Sunday, May 31, 2020

ಸಂಸ್ಕೃತದಿಂದ ಪ್ರಾಕೃತವೋ ಪ್ರಾಕೃತದಿಂದ ಸಂಸ್ಕೃತವೋ?

ಈ ಚರ್ಚೆ ವಿದ್ವದ್ವಲಯದಲ್ಲಿ ಚರ್ವಿತಚರ್ವಣವೆನಿಸಬಹುದು.  ನಾನು ಹೇಳುತ್ತಿರುವುದರಲ್ಲಿ ಹೊಸದೇನೂ ಇಲ್ಲ.  ಆದರೂ ಈ ಪ್ರಶ್ನೆ ಪದೇಪದೇ ಬರುತ್ತಲೇ ಇರುವುದರಿಂದ, ಉತ್ತರವೂ ಪುನರಾವರ್ತನೆಯಾಗುವುದು ಸಹಜವಷ್ಟೇ  ಆದ್ದರಿಂದ ಈ ಲೇಖನ ಈಗಾಗಲೇ ಇದನ್ನು ತಿಳಿದವರಿಗಾಗಿ ಅಲ್ಲ, ಇನ್ನೂ ಈ ಪ್ರಶ್ನೆಯಿರುವವರಿಗಾಗಿ ಅಷ್ಟೇ.

ಈ ಲೇಖನದ ವಸ್ತು, ಹಿರಿಯಮಿತ್ರರಾದ ಶ್ರೀ ಸುಧೀಂದ್ರ ದೇಶಪಾಂಡೆಯವರು ಫೇಸ್ಬುಕ್ ಚರ್ಚೆಯೊಂದರಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ - "ಸಂಸ್ಕೃತವು ಪ್ರಾಕೃತದಿಂದ (ಪ್ರಾಕೃತ ಇದರರ್ಥ; ಪ್ರಕೃತಿಸಹಜವಾದದ್ದು, ಆಡುಮಾತು. natureದಿಂದ ಹುಟ್ಟಿದ natural) ಹುಟ್ಟಿದೆಯೇ ಹೊರತು, ಪ್ರಾಕೃತವು ಸಂಸ್ಕೃತದಿಂದ ಹುಟ್ಟಿಲ್ಲ. ಗ್ರಂಥಭಾಷೆಯಿಂದ ಆಡುನುಡಿಯು ಹುಟ್ಟುವುದೋ, ಆಡುನುಡಿಯಿಂದ ಗ್ರಾಂಥಿಕ ಭಾಷೆ ಹುಟ್ಟುವುದೋ ಎನ್ನುವುದನ್ನು ಪ್ರಾಜ್ಞರು ತಿಳಿದೇ ಇದ್ದಾರೆ"

ಪ್ರಾಕೃತ-ಸಂಸ್ಕೃತಗಳ ಗೂಡಿಗೆ ಕೈಯಿಕ್ಕುವ ಮೊದಲು, ಮೇಲಿನ ಅಭಿಪ್ರಾಯದ ಕೊನೆಯ ವಾಕ್ಯಕ್ಕೆ ಉತ್ತರಿಸಿಬಿಡುತ್ತೇನೆ - ಅದು ಸರಳ.  ಗ್ರಂಥಭಾಷೆಯಿಂದ ಆಡುನುಡಿ ಹುಟ್ಟುವುದೋ ಆಡುನುಡಿಯಿಂದ ಗ್ರಾಂಥಿಕಭಾಷೆ ಹುಟ್ಟುವುದೋ?  ಗ್ರಂಥಭಾಷೆಯಿಂದ ಆಡುನುಡಿ ಹುಟ್ಟುವುದೆಂಬುದನ್ನು ಯಾರೂ ಒಪ್ಪತಕ್ಕದ್ದಲ್ಲ, ಕಾರಣ ಸ್ಪಷ್ಟವಾಗಿಯೇ ಇದೆ - ಏಕೆಂದರೆ ಅಕ್ಷರ ಬರದವರೂ ಭಾಷೆಯನ್ನು ಮಾತಾಡುತ್ತಾರೆ, ಇದರಲ್ಲಿ ಶಂಕೆಯಿಲ್ಲ.  ಆದರೆ ಆಡುನುಡಿಯಿಂದ ಗ್ರಾಂಥಿಕಭಾಷೆ ಹುಟ್ಟುವುದೆಂಬುದೂ ಅತಿವಾದವೇ.  ಏಕೆಂದರೆ ಆಡುನುಡಿಗಳ ಹಲವು ಪ್ರಭೇದಗಳಿರುತ್ತವೆ, ಅವುಗಳಿಂದ ನೇರವಾಗಿ ಗ್ರಂಥಭಾಷೆ ಹುಟ್ಟುವುದಿಲ್ಲ, ಹಾಗೆ ಹುಟ್ಟಿದರೆ ಒಂದೊಂದು ಆಡುನುಡಿಯ ಪ್ರಭೇದಕ್ಕೂ ಒಂದೊಂದು ಗ್ರಂಥಭಾಷೆಯಿರಬೇಕಾಗುತ್ತದೆ.  ಆದರೆ ವಸ್ತುಸ್ಥಿತಿ ಹಾಗಿಲ್ಲವಲ್ಲ.  ಆದ್ದರಿಂದ ಆಡುನುಡಿಗೂ ಗ್ರಂಥಭಾಷೆಗೂ ಮೂಲವಾದ ಭಾಷಾರೂಪವೊಂದು ಇರಲೇಬೇಕು.  ಒಂದುಕಡೆ, ಆ ಮೂಲರೂಪವೇ ಹಲವು ಪ್ರದೇಶಗಳಲ್ಲಿ ಬೇರೆಬೇರೆ ರೀತಿ ಸವೆಸವೆದು ಬೇರೆಬೇರೆಯ ಭಾಷಾಪ್ರಭೇದಗಳಾಗುತ್ತದೆ (ಇವು ಆಡುನುಡಿಗಳು), ಮತ್ತೆ ಅದೇ ಮೂಲರೂಪವನ್ನೇ ಪರಿಶೋಧಿಸಿ ಅದು ಅನುಸರಿಸುವ ವ್ಯಾಕರಣನಿಯಮಗಳನ್ನು ಸೂತ್ರೀಕರಿಸಿದಾಗ ಗ್ರಂಥಭಾಷೆಯ ಉದ್ಭವವಾಗುತ್ತದೆ.  ಇದರ ಅಗತ್ಯವಾದರೂ ಏನೆಂದರೆ, ಅಕ್ಷರರೂಪದಲ್ಲಿರುವ ಭಾಷೆಯು ಮುಖಭಾವ, ದೇಹದ ಚಲನೆ, ಧ್ವನಿಯ ಏರಿಳಿತಗಳ ಸಹಾಯವಿಲ್ಲದೇ ಕೇವಲ ತನ್ನಿಂತಾನೇ ಸಂವಹನಗೊಳ್ಳಬೇಕಿರುವುದರಿಂದ ಅದು ಹೆಚ್ಚು ನಿಖರವಾಗಿ, ಸಂದೇಹಕ್ಕೆಡೆಯಿಲ್ಲದಂತಿರಬೇಕಾಗುತ್ತದೆ.  ಇದು ಸಾಧ್ಯವಾಗಬೇಕೆಂದರೆ ಭಾಷೆಯು ಯಾವ ನಿಯಮಗಳನ್ನು ಅನುಸರಿಸುತ್ತದೆಂಬುದರ ಸ್ಪಷ್ಟತೆಯೂ, ಬಳಕೆಯಲ್ಲಿ ಕೂಡಿದ ಮಟ್ಟಿಗೂ ಏಕರೂಪತೆಯೂ ಅತ್ಯಗತ್ಯವಾಗುತ್ತದೆ.  ಆದ್ದರಿಂದಲೇ ಗ್ರಂಥಭಾಷೆಗೆ ಆಡುಮಾತಿನಲ್ಲಿಲ್ಲದ ಒಂದು ಔಪಚಾರಿಕತೆ, ವ್ಯಾಕರಣಬದ್ಧತೆ ಇರುತ್ತದೆ.  ಆದರೆ ಗ್ರಂಥಭಾಷೆ ಮತ್ತು ವಿವಿಧ ಆಡುನುಡಿಗಳು ಒಂದೇ ಮೂಲರೂಪದಿಂದ ಹೊಮ್ಮಿದ್ದೆಂಬುದನ್ನು ಗಮನದಲ್ಲಿಡಬೇಕು. 

ಇದೇ ಜಾಡನ್ನನುಸರಿಸಿ ಈಗ ಚರ್ಚೆಯನ್ನು ಮುಂದುವರೆಸೋಣ. ಪ್ರಾಕೃತ ಮೊದಲು, ಸಂಸ್ಕೃತ ಆಮೇಲೆ ಎಂಬ ಮಾತು ಬೇರೆಯದೇ ಚರ್ಚೆ - ಯಾವಯಾವ ಪ್ರಾಕೃತಗಳು ಯಾವಯಾವಾಗ ಹುಟ್ಟಿದುವು, ಸಂಸ್ಕೃತ ಹುಟ್ಟಿದ್ದು ಯಾವಾಗ ಇತ್ಯಾದಿ - ಆದರೆ ಅದು ಇಲ್ಲಿನ ಚರ್ಚೆಯ ವಿಷಯವಲ್ಲ; ಇಲ್ಲಿ ನಾವು ಚರ್ಚಿಸುವುದು ಪ್ರಾಕೃತದಿಂದ ಸಂಸ್ಕೃತ ಹುಟ್ಟಿತೋ ಸಂಸ್ಕೃತದಿಂದ ಪ್ರಾಕೃತವೋ ಎಂಬ ಬಗ್ಗೆ ಮಾತ್ರ.

ಮೊದಲಿಗೆ, ಪ್ರಾಕೃತ-ಸಂಸ್ಕೃತ ಎಂಬ ಹೆಸರಿನ ಒಂದು ಅರ್ಥವನ್ನಷ್ಟೇ ಹಿಡಿದು ಭಾಷಾಮೂಲದ ವ್ಯಾಖ್ಯಾನ ಮಾಡುವುದು ಸರಿಯಲ್ಲ.  ಪ್ರಾಕೃತ = ಪ್ರಕೃತಿಯಿಂದ ಹುಟ್ಟಿದ್ದು ಎಂಬ ಅರ್ಥವನ್ನು ಹಿಡಿದರೆ, ಅದನ್ನು ಎಷ್ಟು ಮೂಲಕ್ಕಾದರೂ ಕೊಂಡೊಯ್ಯಬಹುದು - ಉದಾಹರಣೆಗೆ ಗಾಳಿ ಸುಯ್ಯನೆ ಬೀಸುತ್ತದೆ, ಗಿಡಮರಗಳು ಸರ್ರಬರ್ರನೆ ಆಡುತ್ತವೆ, ನದಿ ಜುಳುಜುಳು ಹರಿಯುತ್ತದೆ, ಪಕ್ಷಿಗಳು ಚಿಲಿಪಿಲಿಗುಟ್ಟುತ್ತವೆ, ನಾಯಿ ಭೌಗುಟ್ಟುತ್ತದೆ, ಹುಲಿ 'ಗರ್'ಜಿಸುತ್ತದೆ - ಇವೆಲ್ಲ ಪ್ರಾಕೃತಿಕಶಬ್ದಗಳೇ.  ಪ್ರಕೃತಿಯದೇ ಒಂದು ಭಾಗವಾದ ಮಾನವ ಕೂಡ ತನ್ನ ವಿಶಿಷ್ಟವಾದ ಧ್ವನಿಪೆಟ್ಟಿಗೆಯ ಸಹಾಯದಿಂದ ಸಾವಿರಾರು ಧ್ವನಿಗಳನ್ನು ಹೊರಡಿಸಬಲ್ಲ, ಇವೆಲ್ಲದರ 'ಭಾಷಾರೂಪ' ಪ್ರಾಕೃತ.  ಹೀಗೆಂದುಬಿಟ್ಟರೆ ಪ್ರಪಂಚದ ಎಲ್ಲ ಮೂಲಭಾಷೆಗಳೂ ಪ್ರಾಕೃತಗಳೇ; ಅವುಗಳನ್ನು ಹಿಡಿದು ಸಂಸ್ಕರಿಸಿ ವ್ಯಾಕರಣದ ಚೌಕಟ್ಟಿಗಳವಡಿಸಿಬಿಟ್ಟರೆ ಅಂತಹ ಎಲ್ಲ ಭಾಷೆಗಳೂ ಸಂಸ್ಕೃತವೇ; ಆ ದೃಷ್ಟಿಯಿಂದ ನಮ್ಮ ಕೊಳ್ಳೇಗಾಲದ ಕನ್ನಡ, ಕುಂದಾಪ್ರಕನ್ನಡ, ಹವಿಗನ್ನಡ ಇವೆಲ್ಲವೂ ಪ್ರಾಕೃತಗಳೆಂದೂ, ಅವುಗಳ ಆಧಾರದ ಮೇಲೇ ರೂಪಿತವಾದ ಮೈಸೂರು, ಮಂಗಳೂರು, ಧಾರವಾಡ ಕನ್ನಡಗಳು ಅರೆಸಂಸ್ಕೃತವೆಂದೂ, ಅವುಗಳನ್ನು ಹಿಡಿದು ವ್ಯಾಕರಣಬಂಧಕ್ಕೊಳಪಡಿಸಿದ ಗ್ರಾಂಥಿಕ ಕನ್ನಡವೇ ಸಂಸ್ಕೃತವೆಂದೂ ಕರೆಯಬೇಕಾಗುತ್ತದೆ.  ಆದರೆ ವಸ್ತುತಃ, ಕನ್ನಡವು ಸಂಸ್ಕೃತವಲ್ಲ, ಅಲ್ಲವೇ? ಎರಡೂ ಬೇರೆಬೇರೆ ಭಾಷೆಗಳು!

ಜೊತೆಗೆ ಪ್ರಾಕೃತ=ಪ್ರಕೃತಿಯಿಂದ ಮಾಡಲ್ಪಟ್ಟದ್ದು ಎಂಬ ವ್ಯಾಖ್ಯಾನವನ್ನಿಟ್ಟುಕೊಂಡರೆ ಇನ್ನೆಷ್ಟು ಗಲಿಬಿಲಿಗಳುಂಟಾಗುತ್ತವೆ ನೋಡೋಣ.

ನಮ್ಮಲ್ಲಿ ಅನೇಕರು ತಿಳಿದಿರಬಹುದಾದಂತೆ ಪ್ರಾಕೃತವೆಂಬುದು "ಒಂದು" ಭಾಷೆಯಲ್ಲ - "ಪಲವುಂ ಕನ್ನಡಂಗಳ್" ಎಂಬಂತೆ ಪಲವುಂ ಪ್ರಾಕೃತಂಗಳ್ ಇವೆ - ಶೌರಸೇನೀ, ಪೈಶಾಚೀ, ಅಪಭ್ರಂಶ, ಮಾಗಧೀ, ಅರ್ಧಮಾಗಧೀ, ವೈದರ್ಭೀ (ಮಹಾರಾಷ್ಟ್ರೀ), ಜೈನ, ಪಾಲಿ ಹೀಗೆ.  ಇವೆಲ್ಲವೂ ತಮ್ಮದೇ ವಿಶಿಷ್ಟತೆಯನ್ನು ಹೊಂದಿರುವವಾದರೂ ಇವುಗಳ ನಡುವಿನ ಸಾಮ್ಯವೂ ಕಡೆಗಣಿಸಲಾಗದಂಥದ್ದು - ಉಚ್ಚಾರಣೆ, ವ್ಯಾಕರಣ, ಪದಸಂಪತ್ತು ಮೊದಲಾದುವುಗಳಲ್ಲಿ - ಈ ಸಾಮ್ಯ ತಮಿಳು-ಕನ್ನಡಗಳ ಸಾಮ್ಯಕ್ಕಿಂತ ಹತ್ತಿರದ್ದು, ಧಾರವಾಡ-ಮೈಸೂರು ಕನ್ನಡಗಳ ಸಾಮ್ಯಕ್ಕಿಂತ ದೂರದ್ದು.  ಆದ್ದರಿಂದ ಇವು ಸೋದರಭಾಷೆಗಳೋ, ಒಂದೇ ಭಾಷೆಯ ಪ್ರಭೇದಗಳೋ ಯಾರ ಊಹೆಗಾದರೂ ಬಿಟ್ಟದ್ದು.  ಜೊತೆಗೆ ಈ ಪ್ರಾಕೃತಗಳನ್ನಾಡುವ ಪ್ರದೇಶಗಳು ಒಂದರಿಂದೊಂದು ಬಹುದೂರದವೆಂಬುದನ್ನು ಗಮನದಲ್ಲಿಡಿ - ಶೌರಸೇನೀ ಉತ್ತರಪ್ರದೇಶದ್ದಾದರೆ, ವೈದರ್ಭೀ ಮಹಾರಾಷ್ಟ್ರದ್ದು.  ಎಲ್ಲವೂ ಒಂದಿನ್ನೊಂದರ ಪ್ರಭಾವವಿಲ್ಲದೇ 'ಪ್ರಾಕೃತಿಕ'ವಾಗಿಯೇ ಹುಟ್ಟಿದವೆನ್ನುವುದಾದರೆ, ಅವುಗಳ ನಡುವಣ ಅಚ್ಚರಿಗೊಳಿಸುವ ಸಾಮ್ಯವನ್ನು ಹೇಗೆ ವಿವರಿಸುತ್ತೀರಿ?  ಭಾಷೆಗಳ ನಡುವೆ ಕೊಡುಕೊಳ್ಳುವಿಕೆ, ಒಂದು ಪ್ರದೇಶದಿಂದ ಮತ್ತೊಂದಕ್ಕೆ ಜನರ ವಲಸೆ ಇದರಿಂದ ಭಾಷೆಗಳು ಪರಸ್ಪರ ಪ್ರಭಾವಿತವಾಗುವುದು ಸಾಮಾನ್ಯ, ಒಪ್ಪೋಣ.  ಆದರೆ ಅವು ಭಾಷೆಯೊಂದನ್ನು ಎಷ್ಟೇ ಅತಿಯಾಗಿ ಪ್ರಭಾವಿಸಿದರೂ ಭಾಷೆಯ ಹಂದರವನ್ನೇ ಬದಲಿಸಿಬಿಡುವುದಿಲ್ಲ, ಅಲ್ಲವೇ?  ಈಗ, ಕನ್ನಡಿಗನಿಗೆ ತಮಿಳು ಅರ್ಥವಾಗುವುದಿಲ್ಲ, ತಮಿಳನಿಗೆ ಕನ್ನಡ ಅರ್ಥವಾಗುವುದಿಲ್ಲ, ಎರಡೂ ಬೇರೆಬೇರೆಯ ಭಾಷೆಗಳು.  ಆದರೆ ನೀವು ಕಾಲದಲ್ಲಿ ಹಿಂದುಹಿಂದಕ್ಕೆ ಪಯಣಿಸಿದಂತೆ ತಮಿಳು ಕನ್ನಡಗಳ ಭೇದಗಳು ಕಡಿಮೆಯಾಗುವುದನ್ನು ಗಮನಿಸಬಹುದು.  ಆದ್ದರಿಂದಲೇ ತಮಿಳು ಕನ್ನಡಗಳೆರಡೂ ಒಂದೇ ಭಾಷಾಕುಟುಂಬಕ್ಕೆ ಸೇರಿದುವೆಂದೂ, ಮೂಲಮಾತೃಕೆಯಾದ ಒಂದು ದ್ರಾವಿಡಭಾಷೆಯಿಂದ ಕವಲೊಡೆದುವೆಂದೂ ಭಾಷಾಶಾಸ್ತ್ರಜ್ಞರು ಒಪ್ಪಿದ್ದಾರಲ್ಲವೇ?  ಇದೇ ಮಾತು ಈ ಪ್ರಾಕೃತಗಳಿಗೂ ಅನ್ವಯಿಸುತ್ತವೆ.  ಹಾಗಾದರೆ, ಈ ಎಲ್ಲ ಪ್ರಾಕೃತಗಳಿಗೂ ಮೂಲಮಾತೃಕೆಯೊಂದಿದೆಯೆಂದಮೇಲೆ, ಈ ಒಂದೊಂದು ಪ್ರಾಕೃತವೂ ಪ್ರಕೃತಿಯಿಂದ ಸ್ಥಳೀಯವಾಗಿಯೇ ಮಾಡಲ್ಪಟ್ಟದ್ದು ಎನ್ನುವ ವಾದ ಬಿದ್ದುಹೋಗುತ್ತದೆ ತಾನೆ?  ಹಾಗಿದ್ದರೆ ಅದಕ್ಕೆ 'ಪ್ರಾಕೃತ' (ಪ್ರಕೃತಿಯಿಂದ ಮಾಡಲ್ಪಟ್ಟದ್ದು) ಎಂದೇಕೆ ಕರೆಯುತ್ತಾರೆ?  ಈ ಪ್ರಶ್ನೆ ಏಕೆ ಬರುತ್ತಿದೆಯೆಂದರೆ, ಪ್ರಾಕೃತ = ಪ್ರಕೃತಿಯಿಂದ ಮಾಡಲ್ಪಟ್ಟದ್ದು ಎನ್ನುವ ವ್ಯಾಖ್ಯೆಯನ್ನು ನಾವು ಹಿಡಿದಿರುವುದರಿಂದ.  ಅದು ಈ ಸಂದರ್ಭಕ್ಕೆ ಹೊಂದುವಂಥದ್ದೇ ಅಲ್ಲ.  ಪ್ರಕೃತ = ಮಾಡಲ್ಪಟ್ಟ, ಇರುವ ಇತ್ಯಾದಿ; ಪ್ರಾಕೃತ = ಪ್ರಕೃತದಲ್ಲಿ ಬಳಕೆಯಲ್ಲಿರುವುದು - ಇದು ಸರಿಯಾದ ವ್ಯಾಖ್ಯಾನ.  ಸಂಸ್ಕೃತ-ಪ್ರಾಕೃತ ಈ ಜೋಡಿಯ ಸಂದರ್ಭದಲ್ಲಿ ಹೇಳುವುದಾದರೆ ('ಸಂಸ್ಕೃತ'ದ ವಿಷಯ ಆಮೇಲೆ ನೋಡೋಣ), ಪ್ರಕೃತದಲ್ಲಿ ಬಳಕೆಯಲ್ಲಿರುವ ಭಾಷಾಪ್ರಭೇದಗಳೇ ಪ್ರಾಕೃತಗಳು (ಎಂದರೆ ಇವುಗಳ ಮೂಲರೂಪ ಹೇಗೋ ಇತ್ತು, ಆದರೆ ಇವತ್ತು ಬಳಕೆಯಲ್ಲಿರುವುದು ಹೀಗೆ)

ಈ ವಿವಿಧ ಪ್ರಾಕೃತಗಳ ಪರಸ್ಪರ ಸಾಮ್ಯವಿರಲಿ, ಪ್ರಾಕೃತ-ಸಂಸ್ಕೃತದ ನಡುವಣ ಸಾಮ್ಯವನ್ನೊಮ್ಮೆ ಗಮನಿಸಿ.  ಉದಾಹರಣೆಗೆ ಈ ಕೆಳಗಿನ ಪದ್ಯವನ್ನೊಮ್ಮೆ ನೋಡೋಣ:

ಭವಭೂಇಜಲಹಿಣಿಗ್ಗಯಕವ್ವಾಮಯರಸಕಣಾ ಇವಾ ಫುರಂತಿ
ಜಸ್ಸ ವಿಸೇಸಾ ಅಜ್ಜವಿ ವಿಯಡೇಸು ಕಹಾಣಿವೇಸೇಸು||

ಇದು ವಾಕ್ಪತಿರಾಜನ "ಗಉಡವಹೋ" (ಸಂ. ಗೌಡವಧಾ) ಎಂಬ ಪ್ರಾಕೃತಕಾವ್ಯದಲ್ಲಿ ಬರುವ ಭವಭೂತಿಕವಿಯ ಪ್ರಶಂಸೆ.  "ಭವಭೂತಿಯೆಂಬ ಜಲಧಿಯನ್ನು ಕಡೆದಾಗ ಸ್ಫುರಿಸಿದ ಕಾವ್ಯಾಮೃತರಸದ ಕೆಲವು ಕಣಗಳು ನನ್ನ ಈ ಕಥಾನಿವೇಶದಲ್ಲಿ ಇಂದಿಗೂ ಪ್ರಕಟಗೊಳ್ಳುತ್ತವೆ" ಇದು ಇದರ ಸ್ಥೂಲಾರ್ಥ, ವಾಕ್ಪತಿರಾಜನು ಭವಭೂತಿಯನ್ನು ಸ್ಮರಿಸಿಕೊಳ್ಳುವ ರೀತಿ.  ನಮಗೆ ಈ ಭಾಷೆಯ ಪರಿಚಯವಿಲ್ಲದಿದ್ದರೂ, ಸಂಸ್ಕೃತದ ಅಲ್ಪಪರಿಚಯವಾದರೂ ಇದ್ದವರಿಗೆ ಈ ಪದ್ಯವನ್ನು ಓದಿದಾಗ ತೀರ ಅಪರಿಚಿತವೆಂದೇನು ಅನ್ನಿಸುವುದಿಲ್ಲ - ಪದಗಳು ವಿಚಿತ್ರವೆನಿಸಬಹುದು, ಆದರೆ ಅದರ ಲಯ, ಶೈಲಿ, ವ್ಯಾಕರಣ ಇವಾವುವೂ ಅಪರಿಚಿತವೆನಿಸುವುದಿಲ್ಲ.  ಈಗ ಮೇಲಿನ ಪದ್ಯದ ಸಂಸ್ಕೃತ ಅನುವಾದವನ್ನೇ ನೋಡಿಬಿಡೋಣ:

ಭವಭೂತಿಜಲಧಿನಿರ್ಗತಕಾವ್ಯಾಮೃತರಸಕಣಾ ಇವ ಸ್ಫುರಂತಿ
ಯಸ್ಯ ವಿಶೇಷಾ ಅದ್ಯಪಿ ವಿಕಟೇಷು ಕಥಾನಿವೇಶೇಷು||

ಎಷ್ಟು ವ್ಯತ್ಯಾಸವಿದೆ?  ಸಂಸ್ಕೃತದ ಭವಭೂತಿ ಇಲ್ಲಿ ಭವಭೂಇ ಆದ (ಕೆಲವು ಪ್ರಾಕೃತಗಳಲ್ಲಿ ಬವಬೂಯಿ), ಜಲಧಿಯು ಜಲಹಿ ಆಯಿತು (ಕೆಲವು ಪ್ರಾಕೃತಗಳಲ್ಲಿ ಜಳಹಿ), ನಿರ್ಗತವು ಣಿಗ್ಗಯವಾಯಿತು, ಅದ್ಯಪಿ > ಅಜ್ಜವಿ; ಕಥಾನಿವೇಶ > ಕಹಾಣಿವೇಸ - ಹೀಗೆ ರೂಪಗಳು ವ್ಯತ್ಯಾಸವಾದುವೇ ವಿನಾ ಉಳಿದದ್ದೆಲ್ಲವೂ ಹಾಗೇ ಇವೆಯಲ್ಲ.

ಹಾಗಿದ್ದರೆ ಸಂಸ್ಕೃತಪ್ರಾಕೃತಗಳೆರಡಕ್ಕೂ ಹೊಕ್ಕುಳಬಳ್ಳಿಯ ಸಂಬಂಧವಿದೆಯೆಂದಂತಾಯಿತಲ್ಲವೇ?  ಯಾವುದರಿಂದ ಯಾವುದು ಹುಟ್ಟಿತು?  ಪ್ರಾಕೃತ = ಪ್ರಕೃತಿಯಿಂದ ಮಾಡಲ್ಪಟ್ಟಿದ್ದು, ಸಂಸ್ಕೃತ = ಅದನ್ನು ಸಂಸ್ಕರಿಸಿದ್ದು ಎನ್ನುವ ವ್ಯಾಖ್ಯೆಯ ಆಧಾರದ ಮೇಲೆ, "ಪ್ರಾಕೃತವೇ ಮೊದಲು, ಅದರಿಂದ ಬಂದದ್ದು ಸಂಸ್ಕೃತ" ಎಂದು ಇದುವರೆಗೆ ವಾದಿಸುತ್ತಿದ್ದೆವು.  ಆದರೆ ಪ್ರಾಕೃತವೆಂಬುದರ ವ್ಯಾಖ್ಯೆ ಹಾಗಲ್ಲವೆಂಬುದನ್ನು ಮೇಲೇ ನೋಡಿದೆವಲ್ಲ - ಪ್ರಾಕೃತವೆಂದರೆ ಪ್ರಕೃತದಲ್ಲಿ ಬಳಕೆಯಲ್ಲಿರುವುದೆಂದಷ್ಟೇ ಅರ್ಥ, ಆದಿಯಿಂದಲೂ (Natural ಆಗಿ) ಹೀಗೇ ಇತ್ತಂದಲ್ಲ.  ಸರಿ, ಪ್ರಾಕೃತವೆಂಬುದರ ವ್ಯಾಖ್ಯೆ ಹೇಗಾದರೂ ಇರಲಿ, ಸಂಸ್ಕೃತವು ಪ್ರಾಕೃತದಿಂದಲೇ ಹುಟ್ಟಿಲ್ಲವೆಂದು ಹೇಗೆ ಹೇಳುತ್ತೀರಿ?  ಪ್ರಾಕೃತವೆಂದರೆ ಸದ್ಯ ಬಳಕೆಯಲ್ಲಿರುವುದು ಎಂದಿರಬಹುದು, ಆದರೆ ಸಂಸ್ಕೃತವೆಂದರೆ "ಸಂಸ್ಕರಿಸಲ್ಪಟ್ಟ ಭಾಷೆ" ಎಂಬ ಅರ್ಥವಂತೂ ಇದೆಯಲ್ಲ - ಪ್ರಾಕೃತವನ್ನು 'ಸಂಸ್ಕರಿಸಿ' ಪಡೆದ ಭಾಷೆಯೇ ಸಂಸ್ಕೃತ ಎಂದು ಇನ್ನೂ ವಾದಿಸಬಹುದು.  ಹೀಗೆ ವಾದ ಹೂಡುವಾಗ ಭಾಷೆಯ ಬೆಳವಣಿಗೆಯ ಸಹಜ ಹರಿವನ್ನು ಗಮನಸಲ್ಲಿಡಬೇಕಾಗುತ್ತದೆ.  ಈಗ ನೋಡಿ, ನಿರ್ಗತ-ಣಿಗ್ಗಯ ಇವುಗಳಲ್ಲಿ ಯಾವುದು ಕ್ಲಿಷ್ಟ, ಯಾವುದು ಸರಳ?  ಸ್ಫುರಂತಿ-ಪುರಂತಿ ಇವುಗಳ ನಡುವೆ?  ಹಾಗೆಯೇ ವಿಶೇಷಾ-ವಿಸೇಸಾ, ವಿಕಟ-ವಿಯಡ.  ಈ ಜೋಡಿಗಳಲ್ಲಿ ಎರಡನೆಯ ಪದವೇ ಉಚ್ಚಾರಣೆಗೆ ಸುಲಭವಲ್ಲವೇ?  ಸರಳವಾದ ಕನ್ನಡದ ಉದಾಹರಣೆಯನ್ನೇ ಕೊಡುವುದಾದರೆ, "ನಾನು ಹೋಗುತ್ತೇನೆ" ಎನ್ನುವುದು ಸರಳವೋ, "ನಾ ವೊಯ್ತಿನಿ" ಎನ್ನುವುದೋ?  "ನಾ ವೊಯ್ತಿನಿ" ಎನ್ನುವುದು ಸರಳ.  "ನಾನು ಹೋಗುತ್ತೇನೆ" ಎನ್ನುವುದನ್ನು ಉಚ್ಚಾರಣೆಯ ಸೌಲಭ್ಯಕ್ಕೆ ತಕ್ಕಂತೆ "ನಾ ವೊಯ್ತಿನಿ" ಎಂದು ಮಾಡಿಕೊಂಡಿತು ನಾಲಿಗೆ.  ಎಂದ ಮೇಲೆ ಮೊದಲಿದ್ದದ್ದು ಯಾವುದು?  ನಾನು ಹೋಗುತ್ತೇನೆ ಎಂಬುದೋ ನಾ ವೊಯ್ತಿನಿ ಎಂಬುದೋ?  ನಾ ವೊಯ್ತಿನಿ ಎಂಬುದೇ ಮೊದಲಿದ್ದದ್ದು, ಅದನ್ನು 'ಸಂಸ್ಕರಿಸಿ' ನಾನು ಹೋಗುತ್ತೇನೆ ಎಂಬ ಮಾತು ಕಟ್ಟಲ್ಪಟ್ಟಿತು ಎಂಬ ವಾದವು ಎಷ್ಟು ಸಹಜವೆನಿಸಬಹುದು?  ಸದ್ಯಕ್ಕೆ, ವಾದಕ್ಕಾಗಿ ಈ ವಾದವನ್ನೇ ಒಪ್ಪೋಣ, ನಾ ವೊಯ್ತಿನಿ ಎಂಬುದೇ ಮೊದಲಿದ್ದುದು, ನಾನು ಹೋಗುತ್ತೇನೆ ಎಂಬುದು ಅದರ 'ಸಂಸ್ಕರಿಸಿದ' ರೂಪ.  ಈ ವಾದದಿಂದ ಹೊರಡುವ ತೊಡಕುಗಳನ್ನು ನೋಡಿ.  "ನಾ ವೊಯ್ತಿನಿ" ಎನ್ನುವುದು ನಮ್ಮ ಮೈಸೂರು ಕಡೆ ನಿರ್ದಿಷ್ಟ ಸಮುದಾಯಗಳ ನಡುವಷ್ಟೇ ಇರುವ ಬಳಕೆ - ಇತರರು "ನಾ ಹೋಗ್ತೀನಿ", "ನಾ ಹೋಗ್ತೇನೆ" ಎಂದೂ ಹೇಳುತ್ತಾರೆ.  ಮಂಗಳೂರು/ಕುಂದಾಪುರದ ಕಡೆ "ನಾ ಹೋಗ್ತೆ/ಹೋಗ್ತ್ನೆ/ಹೋತ್ನೆ" ಎನ್ನುತ್ತಾರೆ (ಹಾಗೆಂದುಕೊಂಡಿದ್ದೇನೆ, ಆ ಕಡೆಯವರು ತಿದ್ದಬಹುದು), ಕೊಯಮತ್ತೂರಿನ ಕಡೆಯವರು "ನಾ ಹೋಪೆ" ಎನ್ನುತ್ತಾರೆ, ಧಾರವಾಡದ ಕಡೆ "ನಾ ಹೊಕ್ಕೀನಿ" ಎನ್ನುತ್ತಾರೆ (ಮತ್ತೆ, ತಪ್ಪಿದ್ದರೆ ತಿದ್ದಬಹುದು); ಕೆಲವು ಬ್ರಾಹ್ಮಣಪಂಗಡಗಳಲ್ಲಿ "ನಾ ಹೋಗ್ತೇನು" ಎಂದೂ ಹೇಳುತ್ತಿದ್ದರು (ಕೈಲಾಸಂ ಈ ರೂಪವನ್ನು ತಮ್ಮ ನಾಟಕಗಳಲ್ಲಿ ಬಳಸಿದ್ದಾರೆ ಕೂಡ) ಈಗ ವೊಯ್ತಿನಿ, ಹೋಗ್ತೀನಿ, ಹೋಗ್ತೇನೆ, ಹೋಗ್ತೇನು, ಹೋಗ್ತೆ, ಹೋಗ್ತ್ನೆ, ಹೋತ್ನೆ, ಹೋಪೆ, ಹೊಕ್ಕೀನಿ ಇವುಗಳಲ್ಲಿ ಯಾವುದು ಮೂಲರೂಪ, ಯಾವುದರಿಂದ ಯಾವುದು ಹುಟ್ಟಿತು, ಈ ಒಂದೊಂದು ರೂಪವೂ ಬಂದದ್ದಾದರೂ ಹೇಗೆ?  ಈ ಒಂದೊಂದು ರೂಪವೂ "ಹೋಗುತ್ತೇನೆ" ಎಂದೇ ಪರಿವರ್ತನೆಗೊಂಡದ್ದಾದರೂ ಹೇಗೆ?  ಹಾಗೆ ಪರಿವರ್ತಿಸಿದ ನಿರ್ದಿಷ್ಟ ವ್ಯಾಕರಣಸೂತ್ರವಾವುದು? (ಹೋಗುತ್ತೇನೆ ಎಂಬುದರಿಂದ ಇವು ಹುಟ್ಟಿದುವು ಎನ್ನುವುದಕ್ಕಾದರೆ ಒಂದೇ ವಿವರಣೆ - ನಾಲಿಗೆಯ ಸೌಲಭ್ಯ), ಆದರೆ ಅವುಗಳಿಂದಲೇ ಇದು ಹುಟ್ಟಿತು ಎನ್ನುವುದಕ್ಕಾದರೆ ನಾಲಿಗೆಯ ಸೌಲಭ್ಯ ಎಂಬ ವಿವರಣೆ ಸಲ್ಲುವುದಿಲ್ಲ, ಹೋಗುತ್ತೇನೆ ಎಂಬುದು ಇವೆಲ್ಲಕ್ಕಿಂತ ಕ್ಲಿಷ್ಟರೂಪ, ಮತ್ತು ನಾಲಿಗೆ ಯಾವಾಗಲೂ ಕ್ಲಿಷ್ಟತೆಯಿಂದ ಸರಳತೆಗೆ ಜಾರುವುದೇ ಹೊರತು, ವಿರುದ್ಧದಿಕ್ಕಿನಲ್ಲಲ್ಲ.  ಅಲ್ಲದೇ ವೊಯ್ತಿನಿ, ಹೋಗ್ತೆ, ಹೋಗ್ತ್ನೆ ಮುಂತಾದುವುಗಳಿಂದ ಹೋಗುತ್ತೇನೆ ಎನ್ನುವ ರೂಪ ಬರಬೇಕಾದರೆ, ಅಲ್ಲಿ ಮುಖ್ಯವಾಗುವುದು ನಾಲಿಗೆಯ ಸೌಲಭ್ಯವಲ್ಲ, ವ್ಯಾಕರಣಬದ್ಧತೆ (ಗ್ರಾಂಥಿಕಭಾಷೆಯಲ್ಲಿ ವ್ಯಾಕರಣವೇ ಮುಖ್ಯವಷ್ಟೇ?).  ಹಾಗಿದ್ದರೆ ಈ ಒಂದೊಂದು ರೂಪದಿಂದಲೂ "ಹೋಗುತ್ತೇನೆ" ಎನ್ನುವ ರೂಪವೇ ಸಿದ್ಧಿಸಬೇಕಾದರೆ ಅಲ್ಲಿ ಬಳಸಿದ ವ್ಯಾಕರಣ ಯಾವುದು?  "ಹೋಗುತ್ತೇನೆ" ಎನ್ನುವುದಕ್ಕಾದರೆ ವ್ಯಾಕರಣದ ವಿವರಣೆಯಿದೆ - ಹೋಗು ಎನ್ನುವ ಧಾತುವಿಗೆ "ತ್ತೇನೆ" ಎನ್ನುವ ಕಾಲಸೂಚಕಪ್ರತ್ಯಯ ಸೇರಿ ಹೋಗುತ್ತೇನೆ ಎಂದಾಯಿತು.  ಹೀಗೇ ಈ ಬಳಕೆಯ ರೂಪಗಳನ್ನು ವಿವರಿಸಲಿಕ್ಕಾಗುತ್ತದೆಯೇ?  ಇದರಿಂದ ಏನು ಸಾಬೀತಾಯಿತು?  ಹೋಗುತ್ತೇನೆ ಎಂಬುದೇ ಮೂಲರೂಪ, ಅದರಿಂದ ಹುಟ್ಟಿದ್ದು ವೊಯ್ತಿನಿ, ಹೋಗ್ತೆ, ಹೋಗ್ತ್ನೆ ಇತ್ಯಾದಿ ರೂಪಗಳು, ಅಲ್ಲವೇ? ಒಂದು ಮೂಲದಿಂದ ಹಲವು ರೂಪಗಳು ಹೊಮ್ಮುವುದು ಸಹಜ, ಆದರೆ ಒಂದೇ ರೂಪಕ್ಕೆ ಹಲವು ಮೂಲಗಳಿರಲಾರವಷ್ಟೇ?  ಜೊತೆಗೆ ನೋಡಿ, ಒಯ್ತಿನಿ ಎನ್ನುವುದು ಹೋಗುತ್ತೇನೆ ಎಂಬುದರ ಬಳಕೆಯ ರೂಪವೂ ಆಗಬಹುದು, ಒಯ್ಯುತ್ತೇನೆ ಎನ್ನುವುದರ ಬಳಕೆಯ ರೂಪವೂ ಆಗಬಹುದು. ಹೀಗಾಗಿ ಒಯ್ತೀನಿ ಎನ್ನುವುದರ ವ್ಯುತ್ಪತ್ತಿಯನ್ನು ಅದೇ ರೂಪದಲ್ಲಿ ವಿವರಿಸುವುದು ಸಾಧ್ಯವೇ ಇಲ್ಲ; ಹೋಗುತ್ತೇನೆ ಮತ್ತು ಒಯ್ಯುತ್ತೇನೆ ಎಂಬ ರೂಪಗಳಲ್ಲೇ ವ್ಯುತ್ಪತ್ತಿಯನ್ನು ವಿವರಿಸಬೇಕು. ಎಂದ ಮೇಲೆ ಯಾವುದು ಮೂಲ?

ಇದೇ ತರ್ಕವನ್ನು ಜಲಧಿ-ಜಲಹಿ/ಜಳಹಿ, ನಿರ್ಗತ-ಣಿಗ್ಗಯ, ಸ್ಫುರಂತಿ-ಪುರಂತಿ, ವಿಶೇಷ-ವಿಸೇಸ, ವಿಕಟ-ವಿಯಡ ಇವುಗಳಿಗೆ ಅನ್ವಯಿಸಿ ನೋಡಿ?  ಎರಡನೆಯ ಪದಗಳಿಂದಲೇ ಮೊದಲಿನವು ಹುಟ್ಟಿದುವೆಂದರೆ, ಅವುಗಳ ವ್ಯುತ್ಪತ್ತಿವಿವರಣೆ, ಬೇರೆಬೇರೆ ಹಲವು ರೂಪಗಳಿಂದ ಒಂದೇ ಸಂಸ್ಕೃತಪದ ಹುಟ್ಟಿದ್ದಾದರೂ ಹೇಗೆ ಮೊದಲಾದ ವಿವರಣೆಗಳು ಬೇಕಲ್ಲವೇ? ಜೋಡಿಯ ಮೊದಲ ಪದಗಳಿಗೆ ವ್ಯುತ್ಪತ್ತಿವಿವರಣೆಯಿದೆ.  ಎರಡನೆಯ ಪದಗಳಿಗೆ ಅಂತಹ ವಿವರಣೆಯಿಲ್ಲ.  ಅವು ಮೊದಲ ಪದಗಳಿಂದ ನಾಲಿಗೆಯ ಸೌಲಭ್ಯಕ್ಕನುಗುಣವಾಗಿ ಹುಟ್ಟಿದವು ಎಂಬುದು ಸ್ಪಷ್ಟವಾಯಿತಲ್ಲವೇ?  ತತ್ಸಮದಿಂದ ಹುಟ್ಟಿದ್ದು ತದ್ಭವವೇ ಹೊರತು ತದ್ಭವದಿಂದಲೇ ತತ್ಸಮವು ಹುಟ್ಟುವುದಿಲ್ಲವಷ್ಟೇ?

ಹಾಗಿದ್ದರೆ ಈಗ ಬಹುಮುಖ್ಯವಾದ ಪ್ರಶ್ನೆಯೇಳುತ್ತದೆ - 'ಸಂಸ್ಕೃತ' ಎಂಬುದು ಸಂಸ್ಕರಿಸಿದ ಭಾಷೆ ತಾನೆ?  "ಪ್ರಾಕೃತದಿಂದ ಸಂಸ್ಕರಿಸಿದ ಭಾಷೆ ಸಂಸ್ಕೃತ" ಎನ್ನುವುದು ಸ್ಪಷ್ಟವಾಗಿಯೇ ಇದೆಯಲ್ಲ.  ಇದಕ್ಕೇನು ಸಮಾಧಾನ?  ಸಮಾಧಾನವಿದೆ.  ಪ್ರಾಕೃತ ಎಂದರೆ ಪ್ರಕೃತಿಜನ್ಯವಾದ ಭಾಷೆಯಲ್ಲ, ಪ್ರಕೃತ ಬಳಕೆಯಲ್ಲಿರುವ ಭಾಷೆ ಎಂಬುದನ್ನು ಮೇಲೆ ನೋಡಿದೆವು.  ಪ್ರಾಕೃತದಿಂದ 'ಸಂಸ್ಕೃತ'ವು ಹುಟ್ಟಲು ಸಾಧ್ಯವಿಲ್ಲ ಎಂಬುದನ್ನೂ ಮೇಲೆಯೇ ನೋಡಿದೆವು.  ಹಾಗಿದ್ದರೆ ಸಂಸ್ಕೃತವು ಹುಟ್ಟಿದ್ದೆಲ್ಲಿಂದ?  ಅದು 'ಸಂಸ್ಕರಿಸಿದ ಭಾಷೆ' ಅಲ್ಲವೇ?  ಖಂಡಿತಾ ಹೌದು, ಆದರೆ ಪ್ರಾಕೃತದಿಂದ 'ಸಂಸ್ಕರಿಸಿ' ಪಡೆದದ್ದಲ್ಲ.  ಸಂಸ್ಕೃತದ ಮೂಲಮಾತೃಕೆ ವೇದಭಾಷೆ (ಗುರುತಿಸುವ ಸೌಲಭ್ಯಕ್ಕಾಗಿ ವೇದಭಾಷೆಯನ್ನು ವೈದಿಕಸಂಸ್ಕೃತವೆಂದೂ, ಅದಲ್ಲದ, ಪಾಣಿನಿಪ್ರಣೀತವಾದ ವ್ಯಾವಹಾರಿಕಸಂಸ್ಕೃತವನ್ನು ಲೌಕಿಕ/ಪಾಣಿನೀಯಸಂಸ್ಕೃತವೆಂದೂ ಕರೆಯುತ್ತೇವೆ, ಆದರೆ ವೇದಭಾಷೆಗೆ ಮೂಲತಃ 'ಸಂಸ್ಕೃತ'ವೆಂಬ ಹೆಸರಿದ್ದಿಲ್ಲ, 'ಸಂಸ್ಕೃತ'ವೆಂಬುದೇನಿದ್ದರೂ ವೇದಭಾಷೆಯನ್ನು ಪರಿಷ್ಕರಿಸಿ, 'ಸಂಸ್ಕರಿಸಿ' ಪಡೆದ ಪಾಣಿನೀಯ ಸಂಸ್ಕೃತ).  ಈ ವೇದಭಾಷೆ ಜನಬಳಕೆಗೆ ಹತ್ತಿರವಾದದ್ದು.  ಮೇಲೆ ಹಲವು ಪ್ರಾಕೃತಗಳನ್ನು ವಿವರಿಸುತ್ತಾ, ಅವಕ್ಕೆ ಮೂಲಮಾತೃಕೆಯೊಂದಿರಬೇಕೆಂದಿದ್ದೆನಲ್ಲವೇ?  ಆ ಮೂಲಮಾತೃಕೆಯೇ ವೇದಭಾಷೆ.  ವೇದಭಾಷೆಯೇ ಬಳಕೆಯಲ್ಲಿ ಸವೆಸವೆದು ವಿವಿಧ ಸ್ಥಳೀಯ ಪ್ರಾಕೃತಗಳಾಗಿ ರೂಪುಗೊಂಡದ್ದು.  ಇದು ಯಾವಾಗ ಸವೆಯಲು ಶುರುವಾಯಿತು, ಯಾವಯಾವಾಗ ಎಲ್ಲೆಲ್ಲಿ ಎಷ್ಟೆಷ್ಟು ಸವೆಯಿತು ಎಂಬುದನ್ನು ಹೇಳಬರುವುದಿಲ್ಲವಷ್ಟೇ?  ಜೊತೆಗೆ ಈ ಪ್ರಾಕೃತಗಳ ಮೂಲಮಾತೃಕೆಯಾದ ವೇದಭಾಷೆಯೇ ಜನಬಳಕೆಗೆ ಹತ್ತಿರವಿದ್ದುದರಿಂದ ಅದರಲ್ಲೂ ಕ್ರಮೇಣ ಸಹಜವಾಗಿಯೇ ಬಳಕೆಯಿಂದುಂಟಾಗುವ ಶೈಥಿಲ್ಯಗಳೂ, 'ಅಪ'ರೂಪಗಳೂ, ನಿರ್ದಿಷ್ಟ ನಿಯಮಗಳಿಗೆ ಕಟ್ಟುಬೀಳದ ಹೊಸಹೊಸ ಪ್ರಯೋಗಗಳೂ ಕಾಲಕ್ರಮದಲ್ಲಿ ಹೇರಳವಾಗಿ ಸೇರಿ, ವೇದಭಾಷೆಯಿಂದಾಚೆಗೂ ಹೊರವಾಗಿ ಬೆಳೆದ ಅಗಾಧವಾದ ವ್ಯಾವಹಾರಿಕಭಾಷೆಯೊಂದು ಪಾಣಿನಿಯ ಕಾಲಕ್ಕಾಗಲೇ ಅಸ್ತಿತ್ವದಲ್ಲಿತ್ತು; ಜೊತೆಗೆ ಇದನ್ನು ವಿವರಿಸುವ ವಿವಿಧ ವ್ಯಾಕರಣಗಳೂ - ಈ ಇವೆಲ್ಲವನ್ನೂ ಸೂತ್ರೀಕರಿಸಿ ನಿಯಮಗಳ ಮೂಲಕ ವಿವರಿಸಿದ್ದು, ನಿಯಮಕ್ಕೆ ಅಳವಡಿಸುವಲ್ಲಿನ ತೊಡಕುಗಳನ್ನು ನಿವಾರಿಸಿ 'ಸಂಸ್ಕರಿಸಿ'ದ್ದು, ತನ್ನ ಕಾಲದಲ್ಲಿ ಬಳಕೆಯಲ್ಲಿದ್ದ ಭಾಷೆಯ ಹಲವು ನಿಯಮಬದ್ಧವಲ್ಲದ ರೂಪಗಳಿಗೆ 'ಸರಿ'ಯಾದ ರೂಪಗಳನ್ನು ಹೇಳಿದ್ದು ಪಾಣಿನಿ.  ಪಾಣಿನಿಪ್ರಣೀತವಾದ, ಪರಿಶೋಧಿಸಲ್ಪಟ್ಟ ಈ ಭಾಷೆಯೇ 'ಸಂಸ್ಕೃತ'ವೆಂದು ಬಳಕೆಗೆ ಬಂತು (ಪಾಣಿನಿಗೂ ಮೊದಲೇ ಹಲವರು ವೈಯಾಕರಣರು ವ್ಯಾಕರಣವನ್ನು ರಚಿಸಿದ್ದಾರಾದರೂ ಪಾಣಿನೀಯವ್ಯಾಕರಣವು ಗಟ್ಟಿಯಾಗಿ ನೆಲೆನಿಂತಿತು)

ಈ ಚರ್ಚೆಯಿಂದ ಸ್ಪಷ್ಟವಾಗಿ ತಿಳಿದುಬರುವ ಅಂಶವೆಂದರೆ, ಹಲವು ಪ್ರಭೇದಗಳನ್ನು ಹೊಂದಿದ ಪ್ರಾಕೃತವೂ, ನಾವಿವತ್ತು ಸಂಸ್ಕೃತವೆಂದು ಕರೆಯುವ ಪಾಣಿನೀಯಸಂಸ್ಕೃತವೂ ವೇದಭಾಷೆಯೆಂಬ ಒಂದೇ ಮೂಲಮಾತೃಕೆಯಿಂದ ಹುಟ್ಟಿದ್ದು.  ಪ್ರಾಕೃತಗಳು ವೇದಭಾಷೆಯ ಆಡುನುಡಿಗಳಾದರೆ, 'ಸಂಸ್ಕೃತ'ವು ವೇದಭಾಷೆಯ ಪರಿಷ್ಕೃತರೂಪ.

ಮುಂದೆ ಈ ಪ್ರಾಕೃತಗಳೇ ಹಲವು ಬೇರೆಬೇರೆ ಭಾಷೆಗಳ ಪ್ರಭಾವಕ್ಕೊಳಗಾಗಿ ಹಲವಾರು ಭಾಷೆಗಳು ಹುಟ್ಟಿಕೊಂಡುವೆಂಬುದು ಬೇರೆಯೇ ವಿಷಯ; ಸದ್ಯಕ್ಕೆ ಇಷ್ಟು ಸಾಕೆನಿಸುತ್ತದೆ.

Tuesday, May 26, 2020

ಪಂಡಿತಸಮಾರಾಧನೆಗೆ ಕೃತಜ್ಞತಾಸಮರ್ಪಣೆ

ಈ ಲೇಖನವನ್ನು ಬ್ಲಾಗಿನಲ್ಲಿ ಹಾಕುವ ಉದ್ದೇಶವಿರಲಿಲ್ಲ, ಏಕೆಂದರೆ ಇದು ಫೇಸ್ಬುಕ್ಕಿನಲ್ಲಿ ಒಂದೂವರೆ ವರ್ಷದ ಹಿಂದೆ (09/10/2018) 'ದಂಪತಿ' ಶಬ್ದದ ವಿಚಾರದಲ್ಲಿ ನಡೆದ ಚರ್ಚೆಯೊಂದಕ್ಕೆ ಪ್ರತಿಕ್ರಿಯಾರೂಪದ ಲೇಖನ.  ಈ ವಿಷಯಕ್ಕೆ ಸಂಬಂಧಿಸಿದ ನನ್ನ ಮೂಲಲೇಖನವನ್ನು ಹಿಂದೊಮ್ಮೆ ಬ್ಲಾಗಿನಲ್ಲೇ ಪ್ರಕಟಿಸಿದ್ದೆ (ಆಸಕ್ತರು ಅದನ್ನು ಇಲ್ಲಿ ಓದಬಹುದು). ಅದೂ ಅಂಕಣಕಾರರಾದ ಶ್ರೀ ಶ್ರೀವತ್ಸಜೋಷಿಯವರ ಫೇಸ್ಬುಕ್ ಲೇಖನಕ್ಕೆ ಪ್ರತಿಕ್ರಿಯೆಯೇ, ಆದರೆ ಅದು ಪೂರ್ಣಪ್ರಮಾಣದ ಲೇಖನ.  ಆಮೇಲೆ ಫೇಸ್ಬುಕ್ಕಿನಲ್ಲಿ ಇದರ ಬಗ್ಗೆ ಸಾಕಷ್ಟು ವಾದವಿವಾದಗಳು ನಡೆದು ಅದಕ್ಕೆ ಶ್ರೀ ಜೋಶಿಯವರಿಂದ ಅತ್ಯುಗ್ರರೂಪದ ಖಂಡನೆಯೊದಗಿತ್ತು.  ಆ ಖಂಡನೆಗೆ ಪ್ರತಿಕ್ರಿಯೆಯಾಗಿ ಬರೆದದ್ದು ಈ ಕೆಳಕಂಡ ಲೇಖನ.  ವಿಷಯವೇನೋ ವಿದ್ವದ್ವಿಷಯವೇ ಆಗಿದ್ದರೂ, ಖಂಡನೆಯೊಂದಕ್ಕೆ ಬರೆದ ಪ್ರತಿಕ್ರಿಯೆ ಇದಾದ್ದರಿಂದ ವಿಷಯಮಂಡನೆಗಿಂತ ಘಾತುಕವಾದ ಖಂಡನವಾದಗಳೇ ಇಲ್ಲಿ ಹೆಚ್ಚಿರುವುದು ಸಹಜವೇ - ಅದೇ ಕಾರಣಕ್ಕೇ ಬ್ಲಾಗಿನಲ್ಲಿ ಬರುವ ಯೋಗ್ಯತೆ ಈ ಲೇಖನಕ್ಕಿಲ್ಲವೆಂದು ತರ್ಕಿಸಿ ಫೇಸ್ಬುಕ್ಕಿನಲ್ಲಷ್ಟೇ ಈ ಪ್ರತಿಕ್ರಿಯೆಯನ್ನು ಹಾಕಿ ಸುಮ್ಮನಾಗಿದ್ದೆ.  ಆದರೆ ಅದೇನೋ ಕಾರಣದಿಂದ ಫೇಸ್ಬುಕ್ಕಿನಿಂದ ಈ ಲೇಖನ ಮಾಯವಾಗಿತ್ತು.  ಶ್ರೀ ಜೋಶಿಯವರ ಖಂಡನಲೇಖನಕ್ಕೆ ಅದರಡಿಯಲ್ಲೇ ಹಾಕಿದ್ದ ಪ್ರತ್ಯುತ್ತರಗಳನ್ನು ಸೇರಿಸಿ ತಯಾರಿಸಿದ ಲೇಖನವೇ ಇದಾಗಿದ್ದರೂ, ಅದನ್ನು ಫೇಸ್ಬುಕ್ಕಿನ ನನ್ನ ಗೋಡೆಯ ಮೇಲೆ ಪ್ರಕಟಿಸಿದನಂತರ ಅದಕ್ಕೆ ಅನೇಕ ತಿದ್ದುಪಡಿಗಳನ್ನು ಮಾಡಿ ಲೇಖನವನ್ನು ಬಹುವಾಗಿ ಬೆಳೆಸಿದ್ದೆನಾದ್ದರಿಂದ, ಲೇಖನವು ಮಾಯವಾದಾಗ ಅದೆಲ್ಲವೂ ಮಾಯವಾಯ್ತು.  ಅದೃಷ್ಟವಶಾತ್ ಈ ಲೇಖನವು ಫೇಸ್ಬುಕ್ಕಿನ ನನ್ನ ಗೋಡೆಯ ಮೇಲೆ ಮರಳಿ ಕಾಣಿಸಿಕೊಂಡದ್ದನ್ನು ಇವತ್ತಷ್ಟೇ ಗಮನಿಸಿದೆ.  ಮತ್ತೆ ಕಳೆದುಹೋಗಬಾರದೆಂದು ಈಗ ಈ ಲೇಖನವನ್ನು ಬ್ಲಾಗಿನಲ್ಲೂ ಪ್ರಕಟಿಸುತ್ತಿದ್ದೇನಷ್ಟೇ.  ಇದರ ಫೇಸ್ಬುಕ್ ಅವತರಣಿಕೆ ಇಲ್ಲಿದೆ:

ಈಗ ಲೇಖನಕ್ಕೆ:
===========
ಮಾನ್ಯ Srivathsa Joshiಯವರೇ, ತಾವು ದಿನಾಂಕ ೮ ಅಕ್ಟೋಬರ್ ೨೦೧೮ರಂದು "‘ವಚನ’ಭ್ರಷ್ಟ ‘ವಿದ್ವಾಂಸ’ರಿಗೆ ಸಾಮೂಹಿಕ ಸಮಾರಾಧನೆ" ಎಂಬ ಶೀರ್ಷಿಕೆಯಡಿಯಲ್ಲಿ ಹಲವು ಪಂಡಿತರೊಡನೆ ನನ್ನನ್ನೂ ಕೂರಿಸಿ ಸಮಾರಾಧನೆ ಮಾಡಿದಿರಿ (https://www.facebook.com/srivathsa.joshi/posts/10156050311074403). 'ವಿದ್ವಾಂಸ'ರ ಸಾಲಿನಲ್ಲಿ ಕೂರಲು ನಾನು ಸರ್ವಥಾ ಅನರ್ಹನಾದರೂ, ನಿರ್ದಿಷ್ಟವಾಗಿ ನನ್ನನ್ನೇ ಟ್ಯಾಗ್ ಮಾಡಿ, ನನ್ನನ್ನು ಆ ಸಾಲಿನಲ್ಲಿ ಕೂರಿಸಿದ ತಮ್ಮ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ. ಅದಕ್ಕೆ ಕೃತಜ್ಞತಾಪೂರ್ವಕವಾದ ಧನ್ಯವಾದಗಳನ್ನು ಇದೋ ಸ್ವೀಕರಿಸಿ.

ಮೊದಲಿಗೆ, ನಮಸ್ಕಾರಗಳು. ಪರಸ್ಪರ ಸಂಭಾಷಣೆಯಲ್ಲಿ ಸುಸಂಸ್ಕೃತಿಯ ಮಿತಿಯಲ್ಲಿ ನಾನು ತಿರುಗಿ ಕೊಡಬಹುದಾದದ್ದೆಂದರೆ ಇದೊಂದೇ ನೋಡಿ - ಪ್ರತಿನಮಸ್ಕಾರ. ಉಳಿದದ್ದನ್ನು ತಿರುಗಿ ಕೊಡಲಾರೆ - ಏಕೆಂದರೆ ಸಂಸ್ಕೃತಿಯ ಮಿತಿಮೀರಿದ ದನಿ ಮನುಷ್ಯರ ದನಿಯಂತಿರುವುದಿಲ್ಲವೆಂಬುದನ್ನು ನಾನು ನೋಡಿ, ಕೇಳಿ ಬಲ್ಲೆ - ಅಷ್ಟು ಮಟ್ಟಿಗೆ ನಾನು ಸೋತೆ, ಗೆಲುವು ನಿಮ್ಮದೇ 🙏. ಆದ್ದರಿಂದ ವಿಷಯ-ವಸ್ತುವಿನ ಚರ್ಚೆಗೆ ಹೊರತಾದ ನಿಮ್ಮ ಮಾತುಗಳೊಂದನ್ನೂ ನಾನು ಸ್ವೀಕರಿಸಿಲ್ಲ. ಸ್ವೀಕರಿಸದ ವಸ್ತು ತಮಗೆ ಮರಳುವುದು ಸಹಜವೇ, ಸ್ವೀಕರಿಸಿ.

ಅದಾಯಿತಲ್ಲ, ನಿಮ್ಮ ಫೋಟೋ ಆಲ್ಬಮಿಗೆ "ವಸ್ತುನಿಷ್ಠವಾಗಿ" ಉತ್ತರಿಸುವುದಕ್ಕೆ ಮೊದಲು ತಮಗೂ ಮತ್ತು ತಮ್ಮ ಜೋರುಬಾಯಿನ ಗತ್ತಿಗೆ ಬೆಚ್ಚಿ ಮೆಚ್ಚಿ (ಹಿನ್ನೆಲೆಯನ್ನು ಮಾತ್ರ ಅರಿಯುವ ಗೋಜಿಗೆ ಹೋಗದೇ) ಆನಂದತುಂದಿಲರಾಗಿರುವ ತಮ್ಮ ಹಲವು ಹಿಂಬಾಲಕರಿಗೂ ಕೆಲವು ಸ್ಪಷ್ಟನೆ/ಪ್ರಶ್ನೆ (ಅದು ಪ್ರಯೋಜನವಿಲ್ಲ, ಆದರೂ ದಾಖಲೆಯಲ್ಲಿರಲಿ ಎಂಬ ಉದ್ದೇಶವಷ್ಟೇ). ಮೊದಲನೆಯದಾಗಿ, ತಾವು ಹೀಗೆ ವಾಚಾಮಗೋಚರವಾಗಿ ಬೈದಾಡಿ ಬರೆಯುವುದೇ ತಕ್ಕ ಪ್ರತಿಕ್ರಿಯೆಯೆನಿಸುವಷ್ಟು ನಿಮ್ಮನ್ನು ಪ್ರಚೋದಿಸಿದ ಒಂದೇ ಒಂದು ವಾಕ್ಯವನ್ನಾದರೂ ನನ್ನ ಕಾಮೆಂಟಿನಲ್ಲಾಗಲೀ, ನಿಮ್ಮ ಅಂಚೆಗೆ ಪ್ರತಿಕ್ರಿಯೆಯಾಗಿ ಬರೆದ ನನ್ನ ಲೇಖನದಿಂದಲಾಗಲೀ ಎತ್ತಿ ತೋರಿಸುವಿರಾ? ವ್ಯಾಖ್ಯಾನ ಬೇಡ, ನೀವೀಗ ತೋರಿಸಿದಿರಲ್ಲ 'ಡಿಜಿಡಿಜೈನ್' ಫೋಟೋ ಆಲ್ಬಮ್ ಅಂಥದ್ದಲ್ಲದಿದ್ದರೂ ಒಂದೋ ಎರಡೋ ಫೋಟೋಗಳನ್ನಾದರೂ ತೋರಿಸಿ. ಮೊನ್ನೆ ನನ್ನ ವಾಲ್ ಮೇಲೆ ನೀವು ಇದೇ ಧಾಟಿಯಲ್ಲಿ ಮಾತಾಡಿದಾಗಲೂ ನಾನು ತಮ್ಮನ್ನು ಸಮಾಧಾನದಿಂದಲೇ ಇದೇ ಪ್ರಶ್ನೆ ಕೇಳಿದೆ - ನನ್ನ ಲೇಖನದಲ್ಲಿ ದುರ್ವಾದವನ್ನಾಗಲೀ, ನೀವೀಗ ಮಾಡಿದಂತೆ ವೈಯಕ್ತಿಕ ನಿಂದನೆಯನ್ನಾಗಲೀ ಕಂಡಿರಾ? ಕಂಡಿದ್ದರೆ ಹೇಳಿ, ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ ಎಂದು ನೆನ್ನೆಯೇ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ - ನಿಮ್ಮ ಈ ಅಸಹ್ಯ ಪ್ರತಿಕ್ರಿಯೆಗೆ ನನ್ನ ಯಾವ ಮಾತು ಕಾರಣವಾಗಿದ್ದೀತು? ಸರಿ-ತಪ್ಪನ್ನೇ ಕುರಿತಾದ ನಿಮ್ಮ ಲೇಖನದಲ್ಲಿ ಸರಿತಪ್ಪುಗಳ ಚರ್ಚೆಯನ್ನೆತ್ತಿದ್ದೇ ಕಾರಣವೇ? ನಾನು ಹೇಳಿದ್ದೆಲ್ಲಾ ಏನು? "ದಂಪತಿ ಏಕವಚನವೆಂದು ಹೇಳುತ್ತಿದ್ದೀರಿ, ಆದರೆ ಅದು ಏಕವಚನವಲ್ಲ, ಬಹುವಚನ - ತಪ್ಪು ಮಾಹಿತಿ ಹರಡದಿರಲಿ" ಎಂದೆನಷ್ಟೇ? ಇದು ಕೋಲುಮಾಸ್ತರಿಕೆಯೋ, "ದಂಪತಿ ಏಕವಚನ; ಬಹುವಚನ ಬಳಸಬೇಡಿ" ಎಂದು ತಾಕೀತು ಮಾಡುವುದು ಕೋಲುಮಾಸ್ತರಿಕೆಯೋ? ಅದೂ ತಮ್ಮ ಲೇಖನ ಸಾರ್ವಜನಿಕವಾಗಿದ್ದುದರಿಂದ, ನನ್ನ ಕಣ್ಣಿಗೂ ಬಿದ್ದುದರಿಂದ ಭಾಷೆಯ ಬಗೆಗಿನ ಕಳಕಳಿಯಿಂದಲೇ ಇದನ್ನಾದರೂ ಹೇಳಬೇಕಾಯಿತೇ ವಿನಾ, ನೀವು ಅದನ್ನು ನಿಮ್ಮ ಹಿಂಬಾಲಕರ ಗುಂಪಿನಲ್ಲಿ ಹಂಚಿಕೊಂಡಿದ್ದರೆ ನಾವು ಇಣುಕಿ ನೋಡಲಾದರೂ ಬರುತ್ತಿದ್ದೆವೇ? ಇಷ್ಟಕ್ಕೂ ನಾನೇನು ನನ್ನ ಮಾತನ್ನು ಗಾಳಿಯಲ್ಲಿ ಹೇಳಲಿಲ್ಲವಲ್ಲ ಸ್ವಾಮಿ, ಆಧಾರಗಳ ಮೂಲಕ ನಿರೂಪಿಸಿದ್ದೇನಷ್ಟೇ? ಆ ನನ್ನ ಇಡೀ ಬರಹದಲ್ಲಿ ನೀವೀಗ ತೋರುತ್ತಿರುವುದರ ಒಂದಂಶವಾದರೂ ದುರ್ವರ್ತನೆಯನ್ನು ಕಂಡಿರಾ? ಕಂಡಿದ್ದರೆ ತೋರಿಸಿ - ನೀವೇ ಬೇಕಿಲ್ಲ, ಯಾರು ತೋರಿಸಿದರೂ ಸರಿ, ದಯವಿಟ್ಟು ತೋರಿಸಿ. ಮತ್ತೂ ನನ್ನ ಲೇಖನ ಹೇಗೆ ಆರಂಭವಾಗಿದೆ ನೋಡಿ (ಚಿತ್ರ ೧ ನೋಡಿ)
 

ಈಗಲೂ ಪೂರ್ಣಲೇಖನ ಓದಿ ಅಭಿಪ್ರಾಯವನ್ನು ರೂಪಿಸಿಕೊಳ್ಳುವ ಆಸಕ್ತಿಯುಳ್ಳವರು ಅದನ್ನಿಲ್ಲಿ ನೋಡಬಹುದು (ಹಿನ್ನೆಲೆಯನ್ನರಿಯದೆಯೇ ಬಡಬಡಿಸುವವರ ವಿಷಯ ಬೇರೆ):

https://nannabaraha.blogspot.com/2018/10/blog-post.html

ತಾವಾಗಲೀ, ವಿಷಯದ ಹಿನ್ನೆಲೆಯರಿಯದೇ ಕೇವಲ ತಮ್ಮ ದೊಣ್ಣೆವರಸೆಯನ್ನು ನೋಡಿಯೇ ಉಘೇ ಎನ್ನುತ್ತಿರುವ ಇತರರಾಗಲೀ ಈ ಲೇಖನವನ್ನೊಮ್ಮೆ ನೋಡಿ, ನಿಮ್ಮ ದೊಣ್ಣೆ ಬೀಸಾಟಕ್ಕೆ ಏನಾದರೂ ಅಲ್ಲಿ ಕಾರಣವಿದೆಯೇ ತೋರಿಸಿದರೆ ನಾನು ಕೃತಜ್ಞ (ಇಲ್ಲಿ ನಿಮ್ಮ ಪ್ರತಿಕ್ರಿಯೆ ಸಮರ್ಥಿಸಿಕೊಳ್ಳಲು ಹಲವರು, ಇನ್ನಾರದೋ ಬರಹಗಳನ್ನು ಹಾಕಿ "ಇದು ತಪ್ಪಲ್ಲವಾ" ಎಂದು ಕೇಳುತ್ತಿದ್ದಾರೆ, ನನ್ನ ಉತ್ತರವಿಷ್ಟೇ - ಅದು ನಾನಲ್ಲ. ನನ್ನ ತಪ್ಪಿದ್ದರೆ ಮಾತ್ರ ತೋರಿಸಿ - ಇತರರ ಮಾತು ಇತರರಿಗೆ).

ಗಮನಿಸಿ, ಮೇಲೆ ಹೇಳಿದ ಅಷ್ಟೂ ಮಾತು ನಿಮ್ಮ ವೈಯಕ್ತಿಕ ಧಾಳಿಗೆ ಪ್ರತಿಕ್ರಿಯೆಯಷ್ಟೇ ನೀವು 'ಸಾಧಾರ'ವಾಗಿ ಉತ್ತರ ನೀಡಿದ್ದಕ್ಕಲ್ಲ. ನಿಮ್ಮ ’ಆಧಾರ’ಗಳಿಗೆ ಈಗ, ಈ ಮುಂದೆ ಉತ್ತರಿಸುತ್ತೇನೆ, ದಯವಿಟ್ಟು ನೋಡಿ:

ಮೊದಲಿಗೆ ತಾವು ಸರಿಯಾಗಿಯೇ ಗಮನಿಸಿದಂತೆ ೧೫ ಮತ್ತು ೧೬ನೇ ಪಾಯಿಂಟಿನ ಕಪ್ಪುಬಿಳುಪು ಚಿತ್ರಗಳು ನನ್ನ ನೆಚ್ಚಿನ ಆಸಕ್ತಿಯವು; ಅವನ್ನು ಒಮ್ಮೆ ನೋಡಿಬಿಡೋಣ, ಏಕೆಂದರೆ ಅದೊಂದೇ ನಾನು ತಮಗೆ ನೀಡಬಹುದಾದ ಗಂಭೀರ ಉತ್ತರ. ಉಳಿದದ್ದೆಲ್ಲಾ ’ಮಝಾಕ್’ ಪಾಯಿಂಟುಗಳು, ಅವಕ್ಕೆ ’ಮಝಾಕ್’ ಉತ್ತರಗಳಷ್ಟೇ. ಇರಲಿ, ಈಗ ಪಂಪನನ್ನು ನೋಡೋಣ. ನೀವು ನೀಡಿದ ಉದಾಹರಣೆ ಇದು "ನೆಱೆದತ್ತೆತ್ತಾನುಮೀ ದಂಪತಿಯ ಬಯಕೆ ಸಂಪೂರ್ಣಮಾದತ್ತು" (... ಎತ್ತೆತ್ತಲೂ ನೆರೆಯಿತು, ಈ ದಂಪತಿಯ ಬಯಕೆ ಸಂಪೂರ್ಣವಾಯಿತು). ಇದು ತಾನೆ ತಾವು ಕೊಟ್ಟ ಪ್ರಮಾಣ? "ದಂಪತಿಯ" ಎಂಬ ಏಕವಚನವಿಭಕ್ತಿ ಬಳಸಿದ್ದಾನೆಂಬುದು ನಿಮ್ಮ ಮಾತು; ಆದರೆ ದಂಪತಿ ವಿಷಯದಲ್ಲಿ ಏಕವಚನವಿಭಕ್ತಿಯಿದ್ದರೂ ಅರ್ಥದಲ್ಲಿ ಅದು ಏಕವಚನವಲ್ಲವೇ ಅಲ್ಲ, ಬಹುವಚನ ಎಂಬುದನ್ನು ನಾನು ಈಗಾಗಲೇ ನನ್ನ ಲೇಖನದಲ್ಲಿ ಪರಿಪರಿಯಾಗಿ ವಿವರಿಸಿದ್ದೇನಲ್ಲವೇ? ನಾನು ಕೊಟ್ಟ ಉದಾಹರಣೆಗಳಲ್ಲೇ ಅದನ್ನು ನೀಡಿದ್ದೇನಲ್ಲ, "ರೈಟ್" ಮಾರ್ಕಿನೊಂದಿಗೆ - ದಂಪತಿ ಕುಣಿಯುತ್ತಿದ್ದಾರೆ, ದಂಪತಿ ಮಲಗಿದ್ದಾರೆ ಇತ್ಯಾದಿ (ಮೇಲಿನ ಚಿತ್ರವನ್ನೊಮ್ಮೆ - ಚಿತ್ರ೧ - ದಯವಿಟ್ಟು ನೋಡಿ). ದಂಪತಿಯು/ಗಳು, ದಂಪತಿಯನ್ನು/ಗಳನ್ನು, ದಂಪತಿಯಿಂದ/ಗಳಿಂದ, ದಂಪತಿಗೆ/ಗಳಿಗೆ, ದಂಪತಿಯ/ಗಳ, ದಂಪತಿಯಲ್ಲಿ/ಗಳಲ್ಲಿ - ಯಾವ ವಿಭಕ್ತಿಯನ್ನೇ ಬಳಸಿದರೂ ಅದು ಅರ್ಥದಲ್ಲಿ ಬಹುವಚನವೇ, ಅವಕ್ಕೆ ಹತ್ತುವುದು ಬಹುವಚನಕ್ರಿಯಾಪದ ಮಾತ್ರ. ಇದು ಅರ್ಥವಾಗಬೇಕಾದರೆ ಅದಕ್ಕೊಂದು ಕ್ರಿಯಾಪದವನ್ನು ಬಳಸಿ ನೋಡಿ - ದಂಪತಿ ಕುಣಿಯುತ್ತಿದೆ, ದಂಪತಿ ಮಲಗಿದೆ ಇಂಥವು ರೂಢಿಯಲ್ಲೂ ಅಸಹ್ಯ, ಕವಿಪ್ರಯೋಗದಲ್ಲಿಯೂ ಇಲ್ಲ; ಏಕವಚನದ ವಿಭಕ್ತಿಯೇ ಇದ್ದರೂ ಅದರ ಕ್ರಿಯಾಪದವು ಬಹುವಚನವೇ ಆಗಿರುತ್ತದೆ - ದಂಪತಿ/ಗಳು ಕುಣಿಯುತ್ತಿದ್ದಾರೆ ದಂಪತಿ/ಗಳು ಮಲಗಿದ್ದಾರೆ. ನಾನು ಇದನ್ನು ತಾನೇ ನನ್ನ ಲೇಖನದಲ್ಲೂ ವಿವರಿಸಿದ್ದು? ನನ್ನ ಲೇಖನವನ್ನು ಇನ್ನೊಮ್ಮೆ ನೋಡಿ. ನನಗೆ ಅಂದಾಜಿದೆ, ನಿಮ್ಮ ಸಹನೆಯನ್ನು ಪರೀಕ್ಷಿಸುವುದಿಲ್ಲ. ನಾನು ಹಾಗೆ ಹೇಳಿದ ಲೇಖನದ ಭಾಗವನ್ನು ಇಲ್ಲಿ ಚಿತ್ರರೂಪದಲ್ಲಿ ಕೊಟ್ಟಿದ್ದೇನೆ ನೋಡಿ - ಅದರಲ್ಲಿ ಪ್ರೊ. ವೆಂಕಟಾಚಲಶಾಸ್ತ್ರಿಗಳ ದರ್ಪಣವಿವರಣದಿಂದಲೂ ಉದಾಹರಣೆಗಳನ್ನು ಕೊಟ್ಟಿದ್ದೇನೆ (ಚಿತ್ರ ೨ ನೋಡಿ):

ಇಷ್ಟಾಗಿಯೂ ದಂಪತಿ ಏಕವಚನವೇ ಎಂದು ನೀವು ಸಾಧಿಸುವುದಾದರೆ ಯಾವ ಉದಾಹರಣೆ ತೋರಿಸಬೇಕು? ದಂಪತಿ ಎಂಬುದಕ್ಕೆ ಏಕವಚನದ ಕ್ರಿಯಾಪದವಿರುವ ಪ್ರಯೋಗವನ್ನು ತಾನೆ? ಎಲ್ಲಿದೆ? ನೀವು ಕೊಟ್ಟ ಪ್ರಮಾಣದಲ್ಲಂತೂ "ದಂಪತಿಯ" ಎಂಬಷ್ಟೇ ಇರುವುದು - ಅಷ್ಟರಿಂದ ಅದು ಏಕವಚನವೆಂದು ಸಿದ್ಧವಾಯಿತೇ? ಅದನ್ನು ಹೇಗೆ ಬೆಳೆಸಬಹುದು ನೋಡಿದಿರಾ? "ದಂಪತಿಯ ಬಯಕೆ ನೆರವೇರಿತು" ಎಂಬುದನ್ನು "ಅವರು ಅದರಿಂದ ಸಂತೋಷಿಸಿದರು" ಎಂದು ಬೆಳೆಸಬಹುದೇ ಹೊರತು "ಅದು ಅದರಿಂದ ಸಂತೋಷಿಸಿತು" ಎಂದು ಬೆಳೆಸಬಹುದೇ? ಪಂಪ ಹಾಗೇನಾದರೂ ಬೆಳೆಸಿದ್ದಾನೆಯೇ ಎಲ್ಲಾದರೂ? - ದಂಪತಿಗೆ ಬಂದಿತು,ಹೋಯಿತು ಇತ್ಯಾದಿ ಏಕವಚನ ನಪುಂಸಕಲಿಂಗದ ಉದಾಹರಣೆಯಿದೆಯೇ ಪಂಪನಲ್ಲಿ? (ಗೂಗಲ್ ಮಾಡಿ ನೋಡಿ, ಸಿಕ್ಕೀತೋ). ಬದಲಿಗೆ ಅನೇಕ ಕವಿಗಳಿಂದ ಬಹುವಚನದ ಉದಾಹರಣೆಗಳನ್ನು ನೀಡಿದ್ದೇವೆ, ನಾನಿಲ್ಲಿ ಪಂಪನನ್ನೂ ಸೇರಿದಂತೆ ಅಂಥವು ಇನ್ನೂ ಹಲವನ್ನು ಕೊಡುತ್ತೇನೆ ನೋಡಿ (ಚಿತ್ರ ೩)
ಎಲ್ಲೆಡೆಯೂ ಒಂದೋ ದಂಪತಿಗೆ ಬಹುವಚನವಿಭಕ್ತಿ ಸೇರಿದೆ, ಅಥವಾ ಕ್ರಿಯಾಪದವು ಬಹುವಚನವಾಗಿದೆ. ವಿವರಣೆ ಇಲ್ಲಿದೆ:

೧) ಇದು ಪಂಪನ ವಿಕ್ರಮಾರ್ಜುನವಿಜಯದ ತೃತೀಯಾಶ್ವಾಸದ ೭೫ನೆ ಪದ್ಯವಾದಮೇಲೆ ಬರುವ ವಚನ. ಇಲ್ಲಿ ಸ್ವಾರಸ್ಯವೆಂದರೆ, ದಂಪತಿ ಪದ ಎರಡು ಬಾರಿ ಬಂದಿದೆ. ಮೊದಲನೆಯದು ಪತಂಗದಂಪತಿ - "ಪತಂಗದಂಪತಿಯಂತೆ" ಎನ್ನುತ್ತಾನೆ. ಇದಕ್ಕೆ ಏಕವಚನವಿಭಕ್ತಿಯಿದೆ, ಆದರೆ ಕ್ರಿಯಾಪದದ ಸಂಸರ್ಗವಿಲ್ಲದಿರುವುದರಿಂದ ಇದನ್ನು ಏಕವಚನವೆಂದು ಸಾಧಿಸಬರುವುದಿಲ್ಲ. ಇನ್ನೊಂದು "ಆ ದಂಪತಿಗಳ್" ಇಲ್ಲಿ ನಾಮಪದಕ್ಕೇ ಬಹುವಚನವಿಭಕ್ತಿಯಿರುವುದರಿಂದ ಅದು ನಿಸ್ಸಂದೇಹವಾಗಿ ಬಹುವಚನ - ಇಲ್ಲಿ ಏಕವಚನವಿಲ್ಲ.

೨) ಪಂಪನಿಂದಲೇ ಇನ್ನೊಂದು ಪದ್ಯ - ವಿಕ್ರಮಾರ್ಜುನದ ಪಂಚಮಾಶ್ವಾಸದ ೮೦ನೆಯ ಪದ್ಯ - "ನಿಳಿಂಪದಂಪತಿಗಳಿಂದ" ಎಂದು ಸ್ಪಷ್ಟವಾಗಿಯೇ ಬಹುವಚನವಿದೆ - ಏಕವಚನವಿಲ್ಲ

೩) ರನ್ನನ ಅಜಿತತೀರ್ಥಕರಪುರಾಣದ ದ್ವಿತೀಯಾಶ್ವಾಸದ ೧೪ನೆಯ ಪದ್ಯ - "ಅಂತಿರ್ಪುವು ಅಗಲದೆ ಆ ವನಲತೆಯ ಜೊಂಪದೊಳ್ ದಂಪತಿಗಳ್" ಎಂಬುದು ಪ್ರಯೋಗ. ಇಲ್ಲಿ ಹಲವು ಜೋಡಿಗಳಿರುವುದರಿಂದ ಸಹಜವಾಗಿಯೇ ಬಹುವಚನ, ವಿವಾದವಿಲ್ಲ - ಆದರೆ ಏಕವಚನಪ್ರಯೋಗ ಇಲ್ಲೂ ಕಾಣಲಿಲ್ಲ

೪ ಮತ್ತು ೫) ಇವು ಕ್ರಮವಾಗಿ ಲಕ್ಷ್ಮೀಶನ ಜೈಮಿನಿ ಭಾರತ (೩೧ನೆಯ ಸಂಧಿ - ೨೩ನೆಯ ಪದ್ಯ) ಮತ್ತು ಕುಮಾರವ್ಯಾಸನ ವಿರಾಟಪರ್ವದ ೧೦ನೆಯ ಸಂಧಿಯ ೮೧ನೆಯ ಪದ್ಯ). ಎರಡರಲ್ಲೂ ಇರುವುದು ಒಂದು ದಂಪತಿಯ ಜೋಡಿ, ಆದರೆ ಬಹುವಚನದ ಬಳಕೆ "ದಂಪತಿಗಳೊಪ್ಪಿದರ್" ಮತ್ತು "ಮೆರೆದರು ದಂಪತಿವರರು"- ಏಕವಚನವಿಲ್ಲ:

೬) ಇದು ನಮ್ಮದೇ ಕಾಲದ ಮಹಾಕವಿ, ರಾಷ್ಟ್ರಕವಿ ಕುವೆಂಪು ಅವರ "ಭೈರ" ಪದ್ಯದಿಂದ. ಭೈರನು ಹುಟ್ಟಿದಾಗ ಆತನ ತಾಯ್ತಂದೆಗಳ ಸಂತಸವನ್ನು ವರ್ಣಿಸುವ, ಭೈರನ ಬೆಳವಣಿಗೆಯನ್ನು ವರ್ಣಿಸುವ ಭಾಗ. "ದಂಪತಿಗಳುಲ್ಲಸದಿ ಹಿಗ್ಗಿದರು" ಇಲ್ಲಿ ಹಲವು ದಂಪತಿಗಳಿಲ್ಲ, ಇರುವುದು ಒಂದೇ ಜೋಡಿ, ಆದರೆ ಉಪಯೋಗಿಸಿದ್ದು ಬಹುವಚನ.

೭) ಗದ್ಯದಿಂದಲೂ ಒಂದು ಉದಾಹರಣೆಯಿರಲಿ. ಇದು ಕನ್ನಡದ ಆಚಾರ್ಯಪುರುಷರಲ್ಲೊಬ್ಬರಾದ ಸೇಡಿಯಾಪು ಕೃಷ್ಣಭಟ್ಟರ "ಸೇಡಿಯಾಪು ವಿಚಾರಪ್ರಪಂಚ"ದ ಒಂದು ಲೇಖನ. ಅಂದಹಾಗೆ ಸೇಡಿಯಾಪು ಬಹುದೊಡ್ಡ ಪಂಡಿತರೆಂದು ಬೇರೆ ಹೇಳಬೇಕಿಲ್ಲವಲ್ಲ. ಅವರನ್ನು ಪಂಡಿತಪರಮೇಷ್ಠಿ ಎಂದು ಕೊಂಡಾಡಿದವರು ಬೇರಾರೂ ಅಲ್ಲ, ಶತಾವಧಾನಿ ಶ್ರೀ ಆರ್ ಗಣೇಶರು (ಅವರೂ ಪಂಡಿತರೇ!)

ಹೀಗೆ ದಂಪತಿ ಬಹುವಚನಶಬ್ದವೆಂಬುದಕ್ಕೆ ದಂಡಿಯಾಗಿ ಉದಾಹರಣೆಗಳನ್ನು ಕೊಡುತ್ತಲೇ ಹೋಗಬಹುದು (ಗೂಗಲ್ ನೆರವು ಬೇಕಿಲ್ಲ), ಆದರೆ ನಿಮಗೆ ಬೇಕಾದ ಆಕರಗಳ ಪರಿ ಅದಲ್ಲ ಎಂಬುದು ಸ್ಪಷ್ಟವಾಗಿದೆಯಲ್ಲ, ಆಗಲಿ, ನಿಮ್ಮ 'ಟೈಪ್'ನ ಆಕರಗಳನ್ನೇ ಮುಂದೆ ಕೊಡುವುದಾಗಲಿ. ಅದಕ್ಕೆ ಮೊದಲು ನೀವು ತೋರಿದ ಇತರ ಪಾಯಿಂಟುಗಳನ್ನು ಮೊದಲು ಉತ್ತರಿಸಿಬಿಡುತ್ತೇನೆ:

ಪಾಯಿಂಟ್ ೧)
"ಡಾ. ಶಾಲಿನಿ ರಜನೀಶ್ ನಿಮಗೆ ಗೊತ್ತೇ ಇದ್ದಾರೆ" - ಇಲ್ಲ ಸಾರ್, ಅವರು ಯಾರೋ ನನಗೆ ಗೊತ್ತಿಲ್ಲ, ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಅವರ ಸಾಧನೆಗೆ ನನ್ನ ನಮನ, ಆದರೆ ಭಾಷೆಯ ವಿಷಯದಲ್ಲಿ ನಾಗವರ್ಮ-ಕೇಶಿರಾಜನಿಂದ ಹಿಡಿದು ಸೇಡಿಯಾಪು-ವೆಂಕಟಾಚಲಶಾಸ್ತ್ರಿಗಳವರೆಗಿನ ವಿದ್ವಾಂಸರಿಗಿಂತ ಅವರು ಹೇಗೆ ಹೆಚ್ಚಿನ ಪ್ರಮಾಣವಾದರೋ ತಿಳಿಯುವ ಉತ್ಸುಕತೆಯಿದೆ. ತಿಳಿಸಿದರೆ, ಅರಿತು ತಿದ್ದಿಕೊಳ್ಳುತ್ತೇನೆ.

೨ ರಿಂದ ೧೩)
ತಪ್ಪು ಕನ್ನಡ ಬಳಸಿ ಕನ್ನಡವನ್ನು ಕೊಲ್ಲುತ್ತಿವೆ ಎಂದು ತಾವೇ ದಿನಬೆಳಗಾದರೆ ಜಾಡಿಸುತ್ತಿದ್ದ ಕನ್ನಡ ಪತ್ರಿಕೆಗಳೇ ಇವತ್ತು ತಮ್ಮ ವಾದಕ್ಕೆ ಪ್ರಮಾಣವಾಗಬೇಕಾಗಿ ಬಂದದ್ದು ಮಾತ್ರ ಚೋದ್ಯವೇ ಸರಿ. ಇದಕ್ಕೂ ಮೇಲಿನ ಪ್ರಶ್ನೆಯೇ ಸಲ್ಲುತ್ತದೆ - ಭಾಷೆಯ ವಿಷಯದಲ್ಲಿ ನಾಗವರ್ಮ-ಕೇಶಿರಾಜನಿಂದ ಹಿಡಿದು ಸೇಡಿಯಾಪು-ವೆಂಕಟಾಚಲಶಾಸ್ತ್ರಿಗಳವರೆಗಿನ ವಿದ್ವಾಂಸರಿಗಿಂತ, ಭಾಷೆಯನ್ನು ಚಪ್ಪಲಿ ಸ್ಟ್ಯಾಂಡಿನಂತೆ ಬಳಸಿ ಕುಲಗೆಡಿಸುವ ಪತ್ರಿಕೆಗಳು ಹೇಗೆ ಹೆಚ್ಚಿನ ಪ್ರಮಾಣವಾದವೋ ದಯವಿಟ್ಟು ತಿಳಿಸಿಕೊಡಬೇಕು, ಅದರಲ್ಲೂ ನ್ಯೂಸಿಗೇ ಪ್ರಮಾಣವಾಗದ ಬಷೀರರ ವಾರ್ತಾಭಾರತಿ ತಮಗೆ ಭಾಷೆಗೆ ಪ್ರಮಾಣವಾಗಿಬಿಟ್ಟಿತು :o

ಅಂದಹಾಗೆ, "ದಂಪತಿಗಳು" ಕುರಿತಾದ ನಿಮ್ಮ ಆಕ್ಷೇಪ ಆರಂಭವಾಗುವುದೇ "ಕನ್ನಡದ ದೊಡ್ಡ ಪತ್ರಿಕೆಗಳಲ್ಲಿ ಪ್ರಕಟವಾದ" ಸುದ್ದಿ ಶೀರ್ಷಿಕೆಗಳಲ್ಲಿ ಕಂಡುಬಂದ ದಂಪತಿಗಳು ಎಂಬ ಬಹುವಚನದ ಉದಾಹರಣೆಗಳೊಂದಿಗೆ. ಯಾವ ಆಕರಗಳಲ್ಲಿ 'ತಪ್ಪು' ಪ್ರಕಟವಾಗಲು ಸಾಧ್ಯವೋ ಅವೇ ಆಕರಗಳನ್ನು ’ಸರಿ’ಗೂ ಪ್ರಮಾಣವೆಂದರೆ ಅದು ಯಾವ ಸೀಮೆಯ ಪ್ರಮಾಣ?

ಪಾಯಿಂಟ್ ೧೪)
ಎಲ್ಲಕ್ಕಿಂತ ಗಮ್ಮತ್ತಿನದ್ದು ಎಂದರೆ ತಾವು ನೀಡಿರುವ ಈ ಆಧಾರ. "ಸ್ವಯಮೇವಪ್ರಮಾಣಃ" ಎಂಬ ಪ್ರತೀತಿ ವೇದಗಳ ವಿಷಯದಲ್ಲಿ ಮಾತ್ರ ಇದೆಯೆಂದಿದ್ದೆ, ಈಗ ತಮ್ಮ ಪ್ರಯೋಗಕ್ಕೆ ತಮ್ಮದೇ ತಿಳಿರುತೋರಣದ ಪ್ರಮಾಣ ನೀಡಿದ್ದು ನೋಡಿ, ತಮ್ಮ ವಾಕ್ಯವೂ ವೇದವಾಕ್ಯದಂತೆ ಸ್ವಯಮೇವಪ್ರಮಾಣವಾದದ್ದು ಎಂದು ತಿಳಿಯಿತು. ಹದಿನೇಳನೆಯ ಶತಮಾನದ ಲಾಕ್ಷಣಿಕನಾದ ಪಂಡಿತರಾಜ ಜಗನ್ನಾಥಪಂಡಿತನು ತನ್ನ ಗ್ರಂಥಗಳಲ್ಲಿ ಪ್ರವಚನಗಳಲ್ಲಿ ಬೇರಾರ ಉದಾಹರಣೆಗಳನ್ನೂ ಕೊಡದೇ ತನ್ನದೇ ಕಾವ್ಯದಿಂದ ಉದಾಹರಣೆಗಳನ್ನು ಕೊಡುತ್ತಿದ್ದನಂತೆ - ಅವನ ವಿದ್ವತ್ತು ಅಂಥದ್ದು ಬಿಡಿ. ಇದೀಗ ಅಭಿನವಜಗನ್ನಾಥಪಂಡಿತನನ್ನು ನೋಡಿದಷ್ಟು ಸಂತಸವಾಯಿತು.

ಹೋಗಲಿ, ಪಂಪನಲ್ಲಂತೂ ಕಾಣಲಿಲ್ಲ, ನೀವು ಹುಡುಹುಡುಕಿ ದೈನಿಕಗಳಿಂದ, ಟ್ಯಾಬ್ಲಾಯ್ಡುಗಳಿಂದ, ಅರೆ-ಅಶ್ಲೀಲ ಪೋರ್ಟಲುಗಳಿಂದ ಕೊಟ್ಟಿರುವ ಉದಾಹರಣೆಗಳಲ್ಲಾದರೂ, ಒಂದಾದರೂ ಏಕವಚನಕ್ರಿಯಾಪದದ ಬಳಕೆಯಿರುವ ವಾಕ್ಯವಿದೆಯೇ? ಇಲ್ಲವೆಂದ ಮೇಲೆ ಅದು ನನ್ನ ಪ್ರಶ್ನೆಗೆ ಉತ್ತರ ಹೇಗಾಗುತ್ತದೆ ಸಾರ್? ಮೊದಲಿಗೆ, ಆಯ್ದುಕೊಂಡ ಆಕರವೇ ಮೂರು ಕಾಸಿನದ್ದು. ಅದರಿಂದ ಕೊಟ್ಟಿರುವ ಪ್ರಮಾಣವಂತೂ ಪ್ರಶ್ನೆಗೆ ಸಂಬಂಧವೇ ಇಲ್ಲದ್ದು. ಒಂದೊಂದು ಪ್ರಮಾಣಕ್ಕೂ "ಅವರು ಐ ಎ ಎಸ್ ದಂಪತಿಗಳು" "ಇದು ವಿಶ್ವಾಸಾರ್ಹ ದಿನಪತ್ರಿಕೆ" "ಅದು ಕರಾವಳಿಯ ಹೆಮ್ಮೆ" "ಇಲ್ಲಿ ನೆಚ್ಚಿನ ನಾಯಕ ಮೋದಿಯವರ ಚಿತ್ರಗಳಿವೆ" ಎಂಬ ಭೋಪರಾಕುಗಳು ಧಾರಾಳ. ಪರಾಕುಗಳೇ ಪ್ರಮಾಣವಾಗತೊಡಗಿದ್ದು ಎಂದಿನಿಂದ?

ಇರಲಿ, ಆದರೆ ಒಂದು ವಿಷಯಕ್ಕೆ ತಮಗೆ ಧನ್ಯವಾದ ಸಲ್ಲಿಸಲೇ ಬೇಕು. ಅದೆಂದರೆ ಗೂಗಲ್ ಸರ್ಚ್ ಮಾಡಲು ತಾವು ಕೊಟ್ಟ ಸಲಹೆ. ಮೇಲೆ ನಾನು ನೀಡಿದ ಪಿಂಡದ ಪಂಡಿತರ ಉದಾಹರಣೆಗಳ ಬದಲು ನಿಮಗೆ ಒಪ್ಪಿಗೆಯಾಗುವ ಆಕರಗಳಿಂದಲೇ ಆಧಾರ ಸಂಗ್ರಹಿಸಲು ಗೂಗಲ್ ಸರ್ಚ್ ನಿಜಕ್ಕೂ ಸಹಕಾರಿಯಾಯಿತು. ಇದೋ, ದಂಪತಿ ಏಕವಚನವಲ್ಲ, ಬಹುವಚನ ಎನ್ನುವುದಕ್ಕೆ, ತಾವು ಸೂಚಿಸಿದ ಆಕರಗಳಿಂದಲೇ ಆಧಾರಗಳನ್ನು ಹೆಕ್ಕಿ ತೆಗೆದಿದ್ದೇನೆ. ತಾವು ಹೇಳಿದಂತೆ ಚಿತ್ರಗಳ ಸಂಪುಟ ಮಾಡುವಷ್ಟು ವ್ಯವಧಾನವಿರಲಿಲ್ಲ. ಅದಕ್ಕೇ ಎಲ್ಲವನ್ನೂ ಒಂದೇ ಫ್ರೇಮಿನಲ್ಲಿ ಅಳವಡಿಸಿದ್ದೇನೆ (ಚಿತ್ರ ೪ ನೋಡಿ). 
ಇದರಲ್ಲಿ ನಿಮ್ಮ "ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ ‘ಪ್ರಜಾವಾಣಿ’" ಇದೆ, "ಕರಾವಳಿಯ ಹೆಮ್ಮೆಯೆನಿಸಿದ, ಕನ್ನಡದ ಅತ್ಯಂತ ಸುಂದರ ದೈನಿಕ, ‘ಉದಯವಾಣಿ’" ಇದೆ, ಒನ್ ಇಂಡಿಯಾ ಪತ್ರಿಕೆಯಿದೆ, ಅದರಲ್ಲಿ ನಮ್ಮನಿಮ್ಮೆಲ್ಲರ ಅಚ್ಚುಮೆಚ್ಚಿನ ಜನನಾಯಕರಾದ ಮೋದಿಯೊಬ್ಬರೇ ಏಕೆ ಅಮಿತ್ ಶಾ ಇದ್ದಾರೆ, ಬಂಗಾಳದ ದೀದಿ ಇದ್ದಾರೆ, ಜೊತೆಗೆ ರಾಹುಲ್ ಗಾಂಧಿ ಕೂಡ - if that can be any proof; ಜೊತೆಗೆ ವಿಜಯವಾಣಿಯಲ್ಲಿ ಡಾ. ಕೆ ಎಸ್ ನಾರಾಯಣಾಚಾರ್ಯರ ಲೇಖನವೂ ಇದೆ (ಅಂದಹಾಗೆ ಇವರೂ ಪಂಡಿತರೇ); ಅಷ್ಟೇಕೆ, ಭಾಷಾಪ್ರಶ್ನೆಗಳಿಗೆ ಅಂತಿಮಪರಿಹಾರವೆನಿಸಬಲ್ಲ, ತಾವೇ ಕೋಟ್ ಮಾಡಿದ ಬಶೀರರ ವಾರ್ತಾಭಾರತಿಯೂ ಇಲ್ಲಿದೆ, ಇವರೆಲ್ಲರೂ ದಂಪತಿಗಳು ಎಂಬ ಬಹುವಚನ ಬಳಸಿದ್ದಲ್ಲದೇ ಕ್ರಿಯಾಪದದಲ್ಲಿ ಸ್ಪಷ್ಟವಾಗಿ ಬಹುವಚನ ಬಳಸಿದ್ದಾರೆ.

ಹೀಗೆ ತಾವೇ ವಿರೋಧಿಸುತ್ತಿದ್ದ ಪತ್ರಿಕೆಗಳೇ ಈಗ ಭಾಷಾಶುದ್ಧತೆಗೆ ಪ್ರಮಾಣವಾಗಬಹುದಾದರೆ, ಅದೇ ವರಸೆಯಲ್ಲಿ ಜಾಲತಾಣಗಳೂ ಏಕೆ ಪ್ರಮಾಣವಾಗಬಾರದೆನ್ನಿಸಿತು. ಹುಡುಕಿ ನೋಡಿದರೆ, ಫೇಸ್ಬುಕ್, ಯೂಟ್ಯೂಬ್, ವಿಕಿಪೀಡಿಯಾ, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಎಲ್ಲೆಡೆಯೂ ದಂಪತಿ’ಗಳು’ ರಾರಾಜಿಸುತ್ತಿದ್ದಾರೆ!! ಕೊನೆಗೆ ಒಂದು ಗೋಡೆ ಪೋಸ್ಟರು ಕೂಡ ಪ್ರಮಾಣವಾಗಿ ಸಿಕ್ಕಿಬಿಟ್ಟಿತು. ಅದನ್ನೂ ಇಲ್ಲಿ ಹಾಕಿದ್ದೇನೆ ನೋಡಿ (ಚಿತ್ರ ೫). ಪಂಡಿತಪರಮೇಷ್ಠಿಗಳಿಗೆಲ್ಲಾ ಪಿಂಡಪ್ರದಾನ ಮಾಡಿಬಿಟ್ಟಿರುವುದರಿಂದ ಬಹುಶಃ ಇನ್ನು ಮುಂದೆ ಇವೇ ತಾನೆ ಆಧಾರಗಳು :o 


ಇರಲಿ ಬಿಡಿ, ಬೂಸಿ ಪೋರ್ಟಲುಗಳ ಜೊತೆ ಕುಳಿತು ಬೇಸನ್ ಲಾಡು ತಿನ್ನುವುದಕ್ಕಿಂತ ಪಂಡಿತರ ಜೊತೆ ಕುಳಿತು ಪಿಂಡ ಸ್ವೀಕರಿಸುವುದೇ ಶ್ರೇಯಸ್ಕರವೆನಿಸುತ್ತದೆ ನನಗೆ. ಆದ್ದರಿಂದಲೇ ಅದನ್ನು ಸಂತೋಷದಿಂದ ಸ್ವೀಕರಿಸಿ, ಈಗ ತುಂಬಿದ ಮನದಿಂದ (ತುಂಬಿದ ಹೊಟ್ಟೆಯಿಂದಲೂ) ಹಾರೈಸುತ್ತಿದ್ದೇನೆ, ತಮಗೆ ಸದ್ಗತಿ ದೊರೆಯಲಿ.

ಅಂದ ಹಾಗೆ ಒಂದು ವಿಷಯ, ಮೇಲೆ ನನ್ನ ಪಾಯಿಂಟ್ ಬೈ ಪಾಯಿಂಟ್ ಉತ್ತರದಲ್ಲೇ ಬರಬೇಕಿತ್ತು ಬಿಟ್ಟುಹೋಯಿತು. ನೀವು ಹದಿಮೂರನೆಯ ಪಾಯಿಂಟಿನಲ್ಲಿ ಕೊಟ್ಟ ಬೋಲ್ಡ್ ಸ್ಕೈ ಕನ್ನಡ ಎಂಬುದನ್ನು ಹುಡುಕಿದಾಗ ಅದು ನನ್ನನ್ನು kannada. boldsky . com ಎಂಬ ಜಾಲತಾಣಕ್ಕೆ ಕೊಂಡೊಯ್ದಿತು. ನೀವು "ದಂಪತಿ" ಹುಡುಕಿದಂತೆ ನಾನೂ "ದಂಪತಿಗಳು" ಶಬ್ದಕ್ಕಾಗಿ ಹುಡುಕಿದೆ ( https://kannada.boldsky.com/search/results.html?q=ದಂಪತಿಗಳು ), ಬಂದದ್ದನ್ನು ದಿನಾಂಕಕ್ರಮದಲ್ಲಿ ಸಾರ್ಟ್ ಮಾಡಿದೆ. ಬಂದ ರಿಸಲ್ಟನ್ನು ಕಂಡು ದಿಗ್ಭ್ರಾಂತನಾದೆ (ಚಿತ್ರ ೬). ಹಲವು ಮಂದಿ ಸದ್ಗೃಹಸ್ಥ-ಗೃಹಿಣಿಯರು ಸಂಭಾವಿತರು ಓದುತ್ತಿರಬಹುದಾದ ಈ ಚರ್ಚೆಯಲ್ಲಿ ಅದನ್ನು ’ಬೋಲ್ಡ್’ ಆಗಿ ಹಂಚಿಕೊಳ್ಳಲು ಹೇಸುತ್ತೇನೆ. 


ಕೊನೆಯದಾಗಿ ಒಂದು ಮಾತು - ಸಾರಾಂಶಕ್ಕಾಗಿ ಹಾಗೂ ವಿಷಯಸ್ಪಷ್ಟನೆಗಾಗಿ. ನಿಮ್ಮ ವಿವರಣೆ ತಪ್ಪಾಗಿ ಕಂಡುದರಿಂದ ಅದು ಹೇಗೆ ತಪ್ಪೆಂದು ಆಧಾರಸಹಿತ ವಿವರಣೆ ನೀಡಿದೆನೇ ವಿನಾ ಮೊದಲಲ್ಲಿ ನಿಮ್ಮನ್ನು ವೈಯಕ್ತಿಕವಾಗಿ ಎಲ್ಲಿಯೂ ಟೀಕಿಸಿಲ್ಲ, ವ್ಯಂಗ್ಯವಿರಬಹುದು, ಆದರೆ ಅದು ಯಾವತ್ತೂ ವೈಯಕ್ತಿಕ ಮಟ್ಟ ಮುಟ್ಟಿದ್ದಿಲ್ಲ (ಅಂಥದ್ದೊಂದು ನನ್ನ ಕಡೆಯಿಂದ ಇದ್ದರೆ ತೋರಿಸಬಹುದೆಂದು ಈಗಾಗಲೇ ಹೇಳಿದ್ದೇನೆ - ಬೇರೆಯವರದ್ದಕ್ಕೆ ನಾನು ಹೊಣೆಯಲ್ಲ); ನನ್ನ ವಿವರಣೆಯನ್ನು ತಾವು ಕಂಡೂ ಕಾಣದಂತೆ ಸುಮ್ಮನಿದ್ದುದರಿಂದ ಮುಂದಿನ ಹಂತದಲ್ಲಿ ಸ್ಪಷ್ಟನೆ/ಚರ್ಚೆ ಬೇಡಿದೆನಷ್ಟೇ - ಶೈಕ್ಷಣಿಕ ವಿಷಯದಲ್ಲಿ ಅದು ಸಾಮಾನ್ಯ - ಅದು ನೀವು ಬಿಂಬಿಸಿದಂತೆ ನಿಮ್ಮ ಕಲಿಕೆ ಅಭಿಯಾನದ ಟೀಕೆಯಾಗಲೀ ಹೊಟ್ಟೆಯುರಿಯಾಗಲೀ ಮತ್ತೊಂದಾಗಲೀ ಅಲ್ಲ. ನನ್ನ ಪ್ರಶ್ನೆಗೆ ತಮ್ಮಿಂದ ಉತ್ತರ ಬರದಿದ್ದುದರಿಂದ ಅದೇ ಲೇಖನವನ್ನು ಬರೆದು ನನ್ನ ಗೋಡೆಯ ಮೇಲೆ ಪ್ರಕಟಿಸಿ ಸುಮ್ಮನಾದೆನಷ್ಟೇ - ಅದರಲ್ಲೂ ಎಲ್ಲಿಯೂ ವೈಯಕ್ತಿಕ ಟೀಕೆಯಿರಲಿಲ್ಲ, ಮತ್ತು ಹೇಗಿದ್ದರೂ ಉತ್ತರಿಸಲು ನೀವು ಆಸಕ್ತಿ ತೋರದಿದ್ದುದರಿಂದ ನಿಮ್ಮನ್ನು ನನ್ನ ಲೇಖನದಲ್ಲಿ ಟ್ಯಾಗ್ ಮಾಡುವ ಗೋಜಿಗೂ ಹೋಗಲಿಲ್ಲ. ತಾವದನ್ನು ಅಲ್ಲಿಗೆ ಬಿಟ್ಟಿದ್ದರಾಗಿತ್ತು - ನಾನಂತೂ ಬಿಟ್ಟು ಸುಮ್ಮನಿದ್ದೆ. ನನ್ನ ಲೇಖನಕ್ಕೆ ಕಾಮೆಂಟ್ ಮಾಡಿದ ಹಲವರು ನಿಮ್ಮನ್ನು ಕುರಿತು ವ್ಯಂಗ್ಯವಾಡಿರಬಹುದು, ಅದಕ್ಕೆ ನಾನು ಹೇಗೆ ಹೊಣೆಗಾರನಾದೇನು? ಅಂಥವು ನಿಮ್ಮ ಈ ಲೇಖನದಡಿಯೂ ಬಹಳಷ್ಟಿವೆ, ಅದಕ್ಕೆ ನಾನು ನಿಮ್ಮನ್ನುಹೊಣೆ ಮಾಡಿದರೆ ಹಾಸ್ಯಾಸ್ಪದವಷ್ಟೇ. ಕೊನೆಗೆ ಓದುಗರೊಬ್ಬರು ನಿಮ್ಮನ್ನು ಟ್ಯಾಗ್ ಮಾಡಿದಾಗ "ಎಲ್ಲರಿಗೂ ಒಮ್ಮೆಗೇ ಉತ್ತರಿಸಿದರಾಯಿತು" ಎಂಬ ಅಹಂಕಾರದ ಮಾತು ನಿಮ್ಮಿಂದ ಬಂತು (ಮತ್ತೆ, ಅದುವರೆಗೂ ನಾನು, I repeat ನಾನು, ನಿಮ್ಮ ಬಗ್ಗೆ ಎಲ್ಲಿಯಾದರೂ ಅಹಂಕಾರದ/ಭರ್ತ್ಸನೆಯ/ಕಟಕಿಯ ಮಾತಾಡಿದ್ದರೆ ತೋರಿಸಿ). ನಿಮ್ಮಿಂದ ಆ ಮಾತು ಬಂದಾಗ **ಮೊದಲ ಬಾರಿಗೆ** ತುಸು ವ್ಯಂಗ್ಯದಿಂದ ಉತ್ತರಿಸಿದ್ದು ನಿಜ - "ಇನ್ನು ಕಾಯುವ ಅಗತ್ಯವಿಲ್ಲ, ಇನ್ನು ಎದ್ದು ಬರುವವರು ಯಾರೂ ಇಲ್ಲ, ನೀವು ಉತ್ತರಿಸಬಹುದು" ಇದು ಸ್ವಲ್ಪಮಟ್ಟಿಗಿನ ವ್ಯಂಗ್ಯವಿದ್ದೀತು - ಕೇವಲ ವ್ಯಾಕರಣದ ಸರಿ-ತಪ್ಪಿನ ಪ್ರಶ್ನೆಯೆತ್ತಿದ್ದಕ್ಕೇ ಒರಟುತನದ ದುರಹಂಕಾರದ ಪ್ರತಿಕ್ರಿಯೆ ನಿಮ್ಮಿಂದ ಬರಬಹುದಾದರೆ, ತಮ್ಮ ದುರಹಂಕಾರದ ಪ್ರತಿಕ್ರಿಯೆಗೆ ಇಷ್ಟುಮಟ್ಟಿನ ವ್ಯಂಗ್ಯವಾದರೂ ಹೆಚ್ಚಲ್ಲವೆಂದು ನಾನು ಭಾವಿಸಿದರೆ ತಪ್ಪಲ್ಲವಲ್ಲ. ಆದರೆ ಅದಕ್ಕೆ ಪ್ರತಿಕ್ರಿಯೆಯಾಗಿ ತಾವು ಇಡೀ ಪಂಡಿತವರ್ಗದ 'ಸಮಾರಾಧನೆ'ಯನ್ನೇ ಮಾಡಿಬಿಟ್ಟಿರಿ :o

ಮರ್ಮಾಘಾತವಾಗುವುದು ಸಹಜವೇ (ಈಗ ಚೇತರಿಸಿಕೊಂಡಿದ್ದೇನೆ) - ಮರ್ಮಾಘಾತ ನಿಮ್ಮ ಮಾತಿನ ಜೋರಿನಿಂದಾಗಲೀ ನಿಮ್ಮ ಸಮಾರಾಧನೆಯಿಂದಾಗಲೀ ಅಲ್ಲ, ಬೇರೆಯದೇ ಕಾರಣಕ್ಕೆ - ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕಿಳಿಯಬಹುದು ಎಂಬುದರಿಂದ ಉಂಟಾದ ದಿಗ್ಭ್ರಾಂತಿ ಅದು! ನಾವೆಲ್ಲರೂ ಬಹುವಾಗಿ ಪ್ರೀತಿಸುವ ಗೌರವಿಸುವ ಮಹಾವಿದ್ವಾಂಸರೊಬ್ಬರು (ನೀವು ಹೋಲ್ ಸೇಲಾಗಿ ಪಂಡಿತರೆಲ್ಲರಿಗೂ ಪಿಂಡ ಹಾಕಿಬಿಟ್ಟಿರುವುದರಿಂದ ವಿನಾಕಾರಣ ಆ ಮಹನೀಯರ ಹೆಸರನ್ನು ಎಳೆತಂದು ಪಿಂಡಪಂಕ್ತಿಯಲ್ಲಿ ಕೂರಿಸಲಾರೆ) ಯಾವಾಗಲೂ ಒಂದು ಮಾತನ್ನು ಹೇಳುತ್ತಿರುತ್ತಾರೆ. ಎದುರಾಳಿ ಜಟ್ಟಿಯು, ದಟ್ಟಿಚಲ್ಲಣಗಳನ್ನು ತೊಟ್ಟು ಬಂದರೆ, ಸೋಲೋ ಗೆಲುವೋ ಹೆಗಲೆಣೆಯಾಗಿ ನಿಂತು ಕುಸ್ತಿಯನ್ನಾದರೂ ಮಾಡಬಹುದು; ಅವನು ಅದನ್ನೂ ಬಿಚ್ಚಿ ಬಂದರೆ... !

ನಮಸ್ಕಾರ

========
ಟಿಪ್ಪಣಿ:
========
ಮೇಲ್ಕಂಡ ಲೇಖನ ಮತ್ತು ಅಲ್ಲೇ ಕಾಣಿಸಿದ ಮತ್ತೊಂದೆರಡು ಲೇಖನಗಳು ಇಡೀ ಚರ್ಚೆಯ ಕೇವಲ ಒಂದೆರಡು ಭಾಗಗಳಷ್ಟೇ.  ಆದರೆ ದಂಪತಿ ಶಬ್ದದ ವ್ಯಾಕರಣವಿಚಾರದ ಬಗ್ಗೆ ಫೇಸ್ಬುಕ್ ಮತ್ತು ಕೆಲವು ಬ್ಲಾಗುಗಳಲ್ಲಿ ಬಹುವಿಸ್ತಾರವಾದ ಚರ್ಚೆಯೇ ನಡೆಯಿತು. ಶ್ರೀ ಶ್ರೀವತ್ಸಜೋಶಿಯವರಿಂದ ಮೊದಲುಗೊಂಡು ನನ್ನನ್ನೂ ಒಳಗೊಂಡು ವಿದ್ವನ್ಮಿತ್ರರಾದ ಶ್ರೀ Mahesh Bhat, ಶ್ರೀ ಗಣೇಶ ಕೊಪ್ಪಲತೋಟ, ಶ್ರೀ Ajakkala Girisha Bhat, ಶ್ರೀ Sharath Bhat Seraje ಮೊದಲಾದ ಹಲವು ವಿದ್ವಾಂಸರು ಭಾಗವಹಿಸಿದ್ದ ಈ ಚರ್ಚೆಯಲ್ಲಿ, ಕೆಲವು ವೈಯಕ್ತಿಕ ಚಕಮಕಿಗಳಾಚೆಗೂ ಅನೇಕ ವ್ಯಾಕರಣ-ಪ್ರಯೋಗವಿಷಯಗಳು, ಹಲವು ಭಾಷಾಸೂಕ್ಷ್ಮಗಳು ಹೊರಬಂದುವು; ಜೊತೆಗೆ ಹಿರಿಯವಿದ್ವಾಂಸರಾದ ಶತಾವಧಾನಿ ಶ್ರೀ ಆರ್ ಗಣೇಶರ ಅಮೂಲ್ಯವಾದ ಅಭಿಪ್ರಾಯವೂ ಮೂಡಿಬಂತು.

ಅಂತೆಯೇ, "ಕೇವಲ ಮೂರಕ್ಷರದ ಪದದ ಮೇಲೆ ಇಷ್ಟು ದೊಡ್ಡ ಚರ್ಚೆಯೇ? ಸಮಯವ್ಯರ್ಥ" ಎಂಬ 'ಅಕ್ಷರಲಕ್ಷ'ದ ಅಭಿಪ್ರಾಯದಿಂದ ಹಿಡಿದು "ಪಂಡಿತರಿಗೆ ಬೇರೆ ಕೆಲಸವಿಲ್ಲ", "ಒಣಪಾಂಡಿತ್ಯ", "ಅಜ್ಞಾನ-ಅರೆಜ್ಞಾನ", "ಬುದ್ಧಿಜೀವಿ vs ವಿದ್ವಜ್ಜೀವಿ" ಮೊದಲಾದ ನಿಸ್ಸಹಾಯಕ ನಿಸ್ಸಾರವ್ಯಾಖ್ಯಾನಗಳನ್ನೊಳಗೊಂಡಂತೆ, "ದಂಪತಿಗಳು ತಬ್ಬಿ ಮಲಗುವ ಹೊತ್ತಿನಲ್ಲಿ ದಂಪತಿ ಶಬ್ದದ ವ್ಯಾಕರಣವನ್ನು ಚಿಂತಿಸುತ್ತಿದ್ದರೆ ಹೆಂಡತಿ ಅಪಾರ್ಥಮಾಡಿಕೊಳ್ಳಳೇ" ಎಂಬರ್ಥದ ಚಟಾಕಿಗಳವರೆಗೆ ಹಲವು ಕುಶಾಲುತೋಪುಗಳೂ ಹಾರಾಡಿದುವು.

ಅದೇನೇ ಇರಲಿ, ಇಡೀ ಚರ್ಚೆ ಸ್ವಾರಸ್ಯಕರವೂ, ರಸಪೂರ್ಣವೂ, ಬೋಧಪ್ರದವೂ ಆಗಿದ್ದು, ವಿದ್ವಚ್ಚಿಂತನೆಯ ಹಲವು ಧಾರೆಗಳ ಪರಿಚಯ ಇದರಿಂದಾಗುತ್ತದೆಂಬುದರಲ್ಲಿ ಸಂಶಯವೇ ಇಲ್ಲ.  ಫೇಸ್ಬುಕ್ಕಿನ ಲೋಡುಗಟ್ಟಲೆ ಪೋಸ್ಟು ಕಾಮೆಂಟುಗಳ ಹೋರಿನಲ್ಲಿ ಕಳೆದೇಹೋಗಬಹುದಾದ ಇದು ಭಾಷಾಸಕ್ತರಿಗೆ ಒಂದು ಉತ್ತಮ ಸಾಹಿತ್ಯವಾಗಬಹುದೆಂಬ ಆಶಯದಿಂದ ಮಿತ್ರ ಶ್ರೀ HK Vadirajರು ಇಡೀ ಚರ್ಚೆಗೆ ಸಂಬಂಧಿಸಿದ ಎಲ್ಲ ಲೇಖನಗಳನ್ನೂ ಶ್ರಮಪಟ್ಟು ಹುಡುಕಿ ಸಂಕಲಿಸಿ ಮಹದುಪಕಾರ ಮಾಡಿದ್ದಾರೆ.  ಈ ಎಲ್ಲ ಚರ್ಚೆಗಳೂ ಅವು ಬಂದ ಕಾಲಕ್ರಮದಲ್ಲಿಯೇ ಈ ಕೆಳಗಿನ ಲಿಂಕುಗಳಲ್ಲಿ ಲಭ್ಯ:

ಮೊದಲಿಗೆ, ಅಂಕಣಕಾರರಾದ ಶ್ರೀವತ್ಸ ಜೋಶಿ ಅವರ "ಸ್ವಚ್ಛ ಭಾಷೆ ಅಭಿಯಾನ":
https://m.facebook.com/story.php?story_fbid=10156010284494403&id=702289402

ಇದಕ್ಕೆ ಪ್ರತಿಕ್ರಿಯೆಯಾಗಿ ಅವಧಾನಿ ಮಹೇಶ್ ಭಟ್ ಅವರ ಲೇಖನ:
https://m.facebook.com/story.php?story_fbid=1844384135611529&id=100001198802804

ಜೋಶಿಯವರ ಲೇಖನವನ್ನು ಪ್ರಶ್ನಿಸಿ ಮಂಜುನಾಥ ಕೊಳ್ಳೇಗಾಲರ ಲೇಖನ:
https://m.facebook.com/story.php?story_fbid=10156663102719500&id=594419499

ಅಷ್ಟಾವಧಾನಿ ಗಣೇಶ್ ಕೊಪ್ಪಲತೋಟ ಮತ್ತು ಮಹೇಶ್ ಭಟ್ ಅವರ ಲೇಖನಗಳು (ಮಂಜುನಾಥ ಜಿ.ಎಸ್ ಅವರ ಗೋಡೆಯಿಂದ):
https://m.facebook.com/story.php?story_fbid=2162966403754330&id=100001229739036

ಶ್ರೀವತ್ಸ ಜೋಶಿ ಅವರ ಉತ್ತರ:
https://m.facebook.com/story.php?story_fbid=10156050311074403&id=702289402

ಇದಕ್ಕೆ ಪ್ರತಿಕ್ರಿಯೆಯಾಗಿ ಮಹೇಶ್ ಭಟ್ ಅವರ ಲೇಖನ:
https://m.facebook.com/story.php?story_fbid=1852225824827360&id=100001198802804

 ಮಂಜುನಾಥ ಕೊಳ್ಳೇಗಾಲ ಅವರ ಲೇಖನ:
https://m.facebook.com/story.php?story_fbid=10156673637909500&id=594419499

ಶತಾವಧಾನಿ ಗಣೇಶ್ ಅವರ ಅಭಿಪ್ರಾಯರೂಪದ ಲೇಖನ (ಮಹೇಶ್ ಭಟ್ ಅವರ ಗೋಡೆಯಿಂದ):
https://m.facebook.com/story.php?story_fbid=1853298334720109&id=100001198802804

 ಅಜಕ್ಕಳ ಗಿರೀಶ್ ಭಟ್ ಅವರ ಲೇಖನ:
https://m.facebook.com/story.php?story_fbid=2139638819400319&id=100000626655367

ಪೂರಕ ಓದಿಗೆ ಶರತ್ ಭಟ್ ಸೆರಾಜೆ ಅವರ ಲೇಖನಗಳು
https://m.facebook.com/story.php?story_fbid=10160781971760167&id=590310166

ಮತ್ತೊಂದು:
https://m.facebook.com/story.php?story_fbid=10160785351870167&id=590310166

ಕೊನೆ ಕುಟುಕು:
https://m.facebook.com/story.php?story_fbid=1526535430823155&id=100004001390819

Saturday, May 23, 2020

ಸಮರಸವೇ ಜೀವನ...

ಇತ್ತೀಚಿಗೆ ಫೇಸ್ಬುಕ್/ಇತರ ಮೀಡಿಯಾಗಳಲ್ಲಿ ಒಂದು ಟ್ರೆಂಡ್ ಗಮನಿಸಿದ್ದೇವೆ.  ಯಾರೋ ಒಬ್ಬಾತ/ಕೆ, ಬ್ರಾಹ್ಮಣ ಎಂದಿಟ್ಟುಕೊಳ್ಳಿ.  ತಾವು ಬ್ರಾಹ್ಮಣರೆಂದು ಹೇಳಿಕೊಂಡು ತಮ್ಮ ಮನೆಯಲ್ಲಿ ಮಾಡಿದ ಕೆಲವು ಆಹಾರಪದಾರ್ಥಗಳನ್ನು ಮಾರುವ ಜಾಹೀರಾತು ಹಾಕಿಕೊಳ್ಳುತ್ತಾರೆ - ಅದು ಅವರ ವಾಲ್/ಇನ್ನಾವುದೋ ಗುಂಪಿನಲ್ಲಿ.  ಅದಕ್ಕೆ ಎಂದೂ ಇಲ್ಲದ ಪ್ರತಿರೋಧ, ಹಾಹಾಕಾರ ಹೂಹೂಕಾರಗಳೂ, ವಾದ-ಪ್ರತಿವಾದಗಳೂ, ಔಟ್ ರೇಜುಗಳೂ ಏಳುತ್ತವೆ, ಹಠಕ್ಕೆ ಬಿದ್ದವರಂತೆ ಆಕೆಯ/ಆತನ ಬೆಂಬಲಕ್ಕೆ ನಿಂತ ಅನೇಕರು ಆ ಜಾಹೀರಾತು ಪೋಸ್ಟನ್ನು ಹಂಚಿಕೊಂಡು ಆ ಮಾರಾಟ ಅಧಿಕವಾಗುವಂತೆ ನೋಡಿಕೊಳ್ಳುತ್ತಾರೆ.  ಇರಲಿ, ಇಂತಹ ಮಾರಾಟಕ್ಕೆ ನಿಂತವರು ಸಾಮಾನ್ಯವಾಗಿ ಜೀವನೋಪಾಯಕ್ಕಾಗಿ ಸಣ್ಣ ಗೃಹೋದ್ಯಮ ಕೈಗೊಂಡವರೇ ಆಗಿರುತ್ತಾರಾದ್ದರಿಂದ ನಮ್ಮ ತಕ್ಷಣದ ಭಾವುಕತೆ/ಸಾಮಾಜಿಕ ಕಳಕಳಿಗಳು ಒಂದು ಕುಟುಂಬಕ್ಕೆ ಒಳ್ಳೆಯದನ್ನೇ ಮಾಡಿತು, ಇಷ್ಟುಮಟ್ಟಿಗೆ ಈ 'ಗಲಾಟೆ' ಒಳ್ಳೆಯದೇ ಆಯಿತು.

ಇದರಾಚೆಗೆ ಇದು ಕೆಲವು ಗಂಭೀರ ಚಿಂತನೆಗಳನ್ನು ಹುಟ್ಟಿಹಾಕುತ್ತವೆ/ಹುಟ್ಟಿಹಾಕಬೇಕು.  ಇದನ್ನು ಪರಿಶೀಲಿಸುವ ಮೊದಲು, ಎದ್ದಿರುವ ತಕರಾರುಗಳನ್ನು ನೋಡೋಣ:
  1. ಬ್ರಾಹ್ಮಣರು ಈಗ್ಗೆ ಸಾವಿರಾರು ವರ್ಷಗಳಿಂದ ಉಳಿದೆಲ್ಲ ವರ್ಗಗಳನ್ನು (!!!) ತುಳಿಯುತ್ತಲೇ ಬಂದಿದ್ದಾರೆ, ಅದರಲ್ಲೂ ಸಮಾಜದ ಕಟ್ಟಕಡೆಯ ವರ್ಗ ಬ್ರಾಹ್ಮಣರಿಂದ ತುಳಿಯಲ್ಪಟ್ಟಿದೆ.
  2. ಹೀಗೆ ತುಳಿಯುತ್ತ ತುಳಿಯುತ್ತಲೇ ಇವತ್ತು ಕೇವಲ ನಾಲ್ಕೇ ಪರ್ಸೆಂಟ್ ಇರುವ ಈ ವರ್ಗ ದೇಶದ ಬಹುಪಾಲು ಆರ್ಥಿಕ, ರಾಜಕೀಯ, ಸಾಮಾಜಿಕ ಸಂಪನ್ಮೂಲಗಳನ್ನು ನಿಯಂತ್ರಿಸುತ್ತಿದೆ.  ಇದು ಆ ವರ್ಗದ 'ಸೋಷಿಯಲ್ ಕ್ಯಾಪಿಟಲ್'
  3. ಬ್ರಾಹ್ಮಣವರ್ಗಕ್ಕೆ ಈ ಸೋಷಿಯಲ್ ಕ್ಯಾಪಿಟಲ್ ಇರುವುದರಿಂದ ಅವರು ಬಡವರಾಗಿದ್ದರೂ ಸುಲಭವಾಗಿ ಮೇಲೆ ಬರಲು ಸಾಧ್ಯ, ಉಳಿದವರಿಗೆ (ಅವರೆಷ್ಟೇ ಶ್ರೀಮಂತರಾಗಿದ್ದರೂ ಈ ಸಾಧ್ಯತೆಯಿಲ್ಲ)
  4. ಬ್ರಾಹ್ಮಣ ಎನ್ನುವ ಜಾತಿಸೂಚನೆಯೇ ಆ ಸೋಶಿಯಲ್ ಕ್ಯಾಪಿಟಲ್ಲಿನ ಒಂದು ಭಾಗ.
  5. ತಮಗಿರುವ ಈ 'ಅಕ್ರಮ' ಅಡ್ವಾಂಟೇಜನ್ನು ಬಳಸುವುದರ ಮೂಲಕ ಇತರರನ್ನು ಅವಕಾಶಗಳಿಂದ ವಂಚಿಸಿದಂತಾಗುವುದರಿಂದ, To be fair, ಬ್ರಾಹ್ಮಣರು ಈ ಸೋಷಿಯಲ್ ಕ್ಯಾಪಿಟಲ್ ಆದ ತಮ್ಮ ಹೆಸರನ್ನು ಎಲ್ಲೂ ಬಳಸಬಾರದು.
  6. ಆದ್ದರಿಂದ ಬ್ರಾಹ್ಮಣರು ಜಾತಿಯ ಹೆಸರಿನಲ್ಲಿ ಸಂಘಟಿತರಾಗುವುದು, ಜಾತಿಯ ಹೆಸರಿನಲ್ಲಿ ವ್ಯಾಪಾರವ್ಯವಹಾರಗಳನ್ನು ಮಾಡುವುದು, ಜಾತಿಯ ಬ್ರಾಂಡುಗಳನ್ನು ಪ್ರಮೋಟ್ ಮಾಡುವುದು, ಜಾತಿಸಂಬಂಧಿತ ಯಾವುದೇ ಕೆಲಸಗಳನ್ನು ಮಾಡುವುದು ಸಾಮಾಜಿಕ ಅನ್ಯಾಯ.

ಈಗ, ಈ ನಾಲ್ಕು ಪರ್ಸೆಂಟ್ ಜಾತಿ, ದೇಶದ ಉಳಿದ 96 ಪರ್ಸೆಂಟ್ ಜಾತಿಗಳನ್ನು ಸಾವಿರಾರುವರ್ಷಗಳಿಂದ ತುಳಿದುಕೊಂಡು ಬಂತು ಎಂಬುದು ರೋಚಕ ಕತೆ - ಇದರಲ್ಲಿ ಸ್ವಲ್ಪ ತಥ್ಯವಿಲ್ಲದಿಲ್ಲ - ಅದು ಎಷ್ಟು ಏನು ಎಂಬುದು ಮಾತ್ರ ಚರ್ಚಾರ್ಹ.  ಆದರೂ, ಸಾವಿರಾರು ವರ್ಷಗಳಲ್ಲದಿದ್ದರೂ, ಇತಿಹಾಸದ ಯಾವುದೋ ಘಟ್ಟದಲ್ಲಿ ಕೆಲಕಾಲ ಬ್ರಾಹ್ಮಣರು ಶ್ರೇಷ್ಠತೆಯ ವ್ಯಸನವನ್ನು ಮೆರೆದದ್ದೂ, ಇತರ ಹಲವರನ್ನು ತುಳಿದದ್ದೂ, ಅನೇಕ ಬ್ರಾಹ್ಮಣರು ಜಮೀನ್ದಾರಿ, ಜಹಗೀರಿ, ಉಂಬಳಿಗಳನ್ನು ಹೊಂದಿದ್ದುದೂ ಸತ್ಯ (ಅದು ಒಟ್ಟಾರೆ ಬ್ರಾಹ್ಮಣರ ಶೇಕಡಾ ಎಷ್ಟು, ಕಾಲದಿಂದ 'ಬಡಬ್ರಾಹ್ಮಣ'ನೆಂದೇ ಕರೆಯಲ್ಪಡುವ ಇತರ ಬಹುತೇಕ ಬ್ರಾಹ್ಮಣರ ಕತೆಯೇನು, ಇದನ್ನು ಸದ್ಯಕ್ಕೆ ಪಕ್ಕಕ್ಕಿಡುವಾ).  ಈ 'ಸತ್ಯ'ವನ್ನು ಹತ್ತುಪಟ್ಟು ಹಿಗ್ಗಲಿಸಿ ರೋಚಕವಾಗಿ ಬರೆದ ಇತಿಹಾಸವನ್ನು ಓದಿದ ಹೊಸತಲೆಮಾರಿನ ಬ್ರಾಹ್ಮಣರು ಬಹಳಷ್ಟು ಜನ ನಿಜಕ್ಕೂ ಪಶ್ಚಾತ್ತಾಪದಿಂದ ತಪಿಸಿ, ಪ್ರಾಯಶ್ಚಿತ್ತವಾಗಿ ವೈಯಕ್ತಿಕವಾಗಿ/ಸಾಮಾಜಿಕ ಮಟ್ಟದಲ್ಲಿ ಒಂದಿಲ್ಲೊಂದು ಕ್ರಮಗಳನ್ನು ಕೈಗೊಂಡಿರುವ ಸತ್ಯವನ್ನೂ ಮರೆಯದಿರೋಣ (ಸುಮ್ಮನೇ ಆಧುನಿಕ 'ಸೆಕ್ಯುಲರ್'ಗಳಲ್ಲಿ ಬ್ರಾಹ್ಮಣರ ಸಂಖ್ಯೆಯನ್ನೊಮ್ಮೆ ನೋಡಿ).  ಹಾಗೆಯೇ ತೀರ ಇತ್ತೀಚಿನ ಇತಿಹಾಸದವರೆಗೂ ಕಂಡುಬರುತ್ತಿದ್ದ ಅಸಹ್ಯವೆನಿಸುವ ಅಸ್ಪೃಶ್ಯತೆಯ ಆಚರಣೆ ಈಗಿನ ಬ್ರಾಹ್ಮಣತಲೆಮಾರಿನಲ್ಲಿ ಇಲ್ಲವೇ ಇಲ್ಲವೆನಿಸುವಷ್ಟು ಕಡಿಮೆಯಾಗಿದೆಯೆಂಬುದನ್ನೂ ಗಮನದಲ್ಲಿಡೋಣ.  ಇನ್ನು ಈ ಸಾಮಾಜಿಕ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಮೀಸಲಾತಿಯಿದೆ.  ಅದರ ಮೂಲಧ್ಯೇಯ ನ್ಯಾಯವೇ ಆಗಿದ್ದರೂ ಅದರ ಜಾರಿ, ಬಳಕೆಗಳಲ್ಲಿ ಹಲವು ಅಪಸವ್ಯಗಳಿವೆಯೆಂಬುದನ್ನೂ ಸದ್ಯಕ್ಕೆ ಮರೆತು, ಅದನ್ನು ಅನೇಕ ಮಂದಿ ಬ್ರಾಹ್ಮಣರು ಗೊಣಗುತ್ತಲೇ ಒಪ್ಪಿಕೊಂಡಿದ್ದಾರೆಂಬುದನ್ನು ಗಮನದಲ್ಲಿಡೋಣ.  ವಿರೋಧವಿಲ್ಲವೆಂದಲ್ಲ, ಅದು ಯಾವುದಕ್ಕೂ ಸಹಜವೇ.  ಸರ್ಕಾರದ ಅಧಿಕಾರಸ್ಥಾನಗಳಲ್ಲಿ 60% ಬ್ರಾಹ್ಮಣರೇ ಎನ್ನಲಾಗುತ್ತದೆ (ಗೊತ್ತಿಲ್ಲ).  ಹೀಗಿರುವಾಗ ನಿಜಕ್ಕೂ ಮನಸ್ಸು ಮಾಡಿದ್ದರೆ ಬ್ರಾಹ್ಮಣರಿಗೆ 'ಬೇಡ'ವೆಂದು ಆರೋಪಿಸಲಾಗುತ್ತಿರುವ ಈ ಮೀಸಲಾತಿಯನ್ನು ಇರಗೊಡಿಸುತ್ತಿದ್ದರೇ, ತಮ್ಮ ನರಿಬುದ್ಧಿಯನ್ನುಪಯೋಗಿಸಿ ಕಲ್ಲು ಹಾಕಬೇಕಿತ್ತಲ್ಲವೇ?  ಬದಲಿಗೆ ಅದು ಮುಂದುವರೆಯುತ್ತಲೇ ಇದೆ.  ಹೀಗಿದ್ದರೆ ಒಂದೋ ಈ 60% ಅಧಿಕಾರದಲ್ಲಿ ಬ್ರಾಹ್ಮಣರು ಇದ್ದಾರೆಂಬುದು ಸುಳ್ಳಿರಬೇಕು, ಅಥವಾ ಆ ಬ್ರಾಹ್ಮಣರು ನಿಜಕ್ಕೂ ಆರೋಪಿಸಿದಷ್ಟು ಕೆಟ್ಟವರಲ್ಲವೆನ್ನಬೇಕು.  ಅಥವಾ ಉಳಿದ 40% ಅಧಿಕಾರಸ್ಥರಿಗೆ 'ಅಂಜಿ' ಸುಮ್ಮನಿರಬಹುದೇ?  ಹಾಗಿದ್ದರೂ ಈ ಅಂಜುಕುಳಿಗಳಿಂದ, ಈ ಆರೋಪಿಸುವಂತಹ ತೊಂದರೆಯಿರಲಾರದೆಂದಂತಾಯಿತಲ್ಲ.

ಇರಲಿ, ಈ ಸೋಷಿಯಲ್ ಕ್ಯಾಪಿಟಲ್ ವಿಷಯ ಒಮ್ಮೆ ನೋಡೋಣ.  ಅದಕ್ಕೂ ಮುಂಚೆ ನಿಜವಾದ ಕ್ಯಾಪಿಟಲ್ ವಿಷಯ.  ದೇಶದ ಒಟ್ಟು ಸಂಪತ್ತಿನ ಶೇಕಡಾ 30, ಶೇಕಡಾ 1ರಷ್ಟು ಜನದ ಕೈಲಿದೆಯೆನ್ನುತ್ತದೆ ಒಂದು ಅಂದಾಜು.  ಅದೇ ಒಟ್ಟು ಜನಸಂಖ್ಯೆಯ ಶೇಕಡಾ 50ಕ್ಕೆ, ಸಂಪತ್ತಿನ ಕೇವಲ ಶೇಕಡಾ 8ರಷ್ಟಿದೆಯಂತೆ.  ಉಳಿದ ಶೇ. 62ರಷ್ಟು ಸಂಪತ್ತು ಶೇಕಡಾ 49ರಷ್ಟು ಜನದ ಕೈಲಿದೆಯಂತೆ. 

ಈಗ, ಈ 30% ಸಂಪತ್ತನ್ನು ಹೊಂದಿರುವ ಶೇಕಡಾ 1ರಷ್ಟು ಜನ (ಅಂದರೆ ಸು. 1.3 ಕೋಟಿ) ಜನ ಬ್ರಾಹ್ಮಣರೆಂದುಬಿಡಬಹುದೇ?  ಈ ಬಗೆಗಿನ ಅಂಕಿ-ಅಂಶಗಳಂತೂ ನನ್ನ ಬಳಿಯಿಲ್ಲ.  ಭಾರತದ ಮೊದಲ ಹತ್ತು ಅತಿಶ್ರೀಮಂತರಲ್ಲಿ ಒಬ್ಬರೂ ಬ್ರಾಹ್ಮಣರಿಲ್ಲ.  ಭಾರತದ ಅರವತ್ತೋ ಎಪ್ಪತ್ತೋ ಬಿಲಿಯನೇರುಗಳ ಪಟ್ಟಿಯಲ್ಲಿ ನನಗೆ ಜಾತಿ ಪತ್ತೆಹಚ್ಚಲು ಆಗದ ಒಂದು ಐದಾರು ಜನ ಬಿಟ್ಟರೆ ಉಳಿದವರೆಲ್ಲಾ ಬನಿಯಾ, ಪಾರ್ಸಿ, ಕಾಯಸ್ಥ, ಮುಸ್ಲಿಮ್, ಕ್ರಿಶ್ಚಿಯನ್, ನಾಡಾರ್ ಇತ್ಯಾದಿ (ಎಂದರೆ, ಈ ಗೊತ್ತಾಗದ ಮಂದಿಯನ್ನು ಬ್ರಾಹ್ಮಣರೆಂದೇ ಇಟ್ಟುಕೊಳ್ಳೋಣ - ಗರಿಷ್ಟ 10%).  ಈ ಲೆಕ್ಕದಲ್ಲಿ, ಒಟ್ಟು 30% ಸಂಪತ್ತು ಹೊಂದಿರುವ ಮೊದಲ 1% ಜನರಲ್ಲಿ 10%ನಷ್ಟು ಬ್ರಾಹ್ಮಣರು ಎಂದರೆ, ಒಟ್ಟು ಜನಸಂಖ್ಯೆಯ 0.1% ಮಾತ್ರ ಈ 'ಅತಿಶ್ರೀಮಂತ'ರ ಪಟ್ಟಿಯಲ್ಲಿ ಬರುವವರೆಂದಾಯಿತು.  ಒಟ್ಟು ಶೇ.4 ಇರುವ ಬ್ರಾಹ್ಮಣರಲ್ಲಿ 01% ಅತಿಶ್ರೀಮಂತರೆಂದರೆ ಉಳಿದ 3.9% ಸುಮಾರು ಶ್ರೀಮಂತರ ಪಟ್ಟಿಯಲ್ಲಿ ಬರಬಹುದೇ? (ಅದೇ 62% ಸಂಪತ್ತು ಹೊಂದಿರುವ 49% ಜನ ಇದ್ದಾರಲ್ಲ ಅಲ್ಲಿ).  ಖಂಡಿತಾ ಇರಲಿಕ್ಕಿಲ್ಲ, ಏಕೆಂದರೆ ಬ್ರಾಹ್ಮಣರಲ್ಲಿ ಬಡವರು, ಕಡುಬಡವರು ಇದ್ದಾರೆ, ಕಾಲದಿಂದ ಇದ್ದಾರೆ - ದಿನದ ಒಪ್ಪತ್ತು ಊಟಕ್ಕೂ ಕಷ್ಟಪಡುವ ಬ್ರಾಹ್ಮಣರ ಕುಟುಂಬಗಳು ಅನೇಕವಿವೆ; ಬ್ರಾಹ್ಮಣದಿವಾನರು, ಅಮಲ್ದಾರರು, ಜಮೀನ್ದಾರರು, ಮಂತ್ರಿಮಹಾಮಂತ್ರಿಗಳು ಇದ್ದ ಕಾಲದಲ್ಲೂ ಸಾಮಾನ್ಯಬ್ರಾಹ್ಮಣ 'ಬಡಬ್ರಾಹ್ಮಣ'ನೇ; ದೆಲ್ಲಿಯಲ್ಲಿ ಅನೇಕ ಬ್ರಾಹ್ಮಣರು ಶೌಚಾಲಯಗಳಲ್ಲಿ ಕೆಲಸ ಮಾಡುತ್ತಾರೆ, ಸೈಕಲ್ ರಿಕ್ಷಾ ತುಳಿಯುತ್ತಾರೆ, ಆಟೋ ಓಡಿಸುತ್ತಾರೆ (ಇವನ್ನೆಲ್ಲ ಬ್ರಾಹ್ಮಣರು ಮಾಡುತ್ತಿದ್ದಾರಲ್ಲ, ಮಾಡಬೇಕಾಗಿ ಬಂದಿದೆಯಲ್ಲ ಎಂಬ ದುಃಖ ನನ್ನದಲ್ಲ, ನೂರಾರು ವರ್ಷಗಳಿಂದ ಇತರ ಸಮುದಾಯದವರೂ ಮಾಡುತ್ತಿದ್ದಾರೆ, ಇಲ್ಲಿ ಇದನ್ನು ಹೇಳುವ ಉದ್ದೇಶ ಅಂಕಿಸಂಖ್ಯೆಗಳ ತರ್ಕಕ್ಕಷ್ಟೇ), ಹಾಗೇ ದೇಶದಾದ್ಯಂತ ಮೂರುಕಾಸು ಸಂಬಳ ತೆಗೆದುಕೊಂಡು ಗುಡಿಗಳಲ್ಲಿ ಕೆಲಸ ಮಾಡುವ ಬ್ರಾಹ್ಮಣರಿದ್ದಾರೆ (ಕರ್ನಾಟಕವೊಂದರಲ್ಲೇ ಇಂಥವು ಸುಮಾರು 35000 ಗುಡಿಗಳಿವೆ), ಈ ಪ್ರಸ್ತುತ ಜಾಹೀರಾತು ಕೊಟ್ಟ ಹಿರಿಯ ಮಹಿಳೆಯಂಥವರು ಲೆಕ್ಕವಿಲ್ಲದಷ್ಟಿದ್ದಾರೆ, ಹಪ್ಪಳ ಸಂಡಿಗೆ ಹುಳಿಪುಡಿ ಮಾರಿ ಬದುಕುವವರು.  ಇವರೆಲ್ಲರೂ ಈ ಎರಡನೆಯ ಗುಂಪಿನಲ್ಲಿ ಬರುತ್ತಾರೆನ್ನಲು ಸಾಧ್ಯವಿಲ್ಲ.  ಶೇಕಡಾ 8% ಸಂಪತ್ತನ್ನು ಹೊಂದಿರುವ ಶೇ 50 ಕಡುಬಡವರ ಗುಂಪಿನಲ್ಲೇ ಇವರು ಇರಬೇಕು, ಅಲ್ಲವೇ?  ಇವರ ಸಂಖ್ಯೆ ಎಷ್ಟಾದರೂ ಇರಲಿ, ಇವರಲ್ಲಿ ಬಹುಪಾಲು ಜನ ಅಸಹಾಯಕರು, ಅನಕ್ಷರಸ್ಥರು, ಪೌರೋಹಿತ್ಯವನ್ನೂ ಅರಿಯದ ಜನ, ಎಲ್ಲೋ ಪರಿಚಾರಿಕೆಯೋ, ಅಡುಗೆಯೋ, ಸುತ್ತುಗೆಲಸವೋ ಮಾಡಿಕೊಂಡು ಬದುಕುವವರು, ಅನೇಕ ಮಹಿಳೆಯರು ಅವರಿವರ ಮನೆಗಳಲ್ಲಿ ಅಡುಗೆ ಪಾತ್ರೆ ಇತ್ಯಾದಿ ಮಾಡಿಕೊಂಡು, ಹಪ್ಪಳಸಂಡಿಗೆ ಮಾಡಿಕೊಂಡು ಕಾಲ ಹಾಕುವವರು.  ಮೇಲೆ ಕಾಣಿಸಿದ ಶೇ. 0.1% ಶ್ರೀಮಂತಬ್ರಾಹ್ಮಣರು ಬಂದು ಈ ಕಡುಬಡವರಿಗೆ ಯಾವ ಸಹಾಯವನ್ನೂ ಮಾಡಿದಂತಿಲ್ಲ (ಯಾವತ್ತಿಗೂ ಮಾಡಿದ್ದಿಲ್ಲ).  ಇವರ ಸೋ ಕಾಲ್ಡ್ 'ಸೋಶಿಯಲ್' ಕ್ಯಾಪಿಟಲ್ ಇವರನ್ನು ಮೇಲೆತ್ತಿಲ್ಲ.   ಇಂಥವರಲ್ಲಿ ಬಹುಪಾಲು ಜನ, ಆಪತ್ತಿನಲ್ಲಿ ಒಬ್ಬರ ಕಡೆ ಕೈಚಾಚದೇ ತಮಗೆ ತಿಳಿದದ್ದೇನನ್ನೋ ಮಾಡಿಕೊಂಡು 'ಅಂಬಲಿಯೋ ತುಂಬೇಸೊಪ್ಪೋ ಕುಡಿದಾದರೂ' ಸ್ವಾಭಿಮಾನದಿಂದ ಬದುಕಲೆಳಸುವವರು.  ಇವರೇನು ಭಿಕ್ಶೆಯೆತ್ತುವವರಲ್ಲ, ಸರ್ಕಾರದಿಂದ ಸವಲತ್ತು ಕೇಳುವವರಲ್ಲ, ತಮ್ಮ ಹಪ್ಪಳ-ಸಂಡಿಗೆ ತೆಗೆದುಕೊಂಡು ಸಹಾಯ ಮಾಡಿರೆಂದು ಬೇಡುವವರಲ್ಲ.  ತಮ್ಮಲ್ಲಿರುವ ಸರಕು/ಸೇವೆಯನ್ನು ಮಾರಾಟಕ್ಕಿಟ್ಟಿದ್ದಾರೆ - 'ಬ್ರಾಹ್ಮಣರು ಮಾಡಿದ' ಆಹಾರಪದಾರ್ಥಗಳಿಗೆ ನಿರ್ದಿಷ್ಟ ಸಮುದಾಯದಿಂದ ಬೇಡಿಕೆಯಿದೆಯೆಂಬುದನ್ನು ಬಲ್ಲರು, ತಮ್ಮ ಸೀಮಿತವಲಯದಿಂದಾಚೆಗೆ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳಲು ಸೋಷಿಯಲ್ ಮೀಡಿಯಾ ಬಳಸುತ್ತಿದ್ದಾರೆ.  ಇದನ್ನು ಮೆಚ್ಚಿ ಬೆನ್ನು ತಟ್ಟುವ ಬದಲು ಅಲ್ಲಿ 'ಸೋಷಿಯಲ್ ಕ್ಯಾಪಿಟಲ್' ಹುಳುಕನ್ನರಸಿದರೆ ಏನೆನ್ನಬೇಕು?  ಕಾಲದಿಂದ ನಮ್ಮಲ್ಲಿ ಕಸುಬಿಗೂ ಜಾತಿಗೂ ಸಂಬಂಧವಿದೆ, ಮತ್ತು ಸಮಾಜ ಅದನ್ನು ಹಾಗೆಯೇ ಒಪ್ಪಿದೆ ಕೂಡ - ಮದುವೆ ಮುಂಜಿಗೆ ಪುರೋಹಿತರು, ಬಟ್ಟೆ ಒಗೆಯಲು ಅಗಸರು, ಕ್ಷೌರಮಾಡಲು, ವಾಲಗ ಊದಲು ಕ್ಷೌರಿಕರು ಹೀಗೆ.  ಇದು ತಪ್ಪೋ ಸರಿಯೋ ಎಂಬುದು ಬೇರೆಯ ವಿಚಾರ, ಒಂದು ಕಸುಬನ್ನು ಈಗ ಇನ್ನೊಬ್ಬರು ಮಾಡಬಹುದೆಂಬುದೂ ಬೇರೆಯ ವಿಚಾರ, ಆದರೆ ಈ ಕೆಲಸಗಾರರು ನಮ್ಮನಿಮ್ಮಷ್ಟು ಓದಿದವರಾಗಲೀ ಸೋಷಿಯಲ್ ಕ್ಯಾಪಿಟಲ್ಲಿನ ಬಗೆಗೆ ಭಾಷಣ ಬಿಗಿಯುವವರಾಗಲೀ ಅಲ್ಲ - ಅವರಿಗೆ ಅವತ್ತಿನ ತುತ್ತಿನ ಚೀಲ ತುಂಬುವುದು ಮುಖ್ಯ, ಅದಕ್ಕೆ ತಮ್ಮಲ್ಲಿರುವ ಕಸುಬನ್ನು ಮುಂದಿಟ್ಟು ದುಡಿಯುತ್ತಾರೆ, ಗೌರವದಿಂದ ದುಡಿಯುತ್ತಾರೆ.  ಪೌರೋಹಿತ್ಯ, ಅಡುಗೆ ಮೊದಲಾದ ಕೆಲಸಗಳಿಗೆ ಬ್ರಾಹ್ಮಣರು ಕಾಲದಿಂದ ಹೆಸರಾಗಿದ್ದಾರೆ (ಅವರು ಶುಚಿಯಾಗಿ ಮಾಡುತ್ತಾರೆ, ಪರಿಶುದ್ಧ ಇತ್ಯಾದಿ ನಾನು ಹೇಳುತ್ತಿಲ್ಲ), ಅದು ಅವರ ಕುಲಕಸುಬು, ಅದನ್ನು ಬೇಡುವ ನಿರ್ದಿಷ್ಟ ಸಮುದಾಯಗಳಿವೆ.  ಆ ಸಮುದಾಯಗಳು ಬ್ರಾಹ್ಮಣರವೂ ಇರಬಹುದು, ಇತರರದ್ದೂ.  ಬೇಡುವವರು ಅವರು, ಮಾರುವವರು ಇವರು, ನಮ್ಮ ಗಂಟೇನು ಹೋಯಿತು?  ಜೊತೆಗೆ ಅದು ಒಂದು ಬ್ರಾಂಡ್ ಕೂಡ - ನಿರ್ದಿಷ್ಟ ಜಾತಿ-ಪಂಗಡಗಳು ನಿರ್ದಿಷ್ಟರೀತಿಯ ತಿನಿಸುಗಳಿವೆ ಪ್ರಸಿದ್ಧವಾಗಿವೆ, ಬೇಕಾದವರು ಅವುಗಳನ್ನು ಸವಿಯುವ ಅವಕಾಶ ಈಗ ಇದೆ, ಅದನ್ನು ಅವರು ಬಳಸಿಕೊಳ್ಳುತ್ತಾರೆ.  ಈ ಮೊದಲು ಲಿಂಗಾಯತರ, ಗೌಡರ ತಿನಿಸುಗಳು ಪ್ರಸಿದ್ಧವಿರಲಿಲ್ಲ, ಈಗ ಅವೂ ಮಾರುಕಟ್ಟೆಗೆ ಬಂದಿವೆ, ಆ ಬ್ರಾಂಡನ್ನು ಅವರು ಬೆಳೆಸಿದ್ದಾರೆ.  ಬೇಕಾದವರು ಕೊಂಡು ತಿನ್ನುತ್ತಾರೆ. 

ಇಲ್ಲಿ "ದಲಿತರು ಮಾಡಿದ ಅಡುಗೆ" ಎಂದು ಜಾಹೀರಾತು ಬಂದರೆ ತಿನ್ನುತ್ತೀರೋ ಎನ್ನುವ ಕುಚೇಷ್ಟೆಯ ಪ್ರಶ್ನೆ ಬರುತ್ತದೆ.  ಕಾಲದಿಂದ ದಲಿತರನ್ನು ಅಸ್ಪೃಶ್ಯರನ್ನಾಗಿ ನೋಡಿಕೊಂಡು ಬಂದವರು ಅವರು ಮಾಡಿದ್ದನ್ನು ತಿನ್ನುತ್ತೀರೋ ಎನ್ನುವ ತರಲೆಯ ಪ್ರಶ್ನೆಯಿದು.  ಇದಕ್ಕೆ "ದಲಿತರು ಇದುವರೆಗೂ ಆ ಬ್ರಾಂಡನ್ನು ಮಾರಿಯೇ ಇಲ್ಲ, ನಮಗೆ ಹೇಗೆ ಗೊತ್ತು" ಎನ್ನುವ ಕುರುಡು ಉತ್ತರ ಕೊಡಲಾರೆ.  ಹೌದು, ಈ ಸಾಮಾಜಿಕ 'ಸ್ಟಿಗ್ಮಾ' ಇವತ್ತಿಗೂ ಇದೆ.  ದಲಿತರ ಖಾನಾವಳಿ ಎಂದಿದ್ದರೆ ಉಳಿದ ಹಲವರು ಹೋಗಲಾರರು, ಇದನ್ನು ಒಪ್ಪಲೇಬೇಕು.  ಆದರೆ ಆ ಕಾರಣಕ್ಕೆ, ಕಾಲದಿಂದ ಇದನ್ನೇ ಕಸುಬಾಗಿ ಉಳ್ಳವರು ತಮ್ಮ ಕಸುಬನ್ನು ಬ್ರಾಂಡ್ ಆಗಿ ಮುಂದಿಡಬಾರದೆಂದರೆ, ಅದರಿಂದ ದಲಿತಖಾನಾವಳಿ ಬೆಳೆದೀತೇ?  ಗೌಡರ, ಲಿಂಗಾಯತರ, (ಅಷ್ಟೇಕೆ, ಬ್ರಾಹ್ಮಣರ) ಖಾನಾವಳಿಗೂ ಎಲ್ಲರೂ ಹೋಗುವುದಿಲ್ಲ, ಅವರವರ ಆಯ್ಕೆ ಅದು.  ಹಾಗೆಂದು ಹೊಸಹೊಸ ಬ್ರಾಂಡುಗಳು ಬರುವುದೇನೂ ನಿಂತಿಲ್ಲವಲ್ಲವೇ?  ಇದೂ ಕಾಲಕ್ರಮದಲ್ಲಿ ಹಾಗೆಯೇ ನಿಲ್ಲಬಹುದು.  ದಲಿತರೂ ಇತರ ಹಲವು ಉದ್ಯಮಗಳಂತೆ ಅದನ್ನೂ ಕೈಕೊಳ್ಳಲು ಉತ್ತೇಜಿಸುವುದರಲ್ಲಿ ಅರ್ಥವಿದೆಯೇ ವಿನಾ ಇನ್ನಾವುದನ್ನೋ ತಡೆದುಹಾಕುವುದರಲ್ಲಲ್ಲ ಅಲ್ಲವೇ?  ವೈಯಕ್ತಿಕವಾಗಿ ನನಗೆ ಯಾರೊಡನೆ ಉಣ್ಣಬೇಕೆಂಬ ಯಾವ ಆಯ್ಕೆಯೂ ನಿಷೇಧವೂ ಇಲ್ಲ - ನನ್ನೊಡನೆ ಉಣ್ಣಲು ಅವರಿಗೆ ನಿಷೇಧವಿಲ್ಲದಿದ್ದರೆ ಆಯ್ತು, ನಗುನಗುತ್ತಾ ಉಣ್ಣುತ್ತೇನೆ, ನನ್ನಂಥವರು ಸಾವಿರಾರು ಜನ ಇದ್ದಾರೆಂದು ಬಲ್ಲೆ.  ಅಷ್ಟೇಕೆ, ನಮ್ಮನಮ್ಮ ಕಛೇರಿಗಳಲ್ಲಾಗಲೀ ಹೋಟೆಲುಗಳಲ್ಲಾಗಲಿ ನಮ್ಮ ಪಕ್ಕ ಕುಳಿತು ಉಣ್ಣುವವರು ಯಾರು, ಬಡಿಸುವವರು ಯಾರು, ಅಡುಗೆ ಮಾಡುವವರು ಯಾರು ಇದನ್ನು ನಾವು ನೋಡುತ್ತೇವೆಯೇ?  ಆ ಯೋಚನೆಯಾದರೂ ಬರುತ್ತದೆಯೇ? ಈ ಬದಲಾವಣೆಯನ್ನು ಗಮನಿಸದೇ ಇನ್ನೂ ಎಷ್ಟು ಕಾಲ ಇಂದಿಗೆ ಅಪ್ರಸ್ತುತವಾದ, ಯಾವುದೋ ತಾತನಕಾಲದ ಸಮಾಜವಿಜ್ಞಾನದ ಪಠ್ಯವನ್ನೇ ಒಪ್ಪಿಸುತ್ತಾ ಕೂರುವುದು?  ಅಲ್ಲವೇ?

ಹಾಂ, ದಲಿತರ ಕ್ಯಾಂಟೀನು ನಡೆಯುತ್ತದೆಯೇ ಎಂಬ ಪ್ರಶ್ನೆ ಕೇಳುವವರಿಗೆ ಒಂದು ಪ್ರತಿಪ್ರಶ್ನೆಯಿದೆ.  ದಲಿತರ ಕ್ಯಾಂಟೀನು, ಕಾಫೀಬಾರುಗಳು ಕೊನೆಯ ಪಕ್ಷ ನಗರಪ್ರದೇಶಗಳಲ್ಲಾದರೂ, ನಡೆಯುವುದಿಲ್ಲವೆಂಬುದು ಸತ್ಯವೆಂದಾದರೆ ಅದು ನಿಜಕ್ಕೂ ದುಃಖದ ವಿಷಯ.  ಖಟ್ಟರ್ ಜಾತಿವಾದಿಗಳು ದಲಿತರ ಹೋಟೆಲಿನಲ್ಲಿ ಕಾಫಿ ಕುಡಿಯುವುದಿಲ್ಲ, ಇರಲಿ ಇವರನ್ನು ಸದ್ಯಕ್ಕೆ ಪಕ್ಕಕ್ಕಿಡೋಣ, ಇದು ನಿಧಾನಕ್ಕೆ ಬರಬೇಕಾದ ಪರಿವರ್ತನೆ.  ನಾನು ಕುಡಿಯುತ್ತೇನೆ; ನನ್ನಂತೆ ಯೋಚಿಸುವ ಸಾವಿರಾರು ಜನರಿದ್ದಾರೆ, ಅವರು ಕುಡಿಯುತ್ತಾರೆ; ಇನ್ನು ಹಿಂದೂ ಸಮಾಜದ ಹೊರಗಿರುವ (ಮತ್ತು ಈ ಜಾತೀಯತೆಯ ಕಾರಣಕ್ಕಾಗಿಯೇ ಹಿಂದೂಗಳನ್ನು ದೂರುವ) ಇತರ ಸಮುದಾಯಗಳವರು ದೇಶದಲ್ಲಿ ಶೇಕಡಾ 25ರಷ್ಟಿದ್ದಾರೆ. ಅವರಿಗೆ ಇಲ್ಲಿ ಕುಡಿಯಲು ಖಂಡಿತಾ ತೊಂದರೆಯಿರಬಾರದು; ಇನ್ನು ಸ್ವತಃ ದಲಿತರ ಜನಸಂಖ್ಯೆಯೇ ಸುಮಾರು 15%ಗೂ ಮಿಕ್ಕಿದೆ (ಅವರ ನಡುವೆ ಜಾತೀಯತೆಯ ಕಟ್ಟಲೆಗಳು ಇರಲಾರದೆಂದೇ ಭಾವಿಸಿದ್ದೇನೆ - ಏಕೆಂದರೆ ಇದುವರೆಗಿನ 'ನರೇಟಿವ್ಸ್' ಪ್ರಕಾರ ಜಾತೀಯತೆ ಚಾಲ್ತಿಯಲ್ಲಿರುವುದು ಬ್ರಾಹ್ಮಣ, ಲಿಂಗಾಯತ, ಗೌಡ ಮೊದಲಾದ 'ಮುಂದುವರಿದ' ಜಾತಿಗಳಲ್ಲಿ ಮಾತ್ರವಷ್ಟೇ) ಆದ್ದರಿಂದ ತಮ್ಮ ಹೋಟೆಲುಗಳು ನಡೆಯಲು ಅವರ ಬೆಂಬಲವಂತೂ ಖಂಡಿತಾ ಇದ್ದೇ ಇರುತ್ತದೆ.  ಇನ್ನು ಖಟ್ಟರ್ ಜಾತ್ಯತೀತರು? ಫೇಸ್ಬುಕ್ಕಿನಲ್ಲಿ ಇವರ ಹುಯ್ಲುಗಳನ್ನು ನೋಡಿದರೆ ಅವರ ಸಂಖ್ಯೆಯೂ ಕಡಿಮೆಯೇನಲ್ಲ.  ಜಾತಿವಾದದಾಚೆಗೆ ಇಷ್ಟೊಂದು ಜನರಿದ್ದೂ ದಲಿತರ ಹೋಟೆಲು ನಡೆಯುವುದಿಲ್ಲವೆನ್ನುವುದಾದರೆ, ಈ ಜಾತ್ಯತೀತತೆ ಹುಸಿಯೇ?  "ನಾನು ಜಾತಿವಾದಿ" ಎಂದು ನೇರವಾಗಿಯೇ ಹೇಳಿಕೊಳ್ಳುವ ದುಷ್ಟ ಖಟ್ಟರ್ ಮನಸ್ಥಿತಿಗಿಂತಲೂ ಇಂತಹ ಢೋಂಗೀ ಮನಸ್ಥಿತಿ ಹೆಚ್ಚು ಅಪಾಯಕಾರಿಯಲ್ಲವೇ?

ಈ ಆರ್ಥಿಕ 'ಕೆಳವರ್ಗ'ದ ಬ್ರಾಹ್ಮಣರ ವಿಷಯ ಬಿಡಿ.  ನಮ್ಮಂತಹ ಕೆಳಮಧ್ಯಮವರ್ಗದವರಿಗಾದರೂ ಈ ಸೋಶಿಯಲ್ ಕ್ಯಾಪಿಟಲ್ ಎನ್ನುವುದು ಹೇಗೆ ಕೆಲಸ ಮಾಡಿದೆಯೆಂಬುದನ್ನು ನೋಡೋಣ.  ನಾನೂ ಕಾಲೇಜು ಕಲಿಯುತ್ತಿದ್ದಾಗ ಈ ಸೋಷಿಯಲ್ ಕ್ಯಾಪಿಟಲ್ ಬಗೆಗೆ ಭಾರೀ ತಲೆಕೆಡಿಸಿಕೊಂಡಿದ್ದೆ, ನಮ್ಮ ಪೂರ್ವಜರಿಂದ ಆಗಿತ್ತೆನ್ನಲಾದ ತಪ್ಪುಗಳಿಗೆ ತುಂಬಾ ಬೇಸರಪಟ್ಟಿದ್ದೆ.  ಜಾತಿ ಹೇಳಿಕೊಳ್ಳುವುದು ನಿರ್ಲಜ್ಜತೆಯೆಂಬುದೇ ನನ್ನ ನಿಲುವಾಗಿತ್ತು.  ಕಾಲೇಜಿಗೆ ಅರ್ಜಿ ತುಂಬುವಾಗ ಜಾತಿ, ಧರ್ಮ ಕಲಮುಗಳನ್ನು ಖಾಲಿಬಿಟ್ಟು ದೇಶ ಮಾತ್ರ ತುಂಬಿದೆ.  ಕ್ಲರ್ಕ್ ಕರೆದು ಬೈದು ಅದನ್ನು ತುಂಬಲು ಹೇಳಿದ.  ನಾನು ಜಾತಿ-ಜಾತ್ಯತೀತ ಎಂದೆಲ್ಲ ಭಾಷಣ ಕುಟ್ಟಲು ನೋಡಿದೆ.  "ಜಾತಿಯನ್ನು ಮುಚ್ಚಿಟ್ಟು ಫ್ರೀಶಿಪ್ಪು ಸ್ಕಾಲರ್ಶಿಪ್ಪು ಹೊಡೆಯಲು ನೋಡ್ತಿದೀಯಾ, ನಿಮ್ಮಪ್ಪ ಗೊತ್ತು ನನಗೆ" ಎಂದು ಮತ್ತಷ್ಟು ಉಗಿದು ಆ ಕಲಮುಗಳನ್ನು ತುಂಬಿಸಿದ.  ಆಗ ಹೋಗಲಿ, ಈಗಲೂ ಕೆಲವು ಆನ್ ಲೈನ್ ಫಾರ್ಮುಗಳನ್ನು ತುಂಬಿನೋಡಿ - ಜಾತಿ-ಧರ್ಮ ಕಲಮುಗಳು ಕಡ್ಡಾಯ.  ದುಃಖದ ವಿಷಯವೆಂದರೆ ಜಾತ್ಯತೀತ, ಧರ್ಮನಿರಪೇಕ್ಷವೆಂದು ಹೇಳಿಕೊಳ್ಳುವ ಸರ್ಕಾರವೇ ನಿಮ್ಮನ್ನು ಜಾತಿಯ ಹೊರತಾದ ಒಬ್ಬ ವ್ಯಕ್ತಿಯಾಗಿ ಪರಿಗಣಿಸುವುದೇ ಇಲ್ಲ. 

ಇರಲಿ, ಈ ಟೆಕ್ನಿಕಲ್ ವಿಷಯವನ್ನು ಬದಿಗಿಡೋಣ.  ಜಾತಿಯನ್ನು ಹೇಳಿಕೊಳ್ಳುವುದು, ಅದರಲ್ಲೂ ಬ್ರಾಹ್ಮಣರು, ನಿರ್ಲಜ್ಜವೆನ್ನೋಣ.  ಬದಲಿಗೆ "ಸೋಷಿಯಲ್ ಕ್ಯಾಪಿಟಲ್ (ಸೋ.ಕ್ಯಾ)" ಜಾತಿಯೆಂದುಕೊಳ್ಳೋಣ.  ನಾನು ಹುಟ್ಟಿದ್ದು ಈ ಸೋ.ಕ್ಯಾ ಜಾತಿಯಲ್ಲಿ.  ನಮ್ಮಪ್ಪ 100+ ಸಂಬಳದ ಟೀಚರು.  ಸಹಜವಾಗಿಯೇ ನಾನು ಓದಿದ್ದು ಸರ್ಕಾರೀ ಶಾಲೆಯಲ್ಲಿ - 'ಎಲ್ಲ' ಜಾತಿಯ ಹುಡುಗರೂ ಅಲ್ಲಿಗೆ ಬರುತ್ತಿದ್ದರು.  ಇವತ್ತಿಗೂ, ಆಗಿನ ನನ್ನ ಮಿತ್ರರಲ್ಲಿ ತಮ್ಮ ಜಾತಿಲಾಂಛನಗಳನ್ನು ಹಣೆಗೆ ಹಚ್ಚಿಕೊಂಡು ಬರುತ್ತಿದ್ದ ಒಬ್ಬಿಬ್ಬರನ್ನು ಬಿಟ್ಟರೆ ಮಿಕ್ಕ ಯಾರ ಜಾತಿಯೂ ನನಗೆ ಗೊತ್ತಿಲ್ಲ, ನಮ್ಮ ಬುದ್ಧಿಗೆ ಅದು ಹೊಳೆಯುತ್ತಲೂ ಇರಲಿಲ್ಲ.  ಮುಂದೆ ನಮ್ಮ ತಂದೆಯವರು ಬೋಧಿಸುತ್ತಿದ್ದ ಶಾಲೆಗೆ ಸೇರಿದೆ.  ಅಲ್ಲಿ ಸುಮಾರು ಅರ್ಧದಷ್ಟು ಜನ ದಲಿತಸಮುದಾಯಕ್ಕೆ ಸೇರಿದ ಮಕ್ಕಳು.  ಸೋ.ಕ್ಯಾ.ದವರು ನಾವೊಂದಿಬ್ಬರು, ಉಳಿದವರು ಇತರರು.  ನಮ್ಮಲ್ಲಿ ಆಗೀಗ ಜಗಳವಾಗುತ್ತಿದ್ದುದುಂಟು, ಅವು ಬಾಲಿಶಕಾರಣಗಳಿಗೇ ವಿನಾ ಜಾತಿಗೆ ಸಂಬಂಧಿಸಿದ್ದು ಎಂದೂ ಆಗಿರಲಿಲ್ಲ.  ಇವರಲ್ಲಿ ಕೆಲವರು ನನಗೆ ತುಂಬಾ ಸ್ನೇಹಿತರೂ ಆಗಿದ್ದರು, ನನ್ನನ್ನು ಬೇರೆ ಜಗಳಗಳಿಂದ ರಕ್ಷಿಸುತ್ತಿದ್ದರು ಕೂಡ :)  ನಮ್ಮ ತಂದೆ ಬೇಕೆಂದೇ ನಮ್ಮ ತರಗತಿಗೆ ಬೋಧಿಸುತ್ತಿರಲಿಲ್ಲ - ಮೇಷ್ಟರ ಮಗನೆಂಬ ಇನ್ನೊಂದು ಸೋಷಿಯಲ್ ಕ್ಯಾಪಿಟಲ್ಲನ್ನು ನನಗೆ ಕೊಡುವುದು ಅವರಿಗೆ ಇಷ್ಟವಿರಲಿಲ್ಲ.  ಮೇಷ್ಟರುಗಳಲ್ಲೂ ಅನೇಕ ದಲಿತವರ್ಗದ ಮೇಷ್ಟ್ರುಗಳಿದ್ದರು, ಅವರಲ್ಲಿ ಹಲವರು ಒಳ್ಳೆಯ ಮೇಷ್ಟರುಗಳೂ ಆಗಿದ್ದರು.  ಕೆಲಸಕ್ಕೆ ಬರದ ಮೇಷ್ಟ್ರುಗಳೂ ಕೆಲವರು ಇದ್ದರು, ಅಂಥವರು ಇತರ ವರ್ಗಗಳಲ್ಲೂ ಇದ್ದರು ಕೂಡ.  ಮೇಷ್ಟರುಗಳು ನಮ್ಮನ್ನು ಹೊಡೆಯುತ್ತಿದ್ದುದೂ ಉಂಟು, ಆದರೆ ಜಾತಿಯ ಕಾರಣಕ್ಕೆ ಹೊಡೆದದ್ದು ನನಗೆ ಯಾವತ್ತೂ ನೆನಪಿಲ್ಲ.  ಏಳನೆಯ ತರಗತಿಯಲ್ಲಿ ಒಬ್ಬ ಹುಡುಗಿ ತರಗತಿಗೆ ಮೊದಲ ರ್ಯಾಂಕ್ ಬಂದಳು.  ಬಹಳ ಬುದ್ಧಿವಂತೆಯಾದ ಆಕೆ ಸೋ.ಕ್ಯಾ.ಜನಾಂಗಕ್ಕೆ ಸೇರಿದವಳಾಗಿರಲಿಲ್ಲ.  ನಾನು ಎರಡನೆಯವನಾಗಿ ಬಂದೆ.  ಆದರೆ ಯಾರೂ ಇದಕ್ಕಾಗಿ ಲಿಂಗತಾರತಮ್ಯ, ಸಾಮಾಜಿಕಬಂಡವಾಳ ಮೊದಲಾಗಿ ಗಲಭೆ ಮಾಡಿದ ನೆನಪಿಲ್ಲ (ಆಗೆಲ್ಲಾ ಯಾರಿಗೂ ಇದರ ಪರಿಚಯವೇ ಇಲ್ಲದಿದ್ದುದರಿಂದ ಜೀವನ ಧಗೆಯಿಲ್ಲದೇ ಸಾಗಿತೆನ್ನಬಹುದು).  ಮನೆಯಲ್ಲಿ ನಮ್ಮ ತಂದೆ ನನ್ನನ್ನು ಬೈದರು, ಸರಿಯಾಗಿ ಓದದಿದ್ದುದಕ್ಕಾಗಿ.

ಹೈಸ್ಕೂಲಿನಲ್ಲಿ ನಾನು ಮರೆಯಲೇ ಆಗದ, ಮರೆಯಬಾರದ ಅಧ್ಯಾಪಕರೊಬ್ಬರ ಹೆಸರಿದೆ.  ಆಕೆಯ ಹೆಸರು ದೊಡ್ಡಮ್ಮ 🙏, ನಮ್ಮ ಕನ್ನಡ ಟೀಚರಾಗಿದ್ದರು (ಈಗಲೂ ಇಲ್ಲಿ ಫೇಸ್ಬುಕ್ಕಿನಲ್ಲಿರಬಹುದಾದ ನನ್ನ ಮಿತ್ರರು ಇದನ್ನು ದೃಢೀಕರಿಸಬಹುದು).  ಈ ಅಕ್ಕರೆತುಂಬಿದ ಮಹಿಳೆ, ಅದೇ ದಲಿತವರ್ಗಕ್ಕೆ ಸೇರಿದವರಾಗಿದ್ದರು.  ಇವತ್ತೇನಾದರೂ ನನಗೆ ಶಾಸ್ತ್ರೀಯ ಕನ್ನಡದಲ್ಲಿ ಅಲ್ಪಸ್ವಲ್ಪ ಆಸಕ್ತಿಯಿದ್ದರೆ, ಅದು ಆಕೆಯ ಋಣ.  ಬಹುಶಃ ಬದುಕಿನಲ್ಲಿ ಮೊದಲ ಬಾರಿಗೆ ಕನ್ನಡವನ್ನು ಅಷ್ಟು ಗಂಭೀರವಾಗಿ ಗತ್ತಿನಿಂದ ಮಾತಾಡಬಹುದೆಂದು ಅರಿತದ್ದು ಆಕೆಯ ಮಾತನ್ನು ಕೇಳಿದ ಮೇಲೇ.  ಕನ್ನಡದ ಮೇರುಕೃತಿಗಳನ್ನು ಓದಲು ಅವರು ಯಾವಾಗಲೂ ತಮ್ಮ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು.  ದೊಡ್ಡ ವಿದುಷಿಯೇನಲ್ಲ, ಆದರೆ ಬಹಳ ಅಕ್ಯಾಡೆಮಿಕ್ ಮನೋವೃತ್ತಿಯವರಾಗಿದ್ದ ಆಕೆ, ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಆಗದಿದ್ದರೆ ಅದನ್ನು ಪ್ರಾಂಜಲವಾಗಿ ಒಪ್ಪಿಕೊಂಡು ಮರುದಿನ ತಿಳಿದು ಬಂದು ತಿಳಿಸುತ್ತಿದ್ದರು (ದುರದೃಷ್ಟವಶಾತ್ ಗಂಭೀರ ಮಾನಸಿಕ ತೊಂದರೆಗೊಳಗಾಗಿ ಎರಡು ದಶಕಗಳ ಹಿಂದೆ ಆಕೆ ತೀರಿಕೊಂಡರೆಂದು ಕೇಳಿದೆ).  ನೋಡಿ, ನನ್ನ ಬಳಿಯಿರುವ ಈ 'ಸಾಮಾಜಿಕ ಬಂಡವಾಳ' ಆಕೆಯ ಪ್ರಸಾದ.  ಆದರೆ ಈ 'ಬಂಡವಾಳ' ನನ್ನ ಅಂತರಂಗವನ್ನು ಶ್ರೀಮಂತಗೊಳಿಸಿತಾಗಲೀ, ನನ್ನ ಜೀವನಕ್ಕೆ ಕಸುಬಿಗೆ ಯಾವುದೇ ರೀತಿಯೂ ಸಹಾಯ ಮಾಡಲಿಲ್ಲವೆಂಬುದನ್ನು ನೆನಪಿನಲ್ಲಿಡೋಣ. 

ಇನ್ನೊಬ್ಬರು ಮೇಷ್ಟರಿದ್ದರು, ಲಿಂಗಾಯತರು.  ನಮಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದರು.  ಸ್ಥೂಲಕಾಯದ, ಅನಾರೋಗ್ಯದ ಆತ ನಮಗೆ ಸ್ಪೆಶಲ್ ಕ್ಲಾಸುಗಳನ್ನು ತೆಗೆದುಕೊಳ್ಳುತ್ತಾರೆಂಬ ಕಾರಣಕ್ಕೆ ನನಗವರನ್ನು ಕಂಡರೆ ಆಗುತ್ತಿರಲಿಲ್ಲ.  ಅವರ ಕ್ಲಾಸಿಗೇ ಹೋಗುತ್ತಿರಲಿಲ್ಲ.  ಅದೇ ಕಾರಣಕ್ಕೆ ಅವರಿಗೆ ನನ್ನ ಮೇಲೂ ಬಹಳ ಸಿಟ್ಟು.  ಆದರೆ ಹೀಗೆ 'ಅನಗತ್ಯ'ವಾದ ಸ್ಪೆಶಲ್ ಕ್ಲಾಸುಗಳನ್ನು ತೆಗೆದುಕೊಂಡು ಅವರು ಮಾಡುತ್ತಿದ್ದುದೇನೆಂದರೆ, ನಮಗೆ ಸಿಲಬಸಿನಲ್ಲಿ ಇದ್ದ ಇಲ್ಲದ ಇಂಗ್ಲಿಷ್ ವ್ಯಾಕರಣವನ್ನೆಲ್ಲ ಅಚ್ಚುಕಟ್ಟಾಗಿ ಉದಾಹರಣೆ ಸಹಿತ ಪಾಠ ಮಾಡಿ, ನೋಟ್ಸ್ ಬರೆಸುತ್ತಿದ್ದರು.  ಉದ್ದಕ್ಕೂ ಅವರ ಅವಕೃಪೆಗೆ ಒಳಗಾಗಿಯೇ ಬಂದ ನನಗೆ ಅದರ ನಿಜವಾದ ಬೆಲೆ ತಿಳಿದದ್ದು ಹೈಸ್ಕೂಲ್ ಮುಗಿಸಿದ ಮೇಲೆಯೇ.  ಆ ರಜೆಯಲ್ಲಿ, ಅವರಿವರಿಂದ ಆಗಾಗ ನೋಟ್ಸ್ ಕಡ ಪಡೆದು ರಫ್ ನೋಟಿನಲ್ಲಿ ಗೀಚಿಟ್ಟಿದ್ದ ಇಡೀ ವ್ಯಾಕರಣದ ನೋಟ್ಸನ್ನು ನೀಟಾಗಿ ಪುನರ್ನಿರ್ಮಿಸಿದೆ, ರಜೆಯಲ್ಲಿ ಭದ್ರವಾಗಿ ಇಂಗ್ಲಿಷ್ ಕಲಿತೆ.  ಹೀಗೆ ನನ್ನ ಕಸುಬಿಗೆ ಅತ್ಯಗತ್ಯವಾದ ಕ್ಯಾಪಿಟಲು, ಅವರ ಭಿಕ್ಷೆ 🙏 ಅದನ್ನು ನೀವು ಸೋಶಿಯಲ್ ಕ್ಯಾಪಿಟಲ್ ಎನ್ನುತ್ತೀರೋ ಇನ್ನಾವ ಕ್ಯಾಪಿಟಲ್ ಎನ್ನುತ್ತೀರೋ ನನಗೆ ತಿಳಿಯದು.

ಇನ್ನು ಸರ್ಕಾರದ ಕೆಲಸವಾಗಲೀ ಸವಲತ್ತುಗಳಾಗಲೀ ಎಂದಿಗೂ ಸಿಕ್ಕಿದ್ದಿಲ್ಲ.  ಖಾಸಗೀ ಕೆಲಸಗಳಲ್ಲಿ ನನ್ನ ಜಾತಿಯನ್ನು ಯಾರೂ ಕೇಳಿದ್ದಿಲ್ಲ.  ಆದ್ದರಿಂದ ನನಗೆ ತಿಳಿದ ಮಟ್ಟಿಗೆ ನನಗೆ ಸಹಾಯ ಮಾಡಿದ್ದು ನಾನು ಕಲಿತ ಕಸುಬೇ ಹೊರತು 'ಜಾತಿ' ಎಂಬ ಸೋಶಿಯಲ್ ಕ್ಯಾಪಿಟಲ್ ಅಲ್ಲ.  ಸುಮಾರು ಇದೇ ರೀತಿಯ ನೂರಾರು ಕತೆಗಳಿರುತ್ತವೆಂಬುದನ್ನು ಬಲ್ಲೆ.    ಪರಿಸ್ಥಿತಿ ಹೀಗಿರುವಾಗ, ಬೇರೆಲ್ಲಾ ಕ್ಯಾಪಿಟಲುಗಳಿಂದಲೂ ವಂಚಿತರಾಗಿ ಕುಲಕಸುಬೊಂದನ್ನೇ ಬಲ್ಲ ಒಂದಷ್ಟು ಜನ ಹೊಟ್ಟೆಪಾಡಿಗಾಗಿ (ಬಂಗಲೆ ಕಟ್ಟಿಕೊಳ್ಳುವುದಕ್ಕೇನು ಅಲ್ಲ) ತಮ್ಮ 'ಸೋಶಿಯಲ್ ಕ್ಯಾಪಿಟಲ್' ಬಳಸಿಕೊಂಡರೆ ನಾವು ಕರುಬುವುದು ಬೇಡ, ಸಮಾಜಕ್ಕೆ ಹೊರೆಯಾಗದೇ ತಮ್ಮ ಬದುಕನ್ನು ತಾವು ಕಟ್ಟಿಕೊಳ್ಳುತ್ತಿದ್ದಾರಲ್ಲ ಎಂದು ಸಂತೋಷ ಪಡೋಣ.  ಇದೇ ಶ್ರಮವನ್ನು, ಹಾಗೆ ಉಪಯೋಗಿಸಿಕೊಳ್ಳಲು ಕ್ಯಾಪಿಟಲ್ ಇಲ್ಲದವರಿಗೆ ಹೇಗೆ ತುಂಬಬಹುದೆಂಬುದರ ಕಡೆ ಹರಿಸಿದರೆ ಇನ್ನೂ ಒಳ್ಳೆಯದಾದೀತು.

----------

ಇದರ ಇಂಗ್ಲಿಷ್ ಅವತರಣಿಕೆಗಾಗಿ ಇಲ್ಲಿ ಕ್ಲಿಕ್ಕಿಸಿ