Sunday, September 12, 2010

ಪರಪ್ಪನ ಅಗ್ರಹಾರ

ಇಲ್ಲ, ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಬಗೆಗಿನ ಲೇಖನವಲ್ಲ ಇದು.

ಗೂಗಲ್ ಬಝ್ ನಲ್ಲಿ ಗೆಳೆಯ ಬರತ್ ಕುಮಾರ್ "ಪರಪ್ಪನ ಅಗ್ರಹಾರ"ದ ಮೂಲದ ವಿಶ್ಲೇಷಣೆ ಮಾಡಿದ್ದರು. ಅವರ ಪ್ರಕಾರ:

ಪಾರ್ = ನೋಡಿಕೊಳ್ಳು = look after.... ಪಾರ್ + ಅಪ್ಪ => ಎಲ್ಲರನ್ನು ನೋಡಿಕೊಳ್ಳುವ ಅಪ್ಪ ==> ದೇವರು
ಪಾರಪ್ಪ = ದೇವರು = ಕಡವ

ಅದಕ್ಕೆ ಹಂಸಾನಂದಿಗಳ ಪ್ರತಿಕ್ರಿಯೆ ಹೀಗಿತ್ತು:

ಪಾರು (ಮಾಡುವ, ಗಾಣಿಸುವ) ಅಪ್ಪ -> ದಾಟಿಸುವ ಅಪ್ಪ = ದೇವರು
ಹೀಗಿರಬಾರದೇಕೆ ? ಪಾರು ಅನ್ನೋದಕ್ಕೆ ತಮಿಳಿನಲ್ಲಿ ನೋಡು ಅನ್ನುವ ಅರ್ಥವಿದ್ದರೂ, ಕನ್ನಡದ ಆಡು ಮಾತಿನ ಬಳಕೆಯಲ್ಲಿ ಅದು ಇರುವುದು ನನಗೆ ನೆನಪಿಗೆ ಬರುತ್ತಿಲ್ಲ.

ಇದೇ ರೀತಿ ಪಾರ್ವ, ಹಾರುವ -ಇಲ್ಲೂ ದಾಟು ಅನ್ನುವ ಅರ್ಥವೇ ಇರುವುದನ್ನೂ ಗಮನಿಸಬಹುದು.

ಇದಕ್ಕೆ ನನ್ನ ಪ್ರತಿಕ್ರಿಯೆ ಇದಾಗಿತ್ತು:

ಪಾರು ಅನ್ನುವುದಕ್ಕೆ ಕನ್ನಡದಲ್ಲೂ ನೋಡು (rather (ಕೊನೆಮುಟ್ಟಿಸುವಂತೆ) ನೋಡಿಕೋ, take care) ಅನ್ನುವುದೇ ಅರ್ಥ (ಪಾರು+ಪತ್ತೆ=ಪಾರುಪತ್ತೆ/ಪಾರುಪತ್ಯೆ). ತಮಿಳಿನಲ್ಲೂ ಇದು ಇದೇ ಅರ್ಥದಲ್ಲಿ ಬಳಕೆಯಲ್ಲಿದ್ದು ಅಮೇಲಾಮೇಲೆ ನೋಡು ಎನ್ನುವ ಸಾಮಾನ್ಯಾರ್ಥವೂ ದಕ್ಕಿದಂತೆ ತೋರುತ್ತದೆ.

ಇನ್ನು ಅಪ್ಪ ಅನ್ನುವುದು ಅದರ ಹಿಗ್ಗಿಸಿದ ಅರ್ಥದಲ್ಲಿ ದೇವರು ಎಂದಾದರೂ ಅದನ್ನು ಅಷ್ಟು ಹಿಗ್ಗಿಸುವ ಅಗತ್ಯವೇ ಇಲ್ಲ ಎನ್ನಿಸುತ್ತದೆ. ಪಾರು + ಅಪ್ಪ = ಪಾರುಪತ್ತೇದಾರ, ಯಜಮಾನನ ಅಗ್ರಹಾರ, sounds more practical interpretation

ಈ ಚರ್ಚೆ ನನ್ನಲ್ಲೆಬ್ಬಿಸಿದ ಆಲೋಚನಾತರಂಗಗಳ ಲೇಖನರೂಪವೇ ಇದು.

ಪಾರು (=ನಾಮಪದ: ಗಡಿ/ಸೀಮೆ; ಕ್ರಿಯಾಪದ: ಗಡಿದಾಟು) ಎನ್ನುವುದು ಪಾರ ಎನ್ನುವ ಸಂಸ್ಕೃತ ಶಬ್ದದಿಂದ ಬಂದಂತೆನಿಸುತ್ತದೆ. ಇದು ಸಂಸ್ಕೃತದ "ಪರ್" ಧಾತುವಿನಿಂದ ಬಂದಿರಬೇಕು. ಪರ ಅಂದರೆ, ಹೊರಗಿನದ್ದು. ಪಾರ = "ಸ್ವ" ವನ್ನು "ಪರ"ದಿಂದ ಬೇರ್ಪಡಿಸುವ ಸೀಮಾರೇಖೆ/ಗಡಿ (ವರ-ವಾರ; ಭರ-ಭಾರ; ಧರ-ಧಾರ ಇತಿವತ್); ಅಪಾರ = ಪಾರವಿಲ್ಲದ್ದು, ಬಹುಪಾರ = ಅನೇಕ ಗಡಿಯುಳ್ಳದ್ದು/ವಿಸ್ತಾರವಾದ ಗಡಿಯುಳ್ಳದ್ದು; ವ್ಯಾಪಾರ (ವಿ+ಆಪಾರ) = ಗಡಿಯಾಚಿನ ವ್ಯವಹಾರ (ಆಮದು), ಇತ್ಯಾದಿ ಸಂಸ್ಕೃತ ಪದಗಳನ್ನು ಗಮನಿಸಿ.

ಮನುಷ್ಯನ ಮೂಲಭೂತ ಅಡಚಣೆ/ಪರಿಮಿತಿಯೇ ವೇಗ. ಈ ಅಡಚಣೆಯೇ ಅವನ ಮಿತಿ/ಪಾರ. ಅದನ್ನು ದಾಟಬೇಕಾದರೆ ಮೇಲೆ ನೆಗೆಯಬೇಕು. ಆದ್ದರಿಂದ ಈ ಲಂಘನೆಯೇ "ಪಾರು"/"ಹಾರು" ಆಗಿರಬೇಕು. (ಪಾರ್ವ/ಹಾರುವ ಗಮನಿಸಿ. ಅದರ ಅರ್ಥ "ಹಾರಾಡು"ವವನಲ್ಲ, ಬದಲಿಗೆ ದಾಟುವವನು) ಆದ್ದರಿಂದ ಪಾರು ಎಂಬುದಕ್ಕೆ ಗಡಿದಾಟುವಂತೆ ನೆಗೆ/ದಾಟು ಎಂಬ ಅರ್ಥವಿದ್ದು, ಅದರಲ್ಲಿ ಬಲವೂ ವೇಗವೂ ಸೇರಿರುವುದರಿಂದ ಮುಂದೆ ಪಾರು ಎಂಬ ಪದಕ್ಕೆ ವೇಗವಾಗಿ ಚಲಿಸು ಎಂಬ ಅರ್ಥ ದೊರಕೊಂಡಂತೆ ತೋರುತ್ತದೆ. ಆದ್ದರಿಂದಲೇ ಕೇವಲ ನೆಗೆತವಲ್ಲದ ಹಕ್ಕಿಯ ಸ್ವಚ್ಛಂದ ಹಾರಾಟವೂ "ಪಾರು"/"ಹಾರು" ಎಂದೇ ಸೂಚಿತವಾಯಿತು. ಇನ್ನು ತೆಲುಗಿನ ಪಾರು = ಬಹುವೇಗವಾಗಿ ಓಡು ಎಂಬ ಪ್ರಯೋಗವನ್ನೂ ಗಮನಿಸಬಹುದು. ಇಲ್ಲೆಲ್ಲಾ ಒತ್ತು ಗಮ್ಯವನ್ನು ತಲುಪುವುದೇ.

ಅದೇನೇ ಇರಲಿ, ಹೀಗೆ ಗಮ್ಯವನ್ನು ತಲುಪಿಸುವ (ಕಾಣಿಸುವ) ಜವಾಬ್ದಾರಿಗೆ ಕನ್ನಡದಲ್ಲಿ "ಪಾರಗಾಣಿಸು", "ಪಾರುಪತ್ತೆ ನೋಡು" ಇತ್ಯಾದಿ ಬಳಕೆಯಿದೆ. ಜವಾಬ್ದಾರಿ ನಿರ್ವಹಿಸುವುದಕ್ಕೆ "ನೋಡಿಕೋ, ನೋಡು" ಎಂಬ ಬಳಕೆ ತಮಿಳಿನಲ್ಲೂ ಇರುವುದರಿಂದ ಕನ್ನಡದ ಪಾರಗಾಣು ಎನ್ನುವದಕ್ಕೆ ಸಮಾನಾರ್ಥಕವಾದ "ಪಾರಂಗಾಮಿಚ್ಚು/ಪಾರಂಗಾಣ್" ಎಂಬ ಬಳಕೆ ಮುಂದೆ ಚುಟುಕಾಗಿ "ಪಾತ್ತುಕೋ/ಪಾರ್" ಎಂದಾದಂತೆಯೂ, ಅದರ "ನೋಡಿಕೋ (look after)" ಎನ್ನುವ ಅರ್ಥದಿಂದ ಮುಂದೆ ಪಾತ್ತುಕೋ ಎನ್ನುವುದರ ಧಾತುವಾದ "ಪಾರ್" ಎನ್ನುವುದಕ್ಕೆ ನೋಡು ಎಂಬ ಸಾಮಾನ್ಯಾರ್ಥ ಬಂದಂತೆಯೂ ಕಾಣುತ್ತದೆ.

ಈ ಭಾಷಾಸಾಮ್ಯಗಳನ್ನು ಗಮನಿಸಿದಾಗ ತಮಿಳಿನ ಪಾರ್ ಎನ್ನುವುದರ ಇವತ್ತಿನ ಅರ್ಥ "ನೋಡು" ಮೂಲತಃ ಕನ್ನಡದಿಂದ ತಮಿಳಿಗೆ ಹೋದಂತೆಯೂ, ಹಾರು ಎನ್ನುವ ಅರ್ಥ ಕನ್ನಡ/ತೆಲಗು ದ್ರಾವಿಡಮೂಲದ್ದಾದರೂ ಭೌತಿಕ ಪದ ಸಂಸ್ಕೃತ ಮೂಲದಿಂದ ದ್ರಾವಿಡಕ್ಕೆ ಬಂದಂತೆಯೂ ಕಾಣುತ್ತದೆ.

ಅಷ್ಟಾದರೂ ಇಲ್ಲೇ ಹುಟ್ಟಿ ಬೆಳೆದು ನೆಲೆನಿಂದ "ಪಾರಪ್ಪ/ಪರಪ್ಪ" ನಮ್ಮವನೇ ಎನ್ನಲಡ್ಡಿಯಿಲ್ಲ. ಆದರೆ ಪರಪ್ಪನ ಅಗ್ರಹಾರ ನಮ್ಮದೆಂದರೆ ಮಾತ್ರ ತುಸು ಇರುಸುಮುರುಸಾಗಬಹುದೇನೋ.

Tuesday, September 7, 2010

ನಾನೇಕೆ ಬರೆಯುವುದಿಲ್ಲ

ನಾನು ಕೈಯಲ್ಲಿ ಪೆನ್ನೋ ಪುಸ್ತಕವೋ ಹಿಡಿದು ಎಷ್ಟುದಿನವಾಯಿತು? ತಿಂಗಳು? ವರ್ಷ?

ದಿನಬೆಳಗಾದರೆ ಬೇಕಾದಷ್ಟು ಪೇಪರುಗಳನ್ನು "ಹ್ಯಾಂಡಲ್" ಮಾಡುತ್ತೇನೆ, ಪೆನ್ನು ಹಿಡಿದು ಅನೇಕ ಸಹಿ ಹಾಕುತ್ತೇನೆ, ನೋಟ್ ಪ್ಯಾಡ್ ಹಿಡಿದು ಅನೇಕ "ನೋಟು"ಗಳನ್ನು ಬರೆದುಕೊಳ್ಳುತ್ತೇನೆ, ಅಲ್ಲ, ನಾನು ಅದರ ಬಗ್ಗೆ ಮಾತಾಡುತ್ತಿಲ್ಲ. ನಾನು ಹೇಳುತ್ತಿರುವುದು serious ಆದ ಓದು-ಬರಹದ ಬಗ್ಗೆ. ಸುಮಾರು ಒಂದು ಸಾವಿರದಷ್ಟಿರುವ ನನ್ನ ಪುಸ್ತಕ ಸಂಗ್ರಹ ಎರಡು ಮೂರುಕಡೆ ಹಂಚಿಹೋಗಿದೆ, ಈ ಎರಡು-ಮೂರು ವರ್ಷದಲ್ಲಿ ನಾನು ಅದರಲ್ಲಿ ಒಂದು ಪುಸ್ತಕವನ್ನೂ ಮುಟ್ಟಿದಂತಿಲ್ಲ, ಹಾಗೆಂದು ನನ್ನ ಓದುವ ಹವ್ಯಾಸವೇನು ಬಿಟ್ಟಿಲ್ಲ. ಅಂತರ್ಜಾಲದಲ್ಲಿ ಯಾವಾಗಲೂ ಅದು ಇದು ಓದುತ್ತಲೇ ಇರುತ್ತೇನೆ. ಇನ್ನು ಬರೆಯುವ ವಿಷಯಕ್ಕೆ ಬಂದರೆ, ನಾನು ಪೆನ್ನು ಪೇಪರು ಉಪಯೋಗಿಸಿ ಬರೆದ ಕೊನೆಯ ಬರಹವೆಂದರೆ ಅದೊಂದು ಕವನ, "ಶ್ರಾವಣ ಮುಗಿದಮೇಲೊಂದು ಸಂಜೆ", ೨೦೦೭ ಸೆಪ್ಟೆಂಬರಿನಲ್ಲಿ - ಸುಮಾರು ಹತ್ತಿರ ಹತ್ತಿರ ಮೂರು ವರ್ಷ. ಅದಾದಮೇಲೆ ಮತ್ತೆ ಎರಡು ಕವನ, ಮತ್ತು ಸುಮಾರು ಇಪ್ಪತ್ತೋ ಇಪ್ಪತ್ತೆರಡೋ ಬರಹಗಳನ್ನು 'ಬರೆ'ದೆ, ಆದರೆ ಅವೆಲ್ಲಾ ನಿಜಕ್ಕೂ ಬರೆದಿದ್ದಲ್ಲ, ನೇರವಾಗಿ ಬ್ಲಾಗಿನಲ್ಲಿ ಟೈಪು ಮಾಡಿದ್ದು! ನನ್ನ ಬರಹಗಳನ್ನೆಲ್ಲಾ ಸಂಗ್ರಹಿಸಿಡಲು ಒಂದು ಪುಸ್ತಕವನ್ನಿಟ್ಟಿದ್ದೆ. ಅದರಲ್ಲಿ ಕೊನೆಯದಾಗಿ ದಾಖಲಾಗಿರುವುದು ಈ ಕವನವಷ್ಟೇ. ಹಾಗಾದರೆ ನಿಜಕ್ಕೂ ಬರೆಯುವ ಹವ್ಯಾಸ ತಪ್ಪಿಹೋಗಿದೆಯೇ? ಬ್ಲಾಗಿಂಗ್ ಎಂಬ ಅಂತರ್ಜಾಲ ಬರಹದ ತಂತ್ರ ಜನಪ್ರಿಯಗೊಳ್ಳುತ್ತಿದ್ದಂತೆ ನಮ್ಮ ಬರಹಗಾರರನೇಕರು ಬ್ಲಾಗುಗಾರರಾಗಿಬಿಟ್ಟಿದ್ದಾರೆ. ಹೊಸ ಹೊಸ ಬ್ಲಾಗುಗಳು ಹುಟ್ಟಿಕೊಳ್ಳುತ್ತಿವೆ, ಬ್ಲಾಗಿಗರ ದೊಡ್ಡ ಪಡೆಯೇ ಸಿದ್ಧವಾಗಿದೆ. ಬರಹದ ಬಳಕೆ ತಪ್ಪಿದ್ದು ನನ್ನೊಬ್ಬನ ಅನುಭವವಲ್ಲ. ನೀವು ಇತರ ಬ್ಲಾಗಿಗರನ್ನು ಕೇಳಿನೋಡಿ, ಅವರಲ್ಲಿ ಬಹುತೇಕರ ಅನುಭವ ಇದೇ ಆಗಿರುತ್ತದೆ. ಬರೆಯುವಷ್ಟಿಲ್ಲ, ಬರೆದದ್ದನ್ನು ಹೊಡೆದುಹಾಕುವಷ್ಟಿಲ್ಲ, ಮತ್ತೊಮ್ಮೆ "ನೀಟ್" ಪ್ರತಿ ಮಾಡುವಷ್ಟಿಲ್ಲ; ಸುಮ್ಮನೇ ಮನಸ್ಸಿಗೆ ತೋಚಿದ್ದನ್ನು draft modeನಲ್ಲಿ 'ಗೀಚಿ'ಇಟ್ಟಿದ್ದರಾಯಿತು. ಮತ್ತೆ ಮನಬಂದಾಗ ಮನಬಂದಷ್ಟು ಬಾರಿ ಅದನ್ನು edit ಮಾಡಿ, ತೃಪ್ತಿಯೆನಿಸಿದಾಗ ಪ್ರಕಟಿಸಿದರಾಯಿತು. ಪತ್ರಿಕೆಗಳಿಗೆ ಕಳಿಸಬೇಕಾದರೂ ಬರೆಯಬೇಕಿಲ್ಲ. ಸುಮ್ಮನೇ copy & paste ಮಾಡಿ e-ಅಂಚೆಯಲ್ಲಿ ಕಳಿಸಿಬಿಟ್ಟರಾಯಿತು. ಮರುಕ್ಷಣ ಅದು ಸಂಪಾದಕನ ಬುಟ್ಟಿಯಲ್ಲಿ (ಅಥವಾ ಕಸದ ಬುಟ್ಟಿಯಲ್ಲಿ - ಅದೂ e-ಬುಟ್ಟಿಯೇ!) ಬಿದ್ದಿರುತ್ತದೆ. ಎಂದರೆ "ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ, ಪದವಿಟ್ಟಳುಪದೊಂದಗ್ಗಳಿಕೆ... ಬಳಸಿ ಬರೆಯಲು ಕಂಠಪತ್ರದ ಉಲುಹು ಕೆಡದಗ್ಗಳಿಕೆ" ಎಂದೆಲ್ಲಾ ಕುಮಾರವ್ಯಾಸನು ಅಷ್ಟು ಹೊಗಳಿಕೊಂಡದ್ದನ್ನು ನಾವು ಪ್ರಯತ್ನವೇ ಇಲ್ಲದೇ ಸಾಧಿಸಿಬಿಟ್ಟೆವೇ?

ಖ್ಯಾತ ಲೇಖಕ-ಕತೆಗಾರ ರಸ್ಕಿನ್ ಬಾಂಡ್ ರನ್ನು ಪತ್ರಕರ್ತರೊಬ್ಬರು ಕೇಳಿದರಂತೆ "ಕಂಪ್ಯೂಟರ್, ಇಂಟರ್ ನೆಟ್ ಇತ್ಯಾದಿ ತಾಂತ್ರಿಕ ಪ್ರಗತಿಯ ಈ ಯುಗದಲ್ಲೂ ನೀವಿನ್ನೂ ಒಂದು ನೋಟ್ ಪ್ಯಾಡು ಪೆನ್ಸಿಲು ಹಿಡಿದಿರುವಿರಲ್ಲ, ಅದಕ್ಕೇನು ಕಾರಣ?" ತುಸು ಯೋಚಿಸಿ ಬಾಂಡ್ ಹೇಳಿದರಂತೆ, "ನೋಡೀ, ಬರೆಯುವಾಗ ಏನೂ ಹೊಳೆಯದಿದ್ದರೆ, ನಾನು ಪೆನ್ಸಿಲಿನ ತುದಿಯನ್ನು ಬಾಯಲ್ಲಿ ಹಾಕಿ ಕಚ್ಚುತ್ತಿರುತ್ತೇನೆ, ಕಂಪ್ಯೂಟರನ್ನು ಹಾಗೆ ಕಚ್ಚಲು ಬರುವುದಿಲ್ಲ"

ತುಸು ಸೂಕ್ಷ್ಮವಾಗಿ ನಿರುಕಿಸಿ ನೋಡಿದರೆ, ಬರೆಯುವ ಕ್ರಿಯೆಗೆ ಭೌತಿಕ ಸಾಧನಗಳಾದ ಪೆನ್ಸಿಲು ಪೇಪರು ಇತ್ಯಾದಿಗಳು ದೊರಕಿಸಿಕೊಡುವ ಅದೊಂದು ಬಗೆಯ ಆಪ್ಯಾಯತೆಯನ್ನು ಸೂಚಿಸುತ್ತವೆ ಈ ಮಾತುಗಳು. ಬರೆಯುವವನಿಗೆ ಪೆನ್ನು ಪೇಪರು ಕೇವಲ ಸಲಕರಣೆಯಲ್ಲ, ಆತ್ಮೀಯ ಸಂಗಾತಿ. ಅದರೊಡನೆ ನೀವು ಯಾವ ಸಲುಗೆಯನ್ನು ಬೇಕಾದರೂ ತೆಗೆದುಕೊಳ್ಳಬಹುದು. ಅದರಮೇಲೆ ನಿಮ್ಮ ಸಂಪೂರ್ಣ ನಿಯಂತ್ರಣವಿದೆ. ಅದನ್ನು ಹಿಡಿದೇ ನೀವು ಬರೆಯುವುದನ್ನು ಕಲಿತಿದ್ದೀರಿ. ಕಂಪ್ಯೂಟರಿನ ಕೀಬೋರ್ಡ್ ಮೇಲೆ ನೀವು ಹೇಗೇ ಬಡಿದರೂ ಆಯಾ ಅಕ್ಷರ ಆಯಾರೀತಿಯೇ ಅಚ್ಚಾಗುತ್ತದೆ. ಆದರೆ ನಿಮ್ಮ ಲೇಖನಿ ಹಾಗಲ್ಲ. ನಿಮ್ಮ ಕೈಬರಹ ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ, ನಿಮ್ಮ ವ್ಯಕ್ತಿತ್ವ ನಿಮ್ಮ ಬರಹವನ್ನು ರೂಪಿಸುತ್ತದೆ. ಅದಕ್ಕೆಂದೇ 'ಬರಹ'ಕ್ಕೆ ನಮ್ಮ ವಿದ್ಯಾಭ್ಯಾಸಕ್ರಮದಲ್ಲಿ ಇವತ್ತಿಗೂ ಅತಿ ಪ್ರಮುಖ ಸ್ಥಾನ. ಬರಹ "ದುಂಡಗೆ"ಇಲ್ಲವೆಂದು ಕೈ ಗಿಣ್ಣಿನ ಮೇಲೆ ಹೊಡೆಯುತ್ತಿದ್ದ ನಮ್ಮ ಮೇಷ್ಟ್ರು ಇವತ್ತೂ ನಮಗೆ ಪೂಜನೀಯರು. ಬರಹದ ಬಳಕೆ ತಪ್ಪಿಹೋಗಿ ಇವತ್ತಿನ ನನ್ನ hand writing ನೋಡಿದರೆ ಮನಸ್ಸಿಗೆ ಪಿಚ್ಚೆನಿಸುತ್ತದೆ. ಬರಹವು ಭಾಷೆಯೊಡನೆಯೇ ಬೆಳೆಯಿತಲ್ಲವೇ? ವಿವಿಧ ಜನಾಂಗಗಳ ಮಾತು-ಬರಹಗಳ ಬಳಕೆಯ ಸೌಲಭ್ಯಪ್ರಜ್ಞೆಯನ್ನನುಸರಿಸಿಯೇ ತಾನೇ ಇವತ್ತು ಇಷ್ಟೊಂದು ಭಾಷೆ, ಇಷ್ಟೊಂದು ಲಿಪಿ. ಅದಕ್ಕಲ್ಲವೇ ಇಂಗ್ಲಿಷಿನ R ಮತ್ತು ದೇವನಾಗರಿಯ र ಅಷ್ಟೊಂದು ಬೇರೆಯಾಗಿ ಬೆಳೆದದ್ದು? ಅದಕ್ಕಲ್ಲವೇ ವಿವಿಧ ಭಾಷೆಗಳ ನಡುವಿನ ಇಷ್ಟೊಂದು ಸಾಮ್ಯ-ವ್ಯತ್ಯಾಸಗಳು. ಮಾತಿನಂತೆಯೇ ಬರಹ ನಿರಂತರ ಚಲನಶೀಲ. ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ ಪರಿವರ್ತನೆಹೊಂದುತ್ತಾ, ಎರಡು ವಿಭಿನ್ನ ಕಾಲಘಟ್ಟಗಳಲ್ಲಿ, ದೇಶಮಾನಗಳಲ್ಲಿ ಬೇರೆಯೇ ಆಗಿಬಿಡುತ್ತದೆ. ಆದ್ದರಿಂದ ಲಿಪಿಯೊಂದರ ಅವತಾರ ಜನಾಂಗವೊಂದರ ಬರೆಯುವಿಕೆಯ ವೈಶಿಷ್ಟ್ಯದ ಮೇಲೆ ಅವಲಂಬಿಸಿರುತ್ತದೆ. ಬರೆಯುವುದನ್ನು ನಿಲ್ಲಿಸಿ ಇರುವ ಲಿಪಿಯನ್ನು ಮುದ್ರಣಕ್ಕೆ ಅಳವಡಿಸಿ ಅದನ್ನು "standardise" ಮಾಡಿದ ಮೇಲೆ ಹೊಸ ಲಿಪಿಗಳು ಇನ್ನೆಲ್ಲಿ? ಅದರಿಂದಲೇ ಬಹುಶಃ ಮುದ್ರಣ ಮಾಧ್ಯಮ ಅಸ್ತಿತ್ವಕ್ಕೆ ಬಂದಮೇಲೆ ಮತ್ತಾವುದೂ ಹೊಸ ಲಿಪಿ ಬೆಳೆಯಲೇ ಇಲ್ಲವೇನೋ, ಬೆಳೆಯುವುದೂ ಇಲ್ಲವೇನೋ!

ಒಂದು ಕಂಪ್ಯೂಟರು ಸಾವಿರ ಪುಸ್ತಕಗಳನ್ನು ಅಡಗಿಸಿಕೊಂಡಿರಬಹುದು, ಆದರೆ ಅದನ್ನು ಪುಸ್ತಕವೆನ್ನಲಾದೀತೇ? ಸಾವಿರ ಪುಸ್ತಕಗಳನ್ನು ಹೊದಿಕೆ ಹೊಚ್ಚಿ ಒಪ್ಪಗೊಳಿಸಿ ಶೋಕೇಸಿನಲ್ಲಿಡುವಂತೆ ಕಂಪ್ಯೂಟರನ್ನು ಇಡಲಾದೀತೇ? ಕಂಪ್ಯೂಟರು ಯಾರಬಳಿಯಾದರೂ ಇರಬಹುದು. ಆದರೆ ಅದರ ಹೂರಣ ಹೊರಗೆ ಕಾಣುತ್ತದೆಯೇ? ಅದರಲ್ಲಿ ಪುಸ್ತಕಗಳೇ ಇರಬಹುದು, ಕೆಲಸಕ್ಕೆ ಬಾರದ ಮತ್ತೇನೇ ಇರಬಹುದು, ಅದೇನಿದ್ದರೂ ಅದು ಕಂಪ್ಯೂಟರ್ ಆಗಿಯೇ ಉಳಿಯುತ್ತದೆಯೇ ಹೊರತು ಅದರ ಹೂರಣವೇ ಅದಾಗಲಾರದು. ಇವತ್ತಿಗೂ ನಾವು ಸರಸ್ವತಿಯೆಂದು ಪುಸ್ತಕವನ್ನು ಪೂಜಿಸುತ್ತೇವೆಯೇ ಹೊರತು ಕಂಪ್ಯೂಟರನ್ನಲ್ಲ. ಕಂಪ್ಯೂಟರಿನ ಬಳಕೆಯಿಲ್ಲದ ನನ್ನ ಲೇಖಕಮಿತ್ರರೊಬ್ಬರು ಅವರ ಎರಡುಸಾವಿರ ಪುಸ್ತಕಗಳ ಲೈಬ್ರರಿಯಲ್ಲಿ (ಸದಾ ಸ್ವಚ್ಛ) ಟೇಬಲಿನ ಮೇಲೆ ಲಕ್ಷಣವಾಗಿ ಒಂದು ಹದಿನೈದಿಪ್ಪತ್ತು ಬಿಳೀ ಹಾಳೆಗಳನ್ನೊಳಗೊಂಡ ಒಂದು ಬರಹದ ಪ್ಯಾಡ್ ಮತ್ತು ಒಂದು ಪೆನ್ನು ಸಿದ್ಧವಾಗಿ ಇಟ್ಟಿರುತ್ತಾರೆ. ಅಲ್ಲಿ ಕುಳಿತು ಬರೆಯುವುದೇ ಒಂದು ಆನಂದ (ತಲೆಗೆ ಏನಾದರು ಹೊಳೆದರೆ). ಹೀಗೆ ಹೇಳುವಾಗ ನ್ಯೂಸ್ ಪೇಪರಿನ ಅನಿವಾರ್ಯತೆ ಕುರಿತ ಜಾಹೀರಾತೊಂದು ನೆನಪಿಗೆ ಬರುತ್ತದೆ. ನ್ಯೂಸ್ ಪೇಪರನ್ನು ಶೌಚಾಲಯದಲ್ಲಿ ಕೂಡ ಕೂತು ತೆರೆದು ಓದಬಹುದು, ಆದರೆ e-ಪತ್ರಿಕೆಯನ್ನು ಹಾಗೆ ಓದಬರುವುದಿಲ್ಲ ಎನ್ನುತ್ತದೆ ಆ ಜಾಹೀರಾತು (ಅಪವಾದವೆಂದರೆ, ನನ್ನ ಸಹೋದ್ಯೋಗಿಯೊಬ್ಬ ಲ್ಯಾಪ್ ಟಾಪ್ ತೆಗೆದುಕೊಂಡು ಶೌಚಕ್ಕೆ ಹೋಗಿ ಅಲ್ಲೇ ಕೂತು ದಿನ'ಪತ್ರಿಕೆ' ಓದಿ ಮುಗಿಸಿ ಬರುತ್ತಿದ್ದನೆನ್ನಿ).

ಅದೆಷ್ಟೇ ಅನುಕೂಲವಾದರೂ ಈ ಕಂಪ್ಯೂಟರ್, ಲ್ಯಾಪ್ ಟಾಪ್, ಇತ್ಯಾದಿ ಸಾಧನಗಳು ನಿಮ್ಮಿಂದ ಅದೊಂದುಬಗೆಯ 'ಮರ್ಯಾದೆ'ಯನ್ನು ನಿರೀಕ್ಷಿಸುತ್ತದೆ. ಲ್ಯಾಪ್ ಟಾಪ್ ಅನ್ನು ಎಲ್ಲೆಂದರಲ್ಲಿ ಹೊತ್ತೊಯ್ಯುವಂತಿಲ್ಲ; ಅದಕ್ಕೆ ವಿದ್ಯುತ್ ಸರಬರಾಜು ಬೇಕು, ಅದಿಲ್ಲದಿದ್ದರೂ ಅದರ ಬ್ಯಾಟರಿ ಜೀವನ ಒಂದೋ ಎರಡೋ ಗಂಟೆಗಳು. ಅಷ್ಟರೊಳಗೆ ನಿಮ್ಮ 'ಓದು/ಬರಹ'ದ ಕರ್ಮವನ್ನು ಮುಗಿಸಿ ಬರಬೇಕು; ಇಲ್ಲವೆಂದರೆ ಲ್ಯಾಪ್ ಟಾಪ್ ನೊಂದಿಗೆ ಅದರ ಸಕಲ ಪರಿಕರಗಳನ್ನೂ ಹೊತ್ತೊಯ್ಯಬೇಕು, ಹೋದರೂ ಅಲ್ಲೆಲ್ಲಾದರೂ ವಿದ್ಯುತ್ ಪೂರೈಕೆ ಇರುವ ಜಾಗೆಯಲ್ಲೇ ಕುಳಿತು ಬರೆಯಬೇಕು; ನಮ್ಮಿಷ್ಟಬಂದಂತೆ ಬೆಟ್ಟವೋ, ಕಾಡೋ ನದಿಯೋ ಎಲ್ಲೆಂದರೆ ಅಲ್ಲಿ ಕೂಡುವಂತಿಲ್ಲ. ಅದರಲ್ಲೂ, ಅದನ್ನು ಎಲ್ಲೆಂದರೆ ಅಲ್ಲಿ ಇಡುವಂತಿಲ್ಲ. ಟೇಬಲ್ಲೇ ಆಗಬೇಕು, ಇಲ್ಲವೆಂದರೆ ನಿಮ್ಮ ತೊಡೆ; ಅದನ್ನು ಇಡುವ ರೀತಿಯೋ ಅಷ್ಟೇ - ಅದರ ಫ್ಯಾನಿನ ಗಾಳಿಗೆ ಅಡಚಣೆ ಬರಬಾರದು, ಇಲ್ಲವೆಂದರೆ ಲ್ಯಾಪ್ ಟಾಪ್ ಬಿಸಿಯೇರಿ ನಿಂತೇಹೋಗಿಬಿಡುತ್ತದೆ. ಬರಹದ ಸಿದ್ಧತೆಯೇ ಇಷ್ಟು ಔಪಚಾರಿಕವಾಗಿಬಿಟ್ಟರೆ, ಬರಹ ಹೊಮ್ಮುವುದೆಂತು? ಈ ಬರಹದ ಸ್ಪೂರ್ತಿಯೋ, ಬೇರೆಲ್ಲ ಸ್ಪೂರ್ತಿಗಳಂತೆಯೇ ಅದೂ ಕೂಡ, ಹೊತ್ತಿಲ್ಲ ಗೊತ್ತಿಲ್ಲ. ಮನಸ್ಸಿಗೆ ಬಂದಾಗ ಮೇಲೇರಿ ಸವಾರಿ ಮಾಡುತ್ತದೆ. ಆಗ ಬಂದ ಹದ ಮತ್ತೊಮ್ಮೆ ಬರದು. "ಸದಮಲ ಜ್ಞಾನದ ಕುದಿ ಉಕ್ಕಿ ಬರುವಾಗ ನದರಿಟ್ಟು ನಿನ್ನೊಳು ಸದಮಲ ತತ್ವದಿ ಬರಕೋ ಪದಾ ಬರಕೋ" ಅನ್ನುತ್ತಾನೆ ಶಿಶುನಾಳ ಶರೀಫ. ಅದನ್ನು ಗುರುತು ಹಾಕಿಕೊಳ್ಳಬೇಕೆಂದು ಲ್ಯಾಪ್ ಟಾಪ್ ಶುರುಮಾಡುತ್ತಾ ಕುಳಿತುಕೊಳ್ಳುವುದುಂಟೇ? ಆದರೆ ಪೇಪರು ಪೆನ್ಸಿಲಿನ ವಿಷಯ ಹಾಗಲ್ಲ. ಅದನ್ನು ಪಕ್ಕದಲ್ಲೇ ಇಟ್ಟುಕೊಳ್ಳಬಹುದು, ಇಲ್ಲದಿದ್ದರೂ ಎದ್ದುಹೋಗಿ ಒಂದು ಪೇಪರು ಪೆನ್ಸಿಲು ತಂದು ಬರೆದುಕೊಳ್ಳಬಹುದು. ಪೇಪರಿನ ಕಂತೆಯನ್ನು ಕಿಸೆಯಲ್ಲಿ ತುರುಕಿಕೊಂಡು, ಪೆನ್ಸಿಲನ್ನು ಕೊನೆಗೆ ಕಿವಿಯಲ್ಲಿ ಕೂಡ ಸಿಕ್ಕಿಸಿಕೊಂಡು ಎಲ್ಲಿ ಬೇಕಾದರೂ ಹೋಗಬಹುದು. ನೀವು ಬರೆಯಲೆಂದೇ ಎಲ್ಲೂ ಹೋಗಬೇಕಿಲ್ಲ, ಹೋದಮೇಲೆ ಬರೆಯಲೂ ಬೇಕಿಲ್ಲ. ಸುಮ್ಮನೆ ಹೊರಗೆ ಹೋಗುವಾಗ ಇವನ್ನು ಒಯ್ದರೆ ಆಯಿತು. ಬರುವಾಗ ತಂದರೆ ಆಯಿತು. ಡಿವಿಜಿಯವರ ಜ್ಞಾಪಕ ಚಿತ್ರಶಾಲೆಯಲ್ಲೋ ಹಕ್ಕಿಯ ಪಯಣ ಸರಣಿಯಲ್ಲೋ ಎಲ್ಲೋ ಓದಿದ ಪ್ರಸಂಗ. ಖ್ಯಾತ ಸಂಗೀತವಿದ್ವಾಂಸರೊಬ್ಬರು ಯಾವಾಗಲೂ ತಮ್ಮೊಡನೆ ಒಂದು ಕಟ್ಟು ಪೇಪರು ಪೆನ್ಸಿಲು ಒಯ್ಯುತ್ತಿದ್ದರಂತೆ. ಯಾವುದೋ ಸೊಗಸಾದ ಪಲುಕೋ ಸಂಗ್ತಿಯೋ ನೆರವಲೋ ಎತ್ತುಗಡೆಯೋ ಹೊಳೆದರೆ ಅದನ್ನು ಅಲ್ಲಿಯೇ ಗುರುತು ಹಾಕಿಕೊಳ್ಳುವುದು, ಅದನ್ನೇ ಪದೇಪದೇ ಪಲುಕುತ್ತಾ ಗಟ್ಟಿಮಾಡಿಕೊಳ್ಳುವುದು, ಅದನ್ನು ಮುಂದಿನ ಸಂಗೀತ ಕಚೇರಿಯಲ್ಲಿ ಬಳಸುವುದು ಅವರ ವಾಡಿಕೆ. ಹೀಗೊಮ್ಮೆ ಹೊರಗೆ ಹೋದಾಗ ಅವತ್ತು ಎಂದೂ ಇಲ್ಲದ ಅದ್ಭುತವಾದ ರಾಗಸಂಚಾರವೊಂದು ಹೊಳೆದುಬಿಟ್ಟಿದೆ; ವಾಡಿಕೆಯಂತೆ ಬರೆದುಕೊಳ್ಳಲು ಪೇಪರು ಪೆನ್ಸಿಲು ಹುಡುಕುತ್ತಾರೆ, ಆದರೆ ಅವತ್ತೇ ಅದನ್ನು ಮರೆತಿರಬೇಕೇ? ಸಂಚಾರದ ನಡೆಯೋ ಕ್ಲಿಷ್ಟಾತಿ ಕ್ಲಿಷ್ಟ, ನೆನಪಿನಲ್ಲೂ ಉಳಿಯುವುದಲ್ಲ, ಬರೆದುಕೊಳ್ಳೋಣವೆಂದರೆ ಪೇಪರು ಪೆನ್ನು ಇಲ್ಲ. ಚಡಪಡಿಸಿ ಹೋದರಂತೆ. ಕೊನೆಗೆ ಇವರ ಪಾಡು ಗಮನಿಸಿದ ಯಾರೋ ಸಹೃದಯರು ಅದೆಲ್ಲಿಂದಲೋ ಒಂದು ಪೇಪರು ಪೆನ್ಸಿಲು ಸಂಪಾದಿಸಿ ತಂದಿತ್ತ ಮೇಲೇ ಸಮಾಧಾನ ಆ ವಿದ್ವಾಂಸರಿಗೆ. ಈ ಸ್ಪೂರ್ತಿದೇವತೆಯರ ಉಪಟಳವೇ ಹಾಗೆ. ಅವರು ಬಂದಾಗ ನೀವು ತಯಾರಾಗಿರಬೇಕೇ ಹೊರತು ನಿಮಗೆ ಬೇಕಾದಾಗ ಅವರು ಬರುವುದಿಲ್ಲ. ಗೆಳೆಯ ಜಯಂತರು ಅಲ್ಲೂ hifi technology ಬಿಟ್ಟುಕೊಡರು. ಹೀಗೆ "ಸದಮಲ ಜ್ಞಾನದ ಕುದಿ ಉಕ್ಕಿ ಬರುವಾಗ" ಅದನ್ನು ಅವರು ಮೊಬೈಲಿನಲ್ಲಿ ನಮೂದಿಸಿಕೊಳ್ಳುತ್ತಾರಂತೆ, ಮತ್ತೆ ಯಾವಾಗಲಾದರೂ lap top ಗೆ ವರ್ಗಾಯಿಸಿದರಾಯಿತು! ನಾನಂತೂ ಇನ್ನೂ ತಾಂತ್ರಿಕವಾಗಿ ಅಷ್ಟು ಮುನ್ನಡೆ ಸಾಧಿಸಿಲ್ಲ; ಲ್ಯಾಪ್ ಟಾಪಿನಲ್ಲಿ ಟೈಪು ಮಾಡಿ ಒಗ್ಗಿದ ನನ್ನ ಬೆರಳಿಗೆ ಇನ್ನೂ ಮೊಬೈಲಿನ ಅಕ್ಷರಗಳು ಒಗ್ಗಿಲ್ಲ, ಇರಲಿ.

ಕಾವ್ಯದಷ್ಟು ಸೃಜನಶೀಲವಲ್ಲದ (ಲೇಖನ, ಪ್ರಬಂಧ, ವಿಚಾರ ಎಂದಿಟ್ಟುಕೊಳ್ಳೋಣ) ಬರಹಕ್ಕೆ ಬೇಕಾದ ಸಾಧನ ಸಲಕರಣೆಗಳೇ ಬೇರೆ. ಅದಕ್ಕೆ ಸ್ಫೂರ್ತಿಯ ಅಂಶ ಕಡಿಮೆ. ಅಲ್ಲಿ ವಿಚಾರದ ಪ್ರಖರತೆ, ಹರಿವು, ಸುಸಂಬದ್ಧತೆ ಮುಖ್ಯವೇ ಹೊರತು ಭಾವದ ತೀವ್ರತೆಯಲ್ಲ. ಅದಕ್ಕೆ ಈಗಾಗಲೇ ಓದುಗರ ಗುಂಪೊಂದಿದೆ. ಬರಹಗಾರ ಆ ಗುಂಪನ್ನು ಮನಸ್ಸಿನಲ್ಲಿಟ್ಟೇ ತನ್ನ ವಾದಸರಣಿಯನ್ನು ಮಂಡಿಸುತ್ತಾನೆ. ಅದು ಹುಟ್ಟುವುದು ಅವನ ಮನಸ್ಸಿನಲ್ಲಾದರೂ ಬೆಳೆಯುವುದು ಗುಂಪಿನ ಮಧ್ಯೆಯೇ. ಆ ದೃಷ್ಟಿಯಿಂದ ಅದು ಬಹಿರ್ಮುಖಿ. ಆದ್ದರಿಂದಲೇ ಲೇಖನವೊಂದಕ್ಕೆ ಸ್ಫೂರ್ತಿಗಿಂತಾ ಪ್ರಯತ್ನ ಮುಖ್ಯವಾಗುತ್ತದೆ, ಆದರೆ ಕಾವ್ಯಕ್ಕೆ ಸ್ಫೂರ್ತಿಯೇ ಮುಖ್ಯ (ಅದನ್ನು ಅಲಂಕರಿಸುವಲ್ಲಿ ಪ್ರಯತ್ನವಿದ್ದರೂ, ಕಾವ್ಯದ ಜೀವವಿರುವುದು ಸ್ಫೂರ್ತಿಯಲ್ಲೇ). ಆದ್ದರಿಂದ ನೀವು ಕಂಪ್ಯೂಟರಿನಮುಂದೆಯೋ ಪೆನ್ನು ಪೇಪರು ಹಿಡಿದೋ ದಿನಗಟ್ಟಲೆ ಕುಳಿತು ಪುಟಗಟ್ಟಲೆ ಲೇಖನ ಬರೆಯಬಹುದು, ಆದರೆ ಕಾವ್ಯವನ್ನಲ್ಲ. ಇನ್ನು ಕತೆಯ ವಿಷಯ ನನಗೆ ಗೊತ್ತಿಲ್ಲ. ಕತೆಯೊಂದು ಮನಸ್ಸಿನ ಗಜಗರ್ಭದಲ್ಲಿ ೧೨ ವರ್ಷ ಕಳೆದು ಅದೆಲ್ಲೋ ಕರಗಿಯೇ ಹೋಯಿತು. ಮತ್ತೊಂದು ಕತೆ ತುಸುಕಾಲ ಸೊಗಸಾಗಿ ಬರೆಯಿಸಿಕೊಂಡಿತಾದರೂ ಅದೇಕೋ ಮುಂದುವರೆಯಲೊಲ್ಲದು. ಅದೂ ಕಾವ್ಯದಂತೆಯೇ ಸ್ಫೂರ್ತಿಜನ್ಯವಾದರೂ ಕಾವ್ಯದಂತೆ ಒಮ್ಮೆ ಮಿಂಚಿ ಮರೆಯಾಗಿಬಿಡುವುದಲ್ಲ. ಸ್ಫೂರ್ತಿ ಕತೆಗೆ ಕಾಲಿದ್ದಂತೆ. ಅದು ಉದ್ದಕ್ಕೂ ಹೊಳೆಯುತ್ತಲೇ ಹೋಗಬೇಕು. ಜೊತೆಗೆ ಅದಕ್ಕೆ ಗದ್ಯದ ಸುಸಂಬದ್ಧತೆಯೂ (ಅದಕ್ಕೆ ಬೇಕಾದ ನಿರಂತರ ಪ್ರಯತ್ನವೂ) ಜೊತೆಗೆ ತನ್ನದೇ ಆದ ತಂತ್ರಗಾರಿಕೆಯೂ ಬೇಕು. ಆದರೆ ಕಾವ್ಯ ಹಾಗಲ್ಲ. ಯಾವುದೋ ಘಳಿಗೆ ಮಿಂಚಿ ಮರೆಯಾಗುತ್ತದೆ. ಅದನ್ನು ಹಿಡಿದಿಟ್ಟುಕೊಂಡಿರೋ ಸರಿ, ಇಲ್ಲದಿದ್ದರೆ ಇಲ್ಲ. ಅದು ಒಂದು ಸಲಕರಣೆಯಾಗಿ ನಿಮ್ಮಿಂದ ಬಯಸುವುದು, ಹೊಳೆದಾಗ ಗುರುತು ಹಾಕಿಕೊಳ್ಳಲು ಕೇವಲ ಒಂದು ಸೀಸದ ಕಡ್ಡಿ ಮತ್ತು ಕಾಗದದ ತುಂಡು ಮಾತ್ರ. ಯಾರೋ ಲೇಖಕಿಯೊಬ್ಬರ ಪುಟ್ಟ ಕವನವೊಂದರಲ್ಲಿ (ಕವನವೋ ಕತೆಯೋ ನೆನಪಿಲ್ಲ, ಲೇಖಕಿಯ ಹೆಸರೂ ನೆನಪಿಲ್ಲ) ಅದರ ನಾಯಕಿ ತನ್ನ ಬ್ರಾ ದ ಸ್ಟ್ರಾಪಿನ ಮೇಲೆ ಕವನದ ಸಾಲೆರಡನ್ನು ಬರೆದಿಟ್ಟು ಅದನ್ನು ಒಗೆದಂತೆಲ್ಲಾ ಕರಗುವ ಆ ಸಾಲುಗಳನ್ನು ನೋಡುತ್ತಾ ವಿಷಾದವನ್ನನುಭವಿಸುತ್ತಾಳೆ. ಸಂವೇದನೆಯ ಅನೇಕ ಸ್ತರಗಳನ್ನೊಳಗೊಂಡ ಆ ಪ್ರತಿಮೆ ನನಗೆ ತುಂಬಾ ಹಿಡಿಸಿತು. ಕಾವ್ಯವೊಂದು ಹುಟ್ಟುವುದು ಕವಿಯ ಅತ್ಯಂತ ಖಾಸಗಿ ಕ್ಷಣದಲ್ಲಿ, ಬೆಳೆಯುವುದು ಅವನ/ಳ ಏಕಾಂತದಲ್ಲಿ, ಸೂಕ್ಷ್ಮ ಸಂವೇದನೆಗಳಲ್ಲಿ. ಅಲ್ಲಿ ಅವನಿಗೆ ಓದುಗರಿಲ್ಲ, ಚಪ್ಪಾಳೆಗಳಿಲ್ಲ, ಸ್ಪರ್ಧೆಯಿಲ್ಲ, ಅದನ್ನವನು ಯಾವ ಪತ್ರಿಕೆಗೂ ಕಳಿಸಬೇಕಿಲ್ಲ, ಬ್ಲಾಗಿನಲ್ಲೂ ಪ್ರಕಟಿಸಬೇಕಿಲ್ಲ. ಅಲ್ಲಿ ಬೇರೆ ಯಾರೂ ಇಲ್ಲದಿರುವುದರಿಂದ ಅವನು ಸರ್ವತಂತ್ರಸ್ವತಂತ್ರ. ಮನಕ್ಕೆ ಬಂದದ್ದನ್ನು ಬರೆಯಬಹುದು. ಚಂದ ಕಂಡದ್ದನ್ನು ಉಳಿಸಿಕೊಳ್ಳಬಹುದು. ಲಕ್ಷಣಕ್ಕೆ ಪ್ರಾಸ, ಲಯ, ಛಂದಸ್ಸುಗಳೇನಿದ್ದರೂ ಹೊರಗೆ ತೋರಿಸುವ ಅಲಂಕಾರ ಅಷ್ಟೇ. ಕಾವ್ಯ ಆಗತಾನೇ ಹುಟ್ಟಿದ ಮಗುವಿನಂತೆ, ಬೆತ್ತಲೆ. ಅಲಂಕಾರ ಆಮೇಲೆ. ಅದನ್ನು ಅಲ್ಲಿ ಇಲ್ಲಿ ಪ್ರಕಟಿಸುವುದೋ, ಪ್ರದರ್ಶಿಸುವುದೋ ಆಮೇಲೆ. ಈ ಸೃಜನದ ಏಕಾಂತಕ್ಕೆ, ಧ್ಯಾನಕ್ಕೆ, ತಾದಾತ್ಮ್ಯಕ್ಕೆ ಪೆನ್ನು ಪೇಪರಿನಂತಹ ಸುಲಭ ಸರಳ ಸಲಕರಣೆಗಳೇ least disturbing ಎಂದು ನನ್ನ ಅನಿಸಿಕೆ.

ಈ ದಿಕ್ಕಿನಲ್ಲಿ ಯೋಚಿಸುತ್ತಾ ನನ್ನದೇ ಬರಹಗಳನ್ನು ಗಮನಿಸುತ್ತಿದ್ದಾಗ ಮತ್ತೊಂದು ಅಂಶ ನನ್ನ ಗಮನಕ್ಕೆ ಬಂತು. ಮೇಲೆ ತಿಳಿಸಿದ ಸೆಪ್ಟೆಂಬರು ೨೦೦೭ ರ ವರಿಗಿನ ಕವನಗಳೆಲ್ಲಾ ಹಳೆಯವು, ಕಂಪ್ಯೂಟರಿನ ಬಳಕೆ ಅಷ್ಟಾಗಿ ಇಲ್ಲದ ಕಾಲದಲ್ಲಿ ಬರೆದು ಆಮೇಲೆ ಬ್ಲಾಗಿನಲ್ಲಿ ಹಾಕಿದ್ದು. ಸೆಪ್ಟೆಂಬರ್ ೨೦೦೭ರ ಮೇಲೆ ಮೇಲೆ ನಾನು ಬರೆದದ್ದು ಕೇವಲ ಎರಡೇ ಎರಡು ಕವನ, ಅದೂ ನನಗೆ ಚೆನ್ನಾಗಿ ನೆನಪಿರುವಂತೆ ಎಲ್ಲೋ ಪೇಪರಿನಮೇಲೆ ಗೀಚಿ ಇಟ್ಟುಕೊಂಡಿದ್ದು, ಬಿಡುವಾದಾಗ ಪರಿಷ್ಕರಿಸಿ ಬ್ಲಾಗಿಗೆ ಹಾಕಿದ್ದು. ಅದು ಬಿಟ್ಟರೆ ಆ ನಂತರ ನಾನು ಬರೆದದ್ದೆಲ್ಲಾ (ಅಷ್ಟೊಂದು ಸೃಜನಶೀಲವೆನ್ನಲಾಗದ) ಲೇಖನಗಳೇ! ಅವಕ್ಕೆ ಬರೆದು, ಹೊಡೆದು, ಹರಿದುಹಾಕುವ ಪೆನ್ನು ಪೇಪರಿಗಿಂತ, ಕಟ್ ಕಾಪಿ ಪೇಸ್ಟ್ ಸಾಮರ್ಥ್ಯವನ್ನೊಳಗೊಂಡ ಕಂಪ್ಯೂಟರೇ ಸುಲಭವೆನ್ನಿಸಿದ್ದೂ ನಿಜ, ಅದನ್ನು ಕೂಡಲೇ ಬ್ಲಾಗಿನಲ್ಲಿ ಪ್ರಕಟಿಸುವ ಅನುಕೂಲವಿದ್ದದ್ದೂ ನಿಜ.

ಸ್ಫೂರ್ತಿಗಾಗಿ ಧ್ಯಾನಿಸುವುದಕ್ಕಿಂತಾ ಸುಮ್ಮನೇ ಕುಳಿತು ಯೋಚಿಸಿ ಬರೆಯುವುದು ನನಗೀಗ ಸುಲಭವಾದ್ದರಿಂದ ಸ್ಪೂರ್ತಿಯನ್ನಪೇಕ್ಷಿಸುವ ಕಾವ್ಯ ಹಿಂದೆ ಸರಿದು ಬರಹಗಳ ಹರಿವು ಮುಂಚೂಣಿಗೆ ಬಂತೇ? ಅಥವಾ ಕಾವ್ಯದ ಬುಗ್ಗೆ ಸೊರಗಿದ್ದರ ಕೊರತೆಯನ್ನು ನೀಗಲೆಂದೇ ಇಷ್ಟೆಲ್ಲಾ ಬರೆಯುತ್ತಿದ್ದೇನೆಯೇ? ತುಸು ದಿನ ಬರೆಯುವುದು ಬಿಟ್ಟರೆ ಮತ್ತೆ ನಾನು ಕಾವ್ಯದ ದಾರಿಗೆ ಹೊರಳಿಕೊಳ್ಳಬಹುದೇ? ಪ್ರಶ್ನೆಗಳು ಹಲವು. ಉತ್ತರ ಕಂಡುಕೊಳ್ಳಬೇಕು.

Sunday, August 8, 2010

ಕಿ ರಂ ನಾಗರಾಜ್ ಇನ್ನಿಲ್ಲ !


ದಿಗ್ಭ್ರಮೆಯಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ನೆನ್ನೆ ಸಂಜೆಯಷ್ಟೇ ಗೆಳೆಯ ಶ್ರೀಕಾಂತರೊಡನೆ ಮಾತಾಡುತ್ತಾ ಮಾತು ಕಿ ರಂ ಬಗ್ಗೆ ತಿರುಗಿತ್ತು. ಶ್ರೀಕಾಂತ್ ಆಗಷ್ಟೇ ಸುಚಿತ್ರಾ ಚಲನಚಿತ್ರ ಸೊಸೈಟಿಯ ಆವರಣದಲ್ಲಿ ನಡೆದ "ಮತ್ತೆ ಬಂತು ಶ್ರಾವಣ" ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದಾರೆ. ಕಾರ್ಯಕ್ರಮ ಸುಮಾರು ೭.೩೦ ಕ್ಕೆ ಮುಗಿದಿದೆ. ಕಾರ್ಯಕ್ರಮ ಮುಗಿದ ನಂತರ ಇನ್ನೊಬ್ಬ ಗೆಳೆಯ ಸತ್ಯ ಅವರಿಗೆ ಕಿ ರಂ ಅವರನ್ನು ಪರಿಚಯಿಸಿದ್ದಾರೆ, ಅವರೊಂದಿಗೆ ಮಾತಾಡಿದ ಶ್ರೀಕಾಂತ್ ಮನೆಗೆ ಬಂದೊಡನೆ gtalkನಲ್ಲಿ ನನ್ನೊಡನೆ ಮಾತಾಡುತ್ತಾ ಕಾರ್ಯಕ್ರಮದ ಬಗ್ಗೆ ಹೇಳಿದ್ದಾರೆ. ಆಗಿನ್ನೂ ರಾತ್ರಿ ೮.೩೦. ಮಾತು ಕಿ ರಂ ಅವರ ಕಾವ್ಯಾಸಕ್ತಿಯ ಬಗ್ಗೆ, ಕನ್ನಡದೆಡೆಗೆ ಅವರ ನಿಲುವಿನ ಬಗ್ಗೆ ಸಾಗಿದೆ, ಹೀಗೇ ಸುಮಾರು ಎರಡು ಗಂಟೆ ಹರಟಿದ್ದೇವೆ. ಅದಾದನಂತರ ಗೆಳೆಯ ಜಯಂತರ ಬ್ಲಾಗನ್ನೋದುತ್ತಾ ಅಲ್ಲಿ ಸಿಕ್ಕಿದ "ಅವಧಿ"ಯ ಲಿಂಕ್ ಹಿಡಿದು ಅಲ್ಲಿಗೆ ಹೋದರೆ ಕಿ ರಂ - ಲಂಕೇಶರಬಗ್ಗೆ ಒಂದು ಫೋಟೋ ಲೇಖನ. ಮತ್ತೆ ತುಸುಹೊತ್ತಿನ ಬಳಿಕ ಬೇರಾವುದೋ ಕವನದ ಲಿಂಕ್ ಅನುಸರಿಸಿ "ಕೆಂಡಸಂಪಿಗೆ" ಈ-ಪತ್ರಿಕೆಗೆ ಹೋದರೆ ಅಲ್ಲಿ ಕಿ ರಂ ಬಗೆಗೆ ಮತ್ತೊಂದು ಲೇಖನ, ಅಬ್ದುಲ್ ರಶೀದರಿಂದ. ಅದೇಕೋ ಮನಸ್ಸಿನಲ್ಲಿ ಕಿ ರಂ ಏನಾದರೂ ಸತ್ತುಹೋದರೋ ಎಂಬ ಭಾವನೆ ಬಂದು ಹೋಯಿತು. ಎಷ್ಟೆಂದರೆ ಈ ಲೇಖಕ್ಕೆ "ಕಿ ರಂ ಕ್ಷೇಮವಷ್ಟೇ" ಎಂದು ಕಾಮೆಂಟ್ ಹಾಕಹೊರಡುವಷ್ಟು. ಲೇಖನವೂ ಶ್ರದ್ಧಾಂಜಲಿಯಂತೆಯೇ ಇತ್ತು. ಆದರೆ ಅದು ಶ್ರದ್ಧಾಂಜಲಿಯಾಗಿರಲಿಲ್ಲ, ಅದು ಪ್ರಕಟವಾದ ಸಮಯ ಶುಕ್ರವಾರ ಮಧ್ಯರಾತ್ರೆ; ನಾನು ನೋಡುತ್ತಿದ್ದದ್ದು almost ಭಾನುವಾರ ಬೆಳಗಿನ ಜಾವ.

ಆದರೂ ಕಿರಂ ಬಗ್ಗೆ ಇದೇನು ಇಷ್ಟೊಂದು ಇವತ್ತು ಎನಿಸಿ ಕಿ ರಂ ನಾಗರಾಜ್ ಎಂದು ಗೂಗಲಿಸಿದವನಿಗೆ ಭಾರಿ ಶಾಕ್ ಕಾದಿತ್ತು, ಕಿ ರಂ ನಾಗರಾಜ್ ಇನ್ನಿಲ್ಲ! ಅವತ್ತು update ಆದ ವೆಬ್ ಪುಟಗಳ ಸಂಖ್ಯೆ ೪, ಅದರಲ್ಲಿ ಸಾವಿನ ಸುದ್ದಿ ಹೊತ್ತದ್ದು ಒಂದೇ ಪುಟ, ಆಗಷ್ಟೇ ಎರಡು-ಮೂರು ಗಂಟೆಗಳ ಹಿಂದೆ ಪ್ರಕಟವಾದದ್ದು

ಕನ್ನಡದ ಹಿರಿಯ ವಿಮರ್ಶಕ, ಚಿಂತಕ ಕಿ ರಂ ನಾಗರಾಜ್ ಬಗ್ಗೆ, ಅವರ ಕಾವ್ಯಪ್ರೀತಿಯಬಗ್ಗೆ, ಮಾತಿನಲ್ಲೇ ರನ್ನ ಪಂಪ ಬೇಂದ್ರೆಯರನ್ನು ಪುನಃಸೃಷ್ಟಿಸುತ್ತಿದ್ದ ಅವರ ವೈಖರಿಯ ಬಗ್ಗೆ ತನ್ಮಯರಾಗಿ ನೆನೆಸುವ, ಹೇಳುವ ಬರೆಯುವ ಅವರ ಸಾವಿರಾರು ಶಿಷ್ಯರಿದ್ದಾರೆ. ಕಿ ರಂ ಕಾವ್ಯದ ಬಗ್ಗೆ ಮಾತಾಡಿದರೆ ಅದೊಂದು ಬೇರೆಯೇ ಲೋಕವಿದ್ದಂತೆ ಎನ್ನುವ ಗೆಳೆಯ ಸತ್ಯರಿಗಂತೂ ಕಿ ರಂ ಅಂದರೆ ದೇವರೇ ಸರಿ. ಅವರನ್ನು ಪರಿಚಯಿಸಿಕೊಡುವಂತೆ ಸತ್ಯರಿಗೆ ಅನೇಕಬಾರಿ ದುಂಬಾಲು ಬಿದ್ದಿದ್ದೇನೆ. ಆದರೂ ನನ್ನದೇ ಸೋಮಾರಿತನವೋ ಅದೇನೋ, ಅದೇಕೋ ಆಗಿಬರಲಿಲ್ಲ. ಕಿ ರಂ ಬಾಯಲ್ಲಿ ಕಾವ್ಯ ಕೇಳುವ ಪುಣ್ಯ ಕೊನೆಗೂ ಒದಗಲಿಲ್ಲ, ಇನ್ನು ಒದಗುವುದೂ ಇಲ್ಲ. ಜೀವನದಲ್ಲಿ ಹೀಗೇ ಅನೇಕ ಬಸ್ಸುಗಳನ್ನು ಮಿಸ್ ಮಾಡಿಕೊಂಡಿದ್ದೇನೆ.

ಎರಡೋ ಮೂರೋ ವರ್ಷಗಳ ಹಿಂದೆ ಬಿ ಪಿ ವಾಡಿಯ ರಸ್ತೆಯಲ್ಲಿ ಬ್ಲಾಗ್ ಬರಹಗಾರರ ಪುಟ್ಟದೊಂದು ಸಮಾವೇಶ ಜರುಗಿತು. ಆಗ ಅಲ್ಲಿಗೆ ಬಂದ ಕಿ ರಂ ತಮ್ಮ ಚಿಕ್ಕ ಭಾಷಣದಲ್ಲಿ ಕನ್ನಡ ಲಿಪಿ ಸುಧಾರಣೆಯ ಬಗ್ಗೆ ಮಾತಾಡಿದರು. ಆ ಬಗ್ಗೆ ಅವರ ನಿಲುವುಗಳು ನನಗೆ ಸರಿಬೀಳಲಿಲ್ಲ, ಜೊತೆಗೆ ತುಸು ಆಶ್ಚರ್ಯವನ್ನೂ ತಂದಿತು. ಪ್ರಶ್ನೆಗಳನ್ನು ರೂಪಿಸಿಕೊಂಡು ಎದ್ದು ನಿಂತು ಪ್ರಸ್ತುತಪಡಿಸುವಷ್ಟರಲ್ಲಿ ಮಾತು ಮುಗಿಸಿದ ಕಿ ರಂ ಕೂಡಲೇ ಹೊರಟುಬಿಟ್ಟಿದ್ದರು.

ಈ ಬಗ್ಗೆ ಈಗ ೫-೬ ಗಂಟೆಗಳ ಹಿಂದಷ್ಟೇ ಶ್ರೀಕಾಂತರೊಡನೆ ಮಾತಾಡುತ್ತಾ ನಗೆಯಾಡಿದ್ದೆ. ಕಿ ರಂ ಎದುರು ಎಂದಾದರೂ ಈ ಪ್ರಶ್ನೆಗಳನ್ನು ಎತ್ತಬೇಕೆಂದಿದ್ದೆ. ಇವತ್ತು ಕಿ ರಂ ಈ ಲೋಕವನ್ನೇ ಬಿಟ್ಟು ಹೊರಟುಬಿಟ್ಟಿದ್ದಾರೆ, ನನ್ನ ಪ್ರಶ್ನೆಗಳು ಹಾಗೆಯೇ ಉಳಿದಿವೆ.

Monday, July 26, 2010

ಕಿಟಕಿ ಪಕ್ಕದ ಸೀಟು

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ನನ್ನ ಮಡದಿ ತಾನಾಗಿಯೇ ನನಗೆ ಕಿಟಕಿ ಸೀಟನ್ನು ಬಿಟ್ಟುಕೊಟ್ಟದ್ದು ಅದೇಕೋ ಮನಸ್ಸಿಗೆ ನಾಟಿತು. ಅವಳು ಹಾಗೆ ನನಗೆ ಕಿಟಕಿ ಸೀಟು ಬಿಟ್ಟುಕೊಟ್ಟದ್ದೇನು ಮೊದಲನೆಯ ಸಲವೂ ಅಲ್ಲ, ಹೊಸದೂ ಅಲ್ಲ. ಆದರೆ ಈ ಔದಾರ್ಯ ಯಾವಾಗ ಶುರುವಾಯಿತೋ ನೆನಪಿಲ್ಲ. ಕಿಟಕಿ ಸೀಟಿಗಾಗಿ ನಾವು ಕೊನೆಯ ಸಲ ಕಿತ್ತಾಡಿದ್ದು ಯಾವಾಗ? ನೆನಪಿಗೆ ಬರುತ್ತಿಲ್ಲ, ಕಿತ್ತಾಡುತ್ತಿದ್ದಂತೂ ನಿಜ. ಬಹಳಷ್ಟೇ ದಿನ ನಡೆದುಕೊಂಡುಬಂದ ಈ ಕಿತ್ತಾಟ ಅದು ಯಾವುದೋ ಮಾಯದಲ್ಲಿ ನನ್ನ ಗಮನಕ್ಕೇ ಬರದೇ ಕೊನೆಗೊಂಡಿತ್ತು.

ಹತ್ತು ವರ್ಷದ ಹಿಂದೆ ನಾವು ಮಧುಚಂದ್ರಕ್ಕಾಗಿ ದಿಲ್ಲಿಯಿಂದ ಮನಾಲಿಗೆ ಪಯಣಿಸುತ್ತಿದ್ದಾಗಿನ ಘಟನೆ ನೆನಪಿಗೆ ಬರುತ್ತದೆ. ಇದು ನಾವಿಬ್ಬರೂ ಬಹಳ ಆಸ್ತೆಯಿಂದ ಯೋಜಿಸಿದ್ದ ಪ್ರವಾಸವಾಗಿತ್ತು. ಅಲ್ಲದೇ ಹಿಮಾಲಯದ ದರ್ಶನ ನನ್ನ ಬಹುದಿನಗಳ ಹೆಬ್ಬಯಕೆಯಾಗಿತ್ತು ಕೂಡ. ಬೆಟ್ಟಗಳು ಬೆಳ್ಳಗೂ ಇರುತ್ತವೆ ಎಂಬುದು ನನ್ನ ಜ್ಞಾನ ಪ್ರಪಂಚದಲ್ಲಿ ನಮೂದಾದ್ದ ವಿಷಯವೇ ಹೊರತು, ನನ್ನ ಭಾವಪ್ರಪಂಚದಿಂದ ಅದು ಸಂಪೂರ್ಣ ಹೊರಗು. ಹೀಗಾಗಿ ಬೆಳ್ಳಿ ಬೆಟ್ಟದ ಬೆರಗನ್ನು ನೋಡಲು ಮನಸ್ಸು ಬಹಳ ಉತ್ಸುಕವಾಗಿತ್ತು. ದಿಲ್ಲಿಯಿಂದ ರಾತ್ರಿ ಹೊರಟ ಬಸ್ಸು ಕುಲು ಕಣಿವೆಯನ್ನು ಪ್ರವೇಶಿಸುವ ಹೊತ್ತಿಗೆ ಅರುಣೋದಯದ ಸಮಯ. ಇವಳಿಗೆ ತಡೆಯದಷ್ಟು ನಿದ್ದೆ. ಕಣಿವೆಯ ಕೊನೆಯಲ್ಲಿ ನಿಧಾನಕ್ಕೆ ಕೆಂಪಾಗುತ್ತಿತ್ತು. ಬೆಳ್ಳನೆಯ ಗೋಡೆಗಳಂತೆ ನಿಂತಿದ್ದ ಹಿಮಶೀತಲ ಶೈಲಗಳನ್ನು ಮುಟ್ಟುವುದೋ ಬೇಡವೋ ಎಂಬಂತೆ ಸೂರ್ಯನ ಪ್ರಥಮ ಕಿರಣಗಳು ಅದರ ತುದಿಯನ್ನು ತುಸುವೇ ಸೋಂಕಿ ಸೋಂಕಿ ಹಿಂಜರಿಯುತ್ತಿದ್ದವು. ಬೆಟ್ಟವೂ ಸ್ವಲ್ಪಹೊತ್ತು ತನ್ನ ಸ್ವಭಾವಸಿದ್ಧವಾದ ದಿವ್ಯ ಶೀತಲತೆಯನ್ನು ನಟಿಸಿತು. ಆದರೇನು? ರವಿಗೆ ಕರಗದ ಮಂಜೇ? ಸ್ಪರ್ಶಕ್ಕೆ ನಾಚಿ ನಿಧಾನಕ್ಕೆ, ಬಹು ನಿಧಾನಕ್ಕೆ ಹಿಮಗಿರಿಯ ತುದಿಗಳು ಕೆಂಪೇರತೊಡಗಿದ್ದುವು. ಜುಮ್ಮೆನ್ನುವ ಮಲಯ ಮಾರುತಕ್ಕೆ ಕುಲು ಕಣಿವೆಯ ಹೂ ಗಿಡ ಮರಗಳು ಪುಳಕಿತಗೊಂಡು ತಲೆದೂಗುತ್ತಿದ್ದವು. ನೋಡನೋಡುತ್ತಿದ್ದಂತೆ ಇದುವರೆಗೂ ತಮೋನೀರಸವಾಗಿದ್ದ ಇಡೀ ಕಣಿವೆ ತನ್ನ ಸೌಂದರ್ಯ ಸಮಸ್ತವನ್ನು ಮರೆಮಾಚಿದ್ದ ನಿಷೆಯ ಜವನಿಕೆಯನ್ನು ಕಿತ್ತೊಗೆದು ತನ್ನೆಲ್ಲ ವರ್ಣ ವೈವಿಧ್ಯದೊಂದಿಗೆ ಮುಂಜಾವಿನ ಸೊಬಗನ್ನು ಸ್ವಾಗತಿಸಲು ಎದ್ದು ನಿಂತಿತು. ಶುಭ್ರ ಶ್ವೇತ ಗಿರಿ ಪಂಕ್ತಿ, ನಡುವಿನ ಬಿಡುವಿನಲ್ಲಿ ತುಸುವೇ ಕೆಂಪೇರಿದ ನಸುಗಪ್ಪು ನೀಲಿ ಆಕಾಶ, ಅಲ್ಲೊಂದು ಇಲ್ಲೊಂದು ತುಂಡು ಮೋಡಗಳು, ಕ್ಷಣಕ್ಕೊಮ್ಮೆ ರಂಗು ಬದಲಿಸುತ್ತಿದ್ದ ಸೂರ್ಯ, ಇವೆಲ್ಲಾ, ಮೊದಲೇ ವರ್ಣಮಯವಾದ ಕಣಿವೆಯ ಮೇಲೆ ತಮ್ಮ ಕುಂಚವಾಡಿಸಿ ಅದೊಂದು ಹೊಸ ಲೋಕವನ್ನು ನಿರ್ಮಿಸಿದ್ದುವು.

ಗಳಿಗೆಗೊಂದು ಹೊಸ ರಂಗು, ರೂಪ ತಳೆಯುತ್ತಿದ್ದ ಈ ಚೇತೋಹಾರಿ ದೃಶ್ಯಾವಳಿಯನ್ನು ಸೆರೆಹಿಡಿಯುತ್ತಾ, ಹಿಮಾಲಯದ ಮಹೋನ್ನತ ಶಿಖರಗಳ ಭವ್ಯತೆಗೆ ಬೆರಗಾಗುತ್ತಾ ಮೈಮರೆತಿದ್ದಾಗ ಒಂದು ವಿಷಯ ನನ್ನ ಗಮನಕ್ಕೆ ಬಂತು. ಇಡೀ ಬಸ್ಸಿನಲ್ಲಿ ಕುಳಿತಿದ್ದ ಸುಮಾರು ಮೂವತ್ತು ಜೋಡಿಗಳಲ್ಲಿ, ಕಿಟಕಿಯ ಪಕ್ಕ ಕುಳಿತಿದ್ದ ಗಂಡು ನಾನೊಬ್ಬನೇ. ಉಳಿದವರೆಲ್ಲಾ ಆ ಜಾಗವನ್ನು ತಂತಮ್ಮ ಮಡದಿಯರಿಗೆ ಒಪ್ಪಿಸಿ ಕೊಟ್ಟು ತಾವು ನಿದ್ದೆ ಹೊಡೆಯುತಿದ್ದರು. ನನ್ನ ಪುರುಷಪ್ರಜ್ಞೆ ಸ್ವಲ್ಪ ನಾಚಿತು; ಇವಳ ಮುಖ ನೋಡಿದೆ. ಅವಳೂ ಈ ವಿಷಯವನ್ನು ನನಗಿಂತ ಮುಂಚೆಯೇ ತುಸು ಅಸಮಾಧಾನದಿಂದ ಗಮನಿಸಿದ್ದಂತೆ ಕಂಡಿತು. ಹೊಸ ಪರಿಚಯ, ಕೇಳುವುದು ಹೇಗೆ ಎಂದು ಸುಮ್ಮನಿದ್ದಿರಬಹುದು. ಗಂಡಾಗಿ ನಾನೇ ಈ etiquette ಯನ್ನು ಅರ್ಥಮಾಡಿಕೊಳ್ಳಲಿ ಎಂಬ ನಿರೀಕ್ಷೆಯೂ ಇರಬಹುದು. ಎಷ್ಟುಹೊತ್ತು ಕಳೆದರೂ ನಾನು ಆ ಸಭ್ಯತೆಯನ್ನು ತೋರಿಸದಿದ್ದುದು ಕಂಡು, ಇದೆಂಥಾ ವಡ್ಡನ ಜೊತೆ ಗಂಟುಬಿತ್ತೆಂದು ಅನಿಸಿರಲೂ ಸಾಕು. ನನಗೋ, ಪುರುಷರು ಮಹಿಳೆಯರಿಗೆ ಕಿಟಕಿ ಸೀಟು ಬಿಟ್ಟುಕೊಡಬೇಕೆನ್ನುವ ಈ ಅಲಿಖಿತ ಅರ್ಥಹೀನ ಕಂದಾಚಾರ, ಈ ಸ್ವರ್ಗಸದೃಶ ಪಯಣದಲ್ಲಿ, ಮೊಸರನ್ನದಲ್ಲಿ ಸಿಕ್ಕ ಕಲ್ಲಿನಂತೆ ದೊಡ್ಡ ಕಿರಿಕಿರಿಯನ್ನೇ ಉಂಟುಮಾಡಿತು. Once in a life time ಎನಿಸುವ ಪಯಣವೊಂದುಕಡೆ, etiquette ಪಾಲಿಸಲಿಲ್ಲವೆಂದು ಮುಖವೂದಿಸಿಕೊಂಡು ಕುಳಿತ ಮುದ್ದಿನ ಮಡದಿಯೊಂದುಕಡೆ (ಅತ್ತ ದರಿಯೇನೋ ಸರಿ, ಇತ್ತ ಪುಲಿ ಎನ್ನಲಾದೀತೇ). ಆದರೂ, ಜೀವನದ ಪ್ರತಿಯೊಂದನ್ನೂ ಹಂಚಿಕೊಂಡು ಬದುಕಬೇಕಾದ ನಾವು ಈ ಆನಂದವನ್ನೂ ಹಂಚಿಕೊಳ್ಳಬೇಕಲ್ಲವೇ? ಅಷ್ಟೇ ಏನು, ಕಿಟಕಿಯಪಕ್ಕ ಕೂಡುವುದು ಅವಳ ಹಕ್ಕೂ ಅಲ್ಲವೇ? ಒಬ್ಬಳೇ ಬಂದಿದ್ದರೆ ಅವಳು ಆ ಹಕ್ಕನ್ನು ನಿರ್ಭಿಡೆಯಿಂದ ಚಲಾಯಿಸುತ್ತಿದ್ದಳಲ್ಲವೇ? ಇಬ್ಬರೂ ಒಟ್ಟಿಗೇ ಪಯಣಿಸುತ್ತಿದ್ದರಿಂದ ಈ ಕಿಟಕಿ ಸೀಟಿನ ಆನಂದ ಇಬ್ಬರಿಗೂ ಸಮಾನವಾಗಿ ದಕ್ಕಬೇಕಾದ್ದೇ ನ್ಯಾಯ. ಹೇಗೂ ನಾನು ಕಿಟಕಿಯ ಪಕ್ಕದಲ್ಲಿ ಒಂದು ಕಾಲು ಭಾಗದಷ್ಟು ದಾರಿ ಪಯಣಿಸಿದ್ದಾಗಿದೆ. ಅವಳೊಂದುಸ್ವಲ್ಪ ಹೊತ್ತು ಕೂಡಲಿ, ಮತ್ತೆ ಅವಳೇ ನನಗೆ ಬಿಟ್ಟುಕೊಡುತ್ತಾಳೆ; ಇಷ್ಟಕ್ಕೂ ಅವಳಿಗೆ ಅಸಮಾಧಾನವಾಗಿದೆ ಎನ್ನುವುದು ಕೇವಲ ನನ್ನ ಭ್ರಮೆಯಿರಬಹುದು; ನಾನು ಅದುವರೆಗೂ ಆ ದೃಶ್ಯವೈಭವವನ್ನು ನೋಡುತ್ತಾ ಚಿಕ್ಕ ಹುಡುಗರಂತೆ ಹಿಗ್ಗುತ್ತಿದ್ದುದನ್ನು ಅದೊಂದು ರೀತಿಯ ಆತ್ಮೀಯತೆಯಿಂದ ಗಮನಿಸುತ್ತಿದ್ದಳಲ್ಲವೇ. ನಾನೇನು ಬೇರೆಯವನೇ, ಅವಳಿಗೆ ಬೇಕಿದ್ದರೆ ಕೇಳಿಯೇ ಕೇಳುತ್ತಿದ್ದಳು - ಉಳಿದಂತೆ ಎಷ್ಟು ಕೇಳಿಲ್ಲ; ಆದರೂ ಇರಲಿ ಯಾವುದಕ್ಕೂ ವಿಚಾರಿಸಿ ನೋಡುವಾ; ಅವಳಿಗೆ ಬೇಕಾದರೆ ಬಿಟ್ಟುಕೊಡುತ್ತೇನೆ, ಇಲ್ಲದಿದ್ದರೆ ನಾನೇ ಇಲ್ಲಿ ಮುಂದುವರೆಯುತ್ತೇನೆ ಎಂದೆಲ್ಲಾ ಯೋಚಿಸಿ, "ಕಿಟಕಿ ಪಕ್ಕ ಕೂತ್ಕೋಬೇಕಾ?" ಎಂದು ಕೇಳಿದೆ. ಅವಳು ಹೂಂಗುಟ್ಟಿದಳು. "ಎಲ್ಲರೂ ಅವರವರ ಹೆಂಡತಿಯರಿಗೆ window seat ಬಿಟ್ಟುಕೊಟ್ಟಿದ್ದಾರೆ, ನಾನು ಮಾತ್ರ ನಿನ್ನ ಕೇಳಲೂ ಇಲ್ಲ ಅಂತ ಕೋಪಾನಾ?" ಎಂದು ಕೇಳಿದೆ. ಮುಗುಳ್ನಕ್ಕು ಅದಕ್ಕೂ ಹೂಂ ಎಂದಳು. ಸರಿ, ಇನ್ನು ಬೇರೆ ದಾರಿಯೇ ಇಲ್ಲ. ಕಿಟಕಿ ಸೀಟನ್ನು ಅದೊಂದು ಮಾಣಿಕ್ಯವೋ ಎಂಬಂತೆ ಅವಳಿಗೆ ಹಸ್ತಾಂತರಿಸಿ ನಾನು ಈಚೆ ಬದಿಗೆ ಬಂದು ಕುಂತೆ.

ತರ್ಕದಿಂದ ಈ "ತ್ಯಾಗ"ಕ್ಕೆ ನನ್ನ ಬುದ್ಧಿಯನ್ನು ಒಲಿಸಿದೆನಾದರೂ ಅದೇಕೋ ಭಾವ ಮಾತ್ರ ಬುದ್ಧಿಗೇಡಿ ಮಗುವಿನಂತೆ ಮುಸುಗುಡುತ್ತಲೇ ಇತ್ತು, "ಕಿಟಕಿ ಸೀಟು... ಕಿಟಕಿ ಸೀಟೂಊ" ಎಂದು. ಇವಳಾದರೋ, ಜಾಗ ಬದಲಿಸಿದವಳೇ ಒಂದೈದು ನಿಮಿಷ ಹೊರಗೆ ನೋಡುತ್ತಿದ್ದವಳು ಮತ್ತೆ ನನ್ನೆಡೆ ತಿರುಗಿ ಹೆಗಲ ಮೇಲೆ ತಲೆಯಿಟ್ಟು ಹಾಗೇ ನಿದ್ದೆಹೋದಳು; ದೈವವೇ ಎದುರು ನಿಂತಿರಲು, ಚರುಪು ಪಡೆಯಲು ಪೂಜಾರಿಯ ಹಿಂದೆ ಓಡುವಂತೆ. ಈಗಂತೂ ದೂರದ ಬೆಳ್ಳಿಯ ಶಿಖರ ಹೊತ್ತಿಕೊಂಡು ಉರಿಯುತ್ತಿದೆಯೋ ಎಂಬಂತೆ ಕಿತ್ತಳೆ ಬಣ್ಣದೊಂದಿಗೆ ಜಗಜಗಿಸುತ್ತಿತ್ತು. ಅನ್ಯಾಯ ಇಷ್ಟು ಅಮೂಲ್ಯವಾದ ದೃಶ್ಯವನ್ನು ಕಳೆದುಕೊಳ್ಳುತ್ತಿದ್ದಾಳಲ್ಲಾ ಈ ಪೆದ್ದು ಹುಡುಗಿ - ನನಗೂ ಇಲ್ಲ, ತನಗೂ ಇಲ್ಲ - ಎನ್ನಿಸಿದರೂ ಮಗುವಿನಂತೆ ನಿದ್ರಿಸುತ್ತಿದ್ದ ಅವಳ ಮುಖವನ್ನೇ ಕೆಲಹೊತ್ತು ನಿಟ್ಟಿಸಿದೆ. ಈಗ ಅವಳ ಮುಖದಮೇಲೆ ನಲಿಯುತ್ತಿದ್ದ ಸೂರ್ಯ ಕಿರಣ, ಮುಖದ ಚೆಲುವನ್ನು ಇಮ್ಮಡಿಸಿತ್ತು. ಆದರೆ ಈ ಸೌಖ್ಯ ಬಹುಕಾಲ ಉಳಿಯಲಿಲ್ಲ. ಅವಳು ಎಚ್ಚೆತ್ತು "ಮುಖಕ್ಕೆ ಗಾಳಿ ಹೊಡೆಯುತ್ತಿದೆ, ಕಿಟಕಿ ಮುಚ್ಚಿ, ನಾನು ಸ್ವಲ್ಪ ನಿದ್ದೆ ಮಾಡುತ್ತೇನೆ" ಎಂದಾಗ ಮಾತ್ರ ನನಗೆ ಎಲ್ಲಿಲ್ಲದ ಕೋಪ ಬಂತು. ಆದರೇನು, courtship etiquette ಮೀರಲಾದೀತೇ - ಸಮಯ, ಸಂದರ್ಭ. ಕೊನೆಗೂ ತನ್ನ ಹಕ್ಕಿನ ವಿಂಡೋ ಸೀಟನ್ನು ಪಡೆದ ನೆಮ್ಮದಿಯಲ್ಲಿ ಕಿಟಕಿ ಮುಚ್ಚಿ ನಿದ್ದೆ ಹೋದಳು ಹುಡುಗಿ.

ಕಿಟಕಿ ಸೀಟಿಗಾಗಿ ಹೀಗೆ ಶುರುವಾದ ನಮ್ಮ ಕಾದಾಟ ಬಹಳಷ್ಟು ದಿನ ಮುಂದುವರಿಯಿತೆನ್ನಿಸುತ್ತದೆ. ಪ್ರತಿ ಬಾರಿಯೂ ನಾನೇ ತ್ಯಾಗ ಮಾಡಿ ದೊಡ್ಡವನಾಗುತ್ತಿದ್ದೆ. ಆಗೊಮ್ಮೆ ಈಗೊಮ್ಮೆ ನಾನು ಹಾಗೆ ತ್ಯಾಗ ಮಾಡದಿದ್ದರೆ "ನೀವು 'ಯಾವಾಗಲೂ' ಹೀಗೆಯೇ" ಎನ್ನುವ ಬಾಣ ಸಿದ್ಧವಾಗಿರುತ್ತಿತ್ತು. ಹಾಗೆಂದು ಅವಳಿಗೇನು ಕಿಟಕಿಯ ಬಳಿ ಕೂಡುವ ಹುಚ್ಚೇನೂ ಇದ್ದಂತಿರಲಿಲ್ಲ. ಇನ್ನು ಕಿಟಕಿಯ ಹೊರಗೆ ನೋಡುವ ವಿಚಾರವಂತೂ ದೂರವೇ ಉಳಿಯಿತು. ಬೇರೆ ಯಾರ ಜೊತೆ ಹೋದರೂ ಕಿಟಕಿಯ ಬಗ್ಗೆ ಚಕಾರವನ್ನೂ ಎತ್ತುತ್ತಿರಲಿಲ್ಲ. ಬಹಳಷ್ಟು ಸಾರಿ ತನಗೆ ಗಾಳಿ ಆಗುವುದಿಲ್ಲ ಎಂದು ಹೇಳಿ ಅವರಿಗೇ ಬಿಟ್ಟುಕೊಡುತ್ತಿದ್ದಳು. ಅವಳ ತಕರಾರೆಲ್ಲಾ ನನ್ನೊಡನೆ ಪಯಣಿಸುವಾಗ ಮಾತ್ರ. ಆಗ ಮಾತ್ರ ಕಿಟಕಿ ಅವಳಿಗೆ ಹಕ್ಕಿನ ವಿಷಯವಾಗುತ್ತಿತ್ತು.

ಹಾಗೆಂದು ಕಿಟಕಿಗೋಸ್ಕರ ನನ್ನದೇನು ಹಕ್ಕಿನ ಕಾದಾಟವಲ್ಲ; ಅಥವ ಅದೊಂದು ಅನಿವಾರ್ಯವೂ ಅಲ್ಲ. ಪ್ರಯಾಣ ಅನಿವಾರ್ಯವಾದಾಗ ಎಲ್ಲೋ ಹೇಗೋ ನಿಂತುಕೊಂಡೂ ಪಯಣಿಸಿದ್ದಿದೆ. ಆದರೆ ಕಿಟಕಿಯ ಪಕ್ಕ ಕುಳಿತೂ ಅದರ ಸದುಪಯೋಗ ಪಡೆಯದಿದ್ದರೆ ಮಾತ್ರ ಹೊಟ್ಟೆ ಉರಿಯುತ್ತದೆ. ಹಾಗೆ ನೋಡಿದರೆ ಕಿಟಕಿಯೊಂದೇ ಅಲ್ಲ, ಪಯಣದ ಬಗ್ಗೆ ನನಗೆ ನನ್ನದೇ ಆದ ಅನೇಕ ಗೊತ್ತುಪಾಡುಗಳಿವೆ. ಪಯಣ ತೀರ ಅನಿವಾರ್ಯವಲ್ಲದಿದ್ದರೆ ನಾನು ಈ ಗೊತ್ತುಪಾಡುಗಳನ್ನು ಸಾಕಷ್ಟೇ ಕಟ್ಟುನಿಟ್ಟಾಗಿ ಅನುಸರಿಸುತ್ತೇನೆ, ಮತ್ತು ಅಂಥಾ ಪ್ರಯಾಣಕ್ಕಾಗಿ ಕಾಯುತ್ತೇನೆ, ಒಂದು ಬಸ್ಸು ಮಿಸ್ಸಾದರೂ ಪರವಾಗಿಲ್ಲ (ಅದರಿಂದಲೇ ನಾನು ತೀರಾ 'ನಚ್ಚು' ಎಂಬ ಹಣೆಪಟ್ಟಿಯನ್ನೂ ಸಂಪಾದಿಸಿದ್ದೇನೆ).

ಪ್ರಯಾಣಕ್ಕೆ ಬಸ್ಸಿಗಿಂತ ರೈಲಾದರೆ ಸೂಕ್ತ; ಅದು ಸ್ವಚ್ಚವಾಗಿ ಥಳಥಳಿಸುತ್ತಿರಬೇಕಿಲ್ಲವಾದರೂ ಗಲೀಜಾಗಿರಬಾರದು; ಬಸ್ಸೇ ಆದರೆ ಅದು ವಿಡಿಯೋ ಕೋಚ್ ಆಗಿರಬಾರದು; 'ಸಂಗೀತ'ದ ಗಲಾಟೆಯಿರಬಾರದು; ಬಸ್ಸಿನಲ್ಲಿ ತೀರ ಹಿಂದಲ್ಲದ ತೀರಾ ಮುಂದಲ್ಲದ ಮಧ್ಯ ಭಾಗದ ಸೀಟಾದರೆ ಉತ್ತಮ; ಒಬ್ಬನೇ ಪಯಣಿಸುವಾಗ ಇಬ್ಬರ ಸೀಟಾದರೆ ಒಳ್ಳೆಯದು; ಅಷ್ಟಾದರೂ ಆ ಎರಡನೆಯ ಸೀಟಿಗೆ ಬರುವವರು ಯಾರೋ ಎಂಬ ಟೆನ್ಷನ್ ತಪ್ಪಿದ್ದಲ್ಲ. ಯಾರೂ ಬರದಿದ್ದರೆ ಒಳ್ಳೆಯದು. ಹಾಗೊಂದುವೇಳೆ ಬಂದರೂ ಅದು ಕಿರಿಕಿರಿಯ ಪ್ರಯಾಣಿಕನಲ್ಲದಿದ್ದರೆ ನಾನು ಧನ್ಯ. ಅದೇನೇ ಇರಲಿ, ಆ ಪ್ರಾಣಿ ಬಂದು ಕೂಡುವವರೆಗೂ ಜೀವಕ್ಕೆ ನೆಮ್ಮದಿಯಿಲ್ಲ.

ಇದು ನಿಮಗೆ ತಮಾಷೆಯೆನ್ನಿಸಬಹುದು. ಆದರೆ ನಗಬೇಡಿ, ಅನುಭವದಿಂದ ಹೇಳುತ್ತೇನೆ; ನಿಮ್ಮ ಆ "ಸಹ" ಪ್ರಯಾಣಿಕರಿಗೆ ನಿಮ್ಮ ಪಯಣವನ್ನೇ ಗಬ್ಬೆಬ್ಬಿಸಿಬಿಡುವ ತಾಕತ್ತಿರುತ್ತದೆ. ಈ ಪಕ್ಕಪಯಣಿಗರ ತರಹೇವಾರಿ ರಖಂಗಳನ್ನು ನೋಡಿಬಿಟ್ಟಿದ್ದೇನೆ. ಕೆಲವರಿರುತ್ತಾರೆ. ಅವರು ನಿಮ್ಮ ಪಕ್ಕ ಕುಳಿತಿರುವುದೇ ಗೊತ್ತಾಗುವುದಿಲ್ಲ ನಿಮಗೆ. ತಾವಾಯಿತು, ತಮ್ಮ ಪುಸ್ತಕವೋ/ಮ್ಯಾಗಜೀನೋ ಆಯಿತು. ಇನ್ನು ಕೆಲವರು ನಿಮ್ಮತ್ತ ಒಂದು ಸೌಜನ್ಯದ ಮುಗುಳ್ನಗು ಎಸೆಯುತ್ತಾರೆ; ಹಿತಮಿತವಾಗಿ ಮಾತಾಡುತ್ತಾರೆ. ಆಸಕ್ತಿ ಕುದುರಿದರೆ ಪಯಣದುದ್ದಕ್ಕೂ ಒಳ್ಳೆಯ ಕಂಪನಿಯಾಗಬಲ್ಲರು ಇವರು. ಆದರೆ ಈ ಎರಡೂ ತರಹೆಯ ಜನ ಅಲ್ಪಸಂಖ್ಯಾತರು. ಇವರಿಗಿಂತಲೂ ಮುಂದುವರೆದ ಇನ್ನೊಂದು ಪಂಗಡವಿದೆ. ಇವರಿಗೆ ಮೌನವೆಂದರೆ ಆಗದು. ಯಾರಾದರೂ ಸುಮ್ಮನೆ ಇರುವುದನ್ನು ಕಂಡರೆ ಆಗದು. ವಿನಾಕಾರಣ ನಿಮ್ಮನ್ನು ಮಾತಿಗೆಳೆಯುತ್ತಾರೆ. ನಿಮ್ಮ ವೈಯಕ್ತಿಕ ವಿವರಗಳೆಲ್ಲ ಇವರಿಗೆ ಬೇಕು. ನೀವು ಕೆಲಸ ಮಾಡುವುದೆಲ್ಲಿ (ಕೆಲಸ ಮಾಡುತ್ತೀರಾ?), ಸಂಬಳ ಎಷ್ಟು, ಎಷ್ಟು ಇನ್ಕಂ ಟ್ಯಾಕ್ಸ್ ಕಟ್ಟುತ್ತೀರಿ, ಮಕ್ಕಳೆಷ್ಟು, ಕೊನೆಗೆ ಹೆಂಡತಿಯರೆಷ್ಟು ಎನ್ನುವವರೆಗೂ ಎಲ್ಲ ವಿವರಗಳೂ ಬೇಕು. ಅಷ್ಟೆಲ್ಲ ಕೇಳಿದಮೇಲೂ ಕೊನೆಗೆ "ನೀವು ಬಿಡೀಪ್ಪಾ, ಐಟಿ ಜನ. ನಿಮ್ಮಿಂದಲೇ ಬೆಲೆಯೆಲ್ಲ ಜಾಸ್ತಿಯಾಗಿ ನಮ್ಮಂಥ ಬಡವರ ಹೊಟ್ಟೆ ಮೇಲೆ ಒದ್ದೆಬಟ್ಟೆ" ಎಂದು ಮೂತಿ ದಬ್ಬುತ್ತಾರೆ.

ಇದು ಒಂದು ತರಹೆಯಾದರೆ ಇನ್ನು ಕೆಲವರಿರುತ್ತಾರೆ. ಅವರಿಗೆ ನಿಮ್ಮ ಅಸ್ತಿತ್ವವೇ ಲೆಕ್ಕಕ್ಕಿರುವುದಿಲ್ಲ. ಬಂದವರೇ ನಿಮ್ಮನ್ನೂ ಒತ್ತರಿಸಿಕೊಂಡು ಧೊಪ್ಪನೆ ಕೂತಿದ್ದೇ ಸೈ. ಇದು ಇಬ್ಬರ ಸೀಟು, ನನ್ನ ಭಾಗ ಇದರ ಅರ್ಧ ಮಾತ್ರ ಎಂದು ಅವರಿಗೆ ಅನಿಸುವುದೇ ಇಲ್ಲ. ತಮ್ಮದೇ ಸೀಟಿನ ಮೂಲೆಯಲ್ಲಿ ನೀವೊಂದು ಕಸದಂತೆ ಬಂದು ಕುಳಿತಿದ್ದೀರೆಂದೇ ಅವರ ಅನಿಸಿಕೆ. ಆದ್ದರಿಂದಲೇ ನಿಮ್ಮನ್ನು ಆದಷ್ಟು ಒತ್ತರಿಸಿ ಉಳಿದ ಜಾಗದ ಸದುಪಯೋಗ ಮಾಡಿಕೊಳ್ಳುತ್ತಾರೆ. ಸಣ್ಣಗಿರುವುದು ಎಷ್ಟು ಹೀನಾಯ ಎಂದು ನಿಮಗನ್ನಿಸುವುದೇ ಆಗ. ಕೂತವರು ಸುಮ್ಮನೆ ಕೂಡುತ್ತಾರೆಯೇ, ಇಲ್ಲ. ಮೊಬೈಲ್ ತೆಗೆದು ಯಾರೊಡನೆಯೋ ಜೋರಾಗಿ ಸಂಭಾಷಿಸತೊಡಗುತ್ತಾರೆ, ಎಲ್ಲ ಹಾವಭಾವಗಳೊಡನೆ. ಆ ಕಡೆ ಇರುವ ಪ್ರಾಣಿಗೆ ತಮ್ಮ ಕೈಕರಣಗಳೊಂದೂ ಕಾಣದು ಎಂದು ಇವರಿಗೆ ಅನಿಸದು. ನಿಸ್ಸಂಕೋಚವಾಗಿ ನಿಮ್ಮ ಕರ್ಣಪಟಲದ ಮೇಲೆ ದಾಳಿಗೈಯುತ್ತಾ ಅವರ ವೈಯಕ್ತಿಕ ವಿವರಗಳನ್ನೆಲ್ಲಾ ನಿಮ್ಮ ಮುಂದರಚುತ್ತಾರೆ - ಅದು ಪ್ರೇಯಸಿಯೊಡನಿನ ಲಲ್ಲೆಯಿರಬಹುದು, ಅತ್ತೆಸೊಸೆಯರ ಜಗಳವಿರಬಹುದು, ಸಾಲ ವಸೂಲಿಯಿರಬಹುದು, ಆಸ್ತಿ ತಗಾದೆಯಿರಬಹುದು. ಇಲ್ಲದಿದ್ದರೆ ಮೊಬೈಲಿನಿಂದ ಜೋರಾಗಿ ಸಂಗೀತಸುಧೆಯನ್ನು ಹರಿಸತೊಡಗುತ್ತಾರೆ. ನಿಮ್ಮ ಮುಂದೆ ಅವರ ಮೊಬೈಲ್ ಕಿಂದರಿ ಏನೂ ಉಪಯೋಗವಿಲ್ಲವೆಂದು ಅವರಿಗೆ ತಿಳಿಯುವುದೇ ಇಲ್ಲ. ಇದೇನೂ ಇಲ್ಲದಿದ್ದರೂ ಕುಳಿತಹಾಗೇ ನಿಮಗೊರಗಿ ನಿಶ್ಚಿಂತೆಯಿಂದ ನಿದ್ದೆಹೋಗುತ್ತಾರೆ. ಕಿಟಕಿಯ ಪಕ್ಕ ಕುಳಿತವರು ನೀವಾದರೂ, ಅದರ ಬಾಗಿಲಿನ ಸ್ವಾಮ್ಯ ಮಾತ್ರ ಅವರದೇ. ಅದನ್ನು ಅವರಿಗೆ ಬೇಕಾದಾಗ ಮುಚ್ಚುವುದು, ತೆರೆಯುವುದು ಮಾತ್ರ ನಿಮ್ಮ ಕರ್ತವ್ಯ. ನಿಮ್ಮ ದುರದೃಷ್ಟಕ್ಕೆ ನಿಮಗೆ ಸೆಖೆಯಾದಾಗ ಅವರಿಗೆ ಚಳಿಯೂ, ನಿಮಗೆ ಚಳಿಯಾದಾಗ ಅವರಿಗೆ ಸೆಖೆಯೂ ಆಗುತ್ತದೆ.

ಇದನ್ನೆಲ್ಲಾ ಹೇಗೋ ಸಹಿಸಿಕೊಳ್ಳೋಣವೆಂದರೆ ಇನ್ನೊಂದು ಬಾಧೆಯಿದೆಯಲ್ಲ, ಅದು ಮಾತ್ರ ಸಹಿಸಲಸದಳ. ಅದು ಜರದಾ-ಬೀಡಾ ಜಗಿಯುವವರದ್ದು. ಸದಾ ಸರ್ವದಾ ಜಗಿಯುತ್ತಲೇ ಇರಬೇಕು, ಉಗಿಯುತ್ತಲೇ ಇರಬೇಕು. ಇವರ ಪಾಲಿಗೆ ಕಿಟಕಿ ಕೇವಲ ಪೀಕುದಾನಿಯಷ್ಟೇ. ಮೊದಲುಮೊದಲು ನಿಮ್ಮ ಅನುಮತಿ ಕೇಳುತ್ತಾರೆಂದುಕೊಂಡರೂ ಎಷ್ಟು ಸಲ ಅಂತ ಅನುಮತಿ ಕೇಳುತ್ತಲೇ ಇರುವುದು? ನೀವಾದರೂ ಏನಂದುಕೊಳ್ಳುತ್ತೀರಿ. ಆದ್ದರಿಂದ ನಿಮ್ಮ ಅನುಮತಿಗೂ ಕಾಯದೇ ಎದ್ದು ನಿಮ್ಮ ಮೇಲೆ ಬಗ್ಗಿ ತಲೆ ಹೊರಚಾಚಿ ಸರಿಯಾಗಿ ತುಪ್ಪಿ ಕುಳಿತುಕೊಳ್ಳುತ್ತಾರೆ, ಮತ್ತೊಂದು ಗುಕ್ಕಿಗೆ (ಕೆಳಗೆ ಯಾರಾದರೂ ಬಿಳೀಬಟ್ಟೆ ಧರಿಸಿ ಹೋಗುತ್ತಿದ್ದರೆ, ಗೋವಿಂದ). ಒಂದುರೀತಿಯಲ್ಲಿ ಅವರು ನಿಮ್ಮ ಅನುಮತಿ ಕೇಳದಿರುವುದೇ ಸರಿ. ಅನುಮತಿ ಕೇಳಲು ನಿಮ್ಮ ಮುಂದೆ ಬಾಯಿಬಿಟ್ಟರೆ ನಿಮಗೇ ಕಷ್ಟ.

ಇನ್ನು ನೀವೇನಾದರೂ ಘಾಟ್ ಸೆಕ್ಷನ್ನಿನಲ್ಲಿ ಪಯಣಿಸುತ್ತಿದ್ದರೋ, ನಿಮ್ಮನ್ನು ದೇವರೇ ಕಾಪಾಡಬೇಕು. ಘಟ್ಟದ ರುದ್ರಸೌಂದರ್ಯವನ್ನು ಸವಿಯಬೇಕೆಂದು ನೀವು ಬಸ್ಸಿನಲ್ಲಿ ಪಯಣಿಸುವಿರಾದರೆ ನೀವು ಅಷ್ಟು ಆಸೆಯಿಟ್ಟುಕೊಳ್ಳದಿರುವುದೇ ಒಳ್ಳೆಯದು. ಬಸ್ಸು ಒಂದೆರಡು ತಿರುವು ತಿರುಗಿದ್ದೇ ತಡ, ಪಕ್ಕದಿಂದ ಬೇಡಿಕೆ ಬರುತ್ತದೆ "ವಾಂತಿ ಮಾಡಬೇಕು" ಪ್ರಕೃತಿಯ ಕರೆ, ಇಲ್ಲ ಅನ್ನುವಂತೆಯೇ ಇಲ್ಲ. ಅದೇನು ಬಸ್ಸಿನಲ್ಲಿ ವಾಂತಿಮಾಡುವುದು ಸಾಂಕ್ರಾಮಿಕ ರೋಗವೋ ಏನೋ, ಮತ್ತೊಂದೆರಡು ತಿರುವು ಹೋಗುವಷ್ಟರೊಳಗೆ ಇಡೀ ಬಸ್ಸಿಗೆ ಬಸ್ಸೇ ಕಿಟಕಿಯಿಂದ ತಲೆ ಹೊರಚಾಚಿ ವಾಂತಿಮಾಡಿಕೊಳ್ಳುತ್ತಿರುತ್ತದೆ. ಆಗಂತೂ ನೀವು ವಾಂತಿ ಮಾಡದಿದ್ದರೂ ಕಿಟಕಿಯನ್ನು ಮುಚ್ಚಿ ತೆಪ್ಪಗೆ ಕೂತುಕೊಳ್ಳುವುದೇ ವಾಸಿ. ಇನ್ನು, ಹಿಂದಿನವರಿಗೆ ಯಾವುದೇ ಪೂರ್ವಸೂಚನೆ ಕೊಡದೆ ತಲೆ ಹೊರಹಾಕಿ ವಾಂತಿಮಾಡುವ ಭೂಪ-ಭೂಪತ್ನಿಯರೂ (ವೈಯಾಕರಣರು ಮನ್ನಿಸಬೇಕು) ಇರುತ್ತಾರೆ. ಆಗಂತೂ ಮನೆ ತಲುಪಿದ ಮೇಲೆ ನಿಮಗೆ ಸಚೇಲಸ್ನಾನವೇ ಗಟ್ಟಿ. ಅದುವರೆಗೂ ಮತ್ತೊಮ್ಮೆ ಮುಖಪ್ರಕ್ಷಾಳನವಾಗದಂತೆ ಕಿಟಕಿ ಭದ್ರಮಾಡಿಕೊಂಡು ಮನೆಯ ಬರವನ್ನೇ ಹಾರೈಸುತ್ತಾ ಮುದುರಿ ಕೂಡುವುದಷ್ಟೇ ನಿಮ್ಮ ಕೆಲಸ. ಕಿಟಕಿಗೆ ಆಸೆಪಟ್ಟಿರಲ್ಲವೇ, ಅದರ ಫಲ ಇದು. ಆಸೆಯೇ ದುಃಖಕ್ಕೆ ಮೂಲಕಾರಣ ಎಂದು ಬುದ್ಧ ಹೇಳಿದ್ದ, ಆದರೆ ನಿಮಗಂತು ಬುದ್ಧಿ ಬರಲಿಲ್ಲ. "ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ..."

ಇಷ್ಟಾದರೂ ಕಿಟಕಿಯ ಸೆಳೆತವಂತೂ ಹೋಗದು. ಕಿಟಕಿ ಪಕ್ಕದ ಸೀಟಿನಲ್ಲಿ ಏನೋ ಆಕರ್ಷಣೆ ಇದೆ. ಈ ಮಾತನ್ನು ನಿಮ್ಮಲ್ಲಿ ಬಹಳಷ್ಟು ಮಂದಿ ಒಪ್ಪುತ್ತೀರಿ ಎಂದು ನನಗೂ ಗೊತ್ತು. ಪಯಣಕ್ಕೆ ಯಾವ ಸೀಟಾದರೇನು, ಅದು ಎತ್ತಿ ಹಾಕದಿದ್ದರೆ ಸರಿ ಎನ್ನುವ ಸೌಕರ್ಯವಾದಿಗಳೂ ಸಹ, ಅವಕಾಶ ಸಿಕ್ಕರೆ ಕಿಟಕಿಯ ಸೀಟನ್ನೇ ಬಯಸುತ್ತಾರೆನ್ನುವುದು ನನ್ನ ಅನುಭವಕ್ಕೆ ಬಂದ ಸತ್ಯ. ಇಷ್ಟಕ್ಕೂ ಅಂಥಾದ್ದೇನಿದೆ ಕಿಟಕಿ ಪಕ್ಕದಲ್ಲಿ? ಇನ್ನೇನಿಲ್ಲದಿದ್ದರೂ ಆರಾಮವಾಗಿ ಪಕ್ಕಕ್ಕೊರಗಿ ಕೂಡಲು ಆಧಾರ ಸಿಗುತ್ತದೆ. ಮತ್ತೆ ತುಂಬಿದ ಬಸ್ಸಿನಲ್ಲಿ ನೀವು ಕಿಟಕಿಯ ಅಕ್ಕದ (ಕಿಟಕಿ ಪಕ್ಕದ ಪಕ್ಕ!) ಸೀಟಿನಲ್ಲೇನಾದರೂ ಕುಳಿತರೆ ನಿಮ್ಮ ತಲೆಯಮೇಲೇ ಬುಟ್ಟಿಯನ್ನಿಟ್ಟು ನಿಮ್ಮ ಹೆಗಲಮೇಲೆ ಪೃಷ್ಠವನ್ನೂರಿ ನಿಂತೇ ಪಯಣಿಸುವವರ ಕೋಟಲೆಯಿದೆ. ಅದರಿಂದ ತಪ್ಪಿಸಿಕೊಳ್ಳಬೇಕಾದರೆ ಕಿಟಕಿ ಪಕ್ಕದ ಸೀಟೇ ಉತ್ತಮ. ಅಲ್ಲದೇ ಕಿಟಕಿ ಪಕ್ಕ ಒಳ್ಳೆ ಗಾಳಿಯಾಡುತ್ತದೆ. ಅಷ್ಟು ಬಿಟ್ಟರೆ ಕಿಟಿಕಿ ಸೀಟಿನ "ಐಹಿಕ"ಉಪಯೋಗಗಳೇನೂ ಕಾಣೆ. ಆದರೆ ಕಿಟಕಿ ಪಕ್ಕದ ಪ್ರಯಾಣದ ನಿಜವಾದ ಸುಖವೇ ಬೇರೆ.

ಮೇಲೆ ಹೇಳಿದ ಕೋಟಲೆ-ಕಿರಿಕಿರಿಗಳೊಂದೂ ಇಲ್ಲದ ಕಿಟಕಿ ಸೀಟು ನಿಮಗೆ ದಕ್ಕಿತೆಂದುಕೊಳ್ಳಿ. ನಿಮ್ಮ ಮುಂದಿನ ಮೂರೋ ಐದೋ ಹತ್ತೋ ಗಂಟೆಗಳ ಪಯಣದದಾರಿ, ನಿಮ್ಮದೇ ಭಾವಪ್ರಪಂಚದ ಪಯಣಕ್ಕೆ ರಹದಾರಿ. ಬಸ್ಸು ಹೊರಟ ಮೊದಲ ಹತ್ತು-ಹದಿನೈದು ನಿಮಿಷದ ಗದ್ದಲ ಗಲಿಬಿಲಿ ಶಾಂತವಾಗುತ್ತಿದ್ದಂತೆ ನಿಧಾನವಾಗಿ ಬಸ್ಸಿನ ಒಳ ಆವರಣ ಮರೆಯುತ್ತಾ ಹೋಗುತ್ತದೆ. ಹೊರಗಡೆ ಕಿಟಕಿಯ ಚೌಕಟ್ಟಿನ ಮಧ್ಯೆ ಓಡುವ ದೃಶ್ಯಾವಳಿ, ತೀಡುವ ಗಾಳಿ, ಬಸ್ಸಿನ ಎಂಜಿನ್ನಿನ ಏಕತಾನದ ನಾದ ಎಲ್ಲವೂ ಸೇರಿ ನಿಧಾನಕ್ಕೆ ಹೊಸದೊಂದು ಪ್ರಪಂಚವನ್ನು ತೆರೆದಿಡುತ್ತದೆ. ಹೊರಗೆ ಓಡುತ್ತಿರುವ ಬಸ್ಸಿಗೆ ಸಮಾನಾಂತರವಾಗಿ ನಿಮ್ಮ ಮನಸ್ಸಿನಲ್ಲೂ ಆಲೋಚನೆಗಳ ಬಸ್ಸು ಓಡತೊಡಗುತ್ತದೆ. ಆಲೋಚನೆಗಳು ನಿಧಾನವಾಗಿ ಕಲ್ಪನೆಗಳಾಗುತ್ತವೆ, ಕನಸಾಗುತ್ತವೆ. ಹಾಗೆಂದು ನೀವೇನು ನಿದ್ದೆ ಮಾಡಿಲ್ಲ. ಹೊರಗೆ ನಡೆಯುವ ಪ್ರತಿಯೊಂದು ವಿದ್ಯಮಾನಗಳನ್ನೂ ಗಮನಿಸುತ್ತಿದ್ದೀರಿ, ಅವೆಲ್ಲವೂ ನಿಮ್ಮ ಭಾವಪ್ರಪಂಚದಲ್ಲಿ ದಾಖಲಾಗುತ್ತಿವೆ - ಓಡುವ ಮರ-ಗಿಡಗಳು, ರಸ್ತೆ ಕಲ್ಲುಗಳು, ವಿದ್ಯುತ್ ಕಂಬಗಳು, ಕಂಬದಿಂದ ಕಂಬಕ್ಕೆ ಏರುತ್ತಾ ಇಳಿಯುತ್ತಾ ನರ್ತಿಸುವ ತಂತಿಗಳು, ಮಧ್ಯೆ ಮಧ್ಯೆ ಬಂದುಹೋಗುವ ಊರುಗಳು, ಅಲ್ಲೆಲ್ಲಾ ಕಳ್ಳೇಕಾಯಿ, ಸೌತೇಕಾಯಿ, ಮಿಠಾಯಿ ವಡೆ ಮಾರುವ ಹುಡುಗರು, ಊರು ಬದಲಾಗುತ್ತಿದ್ದಂತೆಯೇ ಬದಲಾಗುವ ಅವರ ವೇಷಭೂಷಣಗಳು, ನಡೆ-ನುಡಿಗಳು, ದಾರಿಯಲ್ಲಿ ಅಡ್ಡಹಾಯುವ ಬೆಟ್ಟಗುಡ್ಡ, ನದಿಗಳು, ದಾರಿಯುದ್ದಕ್ಕೂ ಹಾದುಹೋಗುವ ಸುಂದರವಾದ ಹಳ್ಳಿಗಳು, ಮನೆಗಳ ಚಿಮಣಿಯಿಂದ ಏಳುತ್ತಿರುವ ತೆಳ್ಳನೆ ಹೊಗೆ, ಹೊಲದಲ್ಲಿ ಕಣ್ಣಿ ಕಿತ್ತುಕೊಂಡು ಕಿವಿಯಲ್ಲಿ ಗಾಳಿಹೊಕ್ಕಂತೆ ಓಡುತ್ತಿರುವ ಬಿಳೀ ಕರು, ಕನಸಿನೂರಿನ ದಾರಿಗಳಂತೆ ಅಂಕುಡೊಂಕಾಗಿ ಏರಿಳಿದು ಮರೆಯಾಗುವ ಒಳದಾರಿಗಳು; ಕೆಲವೊಮ್ಮೆಯಂತೂ ಅಲ್ಲೇ ಇಳಿಯಬೇಕೆನ್ನಿಸುತ್ತದೆ, ಆದರೆ ನೀವು ಟಿಕೇಟು ತೆಗೆದುಕೊಂಡಿರುವುದು ಕೊನೆಯ ಸ್ಟಾಪಿಗೆ. ಇಲ್ಲಿ ಇಳಿದರೆ ಮತ್ತೆ ನಿಮ್ಮೂರು ಸೇರುವುದು ಕಷ್ಟ.

ಚಲಿಸುತ್ತಿರುವ ಬಸ್ಸಿನ ಎಂಜಿನ್ನಿನ ಏಕತಾನದ ನಾದವೂ ಮನಸ್ಸಿನಲ್ಲಿ ಅದೊಂದು ಆಧಾರಶ್ರುತಿಯನ್ನು ನಿರ್ಮಿಸುತ್ತದೆ. ಸಾಮಾನ್ಯವಾಗಿ ನನ್ನಷ್ಟಕ್ಕೆ ನಾನು ಪಯಣಿಸುತ್ತಿರುವಾಗ ಮನಸ್ಸಿನಲ್ಲಿ ಯಾವುದೋ ರಾಗವೋ ರಚನೆಯೋ ಗುನುಗುತ್ತಿರುತ್ತಿದೆ. ಅನೇಕ ಸಲ ಎಚ್ಚೆತ್ತು ಗಮನಿಸಿದಾಗ ಅದು ಎಂಜಿನ್ನಿನ ಶ್ರುತಿಗೆ ಅನುಸಾರವಾಗಿ ಹೋಗುತ್ತಿರುವುದನ್ನು ಗಮನಿಸಿ ಆಶ್ಚರ್ಯಪಟ್ಟಿದ್ದೇನೆ. ಅಷ್ಟೇಅಲ್ಲ, ನೀವು ನಿಯಮಿತ ದಾರಿಯಲ್ಲಿ ಪಯಣಿಸುತ್ತಿದ್ದೀರಾದರೆ ನಿಮ್ಮ ಆಲೋಚನೆಯ ಅಲೆಯೂ ಅದೊಂದು ರೀತಿಯ ನಿಶ್ಚಿತತೆಯನ್ನು ಪಡೆಯುತ್ತದೆ. ಉದಾಹರಣೆಗೆ ನಾನು ಸಾಮಾನ್ಯವಾಗಿ ಮೈಸೂರು ಬೆಂಗಳೂರು ಮಾರ್ಗವಾಗಿ ಪಯಣಿಸುವಾಗೆಲ್ಲಾ ಒಂದೊಂದು ಊರು ಬರುವಹೊತ್ತಿಗೆ ಆಲೋಚನೆ ಕೆಲವೊಂದು ನಿರ್ಧರಿತ ದಿಕ್ಕಿಗೆ ಹೊರಳಿಕೊಳ್ಳುತ್ತದೆ. ಚನ್ನಪಟ್ಟಣ ಬಂದಂತೆಲ್ಲ ನಮ್ಮ ತಾತನವರ ಮನೆ, ನನ್ನ ಬಾಲ್ಯದ ನೆನಪುಗಳು ದಟ್ಟವಾಗುತ್ತಾ ಹೋಗುತ್ತದೆ. ಅವರ ಮನೆಯ ಕೊಟ್ಟಿಗೆ, ಅಲ್ಲಿ ತುಂಗೆ ಕರುವಿನೊಡನೆ ಗಂಟೆಗಟ್ಟಲೆ ಹರಟುತ್ತಾ ಕಳೆಯುತ್ತಿದ್ದುದು, ತಾತನವರ ಮನೆಯ ದೇವರಪೂಜೆಯ ವೈಭವ, ಪೂಜೆಯ ಸಮಯದಲ್ಲಿ ನಡೆಯುತ್ತಿದ್ದ ವೇದಘೋಷ, ಮತ್ತೆ ನಾನೂ ನನ್ನ ಓರಗೆಯ ಕಿಟ್ಟಿಯೂ ಅನೇಕಬಾರಿ ಅಭಿನಯಿಸುತ್ತಿದ್ದ ಕರ್ಣಾರ್ಜುನರ ಯುದ್ಧ, ಭೀಮ-ದುರ್ಯೋಧನರ ಕಾಳಗ - ಮನೆಯ ಅಂಗಳವೇ ನಮ್ಮ ರಣರಂಗ, ಮಟ್ಟಾಳೆ ಕಸಬರಿಕೆಯ ಕಡ್ಡಿಯೇ ಬಿಲ್ಲು ಬಾಣ, ಹಾಕಿದ್ದ ಶರಟಿನ ಹಿಂಬದಿಯೇ ನಮ್ಮ ಅಕ್ಷಯ ತೂಣೀರ; ಆಗೀಗ ಮನೆಯ ಮುಂದೆ ಕಟ್ಟಿರುತ್ತಿದ್ದ ಬಾಳೆಯ ಕಂದೇ ಗದೆ. ಹೀಗೊಮ್ಮೆ ದುರ್ಯೋಧನನಾದ ನಾನು (ನನಗೆ ದಕ್ಕುತ್ತಿದ್ದದ್ದು ಯಾವಾಗಲೂ ಕೆಟ್ಟ ಪಾತ್ರಗಳೇ), ಭೀಮನಾದ ಕಿಟ್ಟಿಯ ಮುಖಕ್ಕೆ ಬಾಳೆ ಕಂದಿನ ಗದೆಯಿಂದ ಅಪ್ಪಳಿಸಿದ್ದರ ಪರಿಣಾಮವಾಗಿ ಅವನ ಕಣ್ಣು ಹೋಗಿಬಿಡುವುದರಲ್ಲಿತ್ತು. ತತ್ಪರಿಣಾಮವಾಗಿ ಇಬ್ಬರಿಗೂ ಭೀಷ್ಮಪಿತಾಮಹರಿಂದ ಸರಿಯಾಗಿ ಲಾತಾಗಳೂ ಬಿದ್ದಿದ್ದವು.

ಸರಿ, ಇನ್ನೇನು ಮದ್ದೂರು ಬಂತು. ಇಳಿದು ಊಟಮುಗಿಸಿ ಮತ್ತೆ ಗಾಡಿ ಹತ್ತಿದರೆ ಮಂಡ್ಯದವರೆಗು ಒಂದಿಪ್ಪತ್ತು ನಿಮಿಷ ಸಣ್ಣ ಜೋಂಪು. ಪಯಣದುದ್ದಕ್ಕೂ ಮನಸ್ಸು ಯಾವುದಾದರೂ ರಾಗವನ್ನೋ ರಚನೆಯನ್ನೋ ಗುನುಗುತ್ತಿರುತ್ತದೆ ಎಂದೆನಷ್ಟೇ. ಈ ಮಾರ್ಗದಲ್ಲಿ ಅದರಲ್ಲೂ ಒಂದು ನಿರ್ದಿಷ್ಟ pattern ಇದೆ ಎಂಬುದನ್ನು ಇತ್ತೀಚೆಗಷ್ಟೇ ಗಮನಿಸಿದೆ. ಮಂಡ್ಯ ಬಿಟ್ಟು ಒಂದು ಹತ್ತು ಹದಿನೈದು ನಿಮಿಷ ಬಾಬುರಾಯನ ಕೊಪ್ಪಲು ಬರುವ ಹೊತ್ತಿಗೆ, ಅದೇನೇ ಯೋಚಿಸುತ್ತಿದ್ದರೂ ಮನಸ್ಸು ಅಪ್ರಯತ್ನತಃ ತೋಡಿ ರಾಗದ ಮಟ್ಟುಗಳನ್ನು ಗುನುಗುನಿಸತೊಡಗುತ್ತದೆ. ಇದನ್ನು ಬಹುಕಾಲ ಗಮನಿಸಿರಲಿಲ್ಲ, ಆದರೆ ಎರಡುಮೂರು ಬಾರಿ ಗಮನಿಸಿದಾಗ ಆಶ್ಚರ್ಯವಾಗಿತ್ತು, ಅದೇಕೆ ಆ ಸ್ಥಳದಲ್ಲೇ ಇದೇ ರಾಗ ನೆನಪಿಗೆ ಬರುತ್ತದೆ? ಉತ್ತರಮಾತ್ರ ಹೊಳೆದಿರಲಿಲ್ಲ. ಮನಸ್ಸಿನಲ್ಲೇ ಒಂದು ಕಿರು ಆಲಾಪನೆ ಮುಗಿದು, ಪಲುಕು ತಾನಾಗೇ "ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ..." ಎಂದು ಶುರು ಮಾಡುವ ಹೊತ್ತಿಗೆ ಬಸ್ಸು ಕಾವೇರಿಯ ಮೊದಲ ಕವಲನ್ನು ದಾಟಿ ಶ್ರೀರಂಗಪಟ್ಟಣದಲ್ಲಿರುತ್ತದೆ. ಕಾವೇರಿಗೂ, ಶ್ರೀರಂಗನಿಗೂ ಈ ಹಾಡಿಗೂ ಸಂಬಂಧವಿದ್ದರೂ, ತೋಡಿ ರಾಗದ ಈ ಹಾಡಿಗೆ ಪೀಠಿಕೆಯಾಗಿಯೇ ಆ ರಾಗ ಅಷ್ಟುಹೊತ್ತಿನಿಂದ ಮನಸ್ಸಿನಲ್ಲಿ ತೊಡಗಿದ್ದು ಎಂದು ಹೊಳೆದಾಗಮಾತ್ರ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಈ ಅಚ್ಚರಿ ಅಷ್ಟಕ್ಕೇ ಮುಗಿಯುವುದಿಲ್ಲ. ಬಸ್ಸು ಕಾವೇರಿಯ ಮತ್ತೊಂದು ಕವಲನ್ನು ದಾಟಿ ಶ್ರೀರಂಗಪಟ್ಟಣವನ್ನು ಬಿಡುವಹೊತ್ತಿಗೆ ಆ ಹಾಡು (ಅಥವ ಒಂದು ಚರಣ) ಮುಗಿದು, ಹಾಡು "ರಂಗ ನಾಯಕಂ... ಭಾವಯೇ..." (ನಾಯಕೀ ರಾಗ) ಎಂದು ತಿರುಗಿರುತ್ತದೆ. ಅದರನಂತರ ಅದೇ ರಾಗವನ್ನು ತುಸುಹೋಲುವ "ದರ್ಬಾರು" (ಇದಕ್ಕೂ ಮೈಸೂರು ದರ್ಬಾರಿಗೂ ಸಂಬಂಧವಿದೆಯೇ, ದೇವರೇ ಬಲ್ಲ), ಅದರನಂತರ "ದರ್ಬಾರೀ ಕಾನಡ" ಶೇಷಣ್ಣನವರ ತಿಲ್ಲಾನದ್ದೊಂದು ಪಲುಕು... ಕೊನೆಗೆ ಬಿಲಹರಿಯದೊಂದು ತುಣುಕು, "ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ" ಎಂದು ಮುಗಿಸುವಹೊತ್ತಿಗೆ ಮೈಸೂರು ಬಸ್ ನಿಲ್ದಾಣ ಬಂದಿರುತ್ತದೆ. ಈಗಂತೂ ಅದನ್ನು ನಾನು ಗಮನಿಸಿಬಿಟ್ಟಿರುವುದರಿಂದ ಮೊದಲಿನಷ್ಟು ನಿಶ್ಚಿತತೆ, spontaneity ಇಲ್ಲ.

ಅದೇನೇ ಇರಲಿ, ಮನಸ್ಸಿನ ಮಾರ್ಗಗಳನ್ನು ಕಂಡು ಬೆರಗಾಗಿದ್ದೇನೆ. ಅದು ತನ್ನನ್ನು ತಾನೇ ರಂಜಿಸಿಕೊಳ್ಳುವ, ಕಲ್ಪನೆ ಕಟ್ಟುವ, ಕಂಪನಿ ಕೊಟ್ಟುಕೊಳ್ಳುವ ಪರಿ ನಿಜಕ್ಕೂ ಅದ್ಭುತ. ಒಳಗಿನ ’ನಿಶ್ಶಬ್ದ’ಕ್ಕೆ ಹೆದರಿ ಹೊರಗೆ ಗದ್ದಲದ "ಸಂಗೀತ"ಕ್ಕೆ ಮರೆಹೊಗುವವರನ್ನು ಕಂಡಾಗ ಮರುಕವುಂಟಾಗುತ್ತದೆ. ಈ ಗದ್ದಲವನ್ನು ಒಂದೇ ಕ್ಷಣ ಬಂದು ಮಾಡಿ, ನಿಮ್ಮೊಳಗಿನ ದನಿಯನ್ನು ಆಲಿಸಿ ನೋಡಿ, ಅದೇ ಒಂದು ಲೋಕ. ಅಲ್ಲಿ ನಿಮಗೆ "ಬೋರ್"ಎಂಬುದು ಆಗಲು ಸಾಧ್ಯವೇ ಇಲ್ಲ. ಈ ಲೋಕ ತೆರೆದುಕೊಳ್ಳುವ ಅಂಥ ಒಂದು ಸಂದರ್ಭ, ಕಿಟಕಿ ಪಕ್ಕದ ಸೀಟು. ಮುಂದಿನ ಸಲ ಪಯಣಿಸುವಾಗ ಪುಸ್ತಕಕ್ಕೋ ಐಪೋಡಿಗೋ ಮರೆಹೊಗಬೇಡಿ. ಸುಮ್ಮನೇ ಕಿಟಿಕಿಯಾಚೆ ಕಣ್ಣುಕೀಲಿಸಿ ಓಡುವ ಬಸ್ಸಿನೊಡನೆ ನಿಮ್ಮ ಮನಸ್ಸನ್ನು ಹರಿಯಬಿಡಿ. ಆಮೇಲೆ ನೋಡಿ.

Wednesday, May 5, 2010

ಹೀಗೊಂದು ಬಿಕರೀ ನೋಟೀಸು

ಮೊನ್ನೆ ಸತ್ಯ ಇದ್ದಕ್ಕಿದ್ದಹಾಗೆ ಫೋನಾಯಿಸಿ "ನನ್ನ ಲೈಬ್ರರಿ sale ಮಾಡಬೇಕು ಅಂತಿದೀನಿ ಮಂಜು" ಅಂದಾಗ ಒಂದು ಕ್ಷಣ ಅವರು ಜೋಕ್ ಮಾಡುತ್ತಿದ್ದಾರೆನ್ನಿಸಿತು. ಕೂಲಾಗಿ "ಸರಿ ಮಾಡಿ, ಎಷ್ಟು ಬೇಕು ಹೇಳಿ ಕೊಡೋಣ" ಎಂದೆ. ನಾವು ಆಗಾಗ ಭೆಟ್ಟಿಯಾದಾಗೆಲ್ಲಾ ಅದೂ ಇದು ಕಾಡುಹರಟೆಯ ನಡುವೆ ಏನಾದರೂ ಹಣಕಾಸಿನ ಕಷ್ಟ-ಸುಖದ ವಿಷಯ ಬಂದರೆ "ನನ್ನ ಲೈಬ್ರರಿ ತಗೊಂಡು ಎರಡು ಸಾವಿರ ಕೊಡಿ ಮಂಜು" ಎನ್ನುವುದು, ನಾನು "ಅದು ತುಂಬಾ ಜಾಸ್ತಿಯಾಯಿತು" ಎಂದು ನಗೆಯಾಡುವುದು ವಾಡಿಕೆ. ಒಂದು ಕ್ಷಣ ಮೌನದ ನಂತರ ಹೇಳಿದರು "ಇಲ್ಲ ಮಂಜು, ನಾನು serious ಆಗಿ ಹೇಳ್ತಾ ಇದೀನಿ". ಅರೇ, ಹೌದಲ್ಲ. ಮೊನ್ನೆ ತಾನೆ ಹಠಾತ್ತಾಗಿ ತಮ್ಮನನ್ನು ಕಳೆದುಕೊಂಡ ದುಃಖದಲ್ಲಿದ್ದ ಸತ್ಯ ಜೋಕ್ ಮಾಡುವ ಮನಸ್ಥಿತಿಯಲ್ಲೇನೂ ಇಲ್ಲ ಎಂದು ಹೊಳೆಯಿತು. ಮತ್ತೆ? ನಿಜಕ್ಕೂ ಲೈಬ್ರರಿ ಮಾರಿಬಿಡುತ್ತಿದ್ದಾರೆಯೇ? ಕ್ಷಣ ನಂಬಲಾಗಲಿಲ್ಲ. ಹಾಗೊಂದುವೇಳೆ ಇದು ಜೋಕ್ ಅಲ್ಲವೆಂದಾದರೆ, ಈ ಮಾತು ಸತ್ಯನ ಬಾಯಲ್ಲಿ ಬರಲು ಸಾಧ್ಯವೇ ಇರಲಿಲ್ಲ. ಏಕೆಂದರೆ ನಾನು ಬಾಲ್ಯದಿಂದಲೂ ಬಲ್ಲ ಈತ ತಮ್ಮ ಪುಟ್ಟ ಲೈಬ್ರರಿ ಕಟ್ಟಿ ಬೆಳೆಸಿಕೊಂಡಿದ್ದ ಪರಿಯನ್ನು ಕಣ್ಣಾರೆ ಕಂಡಿದ್ದೆ.

ಚಿಕ್ಕಂದಿನಲ್ಲೇ ಸಿನೆಮಾ-ನಾಟಕ-ಸಾಹಿತ್ಯಗಳ ಗೀಳು ಹತ್ತಿಸಿಕೊಂಡು, ಮುಂದೊಮ್ಮೆ ಅದೇನೋ ಸಾಧಿಸುವ ಕನಸು ಕಣ್ಣಲ್ಲಿಟ್ಟುಕೊಂಡು ಓದು ಬಿಟ್ಟು ಊರು ಬಿಟ್ಟು ಬೆಂಗಳೂರು ಸೇರಿದ ಹುಡುಗ, ಕಲಾವಿದನಾಗಿ ಸಾಕಷ್ಟು ಬೆಳೆಯುತ್ತಾ, ಸಿಜಿಕೆ, ಬಿ.ವಿ.ಕಾರಂತ ಇತ್ಯಾದಿ ಘಟಾನುಘಟಿಗಳೊಂದಿಗೆ ದುಡಿಯುತ್ತಾ ಕಲೆಯ ಬದುಕನ್ನು ರೂಪಿಸಿಕೊಂಡರು. ಹವ್ಯಾಸಿ ರಂಗಭೂಮಿ ವಲಯದಲ್ಲಿ "ಕತ್ಲು ಸತ್ಯ" ಎಂದೇ ಹೆಸರಾಗಿದ್ದ ಸತ್ಯನಾರಾಯಣ, "ಬಾವಿ", "ಡಾಂಬರು ಬಂದದ್ದು" ಇತ್ಯಾದಿ ಸ್ವತಃ ಕೆಲವು ನಾಟಕಗಳನ್ನೂ ರಚಿಸಿದ್ದಲ್ಲದೇ, ರಂಗಕರ್ಮಿ/ನಿರ್ದೇಶಕರಾಗಿ ಕೂಡ ಸಾಕಷ್ಟು ಹೆಸರು ಮಾಡಿದರು.

ಅರಸನ ಅಂಕೆಯಿಲ್ಲದೆ ದೆವ್ವದ ಕಾಟವಿಲ್ಲದೆ ಮನಸ್ಸಿಗೆ ಸರಿಕಂಡದ್ದನ್ನು ಮಾಡುತ್ತಾ, ತನಗಿಷ್ಟವಾದ ಬದುಕು ಬದುಕುವ, ಸರಳಾತಿಸರಳ ಜೀವನ ಶೈಲಿಯ ಸತ್ಯ ನಮಗೆಲ್ಲಾ ಒಂದುರೀತಿ ಅಸೂಯೆ ಹುಟ್ಟಿಸಿದ್ದ ವ್ಯಕ್ತಿ. ಈ ಸಿನಿಮಾ-ನಾಟಕಗಳ ಗೀಳಿಗೆ ಹತ್ತಿಕೊಂಡಂತೆ ಬಂದಿದ್ದ ಮತ್ತೊಂದು ಗೀಳು ಪುಸ್ತಕಗಳದು. ನಾವೆಲ್ಲಾ ಬೇಜಾರಾದಾಗ TV, ಸಿನೆಮಾ ನೋಡಿದರೆ ಈ ಮನುಷ್ಯ ಸುಳಿಯುತ್ತಿದ್ದುದು ಪುಸ್ತಕದ ಅಂಗಡಿಗಳ ಮುಂದೆ. ಊರಲ್ಲಿ ಎಲ್ಲಿ ಪುಸ್ತಕ ಮೇಳವಾದರೆ ಅಲ್ಲಿ ಸತ್ಯ ಹಾಜರು, ಕೈಗೊಂದು ಐದೋ ಆರೋ ಪುಸ್ತಕ ಖರೀದಿಸಿದ್ದೇ ಸೈ. ಕೊಳ್ಳಲು ಸೆಕೆಂಡ್ ಹ್ಯಾಂಡ್, ಫಸ್ಟ್ ಹ್ಯಾಂಡ್, ಅಗ್ಗ, ದುಬಾರಿಯ ಪ್ರಶ್ನೆ ಬರುತ್ತಲೇ ಇರಲಿಲ್ಲ. ಪುಸ್ತಕ ಅಪರೂಪದ್ದಾದರೆ, ಮೌಲಿಕವಾದದ್ದಾದರೆ ಅದು ಮನೆ ಸೇರಲೇಬೇಕು; ಪುಸ್ತಕದ ಆಯ್ಕೆಯಲ್ಲಿ, ಆಟದ ಸಾಮಾನು ಆಯ್ದುಕೊಳ್ಳುವ ಹುಡುಗನ ತನ್ಮಯತೆ ಇರುತ್ತಿತ್ತು. ತಂದದ್ದು ಅಲಂಕಾರಕ್ಕಲ್ಲ, ಮುಂದೆರಡು ಮೂರು ದಿನ ಪಟ್ಟು ಹಿಡಿದು ಅದನ್ನು ಓದಿ ಮುಗಿಸಬೇಕು. ಬಹಳಷ್ಟು ಪುಸ್ತಕಗಳನ್ನು ಪುಸ್ತಕಮೇಳಗಳಲ್ಲೇ ಖರೀದಿಸುತ್ತಿದ್ದುದರಿಂದ, ಅದರಲ್ಲಿ ಬಹಳಷ್ಟು "ಭಾರಿ" ಪುಸ್ತಕಗಳೇ ಆದ್ದರಿಂದ ಇದೊಂದು ದುಬಾರಿ ಹವ್ಯಾಸವಾಗಿ ಪರಿಣಮಿಸಿತ್ತು. ಇವತ್ತು ಒಂದು ನೂರು ರುಪಾಯಿ ಉಳಿದರೆ ಒಂದು ಪುಸ್ತಕ್ಕಾದರೂ ಆಗುತ್ತದೆ ಎಂದು ಯೋಚಿಸುತಿದ್ದ ಸತ್ಯ, ಗಳಿಸಿದ, ಉಳಿಸಿದ ಹಣವನ್ನೆಲ್ಲಾ ಪುಸ್ತಕ ಕೊಳ್ಳಲು ಸುರಿಯುತ್ತಿದ್ದರು. ಹೀಗಾಗಿ ಈ ಪುಟ್ಟ ಲೈಬ್ರರಿ ಕೇವಲ ಲೈಬ್ರರಿ ಆಗಿರದೆ ಅವರ ವ್ಯಕ್ತಿತ್ವದ ಒಂದು ಭಾಗವಾಗಿತ್ತು. ಸುಮಾರು ೨೫೦೦ ಪುಸ್ತಕಗಳಿರುವ ಆ ಲೈಬ್ರರಿಯಲ್ಲಿ ಒಂದೊಂದು ಪುಸ್ತಕವೂ ಎಲ್ಲೆಲ್ಲಿ ಇದೆ, ಯಾವಾಗ ಕೊಂಡದ್ದು, ಅದರ ಹೂರಣವೇನು, ಯಾವ ಪುಸ್ತಕದ ಅಟ್ಟೆ ಎಲ್ಲಿ, ಯಾವಾಗ, ಏಕೆ ಹರಿದಿದೆ ಇತ್ಯಾದಿ ವಿವರಗಳನ್ನೆಲ್ಲಾ ಕರಾರುವಾಕ್ಕಾಗಿ ತಿಳಿಸಬಲ್ಲಷ್ಟು ತಾದಾತ್ಮ್ಯ ಸಿದ್ಧಿಸಿತ್ತು ಆ ಪುಸ್ತಕಗಳ ಜೊತೆ. ಬಂದವರೆದುರು ಈ ಸಂಗ್ರಹವನ್ನು ಪ್ರದರ್ಶಿಸುವುದೇ ಹೆಮ್ಮೆ. ಅದು ನಿಜ ಕೂಡ. Afterall, the collection was an owner's pride.

ಇಂಥಾ ಮನುಷ್ಯ ತಾನು ಕಟ್ಟಿ ಬೆಳೆಸಿದ ಈ ಪುಟ್ಟ ಭಂಡಾರವನ್ನು ಮಾರಿಬಿಡಬೇಕೆಂದರೆ, ಬಂದಿರುವ ತುರ್ತು ಸಾಕಷ್ಟು serious ಆಗಿರಲೇ ಬೇಕೆನ್ನಿಸಿತು. ಈ ವೈಯಕ್ತಿಕ ಪ್ರಶ್ನೆಯನ್ನು ನಾನು ಕೇಳದಿದ್ದರೂ, ಅವರು ತಮ್ಮದೇ ಆಗಿ ಉಳಿದಿದ್ದ ಈ ಏಕಮಾತ್ರ "ಆಸ್ತಿ"ಯನ್ನು ಮಾರಿಬಿಡುವ ನಿರ್ಧಾರಕ್ಕೆ ಬರುವ ಮುನ್ನ ಸುಮಾರು ಎರಡು ತಿಂಗಳ ಕಾಲ ತೊಳಲಾಟವನ್ನನುಭವಿಸಿದ್ದರೆನ್ನುವುದು ತಿಳಿಯುತ್ತಿತ್ತು. ಬಂದ ಕುತ್ತು ಕ್ಷಣಿಕವೇ ಇರಬಹುದು, ಸ್ವಲ್ಪ ಉಸಿರು ಕಟ್ಟಿ ತಡೆದರೆ ಆ ಕುತ್ತು ಹೊರಟುಹೋಗಬಹುದು, ಆದರೆ ಇದು ಮಾತ್ರ ಖಂಡಿತ ಆಗಬಾರದು, ಏಕೆಂದರೆ ಇದು ವ್ಯಕ್ತಿತ್ವದ ಒಂದು ಭಾಗ, ಐಹಿಕ ಸಮಸ್ಯೆಗಳಿಗೋಸ್ಕರ ಮಾರಿಕೊಳ್ಳುವುದಲ್ಲ. ತಾತ್ಕಾಲಿಕವಾಗಿಯಾದರೂ ಏನಾದರೂ ಮಾಡಿ, ಈ ಪುಸ್ತಕಭಂಡಾರವನ್ನು ಉಳಿಸಿಕೊಡಲು ಸಾಧ್ಯವೇ ಇತ್ಯಾದಿ ಯೋಚಿಸಿದೆ. ಆದರೆ ನಾವು ಯಾರೂ ಏನೂ ಮಾಡಲು ಸಾಧ್ಯವಾಗದಷ್ಟು ದೊಡ್ಡದಿತ್ತು ಅವರ ಆರ್ಥಿಕ ಅಗತ್ಯಗಳು; ಮತ್ತೂ ಈ ಲೈಬ್ರರಿಯ ಮಾರಾಟ ಕೂಡ ಅವರ ಇಡೀ ಅಗತ್ಯದಲ್ಲಿ ಕೇವಲ ತುರ್ತಿನ ಅಗತ್ಯಗಳಿಗೆ ಮಾತ್ರ ಸರಿಹೊಂದುವಂತಿತ್ತು. ಲೈಬ್ರರಿ ಮಾರದೆ ಬೇರೆ ದಾರಿಯೇ ಇರಲಿಲ್ಲ. ನಾನು ಇಷ್ಟೆಲ್ಲಾ ಚಿಂತಿಸುತ್ತಿರುವಾಗ ಸತ್ಯ ಹೇಳಿದ ಮಾತು ಇದು. "ನೀವಿರುವ ಈ ಪರಿಸ್ಥಿತಿಯಲ್ಲಿ ಈ ಲೈಬ್ರರಿ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ಗೊತ್ತು, ಆದರೆ ನಾನು ನಿಮ್ಮನ್ನು ಕೇಳುತ್ತಿರುವುದು ಈ ಬಗ್ಗೆ ಬರೆಯಿರಿ ಅಂತ ಮಾತ್ರ. ನನಗೆ ಗೊತ್ತು, ನನ್ನಷ್ಟೇ ಹುಚ್ಚರು ಯಾವಯಾವುದೋ ಮೂಲೆಯಲ್ಲಿ ಬಹಳಷ್ಟು ಜನ ಇರುತ್ತಾರೆ, ಅವರೊಂದಿಗೆ ಸಂಪರ್ಕ ಸಾಧಿಸುವುದು ಮಾತ್ರ ನಮ್ಮ ಸಧ್ಯದ ಕೆಲಸ; ನಿಮಗೂ ನನ್ನಂಥದೇ ಆಸಕ್ತಿಯಿರುವುದರಿಂದ ನಿಮ್ಮ ಮಿತ್ರರ ಗುಂಪಿನಲ್ಲಿ ಖಂಡಿತಾ ಸಮಾನ ವ್ಯಸನಿಗಳು ಇದ್ದಾರು ಎನ್ನುವುದು ನನ್ನ ನಂಬಿಕೆ"
ನನಗೆ ಹೌದೆನ್ನಿಸಿತು.

ಇನ್ನು ನೇರ ವ್ಯವಹಾರಕ್ಕೆ. ಪ್ರಾಚೀನ ಸಾಹಿತ್ಯದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೆ, ಪಾಶ್ಚಾತ್ಯದಿಂದ ಪೌರ್ವಾತ್ಯದವರೆಗೆ, ಕಾವ್ಯ, ನಾಟಕ, ಇತಿಹಾಸ, ಆಧ್ಯಾತ್ಮ, ವಿಜ್ಞಾನ, ಕಲೆ, ರಂಗಭೂಮಿ ಹೀಗೆ ಹತ್ತು ಹಲವು ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಈ ಲೈಬ್ರರಿಗೆ ಅವರು ನಿರೀಕ್ಷಿಸುವ ಒಟ್ಟಂದದ ಬೆಲೆ ಎರಡು ಲಕ್ಷ ರುಪಾಯಿಗಳು (ಸರಾಸರಿ ಪುಸ್ತಕವೊಂದಕ್ಕೆ ೮೦ ರುಪಾಯಿಗಳು). ಪುಸ್ತಕವೊಂದರ ಮೌಲ್ಯ ಯಾವಾಗಲೂ ಅದರ ಮುಖಬೆಲೆಗಿಂತ ಬಹು ಹೆಚ್ಚಿನದು, ಮತ್ತು ಒಂದೊಂದು ಪುಸ್ತಕಗಳ ಬೆಲೆಯ ಮೊತ್ತಕ್ಕಿಂತಾ ಇಡೀ ಪುಸ್ತಕ ಭಂಡಾರದ "ಸಂಗ್ರಹ" ಹೆಚ್ಚು ಬೆಲೆ ಬಾಳುವಂಥದ್ದು ಎಂಬುದು ಯಾವುದೇ ಪುಸ್ತಕಪ್ರೇಮಿಗೆ ತಿಳಿದ ವಿಷಯ. ಮಾರಾಟಕ್ಕಿರುವುದು ಇಡೀ ಲೈಬ್ರರಿಯೇ ಹೊರತು individual ಪುಸ್ತಕಗಳಲ್ಲ. ಒಬ್ಬ ವ್ಯಕ್ತಿ, ಅಲ್ಲದಿದ್ದರೆ ಒಂದು ಗುಂಪು ಕೂಡ ಇದನ್ನು ಖರೀದಿಸಬಹುದು, ಆದರೆ ಇಡೀ ಲೈಬ್ರರಿಯನ್ನು ಒಟ್ಟಿಗೆ ಖರೀದಿಸಬೇಕೆನ್ನುವುದಷ್ಟೇ ಷರತ್ತು, ಇಲ್ಲವೆಂದರೆ ಅದು ತಮ್ಮ ಹಣಕಾಸಿನ ಅಗತ್ಯವನ್ನು ಪೂರೈಸದು, ಹಾಗೂ ಪುಸ್ತಕಗಳನ್ನು ಹರಿದು ಹಂಚುವುದು ಭಾವನಾತ್ಮಕವಾಗಿ ನೋವಿನ ವಿಷಯ ಎಂದು ಅವರ ಅಭಿಪ್ರಾಯ. ಹಾಗೂ ಕೊಂಡವರು ಕೂಡ ಆ ಸಂಗ್ರಹವನ್ನು ಹಾಗೆಯೇ ನೋಡಿಕೊಂಡಾರೆನ್ನುವುದು ಆಶಯ ಕೂಡ.

ಪುಸ್ತಕ ಸಂಗ್ರಹದ ಕೆಲವು ಚಿತ್ರಗಳು http://picasaweb.google.co.in/ksmanjunatha/SatyaLibrary# ಇಲ್ಲಿವೆ.

ಆಸಕ್ತರು ಸತ್ಯನಾರಾಯಣರನ್ನು ನೇರವಾಗಿ ಸಂಪರ್ಕಿಸಬಹುದು ಮತ್ತು ಬೆಂಗಳೂರಿನಲ್ಲಿರುವ ಅವರ ಮನೆಗೆ ಭೇಟಿನೀಡಿ ಪುಸ್ತಕ ಸಂಗ್ರಹವನ್ನು ನೋಡಬಹುದು. ಅವರ ಮೊಬೈಲ್ ಸಂಖ್ಯೆ + ೯೧ ೯೪೪೮೭ ೦೩೮೬೪ (+ 91 94487 03864)

ಪುಸ್ತಕ ಸಂಗ್ರಹವನ್ನು ಮಾರುವ ನಿರ್ಧಾರವೇ ನೋವಿನ ನಿರ್ಧಾರ; ಕೊನೆಯ ಪಕ್ಷ ಅದನ್ನು ಮಾರುವ ಪ್ರಕ್ರಿಯೆ ಹೆಚ್ಚು ನೋವಿಲ್ಲದೆಯೇ ನಡೆಯಲೆಂಬುದು ವೈಯಕ್ತಿಕವಾಗಿ ನನ್ನ ಹಾರೈಕೆ. ಏಕೆಂದರೆ ಇದು ಕೇವಲ ಲೈಬ್ರರಿಯೊಂದನ್ನು ಮಾರುವ/ಕೊಳ್ಳುವ ಪ್ರಶ್ನೆಯಲ್ಲ, ಬದಲಿಗೆ ಜೀವನ ಶೈಲಿ/ಮೌಲ್ಯವೊಂದರ ಬಗೆಗಿನ ನಂಬಿಕೆಯ ಪ್ರಶ್ನೆ. ವ್ಯಕ್ತಿಯೊಬ್ಬ materialistic ಆಯಾಮಗಳಿಲ್ಲದೆಯೂ ಆತ್ಮಸಂತೋಷಕ್ಕೋಸ್ಕರವೇ ಬದುಕಬಹುದು ಎಂಬ ನಂಬಿಕೆಗೆ ಪೆಟ್ಟಾಗುವುದಾದರೆ ಅಂಥಾ ಜೀವನಶೈಲಿಯ ಬಗ್ಗೆ ನಾವು ಪುಟಗಟ್ಟಲೆ ಬರೆಯುವುದು, ವರ್ಷಗಟ್ಟಲೆ ಕನಸುವುದು ಎಲ್ಲ ವ್ಯರ್ಥವೆಂದೇ ನನ್ನ ನಂಬಿಕೆ.

Thursday, January 7, 2010

ಕಾವುದಾನತಜನವ ಗದುಗಿನ ವೀರನಾರಯಣ...

ಕಳೆದ ವಾರ ರಜಾ ಸೀಸನ್ ಆದ್ದರಿಂದ ಪುಣೆಯಿಂದ ಮೈಸೂರಿಗೆ ಯಾವ ಬಸ್ಸೂ ಸಿಕ್ಕಿರಲಿಲ್ಲ. ಇನ್ನು ಟ್ರೈನಿನ ಮಾತಂತೂ ದೂರವೇ ಉಳಿಯಿತು, ಮಾಮೂಲಿನ ದಿನಗಳಲ್ಲೂ ಅದರ "ವೈಟಿಂಗ್ ಲಿಸ್ಟ್" ಮೊಟಕಾಗಿದ್ದೇ ಇಲ್ಲ. ವಿಮಾನಯಾನದ ದರವಂತೂ ವಿಮಾನದೊಂದಿಗೇ ಗಗನಗಾಮಿಯಾಗಿತ್ತು. ಇನ್ನು ಉಳಿದದ್ದೊಂದೇ, ಕಟ್ ರೂಟಿನ ಹೆಜ್ಜೆಸಾಲಿನ ಪಯಣ. ಹೇಗೂ ದೀರ್ಘ ರಜೆಯಿದ್ದುದರಿಂದ ಪಯಣ ಸ್ವಲ್ಪ ಎಳೆದರೂ ಪರವಾಗಿಲ್ಲವೆಂದುಕೊಂಡು, ಪುಣೆ - ಹುಬ್ಬಳ್ಳಿ - ಬೆಂಗಳೂರು - ಮೈಸೂರು ಹೀಗೆ ಪಯಣವನ್ನು ತುಂಡರಿಸಿಕೊಂಡೆ. ರಾತ್ರೆ ಪುಣೆಯಿಂದ ಹೊರಡುವ ಬಸ್ಸು ಬೆಳಗ್ಗೆ ೭ಕ್ಕೆ ಹುಬ್ಬಳ್ಳಿ ಸೇರುವುದಿತ್ತು. ಅಲ್ಲಿಂದ ಬೆಂಗಳೂರಿಗೆ ಸಂಜೆ ೫ರವರೆಗೂ ಯಾವ ಟ್ರೈನೂ ಖಾಲಿಯಿಲ್ಲ. ಈ ಹತ್ತು ಗಂಟೆಗಳನ್ನು ಕಳೆಯುವುದು ಹೇಗೆ? ಆಗ ಇದ್ದಕ್ಕಿದ್ದಂತೆ ನನ್ನ ಬಹುದಿನದ ಕನಸು ನೆನಪಿಗೆ ಬಂತು. ಬಾಲ್ಯದಿಂದಲೂ ಭಾವನಾತ್ಮಕವಾಗಿ ನನ್ನ ಒಡನಾಡಿಯಾದ ಗದುಗಿನ ಭಾರತ, ಅದರ ಕರ್ತೃ ಕುಮಾರವ್ಯಾಸ, ಅವನ ಸ್ಪೂರ್ತಿಯ ಸೆಲೆಯಾದ ವೀರನಾರಾಯಣನನ್ನು ದರ್ಶಿಸುವುದು, ಕವಿಯ ನೆನಪಿಗೆ ಕಾವ್ಯವಾಚನದ ಅಂಜಲಿಯನ್ನು ಸಲ್ಲಿಸುವುದು ಇದು ನನ್ನ ಬಹುದಿನದ ಕನಸಾಗಿತ್ತು. ಅನೇಕಬಾರಿ ಗದುಗಿಗೆ ಹೋಗಬೇಕೆಂದಿದ್ದರೂ ಸಾಧ್ಯವಾಗಿರಲಿಲ್ಲ; ಹೀಗೆ ನಾನು ಹೋಗಬೇಕೆಂದು ಎಣಿಸಿರುವ ಸ್ಥಳಗಳ ಪಟ್ಟಿಯೇ ಬಹಳ ದೊಡ್ಡದಿದ್ದುದರಿಂದ, ಆ ಪಟ್ಟಿಯಲ್ಲಿ ಇದೂ ಒಂದು ಹೆಸರಾಗಿ ಉಳಿದಿತ್ತಷ್ಟೇ. ಮೊನ್ನೆ ಪವನನ ಮದುವೆಗೆ ಧಾರವಾಡಕ್ಕೆ ಹೋದಾಗಲೂ ಗದುಗಿಗೆ ಹೋಗೋಣವೆಂದುಕೊಂಡೆ, ಆದರೆ ಜೊತೆಯಿದ್ದ ಗುಂಪಿನ ಆಸಕ್ತಿಗಳಿಗೆ ಈ ಆಲೋಚನೆ ಕೊಂಚವೂ ಪ್ರಸ್ತುತವಿರಲಿಲ್ಲವಾದ್ದರಿಂದ ಆ ಯೋಜನೆ ಮನಸ್ಸಿನಲ್ಲೇ ಉಳಿಯಿತು. ಆದರೆ ಅದಕ್ಕೆ ಈಗ ಇದ್ದಕ್ಕಿದ್ದಂತೆ ಸಮಯ ಕೂಡಿಬಂದಿತ್ತು. ಹುಬ್ಬಳ್ಳಿಯಿಂದ ಗದುಗಿಗೆ ೭೦ ಕಿಲೋಮೀಟರು, ಒಂದೂವರೆ ಗಂಟೆ ಪಯಣ. ಬೆಳಗ್ಗೆ ೮ಕ್ಕೆ ಹುಬ್ಬಳ್ಳಿ ಬಿಟ್ಟರೂ ೯.೩೦ಕ್ಕೆಲ್ಲಾ ಗದುಗಿನಲ್ಲಿರುತ್ತೇನೆ, ೧೦ಕ್ಕೆ ದೇವಾಲಯ. ಸ್ವಲ್ಪ ಬೇಗ ಹೋದರೆ ಜನವಿಲ್ಲದೆ ಪ್ರಶಾಂತವಾಗಿದ್ದರೆ ಅಂದುಕೊಂಡಂತೆ ಕಾವ್ಯವಾಚನಮಾಡುವ ಅವಕಾಶವೂ ಇರುತ್ತದೆ, ಇದು ನನ್ನ ಆಲೋಚನೆ. ಈ ಭಾವನಾತ್ಮಕ ಪ್ರೈವೆಸಿಯ ವಿಷಯದಲ್ಲಿ ದುರ್ಯೋಧನನ ಅಭಿಮಾನದ ಅಂಶ ನನ್ನಲ್ಲಿ ತುಸು ಹೆಚ್ಚಾಗೇ ಇದೆ. ಸ್ನಾನದ ಮನೆಯ ಹಾಡುಗಾರಿಕೆಗೂ ಸೌಂಡ್ ಪ್ರೂಫಿಂಗ್ ಇದ್ದರೆ ಒಳ್ಳೆಯದೆನ್ನುವ ಗುಂಪಿಗೆ ಸೇರಿದವನು ನಾನು. ಅವಕಾಶವೊದಗಿದರೆ ಇರಲಿ ಎಂದು ಕುಮಾರವ್ಯಾಸಭಾರತದ ಒಂದು ಪ್ರತಿಯನ್ನು ಬ್ಯಾಗಿನಲ್ಲಿರಿಸಿದೆ. ಸಾಮಾನ್ಯವಾಗಿ ನಾನು ಪ್ರಯಾಣದಲ್ಲಿ ಏನನ್ನೂ ಹೊತ್ತೊಯ್ಯುವುದಿಲ್ಲವಾದ್ದರಿಂದ ಇದೊಂದು ಪುಸ್ತಕದಿಂದ ಹೆಚ್ಚಿನ ಭಾರವೇನು ಆಗುವಂತಿಲ್ಲ. ಅಲ್ಲದೇ ಕುಮಾರವ್ಯಾಸನೇ ಹೇಳಿದ್ದಾನಲ್ಲ "ಭಾರತದ ಕಥನಪ್ರಸಂಗವ ಕ್ರೂರಕರ್ಮಿಗಳೆತ್ತಬಲ್ಲರು" ನನಗಂತೂ ಅದು ಎತ್ತಲು ಸುಲಭವಾಗಿತ್ತು!

ಪುಣೆಯಿಂದ ಹುಬ್ಬಳ್ಳಿವರೆಗಿನ ರಾತ್ರಿ ಪ್ರಯಾಣದಲ್ಲಿ ನಿದ್ದೆ ಬರಲಿಲ್ಲ. ಮನಸ್ಸು ತುಸು ಉದ್ವೇಗಗೊಂಡಿತ್ತು. ನನ್ನ ನೆಚ್ಚಿನ ಕವಿ, ಕಾವ್ಯವನ್ನು ರಚಿಸಿದ ಜಾಗದಲ್ಲೇ ಕುಳಿತು ಅದನ್ನು ವಾಚಿಸುವ, ಅರ್ಪಿಸುವ ಕಲ್ಪನೆಯೇ ಮನವನ್ನು ಮುದಗೊಳಿಸಿತ್ತು. ಮರುದಿನ ಅಂದುಕೊಂಡದ್ದಕ್ಕಿಂತ ಮುಂಚೆಯೇ ಹುಬ್ಬಳ್ಳಿ ತಲುಪಿದವನು, ಬೆಳಗ್ಗೆ ೯ಕ್ಕೆಲ್ಲಾ ಗದುಗಿನಲ್ಲಿದ್ದೆ. ಬಸ್ ಸ್ಟಾಂಡಿನಲ್ಲಿಳಿದು ಅಲ್ಲಿ ಇಲ್ಲಿ ವಿಚಾರಿಸುತ್ತಾ ಕೊನೆಗೊಮ್ಮೆ ದೇವಾಲಯವನ್ನು ತಲುಪಿದಾಗ ಅದರ "ಜನ ಜಂಗುಳಿ"ಯ ಬಗ್ಗೆ ಇದ್ದ ವಿಪರೀತ ಕಲ್ಪನೆಯೆಲ್ಲಾ ಹಾರಿಹೋಯಿತು. ಗದುಗಿನ ಸಂದಿಗೊಂದಿ ಗಲ್ಲಿ ಗಲ್ಲಿ ಸುತ್ತಿ ಅದೊಂದು ಕಡೆ ಎಡಕ್ಕೆ ಹೊರಳಿದರೆ ಧುತ್ತನೆ ಪ್ರತ್ಯಕ್ಷವಾಗುತ್ತದೆ, ವೀರನಾರಾಯಣನ ಗೋಪುರ. ಎರಡು ಗಲ್ಲಿ ಕೂಡುವೆಡೆಯಲ್ಲಿ ಮೂಲೆಯಲ್ಲಿರುವ ದೇವಾಲಯದ ಗೋಪುರವನ್ನು ಅದರ ಮುಂದೆ ಬೆಳೆದಿರುವ ದೊಡ್ಡ ಅರಳೀ ಮರ ಮುಚ್ಚಿದ್ದರೆ, ದೇವಾಲಯದ ಉಳಿದ ಭಾಗವನ್ನು ಅದರ ಮುಂದೆ ಅಡ್ಡಾದಿಡ್ಡಿ "ಪಾರ್ಕ್"ಮಾಡಿರುವ ಟ್ರಕ್ಕುಗಳು ಮುಚ್ಚಿರುತ್ತವೆ. ಆದರೂ ಅಲ್ಲೊಂದು ಇಲ್ಲೊಂದು ರಸ್ತೆಸೂಚಿಗಳಿರುವುದರಿಂದ ದೇವಾಲಯವನ್ನು ಕಂಡುಹಿಡಿಯುವುದು ಅಷ್ಟೇನು ಕಷ್ಟವಲ್ಲ, ಅಲ್ಲದೆ ಊರೂ ಚಿಕ್ಕದು. ದೇವಾಲಯ ನಿರ್ಜನವಾಗಿತ್ತು. ಬಹುಶಃ ಭಕ್ತ ನಾರಣಪ್ಪನಂತೆಯೇ ದೈವ ವೀರನಾರಾಯಣನೂ ಊರಿಗೆ ಅಜ್ಞಾತನಿರಬಹುದು. ಅದೇನೇ ಇರಲಿ, ಈ ಅಜ್ಞಾತತೆಯಿಂದ ಒಂದು ಅನುಕೂಲವಂತೂ ಇತ್ತು. ಬೇರೆ ಟೂರಿಸ್ಟ್ ಸ್ಪಾಟ್ ಅಥವಾ ಯಾತ್ರಾಸ್ಥಳಗಳಂತೆ ಇಲ್ಲಿ ಗಜಿಬಿಜಿ ಗಲೀಜುಗಳಾಗಲಿ, ಅದರೊಂದಿಗೆ ಬರುವ ಸ್ಥಳಮಹಾತ್ಮೆ, ಭಕ್ತಿಗೀತೆಗಳ ಕ್ಯಾಸೆಟ್ಟು ಸಿ.ಡಿ., ಬುಕ್ಕುಗಳನ್ನು ಮಾರುವ ಅಂಗಡಿ-ಮುಂಗಟ್ಟುಗಳ ಗಲಾಟೆಗಳಾಗಲಿ ಇಲ್ಲಿರಲಿಲ್ಲ. ಕೇವಲ ಹರಕೆ ಮಾತ್ರದಿಂದ ಭಕ್ತರ ಭವರೋಗಗಳನ್ನೆಲ್ಲಾ ಜಾಲಾಡಿ ಬಿಸಾಕುವ "ಪವರ್ ಫುಲ್" ದೈವಗಳು ಸಾಕಷ್ಟಿರುವಾಗ, ಈ ಬಡ ಗದಾಧರನನ್ನು ಹುಡುಕಿಕೊಂಡು ಯಾವ ಭಕ್ತಗಡಣವೂ ಗದುಗಿನ ಈ ಮೂಲೆಗೆ ಬರುವಂತಿಲ್ಲ. ಹೀಗಾಗಿ ಬಹುತೇಕ ಸ್ಥಳೀಯ ದೈವವಾದ ವೀರನಾರಾಯಣ, ಆ ಅರ್ಥದಲ್ಲಿ ಊರನಾರಾಯಣನೇ ಸರಿ, ನಮ್ಮೂರ ನಾರಾಯಣಸ್ವಾಮಿಯಂತೆ. ಅವನಂತೆ ಇವನಿಗೂ ಸ್ಥಳಪುರಾಣವಿದೆ, "ಹೊರಗಿನವ"ರಿಗೆ ಅದನ್ನು ಅರ್ಚಕರು ಹೇಳುತ್ತಾರೆ, ಈ ಪುರಾಣದ ಮಧ್ಯೆ ಕ್ವಚಿತ್ತಾಗಿ ಕುಮಾರವ್ಯಾಸನು ಇಲ್ಲಿ ಕಾವ್ಯ ಬರೆದನೆನ್ನುವ "ಪ್ರತೀತಿ"ಯೂ ಸುಳಿದು ಹೋಗುತ್ತದೆ. ಅದು ಬಿಟ್ಟರೆ "ಕುಮಾರವ್ಯಾಸನ ಕಂಬ" ಎಂಬ ಬೋರ್ಡು ಹೊತ್ತ ಒಂದು ಕಂಬ, ಹೊರಗೆ ಅಂಗಳದಲ್ಲಿ "ಕುಮಾರವ್ಯಾಸಮಂಟಪ" ಎಂಬ ಹೆಸರು ಹೊತ್ತ ಒಂದು ಮಂಟಪ, ಆಲಯದ ಒಳಬಾಗಿಲ ಮೇಲೆ "ಶ್ರೀ ವನಿತೆಯರಸನೆ..." ಪದ್ಯ ಮತ್ತು ಅದಕ್ಕಿಂತಲೂ ಮುಖ್ಯವಾಗಿ "ಸೇವೆ: ಕೆನರಾ ಬ್ಯಾಂಕ್" ಎಂಬ ಎಚ್ಚರಿಕೆಯನ್ನು ಹೊತ್ತ ಫಲಕ, ಇವಿಷ್ಟೇ ಕುಮಾರವ್ಯಾಸನ ಬಗ್ಗೆ "ಸ್ಥಳೀಯ" ನೆನಪು. ಊರಿನ ಧಾರ್ಮಿಕ ಕುಟುಂಬಗಳು ದಿನಕ್ಕೊಂದೋ ಎರಡೋ ಬಾರಿ ಗುಡಿಗೆ ಬಂದು ನಮಸ್ಕಾರ ಹಾಕಿದರೆ ಮುಗಿಯಿತು; ವರ್ಷಕ್ಕೊಂದೋ ಎರಡೋ ಜಾತ್ರೆ-ಉತ್ಸವ; ಇಷ್ಟು ಬಿಟ್ಟರೆ ಉಳಿದಂತೆ ಭಕ್ತರ ಗಲಾಟೆಯಿಲ್ಲದ ಪ್ರಶಾಂತಮೂರ್ತಿ ಇವ. ಅಜ್ಞಾತವೆನ್ನುವುದಕ್ಕಿಂತ ಅತಿ ಪರಿಚಯದ ಉಪೇಕ್ಷೆಯೆಂದರೆ ಹೆಚ್ಚು ಸೂಕ್ತ; ಬಹುಶಃ ಇದೇ ವಿವರಣೆ ನಾರಣಪ್ಪನಿಗೂ ಅನ್ವಯಿಸುತ್ತದೆ. ಇನ್ನು ಆಗೀಗ ಬರುವ "ಹೊರಗಿನವ"ರೆಂದರೆ ಕುಮಾರವ್ಯಾಸನ ಕಾವ್ಯವನ್ನು ಆನಂದಿಸಿ, ಅವನ ನೆನಪಿಗೆ ಒಂದು ಭಕ್ತಿಯ ಕಾಣಿಕೆ ಸಲ್ಲಿಸಬಯಸುವ ಒಂದಷ್ಟು ಸಾಹಿತ್ಯಾಸಕ್ತರು, ನನ್ನಂತೆ.

ನಾನು ದೇವಾಲಯಕ್ಕೆ ಬೇಗ ಬಂದಿದ್ದರಿಂದ ಬೆಳಗಿನ ಪೂಜಾಕೈಂಕರ್ಯಗಳನ್ನು ವೀಕ್ಷಿಸುವ ಅವಕಾಶವೊದಗಿತ್ತು. ನಿರಾಲಂಕೃತವಾದ ಶಂಖಚಕ್ರಗದಾಭಯ ಮೂರ್ತಿಯ ವಿಶ್ವರೂಪ ದೃಶ್ಯ ಮನೋಹರವಾಗಿತ್ತು. ಇದು ನಾನು ನೋಡಿದ ಬಹು "expressive"ಆದ ನಾರಾಯಣಮೂರ್ತಿಗಳಲ್ಲೊಂದು. ಕುಮಾರವ್ಯಾಸನ ಭಾರತದಲ್ಲಿಡೀ ನಮ್ಮ-ನಿಮ್ಮಂತೆ ನಡೆದಾಡುವ, ಮಾತಾಡುವ, ಕಪಟನಾಟಕದ ಸೂತ್ರ ಹಿಡಿದಾಡಿಸುವ, ಏನೂ ಅರಿಯದಂತೆ ನಸುನಗುವ "ಸಿರಿಮೊಗದ, ಕಿರುಬೆಮರ, ತೇಜಿಯ ಖುರಪುಟದ ಕೆಂದೂಳಿ ಸೋಂಕಿದ ಸಿರಿಮುಡಿಯ, ಕುಡಿಮೀಸೆಯಲಿ ಕೆಂಪಡರ್ದ ರೇಣುಗಳ", ದೇವದೇವನಾದರೂ ಶ್ರೇಷ್ಠ ಮಾನವಭಾವಗಳನ್ನು ಪ್ರದರ್ಶಿಸುವ ಕೃಷ್ಣಮೂರ್ತಿಯ ಕಲ್ಪನೆಯ ಸೆಲೆ ನಸುನಗುವ ಈ ವೀರನಾರಾಯಣನೇ ಸರಿ.

ಭಾವದ ಸಂದರ್ಭದ ಉತ್ಕಟತೆಯನ್ನು ಕಟ್ಟಿಕೊಡುವುದರಲ್ಲಿ ಕುಮಾರವ್ಯಾಸನದು ಎತ್ತಿದ ಕೈ. ಅದರಲ್ಲೂ ಕೃಷ್ಣನ ಬರವನ್ನು ವರ್ಣಿಸುವ ಒಂದು ಅವಕಾಶವನ್ನೂ ಕವಿ ಕಳೆದುಕೊಳ್ಳುವುದೇ ಇಲ್ಲ. ಮಾತು ನಿರರ್ಗಳವಾಗುತ್ತದೆ. "ನಂದಗೋಪಕುಮಾರ ಗೋಪೀವೃಂದ ವಲ್ಲಭ ದೈತ್ಯ ಮಥನ ಮುಕುಂದ ಮುರಹರ ಭಕ್ತವತ್ಸಲ ಘನ ಕೃಪಾಜಲಧಿ" ಎಂದು ದ್ರೌಪದಿ ಮೊರೆಯಿಡುತ್ತಾಳೆ; "ಒಲಿದವರನುಜ್ಜೀವಿಸುವ ಬಗೆ ಬಲುಹು ಮುರಮಥನಂಗೆ"; ಮುಂದೆ ಸಂಧಾನಕ್ಕಾಗಿ ದೇವರ ದೇವ ದುರ್ಯೋಧನನ ಅರಮನೆಗೆ ಬರುವ ಪರಿ ನೋಡಿ "ದೇವಬಂದನು ತನ್ನ ನೆನೆವರ ಕಾವ ಬಂದನು ದೈತ್ಯಕುಲವನದಾವ ಬಂದನು ಭಾಗವತಜನ ಲೋಲುಪನು ಬಂದ, ಭಾವಿಸುವೊಡಘಹಾರಿ ಬಂದನು ಓವಿ ಬಂದರೆ ತನ್ನ ನೀಡುವ ದೇವ ಬಂದನು ವೀರ ನರಯಣ ಬಂದನರಮನೆಗೆ" ಎನ್ನುತ್ತಾನೆ.

ನಿರಾಲಂಕೃತವಾದ ಮೂರ್ತಿಗೆ ಶಂಖ ಚಕ್ರಗಳನ್ನೇರಿಸಿ, ಶುಭ್ರವಾದ ಬಿಳೀ ಪಂಚೆಯುಡಿಸಿ, ಸರಳವಾಗಿ ಸೇವಂತಿಗೆಯನ್ನೇರಿಸಿ ಅಲಂಕಾರವನ್ನು ಮುಗಿಸುವ ವೇಳೆಗೆ ಅಂದು ನಾನು ವಾಚನಮಾಡಬೇಕಾದ ಭಾಗ ಮನದಲ್ಲಿ ಮೂಡಿತ್ತು. ಬೆಳಗಿನ ಮಂಗಳಾರತಿಗಾಗಿ ಬಂದಿದ್ದ ನಾಲ್ಕೈದು ಜನ ಸ್ಥಳೀಯರು ಖಾಲಿಯಾದರು. ಹೊರಗಿನಿಂದ ಬಂದಿದ್ದ ಒಂದಿಬ್ಬರು ದರ್ಶನ ಮುಗಿಸಿಕೊಂಡು ದೇವಸ್ಥಾನದ ಹೊರ ಅಂಗಳಕ್ಕೆ ನಡೆದರು. ನನ್ನಷ್ಟಕ್ಕೆ ನಾನು ಹಾಡಿಕೊಳ್ಳುವುದಿರಲಿ, ಜೋರಾಗಿ ಅರಚಿದರೂ ಯಾರೂ ಕೇಳುವವನಿರಲಿಲ್ಲ. ಗರ್ಭಗುಡಿಯ ಹೊರಪ್ರಾಂಗಣದಲ್ಲಿ ಕುಮಾರವ್ಯಾಸನು ಕುಳಿತು ಕಾವ್ಯ ರಚಿಸುತ್ತಿದ್ದನೆನ್ನಲಾದ ಕಂಬದೆಡೆ ನಡೆದೆ. ಅದೊಂದು ವಿಧದ ಹೆಸರಿಲ್ಲದ ಭಾವದಿಂದ ಮನಸ್ಸು ಉತ್ಕಂಠಿತವಾಗಿತ್ತು. ಕಂಬಕ್ಕೊರಗಿ ಕುಳಿತು, ಪುಸ್ತಕವನ್ನು ತೆರೆದಿಟ್ಟು ನನ್ನಷ್ಟಕ್ಕೆಂಬ ಕೆಳದನಿಯಲ್ಲಿ ಮಂಗಳಾಚರಣೆಯ ಭಾಗಗಳನ್ನು ಶುರುಮಾಡಿದೆ. "ಶ್ರೀ ವನಿತೆಯರಸನೆ..."; "ತಿಳಿಯಹೇಳುವೆ ಕೃಷ್ಣಕಥೆಯನು... "; "ಅರಸುಗಳಿಗಿದು ವೀರ..." ಗುಡಿಗೆ ಆಗೊಬ್ಬರು ಈಗೊಬ್ಬರು ಜನ ಬರುತ್ತಿದ್ದರು. ಕುತೂಹಲದಿಂದ ಈ ಕಡೆ ನೋಡಿದಾಗೆಲ್ಲಾ ಅದೊಂದು ರೀತಿಯ ಸ್ವಪ್ರಜ್ಞೆ ಜಾಗೃತವಾಗಿ ದನಿ ಕುಗ್ಗುವುದು. ಆಗೆಲ್ಲಾ ಐದಾರು ಶತಕಗಳ ಹಿಂದೆ, ಪ್ರಾಯಶಃ ಇದೇ ಜಾಗದಲ್ಲಿ ಕಾವ್ಯಾವೇಶಭರಿತನಾಗಿ ಮೈಮರೆತು ಹಾಡುತ್ತಿದ್ದ ಭಕ್ತ ಕವಿಯ ಚಿತ್ರ ಕಣ್ಮುಂದೆ ಬರುವುದು, ಮನಸ್ಸು ಮತ್ತೆ ಕಾವ್ಯದಲ್ಲಿ ಹೊಗುವುದು. ಅವತ್ತು ನಾನು ವಾಚಿಸಲು ಆಯ್ದುಕೊಂಡ ಭಾಗ ಉದ್ಯೋಗಪರ್ವದ ಎಂಟನೆಯ ಸಂಧಿ, ಸಂಧಾನಕ್ಕಾಗಿ ಹಸ್ತಿನಾವತಿಗೆ ಆಗಮಿಸುವ ಕೃಷ್ಣ ವಿದುರನ ಮನೆಗೆ ಬಂದ ಪ್ರಸಂಗ. ಪಯಣದ ಆಯಾಸದಿಂದ ನಸುವೇ ಬಾಡಿದ ಸಿರಿಮೊಗದ ಮೂರ್ತಿ; ಭಕ್ತ್ಯುದ್ರೇಕದಿಂದ ಮನೆಯನ್ನೇ ಮುರಿದೀಡಾಡುವ ವಿದುರ; ಅದರ ಹುಚ್ಚಾಟವನ್ನು ನೋಡಿ ನಸುನಗುತ್ತಾ "ಹಸಿದು ನಾವೈತಂದರೀ ಪರಿ ಮಸಗಿ ಕುಣಿದಾಡಿದೊಡೆ ಮೇಣೀ ವಸತಿಯನು ಸುಗಿದೆತ್ತಿ ಬಿಸುಟರೆ ತನಗೆ ತಣಿವಹುದೇ? ವಸುಮತಿಯ ವಲ್ಲಭರು ಮಿಗೆ ಪ್ರಾರ್ಥಿಸಿದೊಡೊಲ್ಲದೆ ಬಂದೆವೈ, ನಾಚಿಸದಿರೈ ಬಾ ವಿದುರ" ಎಂದು ಅವನನ್ನು ಸಂತೈಸಿ ಒಳಗೆ ಕರೆದೊಯ್ಯುವ ಕೃಷ್ಣ. ವಾಚನದ ಕೊನೆಗೆ "ವೇದಪಾರಾಯಣದ ಫಲ..." ಹಾಡಿ ಕೈ ಮುಗಿಯುವಹೊತ್ತಿಗೆ ಸಂಪೂರ್ಣ ತಾದಾತ್ಮ್ಯ ಲಭಿಸಿತ್ತು. ಬಹುದಿನದ ಕನಸು ನನಸಾಗಿತ್ತು. ಗುಡಿಗೆ ಬಂದವರು ಹಾಗೇ ಆಲಿಸುತ್ತಾ ಕುಳಿತ ಒಂದಿಬ್ಬರು "ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು" ಒಳನಿಂತಿದ್ದ ಕವಿ ವೀರನಾರಾಯಣನಿಗೆ ನಮಿಸಿ ತೆರಳಿದರು. ನಾನು "ಲಿಪಿಕಾರ ಕುವರವ್ಯಾಸ"ನ ಪುಣ್ಯಸ್ಮೃತಿಯೊಂದಿಗೆ ಊರ ದಾರಿ ಹಿಡಿದೆ.

ಅಡಿಟಿಪ್ಪಣಿ:
ಊರಿಗೆ ಪಯಣಿಸುತ್ತಾ ಮನಸ್ಸಿನಲ್ಲಿ ಮೂಡಿದ ಯೋಚನೆ ಇದು. ಇಡೀ ಕುಮಾರವ್ಯಾಸಭಾರತವನ್ನು ಧ್ವನಿರೂಪದಲ್ಲಿ ಸಂಗ್ರಹಿಸಿಡಲು ಸಾಧ್ಯವೇ? ಊರಿಗೆ ಬಂದಮೇಲೆ ಗೆಳೆಯ ಶ್ರೀಕಾಂತರೊಡನೆ ಚರ್ಚಿಸುತ್ತಿದ್ದಾಗ ಅವರಿಂದ ಅದಕ್ಕೆ ಪೂರಕವಾಗಿ ಅದಕ್ಕೂ ಪ್ರಾಥಮಿಕವಾಗಬಹುದಾದ ಮತ್ತೊಂದು ಯೋಚನೆಯೂ ಬಂತು, ಕುಮಾರವ್ಯಾಸಭಾರತವನ್ನು ಎಲೆಕ್ಟ್ರಾನಿಕ್ ಪುಸ್ತಕವಾಗಿ ಸಂಗ್ರಹಿಸಬಾರದೇಕೆ? ಅಂತರ್ಜಾಲದಲ್ಲೆಲ್ಲೂ ಗದುಗಿನ ಭಾರತ e-book ಇರುವಂತೆ ಕಾಣಲಿಲ್ಲ. ಎರಡೂ ಯೋಜನೆಗಳು ಕಷ್ಟಸಾಧ್ಯವಾದರೂ ಇದ್ದುದರಲ್ಲಿ ಮೊದಲನೆಯ ಯೋಜನೆಗಿಂತಲೂ ಎರಡನೆಯ ಯೋಜನೆ ಸುಲಭವೆಂದು ಕಂಡಿತು. ಆದ್ದರಿಂದ ಪ್ರಾರಂಭಿಕವಾಗಿ ಎಲೆಕ್ಟ್ರಾನಿಕ್ ಪುಸ್ತಕದ ಯೋಜನೆಯನ್ನು ಕೈಗೊಳ್ಳುವುದೆಂದೂ, ಅದರ ಯಶಸ್ಸನ್ನು ಅವಲಂಬಿಸಿ ಧ್ವನಿರೂಪದ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದೆಂದೂ ತೀರ್ಮಾನಿಸಿದೆವು. ಮುಂದುವರೆದು, ಇಡೀ ಕಾರ್ಯ ನಮ್ಮಿಬ್ಬರಿಂದಲೇ ಆಗುವುದಲ್ಲವೆಂದೂ, ನಮ್ಮಿಬ್ಬರದೇ ಆಗಿ ಉಳಿಯಬಾರದೆಂದೂ ಅರಿತೆವು. ಜನಪ್ರಿಯವಾದ ಗದುಗಿನ ಭಾರತದ ಇ-ಆವೃತ್ತಿ ಬಹು ಜನರ ಪ್ರಯತ್ನದಿಂದಲೇ ಸಾಕಾರಗೊಳ್ಳುವುದು ಸಾಧುವೆಂದು ನಮ್ಮ ಅನಿಸಿಕೆ. ಸ್ಥೂಲವಾಗಿ ಎರಡು ಹಂತಗಳ ಯೋಜನೆ ಹೀಗೆ:

೧. ಇ-ಪುಸ್ತಕ: ಸುಮಾರು ೬೦೦ ಪುಟಗಳ ಗದುಗಿನ ಭಾರತದಲ್ಲಿ ೧೦ ಪರ್ವಗಳಿವೆ. ಒಬ್ಬರು ಒಂದೊಂದು ಪರ್ವವನ್ನು ವಹಿಸಿಕೊಂಡರೂ, ದಿನಕ್ಕೊಂದು ಪುಟದಂತೆ ಟೈಪು ಮಾಡಿದರೂ ಹತ್ತು ಜನ ಇದನ್ನು ಎರಡು ತಿಂಗಳಲ್ಲಿ ಮುಗಿಸಬಲ್ಲರೆಂದು ಅಂದಾಜು. ಇವೆಲ್ಲವನ್ನೂ ಒಂದು ಕಡೆ ಕಲೆಹಾಕಿ, ಕರಡು ತಿದ್ದಿ ಕ್ರಮಪಡಿಸಿದರೆ ಇ-ಪುಸ್ತಕವನ್ನು ಅಂತರ್ಜಾಲದಲ್ಲಿ ಉಚಿತವಾಗಿ ದೊರೆಯುವಂತೆ ಪ್ರಕಟಿಸಬಹುದು. ಸಲಕರಣೆಗಾಗಿ ನಮಗೆ ಬೇಕಾದ್ದೆಲ್ಲಾ ಒಂದು unicode ತಂತ್ರಾಂಶ (ಬರಹ ಇತ್ಯಾದಿ), ಗದುಗಿನ ಭಾರತದ ಪ್ರತಿ, ಬರೆಯಲು ಸಮಯ ಮತ್ತು ಉತ್ಸಾಹ. ಈ ಉದ್ದೇಶಕ್ಕಾಗಿ ಬ್ಲಾಗೊಂದನ್ನು ಸಿದ್ಧಪಡಿಸಿದ್ದೇವೆ http://gaduginabharata.blogspot.com/. ಸಧ್ಯಕ್ಕೆ ಶ್ರೀಕಾಂತ್ ಆದಿಪರ್ವವನ್ನೂ ನಾನು ಸಭಾಪರ್ವವನ್ನೂ ಕೈಗೆತ್ತಿಕೊಂಡಿದ್ದೇವೆ. ಉತ್ಸಾಹಿಗಳು ಉಳಿದ ಪರ್ವಗಳನ್ನು ಕೈಗೆತ್ತಿಕೊಳ್ಳಲು ಮುಂದೆ ಬಂದಲ್ಲಿ ಬ್ಲಾಗಿನ authorship ಪಡೆಯಲು ಸ್ವಾಗತ.

೨. ದ್ವನಿರೂಪದ ಸಂಗ್ರಹ: ಇದು ಮೂಲತಃ ಕಾವ್ಯವಾಚನದ ಯೋಜನೆ, ಆದರೆ ಸಿ.ಡಿ. ಹೊರತರುವುದೋ, ಭಾಗಶಃ ವಾಚನ-ವ್ಯಾಖ್ಯಾನವೋ ಅಲ್ಲ. ಮೇಲೆ ಹೇಳಿದ ಇ-ಪುಸ್ತಕದಂತೆಯೇ ಇದು ಧ್ವನಿ ಪುಸ್ತಕ. ಮೇಲಿನಂತೆಯೇ ಒಂದಷ್ಟು ಜನ ಉತ್ಸಾಹಿ ಗಮಕಿಗಳ ಗುಂಪು ಭಾರತದ ಒಂದೊಂದು ಭಾಗವನ್ನು ಹಾಡಿ ಧ್ವನಿಮುದ್ರಿಸಿ ಒಂದು ಕಡೆ ಕಲೆಹಾಕುತ್ತಾ ಹೋಗುವುದು. ಮುಂದೆ ಅವೆಲ್ಲವನ್ನೂ ಪರಿಷ್ಕರಿಸಿ ಕರ್ಣಾಟಭಾರತ ಕಥಾಮಂಜರಿ ಧ್ವನಿ ಅವತರಣಿಕೆ ಹೊರತರಲು ಸಾಧ್ಯ. ಇದೂ ಇ-ಪುಸ್ತಕದಂತೆಯೇ ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿರಬೇಕೆಂದು ಆಶಯ. ಆದರೆ ಇದಕ್ಕೆ ಮೇಲಿನದಕ್ಕಿಂತ ಹೆಚ್ಚು ಜನ ಬೇಕಾಗುತ್ತದೆ ಎನ್ನುವುದಂತೂ ನಿಜ. ಆದರೆ ಭಾಗವಹಿಸುವವರು ಉತ್ತಮ ಸಂಗೀತಗಾರರೋ, ವೃತ್ತಿಪರ ಗಮಕಿಗಳೋ ಆಗಿರಬೇಕೆಂದೇನೂ ಇಲ್ಲ. ಕಾವ್ಯವನ್ನು ಆಸ್ವಾದಿಸುವ, ಅದನ್ನು ಸುಶ್ರಾವ್ಯವಾಗಿ ಭಾವಪೂರ್ಣವಾಗಿ ಹಾಡಿ ಪ್ರಸ್ತುತಪಡಿಸುವ, ಆ ಕ್ರಿಯೆಯನ್ನು ಆನಂದಿಸುವ ಮನಸ್ಸುಳ್ಳವರಾದರೆ ಸಾಕು. ಮತ್ತು ಸಲಕರಣೆಯಾಗಿ ನಮಗೆ ಬೇಕಾದ್ದೆಲ್ಲಾ ಗದುಗಿನ ಭಾರತದ ಪ್ರತಿ, ಒಂದು audacity ತಂತ್ರಾಂಶ (ಅಂತರ್ಜಾಲದಲ್ಲಿ ಉಚಿತವಾಗಿ ದೊರೆಯುತ್ತದೆ), ಒಂದು ಶ್ರುತಿಪೆಟ್ಟಿಗೆ/ತಂಬೂರಿ, ಗೊತ್ತುಪಡಿಸಿದ ಒಂದು ಸಾಮಾನ್ಯ ಶ್ರುತಿ, ಧ್ವನಿಮುದ್ರಿಸಲು ಪ್ರಶಾಂತವಾದ ಸ್ಥಳ, ಎಲ್ಲವನ್ನು ಕಲೆಹಾಕಲು ಒಂದು rapid share ಅಥವ ಅಂಥದ್ದೊಂದು ಖಾತೆ. ಈ ಯೋಜನೆ ಇನ್ನೂ ಆಲೋಚನೆಯ ಹಂತದಲ್ಲಿದೆ. ಸಲಹೆ ಸೂಚನೆಯನ್ನೂ ಒಳಗೊಂಡು ಎಲ್ಲಾ ವಿಧದ ಭಾಗವಹಿಸುವಿಕೆಗೆ ಸ್ವಾಗತ.

Tuesday, November 10, 2009

ಏರಿ ನೀರುಂಬೊಡೆ, ಬೇಲಿ ಹೊಲವ ಮೇದಡೆ...

ಮೊನ್ನೆ ಬೆಂಗಳೂರಿನಲ್ಲಿ ನಡೆದ ವಕೀಲರ ದಾಂದಲೆ ಯಾವ ಮಾನವಂತ, ವೃತ್ತಿವಂತ ವಕೀಲನೂ ತಲೆತಗ್ಗಿಸುವಂಥದ್ದು. ದಾಂದಲೆಗೆ ಪ್ರೇರಕವಾದ ಕಾರಣಗಳೇನೇ ಇರಲಿ, ಅವು ಅದೆಷ್ಟೇ ಸಕಾರಣವಾಗಿರಲಿ ಅದಕ್ಕೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರವಿರಲಿಲ್ಲವೇ? ಕಾನೂನು ಅರಿಯದ ಸಾಮಾನ್ಯ ಜನ ಗೂಂಡಾಗಿರಿಗಿಳಿದರೆ ಅದು ಅವರ ಕಾನೂನು ಅಜ್ಞಾನ ಅಥವ ವ್ಯವಸ್ಥೆಯ ಬಗ್ಗೆ ಹತಾಶೆ ಎಂದಾದರೂ ಅರ್ಥಮಾಡಿಕೊಳ್ಳಬಹುದು; ಆದರೆ ಕಾನೂನು ಬಲ್ಲ ವಕೀಲರು ಈ ರೀತಿ ಕಾನೂನು ಹೊರಗಿನ ಪರಿಹಾರಕ್ಕೆಳಸಿದರೆ ಅದು ಅವರ ಕಾನೂನು ಅಜ್ಞಾನವೇ, ವ್ಯವಸ್ಥೆಯ ಬಗೆಗಿನ ಹತಾಶೆಯೇ? ಅಜ್ಞಾನವಾದರೆ, ಆ ಅಜ್ಞಾನಿ ನಮಗೆ ಯಾವ ಸಹಾಯ ಮಾಡಿಯಾನು? ಹತಾಶೆಯಾದರೆ, ಸ್ವತಃ ಕಾನೂನಿನಲ್ಲಿ ನಂಬಿಕೆ ಕಳೆದುಕೊಂಡ ವಕೀಲ ನಮಗೆ ಅದಾವ ನಂಬಿಕೆ ಕೊಟ್ಟಾನು? ಕೋರ್ಟಿನಲ್ಲಿ ನಿಂತು ವಾದಿಸುವ ಯೋಗ್ಯತೆಯಾದರು ಇದೆಯೇ ಇವರಿಗೆ? ಅದೂ ಒಬ್ಬ ಇಬ್ಬ ವಕೀಲನಾದರೆ ಹೋಗಲಿ, ಒಂದು ಇಡೀ ವಕೀಲ ಸಮುದಾಯ ಹೀಗೆ ಕಾನೂನಿನಲ್ಲಿ ಅಪನಂಬಿಕೆ ತಳೆದರೆ, ಕಾನೂನೇತರ ಮಾರ್ಗ ಹಿಡಿದರೆ ಸಮಾಜಕ್ಕೆ ಇವರ ಸಂದೇಶವೇನು? ಅಥವಾ ಇದು ಸೂಚಿಸುವಂತೆ, ನಮ್ಮ ಕಾನೂನು ವ್ಯವಸ್ಥೆಯಲ್ಲಿ ನಿಜಕ್ಕೂ ದಮ್ಮೇ ಇಲ್ಲವೇ? ಹಾಗಾದರೆ ಕೋರ್ಟ್ ಏಕೆ, ಪೋಲೀಸ್ ಏಕೆ, ಸರಕಾರವೇಕೆ? ದಿಗ್ಭ್ರಮೆಗೊಂಡ ಒಬ್ಬ ಸಾಮಾನ್ಯ law abiding ನಾಗರಿಕನ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿವು. ಉತ್ತರಿಸುವ ಹೊಣೆಗಾರರು ಯಾರಾದರೂ ಇದ್ದಾರೆಯೇ?

ಒಂದು ಜೋಕು ನೆನಪಿಗೆ ಬರುತ್ತದೆ (ಇದು ಜೋಕು ಮಾಡುವ ವಿಷಯವಲ್ಲ, ಆದರೂ). ಆಸ್ಪತ್ರೆಯೊಂದರಲ್ಲಿ ರೋಗಿಯೊಬ್ಬನಿಗೆ ಆಪರೇಷನ್ ನೆಡೆಯಬೇಕಿತ್ತು, ಎಲ್ಲಾ ಸಿದ್ಧವಾಗಿತ್ತು. ಅರಿವಳಿಕೆ ಕೊಡಲು ನರ್ಸ್ ಹತ್ತಿರ ಬಂದಳು. ಡಾಕ್ಟರು ನರ್ಸ್ ಜೊತೆ ಮಾತಾಡುತ್ತಾ ಆಪರೇಷನ್ ಸಿದ್ಧತೆ ನೆಡೆಸಿದ್ದರು. ಆಪರೇಷನ್ ಟೇಬಲಿನ ಮೇಲೆ ಮಲಗಿದ್ದ ರೋಗಿ ಭಯಗೊಂಡು ಧಡಕ್ಕನೆ ಎದ್ದು ಓಡತೊಡಗಿದ. ಓಡುತ್ತಿದ್ದವನನ್ನು ದಾರಿಯಲ್ಲಿ ಒಬ್ಬ ತಡೆದು ಕಾರಣ ಕೇಳಿದ. ಅವರ ಸಂಭಾಷಣೆ ಹೀಗಿತ್ತು:

ದಾರಿಹೋಕ: ಯಾಕೆ ಓಡುತ್ತಿದ್ದೀ, ಏನಾಯ್ತು?
ರೋಗಿ: ನಂಗೆ ಆಪರೇಷನ್ ಆಗಬೇಕಿತ್ತು, ನನಗೆ ಭಯವಾಗಿ ಓಡಿಬಂದೆ
ದಾರಿಹೋಕ: ಭಯ ಯಾಕೆ?
ರೋಗಿ: ನರ್ಸ್ ಹೇಳ್ತಿದ್ದಳು "ಏನೂ ಹೆದರಬೇಡಿ, ನಾನಿದೀನಿ, ಏನೂ ಆಗಲ್ಲ"
ದಾರಿಹೋಕ: ಅದಕ್ಕೆ ನಿನಗೆ ಮತ್ತೂ ಧೈರ್ಯ ಬರಬೇಕು, ಹೆದರಿಕೆ ಯಾಕೆ?
ರೋಗಿ: ಯಾಕಂದ್ರೆ, ನರ್ಸ್ ಹಾಗೆ ಹೇಳಿದ್ದು ನನಗಲ್ಲ, ಡಾಕ್ಟರಿಗೆ

ಏರಿ ನೀರುಂಬೊಡೆ, ಬೇಲಿ ಹೊಲವ ಮೇದಡೆ ಇನ್ನಾರಿಗೆ ದೂರುವೆನಯ್ಯಾ?

Thursday, October 29, 2009

ಕನ್ಯಾಕುಮಾರಿ

(೧)
ಸಂಜೆ ಎಂಟಕೆ ಬಿಡುವ
ಲೌಡ್ ಸ್ಪೀಕರಿನ
someಗೀತ
ಟ್ರಾವೆಲ್ ಬಸ್ಸು;
ಬೆಂಗಳೂರಿಂದ ಹದಿನೆಂಟು ತ್ರಾಸು
ರೆಪ್ಪೆಯಿಲ್ಲದ ಕಿವಿಯ ಮುಚ್ಚಲಾರದ ದಿಟಕೆ
ಕಣ್ಮುಚ್ಚಿ ಕೂತ
ಚಿತ್-
ಭಂಗಿ, ನಿದ್ರಾಯೋಗ
ನಟಿಸಿ, ವಟವಟಿಸಿ ಚಡಪಡಿಸಿ ಸಿಡಿವುದರೊಳಗೆ
ಕನ್ಯಾ
ಕು
ಮಾರಿ
ಬಿಸಿಲು-ಅಂಟು
ಮೈಯೆಲ್ಲ ಉಪ್ಪು
ಕಾರುವ ಕಡಲು
ಅಲೆ
ಯುವ ಮಂದೆ-
ಮಂದಿ

ದ ಒಳ ಹೊರಗೆ
ಕಡಲ ತಡಿಯಡಿಗಡಿಗೆ
ಕಾಗದ ಚೂರು
ಪ್ಲಾಸ್ಟೀಕು ಕವರು
ಕಚಪಚ ಕೆಸರು
ಚೆಲ್ಲುವ ವಿವೇಕ
ಸಾಗರದ
ನಡುವೆ ತಲೆಯೆತ್ತಿದ
ವಿವೇಕ
ಶಿಲೆಗೆ
ಲಾಂಚರು
ಕಾದುನಿಂತ ಮೈಲುದ್ದ ಕ್ಯೂ!

(೨)
ವಿವೇಕ ಮಂದಿರದಿ
ಧ್ಯಾನದಾನಂದದಾರಾಮ;
ತಂಪೆರೆವ ನಿಃಶಬ್ದ ನಿರ್ವಾತ ಧಾಮ;
ಗದ್ದಲದ ವಾಕ್ಯದಲಿದೊಂದು
ಅಲ್ಪ ವಿರಾಮ.

(೩)
ದಿನವೆಲ್ಲ ಉರಿದು ಸುಸ್ತಾಗಿ
ಪಡುಗಡಲಲ್ಲಿ ಮಲಗಲೆಳಸುವ ಸೂರ್ಯ;
ಕಡಲ ಹೊನ್ನೀರ್ ತುಳುಕಿ
ಸುತ್ತೆಲ್ಲ ಬಣ್ಣವೋ ಬಣ್ಣ;
ಸಂಜೆಬಾನಿನ ಕಾಂತಿ,
ಶಿಲೆಯ ನೆಲೆಯಿಂ ಹೊರಟು
ದಿಕ್ಕ ತುಂಬಿದ ಶಾಂತಿ -
ಶ್ರೀ ವಿವೇಕಾನಂದ ಚಿತ್ಛಾಂತಿ

(೪)
ಮುಂಜಾವಿನರುಣೋದಯದ
ಹೊನ್ನ ಕಿರಣದಲಿ
ತೀಡುತಿಹ ತಂಗಾಳಿ,
ದೇವಿಯ ಕೃಪೆಯ ಸುಯ್ಯುತಿಹ
ಉದಯರಾಗ;
ವರ್ಣಮಯವೀ ಬಾನು
ವರ್ಣಮಯವೀ ಕಡಲು
ವರ್ಣಮಯವದರ ಮಳಲು.
ಮುಂಜಾವ ಸಿಹಿಗನಸಲಿನ್ನೂ ಮಿಸುಗುವ ಸೂರ್ಯ
ಮೈತಿಳಿದು ಕಣ್ಹೊಸಕಿ ಉರಿಯ ಕೆದರುವ ಮುನ್ನ
ಕಟ್ಟುತ್ತೇನೆ ಜೋಳಿಗೆಯ,
ಮುಂದಿನೂರಿಗೆ ಪಯಣ.

Wednesday, October 21, 2009

ಮಾತು ಒಡೆದರೆ...

ಮೊನ್ನೆ ಸುಮ್ಮನೇ ಟಿ.ವಿ. ಚಾನೆಲ್ಲುಗಳನ್ನು ತಿರುಗಿಸುತ್ತಿರಬೇಕಾದರೆ ಚಾನೆಲ್ಲೊಂದರಲ್ಲಿ ಬಭ್ರುವಾಹನ ಚಿತ್ರದ ಹಾಡೊಂದು ಬರುತ್ತಿತ್ತು - ರಾಜಕುಮಾರ್ ಜಯಮಾಲಾ ಅಭಿನಯದ ಜನಪ್ರಿಯ ಗೀತೆ, "ಆರಾಧಿಸುವೇ ಮದನಾರಿ". ನಿಮ್ಮಲ್ಲಿ ಅನೇಕರಿಗೆ ಅರಿವಿರುವಂತೆ ಅದೊಂದು ಪ್ರಣಯಸನ್ನಿವೇಶ. ಅರ್ಜುನ ಸನ್ಯಾಸಿ ತನ್ನ ಪೂಜಾ-ಕೈಂಕರ್ಯಗಳಿಗೆಂದು ನಿಯಮಿಸಿದ್ದ ಸುಭದ್ರೆಯೊಡನೆ ಸರಸವಾಡುತ್ತಾ, ಪೂಜೆಯ ನೆವದಲ್ಲಿ ಅವಳೊಡನೆ flirt ಮಾಡುವ ಹಾಡು ಅದು. ಈ ಹಾಡನ್ನು ನಾನು ಮೊದಲು ನೋಡಿದ್ದು ಬಹುಶಃ ಸಿನಿಮಾದಲ್ಲೇ. "ಬಭ್ರುವಾಹನ" ನಮ್ಮೂರಿಗೆ ಬಂದದ್ದು ೭೭ರಲ್ಲೋ ೭೮ರಲ್ಲೋ. ನನಗಾಗ ೮-೧೦ ವಯಸ್ಸಿರಬೇಕು. ಖುಶಿ ಕೊಡುವ ಸಂಗೀತದ ಜೊತೆಗೆ ಸಿನಿಮಾದ ಶ್ರೀಮಂತ ಸೆಟ್, ರಾಜಕುಮಾರರ ಶೃಂಗಾರಭರಿತ ಅಭಿನಯ, 'ಮದನಾರಿ' ಸುಭದ್ರೆಯ ಮದವೇರಿಸುವ ಸೌಂದರ್ಯ, ಒನಪು-ವಯ್ಯಾರ ಇವು ನನ್ನ ಎಳೆಗಣ್ಣಿಗೆ ಕಟ್ಟಿದ್ದ ಅಂಶಗಳು. ಆಮೇಲೆ ಈ ಚಿತ್ರವನ್ನು ಎಷ್ಟೋ ಬಾರಿ ನೋಡಿದ್ದೇನೆ, ಹಾಡನ್ನು ಅದೆಷ್ಟೋ ಬಾರಿ ನೋಡಿದ್ದೇನೆ-ಕೇಳಿದ್ದೇನೆ. ತಲೆಚಿಟ್ಟು ಹಿಡಿಸುವ ಟಿ.ವಿ ಕಾರ್ಯಕ್ರಮಗಳ ನಡುವೆ ಆಗೊಮ್ಮೆ ಈಗೊಮ್ಮೆ ಇಂಥ ಮುದಕೊಡುವ ಹಾಡುಗಳು ಸುಳಿಯುವುದುಂಟು. ಮೊನ್ನೆ ಈ ಹಾಡು ಕೇಳುತ್ತಿದ್ದಾಗ ಮೂವತ್ತು ವರ್ಷಗಳ ಹಿಂದೆ ಇದಕ್ಕೆ ಸಂಬಂಧಿಸಿದ ಮೋಜಿನ ಪ್ರಸಂಗ ನೆನಪಿಗೆ ಬಂತು.

ಬೆಳಗ್ಗೆ ಎಲ್ಲೋ ಯಾರೋ ರೇಡಿಯೋ ಹಾಕಿದ್ದರು (ಯಾರಾದರೂ ಕೇಳುತ್ತಿದ್ದರೆಂದಲ್ಲ, ಯಾರಾದರು ಕೇಳಲಿ ಕೇಳದಿರಲಿ, ರೇಡಿಯೋ ಮಾತ್ರ ಅರಚುತ್ತಿರಬೇಕು; ಆಗೆಲ್ಲ ರೇಡಿಯೋ ನಮ್ಮ ದಿನಚರಿಯನ್ನು ನಿಯಂತ್ರಿಸುವ calender ಆಗಿತ್ತು). ವಿವಿಧಭಾರತಿ ಇರಬೇಕು, ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಈ ಹಾಡು ಪ್ರಸಾರವಾಗುತ್ತಿತ್ತು. ಅಲ್ಲೆಲ್ಲೋ ಜಗುಲಿಯ ಮೇಲೆ ಕುಳಿತಿದ್ದ ನಮ್ಮ ತಾತನವರು (ಆಗ ಅವರಿಗೆ ಸುಮಾರು ಎಂಬತ್ತು ವರ್ಷ) ಆ ಹಾಡನ್ನು ಆಸ್ವಾದಿಸುತ್ತಾ ತಲೆದೂಗುತ್ತಿದ್ದರು; ಬಾಯಿಂದ "ಭೇಷ್ ಭೇಷ್..." ಎಂಬ ಉದ್ಗಾರ ಬೇರೆ. ಇದನ್ನು ಕಂಡ ನಮ್ಮ ತಾಯಿ, ನಮ್ಮ ಸೋದರತ್ತೆಗೆ (ನಮ್ಮ ತಾತನವರ ಮಗಳಿಗೆ) ಅದನ್ನು ತೋರಿಸಿ ನಗುತ್ತಿದ್ದರು. ನಮ್ಮತ್ತೆಗೋ ಒಂದು ರೀತಿ ಇರುಸುಮುರುಸು, ಮುಜುಗರ. ಸಾತ್ವಿಕರಾದ, ಋಜುಸ್ವಭಾವದವರಾದ, ಸಿನಿಮಾ ಮುಖವನ್ನೇ ನೋಡಿಲ್ಲದ ನಮ್ಮ ತಾತ ಈ ವಯಸ್ಸಿನಲ್ಲಿ ಅದಾವುದೋ ಶೃಂಗಾರದ ಹಾಡನ್ನು ಅಷ್ಟು public ಆಗಿ ಮೆಚ್ಚುವುದೆಂದರೇನು, ತಲೆದೂಗುವುದೆಂದರೇನು!

ಆದರೆ ನನಗೆ ಆಶ್ಚರ್ಯ, ಅವರು ಆ ಹಾಡನ್ನು ಮೆಚ್ಚಿದರೆ ಇವರಿಗೇನು? ಆ ಹಾಡಿನ ಸಂಗೀತ ಎಷ್ಟು ಸೊಗಸಾಗಿತ್ತೆಂದರೆ, ಸ್ವತಃ ಹಾಡುಗಾರರಾಗಿದ್ದ ನಮ್ಮ ತಾತನವರು ಅದನ್ನು ಮೆಚ್ಚಿ ತಲೆದೂಗದಿರಲು ಸಾಧ್ಯವೇ ಇರಲಿಲ್ಲ. ನಮ್ಮ ಅತ್ತೆ ಮತ್ತು ನಮ್ಮ ತಾತನವರ ಸಂಭಾಷಣೆ ಹೆಚ್ಚು ಕಡಿಮೆ ಹೀಗಿತ್ತು:

ನಮ್ಮತ್ತೆ: (ಇರುಸುಮುರುಸಿನಿಂದ, ಅಪ್ಪನ ಬಳಿ ಸಾರಿ) ಏನಪ್ಪ ಇದು ಅಸಹ್ಯ, ಹೋಗಿ ಹೋಗಿ ಈ ಹಾಡಿಗೆ ತಲೆತೂಗುತ್ತ ಇದೀಯಲ್ಲ
ತಾತ: ಯಾಕೇ ಪುಟ್ಟಾ, ಅದರ ಸಾಹಿತ್ಯ ನೋಡು, ಎಷ್ಟು ಸೊಗಸಾಗಿದೆ (ನನ್ನ ಸ್ವಗತ, ಅರೇ, ಸಾಹಿತ್ಯವೇ? ಅಥವಾ ಸಂಗೀತವೋ? ಸಾಹಿತ್ಯದಲ್ಲೇನಿದೆ!)
ನಮ್ಮತ್ತೆ: (ತಲೆ ಚಚ್ಚಿಕೊಳ್ಳುತ್ತಾ), ಬಡುಕೋಬೇಕು, ಅದರಲ್ಲೇನಿದೆಯಪ್ಪಾ ಅಂಥಾದ್ದು... ನೀನಂತೂ...

ನಮ್ಮ ತಾತ ಅದಕ್ಕೇನೂ ಉತ್ತರ ಕೊಡುವ ಗೋಜಿಗೆ ಹೋಗಲಿಲ್ಲ. ನಕ್ಕುಕೊಂಡು ಸುಮ್ಮನಾದರೆಂದು ನೆನಪು.

ಆಮೇಲೂ ಸುಮಾರು ಸಲ ಆ ಹಾಡನ್ನು ನೋಡಿದಾಗೆಲ್ಲ/ಕೇಳಿದಾಗೆಲ್ಲ ನಮ್ಮ ತಾಯಿ-ತಂದೆ ಆ ಘಟನೆಯನ್ನು ನೆನಪಿಸಿಕೊಂಡು ನಕ್ಕದ್ದಿದೆ; ಹಾಗೇ ಆ ಸಾಹಿತ್ಯದಲ್ಲಿ ತಾತನವರು ಮೆಚ್ಚಿದ್ದು ಏನಿದೆಯೆಂದು ನಾನು ತಲೆಕೆಡಿಸಿಕೊಂಡಿದ್ದೂ. ಆಮೇಲೊಂದುದಿನ, (ತಲೆಯಲ್ಲಿ ಕುಳಿತಿದ್ದ ಮದ'ನಾರಿ' ಕ್ಷಣಕಾಲ ಮರೆಯಾದಾಗ) ಇದ್ದಕ್ಕಿದ್ದಂತೆ ಹೊಳೆಯಿತು; ಅರೇ, ಮದನಾರಿಯೆಂದರೆ ಶಿವನಲ್ಲವೇ (ಮದನ + ಅರಿ)! ಜೊತೆಗೇ ನೆನಪಿಗೆ ಬಂತು, ತೆರೆಯಮೇಲೆ ಆ ಮದ'ನಾರಿ'ಯ ಮುಂದೆಯೇ ಕುಳಿತಿದ್ದ ಶಿವನ ಮೂರ್ತಿ; ಅರ್ಜುನ ಪೂಜಿಸುವಂತೆ ಅಭಿನಯಿಸುತ್ತಿದ್ದುದು ಆ ಮದನಾರಿಯನ್ನೇ! ಆಗ ಆ ಹಾಡಿನ ಪೂರ್ಣ ಸ್ವಾರಸ್ಯ ಅರಿವಿಗೆ ಬಂತು. ಈಗ ಮೊನ್ನೆ ಆ ಹಾಡನ್ನು ಮತ್ತೆ ನೋಡಿದಾಗ ಈ ಬಗ್ಗೆ ಬರೆಯಬೇಕೆನ್ನಿಸಿತು. ಕೇವಲ ಅದೊಂದು ಅರ್ಥಪಲ್ಲಟದಿಂದ ಇಡೀ ಹಾಡಿನ ರಸವೇ ಅದುಹೇಗೆ ಶೃಂಗಾರದಿಂದ ಭಕ್ತಿಗೆ ಬದಲಾಗುತ್ತದೆ ನೋಡಿ:

ಆರಾಧಿಸುವೇ ಮದನಾರಿ ಆದರಿಸು ನೀ ದಯ ತೋರಿ

ಅಂತರಂಗದಲಿ ನೆಲೆಸಿರುವೆ ಆಂತರ್ಯ ತಿಳಿಯದೆ ಏಕಿರುವೆ
ಸಂತತ ನಿನ್ನ ಸಹವಾಸ ನೀಡಿ ಸಂತೋಷದಿಂದೆನ್ನ ನಲಿಸೆಂದು ಕೋರುವೆ

ಮೈದೋರಿ ಮುಂದೆ ಸಹಕರಿಸು ಆ ಮಾರನುರವಣೆ ಪರಿಹರಿಸು
ಪ್ರೇಮಾಮೃತವನು ನೀನುಣಿಸು ತನ್ಮಯಗೊಳಿಸು ಮೈಮರೆಸು
ಚಿನ್ಮಯ ಭಾವ ತುಂಬುತ ಜೀವ ಆನಂದ ಆನಂದ ಆನಂದವಾಗಲಿ

ಇಡೀ ಹಾಡಿನ ಸಾಹಿತ್ಯ, ಎರಡು ಅರ್ಥಗಳಿಗೂ ಸಂಪೂರ್ಣ ಹೊಂದುತ್ತದೆ. ಬಳಸುವುದು ಒಂದೇ ಪದ, ಕೊಡುವುದು ಎರಡು ಅರ್ಥ (ಅದು ನೀವು ಈಗ ನೋಡುವ double-meaning ಅಲ್ಲ!). ಹೀಗೆ ಒಂದೇ ಪದ ಅಥವಾ ಪದಪುಂಜಗಳನ್ನು ಬಳಸಿ ವಿವಿದಾರ್ಥಗಳನ್ನು ಸೂಚಿಸುವುದಕ್ಕೆ ಅಲಂಕಾರದ ಪರಿಭಾಷೆಯಲ್ಲಿ ಶ್ಲೇಷೆಯೆನ್ನುತ್ತಾರೆ.

ಶ್ಲೇಷಾಲಂಕಾರ ಪ್ರತಿಭಾವಂತ ಕವಿಯೊಬ್ಬನ ಕೈಯಲ್ಲಿ ಉತ್ತಮ ಸಾಧನ. ಪ್ರಾಚೀನ-ಆಧುನಿಕ ಕವಿಗಳು ನಾಟಕಕಾರರು ಶ್ಲೇಷೆಯನ್ನು ಒಂದಿಲ್ಲೊಂದು ರೀತಿಯಲ್ಲಿ ಬಳಸುತ್ತಲೇ ಬಂದಿದ್ದಾರೆ. ಉದಾಹರಣೆಗೆ ಭಾಸನ "ಪ್ರತಿಜ್ಞಾಯೌಗಂಧರಾಯಣ" ನಾಟಕದ ನಾಂದಿ ಪದ್ಯವನ್ನು ನೋಡಿ:

ಪಾಂತು ವಾಸವದತ್ತಾಯೋ ಮಹಾಸೇನೋತಿ ವೀರ್ಯವಾನ್
ವತ್ಸರಾಜಸ್ತು ನಾಮ್ನಾ ಸ ಶಕ್ತಿರ್ಯೌಗಂಧರಾಯಣಃ

(ವಾಸವದತ್ತಾಭ್ಯುದಯ ಮಹಾಸೇನ ಬಹುವೀರ್ಯಯುತ ವತ್ಸರಾಜ
ಶಕ್ತಿಯ ತಳೆದಿಹ ಯೌಗಂಧರಾಯಣ ಕರುಣದಿ ಕಾಪಾಡಲೆಮ್ಮ - ಅನು: ಸಿ.ಪಿ.ಕೆ)

ಸ್ಥೂಲವಾಗಿ ಅದರ ಅರ್ಥ ಹೀಗೆ. ವಾಸವ (ಇಂದ್ರ)ನಿಗೆ ಜೀವನವನ್ನು (ಆಯು = ಜೀವನ, ಅಭ್ಯುದಯ) ನೀಡಿದ, ಅತಿ ವೀರ್ಯವಂತನೂ ವತ್ಸರಾಜನೆಂಬ ಹೆಸರುಳ್ಳವನೂ, ಮಹಾಸೇನನೂ ಆದ ಶಕ್ತಿಯುತನಾದ (ಅಥವ ಶಕ್ತ್ಯಾಯುಧ - ವೇಲಾಯುಧವನ್ನು ತಳೆದ) ಯೌಗಂಧರಾಯಣನು (ಕುಮಾರಸ್ವಾಮಿಯು) ನಮ್ಮನ್ನು ಕಾಪಾಡಲಿ (ಕುಮಾರಸ್ವಾಮಿಗೆ ವತ್ಸರಾಜನೆಂದೂ ಹೆಸರಿದೆ - ಗಣಪತಿಯು ಜ್ಯೇಷ್ಠರಾಜನಾದರೆ, ಅವನ ತಮ್ಮ ಸುಬ್ರಹ್ಮಣ್ಯನು ವತ್ಸರಾಜ; ಹಾಗೆಯೇ ದೇವಸೇನಾನಿಯಾದ ಈತ ಮಹಾಸೇನ; ಅಂತೆಯೇ ಯುಗಂಧರ (ಶಿವ)ನ ಮಗನಾದ್ದರಿಂದ ಯೌಗಂಧರಾಯಣ)

ಇದು ಕುಮಾರಸ್ವಾಮಿಯನ್ನು ಕುರಿತ ಸ್ತುತಿಯಾದರೆ, ನಾಟಕದ ಮಟ್ಟದಲ್ಲಿ ಅದರ ಮುಖ್ಯಪಾತ್ರಗಳ ಸ್ತುತಿಯೂ ಹೌದು, ಹಾಗೆಯೇ ನಾಟಕದ ಸ್ಥೂಲ ಪೂರ್ವಸೂಚಿಕೆಯೂ ಹೌದು - ವಾಸವದತ್ತೆ (ಮತ್ತವಳ ಅಭ್ಯುದಯ - ವಿವಾಹವೇ ಈ ನಾಟಕದ ವಸ್ತು), ಆಕೆಯ ತಂದೆ ಮಹಾಸೇನ (ಪ್ರದ್ಯೋತ); ವೀರಶ್ರೇಷ್ಠನಾದ ವತ್ಸರಾಜ (ಉದಯನ); ಇವೆಲ್ಲದರ ಜೊತೆಗೆ ಈ ನಾಟಕದ ನಾಯಕ, ಚತುರನೂ ಶಕ್ತಿಯುತನೂ ಆದ ಮಂತ್ರಿ ಯೌಗಂಧರಾಯಣ; ವಾಸವದತ್ತೆಯ ನವಜೀವನಕ್ಕೆ ಕಾರಣವಾಗುವ ಅವನ ಯುಕ್ತಿ-ಚಾತುರ್ಯಗಳು - ಇವನ್ನು ಸೂತ್ರಧಾರ ಸ್ತುತಿಸುತ್ತಾ ನಾಟಕವನ್ನು ಪ್ರಾರಂಭಿಸುತ್ತಾನೆ.

ಹೀಗೆಯೇ ಈ ನಾಟಕದ ಮುಂದುವರಿಕೆಯಾದ "ಸ್ವಪ್ನವಾಸದತ್ತಾ" ನಾಟಕದಲ್ಲೂ ಇಂಥದ್ದೇ ಶ್ಲೇಷೆಯನ್ನು ಬಳಸುತ್ತಾನೆ ಕವಿ (ಅದು ಬಲರಾಮನ ಬಗ್ಗೆ ಹಾಗೂ ನಾಟಕದ ಪಾತ್ರಗಳ ಬಗ್ಗೆ - ಶ್ಲೋಕ ನೆನಪಿಲ್ಲ)

ಇನ್ನು ಕಾಳಿದಾಸನ ಬಹು ಪರಿಚಿತ ಸಾಲು <em><span style="font-size:85%;">"ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ"

ಜಗನ್ಮಾತಾಪಿತರಾದ (ಪಿತರೌ = ತಂದೆ-ತಾಯಿಯ ಜೋಡಿಯನ್ನು ಒಟ್ಟಾಗಿ ಸೂಚಿಸಿದಾಗ) ಪಾರ್ವತೀ ಪರಮೇಶ್ವರನ್ನು ವಂದಿಸುತ್ತೇನೆ, ಇದು ಒಂದು ಅರ್ಥವಾದರೆ, ಜಗಜ್ಜನಕರಾದ ಪಾರ್ವತೀಪ (ಪಾರ್ವತೀ ಪತಿ = ಶಿವ) ಹಾಗೂ ರಮೇಶ್ವರ (ರಮಾಪತಿ = ವಿಷ್ಣು) ಇವರನ್ನು ವಂದಿಸುತ್ತೇನೆ (ಇಲ್ಲಿ ಕವಿ "ಪಿತರೌ" ಎಂಬ ದ್ವಿ ವಚನವನ್ನು ಎಷ್ಟು ಚಾತುರ್ಯದಿಂದ ಬಳಸಿದ್ದಾನೆ ಎಂಬುದನ್ನು ಗಮನಿಸಬಹುದು)

ಅಡಿಟಿಪ್ಪಣಿ: "ಪಾರ್ವತೀಪ + ರಮೇಶ್ವರೌ" ಎಂದು ಬಿಡಿಸುವುದು "ಜಗತಃ ಪಿತರೌ" ಎಂಬ ದ್ವಿವಚನದ ಸಂದರ್ಭದಲ್ಲಿ ಅಸಾಧುವೆಂದೂ, "ವಾಕ್" ಎಂಬ ಸ್ತ್ರೀಲಿಂಗಪದಕ್ಕೂ "ಅರ್ಥ" ಎಂಬ ಪುಲ್ಲಿಂಗಪದಕ್ಕೂ ಸಂವಾದಿಯಾಗಿ "ಪಾರ್ವತೀ ಪರಮೇಶ್ವರೌ" ಎಂಬ ಹೋಲಿಕೆ ಬರುವುದರಿಂದ, ಪಾರ್ವತೀಪ ಹಾಗೂ ರಮೇಶ್ವರ ಎಂಬ ದ್ವಿ ಪುಲ್ಲಿಂಗ ಪದಗಳ ಬಳಕೆ ಆಲಂಕಾರಿಕವಾಗೂ ಅನುಚಿತವೆಂದೂ, ತನ್ನ ಕಾವ್ಯಗಳಲ್ಲೆಲ್ಲಾ ಅಸಾಧಾರಣ ಔಚಿತ್ಯಪ್ರಜ್ಞೆ, ವ್ಯಾಕರಣಪ್ರಜ್ಞೆ ಮೆರೆಯುವ ಕಾಳಿದಾಸ ಕೇವಲ ಸಣ್ಣ ಕಾವ್ಯಪ್ರಯೋಜನಕ್ಕೆ ಇಂಧಾ ವ್ಯಾಕರಣದೋಷಕ್ಕೆಡೆಗೊಡುವುದು ಅಸಂಭವವೆಂದೂ ಆದ್ದರಿಂದ ಇಲ್ಲಿ ಶ್ಲೇಷೆಯನ್ನು ಹುಡುಕಹೊರಡುವುದು ವ್ಯರ್ಥವೆಂದೂ ಕೆಲವಿದ್ವಾಂಸರ ಅಭಿಪ್ರಾಯ.  ಹೆಚ್ಚಿನ ವಿವರಗಳಿಗೆ ಶ್ರೀ ವಿವೇಕರ ಪ್ರತಿಕ್ರಿಯಾರೂಪದ ಲೇಖನವನ್ನು ನೋಡಿ, ಕಾಮೆಂಟಿನಲ್ಲಿ]

ಇನ್ನು ಕನ್ನಡಕ್ಕೆ ಬಂದರೆ, "ಕವಿರಾಜಮಾರ್ಗ"ದ ಈ ಮಂಗಲಾಚರಣೆಯ ಪದ್ಯವನ್ನು ನೋಡಿ:

ಶ್ರೀವಿಶದವರ್ಣೆ ಮಧುರಾ
ರಾವೋಚಿತೆ ಚತುರ ರುಚಿರ ಪದರಚನೆ ಚಿರಂ
ದೇವಿ ಸರಸ್ವತಿ ಹಂಸೀ
ಭಾವದಿ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್

  ಶ್ರೀ ವಿಶದವರ್ಣೆ (ಮಂಗಳಕರವಾದ, ಶುಭ್ರವಾದ ಬಿಳೀ ಬಣ್ಣವುಳ್ಳವಳು), ಮಧುರಾರಾವೋಚಿತೆ (ಮಧುರವಾದ ಸ್ತುತಿಗೆ ಅರ್ಹಳು), ಚತುರ ರುಚಿರ ಪದರಚನೆ (ಸುಂದರವಾದ ಸುಲಲಿತವಾದ ನಡೆಯುಳ್ಳವಳು) ಚಿರಂದೇವಿ (ಶಾಶ್ವತಿ - "ಚಿರಂಜೀವಿ"ಯಂತೆ, ಚಿರಂದೇವಿ) ಸರಸ್ವತಿ, ಹಂಸೀ ಭಾವದಿ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್ (ಹಂಸವು ಮಾನಸ ಸರೋವರದಲ್ಲಿ ನೆಲೆಗೊಳ್ಳುವಂತೆ, ನೀನು ನನ್ನ ಮನಸ್ಸಿನಲ್ಲಿ ನೆಲೆಸು);

ಮತ್ತೆ, ಶ್ರೀ ವಿಶದವರ್ಣೆ (ಮಂಗಳಕರವಾದ ಸ್ಫುಟವಾದ ಅಕ್ಷರಗಳನ್ನುಳ್ಳವಳು - ವರ್ಣ = ಅಕ್ಷರ), ಮಧುರಾರಾವೋಚಿತೆ (ಮಧುರವಾದ ನುಡಿಯನ್ನು ಹೊಂದಿದವಳು = ಭಾಷೆ ಮಧುರವಾಗಿದೆ ಎಂಬ ಅಭಿಪ್ರಾಯ), ಚತುರ ರುಚಿರ ಪದರಚನೆ (ಸುಂದರವಾದ ಸುಲಲಿತವಾದ ಪದರಚನೆಯ ಸಾಮರ್ಥ್ಯವುಳ್ಳವಳು) ಚಿರಂದೇವಿ (ಶಾಶ್ವತಿ - ಅಕ್ಷರ ಶಾಶ್ವತ "ಅ+ಕ್ಷರ = ನಾಶವಿಲ್ಲದ್ದು) ಸರಸ್ವತಿ (ಭಾಷೆಗೆ ಸರಸ್ವತಿ ಎಂದೂ ಪರ್ಯಾಯವುಂಟು) ಹಂಸೀ ಭಾವದಿ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್ (ಹಂಸವು ಮಾನಸ ಸರೋವರದಲ್ಲಿ ನೆಲೆಗೊಳ್ಳುವಂತೆ, ನೀನು ನನ್ನ ಮನಸ್ಸಿನಲ್ಲಿ ನೆಲೆಸು) - ಇದು ಮಾತಿನ ಅಧಿದೇವಿಯಾದ ವಾಗ್ದೇವಿಯನ್ನು (ವಾಗ್ದೇವಿ = ಸರಸ್ವತಿ, ಮತ್ತೆ) ಕುರಿತ ಅರ್ಥ. ಮೊದಲ ಅರ್ಥದಲ್ಲಿ ಸರಸ್ವತಿಯ ದೈವೀ ಸ್ವರೂಪದ ವರ್ಣನೆಯಿದ್ದರೆ, ಎರಡನೆಯ ಅರ್ಥದಲ್ಲಿ ಆಕೆಯ ವಾಕ್ ಸ್ವರೂಪದ ವರ್ಣನೆಯಿದೆ. ಈ ರೀತಿ ವಿವಿಧಾರ್ಥಗಳನ್ನು ಹೊಳೆಸುವುದೂ ಮಾತಿನ ಶಕ್ತಿಯೇ ತಾನೆ? ಇದು ವಾಗ್ದೇವಿಯನ್ನು ಸ್ತುತಿಸುವ ಈ ಶ್ಲೋಕದ ಚಮತ್ಕಾರ.

ಇದೇ ಬಗೆಯ ಶ್ಲೇಷೆಯನ್ನು ಕವಿ ಮುದ್ದಣ ಹೇಗೆ ತರುತ್ತಾನೆ ನೋಡಿ ("ಶ್ರೀರಾಮ ಪಟ್ಟಾಭಿಷೇಕ" ಕಾವ್ಯದ ಮಂಗಲಾಚರಣೆಯಿಂದ):

ಹರಿಗೆರಗಿ ಸೋಮನಂ ನುತಿಸುತೆ ಮನಂದಣಿಯೆ
ಹರಿವಾಹನನ ಬಲಂಗೊಂಡು ಹರಿಪುತ್ರರಂ
ಹರಿಸುತಾದ್ಯರ್ಗೆ ತಲೆವಾಗಿ ಗುರು ಕವಿ ಬುಧರ ಪದಕಮಲಮಂ ಧ್ಯಾನಿಸಿ
ಹರಿಗೆರಗಿ ಸೋಮನಂ ನುತಿಸುತೆ ಮನಂದಣಿಯೆ
ಹರಿವಾಹನನ ಬಲಂಗೊಂಡು ಹರಿಪುತ್ರರಂ
ಹರಿಸುತಾದ್ಯರ್ಗೆ ತಲೆವಾಗಿ ಗುರು ಕವಿ ಬುಧರ ಪದಕಮಲಮಂ ಧ್ಯಾನಿಪೆಂ

ಹರಿ (ವಿಷ್ಣು)ಗೆರಗಿ, ಸೋಮ (ಶಿವ)ನಂ ನುತಿಸುತೆ ಮನಂದಣಿಯೆ, ಹರಿವಾಹನನ (ಗರುಡ?) ಬಲಂಗೊಂಡು ಹರಿಪುತ್ರರಂ (ಬ್ರಹ್ಮ) ಹರಿಸುತಾದ್ಯರ್ಗೆ (ಹನುಮನೇ ಮೊದಲಾದ ಕಪಿಶ್ರೇಷ್ಠರಿಗೆ - ಹರಿ = ಕಪಿ) ತಲೆವಾಗಿ ಗುರು (ಗುರುಗಳು) ಕವಿ (ಕವಿಗಳು/ಸಹೃದಯರು) ಬುಧ (ಪಂಡಿತ/ಜ್ಞಾನಿ)ರ ಪದಕಮಲಮಂ ಧ್ಯಾನಿಸಿ; ಮತ್ತೆ ಹರಿ (ಸೂರ್ಯ)ಗೆರಗಿ, ಸೋಮ (ಚಂದ್ರ)ನಂ ನುತಿಸುತೆ, ಮನಂದಣಿಯೆ ಹರಿವಾಹನ (ಮೇಷವಾಹನ = ಮಂಗಳ) ನ ಬಲಂಗೊಂಡು, ಹರಿಪುತ್ರರಂ (ಹರಿ(ಸೂರ್ಯ)ಪುತ್ರ = ಶನಿ) ಹರಿಸುತಾದ್ಯರ್ಗೆ (ಹರಿ=ಹಾವು; ಹಾವಿನಿಂದ ಹುಟ್ಟಿದವರು (?) ರಾಹುಕೇತು) ತಲೆವಾಗಿ, ಗುರು (ಗುರು) ಕವಿ (ಶುಕ್ರ) ಬುಧ (ಕವಿ = ಬುಧ)ರ ಪದಕಮಲಮಂ ಧ್ಯಾನಿಸುವೆ.

ಷಟ್ಪದಿಯ ಎರಡೂ ಅರ್ಧಗಳಲ್ಲಿ ಒಂದೇ ಪದಗಳನ್ನು ಬಳಸಿದರೂ ಮೊದಲ ಅರ್ಧದಲ್ಲಿ ತ್ರಿಮೂರ್ತಿಗಳು, ಗುರು-ಹಿರಿಯರನ್ನು ವಂದಿಸುವ ಕವಿ, ಎರಡನೇ ಅರ್ಧದಲ್ಲಿ ಅದೇ ಪದಗಳನ್ನು ಬಳಸಿ ನವಗ್ರಹಗಳನ್ನು ವಂದಿಸುತ್ತಾನೆ. ಈ ಷಟ್ಪದಿಯಲ್ಲಿ ವಿಷಯದ ಹರಿವಿನಲ್ಲಿ, ಅನ್ವಯದಲ್ಲಿ ಅಷ್ಟು ಸ್ಪಷ್ಟತೆ ಕಾಣುವುದಿಲ್ಲ, ಆದರೂ ಶ್ಲೇಷೆಗೆ ಇದೊಂದು ಉದಾಹರಣೆಯೆಂದು ಇಲ್ಲಿ ಕೊಟ್ಟಿದ್ದೇನೆ.

ಇದೆಲ್ಲಾ ಬುದ್ಧಿಯ ಚಮತ್ಕಾರವಾಯಿತು; ಪ್ರಯತ್ನ ಪಟ್ಟು ಬರೆಯದೇ ಬಂದದ್ದಲ್ಲ, ಪ್ರಯತ್ನ ಪಟ್ಟು ಅರಿಯದೇ ಅರ್ಥವಾಗುವುದಲ್ಲ. ಆದರೆ ಸ್ವಯಂಪ್ರಭೆಯಿರುವ ಕಾವ್ಯದ ಮಿಂಚಿಲ್ಲದಿದ್ದರೆ ಅದಾವ ಅಲಂಕಾರ ತಾನೆ ಮಿನುಗೀತು? ಶ್ರೀ ಎನ್ಕೆಯವರು ಬೇಂದ್ರೆಯರ ಬಗ್ಗೆ ಆಗಾಗ ಹೇಳುತ್ತಿದ್ದ ಘಟನೆಯೊಂದು ನೆನಪಿಗೆ ಬರುತ್ತದೆ. ಬೇಂದ್ರೆಯವರು ಕೆಲ ಮಿತ್ರರೊಡನೆ ಇನ್ನೊಬ್ಬ ಮಿತ್ರರ ಮನೆಗೆ ಹೋಗಿದ್ದರಂತೆ. ಮಿತ್ರರು ಹೊರಗೆಲ್ಲೋ ಹೋಗಿದ್ದರಿಂದ, ಸ್ವಲ್ಪ ಕಾಯಬೇಕಾಯಿತು. ಅವರು ಬರುವವರೆಗೆ ಹೀಗೇ ಸ್ವಲ್ಪ ಸುತ್ತಾಡಿ ಬರೋಣ ಎಂದ ಮಿತ್ರರ ಸಲಹೆಗೆ ಒಪ್ಪದ ಬೇಂದ್ರೆ, ಇತರರನ್ನು ಸುತ್ತಲು ಕಳುಹಿಸಿ ಮನೆಯಲ್ಲೇ ಉಳಿದರಂತೆ. ಅವರನ್ನು ಉಪಚರಿಸಲು ಮನೆಯೊಡತಿ ಒಂದು ತಟ್ಟೆಯಲ್ಲಿ ದೊಡ್ಡ ತಂಬಿಟ್ಟು ತಂದಿತ್ತರಂತೆ. ಅದನ್ನು ತಿಂದು ಮುಗಿಸುವ ವೇಳೆಗೆ ಹಿಂದಿರುಗಿದ ಇತರ ಮಿತ್ರರು, ತಮ್ಮನ್ನೆಲ್ಲಾ ಬಿಟ್ಟು ಬೇಂದ್ರೆ ತಂಬಿಟ್ಟು ತಿಂದರು ಎಂದು ಆಕ್ಷೇಪಿಸಿದಾಗ ಬೇಂದ್ರೆ ಉತ್ತರ "ನೀವ್ ನಂಬಿಟ್ ಹ್ವಾದ್ರಿ, ನಾವ್ ತಂಬಿಟ್ ತಿಂದ್ವಿ" (ನೀವು ನಮ್ಮನ್ನ ಬಿಟ್ಟು ಹೋದಿರಿ, ನಾವು ತಮ್ಮನ್ನ ಬಿಟ್ಟು ತಿಂದೆವು)

ಅ.ರಾ.ಮಿತ್ರರು ಶ್ಲೇಷಾಲಂಕಾರಕ್ಕೆ ಬಹು ಸೊಗಸಾದ ಉದಾಹರಣೆಯೊಂದನ್ನು ರಚಿಸಿ ಕೊಟ್ಟಿದ್ದಾರೆ, ತಮ್ಮ "ಛಂದೋಮಿತ್ರ" ಪುಸ್ತಕದಲ್ಲಿ:

ೀತವರ್ಣಪ್ರೀತೆ ಗೃಹಪತ್ರಕರ್ತೆ
ದೋಷದ ಕರಡು ತಿದ್ದದ ಮನೆಯ ಸಂಪಾದಕ
ಇಬ್ಬರಿಂ ಹಾಳಾಯ್ತು ಮನೆಯಚ್ಚುಕೂಟ
ಬತ್ತಿ ಹೋಯಿತು ಕೇಳು ಅರ್ಥ ಜೀವನದಿ

ಪೀತ = ಹಳದಿ ಪತ್ರಿಕೋದ್ಯಮ (yellow press - useless gossip), ಚಿನ್ನ ಕೂಡ
ಗೃಹಪತ್ರಕರ್ತೆ = ಗೃಹಿಣಿಯೆಂಬ ಪತ್ರಕರ್ತೆ, ಗೃಹಪತ್ರ (ಮನೆಯ ಖರ್ಚುವೆಚ್ಚ) ನೋಡುವವಳು ಕೂಡ
ಸಂಪಾದಕ = ಪತ್ರಿಕಾ ಸಂಪಾದಕ, ಹಣ ಸಂಪಾದಿಸುವವನು (ಯಜಮಾನ) ಎಂದು ಕೂಡ
ಅರ್ಥ = ಸ್ವಾರಸ್ಯ, ಹಣ ಕೂಡ
ಜೀವನದಿ = ಜೀವನದಲ್ಲಿ, ಜೀವ-ನದಿ ಕೂಡ (ಅರ್ಥ (ಹಣ)ವೆಂಬ ಜೀವನದಿ ಈ ದುಂದುವೆಚ್ಚದಿಂದ ಬತ್ತಿಹೋಯಿತು ಎಂದೂ ಅರ್ಥ)

ಶ್ಲೇಷೆಯ ಶುದ್ಧ ರೂಪದಲ್ಲಿ, ಒಂದೇ ಪದಕ್ಕೆ ಸಹಜವಾಗೇ ವಿವಿಧ ಅರ್ಥಗಳಿರುತ್ತವೆ. ಈ ಅರ್ಥಗಳು ಸಹಜ ನಿಘಂಟು ಅರ್ಥಗಳೇ ಹೊರತು ಸಾಧಿತ (ವ್ಯಂಗ್ಯ) ಅರ್ಥಗಳಲ್ಲ. ಉದಾ: ಅತ್ತೆ, ನಿನ್ನಿಂದ ನಾನತ್ತೆ.  ಇಲ್ಲಿ ಅತ್ತೆ (ಗಂಡನ ಅಥವ ಹೆಂಡತಿಯ ತಾಯಿ) ಮತ್ತು (ಅತ್ತೆ, ಅಳುವುದರ ಭೂತಕಾಲ) ಎರಡೂ ನಿಘಂಟಿನ ಅರ್ಥಗಳೇ.  ಹೀಗೆ ಪದಗಳನ್ನು ಒಡೆಯದೆಯೇ ಅದರ ವಿವಿಧಾರ್ಥಗಳನ್ನು ಚಮತ್ಕಾರಿಕವಾಗಿ ಬಳಸಿಕೊಳ್ಳುವುದಕ್ಕೆ ಅಭಂಗಶ್ಲೇಷೆ ಎನ್ನುತ್ತಾರೆ.  ದುಂಡಿರಾಜರ ಈ ಹನಿ ನೋಡಿ:

ಕ್ಯಾಶ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದರೂ ಸಿಗದು
ಅದಕ್ಕೆ ಇರಬೇಕು
ಹಾಕಿದ್ದಾರೆ ಬೋರ್ಡು
"ನಗದು"

ಒಂದೇ ಪದವನ್ನು ಚಮತ್ಕಾರಿಕವಾಗಿ ಒಡೆಯುವುದರ ಮೂಲಕವೂ ಶ್ಲೇಷೆ ಉದಿಸುತ್ತದೆ. ಇದನ್ನು ಸಭಂಗ ಶ್ಲೇಷೆ ಎನ್ನುತ್ತಾರೆ ಉದಾ: ಭೀಮ"ನ ಗದೆ"ಯೆತ್ತುವ ನಿನ್ನ ಸಾಹಸಕೆ ಅವ "ನಗದೆ" ಇರಲು ಹೇಗೆ ಸಾಧ್ಯ?  ಈ ಕೆಳಗಿನ ಸುಂದರ ಸಾಲುಗಳನ್ನು ನೋಡಿ:

ಯಥಾ ನಯತಿ ಕೈಲಾಸಂ ನಗಂ ಗಾನ ಸರಸ್ವತೀ
ತಥಾ ನಯತಿ ಕೈಲಾಸಂ ನ ಗಂಗಾ ನ ಸರಸ್ವತೀ ||

ಇಲ್ಲಿನ "ನಗಂ ಗಾನ" ಹಾಗೂ "ನ ಗಂಗಾ ನ" ಎಂಬ ಒಡೆಯುವಿಕೆಯನ್ನು ಗಮನಿಸಿ.

ಮಾತಿನಲ್ಲಿ ಅಲ್ಲಲ್ಲಿ ಹೀಗೆ ಮಿಂಚಿ ಮರೆಯಾಗುವ ಶ್ಲೇಷೆ ಮನಸ್ಸಿಗೆ ಹಿತವೆನ್ನಿಸಿದರೂ, ಅದು ಅತಿಯಾದರೆ ತಲೆಚಿಟ್ಟು ಹಿಡಿಯಬಹುದಲ್ಲವೇ?  ಶ್ಲೇಷೆಯ ಅತಿ ಬಳಕೆ ಚಿತ್ರಕವಿತ್ವವೆಂಬ ಅಧಮ ಕಾವ್ಯಪ್ರಕಾರವಾಗಿಬಿಡುತ್ತದೆಂದು ಆಲಂಕಾರಿಕರ ಮತ.  ಆದ್ದರಿಂದ ಇದನ್ನು ಸೂಕ್ಷ್ಮವಾಗಿ, ರಸಪೂರ್ಣವಾಗಿ ಬಳಸುವ ಔಚಿತ್ಯಪ್ರಜ್ಞೆ ಅತಿ ಅವಶ್ಯಕ.

ಮೇಲಿನ ಚರ್ಚೆಯಲ್ಲಿ ನಾವು ಗಮನಿಸಿದ ಮುಖ್ಯ ಅಂಶವೆಂದರೆ, ಶ್ಲೇಷೆಯಲ್ಲಿ ಪದವೊಂದನ್ನು ವಿವಿಧಾರ್ಥಗಳಲ್ಲಿ ಬಳಸಿದರೂ, ಆ ವಿವಿಧಾರ್ಥಗಳು ಆ ಪದಕ್ಕೆ ಸಹಜವಾಗಿಯೇ ನಿಘಂಟಿನಲ್ಲಿ ದೊರಕೊಂಡಿರುವುದು; ಅವಾವುವೂ ಸಾಧಿತ ಅಥವ ವ್ಯಂಗ್ಯಾರ್ಥಗಳಲ್ಲ.  ಉದಾಹರಣೆಗೆ ಮಾಮೂಲು ಎಂಬ ಪದಕ್ಕೆ ಇರುವ ಅರ್ಥ, ಸಾಧಾರಣವಾಗಿ, ಸಾಮಾನ್ಯವಾಗಿ, routine, customary ಇತ್ಯಾದಿ.  ಆದರೆ ಅದೇ ಲಂಚವೆಂಬ ವಿಶೇಷಾರ್ಥದಲ್ಲೂ ಬಳಕೆಯಲ್ಲಿದೆ.  ಆದ್ದರಿಂದ ಬಳಕೆಯಲ್ಲಿ ಮಾಮೂಲು ಎನ್ನುವ ಪದವನ್ನು ಹೀಗೆ ಎರಡರ್ಥದಲ್ಲಿ ಬಳಸಿದರೆ, ಅದು ಶ್ಲೇಷೆಯಾಗುವುದಲ್ಲ, ಬದಲಿಗೆ ವ್ಯಂಜನಾವೃತ್ತಿಯೆಂಬ ಮತ್ತೊಂದು ಅಲಂಕಾರವಾಗುತ್ತದೆ.  ವ್ಯಂಜನಾವೃತ್ತಿಯ ಮಿತಿಯೆಂದರೆ, ಈ ವ್ಯಂಗ್ಯಾರ್ಥ ಎಷ್ಟೆಂದರೂ ಸಂದರ್ಭದ ಚಮತ್ಕಾರದಿಂದ ಮೂಡಿರುವ ಅರ್ಥವಾದ್ದರಿಂದ, ಮೊದಲ ಕೆಲವು ಪ್ರಯೋಗಗಳಲ್ಲಿ ಚಮತ್ಕಾರಿಕವಾಗಿ ಸೊಗಸೆನ್ನಿಸಿದರೂ, ಅದರ ಮಿತಿಮೀರಿದ ಬಳಕೆ ತನ್ನ ಹೊಳಪು ಕಳೆದುಕೊಳ್ಳುತ್ತದೆ.  "ಯಡಿಯೂರಪ್ಪನವರ ಸರ್ಕಾರ ’ಶೋಭಾ’ಯಮಾನವಾಗಿ ಮಿನುಗುತ್ತದೆ" ಎಂದಂತೆ!


"Pun" ಎನ್ನುವುದು ಶ್ಲೇಷೆ ಮತ್ತು ವ್ಯಂಜನಾವೃತ್ತಿಗಳ ನಡುವೆ ಸಂಚರಿಸುವ ಇಂಗ್ಲಿಷ್ ಸಮಾನಾಂತರ.  Ogden Nash ಪನ್ನಿನ ಅನಂತ ಸಾಧ್ಯತೆಗಳನ್ನು ಪರಿಚಯಿಸಿದ ಕವಿ. ಅವನ ಈ ಸಾಲುಗಳನ್ನು ನೋಡಿ:

There was an old man in the trunk
Who inquired of his wife, "Am I drunk?"
She replied with regret
"I'm afraid so, my pet"
And he answered, "It's just as I thunk."
 
ಕುುಡುಕ ಗಂಡ ಹೆಂಡತಿಯನ್ನು ಕೇಳುತ್ತಾನೆ, "ನಾನು ಕುಡಿದಿದ್ದೀನಾ?" ಅವಳು ಉತ್ತರಿಸುತ್ತಾಳೆ, "ಹೌದು ಮುದ್ದೂ". ಅದಕ್ಕವನು ಹೇಳುತ್ತಾನೆ, "ಅದೇ ನಾನೂ ಯೋಚಿಸಿದ್ದು". ಇದು ಭಾಷಾಂತರಕ್ಕೆ ಸಿಕ್ಕುವ pun ಅಲ್ಲ. ಇಲ್ಲಿ ಸ್ವಾರಸ್ಯವಿರುವುದು ಕೊನೇ ಸಾಲಿನ "thunk" ಎನ್ನುವ ಪದದಲ್ಲಿ. Drink ಎನ್ನುವುದು Drunk ಆದಂತೆ, ಕುಡುಕನ ಬಾಯಲ್ಲಿ Think ಅನ್ನುವುದು Thunk (Thought ಬದಲಿಗೆ). ಅದೇ ಇಲ್ಲಿನ Pun. ಪದವನ್ನು ತಿರುಚಿ Pun ಉತ್ಪಾದಿಸುವುದಕ್ಕೆ ಇದು ಉದಾಹರಣೆ. ಮತ್ತೆ ಅವ ಅದೆಷ್ಟು ಕುಡುಕನಾಗಿಬಿಟ್ಟಿದ್ದಾನೆಂದರೆ, ಅವನ ಹೆಂಡತಿಯ ಪಾಲಿಗೆ ಅವನೊಂದು ಪೆಟ್ಟಿಗೆಯಲ್ಲಿ ಹೊತ್ತೊಯ್ಯುವ ಸಾಕುಪ್ರಾಣಿಯಂತೆ (trunk ಮತ್ತು pet ಅನ್ನುವುದರ pun ಇದು). ಅದಕ್ಕೇ ಅವನು "honey" ಅಲ್ಲ, "sweetheart" ಅಲ್ಲ, "pet". ಮತ್ತೆ Trunk - Drunk; (Re)gret - Pet ಈ ಪ್ರಾಸಗಳ ಜೊತೆಗೆ ಕೊನೆಯ ಸಾಲಿನಲ್ಲಿ Thunk ಎನ್ನುವ ವಿಲಕ್ಷಣ ಪ್ರಾಸವೂ ಸೇರಿ ಅದಕ್ಕೆ ಮತ್ತಷ್ಟು ಹಾಸ್ಯದ ಲೇಪ ಕೊಡುತ್ತದೆ.

ಇದೇ ಉಸಿರಿನಲ್ಲಿ ವೈಯೆನ್ಕೆಯವರ ಒಂದು ಹನಿ ನೆನಪಿಗೆ ಬರುತ್ತದೆ:

ಕರುಣಾಳು ಬಾ ಬೆಳಕೆ
ಮಸುಕಿದೀ ಪಬ್ಬಿನಲಿ
ಕೈ ಹಿಡಿದು ಕುಡಿಸೆನ್ನನು

ಸುಪ್ರಸಿದ್ಧವಾದ ಸಾಲೊಂದನ್ನು ತೆಗೆದುಕೊಂಡು ಅದಕ್ಕೆ ವಿಲಕ್ಷಣ ತಿರುವನ್ನು ಕೊಡುವುದು ಇಲ್ಲಿನ pun; ಹಾಗೆಯೇ ನಡೆಯುವನಿಗೆಂತೋ ಅಂತೆಯೇ ಕುಡಿಯುವವನಿಗೂ ಬೇಕು ಬೆಳಕು (ಅವನಿಗೆ ಹೆಚ್ಚೇ ಬೇಕು, ಏಕೆಂದರೆ ಅವನ "ಮಬ್ಬು" ಹೆಚ್ಚು) ಅನ್ನುವುದು ಕೂಡ; ಪಬ್ಬೇ ಮಬ್ಬಾಗುವ pun ಕೂಡ ಇಲ್ಲಿದೆ

Pun ಸಾಹಿತ್ಯದ ಬೆಳೆ ಆಧುನಿಕ ಕನ್ನಡದಲ್ಲಿ ಸಾಕಷ್ಟು ಹುಲುಸಾಗಿಯೇ ಬೆಳೆದಿದೆ. ಕೈಲಾಸಂರಿಂದ ಹಿಡಿದು ದುಂಡಿರಾಜರವರೆಗೂ ಅನೇಕ punಡಿತರು ನಮ್ಮಲ್ಲಿದ್ದಾರೆ (ಕ್ಷಮಿಸಿ, ಈ punಡಿತ ಎನ್ನುವ ಶ್ಲೇಷೆಯೇ (ಹಾಗನ್ನಬಹುದೇ) ತನ್ನ ಅತಿ ಬಳಕೆಯಿಂದ ಕ್ಲೀಷೆ (cliche)ಯಾಗಿ ಹೋಗಿದೆ)

Punನ್ನಿನ ವಿಷಯಕ್ಕೆ ಬಂದರೆ ದುಂಡಿರಾಜರನ್ನು ಮರೆಯಲು ಸಾಧ್ಯವೇ ಇಲ್ಲ, ಆದರೆ ಸಮಸ್ಯೆಯೆಂದರೆ ಅವರ ಯಾವ ಹನಿಯನ್ನು ಉದಾಹರಿಸುವುದು ಯಾವುದನ್ನು ಬಿಡುವುದು? ಕಾವ್ಯ ಮಿಂಚಲು ಭಾಮಿನಿಯೇ ಆಗಬೇಕೇ, ಮಿನಿ ಆಗದೇ? ಅವರು ಹೇಳುತ್ತಾರೆ:

ಅಯ್ಯಾ ಕುಮಾರವ್ಯಾಸ
ನಾನು ನಿನ್ನ ದಾಸ
ನೀನು ಬರೆದದ್ದು ಭಾಮಿನಿ
ನನ್ನದೋ ಬರೀ 'ಮಿನಿ'
 
ಹಾಗೆಯೇ ಇನ್ನೊಂದು:

ಬ್ಯಾಂಕ್ ಜೀವನದ
ಏಕತಾನದಿಂದ
ರೋಸಿ ಹೋಗಿ
ಎಲ್ಲ ಮರೆತು ಹಾಯಾಗಿ
ಸುತ್ತಾಡಿ ಬರಲೆಂದು
ರೈಲು ಹತ್ತಿದರೆ ಅಲ್ಲೂ
ಅದೇ ಸೊಲ್ಲು
ಚೆಕ್ ಬುಕ್ ಚೆಕ್ ಬುಕ್ ಚೆಕ್ ಬುಕ್
ಶ್ಲೇಷೆ ಅಥವ ಪನ್ನು ಬರೀ ಕಾವ್ಯದ ಪುಸ್ತಕಗಳಲ್ಲಿ ಮಾತ್ರ ಇರುವುದೆಂದು ತಿಳಿಯಬೇಡಿ ಮತ್ತೆ. ಬಹುಶಃ ಯಾವುದೇ ಪದಕ್ಕೂ ಬಳಕೆಯ ಬಲದಿಂದ ಶ್ಲೇಷೆಯ ಅಥವ ಪನ್ನಿನ 'ದಮ್' ಕೊಡಬಹುದೆನ್ನಿಸುತ್ತದೆ. ನಾ. ಕಸ್ತೂರಿಯವರು ಈ ಶ್ಲೇಷಾರ್ಥ ವ್ಯಂಗ್ಯಾರ್ಥಗಳನ್ನು ಸಂಗ್ರಹಿಸಿ ಒಂದು ಅರ್ಥಕೋಶವನ್ನೇ ರಚಿಸಿದ್ದಾರೆ, ಹೆಸರು "ಅನರ್ಥಕೋಶ"! ಅದರ ಒಂದೆರಡು ಎಂಟ್ರಿಗಳನ್ನು ನೋಡಿ:

ತುಪ್ಪ = ಪಾತ್ರೆಗೆ ಚಮಚೆಯಿಂದ ಬಡಿದಾಗ ಉಂಟಾಗುವ ಶಬ್ದವಿಶೇಷ
ಕೃದಂತ = ಕೃತಕ ಹಲ್ಲಿನ ಸೆಟ್ಟು

ಯಾರನ್ನಾದರೂ ಮೇಧಾವಿಗಳೆಂದು ಹೇಳಬೇಕಾದರೆ "ಬೃಹಸ್ಪತಿ" ಎನ್ನುತ್ತೇವೆ; ಹೀಯಾಳಿಸಬೇಕಾದರೆ ಕೂಡ! ನಮ್ಮಲ್ಲೊಬ್ಬರು "ಮೇಧಾವಿ" ಎಂಬ ಪದವನ್ನು ಅಪಭ್ರಂಶಿಸಿ "ಮೇದಾವಿ" ಎಂದೇ ಬಳಸುತ್ತಿದ್ದರು. ಈ ಅಪಭ್ರಂಶ ಉದ್ದೇಶಪೂರ್ವಕವೆಂದೇ ನನ್ನ ಗುಮಾನಿ; ಏಕೆಂದರೆ ಈ ಮಾರ್ಪಾಡು ಅವರಿಗೆ ಬೇಕಾದಾಗ ಅದನ್ನು ಶ್ಲೇಷೆಯಾಗಿಯೂ ಬಳಸುವ ಅನುಕೂಲವನ್ನಿತ್ತಿತ್ತು. ಯಾರನ್ನಾದರೂ "ಮೇದಾವಿ" ಎಂದು ಹೊಗಳುವಾಗ ಅದೊಂದು ನಿಷ್ಪಾಪಿ ಕಾಗುಣಿತದ ತಪ್ಪಾಗಿ ಕಾಣುತ್ತಿದ್ದರೂ, ಯಾರನ್ನಾದರೂ ತೆಗಳಬೇಕಾದಾಗ ಅವರು ಅದಕ್ಕಿಡುತ್ತಿದ್ದ ಅರ್ಥ "ಮೇದಾವಿ = ಮೇದುಕೊಂಡು ತಿರುಗುವವನು"

ಮತ್ತೆ ಕುಡುಕ ಅಪ್ಪನಿಗೆ ಮಗ ಬರೆಯುತ್ತಿದ್ದ ಪತ್ರದ ಒಕ್ಕಣೆ "’ತೀರ್ಥರೂಪು’ ತಂದೆಯವರಿಗೆ..."

ನನಗೆ ತಿಳಿದ ವಯೋವೃದ್ಧ ಪುರೋಹಿತರೊಬ್ಬರು ಪೌರೋಹಿತ್ಯಕ್ಕಾಗಿ ತಮ್ಮ ಬಳಿ ಬರುತ್ತಿದ್ದ ಕಕ್ಷಿದಾರರನ್ನು ಕೇಳುತ್ತಿದ್ದರು "ಮರ್ಯಾದೆ ಎಷ್ಟು ಕೊಡುತ್ತೀರಿ?" ಇಲ್ಲಿ "ಮರ್ಯಾದೆ" ಎಂದರೆ ದಕ್ಷಿಣೆ ಎಂದರ್ಥ.

ಎಷ್ಟೊಂದು ಪದಗಳು, ಬಳಸುವವರ ಪ್ರತಿಭಾಚಾತುರ್ಯದಿಂದ, ಬಳಕೆಯ ಸಾಮಾನ್ಯತೆಯಿಂದ ಪನ್ ಆಗಿ ಮಾರ್ಪಟ್ಟಿವೆ ನೋಡಿ - ಮಾಮೂಲು, ದಕ್ಷಿಣೆ, ಸಮಾಜ ಸೇವೆ, ಸತ್ಯಾಗ್ರಹ, ಅಹಿಂಸಾತ್ಮಕ ಹೋರಾಟ... ಅಷ್ಟೇಕೆ, "ಮಣ್ಣಿನ ಮಗ" ಎಂಬುದಕ್ಕಿಂತ ಉತ್ತಮ ಪನ್ ಬೇಕೆ!

Sunday, October 4, 2009

ದ್ವೈತಮು ಸುಖಮಾ...

ಸ್ನೇಹಿತರ ವಲಯದಲ್ಲಿ ಈ ವಿಷಯ ಒಮ್ಮೆ ಚರ್ಚೆಗೆ ಬಂತು. ತ್ಯಾಗರಾಜರು ಜನ್ಮತಃ ಅದ್ವೈತಿಗಳಾಗಿದ್ದಾಗ್ಯೂ ತಮ್ಮ ಕೃತಿಗಳಲ್ಲಿ ದ್ವೈತವನ್ನೇ ಎತ್ತಿ ಹಿಡಿದಿದ್ದಾರೆಯೇ?

ಮೊದಲಿಗೆ, ದ್ವೈತ-ಅದ್ವೈತಗಳ ಚರ್ಚೆಯೇ ಆಧ್ಯಾತ್ಮದ ಅತ್ಯುನ್ನತ ಸ್ತರಕ್ಕೆ ಸಂಬಂಧಿಸಿದ್ದು. ಸಾಧಕನು ಆ ಸ್ತರವನ್ನು ಮುಟ್ಟುವವರೆಗೂ, ಅದರಲ್ಲೂ ವ್ಯಾವಹಾರಿಕ ಸ್ತರದಲ್ಲಂತೂ ಇವರಡರ ನಿಲುವಿನಲ್ಲೂ ಆತನಿಗೆ ಹೆಚ್ಚೇನು ವ್ಯತ್ಯಾಸ ಕಾಣದು. ಶಂಕರರು "ಭಜಗೋವಿಂದಂ" ಎಂದರೂ, ಮಧ್ವರು "ಪ್ರೀಣಯಾಮೋ ವಾಸುದೇವಂ" ಎಂದರೂ ಆ ನಮನವು ಮುಟ್ಟುವುದು ಕೇಶವನನ್ನೇ. ಅನುಸಂಧಾನವು ಬೇರೆಯಿರಬಹುದು, ಗಮ್ಯದೃಷ್ಟಿ ಬೇರೆಯಿರಬಹುದು, ಆದರೆ ಇವು ಸಾಧಕನಿಗೆ ಬಿಟ್ಟಿದ್ದಲ್ಲವೇ? ಹೀಗಾಗಿ, ಇನ್ನೂ ಆಧ್ಯಾತ್ಮಸಾಧನೆಯ ತಳದ ಮೆಟ್ಟಿಲಲ್ಲೆಲ್ಲೋ ಇರುವ, ಅಥವ ಶ್ರೀ ರಾಮಾನುಜರು ಹೇಳುವಂತೆ "ಅನಾದಿ ಪಾಪವಾಸನಾಮಹಾರ್ಣವಾಂತರ್ನಿಮಗ್ನ"ರಾದ, "ಕರ್ಮಪಾಶಪ್ರಗ್ರಥಿತ"ರಾದ ನಮಗೆ, ನಮ್ಮ ಈಗಿನ ಮಟ್ಟದಲ್ಲಿ ಈ ಚರ್ಚೆ ಎಷ್ಟು ಪ್ರಸ್ತುತ ಎಂಬ ಬಗ್ಗೆಯೇ ನನಗೆ ಸಂದೇಹವಿದೆ.

ಇದು ಒಂದುಕಡೆಗಾದರೆ, ತ್ಯಾಗರಾಜಸ್ವಾಮಿಗಳಂಥ ಅನುಭಾವಿಗಳ, ಜೀವನ್ಮುಕ್ತರ ವಿಷಯದಲ್ಲೂ ಈ ಚರ್ಚೆ ಅಪ್ರಸ್ತುತವೆಂದೇ ನನ್ನ ಅನಿಸಿಕೆ. ತ್ಯಾಗರಾಜರಂತೂ ತಮ್ಮ ಕೃತಿಗಳಲ್ಲೆಲ್ಲೂ 'ತತ್ತ್ವ' ವಿಚಾರವನ್ನು ಚರ್ಚಿಸಿದ್ದಾಗಲಿ, ದ್ವೈತವೋ ಅದ್ವೈತವೋ ಅಥವ ಮತ್ತಾವುದೋ ಒಂದು ನಿಲುವನ್ನು ತಳೆದಿದ್ದಾಗಲಿ ಕಾಣೆ. ತಮ್ಮ ಕೃತಿಗಳುದ್ದಕ್ಕೂ ಅವರು ಪ್ರತಿಪಾದಿಸುವ ಏಕೈಕ ನಿಲುವೆಂದರೆ ಭಕ್ತಿ - ಅದಕ್ಕೆ ಸಂವಾದಿಯಾಗಿ ಬರುವ ಆತ್ಮನಿವೇದನೆ. ಈ ಭಕ್ತಿಕೂಡ ಭಾವಪ್ರಪಂಚದಿಂದ ಹೆಕ್ಕಿ ತೆಗೆದ ರತ್ನವೇ ಹೊರತು ಶಾಸ್ತ್ರದ ಮೊಸರು ಕಡೆದು ಪಡೆದ ನವನೀತವಲ್ಲ. ಆ ಭಕ್ತಿಯೂ ಅದೆಷ್ಟು ಉತ್ಕೃಷ್ಟ ಮಟ್ಟದ್ದೆಂದರೆ, ಅವರ ಕೃತಿಗಳಲ್ಲಿ ಎದ್ದು ಕಾಣುವ ಭಕ್ತಿಭಾವವನ್ನು ಮರೆತು ಇತರರ ಸಂಗೀತರಚನೆಗಳಂತೆ ಕೇವಲ ಸಂಗೀತದ ಸೊಬಗನ್ನು ಆಸ್ವಾದಿಸುವುದು ಸಾಧ್ಯವೇ ಇಲ್ಲ ಎನ್ನಬಹುದು.

ಭಕ್ತಿಯ ಮೂಲ ಅಗತ್ಯವೇ ದ್ವೈತದ ಸ್ಥಿತಿ, ಒಪ್ಪೋಣ. ಆದರೆ ಅದು ಶ್ರೀ ಮಧ್ವರ ಸಂಪೂರ್ಣ, ಅವಿಚ್ಛಿನ್ನ ದ್ವೈತದ ಪ್ರತಿಪಾದನೆಯಲ್ಲ. ತ್ಯಾಗರಾಜರು ಭಕ್ತಿಯನ್ನು ಪ್ರತಿಪಾದಿಸಿದರೂ ಮಾಧ್ವ ಮಹಾಪ್ರಮೇಯಗಳಾದ ಹರಿಸರ್ವೋತ್ತಮತ್ವ, ಜಗತ್ಸತ್ಯತ್ವ, ಪಂಚಭೇದ, ತಾರತಮ್ಯ, ಮೋಕ್ಷದಲ್ಲೂ ನಿರ್ಬಾಧಿತವಾಗಿ ಉಳಿಯುವ ಜೀವೇಶಭೇದದ ಸ್ಥಿತಿ ಇತ್ಯಾದಿ ತಾಂತ್ರಿಕ ವಿವರ (jargon)ಗಳನ್ನು ಎಲ್ಲೂ ಒಪ್ಪಿ ಪ್ರತಿಪಾದಿಸಿದಂತೆ ಕಾಣೆ. ಬದಲಿಗೆ ಈ ಕೆಳಗಿನ ಸಾಲುಗಳನ್ನು ನೋಡಿ

ಅನ್ನಿ ನೀವನುಚು ಎಂಚಿನವಾಣಿಕಿ ಆಶ್ರಮಭೇದಮುಲೇಲ
ಕನ್ನುಕಟ್ಟು ಮಾಯಲನಿ ಎಂಚುವಾಣಿಕಿ ಕಾಂತಲ ಭ್ರಮಲೇಲ ದಶರಥ ಬಾಲ ೧

(ಎಲ್ಲಾ ನೀನೇ ಎಂದು ತಿಳಿದವನಿಗೆ ಆಶ್ರಮಭೇದವೇಕೆ, (ಸರ್ವವೂ) ಕಣ್ಣುಕಟ್ಟು, ಮಾಯೆ ಎಂದು ಅರಿತವನಿಗೆ ಹೆಣ್ಣಿನ ಭ್ರಮೆಯೇಕೆ)

ಇರಲಿ, ಚರ್ಚೆಯಂತೂ ಬಂತು. ಪ್ರಶ್ನೆಯನ್ನೆತ್ತಿದ ಮಿತ್ರರು ತಮ್ಮ ಅಭಿಪ್ರಾಯಕ್ಕೆ ಉದಾಹರಣೆಯಾಗಿ ಪ್ರಸ್ತುತ ಪಡಿಸಿದ್ದು "ದ್ವೈತಮು ಸುಖಮಾ..." ಎಂಬ ಕೃತಿಯನ್ನು. ರೀತಿಗೌಳ ರಾಗದಲ್ಲಿರುವ ಈ ಕೃತಿ ಹೀಗಿದೆ:

ದ್ವೈತಮು ಸುಖಮಾ ಅದ್ವೈತಮು ಸುಖಮಾ ಪ
ಚೈತನ್ಯಮಾ ವಿನು ಸರ್ವ ಸಾಕ್ಷಿ ವಿಸ್ತಾರಮುಗಾನು ದೆಲ್ಪುಮು ನಾತೋ ಅ.ಪ

ಗಗನ ಪವನ ತಪನ ಭುವನ ದ್ಯಾವಾನಿಲಲೋ ನಗಧರಾಜ ಶಿವೇಂದ್ರಾದಿ ಸುರುಲಲೋ
ಭಗವದ್ಭಕ್ತವರಾಗ್ರೇಸರುಲಲೋ ಬಾಗ ರಮಿಂಚೇ ತ್ಯಾಗರಾಜಾರ್ಚಿತ ೧

ಈ ಪ್ರಶ್ನೆಯನ್ನೆತ್ತುವವರೆಲ್ಲ ಸಾಮಾನ್ಯವಾಗಿ ಮುಂದೊಡ್ಡುವ ಕೃತಿಯೇ ಇದು. ಸ್ವಯಂಸ್ಪಷ್ಟವಾಗಿರುವ ಈ ಕೃತಿಯನ್ನು ಮತ್ತಷ್ಟು ತಿಳಿಗೊಳಿಸಿ ಹೇಳಬೇಕಾದರೆ, ಪಂಚಭೂತಗಳಲ್ಲೂ ತ್ರಿಮೂರ್ತಿಗಳಲ್ಲೂ ಭಕ್ತಶಿಖಾಮಣಿಗಳಲ್ಲೂ ಚೈತನ್ಯವಾಗಿ ನಲಿಯುವ ಸರ್ವಸಾಕ್ಷಿಯಾದ ಪರಮಾತ್ಮನನ್ನು ಕೇಳುತ್ತಾರೆ ತ್ಯಾಗರಾಜರು, "ದ್ವೈತವು ಸುಖವೋ ಅದ್ವೈತವೋ, ವಿಸ್ತಾರವಾಗಿ ತಿಳಿಸು"

"ಪಂಚಭೂತಗಳಲ್ಲೂ ತ್ರಿಮೂರ್ತಿಗಳಲ್ಲೂ ಭಕ್ತಶಿಖಾಮಣಿಗಳಲ್ಲೂ ಚೈತನ್ಯವಾಗಿ ನಲಿಯುವ ಸರ್ವಸಾಕ್ಷಿ"ಯೊಂದು ಜೀವಾತ್ಮಕ್ಕಿಂತ ಪ್ರತ್ಯೇಕ ಅಸ್ಥಿತ್ವಹೊಂದಿದೆಯಿಂದು ಹೇಳಿದಂತಾಯಿತಲ್ಲವೇ? ಅದರಲ್ಲೂ "ದ್ವೈತಮು ಸುಖಮಾ, ಅದ್ವೈತಮು ಸುಖಮಾ" ಎಂಬ ಪಲ್ಲವಿಯ ಹಿನ್ನೆಲೆಯಲ್ಲಿ ಈ ಚರಣ ವ್ಯಂಗ್ಯಾತ್ಮಕವಾಗಿ ದ್ವೈತವನ್ನೇ ಧ್ವನಿಸುವುದಿಲ್ಲವೇ - ಇದು ಸಾಹಿತ್ಯದಲ್ಲೂ ಪ್ರವೃತ್ತಿಯಿರುವ ಮಿತ್ರರ ಪ್ರಶ್ನೆ.

ಇರಬಹುದು, ತ್ಯಾಗರಾಜರು ದ್ವೈತವನ್ನೇ ಸರಿಯೆಂದಲ್ಲಿ ಅಚ್ಚರಿಯೇನಿದೆ? ಅವರು ಅಷ್ಟು ತೀವ್ರವಾಗಿ ಪ್ರತಿಪಾದಿಸುವ ಭಕ್ತಿ, ದ್ವೈತಚಿಂತನೆಯಲ್ಲದೇ ಮತ್ತೇನು? ದ್ವೈತಭಾವವಿಲ್ಲದೆ ಭಕ್ತಿ ಸಾಧ್ಯವೇ?

ಆದರೆ ಹೀಗೆ ಅವರು ದ್ವೈತವನ್ನೋ ಅದ್ವೈತವನ್ನೋ ಪ್ರತಿಪಾದಿಸಿದ್ದಾರೆಂದು ಸಾಧಿಸುವಮೊದಲು ಪಲ್ಲವಿಯಯನ್ನು ಮತ್ತೊಮ್ಮೆ ಗಮನಿಸುವುದು ಸೂಕ್ತ. ಅದರ ಸೂಕ್ಷ್ಮ ಅವಗಾಹನೆ ಮತ್ತೊಂದು ದೃಷ್ಟಿಕೋನವನ್ನು ತೆರೆದಿಡುತ್ತದೆ. "ದ್ವೈತಮು ಸುಖಮಾ, ಅದ್ವೈತಮು ಸುಖಮಾ" - ಗಮನಿಸಬೇಕಾದ ಅಂಶವೆಂದರೆ, "ಸುಖಮಾ" ಎನ್ನುವ ಪ್ರಯೋಗ. ದ್ವೈತವು ಸರಿಯೋ ಅದ್ವೈತವೋ ಎಂಬುದನ್ನು ಸಾಧಿಸುವ ಇರಾದೆ ತ್ಯಾಗರಾಜರಿಗಿದ್ದಲ್ಲಿ, "ದ್ವೈತಮು ತರಮಾ, ಅದ್ವೈತಮು ತರಮಾ" (ಅಥವಾ "ನಿಜಮಾ") ಎಂದು ಬಳಸುತ್ತಿದ್ದರೇನೋ! ಆಗ, ಮುಂದೆ ಬರುವ ಚರಣ ದ್ವೈತವೇ ಸತ್ಯವೆಂಬ ನಿಲುವನ್ನು ಮತ್ತಷ್ಟು ಪುಷ್ಟಿಗೊಳಿಸುತ್ತಿತ್ತು. ಆದರೆ "ಸುಖಮಾ" ಎಂಬ ಬಳಕೆಯಿಂದ, ಸರಿ-ತಪ್ಪಿನ ಪ್ರಶ್ನೆಗಿಂತ, ರಾಮಭಕ್ತಿಗೆ ಯಾವ ಭಾವ ಹೆಚ್ಚು ಸುಖ ಎಂಬ ಚಿಂತನೆಯಷ್ಟೇ ಸ್ಫುಟಗೊಳ್ಳುತ್ತದೆ. ಕೇವಲ ಇದೊಂದು ಪದವನ್ನು ಬಳಸುವ ಮುನ್ನ ತ್ಯಾಗರಾಜರು ಇಷ್ಟೆಲ್ಲ ಯೋಚಿಸಿದ್ದಿರಬೇಕೆಂದು ನಾನು ಹೇಳಹೊರಟಿಲ್ಲ. ಆದರೆ ಭಾವವು ಭಾಷೆಯಲ್ಲಿ ರೂಪುಗೊಳ್ಳುವ ಪರಿಯನ್ನಷ್ಟೇ ವಿವರಿಸಹೊರಟಿದ್ದು. ಕವಿಯೊಬ್ಬ ತನ್ನ ಭಾವಲಹರಿಗೆ ಮಾತಿನ ರೂಪ ಕೊಡುವಾಗ ಭಾವಕ್ಕೆ ತಕ್ಕುದಾದ ಹಲವು ಪದಗಳು ಮೂಡಿ ನಿಲ್ಲುತ್ತವೆ. ಮನದಲ್ಲಿ ಮೂಡಿದ ಭಾವಕ್ಕೆ ಅತ್ಯುಚಿತವಾದ ಪದದ ಆಯ್ಕೆ ಕವಿಯಲ್ಲಿ ತಾನೇ ತಾನಾಗಿ ನಡೆಯುತ್ತದೆ - ಇದೊಂದು ಭಾವದ ವ್ಯಾಪಾರ, ಬುದ್ಧಿಯದಲ್ಲ. ಈ ಸಂದರ್ಭಕ್ಕೆ "ಸುಖಮಾ" ಮತ್ತು "ತರಮಾ" ಎರಡೂ ಪದಗಳು ಒಂದೇ ಭಾವದ ಸೂಚಕ ಖಂಡಿತಾ ಅಲ್ಲ. ಆದ್ದರಿಂದ ಕವಿಗೆ ಇಷ್ಟು ಸಹಜವಾಗಿ "ಸುಖಮಾ" ಎಂಬ ಪದ ಮನದಲ್ಲಿ ಹೊಳೆದಿರಬೇಕಾದರೆ, ಅವರ ಮನದಲ್ಲಿ ದ್ವೈತಾದ್ವೈತಗಳ ಸರಿ-ತಪ್ಪುಗಳ ವಿಮರ್ಶೆಗಿಂತಾ ಆ ನಿಲುವುಗಳ ಭಕ್ತಿಸೌಖ್ಯವೇ ಚಿಂತನೆಯ ವಸ್ತುವಾಗಿದ್ದಿರಬೇಕೆನ್ನುವುದು ಸಹಜ. ಅಂತಿಮವಾಗಿ ದ್ವೈತವು ನಿಜವೋ ಅದ್ವೈತವೋ ಅದು ತ್ಯಾಗರಾಜರಿಗೆ ಮುಖ್ಯವಲ್ಲ. ಬದಲಿಗೆ, ಯಾವ ಮಾರ್ಗದಲ್ಲಿ ಭಕ್ತಿ ಹೆಚ್ಚು ತೀವ್ರ, ನಿಶ್ಕಲ್ಮಶ, ಸುಖ - ಇದು ಅವರ ಪ್ರಶ್ನೆಯೆನಿಸುತ್ತದೆ.

ಅದ್ವೈತ ಚಿಂತನೆಯ ಪರಿಸರದಲ್ಲಿ ಹುಟ್ಟಿ ಬೆಳೆದ ತ್ಯಾಗರಾಜರಿಗೆ, ಅದ್ವೈತವೇ ಅಂತಿಮ ಸತ್ಯವೆಂಬ ಅರಿವಿದೆ. ಆದರೆ ಭಾವುಕ ಮನಸ್ಸೇಕೋ ಇದನ್ನೊಲ್ಲದು. ನಾನೀನೆಂಬ ಭೇದವಳಿದ ಅದ್ವೈತದ ಅರಿವಿನಲ್ಲಿ ಏನಿದೆ? ಏನೂ ಇಲ್ಲ. ಭಕ್ತನೂ ಇಲ್ಲ, ಭಕ್ತಿಯೂ ಇಲ್ಲ. "ರಾಮಭಕ್ತಿಸಾಮ್ರಾಜ್ಯ"ದಲ್ಲಿ ಓಲಾಡುವ ಕವಿಯ ಮನಸ್ಸಿಗೆ, ಈ ನಿರ್ಗುಣ ನಿರುಪಾಧಿಕ ನಿರ್ವೇದಕವಾದ ಅದ್ವೈತ ಸಿದ್ಧಿ ಹೇಗೆ ತಾನೇ ರುಚಿಸೀತು? ಈ ಪರಮಾತ್ಮ-ಜೀವಾತ್ಮ ಭೇದ ತೋರುವ ಮಾಯಾ ಪ್ರಪಂಚದಲ್ಲಿ ಭಕ್ತಿಯೂ ಮಾಯೆಯೇ ಹೌದು, ಉತ್ಕಟ ಭಕ್ತಿ, ಯಥಾರ್ಥ ಜ್ಞಾನಕ್ಕೆ, ತನ್ಮೂಲಕ ಅದ್ವೈತದ ಸಿದ್ಧಿಗೆ ದಾರಿ - ಇರಬಹುದು. ಆದರೆ ಭಕ್ತಿಯ ರಸವನ್ನೀಂಟಿದ ಮನಸ್ಸಿಗೆ, ಗಮ್ಯಕ್ಕಿಂತಾ ಮಾರ್ಗವೇ ರಮ್ಯ, ಅದೇ ಸುಖ. ಆದ್ದರಿಂದ ಭಕ್ತಿಯು ಮಾಯೆಯೆನ್ನುವುದಾದರೆ ಅದ್ವೈತದ 'ವಾಸ್ತವ'ಕ್ಕಿಂತ ದ್ವೈತಸ್ಥಿತಿಯ 'ಮಾಯೆ'ಯೇ ಸುಖವಲ್ಲವೇ? ಇದು, ನನಗನ್ನಿಸುವ ಮಟ್ಟಿಗೆ ಈ ರಚನೆಯ ಕವಿಸಮಯ.

ತ್ಯಾಗರಾಜರು ಅದೆಂಥಾ ಮೃದುಮನದ, ಹದನುಡಿಯ ಕವಿಯೆಂದರೆ, ಅವರೆಲ್ಲೂ ಈ ತತ್ತ್ವ-ಸಿದ್ಧಾಂತಗಳ ಒಣಚರ್ಚೆಯ ಗೊಡವೆಗೆ ಹೋಗುವುದೇ ಇಲ್ಲ. ಈ ರೀತಿಯ ತತ್ತ್ವದ ಇಬ್ಬಂದಿಗಳು ಎದುರಾದಾಗೆಲ್ಲಾ ಅವರು ಕಂಡುಕೊಳ್ಳುವುದು ತಾರ್ಕಿಕನ ಪರಿಹಾರವಲ್ಲ, ಕವಿಯ ಪರಿಹಾರವನ್ನು. ಈ ಸಾಲುಗಳನ್ನು ನೋಡಿ:

ಎವರನಿ ನಿರ್ಣಯಿಂಚಿರಿರಾ ನಿನ್ನೆಟ್ಲಾರಾಧಿಂಚಿರಿರಾ, ನರವರು ಪ
ಶಿವುಡನೋ ಮಾಧವುಡನೋ ಕಮಲ ಭವುಡನೋ ಪರಬ್ರಹ್ಮಮನೋ ನಿ ಅ.ಪ

ಶಿವಮಂತ್ರಮುನಕು ಮಾಜೀವಮು ಮಾಧವ ಮಂತ್ರಮುನಕು ರಾಜೀವಮು ಈ
ವಿವರಮುದೆಲಿಸಿನ ಘನುಲಕು ಮ್ರೋಕ್ಕೆದ ವಿತರಣಗುಣ ತ್ಯಾಗರಾಜವಿನುತ ನಿ ೧

(ನಿನ್ನನ್ನು ಯಾರೆಂದು ನಿರ್ಣಯಿಸಿದರು (ಕೊನೆಗೆ)? ಶಿವನೆಂದೋ, ಮಾಧವನೆಂದೋ, ಕಮಲಭವನೆಂದೋ ಅಥವಾ ಪರಬ್ರಹ್ಮವೆಂದೋ?

"ನಮಶ್ಶಿವಾಯ" ಎಂಬ ಶಿವಮಂತ್ರದ ಜೀವಾಕ್ಷರ "ಮ". ಹಾಗೇ "ನಮೋ ನಾರಾಯಣಾಯ" ಎಂಬ ನಾರಾಯಣಮಂತ್ರದ ಜೀವಾಕ್ಷರ "ರಾ" (ಈ ಅಕ್ಷರಗಳನ್ನು ತೆಗೆದರೆ ಆ ಮಂತ್ರಗಳು ವಿರುದ್ಧಾರ್ಥವನ್ನೇ ಕೊಡುತ್ತವೆ, ಆದ್ದರಿಂದ). ಈ ಎರಡು ಜೀವಾಕ್ಷರಗಳು ಕೂಡಿ ಆದದ್ದೇ "ರಾಮ". ಈ ಮರ್ಮವನ್ನು ತಿಳಿದ ಮಹಾತ್ಮರನ್ನು ವಂದಿಸುತ್ತೇನೆ)

ತಮ್ಮ ಮನೋರಾಜ್ಯಕ್ಕೆ ಪ್ರಸ್ತುತವಲ್ಲದ ಸೈದ್ಧಾಂತಿಕ ಚರ್ಚೆಗಳಿಂದ ಅದೆಷ್ಟು ಸೊಗಸಾಗಿ ತಮ್ಮನ್ನು ಹೊರಪಡಿಸಿಕೊಳ್ಳುತ್ತಾರೆ, ನೋಡಿ. ಭಕ್ತಿಯೋ, ಭಕ್ತನ ಉದ್ಧಾರವೋ ಅಲ್ಲದ ಬೇರಾವ ವಿಚಾರವೂ ಅವರಿಗೆ ಹೊಲ್ಲ. ತಾನಾಯಿತು, ರಾಮನಾಯಿತು, ರಾಮಭಕ್ತಿಯಾಯಿತು. ಆಗೀಗ ತನಗೆ ಸರಿಕಂಡ ಸರಳ ತತ್ತ್ವವನ್ನು ಜನಕ್ಕೆ ಬೋಧಿಸುವುದುಂಟು, ಅದೂ ಸ್ವಗತದ ಧಾಟಿಯಲ್ಲಿ. ಪುರಂಧರ-ಕನಕರೇ ಮೊದಲಾದವರಲ್ಲಿ ಕಾಣಬರುವ ತತ್ತ್ವಬೋಧನೆಯ ಬಿರುಸೂ ಕಟುವೂ ಕಾಣಬರುವುದಿಲ್ಲ ತ್ಯಾಗರಾಜರಲ್ಲಿ. ಬೋಧಿಸಿದ್ದೆಲ್ಲಾ ಸರಳ, ನೇರ, ಚಿಕ್ಕ-ಚೊಕ್ಕ. ಈ ಸಾಲುಗಳನ್ನು ನೋಡಿ:

"ತುರಕವೀದಿಲೋ ವಿಪ್ರುನಿಕಿ ಪಾನಕ ಪೂಜ ಚೇಸಿ ಏಮಿ ಚೇಯಕುಂಡಿ ಏಮಿ"

(ತುರಕಬೀದಿಯಲ್ಲಿ ವಿಪ್ರರಿಗೆ ಪಾನಕಪೂಜೆ ಮಾಡಿ ಏನು ಮಾಡದಿದ್ದರೆ ಏನು?)

ಮತ್ತೆ ಇದು;

"ಬಹುಜನ್ಮಂಬುನಿ ವಾಸನಯುತುಲೈ ಅಹಿವಿಷಸಮವಿಷಯಾಕೃಷ್ಟುಲೈ
ಬಹಿರಾನನುಲೈ ತ್ಯಾಗರಾಜು ಭಜಿಯಿಂಚೇ ಶ್ರೀ ರಾಮುನಿ ತೆಲಿಯಕ (ಯಜ್ಞಾದುಲು ಸುಖಮನುವಾರಿಕಿ ಸಮಮಜ್ಞಾನುಲು ಗನ ಲೇ)"

(ಬಹುಜನ್ಮದ ವಾಸನೆಹೊಂದಿ, ಹಾವಿನ ವಿಷದಂಥ ವಿಷಯಗಳಿಂದ ಆಕರ್ಷಿತರಾಗಿ, ಅಂತ್ರರ್ದೃಷ್ಟಿಯನ್ನು ಕಳೆದುಕೊಂಡು ಶ್ರೀ ರಾಮನನ್ನು ತಿಳಿಯದೇ, ಯಜ್ಞಾದಿಗಳೇ ಸುಖವೆನ್ನುವರಂಥ ಅಜ್ಞಾನಿಗಳು ಇಲ್ಲ)

ಇನ್ನು ಮಂತ್ರ-ತಂತ್ರ, ಶಾಸ್ತ್ರ-ಸಂಪ್ರದಾಯಗಳ ಗೋಜಲಂತೂ ದೂರವೇ ಉಳಿಯಿತು. ಈ ಗೋಜಿನ ಪ್ರಶ್ನೆಗೆ ತ್ಯಾಗರಾಜರ ಉತ್ತರ "ಮನಸು ಸ್ವಾಧೀನಮೈನ ಘನುನಿಕಿ ಮರಿ ಮಂತ್ರ ತಂತ್ರಮುಲೇಲ" (ಮನಸು ಸ್ವಾಧೀನವಿರುವ ಮಹಾತ್ಮನಿಗೆ ಮತ್ತೆ ಮಂತ್ರತಂತ್ರಗಳೇಕೆ)

ಆದ್ದರಿಂದ ತ್ಯಾಗರಾಜರ ಕೃತಿಗಳಲ್ಲಿ ಶಾಸ್ತ್ರ-ಸಿದ್ಧಾಂತಗಳ ಪ್ರತಿಪಾದನೆಯನ್ನರಸುವುದಕ್ಕಿಂತ ಅಮೃತಪ್ರಾಯವಾದ "ಸ್ವರರಾಗಸುಧಾರಸಯುತ ಭಕ್ತಿ"ಯ ಸೊಬಗನ್ನು ಆಸ್ವಾದಿಸುವುದೇ ಹೆಚ್ಚು ಸುಖವಲ್ಲವೇ?

Saturday, August 29, 2009

ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ

ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡು ವಿಷಯ ಬರೆಯಹೊರಟೆ. ಆದರೆ ಅದು ಒಂದು ಸಂಪೂರ್ಣ ಲೇಖವವೇ ಆಗಬಹುದೆನಿಸಿತು. ಅದೇ ಇದು.

ಸಾಹಿತ್ಯ, ಜೀವನದ ಪ್ರತಿಫಲನ ಎನ್ನುತ್ತಾರೆ. ಜೀವನ ಎಂದೂ ನಿಲ್ಲದೇ ನಿರಂತರವಾಗಿ ಹರಿಯುವ ನದಿ ಎನ್ನಬಹುದಾದರೆ, ಸಾಹಿತ್ಯ ಕೂಡ ಹಾಗೆಯೇ. ನದಿ, ನಮಗೆ ಯಾವುದೋ ಕಾಲಘಟ್ಟದಲ್ಲಿ ಕಾಣುವಂತೆ ಬರೀ ಹರಿಯುವ ನೀರಲ್ಲ; ಕಾಲಾಂತರದಲ್ಲಿ ನದಿಯೇ ಬದಲಾಗುತ್ತದೆ, ಅದರ ಪಾತ್ರ ಬದಲಾಗಬಹುದು, ಕೆಲವೆಡೆ ಆಳ ಹೆಚ್ಚಬಹುದು, ಮತ್ತೆ ಕೆಲವೆಡೆ ತಗ್ಗಬಹುದು, ನದಿಯೇ ಮಾಯವಾಗಬಹುದು. ಸಾಹಿತ್ಯ ಕೂಡ ಇದರಂತೆಯೇ ನಿರಂತರ ಚಲನಶೀಲ. ಕಾಲಾಂತರದಲ್ಲಿ ಅದರ ನಿಲುವು, ಒಲವು, ಭಾವ-ಭಂಗಿ ನಮೂನೆಗಳೇ ಬದಲಾಗಬಹುದು. ಜೀವನದಂತೆಯೇ ಇಲ್ಲೂ ನಿರಂತರ ಕೊಡುಕೊಳ್ಳುವಿಕೆ ನಡೆದೇ ಇರುತ್ತದೆ. ಸಮಾಜವು ಸಾಹಿತ್ಯವನ್ನೂ, ಸಾಹಿತ್ಯವು ಸಮಾಜವನ್ನೂ ಪ್ರಭಾವಿಸುತ್ತವೆ; ಹಾಗೆಯೇ ಭಾಷೆ ಇನ್ನೊಂದು ಭಾಷೆಯನ್ನು

ವೈಯಕ್ತಿಕವಾದ ಅಭಿವ್ಯಕ್ತಿ ಕಾಲಕ್ರಮದಲ್ಲಿ ಸ್ಪಷ್ಟ ರೂಪು-ರೇಷೆ-ಲಕ್ಷಣ-ಶೈಲಿಗಳನ್ನು ರೂಪಿಸಿಕೊಳ್ಳುತ್ತಿದ್ದಂತೆ ಅದಕ್ಕೊಂದು ಸಾರ್ವತ್ರಿಕ ನಮೂನೆ (standard format) ದೊರಕಿತೆನ್ನಿಸುತ್ತದೆ. ಹೀಗೆ ರೂಪಗೊಂಡಿದ್ದು ಛಂದಸ್ಸು, ಅಲಂಕಾರ ಇತ್ಯಾದಿ. ಕಾಲಕ್ರಮದಲ್ಲಿ ಇದು ಸರ್ವಸಮ್ಮತವಾಗಿ, ಕಾವ್ಯ "ಹೀಗೇ" ಇರಬೇಕೆಂದು ಶಾಸ್ತ್ರದ ರೂಪ ಪಡೆದಿರಬೇಕು. ಮುಂದೆ ಒಂದು ಭಾಷೆಯಲ್ಲಿ ಬಳಕೆಯಲ್ಲಿದ್ದ ಛಂದಸ್ಸು, ವೃತ್ತ ಇತ್ಯಾದಿ ಸಾಹಿತ್ಯ ಪರಿಕರಗಳು (literary components) ಮತ್ತೊಂದು ಭಾಷೆಯಲ್ಲೂ ಬಳಕೆಗೆ ಬಂದುವು. ಆದಿಕಾಲದ ಕನ್ನಡ ಸಾಹಿತ್ಯ ಕೂಡ ಹೀಗೆಯೇ ತನ್ನ ಶೈಲಿ-ನಮೂನೆ-ಭಾಷೆಗಳನ್ನು ಸಂಸ್ಕೃತದಿಂದ ಭಾರಿ ಪ್ರಮಾಣದಲ್ಲಿ ಎರವಲು ಪಡೆದದ್ದನ್ನು ಕಾಣುತ್ತೇವೆ.

ಅದೇನೇ ಇರಲಿ, ಸಾಹಿತ್ಯ ರಚನೆ ಜನಸಾಮಾನ್ಯರ ಮಟ್ಟದಿಂದ ಬಹು ಮೇಲೇರಿ, ಅದೊಂದು ಕಲೆ-ಶಾಸ್ತ್ರದ ಸ್ಥಾನ ಪಡೆದಿದ್ದಂತೂ ನಿಜ. ಕಲೆ ಎಂದಮೇಲೆ ಅದಕ್ಕೊಂದು ಪ್ರತಿಭೆಯೂ, ಶಾಸ್ತ್ರವೆಂದಮೇಲೆ ಅದಕ್ಕೊಂದು ನಿಶ್ಚಿತ ವಿಧಿ-ವಿಧಾನಗಳೂ "ಮಾಡು-ಬೇಡ"ಗಳೂ (do's and dont's) ಇರಬೇಕಲ್ಲವೇ? ಕಾವ್ಯದಲ್ಲಿ ಎಳ್ಳಷ್ಟು "ದೋಷ" ಸುಳಿದರೂ ಕಣ್ಣಿನಲ್ಲಿ ಬಿದ್ದ ಕಸ ಇಡೀ ಕಣ್ಣನ್ನೇ ಮುಚ್ಚುವಂತೆ ಅದು ಇಡಿಯ ಕಾವ್ಯವನ್ನೇ ಕೆಡಿಸುತ್ತದೆ ಎನ್ನುವ ಕಾಲವೊಂದಿತ್ತು.

ಅವಗುಣಮಿನಿತಾದೊಡಮಾ ಕವಿತಾಬಂಧಮನಶೇಷಮಂ ದೂಷಿಸುಗುಂ
ಸವಿಳಾಸ ಲೋಲಲೋಚನ ವಿವರಮನೆಡೆವೆತ್ತ ಕಸದ ವೋಲನವರತಂ (ಕವಿರಾಜಮಾರ್ಗ)

ಆದ್ದರಿಂದ ಕಾವ್ಯದೋಷಗಳನ್ನು ನಿವಾರಿಸಲೆಂದೇ ಕಾವ್ಯದ ಗುಣ-ಲಕ್ಷಣ-ದೋಷಗಳನ್ನು ತಿಳಿಸುವ ಗ್ರಂಥಗಳು ಬಂದುವು. ಕವಿರಾಜ ಮಾರ್ಗ (ಕ್ರಿ.ಶ.೯ನೆಯ ಶತಮಾನ) ಅಂತಹ ಒಂದು ಗ್ರಂಥ. ಕನ್ನಡದಲ್ಲಿ ನಮಗೆ ಸಿಗುವ ಮೊದಲ "ಕಾವ್ಯ-ಲಕ್ಷಣ" ಗ್ರಂಥ ಇದು. ಆದರೂ ಕಾವ್ಯದ ಗುಣ ಲಕ್ಷಣಗಳನ್ನು ತಿಳಿಸುವ ಗ್ರಂಥ ಇದಾದ್ದರಿಂದ ಕನ್ನಡದಲ್ಲಿ ಕಾವ್ಯ ಇನ್ನೂ ತುಂಬಾ ಹಿಂದಿನಿಂದಲೇ ಇದ್ದಿರಬೇಕೆಂಬುದು ಸುಲಭವಾದ ತರ್ಕ, ಇರಲಿ. ನಾನು ಹೇಳಹೊರಟಿದ್ದು, ಸುಮಾರು ೮-೯ನೆಯ ಶತಮಾನದಿಂದ ೧೨ನೆಯ ಶತಮಾನದ ವರೆಗಿನ ಹಳೆಗನ್ನಡ ಕಾವ್ಯಕ್ಕೆ ಅದರದೇ ಬಂಧ-ಛಂದಗಳು, ನಿಲುವು-ನಡೆಗಳು, ಭಾಷೆ-ಭಾವ-ರಸಗಳ ಕಟ್ಟುಪಾಡು - ಸಾಕಷ್ಟು ಕಠಿಣವಾಗೇ ಇತ್ತು. ಈ ಎಲ್ಲ ಕಡುಕಟ್ಟುಗಳ ನಡುವೆಯೇ ಕವಿಯ ಪ್ರತಿಭೆ ವಿಜೃಂಬಿಸಬೇಕಿತ್ತು, ವಿಜೃಂಭಿಸಿತು ಕೂಡ. ನಡೆ ತಪ್ಪಿದರೆ ಹೀನಾಯ-ಅವಮಾನ ಕಟ್ಟಿಟ್ಟ ಬುತ್ತಿ. ಕಾವ್ಯಕ್ಕಿಂತಾ ಪಾಂಡಿತ್ಯದ ದರ್ಪವೇ ಹೆಚ್ಚಿದ್ದ ಕಾಲ. ಹೀಗಾಗಿ, ಇದು ಕವಿಯೊಬ್ಬನ 'ಅಹಂ'ನ ಪ್ರಶ್ನೆಯಾಗಿದ್ದರಿಂದ "ದೋಷಾರೋಪಣೆ" ಮಾಡುವಮೊದಲು ವಿಮರ್ಶಕನೂ ಅದೆಷ್ಟು ಎಚ್ಚರ ವಹಿಸಿದ್ದರೂ ಸಾಲದು. "ಫಣಿಪತಿಯ ಫಣಾರತ್ನಮುಮಂ ರನ್ನನ ಕೃತಿರತ್ನಮುಮಂ ಪೇಳ್ ಪರೀಕ್ಷಿಪಂಗೆಂಟೆರ್ದೆಯೇ" (ಹಾವಿನ ಹೆಡೆಯ ರತ್ನವನ್ನೂ ರನ್ನನ ಕೃತಿರತ್ನವನ್ನೂ ಪರೀಕ್ಷಿಸಬೇಕೆನ್ನುವನಿಗೆ ಎಂಟೆದೆಯಿರಬೇಕು) ಎನ್ನುತ್ತಾನೆ ರನ್ನ. ಹೀಗಾಗಿ ಅದು ಕವಿ-ಕವಿಗಳ, ಕವಿ-ವಿಮರ್ಶಕರ, ವಿಮರ್ಶಕ-ವಿಮರ್ಶಕರ ದರ್ಪದ ಗದಾಯುದ್ಧವೇ ಆಗಿತ್ತು. ಕಾವ್ಯಕನ್ನಿಕೆ ಸಂಸ್ಕೃತ ಭೂಯಿಷ್ಟವಾದ ಕಂದ-ವೃತ್ತ-ಚಂಪೂ ಛಂದಸ್ಸಿನ ಗುರು-ಲಘು-ಮಾತ್ರೆ-ಗಣ-ಯತಿಗಳ ಆಭರಣ-ಅಲಂಕಾರಗಳಲ್ಲಿ ಬಂದಿ. ಈ ವಜ್ರದ ಮೇಲ್ಮುಸುಕನ್ನು ಮೆಲ್ಲನೆ ಸರಿಸಿ ನೋಡಿದಾಗಷ್ಟೇ ಅವಳ ಕಣ್ಣ ಮಿಂಚು ಹೊಳೆಯಬೇಕು (ಅದಿದ್ದರೆ). ಹೀಗೆ ಈ ಅಲಂಕಾರಗಳ ವೈಭವವನ್ನೂ ಮೀರಿ ವಿಜೃಂಭಿಸಬೇಕಾದರೆ ಕಾವ್ಯಕ್ಕೆ ನಿಜವಾದ ಸತ್ವವಿರಬೇಕಿತ್ತು. ಹಳೆಗನ್ನಡದ ಪಂಪ, ರನ್ನನೇ ಮುಂತಾದ ಕವಿಪರಂಪರೆ, ಈ ಜರಡಿಯಲ್ಲಿ ಉಳಿದ ಗಟ್ಟಿ ಕಾಳುಗಳು. ಉಳಿದಂತೆ ಕೇವಲ ಛಂದಸ್ಸು-ಪದ-ಅಲಂಕಾರಗಳ ಹಿಂದೆ ಬಿದ್ದು ಕಾವ್ಯಕ್ಕೆ ಎರವಾಗಿ ಕಳೆದುಹೋದ ಪುಡಿ ಕವಿಗಳೆಷ್ಟೋ!

ಬದಲಾವಣೆಗೊಳಗಾಗುವುದೇ ಜೀವಂತವಾದ, ಜೀವನಕ್ಕೆ ಸಂಬಂಧಿಸಿದ ಎಲ್ಲದರ ಲಕ್ಷಣ. ಕಾವ್ಯ ಇದಕ್ಕೆ ಹೊರತಲ್ಲ. ಕಾವ್ಯಕ್ಕೆ ಬಿಗಿದ ಸಂಕಲೆಗಳು ಉಸಿರುಗಟ್ಟಿಸತೊಡಗಿ ಕಾವ್ಯ ನಿಂತ ನೀರಾಗತೊಡಗಿದಂತೆ ಈ ಕಟ್ಟುಗಳನ್ನು ತುಸು ಸಡಿಲಿಸಿ, ಕಾವ್ಯಕನ್ನಿಕೆ ಸ್ವಲ್ಪ ಸರಾಗವಾಗಿ ಉಸಿರಾಡಿಸುವ ಅಗತ್ಯ ಕಂಡುಬಂತು. ಭಾಷೆ, ಛಂದಸ್ಸುಗಳೆಲ್ಲವನ್ನೂ ಸಂಸ್ಕೃತದಿಂದ ಸಾರಾಸಗಟಾಗಿ ಎರವಲು ತರುವ ಅಗತ್ಯವಾದರೂ ಏನು? ಉದಾಹರಣೆಗೆ ಯತಿನಿಯಮ. ಪ್ರತಿಯೊಂದು ಪದದಲ್ಲೂ ಯಾವುದೋ ಒಂದು ಅಕ್ಷರದ ಮೇಲೆ ಒತ್ತು ಬೀಳುವ ಮೂಲಕ ಅದರ ಅರ್ಥ ಸ್ಫುಟಗೊಳ್ಳುತ್ತದೆ. ಹೀಗೆ ನಾವು ಮಾತಾಡುವಾಗ ಪ್ರತಿಯೊಂದು ಪದದ ಅರ್ಥಕ್ಕನುಗುಣವಾಗಿ ಕೆಲವು ಅಕ್ಷರದಲ್ಲಿ ನಿಲ್ಲಿಸಿ/ಒತ್ತು ಹಾಕಿ ನುಡಿಯುತ್ತೇವೆ. ಇದು ಯತಿ ನಿಯಮ. ಆದರೆ ಪದ್ಯವೊಂದರ ಛಂದಸ್ಸಿಗೆ ಅದರದೇ ಅಕ್ಷರ ಗಣದ ನಿಯಮವೂ ಇರುತ್ತದೆ (ಅದು ಅರ್ಥವನ್ನನುಸರಿಸಬೇಕೆಂದೇನೂ ಇಲ್ಲ). ಹೀಗಾದಾಗ, ಛಂದೋನಿಯಮಕ್ಕೆ ಕಟ್ಟುಬಿದ್ದು ಪದಗಳನ್ನು ಅರ್ಥಹೀನವಾಗಿ ಒಡೆಯುವ ಸಾಧ್ಯತೆಗಳಿವೆ. ಹೀಗಾಗಬಾರದೆಂದೇ ಛಂದೋಬದ್ಧ ರಚನೆಯಲ್ಲೂ ಯತಿನಿಯಮವನ್ನು ಪಾಲಿಸಬೇಕೆಂಬುದು ಸಂಸ್ಕೃತ ಪದ್ಯ ರಚನೆಯ ನಿಯಮಗಳಲ್ಲೊಂದು. ಉದಾಹರಣೆಗೆ ಈ ಶ್ಲೋಕ ನೋಡಿ:

ಟಾಟವೀ ಗಜ್ವಲ ಪ್ರವಾಹಪಾಲಿಸ್ಥಲೇ ಗಳೇsವಲಂಬ್ಯ ಲಂಬಿತಾಂ ಭುಜಂಗ ತುಂಗ ಮಾಲಿಕಾಂ

ದಪ್ಪಕ್ಷರದಲ್ಲಿರುವ ಅಕ್ಷರಗಳು ಲಯಕ್ಕೂ ಅರ್ಥಕ್ಕೂ ಅನುಗುಣವಾಗೇ ಒತ್ತನ್ನು ಪಡೆಯುತ್ತವೆ. ಸಂಸ್ಕೃತದಲ್ಲಿ ಇದನ್ನು ಸುಲಭವಾಗಿ ಸಾಧಿಸಬಹುದು, ಏಕೆಂದರೆ ಸಂಸ್ಕೃತದ ಪದಗಳ ಜಾಯಮಾನವೇ ಅದು. ಆದರೆ ಕನ್ನಡದಲ್ಲಿ ಅದು ಕಷ್ಟ. ಉದಾಹರಣೆಗೆ ಪಂಪನ ಈ ಸಾಲುಗಳನ್ನು ನೋಡಿ.

ಚಾಗದಭೋಗದಕ್ಕರದಗೇಯದಗೊಟ್ಟಿಯಲಂಪಿನಿಂಪು

ಳ್ಗಾಗರಮಾದಮಾನಿಸರೆ ಮಾನಿಸರಂತವರಾಗಿ ಪುಟ್ಟದೇ

ನಾಗಿಯುಮೇನೊತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್

ಕೋಗಿಲೆಯಾಗಿಪುಟ್ಟುವುದು ನಂದನದೊಳ್ ಬನವಾಸಿ ದೇದೊಳ್

ಇಲ್ಲಿ ಮೂರಕ್ಷರದ ಅಕ್ಷರಗಣದಿಂದ ಲಯ ಬರುತ್ತದೆ ಆದರೆ ಲಯಬದ್ಧವಾಗಿ ಉಚ್ಛರಿಸಿದಾಗ ಅದರ ಅರ್ಥವುಳಿಯುವುದಿಲ್ಲ. ಮತ್ತೆ ಅರ್ಥಕ್ಕನುಗುಣವಾಗಿ ಪಠಿಸಿದರೆ ಲಯದ ಅನುಭವವಾಗುವುದಿಲ್ಲ. ಕನ್ನಡದಲ್ಲೂ ಯತಿನಿಯಮಗಳನ್ನು ಅನುಸರಿಸಿರುವ ರಚನೆಗಳಿಲ್ಲ ಎಂದಲ್ಲ, ಉದಾಹರಣೆಗೆ, ಸೋಮೇಶ್ವರ ಶತಕದ ಈ ಸಾಲುಗಳನ್ನು ನೋಡಿ:

ಪ್ರಜೆಯಂ ಪಾಲಿಸ ಬಲ್ಲೊಡಾತನರಸಂ ಕಯ್ಯಾಶೆಯಂ ಮಾಡದಂ
ನಿಜಮಂತ್ರೀಶ್ವರ ತಂದೆತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ

ಆದರೆ ಅದು ಅಪವಾದ ಅಷ್ಟೇ. ಕವಿರಾಜಮಾರ್ಗಕಾರನೇನೋ ಯತಿವಿಲಂಘನೆಯು ಕನ್ನಡದ ವಿಶೇಷ ಲಕ್ಷಣವೆಂದು ಕರೆದು ಈ ಅಪವಾದವನ್ನು ಸೂತ್ರಬದ್ಧಗೊಳಿಸಿಯೂ ಬಿಟ್ಟ. ಆದರೆ ಒಟ್ಟಂದದಲ್ಲಿ ಈ ನಿಯಮಗಳೆಲ್ಲಾ ಸಂಸ್ಕೃತದ ಜಾಯಮಾನಕ್ಕೆ ಒಗ್ಗೀತೇ ಹೊರತು ಕನ್ನಡದ ಜಾಯಮಾನಕ್ಕಲ್ಲ. ಹಾಗಿದ್ದಮೇಲೆ ಕನ್ನಡಕ್ಕೆ ಒಗ್ಗದ್ದನ್ನೂ ಸಂಸ್ಕೃತದಿಂದ ಎರವಲು ತಂದು ಅದರ ಕಟ್ಟುಪಾಡಿನಲ್ಲಿ ಕಾವ್ಯವನ್ನು ಸಿಲುಕಿಸಬೇಕೇಕೆ? ಕ್ಲಿಷ್ಟವಾದ ಅಕ್ಷರ ಗಣಗಳು, ವೃತ್ತದ ಸುತ್ತುಗಳು ಇಲ್ಲದೆ ಕಾವ್ಯಸೃಷ್ಟಿ ಸಾಧ್ಯವೇ ಇಲ್ಲವೇ? ಮುಂದಿನ ಸುಮಾರು ಮುನ್ನೂರು-ನಾನೂರು ವರ್ಷ (೧೨ರಿಂದ ೧೬ನೆಯ ಶತಮಾನ) ಕಾವ್ಯಮಾರ್ಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆದುವು. ಸರಳ ಸುಂದರವಾದ ಷಟ್ಪದಿ-ರಗಳೆಗಳು ಜನಪ್ರಿಯವಾದದ್ದು ಹೀಗೆ. ಸರಳ ನಡೆ, ತಿಳಿಯಾದ ಭಾಷೆ, ಆದರೆ ಪ್ರಖರವಾದ ಕಾವ್ಯಗುಣ ಹೊಸ ಕಾವ್ಯಮಾರ್ಗದ ವಿಶೇಷವಾಯಿತು. ನಡುಗನ್ನಡ ಕಾವ್ಯದ ಕುಮಾರವ್ಯಾಸ-ಹರಿಹರ-ರಾಘವಾಂಕ; ಜಾನಪದ ಸೊಗಡಿನ ಸಾಂಗತ್ಯಗಳ ರತ್ನಾಕರವರ್ಣಿ; ತ್ರಿಪದಿಗಳ ಸರ್ವಜ್ಞ ಯಾರಿಗೆ ಗೊತ್ತಿಲ್ಲ. ಗದುಗಿನ ಭಾರತ, ತ್ರಿಪದಿ, ಸಾಂಗತ್ಯಗಳು, ದಾಸರ ಪದಗಳು ಜನಸಾಮಾನ್ಯರ ಮನೆ ಮನಗಳಲ್ಲಿ ನಲಿದುವು. ಆದರೂ ಈ ಬದಲಾವಣೆ ಸುಲಭದ್ದೇನಾಗಿರಲಿಲ್ಲ. ಹಳೆಗನ್ನಡದಿಂದ ಬಂದ ಕಾವ್ಯದ ಸತ್ವವನ್ನು ಕಳೆದುಕೊಳ್ಳದೇ, ಅನಗತ್ಯವೆನಿಸಿದ ನಿಯಮಗಳನ್ನು ಮುರಿದು (ಅಥವ ಕೈಬಿಟ್ಟು), ಹೊಸ ನಿಯಮವನ್ನು ಅನುಸರಿಸಿ, ಹೊಸ ನಮೂನೆ-ವಸ್ತುಗಳನ್ನು ಬಳಸಿ ಕಾವ್ಯ ಬರೆಯುವುದು, ಅದರಲ್ಲೂ ಅದು "ಪಂಡಿತ" ಜನರಲ್ಲಿ ಒಪ್ಪಿತಗೊಳ್ಳುವುದು ಒಂದು ಸವಾಲಾಗೇ ಇತ್ತು. ಲಕ್ಷ್ಮೀಶನ ಈ ಸಾಲುಗಳನ್ನು ನೋಡಿ:

ಕೆನೆವಾಲ ಕಡೆದು ನವನೀತಮಂ ತೆಗೆದು ಬಾ
ಯ್ಗಿನಿದಾಗಿ ಸವೆಯದದರೊಳಗೆ ಪುಳಿವಿಡಿದು ರಸ
ವನೆಗೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ ಕಾವ್ಯಮಂ ಕೇಳ್ದು ಮಥಿಸಿ
ಜನಿಸಿದ ಪದಾರ್ಥಮಂ ತಿಳಿದು ನೋಡದೆ ವಿನೂ
ತನ ಕವಿತೆಯೆಂದು ಕುಂದಿಟ್ಟು ಜರಿದೊಡೆ ಪೇಳ್ದ
ವನೊಳಾವದೂಣೆಯಂ ಜಾಣರಿದನರಿದು ಮತ್ಸರವ ಮರೆದಾಲಿಸುವುದು

(ಕೆನೆ ಹಾಲನ್ನು ಕಡೆದು ಬೆಣ್ಣೆ ತೆಗೆದರೆ ಅದನ್ನು ಸವಿಯುವುದು ಬಿಟ್ಟು, ಇದು ಹುಳಿಹಿಡಿದ ಹಾಲು, ಆದ್ದರಿಂದ ಚೆನ್ನಲ್ಲ ಎಂದರೆ ಕರೆದ ಹಸುವಿಗೆ ಅದರಿಂದ ಕುಂದೇನು? ಹಾಗೆಯೇ ಕಾವ್ಯವನ್ನು ಕೇಳಿ, ಅದನ್ನು "ಕಡೆದು" ಅದರ ಬೆಣ್ಣೆಯನ್ನು ಸವಿಯದೆ, ಇದು ಹೊಸ ಕವಿತೆ, ಸಾಂಪ್ರದಾಯ ಬಾಹಿರ (ಆದ್ದರಿಂದ ಚೆನ್ನಾಗಿಲ್ಲ) ಎಂದು ಜರಿದರೆ, ಅದರಲ್ಲಿ ಕವಿಯ ತಪ್ಪೇನು? ಆದ್ದರಿಂದ ಜಾಣರಾದವರು ಇದನ್ನು ಅರಿತು, ಮತ್ಸರವನ್ನು ಮರೆತು ಆಲಿಸಿ - ಜೈಮಿನಿ ಭಾರತ)

ನಿಯಮಗಳಲ್ಲಿ ಸಡಿಲಿಕೆ ಬಂದರೂ, ಹೊಸ ನಿಯಮಗಳು ಬಂದರೂ ನಿಯಮಗಳೇ ಇಲ್ಲವಾಗಲಿಲ್ಲ. ಆದರೂ ಇದೇ ಕಾಲಘಟ್ಟದಲ್ಲಿ ಬಂದ ವಚನಸಾಹಿತ್ಯ ಮಾತ್ರ ಸಾಲುಗಳ ಉದ್ದ, ಗಾತ್ರಗಳ ಯಾವ ನಿಯಮವನ್ನೂ ಪಾಲಿಸದೇ, ಅದರ "ಆಳ"ದ ಬಗೆಗೆ ಮಾತ್ರ ಗಮನ ನೀಡಿತು. ಬಸವಣ್ಣನವರ ಮಾತಿನಲ್ಲಿ ಹೇಳುವುದಾದರೆ, "ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು". ಅದೇ ಅಲ್ಲವೇ ಕಾವ್ಯ? ನುಡಿ ಹಾಗಿದ್ದಮೇಲೆ, ಅದು ಎಷ್ಟು ಉದ್ದ, ಯಾವ ನಡೆಯಲ್ಲಿದ್ದರೆ ಏನು? ಹಾಗೆ ನೋಡಿದರೆ ಇತ್ತೀಚಿನ ದಶಕಗಳಲ್ಲಿ ನಾವು ನವ್ಯದಲ್ಲಿ ಏನು ಪ್ರಯೋಗ ಮಾಡಿದೆವೋ ಅದು ವಚನಗಳಲ್ಲಿ ಆಗಲೇ ನಡೆದಿತ್ತು (atleast, with respect to physical format). ೧೨ನೆಯ ಶತಮಾನದಲ್ಲಿ ನಡೆದ ಈ ಸಾಹಿತ್ಯಕ ಕ್ರಾಂತಿ, ಅವರು ನಡೆಸಿದ ಸಾಮಾಜಿಕ ಕ್ರಾಂತಿಯ ಸಂಕೇತವೂ ಆಗಿತ್ತು. ಆದರೂ ನಡುಗನ್ನಡದ ಸರಳ ನಿಯಮ, ಸರಸ ಕಾವ್ಯಗಳ ಯುಗದಲ್ಲಿ ವಚನಸಾಹಿತ್ಯದ ನಿಯಮರಾಹಿತ್ಯದ ಈ ಕ್ರಾಂತಿ ಒಂದು exception ಆಗಿ ಉಳಿತಷ್ಟೇ ಹೊರತು, ಸಾಹಿತ್ಯದ ಶೈಲಿಯಲ್ಲಿ ಅದು ಮುಂದೆ ಪರಂಪರೆಯಾಗಿ ಬೆಳೆಯಲಿಲ್ಲ. ತದನಂತರದ ನಿಜಗುಣಶಿವಯೋಗಿಗಳಂಥವರೂ ಸಹ (ಕ್ರಿ.ಶ.೧೬೦೦) ಸ್ವರ ವಚನಗಳೆಂಬ ನಿಬದ್ಧ ಪ್ರಕಾರನ್ನೇ ಬಳಸಿಕೊಂಡರು

ಮತ್ತೆ ಕೆಲವು ಕಾಲ ಸರಿದಂತೆ ಸಾಹಿತ್ಯ ಮತ್ತೆ ನಿಂತ ನೀರು. ಇದುವರೆಗೂ "ದೇಸೀ" ಆಗಿದ್ದ ಬದುಕು-ಭಾಷೆ-ಸಾಹಿತ್ಯ, ಬ್ರಿಟಿಷರ ಆಳ್ವಿಕೆಯಲ್ಲಿ ಫಕ್ಕನೆ ಪಾಶ್ಚಾತ್ಯ ಪ್ರಭಾವಕ್ಕೊಳಗಾಯಿತು. ೧೯ನೆಯ ಶತಮಾನದ ಕೊನೆಗೆ ಪಡುವಣ ದಿಕ್ಕಿನಿಂದ ಬೀಸಿದ ಈ ಹೊಸ ಗಾಳಿ ನಮ್ಮ ನಡೆ-ನುಡಿ-ನೋಟಗಳಲ್ಲಿ ಹೊಸ ಬದಲಾವಣೆಯನ್ನೇ ತಂದಿತು. ಕಾಲದಿಂದ ಜುಂಗು ಹಿಡಿದು ನಿಂತಿದ್ದ ಶತಮಾನದ ಸಾಹಿತ್ಯಕ್ಕೀಗ "ನವೋದಯ"ವಾಯಿತು. ಆಗ ಇಂಗ್ಲಿಷಿನಲ್ಲಿ ಜನಪ್ರಿಯವಾಗಿದ್ದ ರೊಮಾಂಟಿಕ್ ಸಾಹಿತ್ಯ ಕನ್ನಡ ಸಾಹಿತ್ಯದ ಮೇಲೆ ಪ್ರಭಾವ ಬೀರಿತು. ರೊಮಾಂಟಿಕ್ ಕವಿಗಳಾದ Wordsworth, Shelly, Tennyson ಮುಂತಾದವರಿಂದ ಸ್ಫೂರ್ತಿಗೊಂಡರು ನವೋದಯದ ಕನ್ನಡ ಕವಿಗಳು. ನಡು/ಹಳೆಗನ್ನಡದ ಪುರಾಣ, ಪ್ರಸಿದ್ಧವ್ಯಕ್ತಿಗಳನ್ನು ಬಿಟ್ಟು, ಪ್ರಕೃತಿ, ಪ್ರೀತಿ-ಪ್ರೇಮ, ಅದರ ದೈವಿಕತೆ, (ಸಭ್ಯತೆ ಮೀರದ) ಪ್ರಣಯ, ನವಿರಾದ ಭಾವನೆಗಳು ಇವು ಹೊಸಕಾವ್ಯದ ವಸ್ತುಗಳಾದುವು. ಇಂಗ್ಲಿಷಿನ ಸಾನೆಟ್ ಇತ್ಯಾದಿ ಛಂದಃಪ್ರಕಾರಗಳನ್ನು ಹೋಲುವ ಹೊಸ ಹೊಸ ಛಂದಸ್ಸುಗಳು ಕನ್ನಡದಲ್ಲಿ ಬಳಕೆಗೆ ಬಂದುವು. ಕಾವ್ಯ ಚಿಕ್ಕಚಿಕ್ಕ ಗೀತೆಗಳ ರೂಪ ಪಡೆಯಿತು. ಭಾಷೆ ಜನ ಬಳಕೆಗೆ ಹತ್ತಿರ ಬಂತು. ಮಾತು ಭಾವವನ್ನು ಅನುಸರಿಸಿ ಬರಬೇಕೇ ಹೊರತು ಭಾವ ಮಾತಿಗೆ ಬಂದಿಯಾಗಬಾರದು ಎನ್ನುವ ನಿಲುವು ಮನ್ನಣೆ ಪಡೆಯಿತು. ಇದುವರೆಗೂ ಇದ್ದ ಛಂದೋನಿಯಮಗಳನ್ನು ದಿಕ್ಕರಿಸಿ, ಭಾವಕ್ಕೆ ತಕ್ಕಂಥ ಸಹಜ ನಡೆ/ಲಯಗಳನ್ನು ಬಳಸಿ ಬರೆಯುವ ಕ್ರಮ ಬಂತು. ನಡುಗನ್ನಡದಲ್ಲಿ ಕಾವ್ಯ ಸರಸವಾಗಿದ್ದರೂ, ಜನದ ಮಟ್ಟದಿಂದ ಒಂದು ಹೆಜ್ಜೆ ಮೇಲಿತ್ತು; ಈಗ ಹೊಸಗನ್ನಡದ ನವೋದಯದಲ್ಲಿ ಇದು ಇನ್ನಷ್ಟು ಸರಸವಾಯಿತು, ಜನದ ಮಟ್ಟಕ್ಕೆ ಇಳಿದುಬಂತು, ನಾವು ಸುತ್ತಮುತ್ತಲ ನಿರ್ದಿಷ್ಟ ವಸ್ತು/ವಿಷಯ/ಅನುಭವಗಳಿಗೆ ಚಿನ್ನದ ಕಟ್ಟು ಹಾಕುವ ಕವಿತೆಗಳಾದುವು. ಗೇಯ ಗುಣ, ಭಾವದ ಲಾಲಿತ್ಯ ಈ ಕಾವ್ಯದ ಮುಖ್ಯ ಅಂಶ. ಕುವೆಂಪು, ಬೇಂದ್ರೆ. ಪುತಿನ, ನರಸಿಂಹಸ್ವಾಮಿ ಮುಂತಾದ ಅತ್ಯುತ್ತಮ ಕವಿಗಳನ್ನು ಕೊಟ್ಟಿತು, ಈ ಘಟ್ಟ.

ಇದರಂತೆಯೇ ನಮ್ಮ ಮೇಲೆ ಪ್ರಭಾವ ಬೀರಿದ ಮತ್ತೊಂದು ಸಾಹಿತ್ಯವೆಂದರೆ ಗ್ರೀಕ್ ಸಾಹಿತ್ಯ. ಗ್ರೀಕ್ ಪುರಾಣಗಳನ್ನಾಧರಿಸಿದ ರುದ್ರನಾಟಕಗಳು ಕನ್ನಡಕ್ಕೆ ಭಾಷಾಂತರಗೊಂಡುವು. ಆ ನಾಟಕಗಳ ವಸ್ತು-ರೌದ್ರತೆ-ಭಾಷೆಯ ತೂಕಕ್ಕೆ ಸರಿದೂಗಿಸಬಲ್ಲಂತೆ ಅವುಗಳನ್ನು ನಮ್ಮ ಹಳೆಗನ್ನಡ ಭಾಷೆಯಲ್ಲಿ ಭಾಷಾಂತರಿಸಲಾಯಿತು. ಕ.ವೆಂ.ರಾಘವಾಚಾರ್ಯರ ಈಡಿಪಸ್ ಇಂಥಾ ನಾಟಕಗಳಲ್ಲೊಂದು. ಇದು ಭಾಷಾಂತರವಾದರೆ, ಇಡೀ ನಾಟಕದ ವಸ್ತು-ಪಾತ್ರಗಳನ್ನು ನಮ್ಮ ಪೌರಾಣಿಕ ಸನ್ನಿವೇಶ-ಪಾತ್ರಗಳಿಗೆ ಅಳವಡಿಸಿ ಮೂಲ ನಾಟಕವನ್ನು ನಮ್ಮ ಸನ್ನಿವೇಶದಲ್ಲಿ ಪುನಃಸೃಷ್ಟಿಸುವ "ರೂಪಾಂತರ" ಕಾರ್ಯಗಳೂ ನಡೆದುವು. ಬಿಎಂಶ್ರೀಯವರ "ಅಶ್ವತ್ಥಾಮನ್" ಇಂಥದ್ದೊಂದು ಉತ್ತಮ ಕೃತಿ. ಮೂಲ ಗ್ರೀಕ್ ನಾಟಕ ಸಾಪೋಕ್ಲೀಸನ "ಅಯಾಜ್" ನ ರೂಪಾಂತರ ಇದು.

ಆದರೆ ಕಾವ್ಯ ಎಂದರೆ ಬರೀ ಪ್ರಕೃತಿ ಸೌಂದರ್ಯ, 'ದೈವೀ'ಪ್ರೇಮ, ನದಿ, ಕಣಿವೆ, ಬೆಟ್ಟ, ಬಾನಾಡಿಗಳನ್ನಷ್ಟೇ ಬಣ್ಣಿಸಿ ತೃಪ್ತಿ ಪಟ್ಟುಕೊಂಡರೆ ಸಾಕೇ? ಕೋಗಿಲೆಯ ಕೂಗನ್ನೇ ಅದೆಷ್ಟುದ್ದ ಎಳೆಯಲು ಸಾಧ್ಯ? ಮನುಷ್ಯನ ಮನದಾಳದಲ್ಲಿ ಕ್ರೂರಮೃಗ ಹೂಂಕರಿಸುತ್ತಿರುವಾಗ ಬರೀ ಅವನ ಔನ್ನತ್ಯವನ್ನಷ್ಟೇ ಕೊಂಡಾಡಿದರೆ ಅದು ಹಸೀ ಸುಳ್ಳಲ್ಲವೇ. ಮನದಾಳದ ವ್ಯಾಪಾರ, ಮನುಷ್ಯ-ಸಮಾಜ-ಪರಿಸರದ ಸಂಬಂಧ, ಕೊಡುಕೊಳ್ಳುವಿಕೆ, ಅವನ ನೂರೆಂಟು ಗೋಳುಗಳು, ಸಣ್ಣಪುಟ್ಟ ನೋವು-ನಲಿವುಗಳಿಗೆ ಕಣ್ಣುಮುಚ್ಚಿ ಬರೀ ಪ್ರಕೃತಿಯನ್ನಾರಾಧಿಸುವವ ಅದೆಂಥ ಕವಿಯಾದಾನು? ಕಾವ್ಯಕ್ಕೂ ಬದುಕಿಗೂ ನಡುವೆ ಕಂಡುಬರುವ ಒಂದು ಬಗೆಯ ವೈರುಧ್ಯ, ಭ್ರಮನಿರಸನಕ್ಕೆಡೆಗೊಟ್ಟಿತು. ಈ ಸರಣಿಯ ಆಲೋಚನೆಗಳು ಜಗತ್ತಿನ ಸಾಹಿತ್ಯವಲಯದಲ್ಲಿ ಹರಿಯತೊಡಗಿ, ಹೊಸಬಗೆಯ ಕಾವ್ಯ ಸೃಷ್ಟಿಗೆ ದಾರಿಗೊಟ್ಟಿತು. ಫ್ರಾಯ್ಡನ ಸುಪ್ತಮನೋವಿಶ್ಲೇಷಣೆಯಿಂದ ಹಿಡಿದು ಮಾರ್ಕ್ಸನ ಸಮತಾವಾದದವರೆಗು ಅನೇಕ ಆಲೋಚನಾಧಾರೆಗಳು ಈ ಕಾವ್ಯಮಾರ್ಗವನ್ನು ರೂಪಿಸಿದುವು; ಹಾಗೆಯೇ ಚಿತ್ರಕಲೆ-ಸಂಗೀತಗಳೇ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ನಡೆದ ಹೊಸ ಪ್ರಯೋಗಗಳು ತಮ್ಮದೇ ಕೊಡುಗೆಯನ್ನು ನೀಡಿದುವು. ಇದನ್ನೇ ಕನ್ನಡದಲ್ಲಿ ನವ್ಯ ಕಾವ್ಯದ ಯುಗ ಎನ್ನಲಾಯಿತು. ಸ್ವಾತಂತ್ರೋತ್ತರ ದಿನಗಳಲ್ಲಿ ಬಳಕೆಗೆ ಬಂದ ಈ ಪ್ರಕಾರದ ಮೊದಲ ಕವಿ ಬಹುಶಃ ಗೋಪಾಲ ಕೃಷ್ಣ ಅಡಿಗರು. ಸ್ವತಃ ನವೋದಯ ಕವಿಯಾಗಿ "ಯಾವ ಮೋಹನ ಮುರಳಿ ಕರೆಯಿತು", "ನಗು ನನ್ನ ನಲ್ಲೆ" ಇತ್ಯಾದಿ ಸುಂದರ ಕವಿತೆಗಳನ್ನು ನೀಡಿದ ಅಡಿಗರು, ಅನಂತರದ ದಿನಗಳಲ್ಲಿ ನವ್ಯದ ಕಡೆ ಹೊರಳಿದರು. "ಹಿಮಗಿರಿಯ ಕಂದರ", "ಭೂಮಿಗೀತ" ದಂತಹ ಶಕ್ತ ಕವನಗಳು ಹೊರಬಂದವು. ನಿಸಾರ್, ಲಂಕೇಶ್, ರಾಮಚಂದ್ರಶರ್ಮ, ರಾಮಾನುಜಂ ಮುಂತಾದ ಪ್ರಮುಖ ಕವಿಗಳು ನವ್ಯದಲ್ಲಿ ಬರೆದರು.

ನವೋದಯದಲ್ಲಿ ನವಿರು ಭಾವಗಳಿಗೂ, ಅವಕ್ಕನುಗುಣವಾದ ಸರಳ, ಸಹಜ, ಸುಂದರ ಲಯಕ್ಕೂ ಒತ್ತುಕೊಟ್ಟಿದ್ದರೆ, ನವ್ಯದ ಮಾರ್ಗದಲ್ಲಿ ಭಾವ, ಅಭಾವ, ಅದರ ತೀವ್ರತೆ-ಸಂಕೀರ್ಣತೆಗಳೇ ಪ್ರಧಾನವಾದುವು. ಅದರ ಸಹಜ ಹರಿವಿಗೆ "ಅಡ್ಡಿ"ಯುಂಟುಮಾಡುವ ಯಾವುದೂ ಕಾವ್ಯದಲ್ಲಿ ಇರತಕ್ಕದ್ದಲ್ಲ. ಆದ್ದರಿಂದ ಕಾವ್ಯ ಮನದಲ್ಲಿ ಧುಮ್ಮಿಕ್ಕುವ ಭಾವದ ಲಯವನ್ನು ಅನುಸರಿಸಬೇಕೇ ಹೊರತು, ಅದಾವುದೋ ಎರವಲು ತಂದ ಮೂರಕ್ಷರದ್ದೋ ಎರಡಕ್ಷರದ್ದೋ ಲಯವನ್ನಲ್ಲ. ಸರ್ವತೋಮುಖ ಸ್ವಾತಂತ್ರ್ಯ, ಸ್ವ'ಚ್ಛಂದ' ನವ್ಯಕಾವ್ಯದ ಹೆಗ್ಗುರುತು. ಅದಕ್ಕೆಂದೇ, ಅದುವರೆಗಿನ "ಶಿಷ್ಟ" ಸಾಹಿತ್ಯದಲ್ಲಿ ಮಡಿವಂತಿಕೆಯಿಂದ ಬಿಟ್ಟಿದ್ದ ಕಾಮ ಇಲ್ಲಿ ಪ್ರಮುಖ ವಸ್ತುವಾಯಿತು. ಇದ್ದದ್ದನ್ನು ಕೆಡವಿ ಹೊಸದನ್ನು ಕಟ್ಟುವ ಉತ್ಸಾಹವೇ ಇಲ್ಲಿನ ಮೂಲಮಂತ್ರ. ಆದ್ದರಿಂದಲೇ, ನವ್ಯಕಾವ್ಯದಲ್ಲಿ ಸ್ವಚ್ಛಂದದ ಇನ್ನೊಂದು ಮುಖವಾದ "ಲಯ"ವಿಹೀನತೆಯೇ ಮುಖ್ಯ ಗುರುತು ಎಂಬಂತಾಯಿತು. ಇದನ್ನೇ ನವ್ಯಕಾವ್ಯದ ವಿಮರ್ಶಕರು "ನಿಯತಿಕೃತ ನಿಯಮ ರಾಹಿತ್ಯ" ಎಂದರು.

ಹಾಗಿದ್ದರೆ ಕಾವ್ಯಕ್ಕೂ ಗದ್ಯಕ್ಕೂ ಏನು ವ್ಯತ್ಯಾಸ? "ಪದ್ಯ"ವೆಂದು ಬರೆದ ತುಂಡು ಸಾಲುಗಳನ್ನು ಒಂದರಪಕ್ಕ ಒಂದು ಜೋಡಿಸಿದರೆ ಗದ್ಯವಾಗುವುದಿಲ್ಲವೇ? ಇದು ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ. ಇದಕ್ಕೆ ಸಾಮಾನ್ಯವಾಗಿ "ಹೌದು" ಎಂದು ಉತ್ತರಿಸಲಾಗುತ್ತದೆ. ಆದರೆ, ಅದು ಹಾಗಲ್ಲ. ನವ್ಯಕಾವ್ಯ ನಿಯತಿಕೃತ ನಿಯಮಗಳನ್ನು ಮೀರಿದರೂ ಅದು ಮೊತ್ತವಾಗಿ ನಿಯಮವಿಹೀನವೇನೂ ಅಲ್ಲ. ಅದು ಕಣ್ಣಿಗೆ ಕಾಣುವ (ಅಥವ ಕಿವಿಗೆ ಕೇಳುವ) "ಅಸಹಜ" ಲಯವನ್ನು ನಿರಾಕರಿಸಿತೇ ಹೊರತು, ಸಾರಾಸಗಟಾಗಿ ಲಯವನ್ನೇ ಅಲ್ಲ. ಅದರ ನಿಲುವು, ಕಾವ್ಯ ಭಾವದ ಲಯವನ್ನು ಅನುಸರಿಸಬೇಕೆಂಬುದಷ್ಟೇ. ಕಾವ್ಯವನ್ನು ನಿರ್ದಿಷ್ಟ ಛಂದಸ್ಸಿನಲ್ಲಿ ಇರುಕುವ ಬದಲು, ಕವನವೊಂದು ತನ್ನದೇ ಛಂದಸ್ಸನ್ನು ಕಂಡುಕೊಳ್ಳಬೇಕೆನ್ನುವುದು ಇದರ ಆಶಯ. ಇದನ್ನು ಬಿಟ್ಟರೆ, ಕಾವ್ಯಕ್ಕೆ ಅನ್ವಯಿಸುವ ಮೂಲಭೂತ ನಿಯಮಗಳೆಲ್ಲಾ ಇಲ್ಲಿಯೂ ಅನ್ವಯಿಸುತ್ತವೆ. ಕಾವ್ಯಕ್ಕೆ ಅದರದೇ ಆದ ಭಾಷೆಯಿದೆ - ಅದು matter-of-factly ಎನಿಸುವ ಗದ್ಯದ ಭಾಷೆಗಿಂತ ತುಸು ಭಿನ್ನವಾದ ನಾಟಕೀಯ ಭಾಷೆ (ಉದಾ: ಬರುತ್ತೀಯಾ - ಬರುವೆಯಾ); ಗದ್ಯಕ್ಕೆ ಒಂದು ಭೌತಿಕ ಲಯವಿಲ್ಲ, ಆದರೆ ಕಾವ್ಯದಲ್ಲಿ ಲಯವಿದೆ, ಅದು ಭಾಷೆಯ ಲಯವಿರಬಹುದು, ಭಾವದ ಲಯವಿರಬಹುದು ಅಥವ ಅಕ್ಷರಗಳ ಲಯವಿರಬಹುದು, ಮುಖ್ಯವೆಂದರೆ, ಅದು ಆ ಕವನದ್ದೇ ಆದ ಲಯ, ಹೊರಗಿನಿಂದ ಹೇರಿದ್ದಲ್ಲ. ಈ ದೃಷ್ಟಿಯಿಂದ, ಕಾವ್ಯ ಲಯವಿಹೀನ ಅಲ್ಲವೇ ಅಲ್ಲ; ತಂತ್ರಗಾರಿಕೆಯಿಂದ ಗದ್ಯ-ಕಾವ್ಯಗಳು ಬೇರೆಯೇ.

"ನವ್ಯಕಾವ್ಯ ಬರೆಯುವುದಕ್ಕೆ ಛಂದಸ್ಸು, ಪ್ರಾಸ, ಲಯ ಇತ್ಯಾದಿ ನಿಯಮಗಳೇನೂ ಇಲ್ಲ, ಹೇಗೆ ಬೇಕೆಂದರೂ ಬರೆಯಬಹುದು" ಎಂಬ ಮಾತು ಪದೇಪದೇ ಕೇಳಿಬರುತ್ತದೆ. ಹೇಗೆ ಬೇಕಿದ್ದರೂ ಬರೆಯಬಹುದೇನೋ, ಆದರೆ ಅದನ್ನು "ಕಾವ್ಯ"ವೆನ್ನಬಹುದೇ ಎಂಬುದು ಬೇರೆಯೇ ಪ್ರಶ್ನೆ. ಈ ಸಂದರ್ಭದಲ್ಲಿ ಶತಾವಧಾನಿ ರಾ.ಗಣೇಶರ ಮಾತು ನೆನಪಿಗೆ ಬರುತ್ತದೆ:

"ಇಂದಿನ ಕವಿಲೋಕ ಛಂದಸ್ಸನ್ನರಿಯದೆಯೇ ಅದನ್ನು ಪರಿತ್ಯಜಿಸಿದ ಅಟ್ಟಹಾಸ ಮಾಡಿದೆ. ಪರಿಗ್ರಹಣವಿಲ್ಲದ ಪರಿತ್ಯಾಗಕ್ಕೆ ಬೆಲೆಯೇನು? ಕವಿಗಳಿಗೇ ಇದರ ಅರಿವಿಲ್ಲದಿದ್ದರೆ ಸಹೃದಯರಿಗೆ ತಿಳಿಯುವುದೆಂತು? ಇವರಿಬ್ಬರನ್ನೇ ಅಭ್ಯಸಿಸುವ ವಿದ್ಯಾರ್ಥಿಗಳಿಗಂತೂ ಛಂದದ ಗಂಧವೂ ಇಲ್ಲದಂತಾಗಿದೆ" - ಅ.ರಾ.ಮಿತ್ರರ "ಛಂದೋಮಿತ್ರ" ಗ್ರಂಥದ ಮುನ್ನುಡಿಯಿಂದ.

ಅಕ್ಷರದ ಲಯ ಅಥವ ಛಂದಸ್ಸುಗಳಿಗೆ ಅಂಟಿಕೊಳ್ಳದಿದ್ದರೂ, ಅಕ್ಷರ, ಭಾವ, ಭಾಷೆಯ ಲಯಗಳನ್ನು ಹದವಾಗಿ ನೆಯ್ದ ನವ್ಯ ಕವನಗಳನ್ನು ಓದಬೇಕಾದರೆ ಅಡಿಗರನ್ನು ಓದಬೇಕು. ಉದಾಹರಣೆಯಾಗಿ ಈ ಸಾಲುಗಳನ್ನು ನೋಡಿ:

"ನವಾವತಾರ ಪುರುಷರು:
ವೇದವನ್ನು ಕದ್ದು, ಮತ್ತೆ ಸೋಮಕನಿಗೆ ಕೊಟ್ಟವರು,
ಭೂಗೋಳವ ಬೆನ್ನ ಮೇಲೆ ಹೊತ್ತಾಡುವ ಕಮಠರು,
ಹಿರಣ್ಯವನ್ನು ತೊಡೆದು ತೆಗೆದು ನೋಟಿನ ಮಳೆಗರೆದವರು,
ನೆಲವ ಚಾಪೆ ಬಿಚ್ಚಿ ಮೈ ಚಾಚಿ ಮಲಗಿ ಕೊಂಡವರು;
ಎಡವು ಅಲ್ಲ, ಬಲವು ಅಲ್ಲ;
ಗಾಂಧಿ ಅಲ್ಲ, ಮಾರ್ಕ್ಸೂ ಅಲ್ಲ;
ಅಹಿಂಸೆಯಲ್ಲ, ಹಿಂಸೆಯಲ್ಲ;
ಇಹವಿಲ್ಲದ ಪರವೊಲ್ಲದ
ಅನುಕೂಲಸಿಂಧು ರಚಿಸುತಿರುವ ಅವರ್ಣ್ಯರೂಪ ಭೂಪರು;
ಬಲ್ಲಿದರನ್ನೊತ್ತಿ ತುಳಿದು ಬಡವಗೆ ಕೈ ಕೊಟ್ಟವರು;
ಚಿಂತಕರನ್ನೊರಸಲಿಕ್ಕೆ ಬೀದಿಕೂಗ ಮಸೆದವರು,
ಮೂರು ಬಾರಿ ನಾಡ ಸೋಸಿ ಮರಳಿ ಪಟ್ಟವೇರಿದವರು,
ಆಹಾ ಮಹಾಪುರುಷರು;
ಉಪವಾಸದಿ ಸಮ್ಮ ಹಿಡಿದು ತೃಪ್ತಿ ತೇಗ ಬರಿಸುವವರು,
ಸಾಲ ಮಾಡಿ ತುಪ್ಪ ತಿಂದು ನಮ್ಮ ಮೂತಿಗೊರಸಿದವರು,
ಯೋಜನೆಗಳ ಯಜ್ಞದಲ್ಲಿ ವಪೆಯ ರುಚಿಯನರಿತವರು,
ಕಾನೂನಿನ ಗಾಣದಿಂದ ಮರಳಿನೆಣ್ಣೆ ತೆಗೆಯುವವರು,
ಕತ್ತೆ ಕುದುರೆಯಾಗುವಂತೆ, ಹುಲಿ ಹೊಟ್ಟನ್ನುಣ್ಣುವಂತೆ
ನೆಲವೆ ನಾಕವಾಗುವಂತೆ, ನಾಯಿಬಾಲ ನಿಗುರುವಂತೆ
ಮಾಡಬಲ್ಲ ದೊಂಬರು"

- "ಬರುತ್ತಾರೆ" ಕವನದಿಂದ

ಇದನ್ನು ಒಂದರ ಪಕ್ಕ ಒಂದು ಜೋಡಿಸಿ ನೋಡಿ, ಗದ್ಯವಾಗುತ್ತದೆಯೋ?

ಇಷ್ಟಕ್ಕೂ ಆದಿ ಕಾಲದ ಸಂಸ್ಕೃತ ಕಾವ್ಯದಿಂದ ಹಿಡಿದು ಇವತ್ತಿನ ನವ್ಯ/ನವ್ಯೋತ್ತರ ಕಾವ್ಯದ ವರೆಗೂ, ಕಾವ್ಯಕ್ಕೆ ಬದ್ಧತೆ ಹೊಂದಿದ ಯಾವುದೇ ಬರಹ ಕೂಡ, ಒಂದು ಮೂಲಭೂತ ನಿಯಮವನ್ನು ಪಾಲಿಸುತ್ತಾ ಬಂದಿದೆ; ಅದೆಂದರೆ ಸಹಜತೆ. ಕಾವ್ಯ ರುಚಿಯಾಗುವುದಕ್ಕೆ ಅಗತ್ಯವಾಗಿ ಬೇಕಾದ್ದು ಅದರ ಸೆಳೆಯುವ, ಮಿಡಿಯುವ, ಮಿಂಚು ಹೊಳೆಸುವ ಗುಣ; "ಆಗಲೇ ಅಲ್ಲೇ ಹುಟ್ಟಿಬಂತೆನಿಸುವ" ತಾಜಾತನ. W.B.Yeatsನ ಮಾತಿನಲ್ಲಿ ಹೇಳಬೇಕಾದರೆ:

"A line will take us hours maybe;
Yet, if it doesn't seem a moment's thought
Our stitching and unstitching has been naught.
Better go down upon your marrow-bones
And scrub a kitchen pavement, or break stones
Like an old pauper, in all kinds of weather"

("ಕವಿತೆ ಸಾಲೊಂದ ಸಾಧಿಸಲು
ಗಂಟೆಗಟ್ಟಲೆ ನಾವು ಹೆಣಗಬೇಕು;
ಆದರೂ ಆ ಸಾಲು ಅಲ್ಲೆ, ಆ ಗಳಿಗೆಯೇ
ಚಿಮ್ಮಿ ಬಂದದ್ದೆಂದು ಅನ್ನಿಸದೆ ಇದ್ದಲ್ಲಿ
ಹೊಲೆದು ಬಿಚ್ಚಿದ್ದೆಲ್ಲ ಪೂರ ವ್ಯರ್ಥ.
ಬೆನ್ನು ಬಗ್ಗಿಸಿ ಮಂಡಿಯೂರಿ ಕೊಳೆಯಡಿಗೆಮನೆ ನೆಲವನ್ನುಜ್ಜುವುದೋ,
ಕಡುಭಿಕಾರಿಯ ಹಾಗೆ ಬಿಸಿಲು ಚಳಿ ಎನ್ನದೆ ಕಲ್ಲನ್ನೊಡೆಯುವುದೋ
ಇದಕಿಂತ ಉತ್ತಮ"

- ಅನು: ಡಾ. ಲಕ್ಷ್ಮೀನಾರಾಯಣಭಟ್ಟ)

ಅಡಿಟಿಪ್ಪಣಿ: ನವ್ಯೋತ್ತರ ಸಾಹಿತ್ಯದ ಪ್ರಕಾರಗಳೆಂದು ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ, ಸ್ತ್ರೀ ಸಾಹಿತ್ಯ ಇತ್ಯಾದಿಗಳು ಬಂದರೂ, ಅವೆಲ್ಲ ಕೆಲವು ನಿರ್ದಿಷ್ಟ ಸಾಮಾಜಿಕ ಸನ್ನಿವೇಶ, ಇಸಂ/ಸಿದ್ಧಾಂತ ಅಥವಾ ನಿರ್ದಿಷ್ಟಸಾಮಾಜಿಕ ಗುರಿಗೆ ಬದ್ಧವಾಗಿ "ಕಾವ್ಯ"ದ ಬದ್ಧತೆಯನ್ನು ಕಡೆಗಣಿಸಿದುವೆಂದೇ ನನ್ನ ಅನಿಸಿಕೆ. ಅಲ್ಲೂ ಗಟ್ಟಿ ಕಾವ್ಯ ಇರಲಿಲ್ಲವೆಂದಲ್ಲ, ಆದರೆ ನವ್ಯದಿಂದಲೇ ಬೇರೆಯಾದ "ಅಲೆ" ಎಬ್ಬಿಸಿದ್ದನ್ನು ಕಾಣೆ. ಅವುಗಳ ನಿರ್ದಿಷ್ಟ ಸಿದ್ಧಾಂತ-ಧೋರಣೆ-ಸಂವೇದನೆಗಳನ್ನು ಬಿಟ್ಟರೆ, ಶೈಲಿ, ರೂಪಗಳಲ್ಲಿ ನವ್ಯದ್ದೇ ಒಂದು ಪ್ರಭೇದವೆಂದು ಪರಿಗಣಿಸಬಹುದಾದ್ದರಿಂದ, ಅವುಗಳ ಬಗ್ಗೆ (ಕಾವ್ಯದ ಸಂದರ್ಭದಲ್ಲಿ) ಪ್ರತ್ಯೇಕವಾಗಿ ಬರೆಯಲು ಏನಾದರೂ ಇದೆ ಎನಿಸುವುದಿಲ್ಲ.

Sunday, August 2, 2009

ಕಂಡಿತು ಕಣ್ಣು ಸವಿದಿತು ನಾಲಗೆ ಪಡೆದೀತೀ ದೇಹಾ...

ನಡುಬೇಸಿಗೆಯ ಮಧ್ಯಾಹ್ನ, ಒಂದೆಲೆ ಅಲುಗುವಷ್ಟೂ ಗಾಳಿಯಿಲ್ಲ. ಮೋಡ ಕವಿದರೂ ಬಾರದ ಮಳೆ, ಮೂಗುಬ್ಬಸ. ಉರಿಯುವ ಬಿಸಿಲಿಗೆ ಮನೆಯ ತಾರಸಿ ಕಾದು ಒಳಗೂ ಹೊರಗೂ ಅಸಾಧ್ಯ ಧಗೆ. ಬೆಳಗಿನಿಂದ ಯಾವಯಾವುದೋ ವಿಚಾರಗಳಲ್ಲಿ ಸಿಕ್ಕಿ ಮನಸ್ಸು ಕೊಚ್ಚೆಯಾಗಿತ್ತು. ಹಣಕಾಸಿನ ಲೆಕ್ಕವಾಯಿತು, ಮನೆ ಖರ್ಚಿನ ಲೆಕ್ಕವಾಯಿತು, careerಬಗೆಗಿನ ಚಿಂತನೆಯಾಯಿತು, mail check ಮಾಡಿದ್ದಾಯಿತು, ಆರ್ಕುಟ್ ನೋಡಿದ್ದಾಯಿತು, ಟೀವಿ ಆಯಿತು... ಉಹೂಂ, ಮನಸ್ಸು ಅದೇಕೋ ವಿರಮಿಸಲೊಲ್ಲದು. ಎದ್ದು ಹೋಗಿ ನನ್ನ ಲೈಬ್ರರಿಯಿಂದ ಕವನ ಸಂಕಲನವೊಂದನ್ನು ಹೊರಗೆಳೆದೆ. ಬೇಂದ್ರೆಯವರ ಕವನ ಸಂಕಲನಗಳ ಸಂಕಲನ ಅದು. ಪುಸ್ತಕ ತೆರೆದಾಗ ಮೊದಲು ಸಿಕ್ಕ ಕವಿತೆ "ಬೆಳಗು", ನನ್ನ ಅಚ್ಚುಮೆಚ್ಚಿನ ಕವನಗಳಲ್ಲೊಂದು. "ವಾಹ್" ಅನ್ನಿಸಿತು. ಈ ಕವನ ತನ್ನ ವಿಶಿಷ್ಟ ಗೇಯತೆಯೊಂದಿಗೆ, ಕಾವ್ಯ ಗುಣದೊಂದಿಗೆ ಮತ್ತೆ ಮತ್ತೆ ಮನದಲ್ಲಿ ರಿಂಗಣಗೊಳ್ಳುತ್ತದೆ. ಬೆಳಗು ತರುವ ಚೈತನ್ಯದ ಸಾಂಕ್ರಾಮಿಕತೆ, ಅದು ತಾನೇ ತಾನಾಗಿ ಮುಟ್ಟಿದ್ದಕ್ಕೆಲ್ಲಾ ಊಡುವ ಜೀವ, ಅದನ್ನು ಚಿತ್ರಿಸುವ ಪರಿ, ಅನ್ಯಾದೃಶ.


"ರತ್ನದ ರಸದಾ ಕಾರಂಜೀಯೂ ಪುಟಪುಟನೇ ಪುಟಿದು ತಾನೆ ಪುಟಪುಟನೇ ಪುಟಿದು ಮಘಮಘಿಸುವಾ ಮುಗಿದ ಮೊಗ್ಗೀ ಪಟಪಟನೇ ಒಡೆದು ತಾನೇ ಪಟಪಟನೇ ಒಡೆದು" ಎನ್ನುವಲ್ಲಿ ರತ್ನದ ರಸದ ಕಾರಂಜಿ ಪುಟಪುಟನೆ ಪುಟಿದಾಗ, ಮುಗಿದ ಮೊಗ್ಗು ತಾನಾಗೇ ಒಡೆಯುವುದು. ಕಾವ್ಯದ ಸೌಂದರ್ಯದೊಡನೆ ಇಲ್ಲಿ ಮತ್ತೆ ಮತ್ತೆ ಅನುರಣನಗೊಳ್ಳುವ ಸಾಲುಗಳು, ಅದಕ್ಕೆ ತಕ್ಕಂತೆ ಮೇಳದಂತೆ ಬರುವ ಪ್ರಾಸಗಳು ಅದಕ್ಕೊಂದು ವಿಚಿತ್ರ ಗೇಯತೆ ತಂದುಕೊಡುತ್ತದೆ. ಹಾಗೆಯೇ ಮತ್ತೊಂದು ಸಾಲು - "ತಂಗಾಳೀಯಾ ಕೈಯೊಳಗಿರಿಸೀ ಎಸಳಿನಾ ಚವರಿ ಹೂವಿನ ಎಸಳೀನಾ ಚವರಿ, ಹಾರಿಸಿಬಿಟ್ಟರು ತುಂಬಿಯ ದಂಡು ಮೈಯೆಲ್ಲಾ ಸವರಿ ಗಂಧಾ ಮೈಯೆಲ್ಲಾ ಸವರಿ" - ಎಸಳಿನ ಚವರಿ ಮತ್ತೆ "ಹೂವಿನ ಎಸಳಿನ ಚವರಿ" ಎಂದು ಅನುರಣನಗೊಳ್ಳುವ ಮೂಲಕ ಎಸಳಿನ ಚವರಿಗೆ ಹೊಸ ಅರ್ಥ ಕೊಡುತ್ತದೆ. ಚವರಿಯ ಕೆಲಸವೇ ತಂಗಾಳಿ ಬೀಸುವುದು. ಮತ್ತೆ ತಂಗಾಳಿಯೇ ಚವರಿ ಹಿಡಿದು ನಿಂತರೆ? ಅದಕ್ಕೆ ಅನುವಾದವಾಗಿ ಬರುವ ಮುಂದಿನ ಸಾಲು ನೋಡಿ, "ಹಾರಿಸಿಬಿಟ್ಟರು ತುಂಬಿಯ ದಂಡು, ಮೈಯೆಲ್ಲಾ ಸವರಿ.. ಗಂಧಾ ಮೈಯೆಲ್ಲಾ ಸವರಿ". ಹೂವಿಗೂ ದುಂಬಿಗೂ ಇರುವ ಸಂಬಂಧ ಸರ್ವ ಸಾಮಾನ್ಯ. ಹೂವಿನೆಸಳಿನ ಚವರಿ ಬಂದಾಗ ದುಂಬಿಯ ಪ್ರಸ್ತಾಪ ಸಹಜವೇ, ಆದರೆ ಅದನ್ನು ಸುಮ್ಮನೇ ಹಾರಿಸಿ ಬಿಡಲಿಲ್ಲ "ಹಾರಿಸಿಬಿಟ್ಟರು... ಮೈಯೆಲ್ಲಾ ಸವರಿ" ಅನ್ನುವಾಗಿನ ಆಪ್ಯಾಯತೆ, "ಗಂಧಾ ಮೈಯೆಲ್ಲಾ ಸವರಿ" ಎಂದು ಅನುರಣನಗೊಂಡಾಗ, ಹೂವು, ದುಂಬಿ, ಗಂಧಗಳ ಮಧುರ ಸಂಬಂಧ ಸುಂದರವಾಗಿ ಮೈದಳೆಯುತ್ತದೆ.


ಕವನವನ್ನು ಮೆಚ್ಚುತ್ತಾ ಇರಬೇಕಾದರೆ, ಮೂರು ವರ್ಷದ ರಾಘವಾಂಕ "ಅಣ್ಣಾ" ಎಂದು ಕರೆದಿದ್ದು ಕೇಳಿಸಿತು. ತಲೆಯೆತ್ತಿ ನೋಡಿದೆ. ಕಂಪ್ಯೂಟರಿನಲ್ಲಿ ಅದಾವುದೋ ಭಾವಗೀತೆ ಸಣ್ಣಗೆ ಗುಯ್ ಗುಡುತ್ತಿತ್ತು. ಟೀವಿ ಬಡಬಡಿಸುತ್ತಿತ್ತು, ನೋಡುವರಾರೂ ಇಲ್ಲದೆ. ರಾಘವಾಂಕ ಮಾಡಲು ಚೇಷ್ಟೆಯೇನೂ ಹೊಳೆಯದೆ ಅದಾವುದೋ ಪುಸ್ತಕದ ಮೇಲೆ ಗೀಚುತ್ತಾ ಮಂಕಾಗಿ ಕುಳಿತಿದ್ದ. ಅವನು ಕೆಲವೊಮ್ಮೆ ಬೈಕಿನಂತೆ, ಕೆಲವೊಮ್ಮೆ ಕುದುರೆಯಂತೆ ಬಳಸುವ ದೊಡ್ಡ ನಾಯಿಯ ಬೊಂಬೆ ನಿರ್ಲಕ್ಷ್ಯಕ್ಕೊಳಗಾಗಿ ಅಲ್ಲೊಂದು ಕಡೆ ಬಿದ್ದಿತ್ತು. ಸಾಮಾನ್ಯವಾಗಿ ಸುಮ್ಮನೆ ಕುಳಿತಿರುವ ಜೀವವಲ್ಲ ರಾಘವಾಂಕ. ಏನಾದರೊಂದು ಮಾಡುತ್ತಿರಬೇಕು - ಗೋಡೆಯ ಮೇಲೆ ಗೀಚುವುದೋ, ರೇಡಿಯೋ-ಗೀಡಿಯೋ ಬಿಚ್ಚಿ "ರಿಪೇರಿ" ಮಾಡುವುದೋ, ಚತ್ತಿನ ಮೇಲೆ ಕುಳಿತ ದೊಡ್ಡ ಹಲ್ಲಿಗೆ ಕೂಗುಹಾಕಿ ಓಡಿಸಲು ಪ್ರಯತ್ನಿಸುವುದೋ, ಏನಾದರೊಂದು. ನೀರಾಟ ಅವನ ಅತಿ ಇಷ್ಟವಾದ ಕ್ರೀಡೆಗಳಲ್ಲೊಂದು. ಆದರೆ "ಮಗುವಿಗೆ ಶೀತ ಆಗಬಹುದೆಂಬ" ಕಾರಣದಿಂದ ಈ ಕ್ರೀಡೆಯಮೇಲೆ ಕಟ್ಟುನಿಟ್ಟಿನ ನಿಷೇಧವಿತ್ತು. ನಿಷೇಧಿತವಾಗಿದ್ದು ಇದೊಂದೇ ಅಲ್ಲ, ಟೆರೇಸಿನ ಮೇಲೆ ಹೋಗುವುದು, ಒಬ್ಬನೇ ಬಚ್ಚಲ ಮನೆಗೆ ಹೋಗುವುದು, ಗೇಟಿನ ಬಳಿ ಆಡುವುದು, ಮಣ್ಣು ಮುಟ್ಟುವುದು, ಬಿಸಿಲಲ್ಲಿ ಹೋಗುವುದು, ಪುಸ್ತಕ-ಪೆನ್ನು ಮುಟ್ಟುವುದು, ಹೀಗೆ ಅವನನ್ನು ಕಟ್ಟಿ ಹಾಕಿದ್ದ ಪಟ್ಟಿ ಸಾಕಷ್ಟು ದೊಡ್ಡದೇ ಇದೆ. ಆದರೆ ಅವನೋ, "ದೇವರಂತೆ ಬಂದು ಠಾವಿಲಿ ಕೂಡ"ಲು ಒಲ್ಲದ ಹುಲು ಮಾನವ ಶಿಶು. ನಾನು ಮನೆಯಲ್ಲಿದ್ದರೆ ಈ ಪಟ್ಟಿಯ ಕಟ್ಟು ಸ್ವಲ್ಪ ಸಡಿಲಗೊಳ್ಳುತ್ತದೆ. ಹಾಗೆ ದೊರಕುವ ಸ್ವಾತಂತ್ರ್ಯಕ್ಕಾಗಿ ಅವ ನನಗೋಸ್ಕರ ಪ್ರತಿ ವಾರ ಕಾದಿರುತ್ತಾನೆ.

"ಅಣ್ಣಾ" ಎಂದು ಕರೆದಾಗೊಮ್ಮೆ ತಲೆಯೆತ್ತಿ ಮಗನ ಮುಖ ನೊಡಿದೆ. ಅನ್ಯಮನಸ್ಕನಾಗಿ ನನ್ನದೊಂದು ಪುಸ್ತಕದ ಮೇಲೆ ಗೀಚುತ್ತಾ ಕುಳಿತಿದ್ದ. ನಾನು ಪುಸ್ತಕ ಹಿಡಿದು ಕುಳಿತಿದ್ದಕ್ಕೆ ಅಸಮಾಧಾನ ಮುಖದ ಮೇಲೆ ಆಳವಾಗಿ ಕೊರೆದಿಟ್ಟಂತಿತ್ತು. ಮತ್ತೆ ತನ್ನ ಬಾಲಭಾಷೆಯಲ್ಲಿ ಹೇಳಿದ "ಅಣ್ಣಾ, ಆ ಪುಸ್ತಕ ಚೆನ್ನಾಗಿಲ್ಲ, ಮುಚ್ಚಿಡು. ಕಂಪ್ಯೂಟರು ಆರಿಸು... ಬಾ ಇಲ್ಲಿ". ಪುಸ್ತಕ ಪಕ್ಕಕ್ಕಿಟ್ಟು ಎದ್ದು ಹತ್ತಿರ ಹೋದೆ. ಅವನು ಗೀಚುತ್ತಿದ್ದ ಪುಸ್ತಕ ನನ್ನ Financial Management ಪುಸ್ತಕ! ಓದಲು ಬರದ ಮಗು, ಬರೆಯುತ್ತಿತ್ತು. ಬೈಯಲು ಮನಸ್ಸು ಬರಲಿಲ್ಲ. ಪೆನ್ನನ್ನು ಕಿತ್ತುಕೊಂಡು ಮಗನನ್ನು ಹತ್ತಿರ ಸೆಳೆದು ಹಗುರವಾಗಿ ಮುದ್ದಿಸಿದೆ. ಪೆನ್ನು ಕಿತ್ತುಕೊಂಡದ್ದಕ್ಕೆ ಪ್ರತಿಭಟನೆಯೇನೂ ವ್ಯಕ್ತವಾಗಲಿಲ್ಲ. ತನ್ನ ಬಾಲಭಾಷೆಯಲ್ಲಿ ಮತ್ತೆ ಹೇಳಿತು ಮಗು "ಅಣ್ಣಾ, ಕಂಪ್ಯುಟರ್ ಮಾಡಿದ್ದು ಸಾಕು, ಆರಿಸಿಬಿಡು, ಇಲ್ಲಿ ಕೂತುಕೋ ಬಾ" ಹಾಗೇ ಮಗುವನ್ನು ಅಪ್ಪಿಕೊಂಡು ಚಿಂತಿಸಿದೆ. ಬೆಳಗಿನಿಂದ ನಾನು ಕಾಲ ಕಳೆದಿದ್ದು ಕಾಗದ ಹೂಗಳ ನಡುವೆ ಅಲ್ಲವೇ! ಕ್ಷಣ ಸುಮ್ಮನಾದೆ.


ಮೇಲೆ ನೀರಿನ ತೊಟ್ಟಿ ಕೊಳೆಯಾಗಿತ್ತು, ನಲ್ಲಿಯಲ್ಲಿ ಕೊಳೆನೀರು ಬರುತ್ತಿತ್ತು. ಕ್ಲೀನ್ ಮಾಡಬೇಕು. ಇಂಥ ಕೆಲಸವೆಲ್ಲಾ ಚಿಕ್ಕಂದಿನಿಂದ ನನ್ನದೇ. ಈಗ ನನ್ನ ಮಡಿಲಲ್ಲಿ ಕುಳಿತು ಮುದ್ದುಗರೆಯುತ್ತಿದ್ದ ರಾಘವಾಂಕನಿಗೆ ಹೇಳಿದೆ "ಮೇಲೆ ಟ್ಯಾಂಕ್ ಕ್ಲೀನ್ ಮಾಡೋಣ?" ಅಷ್ಟು ಹೇಳಿದ್ದೇ ತಡ, ಅದೆಲ್ಲಿತ್ತೋ ಉತ್ಸಾಹ, ದುಡುದುಡು ಓಡಿಹೋದ, ಒಂದು ಪುಟ್ಟ ಬಕೆಟ್ಟು, ಮಗ್ಗು ಮತ್ತೊಂದು ದೊಡ್ಡ ಬಕೆಟ್ ತಂದ. ತೊಟ್ಟಿ ಕ್ಲೀನ್ ಮಾಡುವ ಕ್ರಮ ಅವನಿಗೆ ಸಂಪೂರ್ಣ ಗೊತ್ತು. ಕೆಳಗೆ ನೆಲ್ಲಿಯಲ್ಲಿ ನೀರು ಬಿಟ್ಟು ಟ್ಯಾಂಕ್ ಖಾಲಿ ಮಾಡಬೇಕು. ಟ್ಯಾಂಕಿನ ನೀರು ತಳಮಟ್ಟ ಮುಟ್ಟಿದ ಮೇಲೆ ಟೆರೇಸಿನ ಮೇಲೆ ಹೋಗಿ ನಾನು ಟ್ಯಾಂಕಿನ ಕಟ್ಟೆಯ ಮೇಲೆ ಹತ್ತಬೇಕು; ದೊಡ್ಡ ಬಕೆಟ್ಟನ್ನು ಟ್ಯಾಂಕಿನ ಕಟ್ಟೆಯ ಕೆಳಗೆ ನೆಲದ ಮೇಲಿಡಬೇಕು; ಟ್ಯಾಂಕಿನ ತಳ ನನ್ನ ಕೈಗೆ ನಿಲುಕದ್ದರಿಂದ ಯಾರಾದರೊಬ್ಬರು ಅದರ ಒಳಗೆ ಇಳಿದು ಅಲ್ಲಿ ಉಳಿದ ನೀರು ಖಾಲಿ ಮಾಡಬೇಕು. ಅದಕ್ಕೆ ಎರಡಡಿ ಉದ್ದದ ರಾಘವಾಂಕನಲ್ಲದೆ ಇನ್ನಾರಿಗೆ ಸಾಧ್ಯ! ಅದು ಅವನ ಹಿಗ್ಗು. ಕ್ಲೀನ್ ಮಾಡುವ ಪರಿಕರಗಳನ್ನೆಲ್ಲಾ ಹೊತ್ತು ತಂದು, ಎಲ್ಲರಬಳಿಯೂ ಒಮ್ಮೆ ಹೋಗಿ ಹೇಳಿಕೊಂಡು ಬಂದ. ಅವನ ಅಮ್ಮನ ಬಳಿ ಹೋಗಿ "ಅಮ್ಮಾ, ಈಗ ಅಣ್ಣ ನನಗೆ ಟ್ಯಾಂಕ್ ಕ್ಲೀನ್ ಮಾಡಲು ಹೇಳಿದೆ. ನೀನು ನನ್ನ ಬಯ್ಯಕೂಡದು" ಎಂದು ತಾಕೀತಿನ ರೂಪದ ಅಪ್ಪಣೆ ಬೇಡಿದ್ದೂ ಆಯಿತು; ಅವಳು "ಸರಿ, ಅಪ್ಪ ಮಗನಿಗೆ ಇನ್ನೇನು ಕೆಲಸ, ಉರಿಬಿಸಿಲು, ಮಗು ನೀರಾಡಿ ಶೀತ ಬಂದರೆ ಡಾಕ್ಟರ ಬಳಿ ಹೋಗಲು ನಾನು ಗಟ್ಟಿಯಾಗಿದ್ದೀನಲ್ಲ" ಎಂದು ಆಕ್ಷೇಪಣಾರೂಪದ ಅನುಮತಿಯನ್ನು ನೀಡಿದ್ದೂ ಆಯಿತು. ನೀರಾಟದ, ಕ್ಷಮಿಸಿ, ಕ್ಲೀನ್ ಮಾಡುವ ಪರಿಕರಗಳನ್ನು ಹೊತ್ತು ನಾವಿಬ್ಬರೂ ಮೇಲೆ ನಡೆದೆವು.

ಕೆಳಗೆ ನೆಲ್ಲಿ ಬಿಟ್ಟಿದ್ದರಿಂದ ಟ್ಯಾಂಕಿನ ನೀರು ತಳ ಮುಟ್ಟಿತ್ತು. ಇನ್ನಷ್ಟು ನೀರನ್ನು ಮೊಗೆದು ಈಚೆ ಸುರಿಯಬೇಕಿತ್ತು. ಮೇಲೆ ಬಿಸಿಲಿಗೆ ಟೆರೇಸು ಕಾದಿತ್ತು. ನಾನು ನೀರು ಮೊಗೆದು ಕೆಳಗಿದ್ದ ಬಕೀಟಿಗೆ ಸುರಿದರೆ, ರಾಘವಾಂಕ ಮತ್ತೊಂದು ಮಗ್ಗಿನಿಂದ ಅದನ್ನು ಮೊಗೆದು ಟೆರೇಸಿನ ಮೇಲೆ ಸುರಿಯುವುದು ವ್ಯವಸ್ಥೆ. ಆ ಹಿಗ್ಗನ್ನು ಮೊಗೆಯಲು ಅವನಾಗಲೇ ಉತ್ಸುಕನಾಗಿದ್ದ. ಹಿಗ್ಗು ಮೊಗದಲ್ಲಿ ಕುಣಿಯುತ್ತಿತ್ತು. ನಾನು ಮೇಲಿನಿಂದ ನೀರನ್ನು ಸುರಿಯಲು ಶುರು ಮಾಡಿದೆ. ಬಕೆಟ್ಟು ತುಂಬುವತನಕ ಕಾಯುವ ಮಾತೇ ಇಲ್ಲ. ಮಗ್ಗಿಗೆ ಸಿಕ್ಕಷ್ಟು ನೀರು ಮೊಗೆದು ಸಿಕ್ಕ ಸಿಕ್ಕಂತೆ ಎರಚತೊಡಗಿದ. ಪುಟ್ಟ ಮಗು ಇಷ್ಟಿಷ್ಟೇ ನೀರು ಎರಚಾಡುತ್ತಾ ಇಡೀ ಟೆರೇಸಿನ ತುಂಬಾ ಕುಣಿಯುತ್ತಿದ್ದರೆ, ಮೇಲಿನ ಸುಡುಬಿಸಿಲಿಗೂ ಅದರ ಲಯ ದಕ್ಕಿತ್ತು. ಮೋಡ ನೆರಳು ಬೆಳಕಿನಾಟ ನಡೆಸಿತ್ತು. ಮಕ್ಕಳನ್ನು ಬಿಸಿಲು ಸುಡುವುದುಂಟೇ? ಶೀತ ಮುಟ್ಟುವುದುಂಟೇ? ಇವಳಿಗೆಲ್ಲೋ ಭ್ರಾಂತು. ಮೇಲಿನ ಗದ್ದಲ ಕೇಳಿ ನನ್ನನ್ನು ಬೈಯಲೆಂದು ಮೇಲೆ ಬಂದ ಮಡದಿ, ಕುಣಿಯುತ್ತಿದ್ದ ಮಗನ ಚೆಲುವಿಗೆ ಮನಸೋತು ಕ್ಷಣ ನಿಂತು ಹಿಂದಿರುಗಿದಳು. ಅಲ್ಲೆಲ್ಲೋ ಏನೋ ಓದುತ್ತಿದ್ದ ನನ್ನ ತಮ್ಮ ಮೇಲೆ ಬಂದ. ಚಿಕ್ಕಪ್ಪನನ್ನು ನೋಡಿದ ಮಗುವಿಗೆ ಮತ್ತೂ ಉತ್ಸಾಹ. ಈ ಉತ್ಸಾಹದ ಭರದಲ್ಲಿ ನಾನು ಮೇಲಿನಿಂದ ಸುರಿಯುತ್ತಿದ್ದ ನೀರಿಗೆ ತಲೆ ಕೊಟ್ಟ. ತಲೆಯೆಲ್ಲಾ ತೊಯ್ದುಹೋಯ್ತು. ಒಂದು ಕ್ಷಣವಷ್ಟೇ ಚಕಿತನಾಗಿ ನಿಂತಿದ್ದು. ಮರುಕ್ಷಣ ಹಿಗ್ಗು ಕಿತ್ತು ಹರಿಯಿತು. ಸುಡುಬಿಸಿಲಿನಲ್ಲಿ, ಹಾಕಿಕೊಂಡಿದ್ದ ಬಟ್ಟೆ ಸಮೇತ ಅನಾಮತ್ತು ನೆನೆದಿತ್ತು ಮಗು. ಮುಂದಿನ ಒಂದು ಮಗ್ಗು ನೀರನ್ನು ಅವ ನೆಲಕ್ಕೆ ಸುರಿಯಲೇ ಇಲ್ಲ. ಸೀದಾ ತಲೆಯಮೇಲೆ ಸುರಿದುಕೊಂಡದ್ದೇ! ಆ ಕ್ಷಣಕ್ಕೆ ಅವನ ಮುಖ ನೋಡಬೇಕಿತ್ತು. ನೂರು ಭಾವದ ಮೆರವಣಿಗೆ, ನೀರಿನ ಕಟ್ಟಳೆ ಮೀರಿದ್ದೋ, ಅನಿರೀಕ್ಷಿತ ಸ್ನಾನವೋ, ಉಟ್ಟಬಟ್ಟೆ ಪೂರಾ ನೆಂದಿದ್ದೋ, ನೂರು ಬೆಳಕಿನ ಸಂತೆ ಅಲ್ಲಿತ್ತು. ಇಷ್ಟು ನೆನೆದ ಮೇಲೆ ಇನ್ನೇನು ಎಂದು ಇಡೀ ಬಕೆಟ್ಟಿನಲ್ಲಿದ್ದ ನೀರನ್ನು ತೆಗೆದು ಅನಾಮತ್ತಾಗಿ ಮೇಲೆ ಸುರಿದುಕೊಂಡು ದಬದಬನೆ ಕುಣಿಯಲಾರಂಭಿಸಿದ. ವಿಚಿತ್ರ ಉನ್ಮಾದ ಮುಖದಲ್ಲಿ ಕುಣಿಯುತ್ತಿತ್ತು. ಅವನ ಕಾಲಿನ ಹುಚ್ಚು ಲಯಕ್ಕೆ ಸಿಕ್ಕಿ ಟೆರೇಸು ಪೂರಾ ನರ್ತಿಸುತ್ತಿತ್ತು. ಆ ಕ್ಷಣಕ್ಕೆ ಆ ಮೊಗದಲ್ಲಿ ಮೂಡಿದ ಹಿಗ್ಗು, ಚೊಂಬು ನೀರಿನ ಕಿಂಚಿತ್ತಿನಿಂದ ಪಡೆದ ಧನ್ಯತೆಯ ಮಹತ್ತು, ನೋಡಿಯೇ ಅನುಭವಿಸಬೇಕಾದ್ದು. ಕೆಳಗೆಲ್ಲೋ ಕಾವ್ಯದ ಪುಸ್ತಕದಲ್ಲಿ ಮಲಗಿದ್ದ ನಿರ್ಜೀವ ಸಾಲುಗಳು ಜೀವ ಪಡೆದು ಕಣ್ಣ ಮುಂದೆ ನಿಂತಿತ್ತು.

ಕಂಡಿತು ಕಣ್ಣು ಸವಿದಿತು ನಾಲಗೆ ಪಡೆದಿತೀ ದೇಹ
ಸ್ಪರ್ಶಾ ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು ತನ್ಮಯವೀ ಗೇಹ
ದೇವರದೀ ಮನಸಿನ ಗೇಹಾ

ಅಲ್ಲವೇ? ಮೈ-ಕೈ ಕಟ್ಟಿ ಕಿಟಕಿ-ಬಾಗಿಲು ಮುಚ್ಚಿ ಮಾಡುವ ಅದಾವ ಧ್ಯಾನ, ಅದಾವ ಯೋಗ ನೀರಾಟವಾಡಿದ ಈ ಪೋರನ ಆನಂದ ತರಬಲ್ಲುದು? ಚೈತನ್ಯದ ಪರಮ ಸುಖ ಮೈಯ ಮೂಲಕವೇ ಅಲ್ಲವೇ ಮನವನ್ನು ಮುಟ್ಟುವುದು. ಅದು ರಾಘವಾಂಕನ ನೀರಾಟವಿರಬಹುದು, "ಮಘಮಘಿಸುವ ಹೂವಿನ ಮೊಗ್ಗೀ" ಇರಬಹುದು, ಬೆಳಗಿನ ಚೈತನ್ಯಪೂರ್ಣ ಆನಂದವಿರಬಹುದು, ಅದು ಮೈಯ ಗೇಹದ ಮೂಲಕವೇ ಅಲ್ಲವೇ ಸುಳಿದು ಮನಸಿನ ದೇವರನ್ನು ಮುಟ್ಟುವುದು. ಇಂದ್ರಿಯವಾದದ ಕಾವ್ಯಮಯ ಪ್ರಸ್ತುತಿ ಇದೇ ಅಲ್ಲವೇ?

ಕವಿಗೆ ಅದೊಂದು ಒಳಗಣ್ಣಿದೆ, ನಿಜ, ಆದರೆ ಅವನು ಹೊರಗಣ್ಣನ್ನು ಮುಚ್ಚಿ ಕೂಡುವುದಿಲ್ಲ. ಹೊರಗಣ್ಣಿಲ್ಲದೇ ಒಳಗಣ್ಣಿಲ್ಲ. ಅವನಿಗೆ ಪ್ರಪಂಚ ಇಂದ್ರಿಯಗಳ ಮೂಲಕವೇ ಒಳಗಿಳಿಯಬೇಕು; ಅದು ಕೊಡುವ ಸಮಸ್ತ ಅನುಭವಗಳೂ ಅವನಿಗೆ ಬೇಕು, ಬೇರೆಯವರಿಗಿಂತ ಹೆಚ್ಚು ಬೇಕು, ಯಾಕೆಂದರೆ, ಬೇರೆಯವರು ಅದನ್ನು ಸುಮ್ಮನೇ ಅನುಭವಿಸಿ ಮರೆಯುತ್ತಾರೆ, ಆದರೆ ಕವಿ ಹಾಗಲ್ಲ, ಪಡೆದದ್ದನ್ನು ನೂರ್ಮಡಿ ಅನುಭಿಸುತ್ತಾನೆ, ಅನುಭವಿಸಿ ಹಾಡುತ್ತಾನೆ, ಹಾಡಿ ತನ್ನ ಅನುಭವನ್ನು ಕಣ್ಣಿಗೆ ಕಟ್ಟುವಂತೆ, ಮನ ಮುಟ್ಟುವಂತೆ ಹಂಚುತ್ತಾನೆ.

ಅದಕ್ಕೇ, ಹೆರರಿಗೆ ಇದು ಬರೀ ಬೆಳಗಾದರೆ, ಕವಿಗೆ ಅದು ಬರಿ ಬೆಳಗಲ್ಲ... ಅಮೂರ್ತವಾದ ಶಾಂತಿರಸದ ಮೂರ್ತರೂಪ.

ಅರಿಯದು ಅಳವು ತಿಳಿಯದು ಮನವುಕಾಣಾದೋ ಬಣ್ಣಾ
ಕಣ್ಣಿಗೆ ಕಾಣಾದೋ ಬಣ್ಣಾ
ಶಾಂತಿರಸವೇ ಪ್ರೀತಿಯಿಂದಾಮೈದೊರೀತಣ್ಣಾ
ಇದು ಬರಿ ಬೆಳಗಲ್ಲೋ ಅಣ್ಣಾ..

ಸ್ವಭಾವತಃ ಅಮೂರ್ತವಾದ ಶಾಂತಿರಸ ಹೀಗೆ ಪ್ರೀತಿಯಿಂದ ಮುಂಜಾವಿನ ರೂಪದಲ್ಲಿ ಮೈದೋರದಿದ್ದರೆ, "ಅರಿಯದು ಅಳವು ತಿಳಿಯದು ಮನವು ಕಾಣಾದೋ ಬಣ್ಣಾ, ಕಣ್ಣಿಗೆ ಕಾಣಾದೋ ಬಣ್ಣಾ" ಎಂದು ಮೂರ್ತಕ್ಕೇ ಒಗ್ಗಿಕೊಂಡ ಈ ಮನಸ್ಸಿಗೆ ತನ್ನ ಸುತ್ತಮುತ್ತಲ ಈ ಚಿಲಿಪಿಲಿಯಲ್ಲೂ ಅಂತರ್ಗತವಾದ ಶಾಂತಿ ಅರಿವಿಗೆ ಬರುವುದಾದರೂ ಹೇಗೆ.

ಮೂರ್ತದಿಂದ ಅಮೂರ್ತದೆಡೆಗೆ, ಹುಚ್ಚು ಉನ್ಮಾದದಿಂದ ಪರಮ ಶಾಂತಿಯೆಡೆಗೆ; ಲೋಕೋತ್ತರದ ಪಯಣಕ್ಕೆ ಹೆಬ್ಬಾಗಿಲು ಲೋಕವೇ ಅಲ್ಲವೇ?