Monday, November 20, 2023

ವರ್ಲ್ಡ್ ಕಪ್ ನೆಪದಲ್ಲಿ...

1987ರಲ್ಲೋ ಏನೋ, ವರ್ಲ್ಡ್ ಕಪ್ ನಡೆಯುತ್ತಿತ್ತೆಂದು ನೆನಪು. ಲೈವ್ ನೋಡಲು ಪಕ್ಕದ ಮನೆ ಟೀವಿ ಮುಂದೆ ಜಮಾಯಿಸಿದ್ದೆವು - ಅಲ್ಲ, ನನ್ನ ನಾಲ್ವರು ಮಿತ್ರರು ನನ್ನನ್ನೂ ಕರೆದುಕೊಂಡು ಹೋಗಿ ಅಲ್ಲಿ ಜಮಾಯಿಸಿದ್ದರು. ಏನು ಕೂಗಾಟ, ಚೀರಾಟ, ನಗು, ಕಣ್ಣೀರು, ಪ್ರಾರ್ಥನೆ. ನನಗೋ ಒಂದೂ ಅರ್ಥವಾಗಲೊಲ್ಲದು.

ನನಗೆ ಸ್ಪೋರ್ಟ್ಸ್ ಮೊದಲಿನಿಂದ ಅಷ್ಟಕ್ಕಷ್ಟೇ. ಎಳವೆಯಲ್ಲಿ ಬೀದಿಯಲ್ಲಿ ಆಡುತ್ತಿದ್ದ ಜೂಟಾಟ, ಕಲ್ಲು-ಮಣ್ಣು ಬಿಟ್ಟರೆ ಗೋಲಿ ಚಿನ್ನಿದಾಂಡುಗಳೂ ಅಷ್ಟಕ್ಕಷ್ಟೇ. ಆಮೇಲಾಮೇಲೆ ಕಬಡ್ಡಿ ಬಂತು - ಅಲ್ಲಿಂದಾಚೆಗೆ ಸ್ವಲ್ಪ 'ಸೊಫೆಸ್ಟಿಕೇಟೆಡ್' ನೆಲೆಯಲ್ಲಿ ನನ್ನ ಆಟ ಬ್ಯಾಡ್ಮಿಂಟನ್ ವರೆಗೆ ಬಂದು ನಿಂತಿತು - ಅದೂ ಸಿಂಗಲ್ಸ್ - ಆಗಾಗ ನಾನೂ ಗೆಲ್ಲುತ್ತಿದ್ದುದೂ ಉಂಟು. ಡಬಲ್ಸ್ ಆದರೆ ಜೊತೆಗಾರನಿಂದ ಬೈಸಿಕೊಳ್ಳುವುದು ಸಾಮಾನ್ಯ.

ಒಮ್ಮೆ ಹೈಸ್ಕೂಲಿನಲ್ಲಿ, ಹುಡುಗರೆಲ್ಲಾ ಪಿಟಿ ಮಾಸ್ಟರನ್ನು ಕಾಡಿ ಬೇಡಿ ಫುಟ್ಬಾಲ್ ಪಡೆದಿದ್ದರು. ಎಲ್ಲರಿಗೂ ಆಟ ಗೊತ್ತಿತ್ತೆಂದು ನನ್ನೆಣಿಕೆ, ಏಕೆಂದರೆ ಯಾರೂ ಯಾರಿಗೂ ಏನೂ ಹೇಳಲಿಲ್ಲ. ತಾನಾಗೇ ಎರಡು ಗುಂಪಾಯಿತು, ನನ್ನನ್ನು ಯಾರೋ ಒಂದು ಗುಂಪಿನಲ್ಲಿ ಹಾಕಿದರು. ನನಗೆ ಚೆಂಡನ್ನು ಒದೆಯಬೇಕೆಂಬುದೊಂದು ಬಿಟ್ಟು ಇನ್ನೇನೂ ತಿಳಿದಿರಲಿಲ್ಲ. ಮೇಷ್ಟ್ರ ಹತ್ತಿರ ಹೋಗಿ 'ಸಾರ್, ನಂಗೆ ಆಟ ಬರೊಲ್ಲ, ಇಲ್ಲೇ ಕೂತು ನೋಡ್ತೀನಿ" ಎಂದುದಕ್ಕೆ "ಸೋಮಾರಿ ಮುಂಡೇದೇ, ಓದಂತೂ ನೈವೇದ್ಯ, ಹೋಗಿ ಆಟವಾದರೂ ಆಡು, ಶಕ್ತಿ ಬರುತ್ತೆ" ಎಂಬ 'ಆಶೀರ್ವದೆ' ಸಿಕ್ಕಿತು. ಹೊಸ ಸ್ಕೂಲು ಬೇರೆ, ಹುಡುಗರ ಪರಿಚಯವೂ ಅಷ್ಟಿಲ್ಲ. ಇದ್ದುದರಲ್ಲೇ ಸ್ವಲ್ಪ ಗೊತ್ತಿರುವವನಿಗೆ, "ಲೋ, ನಂಗೆ ಆಟ ಗೊತ್ತಿಲ್ಲ ಕಣೋ" ಎಂದು ಹೇಳಿಕೊಂಡೆ. ಅವನು "ಅದರಲ್ಲೇನಿದೆಯೋ, ಬಾಲನ್ನ ಗೋಲಿನ ಕಡೆ ಒದೆದುಕೊಂಡು ಹೋದರಾಯಿತು" ಅಂದ. ಒದೆಯುವುದೇನೋ ಸರಿ, ಆದರೆ ಗೋಲೆಂಬುದು ಎಲ್ಲಿರುತ್ತದೆ ಬೇಕಲ್ಲ - ಆಳುದ್ದ ಶರೀರವನ್ನು ಗೇಣುದ್ದ ಮಾಡಿಕೊಂಡು ಕೇಳಿದೆ - "ಗೋಲ್ ಎಲ್ಲಿರುತ್ತೋ?". ಅವನಿಗೀಗ ತಮ್ಮ ತಂಡದ ರಿಸ್ಕ್ ಅರ್ಥವಾಯಿತೆನ್ನಿಸುತ್ತದೆ. ಕ್ಯಾಪ್ಟನ್ ಹತ್ತಿರ ಹೋಗಿ ಹೇಳಿದ "ಲೋ, ಇವನಿಗೆ ಆಟ ಗೊತ್ತಿಲ್ಲ, ಇವನ್ನ ಫಾರ್ವರ್ಡಲ್ಲಿ ಹಾಕಿದರೆ "ಚೊಂಬ್ ಹಿಡಿಸ್ತಾನಷ್ಟೇ". ಆಮೇಲೆ ಏನೇನೋ ಮಾತಾಡಿಕೊಂಡರು, ಅವನೇ ನನ್ನ ಕರೆದುಕೊಂಡು ಹೋಗಿ "ನೋಡು, ಇದೇ ಗೋಲ್ ಪೋಸ್ಟು, ನೀನು ಇದರ ಮಧ್ಯ ಸುಮ್ಮನೇ ನಿಂತಿರು ಆಯ್ತಾ, ಬಾಲ್ ಬಂದರೆ ತಡಿ" ಅಂದ, ಹೋದ. ನನಗೆ ನೆಮ್ಮದಿಯಾಯಿತು, ಸುಮ್ಮನೇ ನಿಂತು ಆಟ ನೋಡುವುದಷ್ಟೇ ಕೆಲಸ - ಅಲ್ಲಿ ಕುಳಿತಿರುವುದರ ಬದಲು ಇಲ್ಲಿ ನಿಂತಿರುವುದು - ಫುಟ್ಬಾಲ್ ಅಂತಹ ಕಷ್ಟದ ಆಟವೇನಲ್ಲ ಎನಿಸಿತು. ಆಟ ಶುರುವಾಯಿತು. ಚೆಂಡು ಅಲ್ಲೆಲ್ಲೋ ದೂರದಲ್ಲಿ, ಎದುರು ಗೋಲ್ ಪೋಸ್ಟಿನ ಹತ್ತಿರವೇ ಒದ್ದಾಡುತ್ತಿತ್ತು, ಅಲ್ಲಲ್ಲ, ಒದೆಸಿಕೊಂಡಾಡುತ್ತಿತ್ತು. ಎಷ್ಟು ಹೊತ್ತಾದರೂ ಅದು ಈ ಕಡೆ ಬರುವ ಹಾಡೇ ಇಲ್ಲ, ಕಾದು ಕಾದು ಸಾಕಾಯಿತು. ಅವರಿಂದ ಚೆಂಡನ್ನು ಬಿಡಿಸಿಕೊಂಡು ನಮ್ಮ ಗೋಲ್ ಕಡೆ ತರಲಾರದ ನಮ್ಮ ಟೀಮಿನವರ ಅಸಮರ್ಥತೆಯೇ ನನಗೆ ಅದರಲ್ಲಿ ಕಂಡಂತಾಗಿ ಬೇಸರವಾಗಹತ್ತಿತು. ಕೊನೆಗೂ ಒಂದು ಸಲ ಚೆಂಡು ಈ ಕಡೆ ಬರತೊಡಗಿತು. ಎದುರಿನವರು ತಾವಾಗೇ ಇತ್ತಕಡೆ ಚೆಂಡು ಕಳಿಸಲು ಯತ್ನಿಸುತ್ತಿದ್ದರೂ ನಮ್ಮ ಕಡೆಯ ಮಂಕುಗಳು ಮಾತ್ರ ಅದನ್ನು ಇತ್ತ ಬರದಂತೆ ತಡೆಯುತ್ತಿದ್ದಾರೆ, ಬದಲಿಗೆ ಅವರ ಕಡೆಗೇ ಎಳೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ! ಕೊನೆಗೊಮ್ಮೆ ನಮ್ಮವರ ಪ್ರಯತ್ನವನ್ನೂ ಮೀರಿ ಚೆಂಡು ಇತ್ತ ಬರಲಾರಂಭಿಸಿತು. ಅದರ ಹಿಂದೆ ಅಷ್ಟೂ ಜನ ಕೂಗುತ್ತಾ ಕೈಯೆತ್ತಿ ನನ್ನ ಕಡೆ ನೋಡುತ್ತಾ ಏನೋ ಒದರುತ್ತಾ ಇತ್ತಕಡೆಯೇ ಬರಲಾರಂಭಿಸಿದರು - ಇದ್ದಕ್ಕಿದ್ದಂತೆ ಹಿಂಡು ಜನ ಕೈಯೆತ್ತಿಕೊಂಡು ನಿಮ್ಮ ಕಡೆ ಓಡಿ ಬರತೊಡಗಿದರೆ ನಿಮಗೆ ಹೇಗಾಗಬಹುದು ಯೋಚಿಸಿ ನೋಡಿ. ಕೂಗುತ್ತಿದ್ದವರು ಅದೇನು ಹಿಡಿ ಹಿಡಿ ಎನ್ನುತ್ತಿದ್ದರೋ ತಡಿ ತಡಿ ಎನ್ನುತ್ತಿದ್ದರೋ ಅರ್ಥವಾಗದೇ, ಹಿಡಿಯಬೇಕೋ ಸ್ವಲ್ಪಹೊತ್ತು ತಡೆಯಬೇಕೋ ಗೊಂದಲಗೊಂಡು ನೋಡುತ್ತಿರುವಷ್ಟರಲ್ಲಿ ಅವರ ಕೂಗು ಕೈಕರಣ ಇನ್ನೂ ಹೆಚ್ಚಾಯಿತು. ಚೆಂಡು ತೀರ ಹತ್ತಿರಕ್ಕೆ ಬಂತು, ಅಷ್ಟೇನು ವೇಗವಿರಲಿಲ್ಲ. ನನ್ನ ಮಿತ್ರ ಹೇಳಿದ್ದು ನೆನಪಾಯಿತು - "ಬಾಲು ನಿನ್ನ ಕಡೆ ಬಂದರೆ ಹಿಡಿ" ಅಷ್ಟು ಹೊತ್ತಿಗಾಗಲೇ ತೀರ ಹತ್ತಿರ ಬಂದಿದ್ದ ಬಾಲನ್ನು ಪಕ್ಕನೆ ಎರಡೂ ಕೈಗಳಲ್ಲಿ ಹಿಡಿದೆ. ನನಗೋ, ನಾನೂ ಆಟಕ್ಕಾಗಿ ಏನೋ ಮಾಡಿದೆನಲ್ಲ ಎನ್ನುವ ಖುಷಿ. ಬಾಲನ್ನೆತ್ತಿ ಅವರಿಗೆ ಕೊಡಹೋದೆ. ಆದರೆ ಈ ಅಯೋಗ್ಯರಿಗೆ ಒಂದು ಚೂರೂ ಕೃತಜ್ಞತೆಯಿದ್ದಂತೆ ಕಾಣಲಿಲ್ಲ. ಬದಲಿಗೆ ನನ್ನನ್ನೇ ಏನೇನೋ ಬೈಯುತ್ತಾ, ಕೊನೆಗೆ ತಿರಸ್ಕಾರವನ್ನೆಲ್ಲಾ ಒಟ್ಟು ಸೇರಿಸಿ "ಹೋಗೋ" ಎಂದರು. ನಾನು ಹೋದೆ.

ನನಗೆ ಅದೇನೋ, ಮೊದಲಿಂದಲೂ ಈ 'ಸೊಫೆಸ್ಟಿಕೇಟೆಡ್' ಆಟಗಾರರ ಮಾತು, ಅವರ ಟೆಂಪರಮೆಂಟ್ ಅರ್ಥವೇ ಆಗುವುದಿಲ್ಲ, ಯಾವುದಕ್ಕೆ ಕೋಪಿಸಿಕೊಳ್ಳುತ್ತಾರೋ, ಯಾವುದನ್ನು ಮೆಚ್ಚುತ್ತಾರೋ, ಎಲ್ಲಿ ಮೋಸ ಮಾಡುತ್ತಾರೋ ಗೊತ್ತಾಗುವುದಿಲ್ಲ. ಇನ್ನೂ ಒಂದೆರಡು ವರ್ಷ ಹಿಂದೆ, ಅಂದರೆ ಆರೋ ಏಳೋ ಓದುತ್ತಿದ್ದಾಗ ಬೀದಿಯ ಹುಡುಗರೆಲ್ಲಾ ಕ್ರಿಕೆಟ್ ಆಡಲು ನಮ್ಮ ಸ್ಕೂಲ್ ಗ್ರೌಂಡಿಗೆ ಹೋಗಿದ್ದೆವು. ಅದುವರೆಗೆ ಅದು ಇದು 'ಲೋಕಲ್' ಆಟಗಳನ್ನಾಡಿಕೊಂಡಿದ್ದ ಕೆಲ ಹುಡುಗರಿಗೆ ಕ್ರಿಕೆಟ್ ಆಡುವ ಹುಚ್ಚು ಹತ್ತಿತ್ತು. ನನಗೆ ಈ ಆಟವೇ ಹೊಸದು. ಅದು ಯಾವುದೋ 'ಅದೃಷ್ಟ'ದಿಂದ ನನಗೆ ಬ್ಯಾಟಿಂಗ್ ಬಂದಿತ್ತು. ಒಂದೆರಡು ಬಾಲು ಚೆನ್ನಾಗೇ ಹೊಡೆದೆ. ಎದುರು ಪಾರ್ಟಿಯಲ್ಲಿದ್ದ ಬಾಬು (ನನ್ನ ಸ್ನೇಹಿತನೇ) ಬಂದು "ಮಂಜು, ಆ ಬ್ಯಾಟ್ ಕೊಡಮ್ಮ, ಈ 'ಮಕ್ಕಳಿಗೆ' ಬುದ್ಧಿ ಕಲಿಸ್ತೀನಿ" ಎಂದು ಹೇಳಿ ಬ್ಯಾಟ್ ಇಸಿದುಕೊಂಡ. ಕೊಟ್ಟರೆ, ಆ 'ಮಕ್ಕಳಿಗೆ' ಬುದ್ಧಿ ಕಲಿಸುವ ಬದಲು ಆ ಬ್ಯಾಟನ್ನೇ ವಿಕೆಟ್ಟಿಗೆ ಬಡಿದು "ಔಟ್" ಎಂದು ಕಿರಿಚಿದ. ಬ್ಯಾಟ್ ಕೊಡುವಾಗ "ಬಿ.ಸಿ." ಎಂದು ಹೇಳಿ ಕೊಡಬೇಕಿತ್ತಂತೆ (ಬಿ.ಸಿ ಎಂದರೆ ಏನು ಅರ್ಥವೋ ನನಗಿನ್ನೂ ತಿಳಿದಿಲ್ಲ, Before Christ ಅಂತೂ ಇರಲಾರದು) - ಹಾಗೆ ಹೇಳಿದರೆ ಅದು ಆಟವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಂತೆ. ಹಾಗೆ ಹೇಳದೇ ಬ್ಯಾಟ್ ಕೊಟ್ಟುದರಿಂದ ಅವನು ಆ ಬ್ಯಾಟ್ ವಿಕೆಟಿಗೆ ಸೋಕಿಸಿದಾಗ, ನಾನೇ ಆಡುವಾಗ ಸೋಕಿಸಿದಂತಾಗಿ ನಾನು ಔಟ್ ಅಂತೆ. ಸ್ನೇಹಿತನೇ ಹೀಗೆ ಕತ್ತು ಕೊಯ್ಯುತ್ತಾನೆಂದು ಹೇಗೆ ಗೊತ್ತಾಗಬೇಕು? ಔಟಾದುದರಿಂದ ನನಗೇನೂ ನಷ್ಟವಿಲ್ಲ, ಸರಿಯೆಂದು ಹೇಳಿ ಹೊರಟೆ. ಆದರೆ ನನಗಾದ ಅನ್ಯಾಯಕ್ಕೆ ನನಗಿಂತ ನಮ್ಮ ಟೀಮಿನವರಿಗೆ ಭಯಂಕರ ಕೋಪ ಬಂತು. ಮೋಸ ಎಂದು ಕೂಗಿ ಜಗಳಕ್ಕೆ ಬಿದ್ದರು. "ಹೋಗ್ಲಿ ಬಿಡ್ರೋ, ಮೋಸಕ್ಕೆ ದೇವ್ರು ತೋರ್ಸುತ್ತೆ" ಎಂದೆ (ಅದು ಆ ಕಾಲದಲ್ಲಿ ನಮ್ಮ ಫೇವರಿಟ್ ಶಾಪವಾಕ್ಯ). ಅದು ಅವರನ್ನು ಸಮಾಧಾನಿಸುವ ಬದಲು ಇನ್ನಷ್ಟು ಕೆರಳಿಸಿತು. "ಏ ಗೂಬ್ಮುಂಡೇದೆ, ಮಾಡೋದ್ ಮಾಡಿಬಿಟ್ಟು, ಈಗ ದೇವ್ರು ತೋರ್ಸುತ್ತಂತೆ" ಎಂದು ನನಗೇ ಬೈದು ಮತ್ತೆ ಜಗಳ ಮುಂದುವರೆಸಿದರು. ಹಾಗೂ ಹೀಗೂ ಬ್ಯಾಟು ಮತ್ತೆ ನನ್ನ ಕೈಗೆ ಬಂತು. "ಸರಿಯಾಗಿ ಆಡು, ಆಡುವಾಗ ಏನೇ ಆದರೂ ಕ್ರೀಸು ಬಿಟ್ಟು ಹೊರಗೆ ಬರಬೇಡ" ಎಂದು ಮೂತಿ ತಿವಿದು, ನಮ್ಮ ಕಡೆಯವರೆಲ್ಲಾ ಹೋಗಿ ಕೂತರು. ಮತ್ತೆ ನನ್ನ ಬ್ಯಾಟಿಂಗ್ ಶುರು. ಬಾಲನ್ನು ಹೊಡೆದ ಮೇಲೆ ರನ್ ಮಾಡಬೇಕಲ್ಲ. ಇವರು ಕ್ರೀಸು ಬಿಟ್ಟು ಹೊರಬರಬೇಡ ಎಂದಿದ್ದರು. ಸರಿ, ನನಗೇಕೆ ಎಂದು ಸುಮ್ಮನೆ ನಿಂತರೆ, ಎದುರು ಕ್ರೀಸಿನಿಂದ ರಘು "ಓಡೋ" ಎಂದು ಕೂಗುತ್ತಾ ಓಡಿ ಬಂದ. ನಾನು ಕ್ರೀಸು ಬಿಟ್ಟು ಓಡಲಿಲ್ಲ. ಅವನು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮತ್ತೆ ಓಡಿ ಹೋದರೆ, ಅಷ್ಟರಲ್ಲಿ ಆವನ ವಿಕೆಟ್ಟಿಗೆ ಚೆಂಡೆಸೆದು ಅವನನ್ನು ಔಟ್ ಮಾಡಿಬಿಟ್ಟಿದ್ದರು. ನನ್ನ ಕಡೆ ನೋಡುತ್ತಾ ಗೊಣಗುತ್ತಾ ಬೈಯುತ್ತಾ ಅವನು ಹೋದ. ಮತ್ತೆ ಒಂದೆರಡು ಬಾಲ್ ಆಡಿದ ಮೇಲೆ ಮೂರನೆಯ ಬಾಲಿಗೆ ಸರಿಯಾಗಿ ಬೀಸಿದೆ. ಚೆಂಡು ಆಗಸಕ್ಕೆಗರಿತು - ಇದು ಸಿಕ್ಸ್ ಎಂದು ನನ್ನೆಣಿಕೆ. ಸಿಕ್ಸ್ ಅಲ್ಲದಿದ್ದರೆ ಕೊನೆಯ ಪಕ್ಷ ಫೈವ್ ಆದರೂ...

ಆದರೆ ಅದು ನಾಲ್ಕೂವರೆ ದಾಟಲಿಲ್ಲ. ಆಕಾಶಕ್ಕೆ ನೆಗೆದ ಚೆಂಡು ಭೂಸ್ಪರ್ಶವಾಗದಂತೆ ಗುಂಡ ಗಪ್ಪನೆ ಹಿಡಿದೇ ಬಿಟ್ಟ. "ಔಟ್" ಎಂದು ಕೂಗಿದರು. ಪ್ರತಿಯಾಗಿ ಮೋಸಾ ಎಂದು ಕೂಗುವ ದರದ್ ಏನೂ ನನಗೆ ಕಾಣಲಿಲ್ಲ. ಬಂದು ಕುಂತೆ. ಸ್ವಾರಸ್ಯವೆಂದರೆ ನಮ್ಮವರೂ "ಔಟ್" ಎಂಬ ಸಂಭ್ರಮದ ಕೂಗಿಗೆ ದನಿಗೂಡಿಸಿ, ನನ್ನ ನಿರ್ಗಮನವನ್ನು ಸಂಭ್ರಮಿಸಿದ್ದು!

ಹೀಗಾಗಿ, ಸ್ಪೋರ್ಟ್ಸ್ ಎನ್ನುವ ವಿಷಯದಲ್ಲಿ ನನಗೆ ಮೊದಲಿಂದಲೂ ಆಲಸಿಕೆಯೇ. ಅದರ ಪ್ರಪಂಚವೇ ಬೇರೆ - ಆ ರಣೋತ್ಸಾಹ, ಆ ಭಾವೋದ್ರೇಕ, ಆ ರೋಷಾವೇಷ ಇವು ನನ್ನಲ್ಲಿ ಉಕ್ಕುವುದೇ ಇಲ್ಲ. ಆದ್ದರಿಂದ ಆ ಗುಂಪುಭಾವನೆಗಳು ನನ್ನಲ್ಲಿ ಉತ್ಸಾಹಕ್ಕಿಂತ ಅವರಿಗೆ ಸರಿಗಟ್ಟಲಾಗದ ಆತಂಕವನ್ನೇ ಹೆಚ್ಚಿಸುತ್ತದೆ - ಒಂದು ರೀತಿ performance anxiety ಎನ್ನುತ್ತಾರಲ್ಲ, ಅಂಥದ್ದು. ಆದರೆ ಕೆಲವರಿರುತ್ತಾರೆ. ಅವರಿಗೆ ಕ್ರಿಕೆಟ್ಟಿನ ಗಂಧಗಾಳಿಯಿರುವುದಿಲ್ಲ, ಆದರೂ ಕೆಲವು ಪದಗಳು ಗೊತ್ತಿರುತ್ತವೆ, ಕೆಲವು ಆಟಗಾರರ ಹೆಸರು ಗೊತ್ತಿರುತ್ತದೆ. ಅದನ್ನೇ ಹಿಡಿದುಕೊಂಡು ಕತೆ ಕಟ್ಟುತ್ತಾ ಜೋರುಜೋರಾಗಿ ಮಾತಾಡುತ್ತಿರುತ್ತಾರೆ. ಅವರಲ್ಲಿ ಕೆಲವರು ಕಳೆದ ವಾರವಷ್ಟೇ "ನನಗೆ ಕ್ರಿಕೆಟ್ ಅಂದರೆ ಏನೂ ಗೊತ್ತಿಲ್ಲಪ್ಪ" ಎಂದವರು. ಅವರು ಕ್ರಿಕೆಟ್ ಬಗ್ಗೆ ಬಿಡುತ್ತಿದ್ದ ಬಂಡಲುಗಳನ್ನು ಕಂಡು ತಳವೆಳಗಾಗಿಹೋಗಿದ್ದೆ. ಸಾಹಿತ್ಯಕ್ಷೇತ್ರದಲ್ಲೂ ಅಂಥವರು ಸಾಕಷ್ಟೇ ಇದ್ದಾರಲ್ಲ, ಸಂಗೀತದಲ್ಲೂ ಇದ್ದಾರೆ - ದಿ. ಎ ಎನ್ ಮೂರ್ತಿರಾಯರು ಅಂಥವರನ್ನು "ಸಂಗೀತಜಗತ್ತಿನ ಅಪೂರ್ಣಬೋಧರು" ಎಂದು ಗೌರವಿಸಿದ್ದಾರೆ

ಇರಲಿ, ಆರಂಭದಲ್ಲಿ ಹೇಳಿದ ನನ್ನ ನಾಲ್ವರು ಸನ್ಮಿತ್ರರು ಅಂತಹ ಖೊಟ್ಟಿ ಕ್ರಿಕೆಟ್ ಪ್ರೇಮಿಗಳೇನಲ್ಲ. ಇಬ್ಬರಂತೂ ಕ್ರಿಕೆಟ್ಟಿನಲ್ಲಿ ಉಗ್ರವಾದಿಗಳು ("ಅಭಿಮಾನಿಗಳತ್ಯುಗ್ರರ್", ಜೊತೆಗೆ ವಾದಿಗಳೂ ಹೌದು, ಆದ್ದರಿಂದ ಉಗ್ರವಾದಿಗಳು); ಇನ್ನಿಬ್ಬರು ಕ್ರಿಕೆಟ್ ರಸಿಕರು, ಆದರೂ ಆ ಇಬ್ಬರ ಪ್ರಭಾವದಿಂದ ತಾತ್ಕಾಲಿಕವಾಗಿ ಉಗ್ರವಾದಿಗಳಂತೆ ಆಡುತ್ತಿದ್ದವರು. ಕ್ರಿಕೆಟ್ ಸಂದರ್ಭವಿಲ್ಲದಾಗ ಊರಿನ ವಿಷಯವೆಲ್ಲ ಹರಟುವ ನಮ್ಮೈವರಲ್ಲಿ, ಕ್ರಿಕೆಟ್ ವಿಷಯ ಬಂದೊಡನೆ ಎರಡು ಗುಂಪಾಗಿಬಿಡುತ್ತಿತ್ತು - ಒಂದು, ಕ್ರಿಕೆಟ್ ಅಭಿಮಾನಿಗಳಾದ ಆ ನಾಲ್ವರು, ಇನ್ನೊಂದು, ಕ್ರಿಕೆಟ್ಟಿನ ಎಬಿಸಿಡಿ ತಿಳಿಯದ ಮೂಕ (ಅವರ ಪ್ರಕಾರ ಮೂರ್ಖ)ಪ್ರಾಣಿಯಾದ ನಾನು. ಹೀಗಾಗಿ, ಸ್ವಾರಸ್ಯಕರವಾದ ಹರಟೆಯ ನಡುವೆ ಯಾವನಾದರೂ ಕ್ರಿಕೆಟ್ ವಿಷಯ ಎತ್ತಿದನೋ, ನನಗೆ ಮೈ ಪರಚಿಕೊಳ್ಳುವಂತಾಗುತ್ತಿತ್ತು, ಹೋಗಿ ಅವನ ಬಾಯಿ ಮುಚ್ಚುವಂತಾಗುತ್ತಿತ್ತು. ಇದು ವಾಕ್ಸ್ವಾತಂತ್ರ್ಯದ ಹರಣ, ಫ್ಯಾಸಿಸ್ಟ್ ಮನೋಭಾವ ಎಂದೆಲ್ಲಾ ನಿಮಗೆ ಅನ್ನಿಸಬಹುದು, ಆದರೆ ನನ್ನ ಕಷ್ಟ ನನಗೆ. ನನಗೆ ಅರ್ಥವಾಗುತ್ತಿದ್ದುದು ಕೆಲವೇ ಪದಗಳು - ಸಿಕ್ಸ್, ಫೋರ್, ರನ್, ಕ್ಯಾಚ್, ರನ್ ಔಟ್, ಓವರ್. ಇನ್ನು ವಿಕೆಟ್ ಎನ್ನುವ ಪದವಂತೂ ಸಿಕ್ಕಾಪಟ್ಟೆ ತ್ರಾಸು ಕೊಡುತ್ತಿತ್ತು - ವಿಕೆಟ್ ಎಂದರೆ ನಾನು ತಿಳಿದಂತೆ, ಬ್ಯಾಟ್ಸ್ಮನ್ ಹಿಂದೆ ನೆಲಕ್ಕೆ ಹೊಡೆದಿರುವ ಮೂರು ದೊಣ್ಣೆಗಳು. ಬಾಲೇನಾದರೂ ವಿಕೆಟ್ಟಿಗೆ ಬಡಿದರೆ, ವಿಕೆಟ್ ಬಿತ್ತು ಎನ್ನುವರು - ಸರಿಯೇ, ಅದೇನು ನಿಜಕ್ಕೂ ಬೀಳಬೇಕಿಲ್ಲ, ಬಾಲು ವಿಕೆಟ್ಟಿಗೆ ಬಡಿದರೂ ಅದು ಬಿದ್ದಂತೆಯೇ, ಔಟೇ, ಸಂಶಯವಿಲ್ಲ, ರನ್ ಔಟ್ ಆದರೂ ವಿಕೆಟ್ ಬಿದ್ದಂತೆಯೇ, ಏಕೆಂದರೆ ಆಗಲೂ ಬಾಲು ಬಡಿಯುತ್ತಿದ್ದುದು ವಿಕೆಟ್ಟಿಗೇ. ಕೆಲವೊಮ್ಮೆ ಬ್ಯಾಟ್ಸ್ಮನ್ ಕಾಲನ್ನು ವಿಕೆಟ್ ಮುಂದೆ ತಂದರೂ ಔಟಂತೆ (ಅದನ್ನು ಎಲ್ ಬಿ ಡಬ್ಲ್ಯೂ ಎನ್ನುತ್ತಾರೆ - ಲೆಗ್ ಬಿಫೋರ್ ವಿಕೆಟ್). ಅಲ್ಲಿ ಬಾಲು ವಿಕೆಟ್ಟಿಗೆ ಬಡಿಯದಿದ್ದರೂ ವಿಕೆಟ್ ವಿಷಯ ಬಂದುದರಿಂದ, ಅಲ್ಲೂ ವಿಕೆಟ್ ಬಿದ್ದಂತೆಯೇ, ಒಪ್ಪಿಕೊಳ್ಳೋಣ. ಆದರೆ ಕ್ಯಾಚಿನಲ್ಲಿ ಔಟಾದರೂ ವಿಕೆಟ್ ಬಿತ್ತು ಎನ್ನುವರು - ಇದು ನನಗೆ ಅರ್ಥವಾಗದ ವಿಷಯ. ಸ್ಕೋರ್ ಎಷ್ಟು ಎಂದರೆ 123/4 ಎನ್ನುವರು. ನಾನು 123 ರನ್ನು, ನಾಲ್ಕು ಓವರಿನಲ್ಲಿ ಎಂದುಕೊಂಡರೆ, ಅಲ್ಲವಂತೆ, ಅದು 4 ವಿಕೆಟ್ಟಿಗೆ 123 ರನ್ನಂತೆ. ನಾನೇ ಆಟವನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸಿದಂತೆ ಇಬ್ಬರು ಔಟಾದದ್ದು ಕ್ಯಾಚಿನಿಂದ. ಒಬ್ಬ ಎಲ್ ಬಿ ಡಬ್ಲ್ಯೂ. ವಿಕೆಟ್ ಬಡಿದು ಔಟಾದದ್ದು ಒಬ್ಬನೇ. ಹಾಗಿದ್ದ ಮೇಲೆ ನಾಲ್ಕು ವಿಕೆಟ್ ಹೇಗೆ? ಅಲ್ಲ, ಈ ಪ್ರಶ್ನೆಯಲ್ಲಿ ಏನು ತಪ್ಪಿದೆ? ನಾನೇನು ಹಿಂದೆ ಮೂರು ವಿಕೆಟ್ ನಿಲ್ಲಿಸಿದ್ದರೂ ಬಿದ್ದದ್ದು ಒಂದೇ ವಿಕೆಟ್ ಹೇಗೆ ಎಂದು ಕೇಳಲಿಲ್ಲ. ಆದರೂ ಇದು ಮೂರ್ಖಪ್ರಶ್ನೆಯಾಗಿಬಿಟ್ಟಿತು. ವಿಕೆಟ್ ಎಂದರೆ ಬ್ಯಾಟ್ಸ್ಮನ್ ಅಂತೆ, ಬಿತ್ತು ಎಂದರೆ ಬ್ಯಾಟ್ಸ್ಮನ್ ಔಟ್ ಅಂತೆ, ಬಾಕಿ ಎಂದರೆ ಉಳಿದ ಬ್ಯಾಟ್ಸ್ಮನ್ ಅಂತೆ - ಯಾರಿಗೆ ಕನಸು ಬೀಳಬೇಕು ಇದು? ಇಂತಹ ನೂರು ವಿಕೆಟ್ಟುಗಳ ಸೈಜಿನ ನಮ್ಮ ಗಡಮ ಗುಂಡಣ್ಣನನ್ನು ಆಲದ ಮರಕ್ಕೆ ಹೋಲಿಸುವ ಬದಲು ವಿಕೆಟ್ಟಿಗೆ ಹೋಲಿಸಬಹುದೇ? ಇದು ನನ್ನ ಕಲ್ಪನೆಗೆ ಮೀರಿದ್ದು.

ಮೊದಮೊದಲು ನನ್ನ ಪೆದ್ದು ಪ್ರಶ್ನೆಗಳಿಗೆ ಅತ್ಯುತ್ಸಾಹದಿಂದ ಉತ್ತರಿಸುತ್ತಿದ್ದ ಅವರು, ಅವರ ಅತ್ಯುತ್ಸಾಹವನ್ನು ಅಪಾರ್ಥ ಮಾಡಿಕೊಂಡು ನಾನು ಹೆಚ್ಚು ಹೆಚ್ಚು ಪ್ರಶ್ನೆ ಕೇಳತೊಡಗಿದಂತೆಲ್ಲ ವ್ಯಗ್ರರಾಗುತ್ತಿದ್ದರು, ಆಮೇಲಾಮೇಲೆ ಪ್ರಶ್ನೆ ಬಂದರೆ ಸಾಕು ಉಗ್ರರಾಗಿಬಿಡುತ್ತಿದ್ದರು. ಹೀಗಿರುವಾಗ ಈ ಬುದ್ವಂತರು ಮಾತಾಡುತ್ತಿದ್ದರೆ, ನನಗಿದ್ದ ಲಿಮಿಟೆಡ್ ಜ್ಞಾನದಲ್ಲಿ ನಾನು ಮಾತಾಡುವುದಾದರೂ ಹೇಗೆ? ಎದ್ದು ನಡೆದುಬಿಡೋಣವೆಂದರೆ, ನೀನೆಲ್ಲಿ ನಡೆವೆ ದೂರ, ಎಲ್ಲೆಲ್ಲು... ಕ್ರಿಕೆಟ್ಟೇ. ಹೀಗಾಗಿ, ಇದ್ದ ಐವರಲ್ಲಿ ನಾಲ್ವರೂ ಬಾಯ್ ಕ್ರಿಕೆಟ್ ಆಡತೊಡಗಿದರೆ ನನಗೆ ಸಂಜೆ ಏಳರ ಹೊತ್ತಿಗೆ ಕೋರಮಂಗಲ ಸರ್ಕಲ್ ಟ್ರಾಫಿಕ್ಕಿನಲ್ಲಿ ಹೊಗೆ ಕಕ್ಕುವ ಲಾರಿಯ ಹಿಂದೆ ಸಿಕ್ಕಿಕೊಂಡ ಬೈಕ್ ಸವಾರನ ಫೀಲಿಂಗ್ ಬರುವುದೇನಾಶ್ಚರ್ಯ? ಆದ್ದರಿಂದಲೇ ಮೈ ಪರಚಿಕೊಳ್ಳುವಂತಾಗುತ್ತಿದ್ದುದು.

ಇರಲಿ, ವಿಷಯ ಎಲ್ಲೆಲ್ಲಿಗೋ ಹೋಯಿತು. 1987ಕ್ಕೆ ಮರಳಿ ಬರೋಣ, ಅವತ್ತಾದದ್ದೂ ಹೀಗೇ - ವರ್ಲ್ಡ್ ಕಪ್ ಲೈವ್ ನೋಡಲು ಪಕ್ಕದ ಮನೆಯ ಟೀವಿಯ ಮುಂದೆ ಜಮಾಯಿಸಿದ್ದೆವಲ್ಲ, ನಾವೈವರು (ನಾನು ಮತ್ತು ಆ ನಾಲ್ವರು ಖದೀಮರು), ವಾಸ್ತವದಲ್ಲಿ ನಾವು ಅಲ್ಲಿ ಹೋಗಿದ್ದೇನು ಕ್ರಿಕೆಟ್ ನೋಡಲೆಂದಲ್ಲ, ಪರೀಕ್ಷೆಗೆ ಓದಲಿಕ್ಕೆ (ಕೊನೆಯ ಪಕ್ಷ, ಮುಗ್ಧನಾದ ನಾನಾದರೂ ಹಾಗೆ ನಂಬಿದ್ದೆ). ಅಲ್ಲಿ 'ಕಾಮ್' ಆಗಿರುತ್ತದೆ, ಓದಲು ಚೆನ್ನ. ಹಾಗೇ 'ಅಣ್ಣ' ಟೀವಿ ಹಾಕಿದರೆ ಐದೇ ಐದು ನಿಮಿಷ ಹೈಲೈಟ್ಸ್ ನೋಡಿಬಿಡೋಣ ಎಂದ ಅಚ್ಚುತನ ಮಾತು ಸಾಚಾ ಎಂದೇ ನಂಬಿದ್ದೆ. ಸಮಯಕ್ಕೆ ಎಂದೂ ಕೇರ್ ಮಾಡದ ನಾವು ಅಂದು ಮಾತ್ರ ಠಾಕೋಠೀಕ್ ಊಟವಾದ ಕೂಡಲೇ ಅಲ್ಲಿ ಹಾಜರ್ (ಪುಸ್ತಕಪಾಣಿಗಳಾಗಿ ಎಂದು ಬೇರೆ ಹೇಳಬೇಕಿಲ್ಲವಲ್ಲ). ಟೀವಿಯ ಮುಂದೆ ಆಯಕಟ್ಟಿನ ಜಾಗ ಹಿಡಿದು ಕೂತದ್ದೂ ಆಯಿತು (ಅಲ್ಲೇ ಮೇಲೆ ಫ್ಯಾನ್ ಇತ್ತು, ತಂಗಾಳಿ ಚೆನ್ನಾಗಿತ್ತು, ಅದಕ್ಕೇ). ಓದಲು ಶುರು ಮಾಡಿದ್ದೂ ಆಯಿತು. ಪದೇ ಪದೇ ಗಡಿಯಾರ ನೋಡುತ್ತಿದ್ದ ಅಚ್ಚುತ ಮಾತ್ರ ಆ ಮನೆಯ 'ಅಣ್ಣ'ನ ಕಡೆ ಯಾಚನೆಯ ದೃಷ್ಟಿ ಬೀರುತ್ತಿದ್ದ. ನಾನೂ ಅದನ್ನು ಗಮನಿಸಿದ್ದೆ - ನಾವು ಗಂಭೀರವಾಗಿ ಓದಿಕೊಳ್ಳುತ್ತಿದ್ದುದರಿಂದ ಆ ಅಣ್ಣ ಟೀವಿ ಹಾಕಿಬಿಟ್ಟರೆ ನಮ್ಮ ಓದಿನ ಗತಿಯೇನು ಎಂದು ಆತ ಆತಂಕಗೊಂಡಂತಿತ್ತು. ಹಾಕಬೇಡಿ ಎಂದು ಅವರೆಡೆ ದೀನದೃಷ್ಟಿ ಬೀರುತ್ತಿದ್ದಾನೆನಿಸಿತು, ಅವನ ಕಾಳಜಿಯ ಬಗೆಗೆ ಹೆಮ್ಮೆಯಾಯಿತು ಕೂಡ. ಆದರೇನು, ನಾವು ಓದಿ IAS ಮಾಡುವ ಭವ್ಯಭವಿಷ್ಯದ ಬಗೆಗೆ ಚೂರೂ ಕಾಳಜಿಯಿಲ್ಲದ ಆ ಅಣ್ಣ, ಟೀವಿ ಹಾಕಿಯೇ ಬಿಟ್ಟರು (ಈ ಕ್ರಿಕೆಟ್ ಎನ್ನುವುದು ನೋಡಿ, ಮನುಷ್ಯನ ಸಾಮಾಜಿಕ ಜವಾಬ್ದಾರಿಯನ್ನೇ ಅಪಹರಿಸಿಬಿಡುತ್ತದೆ, ನಾವು ಹಾಳಾದರೆ ಅವರಿಗೇನು?). ಅದುವರೆಗೂ ಯಾಚನೆಯ ದೃಷ್ಟಿ ಬೀರುತ್ತಿದ್ದ ಇವನ ಮುಖವನ್ನೊಮ್ಮೆ ನೋಡಿದೆ. ಅಲ್ಲಿ ದುಃಖವೇನೂ ಕಾಣಲಿಲ್ಲ, ಬದಲಿಗೆ ಸಂತೃಪ್ತಿ ಸಮಾಧಾನ ಆಡುತ್ತಿತ್ತು. ಆಗಲೇ ಕಣ್ಣು ಟೀವಿಯಲ್ಲಿ ನೆಟ್ಟು ಹೋಗಿತ್ತು. ಏನಾದರೂ ಹಾಳಾಗಲಿ, ನಾನಂತೂ ಹಾಳಾಗಲು ತಯಾರಿರಲಿಲ್ಲ, ಧೀರನಂತೆ ಓದುವುದನ್ನು ಮುಂದುವರೆಸಿದೆ.

ಆಟ ಸ್ವಲ್ಪ ಕಾವೇರುತ್ತಿದ್ದಂತೆ ಟೀವಿಯಲ್ಲಿನ ಕಾಮೆಂಟರಿಯೊಡನೆ ಟೀವಿಯ ಹೊರಗೂ ರನ್ನಿಂಗ್ ಕಾಮೆಂಟರಿ ಶುರುವಾಯಿತು (ಅರ್ಥಾತ್, ಕೋಣೆ ತುಂಬಾ ಶತಪಥ ಓಡಾಡಿಕೊಂಡು ಕಾಮೆಂಟರಿ). ಆ ಹಾರಾಟ, ಕೂಗಾಟ, ಚೀರಾಟ - ಅಬ್ಬಾ! ಭಾರತ ಆಡುತ್ತಿತ್ತು, ಅವರ ಜೊತೆ ಯಾರೋ ನೆನಪಿಲ್ಲ. ಆ ಪಂದ್ಯದಲ್ಲಿ ಭಾರತ ಸೋತಿತೋ ಗೆದ್ದಿತೋ ನೆನಪಿಲ್ಲ, ಸದ್ಯಕ್ಕಂತೂ ಆಟ ತೂಗುಯ್ಯಾಲೆಯಲ್ಲಿತ್ತು. ಜಯಲಕ್ಷ್ಮಿ ಒಂದೊಂದು ಸಲ ಆಕಡೆ ಈಕಡೆ ವಾಲಿದಾಗಲೂ ಗಲಾಟೆ ತಾರಕಕ್ಕೇರುತ್ತಿತ್ತು.

ಈ ನಡುವೆ, ಅಲ್ಲಿ ನಮ್ಮ ಅವತಾರದ ನಿಜೋದ್ದೇಶವನ್ನು ನೆನಪಿಸಿ ಗೆಳೆಯರನ್ನು ಸನ್ಮಾರ್ಗಕ್ಕೆಳೆಯುವ ವಿಫಲಪ್ರಯತ್ನ ನಡೆಸಿದೆ. ಎಕನಾಮಿಕ್ಸ್ ನಲ್ಲಿ Diminishing Marginal Utility ಪಾಠ ಇತ್ತು. ಹಾಗಂದ್ರೆ ಏನೋ ಎಂದು ಎಕನಾಮಿಕ್ಸಿನಲ್ಲಿ 'ಪಂಟರ್' ಆದ ಮಿತ್ರನನ್ನು ಕೇಳಿದರೆ ಆ ಪ್ರಭೃತಿ "ಸದ್ಯಕ್ಕೆ ಇಂಡಿಯಾ ಟೀಮ್ ಸ್ಕೋರ್ ಮಾಡ್ತಿದೆಯಲ್ಲಾ, ಅದೇ Diminishing Marginal Utility" ಎನ್ನುವುದೇ? "ಲೋ ಅಕೌಂಟಿಂಗ್ ರೂಲ್ ಸ್ವಲ್ಪ ಕಷ್ಟ ಅನ್ಸುತ್ತೆ ಕಣೋ, ಒಂದ್ಸಲ ನೋಡೋಣ ಬರ್ರೋ" ಎಂದರೆ, "ಇಲ್ಲಿ ಇಂಡಿಯಾ ಅಕೌಂಟೇ ಕ್ಲೋಸ್ ಆಗ್ತಿದೆ, ಅಕೌಂಟಿಂಗ್ ರೂಲಂತೆ, ಸುಮ್ನಿರೋ" ಎಂದು ಬಾಯಿ ಮುಚ್ಚಿಸಲಾಯಿತು. ಸಂಜೆ ವಾಕಿಂಗ್ ಟೈಮೂ ಆಯ್ತು - "ವಾಕಿಂಗ್ ಹೋಗಿದ್ ಬರೋಣ ಬನ್ರಪ್ಪಾ, ಅಷ್ಟೊತ್ತಿಗೆ ಇನ್ನಷ್ಟು ವಿಕೆಟ್ ಬಿದ್ದಿರುತ್ತೆ, ಯಾವುದೂ ನಿಚ್ಚಳವಾಗಿ ಗೊತ್ತಾಗುತ್ತೆ" ಅಂದೆ. ಸ್ನೇಹಿತ ನನ್ನನ್ನೇ ನುಂಗಿಬಿಡುವಂತೆ ದುರುಗುಟ್ಟಿ ನೋಡಿ ಪಕ್ಕನೆ ಟೀವಿಯ ಕಡೆ ದೃಷ್ಟಿ ಹರಿಸಿದ - ನನ್ನ ಕಡೆ ನೋಡುವಷ್ಟರಲ್ಲಿ ನಿಜಕ್ಕೂ ವಿಕೆಟ್ ಬಿದ್ದೇ ಹೋಗುತ್ತೆ ಎಂದು ತಿಳಿದನೇನೋ. ಆದರೆ ವಿಧಿವಿಲಾಸ ನೋಡಿ, ಅವನು ಹಾಗೆ ಟೀವಿ ಕಡೆ ಕಣ್ಣು ಹಾಕೋಕ್ಕೂ ವಿಕೆಟ್ಟೊಂದು ನಿಜವಾಗೂ ಬೀಳೋಕ್ಕೂ ಒಂದೇ ಆಯಿತು. ಈಗ ಇಡೀ ಕೋಣೆ ನನ್ನನ್ನು ದುರುಗುಟ್ಟಿಕೊಂಡು ನೋಡತೊಡಗಿತು. ಇದ್ದಕ್ಕಿದ್ದ ಹಾಗೆ ನಾನಿದ್ದ ಪರಿಸರ ಶತ್ರುಪರಿಸರವಾಗಿ ಬದಲಾಗತೊಡಗಿ ನನಗೆ ಗಾಬರಿಯಾಯಿತು.

ಸರಿ, ದ್ವೀಪದಲ್ಲಿ ನಾನೊಬ್ಬನೇ ಎಷ್ಟು ಕಾಲ ಒಬ್ಬಂಟಿಯಾಗಿರಲು ಸಾಧ್ಯ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದು ನನಗೆ ನಾನೇ ಹೇಳಿಕೊಂಡು ಪುಸ್ತಕ ಮುಚ್ಚಿಟ್ಟೆ, ಆಟವನ್ನು ನೋಡತೊಡಗಿದೆ. ಅಷ್ಟೇ ಅಲ್ಲ, ಪ್ರಾಮಾಣಿಕವಾಗಿ ಅರ್ಥ ಮಾಡಿಕೊಳ್ಳಲೂ ಯತ್ನಿಸುತ್ತಿದ್ದೆ. ಅವರು ಉದ್ಗಾರ ತೆಗೆದಾಗೆಲ್ಲಾ ಕಣ್ಣು ಕಿರಿದು ಮಾಡಿ ಆ ಉದ್ಗಾರಕ್ಕೆ ಕಾರಣವನ್ನು ಟೀವಿಯಲ್ಲಿ ಹುಡುಕತೊಡಗಿದೆ. ಅದೇನು, ಇದು ಹೇಗೆ ಇತ್ಯಾದಿ ಪ್ರಶ್ನೆ ಕೇಳತೊಡಗಿದೆ. ಆದರೆ ನನ್ನ ಸತ್ಪ್ರಯತ್ನಗಳ ಅರಿವಾದರೂ ಇವಕ್ಕಿರಬೇಕಲ್ಲ - ಪ್ರಶ್ನೆ ಕೇಳಿದಾಗೆಲ್ಲಾ ಸಿಡುಕುವುದು, ದುರುಗುಟ್ಟಿ ನೋಡುವುದು - ಅಬ್ಬಬ್ಬಬ್ಬಾ! ಅಷ್ಟರಲ್ಲಿ ಒಬ್ಬ "ಅಯ್ಯಯ್ಯೋ, ಸಿದ್ಧು ರನ್ನರ್ ಗೆ ಬಂದ್ನಲ್ಲಾ, ಬ್ಯಾಟಿಂಗ್ ಬ್ರೇಕಾಯ್ತಲ್ಲಾ ಒಳ್ಳೇ ಸಮಯಕ್ಕೆ" ಅಂದ. ನನಗೆ ನೋಡಿ, ಆಗಲೇ ಹೇಳಿದೆನಲ್ಲ, ಈ ಆಟಗಾರರ (ಅದರ ನೋಟಗಾರರ) ಟೆಂಪರಮೆಂಟೇ ಅರ್ಥವಾಗೊಲ್ಲ - ಯಾವಾಗ ಏನೋ! ಹೋಗಲಿ, ನಾನಾದರೂ ಸುಮ್ಮನಿರಬೇಕು ತಾನೆ? ಕೇಳಿಯೇ ಕೇಳಿದೆ - "ಈ ರನ್ನರ್ ಎಲ್ಲಿರ್ತಾನೆ?".

ಕೇಳಿದ್ದೇ ತಪ್ಪೇ? ಅಷ್ಟೇ ಜ್ಞಾಪಕ. ತಲೆಯ ಮೇಲೆ ಏನೋ ಧಪ್ಪನೆ ಬಿದ್ದಂತಾಯಿತು. ಒಂದು ಕ್ಷಣದ ಮೈಮರೆವು - ಇಡೀ ದೇಹ ಗಾಳಿಯಲ್ಲಿ ತೇಲಿಕೊಂಡು ಬಾಗಿಲಿನೆಡೆ ಸಾಗತೊಡಗಿತ್ತು. ಸಾವರಿಸಿಕೊಂಡು ನೋಡಿದರೆ, ಈ ನಾಲ್ಕೂ ಜನ ದುಷ್ಟರು ತಲೆಯ ಮೇಲೆ ಗುದ್ದಿ, ನನ್ನನ್ನು ಅನಾಮತ್ತು ಎತ್ತಿ ಬಾಗಿಲ ಕಡೆಗೊಯ್ಯುತ್ತಿದ್ದಾರೆ. ಲೋ ಲೋ ಎನ್ನುತ್ತಿದ್ದಂತೆ ಬಾಗಿಲಿಂದ ಹೊರಗೇ ದಬ್ಬಿ, ಬೆನ್ನ ಹಿಂದೆ ದಬ್ಬನೆ ಬಾಗಿಲು ಹಾಕಿದರು. ಒಳಗೆ ಹೋ ಎಂದು ಕೋಲಾಹಲ - "And... he is OUT" - ಕೂಗಿತು ಟೀವಿ.

ಒಳಗೆ ಇನ್ನೊಂದು ವಿಕೆಟ್ ಬಿದ್ದಿತ್ತು.

-
-
-
-
-
ಸೂ: ಈ ದಿನ ಮತ್ತೊಂದು ವರ್ಲ್ಡ್ ಕಪ್ ಫೈನಲ್. ಇದನ್ನು ಬೆಳಗ್ಗೆಯೇ ಬರೆದಿದ್ದೆ. ಇಡೀ ದೇಶ ತುದಿಗಾಲಿನಲ್ಲಿ ನಿಂತು ಕ್ರಿಕೆಟ್ ನೋಡುತ್ತಿದೆ, ಭಾವನೆಗಳು ಬಹಳ ರಭಸವಾಗಿರುತ್ತದೆ. 1987ರ ಪುನರಾವರ್ತನೆ ನನಗಾಗುವುದು ಬೇಡವೆಂದು ಸ್ವಲ್ಪ ತಡೆದೆ. ಈಗ ನೋಡಿದರೆ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿದೆಯೆಂದು ದುಃಖದ ವಾರ್ತೆ ಬಂದಿದೆ. ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಈ ದುಃಖ ಭರಿಸುವ ಶಕ್ತಿ ಬರಲಿ - ಜಾತಸ್ಯ ಮರಣಂ ಧ್ರುವಂ, ಅಲ್ಲಲ್ಲ, ಆಟವೆಂದರೆ ಸೋಲು ಗೆಲುವು ಇದ್ದದ್ದೇ. ಆಷ್ಟ್ರೇಲಿಯಾ ಆದರೂ ಗೆದ್ದಿತಲ್ಲ, ಅವರೊಡನೆ ಸಂತಸ ಪಡೋಣ - ಈ ಹಿಂದೆ ಭಾರತ ಹಲವು ಬಾರಿ ಗೆದ್ದಿದೆ, ಆ ಸಂತಸವನ್ನು ನೆನೆಯೋಣ, ಮುಂದೆಯೂ ಗೆಲ್ಲುತ್ತದೆ, ಆ ಭರವಸೆಯನ್ನು ಇಡೋಣ. ಎಲ್ಲಕ್ಕಿಂತ ಹೆಚ್ಚಾಗಿ, ಕ್ರಿಕೆಟ್ಟಿನಲ್ಲಿ ಸೋತ ಭಾರತ ಚಂದ್ರಯಾನದಲ್ಲಿ ಗೆದ್ದಿದೆಯೆಂಬುದನ್ನೂ ಮರೆಯದಿರೋಣ
🙂