Sunday, October 17, 2010

ಸಾಂಸ್ಕೃತಿಕ ಅನ್ವೇಷಣೆಯ ಸಾಹಿತಿ---ಎಸ್. ಎಲ್. ಭೈರಪ್ಪ?

ಇದು ಸುನಾಥರ "ಸಾಂಸ್ಕೃತಿಕ ಅನ್ವೇಷಣೆಯ ಸಾಹಿತಿ---ಎಸ್. ಎಲ್. ಭೈರಪ್ಪ" ಎಂಬ ಲೇಖನಕ್ಕೆ ನನ್ನ ಪ್ರತಿಕ್ರಿಯೆ. ಪ್ರತಿಕ್ರಿಯೆ ತುಸು ಉದ್ದವಾದ್ದರಿಂದ ಅವರ ಲೇಖನಕ್ಕೆ ಕಾಮೆಂಟಾಗಿ ಹಾಕುವ ಬದಲು ಇಲ್ಲಿ ಪ್ರಕಟಿಸುತ್ತಿದ್ದೇನೆ. ಈ ಲೇಖನದಲ್ಲಿ ಬರುವ ಅನೇಕ ಪ್ರಸ್ತಾಪಗಳು ಮೂಲ ಲೇಖನದ ಭಾಗಗಳನ್ನು ಸೂಚಿಸುವುದರಿಂದ, ಇದನ್ನು ಓದುವ ಮೊದಲು ಮೂಲ ಲೇಖನವನ್ನು ಓದಬೇಕೆಂದು ಕೋರಿಕೆ.

ಭೈರಪ್ಪನವರ ಕಾದಂಬರಿಗಳ ಪ್ರಾತಿನಿಧಿಕ ಸೊಗಸಾದ ಕಿರುಪರಿಚಯ ಮಾಡಿಕೊಡುತ್ತಾ ಕೊನೆಗೆ "ಅವರನ್ನು ನಮ್ಮ ಸಾಂಸ್ಕೃತಿಕ ಅನ್ವೇಷಕ" ಎಂದು ಕರೆಯುತ್ತಾರೆ ಲೇಖಕರು. ನಾನು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅವರನ್ನು ನಮ್ಮ ಸಾಂಸ್ಕೃತಿಕ ಪ್ರತಿಪಾದಕನೆಂದು ಕರೆಯುತ್ತೇನೆ. ಏಕೆಂದರೆ ಅನ್ವೇಷಣೆಯಲ್ಲಿ ನಮಗೆ ತಿಳಿಯದ/ಹೊಸದಾಗಿ ತಿಳಿಯುವ, ಹಾಗೆ ತಿಳಿದಿದ್ದನ್ನು ಮುಕ್ತವಾಗಿ ಒಪ್ಪುವ ಅಂಶವಿರುತ್ತದೆ, ಚಿಂತನೆಯ ಅಂಶವಿರುತ್ತದೆ. ಆದರೆ ಭೈರಪ್ಪನವರಿಗೆ ನಮ್ಮ (ಹಾಗೇ ಪರ)ಸಂಸ್ಕೃತಿಯಬಗ್ಗೆ ಈಗಾಗಲೇ ಪ್ರಬಲವಾದ ಅಭಿಪ್ರಾಯಗಳಿರುವುದರಿಂದ, ಅದರ ಬಗ್ಗೆ ಅನ್ವೇಷಣೆ/"ಚಿಂತನೆ" ಈಗಾಗಲೇ ಆಗಿಹೋಗಿದೆ. ಅದರ ಪ್ರತಿಪಾದನೆಯೇ ಅವರ (ಕೊನೆಯ ಪಕ್ಷ ಇತ್ತೀಚಿನ) ಕಾದಂಬರಿಗಳ ಗುರಿಯಾದಂತೆನಿಸುತ್ತದೆ. ಸುನಾಥರೇ ಮುಂದೊಂದುಕಡೆ ಬಳಸುವಂತೆ, "ವಕಾಲತ್ತು" ಎನ್ನುವ ಪದ ಹೆಚ್ಚು ಸೂಕ್ತವೆನಿಸುತ್ತದೆ. ವಕೀಲನಿಗೆ ಚಿಂತನೆಗಿಂತಾ ಪ್ರತಿಪಾದನೆಯೇ ಮುಖ್ಯವಾಗುತ್ತದೆ.

ಅದೇನೇ ಇರಲಿ ಕಾದಂಬರಿಯ ತಂತ್ರಗಾರಿಕೆ, ಕತೆ ಹೇಳುವ ಅನನ್ಯಶೈಲಿ, ಕತೆಯ ಓಟಕ್ಕೆ ಭಂಗತಾರದೆ ಪಾತ್ರಗಳ ತಾತ್ವಿಕ/ನೈತಿಕ ಒಳತೋಟಿಗಳಲ್ಲಿ ಓದುಗರನ್ನು ಒಳಗೊಳಿಸುವ ಪರಿ ಇತ್ಯಾದಿ ಕಾರಣಗಳಿಗಾಗಿ ಭೈರಪ್ಪ ನನ್ನ ನೆಚ್ಚಿನ ಲೇಖಕರಲ್ಲಿ ಒಬ್ಬರು, ಇಂದಿಗೂ ಕೂಡ. ಅವರ ಈ ಹಿಂದಿನ ಕಾದಂಬರಿಗಳ ಬಗ್ಗೆ ನನ್ನ (ಮತ್ತು ನನ್ನಂತಹ ಇತರರ) ತಕರಾರೆಂದರೆ ಇದು: ಪ್ರಸ್ತುತ ವ್ಯವಸ್ಥೆಯೊಡನೆ ಬದಲಾದ ಪರಿಸ್ಥಿತಿಯ ಮುಖಾಮುಖಿ, ಅದು ಪಾತ್ರಗಳಲ್ಲಿ ತಂದೊಡ್ಡುವ ಸಂಘರ್ಷ, ಉಸಿರುಗಟ್ಟಿಸುವ ಪರಿಸ್ಥಿತಿ ಇವುಗಳನ್ನು ಭೈರಪ್ಪನವರು ವಸ್ತುವನ್ನಾಗಿಸಿಕೊಂಡರೂ, ಇಷ್ಟೆಲ್ಲಾ ತುಮುಲ/ಒಳತೋಟಿಗಳನ್ನನುಭವಿಸಿಯೂ ಅವರ ಪಾತ್ರಗಳು ಈ ಉಸಿರುಗಟ್ಟಿಸುವ ವ್ಯವಸ್ಥೆಯಿಂದ ಹರಿದುಕೊಂಡು ಹೊರಬರದೇ ಕೊನೆಗೆ ಅದಕ್ಕೇ ಜೋತುಬಿದ್ದುಬಿಡುತ್ತವೆಂಬುದು. ಆ ಕಾರಣಕ್ಕೇ ಭೈರಪ್ಪನವರು ಸನಾತನ ಜೀವನಶೈಲಿ ಎತ್ತಿಹಿಡಿಯುವ ಭರದಲ್ಲಿ ಹಳೆಯ ಕಂದಾಚಾರಕ್ಕೇ ಶರಣು ಹೊಡೆದುಬಿಡುತ್ತಾರೆಂಬುದು ಒಂದು ಅನಿಸಿಕೆಯಾಗಿತ್ತು. ಇಂಥದ್ದೊಂದು "ಕ್ರಾಂತಿ" ಆ ಪಾತ್ರ ಅನುಭವಿಸುವ ತುಮುಲಕ್ಕೆ ಅತಿ ಸಹಜವಾದ ಹೊರಹರಿವಾಗಿದ್ದರೂ ಕೊನೆಯ ಗಳಿಗೆಯಲ್ಲಿ ಅದು ಹಿಂದಿರುಗಿ ಬಂದುಬಿಡುತ್ತದೆ, ಮತ್ತು ಅದೊಂದು ರೀತಿಯ ರಸಾತ್ಮಕ ಅಸಮಾಧಾನ/ಅಸಂತುಷ್ಟಿಯನ್ನು ಓದುಗನಲ್ಲಿ ಉಳಿಸಿಬಿಡುತ್ತವೆ. ಹಾಗಿದ್ದಮೇಲೆ ಅಂಥದ್ದೊಂದು ಸಂಘರ್ಷವನ್ನು ಕಾದಂಬರಿಯ ಸಮಸ್ಯೆಯನ್ನಾಗಿ ತೆಗೆದುಕೊಳ್ಳುವ ಅಗತ್ಯವಾದರೂ ಏನು? ಆದರೆ ನಮ್ಮ ಈ ಭಿನ್ನಾಭಿಪ್ರಾಯವೇನಿದ್ದರೂ ತಾತ್ವಿಕ ಮಟ್ಟದಲ್ಲಿ ಮಾತ್ರವೇ ಹೊರತು, ಕಾದಂಬರಿಗಳ ಕಲಾದೃಷ್ಟಿಯ ಬಗ್ಗೆ ಮಾತ್ರ ಎರಡು ಮಾತಿರಲಿಲ್ಲ.

ಆದರೆ ಆವರಣದಿಂದೀಚಿನ ಕಾದಂಬರಿಗಳ ಬಗೆಗೆ ಇಷ್ಟೇ ಹೇಳಿ ಸುಮ್ಮನಾಗಲು ಬರುವುದಿಲ್ಲ. ಅವರ ಹಳೆಯ ಕಾದಂಬರಿಗಳ ಕಲಾದೃಷ್ಟಿ, ಸೂಕ್ಷ್ಮ ಪ್ರಬುದ್ಧ ಮಂಡನೆ ಇಲ್ಲಿ ಮರೆಯಾಗಿದೆ. ಪಾತ್ರಗಳ ಒಳತೋಟಿ, ಅದರ ವೈಯಕ್ತಿಕ ಸೂಕ್ಷ್ಮ ಕಳೆದುಕೊಂಡು ಎರಡು ಪಂಗಡಗಳ/ಜನಾಂಗಗಳ/ಸಮಾಜಗಳ/ಲಿಂಗಗಳ ಜೋರುಬಾಯಿಯಾಗಿ ಪರಿವರ್ತನೆಗೊಂಡಿದೆ. ಈ ಇಡೀ ಸಮಾಜಗಳ ಭಾರವನ್ನು ಕೇವಲ ಒಂದೆರಡು ದುರ್ಬಲ ಪಾತ್ರಗಳು ತಡೆದುಕೊಳ್ಳುವುದು ಸಾಧ್ಯವಾಗದೇ, ಪಾತ್ರಗಳಾಗಿ ಅವು ಕುಸಿದಿವೆ. ಪಾತ್ರವೊಂದು ಗುಣವೊಂದರ ಪ್ರತಿನಿಧಿಯಾಗಿ ಕೆಲಸಮಾಡುವುದು ಅಷ್ಟು ಸುಲಭವೂ ಅಲ್ಲ, ಮತ್ತು ಇದೇ ಮೊದಲೂ ಅಲ್ಲ. ವ್ಯಾಸರು ಇದನ್ನು ಬಹು ಯಶಸ್ವಿಯಾಗಿ ಮಾಡಿದ್ದಾರೆ; ರನ್ನ-ಪಂಪರು ಮಾಡಿದ್ದಾರೆ; ಅಷ್ಟೇಕೆ, ಸ್ವತಃ ಭೈರಪ್ಪನವರೇ ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ, ಪರ್ವದಲ್ಲಿ. ಆದರೆ ಆವರಣದೀಚೆಯ ಅವರ ಕಾದಂಬರಿಗಳಲ್ಲಿ ಈ ಕೌಶಲ ಸಂಪೂರ್ಣ ಮರೆಯಾಗಿದೆಯೆಂದೇ ಹೇಳಬೇಕು. ಅಲ್ಲಿ ಪಾತ್ರಗಳು ಪಾತ್ರಗಳಾಗಿ ಉಳಿದಿಲ್ಲ. ಅಷ್ಟೇಕೆ, ರಾತ್ರಿ ಗಂಡಹೆಂಡಿರು ಪಕ್ಕಪಕ್ಕ ಮಲಗಿದಾಗಲೂ, ಮಿಲನದ ವೇಳೆಯಲ್ಲೂ ಮಾತಾಡುವುದು ಆ ಎರಡು ದೇಹಗಳಲ್ಲ, ಎರಡು ಮನಸ್ಸುಗಳಲ್ಲ, ಬದಲಿಗೆ ಎರಡು ಸಮಾಜಗಳು, ಎರಡು ಧರ್ಮಗಳು (ಆವರಣ)! ಕಾದಂಬರಿಯಲ್ಲಿ ಭೈರಪ್ಪನವರದ್ದೇ ಛಾಪು ಹೊತ್ತು ಮೂಡಿರುವ ತಲೆದೂಗಿಸುವ ಕಥನತಂತ್ರವೂ ಈ ಅಧ್ವಾನವನ್ನು ಮುಚ್ಚುವಲ್ಲಿ ಯಶಸ್ವಿಯಾಗುವುದಿಲ್ಲ.

"ನನ್ನ ದೃಷ್ಟಿ ಬಹುಜನದ ದೃಷ್ಟಿ, ಆದ್ದರಿಂದ ನನ್ನದು ಸರಿ, ಆದ್ದರಿಂದಲೇ ನಿನ್ನದು ತಪ್ಪು, ಆದ್ದರಿಂದಲೇ ನಿನ್ನದೆಂಬುದೆಲ್ಲವೂ ತಪ್ಪೇ, ನಿನ್ನ ಅಪ್ಪ, ತಾತ ಮುತ್ತಾತಂದಿರೆಲ್ಲಾ ತಪ್ಪು" ಮತ್ತು ಇನ್ನೊಂದು ರೀತಿಯಿಂದ "ನಿನ್ನ ಅಪ್ಪ, ತಾತ ಮುತ್ತಾತಂದಿರು ನಮಗೆ ಹೀಗೆ ಹೀಗೆ ಮಾಡಿದರು ( ಐತಿಹಾಸಿಕ ಪುರಾವೆ); ಆದ್ದರಿಂದ ನೀವೆಲ್ಲರೂ ನಮ್ಮೆಲ್ಲರನ್ನೂ ನಾಶ ಮಾಡಿದಿರಿ, ಮಾಡುತ್ತಿದ್ದೀರಿ, ಮಾಡುವಿರಿ; ಆದ್ದರಿಂದ ನಿಮ್ಮದೆಲ್ಲವೂ ತಪ್ಪೇ; ನಾನು ಸನಾತನ ಧರ್ಮದ ಪ್ರತಿನಿಧಿ, ನೀನು ನಮ್ಮನ್ನು ನಾಶಮಾಡಿದ ಪಾಶವೀ ಧರ್ಮದ ಪ್ರತಿನಿಧಿ" ಈ ರೀತಿಯ ವಾದಸರಣಿಗಳು ಚರ್ಚಾಸ್ಪರ್ಧೆಗೆ ಸರಿಹೊಂದಬಹುದೇ ಹೊರತು ಕಾದಂಬರಿಯಂಥ ಸೂಕ್ಷ್ಮ ವೈಯಕ್ತಿಕ ಬರವಣಿಗೆಗಲ್ಲ; ಮತ್ತು ಈ ವಾದಸರಣಿಯನ್ನು ಸಮರ್ಥಿಸಲೆಂದೇ ಸೃಷ್ಟಿಗೊಂಡ ಪಾತ್ರನಿರೂಪಣೆ ಘಟನಾವಳಿಗಳು. ಇತಿಹಾಸವೇ ಪ್ರಧಾನವಾದರೆ ಒಂದು ಸಂಶೋಧನ ಗ್ರಂಥವನ್ನು ಬರೆದರೆ ಅದಕ್ಕೊಂದು ಗಾಂಭೀರ್ಯ; ಇಲ್ಲ ವೈಯಕ್ತಿಕ ದೃಷ್ಟಿಕೋನವೇ ಪ್ರಧಾನವಾದರೆ ಅದನ್ನು ಪ್ರತಿಪಾದಿಸಿ ಒಂದು ಲೇಖನ ಪ್ರಕಟಿಸಿದರೆ ಅದರ ಬಗ್ಗೆ ಚರ್ಚಿಸಬಹುದು; ಆದರೆ ಕಾದಂಬರಿ ಬರೆದಾಗ ಅದರ ಪ್ರಥಮ ಬದ್ಧತೆ ಕಲಾದೃಷ್ಟಿಗೇ ಹೊರತು ಮತ್ತಾವುದಕ್ಕೋ ಅಲ್ಲ, ಅಲ್ಲವೇ? ಅದು ಬಿಟ್ಟು ಕೇವಲ ವೈಯಕ್ತಿಕ ದೃಷ್ಟಿಕೋನವನ್ನು "ಎಲ್ಲರೂ ಒಪ್ಪುವಂತೆ" ಪ್ರತಿಪಾದಿಸಲು ಕಾದಂಬರಿಯ ಹೊದಿಕೆಯಲ್ಲಿ ಇತಿಹಾಸವನ್ನು ತುರುಕಿದರೆ, ಅಷ್ಟಾಗಿಯೂ ಅದು ಒಂದು ದೃಷ್ಟಿಕೋನದ ಲೇಖನವಾಗಿ ಉಳಿದೀತೇ ಹೊರತು ಕಾದಂಬರಿಯಾಗುವುದಿಲ್ಲ, ಅಲ್ಲವೇ? ಹಾಗೆ ಲೇಖನವಾಗಿಯೇ ಬರೆಯುವುದಾದರೆ ಅದನ್ನು ಸಾಫ ಸೀದಾ ಹೇಳುವುದರ ಬದಲು ಕಾದಂಬರಿಯೊಂದರ ಕಲಾತ್ಮಕ ಅಸ್ಪಷ್ಟತೆ, ಮಾಯದ ಮುಸುಕು (fictionality) ಏಕೆ? ಅಂದರೆ ನಮ್ಮ ತಾತ್ವಿಕ ವಿರೋಧ, ಧರ್ಮ ಮತ್ತು ಅದರ ಸಾಮಾಜಿಕ ಆಯಾಮಗಳ ಬಗೆಗಿನ ಭೈರಪ್ಪನವರ ನಿಲುವಿನ ಬಗೆಗಲ್ಲ, ಬದಲಿಗೆ ಅದನ್ನು ಅವರು "ಕಾದಂಬರಿ"ಯನ್ನಾಗಿಸಲೆತ್ನಿಸುವ ಪರಿಯ ಬಗೆಗೆ. ಇಂಥದ್ದೊಂದು ಇತಿಹಾಸ, ವಿಚಾರ ಮತ್ತು ಕತೆಯ ಅಂಶಗಳ ಕಲಸುಮೇಲೋಗರ, ಆ ಅಂಶಗಳ ಪರಸ್ಪರ ಮೈಲಿಗೆಯಿಂದಾಗಿಯೇ ಆ ಬರಹಕ್ಕೆ ಇತಿಹಾಸಗ್ರಂಥವೊಂದರ authenticityಯನ್ನಾಗಲೀ ವೈಚಾರಿಕ ಬರಹವೊಂದರ ಗಾಂಭೀರ್ಯವನ್ನಾಗಲಿ ಕತೆಯ ಸೌಂದರ್ಯ/ಕಲಾತ್ಮಕತೆಯನ್ನಾಗಲಿ ದೊರಕಿಸಲು ವಿಫಲವಾಗುತ್ತದೆ. ಇದಕ್ಕೆ ಸರಿದೊರೆಯಾದ ಉದಾಹರಣೆಯಾಗಿ ತರಾಸು ಅವರ ಐತಿಹಾಸಿಕ ಕಾದಂಬರಿಗಳನ್ನು ನೆನೆಯೋಣ. ಅಲ್ಲೆಲ್ಲೂ ಕಾದಂಬರಿಯ ಪಾತ್ರವೊಂದು ಇಷ್ಟೆಲ್ಲಾ "ಐತಿಹಾಸಿಕ ಸಂಶೋಧನೆ"ಗಳನ್ನು ಮಾಡಿ, ತನ್ನದೇ ಕತೆಯ ಕೊನೆಯಲ್ಲಿ ತನ್ನ ಐತಿಹಾಸಿಕ ಸಂಶೋಧನೆಗಳ bibliography ಕೊಟ್ಟದ್ದು ಕಾಣಬರುವುದಿಲ್ಲ. ಇಷ್ಟಕ್ಕೂ ಇದೆಲ್ಲಾ ಚರ್ಚೆ, ಈ ಕಾದಂಬರಿಗಳ "ಕಾದಂಬರಿತನ"ವನ್ನು ಕುರಿತದ್ದೇ ಹೊರತು ಭೈರಪ್ಪನವರ ನಿಲುವು/"ಪ್ರತಿಪಾದನೆ"ಗಳ ಕುರಿತದ್ದಲ್ಲ (ಅವು ಬೇರೆಯೇ ಚರ್ಚೆಯ ವಿಷಯ).

ಇನ್ನು ಅನಂತಮೂರ್ತಿಯವರ ಬಗ್ಗೆ ಬಂದರೆ, ಭೈರಪ್ಪನವರ ಬಗೆಗಿನ ಚರ್ಚೆಯಲ್ಲಿ ಅನಂತಮೂರ್ತಿಯ ಪ್ರಸ್ತಾಪ ಬರಬೇಕಾದ ಯಾವುದೇ ಸಾಹಿತ್ಯಕ ಕಾರಣಗಳೂ ನನಗಂತೂ ಕಾಣುವುದಿಲ್ಲ. ಇಬ್ಬರ ಬರಹಗಳ ದಿಕ್ಕು ದೆಸೆಗಳು ನೀತಿ-ನಿಲುವುಗಳು, ಸೊಗಸುಗಳು ಬೇರೆಯೇ. ಜಿಲೇಬಿಯೇ ರುಚಿ, ಖೀರು ಅಲ್ಲ ಎನ್ನಲಾದೀತೇ? ಭೈರಪ್ಪನವರ ನಿಲುವಿನಲ್ಲಿ ಅದೆಷ್ಟೇ ಕುಂದುಗಳಿದ್ದಾಗ್ಯೂ ನಮ್ಮ ಕನ್ನಡ ಕಾದಂಬರಿಯ ಸಂದರ್ಭದಲ್ಲಿ ಭೈರಪ್ಪನವರೊಂದು ಮೈಲಿಗಲ್ಲು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅಂತೆಯೇ ಸಣ್ಣ ಕತೆಗಳ ಸಂದರ್ಭದಲ್ಲಿ ಅನಂತಮೂರ್ತಿಯವರು. ಆದರೆ ಇಬ್ಬರಿಗೂ ಎಲ್ಲಿಂದೆಲ್ಲಿಯ ಹೋಲಿಕೆ? ಆನಂದಭೈರವಿಗೂ ಕಲ್ಯಾಣಿಗೂ ಹೋಲಿಕೆಯೇ? ಆದರೆ ಇವತ್ತು ಭೈರಪ್ಪನವರ ಚರ್ಚೆ ಅನಂತಮೂರ್ತಿಯವರ ಪ್ರಸ್ತಾಪವಿಲ್ಲದೇ ಪೂರ್ಣಗೊಳ್ಳುವುದೇ ಇಲ್ಲ. ಇದಕ್ಕೆ ನಾವು ಕಾಣುವ ಒಂದೇ ಅಸಾಹಿತ್ಯಕ ಕಾರಣವೆಂದರೆ, ಅನಂತಮೂರ್ತಿಯವರು ಭೈರಪ್ಪನವರ ಕಾದಂಬರಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು, ಅದು ವಿವಾದವಾಯಿತು, in retaliation, ಅನಂತಮೂರ್ತಿಯವರ ಸಾಹಿತ್ಯದ "ಪುನರ್ವಿಮರ್ಶೆ" ನಡೆಯಿತು, ಹೊಸ ದೃಷ್ಟಿಕೋನದಿಂದ! ಮತ್ತೆ ಎರಡೂ ಬಣಗಳೂ ವೈಯಕ್ತಿಕ ನಿಂದನೆಗಳಲ್ಲಿ ತೊಡಗಿದುವು. ಇದು ಎಷ್ಟರಮಟ್ಟಿಗೆ ಸರಿ?

ಇನ್ನು specific ಆಗಿ "ಸಂಸ್ಕಾರ"ದ ಬಗ್ಗೆ ಮಾತಾಡುವುದಾದರೆ, ಸಂಸ್ಕಾರದ ಕತೆ ಅಥವ ಅದರ "ಒಳಕತೆ"ಯಲ್ಲಿ, ಹಾಗೆ ಅದನ್ನು ಬಳಸುವ ತಂತ್ರಗಾರಿಕೆಯಲ್ಲಿ ಲೇಖಕರು ಹೇಳುವ ದೂರ್ತತನವಾಗಲೀ ಅಥವ ಆ ದೂರ್ತತನ ಮಾಡುವ ಅಗತ್ಯವಾಗಲೀ ಕಾಣಬರುವುದಿಲ್ಲ. ಕತೆಯ ರೀತಿಯೇ ಅದಲ್ಲವೇ? ಹೇಳುವುದನ್ನು ಸಾಫ ಸೀದಾ ಹೇಳಿಬಿಟ್ಟರೆ ಅದು ಕತೆಯಾಗುವುದಿಲ್ಲ, ಬದಲಿಗೆ ಲೇಖನವೋ ಭಾಷಣವೋ ಇನ್ನೇನೋ ಆಗುವುದು, ಅಲ್ಲವೇ? ಆದರೆ ಇಲ್ಲಿ ಕತೆಗಾರನ ಉದ್ದೇಶ ಇದನ್ನು ಲೇಖನವೋ ಭಾಷಣವೋ ಆಗಿಸುವುದಲ್ಲ, ಬದಲಿಗೆ ಕತೆಯಾಗಿಯೇ ಉಳಿಸಿಕೊಳ್ಳುವುದು. ಮತ್ತು ಇದರಲ್ಲಿ ದೂರ್ತತನವನ್ನು ಆರೋಪಿಸುವ ಮೊದಲು ಸಂಸ್ಕಾರದ ಕತೆ ಬಂದ ಕಾಲಘಟ್ಟವನ್ನು ಗಮನಿಸಬೇಕು. ಅವತ್ತಿನ ಸಮಾಜ ಇವತ್ತಿನಷ್ಟು liberal ಆಗಿರಲಿಲ್ಲ. ಸಂಸ್ಕಾರದ "ಪ್ರತಿಭಟನೆ" ಅವತ್ತಿನ ಕಾಲಘಟ್ಟಕ್ಕಂತೂ ಖಂಡಿತಾ ಪ್ರಸ್ತುತವಾಗಿತ್ತು. ವ್ಯವಸ್ಥೆಯೇ ಬಲವಾಗಿದ್ದಾಗ ಅದರ ಬಗೆಗಿನ ಪ್ರತಿಭಟನೆ "ಲೇವಡಿ"ಯೆನ್ನಿಸಿಕೊಳ್ಳುವುದೇ? ಆದರೆ ಇವತ್ತು ಕಾಲ ಬದಲಾಗಿದೆ. ಸಮಾಜ ಹೆಚ್ಚು liberal ಆಗಿದೆ, ವ್ಯವಸ್ಥೆ ಮೊದಲಿನಷ್ಟು ಬಲವಾಗಿಲ್ಲ. ಆದ್ದರಿಂದ ಅದೇ ಕತೆ ಇವತ್ತಿನ ಕಾಲಘಟ್ಟದಲ್ಲಿ ಬಂದರೆ, ಬದಲಾದ ಬ್ರಾಹ್ಮಣ ಸಮಾಜದ ಹಿನ್ನೆಯಲ್ಲಿ ಅನಂತಮೂರ್ತಿಯವರ ಅಂಥ ಪ್ರಯತ್ನ ದೂರ್ತತನವೂ ಬ್ರಾಹ್ಮಣ ಸಮಾಜದ ಲೇವಡಿಯೂ ಖಂಡಿತ ಆಗುತ್ತಿತ್ತು, ಆದರೆ ಸಂಸ್ಕಾರದ ಅವತ್ತಿನ ಕಾಲಘಟ್ಟದಲ್ಲಿ ಅಲ್ಲ.

ಇದರ ಅರ್ಥ ಅನಂತಮೂರ್ತಿಯವರ ಇಂದಿನ ಅನೇಕ ಸಾಹಿತ್ಯೇತರ ಸಾಮಾಜಿಕ ನಿಲುವುಗಳಲ್ಲಿ ದೂರ್ತತನವಿಲ್ಲವೆಂದಲ್ಲ, ಅದನ್ನು ನಾನು ಸಮರ್ಥಿಸುತ್ತೇನೆಂದೂ ಅಲ್ಲ. ಅವರ "ಅಲ್ಪಸಂಖ್ಯಾತ" ಧ್ವನಿಯನ್ನು ತಾತ್ವಿಕವಾಗಿ ನಾನು ಸಮರ್ಥಿಸಿದರೂ ಅದು ಅತಿರೇಕಕ್ಕೆ ಹೋದಾಗೆಲ್ಲಾ ಕಟುವಾಗಿ ವಿರೋಧಿಸಿದವರಲ್ಲಿ ನಾನೂ ಒಬ್ಬ. ಆದರೂ ವ್ಯಕ್ತಿಯೊಬ್ಬನಿಗೆ ಸಾರಾಸಗಟಾಗಿ ದೂರ್ತ/ಸರಳ ಎಂಬ ಹಣೆಪಟ್ಟಿ ಹಚ್ಚುವುದಾಗಲೀ ಆ "ದೂರ್ತತನ/ಸರಳತೆ"ಗಳನ್ನು ಅವನ ಎಲ್ಲಾ (ಕಾಲಘಟ್ಟಗಳ) ಬರವಣಿಗೆಗೂ ಸಾರಾಸಗಟಾಗಿ ಅನ್ವಯಿಸುವುದು ಸಾಹಿತ್ಯಕ್ಕೆ, ಸೃಜನಶೀಲತೆಗೆ ಅಪಚಾರವಲ್ಲವೇ? ಅಂಥ ಸಾಹಿತ್ಯ/ಸೃಜನಶೀಲತೆ ಅನಂತಮೂರ್ತಿಯವರದ್ದಿರಬಹುದು, ಅಥವ ಭೈರಪ್ಪನವರದ್ದಿರಬಹುದು ಅಥವ ಇನ್ನಾರದೇ ಇರಬಹುದು.

9 comments:

sunaath said...

ಮಂಜುನಾಥ,
ನಿಮ್ಮ ವಿಮರ್ಶೆಯನ್ನು ತುಂಬ ಮೆಚ್ಚಿಕೊಂಡೆ. ನನ್ನ ಲೇಖನದಲ್ಲಿ ನಾನು ಅಲಕ್ಷಿಸಿದ ಎಷ್ಟೋ ಅಂಶಗಳನ್ನು ನೀವು ನಿಮ್ಮ ಲೇಖನದಲ್ಲಿ ತೋರಿಸಿದ್ದೀರಿ. ಈ ಕಾರಣಕ್ಕಾಗಿ ನಿಮಗೆ ಅಭಿನಂದನೆಗಳು ಹಾಗು ಧನ್ಯವಾದಗಳು.
ಅನಂತಮೂರ್ತಿಯವರ ಸಾಹಿತ್ಯವನ್ನು ನಾನು ಭೈರಪ್ಪನವರ ಸಾಹಿತ್ಯದ ಜೊತೆಗೆ ತುಲನೆ ಮಾಡಲು ಒಂದೇ ಕಾರಣವಿದೆ. ಭೈರಪ್ಪನವರ ಕಾದಂಬರಿಗಳ ಒಂದು ಅಂಶವೆಂದರೆ ತಾನು ಪ್ರತಿಪಾದಿಸಲು ಬಯಸುವ ಅಂಶವನ್ನು ನೇರವಾಅಗಿ ಹೇಳುವದು. ನನಗೆ ಅನಿಸುವದರ ಮಟ್ಟಿಗೆ ಇದರ antithesis ಅಂದರೆ ಅನಂತಮೂರ್ತಿಯವರ ‘ಸಂಸ್ಕಾರ’. ಅನಂತಮೂರ್ತಿಯವರು ತಮ್ಮ ನಾಯಕ ಪ್ರಾಣೇಶಾಚಾರ್ಯರನ್ನು ಖಳನಾಯಕ ನಾರಣಪ್ಪನ ಜೊತೆಗೆ ತೂಗಿ ನೋಡಿ, ಪ್ರಾಣೇಶಾಚರ್ಯರ ಬ್ರಹ್ಮಚರ್ಯದ ಆದರ್ಶವು
against the natural instincts ಎಂದು ಹೇಳಬಯಸುತ್ತಾರೆ. ಈ ಆದರ್ಶವು ವೈದಿಕ ಸಂಸ್ಕಾರಗಳ ಫಲ
ಎಂದು ಸೂಚಿಸುತ್ತಿದ್ದಾರೆ. ಇಷ್ಟೇ ಆದರೆ, ತಮ್ಮ ಪ್ರತಿಪಾದನೆಗೆ ಬೆಂಬಲ ದೊರೆಯದು ಎನ್ನುವ ಭಾವನೆಯಿಂದಲೇ
ವೈದಿಕ ಸಮಾಜದ ಹುಳುಕುಗಳನ್ನು ತೋರಿಸಿದ್ದಾರೆ. ಇಂತಹ
ವಕ್ರ plotನಿಂದಾಗಿಯೇ ನಾನು ಅವರ ಬರವಣಿಗೆಯನ್ನು ಧೂರ್ತ ಬರವಣಿಗೆ ಎಂದು ಕರೆಯುವದು. ಇದು ನನ್ನ ಅನಿಸಿಕೆ.

Manjunatha Kollegala said...

ಸುನಾಥರೇ, ಪ್ರತಿಕ್ರಿಯೆಗೆ ಧನ್ಯವಾದಗಳು. ಸಂಸ್ಕಾರ ಬಹು ಹಿಂದೆ ಓದಿದ್ದು. ನನಗೆ ನೆನಪಿರುವ ಮಟ್ಟಿಗೆ ಅಲ್ಲಿ ಕತೆಗಾರನ ಪ್ರಜ್ಞೆ ಪ್ರಾಣೇಶಾಚಾರ್ಯರ ಪರವಾಗಿಯಾಗಲಿ ನಾರಣಪ್ಪನ ಪರವಾಗಿಯಾಗಿಯಾಗಲಿ ನಿಂತ ನೆನಪಿಲ್ಲ. ಎರಡೂ ಪಾತ್ರಗಳೂ ತಮ್ಮ ಒಳತೋಟಿಯನ್ನನುಭವಿಸುತ್ತವೆ, ಅದಕ್ಕೆ ತಮ್ಮದೇ (ಇದು ಮುಖ್ಯ, ತಮ್ಮದೇ) ಅಂತ್ಯವನ್ನೂ ಕಂಡುಕೊಳ್ಳುತ್ತವೆ. ಅದರಲ್ಲಿ ಕತೆಗಾರನ "ನಿಲುವು" ಕಂಡ ನೆನಪಿಲ್ಲ. ಕತೆ ಓದಿದನಂತರ ಅದರಲ್ಲಿ ನಾರಣಪ್ಪ critical insiderನ ಪಾತ್ರವಹಿಸುತ್ತಾನೆ ಎಂದುಕೊಂಡ ನೆನಪು. ಮತ್ತೊಮ್ಮೆ ಓದಿ ಈ ಬಗ್ಗೆ ಚರ್ಚಿಸುತ್ತೇನೆ.

ಅದೇನೇ ಇರಲಿ, ಕತೆ/ಕಾವ್ಯವೊಂದು ಇರುವುದೇ ಹಾಗಲ್ಲವೇ, ವಕ್ರ, ವ್ಯಂಗ್ಯ, ಸೂಚ್ಯ. ಮಾತಿನಲ್ಲಿ ಆ ಅನಗತ್ಯ ವಕ್ರ ದೂರ್ತತನವನ್ನು ಸೂಚಿಸಬಹುದಾಗಲೀ ಕತೆಯಲ್ಲಿ ಅದೇ ಸಹಜವಲ್ಲವೇ?

Santhosh Mugoor (ಸಂk) said...

ನಾ ಮೆಚ್ಚಿದ ಲೇಖಕರಲ್ಲಿ ಭೈರಪ್ಪ ಕೂಡ ಒಬ್ಬರು.
ಒಂದು ಕಾಲಘಟ್ಟದಲ್ಲಿ ಚಿಂತನೆಗೆ ಅವಕಾಶ ಮಾಡಿಕೊಡುತ್ತಿದ್ದ ಅವರ ಕಾದಂಬರಿಗಳು ಇದ್ದಕ್ಕಿದ್ದಂತೆ (ಆವರಣದ ನಂತರ) ಭೈರಪ್ಪನವರ ಚಿಂತನೆ(ಅಭಿಪ್ರಾಯಗಳನ್ನು) ಗಳನ್ನು ನಮ್ಮ ಮೇಲೆ ಹೇರುತ್ತಿದೆ ಅನ್ನಿಸ ತೊಡಗಿದೆ. ನಿಮ್ಮ ಲೇಖನ ಬಹಳ ಚೆನ್ನಾಗಿದೆ.
ಇತ್ತೀಚಿನ ಅವರ ಕಾದಂಬರಿಗಳು ಹೇಗೆ ಇರಲಿ ಆದ್ರೆ ಭೈರಪ್ಪನವರನ್ನು ಕಾದಂಬರಿಕಾರನಾಗಿ ಮೆಚ್ಚದೆ ಇರುವುದು ಸಾಧ್ಯವೇ ಇಲ್ಲ.
ಧನ್ಯವಾದಗಳು, ಉತ್ತಮವಾದ ಲೇಖನಕ್ಕೆ.

ಮೃತ್ಯುಂಜಯ ಹೊಸಮನೆ said...

ತುಂಬಾ ತಡವಾಗಿ ಗಮನಿಸಿದ್ದೇನೆ. ಕರ್ಣಾಟ ಭಾರತ ಕಥಾಮಂಜರಿಯ ಸಂಗ್ರಹ ಕಾರ್ಯದಲ್ಲಿ ನನಗೂ ಸಹಕರಿಸುವ ಆಸೆ. ನಿಮಗೆ ಅಗತ್ಯವಿರುವ ಕೆಲಸ ಸೂಚಿಸಿ. ನನ್ನ e-mail :mruthyuganga@gmail.com. ಚರವಾಣಿ : ೯೪೮೦೭೬೬೪೨೪. ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ.

Sudhindra Malur said...

ಒಂದು ತಿಂಗಳಿನಿಂದ ಒಂದೇ ಉಸಿರಿನಲಿ ಕುತೂಹಲದಿಂದ ಓದುತಿದ್ದ ಎಸ್.ಎಲ್ .ಬೈರಪ್ಪ ರವರ "ಆವರಣ " ಕಾದಂಬರಿ ಸಂಪೂರ್ಣಗೊಳಿಸಿದ ಸಾರ್ಥಕತೆ ಸಮಾದಾನ ತಂದಿದೆ . ಹಿಂದಿನ ಮುಸಲ್ಮಾನ ಬಾದಶಹಗಳು ಮಾಡಿದ ತಪ್ಪನ್ನು ಸಮರ್ತಿಸುತ್ತಿರುವ ಇಂದಿನ ರಾಜಕಾರಣಿಗಳ ತಮ್ಮ ಬೇಳೆ ಬೇಯಿಸಿಕೊಳ್ಳಲು ಹಾಗು ಮತಗಳ ಪಡೆಯಲು ಹಿಂದೂ ಕ್ರೈಸ್ತ ಮುಸಲ್ಮಾನರ ಮತಗಳನ್ನು ಉಪಯೋಗಿಸುತ್ತಿರುವ ರೀತಿ ರೀವಾಜುಗಳ ಬೆಂಬೆತ್ತಿ ಪುರಾವೆಗಳ ಸಮೇತ ನಿರೂಪಿಸಿರುವ ಎಸ್.ಎಲ್ .ಬೈರಪ್ಪ ರವರ ಪಾದರವಿಂದಗಳಿಗೆ ನಮಿಸುವೆ ...

Please suggest some other books of Sri S.L. byrappa

sriranga said...

ಮಂಜುನಾಥ ಕೊಳ್ಳೇಗಾಲ ಅವರಿಗೆ -- ನಿಮ್ಮ ದೀರ್ಘ ಪ್ರತಿಕ್ರಿಯೆಯನ್ನು ನಾನು ಈ ದಿನ (೭-೩-೨೦೧೪) ಓದಿದೆ. ಅದರ ಬಗ್ಗೆ ಒಂದೆರೆಡು ಮಾತುಗಳು. (೧) ''ಭೈರಪ್ಪನವರ ಆವರಣ ನಂತರದ ಕಾದಂಬರಿಗಳು ಎಂಬ... ''ಎಂಬ ಸಾಲಿನಲ್ಲಿ ಒಂದು ಅಭಾಸವಿದೆ. ಆವರಣದ ನಂತರ ಅವರು ಬರೆದಿರಿರುವುದು ಒಂದೇ ಒಂದು ಕಾದಂಬರಿ ಅದು ''ಕವಲು''. ಇದನ್ನು ನಾನು ತಮ್ಮ ವಾಕ್ಯ ರಚನೆಯಲ್ಲಿನ ತಪ್ಪಿಗಾಗಿ highlight ಮಾಡುತ್ತಿಲ್ಲ. ಭೈರಪ್ಪನವರನ್ನು ಮತ್ತು ಅವರ ಸಾಹಿತ್ಯವನ್ನು ಕುರಿತ ಆ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಕೆಲವರು ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನು ಓದಿಲ್ಲ. ಒಬ್ಬರಂತೂ ಭೈರಪ್ಪನವರು ಬರೆದಿರುವ ಕಾದಂಬರಿಗಳ list ಕೊಡಿ ಎಂದು ಕೇಳಿದ್ದಾರೆ! ಹೀಗಾಗಿ ತಮ್ಮ ಆ ವಾಕ್ಯದಿಂದ ಆವರಣದ ನಂತರ ಇನ್ನೂ ಮೂರ್ನಾಲಕ್ಕು ಕಾದಂಬರಿಗಳನ್ನು ಭೈರಪ್ಪನವರು ಬರೆದಿರಬಹುದೇನೋ ಎಂಬ ಅನುಮಾನ ಮೂಡಿಸುತ್ತದೆ. (೨) ''ಆವರಣ'' ಕುರಿತಂತೆ ಈಗಾಗಲೇ ಸಾಕಷ್ಟು ಚರ್ಚೆ ಆಗಿದೆ. ಅದರ ಬಗ್ಗೆ ನಾನು ಮತ್ತೇನೂ ಹೇಳಲಾರೆ. ಅದರ ಪರ ಎಷ್ಟು ಜನ ಇದ್ದಾರೋ ವಿರುದ್ಧವಾಗಿಯೂ ಅಷ್ಟೇ ಜನ ಇದ್ದಾರೆ. ಅದಕ್ಕೆ ಕಾರಣ ಸದ್ಯದ ನಮ್ಮ ''ವಾತಾವರಣ''. ಇದು ಮತ್ತೊಂದು ಮಹಾ ಮಹಾ ಭಾರತ. ಇನ್ನು ಆವರಣ ಕಾದಂಬರಿ ಕುರಿತಂತೆ ತಮ್ಮ ಇಡೀ ಪ್ರತಿಕ್ರಿಯೆ ಗೌರಿ ಲಂಕೇಶರ ಸಂಪಾದಕತ್ವದ ''ಆವರಣ ಎಂಬ ವಿಕೃತಿ'' ವಿಮರ್ಶಾ ಸಂಕಲನದಿಂದ ಸಾಕಷ್ಟು ''ಸಾಮಗ್ರಿ''ಗಳನ್ನು ಪಡೆದು ಕೊಂಡಿದೆ ಎಂದು ತಿಳಿಸಲು ವಿಷಾದಿಸುತ್ತೇನೆ. -ಮು ಅ ಶ್ರೀರಂಗ ಬೆಂಗಳೂರು

Manjunatha Kollegala said...

ಶ್ರೀರಂಗರಿಗೆ ನಮಸ್ಕಾರ. ಸುಮಾರು ಮೂರೂವರೆ ವರ್ಷಗಳ ಹಿಂದೆ ನಾನು ಸಾಂದರ್ಭಿಕವಾಗಿ ಬರೆದು ಮರೆತಿದ್ದ ಲೇಖನ ಇದು; ಎಲ್ಲೋ ಅವಿತಿರುವ ನನ್ನ ಬ್ಲಾಗಿಗೆ ಬಂದು ಓದಿ ಪ್ರತಿಕ್ರಿಯಿಸಿದ್ದೀರಿ, ತಮ್ಮ ಅಭಿಮಾನಕ್ಕೆ ಧನ್ಯವಾದ.

ಹೌದು, ನೀವು ತೋರಿಸಿದ್ದು ಸರಿಯೇ. ''ಭೈರಪ್ಪನವರ ಆವರಣ ನಂತರದ ಕಾದಂಬರಿಗಳು... ''ಎಂಬ ಸಾಲಿನ ವಾಸ್ತವಿಕ ದೋಷಕ್ಕೆ (factual error) ಕ್ಷಮೆಯಿರಲಿ. ಆದರೆ ಅದಕ್ಕೆ ತಾವು ಊಹಿಸಿದಂತೆ ಆವರಣದನಂತರ ಭೈರಪ್ಪನವರು ಎಷ್ಟು ಕಾದಂಬರಿಗಳನ್ನು ಬರೆದರೆಂಬುದು ನನಗೆ ತಿಳಿಯದಿರುವುದೋ, ಭೈರಪ್ಪನವರ ಕಾದಂಬರಿಗಳ ಪಟ್ಟಿ ನನ್ನಬಳಿಯಿಲ್ಲದಿರುವುದೋ ಅಥವಾ ’ಹಲವ’ರಂತೆ ನಾನು ಭೈರಪ್ಪನವರ ಕಾದಂಬರಿಯನ್ನು/ಗಳನ್ನು ಓದದೆಯೇ ಈ ಲೇಖನ ಬರೆದಿದ್ದೇನೆಂಬುದೋ ಕಾರಣವಲ್ಲ. ಇರಲಿ, "ಕಾದಂಬರಿ" ಎನ್ನುವುದು "ಕಾದಂಬರಿಗಳು" ಏಕಾಯಿತೆನ್ನುವುದರ ವಾಖ್ಯಾರ್ಥ/ಪದಾರ್ಥ ವಿಶ್ಲೇಷಣೆಗೆ ನಾನಿಲ್ಲಿ ಹೊರಡುವುದಿಲ್ಲ. ಬರೆಯುವಾಗ ಒಟ್ಟಾರೆ ಆಲೋಚನೆಗಳ ಹರಿವು ಕೈಹಿಡಿದು ಬರೆಸುತ್ತದೆ ನೋಡಿ, ಈ ಸಣ್ಣಪುಟ್ಟ ’ಅಭಾಸ’ಗಳು ನುಸುಳಿಬಿಡುತ್ತವೆ. ವಿಷಯ ಬಂದಾಗಲೇ ಇದನ್ನೂ ಸ್ಪಷ್ಟಪಡಿಸಿಬಿಡುವುದು ಒಳ್ಳೆಯದು - ತಾವು ಹೇಳಿದ ’ಹಲವ’ರಂತೆಯೇ ನಾನೂ ಭೈರಪ್ಪನವರ "ಎಲ್ಲ" ಕಾದಂಬರಿಗಳನ್ನು ಓದಿದವನಲ್ಲ, ಆದರೆ ಕಾಲದಿಂದ ಕಾಲಕ್ಕೆ ನಾನು ಮೆಚ್ಚಿ ಓದಿದ, ಓದಿ ಮೆಚ್ಚಿದ ಅವರ ಹಲವು ಕಾದಂಬರಿಗಳು ಒಬ್ಬ ಕಾದಂಬರಿಕಾರನಾಗಿ/ಕತೆಗಾರನಾಗಿ ಭೈರಪ್ಪನವರು ನಡೆದುಬಂದ ದಾರಿಯನ್ನು ಗುರುತಿಸಿಕೊಡುತ್ತವೆಂದು ಅರಿತಿದ್ದೇನೆ. ಅಥವಾ ಹೀಗೆ ಅವರು ನಡೆದುಬಂದ ದಾರಿಯನ್ನು ಗುರುತಿಸಿಕೊಡುವ ಮೈಲುಗಲ್ಲುಗಳೆನಿಸಿದ ಅವರ ಎಲ್ಲ ಕಾದಂಬರಿಗಳನ್ನು ಓದಿದ್ದೇನೆ (ಹಲವನ್ನು ವಿವರಗಳಲ್ಲಿ ಮರೆತಿದ್ದೇನೆಂಬುದನ್ನೂ ಇಲ್ಲೇ ಕಾಣಿಸಿಬಿಡುವುದು ಒಳ್ಳೆಯದು). ಅವರ ಕತೆಗಾರನ ಜೀವನದಲ್ಲಿ ಆವರಣ ಅಂಥದ್ದೊಂದು ತಿರುವು, ದಿಕ್ಸೂಚಿ. ಆ ನಿಟ್ಟಿನಲ್ಲಿ ನೋಡಿದಾಗ ನಾನು ಹೇಳಿದ ಮಾತುಗಳು ಆವರಣ ಮತ್ತು ಅದರನಂತರ ಬಂದ/ಬರಬಹುದಾದ ಬರಹಗಳ ಒಟ್ಟಾರೆ ದಿಕ್ಕು ಧೋರಣೆ ಕುರಿತದ್ದೇ ಹೊರತು ನಿರ್ದಿಷ್ಟವಾಗಿ ಒಂದೋ ಎರಡೋ ಕಾದಂಬರಿ ಕುರಿದದ್ದಲ್ಲ. ಈ ದೃಷ್ಟಿಯಿಂದ "ಕಾದಂಬರಿಗಳು" ಎಂಬ ಪುಟ್ಟ ದೋಷವು ನಾನು ಹೇಳಬೇಕೆಂದಿದ್ದರ ದಿಕ್ಕನ್ನಂತೂ ತಪ್ಪಿಸಿಲ್ಲವೆಂದು ಸಮಾಧಾನಪಟ್ಟುಕೊಳ್ಳಬಲ್ಲೆ.

ಭೈರಪ್ಪನವರು ನಾನು ಬಹುವಾಗಿ ಮೆಚ್ಚಿಕೊಂಡ ಕತೆಗಾರರೆಂದು ನಾನು ಈಗಾಗಲೇ ಹೇಳಿದ್ದಾಗಿದೆ, ಮತ್ತು ಅವರ ಇತರ ಕಾದಂಬರಿಗಳನ್ನು ಮೆಚ್ಚುವ ಅದೇ ಸೂಕ್ಷ್ಮ ಮನಸ್ಸಿಗೆ ಆವರಣವನ್ನೋ, ಕವಲನ್ನೋ ಅಥವಾ ಅದೇ ಗುಂಪಿಗೆ ಸೇರಿದ ಮತ್ತೊಂದನ್ನೋ ಮೆಚ್ಚುವುದು ಅಸಾಧ್ಯ ಎಂದಷ್ಟನ್ನು ಮಾತ್ರ. ತಾವೇ ಹೇಳಿದಂತೆ ಆವರಣದ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿಹೋಗಿವೆಯಾದ್ದರಿಂದ, ಸಧ್ಯದ "ವಾತಾವರಣ"ಕ್ಕೆ ನನ್ನದೊಂದು ಕೊಡುಗೆ ನೀಡುವ ಅಗತ್ಯವಿಲ್ಲ. ಇನ್ನು ಆ "ವಾತಾವರಣ"ವನ್ನು ಅರಿಯುವುದಕ್ಕೆ ಭೈರಪ್ಪನವರ ಕಾದಂಬರಿಯ ಸಹಾಯವನ್ನಾಗಲೀ, ಭೈರಪ್ಪನವರ ಕಾದಂಬರಿಯನ್ನು ಓದಿ ಅರಿಯಲು ಮತ್ತೊಂದು ವಿಮರ್ಶಾಸಂಕಲನದ ಸಹಾಯವನ್ನಾಗಲೀ ಪಡೆಯುವ ಅಗತ್ಯ ನನಗೆ ಕಂಡಿಲ್ಲ. ಅಥವಾ ಅಲ್ಲಿಲ್ಲಿಂದ "ಸಾಮಗ್ರಿ"ಯನ್ನು ಹೆಕ್ಕಿ ತಂದು ಹೆಸರು ಮಾಡಿಕೊಳ್ಳಬೇಕೆಂಬ ತಹತಹಿಕೆಯಾಗಲೀ, ಅಥವ ಅಕಸ್ಮಾತ್ ತಮ್ಮಂಥ ತಿಳಿದವರು ತೋರಿಸಬಹುದಾದ ’ಹೋಲಿಕೆ’ಗಳನ್ನು ಮುಚ್ಚಿಡುವುದಕ್ಕೋಸ್ಕರ ಬರಹವನ್ನು ತಿದ್ದಿ ತೀಡುವ ಜರೂರಾಗಲೀ ಈ ಎಲೆಮರೆಕಾಯಿಯಂಥ ಬ್ಲಾಗಿಗೆ ಒದಗಿಲ್ಲ. ತಾವು ಹೇಳಿದ ಆ ಗೌರೀ ಲಂಕೇಶ ಎಂಬ ವ್ಯಕ್ತಿಯನ್ನು ನಾನು ನೋಡಿದ್ದಾಗಲೀ, ಅಥವಾ ಆಕೆಯ ಬರಹಗಳನ್ನೋ ಲಂಕೇಶರನಂತರದ ಲಂಕೇಶ್ ಪತ್ರಿಕೆಯನ್ನೋ ಓದಿದ್ದಾಗಲೀ ಇಲ್ಲವೆಂದಷ್ಟು ಮಾತ್ರ ತಮಗೆ ಹೇಳಬಲ್ಲೆ.

sriranga said...

ಸುನಾತ್ ಅವರಿಗೆ--ಭೈರಪ್ಪನವರ ಮೂರ್ನಾಲಕ್ಕು ಕಾದಂಬರಿಗಳನ್ನು ಅವಲೋಕಿಸಿ ಅವರ ಸುಮಾರು ಐವತ್ತು ವರ್ಷಗಳ ಸಾಹಿತ್ಯಿಕ ಜೀವನದ ಗೊತ್ತು ಗುರಿಗಳ ಅಜೆಂಡಾಗಳ ಬಗ್ಗೆ ತೀರ್ಪು ಕೊಡುವುದು ಸರಿಯೇ? ತಾವು ಭೈರಪ್ಪನವರ ಇದುವರೆಗಿನ ಕಾದಂಬರಿಗಳಲ್ಲಿ ಅತೀ ಮುಖ್ಯವಾದವುಗಳ ಹೆಸರನ್ನೂ ಸಹ ಹೇಳಿಲ್ಲ. ಉದಾಹರಣೆಗೆ ಗೃಹಭಂಗ,ಅನ್ವೇಷಣೆ, ಪರ್ವ,ತಂತು, ಮತ್ತು ಮಂದ್ರ. ಯಾವುದೇ ಒಬ್ಬ ಸಾಹಿತಿ/ಕಾದಂಬರಿಕಾರ ಬರೆದಿದ್ದೆಲ್ಲಾ ಯಾವಾಗಲೂ ಉತ್ತಮವಾಗೇ ಇರಬೇಕೆಂಬ ಓದುಗರ/ವಿಮರ್ಶಕರ ದೃಷ್ಟಿ/ಆಶಯದಿಂದಲೇ ಗೊಂದಲಗಳು ಪ್ರಾರಂಭವಾಗುತ್ತವೆ. ಇದು ಕೇವಲ ಭೈರಪ್ಪನವರಿಗೆ ಸಂಬಂಧಿಸಿದ ಪ್ರಶ್ನೆಯಲ್ಲ. ಇತರರಿಗೂ ಅನ್ವಯಿಸುತ್ತದೆ. ಇನ್ನು ತಾವು ಅನಂತಮೂರ್ತಿಯವರ ಪ್ರಸ್ತಾಪ ಮಾಡಿರುವುದು ನನಗೆ ಆಶ್ಚರ್ಯವೇನೂ ಆಗಿಲ್ಲ. ಭೈರಪ್ಪನವರ ಪ್ರಸ್ತಾಪ ಬಂದಾಗ ಅನಂತಮೂರ್ತಿಯವರು, ಅನಂತಮೂರ್ತಿಯವರದ್ದು ಬಂದಾಗ ಭೈರಪ್ಪನವರ presence ಇರಲೇಬೇಕಾದಂತಹ ಸಾಹಿತ್ಯ ಸಂಕಟದಲ್ಲಿ ವಿಮರ್ಶಕರು/ಓದುಗರು ತೊಳಲಾಡುತ್ತಿರುವುದಕ್ಕೆ ಮೂರ್ನಾಲಕ್ಕು ದಶಕಗಳ ''ಸಾಹಿತ್ಯದ ಇತಿಹಾಸ''ವಿದೆ. ಅನಂತಮೂರ್ತಿಯವರ ಕಥೆಗಳಲ್ಲಿನ ಗದ್ಯದ ಸೊಗಸು,ಚಿಂತಶೀಲ,ಸಾಂಸ್ಕೃತಿಕ ಲೇಖನಗಳಲ್ಲಿ ಮಿಂಚುವ ಅವರ ಪ್ರತಿಭೆ, ಎಂತಹ ಕಠಿಣ ವಿಷಯವನ್ನು ಬೇಕಾದರೂ ಸುಲಲಿತವಾಗಿ ಹೇಳುವ ಅವರ ಭಾಷೆಯ ಮೇಲಿನ ಹಿಡಿತ,ಬಾಗು,ಬೆಡಗು ಇವುಗಳನ್ನು ಅವರ ಕೆಲವು ಪತ್ರಿಕಾ ಹೇಳಿಕೆಗಳಿಂದ ಉಂಟಾಗುವ ವಿವಾದಗಳನ್ನೇ ಮುಂದುಮಾಡಿಕೊಂಡು ನಾವು ಮರೆಯಬಾರದು. ಬಹುಶಃ ಭೈರಪ್ಪನವರಂತೆಯೇ ಅನಂತಮೂರ್ತಿಯವರೂ ಸಹ ಬೇರೆ ಬೇರೆ ಕಾರಣಗಳಿಂದ misinterpretationಗೆ ಒಳಗಾಗಿದ್ದಾರೆ ಎಂದು ನನಗನಿಸುತ್ತದೆ --ಮು ಅ ಶ್ರೀರಂಗ ಬೆಂಗಳೂರು.

sunaath said...

ಶ್ರೀರಂಗರೆ,
ವಿಭಿನ್ನ ಸಾಹಿತಿಗಳನ್ನು ಹಾಗು ಅವರ ಸಾಹಿತ್ಯವನ್ನು ಜೊತೆಯಾಗಿಟ್ಟು ಪರೀಕ್ಷಿಸುವುದರಿಂದ, ಅವರ ಧೋರಣೆಗಳನ್ನು ಮತ್ತು ಅವರ ಶೈಲಿಯನ್ನು ಅರಿತುಕೊಳ್ಳಲು ಸಹಾಯವಾಗುತ್ತದೆ. ಆದುದರಿಂದ ಭೈರಪ್ಪ ಹಾಗು ಅನಂತಮೂರ್ತಿಯವರನ್ನು ಅಕ್ಕಪಕ್ಕದಲ್ಲಿಟ್ಟು ತೂಗಲು ನಾನು ಪ್ರಯತ್ನಿಸಿರುವುದು. ಇನ್ನು ‘ಲೋಕೋ ಭಿನ್ನರುಚಿ:’ ಎನ್ನುವುದು ಸಾಹಿತ್ಯಕ್ಕೆ ಸರಿಹೊಂದುವ ಮಾತು. ಏನೆ ಇರಲಿ, ನಿಮ್ಮ ಕಣ್ಣಿಗೆ ಬಿದ್ದ ತಕ್ಷಣ ನೀವು ಪ್ರತಿಕ್ರಿಯೆ ನೀಡಿದ್ದು ನನಗೆ ಸಮಾಧಾನವನ್ನು ತಂದಿದೆ. ನಿಮಗೆ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಯನ್ನು ನನ್ನ ಗಮನಕ್ಕೆ ತಂದು, ತಮ್ಮ ಪುಟದಲ್ಲಿ ಉತ್ತರಿಸಲು ನನಗೆ ಅವಕಾಶ ನೀಡುತ್ತಿರುವ ಶ್ರೀ ಮಂಜುನಾಥ ಕೊಳ್ಳೇಗಾಲ ಅವರಿಗೂ ನಾನು ಕೃತಜ್ಞನಾಗಿದ್ದೇನೆ.