Tuesday, April 7, 2015

ದಕ್ಷಿಣಾಯಣ

(೨೦೧೪ರ  ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ)
 *********

ಛೇ ಛೇ, ಇದೇನು? ಲಲಿತಪ್ರಬಂಧ ಅಂತ ಬರೆಯಲು ಹೋಗಿ ದಕ್ಷಿಣಾಯಣದಂಥ "ಅನಿಷ್ಟ"ದ ವಿಷಯ ಹೇಳ್ತಿದಾನಲ್ಲ ಅಂತ ಮೂಗು ಮುರಿಯಬೇಡಿ.  ಅದೂ ನಿಜವೇ ಅನ್ನಿ.  ಉತ್ತರಾಯಣವಾದರೆ ಅದೊಂದುರೀತಿ - ಪುಣ್ಯಕಾಲ - ಸತ್ತರೆ ಸ್ವರ್ಗಪ್ರಾಪ್ತಿ.  ರಾಜ್ಯ-ಸಂಸಾರಗಳ ವ್ಯಾಮೋಹಗಳನ್ನೇ ಗೆದ್ದ ಭೀಷ್ಮನಂಥಾ ಭೀಷ್ಮನೇ "ಅದೇನೇ ಆಗಲಿ, ಸತ್ತರೆ ಮಾತ್ರ ಉತ್ತರಾಯಣ ಪುಣ್ಯಕಾಲದಲ್ಲೇ" ಅಂತ, ಮೈಯೆಲ್ಲಾ ಚುಚ್ಚಿಕೊಂಡ ಬಾಣಗಳು ಜೀವ ತೆಗೆಯುತ್ತಿದ್ದರೂ ಹಲ್ಲು ಕಚ್ಚಿ (ಅದರೊಡನೆ ಜೀವವನ್ನೂ ಕಚ್ಚಿ ಹಿಡಿದು) ಉತ್ತರಾಯಣ ಪುಣ್ಯಕಾಲಕ್ಕಾಗಿ ಕಾಯಲಿಲ್ಲವೇ ಪಾಪ, ಸಾಯೋದಿಕ್ಕೆ - ಹದಿನೆಂಟು ದಿನ!  ಉತ್ತರಾಯಣ ಪುಣ್ಯಕಾಲದಲ್ಲಿ ಸಾಯೋ ಗಮ್ಮತ್ತೇ ಅದು ಅಂತಾರಪ್ಪ, ಬದುಕಿರುವವರು.  ಸ್ವರ್ಗದ ಬಾಗಿಲು ತೆಗೆದಿರುತ್ತೆ.  ಇಲ್ಲಿಂದ ರೊಯ್ಯನೆ ಹಾರಿದರೆ ನೇರ ಸ್ವರ್ಗದ ತೆರೆದಬಾಗಿಲ ಮೂಲಕ ತೂರಿ ಒಳಹೋಗಿಬಿಡಬಹುದು.  ಅಪ್ಪಿತಪ್ಪಿ ಇಂದ್ರನೇನಾದರೂ ಸಿಂಹಾಸನ ಬಿಟ್ಟು ಯಾತಕ್ಕಾದರೂ ಎದ್ದು ಹೋಗಿದ್ದರೆ ನೇರ ಸಿಂಹಾಸನದ ಮೇಲೇ ಕುಕ್ಕರಿಸಿದರೂ ಸೈಯೇ.  ಒಮ್ಮೆ ಸಿಂಹಾಸನ ಸಿಕ್ಕಮೇಲೆ ಮುಗೀತಲ್ಲ.  ಆಮೇಲೆ ಇಂದ್ರ ವಾಪಸು ಬಂದಾಗ ನೋಡಿಕೊಳ್ಳೋಣ.  ಖುರ್ಚಿ ಬಿಡಿಸುವುದೇನು ಹುಡುಗಾಟವೇ?  ನಮ್ಮ ಆಂಧ್ರದಲ್ಲೇ ಹಿಂದೊಂದು ಕಾಲದಲ್ಲಿ ಎಂ ಟಿ ರಾಮರಾವುಗಾರು ಪಾಪ ಅದೇಕೋ ಅಮೇರಿಕಾಕ್ಕೆ ಹೀಗೆ ಹೋಗಿ ಹಾಗೆ ಬರೋವಷ್ಟರಲ್ಲಿ ಅವರ ಮುಖ್ಯಮಂತ್ರಿ ಸೀಟೇ ಗುಳುಂ ಆಗಿರಲಿಲ್ಲವೇ?  ಆಮೇಲೆ ಎಷ್ಟೆಷ್ಟು ತಿಪ್ಪರಲಾಗ ಹಾಕಿದರೂ ಅಂಥಾ ಕೃಷ್ಣವೇಷಧಾರೀ ರಾಮನಿಗೇ ಏನೂ ಮಾಡಲು ಆಗಲಿಲ್ಲವೆಂದಮೇಲೆ ಒಬ್ಬ ಯಃಕಶ್ಚಿತ್ ಇಂದ್ರ, ಏನು ಮಾಡಾನು!  ಅಲ್ಲದೇ, ಅದೇನೋ ಮಾನವರ ಕಾಲಪ್ರಮಾಣಕ್ಕಿಂತ ದೇವತೆಗಳ ಕಾಲಪ್ರಮಾಣ ನೂರಾರು ಪಟ್ಟು ಹೆಚ್ಚಂತೆ.  "ಬ್ರಹ್ಮಶೌಚ" ಅನ್ನೋ ಮಾತೇ ಇದೆಯಲ್ಲ - ನಿಮಗೆ ಅದರ ಕತೆ ಗೊತ್ತಿಲ್ಲವೆಂದರೆ ಅದನ್ನೂ ಕೇಳಿಬಿಡಿ.  ಬ್ರಹ್ಮದೇವನು ಒಮ್ಮೆ ಶೌಚಕ್ಕೆ ಹೋಗಬೇಕಾಯಿತಂತೆ, ಇನ್ನೇನು ಬಾಗಿಲು ತೆರೆದು ಒಳಹೋಗಬೇಕು, ಆಗ ವರದಿಗಾರನೊಬ್ಬ ಬಂದು ಒಪ್ಪಿಸಿದನಂತೆ "ಸ್ವಾಮಿ, ರಾವಣ ಜನನವಾಯಿತು"  ಸರಿ ಎಂದ ಬ್ರಹ್ಮದೇವನು ಒಳಗೆ ಹೋದನಂತೆ, ಮತ್ತೆ ಎಲ್ಲಾ ಮುಗಿಸಿ ಹೊರಬರುವ ಹೊತ್ತಿಗೆ ಮತ್ತೆ ವರದಿಗಾರ ಪ್ರತ್ಯಕ್ಷ - "ಸ್ವಾಮೀ, ರಾವಣ ಸಂಹಾರವಾಯಿತು".  ಇದು ನೋಡಿ ಬ್ರಹ್ಮಶೌಚದ ಕಾಲಪ್ರಮಾಣ.  ಹೀಗೇ ’ಒಂದೈದು ನಿಮಿಷ’ ಎಲ್ಲೋ ಹೊರಹೋಗಿರುವ ಇಂದ್ರ ವಾಪಸು ಬರಬೇಕಾದರೆ ನಮ್ಮ ಅಳತೆಯಲ್ಲಿ ಅದೆಷ್ಟು ವರ್ಷ ಲೆಕ್ಕ ಹಾಕಿಕೊಳ್ಳಿ ಆ ಐದು ನಿಮಿಷಕ್ಕೆ.  ಅಷ್ಟು ವರ್ಷವಂತೂ ಇಂದ್ರನ ಖುರ್ಚಿ ನಿಮ್ಮದಾಯಿತಲ್ಲ.  ಆ ಇಂದ್ರಪದವಿ, ಅಪ್ಸರೆಯರ ನೃತ್ಯ, ಸೋಮಪಾನ, ದೇವಗುರು ಬೃಹಸ್ಪತಿಯಿಂದ ಸ್ವಸ್ತಿವಾಚನ, ಅಷ್ಟದಿಕ್ಪಾಲಕರೆಲ್ಲ ನಿಮ್ಮ ಮುಷ್ಠಿಯಲ್ಲಿ!  ಇಂದ್ರ ತಿರುಗಿ ಬಂದಮೇಲೆ ನೋಡಿಕೊಳ್ಳೋಣ ಬಿಡಿ.  ಬಂದಮೇಲೂ ಅವನೇನು ಮಾಡಲು ಸಾಧ್ಯ?  ನೀವೇನು ಬ್ರಹ್ಮನೋ ಶಿವನೋ ಕೊಟ್ಟ ಮೋಸದ ವರದ ಬಲದಿಂದ ಅಲ್ಲಿ ಹೋಗಿ ಕುಳಿತಿಲ್ಲವಲ್ಲ - ಅದರ ಲೂಪ್ ಹೋಲುಗಳನ್ನು ಹಿಡಿದು ನಿಮ್ಮನ್ನ ಮಟ್ಟಹಾಕಲಿಕ್ಕೆ;  ಅಥವಾ ನೀವೇನು ಆ ಅವಿವೇಕಿ ರಾಕ್ಷರಂತೆ ದೇವರಾಜನ ಮೇಲೆ ದಂಡೆತ್ತಿ ಹೋಗಿಲ್ಲ, ಬಲಪ್ರಯೋಗ ಮಾಡಲಿಲ್ಲ.  ನೀವು ಭೂಲೋಕದಿಂದ ತೂರಿ ಬಂದಾಗ ಅಲ್ಲಿ ಸೀಟು ಖಾಲಿಯಿತ್ತು, ಹೋಗಿ ಕುಳಿತಿರಿ - ಅದೇನು ಸರ್ವೀಸು ಬಸ್ಸು ಕೆಟ್ಟುಹೋಯಿತೇ, ಟವಲು ಹಾಸಿ ಸೀಟು ಹಿಡಿದಿಡಲಿಕ್ಕೆ; ಯಾರಿಗೆ ಸಿಗುತ್ತೋ ಅವರು ಕೂರುತ್ತಾರಪ್ಪ.  ಅಲ್ಲದೇ ನೀವಲ್ಲಿ ಹೋಗಿ ಕುಳಿತಿದ್ದು ಸ್ವತಃ ನಿಮ್ಮದೇ ಪುಣ್ಯಫಲದಿಂದ - ಮತ್ತೆ? ಮೊದಲಾಗಿ ಸಾಯುವುದೇ ಅತ್ಯಂತ ಪುಣ್ಯದ ಕೆಲಸ ಈ ಕಾಲಕ್ಕೆ, ಇನ್ನು ಉತ್ತರಾಯಣ ಪುಣ್ಯಕಾಲದಲ್ಲಿ ಸಾಯುವುದೇನು ಕಡಿಮೆ ಪುಣ್ಯವೇ?  ಶ್ರೀ ಕೃಷ್ಣಪರಮಾತ್ಮನೇ ಹೇಳಿಲ್ಲವೇ?  "ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ" - ನೀವು ನಿಮ್ಮ ಪುಣ್ಯದ ಫಲವನ್ನು ಅನುಭವಿಸಿಯೇ ತೀರಬೇಕು; ಅದನ್ನು ಇಂದ್ರನೂ ತಡೆಯುವಂತಿಲ್ಲ, ಹರಿಹರಬ್ರಹ್ಮರೂ ತಡೆಯುವಂತಿಲ್ಲ. ಹಾಗೆಯೇ ಇಂದ್ರನೂ ತನ್ನ ಕರ್ಮಫಲವನ್ನು ಅನುಭವಿಸಬೇಕಲ್ಲ!  ಅಲ್ಲ, ಹೇಳಿ ಕೇಳಿ ಇದು ಉತ್ತರಾಯಣ ಪುಣ್ಯಕಾಲ, ಸ್ವರ್ಗದ ಬಾಗಿಲು ಹಾಗೆ ಹಾರಹೊಡೆದಿದೆ; ಭೂಮಿಯಿಂದ ಯಾವ ಪುಣ್ಯಜೀವಿಯಾದರೂ ಯಾವಾಗಲಾದರೂ ಉಲ್ಕೆಯಂತೆ ರೊಯ್ಯನೆ ಬಂದು ತನ್ನ ಸಿಂಹಾಸನದಲ್ಲಿ ಕುಕ್ಕರಿಸಿಬಿಡಬಹುದು, ಈಗ ಮೈಯೆಲ್ಲಾ (ಸಾವಿರ) ಕಣ್ಣಾಗಿ ಸಿಂಹಾಸನ ಕಾಪಾಡಿಕೊಳ್ಳುವುದು ಬಹು ಮುಖ್ಯ ಎಂಬ ಪರಿಜ್ಞಾನವೇ ಇಲ್ಲದೇ ತನ್ನ ಸೀಟು ಬಿಟ್ಟು ಎದ್ದು ಹೋಗಿದ್ದು ಅವನ ಕರ್ಮವಲ್ಲದೇ ಮತ್ತೇನು?  ಆಕ್ಸಿಡೆಂಟುಗಳು ಆಗಲು ಒಂದು ಕ್ಷಣ ಸಾಕು ಸ್ವಾಮಿ - ಒಂದು ಮಾನವಕ್ಷಣ, ದೇವಕ್ಷಣವಲ್ಲ.  ಅಂಥಾದ್ದರಲ್ಲಿ ದೇವಲೆಕ್ಕದಲ್ಲಿ ನಿಮಿಷಗಟ್ಟಲೆ ಸೀಟು ಬಿಟ್ಟುಹೋಗುವುದೆಂದರೆ, ಬೇಜವಾಬ್ದಾರಿಯ ಪರಮಾವಧಿಯಲ್ಲವೇ.  ನಮ್ಮಲ್ಲಿ ಯಾವ ಮಂತ್ರಿಯಾದರೂ ಆ ಮೂರ್ಖತನ ಮಾಡುತ್ತಾನೆಯೇ? ಅದಕ್ಕೇ ಇಂದ್ರನಿಗೂ "ಅವಶ್ಯಮನುಭೋಕ್ತವ್ಯಂ... ".  ಅಥವಾ ಅವನಿಗೆ ಕನ್ನಡ ಅರ್ಥವಾಗುವುದಾದರೆ "ಮಾಡಿದ್ದುಣ್ಣೋ ಮಹರಾಯ" ಅನ್ನಲೂ ಬಹುದು.

ತಡೀರಿ, ದಕ್ಷಿಣಾಯಣದ ಬಗ್ಗೆ ಹೇಳಹೊರಟು ಉತ್ತರಾಯಣದ ಬಗೆಗೇ ಹೇಳುತ್ತಿದ್ದಾನಲ್ಲ ಎಂದು ನೀವು ಮೂಗು (ನಿಮ್ಮದೇ) ಮುರಿಯುತ್ತಿದ್ದೀರೆಂದು ನನಗೆ ಗೊತ್ತು.  ಅದ್ಯಾರೋ ಒಬ್ಬ ಹುಡುಗ ಪರೀಕ್ಷೆಗೆ ಹೋದನಂತೆ.  ತೆಂಗಿನ ಮರದ ಬಗ್ಗೆ ಪ್ರಬಂಧ ಉರುಹಚ್ಚಿಕೊಂಡು ಹೋಗಿದ್ದ.  ಆದರೆ ಅವನ ದುರದೃಷ್ಟಕ್ಕೆ ಅಲ್ಲಿ ಕೇಳಿದ್ದು ಹಸುವಿನ ಬಗ್ಗೆ ಪ್ರಬಂಧ.  ಏನು ಮಾಡುವುದು.  ಪ್ರಬಂಧವನ್ನಂತೂ ಬರೆಯಬೇಕಲ್ಲ.  ಸುಮ್ಮನೇ ಹಸುವಿಗೆ ಎರಡು ಕಣ್ಣು, ಎರಡು ಕಿವಿ, ಕೊಂಬು, ನಾಲ್ಕು ಕಾಲು, ಕೆಚ್ಚಲು, ಹಾಲು ಕರೆಯುತ್ತೆ ಎಂದರೆ ಮುಗಿಯಿತೇ, ಪೇಜು ತುಂಬಬೇಕಲ್ಲ.  ಲಕ್ಷಣವಾಗಿ ಎರಡು ಪೇಜು ತಾನು ಉರುಹಚ್ಚಿಕೊಂಡು ಹೋದ ತೆಂಗಿನ ಮರದ ಪ್ರಬಂಧವನ್ನೇ ಬರೆದ.  ಕೊನೆಯಲ್ಲಿ "ಇಂಥ ಅದ್ಭುತವಾದ ಕಲ್ಪವೃಕ್ಷದಂಥ ತೆಂಗಿನ ಮರಕ್ಕೆ ಹಸುವನ್ನು ಕಟ್ಟಿ ಹಾಲು ಕರೆಯುತ್ತಾರೆ.  ಇದು ಹಸುವಿನ ಪ್ರಬಂಧ" ಎಂದು ಬರೆದ.  ನನ್ನ ಪ್ರಬಂಧದ ಕತೆಯೂ ಇಷ್ಟೇ ಎಂದು ನೀವು ಯೋಚಿಸುತ್ತಿರಲಿಕ್ಕೆ ಸಾಕು.  ಅಲ್ಲವೇ ಮತ್ತೆ, ಉತ್ತರಾಯಣದಲ್ಲಾದರೆ ಮೇಲೆ ಹೇಳಿದ ಮಹಿಮೆಯೆಲ್ಲಾ ಇದೆ.  ಪುರಾಣಗಳೇ ಇದನ್ನು ಸಾರುತ್ತಿವೆ.  ದಕ್ಷಿಣಾಯಣದಲ್ಲೇನಿದೆ.  ದಕ್ಷಿಣಾಯಣದಲ್ಲಿ ಸತ್ತರೆ ನೇರ ನರಕವೇ ಗಟ್ಟಿ.  ಅದರಲ್ಲೂ ಈ ಕಲಿಗಾಲದಲ್ಲಂತೂ, ಸಾಯುವವರು ಮತ್ತು ಪಾಪಿಗಳ ಸಂಖ್ಯೆಗಳೆರಡೂ ಮುಗಿಲುಮುಟ್ಟಿರುವುದರಿಂದ ನರಕಕ್ಕೆ ಹೋಗುವ ದಾರಿ ಮೊದಲಿನಷ್ಟು ಸಲೀಸಲ್ಲವಂತೆ.  ಆ ಟ್ರಾಫಿಕ್ ಜಾಮಿನಲ್ಲಿ ತೆವಳಿಕೊಂಡು (ಮೊದಲೇ ದಕ್ಷಿಣಾಯಣ, ಮಳೆ ಛಳಿ ಬೇರೆ), ಆ ಮಳೆಯಲ್ಲಿ ನೆನೆದುಕೊಂಡು - ಬೇಡಾ ಫಜೀತಿ.  ಕೊನೆಯಲ್ಲಿ ಸಿಕ್ಕುವ ಆ ನರಕವನ್ನು ರಸ್ತೆಯಲ್ಲೇ ತೋರಿಸಿಬಿಡುತ್ತಾರೆ.  ಬೆಂಗಳೂರಿನ ರಸ್ತೆಗಳಲ್ಲಿ ಪೀಕ್ ಅವರಿನಲ್ಲಿ ತೆವಳಿ ಅಭ್ಯಾಸವಿರುವ ಸುಮಾರು ಆತ್ಮಗಳು ಹಾಗೂ ಹೀಗೂ ಈ ದಾರಿಯನ್ನು ಸವೆಸಿ ಯಶಸ್ವಿಯಾಗಿ ನರಕವನ್ನು ಸೇರಿಬಿಡುತ್ತವಾದರೂ ಈ ಅಭ್ಯಾಸವಿಲ್ಲದ ಅದೆಷ್ಟೋ ಆತ್ಮಗಳು ಪಾಪ, ಈ ಕೊನೆಗಾಣದ ಹಾದಿ ಸವೆಸಲಾಗದೇ ಅತ್ತ ನರಕವೂ ಇಲ್ಲದೇ ಇತ್ತ ಭೂಮಿಯೂ ಇಲ್ಲದೇ ಬೆಂತರಗಳಾಗಿ ಅಲೆದಾಡುತ್ತವಂತೆ.  ಅಂದಮೇಲೆ ಯಾರಿಗೆ ಬೇಕು ಹೇಳಿ ದಕ್ಷಿಣಾಯಣದ ಸಹವಾಸ.  ಇಲ್ಲ, ನೀವು ಅಪ್ಪೀತಪ್ಪಿ ಪುಣ್ಯವನ್ನೇ ಗಂಟುಕಟ್ಟಿಕೊಂಡಿದ್ದೀರೆನ್ನಿ; ಅದಕ್ಕೇ ನಿಮಗೆ ಸ್ವರ್ಗಕ್ಕೇ ಟಿಕೇಟೂ ಸಿಕ್ಕಿದೆಯೆನ್ನಿ.  ಆ ದಾರಿಯಲ್ಲೇನೋ ಈ ಪರಿಯ ಟ್ರಾಫಿಕ್ ಜಾಮ್ ಇಲ್ಲ.  ಹೇಳಿದೆನಲ್ಲ, ಇಲ್ಲಿಂದ ಜೀವ ಎಗರಿದರೆ ರೊಯ್ಯನೇ ನೇರ ಸ್ವರ್ಗಕ್ಕೇ!  ಆದರೇನು?  ಹಾಳು ದಕ್ಷಿಣಾಯಣ, ಸ್ವರ್ಗದ ಬಾಗಿಲು ಮುಚ್ಚಿದೆ.  ಹಾಗಾಗಿ, ಇಲ್ಲಿಂದ ಬಿಟ್ಟ ಬಾಣದಂತೆ ಹೊರಟ ನೀವು ಹೋಗಿ ಸ್ವರ್ಗದ ಮುಚ್ಚಿದ ಬಾಗಿಲಿಗೆ ಅಪ್ಪಳಿಸುವುದೂ, ಮತ್ತೆ ತ್ರಿಶಂಕುವಿನಂತೆ ಭೋಂಕನೆ ತಲೆ ಕೆಳಗಾಗಿ ಭುವಿಗೆ ಬೀಳುವುದೂ ತಪ್ಪದೇ ತಪ್ಪದು.  ಅಂತರಾಳದಲ್ಲೇ ನಿಮಗಾಗಿ ಒಂದು ಬದಲೀ ಸ್ವರ್ಗ ನಿರ್ಮಿಸಿಕೊಡಲು ಈ ಕಾಲದಲ್ಲಿ ವಿಶ್ವಾಮಿತ್ರನೂ ಇಲ್ಲ, ನೀವು ತ್ರಿಶಂಕುವೂ ಅಲ್ಲ!

ಸರಿಹೋಯ್ತು.  ಹರಟೆಯ ಭರದಲ್ಲಿ ನಾವೀಗಾಲೇ ಪರಲೋಕಯಾತ್ರೆ ಕೈಗೊಂಡೇ ಬಿಟ್ಟಿದ್ದೇವೆಂಬ ಹುರುಪಿನಲ್ಲಿ ಮಾತಾಡುತ್ತಿದ್ದೇನೆ ನೋಡಿ.  ಪರಲೋಕಯಾತ್ರೆಯ ಗಡಿಬಿಡಿಯಲ್ಲಿರುವವರು ಯಾರಾದರೂ ಹೀಗೆ ಲೋಕಾಭಿರಾಮ ಹರಟುತ್ತಿರಲು ಸಾಧ್ಯವೇ?  ಅಥವ ಲೋಕಾಭಿರಾಮವಾದ ಹರಟೆ ಹೊಡೆಯುವ ಮನಸ್ಥಿತಿಯುಳ್ಳವರು ಪರಲೋಕಯಾತ್ರೆಯ ಬಗೆಗೆ ಯೋಚಿಸುವುದಾದರೂ ಸಾಧ್ಯವೇ?  ಅಂಥವರು ಎಲ್ಲೋ ಎಂದೋ ಒಬ್ಬಿಬ್ಬರಿರಬಹುದು, ವೇದಕಾಲದ ನಚಿಕೇತನಂಥವರು.  ಇತರರು, ಸತ್ತಮೇಲೂ ಸ್ವರ್ಗಭೋಗಕ್ಕಾಗಿ ಉತ್ತರದಿಕ್ಕಿನ ಕನಸು ಕಾಣುತ್ತಿದ್ದರೆ, ಈ ಹುಚ್ಚು ಹುಡುಗ ಜ್ಞಾನ ಸಂಪಾದನೆ ಮಾಡಬೇಕೆಂದು, ಬದುಕಿದ್ದಾಗಲೇ ದಕ್ಷಿಣ ದಿಕ್ಕಿನೆಡೆ ನಡೆದ.  ಅತ್ತಕಡೆ ಯಮಧರ್ಮರಾಯ ಅವಧಿಮೀರಿದ ಆತ್ಮಗಳನ್ನು ದಸ್ತಗಿರಿ ಮಾಡಿಕೊಂಡು ಬರಲು ಹುಡುಕಿಕೊಂಡು ಭೂಲೋಕದಲ್ಲಿ ಅಲೆದಾಡುತ್ತಿದ್ದರೆ, ಈ ಪುಣ್ಯಾತ್ಮ ಯಮನನ್ನೇ ಹುಡುಕಿಕೊಂಡು ಯಮಸದನಕ್ಕೇ ಬಂದ; ಮೂರು ದಿನ ಮನೆಯ ಬಾಗಿಲಲ್ಲೇ ಝಂಡಾ ಹಾಕಿದ.  ಎದೆಗಾರಿಕೆ ಎಂದರೆ ಇದಪ್ಪ - ಯಮಧರ್ಮನೇ ಅಲುಗಿಹೋದನಲ್ಲ!  ನಿನಗೆ ಬೇಕಾದಷ್ಟು ಸಂಪತ್ತು ಕೊಡುತ್ತೇನೆ, ತೆಗೆದುಕೊಂಡು ಜಾಗ ಖಾಲಿ ಮಾಡು ಅಂದರೂ, ಉಹ್ಹೂಂ... ಹುಡುಗನದು ಒಂದೇ ಹಟ.  "ನಿನ್ನ ಸಂಪತ್ತೂ ಬೇಡ ಏನೂ ಬೇಡ, ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು, ಸಾಕು" - ಪಟ್ಟು ಎಂದರೆ ಪಟ್ಟು, ನಕ್ಷತ್ರಿಕಂದೇ ಪಟ್ಟು ಅಂತಾರಲ್ಲ ಹಾಗೆ.  ಅಂಥಾ ಯಮನಿಗೂ ಒಂದು ಕ್ಷಣ ಸಾಕಾಗಿಹೋಗಿರಬೇಕು.  ಕೊನೆಗೂ ಯಮನಿಂದ ಸಾವಿನ ರಹಸ್ಯ ತಿಳಿದು, ಬದುಕಿಗೆ ಹಿಂದಿರುಗಿದ ಹುಡುಗ, ಬರಿಗೈಯಲ್ಲಿ!  ಈ ಹುಚ್ಚಿಗೇನು ಹೇಳೋಣ ಸ್ವಾಮಿ?  ಅಲ್ಲಾ, ಬದುಕು ಬದುಕಲು ಸಾವಿನ ರಹಸ್ಯ ಬೇಕೇ?  ನಾವಾಗಿದ್ದರೆ ಯಮನ ಮೊದಲನೇ ಆಫರನ್ನೇ ಒಪ್ಪಿಕೊಂಡು ಕೈತುಂಬಾ ಸಂಪತ್ತಿನ ದಕ್ಷಿಣೆ ಹೊತ್ತು ಮರಳುತ್ತಿರಲಿಲ್ಲವೇ? 

ಈ ಕತೆ ಹೇಳುತ್ತಿರುವಾಗಲೇ ನನಗನ್ನಿಸಿದ್ದು, ನಾವು ದಿನನಿತ್ಯ ಬಳಸುವ ’ದಕ್ಷಿಣೆ’ ಅನ್ನೋ ಪದದ ಮೂಲ ಈ ಕತೆಯೇ ಇರಬಹುದೇ?  ಮನೆಗೆ ಬಂದ ಬ್ರಾಹ್ಮಣ ವಟುವನ್ನು ಮೂರುದಿನ ಕಾಯಿಸಿದ್ದಕ್ಕಾಗಿ ಯಮನಿಗೆ ತುಂಬ ಪಶ್ಚಾತ್ತಾಪವಾಯಿತಂತೆ.  ಅದಕ್ಕೆ ಪ್ರತಿಯಾಗಿ ಮೂರು ವರಗಳನ್ನು ಕೋರಿಕೋ ಎಂದನಂತೆ.  ಮೊದಲ ಎರಡು ವರ ಹೇಗೋ ಸಂದಿತು, ಆದರೆ ಕೊನೆಯ ವರವಾಗಿ ಇವನು ಹುಟ್ಟು ಸಾವಿನ ರಹಸ್ಯ ತಿಳಿಸು ಎಂದು ಕೇಳಿದಾಗ ಮಾತ್ರ ಯಮನಿಗೆ ತೀರ ಪೇಚಾಟಕ್ಕಿಟ್ಟುಕೊಂಡಿತಂತೆ.  ಮಾನವಮಾತ್ರನಿಗೆ ಈ ರಹಸ್ಯವನ್ನು ಹೇಳಿಬಿಟ್ಟರೆ ಅದು ರಹಸ್ಯವಾಗಿ ಉಳಿಯುವುದೆಂತು?  ವರವನ್ನಂತೂ ಕೊಟ್ಟಾಗಿದೆ, ಕೊಟ್ಟ ಮಾತಿನಿಂದ ಹಿಂದೆಗೆಯುವಂತಿಲ್ಲ, ಅದರಲ್ಲೂ ಸಾಕ್ಷಾತ್ ಧರ್ಮದೇವತೆ!  ಅದಕ್ಕೇ ಅದನ್ನು ಮರೆಯಿಸಲು ಹುಡುಗನನ್ನು ಹೇಗೋ ಪುಸಲಾಯಿಸಿ ಕಳಿಸಲು ಅಪಾರ ಸಂಪತ್ತಿನ ದಕ್ಷಿಣೆಯನ್ನಿಟ್ಟನಂತೆ.  ಆದರೆ ಈ ಹುಡುಗ ಮೊಂಡು ಆಸಾಮಿ - ನಮ್ಮಲ್ಲಿರುವ ಹಲವು ಖಡಕ್ ಆಫೀಸರುಗಳಂತೆ.  ದಕ್ಷಿಣೆಯನ್ನು ಕೈಯಿಂದಲೂ ಮುಟ್ಟ; ಕಿಸೆಯಲ್ಲೂ ಹಾಕಗೊಡ!  ಕೊನೆಗೂ ವಿಧಿಯಿಲ್ಲದೇ ಯಮ ಬಾಯಿಬಿಡಬೇಕಾಯಿತು (ಬಾಯ್ಬಾಯಿ ಬಿಡಬೇಕಾಯಿತೆನ್ನುವುದು ಪಾಠಾಂತರ).  ಅದೇನೇ ಇರಲಿ, ಕಾಂಚಾಣದಿಂದ ಕಾರ್ಯಸಿದ್ಧಿ - ಕೆಲಸವನ್ನು ಆಗಮಾಡಿಕೊಳ್ಳಲು ಆಗಲೂ ದಕ್ಷಿಣೆಯಿಡುತ್ತಿದ್ದರು ಅನ್ನೋದಂತೂ ಸಾಬೀತಾಯಿತಲ್ಲ!  ಬಹುಶಃ ದಕ್ಷಿಣದಿಂದ ಹುಟ್ಟಿದ್ದಾದ್ದರಿಂದ ಈ ಸುವಿಧಾ ದ್ರವ್ಯಕ್ಕೆ ದಕ್ಷಿಣೆಯೆಂಬ ಹೆಸರು ಬಂದಿರಬೇಕು.  ಇದು ಕೆಲಸಮಾಡುವ ರೀತಿಯೂ ಹಾಗೇ.  ಮೊದಲು ದಕ್ಷಿಣೆ, ಆಮೇಲೆ ಸಂಬಂಧಪಟ್ಟವರಿಂದ ಅದಕ್ಕೆ ’ಉತ್ತರ’; ಮತ್ತದರಿಂದಲೇ ತಾನೇ, ದಕ್ಷಿಣೆ ನೀಡಿದವನ ಉತ್ತರೋತ್ತರ ಅಭಿವೃದ್ಧಿ?  ಮತ್ತೆ ಈ ದಕ್ಷಿಣೆಯ ಪ್ರಭಾವವೂ ಅಷ್ಟೇ, ಅಲೌಕಿಕ.  ದಕ್ಷಿಣೆ ಪಡೆದವರ ಮೈಭಾಷೆಯನ್ನೊಮ್ಮೆ ನೀವು ಅವಲೋಕಿಸಬೇಕು.  ಸಾಮಾನ್ಯವಾಗಿ ಜಡ ಸಂಪನ್ನವಾಗಿರುವ ಮೈಮನಗಳ ಕಣಕಣವೂ ನೀವು ಹನಿಸಿದ ದಕ್ಷಿಣೆಯ ಕಾಯಕಲ್ಪದಿಂದ ಹುರಿಗೊಳ್ಳುತ್ತದೆ, ಕಾರ್ಯೋತ್ಸಾಹ ಪುಟಿದೇಳುತ್ತಿರುತ್ತದೆ.  ದಕ್ಷಿಣಾದರ್ಶನದ ಮುಂಚೆ ಆ ಅರೆಮುಚ್ಚಿದ ಕಣ್ಣುಗಳಲ್ಲಿ ತುಂಬಿ ತೊನೆಯುತ್ತಿದ್ದ ನಿಮ್ಮ ಬಗೆಗಿನ ದಿವ್ಯನಿರ್ಲಕ್ಷ್ಯ ಈಗ ಮಂಗಮಾಯವಾಗಿ ಅದರ ಜಾಗದಲ್ಲಿ ದಾಕ್ಷಿಣ್ಯಪರತೆ (ದಕ್ಷಿಣೆಯು ತುಂಬಿದ ಧನ್ಯತಾ ಭಾವ) ತುಂಬಿ ತುಳುಕುತ್ತಿರುತ್ತದೆ.  ಕಿರಿದ ಹಲ್ಲುಗಳ ಕಾಂತಿ ಎಲ್ಲೆಲ್ಲೂ ಹರಡುತ್ತದೆ (ಅದನ್ನು ನೋಡಿ "ವದಸಿ ಯದಿ ಕಿಂಚಿದಪಿ ದಂತ ರುಚಿ ಕೌಮುದೀ ಹರತಿ ಧರ ತಿಮಿರಮತಿ ಘೋರಂ" ಎಂದು ನೀವು ಹಾಡಿದರೂ ತಪ್ಪಿಲ್ಲ).  ಅದುವರೆಗೂ ಮೌನಕಠೋರವಾಗಿದ್ದ ಆತನ ದನಿ, ಈಗ ಕೋಕಿಲಧ್ವನಿಯಾಗಿದೆ.  ಮಹಿಷಗಮನಕ್ಕೀಗ ನವಿಲಿನ ನಾಟ್ಯದ ಕಸುವು ದಕ್ಕಿದೆ.  ಆ ಅರಳಿದ ಮೊಗದಾವರೆಯನ್ನು ನೋಡಿ ಅದನ್ನು ಅರಳಿಸಿದ ಬಾಲ ಸೂರ್ಯ ನೀವೇನೋ ಎಂದು ಒಂದು ಕ್ಷಣ ನೀವು ವಿವಂಚನೆಗೊಳಗಾಗುತ್ತೀರಿ, ಆದರೆ ನಿಮಗೆ ತಿಳಿದಿರಲಿ, ಅದು ನೀವಲ್ಲ, ನಿಮ್ಮ ಪರ್ಸು.  ಅದರ ತಾಖತ್ತು ನಿಮಗೇ ಇಷ್ಟುದಿನ ತಿಳಿದಿರಲಿಕ್ಕಿಲ್ಲ.  ಕೇವಲ ಅದರ ಸಾನ್ನಿಧ್ಯದಿಂದಲೇ ನಿಮ್ಮ ಫೈಲುಗಳಿಗೆ ಎಂದಿಲ್ಲದ ಸಂಚಲನೆ ದೊರಕುತ್ತದೆ.  ಭಾಗ್ಯವಂತನ ಮನೆಯಲ್ಲಿ ಒಂದರೆಕ್ಷಣವೂ ಇರಲೊಲ್ಲದ ದರಿದ್ರ ಲಕ್ಷ್ಮಿಯಂತೆ ಹರಿದು ಜೀರ್ಣಗೊಂಡ ಆ ನಿಮ್ಮ ಫೈಲು ಆತನ ಟೇಬಲನ್ನು ಬಿಟ್ಟು ತೊಲಗುತ್ತದೆ.  ಆದರೆ ಮರೆಯದಿರಿ.  ಈ ಹಳೇ ಫೈಲುಗಳ ಮೈಲೇಜು ಹಳೇ ಗಾಡಿಗಳ ಮೈಲೇಜಿಗಿಂತಲೂ ತೀರ ಕಡಿಮೆ.  ಟೇಬಲ್ಲು ಟೇಬಲ್ಲಿನಲ್ಲೂ ನಿಂತು ನಿಮ್ಮತ್ತ ತಿರುಗಿ ಕೈಯಲ್ಲಾಡಿಸಿಬಿಡುತ್ತದೆ.  ನಿಮ್ಮ ಪರ್ಸಿನಲ್ಲಡಗಿದ ಆ ಬಾಲಸೂರ್ಯ, ಇಂಥಾ ಹಲವಾರು ತಾವರೆಗಳನ್ನರಳಿಸಬೇಕು - ನಿಮ್ಮ ಪರ್ಸು ಹತ್ತಾರು ನಿಲುಗಡೆಗಳಲ್ಲಿ ನಿಮ್ಮ ಆಯಾಸಗೊಂಡ ಫೈಲಿಗೆ ಊರುಗೋಲಾಗಬೇಕು.  ಹೀಗೆ ನಿಂತೂ ನಿಂತೂ ಅಂತೂ ಇಂತೂ ಕೊನೆಯ ಘಟ್ಟ ಮುಟ್ಟಿದಮೇಲಷ್ಟೇ ನಿಮ್ಮ ಫೈಲಿಗೆ ಮುಕ್ತಿ, ನಿಮ್ಮ ಕಾರ್ಯಸಿದ್ಧಿ.  ಇದಕ್ಕಾಗಿ ನೀವು ಈ ದಕ್ಷಿಣೆಯೆಂಬ ದೇವಕಾರ್ಯಕ್ಕೆ ಅದೆಷ್ಟು ಕೃತಜ್ಞರಾಗಿದ್ದರೂ ಸಾಲದು.

ಹೀಗೆ ನಿಮ್ಮ ಸಕಲ ಕಾರ್ಯಗಳಿಗೂ ಉತ್ತರಮುಕ್ತಿದಾಯಕವಾದ ದಕ್ಷಿಣೆಗೆ ದಕ್ಕಬೇಕಾದ ನೈತಿಕ ಮಾನ ಸನ್ಮಾನಗಳು ಮಾತ್ರ ದಕ್ಕಲಿಲ್ಲವೆಂಬುದೇ ದುಃಖದ ವಿಷಯ.  ದಕ್ಷಿಣದಿಂದ ಉತ್ತರಕ್ಕೆ ಒಂದು ಹೈ-ಸ್ಪೀಡ್ ರಸ್ತೆಯಂತೆ ಕೆಲಸಮಾಡುವ ದಕ್ಷಿಣೆಗೆ "ಲಂಚ" ಎಂಬ ಕೆಟ್ಟ ಹೆಸರು ಬಂದು ಬಡಿದಿದೆ.  ಇದರ ಹೆಸರೆತ್ತಲೂ ಜನ ಹಿಂದುಮುಂದು ನೋಡುತ್ತಾರೆ - ಎಷ್ಟೆಂದರೆ ಕನ್ನಡದ ಹೋಟೆಲುಗಳಿಗೆ ಹೋಗಿ ರಾಜಾರೋಷವಾಗಿ ಲಂಚ್ ತಿಂದು ಬರುವವರೂ ಲಂಚದ ಹೆಸರನ್ನು ಮಾತ್ರ ಬಾಯಿಬಿಟ್ಟು ಹೇಳುವುದಿಲ್ಲ (ಕೈ ಚಾಚಿ ತೆಗೆದುಕೊಳ್ಳುವುದಿಲ್ಲ ಅಂತ ಹೇಳಲಾಗುವುದಿಲ್ಲ, ಅದು ಬೇರೆ ವಿಷಯ).  ಅದಕ್ಕೇ ಈ ’ಅನಿಷ್ಟ’ ಹೆಸರನ್ನು ವ್ಯವಹಾರದಿಂದ ಆದಷ್ಟೂ ದೂರವಿಡಲು ಮಾಮೂಲು, ಕೈಬೆಚ್ಚಗೆ, ’ನೋಡಿಕೊಳ್ಳುವುದು’, ಸುವಿಧಾ, ’ಮೇಲೆ’, ಟೇಬಲ್ ಕೆಳಗೆ, ಎಕ್ಸ್ಟ್ರಾ, ಚಿಲ್ಲರೆ ದಕ್ಷಿಣೆಯಾದರೆ ’ಕಾಫಿಗೆ’, ಭಾರೀ (ಪ್ರ)ದಕ್ಷಿಣೆಯಾದರೆ ’ಸ್ಕ್ಯಾಮ್’... ಹೀಗೆ ಏನೇನೋ ಹೆಸರುಗಳಿಂದ ಕರೆಯುತ್ತಾರೆ - ತಮ್ಮ ಭಾಗ್ಯದೇವತೆಯನ್ನೇ ಜರಿಯುತ್ತಾರೆ!  ಇನ್ನು ಗುರುದಕ್ಷಿಣೆಯ ವಿಷಯವಂತೂ ಕೇಳಲೇ ಬೇಡಿ.  ಫೀಸು, ಕ್ಯಾಪಿಟೇಶನ್ನು, ಬಿಲ್ಡಿಂಗ್ ಫಂಡು, ಡೆವಲಪ್ ಮೆಂಟ್, ಡೊನೇಶನ್ನು, ದೇಣಿಗೆ ಹೀಗೆ ನಾನಾ ವೇಷ ತಾಳಿ ಕಾಡುತ್ತದೆ.  ವರದಕ್ಷಿಣೆಯೋ, ಅದರ ಹೆಸರೆತ್ತಿದರೆ ನಿಮಗೆ ಜೈಲೇ ಗಟ್ಟಿ.  ಅದೆಲ್ಲ ಹೋಗಲಿ, ಪೌರೋಹಿತ್ಯಕ್ಕೆ ಸಹಜವಾಗಿಯೇ ಬರುವ ಸಂಭಾವನೆಯನ್ನೂ ದಕ್ಷಿಣೆಯೆಂದು ಕರೆಯಲು ಮುಜುಗರ ಪಡುತ್ತಿದ್ದ ಹಿರಿ ತಲೆಗಳನ್ನು ನೋಡಿದ್ದೇನೆ.  ನನಗೆ ತಿಳಿದ ವಯೋವೃದ್ಧ ಪುರೋಹಿತರೊಬ್ಬರು ಪೌರೋಹಿತ್ಯಕ್ಕಾಗಿ ತಮ್ಮ ಬಳಿ ಬರುತ್ತಿದ್ದ ಕಕ್ಷಿದಾರರನ್ನು ಕೇಳುತ್ತಿದ್ದರು "ಮರ್ಯಾದೆ ಎಷ್ಟು ಕೊಡುತ್ತೀರಿ?" ಅಥವ ಹಾಗಾದರೂ ಇವತ್ತು ದಕ್ಷಿಣೆಯೆಂಬ ಪದಕ್ಕೆ ಕಳೆದುಹೋದ ಮರ್ಯಾದೆಯನ್ನು ಸಂಪಾದಿಸಿಕೊಡುವ ಇರಾದೆಯಿದ್ದಿರಬಹುದು ಆ ಹಿರಿಯರಿಗೆ. 

ಆದರೇನು? ನೀವು ಎಷ್ಟೇ ಮುಜುಗರ ಪಟ್ಟರೂ, ಹೇವರಿಸಿಕೊಂಡರೂ, ಹೆಸರು ಮರೆಸಿದರೂ ಈ ಲಂಚತತ್ತ್ವ ಮಾತ್ರ ನಿಮ್ಮ ಕೈಬಿಡುವುದಿಲ್ಲ.  ನೀವದನ್ನು ದಕ್ಷಿಣೆಯೆನ್ನಿ, ಲಂಚವೆನ್ನಿ, ಮರ್ಯಾದೆಯೆನ್ನಿ ಅಥವಾ ಅದೊಂದು ಅಸಹ್ಯ ವಿಷಯವೆಂಬಂತೆ ಕೈಬಾಯಿ ಸನ್ನೆಯಲ್ಲೇ ಸೂಚಿಸಿ, ಅದು ಮಾತ್ರ ಕರ್ಮಯೋಗಿಯಂತೆ ನಿರ್ಲಿಪ್ತವಾಗಿ ತನ್ನ ಕೆಲಸವನ್ನು ತಾನು ಮಾಡುತ್ತಲೇ ಇರುತ್ತದೆ.  ಸ್ವತಃ ತಾನು ಯಾವುದಕ್ಕೂ ಅಂಟದಿದ್ದರೂ ಕೊಡುಕೊಳ್ಳುವರನ್ನು ಅಂಟಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತದೆ - ಲಂಚಗಾರ ಮತ್ತು ಲಂಚಿಗರ (ವೈಯಾಕರಣಿಗಳು ಮನ್ನಿಸಬೇಕು) ಮಧ್ಯೆ ಅದೊಂದು ಅವಿನಾಭಾವ ಸಂಬಂಧವನ್ನೇರ್ಪಡಿಸುತ್ತದೆ.  ಕೊಟ್ಟ ಮೇಲೆ ಕೆಲಸ ಮುಗಿಯುವವರೆಗೂ ಅವನನ್ನು ಇವನು ಬಿಡ, ಇವನನ್ನು ಅವನು ಬಿಡ.  ಹೀಗೆ ವ್ಯಕ್ತಿ ವ್ಯಕ್ತಿಗಳ ನಡುವೆ ಬಾಂಧವ್ಯ ಬೆಸೆಯುವ ದಿವ್ಯ ಬಂಧನವಾಗಿ ಕೆಲಸಮಾಡುತ್ತದೆ ಈ ದಕ್ಷಿಣೆ (ಮುಂದೆ ಅದು ಬೇರೆಯೇ ಬಂಧನವಾಗಬಹುದು, ಆದರೇನು).  ಕಾರ್ಯಸಾಧನೆಗೆ ಈ ಬಂಧ-ಬಾಂಧವ್ಯಗಳೇ ಅಲ್ಲವೇ ಮುಖ್ಯ? ಬಂಧನವಿಲ್ಲದೇ ಜಗತ್ತು ನಡೆಯುವುದುಂಟೇ.  ಆದ್ದರಿಂದ ಲಂಚವೆನ್ನುವುದು ಈ ಜಗತ್ತನ್ನು ಒಗ್ಗೂಡಿಸಿ ಮುನ್ನಡೆಸುವ ಅದ್ಭುತ ಶಕ್ತಿಯೆಂದರೆ ತಪ್ಪೇನು?  ಈ ಜಗದ್ಭವ್ಯ ಶಕ್ತಿಯನ್ನು ಕುರಿತು ಚಿಂತಿಸುವುದು ಬಿಟ್ಟು ಒಣವೇದಾಂತ, ಲೋಕಾಂತರಗಳ ಚಿಂತೆ ನಮಗೇಕೆ ಹೇಳಿ. ನಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳಿ.  ಸುಮ್ಮನೇ ಸ್ವರ್ಗ, ನರಕ, ಉತ್ತರ ದಕ್ಷಿಣ ಎಂದೆಲ್ಲಾ ಲೋಕದಿಂದ ಲೋಕಕ್ಕೆ ಅಲೆಯುತ್ತಿದ್ದ ನಮ್ಮ ಮಾತು, ದಕ್ಷಿಣೆ-ಲಂಚದ ವಿಷಯ ಬಂದ ಕೂಡಲೇ ಹೇಗೆ ಈ ನೆಲಕ್ಕೆ ಅಂಟಿ ನಿಂತಿತು ನೋಡಿ.  ಇಂಥಾ ಜೀವನ್ಮುಖೀ ಶಕ್ತಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೆ ತಾನೇ ತೀರೀತು?  ಅದಕ್ಕೇ ನಾನಂತೂ ನಿರ್ಧರಿಸಿಬಿಟ್ಟಿದ್ದೇನೆ - ಪರ(ಲೋಕ) ಚಿಂತೆ ನಮಗೆ ಏಕಯ್ಯಾ ನಮ್ಮ(ಲೋಕದ) ಚಿಂತೆ ನಮಗೆ ಸಾಲದೇ ಎಂದು ಇಹಲೋಕದ ಬಗ್ಗೆ ಚಿಂತಿಸುವುದೇ ಆದರೆ, ಮೊದಲು ಕೈಮುಗಿಯಬೇಕಾದ್ದು ಈ ಲೋಕದ ಸ್ಥಿತಿಕಾರಕ ಶಕ್ತಿಯಾದ ದಕ್ಷಿಣಾಮೂರ್ತಿಗೆ - ದಕ್ಷಿಣಾಮೂರ್ತಿಯೇ ಆದಿಗುರುವೇ!

Monday, August 25, 2014

ಹೋಗಿ ಬನ್ನಿ ಅನಂತಮೂರ್ತಿ... ವಿದಾಯ.

ಅನಂತಮೂರ್ತಿ ನಮ್ಮನ್ನಗಲಿದ್ದಾರೆ,  ನಂಬಲಾಗುತ್ತಿಲ್ಲ.  ಹಾಗೆಂದು ಇದು ಅಕಾಲಮೃತ್ಯುವಲ್ಲ, ಎಂಬತ್ತಕ್ಕೂ ಹೆಚ್ಚುಕಾಲ ಪುಷ್ಕಳವಾಗಿ ಬದುಕಿ ಬಹುಶಃ ಸಂತೃಪ್ತಿಯಿಂದ ಸಹಜ ಸಾವಿಗೇ ಸಂದಿದ್ದಾರೆ.  ಆದರೆ ಕೊನೆಯವರೆಗೂ ಸಾಮಾಜಿಕ ಜೀವನದಿಂದ ನಿವೃತ್ತಿಹೊಂದದೆಯೇ ನೆನ್ನೆಮೊನ್ನೆಯವರೆಗೂ ನಮ್ಮ ನಡುವೆಯೇ ಇದ್ದವರು ಇವತ್ತಿನಿಂದ ಇಲ್ಲವೆಂದರೆ ಗಕ್ಕಿಟ್ಟಂತಾಗುವುದು ಸಹಜವೇ, ಸತ್ಯ ಒಳಗಿಳಿಯಲು ತುಸು ಸಮಯ ಬೇಕಾಗುತ್ತದೆ.  ಕೊನೆ ದಿನಗಳಲ್ಲಿ ತೀವ್ರ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾಗಲೂ ಸುತ್ತಮುತ್ತಲ ಆಗುಹೋಗುಗಳಿಗೆ ಸ್ಪಂದನಶೀಲರಾಗಿದ್ದರೆಂಬುದನ್ನು ನೆನೆದಾಗ ಆಶ್ಚರ್ಯವಾಗುತ್ತದೆ; ಅನಗತ್ಯವಾಗಿ ವಿವಾದಗಳು ಮೈಮೇಲೆ ಬೀಳುತ್ತವೆಂಬುದನ್ನು ತಿಳಿದೂ (ಅವರು ನುಡಿದದ್ದೆಲ್ಲಾ ವಿವಾದವಾಗುವುದಕ್ಕೇ ಕಾಯುತ್ತಿರುತ್ತವೆಂಬುದನ್ನು ತಿಳಿದೂ) ತಾವು ನಂಬಿದ್ದನ್ನು ಹೇಳಲು ಹಿಂಜರಿಯುತ್ತಿರಲಿಲ್ಲವೆಂಬುದನ್ನು ನೆನೆದಾಗ ಆ ಮೌಲ್ಯಪ್ರಜ್ಞೆಯ ಬಗ್ಗೆ ಹೆಮ್ಮೆಯೆನಿಸುತ್ತದೆ. 

ಅವರನ್ನಂಟಿಕೊಂಡ ವಿವಾದಗಳೇನೇ ಇರಲಿ, ನಾವು ಕಂಡ ಅತ್ಯಂತ ಸಂವೇದನಶೀಲ ವ್ಯಕ್ತಿ/ಸಾಹಿತಿಗಳಲ್ಲೊಬ್ಬರು ಅನಂತಮೂರ್ತಿ ಎಂಬುದರಲ್ಲಿ ಎರಡು ಮಾತುಗಳಿಲ್ಲ.  ಮಾಸ್ತಿಯವರನಂತರ ಅನಂತಮೂರ್ತಿ ಕನ್ನಡ ಕತೆಗಳ ಪ್ರಪಂಚದಲ್ಲಿ ಕಡೆಗಣಿಸಲಾಗದ ಹೆಸರು.  ಅವರ ಕತೆಗಳು ಹೊಸ ಕತೆಗಾರರಿಗೆ ಹಿರಿಯಣ್ಣನ ಮೇಲ್ಪಂಕ್ತಿಯಂತೆ ಕಂಡರೆ, ಸೂಕ್ಷ್ಮ ಓದುಗನನ್ನು ಹಲವು ಬಗೆಗಳಲ್ಲಿ ಆವರಿಸುತ್ತವೆ.  ಅವುಗಳಲ್ಲಿ ನನಗೆ ಬಹು ಇಷ್ಟವಾಗುವ ಅಂಶಗಳೆಂದರೆ, ಪಾತ್ರಗಳ ಒಳತೋಟಿ - ಸನ್ನಿವೇಶಕ್ಕೆ ಸಹಜವಾಗಿ ಅವು ಮೂಡುವ ಪರಿ, ತತ್ತ್ವ, ತರ್ಕ, ಕಲಾತ್ಮಕತೆಗಳ ಆಡಂಬರವಿಲ್ಲದೆಯೂ ಕಲಾತ್ಮಕವಾಗಿ ಅವು ಚಿತ್ರಿತವಾಗುವ, ಕ್ರಿಯೆ ಪಡೆದುಕೊಳ್ಳುವ ರೀತಿ.  ತಾವು ಹುಟ್ಟಿ ಬೆಳೆದ ಬ್ರಾಹ್ಮಣ ಸಮುದಾಯ, ಅದರ ನಿಂತ ನೀರಿನಂಥ ವ್ಯವಸ್ಥೆ, ಆಚರಣೆಗಳು, ಬಿಡಿಸಲಾಗದಂತೆ ಬೆಸೆದ ಒಳಿತು-ಕೆಡಕುಗಳು ಮತ್ತು ಅದೇ ಪರಿಸರದಲ್ಲಿ ಮತ್ತದರ ಹೊರಗೆ ಎದುರಾಗುವ ಸಂಕೀರ್ಣ ಸಂದರ್ಭಗಳು ಬಹುಶಃ ಅವರಲ್ಲಿ ಹಲವು ದ್ವಂದ್ವಗಳನ್ನು ಸೃಷ್ಟಿಸಿದಂತೆನಿಸುತ್ತದೆ.  ಅದಕ್ಕೆಂದೇ ಅನಂತಮೂರ್ತಿಯವರಲ್ಲಿ ಹೊತ್ತಿ ಉರಿಯುವ ಬಂಡಾಯಗಾರನನ್ನು ಕಾಣೆವು, ಅಥವ ಕೊನೆಯಲ್ಲಿ ಅಪ್ಪ ಹಾಕಿದ ಆಲದ ಮರಕ್ಕೇ ಜೋತುಬೀಳುವ ಸಂಪ್ರದಾಯಶರಣನನ್ನೂ.  ಈ ಬಂಡಾಯಗಾರ ತಣ್ಣಗೆ ಉರಿಯುವಂಥವನು; ಭಾಷಣ ಮಾಡುವವನಲ್ಲ, ಪ್ರತಿಭಟನೆಯನ್ನು ತಣ್ಣನೆಯ ಕ್ರಿಯೆಯಿಂದಲೇ ದಾಖಲಿಸುವವನು, ಸುಡುತ್ತಲೇ ಶಾಖದೊಳಗಣ ತಂಪಿಗಾಗಿ ಹಂಬಲಿಸುವಂಥವನು, ತಂಪಿನೊಳಗಣ ಬಿಸುಪನ್ನು ಕಂಡು ಬೆಚ್ಚುವವನು.  ತಮ್ಮಲ್ಲೇ ಬೆಳೆದ ಈ ದ್ವಂದ್ವಗಳನ್ನು ಕತೆಯ ಹಲವು ಪಾತ್ರಗಳಾಗಿ ಹಂಚಿ ರೂಪಿಸುವ ಅನಂತಮೂರ್ತಿಯವರ ರೀತಿ ಬಲು ಸೊಗಸು.  ಆ ಪಾತ್ರಗಳು ತಮ್ಮ ನಡುವೆ ನಡೆಸುವ ಸಂವಾದ ವಿವಾದ ಕ್ರಿಯೆ ಪ್ರತಿಕ್ರಿಯೆಗಳು ಒಟ್ಟಂದದಲ್ಲಿ ಒಂದೇ ವ್ಯಕ್ತಿಯ ಒಳತೋಟಿಯಂತೆ ಕಾಣುವುದು,  ಇದೇ ಕಾರಣಕ್ಕಿರಬೇಕು.  ಇದೇ ದ್ವಂದ್ವಗಳು ಅನಂತಮೂರ್ತಿಯವರನ್ನು ಅವರ ನಿಜಜೀವನದಲ್ಲೂ ನೆರಳಂತೆ ಹಿಂಬಾಲಿಸಿರುವುದನ್ನು ಕಾಣುತ್ತೇವೆ.  ಸಂವೇದನೆಗಳು ಹೆಚ್ಚು ಸೂಕ್ಷ್ಮಗೊಂಡಂತೆ ದ್ವಂದ್ವಗಳೂ ಹೆಚ್ಚುವುದು ಸಹಜವೇನೋ. 

ನನ್ನ ಚಿಂತನೆಯ, ಯೌವನದ ದಿನಗಳನ್ನು ರೂಪಿಸಿದ ಹಿರಿಮೆ ಅನಂತಮೂರ್ತಿ, ತೇಜಸ್ವಿ, ಲಂಕೇಶರದು.  ಆದ್ದರಿಂದಲೇ ನನಗವರು ಹೊಸ ಬದುಕಿನ, ಹೊಸ ಚಿಂತನೆಗಳ, ಸ್ವತಂತ್ರಶೀಲತೆಯ ಪ್ರತೀಕ.  ಅವರನ್ನು ಅವರ ಬದುಕಿನ ಉಚ್ಛ್ರಾಯದ ದಿನಗಳಲ್ಲಿ ಕಂಡು ಓದಿ ಬೆಳೆದ ನನಗೆ "ಹಿರಿಯರು" "ಅಗಲಿದ ವೃದ್ಧರು" ಎಂದೆಲ್ಲಾ ಹೇಳಲು ಮನಸ್ಸು ತಡೆಯುತ್ತದೆ.  ಬದುಕನ್ನು ತಮ್ಮಾಣತಿಯಂತೆಯೇ ಕುಣಿಕುಣಿದು ಬದುಕಿ, ಬದುಕಿನ ಕೊನೆ ಹನಿಯನ್ನೂ ಸವಿದು ತೀರಿದವರಿಗೆ "ಅಂತಿಮ ನಮನ"ಕ್ಕಿಂತ "ಪ್ರೀತಿಯ ವಿದಾಯ" ಎನ್ನುವುದು ಹೆಚ್ಚು ಆಪ್ಯಾಯಮಾನ.  ಈ ಮೂವರಲ್ಲಿ ಕೊನೆಯವರಾಗಿ ಅನಂತಮೂರ್ತಿ ಈಗ ನಮ್ಮನ್ನು ಅಗಲಿದ್ದಾರೆ - ಮಿಶ್ರ ಸಂವೇದನೆಗಳೊಂದಿಗೆ ನಮ್ಮನ್ನು ಬಿಟ್ಟು.  ಅನಂತಮೂರ್ತಿಯವರನ್ನು ಹತ್ತಿರದಿಂದ ಕಂಡು ಒಡನಾಡಿದವರು, ಅವರಲ್ಲಿ ಪಾಠ ಕೇಳಿದವರು, ಕೇಳದಿದ್ದರೂ ಪ್ರೀತಿಯ ಅನಂತು ಮೇಷ್ಟ್ರಾಗಿ ಸ್ವೀಕರಿಸಿದ ಅನೇಕ ಏಕಲವ್ಯ ಶಿಷ್ಯರು ಅವರಬಗ್ಗೆ ಭಾವುಕತೆಯಿಂದ, ಗದ್ಗದಿತರಾಗಿ ಮಾತಾಡುತ್ತಾರೆ.  ಇವೆಲ್ಲ ’ಪ್ರಗತಿಪರ’ ’ಬುದ್ಧಿಜೀವಿ’ ಮನಸ್ಸುಗಳು ಎಂದು ಸಾರಾಸಗಟಾಗಿ ತಳ್ಳಿಹಾಕಿಬಿಡುವ ಒರಟು ಅಭ್ಯಾಸವೂ ಇತ್ತೀಚಿಗೆ ಬಂದುಬಿಟ್ಟಿದೆ.  ಆದರೆ ಈ ಪ್ರೀತಿ, ಅಸ್ಮಿತೆಗಳು ವ್ಯಕ್ತಿಯೊಬ್ಬನ ಕೇವಲ ಚಾಣಾಕ್ಷತೆಯಿಂದ, ರಾಜಕೀಯ/ಸಾಮಾಜಿಕ ’ಪ್ರಗತಿಪರತೆ’ಯಿಂದ, ಯಾವುದೋ ಸಿದ್ಧಾಂತದ ಮೇಲ್ಮೆಯಿಂದ, ಮೇಸ್ಟ್ರುಗಿರಿಯಿಂದ, ಲಾಬಿಯಿಂದ ಅಥವಾ ಸಾಹಿತ್ಯದ ಜನಪ್ರಿಯತೆಯಿಂದ ಬರುವುದಲ್ಲವೆಂಬುದನ್ನು ನೆನಪಿನಲ್ಲಿಡಬೇಕು.  ಭಾಷಣಗಳಲ್ಲಿ ಚಪ್ಪಾಳೆಯಿಕ್ಕುವುದು ಬೇರೆ, ಪ್ರೀತಿಯಿಂದ ನೆನೆಯುವುದು ಬೇರೆ.  ಗತಿಸಿದ ಮೇಷ್ಟ್ರ ಬಗೆಗಿನ ಸಾವಿರ ಬೆಚ್ಚನೆ ನೆನಪುಗಳಿವೆ ಅವರ ಮೆಚ್ಚುಗರಲ್ಲಿ.  ಹಾಗೇ ಅವರ ನಿಷ್ಠುರ ನಿಲುವಿನಿಂದಾಗಿ ಅವರನ್ನ ಕಾಯಾ ವಾಚಾ ಮನಸಾ ದ್ವೇಷಿಸುತ್ತಿದ್ದ, ಅವರ ಸಾವನ್ನೂ ಸಂಭ್ರಮಿಸುವ ಸಮೂಹವೂ ಇದೆ.  ಇದಂತೂ ಒಂದು ರೋಗಗ್ರಸ್ತ ಮನಸ್ಥಿತಿಯೆಂಬುದರಲ್ಲಿ ಎರಡು ಮಾತಿಲ್ಲ.  ಎಷ್ಟೊ ಸಮಯ ಅಗತ್ಯವೇ ಇಲ್ಲದೆಡೆಯಲ್ಲೂ ಅವರ ಹೆಸರು ಎಳೆಯಲ್ಪಡುತ್ತಿತ್ತು, ಯಾರನ್ನಾದರೂ ಹೊಗಳಬೇಕಿದ್ದರೂ ತೆಗಳಿಕೆಗೆ ಅನಂತಮೂರ್ತಿಯೇ ಬೇಕು ಎಂಬಂಥ ಪರಿಸ್ಥಿತಿಯೂ ಏರ್ಪಟ್ಟಿತ್ತು.  ಅಷ್ಟಾದರೂ ಎಲ್ಲೋ ಒಂದುಕಡೆ ಈ ಅಸಹನೆಗೆ ರವೆಯಷ್ಟಾದರೂ ತಥ್ಯ ಕಾರಣವಿಲ್ಲದಿಲ್ಲ.  ಹಲವು ವಿಷಯಗಳಲ್ಲಿ ನಿಷ್ಠುರ ನಿಲುವು ತಾಳುತ್ತಿದ್ದ ಅನಂತಮೂರ್ತಿ, ಮತ್ತೆ ಕೆಲವು ವಿಷಯಗಳು ಕಂಡೂ ಕಾಣದಂತೆ ಇರುತ್ತಿದ್ದರೆಂಬುದು ಅಸಹನೀಯವಾಗುತ್ತಿತ್ತು.  ಅವರ ’ಸಮಾಜಪರ’ ’ಸಾಮಾಜಿಕನ್ಯಾಯುತ’ ನಿಲುವುಗಳು ಹಲವು ಬಾರಿ ಅಷ್ಟೇನು ಸಾಮಾಜಿಕ ನ್ಯಾಯದ್ದಾಗಿ ಕಾಣುತ್ತಲೇ ಇರಲಿಲ್ಲ.  ಅನೇಕವೇಳೆ ಅವರ ನಿಲುವುಗಳಲ್ಲಿ ಕಣ್ಣಿಗೇ ಹೊಡೆಯುವ ವಿರೋಧಾಭಾಸಗಳು ಇರುತ್ತಿದ್ದುವು.  ಈ ಸಮಯದಲ್ಲೆಲ್ಲಾ ಅವರ ಚಿನ್ಮೌನ ಕೂಡ ಹೊತ್ತಿ ಉರಿಯುತ್ತಿದ್ದ ಅಸಹನೆಗೆ ತುಪ್ಪ ಹೊಯ್ಯುತ್ತಿತ್ತು.  ಅನಂತಮೂರ್ತಿ-ಗಾಂಧಿ-ಕಸಬರನ್ನು ಒಟ್ಟಿಗೇ ದ್ವೇಷಿಸುವ ಜನವಿರುವಂತೆಯೇ ಈ ಮೂವರನ್ನೂ ಒಟ್ಟಿಗೇ ಪ್ರೀತಿಸುವ ಜನರೂ ಇರುವುದು, ಆ ಕಳವಳಕಾರೀ ಸಾಮಾಜಿಕ ಬೆಳವಣಿಗೆ, ಅನಂತಮೂರ್ತಿಯವರ ಗಮನಕ್ಕೆ ಬರಲೇ ಇಲ್ಲ.  ಕಸಬನಂಥವರ ಮೇಲಿನ ದ್ವೇಷ ಅನಂತಮೂರ್ತಿಯಂಥವರ ಮೇಲಿನ ಅಸಹನೆಯಾಗಿ ಪರಿಣಮಿಸುತ್ತಿದ್ದುದನ್ನೂ, ಅನಂತಮೂರ್ತಿಯವರ ಮೇಲಿನ ಪ್ರೀತಿ ಕಸಬನಂಥವರ ಮೇಲಿನ ಪ್ರೀತಿಯಾಗಿ ಚಲಾವಣೆಗೊಳ್ಳುತ್ತಿದ್ದುದನ್ನೂ ಅವರು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ.  ಹೀಗಾಗಿ ಯಾವುದೋ ಮಟ್ಟದಲ್ಲಿ ಅನಂತಮೂರ್ತಿ ಅವರದಲ್ಲದ ದ್ವೇಷಕ್ಕೆ ಅವರದಲ್ಲದ ಪ್ರೀತಿಗೆ ಪಕ್ಕಾಗುತ್ತಾ ಹೋದರು.  ಅಥವ ಇದು ಅನಂತಮೂರ್ತಿಯವರ ವೈಯಕ್ತಿಕ ನಿಲುವೆನ್ನುವುದಕ್ಕಿಂತ ಅವರು ಗುರುತಿಸಿಕೊಂಡ, ಈಗಾಗಲೇ ಒಂದು ಕಟ್ಟರ್ ’ಪಂಥ’ವೇ ಆಗಿ ಬೆಳೆದ ರಾಜಕೀಯ ಸಿದ್ಧಾಂತದ ಅನಿವಾರ್ಯ dynamics ಕೂಡ ಇರಬಹುದೆಂದು ನಾನು ಚಿಂತಿಸುತ್ತೇನೆ.  ಆ ದೃಷ್ಟಿಯಿಂದ ಉಳಿದ ಹಲವು ಪ್ರಗತಿಪರರಂತೆಯೇ ಅನಂತಮೂರ್ತಿಯವರೂ ತಾವೇ ನೀರೆರೆದು ಬೆಳೆಸಿದ ಪಂಥವನ್ನು ಪ್ರಶ್ನಿಸಿಕೊಳ್ಳುವ critical insider ಕೆಲಸವನ್ನು ನಿಲ್ಲಿಸಿಬಿಟ್ಟಿದ್ದರೋ ಎನ್ನುವ ಅನುಮಾನ ಕಾಡುತ್ತದೆ.  ಬದಲಾದ ಸಾಮಾಜಿಕ ರಾಜಕೀಯ ಸಂದರ್ಭದಲ್ಲಿ ಸಮತೋಲನದ ಗುರುತ್ವಬಿಂದು (center gravity) ಬದಲಾಗಿದ್ದು ಅವರಿಗೆ ತಿಳಿಯಲೇಯಿಲ್ಲವೆನಿಸುತ್ತದೆ.  ಏಕೆಂದರೆ ತಮ್ಮ ಜೀವನವೆಲ್ಲಾ ವ್ಯವಸ್ಥೆಯನ್ನು ಪ್ರಶ್ನಿಸುತ್ತಾ, ಅದನ್ನು ಮೀರುತ್ತಾ ಗಟ್ಟಿಗೊಳ್ಳುತ್ತಾ ಬಂದ ಈ ಸಮಾಜವಾದಿ, ತಾವೇ ಮತ್ತೊಂದು ಬದಲೀ ವ್ಯವಸ್ಥೆಯ ಭಾಗವಾಗತೊಡಗಿದ್ದನ್ನೂ ಮತ್ತು ಆ ವ್ಯವಸ್ಥೆಯೇ ಮತ್ತೊಂದೆಡೆಯಿಂದ ಅದೇ ಹಲವು ಬಗೆಯ ವೈಪರೀತ್ಯಗಳಿಗೆಡೆಗೊಡತೊಡಗಿದ್ದನ್ನು ಗಮನಿಸದೇ ಹೋದರೇ?  ಇಲ್ಲದಿದ್ದರೆ ಅವರು ಎಲ್ಲೋ ಒಂದೆಡೆ ಅದನ್ನೂ ಮೀರಲೆತ್ನಿಸುತ್ತಿರಲಿಲ್ಲವೇ?  ಅಥವ ಅಷ್ಟುಹೊತ್ತಿಗಾಗಲೇ ಅವರ ಸುತ್ತ ರೂಪುಗೊಂಡಿದ್ದ ಆ ಪ್ರಭಾವಳಿ, ಗೌರವ, ಪ್ರೀತಿಗಳು ಅನಂತಮೂರ್ತಿಯವರೊಳಗಿದ್ದ ಬಂಡಾಯಗಾರನನ್ನು ಮೆತ್ತಗಾಗಿಸಿತ್ತೇ?  ಈ ಹಲವು ಪ್ರಶ್ನೆಗಳನ್ನಿಟ್ಟು ಅವರೊಡನೆ ಚರ್ಚಿಸಬೇಕೆಂದು ಎಷ್ಟೋಬಾರಿ ಅಂದುಕೊಂಡಿದ್ದಿದೆ.  ಅದು ಸಾಧ್ಯವಾಗುತ್ತಿದ್ದಿತೋ, ಇಲ್ಲವೋ - ಒಟ್ಟಿನಲ್ಲಿ ಈಗಂತೂ ಅವರಿಲ್ಲ.  ಬಹುಶಃ ಅವರಲ್ಲಿ ಉತ್ತರವಿದ್ದಿರಬಹುದು, ಕೇವಲ ಭರ್ತ್ಸನೆ, ಬೆದರಿಕೆ, ವೈಯಕ್ತಿಕ ನಿಂದನೆಗಳನ್ನು ಬಿಟ್ಟು ನಿಜದ ಪ್ರಶ್ನೆಗಳೇ ಅವರ ವಿರೋಧಿಗಳಿಂದ ಇತ್ತೀಚಿನ ದಿನಗಳಲ್ಲಿ ಅವರಿಗೆದುರಾಗಲಿಲ್ಲವೇನೋ.  ಪ್ರಶ್ನೆಗಳಂತೂ ಇವೆ.  ಉತ್ತರಗಳೂ ಖಂಡಿತ ಇವೆ.  ಆದರೆ ಸಮಾಧಾನದಿಂದ ಕೂತು, ಪರಸ್ಪರ ಅನುಮಾನಗಳಿಲ್ಲದೇ ಚರ್ಚಿಸಿ ’ಅರ್ಥಮಾಡಿಕೊಳ್ಳುವುದು’ ಸಾಧ್ಯವಾದರೆ!  ಅನಂತ ಸರಳತೆ ಸಜ್ಜನಿಕೆ ಸನ್ನಡತೆಗಳ ಮೂರ್ತಿಗೆ ಅದು ನಿಜವಾದ ಶ್ರದ್ಧಾಂಜಲಿಯಾಗಬಹುದು.

ಅನಂತಮೂರ್ತಿಯವರ ಬಗೆಗೆ ನೆನೆಸಿಕೊಳ್ಳಲು ನನಗೆ ವೈಯಕ್ತಿಕ ಆಪ್ತ ಅನುಭವಗಳಿಲ್ಲ.  ಅಥವ ದ್ವೇಷಿಸುವ ಧಾರ್ಮಿಕ/ಸಾಮಾಜಿಕ ಕಾರಣಗಳೂ ಇಲ್ಲ.  ನನ್ನ ನೆಚ್ಚಿನ ಕತೆಗಾರ ಅನಂತಮೂರ್ತಿ ಮಾತ್ರ ಹಿಂದಿನಂತೆಯೇ ಇನ್ನು ಮುಂದೆಯೂ ನನ್ನ ಜೊತೆಯಿರುವರೆಂಬುದಂತೂ ನಿಜ, ನನ್ನ ಪುಸ್ತಕದ ಕಪಾಟಿನಲ್ಲಿ, ನನ್ನ ಓದಿನ ನೆನಪುಗಳಲ್ಲಿ, ಸ್ಫೂರ್ತಿಯಲ್ಲಿ.  ಅದೇಕೋ ಮೊನ್ನೆ ಅನಂತಮೂರ್ತಿಯವರು ಕೊನೆಯ ಕ್ಷಣಗಳನ್ನೆಣಿಸುತ್ತಿದ್ದ ಸುದ್ದಿ ತಿಳಿದಾಗ ನನಗೆ ನೆನಪಾದದ್ದು, ವಿಪರೀತ ಕಾಡತೊಡಗಿದ್ದು ಅವರು ಕುಮಾರಗಂಧರ್ವರ ಬಗ್ಗೆ ಬರೆದ ಒಂದು ಕವನ.  ಮೊದಲೇ ಹೇಳಿದಂತೆ ನಾನು ವೈಯಕ್ತಿಕವಾಗಿ ಅನಂತಮೂರ್ತಿಯವರನ್ನು ಬಲ್ಲವನಲ್ಲ, ಆದರೆ ಅವರು ನನ್ನೊಡನೆ ಅಷ್ಟು ಆಪ್ತವಾಗಿ ಮಾತನಾಡಿದ್ದು ಈ ಕವನದ ಮೂಲಕವೇ, "ಸಂತೆಯಿಂದ ಸುಸ್ತಾಗಿ ಬಂದ ಶೆಟ್ಟಿ"ಯಂಥ ಆ ಗಂಧರ್ವ ಈ ಮೂರ್ತಿಯನ್ನು ಮಾತಾಡಿಸಿದಷ್ಟೇ ಆಪ್ತತೆಯಿಂದ.  ಅವರ ಸಾವಿನ ಸುದ್ದಿ ಬಂದಾಗ, ಅವರ ಈ ಕವನ ಓದಬೇಕೆಂದು ತುಂಬಾ ಅನ್ನಿಸಿತು.  ನನ್ನ ಲೈಬ್ರರಿಗೆ ದೂರವಿದ್ದೆ.  ಗೆಳೆಯ ರಾಜೇಂದ್ರನ ಬಳಿ ಹೇಳಿ ತರಿಸಿಕೊಂಡು ಒಮ್ಮೆ ಏಕಾಂತದಲ್ಲಿ ಕುಳಿತು ಓದಿಕೊಂಡೆ.  ಗಂಧರ್ವನ ಜಾಡು ಹಿಡಿದು ಹೊರಟ ಅನಂತಮೂರ್ತಿ ಮುಗುಳ್ನಕ್ಕು ಕೈಬೀಸಿದರು.

ಈ ಕವನದ ಧ್ವನಿಮುದ್ರಿಕೆಯನ್ನು ಇಲ್ಲಿ ಕೇಳಬಹುದು:
http://youtu.be/hPrOY1EC7oI

Monday, August 11, 2014

ಅಪೀಲು

ಕೊಲೆಯಿರದ ಮನೆಯ
ಸಾಸಿವೆಯನೆಲ್ಲಿಂದ ತರಲಿ ದೊರೇ!

ಸಾಯಲಸುವೊಂದಿರಲು
ಕೊಲುವ ಕೈಗಳು ಹಲವು;
ಬಡಿಯದಿರು ಅವಕೆ ಕಸ್ತೂರಿ ಚಂದನ ನಾಮ.
ರುದ್ರಾಕ್ಷದಗ್ನಿಯಲಿ ಸನಾತನ
ಕಾಯುತಿದೆ ಚಿನ್ಮುದ್ರೆ;
ಕೊಲೆಯ ಕೈಗಳಿಗಿವನು ಒತ್ತಬಹುದೇ?

ಗ್ರೀಷ್ಮಹತಿಗೆಲೆಯುದುರಿ
ಬೋಧಿಯ ಕೆಳಗೂ ಬಲೆಬಲೆಯ ಬಿಸಿಲು,
ಹೊಸ ಟೊಂಗೆ ಟಿಸಿಲುಗಳು ಬೆಳೆಯಬೇಕು.

ವಿಲಾಯತಿ ಸಿರಿಂಜು ಕತ್ತಿ-ಕತ್ತರಿ ಬರುವ ಮೊದಲು
ಮಾಟಗಾರನೆ ಮನೆವೈದ್ಯ;
ತಾಯತವೆ ಸಕಲ ರುಜಾಪಹಾರಿ.
ಇಂದು ಹಳತೆಂದವನು ದೂಡಬೇಕೆ?
ದತ್ತೂರಿಯಿರಲಿ ಬಿಡು,
ಔಷಧಕೂ ಬಂದೀತು
(ಅತಿಯಾದ ಕ್ಷೀರವೂ ಅತಿಸಾರ ತಂದೀತು).

ಕೊಲೆಯ ಕೈಗಳಿಗಿಂದು ಕಾವ ಕಸುಬನು ಕಲಿಸು,
ಬಿಳಿಲು ಇಳಿಯಲಿ ನೇಣ ಹೆಣದ ಬದಲು;
ಭೂತಗಳಿಗೊಂದೊಮ್ಮೆ ಮುಕ್ತಿ ಕರುಣಿಸಿ ಸಲಿಸು,
ಸತ್ತವರ ನೆನಪಿನಲಿ ಸಂಪಗೆಯು ನಗಲಿ.

Friday, August 8, 2014

ಸಾಂತ್ವನ

ಮನೆ ಹಿತ್ತಿಲು ಪಾಳು ಬಿದ್ದಿರಲು
ಸಂತೆಯೊಳು ಧ್ಯಾನವ ಕನಸುವವ
ಸಂತನೂ ಅಲ್ಲ ಯೋಗಿಯೂ ಅಲ್ಲ

ಬಿಡು ರಾಜಾ,
ಅದೊಂದು ಥರ
ಕಾಸೂ ಕೇಡು ತಲೆಯೂ ಬೋಳಿನ ಕತೆ.

ಗುದ್ದಲಿ ಪಿಕಾಸಿ ತೊಗೋ
ಹಿತ್ತಿಲಲಿ ಬೆಳೆದ ಕಳೆ ಕೀಳು
ಮಣ್ಣ ಹದಮಾಡಿ
ಐನಾತಿ ಅಸಲೀ ಬೀಜಗಳ ನೆಟ್ಟು
ನಗುವ ಸೂರ್ಯನ ತೊಡಿಸಿ
ಆತ್ಮಜಲ ಎರೆದು, ಬೆಳೆ
ನಿನಗೆ ಬೇಕಾದ್ದು
ನಿನ್ನ ಧ್ಯಾನಸ್ಥ ಮೌನದಲ್ಲಿ, ಏಕಾಂತದಲ್ಲಿ
ಬೆಳೆದು
ಕೊಂಡದ್ದು
ಸಂತೆಯ ಕೊಂಡ ಸರಕಿಗಿಂತ ಸಾವಿರಪಾಲು ಪುಷ್ಟಿ
ಬೆಳೆದಿದ್ದು ಮಾರದಿರು
ಮಾರಿದ್ದು ಕೊಳ್ಳದಿರು
ನಿನಗಷ್ಟು ಇಟ್ಟು ಬಂದವರಿಗಷ್ಟು ಕೊಟ್ಟು...
ರುಚಿಯಿಲ್ಲದ ಹಣ್ಣ ಗಿಣಿ ಕಚ್ಚುವುದೇ ಇಲ್ಲ
ಹೋಗು, ಹುಷಾರಾಗಿ, ಮತ್ತೆ ಬಾ
ಆಗೀಗ.

Tuesday, January 14, 2014

ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದು

ಕುಮಾರವ್ಯಾಸಜಯಂತಿಯಂದು ನನ್ನ ಭಾವಪೋಷಕನಾದ ಕುಮಾರವ್ಯಾಸನಿಗೆ ನಮನ

ನಾರಣನೆ ಕರ್ಣಾಟ ಭಾರತ
ಕಾರಣನೆ ಕೃಷ್ಣಾಮೃತಾರ್ಣವ
ಪೂರಣನೆ ಕವಿತಿಲಕ ಕುವರವ್ಯಾಸ ಮುನಿರಾಯ
ಚಾರುಕವಿತೆಯಿದಲ್ಲವೆನುತಲೆ
ಮೇರೆವರಿಸಿದೆ ಬರಿಯ ತೊಳಸಿಯ
ತೀರುತಕೆ ಕಪ್ಪುರವ ಬೆರೆಸಿದೆ ಕಾವ್ಯಸೌರಭವ

ಕಾಳಗದ ಕಲಿಕರ್ಣ ಭಕುತಿಯ
ಸೂಳರಿತ ಗಾಂಗೇಯ ಘನ ಸುವಿ
ಶಾಲಮತಿ ವಿದುರಾಂಕ ಬೆಂಕಿಯ ಕುವರಿ ಪಾಂಚಾಲಿ
ಕಾಳಮತಿ ದುರ್ಯೋಧನಾಹವ
ಕಾಲ ಭೀಮ ಪರಂತಪರ ಕರು
ಣಾಳು ಕೃಷ್ಣನ ಕಂಡರಿಸಿದೈ ಭಾವಭಿತ್ತಿಯಲಿ

ಅರಗಿನರಮನೆಯೋ ವಿರಾಟನ
ಪುರದೊಳಜ್ಞಾತವೊ ಸುಯೋಧನ
ಹರಣವೋ ಕಲಿ ಕರ್ಣಭೀಷ್ಮರ ಮರಣವೋ ಕೊನೆಗೆ
ದುರುಪದಿಯ ಧನ ಹರಣವೋ ಸಲೆ
ಪರಮಪುರುಷನ ಕರುಣವೋ ಮಿರು
ಮಿರುಗಿತಲ ನಿಜರೂಪಕದ ಭಾಂಡದೊಳು ತೊಳತೊಳಗಿ

ನಾರಣನ ಮೊರೆಯಿಡುವ ಭಕುತನ
ನಾರಣಮು ಕೊಂಕಿಸರು ಗಜಪತಿ
ನಾರಣನ ಪಿತನಜಮಿಳನು ಪ್ರಹ್ಲಾದನೇ ಸಾಕ್ಷಿ
ನಾರಣನೆ ಬಾರಯ್ಯ ದುರುಳರ
ನಾರಣೆವರೆಂದವಳ ಮಾನವ
ನಾರಣಿಯೊಳಡಗಿಸುತ ಕಾಯ್ದರು ಕೃಷ್ಣ ದೊರೆಯಲ್ತೇ?

ನಾರಣನ ಕೈವಲ್ಯಕಾರಣ
ನಾ ರಣದ ಪಂಡಿತರ ಗಂಡನ
ನಾರಣಗಿಸುವರೈ ಮಹಾಭಾರತದ ನಾಯಕನ
ನಾರಣನ ಮಂಗಳದ ನಾಮವ
ನಾರಣಿಸುತಿಹ ನಿಗಮಸಾರವು
ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದು

Sunday, May 5, 2013

ಶತಮಾನಂ ಭವತಿ - ಪುಸ್ತಕ ಬಿಡುಗಡೆ ಸಮಾರಂಭ

ಈಗ್ಗೆ ಒಂದೂವರೆ ವರ್ಷದ ಹಿಂದೆ ಇಂಥದ್ದೇ ಒಂದು ಬರಹವನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದೆ.  ಆರ್ಕುಟ್ ನ "3K ಬಳಗ"ದ ಉತ್ಸಾಹೀ ಕವಿಗಳು ಈ ಬಳಗದ ವೇದಿಕೆಯಲ್ಲಿ ಆಗಾಗ ಪ್ರಕಟಿಸಿದ ಆಯ್ದ ಕವನಗಳ ಸಂಕಲನವೊಂದನ್ನು ಹೊರತಂದಿದ್ದರು, ಆಗ.

ಅದಾಗಿ ಒಂದೂವರೆ ವರ್ಷದ ಅವಧಿಯಲ್ಲಿ ಈ ತಂಡ ಸಾಕಷ್ಟು ಬೆಳೆದಿದೆ - ಸಂಖ್ಯೆಯಲ್ಲಿ, ಹುಮ್ಮಸಿನಲ್ಲಿ, ಅನುಭವದಲ್ಲಿ,  ಆತ್ಮೀಯತೆಯಲ್ಲಿ.  ಆರ್ಕುಟ್ಟಿನಲ್ಲಿ ಕುಡಿಯೊಡೆದ ಬಳ್ಳಿ, ಫೇಸ್ ಬುಕ್ಕನ್ನು ಬಳಸಿ ಕತೆ-ಕವನಗಳ ಸೀಮೆಯನ್ನು ಮೀರಿ ಇನ್ನೂ ಅನೇಕ ಸಾಂಸ್ಕೃತಿಕ-ಸಾಮಾಜಿಕ ಚಟುವಟಿಕೆಗಳಲ್ಲಿ ಹಬ್ಬಿದ್ದರೂ ಮೂಲತಃ ಕವಿಗಳೆಂದೇ ತಮ್ಮನ್ನು ಗುರ್ತಿಸಿಕೊಳ್ಳುವ ಇಚ್ಛೆ ಈ ಉತ್ಸಾಹಿಗಳಿಗೆ.  ಕಾವ್ಯಸಂಚಾರದ ಹೆಸರಲ್ಲಿ ಆಗಿಂದಾಗ್ಗೆ ಮೈಸೂರು, ಮಂಗಳೂರು ಹೀಗೆಲ್ಲ ಸಂಚಾರ ಕೈಗೊಳ್ಳುವ ಈ ತಂಡ, ಸ್ಥಳೀಯ ಸಂಸ್ಥೆಗಳೊಡನೆ ಬೆರೆತು ಸಾಹಿತ್ಯಕ-ಸಾಂಸ್ಕೃತಿಕ ವಿನಿಮಯದಲ್ಲಿ ಪಾಲ್ಗೊಳ್ಳುತ್ತದೆ.  

ಪ್ರೀತಿತುಂಬಿದ ಈ ಉತ್ಸಾಹೀ ಕವಿಸಮೂಹದ ಮತ್ತೊಂದು ಹೆಜ್ಜೆ - ನೂರು ಕವಿಗಳ ನೂರು ಕವನಗಳನ್ನೊಳಗೊಂಡ ಎರಡನೆಯ ಕವನಸಂಕಲನ "ಶತಮಾನಂ ಭವತಿ" ಇದೀಗ ಬಿಡುಗಡೆಗೆ ಸಜ್ಜಾಗಿದೆ.  ಕವನ ಸಂಕಲನವನ್ನು ನಾನು ಸಂಪಾದಿಸಿರುವೆನಾಗಿ, ಕವಿತೆಯ ತೇರಿಗೆ ನನ್ನದೂ ಒಂದು ದವನ. 

ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಒಂದೂವರೆ ವರ್ಷದ ನಂತರ ಮತ್ತೆ ಕಬ್ಬಿಗವಕ್ಕಿಗಳ ಕಲರವ ತುಂಬಲಿದೆ.  ಇದು ಸಂತೋಷದ ವಿಷಯ.  ಬಹುಕಾಲದ ನಂತರ ಬ್ಲಾಗ್ ಲೋಕದ ಹಲಕೆಲವು ಮಿತ್ರರನ್ನು ಭೇಟಿಮಾಡುವ ಹಿಗ್ಗು ನನಗೆ.  ನೀವೂ ಬನ್ನಿ.

ದಿನಾಂಕ: ೧೨/೦೫/೨೦೧೩, ಭಾನುವಾರ
ಸಮಯ: ಸಂಜೆ ೫.೩೦
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.


Thursday, November 29, 2012

ಅವಧಾನಕಲೆ

ಇದೇ ತಿಂಗಳ ೩೦ರಿಂದ ಮೂರುದಿನ ಬೆಂಗಳೂರಿನಲ್ಲಿ ತುಂಬುಗನ್ನಡದ ಶತಾವಧಾನ ಕಾರ್ಯಕ್ರಮ ಜರುಗಲಿದೆ.  ಜೊತೆಗೆ ಅವಧಾನವೆಂದರೆ ಏನೆಂಬ ಕುತೂಹಲದ ಪ್ರಶ್ನೆ ಅನೇಕ ಆಸಕ್ತ ಮಿತ್ರರಿಂದ ಬಂದಿದೆ.  ಒಂದು ಕಾಲದಲ್ಲಿ ತನ್ನ ಸಕಲ ವೈಭವದೊಡನೆ ವಿಜೃಂಭಿಸಿ ಈಗ ಹಿನ್ನೆಲೆಗೆ ಸರಿದಿರುವ ಈ ಅಭಿಜಾತ ಕಲೆಯ ಕಿರುಪರಿಚಯ ಮಾಡಿಕೊಡುವುದು, ತನ್ಮೂಲಕ ಕಾರ್ಯಕ್ರಮದ ಆಸ್ವಾದಕ್ಕೆ ಅನುವು ಮಾಡಿಕೊಡುವುದು ಈ ಲೇಖನದ ಉದ್ದೇಶ.

ಅವಧಾನವೆಂದರೆ ಸರಿಸುಮಾರು attention ಎಂಬ ಅರ್ಥ.  ಚಿತ್ತೈಕಾಗ್ರ್ಯಂ ಅವಧಾನಂ ಎಂಬ ಮಾತಿದೆ.  ಅನೇಕ ಗೊಂದಲ/ಗಲಿಬಿಲಿಗಳ ನಡುವೆಯೂ ಚಿತ್ತವನ್ನು ಏಕಾಗ್ರಗೊಳಿಸಿ ಕೆಲಸವೊಂದನ್ನು ನೆರವೇರಿಸುವುದೇ ಅವಧಾನದ ಮೂಲ ತತ್ತ್ವ.

ಸಾಮಾನ್ಯವಾಗಿ ಸವಾಲ್-ಜವಾಬಿನ ರೂಪದಲ್ಲಿರುವ ಅವಧಾನ ಕಾರ್ಯಕ್ರಮದ ಕೇಂದ್ರಬಿಂದು ಅವಧಾನಿಯೇ.  ಅವನನ್ನು ಸುತ್ತುವರಿದು ಪ್ರಶ್ನಿಸುವವರು ಅನೇಕ ಜನ.  ಇವರನ್ನು ಪೃಚ್ಛಕ (ಪ್ರಶ್ನಿಸುವವ)ರೆನ್ನುತ್ತಾರೆ.  ವೇದಾವಧಾನ, ಗಣಿತಾವಧಾನ, ಸಂಗೀತಾವಧಾನ, ಸಾಹಿತ್ಯಾವಧಾನ, ಹೀಗೆ ಒಂದು ಸಾಂಸ್ಕೃತಿಕ ಕಲೆಯಾಗಿ ಅವಧಾನಕಲೆ ಬಹು ಹಿಂದಿನಿಂದ ಚಾಲ್ತಿಯಲ್ಲಿದೆ.  ಅವಧಾನ ಕಾರ್ಯಕ್ರಮವೊಂದು ಇವೆಲ್ಲದರ ಮಿಶ್ರಣವೂ ಆಗಿರಬಹುದು.  ತೆಲುಗಿನಲ್ಲಿ ಇದು ಇಂದಿಗೂ ಬಹು ಜನಪ್ರಿಯ ಸಾಹಿತ್ಯ ಕ್ರೀಡೆಯಾಗಿ ಉಳಿದಿದೆ.  ಆದರೆ ಇದರ ಉಗಮ ಕನ್ನಡದ್ದು ಎಂದು ಹೇಳಲಾಗುತ್ತದೆ.

ಅವಧಾನದಲ್ಲಿ ಭಾಗವಹಿಸುವ ಪೃಚ್ಛಕರ ಸಂಖ್ಯೆಯ ಆಧಾರದ ಮೇಲೆ ಅವಧಾನವು ಗುರುತಿಸಲ್ಪಡುತ್ತದೆ.  ಅದು ಅಷ್ಟಾವಧಾನ ಅಥವ ಶತಾವಧಾನವೇ ಆಗಬೇಕೆಂದಿಲ್ಲ.  ಶೋಡಷಾವಧಾನ (ಹದಿನಾರು ಪೃಚ್ಛಕರು) ಅಷ್ಟಾದಶಾವಧಾನ (ಹದಿನೆಂಟು), ಶತಾವಧಾನ, ಸಹಸ್ರಾವಧಾನ ಅಷ್ಟೇಕೆ ಲಕ್ಷಾವಧಾನ (ಲಕ್ಷ ಜನ ಪೃಚ್ಛಕರು) ಸಹಾ ಚಾಲ್ತಿಯಲ್ಲಿತ್ತೆಂದು ಉಲ್ಲೇಖಗಳು ತಿಳಿಸುತ್ತವೆ.  ಅದರಲ್ಲಿ ಉತ್ಪ್ರೇಕ್ಷೆಯೇನೇ ಇರಲಿ ಶತಾವಧಾನವು ನಾವು ಕಂಡರಿತ ಅತಿ ದೊಡ್ಡ ಅವಧಾನ. 

ಚಿತ್ರಸಾಹಿತಿಯಾಗಿ ಖ್ಯಾತಿ ಪಡೆದ ಬೆಳ್ಳಾವೆ ನರಹರಿಶಾಸ್ತ್ರಿಗಳು ಓರ್ವ ಖ್ಯಾತ ಅವಧಾನಿಯೂ ಆಗಿದ್ದರು.  ಕನ್ನಡದಲ್ಲಿ ಮರೆಯಾಗಿದ್ದ ಅವಧಾನ ಕಲೆಯನ್ನು ಪುನರುತ್ಥಾನಗೊಳಿಸಿದ ಕೀರ್ತಿ ಶಾಸ್ತ್ರಿಗಳದು.  ಹಾಗೆಯೇ ನಮ್ಮ ದಿವಂಗತ ಪ್ರಧಾನಿ ಪಿ ವಿ ನರಸಿಂಹರಾವ್ ಸಹ ಅವಧಾನ ಕಾರ್ಯಕ್ರಮಗಳನ್ನು ನೀಡುತ್ತಿದ್ದರೆಂದು ಕೇಳಿದ್ದೇನೆ.  ಒಂದು ಸಾವಿರದ ಹತ್ತಿರ ಹತ್ತಿರ ಅವಧಾನಕಾರ್ಯಕ್ರಮಗಳನ್ನು ನೆಡೆಸಿದ ಬಹುಶ್ರುತ ವಿದ್ವಾಂಸ ರಾ. ಗಣೇಶರು ಇವತ್ತು ನಮ್ಮ ನಡುವಿರುವ ಏಕೈಕ ಶತಾವಧಾನಿ.

ಇವತ್ತು ಚಾಲ್ತಿಯಲ್ಲಿರುವ ಸಾಮಾನ್ಯ ಅಷ್ಟಾವಧಾನದಲ್ಲಿ ಪೃಚ್ಛಕರ ಕ್ರಮ ಹೀಗೆ.  ಎಂಟು ಜನ ಪೃಚ್ಛಕರಿರುತ್ತಾರೆ.  ಅವರಲ್ಲಿ ನಾಲ್ಕು ಜನ ಅವಧಾನಿಯ ನೆನಪಿನ ಶಕ್ತಿಯನ್ನು ಪರೀಕ್ಷಿಸುವವರಾದರೆ ಇಬ್ಬರು ಅವಧಾನಿಯ ಕಾವ್ಯ ಪ್ರೌಢಿಮೆ, ಓದಿನ ಉದ್ದಗಲಗಳನ್ನು ಪರೀಕ್ಷಿಸುವವರಾಗಿರುತ್ತಾರೆ.  ಇನ್ನಿಬ್ಬರು ಪದೇಪದೇ ಅವಧಾನಿಗೆ ತಡೆಯನ್ನೊಡ್ಡುವುದರ ಮೂಲಕ ಅವನ ಏಕಾಗ್ರತೆಯನ್ನು ಅಗ್ನಿಪರೀಕ್ಷೆಗೊಳಡಿಸುತ್ತಾರೆ.

ಅವಧಾನಿಯು ಪ್ರತಿಯೊಬ್ಬ ಪೃಚ್ಛಕನ ಪ್ರಶ್ನೆಯನ್ನೂ ಸರದಿಯ ಮೇಲೆ ತೆಗೆದುಕೊಂಡು ಉತ್ತರಿಸುತ್ತಾ ಮುಂದುವರೆಯುತ್ತಾನೆ.  ಮೊದಲ ಆರೂ ಜನರಿಗೆ ಉತ್ತರಿಸಿದ ನಂತರ ಎರಡನೆಯ ಸುತ್ತು.  ಹೀಗೆ ಸಾಮಾನ್ಯವಾಗಿ ನಾಲ್ಕು ಸುತ್ತು ನಡೆಯುತ್ತದೆ.  ಕೊನೆಯ ಇಬ್ಬರು ಪೃಚ್ಛಕರು ಯಾವಾಗಲೆಂದರೆ ಆಗ ಮಧ್ಯಪ್ರವೇಶಿಸಬಹುದು. 

ಮೊದಲ ನಾಲ್ಕು ಪೃಚ್ಛಕರೆಂದರೆ:

ನಿಷೇಧಾಕ್ಷರ: ಈತ ಅವಧಾನಿಗೆ ಒಂದು ವಸ್ತುವಿನ ಮೇಲೆ ಒಂದು ಛಂದಸ್ಸಿನಲ್ಲಿ ಪದ್ಯವೊಂದನ್ನು ರಚಿಸಲು ಹೇಳುತ್ತಾನೆ.  ಆದರೆ ಅವಧಾನಿಯು ಹೇಳಿದ ಪ್ರತಿಯೊಂದು ಅಕ್ಷರಕ್ಕೂ, ಮುಂದಿನ ಅಕ್ಷರವನ್ನು ಊಹಿಸುತ್ತಾ ಅದನ್ನು ನಿಷೇಧಿಸುತ್ತಾ ಹೋಗುತ್ತಾನೆ.  ಅವಧಾನಿಯು ಈ ನಿಷೇಧವನ್ನು ಪರಿಗಣಿಸಿ ಬೇರೊಂದು ಅಕ್ಷರವನ್ನು ಬಳಸುತ್ತಾ ಸಾಗಬೇಕು.  ಉದಾಹರಣೆಗೆ ಗಣಪನ ಮೇಲೆ ಪದ್ಯವೊಂದನ್ನು ರಚಿಸಬೇಕಾಗಿದೆಯೆನ್ನೋಣ.  ಅವಧಾನಿಯು ಗಣಪತಿ ಎಂದು ಹೇಳಬೇಕೆಂದುಕೊಂಡು ಗ ಎನ್ನುತ್ತಾನೆ.  ಆದರೆ ಇದನ್ನು ಊಹಿಸುವ ಪೃಚ್ಛಕ ಣಕಾರವನ್ನು ನಿಷೇಧಿಸಿಬಿಡುತ್ತಾನೆ.   ಈಗ ಗಣಪತಿ ಎನ್ನುವಹಾಗಿಲ್ಲ.  ಬದಲಿಗೆ ಗಜ ಎಂದು ಹೇಳುತ್ತಾನೆ ಅವಧಾನಿ.  ಇದು ಗಜಮುಖ ಎಂದಾಗಬಹುದೆಂದು ಊಹಿಸಿದ ಪೃಚ್ಛಕ ಮಕಾರವನ್ನು ನಿಷೇಧಿಸುತ್ತಾನೆ.  ಆಗ ಅವಧಾನಿ ಗಜವದನ ಎಂಬುದನ್ನು ಮನಸ್ಸಿನಲ್ಲಿಟ್ಟು ವ ಎಂದು ಹೇಳಿದರೆ ಇದನ್ನೂ ಊಹಿಸಿದ ಪೃಚ್ಛಕ ದಕಾರವನ್ನು ನಿಷೇಧಿಸುತ್ತಾನೆ.  ಆದರೆ ಅವಧಾನಿಯ ಶಬ್ದಸಂಪತ್ತು ದೊಡ್ಡದು.  ಆತ ಗಜವದನ ಎಂಬುದರ ಬದಲಿಗೆ ಗಜವಕ್ತ್ರ ಎಂದು ಹೇಳಿ ಪದವನ್ನು ಪೂರ್ಣಗೊಳಿಸುತ್ತಾನೆ.  ಹೀಗೆ ಪೃಚ್ಛಕನ ತಡೆಯನ್ನೂ ಮೀರಿ ಗಣಪತಿ ಗಜವಕ್ತ್ರನಾಗುತ್ತಾನೆ.  ಆದರೂ ಉದ್ದಕ್ಕೂ ಆತನು ಛಂದೋನಿಯಮಗಳನ್ನು ಮರೆಯುವಂತಿಲ್ಲ!  ಹೀಗೆ ಪದ್ಯದ ಒಂದು ಸಾಲನ್ನು ಪೂರೈಸಿದ ಅವಧಾನಿ ಮುಂದಿನ ಪೃಚ್ಛಕನೆಡೆ ತಿರುಗುತ್ತಾನೆ.

ಸಮಸ್ಯಾಪೂರಣ:  ಈತ ಅವಧಾನಿಗೆ ಸಮಸ್ಯೆಯಂಥಾ ಸಾಲೊಂದನ್ನು ನೀಡುತ್ತಾನೆ.  ಇದು ನಾಲ್ಕು/ಆರು ಸಾಲಿನ ಪದ್ಯವೊಂದರ ಕೊನೆಯ ಸಾಲಾಗಿರುತ್ತದೆ, ಮತ್ತು ಕೇಳಲು ಅರ್ಥಹೀನವೋ ಅಸಮಂಜಸವೋ ಅಶ್ಲೀಲವೋ ಆಗಿರಬಹುದು.  ಅವಧಾನಿಯ ಕೆಲಸವೆಂದರೆ ಪದ್ಯದ ಉಳಿದ ಸಾಲುಗಳನ್ನು ಅದೇ ಛಂದಸ್ಸಿನಲ್ಲಿ ರಚಿಸಿ, ಆ ಮೂಲಕ ಕೊನೆಯ ಸಾಲಿಗೊಂದು ಸಮಂಜಸವಾದ ಅರ್ಥ ಬರುವಂತೆ ಮಾಡುವುದು.  ಉದಾಹರಣೆಗೆ ಸಮಸ್ಯೆಯೊಂದರ ಸಾಲು ಹೀಗಿದೆಯೆನ್ನಿ "ತಂದೆಯನೇ ಕೊಂದುತಿಂಬ ಸುತನತಿ ರಮ್ಯಂ"  ಇದೊಂದು ಕಂದಪದ್ಯದ ಕೊನೆಯ ಸಾಲು.  ಅರೇ! ಇದೊಳ್ಳೇ ತಮಾಷೆಯಾಯಿತಲ್ಲ!  ಮಗ ಎಲ್ಲಾದರೂ ತಂದೆಯನ್ನು ಕೊಲ್ಲುವುದೆಂದರೇನು, ಕೊಂದು ತಿನ್ನುವುದೇನು, ಹಾಗೆ ಕೊಂದು ತಿನ್ನುವ ಮಗ ರಮ್ಯವಾಗಿ ಕಾಣುವುದಾದರೂ ಹೇಗೆ?  ಅವಧಾನಿಯ ಚಾತುರ್ಯವಿರುವುದು, ಈ ಸಾಲಿನಲ್ಲಿ ಕಾಣುವ ಅನರ್ಥವನ್ನು ತೊಡೆದು ಹಾಕಿ ಅದಕ್ಕೊಂದು ಒಪ್ಪವಾದ ಅರ್ಥವನ್ನು ಕೊಡುವುದು.  ಇದಕ್ಕೆ ನಾನು ನೀಡುವ ಪರಿಹಾರ ಹೀಗೆ:

ಕಂದಂ ಕೊಂಡಾಟದೊಳಾ
ತಂದೆಯ ಮುಂದಲೆಯ ಜಗ್ಗಿ ಗರ್ಜಿಸುತಿಪ್ಪಂ
ತಿಂದಪೆನಿದೊ ನಾಂ ಪುಲಿಯೆನೆ
ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

ಮಗು ತಂದೆಯೊಡನೆ ಆಟವಾಡುತ್ತಿದೆ.  "ನಾನು ಹುಲಿ, ನಿನ್ನ ತಿಂದುಬಿಡ್ತೀನಿ" ಎಂದು ಗರ್ಜಿಸುತ್ತಾ ತಂದೆಯನ್ನು ಜಗ್ಗಾಡುತ್ತಿದೆ.  ಇದು ಎಷ್ಟು ರಮ್ಯವಾದ ದೃಶ್ಯವಲ್ಲವೇ?  ಸಮಸ್ಯೆಯ ಸಾಲಿನಲ್ಲಿನ ಅನರ್ಥ ಹೀಗೆ ನೇರ್ಪಟ್ಟಿತು.  ಇದು ಪೃಚ್ಛಕನು ಸಿದ್ಧಪಡಿಸಿಟ್ಟುಕೊಂಡಿರುವ ಪರಿಹಾರ.  ಹೀಗೇ ಸ್ಥಳದಲ್ಲೇ ಅವಧಾನಿಯೂ ತನ್ನ ಪರಿಹಾರವನ್ನು ಕೊಡುತ್ತಾನೆ.  ಅದು ಬೇರೆಯೇ ಇರಬಹುದು.

ಶತಾವಧಾನಿ ಆರ್ ಗಣೇಶರ ಮೈಸೂರಿನ ಅಷ್ಟಾವಧಾನವೊಂದರಲ್ಲಿ ನಾನು ಕೊಟ್ಟ ಸಮಸ್ಯೆಯ ಸಾಲು ಹೀಗಿತ್ತು.  "ನಾನೀನೋನೀನೆನಾನೋ ನೆನೆನೆನೆನೆನೆ ನಾನೇನುನೀನೇನದೇನೋ".  ಸ್ರಗ್ಧರಾವೃತ್ತದಲ್ಲಿರುವ ಈ ಸಾಲು ಕೇಳುವುದಕ್ಕೆ ಅರ್ಥಹೀನವಾಗಿದೆ.  ಇದಕ್ಕೆ ಗಣೇಶರು ಕೊಟ್ಟ ಸಮಾಧಾನ ಹೀಗೆ:

ದೀನಂ ಸಂಗ್ರಾಮರಂಗಸ್ಥಿತ ನನರದೊ ಕಾಣ್ ಜಾರೆ ಕೋದಂಡ ಕಾಂಡಂ|
ಮಾನಾಮಾನಾವಲೀಢಂ ಮಥಿಸೆ ಮನದೊಳೇ ಕೃಷ್ಣನೊಲ್ದೀಯೆ ಗೀತಾ|
ಯಾನಂ ಧೈರ್ಯ ಪ್ರವಾಸಕ್ಕೆನೆ ಭವರಣದೊಳ್ ಚಿಂತಿಸುತ್ತೆಂದನಿನ್ನೇನ್|
ನಾನೀನೋ ನೀನೆನಾನೋ ನೆನೆನೆನೆನೆನೆ ನಾನೇನೊ ನೀನೇನದೇನೋ|

(ಸಂಗ್ರಾಮರಂಗದಲ್ಲಿ ಮುಂದಿನ ದಾರಿ ಕಾಣದೇ ಬಿಲ್ಲುಬಾಣಗಳನ್ನು ಕೆಳಗೆಸೆದು ಕೂತ ಪಾರ್ಥನಿಗೆ ಕೃಷ್ಣನು ಒಲಿದಿತ್ತ ಗೀತೆಯ ಸಾರ ಇದು "ನಾನೀನೋ, ನೀನೆ ನಾನೋ, ಯೋಚಿಸು... ನಾನೇನು, ನೀನೇನು ಅದೇನೆಂಬ ವಿವರಗಳನ್ನು ಯೋಚಿಸು - ಇದೊಂದು ಅಧ್ಯಾತ್ಮ ಚಿಂತನೆ)

ಅವಧಾನದ ಕೊನೆಯಲ್ಲಿ ಪೃಚ್ಛಕನೂ ಇದಕ್ಕೆ ತನ್ನ ಪರಿಹಾರವನ್ನೂ ಹೇಳಬೇಕಾಗುತ್ತದೆ.  ಇದಕ್ಕೆ ನನ್ನ ಪರಿಹಾರ ಹೀಗಿತ್ತು:

ನಾನಾ ವ್ಯಾಖ್ಯಾನ ಪೂರಂ ಬಹುಮಥಿತ ಮತಾಲಂಬ ಗಂಭೀರ ಪಾರಂ
ನೀನೀಗಳ್ ಭಾವಿಸಲ್ಕಿಂತಿರುತಿಹುದು ಕಣಾ ವೇದವೇದಾರ್ಥ ಸಾರಂ
ನಾನುಂ ನೀನೆಂಬುದುಂ ಪೇಳಿತರಬಹುತರೋಪಾಧಿಗಂ ಮೂಲಮೇನೈ
ನಾನೀನೋ ನೀನೆನಾನೋ ನೆನೆನೆನೆನೆನೆ ನಾನೇನೊ ನೀನೇನದೇನೋ

(ವೇದವೇದಾರ್ಥಗಳು ಅನೇಕ ವ್ಯಾಖ್ಯಾನಗಳಿಂದಲೂ, ಮತಾವಲಂಬೀ ವಿವರಣೆಗಳಿಂದಲೂ ತುಂಬಿವೆ.  ಆದರೂ ಅದೆಲ್ಲವನ್ನೂ ಸಂಕ್ಷಿಪ್ತವಾಗಿ ನೋಡಿದರೆ, ಅದರ ಅಭಿಮತವಿಷ್ಟೇ:  ನಾನು ನೀನೆಂಬುದೇ ನಾವಿಂದು ಕಾಣುತ್ತಿರುವ ಅನೇಕ ರೂಪಗಳಿಗೂ ಮೂಲವೇ, ನಾನೇ ನೀನೋ, ನೀನೆ ನಾನೋ (ಅಂದರೆ ನಾವಿಬ್ಬರೂ ಒಂದೆಯೋ), ಯೋಚಿಸಿ ನೋಡು, ನಾನೇನು, ನೀನೇನು, ಅದೇನೆಂಬುದನ್ನು ಯೋಚಿಸು)

ಈ ಪೃಚ್ಚಕನಿಗೂ ಮೊದಲ ಸಾಲನ್ನು ರಚಿಸಿ ಹೇಳಿ ಅವಧಾನಿ ಮುಂದಿನ ಪೃಚ್ಛಕನೆಡೆ ಗಮನ ಹರಿಸುತ್ತಾನೆ.

ದತ್ತಪದಿ: ಈತನ ಕೆಲಸ, ಅವಧಾನಿಗೆ ಮೂರೋ ನಾಲ್ಕೋ ಸಂಬಂಧವಿಲ್ಲದ ಪದಗಳನ್ನು ಕೊಟ್ಟು ಯಾವುದಾದರೊಂದು ಛಂದಸ್ಸಿನಲ್ಲಿ ಆ ಪದಗಳಿಗೆ ಸಂಬಂಧವೇ ಇಲ್ಲದ ವಿಷಯದ ಮೇಲೆ ಪದ್ಯವೊಂದನ್ನು ರಚಿಸಲು ಹೇಳುವುದು.  ಉದಾಹರಣೆಗೆ ಕಳೆದೊಂದು ಅವಧಾನದಲ್ಲಿ ನಾನು ಕೊಟ್ಟ ದತ್ತಪದಿಯ ಸಮಸ್ಯೆ ಹೀಗಿತ್ತು.  ಮೂರ್ಖ, ಮಂಕ ಮತ್ತು ಮಡ್ಡಿ ಈ ಮೂರು ಹೆಸರುಗಳನ್ನು ಉಪಯೋಗಿಸಿಕೊಂಡು ತ್ರಿಮೂರ್ತಿಗಳನ್ನು ಸ್ತುತಿಸಬೇಕು, ಆದರೆ ಇದು ನಿಂದಾಸ್ತುತಿಯಾಗಿರಬಾರದು ಅಥವಾ ಸ್ವನಿಂದೆಯಾಗಿರಬಾರದು, ಮತ್ತು ಮತ್ತೇಭವಿಕ್ರೀಡಿತ ವೃತ್ತದಲ್ಲಿರಬೇಕು.

ಇದಕ್ಕೆ ಅವಧಾನಿಗಳು ಕೊಟ್ಟ ಪರಿಹಾರ ಇದು:

ಸಮನಾರ್ ಮೂರ್ ಖನಟದ್ರವೀಂದು ಚಪಲಾವ್ರಾತಕ್ಕೆ ತೇಜಸ್ಸಿನೊಳ್
ವಿಮಲಾತ್ಮದ್ಯುತಿಯಿಂದಮಾಂತರತಮಂ ಕಟ್ಟಿಟ್ಟವೊಲ್ ನೀಗುಗುಂ
ಪ್ರಮೆಯಿಂ ಮೂವರನೀಕ್ಷಿಸಲ್ ಸ್ಫುರಿಪುದೈತಾಮಡ್ಡಿಯಾಗರ್ ನತ
ಕ್ರಮಕಂ ಕಾಣ್ ತ್ರಿಗುಣಂಗಳೊಳ್ ಮಡೆಯರೇಂ ಭಕ್ತೇಂಗಿತಂ ಬೇರಿಸಲ್

ನನ್ನ ಪರಿಹಾರ ಹೀಗಿತ್ತು:

ಮೊನೆಗಳ್ ಮೂರ್ ಖಗರಾಜವಾಹನ ಚತುರ್ವಾಗೀಶರೂಪಂ ಜಗನ್
ಮನಗಳ್ಗೀತ ವಿಧಾತನೈ ಸಕಲಮಂ ಕಣ್ಸನ್ನೆಯೊಳ್ ಸಾಧಿಪಂ
ಎಣೆಯಿಲ್ಲಂ ಜಗತೀ ಸಹಸ್ರ ಮೆರೆವೀ ತುಂಗಾಂಗನಂ ಭಾವಿಸಲ್
ಕೊನೆಗಾ ತಾಮಸಮಡ್ಡಿಯಂ ಕಿಡಿಸುವೀ ಮುಮ್ಮೂರ್ತಿಯಂ ಧ್ಯಾನಿಪೆಂ

ಈತನಿಗೂ ಪದ್ಯದ ಒಂದು ಸಾಲನ್ನು ರಚಿಸಿಕೊಟ್ಟು ಅವಧಾನಿ ಮುಂದುವರೆಯುತ್ತಾನೆ.

ಚಿತ್ರಬಂಧ: ಇದರಲ್ಲಿ ಅಕ್ಷರಗಳು ಕೆಲವು ನಿರ್ದಿಷ್ಟ ಕ್ರಮದಲ್ಲಿ ಪದೇಪದೇ ಬರುವಂತೆ ಪದ್ಯ ರಚಿಸಲಾಗುತ್ತದೆ.  ಉದಾಹರಣೆಗೆ:
ತಾಕಾ ತಿ ಕ್ತೀಶಂ
ಮೋರೆ ತೋರೆ ತಿರೆ ಸ್ವಶಂ

ಇಲ್ಲಿ ಪ್ರತಿ ಎರಡನೆಯ ಅಕ್ಷರ ರಕಾರವಾಗಿರುವುದನ್ನು ಗಮನಿಸಿ.  ಈ ರೀತಿ ವಿವಿಧ ವಿನ್ಯಾಸಗಳನ್ನು ವಿವಿಧ ಹೆಸರಿನಿಂದ ಕರೆಯಲಾಗುತ್ತದೆ - ಪುಷ್ಪಗುಚ್ಛಬಂಧ, ಸರ್ಪಬಂಧ, ಗೋಮೂತ್ರಿಕಾ ಬಂಧ, ಮುರಜ ಬಂಧ, ನಾಗಬಂಧ ಇತ್ಯಾದಿ.  ಇದೂ ಸಾಮಾನ್ಯವಾಗಿ ನಾಲ್ಕು ಸಾಲಿನ ಯಾವುದಾದರೂ ಛಂದಸ್ಸಿನಲ್ಲಿರುತ್ತದೆ.

ಈ ಪೃಚ್ಛಕನಿಗೂ ಒಂದು ಸಾಲನ್ನು ರಚಿಸಿಕೊಟ್ಟು ಅವಧಾನಿ ಮುಂದಿನ ಪೃಚ್ಛಕನೆಡೆ ಗಮನ ಹರಿಸುತ್ತಾನೆ.

ವರ್ಣನೆ/ಆಶುಕವಿತೆ:  ಪೃಚ್ಛಕನು ವಸ್ತು/ವಿಷಯವೊಂದನ್ನು ಅವಧಾನಿಗೆ ಕೊಟ್ಟು ನಿರ್ದಿಷ್ಟ ಛಂದಸ್ಸಿನಲ್ಲಿ ಕಾವ್ಯ ರಚಿಸಲು ಹೇಳುತ್ತಾನೆ.  ಇದು ಸಾಮಾನ್ಯವಾಗಿ ಕಾವ್ಯಾತ್ಮಕವಾಗಿ, ವರ್ಣನಾತ್ಮಕವಾಗಿರುತ್ತದೆ.  ಉದಾಹರಣೆಗೆ ತನ್ನದಲ್ಲದ ಕಾರಣಕ್ಕಾಗಿ ಪ್ರಿಯತಮೆಯಿಂದ ದೂರವಾಗಿ ಜೈಲು ಸೇರಿರುವ ನಿರಪರಾಧಿಯೊಬ್ಬನ ಭಾವನೆ ಹುಣ್ಣಿಮೆ ರಾತ್ರೆಯಲ್ಲಿ ಹೇಗಿರಬಹುದು ಎಂದು ವರ್ಣಿಸಲು ಕೇಳಬಹುದು.  ಇದಕ್ಕೆ ಉತ್ತರವಾಗಿ ಅವಧಾನಿ ಸ್ಥಳದಲ್ಲೇ ಕವಿತೆಯೊಂದನ್ನು ರಚಿಸಿಕೊಟ್ಟು ಮುಂದುವರೆಯುತ್ತಾನೆ.

ಕಾವ್ಯವಾಚನ: ಇಲ್ಲಿ ಪೃಚ್ಛಕನು ಯಾವುದಾದರೊಂದು ಕಾವ್ಯದ ಯಾವುದೋ ಒಂದು ಭಾಗವನ್ನು ವಾಚಿಸುತ್ತಾನೆ.  ಇದು ಯಾವ ಕಾವ್ಯವಾದರೂ ಆಗಿರಬಹುದು, ಯಾವ ಮೂಲೆಯಿಂದಾದರೂ ಎತ್ತಿದ್ದಿರಬಹುದು.  ಅದನ್ನು ಕೇಳಿಸಿಕೊಂಡು ಅವಧಾನಿಯು ಆ ಕಾವ್ಯ, ಕವಿ, ಸಂದರ್ಭವನ್ನು ತಿಳಿಸುತ್ತಾನೆ.

ಹೀಗೆ ಆರೂ ಪೃಚ್ಛಕರಿಗೆ ಉತ್ತರಿಸಿದ ನಂತರ ಎರಡನೆಯ ಸುತ್ತು ಪ್ರಾರಂಭವಾಗುತ್ತದೆ, ನಿಷೇಧಾಕ್ಷರಿಯ ಎರಡನೆಯ ಸಾಲಿನ ರಚನೆ... ಹೀಗೆ ನಾಲ್ಕು ಸುತ್ತು ಮುಂದುವರೆಯುತ್ತದೆ ಅವಧಾನ.  ಮೇಲಿನ ನಾಲ್ಕೂ ಪೃಚ್ಛಕರಿಗೂ ಅವಧಾನಿಯು ಒಂದೊಂದು ಒಂದೊಂದು ಸುತ್ತಿನಲ್ಲಿ ಒಂದೊಂದು ಸಾಲುಗಳನ್ನು ಹೇಳುತ್ತಾ ಕೊನೆಯ ಸುತ್ತಿನ ನಂತರ ಪ್ರತಿಯೊಬ್ಬನಿಗೂ ಪೂರ್ಣ ಪದ್ಯವನ್ನು ಒಪ್ಪಿಸಬೇಕು. ಹಾಗೆಯೇ ಪೃಚ್ಛಕರೂ ತಂತಮ್ಮ ಪದ್ಯಗಳನ್ನು ಪಠಿಸುತ್ತಾರೆ.  ಆದರೆ ಕೊನೆಯ ಇಬ್ಬರು ಪೃಚ್ಛಕರ ಪ್ರಶ್ನೆ ಸುತ್ತುಗಳಲ್ಲಿ ಮುಂದುವರೆಯುವುದಿಲ್ಲ.  ಅವರ ಪ್ರಶ್ನೆಗಳಿಗೆ ಆಯಾ ಸುತ್ತಿನಲ್ಲೇ ಪೂರ್ಣಪದ್ಯ ರಚಿಸಿಕೊಟ್ಟು ಅವಧಾನಿ ಮುಂದುವರೆಯುತ್ತಾನೆ.  ಮೊದಲ ನಾಲ್ಕು ಪೃಚ್ಛಕರ ಕೆಲಸ ಅವಧಾನಿಯ ನೆನಪಿನ ಶಕ್ತಿ, ಛಂದೋ ಪಟುತ್ವವನ್ನು ಪರೀಕ್ಷಿಸುವುದಾದರೆ, ಕೊನೆಯ ಇಬ್ಬರು ಪೃಚ್ಛಕರ ಕೆಲಸ ಅವಧಾನಿಯ ಕಾವ್ಯ ಸಾಮರ್ಥ್ಯವನ್ನೂ ಓದಿನ ವಿಸ್ತಾರವನ್ನೂ ಒರೆ ಹಚ್ಚುವುದು.

ಈ ಮೇಲೆ ಹೇಳಿದ ಆರು ಪೃಚ್ಛಕರು ನಿಯತವಾಗಿ ತಮ್ಮತಮ್ಮ ಸರದಿಯಲ್ಲಿ ಪ್ರಶ್ನೆ ಕೇಳಿದರೆ, ಉಳಿದಿಬ್ಬರು ಪೃಚ್ಛಕರು ಯಾವಾಗಲಾದರೂ ಮಧ್ಯ ನುಗ್ಗಿ ಪ್ರಶ್ನೆಗಳನ್ನು ಕೇಳಬಹುದು.  ಮುಖ್ಯವಾಗಿ ಅವಧಾನಿಯ ಏಕಾಗ್ರತೆಯನ್ನು ಕದಲಿಸುವುದೇ ಇವರ ಗುರಿ.  ಸಾಮಾನ್ಯವಾಗಿ ಈ ಪೃಚ್ಛಕರು ಈ ಕೆಳಗಿನ ಯಾವುದಾದರೂ ಎರಡು ವಿಭಾಗಗಳನ್ನು ನಿರ್ವಹಿಸುತ್ತಾರೆ:

ಅಪ್ರಸ್ತುತ ಪ್ರಸಂಗಿ:  ಹೆಸರೇ ಸೂಚಿಸುವಂತೆ ಈತ ಅಪ್ರಸ್ತುತ ಪ್ರಸಂಗಿ.  ಸಂದರ್ಭಕ್ಕೆ ಸಂಬಂಧವೇ ಇಲ್ಲದಂತೆ ಈತ ಏನಾದರೂ ಮಾತಾಡಬಹುದು/ಏನಾದರೂ ಕೇಳಬಹುದು.  ಅವಧಾನಿ ಅವನನ್ನು ಕಡೆಗಣಿಸುವಂತಿಲ್ಲ, ರೇಗುವಂತಿಲ್ಲ, ಉತ್ತರ ಕೊಡುವುದಿಲ್ಲ ಎನ್ನುವಂತಿಲ್ಲ.  ಈತನ ಸವಾಲುಗಳನ್ನು ನಗುನಗುತ್ತಾ ಸ್ವೀಕರಿಸುತ್ತಾ, ಆತನೊಡನೆ ಸರಸವಾಗಿ ಸಂಭಾಷಿಸುತ್ತಲೇ ಈತನನ್ನು ನಿವಾರಿಸಿಕೊಂಡು ಅವಧಾನಿ ಮುಂದುವರಿಯಬೇಕಾಗುತ್ತದೆ.

ಸಂಖ್ಯಾಬಂಧ:  ೫ X ೫ ರ ಚೌಕವೊಂದರಲ್ಲಿ ಹೇಗೇ ಕೂಡಿದರೂ ಒಂದೇ ಮೊತ್ತ ಬರುವಂತೆ ಒಂದು ಬಂಧವನ್ನು ಪೃಚ್ಛಕ ಮೊದಲೇ ರಚಿಸಿಕೊಂಡು ಬಂದಿರುತ್ತಾನೆ.  ಕಾರ್ಯಕ್ರಮದ ಮೊದಲಲ್ಲಿ ಅವಧಾನಿಗೆ ಈ ಮೊತ್ತವನ್ನಷ್ಟೇ ಆತ ಕೊಡುತ್ತಾನೆ.  ಆಮೇಲೆ ಮಧ್ಯ ಮಧ್ಯ ಮನಬಂದಾಗ ಈ ಬಂಧದ ಒಂದು ನಿರ್ದಿಷ್ಟ ಮನೆಯಲ್ಲಿ ಬರುವ ಸಂಖ್ಯೆಯನ್ನು ಕೇಳುತ್ತಾನೆ.  ಉದಾಹರಣೆಗೆ, ಮೂರನೆಯ ಸಾಲಿನ ನಾಲ್ಕನೆಯ ಮನೆಯಲ್ಲಿ ಬರುವ ಸಂಖ್ಯೆ ಎಷ್ಟು?  ಅವಧಾನಿ ಮನಸ್ಸಿನಲ್ಲೇ ಬಂಧವನ್ನು ರಚಿಸಿಕೊಂಡು ಆಯಾ ಮನೆಯಲ್ಲಿ ಬರುವ ಸಂಖ್ಯೆಯನ್ನು ಪೃಚ್ಛಕನು ಕೇಳಿದಾಗಲೆಲ್ಲಾ ಹೇಳಬೇಕಾಗುತ್ತದೆ.  ಅದನ್ನು ಪೃಚ್ಛಕನು ಪ್ರೇಕ್ಷಕರಿಗೆ ಮಾತ್ರ ಕಾಣುವಂತೆ ಬಂಧದಲ್ಲಿ ಬರೆಯುತ್ತಾ ಹೋಗುತ್ತಾನೆ.  ಕೊನೆಯಲ್ಲಿ ಅವುಗಳನ್ನು ಕೂಡಿದಾಗ ಮೊದಲು ನೀಡಿದ ಮೊತ್ತ ಬಂದಿರಬೇಕು.

ಘಂಟಾಗಣನ: ಪೃಚ್ಛಕನೊಬ್ಬ ಒಂದು ಘಂಟೆಯನ್ನು ಹಿಡಿದು ಕುಳಿತಿರುತ್ತಾನೆ.  ಅವಧಾನದುದ್ದಕ್ಕೂ ಯಾವಾಗ ಬೇಕಾದರೂ ಎಷ್ಟು ಬಾರಿ ಬೇಕಾದರೂ ಅವನು ಗಂಟೆಯನ್ನು ಬಾರಿಸಬಹುದು.  ಅದನ್ನು ಅವಧಾನಿ ಮನಸ್ಸಿನಲ್ಲೇ ಲೆಕ್ಕವಿಟ್ಟುಕೊಳ್ಳಬೇಕು.  ಪ್ರೇಕ್ಷಕರೂ ಲೆಕ್ಕವಿಟ್ಟುಕೊಳ್ಳಬಹುದು.  ಕಾರ್ಯಕ್ರಮದ ಕೊನೆಯಲ್ಲಿ ಅವಧಾನಿ ಇದರ ಲೆಕ್ಕವನ್ನು ಒಪ್ಪಿಸುತ್ತಾನೆ.  ಪ್ರೇಕ್ಷಕರು ಇದರ ತಾಳೆ ನೋಡಿಕೊಳ್ಳಬಹುದು.  ಪುಷ್ಪಗಣನವು ಘಂಟಾಗಣನದ ಇನ್ನೊಂದು ರೂಪ.  ಪೃಚ್ಛಕನು ಅವಧಾನಿಯ ಮೇಲೆ ಹೂವನ್ನು ಎಸೆಯುತ್ತಾ ಹೋಗುತ್ತಾನೆ.  ಅದನ್ನು ಅವಧಾನಿ ಲೆಕ್ಕವಿಟ್ಟುಕೊಳ್ಳಬೇಕು.  ಇದೇ ರೀತಿ ಇಸ್ಪೀಟು, ಚದುರಂಗಗಳನ್ನೂ ಕೆಲವು ಅವಧಾನಿಗಳು ಅಳವಡಿಸಿಕೊಳ್ಳುವುದುಂಟು

ಮೇಲೆ ಹೇಳಿದ ವಿಭಾಗಗಳಲ್ಲದೇ ಹಾಗೆಯೇ ನ್ಯಸ್ತಾಕ್ಷರಿ (ಪದ್ಯವೊಂದರ ಕೆಲಕೆಲವು ಸ್ಥಾನಗಳಲ್ಲಿ ಕೆಲ ಕೆಲವು ಅಕ್ಷರಗಳು ಬರಬೇಕು ಎಂಬ ನಿಬಂಧನೆ); ವ್ಯಸ್ತಾಕ್ಷರಿ (ಸಾಲೊಂದರಲ್ಲಿ ಬರುವ ವಿವಿಧ ಅಕ್ಷರಗಳನ್ನೂ ಅವುಗಳ ಸ್ಥಾನ ಸಂಖ್ಯೆಗಳನ್ನೂ ಪ್ರತ್ಯೇಕವಾಗಿ ಬರೆದಿಟ್ಟುಕೊಂಡು ಕ್ರಮ ತಪ್ಪಿದ ರೀತಿಯಲ್ಲಿ ಈ ಅಕ್ಷರಗಳನ್ನು ಆಗಾಗ ಅವಧಾನಿಗೆ ತುಸುವೇ ಕಾಲ ತೋರಿಸುತ್ತಾ ಹೋಗುವುದು.  ಈ ಎಲ್ಲ ಅಕ್ಷರಗಳನ್ನೂ ನೆನಪಿಟ್ಟುಕೊಂಡು ಅವಧಾನದ ಕೊನೆಯಲ್ಲಿ ಅವುಗಳನ್ನು ಕ್ರಮವಾಗಿ ಜೋಡಿಸಿ ಇಡೀ ವಾಕ್ಯವನ್ನು ಅವಧಾನಿ ನಿರೂಪಿಸುವುದು) ಈ ಪ್ರಕಾರಗಳನ್ನೂ ಅಳವಡಿಸಿಕೊಳ್ಳುವುದುಂಟು.

ಇನ್ನು ಶತಾವಧಾನವು ಸಂಯೋಜನೆಯಲ್ಲಿ ಸರಿಸುಮಾರು ಅಷ್ಟಾವಧಾನವನ್ನೇ ಹೋಲುತ್ತದೆಯಾದರೂ ಇಲ್ಲಿ ಪೃಚ್ಛಕರ ಸಂಖ್ಯೆ, ಮತ್ತು ಆ ಕಾರಣದಿಂದ ಇಡೀ ಕಾರ್ಯಕ್ರಮದ ಅವಧಿ ಹೆಚ್ಚು.  ಒಂದು ನಿಷೇಧಾಕ್ಷರಿಯ ಜಾಗದಲ್ಲಿ ಹತ್ತು ಜನ, ಒಬ್ಬ ಸಮಸ್ಯಾಪೂರಕನ ಜಾಗದಲ್ಲಿ ಹತ್ತು ಜನ, ಹೀಗೆ ಸಂಖ್ಯೆ ಜಾಸ್ತಿಯಾಗುತ್ತದೆ, ಮತ್ತು ರಚಿಸಲ್ಪಡುವ ಪದ್ಯಗಳ ಸಂಖ್ಯೆಯೂ ಹೆಚ್ಚು.  ಜೊತೆಗೆ ಅವಧಾನಿಯ ಸಾಮರ್ಥ್ಯಕ್ಕನುಗುಣವಾಗಿ ಅವಧಾನದ ವಿಭಾಗಗಳೂ ಹೆಚ್ಚಬಹುದು.

ಅದೇನೇ ಇರಲಿ, ಅವಧಾನಕಾರ್ಯಕ್ರಮವೆಂದರೆ ಪ್ರಶ್ನೋತ್ತರಗಳ ಗುಡುಗು-ಮಿಂಚುಗಳಿಗೂ ಸರಸ ಸಂಭಾಷಣೆಗಳ ತುಷಾರಸೇಚನಕ್ಕೂ, ಕಾವ್ಯದ ವಿವಿಧ ರೂಹುಗಳ ಅನಾವರಣಕ್ಕೂ ತೆರೆದುಕೊಂಡ ಭವ್ಯರಂಗಸ್ಥಳವೇ ಸರಿ.  ಅವಧಾನ ಕಲೆಯೆಂಬುದೇ ನಶಿಸುತ್ತಿರುವ ಈ ಯುಗದಲ್ಲಿ ಶತಾವಧಾನ, ಅದರಲ್ಲೂ ಸಂಪೂರ್ಣ ಕನ್ನಡ ಶತಾವಧಾನವೆಂಬ ವಿಸ್ಮಯ ಇದೇ ೩೦ನೆಯ ದಿನಾಂಕದಂದು ಅನಾವರಣಗೊಳ್ಳಲಿದೆ.  ಅಪರೂಪದಲ್ಲಿ ಅಪರೂಪವೆನಿಸಿಕೊಳ್ಳುವ ಇಂಥಾ ಕಾರ್ಯಕ್ರಮವೊಂದು ಇಂದಿಗೂ ನೋಡಸಿಗುತ್ತಿದೆಯೆಂಬುದು ನಿಜಕ್ಕೂ ಕೌತುಕದ, ಹೆಮ್ಮೆಯ ವಿಷಯ.

Wednesday, February 1, 2012

ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 3: ಮಾತ್ರೆ-ಗಣ (ಮುಂದುವರೆದಿದೆ)

ಹಿಂದಿನ ಬರಹದಲ್ಲಿ ಲಘು-ಗುರುಗಳ ಬಳಕೆಯನ್ನು ಸ್ವಲ್ಪ ಮಟ್ಟಿಗೆ ನೋಡಿದೆವು; ಬರೀ ಲಘುವನ್ನೇ ಬಳಸಿ ಮತ್ತು ಬರೀ ಗುರುವನ್ನೇ ಬಳಸಿ ಕೆಲವು ಸಾಲುಗಳನ್ನು ಮಾಡಿದೆವು. (ನೋಡಿಲ್ಲದೆ ಇದ್ದರೆ ಆ ಬರಹ ಇಲ್ಲಿದೆ ನೋಡಿ)

ಸುಮ್ಮನೆ ಒಂದು ಸಲ ನೆನಪಿಸಿಕೊಳ್ಳೋಣ. ಲಘುವನ್ನೇ ಬಳಸಿ ಎರಡು, ಮೂರು, ನಾಲ್ಕು, ಐದು ಮತ್ತು ಏಳು ಮಾತ್ರೆಗಳ ಗುಂಪಿರುವಂತೆ ಸಾಲುಗಳನ್ನು ರಚಿಸಿದೆವು, ಹಾಗೇ ಗುರುವನ್ನೇ ಬಳಸಿ ಎರಡು, ನಾಲ್ಕು ಮತ್ತು ಆರು ಮಾತ್ರೆಗಳ ಗುಂಪಿರುವಂತೆಯೂ ಸಾಲುಗಳನ್ನು ರಚಿಸಿದೆವು.

ಆದರೆ ನಾವು ಯಾವಾಗಲೂ ಬರೀ ಲಘುವಿನಲ್ಲಿ ಅಥವಾ ಬರೀ ಗುರುವಿನಲ್ಲಿ ಮಾತಾಡುತ್ತೀವಾ? ಖಂಡಿತಾ ಇಲ್ಲ. ನಮ್ಮ ಮಾತಲ್ಲಿ ಲಘು-ಗುರು ಎರಡೂ ರೀತಿಯ ಅಕ್ಷರಗಳು ಇದ್ದೇ ಇರುತ್ತವೆ ಅಲ್ಲವೇ? ಹಾಗೇ ಪದ್ಯದಲ್ಲೂ ಕೂಡ. ಯಾವುದೇ ಪದ್ಯವಾದರೂ ಲಘು-ಗುರುಗಳ ಮಿಶ್ರಣ. ಕೆಲವು ಅಕ್ಷರ ತುಂಡು (ಲಘು), ಕೆಲವಕ್ಕೆ ಎಳೆತ (ಗುರು). ಮೊದಲು ಮಾಡಿದೆವಲ್ಲ, ಮೂರು, ನಾಲ್ಕು, ಐದು, ಏಳು ಇತ್ಯಾದಿ ಲಯಬದ್ಧ ಗುಂಪು? ಅಲ್ಲಿ ಬರೀ ಲಘು ಅಥವ ಬರೀ ಗುರು ಬಳಸುವ ಬದಲು, ಲಘು ಮತ್ತು ಗುರು ಎರಡನ್ನೂ ಬೇರೆಬೇರೆ ರೀತಿಗಳಲ್ಲಿ ಬಳಸಿ ಬೇರೆ ಬೇರೆ ಲಯಗಳನ್ನು ಸೃಷ್ಟಿಸಬಹುದು.

ಇಲ್ಲಿ ನೋಡಿ (ಇದನ್ನು ಜೋರಾಗಿ ಹೇಳಿ):

ಬಳಸಿ ಬಳಸಿ ನುಡಿಯ ಬೇಡ ನೇರ ನುಡಿಯ ನೂ (ತಕಿಟ ತಕಿಟ ತಕಿಟ ತಕಿಟ ತಾತ ತಕಿಟ ತಾ ಎಂಬಂತೆ) [ಬಳಸಿ (UUU) ಬಳಸಿ (UUU) ನುಡಿಯ (UUU) ಬೇಡ ( _U) ನೇರ ( _U) ನುಡಿಯ (UUU) ನೂ - ಇಲ್ಲಿ ಮೂರುಮೂರು ಮಾತ್ರೆಯ ಜೊತೆ ಬಂದಿದೆ, ಆದರೆ ಕೆಲವು ಗುಂಪುಗಳಲ್ಲಿ ಎಲ್ಲವೂ ಲಘು, ಕೆಲವರಲ್ಲಿ ಲಘು-ಗುರುಗಳ ಮಿಶ್ರಣ]

ಗಣಪತಿ ಬಪ್ಪಾ ಬಂದಾ ನೋಡೂ (ತಕತಕ ತಾತಾ ತಾತಾ ತಾತಾ ಎಂಬಂತೆ) [ಗಣಪತಿ (UUUU) ಬಪ್ಪಾ ( _ _ ) ಬಂದಾ ( _ _ ) ನೋಡೂ ( _ _ ) - ನಾಲ್ಕುನಾಲ್ಕು ಮಾತ್ರೆಯ ಜೊತೆ, ಲಘು-ಗುರುಗಳ ಮಿಶ್ರಣ]

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ (ತಾತಕಿಟ ತಾತಕಿಟ ತಾತಕಿಟ ತಾತಾ ಎಂಬಂತೆ) [ತೂಕಡಿಸಿ ( _UUU) ತೂಕಡಿಸಿ ( _UUU) ಬೀಳದಿರು ( _UUU) ತಮ್ಮಾ ( _ _ ) - ಐದೈದು ಮಾತ್ರೆಗಳ ಜೊತೆ, ಲಘು ಗುರುಗಳ ಸೊಗಸಾದ ಮಿಶ್ರಣ ಇಲ್ಲಿ]

ಶಾಲೆಯಲಿ ನೀ ಓತ್ಲ ಹೊಡೆದರೆ ನಾಕು ಬಾರಿಸಿ ಬಿಡುವೆನು (ತಾತಕಿಟತಾ ತಾತಕಿಟತಕ ತಾತತಾಕಿಟ ತಕಿಟತಾ ಎಂಬಂತೆ) [ಶಾಲೆಯಲಿ ನೀ ( _UUU _) ಓತ್ಲ ಹೊಡೆದರೆ ( _U UUUU) ನಾಕು ಬಾರಿಸಿ ( _U _UU) ಬಿಡುವೆನು (UUUU) - ಏಳೇಳು ಮಾತ್ರೆಯ ಜೊತೆ, ಲಘು-ಗುರುಗಳ ಹದವಾದ ಮಿಶ್ರಣ ಇಲ್ಲಿದೆ]

ಗೆಳೆಯರೇ, ಇಷ್ಟು ಓದಿದಮೇಲೆ, ಹಾಡಿದ ಮೇಲೆ, ನಿಮಗೆ ಮಾತ್ರೆ-ಲಯದ ಮರ್ಮ ಅರ್ಥವಾಗಿರಬೇಕು. ಇನ್ನು ವಿಜೃಂಭಿಸಿ. ೧-೨ (ಲಘು-ಗುರು) ಗಳನ್ನು ವಿವಿಧ ರೀತಿಯಲ್ಲಿ ಬಳಸಿ ಎರಡೋ ಮೂರೋ ನಾಲ್ಕೋ ಹೀಗೆ ನಿಮ್ಮ ಮನಸ್ಸಿನಲ್ಲಿ ಮೂಡಿದ ಲಯದಲ್ಲಿ ಸಾಲುಗಳನ್ನು ರಚಿಸಿ. ನೆನಪಿರಲಿ, ಇದು ಕಾವ್ಯವಾಗಬೇಕಿಲ್ಲ, (ಕಾವ್ಯವಾದರೂ ತಪ್ಪಲ್ಲ) ಒಟ್ಟಿನಲ್ಲಿ ಲಯಬದ್ಧವಾದ, ಅರ್ಥಬದ್ಧವಾದ ಸಾಲುಗಳು ಬಂದರೆ ಸರಿ.

ಮತ್ತೆ ನೆನಪಿಸುತ್ತೇನೆ, ಬರೀ ಯಾಂತ್ರಿಕವಾಗಿ ಲಘು ಗುರುಗಳನ್ನು ಲೆಕ್ಕಹಾಕಿ ಬರೆಯಬೇಡಿ. ನೀವು ಬರೆದದ್ದು ನಿಮಗೇ ತಾಳಹಾಕಿಕೊಂಡು ಓದಲು ಸಿಗಬೇಕು. ಲಯ ಮನಸ್ಸಿನಲ್ಲಿ ಮೂಡಬೇಕಷ್ಟೇ ಬರೀ ಲೆಕ್ಕದಲ್ಲಿ ಅಲ್ಲ.

ಇದು ನಿಮ್ಮ ಹಿಡಿತಕ್ಕೆ ಸಿಕ್ಕಿದ ಮೇಲೆ ಮುಂದೆ ನೋಡೋಣ.

Tuesday, January 17, 2012

ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 2: ಮಾತ್ರೆ-ಗಣ (ಮುಂದುವರೆದಿದೆ)

ಹಿಂದಿನ ಬರಹದಲ್ಲಿ ಲಘು-ಗುರು ಅಂದರೆ ಏನು ಅಂತ ತಿಳಿದುಕೊಂಡೆವು (ನೋಡಿಲ್ಲದೇ ಇದ್ದರೆ ಆ ಬರಹ ಇಲ್ಲಿದೆ ನೋಡಿ)

ಸುಮ್ಮನೇ ಒಂದು ಸಲ ನೆನಪಿಸಿಕೊಳ್ಳೋಣ. ಲಘು ಅಂದರೆ ಒಂದು ಚಿಟುಕೆ ಹೊಡೆಯುವಷ್ಟು ಕಾಲ. ಗುರು ಅಂದರೆ ಅದರ ಎರಡರಷ್ಟು ಕಾಲ. ಆದ್ದರಿಂದ ಸಾಮಾನ್ಯವಾಗಿ ಎಲ್ಲ ಹ್ರಸ್ವಾಕ್ಷರಗಳೂ ಲಘು; ಎಲ್ಲಾ ಧೀರ್ಘಾಕ್ಷರಗಳೂ ಗುರು. ಒತ್ತಕ್ಷರದ ಹಿಂದಿನ ಅಕ್ಷರ ಅದೇನೇ ಇದ್ದರೂ ಗುರುವೇ. ಸರಳವಾಗಿ ತಿಳಿಯಲು ಇದಿಷ್ಟು ಈಗ್ಗೆ ಸಾಕು. ಈಗ ಬಳಕೆಯಲ್ಲಿ ಈ ಲಘು-ಗುರುಗಳನ್ನು ಸ್ವಲ್ಪ ನೋಡೋಣ.

ಈ ಸಾಲುಗಳನ್ನು ಜೋರಾಗಿ ಓದಿ:

ಚಿಲಿಪಿಲಿ ಉಲಿಯುತ ನಲಿವುದೆ ಸೊಗಸು (ತಕ ತಕ ತಕ ತಕ ಎಂಬಂತೆ - ಚಿಲಿ| ಪಿಲಿ| ಉಲಿ| ಯುತ| ನಲಿ| ವುದೆ| ಸೊಗ| ಸು - ಇಲ್ಲೆಲ್ಲಾ ಎರಡೆರಡು ಮಾತ್ರೆಯ ಜೊತೆಯಾಗಿ ಬಂದಿದೆ)

ಇಲಿಯು ಗಣಪಗೊಲಿಯಿತು (ತಕಿಟ ತಕಿಟ ತಕಿಟ ಎಂಬಂತೆ - ಇಲಿಯು| ಗಣಪ| ಗೊಲಿಯಿ| ತು - ಇಲ್ಲಿ ಮೂರುಮೂರು ಮಾತ್ರೆಯ ಜೊತೆಗಳು ಬಂದುವು)

ತಲೆಯನು ಪರಪರ ಕೆರೆಯುತಲಿಹಳು (ತಕತಕ ತಕತಕ ತಕತಕ ಎಂಬಂತೆ - ತಲೆಯನು| ಪರಪರ| ಕೆರೆಯುತ| ಲಿಹಳು| - ಇಲ್ಲಿ ನಾಲ್ಕು ನಾಲ್ಕು ಮಾತ್ರೆಯ ಜೊತೆ)

ಮನೆಗೆಲಸ ಮುಗಿಸದೆಯೆ ತರಗತಿಗೆ ಹೊರಟ (ತಕತಕಿಟ ತಕತಕಿಟ ತಕತಕಿಟ ಎಂಬಂತೆ - ಮನೆಗೆಲಸ| ಮುಗಿಸದೆಯೆ| ತರಗತಿಗೆ| ಹೊರಟ| - ಇಲ್ಲಿ ಐದೈದು ಮಾತ್ರೆಯ ಜೊತೆ)

ಮನೆಯ ಕೆಲಸವ ಬರೆದು ಮುಗಿಸದೆ ತರಗತಿಗೆ ಇವ ಹೊರಟನು (ತಕಿಟತಕತಕ ತಕಿಟತಕತಕ ಎಂಬಂತೆ - ಮನೆಯ ಕೆಲಸವ| ಬರೆದು ಮುಗಿಸದೆ| ತರಗತಿಗೆ ಇವ| ಹೊರಟನು| - ಇಲ್ಲಿ ಏಳೇಳು ಮಾತ್ರೆಯ ಜೊತೆ)

ಇಲ್ಲಿ ನೀವು ಗಮನಿಸಬೇಕಾದ್ದು ಮೇಲೆ ಬಳಸಿರುವುದೆಲ್ಲಾ ಲಘು (U) ಅಕ್ಷರಗಳೇ! ಅಂದರೆ ಕೇವಲ ಒಂದು ಮಾತ್ರೆಯ (ಒಂದು ಚಿಟುಕೆ ಹೊಡೆಯುವಷ್ಟೇ) ಅಕ್ಷರಗಳು.

ಇದೇ ರೀತಿ ಕೆಲವು ಅಭ್ಯಾಸಗಳನ್ನು ಮಾಡೋಣವೇ? ಮೇಲೆ ಹೇಳಿದ ಯಾವುದಾದರೂ ಲಯದಲ್ಲಿ, ಬರೀ ಲಘು ಅಕ್ಷರಗಳನ್ನೇ ಬಳಸಿ ಏನಾದರೂ ಬರೆಯಿರಿ (ಅದು ಅದ್ಭುತ ಕಾವ್ಯವಾಗಿರಬೇಕಿಲ್ಲ, ಏನಾದರೂ ಆಗಬಹುದು)

ಈಗ ಈ ಸಾಲುಗಳನ್ನು ಜೋರಾಗಿ ಓದೋಣ.

ಕಾ ಕಾ ಕಾಗೇ ಬಂತೂ ನೋಡೀ (ತಾ ತಾ ತಾ ತಾ ಎಂಬಂತೆ - ಕಾ| ಕಾ| ಕಾ| ಗೇ| ಬಂ| ತೂ| ನೋ| ಡೀ| - ಇಲ್ಲಿ ಎರಡೆರಡು ಮಾತ್ರೆಗಳು ಬಂದಿದಿವೆ, ಆದರೆ ಒಂದೊಂದರ ಎರಡು ಲಘುವಿನ ಬದಲು ಒಂದೇ ಗುರು ಬಂದಿದೆ)

ಬಂದಾ ಬಂದಾ ಚಂದಾ ಮಾಮಾ (ತಾತಾ ತಾತಾ ತಾತಾ ತಾತಾ ಎಂಬಂತೆ - ಬಂದಾ| ಬಂದಾ| ಚಂದಾ| ಮಾಮಾ| - ಇಲ್ಲಿ ನಾಲ್ಕು ನಾಲ್ಕು ಮಾತ್ರೆಯ ಜೊತೆ, ಅಂದರೆ ಒಂದೊಂದು ಗುಂಪಿನಲ್ಲೂ ಎರಡೆರಡು ಗುರು)

ರಂಗಯ್ಯಾ ಬಂದವ್ನೇ ಬಾಗ್ಲಲ್ಲೀ ನಿಂದವ್ನೇ (ತಾತಾತಾ ತಾತಾತಾ ತಾತಾತಾ ತಾತಾತಾ ಎಂಬಂತೆ - ರಂಗಯ್ಯಾ| ಬಂದವ್ನೇ| ಬಾಗ್ಲಲ್ಲೀ| ನಿಂದವ್ನೇ| - ಇಲ್ಲಿ ಆರಾರು ಮಾತ್ರೆಯ ಜೊತೆ, ಅಂದರೆ ಒಂದೊಂದು ಗುಂಪಿನಲ್ಲೂ ಮೂರುಮೂರು ಗುರು)

ಇಲ್ಲಿ ನೀವು ಗಮನಿಸಬೇಕಾದ್ದು ಮೇಲೆ ಬಳಸಿರುವುದೆಲ್ಲಾ ಗುರು ( _ ) ಅಕ್ಷರಗಳೇ! ಅಂದರೆ ಎರಡು ಮಾತ್ರೆಯ (ಎರಡು ಚಿಟುಕೆ ಹೊಡೆಯುವಷ್ಟು) ಅಕ್ಷರಗಳು.

ಇದೇ ರೀತಿ ಕೆಲವು ಅಭ್ಯಾಸಗಳನ್ನು ಮಾಡೋಣವೇ? ಮೇಲೆ ಹೇಳಿದ ಯಾವುದಾದರೂ ಲಯದಲ್ಲಿ, ಬರೀ ಗುರು ಅಕ್ಷರಗಳನ್ನೇ ಬಳಸಿ ಏನಾದರೂ ಬರೆಯಿರಿ

ಗೆಳೆಯರೇ, ಇಲ್ಲಿಂದಾಚೆಗೆ ಇದು ನಿಮ್ಮೆಡೆಯಿಂದ ತುಸು ಅಭ್ಯಾಸವನ್ನು ನಿರೀಕ್ಷಿಸುತ್ತದೆ. ಅಭ್ಯಾಸರೂಪದ ಪ್ರತಿಕ್ರಿಯೆಗಳು ಬಂದಷ್ಟೂ ಮುಂದುವರೆಸಲು ಹುರುಪು.

ಇದು ಸ್ವಲ್ಪ ಕೈವಶವಾದ ನಂತರ ಮುಂದುವರೆಯೋಣ.

ಈ ಸರಣಿಯ ಮುಂದಿನ ಬರಹ ಇಲ್ಲಿದೆ.
 

Monday, January 9, 2012

ಚೊಚ್ಚಿಲ ಕಂದನನ್ನು ಕಾಯುತ್ತಾ

"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapaana.com) ವಿವಿಧ ಛಂದಸ್ಸುಗಳಲ್ಲಿ "ಚೊಚ್ಚಿಲ ಬಸಿರಿನ" ಬಗ್ಗೆ ಪದ್ಯಗಳನ್ನು ರಚಿಸುವ ಆಹ್ವಾನವಿತ್ತು. ಕವಯಿತ್ರಿಗಿರುವ ಅನುಭವ ಸಂಪತ್ತು ಈ ವಿಷಯದಲ್ಲಿ ಕವಿಗಿಲ್ಲವೆನ್ನುವುದೇನೋ ನಿಜ. ಆದರೂ ಕವಿಗಿರುವ ಕಲ್ಪನಾಸ್ವಾತಂತ್ರ್ಯವನ್ನು ತುಸು (ದುರ್)ಉಪಯೋಗ ಪಡಿಸಿಕೊಂಡಿದ್ದೇನೆ. ಇದರಲ್ಲಿ ’ಬುರುಡೆ-ಬುಡುಬುಡಿಕೆ’ಕಂಡುಬಂದರೆ ತಾಯಂದಿರು ಮನ್ನಿಸಿ.
ಪಂಚಮಾತ್ರಾ ಚೌಪದಿ
ಮುಗಿಲ ಮೊದಲನೆ ಮಳೆಗೆ ನೆನೆದ ಮಣ್ಣಿನ ಕಂಪು
ಮುಗಿದ ಹಚ್ಚನೆ ಮೊಗ್ಗು ಬಿರಿವ ಕೆಂಪು
ಬಗೆ-ಮೈಗಳುಬ್ಬೆ ಮೊದಲಬ್ಬೆತನದಾ ಪೆಂಪು
ನಗೆಸೂಸಿ ಹರಡುತಿದೆ ಮನೆಗೆ ತಂಪು.

ಉತ್ಫಲಮಾಲಾ
ಬೆಚ್ಚನೆ ರಾತ್ರೆಯೊಳ್ ಮನದಿ ಶಂಕೆಯು ಹಿಗ್ಗುತ ಚುಚ್ಚಿ ಕಾಡಿರಲ್
ಬೆಚ್ಚುತ ಚಿಂತಿಪಳ್ ಮಗುವಿದೇಂ ಮಲಗಿಪ್ಪುದೊ ಸತ್ತುದೊ ಕಾಣೆನೇ ಶಿವಾ
ಮುಚ್ಚಿದ ಕಂಗಳೊಳ್ ನಿದಿರೆ ಬಾರದೆ ಬೇಗುದಿ ಭಾರವಾಗಿರಲ್
ಕೆಚ್ಚನೆ ಕಾಲೊಳೊದ್ದು ಬಸಿರಂ ತನಯಂ ಹಿರಿ ಚಿಂತೆನೀಗುವಂ

ಕಂದ
ಕಂದಂ ಬಸಿರೊದೆವಂದಂ
ಬಂಧುರಮೀ ತಾಯ್ ಕುಲಾವಿಗನಸಿನ ಚಂದಂ
ಕಂದಂ ನಸುನಗುವೋಲ್ ಮೇಣ್
ಮುಂದೋಡುತ ಬಿಳ್ದು ಭೋರಿಡುವವೋಲ್ ನೆನೆವಳ್

ಮತ್ತೇಭವಿಕ್ರೀಡಿತ
ಮೆರೆವಳ್ ಮೋದದಿ ಮತ್ತೆ ಮೈಯ ಮರೆವಳ್ ಮತ್ತಾಲಸಂ ಬಾಧಿಸಲ್
ಒರಗುತ್ತುಂ ಕಿರು ಮಂಚದೊಳ್ ನಲುಮೆ ತೋಳ್ ಸಾಂಗತ್ಯಮಂ ಧೇನಿಪಳ್
ಕಿರಿದೊಂದೇ ಕ್ಷಣದೊಳ್ ಮನೋನಯನದೊಳ್ ಕಂದಂ ನಗುತ್ತೈತರಲ್
ಸಿರಿಯಂ ಕಂಡವೊಲಾಗಿ ಕಂಡ ಕನಸೊಳ್ ತೇಲುತ್ತಲಾನಂದಿಪಳ್

ರಗಳೆ
ಮೊದಲಿನ ಹಿಗ್ಗದು ಆಗಸಮುಟ್ಟಲ್
ಬೆದರಿಪ ಭಯವದು ಮೈ ಮನ ತಟ್ಟಲ್
ಬಗೆಬಗೆ ಬಯಕೆಯ ತೆನೆಯೊಡೆಯುತಿರಲ್
ಚಿಗುರುವ ಲತೆಯೊಲ್ ಬಸಿರದು ಬೆಳೆಯಲ್
ತೆಗೆವಾ ನೋವದು ಬೆಳೆದಿರೆ ಒಡಲೊಳ್
ಬಗೆಯೊಳ್ ಕಂದಂ ನೋವ ಮರೆಸಿರಲ್
ಬೆವರುತ ಸುಖದೊಳ್ ಬೆದರುತ ಭಯದೊಳ್
ನವೆವಳ್ ಬೆಳೆವಳ್ ಚೊಚ್ಚಲ ಬಸಿರೊಳ್
ಕೊ: ಗೆಳೆಯ ಚಂದ್ರಮೌಳಿಯವರು ಮೇಲಿನ ಉತ್ಫಲಮಾಲಾ ವೃತ್ತದ ಎರಡನೆಯ ಸಾಲಿನಲ್ಲಿ ಮೂರಕ್ಷರ ಹೆಚ್ಚಾಗಿ ಬಂದಿದೆಯೆಂಬುದನ್ನು ಗಮನಿಸಿದರು. ಇದನ್ನು ಸರಳವಾಗಿ ಸರಿಪಡಿಸಬಹುದಾದರೂ, ಅದೇಕೋ ಇದನ್ನು ಸರಿಪಡಿಸಲು ಮನಸ್ಸೊಪ್ಪುತ್ತಿಲ್ಲ. ಈ ಹೆಚ್ಚಿನ ಗಣವನ್ನು ಗರ್ಭಸ್ಥ ಶಿಶುವಿನ ಪ್ರತೀಕವೆಂದು ಹಾಗೆಯೇ ಉಳಿಸಿಕೊಳ್ಳುತ್ತೇನೆ:

ಆರರ ಮೇಲಿನೊಂದು ಗಣ ದೋಷಮದುತ್ಫಲ ಮಾಲೆಗೆಂದಪರ್
ಮೀರಿರೆ ಪದ್ಯದಂದಗಿಡುಗುಂ ಸರಿ ತೋರದು ಛಂದಕೆಂದಿರಲ್
ಆರನೆ ಕಾಲ್ವೆರಲ್ ದೊರೆಯ ಕಂದನ ಚಂದವ ಕೀಳುಗಟ್ಟಿತೇಂ
ಮೀರಿದ ಭಾರಮುತ್ಫಲಿತ ಗರ್ಭಕೆ ಶೋಭೆಯ ತರ್ಪುದೇ ದಿಟಂ

ಮರೆಯಲ್ ಭಾವದದೊಂದು ಜೋರ ಸೆಳೆಯೊಳ್ ಮೇಲಾಗಿ ಮೂರಕ್ಕರಂ
ನೆರೆಯಲ್ ತಾಳವು ತಪ್ಪಿ ಮುಗ್ಗರಿಸಲುಂ ಛಂದಸ್ಸದೇಂ ಬೇರೆಯೇಂ?
ಸರಿಯೈದೇವೆರಲಿದ್ದೊಡಂ ಮನುಜಗಾರಾಯ್ತೆಂದು ಬೇರಾದನೇಂ?
ಮರೆವೀ ಮಾನವ ಜನ್ಮಜಾತ ಗುಣವೈ ಬ್ರಹ್ಮಾದಿಗಳ್ ಮೀರರೇಂ?

ಪದ್ಯದಲ್ಲೊಂದು ಗಣ ಮೀರಿದರೆ ಛಂದಸ್ಸು ಕೆಡುವುದು, ನಿಜ. ಕಾಲಿಗೆ ಐದೇ ಬೆರಳಾದರೂ ಅಪರೂಪಕ್ಕೆ ಆರು ಬೆರಳಿರುವುದಿಲ್ಲವೇ? ಅದೇನು ಚಂದ್ರಹಾಸನ ಅಂದಗೆಡಿಸಿತೇ? ಮೀರಿದ ಭಾರವು ಬಸಿರಿನ ಶೋಭೆಯನ್ನು ಹೆಚ್ಚಿಸುವುದಲ್ಲದೇ ಕೆಡಿಸುವುದೇ? ಬ್ರಹ್ಮಾದಿಗಳೇ ಮರೆತು ಬೆರಳಿನ ಲೆಕ್ಕವನ್ನು ಹೆಚ್ಚು ಕಡಿಮೆ ಮಾಡುವಾಗ ಮರೆವು ಮನುಜನಿಗೆ ಸಹಜವಲ್ಲವೇ? :)

Saturday, January 7, 2012

ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 1: ಲಘು-ಗುರು

ಇತ್ತೀಚಿಗೆ ನಾನು ಛಂದೋಬದ್ಧ ರಚನೆಗಳಿಗೆ ಕೈಹಾಕಿದ ಮೇಲೆ ಇದರಲ್ಲಿ ಆಸಕ್ತಿ ತಳೆದ ಅನೇಕ ಮಿತ್ರರು, ಈ ಬಗ್ಗೆ ಸರಳವಾಗಿ, ಪ್ರಾಕ್ಟಿಕಲ್ ಆಗಿ ಏನಾದರೂ ಏಕೆ ಬರೆಯಬಾರದೆಂದು ಕೇಳಿದರು. ಛಂದಸ್ಸಿನ ಬಗ್ಗೆ, ಕಾವ್ಯದ ಬಗ್ಗೆ ತಿಳಿಸುವ ಸಾವಿರಾರು ಪುಸ್ತಕಗಳೂ ನೂರಾರು ವೆಬ್ ಸೈಟುಗಳೂ ಇರುವಾಗ ನನ್ನದೊಂದು ಮಾತಿನ ಅಗತ್ಯ ಇಲ್ಲಿ ಇದೆಯೇ ಎನ್ನಿಸಿತು. ಆದರೂ ಈ ಛಂದಸ್ಸಾಹಿತ್ಯರಾಶಿಯಲ್ಲಿ ನಮಗೆ ಬೇಕಾದ ನಿರ್ದಿಷ್ಟ ಪ್ರಶ್ನೆಗೆ ಉತ್ತರ ಹುಡುಕುವುದಕ್ಕಾದರೂ ಛಂದೋಜಗತ್ತಿನಲ್ಲಿ ತುಸು ಪ್ರವೃತ್ತಿ ಬೇಕಲ್ಲವೇ? ಅದನ್ನು ಹುಡುಕಿ ಓದುವವರಾರು, ಓದಿದರೂ ಯಾರೊಡನಾದರೂ personal ಆಗಿ ಚರ್ಚಿಸಿದಷ್ಟು ಪರಿಣಾಮ ಬೀರುತ್ತವೆಯೇ? ಈ ಹಿನ್ನೆಲೆಯೇನೂ ಇಲ್ಲದ, ಆದರೆ ಕಲಿಯುವ/ರಚಿಸುವ ಉತ್ಸಾಹವಂತೂ ಹೇರಳವಾಗಿರುವ ಕವಿಗಡಣಕ್ಕೇನು ದಾರಿ? ಈ ಅಗತ್ಯವನ್ನೂ ತುಂಬಿ ಕೊಡುವ ಪ್ರಯತ್ನಗಳೂ ಇಲ್ಲದಿಲ್ಲ. ಪ್ರೊ. ಅ.ರಾ.ಮಿತ್ರರ "ಛಂದೋಮಿತ್ರ" ಇಂಥದ್ದೊಂದು ಪ್ರಯತ್ನ. ಮಿತ್ರರಿಗೆ ವಿಶಿಷ್ಟವಾದ, ಸುಲಲಿತ ಹಾಸ್ಯಮಿಶ್ರಿತ ಶೈಲಿಯಲ್ಲಿ ಛಂದಶ್ಶಾಸ್ತ್ರದಂಥ ಗಂಭೀರ ವಿಷಯವನ್ನು ಸರಸವಾಗಿ ಹೇಳುವ ಶೈಲಿ ಅನ್ಯಾದೃಶ. ಆಯಾ ಛಂದಸ್ಸುಗಳನ್ನು ಆಯಾ ಛಂದಸ್ಸಿನ ಪದ್ಯಗಳಲ್ಲೇ ವಿವರಿಸುತ್ತಾ, ಅದೇ ಛಂದಸ್ಸಿನಲ್ಲಿ ಹಾಸ್ಯಮಿಶ್ರಿತವಾದ ಲಕ್ಷಣ ಪದ್ಯವನ್ನೂ ಕೊಡುವ ಈ ಪುಸ್ತಕ ಛಂದಶ್ಶಾಸ್ತ್ರಸಾಹಿತ್ಯದಲ್ಲಿ ಒಂದು ಅಪೂರ್ವ ಪ್ರಯತ್ನ. ಆದರೂ, ಇಷ್ಟು ಸುಲಲಿತ ಸರಳ ಶೈಲಿಯಿದ್ದಾಗ್ಯೂ ಈ ಪುಸ್ತಕವೂ ಪದ್ಯಭೂಯಿಷ್ಠವೇ ಆದ್ದರಿಂದ ಪದ್ಯವೆಂದರೆ ತುಸು ಕಣ್ಣೆಳೆಯುವ ಗುಂಪಿಗೆ ಇದನ್ನು ಇನ್ನೂ ಸರಳಗೊಳಿಸಿ ಲಲಿತ ಗದ್ಯದಲ್ಲಿ ಹೇಳುವ ಅಗತ್ಯವಿದೆಯೆನ್ನಿಸಿತು. ಹಾಗೆಯೇ ಛಂದಶ್ಶಾಸ್ತ್ರದ ಪಾಠಗಳನ್ನು ಸರಸ-ಗಂಭೀರವಾಗಿ ಪ್ರಾತ್ಯಕ್ಷಿಕೆಯೊಡನೆ ತಿಳಿಸಿಕೊಡುವ ಶ್ರೀ ಆರ್. ಗಣೇಶರ ವಿಡಿಯೋಗಳೂ ಇವೆ (http://www.padyapaana.com). ಪದ್ಯಪಾಠದ ಗಂಭೀರ ವಿದ್ಯಾರ್ಥಿಗಳಿಗೆ ಇದಕ್ಕಿಂತ ಹೇಳಿ ಮಾಡಿಸಿದ ತಾಣ ಇನ್ನೊಂದಿರಲಾರದು. ಈ ಪಾಠಗಳು ಬಹು ಸರಳವಾಗಿ, ಸ್ವಾರಸ್ಯಕರವಾಗಿದ್ದರೂ, ಇಲ್ಲಿಯೂ ಕಾವ್ಯರಚನೆಗೆ ಕೈಹಾಕಬೇಕಾದರೆ ತುಸುವಾದರೂ ಭಾಷಾಸಿದ್ಧತೆ ಬೇಕು.

ಆದರೆ ನನ್ನ ಈ ಲೇಖನ ಸರಣಿಯ audience ಈ ಗಂಭೀರ ವಿದ್ಯಾರ್ಥಿಗಳೂ ಅಲ್ಲ - ಈಗಷ್ಟೇ ಪದ್ಯರಚನೆಗೆ ಕೈಹಾಕಿ, ನವ್ಯ ಕವನಗಳ ಮಾದರಿಯ ಗದ್ಯರೂಪದ ಪದ್ಯಗಳನ್ನು ಬರೆಯುತ್ತಾ, ಛಂದಸ್ಸು, ಹಳಗನ್ನಡ ಇವುಗಳ ಗಂಧಗಾಳಿಯೂ ಇಲ್ಲದಿದ್ದರೂ ಛಂದೋಬದ್ಧವಾಗಿ ರಚಿಸಬೇಕೆಂಬ ಆಸಕ್ತಿ, ಆದರೆ ಲಘು-ಗುರುಗಳ ಮಾತ್ರೆ ನುಂಗಲು ಹೇವರಿಕೆ ಇವೆರಡೂ ಸಮಾನವಾಗಿ ಸಮ್ಮಿಳಿತವಾಗಿರುವ ಉತ್ಸಾಹೀ ಕವಿ ಕಿಶೋರರಿಗೆ, ಕಿಶೋರ ಕವಿಗಳಿಗೆ ಈ ಸರಣಿ ಅರ್ಪಿತ. ಅದಕ್ಕೆಂದೇ ತೀರ ತೀರ ಪ್ರಾಥಮಿಕ ಮಟ್ಟದಿಂದ ಆರಂಭಿಸಿ ಛಂದೋಪ್ರಪಂಚದ ಕೆಲವು ಹೊಳಹುಗಳನ್ನಷ್ಟೇ ಕಾಣಿಸುವುದು ಈ ಸರಣಿಯ ಉದ್ದೇಶ. ಇದರಿಂದ ಕಾವ್ಯಕ್ಕೆ ಲಯಪ್ರಾಸಗಳೂ ರುಚಿಕರ ವ್ಯಂಜನ ಹೌದೆಂಬ ವಿಷಯ ಉತ್ಸಾಹೀ ಓದುಗರ ಮನಕ್ಕೆ ಹತ್ತಿದರೆ, ಛಂದಸ್ಸನ್ನು ಗಂಭೀರವಾಗಿ ಅಧ್ಯಯನಮಾಡಬೇಕೆಂಬ ಹುಕ್ಕಿ ಬಂದರೆ, ನಾನು ಧನ್ಯ. ಒಮ್ಮೆ ಇದು ಬಂದಮೇಲೆ ಮೇಲ್ಕಾಣಿಸಿದ ಪುಸ್ತಕ-ಜಾಲತಾಣಗಳಿದ್ದೇ ಇವೆ; ಜೊತೆಗೆ ಅಪಾರ ಸಾಹಿತ್ಯವೂ ಇದೆ.

ಸರಣಿಯ ಹೆಸರೇ ಸೂಚಿಸುವಂತೆ ಕಾವ್ಯದ ಕುಣಿತದ ಭಾಗವನ್ನು ತೋರಿಸುವುದೇ ಈ ಸರಣಿಯ ಉದ್ದೇಶ. ಕುಣಿತ ಎಂಬುದರ ಬದಲು ನಡಿಗೆಯೆಂಬುದು ಹೆಚ್ಚು ಗಂಭೀರವಾಗಿರುತ್ತಿತ್ತಲ್ಲವೇ ಎಂಬ ಪ್ರಶ್ನೆಗೆ, "ಹೌದು, ಅದಕ್ಕೇ ನಡಿಗೆಯ ಬದಲು ಕುಣಿತ ಆದದ್ದು" ಎಂಬುದು ನನ್ನ ಉತ್ತರ. ಮೊದಲೇ ಹೇಳಿದಂತೆ ಕಾವ್ಯದ ಗಂಭೀರ ನಡಿಗೆಯನ್ನೂ ಗಜಗಮನವನ್ನೂ ತೋರಿಸುವ ಅನೇಕ ಪ್ರೌಢಾತಿಪ್ರೌಢ ಗ್ರಂಥಗಳು ಈಗಾಗಲೇ ಇವೆ. ಆದರೆ ಆಡುವ ಮಕ್ಕಳಿಗೆ ಬ್ರಹ್ಮಸೂತ್ರದಿಂದೇನು ಪ್ರಯೋಜನ?

ಮೊದಲೇ ಹೇಳಿದಂತೆ ಈ ಸರಣಿ ಕೇವಲ ಆರಂಭಿಕರಿಗೋಸ್ಕರ. ಪರಿಭಾಷೆಯನ್ನು ಆದಷ್ಟು ಕಡಿಮೆಗೊಳಿಸುವುದು ಇಲ್ಲಿ ಉದ್ದೇಶ. ಹಾಗೂ ಬಳಸಿದ ಪರಿಭಾಷೆಯಲ್ಲಿ ಸೂಕ್ಷ್ಮ ಅದಲುಬದಲು (interchange) ಆಗಲೂ ಬಹುದು. ಈ ಸರಣಿಯಲ್ಲಿ ಒಂದೊಂದು ಲೇಖನವೂ ಒಂದೊಂದು ಹೊಸ ವಸ್ತು-ವಿಷಯವನ್ನೊಳಗೊಂಡಿರುತ್ತದೆ. ಬರೆದಿದ್ದಕ್ಕೆ ತಕ್ಕಷ್ಟು ಉದಾಹರಣೆಗಳನ್ನೂ ಕೊಡುತ್ತೇನೆ. ಇದರ ಉದ್ದೇಶ ಸುಮ್ಮನೇ ಬರೆದು ಮರೆಯುವುದಲ್ಲ. ಆಸಕ್ತರು ತಾವೂ ಆಯಾ ಪ್ರಕಾರದಲ್ಲಿ ಪದ್ಯವನ್ನು ರಚಿಸಲು ಪ್ರಯತ್ನಿಸಬಹುದು. ನಿಜಕ್ಕೂ ಇದೊಂದು ಆಟದಂತೆ, ಹರಟೆ ಕಟ್ಟೆಯಂತೆ ಚೇತೋಹಾರಿಯಾಗಬೇಕೆಂದು ನನ್ನ ಆಸೆ. ಇಲ್ಲಿ ನೀವು ಮಾಮೂಲಾಗಿ ಹರಟಿದರೂ ಅಡ್ಡಿಯಿಲ್ಲ, ಒಬ್ಬರು ಇನ್ನೊಬ್ಬರ ಕಾಲೆಳೆದರೂ ಅಡ್ಡಿಯಿಲ್ಲ, ಆದರೆ ಒಂದೇ ಒಂದು ಶರತ್ತೆಂದರೆ ಹರಟಿದರೂ ಪದ್ಯದಲ್ಲೇ ಹರಟಬೇಕು, ಕಾಲೆಳೆದರೂ ಪದ್ಯದಲ್ಲೇ ಕಾಲೆಳೆಯಬೇಕು, ಒದ್ದರೂ ಪದ್ಯದಲ್ಲೇ ಒದೆಯಬೇಕು [:)]

ಇನ್ನು ಮುಂದುವರೆಯೋಣ. ಮೊದಲಿಗೆ, ಛಂದಸ್ಸು ಅಂದ್ರೆ ಏನು? ಛಂದಸ್ಸು ಅಂದ್ರೆ, ಕವನಕ್ಕೆ ಬೇಕಾದ ಲಯ, ಪ್ರಾಸಗಳ ಕಟ್ಟುಪಾಡು. ಅರೇ, ಒಂದು ನಿಮಿಷ! ಈ ಲಯ ಅಂದ್ರೆ ಏನಪ್ಪಾ?!!

ಈ ಕೆಳಗಿನ ಸಾಲುಗಳನ್ನು ನೋಡಿ (ಜೋರಾಗಿ ಹೇಳಿ, ಬೇಕಿದ್ರೆ ಕೈ ಚಪ್ಪಾಳೆ ಹಾಕಿಕೊಂಡು ಹೇಳಿ):

ಅನಂತದಿಂ ದಿಗಂತದಿಂ
ಅನಂತದಾ ದಿಗಂತದಿಂ|

ಏನಿದು ಧೂಳೀ ಓಹೋ ಗಾಳೀ
ಸುರ್ರನೆ ಬಂತೈ ಸುಂಟರಗಾಳೀ|

ಆಟಕ್ಕುಂಟೂ ಲೆಕ್ಕಕ್ಕಿಲ್ಲಾ|

ಬಂದಾ ಬಂದಾ ಸಣ್ ತಮ್ಮಣ್ಣಾ|

ಬೇಕೇ ಬೇಕೂ
ನ್ಯಾಯಾ ಬೇಕೂ|

ಲಗ್ಗ ಲಗಾ ಲಗಾ ಲಗಾ
ಲಗ್ಗ ಲಗಡಿ ಲಗಾ ಲಗಾ|

ಇಲ್ಲೊಂದು ಕುಣಿತದ ಸ್ಥಿತಿ ಕಾಣುತ್ತದೆ ಅಲ್ಲವೇ? ಅದೇ ಲಯ/rhythm. ಅದು ಹೇಗೆ ಬಂತು? ಹೇಗೆ ಅಂದ್ರೆ, ಕೆಲವು ಅಕ್ಷರಗಳು ಚಿಕ್ಕವು, ಕೆಲವು ಉದ್ದ; ಕೆಲವಕ್ಕೆ ಕಡಿಮೆ ಕಾಲ ತೆಗೆದುಕೊಂಡರೆ ಕೆಲವಕ್ಕೆ ಜಾಸ್ತಿ ಕಾಲ. ಅದಕ್ಕೇ ಅಲ್ಲೊಂದು ಕುಣಿತದ ಲಯ ಮೂಡಿಬರುತ್ತದೆ. ಅನೇಕ ವೇಳೆ ನಮಗೆ ಅರಿವಿಲ್ಲದೇ ನಾವು ಲಯಬದ್ಧವಾಗಿ ಮಾತಾಡಿಬಿಡುತ್ತೇವೆ. ಇನ್ನು ಮೇಲಿನ ಉದಾಹರಣೆ ತಗೊಂಡ್ರೆ, "ಅನಂತ" ಅನ್ನೋ ಪದಾನೇ ನೋಡಿ. ಅ ಎನ್ನುವ ಅಕ್ಷರದ ಎರಡರಷ್ಟು ಸಮಯ ನಂ ಅನ್ನುವ ಅಕ್ಷರಕ್ಕೆ ಬಂತು; ಹಾಗೇ ತ ಎಂಬ ಅಕ್ಷರವು ಅ ಎಂಬ ಅಕ್ಷರದಷ್ಟೇ ಸಮಯ ತೆಗೆದುಕೊಂಡಿತು. ಹೀಗೆ ಒಂದು ಎರಡರಷ್ಟು ಸಮಯ ತೆಗೆದುಕೊಳ್ಳುವ ಅಕ್ಷರಗಳನ್ನು ಯಾವುದೋ ಕ್ರಮದಲ್ಲಿ ಜೋಡಿಸಿದರೆ ಅಲ್ಲಿ ಲಯ ಮೂಡುತ್ತದೆ. ಉದಾಹರಣೆಗೆ ಲ(2)ಗ್ಗ(1) = 3; ಲ(1)ಗಾ(2) = 3; ಲ(1)ಗಾ(2) = 3; ಲ(1)ಗಾ(2) = 3 ಇಲ್ಲಿ ಮೂರುಮೂರಕ್ಷರದ 123,123,123,123 ಎನ್ನುವ ಲಯವನ್ನು ಕಾಣುತ್ತೇವಲ್ಲವೇ (ಮತ್ತೆ ಜೋರಾಗಿ ಓದಿ ನೋಡಿ)?

ಅಂದರೆ ಅಕ್ಷರಗಳನ್ನು ನುಡಿಯುವ ಕಾಲಾವಧಿಯೇ ಲಯಕ್ಕೆ ಮೂಲ ಎಂದಾಯಿತು. ಈ ಕಾಲಾವಧಿಯನ್ನೇ ಮಾತ್ರಾಕಾಲ ಅಂತೀವಿ. ಮಾತ್ರೆ ಎಂದರೆ ಒಂದು ಚಿಟಿಕೆ ಹಾಕುವಷ್ಟು ಕಾಲ (ಮಾತ್ರೆ ಅಂದ್ರೆ tablet ಅನ್ಕೊಂಡೀರಿ ಮತ್ತೆ [:)] ).

ಈ ಅಕ್ಷರಗಳನ್ನು ಎಲ್ಲೂ ನಿಲ್ಲಿಸದೇ ಜೋರಾಗಿ ಹೇಳಿ ನೋಡಿ:

ಅ, ಇ, ಉ, ಋ, ಎ, ಒ
ಕ, ಖ, ಗ, ಘ, ಙ, ಯ, ರ, ಲ, ವ...

ಇವನ್ನು ಹೇಳಲು ಒಂದು ಚಿಟಿಕೆಯಷ್ಟು ಕಾಲವಷ್ಟೇ ಬೇಕಾಗುವುದು. ಇದಕ್ಕೆ ಛಂದಸ್ಸಿನ ಭಾಷೆಯಲ್ಲಿ "ಲಘು" ಎನ್ನುತ್ತೇವೆ. ಬರಹದಲ್ಲಿ ಇದನ್ನು ( U ) ಎಂದು ಸೂಚಿಸುತ್ತೇವೆ.

ಇನ್ನು ಇವನ್ನು ಜೋರಾಗಿ ಹೇಳಿ:

ಆ, ಈ, ಊ, ೠ, ಏ, ಐ, ಓ, ಔ, ಅಂ, ಅಃ,
ಕಾ, ಖಾ, ಗಾ, ಘಾ, ಗೀ, ಮೀ, ಯೂ, ಲೇ, ರೌ...

ಇವನ್ನು ಹೇಳಲು ಮೇಲಿನ ಎರಡರಷ್ಟು ಕಾಲ ಬೇಕಾಗುವುದು (ಎರಡು ಚಿಟಿಕೆಯಷ್ಟು ಎನ್ನೋಣ). ಇದಕ್ಕೆ ಛಂದಸ್ಸಿನ ಭಾಷೆಯಲ್ಲಿ "ಗುರು" ಎನ್ನುತ್ತೇವೆ. ಬರಹದಲ್ಲಿ ಇದನ್ನು ( _ ) ಎಂದು ಸೂಚಿಸುತ್ತೇವೆ.

ಗಮನಿಸಿ: ಯಾವುದಾದರೂ ಒತ್ತಕ್ಷರದ ಹಿಂದಿರುವ ಅಕ್ಷರ ಸಹಜವಾಗಿಯೇ ಎಳೆಯುತ್ತದೆ. ಉದಾಹರಣೆಗೆ, ಅಣ್ಣ. ಇಲ್ಲಿ ಅ ಎನ್ನುವುದು ಒಂದೇ ಚಿಟುಕೆಯಲ್ಲಿ ಪೂರೈಸುವ ಅಕ್ಷರವಾದರೂ ಮುಂದೆ ಣ್ಣ ಇರುವುದರಿಂದ ಅ ಎಂಬ ಅಕ್ಷರ ಆ ಎಂಬಷ್ಟೇ ಕಾಲವನ್ನು ತೆಗೆದುಕೊಳ್ಳುತ್ತದೆ.

ಈ ಪದಗಳನ್ನು ಜೋರಾಗಿ ಹೇಳಿ ನೋಡಿ: ಅಣ - ಅಣ್ಣ, ಹಿಗು - ಹಿಗ್ಗು; ಬಕ - ಭಕ್ಷ್ಯ - ಇಲ್ಲೆಲ್ಲಾ ಮೊದಲನೆಯ ಪದದಲ್ಲಿ ಅ ಎನ್ನುವ ಅಕ್ಷರ ಮಾಮೂಲಾಗೇ ಬಂತು. ಎರಡನೆಯ ಪದಗಳಲ್ಲಿ ಅ ಎನ್ನುವುದು ಎರಡರಷ್ಟು ಸಮಯ ತೆಗೆದುಕೊಂಡಿತು.

ಆದ್ದರಿಂದ ಒತ್ತಕ್ಷರದ ಹಿಂದಿನ ಅಕ್ಷರವು ಲಘುವಾಗಿದ್ದರೂ ಅದನ್ನು ಗುರುವೆಂದೇ ಲೆಕ್ಕಹಾಕಬೇಕು
ಈ ಸರಣಿಯ ಮುಂದಿನ ಬರಹ ಇಲ್ಲಿದೆ.

Wednesday, December 21, 2011

ಹಾಯ್ಕುಗಳು

ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ - ಅರ್ಥದ, ಭಾವದ ಮಿಂಚು, ಮಿಂಚಿ ಮರೆಯಾಗುವ ಒಂದು ಕ್ಷಣದ ಸ್ತಬ್ಧಚಿತ್ರ. ತೀರ ಚಿಕ್ಕ ಪದ್ಯವಾದ್ದರಿಂದ ಈ ಅರ್ಥದ ಮಿಂಚು ಬಹಳ ಮುಖ್ಯ. ಅರ್ಥದ ಸೊಗಸು ಪದೇಪದೇ ಮನಸ್ಸಿನಲ್ಲಿ ಮೂಡುವಂತಿರಬೇಕು. ಈ ಅರ್ಥದ ಮಿಂಚು ಎಂದೆನಲ್ಲ, ಅದು ಯಾವುದೋ ಒಂದು ಕಳೆದೇಹೋಗುವಂತಿರುವ ಕ್ಷಣವನ್ನು ಕಟ್ಟಿಕೊಡಬೇಕು - ಅದೊಂದು ಸಾರ್ಥಕಕ್ಷಣ, ಮಿಂಚಿ ಮರೆಯಾಗಿಬಿಡುವ ಆ ಕ್ಷಣ ಚಿತ್ರಪಟದಂತೆ ಹಾಯ್ಕಿನ ಆ ಸಾಲಿನಲ್ಲಿ ನಿಂತುಬಿಟ್ಟಿದೆ.  ಆ ಕ್ಷಣದ ಆಳ, ಆಧ್ಯಾತ್ಮಿಕತೆ ಹೆಚ್ಚಿದ್ದಷ್ಟೂ ಹಾಯ್ಕು ಹೆಚ್ಚು ಪರಿಣಾಮಕಾರಿ.  ಇರಲಿ, ಇದು ವಿವರಿಸಿ ತಿಳಿಸುವಂಥದ್ದಲ್ಲ, ಅವರವರ ಕಾವ್ಯದೃಷ್ಟಿಗೆ ಬಿಟ್ಟ ವಿಷಯ, ಅವರವರು ಕಂಡುಕೊಳ್ಳಬೇಕಾದ್ದು.  ಆದ್ದರಿಂದ ನಾವಿಲ್ಲಿ ಅದನ್ನು ಒಂದು ಪಂಚ್ ಲೈನ್ ಎನ್ನೋಣ, ಮತ್ತು ಹಾಯ್ಕಿನ ಭೌತಿಕ ಅಂಶಗಳಿಗಷ್ಟೇ ಗಮನ ಕೊಡೋಣ.


ನಮ್ಮ ಹನಿಗವನಗಳಂತೆ ಅಂದೆ, ಆದರೆ ನಮ್ಮ ಹನಿಗವನಗಳಂತೆ ಅಳತೆಯಿಲ್ಲದ ಕವನಗಳಲ್ಲ ಇವು. ನಮ್ಮ ಹಳೆಗನ್ನಡದ ಕಂದಪದ್ಯಗಳಂತೆ ಚುಟುಕು, ಆದರೆ ಲೆಕ್ಕಾಚಾರದಿಂದ ಕೂಡಿದ ಪದ್ಯಗಳು. ಆದರೆ ನಮ್ಮ ಕಂದಪದ್ಯಗಳಲ್ಲಿ ಮಾತ್ರಾಕಾಲವನ್ನು ಪರಿಗಣಿಸುತ್ತೇವೆ, ಹಾಯ್ಕುಗಳಲ್ಲಿ ಅಕ್ಷರಗಳನ್ನು.

ಹಾಯ್ಕುಗಳು ಮೂರುಸಾಲಿನವು. ಮೊದಲನೆಯ ಸಾಲಿನಲ್ಲಿ ೫, ಎರಡನೆಯ ಸಾಲಿನಲ್ಲಿ ೭ ಮತ್ತು ಮೂರನೆಯ ಸಾಲಿನಲ್ಲಿ ೫ ಅಕ್ಷರಗಳು. ಜಪಾನೀಯರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ಹಾಯ್ಕುಗಳ ಅಕ್ಷರವಿನ್ಯಾಸದ ಬಗ್ಗೆ ಹೇಳಿದ್ದೆ (ಮೊದಲ, ಎರಡನೆಯ ಮತ್ತು ಮೂರನೆಯ ಸಾಲುಗಳಲ್ಲಿ ಕ್ರಮವಾಗಿ ೫,೭ ಮತ್ತು ೫ ಅಕ್ಷರಗಳು). ಆದರೆ ಇಲ್ಲಿ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜಪಾನೀ ಭಾಷೆ ಕನ್ನಡದಂತಲ್ಲ. It is a highly phonetic language (ಅಂದರೆ ಸ್ವರಬದ್ಧವಾದ ಭಾಷೆ). ಆದ್ದರಿಂದ ಅಲ್ಲಿನ ಅಕ್ಷರಗಳ ಎಣಿಕೆ ನಮ್ಮ ಕನ್ನಡದ ಅಕ್ಷರದ ಎಣಿಕೆಯಂತಲ್ಲ. ನಾವು ಕಣ್ಣಿಗೆ ಕಾಣುವ ಅಕ್ಷರಗಳನ್ನು ಎಣಿಸಿದರೆ ಅವರು ಉಚ್ಛಾರಣೆಯಲ್ಲಿ ಬರುವ ಘಟಕಗಳನ್ನು (syllableಗಳನ್ನು) ಎಣಿಸುತ್ತಾರೆ. Syllable ಎಂದರೆ ಒಂದೇ ಉಚ್ಚಾರಣೆಯ ಪ್ರಯತ್ನದಲ್ಲಿ ಉಚ್ಚರಿಸಲ್ಪಡುವ ಶಬ್ದ. ಅದು ಒಂದೇ ಅಕ್ಷರವಿರಬಹುದು, ಅಥವ ಒಂದಕ್ಕಿಂತ ಹೆಚ್ಚು ಅಕ್ಷರಗಳ ಗುಂಪೂ ಇರಬಹುದು. ಇದನ್ನು ಕೆಲವು ಉದಾಹರಣೆಗಳೊಂದಿಗೆ ಹೀಗೆ ವಿವರಿಸೋಣ:

"ಲವ್ (love)" ಇಲ್ಲಿ ಕಣ್ಣಿಗೆ ಕಾಣುವುದು ಕನ್ನಡದಲ್ಲಿ ಎರಡು ಅಕ್ಷರಗಳು, ಇಂಗ್ಲಿಷಿನಲ್ಲಿ ನಾಲ್ಕು ಅಕ್ಷರಗಳು. ಆದರೆ ಉಚ್ಚಾರಣೆಯ unit (syllable) ಕೇವಲ ಒಂದೇ (ಲೌ). ಆದ್ದರಿಂದ ಹಾಯ್ಕುಗಳ ವಿಷಯದಲ್ಲಿ ಇದನ್ನು ಒಂದು ಎಂದು ಎಣಿಸಬೇಕು.

"ಕಣ್" ಇದೂ ಹಾಗೆಯೇ, ಎರಡು ಅಕ್ಷರಗಳು ಕಂಡರೂ ಉಚ್ಚಾರಣೆಯ syllable ಒಂದೇ. ಆದ್ದರಿಂದ ಹಾಯ್ಕಿನಲ್ಲಿ ಇದು ಒಂದೇ ಅಕ್ಷರವೆಂದಾಗುತ್ತದೆ.

"ಜಂಪ್" ಎನ್ನುವುದೂ ಹಾಗೇ. ಆದರೆ "ಜಂಪು" ಎಂದಾಗ ಮಾತ್ರ ಅಲ್ಲಿ ಎರಡು syllables ಬರುತ್ತವೆ, ಜಂ ಮತ್ತು ಪು.

ಹಾಗೆಯೇ "ಬಂಪರ್ (bumper)" ಎನ್ನುವುದರಲ್ಲಿ 3 (ಇಂಗ್ಲಿಷಿನ 6) ಅಕ್ಷರಗಳು ಆದರೆ ಎರಡೇ syllableಗಳು (ಬಂ + ಪರ್), ಆದರೆ "ಬಂಪರು" ಎನ್ನುವುದರಲ್ಲಿ ಮೂರು syllables ಮತ್ತು ಮೂರು ಅಕ್ಷರಗಳು.

"ಕಾವೇರಿ" ಇಲ್ಲಿ ಕಣ್ಣಿಗೆ ಕಾಣುವುದೂ ಮೂರು ಅಕ್ಷರ, ಉಚ್ಚಾರಣೆಯಲ್ಲೂ ಮೂರು ಅಕ್ಷರ (3 letters and 3 syllables).

ಆದ್ದರಿಂದ ಹಾಯ್ಕುಗಳನ್ನು ಬರೆಯುವಾಗ ೧,೨ ಮತ್ತು ೩ನೆಯ ಸಾಲುಗಳಲ್ಲಿ ೫,೭ ಮತ್ತು ೫ ಅಕ್ಷರಗಳನ್ನು ಎಣಿಸುವ ಬದಲಿಗೆ ೫,೭ ಮತ್ತು ೫ ಸಿಲೆಬಲ್ಲುಗಳನ್ನು ಎಣಿಸುವುದು ಸೂಕ್ತ.

ಹೀಗೆ ಹಾಯ್ಕುಗಳ ಸಾಮಾನ್ಯ format ಹೀಗಿರಬಹುದು:

ನನ ನನನ
ನನ ನನ ನನನ
ನನ ನನನ

(ಮೇಲೆ ಹೇಳಿದಂತೆ ಅದು ಹ್ರಸ್ವಾಕ್ಷರವೇ ಆಗಬೇಕಿಲ್ಲ, "ನ" ಅನ್ನುವುದರ ಬದಲು "ನಾ" ಎಂದು ಕೂಡ ಆಗಬಹುದು, ಅಥವ "ನನ್" ಕೂಡ ಆಗಬಹುದು)

ಮತ್ತೆ, ಮೊದಲೇ ಹೇಳಿದಂತೆ ಜಪಾನೀ ನುಡಿ ಕನ್ನಡಕ್ಕಿಂತ ಹೆಚ್ಚು phonetic ನುಡಿಯಾದ್ದರಿಂದ ಅವರು ಈ ಎಣಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಕನ್ನಡದ ಜಾಯಮಾನ ಹಾಗಲ್ಲವಾದ್ದರಿಂದ ನಾವು ಅದನ್ನು ಅಷ್ಟು ಕಟ್ಟುನಿಟ್ಟಾಗಿ ಅನುಸರಿಸಬೇಕಿಲ್ಲವೆಂಬುದು ನನ್ನ ಅನಿಸಿಕೆ. ಆದರೂ ಆದಷ್ಟು ಈ ಲಕ್ಷಣಗಳನ್ನು ಅನುಸರಿಸುವುದು ಒಳ್ಳೆಯದು. ಒಂದೋ ಎರಡೋ ಸಿಲೆಬಲ್ಲುಗಳು ಹೆಚ್ಚು ಕಡಿಮೆಯಾದರೆ ಪರವಾಗಿಲ್ಲ, ಆದರೆ ತೀರ ಎಣಿಕೆಗೇ ಸಿಗದಂತಿರಬಾರದೆಂಬುದು ನನ್ನ ನಿಲುವು.

ಮತ್ತೆ, ಪ್ರಾಸದ ಬಗ್ಗೆ ಯಾವ ನಿಯಮವೂ ಇದ್ದಂತಿಲ್ಲ, ಆದರೆ ಪ್ರಾಸವಿರಬಾರದೆಂದೇನೂ ಇಲ್ಲ. ಅರ್ಥದ ಮಿಂಚಿಗೆ ಮತ್ತಷ್ಟು ಹೊಳಪು ಸೇರಿಸುವುದಾದರೆ ಏಕಿರಬಾರದು? ಹೀಗೇ ಗೀಚಿದ ಕೆಲವು ಹಾಯ್ಕುಗಳು ಇಲ್ಲಿವೆ (ಮತ್ತೆ ಮೊದಲೇ ಹೇಳಿದಂತೆ, ಇವನ್ನು ನಿಜಾರ್ಥದಲ್ಲಿ ಹಾಯ್ಕು ಎನ್ನಲಾಗುವುದಿಲ್ಲ, ಏಕೆಂದರೆ ಹಾಯ್ಕೊಂದರಲ್ಲಿ ಮುಖ್ಯವಾಗಿ ಇರಲೇ ಬೇಕಾದ ಆ ಒಂದು ಕ್ಷಣವನ್ನು, ಸಾರ್ಥಕಕ್ಷಣವನ್ನು ಚಿತ್ರಪಟದಂತೆ ಹಿಡಿದಿಡುವ ಪಂಚ್ ಲೈನ್ ಇಲ್ಲಿಲ್ಲ - ಕೇವಲ ಹಾಯ್ಕಿನ ಭೌತಿಕ ರೂಪವನ್ನಷ್ಟೇ ಗಮನಿಸುವುದು):

ಐದು ಏಳರ
ಮೇಲೈದುಲಿಯಂ ಹಾಕು
ಬಂದಿತು ಹಾಯ್ಕು

ಬಂಪರ್ ಟು ಬಂಪರ್
ಜೋರಾಗಿ ಗುದ್ದಿದರೆ
ಬಂಪರ್ ಹೊಡೆತ

ನಿನ್ನ ನಗೆ ಹೂ
ಮೊಲ್ಲೆಯ ಚೆಲ್ಲಿಬಿಡು
ಹೂಮಂಚವೇಕೆ?

ಆ ಕಣ್ಣು ತುಟಿ
ಹೀರಿ ತೂರಾಡುವನು
ಇವ, ಕುಡುಕ!

ನಗೆಯ ಮಿಂಚ
ಮುಂದೆ ಮಳೆಯ ಮಿಂಚು
ಮಂಕಾಯಿತಲ್ಲ!

ಮಳೆ ಗುಡುಗು
ಮಿಂಚಿ ತೋರಿಸಿದ್ದೇನು?
ಊಳಿಡೋ ದೆವ್ವ!

ಕಣ್ಣ ಮುಚ್ಚಿದೆ
ನಿದ್ದೆಯಲೂ ನೀ ಬಂದೆ
ನಿದ್ದೆ ಬಿಟ್ಟೆದ್ದೆ

ಕಾಡದಿರು ನೀ
ಗೆಳತಿ, ನೋಡುವಳು
ನಿನ್ನ ಸವತಿ!

ಕಾಡೆ ನೀ ಹೀಗೆ,
ಬೇಜಾರುಗೊಳ್ಳುವನು
ಶನಿರಾಯನು

ಎಕ್ಸಾಮಂದ್ರಿಷ್ಟೇ,
ಜಸ್ಟ್ ಕಾಪಿ ಪೇಸ್ಟ್, ಕಾಪಿ ಪೇಸ್ಟ್
ಓದೋದೆಲ್ಲಾ ವೇಸ್ಟ್

ದೆವ್ವದ್ ಕತೇಲೇ
ಹೆದ್ರುಸ್ತಿದ್ದಾ ನಂ ತಾತ
ಈಗವ್ನೇ ಭೂತಾ!

ಎತ್ತಣ ಮಾವೋ
ಎತ್ತಣ ಕೋಗಿಲೆಯೋ
ಬಂದೂಕು ಶಬ್ದ!

ಹೊಟ್ಗಿಲ್ಲ ಅನ್ನಾ
ತಿರ್ಕೊಂಡ್ ತಿನ್ನೋದ್ ಏನ್ ಚೆನ್ನ?
ಹಾಕ್ತೀನಿ ಕನ್ನ

ಹಾಯ್ಕುವಿನ ಗಮ್ಮತ್ತೇ ಅದು. ಸುಮ್ನೇ ಚಾಟ್ ಮಾಡಿದಹಾಗೆ ಬರೀತಾನೇ ಹೋಗಬಹುದು.

ಈ ಮಾತೇ ಮುತ್ತು
ಮಾತೇ ಮತ್ತು, ಮಾತಲ್ಲೇ
ಕಾಣೋ ಗಮ್ಮತ್ತು

ಚಾಟ್ ಮಾಡ್ದಾಗೆ, ಚಾಟ್
ತಿಂದ್ ಹಾಗೆ, ಚಾಟೀ ಹಾಯ್ಕೊಂಡ್
ಬಂದ್ ಹಾಗ್ ಮಾತು

ನೀನಾಡೋ ಮಾತ್ನೇ
ಕಟ್ ಕಟ್ ಮಾಡು, ಹಾಯ್ಕೊಂದಲ್
ಬಂದಯ್ತೆ ನೋಡು

ಒಂದಷ್ಟು ಸೀರಿಯಸ್ ಹಾಯ್ಕುಗಳು:
ಎಲೆ ಹುಳಕೆ
ಕಪ್ಪೆ ಹಾರಲು ತಡೆ
ಆಡುವ ಹೆಡೆ

ತುಟಿ ಚಾಚಿದೆ
ಮುತ್ತೆಲ್ಲೋ ಉದುರಿದೆ
ಮೆದೆಯ ಸೂಜಿ

ಒಂದು ಎರಡು
ಬಾಳೆಲೆಯ ಹರಡು
ಚುರುಗುಟ್ಟಿದೆ

ಹುಲಿ ಹಸಿದು
ನೆಗೆದಿದೆ; ಗೋವಿಗೋ
ಕರು ಯೋಚನೆ

ರವಿ ಮುಳುಗಿ
ಗಡಂಗು ಕರೆದಿದೆ
ಖಾಲಿ ಜೇಬು

ನೇಣೆತ್ತುವ ಕೈ
ಕಾಣುತ್ತಿಲ್ಲ ಕೈಮರ
ಕಣ್ಣೊರಸಿದೆ

ನೇಣೆತ್ತುವ ಕೈ
ಕಾಣುತ್ತಿಲ್ಲ ಕೈಮರ
ಕಣ್ಣರಸಿದೆ

ಎಂಜಲು ರೊಟ್ಟಿ
ತುಪ್ಪದೊಳಗೆ ಬಿತ್ತು
ಕೇಜಿ ಐನೂರು




Tuesday, November 29, 2011

ಭಾವಸಿಂಚನ - ಪುಸ್ತಕ ಬಿಡುಗಡೆ ಸಮಾರಂಭ

ಈ ಮೊದಲೇ ತಿಳಿಸಿದಂತೆ 26ರಂದು "ಭಾವಸಿಂಚನ" ಕವನ ಸಂಕಲನದ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗಹಿಸಿದ್ದೆ. ಇದೊಂದು ವಿನೂತನ ಪ್ರಯೋಗ. ೩ಕೆ ಎಂಬ ಆರ್ಕುಟ್ ಸಮುದಾಯದ ಉತ್ಸಾಹಿ ಯುವ ಕವಿ-ಕವಯಿತ್ರಿಯರು ಸೇರಿ ಆ ಸಮುದಾಯದಲ್ಲಿ ಆಗಾಗ್ಗೆ ಪ್ರಕಟವಾದ ಕವನಗಳನ್ನು ಹೊರತಂದಿದ್ದಾರೆ.

ಆ ಸಮಾರಂಭದ ಕೆಲವು ಚಿತ್ರಗಳು ಇಲ್ಲಿವೆ (ಚಿತ್ರ ಕೃಪೆ, ತಂಡದ ಸದಸ್ಯರು)

ಆಸಕ್ತರು ಈ ಪುಸ್ತಕಗಳನ್ನು ಬೆಂಗಳೂರಿನ ಸಪ್ನಾ ಪುಸ್ತಕ ಮಳಿಗೆ ಮತ್ತಿತರ ಕಡೆಗಳಲ್ಲಿ ಪಡೆಯಬಹುದು. ಯಾವುದೇ ಕನ್ನಡ ಪುಸ್ತಕದ ಖರೀದಿಯೊಂದಿಗೆ ಈ ಪುಸ್ತಕ ಉಚಿತವಾಗಿ ದೊರೆಯುತ್ತದೆ ಎಂದು ಸಮುದಾಯದ ಪ್ರಕಟಣೆ ಹೇಳುತ್ತದೆ.

Monday, November 21, 2011

ಕೆಲವು ವಚನಗಳು

(೧)
ಕಾಗೆ ಕರುಬಿ ಮಾವಿನ ಚಿಗುರುಂಬೊಡೆ
ಬಾಯಿ ಕಹಿಗೊಂಡಿತ್ತಲ್ಲದೆ
ಕೋಗಿಲೆಯ ಸೊಲ್ಲು ದೊರಕೊಂಡಿತೇ
ಕಾಡ ಮಂಗ ಸಿರಿಗಂಧದ ಮರಕೆ ಜೋತೊಡದರ ನಡೆ ಸಿರಿಗೊಂಡಿತೇ?
ಭಾವದ ಮಿಂಚೊಡೆದ ಬೆಡಗಿಂಗೆ ಮೈಯಿಕ್ಕದೆ ಮನವೀಯದೆ
ಬರಿದೇ ನುಡಿನುಡಿಯೆಂದುರೆ ಬೊಬ್ಬೆ ಹೊಯ್ದೊಡೆ
ಆ ಬೊಬ್ಬೆ ನುಡಿಯೇ? ಹೊಯ್ದವ ನುಡಿಗನೇ? ನುಡಿ ಕನ್ನುಡಿಯೇ?
ನುಡಿಯೊಳನುಡಿತವ ಕೇಳದೆ ಮಿಡಿತವನರಿಯದೆ
ನಾನೀನೆಂದು ಗಳಹುವ ಬಾಯಿಬಡುಕರನೇನೆಂಬೆನಯ್ಯಾ
ದಮ್ಮಪುರದ ಮಂಜಯ್ಯಾ ನಿಮ್ಮ ನುಡಿಯೆಮಗೆ ಶರಣು.

(೨)
ಈ ನುಡಿ ಕನ್ನುಡಿಯೆಂಬರು
ಮತ್ತಾನುಡಿ ಪರನುಡಿಯೆಂಬರು,
ತೊದಲುವ ಕಂದನ ನುಡಿಯಾವುದಯ್ಯಾ
ಬಿರಿವೂವಿನ, ಚೆಲುನಗುವಿನ, ಎದೆಯೊಲವಿನ ನುಡಿಯಾವುದಯ್ಯಾ
ನುಡಿವುಟ್ಟುವ, ಹೊಮ್ಮುವ, ನೆಗೆಯುವ, ಚಿಮ್ಮುವ ಜೀವದ ನಡೆಯರಿಯದೆ,
ಪೆಣಕೆ ದಾರವನಿಕ್ಕಿ ಜಾತಿಯ ಹೊಲಸುಂಬರಯ್ಯಾ
ಅಯ್ಯಾ ನಿಮ್ಮ ಕರುಣೆಯದಾವ ನುಡಿ
ಕಡುಮೌನವದಾವ ನುಡಿ ಪೇಳಾ ದಮ್ಮಪುರದ ಮಂಜಯ್ಯಾ

Sunday, November 20, 2011

ಭಾವಸಿಂಚನ - ಕವಿಗಳಲ್ಲದವರ ಕವನಗಳು

ಆರ್ಕುಟ್ ನ "3K ಬಳಗ"ದ ಉತ್ಸಾಹೀ ನವಕವಿಗಳು ಈ ಬಳಗದ ವೇದಿಕೆಯಲ್ಲಿ ಆಗಾಗ ಪ್ರಕಟಿಸಿದ ಆಯ್ದ ಕವನಗಳ ಸಂಕಲನವೊಂದನ್ನು ಹೊರತರುತ್ತಿದ್ದಾರೆ. ಇದು ಸಂತೋಷದ ವಿಷಯ. ನಾನೂ ಹೋಗುತ್ತಿದ್ದೇನೆ. ನೀವೂ ಬನ್ನಿ.

ದಿನಾಂಕ: ೨೬/೧೧/೨೦೧೧, ಶನಿವಾರ
ಸಮಯ: ಸಂಜೆ ೬ ಗಂಟೆ
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.

Thursday, October 27, 2011

ಬೆಳಕಿನ ಹಾಡು

ದೀವಳಿಗೆಯ ಲಯಕ್ಕೆ ಹೊಂದುವಂತೆ ಕೆಲವು ಲಯಗಳು ಮನಕ್ಕೆ ಹೊಳೆದುದರ ಫಲವೇ ಈ ಕವನ. ಇದು ನಡುಗನ್ನಡದ "ರಗಳೆ" ಛಂದಸ್ಸನ್ನು ಬಹುತೇಕ ಹೋಲುತ್ತದೆಯಾದರೂ ಅಲ್ಲಲ್ಲಿ ಕವನದ ಓಟಕ್ಕೆ ತಕ್ಕಂತೆ ಛಂದಸ್ಸನ್ನು ಬದಲಿಸಿಕೊಳ್ಳುವ ಸ್ವಾತಂತ್ರ್ಯ ವಹಿಸಿದ್ದೇನೆ. ಉತ್ಸಾಹ ರಗಳೆ, ಮಂದಾನಿಲ ರಗಳೆ ಮತ್ತು ಲಲಿತ ರಗಳೆಗಳು ಇಲ್ಲಿ ಕಾಣಬರುವ ಛಂದೋರೂಪಗಳು. ಈ ಪದ್ಯದ ಉದ್ದೇಶವೇ ಹಬ್ಬದ, ಸಂಭ್ರಮದ, ಸ್ವಚ್ಛಂದದ ಅಂದವನ್ನು ಹಿಡಿಯುವುದಾದ್ದರಿಂದ ಪದ್ಯದ ಗಾತ್ರವನ್ನು ನಿಯಂತ್ರಿಸಲು ನಾನು ಯತ್ನಿಸಿಲ್ಲ. ಆದ್ದರಿಂದ ಪದ್ಯ ತುಸು ಉದ್ದವೇ ಬೆಳೆದಿದೆಯೆನ್ನಬೇಕು. ಪಟಾಕಿ ಹೊಡೆಯುವ ಮಕ್ಕಳ ಸಂಭ್ರಮವನ್ನು ಮೊಟಕುಗೊಳಿಸಿ ಊಟಕ್ಕೆಳೆದುಕೊಂಡು ಬಂದರೆ ಇಷ್ಟಪಡುವರೇ?

ಚುಕ್ಕಿ ಬೆಳಕ ಚೆಲ್ಲುವಲ್ಲಿ
ಹಕ್ಕಿ ಹಾಡು ಮೂಡುವಲ್ಲಿ
ಕತ್ತಲೊಡನೆ ತೆಕ್ಕೆಬಿದ್ದು
ಎತ್ತಲಾಗೊ ಹೊರಳುತಿದ್ದ
ಬೆಳಕ ಹಬ್ಬವೆದ್ದಿತೈ
ಹೊಳೆವ ಮೈಯ ಮುರಿದಿತೈ

ಒಳಗೆ ಬಚ್ಚಲಲ್ಲಿ ನೀರು
ಮರಳಿ ಮರಳಿ ಕುದಿವ ಜೋರು
ಕಾದ ಎಣ್ಣೆ ಸೌಟ ಹಿಡಿದು
ಸೀದ ಜಗುಲಿಯೆಡೆಗೆ ನಡೆದು
ಬಂದಳಿವಳು ಸರಸರ
ಚಂದವವಳ ಸಡಗರ

ಕೈಯನೆತ್ತಿ ತಲೆಯ ಸುತ್ತಿ
ಮೈಯ ಸವರಿ ಮೊಗವನೊತ್ತಿ
ಕಾದ ಎಣ್ಣೆ ಸುಡಲು ನೆತ್ತಿ
ಆಹ ಬಡಿಯೆ ಕೈಯನೆತ್ತಿ
ಉಜ್ಜುತಿರಲು ಗಸಗಸ
ತೋರುತಿತ್ತು ಗರಗಸ

ಕುದಿವ ನೀರ ಮೈಯಿಗೆರಚಿ
ಅಯ್ಯೊ ಬೇಡವೆಂದು ಅರಚಿ
ಕಣ್ಣ ತುಂಬ ತುಂಬಿ ಸೀಗೆ
ಆಗಬಹುದೆ ಇಂದು ಹೀಗೆ
ಕೊನೆಗು ಬಂತೆ ಬಿಡುಗಡೆ
ಆಹ ಎಂಥ ನಿಲುಗಡೆ!

ಹೊಸತು ಬಟ್ಟೆ ಹೊಸತು ಹೂ
ಹೊಸತು ಗಂಧ ಎಂಥ ಚಂದ
ಹೊಸತು ಬೆಳಕು ಬಣ್ಣ ಬಿಳುಪು
ಕಣ್ಣುಗಳಲಿ ಹೊಳೆವ ಹೊಳಪು
ನಮಿಸಿ ದೇವ ದೇವಗೆ
ಗಮನವಾ ಪಟಾಕಿಗೆ

ಮಗನಿಗಾ ಪಟಾಕಿ ಕೇಪು
ಒಳಗೆ ನಡುಗಿ ಕಿರುಚೆ ಪಾಪು
ಇವಳಿಗೆ ಸುರುಬತ್ತಿ ಕುಂಡ
ಬಾಣ ಬಿರುಸು ಬರಿಯ ದಂಡ
ಸಮಯವೀಗ ಊಟಕೆ
ಸಗ್ಗದ ರಸದೂಟಕೆ

ಪಾಯಸ ಪುಳಿಯೋಗರೆ ಗೊಜ್ಜುಗಳೇನ್
ರಾಯತ ಕೋಸಂಬರಿ ಪಲ್ಯಗಳೇನ್
ಬಾಯೊಳು ನೀರೊಡೆಸುವ ಚಕ್ಕುಲಿಯೇನ್
ಕಾಯೊಬ್ಬಟ್ಟಿನ ಗಮಗಮ ಕಂಪೇನ್
ರಾಯನಡುಗೆಯೇಂ ಸಮನೆ ಇದಕೆ ಪೇಳ್
ಬಾಯ ತುಂಬ ನೀಂ ತಿಂದುಣ್ಣುತ ಬಾಳ್

ಹಗಲಿನ ಕೊನೆಗಿರಣಗಳಾಡುತಿರಲ್
ಹೆಗಲಿನ ಭಾರವ ರವಿ ಕೊಡವುತಿರಲ್
ಬೆವರಿದನೆನೆ ಹನಿಯೆರಡುದುರುತಿರಲ್
ಅವನಿಯ ಮೇಲ್ಕತ್ತಲೆ ಸೆರಗಿಕ್ಕಲ್

ಓಹೊ ಬೆಳಕು ಹರಿಯಿತೇಂ
ಬಾನು ಬಣ್ಣ ತಳೆಯಿತೇಂ
ಏಳುಬಣ್ಣದಿಂದ್ರಚಾಪ
ಬೆಳಕ ಸೆಳೆದು ಬಿಟ್ಟಿತೇಂ
ಹಳದಿ ಕೆಂಪು ಹಸಿರು ನೀಲಿ
ಬಿಳುಪ ಬಸಿರ ಸೀಳಿ ಸೀಳಿ
ತಮದ ಮಹಾಭಿತ್ತಿಯಲ್ಲಿ
ಗಮನಸೆಳೆವ ರಂಗವಲ್ಲಿ
ಸುರರ ಕಲ್ಪತರುವೆ ಹಿಗ್ಗು
ತರಳಿ ಹೂವ ಬಿಟ್ಟಿತೇಂ
ಮನದಿ ಮನೆಯ ಕಟ್ಟಿತೇಂ
ಮನದ ಕದವ ತಟ್ಟಿತೇಂ

ಮಂದಾನಿಲ ತಣ್ಣಗೆ ಬೀಸುತಿರಲ್
ಸುಂದರ ಕನಸೆನೆ ಹಬ್ಬವು ಕರಗಲ್
ಹಿತಮಿತದಿರುಳೂಟದ ಸವಿಯೆರೆಯಲ್
ಅತಿ ಹಿತದೊಳ್ ಮೆದು ಹಾಸಿಗೆ ಕರೆಯಲ್
ಹಬ್ಬದ ಬೆಳಕದು ಕಣ್ಣೊಳ್ ಕುಣಿಯಲ್
ತಬ್ಬಿದ ನಿದಿರೆಯ ತೋಳೊಳ್ ಜಾರಲ್

ಮುಗಿದಿತ್ತಾ ಸವಿ ದೀವಳಿಗೆ
ಸೊಗವನು ಹಂಚುತಲೀಯಿಳೆಗೆ

Wednesday, October 12, 2011

ಹೂರಣದಿ ಹುಲ್ಲು ಕಲ್ಲುಗಳಿಗೂ ಹಿರಿಮೆಯುಂಟು

"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapaana.com) ಪಂಚಮಾತ್ರೆಯ ಚೌಪದಿಯಲ್ಲಿ "ಹೂರಣದಿ ಹುಲ್ಲು ಕಲ್ಲುಗಳಿಗೂ ಹಿರಿಮೆಯುಂಟು" ಎಂಬ ಸಾಲನ್ನು ಬಳಸಿ ಸಮಸ್ಯೆಯನ್ನು ಪೂರ್ತಿಗೊಳಿಸುವ ಸವಾಲಿತ್ತು. ಅದಕ್ಕಾಗಿ ರಚಿಸಿದ್ದು ಈ ಚೌಪದಿಗಳು:


ಬೆಲ್ಲಬೇಳೆಯ ಸೊಗಸಿನೊಬ್ಬಟ್ಟು ಹೂರಣದಿ
ಕಲ್ಲು ದೊರಕಿರಲು ನೀಂ ಕಡಿಯದಿರು ಹಲ್ಲ
ಬಲ್ಲವರದಾರು ಈ ಬದುಕೆಂಬ ಹೂರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

ಹುಲ್ಲಿರದೆ ಪಶುವಿಹುದೆ ಕಲ್ಲಿರದೆ ಮನೆಯಹುದೆ
ಹುಲ್ಲೆಂದು ಕಲ್ಲೆಂದು ಜರಿಯದಿರು ಮೂಢಾ
ಬಲ್ಲವರು ಪೇಳುವರು ಜಗವೆಂಬ ಹೂರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

ಹುಲ್ಲ ಮಂತ್ರಿಸೆ ಕೊಲ್ವ ಕಣೆಯಾಯ್ತು ಕದನದೊಳು
ಕಲ್ಲಿನಿಂದರಿಸೇನೆ ಮಡಿದೊರಗಿತು
ನಲ್ಲೆಮುಡಿಗಷ್ಟೆ ತಗುವುದು ದಂಡೆ ಹೂ ರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

Sunday, October 2, 2011

ಸ್ತನ ದೊಡ್ಡತನದಲ್ಲಿ ಶೋಭಿಸಿಹುದು


"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬಳಸಿ ಸಮಸ್ಯೆಯನ್ನು ಪೂರ್ತಿಗೊಳಿಸುವ  ಸವಾಲಿತ್ತು.  ಅದಕ್ಕಾಗಿ ರಚಿಸಿದ್ದು ಈ ಚೌಪದಿಗಳು:

ಮನೆಗಲ್ಲದೆಯೆ ನೆಂಟ ಮಠಕೆ ಬರುವನೆ ಪೇಳು
ಒಣಮರಕೆ ಬಹುದೆ ಕೋಗಿಲೆಯು ಗಿಳಿವಿಂಡು
ಮನದಣಿಯೆ ಉಣಬಡಿಪ ಸಿರಿವನೆಯು ಮನೆತನ-
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

ಇನಸುತಗೆ ತಿಳಿದೊಡೇಂ ತನ್ನ ಹುಟ್ಟಿನ ಹಿರಿಮೆ
ಅನುಮಾನವಿನಿತಿಲ್ಲ ಜೀಯನೊಲವಿನೊಳು
ಧನವದುವೆ ಕೌರವನ ಮಾನಧನ ನಂಬಿಕ-
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

ವನಕೆ ಹೆಮ್ಮರ ಸೊಗಸು ಗಿರಿಗಾ ಶಿಖರ ಸೊಗಸು
ಮನೆಗೆ ಹಿರಿಗಂಬದಾಲಂಬ ಸೊಗಸು
ಇನಿವೆಣ್ಣಿನೊಡಲಿಗಾಲಂಬವೆನೆ ಚೆಲುವಿನಾ
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

ಜನಕಗಲ್ಲದೆ ಶುನಕಕಹುದೆ ರಾಮನ ನಂಟು
ಘನಶೈಲಿ ಶೂಲಿ ಹುಲು ಮೊರಡಿ ಬಯಸುವನೇ
ವನಮಾಲಿಯಲ್ತೆ ಸಾಗರನಳಿಯ?ಹಿರಿನಂಟ-
ತನ ದೊಡ್ಡತನದಲ್ಲಿ ಶೋಭಿಸಿಹುದು

ಕೊನೆಯ ಚೌಪದಿ “ಸ್ತನ ದೊಡ್ಡತನದಲ್ಲಿ ಶೋಭಿಸಿಹುದು” ಎಂದು ಬಳಸಿದರೆ ಮೂರನೆಯ ಸಾಲಿನ ಛಂದಸ್ಸು ಕೆಡುತ್ತದೆಯಾದ್ದರಿಂದ ಅದು ಸಮಸ್ಯೆಯನ್ನು ಯಥಾವತ್ತಾಗಿ ಪೂರೈಸುವುದಿಲ್ಲ, ಆದರೂ ಉಳಿದ ಸಾಲುಗಳು ಬಂದುವಲ್ಲ ಎಂದು ಪೋಸ್ಟಿಸಿದೆ ಅಷ್ಟೇ.

Friday, September 23, 2011

ಪ್ರಭಾತ ಚತುರ್ಮುಖ

"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ ಮುಂಜಾವಿನ ವರ್ಣನೆಯ ಬಗೆಗೊಂದು ಸವಾಲಿತ್ತು.  ಅದಕ್ಕಾಗಿ ರಚಿಸಿದ್ದು ಈ ಚೌಪದಿಗಳು:


(೧)
ಸೋರೆ ಕತ್ತಲ ಸಾರ ನೇಸರನ ಮೆಲ್ಬರವ
ಸಾರೆ ಗಗನಾಂಗನೆಯ ಕೆಂಪು ಕದಪು|
ವಾರಿಜದ ಮೊಗವರಳಿ ಮಲಗಿದಿಬ್ಬನಿ ಹೊರಳಿ
ಕೋರಿದುವು ಮಂಗಳದ ಮುಂಬೆಳಗನು||

(೨)
ತಂಗದಿರನಗಲಿಕೆಯ ವಿರಹಕಾಡಲು ರಾತ್ರಿ
ಯಂಗನೆಯ ಕೆನ್ನೆ ತುಸು ಬಿಳುಪಡರಿದೆ|
ಸಂಗಡಲೆ ರವಿಯು ಝುಮ್ಮನೆ ಸೋಂಕೆ ಬಿಸುಪಿನಾ
ಲಿಂಗನದಿ ನಾಚಿ ಮೊಗ ಕೆಂಪೇರಿದೆ||

(೩)
ಮುಂಗೋಳಿ ಕೂಗಿರಲು, ಹಕ್ಕಿಗಳು ಹಾಡಿರಲು
ರಂಗೋಲಿ ನಗುತಲಿವೆ ಅಂಗಳದೊಳು|
ಅಂಗಡಿಯು ತೆರೆಯುತಿದೆ, ತರಕಾರಿ ಕೂಗು ಮನೆ
ಮುಂಗಡೆಯೆ ಸಾಗುತಿದೆ ಏನು ಬೇಕು?

(೪)
ಮಾಗಿಯಿರುಳಿನ ಕೊನೆಗೆ ಮೂಡಣದಿ ನಸುವೆ ಬೆಳ
ಗಾಗೆ ಜಗವೆದ್ದು ಚಡಪಡಿಸುತಿಹುದು|
ಸಾಗೆ ಭರಗುಟ್ಟಿ ಮೋಟಾರುಗಳು ಒಣಮರದ
ಕೋಗಿಲೆಯೆ ಶ್ರುತಿಗೆಟ್ಟು ಕಾಗುತಿಹುದು||

Friday, September 9, 2011

ದ್ವೈತ - ಅದ್ವೈತ: ಒಂದು ಚಿಂತನೆ

ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ಬಗ್ಗೆ ಒಂದು ಲೇಖನವಿದೆ. ಅಲ್ಲಿ ಬಂದಿರುವ ದ್ವೈತ-ಅದ್ವೈತ-ವಿಶಿಷ್ಟಾದ್ವೈತಗಳ ತುಲನೆಯ ವಿಷಯದಲ್ಲಿ ನನ್ನ ಕೆಲವು ಅನಿಸಿಕೆಗಳನ್ನು ಬರೆಯುತ್ತಿದ್ದಾಗ ಅದು ತೀರ ಬೆಳೆದು ತಾನೇ ಒಂದು ಸ್ವತಂತ್ರ ಬರಹವಾಗಬಹುದೆನ್ನಿಸಿತು. ಅದರ ಪರಿಣಾಮವೇ ಈ ಲೇಖನ.

ಇದು ಮೂಲತಃ ದ್ವೈತವು ಸರಿಯೋ ಅದ್ವೈತವೋ ಎಂಬ ಚರ್ಚೆಯಲ್ಲ (ಏಕೆಂದರೆ ಶಂಕರರ ಸಿದ್ಧಾಂತದ ಬಗೆಗೆ ಹೇಗೋ ಹಾಗೆ ಮಧ್ವರ ಸಿದ್ಧಾಂತಗಳ ಬಗೆಗೂ ನನ್ನದೇ ಅನೇಕ ಪ್ರಶ್ನೆಗಳಿದ್ದು ಅದರ ನಿವಾರಣೆಗೆ ಬೇಕಾದ ಬುದ್ಧಿ/ಜ್ಞಾನ ಸಾಮಗ್ರಿ ನನ್ನಲ್ಲಿಲ್ಲ). ಆದ್ದರಿಂದ ಇವು ಮೇಲಿನ ಲೇಖನದಲ್ಲಿ ಕಂಡ ವಿವಿಧ ಸಿದ್ಧಾಂತಗಳ ತುಲನೆಯ ಬಗೆಗಿನ ನನ್ನ ಅನಿಸಿಕೆಗಳು ಮಾತ್ರ. ಇದು ಮೇಲಿನ ಲೇಖನಕ್ಕೆ ಪ್ರತಿಕ್ರಿಯೆಯಾದ್ದರಿಂದ ಆ ಲೇಖನವನ್ನು ಓದದೇ ಇದು ಪೂರ್ಣವಾಗುವುದಿಲ್ಲ. ಆದ್ದರಿಂದ ಮೂಲ ಲೇಖನವನ್ನು ಮೊದಲು ಓದಬೇಕಾಗಿ ಕೋರಿಕೆ (ದಯವಿಟ್ಟು ರೈಟ್ ಕ್ಲಿಕ್ ಮಾಡಿ ಬೇರೊಂದು ಕಿಟಕಿಯಲ್ಲಿ ತೆರೆದಿಟ್ಟುಕೊಳ್ಳಿ).

ಮೊದಲಿಗೆ ದ್ವೈತ-ಅದ್ವೈತ ಎನ್ನುವ ಪದಗಳು ಆಯಾ ಆಚಾರ್ಯರು ಚಾಲ್ತಿಗೆ ತಂದದ್ದಲ್ಲ. ಉದಾಹರಣೆಗೆ ನಾವು ಅದ್ವೈತವೆಂದು ಕರೆಯುವ ತತ್ವವನ್ನು ಸ್ವತಃ ಶಂಕರರು "ಔಪನಿಷದ ದರ್ಶನ"ವೆಂದು ಕರೆಯುತ್ತಾರೆ ("ತಸ್ಮಾತ್ ಸಮಂಜಸಮಿದಂ ಔಪನಿಷದಂ ದರ್ಶನಂ" - ಸೂತ್ರ ಭಾಷ್ಯ.೨.೧.೯) - ವೇದಾಂತದ (ಉಪನಿಷತ್ತುಗಳ) ಪಾರಮಾರ್ಥಿಕ ದೃಷ್ಟಿ ಮತ್ತು ಬ್ರಹ್ಮೈಕತ್ವವನ್ನು ಎತ್ತಿಹಿಡಿಯುವುದರಿಂದ ಇದು ಔಪನಿಷದ ದರ್ಶನ. ಗೌಡಪಾದಕಾರಿಕೆಯಲ್ಲಿ "ಮಾಯಾಮಾತ್ರಮಿದಂ ದ್ವೈತಂ ಅದ್ವೈತಂ ಪರಮಾರ್ಥತಃ" ಎಂಬ ಮಾತು ಬರುತ್ತದೆ. ಆದರೆ ಇಲ್ಲಿ ಬರುವ ದ್ವೈತ ಅದ್ವೈತ ಪದಗಳು ಒಂದು ಸಿದ್ಧಾಂತವನ್ನು ಸೂಚಿಸದೇ ಕೇವಲ ಎರಡು ಸ್ಥಿತಿಗಳನ್ನಷ್ಟೇ ಸೂಚಿಸುತ್ತದೆ (ಏಕೆಂದರೆ ಶಂಕರಾಚಾರ್ಯರ ಕಾಲಕ್ಕೆ ನಾವೀಗ ನೋಡುವ "ದ್ವೈತಸಿದ್ಧಾಂತ"ದ ಪ್ರತಿಪಾದನೆಯೇ ಆಗಿರಲಿಲ್ಲ!). ಇದಕ್ಕೆ ಅದ್ವೈತಸಿದ್ಧಾಂತವೆಂಬ ಹೆಸರು ಬಿದ್ದದ್ದೇ ಬಹುಶಃ ೧೩ನೆಯ ಶತಮಾನದ ಆಸುಪಾಸಿನಲ್ಲಿ (ಮಧ್ವಾಚಾರ್ಯರ ಕಾಲದ ಸರಿಸುಮಾರಿನಲ್ಲಿ).  ಸುಮಾರು ಹದಿನೈದನೆಯ ಶತಮಾನದ "ಅದ್ವೈತದೀಪಿಕೆ", "ಅದ್ವೈತಬೋಧ", "ಭೇದ ಧಿಕ್ಕಾರ" ಇತ್ಯಾದಿ ಗ್ರಂಥಗಳು, ಮತ್ತು ಮುಂದೆ ಮಧುಸೂದನ ಸರಸ್ವತಿಗಳ "ಅದ್ವೈತಸಿದ್ಧಿ" ಇತ್ಯಾದಿ ಗ್ರಂಥಗಳಲ್ಲಿ ಸ್ಪಷ್ಟವಾಗಿ ಕಂಡುಬರುವ ದ್ವೈತ-ಅದ್ವೈತ ಸೈದ್ಧಾಂತಿಕ ಚರ್ಚೆಗಳನ್ನು ಉದಹರಿಸುವ ಸಾಕೃ ರಾಮಚಂದ್ರರಾಯರು, ಶಂಕರರ ಔಪನಿಶದ ದರ್ಶನಕ್ಕೆ ಅದ್ವೈತ ಸಿದ್ಧಾಂತವೆಂಬ ವ್ಯವಹಾರ ಬಂದದ್ದು ಬಹುಶಃ ಹದಿನೈದನೆಯ ಶತಮಾನದಿಂದೀಚಿಗಿರಬಹುದು ಎಂದು ಅಭಿಪ್ರಾಯ ಪಡುತ್ತಾರೆ (ದರ್ಶನ ಪ್ರಬಂಧ - ಅದ್ವೈತ ಸಿದ್ಧಾಂತ: ಸಾ.ಕೃ.ರಾ).  ಆದ್ದರಿಂದ ಶಾಂಕರದರ್ಶನಕ್ಕೆ ಅದ್ವೈತ ಸಿದ್ಧಾಂತವೆಂಬ ವ್ಯವಹಾರವು ಮಧ್ವಾಚಾರ್ಯರ ಕಾಲಕ್ಕೆ ಆರಂಭವಾಗಿ ಬಹುಶಃ ಹದಿನೈದನೆಯ ಶತಮಾನದ ಹೊತ್ತಿಗೆ ಭದ್ರವಾಗಿ ನೆಲೆಯೂರಿತ್ತೆನ್ನಬಹುದು.

ವಿಶಿಷ್ಟಾದ್ವೈತವೆಂಬ ನಿರ್ದೇಶನವೂ ರಾಮಾನುಜರು ಬಳಕೆಗೆ ತಂದದ್ದಲ್ಲ, ಏಕೆಂದರೆ ರಾಮಾನುಜರ ಮತಕ್ಕೆ ಶ್ರೀವೈಷ್ಣವ ಮತವೆಂದೇ ಬಳಕೆ. ಈ ವೈಷ್ಣವ ಮತದಲ್ಲಿ ಹರಿಗಷ್ಟೇ ಅಲ್ಲ, ಲಕ್ಷ್ಮಿಗೂ ಬಹಳಷ್ಟು ಪ್ರಾಮುಖ್ಯವಿರುವುದರಿಂದ ಇದು ಶ್ರೀ-ವೈಷ್ಣವ. ಆಳ್ವಾರರ ಭಕ್ತಿಪಂಥ ಮತ್ತು ನಾಥ-ಯಾಮುನರ ವೈದಿಕ ವಿಚಾರಧಾರೆಗಳನ್ನು ಕ್ರೋಢೀಕರಿಸಿ ಅದಕ್ಕೊಂದು ವೈದಿಕ ದರ್ಶನದ ಅಂತಸ್ತು ನೀಡಿದ ಹೆಗ್ಗಳಿಕೆ ರಾಮಾನುಜರದು. ಬ್ರಹ್ಮ-ಚಿತ್-ಅಚಿತ್ ಸಂಬಂಧವನ್ನು ದೇಹಿ-ದೇಹ (ಶೇಷಿ-ಶೇಷ)ದ ಪರಿಭಾಷೆಯಲ್ಲಿ ನಿರೂಪಿಸುವುದರ ಮೂಲಕ (ಬ್ರಹ್ಮವು ದೇಹಿ, ಜಗತ್ತು ದೇಹ; ಜಗತ್ತಿನ ಪ್ರತಿಯೊಂದು ಚಿದಚಿದ್ವಸ್ತುವೂ ಈ ಬ್ರಹ್ಮನ ಒಂದು ಭಾಗ/ಅಂಶ) ಬ್ರಹ್ಮವೂ ಜಗತ್ತೂ ಹೇಗೆ ಬೇರೆಬೇರೆ ಮತ್ತು ಅದೇ ಸಮಯದಲ್ಲಿ ಹೇಗೆ ಒಂದೇ ಎಂಬುದನ್ನು ಪ್ರತಿಪಾದಿಸುವುದರಿಂದ ಇದಕ್ಕೆ ಮುಂದೆ ವಿಶಿಷ್ಟಾದ್ವೈತವೆಂಬ ಹೆಸರು ದೊರಕೊಂಡಿರುವಂತೆ ತೋರುತ್ತದೆ. ಈ ಹೆಸರಿನ ಬಳಕೆ ವೇದಾಂತದೇಶಿಕರಲ್ಲಿ ಮತ್ತು ಸುದರ್ಶನ ಸೂರಿಗಳಲ್ಲಿ ಮೊದಲಿಗೆ ಬಳಕೆಗೆ ಬಂದಂತೆ ಕಂಡುಬರುತ್ತದೆ (ಕ್ರಿ.ಶ.೧೩-೧೪ - ಮಧ್ವಾಚಾರ್ಯರ ಕಾಲದ ಸರಿಸುಮಾರಿನಲ್ಲೇ). ಮೇಲೆ ತಿಳಿಸಿದಂತೆ ಈ ಹೊತ್ತಿಗಾಲೇ ಶಂಕರರ ಔಪನಿಶದ ದರ್ಶನವು "ಅದ್ವೈತ"ವೆಂಬ ಹೆಸರಿನಲ್ಲಿ ಬಳಕೆಗೆ ಬಂದಿತ್ತು (ಶಂಕರರ ಅದ್ವೈತದಿಂದ ತಮ್ಮದನ್ನು ಪ್ರತ್ಯೇಕವಾಗಿ ಗುರುತಿಸಲಿಕ್ಕಾಗಿ ವಿಶಿಷ್ಟಾದ್ವೈತಿಗಳು ಶಂಕರರ ಅದ್ವೈತವನ್ನು "ಕೇವಲಾದ್ವೈತ" ಎಂದು ನಿರ್ದೇಶಿಸುತ್ತಾರೆ).

ಇನ್ನು ದ್ವೈತದ ವಿಷಯಕ್ಕೆ ಬಂದರೆ, ಇದೂ ಮೂಲತಃ ದ್ವೈತಸಿದ್ಧಾಂತವೆಂದು ಕರೆಯಲ್ಪಟ್ಟದ್ದಲ್ಲ. ಇದರ ಮೂಲ ಹೆಸರು "ತತ್ವವಾದ". ದ್ವೈತಿಗಳು ಅದ್ವೈತ ಸಿದ್ಧಾಂತವನ್ನು ಮಾಯಾವಾದವೆಂದು ನಿರ್ದೇಶಿಸುತ್ತಾರೆ (ಜಗತ್ತು ಮಾಯೆಯೆಂಬುದರಿಂದ). ಅದಕ್ಕೆ ಪ್ರತಿಯಾಗಿ ಈ ವಾದದ ಮುಖ್ಯನಿಲುವು ಸತ್ಯತ್ವ. ಬ್ರಹ್ಮನಷ್ಟೇ ಅಲ್ಲ, ಬ್ರಹ್ಮನಿಂದ ನಿರ್ಮಿತವಾದ ಜಗತ್ತೂ, ಅವುಗಳ ನಡುವಿನ ಸಾಮ್ಯ, ವೈಷಮ್ಯ, ತಾರತಮ್ಯಗಳೂ, ಸ್ವರೂಪ-ಸ್ವಭಾವಗಳೂ ಸತ್ಯ ಹಾಗೂ ನಿತ್ಯವೆಂದೇ ಸಾರುವುದರಿಂದ ಇದು ತತ್ವವಾದ. ಈ ತತ್ತ್ವವಾದವೇ ಆರ್ಷೇಯದರ್ಶನವೆಂದೂ, ಕಾಲಕ್ರಮದಲ್ಲಿ ಬೇರೆಬೇರೆ ಸಿದ್ಧಾಂತಗಳ ವಿಜೃಂಭಣೆಯಿಂದ ತತ್ವವಾದದ ಬೆಳಕು ಮರೆಯಾಯಿತೆಂದೂ, ಮುಂದೆ ಹದಿಮೂರನೆಯ ಶತಮಾನದಲ್ಲಿ ಬಂದ ಮಧ್ವಾಚಾರ್ಯರು (ಇವರ ಆಶ್ರಮನಾಮ ಪೂರ್ಣಪ್ರಜ್ಞತೀರ್ಥರು; ಬಳಿತ್ಥಾಸೂಕ್ತದ ಮಧ್ವ ಆಧವೇ ಎಂಬ ವಾಕ್ಯದಿಂದ ಮಧ್ವಾಚಾರ್ಯರೆಂದು ಪ್ರಸಿದ್ಧಿ - "ಯದೀಮನು ಪ್ರದಿವೋ ಮಧ್ವ ಆಧವೇ ಗುಹಾ ಸಂತಂ ಮಾತರಿಶ್ವಾ ಮಥಾಯತಿ") ಈ ಮರೆಯಾಗಿದ್ದ ತತ್ವವಾದವನ್ನು ಪುನರುಜ್ಜೀವಿಸಿ ಪ್ರಚುರಗೊಳಿಸಿದರೆಂದೂ ದ್ವೈತ ಸಂಪ್ರದಾಯ ನಂಬುತ್ತದೆ. ಆದ್ದರಿಂದ ಇದಕ್ಕೆ ಪೂರ್ಣಪ್ರಜ್ಞದರ್ಶನವೆಂದೂ ಹೆಸರು. ೧೩-೧೪ನೆಯ ಶತಮಾನದ ಮಾಧವಾಚಾರ್ಯರ "ಸರ್ವದರ್ಶನ ಸಂಗ್ರಹ"ದಲ್ಲೂ ಈ ದರ್ಶನ ಪೂರ್ಣಪ್ರಜ್ಞದರ್ಶನವೆಂದೇ ಕರೆಯಲ್ಪಟ್ಟಿದೆ. ದ್ವೈತಸಿದ್ಧಾಂತವೆಂಬ ಹೆಸರು ಮೇಲಿನ ಆತ್ಮೈಕತ್ವದ (ಅದ್ವೈತದ) ಪ್ರತಿಯಾಗಿ ಬಳಕೆಗೆ ಬಂದ ವ್ಯವಹಾರವಿರಬೇಕು. ಶಂಕರರ ಸೂತ್ರಭಾಷ್ಯಗಳಲ್ಲೂ ದ್ವೈತಿಗಳ ಉಲ್ಲೇಖ ಬಂದಿದ್ದರೂ ಸ್ಪಷ್ಟವಾಗಿಯೇ ಅದು ಮಧ್ವಸಿದ್ಧಾಂತದ ಉಲ್ಲೇಖವಲ್ಲ, ಬದಲಿಗೆ ಅದು ಸಾಂಖ್ಯ ಮತ್ತು ಯೋಗದರ್ಶನಗಳನ್ನು ಕುರಿತದ್ದು (ದ್ವೈತಿನೋ ಹಿ ತೇ ಸಾಂಖ್ಯಾ ಯೋಗಾಶ್ಚ - ಸೂತ್ರ ಭಾಷ್ಯ.೨.೧.೩). ದ್ವೈತವೆಂಬಲ್ಲಿ ಒತ್ತು ಎರಡು ಎಂಬ ಸಂಖ್ಯೆಯ ಮೇಲಲ್ಲ, ಬದಲಿಗೆ ನಾನಾತ್ವದ ಮೇಲೆ.

ಅದೇನೇ ಇದ್ದರೂ ಈ ಮೂರೂ ದರ್ಶನಗಳು ಸಮನ್ವಯಿಸಲೇ ಸಾಧ್ಯವಿಲ್ಲದಷ್ಟು ವಿಭಿನ್ನ ಧೋರಣೆಯನ್ನು ತಳೆದದ್ದು.  ಆದರೆ ಪ್ರಸ್ತುತ ಲೇಖನವನ್ನು ಓದುವಾಗ ಅದು ಎಲ್ಲೋ ಒಂದೆಡೆ ಈ ಮೂರೂ ಮತಗಳನ್ನು ಸಮನ್ವಯಿಸಲೆಳಸುತ್ತದೆಯೆನ್ನಿಸಿತು.ಉದಾಹರಣೆಗೆ ಇದನ್ನು ನೋಡಿ:

"ರಾಮಾನುಜಾಚಾರ್ಯರ ವಿಶಿಷ್ಟಾದ್ವೈತಕ್ಕೂ ಅದ್ವೈತಕ್ಕೂ ಹೆಚ್ಚೇನೂ ಭಿನ್ನತೆಯಿಲ್ಲದಿದ್ದರೂ "ವಿಶ್ವಮಾನವರೆಲ್ಲರೂ ಪರಮಾತ್ಮನ ಸ್ವರೂಪರೇ" ಎನ್ನುವ ಅದ್ವೈತವನ್ನು ಬಿಟ್ಟು ಎಲ್ಲವೂ ಶ್ರೀ ಹರಿಯೇ , ಅವನೊಬ್ಬನೇ ಶೇಷಿ ಮಿಕ್ಕದ್ದೆಲ್ಲಾ ಶೇಷ ಎಂದು ಹೇಳುತ್ತಾರೆ"

- ಆದರೆ "ವಿಶ್ವಮಾನವರೆಲ್ಲರೂ ಪರಮಾತ್ಮನ ಸ್ವರೂಪರೇ" ಎನ್ನುವುದಕ್ಕೂ "ಶ್ರೀಹರಿಯು ಶೇಷಿ, ಮಿಕ್ಕದ್ದೆಲ್ಲಾ ಶೇಷ" ಎನ್ನುವುದಕ್ಕೂ ಅಗಾಧವಾದ ಅಂತರವುಂಟು. ಆದ್ದರಿಂದ "ವಿಶಿಷ್ಟಾದ್ವೈತಕ್ಕೂ ಅದ್ವೈತಕ್ಕೂ ಹೆಚ್ಚೇನೂ ಭಿನ್ನತೆಯಿಲ್ಲ"ವೆಂಬ ಸಮನ್ವಯ ತುಸು ಕಷ್ಟದ್ದೆನಿಸುತ್ತದೆ. ಜಗತ್ತು ಮಿಥ್ಯೆ, ಮಾಯೆ; ಈ ಮಾಯಾಪ್ರಪಂಚದಲ್ಲಿ ಸಿಲುಕಿರುವ ಜೀವನ ನಿಜಸ್ವರೂಪವೆಂದರೆ ಪರಮಾತ್ಮನೇ; ಜೀವನಿಗೂ ಪರಮಾತ್ಮನಿಗೂ ಕಾಣಬರುವ ಭೇದ ಕೇವಲ ಪರಮಾತ್ಮನ ಮಾಯಾವಿಕಾರ; ಹೀಗೆಂಬ ತಿಳಿವೇ ಮುಕ್ತಿ (ಸ್ವಸರೂಪದರ್ಶನ, ಯಥಾರ್ಥ ಜ್ಞಾನ) - ಇದು ಸ್ಥೂಲವಾಗಿ ಶಂಕರರ ನಿಲುವು.

ಆದರೆ ರಾಮಾನುಜರ ಶೇಷಿ-ಶೇಷ ಪರಿಕಲ್ಪನೆ ಹಾಗಲ್ಲ. ಇಲ್ಲಿ ಮೂರು ಮುಖ್ಯ ಅಂಶಗಳಿವೆ: ಆತ್ಮ, ಚೇತನ (ಚಿದ್ವಸ್ತು) ಮತ್ತು ಅಚೇತನ (ಅಚಿದ್ವಸ್ತು). ವೇದಪ್ರತಿಪಾದ್ಯವಾದ ಆತ್ಮವೆನ್ನುವುದು ಒಂದೇ - ಅದೇ ಬ್ರಹ್ಮ, ಅದೇ ಸತ್ಯ. ವಿವಿಧಜೀವಿಗಳಲ್ಲಿ ಬೇರೆಬೇರೆ ತೋರುವುದು ವಿವಿಧ ಆತ್ಮಗಳಲ್ಲ, ಬದಲಿಗೆ ಈ ಪರಮಾತ್ಮನದೇ ಒಂದು ಅಂಶವಷ್ಟೇ. ಅದು ಚೇತನ (ಚಿದ್ವಸ್ತು - ಆತ್ಮನ ಒಂದು ತುಣುಕು). ಇನ್ನು ಈ ಇಡೀ ಜಗತ್ತು (ಅಚೇತನ-ಅಚಿದ್ವಸ್ತುಗಳ ಮೊತ್ತ) ಪರಮಾತ್ಮನ ದೇಹ. ಅದಕ್ಕೆಂದೇ ಪರಮಪುರುಷನು ಸಹಸ್ರಪಾದ, ಸಹಸ್ರಾಕ್ಷ, ಸಹಸ್ರಶಿರ, ಸಹಸ್ರೋರು ಮತ್ತು ಸಹಸ್ರಬಾಹುವೆನ್ನಿಸಿಕೊಳ್ಳುತ್ತಾನೆ. ಹೀಗೆ ಆತ್ಮ-ಪರಮಾತ್ಮರ ಭೇದವನ್ನೂ, ಆತ್ಮದ ಬಹುತ್ವವನ್ನೂ ನಿರಾಕರಿಸಿ, ಪ್ರತಿಯೊಂದು ಜೀವಿಯಲ್ಲಿರುವುದು ಒಂದೇ ಪರಮಾತ್ಮನ ಅಂಶ(ಶೇಷ)ವೆಂದೂ, ಆತ್ಮ(ಶೇಷಿ)ವೊಂದೇ ಎಂದೂ ಆತ್ಮೈಕತ್ವವನ್ನು ಪ್ರತಿಪಾದಿಸುವುದರಿಂದ ಅದು "ಅದ್ವೈತ"; ಆದರೆ ಕಾಣಬರುವ ವಿವಿಧ ಆತ್ಮಗಳ ಭೇದವನ್ನು ಮಾಯೆಯೆನ್ನದೇ ಅದು ಸತ್ಯವೆಂದೂ ವಿರಾಟ್ ಆತ್ಮದ ಅಂಶಮಾತ್ರವೆಂದೂ ಪ್ರತಿಪಾದಿಸುವುದರಿಂದ ಅದು "ವಿಶಿಷ್ಟಾದ್ವೈತ". ಇದಕ್ಕೂ, ಬ್ರಹ್ಮನನ್ನುಳಿದು ಮಿಕ್ಕದ್ದೆಲ್ಲವೂ ಮಾಯೆಯೆನ್ನುವ ಅದ್ವೈತದ ನಿಲುವಿಗೂ ಅಜಗಜಾಂತರ ವ್ಯತ್ಯಾಸವಿದೆ.

ಇನ್ನು ಶಂಕರರ ಸಿದ್ಧಾಂತಕ್ಕೂ ಮಧ್ವಸಿದ್ಧಾಂತಕ್ಕೂ ಮೇಲಿನಷ್ಟು ಸಾಮ್ಯವೂ ಇಲ್ಲ - ಭೂಮ್ಯಾಕಾಶಗಳ ಅಂತರ. ಎರಡೂ ಪಕ್ಷಗಳು ಒಪ್ಪುವ ಒಂದೇ ವಾಕ್ಯವೆಂದರೆ "ಬ್ರಹ್ಮ ಸತ್ಯ" ಅದು ಬಿಟ್ಟರೆ ಮಿಕ್ಕಿದ್ದೆಲ್ಲವೂ ತದ್ವಿರುದ್ಧವೇ! ಆದರೆ ಈ ಎರಡು ಸಿದ್ಧಾಂತಗಳನ್ನು ಹೋಲಿಸುತ್ತಾ, ಲೇಖನ ಹೀಗೆ ಹೇಳುತ್ತದೆ:

"ದ್ವೈತದಲ್ಲಿಯೂ ಸಹ 'ಹರಿ ಸರ್ವೋತ್ತಮ' ಎನ್ನುವುದು ಅಂತಿಮ ನಿಶ್ಚಯ. ಬ್ರಹ್ಮವೆಂದರೆ ಬೇರೇನೂ ಅಲ್ಲ, ಜಗತ್ತಿನ ನಿಯಾಮಕನೂ ಸರ್ವಶಕ್ತನೂ ಆದ ಶ್ರೀಹರಿಯೇ ಮತ್ತು ಅವನೊಬ್ಬನೇ ಎಂದು ನಿರೂಪಿಸುತ್ತಾರೆ. ಹರಿಯೊಬ್ಬನೆ ಸ್ವತಂತ್ರ ಸತ್ಯ ಇನ್ನುಳಿದದ್ದೆಲ್ಲಾ ಅಧೀನ ಸತ್ಯ ಎನ್ನುವ ಪ್ರತಿಪಾದನೆಯನ್ನು ಕಾಣಬಹುದಾಗಿರುತ್ತದೆ. ಇಲ್ಲಾದರೂ ಸಹ ನಾವು ಶಂಕರರ ತತ್ವವನ್ನೇ ಕಾಣಬಹುದಾಗಿರುತ್ತದೆ. ಬ್ರಹ್ಮವೊಂದೇ ಸತ್ಯ ಜಗತ್ತು ಮಿಥ್ಯೆ ಎನ್ನುವ ಶಂಕರರ ಅದ್ವೈತಕ್ಕೂ ಹರಿಯೊಬ್ಬನೇ (ಸಗುಣ ಬ್ರಹ್ಮ) ಸತ್ಯ ಉಳಿದುದೆಲ್ಲವೂ ಅನಿತ್ಯ ಅಥವಾ ಅಧೀನ ಸತ್ಯ (ಅಸ್ವತಂತ್ರ ಸತ್ಯ) ಮತ್ತು ಹರಿಯಿಂದಲೇ ಜಗತ್ತು ನೆಡೆಯುವುದು ಎನ್ನುವಾಗ 'ಜಗತ್ತು' ಕೂಡಾ ಹರಿಯ ಮಾಯೆಯೇ ಎನ್ನುವುದು ನಿರೂಪಿತವಾಗುತ್ತದೆ ಮತ್ತು ಹೆಚ್ಚು ವ್ಯತ್ಯಾಸವೂ ಕಾಣದಾಗುತ್ತದೆ. ಇದು ನಿತ್ಯ ಅದು ಅನಿತ್ಯ ಎನ್ನುವ ಪೃಥಃಕರಣ ಎನ್ನಬಹುದು. (ಅರ್ಜುನನ ಗುರಿಯು ಪಕ್ಷಿಯ ಅಕ್ಷಿಯೊಂದೇ ಆಗಿದ್ದಾಗ ಉಳಿದ ಅಂಗಗಳೆಲ್ಲಾ ಆತನಿಗೆ ನಿಮಿತ್ತವಾಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬಹುದು)"

- ಇಲ್ಲಿ ಉಭಯಮತಸಮನ್ವಯದ ಪ್ರಯತ್ನ ಕಾಣುತ್ತದೆ, ಆದರೆ ತಾತ್ವಿಕವಾಗಿಯಾದರೂ ಈ ಸಮನ್ವಯ ಸಾಧ್ಯವೇ ನೋಡೋಣ.

"ದ್ವೈತದಲ್ಲಿಯೂ ಸಹ 'ಹರಿ ಸರ್ವೋತ್ತಮ' ಎನ್ನುವುದು ಅಂತಿಮ ನಿಶ್ಚಯ. ಬ್ರಹ್ಮವೆಂದರೆ ಬೇರೇನೂ ಅಲ್ಲ, ಜಗತ್ತಿನ ನಿಯಾಮಕನೂ ಸರ್ವಶಕ್ತನೂ ಆದ ಶ್ರೀಹರಿಯೇ ಮತ್ತು ಅವನೊಬ್ಬನೇ ಎಂದು ನಿರೂಪಿಸುತ್ತಾರೆ" - ಇದರಲ್ಲಿ ಎರಡು ಮಾತಿಲ್ಲ.

ಮುಂದೆ "ಹರಿಯೊಬ್ಬನೆ ಸ್ವತಂತ್ರ ಸತ್ಯ ಇನ್ನುಳಿದದ್ದೆಲ್ಲಾ ಅಧೀನ ಸತ್ಯ ಎನ್ನುವ ಪ್ರತಿಪಾದನೆಯನ್ನು ಕಾಣಬಹುದಾಗಿರುತ್ತದೆ" ಇಲ್ಲಿ ಸ್ವತಂತ್ರ ಸತ್ಯ ಮತ್ತು ಅಧೀನ ಸತ್ಯ ಎಂಬುವು ತತ್ವವಾದದ ಪರಿಭಾಷೆಯಲ್ಲವಾದರೂ ಅದರ ಆಶಯಕ್ಕೆ ಮುಕ್ಕಾಗಿಲ್ಲವಾದ್ದರಿಂದ ಒಪ್ಪಿ ಮುಂದುವರೆಯಬಹುದು. ಅದನ್ನೇ ತತ್ವವಾದದ ಪರಿಭಾಷೆಯಲ್ಲಿ ಹೇಳುವುದಾದರೆ "ಹರಿಯೊಬ್ಬನೇ ಸ್ವತಂತ್ರ, ಮಿಕ್ಕೆಲ್ಲಾ ಹರಿಯ ಅಧೀನ; ಬ್ರಹ್ಮನೂ, ಅವನಿಂದ ಸೃಷ್ಟಿಸಲ್ಪಟ್ಟ ಜಗತ್ತೂ, ಅದರ ಭೇದವೂ ತಾರತಮ್ಯವೂ ಸತ್ಯ." ಇದನ್ನು ಹೀಗೇಕೆ ಮಾರ್ಪಡಿಸಬೇಕಾಯಿತೆಂದರೆ, ಮೇಲಿನ ವಾಕ್ಯದ ಆಶಯ ಅದೇ ಆದರೂ ಸ್ವತಂತ್ರ ಸತ್ಯ ಮತ್ತು ಅಧೀನ ಸತ್ಯವೆಂಬ ಪರಿಭಾಷೆ ತತ್ವವಾದವನ್ನು ಅದ್ವೈತವಾದದತ್ತ ತುಯ್ಯುತ್ತದೆ. ಏಕೆಂದರೆ "ಹರಿ ಸ್ವತಂತ್ರ, ಮಿಕ್ಕಿದ್ದು ಅಧೀನ, ಮತ್ತು ಎರಡೂ ಸತ್ಯ" ಎನ್ನುವುದಕ್ಕೂ "ಹರಿಯು ಸ್ವತಂತ್ರ ಸತ್ಯ, ಮಿಕ್ಕಿದ್ದು ಅಧೀನ ಸತ್ಯ" ಎನ್ನುವುದಕ್ಕೂ ಬಹಳ ವ್ಯತ್ಯಾಸವಿದೆ. ಮೊದಲ ಸಾಲಿನಲ್ಲಿ ನಾವು ವಸ್ತುವಿನ ಸ್ವಾತಂತ್ರ್ಯದ ಬಗೆಗೆ ಮಾತಾಡುತ್ತೇವೆ, ಎರಡನೆಯದರಲ್ಲಿ ಸತ್ಯದ ಸ್ವಾತಂತ್ರ್ಯದ ಬಗ್ಗೆ. ಮಿಕ್ಕಿದ್ದು ಅಧೀನಸತ್ಯ (dependent/conditional truth) ಎಂದುಬಿಟ್ಟರೆ ಸ್ವತಂತ್ರ ಸತ್ಯದ ಮರ್ಜಿಯಲ್ಲಿ ಅಧೀನ ಸತ್ಯವೂ ಮಿಥ್ಯೆಯಾಗಿಬಿಡಬಹುದೆನ್ನುವ ಅಭಿಪ್ರಾಯ ಬಂದುಬಿಡುತ್ತದೆ (ಜಗತ್ತು ಬ್ರಹ್ಮದ ಮಾಯೆ, ಅದರೊಳಗಿರುವವರಿಗೆ ಮಾತ್ರ ಅದು ಸತ್ಯ (ವ್ಯಾವಹಾರಿಕ-ಅಧೀನ ಸತ್ಯ), ಬ್ರಹ್ಮನಿಗಲ್ಲ). ಇದು ಖಂಡಿತಾ ತತ್ವವಾದದ ನಿಲುವಲ್ಲ. ಇಷ್ಟು ಹೇಳಿ ಮುಂದೆ ನೋಡೋಣ:

"ಬ್ರಹ್ಮವೊಂದೇ ಸತ್ಯ ಜಗತ್ತು ಮಿಥ್ಯೆ ಎನ್ನುವ ಶಂಕರರ ಅದ್ವೈತಕ್ಕೂ ಹರಿಯೊಬ್ಬನೇ (ಸಗುಣ ಬ್ರಹ್ಮ) ಸತ್ಯ ಉಳಿದುದೆಲ್ಲವೂ ಅನಿತ್ಯ ಅಥವಾ ಅಧೀನ ಸತ್ಯ (ಅಸ್ವತಂತ್ರ ಸತ್ಯ) ಮತ್ತು ಹರಿಯಿಂದಲೇ ಜಗತ್ತು ನೆಡೆಯುವುದು ಎನ್ನುವಾಗ 'ಜಗತ್ತು' ಕೂಡಾ ಹರಿಯ ಮಾಯೆಯೇ ಎನ್ನುವುದು ನಿರೂಪಿತವಾಗುತ್ತದೆ ಮತ್ತು ಹೆಚ್ಚು ವ್ಯತ್ಯಾಸವೂ ಕಾಣದಾಗುತ್ತದೆ" - ಇದು ಹೇಗೆ?

"ಹರಿಯೊಬ್ಬನೇ (ಸಗುಣಬ್ರಹ್ಮದ ವಿಷಯವನ್ನು ಮುಂದೆ ಮಾತಾಡೋಣ) ಸತ್ಯ, ಉಳಿದುದೆಲ್ಲವೂ ಅನಿತ್ಯ (ಹಿಂದಿನ ಅಧೀನಸತ್ಯವು ಇಲ್ಲಿ ಅನಿತ್ಯವೆಂದು ಕರೆಯಲ್ಪಟ್ಟಿತು)" ಎಂದಾಗ ಅದು ಹರಿಯ ಮಾಯೆಯೆಂದು ಎಲ್ಲಿ ನಿರೂಪಿತವಾಯಿತು? ಅನಿತ್ಯವೆಂದರೆ ಕ್ಷಣಿಕ (not-eternal, but mortal); ಕ್ಷಣಿಕ ಹೌದು, ಆದರೆ ಮಾಯೆಯೇ? ನಡೆಯುವಾಗ ಎಡವಿ ಬಿದ್ದರೆ ನೋವು ಕ್ಷಣಿಕ, ಅನಿತ್ಯ, ಆದರೆ ಅದು ಮಾಯೆಯಲ್ಲವಲ್ಲ!

ಮತ್ತೆ ಹರಿಯಿಂದಲೇ ಜಗತ್ತು ನಡೆಯುವುದು ಎನ್ನುವಾಗ ಜಗತ್ತು ಹರಿಯ ಮಾಯೆಯೆಂದು ನಿರೂಪಿತವಾಗದು? ಹೆಚ್ಚೆಂದರೆ ಅದನ್ನು ಹರಿಯ ಲೀಲೆಯೆನ್ನಬಹುದಲ್ಲವೇ? ಬ್ರಹ್ಮನ ಲೀಲಾಮಾತ್ರದಿಂದ ಜಗತ್ತು ಸೃಷ್ಟಿಯಾಯಿತು ಎನ್ನುವುದು ಉಭಯ ದರ್ಶನಗಳೂ ಒಪ್ಪುವ ವಿಚಾರ. ಆದರೆ ಈ ಲೀಲಾಮಾತ್ರ ಸೃಷ್ಟಿ ಮಾಯಾಸೃಷ್ಟಿಯೋ ನೈಜವೋ ಎಂಬಲ್ಲಿಯೇ ತಕರಾರು. ಇಲ್ಲಿ ಜಗನ್ನಾಥದಾಸರ ಹರಿಕಥಾಮೃತಸಾರದಿಂದ ಒಂದು ಸಾಲು ನೆನಪಿಗೆ ಬರುತ್ತದೆ "ಏನು ಕರುಣಾನಿಧಿಯೊ ಹರಿ ಮತ್ತೇನು ಭಕ್ತಾಧೀನನೋ ಇನ್ನೇನು ಈತನ ಲೀಲೆ ಇಚ್ಛಾಮಾತ್ರದಲೆ ಜಗವ ತಾನೆ ಸೃಜಿಸುವ ಪಾಲಿಸುವ ನಿರ್ಮಾಣ ಮೊದಲಾದಖಿಲ ಲೋಕಸ್ಥಾನದಲಿ ತನ್ನವರನಿಟ್ಟಾನಂದ ಪಡಿಸುವನು"

ಜಗತ್ಸತ್ಯತ್ವವನ್ನು ವ್ಯಾವಹಾರಿಕ ಸ್ತರದಲ್ಲಿ ಶಂಕರರರೂ ಒಪ್ಪುವರಾದರೂ ಪರಮಾರ್ಥದಲ್ಲಿ ಅದು ಮಾಯೆಯೇ ಸರಿ. ಆದರೆ ಮಧ್ವರ ನಿಲುವೋ, ಜಗತ್ತು ಸತ್ಯವಷ್ಟೇ ಅಲ್ಲ, ನಿತ್ಯವೂ - ಅದರ ರೂಪ ಬದಲಾಗಬಹುದು, ಎಲ್ಲವೂ ನಾಶಹೊಂದಿ ಪರಮಾತ್ಮನಲ್ಲಿ ಅಡಗಬಹುದು, ಆದರೆ ಮಾಯವಾಗದು. ಬೀಜರೂಪದಲ್ಲಾದರೂ ಅದರ ಅಸ್ತಿತ್ವವಿದ್ದೇ ಇರುತ್ತದೆ. ಎಂದಮೇಲೆ ಜಗನ್ಮಿಥ್ಯಾತ್ವ ಮತ್ತು ಸತ್ಯತ್ವಗಳ ನಡುವಿನ ಸಮನ್ವಯವಿರಲಿ, ಹೋಲಿಕೆಯಾದರೂ ಹೇಗೆ?

ಇನ್ನು ಆಚಾರ್ಯರಿಬ್ಬರೂ "ಒಪ್ಪುವ" ಬ್ರಹ್ಮಸತ್ಯತ್ವದ ವಿಷಯವನ್ನೊಂದಿಷ್ಟು ನೋಡೋಣ. ಅದಾದರೂ ನಿರ್ವಿವಾದವೇ ಎಂದರೆ, ಅಲ್ಲವೆಂದೇ ಹೇಳಬೇಕಾಗುವುದು. "ಒಪ್ಪಿಗೆ" ವಾಕ್ಯದ ಮಟ್ಟದಲ್ಲಷ್ಟೇ! ವಾಕ್ಯಾರ್ಥದ ಮಟ್ಟಕ್ಕಿಳಿದರೆ ಅಲ್ಲೂ ತಕರಾರೇ! ಶಂಕರರ ಪ್ರಕಾರ ಬ್ರಹ್ಮನು ನಿರ್ಗುಣ, ನಿರಾಕಾರ, ನಿರುಪಾಧಿಕ. ಗುಣ, ಆಕಾರ, ಉಪಾಧಿ ಎಲ್ಲವೂ ಜೀವಕ್ಕೆ ಮಾತ್ರ. ಆದರೆ ಈಗಾಗಲೇ ಜೀವನು ಪರಬ್ರಹ್ಮಸ್ವರೂಪಿಯೆಂದೂ ಪರಬ್ರಹ್ಮನು ನಿರ್ಗುಣ, ನಿರಾಕಾರ, ನಿರುಪಾಧಿಕನೆಂದೂ ಒಪ್ಪಿಬಿಟ್ಟಿರುವುದರಿಂದ, ಜೀವನಲ್ಲಿ ಕಾಣುವ ಈ ಗುಣ, ಆಕಾರ, ಉಪಾಧಿಗಳೆಲ್ಲಾ ಬರೀ ತೋರಿಕೆಯೆಂದೂ ಮಾಯೆಯೆಂದೂ ಹೇಳಬೇಕಾಗುವುದು - ಇದು ತರ್ಕ. ಹಾಗೆಂದಮಾತ್ರಕ್ಕೆ ಅದ್ವೈತಸಾಧನೆಯಲ್ಲಿ ಬ್ರಹ್ಮನ ಸಗುಣೌಪಾಸನೆಯಿಲ್ಲವೆಂದಲ್ಲ. ಗುಣ, ಆಕಾರ, ಉಪಾಧಿಭರಿತವಾದ ಜೀವಕ್ಕೆ ಅವೆಲ್ಲಾ ಮಾಯೆಯೆಂಬ ಜ್ಞಾನವಾಗದೆ ನಿರ್ಗುಣದ ಅರಿವು ಸಾಧ್ಯವಿಲ್ಲ. ಅದುವರೆಗೂ ಜೀವಕ್ಕೆ ತನ್ನ ಉಪಾಧಿಗನುಗುಣವಾಗಿ ಸಗುಣೌಪಾಸನೆಯೇ ಮಾರ್ಗ. ಭಕ್ತಿ ಇದಕ್ಕೆ ಸಾಧನ. ಇದರಿಂದ ಚಿತ್ತಶುದ್ಧಿ, ತನ್ಮೂಲಕ ಜ್ಞಾನಾರ್ಹತೆ, ಜ್ಞಾನ, ಮುಂದೆ ನಿರ್ಗುಣೋಪಾಸನೆ - ಇದು ಶಂಕರರ ಮಾರ್ಗ. ಇದಕ್ಕೆ ಮಧ್ವರ ಆಕ್ಷೇಪಣೆಯೋ ಎಂದರೆ, ಗುಣ, ಆಕಾರ, ಉಪಾಧಿಗಳೇನೂ ಇಲ್ಲದ ಬ್ರಹ್ಮನನ್ನು ಏನೆಂದು ನಿರ್ದೇಶಿಸುವುದು? "ಇಲ್ಲ"ವೆಂದೇ? ಇದು ಆತ್ಯಂತಿಕವಾಗಿ ಬ್ರಹ್ಮನೂ ಇಲ್ಲವೆಂದೇ ಹೇಳಿದಂತಲ್ಲವೇ? ಇದಕ್ಕೆ ಪ್ರತಿಯಾಗಿ ಮಧ್ವರ ಪರಿಕಲ್ಪನೆಯೆಂದರೆ, ಬ್ರಹ್ಮ ಗುಣರಹಿತನಲ್ಲ, ನಿರಾಕಾರನಲ್ಲ, ಉಪಾಧಿರಹಿತನಲ್ಲ; ಹಾಗೆಯೇ ಆತ್ಮನೂ ಗುಣ/ಆಕಾರ/ಉಪಾಧಿರಹಿತನಲ್ಲ. ಹಾಗಿದ್ದರೆ ಬ್ರಹ್ಮನಿಗೂ ಜೀವನಿಗೂ ವ್ಯತ್ಯಾಸವೇನು? ಜೀವನ ಗುಣ/ಆಕಾರ/ಉಪಾಧಿಗಳು ಸಂಪೂರ್ಣವೂ ಕಳಂಕರಹಿತವೂ ಅಲ್ಲ. ಅದಕ್ಕೆ ಅಪೂರ್ಣತ್ವವಿದೆ, ದೋಷಬಾಧೆಯಿದೆ. ಆದರೆ ಬ್ರಹ್ಮನೋ, ಸರ್ವದೋಷವಿವರ್ಜಿತ. "ಅನಂತಕಲ್ಯಾಣಗುಣ ಪರಿಪೂರ್ಣ, ಕ್ಷೀರಾಬ್ಧಿಶಾಯಿ, ನಿರ್ದೋಷ ಜ್ಞಾನಾನಂದಾತ್ಮಕ ವಿಷ್ಣುರ್ಮೇ ಸ್ವಾಮಿನ್" ಎಂದೇ ನಿರ್ದೇಶನ. ಗುಣಪೂರ್ಣನಾದ್ದರಿಂದ ಈತನಿಗೊಂದು ಹೆಸರಿದೆ, ಅದೇ ಹರಿ; ಅವನಿಗೊಂದು ರೂಪ ಕೂಡ ಇದೆ. ಹರಿಯ ರೂಪಾತಿಶಯಗಳ, ದೇಹದ ಅಂಗಾಂಗಗಳ ವರ್ಣನೆಗೆಂದೇ ಮಧ್ವಾಚಾರ್ಯರು ತಮ್ಮ ದ್ವಾದಶಸ್ತೋತ್ರದ ಇಡೀ ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ.

ಆದ್ದರಿಂದ ಕೇವಲ ಕೆಲವೇ ಕೆಲವು ಗೌಣ ವಿಷಯಗಳ ಬಗೆಗೆ ಬಿಟ್ಟರೆ ಆಚಾರ್ಯದ್ವಯರಲ್ಲಿ (ಅಥವ ಆಚಾರ್ಯತ್ರಯರಲ್ಲಿಯೂ) ಕಂಡುಬರುವುದು ಅಡಿಯಿಂದ ಮುಡಿಯವರೆಗೂ ಭಿನ್ನತೆಯೇ! ಇದರರ್ಥ ಯಾರು ಸರಿ ಯಾರು ತಪ್ಪೆಂದು ಚರ್ಚಿಸಬೇಕೆಂದೋ ನಿರ್ಧರಿಸಬೇಕೆಂದೋ ಅಲ್ಲ, ಕೇವಲ ಹೋಲಿಕೆಗಳ ಸ್ಪಷ್ಟತೆಗಾಗಿಯಷ್ಟೇ ಈ ಚರ್ಚೆ.

ಇದು ಲೇಖನದಲ್ಲಿನ ಹೋಲಿಕೆಗಳ ವಿಷಯದ ಮಾತಾಯಿತು. ಇನ್ನು ಲೇಖನದಲ್ಲೇ ಒಡಮೂಡಿರುವ ಮತ್ತೊಂದು ವಿಚಾರದ ಬಗ್ಗೆ ನನ್ನ ಅನಿಸಿಕೆಗಳನ್ನು ಮಂಡಿಸುವೆ. ಅದೆಂದರೆ ಅನಿತ್ಯ-ಮಿಥ್ಯ ವಿಚಾರ. ಮೊದಲೇ ಚರ್ಚಿಸಿದಂತೆ ಅನಿತ್ಯವು ಮಿಥ್ಯೆಯಾಗಬೇಕಿಲ್ಲ ಅಲ್ಲವೇ? ಲೇಖನವೂ "'ಅನಿತ್ಯ' ಎನ್ನುವುದೇನೋ ಸರಿ ಆದರೆ, ಮಿಥ್ಯೆ ಎನ್ನುವುದು ಎಷ್ಟು ಸರಿ?" ಎಂದು ಪ್ರಶ್ನೆಯನ್ನೇನೋ ಕೈಗೆತ್ತಿಕೊಳ್ಳುತ್ತದೆ, ಆದರೆ ಉತ್ತರ ಮನದಟ್ಟಾಗಲಿಲ್ಲ.

"ಆತ್ಮಾಭ್ಯಾಸಿಯು ಅನಿತ್ಯವಾದ ಜಗತ್ತನ್ನು ನೆಚ್ಚಿ ಕುಳಿತರೆ ತನ್ನ ಪರಮಾರ್ಥದ ಉದ್ದೇಶವನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗದು. ಆತನ ಲಕ್ಷ್ಯವೇನಿದ್ದರೂ ಬ್ರಹ್ಮದೆಡೆಗೆ ಮಾತ್ರ ಇರಬೇಕಾಗುತ್ತದೆ. ಹೀಗೆ ಗಟ್ಟಿಯಾಗುತ್ತಾ ಸಾಗಿದಂತೆ ಮೊಟ್ಟಮೊದಲ ವೈರಾಗ್ಯವು(=ಅನಾಸಕ್ತಿ, ತಟಸ್ಥ ಭಾವ) ಹುಟ್ಟುತ್ತದೆ... ಮಿಥ್ಯಾಪ್ರಂಪಚದ ಗೊಡವೆಯಿಂದ ಪರಮಾರ್ಥ ಚಿಂತನೆಯು ಸಾಧ್ಯವಾಗುವುದಿಲ್ಲ ಎಂಬ ಭಾವವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ ಎಂದುಕೊಳ್ಳಬಹುದು. "ವೈರಾಗ್ಯವು ತಪ್ಪದೆ ಹುಟ್ಟುವುದಕ್ಕಾಗಿ ಬ್ರಹ್ಮವು ನಿತ್ಯ ಜಗತ್ತು ಅನಿತ್ಯ ಎಂದು ಹೇಳದೆ ಬ್ರಹ್ಮವು ಸತ್ಯ ಜಗತ್ತು ಮಿಥ್ಯೆ ಎಂದು ಹೇಳಿದ್ದಾರೆ " ಎಂಬುದು ಸದ್ಗುರು ಚಂದ್ರಶೇಖರ ಭಾರತಿಗಳ ವಿವರಣೆ." ಇದು ಅಷ್ಟು ಸಮರ್ಪಕವೆನಿಸುವುದಿಲ್ಲ. ಕೇವಲ ವೈರಾಗ್ಯವು ತಪ್ಪದೇ ಹುಟ್ಟಬೇಕೆಂಬ ಕಾರಣಕ್ಕಾಗಿ ಅನಿತ್ಯವನ್ನು ಮಿಥ್ಯೆಯೆಂದು ಹೇಳುತ್ತಾರೆಯೇ? ಹಾಗಿದ್ದರೆ ಸತ್ಯವನ್ನೂ ಮಿಥ್ಯೆಯೆಂದೇ ಹೇಳಿಬಿಡಬಹುದಲ್ಲವೇ? ಯಥಾರ್ಥಜ್ಞಾನವೇ ಪರಮಾರ್ಥವೆಂದು ಸಾಧಿಸುವ ಬೋಧಿಸುವ ಮಹಾಮನೀಷಿಗಳು ಕೇವಲ ಮುಮುಕ್ಷುಗಳ ವೈರಾಗ್ಯಲಾಭಕ್ಕಾದರೂ ಅನಿತ್ಯವನ್ನು ಮಿಥ್ಯೆಯೆನ್ನುವ ಆಮಿಷವೊಡ್ಡುವರೇ? ಶ್ರೀ ಶಂಕರರ ವಿಷಯದಲ್ಲಿ ನನಗೇನೋ ಇದು ಮನಸ್ಸಿಗೊಪ್ಪುವ ಮಾತಲ್ಲ. ಬದಲಿಗೆ ಇದರ ಸಮನ್ವಯ ಹೀಗಿರಬಹುದು:

ಸಾಧನಚತುಷ್ಟಯದ ಮೊದಲ ಸಾಧನ, ನಿತ್ಯಾನಿತ್ಯವಸ್ತುವಿವೇಕ. ಯಾವುದು ನಿತ್ಯ (eternal) ಮತ್ತು ಯಾವುದು ಅನಿತ್ಯ (mortal). ಬ್ರಹ್ಮನೇನೋ ಸತ್ಯವೂ, ನಿತ್ಯವೂ ಹೌದು (ಸತ್ಯ, ಮತ್ತು ಅನಾದ್ಯನಂತ). ಇದಕ್ಕೆ ವಿರುದ್ಧವಾಗಿ ಜಗತ್ತು ಮಿಥ್ಯೆ, ಮತ್ತು ಅನಿತ್ಯ. ಆದರೆ ಇಲ್ಲಿ ಮಿಥ್ಯೆಯೆಂದುಬಿಟ್ಟಮೇಲೆ ನಿತ್ಯಾನಿತ್ಯದ ಪ್ರಶ್ನೆಯೇ ಏಳುವುದಿಲ್ಲವಲ್ಲ! ಏಕೆಂದರೆ "ಇಲ್ಲ"ದಿದ್ದುದು ನಿತ್ಯವೋ ಅನಿತ್ಯವೋ ಆಗುವುದಾದರೂ ಹೇಗೆ? ಅದೇನಿದ್ದರೂ ಸತ್ಯವಸ್ತುವಿನ ಗೊಡವೆಯಲ್ಲವೇ? ಹೌದು. ಮತ್ತಿದರ ಪರಿಹಾರ? ಜಗತ್ತು ಪರಮಾರ್ಥದಲ್ಲಿ ಮಿಥ್ಯವೇನೋ ಸರಿ, ಆದರೆ ವ್ಯಾವಹಾರಿಕ ಸ್ತರದಲ್ಲಿ (ಜೀವನಿಗೆ ಯಥಾರ್ಥಜ್ಞಾನವಾಗುವವರೆಗಾದರೂ) ಸತ್ಯವೇ ತಾನೆ? ಅಂದಮೇಲೆ ಆ "ಸತ್ಯ"ದ ಪರಿಧಿಯಲ್ಲಿ ವಸ್ತುವು ನಿತ್ಯವೋ ಅನಿತ್ಯವೋ ಎಂಬ ಪ್ರಶ್ನೆಬಂದೇಬರುತ್ತದೆ. ಜೀವನ ಆತ್ಯಂತಿಕ ಗುರಿ ಪರಮಾರ್ಥವಾದ್ದರಿಂದ, ಯಥಾರ್ಥಜ್ಞಾನವಾದೊಡನೆ ಜಗತ್ತಿನ ವ್ಯಾವಹಾರಿಕ ಸತ್ಯದ ಪೊರೆ ಹರಿಯುವುದರಿಂದ ಈ ವ್ಯಾವಹಾರಿಕ ಜಗತ್ತು ನಿತ್ಯವಲ್ಲ, ಬದಲಿಗೆ ಅನಿತ್ಯ. ಬಹುಶಃ ಇದು ಆಚಾರ್ಯ ಶಂಕರರ ನಿಲುವು. ಆದ್ದರಿಂದ ಇದನ್ನು ಹೀಗೆ ಸಂಗ್ರಹಿಸಬಹುದು: ಬ್ರಹ್ಮವು ಸತ್ಯ, ಮತ್ತು ನಿತ್ಯ; ಜಗತ್ತು, ಪರಮಾರ್ಥದಲ್ಲಿ ಮಿಥ್ಯೆಯಾದರೂ ವ್ಯವಹಾರದಲ್ಲಿ ಸತ್ಯ ಆದರೆ ಈ ವ್ಯಾವಹಾರಿಕತೆಯೇ ಮಿಥ್ಯೆಯಾದ್ದರಿಂದ, ಎಂದಿದ್ದರೂ ಹರಿದುಹೋಗುವುದರಿಂದ ಈ ಜಗತ್ತು ಅನಿತ್ಯ. ಆದ್ದರಿಂದ ಈ ಸಂದರ್ಭದಲ್ಲಿ ನಿಜಕ್ಕೂ ಶ್ರೀ ಶಂಕರರ ಉದ್ದೇಶ ನಿತ್ಯಾನಿತ್ಯವಸ್ತುವಿನ ಬಗ್ಗೆ ತಿಳಿಯಪಡಿಸುವುದೇ ಹೊರತು ಮಿಥ್ಯೆಯ ಬಗೆಗಲ್ಲ (ಅದರ ಸಂದರ್ಭವೇ ಬೇರೆ). "ಜಗತ್ತು ಅನಿತ್ಯವೆಂಬುದನ್ನು ಮೊದಲು ಅರಿತುಕೋ, ಮುಂದಿನ ಅರಿವು ಆಮೇಲಾಗಲಿ" ಇದು ಶಂಕರರ ಆಶಯವಿರಬೇಕು; ಆದ್ದರಿಂದಲೇ ಇದನ್ನು "ನಿತ್ಯಾನಿತ್ಯವಸ್ತುವಿವೇಕ"ವೆಂದಿದ್ದಾರೆ, ತಪ್ಪಿದ್ದರೆ ದಯವಿಟ್ಟು ತಿಳಿಯಪಡಿಸಬೇಕೆಂದು ಕೋರುತ್ತೇನೆ.

ಅನುಬಂಧ:
ಇನ್ನು ಕೊನೆಯದಾಗಿ, ಲೇಖನದಲ್ಲಿ ಪ್ರಾಸ್ತಾವಿಕವಾಗಿ ಮಾಧ್ವಪ್ರಮೇಯಗಳ ಬಗ್ಗೆ ವಿವರಿಸುವಲ್ಲಿ ಈ ಕೆಳಕಂಡ ಶ್ಲೋಕವನ್ನು ಉದಹರಿಸಲಾಗಿದೆ.

ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ತತ್ತ್ವತೋ
ಭೇದೋ ಜೀವಗಣಾಃ ಹರೇರನುಚರಾಃ ನೀಚೋಚ್ಛಭಾವಂ ಗತಾಃ|
ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಂ
ಹ್ಯಕ್ಷಾದಿ ತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ||

ಇದಕ್ಕೆ ತುಸು ವಿವರಣೆ ನೀಡಬೇಕೆನ್ನಿಸಿತು. ವಿವರಣೆ ಇಲ್ಲಿದೆ:

ಮಾಧ್ವತತ್ವದ ಒಂಬತ್ತೂ ಪ್ರಮೇಯಗಳನ್ನು ಸಾರಭೂತವಾಗಿ ಮಂಡಿಸುವ ಈ ಶ್ಲೋಕದ ಕರ್ತೃ ಹರಿದಾಸಸಾಹಿತ್ಯದ ಹರಿಕಾರರೂ, ಕವಿಗಳೂ ಸ್ವತಃ ಪ್ರಕಾಂಡ ಪಂಡಿತರೂ ಆದ ಶ್ರೀ ವ್ಯಾಸರಾಜರು. ಈ ಶ್ಲೋಕದ ಅರ್ಥ/ಅನ್ವಯ ಹೀಗಿದೆ:

ಶ್ರೀಮನ್ ಮಧ್ವಮತೇ;

  • ಹರಿಃ ಪರತರಃ
  • ಸತ್ಯಂ ಜಗತ್
  • ತತ್ತ್ವತೋ ಭೇದಃ
  • ಜೀವಗಣಾಃ ಹರೇರನುಚರಾಃ
  • ನೀಚೋಚ್ಛ ಭಾವಂ ಗತಾಃ
  • ಮುಕ್ತಿಃ ನೈಜ ಸುಖಾನುಭೂತಿಃ, ಅಮಲಾ
  • ಭಕ್ತಿಶ್ಚ ತತ್ಸಾಧನಂ
  • ಅಕ್ಷಾದಿ ತ್ರಿತಯಂ ಹಿ ಪ್ರಮಾಣಂ
  • ಅಖಿಲಾಮ್ನಾಯೈಕ ವೇದ್ಯೋ ಹರಿಃ

ಇದರ ಆಧಾರದಮೇಲೆ ಮಧ್ವಮತವನ್ನು ಸಂಗ್ರಹಿಸಿ ಹೇಳಬಹುದಾದರೆ,

  • ಹರಿಯೇ ಪರದೈವ;
  • ಜಗತ್ತು ಸತ್ಯ;
  • ಭೇದವು ಬ್ರಹ್ಮ-ಜಗತ್ತುಗಳ ಸ್ವಭಾವ (ತತ್ವ)ದಲ್ಲೇ ಇದೆ. ಆಚಾರ್ಯರು ಪಂಚಭೇದಗಳನ್ನು ನಿರೂಪಿಸುತ್ತಾರೆ ಬ್ರಹ್ಮ-ಜೀವ, ಬ್ರಹ್ಮ-ಜಡ, ಜೀವ-ಜೀವ, ಜೀವ-ಜಡ ಮತ್ತು ಜಡ-ಜಡ;
  • ಸಕಲಜೀವರೂ ಹರಿಯ ಅನುಚರರು (ಇಲ್ಲಿ ಅನುಚರ ಅನ್ನುವುದನ್ನು ಅದರ ನಿಜ ಅರ್ಥದಲ್ಲಿ ಬಳಸಲಾಗಿದೆ, ಹರಿಯ ಅನುವರ್ತಿ, ವಶವರ್ತಿ, ಅಧೀನ ಎಂಬ ಅರ್ಥದಲ್ಲಿ, ಜೊತೆಗಾರರು ಎಂಬರ್ಥದಲ್ಲಲ್ಲ);
  • ಮೇಲೆ ಹೇಳಿದ ಬ್ರಹ್ಮ-ಜೀವ, ಬ್ರಹ್ಮ-ಜಡ, ಜೀವ-ಜೀವ, ಜೀವ-ಜಡ ಮತ್ತು ಜಡ-ಜಡಗಳಲ್ಲಿ ಕೇವಲ ಭೇದವಷ್ಟೇ ಅಲ್ಲ ತಾರತಮ್ಯ ಕೂಡ ಇದೆ; ಒಂದು ಮತ್ತೊಂದಕ್ಕೆ ಸಮನಲ್ಲ (ಅಸಮಭವ ಕಾಗಿನೆಲೆಯಾದಿಕೇಶವರಾಯ - ಕನಕದಾಸರು);
  • ಕುಂದಿಲ್ಲದ (flawless) ನೈಜ ಸುಖಾನುಭೂತಿಯೇ ಮುಕ್ತಿ (ಇಲ್ಲಿ ನೈಜ ಎನ್ನುವುದನ್ನು ಜೀವದ ಸ್ವಭಾವಕ್ಕೆ ನಿಜವಾದ (ತಕ್ಕುದಾದ) ಎಂದು ಅರ್ಥೈಸಲಾಗುತ್ತದೆ. ಅಂದರೆ ಮುಕ್ತಿ ಸಹ ಎಲ್ಲ ಜೀವರಿಗೂ ಒಂದೇ ಅಲ್ಲ, ಬೇರ‍ೆಬೇರೆ - ಅದರ ನೆಲೆ ಬೇರೆ, ಆಳ-ಅಗಲಗಳು ಬೇರೆ, ತೀವ್ರತೆ ಬೇರೆ ಇತ್ಯಾದಿ) ಆದ್ದರಿಂದ ಮೇಲೆ ಹೇಳಿದ ಭೇದವೂ ತಾರತಮ್ಯವೂ ಮುಕ್ತಿಯಲ್ಲೂ ಇರುತ್ತದೆ. ಜೀವರು ಮಾತ್ರ ಮುಕ್ತಿಯೋಗ್ಯರು, ಜಡವಲ್ಲ. ಮತ್ತೆ ಜೀವರಲ್ಲಿ ಅವರವರ ಸ್ವಾಭಾವಿಕ ಭೇದಕ್ಕನುಗುಣವಾಗಿ (ತತ್ತ್ವತೋ ಭೇದಃ) ಅವರವರ ಮುಕ್ತಿಯೋಗ್ಯತೆಯೂ ನಿರ್ಧರಿತವಾಗುತ್ತದೆ. ಮತ್ತೆ ಇದರಲ್ಲಿ ಸತ್ವ, ರಜಸ್ ತಮೋಗುಣಗಳ ವರ್ಗೀಕರಣ ಬರುತ್ತದೆ, ಮತ್ತು ಅದಕ್ಕನುಗುಣವಾಗಿ ಜೀವವೊಂದು ತಮೋಯೋಗ್ಯವೋ, ನಿತ್ಯಸಂಸಾರಿಯೋ ಅಥವಾ ಮುಕ್ತಿಯೋಗ್ಯವೋ ಇರಬಹುದು ("ಸಾತ್ವರಿಗೆ ಸುಖ; ಸಂಸಾರ ಮಿಶ್ರರಿಗೆ; ಅಧಮ ಜನರಿಗಪಾರ ದುಃಖಗಳೀವ" - ಹರಿಕಥಾಮೃತಸಾರ, ಜಗನ್ನಾಥದಾಸರು);
  • ಹೀಗೆ ಮುಕ್ತಿಯೋಗ್ಯವಾದ ಜೀವಿಗೆ ಮುಕ್ತಿ ತಾನೇತಾನಾಗಿ ದೊರೆಯುವುದಿಲ್ಲ. ಅದಕ್ಕೆ ಹರಿಕೃಪೆ ಬೇಕು. ಅದಕ್ಕಿರುವ ಮಾರ್ಗವೆಂದರೆ, ಭಕ್ತಿ (ಹರಿಯ ಗುಣಗಳ ಜ್ಞಾನದಿಂದ ಭಕ್ತಿಯ ಹುಟ್ಟು - ಜ್ಞಾನಚಂದ್ರಿಕೆ ಬೆಳಗೆ ಭಕ್ತಿವಾರಿಧಿಯುಕ್ಕೆ ಮನಚಕೋರವು ವಿಷ್ಣುಪಥದಿ ನಲಿಯೆ; ದೀನಜನಭಯವಡಗೆ ತಾಪತ್ರಯಗಳೋಡೆ ಮಧ್ವೇಂದು ಶ್ರೀಕೃಷ್ಣ ನೋಡಿ ತಾ ನಲಿಯೆ - ವ್ಯಾಸರಾಜರು)
  • ಇದಕ್ಕೆ ಪ್ರಮಾಣವೇನು? ಅಕ್ಷಾದಿ ತ್ರಿತಯಂ ಹಿ. ಅಂದರೆ ಪ್ರತ್ಯಕ್ಷ, ಅನುಮಾನ ಮತ್ತು ಆಗಮಗಳೆಂಬ ಈ ಮೂರೇ ಪ್ರಮಾಣ. ಇಲ್ಲೂ ಆಗಮೈಕಪ್ರಮಾಣವೆನ್ನುವ ಬದಲು ಪ್ರತ್ಯಕ್ಷ ಮತ್ತು ಆಗಮಗಳಿಗೆ ಸಮಾನ ಪ್ರಾಮುಖ್ಯ ಕಲ್ಪಿಸಿದ್ದಾರೆ ಆಚಾರ್ಯರು. ಪ್ರತ್ಯಕ್ಷ ಮತ್ತು ಆಗಮಪ್ರಮಾಣಗಳಲ್ಲಿ ವಿರೋಧವಿರದು ಎಂದು ಅಭಿಪ್ರಾಯ. ಮತ್ತೂ ವಿರೋಧ ಕಂಡುಬಂದರೆ ಲೌಕಿಕ ವಿಷಯಗಳಲ್ಲಿ ಪ್ರತ್ಯಕ್ಷವೂ ಅಲೌಕಿಕ ವಿಷಯಗಳಲ್ಲಿ ಆಗಮವೂ ಪ್ರಾಮುಖ್ಯವನ್ನು ಪಡೆಯುವುದು (ಇದು ನನ್ನ ಊಹೆ, ತಿಳಿದವರು ತಿದ್ದಬೇಕು). ಹಾಗೆ ಯಾವುದೇ ಪ್ರತ್ಯಕ್ಷವಿಷಯವನ್ನೋ ಆಗಮವಾಕ್ಯವನ್ನೋ ಪ್ರಮಾಣವೆಂದು ಒಪ್ಪಿಕೊಳ್ಳುವ ಮೊದಲು ಆ "ಪ್ರಮಾಣ" ಶುದ್ಧವಿರಬೇಕು (ಬೇರೆಬೇರ‍ೆ ಪ್ರತ್ಯಕ್ಷ ಪ್ರಮಾಣಗಳಲ್ಲಿ ವಿರೋಧಾಭಾಸವಿರಬಾರದು; ಹಾಗೇ ಆಗಮವಾಕ್ಯಗಳ "ಪ್ರಮಾಣ"ಗಳಲ್ಲಿ ವಿರೋಧಾಭಾಸವಿರಬಾರದು. ಅಪೌರುಷೇಯವಾದ ವೇದವಾಕ್ಯಗಳಲ್ಲಿ ವಿರೋಧವಿರಲು ಸಾಧ್ಯವಿಲ್ಲ, ಆದರೆ ಮೇಲ್ನೋಟಕ್ಕೆ ಕಾಣಬರುವ ವಿರೋಧಾಭಾಸಗಳನ್ನು ಅನುಮಾನ ಮತ್ತು ಬೇರೆ ಪ್ರಮಾಣಗಳ ಮೂಲಕ ಸಮನ್ವಯಿಸಿಕೊಳ್ಳಬೇಕು, ಸಮನ್ವಯವೊದಗುವಂತೆ ಅರ್ಥೈಸಬೇಕು).
  • ಹರಿಯೇ ಸಕಲ ವೇದಪ್ರತಿಪಾದ್ಯನಾದ, ಸತ್ಯಸ್ವರೂಪನಾದ ಬ್ರಹ್ಮ.

Tuesday, September 6, 2011

ಗಣೇಶ ೨೦೧೧

ಪ್ರತಿ ವರ್ಷದಂತೆಯೇ ಈ ವರ್ಷವೂ ಗಣೇಶನ ಹಬ್ಬಕ್ಕಾಗಿ ಗಣೇಶನ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿದ್ದೆ. ಅದರ ಕೆಲವು ಚಿತ್ರಗಳು ಇಲ್ಲಿವೆ. ಈ ವರ್ಷ ಇಡೀ ಚಟುವಟಿಕೆಯ ವಿಡಿಯೋ ಕೂಡ ಮಾಡಿರುವೆ, ಅದನ್ನು ಸಧ್ಯದಲ್ಲೇ ಪೋಸ್ಟ್ ಮಾಡುತ್ತೇನೆ.

ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಂದಿನಂತೆ ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

Sunday, August 14, 2011

ವಂದೇ ಮಾತರಂ (ತಾಯೇ ಬಾಗುವೆ)

"ವಂದೇ ಮಾತರಂ" ಕೇಳಿ ಭಾವುಕನಾಗದ ಭಾರತೀಯನಾರು? ಬಂಕಿಮಚಂದ್ರರ ಕ್ರಾಂತಿಕಾರಿ ಬಂಗಾಳೀ ಕಾದಂಬರಿ ಆನಂದಮಠದಲ್ಲಿ ಬರುವ ಈ ಸುಂದರ ಬಂಗಾಳೀ-ಸಮಸಂಸ್ಕೃತ ಗೀತೆ ತನ್ನ ನವಿರಾದ ಕಾವ್ಯಗುಣದಿಂದ ಮನಮುಟ್ಟುತ್ತದೆ. ರಾಷ್ಟ್ರಗೀತೆಯ ಸ್ಥಾನ ಸಿಗದಿದ್ದರೇನಂತೆ, ಉಜ್ವಲ ರಾಷ್ಟ್ರಪ್ರೇಮವನ್ನು ಬಿಂಬಿಸುವ ಈ ಗೀತೆ ಅದರ ನಿಜ ಅರ್ಥದಲ್ಲಿ ರಾಷ್ಟ್ರಗೀತೆಯೇ ಆಗಿದೆ. ಚಾಲ್ತಿಯಲ್ಲಿರುವ ಭಾಗವನ್ನಷ್ಟೇ ಈ ಕೆಳಗೆ ಕೊಟ್ಟಿದ್ದೇನೆ:

ವಂದೇ ಮಾತರಂ

ಸುಜಲಾಂ ಸುಫಲಾಂ
ಮಲಯಜ ಶೀತಲಾಂ
ಸಸ್ಯಶಾಮಲಾಂ ಮಾತರಂ
ವಂದೇ ಮಾತರಂ...

ಶುಭ್ರಜ್ಯೋತ್ಸ್ನಾಪುಲಕಿತ ಯಾಮಿನೀಂ
ಫುಲ್ಲಕುಸುಮಿತಧ್ರುಮದಳ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ

ವಂದೇ ಮಾತರಂ...
====================


ಇದರ ಕನ್ನಡ ಅವತರಣಿಕೆ ಇಲ್ಲಿದೆ. ಮೂಲದ ಸೊಬಗನ್ನು, ಅಷ್ಟೇ ತುಸುಮಾತುಗಳಲ್ಲಿ ಕನ್ನಡದಲ್ಲಿ ಹಿಡಿದಿಡುವುದು ಕಷ್ಟವೇ ಸರಿ. ಆದರೂ ಮೂಲದ ಭಾವವನ್ನಾದರೂ ಹಿಡಿದಿಟ್ಟಿದ್ದೇನೆನಿಸುತ್ತದೆ. ಭಾವಾನುವಾದದ ಅನುಕೂಲಕ್ಕಾಗಿ, ಮೂಲದ ದ್ವಿತೀಯಾ ವಿಭಕ್ತಿಯನ್ನು ("ಅನ್ನು") ಕನ್ನಡದಲ್ಲಿ ಸಂಬೋಧನೆಯಾಗಿ ಬದಲಿಸಿಕೊಂಡಿದ್ದೇನೆ. ಗೆಳೆಯ ಭರತಕುಮಾರರು ಗೂಗಲ್ ಬಜ಼್ ನಲ್ಲಿ "ನಲ್ನೀರು ನಲ್ವಣ್ಣು ತಾಯಿಯೇ ಬಾಗುವೇ ತಾಯಿಯೇ" ಎಂದು ಹೇಳಿ ಸುಮ್ಮನಾಗಿದ್ದರು. ಇಲ್ಲಿನ ಅನುವಾದಕ್ಕೆ ಈ ಒಂಟಿ ಸಾಲೇ ಸ್ಫೂರ್ತಿ. ಇದಕ್ಕಾಗಿ ಭರತಕುಮಾರರಿಗೆ ಧನ್ಯವಾದ.

ತಾಯೇ ಬಾಗುವೆ

ಸವಿನೀರ್, ತನಿವಣ್,
ತಂಬೆಲರೀವಳೇ
ಸಿರಿಹಸಿರವಳೇ, ಬಾಗುವೆ
ತಾಯೇ ಬಾಗುವೆ...

ಮುಂಜಾವದ ಬಿಳಿ ಸೋನೆಯ ಚುಮಚುಮವೇ
ಅರಳಿ ನಗುವ ಹೂ ಮರಗಳ ಗಮಗಮವೇ
ಮೆಲುನಗೆಯೇ, ನಲ್ನುಡಿಗಾತಿಯೇ
ಸೊಗವೀವಳೆ ವರವೀವಳೇ

ತಾಯೇ ಬಾಗುವೆ...

ಇದರ ಧ್ವನಿಮುದ್ರಿಕೆಯನ್ನು ಸ್ವಾತಂತ್ರ್ಯದಿನಾಚರಣೆಯ ಈ ದಿನವೇ ಪ್ರಕಟಿಸಬೇಕೆಂದಿದ್ದೆ, ಸಾಧ್ಯವಾಗಲಿಲ್ಲ. ಇಷ್ಟರಲ್ಲೇ ಪ್ರಕಟಿಸುತ್ತೇನೆ.

ನಿಮಗೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಟಿಪ್ಪಣಿ - ೧೯/೦೯/೨೦೧೮
=================
ಮೇಲಿನ ಅನುವಾದದಲ್ಲಿ ಮೂಲಕ್ಕೆ ಹತ್ತಿರವಲ್ಲದ ಒಂದು ಸಾಲನ್ನು ಗಮನಿಸಬೇಕು - "ಮುಂಜಾವದ ಬಿಳಿ ಸೋನೆಯ ಚುಮಚುಮವೇ"  ಮೂಲದಲ್ಲಿರುವುದು "ಶುಭ್ರಜ್ಯೋತ್ಸ್ನಾಪುಲಕಿತ ಯಾಮಿನೀಂ" (ತುಂಬು ಬೆಳುದಿಂಗಳಿಂದ ಪುಳಕಿತವಾದ ಇರುಳುಗಳನ್ನು ಹೊಂದಿರುವವಳೇ).  "ಬೆಳುದಿಂಗಳ ರಾತ್ರಿ"ಯು ಅನುವಾದದಲ್ಲಿ "ಮುಂಜಾವದ ಬಿಳಿ ಸೋನೆಯ ಚುಮಚುಮ" ಆಗಿದ್ದು ವಿಚಿತ್ರ, ಆದರೆ ಸ್ವಾರಸ್ಯದ ವಿಷಯ - ಯಾವುದೋ ಒಂದು ಲಹರಿಯಲ್ಲಿ ಬಂದ ಅನುವಾದವದು; ಮೂಲದ ಅರ್ಥ-ಭಾವಗಳಿಗಿಂತ ನನ್ನದೇ ಆ ಕ್ಷಣದ ಲಹರಿಯನ್ನಾಧರಿಸಿ ಹೊಮ್ಮಿದ್ದು.  ಅದಕ್ಕೆ ತಕ್ಕಂತೆ ಮೂಲದಿಂದ ಚಿಕ್ಕದೊಂದು ಬದಲಾವಣೆಯನ್ನು ಮಾಡಿಕೊಂಡೆನೆಂದು ನೆನಪು.  ದಿನಾ ಬೆಳಗಿನ ಜಾವ ರೇಡಿಯೋದಿಂದ ಬಿತ್ತರಗೊಳ್ಳುತ್ತಿದ್ದ ವಂದೇಮಾತರಂ ನನ್ನ ಬಾಲ್ಯಕಾಲದ ಬೆಳಗಿನ ಜಾವದ ಮಧುರ ನೆನಪುಗಳಲ್ಲೊಂದು.  ಇದನ್ನು ಅನುವಾದಿಸುವಾಗ ಆ ನೆನಪಿನ ಲಹರಿಯೇ ನನ್ನ ಮನದಲ್ಲಿದ್ದುದು.  ಯಾಮಿನಿಯು ಇರುಳ್ವೆಣ್ಣಾಗುವುದಕ್ಕಿಂತ ಸುಂದರ ಮುಂಬೆಳಗಿನ ಯಾಮವಾಗುವುದು, ಜ್ಯೋತ್ಸ್ನೆಯ ಜಾಗವನ್ನು ಬೆಳಗಿನ ಜಾವದ ಬೆಳ್ಳನೆಯ ಹಿಮದ ಜವನಿಕೆಯು ತುಂಬುವುದೂ ಹೆಚ್ಚು ಸೊಗಸಾಗಿ ಕಂಡಿತ್ತು.  "ಪುಲಕಿತ" ಶಬ್ದವು ಅದಕ್ಕಿಂತ ಇಲ್ಲೇ ಹೆಚ್ಚು ಸಾರ್ಥಕವಾಗುವುದೆಂದೂ, ಈ ಪ್ರತಿಮೆಯು ಮೂಲಪ್ರತಿಮೆಗಿಂತ ಕವಿಯ ಭಾವವನ್ನು ಹೆಚ್ಚು ಪರಿಣಾಮಕಾರಿಯಾಗಿ ಧ್ವನಿಸಬಹುದೆಂದೂ ಎನಿಸಿ ಮೇಲ್ಕಂಡ ಮಾರ್ಪಾಟು ಮಾಡಿಕೊಂಡೆ.  ಆಮೇಲೆ ಅದರ ಬಗ್ಗೆ ಹೆಚ್ಚು ಚಿಂತಿಸಹೋಗಿರಲಿಲ್ಲ.  ಆದರೆ ಮೊನ್ನೆ ಅದರ ಇಂಗ್ಲಿಷ್ ಅನುವಾದವನ್ನು ಮಾಡಿದಾಗ (ಅನುವಾದವು ಈ ಬರಹದ ಕೊನೆಯಲ್ಲಿದೆ), ಅದೂ ಈ ಕನ್ನಡಾನುವಾದದ ಜಾಡನ್ನೇ ಹಿಡಿದುದನ್ನು ಗಮನಿಸಿ ನನ್ನ ಗಮನ ಸೆಳೆದವರು ವಿದ್ವನ್ಮಿತ್ರರಾದ ಶ್ರೀ ಶ್ರೀಕಾಂತಮೂರ್ತಿ.   ಅಂತೆಯೇ ಇಂಗ್ಲಿಷ್ ಅನುವಾದವನ್ನು ತಿದ್ದಿದೆ, ಆದರೆ ಕನ್ನಡದ ಅನುವಾದ ಆಗ ಅದು ಬಂದ ಹಾಗೆಯೇ ನನಗೆ ಹೆಚ್ಚು ಪ್ರಿಯವೆನಿಸಿದ್ದರಿಂದ ಅದನ್ನು ಹಾಗೆಯೇ ಉಳಿಸಿಕೊಂಡಿದ್ದೇನೆ.  ಆದರೆ ಮೂಲಕ್ಕನುಗುಣವಾಗಿ ತಿದ್ದಿದ ಅನುವಾದ ಇಲ್ಲಿದೆ (ಎರಡನೆಯ ಚರಣದ ಮೊದಲ ಸಾಲನ್ನು ಗಮನಿಸಿ):

ತಾಯೇ ಬಾಗುವೆ

ಸವಿನೀರ್, ತನಿವಣ್,
ತಂಬೆಲರೀವಳೇ
ಸಿರಿಹಸಿರವಳೇ, ಬಾಗುವೆ
ತಾಯೇ ಬಾಗುವೆ...

ಬೆಳುದಿಂಗಳ ಹಾಲ್ಜೊನ್ನದ ಚುಮಚುಮವೇ
ಅರಳಿ ನಗುವ ಹೂ ಮರಗಳ ಗಮಗಮವೇ
ಮೆಲುನಗೆಯೇ, ನಲ್ನುಡಿಗಾತಿಯೇ
ಸೊಗವೀವಳೆ ವರವೀವಳೇ

ತಾಯೇ ಬಾಗುವೆ...

Monday, June 27, 2011

ಮರಳು ಜೇನಳೂ ಮತ್ತು ಪಾದ್ರಿಯೂ (ಮತ್ತೊಂದು ಅನುವಾದ)

ಬಹಳ ಹಿಂದೆ ನಾನು ಮಾಡಿದ W.B.Yeats ಕವನವೊಂದರ ಅನುವಾದವನ್ನು ತುಸು ಬದಲಿಸಿ ಮರುಬರೆದಿದ್ದೇನೆ. ಮೊದಲ ಅನುವಾದವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ (right click ಮಾಡಿ ಬೇರೊಂದು ಕಿಟಕಿಯಲ್ಲಿ ತೆರೆದಿಟ್ಟುಕೊಂಡರೆ ಅನುಕೂಲ)

ದಾರಿಯಲ್ಲಿ ಆ ಪಾದ್ರಿ ಸಿಕ್ಕಿದ್ದ
ಅದೂ ಇದೂ ಮಾತಾಡಿದೆವು.
"ಎಂಥ ಮೊಲೆ, ಹೇಗೆ ಬತ್ತಿಹೋಗಿವೆ ನೋಡು,
ನರಗಳಿನ್ನೇನು ಸೊರಗುವುವು;
ನಡೆಯಿನ್ನಾದರು ಸ್ವರ್ಗದಲಿ ಬದುಕು
ಸಾಕೀ ನರಕದ ಕೊಳೆ ಬದುಕು"

"ಕೊಳಕಿಗು ಥಳುಕಿಗು ಬಿಡದಿಹ ನಂಟು
ಅಗಲಿ ಇರವು ಅವು" - ಚೀರಿದೆ ನಾನು,
"ಸಖರು ಹೋದರೂ ಗೋರಿಯೂ ತಿಳಿದಿದೆ
ಸುಖದ ಶಯ್ಯೆಯೂ ನಿಜವಿದನು.
ಈ ಪತಿತ ದೇಹದಲೆ, ವಿನಯದಿ ಹೆಮ್ಮೆಯ
ಮನದಿ ಅರಿತೆನೀ ಸತ್ಯವನು"

"ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!
ಹರಿಯದ ಬಿರಿಯದ ಒಂದಿದ್ದರೆ ಅದ
ಹೊಲೆವುದು ತಾನೇ ಎಲ್ಲಿ?"

ಟಿಪ್ಪಣಿ:
ಕೊನೆಯ ಎರಡು ಸಾಲುಗಳಿಗೆ ಮೂಲದಲ್ಲಿರುವ ನುಡಿ:
For nothing can be sole or whole
That has not been rent?

ಸೋಲ್ (sole) ಮತ್ತು ಹೋಲ್ (whole) ಎನ್ನುವ ಪದಗಳನ್ನು ಉಚ್ಚರಿಸಿದಾಗ ಅವು soul ಮತ್ತು hole ಎನ್ನುವ ಧ್ವನಿಗಳನ್ನೂ ಹೊರಡಿಸುವ ಮೂಲಕ ಮುಂದಿನ ಸಾಲಿನಲ್ಲಿ ಬರುವ rent ಅನ್ನುವ ಪದಕ್ಕೆ ವಿವಿಧಾರ್ಥಗಳನ್ನು ಕೊಡುತ್ತದೆ; ಅದೇ ಇಲ್ಲಿನ ಸ್ವಾರಸ್ಯ - rent ಅನ್ನುವ ಪದಕ್ಕೇ ಬಾಡಿಗೆಗೆ ಕೊಡು/ಹರಿದುಹಾಕು (rend p.p. rent) ಅನ್ನುವ ಅರ್ಥಗಳಿರುವುದನ್ನೂ ಮತ್ತು ಈ ಕವನದಲ್ಲಿ ಬರುವ ಜೇನ್ ಓರ್ವ ವೇಶ್ಯೆಯೆನ್ನುವುದನ್ನೂ ಗಮನಿಸಿದರೆ rent ಅನ್ನುವುದರ ಸ್ವಾರಸ್ಯ ಹೊಳೆಯುತ್ತದೆ. ಹರಿಯದೇ ಹೊಲೆಯುವುದಕ್ಕಾಗುವುದೇ ಎಂಬ ಅರ್ಥದ ಜೊತೆ, ಇಲ್ಲಿ "ಹರಿಯದೇ ತೂತಾಗುವುದೇ" ಅನ್ನುವ ವ್ಯಂಗ್ಯಾರ್ಥವೂ ಮತ್ತು "ಹರಿದಿದ್ದಕ್ಕೇ ತಾನೆ ಒಂದಾಗುವ ಅಗತ್ಯ?" ಎಂಬ ಅರ್ಥವೂ ಕೂಡಿ ಬರುತ್ತದೆ. ಜೊತೆಗೆ, ತನ್ನ ಈ ಹರಿದ (ಮಾರಿಕೊಂಡ) ಜೀವನದ ಪಾಪಕೂಪವೇ ನನ್ನ ಆತ್ಮೋನ್ನತಿಯ ದಾರಿ ಎಂಬ ಧ್ವನಿಯೂ ಇದೆ (soul ಅನ್ನುವ ಉಚ್ಚಾರಣೆಯ ಭ್ರಮೆ ಇದನ್ನೇ ಧ್ವನಿಸುತ್ತದೆ). ಇದಕ್ಕೆ ಇಂಬುಕೊಡುವಂತೆ ಈ ಮೊದಲ ನಾಲ್ಕು ಸಾಲುಗಳನ್ನು ಗಮನಿಸಬಹುದು:

ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!

("A woman can be proud and stiff
When on love intent;
But love has pitched his mansion in
The place of excrament;)

ಪ್ರೇಮದ ಉತ್ಕಟಸ್ಥಿತಿಯೇ ಆತ್ಮದ ಉನ್ನತಿಯೆನ್ನುತ್ತಾರೆ, ಆದರೆ ಆ "ಪ್ರೇಮ" ಅರಳುವುದೇ ಹೊಲಸಿನ ಕೂಪದಲ್ಲಿ ಅನ್ನುತ್ತಾಳೆ ಜೇನ್. ಶಿಷ್ಟ/ಪವಿತ್ರ ಜೀವನವನ್ನು ಪ್ರತಿನಿಧಿಸುವ ಪಾದ್ರಿಯ ಉಪದೇಶದ ಭಾಷೆಗೆ ಸವಾಲೆಸೆವಂತೆ ಮೈಮಾರಿ ಬದುಕುವ ಹೆಂಗಸಿನ ಒರಟು (rude and crude) ಭಾಷೆಯನ್ನೂ, ಆ ಭಾಷೆಯ ಒರಟುತನದಲ್ಲೇ ಅರಳುವ ತಲೆದೂಗಿಸುವ ತರ್ಕದ ಸೂಕ್ಷ್ಮತೆಯನ್ನೂ ಇಲ್ಲಿ ಗಮನಿಸಬಹುದು. ಕೆಸರಿನ ಕಮಲದಂತೆ ಒರಟು ಮಾತಿನಲ್ಲಿ ಅರಳುವ ಈ ಸೂಕ್ಷ್ಮ, ಜೇನಳೇ ಹೇಳುವಂತೆ ಹೊಲಸಿನಲ್ಲರಳುವ ಸೊಗಸು, ಕಾಮದ ಕೆಸರಿನಲ್ಲಿ ಹುಟ್ಟಿ ಮೇಲೇರುವ ಪ್ರೇಮದ ಔನ್ನತ್ಯವನ್ನೂ ಧ್ವನಿಸುತ್ತದೆ.

ಆದರೆ sole ಮತ್ತು whole ಗಳನ್ನು soul ಮತ್ತು hole ಎಂದೂ ಅರ್ಥ ಸ್ಫುರಿಸುವಂತೆ ಉಚ್ಚರಿಸುವ ಸೌಲಭ್ಯ ಕನ್ನಡದಲ್ಲಿ ಇಲ್ಲವಾದ್ದರಿಂದ ಈ ಸ್ವಾರಸ್ಯವನ್ನು ಕನ್ನಡದ ಅನುವಾದದಲ್ಲಿ ತರುವುದು ಕಷ್ಟ; ಆದ್ದರಿಂದ ಬರೀ ಅರ್ಥವನ್ನು ಮಾತ್ರ ಉಳಿಸಿಕೊಂಡಿದ್ದೇನೆ. ಈ ದೃಷ್ಟಿಯಿಂದ ಈ ಅನುವಾದದ ಬಗೆಗೆ ನನಗೆ ಅತೃಪ್ತಿಯಿದೆ.

Tuesday, June 14, 2011

ಅದು ನೀನಲ್ಲ

ಎಂದೋ ಬಿಡಿಸಿದ ಚಿತ್ರ -
ಹಿಂದೊಂದು ಕಾಲದಲಿ, ದೇಶದಲಿ,
ವರ್ತಮಾನದಿ ಸುಳಿವ ಭೂತದಲ್ಲಿ.
ಕುಡಿಹುಬ್ಬು, ಸುಳಿಗಣ್ಣು
ಮೂಗು ಸಂಪಿಗೆಯೆಸಳು
ನಗೆಯ ಮಲ್ಲಿಗೆಯರಳು
ಮುದ್ದು ಸುರಿಯುವ ಗಲ್ಲ,
ಆಗೆಲ್ಲ;

ಹಾಲ್ಬಿಳುಪು, ಕಡುಗಪ್ಪು,
ಚೆಂಗುಲಾಬಿಯ ಕೆಂಪು,
ನರುಗಂಪು;
ಮಳೆಸುರಿವ ಮುಗಿಲು
ನವಿಲು
ಗರಿ
ಕಾಮನಬಿಲ್ಲು
ಎಲ್ಲೆಲ್ಲು;
ಎಲೆ ಹಸಿರು ಚೆಲ್ಲಾಡಿ,
ಹಳದಿ ಕಿತ್ತಳೆ ಮೋಡಿ;
ಬಣ್ಣಗಳ ರಾಡಿ,
ನೆತ್ತರಿನ ಕಡುಗೆಂಪು-
ಸುರಿಯುವ ಕಣ್ಣ
ನೀರಿಗದ್ದಿದ ಕುಂಚ
ತೊಳೆದಿಟ್ಟು,
ಬಿಸಿಲಿಗಿಕ್ಕಿದ ಚಿತ್ರ;
ಒಣಗಿ ರಟ್ಟು-
ಗಟ್ಟಿದ ನೂರು ಪತ್ರ-
ಗಳ
ಕೆಳಗೆಲ್ಲೋ ಹೂತು ಪೆಟ್ಟಿಗೆಯ
ಬೀಗವ ಜಡಿದು
ಕಳೆದಿದ್ದೆನಲ್ಲ
ಕೈ!

ಆ ಮೇಲೆ
ಸವೆದದ್ದೆಷ್ಟು ವೈಶಾಖ
ಸುರಿದು ಸರಿದದ್ದೆಷ್ಟು ಆಷಾಢ
ಶಿಶಿರ!
ಕಿತ್ತೊಗೆದ ಸುಳಿಬಳ್ಳಿ ಮತ್ತೆಲ್ಲೋ ಬೇರಿಳಿಸಿ
ಮರವನೊಂದನು ಹಬ್ಬಿ,
ಹೂತು, ಮಿಡಿ ಕಾಯಾಗಿ
ತೂಗು ತೊಟ್ಟಿಲು ತೂಗಿ,
ನನಗೊಬ್ಬ ಪುಟ್ಟ, ನಿನಗೆ ಪುಟ್ಟಿ.

ಮೊನ್ನೆ,
ಅದೇನೋ, ತುಕ್ಕಿಡಿದ ತಗಡಿನ ಪೆಟ್ಟಿಯೊಳಗಿಂದ
ದಡದಡನೆ ತಟ್ಟಿದಂತಾಗಿ,
ಕ್ಷಣ ಎದೆ ನಡುಗಿ
ತೆರೆದು ನೋಡಿದರೆ
ನೀನು,
ನಗುತ್ತಲಿದ್ದಿ!
"ನೀ ಒಂಚೂರೂ ಬದಲಾಗಿಲ್ಲ"ವೆಂದಿ
"ಬದಲಾಗು" ಎಂದಿ
ಅದ ಅರಗಿಸಿಕೊಳಲು ನಾನಿಲ್ಲಿ ಹೆಣ-
ಗುತ್ತಿರಲು
ನೀ ಆರಾಮ
ಮಾತಾಡುತ್ತಲೇ ಹೋದಿ -
ಪುಟ್ಟನಿಗೆ ವಯಸೆಷ್ಟು? ಪುಟ್ಟಿಯೇನೋದುವಳು;
ಮನೆ, ಗಂಡ, ಕಾರು, ಹೆಂಡತಿ-
ಪಟ್ಟ
ಆನೆ ಬಂತೊಂದಾನೆ...
ಹೌದೇ? ಅದು ನೀನೇನೆ?
ಆ ಕೆನ್ನೆ, ಆ ಕದಪು
ಆ ಚೆದುರು, ನುಡಿ-ನವಿರು,
ಬರಿಯ ಕಿರುನೋಟದೊಳೆ ಸುತ್ತೆಲ್ಲ ಎಳೆಚಿಗುರು -
ಒಳಗೇ ಹೋಲಿಸಿಕೊಂಡೆ;
ಇಲ್ಲ,
ಅದು ನೀನಲ್ಲವೆಂದು ಹೊಳೆದು,
ಎಂದೂ ಅದು ನೀನಾಗಿರಲೇ ಇಲ್ಲೆಂದು ತಲೆಗಿಳಿದು,
ನೆಮ್ಮದಿಯ ನಿಟ್ಟುಸಿರ ಹೊರದಬ್ಬಿದೆ;
ಮತ್ತಷ್ಟು ಖುಶಿಯಿಂದ ನಿನ್ನೊಡನೆ ಹರಟಿ
ಲೋಕಾಭಿರಾಮದಾರಾಮ
ಅನುಭವಿಸಿದೆ;
ಕೊನೆಗೊಮ್ಮೆ ಸ್ಟೈಲಾಗಿ ಬೈ ಹೇಳಿ
ಪೆಟ್ಟಿಗೆಯ ಮೇಲೆ ಮತ್ತೊಂದು
ಹೂವಿಟ್ಟು ಹಗುರಾಗಿ
ನಿದ್ದೆಹೋದೆ.

Thursday, June 2, 2011

ಸಕ್ಕದಮೋ ಕನ್ನಡಮೋ ನುಡಿಯೋ...

ಮೊನ್ನೆ ನಯಸೇನನ ಈ ಸಾಲುಗಳು ಕಣ್ಣಿಗೆ ಬಿತ್ತು:

ಸಕ್ಕದಮಂ ಪೇೞ್ವೊಡೆ ನೆಱೆ
ಸಕ್ಕದಮಂ ಪೇೞ್ಗೆ ಶುದ್ಧ ಕನ್ನಡದೊಳ್ ತಂ
ದಿಕ್ಕುವುದೆ ಸಕ್ಕದಂಗಳ
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ

ಇದನ್ನು google buzz ನಲ್ಲಿ ಹಂಚಿಕೊಂಡಾಗ ಗೆಳೆಯ ಹಂಸಾನಂದಿ ಇಂತೆಂದರು. "True - for today we should also say the same thing about English!"

ಅಲ್ಲವೇ ಮತ್ತೆ? ಅಟ್ಟುವುದಾದರೆ ಸಂಸ್ಕೃತವೊಂದನ್ನೇ ಏಕೆ? ನಯಸೇನನ ಕಾಲದಲ್ಲಿ ಆಂಗ್ಲದ ಹಾವಳಿಯಿರಲಿಲ್ಲ. ಇದ್ದಿದ್ದರೆ ಅವ ಹೀಗೆ ಹೇಳಿರಬಹುದಿತ್ತೇ?

ಆಂಗಿಲಮಂ ಪೇೞ್ವೊಡೆ ನೆಱೆ
ಯಾಂಗಿಲಮನೆ ಪೇೞ್ಗೆ ಬೆರೆಸಿ ಕಿಡಿಸುವುದೇಂ ತಾ
ಮಂಗಳಮೆ ಚೊಕ್ಕ ಕನ್ನಡ
ಕಾಂಗಿಲಮಂ ತುಪ್ಪಕೆಣ್ಣೆ ಬೆರೆಸುವ ತೆರದೊಳ್

ಮೊದಲು ಹೇಳಿದ ನಯಸೇನನ ಸಾಲುಗಳೂ ಮತ್ತು ಅದರ ಅಭಿಪ್ರಾಯಭೂತವಾಗಿ ನಾನು ಬರೆದ ಮೇಲಿನ ಸಾಲುಗಳೂ, ಸವಿಗನ್ನಡದಲ್ಲಿ ಕಟಕಟೆಯೆನಿಸುವಷ್ಟು ಅಸಹಜವಾಗಿ ಸಕ್ಕದ/ಆಂಗ್ಲಗಳನ್ನು ಬಳಸುವ ಬಗೆಗೆನ್ನುವುದು ಸ್ಪಷ್ಟ. ಆದರೆ ಸಕ್ಕದದ ಮೈಲಿಗೆಯಿಂದ ಕನ್ನಡವನ್ನೇ ಬುಡಮಟ್ಟ clean ಮಾಡಿಬಿಡಬೇಕೆನ್ನುವ ಇಂದಿನ ಅರ್ಥಹೀನ ಕೂಗಿಗೂ ಇವೇ ಸಾಲುಗಳು ಆಧಾರವಾದೀತಲ್ಲವೇ? ಈ ದಿಕ್ಕಿನಲ್ಲಿ ಯೋಚಿಸುತ್ತಿದ್ದಾಗ ಮೂಡಿದುವು ಈ ಕೆಳಗಿನ ಕಂದಗಳೈದು.

ಸಜ್ಜಿಗೆಗೆರೆಯದೆ ತುಪ್ಪಮ
ನೊಜ್ಜೆಯೊಳಿಕ್ಕುವರೆ ಮಜ್ಜಿಗೆಗೆ ರುಚಿಯರಿಗರ್
ಮಜ್ಜನಕೆಣ್ಣೆಯನೆರೆಯದೆ
ಯುಜ್ಜುವವೋಲ್ ತಲೆಗೆ ತುಪ್ಪಮನ್ ಸಕ್ಕರೆಯನ್ ೧

ಎಣ್ಣೆಯೆ ರುಚಿಯೋಗರಕೆನೆ
ಬೆಣ್ಣೆಯದರ ಸವಿಯನೆತ್ತದೇಂ ಕಿಡಿಸುಗುಮೇ
ಎಣ್ಣೆಯಬೆಣ್ಣೆಯ ಸವಿಯರಿ
ದುಣ್ಣುವ ರಸಿಗನವಗಲ್ತೆ ಸೊಗಯಿಪುದಿನಿಗಳ್ ೨

ನುಡಿಯೇಂ ಬರಿ ಪದಮೇ ಕ
ನ್ನಡಪದವೊಟ್ಟುತಲೆ ಸಕ್ಕದಮನಕ್ಕಜದಿಂ
ಬಡಿದಟ್ಟಲ್ಕಾನುಡಿ ಕ
ನ್ನುಡಿಯಪ್ಪುದೆ ಮರುಳೆ ಕನ್ನಡಮದನೆ ಮರೆವಾ ೩

ಪದನರಿದುಲಿಯದೆ ಸವಿಯದೆ
ಪದವಿಡಿದೆಳೆಯುತಿದು ಕನ್ನಡಂ ಸಕ್ಕದಮೆಂ
ದದರುೞಿವಿಡಿಯಲ್ ಕಬ್ಬದ
ಪದಮದು ಕಿಡದುಳಿವುದೆಂತುಪುೞಿವಾಲಿನವೋಲ್ ೪

ನುಡಿಯೊಳನುಡಿತಕೆ ಗಮನಂ
ಗುಡುತೆಸೆವನುನಯದಿ ನಾದದೊಳ್ ಮನವಿಡುವನ್
ನುಡಿಯರಿಗನ್ ಗಮನಂಗಿಡೆ
ನುಡಿದರಿಗನೆನಲ್ ಸಮಂತು ನುಡಿಗದೆ ಲಕ್ಷ್ಯಂ ೫