Saturday, January 30, 2021

ಹಿಂದೀ ರಾಷ್ಟ್ರಭಾಷೆ - ದೊಡ್ಡರಂಗೇಗೌಡರಿಗೊಂದು ಪ್ರತಿಕ್ರಿಯೆ

 
ದೊಡ್ಡರಂಗೇಗೌಡರು ಕ್ಷಮೆ ಕೇಳಿದ್ದಾರೆ.  ಮೊದಲು, "ರಾಷ್ಟ್ರಭಾಷೆ"ಯಾದ ಹಿಂದಿಯನ್ನು ಒಪ್ಪಬಾರದೇಕೆಂದು ಕೇಳಿದರು; ಆಮೇಲೆ ಅದಕ್ಕೆ ವ್ಯಾಪಕವಿರೋಧ ವ್ಯಕ್ತವಾದಾಗ ನಿಜಕ್ಕೂ ನೊಂದ ಗೌಡರು ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ "ಎಲ್ಲ ಭಾಷೆಯೂ ಒಂದೇ ಸಮ" ಎಂದು ಹೇಳುತ್ತಲೇ, ಕನ್ನಡವನ್ನು ಹಾಡಿ ಹೊಗಳುತ್ತಲೇ, ಗಂಟೆಗಟ್ಟಲೆ ಇಂಗ್ಲಿಷಿನ ಗುಮ್ಮ ತೋರಿಸಿದರು (ಹಿಂದಿಯ ಹೇರಿಕೆಯ ವಿಷಯ ಬಂದಾಗ "ನಾನು ಯಾವ ಹೇರಿಕೆಯನ್ನೂ ವಿರೋಧಿಸುತ್ತೇನೆ" ಎಂದು ಹೇಳಿ ತಾವು ಸೃಷ್ಟಿಸಿದ ನಿಜವಾದ ಸಮಸ್ಯೆಯನ್ನು ಮಾತ್ರ ಮರೆತರು); ಆದರೆ ಸಂದರ್ಶನದುದ್ದಕ್ಕೂ ಅವರು ಕನ್ನಡದ ಬಗೆಗೆ ಇಂಗ್ಲಿಷಿನ ಬಗೆಗೆ ಹೇಳಿದ್ದೆಲ್ಲವೂ ಅಕ್ಷರಶಃ ನಿಜವೇ ಆಗಿತ್ತು; ತಮ್ಮ ಬಗೆಗೆ ತಮ್ಮ ಕನ್ನಡಾಭಿಮಾನದ ಬಗೆಗೆ ಹೇಳಿಕೊಂಡಿದ್ದರಲ್ಲೂ ನನಗಂತೂ ಅನುಮಾನವಿಲ್ಲ.  ಆದರೂ ಯಾವ ವಿಷಯಕ್ಕೆ ವಿವಾದ ಆರಂಭವಾಯಿತೋ ಅದೊಂದರ ಬಗೆಗೆ ಮಾತ್ರ ಮಾತಾಡದಿದ್ದುದು ಜಾಣಮರೆವೋ, ನಿಜಕ್ಕೂ ಅವರೇ ಹೇಳುವಂತೆ ವಿವಾದದ ಮೂಲವನ್ನು ಗ್ರಹಿಸುವಲ್ಲಿ ಅವರು ವಿಫಲರಾದರೋ ತಿಳಿಯಲಿಲ್ಲ.  ಆಮೇಲೆ ಅವರು ಬರೆದ ಕ್ಷಮಾಯಾಚನೆಯ ಪತ್ರದಲ್ಲೂ "ಕನ್ನಡ ಜನರ ಮನಸ್ಸನ್ನು ನೋಯಿಸಿದ್ದರೆ, ನಾನು ಕ್ಷಮೆ ಯಾಚಿಸುತ್ತೇನೆ" ಎಂಬ ಒಕ್ಕಣೆ, ಅವರ ಈ ಗ್ರಹಿಕೆಯ ವೈಫಲ್ಯವನ್ನೇ ಧ್ವನಿಸುತ್ತಿತ್ತು (ಈ ವೈಫಲ್ಯವೂ ಸೂಕ್ಷ್ಮ ನೋಟಕ್ಕಷ್ಟೇ ಸಿಕ್ಕುವಂಥದ್ದು. ಅದಿಲ್ಲದಿದ್ದರೆ ಮೇಲ್ನೋಟಕ್ಕೆ ಕಾಣುವುದು ತಮ್ಮ ತಪ್ಪೊಪ್ಪಿಕೊಳ್ಳದೇ ಸುಮ್ಮನೇ ಕಾಟಾಚಾರಕ್ಕೆ ಕ್ಷಮೆ ಕೋರಿದ ಹಟಮಾರಿ ಧೋರಣೆಯೇ!). "ನೋಯಿಸಿದ್ದರೆ, ಕ್ಷಮೆ ಯಾಚಿಸುತ್ತೇನೆ" - ನಿಜಕ್ಕೂ ತಮ್ಮ ಮಾತು ಕನ್ನಡಿಗರ ಮನ ನೋಯಿಸಿರುವುದು ಗೌಡರಿಗೆ ಅರ್ಥವಾಗಿಲ್ಲವೇ?  "ಹಿಂದಿ ರಾಷ್ಟ್ರಭಾಷೆ" ಎಂಬ ಧೂರ್ತ ಸುಳ್ಳನ್ನೇ ಗೌಡರು ನಿಜವೆಂದು ನಂಬಿದ್ದಾರೆಯೇ?  ಒಂದೋ ಇದು ಅಕ್ಷಮ್ಯ ಧೂರ್ತತನವಿರಬೇಕು, ಅಥವಾ ಮುಗ್ಧತೆಯಿರಬೇಕು.  ಆರೂವರೆ ಕೋಟಿ ಕನ್ನಡಿಗರ ಧ್ವನಿಯಾಗಿ ನಿಲ್ಲಬೇಕಾದ ವ್ಯಕ್ತಿಗೆ ಇವೆರಡೂ ಸಲ್ಲ!

ಗೌಡರ ವೈಯಕ್ತಿಕ ಪರಿಚಯ ನನಗಿಲ್ಲ.  ಆದರೆ ಅವರ ಮಾತು ಕತೆ ಬರಹಗಳಿಂದ ಅವರಲ್ಲೊಬ್ಬ ಸರಳ ಸಜ್ಜನ ಸುಸಂಸ್ಕೃತ ಸಂವೇದನಶೀಲವ್ಯಕ್ತಿಯಿರುವುದಂತೂ ಸ್ಪಷ್ಟವಾಗಿ ಕಾಣುತ್ತದೆ.  ಇದುವರೆಗೂ ಇತರ ಅನೇಕ 'ಸಾಯಿತಿ'ಗಳಂತೆ ಯಾವ ಅಡಾವುಡಿಗಳನ್ನೂ ಮಾಡಿಕೊಂಡವರಲ್ಲ - ಅವರಲ್ಲನೇಕರು ಈಗಾಗಲೇ ಸಮ್ಮೇಳನಾಧ್ಯಕ್ಷತೆಯ ದಂಡಿಗೆಯ ಮೇಲೂ ಕೂತು ಹೋಗಿರುವಾಗ, ಆ ಸ್ಥಾನಕ್ಕೆ ಋಜುಸ್ವಭಾವದ, ವಿವಾದಕ್ಕಂಜುವ, ವಿವಾದವಾದರೆ ನಿಜಕ್ಕೂ ನೋಯುವ, ಅವರೇ ಹೇಳುವಂತೆ (ಸತ್ಯವೂ ಆಗಿರುವಂತೆ) "ಅಂತರಾಳದಿಂದ ಕನ್ನಡವನ್ನು ಆರಾಧಿಸು"ತ್ತಾ, "ಕನ್ನಡವನ್ನೇ ತಲೆಯ ಮೇಲೆ ಹೊತ್ತು ಮೆರೆಸು"ವ ಗೌಡರು ಆ ಸ್ಥಾನಕ್ಕೆ ಎಷ್ಟೋ ಎಷ್ಟೆಷ್ಟೋ ಅರ್ಹರಂತೆ ಕಾಣುತ್ತಾರೆಂಬುದರಲ್ಲಿ ಸಂಶಯವಲ್ಲ.   ಗೌಡರದು ನಿಜಕ್ಕೂ ಕನ್ನಡದ ಜೀವ.  ಆದರೆ ಹಿಂದೀ ರಾಷ್ಟ್ರಭಾಷೆ ಎಂದರೆ ಕನ್ನಡಿಗರಿಗೆ ನೋವೇಕಾಗಬೇಕು ಎಂಬುದು ಏಕೋ ಗೌಡರಿಗೆ ಅರಿವಾದಂತಿಲ್ಲ.  ಇದು ಅವರ ಮುಗ್ಧತೆಯೂ ಇರಬಹುದು.  ಆದರೂ ಕನ್ನಡದ ಮಣ್ಣಿನಲ್ಲೇ ಹುಟ್ಟಿ ಬೆಳೆದು, ಕನ್ನಡದ ಚಳುವಳಿಗಳಲ್ಲಿ ಭಾಗವಹಿಸಿ, ಕನ್ನಡಿಗರಾಗಿಯೇ ಬದುಕುತ್ತಿರುವ ಗೌಡರಿಗೆ ಹಿಂದೀ ಭೂತಗಳು ಕಾಲದಿಂದ ಕನ್ನಡಕ್ಕೆ ಮಾಡುತ್ತಲೇ ಬಂದಿರುವ ಅನ್ಯಾಯ ಕಾಣಲಿಲ್ಲವೆಂದರೆ ನಂಬುವುದು ಕಷ್ಟ - ಅದರಲ್ಲೂ ಸಮ್ಮೇಳನಾಧ್ಯಕ್ಷರಾಗಿರುವ ಅವರ ಈ ಮಾತು ಹಿಂದೀ ಹಿತಾಸಕ್ತಿಗಳಿಗೆ ಹಾಸಿಗೆ ಹಾಸಿಕೊಡುವಂತೆ ಇದ್ದಾಗ, ಅದು ಯಾರನ್ನಾದರೂ ರೊಚ್ಚಿಗೆಬ್ಬಿಸುವುದು ಸಹಜ.  ಅವರು ಸಂದರ್ಶನದಲ್ಲಿ ಅನುಮಾನಿಸಿದಂತೆ, ಈ ಪ್ರತಿಭಟನೆಗಳ ಹಿಂದೆ 'ಹುನ್ನಾರ'ವಿರಲೂ ಸಾಧ್ಯ, ಆದರೆ ಹುನ್ನಾರಕ್ಕೂ ಹೊರತಾದ ಸಾತ್ತ್ವಿಕ ರೋಷವಿದೆಯೆಂಬುದನ್ನು ಸಂವೇದನಶೀಲರಾದ ಗೌಡರು ಮನಗಂಡರೆ ಕನ್ನಡದ ಮನಸ್ಸಿಗೆ ಎಷ್ಟೋ ಹಾಯೆನ್ನಿಸುತ್ತದೆ.  ಸಮಸ್ಯೆಯನ್ನು ಕೂಡಿದ ಮಟ್ಟಿಗೂ ವಸ್ತುನಿಷ್ಠವಾಗಿ ವಿವರಿಸಲೆತ್ನಿಸುತ್ತೇನೆ, ಆದರೂ ಅಲ್ಲಲ್ಲಿ ಕೋಪ, ವ್ಯಂಗ್ಯ ಕಟಕಿಗಳು ಕಂಡುಬಂದಲ್ಲಿ, ಅದು ಅನಿವಾರ್ಯ, ಅದಕ್ಕಾಗಿ ಗೌಡರಲ್ಲಿ ಮೊದಲೇ ಕ್ಷಮೆಯಾಚಿಸಿ ನನ್ನ ಪ್ರತಿಕ್ರಿಯೆ ನೀಡುತ್ತಿದ್ದೇನೆ.

ಇರಲಿ, ಗೌಡರೇನೋ ಕನ್ನಡದೇವಿಯನ್ನು ತಲೆಯ ಮೇಲೆ ಹೊತ್ತು ತಿರುಗುವವರು, ಗುಡಿಯಲ್ಲಿಟ್ಟು ಆರಾಧಿಸುವವರು - ಹಿಂದೀ ರಾಷ್ಟ್ರಭಾಷೆಯಾಗಿ ನಮ್ಮ ಮೇಲೆ ಸವಾರಿ ಮಾಡಿದರೆ ಅವರಿಗೆ ಏನೂ ಅನ್ನಿಸಲಿಕ್ಕಿಲ್ಲ.  ಆದರೆ ನಾವು ನೆಲದ ಜನ, ನಮಗೆ ಕನ್ನಡದೇವಿಯ ಪೂಜೆಗೀಜೆ ಬರಾಕಿಲ್ಲ.  ನಾವೇನಿದ್ದರೂ ಹಸಿವಾದಾಗ ಅಮ್ಮನ ಎದೆ ನೋಡುವವರು, ದಣಿದಾಗ ಅಮ್ಮನ ತೊಡೆಗೆ ತಲೆಯಾನಿಸುವವರು, ನೊಂದಾಗ ಕಣ್ಣು ಮೂಗು ಸುರಿಸಿಕೊಂಡು ಅಮ್ಮನ ಸೆರಗಿಗೆ ಮೊಗವೊಡ್ಡುವವರು.  ಆದ್ದರಿಂದ ನಮ್ಮಮ್ಮ ಚೆನ್ನಾಗಿ, ಗಟ್ಟಿಮುಟ್ಟಾಗಿ ಆರೋಗ್ಯವಾಗಿರುವುದು ನಮಗೊಳ್ಳೆಯದು, ನಾವು ಹಾಗಿರುವುದು ಅವಳಿಗೊಳ್ಳೆಯದು ಅಷ್ಟೆ.  ಇವಳನ್ನ ಕರೆದುಕೊಂಡು ಹೋಗಿ ಗರ್ಭಗುಡಿಯಲ್ಲಿ ಕೂಡಿಹಾಕಿ, ದಿನಬೆಳಗಾದರೆ ಪಂಪ ರನ್ನ ಕುಮಾರವ್ಯಾಸ ಕುವೆಂಪು ದೊಡ್ಡರಂಗೇಗೌಡ ಎಂದು ಅರ್ಚನೆ ಹಾಡುತ್ತಾ, ನಮಗೆ ಅನ್ನ ಹಾಕಲು ಮಾತ್ರ ಇನ್ನಾವಳೋ ಅಮ್ಮನನ್ನು ಕರೆತಂದು ಕೂರಿಸಿದರೆ, ಸ್ವಾಮಿ, ನಿಮಗೆ ಹೇಗನ್ನಿಸುವುದೋ, ನಮಗೆ ಮಾತ್ರ ತಬ್ಬಲಿಗಳಾದಂತೆ ಅನ್ನಿಸುತ್ತದೆ.  ಎಲ್ಲೋ ಪರನಾಡಿನಲ್ಲಿ ತಬ್ಬಲಿತನ ಕಾಡಿದರೆ ಒಂದು ರೀತಿ, ನಮ್ಮ ನೆಲದಲ್ಲೇ ನಾವೇ ತಬ್ಬಲಿಗಳಾಗುವುದಿದೆಯಲ್ಲ, ಅದು ಶತ್ರುವಿಗೂ ಬರಬಾರದ ಪಾಡು.  ಸುಶಿಕ್ಷಿತಕವಿಗಳಾದ ತಮಗೆ ಆದಿಕವಿ ಪಂಪನ ಪರಿಚಯವಿರಲೇಬೇಕು.  ಆದಿಪುರಾಣದಲ್ಲಿ ಆತ ಬಾಹುಬಲಿಯ ತಮ್ಮಂದಿರಿಂದ ಈ ಮಾತನ್ನು ಹೇಳಿಸುತ್ತಾನೆ:

"ಪಿಱಿಯಣ್ಣಂ ಗುರು ತಂದೆಯೆಂದೆಱಗುವಂ ಮುನ್ನೆಲ್ಲಂ, ಇಂತೀಗಳ್ ಆಳರಸೆಂಬೊಂದು ವಿಭೇದಮಾದೊಡೆ ಎಱಕಂ ಛಿಃ ಕಷ್ಟಮಲ್ತೇ? ವಸುಂಧರೆಗಯ್ಯಂ ದಯೆಗಯ್ಯೆ ಮುಂಪಡೆದುದರ್ಕೆ, ಇಂತೀತನೊಳ್ ತೊಟ್ಟ ಕಿಂಕರಭಾವಂ ನಮಗೆ ಅಕ್ಕಿಗೊಟ್ಟುಮಡಗೂೞುಣ್ಬಂದಮಂ ಪೋಲದೇ" - ಭರತಚಕ್ರವರ್ತಿ ತನ್ನ ತಮ್ಮಂದಿರಿಗೆ "ಬನ್ನಿಂ, ಎಱಗಿಂ ಚಕ್ರೇಶಪಾದಾಬ್ಜದೊಳ್" ಎಂದು ಬರೆಸಿ ಕಳಿಸಿದ ಪತ್ರಕ್ಕೆ ತಮ್ಮಂದಿರ ಪ್ರತಿಕ್ರಿಯೆ ಇದು.  ಏನೋ, ಹಿರಿಯಣ್ಣ, ಗುರು, ತಂದೆ ಎಂದು ನಮಿಸುವುದಾದರೆ ಒಂದು ರೀತಿ.  ಆದರೆ ಆಳು-ಅರಸ ಎಂಬ ಭಾವನೆಯಿಂದ ತಲೆವಾಗುವುದು ಕಷ್ಟವಲ್ಲವೇ?  ನಮಗೆ ರಾಜ್ಯ ಕೊಟ್ಟಿದ್ದು ನಮ್ಮಪ್ಪ, ಪಡೆದವರು ನಾವು.  ಇವತ್ತು ಅದೇ ರಾಜ್ಯವನ್ನು ಅವನ ಪದತಲದಲ್ಲಿಟ್ಟು ಅವನಿಗೆ ಕೈಮುಗಿದು ನಿಲ್ಲಬೇಕೆಂದರೆ, ನಮ್ಮ ಅಕ್ಕಿಯನ್ನೇ ಕೊಟ್ಟು, ಅವನು ಉಂಡು ಮಿಕ್ಕ ತಂಗಳುಣ್ಣುವಂತಲ್ಲವೇ?" - ಇದು ಭರತನ ತಮ್ಮಂದಿರ ಅಳಲು.  ಇದಕ್ಕೆ ಭರತನೇನೂ ಉತ್ತರಿಸಲಿಲ್ಲವೆನ್ನಿ.  ಆಮೇಲೆ ಭರತನ ಕತೆ ಏನಾಯಿತೆಂಬುದನ್ನೂ, ಇವತ್ತಿನ ಸಂದರ್ಭಕ್ಕೆ ಇದರ ಪ್ರಸ್ತುತತೆಯನ್ನೂ, ಕಾವ್ಯಸೂಕ್ಷ್ಮವನ್ನು ತಿಳಿದವರಾದ ತಮಗೆ ವಿವರಿಸಬೇಕಿಲ್ಲವೆಂದು ಭಾವಿಸುತ್ತೇನೆ.

ಇರಲಿ, ಅಲಂಕಾರದ ಭಾಷೆಯಲ್ಲಿ ಮಾತಾಡಿದ್ದು ಸಾಕು.  ನೇರವಾಗಿ ಕೇಳುತ್ತೇನೆ, ತಾವು ಉತ್ತರ ಹೇಳುತ್ತೀರೋ ಬಿಡುತ್ತೀರೋ, ಆದರೆ ಉತ್ತರಿಸುವುದು ತಮ್ಮ ನೈತಿಕ ಹೊಣೆಯೆಂಬುದಷ್ಟು ನಿಮಗೆ ಅರ್ಥವಾದರೆ ಸಾಕು; ಏಕೆಂದರೆ ಒಬ್ಬ ವ್ಯಕ್ತಿಯಾಗಿ ದೊಡ್ಡರಂಗೇಗೌಡರ ಅಭಿಪ್ರಾಯಗಳು ಏನೇ ಆದರೂ ನಾವು ತಲೆಕೆಡಿಸಿಕೊಳ್ಳುವವರಲ್ಲ, ಜನಪ್ರಿಯಸಾಹಿತಿಯಾಗಿ ದೊಡ್ಡರಂಗೇಗೌಡರ ಅಭಿಪ್ರಾಯಗಳು ನಮಗೆ ಕಳವಳ ಮೂಡಿಸಬಲ್ಲುವಾದರೂ ಹೇಗೋ ಕಡೆಗಣಿಸಿ ಇರಬಲ್ಲೆವು (ಎಷ್ಟೆಷ್ಟೋ ಸಾಹಿತಿಗಳ ಎಂತೆಂಥದೋ ಬಡಬಡಿಕೆಯನ್ನು ಕಡೆಗಣಿಸಿಲ್ಲವೇ), ಆದರೆ ಕನ್ನಡಸಾಹಿತ್ಯಸಮ್ಮೇಳನಾಧ್ಯಕ್ಷರಾಗಿ, ಸಮಸ್ತಕನ್ನಡಿಗರ ಮುಖವಾಣಿಯಾದ ದೊಡ್ಡರಂಗೇಗೌಡರು ಆಡುವ ಮಾತಿದೆಯಲ್ಲ, ಅದು ನಮ್ಮೆಲ್ಲರ ಧ್ವನಿ.  ಆ ಧ್ವನಿಯಲ್ಲಿ ನಮ್ಮದಲ್ಲದ ಮಾತನ್ನಾಡುವುದು ವಿಶ್ವಾಸದ್ರೋಹ! ಅಲ್ಲವೇ? ಹಿಂದೀ ಈ ದೇಶದ ರಾಷ್ಟ್ರಭಾಷೆಯಲ್ಲ, ಅದು ಕೇವಲ ಕೇಂದ್ರಸರ್ಕಾರದ ಆಡಳಿತಭಾಷೆ (ಅದರಲ್ಲೂ ಸೀಮಿತವಲಯಕ್ಕೆ ಮಾತ್ರ) ಎಂಬ ವಿಷಯ ತಮಗೆ ನಿಜಕ್ಕೂ ತಿಳಿದಿರಲಿಲ್ಲವೇ?  ತಾವು ತಿಳಿದಿದ್ದೂ ಸುಳ್ಳು ಹೇಳಿರಲಾರಿರಿ ಎಂಬುದು ನಮ್ಮ ನಂಬಿಕೆ.  ತಿಳಿದಿರಲಿಲ್ಲವೆಂದರೆ ಆಶ್ಚರ್ಯ!  ಹೋಗಲಿ, ಈಗಲಾದರೂ ತಿಳಿಯಿರಿ.  ತಿಳಿದ ಮೇಲಾದರೂ ತಮ್ಮ ತಪ್ಪು ತಿಳುವಳಿಕೆಯನ್ನು ಸಾರ್ವಜನಿಕವಾಗಿ ಪ್ರಕಟಪಡಿಸಿ, ನಿಲುವು ತಿದ್ದಿಕೊಳ್ಳಿ - ಅದಿಲ್ಲದ ಕ್ಷಮಾಯಾಚನೆ ಕೇವಲ ಕಾಟಾಚಾರವೆನಿಸಿಕೊಂಡು, ರೋಷವನ್ನೇ ಹೆಚ್ಚಿಸುತ್ತದೆ.  ಈ ಬರಹವನ್ನೊಮ್ಮೆ ದಯವಿಟ್ಟು ಓದಿ ನೋಡಿ - https://nannabaraha.blogspot.com/2020/09/blog-post_15.html.

ಇನ್ನೊಂದು ವಿಷಯ - ನಿಮ್ಮ ಮಾತನ್ನು ಪತ್ರಿಕೆಯವರು ತಿರುಚಿಯೋ ಸಂಕ್ಷಿಪ್ತಗೊಳಿಸಿಯೋ ಇರುವ ಸಾಧ್ಯತೆಯನ್ನೂ ನಾನು ಅಲ್ಲಗಳೆಯುತ್ತಿಲ್ಲ.  ಅಕಸ್ಮಾತ್ ನಿಮ್ಮ ಮಾತನ್ನು ಅವರು ತಿರುಚಿದ್ದಾರೆಂದರೆ, ನೀವು ಏನು ಹೇಳಿದಿರಿ, ಅವರು ಹೇಗೆ ವರದಿ ಮಾಡಿದ್ದಾರೆ ಎಂಬ ವಿವರಣೆಯನ್ನಾದರೂ ನೀವು ನೀಡಬೇಕಾಗುತ್ತದೆ.  ಬದಲಿಗೆ ಸುಮ್ಮನೇ "ತಿರುಚಿದ ವರದಿ" ಎಂದರೆ ಅದಕ್ಕೆ ಅರ್ಥವೇ ಇಲ್ಲ.  ನಿಮ್ಮಿಂದ ಆ ಸ್ಪಷ್ಟನೆಯಿಲ್ಲದಿದ್ದರೆ ಪತ್ರಿಕೆಯಲ್ಲಿ ವರದಿಯಾಗಿರುವುದೇ ಯಥಾವತ್ ನಿಮ್ಮ ಮಾತೆಂದು ನಾವು ತಿಳಿಯುವುದು, ಅದನ್ನಾಧರಿಸಿ ಪ್ರತಿಕ್ರಿಯಿಸುವುದು ಸಹಜ.  ಮೊನ್ನಿನ ನಿಮ್ಮ ಸಂದರ್ಶನದಲ್ಲಿ ನೀವಾ ಕೆಲಸ ಮಾಡಬಹುದಿತ್ತು, ಅದೇಕೋ ಮಾಡಲಿಲ್ಲ.  ಈಗಿನ ನನ್ನ ಈ ಪ್ರತಿಕ್ರಿಯೆಯೂ ಆ ಪತ್ರಿಕಾವರದಿಗಳನ್ನಾಧರಿಸಿದ್ದೇ.  ಪತ್ರಿಕಾವರದಿಯ ಪ್ರಕಾರ ನೀವು ಹೇಳಿದ್ದು ಇದು - "ಹಿಂದೀ ನಮ್ಮ ರಾಷ್ಟ್ರಭಾಷೆ.  ಇಲ್ಲಿ ಕನ್ನಡ ಹೇಗೋ ಅದೇ ರೀತಿ ಉತ್ತರ ಭಾರತದಲ್ಲಿ ಹಿಂದಿಗೆ ಸ್ಥಾನಮಾನವಿದೆ".  ಇದೆಂತಹ ತರ್ಕ ಸ್ವಾಮಿ?  ಇಲ್ಲಿ ಕನ್ನಡಕ್ಕೆ ಸ್ಥಾನಮಾನವಿದೆ, ಉತ್ತರದಲ್ಲಿ ಹಿಂದಿಗೆ ಸ್ಥಾನಮಾನವಿದೆ, ಆದ್ದರಿಂದ ಹಿಂದಿ ನಮ್ಮ ರಾಷ್ಟ್ರಭಾಷೆ ಹೇಗೆ?  ಅಲ್ಲಿ ಹಿಂದಿಗೆ ಸ್ಥಾನಮಾನವಿದ್ದರೆ ಅದು ಅವರ ನೆಲದ ಭಾಷೆ, ಅದರ ಗೌರವ ಅದಕ್ಕೆ.  ಅದು ನಮ್ಮ ರಾಷ್ಟ್ರಭಾಷೆ ಏಕಾದೀತು?

ಆಮೇಲೆ, ಹಿಂದೀಗೆ ಉತ್ತರಭಾರತದಲ್ಲಿ ಸ್ಥಾನಮಾನವಿದೆ ಎಂದಿರಲ್ಲ, ಯಾವ ಹಿಂದೀ ಅದು?  ಬ್ರಜಭಾಷೆಯೋ ಅವಧಿಯೋ ಮೈಥಿಲಿಯೋ ಕಡೀಬೋಲೋ ಹರಿಯಾಣವಿಯೋ ರಾಜಾಸ್ತಾನಿಯೋ ಭೋಜ್ಪುರಿಯೋ ಪಂಜಾಬಿಯೋ ಗುಜರಾಥಿಯೋ, ಅಥವಾ ಸಂಸ್ಕೃತದಿಂದ ಯಥೇಚ್ಛವಾಗಿ ಪದಗಳನ್ನು ಎರವಲು ತೆಗೆದುಕೊಂಡು 'ಶುದ್ಧ್ ಹಿಂದೀ'ಎಂದು ಮಾರಲ್ಪಡುತ್ತಿರುವ, ಎಲ್ಲೂ ಯಾರೂ ಉಪಯೋಗಿಸದ 'ರಾಜ್ಭಾಷಾ' ಹಿಂದಿಯೋ?  ಈ ಕೊನೆಯ ಹಿಂದೀ, ತಮ್ಮ ರಾಜಕೀಯಬೇಳೆ ಬೇಯಿಸಿಕೊಳ್ಳಲು ಉತ್ತರದ ಹಿಂದೀವಾಲಾಗಳು ಸಂವಿಧಾನಕರ್ತರ ಮೇಲೆ ಒತ್ತಡ ಹೇರಿ, ಸಂವಿಧಾನದ ಮುಖಾಂತರ ಹುಟ್ಟಿಹಾಕಿದ ಹಿಂದೀ ಎಂಬುದನ್ನು ತಿಳಿಯಿರಿ.  ಈ ಪ್ರಣಾಳಶಿಶುವಿಗೆ ಭದ್ರವಾದ ಬೇರೇ ಇಲ್ಲ.

ಅದಿರಲಿ, "ಇಂಗ್ಲಿಷ್ ಒಪ್ಪುವ ನಾವು ಹಿಂದೀ ಭಾಷೆಯನ್ನು ಏಕೆ ಒಪ್ಪಿಕೊಳ್ಳಬಾರದು?" ಎಂಬ ಮಾತನ್ನು ನೀವು ಕೇಳಿದಿರಲ್ಲ - ಈಚಿಗೆ ಈ ರೀತಿಯಲ್ಲಿ ಮಾತಾಡುತ್ತಾ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ಳುವ ಕನ್ನಡಿಗಮಂದಿ ಬಹಳವೇ ಹೆಚ್ಚಾಗಿದ್ದಾರೆ ಬಿಡಿ, ಆದರೆ ತಮ್ಮಿಂದ ಆ ಪ್ರಶ್ನೆ ಬಂತಲ್ಲ - ಒಂದು ಕ್ಷಣ ನೀವು ಕನ್ನಡದ ಧ್ವನಿಯೋ ಅಥವಾ ಕನ್ನಡಿಗರ ಕಿವಿಯಿರಿಯುವ ಹಿಂದಿಗರ ಧ್ವನಿಯೋ ಎಂದು ಸಂಶಯವುಂಟಾದದ್ದು ಸುಳ್ಳಲ್ಲ.  ಆದರೂ ಈ ಪ್ರಶ್ನೆ ಸ್ವತಃ ನಿಮ್ಮದಲ್ಲದಿರಬಹುದು, ಈಚೀಚಿಗೆ ಎದ್ದಿರುವ "ಇಂಗ್ಲಿಷ್ ಮಾತ್ರ ಏಕೆ ಬೇಕು, ಹಿಂದಿ ಏಕೆ ಬೇಡ" ಎಂಬ ಕೂಗಿಗೆ ನೀವೂ ಮರುಳಾಗಿರಬಹುದು.  ಮೊನ್ನಿನ ಸಂದರ್ಶನದಲ್ಲೂ ತಾವು ಅದನ್ನೇ ಸಮರ್ಥಿಸಿಕೊಂಡಿರಿ ಕೂಡ.  ಈ ಪ್ರಶ್ನೆ ಬೇರಾರಿಂದಲೋ ಅಲ್ಲ, ನಿಯೋಜಿತ ಸಮ್ಮೇಳನಾಧ್ಯಕ್ಷರಿಂದ ಬಂದಿರುವುದರಿಂದ ಅದಕ್ಕೊಂದು ಸಾರ್ವಜನಿಕತೆಯಿದೆ, ಅದನ್ನು ಉತ್ತರಿಸಬೇಕಾದ್ದು ಕನ್ನಡಿಗನಾಗಿ ನನ್ನ ಕರ್ತವ್ಯವೆಂದು ನಾನು ಭಾವಿಸುತ್ತೇನೆ, ಹೀಗೆ.

ಹಿಂದೀ ಏಕೆ ಒಪ್ಪಿಕೊಳ್ಳಬಾರದು?  ಒಪ್ಪಿಕೊಳ್ಳಬಾರದೆಂದು ನಾವಾರೂ ಹೇಳುತ್ತಿಲ್ಲ, ಹಿಂದೀ ಒಂದೇ ಏಕೆ, ತಮಿಳು ತೆಲಗು ಮಲಯಾಳ ಮರಾಠಿ ಗುಜರಾಥಿ ರಾಜಾಸ್ಥಾನಿ ಕಾಶ್ಮೀರಿ ಮೈಥಿಲಿ ಅವಧಿ ಉರ್ದೂ ಎಲ್ಲವನ್ನೂ ಒಪ್ಪೋಣ.  ಏಕಲ್ಲ, ಅವೆಲ್ಲವೂ ನಮ್ಮ ಸೋದರಭಾಷೆಗಳೇ.  ಒಳ್ಳೆಯದು ಕನ್ನಡದಲ್ಲಿರುವಂತೆ, ಇಂಗ್ಲಿಷಿನಲ್ಲಿರುವಂತೆ ಈ ಭಾಷೆಗಳಲ್ಲೂ ಇವೆ.  ನನಗೆ ನೂರು ಭಾಷೆ ಕಲಿಯಲು ಸಾಧ್ಯವಾದರೆ ನನಗೆ ಸಂತೋಷವೇ.  ನನ್ನನ್ನೂ ಸೇರಿ ಬಹಳಷ್ಟು ಜನ ಕನ್ನಡಿಗರಿಗೆ ಕನ್ನಡ, ಇಂಗ್ಲಿಷು, ಹಿಂದಿ, ತಮಿಳು, ತೆಲಗು ಈ ಐದು ಭಾಷೆಗಳು ಸಾಕಷ್ಟೇ ಚೆನ್ನಾಗಿ ಬರುತ್ತವೆ.  ಕೆಲವರಿಗೆ ಮಲಯಾಳ ಮರಾಠಿಗಳೂ ಸ್ವಲ್ಪ ದೇಶ ಸುತ್ತಿದವರಿಗೆ ಪಂಜಾಬಿ ಬೆಂಗಾಲಿಗಳೂ, ವಿದೇಶವನ್ನೂ ಸುತ್ತಿದವರಿಗೆ ರಶಿಯನ್, ಜರ್ಮನ್, ಫ್ರೆಂಚುಗಳೂ ಬರುವುದುಂಟು (ಅಂದ ಹಾಗೆ ನಮ್ಮ ವಿಶ್ವವಿದ್ಯಾಲಯಗಳಲ್ಲೂ ಫ್ರೆಂಚ್ ಮೊದಲಾದ ವಿದೇಶೀ ಭಾಷೆಗಳನ್ನು ಕಲಿಯುವ ಅವಕಾಶವಿದೆ, ಯಾರೂ ಇದನ್ನು 'ವಿರೋಧಿ'ಸಿ ಗಲಾಟೆ ಮಾಡಿದ್ದಿಲ್ಲ).  ಏಕೆಂದರೆ ಹೀಗೆ ಕಲಿತವರು ತಮ್ಮ ಸ್ವಂತ ಆಸಕ್ತಿಯಿಂದ, ಕೆಲವೊಮ್ಮೆ ಅಗತ್ಯಗಳಿಂದ ಕಲಿತವರೇ ಹೊರತು ಯಾರೂ ಅವನ್ನು ತಲೆಯ ಮೇಲೆ ಹೇರಿದ್ದಿಲ್ಲ.  ಆ ದೃಷ್ಟಿಯಿಂದ ಹಿಂದಿಯನ್ನು ಒಪ್ಪುವುದರಲ್ಲಿ ನಮಗೆ ಯಾವ ಅಡ್ಡಿಯೂ ಇಲ್ಲ.  ಆದರೆ ಇವಾವುದೂ ಹೇರಿಕೆಯೆನಿಸದ್ದು, ಹಿಂದೀ ಮಾತ್ರ ಹೇರಿಕೆಯೇಕಾಗುತ್ತದೆ?  ಏಕೆಂದರೆ ನಮ್ಮ ಶಿಕ್ಷಣದಲ್ಲಿ, ದಿನಬಳಕೆಯಲ್ಲಿ, ಆಡಳಿತದ ವ್ಯವಹಾರದಲ್ಲಿ, ಹಿಂದಿಗೆ/ಹಿಂದಿಯವರಿಗೆ ನೀಡುವ (ಇತರರಿಗೆ ನಿರಾಕರಿಸಲಾಗುವ) ವಿಶೇಷ ಸವಲತ್ತುಗಳಲ್ಲಿ ಕೇಂದ್ರಾಡಳಿತವೂ ಅದರ ಬಾಲವಾಗಿರುವ ರಾಜ್ಯಾಡಳಿತಗಳೂ ಹಿಂದಿಯನ್ನು ಗಿಡುಕಿ ಗಿಡುಕಿ ತುಂಬುತ್ತಿರುವುದಕ್ಕೆ, ಮತ್ತದರಿಂದ ನಮ್ಮ ಅನ್ನದ ಅವಕಾಶಗಳು ನಮ್ಮ ಕೈತಪ್ಪಿ ಹಿಂದಿಯವರ ಕೈಗೆ ಸುಲಭವಾಗಿ ಸೇರುತ್ತಿರುವುದಕ್ಕೆ, ಹಿಂದೀ ಹೇರಿಕೆಯೆನ್ನಿಸುವುದು.  ನಾವು ಒಪ್ಪಲಾರದ್ದು ಅದನ್ನು.  

ಭಾಷೆ ಕಲಿಸಿದರೆ ಅದು ಹೇರಿಕೆ ಹೇಗೆ ಎನ್ನುತ್ತೀರಾ?  ಅದು ಕೇವಲ ಒಂದು ಭಾಷೆಯನ್ನು ಕಲಿಯುವ ಅಥವಾ ಬಿಡುವ ವಿಷಯವಲ್ಲ ಸ್ವಾಮಿ.  ನಿಮಗಿದು ತಿಳಿಯದೆಂದು ನಾವು ನಂಬಲಾರೆವು, ಆದರೂ ಉದಾಹರಣೆ ಕೊಡುತ್ತೇನೆ.  ಯಾವುದೋ ಕೇಂದ್ರಸಂಸ್ಥೆಯ ಉದ್ಯೋಗಪರೀಕ್ಷೆಯಿದೆಯೆಂದುಕೊಳ್ಳಿ - ದೇಶದ ಎಲ್ಲರೂ ಭಾಗವಹಿಸಬಹುದಾದ್ದು.  ಎಲ್ಲರಿಗೂ ತೆರೆದ ಪರೀಕ್ಷೆ ಎಂದ ಮೇಲೆ ಅದರಲ್ಲಿ ಗೆಲ್ಲುವ ಅವಕಾಶ ಎಲ್ಲರಿಗೂ ಸಮಾನವಾಗಿರಬೇಕಷ್ಟೇ?  ಸಮಾನಾವಕಾಶ ಹೇಗೆ ಬರುತ್ತದೆ?  ಪರೀಕ್ಷೆಯನ್ನು ಎಲ್ಲರೂ ಅವರವರ ಭಾಷೆಯಲ್ಲಿ ಎದುರಿಸಲು ಅವಕಾಶ ಮಾಡಿಕೊಡುವುದರಿಂದ.  ಆಗ ಏನಾಗುತ್ತದೆ?  ಕೆಲಸ/ವಿಷಯ ಬಲ್ಲವನು ಪಾಸಾಗುತ್ತಾನೆ, ಬಾರದವನು ಫೈಲ್ ಆಗುತ್ತಾನೆ.  ಹೌದು ತಾನೆ?  ಅದು ಸಾಧ್ಯವಿಲ್ಲವೇ?  ಬೇಡ, ಪರೀಕ್ಷೆಯನ್ನು ಎಲ್ಲರೂ ಇಂಗ್ಲಿಷಿನಲ್ಲೇ ಬರೆಯಲಿ - ಏಕೆಂದರೆ ಇಂಗ್ಲಿಷ್ ಇಲ್ಲಿನ ಯಾವುದೋ ಒಂದು ಸಮುದಾಯದ ಭಾಷೆಯಲ್ಲ - ಅದು ಎಲ್ಲರಿಗೂ ಸಮಾನದೂರ, ಸಮಾನ ಹತ್ತಿರ.  ಇಂಗ್ಲಿಷ್ ಬಲ್ಲವರು ಬರೆದು ಪಾಸಾಗುತ್ತಾರೆ, ಇಂಗ್ಲಿಷ್ ಬರದವರು ಫೈಲ್ ಆಗುತ್ತಾರೆ (ಕೆಲಸ ಗೊತ್ತಿದ್ದೂ ಇಂಗ್ಲಿಷ್ ಬರದವನೂ ಫೈಲ್ ಆಗುತ್ತಾನೆ ಹೌದು, ಅದು ಅನ್ಯಾಯ - ಆದರೆ ಆ ಅನ್ಯಾಯವೂ ಎಲ್ಲ ಭಾಷಿಕರಿಗೂ ಸಮಾನವಾಗಿರುತ್ತದಲ್ಲ - ಅವನು ಕನ್ನಡಿಗನಿರಲಿ, ಹಿಂದಿಯವನಿರಲಿ, ತಮಿಳನಿರಲಿ, ಕಾಶ್ಮೀರಿಯಿರಲಿ). ಇಂಗ್ಲಿಷ್ ಇವರಾರ ಭಾಷೆಯೂ ಅಲ್ಲವಾದ್ದರಿಂದ ಯಾವುದೋ ಒಂದು ಭಾಷಾಸಮುದಾಯಕ್ಕೆ ಅದು ಹೆಚ್ಚುವರಿ ಅನುಕೂಲವನ್ನು ಒದಗಿಸುವುದಿಲ್ಲ. ಸರಿ, ಇದರಿಂದ ಇಂಗ್ಲಿಷ್ ಕಲಿಯದವರಿಗೆ ಅನ್ಯಾಯವಂತೂ ಆಗುತ್ತದಲ್ಲ ಎಂದರೆ, ಅದಕ್ಕೆ ಉಪಾಯವಿಲ್ಲ, ಏಕೆಂದರೆ ನ್ಯಾಯವಾಗಿ ಎಲ್ಲರೂ ಅವರವರ ಭಾಷೆಯಲ್ಲಿ ಬರೆಯುವ ಅವಕಾಶವನ್ನಂತೂ ನೀವು ಕೊಡಲಿಲ್ಲವಲ್ಲ (ಹಾಗಿದ್ದರೆ ಇಂಗ್ಲಿಷೇ ಯಾಕೆ, ಸಂಸ್ಕೃತ ಏಕಲ್ಲ, ಫ್ರೆಂಚ್ ಏಕಲ್ಲ ಇತ್ಯಾದಿ ವಿತಂಡವಾದಗಳೂ ಬಂದದ್ದಿದೆ, ಸದ್ಯಕ್ಕೆ ಅದು ಪಕ್ಕಕಿರಲಿ, ಇಂಗ್ಲಿಷ್ ಏಕೆ ಎನ್ನುವುದನ್ನು ಆಮೇಲೆ ಉತ್ತರಿಸೋಣ).  ಈಗ ಇಂಗ್ಲಿಷ್ ಬದಲು ನೀವು ಹಿಂದಿಯಲ್ಲಿ ಬರೆಯಲು ಅವಕಾಶ ಕೊಟ್ಟರೆ ಏನಾಗುತ್ತದೆ?  ಮೊದಲಿದ್ದಂತೆ ಕೆಲಸ/ವಿಷಯಜ್ಞಾನವೊಂದೇ ಪಾಸ್/ಫೈಲ್ ಆಗಲು ಮಾನದಂಡವಾಗಿ ಉಳಿಯುವುದಿಲ್ಲ.  ಕೆಲಸವೂ ಗೊತ್ತಿದ್ದು ಹಿಂದಿಯೂ ಗೊತ್ತಿದ್ದವನು ಪಾಸ್ ಆಗುತ್ತಾನೆ, ಕೆಲಸ ಗೊತ್ತಿದ್ದೂ ಹಿಂದಿ ಗೊತ್ತಿಲ್ಲದವನು ಫೈಲ್ ಆಗುತ್ತಾನೆ.  ಆದರೆ ಅನ್ಯಾಯವೆಂದರೆ, ಹಿಂದಿ ಗೊತ್ತಿಲ್ಲದ ಕನ್ನಡಿಗ ಕೆಲಸದೊಡನೆ ಹಿಂದಿಯನ್ನೂ ಕಲಿತು ಬರಬೇಕಾಗುತ್ತದೆ, ಅದೇ ಹಿಂದಿ ಮಾತೃಭಾಷೆಯಾಗಿರುವವ ಈ ಹೆಚ್ಚುವರಿ ಪ್ರಯತ್ನವಿಲ್ಲದೇ ಕೇವಲ ಕೆಲಸವನ್ನಷ್ಟೇ ಇನ್ನೂ ಚೆನ್ನಾಗಿ ಕಲಿತು ಮೊದಲಿನವನಿಗಿಂತ ಸುಲಭವಾಗಿ ಪಾಸಾಗುತ್ತಾನೆ.  ಇದು ಒಂದು ಭಾಷಾಸಮುದಾಯಕ್ಕೆ, ಉಳಿದವರಿಗಿಲ್ಲದ ಹೆಚ್ಚುವರಿ ಸೌಲಭ್ಯ ಕೊಟ್ಟಂತಾಯಿತಷ್ಟೇ? ಇದನ್ನೇ ನೀವು ದೇಶದಾದ್ಯಂತ ಮಾಡಿದಾಗ, ಎಲ್ಲೆಡೆಯೂ ಅವರೇ ವಿಜೃಂಭಿಸುತ್ತಾರೆ.  ಹಿಂದಿ ಬರದವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯಾಗುತ್ತದೆ.  ಈ ದೇಶ ನಮ್ಮೆಲ್ಲರದೂ ಎಂದ ಮೇಲೆ, ಯಾವುದೋ ಒಂದು ಭಾಷಾಸಮುದಾಯದವರ ಭಾಷೆ ಕಲಿತರಷ್ಟೇ ನಮಗೆ ಬದುಕು ಎನ್ನುವ ಪರಿಸ್ಥಿತಿ ಇರುವುದು ಯಾವ ಸೀಮೆ ನ್ಯಾಯ?  ಹಿಂದಿಯ ಬದಲು ಕನ್ನಡದಲ್ಲೇ ಬರೆಯುವ ಅವಕಾಶ ಕೊಡಿ, ಇಂಗ್ಲಿಷೂ ಇರಲಿ.  ಉಳಿದವರು ಇದಕ್ಕೆ ಒಪ್ಪುತ್ತಾರಾ?  ಬೇಡ, ಕನ್ನಡವನ್ನೇ ರಾಷ್ಟ್ರಭಾಷೆಯೆಂದು ಘೋಷಿಸಿ?  ಉಳಿದವರು ಒಪ್ಪುತ್ತಾರಾ?  ಇದಕ್ಕೆ ಒಪ್ಪಲಿಲ್ಲವೆಂದ ಮೇಲೆ ಹಿಂದೀ ಏಕೆ?

ಇನ್ನೊಂದು ಉದಾಹರಣೆ ಕೊಡುತ್ತೇನೆ.  ಬ್ಯಾಂಕು-ಪೋಸ್ಟಾಫೀಸು.  ಇವು ಕೇಂದ್ರಸರ್ಕಾರದ ಆಡಳಿತಕ್ಕೆ ಅಥವಾ ಕೇಂದ್ರಸಂಸ್ಥೆಯ ಮೇಲ್ವಿಚಾರಣೆಗೆ ಒಳಪಟ್ಟುವು.  ಆಡಳಿತ ನಿಮ್ಮದಿರಬಹುದು, ಆದರೆ ಅದನ್ನು ಬಳಸುವವರು ನಾವಷ್ಟೇ? ಈ ನೆಲದ ಜನ.  ಎಂದ ಮೇಲೆ ನಮ್ಮ ಜೊತೆ ವ್ಯವಹಾರ ಮಾಡಲು ನೀವು ಯಾವ ಭಾಷೆ ಬಳಸಬೇಕು?  ನಮ್ಮ ಭಾಷೆಯನ್ನೋ ನಿಮ್ಮ ಭಾಷೆಯನ್ನೋ?  ಸಂಪರ್ಕಭಾಷೆ ಇಂಗ್ಲಿಷಿದೆ (ಇಂಗ್ಲಿಷ್ ಏಕೆ ಎನ್ನುವ ಪ್ರಶ್ನೆಯನ್ನು ಸ್ವಲ್ಪ ತಡೆದಿಟ್ಟುಕೊಳ್ಳಿ ಸದ್ಯಕ್ಕೆ, ಆಮೇಲೆ ಅದನ್ನು ನೋಡುವಾ), ಕೇಂದ್ರದ ಭಾಷೆ ಹಿಂದಿ ಇದೆ (ಅದು ಹಿಂದಿ ಏಕಾಗಬೇಕೋ, ಇರಲಿ ಸದ್ಯಕ್ಕೆ ಅದನ್ನೂ ಒಪ್ಪುವಾ), ಈ ನೆಲದ ವ್ಯವಹಾರದ ಭಾಷೆ ಕನ್ನಡ ಇದೆ.  ಕಾಲದಿಂದಲೂ ಈ ಸಂಸ್ಥೆಗಳ ಎಲ್ಲಾ ಫಾರ್ಮುಗಳಲ್ಲಿ ಈ ಮೂರೂ ಭಾಷೆಗಳೂ ಇರುತ್ತಿದ್ದುವು.  ಆಮೇಲೆ ನೋಡಿದರೆ ಇದ್ದಕ್ಕಿದ್ದಂತೆ ಕನ್ನಡವೇ ಮಾಯ!  ಕನ್ನಡ ಬಿಟ್ಟು ಬೇರೇನೂ ಬಾರದ ಹಳ್ಳಿಯ ಅರ್ಜಿ ತುಂಬ ಬೇಕಾದರೆ ಏನು ಮಾಡಬೇಕು?  ನಿಮ್ಮ ಹಿಂದೀ ಹುಸಿ ರಾಷ್ಟ್ರೀಯತೆಗೆ ಬಲಿಯಾಗಬೇಕೇ?  ಅಥವಾ ಯಾವುದೋ ಮೂಲೆ ಕೊಂಪೆಯಲ್ಲಿದ್ದು, ಜೀವನದಲ್ಲಿ ಹೊರಗೆಲ್ಲೂ ಹೋಗುವ ಅಗತ್ಯವೇ ಇಲ್ಲದಿದ್ದರೂ ನೀವು ಕೊಡುವ ಬ್ಯಾಂಕ್ 'ಸೇವೆ'ಯನ್ನು ಸ್ವೀಕರಿಸುವುದಕ್ಕೋಸ್ಕರ ನಿಮ್ಮ ಭಾಷೆ ಕಲಿಯಬೇಕೇ?  ಬೇಡ, ನಮಗೆ ನಿಮ್ಮ ಬ್ಯಾಂಕೇ ಬೇಡ, ಅದನ್ನು ರಾಜ್ಯಾಡಳಿತಕ್ಕೆ ಕೊಡಿ, ಪೋಸ್ಟಾಫೀಸನ್ನು ರಾಜ್ಯಾಡಳಿತಕ್ಕೆ ಕೊಡಿ, ರಾಜ್ಯ ನಮ್ಮೊಡನೆ ಕನ್ನಡದಲ್ಲೇ ವ್ಯವಹರಿಸಲಿ, ಆದೀತೇ?  ಕನ್ನಡದ ಪ್ರಜೆಯೊಬ್ಬನಿಗೆ ಹಿಂದಿ ಬರುತ್ತದೆಂದು, ಹಿಂದಿ ಬರಲೇಬೇಕೆಂದು ನೀವು ನಿರೀಕ್ಷಿಸುವುದಾದರೂ ಯಾವ ಆಧಾರದ ಮೇಲೆ?  ಇನ್ನು ಈ ಬ್ಯಾಂಕಿಂಗ್ ಪರೀಕ್ಷೆಗಳಲ್ಲೂ ಮೇಲಿನದೇ ಗೋಳು.  ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಉತ್ತರಿಸಬಹುದು, ನೋಡಿದರೆ ಎಲ್ಲೆಲ್ಲೂ ಹಿಂದಿಯವರೇ! ಇವರಂತೂ ನಾವು ಇಂಗ್ಲಿಷಿನಲ್ಲಿ ಮಾತಾಡಿದರೂ ಮುಖಮುಖ ನೋಡುತ್ತಾರೆ, ಕನ್ನಡದಲ್ಲಿ ಮಾತಾಡಿದರೆ ನಾಯಿಯಂತೆ ನಡೆಸಿಕೊಳ್ಳುತ್ತಾರೆ.  ಇದಂತೂ ನಾವು ದಿನಬೆಳಗಾದರೆ ನೋಡುತ್ತಿರುವ ವಾಸ್ತವವೇ ಆಗಿಬಿಟ್ಟಿವೆ ಈಗ.  ಹಿಂದಿ ಏಕೆ ಒಪ್ಪಬಾರದು ಎನ್ನುವುದಕ್ಕೆ ಕಾರಣ ತಿಳಿಯಿತೇ ಈಗಾದರೂ?  ಮೊದಲಾದರೆ, ಸ್ವಲ್ಪ ಇಂಗ್ಲಿಷಾದರೂ ಗೊತ್ತಿದ್ದರೆ ಹೇಗೋ ಎಲ್ಲಾದರೂ ಬಚಾಯಿಸಿಕೊಳ್ಳಬಹುದೆನ್ನುವ ಸ್ಥಿತಿಯಿತ್ತು - ಮತ್ತು ಇದು ಭಾರತದಾದ್ಯಂತ ಎಲ್ಲ ಭಾಷಿಕರಿಗೂ ಒಂದೇ ಆದ ಸ್ಥಿತಿಯಾಗಿತ್ತು.  ಆದರೆ ನಿಮ್ಮ ಹಿಂದೀ ಪ್ರಭುವಿಗೆ, ಈ ಇಂಗ್ಲಿಷನ್ನಾದರೂ ಏಕೆ ಕಲಿಯಬೇಕು ಎನ್ನುವ ಸೋಮಾರಿತನ.  ಒಂದು ಹೆಚ್ಚುವರಿ ಭಾಷೆಯನ್ನೂ ಕಲಿಯದೇ ಕೇಂದ್ರಸರ್ಕಾರಗಳ ಉದ್ಯೋಗ ತನ್ನ ತಟ್ಟೆಗೆ ಬೀಳಬೇಕೆಂಬ ಧೋರಣೆ.  ಅವನಿಗಾದರೆ ಕೆಲಸ ಬಂದರೆ ಸಾಕು, ಇನ್ನೊಂದೇ ಒಂದು ಹೆಚ್ಚುವರಿ ಪ್ರಯತ್ನವಿಲ್ಲದೇ ಕೆಲಸವು ಅವನ ಬುಟ್ಟಿಗೆ ಬೀಳುವುದು.  ಆದರೆ ಇದೇ ಕೆಲಸಕ್ಕೆ ಕನ್ನಡಿಗರು ಪ್ರಯತ್ನಿಸಬೇಕಾದರೆ ಅವರು ಹಿಂದಿಯನ್ನಾದರೂ ಕಲಿಯಲೇ ಬೇಕು, ಹಿಂದಿಯೇ ಮಾತೃಭಾಷೆಯಾಗಿರುವವರೊಡನೆ (ಜೊತೆಗೆ ಹಿಂದಿಗರ ಸ್ವಜನಪಕ್ಷಪಾತದೊಡನೆ) ಪೈಪೋಟಿ ಮಾಡಬೇಕು!  ಈಗಂತೂ ಖಾಸಗೀ ಬಹುರಾಷ್ಟ್ರೀಯ ಕಂಪನಿಗಳಲ್ಲೂ ಹಿಂದಿಗರದ್ದೇ ಹಾವಳಿ, ಸ್ವಜನಪಕ್ಷಪಾತ.  ಎಲ್ಲರೂ ಬೆಂಗಳೂರಿಗೆ ದಾಳಿಯಿಡುವರೇ (ನಾನು ಅವರನ್ನು ಟೀಕಿಸುತ್ತಿಲ್ಲ, ಹಾಗಾಗಲು ಅವಕಾಶ ಮಾಡಿಕೊಟ್ತ ವ್ಯವಸ್ಥೆಯನ್ನು ಟೀಕಿಸುತ್ತಿದ್ದೇನೆ), ಕಂಪನಿಗಳಲ್ಲಿ, ಅಂಗಡಿಯಲ್ಲಿ, ಮಾಲ್ ಗಳಲ್ಲಿ, ಅಪಾರ್ಟ್ಮೆಂಟುಗಳಲ್ಲಿ ಎಲ್ಲ ಕಡೆಯೂ ಅವರೇ.  ಅವರ ಸೇವೆಗಾಗಿ ಅವರ ಭಾಷೆಯನ್ನೇ ಮಾತಾಡುವ ವಾಚ್ಮನ್ನುಗಳು, ಡೆಲಿವರಿ ಬಾಯ್ ಗಳು ಎಲ್ಲರೂ ಉತ್ತರದಿಂದಲೇ ಅಮದಾಗಬೇಕು.  ಹಿಂದೀ ಕಲಿಕೆಯೆನ್ನುವುದು ಕೇವಲ ಒಂದು ಭಾಷೆಯ ಕಲಿಕೆಗೆ ಸಂಬಂಧಿಸಿದ್ದಲ್ಲ ಎಂಬುದು ಅರ್ಥವಾಯಿತೇ?  ಬೇಡ, ನಾವೂ ಯಾವ ಭಾಷೆಯನ್ನೂ ಕಲಿಯುವುದಿಲ್ಲ, ಕೆಲಸ ಬಂದರಾಯಿತೋ ಇಲ್ಲವೋ?  ನಮಗೂ ಕನ್ನಡದಲ್ಲೇ ಪರೀಕ್ಷೆ ಬರೆಸಿ ಬ್ಯಾಂಕ್ ಕೆಲಸ ಕೊಡಿ.  ಆಗುತ್ತದೆಯೋ?  ಆಗುವುದಿಲ್ಲವೆಂದ ಮೇಲೆ ಹಿಂದಿಯ ಪುಂಗಿ ಬಂದ್ ಆಗಲಿ.

ಇನ್ನೊಂದು ಮಾತನ್ನು ಸೂಚಿಸಿ ಮುಂದಿನ ಅಂಶಕ್ಕೆ ಹೋಗುತ್ತೇನೆ.  ತಾವು ಫೆಬ್ರವರಿ 26ರಂದು ಕೂರುತ್ತೀರಲ್ಲ, ಅದೇ ಪೀಠವನ್ನು ಈಗ್ಗೆ ಅರವತ್ನಾಲ್ಕು ವರ್ಷಗಳ ಹಿಂದೆ ಮಹನೀಯರೊಬ್ಬರು ಅಲಂಕರಿಸಿದ್ದರು - "ಕನ್ನಡದ ವಿಷಯದಲ್ಲಿ ನಾನು ಟ್ಯಾಂಕಿನಂತೆ ಮುನ್ನುಗ್ಗುತ್ತೇನೆ; ನೀವು ದಾರಿ ಬಿಟ್ಟುಕೊಟ್ಟಿರೋ ಸರಿ, ಇಲ್ಲವೋ ಅಪ್ಪಚ್ಚಿಯಾಗುತ್ತೀರಿ!" ಎಂದು ಗುಡುಗಿದ್ದ ಚೇತನವದು.  ಅದೇನು ಖಾಲಿ ಗುಡುಗಾಗಿರಲಿಲ್ಲ ಬಿಡಿ.  ಮೈಸೂರು ವಿಶ್ವವಿದ್ಯಾಲಯದ ತಮ್ಮ ಆಡಳಿತಾವಧಿಯಲ್ಲಿ ಇನ್ನಿಲ್ಲದಂತೆ ಕನ್ನಡದ ಕೆಲಸವನ್ನು ಮಾಡಿದರು, ಕನ್ನಡವೆಂಬ ಹೆಸರಿಗೆ ತಾವೇ ಬದಲೀ ಹೆಸರಾದರು.  ಯಾರೆನ್ನುವಿರಾ?  ತಮಗೆ ಅಪರಿಚಿತರಿರಲಾರರು - ಅವರೇ ಕುವೆಂಪು, ಅವರೂ ಕವಿಗಳೇ, ರಾಷ್ಟ್ರಕವಿ.  ಅವರು ಹಿಂದಿ ಹೇರಿಕೆಯ ಬಗೆಗೆ ಏನು ಹೇಳಿದ್ದಾರೆ ಗೊತ್ತೇ?  "ಇಂಗ್ಲಿಷಿನ ಸ್ಥಾನದಲ್ಲಿ ಹಿಂದಿಯನ್ನು ತಂದು ಕೂರಿಸಬೇಕೆಂಬುದು ಹಿಂದಿವಾದಿಗಳ ಸಂಚು.  ಇದನ್ನು ಕನ್ನಡಿಗರು ಪ್ರತಿಭಟಿಸಿ ವಿಫಲಗೊಳಿಸಬೇಕು... ಈ ವಿಷಯದಲ್ಲಿ ಹೆಜ್ಜೆಹೆಜ್ಜೆಗೂ ಎಚ್ಚರ ಬೇಕು; ಒಂದು ಕ್ಷಣ ಕಣ್ಣು ಮುಚ್ಚಿಕೊಳ್ಳುವ ತಪ್ಪಿಗೆ ಯುಗಯುಗಗಳ ಅಂಧಕಾರಫಲವನ್ನು ಅನುಭವಿಸಬೇಕಾದೀತು.  ಐವತ್ತು ಕೋಟಿ ಭಾರತೀಯರೂ ಹಿಂದಿಯನ್ನು ಕಲಿಯಬೇಕೆನ್ನುವ ವಾದದಲ್ಲಿ ಗತಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಅರ್ಥವೂ ಇಲ್ಲ"  ಅವತ್ತೇ ಆ ಕವಿ ಮುಂಗಾಣಿಸಿದ ಅಪಾಯ ಇವತ್ತು ಸಾಕ್ಷಾತ್ ಮೈವೆತ್ತು ನಿಂತಿದ್ದರೂ ಈ ಕವಿ ಅದನ್ನು ಕಾಣುತ್ತಿಲ್ಲವೆಂದರೆ, ರವಿ ಕಾಣದ್ದನ್ನು ಕವಿ ಕಂಡನೆಂಬ ಮಾತನ್ನು ನಂಬುವುದಾದರೂ ಹೇಗೆ ಸ್ವಾಮಿ?

ಈಗ ಬಹುಚರ್ಚಿತ ಪ್ರಶ್ನೆ, ಗಲಭೆಯೆಬ್ಬಿಸಿ ಆ ಗಲಭೆಯ ನಡುವೆ ಹಿಂದಿಯನ್ನು ತೂರಿಸುವುದಕ್ಕಾಗಿಯೇ ಎಬ್ಬಿಸಿದ ಪ್ರಶ್ನೆ "ಗುಲಾಮಗಿರಿಯ ಸಂಕೇತವಾದ ಇಂಗ್ಲಿಷ್ ಮಾತ್ರ ಬೇಕು ನಮ್ಮದೇ ಭಾಷೆಯಾದ ಹಿಂದಿ ಏಕೆ ಬೇಡ".  ನನಗೇನೋ ಇಂಗ್ಲಿಷ್ ಬೇಡ ಸ್ವಾಮಿ, ನನ್ನ ಮಗನನ್ನು ಒಂದು ಹಂತದವರೆಗೂ ಕನ್ನಡಮಾಧ್ಯಮದಲ್ಲೇ ಓದಿಸಿದ್ದೇನೆ (ಪಠ್ಯಪುಸ್ತಕದಲ್ಲಿ ಯಾರಿಗೂ ಅರ್ಥವಾಗದ, ಇತ್ತ ಕನ್ನಡವೂ ಅಲ್ಲದ, ಅತ್ತ ಸಂಸ್ಕೃತವೂ ಅಲ್ಲದ, ಇತ್ತ ಇಂಗ್ಲಿಷೂ ಅಲ್ಲದ ದರಿದ್ರಭಾಷೆಯಿದ್ದಾಗ್ಯೂ).  ಆದ್ದರಿಂದ ತಾವೊಂದು ಸವಾಲನ್ನು ಸ್ವೀಕರಿಸಿ.  ರಾಜ್ಯದ ಇಂಗ್ಲಿಷ್ ಶಾಲೆಗಳನ್ನೆಲ್ಲ ಮುಚ್ಚಿಸಿಬಿಡಿ.  ಇಂಗ್ಲಿಷ್ ಮಾಧ್ಯಮ ಬೇಡ.  ಅಷ್ಟೇಕೆ, ಪಠ್ಯಕ್ರಮದಿಂದ ಇಂಗ್ಲಿಷ್ ಭಾಷೆಯನ್ನೇ ಕಿತ್ತೊಗೆದುಬಿಡಿ - ಆದರೆ ನಾಲ್ಕೇ ಶರತ್ತು: 

  1. ರಾಜ್ಯದ ಎಲ್ಲ ಪಠ್ಯಪುಸ್ತಕಗಳನ್ನೂ ಪರಿಶೋಧಿಸಿ, ಕೊನೆಯಪಕ್ಷ ಈಗ್ಗೆ ನಲವತ್ತು ವರ್ಷಗಳ ಹಿಂದೆ ಎಷ್ಟು ಶುದ್ಧವಿತ್ತೋ ಅಷ್ಟೇ ಶುದ್ಧ ಭಾಷೆಯಲ್ಲಿ, ಮಕ್ಕಳಿಗೆ ಸರಳವಾಗಿ ಅರ್ಥವಾಗುವಂತೆ ಪಠ್ಯಗಳನ್ನು ಬರೆಸಬೇಕು.  
  2. ಹದಿನೈದು ವರ್ಷದ ಸಂಪೂರ್ಣ ಕನ್ನಡಮಾಧ್ಯಮದ ವಿದ್ಯಾಭ್ಯಾಸವಾದ ಮೇಲೆ ಅವರು ಕೆಲಸಕ್ಕೆ ಸೇರಬೇಕೆಂದರೆ ಅವರ ವಿದ್ಯಾರ್ಹತೆಗೆ ತಕ್ಕ ಕೆಲಸದ ಖಾತ್ರಿ ನೀವು ನೀಡಬೇಕು - ಸರ್ಕಾರೀ ಸಂಸ್ಥೆಯಲ್ಲಾಗಲಿ ಖಾಸಗಿಯಲ್ಲಾಗಲಿ (ಕನ್ನಡದಲ್ಲಿ ಓದಿದವರೆಂಬ ರಿಯಾಯಿತಿಯೇನೂ ಬೇಡ - ಈಗಿನಂತೆಯೇ ಅವರ ಯೋಗ್ಯತೆ ನೋಡಿಯೇ ಕೆಲಸ ಕೊಡಲಿ (ಸರ್ಕಾರದ ಕೆಲಸಗಳು ಯೋಗ್ಯತೆಯ ಮೇಲೆ ಸಿಗುವುದು ನಿಂತು ಯಾವುದೋ ಕಾಲವಾಯಿತು, ಅದಿರಲಿ).  ಆದರೆ ಕನ್ನಡದಲ್ಲಿ ಓದಿದರೆಂಬ ಕಾರಣಕ್ಕೆ ಕೆಲಸ ಸಿಗದಿದ್ದರೆ ಮಾತ್ರ ಅದರ ಹೊಣೆ ನಿಮ್ಮದು.
  3. ಹದಿನೈದು ವರ್ಷದ ಸಂಪೂರ್ಣ ಕನ್ನಡಮಾಧ್ಯಮದ ವಿದ್ಯಾಭ್ಯಾಸವಾದ ಮೇಲೆ ಅವರು ಓದು ಮುಂದುವರೆಸಬೇಕೆಂದರೆ ಉನ್ನತವಿದ್ಯಾಭ್ಯಾಸಕ್ಕೆ ರಾಷ್ಟ್ರೀಯ/ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ನೀವು ಪ್ರವೇಶ ಕೊಡಿಸಬೇಕು.  ಕನ್ನಡದಲ್ಲಿ ಓದಿದ ಮಕ್ಕಳೆಂಬ ರಿಯಾಯಿತಿಯೇನು ಬೇಡ - ಈಗ ಮಾಡುವಂತೆಯೇ, ಅವರ ಅಂಕ ಯೋಗ್ಯತೆ ನೋಡಿಯೇ ಪ್ರವೇಶ ಕೊಡಲಿ. ಆದರೆ ಕನ್ನಡದಲ್ಲಿ ಓದಿದರೆಂಬ ಕಾರಣಕ್ಕೆ ಪ್ರವೇಶ ಸಿಗದಿದ್ದರೆ ಮಾತ್ರ ಅದರ ಹೊಣೆ ನಿಮ್ಮದು.  
  4. ಬರೆದುಕೊಡುತ್ತೇನೆ, ಅಲ್ಲಿ ಉನ್ನತಶಿಕ್ಷಣದ ಭಾಷೆ ಇಂಗ್ಲಿಷೇ ಇರುತ್ತದೆ (ನಿಮ್ಮ ಹಿಂದಿಯೂ ಅಲ್ಲ).  ಆಗ ನಮ್ಮ ಮಕ್ಕಳು ಓದಿದ ಈ ಭಾಷೆಯಿಂದ ಆ ಭಾಷೆಗೆ ದಾಟಿಕೊಳ್ಳುವುದಕ್ಕೆ ಸಕಲ ಸಹಾಯವನ್ನೂ ನೀವು ಒದಗಿಸಿ ಕೊಡಬೇಕು.  ಕನ್ನಡದಲ್ಲಿ ಓದಿದರೆಂಬ ಕಾರಣಕ್ಕೆ ಅವರಿಗೆ ಯಾವ ತೊಂದರೆಯೂ ಆಗಬಾರದು.

ಇದು ಸಾಧ್ಯವಿಲ್ಲವೇ?  ಹಾಗಿದ್ದರೆ ಇಂಗ್ಲಿಷ್ ಗುಮ್ಮ ತೋರಿಸುವುದನ್ನು ನಿಲ್ಲಿಸಿ, ಜನ ಇಂಗ್ಲಿಷ್ ಶಾಲೆಗಳಿಗೆ ಏಕೆ ಹೋಗುತ್ತಾರೆಂಬುದನ್ನು ಅರ್ಥ ಮಾಡಿಕೊಳ್ಳಿ, ಅದು ಗುಮ್ಮನೆಂದು ಗೊತ್ತಿದ್ದೂ ಅನಿವಾರ್ಯವಾಗಿ ಅದರ ಜೊತೆ ಬದುಕುತ್ತಿದ್ದೇವೆ, ಹಿಂದಿಯೊಡನೆ ಆ ಬಾಳಾಟದ ಅಗತ್ಯ ನಮಗಿಲ್ಲ.  ಅಥವಾ ಬೇಡ, ಇಂಗ್ಲಿಷಿನ ಜಾಗೆಯಲ್ಲಿ ಹಿಂದಿಯೇ ಬಂದು ಕೂರಲಿ, ಇಂಗ್ಲಿಷ್ ಶಾಲೆಗಳನ್ನೆಲ್ಲ ಮುಚ್ಚಿಸಿ ಹಿಂದೀ ಶಾಲೆಗಳನ್ನೇ ತೆರೆಯಿರಿ (ಮೇಲ್ಕಂಡ ನಾಲ್ಕೂ ಶರತ್ತುಗಳನ್ನೂ ಪೂರೈಸುವುದಾದರೆ).  ಕುವೆಂಪು ಇಂಗ್ಲಿಷನ್ನು ಕನ್ನಡದ ಮಕ್ಕಳ ಪಾಲಿನ ಪೂತನಿಯೆಂದು ಕರೆದರು.  ಇರಲಿ, ನಾವು ಉಣಬೇಕಾದ್ದು ಪೂತನಿಯ ಮೊಲೆವಾಲನ್ನೇ ಎಂದು ಖಾತ್ರಿಯಿದ್ದ ಮೇಲೆ ನಮಗೆ ಇಂಗ್ಲಿಷ್ ಪೂತನಿಯ ಹಾಲಾದರೇನು ಹಿಂದೀ ಪೂತನಿಯ ಹಾಲಾದರೇನು?  ಹೇಳಿ, ಇಂಗ್ಲಿಷ್ ಕೊಡುವುದಷ್ಟನ್ನೂ ಹಿಂದಿಯಿಂದ ಕೊಡಿಸುವಿರಾ?  ಸತ್ಯವಾದ ಮಾತು ಏನೆಂದು ಗೊತ್ತೇ?  ಇಂಗ್ಲಿಷಿನ ಪೂತನಿ ವಿಷದ ಹಾಲೂಡಿ ಕೊಲ್ಲುತ್ತಾಳೆ.  ಆದರೆ ಈಕೆಯಿದ್ದಾಳಲ್ಲ, ಅವಳ ಬಳಿ ಊಡಲು ಹಾಲೇ ಇಲ್ಲ, ಅಸಲಿಗೆ ಮೊಲೆಯೇ ಇಲ್ಲ.  ಬದಲಿಗೆ ಮಕ್ಕಳನ್ನು ಹರಿದು ತಿನ್ನುವ ಬಾಯಷ್ಟೇ ಇರುವುದು. ಈಕೆಯನ್ನು ತಾಟಕಿಯೆನ್ನುವುದೇ ಸರಿಯೇನೋ.  ಇರಲಿ, ನಾನು ಹಾಗೆನ್ನಲಾರೆ, ಏಕೆಂದರೆ ನನಗೆ ಇಂಗ್ಲಿಷಿನ ಬಗೆಗಾಗಲೀ ಹಿಂದೀ ಬಗೆಗಾಗಲೀ ದ್ವೇಷವಿಲ್ಲ.  ಅದನ್ನು ಮುಂದೊತ್ತಿ ಬೇಳೆ ಬೇಯಿಸಿಕೊಳ್ಳುವವರು ಮಾಡುವ ಉಪದ್ವ್ಯಾಪಗಳಿಗೆ ಭಾಷೆಯನ್ನೇಕೆ ದೂರುವುದು.  ಅಲಂಕಾರದ ಮಾತು ಬೇಡ, ನೇರವಾದ ಮಾತಿನಲ್ಲಿ ಹೇಳುತ್ತೇನೆ.  ಜನ ಉತ್ತಮ ಉದ್ಯೋಗಾವಕಾಶಗಳಿಗಾಗಿ ಇಂಗ್ಲಿಷ್ ಕಲಿಯುತ್ತಾರೆಯೇ ಹೊರತು ಯಾವುದೋ ಹೇರಿಕೆಯಿಂದಲ್ಲ (ಕನ್ನಡಕ್ಕೆ ಸದ್ಯದಲ್ಲಿ ಆ ಶಕ್ತಿಯಿಲ್ಲ ಎನ್ನುವುದೇ ನಮ್ಮ ಅಳಲಾಗಿದೆ - ಅದು ಕನ್ನಡದ ನಿಶ್ಶಕ್ತಿಯಲ್ಲ, ಕನ್ನಡಿಗರ ಅಸಹಾಯಕತೆ ಸದ್ಯಕ್ಕೆ), ಆದರೆ ಏನು ಕಂಡು ಜನ ಹಿಂದೀ ಕಲಿಯಲು ಹೋಗಬೇಕು?  ಬದಲಿಗೆ ಹಿಂದೀ ಮಂದಿಯೇ ನಮ್ಮಲ್ಲಿಗೆ ಬಂದು ನಮ್ಮ ಉದ್ಯೋಗಾವಕಾಶಗಳನ್ನು ಕಬಳಿಸುತ್ತಿದ್ದಾರೆ!  ಆ ಅವಕಾಶಗಳನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಲು ನಾವು ಹಿಂದೀ ಕಲಿತು ಅವರೊಡನೆ ಪೈಪೋಟಿ ಮಾಡಬೇಕೇನು? ಕಲಿಯುವುದಾದರೆ, ನಮ್ಮೊಡನೆ ಬದುಕಿ ಬಾಳಲು ಅವರು ಕನ್ನಡ ಕಲಿಯಬೇಕು.  ಅವರ "ಭಯ್ಯಾ, ಏಕ್ ಮಸಾಲಾ ಡೋಸಾ ದೇನಾ, ಏಕ್ ಈಡ್ಲೀ ಔರ್ ವಡಾ ದೇನಾ"ಗಳನ್ನು ಅರಿತು ಅವರ ಸೇವೆ ಮಾಡುವುದಕ್ಕೋಸ್ಕರ ನಾವೇಕೆ ಹಿಂದೀ ಕಲಿಯಬೇಕು?

ಈಗ ಇಂಗ್ಲಿಷ್ ಅಷ್ಟೊಂದು ಪ್ರತಿರೋಧವಿಲ್ಲದೇ ಇಲ್ಲೇಕೆ ನೆಲೆಯೂರಿತು, ಹಿಂದಿಗೇಕೆ ಪ್ರತಿರೋಧ ಎಂಬುದನ್ನಷ್ಟು ವಿವರಿಸುತ್ತೇನೆ.  ಇಂಗ್ಲಿಷರ ಬರುವಿಕೆಗೆ ಮುಂದೆ ನಾವು ನಮ್ಮಷ್ಟಕ್ಕೆ ನಮ್ಮ ಕಸುಬು ಮಾಡಿಕೊಂಡಿದ್ದೆವು, ಹೌದಲ್ಲೋ?  ಆಮೇಲೆ ಇಂಗ್ಲಿಷರು ಬಂದರು, ನಿಧಾನಕ್ಕೆ ನೆಲೆಯೂರಿದರು.  ಬಂದವರೇನು ಹಿಂದಿಯವರಂತೆ "ರಾಷ್ಟ್ರೀಯತೆ"ಯ ಸೋಗಿನಲ್ಲಿ ಕನ್ನಡವನ್ನು ಬೀಳುಗಳೆಯುವ ಅವಿವೇಕ ಮಾಡಲಿಲ್ಲ.  ಅವರ ಉದ್ದೇಶ ಎರಡು - ಒಂದು ಇಲ್ಲಿ ತಳವೂರಿ ಆಡಳಿತ ನಡೆಸುವುದು, ಇನ್ನೊಂದು, ಕ್ರೈಸ್ತಧರ್ಮವನ್ನು ಹರಡುವುದು.  ಈ ಕೆಲಸ ಸುಸೂತ್ರವಾಗಿ ಆಗಬೇಕೆಂದರೆ ಇಲ್ಲಿಯ ಭಾಷೆ ಕಲಿಯುವುದರ ಅಗತ್ಯ ಮನಗಂಡರು, ದೇಶಭಾಷೆಗಳನ್ನು ಕಲಿತರು.  ಅನೇಕ ಆಂಗ್ಲಮಹನೀಯರು ದೇಶೀಯ ನುಡಿಗಳಿಗೆ ಸಲ್ಲಿಸಿದ ಕೊಡುಗೆ ಅಪಾರ (ಅದರಿಂದ ಅವರು ಮಾಡಿದ ಹಾನಿಯೂ ಅಪಾರ, ಇರಲಿ, ಅದಕ್ಕೇ ಕುವೆಂಪು ಇಂಗ್ಲಿಷನ್ನು ನಮ್ಮ ಪಾಲಿನ ಪೂತನಿ ಎಂದದ್ದು).  ಇದೊಂದು ಹಂತ.  ತಮ್ಮ ಆಡಳಿತ ವ್ಯಾಪಾರ ವಹಿವಾಟು ನಡೆಸಬೇಕಾದರೆ ಅವರಿಗೆ ನಿಷ್ಠೆಯಿಂದಿದ್ದು ಅವರೊಡನೆ ಅವರದೇ ಭಾಷೆಯಲ್ಲಿ ಸಂವಹನ ನಡೆಸುವ, ಅವರ ಲೆಕ್ಕ ವ್ಯವಹಾರ ಆಡಳಿತವನ್ನು ನೋಡಿಕೊಳ್ಳುವ ಕೆಲಸಗಾರರ ಸೈನ್ಯ ಅವರಿಗೆ ಅಗತ್ಯವಿತ್ತು (ಹಾಗೆಯೇ ಜನರ ತಲೆ ತಿರುಗಿಸಿ, ಇಲ್ಲಿನದೆಲ್ಲ ಕೀಳು ಎಂಬ ಭಾವನೆಯನ್ನು ಬಿತ್ತಿ, ಮತಾಂತರ ಮಾಡುವ ಅಗತ್ಯ ಕೂಡ).  ಅದಕ್ಕಾಗಿ ಅವರು ಇಂಗ್ಲಿಷ್ ಶಾಲೆಗಳನ್ನು ತೆರೆದರು, ಇಂಗ್ಲಿಷ್ ಕಲಿಸಿ ತಮಗೆ ಬೇಕಾದ ಕಾರಕೂನರ ಪಡೆಯನ್ನು ತಯಾರಿಸಿಕೊಳ್ಳತೊಡಗಿದರು, ಅವರು ಕೊಡುವುದು ಒಳ್ಳೆಯ 'ಕೆಲಸ' ಎಂದು ಪರಿಗಣಿತವಾಯಿತು, ಒಳ್ಳೆಯ ಕೆಲಸ, ಕೈತುಂಬಾ ಸಂಬಳ.  ಜನ ತಾವಾಗೇ ದೇಸೀ ಕಸುಬುಗಳನ್ನು ಬಿಟ್ಟು ಕೆಲಸ-ಹಣ ಸಿಗುವೆಡೆಗೆ ದೌಡಾಯಿಸತೊಡಗಿದರು.  ಹೀಗೆ ಸರ್ಕಾರೀ ಕೆಲಸವೆಂಬುದು ಪ್ರತಿಷ್ಠೆಯ ಮಾತಾಗತೊಡಗಿತು.  ಕೊನೆಗೆ ಇಂಗ್ಲಿಷರು ದೇಶ ಬಿಟ್ಟು ಹೋಗುವ ಹೊತ್ತಿಗೆ ಸರ್ಕಾರೀ ಕೆಲಸವೆನ್ನುವುದು ಬಹುಜನರ ಬಹುದೊಡ್ಡ ಕನಸಾಗಿತ್ತು.  ಅವರೇನೋ ಹೋದರು, ಪ್ರಜಾಪ್ರಭುವಿನ ಕೈಗೆ ಆಡಳಿತ ಬಂದಮೇಲೆ ಆಡಳಿತದ ಭಾಷೆಯೂ ನಮ್ಮನಮ್ಮ ಭಾಷೆಯಾಗಬೇಕಿತ್ತಷ್ಟೇ?  ಆದರೆ ಭಾರತದಂತಹ ಅಗಾಧ ದೇಶ ಶತಮಾನಗಳ ಕಾಲ ಇಂಗ್ಲಿಷರ ಆಡಳಿತದಲ್ಲಿದ್ದಾಗ ಸಹಜವಾಗಿಯೇ ಇಂಗ್ಲಿಷ್ ಆಡಳಿತಭಾಷೆಯಾಗಿತ್ತು.  ಮತ್ತು ಇಡೀ ದೇಶ ಇಂಗ್ಲಿಷರ ಆಡಳಿತದಲ್ಲಿದ್ದುದರಿಂದ ಬಹುಸುಲಭವಾಗಿ ಇಂಗ್ಲಿಷ್ ಸಂಪರ್ಕಭಾಷೆಯೂ ಆಗಿತ್ತು.  ಅವರನಂತರ ಬಂದ ಭಾರತೀಯ ಆಡಳಿತಗಾರರೂ ಬಂದರು.  ಆಡಳಿತಗಾರರು ರಾತ್ರೋರಾತ್ರೆ ಬದಲಾಗಬಹುದು, ಆದರೆ ಶತಮಾನಗಳಿಂದ ಬಂದ ವ್ಯವಸ್ಥೆ ರಾತ್ರೋರಾತ್ರೆ ಬದಲಾಗುವುದಿಲ್ಲವಷ್ಟೇ?  ಕಾರಣವೂ ಇಲ್ಲದ ಬದಲಾವಣೆಯಾದರೂ ಏಕೆ ಬೇಕು.  ಹೊಸ ಆಡಳಿತಗಾರರೂ ಇಂಗ್ಲಿಷ್ ಬಲ್ಲವರೇ ಆದ್ದರಿಂದ ರಾಜ್ಯರಾಜ್ಯಗಳ ನಡುವಣ ಸಂವಹನಕ್ಕೆ ಈಗಾಗಲೇ ಸಂಪರ್ಕಭಾಷೆಯಾಗಿ ಭದ್ರವಾಗಿ ನೆಲೆಯೂರಿದ್ದ ಇಂಗ್ಲಿಷೇ ಮುಂದುವರೆಯಬೇಕಾದ್ದು ಸರಳ, ಸಹಜ ಹಾಗೂ ವಿವೇಕದ ಮಾರ್ಗ.  ಅಲ್ಲದೇ ಆಮೇಲೆ ಅಭಿವೃದ್ಧಿಯಾದ ವ್ಯಾಪಾರ ವ್ಯವಹಾರಗಳೆಲ್ಲಾ ಈಗಾಗಲೇ ಬಲವಾಗಿ ಬೇರೂರಿದ್ದ ಇಂಗ್ಲಿಷಿನಲ್ಲಿ ಸರಾಗವಾಗಿ ನಡೆಯುತ್ತಿತ್ತು. ಪ್ರಪಂಚದ ಹಲವು ದೇಶಗಳಲ್ಲಿ ಕಾಲನಿಗಳನ್ನು ಹೊಂದಿದ್ದ ಇಂಗ್ಲಿಷ್ ಸಹಜವಾಗಿಯೇ ಅಂತಾರಾಷ್ಟ್ರೀಯ ಭಾಷೆಯಾಗಿ ಸಹ ಬೆಳೆದಿತ್ತು.  ಹೊರರಾಷ್ಟ್ರಗಳ ಕಂಪನಿಗಳೂ ಇಲ್ಲಿಗೆ ಕಾಲಿಟ್ಟಮೇಲಂತೂ  ಇಂಗ್ಲಿಷ್ ಇದ್ದುದರಿಂದ ವ್ಯವಹಾರ ಸಲೀಸಾಯಿತು.  ಯಾರೂ ಇದು ಬೇಡ ಎನ್ನಲಿಲ್ಲ, ಎನ್ನುವಂತೆಯೂ ಇರಲಿಲ್ಲ - ಇಂಗ್ಲಿಷನ್ನು ಬೇಡವೆಂದು ಅವಕಾಶದಿಂದ ಯಾರು ವಂಚಿತರಾಗುತ್ತಾರೆ?  ಹೀಗೆ ಇಂಗ್ಲಿಷ್ ಆಡಳಿತ ಕೊಡಮಾಡಿದ ಅವಕಾಶಗಳು, ಅದರಿಂದ ಇಂಗ್ಲಿಷಿಗೆ ಸಿಕ್ಕ ವಿಪರೀತಪ್ರಾಮಖ್ಯ ದೇಶಭಾಷೆಗಳ ಕತ್ತು ಹಿಸುಕತೊಡಗಿತೇ ಹೊರತು, ಇಲ್ಲಿನ ಭಾಷೆಗಳ ಕತ್ತು ಹಿಸುಕಿ ಯಾರೂ ಇಂಗ್ಲಿಷನ್ನು ಹೇರಿದ್ದಲ್ಲ.  ಆದ್ದರಿಂದ ಈಗಾಗಲೇ ದೇಶದಾದ್ಯಂತ ಸಂಪರ್ಕಭಾಷೆಯಾಗಿ ಇಂಗ್ಲಿಷ್ ಬೆಳೆದು ಬಂದಿದೆಯೆಂಬ ವಾಸ್ತವವನ್ನೊಪ್ಪಿ, ಕೇವಲ ಸರ್ಕಾರ ಮತ್ತು ಜನಸಾಮಾನ್ಯನ ನಡುವಣ ಸಂವಹನಕ್ಕಷ್ಟೇ ಆಯಾ ದೇಶಭಾಷೆಯನ್ನು ಬಳಸತೊಡಗಿದ್ದರೆ ಬದುಕು ಎಷ್ಟೋ ಹಸನಾಗುತ್ತಿತ್ತು - ಆಗ ಹೇಗಿರುತ್ತಿತ್ತು?  ಸರ್ಕಾರ ಕನ್ನಡಿಗನೊಡನೆ ಕನ್ನಡದಲ್ಲಿ, ತಮಿಳನೊಡನೆ ತಮಿಳಿನಲ್ಲಿ, ಹಿಂದಿಯವನೊಡನೆ ಹಿಂದಿಯಲ್ಲಿ ಮಾತಾಡುತ್ತಿತ್ತು, ಬೇರೆಬೇರೆ ಭಾಷೆಯ ರಾಜ್ಯಗಳು ಪರಸ್ಪರರೊಡನೆ ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದುವು, ಹಿಂದೀ ರಾಜ್ಯಗಳು ಪರಸ್ಪರ ಹಿಂದಿಯಲ್ಲಿ ಮಾತಾಡುತ್ತಿದ್ದುವು, ಕೇಂದ್ರಸರ್ಕಾರ ರಾಜ್ಯಸರ್ಕಾರಗಳೊಡನೆ ಇಂಗ್ಲಿಷಿನಲ್ಲಿ ಮಾತಾಡುತ್ತಿತ್ತು - ಹಿಂದಿಗೆ ಇತರ ಭಾಷೆಗಳಂತೆಯೇ ಅದಕ್ಕೆ ಸಲ್ಲಬೇಕಾದಷ್ಟೇ ಪ್ರಾಮುಖ್ಯ ಸಲ್ಲುತ್ತಿತ್ತು.  ಆದರೆ ನಮ್ಮ ರಾಷ್ಟ್ರನಾಯಕರ ತಲೆ ಹೊಕ್ಕಿದ್ದ ಹಿಂದೀಪಾರಮ್ಯದ ಭೂತ ಈ ವಿವೇಕಕ್ಕೆ ಕಿವಿಗೊಡಬೇಕಲ್ಲ.  ಹಿಂದಿಗೆ 'ರಾಷ್ಟ್ರೀಯತೆ'ಯ ಮೊಗವಾಡ ತೊಡಿಸಿದರು.  ಜನಸಾಮಾನ್ಯರ ಅನುಕೂಲಕ್ಕಾಗಿ ಇಂಗ್ಲಿಷಿನ ಜಾಗದಲ್ಲಿ ದೇಶಭಾಷೆಗಳನ್ನು ಬಲಪಡಿಸುವ ಬದಲು ಈಗಾಗಲೇ ಬೇರೂರಿದ್ದ ಇಂಗ್ಲಿಷನ್ನು ಕಿತ್ತು ಹಾಕಿ ಹಿಂದಿಯನ್ನು ಕೃತಕವಾಗಿ ತಂದಿಕ್ಕುವ ಅವಿವೇಕದ ಕೆಲಸಕ್ಕೆ ಕೈ ಹಾಕಿದರು.  ಬೀಜ ನೆಟ್ಟು ಸಸಿ ಬೆಳೆಸಿ ಮರವಾಗಿಸಬಹುದು, ಮರವನ್ನೇ ಕಿತ್ತೊಗೆದು ಆ ಜಾಗದಲ್ಲಿ ಇನ್ನೊಂದು ಮರ ನೆಡಲಾಗುತ್ತದೆಯೇ ಸ್ವಾಮಿ?

ಕನ್ನಡದ ಒಗ್ಗಟ್ಟನ್ನು ಒಡೆಯಲು ಹಿಂದೀವಾಲಾಗಳು ಇನ್ನೊಂದು ಅಸಹ್ಯಕೆಲಸ ಮಾಡುತ್ತಿದ್ದಾರೆ.  ಕನ್ನಡದ ಸೋದರಭಾಷೆಗಳಾದ ತುಳು ಕೊಡವ ಇತ್ಯಾದಿಗಳನ್ನು ಎತ್ತಿಕಟ್ಟುವುದು - "ಹಿಂದೀ ಹೇರಿಕೆ ಎನ್ನುತ್ತೀರಲ್ಲ, ಕನ್ನಡದ್ದೂ ಹೇರಿಕೆಯಾಗುತ್ತಿಲ್ಲವೋ" ಎಂಬ ರೀತಿಯ ವಿತಂಡವಾದಗಳನ್ನು ಹರಿಯಬಿಡುವುದು.  ಇದನ್ನೂ ಇಲ್ಲೇ ಉತ್ತರಿಸಿಬಿಡುವುದು ಸೂಕ್ತ.  ಈ ಕನ್ನಡದ ಸೋದರಭಾಷೆಯ ಸಮುದಾಯಗಳ ಬಗೆಗೆ, ಆಯಾ ಪ್ರದೇಶಗಳ ಬಗೆಗೆ ಕರ್ನಾಟಕದ ಆಡಳಿತಗಳು ಕಾಲದಿಂದಲೂ ಅವಜ್ಞೆ ತೋರಿಕೊಂಡೇ ಬಂದಿರುವುದು ಸತ್ಯವೇ - ಇದನ್ನು ಕೇವಲ ತುಳುವರು ಕೊಡವರಲ್ಲ, ಕನ್ನಡಿಗರೆಲ್ಲರೂ ಕೂಡಿಯೇ ಪ್ರತಿಭಟಿಸಬೇಕಾದ್ದು.  ಆದರೆ ಭಾಷೆಯ ವಿಷಯಕ್ಕೆ ಬಂದರೆ, ಕನ್ನಡವು ಹಿಂದಿಯಂತೆ ಖಿಚಡಿ ಭಾಷೆಯೂ ಅಲ್ಲ, ತುಳು ಕೊಡವ ಪ್ರದೇಶಗಳಲ್ಲಿ ಈಗಾಗಲೇ ಇರುವ ಬಳಕೆಗಳನ್ನು ಕಿತ್ತುಹಾಕಿ ಹಿಂದಿಯಂತೆ ಆಡಳಿತಗಳು ಕನ್ನಡವನ್ನು ಈ ಪ್ರದೇಶಗಳಲ್ಲಿ ಹೊಸದಾಗಿ ಮುಂದೊತ್ತಿಯೂ ಇಲ್ಲ.  ಈಗ ಹೇಗಿದೆಯೋ ಆ ಭಾಷಾವ್ಯವಸ್ಥೆ ಕಾಲದಿಂದ ಇದ್ದೇ ಇದೆ.  ಇನ್ನು ಉದ್ಯೋಗಾವಕಾಶಗಳಲ್ಲಿ ಕನ್ನಡ ಬರುವುದಿಲ್ಲವೆಂಬ ಕಾರಣಕ್ಕೆ ತುಳು/ಕೊಡವರು ವಂಚಿತರಾಗುವ ಕಾರಣವೂ ಇಲ್ಲ - ಅಷ್ಟೇಕೆ, ಮೈಸೂರಿನ ಭಾಗದಲ್ಲಿ ತುಳುವರು, ಹುಬ್ಳಿ ಧಾರವಾಡದ ಕಡೆಯವರೂ, ಆಕಡೆಯಲ್ಲಿ ಇಲ್ಲಿಯವರು ಧಾರಾಳವಾಗಿ ಕಾಣಸಿಗುತ್ತಾರೆ, ಮತ್ತು ಆಯಾ ಸ್ಥಳೀಯರೊಂದಿಗೆ ಹಾಲುಸಕ್ಕರೆಯಂತೆ ಬೆರೆತುಕೊಂಡೇ ಇದ್ದಾರೆ.  ಇನ್ನೂ ತುಳುನಾಡು ಕನ್ನಡಕ್ಕೆ ನೀಡಿರುವ ಸಾಹಿತಿಪ್ರತಿಭೆಗಳು ಕಡಿಮೆಯೇನಲ್ಲ - ಸೇಡಿಯಾಪು, ಗೋವಿಂದಪೈ, ಮಂಗೇಶರಾಯರು, ಕೈಯ್ಯಾರ, ಇವರಾರಿಗೂ ತುಳು/ಕೊಡವ ಅಸ್ಮಿತೆಗಳು ತಮ್ಮ ಕನ್ನಡ ಅಸ್ಮಿತೆಯೊಡನೆ ಪೈಪೋಟಿ ನಡೆಸಿವೆಯೆಂದು ಅನ್ನಿಸಿದ್ದೇ ಅಲ್ಲ.

ಹುನ್ನಾರಗಳು ಎಲ್ಲಿವೆಯೆಂದು ಅರ್ಥವಾಯಿತಲ್ಲ.  ಒಮ್ಮೆ ಕನ್ನಡದ ಸದ್ದಡಗಿ, ಹಿಂದಿಯ ದಾರಿ ಸುಗಮವಾಗಿಬಿಡಲಿ, ಆಗ ನೋಡಿ, ಈ ಇಂಗ್ಲಿಷ್ ಗುಮ್ಮ, ಕನ್ನಡವು ಸೋದರಭಾಷೆಗಳ ಮೇಲೆ ನಡೆಸುವ 'ದೌರ್ಜನ್ಯ' ಎಲ್ಲ ಕೂಗುಗಳೂ ನಿಂತೇ ಹೋಗುತ್ತವೆ.  ಅಲ್ಲಿಗೆ ನಿಜವಾದ ಕಳಕಳಿಯೇನು ಹೇಳಿ ಸ್ವಾಮಿ? ತಮ್ಮ ಕನ್ನಡಪ್ರೇಮ, ಇಂಗ್ಲಿಷಿನ ವಿರುದ್ಧದ ಕಳಕಳಿ ಇದಾವುದರ ಬಗೆಗೂ ಯಾವ ಅನುಮಾನವೂ ಇಲ್ಲ.  ಆದರೆ ಸ್ವಾತಂತ್ರ್ಯ ಬಂದಂದಿನಿಂದ ಉತ್ತರದ ಹಿಂದೀವಾಲಾಗಳು ದಕ್ಷಿಣವನ್ನು ಹಣಿಯಲು, ಹಿಂದಿಯ ಆಧಿಪತ್ಯ ಸ್ಥಾಪಿಸಲು ಏನೇನು ಮಾಡುತ್ತಿವೆಯೆಂಬುದು ನಿಮಗೆ ತಿಳಿಯದಿಲ್ಲ, ತಾವೇ ಸ್ವತಃ ಚಳುವಳಿಗಳಲ್ಲಿ ಭಾಗವಹಿಸಿದವರು, ದಶಕಗಳ ಇತಿಹಾಸವಿರುವ ಕನ್ನಡಚಳುವಳಿಯ ಸ್ವರೂಪವನ್ನು ಅರಿತವರು - ಏನೂ ತಿಳಿಯದವರಂತೆ ಮಾತಾಡಬೇಡಿ, ಯಾರುಯಾರೋ ದುರುದ್ದೇಶಪೂರಿತವಾಗಿ ಹರಿಯಬಿಟ್ಟಿರುವ ಸುಳ್ಳುಗಳನ್ನು ವಿತಂಡವಾದಗಳನ್ನು ಸಮರ್ಥಿಸಬೇಡಿ.  ಸಮ್ಮೇಳನಾಧ್ಯಕ್ಷಪೀಠವೆಂಬುದು ಕನ್ನಡಿಗರ ಅಸ್ಮಿತೆ ಅಭಿಮಾನಗಳ ಪ್ರತೀಕ - ಯಾರೋ ದೊರೆಮಗ ತಟ್ಟೆಯಲ್ಲಿಟ್ಟು ಕೊಟ್ಟ ತಾಂಬೂಲವಲ್ಲ.  ಸಮ್ಮೇಳನದ ಅಧ್ಯಕ್ಷರು ಸಮಸ್ತಕನ್ನಡಿಗರ ಮುಖವಾಣಿ, ಯಾವುದೋ ಒಡ್ಡೋಲಗದ ವಂದಿಮಾಗಧರಲ್ಲ.  ಕನ್ನಡದ ಹಿತಾಸಕ್ತಿಗೆ ಮಾರಕವಾದ ನಿಲುವು ತಳೆದಿರುವ ದೊಡ್ಡರಂಗೇಗೌಡರು ಅಧ್ಯಕ್ಷಸ್ಥಾನವನ್ನು ತಿರಸ್ಕರಿಸಬೇಕೆಂದು ಹಲವರು ಹೇಳುತ್ತಾರೆ, ಅದು ಎಷ್ಟುಮಾತ್ರಕ್ಕೂ ಸರಿಯಲ್ಲ.  ನೀವಾಡಿದ ಮಾತುಗಳನ್ನು, ಅದರಿಂದಾದ ಘಾತವನ್ನು ಸರಿಪಡಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ, ಮತ್ತು ಅದು ಸಮ್ಮೇಳನದ ಅಧ್ಯಕ್ಷಪೀಠದಿಂದ ಮಾತ್ರ ಸಾಧ್ಯ.  ನೀವು "ಯಾವ ಹೇರಿಕೆಯನ್ನೂ ಸಮರ್ಥಿಸುವುದಿಲ್ಲ, ಕನ್ನಡವೇ ಶ್ರೇಷ್ಠ, ಇಂಗ್ಲಿಷ್ ಗುಮ್ಮ" ಎಂದುಬಿಟ್ಟ ಮಾತ್ರಕ್ಕೆ ಹಿಂದಿ ರಾಷ್ಟ್ರಭಾಷೆ ಎಂಬ ನಿಮ್ಮ ನಿಲುವು ಬದಲಾಯಿತೇ?  ನೀವು ಹಿರಿಯರು, ಕ್ಷಮೆಯಾಚಿಸಬೇಕಿಲ್ಲ (ಗಟ್ಟಿ ನಿಲುವು ನಿರ್ಧಾರಗಳಿಲ್ಲದ ಖಾಲಿ ಕ್ಷಮಾಯಾಚನೆಯಿಂದ ಪ್ರಯೋಜನವೂ ಇಲ್ಲ).  ಆಗಿರುವ ಅನಾಹುತವನ್ನು ಸರಿಪಡಿಸುವ ಅವಕಾಶ ನಿಮ್ಮ ಕೈಲಿದೆ.  ಹಿಂದೀ ರಾಷ್ಟ್ರಭಾಷೆಯೆಂಬ ಈ ರಾಷ್ಟ್ರೀಯ ಸುಳ್ಳನ್ನು ಮುಕ್ತಕಂಠದಿಂದ ಖಂಡಿಸಿ, ಕನ್ನಡದ ನೆಲ-ಜಲ-ಅಧಿಕಾರಗಳಲ್ಲಿ ಹಿಂದಿಯ ಬಾಲವನ್ನು ತೂರಿಸದೇ ತೆಪ್ಪಗಿರಬೇಕೆಂದು ಕೇಂದ್ರದ ಹಿಂದೀ ಆಡಳಿತಗಳಿಗೆ, ಅಧಿಕಾರಸ್ಥರಿಗೆ, ರಾಜಕಾರಣಿಗಳಿಗೆ ಅಧ್ಯಕ್ಷಪೀಠದಿಂದ ಖಡಕ್ ಸಂದೇಶ ಕೊಡಿ - ನಿಮ್ಮ ಮೇಲಿನ ಗೌರವ ನೂರ್ಮಡಿಯಾಗುತ್ತದೆ.

Tuesday, January 5, 2021

ಲಲಿತವೃತ್ತ - ಪರಿಚಯ


ನಾಗಚಂದ್ರನ ರಾಮಚಂದ್ರಚರಿತಪುರಾಣದಿಂದ ಈ ಸುಂದರವಾದ ಪದ್ಯವನ್ನು ಇಂದು ಬೆಳಗ್ಗೆ, ಮಿತ್ರರಾದ Nanjunda Bomlapura ನೆನಪಿಸಿದರು.  ಈ ಪದ್ಯದ ಛಂದಸ್ಸು "ಲಲಿತವೃತ್ತ".  ಈ ವೃತ್ತವೇ ಅಪರೂಪದ್ದು, ಅದರಲ್ಲೂ ಇಲ್ಲಿ ಕಾಣಿಸಿದ ಪದ್ಯ ಇನ್ನೂ ಅಪರೂಪದ್ದು - ಏಕೆಂದು ವಿವರಿಸುತ್ತೇನೆ:

ಮೊದಲನೆಯದಾಗಿ ಈ ವೃತ್ತವು ಬಹುದೀರ್ಘವಾದ ಪಾದಗಳನ್ನು ಹೊಂದಿದ್ದು ಬಳಕೆಗೆ ತೊಡಕೆನಿಸಬಹುದಾದ್ದರಿಂದಲೋ ಏನೋ, ಕವಿಗಳಲ್ಲಿ ಇದರ ಬಳಕೆ ಕಡಿಮೆ.  ಆದರೆ ಬಹುಸುಂದರವಾದ ಲಯವಿನ್ಯಾಸವನ್ನು ಹೊಂದಿದೆಯಾದ್ದರಿಂದ ಕವಿಗಳು ಅಪರೂಪಕ್ಕೆ ಇದನ್ನು, ಏಕತಾನವನ್ನು ಮುರಿಯುವುದಕ್ಕೋಸ್ಕರ, ಬಳಸುತ್ತಾರೆ.  ಉದಾಹರಣೆಗೆ ರುದ್ರಭಟ್ಟನ ಜಗನ್ನಾಥವಿಜಯಕಾವ್ಯದಿಂದ ಈ ಪದ್ಯವನ್ನು ನೋಡಬಹುದು:

ಶ್ರೀಸ್ತನಸುಕುಂಕುಮರಜಸ್ತತಿವಿಲೇಪನಗಭಸ್ತಿಪರಿರಂಜಿತನಿಜೋನ್ನತವಿಶಾಲೋ
ರಸ್ಥಲಪರಿಸ್ಫುರಿತಕೌಸ್ತುಭವಿಭೂಷಣರುಚಿಸ್ತಬಕಿತಾಖಿಳನಭಂ ದಿವಿಜಕಾಂತಾ
ಹಸ್ತಚಮರಾನಿಳಮುಹುಸ್ತರಳಿತಪ್ರಥಿತವಸ್ತುಚಯಕುಂಡಲವಿಮಂಡಿತಕಪೋಲಂ
ಧ್ವಸ್ತದಿತಿಜಂ ನತನಮಸ್ತವಿಬುಧಂ ಭುವನವಿಸ್ತರಣಪಾದನೆಸೆದಂ ಫಣಿಪತಲ್ಪಂ (1-50)

ಇದನ್ನು ಹೀಗೆ ಓದಿದರೆ, ಅರ್ಥವಾಗುವುದಿರಲಿ, ಅದರ ಲಯಸೌಂದರ್ಯವೂ ದಕ್ಕುವುದಿಲ್ಲ.  ಇದನ್ನು ಸ್ವಲ್ಪ ವಿಶ್ಲೇಷಿಸಿ, ಹೇಗೆ ಓದಬಹುದೆಂಬುದನ್ನೂ ನೋಡೋಣ.  

[ಲಯ ಮಾತ್ರೆ ಗಣ ಮೊದಲಾದ ವಿಷಯಗಳ ಪರಿಚಯವಿಲ್ಲದವರಿಗಾಗಿ ಇಲ್ಲೊಂದಷ್ಟು ಸಂಕ್ಷಿಪ್ತ ವಿವರಣೆಯಿದೆ, ತಿಳಿದವರು ಇದನ್ನು ದಾಟಿಕೊಂಡು ಮುಂದುವರೆಯಬಹುದು:

ಮಾತ್ರಾಕಾಲ/ಮಾತ್ರೆ ಎಂದರೆ ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲಾವಧಿ.

ಒಂದು ಚಿಟುಕಿ ಹೊಡೆಯುವಷ್ಟು ಕಾಲಪ್ರಮಾಣಕ್ಕೆ ಲಘು ಎನ್ನುತ್ತಾರೆ, ಇದನ್ನು "U" ಎಂದು ಗುರುತಿಸುತ್ತಾರೆ.  ಹ್ರಸ್ವಾಕ್ಷರಗಳಾದ ಅ, ಇ, ಉ, ಕ, ಗಿ, ಯ ಇತ್ಯಾದಿಗಳು ಒಂದು ಚಿಟುಕಿ ಹೊಡೆಯುವಷ್ಟು ಕಾಲವನ್ನು ತೆಗೆದುಕೊಳ್ಳುವುದರಿಂದ ಇವು ಲಘು ಅಕ್ಷರಗಳು.

ಮೇಲಿನದರ ಎರಡರಷ್ಟು, ಎಂದರೆ ಎರಡು ಚಿಟುಕಿ ಹೊಡೆಯುವಷ್ಟು ಕಾಲಪ್ರಮಾಣಕ್ಕೆ ಗುರು ಎನ್ನುತ್ತಾರೆ, ಇದನ್ನು "-" ಎಂದು ಗುರುತಿಸುತ್ತಾರೆ.  ದೀರ್ಘಾಕ್ಷರಗಳಾದ ಆ, ಈ, ಊ, ಕಾ, ಗೀ, ಯಾ ಇತ್ಯಾದಿಗಳು ಎರಡು ಚಿಟುಕಿ ಹೊಡೆಯುವಷ್ಟು ಕಾಲವನ್ನು ತೆಗೆದುಕೊಳ್ಳುವುದರಿಂದ ಇವು ಗುರು ಅಕ್ಷರಗಳು. 

ಪದ್ಯವೊಂದನ್ನು ಲಯಬದ್ಧವಾಗಿ ಓದುವಾಗ ಮೂರು ಮೂರು, ನಾಲ್ಕುನಾಲ್ಕು, ಐದೈದು (ಎರಡು+ಮೂರು), ಏಳೇಳು (ಮೂರು+ಎರಡು+ಎರಡು) ಹೀಗೆ ಅನೇಕ ಮಾತ್ರಾಕಾಲಗಳ ಲಯಗಳನ್ನು ಕಾಣಬಹುದು, ಉದಾಹರಣೆಗೆ, ತಕಿಟ (3), ತಝಂ (3), ತಕತಕ (4), ತಧೀಂತ (4), ತಕ ತಕಿಟ (5), ತಕ ಧೀಂತ (5), ತಕಿಟ ತಕ ತಕ (7), ತಝಂ ತಾ ತಕ (7) ಹೀಗೆ.  ಇವಕ್ಕೆ ಮಾತ್ರಾಗಣಗಳು ಎನ್ನುತ್ತಾರೆ.

ಮಾತ್ರಾಗಣಗಳಂತೆಯೇ ಪದ್ಯವನ್ನು ಮೂರುಮೂರು ಅಕ್ಷರಗಳ ಗುಂಪಾಗಿಯೂ ಮಾಡಬಹುದು.  ಉದಾಹರಣೆಗೆ "ಅವಳೇ ಬಂದಳು ಹೂವಿನಾ ನಗೆಯ ನಕ್ಕೆನ್ನತ್ತ ಕೈ ಚಾಚುತಾ"  ಈ ಸಾಲನ್ನು ನೋಡಿ.  ಇದನ್ನು ಮೂರು ಮೂರು ಅಕ್ಷರದ ಗುಂಪಾಗಿ ಮಾಡಿದರೆ "ಅವಳೇ | ಬಂದಳು | ಹೂವಿನಾ | ನಗೆಯ | ನಕ್ಕೆನ್ನ | ತ್ತ ಕೈ ಚಾ | ಚುತಾ" ಈ ಮೂರುಮೂರಕ್ಷರಗಳ ಗುಂಪನ್ನು ಗಮನಿಸಿದರೆ ಒಂದೊಂದು ಗುಂಪಿನ ಉಚ್ಚಾರಣೆಯ ಕಾಲಾವಧಿಯೂ ಬೇರೆಬೇರೆ ಇದೆ.  ಉದಾಹರಣೆಗೆ ಅವಳೇ ಎಂಬುದು ಹ್ರಸ್ವ, ಹ್ರಸ್ವ, ಮತ್ತು ದೀರ್ಘ (ಎಂದರೆ ಲಘು+ಲಘು+ಗುರು 1+1+2 = 4) ನಾಲ್ಕು ಮಾತ್ರೆಯ ಕಾಲ.  ಬಂದಳು ಎನ್ನುವುದು ಗುರು+ಲಘು+ಲಘು (2+1+1 = 4), ಇದೂ ನಾಲ್ಕು ಮಾತ್ರೆಯ ಕಾಲವೇ (ಮೇಲೆ ಮಾತ್ರಾಗಣದ ಲೆಕ್ಕದಲ್ಲಾದರೆ ಇವೆರಡೂ ಒಂದೇ ಎನ್ನಬಹುದಿತ್ತು), ಆದರೆ ಅವಳೇ ಎನ್ನುವುದಕ್ಕೂ ಬಂದಳು ಎನ್ನುವುದಕ್ಕೂ ಲಯದಲ್ಲಿ ವ್ಯತ್ಯಾಸವಿದೆ, ಅಕ್ಷರಗಣ ಈ ಲಯವಿನ್ಯಾಸವನ್ನೂ ಗಮನಕ್ಕೆ ತೆಗೆದುಕೊಳ್ಳುವುದರಿಂದ ಇಲ್ಲಿ ಅವಳೇ ಎನ್ನುವುದೂ ಬಂದಳು ಎನ್ನುವುದೂ ಬೇರೆಬೇರೆಯೆಂದೇ ನೋಡಬೇಕು.  ಹೀಗೆ ಮೇಲಿನ ಅಕ್ಷರಗಳ ಗುಂಪು ನೋಡಿದರೆ, ಎಲ್ಲವೂ ಮೂರಕ್ಷರಗಳೇ ಆದರೂ ಅವುಗಳ ಉಚ್ಚಾರಣೆಯ ಕಾಲಾವಧಿ ಬೇರೆ, ಮತ್ತು ಆ ಅಕ್ಷರಗಳಲ್ಲಿ ಲಘು-ಗುರು ಬಂದಿರುವ ಸ್ಥಾನಗಳೂ ಬೇರೆ.  ಹೀಗೆ ಬೇರೆಬೇರೆ ಲಯವಿನ್ಯಾಸವಿರುವ ಮೂರಕ್ಷರದ ಎಂಟು ಬಗೆಯ ವಿನ್ಯಾಸ ಸಾಧ್ಯ.  ಆ ಒಂದೊಂದು ವಿನ್ಯಾಸಕ್ಕೂ ಒಂದೊಂದು ಹೆಸರಿದೆ ಹೀಗೆ (ನೆನಪಿರಲಿ "U" ಎಂದರೆ ಲಘು, ಒಂದು ಮಾತ್ರೆ; "-" ಎಂದರೆ ಗುರು, ಎರಡು ಮಾತ್ರೆ)

U - - = ಯಗಣ (ಉದಾ: ಸುರೇಶಂ, ಗಣೇಶಂ)
- - - = ಮಗಣ (ಉದಾ: ಗೌರೀಶಂ, ದೇವೇಂದ್ರಂ)
- - U = ತಗಣ (ಉದಾ: ಗೌರೀಶ, ದೇವೇಂದ್ರ)
- U - = ರಗಣ (ಉದಾ: ಶಂಕರಂ, ಭಾಸ್ಕರಂ)
U - U = ಜಗಣ (ಉದಾ: ಸುರೇಶ, ಗಣೇಶ)
- U U = ಭಗಣ (ಉದಾ: ಶಂಕರ, ಭಾಸ್ಕರ)
U U U = ನಗಣ (ಉದಾ: ಸಲಿಗೆ, ಬೆಸುಗೆ)
U U - = ಸಗಣ (ಉದಾ: ಕಮಲಾ, ವಿಮಲಾ)

ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಲುಸುಲಭ - ಅದಕ್ಕೇ ಒಂದು ಪ್ರಾಚೀನಸೂತ್ರವಿದೆ - "ಯಮಾತಾರಾಜಭಾನಸಲಗಂ".  ಇದರ ಪ್ರತಿಯೊಂದು ಅಕ್ಷರವನ್ನೂ ಹಿಡಿದು ಮೂರುಮೂರಾಗಿ ಗುಂಪು ಮಾಡುತ್ತಾ ಹೋದರೆ, ಯಮಾತಾ, ಮಾತಾರಾ, ತಾರಾಜ, ರಾಜಭಾ, ಜಭಾನ, ಭಾನಸ, ನಸಲ, ಸಲಗಂ ಎಂಬ ಬೇರೆಬೇರೆ ಮಾತ್ರಾಕಾಲದ ಗುಂಪುಗಳು ಸಿಗುತ್ತವೆ.  ಗಮನಿಸಿ, ಅದರ ವಿನ್ಯಾಸ ಮೇಲೆ ವಿವರಿಸಿದಂತೆಯೇ ಇದೆ.  ಮತ್ತು ಪ್ರತಿಯೊಂದು ಗುಂಪಿನ ಮೊದಲಕ್ಷರವೇ ಆ ಗಣದ ಹೆಸರು (ಯಮಾತಾ, ಯಗಣ U - -; ಮಾತಾರಾ, ಮಗಣ - - - ; ತಾರಾಜ, ತಗಣ - - U ಹೀಗೆ ಮೇಲಿನ ಪಟ್ಟಿಗೆ ಹೋಲಿಸುತ್ತಾ ಹೋಗಬಹುದು)

ಪದ್ಯಸೌಧವನ್ನು ಕಟ್ಟಲು ನಾವು ಬಳಸಬಹುದಾದ ಇಟ್ಟಿಗೆಗಳು ಎರಡು ರೀತಿಯವು - 

ಒಂದನೆಯದು - ಮೊದಲು ವಿವರಿಸಿದಂತೆ 3, 4, 5, 7 ಮಾತ್ರೆಗಳ ಮಾತ್ರಾಗಣಗಳನ್ನು ಬಳಸಿ ಪದ್ಯ ಕಟ್ಟ ಬಹುದು (ಇಲ್ಲಿ ಗಣವೊಂದರಲ್ಲಿ ಅಕ್ಷರ ಎಷ್ಟೇ ಇರಬಹುದು, ಮಾತ್ರಾಕಾಲ ಸರಿಯಿದ್ದರೆ ಆಯಿತು); ಮಾತ್ರಾಗಣಗಳನ್ನು ಬಳಸಿ ಕಟ್ಟಿದ ಛಂದಸ್ಸುಗಳನ್ನು ಮಾತ್ರಾಗಣ ಛಂದಸ್ಸುಗಳೆನ್ನುತ್ತಾರೆ.  ಇವಕ್ಕೆ ತಕಿಟ ತಕಿಟ, ತಕತಕಿಟ ತಾತಕಿಟ, ತಕಿಟ ತಕತಕ, ಇತ್ಯಾದಿ ನಿರ್ದಿಷ್ಟ ಲಯವಿರುತ್ತದೆ (ಷಟ್ಪದಿ, ಕಂದ, ರಗಳೆ ಮೊದಲಾದುವು ಈ ಜಾತಿಗೆ ಸೇರಿದುವು); 

ಅಥವಾ ಎರಡನೆಯದು - ಆಮೇಲೆ ವಿವರಿಸಿದಂತೆ ಮೂರು ಮೂರು ಅಕ್ಷರಗಳ (ಯಾವುದೇ ಮಾತ್ರಾಕಾಲದ) ಅಕ್ಷರಗಣಗಳನ್ನು ಬಳಸಿ ಕಟ್ಟಬಹುದು.   ಅಕ್ಷರಗಳನ್ನು ಬಳಸಿ ಕಟ್ಟಿದ ಪದ್ಯಗಳನ್ನು ಅಕ್ಷರಗಣದ ಛಂದಸ್ಸುಗಳು, ಅಥವಾ ವೃತ್ತಗಳು ಎನ್ನುತ್ತಾರೆ.  ಬೇರೆಬೇರೆ ಅಕ್ಷರಗಣಗಳ ಚಿತ್ರವಿಚಿತ್ರವಾದ ಸಂಯೋಜನೆಗಳಿಂದ ಬೇರೆಬೇರೆ ವೃತ್ತಗಳನ್ನು ಪಡೆಯಬಹುದು.  ಮೇಲಿನ ಮಾತ್ರಾಗಣದಂತೆ ಇವಕ್ಕೆ ಇಷ್ಟಿಷ್ಟೇ ಮಾತ್ರೆಗಳ ಒಂದೇ ಸಮನಾದ ಏಕತಾನದ ಲಯವಿರುವುದಿಲ್ಲ, ಬದಲಿಗೆ ವಿವಿಧ ಅಕ್ಷರಗಣಗಳ ಲಯಗಳು ಸೇರಿ ಆ ವೃತ್ತಕ್ಕೇ ವಿಶಿಷ್ಟವಾದ ಒಂದು ಲಯ ಉತ್ಪನ್ನವಾಗುತ್ತದೆ - ಉದಾಹರಣೆಗೆ "ಶ್ರೀ ವೆಂಕಟಾಚಲಪತೇ ತವ ಸುಪ್ರಭಾತಂ" ಎನ್ನುವುದನ್ನೂ "ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಶೆಯಂ ಮಾಡದಂ" ಎನ್ನುವುದನ್ನೂ ಜೋರಾಗಿ ಹೇಳಿಕೊಂಡು ನೋಡಿ.  ಎರಡೂ ಬೇರೆಬೇರೆ ಅಕ್ಷರಗಣಗಳಿಂದಾದ ಬೇರೆಬೇರೆ ವೃತ್ತಗಳು, ಎರಡಕ್ಕೂ ಬೇರೆಬೇರೆಯಾದ ಲಯವಿದೆ (ಉತ್ಪಲಮಾಲಾ, ಚಂಪಕಮಾಲಾ, ಸ್ರಗ್ಧರಾ, ಮಹಾಸ್ರಘರಾ, ಮತ್ತೇಭವಿಕ್ರೀಡಿತ, ಶಾರ್ದೂಲವಿಕ್ರೀಡಿತ - ಈ ಆರು ಪ್ರಸಿದ್ಧಕರ್ಣಾಟಕವೃತ್ತಗಳೆಂದು ಹೆಸರಾಗಿವೆ, ಕನ್ನಡದಲ್ಲಿ ಇವುಗಳ ಬಳಕೆ ವ್ಯಾಪಕವಾಗಿದೆ.  ಹಾಗೆಯೇ ಮಂದಾಕ್ರಾಂತ, ವಸಂತತಿಲಕ, ಶಿಖರಿಣೀ ಮೊದಲಾದ ಅನೇಕ ಪ್ರಸಿದ್ಧವೃತ್ತಗಳು ಸಂಸ್ಕೃತದಲ್ಲಿ ಬಳಕೆಯಲ್ಲಿವೆ)

ಇನ್ನು ಮುಖ್ಯಲೇಖನವನ್ನು ನೋಡೋಣ]

ಲಲಿತವೃತ್ತ ಮೂಲತಃ ಅಕ್ಷರಗಣವೃತ್ತ - 30 ಅಕ್ಷರಗಳ (ಮೂರುಮೂರು ಅಕ್ಷರಗಳ ಹತ್ತು ಗಣಗಳ) ವೃತ್ತ.  ಭಜಸನ ಗಣಗಳು ಎರಡಾವರ್ತಿ ಬಂದು ಕೊನೆಯಲ್ಲಿ ಭಗಣವೂ ಯಗಣವೂ ಬರುವಂಥದ್ದು (ಗಣಗಳ ವಿವರಣೆಗೆ ಮೇಲೆ []ರಲ್ಲಿ ವಿವರಣೆಯನ್ನು ನೋಡಿ).  ಭಜಸನಭಜಸನಭಯ ಈ ಗಣಗಳ ವಿನ್ಯಾಸವನ್ನು ಮೇಲೆ ವಿವರಿಸಿದ ಯಮಾತಾರಾಜಭಾನಸಲಗಂ ಎಂಬ ಸೂತ್ರದ ಸಹಾಯದಿಂದ ತೋರಿಸುವುದಾದರೆ:

ಭಾನಸ | ಜಭಾನ | ಸಲಗಂ | ನಸಲ | ಭಾನಸ | ಜಭಾನ | ಸಲಗಂ | ನಸಲ | ಭಾನಸ | ಯಮಾತಾ - ಇದು ಈ ವೃತ್ತದ ವಿನ್ಯಾಸ.  ಇದನ್ನೇ ಸೇರಿಸಿ ಬರೆದಾಗ:

"ಭಾನಸಜಭಾನಸಲಗಂನಸಲಭಾನಸಜಭಾನಸಲಗಂನಸಲಭಾನಸಯಮಾತಾ" ಹೀಗಾಗುತ್ತದೆ.  ಲಯ ದೊರಕಲಿಲ್ಲವೇ?  ಇದನ್ನು ಐದೈದು ಮಾತ್ರೆಗಳಾಗಿ ವಿಂಗಡಿಸಿ ಜೋರಾಗಿ ಓದಿಕೊಳ್ಳಿ:

"ಭಾನಸಜ ಭಾನಸಲ ಗಂನಸಲ ಭಾನಸಜ ಭಾನಸಲ ಗಂನಸಲ ಭಾನಸಯ ಮಾತಾ" 

ಈಗ ಐದೈದು ಮಾತ್ರೆಯ ಸೊಗಸಾದ ಮಾತ್ರಾಗಣವಿನ್ಯಾಸವನ್ನೂ ಕಾಣಬಹುದು.  ಅಕ್ಷರಗಣವೃತ್ತವಾಗಿದ್ದೂ ಮಾತ್ರಾಗಣವಿನ್ಯಾಸದ ಲಯಸೌಂದರ್ಯವನ್ನೂ ಒಳಗೊಂಡ ಅಪರೂಪದ ವೃತ್ತವಿದು.  ಈಗ ಇದೇ ರೀತಿ ಮೇಲಿನ ಜಗನ್ನಾಥವಿಜಯದ ಸಾಲನ್ನು ವಿಂಗಡಿಸಿ ಲಯವನ್ನು ಗಮನಿಸಿ.  "ಶ್ರೀಸ್ತನಸುಕುಂಕುಮರಜಸ್ತತಿವಿಲೇಪನಗಭಸ್ತಿಪರಿರಂಜಿತನಿಜೋನ್ನತವಿಶಾಲೋ" - ಈ ಸಾಲನ್ನು ಲಯಬದ್ಧವಾಗಿ ಹೀಗೆ ವಿಂಗಡಿಸಬಹುದು:

ಶ್ರೀಸ್ತನಸು ಕುಂಕುಮರ ಜಸ್ತತಿವಿ ಲೇಪನಗ ಭಸ್ತಿಪರಿ ರಂಜಿತನಿ ಜೋನ್ನತವಿ ಶಾಲೋ

ಈ ವೃತ್ತದ ಇನ್ನೊಂದು ವಿಶೇಷವೆಂದರೆ, ಎಲ್ಲ ವೃತ್ತಗಳಲ್ಲೂ ಆದಿಪ್ರಾಸ (ಪಾದದ ದ್ವಿತೀಯಾಕ್ಷರದ ಪ್ರಾಸ)ವಷ್ಟೇ ಇದ್ದರೆ ಇಲ್ಲಿ ಆದಿಪ್ರಾಸವೇ ಪಾದದೊಳಗೂ ಅನುಪ್ರಾಸವಾಗಿ ಬರುತ್ತದೆ.  ಮೊದಲ ಗಣದ ಎರಡನೆಯ ಅಕ್ಷರ, ನಾಲ್ಕನೆಯ ಗಣದ ಮೊದಲನೆಯ ಅಕ್ಷರ, ಮತ್ತು ಆರನೆಯ ಗಣದ ಕೊನೆಯ ಅಕ್ಷರ (ಎಂದರೆ 2, 10 ಮತ್ತು 18ನೆಯ ಅಕ್ಷರಗಳು) ಪ್ರಾಸಸ್ಥಾನಗಳು - ಎಂದರೆ ಈ ಜಾಗದಲ್ಲಿ ಒಂದೇ ಅಕ್ಷರ ಬರಬೇಕು).  ಇದನ್ನು ಮೇಲಿನ ಸಾಲಿನಲ್ಲಿ ಗಮನಿಸಬಹುದು (" * " ಚಿಹ್ನೆಯಿಂದ ಗುರುತಿಸಲಾಗಿದೆ)

ಶ್ರೀ*ಸ್ತ*ನ | ಸುಕುಂಕು | ಮರಜ | *ಸ್ತ*ತಿವಿ | ಲೇಪನ | ಗಭ*ಸ್ತಿ* | ಪರಿರಂ | ಜಿತನಿ | ಜೋನ್ನತ | ವಿ ಶಾಲೋ

ಮೊದಲ ಗಣದ ಎರಡನೆಯ ಅಕ್ಷರ, ನಾಲ್ಕನೆಯ ಗಣದ ಮೊದಲನೆಯ ಅಕ್ಷರ, ಮತ್ತು ಆರನೆಯ ಗಣದ ಕೊನೆಯ ಅಕ್ಷರ (ಎಂದರೆ 2, 10 ಮತ್ತು 18ನೆಯ ಅಕ್ಷರಗಳು) ಪ್ರಾಸವಾಗಿರುವುದನ್ನು ಗಮನಿಸಬಹುದು.  ಈಗಿದನ್ನು ಇಡೀ ಪದ್ಯದಲ್ಲಿ ಗಮನಿಸಿ:

ಶ್ರೀ*ಸ್ತ*ನಸುಕುಂಕುಮರಜ*ಸ್ತ*ತಿವಿಲೇಪನಗಭ*ಸ್ತಿ*ಪರಿರಂಜಿತನಿಜೋನ್ನತವಿ ಶಾಲೋ
ರ*ಸ್ಥ*ಲಪರಿಸ್ಫುರಿತಕೌ*ಸ್ತು*ಭವಿಭೂಷಣರುಚಿ*ಸ್ತ*ಬಕಿತಾಖಿಳನಭಂ ದಿವಿಜಕಾಂತಾ
ಹ*ಸ್ತ*ಚಮರಾನಿಳಮುಹು*ಸ್ತ*ರಳಿತಪ್ರಥಿತವ*ಸ್ತು*ಚಯಕುಂಡಲವಿಮಂಡಿತಕಪೋಲಂ
ಧ್ವ*ಸ್ತ*ದಿತಿಜಂ ನತನಮ*ಸ್ತ*ವಿಬುಧಂ ಭುವನವಿ*ಸ್ತ*ರಣಪಾದನೆಸೆದಂ ಫಣಿಪತಲ್ಪಂ

ಎಲ್ಲ ಪ್ರಾಸಸ್ಥಾನಗಳಲ್ಲೂ ಚಾಚೂ ತಪ್ಪದೇ ಸ್ತ ಅಥವಾ ಸ್ಥ ಅಕ್ಷರಗಳು ಬಂದಿರುವುದನ್ನು ಗಮನಿಸಬಹುದು.

ಅದು ಸರಿ, 2, 10 ಮತ್ತು 18ನೆಯ ಅಕ್ಷರಗಳೇ ಏಕೆ ಎಂದರೆ, ಮೇಲಿನ ಸಾಲನ್ನೇ ಅದರ ಐದೈದರ ಮಾತ್ರಾಕಾಲದ ಲಯದನ್ವಯ ಇಟ್ಟು ಒಂದೊಂದು ಸಾಲಿನಲ್ಲಿ ಎರಡೆರಡು ಗಣಗಳನ್ನಿಟ್ಟು ನೋಡಿದರೆ ಅದರ ಮರ್ಮ ತಿಳಿಯುತ್ತದೆ:
 

ಶ್ರೀ*ಸ್ತ*ನಸು ಕುಂಕುಮರ
ಜ*ಸ್ತ*ತಿವಿ ಲೇಪನಗ
ಭ*ಸ್ತಿ*ಪರಿ ರಂಜಿತನಿ ಜೋನ್ನತವಿ ಶಾಲೋ
ರ*ಸ್ಥ*ಲಪ ರಿಸ್ಫುರಿತ
ಕೌ*ಸ್ತು*ಭವಿ ಭೂಷಣರು
ಚಿ*ಸ್ತ*ಬಕಿ ತಾಖಿಳನ ಭಂದಿವಿಜ ಕಾಂತಾ

ಮೇಲಿನ ಸಾಲುಗಳನ್ನು ಗಮನಿಸಿದರೆ, ಪ್ರತಿಸಾಲಿನಲ್ಲೂ ಆದಿಪ್ರಾಸವು (ಎರಡನೆಯ ಅಕ್ಷರ) ಮೂಡಿರುವುದನ್ನು ಗಮನಿಸಬಹುದಲ್ಲವೇ?  ನಿರ್ದಿಷ್ಟವಾಗಿ ಪಾದದ 2, 10 ಮತ್ತು 18ನೆಯ ಅಕ್ಷರಗಳಲ್ಲೇ ಪ್ರಾಸಸ್ಥಾನವನ್ನಿಟ್ಟಿರುವುದಕ್ಕೆ ಇದೇ ಕಾರಣ - ಕೇವಲ ಅಕ್ಷರಗಣದ ಲೆಕ್ಕದಲ್ಲ, ಮಾತ್ರಾಗಣದ ಲಯವನ್ನನುಸರಿಸಿದರೂ ಪ್ರತಿ ಗಣದಲ್ಲೂ ಪ್ರಾಸಸೌಂದರ್ಯವು ಎದ್ದು ತೋರಲಿ ಎಂಬುದು ಉದ್ದೇಶ (ಮೇಲೆ ಮೂಡಿದ ಆರು ಸಾಲುಗಳ ಪದ್ಯ ಬಹುತೇಕ ಕುಸುಮಷಟ್ಪದಿಯನ್ನೇ ಹೋಲುತ್ತದೆ, ಆದರೆ ತಾಂತ್ರಿಕವಾಗಿ ಕುಸುಮಷಟ್ಪದಿಯಲ್ಲ, ಅದರ ಲಕ್ಷಣಗಳು ಬೇರೆ).

ಈ ಸುಂದರವಾದ ವೃತ್ತವನ್ನು ಅನೇಕ ಕವಿಗಳು ಏಕತಾನವನ್ನು ಮುರಿಯುವುದಕ್ಕೆ, ಲಯವರ್ಧನೆಗಾಗಿ ಉಪಯೋಗಿಸುತ್ತಾರೆಂದು ಹೇಳಿದೆ.  ರನ್ನನ ಗದಾಯುದ್ಧದಿಂದ ಇದೇ ವೃತ್ತದ ಒಂದು ಪದ್ಯ 

ತಾರಕನಖಂ ನವಸರೋರುಹದಳಾಂಘ್ರಿತಳ ಚಾರುಘನನಾಭಿ ಪುಳಿನಸ್ಥಳ ನಿತಂಬಂ
ಹಾರಲತಿಕಾಕೃತಿ ವಿಹಾರ ನಿಬಿಡಸ್ಪುರದುರೋಜಯುಗಳಂ ಮದನಪಾಶನಿಭ ಹಸ್ತಂ
ಸ್ಮೇರವದನಂ ಚಳಚಕೋರನಯನಂ ಚಿಕುರ ಚಾರು ರಮಣೀಯ ಮೃದುಕುಂತಳಕಳಾಪಂ
ಚಾರು ರುಚಿಸೂತ್ರ ಸುಕುಮಾರಮೆಸೆಗುಂ ಹೃದಯಹಾರಿ ಪೊಗೞಲ್ಕರಿದುಮಾ ಸತಿಯ ರೂಪಂ (8-57)

ಇಲ್ಲೂ ಮೇಲೆ ಹೇಳಿದ ಎಲ್ಲ ನಿಯಮಗಳೂ ಪಾಲಿತವಾಗಿರುವುದನ್ನು ಕಾಣಬಹುದು (ಅಕ್ಷರಗಣ, ಮಾತ್ರಾಗಣ, ಆದಿಪ್ರಾಸ, ಒಳಪ್ರಾಸಗಳು ಇತ್ಯಾದಿ).

ಇನ್ನು ನಂಜುಂಡರು ತೋರಿದ ನಾಗಚಂದ್ರನ ಪದ್ಯ ಇನ್ನೂ ಅಪರೂಪ - ಏಕೆಂದರೆ, ಇದು ಲಲಿತವೃತ್ತವೆಂದೇ ಸೂಚಿಸಲ್ಪಟ್ಟಿದ್ದರೂ, ಬಹುತೇಕ ಲಲಿತವೃತ್ತದ ಅಕ್ಷರಗಣವಿನ್ಯಾಸವನ್ನೇ ಅನುಸರಿಸಿದ್ದರೂ ಪದ್ಯದ ಹಲವೆಡೆ ಅಕ್ಷರಗಣಗಳನ್ನು ಗಾಳಿಗೆ ತೂರಿ, ಕೇವಲ ಮಾತ್ರಾಗಣವಿನ್ಯಾಸವನ್ನಷ್ಟೇ ಕವಿ ಲಕ್ಷ್ಯದಲ್ಲಿಟ್ಟುಕೊಂಡಿದ್ದಾನೆ.  ಹೀಗಿದ್ದರೂ ಪದ್ಯದ ಮತ್ತೊಂದು ಲಕ್ಷಣವಾದ ಐದೈದರ ಮಾತ್ರಾಲಯಕ್ಕಾಗಲೀ ಮಧ್ಯಪ್ರಾಸಗಳಿಗಾಗಲೀ ಒಂದಿನಿತೂ ಭಂಗ ಬಂದಿಲ್ಲ.  ಇದನ್ನಿಲ್ಲಿ ವಿವರವಾಗಿ ನೋಡಬಹುದು:

ಮೂಲಪದ್ಯ:
ತುಂಗಕುಚಕುಂಭಯುಗವಂಗಜಗಜಂ ಮೊಗವಡಂಗಳೆದುದೆನಿಸೆ ವಿಗತಾಂಚಲಮಪಾಂಗಂ
ಮೀಂಗೆಳೆಸುವಿಂದುಕಿರಣಂಗಳೆನೆ ಕರ್ಣಯುಗಳಂಗಳವತಂಸ ಮಣಿಯಂ ಬಳಸೆ ಘರ್ಮೋ
ದಂಗಳಿರೆ ನೊಸಲೊಳೆಳದಿಂಗಳಮರ್ದಿನ ಪನಿಯ ಪಾಂಗನೊಳಕೊಂಡು ನಳಿದೋಳ್ ನಲಿದು ನೀಳು
ತ್ತಂಗಭವಪಾಶಮೆನೆ ಪಿಂಗದರೆವುದು ಘಟ್ಟಿಯಂ ಗಡಣದಿಂ ಘಟ್ಟಿವಳ್ತಿಯರ ತಂಡಂ

ಐದೈದರ ಮಾತ್ರಾವಿನ್ಯಾಸ ಮತ್ತು ಒಳಪ್ರಾಸ (ಪ್ರಾಸಾಕ್ಷರವನ್ನು * ಸಂಜ್ಞೆಯಿಂದ ಸೂಚಿಸಲಾಗಿದೆ)
ತುಂ**ಕುಚ | ಕುಂಭಯುಗ | ವಂ**ಜಗ | ಜಂ ಮೊಗವ | ಡಂ**ಳೆದು | ದೆನಿಸೆ ವಿಗ | ತಾಂಚಲಮ | ಪಾಂಗಂ
ಮೀಂ*ಗೆ*ಳೆಸು | ವಿಂದುಕಿರ | ಣಂ**ಳೆನೆ | ಕರ್ಣಯುಗ | ಳಂ**ಳವ | ತಂಸ ಮಣಿ | ಯಂ ಬಳಸೆ | ಘರ್ಮೋ
ದಂ**ಳಿರೆ | ನೊಸಲೊಳೆಳ | ದಿಂ**ಳಮ | ರ್ದಿನ ಪನಿಯ | ಪಾಂ**ನೊಳ | ಕೊಂಡು ನಳಿ | ದೋಳ್ ನಲಿದು | ನೀಳು
ತ್ತಂ**ಭವ | ಪಾಶಮೆನೆ | ಪಿಂ**ದರೆ | ವುದು ಘಟ್ಟಿ | ಯಂ **ಡಣ | ದಿಂ ಘಟ್ಟಿ | ವಳ್ತಿಯರ | ತಂಡಂ

ಅಕ್ಷರಗಣವಿಭಾಗ (ಛಂದೋಭಂಗವಾಗಿರುವ ಗಣಗಳನ್ನು * ಸಂಜ್ಞೆಯಿಂದ ಸೂಚಿಸಲಾಗಿದೆ)
ತುಂಗಕು | ಚಕುಂಭ | ಯುಗವಂ | ಗಜಗ | ಜಂ ಮೊಗ | ವಡಂಗ | *ಳೆದುದೆನಿ* | ಸೆ ವಿಗ | ತಾಂಚಲ | ಮಪಾಂಗಂ
ಮೀಂಗೆಳೆ | ಸುವಿಂದು | ಕಿರಣಂ | ಗಳೆನೆ | ಕರ್ಣಯು | ಗಳಂಗ | ಳವತಂ | ಸ ಮಣಿ | ಯಂ ಬಳ | ಸೆ ಘರ್ಮೋ
ದಂಗಳಿ | *ರೆ ನೊಸಲೊ* | ಳೆಳದಿಂ | ಗಳಮ | *ರ್ದಿನ ಪನಿ* | ಯ ಪಾಂಗ | ನೊಳಕೊಂ | ಡು ನಳಿ | ದೋಳ್ ನಲಿ | ದು ನೀಳು
ತ್ತಂಗಭ | ವಪಾಶ | ಮೆನೆ ಪಿಂ | ಗದರೆ | *ವುದು ಘ* | ಟ್ಟಿಯಂ ಗ | ಡಣದಿಂ | *ಘಟ್ಟಿ* | ವಳ್ತಿಯ | ರ ತಂಡಂ

  • ಐದೈದು ಮಾತ್ರೆಯ ಲಯವನ್ನೂ ಒಳಪ್ರಾಸವನ್ನೂ ಪದ್ಯವು ಉಳಿಸಿಕೊಂಡಿದ್ದರೂ ಮೂರಕ್ಷರದ ಗಣವಿಭಾಗ ಮಾಡಿದಾಗ ಹಲವೆಡೆ ಛಂದೋಭಂಗವಾಗಿರುವುದನ್ನು ಗಮನಿಸಬಹುದು.  
  • ಮೊದಲ ಸಾಲಿನ 7ನೆಯ ಗಣದಲ್ಲಿ ಮೂರಕ್ಷರದ ಸಗಣವು (ಸಲಗಂ ಎಂಬಂತೆ) ಬರುವುದರ ಬದಲು ನಾಲ್ಕು ಲಘು ಅಕ್ಷರಗಳು ("ಳೆದುದೆನಿ") ಬಂದಿವೆ;
  • ಮೂರನೆಯ ಸಾಲಿನ ಎರಡನೆಯ ಗಣದಲ್ಲಿ ಮೂರಕ್ಷರದ ಜಗಣವು (ಜಭಾನ ಎಂಬಂತೆ) ಬರುವುದರ ಬದಲು ಮತ್ತೆ ನಾಲ್ಕಕ್ಷರದ ಸರ್ವಲಘು ("ರೆ ನೊಸಲೊ") ಬಂದಿದೆ.  
  • ಅದೇ ಸಾಲಿನ ಐದನೆಯ ಗಣದಲ್ಲಿ ಮೂರಕ್ಷರದ ಭಗಣದ (ಭಾನಸ ಎಂಬಂತೆ) ಬದಲು ಮತ್ತೆ ನಾಲ್ಕಕ್ಷರದ ಸರ್ವಲಘು ಬಂದಿದೆ ("ರ್ದಿನ ಪನಿ");
  • ಕೊನೆಯ ಸಾಲಿನ ಐದನೆಯ ಗಣವು ಮೂರಕ್ಷರದ್ದೇ ಆದರೂ ಅಲ್ಲಿ ಬರಬೇಕಾದ  ಭಗಣದ (ಭಾನಸ ಎಂಬಂತೆ) ಬದಲು ಸಗಣ (ಸಲಗಂ ಎಂಬಂತೆ) ಬಂದಿದೆ.  
  • ಅದೇ ಸಾಲಿನ 8ನೆಯ ಗಣದಲ್ಲಿ ನಗಣ (ನಸಲ ಎಂಬಂತೆ) ಬರಬೇಕಿತ್ತು.  ಅದು ಮೂರು ಲಘುಗಳ ಗಣ.  ಬದಲಿಗೆ ಅಲ್ಲಿ ಒಂದು ಗುರು ಮತ್ತು ಒಂದು ಲಘುವಿನ "ಘಟ್ಟಿ" ಎಂದು ಬಂದಿದೆ.


ಇದು ಒಂದು ಕಡೆಯಾಗಿದ್ದರೆ ಲಿಪಿಕಾರನ ದೋಷವೆಂದು ತರ್ಕಿಸಬಹುದಿತ್ತು.  ಆದರೆ ಇಷ್ಟೂ ಕಡೆ ಅಕ್ಷರಗಣದ ನಿಯಮಗಳು ಭಂಗವಾಗಿರುವುದರಿಂದ ಕವಿ ತಾನೇ ಸ್ವಾತಂತ್ರ್ಯವಹಿಸಿ ಹೀಗೆ ಮಾಡಿದ್ದಾನೆಂದು ತರ್ಕಿಸಬೇಕಾಗುತ್ತದೆ.  ಪ್ರಾಚೀನಕವಿಗಳು ಸಾಮಾನ್ಯವಾಗಿ ಹೀಗೆ ಮಾಡುವವರಲ್ಲ.  ಆದ್ದರಿಂದ ಇದು ಅಪರೂಪದ್ದೆನಿಸಿಕೊಳ್ಳುತ್ತದೆ.

ಒಟ್ಟಿನಲ್ಲಿ, ಲಲಿತವೃತ್ತವು ಅಕ್ಷರಗಣದ ಲಯವೈವಿಧ್ಯವನ್ನೂ, ಮಾತ್ರಾಗಣದ ಏಕರೂಪತೆಯನ್ನೂ ಮೇಳೈಸಿಕೊಂಡಿರುವ, ಅಕ್ಷರಗಣ-ಮಾತ್ರಾಗಣ ಎರಡೂ ಲಯಗಳಿಗೂ ತಕ್ಕ ಪ್ರಾಸವಿನ್ಯಾಸವನ್ನೂ ಹೊಂದಿರುವ ಅಪರೂಪದ ವೃತ್ತ.

Sunday, January 3, 2021

ಮಾತಲ್ಲದ ಮಾತಿಗೆ ಅರ್ಥವಲ್ಲದ ಅರ್ಥ

 


"ಏನು ಸರ್ ನಿಮ್ಮ ಮಗಳನ್ನು ಸಂಗೀತದ ಕ್ಲಾಸ್ ಗೆ ಕಳುಹಿಸೋದು ನಿಲ್ಲಿಸಿ ಬಿಟ್ರಿ"
"ಇನ್ನೇನ್ರೀ ಮತ್ತೆ ಯಾವಾಗ್ಲೂ “ನಿಮಪದಪ ನಿಮಪದಪ” ಅನ್ನೋ ಸಂಗೀತ ಹೇಳಿ ಕೊಡ್ತಾರೆ ಅಲ್ಲಿಂದ ಮುಂದಕ್ಕೆ ಹೋಗಲ್ಲ ಅಂತಾರೆ"

ಹೀಗೊಂದು ಚಟಾಕಿ ಹಾರಿಸಿದರು, ಮಿತ್ರ Ramaprasad Konanurರು.  ಸಂಗೀತದ ಸರಳೆವರಸೆ ವಿಷಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಚಟಾಕಿಯಿದು.  ಹೌದು ಮತ್ತೆ, ಸಂಗೀತದ ಹೆಸರಿನಲ್ಲಿ ಮಕ್ಕಳಿಗೆ ಅಪ್ಪ ಅಮ್ಮಂದಿರ ಬಗ್ಗೆ ಹಾಗೆಲ್ಲ ಹೇಳಿಕೊಟ್ಟರೆ ಹೇಗೆ?  ಅಪ್ಪ ಅಮ್ಮಂದಿರು ಸುಮ್ಮನಿದ್ದುಬಿಡುತ್ತಾರಾ?  ಬದಲಿಗೆ ಆ ಸಂಗೀತದ ಮೇಷ್ಟ್ರು ಇದನ್ನು ಪ್ರಯತ್ನಿಸಬಹುದಿತ್ತು:

ಸರಿ, ನೀದಪಾ; ಸರಿಸರಿ ನೀsss ದಪಾ: ನೀಸರಿ ನೀss ದಪಾ; ನೀsss ಸರಿಸರಿ ನೀsದಪಾ; ನೀsss ನೀsss ನೀsss ನೀದಪಾ

ಆಗ ಅಪ್ಪ ಅಮ್ಮ ಸಂಗೀತ ಬಿಡಿಸುತ್ತಿರಲಿಲ್ಲ, ಹುಡುಗಿಯೇ ಬಿಟ್ಟು ಹೋಗುತ್ತಿದ್ದಳು.  ಹೋದರೆ ಹೋದಳು, ಅದಕ್ಕೆ ಅಷ್ಟೇನು ತಲೆ ಕೆಡಿಸಿಕೊಳ್ಳಬೇಕಿಲ್ಲ; ಆದರೆ ಅದಕ್ಕೆ ಉತ್ತರವಾಗಿ ಹುಡುಗಿಯೇ "ದಪ್ಪದಪ್ಪದಪದಪಾ ದಪಾ, ದಪದಪದಪ ದಪದಪದಪ ದಪದಪ" ಎಂದು ಕೊಡಲು (ಹೇಳಿಕೊಡಲು), ಶುರುಮಾಡಿದರೆ, 'ದಾರಿದಾರಿ'ಯಲ್ಲಿ?  ಆಮೇಲೆ "ಪಾದ, ನೀಪಾದ, ಸಾssರಿ ನೀಪಾದ, ಸಾರಿಸಾರಿ ನೀಪಾದ, ಸದಾ ನೀಪಾದ, ದಾಸ ನೀಪಾದ ದಾಸದಾಸ" ಎಂದು 'ಪರಿಪರಿ'ಯಾಗಿ ಬೇಡುವ ಪರಿಸ್ಥಿತಿಯುಂಟಾಗಿಬಿಟ್ಟರೆ ಮೇಷ್ಟರಿಗೆ?  ಎಷ್ಟಾದರೂ ಮೇಷ್ಟರು, 'ವರಸೆ'ಯ ಅನಂತಸಾಧ್ಯತೆಗಳನ್ನು ಪ್ರಾಯೋಗಿಕವಾಗಿ ಅರಿತವರು, ಸ್ವಲ್ಪ 'ನಿಧಾನಿ'ಸಿದರು, ಬಚಾವಾದರು.

ಸಂಗೀತದ ಸ್ವರಸಂಜ್ಞೆಗಳ ಅರ್ಥಸಾಧ್ಯತೆಗಳು ನಮ್ಮ ಹಾಸ್ಯಪ್ರಜ್ಞೆಯನ್ನೆಂತೋ ಅಂತೇ ಗಂಭೀರ ವಾಗ್ಗೇಯಪ್ರತಿಭೆಯನ್ನೂ ಸಾಕಷ್ಟೇ ಕೆಣಕಿದೆ.  ತ್ಯಾಗರಾಜರ ಪ್ರಖ್ಯಾತ "'ಸಾಮನಿಗಮ'ಜ ಸುಧಾಮಯ" ಎಂಬ ಸಾಲು, ಪ್ರಖ್ಯಾತವಾದ "ವಲಜಿ" ರಾಗಮಾಲಿಕಾವರ್ಣದ "'ಪದಸ'ರೋಜಮುಲನೇ ನಮ್ಮಿ" ಎಂಬ ಚರಣ, ಬಾಲಮುರಳೀಕೃಷ್ಣರ "ಓಂಕಾರಪ್ರಣವ" ಷಣ್ಮುಖಪ್ರಿಯ ವರ್ಣದ "'ಪದನೀ'ರಜಮುಲೇ ನಮ್ಮಿತಿ" ಎಂಬ ಚರಣ - ಕೂಡಲೇ ನೆನಪಾಗುವಂಥದ್ದು.  ಮತ್ತೆ, ರಾಮಸ್ವಾಮಿದೀಕ್ಷಿತರ ತೋಡಿರಾಗದ "ಸರಿಗಾನಿ ದಾನಿ ಪಾಮರಿನಿ ನೀಪದ" ಎಂಬ ರಚನೆ, ಸಂಪೂರ್ಣ ಸ್ವರಸಂಕೇತಾಕ್ಷರಗಳಿಂದಲೇ ನಿರ್ವಹಿಸಲ್ಪಟ್ಟದ್ದು.  ಅಂಥದ್ದೇ ಮತ್ತೊಂದು ಪ್ರತಿಭಾಪೂರ್ಣ ರಚನೆ ಬಾಲಮುರಳೀಕೃಷ್ಣರ ತೋಡಿರಾಗದ "ಮಾ ಮಾನಿನಿ ನೀ ಧಾಮಗನಿ ನೀ ದಾಸರಿನಿಗಾದಾ".  ಇದಂತೂ ಹಲವು ಮನೋಜ್ಞವಾದ ಅರ್ಥಪೂರ್ಣವಾದ ಸ್ವರಾಕ್ಷರಪದಪ್ರಯೋಗಗಳಿಂದ ಕೂಡಿದೆ - ಉದಾ: "ಸರಿಗಾನಿ ದಾರಿಮಾರಿ ಗದಾಧರಿ ನೀ ನಿಗಗನಿ ನೀ ಮಗನಿ ಸಾಮನಿಗಮ ಗರಿಮಗನಿ".  ಒಂದುಕಡೆ, ಇರುವ ಏಳೇ ಅಕ್ಷರಗಳಲ್ಲಿ ಅರ್ಥಪೂರ್ಣವಾದ ಪದಗಳನ್ನು, ಭಾವಪೂರ್ಣವಾದ ವಾಕ್ಯಗಳನ್ನು ರಚಿಸುವುದು; ಮತ್ತೊಂದೆಡೆ, ಆ ಅಕ್ಷರಸಂಯೋಜನೆ ಆ ರಾಗದ ಸ್ವರೂಪಕ್ಕೆ ಸಹಜವಾಗಿ ಇರುವಂತೆ ರಾಗಪ್ರವಾಹದ ಅಂದಗೆಡದಂತೆ ನೋಡಿಕೊಳ್ಳುವುದು - ಇದು ಹಗ್ಗದಮೇಲಿನ ನಡಿಗೆಯೇ ಸರಿ.  ಇಷ್ಟಾಗಿಯೂ ಇತ್ತ 'ಮಾತೂ' ಅತ್ತ 'ಧಾತು'ವೂ ಸಂಪೂರ್ಣ ರುಚಿಸದಿರುವ ಸಾಧ್ಯತೆಯೇ ಹೆಚ್ಚು.

ಸಂಗೀತದ ತಾಂತ್ರಿಕಾಂಶವೇ ಸಾಹಿತ್ಯವಾಗಿ 'ಮಾತು' ಆಗಿ ಮಿಂಚುವ ಪರಿಯಿದು.  ಸಾಹಿತ್ಯದ ತಾಂತ್ರಿಕಾಂಶವೂ ಕವಿಯ ಪ್ರತಿಭಾವಿಶೇಷದಿಂದ ಸ್ವತಃ ಸಾಹಿತ್ಯವಾಗಿ ಮಿಂಚುವುದೂ ಉಂಟು.  ರನ್ನನ ಈ ಸಾಲನ್ನು ನೋಡಿ:

ಗುರುವಂ ಲಘುಸಂಧಾನದಿ
ನರನಿಸೆ ಗುರುಲಘುವಿಮಿಶ್ರಿತಂ ದೊರಕೊಳಲ್ ತ-
ದ್ಗುರು ತಚ್ಛಂದೋವೃತ್ತಿಗೆ
ದೊರೆಯೆನಿಸಿರ್ದುದು ಮನಕ್ಕೆ ದುರ್ಯೋಧನನಾ

ಗುರುವಾದ ದ್ರೋಣನನ್ನು ಲಘುವಾಗಿ ಪರಿಗಣಿಸಿ ಅರ್ಜುನನು ಬಾಣಗಳಿಂದ ಹೊಡೆಯಲು ಆ ಗುರುವಿನ ಶರೀರ ಗುರುಲಘುಮಿಶ್ರಿತವಾದ ಛಂದೋರೂಪದಂತೆ (ಪದ್ಯದಂತೆ) ದುರ್ಯೋಧನನಿಗೆ ಕಂಡಿತಂತೆ.  ಪ್ರತಿಭೆಯೇ ಸರಿ, ಆದರೆ ರಣಭೂಮಿಯ ಘೋರಸನ್ನಿವೇಶದಲ್ಲಿ, ಏಕಾಂಗಿಯಾಗಿ ಮಿಡುಕುತ್ತಾ ಕುದಿಯುತ್ತಾ ರಣಭೂಮಿಯುದ್ದಕ್ಕೂ ತನ್ನ ಸೋಲಿನ ನಿಶಾನೆಗಳನ್ನೇ ಕಾಣುತ್ತಾ ಬಂಧುಮಿತ್ರರ ಕಳೇಬರಗಳನ್ನು ಕಾಣುತ್ತಾ, ತುಳಿಯುತ್ತಾ, ಎಡವುತ್ತಾ, ಎಣೆಯಿಲ್ಲದ ದುಃಖದಿಂದ ಪರಿತಪಿಸುತ್ತಾ ಆ ರಣಭೂಮಿಯಲ್ಲಿ ನಡೆದು ಬರುತ್ತಿದ್ದ ದುರ್ಯೋಧನನಿಗೆ, "ಶರಜಾಲಜರ್ಜರಿತಗಾತ್ರತ್ರಾಣ"ನಾಗಿ ಸತ್ತು ಬಿದ್ದಿರುವ ಗುರುವಿನ ಶರೀರ ಗುರುಲಘುವಿಮಿಶ್ರಿತವಾದ ಪದ್ಯದಂತೆ ಕಂಡಿತಲ್ಲಾ (ಆ ಸಮಯದಲ್ಲೂ ದುರ್ಯೋಧನನಿಗೆ ವ್ಯಾಕರಣ-ಛಂದಸ್ಸುಗಳ ನೆನಪಾಯಿತಲ್ಲಾ), ಅದೀಗ ತಮಾಷೆಯೇ ಸರಿ, ಕ್ರೂರ ತಮಾಷೆ.  ಇಲ್ಲಿ ಕವಿಯ ಪ್ರತಿಭೆಗೆ ತಲೆದೂಗಬೇಕೋ, ದುರ್ಯೋಧನನ ಅಪ್ರಸ್ತುತಪ್ರಸಂಗಕ್ಕೆ ತಲೆಯ ಮೇಲೆ ಕೈ ಹೊರಬೇಕೋ ಓದುಗನಿಗೆ-ಕೇಳುಗನಿಗೆ ಬಿಟ್ಟ ವಿಷಯ.  ಪ್ರಸಂಗಾವಧಾನವಿಲ್ಲದ ಪ್ರತಿಭೆ ರಸಾಭಾಸವನ್ನೂ ಉಂಟುಮಾಡಬಹುದಷ್ಟೇ?  ಅದೇನೇ ಇರಲಿ, ಪ್ರತಿಭೆ ಈ ರೂಪದಲ್ಲೂ ಇರಬಹುದೆಂಬುದಂತೂ ಗಮನಿಸಬೇಕಾದ ಮಾತು.

ಇದೇ ಪ್ರತಿಭೆ ಸಹಜಸುಂದರ ಹಾಸ್ಯವೇ ಆಗಿ ಹೊಮ್ಮುವ ಪರಿಯನ್ನೂ ನೋಡಿಬಿಡಿ.  ಭಾಮಿನಿ (ಷಟ್ಪದಿ)ಯ ಲಕ್ಷಣವನ್ನು ವಿವರಿಸುತ್ತಾ ಲಾಕ್ಷಣಿಕರಾದ ಅ ರಾ ಮಿತ್ರ ಹೀಗೆ ಹೇಳುತ್ತಾರೆ:

ಇವಗೆ ಭಾಮಿನಿ ಹುಚ್ಚು ಒಂದೇ
ಸಮನೆ 'ಮಾತ್ರೆ'ಗಳೇಳ ಕೊಡುತಿರಿ
ಕ್ರಮವ ತಪ್ಪದೆ ಮೂರು ನಾಲ್ಕರ ತೆರದಿ ಏಳು ಸಲ
ಸಮೆಯದಿರೆ ಮತ್ತೊಂದು ಮಂಡಲ
ಹವಣಿಸುತ ಬರೆ ಲೇಸು ಕೇಳಿರಿ
ಬೆವರಬೇಡಿರಿ 'ಕೊನೆಗೆ ಗುರು'ಕೃಪೆಯಿರಲು ಬದುಕುವನು

ಅಲ್ಲವೇ ಮತ್ತೆ?  ಮೂರು-ನಾಲ್ಕರ ಡೋಸುಗಳಲ್ಲಿ ಏಳೇಳು ಮಾತ್ರೆಗಳನ್ನು ಎರಡು ಮಂಡಲ ಕೊಟ್ಟರೆ ತಾನೆ ಭಾಮಿನಿಯ ಹುಚ್ಚು ಬಿಡುವುದು? ಅದೂ ಕೊನೆಗೆ ಗುರುಕೃಪೆಯಿದ್ದರೆ ಮಾತ್ರ (ಭಾಮಿನೀಷಟ್ಪದಿಯ ಲಕ್ಷಣ - ಮೂರು+ನಾಲ್ಕರ ಏಳೇಳು ಗಣಗಳು ಮತ್ತು ಒಂದು ಗುರು - ಇಷ್ಟಾದರೆ ಭಾಮಿನೀಷಟ್ಪದಿಯ ಒಂದು ಮಂಡಲ (ಪಾದ)ವಾಯಿತು; ಅಂಥದ್ದೇ ಇನ್ನೊಂದು ಮಂಡಲವಾದರೆ ಪೂರ್ಣಷಟ್ಪದಿ).

ಇದೇ ಅರಾ ಮಿತ್ರರು ತಮ್ಮ "ಪಂಡಿತನ ಸಂಕಟ" ಎಂಬ ಲಲಿತಪ್ರಬಂಧವೊಂದರಲ್ಲಿ, ಹುಚ್ಚಾಸ್ಪತ್ರೆಗೆ ಎಳೆತರಲ್ಪಟ್ಟ ವ್ಯಾಕರಣಪಂಡಿತರೊಬ್ಬರ ಸಂಕಟವನ್ನು ಡಾಕ್ಟರ ದೃಷ್ಟಿಯಿಂದ ಚಿತ್ರಿಸುತ್ತಾರೆ.  ಪಂಡಿತರು ತಮ್ಮ ಸಂಕಟವನ್ನು ಗಂಟೆಗಟ್ಟಲೆ ವ್ಯಾಕರಣದ ಭಾಷೆಯಲ್ಲೇ ವರ್ಣಿಸಿದ್ದನ್ನು ಕೇಳಿ ತಲೆಕೆಟ್ಟು ಸುಸ್ತಾಗಿ ರಾತ್ರಿ ಮನೆಗೆ ಬಂದ ಡಾಕ್ಟರು, ಆ ಕತೆಯನ್ನು ತನ್ನ ತಂದೆಯ ಬಳಿ ಹೇಳುತ್ತಾರೆ.  ಹಿರಿಯರಾದ ತಂದೆ ತಮ್ಮ ಅನುಭವದಿಂದ ನಾಲ್ಕು ಮಾತು ಹೇಳಿಯಾರು ಎನ್ನುವ ಆಸೆ ಡಾಕ್ಟರರದ್ದು.  ಆ ತಂದೆಯೋ ನಿವೃತ್ತ ಛಂದಶ್ಶಾಸ್ತ್ರಪಂಡಿತರು.  ಅವರು ಹೇಳುತ್ತಾರೆ "ಏನು ಮಾಡೋದು ಮಗು, ಪಾಪ ಗ್ರಹಚಾರ.  ಆತನನ್ನು ನಾನು ಬಲ್ಲೆ... ವ್ಯಾಕರಣ ಎಂದರೆ ಪ್ರಾಣ ಅವರಿಗೆ... ಆದರೆ ಅವರ ದಾಂಪತ್ಯಜೀವನದಲ್ಲಿ 'ಸಾಂಗತ್ಯ'ವಿಲ್ಲ,  ಅವರ ಬದುಕು ಲಲಿತ ಅಥವಾ ಸರಳರಗಳೆಯ ಹಾಗೆ ಉತ್ಸಾಹದಿಂದ ಸಾಗಲಿಲ್ಲ.  ಎಷ್ಟಾದರೂ ಅವರು 'ಗುರು'ಗಳಲ್ಲವೇ?  ಅವರ ಹೆಂಡತಿ ಕೂಡ ಅಲ್ಪಪ್ರಾಣಗಳ ಹಾಗೆ ಅವರನ್ನು ಅಷ್ಟು ಲಘುವೆಂದು ಎಣಿಸಬಾರದಿತ್ತು.  ಒಟ್ಟಿನಲ್ಲಿ ಮದುವೆಯಾದಂದಿನಿಂದ ಭಾಮಿನೀಷಟ್ಪದಿ ಅವರಿಗೆ ಒಗ್ಗಲಿಲ್ಲ" - ಈ ಮಾತನ್ನು ಕೇಳಿ ಮಗನಿಗೆ ಬಂದದ್ದು ನಿದ್ದೆಯಲ್ಲ, ಮೂರ್ಛೆ!

ಇರಲಿ, ಇವೆಲ್ಲ ಗಂಭೀರವಾದ ಸಾಹಿತ್ಯಸಂಗೀತಪ್ರತಿಭೆಯ ಮಾತಾಯಿತು.  ಅದರಾಚೆಗೂ ಪ್ರತಿಭೆಯೆಂಬುದು ಮಾತಲ್ಲದ ಮಾತಿಗೆ, ಅರ್ಥವಲ್ಲದ ಅರ್ಥವನ್ನು ಜೋಡಿಸಿ ನೋಡಿ ಹಿಗ್ಗುತ್ತಲೇ, ರೋಮಾಂಚಗೊಳ್ಳುತ್ತಲೇ ಇರುತ್ತದೆ.  ಬೆಕ್ಕುಗಳು ಜಗಳಾಡುವಾಗ ಕಿರುಚುವುದು ಮಗುವಿನ ಅಳುವಿನಂತೆಯೇ ಕೇಳುತ್ತದೆ. ನಡುರಾತ್ರಿಯ ನೀರವಮೌನದಲ್ಲಿ ಸುತ್ತಮುತ್ತ ಯಾರೂ ಇಲ್ಲದಿರುವಾಗ ಬೆಕ್ಕುಗಳು ಕಿರುಚಲು ಶುರುಮಾಡಿದರೆ, ಪ್ರೇತಶಿಶುವೊಂದರ ಅಳುವನ್ನು ಕೇಳಿದಂತಾಗಿ ರಕ್ತ ಹೆಪ್ಪುಗಟ್ಟುವುದು ಖಂಡಿತ.  ಊರ ಕಡೆಯ, ಚಿಕ್ಕಂದಿನ ನೆನಪುಗಳು ಯಾವಾಗಲೂ ರೋಮಾಂಚಕ.  ನಾಯಿಗಳು ಕೆಲವೊಮ್ಮೆ ಅಳುತ್ತವಲ್ಲ.  ಅದಕ್ಕೆ ಹಲವು ವ್ಯಾಖ್ಯಾನಗಳಿದ್ದುವು.  ಹೊರಗೆ ನಾಯಿಯೊಂದು ಅಳುತ್ತಿದ್ದರೆ, ಅದು ಮೇಲೆ ನೋಡಿಕೊಂಡು ಅಳುತ್ತಿದೆಯೋ ನೆಲ ನೋಡಿಕೊಂಡು ಅಳುತ್ತಿದೆಯೋ ನೋಡಲು ಹೇಳುತ್ತಿದ್ದರು.  ಮೇಲೆ ನೋಡಿಕೊಂಡು ಅಳುತ್ತಿದ್ದರೆ ಅದರ ಕಣ್ಣಿಗೆ ದೆವ್ವ ಕಾಣಿಸುತ್ತಿದೆಯೆಂದರ್ಥ, ಅಳುವಿನ ಜೊತೆಗೆ ಭಯ ತುಂಬಿದ ಬೊಗಳುವಿಕೆಯೂ ಸೇರಿರುತ್ತದಂತೆ.  ನೆಲ ನೋಡಿಕೊಂಡು ಅಳುತ್ತಿದ್ದರೆ ಯಾರೋ ಸಾಯುತ್ತಾರೆ ಎಂದರ್ಥವಂತೆ.  ಯಾರ ಮನೆಯ ಮುಂದೆ ಅಳುತ್ತದೆಯೋ ಅವರಿಗೆ ಒಳಗೇ ಪುಕಪುಕ; ಅದರಲ್ಲೂ ಯಾರಾದರೂ ವಯಸ್ಸಾದವರೋ, ರೋಗಿಷ್ಟರೋ, ಸಾಯಲು ಬಾಕಿಯಿರುವವರು ಮನೆಯಲ್ಲಿದ್ದರಂತೂ ಮುಗಿದೇ ಹೋಯಿತು - "ದರಿದ್ರದ್ದು ನಮ್ಮನೇ ಮುಂದೇನೇ ಅಳ್ತಿದೆ, ಓಡಿಸೋ ಅತ್ಲಾಗೆ" ಎನ್ನುವ ಉದ್ಗಾರ ಸಾಮಾನ್ಯ.  ಒಂದು ನಾಯಿಯಂತೂ "ಅವ್ವೊವ್ವೋssssss" ಎಂದು ಸ್ಪಷ್ಟಾಕ್ಷರಗಳೊಂದಿಗೆ ಅಳುತ್ತಿತ್ತು.  ಮನೆಯ ಬಳಿ ಅಲ್ಲೆಲ್ಲೋ ಮರದ ಮೇಲೆ ಗೂಬೆಯೊಂದು ಇದ್ದಕ್ಕಿದ್ದ ಹಾಗೆ ಕೂಗಲು ಶುರುಮಾಡುತ್ತಿತ್ತು.  "ಗೂsss" ಎಂದೊಂದು ಪ್ಲುತ, ಅದರ ಹಿಂದೆಯೇ "ಗುಗ್ಗುಗುಗೂsss" ಎಂಬೊಂದು ಉದ್ಗಾರ.  ಇದು ಪುನರಾವರ್ತನೆಯಾಗುತ್ತಿದ್ದರೆ ಯಾವುದೋ ಸಾವಿನ ಕರೆಯಂತೆ ಕೇಳುತ್ತಿತ್ತು.  ನಮ್ಮ ತಂದೆ ಉದ್ಗರಿಸುತ್ತಿದ್ದರು - "ಓಹೋ ಇದು 'ಗೂ... ಗುತ್ತಿಸುಡೂ' 'ಗುತ್ತಿಸುಡೂ' ಅಂತ ಕೂಗ್ತಿದೆ.  ಯಾರೋ 'ಠಾ' ಅಂತಾರೆ ಇಷ್ಟರಲ್ಲೇ" (ಕೈಲಾಸಂ ತಾವರೆಕೆರೆಯ ಗಡFಖಾನರು ನೋಡಿದ್ದ ಗೂಬೆಯೊಂದು "ಮುದ್ದೂ... ಮುದ್ದೂ... ಐಸಾ ಅಲ್ಡಾಯಿಸ್ತಿತ್ತು").

ನಮ್ಮ ತಂದೆ, ತಮ್ಮ ಬಾಲ್ಯಕಾಲದ್ದೊಂದು ನೆನಪನ್ನು ಯಾವಾಗಲೂ ಹೇಳುತ್ತಿದ್ದರು.  ಬೀದಿಕೊನೆಯ ಮುದುಕಿಯೊಂದು ಸತ್ತಾಗ, ಆ ಶವವನ್ನು ಅಲಂಕರಿಸಿ ಚಟ್ಟದಲ್ಲಿ ಕೂರಿಸಿ ಬ್ಯಾಂಡ್ ಸೆಟ್ಟಿನೊಂದಿಗೆ ಶವಯಾತ್ರೆಯಲ್ಲಿ ಹೊತ್ತೊಯ್ಯುತ್ತಿದ್ದರೆ, ಬ್ಯಾಂಡ್ ಸೆಟ್ಟಿನ ಸಂಗೀತದ ಲಯಕ್ಕೆ ತಕ್ಕ ಹಾಗೆ ಚಟ್ಟದಲ್ಲಿ ಕುಳಿತ ಹೆಣ ಅಡ್ಡಡ್ಡ ತಲೆಯಾಡಿಸುತ್ತಿದ್ದುದು ನೋಡಿ ಈ ಹುಡುಗನಿಗೆ ಹೊಳೆದದ್ದು - "ಬರೋದಿಲ್ಲs ನಾsನೂss... ಯಮಲೋsಕಕ್ಕೆs, ಬರೋದಿಲ್ಲs ನಾsನೂsss..." (ಸಂಗೀತ ಬಲ್ಲವರು ಬೇಕಿದ್ದರೆ ಇದನ್ನು ಆನಂದಭೈರವಿ ರಾಗ ಮಿಶ್ರಚಾಪುತಾಳದಲ್ಲಿ ಹಾಡಿಕೊಂಡು ಆನಂದಿಸಬಹುದು - "ಸಗಾರಿಗ್ಗs ಮಾsಪಾss... ಮಪಗಾsರಿsಸs ಸಗಾರಿಗ್ಗs ಮಾsಪಾsss") ಎಂದು ಆ ಮುದುಕಿ ತಲೆಯಾಡಿಸುತ್ತಿದೆಯಂತೆ, ಅದೇ ಹಾಡನ್ನೇ ಬ್ಯಾಂಡ್ ಸೆಟ್ಟಿನವರು ಬಾರಿಸುತ್ತಿರುವುದಂತೆ

ಪ್ರತಿಭೆ ವಂಶವಾಹಿನಿಯಲ್ಲೇ ಹರಿಯುತ್ತದೆ ಎಂಬುದು ಸುಳ್ಳಲ್ಲ ನೋಡಿ.  ನಾನೂ ಸುಮಾರು ಅದೇ ವಯಸ್ಸಿನಲ್ಲಿ ಅಂಥದ್ದೇ ಶವಯಾತ್ರೆಗಳನ್ನು ಕಂಡವನೇ, ಬ್ಯಾಂಡ್ ಸೆಟ್ಟನ್ನು ಕೇಳಿದವನೇ.  ಬ್ಯಾಂಡ್ ಸೆಟ್ಟಿನ "ಡಡ್ಡಡ್ಡ... ಡಡ್ಡಡ್ಡ...ಡಡ್ಡಡ್ಡ... ಡಡ್ಡಡ್ಡ..." ಎಂಬ ಗತ್ತಿನ ಲಯ, "ನಂದಲ್ಲ... ನಂದಲ್ಲ... ನಂದಲ್ಲ... ನಂದಲ್ಲ..." ಎಂದು ಆ ಸತ್ತವರ ಮನದ ಹಾಡಾಗಿ ನನಗೆ ಕೇಳುತ್ತಿದ್ದುದು ಆಶ್ಚರ್ಯವಲ್ಲ.

ತಡೆಯಿರಿ, ಪ್ರತಿಭೆಯೆಂಬುದು ಈ ರೀತಿ ಕೆಟ್ಟ, ಅಪಶಕುನದ ಹಾದಿಯಲ್ಲೇ ಹರಿಯಬೇಕೆಂದಿಲ್ಲ.  ಅಲ್ಲೆಲ್ಲೋ ಆಕಾಶದಲ್ಲಿ ಗರುಡಪಕ್ಷಿಯನ್ನು ಕಂಡರೆ ಅದು ಕ್ಷೇಮಕಾರಿ, ಲಕ್ಷ್ಮೀನಾರಾಯಣನ ಸನ್ನಿಧಾನ.  ಅದು "ಕರ್ರ್ರಾ..." ಎಂದು ಕೂಗಿದರೆ ಶ್ರದ್ಧಾಳುಗಳ ಕಿವಿಗೆ "ಕೃಷ್ಣಾ..." ಎಂದು ಕೇಳಿಸುತ್ತದೆ, ಕೆಲವರಿಗಂತೂ "ನಾರಾಯ್ಣಾ, ನಾರ್ಣಾ..." ಎಂದೂ ಕೇಳಿಸುತ್ತದೆ, ಕೈ ತಾನಾಗಿಯೇ ಮುಗಿಯುತ್ತದೆ.  ಏನಾದರೂ ಮಾತಾಡುವಾಗ ಹಲ್ಲಿ ಲೊಚಗುಟ್ಟಿತೆನ್ನಿ "ನೋಡಿದ್ಯಾ, ನಿಜವಂತೆ" ಎಂದು ಹಿಗ್ಗುತ್ತಾ ಆ ಲೊಚಗುಡುವಿಕೆಯ ಲಯಕ್ಕೆ ಸರಿಯಾಗಿ "ಕೃಷ್ಣ ಕೃಷ್ಣ ಕೃಷ್ಣ" ಎಂದು ನೆಲಕ್ಕೆ ಬೆರಳ ತುದಿ ಕುಟ್ಟುತ್ತಾರೆ.  ಇನ್ನು ಮಾತೃಸ್ವರೂಪಿಯಾದ ಹಸುವಿನ ಕೂಗಂತೂ ಜಗದ ತಾಯ್ತನವನ್ನೆಲ್ಲ ಒಟ್ಟುಮಾಡಿ ಕರೆದಂತೆ "ಅಂಬಾsss" ಎಂದೇ ಕೇಳುತ್ತದೆ.  "ಕನ್ನಡ ಗೋವಿನ ಮುದ್ದಿನ ಕರು"ಗಳಂತೂ ಇನ್ನೂ ಸ್ಪಷ್ಟವಾಗಿ "ಅಮ್ಮಾsss" ಎನ್ನುತ್ತವೆ.

ಪಶುಪಕ್ಷಿಗಳ ಎಲ್ಲ ಧ್ವನಿಗಳಿಗೂ ಹೀಗೆ 'ಮಾತು' ಆರೋಪಿಸಲು ಸಾಧ್ಯವೋ ಅಲ್ಲವೋ, ಆದರೆ ಇವೆಲ್ಲ ಸಂಗೀತವೇ.  ಸಂಗೀತದ ಒಂದೊಂದು ಸ್ವರಕ್ಕೂ ಒಂದೊಂದು ಪಶುಪಕ್ಷಿಯ ಹೆಸರನ್ನು ಕೊಟ್ಟಿರುವುದು ಸುಮ್ಮನೇ ಅಲ್ಲ.  ಆದರೆ ಅದೇನೇ ಇರಲಿ, ಈ ಧ್ವನಿವೈವಿಧ್ಯವನ್ನು ಒಟ್ಟಾರೆ ಸಂಗೀತವೆಂದೇ ಕರೆಯಬಹುದಿರಲಿ, ಒಂದೊಂದೇ ಪ್ರಾಣಿಯನ್ನೋ ಪಕ್ಷಿಯನ್ನೋ ಹಿಡಿದರೆ, ಕೋಗಿಲೆಯ 'ಸಂಗೀತ'ವನ್ನು ಆಸ್ವಾದಿಸಿದಂತೆ ಕಾಗೆಯ ’some'ಗೀತವನ್ನೂ ಗಾರ್ದಭಗಾನವನ್ನೂ ಆಸ್ವಾದಿಸಬರುವುದೋ, ಹೇಳಲಾಗದು.  ಕೋಕಿಲಾರವ, ಕೀರವಾಣಿ ಮುಂತಾದ ರಾಗಗಳಂತೆ ಕಾಕವಾಣಿ, ಗಾರ್ದಭಧ್ವನಿ ಇತ್ಯಾದಿ ರಾಗಗಳನ್ನು ಯಾರೂ ರೂಪಿಸಿದಂತಿಲ್ಲ.  ಹಂಸಧ್ವನಿ, ಹಂಸನಾದ, ಮಯೂರಧ್ವನಿಯಂತಹ ಸುಶ್ರಾವ್ಯರಾಗಗಳಿಗೆ ಆ ಹೆಸರಿಟ್ಟವರು ಆಯಾ ಪಕ್ಷಿಗಳ ಧ್ವನಿಯನ್ನು ನಿಜಕ್ಕೂ ಆಲಿಸಿ ಸವಿದು ಈ ರಾಗಗಳಿಗೆ ಆ ಹೆಸರಿಟ್ಟರೋ, ಅಥವಾ ಸೌಂದರ್ಯಕ್ಕೆ ಸೆರಗು ಹೊದಿಸಿದಂತೆ ರಾಗಸೌಂದರ್ಯವನ್ನು ಈ ಕರ್ಕಶಧ್ವನಿಯ ಸುಂದರಪಕ್ಷಿಗಳ ಹೆಸರುಗಳ ಹಿಂದೆ ಬೈತಿಡುವ ತಂತ್ರವೋ ಯಾರಿಗೆ ಗೊತ್ತು?

ಅದಿರಲಿ, ಬಹುಕಾಲದ ಹಿಂದೆ, ನಮ್ಮ ಮನೆಯ ಮುಂದಿದ್ದ ಜೋಪಡಿಗಳಲ್ಲಿ ಎರಡು ಹುಂಜಗಳಿದ್ದುವು.  ಸಾಮಾನ್ಯವಾಗಿ ಹುಂಜಗಳು "ಕೊಕ್ಕೊಕೋsಕೋss" ಎಂದು ಕೂಗುತ್ತವಷ್ಟೇ?  ಇಲ್ಲಿ ಒಂದು ಹುಂಜ ಅದಕ್ಕೆ ಇನ್ನೊಂದಿಷ್ಟು ನಾದವನ್ನು ಸೇರಿಸಿ ರಾಗವಾಗಿ "ಕೋಕ್ಕೊಕೋss ಕೋsss" ಎಂದು ಕೂಗುತ್ತಿತ್ತು.  ಆದರೆ ಅದೇನೋ ಪಾಪ ಕಕಾರವು ಸ್ಪಷ್ಟವಾಗಿ ಹೊರಡದೇ ಆ ದನಿಯಲ್ಲಿ ಅನೇಕ ಅಕ್ಷರಸಾಧ್ಯತೆ ಕೇಳಬರುತ್ತಿತ್ತು.  ಅದು ಹೀಗೆ ರಾಗವಾಗಿ "ಕೋಕ್ಕೊಕೋss ಕೋsss" ಎಂದು ಕೂಗಿದರೆ ನನಗಂತೂ "ವೆಂಕಟೇsಶಾsss" ಎಂದು ಕೂಗಿದಂತೆಯೇ ಕೇಳುತ್ತಿತ್ತು ("ರಂಗನಾsಥಾsss" ಎಂದು ಕರೆದಂತಿತ್ತೆಂದು ನಮ್ಮ ಚಿಕ್ಕಪ್ಪನವರ ವಾದ, ಇರಲಿ - "ಶಂಭುಲಿಂsಗಾsss" ಎಂದು ಕೂಗುತ್ತಿತ್ತೆಂದು ಯಾರೂ ವಾದಹೂಡಲಿಲ್ಲ, ಯಾವುದೋ ಒಂದು ಹೆಸರು, ನಾಮಸ್ಮರಣೆಗೆ- "ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ" ಅಲ್ಲವೇ?).

ಇನ್ನೊಂದು ಹುಂಜ, ಇದರ ಉಚ್ಚಾರಣೆಯೇನೋ ಸ್ಪಷ್ಟವಾಗಿತ್ತು, ಆದರೆ ಇತರ ಹುಂಜಗಳಿಗಿಂತ ವಿಚಿತ್ರವಾದ ಲಯವನ್ನನುಸರಿಸಿ ಕೂಗುತ್ತಿತ್ತು.  ಹುಂಜಗಳು ಸಾಮಾನ್ಯವಾಗಿ "ಕೊಕ್ಕೊಕೋsಕೋsss", ಎಂದೋ "ಕೋಕೋsಕೋsss" ಎಂದೋ ಕೂಗುತ್ತವೆ; ಕೆಲವು ಸಹನೆಗೆಟ್ಟ ಹುಂಜಗಳು "ಕೊಕ್ಕೊಕೋs" ಎಂದೋ  "ಕೋsಕೋss" ಎಂದೋ "ಹ್ರಸ್ವಾವರ್ತದಲ್ಲಿ ನುಡಿದು ಸುಮ್ಮನಾಗುತ್ತವೆ.  ಕೆಲವೊಮ್ಮೆ ತೀರ ಬೇಸರದಲ್ಲಿ "ಕೋss" ಎಂಬ ಪ್ಲುತಸ್ವರವನ್ನಷ್ಟೇ ನುಡಿದು, ಕೊಂಡರೆ ಕೊಳ್ಳಲಿ ಬಿಟ್ಟರೆ ಬಿಡಲಿ ಎಂದು ಸುಮ್ಮನಾಗುವುದೂ ಉಂಟು.  ಆದರೆ ಈ ಹುಂಜ ಮಾತ್ರ ಈ ಯಾವ ಸಾಂಪ್ರದಾಯಿಕ ಲಯವನ್ನೂ ಅನುಸರಿಸದೇ "ಕೊಕ್ಕೊಕೊ ಕೊಕ್ಕೋss" "ಕೊಕ್ಕೊಕೊ ಕೊಕ್ಕೋss" ಎಂದು ಕೂಗುತ್ತಿತ್ತು.  ಹೀಗೆ ಇದು ಬೆಳಗಿನ ಜಾವದಲ್ಲಿ ಕೂಗುತ್ತಿದ್ದರೆ, ಅರೆನಿದ್ದೆಯಲ್ಲಿದ್ದ ನಮಗೆ, ಆ "ಕೊಕ್ಕೊಕೊ ಕೊಕ್ಕೋss" ಎಂಬ ಕರೆಯಲ್ಲಿ, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ "ಅರ್ಥಮನರ್ಥಮ್" ಎಂಬ ಸ್ಪಷ್ಟವಾದ ಘೋಷವಾಣಿಯೇ ಕೇಳುತ್ತಿತ್ತು.

ಪ್ರತಿದಿನ ಜೋಪಡಿಯ ಶೃಂಗವನ್ನೇರಿ, ಕೊರಳುಬ್ಬಿಸಿ ಒಮ್ಮೆ "ಅರ್ಥಮನರ್ಥಮ್" ಎಂದು ಕೂಗುವುದು; ಕೊರಳು ಕೊಂಕಿಸಿ, ಎಲ್ಲಿಂದಲಾದರೂ ಪ್ರತಿವಾದಿಮಲ್ಲರು ಬರಬಹುದೇ ಎಂಬ ಗತ್ತಿನಲ್ಲಿ ಹತ್ತೂ ದಿಕ್ಕುಗಳನ್ನು ನೋಡಿ, ಮತ್ತೊಮ್ಮೆ "ಅರ್ಥಮನರ್ಥಮ್" ಭೇರಿ ಮೊಳಗಿಸುವುದು;  ಮತ್ತೊಮ್ಮೆ ದಶದಿಗ್ದರ್ಶನ, ಮತ್ತೊಮ್ಮೆ ಭೇರಿ - ಹೀಗೆ ಪ್ರತಿದಿನ ಬೆಳಗಿನ ಜಾವ, ಆಮೇಲೆ ಜನರಲ್ಲಿ ಆಧ್ಯಾತ್ಮಪ್ರಜ್ಞೆ ಖಿಲವಾಗಿ ಲೌಕಿಕಪ್ರಜ್ಞೆ ವಿಜೃಂಭಿಸುತ್ತಿದೆಯೆಂದೆನ್ನಿದಾಗಲೆಲ್ಲ ಒಮ್ಮೊಮ್ಮೆ, ವೇದಾಂತಭೇರಿಯನ್ನು ಬಾರಿಸುತ್ತಿದ್ದ ಹುಂಜ ಯಾವಾಗಲೋ ಒಂದು ದಿನ, ನಮ್ಮ ಅರಿವಿಗೇ ಬಾರದಂತೆ, ಕೂಗುವುದನ್ನು ನಿಲ್ಲಿಸಿಯೇ ಬಿಟ್ಟಿತ್ತು.  ಪಾಪ ಯಾವ 'ಅನರ್ಥ' ಅದಕ್ಕೆ ಸಂಭವಿಸಿತ್ತೋ - ಸದೇಹಮುಕ್ತಿಯಂತೂ ದೊರೆತಿರಲಾರದು.