Sunday, March 22, 2020

ಧರ್ಮ-ವಿಜ್ಞಾನ-ವೈಜ್ಜಾನಿಕದೃಷ್ಟಿ


ಸನಾತನಧರ್ಮವೆಂಬುದು ಭಾರತೀಯರು ಸಾವಿರಾರು ವರ್ಷಗಳಿಂದ ರೂಢಿಸಿಕೊಂಡು ಬಂದ ಬದುಕಿನ ವಿಧಾನ - ಹಲವು ಜೀವನಶೈಲಿ, ನಂಬುಗೆ, ಪದ್ಧತಿ, ಸಂಪ್ರದಾಯ, ಆಚರಣೆಗಳ ಕುದಿಮಡಕೆ (melting pot).  ಇಲ್ಲಿ ವೈವಿಧ್ಯವಿದೆ, ವೈರುಧ್ಯಗಳೂ ಇವೆ, ತಗ್ಗುತೆವರುಗಳಿವೆ, ಸಾಮರಸ್ಯವಿದೆ, ಪ್ರಶ್ನೆಗಾಸ್ಪದವಿದೆ, ಆರೋಗ್ಯಕರ ಹಾಸ್ಯಕ್ಕೂ.  ಶತಮಾನಗಳಿಂದ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾ ಪರಿಶೀಲಿಸಿಕೊಳ್ಳುತ್ತಾ ಸರಿಪಡಿಸಿಕೊಳ್ಳುತ್ತಾ, ಹರಿದಿರುವ ಇದು, ನಿರಂತರ, ಚಲನಶೀಲ, ಪರಿವರ್ತನಶೀಲ ಕೂಡ.  ಕಾಲದಿಂದ ಕಾಲಕ್ಕೆ ತನ್ನ ತೆಕ್ಕೆಗೆ ಬಂದ ಹಲವು ಮತ-ಪಂಥ-ವಿಚಾರಧಾರೆಗಳನ್ನು ತನ್ನ ಮುಖ್ಯವಾಹಿನಿಯಲ್ಲಿ ಒಳಗೊಳ್ಳುತ್ತಾ ಹರಿದಿರುವ ಇದು ನಿರ್ದಿಷ್ಟ ಮತವಲ್ಲ, ಭಾರತೀಯನ ಸಹಜ ಜೀವನಧರ್ಮ.  ಇದರಲ್ಲಿ ನಂಬಿಕೆಶ್ರದ್ಧೆಗಳು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳುವಂಥವಲ್ಲ, ಸಹಜವಾಗಿಯೇ ಬರುವಂಥವು.  ಮೀನಿಗೆ ನೀರಿನಲ್ಲಿ ಈಜಲು ಬರುವುದಿಲ್ಲವೆಂದರೂ ನೀರನ್ನು ಬಿಟ್ಟು ನೆಲದ ಮೇಲೆ ಬಂದು ಬದುಕಬಲ್ಲುದೇ?  ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ

ಆದರೆ ಸನಾತನಧರ್ಮದಲ್ಲಿ ಅಭಿಮಾನವನ್ನು ಮಾತ್ರ ಉಳಿಸಿಕೊಂಡು ಇದರ ಮಹತ್ತನ್ನು ಮರೆತ, ಅದು ಹೇಗೋ ಪರವಿಚಾರಧಾರೆಯ ಪ್ರಭಾವಳಿಗೆ ಸಿಕ್ಕ ಮನಸ್ಸುಗಳಲ್ಲಿ ತಮ್ಮ ಸನಾತನಧರ್ಮದ ವಿಷಯದಲ್ಲಿ ಏನೋ ಕೀಳರಿಮೆ, ಏನೋ ಕೊರತೆ.  ತಮ್ಮ ಧರ್ಮವು 'ಕಂದಾಚಾರಗಳ ಮೂಟೆ'ಯೆಂದು ಯಾರೋ ಹೇಳಿದ ಮಾತಿನಲ್ಲಿ ದುಃಖಭರಿತ ನಂಬಿಕೆ, ಜೊತೆಗೆ ಕೆರಳಿಕೆ ಕೂಡ - ಆ ಮಾತನ್ನು ಸುಳ್ಳಾಗಿಸಬೇಕೆಂಬ ಹಳಹಳಿ.  ಅದಕ್ಕಾಗಿ ತಮ್ಮ 'ಧರ್ಮ' ಅತ್ಯಂತ ವೈಜ್ಞಾನಿಕಧರ್ಮವೆಂದು ಹೇಗಾದರೂ ಸಾಧಿಸಿ ತೋರಿಸಬೇಕೆಂಬ ಕಳಕಳಿ.  ವಿಜ್ಜಾನ ಬೇರೆ, ವೈಜ್ಞಾನಿಕತೆ ಬೇರೆ, ಧರ್ಮ ಬೇರೆ, ಮತ ಬೇರೆ, ನಂಬಿಕೆ ಬೇರೆ ಎಂಬ ಬೇರ್ಮೆ ಬುದ್ಧಿಗೆ ಹೋಗದು.  ಹೀಗಾದಾಗ, ಎಲ್ಲಕ್ಕೂ 'ವೈಜ್ಞಾನಿಕ' ವಿವರಣೆ ನೀಡುವ ತೆವಲು ಹುಟ್ಟಿಕೊಳ್ಳುತ್ತದೆ.  ಹಾಗೆ ವಿವರಣೆ ನೀಡುವವರಿಗೆ ಇತ್ತ ವಿಜ್ಞಾನವೂ ತಿಳಿದಿರುವುದಿಲ್ಲ, ಅತ್ತ ಪುರಾಣವೂ ತಿಳಿದಿರುವುದಿಲ್ಲ, ವೈಜ್ಞಾನಿಕಮನೋವೃತ್ತಿಯಂತೂ ಮೊದಲೇ ಇರುವುದಿಲ್ಲ.  ಯಾರಾದರೂ "ನಿಮ್ಮ ಶಿವ ನಿಜಕ್ಕೂ ಗಣೇಶನಿಗೆ ಆನೆ ತಲೆ ಜೋಡಿಸಿದನಾ" ಎಂದು ಲೇವಡಿ ಮಾಡಿದರೆಂದಿಟ್ಟುಕೊಳ್ಳಿ.  "ಹೌದಪ್ಪ, ಹಾಗೆ ಪುರಾಣದ ಕತೆ ಹೇಳುತ್ತದೆ, ಈಗ, ಜೀಸಸ್ ಸತ್ತ ಮೇಲೆ ಬದುಕಿ ಬರಲಿಲ್ಲವೇ ಹಾಗೇ, ಅದು ನಂಬಿಕೆಗೆ ಸಂಬಂಧಿಸಿದ ವಿಚಾರ, ನಮ್ಮ ಪಾಲಿಗೆ ಅದು ಪವಿತ್ರ ನಂಬಿಕೆ, ಪ್ರತಿಯೊಬ್ಬರಿಗೂ ಅವರವರ ನಂಬಿಕೆ ಪವಿತ್ರವಲ್ಲವೇ" ಎಂದು ಹೇಳಿ ಕೈಮುಗಿದು ಸುಮ್ಮನಾಗಲು ಮನಸ್ಸು ಬರುವುದಿಲ್ಲ. ಅನೇಕ ಪುರಾಣಕತೆಗಳಿಗೆ ಅದರದ್ದೇ ಆದ ಸಾಂಕೇತಿಕತೆಯಿರುತ್ತದೆ, ಕೆಲವೊಮ್ಮೆ ಕಲ್ಪನಾವಿಲಾಸವೂ ಇರಬಹುದು, ಮತಭಕ್ತಿಯೂ.  ಅದನ್ನು ಪರಿಶೀಲಿಸಿ ಅದು ಇರುವ ಹಾಗೇ ಒಪ್ಪಿ ಅದಕ್ಕೆ ತಕ್ಕ ಶ್ರದ್ಧೆಯಿಂದ ಮುಂದುವರೆಯಲು ಮನಸ್ಸು ಒಪ್ಪುವುದೇ ಇಲ್ಲ.  "ಹೂಂ ಮತ್ತೆ, ನಮ್ಮ ಹಿಂದೂ ಧರ್ಮ ಮತ್ತೇನೆಂದುಕೊಂಡಿರಿ, ಆಗಲೇ ನಮ್ಮಲ್ಲಿ ವಿಜ್ಞಾನ ಎಷ್ಟು ಮುಂದುವರೆದಿತ್ತು ಗೊತ್ತಾ, Head Transplantation ನಮಗೆ ಆಗಲೇ ಗೊತ್ತಿತ್ತು, Shiva was the first Head Surgeon" ಎಂದು ಬೊಂಕುತ್ತಾರೆ, ನಗುವವರ ಮುಂದೆ ಎಡವಿ ಬೀಳುತ್ತಾರೆ.  ಈ ವಿವರಣೆಗಳನ್ನು ಕಂಡು ಹಾಸ್ಯ ಮಾಡಿದವ, ಸ್ವಘೋಷಿತಧರ್ಮರಕ್ಷಕರ ದೃಷ್ಟಿಯಲ್ಲಿ ಧರ್ಮದ್ರೋಹಿಯಾಗಿಬಿಡುತ್ತಾನೆ (ಆತ ಮನೆಯಲ್ಲಿ ಶ್ರದ್ಧೆಯಿಂದ ತ್ರಿಕಾಲಸಂಧ್ಯಾವಂದನೆ, ದೇವತಾರ್ಚನೆ ಮಾಡುತ್ತಿದ್ದರೂ)! ನಮಸ್ಕಾರ-ಆಶೀರ್ವಾದಗಳಂತಹ ಗೌರವ-ವಾತ್ಸಲ್ಯಗಳ, ಆತ್ಮವಿಶ್ವಾಸ-ಭರವಸೆ ತುಂಬುವ ಸಾಮಾಜಿಕ-ಸಾಂಪ್ರದಾಯಿಕ ಕ್ರಿಯೆ ಕೂಡ, ತನ್ನ ಪವಿತ್ರಭಾವನೆಯಿಂದ ನಮ್ಮ ಮನಗೆಲ್ಲುವುದಿಲ್ಲ, ಅದಕ್ಕೆ ವೈಜ್ಞಾನಿಕ ವಿವರಣೆಯೇ ಬೇಕು - ಎಂಥದ್ದೋ blah blah blah ಕಿರಣಗಳು ಎಲ್ಲಿಂದಲೋ ಹೊರಟು ಇನ್ನೆಲ್ಲೋ ಹೊಕ್ಕು, ಮಿದುಳನ್ನೋ ಹೃದಯವನ್ನೋ ಕಿಡ್ನಿಯನ್ನೋ ಮೀಟಿ ಅದೇನೋ ಮ್ಯಾಜಿಕ್ ಮಾಡಿಬಿಡುತ್ತದೆ, "ನೋಡಿದಿರಾ, ನಮ್ಮ ಸನಾತನ ಹಿಂದೂಧರ್ಮದಲ್ಲಿ ಇವೆಲ್ಲಾ ಹೇಗೆ ಕಂಡುಹಿಡಿದಿದ್ದಾರೆ"!  ಮೊನ್ನೆ ವಾಟ್ಸಪ್ ಜಂಕಿನಲ್ಲಿ ಒಂದು ಬಂದಿತ್ತು.  ಶಿಖೆ ಬಿಡುವುದರಿಂದ ಜುಟ್ಟಿನ ಭಾರವು ತಲೆಯ ಹಿಂಭಾಗವನ್ನು ಚುಳ್ಳಗೆ ಎಳೆದು ಮಿದುಳಿನ ಮೇಲೆ ಅದೆಂಥದ್ದೋ ಒತ್ತಡ ಹಾಕುತ್ತದಂತೆ.  ಅದರಿಂದ concentration, mind-control, memory ಇವೆಲ್ಲಾ ವೃದ್ಧಿಸುತ್ತವಂತೆ.  ಯಜ್ಞೋಪವೀತವು ಅದಾವುದೋ ಕಾಸ್ಮಿಕ್ ಕಿರಣಗಳನ್ನು ಆಕರ್ಷಿಸಿ ಎಡಭುಜದಿಂದ ಬಲಸೊಂಟದವರೆಗೂ ಹಾದು ಹೃದಯ, ಶ್ವಾಸಕೋಶ, ಕಿಡ್ನಿಗಳನ್ನು ಬಲಗೊಳಿಸುತ್ತವಂತೆ.  ಇವೆಲ್ಲಾ ಯುವಜನರಲ್ಲಿ ಸನಾತನಧರ್ಮವನ್ನು popularize ಮಾಡುವ ಹತಾಶಪ್ರಯತ್ನದಂತೆ ಕಾಣುವುದಿಲ್ಲವೇ?  ಅಲ್ಪಸ್ವಲ್ಪ ವಿಜ್ಞಾನ ಓದಿಕೊಂಡು, ಅದೇ ಎಲ್ಲ ಎಂದು ತಿಳಿದುಕೊಂಡು ತಾವೇ ಬೃಹಸ್ಪತಿಯೆಂಬ ಭ್ರಮೆಯಲ್ಲಿ ಬೀಗುವ ಪಡ್ಡೆಗಳಿಗಂತೂ ಇದು ಇನ್ನೂ ನಗೆಪಾಟಲಾಗುತ್ತವಲ್ಲವೇ?  ಇದರ ಬದಲು ಮಕ್ಕಳಿಗೆ ಮನೆಯಲ್ಲಿ ಸ್ತೋತ್ರಪಾಠಾದಿಗಳನ್ನು ಹೇಳಿಕೊಟ್ಟು, ದೇವರಿಗೆ ಗುರುಹಿರಿಯರಿಗೆ ನಮಸ್ಕರಿಸುವ, ಆಯಾ ಸಮಯ ಸಂದರ್ಭಕ್ಕೆ ತಕ್ಕಂತೆ ಉಡುಪು ನಡೆನುಡಿ ಕಲಿಸಿಕೊಡುವ, ಅವುಗಳ ಮಹತ್ವವನ್ನು **ವಿಜ್ಞಾನದ ಹಂಗಿಲ್ಲದೇ** ಸರಳವಾಗಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದರೆ ಬಹುಕಾಲ ಅವು ಮಕ್ಕಳಲ್ಲಿ ಉಳಿಯುವುದಲ್ಲವೇ?  ಮಕ್ಕಳು ಪ್ರಶ್ನಿಸುವುದಿಲ್ಲವೆಂದಲ್ಲ.  ಬೆಳೆದು ದೊಡ್ಡವರಾಗುತ್ತಿದ್ದಂತೆಯೇ ಪ್ರಶ್ನೆಗಳೇ ಹೆಚ್ಚು.  ಹಿಂದಿನ ಕಾಲದಲ್ಲಿ ಇಂತಹ ಪ್ರಶ್ನೆಗಳಿಗೆ ಸಿಡುಕುತ್ತಿದ್ದರು, ಈಗಿನವರು ಸಮಾಧಾನದಿಂದ 'ವೈಜ್ಞಾನಿಕ ಉತ್ತರ'ಗಳನ್ನು ಹೊಸೆದು ಕೊಡುತ್ತಾರೆ, ಎರಡೂ ಏಕಪ್ರಕಾರವಾಗಿ 'ಡ್ಯಾಮೇಜ್' ಮಾಡುವಂಥವು.  ಪ್ರಶ್ನೆ ಕೇಳುವುದು ನಮ್ಮ ಧರ್ಮದಲ್ಲಿಯೇ ಇದೆ, ಕೇಳಬೇಕು ಕೂಡ.  ಆದರೆ ಪ್ರಶ್ನೆಗೆಲ್ಲ ಉತ್ತರಿಸಲೇಬೇಕೆಂಬ ನಿಯಮವಾದರೂ ಎಲ್ಲಿದೆ?  ಕೆಲವಕ್ಕೆ ಉತ್ತರವಿರುತ್ತದೆ (ಅದರಲ್ಲಿ ನಿಜಕ್ಕೂ ಸ್ವಲ್ಪ ವಿಜ್ಞಾನವೂ ಇರಬಹುದು), ಕೆಲವಕ್ಕೆ ನಂಬಿಕೆ-ಶ್ರದ್ಧೆಗಳೇ ಉತ್ತರ.  ಅವನ್ನು ಒಪ್ಪಿ ಅಪ್ಪುವ, ಅಥವಾ ಗೌರವಪೂರ್ವಕವಾಗಿ ಪ್ರಶ್ನಿಸುವ/ನಿರಾಕರಿಸುವ ಸಂಸ್ಕಾರ ಮಕ್ಕಳಲ್ಲಿದ್ದರೆ ಆಯಿತು.  ಇನ್ನು ಕೆಲವಕ್ಕೆ ಉತ್ತರ ಕಂಡುಕೊಳ್ಳುವುದು ಕೇಳುವವನದೇ ಹೊಣೆ.  ಉಹೂಂ, ನಮಗೆ ಈ 'ಅವೈಜ್ಞಾನಿಕ' ಕ್ರಮಗಳಿಂದ ಸಮಾಧಾನವಾಗದು - ವಿವರಿಸಲು ವಿಜ್ಞಾನವೇ ಬೇಕು.  ವೈಜ್ಞಾನಿಕ ವಿವರಣೆಯಿಲ್ಲದಿದ್ದರೆ ಒಂದು ಹೊಸೆದರಾಯಿತು.

ಮೊನ್ನೆ ಇನ್ನೊಂದು 'ವೈಜ್ಞಾನಿಕ' ಸಂಶೋಧನೆ ಚಲಾವಣೆಯಲ್ಲಿತ್ತು.  "ವೈಜ್ಞಾನಿಕ ಜ್ಯೋತಿಷ್ಯದ ಪ್ರಕಾರ" ಕೊರೋನಾ ವೈರಸ್ ಪ್ರತಿ 29.5 ವರ್ಷಗಳಿಗೊಮ್ಮೆ ಶನಿಗ್ರಹದಿಂದ ಭೂಮಿಗೆ ಪಯಣಬೆಳೆಸುತ್ತದಂತೆ.  ಇಲ್ಲಿ ಕೆಲಕಾಲವಿದ್ದು ತಾನೇ ಮಾಯವಾಗುತ್ತದಂತೆ.  ಅದಕ್ಕೆ ಜ್ಯೋತಿರ್ಲಿಂಗವೆಂದರೆ ಭಯವಂತೆ, ಅದಕ್ಕೇ ಭಾರತದಲ್ಲಿ ಕೊರೋನಾ ವೈರಸ್ಸಿನ ಭಯ ಅಷ್ಟಿಲ್ಲವಂತೆ :o ಇದಕ್ಕೇನೆನ್ನೋಣ?  (ಇದಕ್ಕೂ "ಆಹಾ, ಶಿವಶಿವಾ" ಎಂದು ಕೆನ್ನೆಬಡಿದುಕೊಂಡು ಕೈಮುಗಿಯುವವರಿದ್ದಾರೆ, ಆದರೆ ಶಿವಭಕ್ತಿಗೆ ವಿಜ್ಞಾನದ, ಅದೂ ಢೋಂಗಿ ವಿಜ್ಞಾನದ ಕುಮ್ಮಕ್ಕು ಬೇಕೇ?) ಮೊದಲಿಗೆ, ವೈಜ್ಞಾನಿಕಜ್ಯೋತಿಷ್ಯ, ಅವೈಜ್ಞಾನಿಕಜ್ಯೋತಿಷ್ಯ ಎಂಬ ಎರಡು ಭಾಗಗಳಿವೆಯೇ?  ನಾನು ಜ್ಯೋತಿಷ್ಯದ ನಂಬಿಕೆಯನ್ನಿಲ್ಲಿ ಪ್ರಶ್ನಿಸುತ್ತಿಲ್ಲ (ಅದು ನನಗೆ ತಿಳಿದಿಲ್ಲ, ಆದ್ದರಿಂದ ಅದು ನನ್ನ ನಂಬಿಕೆ-ಅಪನಂಬಿಕೆಗಳಿಗೆ ಮೀರಿದ್ದು), ಆದರೆ ಈ 'ವೈಜ್ಞಾನಿಕಜ್ಯೋತಿಷ್ಯ' ಎಂದರೇನು?  ಆ 'ವೈಜ್ಞಾನಿಕ'ಜ್ಯೋತಿಷ್ಯಗ್ರಂಥವಾವುದು?  ಅದರಲ್ಲಿ ಶನಿಗ್ರಹದಿಂದ ಇಲ್ಲಿಗೆ ಬರುವ ಕೊರೋನಾ ವೈರಸ್ಸಿನ ಬಗೆಗೆ ಏನು ಬರೆದಿದೆ?  ಯಾವ ಅಧ್ಯಾಯ, ಯಾವ ಶ್ಲೋಕ?  ಅದರ ಮೇಲೆ ಭಾಷ್ಯ-ವ್ಯಾಖ್ಯಾನಗಳೇನಾದರೂ ಬಂದಿವೆಯೇ?  ನಮಗಿಲ್ಲಿಯವರೆಗೂ ಕಾಣದ ಲೋಕಾಂತರಗಳಲ್ಲಿ ಜೀವವಿದೆಯೋ ಇಲ್ಲವೋ ಎಂಬುದು ನಮಗೂ ವಿಜ್ಞಾನಿಗಳಿಗೂ ಇಬ್ಬರಿಗೂ ಸದ್ಯಕ್ಕೆ ಉತ್ತರಿಸಲಾಗದ ವಿಷಯ, ಇರಲಿ.  ಆದರೆ ನಮ್ಮದೇ ಸೌರಮಂಡಲದ ಭಾಗವಾಗಿರುವ ಶನಿಗ್ರಹದಲ್ಲಿ ಜೀವಜಾಲವಿದೆ, ಮತ್ತು ಅದು ಮೂವತ್ತು ವರ್ಷಕ್ಕೊಮ್ಮೆ ಭೂಮಿಗೂ ಬರುತ್ತಿದೆ ಎಂಬ ವಿಷಯ ಆಧುನಿಕವಿಜ್ಞಾನಿಗಳಿಗೆ ತಿಳಿದಿಲ್ಲವೆಂದರೆ, ಅವರಿಗಿಂತ ದಡ್ಡರಿದ್ದಾರೆಯೇ?  ಅವರು ಅದನ್ನು ತಿಳಿದು ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕಾದ್ದು ಅವಶ್ಯಕವಲ್ಲವೇ?  ಅದು ಈಗಿನ 'ಅವೈಜ್ಞಾನಿಕ'ವಿಜ್ಞಾನಲೋಕದಲ್ಲಿ ಕ್ರಾಂತಿಯನ್ನೇ ಎಬ್ಬಿಸಬಹುದಲ್ಲವೇ?  ಅದಕ್ಕೆ ತಕ್ಕ ಆಕರಗಳನ್ನು ಅವರಿಗೆ ನೀಡಿ ಲೋಕೋಪಕಾರ ಮಾಡುವುದು 'ವೈಜ್ಞಾನಿಕ ಜ್ಯೋತಿಷ್ಯ'ವನ್ನು ಅರಿತವರ ಕರ್ತವ್ಯವಲ್ಲವೇ?  ಆದರೆ ಈ ಪ್ರಶ್ನೆಯೂ ನಮ್ಮ 'ನಂಬಿಕೆ'ಗಳ, ಸಂಪ್ರದಾಯ-ಪದ್ಧತಿಗಳ ಲೇವಡಿಯಂತೆ ಕಂಡರೆ ಏನು ಮಾಡಬೇಕು?  ಕೊರೋನಾವೈರಸು, ಶನಿಗ್ರಹದಲ್ಲಿ ಕೊರೋನಾ ವಾಸ ಇವು ಯಾವತ್ತೂ ನಮ್ಮ ಸಾಂಪ್ರದಾಯಿಕ ಸನಾತನ ನಂಬಿಕೆಗಳ ಭಾಗವಾಗಿರಲೇ ಇಲ್ಲ, ಕೊರೋನಾ ವೈರಸ್ಸು ಮಾಧ್ಯಮಗಳಲ್ಲಿ ಸದ್ದುಮಾಡತೊಡಗಿದ ಮೇಲೆ ಮೊನ್ನೆಮೊನ್ನೆ ಹುಟ್ಟಿಕೊಂಡ ನಂಬಿಕೆಯಿದು.  ಇದನ್ನೂ ಸನಾತನಧರ್ಮದ ಬುಟ್ಟಿಯಲ್ಲಿ ಸೇರಿಸಿ ಕೈಮುಗಿಯಬೇಕೇ?

ನಮ್ಮ ಧರ್ಮ, ಆಚಾರವಿಚಾರ, ಸಂಪ್ರದಾಯ, ಮತಾಚರಣೆಗಳನ್ನು ನೆಚ್ಚಿ ಆಚರಿಸಲು ನಮಗೆ ನಿಜಕ್ಕೂ ಬೇಕಾದ್ದು ವಿಜ್ಞಾನವಲ್ಲ, ಶ್ರದ್ಧೆ.  ಆಚರಣೆಗಳಲ್ಲಿ ವಿಜ್ಞಾನವಿದೆಯೇ?  ಸಂತೋಷ, ಅದರಿಂದ ಏನೋ ಒಳ್ಳೆಯದು ಆದೀತು.  ವಿಜ್ಞಾನವಿಲ್ಲವೇ?  ಅಡ್ಡಿಯಿಲ್ಲ, ನಾವು ಕುಳಿತಿರುವುದು ಲ್ಯಾಬಿನಲ್ಲಲ್ಲ, ಪೂಜಾಗೃಹದೊಳಗೆ.  ಇಲ್ಲಿ ಬೇಕಾದ್ದು ವಿಜ್ಞಾನವಲ್ಲ, ಶ್ರದ್ಧೆ.  ನಮ್ಮ ನಂಬಿಕೆ ಆಚರಣೆಗಳು ಪರಪೀಡಕವಲ್ಲದಿದ್ದರೆ, ಸ್ವಹಾನಿಕಾರಕವಲ್ಲದಿದ್ದರೆ ಆಯ್ತು.  ನಿರಪಾಯಕಾರಿಯಾದ ನಂಬಿಕೆಗಳು ಬದುಕಿಗೊಂದಷ್ಟು ಶಿಸ್ತು, ಸೌಂದರ್ಯ, ಭರವಸೆ, ನೆಮ್ಮದಿಗಳನ್ನು ತರುವುದಾದರೆ ಅವುಗಳನ್ನು ಹಾಳುಮಾಡಲು ಹಾಳು ವಿಜ್ಞಾನಕ್ಕೇಕೆ ಅವಕಾಶ ನೀಡಬೇಕು?  ಎಲ್ಲವನ್ನೂ ತ್ಯಜಿಸಿ ನಿಂತ ಗೊಮ್ಮಟನನ್ನು ನೋಡಲು ಕೋಲೂರಿಕೊಂಡು ಬರಿಗಾಲಿನಲ್ಲಿ ವಿಂಧ್ಯಗಿರಿಯನ್ನೇರುವ ವೃದ್ಧದಂಪತಿಯನ್ನು ನೋಡಿದರೆ ಕೈಗಳು ತಾವೇ ತಾವಾಗಿ ಮುಗಿಯುತ್ತವೆ, ವೈಜ್ಞಾನಿಕ ಆವಿಷ್ಕಾರವಾದ ಕೇಬಲ್ ಕಾರಿನಲ್ಲಿ ಕುಳಿತು ಸುಯ್ಯನೆ ಗೊಮ್ಮಟನ ನೆತ್ತಿಯ ಮೇಲೇ ಇಳಿಯುವ ಕಟ್ಟುಮಸ್ತಾದ ತರುಣರನ್ನು ಕಂಡರೆ ಅಲ್ಲ.  ಮೊದಲ ಚಿತ್ರದಲ್ಲಿ ನಮಗೆ ಕಂಡದ್ದು ಶ್ರದ್ಧೆ.  ಎರಡನೆಯದರಲ್ಲಿ ಕಂಡದ್ದು ವಿಜ್ಞಾನದ ಅಟಾಟೋಪ. 

ಇದು ಖೊಟ್ಟಿ ವಿಜ್ಞಾನದ ಮಾತಾಯಿತು.  ಇನ್ನು ಮೂಢನಂಬಿಕೆಗಳ ವಿಷಯ ಬೇರೆ.  ಅವು ಕೆಲವೊಮ್ಮೆ ಅಪಾಯಕಾರಿ, ಅಮಾನವೀಯ ಕೂಡ.  ಸನಾತನಧರ್ಮವೆಂಬ ಹಣ್ಣಿನ ಬುಟ್ಟಿಯಲ್ಲಿ ಮೂಢನಂಬಿಕೆಗಳು ಕೊಳೆತ ಹಣ್ಣುಗಳಾದರೆ, ಮೇಲೆ ವಿವರಿಸಿದ ರೀತಿಯ ಖೊಟ್ಟಿ ವಿಜ್ಞಾನ ಪ್ಲಾಸ್ಟಿಕ್ ಹಣ್ಣು.  ಕೊಳೆತ ಹಣ್ಣು ಇಡೀ ಬುಟ್ಟಿಯನ್ನೇ ಕೊಳೆಸಿಬಿಡಬಲ್ಲುದು.  ಪ್ಲಾಸ್ಟಿಕ್ ಹಣ್ಣು ಕ್ಯಾನ್ಸರ್ ತರಬಲ್ಲುದು, ತಿಂದರೆ ಇನ್ನೂ ಏನೇನನ್ನೋ ತರಬಲ್ಲುದು.  ಈ ಕೊಳೆತ/ಖೊಟ್ಟಿ ಹಣ್ಣುಗಳನ್ನು ನಿಜವಾದ ತಾಜಾ ಹಣ್ಣುಗಳಿಂದ ಬೇರ್ಪಡಿಸಿ ತೆಗೆದೊಗೆಯಲು ಬೇಕಾದ್ದು ವಿಜ್ಞಾನವಲ್ಲ, ವೈಜ್ಞಾನಿಕದೃಷ್ಟಿ.  ಧರ್ಮಕ್ಕೆ ಬೆಂಬಲ ನೀಡಬೇಕಾದ್ದು ಈ ವೈಜ್ಞಾನಿಕದೃಷ್ಟಿಯೇ ಹೊರತು, ವಿಜ್ಞಾನವಲ್ಲ. 

ಇರಲಿ, ಹಾಗಿದ್ದರೆ ನಮ್ಮಲ್ಲಿ ವಿಜ್ಞಾನ ಇರಲೇ ಇಲ್ಲವೇ?  ಏಕಿಲ್ಲ, ವೈಜ್ಞಾನಿಕರ, ಗಣಿತಜ್ಞರ, ದ್ರಷ್ಟಾರರ ಪರಂಪರೆಯೇ ನಮ್ಮಲ್ಲಿದೆ.  ಹಲವು ಆವಿಷ್ಕಾರಗಳಲ್ಲಿ, ವಾಸ್ತುಗಳಲ್ಲಿ, ಆಚರಣೆಗಳಲ್ಲಿ ಇವು ಎದ್ದು ಕಾಣುತ್ತವೆ ಕೂಡ.  ಕೆಲವು ನಮ್ಮ ಇವತ್ತಿನ 'ಜ್ಞಾನ'ಕ್ಕೆ ಅರ್ಥವಾಗುತ್ತವೆ, ಕೆಲವು ಅರ್ಥವಾಗುವುದಿಲ್ಲ.  ಜೊತೆಗೆ ಅನೇಕ ವಿಷಯಗಳ ಮೇಲೆ ಅರ್ಥಹೀನ ಕಂದಾಚಾರಗಳ ಪಾಚಿಯೂ ಬೆಳೆದಿದೆ.  ಯಾವುದರಡಿಯಲ್ಲಿ ವಿಜ್ಞಾನವಿದೆ, ಯಾವುದರಡಿಯಲ್ಲಿ ಇಲ್ಲ ಎಂದು ಹೇಳುವುದು ಕಷ್ಟ.  ಕಂಡ ಅನೇಕ ವಿಷಯಗಳನ್ನೂ ವಿಜ್ಞಾನವೆಂದು ಗುರುತಿಸುವ ಸ್ಥಿತಿಯಲ್ಲಿ ನಾವಿಲ್ಲ.  ಬದಲಿಗೆ ಅನೇಕ ಕಂದಾಚಾರಗಳನ್ನು ವಿಜ್ಞಾನವೆಂದು ಎತ್ತಿ ಮೆರೆಸುವ ಗದ್ದಲವೇ ಆಧುನಿಕ ಧರ್ಮೋತ್ಸಾಹಿಗಳಲ್ಲಿ ಅತಿಯಾಗಿ ಕಾಣುತ್ತಿದೆ.  ಮರೆವು ಮನುಷ್ಯನಿಗೆ ಸಹಜ, ಮನುಕುಲಕ್ಕೆ ಸಹಜ.  ಸಾವಿರಾರು ವರ್ಷಗಳ ಅವಧಿಯಲ್ಲಿ ವಿಜ್ಞಾನವೂ ಸೇರಿದಂತೆ ಅನೇಕ ವಿಷಯಗಳನ್ನು ಮನುಕುಲ ಮರೆಯುತ್ತದೆ, ಗ್ರಂಥಗಳು ನಷ್ಟವಾಗುತ್ತವೆ, ಸಿಕ್ಕಿದ ಗ್ರಂಥಗಳ ಭಾಷೆಯೇ ಅರ್ಥವಾಗದಿರಬಹುದು ಕೂಡ.  ಈ ಚಕ್ರದಲ್ಲಿ, ಯಾವುದೋ ಕಾಲದಲ್ಲಿ ನಮಗೆ ಆಗಲೇ ಗೊತ್ತಿದ್ದ ವಿಷಯಗಳನ್ನು ನಾವು ಹೊಸದಾಗಿ 'ಕಂಡುಹಿಡಿ'ದದ್ದೂ ಉಂಟು; ಆಗ ಇಲ್ಲದ ಅನೇಕ ವಿಷಯಗಳನ್ನು ಇವತ್ತು ನಾವು ಮೊಟ್ಟಮೊದಲಿಗೆ ಕಂಡುಹಿಡಿದದ್ದೂ ಉಂಟು.  ಮತ್ತು ಸಾವಿರ ವರ್ಷಗಳ ಹಿಂದೆ ನಮಗೆ 'ತಿಳಿದಿದ್ದ' ಅನೇಕ ವಿಷಯಗಳನ್ನು ನಾವಿಂದು ಮರೆತಿರುವುದೂ ಉಂಟು - ಅವುಗಳಲ್ಲಿ ಹಲವು ನಮಗೆ ಇವತ್ತು ಮೂಢನಂಬಿಕೆಯಂತೆ ಕಂಡರೆ, ತಪ್ಪು ವಿಜ್ಞಾನದ್ದಲ್ಲ, ಅದನ್ನು ಮರೆತ ಮರವೆಯದು.  ಯಾರಿಗೆ ಗೊತ್ತು, ಆಗ ತಿಳಿದಿದ್ದ ಅನೇಕ ವಿಷಯಗಳು ಇವತ್ತಿಗೆ ಮರೆತಿರುವಂತೆಯೇ, ಇವತ್ತಿನ ವಿಜ್ಞಾನವೂ ಹೀಗೇ ಕೆಲವಾರು ಸಾವಿರ ವರ್ಷಗಳಲ್ಲಿ ಮನುಕುಲದ ಮರವೆಗೆ ಸಲ್ಲಬಹುದು (ನಾವು ಅದುವರೆಗೆ ಬದುಕಿದ್ದರೆ).  ಆಗ ಇವತ್ತಿನ ವೈಜ್ಞಾನಿಕಸತ್ಯವನ್ನು ಮರೆತ ಮುಂದಿನವರು ಅದನ್ನು 'ಮೂಢನಂಬಿಕೆ' ಎಂದು ಗೇಲಿಮಾಡಿದರೂ ಅಚ್ಚರಿಯಿಲ್ಲ.  ಹೀಗಾಗಿ ಹಿಂದಿನವರೆಲ್ಲ ಕಾಡುಮನುಷ್ಯರು, ನಾವೇ ಬೃಹಸ್ಪತಿಗಳ ಪೀಳಿಗೆ ಎಂದು ಹಿಗ್ಗುವುದು ಹಳೆಯದನ್ನು ಜರಿಯುವುದು ಎಷ್ಟು ಮೂರ್ಖತನವೋ, ಇವತ್ತಿನದೆಲ್ಲಾ ಸಾವಿರಾರು ವರ್ಷಗಳ ಹಿಂದೆಯೇ ಇತ್ತು, ಇವತ್ತಿನದು ಏನೂ ಇಲ್ಲವೆಂದು ಬೋಂಗುಬಿಡುವುದೂ ಅಷ್ಟೇ ಮೂರ್ಖತನ; ಹಾಗೆಯೇ ಇವತ್ತು ನಮಗೆ ಗೊತ್ತಿರುವ 'ಜ್ಞಾನ' ಇನ್ನು ಸಾವಿರಾರುವರ್ಷಗಳನಂತರವೂ ನಮ್ಮ ನೆನಪಿನಲ್ಲಿರುತ್ತದೆಂದು ನಂಬುವುದೂ!

ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾsಪಿ ಕಾವ್ಯಂ ನವಮಿತ್ಯವದ್ಯಮ್ |
ಸಂತಃ ಪರೀಕ್ಷ್ಯಾನ್ಯತರತ್ ಭಜಂತೇ
ಮೂಢಃ ಪರಪ್ರತ್ಯಯನೇಯಬುದ್ಧಿಃ ||

(ಹಳತೆಂಬುದೆಲ್ಲ ಬಲು ಸಾಧುವೆಂದಲ್ಲ ಹೊಸ
ಹೊಳಹೆಂಬ ಕಬ್ಬವದು ಕಗ್ಗವೇನಲ್ಲ
ಬಳಸಿ ಅರಿವನು ಸಂತ ಮೇಣ್ ಮೂಢ ತನ್ನರಿಮೆ
ಬೆಳೆಯಿರದೆ ಪರಬುದ್ಧಿಯಾಶ್ರಯಿಸುವ)

ಈ ಕವಿವಾಣಿ ಕೇವಲ ಕಾವ್ಯಕ್ಕಲ್ಲ, ಜೀವನಕ್ಕೂ ಅನ್ವಯಿಸುವಂಥದ್ದು.  ಅರಿತರೆ ಬದುಕು ಹಸನು.  "ನಮಗೆ ಮಾತ್ರ ಏಕೆ ಹೇಳುತ್ತೀರಿ, 'ಅವರಿಗೂ' ಹೇಳಿ" ಎಂಬ ಸವಾಲು ಕೆಲವೊಮ್ಮೆ (ಕೆಲ ಸಾಮಾಜಿಕ-ರಾಜಕೀಯ ಸಂದರ್ಭಗಳಲ್ಲಿ) ಸರಿಯಾದದ್ದೇ ಆದರೂ, ಮೇಲೆ ವಿವರಿಸಿದ ಸಂದರ್ಭಗಳಲ್ಲಿ ಬಾಲಿಶವಾಗಬಲ್ಲುದು, ಇದರಿಂದ ನಷ್ಟ ನಮಗೇ ಹೊರತು ಆ ಇನ್ನೊಬ್ಬರಿಗಲ್ಲ.  ಈ ಸ್ವವಿಮರ್ಶನನಿರಾಕರಣೆ ನಾವು ಹೆಮ್ಮೆಯಿಂದ ಪ್ರತಿಪಾದಿಸುವ ಸನಾತನಧರ್ಮದ್ದು ಯಾವತ್ತೂ ಆಗಿರಲಿಲ್ಲ.

Monday, March 16, 2020

ಕೊರೋನಾ - ಭೀತಿ ಬೇಡ, ಮೌಢ್ಯ ಬೇಡ - ಹೊಣೆಯಿರಲಿ


ಪ್ರಪಂಚವೆಲ್ಲಾ ಕೊರೋನಾ ಭೀತಿಯಲ್ಲಿ ತತ್ತರಿಸುತ್ತಿರುವಾಗ, ನಾಲ್ಕು ಮೌಢ್ಯದ ಸುದ್ದಿಗಳು ನನ್ನ ಮುಂದಿವೆ.  ಇಂಥವು ನೂರಾರಿರಬಹುದು, ಈ ನಾಲ್ಕು ಪ್ರಾತಿನಿಧಿಕ:
  1. ದುಬೈನಿಂದ ಬಂದ ನಾಲ್ವರು ಯುವಕರು ತಮ್ಮ ಧರ್ಮದ ನೆಪವೊಡ್ಡಿ ಕೊರೋನಾ ಪರೀಕ್ಷೆಗೆ ನಿರಾಕರಿಸಿದ್ದಾರೆ
  2. ಅದೇನೋ "ಗೋಮೂತ್ರ ಪಾರ್ಟಿ"ಯಂತೆ - ಗೋಮೂತ್ರವಾದಿ ಸಂಘಟನೆಯೊಂದು ಏರ್ಪಡಿಸಿದ್ದ 'ಪಾರ್ಟಿ'ಯಲ್ಲಿ ಎಷ್ಟೆಷ್ಟೋ ಜನ ದೂರದೂರದಿಂದ ಬಂದು ಲೋಟಗಟ್ಟಲೆ ಗೋಮೂತ್ರವನ್ನು ಗಟಗಟನೆ ಕುಡಿದು, ಕೊರೋನಾ ವೈರಸ್ಸಿಗೆ ಪೂಜೆ ಮಾಡಿ "ಕೊರೋನಾ ಸಾಂತ್ ಹೋ ಜಾವ್" ಎಂದು ಘೋಷಣೆ ಕೂಗಿ ಗೆದ್ದೆವೆಂದುಕೊಂಡಿದ್ದಾರೆ - ಗೋಮೂತ್ರದಿಂದ ಕೊರೋನಾ ಕಂಬಿಕೀಳುತ್ತದೆಂದೂ, ಕೊರೋನಾ ಹಿಡಿದಿರುವ ಯಾರನ್ನೇ ಆಗಲಿ ತಮ್ಮ ಬಳಿ ಕರೆತಂದರೆ ತಾವು ಚಟಕ್ಕನೆ ಅವರನ್ನು ಗೋಮೂತ್ರದಿಂದಲೇ ಗುಣಪಡಿಸುತ್ತೇವೆಂದು ಸಂಘಟನೆಯ ಕೆಲವರು ಘಂಟಾಘೋಷವಾಗಿ ಭರವಸೆ ನೀಡಿದ್ದಾರೆ.
  3. ಇರಾನಿನ ಮುಲ್ಲಾ ಒಬ್ಬ, ಗುದದ್ವಾರಕ್ಕೆ ಕೆಲವು ಎಣ್ಣೆ ಹಚ್ಚಿದರೆ ಕೊರೋನಾ ಮಟಾಮಾಯವಾಗುತ್ತದೆಂದು 'ಕಂಡುಹಿಡಿದು', ಹಾಗೇ ಮಾಡುವಂತೆ ಕರೆಕೊಟ್ಟಿದ್ದಾನೆ. 
  4. ಯಾವುದನ್ನಾದರೂ ಸರೇ, 'ಓರಾಟ'ವೇ ಪರಿಹಾರವೆಂದು ತಿಳಿದಿರುವ ಡಾಕ್ಟರೊಬ್ಬ, ಕೊರೋನಾ ವಿರುದ್ಧ ಮುನ್ನೆಚ್ಚರಿಕೆಯಾಗಿ ಶಾಲೆ ಕಾಲೇಜು ಸಮಾರಂಭ ಮೊದಲಾದುವುಗಳನ್ನು ಸ್ಥಗಿತಗೊಳಿಸಿರುವುದನ್ನು ಪ್ರತಿಭಟಿಸಿ, ಜನ ಬೀದಿಗಿಳಿದು ಹೋರಾಡಬೇಕೆಂದು ಕರೆಕೊಟ್ಟಿದ್ದಾನೆ.

ಮೌಢ್ಯದ ನಾಲ್ಕು ಮುಖಗಳನ್ನು ನೋಡಿದ್ದಾಯಿತಲ್ಲ.  ಇನ್ನಿವನ್ನು ಆಯಾ ಪಂಥದ ಪರವಿರುವವರು, ವಿರುದ್ಧವಿರುವವರು ಹಂಚಿಕೊಂಡು ಮೆಚ್ಚುತ್ತಾ ಹೀಗಳೆಯುತ್ತಾ ಸಂಭ್ರಮಿಸುತ್ತಿದ್ದರೆ, ಇತ್ತ ಟೀವಿ ಚಾನಲ್ಲುಗಳು, ಈಗಿನ್ನೂ ದೇಶದೊಳಗೆ ಮೂಗಿಟ್ಟು ಹತ್ತು ಜನರನ್ನೂ ಕೊಂದಿಲ್ಲದ ವೈರಸ್ಸಿನ ಬಗ್ಗೆ "ಕೊರೋನಾ ಮರಣಮೃದಂಗ", "ಕೊರೋನಾ ಸಾವಿನ ತಮಟೆ" ಎಂದೆಲ್ಲಾ ರುಮ್ಮರುಮ್ಮನೆ ಮಾರಿತಮಟೆಯನ್ನು ಬಡಿಯುತ್ತಾ, ಬೀದಿಬೀದಿಯಲ್ಲೂ ನೂರಾರು ಹೆಣ ಬೀಳುವ ದೃಶ್ಯವನ್ನು ಕಲ್ಪಿಸಿಕೊಂಡು ಜೊಲ್ಲುಸುರಿಸುತ್ತಾ ಕುಣಿಯುತ್ತಿವೆ; ಸರ್ಕಾರವೋ, ಫೋನು ಮಾಡುವವರ ಕಿವಿಯೊಳಗೆಲ್ಲಾ ಕೆಹ್ಹು ಕೆಹ್ಹು ಎಂದು ಕೆಮ್ಮುತ್ತಾ, ಕೊರೋನಾಗಿಂತಾ ಈ ಕೊರೋನಾ ಜಾಗೃತಿಯ ಬಗೆಗೇ ಅಸಹ್ಯ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಯಾರಿಗಾದರೂ ಅರ್ಜೆಂಟಾಗಿ ಕರೆ ಮಾಡಬೇಕು, ಅವರು ಫೋನೆತ್ತುತ್ತಿಲ್ಲ.  ಹೀಗೆ ಒಂದಿಪ್ಪತ್ತು ಕರೆ ಮಾಡಿದರೆ, ಪ್ರತಿ ಕರೆಯಲ್ಲೂ ಅರ್ಧರ್ಧ ನಿಮಿಷ ಇವರ ಕೊರೋನಾ ಕೆಮ್ಮು - ವಿಫಲವಾದ ಇಪ್ಪತ್ತು ಕರೆಗೆ ಹತ್ತು ನಿಮಿಷ ಕೆಮ್ಮಿನ ನಿನಾದ ಕೇಳುವುದರಲ್ಲೇ ಖತಂ.  ಸಹನೆ ಉಳಿದೀತಾದರೂ ಎಲ್ಲಿಂದ?

ಇನ್ನಿವೆಲ್ಲಾ ಗೊಂದಲ ಗದ್ದಲಗಳ ನಡುವೆಯೂ, ನಮ್ಮ ದೇಶವೂ ಸೇರಿದಂತೆ ಪ್ರಪಂಚದಾದ್ಯಂತ ನೂರಾರು ವಿಜ್ಞಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಈ ವೈರಸ್ಸಿಗೆ ಮದ್ದರೆಯುತ್ತಿದ್ದಾರೆ, ಸಾವಿರಾರು ಜನ ವೈದ್ಯರು, ದಾದಿಯರು, ತಮ್ಮ ಜೀವವನ್ನೇ ಒತ್ತೆಯಿಟ್ಟು ರೋಗಿಗಳ ಶುಶ್ರೂಷೆಯಲ್ಲಿ ಈಡುಪಟ್ಟಿದ್ದಾರೆ, ಸರ್ಕಾರ, ಸಾವಿರಾರು ಜನ ಸರ್ಕಾರೀ ಅಧಿಕಾರಿಗಳು, ಆರೋಗ್ಯಕಾರ್ಯಕರ್ತರು ಏರ್ಪೋರ್ಟುಗಳಲ್ಲಿ, ಸಾರ್ವಜನಿಕಸ್ಥಳಗಳಲ್ಲಿ ರೋಗ ಹರಡದಂತೆ ತಕ್ಕ ಆಡಳಿತಾತ್ಮಕ ಕ್ರಮ ಕೈಗೊಳ್ಳಲು ಹೆಣಗುತ್ತಿದ್ದಾರೆ.

ಇವರೆಲ್ಲರ ಶ್ರಮ ವ್ಯರ್ಥವಾಗಬಾರದೆಂದರೆ, ನಮ್ಮ ಈ ಗದ್ದಲ ಗೊಂದಲಗಳನ್ನು ಹತ್ತಿಕ್ಕಿ, ಕಿಂಚಿತ್ತಾದರೂ ಪ್ರಬುದ್ಧತೆ ತೋರುವುದು ನಮ್ಮೆಲ್ಲರ ಹೊಣೆ.  ಕೊರೋನಾ ಬಗ್ಗೆ ಜೋಕು ಮಾಡಿ ನಕ್ಕುಕೊಳ್ಳುವುದಕ್ಕೂ, ಮೌಢ್ಯವನ್ನು ಚಳುವಳಿಯೋಪಾದಿಯಲ್ಲಿ ಹರಡುವುದಕ್ಕೂ ವ್ಯತ್ಯಾಸವಿದೆ.  ಮೊದಲನೆಯದು ಮನಸ್ಸನ್ನು ಹಗುರಗೊಳಿಸಿ ಸುಸ್ಥಿತಿಯಲ್ಲಿಡಬಲ್ಲುದು, ಎರಡನೆಯದು ಇದ್ದ ಬುದ್ಧಿಯನ್ನೂ ಕೆಡಿಸಿ ಅನಾಹುತಕ್ಕೆಡೆಮಾಡಿಕೊಡಬಲ್ಲುದು.

ಅನಗತ್ಯವಾಗಿ ಎಲ್ಲಿಯೂ ಹೋಗದೇ, ಕೊರೋನಾ ಶಂಕೆಯಿರುವ ಕಡೆಗಂತೂ ತಲೆಯನ್ನೇ ಹಾಕದೇ ಸಾಧ್ಯವಾದಷ್ಟೂ ಮನೆಯಲ್ಲಿ ಕಾಲ ಕಳೆಯಲು ಇದು ಸುಸಮಯ.  ಕೊನೆಯ ಪಕ್ಷ ಮನೋರಂಜನೆ, ಊಟ-ತಿಂಡಿಗಳಾದರೂ ಮನೆಯಲ್ಲೇ ಆದರೆ ಅಷ್ಟರ ಮಟ್ಟಿಗೆ ಸಂಸಾರದ ಬಂಧ ಬಲಗೊಂಡಿತೆನ್ನಬೇಕು.  ಕೆಲಸಕ್ಕೆ ಹೋಗಲೇಬೇಕಾದವರಿಗೆ ವಿಧಿಯಿಲ್ಲ, ಮಾಸ್ಕು ಧರಿಸಿ, ಇದ್ದುದರಲ್ಲಿ ಹುಷಾರಾಗಿದ್ದರೆ ಆಯಿತು.  ಮಾಸ್ಕಿಗಾಗಿ ಅಂಗಡಿಯ ಮುಂದೆ ನೂಕುನುಗ್ಗಲು ಬೇಡ.  ಸ್ವಚ್ಛವಾದ ಬಟ್ಟೆಯಿಂದ ಮನೆಯಲ್ಲಿ ಮಾಸ್ಕು ಮಾಡಿಳ್ಳುವುದು ಕಷ್ಟವಲ್ಲ - ಮಾಸ್ಕೇನು ಕೊರೋನಾದಿಂದ ರಕ್ಷಣೆ ನೀಡುವುದಿಲ್ಲ, ಕೆಮ್ಮಿದಾಗ ಸೀನಿದಾಗ ಅದು ಬಲವಾಗಿ ವಾತಾವರಣದೊಳಗೆ ಉಗ್ಗದಂತೆ ತಡೆಯುತ್ತದೆ, ಹೊರಗಿರುವ ವೈರಸ್ಸು ಸಲೀಸಾಗಿ ಮೂಗಿನೊಳಗೆ ನುಗ್ಗಲು ಕೆಲಮಟ್ಟಿಗೆ ತಡೆಯೊಡ್ಡುತ್ತದೆ - ಅಷ್ಟುಮಟ್ಟಿಗೆ ಹರಡುವಿಕೆಯನ್ನು ನಿಧಾನ ಮಾಡುತ್ತದಷ್ಟೇ.

ತಜ್ಞರ ಸಲಹೆ ಎಲ್ಲಕ್ಕಿಂತ ಮುಖ್ಯ, ಸ್ವವೈದ್ಯ ಬೇಡ.  ತುಳಸಿ, ಶುಂಠಿ, ಮೆಣಸು, ಬೆಳ್ಳುಳ್ಳಿ, ಅಮೃತಬಳ್ಳಿ, ಬೇವು, ಪರಂಗಿ ಎಲೆ ಇವೆಲ್ಲಾ ಸಾಮಾನ್ಯವಾಗಿ ರೋಗನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆಂಬುದು ಹೌದು, ಹೆಚ್ಚಿದ ರೋಗನಿರೋಧಕಶಕ್ತಿ ಕೊರೋನಾ ವಿರುದ್ಧ ಹೋರಾಡುವ ಶಕ್ತಿಯನ್ನೂ ಕೆಲಮಟ್ಟಿಗೆ ನೀಡಬಹುದು - "ಬಹುದು" ಅಷ್ಟೇ.  ಇವಾವುವೂ ನಿರ್ದಿಷ್ಟವಾಗಿ ಕೊರೋನಾ ವೈರಸ್ಸಿಗೆ ಮದ್ದೆಂಬ ಸಂಗತಿ ದೃಢಪಟ್ಟಿಲ್ಲ.  ಸಾಮಾನ್ಯ ಹಿತದೃಷ್ಟಿಯಿಂದ ಇವನ್ನು ಬಳಸಿದರೆ ನಷ್ಟವೇನೂ ಇಲ್ಲ.  ಸಾಂಪ್ರದಾಯಿಕ ಮನೆಮದ್ದು ಎಷ್ಟೋ ವಿಷಯಗಳಲ್ಲಿ ರಾಮಬಾಣವೆನ್ನುವುದು ಸತ್ಯ (ಬಳಸಿದ್ದರಿಂದ ಒಳ್ಳೆಯದಾದರೆ ಸಂತೋಷವೇ), ಆದರೆ ಬಳಸಿದ ಮಾತ್ರಕ್ಕೆ ನಾನು ಕೊರೋನಾದಿಂದ ಸುರಕ್ಷಿತ ಎಂಬ ಭ್ರಮೆ ಬೇಡ, ತಕ್ಕ ಪರೀಕ್ಷೆ/ಚಿಕಿತ್ಸೆಗಳನ್ನು ಕಡೆಗಣಿಸುವುದು ಬೇಡ.

ಸೋಂಕನ್ನು ತಡೆಗಟ್ಟಲು, ಸೋಂಕಿನ ಲಕ್ಷಣ ಕಂಡುಬಂದರೆ ಏನು ಮಾಡಬೇಕೆಂಬುದನ್ನು ಸರ್ಕಾರ ಮತ್ತಿತರ ಸಂಸ್ಥೆಗಳು ವಿಶದವಾಗಿ ತಿಳಿಸಿವೆ.  ಅದನ್ನು ಅನುಸರಿಸಿದರೆ ಸಾಕು.  ಅನಧಿಕೃತಮೂಲಗಳಿಂದ ಬರುವ ಯಾವ ವದಂತಿಯನ್ನೂ 'ಪರಿಹಾರ'ಗಳನ್ನೂ ನಂಬಬೇಡಿ.  ಮೇಲೆ ಹೇಳಿದ, ಎಣ್ಣೆಬಿಟ್ಟುಕೊಳ್ಳುವ ಕೆಲಸವೂ, ಗೋಮೂತ್ರ ಕುಡಿಯುವ ಕೆಲಸವೂ ಹೇಳುವವರೂ ಯಾರೂ ವೈದ್ಯರೂ ಅಲ್ಲ, ಕೊನೆಗೆ ಆಯುರ್ವೇದ/ಯುನಾನಿ ತಜ್ಞರೂ ಅಲ್ಲವೆಂಬುದು ನೆನಪಿರಲಿ.  ಗೋಮೂತ್ರ/ಸೆಗಣಿ ಒಂದು ಮಟ್ಟಕ್ಕೆ ಕ್ರಿಮಿನಾಶಕವೆಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ, ಆದರೆ ಅದೇನಿದ್ದರೂ ಹೊರಗೆ, ದೇಹದೊಳಗೆ ತೆಗೆದುಕೊಳ್ಳಲಿಕ್ಕಲ್ಲ.  ಪಂಚಗವ್ಯದಂತಹ ಧಾರ್ಮಿಕ ಮಿಶ್ರಣಗಳೂ ಶಾಸ್ತ್ರಕ್ಕಾಗಿ ಒಂದೆರಡು ಹನಿಯಷ್ಟು ಗೋಮೂತ್ರವನ್ನು ಬಳಸುತ್ತವೆಯೇ ಹೊರತು, ಲೋಟಗಟ್ಟಲೆ ಚೊಂಬುಗಟ್ತಲೆ ಗೋಮೂತ್ರ ಕುಡಿಯುವುದು ಒಳ್ಳೆಯದೆಂದು ಯಾವ ಗ್ರಂಥದಲ್ಲೂ ಹೇಳಿದಂತಿಲ್ಲ.  ಹಾಗೊಮ್ಮೆ ಹೇಳಿದ್ದರೂ, ವೈಜ್ಞಾನಿಕವಾಗಿ ಸ್ಥಿರಪಟ್ಟಲ್ಲದೇ ಅದನ್ನು ನಂಬುವಂತಿಲ್ಲ (ಶಿಖಾ-ಯಜ್ಞೋಪವೀತ, ನಮಸ್ಕಾರಗಳಂತಹ, ಶ್ರದ್ಧೆ ನಂಬಿಕೆಗಳೇ ಆಧಾರವಾದ ವಿಷಯಗಳಿಗೆ, ಬೇಕಿಲ್ಲದಿದ್ದರೂ ಯಾವಯಾವುದೋ ಸುಳ್ಳು ವೈಜ್ಞಾನಿಕ ಕಾರಣಗಳನ್ನು ಪುಂಖಾನುಪುಂಖವಾಗಿ ಉದುರಿಸುವವರು, ಔಷಧವಾಗಿ ಹೊಟ್ಟೆಗೆ ತೆಗೆದುಕೊಳ್ಳಬೇಕೆನ್ನುವ ಗಂಜಲ ಮೊದಲಾದುವುಗಳನ್ನು ವೈಜ್ಞಾನಿಕವಾಗಿ ವಿವರಿಸುವ ಗೋಜಿಗೆ ಹೋಗುವುದಿಲ್ಲ) ಧಾರ್ಮಿಕ ಆಚರಣೆಗಳು, ಅಮಾನವೀಯವಲ್ಲದಿದ್ದರೆ, ಯಾವಾಗಲೂ ಗೌರವನೀಯ.  ಆದರೆ ಅವು ನಂಬಿಕೆಯ ಮಟ್ಟದಲ್ಲಿದ್ದರೆ ಚೆನ್ನ (ಕೆಲನಂಬಿಕೆಗಳು ಅನೇಕ ಬಾರಿ ಕೆಲಸ ಮಾಡುತ್ತವೆ ಎಂಬುದು ನನ್ನ ನಂಬಿಕೆ ಕೂಡ).  ಆದರೆ ನಮ್ಮ ನಂಬಿಕೆಯಿಂದ ಇತರರಿಗೆ ತೊಂದರೆಯಾಗಬಾರದು, ಇತರರು ದಾರಿತಪ್ಪಬಾರದು ಎನ್ನುವುದು ಮುಖ್ಯ.  ಕೊರೋನಾ ವಿರುದ್ಧ ತಿಮ್ಮಪ್ಪನಿಗೆ ಮುಡಿಪು ಕಟ್ಟಿಡುತ್ತೀರಾ, ತೋಟದ ಭೂತನಿಗೆ ಕಾಣಿಕೆ ಹಾಕುತ್ತೀರಾ, ದರ್ಗಾದಲ್ಲಿ ಸಕ್ಕರೆ ಹಂಚುತ್ತೀರಾ, ವೇಲಾಂಗಣಿಗೆ ಹರಕೆ ಹೊರುತ್ತೀರಾ, ಅದು ನಿಮ್ಮ ನಂಬಿಕೆ, ಗೌರವಿಸೋಣ, ನಿಮಗೆ ಶುಭವಾಗಲಿ; ಆದರೆ ಅದನ್ನು ಬಿಟ್ಟು ಬೇರೇನನ್ನೂ ನೀವು ಮಾಡುವುದಿಲ್ಲವೇ, ಸರಿ, ನಿಮ್ಮಿಷ್ಟ, ನಿಮ್ಮ ಹಣೆಯಬರಹ - ನಿಮ್ಮ ನಂಬಿಕೆ ನಿಮ್ಮನ್ನು ಕಾಪಾಡುವವರೆಗೂ ಬಾಗಿಲು ಹಾಕಿಕೊಂಡು ಮನೆಯಲ್ಲಿರಿ, ಹೊರಬಂದು ನಿಮ್ಮ ಕೇವಲ'ನಂಬಿಕೆ'ಯ ಫಲವನ್ನು ಅನ್ಯರಿಗೆ ಹರಡಬೇಡಿ.  ನಾನು ಒಂದು ಲೀಟರು ಗಂಜಲ ಕುಡಿದಿದ್ದೇನೆ, ಕೆಳಕ್ಕೆ ಎಣ್ಣೆ ಹಚ್ಚಿಕೊಂಡಿದ್ದೇನೆ, ನನ್ನ ಸುತ್ತಾ ಕೊರೋನಾ ಸುಳಿಯುವುದೂ ಇಲ್ಲ ಎಂಬೆಲ್ಲ ಭ್ರಮೆ ನಿಮ್ಮದಾಗಿದ್ದರೆ, ನಿಮಗೆ ನಮಸ್ಕಾರ, ಬೋನು ಬಿಟ್ಟು ಹೊರಗೆ ಬರಲೇಬೇಡಿ 🙏🙏🙏

[ಈ ಲೇಖನದ ಇಂಗ್ಲಿಷ್ ಆವೃತ್ತಿಗಾಗಿ ಇಲ್ಲಿ ಕ್ಲಿಕ್ ಮಾಡಿ]

Sunday, March 1, 2020

ಪ್ರಶಸ್ತಂ ಶೌಚಚಿಂತನಮ್

ಇದೇನು, ಭಾನುವಾರ ಬೆಳಬೆಳಗ್ಗೆ ರಾಮಾ ಕೃಷ್ಣಾ ಎನ್ನುವುದು ಬಿಟ್ಟು ಶೌಚಚಿಂತನೆ ಮಾಡುತ್ತಿದ್ದಾನಲ್ಲಾ, ಇವನಿಗೇನು ಬಂತು ಎಂದುಕೊಳ್ಳುತ್ತಿದ್ದೀರೋ.  ಅಂದುಕೊಳ್ಳಿ, ನನಗೇನೂ ಅಚ್ಚರಿಯಿಲ್ಲ, ಬೇಸರವೂ ಇಲ್ಲ.  ದಿನನಿತ್ಯದ ಗಡಿಬಿಡಿಯ ಬದುಕಿನಲ್ಲಿ ಟಾಯ್ಲೆಟ್ಟಿನಲ್ಲಿ ಒಂದರ್ಧ ಗಂಟೆಯಷ್ಟೇ ಕೂತು ಎದ್ದು ಬರುವುದಾಗಿರುತ್ತದೆ, ಭಾನುವಾರವೂ ಕೆಲಕಾಲ ನಿರಾಳವಾಗಿ ಕೂರಬಾರದೆಂದರೆ ಹೇಗೆ?  

ಹಿರಿಯರಾದ ಭೈರವಿ ಕೆಂಪೇಗೌಡರ ಅದ್ಭುತ ಗಾಯನವನ್ನು ಧ್ವನಿಮುದ್ರಿಸಬೇಕೆಂದು ಆಗಿನ ಗ್ರಾಮಾಫೋನ್ ಸಂಸ್ಥೆ ಅವರಲ್ಲಿ ವಿನಂತಿಸಿತಂತೆ.  "ಎಷ್ಟು ಸಮಯ ಹಾಡಬೇಕು?" - ಕೆಂಪೇಗೌಡರ ಪ್ರಶ್ನೆ.  "ಐದು ನಿಮಿಷ" - ಗ್ರಾಮಾಫೋನ್ ಕಂಪನಿಯ ಉತ್ತರ.  "ನಾನು ಲಹರಿಗೆ ಬರುವುದಕ್ಕೇ ಅರ್ಧಗಂಟೆ ಬೇಕು, ಆಗೊಲ್ಲ" ಎಂದು ಉತ್ತರಿಸಿ ಎದ್ದು ನಡೆದರಂತೆ ಕೆಂಪೇಗೌಡರು.  ಸಂಗೀತವೇನೋ "ನಾಭಿ ಹೃತ್ಕಂಠರಸನ ನಾಸಾದುಲಯಂದು" ಬರುವಂಥದ್ದು.  ಅದಕ್ಕೇ ಲಹರಿಗೆ ಬರುವುದಕ್ಕೆ ಅರ್ಧಗಂಟೆ ಬೇಕೆಂದರೆ, ಶೌಚವೆಂಬುದು ಅದಕ್ಕಿಂತ 'ಮೂಲ'ಭೂತ ವಿಚಾರ - ಮನೋಧರ್ಮವೊಂದಕ್ಕೇ ಅಲ್ಲ, ದೇಹಧರ್ಮಕ್ಕೂ ಸಂಬಂಧಿಸಿದ್ದು - ಅಡಿಗರು ಹೇಳುವಂತೆ "ಪಾತಾಳದಾಳದಿಂದೆದ್ದುಬರುವ ವಿಕಾರ"ವೆಂದೇ ಇಟ್ಟುಕೊಳ್ಳೋಣ.  ಅದಕ್ಕೇನು ಕಡಿಮೆ ಸಮಯ ಬೇಕಾದೀತೇ?  ಬ್ರಹ್ಮಶೌಚದ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ಕೇಳಿ, ಹೇಳುತ್ತೇನೆ: 

ಬಿಡುವಿಲ್ಲದೇ ಜಗತ್ಸೃಷ್ಟಿಯಲ್ಲಿ ತೊಡಗಿದ್ದ ಬ್ರಹ್ಮದೇವರಿಗೆ ಇದ್ದಕ್ಕಿದ್ದಂತೆ 'ವಿಸರ್ಜನೆ'ಯ ಲಹರಿ ಬಂದು ಎದ್ದು ಹೊರಟರಂತೆ.  ಇನ್ನೇನು ಶೌಚಗೃಹದೊಳಗೆ ಕಾಲಿಡಬೇಕು, ಅಷ್ಟರಲ್ಲಿ ಪರಿಚಾರಕನು ಬಂದು "ರಾಮಜನನವಾಯಿತು ಸ್ವಾಮಿ" ಎಂದು ಸುದ್ದಿ ಮುಟ್ಟಿಸಿದನಂತೆ.  ಸರಿ ಎಂದು ಬ್ರಹ್ಮದೇವರು ಒಳಗೆ ಹೋದರು.  ಎಲ್ಲಾ ಮುಗಿಸಿ ಹೊರಬರುವ ಹೊತ್ತಿಗೆ ಸರಿಯಾಗಿ ಮತ್ತೊಬ್ಬ ಪರಿಚಾರಕ ಸುದ್ದಿ ಮುಟ್ಟಿಸಿದನಂತೆ.  "ರಾಮಪಟ್ಟಾಭಿಷೇಕವಾಯಿತು ಸ್ವಾಮಿ".  ಬ್ರಹ್ಮ ನಿರ್ಲಿಪ್ತನಾಗಿ, ಅದಕ್ಕೂ "ಸರಿ" ಎಂದು ಹೇಳಿ, ಮತ್ತೆ ಸೃಷ್ಟಿಕಾರ್ಯದಲ್ಲಿ ತೊಡಗಿಕೊಂಡನಂತೆ.  ನೋಡಿ, ರಾಮ ಹುಟ್ಟಿದಾಗ ಒಳಹೋದ ಬ್ರಹ್ಮ ಹೊರಬರುವ ಹೊತ್ತಿಗೆ ಇಡೀ ರಾಮಾಯಣವೇ ಮುಗಿದುಹೋಗಿತ್ತು.  ಇದು ಬ್ರಹ್ಮಶೌಚ.  ಇಡೀ ಜಗತ್ತಿನ ಸೃಷ್ಟಿಯ ಹೊಣೆಹೊತ್ತ ಬ್ರಹ್ಮನೇ ಶೌಚದಲ್ಲಿ ದಶಕವೆರಡು ದಶಕಗಳನ್ನೇ ಕಳೆಯಬಹುದಾದರೆ ಅಂತಹ ಯಾವ ಹೊಣೆಯೂ ಇಲ್ಲದ ಹುಲುಮಾನವರು ಇನ್ನೆಷ್ಟು ದಶಕಗಳನ್ನು ಶತಕಗಳನ್ನು ಕಳೆಯಬಾರದು.  ರಾಮಾಯಣದಂತೆ ಇದೊಂದು ಶೌಚಾಯನವೇ ಆದೀತು.  ಆದರೆ ನನ್ನ ಈ ಚಿಂತನೆಗೆ ಚಿಂತನೆಯೆಂದು ಕರೆದಿದ್ದೇನೆಯೇ ಹೊರತು ಶೌಚಾಯನವೆಂದಿಲ್ಲ.  ರಸಾಯನಕ್ಕೆ ಪ್ರಾಸಗೊಡುವ ಪದವನ್ನು ಇದಕ್ಕೆ ಹೊಂದಿಸಿ, ರಸಾಯನದ ರುಚಿ ಕೆಡಿಸಲಾರೆ.  ಶೌಚಪುರಾಣವೆಂದರೂ ನಡೆಯುತ್ತಿತ್ತು (ಅಷ್ಟೇಕೆ, ಸರಿಯಾದ ಸಮಯದಲ್ಲಿ ತಕ್ಕ ಎಡೆ ಸಿಕ್ಕದೇ ಕೈಮೀರಿದರೆ ಉದ್ದಕ್ಕೂ 'ಶೌಚಚರಿತೆ'ಯೂ ಆದೀತು, ’ಉಚ್ಚಾಟ’ನೆಯೂ ಆದೀತು).  ಶೌಚವೇನೋ ಪುರಾತನವಾದದ್ದೇ, ಪುರಾಣವೆನಿಸಿಕೊಳ್ಳಲು ಬೇಕಾದ ಹಳಮೆ ಅದಕ್ಕಿದೆ,  ನಮ್ಮಲ್ಲಿ ಶೌಚವು ಚಿಂತನೆಯ ವಿಷಯವಾದದ್ದು ಇತಿಹಾಸದಲ್ಲಿ ತೀರ ಇತ್ತೀಚಿಗೆ, ಒಂದೆರಡು ಗಂಟೆಗಳ ಹಿಂದೆ ಎನ್ನಿ. 

ನೋಡಿ, ಏನೋ ಹೇಳಲು ಹೋಗಿ ಏನೋ ಹೇಳತೊಡಗಿದೆ.  ನಿಮ್ಮ ತಕರಾರು ಶೌಚದ ಬಗೆಗಾಗಲೀ ಅವರವರ ಮನೆಯಲ್ಲಿ ಅವರವರು ಶೌಚಕ್ಕಾಗಿ ತೆಗೆದುಕೊಳ್ಳುವ ಸಮಯದ ಬಗೆಗಾಗಲೀ ಅಲ್ಲವೆಂದು ನನಗೆ ಗೊತ್ತು. ಬೆಳಬೆಳಗ್ಗೆ ರಾಮಾ ಕೃಷ್ಣಾ ಎನ್ನುವುದು ಬಿಟ್ಟು ಶೌಚಚಿಂತನೆ ಮಾಡುತ್ತಿದ್ದಾನಲ್ಲಾ ಎಂಬುದು ನಿಮ್ಮ ತಕರಾರು ಅಲ್ಲವೇ?  ಅದನ್ನೇ ಹೇಳಲು ಹೊರಟೆ, ಆದರೆ ಈ ಶೌಚವೆಂಬುದು ಭಾವನಾತ್ಮಕವಿಷಯ ನೋಡಿ, ಅದರ ಸಮರ್ಥನೆಗಿಳಿದುಬಿಟ್ಟೆ, ಇರಲಿ.  ವಿಷಯಕ್ಕೆ ಬರೋಣ.  ನಮ್ಮಲ್ಲಿ ಇದೊಂದು ದೊಡ್ಡ ಮೌಢ್ಯ, ದೈವಚಿಂತನೆಗೂ ಶೌಚಚಿಂತನೆಗೂ ಅದು ಹೇಗೋ ಥಳಕು ಹಾಕುವುದು.  ಶೌಚದಲ್ಲಿ ದೈವಚಿಂತನೆ ಮಾಡಬಾರದೆಂದಾಗಲೀ, ದೈವಸಾನ್ನಿಧ್ಯದಲ್ಲಿ ಶೌಚಚಿಂತನೆ (ಕೊನೆಯಪಕ್ಷ ಚಿಂತೆ, ಕೆಲವೊಮ್ಮೆ ಅನಿವಾರ್ಯವಾಗಿ) ಮಾಡಬಾರದೆಂದಾಗಲೀ ಇದೆಯೇ?  ಶೌಚಾಶೌಚಗಳು ಪ್ರಕೃತಿವ್ಯಾಪಾರ, ಪರಮಾತ್ಮನಿಂದಲೇ ನಿರ್ಮಿಸಲ್ಪಟ್ಟಂಥವು.  ಚಿಂತನೆಯನ್ನೇನೋ ಮಾಡದಿದ್ದೇವು, ಆದರೆ ಚಿಂತೆ?  ನಮ್ಮ ಕೈಯಲ್ಲಿದೆಯೇ?  ಬಂದರೆ ಮುಗಿಯಿತು.  ದೈವಕ್ಕೆ ಅಪಚಾರವಾಗದಂತೆ ಅಲ್ಲಿಂದ ಕಳಚಿಕೊಳ್ಳುವುದು ಹೇಗೆಂಬ ಚಿಂತೆ ಬಾಧಿಸದೇ ಬಿಟ್ಟೀತೇ?  ಪರಮಾತ್ಮನೇನೋ ಭಯಕೃದ್ಭಯನಾಶನ, ಹೌದು.  ಆದರೆ ಈ ಕ್ಷಣಕ್ಕಂತೂ ಆತ ಭಯಕೃತ್ ಅಷ್ಟೇ.  ಭಯನಾಶನನೂ ಹೌದೆಂಬ ಮಾತು ನಮ್ಮ ಪ್ರಜ್ಞೆಯ ಮೇಲ್ಪದರದಲ್ಲಿದೆಯೇ ವಿನಾ ನಂಬಿಕೆಯಾಗಿ ಬೇರು ಬಿಟ್ಟಿಲ್ಲ; ಅವಸರವನ್ನು ರೂಪಿಸಿದ ಪರಮಾತ್ಮನು ಅದಕ್ಕೊಂದು ದಾರಿಯನ್ನೂ ಕಲ್ಪಿಸುತ್ತಾನೆಂದು ಮನಸ್ಸು ನಂಬಲೊಲ್ಲದು.  ನಂಬಿದರೂ ಆ ಮನಸ್ಸಿನ ಹಿಡಿತದಲ್ಲಿಲ್ಲದ ದೇಹ ನಂಬಲೊಲ್ಲದು.  ತನ್ನದೆಂಬುದನ್ನೆಲ್ಲವನ್ನೂ ಕೈಬಿಟ್ಟು "ಮಾನಾಭಿಮಾನ ನಿನ್ನದೋ" ಎಂದು ದ್ರೌಪದಿಯಂತೆ ಎರಡೂ ಕೈಗಳನ್ನು ಎತ್ತಲೊಲ್ಲದು.  ಬದಲಿಗೆ ಎರಡು ಬೆರಳನ್ನಷ್ಟೇ ಎತ್ತುತ್ತದೆ.  ಬಾಧೆಗೊಳಪಟ್ಟ ದೇಹದ್ದು ದ್ವೈತಚಿಂತನೆ - ಪರಮಾತ್ಮನೇ ಬೇರೆ, ಈ ಸಂಕಟವೇ ಬೇರೆ, ನೀನೇ ಬೇಗ ಮುಕ್ತಿಯ ದಾರಿ ಹುಡುಕಿಕೋ ಎನ್ನುತ್ತದೆ.  ಏನು ಮಾಡುತ್ತೀರಿ?  ಪರಮಾತ್ಮನನ್ನು ಈ ವಿಷಯದಲ್ಲಿ ದೂರುವಂತಿಲ್ಲ.  ಪ್ರಕೃತಿ ಪರಮಾತ್ಮನ ಸೃಷ್ಟಿ, ಅದರ ವಿಕೃತಿ ನಮ್ಮದೇ ಸೃಷ್ಟಿಯಷ್ಟೇ?  ದೇಹದಲ್ಲೇನೋ ಹೊರದಾರಿಯನ್ನು ಪರಮಾತ್ಮನು ಅಚ್ಚುಕಟ್ಟಾಗಿ ನಿರ್ಮಿಸಿ ಕೈತೊಳೆದುಕೊಂಡಿದ್ದಾನೆ (ಮತ್ತೆ?  ಕೈ ತೊಳೆಯಬೇಡವೇ).  ಆದರೆ ಅಲ್ಲಿ 'ಹೋಗ'ಬಾರದು ಇಲ್ಲಿ ಹೋಗಬಾರದು ಎಂಬ ಕಟ್ಟುಪಾಡು ನಮ್ಮದೇ ಸೃಷ್ಟಿ.  ಪ್ರಾಣಿಗಳನ್ನು ಮೀರಿದೆವೆಂಬ ಹಮ್ಮು ನಮಗಿದೆಯಲ್ಲವೇ? ಅದಕ್ಕೇ ನಮಗಿದು ಶಿಕ್ಷೆ.  ಆಯ್ತು, ಹಾಗೂ, ಪರಮಾತ್ಮನೇ ನೀಡಿರುವ ಬುದ್ಧಿಯನ್ನೂ ವಿವೇಕವನ್ನೂ ಉಪಯೋಗಿಸಿ, ಹೇಗೋ ಶೌಚಾಲಯವನ್ನು ಕಂಡುಹಿಡಿದು (ದೇವರ ದಯದಿಂದ ಅದು ಖಾಲಿಯೂ ಇದ್ದು), ಹೋಗಿ ಕೂತೆವೆನ್ನಿ.  ಆ 'ಮೋಕ್ಷ'ಕ್ಕೆ ಇನ್ನಾವ ಮೋಕ್ಷ ಸಾಟಿ?  "ಅಬ್ಬಾ, ಕಾಪಾಡಿದೆಯಲ್ಲ ಪರಮಾತ್ಮ" ಎಂಬ ಉದ್ಗಾರ ಆ ಶೌಚದಲ್ಲೂ ಹೊಮ್ಮಿದರೆ ತಪ್ಪೇ?  ಆತ ಸರ್ವಾಂತರ್ಯಾಮಿಯಲ್ಲವೇ?  ಶಿಷ್ಯರೆಲ್ಲರಿಗೂ ವ್ಯಾಸರಾಜರು ಒಂದೊಂದು ಬಾಳೆಯ ಹಣ್ಣನ್ನು ನೀಡಿ "ಯಾರೂ ಇಲ್ಲದೆಡೆ ತಿಂದು ಬನ್ನಿ" ಎಂದಾಗ, ಮೂರ್ಖಪಂಡಿತರು ಶೌಚದಲ್ಲಿ ಗುಟ್ಟಾಗಿ ತಿಂದು ಬಂದರಂತೆ, ಆದರೆ ಅಲ್ಲಿಯೂ ಪರಮಾತ್ಮನು ಇದ್ದಾನೆಂದು ಮನಗಂಡ ಕನಕದಾಸರು ಹಣ್ಣನ್ನು ತಿನ್ನದೇ ಬಂದರಲ್ಲವೇ?  ಎಲ್ಲೆಲ್ಲಿಯೂ ಇರುವ ಪರಮಾತ್ಮನನ್ನು ಇಲ್ಲೂ ಸ್ಮರಿಸಿದರೆ ತಪ್ಪೇನು?  ಪುರಂದರದಾಸರೇ ಹೇಳಿಲ್ಲವೇ?

ಗಂಧವ ಪೂಸಿ ತಾಂಬೂಲ ಮೆಲುವಾಗ ಕೃಷ್ಣಾ ಎನಬಾರದೇ, ತನ್ನ
ಮಂದಗಮನೆ ಕೂಡ ಸರಸವಾಡುತಲೊಮ್ಮೆ, ಕೃಷ್ಣಾ ಎನಬಾರದೇ?

"ಶೌಚದಲ್ಲಿರುವಾಗೊಮ್ಮೆ ಕೃಷ್ಣಾ ಎನಬಾರದೇ" ಎಂದಿಲ್ಲ ಒಪ್ಪೋಣ, ಆದರೆ ಅದೇ ಕೃತಿಯಲ್ಲಿ ಹೇಳಿದ್ದಾರಲ್ಲ

ದುರಿತರಾಶಿಗಳನು ತರಿದು ಬಿಸಾಡಲು, ಕೃಷ್ಣಾ ಎನಬಾರದೆ, ಸದಾ
ಗರುಡವಾಹನ ಸಿರಿಪುರಂದರವಿಠಲನ್ನ ಕೃಷ್ಣಾ ಎನಬಾರದೇ?

"ಸದಾ" ಕೃಷ್ಣಾ ಎನ್ನಬೇಕೆಂದಿರುವಾಗ, ಶೌಚಕಾಲವೂ ಆ ಸದಾಕಾಲದಲ್ಲೇ ಬರುತ್ತದಲ್ಲವೇ?  ಅದರಲ್ಲೂ "ದುರಿತರಾಶಿಗಳನ್ನು ತರಿದು ಬಿಸಾಡಲು" ಎಂದು ಸ್ಪಷ್ಟವಾಗಿ ಹೇಳಿದ್ದಾರೆ.  ಶೌಚವೆಂಬುದೇನು ಕಡಿಮೆ ದುರಿತರಾಶಿಯೇ?  ಸಂಕಟಬಂದಾಗ ವೆಂಕಟರಮಣನಲ್ಲದೇ ಇನ್ನಾರು ನೆನಪಿಗೆ ಬಂದಾರು?  ಶೌಚವೆಂತಹ ಸಂಕಟ ಎಂದಿರಾ?  ಮೂಲವ್ಯಾಧರನ್ನು (ಮೂಲವ್ಯಾಧಿಯಿಂದ ಬಾಧೆಪಡುವವರನ್ನು) ಕೇಳಿ ನೋಡಿ, ಗೊತ್ತಾದೀತು.  ಇನ್ನೊಂದು ಕತೆ ನೆನಪಾಗುತ್ತಿದೆ, ಹೇಳಿ, ಆಮೇಲೆ ಹೆಚ್ಚು ಸತಾಯಿಸದೇ ವಿಷಯಕ್ಕೆ ಬಂದುಬಿಡುತ್ತೇನೆ.  ಭಕ್ತಶಿರೋಮಣಿ ಹನುಮಂತನಿಗೂ ಈ ಶೌಚದ ಮಡಿವಂತಿಕೆಯ ಮೌಢ್ಯ ಮೆಟ್ಟಿಕೊಂಡಿತ್ತಂತೆ (ಆತನಿಗೆ ಪುರಂದರದಾಸರ ಹಾಡಿನ ಪರಿಚಯವಿದ್ದಿರಲಿಕ್ಕಿಲ್ಲ, ಆ ಕಾಲಕ್ಕೆ).  ಯಾರೋ ಪಾಪ ಒಬ್ಬ ಶೌಚಪೀಡಿತ, ಶೌಚಕ್ಕೆ ಕುಳಿತಿದ್ದನಂತೆ.  ಒಳಗಿನ ಬೇಗೆ, ಪಾಪ ಏನು ಸಂಕಟವಾಯಿತೋ, ಮುಕ್ಕುವಾಗೊಮ್ಮೆ "ರಾಮಾ... ರಾಮರಾಮಾ..." ಎಂದು ಉದ್ಗರಿಸಿದನಂತೆ.  ಆಂಜನೇಯನಿಗೆ ಈ ರಾಮನಾಮಸ್ಮರಣೆ ಕಿವಿಗೆ ಬಿತ್ತಂತೆ.  ಮಾರುತಿ, "ಯತ್ರಯತ್ರ ರಘುನಾಥಕೀರ್ತನಂ ತತ್ರತತ್ರ ಕೃತ ಮಸ್ತಕಾಂಜಲಿಂ" ತಾನೇ?  ಹೋಗಿ ನೋಡುತ್ತಾನೆ, ನೋಡುವುದೇನಿದೆ? ಈ ಪಾಪಿ ಶೌಚದಲ್ಲಿ ಕುಳಿತು ರಾಮನಾಮಸ್ಮರಣೆ ಮಾಡುತ್ತಿದ್ದಾನೆ!  ಸಿಟ್ಟು ಬರದಿರುತ್ತದೆಯೇ ಆ ರಾಕ್ಷಸಾಂತಕನಿಗೆ?  ಮುಷ್ಠಿ ಬಿಗಿದು ತಲೆಗೆ ಒಂದೇಟು ಅಪ್ಪಳಿಸಿದನಂತೆ.  ಆ ಸೀನ್ ಅಲ್ಲಿಗೆ ಕಟ್ ಆಗಿದೆ.  ಆ ಶೌಚಿಯ ಗತಿ ಏನಾಯಿತೋ ಆ ಕತೆ ಹೇಳುವುದಿಲ್ಲ.  ಬಹುಶಃ ಒಳಗೆ ಕಟ್ಟಿಕೊಂಡಿದ್ದೆಲ್ಲಾ ಒಂದೇಟಿಗೆ ಹೊರಬಂದು, ಶೌಚಬಾಧೆಯಿಂದ ಮುಕ್ತಿ ದೊರಕಿರಲೂ ಬಹುದು, ಆತ ಕೃತಜ್ಞನಾಗಿ (ಕಣ್ಣೀರಿನಲ್ಲೇ ಕೈ ತೊಳೆದುಕೊಂಡು) ಮನೆಗೆ ಹಿಂದಿರುಗಿರಲೂ ಬಹುದು.  ಇರಲಿ, ಕತೆಯ ಮುಂದಿನ ಸೀನು ಸ್ವಾರಸ್ಯಕರವಾಗಿದೆ.  ಮಾರುತಿ, ಒಡೆಯನ ಸೇವೆಯಲ್ಲಿ ಲೀನನಾಗಿದ್ದಾನೆ.  ರಾಮನಿಗೆ ಎಣ್ಣೆತಿಕ್ಕಿ ಅಭ್ಯಂಜನ ಮಾಡಿಸುವ ಕೆಲಸ.  ತಲೆಗೆ ಎಣ್ಣೆ ತಿಕ್ಕಲು ಕೈಯಲ್ಲಿ ಎಣ್ಣೆ ಹಾಕಿಕೊಂಡು ಆ ಮೃದುಕುಟಿಲಕೇಶರಾಶಿಯನ್ನು ತುಸುತುಸುವೇ ಸರಿಸುತ್ತಿದ್ದಾನೆ; ಕೈಗೇನೋ ದೊಡ್ಡ ಗುಬುಟೊಂದು ಸಿಕ್ಕಿದಂತಾಗಿ ಬೆಚ್ಚುತ್ತಾನೆ; ಇದೇನೆಂದು ಕೂದಲು ಸರಿಸಿ ನೋಡುತ್ತಾನೆ, ರಾಮನ ತಲೆಯ ಮೇಲೆ ಅಷ್ಟು ದಪ್ಪ, ಇಷ್ಟುದ್ದ ಬೋರೆ!.  ಹನುಮನಿಗೆ ದುಃಖ ಕೋಪಗಳೆರಡೂ ಒಟ್ಟಿಗೇ ಉಂಟಾಗುತ್ತದೆ.  "ಪ್ರಭೂ, ನಿನ್ನ ತಲೆಯ ಮೇಲೆ ಹೀಗೆ ಹೊಡೆದವನನ್ನು ಇಲ್ಲವೆನಿಸಿಬಿಡುತ್ತೇನೆ ಹೇಳು ಯಾರದು" ಎನ್ನುತ್ತಾನೆ ಹಲ್ಲು ಕಡಿಯುತ್ತಾ.  ರಾಮ ಹೇಳುತ್ತಾನೆ "ನನಗೂ ಗೊತ್ತಿಲ್ಲಪ್ಪಾ ಬೆಳಗ್ಗೆ ಯಾರೋ ಭಕ್ತ ನನ್ನ ಸ್ಮರಣೆ ಮಾಡಿದ.  ಆನಂದದಿಂದ ಕಣ್ಮುಚ್ಚಿದೆ, ಮರುಕ್ಷಣವೇ ತಲೆಯ ಮೇಲೆ ಯಾರೋ ಬಲವಾಗಿ ಗುದ್ದಿದಂತಾಯಿತು, ಮಾರುತೀ ಎಂದು ಚೀರಿದ್ದೊಂದೇ ನೆನಪು.  ಪಾಪ ಆ ನನ್ನ ಭಕ್ತನಿಗೆ ಅದಾವ ಪಾಪಿ ಹೊಡೆದನೋ, ನನ್ನ ತಲೆ ಅಸಾಧ್ಯವಾಗಿ ನೋಯುತ್ತಿದೆ".  ಇದನ್ನು ಕೇಳಿದ ಮಾರುತಿಗೆ, ಜ್ಞಾನೋದಯವಾಗಿ ತನ್ನ ಅಕಾರ್ಯಕ್ಕೆ ಬಹುವಾಗಿ ಪಶ್ಚಾತ್ತಾಪಪಟ್ಟನಂತೆ, ಇದು ಕತೆ.  ಇದು ನಿಜವೇ ಇರಬೇಕು.  ಏಕೆಂದರೆ, ಆಮೇಲೆ ಸ್ವತಃ ನಾನೇ ಅದೆಷ್ಟೋ ಎಂಥೆಂಥದ್ದೋ ಸಂದರ್ಭಗಳಲ್ಲಿ ರಾಮಾ ಎಂದಿದ್ದೇನೆ, ರಾಮರಾಮಾ ಎಂದಿದ್ದೇನೆ.  ಮಾರುತಿ ನನಗೆಂದೂ ಹೊಡೆದದ್ದಿಲ್ಲ.  ಬಾಷ್ಪವಾರಿಪರಿಪೂರ್ಣಲೋಚನನಾಗಿ ಆಶೀರ್ವದಿಸಿರಬೇಕೆಂದೇ ನನ್ನ ನಂಬಿಕೆ.

ಓ, ದೈವಚಿಂತನೆಯ ಬಗ್ಗೆ ನಿಮ್ಮದೇನು ತಕರಾರಿಲ್ಲವೇ?  ತಕರಾರೇನಿದ್ದರೂ ಶೌಚಚಿಂತನೆಯ ಬಗೆಗೇ?  ಸರಿ ಬಿಡಿ.  ನನಗೇನು ಚಿಂತನೆಗೆ ಶೌಚವೇ ಆಗಬೇಕೆಂದೇನಿಲ್ಲ.  ಅಥವಾ ಶೌಚ ಆಗಬಾರದೆಂಬ ಮಡಿವಂತಿಕೆಯೂ ಇಲ್ಲ.  ಎಲ್ಲೋ ಈ ವಿಷಯ ಬಂತು, ಚಿಂತನೆ ಹರಿಯಿತಷ್ಟೇ, ಇರಲಿ, ಅದೇಕೆ ಬಂದಿತೆಂದರೆ, ಮಿತ್ರರೊಬ್ಬರು, ಪಬ್ಲಿಕ್ ಟಾಯ್ಲೆಟುಗಳಲ್ಲಿ ನಮನಮೂನೆ ಹಾಡುಗಳನ್ನು ಹಾಡುತ್ತಾ ಕುಳಿತವರ ಬಗ್ಗೆ ಒಂದು ನಗೆಬರಹ ಬರೆದಿದ್ದರು.  ಯಾರೋ ಒಬ್ಬ ಪಬ್ಲಿಕ್ ಟಾಯ್ಲೆಟ್ಟಿನಲ್ಲಿ ಕುಳಿತು "ಓ... ಮೇಘವೇ, ಮೇಘವೇ ಓಡಿಬಾ" ಎಂದು ಹಾಡುತ್ತಿದ್ದನಂತೆ.  ಇನ್ನೊಬ್ಬ ಯಾರೋ "ಓ ಮಲೆನಾಡಿನ ಮೈಸಿರಿಯೇ" ಎಂದು ಹಾಡುತ್ತಿದ್ದನಂತೆ.  ಇವರು ಹೀಗೆ ಹಾಡುತ್ತಿದ್ದರೆ ಹೊರಗಿರುವವರು ಏನೆಂದು ಅರ್ಥಮಾಡಿಕೊಳ್ಳಬೇಕು ಎನ್ನುವುದು ನನ್ನ ಮಿತ್ರರ ಅಳಲು.  ಅದಕ್ಕೆ ನನಗೆನಿಸಿದ್ದು, ಅಲ್ಲಿಂದ (ಶೌಚಾಲಯದಿಂದ) ಹೊಮ್ಮುವ ಹಾಡುಗಳಿಗೆ ಅರ್ಥ ಕಲ್ಪಿಸಹೊರಡುವುದು ವ್ಯರ್ಥಶ್ರಮ.  ಅವರಿಬ್ಬರೂ ಬಹುಶಃ ಉಳಿದವರನ್ನೂ ಹಾಡಲು ಪ್ರೇರೇಪಿಸಿ ಟಾಯ್ಲೆಟ್ಟಿನ ಪ್ರಶಾಂತವಾತಾವರಣವನ್ನು ಕದಡಲು ಯತ್ನಿಸುತ್ತಿದ್ದರೆನಿಸುತ್ತದೆ. ಇಂಥವರಿಗೆ ಮೌನವೇ ಪ್ರತ್ಯುತ್ತರ. ಅದಕ್ಕೇ ನನ್ನ ಮಿತ್ರರಿಗೆ ಸಲಹೆ ಕೊಟ್ಟೆ - ನೀವೂ ಮೌನವಾಗಿಯೇ ಪ್ರತ್ಯುತ್ತರ ನೀಡಬೇಕಿತ್ತು "ಮೂಗನ ಕಾಡಿದರೇನು, ಸವಿ ಮಾತನು ಆಡುವನೇನು... ಕೋಪಿಸಲು, ನಿಂದಿಸಲು, ಮೌನವ ಮೀರುವನೇನು"

ಕೆಲವೊಮ್ಮೆ ಹೀಗಾಗುತ್ತದೆ.  ತಮಾಷೆಯಲ್ಲ, ಹಿರಿಯರೊಬ್ಬರು (ಎಲ್ಲಿ ಹೋದರೂ ಹಾಡುವ ಅಭ್ಯಾಸ ಬಿಡದವರು) ಒಮ್ಮೆ ಟಾಯ್ಲೆಟ್ಟಿನಿಂದ ಹಾಡುತ್ತಿದ್ದರು "ಏನಿದೀ ಗ್ರಹಚಾರವೋ... ಏನಿದೀ ವನವಾಸವೋ... ಏನ ಮಾಡಿದೆನೆಂದು ಈ ಗತಿ ನನಗೆ ತಂದೆಯೊ ಪಶುಪತೀ..."

ಅವರು ಹಾಡುತ್ತಿದ್ದುದೇನೋ ಪಾಪ, ಅಷ್ಟನ್ನೇ.  ಅವರ ಕಷ್ಟವೇನೋ ಯಾರಿಗೆ ಗೊತ್ತು!  ಆದರೆ ಈ ಕಿಡಿಗೇಡಿ ಮನ ಬಿಡಬೇಕಲ್ಲ, ಹಾಡಿನ ಮುಂದಿನ ಚರಣವನ್ನು ಆ ಸಂದರ್ಭದಲ್ಲಿ ಅನ್ವಯಿಸಿಬಿಟ್ಟಿತು, ಕಲ್ಪಿಸಿಕೊಂಡು ನಗು ತಡೆಯಲಾಗಲಿಲ್ಲ

"ಕಾಲ ಕಾಲಕೆ ತಿಂದು ತೇಗಿ
ಕಾಲ ಕಳೆಯುತಲಿದ್ದ ಪ್ರಾಣಿಗೆ
ಕೂಳು ಇಲ್ಲದೆ ನೀರು ಇಲ್ಲದೆ
ಅಲೆವ ಗತಿಯಿದು ಬಂದಿತೋ"

ಸದ್ಯ, ನನ್ನ ನಗೆ ಆ ಹಿರಿಯರಿಗೆ ತಲುಪಲಿಲ್ಲ, ಅಷ್ಟಕ್ಕೆ ನಾನು ಬಚಾವು.  ನಗೆ ಕೊಲ್ಲುವಂತೆ ಹಗೆ ಕೊಲ್ಲದು.  ಇಂತಹ ಸಂದರ್ಭದಲ್ಲಿ ನಗೆಯೆನ್ನುವುದು ಆತ್ಮಹತ್ಯೆಗೆ ಅದ್ಭುತ ಸಾಧನ.  ಒಮ್ಮೆ ಹೀಗಾಯಿತು, ಕೆಲವು ದಶಕಗಳ ಹಿಂದೆ.  ನಾನು ನನ್ನ ಸ್ಥೂಲದೇಹಿ ಮಿತ್ರನೊಬ್ಬನೊಡನೆ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ.  ಅಲ್ಲೆಲ್ಲ ತೂಕ ನೋಡುವ ಮಿಶಿನ್ನುಗಳಿದ್ದುವಲ್ಲ - ನನ್ನ ಮಿತ್ರನಿಗೆ ತೂಕ ನೋಡಿಕೊಳ್ಳೋಣವೆನಿಸಿತು.  ನೋಡಿದರೆ ಎಪ್ಪತ್ತು ಕಿಲೋ ತೋರಿಸುತ್ತಿತ್ತು!  ಕಾರ್ಡಿನ ಹಿಂದೆ ರೋಗಬಾಧೆ ಎಂಬ ಒಂದು ಪದದ ಭವಿಷ್ಯ ಬೇರೆ.  ಪಾಪ ಈತ ಭೂಮಿಗಿಳಿದು ಹೋದ.  ಅರವತ್ತೈದಿದ್ದನಂತೆ.  ಕಳೆದೊಂದು ತಿಂಗಳಿಂದ ಸಿಕ್ಕಾಪಟ್ಟೆ ಡಯಟ್ ಮಾಡುತ್ತಿದ್ದನಂತೆ, ಐದು ಕಿಲೋ ಇಳಿದಿರಬೇಕೆಂದು ಅವನೆಣಿಕೆ.  ಇಲ್ಲಿ ನೋಡಿದರೆ ಐದು ಕಿಲೋ ಹೆಚ್ಚಾಗಿತ್ತು.  ಸಹಜವಾಗಿಯೇ ಮಂಕಾಗಿದ್ದ.  ಬಸ್ ಬರುವುದಕ್ಕೆ ಇನ್ನೂ ಒಂದು ಗಂಟೆಯ ಕಾಲವಿತ್ತು.  ಆರು ಗಂಟೆಯ ಪಯಣ ಬೇರೆ.  ಯಾವುದಕ್ಕೂ ಇರಲಿ ಒಮ್ಮೆ ಟಾಯ್ಲೆಟ್ಟಿಗೆ ಹೋಗಿ ಬಂದುಬಿಡುತ್ತೇನೆ ಎಂದು, ಬ್ಯಾಗುಗಳನ್ನು ನನ್ನ ಕೈಗೆ ಕೊಟ್ಟು ಹೋದ.  ಹೋದವನು ಹತ್ತೇ ನಿಮಿಷದಲ್ಲಿ ಬಂದನೆನ್ನಿ.  ಮತ್ತೆ ಸುತ್ತಾಡುತ್ತಾ ಅದೇ ತೂಕ ಹೇಳುವ ಮೆಶಿನ್ನಿನ ಬಳಿ ಬಂದೆವು.  ಇವನಿಗೆ ಅದೇನೋ ಅನುಮಾನ, ಮಶೀನು ಕೆಟ್ಟಿರಬೇಕು, ಮತ್ತೊಮ್ಮೆ ನೋಡುವೆ ತಡಿ ಎಂದು ಮತ್ತೆ ನೋಡಿದ.  ಏನಾಶ್ಚರ್ಯ!  ಈಗ ಆ ಯಂತ್ರ, 55 ಕಿಲೋ ತೋರಿಸುತ್ತಿತ್ತು - ಹಿಂದೆ ತೋರಿಸಿದ್ದಕ್ಕಿಂತ ಏಕ್ ದಂ 15 ಕಿಲೋ ಕಡಿಮೆ!  ಅದೂ ಕೇವಲ ಹದಿನೈದಿಪ್ಪತ್ತು ನಿಮಿಷಗಳ ಅಂತರದಲ್ಲಿ!!  ಇಪ್ಪತ್ತು ನಿಮಿಷದಲ್ಲಿ ಹದಿನೈದು ಕಿಲೋ ಇಳಿಸುವ ಯಾವ ಕೆಲಸವನ್ನೂ ಆತ ಮಾಡಿದ್ದಿಲ್ಲ, ಟಾಯ್ಲೆಟ್ಟಿಗೆ ಹೋಗಿ ಬಂದದ್ದನ್ನು ಬಿಟ್ಟು.  ಈಗ ಇದು ಟಾಯ್ಲೆಟ್ಟಿನ ಮಹಿಮೆಯಲ್ಲದೇ ಮತ್ತೇನು?  ನಗೆ ಕೊಲ್ಲುವಂತೆ ಹಗೆ ಕೊಲ್ಲದು ನೋಡಿ.  ಜೀವರಕ್ಷಕವಾದ ವಿವೇಕ ಮತ್ತೊಮ್ಮೆ ನನ್ನ ಕಿಸುಬಾಯನ್ನು ಮುಚ್ಚಿಸಿ ನನ್ನನ್ನು ಕಾಪಾಡಿತು.  ಒಳಗೇ ನಕ್ಕುಕೊಂಡು ಸುಮ್ಮನಾದೆ.  ಇವನಿಗೋ ಅನುಮಾನ, ಮಶೀನು ಇವನಂದುಕೊಂಡದ್ದಕ್ಕಿಂತ ಕಡಿಮೆ ತೋರಿಸುತ್ತಿತ್ತು.  ಇನ್ನೊಂದರಲ್ಲಿ ಒಮ್ಮೆ ನೋಡಿಬಿಡೋಣ ಎಂದವನನ್ನು, ಬೇಡ ನಡೆ ಬಸ್ಸು ಬಂತು, ಇದು ಸರಿಯಾಗಿದೆ ಎಂದು ದಬ್ಬಿಕೊಂಡು ಹೋದದ್ದಾಯಿತು.  ಅಲ್ಲದೇ ಈ ಬಾರಿಯ ಭವಿಷ್ಯಚೀಟಿಯಲ್ಲಿ "ಪ್ರಣಯಲಾಭ" ಎಂದು ಬೇರೆ ಬರೆದಿತ್ತು.  ಸುಕಾಸುಮ್ಮನೇ ಆ ಖುಷಿಯನ್ನೇಕೆ ಹಾಳುಗೆಡವಬೇಕು ಎಂಬ ಮಾತಿಗೆ ಸೋತು ಸುಮ್ಮನಾದನೆನ್ನಿ.  ಅದೇನೇ ಇರಲಿ, ಅಂದು ನನಗೊಂದು ಹೊಸ ಅರಿವಂತೂ ಮೂಡಿತು.  ಟಾಯ್ಲೆಟು ತೂಕ ಇಳಿಸುವಲ್ಲಿಯೂ ಭಾರೀ ಸಹಕಾರಿ ಎಂಬುದೇ ಆ ಅರಿವು.  ಸರ್ಕಾರವೇಕೆ "ಟಾಯ್ಲೆಟ್ಟಿನಲ್ಲಿ ಹೆಚ್ಚು ಹೆಚ್ಚು ಸಮಯ ಕಳೆಯಿರಿ, ತೂಕವಿಳಿಸಿ ಆರೋಗ್ಯವಂತರಾಗಿರಿ" ಎಂಬ ಘೋಷಣೆಯನ್ನು ಜಾರಿಗೆ ತರಬಾರದು?  "ಶೌಚವೇ ಆರೋಗ್ಯ; ಆರೋಗ್ಯವೇ ಭಾಗ್ಯ" ಎಂಬ ಘೋಷಣೆಯೊಂದಿಗೆ ಶೌಚಭಾಗ್ಯ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು.  ಶೌಚದಲ್ಲಿಯೇ ಹೆಚ್ಚುಹೆಚ್ಚು ಸಮಯ ಕಳೆದವರನ್ನು ಗುರುತಿಸಿ "ಶೌಚಶ್ರೀ" ಪ್ರಶಸ್ತಿ ನೀಡುವ ಬಗೆಗೂ ಯೋಚಿಸಬಹುದು. 

ನೀವೇನೇ ಹೇಳಿ, ಈ ಟಾಯ್ಲೆಟ್ ಎನ್ನುವುದು ಒಂದು ರೀತಿ ತಪೋಭೂಮಿಯಿದ್ದಂತೆ. ಅಲ್ಲಿ ಮಾಡಿದ ಯಾವ ಕೆಲಸವೂ ಬೇಗ ಕೈಗೂಡುತ್ತದೆಂಬ ನಂಬಿಕೆಯಿದೆ. ಅನೇಕರು ಅದಕ್ಕೇ ಟಾಯ್ಲೆಟ್ಟಿನಲ್ಲೇ ಯಜ್ಞಯಾಗಾದಿಗಳನ್ನೂ ಮಾಡುವ ಅಭ್ಯಾಸವಿಟ್ಟುಕೊಂಡಿದ್ದಾರೆ - ಅಂತಹ ಸಿದ್ಧಯಾಜ್ಞಿಕರು ಆರಣಿಯನ್ನೂ ಸಮಿತ್ತನ್ನೂ ಜೇಬಿನಲ್ಲೇ ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಶೌಚಕುಂಡವನ್ನು ಕಂಡೊಡನೆಯೇ ಆರಣಿಯನ್ನು ಮಥಿಸಿ ಯಜ್ಞೇಶ್ವರನನ್ನು ಆಮಂತ್ರಿಸಿ, ಸಮಿತ್ತನ್ನು ಬಾಯಲ್ಲಿ ನಿಧಾನಿಸಿ, ಅಗ್ನಿಸ್ಪರ್ಶಮಾಡಿ, ಪೂರ್ಣಶ್ವಾಸೋಚ್ಛ್ವಾಸದೊಡನೆ ಧೂಮೋತ್ಪಾಟನ ಮಾಡಿ ಯಜ್ಞವನ್ನು ಪೂರ್ಣಗೊಳಿಸುತ್ತಾರೆ.  ಇದು ಧೀಶಕ್ತಿಯನ್ನುದ್ದೀಪಿಸಿ, ಚಿಂತನಕ್ರಮವನ್ನು ಚುರುಕುಗೊಳಿಸುತ್ತದೆನ್ನುತ್ತಾರೆ.  ಬೇರೆಲ್ಲೂ ಹೊಳೆಯದ ಅದ್ಭುತ ಚಿಂತನೆಗಳು ಪರಿಹಾರಗಳೂ ಅಲ್ಲಿ ಹೊಳೆದು ಯುರೇಕಾ ಎಂದು ಕೂಗಿಕೊಳ್ಳುತ್ತಾ, ಇದ್ದದ್ದು ಇದ್ದಂತೆಯೇ ಎದ್ದು ಓಡಿಹೋದವರೂ ಇದ್ದಾರೆ.   ತೀರಾ, ಬಾಗಿಲನ್ನೂ ವಾಪಸು ಮುಚ್ಚದೇ ಹಾಗೆ ಓಡಿಹೋಗುವವರ ಅನಾಗರೀಕತೆ ಕೆಲವೊಮ್ಮೆ ಸಿಟ್ಟು ತರಿಸುತ್ತದೆ, ಇರಲಿ.  ಆದರೆ ಜ್ಞಾನದ ’ಸೆಳವು’ ಅಂಥದ್ದು.  ಅಷ್ಟಲ್ಲದೇ ಅದನ್ನು ಜ್ಞಾನಮಂಟಪವೆಂದರೇ ಹಿರಿಯರು? ಕಲೆಯೂ ಒಂದು ಜ್ಞಾನಶಾಖೆಯಷ್ಟೇ?  ಆದ್ದರಿಂದ ಟಾಯ್ಲೆಟ್ಟಿನಲ್ಲಿ ಸಂಗೀತಾಭ್ಯಾಸವೂ ಶೀಘ್ರಫಲಪ್ರದವೆಂದು ಕೆಲವರಿಗೆ ಅನಿಸಿದ್ದರೆ ಅಚ್ಚರಿಯೇನಿಲ್ಲ.

ನನ್ನ ಎಳವೆಯಲ್ಲಿ, ಕೊಳ್ಳೇಗಾಲದಲ್ಲಿ ಒಂದು ವಠಾರದ ಮನೆಯಲ್ಲಿದ್ದೆವು. ಆಗ ನನಗಿನ್ನೂ ಮೂರೋ ನಾಲ್ಕೋ ವರ್ಷ, ಇನ್ನೂ ಸ್ಕೂಲಿಗೆ ಹೋಗುತ್ತಿದ್ದಿಲ್ಲ. ಸಾಲಾಗಿ ಇದ್ದ ಐದೋ ಆರೋ ಮನೆಗಳ ಕೊನೆಯಲ್ಲಿ ಕಾಮನ್ ಟಾಯ್ಲೆಟು. ನಮ್ಮ ಮನೆ ಆ ಸಾಲಿನ ಇನ್ನೊಂದು ತುದಿಯಲ್ಲಿ. ದಿನಾ ಬೆಳಗ್ಗೆ ನನ್ನನ್ನು ಟಾಯ್ಲೆಟ್ಟಿಗೆ ಕರೆದೊಯ್ಯುವ ಕೆಲಸ ನಮ್ಮ ತಂದೆಯವರದ್ದು. ನಮ್ಮ ತಂದೆಯವರಿಗೆ ರೇಡಿಯೋ ಕೇಳುವ ಹುಚ್ಚು. ಅವರ ಬಳಿ, ಕೈಯಲ್ಲಿ ಹೊತ್ತೊಯ್ಯಬಹುದಾದ ಟ್ರಾನ್ಸಿಸ್ಟರ್ ಒಂದಿತ್ತು. ಹಾಗಾಗಿ ನನ್ನನ್ನು ಕರೆದೊಯ್ಯಬೇಕಾದರೂ ಒಂದು ಕೈಯಲ್ಲಿ ನನ್ನ ಕೈ, ಇನ್ನೊಂದರಲ್ಲಿ ಟ್ರಾನ್ಸಿಸ್ಟರು ಹಿಡಿದೇ ಒಯ್ಯುತ್ತಿದ್ದರು.  ರೇಡಿಯೋದವರ ಸಮಯಪ್ರಜ್ಞೆಯಂತೆ ಸಂದರ್ಭಪ್ರಜ್ಞೆಯೂ ಅದ್ಭುತವಾದದ್ದು.  ಯಾವ ಸ್ಟೇಶನೋ ನೆನಪಿಲ್ಲ, ದಿನಾ ಆ ಸಮಯಕ್ಕೆ ಸರಿಯಾಗಿ ನಾದಸ್ವರ ವಾದನ. ವಠಾರದ ಜನ ಕಾಮೆಂಟು ಮಾಡುತ್ತಿದ್ದರು. "ಮೇಷ್ಟ್ರು ನೋಡು, ಮಗನನ್ನ ಒಳ್ಳೆ ರಾಜಕುಮಾರನ ರೀತಿ ನೋಡಿಕೊಳ್ಳುತ್ತಾರೆ. ಟಾಯ್ಲೆಟ್ಟಿಗೆ ಕರೆದೊಯ್ಯಬೇಕಾದರೂ ಮಂಗಳವಾದ್ಯ ತಾಳಮೇಳಗಳ ಸಮೇತ ಕರೆದೊಯ್ಯುತ್ತಾರೆ" ಎಂದು!  ನನಗೆ ಹೋಗುವಾಗಲೂ ವಾಲಗ, ಬರುವಾಗಲೂ ವಾಲಗ!  "ತಾಳಮೇಳಬಿರುದಾವಳಿ ಸಹಿತಲಿ ಪೌರವೀಧಿಯಲಿ ಮೆರೆಯುತ" ಬರುವ ಅನುಭವ.  ಚಡ್ಡಿ ಹಾಕಿಕೊಳ್ಳುವ ವಸ್ತ್ರಸೇವೆ ನಡೆಯುತ್ತಿದ್ದುದು ಮನೆಗೆ ಮರಳಿದ ಮೇಲೆ.

ಹೀಗೆ ಶೌಚಕಾಲದಲ್ಲಿ ತಾನಾಗಿಯೇ ಸಾಕಷ್ಟು ಸಂಗೀತದ ಗಲಾಟೆ ಇದ್ದುದರಿಂದ ಟಾಯ್ಲೆಟ್ಟಿನಲ್ಲಿ ಹಾಡುವ ಅಭ್ಯಾಸ ನನಗಂತೂ ಬರಲಿಲ್ಲ. ಬಂದಿದ್ದರೆ, ಯಾರಿಗೆ ಗೊತ್ತು, ದೊಡ್ಡ ಸಂಗೀತಗಾರನೇ ಆಗುತ್ತಿದ್ದೆನೇನೋ.  ಆದರೆ ಕೆಲವರು ಪಬ್ಲಿಕ್ ಟಾಯ್ಲೆಟ್ಟಿನಲ್ಲೂ ಹಾಡುಗಾರಿಕೆಯನ್ನು ಅಭ್ಯಾಸ ಮಾಡುತ್ತಾರೆಂದರೆ ಅವರ ಸಂಗೀತಾಸಕ್ತಿ ಮೆಚ್ಚಬೇಕಾದ್ದೇ. ಆದ್ದರಿಂದ ಟಾಯ್ಲೆಟ್ಟಿನಲ್ಲಿ ಹಾಡಲು ಅನುಕೂಲವಾದ ಕೆಲವು ಹಾಡುಗಳ ಪಟ್ಟಿ ಸುಲಭವಾಗಿ ಸಿಗುವಂತಿದ್ದರೆ ಸಾಧಕರಿಗೆ ಅನುಕೂಲವಾಗಬಹುದೇನೋ. ಅವರವರ ಆಸಕ್ತಿಗೆ ತಕ್ಕಂತೆ ಈ ಕೆಲವು ಹಾಡುಗಳನ್ನು ಅಭ್ಯಸಿಸಬಹುದು:

ರೊಮ್ಯಾನ್ಸ್ ಪ್ರಿಯರಿಗೆ:
ಈ ಸಮಯ ಆನಂದಮಯಾ
ನೂತನ ಬಾಳಿನ ನವೋದಯಾ

ಶ್ರುತಿ ಸೇರಿದೆ, ಹಿತವಾಗಿದೆ, ಬಾಳೆಲ್ಲ ಹಗುರಾಗಿದೇ...

ಸುತ್ತಮುತ್ತ ಯಾರು ಇಲ್ಲ...

ಆಕಾಶದಿಂದ ಧರೆಗಿಳಿದ ರಂಭೇ
ಇವಳೇ ಇವಳೇ, ಚಂದನದ ಗೊಂಬೆ

ಬಾರೇ ಬಾರೇ ಚೆಂದದ ಚೆಲುವಿನ ತಾರೆ
ಬಾರೇ ಬಾರೇ ಒಲವಿನ ಚಿಲುಮೆಯ ಧಾರೆ
 
ಸ್ವಾಭಿಮಾನದ ನಲ್ಲೆ ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೇ ಒಳಗೆ ವೇದನೆ ಇಳಿದು ಬಾ ಬಾಲೆ

ಬಳ್ಳಿಯೊಂದು ಬಳುಕುತಿದೆ...ಆಹಾ... ಆಹಾ ನಡೆಯುತ್ತಿದೆ

ಆಜಾ ಅಹಹ ಆಜಾ ಅಹಹ ಆಜ ಆಜ ಆಜ ಆಜ ಆಜಾ...

ಭಾವಗೀತೆ ಪ್ರಿಯರಿಗೆ:
ಅನಂತದಿಂ ದಿಗಂತದಿಂ
ನೋಡೆನೋಡೆ ಮೂಡಿತೊಂದು ಮೋಡಗೋಪುರ
ಗಿರಿಯ ಬಿತ್ತರ, ಶಿಖರದೆತ್ತರ

ಅವತಾರವೆಂದೆ ಎಂದಾರೆ ತಾಯೆ ಈ ಅಧಃಪಾತವನ್ನೇ (ಇಳಿದು ಬಾ)

ಹೊನ್ನ ಗಿಂಡಿಯ ಹಿಡಿದು ಕೈಯಲಿ ಹೇಮವಾರಿಯ ಚಿಮುಕಿಸೀ...
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ

ಮೂಡಲ ಮನೆಯಾ ಮುತ್ತಿನ ನೀರಿನ
ಎರಕಾವಾ ಹೊಯ್ದಾ ನುಣ್ಣನೆ ಎರಕಾವಾ ಹೊಯ್ದಾ...

ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮಜಲದಾ ಕಂಪು

ಆಗು ಗೆಳೆಯ ಆಗು, ನೀನು ಭರವಸೆಯಾ ಪ್ರವಾದಿ
ಹತಾಶೆಯಲ್ಲೇನಿದೇ, ಬರಿ ಶೂನ್ಯ ಬರೀ ಬೂದಿ

'ಸೋಗಪಾಟ್ಟು' ಪ್ರಿಯರಿಗೆ 
(ಸೋಗಪಾಟ್ಟು (ತ) = ಶೋಕದ ಹಾಡಿಗೆ ನಾವು ಪಡ್ಡೆಗಳು ಇಟ್ಟಿದ್ದ ಹೆಸರು):
ಏನಿದೀ ಗ್ರಹಚಾರವೋ ಏನಿದೀ ವನವಾಸವೋ
ಏನು ಮಾಡಿದೆನೆಂದು ಈ ಗತಿ ನನಗೆ ತಂದೆಯೊ ಪಶುಪತೀ

ನಿನದೇ ನೆನಪು ದಿನವೂ ಮನದಲ್ಲಿ
ನೋಡುವಾ ಆಸೆಯೂ ತುಂಬಿದೇ ನನ್ನಲಿ

ಒಲವಿನಾ ಪ್ರಿಯಲತೇ ಅವಳದೇ ಚಿಂತೇ...

ಅಹಹಾ ಅಹಹಾ... ವಿರಹಾ... ನೂರು ನೂರು ತರಹಾ

Happy-go-lucky ಮನೋಧರ್ಮವುಳ್ಳವರಿಗೆ:
ಸುಹಾನಾ ಸಫರ್ ಔರ್ ಎ ಮೌಸಮ್ ಹಸೀನ್
ಹಮೇ ಡರ್ ಹೈ ಹಮ್ ಖೋ ನಜಾಯೇಂ ಕಹೀಂ

ಆಡಿಸಿ ನೋಡು ಬೀಳಿಸಿ ನೋಡೂ
ಉರುಳಿ ಹೋಗದು

ನಗುನಗುತಾ ನಲೀ ನಲೀ ಏನೇ ಆಗಲಿ
ಎಲ್ಲಾ ದೇವನಾ ಕಲೆಯೆಂದೇ ನೀ ತಿಳೀ ಅದರಿಂದಾ ನೀ ಕಲಿ

ಎಲ್ಲೆಲ್ಲೂ ಊಟವನ್ನೇ ಕನಸುವವರಿಗೆ:
ಶ್ರಾದ್ಧದೂಟ ಸುಮ್ಮನೇ ನೆನೆಸಿಕೊಂಡ್ರೆ ಜುಮ್ಮನೇ

ವಿವಾಹಭೋಜನವಿದು, ವಿಚಿತ್ರಭಕ್ಷ್ಯಗಳಿವು
ಬೀಗರಿಗೌತಣವಿದು ದೊರಕೊಂಡಿತೆನಗೆ ಬಂದು
ಅಹಹ್ಹಹಹ್ಹಹಹ್ಹಾ ಅಹಹ್ಹಹಹ್ಹಹಹ್ಹಾ ಅಹಹ್ಹಹಹ್ಹಹಾ

ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೇ
ವಿಠಲನಾಮ ತುಪ್ಪವ ಬೆರೆಸೀ ಬಾಯ ಚಪ್ಪರಿಸಿರೋ

ಶಾಸ್ತ್ರೀಯಸಂಗೀತವನ್ನು ಅಭ್ಯಾಸ ಮಾಡುವವರಿಗೆ:
ನಿನ್ನುಕ್ಕೋಓ ರೀಈಈಈಈಈಈ ಯುಉಉಉ ನ್ನಾಅಅಅ ನುವುವು ರಾಅಅಅ
ಕಾವಾ ವಾ ಕಂದಾ ವಾ...
ಮರಿಯಾದಗಾದುರಾಆಆ...

ಟಾಯ್ಲೆಟ್ಟಿನಲ್ಲೂ ತತ್ತ್ವಚಿಂತನೆ ಮಾಡುವ ಅನುಭಾವಿಗಳಿಗೆ:
ನಾಳೆ ಬಪ್ಪುದು ನಮಗಿಂದೇ ಬರಲಿ
ಇಂದು ಬಪ್ಪುದು ನಮಗೀಗಲೇ ಬರಲಿ

ಮನುಜಶರೀರವಿದೇನು ಸುಖಾ
ಎಲುಬು ರಕ್ತಮಾಂಸಗಳ ಮೇಲೆ ಚರ್ಮದ ಹೊದಿಕೆ
ಒಳಗೆ ಮಲಮೂತ್ರಾದಿ ಕ್ರಿಮಿಗಳಿಹವೋ

ಪರಚಿಂತೆ ನಮಗೆ ಏಕೆ ಅಯ್ಯಾ
ನಮ್ಮ ಚಿಂತೆ ನಮಗೆ ಸಾಲದೇ

ನಿಜ, ಹೊರಗೆ ಕಾದಿರುವವರ ಚಿಂತೆ ನಮಗೇಕೆ, ಅವರವರ ಚಿಂತೆ ಅವರವರಿಗೆ. ನೆರೆಯವರ ದುಃಖಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ. ಕಾದವರು ಬೇಕಾದರೆ "ಕಾದಿರುವೇ ಏಏಏಏ ಏಏಏಏ ಏಏಏಏ ನಿನಗಾಗಿ" ಎಂದೋ, "ಬಾ ಬಾರೋ ಬಾರೋ ರಣಧೀರಾ ಆಆಆಆ ಆಆಆಆ ಆಆಆಆ" ಎಂದೋ "ಜಾಡಿಸಿ ವದಿ ಅವನನು... " ಎಂದೋ ಬೇಕಾದ್ದನ್ನು ಹಾಡಿಕೊಂಡಿರಲಿ. ಹೊರಗೆ ನಿಂತು ಹಾಡುತ್ತಾ ಜನದ ಕಣ್ಣಿಗೆ ಬಿದ್ದು ನಗೆಪಾಟಲಾಗುವವರು ಅವರೇ... ನಮಗೇನು?

ಸರಿ, ವಿಷಯವೇನು ಹೇಳು ಎಂದಿರಾ?  ಸರಿ ಹೋಯ್ತು.  ಚಿಂತನೆಯೆಂದು ಆಗಲೇ ಹೇಳಿದೆನಲ್ಲ.  ಚಿಂತನೆಗೂ ಒಂದು ಸಮಯಮಿತಿಯಿದೆ ದೇವ್ರೂ.  ಯುಗವೆಲ್ಲಾ ಶೌಚದಲ್ಲೇ ಕುಳಿತಿರಲು ನಾನೇನು ಚತುರ್ಮುಖಬ್ರಹ್ಮನೇ?  ನನಗೆ ಇರುವುದು ಒಂದೇ ಮುಖ, ಅದೇ ನಾಲ್ಕು ದಿಕ್ಕುಗಳನ್ನೂ ನೋಡಬೇಕು, ಹೊಟ್ಟೆಪಾಡು ಆಗಬೇಕು.  ದಿನವೆಲ್ಲಾ ಇಲ್ಲೇ ಕುಳಿತಿದ್ದರೆ ಹೊಟ್ಟೆಪಾಡು ನಡೆಯುವುದು ಹೇಗೆ, ಹೊಟ್ಟೆಗೇ ಇಲ್ಲದಿದ್ದರೆ ಶೌಚದ ಗತಿಯೇನು?.  ಸರಿ, ಬರುತ್ತೇನೆ, ಇನ್ನೊಮ್ಮೆ ವಿರಾಮವಾಗಿ ಸಿಕ್ಕೋಣ.  ನಮಸ್ಕಾರ.

Wednesday, February 19, 2020

ಅಡಿಗರ ನೆನಕೆ



















ಇಲ್ಲ, ನೀವು
ಅರ್ಥವಾಗುವುದಿಲ್ಲ.

ತೋಳಬಂದಿಯ ಲಲ್ಲೆಮಾತ ಕನಸಿನ ನಡುವೆ
ತೋಳದೂಳನು ಕೇಳಿ ಬೆಚ್ಚಿದವರು;
ಕಾಣದಾವುದೊ ಕರೆಯ, ಕೇಳದಾವುದೊ ತೆರೆಯ
ಭೋರ್ಗರೆತಕೋಗೊಟ್ಟು ತೆರಳಿದವರು.

ಅಡಿಗರೆಂದರೆ ಬಡಿಗೆ!
ಅಡುಗೆತುಂಬಿದ ಗಡಿಗೆ-
ಯೊಡೆದು,
ಚೆಲ್ಲಾಪಿಲ್ಲಿ ಚೆಲ್ಲಿದನ್ನವ ಭುವಿಗೆ
ಬಿತ್ತಿ ಬಿತ್ತಿ ಮತ್ತೆ ಭತ್ತ ಬೆಳಕೊಂಡವರು.

ಬೆಳಬೆಳೆಸಿ ಚಾಚಿ ಮೂಗನು ಮೈಲುದ್ದ
ನೇಗಿಲಿನಂತೆ,
ಉದ್ದೋ ಉದ್ದ
ಉತ್ತು ಕೆತ್ತುತ ಭೂಮಿ-
ಗೀತ ಹಾಡಿಸಿದವರು;
ಕಾಲುವೆಯ ಬಗೆದು
ಸಾಗರವನೇ ಮೊಗೆಮೊಗೆದು
ಹಿಮಗಿರಿಯ ಕಂದರವ ತುಂಬಿದವರು.

ಪ್ರಾಸಲಯವೃತ್ತಗಳ ಮುರಿದು, ಶೀಷೆಯನೊಡೆದು
ಕರಗಿ ಗಾಳಿಗೆ ಸಲುವ ಕಾವ್ಯಜೀವವ ಪಿಡಿದು
ನಿರ್ಬಂಧಬಂಧದೊಳು ನಿಲಿಸಿದವರು.
ನೀರಿನಿತೂ ಸೋಂಕಿಸದ ಗಡಿಗೆಗಟ್ಟಲೆ ಗಟ್ಟಿ
ಗರಣೆಮೊಸರಿನ ಎಡೆಯ ಸಲಿಸಿದವರು;
ಜೀರ್ಣಕ್ಕೆ,
ಏಳು ಕೆರೆಗಳ ನೀರ ಕುಡಿಸಿದವರು.

ಪ್ರಜ್ಞೆಯಾಳದ ಕುರುಡುಗತ್ತಲೆಯ ಪಾತಾಳ-
ಕಿಳಿಸಿ
ಪಾತಾಳಗರಡಿ,
ನೆಳಲೊಡನೆ ಜೋಲುತಿಹ ನೂರೆಂಟು ಭೂತಗಳ
ಸೆಕ್ಕಿ ಕೊಕ್ಕೆಗೆ, ರಂಗಕೆಳೆತಂದು,
ಹಚ್ಚಿ ಬಣ್ಣದವೇಷ,
ಧೀಂಕು ಧೀಂಕಿಟಗುಡುತ
ಚಂಡೆಮದ್ದಳೆ ಲಯಕೆ ಕುಣಿಸಿದವರು.

ಅರ್ಥವಾದೀರಿ ಹೇಗೆ?
ರಾಜರಸ್ತೆಯ ನೆಚ್ಚಿ ನಡೆಯದವರು?
ಮೊಸರ ಹೆಸರಲಿ ನೀರ ಕುಡಿಯದವರು?

ನೀವಂದು ಬೇಡೆಂದ ರಾಜರಸ್ತೆಗಳೀಗ
ಪಯಣಿಗರ ಕಳಕೊಂಡು ಕಾಡಾಗಿವೆ
ಹುಚ್ಚು ಹೂ, ಜೇನು ಹಲಸುಗಳ ಸಮೃದ್ಧಿಯಲಿ
ಬನದ ಕರಡಿಗಳಲ್ಲಿ ಮನೆಮಾಡಿವೆ
ನವ್ಯಚಿಂತನೆಯಿರದ ಪೆದ್ದು ಪರಪುಟ್ಟಗಳು
ತಾರಪಂಚಮದಲ್ಲಿ ಪಲುಕುತ್ತಿವೆ
ನವಿಲೊಡನೆ ಕುಣಿವ ಕೆಂಬೂತಗಳು ಕೋತಿಗಳು
ವಾನಪ್ರಸ್ಥವ ಹಿಡಿದು ಹಾಯಾಗಿವೆ.

ಪ್ರಜಾರಸ್ತೆಗಳು?
ಕಾಡ ಸವರಿ, ಬೆಟ್ಟವೇರಿ
ಬಿಟ್ಟು ಹತ್ತುದಿಕ್ಕಿಗು ಕಣ್ಣುಕಣ್ಣು -
ನೀವು ಕೆತ್ತಿಟ್ಟು ಹೋದವು;
ಸವೆಸವೆದು, ಅವೇ ಈಗ ಅಫಿಶಿಯಲ್ ರಾಜರಸ್ತೆಗಳು!

ರಾಜತ್ವದ ವ್ಯಾಖ್ಯೆಯಿಂದು ಬದಲಾಗಿದೆ -
ಈಗ ರಾಜನೆಂದರೆ ಪ್ರಜೆ, ಪ್ರಜೆಯೆಂದರೂ ಪ್ರಜೆ;
ಪ್ರಭುತ್ವ
ದಂಡವೀಗ ನಮ್ಮ ಕೈಯಲ್ಲಿ -
ಅದು ಲೇಖನಿಗಿಂತ ಹರಿತ,
ಒಮ್ಮೆ ಸಾಣೆ ಹಿಡಿಸಿದರೆ ಸಾಕು
ಮುಂದಿನೈದು ವರ್ಷಕೆ ಚಿಂತೆಯಿಲ್ಲ;
ಮನಬಂದಂತೆ ಕೆತ್ತಬಹುದು, ಕುತ್ತಬಹುದು
ಕೊಚ್ಚಬಹುದು, ಸೀಳಬಹುದು, ಹೂಳಬಹುದು.

ಕಂದರವೇನು ಹಿಮಗಿರಿಯ ತಾತನ ಗಂಟೇ?
ಆ ಗಿರಿಯನೀಗ ಕಡಿದು ಕಂದರಕೆ ತುಂಬಿ,
ತಗ್ಗುತೆವರಿಲ್ಲದಂತೆ ಸಪಾಟು ಮಾಡಿದ್ದೇವೆ,
ಸರ್ವಸಮತಾಭಾವ ಮೆರೆದಿದ್ದೇವೆ.
"ಸಮತ್ವಂ ಯೋಗಮುಚ್ಯತೇ" -
ಯೋಗಾಸನಾಚಾರ್ಯರಿಗೆ ಕರೆಯ ಕಳಿಸಿದ್ದೇವೆ.

ಸಪಾಟಿದ್ದಲ್ಲಿ?
ಹೊಸ ಕಂದರವನಗೆದಿದ್ದೇವೆ
ಹೆಜ್ಜೆಯಿಟ್ಟರೆ
ಲಾಗ -
ಲಾಗವೆ ಯೋಗ;
ಲಾಗಾಯಿತಿನ ಕಲೆಗೆ ಎಡೆಯೊದಗಿಸಿದ್ದೇವೆ;
ಹೆಜ್ಜೆಹೆಜ್ಜೆಗು ಈಗ
ಭಂಗೀಜಂಪಿನ ಥ್ರಿಲ್ಲು,
ಎಲ್ಲೆಲ್ಲು.

ನೀವೇ ನೀಡಿದ್ದು,
ನಮ್ಮ ದಾರಿ ನಾವೇ ಕಂಡುಕೊಳ್ಳುವ ದೀಕ್ಷೆ -
ಕಾಡ ಸವರುವ ದೀಕ್ಷೆ ಗುಡ್ಡ ಕಡಿಯುವ ದೀಕ್ಷೆ -
ಅದು ಬೇರೆ ದೀಕ್ಷಿತರದ್ದು,
ಅವರಿಗೀಗ ಅಗೆದಷ್ಟು ಚಿನ್ನ, ಬಗೆದಷ್ಟು ಬಣ್ಣ!
ದಾರಿಯ ತೆವಲು ಅವರದಲ್ಲ.
ದಾರಿದೀಕ್ಷೆಯ ನಮಗೋ,
ಸವರಲು ಕಾಡುಗಳಿಲ್ಲ, ಕಡಿಯಲು ಗುಡ್ಡಗಳಿಲ್ಲ.
ಕಾಣುವುದು ಹೇಗೆ ಹೊಸ ದಾರಿಯನ್ನ?
ಇಲ್ಲೋ, ಮುಟ್ಟಿದ್ದಕ್ಕೆ ಪರ್ಮಿಟ್ಟು, ಹಿಡಿದದ್ದೇ ಬಕೆಟ್ಟು.

ನಿಮ್ಮದೇ ದಾರಿಯಲ್ಲಿ ನಡೆಯೋಣವೆಂದರೆ
ಅದೀಗ ಸವೆದು ಸವೆದು ರಾಜಾರಸ್ತೆಯಾಗಿದೆ.
ತಂತಮ್ಮ ಮೂಗಿನಳತೆಯ
ಅಳತೆಗೋಲುಗಳು, ಕೋಲುಗಳು
ಮೈಲುಗಲ್ಲುಗಳು, ಗಲ್ಲುಗಳು
ಇಲ್ಲೂ ಬಂದಿವೆ.
ಕುಳಿಬಿದ್ದ ರಸ್ತೆಗಳು
ತಲೆ ಗಿರ್ರೆನಿಸುವ,
ಎಲ್ಲೋ ಹೊಕ್ಕು ಇನ್ನೆಲ್ಲೋ ಹೊರಳುವ
ಗೊಂದಲದ ಸಂದುಗೊಂದುಗಳು
ಒಮ್ಮೆ ಜಾಮ್ ಆಯಿತೋ -
ಗಂಟೆಗಟ್ಟಲೆ ಒಳಕಟ್ಟುಗಳು ಸಡಿಲುವುದೇ ಇಲ್ಲ
ಹೊಟ್ಟೆಯುಬ್ಬರಿಸಿದರೂ, ಅಬ್ಬರಿಸಿದರೂ ಪ್ರಜ್ಜೆ
ಅಮಿಕ್ಕೊಂಡು ಕಾಯುವುದೇ ಲಕ್ಷಣ,
ರಸ್ತೆ ತೆರೆಯುವವರೆಗೆ;
ಕಾಯುವಿಕೆಗಿಂತನ್ಯ ತಪವು ಇಲ್ಲ.

ಪ್ರಜಾರಾಜ್ಯರಸ್ತೆಯಲ್ಲಿ
ಗಾಡಿಯೋಡಿಸುವ ಲೈಸೆನ್ಸೇ?
ಛೇ, ಎಂತಹ ಪ್ಯಾಸಿಸ್ಟ್ ಮನೋವೃತ್ತಿ!
ತಗೋ ಗಾಡಿ,
ನುಗ್ಗು -
ಎಡಕೂ ಬಲಕೂ ನಡಕೂ!
ಹಿಂದಿನಿಂದಲೂ ಹೊಡೆ
ಮುಂದಿನಿಂದಲೂ.
ದಿನಕೆರಡು ಢಿಕ್ಕಿ, ಕ್ಷಣಕ್ಕೆರಡು ಅಪಘಾತ
ನಿದ್ದೆಗೊಮ್ಮೆ ನಿತ್ಯಮರಣ,
ನಿಮ್ಮ ರಾಜರಸ್ತೆಗಳಲ್ಲಿ.
ಹಾಗೂ ನಿಮ್ಮ ರಸ್ತೆ ಹಿಡಿದೆವೆಂದುಕೊಳ್ಳಿ,
ನೀವೇ ತೊಡಿಸಿದ ದೀಕ್ಷೆಯುಳಿದೀತೆ ಹೇಳಿ.

ಅದಕೇ ನಾವೀಗ ಆಕಾಶದವಕಾಶವನ್ನಗೆದು
ಹೊಸ ರಸ್ತೆ ಮಾಡಬೇಕೆಂದಿದ್ದೇವೆ.
ಪರ್ಮಿಟ್ಟಿಗೆ ಅರ್ಜಿ ಹಾಕಿದ್ದೇವೆ
ದಿನ ಗೊತ್ತು ಮಾಡಲು
ನವೋನವ್ಯದ ಪುರೋಹಿತರಿಗೆ ಕರೆಹೋಗಿದೆ

ಇದೊಂದಕಾದರೂ ದೀಕ್ಷೆ ಮೀರುತ್ತೇನೆ,
ನಿಮಗೆ ನಮನವ ನಿಮ್ಮ ಶೈಲಿಯಲ್ಲೇ ಮಾಡುತ್ತೇನೆ
ಆಶೀರ್ವದಿಸಿ ಹಿರಿಯರೇ!
ಇದು ನಮನವೋ ವಮನವೋ, ಕವನವೋ ಕದನವೋ
ಎಂಬ ಒಣಜಿಜ್ಞಾಸೆ ನನ್ನದಲ್ಲ
(ಅದು ನಿಮ್ಮದೂ ಆಗಿರಲಿಲ್ಲ);
ಸಾಲುಸಾಲುಗಳಲ್ಲಿ ನೀವಿದ್ದೀರೆಂದು ಬಲ್ಲೆ
ಅಷ್ಟು ಸಾಕಿಂದಿಗೆ,
ನಿಮ್ಮ ನೆನಪಿಗೆ.
ನಮಸ್ಕಾರ.

Sunday, February 2, 2020

ಸ್ವರಚಿತ ವರ್ಣ - ರಾಜೀವಾಕ್ಷಿ


ಮೊನ್ನೆ ಬೇರೊಂದು ಉದ್ದೇಶಕ್ಕೆ ಸಂಗೀತಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ನೋಡುತ್ತಿದ್ದಾಗ, ರಾಗಕೋಶದಲ್ಲಿ ಈ ಹೊಸ ರಾಗವೊಂದು ಕಣ್ಣಿಗೆ ಬಿತ್ತು - ಕಿನ್ನರೇಶಪ್ರಿಯ ಎಂಬ ಹೆಸರು ಮೆಚ್ಚೆನಿಸಿತು.  ರಾಗಲಕ್ಷಣದ ವಿವರವಿಲ್ಲ, ಕೇವಲ ಆರೋಹಣ ಅವರೋಹಣದ ಸ್ಕೇಲ್ ಮಾತ್ರ ಇತ್ತು.  ಹಾಡಿ ನೋಡಿದೆ, ರಾಗವನ್ನು ಸ್ವಲ್ಪ ಬೆಳೆಸಿದಾಗ ಹೃದ್ಯವೆನಿಸಿತು.  ಪೂರ್ವಾಂಗದಲ್ಲಿ ಭೂಪಾಲವನ್ನೂ ಉತ್ತರಾಂಗದಲ್ಲಿ ಮಲಯಮಾರುತವನ್ನೂ ಹೋಲುವ, ಸ್ವಲ್ಪ ಮೈಮರೆತರೆ ಶುಭಪಂತುವರಾಳಿ, ಭೌಳಿ, ಮಲಯಮಾರುತ ಕೊನೆಗೆ ಶಿವರಂಜಿನಿ ಹೀಗೆ ಯಾವುದಕ್ಕೂ ತಿರುಗಿಬಿಡಬಹುದಾದ ಈ ರಾಗ ಸೂಜಿಗಲ್ಲಿನಂತೆ ಮನಸೆಳೆಯಿತು.  ಹಾಗೇ ಸ್ವಲ್ಪಹೊತ್ತು ರಾಗವನ್ನು ಗುನುಗಿಕೊಳ್ಳುತ್ತಿದ್ದಂತೆ ವರ್ಣವೊಂದರ ಸಾಲು ಹೊಳೆಯಿತು - ಕನ್ನಡದ್ದು!  ಜೊತೆಗೆ ವರ್ಣಕ್ಕೆ ಅಗತ್ಯವಿರುವ ನಡೆಗಳ ಸಂಕೀರ್ಣತೆಯೂ ಸರಾಗವಾಗಿ ಒದಗುತ್ತಾ ಹೋದುದರಿಂದ ಕುಳಿತು ಪೂರ್ವಾಂಗವನ್ನು ಮುಗಿಸಿದೆ.

ಉತ್ತರಾಂಗಕ್ಕೆ ಬರುವಾಗ ಮತ್ತೊಂದು ಅಚ್ಚರಿ ಕಾದಿತ್ತು.  ಚರಣಕ್ಕಾಗಿ ಹೊಳೆದ ಸಾಲು ಕನ್ನಡದ್ದಾಗಿರದೇ ತಮಿಳಿನದಾಗಿತ್ತು!  ಹೊಳೆದ ಸಾಹಿತ್ಯವೂ ಬಹು ಚೆಲುವಾಗಿದೆಯೆನಿಸಿದ್ದರಿಂದ ಬಲವಂತವಾಗಿ ಕನ್ನಡವನ್ನು ತರದೇ ಅದನ್ನೇ ಉಳಿಸಿಕೊಂಡೆ.  ಎರಡನೆಯ ಎತ್ತುಗಡೆ ಸಾಹಿತ್ಯಕ್ಕೆ ತೆಲುಗಿನ ಸಾಲೂ ಅಷ್ಟೇ ಸಹಜವಾಗಿ ಮೂಡಿಬಿಟ್ಟಿತು.  ಇದು ಹಿಡಿದ ದಿಕ್ಕು ಈಗಾಗಲೇ ನನಗೆ ಅರ್ಥವಾಗಿಬಿಟ್ಟಿದ್ದರಿಂದ ತಿದ್ದದೇ ಮುಂದುವರೆದೆ.  ಮೂರನೆಯ ಎತ್ತುಗಡೆ ಕನ್ನಡದ್ದಾಯಿತು.  ನಾಲ್ಕನೆಯದನ್ನು ಮಾತ್ರ ಪ್ರಯತ್ನಪೂರ್ವಕವಾಗಿ ತೆಲುಗು, ಕನ್ನಡ, ತಮಿಳು, ಸಂಸ್ಕೃತ ಇಷ್ಟನ್ನೂ ಸಂಯೋಜಿಸಿ, ಜೊತೆಗೆ ಸಂಗೀತಾಕ್ಷರ (ಸರಿಗಮ ಇತ್ಯಾದಿ) ಮತ್ತು ಪಾಠಾಕ್ಷರ (ತಕಧಿಮಿ ತಝಣು ಇತ್ಯಾದಿ)ಗಳನ್ನೂ ಸಂಯೋಜಿಸಿ ನಾಲ್ಕನೆಯ ಎತ್ತುಗಡೆಯನ್ನು ಮುಗಿಸಿದೆ.  ಒಟ್ಟಂದದಲ್ಲಿ ವರ್ಣವು ಒಂದು ಮಣಿಪ್ರವಾಳಶೈಲಿಯ ರಚನೆಯಾಗಿ ಮೂಡಿ ಬಂತು (ಮಣಿಪ್ರವಾಳವೆಂದರೆ ಒಂದೇ ಕೃತಿಯಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನೊಳಗೊಂಡ ಸಾಮರಸ್ಯಪೂರ್ಣವಾದ ರಚನೆ.  ಮಣಿ ಎಂದರೆ ಪಚ್ಚೆ, ಕೆಂಪು, ಮುತ್ತು ಮೊದಲಾದ ಮಣಿಗಳು.  ಪ್ರವಾಳವೆಂದರೆ ಹವಳ (ಪ್ರವಾಳ > ಹವಳ).  ಹೀಗೆ ಸಂಸ್ಕೃತವೂ ಸೇರಿದಂತೆ ವಿವಿಧ ಭಾಷೆಗಳನ್ನು ಚೆಲುವಾಗಿ ಕೋದ ಹಾರವೇ ಮಣಿಪ್ರವಾಳ.  ಅದು ಸಂಗೀತರಚನೆಯಾದರೆ ಅದಕ್ಕೆ ಸಂಗೀತಾಕ್ಷರಗಳನ್ನೂ, ಮೃದಂಗದ ಪಾಠಾಕ್ಷರಗಳನ್ನೂ ಸೇರಿಸುವುದುಂಟು.  ಒಟ್ಟಿನಲ್ಲಿ ಈ ಮಿಶ್ರಣದಿಂದ ಅರ್ಥ-ನಾದಗಳ ಹದ ಕೆಡಬಾರದೆಂಬುದು ಮುಖ್ಯ.  ಶ್ರೀ ಮುತ್ತುಸ್ವಾಮಿದೀಕ್ಷಿತರ ಅಪರೂಪದ ಕೃತಿ "ಶ್ರೀ ಅಭಯಾಂಬಾ" ಮಣಿಪ್ರವಾಳಶೈಲಿಯ ರಚನೆಗೆ ಉತ್ತಮ ಉದಾಹರಣೆ).
ಕೆಲದಶಕಗಳ ಹಿಂದೆ ಒಂದೆರಡು ತಿಲ್ಲಾನ, ಒಂದೆರಡು ಕೀರ್ತನೆಗಳನ್ನು ರಚಿಸಿದ್ದೆನಾದರೂ ಬಾಲಿಶಪ್ರಯತ್ನಗಳೆನಿಸಿ ಅಲ್ಲಿಗೇ ಕೈಬಿಟ್ಟಿದ್ದೆ.  ಹೀಗಾಗಿ ಇದು ಮೊದಲ ಪ್ರಯತ್ನ.  ಒಂದು ಮಟ್ಟಕ್ಕೆ ಸಂಗೀತಾಂಶ ಹೆಚ್ಚಿದ್ದರೂ ಕೀರ್ತನೆಗಳು ಪರವಾಗಿಲ್ಲ; ಆದರೆ ವರ್ಣ, ತಿಲ್ಲಾನ ಮೊದಲಾದ ಸಂಪೂರ್ಣ ಸಂಗೀತರಚನೆಗಳು ಸಂಗೀತಜ್ಞರ - ಮಾತು-ಧಾತುಗಳೆರಡರ ಮರ್ಮವನ್ನರಿತ, ಅವುಗಳ ಮಿಶ್ರಣದ ಹದವರಿತ ವಾಗ್ಗೇಯಕಾರರ ಕ್ಷೇತ್ರ. ಸಂಗೀತದ ಕೇಳ್ಮೆ ಮಾತ್ರದ ಪರಿಚಯವುಳ್ಳ, ಯಾವುದೇ ಔಪಚಾರಿಕ ಶಿಕ್ಷಣವಿಲ್ಲದ ನನ್ನಂತಹ ಸ್ವಯಮಾಚಾರ್ಯರಿಗೆ ಇಲ್ಲಿ ಪ್ರವೇಶವಿಲ್ಲವೆಂದು ಬಲ್ಲೆ.  ಆದರೂ ಮೊದಲ ಸಂಗೀತಪ್ರಯತ್ನದ ಕೌತುಕವನ್ನು ತಡೆಯಲಾರದೇ ಅಂಜುತ್ತಂಜುತ್ತಲೇ ಒಳಗೆ ಕಾಲಿಡುತ್ತಿದ್ದೇನೆ.  ಕೇಳ್ಮೆಯದೊಂದೇ ಬೆಂಬಲದಿಂದ ಹೊಸೆದು ತಂದ ಈ ವರ್ಣವನ್ನು ಅರ್ಪಿಸುತ್ತೇನೆ.  ಅರಿತವರು ನೋಡಿ, ತಿದ್ದಬೇಕಾದೆಡೆ ತಿದ್ದಿದಲ್ಲಿ ಉಪಕೃತನಾಗುತ್ತೇನೆ.

ರಚನೆಯನ್ನು ಮೊದಲು ಅವಲೋಕಿಸಿ, ಆನಂತರ ಕೇಳಿ ಹಸಿರು ನಿಶಾನೆ ತೋರಿಸಿ ಧೈರ್ಯತುಂಬಿ ಪ್ರೋತ್ಸಾಹಿಸಿದ ವಿದ್ವದ್ಬಂಧುಗಳಾದ ಶ್ರೀ ರಾಮಪ್ರಸಾದ್, ಶ್ರೀಮತಿ ವಾಣೀ ಸುರೇಶ್ ಮತ್ತು ಶ್ರೀಮತಿ ಧರಿತ್ರೀ ಆನಂದರಾಯರಿಗೆ ಕೃತಜ್ಞತೆಗಳನ್ನರ್ಪಿಸುತ್ತೇನೆ.

ಆಸಕ್ತರು ವರ್ಣದ ಪ್ರಸ್ತಾರ-ಪಾಠವನ್ನು ಇಲ್ಲಿ ನೋಡಬಹುದು:

ರಾಗ: ಕಿನ್ನರೇಶಪ್ರಿಯ (ನಾಟಕಪ್ರಿಯ ಜನ್ಯ)        ತಾಳ: ಆದಿ
ಆ:
ಸರಿ1ಗ2ಪದ2ನಿ2
ಅ: ನಿ2ದ2ಪಗ2ರಿ1ಸ

ಪಲ್ಲವಿ
ನೀದಾ | ಪಾ-- | ನಿದಪಗ | ಗಗಪದ | ನಿನಿದದ | ಪಪಗಗ | ನಿದಪಗ | ಪಗರಿಸ |
ರಾಜೀ | ವಾ    | ಕ್ಷಿ          | ನಿ. .  ನ್ನ| ಕಾ .    ದಿ | .   .  ರು  |  .  ವ .  . | ಳೋ. .  .|

ರಿಸನಿದ | ನಿಸರಿಗ | ರಿಗಾಪ | ಗಪದನಿ | ನಿದಪ | ಗಗ ನಿದ |ಪಗಗ ಪ   |ಗರಿರಿಸ ||
ಮೂ. . . | ಜ .  ಗ .  | ದೊ. ಡೆ|ಯ. ನೆ .  |ನೀ .  .   .  |  .  . ಬಾ. | .   .  . ರೋ| .  .  .  . ||

ಅನುಪಲ್ಲವಿದಾನೀ | ದಾ-- | ಪಗಪನಿ | ದಾ-- | ನಿದಾನಿ |ಪಾದ ಗ | -ರಿಗಾ  | ಸರಿಗಪ |
ಏ  ಕಿಂ| ದೀ . . | ಪರಿಹಾ. | ಸ  . .  |ಮಿಂ. ಚಿ|ಮ ರೆ ವ| .ಮೃದು|ಹಾ. .ಸ |

ದನಿಸರಿ | ನಿಸಾನಿ | ದಪ  ಗ  ಗ | ನಿದಾದ |ನಿಸಾಪ   | ದಾಗಪ | -ರಿಗಸ     | ರಿಗ    ಪದ ||
ಸಾ. ಕಿ .  | ನ್ನು . .   |ದಯಮಾ. | ಡೋ. .  |ಮಲಗೊ|  .   ವೇ . | . ಳೆ . ಯಾ| . ಯ್ತೊ .  .   ||

ಚಿಟ್ಟೆಸ್ವರಪಾಗಪ | ಗರಿಗಾ | ದನಿದಪ | ಗರಿಸನಿ | ದಾನಿಪ | ದನಿನಿ | ಸರಿಗ ಗ| ಪಾ-- |
ಗಾಪದ | -ದದಾ | ನಿದಪ | ದನಿಸರಿ | ಸಾ -  ಪ |  -  - ನಿದ | ಪಗರಿಸ| ನಿದಪದ||

ಸೊಲ್ಕಟ್ಟುಪಾಗಪ | ಗ ರಿ ಗಾ    | ದ ನಿ ದ   ಪ| ಗ  ರಿ  ಸನಿ| ದಾ ನಿಪ| ದನಿನಿ|ಸ ರಿ ಗ ಗ |ಪಾ   - - |
ತ . ತ್ತರಿ | ಕಿಟ ಝಂ| ತಝಣು ತ |ಝಣುತ ದ|ಣಂ ತಕ | ತಕಿಟ  ತ |ದಿಗುತ ಕ |ಝಂ . . |
ಗಾ ಪದ | - ದ  ದಾ  | ನಿದ   ಪ |ದನಿಸರಿ | ಸಾ    -  ಪ      | -- ನಿ    ದ|ಪ ಗ   ರಿ ಸ|ನಿದಪದ||
ಧಿತ್ತಳಾಂ| . ಗುಧಿ  | ತ್ತಳಾಂ. ಗು| ತದಿಗಿಣ |ತೋಂ. ತೋಂ| . .  ಧೀಂ . |ತ ಧೀಂ. ತ |ಕಿಟತಕ||

ಚಿಟ್ಟೆಸ್ವರ ಸಾಹಿತ್ಯಪಾಗಪ | ಗರಿಗಾ   | ದ ನಿ ದ ಪ |ಗ ರಿ ಸನಿ | ದಾನಿಪ | ದನಿನಿ | ಸ ರಿ ಗ ಗ|ಪಾ-- |
ಮಲ್ಲಿಗೆ | ಯರಳು| ಘಮಘಮ|ವೆನುತಿದೆ | ಚಂದನ | ಪರಿಮಳ| ಸೂ.ಸುತಿ|ದೆ .  . |
ಗಾಪದ | - ದ ದಾ | ನಿದಪ | ದನಿ    ಸರಿ | ಸಾ-  ಪ   | --ನಿದ  |ಪ ಗ ರಿ ಸ | ನಿ  ದ  ಪ ದ||
ಫುಲ್ಲನೇ| . ತ್ರ ಕಿ .  | ನ್ನರೇ. ಶ | ಪ್ರಿಯ ನೀ. | ಬಾ. ರೋ| . . ಮಂ|ಜುನಾ. ಥ| ಪ್ರಿ ಯ ಸಖ ||

ಚರಣನಿಸಾ ನಿ  | --ದಾ | ಪಗಾ     ಪ| --ನೀ  |ದಾ-- | -- ರಿಸ |ನೀ-  ನಿ |ದ ಗಪದ ||
ಕುೞಲೂ| . .ದು | ವಾಯ್ ಕ | . . ಣ್ಣ| ನೇ . .| . . ರಾ. | ದೈ . ಕಾ| .  ದಲನೆ ||

ಎತ್ತುಗಡೆ ಸ್ವರ 1ನೀ-ದ | --ಪಾ | -ಗಾರಿ    | -ಸಾ    ರಿ | ಗಾ- ರಿ | --ಗಾ | ---ಸ | ರಿಗಪ ದ      ||
ನೀ. ದ |. . ಪಾ| . ತದ್ಧೀಂ| . ಧೀಂತ  | ಗಾ . ರಿ | . .ಗಾ | . . . ತ | ಧಿಗಿಣತೊಂ||


ಎತ್ತುಗಡೆ ಸ್ವರ 2ನೀದ   ಪ | ದನಿದಾ   | ಪಗದ  ಪ | ಗ  ರಿ ಸನಿ |ದಾನಿ    ಪ | ದನಿಸರಿ | ಸರಿಗಪ|ದ ಗಪದ ||
ನೀದು ಸ್ಮ| ರಣಲೋ| ಜಗಮುನ| ಮರಚಿನ | ನ  ನ್ನು ಮ| ರವಕುರ | ಶ್ರೀ. . ಕ |ರಾ .  .  .  ||

ಎತ್ತುಗಡೆ ಸ್ವರ 3ದಾ-- | -- ನಿ    ಸ  | ದ ನಿ   ದಪ | ಗ    ರಿ   ಸ  ರಿ |ಗಾ-- | -- ರಿ  ಗ  | ಸ ರಿ ಗ ಪ  |ದಪದನಿ |
ಆ  .  . | . . ಯಮು| ನೆಯ  ತ ಟ| ದೊಳು ಮೆಲು|ಗಾ . . | . . ಳಿಯ| ಕುಳಿರ ಸೊ|ಗವುಣುತೆ |

ಸಾ  ರಿ ಗ| -ರಿ   ಗ   ರಿ|ಸ ನಿದನಿ | ದಪದ ನಿ | ಸಾನಿ ದಾ  | -- ದನಿ | ಪಾ-ಸ |ರಿಗಪದ ||
ಗೋಗಳೆ| . ಲ್ಲ ಮೇ. |ವ ಮರೆತು|ನಾ. ದವ | ನಾಲಿಸಲ್ | . . ಚಿಗು| ರಂ. ದ|ದಕರದಿ ||

ಎತ್ತುಗಡೆ ಸ್ವರ 4ಸಾ-- | --ರಿ  ಗ | ರೀ-  ಗ| ರಿ ಸ  ನಿ  ದ | ದಾ-- | --ಸ   ರಿ |ಗಪದ ಗ|ಪದ ನಿ ರಿ |
ನೀ . . | . .ಮಹಿ|ಮಾ.ತಿ |ಶಯಮುನ | ನೀ . . | . . ಮಧು|ರತರ ಚ|ರಿತಮುಲ |

ಸ  ರಿ  ಗ ರಿ| -ಸನಿ    |ದನಿ ಪ ದ|ಗಪ ದ  ನಿ | ನಿ ದ ಪ|ಗರಿ  ಸ ರಿ  | ಗ   ಪದನಿ|ದಾ-- |
ದ್ರಮಿಡ ಕ| .ನ್ನಡಾಂ. |ಧ್ರದೇ . ಶ|ಭಾ. ಷಲೊ| ಪಾ. ಡಿ ಆ| . ಡಿ ನಿನ್ನ| ಪೊಗಳುತಿ |ರೆ . . . |

ಸಾ-ರಿ | --ಗಾ      | -ರಿ    ಗಪ| ಗ ರಿಸ ನಿ |ಪಾ-ದ | --ನೀ| -ದ ನಿ | ನಿ  ದ ಪ   ಗ |
ವಾ.ರಾ| . .ಯೆನ್| . ಗೋ. ಪ|ಬಾ. ಲನೆ | ಸೇ. ರಾ| . . ಎ| . ನ್ನೆದೆಯ| ಗುಡಿಯೊಳು|

ರೀ- ಗ | -- ಪಾ  | -ಗಪದ |ನಿ  ಸರಿಗ | -ಗರಿಸ|ನಿದ        ರಿಸ|ನಿದಪ       | ನಿದಪದ ||
ಧೀ.ರಾ| . . ಗೋ| . ಪೀ.ಕು|ಮಾ. . ರ | . ತಧಿಗಿ|ಣತೊಂ  ತಧಿ|ಗಿಣತೊಂ ಸ | ನಿದಪದ ||


ಈ ವರ್ಣದ ಧ್ವನಿಮುದ್ರಣವನ್ನು ಇಲ್ಲಿ ಕೇಳಬಹುದು.

ನನ್ನದು ಸಂಗೀತದ ತರಬೇತಿಯಿಲ್ಲದ ದನಿಯಾದುದರಿಂದ ಸಹಜವಾಗಿಯೇ ಅಲ್ಲಲ್ಲಿ ಅಪಸ್ವರ ಅವಲಯಗಳು ಇದ್ದೀತು, ಅನ್ಯಸ್ವರಗಳೂ ನುಸುಳಿರಬಹುದು.  ಮನ್ನಿಸಿ ಲಾಲಿಸಬೇಕು. 

ವಿ.ಸೂ - ಆಮೇಲೆ ಗಮನಿಸಿದ್ದು:ಈ ಹಾಡುವಿಕೆಯಲ್ಲಿ ನಾನೇ ಗಮನಿಸಿರುವ ದೋಷವೆಂದರೆ ರಾಗದ ಚೌಕಟ್ಟಿನಲ್ಲಿಯೇ ಇಲ್ಲದ ಪ್ರತಿಮಧ್ಯಮದ ಬಳಕೆ ಅನೇಕ ಕಡೆ ನುಸುಳಿದೆ.  ಈ ರಾಗವು ನಾಟಕಪ್ರಿಯವೆಂಬ ಶುದ್ಧಮಧ್ಯಮರಾಗದಲ್ಲಿ ಜನ್ಯವಾದದ್ದು, ಅನ್ಯಸ್ವರಪ್ರಯೋಗವಿಲ್ಲ.  ಆದರೆ ರಾಗವು ಹೊಸದಾದ್ದರಿಂದ, ಇತರ ಹಲವು ಪ್ರತಿಮಧ್ಯಮರಾಗಗಳಿಗೆ ಸ್ವಲ್ಪ ಹೋಲಿಕೆಯಿರುವುದರಿಂದ, ಹಾಗೂ ನನ್ನದೇ ಅಭ್ಯಾಸದ ಕೊರತೆಯಿಂದ ಪ್ರತಿಮಧ್ಯಮವು ಅಪ್ರಯತ್ನತಃ ನುಸುಳಿದೆ.  ಅದರಲ್ಲೂ ಅವರೋಹಣದಲ್ಲಿ ಚಕ್ಕನೆ ಪಂಚಮದಿಂದ ಸಾಧಾರಣಗಾಂಧಾರಕ್ಕೆ ಇಳಿಯುವುದು ಅಭ್ಯಾಸವಿಲ್ಲದ ಕಂಠಕ್ಕೆ ತೊಡಕೆನಿಸಬಹುದು, ಅಂತಹ ಕಡೆ ಪ್ರತಿಮಧ್ಯಮವು ನುಸುಳಿರುವುದನ್ನು ಗಮನಿಸಿದ್ದೇನೆ.  ಈ ದೋಷವನ್ನು ನಿವಾರಿಸಿಕೊಂಡು ಮತ್ತೊಮ್ಮೆ ಇದನ್ನು ಧ್ವನಿಮುದ್ರಿಸುತ್ತೇನೆ.  ಸದ್ಯಕ್ಕೆ ಈ ವರ್ಣವನ್ನು ಹಾಡಬೇಕೆನ್ನುವವರು ದಯವಿಟ್ಟು ಈ ವಿಷಯವನ್ನು ಗಮನಿಸಿ ತಿದ್ದಿಕೊಳ್ಳಬೇಕಾಗಿ ಕೋರಿಕೆ.



Tuesday, January 21, 2020

ಪತ್ರಿಕಾಶ್ವಾನ ಅಥವಾ ಪೇಪರ್ನಾಯಿ


ಲೆಟ್ ಅಸ್ ಮೇಕ್ ಒನ್ ಥಿಂಗ್ ವೆರಿ ಕ್ಲಿಯರ್ - ಶ್ವಾನ ಅಂಡ್ ಡಾಗ್ ಆರ್ ಒನ್ ಅಂಡ್ ದ ಸೇಮ್ - ದೇ ಆರ್ ನಾಟ್ ಡಿಫ್ರೆಂಟ್ ಫ್ರಮ್ ಈಚ್ ಅದರ್ ಅಟ್ ಆಲ್.

ಈ ಚಿತ್ರದಲ್ಲಿರುವ ಎರಡೂ ಪ್ರಾಣಿಗಳೂ ಬೇರೆಬೇರೆ ಪಂಗಡಗಳಿಗೆ ಸೇರಿದುವೇನೋ ಹೌದು - ಮೊದಲನೆಯದು ಕಂತ್ರಿನಾಯಿ ಮತ್ತು ಎರಡನೆಯದು ರಾಜನಾಯಿ ಎಂದಿಟ್ಟುಕೊಳ್ಳೋಣ (ಅಥವಾ, ರಾಜನಿಗೆ ಈ ಕಾಲದಲ್ಲಿ ಯಾವ ಕಿಮ್ಮತ್ತೂ ಇಲ್ಲದ್ದರಿಂದ, ಈ ಬೆಲೆಬಾಳುವ ನಾಯಿಯನ್ನು ಮಂತ್ರಿನಾಯಿ ಎಂದೇ ತಿಳಿಯಿರಿ, ಅಡ್ಡಿಯಿಲ್ಲ) - ಆದರೆ ಎರಡೂ ನಾಯಿಗಳೇ ಎಂಬುದರಲ್ಲಿ ನನಗಂತೂ ಸಂಶಯವಿಲ್ಲ. ನಾವು ಕನ್ನಡದಲ್ಲಿ ಯಾವುದನ್ನು ನಾಯಿ ಎಂದು ಕರೆಯುತ್ತೇವೋ ಅದನ್ನು ಸಂಸ್ಕೃತದಲ್ಲಿ ಶ್ವಾನವೆಂದು ಕರೆಯುತ್ತಾರಷ್ಟೇ (ಮತ್ತು ಆಲಂಕಾರಿಕವಾಗಿ ಗ್ರಾಮಸಿಂಹ ಎಂದು ಕರೆಯುತ್ತಾರೆ ಕೂಡ); ಕನ್ನಡದಲ್ಲಿ ನಾಯಿಯನ್ನು ಆಲಂಕಾರಿಕವಾಗಿ (ಕೆಲವು ಸಂದರ್ಭಗಳಲ್ಲಿ ಮಾತ್ರ) ಶ್ವಾನವೆಂಬ ಸಂಸ್ಕೃತ ಹೆಸರಿನಿಂದ ಕರೆಯಬಹುದು. ಹಾಗೆಂದ ಮಾತ್ರಕ್ಕೆ ನಾಯಿಯೆಂದರೆ ಗೌರವ ಕಡಿಮೆಯೇನೂ ಆಗುವುದಿಲ್ಲ, ಶ್ವಾನವೆಂದಾಕ್ಷಣ ಈ ಚಿತ್ರದಲ್ಲಿರುವಂತೆ ದಂಡಿಗೆಯ ಮೇಲೆ ಕೂರಿಸಬೇಕೆಂದೂ ಇಲ್ಲ.

ತೇಜಸ್ವಿಯವರ ಬಾಲ್ಯದ ನೆನಪುಗಳಲ್ಲಿ, ಒಬ್ಬ ತನ್ನ ವಿಲಾಯಿತಿ ನಾಯಿಗೆ ಇಂಗ್ಲಿಷೇ ಸರಿಯೆಂದು ತಿಳಿದು "ಕಮಾನ್ ಡಾಗ್" ಎಂದೇ ಕರೆಯುತ್ತಿದ್ದನಂತೆ, ಈ ಮಕ್ಕಳು ಇದೂ ಒಂದು ನಾಯಿಭಾಷೆಯಿರಬೇಕೆಂದು ತಿಳಿದು, ಅದರ ಅರ್ಥ ತಿಳಿಯುವ ಗೋಜಿಗೆ ಹೋಗದೇ ತಾವೂ "ಕಮಂಡಾ ಕಮಂಡಾ" ಎಂದು ಕರೆಯತೊಡಗಿದರಂತೆ. ಹಾಗೆಯೇ ನಮ್ಮ ಬಹುತೇಕ ಪತ್ರಕರ್ತರಿಗೆ (ಮತ್ತು ಅವರನ್ನು ಕಣ್ಣುಮುಚ್ಚಿ ಅನುಕರಿಸುವ ಇತರ ಹಲವರಿಗೆ) ನಾಯಿಯೆಂಬ ಪದ ಬಳಸಲು ಅದೇನೋ ಕೀಳರಿಮೆ, ಶ್ವಾನವೆನ್ನುವುದೇ ಫ್ಯಾಶನು.

ಇಲ್ಲ, ಇದು ಸಂಸ್ಕೃತವು ಸಾವಿರಾರು ವರ್ಷಗಳಿಂದ ನಮ್ಮಲ್ಲಿ ಬಿತ್ತಿ ಬೆಳೆಸಿರುವ ಕೀಳರಿಮೆ ಎಂದೇನೂ ನಾನು ಹೇಳುತ್ತಿಲ್ಲ, ಕೀಳರಿಮೆ ನಮ್ಮಲ್ಲೇ ಮನೆಮಾಡಿದ್ದರೆ ಪಾಪ ಸಂಸ್ಕೃತವೇನು ಮಾಡೀತು :)

"ಬಾಂಬ್ ಸ್ಫೋಟದ ಸ್ಥಳಕ್ಕೆ ಶ್ವಾನದಳದ ಭೇಟಿ"
"ಈ ದಿನ ನಗರದಲ್ಲಿ ಶ್ವಾನಗಳ ಪ್ರದರ್ಶನ"

ಇಂಥವುಗಳನ್ನು ಸಮಾಧಾನದಿಂದ ಓದಬಹುದು.

"ಕಳೆದು ಹೋದ ಪರ್ಸನ್ನು ಹುಡುಕಿಕೊಟ್ಟ ಶ್ವಾನ"
"ನಗರ್ತರ ಪೇಟೆಯ ಎರಡನೇ ಅಡ್ಡರಸ್ತೆಯಲ್ಲಿ ಶ್ವಾನಗಳ ಕಾಟ"

ಇಂಥವುಗಳನ್ನು ಓದಿದಾಗ ಗುರುಗುಟ್ಟುವಂತಾದರೂ ಹೇಗೋ ಸೈರಿಸಿಕೊಳ್ಳಬಹುದು. ಆದರೆ -

"ಬೀಡಾಡಿ ಶ್ವಾನಗಳ ನಿಯಂತ್ರಣಕ್ಕೆ ನಗರಪಾಲಿಕೆ ಸಜ್ಜು"
"ಶ್ವಾನಗಳ ಬೊಗಳುವಿಕೆಗೆ ಬೆದರಿ ಓಡಿಹೋದ ಕಳ್ಳರು"

ಇಂಥವುಗಳನ್ನು ನೋಡಿದಾಗ ಕೊರಲೆತ್ತಿ ಬೊಗಳಿಯೇಬಿಡೋಣವೆನಿಸುತ್ತದೋ ಇಲ್ಲವೋ? ಆದರೇನು, "ನಾಯಿ, ಅಲ್ಲಲ್ಲ, ಶ್ವಾನ ಬೊಗಳಿದರೆ ದೇವಲೋಕ ಹಾಳೇ" ಎಂದುಕೊಂಡು ತಮ್ಮ ಬರೆಯುವಿಕೆಯನ್ನು ಮುಂದುವರೆಸಿದರೆ ಏನು ಮಾಡುವುದು ಹೇಳಿ?

ಅದು ಹೋಗಲಿ ಸ್ವಾಮಿ "ಹುಚ್ಚುಶ್ವಾನದ ಕಡಿತಕ್ಕೆ ಬಾಲಕ ಅಸ್ವಸ್ಥ" ಈ ಶೀರ್ಷಿಕೆಯನ್ನು ಓದಿದರೆ ಹುಚ್ಚೇ ಹಿಡಿದು, ಹೋಗಿ ಕಚ್ಚಿಯೇ ಬಿಡಬೇಕೆನ್ನಿಸಿದರೆ ಅತಿಶಯವೇ?

ಕೆಲ ದಶಕಗಳ ಹಿಂದಿನ ದಿನಪತ್ರಿಕೆಯ ವರದಿಗಾರನೊಬ್ಬನ ಗಾರ್ದಭಪ್ರೇಮವನ್ನು ತುಂಬಾ ಹಿಂದೆ ಇಲ್ಲಿ ನೆನಪಿಸಿಕೊಂಡಿದ್ದೆ - ಗಾರ್ದಭವೆಂಬ ಹೆಸರು ಹೊರಳದಿದ್ದರೂ ಕತ್ತೆಯೆಂಬ ಮೈಲಿಗೆ ಪದವನ್ನು ಮಾತ್ರ ತಪ್ಪಿಯೂ ಉಚ್ಚರಿಸಬಾರದೆಂದು ಆತ ಪ್ರತಿಜ್ಞೆ ಮಾಡಿದಂತಿತ್ತು. ಪತ್ರಿಕಾವರದಿ ಹೀಗಿತ್ತು:

"ರಸ್ತೆ ಅಪಘಾತದಲ್ಲಿ ಗಾರ್ದಭ ಸಾವು:

ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಗಾದರ್ಭವೊಂದಕ್ಕೆ ಲಾರಿ ಡಿಕ್ಕಿ ಹೊಡೆದು ಗಾರ್ಬಧವು ಸ್ಥಳದಲ್ಲೇ ಅಸುನೀಗಿದ ಘಟನೆ ಸಂಭವಿಸಿದೆ. ತೀವ್ರ ಪೆಟ್ಟುತಿಂದಿದ್ದ ಗಾರ್ದಬವನ್ನು ರಕ್ಷಿಸಲು ಗ್ರಾಮಸ್ತರು ಧಾವಿಸಿದರಾದರೂ ಅವರ ಪ್ರಯತ್ನ ಫಲಕಾರಿಯಾಗದೇ ಗಾಬರ್ದವು ಅಸುನೀಗಿತೆನ್ನಲಾಗಿದೆ" :o

ಆಗಿನ ಗಾರ್ದಭಪ್ರೇಮವು ಈಗ ಶ್ವಾನಗಳ ಮೇಲೆ ವರ್ಗಾವಣೆಯಾಗಿದೆಯೋ ಏನೋ.

ಇರಲಿ, ಜೋಕ್ಸ್ ಅಪಾರ್ಟ್, ಕನ್ನಡದಲ್ಲಿ ಶ್ವಾನಶಬ್ದವನ್ನು ಬಳಸಲೇಬಾರದೆಂದು ನನ್ನ ವಾದವಲ್ಲ, ಕೆಲಸಂದರ್ಭಗಳಲ್ಲಿ ಅದೇ ಸರಿಯಾದ ಬಳಕೆ ಕೂಡ. ಉದಾಹರಣೆಗೆ "ಕೊಲೆಯಾದ ಸ್ಥಳಕ್ಕೆ ಧಾವಿಸಿದ ನಾಯಿಹಿಂಡು/ನಾಯಿಮಂದೆ/ನಾಯಿಗುಂಪು" ಎನ್ನಲಾಗುತ್ತದೆಯೇ? ಪೋಲೀಸ್ ನಾಯಿಗಳು ಎಗರಿ ಕಚ್ಚಿಯೇ ಬಿಟ್ಟಾವು, ಅಥವಾ ಪೋಲೀಸ್ ಭಾಷೆಯಲ್ಲೇ ಬೊಗಳಿಯಾವು. ಅಲ್ಲಿ ಶ್ವಾನದಳ/ಶ್ವಾನಪಡೆ ಎಂದೇ ಬಳಸಬೇಕಾದ್ದು (ಅದೇನೇ ಇರಲಿ, ಶ್ವಾನದಳದಲ್ಲಿ ಶ್ವಾನವೇ ಉಚಿತವಾದರೂ ಪೋಲೀಸ್ ನಾಯಿಗೆ ಪೋಲೀಸ್ ಶ್ವಾನ ಎನ್ನುವುದು ತಾಂತ್ರಿಕವಾಗಿ ಸ್ವಲ್ಪ ತೊಡಕಿನ ವಿಷಯ, ಏಕೆಂದರೆ ಪೋಲೀಸ್+ಶ್ವಾನ ಎನ್ನುವುದು ಪೋಲೀಶ್ವಾನ ಎಂಬುದಾಗಿ ಸಕಾರಲೋಪಸಂಧಿಯಾಗಿ, ಅವಕ್ಕೆ ಪೋಲಿನಾಯಿಗಳ ಪಟ್ಟವನ್ನೇ ಕಟ್ಟಿಬಿಡುವ ಅಪಾಯವಿದೆ, ಇದು ಕೇವಲ ತಾಂತ್ರಿಕ ತೊಡಕಲ್ಲ, ರಾಜತಾಂತ್ರಿಕ ತೊಡಕೇ ಸರಿ).

ಇರಲಿ, ಪೋಲೀಸು ಶ್ವಾನದಳದ್ದಾಯಿತಲ್ಲ, ಅದೇ ಬೇರೊಂದು ಸಂದರ್ಭದಲ್ಲಿ, "ಕೊಲೆಯಾದವನ ಶವವನ್ನು ಕಚ್ಚಿ ಎಳೆದಾಡುತ್ತಿರುವ ಶ್ವಾನದಳ" ಎಂದು ಬಳಸಬಹುದೇ? ಅದು ಆ ನಾಯಿಗಳಿಗಾಗಲೀ, ಅನಾಥ ಹೆಣಕ್ಕಾಗಲೀ, ಅಥವಾ ಶ್ವಾನದಳಕ್ಕಾಗಲೀ ಮರ್ಯಾದೆ ತರುವಂತಹ ವಿಷಯವೇ?. ಅಲ್ಲಿ "ಕೊಲೆಯಾದವನ ಶವವನ್ನು ಕಚ್ಚಿ ಎಳೆದಾಡುತ್ತಿರುವ ನಾಯಿಹಿಂಡು/ಗುಂಪು" ಎಂದು ಹೇಳುವುದೇ ಉಚಿತ. "ಬೀಡಾಡಿ ನಾಯಿಗಳ ಗುಂಪು" ಎಂದರೆ ಇನ್ನೂ ಪರಿಣಾಮಕಾರಿ.

ಇನ್ನು ನಾಯಿ ಸಾಕಿದವರು ಅದನ್ನು ತಮ್ಮ ಮನೆಯ ಸದಸ್ಯ/ಸ್ಯೆಯಂತೆಯೇ ಪ್ರೀತಿಸುತ್ತಾರಾದರೂ ("ನಿಮ್ಮ ನಾಯಿ ತುಂಬಾ ಚೆನ್ನಾಗಿದೆ" ಎಂದರೆ ನಿಮ್ಮನ್ನೇ ನಾಯಿಯಂತೆ ಕಾಣಬಹುದಾದರೂ) "ನಿಮ್ಮ ಶ್ವಾನ ತುಂಬಾ ಚೆನ್ನಾಗಿದೆ" ಎಂದ ಮಾತ್ರಕ್ಕೆ ಹೆಚ್ಚುವರಿ ಮರ್ಯಾದೆಯನ್ನೇನೂ ಮಾಡಲಾರರು. ಅಲ್ಲಿ "ನಿಮ್ಮ ರಾಮು, ಅಲ್ಲಲ್ಲ ಡ್ಯಾನಿ ತುಂಬಾ ಚೂಟಿಯಾಗಿದ್ದಾನೆ" ಎಂದೋ "ನಿಮ್ಮ ರಿಂಕಿ ಮುದ್ದಾಗಿದ್ದಾಳೆ" ಎಂದೋ ಹೇಳಿದರೆ, ಕಾಲನ್ನು ಮೂಸಿನೋಡಲು ತಣ್ಣನೆಯ ಮೂಗು ಸೋಕಿಸುವ ಅದನ್ನು, ಜೀವ ಪುಕಪುಕವೆನ್ನುತ್ತಿದ್ದರೂ ಎದೆಯ ಧೈರ್ಯವನ್ನೆಲ್ಲಾ ಕೈಗೆ ರವಾನಿಸಿ ತಲೆಸವರಿದ ಶಾಸ್ತ್ರ ಮಾಡಿದರೆ, ಎರಡು ಹೆಚ್ಚುವರಿ ಬಿಸ್ಕಿಟ್ (ನಾಯಿ ಬಿಸ್ಕೆಟ್ ಅಲ್ಲ ಮತ್ತೆ) ದಕ್ಕಬಹುದು.

ಹೀಗೆ ಸಿಕ್ಕಸಿಕ್ಕಲ್ಲೆಲ್ಲಾ ಶ್ವಾನಗಳನ್ನು ನುಗ್ಗಿಸುವ ಪತ್ರಕರ್ತಮಿತ್ರರು, ಮತ್ತು ಅವರನ್ನನುಕರಿಸುವ ಇತರ ಮಿತ್ರರು, ಈ 'ಶ್ವಾನೌಚಿತ್ಯ'ವನ್ನು ತುಸು ಬೆಳೆಸಿಕೊಂಡರೆ ಓದುಗನ ಬದುಕು ನಾಯಿಪಾಡಾಗುವುದು, ಅಲ್ಲಲ್ಲ, ಶ್ವಾನಪಾಡಾಗುವುದು ತಪ್ಪಬಹುದೇನೋ. ಅಥವಾ ಶ್ವಾನಕ್ಕಿಂತ ಹೆಚ್ಚು 'ಮರ್ಯಾದೆ'ಯದಾದ ಗ್ರಾಮಸಿಂಹವೆಂಬ ಪದವು ಇನ್ನೂ ಇವರ ಬತ್ತಳಿಕೆ ಸೇರಿಲ್ಲವೆಂದು ನೆಮ್ಮದಿಯ ನಿಟ್ಟುಸಿರಿಡಬೇಕೋ

Thursday, January 9, 2020

ಚಳಿಗಾಲದ ಚುರುಬಿಸಿಲಿಗೂ ಸೈ, ಸೊಂಪಾದ ರಾತ್ರಿಯೂಟಕ್ಕೂ ಸೈ - ಮಜ್ಜಿಗೇಹುಳಿಗೊಜ್ಜು

ಅಪರೂಪಕ್ಕೆ ಸಮಯ ಸಾಧಿಸಿ ಅಡುಗೆಮನೆಗೆ ನುಗ್ಗುವ ನಮ್ಮಂತಹ ಹವ್ಯಾಸಿ ಅಡುಗೆಕೋರರಿಗೆ ಸಿದ್ಧ ರೆಸಿಪಿಗಳಿರುವುದಿಲ್ಲ (ಏನು? ರೆಸಿಪಿ ನೋಡಿಕೊಂಡು ಅಡುಗೆ ಮಾಡುವುದೇ!) ನಮಗೆ ಅಡುಗೆಯೆನ್ನುವುದೇನಿದ್ದರೂ ಆ ಕ್ಷಣದ ಸ್ಫೂರ್ತಿಯಿಂದ ಉದಿಸುವ ಕಾವ್ಯದಂತೆ, ಮನೋಧರ್ಮಸಂಗೀತವೇ ಎನ್ನೋಣ.  ಅವತ್ತಿನ ವಿನಿಕೆ ಯಾ ಉಣಿಕೆ ಅವತ್ತಿಗೆ ಕಳೆಗಟ್ಟಿದರೆ ಕಟ್ಟಿತು ಇಲ್ಲದಿದ್ದರಿಲ್ಲ, ಇವತ್ತು ಮಾಡಿದ್ದು ನಾಳೆಗೆ ಮತ್ತೆ ಹಾಗೆಯೇ ಮೂಡುವ ಭರವಸೆಯಿಲ್ಲ.  ಆದ್ದರಿಂದ ಇಂದು ಚೆಂದ ಕಂಡದ್ದನ್ನು ಬರೆದಿಟ್ಟುಬಿಡುವ ಪ್ರಯತ್ನವಷ್ಟೇ ಇದು.  "ಅಯ್ಯೋ, ಇದೇನು ಹೊಸದು, ನಾವು ಮಾಡಿಲ್ಲದ ಅಡುಗೆಯೇ?" ಎಂದು ಪಾಕಪ್ರವೀಣರು ಮೂಗು ಮುರಿಯಬೇಡಿ, ಈ 'ರೆಸಿಪಿ' ನಿಮಗಲ್ಲ.  ಕಾಫಿಗೆ ಎಷ್ಟು ಟೇಬಲ್ ಸ್ಪೂನ್ ಉಪ್ಪು ಹಾಕಬೇಕೆಂದರಿಯದ, ಅನ್ನ ಮಾಡಲು ರೆಸಿಪಿ ಕೇಳುವ, "ಒಲೆ ಹೊತ್ತಿಸಿ" ಎಂಬ ಸಾಲನ್ನು ರೆಸಿಪಿಯಲ್ಲಿ ಹುಡುಕುವ ನೂರಾರು ಮುಗ್ಧ ಜೀವಗಳು, ಮನೆಯಿಂದ ದೂರದಲ್ಲೆಲ್ಲೆಲ್ಲೋ ಬದುಕುತ್ತಾ ಇದ್ದಾವೆ, ಅವರಿಗೂ ಹೊಟ್ಟೆಯಿದೆ, ಬಾರದ ಅಡುಗೆಯಿಂದ ಆ ಹೊಟ್ಟೆತುಂಬಿಸಿಕೊಳ್ಳುವ ಅನಿವಾರ್ಯತೆಯೂ ಇದೆ ಎಂಬುದನ್ನು ಅನುಭವದಿಂದ ಬಲ್ಲೆ.  ಆ ಒಂಟಿ ಜೀವಗಳ ಊಟ ಕಿಂಚಿತ್ತು ರಸಮಯವಾಗುವುವಾದರೆ ಆಗಲಿ ಬಿಡಿ, ಅಲ್ಲವೇ?  ನೀವೂ ಬೇಕಿದ್ದರೆ ಮನೆಯಲ್ಲಿ ಇದನ್ನು ಪ್ರಯತ್ನಿಸಬಹುದು - ಪರಿಣಾಮಗಳಿಗೆ ನೀವೇ ಹೊಣೆಯಷ್ಟೇ.

ಹೊಸದೇನೂ ಇಲ್ಲ, ವಾಸ್ತವದಲ್ಲಿ ಇದು ಮಜ್ಜಿಗೆಹುಳಿ ಮತ್ತು ಗೊಜ್ಜು ಇವೆರಡರ ಮಿಶ್ರಣ - ಮೈನಸ್ ಕೆಲವಂಶಗಳು ಪ್ಲಸ್ ಕೆಲವಂಶಗಳು ಎಂದಿಟ್ಟುಕೊಂಡರಾದೀತು.  ಇದನ್ನು ಅನ್ನಕ್ಕೆ ಕಲಸಿದರೆ ಮೊಸರನ್ನದ ಪರಿಷ್ಕೃತ ಆವೃತ್ತಿ, ಆದರೆ ಅನ್ನಕ್ಕೆ ಕಲಸಲೇಬೇಕೆಂದಿಲ್ಲ, ಬೇರೆಬೇರೆ ತಿಂಡಿಗಳಿಗೆ ನೆಂಜಿಕೊಳ್ಳಲು ಬಳಸಬಹುದು, ಹಾಗೆಯೇ ತಿನ್ನಲೂ ರುಚಿಯೇ.  

ಮೊಸರನ್ನದ ಹದದಲ್ಲಿ ಒಂದು ಪಾವಿನ ಅನ್ನ ಕಲಸುವಷ್ಟು ಮಜ್ಜಿಗೆಹುಳಿಗೊಜ್ಜಿಗೆ ಬೇಕಾಗುವ ಸಾಮಗ್ರಿ:
  1. ಕಾಲು ಲೀಟರು ಚೆನ್ನಾಗಿ ಹುಳಿ ಬಂದ ಮೊಸರು (ಗಂಟುಗಳಿಲ್ಲದಂತೆ ಗೊಟಾಯಿಸಿಟ್ಟುಕೊಳ್ಳಿ)
  2. ಅರ್ಧ ಲೀಟರು ಹೊಸದಾದ ಸಿಹಿ ಮೊಸರು, ಅನ್ನಕ್ಕೆ ಕಲಸುವುದಿದ್ದರೆ ಮಾತ್ರ (ಗಂಟುಗಳಿಲ್ಲದಂತೆ ಗೊಟಾಯಿಸಿಟ್ಟುಕೊಳ್ಳಿ)
  3. ಒಂದೂವರೆ ಟೇಬಲ್ ಚಮಚೆಯಷ್ಟು ಅಕ್ಕಿ ಹಿಟ್ಟು
  4. ಒಂದು ಚಮಚೆ ಕಡಲೆ ಹಿಟ್ಟು
  5. ನಾಲ್ಕು ದೊಡ್ಡದಾದ ಹಸಿಮೆಣಸಿನ ಕಾಯಿ
  6. ಒಂದು ದೊಡ್ಡ ಈರುಳ್ಳಿ
  7. ಎರಡು ದೊಡ್ಡ, ಕೆಂಪಗೆ ಹಣ್ಣಾದ ಟೊಮ್ಯಾಟೋ
  8. ಒಂದು ದೊಡ್ಡ ನಿಂಬೆ ಹಣ್ಣು
  9. ಒಂದು ಟೇಬಲ್ ಚಮಚೆಯಷ್ಟು ತುಪ್ಪ
  10. ಒಗ್ಗರಣೆಯ ವಸ್ತುಗಳು - ಸಾಸಿವೆ, ಕಡಲೇಬೇಳೆ, ಉದ್ದಿನಬೇಳೆ, ಮೆಂತ್ಯ, ಇಂಗು, ಕರಿಬೇವು/ಕೊತ್ತಂಬರಿ ಸೊಪ್ಪು
  11. ಒಂದು ಚಮಚೆ ಉಪ್ಪಿನ ಕಾಯಿ - ನಿಂಬೆ/ಮಾವು ಇತ್ಯಾದಿ
  12. ಮಸಾಲೆಯ ಪುಡಿ (ಒಂದೊಂದು ಚಿಟಿಕೆ ಬೆರೆಸಿ ಇಟ್ಟುಕೊಳ್ಳುವುದು) - ಅಚ್ಚಕಾರದ ಪುಡಿ, ಕಾಳುಮೆಣಸಿನ ಪುಡಿ, ಇಂಗು, ಸಾರಿನಪುಡಿ/ಹುಳಿಪುಡಿ, ಅರಿಸಿನ, ಇದ್ದರೆ ಪಾನಿಪುರಿ/ಚಾಟ್ ಮಸಾಲೆ ಪುಡಿಯನ್ನೂ ಒಂದು ಚಿಟಿಕೆ ಬೆರೆಸಿಕೊಳ್ಳಬಹುದು
  13. ಎರಡು ಟೀ ಚಮಚೆ ಸಕ್ಕರೆ ಅಥವಾ ಬೆಲ್ಲದ ಪುಡಿ
  14. ರುಚಿಗೆ ತಕ್ಕಷ್ಟು ಉಪ್ಪು

ಹೀಗೆ ಮಾಡಿ:
  1. ಹಸಿ ಮೆಣಸಿನಕಾಯಿ, ಈರುಳ್ಳಿ, ಟೊಮ್ಯಾಟೋ, ಕೊತ್ತಂಬರಿ/ಕರಿಬೇವು ಇವುಗಳನ್ನು ಸಣ್ಣಗೆ, ಬೇರೆಬೇರೆಯಾಗಿ ಹೆಚ್ಚಿಟ್ಟುಕೊಳ್ಳಿ.
  2. ಒಂದು ಲೋಟ ನೀರಿಗೆ ಅಕ್ಕಿ ಹಿಟ್ಟು ಮತ್ತು ಕಡಲೆ ಹಿಟ್ಟುಗಳನ್ನು ಹಾಕಿ ಗಂಟುಗಳಿಲ್ಲದಂತೆ ಕದರಿ, ಹೆಚ್ಚಿರುವುದರಲ್ಲಿ ಸ್ವಲ್ಪ ಮೆಣಸಿನಕಾಯಿ ತುಂಡುಗಳನ್ನೂ ಹಾಕಿ ಒಲೆಯ ಮೇಲಿಡಿ (ಒಲೆ ಹೊತ್ತಿಸಿರಬೇಕೆಂದು ಬೇರೆ ಹೇಳಬೇಕಿಲ್ಲವಲ್ಲ)
  3. ಅದು ಕಾಯುತ್ತಿರುವಾಗ ಒಂದು ಚಿಟಿಕೆ ಅರಿಸಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
  4. ಒಂದು ಕುದಿ ಸಾಕು - ಮಿಶ್ರಣವು ನೀರಾದ ಅಂಬಲಿಯಂತಾದ ಮೇಲೆ, ಹುಳಿ ಮೊಸರನ್ನು ಹಾಕಿ, ತಕ್ಷಣ ಒಲೆಯ ಮೇಲಿಂದ ತೆಗೆದು, ಅರ್ಧ ನಿಂಬೆಹಣ್ಣು ಹಿಂಡಿ, ಚೆನ್ನಾಗಿ ಗೊಟಾಯಿಸಿ ಪಕ್ಕಕ್ಕಿಡಿ, ಆರಲಿ.
  5. ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಹಾಕಿ ಒಲೆಯ ಮೇಲಿಡಿ, ಅದು ಕಾದ ಮೇಲೆ ಸಾಸಿವೆ ಹಾಕಿ, ಚಟಗುಟ್ಟಿದ ಮೇಲೆ ಉಳಿದ ಒಗ್ಗರಣೆಯ ವಸ್ತುಗಳನ್ನು ಹಾಕಿ, ಉರಿ ಕಡಿಮೆ ಮಾಡಿ
  6. ಉಳಿದ ಮೆಣಸಿನಕಾಯಿ ತುಂಡಿನಲ್ಲಿ ಅರ್ಧ, ಈರುಳ್ಳಿ ಮತ್ತು ಟೊಮ್ಯಾಟೋ ತುಂಡುಗಳಲ್ಲಿ ಅರ್ಧ ಹಾಕಿ
  7. ಬೆರೆಸಿಟ್ಟುಕೊಂಡ ಮಸಾಲೆ ಪುಡಿ, ಸಕ್ಕರೆ/ಬೆಲ್ಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಒಂದು ಚಮಚೆ ಉಪ್ಪಿನ ಕಾಯನ್ನು ಹಾಕಿ, ಚೆನ್ನಾಗಿ ಕಲಸಿ, ಕೈಯಾಡಿಸುತ್ತಾ ಎರಡು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.
  8. ಈರುಳ್ಳಿ ಮತ್ತು ಟೊಮ್ಯಾಟೋ ಸಾಕಷ್ಟು ಬೆಂದು ಗೊಜ್ಜಿನ ಹದಕ್ಕೆ ಬಂದ ಮೇಲೆ ಈಗಾಗಲೇ ಮಾಡಿಟ್ಟುಕೊಂಡ ಮಜ್ಜಿಗೆಹುಳಿಯ ಮಿಶ್ರಣವನ್ನು ಇದಕ್ಕೆ ಹಾಕಿ ಚೆನ್ನಾಗಿ ಕಲಕಿ, ಒಂದು ಕುದಿ ಬರುವ ಮೊದಲೇ ಒಲೆ ಆರಿಸಿಬಿಡಿ.
  9. ಈಗ ಅರ್ಧ ನಿಂಬೆಹಣ್ಣು ಹಿಂಡಿ, ಉಳಿದಿರುವ ಮೆಣಸಿನಕಾಯಿ, ಈರುಳ್ಳಿ ಮತ್ತು ಟೊಮ್ಯಾಟೋ ತುಂಡುಗಳನ್ನು ಹಾಕಿ ಚೆನ್ನಾಗಿ ಕಲಕಿ ಆರಲು ಎತ್ತಿಡಿ.
ರುಚಿರುಚಿಯಾದ ಮಜ್ಜಿಗೆಹುಳಿಗೊಜ್ಜು ತಯಾರಾಯಿತು.  ಇದನ್ನು ಹಾಗೆಯೇ ತಿನ್ನಲು ಬಳಸಬಹುದು, ಬೇರೆ ತಿಂಡಿಗಳೊಟ್ಟಿಗೆ ನೆಂಜಿಕೊಳ್ಳಲೂ ಬಳಸಬಹುದು ಅಥವಾ ಮೊಸರನ್ನದಂತೆ ಅನ್ನಕ್ಕೂ ಕಲಸಬಹುದು.  

ಅನ್ನಕ್ಕೆ ಕಲಸುವುದಾದರೆ, ಒಂದು ಪಾವಿನಷ್ಟು ಅನ್ನಕ್ಕೆ ಸೇರಿಸಿ ಚೆನ್ನಾಗಿ ಕಲಸಿ ಒಂದು ಹತ್ತು ನಿಮಿಷ ನೆನೆಯಲು ಬಿಡಿ.  ಸ್ವಲ್ಪ ಹೊತ್ತಾದ ಮೇಲೆ ಅನ್ನವು ಕಲಸಿದ ಹುಳಿಗೊಜ್ಜನ್ನು ಹೀರಿಕೊಂಡು ಸ್ವಲ್ಪ ಬಿಗಿಯಾಗುತ್ತದೆ.  ಈಗ ಹೊಸದಾದ ಸಿಹಿ ಮೊಸರು ಸೇರಿಸಿ ಮೊಸರನ್ನದ ಹದಕ್ಕೆ ಕಲಸಿ - ಮಜ್ಜಿಗೆಹುಳಿಗೊಜ್ಜಿನ ಅನ್ನ ಸವಿಯಲು ತಯಾರು.


Sunday, December 29, 2019

ಕೊನೆಗೊಂಡ ಸದಾಚಾರ-ಸೌಶೀಲ್ಯಗಳ ಯುಗ


ಶ್ರೀಗಳ ಸಮ್ಮುಖ ನಮ್ಮ ಪಾಲಿಗೆ ಬಹುಸಾಮಾನ್ಯವೆಂಬಂತಿದ್ದದ್ದು ನನ್ನ ಎಳವೆಯಲ್ಲಿ. ಚನ್ನಪಟ್ಟಣಕ್ಕೆ ಬಂದ ಎಲ್ಲ ಸ್ವಾಮಿಗಳಿಗೂ ನಮ್ಮ ತಾತನವರದ್ದೇ ಆತಿಥ್ಯ, ಊರಿನ ರಾಮದೇವರ ಗುಡಿಯಲ್ಲಿ ವಾಸ್ತವ್ಯ ಎಂದು ನನ್ನ ನೆನಪು. ಅವರು ಊರಿಗೆ ಬಂದ ದಿನ ಸಂಜೆ ಸಾಮಾನ್ಯವಾಗಿ ನಮ್ಮ ತಾತನವರ ಮನೆಗೆ ಭೇಟಿ - ದೊಡ್ಡ ಮನೆ, ಅಲ್ಲೊಂದು ಪುಟ್ಟ ಸಭೆ ನಡೆಯುತ್ತಿತ್ತು. ಶ್ರೀಗಳ ಆಶೀರ್ವಚನ - ಅದೇ ವಿದ್ಯುತ್ಕಾಂತಿಯ ಮಾಸದ ನಗೆ, ಸ್ವಗತದ ಶೈಲಿಯ ಮೃದುಗಂಭೀರವಾಣಿ, ಫಲಮಂತ್ರಾಕ್ಷತೆ, ನಗೆಮೊಗದ ಕುಶಲಪ್ರಶ್ನೆ - ಈ ಕ್ರಮ ಬಹುತೇಕ ನಮ್ಮ ತಾತನವರು ಬದುಕಿರುವ ತನಕ ತಪ್ಪಿದ್ದಿಲ್ಲ. ಆಮೇಲೆ ಊರಿನ ಸಂಪರ್ಕ ತಪ್ಪಿ ದಶಕಗಳೇ ಕಳೆದುವು. ಮಾಧ್ಯಮಗಳ ಮೂಲಕವಷ್ಟೇ ಶ್ರೀಗಳ ಪರೋಕ್ಷಸಂಪರ್ಕ. ಎಷ್ಟೋ ದಶಕಗಳನಂತರ ಮೊನ್ನೆಮೊನ್ನೆ ಶ್ರೀಗಳ ನೇರ ದರ್ಶನ ಬೆಂಗಳೂರಿನಲ್ಲಿ, ಸರಿಯಾಗಿ 18 ದಿನದ ಕೆಳಗೆ, 11/12/2019ರಂದು, ಶ್ರೀ ವಿದ್ಯಾಪ್ರಸನ್ನತೀರ್ಥರ ಐವತ್ತನೇ ಪುಣ್ಯದಿನದ ಸ್ಮರಣೆಯಲ್ಲಿ. ಪ್ರಸನ್ನತೀರ್ಥರೊಡನಿನ ಅರವತ್ತೈದು ವರ್ಷಕ್ಕೂ ಹಿಂದಿನ ತಮ್ಮ ನೆನಪುಗಳನ್ನು ಹೆಕ್ಕಿ ತೆಗೆದು ಹಂಚಿಕೊಂಡರು, ತಮಿಳುನಾಡಿನ ಯಾವುದೋ ಹಳ್ಳಿಯ ಹೆಸರು ಕೂಡ ಶ್ರೀಗಳ ನೆನಪಿನಲ್ಲಿತ್ತು. ಆ ದಿನ ಶ್ರೀಗಳನ್ನು ನೋಡಿದವರಿಗೆ ಅದೇ ಕೊನೆಯ ದರ್ಶನವಾಗಬಹುದೆಂಬ ಊಹೆ ಖಂಡಿತಾ ಇರಲಿಕ್ಕಿಲ್ಲ. ಶ್ರೀಗಳ ಅದಮ್ಯಚೇತನಕ್ಕೆ 88 ಇನ್ನೂ ಕಿರಿಯವಯಸ್ಸು. ಬಿಡುವಿಲ್ಲದ ಕಾರ್ಯಕ್ರಮದ ಕಾರಣದಿಂದ, ಈ ಕಾರ್ಯಕ್ರಮದ ಅರ್ಧದಲ್ಲೇ ಉಡುಪಿಗೆ ಹೊರಡಬೇಕಾಗಿ ಬಂದ ಕಾರಣವನ್ನು ಸಭೆಗೆ ವಿವರಿಸಿ "ಸಭೆಯ ಅನುಮತಿ ಪಡೆದು ಪ್ರಯಾಣ ಬೆಳಸುತ್ತೇವೆ" ಎಂದ ಶ್ರೀಗಳ ಸೌಜನ್ಯ ಬೆರಗಾಗಿಸಿತು.

ಕಳೆದ ವರ್ಷವೋ ಏನೋ, ಪ್ರಯಾಣದಲ್ಲಿ ಬೆನ್ನಿಗೆ ಪೆಟ್ಟಾಗಿ, ಎದ್ದು ನಿಲ್ಲುವುದೇ ದುಸ್ತರವಾಗಿ, ವೈದ್ಯರು ಬೆಡ್ ರೆಸ್ಟ್ ಹೇಳಿದ್ದಾಗ್ಯೂ ಎರಡೇ ದಿನದಲ್ಲಿ ಕೂಡಿದ ಮಟ್ಟಿಗೆ ನಿತ್ಯಕರ್ಮಾನುಷ್ಠಾನವನ್ನು ರೂಢಿಸಿಕೊಂಡರೆಂದು ಕೇಳಿದ್ದೇನೆ. ಸಾಂಪ್ರದಾಯಿಕ ಸನ್ಯಾಸಿಯೊಬ್ಬನಿಗೆ ನಿತ್ಯಕರ್ಮಾನುಷ್ಠಾನ ಅದೆಷ್ಟು ಮುಖ್ಯವೆಂದು ಸಂಪ್ರದಾಯವನ್ನು ಬಲ್ಲವರೆಲ್ಲರೂ ಅರಿತ ವಿಷಯ. ಇದು ಸನ್ಯಾಸಿಗಳಿಗೆಲ್ಲ ಮಾದರಿಯಾಗಬಹುದಾದ ವಿಶ್ವೇಶತೀರ್ಥರ ಇಚ್ಛಾಶಕ್ತಿ.

ಸಾಂಪ್ರದಾಯಿಕ ಸನ್ಯಾಸದ ಚೌಕಟ್ಟಿನೊಳಗೇ ಸಾಮಾಜಿಕಸುಧಾರಣೆಗಾಗಿ ತುಡಿದ ಈ ಚೇತನ, ಕೇಳಿದ ಕಟಕಿಗಳೆಷ್ಟು, ಎದುರಿಸಿದ ವಿರೋಧವೆಷ್ಟು, ಅನುಭವಿಸಿದ ನಿರ್ಲಜ್ಜ ವೈಯಕ್ತಿಕ ಭರ್ತ್ಸನೆಗಳೆಷ್ಟು? ರಾಜಕೀಯಸ್ಥನೆಂದರು, ಪೊಲಿಟಿಕಲ್ ಗಿಮಿಕ್ ಎಂದರು, ಕೇಳಬಾರದ ಪ್ರಶ್ನೆಗಳನ್ನು ಕೇಳಿದರು, ಆಡಬಾರದ್ದನ್ನಾಡಿದರು - ಈ ಎಲ್ಲ ಸಂದರ್ಭಗಳಲ್ಲೂ ತಮ್ಮದೇ ಸಮುದಾಯದ ಯತಿಗಡಣವಿರಲಿ, ಬ್ರಾಹ್ಮಣಸಮಾಜದ, ಇಡೀ ಹಿಂದೂ ಸಮಾಜದ ಯತಿಸಮುದಾಯವೂ ನಿರ್ಲಿಪ್ತಮೌನ ವಹಿಸಿದಾಗ್ಯೂ, ತಾವೂ ಸ್ವತಃ ನಿರ್ಲಿಪ್ತರಾಗಿ ತಾವು ಸರಿಯೆಂದು ಅರಿತದ್ದನ್ನು ನಡೆಸಿಕೊಂಡು ಹೋದ ದೃಢತೆ ಸ್ವಾಮಿಗಳದ್ದು.

ಸ್ವಚ್ಛತೆ, ಸದಾಚಾರ, ಸಂಯಮ, ಸೌಶೀಲ್ಯಗಳ ಒಂದು ಯುಗ ಇಂದಿಗೆ ಮುಗಿದಿದೆ. ಆ ಯುಗದ ಒಂದು ಭಾಗದಲ್ಲಿ ನಾವೂ ಜೀವಿಸಿದ್ದೆವೆಂಬ ಸಾರ್ಥಕತೆ ನಮಗುಳಿದಿದೆ, ಆ ಸಾರ್ಥಕತೆಗೆ ಮುಕ್ಕಾಗದಂತೆ ಬದುಕುವ ಹೊಣೆಗಾರಿಕೆಯೂ!  ನೆಚ್ಚಿದ ತತ್ತ್ವಕ್ಕೆ ಕಟ್ಟಿ ನಿಲ್ಲುವ ಆ ದೃಢತೆ, ಗುಬ್ಬಚ್ಚಿಯಂತಹ ಪುಟ್ಟ ದೇಹದಲ್ಲಿ ಸದಾ ಪುಟಿಯುವ ಆ ಚೈತನ್ಯ, ಆ ಮಗುವಿನಂತಹ ನಗೆ - ಇವೆಲ್ಲ ಕಣ್ಣಿಗೆ ಕಟ್ಟಿದಂತಿದೆ.

ಈ ಚೇತನ ನಮ್ಮ ಹಿಂದೆ ಸದಾ ಬೆಂಗಾವಲಾಗಿರಲಿ ಎಂಬ ಹಾರೈಕೆಯೊಂದಿಗೆ 🙏🙏🙏

Friday, September 6, 2019

ಪ್ರಾದೇಶಮಾತ್ರವಸನಂ

ಯಾವುದೋ ತರಲೆ ಚರ್ಚೆಯ ನಡುವೆ, ವಿದ್ವನ್ಮಿತ್ರರಾದ ಶ್ರೀ ರಂಗನಾಥಪ್ರಸಾದರಿಗೆ "ನೀವು ದೇಶದ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಂತೆ ಕಾಣುತ್ತದೆ" ಎಂದೆ.  ಅದು ಬೇರೆಯೇ ತಮಾಷೆಯ ಹಿನ್ನೆಲೆ, ಸದ್ಯಕ್ಕಿಲ್ಲಿ ಅಪ್ರಸ್ತುತ.  ಅದಕ್ಕವರು ಹೀಗೆ ಹೇಳಿದರು - "ದೇಶ ಎಂದರೆ ಪ್ರದೇಶ ಎಂಬ ಅರ್ಥವೂ ಇದೆ. ಪ್ರದೇಶದಿಂದ ಪ್ರಾದೇಶ! ಈಚೆಗೆ ನೀವು ಪದ್ಯಪಾನಕ್ಕೆ ಬಂದಿಲ್ಲ. ಅಲ್ಲೊಂದು ಸಮಸ್ಯೆ ಹೀಗಿತ್ತು: "ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ" - ತಾಕತ್ತಿದ್ದರೆ ಪರಿಹರಿಸಿ ನೋಡೋಣ"  ಈ ಬಗೆಯ ಹಾಸ್ಯಸಲ್ಲಾಪಗಳು ನಮ್ಮಲ್ಲಿ ಆಗಾಗ್ಗೆ ನಡೆಯುತ್ತಿರುತ್ತವೆ.

"ಪ್ರಾದೇಶಮಾತ್ರವಸನ" ಎಂದರೆ ದೇಹದ 'ಆ' ಪ್ರದೇಶವನ್ನಷ್ಟೇ ಮುಚ್ಚುವಷ್ಟು ಚಿಕ್ಕ ಬಟ್ಟೆ ಎಂದು ವಿಶೇಷಾರ್ಥ - "ಆ ಸತಿಯು 'ಪ್ರದೇಶ'ವನ್ನಷ್ಟೇ ಮುಚ್ಚುವಷ್ಟು ಬಟ್ಟೆಯನ್ನು ಧರಿಸಿದಳಲ್ಲವೇ?" ಎಂಬುದು ಈ ಸಾಲಿನ ಅರ್ಥ.  ಕ್ಷಮಿಸಿ, ಸ್ವಲ್ಪ ಮಡಿಯವರಿದ್ದರೆ ಇನ್ನು ಮುಂದೆ ಓದುವ ಅಗತ್ಯವಿಲ್ಲ, ಆದರಿದು ವಿದ್ವದ್ವಿನೋದ ಎಂಬ ದೃಷ್ಟಿಯುಳ್ಳವರು ಮುಂದುವರೆಯಬಹುದು :) ಇದೊಂದು ಸಮಸ್ಯಾಪೂರಣದ ಪ್ರಶ್ನೆ.  ಸಮಸ್ಯಾಪೂರಣದ ಹಿನ್ನೆಲೆ ಅರಿಯದವರಿಗಾಗಿ ಇದೊಂದು ಚಿಕ್ಕ ವಿವರಣೆ.  ಅವಧಾನಕಲೆಯಲ್ಲಿ ಸಮಸ್ಯಾಪೂರಣವೆನ್ನುವುದು ಒಂದು ವಿಭಾಗ.  ಇಲ್ಲಿ ಅವಧಾನಿಗೆ ಪೃಚ್ಛಕನು (ಅವಧಾನಿಗೆ ಸರದಿಯ ಮೇಲೆ ಪ್ರಶ್ನೆ ಕೇಳುವ ಎಂಟೋ ಹತ್ತೋ ನೂರೋ ಸಾವಿರವೋ ಮಂದಿಯಲ್ಲಿ ಒಬ್ಬ) ತಾನು ರಚಿಸಿದ/ರಚಿಸಲೆಳಸುವ ಪದ್ಯದ ಸಾಲೊಂದನ್ನು  ಕೊಡುತ್ತಾನೆ.  ಈ ಸಾಲು ಸಾಮಾನ್ಯವಾಗಿ ಅರ್ಥಹೀನವೋ ಅಸಂಬದ್ಧವೋ ಅಸಂಭವವವೋ ಕೆಲವೊಮ್ಮೆ ಅಶ್ಲೀಲವೋ ಆಗಿದ್ದು, ಇದನ್ನು 'ಸಮಸ್ಯೆ' ಎನ್ನುತ್ತಾರೆ - ಉದಾ: "ಸತ್ತವಳೆದ್ದೋಡಿ ಪೋದಳ್"; "ದನಮಂ ಕಡಿಕಡಿದು ಬಸದಿಗೆಳೆಯುತ್ತಿರ್ದರ್"; ಅಥವಾ "ಬ್ರಾಹ್ಮಣ ಕಾಗೆಮಾಂಸವ ತಿಂಬುದೇನಾಶ್ಚರ್ಯಂ" ಹೀಗೆ.  ನಿರ್ದಿಷ್ಟ ಛಂದಸ್ಸಿನಲ್ಲಿರುವ ಆ ಪದ್ಯದ ಉಳಿದ ಮೂರೋ ನಾಲ್ಕೋ ಐದೋ ಸಾಲುಗಳನ್ನು ಛಂದೋನಿಯಮಗಳಿಗೆ ಭಂಗವಾಗದಂತೆ ರಚಿಸಿ, ಪದ್ಯ ಪೂರ್ಣಗೊಳಿಸಿ, ಈ 'ಸಮಸ್ಯೆ'ಯ ಸಾಲಿಗೆ ಒಂದು ಸುಸಂಬದ್ಧತೆಯನ್ನ, ಅರ್ಥವನ್ನ ತಂದುಕೊಟ್ಟು, ಅದರಲ್ಲಿ ಮೇಲ್ನೋಟಕ್ಕೆ ಕಾಣುವ ಅಶ್ಲೀಲತೆಯನ್ನು ತೊಡೆದು ಹಾಕುವುದು ಅವಧಾನಿಯ ಕೆಲಸ.  ಅದನ್ನಾತ ಸುತ್ತಿಗೊಂದು ಸಾಲಿನಂತೆ ಮೂರೋ ನಾಲ್ಕೋ ಸುತ್ತುಗಳಲ್ಲಿ ಮಾಡಿ ಮುಗಿಸುವುದಲ್ಲದೇ, ಕೊನೆಯಲ್ಲಿ ಇಡೀ ಪದ್ಯವನ್ನು ನೆನಪಿನಿಂದ ಹೇಳುತ್ತಾನೆ, ಅದಾದಮೇಲೆ ಪೃಚ್ಛಕ ಅದೇ ಸಮಸ್ಯೆಯ ಸಾಲನ್ನೊಳಗೊಂಡ ತನ್ನ ಪದ್ಯವನ್ನೂ ಹೇಳುತ್ತಾನೆ.  ಮೇಲಿನ ಉದಾಹರಣೆಯಲ್ಲಿ, ಸತ್ತವಳು ಎದ್ದೋಡಿಹೋಗಲು ಹೇಗೆ ಸಾಧ್ಯ.  ಆದರೆ "ಅತ್ತೆಯ ಕಾಟಕೆ ಬೇಸತ್ತವಳೆದ್ದೋಡಿ ಪೋಗಲು" ಸಾಧ್ಯವಲ್ಲವೇ?  ಹಾಗೆಯೇ ಪರಮ ಅಹಿಂಸಾವಾದಿಗಳಾದ ಜೈನರು "ದನಮಂ ಕಡಿಕಡಿದು ಬಸದಿಗೆಳೆ"ಯುವುದು ಅಸಾಧ್ಯವಿರಬಹುದು, ಆದರೆ "ಚಂದನಮಂ ಕಡಿಕಡಿದು ಬಸದಿಗೆಳೆ"ಯುವುದು ಸಾಧ್ಯ.  ಸಮಸ್ಯಾಪೂರಣವು ಹೀಗಿರುತ್ತದೆ.  ಪ್ರಖ್ಯಾತವಾದ ಕವಿರತ್ನಕಾಳಿದಾಸ ಸಿನಿಮಾದಲ್ಲಿ ಡಿಂಡಿಮನೆಂಬ ಕವಿ ಒಂದು ಸಾಲು ಹೇಳುತ್ತಾನಲ್ಲ - "ಕಮಲೇ ಕಮಲೋತ್ಪತ್ತಿಃ" - ಇದು ಅಂಥದ್ದೊಂದು ಸಮಸ್ಯೆಯ ಸಾಲು.  ಅದನ್ನು ಆಮೇಲೆ ಕಾಳಿದಾಸನು ಹೇಗೆ ಪೂರೈಸುತ್ತಾನೆಂಬುದನ್ನು ನೀವು ಬಲ್ಲಿರಿ.

ಇರಲಿ, ಈಗ ಪ್ರಸ್ತುತ ಸಮಸ್ಯೆಗೆ ಬಂದರೆ, ಹಿರಿಯರಾದ ರಂಗನಾಥರು ಹೋಗಿ ಹೋಗಿ ನಮ್ಮಂತಹ ಚಿಕ್ಕವರಿಗೆ ಇಂಥದ್ದೊಂದು ಸಾಲನ್ನು ಕೊಟ್ಟು, ಬಿಡಿಸಿರೆಂದರೆ ಏನು ಹೇಳಬೇಕು?  ಆದರೆ ಹಿರಿಯರು 'ತಾಕತ್ತ'ನ್ನೇ ಚುಚ್ಚಿ ನುಡಿದ ಮೇಲೆ ಮಾನಿಸದಿರಲು ಸಾಧ್ಯವೇ? ಅದರಿಂದಾಗಿ ಈ ಕೆಳಗಣ ಪೂರಣವನ್ನು ಮಾಡಿದೆ:

ಆದೇಶ ಬಂದುದು ಕಣಾ ಪಿರಿಯಜ್ಜನಿಂದಂ
ವಾದಕ್ಕಣಂಗುಡದೆ ಪೂರಯಿಸೆಂದಿದಂ ಪೋ
ಬಾಧಿಪ್ಪ ಮಾರನುಡೆಯಂ ಸೆಳೆಯುತ್ತಿರಲ್ಕಾ
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ

('ಹಿರಿಯಜ್ಜ'ನಿಂದ ಆದೇಶ ಬಂದಿದೆ, ವಾದವಿಲ್ಲದೇ ಈ ಸಾಲನ್ನು ಪೂರೈಸೆಂದು - ಇದನ್ನು ಬಿಟ್ಟು ಇನ್ನೇನು ತಾನೆ ಹೇಳಲಿ (ಪೋ), ಬಾಧಿಸುವ ಮದನನು ಉಟ್ಟದ್ದನ್ನೇ ಸೆಳೆಯುತ್ತಿರಲು ಆ ಸತಿ ಮತ್ತೇನು ಮಾಡಿಯಾಳು... "ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ".  ಇದು ಪೂರಣ)

ಮೇಲಿನದ್ದನ್ನು ನಿಜಕ್ಕೂ ಸಮಸ್ಯಾಪೂರಣವೆನ್ನಲಾಗದು.  ಸಾಲಿನಲ್ಲಿರುವ ಅಸಂಬದ್ಧ ಅಶ್ಲೀಲತೆ ಹಾಗೆಯೇ ಇದೆ - ಪೃಚ್ಛಕರು ಹೇಳಿದ್ದನ್ನೇ ನಾನೂ ಒಪ್ಪಿ ಹೂಂಗುಟ್ಟಿದ್ದೇನಷ್ಟೇ; ಹೋಗಲಿ ಅದು ಪತಿಪತ್ನಿಯರ ಸಲ್ಲಾಪವರ್ಣನೆಯೆನ್ನೋಣವೇ, ಪದ್ಯದ ಸಂದರ್ಭವೂ ಹಾಗೆಂದು ಸೂಚಿಸದು.  ಆದ್ದರಿಂದ ಪದ್ಯವು ಆ ಅಶ್ಲೀಲತೆಯನ್ನು ತೊಡೆಯಲು ಏನೂ ಮಾಡಿಲ್ಲ.  ನಾನೇನು ಅವಧಾನಿಯೇ? ನೀವು ಹೇಗೆ ಕೊಟ್ಟಿರೋ ಹಾಗೇ ಹೇಳಿದ್ದೇನಪ್ಪಾ ಎನ್ನುವ ಧೋರಣೆ ಇಲ್ಲಿನದು.  ಆದರೆ ಸಮಸ್ಯೆಯೆಂದ ಮೇಲೆ ಅದು ಬಗೆಹರಿಯಬೇಕು ತಾನೆ?  'ಸತಿ' ಹಾಗೆ ಮಾಡಲು ತಕ್ಕ ಸಂದರ್ಭವಾದರೂ ಇದ್ದರೆ ಸತಿಯ ಆ ನಡುವಳಿಕೆಗೆ ತಕ್ಕ ಹಿನ್ನೆಲೆಯೊದಗಿ ಆ ಅಶ್ಲೀಲತೆ ಸ್ವಲ್ಪ ತೊಲಗಬಹುದಲ್ಲವೇ?  ಈ ದೃಷ್ಟಿಯ ಪೂರಣ ಈ ಕೆಳಗಿನದು:

ಆ ದೇಶದಿಂ ಮರಳಿ ಬಂದಿಹ ನಲ್ಲನಂ ಕಂ
ಡಾಮೋದದೊಳ್ ಮಿಗುತೆ ಪೆರ್ಚಿದ ನಲ್ಮೆ ಕಾಡಲ್
ಬಾಧಿಪ್ಪ ಮಾರನುಡೆಯಂ ಸೆಳೆಯುತ್ತಿರಲ್ಕಾ
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ

(ಯಾವುದೋ ದೇಶಕ್ಕೆ ಹೋಗಿದ್ದ ನಲ್ಲನು ಮನೆಗೆ ಮರಳಿದ್ದಾನೆ.  ಆತನನ್ನು ಕಂಡ ಸತಿಗೆ ಬಲು ಹಿಗ್ಗಾಗಿದೆ; ಅದುವರೆಗೆ ತಡೆದಿದ್ದ ಬಯಕೆಗಳು ಉಕ್ಕೇರಿ ಕಾಡತೊಡಗಿವೆ... ಮುಂದಿನದ್ದು ಮೇಲೇ ವಿವರಿಸಿದಂತೆ)

ಸಮಸ್ಯಾಪೂರಣಗಳು ಹೀಗಿರಬಾರದೆಂದೇನಿಲ್ಲ.  ಸಾಲಿನಲ್ಲಿ ಕಾಣುವ ಅಸಂಬದ್ಧತೆಯಿಲ್ಲದಿದ್ದರೆ ಆಯಿತು.  ಮೇಲಿನ ಪೂರಣದಲ್ಲಿ ಸತಿಯ ಆ ನಡುವಳಿಕೆಗೆ ಸಹಜವೆನಿಸಿದ ಒಂದು ಸಂದರ್ಭವೊದಗಿ, ಆ ಚೌಕಟ್ಟಿನಲ್ಲಿ ಕೊನೆಯ ಸಾಲು ಸುಸಂಬದ್ಧವೆನಿಸಿದೆ.  ಈ ದೃಷ್ಟಿಯಿಂದ ಮೇಲಿನದು ಒಪ್ಪಬಹುದಾದ ಸಮಸ್ಯಾಪೂರಣವೇ.  ಆದರೆ ಸಾಮಾನ್ಯವಾಗಿ ಸಮಸ್ಯಾಪೂರಣಗಳು ಇಷ್ಟು ಸೀದಾಸಾದಾ ಆಗಿ, ಪೇಲವವಾಗಿರುವುದಿಲ್ಲ, ಇನ್ನಷ್ಟು ಚಮತ್ಕಾರದಿಂದ ಕೂಡಿರುತ್ತದೆ.  ಸಮಸ್ಯೆಯ ಸಾಲಿನ ಮೊದಲ ಪದಕ್ಕೆ ಹಿಂದೆ ಒಂದೋ ಎರಡೋ ಅಕ್ಷರಗಳನ್ನು ಸೇರಿಸುವುದರ ಮೂಲಕ ಬಹುಚಮತ್ಕಾರವಾಗಿ ಇಡೀ ಸಾಲಿನ ಅರ್ಥವನ್ನೇ ಬದಲಿಸಿ, ಪದ್ಯದ ಸಂದರ್ಭವನ್ನೇ ಬದಲಿಸಿಬಿಡಬಹುದು (ಮೇಲಿನ ಉದಾಹರಣೆಯಲ್ಲಿ ಸತ್ತವಳ್-ಬೇಸತ್ತವಳ್; ದನಮಂ-ಚಂದನಮಂ ನೋಡಿದಿರಲ್ಲ).  ಹೀಗೆ ಬದಲಾವಣೆಗೊಳಗಾಗುವ ಪದಕ್ಕೆ ಕೀಲಕಪದವೆನ್ನುತ್ತಾರೆ.  ಇಡೀ ಪದ್ಯದ ಅರ್ಥಪಲ್ಲಟಕ್ಕೆ ಇದು ಕೀಲಿ ಕೈ ಇದ್ದಂತೆ.  ಇದೇ ಸಾಲನ್ನು ಬಳಸಿಕೊಂಡ ಕೆಳಗಿನ ಪೂರಣವನ್ನು ನೋಡಿ - ಮಡಿಮಡಿಯೆಂದರೆ ಅಚ್ಚ ಮಡಿ - ಸ್ನಾನಮಾಡಿಕೊಂಡು ಓದಬೇಕಾದ್ದು, ಈ ಪೂರಣ :)

ಗೋದಾನ ವಸ್ತ್ರ ಧರಣೀ ಧನಧಾನ್ಯ ಮುಂಕೊಂ
ಡಾ ದಾನಕರ್ಮ ಮುಗಿಯಲ್ ಪತಿಪತ್ನಿಯರ್ ಮ
ತ್ತಾ ದೇವಗಂ ನಮಿಸಿ ಪೊನ್ನುಡೆಯುಟ್ಟೆನಲ್ ವಿ-
ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ

(ಪತಿಪತ್ನಿಯರು ಯಾವುದೋ ಹೋಮವನ್ನೋ ವ್ರತ/ಪೂಜೆಯನ್ನೋ ಮಾಡುತ್ತಿದ್ದಾರೆ.  ಗೋದಾನ, ವಸ್ತ್ರದಾನವೇ ಮೊದಲಾದ ದಾನಕರ್ಮ ಮುಗಿದಿದೆ.  "ಈಗ ಪತಿಪತ್ನಿಯರು ಜರತಾರಿ ಬಟ್ಟೆ (ಪೊನ್ನುಡೆ)ಯನ್ನುಟ್ಟು ಬಂದು ದೇವರಿಗೆ ನಮಸ್ಕರಿಸಿ" ಎಂದು ಪುರೋಹಿತರು ಆದೇಶಿಸುತ್ತಾರೆ.  ಆ 'ವಿಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇಂ?" - ಹಾಗೆ ವಿಪ್ರನು ಆದೇಶಿಸಿದ ವಸ್ತ್ರವನ್ನೇ (ವಿಪ್ರಾದೇಶಮಾತ್ರವಸನಂ) ಆ ಸತಿಯು ತೊಟ್ಟಳು - ಇಲ್ಲಿ ಪ್ರಾದೇಶವು ವಿಪ್ರಾದೇಶವಾಯಿತು)

ಸಾಮಾನ್ಯವಾಗಿ ಅವಧಾನದಲ್ಲಿ ಬರುವುದು ಇಂತಹ ಪೂರಣಗಳು.  

ಅಂದಹಾಗೆ, ಈ ಪದ್ಯವು ವಸಂತತಿಲಕ ಎಂಬ ಛಂದಸ್ಸಿನಲ್ಲಿದೆ - "ಶ್ರೀವೇಂಕಟಾಚಲಪತೇ ತವಸುಪ್ರಭಾತಂ" ವೆಂಕಟೇಶಸುಪ್ರಭಾತ ಕೇಳಿದ್ದೀರಲ್ಲ, ಅದೇ ಛಂದಸ್ಸು.  ಅಥವಾ ನೃಸಿಂಹನ ಭಕ್ತರಾದರೆ "ಲಕ್ಷ್ಮೀನೃಸಿಂಹ ಮಮದೇಹಿ ಕರಾವಲಂಬಂ" ಎನ್ನಿ, ಅದೂ ಇದೇ ಛಂದಸ್ಸು.  ಅಥವಾ ಶಿವಭಕ್ತರಾದರೆ "ವಾರಾಣಸೀಪುರಪತೇ ತವಸುಪ್ರಭಾತಂ" ಎಂದೂ ಹೇಳಬಹುದು.

ಚಿತ್ರಕೃಪೆ: ಅಂತರ್ಜಾಲ

Wednesday, August 21, 2019

ಕನ್ನಡಕೆ ಹೋರಾಡು ಕನ್ನಡವ ಕಾಪಾಡು ಕನ್ನಡದ ಕಂದಾ...











ಕನ್ನಡ ಹೋರಾಟದ ಹೆಸರಿನಲ್ಲಿ, ಕನ್ನಡದ ಹಿತಾಸಕ್ತಿಯನ್ನು ಮೂರಾಬಟ್ಟೆ ಮಾಡಲು ಕಾಲದಿಂದಲೂ ಒಳಗೂ ಹೊರಗೂ ಕಾದುನಿಂತ ಶಕ್ತಿಗಳಿಗೆ ಗ್ರಾಸವಾಗುವಂತಹ ಇಂಥದ್ದೊಂದು ಘಟನೆ ನಡೆಯಬಾರದಿತ್ತು.  ಮೊನ್ನೆ ಬೆಂಗಳೂರಿನ ಮಾರವಾಡಿ ಸಮುದಾಯದ ಖಾಸಗೀ ಧಾರ್ಮಿಕ/ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಹಾಕಿದ್ದ ಹಿಂದೀ ಬ್ಯಾನರುಗಳನ್ನು ಕನ್ನಡ ಹೋರಾಟಗಾರರೆಂದು ಹೇಳಿಕೊಳ್ಳುವ ಗುಂಪೊಂದು ಹರಿದುಹಾಕಿದ್ದು, ಅದನ್ನು ವಿರೋಧಿಸಿ ಕನ್ನಡದ ಎಳೇ ಸಂಸದರೊಬ್ಬರು ಪ್ರತಿಕ್ರಿಯೆ ಕೊಟ್ಟಿದ್ದೂ, ಅದಕ್ಕೆ ವಿರುದ್ಧವಾಗಿ ಭುಗಿಲೆದ್ದ ಪ್ರತಿಭಟನೆಗಳೂ, ಎರಡೂ ಬಣಗಳೂ ತಂತಮ್ಮ ಸಮರ್ಥನೆಗಾಗಿ ಮುಂದೂಡ್ಡುತ್ತಿರುವ ಹಾಸ್ಯಾಸ್ಪದ ವಾದಗಳೂ, ಅವುಗಳ ಹಿಂದಿರುವ ರಾಜಕೀಯ ಹುನ್ನಾರಗಳೂ - ಬೇಡವಾಗಿತ್ತು.  ಅಂತಿಮವಾಗಿ ಇವರೆಲ್ಲ ಸೇರಿ ಸೆಳೆಯಲೆತ್ನಿಸುತ್ತಿರುವುದು ಕನ್ನಡಮ್ಮನ ಜೀರ್ಣವಸ್ತ್ರವನ್ನಷ್ಟೇ, ಇದು ಸಂಕಟದ ವಿಷಯ.

ವಿಷಯದ ವಿಶ್ಲೇಷಣೆಗೆ ತೊಡಗುವ ಮೊದಲು, ಆದದ್ದನ್ನೊಮ್ಮೆ ಪರಿಶೀಲಿಸೋಣ.  ಬೆಂಗಳೂರಿನ ಗಣೇಶ ಬಾಗ್ ನಲ್ಲಿ ಮಾರವಾಡಿ ಜೈನಸಮುದಾಯದವರು ಚಾತುರ್ಮಾಸ್ಯ ಸಮಾರಂಭದ ಸಲುವಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ - ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಅವರ ಗುರುಗಳನ್ನು ಸ್ವಾಗತಿಸಿ ರಸ್ತೆ ಕಮಾನನ್ನು ನಿರ್ಮಿಸಿದ್ದಾರೆ, ಮತ್ತು ಅವರ ಸಮುದಾಯಕ್ಕೇ ಸೀಮಿತವಾದ ಸಮಾರಂಭವಾದ್ದರಿಂದ ಸಹಜವಾಗಿಯೇ ಅವರ ಮಾತೃಭಾಷೆಯಲ್ಲಿ ಸ್ವಾಗತವಾಕ್ಯಗಳನ್ನು ಬರೆದಿದ್ದಾರೆ.  ಇದೊಂದು ಸಮುದಾಯದ ಒಳಗಣ ಸಂಭ್ರಮದ ಸಮಾರಂಭ, ಅಷ್ಟು ಮಟ್ಟಿಗೆ ವೈಯಕ್ತಿಕ ಕಾರ್ಯಕ್ರಮ ಕೂಡ.

ಆದರೆ ಇದಾವುದನ್ನೂ ಲೆಕ್ಕಿಸದ ಕೆಲವರು ’ಹೋರಾಟ’ಗಾರರು ಕೇವಲ ದೊಡ್ಡದೊಡ್ಡ ಅಕ್ಷರಗಳ ಹಿಂದೀ ಬ್ಯಾನರನ್ನು ಮಾತ್ರ ಗಮನಿಸಿ, ಸ್ಥಳಕ್ಕೆ ನುಗ್ಗಿ ಗಲಾಟೆ ಮಾಡಿದ್ದಾರೆ - ವಿಡಿಯೋ ನೋಡಿದರೆ ಇವರು ಬಳಸಿದ ಭಾಷೆಯೂ ತೀರ ವೈಯಕ್ತಿಕವಾಗಿದೆ.  ಅಲ್ಲಿದ್ದ ಇಬ್ಬರೇ ಇಬ್ಬರು ಸೆಕ್ಯುರಿಟಿಗಳು ವಿನಯವಾಗಿಯೇ ತಮಗೆ ತಿಳಿದ ಸಮಜಾಯಿಸಿ ನೀಡಲೆತ್ನಿಸಿದ್ದಾರೆ.  ಸ್ವಾಮೀಜಿ ಬರುತ್ತಿದ್ದಾರೆ ಎಂದೇನೋ ಹೇಳಿದ ಹಾಗಿದೆ.  ಅದಕ್ಕೆ ಗಲಾಟೆ ಮಾಡುತ್ತಿದ್ದವರಲ್ಲೊಬ್ಬ "ಅವನ್ಯಾವನೋ ಮುಚ್ಕೊಂಡ್ ಬಂದಿರೋ ಸ್ವಾಮಿ... " ಎಂದು ಅಸಹ್ಯವಾಗಿ ಮಾತಾಡಿದ್ದೂ ವಿಡಿಯೋದಲ್ಲಿ ದಾಖಲಾಗಿದೆ.  ಅಷ್ಟಾದ ಮೇಲೆ, ಸೆಕ್ಯುರಿಟಿಗಳು ನಿಸ್ಸಹಾಯಕವಾಗಿ ನೋಡುತ್ತಿದ್ದಂತೆಯೇ ಈ ಜನ ಮೇಲೆ ಹತ್ತಿ ಬ್ಯಾನರುಗಳನ್ನು ಕಿತ್ತುಹಾಕಿದ್ದೂ, ಗುರುಗಳ ಚಿತ್ರವನ್ನು ಚೂರಿಯಲ್ಲಿ ಹರಿದು ಕೆಳಗೆಳೆದದ್ದೂ, ಬ್ಯಾನರನ್ನು ಕಾಲಿನಲ್ಲಿ ಹೊಸಕಿದ್ದೂ - ಇವಿಷ್ಟೂ ವಿಡಿಯೋದಲ್ಲಿ ದಾಖಲಾಗಿರುವ ಅಂಶ.

ಹೀಗೆ ತಮ್ಮ ಧರ್ಮಗುರುಗಳ ಭಾವಚಿತ್ರಕ್ಕಾದ ಅಪಚಾರದಿಂದ, ತಮ್ಮ ಖಾಸಗೀ ಕಾರ್ಯಕ್ರಮದಲ್ಲಿ ಆದ ದಾಂದಲೆಯಿಂದ ನೊಂದು ಜೈನಸಮಾಜದವರು ಪೋಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ, ಮತ್ತು ಸಹಜವಾಗಿಯೇ ಪೋಲೀಸರು ಅಪರಾಧಿಗಳನ್ನು ಬಂಧಿಸಿದ್ದಾರೆ.

ಸಧ್ಯಕ್ಕೆ ಕನ್ನಡದ ಪರ-ವಿರೋಧವಾಗಿ ಹಾರಾಡುತ್ತಿರುವ ಹಲವು ಕಾಮೆಂಟುದಾರರಿಗೆ ಮೇಲಿನ ಘಟನಾವಳಿಗಳು ಪೂರ್ಣ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.  ಇರಲಿ, ಸಧ್ಯಕ್ಕೆ ಇದನ್ನು ನಾವೂ ತಾತ್ಕಾಲಿಕವಾಗಿ ಮರೆತು ಆನಂತರ ನಡೆದದ್ದನ್ನು ಒಮ್ಮೆ ನೋಡೋಣ.  ಕನ್ನಡ-ಕನ್ನಡತನದ ಬಗ್ಗೆ ತಮ್ಮ ಬಾಲಿಶ ಹೇಳಿಕೆಗಳಿಗೆ ಪ್ರಸಿದ್ಧರಾದ 'ಸೆಂಟ್ರಲ್' ಸ್ಕೂಲಿನ ಎಳೇ ವಿದ್ಯಾರ್ಥಿ ಸಂಸದರೊಬ್ಬರು "ಕೆಲವು ರೌಡಿ ಶಕ್ತಿಗಳಿಂದ ನಮ್ಮ ಜೈನಬಂಧುಗಳ ಮೇಲೆ ಹಲ್ಲೆಯಾಗಿರುವುದು ನೋವುಂಟುಮಾಡಿದೆ, ಆದರೆ ಅವರು ಬೆಂಗಳೂರಿನಲ್ಲಿ ಉರ್ದೂ ಬಳಕೆಯ ಬಗ್ಗೆ ಚಕಾರವೆತ್ತುವುದಿಲ್ಲ.  ಕರ್ನಾಟಕಕ್ಕೆ ತಮ್ಮ ಕೊಡುಗೆ ನೀಡಿರುವ ಈ ಶಾಂತಿಪ್ರಿಯ ಸಮುದಾಯದ ಮೇಲೆ ನಡೆದ ಹಲ್ಲೆ ನ್ಯಾಯವಾದ ಕನ್ನಡಿಗರಿಗೆ, ಕನ್ನಡ ಹೋರಾಟಗಾರರಿಗೆ ಕಳಂಕ ತಂದಿದೆ" ಎಂದು ಹೇಳಿಕೆ ನೀಡಿದ್ದಾರೆ.  ಮೇಲೆ ವಿವರಿಸಿದ ಹಿನ್ನೆಲೆಯನ್ನರಿಯದೇ, ಹೋರಾಟಗಾರರೇ ಅಪ್ಲೋಡ್ ಮಾಡಿದ ವಿಡಿಯೋವನ್ನು ನೋಡದೆಯೇ ಈ ಹೇಳಿಕೆಯನ್ನಷ್ಟೇ ನೋಡಿದವರಿಗೆ (ಅದೂ ಈ ಸಂಸದರ ಈ ಹಿಂದಿನ ಕನ್ನಡವಿರೋಧೀ ನಿಲುವುಗಳನ್ನು ಗಮನಿಸಿದವರಿಗೆ), ಭಾಷೆಯ ವಿಷಯದಲ್ಲಿ ಧರ್ಮವನ್ನು ಬೆರೆಸಿ ಒಡಕುತಂದೊಡ್ಡುವ ಟಿಪಿಕಲ್ ಹೇಳಿಕೆಯಂತೆ ತೋರಿ ಅಸಹ್ಯ ಹುಟ್ಟಿಸುವುದರಲ್ಲಿ, ಈ ಸಂಸದರ ಬಗ್ಗೆ ಸಿಟ್ಟು ತರಿಸುವುದರಲ್ಲಿ ಅನುಮಾನವಿಲ್ಲ (ನನಗೂ ಇದನ್ನೋದಿದ ಕೂಡಲೇ ಬಂದದ್ದು ಅದೇ ಭಾವ - ಈಗ ಇದರ ಬಗ್ಗೆ ಗಲಭೆಯೆಬ್ಬಿಸುತ್ತಿರುವವರಿಗೆ ಬೇಕಾದ್ದೂ ಅದೇ).  ಆದರೆ ಅದೃಷ್ಟವೋ ದುರದೃಷ್ಟವೋ, ಈ ಸಲ, ಈ ಸಂಸದರ ಹೇಳಿಕೆಯಲ್ಲಿ ಹುರುಳಿದೆಯೆಂಬುದು ಮೇಲಿನ ಘಟನೆಯನ್ನು ಪರಿಶೀಲಿಸಿದ, ವಿಡಿಯೋ ನೋಡಿದ ಯಾರಿಗಾದರೂ ಮನದಟ್ಟಾಗದಿರದು.  ಇದು ನಿಜಕ್ಕೂ ಭಾಷೆಗೆ ಸಂಬಂಧಪಟ್ಟ ವಿಷಯವಲ್ಲ, ಬದಲಿಗೆ ಹಾಗೆ ತಪ್ಪುತಿಳಿದು ಸಮುದಾಯವೊಂದರ ಧಾರ್ಮಿಕ ಭಾವನೆಗಳ ಮೇಲೆ ನಡೆಸಿದ ಹಲ್ಲೆ ಎಂಬುದು ಸ್ಪಷ್ಟವಾಗಿಯೇ ಕಾಣುತ್ತದೆ.

ಕನ್ನಡನಾಡಿನಲ್ಲಿ ಕನ್ನಡವೇ ಸಾರ್ವಭೌಮ ಎಂಬ ಮಾತಿಗೆ ಎರಡಿಲ್ಲ - ಕನ್ನಡದೊಂದಿಗೇ ಹಾಸುಹೊಕ್ಕಾಗಿ ಜೊತೆವಾಳುತ್ತಿರುವ ತುಳು ಕೊಡವ ಕೊಂಕಣಿಗಳನ್ನೂ ಸೇರಿಸಿ ಪಲವುಂ ಕನ್ನಡಂಗಳ್ ಎನ್ನಿ ಬೇಕಾದರೆ.  ಆದರೆ ಕನ್ನಡವು ಈ ನಾಡಿಗರ ಹಲವು ಅಸ್ಮಿತೆಗಳಲ್ಲಿ ಒಂದಷ್ಟೇ, ಅದೇ ಎಲ್ಲವೂ ಅಲ್ಲ.  ಪ್ರತಿವ್ಯಕ್ತಿಗೂ ಹಲವು ಅಸ್ಮಿತೆಗಳಿರುತ್ತವೆ - ಭಾಷೆ, ದೇಶ, ಊರು, ಜಾತಿ, ಧರ್ಮ, ಉದ್ಯೋಗ, ಲಿಂಗ, ಕೊನೆಗೆ ನಿಮ್ಮ ಗೆಳೆಯರ ಗುಂಪೂ ಒಂದು ಅಸ್ಮಿತೆಯೇ.  ಇದಾವುದಕ್ಕೆ ಪೆಟ್ಟು ಬೀಳುವುದನ್ನೂ ವ್ಯಕ್ತಿ ಸಹಿಸಲಾರ.  ಯಾವಯಾವ ಅಸ್ಮಿತೆಗೆ ಎಲ್ಲೆಲ್ಲಿ ಬೆಲೆ ಕೊಡಬೇಕೆಂಬುದನ್ನು ಅರಿತಾತ ಗೆದ್ದ - ಹಾಗೆ ಅರಿತ ಸಮುದಾಯ ಗೆದ್ದಿತು, ನಾಡು ಗೆದ್ದಿತು.  ಬದಲಿಗೆ ಒಂದು ಅಸ್ಮಿತೆ ಮೆರೆಯಬೇಕಾದೆಡೆ ಇನ್ನಾವುದೋ ಅಸ್ಮಿತೆಯನ್ನು ತಂದು ಹೇರುವುದು ಇಲ್ಲಿನ ಅಸ್ಮಿತೆಯನ್ನು ತುಳಿಯುವುದು ದೊಡ್ಡ ಅಪಚಾರ.  ಮೊನ್ನೆ ಬೆಂಗಳೂರಿನಲ್ಲಾದದ್ದೂ ಅಂಥದ್ದೇ ಒಂದು.  ಕನ್ನಡ ನೆಲದಲ್ಲಿ ಕನ್ನಡ ಅಸ್ಮಿತೆ - ಯಾವಾಗ? ಸಾರ್ವಜನಿಕ ಸ್ಥಳಗಳಲ್ಲಿ, ಸಾರ್ವಜನಿಕ ಸಂವಹನಗಳಲ್ಲಿ, ಸಾರ್ವಜನಿಕ ಉದ್ಯೋಗಗಳಲ್ಲಿ - ಖಾಸಗಿಯ ವಿಷಯ ಬೇರೆ.  ಕನ್ನಡನಾಡಿನ ದಾರ್ಶನಿಕರಲ್ಲೊಬ್ಬರಾದ ಡಿವಿಜಿಯವರ ಮನೆಮಾತು ತಮಿಳು; ಬೀದಿಯಲ್ಲಿ ಆಡುತ್ತಿದ್ದುದು ಪಕ್ಕಾ, ಮುಲಕನಾಡು ಬ್ರಾಹ್ಮಣರ ತೆಲುಗು, ವರಕವಿ ಬೇಂದ್ರೆ ಮರಾಠಿಗರು, ಕನ್ನಡಕ್ಕೊಬ್ಬನೇ ಕೈ ಕೈಲಾಸಂ ತಮಿಳರು.  ಇವರಾರೂ ಖಾಸಗೀ ಜೀವನದಲ್ಲಿ ತಂತಮ್ಮ ಅಸ್ಮಿತೆಗಳನ್ನು ಬಿಟ್ಟುಕೊಡಲೂ ಇಲ್ಲ, ಸಾರ್ವಜನಿಕ ಜೀವನದಲ್ಲಿ ಅವುಗಳನ್ನು ಮೆರೆಸಲೂ ಇಲ್ಲ.  ಬದಲಿಗೆ ತಂತಮ್ಮ ’ಅನ್ಯ’ ಹಿನ್ನೆಲೆಗಳ ಹೊರತಾಗಿಯೂ ಕನ್ನಡದ ’ಗುರುತಾಗಿ’ ಮೆರೆದರು.  ಅಷ್ಟೇಕೆ?  ಕನ್ನಡದ ಬಲುದೊಡ್ಡ ಹೆಗ್ಗುರುತು, ಕನ್ನಡದ ಕಣ್ಮಣಿ ಡಾ. ರಾಜ್ಕುಮಾರ್ ಹುಟ್ಟಿದ್ದು ತಮಿಳುನಾಡಿನಲ್ಲಿ, ತಮಿಳರ ಆ ಕಾಲದ ಆರಾಧ್ಯದೈವ ಎಮ್ ಜಿ ಆರ್ ಮಲಯಾಳದವರು, ಮತ್ತೊಬ್ಬ ಆರಾಧ್ಯದೇವತೆ ಪುರಚ್ಚಿ ತಲೈವಿ ಜಯಲಲಿತಾ ನಮ್ಮ ಮಂಡ್ಯದ ಹೆಣ್ಣುಮಗಳು.  ಇನ್ನು ತಮಿಳು ಸಿನಿಮಾ ರಸಿಕರ ಹೃದಯಸಿಂಹಾಸನದಲ್ಲಿ ಕುಳಿತ 'ಸದಾಹಸಿರು' (ever green) ಹೀರೋ ರಜನೀಕಾಂತ್ ಅಂತೂ ಕನ್ನಡನಾಡಿನಲ್ಲೇ ಬೆಳೆದ ಮರಾಠಿಗರು.  ’ನಮ್ಮ’ ರಾಜಕುಮಾರರ ಪ್ರೀತಿಯ ಗೆಳೆಯನಾಗಿದ್ದ ಇವರು, ಈಗಲೂ ಇಲ್ಲಿಗೆ ಬಂದಾಗ ಶುದ್ಧವಾದ ಕನ್ನಡದಲ್ಲೇ ಮಾತಾಡುತ್ತಾರೆ, ಕೇವಲ ಮಾತಷ್ಟೇ ಏಕೆ, ಅವರು ಓದಿದ ತ್ರಿವೇಣಿ, ಗಟ್ಟಿ ಮೊದಲಾದ ಕಾದಂಬರಿಕಾರರಿಂದ ಮಾತುಗಳನ್ನು ಹಂಚಿಕೊಳ್ಳುತ್ತಾರೆ.  ಅವರನ್ನು ಪ್ರೀತಿಸಲು ನಮಗೆ, ಕನ್ನಡಿಗರಿಗೆ ಇನ್ನೇನು ಬೇಕು?  ಹಾಗೆಂದು ಅವರು ತಮಿಳು ವಿರೋಧಿಯೇ?  ತಮಿಳಿನ ಹಿತಾಸಕ್ತಿಯ ವಿಷಯ ಬಂದಾಗ ನಿರ್ದಾಕ್ಷಿಣ್ಯವಾಗಿ ತಮಿಳಿನ ಪರ ವಹಿಸಿ ನಿಲ್ಲುವುದು ಇದೇ ’ತಲೈವ’ರೇ.  ಹಲವು ಅಸ್ಮಿತೆಗಳೆಡೆಗೆ ವ್ಯಕ್ತಿಯೊಬ್ಬ ಇಟ್ಟುಕೊಳ್ಳಲೇಬೇಕಾದ ವಿವೇಕ ಇದು.

ಇನ್ನು ಭಾಷೆಗೂ ಧರ್ಮಕ್ಕೂ ಬಿಡಿಸಲಾಗದ ನಂಟು.  ನಾವು ಇನ್ನೆಷ್ಟೇ ಕನ್ನಡವಂತರಾಗಿರಲಿ, ದಾಸರಪದಗಳನ್ನು ಹಾಡಿಕೊಂಡೇ ಕುಣಿಯಲಿ ವಿಷ್ಣುಸಹಸ್ರನಾಮವನ್ನೋ ಲಲಿತಾಸಹಸ್ರನಾಮವನ್ನೋ ಕನ್ನಡಕ್ಕೆ ಅನುವಾದಿಸಿ ಅರ್ಚಿಸುತ್ತೇನೆಂದರೆ ಆ ವಿಷ್ಣುವೋ ಲಲಿತೆಯೋ ನಿಮ್ಮ ಮೊರೆಯನ್ನು ಕೇಳುವುದೇ ಇಲ್ಲ - ಆಗಮೋಕ್ತಪೂಜೆಯೆಂದರೆ ಸಂಸ್ಕೃತವೇ ಬೇಕು (ಆಗಮೋಕ್ತ ಪೂಜೆಯೇ ಏಕೆ ಬೇಕು ಎನ್ನುವುದಾದರೆ, ಅದು ಬೇರೆಯ ವಿಷಯ, ಅವರವರ ನಂಬಿಕೆಗೆ ಬಿಟ್ಟದ್ದು, ನಮ್ಮ ಚರ್ಚೆಯಲ್ಲ); ಮುಸಲ್ಮಾನರು ಕಾಬಾ ಕಡೆ ತಿರುಗಿ ಕನ್ನಡದಲ್ಲಿ ನಮಾಜು ಮಾಡಲಾಗುವುದಿಲ್ಲ, ಅರಬ್ಬಿಯೇ ಬೇಕು; ಹಾಗೇ ಪಂಡರಿಯ ವಿಟ್ಠಲನಿಗೆ ಮರಾಠಿಯ ಅಭಂಗ, ತಿರುಪತಿಯ ತಿಮ್ಮನಿಗೆ ಅನ್ನಮಯ್ಯನ ತೆಲುಗು ಗೀತೆಗಳು, ಶ್ರೀರಂಗದ ರಂಗನಿಗೆ ತಮಿಳಿನ ಪಾಶುರಗಳು (ನಾನಂತೂ ಈ ಪಾಶುರಗಳ ನಾದಾನುಭಾವಕ್ಕೆ ಮರುಳಾಗಿ ಇದನ್ನು ಅಭ್ಯಸಿಸಲಿಕ್ಕಾದರೂ ಶುದ್ಧವಾಗಿ ತಮಿಳು ಕಲಿಯಬೇಕೆಂದು ಆಸೆಪಟ್ಟವನು).  ಹೀಗಿರುವಾಗ ಭಾಷೆಯೆನ್ನುವುದು ಆಯಾ ಧಾರ್ಮಿಕಸಮುದಾಯಗಳ ಆಚರಣೆಯ ಭಾಗವೇ ಆಗಿಬಿಡುತ್ತದೆ.  ಅನೇಕವೇಳೆ ಆಯಾ ಸಮುದಾಯಗಳಲ್ಲಿ ಬಹುಸಂಖ್ಯಾತರ ಭಾಷೆಯೇ ಆ ಧರ್ಮದ ಭಾಷೆಯೂ ಆಗಿಬಿಡುತ್ತದೆ.  ಉದಾಹರಣೆಗೆ, ಅಯ್ಯಂಗಾರರ ಪಂಗಡವನ್ನು ತೆಗೆದುಕೊಳ್ಳಿ - ಈ ಪಂಗಡ ಮೂಲತಃ ತಮಿಳುನಾಡಿನದು, ಆದರೆ ಈ ಪಂಗಡಕ್ಕೆ ಸೇರಿದ ಜನ ಕೇವಲ ತಮಿಳುನಾಡಿಗೆ ಸೀಮಿತವಾಗಿಲ್ಲ - ಕರ್ನಾಟಕ, ಅಂಧ್ರಗಳಲ್ಲೂ ಹರಡಿದ್ದಾರೆ.  ಮನೆಮಾತು ಸಾಮಾನ್ಯವಾಗಿ ತಮಿಳು, ಪೂಜೆಯ ಬಹುಭಾಗ ತಮಿಳು.  ಬೇರೆಬೇರೆ ಪ್ರಾಂತ್ಯಕ್ಕೆ ಸೇರಿದ ಅಯ್ಯಂಗಾರರು ಭೆಟ್ಟಿಯಾದಾಗ ಪರಸ್ಪರ ಕುಶಲ ವಿಚಾರಿಸುವುದೂ ಸಾಮಾನ್ಯವಾಗಿ ತಮಿಳಿನಲ್ಲೇ.  ಆದ್ದರಿಂದ ತಮಿಳು ಅಯ್ಯಂಗಾರ್ ಧರ್ಮದ ಭಾಷೆ.  ಹಾಗೇ ಮಾಧ್ವಬ್ರಾಹ್ಮಣರದ್ದು ಸಾಮಾನ್ಯವಾಗಿ ಕನ್ನಡ ಭಾಷೆ.  ಪೂಜೆಯಲ್ಲಿ ಕನ್ನಡದ ಪಾತ್ರವೇನಿಲ್ಲದಿದ್ದರೂ ಮಾಧ್ವಮತದ ಸಂಸ್ಕೃತೇತರ ಧಾರ್ಮಿಕಸಾಹಿತ್ಯವಿರುವುದು ಬಹುಮಟ್ಟಿಗೆ ಕನ್ನಡದಲ್ಲೇ - ಹರಿದಾಸಸಾಹಿತ್ಯದಲ್ಲಿ.  ಕನ್ನಡನಾಡಿನ ಹೊರಗೆ ತಮಿಳುನಾಡಿನಲ್ಲಿ ಆಂಧ್ರದಲ್ಲಿ ನೆಲೆಸಿದ ಮಾಧ್ವರೂ ಅವರದ್ದೇ ಪ್ರಭೇದದ ವಿಚಿತ್ರವಾದ ಕನ್ನಡವನ್ನೇ ಆಡುತ್ತಾರೆ.  ಅವರ ಧರ್ಮಗುರುಗಳು ನೂರಕ್ಕೆ ನೂರು ಕನ್ನಡಿಗರು.  ಅವರು ತಮ್ಮ ಹೊರರಾಜ್ಯದ ಶಿಷ್ಯರನ್ನು ಭೇಟಿಮಾಡಲು ಹೋದಾಗ ಅಲ್ಲಿ ಕನ್ನಡದ ಸ್ವಾಗತಫಲಕಗಳು ರಾರಾಜಿಸುತ್ತದೆ.  ಹೀಗೇ ಇವತ್ತಿನ ಮಾರವಾಡೀ ಜೈನಸಮುದಾಯದ ಭಾಷೆ ಗುಜರಾಥೀ, ರಾಜಾಸ್ತಾನೀ, ಹಿಂದೀ - ಅದು ಅವರ ಧರ್ಮದ ಭಾಷೆ.  ಇಲ್ಲಿ ಅವರ ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸಿ ಅವರ ಗುರುಗಳನ್ನಿಲ್ಲಿಗೆ ಕರೆಸಿದಾಗ ಸಹಜವಾಗಿಯೇ ಅವರ ಧರ್ಮದ ಭಾಷೆ ಬಳಸಲ್ಪಡುತ್ತದೆಯೇ ಹೊರತು, ಈ ನೆಲದ ಭಾಷೆಯಲ್ಲ.  ’ತಮ್ಮವರು’ ಇಲ್ಲಿಗೆ ಬಂದಾಗ ಇವರು ಅವರಿಗೆ ಸ್ವಾಗತ ಕೋರಬೇಕಾದ್ದು ತಮ್ಮೆಲ್ಲರ ಭಾಷೆಯಲ್ಲೇ ಹೊರತು ಕನ್ನಡದಲ್ಲಲ್ಲ.  ಹಾಗಿದ್ದರೆ ಕನ್ನಡನಾಡಿನ ಜೈನರ ಕತೆ? ಎಂದರೆ, ಅದನ್ನು ಅವರೇ ಕೇಳುತ್ತಿಲ್ಲ, ನಾವೇಕೆ ತಲೆಕೆಡಿಸಿಕೊಳ್ಳಬೇಕು?  ಕನ್ನಡನಾಡಿನಲ್ಲಿ ಜೈನರೂ ಇದ್ದಾರೆ, ಜೈನಗುರುಗಳೂ ಇದ್ದಾರೆ, ಅವರು ಕನ್ನಡದಲ್ಲೇ ವ್ಯವಹರಿಸುತ್ತಾರೆ - ಆದರೆ ಧರ್ಮದ ವಿಷಯಕ್ಕೆ ಬಂದರೆ ಅವರೇನು ಪಂಪರನ್ನರನ್ನೋದಿ ಧರ್ಮವನ್ನು ಕಲಿಯುವುದಿಲ್ಲ.  ಅವರ ಆಕರವೇ ಬೇರೆ, ಅದರ ಭಾಷೆಯೇ ಬೇರೆ - ಅದು ಅವರ ವೈಯಕ್ತಿಕ ವಿಷಯ.  ನಾವು ಸಾರ್ವಜನಿಕರು, ನಮಗೆ ಅವರ ವೈಯಕ್ತಿಕ ಆಚರಣೆಗಳಲ್ಲಿ ಪ್ರವೇಶವಿಲ್ಲ.  ಒಟ್ಟಿನಲ್ಲಿ ಮೇಲೆ ವಿವರಿಸಿದ ಘಟನೆಯಲ್ಲಿ ಭಾಷೆ ಯಾವ ದೃಷ್ಟಿಯಿಂದಲೂ ಕನ್ನಡದ ಅಸ್ಮಿತೆಯ ವಿಷಯವಾಗಿರಲಿಲ್ಲ, ಬದಲಿಗೆ ಅವರ ಧಾರ್ಮಿಕ ಆಚರಣೆಯ ಅಸ್ಮಿತೆಯ ವಿಷಯವಾಗಿತ್ತು.  ಈ ದೃಷ್ಟಿಯಿಂದ ಆ ಹಲ್ಲೆ ದುರಾಚಾರವೇ ಸರಿ.  ಇನ್ನು, ಯಾವ ಧರ್ಮಕ್ಕೇ ಸೇರಿರಲಿ, ಗುರುಗಳೊಬ್ಬರ ಚಿತ್ರವನ್ನು ಕಾಲಿಗೆ ಹಾಕಿ ತುಳಿದದ್ದು ಅಪಚಾರ - ಭಾಷಾತೀತವಾಗಿ ಅಪಚಾರ.

ಇರಲಿ, ಇದು ಹೇಗೂ ಜಾತಿ/ಧರ್ಮದ ವಿಷಯ ಬಂದುಬಿಟ್ಟಿರುವುದರಿಂದ ಮೇಲೆ ಸಂಸದರ ಹೇಳಿಕೆಯ ಇನ್ನೊಂದು ಭಾಗವನ್ನೂ ಪರಿಶೀಲಿಸುವುದೊಳ್ಳೆಯದು.  ಹೌದಲ್ಲವೇ?  ಇದೇ ಜಾಗದಲ್ಲಿ ಯಾವುದಾದರೂ ಉರ್ದು ಹೋರ್ಡಿಂಗ್ ಇದ್ದಿದ್ದರೆ ಪ್ರತಿಕ್ರಿಯೆಗಳು, ದಾಂಧಲೆಗಳು ಹೀಗೇ ಇರುತ್ತಿದ್ದುವಾ?  ಇಲ್ಲ, ಇವರಿಗೆ ಮಾಡಿದಿರಲ್ಲ ಅವರಿಗೂ ಮಾಡಿ ಎಂಬುದು ಎಷ್ಟುಮಾತ್ರಕ್ಕೂ ನನ್ನ ಸವಾಲಲ್ಲ.  ನಾನು ಮೇಲೇ ವಿವರಿಸಿದಂತೆ ಧರ್ಮ, ಅದಕ್ಕೆ ಸಂಬಂಧಿಸಿದ ಆಚರಣೆ, ಅದರೊಡನೆ ಹಾಸುಹೊಕ್ಕಾದ ಭಾಷೆ ಇವಿಷ್ಟೂ ಆ ಧಾರ್ಮಿಕಸಮುದಾಯದ ವೈಯಕ್ತಿಕವಿಷಯ - ಅದು ಮುಸಲ್ಮಾನರಾದರೂ ಜೈನರಾದರೂ ಅಯ್ಯಂಗಾರರಾದರೂ ಅಷ್ಟೇ.  ಆದರೂ, ಅಹಿಂಸೆಯನ್ನೇ ಆಚರಣೆಯನ್ನಾಗಿ ಮಾಡಿಕೊಂಡು, ಒಬ್ಬರ ಹಂಗಿಲ್ಲದೇ ಪರರಾಜ್ಯವೊಂದರಲ್ಲಿ ತಮ್ಮ ಜೀವನ ಕಟ್ಟಿಕೊಂಡು ಅಲ್ಲಿನ ಜನರೊಂದಿಗೆ ಬೆರೆತು ಬದುಕುತ್ತಿರುವ ಸಮುದಾಯವೊಂದರ ಖಾಸಗೀ ಆಚರಣೆಯಲ್ಲಿ ಬಳಸಿದ ಭಾಷೆಗೆ ಕಿಡಿಕಿಡಿಯಾದ ಹೋರಾಟಗಾರರು, ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಜನರ ನಡುವೆಯೇ ಬದುಕಿದ್ದೂ ಕನ್ನಡ ಮಾತಾಡಲೊಲ್ಲದ, ಕಲಿಯಲೊಲ್ಲದ, ಧಾರ್ಮಿಕವಲ್ಲದ ಸಂವಹನದಲ್ಲೂ ಉರ್ದೂವಿಗೇ ಪ್ರಾಧಾನ್ಯ ಕೊಡುವ, ಕೊನೆಗೆ ಚುನಾವಣಾಪ್ರಚಾರಗಳಲ್ಲೂ ಉರ್ದೂವನ್ನೇ ಬಳಸುವ, ಉರ್ದೂ ಶಾಲೆಗಳಲ್ಲೇ ತಮ್ಮ ಮಕ್ಕಳಿಗೆ ಕಲಿಸುವ ಸಮುದಾಯಗಳ ಮೇಲೂ ಹೀಗೆ 'ಕ್ರಮ' ಕೈಗೊಳ್ಳುವ ಧೈರ್ಯ ತೋರುತ್ತಿದ್ದರೇ?  ಕನ್ನಡ'ಕ್ರಿಯೆ' ದುರ್ಬಲರ ಮೇಲೆ ಎತ್ತಿದ ಕೋಲಾಗಬಾರದಲ್ಲವೇ?  ಇದು ಯಾರನ್ನೂ ಕಾಡುವ ಪ್ರಶ್ನೆ.

ಇವಿಷ್ಟೂ ಈ ನಿರ್ದಿಷ್ಟ ಘಟನೆಗೆ ಸಂಬಂಧಿಸಿದ ಮಾತಾಯಿತು.  ಆದರೆ ಇದನ್ನು ವಿರೋಧಿಸುತ್ತಿರುವವರಾಗಲೀ ಸಮರ್ಥಿಸುತ್ತಿರುವವರಾಗಲೀ ತಂತಮ್ಮ ರಾಜಕೀಯ ಅಜೆಂಡಾಗಳಿಗನುಗುಣವಾಗಿ ಅದನ್ನು ಮಾಡುತ್ತಿದ್ದಾರೆಯೇ ವಿನಾ ಘಟನೆಯ ಗುಣಾವಗುಣಗಳನ್ನು ಆಧರಿಸಿ ಅಲ್ಲವೆನ್ನುವುದು ಸ್ಪಷ್ಟ.  ಉದಾಹರಣೆಗೆ, ಈ ದಾಂಧಲೆ ಮಾರವಾಡಿಗಳ ಮೇಲಲ್ಲದೇ ಮೇಲೆ ವಿವರಿಸಿದಂತೆ ಬೇರೆ ಇನ್ನೊಂದು ಧರ್ಮದವರ ಮೇಲಾಗಿದ್ದಿದ್ದರೆ ಆ ಹೋರಾಟಗಾರರ ಬಗೆಗಿನ 'ವಿರೋಧ' ಇಷ್ಟೇ ಪ್ರಮಾಣದಲ್ಲಿರುತ್ತಿತ್ತೇ?  ಈ ವಿರೋಧದಲ್ಲಿ, ಕೇಂದ್ರದ ಹಿಂದೀ-ಪರ ನೀತಿಯಿಂದ ಆ ಪಕ್ಷದ ಹಿಂಬಾಲಕರಲ್ಲಿ ಇದ್ದಕ್ಕಿದ್ದಂತೆ ಜಾಗೃತವಾದ ಹಿಂದೀಪ್ರೇಮದ ಪಾತ್ರವೆಷ್ಟು?  ಈಗ ರಾಜ್ಯದಲ್ಲಿ ಯಡಿಯೂರಪ್ಪನವರ ಬಿಜೆಪಿ ಸಂಪುಟ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಈ ಘಟನೆ ನಡೆದಿರಬೇಕಾದರೆ ಅದಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೇ, ಅಧಿಕಾರದಿಂದ ನಿರ್ಗಮಿಸಿದವರ ಪಾತ್ರವೇನೂ ಇರಲಿಕ್ಕಿಲ್ಲವಷ್ಟೇ?  ಬಿಜೆಪಿ ಬದಲು ರಾಜ್ಯದಲ್ಲಾಗಲೀ ಕೇಂದ್ರದಲ್ಲಾಗಲೀ ಬೇರೆ ಸರ್ಕಾರವಿದ್ದಿದ್ದರೆ ಸಮೀಕರಣ ಬದಲಾಗುತ್ತಿದ್ದಿತೇ?  ಹೀಗೆ ಹಲವು ಲೆಕ್ಕಾಚಾರಗಳಾಚೆಗೆ ಕನ್ನಡದ ಅಸ್ಮಿತೆ-ಹೋರಾಟವನ್ನು ನೋಡುವುದು ಇಂದಿನ ಅಗತ್ಯ.  ಈ ಹೋರಾಟಗಳೂ, ಆ ಹೋರಾಟದ ಪ್ರತಿಭಟನೆಗಳೂ ವಸ್ತುನಿಷ್ಠವಾಗಿರಬೇಕಾದ್ದು ಬಹುಮುಖ್ಯ.  ಮೊನ್ನೆ ಕಳೆದ ತಿಂಗಳು ಹಂಪಿಯ ನವಬೃಂದಾವನದಲ್ಲಿ ವ್ಯಾಸರಾಜರ ಬೃಂದಾವನವನ್ನು ನೆಲಸಮ ಮಾಡಲಾಯಿತು.  ಕನ್ನಡದ ಸಾಂಸ್ಕೃತಿಕ ಪರಂಪರೆಗೆ ವ್ಯಾಸರಾಜರ ಕೊಡುಗೆ ಸಾಮಾನ್ಯದ್ದೇ?  ಇಂತಿದ್ದರೂ ಒಂದೇ ಒಂದು ಕನ್ನಡಪರಸಂಘಟನೆ ಕಮಕ್ ಕಿಮಕ್ ಎಂದುದನ್ನು ನೋಡಲಿಲ್ಲ - ಮಾಧ್ಯಮಗಳಲ್ಲಿ ಪ್ಯಾನಲ್ ಡಿಸ್ಕಶನ್ ಆಗಲಿಲ್ಲ; ಹೋಗಲಿ ಸನಾತನ ಸಂಸ್ಕೃತಿಯನ್ನು ಎತ್ತಿಹಿಡಿದರೆಂಬ ಕಾರಣಕ್ಕಾದರೂ ಒಂದೇ ಒಂದು ಹಿಂದೂ ಸಂಘಟನೆ ಈ ಅನಾಹುತದ ಬಗ್ಗೆ ಚಕಾರವೆತ್ತಲಿಲ್ಲ.  ಕೊನೆಯ ಪಕ್ಷ ಬ್ರಾಹ್ಮಣರ ಗುರುವೆಂಬ ಕಾರಣಕ್ಕಾಗಿ ಒಂದೇ ಒಂದು ಬ್ರಾಹ್ಮಣಸಂಘಟನೆ ಇದರ ಬಗ್ಗೆ ಉಸಿರೆತ್ತಲಿಲ್ಲ.  ಇದೆಂತಹ ಕನ್ನಡ ಕಳಕಳಿ?  ಇದೆಂತಹ ಹಿಂದೂ ಜಾಗೃತಿ?  ಇದೆಂತಹ ಬ್ರಾಹ್ಮಣ ಒಗ್ಗಟ್ಟು?

ಇರಲಿ.  ಕನ್ನಡಪರ ಹೋರಾಟಕ್ಕೆ ಅದರದ್ದೇ ಆದ ಗೌರವಾನ್ವಿತ ಇತಿಹಾಸವಿದೆ - ಕನ್ನಡವನ್ನು ಕನಸಿದ ಹಲವು ಮಹಾನ್ ಚೇತನಗಳ ಶ್ರಮ-ಮುಂಗಾಣ್ಕೆಗಳು ಇದರಲ್ಲಿವೆ; ಹಾಗೆಯೇ ಸ್ವಾತಂತ್ರ್ಯಪೂರ್ವದಿಂದಲೂ ಕನ್ನಡದೆಡೆಗೆ ಮಲತಾಯಿ ಧೋರಣೆಯನ್ನೇ ತಳೆದಿರುವ ಉತ್ತರದ ಹಿಂದೀವಾಲಾಗಳ ಅಡಾವುಡಿಗೂ ಅದರ ವಿರುದ್ಧದ ಪ್ರತಿಭಟನೆಗಳಿಗೂ ಅಷ್ಟೇ ದೀರ್ಘ ಇತಿಹಾಸವಿದೆ.  ಈ ನಾಡಿಗೆ ಇದಾವುದೂ ಹೊಸದಲ್ಲ - ಮೊದಲೆಲ್ಲಾ ಪ್ರತಿಭಟನೆಗಳಲ್ಲಿ ಎಲ್ಲ ಕನ್ನಡಿಗರೂ ಮನಸಾರೆ ದನಿಗೂಡಿಸದಿದ್ದರೂ ಒಡಕು ದನಿಗಳಂತೂ ಬಹಳವಿರಲಿಲ್ಲ.  ಹೆಚ್ಚೆಂದರೆ ಕನ್ನಡ ಹೋರಾಟಗಾರರು ಕನ್ನಡವನ್ನೇ ಸರಿಯಾಗಿ ಮಾತಾಡದ ಬಗ್ಗೆ, ಕನ್ನಡದ ಹೆಸರಿನಲ್ಲಿ ನಡೆಯುವುದೆನ್ನಲಾದ ರೋಲ್ಕಾಲುಗಳ ಬಗ್ಗೆ ಗೊಣಗಾಟವಿರುತ್ತಿತ್ತು (ಅನೇಕ ವೇಳೆ ಅದು ಸರಿಯೂ ಕೂಡ).  ಆದರೆ ಈಗೀಗಂತೂ ಕನ್ನಡದ ಹೋರಾಟವನ್ನೇ ಹೀಯಾಳಿಸುವುದು, ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹಿಂದೀ ಪ್ರೇಮದ ಹೊಳೆಯನ್ನೇ ಹರಿಸುವುದು, ಹಿಂದೀವಿರೋಧಕ್ಕೆ ಪ್ರತಿಯಾಗಿ ಇಂಗ್ಲಿಷ್ ಬೆರ್ಚಪ್ಪನನ್ನು ತೋರಿಸುವುದು, ತುಳುವರನ್ನ ಕೊಡವರನ್ನ ಕನ್ನಡದ ಮೇಲೆ ಎತ್ತಿಕಟ್ಟುವುದು - ಛೇ, ರಾಜಕೀಯಸಿದ್ಧಾಂತವೊಂದರ ಸಮರ್ಥನೆಗೋಸ್ಕರ ಇಷ್ಟೆಲ್ಲಾ ಸರ್ಕಸುಗಳು, ನಮ್ಮ ಕಾಲ ಮೇಲೇ ನಾವು ಕಲ್ಲೆತ್ತಿಹಾಕಿಕೊಳ್ಳುವ ವಿಚಾರಹೀನತೆ ಬೇಕಾ ಎನ್ನಿಸುತ್ತದೆ.  ಇದು ಕನ್ನಡದ ಮಟ್ಟಿಗಂತೂ ನಲ್ಮೆಯ ವಿಷಯವಲ್ಲ.

ಕನ್ನಡಕ್ಕೆ ಹೊರಗಿನ ಶತ್ರುಗಳಂತೂ ಇದ್ದೇ ಇದ್ದಾರೆ, ಒಳಗಿನಿಂದಲೂ ಘಾತಿಸುವ ಶಕ್ತಿಗಳು ಬುದಬುದನೆ ಹುಟ್ಟಿಕೊಳ್ಳುತ್ತಿರುವ ಈ ವಿಷಮಸಂದರ್ಭದಲ್ಲಿ ಕನ್ನಡಪರ ಹೋರಾಟ ಕೇವಲ ತೋಳ್ಬಲದ ಮಟ್ಟದಲ್ಲಿ ಉಳಿದಿಲ್ಲ, ಬದಲಿಗೆ ಅಲ್ಲಿಂದ ಮೇಲೇರಿ ಬೌದ್ಧಿಕಮಟ್ಟವನ್ನು ಮುಟ್ಟಿದೆಯೆಂಬುದನ್ನು ನಮ್ಮ ಕನ್ನಡಪರಸಂಘಟನೆಗಳು ಅರಿತುಕೊಳ್ಳುವುದು ಕನ್ನಡದ ದೃಷ್ಟಿಯಿಂದ ಕ್ಷೇಮ. ಈಗ ಎಷ್ಟು ಎಚ್ಚರವಿದ್ದರೂ ಸಾಲದು!  ಹೋರಾಟವೆಂದರೆ ಕೇವಲ ಕೈ ಮಾಡುವುದಲ್ಲ - ಹೋರಾಟದ ಪರಿಣಾಮ ಕಾಣಬೇಕು.  ಹಾಗಾಗಬೇಕೆಂದರೆ ಅಧಿಕಾರಸ್ಥರು ಮಣಿಯಬೇಕು.  ಅಧಿಕಾರಸ್ಥರು ಮಣಿಯುವುದು ತೋಳ್ಬಲಕ್ಕಲ್ಲ, ಜನಾಭಿಪ್ರಾಯಕ್ಕೆ.  ಆದರೆ, ನಗುವವರ ಮುಂದೆ ಎಡವಿಬಿದ್ದಂತೆ ಕಾಣುವ ಮೇಲಿನ ಘಟನೆಯಂತಹ ಅನ್ಯಾಯಗಳು ಕನ್ನಡಪರ ಜನಾಭಿಪ್ರಾಯವನ್ನು ಕ್ಷಣಾರ್ಧದಲ್ಲಿ ಮಣ್ಣುಗೂಡಿಸಬಲ್ಲುವು.  ಹೋರಾಡುವುದೇ ಆದರೆ ವಿಷಯಕ್ಕೇನು ಕೊರತೆ - ಕನ್ನಡಿಗರಿಗೆ ಉದ್ಯೋಗಾವಕಾಶವಿಲ್ಲ, ಭಾಷಾಗುಂಪುಗಾರಿಕೆ ನಡೆಯುತ್ತಿದೆ (ನಮ್ಮ ಘನ ಸಂಸದರು "ಕನ್ನಡಿಗರಿಗೆ ಪಂಜಾಬಿನಲ್ಲಿ ಕೆಲಸ ಸಿಗುತ್ತಲ್ಲ" ಎಂದು ಆಣಿಮುತ್ತನ್ನುದುರಿಸಿದ್ದರು ಮೊನ್ನೆ - ಪ್ರತಿಭಟಿಸಬೇಕಾದ್ದು ಇಂಥದ್ದನ್ನು), ಸದ್ದಿಲ್ಲದೇ ಹಿಂದಿಯನ್ನು ನಮ್ಮ ಪಠ್ಯಗಳಲ್ಲಿ ವಿಮಾನನಿಲ್ದಾಣಗಳಲ್ಲಿ, ಬ್ಯಾಂಕುಗಳಲ್ಲಿ, ಪೋಸ್ಟಾಫೀಸುಗಳಲ್ಲಿ ನುಗ್ಗಿಸಲಾಗುತ್ತಿದೆ,  ಹಿಂದೀವಾಲಾಗಳೇ ಹೆಚ್ಚಿರುವ ಕಂಪನಿಗಳಲ್ಲಿ, ಅಂಗಡಿಮುಂಗಟ್ಟುಗಳಲ್ಲಿ ಕನ್ನಡವನ್ನು ಕೇಳುವವರಿಲ್ಲವಾಗಿದೆ; 'ಪಾಶ್' ಎನ್ನಿಸಿಕೊಳ್ಳುವ ಮಾಲುಗಳಲ್ಲಿ ಕನ್ನಡದ ಮನೋರಂಜನೆಯಿಲ್ಲ, ಕನ್ನಡದ ಫಲಕಗಳಿಲ್ಲ, ಕೊನೆಗೆ ಅಲ್ಲಿ ಕನ್ನಡಿಗ ಅನಾಥಶಿಶುವಾದರೆ ಅದನ್ನು ಗಮನಿಸುವವರೂ ಇಲ್ಲ.  ಕನ್ನಡದ ಬೋರ್ಡು ಇರಲೇಬೇಕೆಂಬ ಕಾಟಾಚಾರಕ್ಕಾಗಿ ಗೂಗಲ್ ಟ್ರಾನ್ಸ್ಲೇಟರ್ ಸಹಾಯದಿಂದ ಅಸಹ್ಯ ಬೋರ್ಡುಗಳನ್ನು ಹಾಕುತ್ತಾರೆ (ಪಡವಲಕಾಯಿ = ಹಾವಿನ ಸುವಾಸನೆ, ಹೀಗೆ).  ಕನ್ನಡದ ಬಗೆಗೆ ಇಂತಹ ಬೇಕಾಬಿಟ್ಟಿ ಧೋರಣೆಯನ್ನು ವಿರೋಧಿಸಬೇಕಾದ್ದು.  ನಮ್ಮ ಹೋರಾಟವಿರಬೇಕಾದ್ದು ಸರ್ಕಾರದ, ಉತ್ತರದ ಸಂಸ್ಥೆಗಳ ಸಾರ್ವಜನಿಕ ಕನ್ನಡವಿರೋಧಿ ನೀತಿಯ ಬಗೆಗೆ - ಯಾವುದೋ ಧಾರ್ಮಿಕಸಮುದಾಯವೊಂದರ ಖಾಸಗೀ ಕಾರ್ಯಕ್ರಮದ ಬಗೆಗಲ್ಲ.

ಕನ್ನಡದ ಆಳ್ಮೆಗೆ, ಬಾಳ್ಮೆಗೆ ಇವತ್ತು ಬೇಕಾದ್ದು ಎರಡು - ಒಂದು, ಭಾಷೆಯ ಅರಿವನ್ನು, ಶುದ್ಧತೆಯನ್ನು, ಸೌಂದರ್ಯವನ್ನು ಕಾಪಿಟ್ಟುಕೊಳ್ಳುವುದು, ಅದರ ಘನತೆಯನ್ನರಿತು ಬಳಸುವುದು, ಕನ್ನಡಿಗರೆಲ್ಲರ ಹೊಣೆ ಇದು, ಜೊತೆಗೆ ಕನ್ನಡನುಡಿಯನ್ನರಿತ ವಿದ್ವಾಂಸರ ವಿಶೇಷ ಹೊಣೆ ಕೂಡ.  ಇದು ಕನ್ನಡಕ್ಕೆ ಒಳಗಿನಿಂದ ಕಸುವು ತುಂಬುವ ಕೆಲಸ.  ಆದರೆ ಕನ್ನಡ ಹೋರಾಟವೆಂದರೆ ಕನ್ನಡವನ್ನು ಸರಿಯಾಗಿ ಕಲಿತು ಮಾತಾಡುವುದಷ್ಟೇ ಅಲ್ಲ (ಹಾಗೆನ್ನುವವರು, ಹಿಂಬಾಲಕರಿಂದ ಹಾಗೆನ್ನಿಸುವವರು, ಕನ್ನಡತನದ ನೆಲೆಯರಿಯದ ರಾಜಕೀಯಸ್ಥರು ಮಾತ್ರ).  ಹೀಗಾಗಿ ಎರಡನೆಯ ಕೆಲಸ, ಕನ್ನಡವನ್ನು ಸುತ್ತಲಿಂದ ಕಾದು ರಕ್ಷಿಸಿಕೊಳ್ಳುವುದು, ಹೊರಗಣ ದಾಳಿಯಿಂದ, ಒಳಗಣ ದಾಳಿಯಿಂದ ಕಾಪಿಟ್ಟುಕೊಳ್ಳುವುದು.  ಇದು ಮೊದಲ ಕೆಲಸದಂತೆ ಬಾಯ್ಮಾತಿನ ಕೆಲಸವಲ್ಲ, ಕಾರ್ಯಕ್ಷಮತೆ ಬೇಡುವಂಥದ್ದು, ಗಂಟಲ ಬಲ, ಕೆಲವೊಮ್ಮೆ ತೋಳ್ಬಲವನ್ನೂ ಬೇಡುವಂಥದ್ದು.  ಮೊದಲನೆಯ ಕೆಲಸ ಮಾಡುವವರು ಎರಡನೆಯದನ್ನು ಮಾಡಲಾರರು, ಎರಡನೆಯವರು ಮೊದಲನೆಯದನ್ನು.  ಎರಡೂ ಶಕ್ತಿಗಳು ಪರಸ್ಪರರನ್ನು ಹೀಯಾಳಿಸುತ್ತಾ ಶತ್ರುವಿಗೆ ಅನುಕೂಲ ಮಾಡುವುದರ ಬದಲು, ಪರಸ್ಪರ ಕೈಹಿಡಿದು ನಡೆದಾಗ ಮಾತ್ರ ಕನ್ನಡದ ಉಳಿವು ಬೆಳವು ಸಾಧ್ಯ.  ಇನ್ನೊಂದು ಚರ್ಚೆಯಲ್ಲಿ ಮಿತ್ರರೊಬ್ಬರು ಕೇಳಿದರು "ಕನ್ನಡ ಹೋರಾಟದ ಪರಂಪರೆಯ ಬಗೆಗೆ ಹೇಳುತ್ತೀರಿ, ಈಗಿನ 'ವೋರಾಟ'ಗಾರರು ಆ ಪರಂಪರೆಗೆ ಸೇರಿದವರು ಅನ್ಸುತ್ತಾ?  ಅಂತಹ ಅನಾಗರಿಕರನ್ನು ನೀವು ಸಪೋರ್ಟ್ ಮಾಡುತ್ತೀರಾ/ಮಾಡಬೇಕಾ?".  ನನ್ನ ಉತ್ತರ ಇಷ್ಟು - "ಕನ್ನಡದ ಹೋರಾಟದಲ್ಲಿ 'ನಾಗರೀಕತೆ' ಕಡಿಮೆಯಾಗುತ್ತದೆನ್ನಿಸಿದ್ದರೆ ಅದಕ್ಕೆ ಕಾರಣ ನಿಮ್ಮಂತಹ 'ಸುಸಂಸ್ಕೃತ'ರ ಅನುಪಸ್ಥಿತಿ.  ಅನುಪಸ್ಥಿತಿಯೇ ದೊಡ್ಡ ಧಕ್ಕೆಯೆಂದರೆ, ಇನ್ನು ಮುಂದುವರೆದು ಕನ್ನಡದ ವಿರುದ್ಧವಾಗಿಯೇ ಕೆಲಸ ಮಾಡುವುದು ಇನ್ನಷ್ಟು ದೊಡ್ಡ ಧಕ್ಕೆ.  ಯಾರಿಗೆ ಗೊತ್ತು, ನೀವು ಹೋರಾಟದಲ್ಲಿದ್ದು ಅದಕ್ಕೆ ದಿಶಾನಿರ್ದೇಶನವನ್ನು ನೀಡಿದ್ದರೆ, ಮೇಲೆ ವಿವರಿಸಿದ ಘಟನೆ ನಡೆಯುತ್ತಲೇ ಇರಲಿಲ್ಲವೇನೋ?  ಸುಸಂಸ್ಕೃತರು ಹೊರನೆಡೆದ ಮೇಲೆ ಹೋರಾಟದಲ್ಲಿ 'ಸಂಸ್ಕೃತಿ' ಉಳಿಯುವುದಾದರೂ ಹೇಗೆ?  ಇವತ್ತಿದ್ದು ನಾಳೆ ಹೋಗುವ ಒಂದು ನಾಯಕತ್ವವನ್ನು ಸಮರ್ಥಿಸಿಕೊಳ್ಳುವ ಹುಚ್ಚಿನಲ್ಲಿ, ಇಲ್ಲದ ಹಿಂದೀ ಪ್ರೇಮವನ್ನು ಸೂಸುತ್ತಾ ಇಲ್ಲದ ವಿತಂಡವಾದಗಳನ್ನು ಹೂಡುತ್ತಾ ಕನ್ನಡವನ್ನು ಬೀಳುಗಳೆವ ಬದಲು, ಮರಳಿ ಬನ್ನಿ, ಕನ್ನಡ ಹೋರಾಟವನ್ನು ಕೈಹಿಡಿದು ನಡೆಸಿ, ಅದಕ್ಕೆ 'ಸಂಸ್ಕೃತಿ'ಯ ಕಸುವು ತುಂಬಿ.

Sunday, July 21, 2019

ಹೌದು, ನಾವು ಮಾಧ್ವರು - ಏನೀಗ?

ಹಿಂದೆಲ್ಲಾ ಏನೇನೋ ಕಾರಣಗಳಿಗಾಗಿ - ಯಾವುದೋ ರಾಷ್ಟ್ರೀಯದುರಂತ, ಮಾನವೀಯತೆಯ ಮೇಲೆ, ಸಿದ್ಧಾಂತದ ಮೇಲೆ ಹಲ್ಲೆ ಇಂಥವಕ್ಕೆಲ್ಲಾ - ಫೇಸ್ಬುಕ್ ಪ್ರೊಫೈಲನ್ನು ಕಪ್ಪು ಮಾಡಿಕೊಳ್ಳುತ್ತಿದ್ದುದುಂಟು.  ಮೊನ್ನೆ ಹಂಪಿಯ ಆನೆಗೊಂದಿಯಲ್ಲಾದ ಘಟನೆ ಈ ಮೇಲೆ ಹೇಳಿದ ಕಪ್ಪು ಪ್ರೊಫೈಲ್ ಘಟನೆಗಳಿಗಿಂತ ಏನೂ ಕಡಿಮೆಯಿರಲಿಲ್ಲ, ಅಥವಾ ಅವಕ್ಕಿಂತ ಒಂದೋ ಎರಡೋ ಹತ್ತೋ ಪಾಲು ಹೆಚ್ಚಿನದೇ ಎಂದರೂ ತಡೆದೀತು.  ಆದರೂ ಪ್ರೊಫೈಲನ್ನು ಕಪ್ಪು ಮಾಡಿಕೊಳ್ಳಲಿಲ್ಲವೇ?  ಹೀಗೆ ಯೋಚಿಸಿದಾಗ ಹೊಳೆದ ಉತ್ತರ, ನಾವೇಕೆ ಮುಖ ಕಪ್ಪು ಮಾಡಿಕೊಳ್ಳಬೇಕು, ನಾಚುವ ಕೆಲಸ ಮಾಡಿದವರು ಮುಖ ಕಪ್ಪುಮಾಡಿಕೊಳ್ಳಬೇಕಾದ್ದು.  ವ್ಯಾಸರಾಜರು ನಮ್ಮ ಹೆಮ್ಮೆ, ಅದನ್ನು ಮೆರೆಸುವುದೇ ಆದದ್ದಕ್ಕೆ ಸರಿಯಾದ ಪ್ರತಿಭಟನೆ.  ನನ್ನ ಈ ಹಮ್ಮಿಗೆ, ಹೆಮ್ಮೆಗೆ ಮೊನ್ನೆ ಜುಲೈ ೧೮ರಂದು ನಡೆದ ಅನಾಚಾರವನ್ನು ಮಾಧ್ವಸಮುದಾಯವು ನಿಭಾಯಿಸಿದ ರೀತಿ ಪುಷ್ಟಿಯನ್ನೊದಗಿಸಿದೆ.

೨೦೧೯ರ ಜುಲೈ ೧೯ ಒಂದು ಅವಿಸ್ಮರಣೀಯ ದಿನ.  ಸಾವಿರವೆರಡುಸಾವಿರ ಜನದ ಇಚ್ಛಾಶಕ್ತಿ, ಆರಂಭದಲ್ಲಿ ಅಸಾಧ್ಯವೆನಿಸಿದ್ದನ್ನು ಸಾಧ್ಯವೆನಿಸಿದ ದಿನ - ಹಿಂದಿನ ದಿನವಷ್ಟೇ ನಾಮಾವಶೇಷವಾಗಿದ್ದ ಐತಿಹಾಸಿಕಸ್ಮಾರಕವೊಂದನ್ನು (ಉದ್ದೇಶಪೂರ್ವಕವಾಗಿ ನಾನದನ್ನು ಬೃಂದಾವನವೆನ್ನುವ ಬದಲು ಸ್ಮಾರಕವೆಂದೇ ಕರೆಯುತ್ತೇನೆ) ಹಿಂದಿದ್ದಂತೆಯೇ ಯಥಾವತ್ತಾಗಿ ಕಟ್ಟಿ ನಿಲ್ಲಿಸಿದ ದಿನ.  ಭಾವನೆಗಳ ತೀವ್ರತೆಯು ಕ್ರಿಯೆಯಾಗಿ ಮಾರ್ಪಟ್ಟಾಗ ಅದು ಕೇವಲ Destructive ಆಗಿ ಮಾತ್ರವಲ್ಲ, ನಿಜವಾದ ಅರ್ಥದಲ್ಲಿ Constructive ಆಗಿ ಕೂಡ ಕೆಲಸ ಮಾಡಬಲ್ಲುದೆಂದು ತೋರಿಸಿಕೊಟ್ಟ ದಿನ.  ಹಲವು ಭ್ರಮೆಗಳು, ಹಲವು ಮುಖವಾಡಗಳು ಕಳಚಿಬಿದ್ದ ದಿನ, ಹಾಗೆಯೇ ಹಲವು ಆಶಾಕಿರಣಗಳು ಮೂಡಿದ ದಿನವೂ ಹೌದು.

ಈ ಅಕಾರ್ಯವನ್ನು ಮಾಡಿದ್ದು ನಿಧಿಗಾಗಿಯೋ, ರಾಜಕೀಯಕಾರಣಕ್ಕೋ, ಅಥವಾ ಇನ್ನಾವುದಕ್ಕೋ ಎಂಬುದನ್ನು ಚರ್ಚಿಸಲು ಇದು ಸಮಯವಲ್ಲ, ಅದೇನಿದ್ದರೂ ತನಿಖೆಗೆ ಬಿಟ್ಟ ವಿಷಯ - ಅಂಥದ್ದೊಂದು ನಡೆದರೆ.  ಆದರೆ ಮನಸ್ಸನ್ನು ಕಾಡುವುದು ಅದಲ್ಲ.  ಹದಿನೆಂಟನೆಯ ತಾರೀಖು ಬೆಳಬೆಳಗ್ಗೆ ಈ ಸುದ್ದಿ ಬಂದಾಗ ಒಂದು ಕ್ಷಣ ಅದುರಿ ಹೋಗಿಬಿಟ್ಟೆ.  ಆಣೆ ಮಾಡಿ ಹೇಳುತ್ತೇನೆ, ವ್ಯಾಸರಾಯರು ’ನಮ್ಮ ಜಾತಿ’ಯವರು, ಮಾಧ್ವಗುರುಗಳು, ಧಾರ್ಮಿಕ ಆಚಾರ್ಯರು ಎಂಬ ಕಾರಣಕ್ಕಾದ ದಿಗ್ಭ್ರಮೆಯಲ್ಲ ಅದು (ಜಾತಿಯ ವಿಷಯವನ್ನು ನಾನು ಇವತ್ತಿನಷ್ಟು ಯಾವತ್ತೂ ತಲೆ ಕೆಡಿಸಿಕೊಂಡದ್ದೇ ಇಲ್ಲ) - ಯಾರೋ ಪಾರ್ಲಿಮೆಂಟನ್ನೋ ವಿಧಾನಸೌಧವನ್ನೋ ಮಹಾತ್ಮರ ಸಮಾಧಿಯನ್ನೋ ಇನ್ನಾವುದೋ ಮಹತ್ವದ ಸ್ಮಾರಕವನ್ನೋ ಉಡಾಯಿಸಿಬಿಟ್ಟಿದ್ದಾರೆಂಬ ಸುದ್ದಿ ಬಂದಿದ್ದರೆ ಆಗುತ್ತಿದ್ದಷ್ಟೇ ದಿಗ್ಭ್ರಮೆಯದು.  ಒಬ್ಬ ತಾರ್ಕಿಕರಾಗಿ, ದಾರ್ಶನಿಕರಾಗಿ ವಿದ್ವಲ್ಲೋಕದಲ್ಲಿ ವ್ಯಾಸತೀರ್ಥರ ಮಹತ್ತ್ವವೇನೆಂಬುದನ್ನು ವಿದ್ವಲ್ಲೋಕವು ಬಲ್ಲುದು, ಅದರ ಚರ್ಚೆ ಇಲ್ಲಿ ಅಗತ್ಯವಿಲ್ಲ.  ಆದರೆ ಕರ್ನಾಟಕದ ಸಾಂಸ್ಕೃತಿಕ ಸಾಹಿತ್ಯಕ ಲೋಕಕ್ಕೆ ಶ್ರೀ ವ್ಯಾಸರಾಜರ ಕೊಡುಗೆಯೇನೆಂಬುದು ಕನ್ನಡಿಗರೆಂದುಕೊಳ್ಳುವವರೆಲ್ಲರ ಹೆಮ್ಮೆಯ ವಿಷಯವಾಗಬೇಕಿತ್ತು.  ಸ್ವತಃ ಹರಿದಾಸರಾಗಿ, ಕನಕಪುರಂದರರ ಗುರುಗಳಾಗಿ ವ್ಯಾಸರಾಜರು ಕರ್ನಾಟಕದ ಭಕ್ತಿಪಂಥಕ್ಕೆ ಹರಿದಾಸಪಂಥಕ್ಕೆ ನೀಡಿದ ಮಾರ್ಗದರ್ಶನ, ಕರ್ನಾಟಕಸಾಮ್ರಾಜ್ಯ ವಿಜಯನಗರದ ಉಚ್ಛ್ರಾಯಸ್ಥಿತಿಯಲ್ಲಿ ರಾಜಗುರುವಾಗಿ, ಧಾರ್ಮಿಕನಾಯಕನಾಗಿ ಸಮಾಜವನ್ನು ಮುನ್ನೆಡೆಸುವಲ್ಲಿ ವ್ಯಾಸರಾಜರು ವಹಿಸಿದ ಪಾತ್ರ, ಅನ್ಯಾದೃಶ.  ಇಂತಿರುವಾಗ, ಹದಿನಾರನೆಯ ಶತಮಾನದ ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ರಾಜಕೀಯಕ್ಷೇತ್ರಗಳಲ್ಲಿ ಆಢ್ಯರಾದ ವ್ಯಾಸರಾಜರ ಬೃಂದಾವನ ಐನೂರು ವರ್ಷಗಳಿಂದ ಮಳೆ ಬಿಸಿಲು ಗಾಳಿಗಳಿಗೆ ತನ್ನನ್ನೊಡ್ಡಿಕೊಂಡು ಬಟಾಬಯಲಿನಲ್ಲಿ, ಕೇಳುವವರಿಲ್ಲದ ಕಾಡಿನಲ್ಲಿ ನಿಂತಿದೆ.  ಇದರ ಬಗ್ಗೆ ನಮಗಾರಿಗೂ ದುಃಖವಿಲ್ಲ, ಏಕೆಂದರೆ ಸನ್ಯಾಸಿಗೆ ಬದುಕಿನಲ್ಲಾಗಲೀ ಸಾವಿನಲ್ಲಾಗಲೀ ಯಾವ ವೈಭವವೂ ಹೇಳಿದ್ದಲ್ಲ - ಆಗೆಲ್ಲಾ ಬೃಂದಾವನಗಳನ್ನು ಹೀಗೆ ಬಯಲಿನಲ್ಲಿ ಕಟ್ಟಿ ಬಿಟ್ಟುಬಿಡುತ್ತಿದುದೇ ಪರಿಪಾಠ - ವಿಜಯನಗರದ ಪತನವಾಗಿ ದಕ್ಷಿಣದಲ್ಲಿ ಅನ್ಯಧರ್ಮೀಯರ ದಾಳಿ ಹೆಚ್ಚಾಗುವವರೆಗೂ ಬೃಂದಾವನಗಳಿಗೊಂದು ಕಟ್ಟಡ, ಮೇಲ್ಛಾವಣಿ ಕಟ್ಟುವ ಪರಿಪಾಠವೇ ಇರಲಿಲ್ಲ.  ವ್ಯಾಸರಾಜರದ್ದೂ ಈ ರೂಢಿಗೆ ಹೊರತಲ್ಲ.  ಅನಂತವೈಭವಗಳ ನಡುವೆಯೂ ವೈರಾಗ್ಯದ, ಶುದ್ಧಸನ್ಯಾಸದ ಬದುಕನ್ನು ಬದುಕಿದವರು ವ್ಯಾಸರಾಜರು - ಅದೇನು ಇಂದಿನಂತೆ ಕಾವಿಯ ಮರೆಯಲ್ಲಿ ಕಚ್ಚೆಹರಿಯುವ ಢೋಂಗಿ ಸನ್ಯಾಸವಲ್ಲ; "ಮೂತ್ರದ ಮನೆಗಾಗಿ ಗಾತ್ರ ಬಳಲಿಸಿ, ಮದನಸೂತ್ರಬೊಂಬೆಯು ಎನಿಸಿ, ನೇತ್ರದಿಂದ ಪಾತ್ರದವಳನು ನೋಡಿ ಸ್ತೋತ್ರಮಾಡುತ ಹಿಗ್ಗಿ, ರಾತ್ರಿ ಹಗಲೂ ಕೆಟ್ಟ ವಾರ್ತೆಯಲ್ಲಿರುವ" ಸನ್ಯಾಸವಲ್ಲ ಅವರದ್ದು - "ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು ವ್ಯಾಸಮುನಿರಾಯರ ಸನ್ಯಾಸತ್ವದಿರವ" ಎಂದು ಗುರುಗಳಾದ ಶ್ರೀಪಾದರಾಜರಿಂದಲೇ ಹೊಗಳಿಸಿಕೊಂಡ ಸನ್ಯಾಸವದು.  ಹೀಗಾಗಿ, ಬದುಕಿನುದ್ದಕ್ಕೂ ಬಂದ ಸನ್ಯಾಸ ಸಾವಿನಲ್ಲೂ ಕಂಡರೆ ಅಸಹಜವೇನಲ್ಲ.  ಅದಕ್ಕಾಗಿಯೇ ವ್ಯಾಸರಾಜರದ್ದೂ ಬಯಲ ಬೃಂದಾವನ.  ರಾಜಗುರುಗಳೆಂಬ ಹೆಗ್ಗಳಿಕೆಯ ಒಂದೇ ಸಂಕೇತವಾಗಿ ಇದೊಂದು ಬೃಂದಾವನದ ಮುಂದೆ ಮಾತ್ರ ಎರಡು ಕಂಬಗಳದ್ದೊಂದು ಚಪ್ಪರ, ಉಳಿದ ಬೃಂದಾವನಗಳಿಗಿಲ್ಲದ್ದು (ಅದೂ ಬೃಂದಾವನದ ಮೇಲಲ್ಲ, ಮುಂದೆ!) - ಅದು ಬಿಟ್ಟರೆ ಉಳಿದದ್ದು ಬಯಲು.  ಇಂತಿರುವ ಬೃಂದಾವನವು ಕಳೆದ ಐನೂರು ವರ್ಷಗಳಲ್ಲಿ, ಅದೂ ಅನ್ಯಧರ್ಮೀಯರ ದಾಳಿಗಳ ಉತ್ತುಂಗ ಸ್ಥಿತಿಯಲ್ಲೂ ಯಾವ ಸಣ್ಣ ದಾಳಿಗೂ ಒಳಗಾಗದೇ ನಿಂತಿರುವುದು ಅಚ್ಚರಿಯೇನಲ್ಲ - ಒಬ್ಬ ಸನ್ಯಾಸಿಯ ಸಮಾದಿಯಲ್ಲಿ ದುಡ್ಡು ಕಾಸು ಏನೂ ಸಿಗುವುದಿಲ್ಲ, ಅಲ್ಲಿ ಸಿಗುವುದೆಲ್ಲಾ ಸಾಲಿಗ್ರಾಮಗಳೆಂಬ ’ಕೆಲಸಕ್ಕೆ ಬಾರದ’ ಕಲ್ಲಿನ ಚೂರುಗಳು ಎಂಬ ವಿಷಯ ಆಗಿನ ದಾಳಿಕೋರರಿಗೆ ತಿಳಿದಿತ್ತು (ಅಷ್ಟರಮಟ್ಟಿಗೆ ಅವರೂ ಒಂದು ರೀತಿ ಸಂಸ್ಕೃತಿವಂತರಾಗಿದ್ದರು, ತಿಳಿದವರಾಗಿದ್ದರು), ಈಗಿನ ದಾಳಿಕೋರರಿಗೆ ತಿಳಿದಿಲ್ಲ ಅಷ್ಟೇ ವ್ಯತ್ಯಾಸ.

ಇರಲಿ, ಇಂಥದ್ದೊಂದು ಸುದ್ದಿ ಬೆಳಬೆಳಗ್ಗೆ ಬಂದು ಬಡಿದಾಗ ಇಡೀ ನಾಡು ದಿಗ್ಭ್ರಮೆಗೊಳಗಾಗಬಹುದೆಂದೆಣಿಸಿದ್ದೆ, ಸುದ್ದಿಮಾಧ್ಯಮಗಳು ಈ ಬಗ್ಗೆ ದಪ್ಪ ದನಿಯಲಿ ಬಿತ್ತರಿಸಿ, ವಿಶೇಷ ಪ್ಯಾನಲ್ ಡಿಸ್ಕಶನ್ನುಗಳನ್ನೇರ್ಪಡಿಸಬಹುದೆಂದೆಣಿಸಿದ್ದೆ, ಪತ್ರಿಕೆಗಳು ಈ ಸುದ್ದಿಯನ್ನು ದಪ್ಪಕ್ಷರಗಳಲ್ಲಿ ಛಾಪಿಸಿ ಸಂಪಾದಕೀಯ ಬರೆಯಬಹುದೆಂದೆಣಿಸಿದ್ದೆ, ಸರ್ಕಾರವು ತಕ್ಷಣ ಕಾರ್ಯಪ್ರವೃತ್ತವಾಗಿ ಸ್ಥಳವನ್ನು ತೆರವುಗೊಳಿಸಿ, ಕಾಯಲು ಪೋಲೀಸರನ್ನು ನಿಯಮಿಸಿ, ಉನ್ನತಮಟ್ಟದ ತನಿಖೆಯ ದಳವನ್ನು ರೂಪಿಸಿ, ಎರಡು ದಿನದೊಳಗೆ ದುಷ್ಕರ್ಮಿಗಳನ್ನು ಹೆಡಮುರಿಗೆ ಕಟ್ಟಿ ತರುತ್ತಾರೆಂದೆಣಿಸಿದ್ದೆ, ತಾನೇ ನಿಂತು, ಪುರಾತತ್ತ್ವ ಇಲಾಖೆಯೊಡನೆ ಕೈಜೋಡಿಸಿ, ನಶಿಸಿಹೋದ ಸ್ಮಾರಕವನ್ನು ಪುನಾರೂಪಿಸುತ್ತಾರೆಂದೆಣಿಸಿದ್ದೆ, ಹಿಂದೂಧರ್ಮದ ಪರಮಾಶ್ರಯವೆಂದು ಬಿಂಬಿಸಿಕೊಳ್ಳುವ ಪಕ್ಷದ ಆಡಳಿತವಿರುವ ಕೇಂದ್ರಸರ್ಕಾರವು ಈ ಸಂಬಂಧ ತಕ್ಕರೀತಿಯಲ್ಲಿ ರಾಜ್ಯಸರ್ಕಾರಕ್ಕೆ ಸ್ಪಂದಿಸಿ ತನಿಖೆಯ, ಪುನರ್ನಿರ್ಮಾಣದ ಮೇಲುಸ್ತುವಾರಿ ವಹಿಸಬಹುದೆಂದೆಣಿಸಿದ್ದೆ (ನಾವು ಆಶಿಸಿದ್ದ ’ರಾಮರಾಜ್ಯ’ದ ಒಂದು ಸೆಳಕಲ್ಲವೇ ಅದು).  ಅಯ್ಯೋ, ಇಲ್ಲ - ಅದಾವುದೂ ಆಗಲಿಲ್ಲ.  ನಾನೇ ಕೆಲಶತಮಾನಗಳ ಕಾಲ ಬಂಡೆಯಡಿಯಲ್ಲಿದ್ದೆನೆಂದು (having lived under the rock) ನಿಧಾನಕ್ಕೆ ಅರಿವಿಗೆ ಬಂದಿತು. ಎಂದೂ ಟೀವಿಯನ್ನೇ ನೋಡದವನು ಟೀವಿಯ ಮುಂದೆ ಕುಳಿತರೆ, ದಿನವಿಡೀ ರಿಸಾರ್ಟುಗಳಲ್ಲಿ ಕಳೆದುಹೋಗಿರುವ ಜನಪ್ರತಿನಿಧಿಗಳ ಬಗ್ಗೆ ’ಸ್ಪೀಕರು’ ಕಿತ್ತುಹೋಗುವಂತೆ ಬಡಕೊಳ್ಳುತ್ತಿದ್ದುವೇ ಶಿವಾಯಿ, ಹಂಪಿಯಲ್ಲಾದ ಘಟನೆಯ ಬಗ್ಗೆ ಒಂದು ಚಕಾರವಿಲ್ಲ!  ಯಾವುದೋ ಒಂದು ಚಾನಲ್ ಮಾತ್ರ "ಉತ್ತರಾಧಿ ಮತ್ತು ರಾಯರ ಮಠಗಳ ನಡುವೆ ಕಾದಾಟ, ವ್ಯಾಸರಾಜರ ಸಮಾಧಿ ಧ್ವಂಸ" ಎಂಬ ತಲೆಬುಡವಿಲ್ಲದ, ಅಸಂಬದ್ಧ ನ್ಯೂಸ್ ಕ್ಯಾಪ್ಸೂಲನ್ನು ಸ್ಕ್ರೀನಿನ ಕೆಳಭಾಗದಲ್ಲಿ ಬಿತ್ತರಿಸುತ್ತಿತ್ತು.  ಆಮೇಲೇಕೋ ಅದರಲ್ಲಿ ಸಾಕಷ್ಟು ಟಿ ಆರ್ ಪಿ ಕಮಾಯಿ ಕಾಣದ್ದರಿಂದ ಅದನ್ನು ಕೈಬಿಟ್ಟಿತು.  ಮರುದಿನ ವೃತ್ತಪತ್ರಿಕೆಗಳಲ್ಲಿ ಕಣ್ಣೊಡೆಯುವಷ್ಟು ದಪ್ಪಕ್ಷರಗಳಲ್ಲಿ, ಕಣ್ಣಿಗೆ ರಾಚುವ ಬಣ್ಣಗಳಲ್ಲಿ ಪ್ರಕಟವಾಗಿತ್ತು ಸುದ್ದಿ - ರಾಜ್ಯಸರ್ಕಾರದ ಕ್ಷಣಗಣನೆ, ಜನಪ್ರತಿನಿಧಿಗಳ ನಂಗಾನಾಚ್, ಸ್ಪೀಕರ್ ತಿಪ್ಪರಲಾಗ ಇತ್ಯಾದಿ ಇತ್ಯಾದಿ.  ಅದು ಬಿಟ್ಟರೆ ಇನ್ನೆಲ್ಲೋ ಆದ ತ್ರಿವಳಿ ಕೊಲೆ, ಕಲ್ಲು ಎತ್ತಿ ಹಾಕಿ ಕೊಲೆ, ಸರಗಳ್ಳತನ, ಅಪಹರಣ, ಅತ್ಯಾಚಾರ ಇತ್ಯಾದಿ ಇತ್ಯಾದಿಗಳಿಂದ ಯಥಾಪ್ರಕಾರ ಪತ್ರಿಕೆಗಳು ತುಂಬಿಹೋಗಿ, ಕೆಲವು ಪತ್ರಿಕೆಗಳಲ್ಲಿ ಮಾತ್ರ ವ್ಯಾಸರಾಜರ ಈ ಪ್ರಕರಣ ಅಂತಹ ಇತರ ಹಲವು ಕ್ರೈಮ್ ಸುದ್ದಿಗಳೊಂದಿಗೆ ಫುಟ್ ಬೋರ್ಡಿನಲ್ಲಿ ಅರೆಕಾಲೂರಿ ಪಯಣಿಸುತ್ತಿತ್ತು. 

ಇನ್ನು ಸರ್ಕಾರದ ಕಡೆ ನೋಡಿದರೆ, ಸರ್ಕಾರವೇ ಕೋಮಾದಲ್ಲಿದೆ, ಅದರ ವಾರಸುದಾರರು ನನಗಿಷ್ಟು ನಿನಗಿಷ್ಟು ಎಂಬ, ಬೆಂದಮನೆಯ ಗಳ ಹಿರಿಯುವ ಲೆಕ್ಕಾಚಾರದಲ್ಲಿದ್ದಾರೆ.  ಇನ್ನು ಅದ್ಯಾವಾಗಲೋ ಸತ್ತ ಬ್ರಾಹ್ಮಣ ಸನ್ಯಾಸಿಯ ಸಮಾದಿಯ ಬಗ್ಗೆ ಅಳಲು ಯಾರಿಗೆ ಬಿಡುವು?  ಸರಿ, ರಾಜ್ಯಸರ್ಕಾರವನ್ನು ದೂಷಿಸಿ ಫಲವಿಲ್ಲ, ಹೋಗಲಿ, ಕೇಂದ್ರದಲ್ಲಾದರೂ 'ನಮ್ಮದೇ' ಸರ್ಕಾರವಿದೆಯಲ್ಲ (ಕಣ್ಣಿಗೆ ಮಸಗಿದ್ದ ಸೆಕ್ಯುಲರ್ ಪೊರೆ ಬಲವಂತವಾಗಿ ಕಳಚಿದ್ದರಿಂದ ಹಿಂದೂವಾದಿಯಾಗಿಬಿಟ್ಟಿದ್ದೆ ನೋಡಿ), ಹೀಗೆಂದುಕೊಂಡು ಕೇಂದ್ರಸರ್ಕಾರದೆಡೆ ನೋಡಿದರೆ, ಆಯಾಯಾ ಸಂದರ್ಭಕ್ಕೆ ತಕ್ಕಂತೆ ಬಸವಣ್ಣನವರ ಬಗ್ಗೆ, ರಾಮಾನುಜರ ಬಗ್ಗೆ, ಮಧ್ವಾಚಾರ್ಯರ ಬಗ್ಗೆ ಹೇಳಿಕೊಟ್ಟ ಮಾತುಗಳನ್ನು ಗಿಣಿಪಾಠವೊಪ್ಪಿಸುವ ಕೇಂದ್ರನಾಯಕರಾರೂ ಕೊನೆಯ ಪಕ್ಷ ತಲೆಯೆತ್ತಿಯೂ ನೋಡುತ್ತಿರಲಿಲ್ಲ.  ಯಾರಾದರೂ ತೇಜಸ್ವಿ ಸೂರ್ಯನಿಗೆ ತಿಳಿಸಿ ಸಹಾಯ ಮಾಡಲು ಕೇಳಿ, ಯಾರಾದರೂ ಪರಿಚಯವಿರುವವರು ಸುಬ್ರಮಣ್ಯಂ ಸ್ವಾಮಿಗೆ ತಿಳಿಸಿ, ಪೇಜಾವರರು ತಮ್ಮ ಪ್ರಭಾವವುಪಯೋಗಿಸಿ ಮೋದಿಯವರೊಡನೆ ಮಾತಾಡಲಿ ಎಂದು 'ನಮ್ಮವರು' ಹೊಯ್ಕೊಂಡದ್ದೇ ಬಂತು.  ಇಂಥದ್ದೊಂದು ಘಟನೆಯನ್ನು ಯಾರಾದರೂ ಯಾರಿಗಾದರೂ ತಿಳಿಸಬೇಕೇ, ಅವರಿಗೆ ತಿಳಿದಿರುವುದಿಲ್ಲವೇ, ಅವರ ಮೌನಕ್ಕೆ ಏನರ್ಥ ಇವನ್ನು ಅರಿಯಲಾರದ ನಮ್ಮದೇ ಮುಗ್ಧತೆಗೆ ಸಂಕಟವಾಯಿತು.  ಅನ್ಯಾಯವಾಗಿರುವುದು ನಮಗೆ, ನಾವು ಸಹಾಯ ಯಾಚಿಸಬೇಕಿಲ್ಲ, ಆಗಬೇಕಾದ್ದನ್ನು ಡಿಮ್ಯಾಂಡ್ ಮಾಡಿ ಪಡೆಯಬೇಕಾದ್ದು, ವ್ಯವಸ್ಥೆ ಯಾರಪ್ಪನ ಆಸ್ತಿಯೂ ಅಲ್ಲ ಎಂಬ ಅರಿವೇ ನಮ್ಮಿಂದ ಎಗರಿಹೋಗಿರುವುದು ಕಂಡು ದುಃಖವಾಯಿತು.  ಅಷ್ಟಾದಮೇಲೂ ಏನು?  ನಮ್ಮ ದಕ್ಷಿಣ ಬೆಂಗಳೂರಿನ ಸಂಸದರೊಬ್ಬರು ಸಂಸತ್ತಿನಲ್ಲಿ ಎದ್ದು ನಿಂತು "ಕರ್ನಾಟಕದ ಹದಿನಾರನೆಯ ಶತಮಾನದ ಸಂತರೊಬ್ಬರ" ಬಗ್ಗೆ ಒಂದು ಸಾಲಿನ ಪರಿಚಯ ಹೇಳಿ, ಇನ್ನೊಂದು ಸಾಲಿನಲ್ಲಿ, ಅವರ ಬೃಂದಾವನವು ನಾಶವಾಗಿರುವುದರ ಕುರಿತು ತಿಳಿಸಿ, ಮೂರನೆಯ ಸಾಲಿನಲ್ಲಿ ಇದಕ್ಕೆ ತಕ್ಕ ಪರಿಹಾರ ಬೇಕೆಂದು ಒಪ್ಪಿಸಿದರು.  ಮಂತ್ರಿಯೊಬ್ಬರು "ಸೂಕ್ತಕ್ರಮ ಕೈಗೊಳ್ಳಲಾಗುವುದು" ಎಂಬ ಒಂದು ಸಾಲಿನ ರೊಟೀನ್ ಭರವಸೆಯನ್ನು ನೀಡಿದರು.  ಹೇಳಿದವರಲ್ಲಾಗಲೀ, ಕೇಳಿದವರಲ್ಲಾಗಲೀ, ಉತ್ತರಿಸಿದವರಲ್ಲಾಗಲೀ ನಡೆದ ಘಟನೆಯ ಗಂಭೀರತೆಯ ಕಿಂಚಿತ್ತು ನೆರಳೂ ಕಾಣಲಿಲ್ಲ.  ಆ ರೊಟೀನ್ ಭರವಸೆ ಕೊನೆಗೇನಾಯಿತೆಂಬ ಬಗ್ಗೆ ಯಾರಿಗೂ ಗೊತ್ತಿಲ್ಲ.  ಆದರೆ ಸಂಸತ್ತಿನಲ್ಲಿ ನಮ್ಮ ಬಗೆಗೂ ಒಂದು ಸಾಲನ್ನಾದರೂ ಹೇಳಿದ ಈ ಅಮೋಘ ಸಾಧನೆಯ ಬಗೆಗೆ ನಮ್ಮವರು ಆ ತರುಣಸಂಸದರನ್ನು ಇನ್ನಿಲ್ಲದಂತೆ ಕೊಂಡಾಡಿದರು. 

ಇವೆಲ್ಲಾ ಸರ್ಕಾರ, ಮಾಧ್ಯಮ, ವ್ಯವಸ್ಥೆಗಳ ವಿಷಯವಾಯಿತಲ್ಲ. ಫೇಸ್ಬುಕ್ಕು ಟ್ವಿಟರುಗಳಾದರೂ ಈ ಸುದ್ಧಿಯಿಂದ ತುಂಬಿಹೋಗಬಹುದೆಂದೆಣಿಸಿದ್ದೆ - ಅದೂ ಇಲ್ಲ!  ಫೇಸ್ಬುಕ್ಕಿನಲ್ಲೂ ಈ ಸುದ್ದಿ ಅಂತಹ ಸಂಚಲನವನ್ನುಂಟುಮಾಡಿದಂತೆ ಕಾಣಲಿಲ್ಲ - ಕೊನೆಗೆ "ಕೃಷ್ಣಾ ನೀ ಬೇಗನೆ ಬಾರೋ" ಎಂಬ ಹಾಡಿಗೆ ತಲೆದೂಗುವ ಮನಸ್ಸುಗಳೂ ಈ ದುರಂತಕ್ಕೆ ಬಹುದೊಡ್ಡ ರೀತಿ ಸ್ಪಂದಿಸಿದ್ದು ಕಾಣಲಿಲ್ಲ.

ಇಷ್ಟಾಗುವಾಗ ಇತ್ತ, ಮಹಾತ್ಮರಾದ ವ್ಯಾಸರಾಜರ ಬೃಂದಾವನ ಕಳಚಿಕೊಂಡು, ಒಳಗಿನ ಕುಣಿ ತೋಡಿಸಿಕೊಂಡು ಬಿದ್ದಿತ್ತಲ್ಲ, ಅದನ್ನು ನೋಡಿ ವಿಲಗುಟ್ಟಿದವರು, ಅನ್ನ ಬಿಟ್ಟವರು, ಕಣ್ಣೀರಿಟ್ಟವರು, ಬಿಟ್ಟ ಕೆಲಸ ಬಿಟ್ಟು ಸ್ಥಳಕ್ಕೆ ದೌಡಾಯಿಸಿದವರು ಇದೇ ಸೋ ಕಾಲ್ಡ್ 'ಜಗಳಗಂಟ' ಮಾಧ್ವರು.  ನಂಬಿದರೆ ನಂಬಿ ಬಿಟ್ಟರೆ ಬಿಡಿ, ಅಂದು ಹಲವು ಸಂಪ್ರದಾಯಸ್ಥ ಮಾಧ್ವಕುಟುಂಬಗಳಲ್ಲಿ ಒಲೆ ಹಚ್ಚಿಲ್ಲ.  ಸುದ್ದಿ ಕೇಳಿ ನಂಬಲಾರದೇ ತತ್ತರಿಸಿದವರೆಷ್ಟೋ, ದಿಗ್ಭ್ರಮೆಯಿಂದ ಕುಸಿದು ಕುಳಿತವರೆಷ್ಟೋ! ಅಲ್ಲಿಗೆ ಧಾವಿಸಲಾಗದವರು ಮನೆಯಲ್ಲಿ ತುಪ್ಪದ ದೀಪ ಹಚ್ಚಿ ಅಖಂಡ ಪಾರಾಯಣ, ಸಚ್ಛಾಸ್ತ್ರಶ್ರವಣಗಳಲ್ಲಿ ತೊಡಗಿದರು.  ಮನೆಮನೆಯಲ್ಲೂ ಸೂತಕದ ಛಾಯೆ, ಆತಂಕ, ದುಗುಡ.  ಇವರ ಪಾಲಿಗೆ ಅಲ್ಲಿ ಉರುಳಿದುದು ಕೇವಲ ಜುಜುಬಿ "ಕರ್ನಾಟಕದ ಸಾಂಸ್ಕೃತಿಕಸ್ಮಾರಕ"ವಾಗಿರಲಿಲ್ಲ, ಸಮಸ್ತಮಾಧ್ವರ ಶ್ರದ್ಧಾಕೇಂದ್ರದ ಗೋಪುರವಾಗಿತ್ತು, ಅವರ ಅಸ್ಮಿತೆಯ ಪ್ರತೀಕವಾಗಿತ್ತು; ಇವತ್ತಿಗೂ ವ್ಯಾಸರಾಜರ ಪರಂಪರೆಯ ಸ್ವಾಮಿಗಳು ವ್ಯಾಸರಾಜರ ಪ್ರತಿನಿಧಿಗಳಾಗಿ ಒಂದು ಮುಹೂರ್ತಕಾಲ ಪರಂಪರಾಗತ ’ಸಿಂಹಾಸನ’ದ ಮೇಲೆ ಕುಳಿತು ’ರಾಜದರ್ಬಾರು’ ನೀಡುತ್ತಾರೆ.  ವಂದಿಮಾಗಧರು "ರಾಜಾಧಿರಾಜ... ಗಜಗಹ್ವರ ಕರ್ಣಾಟಕಸಿಂಹಾಸನಗತಪ್ರಭೋ" ಎಂದು ಪರಾಕು ಕೂಗುತ್ತಾರೆ.  ಇಂದಿನ ಅನೇಕ ಜಗದ್ಗುರುಗಳ ಆಧುನಿಕ ಅಡ್ಡಪಲ್ಲಕ್ಕಿ ಉತ್ಸವದಂಥದ್ದಲ್ಲ ಇದು - ವಿಜಯನಗರದ ಕಾಲದಿಂದ ಬೆಳೆದುಬಂದ ಸಂಪ್ರದಾಯ.  ಇದು ಮಾಧ್ವಸಮುದಾಯದ ಹೆಮ್ಮೆ.  ಆದ್ದರಿಂದ ಅಲ್ಲಿನ ಘಟನೆ ಇಡೀ ಮಾಧ್ವಸಮುದಾಯದ ಎದೆಗೆ ಬಿದ್ದ ಏಟಾಗಿತ್ತು.  ಮೊದಲ ಕೆಲಗಂಟೆಗಳ ದಿಗ್ಭ್ರಮೆ, ಯಾರು ಮಾಡಿದರು, ಏಕೆ, ಹೇಗೆ ಇತ್ಯಾದಿ ಪ್ರಶ್ನೆಗಳು ಸುಳಿದು ನೆಲ ಕಚ್ಚಿದಮೇಲೆ, ಕಂಡಕಂಡ ಕಲ್ಲುಗಳಿಗೆಲ್ಲಾ (ರಾಜಕಾರಣಿಗಳಿಗೆ, ಅಧಿಕಾರಸ್ಥರಿಗೆ ಎಂದು ಓದಿಕೊಳ್ಳಿ) ಮೊರೆಯಿಟ್ಟು, ಮೌನದ ಪ್ರತ್ಯುತ್ತರ ಸಿಕ್ಕಮೇಲೆ ಮೇಲೆ ಆದ ಜ್ಞಾನೋದಯ, ಇದು ತಮ್ಮದೇ, ಕೇವಲ ತಮ್ಮದೇ ನಷ್ಟ, ಇನ್ನಾರೂ ಇದರ ಬಗ್ಗೆ ತಲೆ ಕೆಡೆಸಿಕೊಳ್ಳುವುದಿಲ್ಲ ಎಂಬುದು. 

ವಿಕಾರವಾಗಿ ಗುಳಿ ತೆರೆದುಕೊಂಡು ಬಿದ್ದಿದ್ದ ಬೃಂದಾವನದ ಅವಶೇಷ ತಮ್ಮದೇ ಎದೆಬಗೆದು ಕಿತ್ತಿಟ್ಟಂತೆ, ಉಸಿರಿಗೆ ಹಪಹಪಿಸುವಂತೆ ಮಾಡಿತ್ತು.  ಸುಮಾರು ಸಾವಿರ ಎರಡುಸಾವಿರ ಜನ ಮಾಧ್ವಬಂಧುಗಳು (ಆರು ಸಾವಿರ ಎಂಬ ವರದಿಯಿದೆ, ತಿಳಿಯದು) ಅಲ್ಲಿ ಸೇರಿ ಬೃಂದಾವನ ಪುನರ್ನಿರ್ಮಾಣ ಮಾಡುತ್ತೇವೆಂದು ಘೋಷಿಸಿದಾಗ ಮೊದಲು ನನಗೆ ಗಾಬರಿಯಾಯಿತು - ಎಲಾ ಇಂತಹ ಒಂದು ದುಷ್ಕೃತ್ಯ ನಡೆದಿದೆ, ಪೋಲೀಸರು ಇನ್ನೂ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ, ಇಷ್ಟೊಂದು ಜನ ಇಲ್ಲಿ ಸೇರಿ ಹೀಗೆ ಸರಿದಾಡಿದರೆ ಸಾಕ್ಷಿಗಳು ನಾಶವಾಗುವುದಿಲ್ಲವೇ, ಬೃಂದಾವನ ಕಟ್ಟಿಬಿಟ್ಟರೆ ತನಿಖೆಗೆ ಏನು ಕುರುಹು ಉಳಿಯುತ್ತದೆ, ತಪ್ಪಿತಸ್ಥರು ಆರಾಮವಾಗಿ ತಪ್ಪಿಸಿಕೊಂಡುಬಿಡುವುದಿಲ್ಲವೇ ಎಂಬುದು ನನ್ನ ಚಿಂತೆ.  ಆದರೆ ಬೃಂದಾವನದ ನಿರ್ಮಾಣಕಾರ್ಯ ಆರಂಭವಾಗಿ ಮೊದಲ ಸುತ್ತು ಮುಗಿಯುತ್ತಿದ್ದಂತೆ ಒಂದು ವಿಷಯ ಮನದಟ್ಟಾಯಿತು - ಇದು ಆಗಬೇಕಾದ್ದೇ ಹೀಗೆ.  ಇದು ಇಡೀ ಸಮುದಾಯದ ನೋವಿನ ಪ್ರಶ್ನೆ - ಅದು ತನ್ನ ಎದೆಯಲ್ಲಾದ ಬಹುದೊಡ್ಡ ದೊಗರನ್ನು ತುರ್ತಾಗಿ ಸರಿಪಡಿಸಿಕೊಳ್ಳುತ್ತಿದೆ - ಅಂತಿಮವಾಗಿ ಇದೇ ಸತ್ಯ - ಇದರ ಮುಂದೆ ಯಾವುದೋ ಸಂಸ್ಕೃತಿ, ಐತಿಹಾಸಿಕ ಸ್ಮಾರಕ ಈ ಮಾತೆಲ್ಲಾ ಬರೀ ಮಣ್ಣಂಗಟ್ಟಿ.  ಇದು ಬಗೆಹರಿಯುತ್ತಿದ್ದಂತೆ ನನ್ನಲ್ಲೆದ್ದಿದ್ದ ಪ್ರಶ್ನೆಗಳು ಅದೆಷ್ಟು ಬಾಲಿಶವೆಂದು ಮನದಟ್ಟಾಯಿತು - ಏಕೆಂದರೆ ತನಿಖೆ ಯಾವ ಹಾದಿ ಹಿಡಿಯುತ್ತದೆಂಬುದು ಎಲ್ಲರಿಗೂ ತಿಳಿದ ವಿಷಯ, ಅದಕ್ಕೋಸ್ಕರ, ಧ್ವಂಸಗೊಂಡ ಈ ದೊಗರನ್ನು ತೆರೆದಿಟ್ಟುಕೊಂಡು ಕಾಯುವುದು ಅಪಾರ ನೋವಿನ ವಿಷಯ.  ಇನ್ನು ಈ 'ಸಾಂಸ್ಕೃತಿಕ' ಆಘಾತವನ್ನು ಇಡೀ ನಾಡು 'ಸಹಿಸಿ'ಕೊಂಡ ರೀತಿ ಕಣ್ಣಮುಂದೆಯೇ ಇದೆ.  ಇನ್ನುಳಿದದ್ದೇನು? ನಮ್ಮ ನೋವು, ಅದು ನಮಗೆ ಹೆಚ್ಚು - ನಾವು ಸರಿಪಡಿಸಿಕೊಳ್ಳಬೇಕಾದ್ದು ಅದನ್ನೇ, ಮತ್ತು ಅದನ್ನು ಸರಿಪಡಿಸಿಕೊಳ್ಳಬೇಕಾದವರೂ ನಾವೇ - ಅದಷ್ಟೇ ಸತ್ಯ.  ಇದಾದಮೇಲೆ ಇನ್ನೂ ಒಂದು ಪ್ರಶ್ನೆ, ಆತಂಕ ಕಾಡಿತು.  ಈಗೆಲ್ಲಾ ಭಕ್ತಿಯ ಅಬ್ಬರವೆಂದರೆ ಅತಿರೇಕದ ಪ್ರತಿಕ್ರಿಯೆಯಷ್ಟೇ.  ಆಗಲೇ "ವ್ಯಾಸರಾಜರಿಗೆ ವೈಭವೋಪೇತವಾದ ಬೃಂದಾವನವನ್ನು ನಿರ್ಮಾಣ ಮಾಡೋಣ" ಎಂಬಂತಹ ಮಾತುಗಳು ಕೇಳಿಬಂದಾಗ, ’ವೈಭವೋಪೇತ’ ಬೃಂದಾವನದ ಹೆಸರಿನಲ್ಲಿ ಇವರೆಲ್ಲ ಸೇರಿ ಕಣ್ಣಿಗೆ ರಾಚುವಂತೆ ಆಧುನಿಕ ಡಬ್ಬವನ್ನೆಲ್ಲಿ ನಿರ್ಮಿಸಿಬಿಡುತ್ತಾರೋ, ಅದರ ಪಾವಿತ್ರ್ಯಕ್ಕೆ, ಹಳಮೆಗೆ, ಐತಿಹಾಸಿಕತೆಗೆ ಎಲ್ಲಿ ಧಕ್ಕೆಯಾಗಿಬಿಡುತ್ತದೆಯೋ ಎಂಬ ಚಿಂತೆಯಿದ್ದಿತು.  ಆದರೆ ಪುನರ್ನಿರ್ಮಾಣಕಾರ್ಯ ಮುಂದುವರೆದಂತೆ, ನನ್ನ ಚಿಂತೆ ಎಷ್ಟು ನಿರಾಧಾರವಾದುದೆಂದು ಅರಿವಾಯಿತು. 

ಎಷ್ಟು ಅಚ್ಚುಕಟ್ಟಾಗಿ, ಯಾವ ಪುರಾತತ್ವ ಇಲಾಖೆಯ ಕೆಲಸಕ್ಕೂ ಕಡಿಮೆಯಿಲ್ಲದಂತೆ, ಚೆಲ್ಲಿಬಿದ್ದಿದ್ದ ಕಲ್ಲುಗಳನ್ನು ಅದದೇ ಕ್ರಮದಲ್ಲಿ ಎತ್ತಿ ಜೋಡಿಸಿ, ಭಗ್ನವಾಗಿದ್ದೆಡೆ ಅದರ ಮೂಲವಾಸ್ತುವಿಗೆ ಒಂದಿನಿತೂ ಧಕ್ಕೆ ಬರದಂತೆ ಪುನರ್ನಿರ್ಮಿಸಿದ್ದಾರೆ.  ಭಕ್ತಿಯ ಭರದಲ್ಲಿ 'ವೈಭವೋಪೇತವಾದ' ಹೊಸದೊಂದು ಬೃಂದಾವನವನ್ನೇ ನಿರ್ಮಿಸಿದ್ದರೆ ಯಾರೂ ತಡೆಯುತ್ತಿರಲಿಲ್ಲ, "ಪುರಾತನ ಸ್ಮಾರಕ"ವೊಂದು ನಾಶವಾಗಿದ್ದಕ್ಕೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.  ಆದರೆ ಆ ಎದೆಬಗೆವ ನೋವಿನಲ್ಲೂ ಸ್ಮಾರಕದ ಪುರಾತನತೆಯನ್ನೂ, ಆ ಹಳೆಮೆಯ ಪಾವಿತ್ರ್ಯವನ್ನೂ ಮನಸ್ಸಿನಲ್ಲಿಟ್ಟುಕೊಂಡು ಪೊರೆದದ್ದು, ಇದ್ದುದನ್ನು ಇದ್ದಂತೆಯೇ ಪುನರ್ನಿರ್ಮಿಸಿದ್ದು ನಮ್ಮದೇ ಸಾಂಪ್ರದಾಯಿಕ ವಿವೇಕ. 



ಇಪ್ಪತ್ನಾಲ್ಕಕ್ಕೂ ಹೆಚ್ಚು ಗಂಟೆ ಅನ್ನ ನಿದ್ರೆಯ ಹಂಗು ತೊರೆದು ಕೈಗೊಂಡ ಕೆಲಸ ಪೂರ್ತಿಗೊಂಡನಂತರ ಮರುದಿನ ಸಂಜೆಯ ಹೊತ್ತಿಗೆ ಊಟಕ್ಕೆ ಕುಳಿತ ಆ ಮೊಗಗಳಲ್ಲಿ ಅರಳಿದ್ದ ಸಂತಸ, ಸಂತೃಪ್ತಿ, ಧನ್ಯತೆ ಅದಾವ ಬೆಲೆ ಕೊಟ್ಟರೆ ತಾನೆ ಸಿಕ್ಕೀತು?  ಬಹುಕಾಲದನಂತರ  ಆ ಮುಖಗಳಲ್ಲಿ ಕಂಡುಬಂದ ಒಮ್ಮತದ ಭಾವ, ಆ ಒಗ್ಗಟ್ಟು ಹೀಗೇ ಇದ್ದರೆ ಸಾಕು.  ಈ ಸರ್ಕಾರಗಳಾಗಲೀ, ವ್ಯವಸ್ಥೆಯಾಗಲೀ, ಸಮಾಜವಾಗಲೀ ನಮ್ಮನ್ನು ಲೆಕ್ಕಕ್ಕೇ ಇಡದಿದ್ದರೂ ಅವರಾರ ಹಂಗೂ ಇಲ್ಲದೇ ನಾವು ಮೇಲೇಳಬಲ್ಲೆವು, ಬಾಳಬಲ್ಲೆವು ಎಂಬುದನ್ನು ಇಂದು ಮತ್ತೊಮ್ಮೆ ಪ್ರಪಂಚಕ್ಕೆ ತೋರಿದರು ಇಲ್ಲಿ ನೆರೆದ ಜನ - ಒಂದು ಹೋರಾಟವಿಲ್ಲ, ಕೂಗಾಟ ಚೀರಾಟಗಳಿಲ್ಲ, ಒಂದು ಕಟ್ಟಡಕ್ಕೆ ಕಲ್ಲು ಬೀಳಲಿಲ್ಲ, ಒಂದು ಸಾರ್ವಜನಿಕ ಆಸ್ತಿ ಧ್ವಂಸವಾಗಲಿಲ್ಲ (ಯಾರೋ ಒಬ್ಬರು ’ಮಾನವತಾವಾದಿಗಳು’ "ಬ್ರಾಹ್ಮಣ್ಯದ ಹೇರಿಕೆ" ಎನ್ನುತ್ತಿದ್ದರು.  ಅದು ಇದೇ ಇರಬೇಕು ಬಹುಶಃ!), ಸರ್ಕಾರದ ನೆರವಿಗೆ ಕಾಯಲಿಲ್ಲ - ನಮ್ಮ ನಷ್ಟ, ನಮ್ಮ ನೋವು, ನಮ್ಮ ಪರಿಹಾರ, ನಾವು ಕಂಡುಕೊಂಡೆವಷ್ಟೇ.  "ನೋಡಿದಿರಾ, ಇದೇ ಹಿಂದೂ ಸಂಸ್ಕೃತಿಯ ಮಹತ್ತು" ಎಂದು ಒಬ್ಬರು ಮಹಿಳಾರಾಜಕಾರಣಿ ಉಬ್ಬುತ್ತಿದುದೂ ಗಮನಕ್ಕೆ ಬಂತು.  ಅವರಿಗೆ ವಿನಮ್ರನಾಗಿ ಹೇಳುವುದಿಷ್ಟೇ "ತಮ್ಮ ಶ್ಲಾಘನೆಗೆ ಧನ್ಯವಾದಗಳು, ಆದರೆ ಕ್ಷಮಿಸಿ ಮೇಡಂ, ನೀವು ಹೇಳಿದ ಹಿಂದೂ ಸಂಸ್ಕೃತಿಯ ಮಹತ್ತಾಗಲೀ ಅಥವಾ ಆ ಇನ್ನೊಬ್ಬರು ಹೇಳುವ ವಿಶ್ವಮಾನವತ್ವ/ಭ್ರಾತೃತ್ವಗಳಾಗಲೀ ನಮ್ಮ ಸಹಾಯಕ್ಕೆ ಬರಲಿಲ್ಲ, ಬದಲಿಗೆ ಎರಡೂ ಸುರಕ್ಷಿತ ದೂರದಲ್ಲಿ ನಿಂತು ತಮಾಷೆ ನೋಡುತ್ತಿದ್ದುವು; ನಮ್ಮ ಮನೆಯ ದುರಂತವನ್ನು ನಾವು ತೆಪ್ಪಗೆ, ನಮಗೆ ತಿಳಿದಂತೆ ನಿಭಾಯಿಸಿಕೊಂಡೆವಷ್ಟೇ - ಇದಕ್ಕೆ ಇಷ್ಟಕ್ಕಿಂತ ಹೆಚ್ಚಿನ ಬಣ್ಣ ಬೇಡ"  ಇನ್ನೇನು, ವಿಶ್ವಭ್ರಾತೃತ್ವದ ಬಗ್ಗೆ, ಹಿಂದೂ ಏಕತೆಯ ಬಗ್ಗೆ, ಬ್ರಾಹ್ಮಣರ ಒಗ್ಗಟ್ಟಿನ ಬಗ್ಗೆ, ಕನ್ನಡತನದ ಬಗ್ಗೆ ಬೇಕಷ್ಟು ರಾಜಕೀಯ ಭಾಷಣ ಕುಟ್ಟಬಹುದು, ಬೇಡವೆಂದವರಾರು, ಆದರೆ ವ್ಯಾಸರಾಯರನ್ನು ದಯವಿಟ್ಟು ಅದರಿಂದ ದೂರವಿಟ್ಟುಬಿಡಿ - ಏಕೆಂದರೆ ಅವರು ನಮ್ಮವರು, ಕೇವಲ ನಮ್ಮವರು, ಮಾಧ್ವರ ಗುರುಗಳು.  ನಮ್ಮ ಗುರುಗಳು, ನಮ್ಮ ಹೆಮ್ಮೆ.  

ಓ, ಈ ನಿಲುವು ನಮಗೆ ಜಾತಿವಾದಿಯ ಪಟ್ಟವನ್ನೋ, ಹಿಂದುತ್ವವಿರೋಧಿಯ ಪಟ್ಟವನ್ನೋ, ಬ್ರಾಹ್ಮಣ ಒಗ್ಗಟ್ಟಿನ ವಿರೋಧಿಯ ಪಟ್ಟವನ್ನೋ ತಂದೀಯಬಹುದು - ಅಡ್ಡಿಯೇನು?  ನಾವು ಅದಾವುದೂ ಅಲ್ಲವೆಂಬುದು ನಮಗೆ ತಿಳಿದಿರುವಂತೆಯೇ, ಯಾವಯಾವುದೋ ಇಸಮ್ಮಿನ ಮುಸುಕಿನಡಿಯಲ್ಲಿ ಜಾತೀಯತೆಯ ಹೊಲಸುಣ್ಣುವುದಕ್ಕಿಂತ ಪ್ರಾಮಾಣಿಕವಾಗಿ ನೇರವಾಗಿ ನಮ್ಮ ಜಾತಿಯ ತಳಿಗೆಯಲ್ಲಿ ಅನ್ನವುಂಡು ಇತರರನ್ನು ಗೌರವಿಸುವುದು ಎಷ್ಟೋ ಮೇಲು.  ಹೀಗಾಗಿ, "ಹೌದು, ನಾವು ಮಾಧ್ವರು... ಏನೀಗ?"

ಹಾಗೆಯೇ ಬೃಂದಾವನವನ್ನು ಒಡೆದ ಮನಸ್ಸುಗಳಿಗೊಂದು ಮಾತು.  ಶ್ರೀ ವ್ಯಾಸರಾಜರಂತಹ ಮಹಾನ್ ಚೇತನಗಳು ಅವಿನಾಶಿ, ಅವರ ಚೇತನವಿರಲಿ, ಕೊನೆಗೆ ಅವರ ಬೃಂದಾವನದ ಒಂದು ಕಲ್ಲನ್ನೂ ನೀವು ಕೊಂಕಿಸಲಾಗಲಿಲ್ಲ.  ವ್ಯಾಸರಾಜರಂತಹ ಪುಣ್ಯಜೀವರನ್ನು ಮುಟ್ಟಿದ ನಿಮ್ಮ ಕೈ ಪಾವನವಾಯಿತು, ಹೋಗಿಬನ್ನಿ.