Monday, August 11, 2014

ಅಪೀಲು

ಕೊಲೆಯಿರದ ಮನೆಯ
ಸಾಸಿವೆಯನೆಲ್ಲಿಂದ ತರಲಿ ದೊರೇ!

ಸಾಯಲಸುವೊಂದಿರಲು
ಕೊಲುವ ಕೈಗಳು ಹಲವು;
ಬಡಿಯದಿರು ಅವಕೆ ಕಸ್ತೂರಿ ಚಂದನ ನಾಮ.
ರುದ್ರಾಕ್ಷದಗ್ನಿಯಲಿ ಸನಾತನ
ಕಾಯುತಿದೆ ಚಿನ್ಮುದ್ರೆ;
ಕೊಲೆಯ ಕೈಗಳಿಗಿವನು ಒತ್ತಬಹುದೇ?

ಗ್ರೀಷ್ಮಹತಿಗೆಲೆಯುದುರಿ
ಬೋಧಿಯ ಕೆಳಗೂ ಬಲೆಬಲೆಯ ಬಿಸಿಲು,
ಹೊಸ ಟೊಂಗೆ ಟಿಸಿಲುಗಳು ಬೆಳೆಯಬೇಕು.

ವಿಲಾಯತಿ ಸಿರಿಂಜು ಕತ್ತಿ-ಕತ್ತರಿ ಬರುವ ಮೊದಲು
ಮಾಟಗಾರನೆ ಮನೆವೈದ್ಯ;
ತಾಯತವೆ ಸಕಲ ರುಜಾಪಹಾರಿ.
ಇಂದು ಹಳತೆಂದವನು ದೂಡಬೇಕೆ?
ದತ್ತೂರಿಯಿರಲಿ ಬಿಡು,
ಔಷಧಕೂ ಬಂದೀತು
(ಅತಿಯಾದ ಕ್ಷೀರವೂ ಅತಿಸಾರ ತಂದೀತು).

ಕೊಲೆಯ ಕೈಗಳಿಗಿಂದು ಕಾವ ಕಸುಬನು ಕಲಿಸು,
ಬಿಳಿಲು ಇಳಿಯಲಿ ನೇಣ ಹೆಣದ ಬದಲು;
ಭೂತಗಳಿಗೊಂದೊಮ್ಮೆ ಮುಕ್ತಿ ಕರುಣಿಸಿ ಸಲಿಸು,
ಸತ್ತವರ ನೆನಪಿನಲಿ ಸಂಪಗೆಯು ನಗಲಿ.