Friday, September 23, 2022

ಬೆಳದಿಂಗಳ ಕಸುಬು

ಚಂದ್ರನನ್ನು ಹಾಡಿ ಹೊಗಳದವರಾರು.  ತಂಬೆಳಕು ನೀಡುವವನು, ಮನಸ್ಸಿಗೆ ಆಹ್ಲಾದ ನೀಡುವವನು, ನಿಶಾಪತಿ, ತಾರಾಪತಿ, ನೈದಿಲೆಗಳಿಗೆ ಚಕೋರಪಕ್ಷಿಗೆ ಪರಮಾಪ್ತಮಿತ್ರ, ಎಷ್ಟೆಲ್ಲ ಉಪಾಧಿಗಳು ಚಂದ್ರನಿಗೆ! "ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ" ಎನ್ನುತ್ತಾರೆ ಬಸವಣ್ಣನವರು.  ಇನ್ನು ಪ್ರೇಮಿಗಳಿಗಂತೂ ಮನ್ಮಥನನ್ನು ಬಿಟ್ಟರೆ ಈತನೇ ಆರಾಧ್ಯದೈವ.  ಬೆಳದಿಂಗಳಿನಲ್ಲಿ ಕಡಲತಡಿಯಲ್ಲಿ ಕೈಕೈ ಹಿಡಿದುಕೊಂಡು ನಡೆಯುವ ಪ್ರೇಮಿಗಳಿಗೆ ಬೇರೆ ಪ್ರಪಂಚವೇ ಬೇಡವಂತೆ - ಅಂತೆ, ನಮಗೆ ತಿಳಿಯದು.  "ತೆಂಗುಗರಿಗಳ ನಡುವೆ ತುಂಬು ಚಂದಿರ ಬಂದು ಬೆಳ್ಳಿ ಹಸುಗಳ ಹಾಲ ಕರೆಯುವಂದು ಅಂಗಳದ ನಡುವೆ ಬೃಂದಾವನದ ಬಳಿ ನಿಂದು ಹಾಡುವೆವು ಸಿರಿಯ ಕಂಡು" ಎಂದು ಕವಿ ಕನಸುತ್ತಾನೆ.  

ಇಂಥಾ ಚಂದಿರನನ್ನು ದ್ವೇಷಿಸುವವರೂ ಇರುತ್ತಾರೆಯೇ?  ಯಾಕಿಲ್ಲ?  ಆರಾಧ್ಯದೈವವೆಂದು ಕೊಂಡಾಡುವ ಅದೇ ಪ್ರೇಮಿಗಳನ್ನು ಒಮ್ಮೆ ಅಗಲಿಸಿ, ಅವರ ಮೇಲೆ ಬೆಳದಿಂಗಳನ್ನು ಹರಿಸಿ ನೋಡಿ, ಆಗ ತಿಳಿಯುತ್ತದೆ ಅವರ ಚಂದ್ರಭಕ್ತಿಯ ಅಸಲಿಯತ್ತು - ಪ್ರೇಮಿಯನ್ನಗಲಿದ ಜೀವಕ್ಕೆ ಬೆಳದಿಂಗಳೇ ಬಿಸಿಲಾಗಿ ಕಾಡುತ್ತದಂತೆ, ಮಲಯಾನಿಲ ಬಿಸಿಗಾಳಿಯಾಗಿಬಿಡುತ್ತದಂತೆ, ಚಂದನ ಮೈಸುಡುತ್ತದಂತೆ.  ಶೃಂಗಾರಕಾವ್ಯಗಳ ಅರ್ಧಕ್ಕರ್ಧ ಈ ವಿರಹಿಗಳ ವಿರಹಾಲಾಪದಿಂದಲೇ ತುಂಬಿ ಹೋಗಿದೆ - ಮನ್ಮಥ, ವಸಂತ, ಚಂದ್ರ, ಚಂದನ ಮತ್ತು ಮಲಯಾನಿಲ ಇವಿಷ್ಟನ್ನು ಎಷ್ಟು ಗೋಳುಗರೆದರೂ ಸಾಲದು.  ಪಾಪ ಇಲ್ಲೊಬ್ಬ ಪ್ರೇಮಿ ಚಂದ್ರನಲ್ಲಿ ಹೇಗೆ ಮೊರೆಯಿಡುತ್ತಾನೆ ನೋಡಿ, ರಾಜಶೇಖರನ ವಿದ್ಧಶಾಲಭಂಜಿಕಾ ನಾಟಕದಲ್ಲಿ:

ಸೂತಿರ್ದುಗ್ಧಸಮುದ್ರತೋ ಭಗವತಃ ಶ್ರೀಕೌಸ್ತುಭೌ ಸೋದರೌ

ಸೌಹಾರ್ದಂ ಕುಮುದಾಕರೇಷು ಕಿರಣಾಃ ಪೀಯೂಷಧಾರಾಕಿರಃ

ಸ್ಪರ್ಧಾ ತೇ ವದನಾಂಬುಜೈರ್ಮೃಗದೃಶಾಂ ತತ್ ಸ್ಥಾಣುಚೂಡಾಮಣೇ

ಹಂಹೋ ಚಂದ್ರ ಕಥಂ ನು ಮುಂಚಸಿ ಮಯಿ ಜ್ವಾಲಾಮುಚೋ ವೇದನಾಃ

(ಹೇ ಚಂದ್ರಭಗವನ್, ನೀನು ಹುಟ್ಟಿದ್ದು ನೋಡಿದರೆ ಹಾಲಿನ ಸಮುದ್ರದಲ್ಲಿ, ಲಕ್ಷ್ಮಿಯೂ ಕೌಸ್ತುಭರತ್ನವೂ ನಿನ್ನ ಸೋದರರು, ನಿನ್ನ ಸ್ನೇಹವೋ ಕುಮುದಪುಷ್ಪಗಳಿಂದ ತುಂಬಿದ ಕೊಳಗಳೊಡನೆ, ಕಿರಣವೋ ಅಮೃತಧಾರೆ, ಇನ್ನು ನಿನ್ನ ಸ್ಪರ್ಧೆಯೋ, ಆ ಮೃಗನಯನಿಯರ ಮುಖಕಮಲಗಳೊಂದಿಗೇ, ವಾಸವನ್ನು ನೋಡಿದರೆ, ಸಾಕ್ಷಾತ್ ಶಿವನ ತಲೆಯಮೇಲೆ ಚೂಡಾಮಣಿಯಾಗಿ ನೆಲೆಸಿದ್ದೀಯೆ - ಹೀಗಿದ್ದೂ ನನ್ನ ಮೇಲೆ ಮಾತ್ರ ಏಕಪ್ಪಾ ಈ ವೇದನಾಮಯವಾದ ಜ್ವಾಲೆಯನ್ನು ಹರಿಸುತ್ತಿದ್ದೀಯೆ?)

ಚಂದ್ರನನ್ನು ದ್ವೇಷಿಸುವ ಇನ್ನೊಂದು ಜೀವವಿದೆ - ಆತ ವಿರಹಿಯೂ ಅಲ್ಲ, ಪ್ರೇಮಿಯೂ ಅಲ್ಲ, ಭಾವುಕನೂ ಅಲ್ಲ, ಕೇವಲ ಡೌನ್ ಟು ಅರ್ಥ್ ಕಸಬುದಾರ - 

ಕಳ್ಳ.  

ಈಗಿನ ಕಳ್ಳರು ಹೇಗೋ ಗೊತ್ತಿಲ್ಲ, ಹಿಂದಿನ ಕಳ್ಳರಂತೂ ಪಾರಂಪರಿಕವಾಗಿ ಚಂದ್ರನನ್ನು ದ್ವೇಷಿಸಿಕೊಂಡೇ ಬಂದಿದ್ದಾರೆ.  "ಚೋರ ನಿಂದಿಸಿ ಶಶಿಯ ಬೈದೊಡೆ... ಏನಹುದು" ಎಂದು ಹೀಯಾಳಿಸುತ್ತಾನೆ ಕವಿ ಕುಮಾರವ್ಯಾಸ.  ಆಚಾರ್ಯ ಚಾಣಕ್ಯನಂತೂ "ಚೋರಾಣಾಂ ಚಂದ್ರಮಾ ರಿಪುಃ" ಎಂದೇ ಘೋಷಿಸಿಬಿಟ್ಟಿದ್ದಾನೆ.  ಕಳ್ಳನೊಬ್ಬನದೇ ಏಕೆ, ಆ ಪೂರ್ತಿ ಪದ್ಯವೇ ಅವಗಾಹ್ಯವಾಗಿದೆ, ಒಮ್ಮೆ ನೋಡಿಬಿಡೋಣ:

ಲುಬ್ಧಾನಾಂ ಯಾಚಕಃ ಶತ್ರುಃ ಮೂರ್ಖಾಣಾಂ ಬೋಧಕೋ ರಿಪುಃ |

ಜಾರಸ್ತ್ರೀಣಾಂ ಪತಿಃ ಶತ್ರುಃ ಚೋರಾಣಾಂ ಚಂದ್ರಮಾ ರಿಪುಃ

(ಚಾಣಕ್ಯನೀತಿ 10-6)

(ಲೋಭಿಗೆ ಬೇಡುವವನೇ ಶತ್ರುವಾದರೆ ಮೂರ್ಖನಿಗೆ ಬೋಧಿಸುವವನು; ಹಾದರಗಿತ್ತಿಗೆ ಪತಿಯೇ ಶತ್ರುವಾದರೆ, ಕಳ್ಳರಿಗೆ ಚಂದ್ರನೇ ಶತ್ರು)

ಎಂಜಲ ಕೈಯಲ್ಲಿ ಕಾಗೆ ಹೊಡೆಯದ ಲೋಭಿಯ ಬಳಿ ಹೋಗಿ ಸ್ವಲ್ಪ "ಕೀತ ಬೆಟ್ಟಿಗೆ ಉಚ್ಚೆ ಹೊಯ್ಯಿ" ಎಂದು ಬೇಡಿದರೆ ಆತ "ಜಲ ಮಲ ಕಟ್ಟಿ ಮೂರು ದಿನ ಆಯ್ತು" ಎಂದು ಹೇಳಿ ಎದ್ದು ಹೋದನಂತೆ.  ಹೀಗಿರುವಾಗ ಯಾಚಿಸಿದರೆ?  ನೀವೇ ಯೋಚಿಸಿ!  ಇನ್ನು ಮೂರ್ಖರಿಗೆ ಬೋಧಕರು ಅದೆಂತಹ ಪರಮಶತ್ರುಗಳು ಎಂಬುದನ್ನಂತೂ ಹೇಳುವುದೇ ಬೇಡ.  ಅಂತಹ ಸರ್ವಜ್ಞನೇ "ಮೂರ್ಖರಿಗೆ ನೂರ್ಕಾಲ ಬುದ್ಧಿ ಪೇಳಿದರೇನು ಗೋರ್ಕಲ್ಲ ಮೇಲೆ ಮಳೆ ಸುರಿಯಲಾ ಕಲ್ಲು ನೀರ್ಗುಡಿಯಲಪ್ಪುದೇ" ಎಂದು ಕೈ ಚೆಲ್ಲಿ, ಅಲ್ಲಲ್ಲ, ನೀರು ಚೆಲ್ಲಿ ಕೈಬಿಟ್ಟಿದ್ದಾನೆ.  ಸರ್ವಜ್ಞನಾದರೋ ನೂರ್ಕಾಲ ಮಳೆಸುರಿದು ನೋಡಿದ.  ಆದರೆ ಇದನ್ನು ಶತಮಾನಗಳ ಮೊದಲೇ ಕಂಡಿದ್ದ ಚಾಣಕ್ಯ, ಈ ಪ್ರಯತ್ನವೇ ವಿಫಲ ಎನ್ನುತ್ತಾನೆ.  "ಎಷ್ಟು ನೂರು ಬಾರಿ ತೊಳೆದರೂ ಗುದವು ಗುದವೇ ಹೊರತು ವದನವಾದೀತೇ" ಎಂಬುದು ಆತನ ನೇರ ಅಭಿಪ್ರಾಯ (ದುರ್ಜನಂ ಸಜ್ಜನಂ ಕರ್ತುಂ ಉಪಾಯಂ ನ ಹಿ ಭೂತಲೇ; ಅಪಾನಂ ಶತಧಾ ಧೌತಂ ನ ಶ್ರೇಷ್ಠಮಿಂದ್ರಿಯಂ ಭವೇತ್ (ಚಾಣಕ್ಯನೀತಿ - 10-10) - ದುರ್ಜನರನ್ನು ಸಜ್ಜನರನ್ನಾಗಿ ಮಾಡುವ ಉಪಾಯ ಈ ಭೂಮಿಯಲ್ಲಿ ಇಲ್ಲವೇ ಇಲ್ಲ; ಗುದವನ್ನು ನೂರು ಬಾರಿ ತೊಳೆದರೂ ಅದು ವದನವಾಗುವುದಿಲ್ಲ)

ಅದಿರಲಿ, ಮೂಲಶ್ಲೋಕಕ್ಕೆ ಮರಳೋಣ. ಲೋಭಿಗಳು ಮತ್ತು ಮೂರ್ಖರ ಬಗೆಗೆ ಹೇಳಿದ್ದೇನೋ ಸರಿ, ಆದರೆ "ಜಾರಸ್ತ್ರೀಣಾಂ ಪತಿಃ ಶತ್ರುಃ" ಎಂಬಲ್ಲಿ ಮಾತ್ರ ಚಾಣಕ್ಯನು ಪಕ್ಕಾ ಮೇಲ್ ಶೌವೆನಿಸ್ಟಿಕ್ ಆಗಿಬಿಟ್ಟಿದ್ದಾನೆ - ಜಾರತನವನ್ನು ಕೇವಲ ಸ್ತ್ರೀಯರು ಮಾಡುತ್ತಾರೆಯೇ?  ಅಥವಾ ಜಾರತನ ಮಾಡುವ ಪುರುಷರಿಗೇನು ಅವರ ಸತಿ ಶತ್ರುವೇ ಅಲ್ಲವೇ?  ಇದನ್ನೂ ಚಾಣಕ್ಯ ಹೇಳಬೇಕಾಗಿತ್ತು.  ಈ ಕಾರಣಕ್ಕಾಗಿ ಯಾರಾದರೂ ಚಾಣಕ್ಯನ ಮೇಲೆ ಹಕ್ಕುಚ್ಯುತಿ ಮಂಡಿಸುವುದಿದ್ದರೆ ಅದನ್ನು ನಾನಂತೂ ಬೆಂಬಲಿಸುತ್ತೇನೆ.  

ನೋಡಿ, ನಾವು ಶುರುಮಾಡಿದ್ದು ಕಳ್ಳನ ವಿಷಯ.  ಕಳ್ಳತನದ ಸುಳಿವು ಕಂಡದ್ದೇ ತಡ, ಮಾತು ಯಾವಯಾವುದೋ ಕಳ್ಳವ್ಯವಹಾರಗಳ ಹಾದಿಯನ್ನೇ ಹಿಡಿಯಿತು.  ಮತ್ತೆ ಸರಿದಾರಿಗೆ - ಅಂದರೆ ಕಳ್ಳನ ದಾರಿಗೆ ಬರೋಣ - "ಚೋರಾಣಾಂ ಚಂದ್ರಮಾ ರಿಪುಃ" - ಸದ್ಯಕ್ಕೆ ನಮ್ಮ ಅವಗಾಹನೆಗೆ ಬೇಕಾದ್ದು ಈ ಚಂದ್ರವೈರಿಯಾದ ಕಳ್ಳೋತ್ತಮನೇ.  

ಇಷ್ಟಕ್ಕೂ ಕಳ್ಳನಿಗೆ ಚಂದ್ರನ ಮೇಲೆ ಅಷ್ಟು ದ್ವೇಷವೇಕೆ, ಅದಕ್ಕೇನಾದರೂ ಪುರಾಣದ ಕತೆಯಿದೆಯೇ ಎಂದು ಕೇಳಬೇಡಿ - ಅದರ ಹಿಂದೆ ಇರುವುದು ಪುರಾಣವಲ್ಲ, ಕಾಮನ್ ಸೆನ್ಸು.  ಅಲ್ಲ, ಎಲ್ಲೆಲ್ಲೂ ಹಾಲು ಚೆಲ್ಲಿದಂತೆ ಬೆಳದಿಂಗಳು ಚೆಲ್ಲಿದ್ದರೆ ಆ ಬೆಳದಿಂಗಳ ರಾತ್ರಿಯಲ್ಲಿ ಕಳ್ಳನೇನು ಮೋಹಿನಿಯ ಜೊತೆ ಕೂತು ರೊಮ್ಯಾನ್ಸ್ ಮಾಡುತ್ತಾ ಕಾಲ ಹಾಕಬೇಕೇ?  ಅವ ಬಂದಿರುವುದು ಕಳ್ಳತನ ಮಾಡಲು - ಕಳ್ಳತನ ಯಾರ ಕಣ್ಣಿಗೂ ಬೀಳದಂತೆ ಮಾಡಬೇಕಾದ ಕೆಲಸ, ನಮ್ಮ ವಡಿವೇಲುವಿನಂತೆ ಢಾಣಾಢಂಗುರ ಹೊಯಿಸಿ, ಪೋಸ್ಟರ್ ಹಚ್ಚಿ ಮಾಡಬೇಕಾದ ಸಮಾರಂಭವಲ್ಲ.  ಅದು ಹೇಳಿಕೇಳಿ ಕಪ್ಪು ಕೆಲಸ - ಅದಕ್ಕೆ ಬೆಳದಿಂಗಳ ರಾತ್ರಿ ಆಗಿಬರದು. ಮಾಟಮಂತ್ರವೇ ಮೊದಲಾದ ಅಭಿಚಾರವಿದ್ಯೆಗಳಂತೆ ಇದೂ ಕಪ್ಪು ರಾತ್ರಿಯಲ್ಲೇ ಮಾಡಬೇಕಾದ ಕೆಲಸ - ಸೂರ್ಯಗ್ರಹಣವೂ ಕಪ್ಪುಕಾಲವೇ ಆದರೂ ಅದು ಮಾಟಮಂತ್ರಗಳಿಗೆ ಆದೀತೇ ಹೊರತು ಕಳ್ಳತನಕ್ಕೆ ಆಗಿಬರುವುದಿಲ್ಲ, ಏಕೆಂದರೆ ಸೂರ್ಯಗ್ರಹಣಗಳು ಆಗುವುದು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲೇ ನೋಡಿ!  ಗ್ರಹಣಕ್ಕೆ ಹೆದರಿ ಜನ ಮನೆಯಲ್ಲೇ ಗುಬ್ಬೆಂದು ಕೂತಿರುವಾಗ ಅಲ್ಲಿಗೆ ಕಳ್ಳ ಹೊಕ್ಕು ಜಯಿಸಲಾಗುವುದೇ?

ಈಗೆಲ್ಲ ಬಿಡಿ, ಕಳ್ಳನ ಕೆಲಸಕ್ಕೆ ಕಲ್ಲು ಹಾಕಲು ಹುಣ್ಣಿಮೆಯ ಚಂದ್ರನೇ ಬೇಕಿಲ್ಲ - ಬೀದಿ ದೀಪಗಳಿವೆ (ಅವು ನೂರಕ್ಕೆಪ್ಪತ್ತರಷ್ಟು ಕೆಟ್ಟು ಕೂತಿರುತ್ತವೆ ಎಂಬ ವಿಷಯವನ್ನು ಸದ್ಯಕ್ಕೆ ಪಕ್ಕಕ್ಕಿಡೋಣ), ಅವಿಲ್ಲದಿದ್ದರೇನಾಯಿತು, ದಂಡಿಯಾಗಿ ಬೀದಿ ನಾಯಿಗಳಿವೆ - ನಮ್ಮ ರಕ್ಷಣೆಗಾಗಿಯೇ ಕಾರ್ಪೊರೇಷನ್ನು ಅವುಗಳನ್ನು ಬೀದಿಬೀದಿಗಳಲ್ಲಿ ಬೆಳೆಸಿದೆ, ಸ್ವಲ್ಪ ಶ್ರೀಮಂತರ ಮನೆಗಳಲ್ಲಾದರೆ ಮನೆಯಲ್ಲಿ ಸಾಕಿದ ನಾಯಿಗಳೂ ಇರುತ್ತವೆ, ಮನೆಯ ದೀಪಗಳಂತೂ ಇದ್ದೇ ಇವೆ, ಸ್ವಲ್ಪ ಮುಂದುವರೆದ ಮನೆಗಳಲ್ಲಿ ಬರ್ಗಲರ್ ಅಲಾರ್ಮು, ಸಿಸಿಟಿವಿ ಹೀಗೆ ಇನ್ನೂ ಏನೇನೋ ಇರುತ್ತವೆ.  ಆದ್ದರಿಂದ ಈಚಿನ ಕಳ್ಳರಿಗೆ ಚಂದ್ರನೇನು ಬಲುದೊಡ್ಡ ತೊಡಕಲ್ಲ.  ಅಲ್ಲದೇ ಈಗಂತೂ ಹಾಡುಹಗಲಲ್ಲೇ ದರೋಡೆ ಮಾಡಿ ಹೋಗುವಷ್ಟು ಟೆಕ್ನಾಲಜಿ ಮುಂದುವರೆದಿರುವುದರಿಂದ ಈಗೇನಿದ್ದರೂ ಚಂದ್ರ ಒಂದು ಸಂಕೇತವಷ್ಟೇ - ಕಸುಬಿಗೆ ತೊಡಕಾಗಿರುವ ಎಲ್ಲದರ ಸಂಕೇತ - ಎಲ್ಲಿ ಯಾವುದೇ ಕೆಟ್ಟದಿದ್ದರೂ ಅದನ್ನು ಬ್ರಾಹ್ಮಣ್ಯವೆಂದು ಕರೆಯುವುದಿಲ್ಲವೇ, ಹಾಗೆ ಎಂದಿಟ್ಟುಕೊಳ್ಳಬಹುದು.

ಅದೇನೇ ಇರಲಿ, ವಾಸ್ತವದಲ್ಲಿ ಕಳ್ಳರು ಚಂದ್ರಪ್ರೇಮಿಗಳಲ್ಲದಿದ್ದರೂ ಚಂದ್ರದ್ವೇಷಿಗಳಲ್ಲ ಎಂಬುದನ್ನು ಸ್ಥಾಪಿಸಲಿಕ್ಕೆ ಇಷ್ಟು ಹೇಳಬೇಕಾಯಿತು.  ಅಷ್ಟೇಕೆ, ಈಗೀಗ ಒಂದು ಹೊಸಬಗೆಯ ಕಳ್ಳರ ಸಮುದಾಯ ರೂಪುಗೊಂಡಿದೆ.  ಅವರು ಸುತರಾಂ ಚಂದ್ರದ್ವೇಷಿಗಳಲ್ಲ.  ಇವರೂ ಸಾಮಾನ್ಯವಾಗಿ ನಡುರಾತ್ರಿಯಲ್ಲೇ ಕೆಲಸಮಾಡುವುದರಿಂದ ಇವರನ್ನು ನಿಶಾಚರರು ಎಂದೇ ಕರೆಯಬಹುದಾದರೂ ಇವರ ಕಸುಬಿಗೆ moonlighting ಎಂಬ ಸುಂದರವಾದ, ಕಾವ್ಯಮಯವಾದ ಹೆಸರಿದೆ.  ತಡೆಯಿರಿ, ಹೆಸರನ್ನು ನೋಡಿಕೊಂಡು ಕಸುಬಿಗಿಳಿಯುವುದು ಒಳ್ಳೆಯದಲ್ಲ.  ಹೆಸರು moonlighting ಆದರೂ ವಾಸ್ತವದಲ್ಲಿ ಅದು ಕಳ್ಳಕೆಲಸ.  ಒಂದು ಕಂಪನಿಯಲ್ಲಿ ಕೆಲಸಕ್ಕಿದ್ದುಕೊಂಡೇ ಗುಟ್ಟಾಗಿ ಇನ್ನೊಂದು ಕಂಪನಿಗೆ ಕೆಲಸ ಮಾಡುವುದಕ್ಕೆ ಕಾರ್ಪೊರೇಟ್ ವಲಯದಲ್ಲಿ moonlighting ಎಂಬ ನಾಮಧೇಯವಿದೆ.  ಈ moonlighting ಯಾವ ಕ್ಷೇತ್ರದಲ್ಲೂ ಆಗಬಹುದಾದರೂ ಸಾಮಾನ್ಯವಾಗಿ ಇದು ಐಟಿ ವಲಯದಲ್ಲೇ ಹೆಚ್ಚು.  ಈಗಂತೂ work from home ಬಹಳ ಹೆಚ್ಚಾದುದರಿಂದ ಈ 'ತಂಬೆಳಕು ಕೋರ'ರ ಸಂಖ್ಯೆಯೂ ವಿಪರೀತ ಹೆಚ್ಚಾಗಿದೆಯಂತೆ.  ಸಾಮಾನ್ಯವಾಗಿ ಐಟಿ ವಲಯದಲ್ಲಿ ಕೆಲಸದಲ್ಲಿರುವ ಯಾರಿಗಾದರೂ ಅವರವರ ಮಾನವಸಂಪನ್ಮೂಲವಿಭಾಗದಿಂದ ಹೀಗೆ ಮಾಡದಂತೆ ಎಚ್ಚರಿಕೆ ಸಂದೇಶ ಬಂದೇ ಇರುತ್ತದೆ.  ಸರಿ, ಮಾಡುವುದು ಕಳ್ಳಕೆಲಸ.  ಇದಕ್ಕೆ moonlighting ಎಂಬ ಹೆಸರೇಕೆ ಎಂದಿರಾ?  ಅದು ಹೀಗೆ.  ನೀವು ಮಾಡುವ ಮುಖ್ಯ ಕೆಲಸ ಸಾಮಾನ್ಯವಾಗಿ ಹಗಲು ಹೊತ್ತಿನದು - 9ರಿಂದ 6 ಎಂದಿಟ್ಟುಕೊಳ್ಳೋಣ - ಇದು sunlight ಇರುವ ಸಮಯ.  ಅದಾದ ಮೇಲೆ ನಿಮ್ಮ ಬಿಡುವಿನ ಸಮಯದಲ್ಲಿ ಇನ್ನೊಂದು ಕಂಪನಿಯಲ್ಲಿ ಇನ್ನೊಂದು ಆರೇಳು ಗಂಟೆ ಕೆಲಸ ಮಾಡುತ್ತೇನೆಂದರೆ ಅದು ರಾತ್ರಿಯ ಕೆಲಸವಾಯಿತಲ್ಲ - ಅದು moonlight ಸಮಯವಷ್ಟೇ?  ಆ ಸಮಯದಲ್ಲಿ ಮಾಡುವ ಕೆಲಸವಾದ್ದರಿಂದ ಅದು moonlighting.  

ಸರಿಯಪ್ಪಾ, ಆದರೂ ಕಳ್ಳಕೆಲಸಕ್ಕೆ ಇಷ್ಟು ಸುಂದರ ಹೆಸರೇ ಎಂದರೆ, ನೋಡಿ, ನಾವು ಐಟಿ ಜನ, ಭಾಷಾನಯವನ್ನು ಅರಿತವರು, ಯಾವುದನ್ನೂ ಎದುರಾಳಿಯ (ಅವನು ಕಳ್ಳನೇ ಆದರೂ) ಮನಸ್ಸಿಗೆ ನೋವಾಗದಂತೆ ಹೇಳುವ ಕಲೆ ನಮ್ಮ ಕಸುಬಿನ ಒಂದು ಭಾಗ.  ಅದ್ದರಿಂದಲೇ ಮೀಟಿಂಗುಗಳಲ್ಲಿ problem (ಗೋಳು)ಗಳು concernಗಳಾಗುತ್ತವೆ, hurdle (ತೊಡಕು)ಗಳು challengeಗಳಾಗುತ್ತವೆ; ನಾವು ಒಬ್ಬರಿನ್ನೊಬ್ಬರೊಂದಿಗೆ discuss ಮಾಡುವುದಿಲ್ಲ, brainstorm ಮಾಡುತ್ತೇವೆ, ಹಾಗೆ brainstorm ಮಾಡಲು ಒಂದೆಡೆ ಸೇರಬೇಕಲ್ಲ, ಸೇರಬೇಕೆಂದರೆ ಸಂಬಂಧಪಟ್ಟವರನ್ನು ಸಂಪರ್ಕಿಸಬೇಕಲ್ಲ; ಹಾಗೆಲ್ಲಾ ಒಡ್ಡೊಡ್ಡಾಗಿ ಹೋಗಿ ಸಂಪರ್ಕಿಸಿಬಿಡುವುದಿಲ್ಲ, ನಯವಾಗಿ touch base ಮಾಡುತ್ತೇವೆ - ಇಲ್ಲ ಇಲ್ಲ, ತಪ್ಪು ತಿಳಿಯಬೇಡಿ, ಮುಟ್ಟುವ ಕೆಲಸವೇನು ಇಲ್ಲ, ಮೀಟಿಂಗ್ ಮಾಡೋಣವಾ ಎಂದು ಕೇಳುವ ವಿಧಾನವಷ್ಟೇ ಅದು.  ಅಷ್ಟೇಕೆ, ಐಡಿ ಕಾರ್ಡ್ ಇಲ್ಲದೇ ಹೊಂಚು ಕಾದು ಇನ್ನೊಬ್ಬರ ಹಿಂದೆ ಒಳನುಗ್ಗುವುದನ್ನೂ tresspassing ಎಂದು ಕರೆದು ಅವರ ಮನನೋಯಿಸುವುದಿಲ್ಲ, ಅವರಿಗೆ ಖುಶಿಯಾಗುವ ಹಾಗೆ tailgating ಎನ್ನುತ್ತೇವೆ.  ಆದ್ದರಿಂದಲೇ ಒಂದು ಕೆಲಸದಲ್ಲಿದ್ದುಕೊಂಡೇ ಇನ್ನೊಂದು ಕಡೆ ಕೆಲಸ ಮಾಡುವುದನ್ನು doublecrossing ಎನ್ನುವ ಬದಲು ಡೀಸೆಂಟಾಗಿ moonlighting ಎನ್ನುತ್ತೇವಷ್ಟೇ.  ಬೇಕಾದರೆ ಇದನ್ನು "ಚಂದ್ರೋಪಜೀವನ" ಎಂದು ಅನುವಾದಿಸಿಕೊಳ್ಳಬಹುದು, ಅಥವಾ ಅಚ್ಚಗನ್ನಡದಲ್ಲಿ "ಬೆಳದಿಂಗಳ ಬದುಕು" ಎನ್ನಬಹುದು (ಬದುಕು = ಉದ್ಯೋಗ, ಉಪಜೀವಿಕೆ, ವೃತ್ತಿ).  ಅಥವಾ ಹೆಚ್ಚು ಕಸುಬುದಾರಿಕೆ ಕಾಣಬೇಕೆಂದರೆ "ಬೆಳದಿಂಗಳ ಕಸುಬು" ಎನ್ನಲೂ ಬಹುದು.  ಏನೇ ಇರಲಿ, ಇತ್ತೀಚಿಗೆ ಈ moonlighting ಒಂದು ಭಾರೀ ಪಿಡುಗಾಗಿದೆಯಂತೆ.  ಆದರೆ ಅದಕ್ಕಾಗಿ ಚಂದ್ರನನ್ನು ಶಪಿಸಬೇಕಿಲ್ಲ - ಈ ವಿಷಯದಲ್ಲಿ ನಿಜಕ್ಕೂ ನಿಷ್ಪಾಪಿ ಆತ.  

ಇರಲಿ, ಇಷ್ಟೆಲ್ಲಾ ಹೇಳಿದ ಮೇಲೆ ಒಂದು ಜೋಕು ನೆನಪಿಗೆ ಬರುತ್ತಿದೆ.  ಅದೂ ಒಂದನ್ನು ಕೇಳಿಬಿಡುವುದರಲ್ಲಿ ನಿಮಗೆ ಹೆಚ್ಚಿನ ತೊಂದರೆಯೇನೂ ಆಗದು.  ಪರೀಕ್ಷೆಗೆ ಹೋದವನೊಬ್ಬನಿಗೆ ಅಲ್ಲಿ ಹಸುವಿನ ಮೇಲೆ ಪ್ರಬಂಧ ಬರೆಯಲು ಹೇಳಿದ್ದು ಕೇಳಿ ಗಾಬರಿಯಾಯಿತಂತೆ.  ಇವನು ಓದಿಕೊಂಡು ಹೋಗಿದ್ದು ತೆಂಗಿನ ಮರದ ಬಗ್ಗೆ.  ಚಿಂತಿಸಿ ಏನು ಪ್ರಯೋಜನ?  ಓದಿಕೊಂಡು ಹೋಗಿದ್ದಂತೆ ತೆಂಗಿನ ಮರದ ಮೇಲೇ ಪ್ರಬಂಧ ಬರೆದನಂತೆ, ಕೊನೆಯಲ್ಲಿ "ಇಂಥಾ ಕಲ್ಪವೃಕ್ಷದಂತಹ ತೆಂಗಿನ ಮರಕ್ಕೆ, ಕಾಮಧೇನುವಿನಂತಹ ಹಸುವನ್ನು ಕಟ್ಟುತ್ತಾರೆ - ಇಲ್ಲಿಗೆ ಹಸುವಿನ ಮೇಲಿನ ಪ್ರಬಂಧ ಮುಗಿಯಿತು" ಎಂದು ಮುಗಿಸಿ ಎದ್ದು ಬಂದನಂತೆ.  ಮಿತ್ರ ಶ್ರೀ Hunasuru Sudeendra ಅವರು moonlighting ಬಗ್ಗೆ ಬರೆಯಿರಿ ಎಂದರು.  ಅದಕ್ಕಾಗಿ ಇಷ್ಟು ಬರೆಯಬೇಕಾಯಿತು.


Wednesday, June 1, 2022

ನಿರಾಶಯ

ನನ್ನ ಕವಿತೆಗೆ ಅದಿರಲಿ ಇದಿರಲಿ ಎಂದೆಲ್ಲ ನಾನು ಕೇಳುವುದಿಲ್ಲ ಅದಿಲ್ಲದಿರಲಿ ಇದಿಲ್ಲದಿರಲಿ ಎಂದಂತೂ ಮೊದಲೇ ಕೇಳುವುದಿಲ್ಲ. "ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವ ವೀರನೂ ಅಲ್ಲ" ಬೇಕಾದ್ದ ಬೇಕಾದೆಡೆಯಿಡುವ ಸೃಷ್ಟಿಶಕ್ತಿಯ ಬಾರದ್ದ ಬಾರದೆಡೆಯಿಡದ ದೃಷ್ಟಿವಿವೇಕವ ಬಳಸಲರಿಯದೆ ಮತ್ತೊಂದಕೆ ಗೆಂಜುವ ಹಲ್ಲು ಶೂರನದೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಕವಿತೆಯ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ. ತನ್ನ ರಕ್ತಮಾಂಸದೆ ಮೈದಳೆದ ಕವಿತೆಗೆ ಅವರ ಸತ್ವ, ಇವರ ಸತ್ಯ, ಅವರ ಹೃದಯ, ಇವರ ಮಿದುಳು
ಇನ್ನೊಬ್ಬರ ರಕ್ತ ಸಿಕ್ತ ಬಟ್ಟೆ ತಿರಿತಂದು ತೊಡಿಸಿ ಮೆರೆಸುವ ತಿರುಪ ತನಗೆಂದೂ ಬಾರದಿರಲಿ. ಗಾಂಧಿ ಬುದ್ಧ ಬಸವ ಅಲ್ಲಮರ, ಇಸಾಯಿ ಪೈಗಂಬರರ ಸತ್ವ ಕವಿತೆಯಲ್ಲಲ್ಲ, ಅದು ಹುಟ್ಟುವ ಮಣ್ಣಿನಲ್ಲಿ ತುಂಬಲಿ ಇರುವುದಿಲ್ಲದ ಅಲ್ಲದ್ದು ಮೊಳೆತ ಅಷ್ಟಾವಕ್ರವ ಹುಟ್ಟುವ ಮೊದಲೇ ಹೂತು ಮತ್ತೊಂದ ನೇಯುವ ಕಸುವಿರದವ ಕವಿಯೇ ಅಲ್ಲ
ವಿಸೂ: ಇದೊಂದು ಪದ್ಯವಲ್ಲ (ಕಾವ್ಯ ಮೊದಲೇ ಅಲ್ಲ), ಪದ್ಯದ ಕೌದಿ ಹೊದ್ದ ಗದ್ಯ ಎಂದು ಈ ಮೂಲಕ ದೃಢೀಕರಿಸುತ್ತೇನೆ. ಹಾಗೆಂದ ಮಾತ್ರಕ್ಕೆ ಇದನ್ನು ಯಾವುದೇ ಪಠ್ಯಪುಸ್ತಕದಲ್ಲಿ (ಕದ್ದಾದರೂ) ಅಳವಡಿಸಲು ನನ್ನ ಅನುಮತಿಯಿಲ್ಲವೆಂದೂ ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಮತ್ತಿದನ್ನು ಯಾರ ಕೋರಿಕೆಯೂ ಇಲ್ಲದೇ ನಾನಾಗಿಯೇ ಸ್ವಯಿಚ್ಛೆಯಿಂದ ಇಲ್ಲಿ ಪ್ರಕಟಿಸುತ್ತಿದ್ದೇನಾದ್ದರಿಂದ ನನ್ನ ಬರಹಕ್ಕೆ ನಾನೇ ಕಾರಣವೆಂದೂ ಇದಕ್ಕಾಗಿ ಬೇರಾರನ್ನೂ ದೂರಬಾರದೆಂದೂ ಈ ಮೂಲಕ ವಿನಂತಿಸುತ್ತೇನೆ.

Wednesday, May 11, 2022

ಹಿರಿದು ಕಿರಿದು

ಹಿರಿದೆಂಬುದ ಭಂಜಿಸಿದೊಡೆ ಹಿರಿದಹೆನೆಂಬ ಕಿರಿತನವ ನೋಡಿರೇ ನೆರೆಗೆರೆಯನಳಿದು ತಾ ಹಿರಿದಹೆನೆಂಬ ಕಿರಿಗೆರೆಯಂತಪ್ಪಿರಯ್ಯಾ ಅಯ್ಯಾ ನಿಮ್ಮೀ ಕಿರಿತನವೆ ಹಿರಿದು ವಿಕಾರಮಾಯಿತ್ತು ಮೊಳೆವ ಸಿರಿಗೆ ನೆರಳಾಗದೆ ಎಲರಾಗದೆ ಬಿಸುಪಾಗದೆ ಬೆಳಕಾಗದೆ ಮರೆಯಾಗದೆ ಹಿರಿದಲ್ಲ ಬೆಳೆಯ ಹಿಗ್ಗಿಂಗೆ ಎದೆಯರಳದೆ ಕೈವರಿಯದೆ ಮೈದಡಹದೆ ತಕ್ಕೈಸದೆ ಹಿರಿದಲ್ಲ ಪೆತ್ತ ಮಗುವ ತಿಂಬ ರಕ್ಕಸಿ ತಾಯಪ್ಪಳೇ ಶಿವಪೂಜೆಗೆ ಗೋಕ್ಷೀರವಲ್ಲದೆ ಕತ್ತೆಯ ಹಾಲಪ್ಪುದೇ ಮೊಲ್ಲೆಮಲ್ಲಿಗೆಯಲ್ಲದೆ ಕಳ್ಳಿಯ ಮುಳ್ಳಪ್ಪುದೇ ಹೂವಿನೊಳಗಂಧವಾಗದೆ ಹೊಗುವ ಮುಳ್ಳಪ್ಪೊಡೆ ಹಣ್ಣಿನೊಳಸ್ವಾದವಾಗದೆ ಹಿಡಿದ ಹುಳುವಪ್ಪೊಡೆ ಆದರಿಸಿ ಅಂದಣವನಿಕ್ಕಿರೆ ಸೊಣಗನಂತಪ್ಪೊಡೆ ಆ ಮುಳ್ಳನಾ ಹುಳುವನಾ ಸೊಣಗನನೆಡಗೈಯ ತುದಿವೆರಲೊಳೆ ಚಿಮ್ಮಿ ಮಿಂದು ಮಡಿಯಾಗೆಂದ ನಮ್ಮ ದಮ್ಮಪುರದ ಮಂಜೇಶನು.



Friday, April 1, 2022

ಮನುಷ್ಯಜಾತಿ ತಾನೊಂದೆ ವಲಂ...

ಆದಿಕವಿ ಪಂಪನೇ ಹೀಗೆ ಹೇಳಿದ್ದಾನೆ, ಆದ್ದರಿಂದ ಮನುಷ್ಯರೆಲ್ಲ ಒಂದೇ, ನಮ್ಮಲ್ಲಿ ಭೇದಭಾವ ಸಲ್ಲ ಎಂಬರ್ಥದ ಅಭಿಪ್ರಾಯವೊಂದನ್ನು ಫೇಸ್ಬುಕ್ಕಿನಲ್ಲಿ ನೋಡಿದೆ.  ಈ ಅಭಿಪ್ರಾಯದ ಬಗೆಗೆ ನಮ್ಮ ತಕರಾರಿಲ್ಲ; ಅಥವಾ ಮೇಲಿನ ಮಾತುಗಳು ಪಂಪನವೇ ಎಂಬಲ್ಲಿ ಕೂಡ ತಕರಾರಿಲ್ಲ.  ಆದರೆ ಮೇಲಿನ ಮಾತುಗಳು ಈ ಅಭಿಪ್ರಾಯವನ್ನು ಸೂಚಿಸುತ್ತವೆ ಎಂಬ 'ಮೂಢನಂಬಿಕೆ'ಯ ಬಗೆಗಷ್ಟೇ ತಕರಾರು.

ಇದು ಹೊಸದೇನಲ್ಲ.  ಪಂಪ "ಮನುಷ್ಯರೆಲ್ಲ ಒಂದೇ" ಎಂದೇ ಹೇಳಿದ್ದಾನೆ ಎಂಬ ಅಭಿಪ್ರಾಯ ಬಹಳವಾಗಿ ಚಾಲ್ತಿಯಲ್ಲಿದೆ.  ಕೆಲವು ಹಿರಿಯ ವಿಮರ್ಶಕರು (ತಿಳಿಯದವರೇನಲ್ಲ), ಅದಾವುದೋ ತಮಗಷ್ಟೇ ತಿಳಿದಿರಬಹುದಾದ ಕಾರಣಕ್ಕೆ ಇಂಥದ್ದೊಂದು ವ್ಯಾಖ್ಯಾನವನ್ನು ಹರಿಯಬಿಟ್ಟಿದ್ದಾರೆ, ಸಾವಿರ ವರ್ಷದ ಹಿಂದೆಯೇ ಜಾತಿಪದ್ಧತಿಯನ್ನು ವಿರೋಧಿಸಿದ ಪ್ರಗತಿಪರಕವಿಯದೊಂದು ಇಮೇಜ್ ಸಿದ್ಧವಾಗಿಬಿಟ್ಟಿದೆ, ಮತ್ತು ಪಂಪನಿಗೆ ತಾನು ಕನಸುಮನಸಿನಲ್ಲಿಯೂ ಊಹಿಸಿರದ ಜಾತ್ಯತೀತ ವಿಶ್ವಮಾನವಕವಿಯ ಪಟ್ಟ ದಕ್ಕಿಬಿಟ್ಟಿದೆ.  ಜಾತಿಯನ್ನು ಖಂಡಿಸುವವರು (ಅದಕ್ಕಾಗಿ ಬ್ರಾಹ್ಮಣರ ಮೂತಿ ದೆಬ್ಬುವವರು), ಪಂಪನನ್ನು ಓದಿಕೊಂಡಿದ್ದೇನೆಂದು ತೋರಿಸಿಕೊಳ್ಳುವವರು, ಪಂಪನನ್ನು ಅರೆಬರೆ ಓದಿಕೊಂಡವರು, ಪಂಪನ ಹೆಸರನ್ನು ಎಲ್ಲೋ ಕೇಳಿದವರು, ಪುಡಾರಿಗಳು, ಪುಡಿಸಾಹಿತಿಗಳು, ಧಡಿಸಾಹಿತಿಗಳು, ಮಾನವತಾವಾದದ ಉದ್ಯಮವನ್ನು ನಡೆಸುವವರು ಎಲ್ಲರಿಗೂ ಪಂಪನ ಇದೊಂದು ವಾಕ್ಯ, ಅಲ್ಲಲ್ಲ, ವಾಕ್ಯಖಂಡ ಬಹಳ ಅನುಕೂಲಕರವಾದ ಕೈಹಿಡಿಯಾಗಿ ಪರಿಣಮಿಸಿಬಿಟ್ಟಿದೆ.  ಇದೊಂದು ಸಾಲನ್ನು ಪಂಪನ 'ವಿಶ್ವಮಾನವದೃಷ್ಟಿ'ಗೆ ದ್ಯೋತಕವಾಗಿ ಎಲ್ಲೆಲ್ಲಿ ಎಷ್ಟೆಷ್ಟು ಹೇಗೆಹೇಗೆ ಬರೆದರೂ ಸಾಲದು.  ಅಷ್ಟೇಕೆ, ಸ್ವತಃ ಕನ್ನಡಸಾಹಿತ್ಯಪರಿಷತ್ತೇ ತನ್ನ ಪುಸ್ತಕಸರಣಿಯಲ್ಲಿ ಇದನ್ನು ಘೋಷವಾಕ್ಯವಾಗಿ ಮುದ್ರಿಸಿಕೊಂಡಿದೆ.  ಹೀಗಾಗಿ ಈ ವಾಕ್ಯದ ಹಿಂದುಮುಂದು ತಿಳಿಯದೇ, ಈ ಮಾತಿನ ಮೂಲಕ "ಮನುಷ್ಯಜಾತಿ ಒಂದೇ" ಎಂಬ ಏಕತ್ವದ ಸಂದೇಶವನ್ನು ಪಂಪ ಸಾರುತ್ತಿದ್ದಾನೆ ಎಂದು ಮುಗ್ಧವಾಗಿ ನಂಬಿದವರೂ ಕಡಿಮೆಯಿಲ್ಲ.

ಇರಲಿ, ಕೆಟ್ಟ ಅಪಾರ್ಥಗಳಿಗಿಂತ ಒಳ್ಳೆಯ ಅಪಾರ್ಥ ಯಾವಾಗಲೂ ಒಳ್ಳೆಯದೇ.  ಈ ವಾಕ್ಯದ ಅಭಿಪ್ರಾಯವೇನೇ ಇರಲಿ, ಮನುಷ್ಯಜಾತಿಯೊಂದೇ ಎಂಬುದರಲ್ಲಿ ಎರಡು ಮಾತಿಲ್ಲವೇ ಇಲ್ಲ.  ಬಸವಣ್ಣನವರೇ ಹೇಳಿಲ್ಲವೇ - "ನೆಲನೊಂದೆ ಹೊಲಗೇರಿ ಶಿವಾಲಯಕೆ"; ಅದಕ್ಕೆ ಸರ್ವಜ್ಞನೂ ದನಿಗೂಡಿಸಿದ್ದಾನಲ್ಲ - "ನಡೆವುದೊಂದೇ ಭೂಮಿ ಕುಡಿವುದೊಂದೇ ನೀರು ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ ನಡುವೆ ಎತ್ತಣದು"; ಕನಕದಾಸರೂ ಅದನ್ನೇ ಹೇಳುತ್ತಾರೆ - "ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?"  ಅಷ್ಟೇಕೆ ಪಂಪನೂ ಕುಲಾಚಾರಗಳನ್ನು ಗೌರವಿಸಿದರೂ ಅದು ಅತಿರೇಕಕ್ಕೆ ಹೋದರೆ ಸಹಿಸುವವನಲ್ಲ.   ಉದಾಹರಣೆಗೆ ವಿಕ್ರಮಾರ್ಜುನವಿಜಯದಲ್ಲಿ ಕರ್ಣನ ಬಾಯಲ್ಲಿ ಆತ ಹೇಳಿಸುವ ಮಾತುಗಳನ್ನು ಕೇಳಿ:

"ಕುಲಮನೆ ಮುನ್ನಮುಗ್ಗಡಿಪಿರೇಂ ಗಳ, ನಿಮ್ಮ ಕುಲಂಗಳಾಂತು ಮಾರ್ಮಲೆವನನಟ್ಟಿ ತಿಂಬುವೆ? ಕುಲಂ ಕುಲಮಲ್ತು - ಚಲಂ ಕುಲಂ, ಗುಣಂ ಕುಲಂ, ಅಭಿಮಾನಮೊಂದೆ ಕುಲಂ, ಅಣ್ಮು ಕುಲಂ.  ಬಗೆವಾಗಳ್ ಈಗಳ್ ಈ ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ" (ಕುಲವನ್ನೇ ಎತ್ತೆತ್ತೆತ್ತಿ ಆಡುವಿರಲ್ಲ, ನಿಮ್ಮ ಕುಲಗಳೇನು ಏರಿಬರುವ ಶತ್ರುಗಳನ್ನು ಅಟ್ಟಿ ತಿನ್ನುತ್ತವೆಯೇ?  ಕುಲ ಕುಲವಲ್ಲಪ್ಪಾ, ಛಲ ಕುಲ, ಗುಣ ಕುಲ, ಅಭಿಮಾನವೊಂದೇ ಕುಲ, ವೀರ್ಯವೇ ಕುಲ.  ನೋಡಿದರೆ ಈಗ ಈ ಕಲಹದಲ್ಲಿ, ಅಣ್ಣಾ, ನಿಮ್ಮ ಕುಲವೇ ನಿಮಗೆ ಆಕುಲವನ್ನು (ದುಃಖವನ್ನು) ತಂದೀತು).

ಪಂಪನ ಶಾಸ್ತ್ರದೃಷ್ಟಿಯೇನೇ ಇರಲಿ, ಮೇಲೆ ಕರ್ಣ ಹೇಳುವ ಮಾತು ಕೆಲಮಟ್ಟಿಗೆ ಪಂಪನ ಜೀವನದೃಷ್ಟಿಯನ್ನೂ ಧ್ವನಿಸುತ್ತದೆಂದಿಟ್ಟುಕೊಳ್ಳಬಹುದು. ಮಾನವಧರ್ಮವೇ ಸರ್ವಶ್ರೇಷ್ಠವೆಂಬ ಮಾತಿನಲ್ಲಿ ಅನುಮಾನವಿಲ್ಲ; ಮಾನವತೆಯೆಂಬುದು ದಯೆ-ಕರುಣೆ ಎಂದು ಅರ್ಥೈಸುವುದಾದರೆ ಸ್ವತಃ ಜೈನಮತಾವಲಂಬಿಯಾದ ಪಂಪನೂ ಮಾನವಧರ್ಮದಲ್ಲಿ ನಂಬಿಕೆಯಿಟ್ಟವನೇ ಎಂದರೂ ತಪ್ಪಾಗಲಾರದು.  ಆದರೆ ಪಂಪನ 'ಮಾನವತೆ' ನಮ್ಮ ಆಧುನಿಕಬುದ್ಧಿಜೀವಿಗಳ ಬ್ರಾಂಡಿನ ಮಾನವತೆಯಲ್ಲ.  ಅವನ ಮಾನವತೆಯು ಜಾತಿ-ಕುಲ-ನಂಬಿಕೆಗಳಿಗೆ, ಅದರಿಂದ ಹೊಮ್ಮಬಹುದಾದ ಸಹಜವಾದ ಹೆಮ್ಮೆಗೆ, ಸ್ವಾಭಿಮಾನಕ್ಕೆ, ಶ್ರೇಷ್ಠತೆಯ ಪ್ರಜ್ಞೆಗೆ ಎಂದೂ ವಿರುದ್ಧವಾದದ್ದಲ್ಲ.  ಅಷ್ಟೇಕೆ?  ಸ್ವತಃ ಪಂಪ ಧರ್ಮದಿಂದ ಜೈನನಾದರೂ ಜಾತಿಯಿಂದ ಬ್ರಾಹ್ಮಣ, ಮತ್ತು ಅವನಿಗೆ ತನ್ನ ಜಾತಿಯ ಬಗ್ಗೆ ಅಪಾರವಾದ ಹೆಮ್ಮೆಯಿದೆ.  'ವಿಪ್ರಶ್ರೇಷ್ಠ'ನಾದ ತನ್ನ ತಂದೆ ಅಭಿರಾಮದೇವರಾಯ (ಭೀಮಪಯ್ಯ)ನು ಜೈನಧರ್ಮವನ್ನು ಪರಿಗ್ರಹಿಸಿದ ಘಟನೆಯನ್ನು ಹೆಮ್ಮೆಯಿಂದ ವಿವರಿಸುತ್ತಾ ಪಂಪ ಹೀಗೆ ಹೇಳುತ್ತಾನೆ:

ಜಾತಿಯೊಳೆಲ್ಲಮುತ್ತಮದ ಜಾತಿಯ ವಿಪ್ರಕುಲಂಗೆ ನಂಬಲೇ

ಮಾತೊ ಜಿನೇಂದ್ರಧರ್ಮಮೆ ವಲಂ ದೊರೆ ಧರ್ಮದೊಳೆಂದು ನಂಬಿ ತ

ಜ್ಜಾತಿಯನುತ್ತರೋತ್ತರಮೆ ಮಾಡಿ ನೆಗೞ್ಚಿದನಿಂತಿರಾತ್ಮವಿ

ಖ್ಯಾತಿಯನಾತನಾತನ ಮಗಂ ನೆಗೞ್ದಂ ಕವಿತಾಗುಣಾರ್ಣವಂ

 - ವಿಕ್ರಮಾರ್ಜುನವಿಜಯ 14/48

(ಜಾತಿಗಳಲ್ಲಿ ಉತ್ತಮಜಾತಿಯವನಾದ ವಿಪ್ರನಿಗೆ ಧರ್ಮಗಳಲ್ಲಿ ಉನ್ನತವಾದ ಜಿನೇಂದ್ರಧರ್ಮವೇ ಸರಿಯಾದ ಧರ್ಮವೆಂದು ನಂಬಿ, ಅದರಿಂದ ಆ (ಬ್ರಾಹ್ಮಣ)ಜಾತಿಯನ್ನೇ ಉತ್ತರೋತ್ತರವನ್ನಾಗಿಸಿ (ತನ್ನ ಜಾತಿಯ ಪೆರ್ಮೆಯನ್ನು ಇನ್ನೂ ಹಿರಿದಾಗಿಸಿ) ತನ್ನ ಖ್ಯಾತಿಯನ್ನೂ ಹೆಚ್ಚಿಸಿಕೊಂಡನು; ಆತನ (ಅಂತಹ ಅಭಿರಾಮದೇವರಾಯನ) ಮಗನೇ ಈ ಕವಿತಾಗುಣಾರ್ಣವನಾದ ಪಂಪ)

ಮುಂದುವರೆದು ತನ್ನ ಬಗ್ಗೆ ಪಂಪ ಹೇಳಿಕೊಳ್ಳುವ ಪರಾಕುಗಳನ್ನೂ ನೋಡಿ - 

ಪಂಪಂ ಧಾತ್ರೀವಳಯನಿ

ಳಿಂಪಂ ಚತುರಂಗಬಳಭಯಂಕರಣಂ ನಿ

ಷ್ಕಂಪಂ ಲಲಿತಾಲಂಕರ

ಣಂ ಪಂಚಶರೈಕರೂಪನಪಗತಪಾಪಂ

 - ವಿಕ್ರಮಾರ್ಜುನವಿಜಯ 14/49

(ಪಂಪ, ಧಾತ್ರೀವಳಯನಿಳಿಂಪ (ಭೂಲೋಕದ ದೇವತೆ - ಭೂಸುರ - ಬ್ರಾಹ್ಮಣ), ಚತುರಂಗಬಲಭಯಂಕರ, ಎಂದೂ ನಡುಗದವನು, ಲಲಿತವಾಗಿ ಅಲಂಕರಿಸಿಕೊಂಡ ಮನ್ಮಥರೂಪ, ಪಾಪರಹಿತ).

ಮತ್ತೆ, ತನ್ನ ದೊರೆಯಾದ ಅರಿಕೇಸರಿಯು ತನಗೆ ಮೆಚ್ಚುಗೆಯಾಗಿ ಕೊಡಮಾಡಿದ ಧರ್ಮಪುರವೆಂಬ ಅಗ್ರಹಾರವನ್ನು ಪಂಪನು ವರ್ಣಿಸುವ ಬಗೆ ನೋಡಿ:

ದೆಸೆ ಮಖಧೂಮದಿಂ ದ್ವಿಜರ ಹೋಮದಿನೊಳ್ಗೆಱೆ ಹಂಸಕೋಕಸಾ

ರಸಕಳನಾದದಿಂದೊಳಗೆ ವೇದನಿನಾದದಿನೆತ್ತಮೆಯ್ದೆ ಶೋ

ಭಿಸೆ ಸುರಮಥ್ಯಮಾನವನಧಿಕ್ಷುಭಿತಾರ್ಣವಘೋಷದಂತೆ ಘೂ

ರ್ಣಿಸುತಿರಲೀ ಗುಣಾರ್ಣವನ ಧರ್ಮದ ಧರ್ಮವುರಂ ಮನೋಹರಂ

 - ವಿಕ್ರಮಾರ್ಜುನವಿಜಯ 14/57

(ದಿಕ್ಕುಗಳು ಬ್ರಾಹ್ಮಣರ ಹೋಮಧೂಮದಿಂದಲೂ, ಒಳ್ಳೆಯ ಕೆರೆಗಳು ಹಂಸಕೋಕಸಾರಸಪಕ್ಷಿಗಳ ಕಳಕಳನಾದದಿಂದಲೂ, ಊರಿನ ಒಳಭಾಗವು ವೇದನಿನಾದದಿಂದಲೂ ಶೋಭಿಸುತ್ತಿರಲು, ಗುಣಾರ್ಣವನ ಧರ್ಮದ ಈ ಧರ್ಮಪುರವು ದೇವತೆಗಳಿಂದ ಕಡೆಯಲ್ಪಟ್ಟ ಸಮುದ್ರದಂತೆ ಘೂರ್ಣಿಸುತ್ತಾ ಮನೋಹರವಾಗಿತ್ತು) 

ಇದನ್ನೋದಿ ಪಂಪನಿಗೆ ಬ್ರಾಹ್ಮಣ್ಯದ, ಶ್ರೇಷ್ಠತೆಯ ವ್ಯಸನವಿತ್ತೆಂದು ನಾನಂತೂ ಹುಯಿಲೆಬ್ಬಿಸುವುದಿಲ್ಲ.  "ಮನುಷ್ಯಜಾತಿ ತಾನೊಂದೆವಲಂ" ಎಂಬ ಅರ್ಧವಾಕ್ಯವನ್ನು ಹಿಡಿದು ಪಂಪನನ್ನು ಆಧುನಿಕ ಬ್ರಾಂಡ್ ಮಾನವತಾವಾದಿಯಾಗಿಸಿ ಮೆರೆಸಿದವರು ಈಗ ಇದನ್ನೋದಿ ನಿಲುವು ಬದಲಿಸಿಕೊಂಡರೆ, ಪಂಪನ 'ಶ್ರೇಷ್ಠತೆಯ ವ್ಯಸನದ ಬಗ್ಗೆ, ಎದ್ದು ಕಾಣುವ 'ಬ್ರಾಹ್ಮಣ್ಯ'ದ ಬಗ್ಗೆ ಹುಯಿಲೆಬ್ಬಿಸಿದರೆ ನಾನು ಪಂಪನನ್ನು ರಕ್ಷಿಸಲೂ ಹೋಗುವುದಿಲ್ಲ.  ಏಕೆಂದರೆ ಸ್ವಪ್ರಶಂಸೆ ಪ್ರಾಚೀನಕವಿಗಳ ಶೈಲಿಯೇ ಆಗಿದೆ.  ಅದು ತಪ್ಪೂ ಅಲ್ಲ, ಮತ್ತು ಪಂಪನಂತಹ ಸಿದ್ಧಕವಿಗಳಿಗೆ ಅದು ಕೇವಲ ವ್ಯಸನವೂ ಅಲ್ಲ.  ಆದ್ದರಿಂದ ಅದರ ವೈಖರಿಯನ್ನು ಆಸ್ವಾದಿಸುತ್ತಾ ತಲೆದೂಗುತ್ತೇನಷ್ಟೇ.  ಬ್ರಾಹ್ಮಣ್ಯದ ಹೆಮ್ಮೆ ಪಂಪನಿಗಿರಬಹುದು, ಆದರೆ ನಮ್ಮ ಹೆಮ್ಮೆ ಪಂಪನ ಬ್ರಾಹ್ಮಣ್ಯಲ್ಲ, ಸ್ವತಃ ಪಂಪನೇ.

ಇರಲಿ, ಇಲ್ಲಿ ವಿವರಿಸಹೊರಟದ್ದು "ಮನುಷ್ಯಜಾತಿ ತಾನೊಂದೆ ವಲಂ" ಎಂಬ ಸಾಲನ್ನಷ್ಟೇ?  ಇದು ಬರುವುದು ಆದಿಪುರಾಣದಲ್ಲಿ, ಭರತಚಕ್ರವರ್ತಿಯ ರಾಜ್ಯಭಾರವನ್ನು ವರ್ಣಿಸುವ ಹದಿನೈದನೆಯ ಆಶ್ವಾಸದಲ್ಲಿ.  ರಾಜ್ಯದಲ್ಲಿ ತಂತಮ್ಮ ಜಾತಿಧರ್ಮಗಳನ್ನು ನಿಷ್ಠೆಯಿಂದ ಪಾಲಿಸದವರನ್ನು ಬೇರಿರಿಸಿ, ಪಾಲಿಸುವವರನ್ನು ಸನ್ಮಾನಿಸುವ ಮೂಲಕ ಧರ್ಮವ್ರತಗಳನ್ನು ಬಿಟ್ಟವರೂ ಮತ್ತೆ ಅದನ್ನು ಹಿಡಿಯುವಂತೆ ಮಾಡುತ್ತಿದ್ದ ಎಂದು ವಿವರಿಸುವ ಭಾಗ.  ಹೀಗೆ ಸ್ವಧರ್ಮವ್ರತಗಳಲ್ಲಿ ನಿರತರಾದ ಕೃಷಿ, ವಾಣಿಜ್ಯ, ಶಿಲ್ಪ, ಮೊದಲಾದ ಕಸುಬುದಾರರನ್ನೂ, ಶ್ರಾವಕರನ್ನೂ, ಉಪಾಸನೆ ಅಧ್ಯಯನ ಅಧ್ಯಾಪನ ಮೊದಲಾದವುಗಳಲ್ಲಿ ನಿರತರಾದ ಬ್ರಾಹ್ಮಣರನ್ನೂ ಯಾವಯಾವ ರೀತಿ ಸನ್ಮಾನಿಸುತ್ತಿದ್ದನೆಂದು ವಿವರಿಸುವ ಈ ಭಾಗದಲ್ಲಿ, ಬ್ರಾಹ್ಮಣರನ್ನು ಕುರಿತು ಬರುವ ಮಾತುಗಳು ಹೀಗಿವೆ:

"ಉಪಾಸಕಾಧ್ಯಯನಾಧ್ಯಾಪನಾನಂತರಂ ಸಕಳಶಾಸ್ತ್ರಂಗಳನೋದುವೋದಿಸುವ ನೆನೆವ ಬರೆವ ಪರಮಸ್ವಾಧ್ಯಾಯಮುಂ, ಪಂಚಾಣುವ್ರತಾದಿಪ್ರವರ್ತನಸ್ವಭಾವಸಂಯಮಮುಮನ್ ಅನಶನವೃತ್ಯಾದಿ ತಪೋನುಷ್ಠಾನಮುಂಬೆರಸು ಆರ್ಯಷಟ್ಕರ್ಮಂಗಳಂ ನಿಮಗಿವು ಕುಲಾಚಾರಂಗಳೆಂದಱಿಯೆ ಪೇೞ್ದು ಕೈಕೊಳಿಸಿ,

ಆಱುಂ ವೃತ್ತಿಗಳನಿವಂ

ಮೀಱಿದರಲ್ಲರ್ ದ್ವಿಜನ್ಮರೀವೃತ್ತಿಗಳಿಂ

ಬೇಱಾದರ್ ದ್ವಿಜರುಂತೇಂ

ಬೇಱುಂಟೆ ಮನುಷ್ಯಜಾತಿ ತಾನೊಂದೆ ವಲಂ"

 - ಆದಿಪುರಾಣ 15/14

ಇಲ್ಲಿ ಬರುವುದು "ಮನುಷ್ಯಜಾತಿ ತಾನೊಂದೆ ವಲಂ" ಎಂಬ ಮಾತು.  ಇದರರ್ಥ ಸ್ಥೂಲವಾಗಿ ಹೀಗೆ:

ಉಪಾಸನೆ, ಅಧ್ಯಯನ, ಅಧ್ಯಾಪನ, ಶಾಸ್ತ್ರಗಳನ್ನು ಓದುವುದು, ಓದಿಸುವುದು, ಚಿಂತಿಸುವುದು, ಬರೆಯುವುದು ಮೊದಲಾದ ಚಟುವಟಿಕೆಗಳನ್ನೂ, ಪಂಚಾಣುವ್ರತವೇ ಮೊದಲಾದ ಸಂಯಮವನ್ನೂ, ಉಪವಾಸವೇ ಮೊದಲಾದ ತಪೋನುಷ್ಠಾನಗಳಿಂದ ಕೂಡಿದ ಆರ್ಯರ ಆರು ಕರ್ಮಗಳನ್ನೂ "ನಿಮಗಿದು ಕುಲಾಚಾರ" ಎಂದು ತಿಳಿಯಹೇಳಿ, "ಈ ಆರು ವೃತ್ತಿಗಳನ್ನು ದ್ವಿಜರು (ಬ್ರಾಹ್ಮಣರು) ಎಂದಿಗೂ ಮೀರುವುದಿಲ್ಲ, ಏಕೆಂದರೆ ಈ ವೃತ್ತಿಗಳೇ ಅವರನ್ನು ಇತರರಿಂದ ಬೇರಾಗಿಸಿರುವುದು (ವಿಶಿಷ್ಟವಾಗಿಸಿರುವುದು).  ಅದು ಬಿಟ್ಟರೆ ಅವರು ಕೇವಲ ಮನುಷ್ಯಜಾತಿ ಒಂದೇ ಆಗಿ (ಮನುಷ್ಯಜಾತಿಯಷ್ಟೇ ಆಗಿ) ಉಳಿಯುತ್ತಾರಲ್ಲವೇ? (ಅವರನ್ನು ದ್ವಿಜರೆನ್ನಲಾಗುತ್ತದೆಯೇ?)

ಎಂದರೆ ಮನುಷ್ಯಜಾತಿ ಒಂದು ಪದರ, ಅದರ ಮೇಲೆ ದ್ವಿಜರು ತಮ್ಮ ಈ ಷಟ್ಕರ್ಮಗಳಿಂದ ಎರಡನೆಯ ಜನ್ಮ ತಳೆಯುತ್ತಾರೆ, ಉಳಿದ ಮನುಷ್ಯಜಾತಿಯಿಂದ ಒಂದು ಮೆಟ್ಟಿಲು ಮೇಲೇರುತ್ತಾರೆ.  ಈ ಕರ್ಮಗಳನ್ನು ಬಿಟ್ಟರೆ ದ್ವಿಜತ್ವವನ್ನು ಕಳೆದುಕೊಂಡ ಅವರು ಕೇವಲ ಮನುಷ್ಯರೊಂದೇ ಆಗಿ ಉಳಿಯುತ್ತಾರೆ ಎಂಬುದು ಇಲ್ಲಿ ಕವಿಯ ಭಾವ.  ಅದನ್ನೇ ಮುಂದಿನ ಪದ್ಯದಲ್ಲಿ ಇನ್ನಷ್ಟು ಸ್ಪಷ್ಟಪಡಿಸುತ್ತಾನೆ:

ವ್ರತಸಂಸ್ಕಾರದಿನಾದರ್ವಿ

ತತಗುಣರ್ ಬ್ರಾಹ್ಮಣರ್ ಕ್ರಿಯಾಸಂತತಿಸಂ

ಯುತರುಚಿತಸತ್ಕ್ರಿಯಾವಿರ

ಹಿತನಾತಂ ನಾಮಧಾರಕಂ ದ್ವಿಜನಲ್ಲಂ

 - ಆದಿಪುರಾಣ 15/15

ಹುಟ್ಟುತ್ತ ಸಾಮಾನ್ಯಮನುಷ್ಯರಾದ ಬ್ರಾಹ್ಮಣರು ಈ ವ್ರತಸಂಸ್ಕಾರಗಳಿಂದ, ಅದಕ್ಕನುಗುಣವಾದ ಕ್ರಿಯಾಕರ್ಮಗಳಿಂದ ವಿತತಗುಣರಾಗುತ್ತಾರೆ (ವಿಸ್ತರಿಸಿದ, ಉತ್ತಮಗುಣವನ್ನು ಸಂಪಾದಿಸುತ್ತಾರೆ).  ಈ ಸತ್ಕ್ರಿಯಾಸಂಸ್ಕಾರಗಳನ್ನು ಬಿಟ್ಟ ಬ್ರಾಹ್ಮಣ ಕೇವಲ ಹೆಸರಿಗೆ ಬ್ರಾಹ್ಮಣನೆನಿಸುತ್ತಾನಷ್ಟೇ, ಅವನು ದ್ವಿಜನಲ್ಲ.

ಮೇಲಿನ ಎರಡೂ ಪದ್ಯಗಳನ್ನು ವಿವರವಾಗಿ ಓದಿದರೆ, "ಮನುಷ್ಯಜಾತಿ ತಾನೊಂದೆ ವಲಂ" ಎಂಬ ಮಾತಿನಲ್ಲಿರುವ "ಒಂದೇ" ಎಂಬುದನ್ನು ಯಾವ ಅರ್ಥದಲ್ಲಿ ಬಳಸಿದ್ದೆಂಬುದು ಸ್ಪಷ್ಟವಾಗುತ್ತದೆ.  "ಒಂದೇ" ಎಂಬುದನ್ನು ಎರಡರ್ಥದಲ್ಲಿ ಬಳಸಬಹುದಷ್ಟೇ? 

1) "ಎಲ್ಲರೂ ಒಂದೇ" ಎಂಬ ಸಮಷ್ಟಿ ಅರ್ಥದಲ್ಲಿ (ನಾವೆಲ್ಲರೂ ಒಂದೇ, ಮನುಷ್ಯಜಾತಿ ಒಂದೇ, ಇತ್ಯಾದಿ); 

2) "ಒಂದೇ, ಅಷ್ಟೇ, only" ಎಂಬ ಅರ್ಥದಲ್ಲಿ (ನನ್ನ ಬಳಿ ಒಂದೇ ಪುಸ್ತಕವಿದೆ, ಒಂದೇ ನಾಯಿಯಿದೆ ಇತ್ಯಾದಿ).  

ಇಲ್ಲಿ ಒಂದೇ ಎಂಬ ಪದವನ್ನು ಬಳಸಿರುವುದು ಈ ಎರಡನೆಯ ಅರ್ಥದಲ್ಲಿ - ದ್ವಿಜಸಂಸ್ಕಾರವನ್ನು ಬಿಟ್ಟ ಬ್ರಾಹ್ಮಣನಲ್ಲಿ ಉಳಿಯುವುದು "ಮನುಷ್ಯಜಾತಿಯೊಂದೇ (ಮತ್ತೇನು ಇಲ್ಲ)" ಎಂಬ ಅರ್ಥದಲ್ಲಿ.  ಬ್ರಾಹ್ಮಣನ ಕುಲಾಚಾರವೇನು, ಅವನು ಇತರ ಮನುಷ್ಯರಿಗಿಂತ ಹೇಗೆ ಬೇರಾಗುತ್ತಾನೆ, ತನ್ನ ಕುಲಾಚಾರಗಳನ್ನು ಬಿಟ್ಟ ಬ್ರಾಹ್ಮಣ ಹೇಗೆ ಕೇವಲ ಮನುಷ್ಯನಾಗಿಯಷ್ಟೇ ಉಳಿಯುತ್ತಾನೆ, ಹೇಗೆ ಹೆಸರಿಗಷ್ಟೇ ಬ್ರಾಹ್ಮಣನಾಗಿರುತ್ತಾನೆ, ಅದರ ಮೇಲಿನ 'ದ್ವಿಜ' ಎಂಬ ಎರಡನೆಯ ಪದರವನ್ನು ಕಳೆದುಕೊಂಡು ಮನುಷ್ಯ ಎಂಬ 'ಒಂದೇ' ಪದರದಲ್ಲಿ ಉಳಿದುಬಿಡುತ್ತಾನೆ ಎಂಬ ವಿವರಣೆಯಷ್ಟೇ ಇಲ್ಲಿರುವುದು.  ಇಲ್ಲಿ "ಒಂದೇ" ತತ್ತ್ವದ ವಿಶ್ವಮಾನವದೃಷ್ಟಿಯನ್ನು ಹುಡುಕುವ ವ್ಯರ್ಥಪ್ರಯತ್ನ ಬೇಡವೇನೋ.

ಕೊನೆಯದಾಗಿ, ಇಲ್ಲಿ ವಿವರಿಸಿರುವುದು ಪಂಪನ ಮತ್ತು ಅವನ ಪಾತ್ರಗಳ ಅಭಿಪ್ರಾಯವೇ ಹೊರತು ನನ್ನದಲ್ಲ.  ಈ ವಿಷಯದ ಬಗ್ಗೆ ನನ್ನ ಅಭಿಪ್ರಾಯ ಇಲ್ಲಿ ಅಪ್ರಸ್ತುತ.

ಅಂದ ಹಾಗೆ, "ಬೇಱಾದರ್ ದ್ವಿಜರುಂತೇಂ ಬೇಱುಂಟೆ ಮನುಷ್ಯಜಾತಿ ತಾನೊಂದೆ ವಲಂ" ಎಂಬುದೂ ಪಂಪನೇ ಸ್ವತಃ ಮಾಡಿಕೊಂಡ ಅಭಿಪ್ರಾಯವೂ ಅಲ್ಲ. ಪಂಪನ ಆದಿಪುರಾಣದ ಆಕರವಾದ ಜಿನಸೇನಾಚಾರ್ಯರ ಮಹಾಪುರಾಣದ (ಪೂರ್ವಪುರಾಣ/ಆದಿಪುರಾಣ) 38ನೆಯ ಅಧ್ಯಾಯದ ಈ ಕೆಳಗಿನ ಶ್ಲೋಕಗಳನ್ನು ಗಮನಿಸಬಹುದು (ಬ್ರಾಕೆಟ್ಟಿನಲ್ಲಿ ಅದರ ಸ್ಥೂಲ ಅರ್ಥವನ್ನೂ ವಿವರಿಸಿದ್ದೇನೆ - ಪಂಪನು ತನ್ನ ಆದಿಪುರಾಣದಲ್ಲೂ ಇದೇ ಅಭಿಪ್ರಾಯವನ್ನೇ ಯಥಾವತ್ತಾಗಿ ತಂದಿದ್ದಾನೆ ):

ವಿಶುದ್ಧಾ ವೃತ್ತಿರೇವೈಷಾಂ ಷಟ್ತಯೋಷ್ಟಾ ದ್ವಿಜನ್ಮನಾಂ

ಯೋऽತಿಕ್ರಾಮೇದಿಮಾಂ ಸೋऽಜ್ಞೋ ನಾಮ್ನೈವ ನ ಗುಣೈರ್ದ್ವಿಜಃ ||42||

(ಮೇಲೆ ಹೇಳಿದ ಷಟ್ಕರ್ಮಗಳು (ಪೂಜಾ, ದಾನ, ಸ್ವಾಧ್ಯಾಯ, ಇತ್ಯಾದಿ) ದ್ವಿಜರಿಗೆ ಆಚರಣೀಯ.  ಇವನ್ನು ಅತಿಕ್ರಮಿಸುವ ಅಜ್ಞನು ಕೇವಲ ಹೆಸರಿಗಷ್ಟೇ ದ್ವಿಜನಾಗಿರುತ್ತಾನೆ, ಗುಣದಿಂದಲ್ಲ)

ತಪಃ ಶ್ರುತಂಚ ಜಾತಿಶ್ಚ ತ್ರಯಂ ಬ್ರಾಹ್ಮಣ್ಯಕಾರಣಮ್

ತಪಶ್ರುತಾಭ್ಯಾಂ ಯೋ ಹೀನೋ ಜಾತಿಬ್ರಾಹ್ಮಣ ಏವ ಸಃ ||43||

(ತಪಸ್ಸು, ಶಾಸ್ತ್ರಜ್ಞಾನ ಮತ್ತು ಜಾತಿ ಇವು ಮೂರು ಬ್ರಾಹ್ಮಣ್ಯಕ್ಕೆ ಕಾರಣಗಳು.  ತಪಸ್ಸು ಮತ್ತು ಶಾಸ್ತ್ರಜ್ಞಾನವಿಲ್ಲದಾತ ಕೇವಲ ಜಾತಿಬ್ರಾಹ್ಮಣನಷ್ಟೇ)

ಮನುಷ್ಯಜಾತಿರೇಕೈವ ಜಾತಿನಾಮೋದಯೋದ್ಭವಾ

ವೃತ್ತಿಭೇದಾಹಿತಾದ್ಭೇದಾಚ್ಚಾತುರ್ವಿಧ್ಯಮಿಹಾಶ್ನುತೇ ||45||

(ಮೂಲತಃ ಮನುಷ್ಯಜಾತಿಯೊಂದೇ, ಆದರೆ ಜೀವನೋಪಾಯಕ್ಕಾಗಿ ಮಾಡುವ ನಾಲ್ಕು ವಿಧದ ಕರ್ಮಗಳಿಂದಾಗಿ ಅದು ನಾಲ್ಕು ವಿಧದ ಜಾತಿಯಾಗಿ ಪರಿಣಮಿಸುತ್ತದೆ)

ಬ್ರಾಹ್ಮಣಾ ವ್ರತಸಂಸ್ಕಾರಾತ್ ಕ್ಷತ್ರಿಯಾಃ ಶಸ್ತ್ರಧಾರಣಾತ್

ವಣಿಜೋಽರ್ಥಾರ್ಜನಾನ್ಯಾಯಾಚ್ಛೂದ್ರಾನ್ಯಗ್ವೃತ್ತಿಸಂಶ್ರಯಾತ್ ||46||

(ವ್ರತಸಂಸ್ಕಾರದಿಂದ ಬ್ರಾಹ್ಮಣ, ಶಸ್ತ್ರಧಾರಣದಿಂದ ಕ್ಷತ್ರಿಯ, ನ್ಯಾಯಬದ್ಧವಾದ ಧನಾರ್ಜನದಿಂದ ವೈಶ್ಯ ಮತ್ತು ಇತರ ವೃತ್ತಿಗಳಿಂದ ಶೂದ್ರ - ಹೀಗಾಗುತ್ತದೆ).

ದ್ವಿರ್ಜಾತೋ ಹಿ ದ್ವಿಜನ್ಮೇಷ್ಟಃ ಕ್ರಿಯಾತೋ ಗರ್ಭತಶ್ಚ ಯಃ

ಕ್ರಿಯಾಮಂತ್ರವಿಹೀನಸ್ತು ಕೇವಲಂ ನಾಮಧಾರಕಃ ||48||

(ದ್ವಿಜನೆಂದರೆ ಎರಡು ಜನ್ಮ ತಾಳಿದವನು - ಗರ್ಭದಿಂದ ಮೊದಲನೆಯ ಜನ್ಮ, ಕ್ರಿಯೆಯಿಂದ (ಸಂಸ್ಕಾರದಿಂದ) ಎರಡನೆಯದು.  ಕ್ರಿಯಾಮಂತ್ರವಿಹೀನನಾದ ಬ್ರಾಹ್ಮಣನು ಕೇವಲ ಹೆಸರಿಗಷ್ಟೇ ಬ್ರಾಹ್ಮಣನಾಗಿರುತ್ತಾನೆ)

ನೆನಪಿರಲಿ, ಮೇಲಿನ ಯಾವ ಉಲ್ಲೇಖಗಳೂ ವೈದಿಕ ಉಲ್ಲೇಖಗಳಲ್ಲ, ಸ್ವತಃ ಪಂಪನೇ ಆಕರವಾಗಿರಿಸಿಕೊಂಡಿರುವ ಜೈನರ ಪವಿತ್ರಗ್ರಂಥವಾದ ಮಹಾಪುರಾಣದ್ದು.  ಆದರೆ ಇವನ್ನು ನೋಡಿದಾಗ, ವೈದಿಕವಲಯದಿಂದ ಈ ಕೆಳಕಂಡ ಶ್ಲೋಕಗಳೂ ನೆನಪಾದರೆ ಅದು ಅಸಹಜವಲ್ಲ:

ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ

ವೇದಜ್ಞಾನೇನ ವಿಪ್ರತ್ವಂ ಬ್ರಹ್ಮಜ್ಞಾನೇನ ಬ್ರಾಹ್ಮಣಃ

(ಹುಟ್ಟುವಾಗ ಎಲ್ಲರೂ ಶೂದ್ರರಿರುತ್ತಾರೆ, ಉಪನಯನಸಂಸ್ಕಾರದಿಂದ ದ್ವಿಜರೆನಿಸಿಕೊಳ್ಳುತ್ತಾರೆ, ವೇದಜ್ಞಾನದಿಂದ ವಿಪ್ರರಾಗುತ್ತಾರೆ, ಬ್ರಹ್ಮಜ್ಞಾನದಿಂದ ಬ್ರಾಹ್ಮಣರಾಗುತ್ತಾರೆ)

ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ (ಭಗವದ್ಗೀತಾ)

(ಗುಣಕರ್ಮವಿಶೇಷಗಳಿಗನುಗುಣವಾಗಿ ನಾಲ್ಕು ವರ್ಣಗಳು ನನ್ನಿಂದ ಸೃಷ್ಟಿಸಲ್ಪಟ್ಟಿವೆ)

ಶೂದ್ರೇಣ ಹಿ ಸಮಸ್ತಾವತ್ ಯಾವದ್ವೇದೇ ನ ಜಾಯತೇ (ಮನುಸ್ಮೃತಿ)

ಉಪನಯನವೇ ಮೊದಲಾದ ದ್ವಿಜಸಂಸ್ಕಾರಗಳಾಗುವವರೆಗೆ ಎಲ್ಲರೂ ಶೂದ್ರರೇ.

ಈ ಕೊನೆಯ ಮೂರು ಉಲ್ಲೇಖಗಳನ್ನು ನೋಡಿದ ಮೇಲೆ, ಇದುವರೆಗೆ ಮಹಾನ್ ಮಾನವತಾವಾದಿಯಾಗಿದ್ದ ಪಂಪನೂ ಇದ್ದಕ್ಕಿದ್ದಂತೆ ವೈದಿಕವಾದಿ, ಬ್ರಾಹ್ಮಣವಾದಿ, ಭಗವದ್ಗೀತಾವಾದಿ, ಮನುವಾದಿ ಹೀಗೆಲ್ಲ ಕಾಣತೊಡಗಿದರೆ ತಪ್ಪು ನನ್ನದಲ್ಲ.  ನಮಗಂತೂ "ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ" - ಆವಗಂ!!!

Wednesday, January 5, 2022

ಮುದ್ದಣಮನೋಲಹರಿ

ಮುದ್ದಣನಿಗೂ ಮನೋರಮೆಗೂ ಒಂದೇ ಜಗಳ , ವಿಳ್ಳೇದೆಲೆ ವಿಷಯಕ್ಕೆ.  ಕೊಡಲೇ ಇಲ್ಲವೆಂದು ಇವನು, ಹತ್ತು ಕೊಟ್ಟಿದ್ದೇನೆಂದು ಅವಳು.  

ಅದು ಹೀಗಾಯ್ತು.  ಅರಮನೆಯಿಂದ ರಾಜಮರ್ಯಾದೆ ಹೊತ್ತು ದಣಿದು ಬಂದ ಗಂಡನಿಗೆ ಕಾಲಿಗೆ ನೀರಿತ್ತು, ಕೈಹಿಡಿದು ಒಳಚೌಕಿಗೆ ಕರೆದೊಯ್ದು, ಮಣೆಯ ಮೇಲೆ ಕುಳ್ಳಿರಿಸಿ ಸೊಗಸಾದ ಹಣ್ಣುಗಳನ್ನು ತಿನ್ನಲಿತ್ತು, ಕೆನೆ ಹಾಲನ್ನು ಕುಡಿಯಲಿತ್ತು, ಬಳಿಯಲ್ಲೇ ಕುಳಿತು ನರುದಂಬುಲವನ್ನು ಮಡಚಿಕೊಡುತ್ತಾ ಅವನು ಹೇಳುವ ನಲ್ಗತೆಯನ್ನು ಆಲಿಸುವುದು ಮನೋರಮೆಯ ವಾಡಿಕೆ.  ಇಂದೂ ಆದದ್ದು ಅದೇ.  ಆದರೆ ಕತೆ ಕೇಳುವ ಭರದಲ್ಲಿ ಅವಳು ತಂಬುಲವನ್ನು ಕೊಡಲೇ ಇಲ್ಲವೆಂಬುದು ಮುದ್ದಣನ ವಾದ, ಇಲ್ಲ, ಕೊಟ್ಟಿದ್ದೇನೆಂದರೆ ಕೊಟ್ಟಿದ್ದೇನೆ ಎಂದು ಇವಳ ವಾದ.  ಇರಲಿ ಇದನ್ನು ನಮ್ಮ ಬಡನುಡಿಯಲ್ಲಿ ವರ್ಣಿಸಿ ಕೆಡಿಸುವುದೇಕೆ?  ಬನ್ನಿ ಅದೇನು ಕಲಹವೋ ಅಲ್ಲಿಯೇ ನೋಡೋಣ:

***

ಮುದ್ದ: ದೇವೀ

ಮನೋ: ಆಂ?

ಮುದ್ದ: ಕತೆ ನಿನಗೆ ಸೊಗಮೆನಿಸಿರ್ಪುದೇಂ?

ಮನೋ: ಅಲ್ತೇಂ?  ಬಲ್ಸೊಗಸು ಕಣಾ ನೀಂ ಕತೆವೇೞ್ವ ಮೊಗಸು.

ಮುದ್ದ: ಅಕ್ಕಕ್ಕು ರಮಣೀ.  ಅಂತಾ ಮಾತೀಗಳೆಮ್ಮ ಮನಕಂ ಬಂದುದೈಸೆ.

ಮನೋ: ಅಂತೇಕೆನುವಯ್?

ಮುದ್ದ: ಮತ್ತೇವೇೞ್ವೆನ್? ಕತೆಗೇಳ್ವೊಂದು ಮನಮರೆವಿನೊಳೆನ್ನ ನಿಚ್ಚದ ಮೆಚ್ಚಿನ ನಱುದಂಬುಲಕಂ ಸೊನ್ನೆಸುತ್ತಿರ್ದಪೆಯಲ್ತೇ?

ಮನೋ: ಮನಮರೆವೇಂ? ಏವಾತೋ?  ಆಂ ಸೊನ್ನೆಸುತ್ತಿದೆನ್?

ಮುದ್ದ: ಮತ್ತೇಂ?  ತಂಬುಲಮೆಲ್ಲೇ?

ಮನೋ: ಎಲ್ಲೆಂಬೆಯೇಂ?  ನಿನ್ನ ಗಡಿಗೆವೊಟ್ಟೆಯೊಳ್.  ಒಂದೆರೞ್ಮೂರೋರಂತೆ ಪತ್ತು ತಂಬುಲಮಂ ಮಡಿದಿತ್ತೆನೈಸೆ? 

ಮುದ್ದ:  ಪತ್ತು? ಎಂದೇ?  ಎನಗೇಂ?

ಮನೋ: ಆಂ, ಪತ್ತು - ಒಂದೆರೞ್ಮೂರ್ನಾಲ್ಕೈದಾರಲ್ತು, ಪತ್ತು, ಪತ್ತು; ಇಂದೇ, ಈಗಳೇ, ನಿನಗೇ.  

ಮುದ್ದ: ಓವೋ, ನೀಂ ಬಲ್ಗಡಸುಗಾರ್ತಿಯೈಸೆ!  ನಡುವೊಳ್ ಪುಸಿ ಸೊಗಸಕ್ಕುಂ, ನುಡಿಯೊಳಲ್ತು.

ಮನೋ: ಆ?  ಆಂ ಪುಸಿವೆನೇಂ?  ಒಂದಾದುದೆರೞ್ಮೂರಾದುದು, ಪತ್ತುಂ ವೀಳಯಮನೆಡೆವಿಡದೆ ತಡೆಯಿಡದೆ ಮೆದ್ದುದಿಲ್ಲಾ?  ನೀನೇಂ ಗಂಡನೆಯೋ ತೊಂಡುಮೇಂಕೆಯೋ?

ಮುದ್ದ: ಪುಸಿಯಲ್ಲದೇಂ ದಿಟಮೇ?  ಕತೆವೇಳ್ವೊಂದುದ್ಯಮದೊಳ್ ಬಾಯಾಱಿವಂದೊಡಂ ತೆಱೆವಾಯ್ಮುಚ್ಚಿರ್ದೆನಿಲ್ಲ.  ಪತ್ತುಂ ವೀಳಯಂ ಮೆದ್ದೆನ್?

ಮನೋ: ಅವ್ವೀ!  ಏವೇಳ್ವಯ್?  ನಿನ್ನೊಳಾವ ಬೂತುವೊಕ್ಕಿದುದೋ? ಕತೆವೇಳ್ವೆಡೆಯೆಡೆಯೊಳ್ ತಂಬುಲಮಂ ಮಡಿಮಡಿದು, ಎನ್ನ ರಸಿಕರಾಜಂಗೆ ನಲ್ವೆಚ್ಚನೀವೊಂದು ಪಾಂಗಿನೊಳಾನೆ ತುಟಿಯೊಳ್ವಿಡಿದು ಬಾಯ್ಗಿತ್ತೆನಿಲ್ಲಾ? 

ಮುದ್ದ:  (ನೆನಪಿನಿಂದೆ) ಆಂ!  ಅಂತುವೇೞ್!  ಅಂತುವೇೞ್!

ಮನೋ: ಏಂ? ನೆನವಾದುದೋ?

ಮುದ್ದ: ಅಪ್ಪುದು!  ಕತೆಗೇಳ್ವೆಡೆಯೆಡೆಯೊಳ್ ಸೊಗವರಿದಿರೆ, ರಸಿಕತೆವಿಕ್ಕಿರೆ, ಚೆಂಗದಪಿನ ಚೆಲುನಗೆವೆರಸು ನೀಂ ತಂಬುಲಮಂ ಮಡಿದುದು ದಿಟಂ

ಮನೋ: (ಗೆಲ್ದ ಸಂತಸದಿಂದೆ) ಹಾಂ!  ಅಂತೆವೇೞ್!

ಮುದ್ದ: ಮಡಿದುದಂ ನಿನ್ನ ತುಟಿಯೊಳಿಟ್ಟುದುಂ ಸಚ್ಚಂ

ಮನೋ: (ಕಾತರದಿಂದೆ) ಮುಂದೆ, ಮುಂದೆ?

ಮುದ್ದ: ಸರಸದಿಂ ಅದನೆನ್ನ ಬಾಯ್ವೞಿಗೆ ತಂದುದುಂ ದಿಟಮೇ

ಮನೋ: (ಉದ್ವೇಗದಿಂದೆ) ಮತ್ತಂ?  ಪೇೞ್ ಪೇೞ್

ಮುದ್ದ: ಮತ್ತೇವೇೞ್ವೆಂ?  ಆದೊಡದಂ ನೀನೆನ್ನ ಬಾಯ್ಗಿತ್ತುದಿಲ್ಲಂ!

ಮನೋ: (ಅಚ್ಚರಿಯಿಂದೆ) ಆಂ?  ಮತ್ತೇಗೆಯ್ದೆನೋ!

ಮುದ್ದ: (ಪುಸಿಗೋವದಿಂದೆ) ಏಗೆಯ್ದೆಯೇಂ? ಅದನಿತುಮಂ ನೀನೆ ಮೆಯ್ದೆಯಲ್ತೆ?  ಅಟ್ಟಡುಗೆಯಂ ಕುಡದೆ ತಾನುಣ್ಬ ತಿನಿವೆಂಡಿರೊಲ್!  ಬಯಸಿ ಬಾಯ್ವಿಟ್ಟುದನಿತೆಯೆಮಗೊದವಿದ ಭಾಗ್ಯಂ!

ಮನೋ: (ಬಿಲ್ಲುಂಬೆಱಗಾಗಿ) ಅವ್ವಯ್ಯಾ! ಇದೇಂ ಗಡಸೋ! ಇದೇಂ ಗಟ್ಟಿಗಾಱತನಮೋ! ಸೆಱಗಿಲ್ಲದೆ ಪುಸಿವದಟೋ! ಪುಸಿನುಡಿವೊಂದುಪಾಂಗು ಇಂತುಮಿರ್ಕುಮೆ!  ಹಾ ಗೌರೀ! ಇನಿತುಂ ಭಂಡುಳ್ಳ ಗಂಡನೊಡನೆಂತು ಬಾಳಂಗೆಯ್ವೆಂ! 

ಮುದ್ದ: ಏವೆಣ್ಣೆ?  ಆಗಳಿಂ ನೋಳ್ಪೆಂ. ಆಂ ಗಡಸುಗಾಱಂ ಗಡ!  ಪುಸಿವಂ ಗಡ! ಭಂಡಂ ಗಡ! ತೊಂಡಂ ಮೇವ ಮೇಂಕೆಗಡ!  ತಂಬುಲಮನಾರ್ ಮೆದ್ದರ್ ಈಗಳೆ ನೋಳ್ಪಂ.   ಆರ ತುಟಿಯೊಳ್ ರಂಗುವೆರ್ಚಿರ್ಪುದೋ ರನ್ನಗನ್ನಡಿಯೊಳೆ ಕಾಣ್ಬಂ.

ಮನೋ: ಪೋ!  ಇದೇತಱ ಮಾತಯ್?  ಬೊಮ್ಮನಿತ್ತ ಸಾಜದ ತುಟಿಗೆಂಪಂ ತಂಬುಲಗೆಂಪಿಂಗೆತ್ತುವುದೇವಾತೋ? 

ಮುದ್ದ: ಅಂತೇಂ?  ಅಂತಪ್ಪೊಡಾ ಚೆಂದುಟಿಯ ಕೆಂಪೆನಿತು ಸಾಜಮೊ ತುಟಿಯನೆ ಕೇಳ್ವಂ (ಬೞಿಸಾರ್ದು ಮೊಗವಿಡಿವನ್)

ಮನೋ: (ಬೆರ್ಚುತ್ತುಂ, ನಾಣ್ಚುತ್ತುಂ, ಕೊಸಱುತ್ತುಂ) ಓ ಇದೇಂ ಮಾೞ್ಪಯ್! ಬಿಡು ಬಿಡು! ನಡುವಗಲ್, ಪಿರಿಯರ್ ನೋಳ್ಪರಿಲ್ಲಾ?  ಇದೇನೀ ನಾಣಿಲಿಗೆಯ್ತಂ! ಮಾಣ್ ಮಾಣ್!

ಇಂತು "ಮಾಣ್ಮಾಣೆಂಬೊಂದು ನೆವದಿಂದೊಚ್ಚತಮುಣ್ಮುವ ಕಾಮಿನಿಯ ಕಂಠರುತಿಯ ಹೂಂಕೃತಿಯುಪಚಾರಮಾಗೆ ತುಂಬುಂಗೊಡನೊಳಿಟ್ಟೊಂದು ನುಣ್ಮೞಲ್ವರಲಿಂ ಪುಟ್ಟುವ ಕುಳ್ಕುಳೆಂಬ ಮೆಲ್ಲುಲಿಯ ಪಾಂಗಿನಿಂ ಕಂಠಮೂಲದೊಳಡಿಗಡಿಗೆ ಕಳಕಳನಾದಮೊದವೆ ಮುಂಬಲ್ಗಳಿಂ ಮೆಲ್ಲನೆ ಕರ್ಚಿಯುಂ, ತನಿರಸಂ ಸೋಱುವನ್ನಂ..."

***

ಸಾಕು ಬನ್ನಿ, ಇನ್ನು ನಾವಲ್ಲಿರುವುದು ತರವಲ್ಲ.  ನೀವೂ ಸರಿ, ಅಲ್ಲೇ ಖುರ್ಚಿ ಹಾಕಿಕೊಂಡು ಕೂತೇ ಬಿಡುವುದೇ?  ಅವರಷ್ಟಕ್ಕೆ ಅವರನ್ನು ಬಿಟ್ಟು ನಮ್ಮ ಕೆಲಸ ನೋಡೋಣ.  ಅಂದಹಾಗೆ, ಎಲ್ಲರ ಕನ್ನಡದ ಜಗಳ ಏನಾಯ್ತು?

ವಿ.ಸೂ:  

ಬೇರೇನನ್ನೋ ಗಂಭೀರವಾಗಿ ಬರೆಯಲು ಹೊರಟದ್ದು - ಸಂಸ್ಕೃತವಿಲ್ಲದ ಕನ್ನಡವೆಂದರೆ ಅದನ್ನು ವಿಕಾರ ಮಾಡಲೇಬೇಕೆಂದಿಲ್ಲ ಎಂದೇನೋ ಹೇಳುತ್ತಾ, ಕನ್ನಡ-ಸಂಸ್ಕೃತ-ಸಂಸ್ಕೃತವಿಲ್ಲದ ಹಳಗನ್ನಡ, ಚೆಲುಗನ್ನಡ ಹೀಗೆ ಲೇಖನವೊಂದನ್ನು ಬರೆಯಹೊರಟೆ.  ಮುದ್ದಣ ಮನೋರಮೆಯರ ಉದಾಹರಣೆಯೊಂದಿಗೆ ಶುರುಮಾಡಿದರೆ, ಅದು ತನ್ನಷ್ಟಕ್ಕೇ ಚೆಲುವಾದೊಂದು ಲಹರಿಯಾಗಿ ಬೆಳೆಯತೊಡಗಿತು.  ಬರೆಯಬೇಕೆಂದಿದ್ದ ವಿಷಯವನ್ನು ಪಕ್ಕಕ್ಕಿಟ್ಟು ಲಹರಿಯನ್ನು ಬೆಳೆಯಲು ಬಿಟ್ಟೆ - ಇಷ್ಟಾಯ್ತು.

ಅಂದ ಹಾಗೆ, ಇದು ಮುದ್ದಣನ ಬರಹವಲ್ಲ - ಹಿನ್ನೆಲೆ ಮುದ್ದಣನದ್ದು, ಮುದ್ದಣಮನೋರಮೆಯರ ಅಂತರಂಗಕ್ಕಿಳಿದಾಗ ಹೊರಟ ಸಂಭಾಷಣೆ ನನ್ನದೇ ಲಹರಿ.   "***" ಚಿಹ್ನೆಯ ಮೇಲಿರುವ ಕೊನೆಯ ಪ್ಯಾರಾ ಮಾತ್ರ (ಮಾಣ್ಮಾಣೆಂಬೊಂದು ನೆವದಿಂದೊಚ್ಚತಮುಣ್ಮುವ...") ಮುದ್ದಣನದು, ರಾಮಾಶ್ವಮೇಧದ ಅಷ್ಟಮಾಶ್ವಾಸದ ಒಂದು ಭಾಗ.