Monday, September 13, 2021

ಆಡುಮಾತಿ'ನಲ್ಲಿ' (ಸಪ್ತಮೀ)ವಿಭಕ್ತಿಪ್ರತ್ಯಯ

ಮಿತ್ರರಾದ ವಸಂತ ಬಂಟಕಲ್ ಅವರು "ಮನೇನಲ್ಲಿ, ಕಾಶೀನಲ್ಲಿ, ಬೀದೀನಲ್ಲಿ" ಎಂದು ಮಾತಾಡುವ ವಿದ್ವಾಂಸರೋರ್ವರ ಅಭ್ಯಾಸದ ಬಗ್ಗೆ ತಮಾಷೆಯಾಗಿ ಹೇಳಿದರು.  ಸ್ವಾರಸ್ಯವಾದ ಗಮನಿಕೆ.  "ಸರ್ವಂ 'ನಲ್ಲಿ'ಮಯಂ ಜಗತ್" ಎನ್ನೋಣವೇ? 🙂 'ನಲ್ಲಿ' ಪ್ರತ್ಯಯ ತಪ್ಪೆಂಬುದರಲ್ಲಿ ಎರಡು ಮಾತಿಲ್ಲ.  ಆದರೆ ಆ ತಮಾಷೆಯ ನೆಪದಲ್ಲಾದರೂ ಆಡುನುಡಿಯಲ್ಲಿ ಅದು ಏಕೆ ಬರುತ್ತದೆ ಎಂಬುದನ್ನು ತಿಳಿದು ನೋಡುವುದು ಕುತೂಹಲಕರವೆನಿಸಿತು.  ಅದಕ್ಕಾಗಿ ಈ ಲೇಖನ (ನೆನಪಿರಲಿ, ಹಳಗನ್ನಡದ ವ್ಯಾಕರಣಸೂತ್ರಗಳಲ್ಲಿ, ಹೊಸಗನ್ನಡದ ವ್ಯಾಕರಣದಲ್ಲಿ, ಶಿಷ್ಟಭಾಷೆಯ ರೂಢಿಯಲ್ಲಿ ಏನಿದೆ ಎನ್ನುವುದಕ್ಕಿಂತ ಆಡುಮಾತಿನಲ್ಲಿ ಅವು ಹೇಗೆ/ಏಕೆ ಹಾಗೆ ಮೈದಳೆದಿವೆ ಎನ್ನುವುದರ ವಿಶ್ಲೇಷಣೆಯೇ ಈ ಬರಹದ ಉದ್ದೇಶ.  ಆದ್ದರಿಂದ ಬಳಕೆಯನ್ನು ವಿವರಿಸುವಾಗ ವ್ಯಾಕರಣದಲ್ಲಿ ಹೇಳಿರದ/ಅಥವಾ ಅದಕ್ಕಿಂತ ಭಿನ್ನವಾದ ವಿವರಗಳು ಇಲ್ಲಿ ಕಾಣಬಹುದು).
 
ಮೊದಲಿಗೆ ಹೊಸಗನ್ನಡದಲ್ಲಿ ನಾವು ಬಳಸುವ ವಿಭಕ್ತಿಪ್ರತ್ಯಯಗಳನ್ನು ನೋಡೋಣ

ಪ್ರಥಮಾ - ಉ
ದ್ವಿತೀಯಾ - ಅನ್ನು
ತೃತೀಯಾ/ಪಂಚಮೀ - ಇಂದ
ಚತುರ್ಥೀ - ಗೆ
ಷಷ್ಠೀ - ಅ
ಸಪ್ತಮೀ - ಅಲ್ಲಿ

ಆದರೆ ಈ ವಿಭಕ್ತಿಪ್ರತ್ಯಯಗಳು ನಾಮಪದಕ್ಕೆ ನೇರವಾಗಿ ಹತ್ತಲಾರವು.  ಉದಾಹರಣೆಗೆ ರಾಮನು ಎಂಬುದನ್ನು ನೋಡಿ.  ರಾಮ (ನಾಮಪದ) + ಉ (ಪ್ರಥಮಾವಿಭಕ್ತಿ) = ರಾಮು ಆಗಬೇಕಲ್ಲವೇ?  ರಾಮನು ಎಂಬ ನಕಾರ ಎಲ್ಲಿಂದ ಬಂತು? (ಇದರ ಹಳಗನ್ನಡರೂಪ ರಾಮನ್ ಮತ್ತು ಹಳಗನ್ನಡದಲ್ಲಿ ಇದಕ್ಕೆ ವಿಭಕ್ತಿಪ್ರತ್ಯಯವಿಲ್ಲ, ಆದ್ದರಿಂದ ಅಲ್ಲಿ ಈ ಸಮಸ್ಯೆ ಬರುವುದಿಲ್ಲ).  ಮೇಲಿನ ಸಮೀಕರಣವನ್ನು ಮರುಬರೆದರೆ ರಾಮ + ನ್ + ಉ ಹೀಗಾಗಿರಬೇಕಲ್ಲವೇ?  ಈ ನಕಾರ ಏಕೆ ಬಂತು?  ಅದೇ ರೀತಿ ಗುಡ್ಡವನ್ನು ಎಂಬುದನ್ನು ಗಮನಿಸಿ.  ಗುಡ್ಡ + ವ್ + ಅನ್ನು = ಗುಡ್ಡವನ್ನು ಆಯಿತು.  ವಕಾರವೊಂದು ಬಂದು ಸೇರಿತು.  ಇದಿಲ್ಲದೇ ಕೇವಲ 'ಅನ್ನು' ವಿಭಕ್ತಿಪ್ರತ್ಯಯ ಸೇರಿಸಿದ್ದರೆ ಗುಡ್ಡನ್ನು ಎಂದಾಗುತ್ತಿತ್ತು.  ಹಾಗೆಯೇ ಮರದಲ್ಲಿ ಎನ್ನುವಲ್ಲಿ ಮರ (ನಾಮಪದ) + ದ + ಅಲ್ಲಿ = ಮರದಲ್ಲಿ.  ಇಲ್ಲಿ ದಕಾರವೊಂದು ಸೇರಿತು.  ಮರ ಮತ್ತು ಅಲ್ಲಿ ಇಷ್ಟನ್ನು ಹಾಗೆಯೇ ಸಂಧಿ ಮಾಡಿದ್ದರೆ ಮರಲ್ಲಿ ಆಗಬೇಕಿತ್ತಷ್ಟೇ?  (ವಾಸ್ತವದಲ್ಲಿ ಇಲ್ಲಿ ಬಂದಿರುವುದು ದ ಎಂಬ ಪೂರ್ಣಾಕ್ಷರವಲ್ಲ, ದ್ ಎಂಬ ಅಕ್ಷರ ಮತ್ತು ಅ ಎಂಬ ಷಷ್ಠೀವಿಭಕ್ತಿ, ಎರಡೂ ಸೇರಿ 'ದ' ಆಗಿರುವುದು.  ನಾವು ಕನ್ನಡದಲ್ಲಿ ವಿಭಕ್ತಿಪ್ರತ್ಯಯಗಳು ಹತ್ತುವ ರೀತಿಯನ್ನು ಗಮನಿಸಿದರೆ, ಪ್ರಥಮಾ, ದ್ವಿತೀಯಾ, ಚತುರ್ಥೀ ಮತ್ತು ಷಷ್ಠೀವಿಭಕ್ತಿಪ್ರತ್ಯಯಗಳು ಸ್ವತಂತ್ರ ವ್ಯವಹಾರವುಳ್ಳವು - ನಾಮಪದಕ್ಕೆ ನೇರವಾಗಿ ಹತ್ತುತ್ತವೆ.  ಆದರೆ ತೃತೀಯಾ/ಪಂಚಮೀ ಮತ್ತು ಸಪ್ತಮೀವಿಭಕ್ತಿಗಳ ಪ್ರತ್ಯಯಗಳು ನಾಮಪದಕ್ಕೆ ನೇರವಾಗಿ ಸೇರುವುದಿಲ್ಲ - ಅವು ಷಷ್ಠೀವಿಭಕ್ತಿಯ ಮೇಲೆ ಬಂದು ಕೂರುವಂಥವು - ನ್+ಅ+ಇಂದ=ನಿಂದ, ದ್+ಅ+ಅಲ್ಲಿ=ದಲ್ಲಿ ಹೀಗೆ, ಇರಲಿ) ನಾಮಪದಕ್ಕೂ ವಿಭಕ್ತಿಪ್ರತ್ಯಯಗಳಿಗೂ ನಡುವೆ ಈ ಹೊಸ ಅಕ್ಷರಗಳು ಏಕೆ ಬರುತ್ತವೆ?  ಏಕೆಂದರೆ ನೇರವಾಗಿ ವಿಭಕ್ತಿಪ್ರತ್ಯಯ ಸೇರಿದರೆ ರಾಮು, ಗುಡ್ಡನ್ನು, ಮರಲ್ಲಿ ಮುಂತಾದ ವಿಕಾರಗಳು ಬರುವುವಷ್ಟೇ?  ಅದನ್ನು ನಿವಾರಿಸುವುದಕ್ಕೋಸ್ಕರವೇ, ನಾಲಿಗೆಗೆ ಆಧಾರವಾಗಿ ಈ ಅಕ್ಷರಗಳು ಬಂದು ಕೂಡಿಕೊಳ್ಳುತ್ತವೆ (ಆಗಮ).  ಹೀಗೆ ಯಾವ ಅಕ್ಷರವು ಆಗಮವಾಗಿ ಬರುತ್ತದೆ ಎನ್ನುವುದು, ಆ ನಾಮಪದ ಯಾವ ಸ್ವರದಿಂದ ಕೊನೆಗೊಳ್ಳುತ್ತದೆ ಮತ್ತು ಅದರ ಲಿಂಗ/ವಚನಗಳೇನು ಎಂಬುದರ ಮೇಲೆ ನಿರ್ಧಾರವಾಗುತ್ತದೆ - ಸಾಮಾನ್ಯವಾಗಿ ದ್/ನ್/ಇನ್/ಳ್/ಅಳ್/ರ್/ಅರ್ ಹೀಗೆ ಹಲವು ಅಕ್ಷರಗಳು ಬಂದು ಸೇರುತ್ತವೆ.  ಇವನ್ನು ಆಗಮ (ಹೊಸದಾಗಿ ಬಂದು ಸೇರಿದ್ದು) ಎನ್ನುತ್ತಾರೆ, 'ಔಪವಿಭಕ್ತಿ'ಗಳೆಂದೂ ಕರೆಯುತ್ತಾರೆ - ದಕಾರಾಗಮ, ನಕಾರಾಗಮ, ಇನಾಗಮ, ಳಕಾರಾಗಮ, ಅಳಾಗಮ, ಅರಾಗಮ ಇತ್ಯಾದಿ.  ಉದಾಹರಣೆಗೆ, ದಾಸನಲ್ಲಿ ಎಂಬ ಸಪ್ತಮೀವಿಭಕ್ತಿರೂಪವನ್ನು ಬಿಡಿಸಿ ಬರೆದರೆ ದಾಸ (ನಾಮಪದ) + (ನ್ (ಆಗಮ) + ಅ (ಷಷ್ಠೀ)) + ಅಲ್ಲಿ (ಸಪ್ತಮೀ) = ದಾಸ + ನ + ಅಲ್ಲಿ = ದಾಸ'ನಲ್ಲಿ'.  ಇಲ್ಲಿ "ನಲ್ಲಿ" ಎಲ್ಲಿಂದ ಬಂದಿತೆಂದು ತಿಳಿಯಿತಲ್ಲ.  ಹೀಗಾಗಿ ನಲ್ಲಿಯ ಮೂಲವಿರುವುದು ಕೊನೆಯಲ್ಲಿ ಬರುವ ಸಪ್ತಮೀವಿಭಕ್ತಿಯಲ್ಲಲ್ಲ, ನಾಮಪದಕ್ಕೆ ಸೇರುವ ಆಗಮಾಕ್ಷರಗಳಲ್ಲಿ

ಈಗ, ಈ ಆಗಮಾಕ್ಷರಗಳು ಹೇಗೆ ಬಂದು ಕೂರುತ್ತವೆ ನೋಡೋಣ - ಮೊದಲೇ ಹೇಳಿದಂತೆ ನಾಮಪದದ ಕೊನೆಯ ಸ್ವರ ಮತ್ತು ನಾಮಪದದ ಲಿಂಗವಚನಗಳೇ ಇದಕ್ಕೆ ಆಧಾರ - ಸಾಮಾನ್ಯವಾಗಿ ಹೀಗೆ:

ನಕಾರಾಗಮ
ಅಕಾರಾಂತ ಪುಲ್ಲಿಂಗ - ರಾಮ + ನ್ + ಅ = ರಾಮನ
ಆಕಾರಾಂತ ಪುಲ್ಲಿಂಗ - ಗಾಮಾ + ನ್ + ಅ = ಗಾಮಾನ
ಊಕಾರಾಂತ ಪುಲ್ಲಿಂಗ - ಬಬ್ಲೂ + ನ್ + ಅ = ಬಬ್ಲೂನ
ಊಕಾರಾಂತ ನಪುಂಸಕ - ಝೂ + ನ್ + ಅ = ಝೂನ
ಓಕಾರಾಂತ ಪುಲ್ಲಿಂಗ - ಮನ್ರೋ + ನ್ + ಅ = ಮನ್ರೋನ
ಓಕಾರಾಂತ ನಪುಂಸಕ - ಎಸ್ಕಿಮೋ + ನ್ + ಅ = ಎಸ್ಕಿಮೋನ

ಇನಾಗಮ
ವ್ಯಂಜನಾಂತ ಸರ್ವಲಿಂಗ - ಕಣ್ + ಇನ್ + ಅ = ಕಣ್ಣಿನ; ಊರ್ + ಇನ್ + ಅ = ಊರಿನ; ಮನಸ್ + ಇನ್ + ಅ = ಮನಸಿನ; ಬಾರ್+ ಇನ್ + ಅ = ಬಾರಿನ
ಉಕಾರಾಂತ ಸರ್ವಲಿಂಗ (ಆಗಮದೊಂದಿಗೆ ಉಕಾರಲೋಪವೂ) - ಓದು + ಇನ್ + ಅ = ಓದಿನ; ಕಾಡು +ಇನ್ + ಅ = ಕಾಡಿನ; ಗುಡ್ಡು + ಇನ್ + ಅ = ಗುಡ್ಡಿನ
ಉಕಾರಾಂತ ಸರ್ವಲಿಂಗ (ಆಗಮಮಾತ್ರ; ಉಕಾರಲೋಪವಿಲ್ಲ) - ಗುರು + ಇನ್ + ಅ = ಗುರುವಿನ; ಪಾರು +ಇನ್ + ಅ = ಪಾರುವಿನ; ಕರು + ಇನ್ + ಅ = ಕರುವಿನ
ಊಕಾರಾಂತ ಸರ್ವಲಿಂಗ (ಆಗಮಮಾತ್ರ; ಉಕಾರಲೋಪವಿಲ್ಲ) - ಹೂ + ಇನ್ + ಅ = ಹೂವಿನ

ಳಕಾರಾಗಮ
ಅಕಾರಾಂತ ಸ್ತ್ರೀಲಿಂಗ - ಸೇವಕ + ಳ್ + ಅ = ಸೇವಕಳ (ಸೇವಿಕಾ/ಸೇವಕಿ ಎಂಬುದು ಸರಿ, ಸೇವಕಶಬ್ದಕ್ಕೇ ಸ್ತ್ರೀಲಿಂಗಪ್ರತ್ಯಯ ಸೇರಿಸಬೇಕಾದರೆ ಇದು)
ಆಕಾರಾಂತ ಸ್ತ್ರೀಲಿಂಗ - ರೀಟಾ + ಳ್ + ಅ = ರೀಟಾಳ
ಊಕಾರಾಂತ ಸ್ತ್ರೀಲಿಂಗ - ಸೋನೂ + ಳ್ + ಅ = ಸೋನೂಳ
ಓಕಾರಾಂತ ಸ್ತ್ರೀಲಿಂಗ - ದನ್ನೋ + ಳ್ + ಅ = ದನ್ನೋಳಲ್ಲಿ

ದಕಾರಾಗಮ
ಅಕಾರಾಂತ ನಪುಂಸಕ - ಮರ + ದ್ + ಅ = ಮರದ
ಆಕಾರಾಂತ ನಪುಂಸಕ - ಪಿzzಆ + ದ್ + ಅ = ಪಿzzಆದ
ಊಕಾರಾಂತ ನಪುಂಸಕ - ಝೂ + ದ್ + ಅ = ಝೂದ
ಓಕಾರಾಂತ ನಪುಂಸಕ - ಎಸ್ಕಿಮೋ + ದ್ + ಅ = ಎಸ್ಕಿಮೋದ

ರಕಾರಾಗಮ
ಅಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಸೇವಕ + ರ್ + ಅ = ಸೇವಕರ

ಅವರ್ ಆಗಮ
ಆಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಗಾಮಾ + ಅವರ್ + ಅ = ಗಾಮಾ ಅವರ; ರೀಟಾ + ಅವರ್ + ಅ = ರೀಟಾ ಅವರ
ಈಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಅಣ್ಣಾಜೀ + ಅವರ್ + ಅ = ಅಣ್ಣಾಜೀ ಅವರ; ಜೋಲೀ + ಅವರ್ + ಅ = ಜೋಲೀ ಅವರ
ಊಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಬಬ್ಲೂ + ಅವರ್ + ಅ = ಬಬ್ಲೂ ಅವರ; ಸೋನೂ + ಅವರ್ + ಅ = ಸೋನೂ ಅವರ
ಓಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಮನ್ರೋ + ಅವರ್ + ಅ = ಮನ್ರೋ ಅವರ; ದನ್ನೋ + ಅವರ್ + ಅ = ದನ್ನೋ ಅವರ

ಅರಾಗಮ
ಇ/ಎಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಹಿರಿ + ಅರ್ + ಅ = ಹಿರಿಯರ

ಅಱಾಗಮ (ಹೊಸಗನ್ನಡದಲ್ಲಿ ಇದೂ ಅರಾಗಮವೇ)
ಉಕಾರಾಂತ ಕೃದಂತ, ಸರ್ವನಾಮ, ಗುಣವಾಚಕ ಅಥವಾ ಸಂಖ್ಯಾವಾಚಕ - ಮಾಡಿದ್ದು + ಅರ್ + ಅ = ಮಾಡಿದ್ದರ; ಅದು + ಅರ್ + ಅ = ಅದರ; ದೊಡ್ಡದು + ಅರ್ + ಅ = ದೊಡ್ಡದರ; ಐದು + ಅರ್ + ಅ = ಐದರ

ಗಳಾಗಮ
ಅಕಾರಾಂತ ನಪುಂಸಕಬಹುವಚನ - ಮರ + ಗಳ್ + ಅ = ಮರಗಳ
ಆಕಾರಾಂತ ನಪುಂಸಕಬಹುವಚನ - ಪಿzzಆ + ಗಳ್ + ಅ = ಪಿzzಆಗಳ
ಇ/ಎಕಾರಾಂತ ಪುಂ/ಸ್ತ್ರೀಲಿಂಗಬಹುವಚನ - ಸಿರಿ + ಗಳ್ + ಅ = ಸಿರಿಗಳ; ದೊರೆ + ಗಳ್ + ಅ = ದೊರೆಗಳ
ಇ/ಎಕಾರಾಂತ ನಪುಂಸಕಲಿಂಗಬಹುವಚನ - ನದಿ + ಗಳ್ + ಅ = ನದಿಗಳ; ತೊರೆ + ಗಳ್ + ಅ = ತೊರೆಗಳ
ಈಕಾರಾಂತ ನಪುಂಸಕಲಿಂಗಬಹುವಚನ - ಸಬ್ಜೀ + ಗಳ್ + ಅ = ಸಬ್ಜೀಗಳ
ಓಕಾರಾಂತ ನಪುಂಸಕಲಿಂಗಬಹುವಚನ - ಎಸ್ಕಿಮೋ + ಗಳ್ + ಅ = ಎಸ್ಕಿಮೋಗಳ

ಯಕಾರಾಗಮ
ಇ/ಎಕಾರಾಂತ ಸರ್ವಲಿಂಗ ಏಕವಚನ - ಹರಿ + ಯ್ + ಅ = ಹರಿಯ;  ದೊರೆ + ಯ್ + ಅ = ದೊರೆಯ; ಲಕ್ಷ್ಮಿ + ಯ್ + ಅ = ಲಕ್ಷ್ಮಿಯ; ವರದೆ + ಯ್ + ಅ = ವರದೆಯ; ನದಿ + ಯ್ + ಅ = ನದಿಯ; ತೊರೆ + ಯ್ + ಅ = ತೊರೆಯ;
ಈಕಾರಾಂತ ಸರ್ವಲಿಂಗ ಏಕವಚನ - ಅಣ್ಣಾಜೀ + ಯ್ + ಅ = ಅಣ್ಣಾಜೀಯ; ಜೋಲೀ + ಯ್ + ಅ = ಜೋಲೀಯ; ಸಬ್ಜೀ + ಯ್ + ಅ = ಸಬ್ಜೀಯ
 
ಮೇಲಿನ ಎಲ್ಲವೂ ಷಷ್ಠೀವಿಭಕ್ತಿರೂಪಗಳು.  ಅದಕ್ಕೇ 'ಅಲ್ಲಿ' ಪ್ರತ್ಯಯ ಸೇರಿಸಿದರೆ ಸಪ್ತಮೀವಿಭಕ್ತಿರೂಪವು ದೊರೆಯುತ್ತದೆ - ರಾಮನಲ್ಲಿ, ಸೇವಕಳಲ್ಲಿ, ಮರದಲ್ಲಿ, ಸೇವಕರಲ್ಲಿ, ಗಾಮಾ ಅವರಲ್ಲಿ, ಹಿರಿಯರಲ್ಲಿ, ಮಾಡಿದ್ದರಲ್ಲಿ, ಮರಗಳಲ್ಲಿ, ಹರಿಯಲ್ಲಿ ಹೀಗೆ.

ಅದು ಸರಿ.  ಸಹಜವಾಗಿ ಮನೆಯಲ್ಲಿ, ಬೀದಿಯಲ್ಲಿ, ಕಾಶಿಯಲ್ಲಿ ಎಂದಿರಬೇಕಾದದ್ದು ಆಡುಮಾತಿನಲ್ಲಿ ಮನೇನಲ್ಲಿ, ಬೀದೀನಲ್ಲಿ, ಕಾಶೀನಲ್ಲಿ ಎಂದೇಕಾಯಿತು ಎಂಬುದಲ್ಲವೇ ಪ್ರಶ್ನೆ?  ಇದು ತಪ್ಪೇನೋ ಹೌದು, ಆದರೆ ಈ ತಪ್ಪು ಬಳಕೆ ಬಂದದ್ದಾದರೂ ಹೇಗೆ?

ಮೇಲೆ ನಕಾರಾಗಮವನ್ನು ಪಡೆದುಕೊಂಡ ಅಕಾರಾಂತಪುಲ್ಲಿಂಗಗಳನ್ನು ನೋಡಿ - ರಾಮ (ನಾಮ) + ನ್ (ಆಗಮ) + ಅ (ಷಷ್ಠೀ) + ಅಲ್ಲಿ (ಸಪ್ತಮೀ) = ರಾಮನಲ್ಲಿ; ಇದೇ ರೀತಿ ಕೃಷ್ಣನಲ್ಲಿ, ಬ್ರಹ್ಮನಲ್ಲಿ ಹೀಗೊಂದು 'ನಲ್ಲಿ'ಯ ಕಂತೆ.  

ಹಾಗೆಯೇ ಇನಾಗಮವನ್ನು ಪಡೆದ ವ್ಯಂಜನಾಂತಗಳನ್ನೂ ಉಕಾರಾಂತಗಳನ್ನೂ ಗಮನಿಸಿ - ಕಣ್ಣಿನಲ್ಲಿ, ಕಾಲಿನಲ್ಲಿ, ಊರಿನಲ್ಲಿ, ಮನಸಿನಲ್ಲಿ, ಬಾರಿನಲ್ಲಿ, ಕಾರಿನಲ್ಲಿ, ಓದಿನಲ್ಲಿ, ಕಾಡಿನಲ್ಲಿ, ಗುಡ್ಡಿನಲ್ಲಿ - ಇದು ಮತ್ತೊಂದು 'ನಲ್ಲಿ'ಯ ಕಂತೆ.  ಇವಂತೂ ಬಳಕೆಯಲ್ಲಿ ಮತ್ತಷ್ಟು ಸವೆದು ಕಣ್ನಲ್ಲಿ, ಕಾಲ್ನಲ್ಲಿ, ಊರ್ನಲ್ಲಿ, ಮನಸ್ನಲ್ಲಿ, ಬಾರ್ನಲ್ಲಿ, ಕಾರ್ನಲ್ಲಿ, ಓದ್ನಲ್ಲಿ, ಕಾಡ್ನಲ್ಲಿ, ಗುಡ್ನಲ್ಲಿ ಎಂದಾಗಿ, 'ನಲ್ಲಿ'ಯ ಭ್ರಮೆ ಮತ್ತಷ್ಟು ಹೆಚ್ಚಾಗುತ್ತದೆ.  ಇವಲ್ಲದೇ, ಇನಾಗಮವನ್ನು ಪಡೆದು, ನಾಮಪದದ ಉಕಾರವನ್ನೂ ಉಳಿಸಿಕೊಂಡ ಉಕಾರಾಂತಗಳನ್ನೂ ನೋಡಬಹುದು - ಗುರುವಿನಲ್ಲಿ, ಪಾರುವಿನಲ್ಲಿ, ಕರುವಿನಲ್ಲಿ.  ಇಲ್ಲೆಲ್ಲಾ ಸಂಧಿಯಾದಾಗ ಉಂಟಾದ 'ವಿ' ಅಕ್ಷರ ಆಡುವ ನಾಲಿಗೆಗೆ ತೊಡಕು.  ಆದ್ದರಿಂದ ಅದು ಬಳಕೆಯಲ್ಲಿ ಸವೆದು ಸವೆದು ಹಿಂದಿನ ಉಕಾರದೊಡನೆ ಉಕಾರವಾಗಿ ಬೆರೆತು ಕಾಣೆಯಾಗಿಬಿಡುತ್ತದೆ.  ಗುರುವಿನಲ್ಲಿ > ಗುರುವ್ ನಲ್ಲಿ > ಗುರುವ್ನಲ್ಲಿ > ಗುರೂನಲ್ಲಿ ಹೀಗೆ.  ಹೀಗಾಗಿ ಗುರೂನಲ್ಲಿ, ಪಾರೂನಲ್ಲಿ, ಕರೂನಲ್ಲಿ ಇಂತಹ (ತಪ್ಪು) ರೂಪಗಳು ಬಳಕೆಯಲ್ಲಿ ನಿಲ್ಲುತ್ತವೆ (ಕೆಲವರು "ಪಾರೂನಲ್ಲಿ" ಎಂಬಲ್ಲಿ ನಕಾರವನ್ನು ಪುಲ್ಲಿಂಗವಾಚಿಯೆಂದು ಭ್ರಮಿಸಿ, ಸ್ತ್ರೀಲಿಂಗಕ್ಕೆ ಅದೇಕೆಂದು ಚಿಂತಿಸಿ ಅದನ್ನೂ ತೆಗೆದು ನಕಾರದ ಜಾಗಕ್ಕೆ ಳಕಾರ ಹಾಕುವುದೂ ಉಂಟು ಪಾರೂನಲ್ಲಿ > ಪಾರೂಳಲ್ಲಿ ಆಗುವುದು ಹೀಗೆ. ಇರಲಿ).  ಕನ್ನಡದಲ್ಲಿ ಉಕಾರಾಂತ/ವ್ಯಂಜನಾಂತಶಬ್ದಗಳ ಬಳಕೆ ಬಹಳ ಹೆಚ್ಚು.  ಆದ್ದರಿಂದ ಈ ಬಗೆಯ ಸವೆದ 'ನಲ್ಲಿ'ಗಳ' ಬಳಕೆಯೂ ಬಹಳ ಹೆಚ್ಚೇ :) - ಕಾರ್ನಲ್ಲಿ, ಬಸ್ನಲ್ಲಿ, ಊರ್ನಲ್ಲಿ, ಬಿಗಿನಿಂಗ್ನಲ್ಲಿ, ಪಾರೂನಲ್ಲಿ, ಮಗೂನಲ್ಲಿ, ಹಸೂನಲ್ಲಿ, ಕರೂನಲ್ಲಿ, ಶುರೂನಲ್ಲಿ ಹೀಗೆ.  'ನಲ್ಲಿ'ಯೆಂಬುದು ಈಗ ಸರ್ವೇಸಾಮಾನ್ಯವಾಯಿತಲ್ಲ.

ಇನ್ನು ಈ ಭಾವನೆಗೆ ಪುಷ್ಟಿ ಕೊಡುವಂತೆ ಮೇಲೆ ನಾವು ನೋಡಿದ ಆಕಾರಾಂತ, ಊಕಾರಾಂತ, ಓಕಾರಾಂತಪದಗಳ ಪ್ರತ್ಯಯವನ್ನು ಮತ್ತೆ ಗಮನಿಸಿ - ಅವೆಲ್ಲಾ ನಮಗೆ ಅಪರಿಚಿತ ಪದಗಳೇ - ಗಾಮಾನಲ್ಲಿ, ಬಬ್ಲೂನಲ್ಲಿ, ಮನ್ರೋನಲ್ಲಿ, ಝೂನಲ್ಲಿ, ಮೆಂಥೋನಲ್ಲಿ (ಇಲ್ಲಿ ಪುಲ್ಲಿಂಗವಷ್ಟೇ ಅಲ್ಲ, ನಪುಂಸಕಲಿಂಗಕ್ಕೂ 'ನಲ್ಲಿ' ಬಂತು).  ಇವಿಷ್ಟರಿಂದ ಏನಾಯಿತು?  'ನಲ್ಲಿ' ಎಂಬುದು ಸಾಮಾನ್ಯವಾದ ಸಪ್ತಮೀವಿಭಕ್ತಿಪ್ರತ್ಯಯ, ಹೊಸಪದಗಳಿಗೆ 'ನಲ್ಲಿ' ಬಳಸಬಹುದು/ಬೇಕು ಎಂಬ ತಪ್ಪು ಅಂಶ ನಮ್ಮ ವ್ಯಾಕರಣಪ್ರಜ್ಞೆಯಲ್ಲಿ ಜಮೆಯಾಗಿಹೋಯಿತು.  

ಸರಿ, ಆದರೂ ಬೀದಿ, ಕಾಶಿ, ಮನೆ ಇವೆಲ್ಲಾ ನಮಗೆ ಅಪರಿಚಿತಪದಗಳಲ್ಲವಷ್ಟೇ?  ಅವಕ್ಕೆ 'ಅಲ್ಲಿ' ಪ್ರತ್ಯಯ ಸೇರಬೇಕೆಂದು ನಮ್ಮ ಪ್ರಜ್ಞೆಗೆ ಗೊತ್ತು.  ಬರೆಯುವಾಗ ಚಿಂತಿಸಿ ಬರೆಯುತ್ತೇವಾದ್ದರಿಂದ ಸರಿಯಾಗಿಯೇ ಬರೆಯುತ್ತೇವೆ ಕೂಡ.  ಆದರೆ ಮಾತಾಡುವಾಗ ಮಾತ್ರ ಏಕೆ "ನಲ್ಲಿ ಬಿಡು"ತ್ತೇವೆ? ಇದಕ್ಕೆ ಅಪ್ರಜ್ಞಾಪೂರ್ವಕವಾಗಿ ನಾವು ಆ ನಾಮಪದಗಳನ್ನು ನುಡಿಯುವ ರೀತಿಯೇ ಕಾರಣ.  ನಾವು ಆಡುಮಾತಿನಲ್ಲಿ ಬೀದಿ, ಕಾಶಿ, ಮನೆ ಎಂದು ಹ್ರಸ್ವವನ್ನು ಹ್ರಸ್ವವಾಗಿ ನುಡಿಯುವುದೇ ಇಲ್ಲ.  ಬೀದೀ, ಕಾಶೀ, ಮನೇ ಎಂದು ದೀರ್ಘವಾಗಿಯೇ ನುಡಿಯುವುದು ಉದಾಹರಣೆಗೆ:

"ಅಯ್ಯೋ ಬಿಡಮ್ಮಾ, ಎಲ್ಲಾರ್ ಮನೇ ದೋಸೇನೂ ತೂತೇ" (ಅಯ್ಯೋ ಬಿಡಮ್ಮಾ, ಎಲ್ಲರ ಮನೆ ದೋಸೆಯೂ ತೂತೇ)
"ನಮ್ ಬೀದೀ ಎಷ್ಟೋಂದು ದೊಡ್ದಿದೇ ಗೊತ್ತಾ?"; (ನಮ್ಮ ಬೀದಿ ಎಷ್ಟೊಂದು ದೊಡ್ಡದಿದೆ ಗೊತ್ತಾ?)
"ಕಾಶೀಗ್ಹೋದ ನಂ ಭಾವ ಕಬ್ಡದ್ ದೋಣೀಲೀ; ರಾಶೀ ರಾಶೀ ಗಂಗೇ ತರೋಕ್ ಸೊಳ್ಳೇ ಪರ್ದೇಲೀ" (ಕಾಶಿಗೆ ಹೋದ ನಮ್ಮ ಭಾವ ಕಬ್ಬಿಣದ್ ದೋಣಿಯಲ್ಲಿ; ರಾಶಿರಾಶಿ ಗಂಗೆ ತರೋಕ್ ಸೊಳ್ಳೆಯ ಪರದೆಯಲ್ಲಿ - ಇದೂ ಆಡುಮಾತೇ, 'ಸರಿ'ಯಾಗಿ ಆಡುವ ಮಾತು, ಆದರೆ ತಿಳಿದವರೂ ಹೀಗೆ ಮಾತಾಡುವುದಿಲ್ಲವೆಂಬುದನ್ನು ಗಮನಿಸಬೇಕು)

ಮನೆ, ಬೀದಿ, ಕಾಶಿ ಇವುಗಳೇನೋ ನಮಗೆ ಸುಪರಿಚಿತವಾದ ಪದಗಳು.  ಆದರೆ ಮಾತಿನ ಓಘದಲ್ಲಿ ನಾವು ಬಳಸುವ ಮನೇ, ಬೀದೀ, ಕಾಶೀ ಇವು ನಮ್ಮ ಶಿಷ್ಟವ್ಯಾಕರಣಪ್ರಜ್ಞೆಗೆ ಅಪರಿಚಿತ.  ಮೇಲೆ ವಿವರಿಸಿದಂತೆ, ನಮ್ಮ ವ್ಯಾಕರಣಪ್ರಜ್ಞೆಯಲ್ಲಿ ದಾಖಲಾಗಿರುವ ವಿಷಯವೆಂದರೆ, ಅಪರಿಚಿತಪದಗಳಿಗೆ ಸಪ್ತಮೀವಿಭಕ್ತಿಯಾಗಿ 'ನಲ್ಲಿ' ಬರಬೇಕೆಂಬುದಷ್ಟೇ.  ಆದ್ದರಿಂದ ಬರೆಯುವಾಗ ಸರಿಯಾಗಿಯೇ ಚಿಂತಿಸಿ ಬರೆದರೂ ಆಡುವಾಗ ನಾವು ಒಂದೊಂದು ಪದವನ್ನೂ ಚಿಂತಿಸಿ ಆಡುವುದಿಲ್ಲವಾದುದರಿಂದ, ಮಾತಿನ ಓಘದಲ್ಲಿ ನಲ್ಲಿ ಲಗತ್ತಾಗಿಬಿಡುತ್ತದೆ.  ಮನಸ್ಸು ಮಾಡಿದರೆ ಸರಿಪಡಿಸಲಾಗದ ವಿಷಯವೇನೂ ಅಲ್ಲ.  ಆದರೆ ಆಡುಮಾತಿನ ರೀತಿಯನ್ನು ಮೆಚ್ಚಿ ಆಡುವವರು ಆಡುಮಾತಿನ ಬಗ್ಗೆ ಅಷ್ಟು ಸೂಕ್ಷ್ಮವಾಗಿ ತಲೆಕೆಡಿಸಿಕೊಳ್ಳದೇ ಆ ರೂಪವನ್ನೇ ಉಳಿಸಿಕೊಳ್ಳುವುದುಂಟು.  

ತಪ್ಪು, ಆದರೆ ವೈಯಾಕರಣನು ತಾನೆ ನಮ್ಮ ಆಡುಮಾತಿನ ಮೇಲೆ ಎಷ್ಟೆಂದು ಕಾರ್ಕತ್ತು ನಡೆಸಿಯಾನು?

1 comment:

Anonymous said...

ಏನೋ ಹುಡುಕುತಿದ್ದೆ ಓದಿದ ಮೇಲೆ ಗೊತ್ತಾಯಿತು ನಾನು ಹುಡುಕುತಿರುವುದು ಇದೆ ಎಂದು ಶುಭವಾಗಲಿ ಸರ್