Showing posts with label ೦೮. ಭಾಷೆ. Show all posts
Showing posts with label ೦೮. ಭಾಷೆ. Show all posts

Thursday, December 21, 2023

ಶ್ವಾನವೃತ್ತಾ-ನ್ತ

ಇವತ್ತು ಬೆಳಗ್ಗೆ, ರೂಮಿನ ಪಕ್ಕದಲ್ಲೇ ಕುಳಿತು ಚಿಲಿಪಿಲಿಗುಟ್ಟುತ್ತಿದ್ದ ಹಕ್ಕಿಯೊಂದರ ಸದ್ದಿಗೆ ಎಚ್ಚರಗೊಂಡು, ಎದ್ದು ಮುಖತೊಳೆದು, ಹಬೆಯಾಡುವ ಕಾಫಿಯೊಂದಿಗೆ ಹೊರಗೆ ಪಡಸಾಲೆಗೆ ಬಂದೆ.  ಚುಮುಚುಮು ಬೆಳಗು.  ಚಾಮುಂಡಿ ಬೆಟ್ಟದ ಕಡೆಯಿಂದ ಸೂರ್ಯನ ಮೊದಲ ಕಿರಣಗಳು ಆಗಷ್ಟೇ ಸೂಸುತ್ತಿದ್ದುವು, ಎಲೆಗಳ ಮೇಲಣ ಪನಿ ಇನ್ನೂ ಆರಿರಲಿಲ್ಲ.  ಇವತ್ತು ಏನೇನು ಮಾಡಬೇಕೆಂದು ಯೋಚಿಸುತ್ತಾ ಪಡಸಾಲೆಯಲ್ಲಿದ್ದ ತೂಗುಯ್ಯಾಲೆಯಲ್ಲಿ ಕೂರುತ್ತಿದ್ದಂತೆ, ಆಗಲೇ ಎದ್ದು, ತೋಟವನ್ನೆಲ್ಲಾ ಒಂದು ಸುತ್ತು ಠಳಾಯಿಸಿ ಹೂಬಿಸಿಲಿಗೆ ಮೈಯೊಡ್ಡಿ ಮಲಗಿದ್ದ ನಮ್ಮ ಸಿಂಬಣ್ಣ (ಆಯ್ತು, ಸಿಂಬಕ್ಕನೆಂದೇ ಇರಲಿ) ಓಡಿಬಂದು, ನನ್ನ ಮುಂದೆ ತನ್ನ ಎರಡೂ ಮುಂಗಾಲುಗಳನ್ನು ನೆಲಕ್ಕೆ ಚಾಚಿ, ತಲೆಯನ್ನದರಲ್ಲಿ ಹುದುಗಿಸುತ್ತಾ ಅರ್ಧದಂಡನಮಸ್ಕಾರ ಮಾಡಿದಳು (ಅರ್ಧದಂಡವೇ ಎಂದು ಮೂಗು ಮುರಿಯಬೇಡಿ, ನಾಯಿಗಳಿಗೆ ಅರ್ಧದಂಡವೇ ಶಾಸ್ತ್ರವಿಹಿತ; ದೀರ್ಘದಂಡ ಈ ಕಾಲದಲ್ಲಿ ಮನುಷ್ಯರಿಗೂ ಆಗದ ಕಸರತ್ತು).  ಎಲಯೆಲಾ, ಮೊನ್ನೆಮೊನ್ನೆಯವರೆಗೂ ಚಪ್ಪಲಿ, ಪುಸ್ತಕ ಹೀಗೆ ಸಿಕ್ಕಿದ್ದನ್ನು ಹೊತ್ತೊಯ್ದು ಕಚ್ಚಿಕಚ್ಚಿ ಚಿಂದಿ ಮಾಡಿ ಹಾಕುತ್ತಿದ್ದ ಈಕೆ ನೋಡನೋಡುತ್ತಿದ್ದಂತೆ ಇಷ್ಟು ಸಂಸ್ಕಾರವಂತೆಯಾಗಿಬಿಟ್ಟಳಲ್ಲ, ಈಗಿನ ಕಾಲದಲ್ಲಿ ಮನುಷ್ಯರೇ ನಕ್ಕು ಕಡೆಗಣಿಸುವ ನಮಸ್ಕಾರವೆಂಬ ಆತ್ಮೋದ್ಧಾರಕಕ್ರಿಯೆಯನ್ನು, ನಾಯಿಯಾದರೂ ಈಕೆ ಮನಗಂಡು ಅಳವಡಿಸಿಕೊಂಡಿದ್ದಾಳಲ್ಲಾ ಎಂಬ ಅಚ್ಚರಿಯೊಂದಿಗೆ, ಮನಸ್ಸೂ ತುಂಬಿ ಬಂತು.  ತಲೆಸವರಿ, ಮನದುಂಬಿ ಆಶೀರ್ವದಿಸುತ್ತಾ, ಹಿಂದೀ ಮಹಾಭಾರತದ ಭೀಷ್ಮದ್ರೋಣರಂತೆ (ಗಡ್ಡವಿಲ್ಲದುದರಿಂದ ಗಡ್ಡ ನೀವಿಕೊಳ್ಳಲಾಗಲಿಲ್ಲ) "ದೀರ್ಘಾಯುಷ್ಮಾನ್ ಭವ್" ಎಂದೆ.

ಅವಳಿಗೆ ನನ್ನ ಆಶೀರ್ವಚನವೇನು ಅರ್ಥವಾದಂತೆ ಕಾಣಲಿಲ್ಲ, ಬದಲಿಗೆ ಈ ಹೊಸ ಪೆಚ್ಚಿಗೆ ಅಚ್ಚರಿಗೊಂಡು ಕಣ್ಣರಳಿಸಿ ನನ್ನನ್ನೇ ನೋಡುತ್ತ "ಭೌ ಭೌ" ಎಂದಳು.  ಓಹೋ, ಸರಿಸರಿ ಎಂದು ತಿದ್ದಿಕೊಂಡು "ದೀರ್ಘಾಯುಷ್ಮಾನ್ ಭೌ ಭೌ" ಎಂದೆ.  ಈ 'ತಿದ್ದುಪಡಿ'ಯಿಂದಲೂ ಅವಳಿಗೇನೂ ತೃಪ್ತಿಯಾದಂತೆ ಕಾಣಲಿಲ್ಲ.  ಅಲ್ಲೇ ಇಟ್ಟಿದ್ದ ಬಿಸ್ಕೆಟ್ಟಿನ ಡಬ್ಬದೆಡೆ ನೋಡಿ ಮತ್ತೆ ನನ್ನ ಕಡೆ ತಿರುಗಿ ದೀರ್ಘಪ್ಲುತಸಮನ್ವಿತವಾಗಿ "ಭೌವ್ ವೌವ್" ಎಂದಳು.  ಓಹೋ, ತಿಳಿಯಿತು - ಈ ನಮಸ್ಕಾರವೆಲ್ಲಾ ಯಾವ ಆತ್ಮೋದ್ಧಾರಕ್ಕಾಗೂ ಅಲ್ಲ, ಕೇವಲ ಒಂದು ಹಿಡಿ ಬಿಸ್ಕೆಟ್ಟಿಗಾಗಿ (ಮನಸ್ಸಿಗೆ ಪಿಚ್ಚೆನ್ನಿಸಿತು)! ಅಷ್ಟಲ್ಲದೇ ದಾಸರು ಹೇಳಿದರೇ - "ಎಲ್ಲರು ಮಾಡುವುದು ಹೊಟ್ಟೆಗಾಗಿ".  ಆದರೆ ಹೊಟ್ಟೆಗಾಗಿ ನರಮನುಷ್ಯರು ಮಾಡುವ ಗಿಲೀಟುಗಳನ್ನು ನಾಯಿಗಳೂ ಅಳವಡಿಸಿಕೊಂಡಿವೆಯೆಂಬುದು ನನಗಾದರೂ ಹೇಗೆ ತಿಳಿಯಬೇಕು? "ಸರಿಕಣವ್ವ" ಎಂದುಕೊಂಡು, ಎದ್ದು ಹೋಗಿ ಬಿಸ್ಕೆಟ್ ಡಬ್ಬದಿಂದ ಒಂದು ಹಿಡಿ ಬಿಸ್ಕೆಟ್ ತೆಗೆದು ತಟ್ಟೆಗೆ ಹಾಕಿದೆ, ಬಟ್ಟಲಿಗೆ ಹಾಲು ತಂದು ಸುರಿದೆ.  ಉಲ್ಲಾಸದಿಂದ ಬಾಲವಾಡಿಸುತ್ತಾ ಬೆಳಗಿನ ಉಪಾಹಾರಕ್ಕೆ ಕುಳಿತಳು.  ಅವಳು ಮೈಮುರಿದದ್ದನ್ನು ನಾನು ನಮಸ್ಕಾರವೆಂದುಕೊಂಡದ್ದು, ಮತ್ತೆ ಆ 'ನಮಸ್ಕಾರ'ವನ್ನು ಬಿಸ್ಕೆಟ್ಟಿಗಾಗಿ ಮಾಡಿದ ಗಿಲೀಟೆಂದುಕೊಂಡದ್ದು - ನನ್ನ ಈ ಯಾವ ಮನೋವಿಕಾರಗಳೂ ಆಕೆಯನ್ನು ಬಾಧಿಸಿದಂತೆ ಕಾಣಲಿಲ್ಲ.  ಮುಗುಳ್ನಗುತ್ತಾ ಮತ್ತೊಮ್ಮೆ "ದೀರ್ಘಾಯುಷ್ಮಾನ್ ಭೌ ಭೌ" ಎಂದು ತಲೆ ನೇವರಿಸಿದೆ.  ತಿನ್ನುತ್ತಲೇ ಹಗುರವಾಗಿ ಬಾಲವಾಡಿಸಿದಳು.  ಇನ್ನಷ್ಟು ಆಪ್ತತೆಯಿಂದ "ದೀರ್ಘಾಯುಷ್ಮಾನ್ ಭೌಭೌ ಭೌಭೌ" ಎಂದೆ.  ಅರೆ! ಒಂದು ಕ್ಷಣ ಸ್ತಬ್ಧನಾದೆ.  ಮತ್ತೊಮ್ಮೆ ಅದನ್ನೇ ಹೇಳಿಕೊಂಡೆ - "ದೀರ್ಘಾಯುಷ್ಮಾನ್ ಭೌಭೌ ಭೌಭೌ" - ಈ ಸಾಲು ಅದೇಕೋ ಪರಿಚಿತವೆನಿಸಿತು.  ಈಗಷ್ಟೇ ಮೂಡಿದ ಸಾಲುಗಳು, ಪರಿಚಿತವಿರಲು ಹೇಗೆ ಸಾಧ್ಯ?  ಪೂರ್ವಜನ್ಮದ ವಾಸನೆಯೋ!  ಮತ್ತೊಂದೆರಡು ಬಾರಿ ಹೇಳಿಕೊಂಡಾಗ ಹೊಳೆಯಿತು - ಪರಿಚಿತವೆನ್ನಿಸಿದ್ದು ಸಾಲಲ್ಲ, ಅದರ ಲಯ; ಪರಿಚಿತವೆಂದರೆ ತೀರ ಪರಿಚಿತವಲ್ಲ, ಅಪರಿಚಿತವೂ ಅಲ್ಲ; ಚಿಂತಿಸುತ್ತಿದ್ದಂತೆ ಒಂದೆರಡು ಕ್ಷಣದಲ್ಲೇ ಸೂತ್ರವಾಕ್ಯವೂ ನೆನಪಾಗಿಬಿಟ್ಟಿತು - "ವಿದ್ಯುನ್ಮಾಲಾ ಮೋ ಮೋ ಗೋ ಗಃ" - ವಿದ್ಯುನ್ಮಾಲಾ ಎಂಬ ಛಂದಸ್ಸಿನ ಲಕ್ಷಣವಾಕ್ಯವದು.  ತಮಾಷೆಗೆಂದು ನುಡಿದ ಮಾತು ಒಂದು ಛಂದೋಬದ್ಧವಾದ ಸಾಲಾಗಿಬಿಟ್ಟಿತ್ತು!

ಒಂದು ಕ್ಷಣ, ಮೈಯಲ್ಲಿ ವಿದ್ಯುತ್ಸಂಚಾರವಾದಂತಾಯಿತು (ವಿದ್ಯುನ್ಮಾಲೆಯ ವಿಷಯವಲ್ಲವೇ ಮತ್ತೆ?).  ಆದಿಕವಿ ವಾಲ್ಮೀಕಿಗೂ ಆತನ ಸುಪ್ರಸಿದ್ಧವಾದ "ಮಾನಿಷಾದಪ್ರತಿಷ್ಠಾಂ..." ಸಾಲು ಹೊಮ್ಮಿದನಂತರ ಇಂಥದ್ದೇ ರೋಮಾಂಚನವಾಗಿರಬೇಕು-

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಸ್ಸಮಾಃ|

ಯತ್ಕ್ರೌಂಚಮಿಥುನಾದೇಕಂ ಅವಧೀಃ ಕಾಮಮೋಹಿತಮ್||

ಎಲೋ ಬೇಡನೇ, ಕಾಮಮೋಹಿತವಾಗಿದ್ದ ಈ ಕ್ರೌಂಚಪಕ್ಷಿಗಳಲ್ಲೊಂದನ್ನು ಹೊಡೆದು ಹಾಕಿದ ನೀನು ಬಹುಕಾಲ ಬದುಕಿರಬಾರದು - ಮಧುರವಾಗಿ ಕೂಗುತ್ತಾ ಒಂದನ್ನೊಂದು ಬಿಡದೇ ಹಾರಾಡುತ್ತಿದ್ದ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಬೇಡನೊಬ್ಬನು ಹೊಡೆದುಹಾಕಿದಾಗ, ರಕ್ತಸುರಿಸುತ್ತಾ ಕೆಳಬಿದ್ದ ಗಂಡು ಹಕ್ಕಿ, ಅದರ ವಿಯೋಗದಿಂದ ಕರುಣಾಜನಕವಾಗಿ ಆಕ್ರಂದಿಸುತ್ತಿದ್ದ ಹೆಣ್ಣುಹಕ್ಕಿಯ ಗೋಳನ್ನು ನೋಡಲಾರದೇ ವಾಲ್ಮೀಕಿಯ ಬಾಯಿಂದ ಹೊರಟ ಶಾಪವಾಕ್ಯವಿದು.

ದುಃಖದಿಂದ ಮಾತೇನೋ ಹೊರಬಿದ್ದಿತು.  ಆಡಿದ ಮರುಕ್ಷಣದಲ್ಲಿಯೇ ವಾಲ್ಮೀಕಿಮುನಿಗೆ ಅಚ್ಚರಿಯಾಯಿತಂತೆ, ಏಕೆಂದರೆ ಅದು ಕೇವಲ ಮಾತಾಗಿರಲಿಲ್ಲ, ಲಯಬದ್ಧವಾದ ಶ್ಲೋಕವಾಗಿತ್ತು - ಎಲಾ, ದುಃಖದಲ್ಲಿ ನಾನು ಏನು ಮಾತಾಡಿದೆ (ಶೋಕಾರ್ತೇನಾಸ್ಯ ಶಕುನೇಃ ಕಿಮಿದಂ ವ್ಯಾಹೃತಂ ಮಯಾ)!  ಶೋಕದಲ್ಲಿ ಆಡಿದ ಮಾತು ಪಾದಬದ್ಧವಾಗಿ, ಸಮಾಕ್ಷರಗಳಿಂದ ಕೂಡಿ, ತಂತಿಯ ಲಯಕ್ಕೆ ಹೊಂದುವಂತೆ ಮೂಡಿತಲ್ಲಾ (ಪಾದಬದ್ಧೋSಕ್ಷರಸಮಸ್ತಂತ್ರೀಲಯಸಮನ್ವಿತಃ); ಶೋಕದಿಂದ ಒಡಮೂಡಿದ ಮಾತು ಶ್ಲೋಕವಾಗಿಯೇ ಉಳಿಯಲಿ (ಶೋಕಾರ್ತಸ್ಯ ಪ್ರವೃತ್ತೋ ಮೇ ಶ್ಲೋಕೋ ಭವತು ನಾನ್ಯಥಾ) ಎಂದು ಶಿಷ್ಯನಾದ ಭರದ್ವಾಜನಿಗೆ ಹೇಳಿದರಂತೆ.  ಅಲ್ಲಿಂದ ನದಿಯಲ್ಲಿ ಸ್ನಾನ ಮುಗಿಸಿಕೊಂಡು ಆಶ್ರಮಕ್ಕೆ ಹಿಂದಿರುಗಿದ ಮೇಲೂ ಮುನಿಗೆ ಅದೇ ಗುಂಗು - ಶೋಕದಲ್ಲಿ ಆಡಿದ ಮಾತು ಶ್ಲೋಕವಾಯಿತಲ್ಲ, ಎಂತಹ ಸೋಜಿಗ!  ಆಗ ಬ್ರಹ್ಮದೇವನು ಪ್ರತ್ಯಕ್ಷನಾಗಿ, ಇದು ಆಕಸ್ಮಿಕವೇನಲ್ಲ, ನನ್ನ ಇಚ್ಛೆಯಿಂದಲೇ ಈ ವಾಣಿಯು ನಿನ್ನ ಮುಖದಿಂದ ಹೊರಹೊಮ್ಮಿತು (ಮಚ್ಛಂದಾದೇವ ತೇ ಬ್ರಹ್ಮನ್ ಪ್ರವೃತ್ತೇಯಂ ಸರಸ್ವತೀ); ನೀನು ಮಹಾತ್ಮನಾದ ರಾಮನ ಚರಿತ್ರೆಯನ್ನು ರಚಿಸು ಎಂದು ಹೇಳಿ ಕಣ್ಮರೆಯಾದನಂತೆ.  ಆನಂತರ ವಾಲ್ಮೀಕಿಮುನಿಗಳು ಅದೇ ಶ್ಲೋಕವನ್ನು ಮತ್ತೆಮತ್ತೆ ಹೇಳುತ್ತಾ ಅದರ ಲಯವನ್ನು ಮನಸ್ಸಿನಲ್ಲಿ ಗಟ್ಟಿಮಾಡಿಕೊಳ್ಳುತ್ತಿದ್ದಂತೆ ರಾಮಕತೆಯು ಅದೇ ಅನುಷ್ಟುಪ್ ಛಂದಸ್ಸಿನಲ್ಲಿ ಮೂಡಲಾರಂಭಿಸಿತು.  ಇದು ರಾಮಾಯಣಾವತಾರದ ಕತೆ.

ಅಲ್ಲ, ವಾಲ್ಮೀಕಿಯ ಮಾತು ಬಂದದ್ದಕ್ಕೆ ಇಷ್ಟು ಹೇಳಬೇಕಾಯಿತಷ್ಟೇ.  ಈಗೇನು?  ವಾಲ್ಮೀಕಿಯಂತೆಯೇ ನಿನ್ನದೊಂದು ರಾಮಾಯಣ ಬರಲಿದೆಯೋ ಎಂದು (ಮುಸಿನಗುತ್ತಾ) ಕೇಳುತ್ತೀರೆಂದು ನನಗೆ ಗೊತ್ತು.  ಸದ್ಯ, ಸ್ವಾಮೀ ಆ ಘಟನೆಯನಂತರ ಅದೆಷ್ಟು ಬೇಡರು ಹುಟ್ಟಿಲ್ಲ, ಅದೆಷ್ಟು ಕ್ರೌಂಚಪಕ್ಷಿಗಳನ್ನು ಕೊಂದಿಲ್ಲ - ಕ್ರೌಂಚಪಕ್ಷಿಯೊಂದು ಬಿದ್ದಾಗೆಲ್ಲಾ ಒಂದು ರಾಮಾಯಣ ಹುಟ್ಟಿದ್ದಿದ್ದರೆ "ರಾಮಾಯಣದ ಕವಿಗಳ ಭಾರದಲಿ" ತಿಣುಕುತ್ತಿದ್ದ ಫಣಿರಾಯ ಈ ಹೊತ್ತಿಗೆ ನೆಲಕಚ್ಚಿಯೇ ಬಿಡುತ್ತಿದ್ದ.   ಇಷ್ಟಕ್ಕೂ ರಾಮಾಯಣ ಬರೆಯುವುದೇನು ಸಾಮಾನ್ಯವೇ?  ಛಂದಸ್ಸಿನ ಸಾಲೊಂದು ಹೊಳೆದರೆ ರಾಮಾಯಣವೇ ಹೊಳೆದುಬಿಡುವುದೇ?  ಬ್ರಹ್ಮ ಪ್ರತ್ಯಕ್ಷವಾಗಬೇಕು, ಕತೆ ಬರೆಯೆಂದು ಆಶೀರ್ವದಿಸಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಹುತ್ತಗಟ್ಟಬೇಕು - "ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು, ಪುರುಷೋತ್ತಮನ ಆ ಅಂಥ ರೂಪ-ರೇಖೆ?"  ನನ್ನ ಸುತ್ತ ಹುತ್ತಗಟ್ಟಿಕೊಂಡರೆ ಈ ಮನೆ ಈ ಸಂಸಾರ ನೋಡಿಕೊಳ್ಳುವರಾರು?  ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸಿಂಬಣ್ಣನಿಗೆ ಬಿಸ್ಕೇಟು ಹಾಕುವವರಾರು?  ಇದಕ್ಕೆಲ್ಲ ಒಂದು ವ್ಯವಸ್ಥೆಯಾಗದೇ, ಮೋಕ್ಷವೇ ಸಿಗುತ್ತದೆಂದರೂ ಹೋಗಲುಂಟೇ?  ಏನೋ, ವಾಲ್ಮೀಕಿಗಾದಂತೆ ನಮಗೂ ಒಂದು ಅನುಭವವಾಯಿತು ಎಂದು ಹೇಳಬಂದೆನಷ್ಟೇ- "ಒಬ್ಬೊಬ್ಬ ಗಂಡನಲಿ ಶ್ರೀರಾಮನಡಗಿಹನು" ಕವಿವಾಣಿಯೇ ಇಲ್ಲವೇ? "ಒಂದೊಂದು ಹಳ್ಳಿಯಲಿ ಒಬ್ಬೊಬ್ಬ ಜಸವಂತನಾಗದಿಹ ವಾಲ್ಮೀಕಿ ನೆಲೆಸಿಹನು..." ಇರಬಹುದು, ಶ್ರೀರಾಮನ ಹೋಲಿಕೆಯೆಂದ ಮಾತ್ರಕ್ಕೆ ಪತ್ನಿಯನ್ನು ಕಾಡಿಗಟ್ಟಲಾದೀತೇ?  ಶ್ರೀಕೃಷ್ಣನಂಥವನು ಎಂದ ಮಾತ್ರಕ್ಕೆ, ಹದಿನಾರು ಸಾವಿರ ಬೇಡ ಎಂಟು ಮಂದಿಯನ್ನಾದರೂ ಕಟ್ಟಿಕೊಂಡು ಜಯಿಸಲಾದೀತೇ?  ವಾಲ್ಮೀಕಿಯಂತೆ ನನಗೂ ಒಂದು ಛಂದಸ್ಫುರಣವಾಯಿತೆಂದ ಮಾತ್ರಕ್ಕೆ ಮುಂದುವರೆದು ರಾಮಾಯಣವನ್ನೂ ಬರೆಯಲಾದೀತೇ?

ಈ ರಾಮಾಯಣವೆಲ್ಲ ನಮಗೇಕೆ?  ವಿದ್ಯುನ್ಮಾಲೆಯ ವಿಷಯಕ್ಕೆ ಮರಳೋಣ.  ವಿದ್ಯುನ್ಮಾಲೆ, ಎಂಟಕ್ಷರದ ಅಕ್ಷರಗಣದ ವೃತ್ತ - ವಿದ್ಯುನ್ಮಾಲಾ ಮೋ ಮೋ ಗೋ ಗಃ (ವಿದ್ಯುನ್ಮಾಲೆಯಲ್ಲಿ ಮಗಣ, ಮಗಣ, ಗುರು ಮತ್ತೊಂದು ಗುರು).  ಮಗಣವೆಂದರೆ ಮೂರು ಗುರ್ವಕ್ಷರಗಳ ಗುಂಪು (ಎಂದರೆ ಮೂರು ದೀರ್ಘಾಕ್ಷರಗಳು); ಅಂಥವೆರಡು ಗಣಗಳು ಮತ್ತೆ ಎರಡು ಗುರು - ಎಂದರೆ ಎಂಟು ಗುರ್ವಕ್ಷರವಿರುವ ಸರ್ವಗುರು ವೃತ್ತವಿದು - ನಾನಾನಾ ನಾನಾನಾ ನಾನಾ ಎಂಬಂತೆ - ಸ್ವಲ್ಪ ಢಿಕ್ಕಿಹೊಡೆದಂತೆ ಚಲಿಸುವ ಅಡ್ಡಡ್ಡ ಚಲನೆ ಈ ಸಾಲಿನದು.

ರಾಮಂ ಸೀತಾರಾಮಂ ವಂದೇ

ಸೌಮಿತ್ರ್ಯಗ್ರೇಜಾತಂ ಶಾಂತಮ್

ವೈದೇಹೀಕಾಂತಂ ಕೌಸಲ್ಯಾ

ನಂದಂ ತಂ ಕೋದಂಡಸ್ಕಂಧಂ


ಹೀಗೆ ಬರುತ್ತದೆ.  ಇಂಥದ್ದನ್ನೇ ಕನ್ನಡದಲ್ಲೂ ಮಾಡಬಹುದು


ಬುದ್ಧಂ ತಾನೆದ್ದಾಗಳ್ ಲೋಕಂ

ನಿದ್ರಾಸ್ವಪ್ನಾವಸ್ಥಾಬದ್ಧಂ

ಸಿದ್ಧಂ ತಾನೆಯ್ದಾಗಳ್ ಲೋಕಂ

ಮತ್ತಂ ನಿದ್ರಾವಸ್ಥಾಬದ್ಧಂ

(ಬುದ್ಧ ಎದ್ದಾಗ ಲೋಕ ನಿದ್ರಾಬದ್ಧವಾಗಿ ಕನಸು ಕಾಣುತ್ತಿತ್ತು; ಆತ ಸಿದ್ಧನಾಗಿ ಹೊರಟುಹೋದಾಗಲೂ ಲೋಕ ನಿದ್ರಾಬದ್ಧವಾಗಿಯೇ ಇತ್ತು)

ಛಂದೋಂಬುದಿಯಲ್ಲಿ ನಾಗವರ್ಮನು ವಿದ್ಯುನ್ಮಾಲೆಯ ಲಕ್ಷಣವನ್ನು ಹೀಗೆ ಕೊಡುತ್ತಾನೆ (ಅದೇ ಛಂದಸ್ಸಿನಲ್ಲಿ)-

ಪಿಂತುರ್ವೀಯುಗ್ಮಂಗಳ್ ಬರ್ಕುಂ

ಮುಂತೀಶಾನದ್ವಂದ್ವಂ ನಿಲ್ಕುಂ

ಸಂತಂ ನೀ ಕೇಳಂಭೋಜಾಕ್ಷೀ

ಕಾಂತಂ ವಿದ್ಯುನ್ಮಾಲಾವೃತ್ತಂ

ತಾವರೆಗಣ್ಣವಳೇ, ಗಮನಿಸಿ ಕೇಳು, ಮನೋಹರವಾದ ವಿದ್ಯುನ್ಮಾಲಾವೃತ್ತದಲ್ಲಿ ಮೊದಲು ಉರ್ವೀಯುಗ್ಮ (ಎರಡು ಭೂಮಿಗಳು) ಮತ್ತೆ ಈಶಾನಯುಗ್ಮ (ಇಬ್ಬರು ಹರರು); ಭೂಮಿ ಎಂದರೆ ಮಗಣ (ಮೂರು ಗುರುವಿನ ಗುಂಪು - ನಾನಾನಾ ಎಂಬಂತೆ); ಹರ ಎಂದರೆ ಗುರು, ದೀರ್ಘಾಕ್ಷರ.  ವಿದ್ಯುನ್ಮಾಲೆಯಲ್ಲಿ ಎರಡು ಮಗಣ (ನಾನಾನಾ ನಾನಾನಾ ಎಂಬಂತೆ), ಮತ್ತು ಎರಡು ಗುರು (ನಾ ನಾ).  ಇದು ಪ್ರಸಿದ್ಧಕರ್ಣಾಟಕವೃತ್ತಗಳಷ್ಟು (ಮತ್ತೇಭವಿಕ್ರೀಡಿತ, ಶಾರ್ದೂಲವಿಕ್ರೀಡಿತ, ಉತ್ಪಲಮಾಲಾ, ಚಂಪಕಮಾಲಾ, ಸ್ರಗ್ಧರಾ, ಮಹಾಸ್ರಗ್ಧರಾ), ಅಥವಾ ವಸಂತತಿಲಕ, ಹರಿಣೀ, ಮಂದಾಕ್ರಾಂತ ಮುಂತಾದ ಇತರ ವೃತ್ತಗಳಷ್ಟು ಪ್ರಸಿದ್ಧವಲ್ಲವಾದರೂ ಈ ಲಯ ತೀರ ಅಪರಿಚಿತವೇನಲ್ಲ.

ಶ್ರೀ ವಾದಿರಾಜರಿಗೆ ಸಂಬಂಧಿಸಿದ್ದೆಂದು ಒಂದು ಕತೆ ಪ್ರಚಲಿತವಾಗಿದೆ - ವಾದಿರಾಜರ ಶಿಷ್ಯರಲ್ಲೊಬ್ಬ, ನಾರಾಯಣಾಚಾರ್ಯನೆಂಬವನು ಬಹಳ ದೊಡ್ಡ ವಿದ್ವಾಂಸ, ಆದರೆ ವಿದ್ಯೆಗೆ ತಕ್ಕ ವಿನಯವಿಲ್ಲ.  ವಿದ್ಯಾಮದದಿಂದ ಯಾರ ಮುಖ ಮುರಿಯಲೂ ಹಿಂಜರಿಯುತ್ತಿರಲಿಲ್ಲ.  ಒಮ್ಮೆ ಗುರುಗಳಾದ ಶ್ರೀ ವ್ಯಾಸರಾಜರನ್ನು ಸಂದರ್ಶಿಸಲು ವಾದಿರಾಜರು ಶಿಷ್ಯಸಮೇತ ಹಂಪಿಗೆ ಬಂದಿದ್ದಾಗ, ಗುರುಗಳ ದರ್ಶನಕ್ಕೆ ತಡವಾಗಬಹುದೆಂದು ತಮ್ಮ ಸ್ನಾನಾಹ್ನಿಕಗಳನ್ನು ಸ್ವಲ್ಪ ಚುಟುಕಾಗಿಸಿದರಂತೆ.  ಶಿಷ್ಯನಿಗೆ ಅದೇ ನೆಪವಾಯಿತು - ಗುರುಗಳಾದ ವಾದಿರಾಜರನ್ನೂ ವ್ಯಾಸರಾಜರನ್ನೂ ತುಂಬಾ ಹಂಗಿಸಿದನಂತೆ.  ಗುರುಗಳನ್ನೂ ಬಿಡದಿದ್ದ ಶಿಷ್ಯನಮೇಲೆ ವಿಪರೀತ ಸಿಟ್ಟಿಗೆದ್ದ ವಾದಿರಾಜರು, ವಿದ್ಯಾಹಂಕಾರಿಯಾದ ನೀನು ಬ್ರಹ್ಮರಾಕ್ಷಸನಾಗು ಎಂದು ಶಪಿಸಿ ಹೊರಟುಹೋದರಂತೆ.  ಅಂದಿನಿಂದ ಹಂಪಿಯ ದಾರಿಯಲ್ಲಿದ್ದ ಭಾರೀ ಮರವೊಂದರ ಮೇಲೆ ನಾರಾಯಣಾಚಾರ್ಯ ಉರ್ಫ್ ಬ್ರಹ್ಮರಾಕ್ಷಸನ ವಾಸ.  ಆ ದಾರಿಯಲ್ಲಿ ಹೋಗಬರುವವರಿಗೆಲ್ಲ ಧುತ್ತನೆ ಪ್ರತ್ಯಕ್ಷನಾಗುವನು, ಬೆದರಿ ಮಿಡುಕುವ ದಾರಿಗನಿಗೆ ಒಂದು ಶರತ್ತು ಹಾಕುವನು - "ಒಂದು ಪ್ರಶ್ನೆ ಕೇಳುತ್ತೇನೆ, ಉತ್ತರಿಸಿದರೆ ನೀನು ಬಚಾವು".  ದಾರಿಗ ಒಪ್ಪಿ ತಲೆಯಾಡಿಸುತ್ತಿದ್ದಂತೆ ಬ್ರಹ್ಮರಾಕ್ಷಸ ಗರ್ಜಿಸಿ ಕೇಳುವನು - "ಆಕಾಮಾವೈ ಕೋ ನಸ್ನಾತಃ?".  ಅರ್ಥವೇ ಆಗದ ಪ್ರಶ್ನೆಗೆ ದಾರಿಗ ಏನುತ್ತರಿಸಿಯಾನು? ಅಂದಿಗೆ ಆತ ಬ್ರಹ್ಮರಾಕ್ಷನ ಹೊಟ್ಟೆಗೆ ಆಹಾರ! ಜನ ಆ ದಾರಿಯಲ್ಲಿ ಓಡಾಡುವುದನ್ನೇ ಬಿಡಲಾರಂಭಿಸಿದರು.  ಹೀಗಿರಲೊಮ್ಮೆ ಕೆಲಕಾಲಾನಂತರ ಸ್ವತಃ ವಾದಿರಾಜರು ಆ ದಾರಿಯಲ್ಲೇ ಬಂದರು.  ಮುರಿದು ತಿನ್ನುವ ಬ್ರಹ್ಮರಾಕ್ಷಸನಿಗೆ ಯಾರಾದರೇನು? ಧುತ್ತನೆ ಮರದಿಂದ ಧುಮುಕಿದವನೇ ಗರ್ಜಿಸಿದ - "ಆಕಾಮಾವೈ ಕೋ ನಸ್ನಾತಃ".  ಕೊಂಚವೂ ವಿಚಲಿತರಾಗದ ವಾದಿರಾಜರು ಉತ್ತರಿಸಿದರು - "ರಂಡಾಪುತ್ರ ತ್ವಂ ನಸ್ನಾತಃ" (ಆಷಾಢ ಕಾರ್ತಿಕ ಮಾಘ ವೈಶಾಖಗಳಲ್ಲಿ (ತೀರ್ಥ)ಸ್ನಾನ ಮಾಡದವನು ಯಾರು - ಇದು ಬ್ರಹ್ಮರಾಕ್ಷಸನ ಪ್ರಶ್ನೆ.  ಆ ಪುಣ್ಯಮಾಸಗಳಲ್ಲಿ ಶಾಸ್ತ್ರವಿಹಿತವಾದ ತೀರ್ಥಸ್ನಾನ ಮಾಡದ ಪಾಪಿ, ನೀರು ಕಂಡರೆ ಹೆದರುವ ನೀನಲ್ಲದೇ ಇನ್ನಾರಾಗಿರಲು ಸಾಧ್ಯ?  ಇದು ಉತ್ತರ - ರಂಡಾಪುತ್ರ (ರಂಡೆಯ ಮಗನೇ) ಈ ಬಗೆಯ ಬೈಗಳು ಎಲ್ಲ ಕಾಲದಲ್ಲೂ ಎಲ್ಲ ಸ್ತರಗಳಲ್ಲೂ ಇತ್ತು).  ಬ್ರಹ್ಮರಾಕ್ಷಸನಿಗೆ ಪೂರ್ವಜನ್ಮಸ್ಮರಣೆ ಬಂತಂತೆ - ತನ್ನನ್ನು ಶಪಿಸಿ ಈ ಗತಿಗೆ ತಂದವರೇ ಇವರು.  ತಿಳಿವು ತಿಳಿದು ಪಶ್ಚಾತ್ತಾಪವಾಗುವುದರ ಬದಲು ಸಿಟ್ಟು ಭುಗಿಲೆದ್ದಿತಂತೆ - ವಾದಿರಾಜರಿಗೆ ವಾದಕ್ಕಾಹ್ವಾನ ನೀಡಿತು ಬ್ರಹ್ಮರಾಕ್ಷಸ.  ತಾನು ಗೆದ್ದರೆ ವಾದಿರಾಜರನ್ನು ಮುರಿದು ತಿನ್ನುವುದು; ತಾನು ಸೋತರೆ, ಅವರ ದಾಸನಾಗಿ ಪಲ್ಲಕ್ಕಿ ಹೊರುವುದು.  ಕೊನೆಗೆ ಬ್ರಹ್ಮರಾಕ್ಷಸನೇ ಪಲ್ಲಕ್ಕಿ ಹೊರಬೇಕಾಯಿತೆಂದು ಬೇರೆ ಹೇಳಬೇಕಾಗಿಲ್ಲವಲ್ಲ.

ಇರಲಿ, ಬಾಲ್ಯದಲ್ಲಿ ಕೇಳಿದ ಕತೆ - ಕತೆಗೆ ಕಾಲಿಲ್ಲ, ಇನ್ನು ಆಧಾರವನ್ನೆಲ್ಲಿ ತರುವುದು? ಆಮೇಲೆ ಇದನ್ನು ಬೇಲೂರು ಕೇಶವದಾಸರ ಕರ್ಣಾಟಕ ಭಕ್ತವಿಜಯದಲ್ಲೂ ಓದಿದ್ದೇನೆ - ಆಕರ ತಿಳಿಯದು.  ಅದೇನೇ ಇರಲಿ, ಕತೆಯ ವಿಮರ್ಶೆ ನಮ್ಮ ತಲೆನೋವಲ್ಲ.  ಮೇಲಿನ ಸಂಭಾಷಣೆ - "ಆಕಾಮಾವೈ ಕೋ ನಸ್ನಾತಃ", "ರಂಡಾಪುತ್ರ ತ್ವಂ ನಸ್ನಾತಃ" ವಿದ್ಯುನ್ಮಾಲಾವೃತ್ತದಲ್ಲೇ ಇದೆಯೆನ್ನುವುದಕ್ಕೆ ಇಷ್ಟು ಹೇಳಬೇಕಾಯಿತು.

ವಿಚಿತ್ರ ನಡೆಯುಳ್ಳ ಈ ವೃತ್ತ, ಹಲವು ಚಮತ್ಕಾರದ ರಚನೆಗಳಿಗೆ ಸ್ಫೂರ್ತಿಯಾಗಿದೆ.  ಉದಾಹರಣೆಗೆ, ವೆಂಕಟಾಧ್ವರಿಯ "ಶ್ರೀ ರಾಘವ ಯಾದವೀಯಂ" ಎಂಬ ದ್ವಿಸಂಧಾನಕಾವ್ಯ (ದ್ವಿಸಂಧಾನಕಾವ್ಯವೆಂದರೆ ನೇರವಾಗಿ ಓದಿದರೆ ಒಂದು ಕತೆ, ಅವೇ ಶ್ಲೋಕಗಳನ್ನು ತಿರುವುಮುರುವಾಗಿ ಓದಿದರೆ ಇನ್ನೊಂದು ಕತೆ - ಹೀಗೆ ಇಡೀ ಕಾವ್ಯ ಎರಡೆರಡು ಕತೆ ಹೇಳುವಂಥದ್ದು).  ಉದಾಹರಣೆಯಾಗಿ ಇದರ ಮೊದಲ ಶ್ಲೋಕ ನೋಡಿ (ವಿದ್ಯುನ್ಮಾಲೆಯಲ್ಲಿರುವುದರಿಂದ ಈ ಉದಾಹರಣೆ)-

ವಂದೇSಹಂ ದೇವಂ ತಂ ಶ್ರೀತಂ

ರಂತಾರಂ ಕಾಲಂ ಭಾಸಾಯಃ

ರಾಮೋರಾಮಾಧೀರಾಪ್ಯಾಗೋ

ಲೀಲಾಮಾರಾಯೋಧ್ಯೇ ವಾಸೇ

ಇದು ಅಯೋಧ್ಯಾರಾಮನ ಸ್ತುತಿ.  ಮೇಲಿನ ಶ್ಲೋಕವನ್ನೇ ಕೊನೆಯ ಅಕ್ಷರದಿಂದ ಮೊದಲಿನವರೆಗೆ ಓದಿಕೊಂಡು ಬಂದರೆ ಅದು ಹೀಗಾಗುತ್ತದೆ-

ಸೇವಾಧ್ಯೇಯೋರಾಮಾಲಾಲೀ

ಗೋಪ್ಯಾರಾಧೀ ಮಾರಾಮೋರಾಃ

ಯಸ್ಸಾಭಾಲಂಕಾರಂ ತಾರಂ

ತಂ ಶ್ರೀತಂ ವಂದೇSಹಂ ದೇವಂ

ಇದು ಗೋಪೀಲೋಲನಾದ, ಶ್ರೀನಿವಾಸನಾದ, ಅಷ್ಟಮಹಿಷಿಯರೊಡನೆ ವಿಲಸಿಸುವ ಕೃಷ್ಣನ ಸ್ತುತಿ.

ಶ್ರೀ ವೇದಾಂತದೇಶಿಕರ ಪಾದುಕಾಸಹಸ್ರದಲ್ಲಿ ಬರುವ ಈ ಪದ್ಯವಂತೂ ಇನ್ನೂ ಚಮತ್ಕಾರಯುಕ್ತವಾದದ್ದು (ಇದೂ ವಿದ್ಯುನ್ಮಾಲೆಯೇ)

ಯಾಯಾಯಾಯಾಯಾಯಾಯಾಯಾ

ಯಾಯಾಯಾಯಾಯಾಯಾಯಾಯಾ

ಯಾಯಾಯಾಯಾಯಾಯಾಯಾಯಾ

ಯಾಯಾಯಾಯಾಯಾಯಾಯಾಯಾ

(ಪಾದುಕಾಸಹಸ್ರಂ - 30-26)

ಇದು ಕೇವಲ ಏಕಾಕ್ಷರಶ್ಲೋಕವಷ್ಟೇ ಅಲ್ಲ, ಇದರಲ್ಲಿ ಕಂಕಣ, ಪದ್ಮ, ಗೋಮೂತ್ರಿಕೆ ಮೊದಲಾದ ಹಲವು ಚಿತ್ರಬಂಧಗಳೂ ಅಡಗಿವೆಯೆನ್ನುತ್ತಾರೆ ಪ್ರಾಜ್ಞರು - ನಾನು ಪರಿಶೀಲಿಸಿ ನೋಡಹೋಗಿಲ್ಲ.  ಇಂಥವನ್ನು ಮಹಾಯಮಕಗಳೆನ್ನುತ್ತಾರೆ.  ಚಮತ್ಕಾರಿಕಪದ್ಯ ಹೌದು, ಆದರೆ ಇದೇನು ಅರ್ಥವಿಲ್ಲದ ಅಕ್ಷರಜೋಡಣೆಯಲ್ಲ.  ಬೇರೆಬೇರೆ ಪದಗಳು ಸಂಧಿಯಾಗಿ, ಪರಿಣಾಮದಲ್ಲಿ ಎಲ್ಲ ಒಂದೇ ಅಕ್ಷರವಾಗಿರುವುದು.  ಇದನ್ನು ಬಿಡಿಸಿದರೆ - 

ಯಾಯಾಯಾ ಅಯ ಆಯಾಯ ಅಯಾಯ ಅ-

ಯಾಯ ಅಯಾಯ ಅಯಾಯ ಅಯಾಯಾ

ಯಾಯಾಯ ಆಯಾಯಾಯ ಆಯಾಯಾ-

ಯಾ ಯಾ ಯಾ ಯಾ ಯಾ ಯಾ ಯಾ ಯಾ

ಇದರ ಅರ್ಥವಿವರಣೆ ಸದ್ಯದ ಬರಹದ ವ್ಯಾಪ್ತಿಯನ್ನು ಮೀರಿದುದಾದ್ದರಿಂದ ಅದಕ್ಕೆ ಕೈ ಹಾಕಿಲ್ಲ.  ಇಂಥವು ಬೇರೆಬೇರೆ ಛಂದಸ್ಸುಗಳಲ್ಲೂ ಇವೆ, ಸದ್ಯದ ಬರಹ ವಿದ್ಯುನ್ಮಾಲೆಯನ್ನು ಕುರಿತದ್ದಾದ್ದರಿಂದ ಈ ಶ್ಲೋಕವನ್ನು ಉದಾಹರಿಸಿದೆ.  ಹಾಗೇ ವೇದಾಂತದೇಶಿಕರದೇ ಯಾದವಾಭ್ಯುದಯದ ಈ ಶ್ಲೋಕವನ್ನೂ ನೋಡಬಹುದು-

ನಾನಾನಾನಾನಾನಾನಾನಾ

ನಾನಾನಾನಾನಾನಾನಾನಾ

ನಾನಾನಾನಾನಾನಾನಾನಾ

ನಾನಾನಾನಾನಾನಾನಾನಾ

(ಯಾದವಾಭ್ಯುದಯ - 6-96)

ಅದೇ ರೀತಿ ಶ್ರೀ ಮಧ್ವಾಚಾರ್ಯರ ಯಮಕಭಾರತದಲ್ಲಿಯೂ ಇಂತಹ ರಚನೆಗಳನ್ನು ಕಾಣಬಹುದು, ಅದರಲ್ಲಿ ವಿದ್ಯುನ್ಮಾಲಾವೃತ್ತದ ಈ ರಚನೆಯನ್ನು ನೋಡಿ-

ಭಾಭಾಭಾಭಾಭಾಭಾಭಾಭಾ

ಭಾಭಾಭಾಭಾಭಾಭಾಭಾಭಾ

ಭಾಭಾಭಾಭಾಭಾಭಾಭಾಭಾ

ಭಾಭಾಭಾಭಾಭಾಭಾಭಾಭಾ

(ಯಮಕಭಾರತ - 78)

ಮೇಲಿನವು ಗಂಭೀರವಾದ ರಚನೆಗಳಾದುವು.  ಆದರೆ ನಮ್ಮ ಉದ್ದೇಶ ಈ ರಚನೆಗಳ ಪರಿಚಯವಲ್ಲ, ಈ ವೃತ್ತದ ಸ್ವಭಾವಪರಿಚಯವಷ್ಟೇ?  ಇದು ಎಷ್ಟು ಸರಳವಾದ, ಸುಲಭವಾಗಿ ಕೈಗೆಟುಕುವ ಲಯವೆಂದರೆ, ಸರಳವಾದ ದಿನಬಳಕೆಯ ಮಾತುಗಳೂ ಈ ಲಯಕ್ಕೆ ಹೊಂದಿಬಿಡುತ್ತವೆ.  ಬಾಲ್ಯದಲ್ಲಿ ಕಣ್ಣಾಮುಚ್ಚಾಲೆಯಾಟದಲ್ಲಿ ಹೇಳುತ್ತಿದ್ದ ಈ ಪದ್ಯ ನೆನಪಿದೆಯೇ?

ಕಣ್ಣಾಮುಚ್ಚೇ ಕಾಡೇಗೂಡೇ

ಉದ್ದಿನ್ಮೂಟೇ ಉಂಟೇ ಹೋಯ್ತು

ನಮ್ಮಾ ಹಕ್ಕೀ ಬಿಟ್ಟೇ ಬಿಟ್ಟೇ

ನಿಮ್ಮಾ ಹಕ್ಕೀ ಬಚ್ಚಿಟ್ಕೊಳ್ಳೀ

ಇಲ್ಲಿ ಲಯಕ್ಕಾಗಿ ಅಕ್ಷರಗಳನ್ನು ಜಗ್ಗಿಸುವುದು, ತುರುಕುವುದು ಇಂಥವೆಲ್ಲ ಇದೆ, ಪದಗಳು ಅವುಗಳ ಮೂಲರೂಪದಲ್ಲಿಲ್ಲ, ಇರಲಿ.  ಒಂದು ಗಂಭೀರವಾದ ವೃತ್ತರಚನೆಯಲ್ಲಿ ಹೀಗಿರುವುದಿಲ್ಲ ಎಂಬುದನ್ನು ಮನಸ್ಸಿನಲ್ಲಿಡೋಣ.  ಆದರೆ ವಿದ್ಯುನ್ಮಾಲೆಯ ಲಯ ಆಡುಮಾತಿಗೂ ಎಷ್ಟು ಸೊಗಸಾಗಿ ಹೊಂದುತ್ತದೆಂದು ತೋರಿಸಬಯಸಿದೆನಷ್ಟೇ.  ತುಂಬಾ ದಿನದ ಹಿಂದೆ ನಾನೊಂದು ತಮಾಷೆಯ ಚೌಪದಿ ರಚಿಸಿದ್ದೆ-

ಗುಟ್ಟೊಳ್ ಬಚ್ಚಿಟ್ಟಾ ತಂಬಿಟ್ಟಂ

ಛಟ್ಟನೆ ಹಾರಿಸಿ ಬಿಟ್ಟಂ ಕಿಟ್ಟಂ

ಸಿಟ್ಟಿಂದಟ್ಟುತ ಸುಬ್ಬಾ ಭಟ್ಟಂ

ದಟ್ಟಿಯು ತೊಡರಲ್ ಬಿದ್ದಂ ಕೆಟ್ಟಂ

ಇದು ವಿದ್ಯುನ್ಮಾಲೆಯಲ್ಲ, ಚತುರ್ಮಾತ್ರಾಚೌಪದಿ (ನಾಲ್ಕುನಾಲ್ಕು ಮಾತ್ರೆಯ ಲಯವುಳ್ಳದ್ದು); ವಿದ್ಯುನ್ಮಾಲೆಯಲ್ಲಾದರೆ, ಮೇಲೆ ವಿವರಿಸಿದಂತೆ ಸರ್ವಗುರು ಬರಬೇಕು.  ಆದರೆ ಇದನ್ನು ಸುಲಭವಾಗಿ ವಿದ್ಯುನ್ಮಾಲೆಯಾಗಿ ಪರಿವರ್ತಿಸಬಹುದು (ಮೊದಲ ಸಾಲು ಈಗಾಗಲೇ ಪೂರ್ತಿ ಗುರ್ವಕ್ಷರಗಳೇ ಇದ್ದು, ವಿದ್ಯುನ್ಮಾಲೆಯಾಗಿಯೇ ಇದೆ, ಉಳಿದದ್ದನ್ನೂ ಪರಿವರ್ತಿಸಿದರೆ ಹೀಗೆ)-

ಗುಟ್ಟೊಳ್ ಬಚ್ಚಿಟ್ಟಾ ತಂಬಿಟ್ಟಂ

ಕಿಟ್ಟಂ ಛಟ್ಟೆಂದೆತ್ತೇ ಬಿಟ್ಟಂ

ಸಿಟ್ಟಿಂದಟ್ಟಲ್ ಸುಬ್ಬಾ ಭಟ್ಟಂ

ಕೆಟ್ಟಂ ಕಿಟ್ಟಂ ಬಿದ್ದೇ ಬಿಟ್ಟಂ

ಅಯ್ಯೋ, ನಾನು ನಿಮ್ಮೊಡನೆ ಹರಟುತ್ತಾ ಕೂತೆ - ಸಿಂಬಣ್ಣ ನೋಡಿ, ಬಿಸ್ಕೆಟ್ ತಿಂದು ಮುಗಿಸಿ, ಅದೇನೋ ಗಲಾಟೆ ನೋಡಲು ಗೇಟಿನ ಮುಂದೆ ಹೋಗಿ ನಿಂತಿದೆ; ಅಲ್ಲೆಲ್ಲೋ ಮೆರವಣಿಗೆ, ಒಂದಷ್ಟು ಜನ ಘೋಷಣೆ ಕೂಗುತ್ತಿದ್ದಾರೆ-

"ಬೇಕೇಬೇಕೂ ನ್ಯಾಯಾ ಬೇಕೂ"

"ಸಾಲಾ ಮನ್ನಾ ಮಾಡ್ಲೇ ಬೇಕೂ"

"ಅಕ್ಕೀಬೇಳೇ ಬಿಟ್ಟೀ ಬೇಕೂ"

"ಕಾರೂ ಬೇಕು ಬೈಕೂ ಬೇಕು"


"ಚಟ್ನೀಗಿಡ್ಲೀ ಬೇಕೇ ಬೇಕೂ

ಆಲೂಗಡ್ಡೇ ಪಲ್ಯಾ ಬೇಕೂ

ಪೂರೀ ಸಾಗೂ ಕಾಫೀ ಬೇಕೂ

ಬೇಕೇಬೇಕೂ ಬೇಕೇಬೇಕೂ"

Monday, September 13, 2021

ಆಡುಮಾತಿ'ನಲ್ಲಿ' (ಸಪ್ತಮೀ)ವಿಭಕ್ತಿಪ್ರತ್ಯಯ

ಮಿತ್ರರಾದ ವಸಂತ ಬಂಟಕಲ್ ಅವರು "ಮನೇನಲ್ಲಿ, ಕಾಶೀನಲ್ಲಿ, ಬೀದೀನಲ್ಲಿ" ಎಂದು ಮಾತಾಡುವ ವಿದ್ವಾಂಸರೋರ್ವರ ಅಭ್ಯಾಸದ ಬಗ್ಗೆ ತಮಾಷೆಯಾಗಿ ಹೇಳಿದರು.  ಸ್ವಾರಸ್ಯವಾದ ಗಮನಿಕೆ.  "ಸರ್ವಂ 'ನಲ್ಲಿ'ಮಯಂ ಜಗತ್" ಎನ್ನೋಣವೇ? 🙂 'ನಲ್ಲಿ' ಪ್ರತ್ಯಯ ತಪ್ಪೆಂಬುದರಲ್ಲಿ ಎರಡು ಮಾತಿಲ್ಲ.  ಆದರೆ ಆ ತಮಾಷೆಯ ನೆಪದಲ್ಲಾದರೂ ಆಡುನುಡಿಯಲ್ಲಿ ಅದು ಏಕೆ ಬರುತ್ತದೆ ಎಂಬುದನ್ನು ತಿಳಿದು ನೋಡುವುದು ಕುತೂಹಲಕರವೆನಿಸಿತು.  ಅದಕ್ಕಾಗಿ ಈ ಲೇಖನ (ನೆನಪಿರಲಿ, ಹಳಗನ್ನಡದ ವ್ಯಾಕರಣಸೂತ್ರಗಳಲ್ಲಿ, ಹೊಸಗನ್ನಡದ ವ್ಯಾಕರಣದಲ್ಲಿ, ಶಿಷ್ಟಭಾಷೆಯ ರೂಢಿಯಲ್ಲಿ ಏನಿದೆ ಎನ್ನುವುದಕ್ಕಿಂತ ಆಡುಮಾತಿನಲ್ಲಿ ಅವು ಹೇಗೆ/ಏಕೆ ಹಾಗೆ ಮೈದಳೆದಿವೆ ಎನ್ನುವುದರ ವಿಶ್ಲೇಷಣೆಯೇ ಈ ಬರಹದ ಉದ್ದೇಶ.  ಆದ್ದರಿಂದ ಬಳಕೆಯನ್ನು ವಿವರಿಸುವಾಗ ವ್ಯಾಕರಣದಲ್ಲಿ ಹೇಳಿರದ/ಅಥವಾ ಅದಕ್ಕಿಂತ ಭಿನ್ನವಾದ ವಿವರಗಳು ಇಲ್ಲಿ ಕಾಣಬಹುದು).
 
ಮೊದಲಿಗೆ ಹೊಸಗನ್ನಡದಲ್ಲಿ ನಾವು ಬಳಸುವ ವಿಭಕ್ತಿಪ್ರತ್ಯಯಗಳನ್ನು ನೋಡೋಣ

ಪ್ರಥಮಾ - ಉ
ದ್ವಿತೀಯಾ - ಅನ್ನು
ತೃತೀಯಾ/ಪಂಚಮೀ - ಇಂದ
ಚತುರ್ಥೀ - ಗೆ
ಷಷ್ಠೀ - ಅ
ಸಪ್ತಮೀ - ಅಲ್ಲಿ

ಆದರೆ ಈ ವಿಭಕ್ತಿಪ್ರತ್ಯಯಗಳು ನಾಮಪದಕ್ಕೆ ನೇರವಾಗಿ ಹತ್ತಲಾರವು.  ಉದಾಹರಣೆಗೆ ರಾಮನು ಎಂಬುದನ್ನು ನೋಡಿ.  ರಾಮ (ನಾಮಪದ) + ಉ (ಪ್ರಥಮಾವಿಭಕ್ತಿ) = ರಾಮು ಆಗಬೇಕಲ್ಲವೇ?  ರಾಮನು ಎಂಬ ನಕಾರ ಎಲ್ಲಿಂದ ಬಂತು? (ಇದರ ಹಳಗನ್ನಡರೂಪ ರಾಮನ್ ಮತ್ತು ಹಳಗನ್ನಡದಲ್ಲಿ ಇದಕ್ಕೆ ವಿಭಕ್ತಿಪ್ರತ್ಯಯವಿಲ್ಲ, ಆದ್ದರಿಂದ ಅಲ್ಲಿ ಈ ಸಮಸ್ಯೆ ಬರುವುದಿಲ್ಲ).  ಮೇಲಿನ ಸಮೀಕರಣವನ್ನು ಮರುಬರೆದರೆ ರಾಮ + ನ್ + ಉ ಹೀಗಾಗಿರಬೇಕಲ್ಲವೇ?  ಈ ನಕಾರ ಏಕೆ ಬಂತು?  ಅದೇ ರೀತಿ ಗುಡ್ಡವನ್ನು ಎಂಬುದನ್ನು ಗಮನಿಸಿ.  ಗುಡ್ಡ + ವ್ + ಅನ್ನು = ಗುಡ್ಡವನ್ನು ಆಯಿತು.  ವಕಾರವೊಂದು ಬಂದು ಸೇರಿತು.  ಇದಿಲ್ಲದೇ ಕೇವಲ 'ಅನ್ನು' ವಿಭಕ್ತಿಪ್ರತ್ಯಯ ಸೇರಿಸಿದ್ದರೆ ಗುಡ್ಡನ್ನು ಎಂದಾಗುತ್ತಿತ್ತು.  ಹಾಗೆಯೇ ಮರದಲ್ಲಿ ಎನ್ನುವಲ್ಲಿ ಮರ (ನಾಮಪದ) + ದ + ಅಲ್ಲಿ = ಮರದಲ್ಲಿ.  ಇಲ್ಲಿ ದಕಾರವೊಂದು ಸೇರಿತು.  ಮರ ಮತ್ತು ಅಲ್ಲಿ ಇಷ್ಟನ್ನು ಹಾಗೆಯೇ ಸಂಧಿ ಮಾಡಿದ್ದರೆ ಮರಲ್ಲಿ ಆಗಬೇಕಿತ್ತಷ್ಟೇ?  (ವಾಸ್ತವದಲ್ಲಿ ಇಲ್ಲಿ ಬಂದಿರುವುದು ದ ಎಂಬ ಪೂರ್ಣಾಕ್ಷರವಲ್ಲ, ದ್ ಎಂಬ ಅಕ್ಷರ ಮತ್ತು ಅ ಎಂಬ ಷಷ್ಠೀವಿಭಕ್ತಿ, ಎರಡೂ ಸೇರಿ 'ದ' ಆಗಿರುವುದು.  ನಾವು ಕನ್ನಡದಲ್ಲಿ ವಿಭಕ್ತಿಪ್ರತ್ಯಯಗಳು ಹತ್ತುವ ರೀತಿಯನ್ನು ಗಮನಿಸಿದರೆ, ಪ್ರಥಮಾ, ದ್ವಿತೀಯಾ, ಚತುರ್ಥೀ ಮತ್ತು ಷಷ್ಠೀವಿಭಕ್ತಿಪ್ರತ್ಯಯಗಳು ಸ್ವತಂತ್ರ ವ್ಯವಹಾರವುಳ್ಳವು - ನಾಮಪದಕ್ಕೆ ನೇರವಾಗಿ ಹತ್ತುತ್ತವೆ.  ಆದರೆ ತೃತೀಯಾ/ಪಂಚಮೀ ಮತ್ತು ಸಪ್ತಮೀವಿಭಕ್ತಿಗಳ ಪ್ರತ್ಯಯಗಳು ನಾಮಪದಕ್ಕೆ ನೇರವಾಗಿ ಸೇರುವುದಿಲ್ಲ - ಅವು ಷಷ್ಠೀವಿಭಕ್ತಿಯ ಮೇಲೆ ಬಂದು ಕೂರುವಂಥವು - ನ್+ಅ+ಇಂದ=ನಿಂದ, ದ್+ಅ+ಅಲ್ಲಿ=ದಲ್ಲಿ ಹೀಗೆ, ಇರಲಿ) ನಾಮಪದಕ್ಕೂ ವಿಭಕ್ತಿಪ್ರತ್ಯಯಗಳಿಗೂ ನಡುವೆ ಈ ಹೊಸ ಅಕ್ಷರಗಳು ಏಕೆ ಬರುತ್ತವೆ?  ಏಕೆಂದರೆ ನೇರವಾಗಿ ವಿಭಕ್ತಿಪ್ರತ್ಯಯ ಸೇರಿದರೆ ರಾಮು, ಗುಡ್ಡನ್ನು, ಮರಲ್ಲಿ ಮುಂತಾದ ವಿಕಾರಗಳು ಬರುವುವಷ್ಟೇ?  ಅದನ್ನು ನಿವಾರಿಸುವುದಕ್ಕೋಸ್ಕರವೇ, ನಾಲಿಗೆಗೆ ಆಧಾರವಾಗಿ ಈ ಅಕ್ಷರಗಳು ಬಂದು ಕೂಡಿಕೊಳ್ಳುತ್ತವೆ (ಆಗಮ).  ಹೀಗೆ ಯಾವ ಅಕ್ಷರವು ಆಗಮವಾಗಿ ಬರುತ್ತದೆ ಎನ್ನುವುದು, ಆ ನಾಮಪದ ಯಾವ ಸ್ವರದಿಂದ ಕೊನೆಗೊಳ್ಳುತ್ತದೆ ಮತ್ತು ಅದರ ಲಿಂಗ/ವಚನಗಳೇನು ಎಂಬುದರ ಮೇಲೆ ನಿರ್ಧಾರವಾಗುತ್ತದೆ - ಸಾಮಾನ್ಯವಾಗಿ ದ್/ನ್/ಇನ್/ಳ್/ಅಳ್/ರ್/ಅರ್ ಹೀಗೆ ಹಲವು ಅಕ್ಷರಗಳು ಬಂದು ಸೇರುತ್ತವೆ.  ಇವನ್ನು ಆಗಮ (ಹೊಸದಾಗಿ ಬಂದು ಸೇರಿದ್ದು) ಎನ್ನುತ್ತಾರೆ, 'ಔಪವಿಭಕ್ತಿ'ಗಳೆಂದೂ ಕರೆಯುತ್ತಾರೆ - ದಕಾರಾಗಮ, ನಕಾರಾಗಮ, ಇನಾಗಮ, ಳಕಾರಾಗಮ, ಅಳಾಗಮ, ಅರಾಗಮ ಇತ್ಯಾದಿ.  ಉದಾಹರಣೆಗೆ, ದಾಸನಲ್ಲಿ ಎಂಬ ಸಪ್ತಮೀವಿಭಕ್ತಿರೂಪವನ್ನು ಬಿಡಿಸಿ ಬರೆದರೆ ದಾಸ (ನಾಮಪದ) + (ನ್ (ಆಗಮ) + ಅ (ಷಷ್ಠೀ)) + ಅಲ್ಲಿ (ಸಪ್ತಮೀ) = ದಾಸ + ನ + ಅಲ್ಲಿ = ದಾಸ'ನಲ್ಲಿ'.  ಇಲ್ಲಿ "ನಲ್ಲಿ" ಎಲ್ಲಿಂದ ಬಂದಿತೆಂದು ತಿಳಿಯಿತಲ್ಲ.  ಹೀಗಾಗಿ ನಲ್ಲಿಯ ಮೂಲವಿರುವುದು ಕೊನೆಯಲ್ಲಿ ಬರುವ ಸಪ್ತಮೀವಿಭಕ್ತಿಯಲ್ಲಲ್ಲ, ನಾಮಪದಕ್ಕೆ ಸೇರುವ ಆಗಮಾಕ್ಷರಗಳಲ್ಲಿ

ಈಗ, ಈ ಆಗಮಾಕ್ಷರಗಳು ಹೇಗೆ ಬಂದು ಕೂರುತ್ತವೆ ನೋಡೋಣ - ಮೊದಲೇ ಹೇಳಿದಂತೆ ನಾಮಪದದ ಕೊನೆಯ ಸ್ವರ ಮತ್ತು ನಾಮಪದದ ಲಿಂಗವಚನಗಳೇ ಇದಕ್ಕೆ ಆಧಾರ - ಸಾಮಾನ್ಯವಾಗಿ ಹೀಗೆ:

ನಕಾರಾಗಮ
ಅಕಾರಾಂತ ಪುಲ್ಲಿಂಗ - ರಾಮ + ನ್ + ಅ = ರಾಮನ
ಆಕಾರಾಂತ ಪುಲ್ಲಿಂಗ - ಗಾಮಾ + ನ್ + ಅ = ಗಾಮಾನ
ಊಕಾರಾಂತ ಪುಲ್ಲಿಂಗ - ಬಬ್ಲೂ + ನ್ + ಅ = ಬಬ್ಲೂನ
ಊಕಾರಾಂತ ನಪುಂಸಕ - ಝೂ + ನ್ + ಅ = ಝೂನ
ಓಕಾರಾಂತ ಪುಲ್ಲಿಂಗ - ಮನ್ರೋ + ನ್ + ಅ = ಮನ್ರೋನ
ಓಕಾರಾಂತ ನಪುಂಸಕ - ಎಸ್ಕಿಮೋ + ನ್ + ಅ = ಎಸ್ಕಿಮೋನ

ಇನಾಗಮ
ವ್ಯಂಜನಾಂತ ಸರ್ವಲಿಂಗ - ಕಣ್ + ಇನ್ + ಅ = ಕಣ್ಣಿನ; ಊರ್ + ಇನ್ + ಅ = ಊರಿನ; ಮನಸ್ + ಇನ್ + ಅ = ಮನಸಿನ; ಬಾರ್+ ಇನ್ + ಅ = ಬಾರಿನ
ಉಕಾರಾಂತ ಸರ್ವಲಿಂಗ (ಆಗಮದೊಂದಿಗೆ ಉಕಾರಲೋಪವೂ) - ಓದು + ಇನ್ + ಅ = ಓದಿನ; ಕಾಡು +ಇನ್ + ಅ = ಕಾಡಿನ; ಗುಡ್ಡು + ಇನ್ + ಅ = ಗುಡ್ಡಿನ
ಉಕಾರಾಂತ ಸರ್ವಲಿಂಗ (ಆಗಮಮಾತ್ರ; ಉಕಾರಲೋಪವಿಲ್ಲ) - ಗುರು + ಇನ್ + ಅ = ಗುರುವಿನ; ಪಾರು +ಇನ್ + ಅ = ಪಾರುವಿನ; ಕರು + ಇನ್ + ಅ = ಕರುವಿನ
ಊಕಾರಾಂತ ಸರ್ವಲಿಂಗ (ಆಗಮಮಾತ್ರ; ಉಕಾರಲೋಪವಿಲ್ಲ) - ಹೂ + ಇನ್ + ಅ = ಹೂವಿನ

ಳಕಾರಾಗಮ
ಅಕಾರಾಂತ ಸ್ತ್ರೀಲಿಂಗ - ಸೇವಕ + ಳ್ + ಅ = ಸೇವಕಳ (ಸೇವಿಕಾ/ಸೇವಕಿ ಎಂಬುದು ಸರಿ, ಸೇವಕಶಬ್ದಕ್ಕೇ ಸ್ತ್ರೀಲಿಂಗಪ್ರತ್ಯಯ ಸೇರಿಸಬೇಕಾದರೆ ಇದು)
ಆಕಾರಾಂತ ಸ್ತ್ರೀಲಿಂಗ - ರೀಟಾ + ಳ್ + ಅ = ರೀಟಾಳ
ಊಕಾರಾಂತ ಸ್ತ್ರೀಲಿಂಗ - ಸೋನೂ + ಳ್ + ಅ = ಸೋನೂಳ
ಓಕಾರಾಂತ ಸ್ತ್ರೀಲಿಂಗ - ದನ್ನೋ + ಳ್ + ಅ = ದನ್ನೋಳಲ್ಲಿ

ದಕಾರಾಗಮ
ಅಕಾರಾಂತ ನಪುಂಸಕ - ಮರ + ದ್ + ಅ = ಮರದ
ಆಕಾರಾಂತ ನಪುಂಸಕ - ಪಿzzಆ + ದ್ + ಅ = ಪಿzzಆದ
ಊಕಾರಾಂತ ನಪುಂಸಕ - ಝೂ + ದ್ + ಅ = ಝೂದ
ಓಕಾರಾಂತ ನಪುಂಸಕ - ಎಸ್ಕಿಮೋ + ದ್ + ಅ = ಎಸ್ಕಿಮೋದ

ರಕಾರಾಗಮ
ಅಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಸೇವಕ + ರ್ + ಅ = ಸೇವಕರ

ಅವರ್ ಆಗಮ
ಆಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಗಾಮಾ + ಅವರ್ + ಅ = ಗಾಮಾ ಅವರ; ರೀಟಾ + ಅವರ್ + ಅ = ರೀಟಾ ಅವರ
ಈಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಅಣ್ಣಾಜೀ + ಅವರ್ + ಅ = ಅಣ್ಣಾಜೀ ಅವರ; ಜೋಲೀ + ಅವರ್ + ಅ = ಜೋಲೀ ಅವರ
ಊಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಬಬ್ಲೂ + ಅವರ್ + ಅ = ಬಬ್ಲೂ ಅವರ; ಸೋನೂ + ಅವರ್ + ಅ = ಸೋನೂ ಅವರ
ಓಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಮನ್ರೋ + ಅವರ್ + ಅ = ಮನ್ರೋ ಅವರ; ದನ್ನೋ + ಅವರ್ + ಅ = ದನ್ನೋ ಅವರ

ಅರಾಗಮ
ಇ/ಎಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಹಿರಿ + ಅರ್ + ಅ = ಹಿರಿಯರ

ಅಱಾಗಮ (ಹೊಸಗನ್ನಡದಲ್ಲಿ ಇದೂ ಅರಾಗಮವೇ)
ಉಕಾರಾಂತ ಕೃದಂತ, ಸರ್ವನಾಮ, ಗುಣವಾಚಕ ಅಥವಾ ಸಂಖ್ಯಾವಾಚಕ - ಮಾಡಿದ್ದು + ಅರ್ + ಅ = ಮಾಡಿದ್ದರ; ಅದು + ಅರ್ + ಅ = ಅದರ; ದೊಡ್ಡದು + ಅರ್ + ಅ = ದೊಡ್ಡದರ; ಐದು + ಅರ್ + ಅ = ಐದರ

ಗಳಾಗಮ
ಅಕಾರಾಂತ ನಪುಂಸಕಬಹುವಚನ - ಮರ + ಗಳ್ + ಅ = ಮರಗಳ
ಆಕಾರಾಂತ ನಪುಂಸಕಬಹುವಚನ - ಪಿzzಆ + ಗಳ್ + ಅ = ಪಿzzಆಗಳ
ಇ/ಎಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಸಿರಿ + ಗಳ್ + ಅ = ಸಿರಿಗಳ; ದೊರೆ + ಗಳ್ + ಅ = ದೊರೆಗಳ
ಇ/ಎಕಾರಾಂತ ನಪುಂಸಕಲಿಂಗಬಹುವಚನ - ನದಿ + ಗಳ್ + ಅ = ನದಿಗಳ; ತೊರೆ + ಗಳ್ + ಅ = ತೊರೆಗಳ
ಈಕಾರಾಂತ ನಪುಂಸಕಲಿಂಗಬಹುವಚನ - ಸಬ್ಜೀ + ಗಳ್ + ಅ = ಸಬ್ಜೀಗಳ
ಓಕಾರಾಂತ ನಪುಂಸಕಲಿಂಗಬಹುವಚನ - ಎಸ್ಕಿಮೋ + ಗಳ್ + ಅ = ಎಸ್ಕಿಮೋಗಳ

ಯಕಾರಾಗಮ
ಇ/ಎಕಾರಾಂತ ಸರ್ವಲಿಂಗ ಏಕವಚನ - ಹರಿ + ಯ್ + ಅ = ಹರಿಯ;  ದೊರೆ + ಯ್ + ಅ = ದೊರೆಯ; ಲಕ್ಷ್ಮಿ + ಯ್ + ಅ = ಲಕ್ಷ್ಮಿಯ; ವರದೆ + ಯ್ + ಅ = ವರದೆಯ; ನದಿ + ಯ್ + ಅ = ನದಿಯ; ತೊರೆ + ಯ್ + ಅ = ತೊರೆಯ;
ಈಕಾರಾಂತ ಸರ್ವಲಿಂಗ ಏಕವಚನ - ಅಣ್ಣಾಜೀ + ಯ್ + ಅ = ಅಣ್ಣಾಜೀಯ; ಜೋಲೀ + ಯ್ + ಅ = ಜೋಲೀಯ; ಸಬ್ಜೀ + ಯ್ + ಅ = ಸಬ್ಜೀಯ
 
ಮೇಲಿನ ಎಲ್ಲವೂ ಷಷ್ಠೀವಿಭಕ್ತಿರೂಪಗಳು.  ಅದಕ್ಕೇ 'ಅಲ್ಲಿ' ಪ್ರತ್ಯಯ ಸೇರಿಸಿದರೆ ಸಪ್ತಮೀವಿಭಕ್ತಿರೂಪವು ದೊರೆಯುತ್ತದೆ - ರಾಮನಲ್ಲಿ, ಸೇವಕಳಲ್ಲಿ, ಮರದಲ್ಲಿ, ಸೇವಕರಲ್ಲಿ, ಗಾಮಾ ಅವರಲ್ಲಿ, ಹಿರಿಯರಲ್ಲಿ, ಮಾಡಿದ್ದರಲ್ಲಿ, ಮರಗಳಲ್ಲಿ, ಹರಿಯಲ್ಲಿ ಹೀಗೆ.

ಅದು ಸರಿ.  ಸಹಜವಾಗಿ ಮನೆಯಲ್ಲಿ, ಬೀದಿಯಲ್ಲಿ, ಕಾಶಿಯಲ್ಲಿ ಎಂದಿರಬೇಕಾದದ್ದು ಆಡುಮಾತಿನಲ್ಲಿ ಮನೇನಲ್ಲಿ, ಬೀದೀನಲ್ಲಿ, ಕಾಶೀನಲ್ಲಿ ಎಂದೇಕಾಯಿತು ಎಂಬುದಲ್ಲವೇ ಪ್ರಶ್ನೆ?  ಇದು ತಪ್ಪೇನೋ ಹೌದು, ಆದರೆ ಈ ತಪ್ಪು ಬಳಕೆ ಬಂದದ್ದಾದರೂ ಹೇಗೆ?

ಮೇಲೆ ನಕಾರಾಗಮವನ್ನು ಪಡೆದುಕೊಂಡ ಅಕಾರಾಂತಪುಲ್ಲಿಂಗಗಳನ್ನು ನೋಡಿ - ರಾಮ (ನಾಮ) + ನ್ (ಆಗಮ) + ಅ (ಷಷ್ಠೀ) + ಅಲ್ಲಿ (ಸಪ್ತಮೀ) = ರಾಮನಲ್ಲಿ; ಇದೇ ರೀತಿ ಕೃಷ್ಣನಲ್ಲಿ, ಬ್ರಹ್ಮನಲ್ಲಿ ಹೀಗೊಂದು 'ನಲ್ಲಿ'ಯ ಕಂತೆ.  

ಹಾಗೆಯೇ ಇನಾಗಮವನ್ನು ಪಡೆದ ವ್ಯಂಜನಾಂತಗಳನ್ನೂ ಉಕಾರಾಂತಗಳನ್ನೂ ಗಮನಿಸಿ - ಕಣ್ಣಿನಲ್ಲಿ, ಕಾಲಿನಲ್ಲಿ, ಊರಿನಲ್ಲಿ, ಮನಸಿನಲ್ಲಿ, ಬಾರಿನಲ್ಲಿ, ಕಾರಿನಲ್ಲಿ, ಓದಿನಲ್ಲಿ, ಕಾಡಿನಲ್ಲಿ, ಗುಡ್ಡಿನಲ್ಲಿ - ಇದು ಮತ್ತೊಂದು 'ನಲ್ಲಿ'ಯ ಕಂತೆ.  ಇವಂತೂ ಬಳಕೆಯಲ್ಲಿ ಮತ್ತಷ್ಟು ಸವೆದು ಕಣ್ನಲ್ಲಿ, ಕಾಲ್ನಲ್ಲಿ, ಊರ್ನಲ್ಲಿ, ಮನಸ್ನಲ್ಲಿ, ಬಾರ್ನಲ್ಲಿ, ಕಾರ್ನಲ್ಲಿ, ಓದ್ನಲ್ಲಿ, ಕಾಡ್ನಲ್ಲಿ, ಗುಡ್ನಲ್ಲಿ ಎಂದಾಗಿ, 'ನಲ್ಲಿ'ಯ ಭ್ರಮೆ ಮತ್ತಷ್ಟು ಹೆಚ್ಚಾಗುತ್ತದೆ.  ಇವಲ್ಲದೇ, ಇನಾಗಮವನ್ನು ಪಡೆದು, ನಾಮಪದದ ಉಕಾರವನ್ನೂ ಉಳಿಸಿಕೊಂಡ ಉಕಾರಾಂತಗಳನ್ನೂ ನೋಡಬಹುದು - ಗುರುವಿನಲ್ಲಿ, ಪಾರುವಿನಲ್ಲಿ, ಕರುವಿನಲ್ಲಿ.  ಇಲ್ಲೆಲ್ಲಾ ಸಂಧಿಯಾದಾಗ ಉಂಟಾದ 'ವಿ' ಅಕ್ಷರ ಆಡುವ ನಾಲಿಗೆಗೆ ತೊಡಕು.  ಆದ್ದರಿಂದ ಅದು ಬಳಕೆಯಲ್ಲಿ ಸವೆದು ಸವೆದು ಹಿಂದಿನ ಉಕಾರದೊಡನೆ ಉಕಾರವಾಗಿ ಬೆರೆತು ಕಾಣೆಯಾಗಿಬಿಡುತ್ತದೆ.  ಗುರುವಿನಲ್ಲಿ > ಗುರುವ್ ನಲ್ಲಿ > ಗುರುವ್ನಲ್ಲಿ > ಗುರೂನಲ್ಲಿ ಹೀಗೆ.  ಹೀಗಾಗಿ ಗುರೂನಲ್ಲಿ, ಪಾರೂನಲ್ಲಿ, ಕರೂನಲ್ಲಿ ಇಂತಹ (ತಪ್ಪು) ರೂಪಗಳು ಬಳಕೆಯಲ್ಲಿ ನಿಲ್ಲುತ್ತವೆ (ಕೆಲವರು "ಪಾರೂನಲ್ಲಿ" ಎಂಬಲ್ಲಿ ನಕಾರವನ್ನು ಪುಲ್ಲಿಂಗವಾಚಿಯೆಂದು ಭ್ರಮಿಸಿ, ಸ್ತ್ರೀಲಿಂಗಕ್ಕೆ ಅದೇಕೆಂದು ಚಿಂತಿಸಿ ಅದನ್ನೂ ತೆಗೆದು ನಕಾರದ ಜಾಗಕ್ಕೆ ಳಕಾರ ಹಾಕುವುದೂ ಉಂಟು ಪಾರೂನಲ್ಲಿ > ಪಾರೂಳಲ್ಲಿ ಆಗುವುದು ಹೀಗೆ. ಇರಲಿ).  ಕನ್ನಡದಲ್ಲಿ ಉಕಾರಾಂತ/ವ್ಯಂಜನಾಂತಶಬ್ದಗಳ ಬಳಕೆ ಬಹಳ ಹೆಚ್ಚು.  ಆದ್ದರಿಂದ ಈ ಬಗೆಯ ಸವೆದ 'ನಲ್ಲಿ'ಗಳ' ಬಳಕೆಯೂ ಬಹಳ ಹೆಚ್ಚೇ :) - ಕಾರ್ನಲ್ಲಿ, ಬಸ್ನಲ್ಲಿ, ಊರ್ನಲ್ಲಿ, ಬಿಗಿನಿಂಗ್ನಲ್ಲಿ, ಪಾರೂನಲ್ಲಿ, ಮಗೂನಲ್ಲಿ, ಹಸೂನಲ್ಲಿ, ಕರೂನಲ್ಲಿ, ಶುರೂನಲ್ಲಿ ಹೀಗೆ.  'ನಲ್ಲಿ'ಯೆಂಬುದು ಈಗ ಸರ್ವೇಸಾಮಾನ್ಯವಾಯಿತಲ್ಲ.

ಇನ್ನು ಈ ಭಾವನೆಗೆ ಪುಷ್ಟಿ ಕೊಡುವಂತೆ ಮೇಲೆ ನಾವು ನೋಡಿದ ಆಕಾರಾಂತ, ಊಕಾರಾಂತ, ಓಕಾರಾಂತಪದಗಳ ಪ್ರತ್ಯಯವನ್ನು ಮತ್ತೆ ಗಮನಿಸಿ - ಅವೆಲ್ಲಾ ನಮಗೆ ಅಪರಿಚಿತ ಪದಗಳೇ - ಗಾಮಾನಲ್ಲಿ, ಬಬ್ಲೂನಲ್ಲಿ, ಮನ್ರೋನಲ್ಲಿ, ಝೂನಲ್ಲಿ, ಮೆಂಥೋನಲ್ಲಿ (ಇಲ್ಲಿ ಪುಲ್ಲಿಂಗವಷ್ಟೇ ಅಲ್ಲ, ನಪುಂಸಕಲಿಂಗಕ್ಕೂ 'ನಲ್ಲಿ' ಬಂತು).  ಇವಿಷ್ಟರಿಂದ ಏನಾಯಿತು?  'ನಲ್ಲಿ' ಎಂಬುದು ಸಾಮಾನ್ಯವಾದ ಸಪ್ತಮೀವಿಭಕ್ತಿಪ್ರತ್ಯಯ, ಹೊಸಪದಗಳಿಗೆ 'ನಲ್ಲಿ' ಬಳಸಬಹುದು/ಬೇಕು ಎಂಬ ತಪ್ಪು ಅಂಶ ನಮ್ಮ ವ್ಯಾಕರಣಪ್ರಜ್ಞೆಯಲ್ಲಿ ಜಮೆಯಾಗಿಹೋಯಿತು.  

ಸರಿ, ಆದರೂ ಬೀದಿ, ಕಾಶಿ, ಮನೆ ಇವೆಲ್ಲಾ ನಮಗೆ ಅಪರಿಚಿತಪದಗಳಲ್ಲವಷ್ಟೇ?  ಅವಕ್ಕೆ 'ಅಲ್ಲಿ' ಪ್ರತ್ಯಯ ಸೇರಬೇಕೆಂದು ನಮ್ಮ ಪ್ರಜ್ಞೆಗೆ ಗೊತ್ತು.  ಬರೆಯುವಾಗ ಚಿಂತಿಸಿ ಬರೆಯುತ್ತೇವಾದ್ದರಿಂದ ಸರಿಯಾಗಿಯೇ ಬರೆಯುತ್ತೇವೆ ಕೂಡ.  ಆದರೆ ಮಾತಾಡುವಾಗ ಮಾತ್ರ ಏಕೆ "ನಲ್ಲಿ ಬಿಡು"ತ್ತೇವೆ? ಇದಕ್ಕೆ ಅಪ್ರಜ್ಞಾಪೂರ್ವಕವಾಗಿ ನಾವು ಆ ನಾಮಪದಗಳನ್ನು ನುಡಿಯುವ ರೀತಿಯೇ ಕಾರಣ.  ನಾವು ಆಡುಮಾತಿನಲ್ಲಿ ಬೀದಿ, ಕಾಶಿ, ಮನೆ ಎಂದು ಹ್ರಸ್ವವನ್ನು ಹ್ರಸ್ವವಾಗಿ ನುಡಿಯುವುದೇ ಇಲ್ಲ.  ಬೀದೀ, ಕಾಶೀ, ಮನೇ ಎಂದು ದೀರ್ಘವಾಗಿಯೇ ನುಡಿಯುವುದು ಉದಾಹರಣೆಗೆ:

"ಅಯ್ಯೋ ಬಿಡಮ್ಮಾ, ಎಲ್ಲಾರ್ ಮನೇ ದೋಸೇನೂ ತೂತೇ" (ಅಯ್ಯೋ ಬಿಡಮ್ಮಾ, ಎಲ್ಲರ ಮನೆ ದೋಸೆಯೂ ತೂತೇ)
"ನಮ್ ಬೀದೀ ಎಷ್ಟೋಂದು ದೊಡ್ದಿದೇ ಗೊತ್ತಾ?"; (ನಮ್ಮ ಬೀದಿ ಎಷ್ಟೊಂದು ದೊಡ್ಡದಿದೆ ಗೊತ್ತಾ?)
"ಕಾಶೀಗ್ಹೋದ ನಂ ಭಾವ ಕಬ್ಡದ್ ದೋಣೀಲೀ; ರಾಶೀ ರಾಶೀ ಗಂಗೇ ತರೋಕ್ ಸೊಳ್ಳೇ ಪರ್ದೇಲೀ" (ಕಾಶಿಗೆ ಹೋದ ನಮ್ಮ ಭಾವ ಕಬ್ಬಿಣದ್ ದೋಣಿಯಲ್ಲಿ; ರಾಶಿರಾಶಿ ಗಂಗೆ ತರೋಕ್ ಸೊಳ್ಳೆಯ ಪರದೆಯಲ್ಲಿ - ಇದೂ ಆಡುಮಾತೇ, 'ಸರಿ'ಯಾಗಿ ಆಡುವ ಮಾತು, ಆದರೆ ತಿಳಿದವರೂ ಹೀಗೆ ಮಾತಾಡುವುದಿಲ್ಲವೆಂಬುದನ್ನು ಗಮನಿಸಬೇಕು)

ಮನೆ, ಬೀದಿ, ಕಾಶಿ ಇವುಗಳೇನೋ ನಮಗೆ ಸುಪರಿಚಿತವಾದ ಪದಗಳು.  ಆದರೆ ಮಾತಿನ ಓಘದಲ್ಲಿ ನಾವು ಬಳಸುವ ಮನೇ, ಬೀದೀ, ಕಾಶೀ ಇವು ನಮ್ಮ ಶಿಷ್ಟವ್ಯಾಕರಣಪ್ರಜ್ಞೆಗೆ ಅಪರಿಚಿತ.  ಮೇಲೆ ವಿವರಿಸಿದಂತೆ, ನಮ್ಮ ವ್ಯಾಕರಣಪ್ರಜ್ಞೆಯಲ್ಲಿ ದಾಖಲಾಗಿರುವ ವಿಷಯವೆಂದರೆ, ಅಪರಿಚಿತಪದಗಳಿಗೆ ಸಪ್ತಮೀವಿಭಕ್ತಿಯಾಗಿ 'ನಲ್ಲಿ' ಬರಬೇಕೆಂಬುದಷ್ಟೇ.  ಆದ್ದರಿಂದ ಬರೆಯುವಾಗ ಸರಿಯಾಗಿಯೇ ಚಿಂತಿಸಿ ಬರೆದರೂ ಆಡುವಾಗ ನಾವು ಒಂದೊಂದು ಪದವನ್ನೂ ಚಿಂತಿಸಿ ಆಡುವುದಿಲ್ಲವಾದುದರಿಂದ, ಮಾತಿನ ಓಘದಲ್ಲಿ ನಲ್ಲಿ ಲಗತ್ತಾಗಿಬಿಡುತ್ತದೆ.  ಮನಸ್ಸು ಮಾಡಿದರೆ ಸರಿಪಡಿಸಲಾಗದ ವಿಷಯವೇನೂ ಅಲ್ಲ.  ಆದರೆ ಆಡುಮಾತಿನ ರೀತಿಯನ್ನು ಮೆಚ್ಚಿ ಆಡುವವರು ಆಡುಮಾತಿನ ಬಗ್ಗೆ ಅಷ್ಟು ಸೂಕ್ಷ್ಮವಾಗಿ ತಲೆಕೆಡಿಸಿಕೊಳ್ಳದೇ ಆ ರೂಪವನ್ನೇ ಉಳಿಸಿಕೊಳ್ಳುವುದುಂಟು.  

ತಪ್ಪು, ಆದರೆ ವೈಯಾಕರಣನು ತಾನೆ ನಮ್ಮ ಆಡುಮಾತಿನ ಮೇಲೆ ಎಷ್ಟೆಂದು ಕಾರ್ಕತ್ತು ನಡೆಸಿಯಾನು?

Tuesday, January 5, 2021

ಲಲಿತವೃತ್ತ - ಪರಿಚಯ


ನಾಗಚಂದ್ರನ ರಾಮಚಂದ್ರಚರಿತಪುರಾಣದಿಂದ ಈ ಸುಂದರವಾದ ಪದ್ಯವನ್ನು ಇಂದು ಬೆಳಗ್ಗೆ, ಮಿತ್ರರಾದ Nanjunda Bomlapura ನೆನಪಿಸಿದರು.  ಈ ಪದ್ಯದ ಛಂದಸ್ಸು "ಲಲಿತವೃತ್ತ".  ಈ ವೃತ್ತವೇ ಅಪರೂಪದ್ದು, ಅದರಲ್ಲೂ ಇಲ್ಲಿ ಕಾಣಿಸಿದ ಪದ್ಯ ಇನ್ನೂ ಅಪರೂಪದ್ದು - ಏಕೆಂದು ವಿವರಿಸುತ್ತೇನೆ:

ಮೊದಲನೆಯದಾಗಿ ಈ ವೃತ್ತವು ಬಹುದೀರ್ಘವಾದ ಪಾದಗಳನ್ನು ಹೊಂದಿದ್ದು ಬಳಕೆಗೆ ತೊಡಕೆನಿಸಬಹುದಾದ್ದರಿಂದಲೋ ಏನೋ, ಕವಿಗಳಲ್ಲಿ ಇದರ ಬಳಕೆ ಕಡಿಮೆ.  ಆದರೆ ಬಹುಸುಂದರವಾದ ಲಯವಿನ್ಯಾಸವನ್ನು ಹೊಂದಿದೆಯಾದ್ದರಿಂದ ಕವಿಗಳು ಅಪರೂಪಕ್ಕೆ ಇದನ್ನು, ಏಕತಾನವನ್ನು ಮುರಿಯುವುದಕ್ಕೋಸ್ಕರ, ಬಳಸುತ್ತಾರೆ.  ಉದಾಹರಣೆಗೆ ರುದ್ರಭಟ್ಟನ ಜಗನ್ನಾಥವಿಜಯಕಾವ್ಯದಿಂದ ಈ ಪದ್ಯವನ್ನು ನೋಡಬಹುದು:

ಶ್ರೀಸ್ತನಸುಕುಂಕುಮರಜಸ್ತತಿವಿಲೇಪನಗಭಸ್ತಿಪರಿರಂಜಿತನಿಜೋನ್ನತವಿಶಾಲೋ
ರಸ್ಥಲಪರಿಸ್ಫುರಿತಕೌಸ್ತುಭವಿಭೂಷಣರುಚಿಸ್ತಬಕಿತಾಖಿಳನಭಂ ದಿವಿಜಕಾಂತಾ
ಹಸ್ತಚಮರಾನಿಳಮುಹುಸ್ತರಳಿತಪ್ರಥಿತವಸ್ತುಚಯಕುಂಡಲವಿಮಂಡಿತಕಪೋಲಂ
ಧ್ವಸ್ತದಿತಿಜಂ ನತನಮಸ್ತವಿಬುಧಂ ಭುವನವಿಸ್ತರಣಪಾದನೆಸೆದಂ ಫಣಿಪತಲ್ಪಂ (1-50)

ಇದನ್ನು ಹೀಗೆ ಓದಿದರೆ, ಅರ್ಥವಾಗುವುದಿರಲಿ, ಅದರ ಲಯಸೌಂದರ್ಯವೂ ದಕ್ಕುವುದಿಲ್ಲ.  ಇದನ್ನು ಸ್ವಲ್ಪ ವಿಶ್ಲೇಷಿಸಿ, ಹೇಗೆ ಓದಬಹುದೆಂಬುದನ್ನೂ ನೋಡೋಣ.  

[ಲಯ ಮಾತ್ರೆ ಗಣ ಮೊದಲಾದ ವಿಷಯಗಳ ಪರಿಚಯವಿಲ್ಲದವರಿಗಾಗಿ ಇಲ್ಲೊಂದಷ್ಟು ಸಂಕ್ಷಿಪ್ತ ವಿವರಣೆಯಿದೆ, ತಿಳಿದವರು ಇದನ್ನು ದಾಟಿಕೊಂಡು ಮುಂದುವರೆಯಬಹುದು:

ಮಾತ್ರಾಕಾಲ/ಮಾತ್ರೆ ಎಂದರೆ ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲಾವಧಿ.

ಒಂದು ಚಿಟುಕಿ ಹೊಡೆಯುವಷ್ಟು ಕಾಲಪ್ರಮಾಣಕ್ಕೆ ಲಘು ಎನ್ನುತ್ತಾರೆ, ಇದನ್ನು "U" ಎಂದು ಗುರುತಿಸುತ್ತಾರೆ.  ಹ್ರಸ್ವಾಕ್ಷರಗಳಾದ ಅ, ಇ, ಉ, ಕ, ಗಿ, ಯ ಇತ್ಯಾದಿಗಳು ಒಂದು ಚಿಟುಕಿ ಹೊಡೆಯುವಷ್ಟು ಕಾಲವನ್ನು ತೆಗೆದುಕೊಳ್ಳುವುದರಿಂದ ಇವು ಲಘು ಅಕ್ಷರಗಳು.

ಮೇಲಿನದರ ಎರಡರಷ್ಟು, ಎಂದರೆ ಎರಡು ಚಿಟುಕಿ ಹೊಡೆಯುವಷ್ಟು ಕಾಲಪ್ರಮಾಣಕ್ಕೆ ಗುರು ಎನ್ನುತ್ತಾರೆ, ಇದನ್ನು "-" ಎಂದು ಗುರುತಿಸುತ್ತಾರೆ.  ದೀರ್ಘಾಕ್ಷರಗಳಾದ ಆ, ಈ, ಊ, ಕಾ, ಗೀ, ಯಾ ಇತ್ಯಾದಿಗಳು ಎರಡು ಚಿಟುಕಿ ಹೊಡೆಯುವಷ್ಟು ಕಾಲವನ್ನು ತೆಗೆದುಕೊಳ್ಳುವುದರಿಂದ ಇವು ಗುರು ಅಕ್ಷರಗಳು. 

ಪದ್ಯವೊಂದನ್ನು ಲಯಬದ್ಧವಾಗಿ ಓದುವಾಗ ಮೂರು ಮೂರು, ನಾಲ್ಕುನಾಲ್ಕು, ಐದೈದು (ಎರಡು+ಮೂರು), ಏಳೇಳು (ಮೂರು+ಎರಡು+ಎರಡು) ಹೀಗೆ ಅನೇಕ ಮಾತ್ರಾಕಾಲಗಳ ಲಯಗಳನ್ನು ಕಾಣಬಹುದು, ಉದಾಹರಣೆಗೆ, ತಕಿಟ (3), ತಝಂ (3), ತಕತಕ (4), ತಧೀಂತ (4), ತಕ ತಕಿಟ (5), ತಕ ಧೀಂತ (5), ತಕಿಟ ತಕ ತಕ (7), ತಝಂ ತಾ ತಕ (7) ಹೀಗೆ.  ಇವಕ್ಕೆ ಮಾತ್ರಾಗಣಗಳು ಎನ್ನುತ್ತಾರೆ.

ಮಾತ್ರಾಗಣಗಳಂತೆಯೇ ಪದ್ಯವನ್ನು ಮೂರುಮೂರು ಅಕ್ಷರಗಳ ಗುಂಪಾಗಿಯೂ ಮಾಡಬಹುದು.  ಉದಾಹರಣೆಗೆ "ಅವಳೇ ಬಂದಳು ಹೂವಿನಾ ನಗೆಯ ನಕ್ಕೆನ್ನತ್ತ ಕೈ ಚಾಚುತಾ"  ಈ ಸಾಲನ್ನು ನೋಡಿ.  ಇದನ್ನು ಮೂರು ಮೂರು ಅಕ್ಷರದ ಗುಂಪಾಗಿ ಮಾಡಿದರೆ "ಅವಳೇ | ಬಂದಳು | ಹೂವಿನಾ | ನಗೆಯ | ನಕ್ಕೆನ್ನ | ತ್ತ ಕೈ ಚಾ | ಚುತಾ" ಈ ಮೂರುಮೂರಕ್ಷರಗಳ ಗುಂಪನ್ನು ಗಮನಿಸಿದರೆ ಒಂದೊಂದು ಗುಂಪಿನ ಉಚ್ಚಾರಣೆಯ ಕಾಲಾವಧಿಯೂ ಬೇರೆಬೇರೆ ಇದೆ.  ಉದಾಹರಣೆಗೆ ಅವಳೇ ಎಂಬುದು ಹ್ರಸ್ವ, ಹ್ರಸ್ವ, ಮತ್ತು ದೀರ್ಘ (ಎಂದರೆ ಲಘು+ಲಘು+ಗುರು 1+1+2 = 4) ನಾಲ್ಕು ಮಾತ್ರೆಯ ಕಾಲ.  ಬಂದಳು ಎನ್ನುವುದು ಗುರು+ಲಘು+ಲಘು (2+1+1 = 4), ಇದೂ ನಾಲ್ಕು ಮಾತ್ರೆಯ ಕಾಲವೇ (ಮೇಲೆ ಮಾತ್ರಾಗಣದ ಲೆಕ್ಕದಲ್ಲಾದರೆ ಇವೆರಡೂ ಒಂದೇ ಎನ್ನಬಹುದಿತ್ತು), ಆದರೆ ಅವಳೇ ಎನ್ನುವುದಕ್ಕೂ ಬಂದಳು ಎನ್ನುವುದಕ್ಕೂ ಲಯದಲ್ಲಿ ವ್ಯತ್ಯಾಸವಿದೆ, ಅಕ್ಷರಗಣ ಈ ಲಯವಿನ್ಯಾಸವನ್ನೂ ಗಮನಕ್ಕೆ ತೆಗೆದುಕೊಳ್ಳುವುದರಿಂದ ಇಲ್ಲಿ ಅವಳೇ ಎನ್ನುವುದೂ ಬಂದಳು ಎನ್ನುವುದೂ ಬೇರೆಬೇರೆಯೆಂದೇ ನೋಡಬೇಕು.  ಹೀಗೆ ಮೇಲಿನ ಅಕ್ಷರಗಳ ಗುಂಪು ನೋಡಿದರೆ, ಎಲ್ಲವೂ ಮೂರಕ್ಷರಗಳೇ ಆದರೂ ಅವುಗಳ ಉಚ್ಚಾರಣೆಯ ಕಾಲಾವಧಿ ಬೇರೆ, ಮತ್ತು ಆ ಅಕ್ಷರಗಳಲ್ಲಿ ಲಘು-ಗುರು ಬಂದಿರುವ ಸ್ಥಾನಗಳೂ ಬೇರೆ.  ಹೀಗೆ ಬೇರೆಬೇರೆ ಲಯವಿನ್ಯಾಸವಿರುವ ಮೂರಕ್ಷರದ ಎಂಟು ಬಗೆಯ ವಿನ್ಯಾಸ ಸಾಧ್ಯ.  ಆ ಒಂದೊಂದು ವಿನ್ಯಾಸಕ್ಕೂ ಒಂದೊಂದು ಹೆಸರಿದೆ ಹೀಗೆ (ನೆನಪಿರಲಿ "U" ಎಂದರೆ ಲಘು, ಒಂದು ಮಾತ್ರೆ; "-" ಎಂದರೆ ಗುರು, ಎರಡು ಮಾತ್ರೆ)

U - - = ಯಗಣ (ಉದಾ: ಸುರೇಶಂ, ಗಣೇಶಂ)
- - - = ಮಗಣ (ಉದಾ: ಗೌರೀಶಂ, ದೇವೇಂದ್ರಂ)
- - U = ತಗಣ (ಉದಾ: ಗೌರೀಶ, ದೇವೇಂದ್ರ)
- U - = ರಗಣ (ಉದಾ: ಶಂಕರಂ, ಭಾಸ್ಕರಂ)
U - U = ಜಗಣ (ಉದಾ: ಸುರೇಶ, ಗಣೇಶ)
- U U = ಭಗಣ (ಉದಾ: ಶಂಕರ, ಭಾಸ್ಕರ)
U U U = ನಗಣ (ಉದಾ: ಸಲಿಗೆ, ಬೆಸುಗೆ)
U U - = ಸಗಣ (ಉದಾ: ಕಮಲಾ, ವಿಮಲಾ)

ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಲುಸುಲಭ - ಅದಕ್ಕೇ ಒಂದು ಪ್ರಾಚೀನಸೂತ್ರವಿದೆ - "ಯಮಾತಾರಾಜಭಾನಸಲಗಂ".  ಇದರ ಪ್ರತಿಯೊಂದು ಅಕ್ಷರವನ್ನೂ ಹಿಡಿದು ಮೂರುಮೂರಾಗಿ ಗುಂಪು ಮಾಡುತ್ತಾ ಹೋದರೆ, ಯಮಾತಾ, ಮಾತಾರಾ, ತಾರಾಜ, ರಾಜಭಾ, ಜಭಾನ, ಭಾನಸ, ನಸಲ, ಸಲಗಂ ಎಂಬ ಬೇರೆಬೇರೆ ಮಾತ್ರಾಕಾಲದ ಗುಂಪುಗಳು ಸಿಗುತ್ತವೆ.  ಗಮನಿಸಿ, ಅದರ ವಿನ್ಯಾಸ ಮೇಲೆ ವಿವರಿಸಿದಂತೆಯೇ ಇದೆ.  ಮತ್ತು ಪ್ರತಿಯೊಂದು ಗುಂಪಿನ ಮೊದಲಕ್ಷರವೇ ಆ ಗಣದ ಹೆಸರು (ಯಮಾತಾ, ಯಗಣ U - -; ಮಾತಾರಾ, ಮಗಣ - - - ; ತಾರಾಜ, ತಗಣ - - U ಹೀಗೆ ಮೇಲಿನ ಪಟ್ಟಿಗೆ ಹೋಲಿಸುತ್ತಾ ಹೋಗಬಹುದು)

ಪದ್ಯಸೌಧವನ್ನು ಕಟ್ಟಲು ನಾವು ಬಳಸಬಹುದಾದ ಇಟ್ಟಿಗೆಗಳು ಎರಡು ರೀತಿಯವು - 

ಒಂದನೆಯದು - ಮೊದಲು ವಿವರಿಸಿದಂತೆ 3, 4, 5, 7 ಮಾತ್ರೆಗಳ ಮಾತ್ರಾಗಣಗಳನ್ನು ಬಳಸಿ ಪದ್ಯ ಕಟ್ಟ ಬಹುದು (ಇಲ್ಲಿ ಗಣವೊಂದರಲ್ಲಿ ಅಕ್ಷರ ಎಷ್ಟೇ ಇರಬಹುದು, ಮಾತ್ರಾಕಾಲ ಸರಿಯಿದ್ದರೆ ಆಯಿತು); ಮಾತ್ರಾಗಣಗಳನ್ನು ಬಳಸಿ ಕಟ್ಟಿದ ಛಂದಸ್ಸುಗಳನ್ನು ಮಾತ್ರಾಗಣ ಛಂದಸ್ಸುಗಳೆನ್ನುತ್ತಾರೆ.  ಇವಕ್ಕೆ ತಕಿಟ ತಕಿಟ, ತಕತಕಿಟ ತಾತಕಿಟ, ತಕಿಟ ತಕತಕ, ಇತ್ಯಾದಿ ನಿರ್ದಿಷ್ಟ ಲಯವಿರುತ್ತದೆ (ಷಟ್ಪದಿ, ಕಂದ, ರಗಳೆ ಮೊದಲಾದುವು ಈ ಜಾತಿಗೆ ಸೇರಿದುವು); 

ಅಥವಾ ಎರಡನೆಯದು - ಆಮೇಲೆ ವಿವರಿಸಿದಂತೆ ಮೂರು ಮೂರು ಅಕ್ಷರಗಳ (ಯಾವುದೇ ಮಾತ್ರಾಕಾಲದ) ಅಕ್ಷರಗಣಗಳನ್ನು ಬಳಸಿ ಕಟ್ಟಬಹುದು.   ಅಕ್ಷರಗಳನ್ನು ಬಳಸಿ ಕಟ್ಟಿದ ಪದ್ಯಗಳನ್ನು ಅಕ್ಷರಗಣದ ಛಂದಸ್ಸುಗಳು, ಅಥವಾ ವೃತ್ತಗಳು ಎನ್ನುತ್ತಾರೆ.  ಬೇರೆಬೇರೆ ಅಕ್ಷರಗಣಗಳ ಚಿತ್ರವಿಚಿತ್ರವಾದ ಸಂಯೋಜನೆಗಳಿಂದ ಬೇರೆಬೇರೆ ವೃತ್ತಗಳನ್ನು ಪಡೆಯಬಹುದು.  ಮೇಲಿನ ಮಾತ್ರಾಗಣದಂತೆ ಇವಕ್ಕೆ ಇಷ್ಟಿಷ್ಟೇ ಮಾತ್ರೆಗಳ ಒಂದೇ ಸಮನಾದ ಏಕತಾನದ ಲಯವಿರುವುದಿಲ್ಲ, ಬದಲಿಗೆ ವಿವಿಧ ಅಕ್ಷರಗಣಗಳ ಲಯಗಳು ಸೇರಿ ಆ ವೃತ್ತಕ್ಕೇ ವಿಶಿಷ್ಟವಾದ ಒಂದು ಲಯ ಉತ್ಪನ್ನವಾಗುತ್ತದೆ - ಉದಾಹರಣೆಗೆ "ಶ್ರೀ ವೆಂಕಟಾಚಲಪತೇ ತವ ಸುಪ್ರಭಾತಂ" ಎನ್ನುವುದನ್ನೂ "ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಶೆಯಂ ಮಾಡದಂ" ಎನ್ನುವುದನ್ನೂ ಜೋರಾಗಿ ಹೇಳಿಕೊಂಡು ನೋಡಿ.  ಎರಡೂ ಬೇರೆಬೇರೆ ಅಕ್ಷರಗಣಗಳಿಂದಾದ ಬೇರೆಬೇರೆ ವೃತ್ತಗಳು, ಎರಡಕ್ಕೂ ಬೇರೆಬೇರೆಯಾದ ಲಯವಿದೆ (ಉತ್ಪಲಮಾಲಾ, ಚಂಪಕಮಾಲಾ, ಸ್ರಗ್ಧರಾ, ಮಹಾಸ್ರಘರಾ, ಮತ್ತೇಭವಿಕ್ರೀಡಿತ, ಶಾರ್ದೂಲವಿಕ್ರೀಡಿತ - ಈ ಆರು ಪ್ರಸಿದ್ಧಕರ್ಣಾಟಕವೃತ್ತಗಳೆಂದು ಹೆಸರಾಗಿವೆ, ಕನ್ನಡದಲ್ಲಿ ಇವುಗಳ ಬಳಕೆ ವ್ಯಾಪಕವಾಗಿದೆ.  ಹಾಗೆಯೇ ಮಂದಾಕ್ರಾಂತ, ವಸಂತತಿಲಕ, ಶಿಖರಿಣೀ ಮೊದಲಾದ ಅನೇಕ ಪ್ರಸಿದ್ಧವೃತ್ತಗಳು ಸಂಸ್ಕೃತದಲ್ಲಿ ಬಳಕೆಯಲ್ಲಿವೆ)

ಇನ್ನು ಮುಖ್ಯಲೇಖನವನ್ನು ನೋಡೋಣ]

ಲಲಿತವೃತ್ತ ಮೂಲತಃ ಅಕ್ಷರಗಣವೃತ್ತ - 30 ಅಕ್ಷರಗಳ (ಮೂರುಮೂರು ಅಕ್ಷರಗಳ ಹತ್ತು ಗಣಗಳ) ವೃತ್ತ.  ಭಜಸನ ಗಣಗಳು ಎರಡಾವರ್ತಿ ಬಂದು ಕೊನೆಯಲ್ಲಿ ಭಗಣವೂ ಯಗಣವೂ ಬರುವಂಥದ್ದು (ಗಣಗಳ ವಿವರಣೆಗೆ ಮೇಲೆ []ರಲ್ಲಿ ವಿವರಣೆಯನ್ನು ನೋಡಿ).  ಭಜಸನಭಜಸನಭಯ ಈ ಗಣಗಳ ವಿನ್ಯಾಸವನ್ನು ಮೇಲೆ ವಿವರಿಸಿದ ಯಮಾತಾರಾಜಭಾನಸಲಗಂ ಎಂಬ ಸೂತ್ರದ ಸಹಾಯದಿಂದ ತೋರಿಸುವುದಾದರೆ:

ಭಾನಸ | ಜಭಾನ | ಸಲಗಂ | ನಸಲ | ಭಾನಸ | ಜಭಾನ | ಸಲಗಂ | ನಸಲ | ಭಾನಸ | ಯಮಾತಾ - ಇದು ಈ ವೃತ್ತದ ವಿನ್ಯಾಸ.  ಇದನ್ನೇ ಸೇರಿಸಿ ಬರೆದಾಗ:

"ಭಾನಸಜಭಾನಸಲಗಂನಸಲಭಾನಸಜಭಾನಸಲಗಂನಸಲಭಾನಸಯಮಾತಾ" ಹೀಗಾಗುತ್ತದೆ.  ಲಯ ದೊರಕಲಿಲ್ಲವೇ?  ಇದನ್ನು ಐದೈದು ಮಾತ್ರೆಗಳಾಗಿ ವಿಂಗಡಿಸಿ ಜೋರಾಗಿ ಓದಿಕೊಳ್ಳಿ:

"ಭಾನಸಜ ಭಾನಸಲ ಗಂನಸಲ ಭಾನಸಜ ಭಾನಸಲ ಗಂನಸಲ ಭಾನಸಯ ಮಾತಾ" 

ಈಗ ಐದೈದು ಮಾತ್ರೆಯ ಸೊಗಸಾದ ಮಾತ್ರಾಗಣವಿನ್ಯಾಸವನ್ನೂ ಕಾಣಬಹುದು.  ಅಕ್ಷರಗಣವೃತ್ತವಾಗಿದ್ದೂ ಮಾತ್ರಾಗಣವಿನ್ಯಾಸದ ಲಯಸೌಂದರ್ಯವನ್ನೂ ಒಳಗೊಂಡ ಅಪರೂಪದ ವೃತ್ತವಿದು.  ಈಗ ಇದೇ ರೀತಿ ಮೇಲಿನ ಜಗನ್ನಾಥವಿಜಯದ ಸಾಲನ್ನು ವಿಂಗಡಿಸಿ ಲಯವನ್ನು ಗಮನಿಸಿ.  "ಶ್ರೀಸ್ತನಸುಕುಂಕುಮರಜಸ್ತತಿವಿಲೇಪನಗಭಸ್ತಿಪರಿರಂಜಿತನಿಜೋನ್ನತವಿಶಾಲೋ" - ಈ ಸಾಲನ್ನು ಲಯಬದ್ಧವಾಗಿ ಹೀಗೆ ವಿಂಗಡಿಸಬಹುದು:

ಶ್ರೀಸ್ತನಸು ಕುಂಕುಮರ ಜಸ್ತತಿವಿ ಲೇಪನಗ ಭಸ್ತಿಪರಿ ರಂಜಿತನಿ ಜೋನ್ನತವಿ ಶಾಲೋ

ಈ ವೃತ್ತದ ಇನ್ನೊಂದು ವಿಶೇಷವೆಂದರೆ, ಎಲ್ಲ ವೃತ್ತಗಳಲ್ಲೂ ಆದಿಪ್ರಾಸ (ಪಾದದ ದ್ವಿತೀಯಾಕ್ಷರದ ಪ್ರಾಸ)ವಷ್ಟೇ ಇದ್ದರೆ ಇಲ್ಲಿ ಆದಿಪ್ರಾಸವೇ ಪಾದದೊಳಗೂ ಅನುಪ್ರಾಸವಾಗಿ ಬರುತ್ತದೆ.  ಮೊದಲ ಗಣದ ಎರಡನೆಯ ಅಕ್ಷರ, ನಾಲ್ಕನೆಯ ಗಣದ ಮೊದಲನೆಯ ಅಕ್ಷರ, ಮತ್ತು ಆರನೆಯ ಗಣದ ಕೊನೆಯ ಅಕ್ಷರ (ಎಂದರೆ 2, 10 ಮತ್ತು 18ನೆಯ ಅಕ್ಷರಗಳು) ಪ್ರಾಸಸ್ಥಾನಗಳು - ಎಂದರೆ ಈ ಜಾಗದಲ್ಲಿ ಒಂದೇ ಅಕ್ಷರ ಬರಬೇಕು).  ಇದನ್ನು ಮೇಲಿನ ಸಾಲಿನಲ್ಲಿ ಗಮನಿಸಬಹುದು (" * " ಚಿಹ್ನೆಯಿಂದ ಗುರುತಿಸಲಾಗಿದೆ)

ಶ್ರೀ*ಸ್ತ*ನ | ಸುಕುಂಕು | ಮರಜ | *ಸ್ತ*ತಿವಿ | ಲೇಪನ | ಗಭ*ಸ್ತಿ* | ಪರಿರಂ | ಜಿತನಿ | ಜೋನ್ನತ | ವಿ ಶಾಲೋ

ಮೊದಲ ಗಣದ ಎರಡನೆಯ ಅಕ್ಷರ, ನಾಲ್ಕನೆಯ ಗಣದ ಮೊದಲನೆಯ ಅಕ್ಷರ, ಮತ್ತು ಆರನೆಯ ಗಣದ ಕೊನೆಯ ಅಕ್ಷರ (ಎಂದರೆ 2, 10 ಮತ್ತು 18ನೆಯ ಅಕ್ಷರಗಳು) ಪ್ರಾಸವಾಗಿರುವುದನ್ನು ಗಮನಿಸಬಹುದು.  ಈಗಿದನ್ನು ಇಡೀ ಪದ್ಯದಲ್ಲಿ ಗಮನಿಸಿ:

ಶ್ರೀ*ಸ್ತ*ನಸುಕುಂಕುಮರಜ*ಸ್ತ*ತಿವಿಲೇಪನಗಭ*ಸ್ತಿ*ಪರಿರಂಜಿತನಿಜೋನ್ನತವಿ ಶಾಲೋ
ರ*ಸ್ಥ*ಲಪರಿಸ್ಫುರಿತಕೌ*ಸ್ತು*ಭವಿಭೂಷಣರುಚಿ*ಸ್ತ*ಬಕಿತಾಖಿಳನಭಂ ದಿವಿಜಕಾಂತಾ
ಹ*ಸ್ತ*ಚಮರಾನಿಳಮುಹು*ಸ್ತ*ರಳಿತಪ್ರಥಿತವ*ಸ್ತು*ಚಯಕುಂಡಲವಿಮಂಡಿತಕಪೋಲಂ
ಧ್ವ*ಸ್ತ*ದಿತಿಜಂ ನತನಮ*ಸ್ತ*ವಿಬುಧಂ ಭುವನವಿ*ಸ್ತ*ರಣಪಾದನೆಸೆದಂ ಫಣಿಪತಲ್ಪಂ

ಎಲ್ಲ ಪ್ರಾಸಸ್ಥಾನಗಳಲ್ಲೂ ಚಾಚೂ ತಪ್ಪದೇ ಸ್ತ ಅಥವಾ ಸ್ಥ ಅಕ್ಷರಗಳು ಬಂದಿರುವುದನ್ನು ಗಮನಿಸಬಹುದು.

ಅದು ಸರಿ, 2, 10 ಮತ್ತು 18ನೆಯ ಅಕ್ಷರಗಳೇ ಏಕೆ ಎಂದರೆ, ಮೇಲಿನ ಸಾಲನ್ನೇ ಅದರ ಐದೈದರ ಮಾತ್ರಾಕಾಲದ ಲಯದನ್ವಯ ಇಟ್ಟು ಒಂದೊಂದು ಸಾಲಿನಲ್ಲಿ ಎರಡೆರಡು ಗಣಗಳನ್ನಿಟ್ಟು ನೋಡಿದರೆ ಅದರ ಮರ್ಮ ತಿಳಿಯುತ್ತದೆ:
 

ಶ್ರೀ*ಸ್ತ*ನಸು ಕುಂಕುಮರ
ಜ*ಸ್ತ*ತಿವಿ ಲೇಪನಗ
ಭ*ಸ್ತಿ*ಪರಿ ರಂಜಿತನಿ ಜೋನ್ನತವಿ ಶಾಲೋ
ರ*ಸ್ಥ*ಲಪ ರಿಸ್ಫುರಿತ
ಕೌ*ಸ್ತು*ಭವಿ ಭೂಷಣರು
ಚಿ*ಸ್ತ*ಬಕಿ ತಾಖಿಳನ ಭಂದಿವಿಜ ಕಾಂತಾ

ಮೇಲಿನ ಸಾಲುಗಳನ್ನು ಗಮನಿಸಿದರೆ, ಪ್ರತಿಸಾಲಿನಲ್ಲೂ ಆದಿಪ್ರಾಸವು (ಎರಡನೆಯ ಅಕ್ಷರ) ಮೂಡಿರುವುದನ್ನು ಗಮನಿಸಬಹುದಲ್ಲವೇ?  ನಿರ್ದಿಷ್ಟವಾಗಿ ಪಾದದ 2, 10 ಮತ್ತು 18ನೆಯ ಅಕ್ಷರಗಳಲ್ಲೇ ಪ್ರಾಸಸ್ಥಾನವನ್ನಿಟ್ಟಿರುವುದಕ್ಕೆ ಇದೇ ಕಾರಣ - ಕೇವಲ ಅಕ್ಷರಗಣದ ಲೆಕ್ಕದಲ್ಲ, ಮಾತ್ರಾಗಣದ ಲಯವನ್ನನುಸರಿಸಿದರೂ ಪ್ರತಿ ಗಣದಲ್ಲೂ ಪ್ರಾಸಸೌಂದರ್ಯವು ಎದ್ದು ತೋರಲಿ ಎಂಬುದು ಉದ್ದೇಶ (ಮೇಲೆ ಮೂಡಿದ ಆರು ಸಾಲುಗಳ ಪದ್ಯ ಬಹುತೇಕ ಕುಸುಮಷಟ್ಪದಿಯನ್ನೇ ಹೋಲುತ್ತದೆ, ಆದರೆ ತಾಂತ್ರಿಕವಾಗಿ ಕುಸುಮಷಟ್ಪದಿಯಲ್ಲ, ಅದರ ಲಕ್ಷಣಗಳು ಬೇರೆ).

ಈ ಸುಂದರವಾದ ವೃತ್ತವನ್ನು ಅನೇಕ ಕವಿಗಳು ಏಕತಾನವನ್ನು ಮುರಿಯುವುದಕ್ಕೆ, ಲಯವರ್ಧನೆಗಾಗಿ ಉಪಯೋಗಿಸುತ್ತಾರೆಂದು ಹೇಳಿದೆ.  ರನ್ನನ ಗದಾಯುದ್ಧದಿಂದ ಇದೇ ವೃತ್ತದ ಒಂದು ಪದ್ಯ 

ತಾರಕನಖಂ ನವಸರೋರುಹದಳಾಂಘ್ರಿತಳ ಚಾರುಘನನಾಭಿ ಪುಳಿನಸ್ಥಳ ನಿತಂಬಂ
ಹಾರಲತಿಕಾಕೃತಿ ವಿಹಾರ ನಿಬಿಡಸ್ಪುರದುರೋಜಯುಗಳಂ ಮದನಪಾಶನಿಭ ಹಸ್ತಂ
ಸ್ಮೇರವದನಂ ಚಳಚಕೋರನಯನಂ ಚಿಕುರ ಚಾರು ರಮಣೀಯ ಮೃದುಕುಂತಳಕಳಾಪಂ
ಚಾರು ರುಚಿಸೂತ್ರ ಸುಕುಮಾರಮೆಸೆಗುಂ ಹೃದಯಹಾರಿ ಪೊಗೞಲ್ಕರಿದುಮಾ ಸತಿಯ ರೂಪಂ (8-57)

ಇಲ್ಲೂ ಮೇಲೆ ಹೇಳಿದ ಎಲ್ಲ ನಿಯಮಗಳೂ ಪಾಲಿತವಾಗಿರುವುದನ್ನು ಕಾಣಬಹುದು (ಅಕ್ಷರಗಣ, ಮಾತ್ರಾಗಣ, ಆದಿಪ್ರಾಸ, ಒಳಪ್ರಾಸಗಳು ಇತ್ಯಾದಿ).

ಇನ್ನು ನಂಜುಂಡರು ತೋರಿದ ನಾಗಚಂದ್ರನ ಪದ್ಯ ಇನ್ನೂ ಅಪರೂಪ - ಏಕೆಂದರೆ, ಇದು ಲಲಿತವೃತ್ತವೆಂದೇ ಸೂಚಿಸಲ್ಪಟ್ಟಿದ್ದರೂ, ಬಹುತೇಕ ಲಲಿತವೃತ್ತದ ಅಕ್ಷರಗಣವಿನ್ಯಾಸವನ್ನೇ ಅನುಸರಿಸಿದ್ದರೂ ಪದ್ಯದ ಹಲವೆಡೆ ಅಕ್ಷರಗಣಗಳನ್ನು ಗಾಳಿಗೆ ತೂರಿ, ಕೇವಲ ಮಾತ್ರಾಗಣವಿನ್ಯಾಸವನ್ನಷ್ಟೇ ಕವಿ ಲಕ್ಷ್ಯದಲ್ಲಿಟ್ಟುಕೊಂಡಿದ್ದಾನೆ.  ಹೀಗಿದ್ದರೂ ಪದ್ಯದ ಮತ್ತೊಂದು ಲಕ್ಷಣವಾದ ಐದೈದರ ಮಾತ್ರಾಲಯಕ್ಕಾಗಲೀ ಮಧ್ಯಪ್ರಾಸಗಳಿಗಾಗಲೀ ಒಂದಿನಿತೂ ಭಂಗ ಬಂದಿಲ್ಲ.  ಇದನ್ನಿಲ್ಲಿ ವಿವರವಾಗಿ ನೋಡಬಹುದು:

ಮೂಲಪದ್ಯ:
ತುಂಗಕುಚಕುಂಭಯುಗವಂಗಜಗಜಂ ಮೊಗವಡಂಗಳೆದುದೆನಿಸೆ ವಿಗತಾಂಚಲಮಪಾಂಗಂ
ಮೀಂಗೆಳೆಸುವಿಂದುಕಿರಣಂಗಳೆನೆ ಕರ್ಣಯುಗಳಂಗಳವತಂಸ ಮಣಿಯಂ ಬಳಸೆ ಘರ್ಮೋ
ದಂಗಳಿರೆ ನೊಸಲೊಳೆಳದಿಂಗಳಮರ್ದಿನ ಪನಿಯ ಪಾಂಗನೊಳಕೊಂಡು ನಳಿದೋಳ್ ನಲಿದು ನೀಳು
ತ್ತಂಗಭವಪಾಶಮೆನೆ ಪಿಂಗದರೆವುದು ಘಟ್ಟಿಯಂ ಗಡಣದಿಂ ಘಟ್ಟಿವಳ್ತಿಯರ ತಂಡಂ

ಐದೈದರ ಮಾತ್ರಾವಿನ್ಯಾಸ ಮತ್ತು ಒಳಪ್ರಾಸ (ಪ್ರಾಸಾಕ್ಷರವನ್ನು * ಸಂಜ್ಞೆಯಿಂದ ಸೂಚಿಸಲಾಗಿದೆ)
ತುಂ**ಕುಚ | ಕುಂಭಯುಗ | ವಂ**ಜಗ | ಜಂ ಮೊಗವ | ಡಂ**ಳೆದು | ದೆನಿಸೆ ವಿಗ | ತಾಂಚಲಮ | ಪಾಂಗಂ
ಮೀಂ*ಗೆ*ಳೆಸು | ವಿಂದುಕಿರ | ಣಂ**ಳೆನೆ | ಕರ್ಣಯುಗ | ಳಂ**ಳವ | ತಂಸ ಮಣಿ | ಯಂ ಬಳಸೆ | ಘರ್ಮೋ
ದಂ**ಳಿರೆ | ನೊಸಲೊಳೆಳ | ದಿಂ**ಳಮ | ರ್ದಿನ ಪನಿಯ | ಪಾಂ**ನೊಳ | ಕೊಂಡು ನಳಿ | ದೋಳ್ ನಲಿದು | ನೀಳು
ತ್ತಂ**ಭವ | ಪಾಶಮೆನೆ | ಪಿಂ**ದರೆ | ವುದು ಘಟ್ಟಿ | ಯಂ **ಡಣ | ದಿಂ ಘಟ್ಟಿ | ವಳ್ತಿಯರ | ತಂಡಂ

ಅಕ್ಷರಗಣವಿಭಾಗ (ಛಂದೋಭಂಗವಾಗಿರುವ ಗಣಗಳನ್ನು * ಸಂಜ್ಞೆಯಿಂದ ಸೂಚಿಸಲಾಗಿದೆ)
ತುಂಗಕು | ಚಕುಂಭ | ಯುಗವಂ | ಗಜಗ | ಜಂ ಮೊಗ | ವಡಂಗ | *ಳೆದುದೆನಿ* | ಸೆ ವಿಗ | ತಾಂಚಲ | ಮಪಾಂಗಂ
ಮೀಂಗೆಳೆ | ಸುವಿಂದು | ಕಿರಣಂ | ಗಳೆನೆ | ಕರ್ಣಯು | ಗಳಂಗ | ಳವತಂ | ಸ ಮಣಿ | ಯಂ ಬಳ | ಸೆ ಘರ್ಮೋ
ದಂಗಳಿ | *ರೆ ನೊಸಲೊ* | ಳೆಳದಿಂ | ಗಳಮ | *ರ್ದಿನ ಪನಿ* | ಯ ಪಾಂಗ | ನೊಳಕೊಂ | ಡು ನಳಿ | ದೋಳ್ ನಲಿ | ದು ನೀಳು
ತ್ತಂಗಭ | ವಪಾಶ | ಮೆನೆ ಪಿಂ | ಗದರೆ | *ವುದು ಘ* | ಟ್ಟಿಯಂ ಗ | ಡಣದಿಂ | *ಘಟ್ಟಿ* | ವಳ್ತಿಯ | ರ ತಂಡಂ

  • ಐದೈದು ಮಾತ್ರೆಯ ಲಯವನ್ನೂ ಒಳಪ್ರಾಸವನ್ನೂ ಪದ್ಯವು ಉಳಿಸಿಕೊಂಡಿದ್ದರೂ ಮೂರಕ್ಷರದ ಗಣವಿಭಾಗ ಮಾಡಿದಾಗ ಹಲವೆಡೆ ಛಂದೋಭಂಗವಾಗಿರುವುದನ್ನು ಗಮನಿಸಬಹುದು.  
  • ಮೊದಲ ಸಾಲಿನ 7ನೆಯ ಗಣದಲ್ಲಿ ಮೂರಕ್ಷರದ ಸಗಣವು (ಸಲಗಂ ಎಂಬಂತೆ) ಬರುವುದರ ಬದಲು ನಾಲ್ಕು ಲಘು ಅಕ್ಷರಗಳು ("ಳೆದುದೆನಿ") ಬಂದಿವೆ;
  • ಮೂರನೆಯ ಸಾಲಿನ ಎರಡನೆಯ ಗಣದಲ್ಲಿ ಮೂರಕ್ಷರದ ಜಗಣವು (ಜಭಾನ ಎಂಬಂತೆ) ಬರುವುದರ ಬದಲು ಮತ್ತೆ ನಾಲ್ಕಕ್ಷರದ ಸರ್ವಲಘು ("ರೆ ನೊಸಲೊ") ಬಂದಿದೆ.  
  • ಅದೇ ಸಾಲಿನ ಐದನೆಯ ಗಣದಲ್ಲಿ ಮೂರಕ್ಷರದ ಭಗಣದ (ಭಾನಸ ಎಂಬಂತೆ) ಬದಲು ಮತ್ತೆ ನಾಲ್ಕಕ್ಷರದ ಸರ್ವಲಘು ಬಂದಿದೆ ("ರ್ದಿನ ಪನಿ");
  • ಕೊನೆಯ ಸಾಲಿನ ಐದನೆಯ ಗಣವು ಮೂರಕ್ಷರದ್ದೇ ಆದರೂ ಅಲ್ಲಿ ಬರಬೇಕಾದ  ಭಗಣದ (ಭಾನಸ ಎಂಬಂತೆ) ಬದಲು ಸಗಣ (ಸಲಗಂ ಎಂಬಂತೆ) ಬಂದಿದೆ.  
  • ಅದೇ ಸಾಲಿನ 8ನೆಯ ಗಣದಲ್ಲಿ ನಗಣ (ನಸಲ ಎಂಬಂತೆ) ಬರಬೇಕಿತ್ತು.  ಅದು ಮೂರು ಲಘುಗಳ ಗಣ.  ಬದಲಿಗೆ ಅಲ್ಲಿ ಒಂದು ಗುರು ಮತ್ತು ಒಂದು ಲಘುವಿನ "ಘಟ್ಟಿ" ಎಂದು ಬಂದಿದೆ.


ಇದು ಒಂದು ಕಡೆಯಾಗಿದ್ದರೆ ಲಿಪಿಕಾರನ ದೋಷವೆಂದು ತರ್ಕಿಸಬಹುದಿತ್ತು.  ಆದರೆ ಇಷ್ಟೂ ಕಡೆ ಅಕ್ಷರಗಣದ ನಿಯಮಗಳು ಭಂಗವಾಗಿರುವುದರಿಂದ ಕವಿ ತಾನೇ ಸ್ವಾತಂತ್ರ್ಯವಹಿಸಿ ಹೀಗೆ ಮಾಡಿದ್ದಾನೆಂದು ತರ್ಕಿಸಬೇಕಾಗುತ್ತದೆ.  ಪ್ರಾಚೀನಕವಿಗಳು ಸಾಮಾನ್ಯವಾಗಿ ಹೀಗೆ ಮಾಡುವವರಲ್ಲ.  ಆದ್ದರಿಂದ ಇದು ಅಪರೂಪದ್ದೆನಿಸಿಕೊಳ್ಳುತ್ತದೆ.

ಒಟ್ಟಿನಲ್ಲಿ, ಲಲಿತವೃತ್ತವು ಅಕ್ಷರಗಣದ ಲಯವೈವಿಧ್ಯವನ್ನೂ, ಮಾತ್ರಾಗಣದ ಏಕರೂಪತೆಯನ್ನೂ ಮೇಳೈಸಿಕೊಂಡಿರುವ, ಅಕ್ಷರಗಣ-ಮಾತ್ರಾಗಣ ಎರಡೂ ಲಯಗಳಿಗೂ ತಕ್ಕ ಪ್ರಾಸವಿನ್ಯಾಸವನ್ನೂ ಹೊಂದಿರುವ ಅಪರೂಪದ ವೃತ್ತ.

Wednesday, October 14, 2020

ಹೆಂಡತಿಯ ಬಹುವಚನ


ಹೆಂಡತಿಯ ಬಹುವಚನವೆಂದರೆ "ರೀ..." ಎಂಬ ರಾಗವೆಂದು ಅರ್ಥೈಸಿಕೊಳ್ಳಬೇಡಿ - ರಾಗವೇ ಅದು?  ಸ್ವರ - ಶುದ್ಧರಿಷಭ, ಸಂದರ್ಭಾನುಸಾರ ಚತುಶ್ರುತಿರಿಷಭವೂ ರೇಗಿದರೆ ಷಟ್ಶ್ರುತಿರಿಷಭವೂ ಆಗಬಲ್ಲುದು (ಕರ್ಣಪ್ರಮಾಣಿಗಳಾದ ಹಿಂದುಸ್ತಾನಿ ಸಂಗೀತದವರು ಈ ಸ್ವರಪ್ರಭೇದಗಳನ್ನು ಸೊಗಸಾಗಿ ಕೋಮಲರಿಷಬ್, ಶುದ್ಧರಿಷಬ್ ಎಂದು ಕರೆಯುತ್ತಾರೆ), ತ್ರಿಸ್ಥಾಯಿವ್ಯಾಪ್ತಿಯುಳ್ಳ, ಷಟ್ಕಾಲಗಳಲ್ಲಿ ಸ್ಫುಟವಾಗಿಯೂ ಘಂಟಾಘೋಷವಾಗಿಯೂ ಸಕಲಗಮಕಯುಕ್ತವಾಗಿಯೂ ನುಡಿಯಬಲ್ಲ, ತ್ರಿಲೋಕಗಳಲ್ಲೂ ಮೊಳಗಬಲ್ಲ ಸ್ವರ ಅದು; ನಿಮಗೇನಾದರೂ ಅದು ಕೆಲವೊಮ್ಮ ಅಪಸ್ವರದಂತೆ ಕೇಳಿದರೆ, ಅದು ಕೇಳುವ ಕಿವಿಯ ದೋಷವೇ ಹೊರತು ಕರೆಯುವ ಕಂಠದ್ದು ಖಂಡಿತಾ ಅಲ್ಲ ಎಂಬುದು, ಆಡಿ ಅನುಭವಿಸಿದ ಎಲ್ಲ ಗಂಡಂದಿರ ಏಕಾಭಿಪ್ರಾಯ.  ಇರಲಿ, ನಾವಿಲ್ಲಿ ಈ ರಿಷಭಸ್ವರದ ಬಗೆಗೆ ಮಾತಾಡುತ್ತಿಲ್ಲ, ಅಸಲಿಗೆ ಸಂಗೀತದ ಬಗೆಗೇ ಮಾತಾಡುತ್ತಿಲ್ಲ, ಮಾತಾಡುತ್ತಿರುವುದು ವ್ಯಾಕರಣದ ಬಗ್ಗೆ - ಹೆಂಡತಿ'ಯಿಂದ' ಬರುವ ಬಹುವಚನದ ಬಗೆಗೂ ಅಲ್ಲ, ಹೆಂಡತಿ'ಗೆ' ಬಳಸುವ ಬಹುವಚನದ ಬಗ್ಗೆ, ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಹೆಂಡತಿ ಎಂಬ ಶಬ್ದದ ಬಹುವಚನರೂಪದ ಬಗೆಗೆ.  ಫೇಸ್ಬುಕ್ಕಿನಲ್ಲಿ ಮಿತ್ರ ಆನಂದವರ್ಧನರು ಕೇಳಿದ ಪ್ರಶ್ನೆಯೊಂದು ಈ ಲೇಖನಕ್ಕೆ ಕಾರಣ.  ಮಗ - ಮಗಂದಿರು, ಮಗಳು > ಮಗಳ್ದಿರು ಆದ ಹಾಗೆ ಹೆಂಡತಿಗೆ ಹೆಂಡಂದಿರು ಅಥವಾ ಹೆಂಡತಿಯಂದಿರು ಎಂದು ಹೇಳಬೇಕೇ ಎಂಬುದು ಅವರ ಪ್ರಶ್ನೆ.  ಪ್ರಶ್ನೆ ತಮಾಷೆಯಾಗಿದ್ದುದರಿಂದ ಅದಕ್ಕೆ ಉತ್ತರರೂಪವಾದ ಈ ಲೇಖನವೂ ಸಹಜವಾಗಿಯೇ ತುಸು ತಮಾಷೆಯ ಹಾದಿ ಹಿಡಿದಿದೆ.  ಶಾಸ್ತ್ರವಿಷಯದಲ್ಲಿ ಸಾಮಾನ್ಯವಾಗಿ ಅನುಸರಿಸಬೇಕಾದ ಗಾಂಭೀರ್ಯವಿಲ್ಲಿಲ್ಲ, ಒಪ್ಪುತ್ತೇನೆ, ಆದರೆ ವಿಷಯಸ್ಪಷ್ಟತೆಗೆ ಧಕ್ಕೆಯಾಗಿಲ್ಲವೆಂದುಕೊಂಡಿದ್ದೇನೆ.  ವ್ಯಾಕರಣವೆಂಬುದು ಯಾವಾಗಲೂ ಹುಬ್ಬುಗಂಟಿಕ್ಕಿಕೊಂಡು ಮಾಡುವ ಶ್ರಾದ್ಧಕರ್ಮವೇಕಾಗಬೇಕು?  ಆಗೀಗ ಹುಬ್ಬು ಸಡಿಲಿಸಿ ನಕ್ಕರಾಯ್ತಪ್ಪ.  ನಿಮ್ಮಲ್ಲಿ ಸಂಸ್ಕೃತ ಕಲಿತವರಿದ್ದರೆ, ಲತಾಶಬ್ದದ್ದೋ ಲುಂಡಕಶಬ್ದದ್ದೋ ಸಂಬೋಧನಪ್ರಥಮಾವಿಭಕ್ತಿರೂಪವನ್ನು ಹೇಳುವಾಗ ಎಷ್ಟು ಜನ ಹುಚ್ಚುಹುಚ್ಚಾಗಿ ನಗದೇ, ಮುಖವಿಕಾರ ಮಾಡದೇ, ಹುಬ್ಬು ಗಂಟಿಕ್ಕಿಕೊಂಡು, ಗುರುಗಳು ಮೆಚ್ಚುವಂತೆ ಘನವಾಗಿ ಗಂಭೀರವಾಗಿ ಒಪ್ಪಿಸಿದ್ದೀರಿ?  ಎದೆ ಮುಟ್ಟಿಕೊಂಡು ಹೇಳಿ ಮತ್ತೆ?  ನಗುನಗುತ್ತಲೇ ವಿಷಯವನ್ನು ತಿಳಿಸುವುದೇ ಕಾಂತಾಸಮ್ಮಿತವಷ್ಟೇ?  ಹಾಗಿದ್ದಾಗ ಕಾಂತೆಯ ವಿಷಯ ಮಾತಾಡುವಾಗಲೂ ತುಸು ನಗದಿದ್ದರೆ ಹೇಗೆ?

ಕನ್ನಡದ ವಚನ, ಸಂಧಿ, ಸಮಾಸಗಳನ್ನು ಬಿಡಿಸಿ ಮೂಲಪದಗಳ ಮಟ್ಟದಲ್ಲಿ ಅರ್ಥ ಮಾಡಿಕೊಳ್ಳಬೇಕಾದರೆ ಒಂದಿಷ್ಟೇ ಇಷ್ಟು ಹಳಗನ್ನಡದ ಅರಿವು ಬಹಳ ಉಪಯುಕ್ತ.  ಏಕೆಂದರೆ, ನಾನು ಈ ಹಿಂದೆ ಹಲವು ಬಾರಿ ಹೇಳಿದ್ದಂತೆ, ನಾವಿವತ್ತು ಬಳಸುವ ಅನೇಕ ಸಾಧಿತಪದಗಳು, ಸಂಯುಕ್ತಪದಗಳು (compound words, ಸಂಧಿ, ಸಮಾಸ, ಪ್ರತ್ಯಯಯುಕ್ತಪದಗಳು ಇತ್ಯಾದಿ) ಬಹುತೇಕ ಹಳಗನ್ನಡದ ಕಾಲದಲ್ಲೇ ರೂಪುಗೊಂಡಿದ್ದು.  ಹೀಗೆ ರೂಪುಗೊಂಡ ಪದದ ಕೊನೆಯಲ್ಲಿ ಕೊಂಬೋ ಗುಡಿಸೋ ಸೇರಿಸಿ ಚಿಕ್ಕಪುಟ್ಟ ಬದಲಾವಣೆ ಮಾಡಿಕೊಂಡು ಈಗ ಬಳಸುತ್ತಿದ್ದೇವಷ್ಟೇ - ಪದಗಳ ಮೂಲರೂಪ, ಸಂಧಿ/ಸಮಾಸಪ್ರಕ್ರಿಯೆ ಮೊದಲಾದುವುಗಳು ಹಾಗೇ ಉಳಿದುಕೊಂಡು ಬಂದಿರುತ್ತವೆ.  ಆದ್ದರಿಂದ ಅವನ್ನು ಬಿಡಿಸಿ ನೋಡಿದರೆ ನಮಗೆ ಸಿಗುವುದು ಹಳಗನ್ನಡ ರೂಪಗಳೇ, ಅವನ್ನ ಹಾಗೆಯೇ ಅರ್ಥ ಮಾಡಿಕೊಂಡರೆ, ಇಂದಿನ ರೂಪವನ್ನರಿಯಲು ಸಹಾಯವಾಗುತ್ತದೆ.

ಹೆಂಡತಿ ಅನ್ನೋ ಪದಕ್ಕೆ ಬಹುವಚನ ಸೇರಿಸುವುದು ಹೇಗೆ? ಹೆಂಡತಿಗಳು/ಹೆಂಡಂದಿರು/ಹೆಂಡಿತಿಯಂದಿರು/ಹೆಂಡತಿಯರು ಇದರಲ್ಲಿ ಯಾವುದು ಸರಿ ಎಂಬುದು ನಮ್ಮ ಮಿತ್ರರ ಪ್ರಶ್ನೆ.  ಈ ವಿವಿಧರೂಪಗಳನ್ನು ಒಂದೊಂದಾಗಿ ಪರಿಶೀಲಿಸೋಣ.

ಇಲಿಗಳು, ಬೆಕ್ಕುಗಳು ಎನ್ನುವ ರೀತಿ ಹೆಂಡತಿಗಳು ಎಂದರೆ ಹೆಂಡತಿಯ ಆಗ್ರಹಕ್ಕೆ ಪಾತ್ರವಾಗಬೇಕಾದೀತು, ಆ 'ಹೆಂಡತಿಯರು' ಬಹುಸಂಖ್ಯೆಯಲ್ಲಿದ್ದರಂತೂ ಇನ್ನೂ ಫಜೀತಿ (ಲಟ್ಟಣಿಗೆಗಳು ಎಂಬುದೂ ಅಂತಹ ಬಹುವಚನವೇ, ನೆನಪಿರಲಿ), ಆದ್ದರಿಂದ ಹೆಂಡತಿಗಳು ಎಂಬುದು ಸರಿಯೋ ತಪ್ಪೋ, ಕ್ಷೇಮವಂತೂ ಅಲ್ಲವೆಂದು ತಿಳಿಯಬಹುದು, ಸದ್ಯಕ್ಕೆ.  ಇದನ್ನು ಮುಂದೆ, ಪರಿಸ್ಥಿತಿ ತಿಳಿಯಾದ ಮೇಲೆ, ಪರಿಶೀಲಿಸೋಣ.  ಇನ್ನು ಹೆಂಡಂದಿರು, ಹೆಂಡತಿಯಂದಿರು, ಹೆಂಡತಿಯರು - ಈ ಮೂರು ರೂಪಗಳಲ್ಲಿ ಯಾವುದು ಸರಿ ಎನ್ನುವ ಪ್ರಶ್ನೆ ಉಳಿಯುತ್ತದೆ.  

ಹೆಂಡಂದಿರು ಎಂಬ ಪದ ಬಂದುದರಿಂದ ಹೇಳುತ್ತೇನೆ, ಹೆಂಡಕ್ಕೂ ಹೆಂಡತಿಗೂ ಯಾವ ಸಂಬಂಧವೂ ಇಲ್ಲ (ಜಿ ಪಿ ರಾಜರತ್ನಂ ಏನಾದರೂ ಹೇಳಲಿ!) -  ಭಾಷಿಕಸಂಬಂಧವಂತೂ ಇಲ್ಲವೇ ಇಲ್ಲ.  ಹೆಂಡವು ಪೆಂಢಾ ಎಂಬ ಪ್ರಾಕೃತರೂಪದಿಂದ ಬಂದದ್ದು (ಅದರ ಮೂಲಸಂಸ್ಕೃತರೂಪ ಫೇನಕ್ಕೆ (ನೊರೆಗೆ) ಸಂಬಂಧಿಸಿದ ಯಾವುದೋ ಪದವಿದ್ದೀತು, ಪರಿಶೀಲಿಸಿ ತಿಳಿಯಬೇಕು); ಆದರೆ ಹೆಂಡತಿ ಮಾತ್ರ ದ್ರಾವಿಡಭಾಷೆಯ ಪಾಲ್ಗಡಲಲ್ಲೇ ಹುಟ್ಟಿ ಬಂದವಳು - ಪೆಣ್ ಎಂಬ ಆದಿದ್ರಾವಿಡಪದವೇ ಈಕೆಯ ಮೂಲರೂಪ.  ಹೆಂಡದ ಬಹುವಚನವಾದರೋ, "ಹೆಂಡಗಳು" (ಹೆಂಡವನ್ನೇ ವ್ಯಕ್ತಿಯಾಗಿ, 'ಅಣ್ತಮ್ಮ'ನಾಗಿ ಭಾವಿಸಿದವರು ಬೇಕಿದ್ದರೆ ಹಲವು ಹೆಂಡಗಳನ್ನುದ್ದೇಶಿಸಿ ಹೆಂಡಂದಿರು ಎಂದು ಕೈಮುಗಿಯಬಹುದೇನೋ, ಅದು ಅವರವರ ಭಾವಕ್ಕೆ ಸಂಬಂಧಿಸಿದ ವಿಷಯ, ಆದರೆ ವ್ಯಾಕರಣವಂತೂ ಅದನ್ನೊಪ್ಪುವುದಿಲ್ಲ). ಹೀಗಿರುವಾಗ, ಹೆಂಡಪುರುಷನಿಗೆ ಬಹುವಚನದಂತೆ ಕಾಣುವ ಈ ಪದ ಹೆಂಡತಿಗಂತೂ ಖಂಡಿತಾ ಒಪ್ಪುವುದಿಲ್ಲ.  ಸಾಮಾಜಿಕವಾಗಿಯೂ ಹೆಂಡಕ್ಕೂ ಹೆಂಡತಿಗೂ ಎಣ್ಣೆಸೀಗೆಯ ಸಂಬಂಧ ತಾನೆ? (ವಿಸ್ಕಿ-ಸೋಡಾದ ಸಂಬಂಧವಿರಬಾರದಿತ್ತೇ ಎಂದು ಕೆಲವರು ಹೆಂಡತಿಪ್ರಿಯ (ಹೆಂಡ+ಅತಿಪ್ರಿಯ) ಗಂಡಂದಿರು ಹಲುಬಬಹುದು.  ಬಿಡಿ, ಅವರಷ್ಟಕ್ಕವರು "ಯೆಂಡಾ ಯೆಂಡ್ತಿ ಕನ್ನಡ್ ಪದ್ಗೋಳ್" ಎಂದು ತೂರಾಡಿಕೊಂಡಿರಲಿ, ಆ ಭಂಡಂದಿರ (ಅರ್ಥಾತ್, ಭಂಡಗಂಡಂದಿರ) ಗೊಡವೆ ನಮಗೇಕೆ?  ಹೆಂಡತಿಮೀಮಾಂಸೆಯಲ್ಲಿ ಹೆಂಡಕ್ಕೇನು ಕೆಲಸ?), ಆದ್ದರಿಂದ ಹೆಂಡವನ್ನು ಪಕ್ಕಕ್ಕಿಟ್ಟು ಸದ್ಯಕ್ಕೆ ಹೆಂಡತಿಯ ಕಡೆ ಗಮನ ಹರಿಸೋಣ.  ಹೆಂಡಂದಿರು ಸರಿಯಲ್ಲ ಎಂದ ಮೇಲೆ, ಇನ್ನುಳಿದದ್ದು ಹೆಂಡತಿಯಂದಿರು ಮತ್ತು ಹೆಂಡತಿಯರು - ಈ ಎರಡು ರೂಪಗಳಲ್ಲಿ ಯಾವುದು ಸರಿ ಎನ್ನುವ ಪ್ರಶ್ನೆ ಉಳಿಯುತ್ತದೆ.

ಇಷ್ಟಕ್ಕೂ ಹೆಂಡತಿಯ ಬಹುವಚನವನ್ನು ತಿಳಿಯಬೇಕಾದರೆ ಹೆಂಡತಿಯ ಸ್ವರೂಪವನ್ನು (ಎಂದರೆ ಹೆಂಡತಿಯೆಂಬ ಆ ಪದದ ಸ್ವರೂಪವನ್ನು) ಅರಿಯಬೇಕಲ್ಲವೇ?  ನಾನು ಮೊದಲೇ ತಿಳಿಸಿದಂತೆ, ಇವತ್ತು ಬಳಸುವ ಅನೇಕ ರೂಪಗಳು ಹಳಗನ್ನಡದಿಂದಲೇ ಬಂದುವು, ಆದ್ದರಿಂದ ಹೆಂಡತಿಯ ಹಳೆಯ ರೂಪವನ್ನು ಪರಿಶೀಲಿಸುವುದು ಒಳ್ಳೆಯದು.

ಈ ಹೆಂಡತಿಯ ಹಳೆಯ ರೂಪ, ಪೆಂಡತಿ (ಕನ್ನಡದ ಪೆಣ್ ( = ಹೆಣ್ಣು), ತಮಿಳಿನ ಪೊಣ್; ಕನ್ನಡದ ಪೆಂಡತಿಯೇ ತಮಿಳಿನ ಪೊಣ್ಡಾಟ್ಟಿ).  ಈ ಪೆಂಡತಿ ಕೂಡ, ಪೆಂಡಿತಿ ಎಂಬುದರ ಬದಲಾದ ರೂಪವೆಂದು ತಿಳಿಸುವ ನಿಘಂಟು, ಪೆಣ್ ಎಂಬುದಕ್ಕೆ 'ಇತಿ' ಪ್ರತ್ಯಯ ಸೇರಿ ಪೆಂಡಿತಿಯೆಂದಾಯಿತೆಂದು ಸೂಚಿಸುತ್ತದೆ.  ಆದರೆ ಪೆಣ್+ಇತಿ ಎನ್ನುವುದು ಪೆಣಿತಿ/ಪೆಣ್ಣಿತಿ/ಪೇಣಿತಿ ಎಂದಾಗಬಹುದೇ ಹೊರತು ಅಲ್ಲಿ ಡಕಾರ ಬಂದದ್ದು ಹೇಗೆ?  ಆದ್ದರಿಂದ ಇದು 'ಇತಿ' ಪ್ರತ್ಯಯವಿರಲಾರದೆಂದು ನನ್ನ ಅನಿಸಿಕೆ; ಬದಲಿಗೆ ಪೆಂಡಿರ್ ಎಂಬ ಪದಕ್ಕೆ 'ತಿ' ಪ್ರತ್ಯಯ ಸೇರಿ, ಪೆಂಡಿರ್ + ತಿ = ಪೆಂಡಿರ್ತಿ (ರಕಾರಶಿಥಿಲ) > ಪೆಂಡಿತಿ ಹೀಗಾಗಿರಲು ಸಾಕು.  ಇದರ ಅರ್ಥವಿವರಣೆಯನ್ನು ಆಮೇಲೆ ನೋಡೋಣ, ಇಲ್ಲಿ ನಾವು ಗಮನಿಸಬೇಕಾದ್ದು, ಪೆಂಡಿರ್ ಎಂಬ ಬಹುವಚನವನ್ನು.  'ಇರ್' ಎಂಬ ಬಹುವಚನಪ್ರತ್ಯಯಕ್ಕೆ ಉದಾಹರಣೆ ಕೊಡುತ್ತಾ ಕೇಶಿರಾಜನು ಪೆಣ್ + ಇರ್ = ಪೆಂಡಿರ್ ಎಂದು ತಿಳಿಸುತ್ತಾನೆ (ಶಬ್ದಮಣಿದರ್ಪಣ, ನಾಮಪ್ರಕರಣ - ಸೂತ್ರ 107ರ ಪ್ರಯೋಗಭಾಗ).  ಆದರೆ ದರ್ಪಣಕಾರನಾಗಲೀ, ವ್ಯಾಖ್ಯಾನಕಾರರಾಗಲೀ, ವಿವರಣಕಾರರಾಗಲೀ ಪೆಣ್ + ಇರ್ ಎಂಬುದು ಪೆಣಿರ್/ಪೆಣ್ಣಿರ್/ಪೇಣಿರ್ ಆಗದೇ ಪೆಂಡಿರ್ ಹೇಗಾಗುತ್ತದೆ - ಅಲ್ಲಿ ಡಕಾರ ಹೇಗೆ ಬಂತು ಎಂಬುದರ ವಿವರಣೆ ನೀಡಿಲ್ಲ (ಮತ್ತೆ ಇದು ಮೇಲೆ ವಿವರಿಸಿದ ಪೆಣ್+ಇತಿ ಎಂಬಲ್ಲಿನ ತೊಡಕೇ - ಡಕಾರ ಬಂದದ್ದು ಹೇಗೆ?).  ಆದ್ದರಿಂದ ಇಲ್ಲಿ 'ಇರ್' ಪ್ರತ್ಯಯವಿರಲಾರದು, ಬದಲಿಗೆ ಪೆಣ್ ಎಂಬ ನಾಮಪದಕ್ಕೆ ದಿರ್ ಎಂಬ ಪ್ರತ್ಯಯ ಸೇರಿ ಪೆಣ್ + ದಿರ್ = ಪೆಣ್ದಿರ್ ಎಂದಾಗಿರಬೇಕೆಂಬುದು ನನ್ನ ಊಹೆ.  ಅಲ್ಲಿಂದ ಪೆಣ್ದಿರ್ > ಪೆಣ್ಡಿರ್ > ಪೆಂಡಿರ್ ಎಂಬ ರೂಪ ಸಾಧ್ಯ.  ಅದೇನೇ ಇರಲಿ, ಪೆಂಡಿರ್ ಎನ್ನುವುದು ಬಹುವಚನವೆಂದಂತೂ ಆಯಿತಲ್ಲ.  ಯಾವುದರ ಬಹುವಚನ?  ಪೆಣ್ (ಹೆಣ್ಣು) ಎಂಬುದರ ಬಹುವಚನ.  ಪೆಣ್ (ಹೆಣ್ಣು) ಎಂದರೆ ಸಾಮಾನ್ಯಾರ್ಥದಲ್ಲಿ ಸ್ತ್ರೀ ಎಂದು ತಾನೆ ಅರ್ಥ?  ಆದ್ದರಿಂದ ಪೆಂಡಿರ್ ಎಂಬುದು ಮೂಲಾರ್ಥದಲ್ಲಿ ಸ್ತ್ರೀಯರು ಎಂಬ ಬಹುವಚನಾರ್ಥ ಕೊಡುವಂಥದ್ದು - ಆದ್ದರಿಂದ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಸ್ತ್ರೀಯರಿದ್ದರೆ (ವಿವಾಹಿತರಿರಲಿ, ಅವಿವಾಹಿತರಿರಲಿ) ಅವರಿಗೆ ಪೆಂಡಿರ್ ಅಥವಾ ಹೆಂಡಿರು ಎಂಬುದು ಅನ್ವಯಿಸೀತು (ಇರಿ, ಹಾಗೆಂದು ಸಿಕ್ಕಸಿಕ್ಕವರನ್ನೆಲ್ಲಾ ಹೆಂಡಿರೆಂದುಬಿಡುವುದಕ್ಕಾಗುತ್ತದೆಯೇ? ಅನಾಹುತವೇ ಆದೀತು).  

ಕನ್ನಡದಲ್ಲಿ ವಿವಾಹದಿಂದ ಏರ್ಪಟ್ಟ ಗಂಡುಹೆಣ್ಣುಗಳ ನಿರ್ದಿಷ್ಟ ಸಂಬಂಧಕ್ಕೆ ಅದರದೇ ಆದ ಪದವೇ ಇದ್ದಂತಿಲ್ಲ.  ಅಯ್ಯೋ, ಗಂಡ-ಹೆಂಡತಿ ಎಂಬುದು ಇದೆಯಲ್ಲ ಎನ್ನುತ್ತೀರಾ?  ಅವು ಮೂಲತಃ ಬೇರೆಬೇರೆ ಅರ್ಥವುಳ್ಳವು, ನಾವು ಆ ವೈವಾಹಿಕಸಂಬಂಧ ಸೂಚಿಸುವ ಬೇರೆ ಪದಗಳಿಲ್ಲದ ಕಾರಣಕ್ಕೆ ಬಳಕೆಯಲ್ಲಿ ತಂದುಕೊಂಡಿರುವ ಪದಗಳು.  ಗಂಡ ಎನ್ನುವ ಪದ ಮೂಲತಃ ಶೂರ, ಸ್ವಾಮಿ, ಒಡೆಯ ಇತ್ಯಾದಿ ಅರ್ಥವುಳ್ಳದ್ದು, ವಿವಾಹದಲ್ಲಾತ ಕನ್ಯಾದಾನ ಪಡೆದು (ಅಥವಾ ಹೇಗೋ ಹೆಣ್ಣನ್ನು 'ಗೆದ್ದೋ, ಕದ್ದೋ, ಹೊತ್ತೊಯ್ದೋ') ಆಕೆಗೆ 'ಒಡೆಯ'ನಾಗುವುದರಿಂದ ಸಂಸಾರದಲ್ಲವನು ಗಂಡ (ಹಾಗೇ ಯಜಮಾನ, ಪತಿ, ಭರ್ತಾ, ವಲ್ಲಭ, ಕಾಂತ ಇವೆಲ್ಲವೂ ಸಾಂದರ್ಭಿಕವಾಗಿ ಬೇರೆಬೇರೆ ಅರ್ಥವುಳ್ಳವು, ಗಂಡ ಎಂಬ ವಿಶೇಷಾರ್ಥ ಹೊಂದಿವೆಯಷ್ಟೇ).  ಅದೇ ರೀತಿ ಯಜಮಾನಿತಿ, ಪತ್ನಿ, ದಾರಾ, ಭಾರ್ಯಾ, ಮಡದಿ, ಕಾಂತೆ ಇತ್ಯಾದಿಗಳೂ ಸಾಂದರ್ಭಿಕವಾಗಿ ಬೇರೆಬೇರೆ ಅರ್ಥವುಳ್ಳವು, ಹೆಂಡತಿ ಎಂಬ ವಿಶೇಷಾರ್ಥ ಹೊಂದಿವೆಯಷ್ಟೇ.  ಇನ್ನು ಹೆಂಡತಿ ಎಂಬುದರ ರೂಪವಿಕಾಸವನ್ನೂ ಅರ್ಥವ್ಯಾಪ್ತಿಯನ್ನೂ ಮೇಲೇ ನೋಡಿದೆವಲ್ಲ - ಹೆಂಡತಿ (ಹೆಂಡಿರ್ + ತಿ) ಎಂಬುದರ ಮೂಲಭಾಗ ಹೆಂಡಿರ್ ಎಂಬುದು ಯಾವ ಸ್ತ್ರೀಸಮೂಹಕ್ಕೂ ಅನ್ವಯಿಸುವುದೆಂದು ತಿಳಿದೆವಲ್ಲ.  ಹೆಂಡಿರ್ ಎಂಬುದೂ ವಿವಾಹಸಂದರ್ಭದಲ್ಲಿ ಮಾತ್ರ ಪತ್ನಿಯರು ಎಂಬ ವಿಶೇಷಾರ್ಥ ಹೊಂದಿತಷ್ಟೇ.  ಹೇಗೆಂದರೆ, ಪೆಣ್/ಹೆಣ್ಣು ಎಂಬ ಸಾಮಾನ್ಯಪದವು, "ಅವನಿಗೆ (ಆ ಗಂಡನಿಗೆ) ಸೇರಿದ ಪೆಣ್/ಹೆಣ್ಣು ಎಂಬ ಸಂಬಂಧಸೂಚಕವಿಶೇಷಾರ್ಥ ಪಡೆದುಕೊಳ್ಳುತ್ತದೆ ('ನಿನ್ನ ಹೆಂಗುಸು, ನಿನ್ನ ಹೆಣ್ಣು, ನಮ್ ಹೆಂಗಸ್ರು ಇತ್ಯಾದಿ ಪ್ರಯೋಗಗಳು ಈಗಲೂ ಬಳಕೆಯಲ್ಲಿವೆಯಲ್ಲ).  ಒಬ್ಬನಿಗೆ ಅಂತಹ ಹಲವು ಪೆಣ್ಗಳ್/ಹೆಣ್ಣುಗಳು ಇದ್ದಲ್ಲಿ ಅವರು ಬಹುವಚನವಾಗಿ ಪೆಂಡಿರ್/ಹೆಂಡಿರ್/ಹೆಂಡಿರು ಆಗುತ್ತಾರೆ (ಎಂದರೆ ಆ ಎಲ್ಲರೂ ಆ ಗಂಡನಿಗೆ ಸೇರಿದ ಹೆಂಗಸರು, ಪತ್ನಿಯರು).  ಸ್ತ್ರೀಯರು ಎಂಬ ಸಾಮಾನ್ಯಾರ್ಥ ಹೊಂದಿದ್ದ ಹೆಂಡಿರ್, ಪತ್ನಿಯರು ಎಂಬ ವಿಶೇಷಾರ್ಥ ಪಡೆದದ್ದು ಹೀಗೆ.

ಈ ಪೆಂಡಿರ್ ಎಂಬ ಬಹುವಚನಕ್ಕೆ 'ತಿ' ಪ್ರತ್ಯಯ ಸೇರಿದಾಗ ಪೆಂಡಿರ್ತಿ>ಪೆಂಡಿತಿ > ಹೆಂಡಿತಿ > ಹೆಂಡತಿ ಆದದ್ದೆಂಬುದನ್ನು ಮೇಲೆಯೇ ನೋಡಿದೆವಷ್ಟೇ?  ಕನ್ನಡದಲ್ಲಿ 'ತಿ' ಪ್ರತ್ಯಯ ಸಾಮಾನ್ಯವಾಗಿ ವೃತ್ತಿಸೂಚಕವಾಗಿರಬಹುದು (ಬೋಯಿತಿ, ಅಗಸಿತಿ, ಕುಂಬಾರ್ತಿ ಇತ್ಯಾದಿ) ಅಥವಾ ವೃತ್ತಿಸೂಚಕಪುಲ್ಲಿಂಗಪದದ ಸ್ತ್ರೀಲಿಂಗರೂಪವಾಗಿರಬಹುದು (ಬ್ರಾಹ್ಮಣತಿ, ಕನ್ನಡತಿ, ಇತ್ಯಾದಿ), ಅಥವಾ ಸ್ವಭಾವಸೂಚಕವಾಗಿರಬಹುದು (ಅಂದಗಾತಿ, ಮಾತುಗಾತಿ, ಕಲೆಗಾತಿ ಇತ್ಯಾದಿ), ಅಥವಾ ಒಡೆತನವನ್ನು, ಅಧಿಕಾರವನ್ನು ಸೂಚಿಸುವಂಥದ್ದು ಆಗಿರಬಹುದು (ಗೌಡಿತಿ, ಹೆಗ್ಗಡಿತಿ).  ಆದ್ದರಿಂದ 'ತಿ' ಪ್ರತ್ಯಯ ಪಡೆದ ಈ ಪೆಂಡಿರ್ತಿ/ಪೆಂಡಿತಿ/ಹೆಂಡಿತಿ ಹಲವು ಹೆಂಡಿರಲ್ಲಿ ಮುಖ್ಯಳಾಗಿರಬೇಕು - ಪ್ರಧಾನಪತ್ನಿ, ಮುಖ್ಯಪತ್ನಿ ಇತ್ಯಾದಿ.  ಒಂದು ಸಂಸಾರದಲ್ಲಿ ಪೆಂಡಿರು/ಹೆಂಡಿರು ಹಲವರಿರಬಹುದು, ಅವರಲ್ಲಿ ಮುಖ್ಯಳಾದ ಪೆಂಡಿತಿ/ಹೆಂಡಿತಿ ಒಬ್ಬಳೇ ತಾನೇ ಇರಲು ಸಾಧ್ಯ?  ಆದ್ದರಿಂದ ಸಂಸಾರದ ಮಟ್ಟದಲ್ಲಿ ಇದಕ್ಕೆ ಬಹುವಚನ ಪ್ರಾಯೋಗಿಕವಾಗಿ ಸಾಧ್ಯವಿಲ್ಲ (ಗಂಡ ಒಬ್ಬರಿನ್ನೊಬ್ಬರಿಗೆ ಕಾಣದಂತೆ ಎರಡು ಸಂಸಾರ ನಡೆಸುತ್ತಿದ್ದರೆ ಅದು ಬೇರೆಯ ವಿಷಯ).  ಈಗಂತೂ ಏಕಪತ್ನೀತ್ವವೇ ಸಾಮಾನ್ಯವಾದ್ದರಿಂದ ಹೆಣ್ಣು, ಹೆಂಡಿರು, ಹೆಂಡತಿ ಎಲ್ಲಾ ಒಂದೇ ವ್ಯಕ್ತಿಗೆ, ಏಕವಚನದಲ್ಲೇ ಅನ್ವಯಿಸುವಂಥದ್ದು - ಬಹುವಚನವಿದ್ದರೆ ಮರ್ಯಾದೆಗಾಗಿ ಇರಬೇಕಷ್ಟೇ.  ಇರಲಿ ಮರ್ಯಾದೆಗಾದರೂ ಯಾವ ಬಹುವಚನ ಉಪಯೋಗಿಸಬೇಕು?  ಹಾಗೇ ಹಲವು ಬೇರೆಬೇರೆ ಹೆಂಡತಿಯರನ್ನು (ಬೇರೆಬೇರೆ ಕುಟುಂಬದ ಮುಖ್ಯಪತ್ನಿಯರನ್ನು) ಉದ್ದೇಶಿಸುವಾಗಲೂ ಬಹುವಚನ ಬೇಕಷ್ಟೇ? ಆಗ ಯಾವ ಬಹುವಚನ? ಈ ಲೇಖನದ ಆರಂಭದಲ್ಲಿ ಹೆಂಡತಿಗಳು/ಹೆಂಡಂದಿರು/ಹೆಂಡಿತಿಯಂದಿರು/ಹೆಂಡತಿಯರು - ಈ ನಾಲ್ಕು ರೂಪಗಳನ್ನು ಗಮನಿಸಿದೆವು, ಹೆಂಡಂದಿರು ಎನ್ನುವುದು ಸರಿಯಲ್ಲವೆಂದು ನಿರ್ಧರಿಸಿ ಕೈಬಿಟ್ಟೆವು, ಹೆಂಡತಿಗಳು ಎನ್ನಲು ಭಯಪಟ್ಟು ಅದನ್ನೂ ಕೈಬಿಟ್ಟಿದ್ದೆವು ಅಲ್ಲವೇ?  ಸದ್ಯಕ್ಕಿನ್ನೂ ಹೆಂಡತಿಗಳ ಸಹವಾಸ ಬೇಡ - ಹೆಂಡಿತಿಯಂದಿರು ಮತ್ತು ಹೆಂಡತಿಯರು ಈ ಎರಡು ರೂಪಗಳಲ್ಲಿ ಯಾವುದು ಸರಿಹೋಗಬಹುದೆಂಬುದನ್ನೀಗ ಮತ್ತೆ ಪರಿಶೀಲಿಸೋಣ.

ಹೆಂಡತಿಯಂದಿರ್ ಸಾಧ್ಯವಿಲ್ಲ, ಏಕೆಂದರೆ ಅಂದಿರ್ ಎಂಬ ಪ್ರತ್ಯಯವೇ ಇಲ್ಲ.  ನಾಮಪದವು ನ್ ಅಥವಾ ಮ್ ಅರ್ಧಾಕ್ಷರಗಳಿಂದ ಕೊನೆಗೊಂಡಿದ್ದಾಗ ಅದಕ್ಕೆ ದಿರ್ ಪ್ರತ್ಯಯ ಸೇರಿ ಅಂದಿರ್ ಎಂದು ಕಾಣುತ್ತದಷ್ಟೇ, ಆದರೆ ಅದು ವಾಸ್ತವದಲ್ಲಿ ದಿರ್ ಪ್ರತ್ಯಯವೇ ಹೊರತು ಅಂದಿರ್ ಅಲ್ಲ (ಉದಾ: ಮಗನ್+ದಿರ್=ಮಗಂದಿರ್) - ಹಾಗೆಯೇ  ಹೆಣ್ ಎಂಬುದಕ್ಕೆ ದಿರ್ ಪ್ರತ್ಯಯ ಸೇರಿಸಿದಾಗ ಹೆಣ್ಡಿರ್/ಹೆಂಡಿರ್ ಆಗುತ್ತದೆಯೇ ಹೊರತು ಹೆಣಂದಿರ್ ಅಥವಾ ಹೆಣ್ಣಂದಿರ್ ಆಗುವುದಿಲ್ಲ ಅಲ್ಲವೇ?  ಆದ್ದರಿಂದ ಹೆಂಡತಿಯಂದಿರ್ ಎಂಬುದು ಸಾಧುವಲ್ಲ.  ಹೆಂಡತಿಗೇ 'ದಿರ್' ಪ್ರತ್ಯಯ ಸೇರಿಸಿ ಹೆಂಡತಿದಿರ್ ಎಂಬುದು ಆದೀತು ಆದರೆ ಹಾಗೆ ಬಳಕೆಯಲ್ಲಿಲ್ಲ.  ಆದ್ದರಿಂದ ಹೆಂಡತಿಯಂದಿರ್/ಹೆಂಡತಿದಿರ್ ಇವನ್ನು ಕೈಬಿಡೋಣ.

ಇನ್ನೊಂದಿದೆ - ಪೆಂಡತಿ ಎಂಬುದಕ್ಕೆ ವಿರ್ ಅಥವಾ ಅರ್ ಪ್ರತ್ಯಯಗಳು ಸೇರಿ ಪೆಂಡತಿವಿರ್ ಅಥವಾ ಪೆಂಡತಿಯರ್ ಎಂಬ ಹಳಗನ್ನಡರೂಪಗಳು ಸಾಧ್ಯ.  ಪೆಂಡತಿವಿರ್ ಎನ್ನುವುದು, ಹೊಸಗನ್ನಡದಲ್ಲಿ ಹೆಂಡತಿವಿರು ಎಂದಾಗುತ್ತದೆ.  ಹೆಂಡತಿಯರನ್ನು ಹಾಗೆ ಕರೆಯಲು ಬರುವುದೇ? "ನಾನೆಲ್ಲಿ ತಿವಿದೆ? ನಿಮಗೇನು ತಿಮಿರು" ಎಂಬ ಗರ್ಜನೆ ಬರುತ್ತದಷ್ಟೇ (ತಿವಿದುಬಿಡಲೂ ಬಹುದು).  ಆದ್ದರಿಂದ ಅದು ಬೇಡವೆಂದರೆ, ಉಳಿದುದು, ಸುರಕ್ಷಿತವಾಗಿ, ಪೆಂಡತಿಯರ್ > ಹೆಂಡತಿಯರು ಎಂಬ ರೂಪ ಮಾತ್ರ.  ಹೀಗಾಗಿ ಹೆಂಡತಿ ಎನ್ನುವುದರ ಸಂಖ್ಯಾಬಹುವಚನಕ್ಕೆ ಹೆಂಡತಿಯರು ಎನ್ನುವುದೇ ಸರಿ.

ಇದು ಬಹುಸಂಖ್ಯೆಯ ಹೆಂಡತಿಯರಿದ್ದಾಗ ಆಯಿತಲ್ಲ.  ನಿಮ್ಮ ಒಬ್ಬಳೇ ಹೆಂಡತಿಯನ್ನು ಮರ್ಯಾದೆಯಿಂದ ಸೂಚಿಸಬೇಕೆನ್ನಿ.  ಆಗ? ಇರುವ ಒಬ್ಬಳೇ ಹೆಂಡತಿಯನ್ನು ಹೆಂಡತಿಯರು ಎನ್ನಲಾಗುತ್ತದೆಯೇ? (ಆಕೆ ಎಷ್ಟು ಜನರ ಸಮಾನವಾಗಿಯಾದರೂ ಇರಲಿ - ಸಾಮರ್ಥ್ಯದಲ್ಲಿ ಅಥವಾ ಗಾತ್ರದಲ್ಲಿ).  "ಅದಕ್ಕೇನು? ಹೆಂಡತಿಯವರು" ಎಂದರಾಯಿತು ಎನ್ನುತ್ತೀರೇನೋ.  ಅದೆಂತಹ ಚೆಂದ? ಮಹಾಸ್ವಾಮಿಯವರು, ಮಹಾಸನ್ನಿಧಾನದವರು ಎನ್ನುವಂತೆ?  ಅತಿವಿನಯಂ ಧೂರ್ತಲಕ್ಷಣಂ, ನೆನಪಿಡಿ, ಅದು ಆಕೆಗೆ ಚೆನ್ನಾಗಿ ಗೊತ್ತು.  ಸ್ವಲ್ಪ ಸಹಜವಾದ ಬಹುವಚನ ಉಪಯೋಗಿಸಿ, ಕೊಡುವ ಮರ್ಯಾದೆಯೂ ಸಹಜವಾಗಿರಲಿ, ನಂಬುವಂತಿರಲಿ.  ಹಳಗನ್ನಡದಲ್ಲಿ, ಬುದ್ಧಿಯಿಲ್ಲದ, ಜೀವವಿಲ್ಲದ ನಪುಂಸಕವಸ್ತುಗಳಿಗೆ ಹೇಗೋ ವ್ಯಕ್ತಿಗಳಿಗೆ ಮರ್ಯಾದೆ ಕೊಡಲೂ ನಪುಂಸಕಲಿಂಗಬಹುವಚನವನ್ನುಪಯೋಗಿಸುವುದೇ ರೂಢಿ - ಕಲ್ಗಳ್, ಕೈಗಳ್, ಪಕ್ಷಿಗಳ್ ಎಂಬಂತೆಯೇ ತಂದೆಗಳ್, ತಾಯ್ಗಳ್, ಅಣ್ಣಗಳ್, ತಮ್ಮಗಳ್, ಆತಗಳ್, ಈತಗಳ್ (ಗಮನಿಸಿ, ಇದು ಸಂಖ್ಯಾಬಹುವಚನವಲ್ಲ, ಮರ್ಯಾದಾಬಹುವಚನ).  ಇದೇ ದಾರಿಯನ್ನನುಸರಿಸಿ ಹೆಂಡತಿಗೆ ಮರ್ಯಾದೆ ಕೊಡುವವರು ಪೆಂಡಿತಿಗಳ್ ಎನ್ನಬಹುದು, ಅದನ್ನು ಹೊಸಗನ್ನಡಕ್ಕೆ ತಂದರೆ... ಕ್ಷಮಿಸಿ, ಹೆಂಡತಿಗಳು ಎಂದೇ ಆಗಬೇಕು - ಹೇಗೋ ಧೈರ್ಯ ಮಾಡದೇ ನಿಮಗೆ ಬೇರೆ ದಾರಿಯಿಲ್ಲ! ಅದು ಇಲಿಗಳು, ಬೆಕ್ಕುಗಳು ಎನ್ನುವಂತಲ್ಲ, ಮರ್ಯಾದಾಬಹುವಚನ ಎಂದು ನಿಮ್ಮ ಪತ್ನಿಗೆ ಮನದಟ್ಟು ಮಾಡಿಕೊಡುವ ಹೊಣೆಗಾರಿಕೆಯನ್ನು ನೀವು ಹೊರಲೇಬೇಕಾಗುತ್ತದೆ (ಬೇಕಿದ್ದರೆ ಈ ಲೇಖನವನ್ನಾಕೆಗೆ ಓದಿ ಹೇಳಬಹುದು, ಕೇಳಿಸಿಕೊಂಡರೆ).  ಇಲ್ಲದಿದ್ದರೆ, ನೆನಪಿದೆಯಲ್ಲ, ಲಟ್ಟಣಿಗೆಗಳು ಎನ್ನುವುದೂ ಬಹುವಚನವೇ!

ತಡೆಯಿರಿ, ಅಥವಾ ಇನ್ನೊಂದು ಮಾಡಬಹುದು - ಅರ್ ಮತ್ತು ಕಳ್ ಎರಡೂ ಪ್ರತ್ಯಯವನ್ನೂ ಸೇರಿಸಿ ಹೇಳುವ ಪರಿಪಾಠವೂ ಇದೆ - ಅವರ್+ಕಳ್>ಅವರ್ಗಳ್, ಪತ್ನಿಯರ್+ಕಳ್>ಪತ್ನಿಯರ್ಗಳ್ ಹೀಗೆ.  ಅದೇರೀತಿ ಪೆಂಡಿತಿಯರ್ಗಳ್ > ಹೆಂಡತಿಯರುಗಳು ಎನ್ನಬಹುದು.  ಇದು ಹಲವು ಗೌರವಾನ್ವಿತ ಹೆಂಡತಿಯರಿರುವ ಗುಂಪಿಗೆ ಮರ್ಯಾದೆಯಾಗಿ ಹೇಳುವ ಪದ - ಸಂಖ್ಯಾಮರ್ಯಾದಾಬಹುವಚನ.  ಆದರೇನಂತೆ? ಅದನ್ನೇ ಒಬ್ಬ ಪತ್ನಿಗೂ ಹೇಳಬಾರದೆಂದಿದೆಯೇ? ಒಬ್ಬ ಹೆಂಡತಿಗೆ ಇಡೀ ಗುಂಪಿನ ಮರ್ಯಾದೆ ಸಲ್ಲಬಾರದೆಂದಿದೆಯೇ?  ನೀನೊಬ್ಬಳು ನನಗೆ ಹಲವು ಹೆಂಡಿರ, ಅಲ್ಲಲ್ಲ ಹಲವು ಹೆಂಡತಿಯರ (ಅಂದರೆ ಹಲವು ಮುಖ್ಯಪತ್ನಿಯರ, ಪತ್ನೀರತ್ನರ) ಸಮ ಎಂದು ಹೇಳಿದಂತಾಗುವುದಿಲ್ಲವೇ?  "ಇವರು ನಮ್ಮ ಹೆಂಡತಿಯರುಗಳು" ಎಂದು ಯಾರಿಗಾದರೂ ಆಕೆಯನ್ನು ಪರಿಚಯಿಸಿ; ಆಗ ಅರಳುವ ಆಕೆಯ ಮೊಗವನ್ನು ನೋಡಿ, ವ್ಯಾಕರಣಸ್ವರ್ಗಕ್ಕೆ ಕಿಚ್ಚು ಹಚ್ಚಿ ಚಳಿ ಕಾಯಿಸಿಕೊಳ್ಳಿ!  "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿರುಪಾಯಿ" ಎಂದಿಲ್ಲವೇ ಕವಿ?  ಅದನ್ನೇ ನೀವು ಬದಲಿಸಿ "ನನ್ಹೆಂಡತಿಯೊಬ್ಬಳು ಹತ್ತಿರವಿದ್ದರೆ ಹೆಂಡಿರು ನೂರೊ ಶಿವಾಯಿ" ಎಂದು ಹಾಡಬಹುದು.

ಇಷ್ಟು ವಿವರಿಸಿದಮೇಲೂ ಹೆಂಡತಿಯನ್ನು ಮರ್ಯಾದೆಯಾಗಿ ಹೆಂಡತಿಗಳು ಅಥವಾ ಹೆಂಡತಿಯರುಗಳು ಎಂದು ಕರೆಯಲು ನಿಮಗೆ 'ಒಂಥರಾ' ಎನ್ನಿಸಿದರೆ, ನಾನು ತಾನೆ ಏನು ಮಾಡಲಿ?  ಆಯ್ತು, ಎಲ್ಲರೂ ಒಪ್ಪುವಂತೆ ಹೆಂಡತಿಯವರು ಎಂದೇ ಕರೆಯಿರಿ, ಇನ್ನೇನು ಮಾಡಲಾದೀತು?

ಇರಲಿ, ತಮಾಷೆಯಲ್ಲಿ ಮೂಲವಿಷಯ ಕಳೆದುಹೋಗದಿರಲಿ:
ಪೆಣ್ > ಹೆಣ್ > ಹೆಣ್ಣು = ಸ್ತ್ರೀ (ಸಾಮಾನ್ಯಾರ್ಥ ಏಕವಚನ)
ಪೆಣ್+ದಿರ್=ಪೆಣ್ಡಿರ್ > ಹೆಂಡಿರು = ಸ್ತ್ರೀಯರು (ಸಾಮಾನ್ಯಾರ್ಥ ಬಹುವಚನ, ಆದರೆ ಈ ಅರ್ಥ ಬಳಕೆಯಲ್ಲಿಲ್ಲ)
ಹೆಣ್ಣು = ಪತ್ನಿ (ವಿಶೇಷಾರ್ಥ ಏಕವಚನ, ಆದರೆ ಈ ಅರ್ಥದಲ್ಲಿ ಬಳಕೆ ಕಡಿಮೆ)
ಹೆಂಡಿರು = ಪತ್ನಿಯರು (ವಿಶೇಷಾರ್ಥ ಬಹುವಚನ; ಆದರೆ ಇದು ಪತ್ನಿ ಎಂಬ ಏಕವಚನದಲ್ಲೂ ಬಳಕೆಯಲ್ಲಿದೆ)
ಪೆಂಡಿರ್+ತಿ = ಪೆಂಡಿತಿ > ಹೆಂಡತಿ = ಪ್ರಧಾನಪತ್ನಿ(ವಿಶೇಷಾರ್ಥ ಏಕವಚನ, ಆದರೆ ಈ ಅರ್ಥ ಬಳಕೆಯಲ್ಲಿಲ್ಲ)
ಹೆಂಡತಿ - ಪತ್ನಿ (ಸಾಮಾನ್ಯಾರ್ಥ, ಏಕವಚನ, ಇದು ಬಹುಬಳಕೆಯಲ್ಲಿರುವ ಅರ್ಥ)
ಹೆಂಡತಿಯರು = ಹಲವು ಪ್ರಧಾನಪತ್ನಿಯರು (ವಿಶೇಷಾರ್ಥ, ಸಂಖ್ಯಾಬಹುವಚನ, ಆದರೆ ಈ ಅರ್ಥ ಬಳಕೆಯಲ್ಲಿಲ್ಲ)
ಹೆಂಡತಿಯರು = ಪತ್ನಿಯರು (ಸಾಮಾನ್ಯಾರ್ಥ, ಸಂಖ್ಯಾಬಹುವಚನ)
ಹೆಂಡತಿಯವರು (ಮರ್ಯಾದಾಬಹುವಚನ - ಹೆಂಡತಿಗಳು ಎನ್ನಬೇಕಿತ್ತು, ನಿಮ್ಮ ಧೈರ್ಯ!)

ಮುಖ್ಯವಾಗಿ ಹೆಂಡತಿ ಎನ್ನುವುದರ ಬಹುವಚನವೇನು ಎಂಬ ಮೂಲಪ್ರಶ್ನೆಗೆ ಈ ಕೊನೆಯೆರಡು ಸಾಲುಗಳಷ್ಟೇ ಉತ್ತರ.  ಸುಮ್ಮನೇ ನೀವು ಇಷ್ಟೆಲ್ಲಾ ಓದುವಂತೆ ಮಾಡಿದ್ದಾಯ್ತು, ಕ್ಷಮೆಯಿರಲಿ!

ಅಷ್ಟಭಾರ್ಯೆಯರೊಡನೆ ಕೃಷ್ಣ
ಚಿತ್ರಕೃಪೆ:
Ramsons Kala Pratishtana (ವಿಕಿಪೀಡಿಯಾ ಮೂಲಕ)


Sunday, May 31, 2020

ಸಂಸ್ಕೃತದಿಂದ ಪ್ರಾಕೃತವೋ ಪ್ರಾಕೃತದಿಂದ ಸಂಸ್ಕೃತವೋ?

ಈ ಚರ್ಚೆ ವಿದ್ವದ್ವಲಯದಲ್ಲಿ ಚರ್ವಿತಚರ್ವಣವೆನಿಸಬಹುದು.  ನಾನು ಹೇಳುತ್ತಿರುವುದರಲ್ಲಿ ಹೊಸದೇನೂ ಇಲ್ಲ.  ಆದರೂ ಈ ಪ್ರಶ್ನೆ ಪದೇಪದೇ ಬರುತ್ತಲೇ ಇರುವುದರಿಂದ, ಉತ್ತರವೂ ಪುನರಾವರ್ತನೆಯಾಗುವುದು ಸಹಜವಷ್ಟೇ  ಆದ್ದರಿಂದ ಈ ಲೇಖನ ಈಗಾಗಲೇ ಇದನ್ನು ತಿಳಿದವರಿಗಾಗಿ ಅಲ್ಲ, ಇನ್ನೂ ಈ ಪ್ರಶ್ನೆಯಿರುವವರಿಗಾಗಿ ಅಷ್ಟೇ.

ಈ ಲೇಖನದ ವಸ್ತು, ಹಿರಿಯಮಿತ್ರರಾದ ಶ್ರೀ ಸುಧೀಂದ್ರ ದೇಶಪಾಂಡೆಯವರು ಫೇಸ್ಬುಕ್ ಚರ್ಚೆಯೊಂದರಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ - "ಸಂಸ್ಕೃತವು ಪ್ರಾಕೃತದಿಂದ (ಪ್ರಾಕೃತ ಇದರರ್ಥ; ಪ್ರಕೃತಿಸಹಜವಾದದ್ದು, ಆಡುಮಾತು. natureದಿಂದ ಹುಟ್ಟಿದ natural) ಹುಟ್ಟಿದೆಯೇ ಹೊರತು, ಪ್ರಾಕೃತವು ಸಂಸ್ಕೃತದಿಂದ ಹುಟ್ಟಿಲ್ಲ. ಗ್ರಂಥಭಾಷೆಯಿಂದ ಆಡುನುಡಿಯು ಹುಟ್ಟುವುದೋ, ಆಡುನುಡಿಯಿಂದ ಗ್ರಾಂಥಿಕ ಭಾಷೆ ಹುಟ್ಟುವುದೋ ಎನ್ನುವುದನ್ನು ಪ್ರಾಜ್ಞರು ತಿಳಿದೇ ಇದ್ದಾರೆ"

ಪ್ರಾಕೃತ-ಸಂಸ್ಕೃತಗಳ ಗೂಡಿಗೆ ಕೈಯಿಕ್ಕುವ ಮೊದಲು, ಮೇಲಿನ ಅಭಿಪ್ರಾಯದ ಕೊನೆಯ ವಾಕ್ಯಕ್ಕೆ ಉತ್ತರಿಸಿಬಿಡುತ್ತೇನೆ - ಅದು ಸರಳ.  ಗ್ರಂಥಭಾಷೆಯಿಂದ ಆಡುನುಡಿ ಹುಟ್ಟುವುದೋ ಆಡುನುಡಿಯಿಂದ ಗ್ರಾಂಥಿಕಭಾಷೆ ಹುಟ್ಟುವುದೋ?  ಗ್ರಂಥಭಾಷೆಯಿಂದ ಆಡುನುಡಿ ಹುಟ್ಟುವುದೆಂಬುದನ್ನು ಯಾರೂ ಒಪ್ಪತಕ್ಕದ್ದಲ್ಲ, ಕಾರಣ ಸ್ಪಷ್ಟವಾಗಿಯೇ ಇದೆ - ಏಕೆಂದರೆ ಅಕ್ಷರ ಬರದವರೂ ಭಾಷೆಯನ್ನು ಮಾತಾಡುತ್ತಾರೆ, ಇದರಲ್ಲಿ ಶಂಕೆಯಿಲ್ಲ.  ಆದರೆ ಆಡುನುಡಿಯಿಂದ ಗ್ರಾಂಥಿಕಭಾಷೆ ಹುಟ್ಟುವುದೆಂಬುದೂ ಅತಿವಾದವೇ.  ಏಕೆಂದರೆ ಆಡುನುಡಿಗಳ ಹಲವು ಪ್ರಭೇದಗಳಿರುತ್ತವೆ, ಅವುಗಳಿಂದ ನೇರವಾಗಿ ಗ್ರಂಥಭಾಷೆ ಹುಟ್ಟುವುದಿಲ್ಲ, ಹಾಗೆ ಹುಟ್ಟಿದರೆ ಒಂದೊಂದು ಆಡುನುಡಿಯ ಪ್ರಭೇದಕ್ಕೂ ಒಂದೊಂದು ಗ್ರಂಥಭಾಷೆಯಿರಬೇಕಾಗುತ್ತದೆ.  ಆದರೆ ವಸ್ತುಸ್ಥಿತಿ ಹಾಗಿಲ್ಲವಲ್ಲ.  ಆದ್ದರಿಂದ ಆಡುನುಡಿಗೂ ಗ್ರಂಥಭಾಷೆಗೂ ಮೂಲವಾದ ಭಾಷಾರೂಪವೊಂದು ಇರಲೇಬೇಕು.  ಒಂದುಕಡೆ, ಆ ಮೂಲರೂಪವೇ ಹಲವು ಪ್ರದೇಶಗಳಲ್ಲಿ ಬೇರೆಬೇರೆ ರೀತಿ ಸವೆಸವೆದು ಬೇರೆಬೇರೆಯ ಭಾಷಾಪ್ರಭೇದಗಳಾಗುತ್ತದೆ (ಇವು ಆಡುನುಡಿಗಳು), ಮತ್ತೆ ಅದೇ ಮೂಲರೂಪವನ್ನೇ ಪರಿಶೋಧಿಸಿ ಅದು ಅನುಸರಿಸುವ ವ್ಯಾಕರಣನಿಯಮಗಳನ್ನು ಸೂತ್ರೀಕರಿಸಿದಾಗ ಗ್ರಂಥಭಾಷೆಯ ಉದ್ಭವವಾಗುತ್ತದೆ.  ಇದರ ಅಗತ್ಯವಾದರೂ ಏನೆಂದರೆ, ಅಕ್ಷರರೂಪದಲ್ಲಿರುವ ಭಾಷೆಯು ಮುಖಭಾವ, ದೇಹದ ಚಲನೆ, ಧ್ವನಿಯ ಏರಿಳಿತಗಳ ಸಹಾಯವಿಲ್ಲದೇ ಕೇವಲ ತನ್ನಿಂತಾನೇ ಸಂವಹನಗೊಳ್ಳಬೇಕಿರುವುದರಿಂದ ಅದು ಹೆಚ್ಚು ನಿಖರವಾಗಿ, ಸಂದೇಹಕ್ಕೆಡೆಯಿಲ್ಲದಂತಿರಬೇಕಾಗುತ್ತದೆ.  ಇದು ಸಾಧ್ಯವಾಗಬೇಕೆಂದರೆ ಭಾಷೆಯು ಯಾವ ನಿಯಮಗಳನ್ನು ಅನುಸರಿಸುತ್ತದೆಂಬುದರ ಸ್ಪಷ್ಟತೆಯೂ, ಬಳಕೆಯಲ್ಲಿ ಕೂಡಿದ ಮಟ್ಟಿಗೂ ಏಕರೂಪತೆಯೂ ಅತ್ಯಗತ್ಯವಾಗುತ್ತದೆ.  ಆದ್ದರಿಂದಲೇ ಗ್ರಂಥಭಾಷೆಗೆ ಆಡುಮಾತಿನಲ್ಲಿಲ್ಲದ ಒಂದು ಔಪಚಾರಿಕತೆ, ವ್ಯಾಕರಣಬದ್ಧತೆ ಇರುತ್ತದೆ.  ಆದರೆ ಗ್ರಂಥಭಾಷೆ ಮತ್ತು ವಿವಿಧ ಆಡುನುಡಿಗಳು ಒಂದೇ ಮೂಲರೂಪದಿಂದ ಹೊಮ್ಮಿದ್ದೆಂಬುದನ್ನು ಗಮನದಲ್ಲಿಡಬೇಕು. 

ಇದೇ ಜಾಡನ್ನನುಸರಿಸಿ ಈಗ ಚರ್ಚೆಯನ್ನು ಮುಂದುವರೆಸೋಣ. ಪ್ರಾಕೃತ ಮೊದಲು, ಸಂಸ್ಕೃತ ಆಮೇಲೆ ಎಂಬ ಮಾತು ಬೇರೆಯದೇ ಚರ್ಚೆ - ಯಾವಯಾವ ಪ್ರಾಕೃತಗಳು ಯಾವಯಾವಾಗ ಹುಟ್ಟಿದುವು, ಸಂಸ್ಕೃತ ಹುಟ್ಟಿದ್ದು ಯಾವಾಗ ಇತ್ಯಾದಿ - ಆದರೆ ಅದು ಇಲ್ಲಿನ ಚರ್ಚೆಯ ವಿಷಯವಲ್ಲ; ಇಲ್ಲಿ ನಾವು ಚರ್ಚಿಸುವುದು ಪ್ರಾಕೃತದಿಂದ ಸಂಸ್ಕೃತ ಹುಟ್ಟಿತೋ ಸಂಸ್ಕೃತದಿಂದ ಪ್ರಾಕೃತವೋ ಎಂಬ ಬಗ್ಗೆ ಮಾತ್ರ.

ಮೊದಲಿಗೆ, ಪ್ರಾಕೃತ-ಸಂಸ್ಕೃತ ಎಂಬ ಹೆಸರಿನ ಒಂದು ಅರ್ಥವನ್ನಷ್ಟೇ ಹಿಡಿದು ಭಾಷಾಮೂಲದ ವ್ಯಾಖ್ಯಾನ ಮಾಡುವುದು ಸರಿಯಲ್ಲ.  ಪ್ರಾಕೃತ = ಪ್ರಕೃತಿಯಿಂದ ಹುಟ್ಟಿದ್ದು ಎಂಬ ಅರ್ಥವನ್ನು ಹಿಡಿದರೆ, ಅದನ್ನು ಎಷ್ಟು ಮೂಲಕ್ಕಾದರೂ ಕೊಂಡೊಯ್ಯಬಹುದು - ಉದಾಹರಣೆಗೆ ಗಾಳಿ ಸುಯ್ಯನೆ ಬೀಸುತ್ತದೆ, ಗಿಡಮರಗಳು ಸರ್ರಬರ್ರನೆ ಆಡುತ್ತವೆ, ನದಿ ಜುಳುಜುಳು ಹರಿಯುತ್ತದೆ, ಪಕ್ಷಿಗಳು ಚಿಲಿಪಿಲಿಗುಟ್ಟುತ್ತವೆ, ನಾಯಿ ಭೌಗುಟ್ಟುತ್ತದೆ, ಹುಲಿ 'ಗರ್'ಜಿಸುತ್ತದೆ - ಇವೆಲ್ಲ ಪ್ರಾಕೃತಿಕಶಬ್ದಗಳೇ.  ಪ್ರಕೃತಿಯದೇ ಒಂದು ಭಾಗವಾದ ಮಾನವ ಕೂಡ ತನ್ನ ವಿಶಿಷ್ಟವಾದ ಧ್ವನಿಪೆಟ್ಟಿಗೆಯ ಸಹಾಯದಿಂದ ಸಾವಿರಾರು ಧ್ವನಿಗಳನ್ನು ಹೊರಡಿಸಬಲ್ಲ, ಇವೆಲ್ಲದರ 'ಭಾಷಾರೂಪ' ಪ್ರಾಕೃತ.  ಹೀಗೆಂದುಬಿಟ್ಟರೆ ಪ್ರಪಂಚದ ಎಲ್ಲ ಮೂಲಭಾಷೆಗಳೂ ಪ್ರಾಕೃತಗಳೇ; ಅವುಗಳನ್ನು ಹಿಡಿದು ಸಂಸ್ಕರಿಸಿ ವ್ಯಾಕರಣದ ಚೌಕಟ್ಟಿಗಳವಡಿಸಿಬಿಟ್ಟರೆ ಅಂತಹ ಎಲ್ಲ ಭಾಷೆಗಳೂ ಸಂಸ್ಕೃತವೇ; ಆ ದೃಷ್ಟಿಯಿಂದ ನಮ್ಮ ಕೊಳ್ಳೇಗಾಲದ ಕನ್ನಡ, ಕುಂದಾಪ್ರಕನ್ನಡ, ಹವಿಗನ್ನಡ ಇವೆಲ್ಲವೂ ಪ್ರಾಕೃತಗಳೆಂದೂ, ಅವುಗಳ ಆಧಾರದ ಮೇಲೇ ರೂಪಿತವಾದ ಮೈಸೂರು, ಮಂಗಳೂರು, ಧಾರವಾಡ ಕನ್ನಡಗಳು ಅರೆಸಂಸ್ಕೃತವೆಂದೂ, ಅವುಗಳನ್ನು ಹಿಡಿದು ವ್ಯಾಕರಣಬಂಧಕ್ಕೊಳಪಡಿಸಿದ ಗ್ರಾಂಥಿಕ ಕನ್ನಡವೇ ಸಂಸ್ಕೃತವೆಂದೂ ಕರೆಯಬೇಕಾಗುತ್ತದೆ.  ಆದರೆ ವಸ್ತುತಃ, ಕನ್ನಡವು ಸಂಸ್ಕೃತವಲ್ಲ, ಅಲ್ಲವೇ? ಎರಡೂ ಬೇರೆಬೇರೆ ಭಾಷೆಗಳು!

ಜೊತೆಗೆ ಪ್ರಾಕೃತ=ಪ್ರಕೃತಿಯಿಂದ ಮಾಡಲ್ಪಟ್ಟದ್ದು ಎಂಬ ವ್ಯಾಖ್ಯಾನವನ್ನಿಟ್ಟುಕೊಂಡರೆ ಇನ್ನೆಷ್ಟು ಗಲಿಬಿಲಿಗಳುಂಟಾಗುತ್ತವೆ ನೋಡೋಣ.

ನಮ್ಮಲ್ಲಿ ಅನೇಕರು ತಿಳಿದಿರಬಹುದಾದಂತೆ ಪ್ರಾಕೃತವೆಂಬುದು "ಒಂದು" ಭಾಷೆಯಲ್ಲ - "ಪಲವುಂ ಕನ್ನಡಂಗಳ್" ಎಂಬಂತೆ ಪಲವುಂ ಪ್ರಾಕೃತಂಗಳ್ ಇವೆ - ಶೌರಸೇನೀ, ಪೈಶಾಚೀ, ಅಪಭ್ರಂಶ, ಮಾಗಧೀ, ಅರ್ಧಮಾಗಧೀ, ವೈದರ್ಭೀ (ಮಹಾರಾಷ್ಟ್ರೀ), ಜೈನ, ಪಾಲಿ ಹೀಗೆ.  ಇವೆಲ್ಲವೂ ತಮ್ಮದೇ ವಿಶಿಷ್ಟತೆಯನ್ನು ಹೊಂದಿರುವವಾದರೂ ಇವುಗಳ ನಡುವಿನ ಸಾಮ್ಯವೂ ಕಡೆಗಣಿಸಲಾಗದಂಥದ್ದು - ಉಚ್ಚಾರಣೆ, ವ್ಯಾಕರಣ, ಪದಸಂಪತ್ತು ಮೊದಲಾದುವುಗಳಲ್ಲಿ - ಈ ಸಾಮ್ಯ ತಮಿಳು-ಕನ್ನಡಗಳ ಸಾಮ್ಯಕ್ಕಿಂತ ಹತ್ತಿರದ್ದು, ಧಾರವಾಡ-ಮೈಸೂರು ಕನ್ನಡಗಳ ಸಾಮ್ಯಕ್ಕಿಂತ ದೂರದ್ದು.  ಆದ್ದರಿಂದ ಇವು ಸೋದರಭಾಷೆಗಳೋ, ಒಂದೇ ಭಾಷೆಯ ಪ್ರಭೇದಗಳೋ ಯಾರ ಊಹೆಗಾದರೂ ಬಿಟ್ಟದ್ದು.  ಜೊತೆಗೆ ಈ ಪ್ರಾಕೃತಗಳನ್ನಾಡುವ ಪ್ರದೇಶಗಳು ಒಂದರಿಂದೊಂದು ಬಹುದೂರದವೆಂಬುದನ್ನು ಗಮನದಲ್ಲಿಡಿ - ಶೌರಸೇನೀ ಉತ್ತರಪ್ರದೇಶದ್ದಾದರೆ, ವೈದರ್ಭೀ ಮಹಾರಾಷ್ಟ್ರದ್ದು.  ಎಲ್ಲವೂ ಒಂದಿನ್ನೊಂದರ ಪ್ರಭಾವವಿಲ್ಲದೇ 'ಪ್ರಾಕೃತಿಕ'ವಾಗಿಯೇ ಹುಟ್ಟಿದವೆನ್ನುವುದಾದರೆ, ಅವುಗಳ ನಡುವಣ ಅಚ್ಚರಿಗೊಳಿಸುವ ಸಾಮ್ಯವನ್ನು ಹೇಗೆ ವಿವರಿಸುತ್ತೀರಿ?  ಭಾಷೆಗಳ ನಡುವೆ ಕೊಡುಕೊಳ್ಳುವಿಕೆ, ಒಂದು ಪ್ರದೇಶದಿಂದ ಮತ್ತೊಂದಕ್ಕೆ ಜನರ ವಲಸೆ ಇದರಿಂದ ಭಾಷೆಗಳು ಪರಸ್ಪರ ಪ್ರಭಾವಿತವಾಗುವುದು ಸಾಮಾನ್ಯ, ಒಪ್ಪೋಣ.  ಆದರೆ ಅವು ಭಾಷೆಯೊಂದನ್ನು ಎಷ್ಟೇ ಅತಿಯಾಗಿ ಪ್ರಭಾವಿಸಿದರೂ ಭಾಷೆಯ ಹಂದರವನ್ನೇ ಬದಲಿಸಿಬಿಡುವುದಿಲ್ಲ, ಅಲ್ಲವೇ?  ಈಗ, ಕನ್ನಡಿಗನಿಗೆ ತಮಿಳು ಅರ್ಥವಾಗುವುದಿಲ್ಲ, ತಮಿಳನಿಗೆ ಕನ್ನಡ ಅರ್ಥವಾಗುವುದಿಲ್ಲ, ಎರಡೂ ಬೇರೆಬೇರೆಯ ಭಾಷೆಗಳು.  ಆದರೆ ನೀವು ಕಾಲದಲ್ಲಿ ಹಿಂದುಹಿಂದಕ್ಕೆ ಪಯಣಿಸಿದಂತೆ ತಮಿಳು ಕನ್ನಡಗಳ ಭೇದಗಳು ಕಡಿಮೆಯಾಗುವುದನ್ನು ಗಮನಿಸಬಹುದು.  ಆದ್ದರಿಂದಲೇ ತಮಿಳು ಕನ್ನಡಗಳೆರಡೂ ಒಂದೇ ಭಾಷಾಕುಟುಂಬಕ್ಕೆ ಸೇರಿದುವೆಂದೂ, ಮೂಲಮಾತೃಕೆಯಾದ ಒಂದು ದ್ರಾವಿಡಭಾಷೆಯಿಂದ ಕವಲೊಡೆದುವೆಂದೂ ಭಾಷಾಶಾಸ್ತ್ರಜ್ಞರು ಒಪ್ಪಿದ್ದಾರಲ್ಲವೇ?  ಇದೇ ಮಾತು ಈ ಪ್ರಾಕೃತಗಳಿಗೂ ಅನ್ವಯಿಸುತ್ತವೆ.  ಹಾಗಾದರೆ, ಈ ಎಲ್ಲ ಪ್ರಾಕೃತಗಳಿಗೂ ಮೂಲಮಾತೃಕೆಯೊಂದಿದೆಯೆಂದಮೇಲೆ, ಈ ಒಂದೊಂದು ಪ್ರಾಕೃತವೂ ಪ್ರಕೃತಿಯಿಂದ ಸ್ಥಳೀಯವಾಗಿಯೇ ಮಾಡಲ್ಪಟ್ಟದ್ದು ಎನ್ನುವ ವಾದ ಬಿದ್ದುಹೋಗುತ್ತದೆ ತಾನೆ?  ಹಾಗಿದ್ದರೆ ಅದಕ್ಕೆ 'ಪ್ರಾಕೃತ' (ಪ್ರಕೃತಿಯಿಂದ ಮಾಡಲ್ಪಟ್ಟದ್ದು) ಎಂದೇಕೆ ಕರೆಯುತ್ತಾರೆ?  ಈ ಪ್ರಶ್ನೆ ಏಕೆ ಬರುತ್ತಿದೆಯೆಂದರೆ, ಪ್ರಾಕೃತ = ಪ್ರಕೃತಿಯಿಂದ ಮಾಡಲ್ಪಟ್ಟದ್ದು ಎನ್ನುವ ವ್ಯಾಖ್ಯೆಯನ್ನು ನಾವು ಹಿಡಿದಿರುವುದರಿಂದ.  ಅದು ಈ ಸಂದರ್ಭಕ್ಕೆ ಹೊಂದುವಂಥದ್ದೇ ಅಲ್ಲ.  ಪ್ರಕೃತ = ಮಾಡಲ್ಪಟ್ಟ, ಇರುವ ಇತ್ಯಾದಿ; ಪ್ರಾಕೃತ = ಪ್ರಕೃತದಲ್ಲಿ ಬಳಕೆಯಲ್ಲಿರುವುದು - ಇದು ಸರಿಯಾದ ವ್ಯಾಖ್ಯಾನ.  ಸಂಸ್ಕೃತ-ಪ್ರಾಕೃತ ಈ ಜೋಡಿಯ ಸಂದರ್ಭದಲ್ಲಿ ಹೇಳುವುದಾದರೆ ('ಸಂಸ್ಕೃತ'ದ ವಿಷಯ ಆಮೇಲೆ ನೋಡೋಣ), ಪ್ರಕೃತದಲ್ಲಿ ಬಳಕೆಯಲ್ಲಿರುವ ಭಾಷಾಪ್ರಭೇದಗಳೇ ಪ್ರಾಕೃತಗಳು (ಎಂದರೆ ಇವುಗಳ ಮೂಲರೂಪ ಹೇಗೋ ಇತ್ತು, ಆದರೆ ಇವತ್ತು ಬಳಕೆಯಲ್ಲಿರುವುದು ಹೀಗೆ)

ಈ ವಿವಿಧ ಪ್ರಾಕೃತಗಳ ಪರಸ್ಪರ ಸಾಮ್ಯವಿರಲಿ, ಪ್ರಾಕೃತ-ಸಂಸ್ಕೃತದ ನಡುವಣ ಸಾಮ್ಯವನ್ನೊಮ್ಮೆ ಗಮನಿಸಿ.  ಉದಾಹರಣೆಗೆ ಈ ಕೆಳಗಿನ ಪದ್ಯವನ್ನೊಮ್ಮೆ ನೋಡೋಣ:

ಭವಭೂಇಜಲಹಿಣಿಗ್ಗಯಕವ್ವಾಮಯರಸಕಣಾ ಇವಾ ಫುರಂತಿ
ಜಸ್ಸ ವಿಸೇಸಾ ಅಜ್ಜವಿ ವಿಯಡೇಸು ಕಹಾಣಿವೇಸೇಸು||

ಇದು ವಾಕ್ಪತಿರಾಜನ "ಗಉಡವಹೋ" (ಸಂ. ಗೌಡವಧಾ) ಎಂಬ ಪ್ರಾಕೃತಕಾವ್ಯದಲ್ಲಿ ಬರುವ ಭವಭೂತಿಕವಿಯ ಪ್ರಶಂಸೆ.  "ಭವಭೂತಿಯೆಂಬ ಜಲಧಿಯನ್ನು ಕಡೆದಾಗ ಸ್ಫುರಿಸಿದ ಕಾವ್ಯಾಮೃತರಸದ ಕೆಲವು ಕಣಗಳು ನನ್ನ ಈ ಕಥಾನಿವೇಶದಲ್ಲಿ ಇಂದಿಗೂ ಪ್ರಕಟಗೊಳ್ಳುತ್ತವೆ" ಇದು ಇದರ ಸ್ಥೂಲಾರ್ಥ, ವಾಕ್ಪತಿರಾಜನು ಭವಭೂತಿಯನ್ನು ಸ್ಮರಿಸಿಕೊಳ್ಳುವ ರೀತಿ.  ನಮಗೆ ಈ ಭಾಷೆಯ ಪರಿಚಯವಿಲ್ಲದಿದ್ದರೂ, ಸಂಸ್ಕೃತದ ಅಲ್ಪಪರಿಚಯವಾದರೂ ಇದ್ದವರಿಗೆ ಈ ಪದ್ಯವನ್ನು ಓದಿದಾಗ ತೀರ ಅಪರಿಚಿತವೆಂದೇನು ಅನ್ನಿಸುವುದಿಲ್ಲ - ಪದಗಳು ವಿಚಿತ್ರವೆನಿಸಬಹುದು, ಆದರೆ ಅದರ ಲಯ, ಶೈಲಿ, ವ್ಯಾಕರಣ ಇವಾವುವೂ ಅಪರಿಚಿತವೆನಿಸುವುದಿಲ್ಲ.  ಈಗ ಮೇಲಿನ ಪದ್ಯದ ಸಂಸ್ಕೃತ ಅನುವಾದವನ್ನೇ ನೋಡಿಬಿಡೋಣ:

ಭವಭೂತಿಜಲಧಿನಿರ್ಗತಕಾವ್ಯಾಮೃತರಸಕಣಾ ಇವ ಸ್ಫುರಂತಿ
ಯಸ್ಯ ವಿಶೇಷಾ ಅದ್ಯಪಿ ವಿಕಟೇಷು ಕಥಾನಿವೇಶೇಷು||

ಎಷ್ಟು ವ್ಯತ್ಯಾಸವಿದೆ?  ಸಂಸ್ಕೃತದ ಭವಭೂತಿ ಇಲ್ಲಿ ಭವಭೂಇ ಆದ (ಕೆಲವು ಪ್ರಾಕೃತಗಳಲ್ಲಿ ಬವಬೂಯಿ), ಜಲಧಿಯು ಜಲಹಿ ಆಯಿತು (ಕೆಲವು ಪ್ರಾಕೃತಗಳಲ್ಲಿ ಜಳಹಿ), ನಿರ್ಗತವು ಣಿಗ್ಗಯವಾಯಿತು, ಅದ್ಯಪಿ > ಅಜ್ಜವಿ; ಕಥಾನಿವೇಶ > ಕಹಾಣಿವೇಸ - ಹೀಗೆ ರೂಪಗಳು ವ್ಯತ್ಯಾಸವಾದುವೇ ವಿನಾ ಉಳಿದದ್ದೆಲ್ಲವೂ ಹಾಗೇ ಇವೆಯಲ್ಲ.

ಹಾಗಿದ್ದರೆ ಸಂಸ್ಕೃತಪ್ರಾಕೃತಗಳೆರಡಕ್ಕೂ ಹೊಕ್ಕುಳಬಳ್ಳಿಯ ಸಂಬಂಧವಿದೆಯೆಂದಂತಾಯಿತಲ್ಲವೇ?  ಯಾವುದರಿಂದ ಯಾವುದು ಹುಟ್ಟಿತು?  ಪ್ರಾಕೃತ = ಪ್ರಕೃತಿಯಿಂದ ಮಾಡಲ್ಪಟ್ಟಿದ್ದು, ಸಂಸ್ಕೃತ = ಅದನ್ನು ಸಂಸ್ಕರಿಸಿದ್ದು ಎನ್ನುವ ವ್ಯಾಖ್ಯೆಯ ಆಧಾರದ ಮೇಲೆ, "ಪ್ರಾಕೃತವೇ ಮೊದಲು, ಅದರಿಂದ ಬಂದದ್ದು ಸಂಸ್ಕೃತ" ಎಂದು ಇದುವರೆಗೆ ವಾದಿಸುತ್ತಿದ್ದೆವು.  ಆದರೆ ಪ್ರಾಕೃತವೆಂಬುದರ ವ್ಯಾಖ್ಯೆ ಹಾಗಲ್ಲವೆಂಬುದನ್ನು ಮೇಲೇ ನೋಡಿದೆವಲ್ಲ - ಪ್ರಾಕೃತವೆಂದರೆ ಪ್ರಕೃತದಲ್ಲಿ ಬಳಕೆಯಲ್ಲಿರುವುದೆಂದಷ್ಟೇ ಅರ್ಥ, ಆದಿಯಿಂದಲೂ (Natural ಆಗಿ) ಹೀಗೇ ಇತ್ತಂದಲ್ಲ.  ಸರಿ, ಪ್ರಾಕೃತವೆಂಬುದರ ವ್ಯಾಖ್ಯೆ ಹೇಗಾದರೂ ಇರಲಿ, ಸಂಸ್ಕೃತವು ಪ್ರಾಕೃತದಿಂದಲೇ ಹುಟ್ಟಿಲ್ಲವೆಂದು ಹೇಗೆ ಹೇಳುತ್ತೀರಿ?  ಪ್ರಾಕೃತವೆಂದರೆ ಸದ್ಯ ಬಳಕೆಯಲ್ಲಿರುವುದು ಎಂದಿರಬಹುದು, ಆದರೆ ಸಂಸ್ಕೃತವೆಂದರೆ "ಸಂಸ್ಕರಿಸಲ್ಪಟ್ಟ ಭಾಷೆ" ಎಂಬ ಅರ್ಥವಂತೂ ಇದೆಯಲ್ಲ - ಪ್ರಾಕೃತವನ್ನು 'ಸಂಸ್ಕರಿಸಿ' ಪಡೆದ ಭಾಷೆಯೇ ಸಂಸ್ಕೃತ ಎಂದು ಇನ್ನೂ ವಾದಿಸಬಹುದು.  ಹೀಗೆ ವಾದ ಹೂಡುವಾಗ ಭಾಷೆಯ ಬೆಳವಣಿಗೆಯ ಸಹಜ ಹರಿವನ್ನು ಗಮನಸಲ್ಲಿಡಬೇಕಾಗುತ್ತದೆ.  ಈಗ ನೋಡಿ, ನಿರ್ಗತ-ಣಿಗ್ಗಯ ಇವುಗಳಲ್ಲಿ ಯಾವುದು ಕ್ಲಿಷ್ಟ, ಯಾವುದು ಸರಳ?  ಸ್ಫುರಂತಿ-ಪುರಂತಿ ಇವುಗಳ ನಡುವೆ?  ಹಾಗೆಯೇ ವಿಶೇಷಾ-ವಿಸೇಸಾ, ವಿಕಟ-ವಿಯಡ.  ಈ ಜೋಡಿಗಳಲ್ಲಿ ಎರಡನೆಯ ಪದವೇ ಉಚ್ಚಾರಣೆಗೆ ಸುಲಭವಲ್ಲವೇ?  ಸರಳವಾದ ಕನ್ನಡದ ಉದಾಹರಣೆಯನ್ನೇ ಕೊಡುವುದಾದರೆ, "ನಾನು ಹೋಗುತ್ತೇನೆ" ಎನ್ನುವುದು ಸರಳವೋ, "ನಾ ವೊಯ್ತಿನಿ" ಎನ್ನುವುದೋ?  "ನಾ ವೊಯ್ತಿನಿ" ಎನ್ನುವುದು ಸರಳ.  "ನಾನು ಹೋಗುತ್ತೇನೆ" ಎನ್ನುವುದನ್ನು ಉಚ್ಚಾರಣೆಯ ಸೌಲಭ್ಯಕ್ಕೆ ತಕ್ಕಂತೆ "ನಾ ವೊಯ್ತಿನಿ" ಎಂದು ಮಾಡಿಕೊಂಡಿತು ನಾಲಿಗೆ.  ಎಂದ ಮೇಲೆ ಮೊದಲಿದ್ದದ್ದು ಯಾವುದು?  ನಾನು ಹೋಗುತ್ತೇನೆ ಎಂಬುದೋ ನಾ ವೊಯ್ತಿನಿ ಎಂಬುದೋ?  ನಾ ವೊಯ್ತಿನಿ ಎಂಬುದೇ ಮೊದಲಿದ್ದದ್ದು, ಅದನ್ನು 'ಸಂಸ್ಕರಿಸಿ' ನಾನು ಹೋಗುತ್ತೇನೆ ಎಂಬ ಮಾತು ಕಟ್ಟಲ್ಪಟ್ಟಿತು ಎಂಬ ವಾದವು ಎಷ್ಟು ಸಹಜವೆನಿಸಬಹುದು?  ಸದ್ಯಕ್ಕೆ, ವಾದಕ್ಕಾಗಿ ಈ ವಾದವನ್ನೇ ಒಪ್ಪೋಣ, ನಾ ವೊಯ್ತಿನಿ ಎಂಬುದೇ ಮೊದಲಿದ್ದುದು, ನಾನು ಹೋಗುತ್ತೇನೆ ಎಂಬುದು ಅದರ 'ಸಂಸ್ಕರಿಸಿದ' ರೂಪ.  ಈ ವಾದದಿಂದ ಹೊರಡುವ ತೊಡಕುಗಳನ್ನು ನೋಡಿ.  "ನಾ ವೊಯ್ತಿನಿ" ಎನ್ನುವುದು ನಮ್ಮ ಮೈಸೂರು ಕಡೆ ನಿರ್ದಿಷ್ಟ ಸಮುದಾಯಗಳ ನಡುವಷ್ಟೇ ಇರುವ ಬಳಕೆ - ಇತರರು "ನಾ ಹೋಗ್ತೀನಿ", "ನಾ ಹೋಗ್ತೇನೆ" ಎಂದೂ ಹೇಳುತ್ತಾರೆ.  ಮಂಗಳೂರು/ಕುಂದಾಪುರದ ಕಡೆ "ನಾ ಹೋಗ್ತೆ/ಹೋಗ್ತ್ನೆ/ಹೋತ್ನೆ" ಎನ್ನುತ್ತಾರೆ (ಹಾಗೆಂದುಕೊಂಡಿದ್ದೇನೆ, ಆ ಕಡೆಯವರು ತಿದ್ದಬಹುದು), ಕೊಯಮತ್ತೂರಿನ ಕಡೆಯವರು "ನಾ ಹೋಪೆ" ಎನ್ನುತ್ತಾರೆ, ಧಾರವಾಡದ ಕಡೆ "ನಾ ಹೊಕ್ಕೀನಿ" ಎನ್ನುತ್ತಾರೆ (ಮತ್ತೆ, ತಪ್ಪಿದ್ದರೆ ತಿದ್ದಬಹುದು); ಕೆಲವು ಬ್ರಾಹ್ಮಣಪಂಗಡಗಳಲ್ಲಿ "ನಾ ಹೋಗ್ತೇನು" ಎಂದೂ ಹೇಳುತ್ತಿದ್ದರು (ಕೈಲಾಸಂ ಈ ರೂಪವನ್ನು ತಮ್ಮ ನಾಟಕಗಳಲ್ಲಿ ಬಳಸಿದ್ದಾರೆ ಕೂಡ) ಈಗ ವೊಯ್ತಿನಿ, ಹೋಗ್ತೀನಿ, ಹೋಗ್ತೇನೆ, ಹೋಗ್ತೇನು, ಹೋಗ್ತೆ, ಹೋಗ್ತ್ನೆ, ಹೋತ್ನೆ, ಹೋಪೆ, ಹೊಕ್ಕೀನಿ ಇವುಗಳಲ್ಲಿ ಯಾವುದು ಮೂಲರೂಪ, ಯಾವುದರಿಂದ ಯಾವುದು ಹುಟ್ಟಿತು, ಈ ಒಂದೊಂದು ರೂಪವೂ ಬಂದದ್ದಾದರೂ ಹೇಗೆ?  ಈ ಒಂದೊಂದು ರೂಪವೂ "ಹೋಗುತ್ತೇನೆ" ಎಂದೇ ಪರಿವರ್ತನೆಗೊಂಡದ್ದಾದರೂ ಹೇಗೆ?  ಹಾಗೆ ಪರಿವರ್ತಿಸಿದ ನಿರ್ದಿಷ್ಟ ವ್ಯಾಕರಣಸೂತ್ರವಾವುದು? (ಹೋಗುತ್ತೇನೆ ಎಂಬುದರಿಂದ ಇವು ಹುಟ್ಟಿದುವು ಎನ್ನುವುದಕ್ಕಾದರೆ ಒಂದೇ ವಿವರಣೆ - ನಾಲಿಗೆಯ ಸೌಲಭ್ಯ), ಆದರೆ ಅವುಗಳಿಂದಲೇ ಇದು ಹುಟ್ಟಿತು ಎನ್ನುವುದಕ್ಕಾದರೆ ನಾಲಿಗೆಯ ಸೌಲಭ್ಯ ಎಂಬ ವಿವರಣೆ ಸಲ್ಲುವುದಿಲ್ಲ, ಹೋಗುತ್ತೇನೆ ಎಂಬುದು ಇವೆಲ್ಲಕ್ಕಿಂತ ಕ್ಲಿಷ್ಟರೂಪ, ಮತ್ತು ನಾಲಿಗೆ ಯಾವಾಗಲೂ ಕ್ಲಿಷ್ಟತೆಯಿಂದ ಸರಳತೆಗೆ ಜಾರುವುದೇ ಹೊರತು, ವಿರುದ್ಧದಿಕ್ಕಿನಲ್ಲಲ್ಲ.  ಅಲ್ಲದೇ ವೊಯ್ತಿನಿ, ಹೋಗ್ತೆ, ಹೋಗ್ತ್ನೆ ಮುಂತಾದುವುಗಳಿಂದ ಹೋಗುತ್ತೇನೆ ಎನ್ನುವ ರೂಪ ಬರಬೇಕಾದರೆ, ಅಲ್ಲಿ ಮುಖ್ಯವಾಗುವುದು ನಾಲಿಗೆಯ ಸೌಲಭ್ಯವಲ್ಲ, ವ್ಯಾಕರಣಬದ್ಧತೆ (ಗ್ರಾಂಥಿಕಭಾಷೆಯಲ್ಲಿ ವ್ಯಾಕರಣವೇ ಮುಖ್ಯವಷ್ಟೇ?).  ಹಾಗಿದ್ದರೆ ಈ ಒಂದೊಂದು ರೂಪದಿಂದಲೂ "ಹೋಗುತ್ತೇನೆ" ಎನ್ನುವ ರೂಪವೇ ಸಿದ್ಧಿಸಬೇಕಾದರೆ ಅಲ್ಲಿ ಬಳಸಿದ ವ್ಯಾಕರಣ ಯಾವುದು?  "ಹೋಗುತ್ತೇನೆ" ಎನ್ನುವುದಕ್ಕಾದರೆ ವ್ಯಾಕರಣದ ವಿವರಣೆಯಿದೆ - ಹೋಗು ಎನ್ನುವ ಧಾತುವಿಗೆ "ತ್ತೇನೆ" ಎನ್ನುವ ಕಾಲಸೂಚಕಪ್ರತ್ಯಯ ಸೇರಿ ಹೋಗುತ್ತೇನೆ ಎಂದಾಯಿತು.  ಹೀಗೇ ಈ ಬಳಕೆಯ ರೂಪಗಳನ್ನು ವಿವರಿಸಲಿಕ್ಕಾಗುತ್ತದೆಯೇ?  ಇದರಿಂದ ಏನು ಸಾಬೀತಾಯಿತು?  ಹೋಗುತ್ತೇನೆ ಎಂಬುದೇ ಮೂಲರೂಪ, ಅದರಿಂದ ಹುಟ್ಟಿದ್ದು ವೊಯ್ತಿನಿ, ಹೋಗ್ತೆ, ಹೋಗ್ತ್ನೆ ಇತ್ಯಾದಿ ರೂಪಗಳು, ಅಲ್ಲವೇ? ಒಂದು ಮೂಲದಿಂದ ಹಲವು ರೂಪಗಳು ಹೊಮ್ಮುವುದು ಸಹಜ, ಆದರೆ ಒಂದೇ ರೂಪಕ್ಕೆ ಹಲವು ಮೂಲಗಳಿರಲಾರವಷ್ಟೇ?  ಜೊತೆಗೆ ನೋಡಿ, ಒಯ್ತಿನಿ ಎನ್ನುವುದು ಹೋಗುತ್ತೇನೆ ಎಂಬುದರ ಬಳಕೆಯ ರೂಪವೂ ಆಗಬಹುದು, ಒಯ್ಯುತ್ತೇನೆ ಎನ್ನುವುದರ ಬಳಕೆಯ ರೂಪವೂ ಆಗಬಹುದು. ಹೀಗಾಗಿ ಒಯ್ತೀನಿ ಎನ್ನುವುದರ ವ್ಯುತ್ಪತ್ತಿಯನ್ನು ಅದೇ ರೂಪದಲ್ಲಿ ವಿವರಿಸುವುದು ಸಾಧ್ಯವೇ ಇಲ್ಲ; ಹೋಗುತ್ತೇನೆ ಮತ್ತು ಒಯ್ಯುತ್ತೇನೆ ಎಂಬ ರೂಪಗಳಲ್ಲೇ ವ್ಯುತ್ಪತ್ತಿಯನ್ನು ವಿವರಿಸಬೇಕು. ಎಂದ ಮೇಲೆ ಯಾವುದು ಮೂಲ?

ಇದೇ ತರ್ಕವನ್ನು ಜಲಧಿ-ಜಲಹಿ/ಜಳಹಿ, ನಿರ್ಗತ-ಣಿಗ್ಗಯ, ಸ್ಫುರಂತಿ-ಪುರಂತಿ, ವಿಶೇಷ-ವಿಸೇಸ, ವಿಕಟ-ವಿಯಡ ಇವುಗಳಿಗೆ ಅನ್ವಯಿಸಿ ನೋಡಿ?  ಎರಡನೆಯ ಪದಗಳಿಂದಲೇ ಮೊದಲಿನವು ಹುಟ್ಟಿದುವೆಂದರೆ, ಅವುಗಳ ವ್ಯುತ್ಪತ್ತಿವಿವರಣೆ, ಬೇರೆಬೇರೆ ಹಲವು ರೂಪಗಳಿಂದ ಒಂದೇ ಸಂಸ್ಕೃತಪದ ಹುಟ್ಟಿದ್ದಾದರೂ ಹೇಗೆ ಮೊದಲಾದ ವಿವರಣೆಗಳು ಬೇಕಲ್ಲವೇ? ಜೋಡಿಯ ಮೊದಲ ಪದಗಳಿಗೆ ವ್ಯುತ್ಪತ್ತಿವಿವರಣೆಯಿದೆ.  ಎರಡನೆಯ ಪದಗಳಿಗೆ ಅಂತಹ ವಿವರಣೆಯಿಲ್ಲ.  ಅವು ಮೊದಲ ಪದಗಳಿಂದ ನಾಲಿಗೆಯ ಸೌಲಭ್ಯಕ್ಕನುಗುಣವಾಗಿ ಹುಟ್ಟಿದವು ಎಂಬುದು ಸ್ಪಷ್ಟವಾಯಿತಲ್ಲವೇ?  ತತ್ಸಮದಿಂದ ಹುಟ್ಟಿದ್ದು ತದ್ಭವವೇ ಹೊರತು ತದ್ಭವದಿಂದಲೇ ತತ್ಸಮವು ಹುಟ್ಟುವುದಿಲ್ಲವಷ್ಟೇ?

ಹಾಗಿದ್ದರೆ ಈಗ ಬಹುಮುಖ್ಯವಾದ ಪ್ರಶ್ನೆಯೇಳುತ್ತದೆ - 'ಸಂಸ್ಕೃತ' ಎಂಬುದು ಸಂಸ್ಕರಿಸಿದ ಭಾಷೆ ತಾನೆ?  "ಪ್ರಾಕೃತದಿಂದ ಸಂಸ್ಕರಿಸಿದ ಭಾಷೆ ಸಂಸ್ಕೃತ" ಎನ್ನುವುದು ಸ್ಪಷ್ಟವಾಗಿಯೇ ಇದೆಯಲ್ಲ.  ಇದಕ್ಕೇನು ಸಮಾಧಾನ?  ಸಮಾಧಾನವಿದೆ.  ಪ್ರಾಕೃತ ಎಂದರೆ ಪ್ರಕೃತಿಜನ್ಯವಾದ ಭಾಷೆಯಲ್ಲ, ಪ್ರಕೃತ ಬಳಕೆಯಲ್ಲಿರುವ ಭಾಷೆ ಎಂಬುದನ್ನು ಮೇಲೆ ನೋಡಿದೆವು.  ಪ್ರಾಕೃತದಿಂದ 'ಸಂಸ್ಕೃತ'ವು ಹುಟ್ಟಲು ಸಾಧ್ಯವಿಲ್ಲ ಎಂಬುದನ್ನೂ ಮೇಲೆಯೇ ನೋಡಿದೆವು.  ಹಾಗಿದ್ದರೆ ಸಂಸ್ಕೃತವು ಹುಟ್ಟಿದ್ದೆಲ್ಲಿಂದ?  ಅದು 'ಸಂಸ್ಕರಿಸಿದ ಭಾಷೆ' ಅಲ್ಲವೇ?  ಖಂಡಿತಾ ಹೌದು, ಆದರೆ ಪ್ರಾಕೃತದಿಂದ 'ಸಂಸ್ಕರಿಸಿ' ಪಡೆದದ್ದಲ್ಲ.  ಸಂಸ್ಕೃತದ ಮೂಲಮಾತೃಕೆ ವೇದಭಾಷೆ (ಗುರುತಿಸುವ ಸೌಲಭ್ಯಕ್ಕಾಗಿ ವೇದಭಾಷೆಯನ್ನು ವೈದಿಕಸಂಸ್ಕೃತವೆಂದೂ, ಅದಲ್ಲದ, ಪಾಣಿನಿಪ್ರಣೀತವಾದ ವ್ಯಾವಹಾರಿಕಸಂಸ್ಕೃತವನ್ನು ಲೌಕಿಕ/ಪಾಣಿನೀಯಸಂಸ್ಕೃತವೆಂದೂ ಕರೆಯುತ್ತೇವೆ, ಆದರೆ ವೇದಭಾಷೆಗೆ ಮೂಲತಃ 'ಸಂಸ್ಕೃತ'ವೆಂಬ ಹೆಸರಿದ್ದಿಲ್ಲ, 'ಸಂಸ್ಕೃತ'ವೆಂಬುದೇನಿದ್ದರೂ ವೇದಭಾಷೆಯನ್ನು ಪರಿಷ್ಕರಿಸಿ, 'ಸಂಸ್ಕರಿಸಿ' ಪಡೆದ ಪಾಣಿನೀಯ ಸಂಸ್ಕೃತ).  ಈ ವೇದಭಾಷೆ ಜನಬಳಕೆಗೆ ಹತ್ತಿರವಾದದ್ದು.  ಮೇಲೆ ಹಲವು ಪ್ರಾಕೃತಗಳನ್ನು ವಿವರಿಸುತ್ತಾ, ಅವಕ್ಕೆ ಮೂಲಮಾತೃಕೆಯೊಂದಿರಬೇಕೆಂದಿದ್ದೆನಲ್ಲವೇ?  ಆ ಮೂಲಮಾತೃಕೆಯೇ ವೇದಭಾಷೆ.  ವೇದಭಾಷೆಯೇ ಬಳಕೆಯಲ್ಲಿ ಸವೆಸವೆದು ವಿವಿಧ ಸ್ಥಳೀಯ ಪ್ರಾಕೃತಗಳಾಗಿ ರೂಪುಗೊಂಡದ್ದು.  ಇದು ಯಾವಾಗ ಸವೆಯಲು ಶುರುವಾಯಿತು, ಯಾವಯಾವಾಗ ಎಲ್ಲೆಲ್ಲಿ ಎಷ್ಟೆಷ್ಟು ಸವೆಯಿತು ಎಂಬುದನ್ನು ಹೇಳಬರುವುದಿಲ್ಲವಷ್ಟೇ?  ಜೊತೆಗೆ ಈ ಪ್ರಾಕೃತಗಳ ಮೂಲಮಾತೃಕೆಯಾದ ವೇದಭಾಷೆಯೇ ಜನಬಳಕೆಗೆ ಹತ್ತಿರವಿದ್ದುದರಿಂದ ಅದರಲ್ಲೂ ಕ್ರಮೇಣ ಸಹಜವಾಗಿಯೇ ಬಳಕೆಯಿಂದುಂಟಾಗುವ ಶೈಥಿಲ್ಯಗಳೂ, 'ಅಪ'ರೂಪಗಳೂ, ನಿರ್ದಿಷ್ಟ ನಿಯಮಗಳಿಗೆ ಕಟ್ಟುಬೀಳದ ಹೊಸಹೊಸ ಪ್ರಯೋಗಗಳೂ ಕಾಲಕ್ರಮದಲ್ಲಿ ಹೇರಳವಾಗಿ ಸೇರಿ, ವೇದಭಾಷೆಯಿಂದಾಚೆಗೂ ಹೊರವಾಗಿ ಬೆಳೆದ ಅಗಾಧವಾದ ವ್ಯಾವಹಾರಿಕಭಾಷೆಯೊಂದು ಪಾಣಿನಿಯ ಕಾಲಕ್ಕಾಗಲೇ ಅಸ್ತಿತ್ವದಲ್ಲಿತ್ತು; ಜೊತೆಗೆ ಇದನ್ನು ವಿವರಿಸುವ ವಿವಿಧ ವ್ಯಾಕರಣಗಳೂ - ಈ ಇವೆಲ್ಲವನ್ನೂ ಸೂತ್ರೀಕರಿಸಿ ನಿಯಮಗಳ ಮೂಲಕ ವಿವರಿಸಿದ್ದು, ನಿಯಮಕ್ಕೆ ಅಳವಡಿಸುವಲ್ಲಿನ ತೊಡಕುಗಳನ್ನು ನಿವಾರಿಸಿ 'ಸಂಸ್ಕರಿಸಿ'ದ್ದು, ತನ್ನ ಕಾಲದಲ್ಲಿ ಬಳಕೆಯಲ್ಲಿದ್ದ ಭಾಷೆಯ ಹಲವು ನಿಯಮಬದ್ಧವಲ್ಲದ ರೂಪಗಳಿಗೆ 'ಸರಿ'ಯಾದ ರೂಪಗಳನ್ನು ಹೇಳಿದ್ದು ಪಾಣಿನಿ.  ಪಾಣಿನಿಪ್ರಣೀತವಾದ, ಪರಿಶೋಧಿಸಲ್ಪಟ್ಟ ಈ ಭಾಷೆಯೇ 'ಸಂಸ್ಕೃತ'ವೆಂದು ಬಳಕೆಗೆ ಬಂತು (ಪಾಣಿನಿಗೂ ಮೊದಲೇ ಹಲವರು ವೈಯಾಕರಣರು ವ್ಯಾಕರಣವನ್ನು ರಚಿಸಿದ್ದಾರಾದರೂ ಪಾಣಿನೀಯವ್ಯಾಕರಣವು ಗಟ್ಟಿಯಾಗಿ ನೆಲೆನಿಂತಿತು)

ಈ ಚರ್ಚೆಯಿಂದ ಸ್ಪಷ್ಟವಾಗಿ ತಿಳಿದುಬರುವ ಅಂಶವೆಂದರೆ, ಹಲವು ಪ್ರಭೇದಗಳನ್ನು ಹೊಂದಿದ ಪ್ರಾಕೃತವೂ, ನಾವಿವತ್ತು ಸಂಸ್ಕೃತವೆಂದು ಕರೆಯುವ ಪಾಣಿನೀಯಸಂಸ್ಕೃತವೂ ವೇದಭಾಷೆಯೆಂಬ ಒಂದೇ ಮೂಲಮಾತೃಕೆಯಿಂದ ಹುಟ್ಟಿದ್ದು.  ಪ್ರಾಕೃತಗಳು ವೇದಭಾಷೆಯ ಆಡುನುಡಿಗಳಾದರೆ, 'ಸಂಸ್ಕೃತ'ವು ವೇದಭಾಷೆಯ ಪರಿಷ್ಕೃತರೂಪ.

ಮುಂದೆ ಈ ಪ್ರಾಕೃತಗಳೇ ಹಲವು ಬೇರೆಬೇರೆ ಭಾಷೆಗಳ ಪ್ರಭಾವಕ್ಕೊಳಗಾಗಿ ಹಲವಾರು ಭಾಷೆಗಳು ಹುಟ್ಟಿಕೊಂಡುವೆಂಬುದು ಬೇರೆಯೇ ವಿಷಯ; ಸದ್ಯಕ್ಕೆ ಇಷ್ಟು ಸಾಕೆನಿಸುತ್ತದೆ.

Tuesday, May 26, 2020

ಪಂಡಿತಸಮಾರಾಧನೆಗೆ ಕೃತಜ್ಞತಾಸಮರ್ಪಣೆ

ಈ ಲೇಖನವನ್ನು ಬ್ಲಾಗಿನಲ್ಲಿ ಹಾಕುವ ಉದ್ದೇಶವಿರಲಿಲ್ಲ, ಏಕೆಂದರೆ ಇದು ಫೇಸ್ಬುಕ್ಕಿನಲ್ಲಿ ಒಂದೂವರೆ ವರ್ಷದ ಹಿಂದೆ (09/10/2018) 'ದಂಪತಿ' ಶಬ್ದದ ವಿಚಾರದಲ್ಲಿ ನಡೆದ ಚರ್ಚೆಯೊಂದಕ್ಕೆ ಪ್ರತಿಕ್ರಿಯಾರೂಪದ ಲೇಖನ.  ಈ ವಿಷಯಕ್ಕೆ ಸಂಬಂಧಿಸಿದ ನನ್ನ ಮೂಲಲೇಖನವನ್ನು ಹಿಂದೊಮ್ಮೆ ಬ್ಲಾಗಿನಲ್ಲೇ ಪ್ರಕಟಿಸಿದ್ದೆ (ಆಸಕ್ತರು ಅದನ್ನು ಇಲ್ಲಿ ಓದಬಹುದು). ಅದೂ ಅಂಕಣಕಾರರಾದ ಶ್ರೀ ಶ್ರೀವತ್ಸಜೋಷಿಯವರ ಫೇಸ್ಬುಕ್ ಲೇಖನಕ್ಕೆ ಪ್ರತಿಕ್ರಿಯೆಯೇ, ಆದರೆ ಅದು ಪೂರ್ಣಪ್ರಮಾಣದ ಲೇಖನ.  ಆಮೇಲೆ ಫೇಸ್ಬುಕ್ಕಿನಲ್ಲಿ ಇದರ ಬಗ್ಗೆ ಸಾಕಷ್ಟು ವಾದವಿವಾದಗಳು ನಡೆದು ಅದಕ್ಕೆ ಶ್ರೀ ಜೋಶಿಯವರಿಂದ ಅತ್ಯುಗ್ರರೂಪದ ಖಂಡನೆಯೊದಗಿತ್ತು.  ಆ ಖಂಡನೆಗೆ ಪ್ರತಿಕ್ರಿಯೆಯಾಗಿ ಬರೆದದ್ದು ಈ ಕೆಳಕಂಡ ಲೇಖನ.  ವಿಷಯವೇನೋ ವಿದ್ವದ್ವಿಷಯವೇ ಆಗಿದ್ದರೂ, ಖಂಡನೆಯೊಂದಕ್ಕೆ ಬರೆದ ಪ್ರತಿಕ್ರಿಯೆ ಇದಾದ್ದರಿಂದ ವಿಷಯಮಂಡನೆಗಿಂತ ಘಾತುಕವಾದ ಖಂಡನವಾದಗಳೇ ಇಲ್ಲಿ ಹೆಚ್ಚಿರುವುದು ಸಹಜವೇ - ಅದೇ ಕಾರಣಕ್ಕೇ ಬ್ಲಾಗಿನಲ್ಲಿ ಬರುವ ಯೋಗ್ಯತೆ ಈ ಲೇಖನಕ್ಕಿಲ್ಲವೆಂದು ತರ್ಕಿಸಿ ಫೇಸ್ಬುಕ್ಕಿನಲ್ಲಷ್ಟೇ ಈ ಪ್ರತಿಕ್ರಿಯೆಯನ್ನು ಹಾಕಿ ಸುಮ್ಮನಾಗಿದ್ದೆ.  ಆದರೆ ಅದೇನೋ ಕಾರಣದಿಂದ ಫೇಸ್ಬುಕ್ಕಿನಿಂದ ಈ ಲೇಖನ ಮಾಯವಾಗಿತ್ತು.  ಶ್ರೀ ಜೋಶಿಯವರ ಖಂಡನಲೇಖನಕ್ಕೆ ಅದರಡಿಯಲ್ಲೇ ಹಾಕಿದ್ದ ಪ್ರತ್ಯುತ್ತರಗಳನ್ನು ಸೇರಿಸಿ ತಯಾರಿಸಿದ ಲೇಖನವೇ ಇದಾಗಿದ್ದರೂ, ಅದನ್ನು ಫೇಸ್ಬುಕ್ಕಿನ ನನ್ನ ಗೋಡೆಯ ಮೇಲೆ ಪ್ರಕಟಿಸಿದನಂತರ ಅದಕ್ಕೆ ಅನೇಕ ತಿದ್ದುಪಡಿಗಳನ್ನು ಮಾಡಿ ಲೇಖನವನ್ನು ಬಹುವಾಗಿ ಬೆಳೆಸಿದ್ದೆನಾದ್ದರಿಂದ, ಲೇಖನವು ಮಾಯವಾದಾಗ ಅದೆಲ್ಲವೂ ಮಾಯವಾಯ್ತು.  ಅದೃಷ್ಟವಶಾತ್ ಈ ಲೇಖನವು ಫೇಸ್ಬುಕ್ಕಿನ ನನ್ನ ಗೋಡೆಯ ಮೇಲೆ ಮರಳಿ ಕಾಣಿಸಿಕೊಂಡದ್ದನ್ನು ಇವತ್ತಷ್ಟೇ ಗಮನಿಸಿದೆ.  ಮತ್ತೆ ಕಳೆದುಹೋಗಬಾರದೆಂದು ಈಗ ಈ ಲೇಖನವನ್ನು ಬ್ಲಾಗಿನಲ್ಲೂ ಪ್ರಕಟಿಸುತ್ತಿದ್ದೇನಷ್ಟೇ.  ಇದರ ಫೇಸ್ಬುಕ್ ಅವತರಣಿಕೆ ಇಲ್ಲಿದೆ:

ಈಗ ಲೇಖನಕ್ಕೆ:
===========
ಮಾನ್ಯ Srivathsa Joshiಯವರೇ, ತಾವು ದಿನಾಂಕ ೮ ಅಕ್ಟೋಬರ್ ೨೦೧೮ರಂದು "‘ವಚನ’ಭ್ರಷ್ಟ ‘ವಿದ್ವಾಂಸ’ರಿಗೆ ಸಾಮೂಹಿಕ ಸಮಾರಾಧನೆ" ಎಂಬ ಶೀರ್ಷಿಕೆಯಡಿಯಲ್ಲಿ ಹಲವು ಪಂಡಿತರೊಡನೆ ನನ್ನನ್ನೂ ಕೂರಿಸಿ ಸಮಾರಾಧನೆ ಮಾಡಿದಿರಿ (https://www.facebook.com/srivathsa.joshi/posts/10156050311074403). 'ವಿದ್ವಾಂಸ'ರ ಸಾಲಿನಲ್ಲಿ ಕೂರಲು ನಾನು ಸರ್ವಥಾ ಅನರ್ಹನಾದರೂ, ನಿರ್ದಿಷ್ಟವಾಗಿ ನನ್ನನ್ನೇ ಟ್ಯಾಗ್ ಮಾಡಿ, ನನ್ನನ್ನು ಆ ಸಾಲಿನಲ್ಲಿ ಕೂರಿಸಿದ ತಮ್ಮ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ. ಅದಕ್ಕೆ ಕೃತಜ್ಞತಾಪೂರ್ವಕವಾದ ಧನ್ಯವಾದಗಳನ್ನು ಇದೋ ಸ್ವೀಕರಿಸಿ.

ಮೊದಲಿಗೆ, ನಮಸ್ಕಾರಗಳು. ಪರಸ್ಪರ ಸಂಭಾಷಣೆಯಲ್ಲಿ ಸುಸಂಸ್ಕೃತಿಯ ಮಿತಿಯಲ್ಲಿ ನಾನು ತಿರುಗಿ ಕೊಡಬಹುದಾದದ್ದೆಂದರೆ ಇದೊಂದೇ ನೋಡಿ - ಪ್ರತಿನಮಸ್ಕಾರ. ಉಳಿದದ್ದನ್ನು ತಿರುಗಿ ಕೊಡಲಾರೆ - ಏಕೆಂದರೆ ಸಂಸ್ಕೃತಿಯ ಮಿತಿಮೀರಿದ ದನಿ ಮನುಷ್ಯರ ದನಿಯಂತಿರುವುದಿಲ್ಲವೆಂಬುದನ್ನು ನಾನು ನೋಡಿ, ಕೇಳಿ ಬಲ್ಲೆ - ಅಷ್ಟು ಮಟ್ಟಿಗೆ ನಾನು ಸೋತೆ, ಗೆಲುವು ನಿಮ್ಮದೇ 🙏. ಆದ್ದರಿಂದ ವಿಷಯ-ವಸ್ತುವಿನ ಚರ್ಚೆಗೆ ಹೊರತಾದ ನಿಮ್ಮ ಮಾತುಗಳೊಂದನ್ನೂ ನಾನು ಸ್ವೀಕರಿಸಿಲ್ಲ. ಸ್ವೀಕರಿಸದ ವಸ್ತು ತಮಗೆ ಮರಳುವುದು ಸಹಜವೇ, ಸ್ವೀಕರಿಸಿ.

ಅದಾಯಿತಲ್ಲ, ನಿಮ್ಮ ಫೋಟೋ ಆಲ್ಬಮಿಗೆ "ವಸ್ತುನಿಷ್ಠವಾಗಿ" ಉತ್ತರಿಸುವುದಕ್ಕೆ ಮೊದಲು ತಮಗೂ ಮತ್ತು ತಮ್ಮ ಜೋರುಬಾಯಿನ ಗತ್ತಿಗೆ ಬೆಚ್ಚಿ ಮೆಚ್ಚಿ (ಹಿನ್ನೆಲೆಯನ್ನು ಮಾತ್ರ ಅರಿಯುವ ಗೋಜಿಗೆ ಹೋಗದೇ) ಆನಂದತುಂದಿಲರಾಗಿರುವ ತಮ್ಮ ಹಲವು ಹಿಂಬಾಲಕರಿಗೂ ಕೆಲವು ಸ್ಪಷ್ಟನೆ/ಪ್ರಶ್ನೆ (ಅದು ಪ್ರಯೋಜನವಿಲ್ಲ, ಆದರೂ ದಾಖಲೆಯಲ್ಲಿರಲಿ ಎಂಬ ಉದ್ದೇಶವಷ್ಟೇ). ಮೊದಲನೆಯದಾಗಿ, ತಾವು ಹೀಗೆ ವಾಚಾಮಗೋಚರವಾಗಿ ಬೈದಾಡಿ ಬರೆಯುವುದೇ ತಕ್ಕ ಪ್ರತಿಕ್ರಿಯೆಯೆನಿಸುವಷ್ಟು ನಿಮ್ಮನ್ನು ಪ್ರಚೋದಿಸಿದ ಒಂದೇ ಒಂದು ವಾಕ್ಯವನ್ನಾದರೂ ನನ್ನ ಕಾಮೆಂಟಿನಲ್ಲಾಗಲೀ, ನಿಮ್ಮ ಅಂಚೆಗೆ ಪ್ರತಿಕ್ರಿಯೆಯಾಗಿ ಬರೆದ ನನ್ನ ಲೇಖನದಿಂದಲಾಗಲೀ ಎತ್ತಿ ತೋರಿಸುವಿರಾ? ವ್ಯಾಖ್ಯಾನ ಬೇಡ, ನೀವೀಗ ತೋರಿಸಿದಿರಲ್ಲ 'ಡಿಜಿಡಿಜೈನ್' ಫೋಟೋ ಆಲ್ಬಮ್ ಅಂಥದ್ದಲ್ಲದಿದ್ದರೂ ಒಂದೋ ಎರಡೋ ಫೋಟೋಗಳನ್ನಾದರೂ ತೋರಿಸಿ. ಮೊನ್ನೆ ನನ್ನ ವಾಲ್ ಮೇಲೆ ನೀವು ಇದೇ ಧಾಟಿಯಲ್ಲಿ ಮಾತಾಡಿದಾಗಲೂ ನಾನು ತಮ್ಮನ್ನು ಸಮಾಧಾನದಿಂದಲೇ ಇದೇ ಪ್ರಶ್ನೆ ಕೇಳಿದೆ - ನನ್ನ ಲೇಖನದಲ್ಲಿ ದುರ್ವಾದವನ್ನಾಗಲೀ, ನೀವೀಗ ಮಾಡಿದಂತೆ ವೈಯಕ್ತಿಕ ನಿಂದನೆಯನ್ನಾಗಲೀ ಕಂಡಿರಾ? ಕಂಡಿದ್ದರೆ ಹೇಳಿ, ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ ಎಂದು ನೆನ್ನೆಯೇ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ - ನಿಮ್ಮ ಈ ಅಸಹ್ಯ ಪ್ರತಿಕ್ರಿಯೆಗೆ ನನ್ನ ಯಾವ ಮಾತು ಕಾರಣವಾಗಿದ್ದೀತು? ಸರಿ-ತಪ್ಪನ್ನೇ ಕುರಿತಾದ ನಿಮ್ಮ ಲೇಖನದಲ್ಲಿ ಸರಿತಪ್ಪುಗಳ ಚರ್ಚೆಯನ್ನೆತ್ತಿದ್ದೇ ಕಾರಣವೇ? ನಾನು ಹೇಳಿದ್ದೆಲ್ಲಾ ಏನು? "ದಂಪತಿ ಏಕವಚನವೆಂದು ಹೇಳುತ್ತಿದ್ದೀರಿ, ಆದರೆ ಅದು ಏಕವಚನವಲ್ಲ, ಬಹುವಚನ - ತಪ್ಪು ಮಾಹಿತಿ ಹರಡದಿರಲಿ" ಎಂದೆನಷ್ಟೇ? ಇದು ಕೋಲುಮಾಸ್ತರಿಕೆಯೋ, "ದಂಪತಿ ಏಕವಚನ; ಬಹುವಚನ ಬಳಸಬೇಡಿ" ಎಂದು ತಾಕೀತು ಮಾಡುವುದು ಕೋಲುಮಾಸ್ತರಿಕೆಯೋ? ಅದೂ ತಮ್ಮ ಲೇಖನ ಸಾರ್ವಜನಿಕವಾಗಿದ್ದುದರಿಂದ, ನನ್ನ ಕಣ್ಣಿಗೂ ಬಿದ್ದುದರಿಂದ ಭಾಷೆಯ ಬಗೆಗಿನ ಕಳಕಳಿಯಿಂದಲೇ ಇದನ್ನಾದರೂ ಹೇಳಬೇಕಾಯಿತೇ ವಿನಾ, ನೀವು ಅದನ್ನು ನಿಮ್ಮ ಹಿಂಬಾಲಕರ ಗುಂಪಿನಲ್ಲಿ ಹಂಚಿಕೊಂಡಿದ್ದರೆ ನಾವು ಇಣುಕಿ ನೋಡಲಾದರೂ ಬರುತ್ತಿದ್ದೆವೇ? ಇಷ್ಟಕ್ಕೂ ನಾನೇನು ನನ್ನ ಮಾತನ್ನು ಗಾಳಿಯಲ್ಲಿ ಹೇಳಲಿಲ್ಲವಲ್ಲ ಸ್ವಾಮಿ, ಆಧಾರಗಳ ಮೂಲಕ ನಿರೂಪಿಸಿದ್ದೇನಷ್ಟೇ? ಆ ನನ್ನ ಇಡೀ ಬರಹದಲ್ಲಿ ನೀವೀಗ ತೋರುತ್ತಿರುವುದರ ಒಂದಂಶವಾದರೂ ದುರ್ವರ್ತನೆಯನ್ನು ಕಂಡಿರಾ? ಕಂಡಿದ್ದರೆ ತೋರಿಸಿ - ನೀವೇ ಬೇಕಿಲ್ಲ, ಯಾರು ತೋರಿಸಿದರೂ ಸರಿ, ದಯವಿಟ್ಟು ತೋರಿಸಿ. ಮತ್ತೂ ನನ್ನ ಲೇಖನ ಹೇಗೆ ಆರಂಭವಾಗಿದೆ ನೋಡಿ (ಚಿತ್ರ ೧ ನೋಡಿ)
 

ಈಗಲೂ ಪೂರ್ಣಲೇಖನ ಓದಿ ಅಭಿಪ್ರಾಯವನ್ನು ರೂಪಿಸಿಕೊಳ್ಳುವ ಆಸಕ್ತಿಯುಳ್ಳವರು ಅದನ್ನಿಲ್ಲಿ ನೋಡಬಹುದು (ಹಿನ್ನೆಲೆಯನ್ನರಿಯದೆಯೇ ಬಡಬಡಿಸುವವರ ವಿಷಯ ಬೇರೆ):

https://nannabaraha.blogspot.com/2018/10/blog-post.html

ತಾವಾಗಲೀ, ವಿಷಯದ ಹಿನ್ನೆಲೆಯರಿಯದೇ ಕೇವಲ ತಮ್ಮ ದೊಣ್ಣೆವರಸೆಯನ್ನು ನೋಡಿಯೇ ಉಘೇ ಎನ್ನುತ್ತಿರುವ ಇತರರಾಗಲೀ ಈ ಲೇಖನವನ್ನೊಮ್ಮೆ ನೋಡಿ, ನಿಮ್ಮ ದೊಣ್ಣೆ ಬೀಸಾಟಕ್ಕೆ ಏನಾದರೂ ಅಲ್ಲಿ ಕಾರಣವಿದೆಯೇ ತೋರಿಸಿದರೆ ನಾನು ಕೃತಜ್ಞ (ಇಲ್ಲಿ ನಿಮ್ಮ ಪ್ರತಿಕ್ರಿಯೆ ಸಮರ್ಥಿಸಿಕೊಳ್ಳಲು ಹಲವರು, ಇನ್ನಾರದೋ ಬರಹಗಳನ್ನು ಹಾಕಿ "ಇದು ತಪ್ಪಲ್ಲವಾ" ಎಂದು ಕೇಳುತ್ತಿದ್ದಾರೆ, ನನ್ನ ಉತ್ತರವಿಷ್ಟೇ - ಅದು ನಾನಲ್ಲ. ನನ್ನ ತಪ್ಪಿದ್ದರೆ ಮಾತ್ರ ತೋರಿಸಿ - ಇತರರ ಮಾತು ಇತರರಿಗೆ).

ಗಮನಿಸಿ, ಮೇಲೆ ಹೇಳಿದ ಅಷ್ಟೂ ಮಾತು ನಿಮ್ಮ ವೈಯಕ್ತಿಕ ಧಾಳಿಗೆ ಪ್ರತಿಕ್ರಿಯೆಯಷ್ಟೇ ನೀವು 'ಸಾಧಾರ'ವಾಗಿ ಉತ್ತರ ನೀಡಿದ್ದಕ್ಕಲ್ಲ. ನಿಮ್ಮ ’ಆಧಾರ’ಗಳಿಗೆ ಈಗ, ಈ ಮುಂದೆ ಉತ್ತರಿಸುತ್ತೇನೆ, ದಯವಿಟ್ಟು ನೋಡಿ:

ಮೊದಲಿಗೆ ತಾವು ಸರಿಯಾಗಿಯೇ ಗಮನಿಸಿದಂತೆ ೧೫ ಮತ್ತು ೧೬ನೇ ಪಾಯಿಂಟಿನ ಕಪ್ಪುಬಿಳುಪು ಚಿತ್ರಗಳು ನನ್ನ ನೆಚ್ಚಿನ ಆಸಕ್ತಿಯವು; ಅವನ್ನು ಒಮ್ಮೆ ನೋಡಿಬಿಡೋಣ, ಏಕೆಂದರೆ ಅದೊಂದೇ ನಾನು ತಮಗೆ ನೀಡಬಹುದಾದ ಗಂಭೀರ ಉತ್ತರ. ಉಳಿದದ್ದೆಲ್ಲಾ ’ಮಝಾಕ್’ ಪಾಯಿಂಟುಗಳು, ಅವಕ್ಕೆ ’ಮಝಾಕ್’ ಉತ್ತರಗಳಷ್ಟೇ. ಇರಲಿ, ಈಗ ಪಂಪನನ್ನು ನೋಡೋಣ. ನೀವು ನೀಡಿದ ಉದಾಹರಣೆ ಇದು "ನೆಱೆದತ್ತೆತ್ತಾನುಮೀ ದಂಪತಿಯ ಬಯಕೆ ಸಂಪೂರ್ಣಮಾದತ್ತು" (... ಎತ್ತೆತ್ತಲೂ ನೆರೆಯಿತು, ಈ ದಂಪತಿಯ ಬಯಕೆ ಸಂಪೂರ್ಣವಾಯಿತು). ಇದು ತಾನೆ ತಾವು ಕೊಟ್ಟ ಪ್ರಮಾಣ? "ದಂಪತಿಯ" ಎಂಬ ಏಕವಚನವಿಭಕ್ತಿ ಬಳಸಿದ್ದಾನೆಂಬುದು ನಿಮ್ಮ ಮಾತು; ಆದರೆ ದಂಪತಿ ವಿಷಯದಲ್ಲಿ ಏಕವಚನವಿಭಕ್ತಿಯಿದ್ದರೂ ಅರ್ಥದಲ್ಲಿ ಅದು ಏಕವಚನವಲ್ಲವೇ ಅಲ್ಲ, ಬಹುವಚನ ಎಂಬುದನ್ನು ನಾನು ಈಗಾಗಲೇ ನನ್ನ ಲೇಖನದಲ್ಲಿ ಪರಿಪರಿಯಾಗಿ ವಿವರಿಸಿದ್ದೇನಲ್ಲವೇ? ನಾನು ಕೊಟ್ಟ ಉದಾಹರಣೆಗಳಲ್ಲೇ ಅದನ್ನು ನೀಡಿದ್ದೇನಲ್ಲ, "ರೈಟ್" ಮಾರ್ಕಿನೊಂದಿಗೆ - ದಂಪತಿ ಕುಣಿಯುತ್ತಿದ್ದಾರೆ, ದಂಪತಿ ಮಲಗಿದ್ದಾರೆ ಇತ್ಯಾದಿ (ಮೇಲಿನ ಚಿತ್ರವನ್ನೊಮ್ಮೆ - ಚಿತ್ರ೧ - ದಯವಿಟ್ಟು ನೋಡಿ). ದಂಪತಿಯು/ಗಳು, ದಂಪತಿಯನ್ನು/ಗಳನ್ನು, ದಂಪತಿಯಿಂದ/ಗಳಿಂದ, ದಂಪತಿಗೆ/ಗಳಿಗೆ, ದಂಪತಿಯ/ಗಳ, ದಂಪತಿಯಲ್ಲಿ/ಗಳಲ್ಲಿ - ಯಾವ ವಿಭಕ್ತಿಯನ್ನೇ ಬಳಸಿದರೂ ಅದು ಅರ್ಥದಲ್ಲಿ ಬಹುವಚನವೇ, ಅವಕ್ಕೆ ಹತ್ತುವುದು ಬಹುವಚನಕ್ರಿಯಾಪದ ಮಾತ್ರ. ಇದು ಅರ್ಥವಾಗಬೇಕಾದರೆ ಅದಕ್ಕೊಂದು ಕ್ರಿಯಾಪದವನ್ನು ಬಳಸಿ ನೋಡಿ - ದಂಪತಿ ಕುಣಿಯುತ್ತಿದೆ, ದಂಪತಿ ಮಲಗಿದೆ ಇಂಥವು ರೂಢಿಯಲ್ಲೂ ಅಸಹ್ಯ, ಕವಿಪ್ರಯೋಗದಲ್ಲಿಯೂ ಇಲ್ಲ; ಏಕವಚನದ ವಿಭಕ್ತಿಯೇ ಇದ್ದರೂ ಅದರ ಕ್ರಿಯಾಪದವು ಬಹುವಚನವೇ ಆಗಿರುತ್ತದೆ - ದಂಪತಿ/ಗಳು ಕುಣಿಯುತ್ತಿದ್ದಾರೆ ದಂಪತಿ/ಗಳು ಮಲಗಿದ್ದಾರೆ. ನಾನು ಇದನ್ನು ತಾನೇ ನನ್ನ ಲೇಖನದಲ್ಲೂ ವಿವರಿಸಿದ್ದು? ನನ್ನ ಲೇಖನವನ್ನು ಇನ್ನೊಮ್ಮೆ ನೋಡಿ. ನನಗೆ ಅಂದಾಜಿದೆ, ನಿಮ್ಮ ಸಹನೆಯನ್ನು ಪರೀಕ್ಷಿಸುವುದಿಲ್ಲ. ನಾನು ಹಾಗೆ ಹೇಳಿದ ಲೇಖನದ ಭಾಗವನ್ನು ಇಲ್ಲಿ ಚಿತ್ರರೂಪದಲ್ಲಿ ಕೊಟ್ಟಿದ್ದೇನೆ ನೋಡಿ - ಅದರಲ್ಲಿ ಪ್ರೊ. ವೆಂಕಟಾಚಲಶಾಸ್ತ್ರಿಗಳ ದರ್ಪಣವಿವರಣದಿಂದಲೂ ಉದಾಹರಣೆಗಳನ್ನು ಕೊಟ್ಟಿದ್ದೇನೆ (ಚಿತ್ರ ೨ ನೋಡಿ):

ಇಷ್ಟಾಗಿಯೂ ದಂಪತಿ ಏಕವಚನವೇ ಎಂದು ನೀವು ಸಾಧಿಸುವುದಾದರೆ ಯಾವ ಉದಾಹರಣೆ ತೋರಿಸಬೇಕು? ದಂಪತಿ ಎಂಬುದಕ್ಕೆ ಏಕವಚನದ ಕ್ರಿಯಾಪದವಿರುವ ಪ್ರಯೋಗವನ್ನು ತಾನೆ? ಎಲ್ಲಿದೆ? ನೀವು ಕೊಟ್ಟ ಪ್ರಮಾಣದಲ್ಲಂತೂ "ದಂಪತಿಯ" ಎಂಬಷ್ಟೇ ಇರುವುದು - ಅಷ್ಟರಿಂದ ಅದು ಏಕವಚನವೆಂದು ಸಿದ್ಧವಾಯಿತೇ? ಅದನ್ನು ಹೇಗೆ ಬೆಳೆಸಬಹುದು ನೋಡಿದಿರಾ? "ದಂಪತಿಯ ಬಯಕೆ ನೆರವೇರಿತು" ಎಂಬುದನ್ನು "ಅವರು ಅದರಿಂದ ಸಂತೋಷಿಸಿದರು" ಎಂದು ಬೆಳೆಸಬಹುದೇ ಹೊರತು "ಅದು ಅದರಿಂದ ಸಂತೋಷಿಸಿತು" ಎಂದು ಬೆಳೆಸಬಹುದೇ? ಪಂಪ ಹಾಗೇನಾದರೂ ಬೆಳೆಸಿದ್ದಾನೆಯೇ ಎಲ್ಲಾದರೂ? - ದಂಪತಿಗೆ ಬಂದಿತು,ಹೋಯಿತು ಇತ್ಯಾದಿ ಏಕವಚನ ನಪುಂಸಕಲಿಂಗದ ಉದಾಹರಣೆಯಿದೆಯೇ ಪಂಪನಲ್ಲಿ? (ಗೂಗಲ್ ಮಾಡಿ ನೋಡಿ, ಸಿಕ್ಕೀತೋ). ಬದಲಿಗೆ ಅನೇಕ ಕವಿಗಳಿಂದ ಬಹುವಚನದ ಉದಾಹರಣೆಗಳನ್ನು ನೀಡಿದ್ದೇವೆ, ನಾನಿಲ್ಲಿ ಪಂಪನನ್ನೂ ಸೇರಿದಂತೆ ಅಂಥವು ಇನ್ನೂ ಹಲವನ್ನು ಕೊಡುತ್ತೇನೆ ನೋಡಿ (ಚಿತ್ರ ೩)
ಎಲ್ಲೆಡೆಯೂ ಒಂದೋ ದಂಪತಿಗೆ ಬಹುವಚನವಿಭಕ್ತಿ ಸೇರಿದೆ, ಅಥವಾ ಕ್ರಿಯಾಪದವು ಬಹುವಚನವಾಗಿದೆ. ವಿವರಣೆ ಇಲ್ಲಿದೆ:

೧) ಇದು ಪಂಪನ ವಿಕ್ರಮಾರ್ಜುನವಿಜಯದ ತೃತೀಯಾಶ್ವಾಸದ ೭೫ನೆ ಪದ್ಯವಾದಮೇಲೆ ಬರುವ ವಚನ. ಇಲ್ಲಿ ಸ್ವಾರಸ್ಯವೆಂದರೆ, ದಂಪತಿ ಪದ ಎರಡು ಬಾರಿ ಬಂದಿದೆ. ಮೊದಲನೆಯದು ಪತಂಗದಂಪತಿ - "ಪತಂಗದಂಪತಿಯಂತೆ" ಎನ್ನುತ್ತಾನೆ. ಇದಕ್ಕೆ ಏಕವಚನವಿಭಕ್ತಿಯಿದೆ, ಆದರೆ ಕ್ರಿಯಾಪದದ ಸಂಸರ್ಗವಿಲ್ಲದಿರುವುದರಿಂದ ಇದನ್ನು ಏಕವಚನವೆಂದು ಸಾಧಿಸಬರುವುದಿಲ್ಲ. ಇನ್ನೊಂದು "ಆ ದಂಪತಿಗಳ್" ಇಲ್ಲಿ ನಾಮಪದಕ್ಕೇ ಬಹುವಚನವಿಭಕ್ತಿಯಿರುವುದರಿಂದ ಅದು ನಿಸ್ಸಂದೇಹವಾಗಿ ಬಹುವಚನ - ಇಲ್ಲಿ ಏಕವಚನವಿಲ್ಲ.

೨) ಪಂಪನಿಂದಲೇ ಇನ್ನೊಂದು ಪದ್ಯ - ವಿಕ್ರಮಾರ್ಜುನದ ಪಂಚಮಾಶ್ವಾಸದ ೮೦ನೆಯ ಪದ್ಯ - "ನಿಳಿಂಪದಂಪತಿಗಳಿಂದ" ಎಂದು ಸ್ಪಷ್ಟವಾಗಿಯೇ ಬಹುವಚನವಿದೆ - ಏಕವಚನವಿಲ್ಲ

೩) ರನ್ನನ ಅಜಿತತೀರ್ಥಕರಪುರಾಣದ ದ್ವಿತೀಯಾಶ್ವಾಸದ ೧೪ನೆಯ ಪದ್ಯ - "ಅಂತಿರ್ಪುವು ಅಗಲದೆ ಆ ವನಲತೆಯ ಜೊಂಪದೊಳ್ ದಂಪತಿಗಳ್" ಎಂಬುದು ಪ್ರಯೋಗ. ಇಲ್ಲಿ ಹಲವು ಜೋಡಿಗಳಿರುವುದರಿಂದ ಸಹಜವಾಗಿಯೇ ಬಹುವಚನ, ವಿವಾದವಿಲ್ಲ - ಆದರೆ ಏಕವಚನಪ್ರಯೋಗ ಇಲ್ಲೂ ಕಾಣಲಿಲ್ಲ

೪ ಮತ್ತು ೫) ಇವು ಕ್ರಮವಾಗಿ ಲಕ್ಷ್ಮೀಶನ ಜೈಮಿನಿ ಭಾರತ (೩೧ನೆಯ ಸಂಧಿ - ೨೩ನೆಯ ಪದ್ಯ) ಮತ್ತು ಕುಮಾರವ್ಯಾಸನ ವಿರಾಟಪರ್ವದ ೧೦ನೆಯ ಸಂಧಿಯ ೮೧ನೆಯ ಪದ್ಯ). ಎರಡರಲ್ಲೂ ಇರುವುದು ಒಂದು ದಂಪತಿಯ ಜೋಡಿ, ಆದರೆ ಬಹುವಚನದ ಬಳಕೆ "ದಂಪತಿಗಳೊಪ್ಪಿದರ್" ಮತ್ತು "ಮೆರೆದರು ದಂಪತಿವರರು"- ಏಕವಚನವಿಲ್ಲ:

೬) ಇದು ನಮ್ಮದೇ ಕಾಲದ ಮಹಾಕವಿ, ರಾಷ್ಟ್ರಕವಿ ಕುವೆಂಪು ಅವರ "ಭೈರ" ಪದ್ಯದಿಂದ. ಭೈರನು ಹುಟ್ಟಿದಾಗ ಆತನ ತಾಯ್ತಂದೆಗಳ ಸಂತಸವನ್ನು ವರ್ಣಿಸುವ, ಭೈರನ ಬೆಳವಣಿಗೆಯನ್ನು ವರ್ಣಿಸುವ ಭಾಗ. "ದಂಪತಿಗಳುಲ್ಲಸದಿ ಹಿಗ್ಗಿದರು" ಇಲ್ಲಿ ಹಲವು ದಂಪತಿಗಳಿಲ್ಲ, ಇರುವುದು ಒಂದೇ ಜೋಡಿ, ಆದರೆ ಉಪಯೋಗಿಸಿದ್ದು ಬಹುವಚನ.

೭) ಗದ್ಯದಿಂದಲೂ ಒಂದು ಉದಾಹರಣೆಯಿರಲಿ. ಇದು ಕನ್ನಡದ ಆಚಾರ್ಯಪುರುಷರಲ್ಲೊಬ್ಬರಾದ ಸೇಡಿಯಾಪು ಕೃಷ್ಣಭಟ್ಟರ "ಸೇಡಿಯಾಪು ವಿಚಾರಪ್ರಪಂಚ"ದ ಒಂದು ಲೇಖನ. ಅಂದಹಾಗೆ ಸೇಡಿಯಾಪು ಬಹುದೊಡ್ಡ ಪಂಡಿತರೆಂದು ಬೇರೆ ಹೇಳಬೇಕಿಲ್ಲವಲ್ಲ. ಅವರನ್ನು ಪಂಡಿತಪರಮೇಷ್ಠಿ ಎಂದು ಕೊಂಡಾಡಿದವರು ಬೇರಾರೂ ಅಲ್ಲ, ಶತಾವಧಾನಿ ಶ್ರೀ ಆರ್ ಗಣೇಶರು (ಅವರೂ ಪಂಡಿತರೇ!)

ಹೀಗೆ ದಂಪತಿ ಬಹುವಚನಶಬ್ದವೆಂಬುದಕ್ಕೆ ದಂಡಿಯಾಗಿ ಉದಾಹರಣೆಗಳನ್ನು ಕೊಡುತ್ತಲೇ ಹೋಗಬಹುದು (ಗೂಗಲ್ ನೆರವು ಬೇಕಿಲ್ಲ), ಆದರೆ ನಿಮಗೆ ಬೇಕಾದ ಆಕರಗಳ ಪರಿ ಅದಲ್ಲ ಎಂಬುದು ಸ್ಪಷ್ಟವಾಗಿದೆಯಲ್ಲ, ಆಗಲಿ, ನಿಮ್ಮ 'ಟೈಪ್'ನ ಆಕರಗಳನ್ನೇ ಮುಂದೆ ಕೊಡುವುದಾಗಲಿ. ಅದಕ್ಕೆ ಮೊದಲು ನೀವು ತೋರಿದ ಇತರ ಪಾಯಿಂಟುಗಳನ್ನು ಮೊದಲು ಉತ್ತರಿಸಿಬಿಡುತ್ತೇನೆ:

ಪಾಯಿಂಟ್ ೧)
"ಡಾ. ಶಾಲಿನಿ ರಜನೀಶ್ ನಿಮಗೆ ಗೊತ್ತೇ ಇದ್ದಾರೆ" - ಇಲ್ಲ ಸಾರ್, ಅವರು ಯಾರೋ ನನಗೆ ಗೊತ್ತಿಲ್ಲ, ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಅವರ ಸಾಧನೆಗೆ ನನ್ನ ನಮನ, ಆದರೆ ಭಾಷೆಯ ವಿಷಯದಲ್ಲಿ ನಾಗವರ್ಮ-ಕೇಶಿರಾಜನಿಂದ ಹಿಡಿದು ಸೇಡಿಯಾಪು-ವೆಂಕಟಾಚಲಶಾಸ್ತ್ರಿಗಳವರೆಗಿನ ವಿದ್ವಾಂಸರಿಗಿಂತ ಅವರು ಹೇಗೆ ಹೆಚ್ಚಿನ ಪ್ರಮಾಣವಾದರೋ ತಿಳಿಯುವ ಉತ್ಸುಕತೆಯಿದೆ. ತಿಳಿಸಿದರೆ, ಅರಿತು ತಿದ್ದಿಕೊಳ್ಳುತ್ತೇನೆ.

೨ ರಿಂದ ೧೩)
ತಪ್ಪು ಕನ್ನಡ ಬಳಸಿ ಕನ್ನಡವನ್ನು ಕೊಲ್ಲುತ್ತಿವೆ ಎಂದು ತಾವೇ ದಿನಬೆಳಗಾದರೆ ಜಾಡಿಸುತ್ತಿದ್ದ ಕನ್ನಡ ಪತ್ರಿಕೆಗಳೇ ಇವತ್ತು ತಮ್ಮ ವಾದಕ್ಕೆ ಪ್ರಮಾಣವಾಗಬೇಕಾಗಿ ಬಂದದ್ದು ಮಾತ್ರ ಚೋದ್ಯವೇ ಸರಿ. ಇದಕ್ಕೂ ಮೇಲಿನ ಪ್ರಶ್ನೆಯೇ ಸಲ್ಲುತ್ತದೆ - ಭಾಷೆಯ ವಿಷಯದಲ್ಲಿ ನಾಗವರ್ಮ-ಕೇಶಿರಾಜನಿಂದ ಹಿಡಿದು ಸೇಡಿಯಾಪು-ವೆಂಕಟಾಚಲಶಾಸ್ತ್ರಿಗಳವರೆಗಿನ ವಿದ್ವಾಂಸರಿಗಿಂತ, ಭಾಷೆಯನ್ನು ಚಪ್ಪಲಿ ಸ್ಟ್ಯಾಂಡಿನಂತೆ ಬಳಸಿ ಕುಲಗೆಡಿಸುವ ಪತ್ರಿಕೆಗಳು ಹೇಗೆ ಹೆಚ್ಚಿನ ಪ್ರಮಾಣವಾದವೋ ದಯವಿಟ್ಟು ತಿಳಿಸಿಕೊಡಬೇಕು, ಅದರಲ್ಲೂ ನ್ಯೂಸಿಗೇ ಪ್ರಮಾಣವಾಗದ ಬಷೀರರ ವಾರ್ತಾಭಾರತಿ ತಮಗೆ ಭಾಷೆಗೆ ಪ್ರಮಾಣವಾಗಿಬಿಟ್ಟಿತು :o

ಅಂದಹಾಗೆ, "ದಂಪತಿಗಳು" ಕುರಿತಾದ ನಿಮ್ಮ ಆಕ್ಷೇಪ ಆರಂಭವಾಗುವುದೇ "ಕನ್ನಡದ ದೊಡ್ಡ ಪತ್ರಿಕೆಗಳಲ್ಲಿ ಪ್ರಕಟವಾದ" ಸುದ್ದಿ ಶೀರ್ಷಿಕೆಗಳಲ್ಲಿ ಕಂಡುಬಂದ ದಂಪತಿಗಳು ಎಂಬ ಬಹುವಚನದ ಉದಾಹರಣೆಗಳೊಂದಿಗೆ. ಯಾವ ಆಕರಗಳಲ್ಲಿ 'ತಪ್ಪು' ಪ್ರಕಟವಾಗಲು ಸಾಧ್ಯವೋ ಅವೇ ಆಕರಗಳನ್ನು ’ಸರಿ’ಗೂ ಪ್ರಮಾಣವೆಂದರೆ ಅದು ಯಾವ ಸೀಮೆಯ ಪ್ರಮಾಣ?

ಪಾಯಿಂಟ್ ೧೪)
ಎಲ್ಲಕ್ಕಿಂತ ಗಮ್ಮತ್ತಿನದ್ದು ಎಂದರೆ ತಾವು ನೀಡಿರುವ ಈ ಆಧಾರ. "ಸ್ವಯಮೇವಪ್ರಮಾಣಃ" ಎಂಬ ಪ್ರತೀತಿ ವೇದಗಳ ವಿಷಯದಲ್ಲಿ ಮಾತ್ರ ಇದೆಯೆಂದಿದ್ದೆ, ಈಗ ತಮ್ಮ ಪ್ರಯೋಗಕ್ಕೆ ತಮ್ಮದೇ ತಿಳಿರುತೋರಣದ ಪ್ರಮಾಣ ನೀಡಿದ್ದು ನೋಡಿ, ತಮ್ಮ ವಾಕ್ಯವೂ ವೇದವಾಕ್ಯದಂತೆ ಸ್ವಯಮೇವಪ್ರಮಾಣವಾದದ್ದು ಎಂದು ತಿಳಿಯಿತು. ಹದಿನೇಳನೆಯ ಶತಮಾನದ ಲಾಕ್ಷಣಿಕನಾದ ಪಂಡಿತರಾಜ ಜಗನ್ನಾಥಪಂಡಿತನು ತನ್ನ ಗ್ರಂಥಗಳಲ್ಲಿ ಪ್ರವಚನಗಳಲ್ಲಿ ಬೇರಾರ ಉದಾಹರಣೆಗಳನ್ನೂ ಕೊಡದೇ ತನ್ನದೇ ಕಾವ್ಯದಿಂದ ಉದಾಹರಣೆಗಳನ್ನು ಕೊಡುತ್ತಿದ್ದನಂತೆ - ಅವನ ವಿದ್ವತ್ತು ಅಂಥದ್ದು ಬಿಡಿ. ಇದೀಗ ಅಭಿನವಜಗನ್ನಾಥಪಂಡಿತನನ್ನು ನೋಡಿದಷ್ಟು ಸಂತಸವಾಯಿತು.

ಹೋಗಲಿ, ಪಂಪನಲ್ಲಂತೂ ಕಾಣಲಿಲ್ಲ, ನೀವು ಹುಡುಹುಡುಕಿ ದೈನಿಕಗಳಿಂದ, ಟ್ಯಾಬ್ಲಾಯ್ಡುಗಳಿಂದ, ಅರೆ-ಅಶ್ಲೀಲ ಪೋರ್ಟಲುಗಳಿಂದ ಕೊಟ್ಟಿರುವ ಉದಾಹರಣೆಗಳಲ್ಲಾದರೂ, ಒಂದಾದರೂ ಏಕವಚನಕ್ರಿಯಾಪದದ ಬಳಕೆಯಿರುವ ವಾಕ್ಯವಿದೆಯೇ? ಇಲ್ಲವೆಂದ ಮೇಲೆ ಅದು ನನ್ನ ಪ್ರಶ್ನೆಗೆ ಉತ್ತರ ಹೇಗಾಗುತ್ತದೆ ಸಾರ್? ಮೊದಲಿಗೆ, ಆಯ್ದುಕೊಂಡ ಆಕರವೇ ಮೂರು ಕಾಸಿನದ್ದು. ಅದರಿಂದ ಕೊಟ್ಟಿರುವ ಪ್ರಮಾಣವಂತೂ ಪ್ರಶ್ನೆಗೆ ಸಂಬಂಧವೇ ಇಲ್ಲದ್ದು. ಒಂದೊಂದು ಪ್ರಮಾಣಕ್ಕೂ "ಅವರು ಐ ಎ ಎಸ್ ದಂಪತಿಗಳು" "ಇದು ವಿಶ್ವಾಸಾರ್ಹ ದಿನಪತ್ರಿಕೆ" "ಅದು ಕರಾವಳಿಯ ಹೆಮ್ಮೆ" "ಇಲ್ಲಿ ನೆಚ್ಚಿನ ನಾಯಕ ಮೋದಿಯವರ ಚಿತ್ರಗಳಿವೆ" ಎಂಬ ಭೋಪರಾಕುಗಳು ಧಾರಾಳ. ಪರಾಕುಗಳೇ ಪ್ರಮಾಣವಾಗತೊಡಗಿದ್ದು ಎಂದಿನಿಂದ?

ಇರಲಿ, ಆದರೆ ಒಂದು ವಿಷಯಕ್ಕೆ ತಮಗೆ ಧನ್ಯವಾದ ಸಲ್ಲಿಸಲೇ ಬೇಕು. ಅದೆಂದರೆ ಗೂಗಲ್ ಸರ್ಚ್ ಮಾಡಲು ತಾವು ಕೊಟ್ಟ ಸಲಹೆ. ಮೇಲೆ ನಾನು ನೀಡಿದ ಪಿಂಡದ ಪಂಡಿತರ ಉದಾಹರಣೆಗಳ ಬದಲು ನಿಮಗೆ ಒಪ್ಪಿಗೆಯಾಗುವ ಆಕರಗಳಿಂದಲೇ ಆಧಾರ ಸಂಗ್ರಹಿಸಲು ಗೂಗಲ್ ಸರ್ಚ್ ನಿಜಕ್ಕೂ ಸಹಕಾರಿಯಾಯಿತು. ಇದೋ, ದಂಪತಿ ಏಕವಚನವಲ್ಲ, ಬಹುವಚನ ಎನ್ನುವುದಕ್ಕೆ, ತಾವು ಸೂಚಿಸಿದ ಆಕರಗಳಿಂದಲೇ ಆಧಾರಗಳನ್ನು ಹೆಕ್ಕಿ ತೆಗೆದಿದ್ದೇನೆ. ತಾವು ಹೇಳಿದಂತೆ ಚಿತ್ರಗಳ ಸಂಪುಟ ಮಾಡುವಷ್ಟು ವ್ಯವಧಾನವಿರಲಿಲ್ಲ. ಅದಕ್ಕೇ ಎಲ್ಲವನ್ನೂ ಒಂದೇ ಫ್ರೇಮಿನಲ್ಲಿ ಅಳವಡಿಸಿದ್ದೇನೆ (ಚಿತ್ರ ೪ ನೋಡಿ). 
ಇದರಲ್ಲಿ ನಿಮ್ಮ "ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ ‘ಪ್ರಜಾವಾಣಿ’" ಇದೆ, "ಕರಾವಳಿಯ ಹೆಮ್ಮೆಯೆನಿಸಿದ, ಕನ್ನಡದ ಅತ್ಯಂತ ಸುಂದರ ದೈನಿಕ, ‘ಉದಯವಾಣಿ’" ಇದೆ, ಒನ್ ಇಂಡಿಯಾ ಪತ್ರಿಕೆಯಿದೆ, ಅದರಲ್ಲಿ ನಮ್ಮನಿಮ್ಮೆಲ್ಲರ ಅಚ್ಚುಮೆಚ್ಚಿನ ಜನನಾಯಕರಾದ ಮೋದಿಯೊಬ್ಬರೇ ಏಕೆ ಅಮಿತ್ ಶಾ ಇದ್ದಾರೆ, ಬಂಗಾಳದ ದೀದಿ ಇದ್ದಾರೆ, ಜೊತೆಗೆ ರಾಹುಲ್ ಗಾಂಧಿ ಕೂಡ - if that can be any proof; ಜೊತೆಗೆ ವಿಜಯವಾಣಿಯಲ್ಲಿ ಡಾ. ಕೆ ಎಸ್ ನಾರಾಯಣಾಚಾರ್ಯರ ಲೇಖನವೂ ಇದೆ (ಅಂದಹಾಗೆ ಇವರೂ ಪಂಡಿತರೇ); ಅಷ್ಟೇಕೆ, ಭಾಷಾಪ್ರಶ್ನೆಗಳಿಗೆ ಅಂತಿಮಪರಿಹಾರವೆನಿಸಬಲ್ಲ, ತಾವೇ ಕೋಟ್ ಮಾಡಿದ ಬಶೀರರ ವಾರ್ತಾಭಾರತಿಯೂ ಇಲ್ಲಿದೆ, ಇವರೆಲ್ಲರೂ ದಂಪತಿಗಳು ಎಂಬ ಬಹುವಚನ ಬಳಸಿದ್ದಲ್ಲದೇ ಕ್ರಿಯಾಪದದಲ್ಲಿ ಸ್ಪಷ್ಟವಾಗಿ ಬಹುವಚನ ಬಳಸಿದ್ದಾರೆ.

ಹೀಗೆ ತಾವೇ ವಿರೋಧಿಸುತ್ತಿದ್ದ ಪತ್ರಿಕೆಗಳೇ ಈಗ ಭಾಷಾಶುದ್ಧತೆಗೆ ಪ್ರಮಾಣವಾಗಬಹುದಾದರೆ, ಅದೇ ವರಸೆಯಲ್ಲಿ ಜಾಲತಾಣಗಳೂ ಏಕೆ ಪ್ರಮಾಣವಾಗಬಾರದೆನ್ನಿಸಿತು. ಹುಡುಕಿ ನೋಡಿದರೆ, ಫೇಸ್ಬುಕ್, ಯೂಟ್ಯೂಬ್, ವಿಕಿಪೀಡಿಯಾ, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಎಲ್ಲೆಡೆಯೂ ದಂಪತಿ’ಗಳು’ ರಾರಾಜಿಸುತ್ತಿದ್ದಾರೆ!! ಕೊನೆಗೆ ಒಂದು ಗೋಡೆ ಪೋಸ್ಟರು ಕೂಡ ಪ್ರಮಾಣವಾಗಿ ಸಿಕ್ಕಿಬಿಟ್ಟಿತು. ಅದನ್ನೂ ಇಲ್ಲಿ ಹಾಕಿದ್ದೇನೆ ನೋಡಿ (ಚಿತ್ರ ೫). ಪಂಡಿತಪರಮೇಷ್ಠಿಗಳಿಗೆಲ್ಲಾ ಪಿಂಡಪ್ರದಾನ ಮಾಡಿಬಿಟ್ಟಿರುವುದರಿಂದ ಬಹುಶಃ ಇನ್ನು ಮುಂದೆ ಇವೇ ತಾನೆ ಆಧಾರಗಳು :o 


ಇರಲಿ ಬಿಡಿ, ಬೂಸಿ ಪೋರ್ಟಲುಗಳ ಜೊತೆ ಕುಳಿತು ಬೇಸನ್ ಲಾಡು ತಿನ್ನುವುದಕ್ಕಿಂತ ಪಂಡಿತರ ಜೊತೆ ಕುಳಿತು ಪಿಂಡ ಸ್ವೀಕರಿಸುವುದೇ ಶ್ರೇಯಸ್ಕರವೆನಿಸುತ್ತದೆ ನನಗೆ. ಆದ್ದರಿಂದಲೇ ಅದನ್ನು ಸಂತೋಷದಿಂದ ಸ್ವೀಕರಿಸಿ, ಈಗ ತುಂಬಿದ ಮನದಿಂದ (ತುಂಬಿದ ಹೊಟ್ಟೆಯಿಂದಲೂ) ಹಾರೈಸುತ್ತಿದ್ದೇನೆ, ತಮಗೆ ಸದ್ಗತಿ ದೊರೆಯಲಿ.

ಅಂದ ಹಾಗೆ ಒಂದು ವಿಷಯ, ಮೇಲೆ ನನ್ನ ಪಾಯಿಂಟ್ ಬೈ ಪಾಯಿಂಟ್ ಉತ್ತರದಲ್ಲೇ ಬರಬೇಕಿತ್ತು ಬಿಟ್ಟುಹೋಯಿತು. ನೀವು ಹದಿಮೂರನೆಯ ಪಾಯಿಂಟಿನಲ್ಲಿ ಕೊಟ್ಟ ಬೋಲ್ಡ್ ಸ್ಕೈ ಕನ್ನಡ ಎಂಬುದನ್ನು ಹುಡುಕಿದಾಗ ಅದು ನನ್ನನ್ನು kannada. boldsky . com ಎಂಬ ಜಾಲತಾಣಕ್ಕೆ ಕೊಂಡೊಯ್ದಿತು. ನೀವು "ದಂಪತಿ" ಹುಡುಕಿದಂತೆ ನಾನೂ "ದಂಪತಿಗಳು" ಶಬ್ದಕ್ಕಾಗಿ ಹುಡುಕಿದೆ ( https://kannada.boldsky.com/search/results.html?q=ದಂಪತಿಗಳು ), ಬಂದದ್ದನ್ನು ದಿನಾಂಕಕ್ರಮದಲ್ಲಿ ಸಾರ್ಟ್ ಮಾಡಿದೆ. ಬಂದ ರಿಸಲ್ಟನ್ನು ಕಂಡು ದಿಗ್ಭ್ರಾಂತನಾದೆ (ಚಿತ್ರ ೬). ಹಲವು ಮಂದಿ ಸದ್ಗೃಹಸ್ಥ-ಗೃಹಿಣಿಯರು ಸಂಭಾವಿತರು ಓದುತ್ತಿರಬಹುದಾದ ಈ ಚರ್ಚೆಯಲ್ಲಿ ಅದನ್ನು ’ಬೋಲ್ಡ್’ ಆಗಿ ಹಂಚಿಕೊಳ್ಳಲು ಹೇಸುತ್ತೇನೆ. 


ಕೊನೆಯದಾಗಿ ಒಂದು ಮಾತು - ಸಾರಾಂಶಕ್ಕಾಗಿ ಹಾಗೂ ವಿಷಯಸ್ಪಷ್ಟನೆಗಾಗಿ. ನಿಮ್ಮ ವಿವರಣೆ ತಪ್ಪಾಗಿ ಕಂಡುದರಿಂದ ಅದು ಹೇಗೆ ತಪ್ಪೆಂದು ಆಧಾರಸಹಿತ ವಿವರಣೆ ನೀಡಿದೆನೇ ವಿನಾ ಮೊದಲಲ್ಲಿ ನಿಮ್ಮನ್ನು ವೈಯಕ್ತಿಕವಾಗಿ ಎಲ್ಲಿಯೂ ಟೀಕಿಸಿಲ್ಲ, ವ್ಯಂಗ್ಯವಿರಬಹುದು, ಆದರೆ ಅದು ಯಾವತ್ತೂ ವೈಯಕ್ತಿಕ ಮಟ್ಟ ಮುಟ್ಟಿದ್ದಿಲ್ಲ (ಅಂಥದ್ದೊಂದು ನನ್ನ ಕಡೆಯಿಂದ ಇದ್ದರೆ ತೋರಿಸಬಹುದೆಂದು ಈಗಾಗಲೇ ಹೇಳಿದ್ದೇನೆ - ಬೇರೆಯವರದ್ದಕ್ಕೆ ನಾನು ಹೊಣೆಯಲ್ಲ); ನನ್ನ ವಿವರಣೆಯನ್ನು ತಾವು ಕಂಡೂ ಕಾಣದಂತೆ ಸುಮ್ಮನಿದ್ದುದರಿಂದ ಮುಂದಿನ ಹಂತದಲ್ಲಿ ಸ್ಪಷ್ಟನೆ/ಚರ್ಚೆ ಬೇಡಿದೆನಷ್ಟೇ - ಶೈಕ್ಷಣಿಕ ವಿಷಯದಲ್ಲಿ ಅದು ಸಾಮಾನ್ಯ - ಅದು ನೀವು ಬಿಂಬಿಸಿದಂತೆ ನಿಮ್ಮ ಕಲಿಕೆ ಅಭಿಯಾನದ ಟೀಕೆಯಾಗಲೀ ಹೊಟ್ಟೆಯುರಿಯಾಗಲೀ ಮತ್ತೊಂದಾಗಲೀ ಅಲ್ಲ. ನನ್ನ ಪ್ರಶ್ನೆಗೆ ತಮ್ಮಿಂದ ಉತ್ತರ ಬರದಿದ್ದುದರಿಂದ ಅದೇ ಲೇಖನವನ್ನು ಬರೆದು ನನ್ನ ಗೋಡೆಯ ಮೇಲೆ ಪ್ರಕಟಿಸಿ ಸುಮ್ಮನಾದೆನಷ್ಟೇ - ಅದರಲ್ಲೂ ಎಲ್ಲಿಯೂ ವೈಯಕ್ತಿಕ ಟೀಕೆಯಿರಲಿಲ್ಲ, ಮತ್ತು ಹೇಗಿದ್ದರೂ ಉತ್ತರಿಸಲು ನೀವು ಆಸಕ್ತಿ ತೋರದಿದ್ದುದರಿಂದ ನಿಮ್ಮನ್ನು ನನ್ನ ಲೇಖನದಲ್ಲಿ ಟ್ಯಾಗ್ ಮಾಡುವ ಗೋಜಿಗೂ ಹೋಗಲಿಲ್ಲ. ತಾವದನ್ನು ಅಲ್ಲಿಗೆ ಬಿಟ್ಟಿದ್ದರಾಗಿತ್ತು - ನಾನಂತೂ ಬಿಟ್ಟು ಸುಮ್ಮನಿದ್ದೆ. ನನ್ನ ಲೇಖನಕ್ಕೆ ಕಾಮೆಂಟ್ ಮಾಡಿದ ಹಲವರು ನಿಮ್ಮನ್ನು ಕುರಿತು ವ್ಯಂಗ್ಯವಾಡಿರಬಹುದು, ಅದಕ್ಕೆ ನಾನು ಹೇಗೆ ಹೊಣೆಗಾರನಾದೇನು? ಅಂಥವು ನಿಮ್ಮ ಈ ಲೇಖನದಡಿಯೂ ಬಹಳಷ್ಟಿವೆ, ಅದಕ್ಕೆ ನಾನು ನಿಮ್ಮನ್ನುಹೊಣೆ ಮಾಡಿದರೆ ಹಾಸ್ಯಾಸ್ಪದವಷ್ಟೇ. ಕೊನೆಗೆ ಓದುಗರೊಬ್ಬರು ನಿಮ್ಮನ್ನು ಟ್ಯಾಗ್ ಮಾಡಿದಾಗ "ಎಲ್ಲರಿಗೂ ಒಮ್ಮೆಗೇ ಉತ್ತರಿಸಿದರಾಯಿತು" ಎಂಬ ಅಹಂಕಾರದ ಮಾತು ನಿಮ್ಮಿಂದ ಬಂತು (ಮತ್ತೆ, ಅದುವರೆಗೂ ನಾನು, I repeat ನಾನು, ನಿಮ್ಮ ಬಗ್ಗೆ ಎಲ್ಲಿಯಾದರೂ ಅಹಂಕಾರದ/ಭರ್ತ್ಸನೆಯ/ಕಟಕಿಯ ಮಾತಾಡಿದ್ದರೆ ತೋರಿಸಿ). ನಿಮ್ಮಿಂದ ಆ ಮಾತು ಬಂದಾಗ **ಮೊದಲ ಬಾರಿಗೆ** ತುಸು ವ್ಯಂಗ್ಯದಿಂದ ಉತ್ತರಿಸಿದ್ದು ನಿಜ - "ಇನ್ನು ಕಾಯುವ ಅಗತ್ಯವಿಲ್ಲ, ಇನ್ನು ಎದ್ದು ಬರುವವರು ಯಾರೂ ಇಲ್ಲ, ನೀವು ಉತ್ತರಿಸಬಹುದು" ಇದು ಸ್ವಲ್ಪಮಟ್ಟಿಗಿನ ವ್ಯಂಗ್ಯವಿದ್ದೀತು - ಕೇವಲ ವ್ಯಾಕರಣದ ಸರಿ-ತಪ್ಪಿನ ಪ್ರಶ್ನೆಯೆತ್ತಿದ್ದಕ್ಕೇ ಒರಟುತನದ ದುರಹಂಕಾರದ ಪ್ರತಿಕ್ರಿಯೆ ನಿಮ್ಮಿಂದ ಬರಬಹುದಾದರೆ, ತಮ್ಮ ದುರಹಂಕಾರದ ಪ್ರತಿಕ್ರಿಯೆಗೆ ಇಷ್ಟುಮಟ್ಟಿನ ವ್ಯಂಗ್ಯವಾದರೂ ಹೆಚ್ಚಲ್ಲವೆಂದು ನಾನು ಭಾವಿಸಿದರೆ ತಪ್ಪಲ್ಲವಲ್ಲ. ಆದರೆ ಅದಕ್ಕೆ ಪ್ರತಿಕ್ರಿಯೆಯಾಗಿ ತಾವು ಇಡೀ ಪಂಡಿತವರ್ಗದ 'ಸಮಾರಾಧನೆ'ಯನ್ನೇ ಮಾಡಿಬಿಟ್ಟಿರಿ :o

ಮರ್ಮಾಘಾತವಾಗುವುದು ಸಹಜವೇ (ಈಗ ಚೇತರಿಸಿಕೊಂಡಿದ್ದೇನೆ) - ಮರ್ಮಾಘಾತ ನಿಮ್ಮ ಮಾತಿನ ಜೋರಿನಿಂದಾಗಲೀ ನಿಮ್ಮ ಸಮಾರಾಧನೆಯಿಂದಾಗಲೀ ಅಲ್ಲ, ಬೇರೆಯದೇ ಕಾರಣಕ್ಕೆ - ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕಿಳಿಯಬಹುದು ಎಂಬುದರಿಂದ ಉಂಟಾದ ದಿಗ್ಭ್ರಾಂತಿ ಅದು! ನಾವೆಲ್ಲರೂ ಬಹುವಾಗಿ ಪ್ರೀತಿಸುವ ಗೌರವಿಸುವ ಮಹಾವಿದ್ವಾಂಸರೊಬ್ಬರು (ನೀವು ಹೋಲ್ ಸೇಲಾಗಿ ಪಂಡಿತರೆಲ್ಲರಿಗೂ ಪಿಂಡ ಹಾಕಿಬಿಟ್ಟಿರುವುದರಿಂದ ವಿನಾಕಾರಣ ಆ ಮಹನೀಯರ ಹೆಸರನ್ನು ಎಳೆತಂದು ಪಿಂಡಪಂಕ್ತಿಯಲ್ಲಿ ಕೂರಿಸಲಾರೆ) ಯಾವಾಗಲೂ ಒಂದು ಮಾತನ್ನು ಹೇಳುತ್ತಿರುತ್ತಾರೆ. ಎದುರಾಳಿ ಜಟ್ಟಿಯು, ದಟ್ಟಿಚಲ್ಲಣಗಳನ್ನು ತೊಟ್ಟು ಬಂದರೆ, ಸೋಲೋ ಗೆಲುವೋ ಹೆಗಲೆಣೆಯಾಗಿ ನಿಂತು ಕುಸ್ತಿಯನ್ನಾದರೂ ಮಾಡಬಹುದು; ಅವನು ಅದನ್ನೂ ಬಿಚ್ಚಿ ಬಂದರೆ... !

ನಮಸ್ಕಾರ

========
ಟಿಪ್ಪಣಿ:
========
ಮೇಲ್ಕಂಡ ಲೇಖನ ಮತ್ತು ಅಲ್ಲೇ ಕಾಣಿಸಿದ ಮತ್ತೊಂದೆರಡು ಲೇಖನಗಳು ಇಡೀ ಚರ್ಚೆಯ ಕೇವಲ ಒಂದೆರಡು ಭಾಗಗಳಷ್ಟೇ.  ಆದರೆ ದಂಪತಿ ಶಬ್ದದ ವ್ಯಾಕರಣವಿಚಾರದ ಬಗ್ಗೆ ಫೇಸ್ಬುಕ್ ಮತ್ತು ಕೆಲವು ಬ್ಲಾಗುಗಳಲ್ಲಿ ಬಹುವಿಸ್ತಾರವಾದ ಚರ್ಚೆಯೇ ನಡೆಯಿತು. ಶ್ರೀ ಶ್ರೀವತ್ಸಜೋಶಿಯವರಿಂದ ಮೊದಲುಗೊಂಡು ನನ್ನನ್ನೂ ಒಳಗೊಂಡು ವಿದ್ವನ್ಮಿತ್ರರಾದ ಶ್ರೀ Mahesh Bhat, ಶ್ರೀ ಗಣೇಶ ಕೊಪ್ಪಲತೋಟ, ಶ್ರೀ Ajakkala Girisha Bhat, ಶ್ರೀ Sharath Bhat Seraje ಮೊದಲಾದ ಹಲವು ವಿದ್ವಾಂಸರು ಭಾಗವಹಿಸಿದ್ದ ಈ ಚರ್ಚೆಯಲ್ಲಿ, ಕೆಲವು ವೈಯಕ್ತಿಕ ಚಕಮಕಿಗಳಾಚೆಗೂ ಅನೇಕ ವ್ಯಾಕರಣ-ಪ್ರಯೋಗವಿಷಯಗಳು, ಹಲವು ಭಾಷಾಸೂಕ್ಷ್ಮಗಳು ಹೊರಬಂದುವು; ಜೊತೆಗೆ ಹಿರಿಯವಿದ್ವಾಂಸರಾದ ಶತಾವಧಾನಿ ಶ್ರೀ ಆರ್ ಗಣೇಶರ ಅಮೂಲ್ಯವಾದ ಅಭಿಪ್ರಾಯವೂ ಮೂಡಿಬಂತು.

ಅಂತೆಯೇ, "ಕೇವಲ ಮೂರಕ್ಷರದ ಪದದ ಮೇಲೆ ಇಷ್ಟು ದೊಡ್ಡ ಚರ್ಚೆಯೇ? ಸಮಯವ್ಯರ್ಥ" ಎಂಬ 'ಅಕ್ಷರಲಕ್ಷ'ದ ಅಭಿಪ್ರಾಯದಿಂದ ಹಿಡಿದು "ಪಂಡಿತರಿಗೆ ಬೇರೆ ಕೆಲಸವಿಲ್ಲ", "ಒಣಪಾಂಡಿತ್ಯ", "ಅಜ್ಞಾನ-ಅರೆಜ್ಞಾನ", "ಬುದ್ಧಿಜೀವಿ vs ವಿದ್ವಜ್ಜೀವಿ" ಮೊದಲಾದ ನಿಸ್ಸಹಾಯಕ ನಿಸ್ಸಾರವ್ಯಾಖ್ಯಾನಗಳನ್ನೊಳಗೊಂಡಂತೆ, "ದಂಪತಿಗಳು ತಬ್ಬಿ ಮಲಗುವ ಹೊತ್ತಿನಲ್ಲಿ ದಂಪತಿ ಶಬ್ದದ ವ್ಯಾಕರಣವನ್ನು ಚಿಂತಿಸುತ್ತಿದ್ದರೆ ಹೆಂಡತಿ ಅಪಾರ್ಥಮಾಡಿಕೊಳ್ಳಳೇ" ಎಂಬರ್ಥದ ಚಟಾಕಿಗಳವರೆಗೆ ಹಲವು ಕುಶಾಲುತೋಪುಗಳೂ ಹಾರಾಡಿದುವು.

ಅದೇನೇ ಇರಲಿ, ಇಡೀ ಚರ್ಚೆ ಸ್ವಾರಸ್ಯಕರವೂ, ರಸಪೂರ್ಣವೂ, ಬೋಧಪ್ರದವೂ ಆಗಿದ್ದು, ವಿದ್ವಚ್ಚಿಂತನೆಯ ಹಲವು ಧಾರೆಗಳ ಪರಿಚಯ ಇದರಿಂದಾಗುತ್ತದೆಂಬುದರಲ್ಲಿ ಸಂಶಯವೇ ಇಲ್ಲ.  ಫೇಸ್ಬುಕ್ಕಿನ ಲೋಡುಗಟ್ಟಲೆ ಪೋಸ್ಟು ಕಾಮೆಂಟುಗಳ ಹೋರಿನಲ್ಲಿ ಕಳೆದೇಹೋಗಬಹುದಾದ ಇದು ಭಾಷಾಸಕ್ತರಿಗೆ ಒಂದು ಉತ್ತಮ ಸಾಹಿತ್ಯವಾಗಬಹುದೆಂಬ ಆಶಯದಿಂದ ಮಿತ್ರ ಶ್ರೀ HK Vadirajರು ಇಡೀ ಚರ್ಚೆಗೆ ಸಂಬಂಧಿಸಿದ ಎಲ್ಲ ಲೇಖನಗಳನ್ನೂ ಶ್ರಮಪಟ್ಟು ಹುಡುಕಿ ಸಂಕಲಿಸಿ ಮಹದುಪಕಾರ ಮಾಡಿದ್ದಾರೆ.  ಈ ಎಲ್ಲ ಚರ್ಚೆಗಳೂ ಅವು ಬಂದ ಕಾಲಕ್ರಮದಲ್ಲಿಯೇ ಈ ಕೆಳಗಿನ ಲಿಂಕುಗಳಲ್ಲಿ ಲಭ್ಯ:

ಮೊದಲಿಗೆ, ಅಂಕಣಕಾರರಾದ ಶ್ರೀವತ್ಸ ಜೋಶಿ ಅವರ "ಸ್ವಚ್ಛ ಭಾಷೆ ಅಭಿಯಾನ":
https://m.facebook.com/story.php?story_fbid=10156010284494403&id=702289402

ಇದಕ್ಕೆ ಪ್ರತಿಕ್ರಿಯೆಯಾಗಿ ಅವಧಾನಿ ಮಹೇಶ್ ಭಟ್ ಅವರ ಲೇಖನ:
https://m.facebook.com/story.php?story_fbid=1844384135611529&id=100001198802804

ಜೋಶಿಯವರ ಲೇಖನವನ್ನು ಪ್ರಶ್ನಿಸಿ ಮಂಜುನಾಥ ಕೊಳ್ಳೇಗಾಲರ ಲೇಖನ:
https://m.facebook.com/story.php?story_fbid=10156663102719500&id=594419499

ಅಷ್ಟಾವಧಾನಿ ಗಣೇಶ್ ಕೊಪ್ಪಲತೋಟ ಮತ್ತು ಮಹೇಶ್ ಭಟ್ ಅವರ ಲೇಖನಗಳು (ಮಂಜುನಾಥ ಜಿ.ಎಸ್ ಅವರ ಗೋಡೆಯಿಂದ):
https://m.facebook.com/story.php?story_fbid=2162966403754330&id=100001229739036

ಶ್ರೀವತ್ಸ ಜೋಶಿ ಅವರ ಉತ್ತರ:
https://m.facebook.com/story.php?story_fbid=10156050311074403&id=702289402

ಇದಕ್ಕೆ ಪ್ರತಿಕ್ರಿಯೆಯಾಗಿ ಮಹೇಶ್ ಭಟ್ ಅವರ ಲೇಖನ:
https://m.facebook.com/story.php?story_fbid=1852225824827360&id=100001198802804

 ಮಂಜುನಾಥ ಕೊಳ್ಳೇಗಾಲ ಅವರ ಲೇಖನ:
https://m.facebook.com/story.php?story_fbid=10156673637909500&id=594419499

ಶತಾವಧಾನಿ ಗಣೇಶ್ ಅವರ ಅಭಿಪ್ರಾಯರೂಪದ ಲೇಖನ (ಮಹೇಶ್ ಭಟ್ ಅವರ ಗೋಡೆಯಿಂದ):
https://m.facebook.com/story.php?story_fbid=1853298334720109&id=100001198802804

 ಅಜಕ್ಕಳ ಗಿರೀಶ್ ಭಟ್ ಅವರ ಲೇಖನ:
https://m.facebook.com/story.php?story_fbid=2139638819400319&id=100000626655367

ಪೂರಕ ಓದಿಗೆ ಶರತ್ ಭಟ್ ಸೆರಾಜೆ ಅವರ ಲೇಖನಗಳು
https://m.facebook.com/story.php?story_fbid=10160781971760167&id=590310166

ಮತ್ತೊಂದು:
https://m.facebook.com/story.php?story_fbid=10160785351870167&id=590310166

ಕೊನೆ ಕುಟುಕು:
https://m.facebook.com/story.php?story_fbid=1526535430823155&id=100004001390819