Sunday, January 3, 2021

ಮಾತಲ್ಲದ ಮಾತಿಗೆ ಅರ್ಥವಲ್ಲದ ಅರ್ಥ

 


"ಏನು ಸರ್ ನಿಮ್ಮ ಮಗಳನ್ನು ಸಂಗೀತದ ಕ್ಲಾಸ್ ಗೆ ಕಳುಹಿಸೋದು ನಿಲ್ಲಿಸಿ ಬಿಟ್ರಿ"
"ಇನ್ನೇನ್ರೀ ಮತ್ತೆ ಯಾವಾಗ್ಲೂ “ನಿಮಪದಪ ನಿಮಪದಪ” ಅನ್ನೋ ಸಂಗೀತ ಹೇಳಿ ಕೊಡ್ತಾರೆ ಅಲ್ಲಿಂದ ಮುಂದಕ್ಕೆ ಹೋಗಲ್ಲ ಅಂತಾರೆ"

ಹೀಗೊಂದು ಚಟಾಕಿ ಹಾರಿಸಿದರು, ಮಿತ್ರ Ramaprasad Konanurರು.  ಸಂಗೀತದ ಸರಳೆವರಸೆ ವಿಷಯದಲ್ಲಿ ಸಾಮಾನ್ಯವಾಗಿ ಕೇಳಿಬರುವ ಚಟಾಕಿಯಿದು.  ಹೌದು ಮತ್ತೆ, ಸಂಗೀತದ ಹೆಸರಿನಲ್ಲಿ ಮಕ್ಕಳಿಗೆ ಅಪ್ಪ ಅಮ್ಮಂದಿರ ಬಗ್ಗೆ ಹಾಗೆಲ್ಲ ಹೇಳಿಕೊಟ್ಟರೆ ಹೇಗೆ?  ಅಪ್ಪ ಅಮ್ಮಂದಿರು ಸುಮ್ಮನಿದ್ದುಬಿಡುತ್ತಾರಾ?  ಬದಲಿಗೆ ಆ ಸಂಗೀತದ ಮೇಷ್ಟ್ರು ಇದನ್ನು ಪ್ರಯತ್ನಿಸಬಹುದಿತ್ತು:

ಸರಿ, ನೀದಪಾ; ಸರಿಸರಿ ನೀsss ದಪಾ: ನೀಸರಿ ನೀss ದಪಾ; ನೀsss ಸರಿಸರಿ ನೀsದಪಾ; ನೀsss ನೀsss ನೀsss ನೀದಪಾ

ಆಗ ಅಪ್ಪ ಅಮ್ಮ ಸಂಗೀತ ಬಿಡಿಸುತ್ತಿರಲಿಲ್ಲ, ಹುಡುಗಿಯೇ ಬಿಟ್ಟು ಹೋಗುತ್ತಿದ್ದಳು.  ಹೋದರೆ ಹೋದಳು, ಅದಕ್ಕೆ ಅಷ್ಟೇನು ತಲೆ ಕೆಡಿಸಿಕೊಳ್ಳಬೇಕಿಲ್ಲ; ಆದರೆ ಅದಕ್ಕೆ ಉತ್ತರವಾಗಿ ಹುಡುಗಿಯೇ "ದಪ್ಪದಪ್ಪದಪದಪಾ ದಪಾ, ದಪದಪದಪ ದಪದಪದಪ ದಪದಪ" ಎಂದು ಕೊಡಲು (ಹೇಳಿಕೊಡಲು), ಶುರುಮಾಡಿದರೆ, 'ದಾರಿದಾರಿ'ಯಲ್ಲಿ?  ಆಮೇಲೆ "ಪಾದ, ನೀಪಾದ, ಸಾssರಿ ನೀಪಾದ, ಸಾರಿಸಾರಿ ನೀಪಾದ, ಸದಾ ನೀಪಾದ, ದಾಸ ನೀಪಾದ ದಾಸದಾಸ" ಎಂದು 'ಪರಿಪರಿ'ಯಾಗಿ ಬೇಡುವ ಪರಿಸ್ಥಿತಿಯುಂಟಾಗಿಬಿಟ್ಟರೆ ಮೇಷ್ಟರಿಗೆ?  ಎಷ್ಟಾದರೂ ಮೇಷ್ಟರು, 'ವರಸೆ'ಯ ಅನಂತಸಾಧ್ಯತೆಗಳನ್ನು ಪ್ರಾಯೋಗಿಕವಾಗಿ ಅರಿತವರು, ಸ್ವಲ್ಪ 'ನಿಧಾನಿ'ಸಿದರು, ಬಚಾವಾದರು.

ಸಂಗೀತದ ಸ್ವರಸಂಜ್ಞೆಗಳ ಅರ್ಥಸಾಧ್ಯತೆಗಳು ನಮ್ಮ ಹಾಸ್ಯಪ್ರಜ್ಞೆಯನ್ನೆಂತೋ ಅಂತೇ ಗಂಭೀರ ವಾಗ್ಗೇಯಪ್ರತಿಭೆಯನ್ನೂ ಸಾಕಷ್ಟೇ ಕೆಣಕಿದೆ.  ತ್ಯಾಗರಾಜರ ಪ್ರಖ್ಯಾತ "'ಸಾಮನಿಗಮ'ಜ ಸುಧಾಮಯ" ಎಂಬ ಸಾಲು, ಪ್ರಖ್ಯಾತವಾದ "ವಲಜಿ" ರಾಗಮಾಲಿಕಾವರ್ಣದ "'ಪದಸ'ರೋಜಮುಲನೇ ನಮ್ಮಿ" ಎಂಬ ಚರಣ, ಬಾಲಮುರಳೀಕೃಷ್ಣರ "ಓಂಕಾರಪ್ರಣವ" ಷಣ್ಮುಖಪ್ರಿಯ ವರ್ಣದ "'ಪದನೀ'ರಜಮುಲೇ ನಮ್ಮಿತಿ" ಎಂಬ ಚರಣ - ಕೂಡಲೇ ನೆನಪಾಗುವಂಥದ್ದು.  ಮತ್ತೆ, ರಾಮಸ್ವಾಮಿದೀಕ್ಷಿತರ ತೋಡಿರಾಗದ "ಸರಿಗಾನಿ ದಾನಿ ಪಾಮರಿನಿ ನೀಪದ" ಎಂಬ ರಚನೆ, ಸಂಪೂರ್ಣ ಸ್ವರಸಂಕೇತಾಕ್ಷರಗಳಿಂದಲೇ ನಿರ್ವಹಿಸಲ್ಪಟ್ಟದ್ದು.  ಅಂಥದ್ದೇ ಮತ್ತೊಂದು ಪ್ರತಿಭಾಪೂರ್ಣ ರಚನೆ ಬಾಲಮುರಳೀಕೃಷ್ಣರ ತೋಡಿರಾಗದ "ಮಾ ಮಾನಿನಿ ನೀ ಧಾಮಗನಿ ನೀ ದಾಸರಿನಿಗಾದಾ".  ಇದಂತೂ ಹಲವು ಮನೋಜ್ಞವಾದ ಅರ್ಥಪೂರ್ಣವಾದ ಸ್ವರಾಕ್ಷರಪದಪ್ರಯೋಗಗಳಿಂದ ಕೂಡಿದೆ - ಉದಾ: "ಸರಿಗಾನಿ ದಾರಿಮಾರಿ ಗದಾಧರಿ ನೀ ನಿಗಗನಿ ನೀ ಮಗನಿ ಸಾಮನಿಗಮ ಗರಿಮಗನಿ".  ಒಂದುಕಡೆ, ಇರುವ ಏಳೇ ಅಕ್ಷರಗಳಲ್ಲಿ ಅರ್ಥಪೂರ್ಣವಾದ ಪದಗಳನ್ನು, ಭಾವಪೂರ್ಣವಾದ ವಾಕ್ಯಗಳನ್ನು ರಚಿಸುವುದು; ಮತ್ತೊಂದೆಡೆ, ಆ ಅಕ್ಷರಸಂಯೋಜನೆ ಆ ರಾಗದ ಸ್ವರೂಪಕ್ಕೆ ಸಹಜವಾಗಿ ಇರುವಂತೆ ರಾಗಪ್ರವಾಹದ ಅಂದಗೆಡದಂತೆ ನೋಡಿಕೊಳ್ಳುವುದು - ಇದು ಹಗ್ಗದಮೇಲಿನ ನಡಿಗೆಯೇ ಸರಿ.  ಇಷ್ಟಾಗಿಯೂ ಇತ್ತ 'ಮಾತೂ' ಅತ್ತ 'ಧಾತು'ವೂ ಸಂಪೂರ್ಣ ರುಚಿಸದಿರುವ ಸಾಧ್ಯತೆಯೇ ಹೆಚ್ಚು.

ಸಂಗೀತದ ತಾಂತ್ರಿಕಾಂಶವೇ ಸಾಹಿತ್ಯವಾಗಿ 'ಮಾತು' ಆಗಿ ಮಿಂಚುವ ಪರಿಯಿದು.  ಸಾಹಿತ್ಯದ ತಾಂತ್ರಿಕಾಂಶವೂ ಕವಿಯ ಪ್ರತಿಭಾವಿಶೇಷದಿಂದ ಸ್ವತಃ ಸಾಹಿತ್ಯವಾಗಿ ಮಿಂಚುವುದೂ ಉಂಟು.  ರನ್ನನ ಈ ಸಾಲನ್ನು ನೋಡಿ:

ಗುರುವಂ ಲಘುಸಂಧಾನದಿ
ನರನಿಸೆ ಗುರುಲಘುವಿಮಿಶ್ರಿತಂ ದೊರಕೊಳಲ್ ತ-
ದ್ಗುರು ತಚ್ಛಂದೋವೃತ್ತಿಗೆ
ದೊರೆಯೆನಿಸಿರ್ದುದು ಮನಕ್ಕೆ ದುರ್ಯೋಧನನಾ

ಗುರುವಾದ ದ್ರೋಣನನ್ನು ಲಘುವಾಗಿ ಪರಿಗಣಿಸಿ ಅರ್ಜುನನು ಬಾಣಗಳಿಂದ ಹೊಡೆಯಲು ಆ ಗುರುವಿನ ಶರೀರ ಗುರುಲಘುಮಿಶ್ರಿತವಾದ ಛಂದೋರೂಪದಂತೆ (ಪದ್ಯದಂತೆ) ದುರ್ಯೋಧನನಿಗೆ ಕಂಡಿತಂತೆ.  ಪ್ರತಿಭೆಯೇ ಸರಿ, ಆದರೆ ರಣಭೂಮಿಯ ಘೋರಸನ್ನಿವೇಶದಲ್ಲಿ, ಏಕಾಂಗಿಯಾಗಿ ಮಿಡುಕುತ್ತಾ ಕುದಿಯುತ್ತಾ ರಣಭೂಮಿಯುದ್ದಕ್ಕೂ ತನ್ನ ಸೋಲಿನ ನಿಶಾನೆಗಳನ್ನೇ ಕಾಣುತ್ತಾ ಬಂಧುಮಿತ್ರರ ಕಳೇಬರಗಳನ್ನು ಕಾಣುತ್ತಾ, ತುಳಿಯುತ್ತಾ, ಎಡವುತ್ತಾ, ಎಣೆಯಿಲ್ಲದ ದುಃಖದಿಂದ ಪರಿತಪಿಸುತ್ತಾ ಆ ರಣಭೂಮಿಯಲ್ಲಿ ನಡೆದು ಬರುತ್ತಿದ್ದ ದುರ್ಯೋಧನನಿಗೆ, "ಶರಜಾಲಜರ್ಜರಿತಗಾತ್ರತ್ರಾಣ"ನಾಗಿ ಸತ್ತು ಬಿದ್ದಿರುವ ಗುರುವಿನ ಶರೀರ ಗುರುಲಘುವಿಮಿಶ್ರಿತವಾದ ಪದ್ಯದಂತೆ ಕಂಡಿತಲ್ಲಾ (ಆ ಸಮಯದಲ್ಲೂ ದುರ್ಯೋಧನನಿಗೆ ವ್ಯಾಕರಣ-ಛಂದಸ್ಸುಗಳ ನೆನಪಾಯಿತಲ್ಲಾ), ಅದೀಗ ತಮಾಷೆಯೇ ಸರಿ, ಕ್ರೂರ ತಮಾಷೆ.  ಇಲ್ಲಿ ಕವಿಯ ಪ್ರತಿಭೆಗೆ ತಲೆದೂಗಬೇಕೋ, ದುರ್ಯೋಧನನ ಅಪ್ರಸ್ತುತಪ್ರಸಂಗಕ್ಕೆ ತಲೆಯ ಮೇಲೆ ಕೈ ಹೊರಬೇಕೋ ಓದುಗನಿಗೆ-ಕೇಳುಗನಿಗೆ ಬಿಟ್ಟ ವಿಷಯ.  ಪ್ರಸಂಗಾವಧಾನವಿಲ್ಲದ ಪ್ರತಿಭೆ ರಸಾಭಾಸವನ್ನೂ ಉಂಟುಮಾಡಬಹುದಷ್ಟೇ?  ಅದೇನೇ ಇರಲಿ, ಪ್ರತಿಭೆ ಈ ರೂಪದಲ್ಲೂ ಇರಬಹುದೆಂಬುದಂತೂ ಗಮನಿಸಬೇಕಾದ ಮಾತು.

ಇದೇ ಪ್ರತಿಭೆ ಸಹಜಸುಂದರ ಹಾಸ್ಯವೇ ಆಗಿ ಹೊಮ್ಮುವ ಪರಿಯನ್ನೂ ನೋಡಿಬಿಡಿ.  ಭಾಮಿನಿ (ಷಟ್ಪದಿ)ಯ ಲಕ್ಷಣವನ್ನು ವಿವರಿಸುತ್ತಾ ಲಾಕ್ಷಣಿಕರಾದ ಅ ರಾ ಮಿತ್ರ ಹೀಗೆ ಹೇಳುತ್ತಾರೆ:

ಇವಗೆ ಭಾಮಿನಿ ಹುಚ್ಚು ಒಂದೇ
ಸಮನೆ 'ಮಾತ್ರೆ'ಗಳೇಳ ಕೊಡುತಿರಿ
ಕ್ರಮವ ತಪ್ಪದೆ ಮೂರು ನಾಲ್ಕರ ತೆರದಿ ಏಳು ಸಲ
ಸಮೆಯದಿರೆ ಮತ್ತೊಂದು ಮಂಡಲ
ಹವಣಿಸುತ ಬರೆ ಲೇಸು ಕೇಳಿರಿ
ಬೆವರಬೇಡಿರಿ 'ಕೊನೆಗೆ ಗುರು'ಕೃಪೆಯಿರಲು ಬದುಕುವನು

ಅಲ್ಲವೇ ಮತ್ತೆ?  ಮೂರು-ನಾಲ್ಕರ ಡೋಸುಗಳಲ್ಲಿ ಏಳೇಳು ಮಾತ್ರೆಗಳನ್ನು ಎರಡು ಮಂಡಲ ಕೊಟ್ಟರೆ ತಾನೆ ಭಾಮಿನಿಯ ಹುಚ್ಚು ಬಿಡುವುದು? ಅದೂ ಕೊನೆಗೆ ಗುರುಕೃಪೆಯಿದ್ದರೆ ಮಾತ್ರ (ಭಾಮಿನೀಷಟ್ಪದಿಯ ಲಕ್ಷಣ - ಮೂರು+ನಾಲ್ಕರ ಏಳೇಳು ಗಣಗಳು ಮತ್ತು ಒಂದು ಗುರು - ಇಷ್ಟಾದರೆ ಭಾಮಿನೀಷಟ್ಪದಿಯ ಒಂದು ಮಂಡಲ (ಪಾದ)ವಾಯಿತು; ಅಂಥದ್ದೇ ಇನ್ನೊಂದು ಮಂಡಲವಾದರೆ ಪೂರ್ಣಷಟ್ಪದಿ).

ಇದೇ ಅರಾ ಮಿತ್ರರು ತಮ್ಮ "ಪಂಡಿತನ ಸಂಕಟ" ಎಂಬ ಲಲಿತಪ್ರಬಂಧವೊಂದರಲ್ಲಿ, ಹುಚ್ಚಾಸ್ಪತ್ರೆಗೆ ಎಳೆತರಲ್ಪಟ್ಟ ವ್ಯಾಕರಣಪಂಡಿತರೊಬ್ಬರ ಸಂಕಟವನ್ನು ಡಾಕ್ಟರ ದೃಷ್ಟಿಯಿಂದ ಚಿತ್ರಿಸುತ್ತಾರೆ.  ಪಂಡಿತರು ತಮ್ಮ ಸಂಕಟವನ್ನು ಗಂಟೆಗಟ್ಟಲೆ ವ್ಯಾಕರಣದ ಭಾಷೆಯಲ್ಲೇ ವರ್ಣಿಸಿದ್ದನ್ನು ಕೇಳಿ ತಲೆಕೆಟ್ಟು ಸುಸ್ತಾಗಿ ರಾತ್ರಿ ಮನೆಗೆ ಬಂದ ಡಾಕ್ಟರು, ಆ ಕತೆಯನ್ನು ತನ್ನ ತಂದೆಯ ಬಳಿ ಹೇಳುತ್ತಾರೆ.  ಹಿರಿಯರಾದ ತಂದೆ ತಮ್ಮ ಅನುಭವದಿಂದ ನಾಲ್ಕು ಮಾತು ಹೇಳಿಯಾರು ಎನ್ನುವ ಆಸೆ ಡಾಕ್ಟರರದ್ದು.  ಆ ತಂದೆಯೋ ನಿವೃತ್ತ ಛಂದಶ್ಶಾಸ್ತ್ರಪಂಡಿತರು.  ಅವರು ಹೇಳುತ್ತಾರೆ "ಏನು ಮಾಡೋದು ಮಗು, ಪಾಪ ಗ್ರಹಚಾರ.  ಆತನನ್ನು ನಾನು ಬಲ್ಲೆ... ವ್ಯಾಕರಣ ಎಂದರೆ ಪ್ರಾಣ ಅವರಿಗೆ... ಆದರೆ ಅವರ ದಾಂಪತ್ಯಜೀವನದಲ್ಲಿ 'ಸಾಂಗತ್ಯ'ವಿಲ್ಲ,  ಅವರ ಬದುಕು ಲಲಿತ ಅಥವಾ ಸರಳರಗಳೆಯ ಹಾಗೆ ಉತ್ಸಾಹದಿಂದ ಸಾಗಲಿಲ್ಲ.  ಎಷ್ಟಾದರೂ ಅವರು 'ಗುರು'ಗಳಲ್ಲವೇ?  ಅವರ ಹೆಂಡತಿ ಕೂಡ ಅಲ್ಪಪ್ರಾಣಗಳ ಹಾಗೆ ಅವರನ್ನು ಅಷ್ಟು ಲಘುವೆಂದು ಎಣಿಸಬಾರದಿತ್ತು.  ಒಟ್ಟಿನಲ್ಲಿ ಮದುವೆಯಾದಂದಿನಿಂದ ಭಾಮಿನೀಷಟ್ಪದಿ ಅವರಿಗೆ ಒಗ್ಗಲಿಲ್ಲ" - ಈ ಮಾತನ್ನು ಕೇಳಿ ಮಗನಿಗೆ ಬಂದದ್ದು ನಿದ್ದೆಯಲ್ಲ, ಮೂರ್ಛೆ!

ಇರಲಿ, ಇವೆಲ್ಲ ಗಂಭೀರವಾದ ಸಾಹಿತ್ಯಸಂಗೀತಪ್ರತಿಭೆಯ ಮಾತಾಯಿತು.  ಅದರಾಚೆಗೂ ಪ್ರತಿಭೆಯೆಂಬುದು ಮಾತಲ್ಲದ ಮಾತಿಗೆ, ಅರ್ಥವಲ್ಲದ ಅರ್ಥವನ್ನು ಜೋಡಿಸಿ ನೋಡಿ ಹಿಗ್ಗುತ್ತಲೇ, ರೋಮಾಂಚಗೊಳ್ಳುತ್ತಲೇ ಇರುತ್ತದೆ.  ಬೆಕ್ಕುಗಳು ಜಗಳಾಡುವಾಗ ಕಿರುಚುವುದು ಮಗುವಿನ ಅಳುವಿನಂತೆಯೇ ಕೇಳುತ್ತದೆ. ನಡುರಾತ್ರಿಯ ನೀರವಮೌನದಲ್ಲಿ ಸುತ್ತಮುತ್ತ ಯಾರೂ ಇಲ್ಲದಿರುವಾಗ ಬೆಕ್ಕುಗಳು ಕಿರುಚಲು ಶುರುಮಾಡಿದರೆ, ಪ್ರೇತಶಿಶುವೊಂದರ ಅಳುವನ್ನು ಕೇಳಿದಂತಾಗಿ ರಕ್ತ ಹೆಪ್ಪುಗಟ್ಟುವುದು ಖಂಡಿತ.  ಊರ ಕಡೆಯ, ಚಿಕ್ಕಂದಿನ ನೆನಪುಗಳು ಯಾವಾಗಲೂ ರೋಮಾಂಚಕ.  ನಾಯಿಗಳು ಕೆಲವೊಮ್ಮೆ ಅಳುತ್ತವಲ್ಲ.  ಅದಕ್ಕೆ ಹಲವು ವ್ಯಾಖ್ಯಾನಗಳಿದ್ದುವು.  ಹೊರಗೆ ನಾಯಿಯೊಂದು ಅಳುತ್ತಿದ್ದರೆ, ಅದು ಮೇಲೆ ನೋಡಿಕೊಂಡು ಅಳುತ್ತಿದೆಯೋ ನೆಲ ನೋಡಿಕೊಂಡು ಅಳುತ್ತಿದೆಯೋ ನೋಡಲು ಹೇಳುತ್ತಿದ್ದರು.  ಮೇಲೆ ನೋಡಿಕೊಂಡು ಅಳುತ್ತಿದ್ದರೆ ಅದರ ಕಣ್ಣಿಗೆ ದೆವ್ವ ಕಾಣಿಸುತ್ತಿದೆಯೆಂದರ್ಥ, ಅಳುವಿನ ಜೊತೆಗೆ ಭಯ ತುಂಬಿದ ಬೊಗಳುವಿಕೆಯೂ ಸೇರಿರುತ್ತದಂತೆ.  ನೆಲ ನೋಡಿಕೊಂಡು ಅಳುತ್ತಿದ್ದರೆ ಯಾರೋ ಸಾಯುತ್ತಾರೆ ಎಂದರ್ಥವಂತೆ.  ಯಾರ ಮನೆಯ ಮುಂದೆ ಅಳುತ್ತದೆಯೋ ಅವರಿಗೆ ಒಳಗೇ ಪುಕಪುಕ; ಅದರಲ್ಲೂ ಯಾರಾದರೂ ವಯಸ್ಸಾದವರೋ, ರೋಗಿಷ್ಟರೋ, ಸಾಯಲು ಬಾಕಿಯಿರುವವರು ಮನೆಯಲ್ಲಿದ್ದರಂತೂ ಮುಗಿದೇ ಹೋಯಿತು - "ದರಿದ್ರದ್ದು ನಮ್ಮನೇ ಮುಂದೇನೇ ಅಳ್ತಿದೆ, ಓಡಿಸೋ ಅತ್ಲಾಗೆ" ಎನ್ನುವ ಉದ್ಗಾರ ಸಾಮಾನ್ಯ.  ಒಂದು ನಾಯಿಯಂತೂ "ಅವ್ವೊವ್ವೋssssss" ಎಂದು ಸ್ಪಷ್ಟಾಕ್ಷರಗಳೊಂದಿಗೆ ಅಳುತ್ತಿತ್ತು.  ಮನೆಯ ಬಳಿ ಅಲ್ಲೆಲ್ಲೋ ಮರದ ಮೇಲೆ ಗೂಬೆಯೊಂದು ಇದ್ದಕ್ಕಿದ್ದ ಹಾಗೆ ಕೂಗಲು ಶುರುಮಾಡುತ್ತಿತ್ತು.  "ಗೂsss" ಎಂದೊಂದು ಪ್ಲುತ, ಅದರ ಹಿಂದೆಯೇ "ಗುಗ್ಗುಗುಗೂsss" ಎಂಬೊಂದು ಉದ್ಗಾರ.  ಇದು ಪುನರಾವರ್ತನೆಯಾಗುತ್ತಿದ್ದರೆ ಯಾವುದೋ ಸಾವಿನ ಕರೆಯಂತೆ ಕೇಳುತ್ತಿತ್ತು.  ನಮ್ಮ ತಂದೆ ಉದ್ಗರಿಸುತ್ತಿದ್ದರು - "ಓಹೋ ಇದು 'ಗೂ... ಗುತ್ತಿಸುಡೂ' 'ಗುತ್ತಿಸುಡೂ' ಅಂತ ಕೂಗ್ತಿದೆ.  ಯಾರೋ 'ಠಾ' ಅಂತಾರೆ ಇಷ್ಟರಲ್ಲೇ" (ಕೈಲಾಸಂ ತಾವರೆಕೆರೆಯ ಗಡFಖಾನರು ನೋಡಿದ್ದ ಗೂಬೆಯೊಂದು "ಮುದ್ದೂ... ಮುದ್ದೂ... ಐಸಾ ಅಲ್ಡಾಯಿಸ್ತಿತ್ತು").

ನಮ್ಮ ತಂದೆ, ತಮ್ಮ ಬಾಲ್ಯಕಾಲದ್ದೊಂದು ನೆನಪನ್ನು ಯಾವಾಗಲೂ ಹೇಳುತ್ತಿದ್ದರು.  ಬೀದಿಕೊನೆಯ ಮುದುಕಿಯೊಂದು ಸತ್ತಾಗ, ಆ ಶವವನ್ನು ಅಲಂಕರಿಸಿ ಚಟ್ಟದಲ್ಲಿ ಕೂರಿಸಿ ಬ್ಯಾಂಡ್ ಸೆಟ್ಟಿನೊಂದಿಗೆ ಶವಯಾತ್ರೆಯಲ್ಲಿ ಹೊತ್ತೊಯ್ಯುತ್ತಿದ್ದರೆ, ಬ್ಯಾಂಡ್ ಸೆಟ್ಟಿನ ಸಂಗೀತದ ಲಯಕ್ಕೆ ತಕ್ಕ ಹಾಗೆ ಚಟ್ಟದಲ್ಲಿ ಕುಳಿತ ಹೆಣ ಅಡ್ಡಡ್ಡ ತಲೆಯಾಡಿಸುತ್ತಿದ್ದುದು ನೋಡಿ ಈ ಹುಡುಗನಿಗೆ ಹೊಳೆದದ್ದು - "ಬರೋದಿಲ್ಲs ನಾsನೂss... ಯಮಲೋsಕಕ್ಕೆs, ಬರೋದಿಲ್ಲs ನಾsನೂsss..." (ಸಂಗೀತ ಬಲ್ಲವರು ಬೇಕಿದ್ದರೆ ಇದನ್ನು ಆನಂದಭೈರವಿ ರಾಗ ಮಿಶ್ರಚಾಪುತಾಳದಲ್ಲಿ ಹಾಡಿಕೊಂಡು ಆನಂದಿಸಬಹುದು - "ಸಗಾರಿಗ್ಗs ಮಾsಪಾss... ಮಪಗಾsರಿsಸs ಸಗಾರಿಗ್ಗs ಮಾsಪಾsss") ಎಂದು ಆ ಮುದುಕಿ ತಲೆಯಾಡಿಸುತ್ತಿದೆಯಂತೆ, ಅದೇ ಹಾಡನ್ನೇ ಬ್ಯಾಂಡ್ ಸೆಟ್ಟಿನವರು ಬಾರಿಸುತ್ತಿರುವುದಂತೆ

ಪ್ರತಿಭೆ ವಂಶವಾಹಿನಿಯಲ್ಲೇ ಹರಿಯುತ್ತದೆ ಎಂಬುದು ಸುಳ್ಳಲ್ಲ ನೋಡಿ.  ನಾನೂ ಸುಮಾರು ಅದೇ ವಯಸ್ಸಿನಲ್ಲಿ ಅಂಥದ್ದೇ ಶವಯಾತ್ರೆಗಳನ್ನು ಕಂಡವನೇ, ಬ್ಯಾಂಡ್ ಸೆಟ್ಟನ್ನು ಕೇಳಿದವನೇ.  ಬ್ಯಾಂಡ್ ಸೆಟ್ಟಿನ "ಡಡ್ಡಡ್ಡ... ಡಡ್ಡಡ್ಡ...ಡಡ್ಡಡ್ಡ... ಡಡ್ಡಡ್ಡ..." ಎಂಬ ಗತ್ತಿನ ಲಯ, "ನಂದಲ್ಲ... ನಂದಲ್ಲ... ನಂದಲ್ಲ... ನಂದಲ್ಲ..." ಎಂದು ಆ ಸತ್ತವರ ಮನದ ಹಾಡಾಗಿ ನನಗೆ ಕೇಳುತ್ತಿದ್ದುದು ಆಶ್ಚರ್ಯವಲ್ಲ.

ತಡೆಯಿರಿ, ಪ್ರತಿಭೆಯೆಂಬುದು ಈ ರೀತಿ ಕೆಟ್ಟ, ಅಪಶಕುನದ ಹಾದಿಯಲ್ಲೇ ಹರಿಯಬೇಕೆಂದಿಲ್ಲ.  ಅಲ್ಲೆಲ್ಲೋ ಆಕಾಶದಲ್ಲಿ ಗರುಡಪಕ್ಷಿಯನ್ನು ಕಂಡರೆ ಅದು ಕ್ಷೇಮಕಾರಿ, ಲಕ್ಷ್ಮೀನಾರಾಯಣನ ಸನ್ನಿಧಾನ.  ಅದು "ಕರ್ರ್ರಾ..." ಎಂದು ಕೂಗಿದರೆ ಶ್ರದ್ಧಾಳುಗಳ ಕಿವಿಗೆ "ಕೃಷ್ಣಾ..." ಎಂದು ಕೇಳಿಸುತ್ತದೆ, ಕೆಲವರಿಗಂತೂ "ನಾರಾಯ್ಣಾ, ನಾರ್ಣಾ..." ಎಂದೂ ಕೇಳಿಸುತ್ತದೆ, ಕೈ ತಾನಾಗಿಯೇ ಮುಗಿಯುತ್ತದೆ.  ಏನಾದರೂ ಮಾತಾಡುವಾಗ ಹಲ್ಲಿ ಲೊಚಗುಟ್ಟಿತೆನ್ನಿ "ನೋಡಿದ್ಯಾ, ನಿಜವಂತೆ" ಎಂದು ಹಿಗ್ಗುತ್ತಾ ಆ ಲೊಚಗುಡುವಿಕೆಯ ಲಯಕ್ಕೆ ಸರಿಯಾಗಿ "ಕೃಷ್ಣ ಕೃಷ್ಣ ಕೃಷ್ಣ" ಎಂದು ನೆಲಕ್ಕೆ ಬೆರಳ ತುದಿ ಕುಟ್ಟುತ್ತಾರೆ.  ಇನ್ನು ಮಾತೃಸ್ವರೂಪಿಯಾದ ಹಸುವಿನ ಕೂಗಂತೂ ಜಗದ ತಾಯ್ತನವನ್ನೆಲ್ಲ ಒಟ್ಟುಮಾಡಿ ಕರೆದಂತೆ "ಅಂಬಾsss" ಎಂದೇ ಕೇಳುತ್ತದೆ.  "ಕನ್ನಡ ಗೋವಿನ ಮುದ್ದಿನ ಕರು"ಗಳಂತೂ ಇನ್ನೂ ಸ್ಪಷ್ಟವಾಗಿ "ಅಮ್ಮಾsss" ಎನ್ನುತ್ತವೆ.

ಪಶುಪಕ್ಷಿಗಳ ಎಲ್ಲ ಧ್ವನಿಗಳಿಗೂ ಹೀಗೆ 'ಮಾತು' ಆರೋಪಿಸಲು ಸಾಧ್ಯವೋ ಅಲ್ಲವೋ, ಆದರೆ ಇವೆಲ್ಲ ಸಂಗೀತವೇ.  ಸಂಗೀತದ ಒಂದೊಂದು ಸ್ವರಕ್ಕೂ ಒಂದೊಂದು ಪಶುಪಕ್ಷಿಯ ಹೆಸರನ್ನು ಕೊಟ್ಟಿರುವುದು ಸುಮ್ಮನೇ ಅಲ್ಲ.  ಆದರೆ ಅದೇನೇ ಇರಲಿ, ಈ ಧ್ವನಿವೈವಿಧ್ಯವನ್ನು ಒಟ್ಟಾರೆ ಸಂಗೀತವೆಂದೇ ಕರೆಯಬಹುದಿರಲಿ, ಒಂದೊಂದೇ ಪ್ರಾಣಿಯನ್ನೋ ಪಕ್ಷಿಯನ್ನೋ ಹಿಡಿದರೆ, ಕೋಗಿಲೆಯ 'ಸಂಗೀತ'ವನ್ನು ಆಸ್ವಾದಿಸಿದಂತೆ ಕಾಗೆಯ ’some'ಗೀತವನ್ನೂ ಗಾರ್ದಭಗಾನವನ್ನೂ ಆಸ್ವಾದಿಸಬರುವುದೋ, ಹೇಳಲಾಗದು.  ಕೋಕಿಲಾರವ, ಕೀರವಾಣಿ ಮುಂತಾದ ರಾಗಗಳಂತೆ ಕಾಕವಾಣಿ, ಗಾರ್ದಭಧ್ವನಿ ಇತ್ಯಾದಿ ರಾಗಗಳನ್ನು ಯಾರೂ ರೂಪಿಸಿದಂತಿಲ್ಲ.  ಹಂಸಧ್ವನಿ, ಹಂಸನಾದ, ಮಯೂರಧ್ವನಿಯಂತಹ ಸುಶ್ರಾವ್ಯರಾಗಗಳಿಗೆ ಆ ಹೆಸರಿಟ್ಟವರು ಆಯಾ ಪಕ್ಷಿಗಳ ಧ್ವನಿಯನ್ನು ನಿಜಕ್ಕೂ ಆಲಿಸಿ ಸವಿದು ಈ ರಾಗಗಳಿಗೆ ಆ ಹೆಸರಿಟ್ಟರೋ, ಅಥವಾ ಸೌಂದರ್ಯಕ್ಕೆ ಸೆರಗು ಹೊದಿಸಿದಂತೆ ರಾಗಸೌಂದರ್ಯವನ್ನು ಈ ಕರ್ಕಶಧ್ವನಿಯ ಸುಂದರಪಕ್ಷಿಗಳ ಹೆಸರುಗಳ ಹಿಂದೆ ಬೈತಿಡುವ ತಂತ್ರವೋ ಯಾರಿಗೆ ಗೊತ್ತು?

ಅದಿರಲಿ, ಬಹುಕಾಲದ ಹಿಂದೆ, ನಮ್ಮ ಮನೆಯ ಮುಂದಿದ್ದ ಜೋಪಡಿಗಳಲ್ಲಿ ಎರಡು ಹುಂಜಗಳಿದ್ದುವು.  ಸಾಮಾನ್ಯವಾಗಿ ಹುಂಜಗಳು "ಕೊಕ್ಕೊಕೋsಕೋss" ಎಂದು ಕೂಗುತ್ತವಷ್ಟೇ?  ಇಲ್ಲಿ ಒಂದು ಹುಂಜ ಅದಕ್ಕೆ ಇನ್ನೊಂದಿಷ್ಟು ನಾದವನ್ನು ಸೇರಿಸಿ ರಾಗವಾಗಿ "ಕೋಕ್ಕೊಕೋss ಕೋsss" ಎಂದು ಕೂಗುತ್ತಿತ್ತು.  ಆದರೆ ಅದೇನೋ ಪಾಪ ಕಕಾರವು ಸ್ಪಷ್ಟವಾಗಿ ಹೊರಡದೇ ಆ ದನಿಯಲ್ಲಿ ಅನೇಕ ಅಕ್ಷರಸಾಧ್ಯತೆ ಕೇಳಬರುತ್ತಿತ್ತು.  ಅದು ಹೀಗೆ ರಾಗವಾಗಿ "ಕೋಕ್ಕೊಕೋss ಕೋsss" ಎಂದು ಕೂಗಿದರೆ ನನಗಂತೂ "ವೆಂಕಟೇsಶಾsss" ಎಂದು ಕೂಗಿದಂತೆಯೇ ಕೇಳುತ್ತಿತ್ತು ("ರಂಗನಾsಥಾsss" ಎಂದು ಕರೆದಂತಿತ್ತೆಂದು ನಮ್ಮ ಚಿಕ್ಕಪ್ಪನವರ ವಾದ, ಇರಲಿ - "ಶಂಭುಲಿಂsಗಾsss" ಎಂದು ಕೂಗುತ್ತಿತ್ತೆಂದು ಯಾರೂ ವಾದಹೂಡಲಿಲ್ಲ, ಯಾವುದೋ ಒಂದು ಹೆಸರು, ನಾಮಸ್ಮರಣೆಗೆ- "ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ" ಅಲ್ಲವೇ?).

ಇನ್ನೊಂದು ಹುಂಜ, ಇದರ ಉಚ್ಚಾರಣೆಯೇನೋ ಸ್ಪಷ್ಟವಾಗಿತ್ತು, ಆದರೆ ಇತರ ಹುಂಜಗಳಿಗಿಂತ ವಿಚಿತ್ರವಾದ ಲಯವನ್ನನುಸರಿಸಿ ಕೂಗುತ್ತಿತ್ತು.  ಹುಂಜಗಳು ಸಾಮಾನ್ಯವಾಗಿ "ಕೊಕ್ಕೊಕೋsಕೋsss", ಎಂದೋ "ಕೋಕೋsಕೋsss" ಎಂದೋ ಕೂಗುತ್ತವೆ; ಕೆಲವು ಸಹನೆಗೆಟ್ಟ ಹುಂಜಗಳು "ಕೊಕ್ಕೊಕೋs" ಎಂದೋ  "ಕೋsಕೋss" ಎಂದೋ "ಹ್ರಸ್ವಾವರ್ತದಲ್ಲಿ ನುಡಿದು ಸುಮ್ಮನಾಗುತ್ತವೆ.  ಕೆಲವೊಮ್ಮೆ ತೀರ ಬೇಸರದಲ್ಲಿ "ಕೋss" ಎಂಬ ಪ್ಲುತಸ್ವರವನ್ನಷ್ಟೇ ನುಡಿದು, ಕೊಂಡರೆ ಕೊಳ್ಳಲಿ ಬಿಟ್ಟರೆ ಬಿಡಲಿ ಎಂದು ಸುಮ್ಮನಾಗುವುದೂ ಉಂಟು.  ಆದರೆ ಈ ಹುಂಜ ಮಾತ್ರ ಈ ಯಾವ ಸಾಂಪ್ರದಾಯಿಕ ಲಯವನ್ನೂ ಅನುಸರಿಸದೇ "ಕೊಕ್ಕೊಕೊ ಕೊಕ್ಕೋss" "ಕೊಕ್ಕೊಕೊ ಕೊಕ್ಕೋss" ಎಂದು ಕೂಗುತ್ತಿತ್ತು.  ಹೀಗೆ ಇದು ಬೆಳಗಿನ ಜಾವದಲ್ಲಿ ಕೂಗುತ್ತಿದ್ದರೆ, ಅರೆನಿದ್ದೆಯಲ್ಲಿದ್ದ ನಮಗೆ, ಆ "ಕೊಕ್ಕೊಕೊ ಕೊಕ್ಕೋss" ಎಂಬ ಕರೆಯಲ್ಲಿ, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ "ಅರ್ಥಮನರ್ಥಮ್" ಎಂಬ ಸ್ಪಷ್ಟವಾದ ಘೋಷವಾಣಿಯೇ ಕೇಳುತ್ತಿತ್ತು.

ಪ್ರತಿದಿನ ಜೋಪಡಿಯ ಶೃಂಗವನ್ನೇರಿ, ಕೊರಳುಬ್ಬಿಸಿ ಒಮ್ಮೆ "ಅರ್ಥಮನರ್ಥಮ್" ಎಂದು ಕೂಗುವುದು; ಕೊರಳು ಕೊಂಕಿಸಿ, ಎಲ್ಲಿಂದಲಾದರೂ ಪ್ರತಿವಾದಿಮಲ್ಲರು ಬರಬಹುದೇ ಎಂಬ ಗತ್ತಿನಲ್ಲಿ ಹತ್ತೂ ದಿಕ್ಕುಗಳನ್ನು ನೋಡಿ, ಮತ್ತೊಮ್ಮೆ "ಅರ್ಥಮನರ್ಥಮ್" ಭೇರಿ ಮೊಳಗಿಸುವುದು;  ಮತ್ತೊಮ್ಮೆ ದಶದಿಗ್ದರ್ಶನ, ಮತ್ತೊಮ್ಮೆ ಭೇರಿ - ಹೀಗೆ ಪ್ರತಿದಿನ ಬೆಳಗಿನ ಜಾವ, ಆಮೇಲೆ ಜನರಲ್ಲಿ ಆಧ್ಯಾತ್ಮಪ್ರಜ್ಞೆ ಖಿಲವಾಗಿ ಲೌಕಿಕಪ್ರಜ್ಞೆ ವಿಜೃಂಭಿಸುತ್ತಿದೆಯೆಂದೆನ್ನಿದಾಗಲೆಲ್ಲ ಒಮ್ಮೊಮ್ಮೆ, ವೇದಾಂತಭೇರಿಯನ್ನು ಬಾರಿಸುತ್ತಿದ್ದ ಹುಂಜ ಯಾವಾಗಲೋ ಒಂದು ದಿನ, ನಮ್ಮ ಅರಿವಿಗೇ ಬಾರದಂತೆ, ಕೂಗುವುದನ್ನು ನಿಲ್ಲಿಸಿಯೇ ಬಿಟ್ಟಿತ್ತು.  ಪಾಪ ಯಾವ 'ಅನರ್ಥ' ಅದಕ್ಕೆ ಸಂಭವಿಸಿತ್ತೋ - ಸದೇಹಮುಕ್ತಿಯಂತೂ ದೊರೆತಿರಲಾರದು. 

Monday, December 28, 2020

ಜನಗಣಮನ: ವಿವಾದ-ನಿರ್ವಿವಾದ


ನಮ್ಮ ರಾಷ್ಟ್ರಗೀತೆ "ಜನಗಣಮನ" ಮತ್ತದನ್ನು ಸುತ್ತುವರಿದ ವಿವಾದದ ಮೇಲೆ ಬೆಳಕು ಚೆಲ್ಲುವ ಲೇಖನವೊಂದನ್ನು ಮಿತ್ರರಾದ ದಿಲೀಪ್ ಕುಮಾರ್ ಕೆಲದಿನದ ಹಿಂದೆ ಹಂಚಿಕೊಂಡಿದ್ದರು.  ಐದು ಚರಣಗಳಲ್ಲಿರುವ ಈ ಗೀತೆಯ ಮೊದಲ ಚರಣವನ್ನಷ್ಟೇ ನಮ್ಮ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿದ್ದೇವೆ.  ಈ ಗೀತೆಯನ್ನು ಮೂಲತಃ ಬ್ರಿಟನ್ನಿನ ಚಕ್ರವರ್ತಿ ಐದನೆಯ ಜಾರ್ಜ್ ದೊರೆಯನ್ನು ಸ್ವಾಗತಿಸಲೋಸುಗ ರಚಿಸಿದ್ದೆಂದೂ, ಇದನ್ನು ರಚಿಸಿದ್ದಕ್ಕೇ ಆನಂತರದ ದಿನಗಳಲ್ಲಿ ಟಾಗೂರರಿಗೆ ನೊಬೆಲ್ ಪಾರಿತೋಷಕವೂ ಮತ್ತೆ ಕೆಲದಿನಗಳಾದ ಮೇಲೆ ನೈಟ್ ಹುಡ್ (knighthood) ಪದವಿಯೂ ದೊರಕಿತೆಂದೂ ಒಂದು ಆರೋಪ ಬಹುಕಾಲ ಈ ಗೀತೆಯನ್ನು ಸುತ್ತಿಕೊಂಡಿತ್ತು.  ಈಗಲೂ ಆಗೀಗ ತಲೆಯೆತ್ತುತ್ತಿರುತ್ತದೆ.  ಈ ವಿವಾದದ ಮೇಲೆ ಅಚ್ಚುಕಟ್ಟಾಗಿ ಬೆಳಕು ಚೆಲ್ಲುವ ಆ ಲೇಖನದಲ್ಲಿ ಒಂದು ಭಾಗ ನನ್ನ ಗಮನ ಸೆಳೆಯಿತು.  ಅದು ಹೀಗಿದೆ:

=========================================================================
"ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸಂಟಿಸಲು (ಸಂಘಟಿಸಲು?) ಬ್ರಿಟಿಷ್ ಸರಕಾರ ಅಡ್ಡಿಮಾಡಿದಾಗ ಮುಂಬೈ ಪ್ರಾಂತ್ಯದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣಾಧಿನಾಯಕನ ಪೂಜೆಯನ್ನು ಪ್ರಾರಂಭಿಸಿದ್ದರು. ೧೮೯೮ರಲ್ಲಿ ಬ್ರಿಟಿಷ್ ಸರಕಾರ ತಿಲಕರ ವಿರುದ್ಧ ರಾಜದ್ರೋಹದ ಆಪಾದನೆ ಹೊರಿಸಿ ಬಂಧಿಸಿತು. ರವೀಂದ್ರರು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ತಿಲಕರ ಕಾನೂನು ಹೋರಾಟಕ್ಕೆ ಬೆಂಬಲ ನೀಡಿದ್ದರು. ಆಗ ರವೀಂದ್ರರು ರಚಿಸಿದ ದೇಶಭಕ್ತಿಗೀತೆಗಳ ಸಂಕಲನ ನೈವೇದ್ಯ(೧೯೦೧). ಇದನ್ನು ಶ್ರೀ ಎಂ.ಆರ್.ಸಿ. ನಾಗರಾಜನ್ ಅವರು ಮೂಲ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ (ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಬೆಂಗಳೂರು ೨೦೦೭). ಇದರಲ್ಲಿರುವ ನೂರು ದೇಶಭಕ್ತಿಗೀತೆಗಳು ರವೀಂದ್ರರ ಉಜ್ವಲ ಸ್ವಾಭಿಮಾನ, ದೇಶಾಭಿಮಾನಗಳಿಗೆ ನಿದರ್ಶನಗಳಾಗಿವೆ.  ರವೀಂದ್ರರು ತಿಲಕರ ಗಣಾಧಿನಾಯಕನನ್ನು ಜನಗಣದ ಮನದ ಅಧಿನಾಯಕನಾಗಿಸಿದರು.

...

"‘ಜನಗಣಮನ’ದ ಬಗ್ಗೆ ಅಪಪ್ರಚಾರಗಳೂ ಇದ್ದುವು. ಅದನ್ನು ರವೀಂದ್ರರು ಐದನೆಯ ಜಾರ್ಜ್ ದೊರೆಯ ಸ್ವಾಗತಕ್ಕಾಗಿ ಬರೆದರೆಂದೂ ಅದರಿಂದ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಿತೆಂದೂ ಅಪಪ್ರಚಾರ ಮಾಡುತ್ತಿದ್ದರು. ಅದಕ್ಕೆ ರವೀಂದ್ರರು ಬೆಲೆಕೊಡಲಿಲ್ಲ. ಅವರ ಆತ್ಮೀಯರೊಬ್ಬರಿಗೆ ಬರೆದ ಪತ್ರದಲ್ಲಿ “ಯುಗ ಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾನು ನಾಲ್ಕನೆಯವನೊ ಐದನೆಯವನೊ ಜಾರ್ಜ್ ನ ಗುಣಗಾನ ಮಾಡಿದ್ದೇನೆಂದು, ತಮ್ಮ ಅಪರಿಮಿತ ಮೌಢ್ಯದಿಂದ ನನ್ನ ಬಗ್ಗೆ ಸಂಶಯಪಡಬಲ್ಲವರ ಪ್ರಶ್ನೆಗೆ ಉತ್ತರ ನೀಡುವುದೂ ನನ್ನ ಆತ್ಮಗೌರವಕ್ಕೆ ಅವಮಾನ” ಎಂದು ಹೇಳಿದ್ದಾರೆ."
=========================================================================

ತಿಲಕರ ಗಣನಾಯಕನೇ ರವೀಂದ್ರರ ಜನಗಣಮನದ ಅಧಿನಾಯಕನೆನ್ನುವ ಅಭಿಪ್ರಾಯಕ್ಕೆ ಲೇಖಕರ ಆಕರವೇನೋ ನನಗೆ ತಿಳಿಯದು.  ತಿಲಕರು ರಾಜದ್ರೋಹದ ಆಪಾದನೆಯ ಮೇಲೆ ಬಂಧನಕ್ಕೊಳಗಾಗಿದ್ದು ನಿಜ, ರವೀಂದ್ರರು ಹಲವು ರೀತಿಯಲ್ಲಿ ತಿಲಕರ ಬೆಂಬಲಕ್ಕೆ ನಿಂತದ್ದೂ ನಿಜ.  ತಿಲಕರ ಗಣೇಶೋತ್ಸವದ ಬಗ್ಗೆ ರವೀಂದ್ರರ ಅಭಿಪ್ರಾಯ ಎಂತಿತ್ತೋ ತಿಳಿಯದು, ಆದರೆ ದೇಶವನ್ನು ಒಗ್ಗೂಡಿಸುವ ಮಹದಾಶಯವುಳ್ಳ ಅದನ್ನವರು ಬೆಂಬಲಿಸಿದ್ದಿರಲು ಸಾಕು.  ಆದರೆ ತಿಲಕರ ಗಣಾಧಿನಾಯಕನನ್ನೇ ರವೀಂದ್ರರು ಜನಗಣಮನದ ಅಧಿನಾಯಕನಾಗಿಸಿದರು ಎನ್ನುವುದು ಊಹೆಯೆನ್ನದೇ ವಿಧಿಯಿಲ್ಲ - ಏಕೆಂದರೆ ಹಾಗೆ ಹೇಳಲು ಬೇಕಾದ ಉಲ್ಲೇಖಗಳಾಗಲೀ, ಜನಗಣಮನ ಗೀತೆಯಲ್ಲಾಗಲೀ ಯಾವ ಸೂಚನೆಯೂ ಕಂಡುಬರುವುದಿಲ್ಲ.  ಜನ'ಗಣ'ಮನ 'ಅಧಿನಾಯಕ' ಎಂಬ ಎರಡೇ ಪದಪ್ರಯೋಗದ ಸಾಮ್ಯದಿಂದ ರವೀಂದ್ರರ ಜನಗಣಮನ ಅಧಿನಾಯಕನನ್ನು ತಿಲಕರ ಗಣೇಶನೆಂದು ಅರ್ಥೈಸುವುದು ಸರಿಯಲ್ಲವೆಂದು ನನ್ನ ಅನಿಸಿಕೆ.  ಇದರ ವಿಶ್ಲೇಷಣೆಗೆ ತೊಡಗುವ ಮೊದಲು, ರವೀಂದ್ರರ ಮೂಲ ಬೆಂಗಾಲೀ ಗೀತೆಯ ಪೂರ್ಣಪಾಠವನ್ನು ನೋಡೋಣ (ಸುಲಭವಾಗಿ ಅರ್ಥವಾಗಲೆಂದು ಮೂಲಬೆಂಗಾಲೀ ಉಚ್ಚಾರಣೆಯನ್ನು ಕೂಡಿದ ಮಟ್ಟಿಗೂ ಹಿಂದೀ/ಸಂಸ್ಕೃತ ಉಚ್ಚಾರಣೆಗೆ ಪರಿವರ್ತಿಸಿದ್ದೇನೆ, ಅರ್ಥ ಬದಲಾಗಬಹುದೆನಿಸಿದ ಕಡೆ ಮೂಲ ಬೆಂಗಾಲೀ ಪದಗಳನ್ನು ಹಾಗೇ ಉಳಿಸಿಕೊಂಡಿದ್ದೇನೆ):


ಜನಗಣಮನ ಅಧಿನಾಯಕ ಜಯ ಹೇ, ಭಾರತ ಭಾಗ್ಯವಿಧಾತಾ
ಪಂಜಾಬ ಸಿಂಧು ಗುಜರಾತ ಮರಾಠಾ, ದ್ರಾವಿಡ ಉತ್ಕಲ ಬಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ, ಉಚ್ಚಲ ಜಲಧಿ ತರಂಗ
ತವ ಶುಭನಾಮೇ ಜಾಗೇ, ತವ ಶುಭ ಆಶಿಶ ಮಾಗೇ
ಗಾಹೇ ತವ ಜಯಗಾಥಾ

ಜನಗಣ ಮಂಗಳದಾಯಕ, ಜಯ ಹೇ ಭಾರತ ಭಾಗ್ಯ ವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ


ಅಹರಹ ತವ ಆಹ್ವಾನ ಪ್ರಚಾರಿತ, ಸುನಿ ತವ ಉದಾರವಾಣಿ
ಹಿಂದು ಬೌದ್ಧ ಸಿಖ ಜೈನ, ಪಾರಸಿಕ ಮುಸಲ್ಮಾನ ಕ್ರಿಸ್ತಾನಿ
ಪೂರವ ಪಶ್ಚಿಮ ಆಸೇ, ತವ ಸಿಂಹಾಸನ ಪಾಶೇ
ಪ್ರೇಮಹಾರ ಜಯಗಾಥಾ

ಜನಗಣ ಐಕ್ಯ ವಿಧಾಯಕ ಜಯ ಹೇ, ಭಾರತ ಭಾಗ್ಯ ವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ


ಪತನ ಅಭ್ಯುದಯ ಬಂಧುರ ಪಂಥಾ, ಯುಗಯುಗ ಧಾವಿತ ಜಾತ್ರೀ
ಹೇ ಚಿರಸಾರಥಿ, ತವ ರಥಚಕ್ರೇ ಮುಖರಿತ ಪಥ ದಿನರಾತ್ರೀ
ದಾರುಣ ವಿಪ್ಲವ ಮಾಝೇ, ತವ ಶಂಖಧ್ವನಿ ಬಾಜೇ
ಸಂಕಟದುಃಖ ತ್ರಾತಾ

ಜನಗಣ ಪಥ ಪರಿಚಾಯಕ, ಜಯ ಹೇ ಭಾರತ ಭಾಗ್ಯ ವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ


ಘೋರತಿಮಿರಘನನಿಬಿಡನಿಶೀಥೇ ಪೀಡಿತ ಮೂರ್ಛಿತ ದೇಶೇ
ಜಾಗ್ರತ ಛಿಲ ತವ ಅವಿಚಲ ಮಂಗಲ ನತನಯನೇ ಅನಿಮೇಶೇ
ದುಃಸ್ವಪ್ನೇ ಆತಂಕೇ, ರಕ್ಷಾ ಕರಿಲೇ ಅಂಕೇ
ಸ್ನೆಹಮಯೀ ತುಮಿ ಮಾತಾ

ಜನಗಣದುಃಖತ್ರಾಯಕ, ಜಯ ಹೇ ಭಾರತ ಭಾಗ್ಯ ವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ


ರಾತ್ರಿ ಪ್ರಭಾತಿಲ ಉದಿಲ ರವಿಚ್ಛವಿ, ಪೂರ್ವ ಉದಯಗಿರಿ ಭಾಲೇ
ಗಾಹೆ ವಿಹಂಗಮ ಪುಣ್ಯ ಸಮೀರಣ, ನವಜೀವನರಸ ಢಾಲೇ
ತವ ಕರುಣಾರುಣ ರಾಗೇ, ನಿದ್ರಿತಭಾರತ ಜಾಗೇ
ತವಚರಣೇ ನತ ಮಾಥಾ

ಜಯ ಜಯ ಜಯ ಹೇ, ಜಯ ರಾಜೇಶ್ವರ, ಭಾರತ ಭಾಗ್ಯವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ

ಮೊದಲಿಗೆ, ತಿಲಕರ ಗಣನಾಥ ಯಾವ ಅಮೂರ್ತಕಲ್ಪನೆಯೂ ಇಲ್ಲ.  ದೇಶದ ಬಹುತೇಕರ ಮನೆಮನೆಗಳಲ್ಲೂ ಪೂಜಿಸಲ್ಪಡುವ ಆನೆಮೊಗದ, ಡೊಳ್ಳುಹೊಟ್ಟೆಯ 'ಗಣಪತಿಬಪ್ಪ'ನೇ ಈತ.  ಜನ ಸೇರಲು ಸರ್ಕಾರ ಹಾಕಿದ ನಿರ್ಬಂಧವನ್ನು ಮುರಿಯುವ ಸಲುವಾಗಿ, ಗಣೇಶನ ನೆಪದಿಂದ ಜನರು ಹೊರಬಂದು ಒಂದಾಗಬೇಕೆಂಬ ಉದ್ದೇಶದಿಂದ ತಿಲಕರು ಆರಂಭಿಸಿದ್ದು ಸಾರ್ವಜನಿಕ ಗಣೇಶೋತ್ಸವ.  ಇದಕ್ಕಿದ್ದ ರಾಜಕೀಯಕಾರಣಗಳನ್ನು ಬಿಟ್ಟರೆ ಇದಕ್ಕೆ ಇನ್ನಾವ ಆಧ್ಯಾತ್ಮಿಕ ಕಾರಣಗಳೂ ಇರಲಿಲ್ಲ.  ಆದರೆ ರವೀಂದ್ರರ ಅಮೂರ್ತಕಲ್ಪನೆಯ "ಜನಗಣಮನದ ಅಧಿನಾಯಕ" ಮೂರ್ತರೂಪದಲ್ಲಾಗಲಿ, ಸಂಕೇತಗಳಲ್ಲಾಗಲಿ, ಕಲ್ಪನೆಗಳಲ್ಲಾಗಲಿ ತಿಲಕರ ಗಣೇಶನನ್ನು ಹೋಲುವುದೇ ಇಲ್ಲ.

ಇಷ್ಟಕ್ಕೆ ಪ್ರತಿಕ್ರಿಯೆ ಬರೆಯುತ್ತಾ, ರಾಷ್ಟ್ರಗೀತೆಯ ಸುತ್ತಣ ವಿವಾದವನ್ನೂ ಇನ್ನಷ್ಟು ವಿವರವಾಗಿ ವಸ್ತುನಿಷ್ಠವಾಗಿ ಪರಿಶೀಲಿಸುವ ಅಗತ್ಯವಿದೆಯೆನಿಸಿತು.  ಅದರ ಫಲವೇ ಪ್ರಸ್ತುತ ಲೇಖನ.  ಮೊದಲನೆಯದಾಗಿ, ಇದರ 'ರಾಷ್ಟ್ರಗೀತೆ'ಯ ಆಯಾಮವನ್ನು ಬದಿಗಿಟ್ಟರೆ, ಇಡೀ ಗೀತೆ ಒಂದು ಉಜ್ವಲವಾದ, ಉನ್ನತಭಾವಪ್ರೇರಕವಾದ ಗೀತೆಯೆನ್ನುವುದರಲ್ಲಿ ಎರಡು ಮಾತಿಲ್ಲ.  ಅದನ್ನು ಆಮೇಲೆ ಪರಿಶೀಲಿಸೋಣ.  ಇದನ್ನು ಸುತ್ತುವರಿದ ವಿವಾದ ಮೂಲಲೇಖನದ ಮುಖ್ಯವಸ್ತುವಾದ್ದರಿಂದ ಅದನ್ನು ಮೊದಲು ಪರಿಶೀಲಿಸೋಣ.

ಇದು ಜಾರ್ಜ್ ದೊರೆಯನ್ನು ಕುರಿತ ಸ್ತುತಿ ಎಂಬ ಮಾತಿಗೆ ಪ್ರತಿಕ್ರಿಯಿಸುತ್ತ ಕವಿ, ಹಾಗೆ ಪ್ರಶ್ನೆ ಕೇಳಿದವರದ್ದು "ಅಪರಿಮಿತಮೌಢ್ಯ" ಎಂದಿದ್ದಾರೆಂದು ಮೂಲಲೇಖನ ತಿಳಿಸುತ್ತದೆ (“ಯುಗ ಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾನು ನಾಲ್ಕನೆಯವನೊ ಐದನೆಯವನೊ ಜಾರ್ಜ್ ನ ಗುಣಗಾನ ಮಾಡಿದ್ದೇನೆಂದು, ತಮ್ಮ ಅಪರಿಮಿತ ಮೌಢ್ಯದಿಂದ ನನ್ನ ಬಗ್ಗೆ ಸಂಶಯಪಡಬಲ್ಲವರ ಪ್ರಶ್ನೆಗೆ ಉತ್ತರ ನೀಡುವುದೂ ನನ್ನ ಆತ್ಮಗೌರವಕ್ಕೆ ಅವಮಾನ”).  ಈ ಅನುವಾದದ ಆಕರ ತಿಳಿದಿಲ್ಲ, ಆದರೆ 'ವಿರೋಧಿ'ಗಳದು 'ಅಪರಿಮಿತಮೌಢ್ಯ' ಎಂದು ಕರೆದು ವೈಯಕ್ತಿಕ ದಾಳಿ ಮಾಡುವುದು ಕವಿಯ ಉದ್ದೇಶವಾಗಿರಲಿಲ್ಲವೆಂಬುದು, ಕವಿಯ ಇದೇ ಮಾತಿನ ಇಂಗ್ಲಿಷ್ ಅನುವಾದವನ್ನು ನೋಡಿದರೆ ತಿಳಿದುಬಿಡುತ್ತದೆ - 1939ರ ಮಾರ್ಚ್ 19ರ ತಮ್ಮ ಪತ್ರವೊಂದರಲ್ಲಿ ಟ್ಯಾಗೋರ್ ಹೀಗೆ ಹೇಳುತ್ತಾರೆ “I should only insult myself if I cared to answer those who consider me capable of such unbounded stupidity as to sing in praise of George the Fourth or George the Fifth as the Eternal Charioteer leading the pilgrims on their journey through countless ages of the timeless history of mankind (ಯುಗಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾಲ್ಕನೆಯವನೊ ಐದನೆಯವನೊ ಜಾರ್ಜ್ ನ ಗುಣಗಾನ ಮಾಡುವ ಎಣೆಯಿಲ್ಲದ ಮೂರ್ಖತನ ನನ್ನದೆನ್ನುವವರಿಗೆ ಉತ್ತರಿಸಹೋಗುವುದೂ ನನಗೆ ನಾನೇ ಮಾಡಿಕೊಳ್ಳುವ ಅಪಮಾನ" - ಎರಡೂ ಅನುವಾದಗಳ ಸೂಕ್ಷ್ಮವ್ಯತ್ಯಾಸ ಗಮನಿಸಿ) - Purvasa, Phalgun, 1354, p738.  ರವೀಂದ್ರರಿಗೆ ಹೀಗೆನ್ನಿಸಲೂ ಕಾರಣವಿದೆ, ಅದನ್ನು ಆಮೇಲೆ ನೋಡೋಣ.  ಸದ್ಯಕ್ಕಂತೂ ಅಪರಿತಮೌಢ್ಯದ ಶಂಕೆಗೊಳಗಾಗದೇ, ಈ ಗೀತೆ ಯಾವ ರೀತಿಯಲ್ಲಾದರೂ ಜಾರ್ಜ್ ದೊರೆಗೆ ಅನ್ವಯಿಸುವುದೇ ಎಂಬುದನ್ನೊಮ್ಮೆ ಪರಿಶೀಲಿಸೋಣ.

ಮೊದಲಿಗೆ, ದೇಶ-ಭಾಷೆಗಳು ಬಹಳ ಭಾವನಾತ್ಮಕವಾದ ವಿಷಯಗಳು, ಮತ್ತು ಈ ಭಾವನೆಯಲ್ಲಿ ಅತ್ಯುತ್ಕಟವಾದ ಭಾವನೆ ತಾಯಿಯನ್ನು ಕುರಿತದ್ದು.  ದೇಶವನ್ನಾಗಲೀ ಭಾಷೆಯನ್ನಾಗಲೀ ಹೆಣ್ಣಿಗೆ, ಮಾತೆಗೆ ಹೋಲಿಸುವುದೇ ಸಾಮಾನ್ಯವಾಗಿ ಎಲ್ಲೆಡೆಯೂ ಪ್ರಚಲಿತವಿರುವ ರೂಢಿ.  ಭಾರತದಲ್ಲಿರಲಿ, ಪಾಶ್ಚಾತ್ಯರಲ್ಲೂ ದೇಶವೊಂದನ್ನು ಕುರಿತು ಮಾತಾಡುವಾಗ 'her' ಎನ್ನುವ ಸರ್ವನಾಮವನ್ನು ಬಳಸುವರೇ ನಿನಾ 'him' ಎಂಬುದನ್ನಲ್ಲ; ಹಾಗೆಯೇ ಮನೆಮಾತು ತಾಯ್ನುಡಿ, ಮಾತೃಭಾಷೆ, Mother-tongue ಎನ್ನಿಸಿಕೊಳ್ಳುತ್ತದೆಯೇ ಹೊರತು ತಂದೆನುಡಿ, ಪಿತೃಭಾಷೆ, Father-tongue ಎನ್ನುವುದಿಲ್ಲ.  ಸ್ವದೇಶವು ತಾಯ್ನೆಲ, ಮಾತೃಭೂಮಿ Mother-land ಆಗುತ್ತದೆಯೇ ಹೊರತು ಹೊರತು ತಂದೆನೆಲ, ಪಿತೃಭೂಮಿ Father-land ಆಗುವುದಿಲ್ಲ.  ಭಾಷಿಕವಾಗಿಯೂ, ಭಾವನಾತ್ಮಕವಾಗಿಯೂ ನೆಲ-ನುಡಿಗಳು ಹೆಣ್ಣು.  ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿಗರೀಯಸಿ ಎನ್ನುವುದೇ ಈ ನೆಲದ ಭಾವ.  ಹೀಗಿರುವಾಗ "ಭಾರತ ಭಾಗ್ಯವಿಧಾತ"ನ (ಆತ ತಂದೆಯೂ ಅಲ್ಲ, ವಿಧಾತ, ಸ್ವಾಮಿ, ಪ್ರಭು), ಈ ನೆಲದ ಭಾವಕ್ಕೆ ಹೊರಗು.  ಆದ್ದರಿಂದ ಅದೆಷ್ಟೇ ಉಜ್ವಲವಾದ ದೇಶಭಕ್ತಿಯಿಂದ ಕೂಡಿದ್ದರೂ ಅದು ಈ ನೆಲದ ಬಗ್ಗೆ "ವಂದೇ ಮಾತರಂ" ಉದ್ದೀಪಿಸಬಲ್ಲ ಉತ್ಕಟಭಾವನೆಗಳನ್ನು ಉದ್ದೀಪಿಸಲಾರದು.

ಇನ್ನು ಜನಗಣದೊಡನೆ ಆ "ಜನಗಣಮನ ಅಧಿನಾಯಕ"ನ ಸಂಬಂಧವನ್ನು ನೋಡಿ - ಆತ "ಭಾರತ ಭಾಗ್ಯವಿಧಾತ" - ಭಾರತದ ಭಾಗ್ಯವನ್ನು ದಯಪಾಲಿಸುವವನು, ಭಾರತದ ಹಣೆಬರಹ ಬರೆಯುವ ವಿಧಾತ, ಬ್ರಹ್ಮ.  ನಮ್ಮ ಭಾಗ್ಯವನ್ನು ಆತ ದಯಪಾಲಿಸುತ್ತಾನೆಯೇ ಹೊರತು, ನಮ್ಮ ಭಾಗ್ಯದಲ್ಲಿ ಆತ ಪಾಲ್ಗೊಳ್ಳಲಾರ.  ಅವನು ದೊರೆ - ಇಡೀ ದೇಶ, ಜನಸಮುದಾಯಗಳು, ನದಿಸಾಗರಗಳು ಅವನ ಶುಭನಾಮವನ್ನು ನೆನೆಸಿಕೊಂಡು ಏಳುತ್ತದೆ, ಆತನ ಉದಾರವಾಣಿಯನ್ನು ಕೇಳಿ ಸಕಲಜನರೂ ಆತನ "ಸಿಂಹಾಸನ"ದ ಸುತ್ತ ನೆರೆಯುತ್ತಾರೆ, ಆತನಿಗೆ ಪ್ರೇಮದಿಂದ ಜಯಕಾರ ಹಾಕುತ್ತಾರೆ, ಯುಗಯುಗಗಳಿಂದ ಏರಿಳಿತದ ಹಾದಿಯಲ್ಲಿ ಸಾಗಿರುವ ಜನಜಾತ್ರೆಗೆ ಹಗಲಿರುಳು ದಾರಿತೋರುವುದು ಆ ಚಿರಸಾರಥಿಯ ರಥದ ಚಕ್ರಗಳು, ಅವನ ಶಂಖಧ್ವನಿ ನಮ್ಮ ಸಕಲ ಸಂಕಟವಿಪ್ಲವಗಳಿಂದಲೂ ಮೇಲೆತ್ತುವ ಮಹಾಶಕ್ತಿ; "ಘೋರಾಂಧಕಾರದಲ್ಲಿ ಮೂರ್ಛಿತವಾಗಿ ಮಲಗಿರುವ ಈ ದೇಶ"ವನ್ನು ಮೇಲೆಬ್ಬಿಸಲು ಆತನ ಮಂಗಲದೃಷ್ಟಿಯೇ ಬೇಕು.  ಇಂತಿರುವ ಹೀಗೆ ಜನಗಣದ ದುಃಖತ್ರಾಯಕನಾದ ಭಾರತಭಾಗ್ಯವಿಧಾತನು ಅವರನ್ನು ತೊಡೆಯಮೇಲಿರಿಸಿಕೊಂಡು ಸಲಹುವ ತಾಯಿಯೂ ಆಗಿದ್ದಾನೆ (ತಾಯಿಲ್ಲದ ತಬ್ಬಲಿಗಳಿಗೆ ತಂದೆಯೇ ತಾಯಿಯಷ್ಟೇ? ಆದರೇನು, ತಂದೆಯೆಂಬ, ವಿಧಾತನೆಂಬ, ದೊರೆಯೆಂಬ ಭಾವದಲ್ಲಿ ಇದೊಂದು ಸಣ್ಣ ಆಯಾಮವಷ್ಟೆ).  ರಾತ್ರೆ ಕಳೆದು ಉದಯಾದ್ರಿಯ ಹಣೆಯ ಮೇಲೆ ಮೂಡುವ ಭಾಸ್ಕರ, ಚಿಲಿಪಿಲಿಗುಟ್ಟುವ ಹಕ್ಕಿಗಳು, ಬೀಸುವ ತಂಗಾಳಿ ಎಲ್ಲವೂ ಆತನ ಕರಣುರಾರುಣರಾಗವನ್ನೇ ಹಾಡುತ್ತಾ, ಈ "ನಿದ್ರಿಸುತ್ತಿರುವ ಭಾರತ"ವನ್ನು ಎಚ್ಚರಿಸುತ್ತಿವೆ.  ಇಂತಹ ಭಾರತಭಾಗ್ಯವಿಧಾತನಾದ "ರಾಜೇಶ್ವರ"ನ ಚರಣಗಳಿಗೆ ನಾವು ತಲೆವಾಗುತ್ತಾ ಜಯಗೀತೆ ಹಾಡುತ್ತೇವೆ.

ಗೀತೆಯುದ್ದಕ್ಕೂ ಈ ಭಾರತಭಾಗ್ಯವಿಧಾತ ಮತ್ತು ಭಾರತದ (ಭಾರತನಿವಾಸಿಗಳಾದ ನಮ್ಮ) ಸಂಬಂಧ ತಾಯಿ ಮಕ್ಕಳ ಹೊಕ್ಕುಳಬಳ್ಳಿ ಸಂಬಂಧವಲ್ಲ, ಅಲ್ಲಿ ಸಲುಗೆಯಿಲ್ಲ, ಆತ್ಮೀಯತೆಯಿಲ್ಲ, ಅಪ್ಪುಗೆಯಿಲ್ಲ, ಅದರಿಂದಲೇ ನಮ್ಮ ಹಕ್ಕಾಗಿ ಬರುವ 'ನನ್ನದು' ಎನ್ನಿಸುವ ಯಾವ ಭಾವವೂ ಇಲ್ಲ, ಬದಲಿಗೆ ಆ ಸಂಬಂಧ - ದೇವ ಮತ್ತು ಹುಲುಮನುಜರದ್ದು, ರಾಜ-ಪ್ರಜೆಗಳದ್ದು, ಯಜಮಾನ-ಸೇವಕರದ್ದು; ಆತನ 'ವಿಧಾಯಕ'ತೆ, ಆತನ ಸಿಂಹಾಸನ, ಆತನ ರಥಚಕ್ರ, ಆತನ ಶಂಖಧ್ವನಿ, ಆತನ ರಾಜೇಶ್ವರ ಪದವಿ - ಇದನ್ನಲ್ಲದೇ ಬೇರೇನನ್ನೂ ಸೂಚಿಸುವುದಿಲ್ಲ.  ನಮ್ಮ ಭಾಗ್ಯಸರ್ವಸ್ವವೂ ಅವನ ಕೈಯಲ್ಲಿದೆ, ಅವನ ದಯೆಯಿಂದ ಬದುಕು ಸಾಗುತ್ತಿದೆ.  ನಾವು ಆತನ ಪಾದಗಳಿಗೆ ಹಣೆಯೊತ್ತಿ, ಜಯಗೀತೆ ಹಾಡುತ್ತ ಬದುಕುತ್ತೇವೆ.  ಇಂತಹ ಶರಣಾಗತಿಗೆ ನಿಷ್ಠೆಗೆ ಅರ್ಹನಾದ ಆ "ಭಾಗ್ಯವಿಧಾತ" ಒಂದೋ ಆ ಪರಮಾತ್ಮನಿರಬೇಕು, ಅಥವಾ ಈ ದೇಶವನ್ನಾಳುವ ದೊರೆಯಿರಬೇಕು.  ಈ ಗೀತೆಯಲ್ಲಿ ದೇಶದ ಪ್ರಸಕ್ತಿಯಿರದಿದ್ದರೆ ಅದೊಂದು ದೇವಪ್ರಾರ್ಥನೆಯ ಗೀತೆಯೆಂದು ಸುಲಭವಾಗಿ ಅರ್ಥೈಸಬಹುದಿತ್ತು - ವಾಸ್ತವದಲ್ಲಿ ಇದು ಪ್ರಾರ್ಥನಾಗೀತೆಯೇ - ಈ ಗೀತೆಯನ್ನು ಬ್ರಹ್ಮಸಮಾಜವು ಬ್ರಹ್ಮಗೀತೆಯೆಂದು ಅಂಗೀಕರಿಸಿ ಪ್ರಕಟಿಸಿದೆ, ಅಲ್ಲದೇ ಮೇಲಿನ ಲೇಖನದಲ್ಲೂ ವಿವರಿಸಿದಂತೆ, ರವೀಂದ್ರರ ಹಲವು ಪ್ರಾರ್ಥನಾಗೀತೆಗಳು ಇದೇ ತಂದೆ-ಈಶ ಭಾವವನ್ನು ಹೊರಸೂಸುತ್ತವೆ.  ಅವರ ಅಂತಹ ಒಂದೆರಡು ಮನೋಜ್ಞವಾದ ಪ್ರಾರ್ಥನಾಗೀತೆಗಳನ್ನು ಇಲ್ಲಿ ಕೇಳಬಹುದು:

https://youtu.be/YgFMeVceP34 (ಪಾದಪ್ರಾಂತೇ ರಖೋ ಸಬಕೆ - ಸ್ವಾಗತಲಕ್ಷ್ಮಿ ದಾಸ್ ಗುಪ್ತಾ)
https://youtu.be/KfzkYf-2vaU (ಬಹೆ ನಿರಂತರ ಅನಂತ - ಡಾ. ಬಾಲಮುರಳೀಕೃಷ್ಣ)
https://youtu.be/I7Nj2G4g4hQ (ತುಮಿ ಆಮದೆರ್ ಪಿತಾ - ಸ್ವಾಗತಲಕ್ಷ್ಮಿ ದಾಸ್ ಗುಪ್ತಾ)

ಒಂದು ದೈವಪ್ರಾರ್ಥನೆಯಾಗಿ "ಜನಗಣಮನ" ಒಂದು ಉನ್ನತಭಾವಪ್ರೇರಕವಾದ ಗೀತೆಯೆನ್ನುವುದರಲ್ಲಿ ಎರಡು ಮಾತಿಲ್ಲ.  ಆದರೆ ಇಲ್ಲಿ ದೇಶದ ಪ್ರಸಕ್ತಿಯೂ ಇದ್ದು, ಇದೊಂದು ದೇಶಭಕ್ತಿಗೀತೆಯೆಂದೇ ಖ್ಯಾತವಾಗಿದೆ.  ರವೀಂದ್ರರೂ ಈ ಗೀತೆಯನ್ನು ಬರೆದ ಹಿನ್ನೆಲೆಯನ್ನು ವಿವರಿಸುತ್ತಾ ಇದೊಂದು ದೇಶಭಕ್ತಿಗೀತೆಯೆಂದೇ ಹೇಳಿಕೊಂಡಿದ್ದಾರೆ (ಅದನ್ನು ಆಮೇಲೆ ನೋಡೋಣ).  ಆದರೆ ವಿಧಾಯಕ (ವಿಧಿಸುವವನು, ಶಾಸಿಸುವವನು, ಅಧಿಪತಿ), ಸಿಂಹಾಸನ, ರಾಜೇಶ್ವರ ಮೊದಲಾದ ಪದಪ್ರಯೋಗಗಳು ಇದನ್ನು ದೇಶಭಕ್ತಿಗೀತೆಯೆನ್ನುವುದಕ್ಕಿಂತ ಒಬ್ಬ ಚಕ್ರವರ್ತಿಗೆ ದೇಶದ ಭಕ್ತಿಯನ್ನು ನಿಷ್ಠೆಯನ್ನು ಸೂಚಿಸುವ ಗೀತೆಯನ್ನಾಗಿಸಿದೆಯೆಂದರೆ ಸುಳ್ಳಾಗಲಾರದು.  ಸಹಜವಾಗಿಯೇ ಆ ಚಕ್ರವರ್ತಿ, ರಾಜೇಶ್ವರ ಯಾರು ಎಂಬ ಪ್ರಶ್ನೆ ಬರುತ್ತದೆ.  ಈಗ, ಈ ಪ್ರಶ್ನೆಯನ್ನು ಇನ್ನಷ್ಟು ದಟ್ಟವಾಗಿಸಿ, ಅದನ್ನು ಐದನೆಯ ಜಾರ್ಜ್ ದೊರೆಗೆ ಕಟ್ಟಲು ಕಾರಣವಾದ ಸನ್ನಿವೇಶಗಳನ್ನು ನೋಡೋಣ:

1911 - ಆಗಿನ್ನೂ ಪೂರ್ಣಸ್ವರಾಜ್ಯದ ಬೇಡಿಕೆ ಶುರುವಾಗಿರಲಿಲ್ಲ.  ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯದ ಅಧೀನರಾಷ್ಟ್ರವಾಗಿ ಮಾಡಿ 'ಡೊಮಿನಿಯನ್' ಸ್ಥಾನಮಾನ ನೀಡಿ ಒಂದು ಮಟ್ಟದ ಸ್ವಾಯತ್ತತೆ ನೀಡಬೇಕೆಂಬ ಬೇಡಿಕೆಯನ್ನು ಭಾರತದ ಸ್ವಾತಂತ್ರ್ಯಚಳುವಳಿಯ ನಾಯಕರು ಮುಂದಿಟ್ಟಿದ್ದರು.  ಇದರಿಂದ ಭಾರತ ಬಹುಮಟ್ಟಿಗೆ ಸ್ವತಂತ್ರವಾಗುವುದಾದರೂ ಅದು ಬ್ರಿಟನ್ನಿನ ಧ್ವಜದಡಿಯಲ್ಲಿ, ಹೆಸರಿನಲ್ಲಾದರೂ ಬ್ರಿಟನ್ ಅರಸೊತ್ತಿಗೆಗೆ ಅಧೀನವಾಗಿ ಬದುಕಬೇಕಿತ್ತು.  ಬ್ರಿಟಿಷರ ಆಡಳಿತವು ತೊಲಗಿ ಅಷ್ಟರಮಟ್ಟಿಗಾದರೂ ಸ್ವಾತಂತ್ರ್ಯ ದೊರಕಲಿ ಸದ್ಯಕ್ಕೆ ಎಂಬುದು ರಾಷ್ಟ್ರನಾಯಕರ ಇರಾದೆಯಾಗಿತ್ತು.  ಆದ್ದರಿಂದ ಯಾವುದು ಹೇಗೇ ಇರಲಿ, ಸದ್ಯಕ್ಕಂತೂ ಬ್ರಿಟಿಷ್ ಅರಸೊತ್ತಿಗೆಗೆ ನಿಷ್ಠವಾಗಿರುವುದು ಕಾಂಗ್ರೆಸ್ಸಿಗೆ ಅನಿವಾರ್ಯವಾಗಿತ್ತು.  1911ರ ಕಾಂಗ್ರೆಸ್ ಅಧಿವೇಶನದ ಸಮಯದಲ್ಲಿದ್ದ ಪರಿಸ್ಥಿತಿ ಇದು.  ಇದಲ್ಲದೇ ಇದೇ ಸುಮಾರಿನಲ್ಲಿ ಮತ್ತೆರಡು ಮಹತ್ವದ ಬೆಳವಣಿಗೆಗಳಾದುವು.  ಜೂನ್ 22ರಂದು ಐದನೆಯ ಜಾರ್ಜ್ ಬ್ರಿಟಿಷ್ ಸಾಮ್ರಾಜ್ಯದ ದೊರೆಯಾಗಿ, ಭಾರತದ ಚಕ್ರವರ್ತಿಯಾಗಿ ಅಧಿಕಾರ ಸ್ವೀಕರಿಸಿದ.  ಡಿಸೆಂಬರ್ 12ರಂದು ಕಲ್ಕತ್ತಾದ ಕೊರೊನೇಶನ್ ಮೈದಾನದಲ್ಲಿ ಅದ್ದೂರಿಯಾದ ದರ್ಬಾರ್ ಸಮಾರಂಭ ನಡೆಯಿತು.  ದೇಶದ ಎಲ್ಲ ರಾಜರು, ಗಣ್ಯರು ಸೇರಿದಂತೆ ಸಾವಿರಾರು ಜನ ನೂತನ ಚಕ್ರವರ್ತಿ-ಚಕ್ರವರ್ತಿನಿಯರೆದುರು ನಡುಬಾಗಿಸಿ ಮುಜುರೆ ಮಾಡಿ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ತಮ್ಮ ನಿಷ್ಠೆ ಪ್ರದರ್ಶಿಸಿದರು.  ಇದೇ ಸಂದರ್ಭಕ್ಕೆ ಪೂರ್ವಭಾವಿಯಾಗಿ, ರವೀಂದ್ರರ ಮಿತ್ರನಾದ ಬ್ರಿಟಿಷ್ ಉನ್ನತ ಅಧಿಕಾರಿಯೊಬ್ಬ, ಭಾರತಕ್ಕೆ ಆಗಮಿಸಲಿರುವ ಜಾರ್ಜ್ ಚಕ್ರವರ್ತಿಗಾಗಿ ಒಂದು ಸ್ವಾಗತಗೀತೆಯನ್ನು ಬರೆಯಲು ಸಾಧ್ಯವೇ ಎಂದು ರವೀಂದ್ರರನ್ನು ಕೇಳಿದ್ದ (ಇದು, ಅದಾದ ಅನೇಕ ವರ್ಷಗಳನಂತರ, 1937ರಲ್ಲಿ, ರವೀಂದ್ರರೇ ತಮ್ಮ ಪತ್ರವೊಂದರಲ್ಲಿ ನೀಡಿರುವ ವಿವರಣೆ - ಅವರ ಪೂರ್ಣವಿವರಣೆಯನ್ನು ಆಮೇಲೆ ನೋಡೋಣ).   ರವೀಂದ್ರರು ಈ ಬೇಡಿಕೆಯನ್ನು ಒಪ್ಪಿದರೋ ಬಿಟ್ಟರೋ, ಗೀತೆಯನ್ನಂತೂ ಬರೆದರು - ಅದೇ, "ಜನಗಣಮನದ ಅಧಿನಾಯಕನಾದ ಭಾರತಭಾಗ್ಯವಿಧಾತ"ನಿಗೆ ಜಯವನ್ನು ಹಾಡುವ ಪ್ರಸ್ತುತ ಗೀತೆ.  ಮೇಲಿನ ದರ್ಬಾರ್ ನಡೆದ ಎರಡೇ ವಾರಗಳನಂತರ ಡಿಸೆಂಬರ್ 27ರಂದು ಕಲ್ಕತ್ತಾದಲ್ಲೇ ನಡೆದ 26ನೆಯ ಕಾಂಗ್ರೆಸ್ ಅಧಿವೇಶನದ ಎರಡನೆಯ ದಿನ, ಕಲಾಪದ ಆರಂಭದಲ್ಲಿ ಈ ಗೀತೆಯನ್ನು ಪ್ರಾರ್ಥನಾಗೀತೆಯಾಗಿ ಹಾಡಿದರು ಕೂಡ (ಆ ದಿನ ಅವರೊಟ್ಟಿಗೆ ದನಿಗೂಡಿಸಿದ್ದು ಅವರ ಅಕ್ಕನ ಮಗಳಾದ, ಖ್ಯಾತ ಮಹಿಳಾವಾದಿ ಸರಳಾದೇವಿ ಚೌಧುರಾಣಿ).  ಆನಂತರ ಬಂದಿದ್ದ ಶುಭಸಂದೇಶಗಳನ್ನು ಓದಲಾಯಿತು ಮತ್ತು ನೂತನ ಚಕ್ರವರ್ತಿ-ಚಕ್ರವರ್ತಿನಿಯರಿಗೆ ನಿಷ್ಠಾಪೂರ್ಣಸ್ವಾಗತವನ್ನು ಕೋರುವ ನಿರ್ಣಯವನ್ನು ಅಂಗೀಕರಿಸಲಾಯ್ತು.  ತದನಂತರ ಚಕ್ರವರ್ತಿ-ಚಕ್ರವರ್ತಿನಿಯರನ್ನು ಸ್ವಾಗತಿಸುವ (ಇದೇ ಸರಳಾದೇವಿಯವರ ಪತಿ, ಪಂಜಾಬಿನ ಪತ್ರಕರ್ತ, ಕಾಂಗ್ರೆಸ್ ನಾಯಕ ರಾಂ ಭುಜ್ ಚೌಧುರಿಯವರು ರಚಿಸಿದ) "ಬಾದಶಾಹ್ ಹಮಾರಾ" ಎಂಬ ಗೀತೆಯನ್ನು ಹಾಡಲಾಯಿತು.

ಮೇಲಿನದು ಭಾರತೀಯಪತ್ರಿಕೆಗಳ ಮತ್ತು ಕಾಂಗ್ರೆಸ್ ಅಧಿವೇಶನದ ವಾರ್ಷಿಕವರದಿ.  ಪಾಶ್ಚಾತ್ಯಪತ್ರಿಕೆಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, "ಚಕ್ರವರ್ತಿಯನ್ನು ಸ್ವಾಗತಿಸಲೆಂದೇ ವಿಶೇಷವಾಗಿ ರಚಿಸಿದ ಬೆಂಗಾಲೀ ಗೀತೆಯನ್ನು ಕವಿ ರವೀಂದ್ರನಾಥ ಟಾಗೋರರು ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದರು" ಎಂದೇ ವರದಿ ಮಾಡಿದುವು:

"The Bengali poet Rabindranath Tagore sang a song composed by him specially to welcome the Emperor." (Statesman, 28 December 1911)

"The proceedings began with the singing by Rabindranath Tagore of a song specially composed by him in honour of the Emperor." (Englishman, 28 December 1911) 

ಈ ಗೀತೆಯನ್ನು ರವೀಂದ್ರರು ಐದನೆಯ ಜಾರ್ಜ್ ದೊರೆಯ ಸ್ವಾಗತಕ್ಕಾಗಿ ಬರೆದರೋ ಇಲ್ಲವೋ, ಕಾಂಗ್ರೆಸ್ಸಿಗಾಗಿಯೇ ಬರೆದರೋ ಇಲ್ಲವೋ, ಕೊನೆಗೆ ಅವರೇ ಹಾಡಿದರೋ ಇಲ್ಲವೋ, ಆದರೆ ರಚನೆಯಾದ ಕೆಲವೇ ದಿನಗಳಲ್ಲಿ ಅದು ಉಪಯೋಗಿಸಲ್ಪಟ್ಟ ಸಂದರ್ಭ, ಮತ್ತು ಈಗಾಗಲೇ ವಿವರಿಸಿದಂತೆ ಗೀತೆಯ ಹೂರಣ, ಭಾಷೆ, ಭಾವ, ಅದು ಐದನೆಯ ಜಾರ್ಜ್ ದೊರೆಯನ್ನು ಕುರಿತದ್ದೇ ಎಂಬ ಸ್ಪಷ್ಟ ಅಭಿಪ್ರಾಯವನ್ನು ರೂಪಿಸಿಬಿಟ್ಟಿತು.  ಕವಿಗೆ ಅದನ್ನು ಮೀರಿದ ಉನ್ನತ ಉದ್ದೇಶವೊಂದಿದ್ದರೆ, ಅದು ಕೇವಲ ಕಾವ್ಯಸತ್ಯವಾಗಿ, ರವೀಂದ್ರರ ಸಾಹಿತ್ಯವನ್ನರಿತ ದೇಶಭಕ್ತ ಸಹೃದಯರಿಗಷ್ಟೆ ಅರಿವಿಗೆ ಬರುವಂಥದ್ದಾಗಿತ್ತೇ ಹೊರತು, ಕಾವ್ಯಸೂಕ್ಷ್ಮವನ್ನರಿಯದ ಜನಸಾಮಾನ್ಯರ, ರಾಜಕೀಯಸ್ಥರ ಅರಿವಿಗೆ ಸುತರಾಂ ಬರುವಂಥದ್ದಾಗಿರಲಿಲ್ಲ, ಏಕೆಂದರೆ ಗೀತೆಯು ಮೇಲ್ನೋಟಕ್ಕೇ ತೋರುತ್ತಿದ್ದ ಅಭಿಪ್ರಾಯ ಸ್ಪಷ್ಟವಿತ್ತು.  ಕುತೂಹಲದ ಅಂಶವೆಂದರೆ, ತಮ್ಮ ದೇಶಭಕ್ತಿಯ ಪರಿಕಲ್ಪನೆಗಳಿಗೇ ಧಕ್ಕೆತರುವಂತಿದ್ದ ಈ ಪತ್ರಿಕಾವರದಿಗಳನ್ನು ಕುರಿತ ಟಾಗೋರರ ಮೌನ.

ಇದಾಗಿ ಎರಡು ವರ್ಷಗಳಲ್ಲಿ ಅವರ ಗೀತಾಂಜಲಿ ಇಂಗ್ಲಿಷ್ ಅನುವಾದಕ್ಕಾಗಿ ನೊಬೆಲ್ ಪ್ರಶಸ್ತಿಯೂ, ಮತ್ತೆರಡು ವರ್ಷಗಳಲ್ಲಿ 1915ರಲ್ಲಿ ಬ್ರಿಟಿಷ್ ಸರ್ಕಾರದ ಅತ್ಯುನ್ನತ ನಾಗರಿಕಗೌರವವಾದ 'ನೈಟ್ ಹುಡ್' ಟಾಗೋರರಿಗೆ ದೊರೆಯಿತು.  ರವೀಂದ್ರರು ಚಕ್ರವರ್ತಿಯನ್ನು ಹೊಗಳಿದ್ದಕ್ಕಾಗಿಯೇ ಅವರಿಗೆ ಈ ಗೌರವ ಸಂದಿತು ಎನ್ನುವುದು ನನ್ನ ವಾದವಂತೂ ಅಲ್ಲ, ಖಂಡಿತಾ ಅಲ್ಲ.  ಅದೇ ನಿಜವಾಗಿದ್ದರೆ ಇನ್ನೂ ಸ್ಪಷ್ಟವಾಗಿಯೇ ಚಕ್ರವರ್ತಿಯನ್ನು ಹಾಡಿ ಹೊಗಳಿದ ಅನೇಕರಿಗೆ, ಮೇಲಿನ ಉದಾಹರಣೆಯಲ್ಲೇ ರಾಂ ಭುಜ್ ಚೌಧುರಿಯವರಿಗೂ ಇದು ಸಲ್ಲಬಹುದಿತ್ತು.  ಆದ್ದರಿಂದ ಇದು ಸ್ಪಷ್ಟವಾಗಿಯೇ ಕಾಕತಾಳೀಯವಷ್ಟೇ, ಆದರೆ ಮಹತ್ವಪೂರ್ಣವಾಗಿ ಎದ್ದು ಕಾಣುವ ಕಾಕತಾಳೀಯ - ದೇಶಕಂಡ ಮಹೋನ್ನತ ವ್ಯಕ್ತಿತ್ವ, ಅಪ್ರತಿಮ ದೇಶಭಕ್ತ, ಕವಿ ಟಾಗೋರ ಬೆಂಬಲ ಬ್ರಿಟಿಷ್ ಚಕ್ರಾಧಿಪತ್ಯಕ್ಕಿದೆಯೆನ್ನುವ ಅಭಿಪ್ರಾಯ ಮೂಡಿದರೆ ಅದು ಹಗುರವಾದ ಮಾತಲ್ಲ - ಅದು ಚಕ್ರಾಧಿಪತ್ಯಕ್ಕೆ ಅಮೂಲ್ಯವಾದದ್ದು.  ಆದ್ದರಿಂದ ಈ ಹಿನ್ನೆಲೆಯಲ್ಲಿ ನೈಟ್ ಹುಡ್ ಪದವಿಯನ್ನು ನೋಡುವವರಿಗೆ ಸಹಜವಾಗಿಯೇ ಅಲ್ಲಿ ಕೇವಲ ಕಾಕತಾಳೀಯಕ್ಕಿಂತ ಹೆಚ್ಚಿನದು ಕಂಡರೆ ಅಚ್ಚರಿಯೇನಿಲ್ಲ.

ಇವಿಷ್ಟು ವಿಷಯದ ಒಂದು ಮುಖವಾಯಿತು.  ಈಗ ಇದರ ಇನ್ನೊಂದು, ಮೊದಲಿನದ್ದಕ್ಕಿಂತ ಮುಖ್ಯವಾದ, ಮುಖವನ್ನು ಈಗ ನೋಡೋಣ.  ಮೇಲೆ ವಿವರಿಸಿದ್ದೆಲ್ಲ ಈ ಗೀತೆಯು (ಬಹುಶಃ ಟಾಗೋರರ ಉದ್ದೇಶವನ್ನೂ ಮೀರಿ), ಐದನೆಯ ಜಾರ್ಜ್ ಚಕ್ರವರ್ತಿಯ ಸ್ತುತಿಯೆಂದು ಬಿಂಬಿತವಾಗಲು ಕಾರಣವಾದ ಸಂದರ್ಭಗಳನ್ನು ಕುರಿತದ್ದು.  ಆದರೆ ನಿಜಕ್ಕೂ ಈ ಗೀತೆ ಜಾರ್ಜ್ ಚಕ್ರವರ್ತಿಯನ್ನೇ ಕುರಿತದ್ದೇ ಎಂಬುದರ ಸತ್ಯವನ್ನೀಗ ಪರಿಶೀಲಿಸಬೇಕಿದೆ.  ಮೊದಲಿಗೆ ಈ ಗೀತೆ ದೇಶಭಕ್ತಿಗೀತೆಯಾದರೂ ಮೇಲೆ ವಿವರಿಸಿದಂತೆ ಒಂದು ವಿಭಿನ್ನವಾದ ದೇಶಭಕ್ತಿಗೀತೆಯೆಂಬುದನ್ನು ನೆನಪಿನಲ್ಲಿಡಬೇಕು.  ಇಲ್ಲಿ ದೇಶದ ಬಗೆಗಿರುವುದು ಭಕ್ತಿಯಲ್ಲ, ಕಳಕಳಿ, ಕಾಳಜಿ, ವಿಹ್ವಲತೆ - ಭಕ್ತಿ, ದೇಶವನ್ನು ಅನವರತ ಕೈಹಿಡಿದು ಪೊರೆಯುವ, ಮುನ್ನಡೆಸುವ ಪರಮಪಿತನ ಬಗೆಗೆ.  ಭಗವಂತನನ್ನು ದೇವದೇವನನ್ನು ಪುರುಷರೂಪದಲ್ಲಿ, ಪ್ರಭುವಿನ ರೂಪದಲ್ಲಿ ಆರಾಧಿಸುವ ಕಲ್ಪನೆ ನಮಗೆ ಹೊಸದಲ್ಲವಾದರೂ, ದೇಶಭಕ್ತಿಯ ಸಂದರ್ಭದಲ್ಲಿ ಇದು ಹೊಸ ಕಲ್ಪನೆ.  ಆದರೆ ರವೀಂದ್ರರಿಗೆ ಇದು ಹೊಸ ಕಲ್ಪನೆಯೇನಲ್ಲ.  ಬ್ರಹ್ಮಸಮಾಜಿಗಳಾದ ರವೀಂದ್ರರ ಅನೇಕ ಪದ್ಯಗಳಲ್ಲಿ ಉನ್ನತಾಸನದಲ್ಲಿ ಮಂಡಿಸಿದ, ದೊರೆಗಳ ದೊರೆಯಾದ, ಜಗತ್ತಿನ ತಂದೆಯಾದ ಪರಮಪುರುಷನ ಕಲ್ಪನೆ, ಆತನ ಸಿಂಹಾಸನ, ಸ್ವರ್ಣರಥ, ಶಂಖನಾದ, ಭಯಹುಟ್ಟಿಸುವ ಖಡ್ಗ, ಪೊರೆಯುವ ಮಂದಹಾಸ, 'ಮಗ'ನನ್ನು ಹುಡುಕಿಕೊಂಡು ಹಟ್ಟಿಯ ಬಾಗಿಲಿಗೇ ಬಂದುಬಿಡುವ ಪರಮ ಔದಾರ್ಯ ಇವೆಲ್ಲವೂ ಧಾರಾಳವಾಗಿ ಬರುತ್ತವೆ.  ಉದಾಹರಣೆಗೆ, ಅವರ ಖ್ಯಾತ ಗೀತಾಂಜಲಿ ಸಂಕಲನದಿಂದ ಅವರೇ ಅನುವಾದಿಸಿದ ಕೆಲವು ಸಾಲುಗಳನ್ನು ನೋಡಬಹುದು (ಓದುಗರ ಅನುಕೂಲಕ್ಕಾಗಿ ಸ್ಥೂಲವಾಗಿ ಕನ್ನಡಕ್ಕೆ ಅನುವಾದಿಸಿದ್ದೇನೆ):

I was singing all alone in a corner, and the melody caught your ear.
You came down and stood at my cottage door.
(ನಾನು ನನ್ನಷ್ಟಕ್ಕೆ ಅಲ್ಲೊಂದು ಮೂಲೆಯಲಿ ಹಾಡುತಿದ್ದೆ; ಹಾಡು ನಿನ್ನ ಕಿವಿಮುಟ್ಟಿತು.  
ನೀನೋ ನನ್ನ ಗುಡಿಸಿಲ ಬಾಗಿಲಿಗೇ ಬಂದು ನಿಂತೆ)

...

I had gone a-begging from door to door in the village path, when thy golden chariot
appeared in the distance like a gorgeous dream and I wondered who was this King of all
kings!
(ಬೀದಿ ತಿರಿಯಹೊರಟವನಿಗೆ ಅಲ್ಲಿ, ದೂರದಲ್ಲಿ ನಿನ್ನ ಹೊಂದೇರ ಗಾಲಿ ಕಂಡಿತು, ದಿವ್ಯಾದ್ಭುತಸ್ವಪ್ನದಂತೆ.  ನನಗೆ ಬೆರಗು - ಯಾರೀ ರಾಜರ ರಾಜ!)

...

The chariot stopped where I stood... Then of a sudden thou didst hold out
thy right hand and say ‘What hast thou to give to me?’

Ah, what a kingly jest was it to open thy palm to a beggar to beg!

(ರಥ ಪಕ್ಕದಲ್ಲೇ ನಿಂತಿತು... ಇದ್ದಕ್ಕಿದ್ದಂತೆ ನೀನೇ ಕೈಚಾಚಿದೆ, ಕೇಳಿದೆ "ಏನು ಕೊಡುತ್ತೀ ನನಗೆ?"

ಆಹ, ತಿರುಕನಲ್ಲೆ ತಿರಿಯಬರುವ ದೊರೆಯ ಆಟವೆಂಥದೋ!)

... 

The night darkened... some said the king was to come. We laughed and said ‘No, it cannot be!’
(ಇರುಳುಗತ್ತಲೇರಿತು...  ಕೆಲರೆಂದರು, ದೊರೆ ಬರುವುದು ಬಾಕಿಯಿದೆ.  ನಮಗೆ ನಗು "ಇಲ್ಲ, ಸಾಧ್ಯವಿಲ್ಲ!)

...

The night was still dark when the drum sounded... We pressed our hands on our hearts and
shuddered with fear. Some said, ‘Lo, there is the king’s flag!’
(ಮತ್ತೂ ಕತ್ತಲಾಯಿತು, ನಗಾರಿ ಶಬ್ದ... ಬೆಚ್ಚಿ ಎದೆಯೊತ್ತಿಕೊಂಡೆವು.  ಕೆಲರೆಂದರು, 'ಅಗೋ ರಾಜಧ್ವಜ!)

...

The king has come—but where are lights, where are wreaths? Where is the throne to seat
him? Oh, shame! Oh utter shame! Where is the hall, the decorations? Someone has said,
‘Vain is this cry! Greet him with empty hands, lead him into thy rooms all bare!’
Open the doors, let the conch-shells be sounded! in the depth of the night has come the
king of our dark, dreary house. 

(ದೊರೆ ಬಂದಿಹನು - ಆದರೆ ದೀವಟಿಗೆಯೆಲ್ಲಿ, ಹಾರವೆಲ್ಲಿ?  ಕುಳ್ಳಿರಿಸಲು ಸಿಂಹಾಸನವೆಲ್ಲಿ?  ಓಹ್ ಮುಜುಗರವೇ! ಎಂಥ ನಾಣ್ಗೇಡು!  ಸಭಾಂಗಣವೆಲ್ಲಿ, ಎಲ್ಲಿ ಅಲಂಕಾರ?
ಒಬ್ಬರೆಂದರು "ವೃಥಾ ಅಳುವುದೇಕೆ? ಬರಿಗೈಯಲ್ಲೇ ಬರಮಾಡಿಕೊಳ್ಳಿ, ನಿಮ್ಮ ಬರಿಗೋಣೆಗವನ ಕರೆದೊಯ್ಯಿರಿ!"
ಬಾಗಿಲ ತೆರೆಯಿರಿ, ಶಂಖಧ್ವನಿ ಮೊಳಗಲಿ!  ನಟ್ಟಿರುಳೊಳು ದೊರೆ ಬಂದಿದ್ದಾನೆ, ನಮ್ಮ ಮಬ್ಬುಗತ್ತಲ ಕೋಣೆಗೆ)

...

I thought I should ask of thee—but I dared not—the rose wreath thou hadst on thy neck.
Thus I waited for the morning, when thou didst depart, to find a few fragments on the bed.
(ಬೇಡೋಣವೆಂದಿದ್ದೆ, ನಿನ್ನ ಕೊರಳನಲಂಕರಿಸಿದ್ದ ಆ ಗುಲಾಬಿ ಮಾಲೆಯನ್ನು - ಅಂಜಿ ಸುಮ್ಮನಾದೆ.
ಕಾದೆ - ಬೆಳಗ್ಗೆ ನೀ ಹೋದ ಮೇಲೆ ಹಾಸಿಗೆಯ ಮೇಲುದುರಿರುವ ಕೆಲವು ಪಕಳೆಗಳನ್ನಾಯಲು)

...

Ah me, what is it I find? What token left of thy love? It is no flower, no spices, no vase of
perfumed water. It is thy mighty sword, flashing as a flame, heavy as a bolt of thunder.
(ಆಹ್, ನನಗೆ ಕಂಡದ್ದಾದರೂ ಏನು?  ನೀ ನನಗಾಗಿ ಬಿಟ್ಟುಹೋದ ಪ್ರೀತಿಯ ಕಾಣಿಕೆ!  ಹೂವಲ್ಲ, ಗಂಧವಲ್ಲ, ತೀರ್ಥವೂ ಅಲ್ಲ.  
ಬೆಂಕಿಯುಗುಳುವ, ಸಿಡಿಲ ತೂಕದ ನಿನ್ನ ಬಲು ಖಡ್ಗ!)

...

I sit and muse in wonder, what gift is this of thine.
(ಬೆರಗುವಡೆದು ಚಿಂತಿಸುತ್ತಿದ್ದೇನೆ, ಇದೆಂಥ ಉಡುಗೊರೆಯಪ್ಪ ನಿನ್ನದು)

"ಜನಗಣಮನ" ಗೀತೆಯಲ್ಲಿ ಸ್ತುತಿಸಲ್ಪಟ್ಟ "ಭಾರತಭಾಗ್ಯವಿಧಾತ" ಈ ದೊರೆ - ಯಾವುದೋ ಮರ್ತ್ಯಲೋಕದ ಚಕ್ರವರ್ತಿಯಲ್ಲ.  ಮೇಲಿನದು ಒಂದು ಉದಾಹರಣೆಯಷ್ಟೇ.  ಈ ಕಲ್ಪನೆ ರವೀಂದ್ರರ ಸಾಹಿತ್ಯದಲ್ಲಿ ವಿಪುಲವಾಗಿ ದೊರೆಯುತ್ತದೆ.  ಅದರ ಪರಿಚಯವಿದ್ದವರಿಗೆ ಇದು ಹೊಸದಲ್ಲ.  

ರವೀಂದ್ರರು ಬೆಂಗಾಲದ ವಿಭಜನೆಯನ್ನು ಪ್ರತಿಭಟಿಸುವ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು, ಸ್ವಾತಂತ್ರ್ಯಚಳುವಳಿಗಾರರನೇಕರ 'ರಾಷ್ಟ್ರೀಯತೆ'ಯ ಕಲ್ಪನೆಯನ್ನು ಅನೇಕ ವೇಳೆ ಕಟುವಾಗಿ ಟೀಕಿಸಿದರೂ ದೇಶದ ದಾಸ್ಯವನ್ನು ಕಂಡು ಬಹುವಾಗಿ ಮರುಗಿದವರು.  ಈ 'ದೈನ್ಯ', ಅದರಿಂದ ದೇಶವನ್ನು ಮೇಲೆತ್ತಲು ದೇವದೇವನಿಗೆ ಕಳಕಳಿಯ ಮೊರೆ ಇವು ರವೀಂದ್ರರ ಬರಹಗಳಲ್ಲಿ ಪದೇಪದೇ ಕಾಣುತ್ತವೆ (ಇದೇ ಭಾವ ಮೇಲೆ ನೋಡಿದ "ಜನಗಣಮನ" ಗೀತೆಯಲ್ಲೂ ಮಡುಗಟ್ಟಿದೆ).  ಮುಂದೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಪ್ರತಿಭಟಿಸಿ ನಾವು ಮೇಲೆ ಚರ್ಚಿಸಿದ ಅದೇ 'ನೈಟ್ ಹುಡ್' ಪದವಿಯನ್ನು ಅದೇ ಬ್ರಿಟಿಷ್ ಸರ್ಕಾರದ ಮುಖಕ್ಕೆ ಬಿಸಾಕಿದ ಧೀಮಂತವ್ಯಕ್ತಿತ್ವದ ಅಸೀಮ ದೇಶಭಕ್ತ, ದಾರ್ಶನಿಕ, ಮರ್ತ್ಯದ ದೊರೆಯೊಬ್ಬನಿಗೆ ಜೈಕಾರ ಹಾಕುತ್ತಾನೆಂಬುದು ನಿಜಕ್ಕೂ ಯೋಚನೆಗೆ ದಕ್ಕುವ ವಿಷಯವಲ್ಲ.  ಸುಮಾರು ಇದೇ ಭಾವನೆಯನ್ನು ಪ್ರತಿಧ್ವನಿಸುತ್ತಾ, 1937ರಲ್ಲಿ, ಪುಲಿನ್ ಬಿಹಾರಿ ಸೇನ್ ಎಂಬುವರಿಗೆ ಬರೆದ ಪತ್ರದಲ್ಲಿ ರವೀಂದ್ರರು ಹೀಗೆ ಹೇಳುತ್ತಾರೆ - "A certain high official in His Majesty's service, who was also my friend, had requested that I write a song of felicitation towards the Emperor. The request simply amazed me. It caused a great stir in my heart. In response to that great mental turmoil, I pronounced the victory in Jana Gana Mana of that Bhagya Bidhata [ed. God of Destiny] of India who has from age after age held steadfast the reins of India's chariot through rise and fall, through the straight path and the curved. That Lord of Destiny, that Reader of the Collective Mind of India, that Perennial Guide, could never be George V, George VI, or any other George. Even my official friend understood this about the song. After all, even if his admiration for the crown was excessive, he was not lacking in simple common sense (ಪ್ರಭುಗಳ ಸೇವೆಯಲ್ಲಿರುವ ಉನ್ನತ ಅಧಿಕಾರಿಯೊಬ್ಬರು, ನನ್ನ ಮಿತ್ರರೂ ಕೂಡ, ಚಕ್ರವರ್ತಿಯನ್ನು ಸ್ವಾಗತಿಸುವ ಗೀತೆಯೊಂದನ್ನು ಬರೆಯಲು ನನ್ನನ್ನು ಕೋರಿದರು.  ಈ ಕೋರಿಕೆ ನನ್ನನ್ನು ಅಚ್ಚರಿಗೊಳಿಸಿತು.  ನನ್ನ ಹೃದಯವನ್ನು ಕಲಕಿಬಿಟ್ಟಿತು.  ಈ ಒಳತೋಟಿಗುತ್ತರವಾಗಿ ನಾನು, ಎಷ್ಟೆಷ್ಟೋ ಏಳುಬೀಳಿನ ಅಂಕುಡೊಂಕಿನ ದಾರಿಯಲ್ಲೂ ಯುಗಯುಗಗಳಿಂದ ಭಾರತದ ರಥವನ್ನು ನಡೆಸುತ್ತಾ ಕರೆದೊಯ್ಯುತ್ತಿರುವ, ಭಾರತಭಾಗ್ಯವಿಧಾತನ ಜಯಗೀತೆಯನ್ನು ಹಾಡಿದೆ.  ಆ ಭಾಗ್ಯವಿಧಾತ, ಜನಗಣಮನದ ಅಧಿನಾಯಕ, ಚಿರಸಾರಥಿ ಖಂಡಿತಾ ಐದನೆಯ ಜಾರ್ಜೋ ಆರನೆಯ ಜಾರ್ಜೋ ಇನ್ನಾವ ಜಾರ್ಜೋ ಆಗಿರಲು ಸಾಧ್ಯವಿಲ್ಲ.  ನನ್ನ ಆ ಅಧಿಕಾರಿಮಿತ್ರರೂ ಆ ಗೀತೆಯ ವಿಷಯದಲ್ಲಿ ಇದನ್ನು ಅರಿತರು.  ಚಕ್ರವರ್ತಿಗಳ ವಿಷಯದಲ್ಲಿ ಅವರ ಭಕ್ತಿ ಏನೇ ಇರಲಿ, ಆತನಿಗೆ ಸಾಮಾನ್ಯಜ್ಞಾನವಂತೂ ಇದ್ದೇ ಇತ್ತು)" 

ಮತ್ತೆ 1939ರ ಮಾರ್ಚ್ 19ರ ತಮ್ಮ ಇನ್ನೊಂದು ಪತ್ರ ಟ್ಯಾಗೋರ್ ಹೀಗೆ ಹೇಳುತ್ತಾರೆ “I should only insult myself if I cared to answer those who consider me capable of such unbounded stupidity as to sing in praise of George the Fourth or George the Fifth as the Eternal Charioteer leading the pilgrims on their journey through countless ages of the timeless history of mankind (ಯುಗಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾಲ್ಕನೆಯವನೊ ಐದನೆಯವನೊ ಜಾರ್ಜ್ ನ ಗುಣಗಾನ ಮಾಡುವ ಎಣೆಯಿಲ್ಲದ ಮೂರ್ಖತನ ನನ್ನದೆನ್ನುವವರಿಗೆ ಉತ್ತರಿಸಹೋಗುವುದೂ ನನಗೆ ನಾನೇ ಮಾಡಿಕೊಳ್ಳುವ ಅಪಮಾನ") - Purvasa, Phalgun, 1354, p738.

ಅದೇನೇ ಇರಲಿ, ಮೇಲಿನ ಎರಡೂ ಸ್ಪಷ್ಟನೆಗಳು ಬಂದದ್ದು ಮೇಲಿನ ವಿವಾದ ಸೃಷ್ಟಿಯಾದ ಎಷ್ಟೋ ವರ್ಷಗಳನಂತರ, ಸ್ವತಃ ಐದನೆಯ ಜಾರ್ಜ್ ದೊರೆ ಗತಿಸಿದಮೇಲೆ.  ಬಹುಶಃ ಈ ವಿವರಣೆಯನ್ನು ಟಾಗೋರರು ಇಪ್ಪತ್ತು ವರ್ಷಗಳ ಹಿಂದೆಯೇ ನೀಡಿದ್ದರೆ ಆ ಮಾತು ಬೇರೆಯೇ ಇರುತ್ತಿತ್ತೇನೋ.  ಆದರೆ ಇಷ್ಟು ವರ್ಷಕಾಲದ ಅವರ ಮೌನಕ್ಕೆ ನಿಜಕ್ಕೂ ವಿವರಣೆಯಿಲ್ಲ.  ಅಥವಾ, ಟಾಗೋರರ ಆಗಿನ ಮೌನಕ್ಕೆ ಆ ಕಾಲದ ರಾಜಕೀಯಸನ್ನಿವೇಶವೇ ಕಾರಣವಿರಬಹುದೆಂದು ಊಹಿಸುವುದರಲ್ಲಿ ತಪ್ಪೇನಿಲ್ಲ.  ಹೇಳಿಕೇಳಿ, ಭಾರತವು ಬ್ರಿಟಿಷರಿಂದ ಡೊಮಿನಿಯನ್ ಸ್ಥಾನಮಾನ ಕೇಳುತ್ತಿದ್ದ ಕಾಲ, ಸಹಜವಾಗಿಯೇ ಚಕ್ರಾಧಿಪತ್ಯಕ್ಕೆ ತಗ್ಗಿಬಗ್ಗಿ ನಡೆಯಬೇಕಾದ ರಾಜಕೀಯ ಅನಿವಾರ್ಯತೆಯಿದ್ದ ಕಾಲ; ಇನ್ನೂ ಅನೇಕ ಮುಂಚೂಣಿ ನಾಯಕರು ಇದೇ ರಾಜಕೀಯಕಾರಣಕ್ಕಾಗಿಯೇ ಬ್ರಿಟಿಷರನ್ನು ಅದೆಷ್ಟೋ ವಿಷಯಗಳಲ್ಲಿ ಬೆಂಬಲಿಸಿದ ಉದಾಹರಣೆಯೂ ಇದೆ.  ಹೀಗಿದ್ದಾಗ, ದೇಶದ ಹಿತದೃಷ್ಟಿಯಿಂದಲೇ ಮೌನವಹಿಸುವುದು ಲೇಸೆಂದು ಆಗ ಗುರುದೇವರು ಭಾವಿಸಿದ್ದರೆ ಅಚ್ಚರಿಯೇನಿಲ್ಲ.  ಜನಗಣಮನದಂತಹ ಅರ್ಥಸಂದಿಗ್ಧವುಳ್ಳ ಗೀತೆಯನ್ನು ರಚಿಸಿದ್ದೂ ಈ ಸನ್ನಿವೇಶಕ್ಕೆ ಕಟ್ಟುಬಿದ್ದೇ ಇರಬಹುದು.  ಆದರೆ ಮೇಲ್ಕಂಡ ಸ್ಪಷ್ಟನೆ ನೀಡುವ ಹೊತ್ತಿಗೆ ಕಾಲ ಬದಲಾಗಿತ್ತು - ಭಾರತದ ಸ್ವಾತಂತ್ರ್ಯಚಳುವಳಿ ಬ್ರಿಟಿಷ್ ಚಕ್ರಾಧಿಪತ್ಯದ ಮುಲಾಜನ್ನು ಕಿತ್ತೊಗೆದು, ಡೊಮಿನಿಯನ್ ಸ್ಥಾನಮಾನದ ಬೇಡಿಕೆಯನ್ನು ಕೈಬಿಟ್ಟು, ಪೂರ್ಣಸ್ವರಾಜ್ಯದ ಹಕ್ಕೊತ್ತಾಯವನ್ನು ಸ್ಥಾಪಿಸಿ ಸಂಪೂರ್ಣಸ್ವಾತಂತ್ರ್ಯದೆಡೆ ದಾಪುಗಾಲಿಕ್ಕುತ್ತಿದ್ದ ಕಾಲವದು.  ಆದ್ದರಿಂದ ಈಗ ಸ್ಪಷ್ಟನೆ ನೀಡಲು ಸಕಾಲವೆಂದು ಟಾಗೂರರು ಭಾವಿಸಿದ್ದಿರಬಹುದು. 

ಇವಿಷ್ಟನ್ನೂ ಪರ್ಯಾಲೋಚಿಸಿದ ಮೇಲೆ ನಮಗೆ ತೋರುವುದಿಷ್ಟು.  ರವೀಂದ್ರರ ಸಾಹಿತ್ಯದ ಸಂದರ್ಭ, ಧಾರ್ಮಿಕ-ಆಧ್ಯಾತ್ಮಿಕ ಹಿನ್ನೆಲೆ, ಮತ್ತು ಅವರದ್ದೇ ಇತರ ಹಲವು ಪ್ರಾರ್ಥನಾಪದ್ಯಗಳನ್ನು ಗಮನದಲ್ಲಿಟ್ಟುಕೊಂಡು ಜನಗಣಮನ ಪೂರ್ಣಗೀತೆಯನ್ನು ಪರಿಶೀಲಿಸಿದಾಗ ಗೀತೆಯ ಉದಾತ್ತಕಲ್ಪನೆ, ಈ ನೆಲದ ಜನಗಣಮನವನ್ನು ಅನುಗಾಲವೂ ಕೈಹಿಡಿದು ನಡೆಸುವ ಪರಮಪಿತನ ಸ್ತುತಿಯೆಂಬ ವಿಷಯ ಮನದಟ್ಟಾಗುತ್ತದೆ.  ಇದನ್ನು ಬ್ರಹ್ಮಸಮಾಜವು 'ಬ್ರಹ್ಮ'ಪ್ರಾರ್ಥನೆಯೆಂದು ಅಂಗೀಕರಿಸಿ ತನ್ನ ಸಂಕಲನದಲ್ಲಿ ಪ್ರಕಟಿಸಿರುವುದೂ ಈ ಅಂಶವನ್ನು ದೃಢಪಡಿಸುತ್ತದೆ.  ಇಂತಿರುವಾಗ ಇದು ಯಾವನೋ ಈ ನೆಲದ ದೊರೆಯ ಸ್ತುತಿಯೆನ್ನುವ ಗ್ರಹಿಕೆ ನಿರಾಧಾರವೆಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಇದು ಈ ನೆಲದ ದೊರೆಯ ಸ್ತುತಿಯೆನ್ನುವ ಗ್ರಹಿಕೆ ನಿರಾಧಾರವಾದುದೇನೋ ಹೌದು - ಯಾರಿಗೆ? ಮೇಲೆ ವಿವರಿಸಿದ ಎಲ್ಲ ಹಿನ್ನೆಲೆಗಳನ್ನೂ ಅರಿತವರಿಗೆ.  ಆದರೆ ಹಾಗೆ ಕೂಲಂಕಷವಾಗಿ ವಿಷಯವನ್ನು ಅರಿತವರು, ಪರಿಶೀಲಿಸಬಲ್ಲವರು ಎಷ್ಟು ಮಂದಿ? ಪರಮಾತ್ಮನನ್ನು ಪೂಜಿಸುವ ಧಾರ್ಮಿಕ ವಿಷಯ ಬೇರೆ, ಆದರೆ ದೇಶವೆಂದರೆ ಮಾತೆ ಎಂಬ ಕಲ್ಪನೆಯನ್ನೇ ಹೊಂದಿರುವ ಎಷ್ಟು ಜನಕ್ಕೆ "ಜನಗಣಮನ ಅಧಿನಾಯಕ"ನ ಅಮೂರ್ತಕಲ್ಪನೆ ಮನಸ್ಸಿಗೆ ಹೊಗಬಲ್ಲುದು?  ರಥ, ಚಕ್ರ, ಚಕ್ರೇಶ್ವರ, ಶಂಖಧ್ವನಿ, ಸಿಂಹಾಸನ ಮುಂತಾದ ಸಂಕೇತಗಳು ಯಾವುದೋ ರಾಜನದ್ದಲ್ಲ, ಪರಮಪಿತನನ್ನು ಕುರಿತದ್ದೆಂಬುದನ್ನು ಎಷ್ಟು ಜನ ಅರಿಯಬಲ್ಲರು?  ಜನಾಭಿಪ್ರಾಯಗಳು ರೂಪುಗೊಳ್ಳುವುದು ಸೂಕ್ಷ್ಮಪರಿಶೀಲನೆಗಳಿಂದಲ್ಲ, ಕಣ್ಣಿಗೆ ಕಾಣುವ ಸ್ಥೂಲಸನ್ನಿವೇಶಗಳ ಆಧಾರದ ಮೇಲೆ.  ಆ ಸ್ಥೂಲಸನ್ನಿವೇಶಗಳು ಸ್ಪಷ್ಟವಾಗಿವೆ - ದೊರೆಯ ಪಟ್ಟಾಭಿಷೇಕ ಕೆಲವೇ ತಿಂಗಳ ಹಿಂದೆ ಆಗಿದೆ, ಎರಡೇ ವಾರದ ಹಿಂದೆ ಕಲ್ಕತ್ತಾದಲ್ಲಿ ಚಕ್ರವರ್ತಿಯ ದರ್ಬಾರು ನಡೆದಿದೆ - ಅದರಲ್ಲಿ ಇಡೀ ದೇಶದ ಗಣ್ಯಾತಿಗಣ್ಯರು ನಡುಬಗ್ಗಿಸಿ ಚಕ್ರವರ್ತಿಗೆ ಮುಜುರೆ ಮಾಡಿ ನಿಷ್ಠೆತೋರಿದ್ದಾರೆ.  ದೊರೆಗೆ ನಿಷ್ಠವಾದ ಕಾಂಗ್ರೆಸ್ ಅಧಿವೇಶನದಲ್ಲಿ ಹೊಸದಾಗಿ ರಚಿತವಾದ ಪ್ರಾರ್ಥನಗೀತೆಯೊಂದನ್ನು ಸ್ವತಃ ರವೀಂದ್ರರೇ ಹಾಡಿದ್ದಾರೆ (ಅಂಥದ್ದೊಂದು ಸ್ವಾಗತಗೀತೆಯನ್ನು ರಚಿಸಬೇಕೆಂಬ ಕೋರಿಕೆ ಅವರಿಗೆ ಬ್ರಿಟಿಷರ ಕಡೆಯಿಂದಲೇ ಬಂದಿದೆ - ಅವರದನ್ನು ಪುರಸ್ಕರಿಸಿಲ್ಲವಾದರೂ ಸ್ಪಷ್ಟವಾಗಿ ತಿರಸ್ಕರಿಸಿಲ್ಲ, ಗೀತೆಯನ್ನೇನೋ ರಚಿಸಿದ್ದಾರೆ).  ಆ ಗೀತೆಯ ಉನ್ನತಾರ್ಥವೇನೇ ಇರಲಿ, ಮೇಲ್ನೋಟಕ್ಕೆ ಅದರ ಹೂರಣವಂತೂ (ಹಿನ್ನೆಲೆಯನ್ನರಿಯದ ಬಹುಪಾಲು ಜನಕ್ಕೆ) ದೊರೆಯನ್ನು ಸ್ತುತಿಸುವಂತೆಯೇ ಕಾಣುತ್ತದೆ.  ಈ ಗೀತೆಯಾದೊಡನೆಯೇ ದೊರೆಗೆ ನಿಷ್ಠವಾಗಿರುವ ನಿರ್ಣಯವನ್ನು ಅಂಗೀಕರಿಸಲಾಗುತ್ತದೆ, ಮತ್ತು ಅದರ ಬೆನ್ನಲ್ಲೇ ದೊರೆಯನ್ನು ಸ್ವಾಗತಿಸಿಕೊಂಡಾಡುವ ಸ್ವಾಗತಗೀತೆಯನ್ನು ಹಾಡಲಾಗುತ್ತದೆ.  ಆಂಗ್ಲಪತ್ರಿಕೆಗಳು "ಚಕ್ರವರ್ತಿಯನ್ನು ಸ್ವಾಗತಿಸಲೆಂದೇ ವಿಶೇಷವಾಗಿ ರಚಿಸಿದ ಬೆಂಗಾಲೀ ಗೀತೆಯನ್ನು ಕವಿ ರವೀಂದ್ರನಾಥ ಟಾಗೋರರು ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದರು" ಎಂದು ವರದಿ ಮಾಡುತ್ತವೆ.  ಹೀಗೆ ಸ್ಪಷ್ಟವಾಗಿಯೇ 'ದಾರಿ ತಪ್ಪಿಸುವ' ವರದಿ ಬಂದಾಗಲೂ, ಅದನ್ನು ನಿರಾಕರಿಸಿ ಗಟ್ಟಿಯಾಗಿ ಸ್ಪಷ್ಟನೆ ನೀಡಬಹುದಾದ ಒಬ್ಬರೇ ವ್ಯಕ್ತಿ, ಟಾಗೋರರು ಮೌನವಹಿಸುತ್ತಾರೆ.  ಇದಾಗಿ ಎರಡೇ ವರ್ಷಕ್ಕೆ ನೊಬೆಲ್ ಪ್ರಶಸ್ತಿಯೂ ನಾಲ್ಕೇ ವರ್ಷಕ್ಕೆ ನೈಟ್ ಪದವಿಯೂ ಕೂಡ ದೊರೆಯುತ್ತದೆ, ಇದು ಸಹಜವಾಗಿಯೇ ಈ ಮೌನಕ್ಕೆ ವಿಶೇಷಾರ್ಥವನ್ನು ಹಚ್ಚುತ್ತದೆಯಷ್ಟೇ?  (ಆಮೇಲಿನ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಅವರು ಆ ಪದವಿಯನ್ನು ಮರಳಿಸುತ್ತಾರೆಂಬುದೇನೋ ನಿಜವೇ, ಆದರೆ ಅದು ಸರ್ಕಾರದ ಅವತ್ತಿನ ದುರಾಚಾರಕ್ಕೆ ಪ್ರತಿಭಟನೆಯಾಗುತ್ತದೆಯೇ ಹೊರತು, ಮೂಲವಿವಾದವನ್ನೇನೂ ಸರಿಪಡಿಸುವುದಿಲ್ಲ).  ಇಷ್ಟೆಲ್ಲ ಇರುವಾಗ, ಇದು ಐದನೇ ಜಾರ್ಜ್ ಚಕ್ರವರ್ತಿಯನ್ನೇ ಕುರಿತದ್ದಿರಬೇಕೆನ್ನುವ ಜನಾಭಿಪ್ರಾಯ ರೂಪುಗೊಂಡಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ.

ಇಷ್ಟಕ್ಕೂ ಈ ಅಭಿಪ್ರಾಯದಲ್ಲೂ ಎಳ್ಳಷ್ಟಾದರೂ ಸತ್ಯವಿಲ್ಲದಿಲ್ಲ.  ಗೀತೆಯಲ್ಲಿ ಕವಿಯ ಉದಾತ್ತಕಲ್ಪನೆಯೇನೇ ಇರಲಿ, ಗೀತೆಗೆ ನಿಮಿತ್ತವಾದದ್ದು ಮಾತ್ರ ಭಾರತಕ್ಕೆ ಬರಲಿದ್ದ ಚಕ್ರವರ್ತಿಯೇ ಎಂಬುದರಲ್ಲಿ ಸುಳ್ಳೇನಿಲ್ಲವಲ್ಲ.  ಆತನ ಸ್ವಾಗತಕ್ಕಾಗಿ ಗೀತೆಯೊಂದನ್ನು ರಚಿಸಿರೆಂಬ ಕೋರಿಕೆ ಬರದಿದ್ದರೆ ಬಹುಶಃ ರವೀಂದ್ರರು ಈ ಗೀತೆಯನ್ನು ರಚಿಸುತ್ತಲೇ ಇರಲಿಲ್ಲವಷ್ಟೇ?  ಅದನ್ನು ಕಾಂಗ್ರೆಸ್ ಅಧಿವೇಶನದಲ್ಲಿ (ದೊರೆಗೆ ನಿಷ್ಠೆಯನ್ನು ಸೂಚಿಸುವ ಸಂದರ್ಭದಲ್ಲಿ) ಹಾಡಿದ್ದೂ ಸಹ, ಆ ಗೀತೆಯನ್ನು ಇದೇ ಸಂದರ್ಭಕ್ಕಾಗಿ ಬರೆದದ್ದೆಂಬುದನ್ನು ಸ್ಪಷ್ಟಪಡಿಸುತ್ತದೆ.  ಕವಿಗೆ ದೊರೆಯನ್ನು ಸ್ತುತಿಸುವ ಉದ್ದೇಶವಿಲ್ಲದಿರಬಹುದು, ಅಂಥದ್ದೊಂದು ಕೋರಿಕೆಯಿಂದ ತಮಗಾದ ನೋವನ್ನು ಪ್ರತಿಭಟನೆಯ ರೂಪದಲ್ಲಿ ತುಂಬಿ, ದೊರೆಯ ನೆವದಲ್ಲಿ "ಜನಗಣಮನ ಅಧಿನಾಯಕ"ನನ್ನೇ ಸ್ತುತಿಸಿರಬಹುದು - ಅತ್ತ ದೊರೆಗೆ ಇದು ತನ್ನನ್ನೇ ಕುರಿತದ್ದೆನ್ನುವ ಸಂತಸವಾದರೆ ಇತ್ತ ನಮಗೆ ನಮ್ಮೆಲ್ಲರನ್ನೂ ಕೈಹಿಡಿದು ಮುನ್ನೆಡೆಸುತ್ತಿರುವ ಮಹಾಶಕ್ತಿಯ ಸ್ತುತಿಯೆಂಬ ಸಮಾಧಾನ.  ಆದರೆ ಅದಕ್ಕಾಗಿ ಕವಿ ಬಳಸಿದ ಸಂದಿಗ್ಧ ಕಲ್ಪನೆಗಳು (ಎರಡೂ ಅರ್ಥ ಕೊಡಬಹುದಾದ ಕಲ್ಪನೆಗಳು), ಕವಿಯ ಉದಾತ್ತ ಉದ್ದೇಶವನ್ನಾಗಲಿ, ಕವಿಯನ್ನು ತುಂಬಿದ್ದ ನೋವನ್ನಾಗಲೀ ಬಹುಜನರಿಗೆ ಮುಟ್ಟಿಸಲಿಲ್ಲ.  ಬದಲಿಗೆ ಜನ, ದೊರೆಯೇ ಆ "ಜನಗಣಮನ ಅಧಿನಾಯಕ"ನೆಂದು ತಿಳಿಯುವ ಅಪಾಯವನ್ನೇನೂ ಅದು ತಪ್ಪಿಸಲಿಲ್ಲ.  ಹೀಗಾಗಿ, ಗೀತೆಯು ತಾತ್ತ್ವಿಕವಾಗಿ ಭಾರತದ ಭಾಗ್ಯವಿಧಾತನನ್ನೇ ಸ್ತುತಿಸಿದ್ದರೂ, ವಾಸ್ತವದಲ್ಲಿ ಆ ಪದ್ಯ ಹುಟ್ಟಿದ್ದು ದೊರೆಯ ನಿಮಿತ್ತದಿಂದಲೇ ಎಂಬುದನ್ನು ಅಲ್ಲಗಳೆಯಲಾಗದು.  ಆದರೆ ಪ್ರಸಕ್ತ ರಾಜಕೀಯಸನ್ನಿವೇಶ ಟಾಗೂರರ ಬಾಯಿ ಕಟ್ಟಿತ್ತೆಂದುಕೊಳ್ಳಬಹುದು.

ಇಷ್ಟು ಹೇಳಿದ ಮೇಲೆ ಕೊನೆಯದಾಗಿ, ರಾಷ್ಟ್ರಗೀತೆಯಾಗಿ ಈ ಗೀತೆಯನ್ನೊಮ್ಮೆ ಪರಿಶೀಲಿಸುವುದು ಅಪ್ರಸ್ತುತವಾಗಲಿಕ್ಕಿಲ್ಲ.  ರಾಷ್ಟ್ರಗೀತೆಯೊಂದು ಹೇಗಿರಬೇಕು?  

  1. ಎದೆ ಸೆಟೆಸಿ ತಲೆಯೆತ್ತಿ ಗತ್ತಿನಿಂದ ಹಾಡುವಂತಿರಬೇಕು; 
  2. ತೀರ ನಿಧಾನವೂ ಅಲ್ಲದ, ವೇಗವೂ ಅಲ್ಲದ ಕವಾಯತಿನ ಲಯಕ್ಕೆ ತಕ್ಕಂತಹ ವೇಗ, ಸಂಗೀತ ಹೊಂದಿರಬೇಕು; 
  3. ಆ ಸಂದರ್ಭಕ್ಕೆ ತಕ್ಕಂತಹ ಹೆಮ್ಮೆಯ ಭಾವವನ್ನು ಹೊಮ್ಮಿಸುವ ಸಂಗೀತ, ಮತ್ತು ಅದಕ್ಕೆ ಒಪ್ಪುವ ಸಾಹಿತ್ಯವಿರಬೇಕು; 
  4. ಆ ನೆಲಜಲಗಳ, ಜನದ, ಸಿರಿಸಂಪತ್ತಿನ, ವೀರ್ಯಶೌರ್ಯಗಳ, ತ್ಯಾಗಬಲಿದಾನಗಳ ವೈಶಿಷ್ಟ್ಯವನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುವಂತಿರಬೇಕು, 
  5. ಜೊತೆಗೆ ತನ್ನ ದೇಶದ ಬಗ್ಗೆ ಆತ್ಮೀಯಭಾವ ಉಕ್ಕುವಂತಿರಬೇಕು.

ಈ ಐದು ಅಂಶಗಳಲ್ಲಿ ಮೊದಲ ಮೂರಂಶಗಳು ಸಂಗೀತಕ್ಕೆ ಸಂಬಂಧಿಸಿದುವು.  ಸಾಹಿತ್ಯವೊಂದು ಸಂಗೀತಕ್ಕೊಪ್ಪುವಂತಿದ್ದರಾಯಿತು.  ಉಳಿದುದನ್ನು ಸಂಗೀತ ನೋಡಿಕೊಳ್ಳುತ್ತದೆ.  ನಮ್ಮ ರಾಷ್ಟ್ರಗೀತೆಯ ಸಂಗೀತ ಅಂತಹ ಗುಣವನ್ನು ಹೊಂದಿದೆಯೆನ್ನುವುದು ನಿರ್ವಿವಾದ.  ಆದರೆ ನೆನಪಿರಲಿ, ಅಂತಹ ಸಂಗೀತವನ್ನು ಯಾವ ಗೀತೆಗೂ ಮಾಡಬಹುದು, ಮತ್ತು ಅಂತಹ ಸಂಗೀತಕ್ಕೆ ತಕ್ಕ ಭಾವವನ್ನು ಇನ್ನೂ ಸಮರ್ಥವಾಗಿ ಒದಗಿಸಬಲ್ಲ ಗೀತೆಗಳು ಹೇರಳವಾಗಿವೆ.  ಇನ್ನು ನಾಲ್ಕನೆಯ ಅಂಶಕ್ಕೆ ಬಂದರೆ ನನಗೆ ಥಟ್ಟನೆ ನೆನಪಾಗುವುದು ಪಂಜೆಮಂಗೇಶರಾಯರ "ನಮ್ಮ ನಾಡಿದು ನಮ್ಮದು, ನಮ್ಮ ಕನ್ನಡನಾಡಿದು" ಎಂಬ ಗೀತೆ, ಯಾವುದೇ ನಾಡಿನ ಹೆಮ್ಮೆಯ ಗೀತೆಯಾಗಬಲ್ಲ ಗೀತೆಯಿದು.  ಆದರೆ ಜನಗಣಮನ ಗೀತೆಯಲ್ಲಿ ಕಾಣುವುದು ಶೌರ್ಯವೀರ್ಯ, ತ್ಯಾಗಬಲಿದಾನಗಳ ಹೆಮ್ಮೆಯ ಭಾವವಲ್ಲ, ಬದಲಿಗೆ ಈಗಾಗಲೇ ವಿವರಿಸಿದಂತೆ ಇಲ್ಲಿ ಕಾಣಬರುವುದೆಲ್ಲ "ನಮ್ಮದೇನಿದೆ, ಎಲ್ಲ ನಿನ್ನದೇ, ಬಿದ್ದಿರುವ ನಮ್ಮನ್ನು ಮೇಲೆತ್ತಿ ಮುನ್ನಡೆಸಿ ಕಾಪಾಡು, ನಿನಗೆ ಜಯವಾಗಲಿ" ಎಂಬ ರೀತಿಯ ದೈನ್ಯಭಾವವಷ್ಟೇ.  ರಾಷ್ಟ್ರಗೀತೆಯಾಗಿ ಕೇವಲ ಮೊದಲ ಚರಣವನ್ನಷ್ಟೇ ಅಂಗೀಕರಿಸಿದೆ ಎಂಬ ಅಂಶವನ್ನು ಗಮನದಲ್ಲಿರಿಸಿದರೂ "ದೇಶದ ಸಕಲಪ್ರಾಂತ್ಯಗಳೂ, ಸಕಲ ನದಿಸಾಗರಗಳೂ ನಿನ್ನ ಶುಭನಾಮವನ್ನೇ ನೆನೆಯುತ್ತಿವೆ, ನಿನ್ನ ಕೃಪೆಗಾಗಿ ಕಾಯುತ್ತಿವೆ, ನಮ್ಮ ಭಾಗ್ಯವಿಧಾತನಾದ ನಿನಗೆ ಜಯವಾಗಲಿ" ಎನ್ನುವ ಭಾವವಷ್ಟೇ ಇಲ್ಲಿಯೂ ಕಾಣುವುದು.  ದೇಶವಾಸಿಗಳ ನರನಾಡಿಗಳಲ್ಲಿ ರಾಷ್ಟ್ರೀಯತೆಯ ಕೆಚ್ಚು ಕಿಚ್ಚುಗಳನ್ನು ಹೊತ್ತಿಸಿದ ನೂರಾರು ಗೀತೆಗಳ ಮುಂದೆ ಈ ಭಾವ ಪೇಲವವೆನಿಸಿದರೆ ಅಚ್ಚರಿಯೇನಿಲ್ಲ.  ಇನ್ನು ಕೊನೆಯದಾದ ಆತ್ಮೀಯಭಾವವೂ ಅಷ್ಟೇ.  ತಾಯೊಲುಮೆಗಿಂತ ಆತ್ಮೀಯಭಾವವೇ?  ಆದರೆ ದೊರೆ-ಸೇವಕ, ಪ್ರಭು-ಪ್ರಜೆ, ನಮ್ಮೆಲ್ಲರ ಮನಗಳ ಅಧಿನಾಯಕ ಮುಂತಾದ ಭಾವಗಳಲ್ಲಿ ತಾಯೊಲುಮೆಯ ಆತ್ಮೀಯತೆ ಹೇಗೆ ತಾನೆ ಸ್ಫುರಿಸೀತು?  ಹೋಗಲಿ, ಭಕ್ತಿಭಾವದಿಂದಲಾದರೂ ಈ ಆತ್ಮೀಯತೆ ಸ್ಫುರಿಸಬಹುದೇ ಎಂದರೆ, ಶಿವ, ವಿಷ್ಣು, ಕಾಳಿ, ಮಾರಿ-ಮಸಣಿ, ಜಕ್ಕಿಣಿ-ಭೂತಪ್ಪಗಳನ್ನು ಕಂಡರಿಸಿದ ಮೂರ್ತಕಲ್ಪನೆಯ ಮನಸ್ಸಿಗೆ ಬ್ರಹ್ಮಸಮಾಜದ ಸುಶಿಕ್ಷಿತ ಉಚ್ಚಬೌದ್ಧಿಕಸಮುದಾಯಕ್ಕಷ್ಟೇ ಪರಿಚಿತವಾದ ಈ ನಿರಾಕಾರ, ಕಲ್ಪನಾತೀತ "ಅಧಿನಾಯಕ" ಆತನ ರಥ, ಚಕ್ರ, ಶಂಖಧ್ವನಿ, ಸಿಂಹಾಸನ ಇವುಗಳ ಸಾಂಕೇತಿಕತೆ, ಅಮೂರ್ತಕಲ್ಪನೆಗಳು ಆತ್ಮೀಯತೆಯನ್ನು ಉಕ್ಕಿಸಿಯಾವು ಹೇಗೆ?  ಅಥವಾ ಇವೆಲ್ಲವನ್ನೂ ದೇಶಕ್ಕೆ ಲಗತ್ತಿಸಿ ಕಲ್ಪಿಸಿಕೊಳ್ಳುವುದಾದರೂ ಹೇಗೆ?

ಇಲ್ಲಿ ವಂದೇಮಾತರಂ ಸಣ್ಣದೊಂದು ಹೋಲಿಕೆ ಬೇಡುತ್ತದೆ.  ವಂದೇಮಾತರಂ ವಿಷಯ ಹಾಗಲ್ಲ.  ಅದು ತಾಯ್ದೇವಿಯ ವಿವಿಧ ಆಯಾಮಗಳ ಮೂರ್ತಕಲ್ಪನೆ.  ಅಲ್ಲಲ್ಲಿ ಬರುವ ಅಮೂರ್ತ ಕಲ್ಪನೆಗಳೂ ದೇಶದ ಸಾಮಾನ್ಯರ ಕಲ್ಪನಾಪರಿಧಿಗೆ ಹೊರತೇನಲ್ಲ.  ಕೋಟಿಕೋಟಿಕಂಠಕಲಕಲನಿನಾದಕರಾಲೆಯಾದ ಬಹುಬಲಧಾರಿಣಿ, ತಾರಿಣಿಯ ಪರಿಚಯ ಹೇಗೋ, ವಿದ್ಯಾ, ಧರ್ಮ, ಮರ್ಮಸ್ವರೂಪೆಯ ಪರಿಚಯ ಹೇಗೋ ಸುಜಲೆ, ಸುಫಲೆ, ಮಲಯಜಶೀತಲೆ, ಸಸ್ಯಶ್ಯಾಮಲೆ, ಶುಭ್ರಜ್ಯೋತ್ಸ್ನಾಪುಲಕಿತಯಾಮಿನಿ, ಫುಲ್ಲಕುಸುಮಿತಧ್ರುಮದಳಶೋಭಿನಿ, ಸುಹಾಸಿನಿ, ಸುಮಧುರಭಾಷಿಣಿಯಾದ ರಾಷ್ಟ್ರಮಾತೆಯ ಕಲ್ಪನೆಯೂ ಭಾರತೀಯರಿಗೆ ಹೊಸದಲ್ಲ.  ಆದರೆ ಇದನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸುವಲ್ಲಿ ಎದುರಾದ ಮುಖ್ಯ ತೊಡಕೆಂದರೆ, ಇಲ್ಲಿ ಹಿಂದೂ ದೇವತೆಯೊಬ್ಬಳ ಮೂರ್ತಕಲ್ಪನೆಯಿರುವುದರಿಂದ ರಾಷ್ಟ್ರಗೀತೆಯ ಹೆಸರಿನಲ್ಲಿ ಆಕೆಗೆ ತಲೆವಾಗುವುದು ತಮ್ಮ ಧರ್ಮವಿರುದ್ಧ ಎಂದು ಮುಸ್ಲಿಮರು ತಕರಾರು ತೆಗೆದದ್ದು.  ಆದರೆ ಬಂಗಾಳದ ವಿಭಜನೆಯವರೆಗೂ ಈ ಗೀತೆಯನ್ನು ಹಿಂದೂ ಮುಸ್ಲಿಮರಿಬ್ಬರೂ ಕೂಡಿಯೇ ಹಾಡುತ್ತಿದ್ದರೆಂಬುದೂ, ಇಡೀ ದೇಶವನ್ನು ಒಗ್ಗೂಡಿಸುವಲ್ಲಿ ಈ ಗೀತೆ ಸಹಾಯಮಾಡಿತ್ತೆಂಬುದೂ ಇತಿಹಾಸ.  ಇರಲಿ, ಆದರೂ ಈ ತಕರಾರಿನಲ್ಲಿ ತಥ್ಯವಿಲ್ಲದಿಲ್ಲ.  ಗೀತೆಯ ಮೊದಲ ಚರಣವನ್ನು ಬಿಟ್ಟರೆ ಉಳಿದದ್ದು ಕಾಳಿಕಾಮಾತೆಯ ಮೂರ್ತಿಪೂಜೆಯೇ.  ಆದ್ದರಿಂದ ಅದಕ್ಕೆ ವಿರೋಧವೊದಗಿದ್ದರೆ ಸಹಜವೇ.  ಆದರೆ ರಾಷ್ಟ್ರೀಯಗೀತೆಯಾಗಿ ಚಾಲ್ತಿಯಲ್ಲಿರುವುದು ಕೇವಲ ಮೊದಲ ಚರಣವಷ್ಟೇ?  ಅಲ್ಲಿ ಯಾವ ಮೂರ್ತಿಪೂಜೆಯೂ, ಹಿಂದೂ ದೇವತೆಯ ಸ್ತುತಿಯೂ ಇಲ್ಲವಲ್ಲ?  ಅಲ್ಲಿರುವುದೆಲ್ಲಾ ಒಳ್ಳೆಯ ನೀರು, ಹಣ್ಣು, ಗಾಳಿ, ಸಸ್ಯಸಂಪತ್ತಿನಿಂದ ತುಂಬಿದ ತಾಯ್ನೆಲದ ಸ್ತುತಿಯಷ್ಟೇ.  ತಾಯ್ನೆಲ ಎಲ್ಲರಿಗೂ ಸಮಾನವಾಗಿ ಪೂಜ್ಯವಷ್ಟೆ?  ಅದಕ್ಕಾದರೂ ಯಾವ ಧಾರ್ಮಿಕ ತೊಡಕೂ ಇರಬಾರದಷ್ಟೇ?  ಆದರೂ ಇದಕ್ಕೆ ವಿರೋಧವಂತೂ ತಪ್ಪಲಿಲ್ಲ.  ಸ್ವಲ್ಪ ನಿರುಕಿಸಿ ನೋಡಿದರೆ ಈ ವಿರೋಧಕ್ಕೆ ಅಸಲಿ ಕಾರಣ ಮೇಲೆ ಹೇಳಿದ ವಿಗ್ರಹಪೂಜೆಯಲ್ಲ, ಬೇರೆಯೇ!  ಈ ಗೀತೆ ಬಂಕಿಮಚಂದ್ರರ ಆನಂದಮಠದಲ್ಲಿ, ಮುಸ್ಲಿಮ್ ದುರಾಕ್ರಮಣಕಾರರ ವಿರುದ್ಧ ಹಿಂದೂ ಸಾಧುಗಳು ಒಗ್ಗೂಡುತ್ತಿದ್ದ ಸಂದರ್ಭದಲ್ಲಿ ಬರುವುದು, ಆದ್ದರಿಂದ ಇದು "ಮುಸ್ಲಿಮರ ವಿರುದ್ಧವಾದುದು" ಎನ್ನುವ ಗ್ರಹಿಕೆ ಈ ವಿರೋಧಕ್ಕೆ ಕಾರಣ.  ಆದರೆ ನಿಜಕ್ಕೂ ಈ ಗ್ರಹಿಕೆಯಲ್ಲಿ ತಥ್ಯವುಂಟೇ ಎಂಬುದು ನಾವೆಲ್ಲರೂ ಪರಿಶೀಲಿಸಿಕೊಳ್ಳಬೇಕಾದ ಅಂಶ.  ದುರಾಕ್ರಮಣಕಾರರ ವಿರುದ್ಧದ ಭಾವನೆಗಳನ್ನು ಒಂದು ಸಮುದಾಯದ ವಿರುದ್ಧದ ಭಾವನೆಗಳಾಗಿ ಗ್ರಹಿಸಬೇಕೇ?  ಪ್ರಾರ್ಥನಾಪದ್ಯವಾಗಿ ಬಂದ ಗೀತೆಯ ಒಂದು ಭಾಗವನ್ನು (ಅದರ ಪ್ರಾರ್ಥನೆಯ ಅಂಶಗಳನ್ನು ಕಡೆಗಣಿಸಿ) ರಾಷ್ಟ್ರಗೀತೆಯಾಗಿ ಪರಿಗ್ರಹಿಸಬಹುದಾದರೆ, ಕಾದಂಬರಿಯೊಂದರಲ್ಲಿ ಬಂದ ಗೀತೆಯ ಒಂದು ಭಾಗವನ್ನು (ತನ್ನಷ್ಟಕ್ಕೇ ಯಾವ ಧಾರ್ಮಿಕವಿರೋಧಕ್ಕೂ ಎಡೆಗೊಡದ ಭಾಗವನ್ನು) ಅದರ ಕಾದಂಬರಿ ಸಂದರ್ಭದ ಹಿನ್ನೆಲೆಯನ್ನು ಕಡೆಗಣಿಸಿ ರಾಷ್ಟ್ರಗೀತೆಯಾಗಿ ಪರಿಗ್ರಹಿಸಬಾರದೇಕೆ?  ಇರಲಿ, ಇದು ಬಗೆಹರಿಯಲಾರದ ಪ್ರಶ್ನೆ.  ವಂದೇಮಾತರಂನಂತಹ ಹೃದ್ಯಮನೋಹರವಾದ ಗೀತೆಯನ್ನು ರಾಷ್ಟ್ರಗೀತೆಯಾಗಿ ಹಾಡುವ ಭಾಗ್ಯ ನಮಗೆ ಬರಲಿಲ್ಲವೆಂದು ನಿಡುಸುಯ್ಯಬಹುದಷ್ಟೇ.

ಅದೇನೇ ಇರಲಿ ರಾಷ್ಟ್ರಗೀತೆ ಯಾವುದಿರಬೇಕು, ಯಾವುದಿರಬಾರದೆಂದು ಚರ್ಚಿಸುವ ಉದ್ದೇಶ ಈ ಲೇಖನದ್ದಲ್ಲ, ಮತ್ತು ಅಂತಹ ಸಂದರ್ಭವೂ ಈಗಿಲ್ಲ; ರಾಷ್ಟ್ರಗೀತೆಯೆಂಬುದು ಹಾಗೆಲ್ಲ ಮನಬಂದಂತೆ ಬದಲಿಸಬರುವಂಥದ್ದೂ ಅಲ್ಲ.  ಜನಗಣಮನ ಗೀತೆಯ ಸಾಹಿತ್ಯಕ, ಐತಿಹಾಸಿಕವಿಶ್ಲೇಷಣಗಳೇನೇ ಇರಲಿ, ಅದಕ್ಕೆ ಅತ್ಯುನ್ನತಗೌರವ ಸಲ್ಲಲು ಅದು ನಮ್ಮ ರಾಷ್ಟ್ರಗೀತೆಯೆನ್ನುವ ಒಂದೇ ಕಾರಣ ಸಾಕು - ನಮ್ಮ ಎರಡಿಲ್ಲದ ಗೌರವ ಅದಕ್ಕೆ ಮೀಸಲು.  ಇದರೊಡನೆ ಗೀತೆಯಲ್ಲಿ ಅಂತರ್ಗತವಾಗಿರುವ ಉನ್ನತಭಾವವೂ ಮನಸ್ಸಿಗೆ ಬಂದರೆ ಈ ಗೌರವ ಇಮ್ಮಡಿಯಾದೀತು

ಜನಗಣಮಂಗಲದಾಯಕ ಜಯಹೇ ಭಾರತಭಾಗ್ಯವಿಧಾತಾ
ಜಯಹೇ ಜಯಹೇ ಜಯಹೇ ಜಯಜಯಜಯಜಯಹೇ

ವಂದೇಮಾತರಂ

Wednesday, October 14, 2020

ಹೆಂಡತಿಯ ಬಹುವಚನ


ಹೆಂಡತಿಯ ಬಹುವಚನವೆಂದರೆ "ರೀ..." ಎಂಬ ರಾಗವೆಂದು ಅರ್ಥೈಸಿಕೊಳ್ಳಬೇಡಿ - ರಾಗವೇ ಅದು?  ಸ್ವರ - ಶುದ್ಧರಿಷಭ, ಸಂದರ್ಭಾನುಸಾರ ಚತುಶ್ರುತಿರಿಷಭವೂ ರೇಗಿದರೆ ಷಟ್ಶ್ರುತಿರಿಷಭವೂ ಆಗಬಲ್ಲುದು (ಕರ್ಣಪ್ರಮಾಣಿಗಳಾದ ಹಿಂದುಸ್ತಾನಿ ಸಂಗೀತದವರು ಈ ಸ್ವರಪ್ರಭೇದಗಳನ್ನು ಸೊಗಸಾಗಿ ಕೋಮಲರಿಷಬ್, ಶುದ್ಧರಿಷಬ್ ಎಂದು ಕರೆಯುತ್ತಾರೆ), ತ್ರಿಸ್ಥಾಯಿವ್ಯಾಪ್ತಿಯುಳ್ಳ, ಷಟ್ಕಾಲಗಳಲ್ಲಿ ಸ್ಫುಟವಾಗಿಯೂ ಘಂಟಾಘೋಷವಾಗಿಯೂ ಸಕಲಗಮಕಯುಕ್ತವಾಗಿಯೂ ನುಡಿಯಬಲ್ಲ, ತ್ರಿಲೋಕಗಳಲ್ಲೂ ಮೊಳಗಬಲ್ಲ ಸ್ವರ ಅದು; ನಿಮಗೇನಾದರೂ ಅದು ಕೆಲವೊಮ್ಮ ಅಪಸ್ವರದಂತೆ ಕೇಳಿದರೆ, ಅದು ಕೇಳುವ ಕಿವಿಯ ದೋಷವೇ ಹೊರತು ಕರೆಯುವ ಕಂಠದ್ದು ಖಂಡಿತಾ ಅಲ್ಲ ಎಂಬುದು, ಆಡಿ ಅನುಭವಿಸಿದ ಎಲ್ಲ ಗಂಡಂದಿರ ಏಕಾಭಿಪ್ರಾಯ.  ಇರಲಿ, ನಾವಿಲ್ಲಿ ಈ ರಿಷಭಸ್ವರದ ಬಗೆಗೆ ಮಾತಾಡುತ್ತಿಲ್ಲ, ಅಸಲಿಗೆ ಸಂಗೀತದ ಬಗೆಗೇ ಮಾತಾಡುತ್ತಿಲ್ಲ, ಮಾತಾಡುತ್ತಿರುವುದು ವ್ಯಾಕರಣದ ಬಗ್ಗೆ - ಹೆಂಡತಿ'ಯಿಂದ' ಬರುವ ಬಹುವಚನದ ಬಗೆಗೂ ಅಲ್ಲ, ಹೆಂಡತಿ'ಗೆ' ಬಳಸುವ ಬಹುವಚನದ ಬಗ್ಗೆ, ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಹೆಂಡತಿ ಎಂಬ ಶಬ್ದದ ಬಹುವಚನರೂಪದ ಬಗೆಗೆ.  ಫೇಸ್ಬುಕ್ಕಿನಲ್ಲಿ ಮಿತ್ರ ಆನಂದವರ್ಧನರು ಕೇಳಿದ ಪ್ರಶ್ನೆಯೊಂದು ಈ ಲೇಖನಕ್ಕೆ ಕಾರಣ.  ಮಗ - ಮಗಂದಿರು, ಮಗಳು > ಮಗಳ್ದಿರು ಆದ ಹಾಗೆ ಹೆಂಡತಿಗೆ ಹೆಂಡಂದಿರು ಅಥವಾ ಹೆಂಡತಿಯಂದಿರು ಎಂದು ಹೇಳಬೇಕೇ ಎಂಬುದು ಅವರ ಪ್ರಶ್ನೆ.  ಪ್ರಶ್ನೆ ತಮಾಷೆಯಾಗಿದ್ದುದರಿಂದ ಅದಕ್ಕೆ ಉತ್ತರರೂಪವಾದ ಈ ಲೇಖನವೂ ಸಹಜವಾಗಿಯೇ ತುಸು ತಮಾಷೆಯ ಹಾದಿ ಹಿಡಿದಿದೆ.  ಶಾಸ್ತ್ರವಿಷಯದಲ್ಲಿ ಸಾಮಾನ್ಯವಾಗಿ ಅನುಸರಿಸಬೇಕಾದ ಗಾಂಭೀರ್ಯವಿಲ್ಲಿಲ್ಲ, ಒಪ್ಪುತ್ತೇನೆ, ಆದರೆ ವಿಷಯಸ್ಪಷ್ಟತೆಗೆ ಧಕ್ಕೆಯಾಗಿಲ್ಲವೆಂದುಕೊಂಡಿದ್ದೇನೆ.  ವ್ಯಾಕರಣವೆಂಬುದು ಯಾವಾಗಲೂ ಹುಬ್ಬುಗಂಟಿಕ್ಕಿಕೊಂಡು ಮಾಡುವ ಶ್ರಾದ್ಧಕರ್ಮವೇಕಾಗಬೇಕು?  ಆಗೀಗ ಹುಬ್ಬು ಸಡಿಲಿಸಿ ನಕ್ಕರಾಯ್ತಪ್ಪ.  ನಿಮ್ಮಲ್ಲಿ ಸಂಸ್ಕೃತ ಕಲಿತವರಿದ್ದರೆ, ಲತಾಶಬ್ದದ್ದೋ ಲುಂಡಕಶಬ್ದದ್ದೋ ಸಂಬೋಧನಪ್ರಥಮಾವಿಭಕ್ತಿರೂಪವನ್ನು ಹೇಳುವಾಗ ಎಷ್ಟು ಜನ ಹುಚ್ಚುಹುಚ್ಚಾಗಿ ನಗದೇ, ಮುಖವಿಕಾರ ಮಾಡದೇ, ಹುಬ್ಬು ಗಂಟಿಕ್ಕಿಕೊಂಡು, ಗುರುಗಳು ಮೆಚ್ಚುವಂತೆ ಘನವಾಗಿ ಗಂಭೀರವಾಗಿ ಒಪ್ಪಿಸಿದ್ದೀರಿ?  ಎದೆ ಮುಟ್ಟಿಕೊಂಡು ಹೇಳಿ ಮತ್ತೆ?  ನಗುನಗುತ್ತಲೇ ವಿಷಯವನ್ನು ತಿಳಿಸುವುದೇ ಕಾಂತಾಸಮ್ಮಿತವಷ್ಟೇ?  ಹಾಗಿದ್ದಾಗ ಕಾಂತೆಯ ವಿಷಯ ಮಾತಾಡುವಾಗಲೂ ತುಸು ನಗದಿದ್ದರೆ ಹೇಗೆ?

ಕನ್ನಡದ ವಚನ, ಸಂಧಿ, ಸಮಾಸಗಳನ್ನು ಬಿಡಿಸಿ ಮೂಲಪದಗಳ ಮಟ್ಟದಲ್ಲಿ ಅರ್ಥ ಮಾಡಿಕೊಳ್ಳಬೇಕಾದರೆ ಒಂದಿಷ್ಟೇ ಇಷ್ಟು ಹಳಗನ್ನಡದ ಅರಿವು ಬಹಳ ಉಪಯುಕ್ತ.  ಏಕೆಂದರೆ, ನಾನು ಈ ಹಿಂದೆ ಹಲವು ಬಾರಿ ಹೇಳಿದ್ದಂತೆ, ನಾವಿವತ್ತು ಬಳಸುವ ಅನೇಕ ಸಾಧಿತಪದಗಳು, ಸಂಯುಕ್ತಪದಗಳು (compound words, ಸಂಧಿ, ಸಮಾಸ, ಪ್ರತ್ಯಯಯುಕ್ತಪದಗಳು ಇತ್ಯಾದಿ) ಬಹುತೇಕ ಹಳಗನ್ನಡದ ಕಾಲದಲ್ಲೇ ರೂಪುಗೊಂಡಿದ್ದು.  ಹೀಗೆ ರೂಪುಗೊಂಡ ಪದದ ಕೊನೆಯಲ್ಲಿ ಕೊಂಬೋ ಗುಡಿಸೋ ಸೇರಿಸಿ ಚಿಕ್ಕಪುಟ್ಟ ಬದಲಾವಣೆ ಮಾಡಿಕೊಂಡು ಈಗ ಬಳಸುತ್ತಿದ್ದೇವಷ್ಟೇ - ಪದಗಳ ಮೂಲರೂಪ, ಸಂಧಿ/ಸಮಾಸಪ್ರಕ್ರಿಯೆ ಮೊದಲಾದುವುಗಳು ಹಾಗೇ ಉಳಿದುಕೊಂಡು ಬಂದಿರುತ್ತವೆ.  ಆದ್ದರಿಂದ ಅವನ್ನು ಬಿಡಿಸಿ ನೋಡಿದರೆ ನಮಗೆ ಸಿಗುವುದು ಹಳಗನ್ನಡ ರೂಪಗಳೇ, ಅವನ್ನ ಹಾಗೆಯೇ ಅರ್ಥ ಮಾಡಿಕೊಂಡರೆ, ಇಂದಿನ ರೂಪವನ್ನರಿಯಲು ಸಹಾಯವಾಗುತ್ತದೆ.

ಹೆಂಡತಿ ಅನ್ನೋ ಪದಕ್ಕೆ ಬಹುವಚನ ಸೇರಿಸುವುದು ಹೇಗೆ? ಹೆಂಡತಿಗಳು/ಹೆಂಡಂದಿರು/ಹೆಂಡಿತಿಯಂದಿರು/ಹೆಂಡತಿಯರು ಇದರಲ್ಲಿ ಯಾವುದು ಸರಿ ಎಂಬುದು ನಮ್ಮ ಮಿತ್ರರ ಪ್ರಶ್ನೆ.  ಈ ವಿವಿಧರೂಪಗಳನ್ನು ಒಂದೊಂದಾಗಿ ಪರಿಶೀಲಿಸೋಣ.

ಇಲಿಗಳು, ಬೆಕ್ಕುಗಳು ಎನ್ನುವ ರೀತಿ ಹೆಂಡತಿಗಳು ಎಂದರೆ ಹೆಂಡತಿಯ ಆಗ್ರಹಕ್ಕೆ ಪಾತ್ರವಾಗಬೇಕಾದೀತು, ಆ 'ಹೆಂಡತಿಯರು' ಬಹುಸಂಖ್ಯೆಯಲ್ಲಿದ್ದರಂತೂ ಇನ್ನೂ ಫಜೀತಿ (ಲಟ್ಟಣಿಗೆಗಳು ಎಂಬುದೂ ಅಂತಹ ಬಹುವಚನವೇ, ನೆನಪಿರಲಿ), ಆದ್ದರಿಂದ ಹೆಂಡತಿಗಳು ಎಂಬುದು ಸರಿಯೋ ತಪ್ಪೋ, ಕ್ಷೇಮವಂತೂ ಅಲ್ಲವೆಂದು ತಿಳಿಯಬಹುದು, ಸದ್ಯಕ್ಕೆ.  ಇದನ್ನು ಮುಂದೆ, ಪರಿಸ್ಥಿತಿ ತಿಳಿಯಾದ ಮೇಲೆ, ಪರಿಶೀಲಿಸೋಣ.  ಇನ್ನು ಹೆಂಡಂದಿರು, ಹೆಂಡತಿಯಂದಿರು, ಹೆಂಡತಿಯರು - ಈ ಮೂರು ರೂಪಗಳಲ್ಲಿ ಯಾವುದು ಸರಿ ಎನ್ನುವ ಪ್ರಶ್ನೆ ಉಳಿಯುತ್ತದೆ.  

ಹೆಂಡಂದಿರು ಎಂಬ ಪದ ಬಂದುದರಿಂದ ಹೇಳುತ್ತೇನೆ, ಹೆಂಡಕ್ಕೂ ಹೆಂಡತಿಗೂ ಯಾವ ಸಂಬಂಧವೂ ಇಲ್ಲ (ಜಿ ಪಿ ರಾಜರತ್ನಂ ಏನಾದರೂ ಹೇಳಲಿ!) -  ಭಾಷಿಕಸಂಬಂಧವಂತೂ ಇಲ್ಲವೇ ಇಲ್ಲ.  ಹೆಂಡವು ಪೆಂಢಾ ಎಂಬ ಪ್ರಾಕೃತರೂಪದಿಂದ ಬಂದದ್ದು (ಅದರ ಮೂಲಸಂಸ್ಕೃತರೂಪ ಫೇನಕ್ಕೆ (ನೊರೆಗೆ) ಸಂಬಂಧಿಸಿದ ಯಾವುದೋ ಪದವಿದ್ದೀತು, ಪರಿಶೀಲಿಸಿ ತಿಳಿಯಬೇಕು); ಆದರೆ ಹೆಂಡತಿ ಮಾತ್ರ ದ್ರಾವಿಡಭಾಷೆಯ ಪಾಲ್ಗಡಲಲ್ಲೇ ಹುಟ್ಟಿ ಬಂದವಳು - ಪೆಣ್ ಎಂಬ ಆದಿದ್ರಾವಿಡಪದವೇ ಈಕೆಯ ಮೂಲರೂಪ.  ಹೆಂಡದ ಬಹುವಚನವಾದರೋ, "ಹೆಂಡಗಳು" (ಹೆಂಡವನ್ನೇ ವ್ಯಕ್ತಿಯಾಗಿ, 'ಅಣ್ತಮ್ಮ'ನಾಗಿ ಭಾವಿಸಿದವರು ಬೇಕಿದ್ದರೆ ಹಲವು ಹೆಂಡಗಳನ್ನುದ್ದೇಶಿಸಿ ಹೆಂಡಂದಿರು ಎಂದು ಕೈಮುಗಿಯಬಹುದೇನೋ, ಅದು ಅವರವರ ಭಾವಕ್ಕೆ ಸಂಬಂಧಿಸಿದ ವಿಷಯ, ಆದರೆ ವ್ಯಾಕರಣವಂತೂ ಅದನ್ನೊಪ್ಪುವುದಿಲ್ಲ). ಹೀಗಿರುವಾಗ, ಹೆಂಡಪುರುಷನಿಗೆ ಬಹುವಚನದಂತೆ ಕಾಣುವ ಈ ಪದ ಹೆಂಡತಿಗಂತೂ ಖಂಡಿತಾ ಒಪ್ಪುವುದಿಲ್ಲ.  ಸಾಮಾಜಿಕವಾಗಿಯೂ ಹೆಂಡಕ್ಕೂ ಹೆಂಡತಿಗೂ ಎಣ್ಣೆಸೀಗೆಯ ಸಂಬಂಧ ತಾನೆ? (ವಿಸ್ಕಿ-ಸೋಡಾದ ಸಂಬಂಧವಿರಬಾರದಿತ್ತೇ ಎಂದು ಕೆಲವರು ಹೆಂಡತಿಪ್ರಿಯ (ಹೆಂಡ+ಅತಿಪ್ರಿಯ) ಗಂಡಂದಿರು ಹಲುಬಬಹುದು.  ಬಿಡಿ, ಅವರಷ್ಟಕ್ಕವರು "ಯೆಂಡಾ ಯೆಂಡ್ತಿ ಕನ್ನಡ್ ಪದ್ಗೋಳ್" ಎಂದು ತೂರಾಡಿಕೊಂಡಿರಲಿ, ಆ ಭಂಡಂದಿರ (ಅರ್ಥಾತ್, ಭಂಡಗಂಡಂದಿರ) ಗೊಡವೆ ನಮಗೇಕೆ?  ಹೆಂಡತಿಮೀಮಾಂಸೆಯಲ್ಲಿ ಹೆಂಡಕ್ಕೇನು ಕೆಲಸ?), ಆದ್ದರಿಂದ ಹೆಂಡವನ್ನು ಪಕ್ಕಕ್ಕಿಟ್ಟು ಸದ್ಯಕ್ಕೆ ಹೆಂಡತಿಯ ಕಡೆ ಗಮನ ಹರಿಸೋಣ.  ಹೆಂಡಂದಿರು ಸರಿಯಲ್ಲ ಎಂದ ಮೇಲೆ, ಇನ್ನುಳಿದದ್ದು ಹೆಂಡತಿಯಂದಿರು ಮತ್ತು ಹೆಂಡತಿಯರು - ಈ ಎರಡು ರೂಪಗಳಲ್ಲಿ ಯಾವುದು ಸರಿ ಎನ್ನುವ ಪ್ರಶ್ನೆ ಉಳಿಯುತ್ತದೆ.

ಇಷ್ಟಕ್ಕೂ ಹೆಂಡತಿಯ ಬಹುವಚನವನ್ನು ತಿಳಿಯಬೇಕಾದರೆ ಹೆಂಡತಿಯ ಸ್ವರೂಪವನ್ನು (ಎಂದರೆ ಹೆಂಡತಿಯೆಂಬ ಆ ಪದದ ಸ್ವರೂಪವನ್ನು) ಅರಿಯಬೇಕಲ್ಲವೇ?  ನಾನು ಮೊದಲೇ ತಿಳಿಸಿದಂತೆ, ಇವತ್ತು ಬಳಸುವ ಅನೇಕ ರೂಪಗಳು ಹಳಗನ್ನಡದಿಂದಲೇ ಬಂದುವು, ಆದ್ದರಿಂದ ಹೆಂಡತಿಯ ಹಳೆಯ ರೂಪವನ್ನು ಪರಿಶೀಲಿಸುವುದು ಒಳ್ಳೆಯದು.

ಈ ಹೆಂಡತಿಯ ಹಳೆಯ ರೂಪ, ಪೆಂಡತಿ (ಕನ್ನಡದ ಪೆಣ್ ( = ಹೆಣ್ಣು), ತಮಿಳಿನ ಪೊಣ್; ಕನ್ನಡದ ಪೆಂಡತಿಯೇ ತಮಿಳಿನ ಪೊಣ್ಡಾಟ್ಟಿ).  ಈ ಪೆಂಡತಿ ಕೂಡ, ಪೆಂಡಿತಿ ಎಂಬುದರ ಬದಲಾದ ರೂಪವೆಂದು ತಿಳಿಸುವ ನಿಘಂಟು, ಪೆಣ್ ಎಂಬುದಕ್ಕೆ 'ಇತಿ' ಪ್ರತ್ಯಯ ಸೇರಿ ಪೆಂಡಿತಿಯೆಂದಾಯಿತೆಂದು ಸೂಚಿಸುತ್ತದೆ.  ಆದರೆ ಪೆಣ್+ಇತಿ ಎನ್ನುವುದು ಪೆಣಿತಿ/ಪೆಣ್ಣಿತಿ/ಪೇಣಿತಿ ಎಂದಾಗಬಹುದೇ ಹೊರತು ಅಲ್ಲಿ ಡಕಾರ ಬಂದದ್ದು ಹೇಗೆ?  ಆದ್ದರಿಂದ ಇದು 'ಇತಿ' ಪ್ರತ್ಯಯವಿರಲಾರದೆಂದು ನನ್ನ ಅನಿಸಿಕೆ; ಬದಲಿಗೆ ಪೆಂಡಿರ್ ಎಂಬ ಪದಕ್ಕೆ 'ತಿ' ಪ್ರತ್ಯಯ ಸೇರಿ, ಪೆಂಡಿರ್ + ತಿ = ಪೆಂಡಿರ್ತಿ (ರಕಾರಶಿಥಿಲ) > ಪೆಂಡಿತಿ ಹೀಗಾಗಿರಲು ಸಾಕು.  ಇದರ ಅರ್ಥವಿವರಣೆಯನ್ನು ಆಮೇಲೆ ನೋಡೋಣ, ಇಲ್ಲಿ ನಾವು ಗಮನಿಸಬೇಕಾದ್ದು, ಪೆಂಡಿರ್ ಎಂಬ ಬಹುವಚನವನ್ನು.  'ಇರ್' ಎಂಬ ಬಹುವಚನಪ್ರತ್ಯಯಕ್ಕೆ ಉದಾಹರಣೆ ಕೊಡುತ್ತಾ ಕೇಶಿರಾಜನು ಪೆಣ್ + ಇರ್ = ಪೆಂಡಿರ್ ಎಂದು ತಿಳಿಸುತ್ತಾನೆ (ಶಬ್ದಮಣಿದರ್ಪಣ, ನಾಮಪ್ರಕರಣ - ಸೂತ್ರ 107ರ ಪ್ರಯೋಗಭಾಗ).  ಆದರೆ ದರ್ಪಣಕಾರನಾಗಲೀ, ವ್ಯಾಖ್ಯಾನಕಾರರಾಗಲೀ, ವಿವರಣಕಾರರಾಗಲೀ ಪೆಣ್ + ಇರ್ ಎಂಬುದು ಪೆಣಿರ್/ಪೆಣ್ಣಿರ್/ಪೇಣಿರ್ ಆಗದೇ ಪೆಂಡಿರ್ ಹೇಗಾಗುತ್ತದೆ - ಅಲ್ಲಿ ಡಕಾರ ಹೇಗೆ ಬಂತು ಎಂಬುದರ ವಿವರಣೆ ನೀಡಿಲ್ಲ (ಮತ್ತೆ ಇದು ಮೇಲೆ ವಿವರಿಸಿದ ಪೆಣ್+ಇತಿ ಎಂಬಲ್ಲಿನ ತೊಡಕೇ - ಡಕಾರ ಬಂದದ್ದು ಹೇಗೆ?).  ಆದ್ದರಿಂದ ಇಲ್ಲಿ 'ಇರ್' ಪ್ರತ್ಯಯವಿರಲಾರದು, ಬದಲಿಗೆ ಪೆಣ್ ಎಂಬ ನಾಮಪದಕ್ಕೆ ದಿರ್ ಎಂಬ ಪ್ರತ್ಯಯ ಸೇರಿ ಪೆಣ್ + ದಿರ್ = ಪೆಣ್ದಿರ್ ಎಂದಾಗಿರಬೇಕೆಂಬುದು ನನ್ನ ಊಹೆ.  ಅಲ್ಲಿಂದ ಪೆಣ್ದಿರ್ > ಪೆಣ್ಡಿರ್ > ಪೆಂಡಿರ್ ಎಂಬ ರೂಪ ಸಾಧ್ಯ.  ಅದೇನೇ ಇರಲಿ, ಪೆಂಡಿರ್ ಎನ್ನುವುದು ಬಹುವಚನವೆಂದಂತೂ ಆಯಿತಲ್ಲ.  ಯಾವುದರ ಬಹುವಚನ?  ಪೆಣ್ (ಹೆಣ್ಣು) ಎಂಬುದರ ಬಹುವಚನ.  ಪೆಣ್ (ಹೆಣ್ಣು) ಎಂದರೆ ಸಾಮಾನ್ಯಾರ್ಥದಲ್ಲಿ ಸ್ತ್ರೀ ಎಂದು ತಾನೆ ಅರ್ಥ?  ಆದ್ದರಿಂದ ಪೆಂಡಿರ್ ಎಂಬುದು ಮೂಲಾರ್ಥದಲ್ಲಿ ಸ್ತ್ರೀಯರು ಎಂಬ ಬಹುವಚನಾರ್ಥ ಕೊಡುವಂಥದ್ದು - ಆದ್ದರಿಂದ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಸ್ತ್ರೀಯರಿದ್ದರೆ (ವಿವಾಹಿತರಿರಲಿ, ಅವಿವಾಹಿತರಿರಲಿ) ಅವರಿಗೆ ಪೆಂಡಿರ್ ಅಥವಾ ಹೆಂಡಿರು ಎಂಬುದು ಅನ್ವಯಿಸೀತು (ಇರಿ, ಹಾಗೆಂದು ಸಿಕ್ಕಸಿಕ್ಕವರನ್ನೆಲ್ಲಾ ಹೆಂಡಿರೆಂದುಬಿಡುವುದಕ್ಕಾಗುತ್ತದೆಯೇ? ಅನಾಹುತವೇ ಆದೀತು).  

ಕನ್ನಡದಲ್ಲಿ ವಿವಾಹದಿಂದ ಏರ್ಪಟ್ಟ ಗಂಡುಹೆಣ್ಣುಗಳ ನಿರ್ದಿಷ್ಟ ಸಂಬಂಧಕ್ಕೆ ಅದರದೇ ಆದ ಪದವೇ ಇದ್ದಂತಿಲ್ಲ.  ಅಯ್ಯೋ, ಗಂಡ-ಹೆಂಡತಿ ಎಂಬುದು ಇದೆಯಲ್ಲ ಎನ್ನುತ್ತೀರಾ?  ಅವು ಮೂಲತಃ ಬೇರೆಬೇರೆ ಅರ್ಥವುಳ್ಳವು, ನಾವು ಆ ವೈವಾಹಿಕಸಂಬಂಧ ಸೂಚಿಸುವ ಬೇರೆ ಪದಗಳಿಲ್ಲದ ಕಾರಣಕ್ಕೆ ಬಳಕೆಯಲ್ಲಿ ತಂದುಕೊಂಡಿರುವ ಪದಗಳು.  ಗಂಡ ಎನ್ನುವ ಪದ ಮೂಲತಃ ಶೂರ, ಸ್ವಾಮಿ, ಒಡೆಯ ಇತ್ಯಾದಿ ಅರ್ಥವುಳ್ಳದ್ದು, ವಿವಾಹದಲ್ಲಾತ ಕನ್ಯಾದಾನ ಪಡೆದು (ಅಥವಾ ಹೇಗೋ ಹೆಣ್ಣನ್ನು 'ಗೆದ್ದೋ, ಕದ್ದೋ, ಹೊತ್ತೊಯ್ದೋ') ಆಕೆಗೆ 'ಒಡೆಯ'ನಾಗುವುದರಿಂದ ಸಂಸಾರದಲ್ಲವನು ಗಂಡ (ಹಾಗೇ ಯಜಮಾನ, ಪತಿ, ಭರ್ತಾ, ವಲ್ಲಭ, ಕಾಂತ ಇವೆಲ್ಲವೂ ಸಾಂದರ್ಭಿಕವಾಗಿ ಬೇರೆಬೇರೆ ಅರ್ಥವುಳ್ಳವು, ಗಂಡ ಎಂಬ ವಿಶೇಷಾರ್ಥ ಹೊಂದಿವೆಯಷ್ಟೇ).  ಅದೇ ರೀತಿ ಯಜಮಾನಿತಿ, ಪತ್ನಿ, ದಾರಾ, ಭಾರ್ಯಾ, ಮಡದಿ, ಕಾಂತೆ ಇತ್ಯಾದಿಗಳೂ ಸಾಂದರ್ಭಿಕವಾಗಿ ಬೇರೆಬೇರೆ ಅರ್ಥವುಳ್ಳವು, ಹೆಂಡತಿ ಎಂಬ ವಿಶೇಷಾರ್ಥ ಹೊಂದಿವೆಯಷ್ಟೇ.  ಇನ್ನು ಹೆಂಡತಿ ಎಂಬುದರ ರೂಪವಿಕಾಸವನ್ನೂ ಅರ್ಥವ್ಯಾಪ್ತಿಯನ್ನೂ ಮೇಲೇ ನೋಡಿದೆವಲ್ಲ - ಹೆಂಡತಿ (ಹೆಂಡಿರ್ + ತಿ) ಎಂಬುದರ ಮೂಲಭಾಗ ಹೆಂಡಿರ್ ಎಂಬುದು ಯಾವ ಸ್ತ್ರೀಸಮೂಹಕ್ಕೂ ಅನ್ವಯಿಸುವುದೆಂದು ತಿಳಿದೆವಲ್ಲ.  ಹೆಂಡಿರ್ ಎಂಬುದೂ ವಿವಾಹಸಂದರ್ಭದಲ್ಲಿ ಮಾತ್ರ ಪತ್ನಿಯರು ಎಂಬ ವಿಶೇಷಾರ್ಥ ಹೊಂದಿತಷ್ಟೇ.  ಹೇಗೆಂದರೆ, ಪೆಣ್/ಹೆಣ್ಣು ಎಂಬ ಸಾಮಾನ್ಯಪದವು, "ಅವನಿಗೆ (ಆ ಗಂಡನಿಗೆ) ಸೇರಿದ ಪೆಣ್/ಹೆಣ್ಣು ಎಂಬ ಸಂಬಂಧಸೂಚಕವಿಶೇಷಾರ್ಥ ಪಡೆದುಕೊಳ್ಳುತ್ತದೆ ('ನಿನ್ನ ಹೆಂಗುಸು, ನಿನ್ನ ಹೆಣ್ಣು, ನಮ್ ಹೆಂಗಸ್ರು ಇತ್ಯಾದಿ ಪ್ರಯೋಗಗಳು ಈಗಲೂ ಬಳಕೆಯಲ್ಲಿವೆಯಲ್ಲ).  ಒಬ್ಬನಿಗೆ ಅಂತಹ ಹಲವು ಪೆಣ್ಗಳ್/ಹೆಣ್ಣುಗಳು ಇದ್ದಲ್ಲಿ ಅವರು ಬಹುವಚನವಾಗಿ ಪೆಂಡಿರ್/ಹೆಂಡಿರ್/ಹೆಂಡಿರು ಆಗುತ್ತಾರೆ (ಎಂದರೆ ಆ ಎಲ್ಲರೂ ಆ ಗಂಡನಿಗೆ ಸೇರಿದ ಹೆಂಗಸರು, ಪತ್ನಿಯರು).  ಸ್ತ್ರೀಯರು ಎಂಬ ಸಾಮಾನ್ಯಾರ್ಥ ಹೊಂದಿದ್ದ ಹೆಂಡಿರ್, ಪತ್ನಿಯರು ಎಂಬ ವಿಶೇಷಾರ್ಥ ಪಡೆದದ್ದು ಹೀಗೆ.

ಈ ಪೆಂಡಿರ್ ಎಂಬ ಬಹುವಚನಕ್ಕೆ 'ತಿ' ಪ್ರತ್ಯಯ ಸೇರಿದಾಗ ಪೆಂಡಿರ್ತಿ>ಪೆಂಡಿತಿ > ಹೆಂಡಿತಿ > ಹೆಂಡತಿ ಆದದ್ದೆಂಬುದನ್ನು ಮೇಲೆಯೇ ನೋಡಿದೆವಷ್ಟೇ?  ಕನ್ನಡದಲ್ಲಿ 'ತಿ' ಪ್ರತ್ಯಯ ಸಾಮಾನ್ಯವಾಗಿ ವೃತ್ತಿಸೂಚಕವಾಗಿರಬಹುದು (ಬೋಯಿತಿ, ಅಗಸಿತಿ, ಕುಂಬಾರ್ತಿ ಇತ್ಯಾದಿ) ಅಥವಾ ವೃತ್ತಿಸೂಚಕಪುಲ್ಲಿಂಗಪದದ ಸ್ತ್ರೀಲಿಂಗರೂಪವಾಗಿರಬಹುದು (ಬ್ರಾಹ್ಮಣತಿ, ಕನ್ನಡತಿ, ಇತ್ಯಾದಿ), ಅಥವಾ ಸ್ವಭಾವಸೂಚಕವಾಗಿರಬಹುದು (ಅಂದಗಾತಿ, ಮಾತುಗಾತಿ, ಕಲೆಗಾತಿ ಇತ್ಯಾದಿ), ಅಥವಾ ಒಡೆತನವನ್ನು, ಅಧಿಕಾರವನ್ನು ಸೂಚಿಸುವಂಥದ್ದು ಆಗಿರಬಹುದು (ಗೌಡಿತಿ, ಹೆಗ್ಗಡಿತಿ).  ಆದ್ದರಿಂದ 'ತಿ' ಪ್ರತ್ಯಯ ಪಡೆದ ಈ ಪೆಂಡಿರ್ತಿ/ಪೆಂಡಿತಿ/ಹೆಂಡಿತಿ ಹಲವು ಹೆಂಡಿರಲ್ಲಿ ಮುಖ್ಯಳಾಗಿರಬೇಕು - ಪ್ರಧಾನಪತ್ನಿ, ಮುಖ್ಯಪತ್ನಿ ಇತ್ಯಾದಿ.  ಒಂದು ಸಂಸಾರದಲ್ಲಿ ಪೆಂಡಿರು/ಹೆಂಡಿರು ಹಲವರಿರಬಹುದು, ಅವರಲ್ಲಿ ಮುಖ್ಯಳಾದ ಪೆಂಡಿತಿ/ಹೆಂಡಿತಿ ಒಬ್ಬಳೇ ತಾನೇ ಇರಲು ಸಾಧ್ಯ?  ಆದ್ದರಿಂದ ಸಂಸಾರದ ಮಟ್ಟದಲ್ಲಿ ಇದಕ್ಕೆ ಬಹುವಚನ ಪ್ರಾಯೋಗಿಕವಾಗಿ ಸಾಧ್ಯವಿಲ್ಲ (ಗಂಡ ಒಬ್ಬರಿನ್ನೊಬ್ಬರಿಗೆ ಕಾಣದಂತೆ ಎರಡು ಸಂಸಾರ ನಡೆಸುತ್ತಿದ್ದರೆ ಅದು ಬೇರೆಯ ವಿಷಯ).  ಈಗಂತೂ ಏಕಪತ್ನೀತ್ವವೇ ಸಾಮಾನ್ಯವಾದ್ದರಿಂದ ಹೆಣ್ಣು, ಹೆಂಡಿರು, ಹೆಂಡತಿ ಎಲ್ಲಾ ಒಂದೇ ವ್ಯಕ್ತಿಗೆ, ಏಕವಚನದಲ್ಲೇ ಅನ್ವಯಿಸುವಂಥದ್ದು - ಬಹುವಚನವಿದ್ದರೆ ಮರ್ಯಾದೆಗಾಗಿ ಇರಬೇಕಷ್ಟೇ.  ಇರಲಿ ಮರ್ಯಾದೆಗಾದರೂ ಯಾವ ಬಹುವಚನ ಉಪಯೋಗಿಸಬೇಕು?  ಹಾಗೇ ಹಲವು ಬೇರೆಬೇರೆ ಹೆಂಡತಿಯರನ್ನು (ಬೇರೆಬೇರೆ ಕುಟುಂಬದ ಮುಖ್ಯಪತ್ನಿಯರನ್ನು) ಉದ್ದೇಶಿಸುವಾಗಲೂ ಬಹುವಚನ ಬೇಕಷ್ಟೇ? ಆಗ ಯಾವ ಬಹುವಚನ? ಈ ಲೇಖನದ ಆರಂಭದಲ್ಲಿ ಹೆಂಡತಿಗಳು/ಹೆಂಡಂದಿರು/ಹೆಂಡಿತಿಯಂದಿರು/ಹೆಂಡತಿಯರು - ಈ ನಾಲ್ಕು ರೂಪಗಳನ್ನು ಗಮನಿಸಿದೆವು, ಹೆಂಡಂದಿರು ಎನ್ನುವುದು ಸರಿಯಲ್ಲವೆಂದು ನಿರ್ಧರಿಸಿ ಕೈಬಿಟ್ಟೆವು, ಹೆಂಡತಿಗಳು ಎನ್ನಲು ಭಯಪಟ್ಟು ಅದನ್ನೂ ಕೈಬಿಟ್ಟಿದ್ದೆವು ಅಲ್ಲವೇ?  ಸದ್ಯಕ್ಕಿನ್ನೂ ಹೆಂಡತಿಗಳ ಸಹವಾಸ ಬೇಡ - ಹೆಂಡಿತಿಯಂದಿರು ಮತ್ತು ಹೆಂಡತಿಯರು ಈ ಎರಡು ರೂಪಗಳಲ್ಲಿ ಯಾವುದು ಸರಿಹೋಗಬಹುದೆಂಬುದನ್ನೀಗ ಮತ್ತೆ ಪರಿಶೀಲಿಸೋಣ.

ಹೆಂಡತಿಯಂದಿರ್ ಸಾಧ್ಯವಿಲ್ಲ, ಏಕೆಂದರೆ ಅಂದಿರ್ ಎಂಬ ಪ್ರತ್ಯಯವೇ ಇಲ್ಲ.  ನಾಮಪದವು ನ್ ಅಥವಾ ಮ್ ಅರ್ಧಾಕ್ಷರಗಳಿಂದ ಕೊನೆಗೊಂಡಿದ್ದಾಗ ಅದಕ್ಕೆ ದಿರ್ ಪ್ರತ್ಯಯ ಸೇರಿ ಅಂದಿರ್ ಎಂದು ಕಾಣುತ್ತದಷ್ಟೇ, ಆದರೆ ಅದು ವಾಸ್ತವದಲ್ಲಿ ದಿರ್ ಪ್ರತ್ಯಯವೇ ಹೊರತು ಅಂದಿರ್ ಅಲ್ಲ (ಉದಾ: ಮಗನ್+ದಿರ್=ಮಗಂದಿರ್) - ಹಾಗೆಯೇ  ಹೆಣ್ ಎಂಬುದಕ್ಕೆ ದಿರ್ ಪ್ರತ್ಯಯ ಸೇರಿಸಿದಾಗ ಹೆಣ್ಡಿರ್/ಹೆಂಡಿರ್ ಆಗುತ್ತದೆಯೇ ಹೊರತು ಹೆಣಂದಿರ್ ಅಥವಾ ಹೆಣ್ಣಂದಿರ್ ಆಗುವುದಿಲ್ಲ ಅಲ್ಲವೇ?  ಆದ್ದರಿಂದ ಹೆಂಡತಿಯಂದಿರ್ ಎಂಬುದು ಸಾಧುವಲ್ಲ.  ಹೆಂಡತಿಗೇ 'ದಿರ್' ಪ್ರತ್ಯಯ ಸೇರಿಸಿ ಹೆಂಡತಿದಿರ್ ಎಂಬುದು ಆದೀತು ಆದರೆ ಹಾಗೆ ಬಳಕೆಯಲ್ಲಿಲ್ಲ.  ಆದ್ದರಿಂದ ಹೆಂಡತಿಯಂದಿರ್/ಹೆಂಡತಿದಿರ್ ಇವನ್ನು ಕೈಬಿಡೋಣ.

ಇನ್ನೊಂದಿದೆ - ಪೆಂಡತಿ ಎಂಬುದಕ್ಕೆ ವಿರ್ ಅಥವಾ ಅರ್ ಪ್ರತ್ಯಯಗಳು ಸೇರಿ ಪೆಂಡತಿವಿರ್ ಅಥವಾ ಪೆಂಡತಿಯರ್ ಎಂಬ ಹಳಗನ್ನಡರೂಪಗಳು ಸಾಧ್ಯ.  ಪೆಂಡತಿವಿರ್ ಎನ್ನುವುದು, ಹೊಸಗನ್ನಡದಲ್ಲಿ ಹೆಂಡತಿವಿರು ಎಂದಾಗುತ್ತದೆ.  ಹೆಂಡತಿಯರನ್ನು ಹಾಗೆ ಕರೆಯಲು ಬರುವುದೇ? "ನಾನೆಲ್ಲಿ ತಿವಿದೆ? ನಿಮಗೇನು ತಿಮಿರು" ಎಂಬ ಗರ್ಜನೆ ಬರುತ್ತದಷ್ಟೇ (ತಿವಿದುಬಿಡಲೂ ಬಹುದು).  ಆದ್ದರಿಂದ ಅದು ಬೇಡವೆಂದರೆ, ಉಳಿದುದು, ಸುರಕ್ಷಿತವಾಗಿ, ಪೆಂಡತಿಯರ್ > ಹೆಂಡತಿಯರು ಎಂಬ ರೂಪ ಮಾತ್ರ.  ಹೀಗಾಗಿ ಹೆಂಡತಿ ಎನ್ನುವುದರ ಸಂಖ್ಯಾಬಹುವಚನಕ್ಕೆ ಹೆಂಡತಿಯರು ಎನ್ನುವುದೇ ಸರಿ.

ಇದು ಬಹುಸಂಖ್ಯೆಯ ಹೆಂಡತಿಯರಿದ್ದಾಗ ಆಯಿತಲ್ಲ.  ನಿಮ್ಮ ಒಬ್ಬಳೇ ಹೆಂಡತಿಯನ್ನು ಮರ್ಯಾದೆಯಿಂದ ಸೂಚಿಸಬೇಕೆನ್ನಿ.  ಆಗ? ಇರುವ ಒಬ್ಬಳೇ ಹೆಂಡತಿಯನ್ನು ಹೆಂಡತಿಯರು ಎನ್ನಲಾಗುತ್ತದೆಯೇ? (ಆಕೆ ಎಷ್ಟು ಜನರ ಸಮಾನವಾಗಿಯಾದರೂ ಇರಲಿ - ಸಾಮರ್ಥ್ಯದಲ್ಲಿ ಅಥವಾ ಗಾತ್ರದಲ್ಲಿ).  "ಅದಕ್ಕೇನು? ಹೆಂಡತಿಯವರು" ಎಂದರಾಯಿತು ಎನ್ನುತ್ತೀರೇನೋ.  ಅದೆಂತಹ ಚೆಂದ? ಮಹಾಸ್ವಾಮಿಯವರು, ಮಹಾಸನ್ನಿಧಾನದವರು ಎನ್ನುವಂತೆ?  ಅತಿವಿನಯಂ ಧೂರ್ತಲಕ್ಷಣಂ, ನೆನಪಿಡಿ, ಅದು ಆಕೆಗೆ ಚೆನ್ನಾಗಿ ಗೊತ್ತು.  ಸ್ವಲ್ಪ ಸಹಜವಾದ ಬಹುವಚನ ಉಪಯೋಗಿಸಿ, ಕೊಡುವ ಮರ್ಯಾದೆಯೂ ಸಹಜವಾಗಿರಲಿ, ನಂಬುವಂತಿರಲಿ.  ಹಳಗನ್ನಡದಲ್ಲಿ, ಬುದ್ಧಿಯಿಲ್ಲದ, ಜೀವವಿಲ್ಲದ ನಪುಂಸಕವಸ್ತುಗಳಿಗೆ ಹೇಗೋ ವ್ಯಕ್ತಿಗಳಿಗೆ ಮರ್ಯಾದೆ ಕೊಡಲೂ ನಪುಂಸಕಲಿಂಗಬಹುವಚನವನ್ನುಪಯೋಗಿಸುವುದೇ ರೂಢಿ - ಕಲ್ಗಳ್, ಕೈಗಳ್, ಪಕ್ಷಿಗಳ್ ಎಂಬಂತೆಯೇ ತಂದೆಗಳ್, ತಾಯ್ಗಳ್, ಅಣ್ಣಗಳ್, ತಮ್ಮಗಳ್, ಆತಗಳ್, ಈತಗಳ್ (ಗಮನಿಸಿ, ಇದು ಸಂಖ್ಯಾಬಹುವಚನವಲ್ಲ, ಮರ್ಯಾದಾಬಹುವಚನ).  ಇದೇ ದಾರಿಯನ್ನನುಸರಿಸಿ ಹೆಂಡತಿಗೆ ಮರ್ಯಾದೆ ಕೊಡುವವರು ಪೆಂಡಿತಿಗಳ್ ಎನ್ನಬಹುದು, ಅದನ್ನು ಹೊಸಗನ್ನಡಕ್ಕೆ ತಂದರೆ... ಕ್ಷಮಿಸಿ, ಹೆಂಡತಿಗಳು ಎಂದೇ ಆಗಬೇಕು - ಹೇಗೋ ಧೈರ್ಯ ಮಾಡದೇ ನಿಮಗೆ ಬೇರೆ ದಾರಿಯಿಲ್ಲ! ಅದು ಇಲಿಗಳು, ಬೆಕ್ಕುಗಳು ಎನ್ನುವಂತಲ್ಲ, ಮರ್ಯಾದಾಬಹುವಚನ ಎಂದು ನಿಮ್ಮ ಪತ್ನಿಗೆ ಮನದಟ್ಟು ಮಾಡಿಕೊಡುವ ಹೊಣೆಗಾರಿಕೆಯನ್ನು ನೀವು ಹೊರಲೇಬೇಕಾಗುತ್ತದೆ (ಬೇಕಿದ್ದರೆ ಈ ಲೇಖನವನ್ನಾಕೆಗೆ ಓದಿ ಹೇಳಬಹುದು, ಕೇಳಿಸಿಕೊಂಡರೆ).  ಇಲ್ಲದಿದ್ದರೆ, ನೆನಪಿದೆಯಲ್ಲ, ಲಟ್ಟಣಿಗೆಗಳು ಎನ್ನುವುದೂ ಬಹುವಚನವೇ!

ತಡೆಯಿರಿ, ಅಥವಾ ಇನ್ನೊಂದು ಮಾಡಬಹುದು - ಅರ್ ಮತ್ತು ಕಳ್ ಎರಡೂ ಪ್ರತ್ಯಯವನ್ನೂ ಸೇರಿಸಿ ಹೇಳುವ ಪರಿಪಾಠವೂ ಇದೆ - ಅವರ್+ಕಳ್>ಅವರ್ಗಳ್, ಪತ್ನಿಯರ್+ಕಳ್>ಪತ್ನಿಯರ್ಗಳ್ ಹೀಗೆ.  ಅದೇರೀತಿ ಪೆಂಡಿತಿಯರ್ಗಳ್ > ಹೆಂಡತಿಯರುಗಳು ಎನ್ನಬಹುದು.  ಇದು ಹಲವು ಗೌರವಾನ್ವಿತ ಹೆಂಡತಿಯರಿರುವ ಗುಂಪಿಗೆ ಮರ್ಯಾದೆಯಾಗಿ ಹೇಳುವ ಪದ - ಸಂಖ್ಯಾಮರ್ಯಾದಾಬಹುವಚನ.  ಆದರೇನಂತೆ? ಅದನ್ನೇ ಒಬ್ಬ ಪತ್ನಿಗೂ ಹೇಳಬಾರದೆಂದಿದೆಯೇ? ಒಬ್ಬ ಹೆಂಡತಿಗೆ ಇಡೀ ಗುಂಪಿನ ಮರ್ಯಾದೆ ಸಲ್ಲಬಾರದೆಂದಿದೆಯೇ?  ನೀನೊಬ್ಬಳು ನನಗೆ ಹಲವು ಹೆಂಡಿರ, ಅಲ್ಲಲ್ಲ ಹಲವು ಹೆಂಡತಿಯರ (ಅಂದರೆ ಹಲವು ಮುಖ್ಯಪತ್ನಿಯರ, ಪತ್ನೀರತ್ನರ) ಸಮ ಎಂದು ಹೇಳಿದಂತಾಗುವುದಿಲ್ಲವೇ?  "ಇವರು ನಮ್ಮ ಹೆಂಡತಿಯರುಗಳು" ಎಂದು ಯಾರಿಗಾದರೂ ಆಕೆಯನ್ನು ಪರಿಚಯಿಸಿ; ಆಗ ಅರಳುವ ಆಕೆಯ ಮೊಗವನ್ನು ನೋಡಿ, ವ್ಯಾಕರಣಸ್ವರ್ಗಕ್ಕೆ ಕಿಚ್ಚು ಹಚ್ಚಿ ಚಳಿ ಕಾಯಿಸಿಕೊಳ್ಳಿ!  "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿರುಪಾಯಿ" ಎಂದಿಲ್ಲವೇ ಕವಿ?  ಅದನ್ನೇ ನೀವು ಬದಲಿಸಿ "ನನ್ಹೆಂಡತಿಯೊಬ್ಬಳು ಹತ್ತಿರವಿದ್ದರೆ ಹೆಂಡಿರು ನೂರೊ ಶಿವಾಯಿ" ಎಂದು ಹಾಡಬಹುದು.

ಇಷ್ಟು ವಿವರಿಸಿದಮೇಲೂ ಹೆಂಡತಿಯನ್ನು ಮರ್ಯಾದೆಯಾಗಿ ಹೆಂಡತಿಗಳು ಅಥವಾ ಹೆಂಡತಿಯರುಗಳು ಎಂದು ಕರೆಯಲು ನಿಮಗೆ 'ಒಂಥರಾ' ಎನ್ನಿಸಿದರೆ, ನಾನು ತಾನೆ ಏನು ಮಾಡಲಿ?  ಆಯ್ತು, ಎಲ್ಲರೂ ಒಪ್ಪುವಂತೆ ಹೆಂಡತಿಯವರು ಎಂದೇ ಕರೆಯಿರಿ, ಇನ್ನೇನು ಮಾಡಲಾದೀತು?

ಇರಲಿ, ತಮಾಷೆಯಲ್ಲಿ ಮೂಲವಿಷಯ ಕಳೆದುಹೋಗದಿರಲಿ:
ಪೆಣ್ > ಹೆಣ್ > ಹೆಣ್ಣು = ಸ್ತ್ರೀ (ಸಾಮಾನ್ಯಾರ್ಥ ಏಕವಚನ)
ಪೆಣ್+ದಿರ್=ಪೆಣ್ಡಿರ್ > ಹೆಂಡಿರು = ಸ್ತ್ರೀಯರು (ಸಾಮಾನ್ಯಾರ್ಥ ಬಹುವಚನ, ಆದರೆ ಈ ಅರ್ಥ ಬಳಕೆಯಲ್ಲಿಲ್ಲ)
ಹೆಣ್ಣು = ಪತ್ನಿ (ವಿಶೇಷಾರ್ಥ ಏಕವಚನ, ಆದರೆ ಈ ಅರ್ಥದಲ್ಲಿ ಬಳಕೆ ಕಡಿಮೆ)
ಹೆಂಡಿರು = ಪತ್ನಿಯರು (ವಿಶೇಷಾರ್ಥ ಬಹುವಚನ; ಆದರೆ ಇದು ಪತ್ನಿ ಎಂಬ ಏಕವಚನದಲ್ಲೂ ಬಳಕೆಯಲ್ಲಿದೆ)
ಪೆಂಡಿರ್+ತಿ = ಪೆಂಡಿತಿ > ಹೆಂಡತಿ = ಪ್ರಧಾನಪತ್ನಿ(ವಿಶೇಷಾರ್ಥ ಏಕವಚನ, ಆದರೆ ಈ ಅರ್ಥ ಬಳಕೆಯಲ್ಲಿಲ್ಲ)
ಹೆಂಡತಿ - ಪತ್ನಿ (ಸಾಮಾನ್ಯಾರ್ಥ, ಏಕವಚನ, ಇದು ಬಹುಬಳಕೆಯಲ್ಲಿರುವ ಅರ್ಥ)
ಹೆಂಡತಿಯರು = ಹಲವು ಪ್ರಧಾನಪತ್ನಿಯರು (ವಿಶೇಷಾರ್ಥ, ಸಂಖ್ಯಾಬಹುವಚನ, ಆದರೆ ಈ ಅರ್ಥ ಬಳಕೆಯಲ್ಲಿಲ್ಲ)
ಹೆಂಡತಿಯರು = ಪತ್ನಿಯರು (ಸಾಮಾನ್ಯಾರ್ಥ, ಸಂಖ್ಯಾಬಹುವಚನ)
ಹೆಂಡತಿಯವರು (ಮರ್ಯಾದಾಬಹುವಚನ - ಹೆಂಡತಿಗಳು ಎನ್ನಬೇಕಿತ್ತು, ನಿಮ್ಮ ಧೈರ್ಯ!)

ಮುಖ್ಯವಾಗಿ ಹೆಂಡತಿ ಎನ್ನುವುದರ ಬಹುವಚನವೇನು ಎಂಬ ಮೂಲಪ್ರಶ್ನೆಗೆ ಈ ಕೊನೆಯೆರಡು ಸಾಲುಗಳಷ್ಟೇ ಉತ್ತರ.  ಸುಮ್ಮನೇ ನೀವು ಇಷ್ಟೆಲ್ಲಾ ಓದುವಂತೆ ಮಾಡಿದ್ದಾಯ್ತು, ಕ್ಷಮೆಯಿರಲಿ!

ಅಷ್ಟಭಾರ್ಯೆಯರೊಡನೆ ಕೃಷ್ಣ
ಚಿತ್ರಕೃಪೆ:
Ramsons Kala Pratishtana (ವಿಕಿಪೀಡಿಯಾ ಮೂಲಕ)


Tuesday, September 15, 2020

ಹಿಂದೀ ದಿವಸವೂ ಕನ್ನಡಪ್ರಜ್ಞೆಯೂ


सभी हिन्दी बोलने वाले साथियों को "राष्ट्रीय हिन्दी दिवस" की बधाई | इस हिन्दी दिवस जो है, भारत के किसी और श्रीमन्त, पुराने और वैज्ञनिक भाषाओं को भी नही मिला हुवा एक पुरस्कार है!  इस के लिये आप सभी को फिर एक बार बधाई | हम लोग 'सौत' के हैं (जो भी भारत का एक हिस्सा है लेकिन जिस का मातृभाषा हिन्दी नहीं है), हमारे हिन्दी गलत हो सकती है; अगर गलत है तो माफ कीजियेगा (क्यों कि "कन्नड् गोत्तिल्ला" जैसे अनाडीपन हमारे लिये नामुमकिन है - of course with due respects to all those friends who are linguistically sensible and really courteous to others)

(ಹಿಂದೀ ಮಾತಾಡುವ ಮಿತ್ರರಿಗೆಲ್ಲ "ರಾಷ್ಟ್ರೀಯ ಹಿಂದೀ ದಿವಸ"ದ ಅಭಿನಂದನೆಗಳು.  ಈ ಹಿಂದೀ ದಿವಸ ಏನಿದೆ, ಇದು ಭಾರತದ ಬೇರಾವುದೇ ಶ್ರೀಮಂತ, ಹಳೆಯ, ವೈಜ್ಞಾನಿಕ ಭಾಷೆಗೂ ಸಂದಿರದ ಪುರಸ್ಕಾರ.  ಅದಕ್ಕಾಗಿ ನಿಮಗೆಲ್ಲ ಮತ್ತೊಮ್ಮೆ ಅಭಿನಂದನೆಗಳು.  ನಾವು 'ಸೌತ್' ಜನ (ಅದೂ ಭಾರತದ್ದೇ ಒಂದು ಭಾಗ, ಆದರೆ ನಮ್ಮ ಮಾತೃಭಾಷೆ ಮಾತ್ರ ಹಿಂದಿ ಅಲ್ಲ), ಆದ್ದರಿಂದ ನಮ್ಮ ಹಿಂದೀ ತಪ್ಪಾಗಿರಲು ಸಾಧ್ಯ; ಹಾಗೊಂದುವೇಳೆ ತಪ್ಪಿದ್ದರೆ ಕ್ಷಮೆಯಿರಲಿ (ಏಕೆಂದರೆ "ಕನ್ನಡ್ ಗೊತ್ತಿಲ್ಲ" ಎನ್ನುವಂತಹ ಒರಟು ನಡುವಳಿಕೆ ನಮಗೆ ಸಾಧ್ಯವಿಲ್ಲ - ಇನ್ನೊಬ್ಬರ ಭಾಷಾಭಾವನೆಗಳನ್ನು ಮನ್ನಿಸಿ ನಿಜಕ್ಕೂ ಸೌಜನ್ಯದಿಂದ ವ್ಯವಹರಿಸುವ ಅನೇಕ ಮಿತ್ರರಿದ್ದಾರೆ, ಅವರನ್ನು ಹೊರತುಪಡಿಸಿ).

ಇಷ್ಟು ಹೇಳಿದಮೇಲೆ, ಇಡೀ ದೇಶವೇ ಏಕೆ "ಹಿಂದೀ ದಿವಸ್" ಆಚರಿಸಬೇಕೋ ನನಗೆ ತಿಳಿಯುತ್ತಿಲ್ಲ, ಅದರಲ್ಲೂ ಕನ್ನಡ ದಿವಸ್, ತಮಿಳ್ ದಿವಸ್, ಒರಿಯಾ ದಿವಸ್, ಕಾಶ್ಮೀರಿ ದಿವಸ್ ಇವನ್ನೆಲ್ಲಾ ಯಾರೂ ಆಚರಿಸದಿರುವಾಗ.  "ಹಿಂದೀ ರಾಷ್ಟ್ರಭಾಷೆ" ಎನ್ನುವ ನೆಪವನ್ನು ನನಗೆ ಹೇಳಬೇಡಿ.  ಉತ್ತರದ ರಾಜಕಾರಣಿಗಳು ಮತ್ತು ದಕ್ಷಿಣದ ಅವರ ಹಿಂಬಾಲಕರು ದಶಕಗಳಿಂದ ಹೇಳಿಕೊಂಡು ಬಂದಿರುವ ಸುಳ್ಳು ಇದು.  ಒಂದು ಮಾತಿದೆ - ಒಂದು ಸುಳ್ಳನ್ನು ನೂರು ಸಲ ಹೇಳಿದರೆ ಅದೇ ಸತ್ಯವಾಗಿಬಿಡುತ್ತದೆ.  ಆದರೆ ಅದು ಸುಳ್ಳು ಎಂಬ ಮಾತಂತೂ ಯಾವತ್ತಿದ್ದರೂ ಸತ್ಯವೇ.  ಶುರುವಾತಿಗೆ, ನಮ್ಮ ರಾಷ್ಟ್ರೀಯ ವಸ್ತುಗಳನ್ನು ವಿವರಿಸುವ ಭಾರತಸರ್ಕಾರದ ಒಂದು ವೆಬ್ ಸೈಟಿದೆ, ಅದನ್ನೊಮ್ಮೆ ನೋಡೋಣ:

https://www.india.gov.in/india-glance/national-symbols

ಇಲ್ಲಿ ರಾಷ್ಟ್ರಧ್ವಜವಿದೆ, ರಾಷ್ಟ್ರಗೀತೆಯಿದೆ, ರಾಷ್ಟ್ರಗಾನವಿದೆ, ರಾಷ್ಟ್ರಲಾಂಛನವಿದೆ, ರಾಷ್ಟ್ರಪಕ್ಷಿಯಿದೆ, ರಾಷ್ಟ್ರಪ್ರಾಣಿಯಿದೆ, ರಾಷ್ಟ್ರಪುಷ್ಪವಿದೆ - ಕೊನೆಗೆ ರಾಷ್ಟ್ರವೃಕ್ಷ, ರಾಷ್ಟ್ರಪಂಚಾಂಗ ಮತ್ತೆ ರಾಷ್ಟ್ರನಾಣ್ಯವೂ ಇದೆ, ರಾಷ್ಟ್ರಭಾಷೆಯ ಮಾತೇ ಇಲ್ಲ!

ಹೋಗಲಿ, 'ರಾಷ್ಟ್ರಭಾಷೆ' ಬಗೆಗೆ ನಮ್ಮ ಸಂವಿಧಾನವಾದರೂ ಏನಾದರೂ ಹೇಳುತ್ತದೆಯೋ? - ಏನಿಲ್ಲ, ಏನೇನೂ ಇಲ್ಲ.  ಭಾರತಸಂವಿಧಾನದ ವಿಧಿ 343-347, ಅಧಿಕೃತಭಾಷೆಗಳ ಕಾಯ್ದೆ 1963 ಮತ್ತು ಅಧಿಕೃತಭಾಷಾನಿಯಮ 1976 ಇವೆಲ್ಲವನ್ನೂ ಒಟ್ಟಿಗೆ ಓದಿದಾಗ ತಿಳಿದುಬರುವುದೆಂದರೆ, ಹಿಂದಿಯು ಕೇಂದ್ರದ ಅಧಿಕೃತಭಾಷೆ (ರಾಷ್ಟ್ರಭಾಷೆಯಲ್ಲ, ಅಧಿಕೃತಭಾಷೆ), ಅದೂ ಕೇವಲ ಕೇಂದ್ರ ಮತ್ತು ಹಿಂದೀ ಮಾತಾಡುವ ರಾಜ್ಯಗಳ ನಡುವಣ ವ್ಯವಹಾರಕ್ಕೆ ಸೀಮಿತವಾದದ್ದು.  ಉಳಿದ ರಾಜ್ಯಗಳೊಡನಿನ ವ್ಯವಹಾರಕ್ಕೆ ಇಂಗ್ಲಿಷೇ (ಹಿಂದಿಯೊಡನೆ, ಇರಲಿ).  348ನೇ ವಿಧಿ ಇನ್ನೂ ಸ್ಪಷ್ಟವಾಗಿ ನ್ಯಾಯಾಲಯಗಳ ವ್ಯವಹಾರ, ಪಾರ್ಲಿಮೆಂಟ್ ಹೊರಡಿಸುವ ಕಾಯ್ದೆ ಕಾನೂನುಗಳು ಇಂಗ್ಲಿಷಿನಲ್ಲಿರಬೇಕೆಂದು ತಿಳಿಸುತ್ತದೆ.  ಅಷ್ಟೇ ಅಲ್ಲ, ಅಧಿಕೃತಭಾಷೆಗಾಗಿ ನಿಯಮಿಸಲಾಗಿರುವ ಸಂಸದೀಯಸಮಿತಿಯು "ಹಿಂದೀ ಮಾತಾಡದ ಪ್ರಾಂತ್ಯಗಳಲ್ಲಿರುವ ಜನರ ನ್ಯಾಯಸಮ್ಮತ ಬೇಡಿಕೆಗಳನ್ನೂ ಹಿತಾಸಕ್ತಿಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕು" ಎಂದು ವಿಧಿ 444(3) ವಿಧಿಸುತ್ತದೆ.

ತಮಾಷೆಯೆಂದರೆ, 2010ರಲ್ಲಿ ಗುಜರಾತ್ ಉಚ್ಚನ್ಯಾಯಾಲಯದ ಮುಂದೆ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಂತು (Sureshbhai vs Union) - ಹಿಂದೀ ರಾಷ್ಟ್ರಭಾಷೆಯಾದ್ದರಿಂದ, ಮಾರಾಟವಾಗುವ ಸರಕಿನ ವಿವರಗಳನ್ನು ಹಿಂದಿಯಲ್ಲೇ ಮುದ್ರಿಸಬೇಕೆಂಬ ಆದೇಶ ಕೋರಿದ ಅರ್ಜಿ ಅದು.  ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಹೀಗೆ ಸ್ಪಷ್ಟಪಡಿಸಿತು - "ಹಿಂದೀ ಈ ದೇಶದ ರಾಷ್ಟ್ರಭಾಷೆಯೆಂಬುದನ್ನು ದೃಢಪಡಿಸುವ ಯಾವುದೇ ದಾಖಲೆಗಳಾಗಲೀ, ಕಾನೂನಾಗಲೀ, ಆದೇಶಗಳಾಗಲೀ ಇಲ್ಲ"

'ರಾಷ್ಟ್ರೀಯಭಾಷೆ'ಯ ಮಾತು ಇಷ್ಟಾಯಿತಲ್ಲ, ಇನ್ನೊಂದೆಡೆ ಇದೇ ಸಂವಿಧಾನದ 8ನೇ ಪರಿಶಿಷ್ಟದಲ್ಲಿ ಕನ್ನಡ ಮತ್ತು ಹಿಂದಿಯೂ (ಮತ್ತು ಮೈಥಿಲಿಯೂ) ಸೇರಿದಂತೆ 22 ಅಧಿಕೃತಭಾಷೆಗಳ ಪಟ್ಟಿ ಮಾಡುತ್ತದೆ - ಎಲ್ಲವೂ ಸಮಾನ.  ಈ "ಹಿಂದೀ ರಾಷ್ಟ್ರಭಾಷೆ" ಎಂಬ ಕೂಗು ಎಲ್ಲಿಂದ ಬಂತು ಯಾರಾದರೂ ತಿಳಿಸಬಹುದೇ?

ಹೋಗಲಿ, ಈ 'ಅಧಿಕೃತ' ವಿಷಯ ಬಿಡೋಣ.  ಒಬ್ಬ ನಿಜವಾದ ಭಾರತೀಯನಾಗಿ ನಾನು ಶ್ರೀ ಭದ್ರಾಚಲರಾಮದಾಸರನ್ನ, ಅನ್ನಮಯ್ಯನನ್ನ, ತ್ಯಾಗರಾಜರನ್ನ, ತಿರುವಳ್ಳುವರನ್ನ, ಕಂಬರನ್ನ, ಸ್ವಾತಿ ತಿರುನಾಳರನ್ನ ಎಷ್ಟು ಓದುತ್ತೇನೋ, ಕೇಳುತ್ತೇನೋ, ಆನಂದಿಸುತ್ತೇನೋ, ಗೌರವಿಸುತ್ತೇನೋ ಅಷ್ಟೇ ಶ್ರೀ ತುಳಸೀದಾಸರನ್ನ, ಸೂರದಾಸರನ್ನ, ಮೀರಾಳನ್ನ, ನಾನಕರನ್ನ, ಚೈತನ್ಯರನ್ನ, ಜಯದೇವನನ್ನ, ರಾಮದಾಸರನ್ನ, ಜ್ಞಾನೇಶ್ವರರನ್ನ ಅಷ್ಟೇ ಓದುತ್ತೇನೆ (ಅನುವಾದ, ಕೆಲವೊಮ್ಮೆ), ಕೇಳುತ್ತೇನೆ, ಆನಂದಿಸುತ್ತೇನೆ, ಗೌರವಿಸುತ್ತೇನೆ ಕೂಡ.  ಅವರೆಲ್ಲಾ ನಮ್ಮ ದಾಸ-ಶರಣರಷ್ಟೇ ಗೌರವಾರ್ಹರು, ಪೂಜ್ಯರು ನಮಗೆ.  ಈ ಮಹನೀಯರಲ್ಲಿ ಕೆಲವರ ಸಾಲುಗಳನ್ನು ಹೃದಯದಾಳದಿಂದ ಹೆಕ್ಕಿ ತರಬಲ್ಲೆ ಕೂಡ.  ಈ ಮಹನೀಯರ ನೆನಪು ತರುವ ಸ್ಥಳಗಳಿಗೆ ಹೋದಾಗೆಲ್ಲ ಭಾವುಕನಾಗುತ್ತೇನೆ, ಇದು ನನ್ನದೆಂಬ ಭಾವನೆ ತುಂಬಿ ಬರುತ್ತದೆ.  ದಕ್ಷಿಣದ ರಾಮೇಶ್ವರನಷ್ಟೇ ಪೂರ್ವದ ಜಗನ್ನಾಥನಷ್ಟೇ, ಪಶ್ಚಿಮದ ದ್ವಾರಕಾನಾಥನಷ್ಟೇ ಉತ್ತರದ ಕೈಲಾಸನಾಥನೂ, ಕೇದಾರನಾಥನೂ, ಬದರೀನಾಥನೂ ವಿಶ್ವನಾಥನೂ ನನ್ನವರು.  "ಆಸೇತು ಹಿಮಾಚಲಪರ್ಯಂತ (ದಕ್ಷಿಣದ ಮಹಾಸೇತುವಿನಿಂದ ಹಿಡಿದು ಹಿಮಾಚಲದವರೆಗೂ)" ಎಂಬ ನಿಜವಾದ ಅರ್ಥದಲ್ಲಿ ಭಾರತೀಯತೆಯನ್ನು ಆಚರಿಸುತ್ತೇವೆ ನಾವು.  ರಾಜ್ ಕುಮಾರ್ ನಮ್ಮ ನಾಡಿಮಿಡಿತವಾದರೆ, ಬಿಗ್ ಬಿ ಮತ್ತು ರಜನೀಕಾಂತರನ್ನೇನು ನಾವು ಕಡಿಮೆ ಇಷ್ಟಪಡುವುದಿಲ್ಲ.  ಲತಾಮಂಗೇಶ್ಕರ್, ಆಶಾ ಬೋಸ್ಲೆ, ಮುಖೇಶ್, ಕಿಶೋರ್ ಕುಮಾರ್, ಮೊಹಮ್ಮದ್ ರಫಿ ಇವರೆಲ್ಲಾ ತಮ್ಮ ಇಂಪಿನಿಂದ ಈಗಲೂ ನಮ್ಮ ಹೃದಯಗಳನ್ನು ಕಾಡುವಂಥವರು.  ಆ ಕಡೆಯಿಂದ ಇಂಥದ್ದೇ ಭಾವನೆಗಳನ್ನು ನಿರೀಕ್ಷಿಸಬಹುದೇ?  ಇಲ್ಲ, ನಿಮ್ಮಿಂದ ಪ್ರತ್ಯುಪಕಾರವನ್ನು ನಿರೀಕ್ಷಿಸುತ್ತಿಲ್ಲ - ನಿಮಗೂ ಭಾರತದ ಉಳಿದ ಭಾಗದ ವಿಷಯದಲ್ಲಿ ಇಂಥವೇ ಭಾವನೆಗಳಿವೆಯೇ (ಕೊನೆಯ ಪಕ್ಷ ನಿಮ್ಮ 'ಹಿಂದೀ ಲ್ಯಾಂಡ್'ನಿಂದ ಆಚೆಗೂ ಭಾರತವಿದೆಯೆಂಬ ಕಲ್ಪನೆಯಾದರೂ ನಿಮಗಿದೆಯೇ)? ರಾಷ್ಟ್ರೀಯತೆಯೆನ್ನುವುದು ಪರಸ್ಪರ ಗೌರವ-ಸಮಾನತೆ, ನನ್ನದೆನ್ನುವ ಅಕ್ಕರೆಯಿಲ್ಲದೇ ಉಳಿಯುವಂಥದ್ದಲ್ಲ.  ಹಿಂದೀ ಮತ್ತು ಹಿಂದಿಯಲ್ಲದ ಎಂದು ಎರಡು ದರ್ಜೆ ಪ್ರಜೆಗಳಾದರೆ ರಾಷ್ಟ್ರೀಯತೆಯೆನ್ನುವುದು ಉಳಿಯಲಾರದು.


ಹಿಂದೀ ರಾಷ್ಟ್ರೀಯವೂ ಅಲ್ಲ, ಹೆಚ್ಚುವರಿ ವಿಶೇಷವೂ ಅಲ್ಲ, ಕನ್ನಡಕ್ಕಿಂತ ಖಂಡಿತಾ ಅಲ್ಲ.  ಕೇವಲ ನಿಮ್ಮ "ಭಯ್ಯಾ, ಏಕ್ ಮಸಾಲಾ ಡೋಸಾ ದೇನಾ, ಏಕ್ ಈಡ್ಲೀ ಔರ್ ವಡಾ ದೇನಾ"ಗಳನ್ನು ಪುರಸ್ಕರಿಸುವುದಕ್ಕೋಸ್ಕರ ನಾವು ಹಿಂದೀ ಕಲಿಯಬೇಕೆಂದು ನಿರೀಕ್ಷಿಸುವ ಬದಲು ನೀವೇ ಕನ್ನಡ ಕಲಿತು ನಮ್ಮೊಡನೆ ಸುಖವಾಗಿ ಬಾಳಬಹುದಲ್ಲ.  ನಾವೇನಾದರೂ ನಿಮ್ಮ ನೆಲಕ್ಕೆ ಬಂದು ಬದುಕಬೇಕಾದರೆ ನೀವು ಕನ್ನಡ ಕಲಿತು ನಮ್ಮೊಡನೆ ಮಾತಾಡಬೇಕು ಎಂದಂತೂ ನಿರೀಕ್ಷಿಸಲಾಗದು, ಅಲ್ಲವೇ?

ಇದರ ಇಂಗ್ಲಿಷ್ ಅವತರಣಿಕೆಗಾಗಿ ಇಲ್ಲಿ ಕ್ಲಿಕ್ಕಿಸಿ.

Saturday, September 5, 2020

ಕೊಳ್ಳೇಗಾಲದ ಶೋಭಾ ಟಾಕೀಸ್


ಕೊಳ್ಳೇಗಾಲದ ಶೋಭಾ ಚಿತ್ರಮಂದಿರ ಮುಚ್ಚುತ್ತಿದೆಯಂತೆ. ಮಿತ್ರ
Santhoshkumar Lm ಈ ದುಃಖದ ಸುದ್ದಿಯನ್ನು ಹಂಚಿಕೊಂಡು, ಜೀವವನ್ನು ಮೂವತ್ತೈದು ವರ್ಷದ ಹಿಂದಕ್ಕೆ, ಸಿನಿಮಾ ಎನ್ನುವುದು ನನ್ನ ಬದುಕಿನಲ್ಲೂ ಬಲುಮುಖ್ಯವಾಗಿದ್ದ ಕಾಲಕ್ಕೆ ಒಯ್ದುಬಿಟ್ಟರು. ಶೋಭಾ ಚಿತ್ರಮಂದಿರವನ್ನು ನೆನಪಿಸಿಕೊಳ್ಳುವ ನೆವದಲ್ಲಿ ಶೆಟ್ಟಿ ಹೋಟಲು, ಭಟ್ಟರ ಇಡ್ಲಿ ಚಟ್ನಿಯೊಡನೆ ಮಧುರವಾದ ನೆನಪಿನ ಬುತ್ತಿಯನ್ನೇ ಬಿಚ್ಚಿದರು. ಸಿನಿಮಾ ನೋಡಲು ಹೋಗುವುದರಿಂದ ಹಿಡಿದು ಬಂದ ಮೇಲೆ ವಾರಗಟ್ಟಲೆ ಸಿನಿಮಾ ಕತೆ ಹೇಳುತ್ತಿದ್ದ (ಘಂಟಸಾಲರ ನಮೋ ವೆಂಕಟೇಶ ಅಥವಾ ವಾತಾಪಿ ಗಣಪತಿಂ ಭಜೇ ಇಂದ ಹಿಡಿದು ಶುಭಂ ಎಂದು ತೆರೆ ಬೀಳುವವರೆಗೆ :) ) ಆ ದಿನಗಳು ಎಷ್ಟು ಸೊಗಸಾಗಿದ್ದುವೋ. ಅದು ನಾವೇಯೇ ಎನಿಸುತ್ತದೆ ಈಗ. ಈ ಕ್ಷಣ ಒಮ್ಮೆ ಕೊಳ್ಳೇಗಾಲಕ್ಕೆ ಹೋಗಿ ಬರಲೇ ಎನ್ನಿಸುತ್ತಿದೆ - ನೆನಪುಗಳು ವಾಸ್ತವಕ್ಕಿಂತ ಮಧುರವೇ ಯಾವಾಗಲೂ - ಅವು ಇರಬೇಕಾದ್ದೇ ಹಾಗೆ - ಅವಕ್ಕೆ ವಾಸ್ತವದ ಸೋಂಕು ಸೋಕದಿರಲಿ.

ಕೊಳ್ಳೇಗಾಲದ ಮರಡಿಗುಡ್ಡ ರಸ್ತೆಯಲ್ಲಿ ಬಸ್ ಸ್ಟ್ಯಾಂಡ್ ಎದುರಿಗೆ, ರಸ್ತೆಯ ಈ ಕೊನೆಯಿಂದ ಆ ಕೊನೆಯವರೆಗೆ, ಪಕ್ಕಪಕ್ಕದಲ್ಲಿ ಮೂರು ಟಾಕೀಸುಗಳು, ಕೊಳ್ಳೇಗಾಲದ ಸಿನಿಮಾರಂಜನೆಯ ಮೂರು ಲೋಕಗಳು - ಕೃಷ್ಣ, ಶಾಂತಿ, ಶೋಭ. ಇವತ್ತು ಸಿನಿಮಾಗೆ ಹೋಗಬೇಕೆಂದು ಮನಸ್ಸು ಮಾಡಿ ಹೋದರೆ ಆಯಿತು, ಅಂದುಕೊಂಡ ಸಿನಿಮಾಗೆ ಟಿಕೀಟು ಸಿಗದಿದ್ದರೆ ಪಕ್ಕದಲ್ಲೇ ಇನ್ನೊಂದು, ಅದಿಲ್ಲದಿದ್ದರೆ ಮತ್ತೊಂದು, ಮೂರಕ್ಕೂ ಶೋ ಸಮಯದಲ್ಲಿ ಹದಿನೈದು ಹದಿನೈದು ನಿಮಿಷ ಅಂತರ, ಯಾವುದೋ ಒಂದಕ್ಕೆ ಟಿಕೇಟು ಖಾತ್ರಿ.

ಕೃಷ್ಣ ಮತ್ತು ಶ್ರೀನಿವಾಸ ಟಾಕೀಸುಗಳಲ್ಲಿ ಘಂಟಸಾಲರ "ನಮೋ ವೆಂಕಟೇಶ" ಹಾಡಿನೊಡನೆ ತೆರೆಯೇಳುತ್ತಿದ್ದರೆ, ಶಾಂತಿ ಮತ್ತು ಶೋಭ ಟಾಕೀಸುಗಳಲ್ಲಿ ಅವರದ್ದೇ "ವಾತಾಪಿ ಗಣಪತಿಂ ಭಜೇ" ಹಾಡಿನೊಡನೆ ತೆರೆಯೇಳುತ್ತಿದ್ದುದು. ಶುದ್ಧ ಸಿನಿಮಾ ಪ್ರೇಮಿಯಾದರೆ ಢಣ್ ಎಂಬ ನಾದದೊಡನೆ ಈ ಹಾಡು ಶುರುವಾಗುವ ಮೊದಲು ಬಂದು ಸೀಟಿನಲ್ಲಿ ಕುಳಿತಿರಬೇಕು, ಶುಭಂ ಎಂದು ತೆರೆ ಬೀಳುವವರೆಗೆ ಕೂತಿರಬೇಕು. ಆದರೆ ನಮ್ಮ ಸಿನಿಮಾ ಪ್ರೇಮದಲ್ಲಿದ್ದ ಶುದ್ಧತೆ ಆಗಲೂ ಸುಮಾರು ಜನಕ್ಕೆ ಇರಲೇ ಇಲ್ಲ. ನಮೋ ವೆಂಕಟೇಶ ಇರಲಿ, ನ್ಯೂಸ್ ರೀಲ್ ಇರಲಿ, ಸಿನಿಮಾನೇ ಶುರುವಾದಮೇಲೂ ಬರುತ್ತಲೇ ಇರುತ್ತಿದ್ದರು. ಅವರಿಗೆ ಸೀಟು ತೋರಿಸಲು ಬಂದು, ಮುಖಕ್ಕೆ ಬ್ಯಾಟರಿ ಬಿಡುವ ಗೇಟ್ ಕೀಪರನ ಕಿರಿಕಿರಿ ಬೇರೆ.  ಸಿನಿಮಾದ ಮೊದಲ ಹಾಡು ಆಗುವವರೆಗೂ ಅಡ್ಡಿಯಿಲ್ಲ ಎಂಬುದು ಜನರ ಭಾವನೆ. ಒಂದು ಹಾಡು ಆಗಿ ಹೋಗಿದ್ದರೆ ಸಿನಿಮಾಗೆ ಹೋಗಿ ಪ್ರಯೋಜನವಿಲ್ಲ. ಹೊರಗಡೆಯೂ ತಡವಾಗಿ ಬಂದವರನ್ನು ಗೇಟ್ ಕೀಪರು "ಇನ್ನೂ ಒಂದ್ 'ರೆಕಾಡ್' (ಹಾಡು) ಆಗಿಲ್ಲ ಕಣೋಗಿ" ಎಂದೇ ಧೈರ್ಯ ತುಂಬಿ ಕಳಿಸುತ್ತಿದ್ದುದು. ಆದರೂ ಒಳಬಂದವರಿಗೆ ಆತಂಕ - ಒಂದು 'ರೆಕಾಡ್' ಆಗಿಬಿಟ್ಟಿದೆಯೋ ಎಂದು. ಅಲ್ಲಿ ಈಗಾಗಲೇ ಇದ್ದವರಾರಾದರೂ "ಅಯ್ ಇಲ್ಲ, ಈಗ ನಂಬರ್ ಬುಟ್ರು (ಹೆಸರು/ಟೈಟಲ್ ಕಾರ್ಡ್ ತೋರಿಸಿದರು) ಕ ಬನ್ನಿ" ಎಂದು ಹೇಳಿದ ಮೇಲೇ ಜೀವಕ್ಕೆ ಸಮಾಧಾನ. ಕೊನೆಯಲ್ಲೂ ಅಷ್ಟೇ; ಹೀರೋನೋ ವಿಲನ್ನೋ ಸಾಯಲು ಬಿದ್ದರೆ ಮುಗಿಯಿತು, ಜನ ಎದ್ದು ಹೋಗೋಕ್ಕೆ ಶುರು, ಇನ್ನೂ ಸಾಯುವವರು ಕೊನೆಯುಸಿರೂ ಎಳೆದಿರುವುದಿಲ್ಲ. ನಾವೋ, ತೆರೆಬೀಳುವವರೆಗೂ ಎದ್ದು ಹೋಗಬಾರದೆಂಬುದು ನಮ್ಮ ಬದ್ಧತೆ. ಕಿರಿಕಿರಿಯಾಗುತ್ತಿತ್ತು.

ನನಗೆ ನೆನಪಿರುವಂತೆ ಮೂರನೆಯ ದರ್ಜೆ (ಮುಂದಿನ ಭಾಗದ) ಟಿಕಿಟ್ಟಿನ ಬೆಲೆ 95 ಪೈಸಾ; ಎರಡನೆಯ ದರ್ಜೆಯದು 1.50 ಮತ್ತು ಬಾಲ್ಕನಿಗೆ /2.10. ರಾಜ್ ಕುಮಾರ್ ವಿಷ್ಣುವರ್ಧನ್ ಯಾವುದೇ ಸಿನಿಮಾ ಬರಲಿ, 95 ಪೈಸೆಯ ಕ್ಲಾಸಿನಲ್ಲಿ ಭಕ್ತರ ಹಾವಳಿಯೋ ಹಾವಳಿ; ಸ್ಟಾರ್ ಕಟ್ಟುವುದೇನು, ಹಾರ ಹಾಕುವುದೇನು, ತೆರೆಯ ಮೇಲೆ ರಾಜ್ ಕುಮಾರೋ ವಿಷ್ಣುವರ್ಧನೋ ಕಾಣಿಸಿದೊಡನೇ ಕಾಸು ಎರಚುವುದೇನು. ಎಷ್ಟೋ ಬಾರಿ, ಕಾಸು ಎರಚುತ್ತಾರೆಂದೇ ನಾವು ಹೋಗಿ ಮುಂದಿನ ಸಾಲಿನಲ್ಲಿ ಕೂರುತ್ತಿದ್ದುದು ಉಂಟು. ಟಿಕೆಟಿಗೆ ತೆತ್ತ ಅರ್ಧದಷ್ಟು ಹೇಗೋ ಎದ್ದುಬಿಡುತ್ತಿತ್ತು. ಒಮ್ಮೆ ಯಾವನೋ ಪಡ್ಡೆ ಹುಡುಗ ಕಾಸಿನ ಬದಲು ತೆಂಗಿನ ಕಾಯಿ ಎಸೆದು, ಮುಂದೆ ಕೂತವರಾರಿಗೋ ಜಖಂ ಆಗಿ ದೊಡ್ಡ ಜಗಳವಾಗಿತ್ತು.

ಆಗೆಲ್ಲಾ ಮುಂದಿನ ಸಾಲಿನ ಭಕ್ತರ ಮತ್ತೊಂದು ಖಯಾಲಿಯೆಂದರೆ, ತಮ್ಮ ಮೆಚ್ಚಿನ ಹೀರೋ ತೆರೆಯ ಮೇಲೆ ಬಂದರೆ ಓಡಿ ಹೋಗಿ ಕಾಲಿಗೆ ಬೀಳುವುದು, ಕಾಲು ಹಿಡಿಯುವುದು, ಹೇಗೋ ಆ ಚರಣಸ್ಪರ್ಶ ಆದರೆ ಸಾಕು. ಯಾವುದೋ ಸಿನಿಮಾದಲ್ಲಿ (ನೆನಪಿಲ್ಲ) ರಾಜ್ ಕುಮಾರ್ ಗೂ ಪ್ರಭಾಕರ್ ಗೂ ಫೈಟಿಂಗ್. ಮುಂದಿನ ಸಾಲಿನಲ್ಲಿ ಕೂತವನೊಬ್ಬನಿಗೆ ಇದ್ದಕ್ಕಿದ್ದಂತೆ, ಹೋಗಿ ಫೈಟಿಂಗಿಗೆ ತಯಾರಾಗುತ್ತಿರುವ ಅಣ್ಣಾವ್ರ ಪಾದ ಹಿಡಿದು ಆಶೀರ್ವಾದ ಪಡೆಯಬೇಕೆಂಬ ಖಯಾಲಿ. ಕಂಠಪೂರ್ತಿ ಕುಡಿದುಬಿಟ್ಟಿದ್ದಾನೆ ಬೇರೆ; ತೂರಾಡುತ್ತಾ ಹೋಗಿ ಅಣ್ಣಾವ್ರೇ ಎಂದು ಅಡ್ಡಬಿದ್ದು ಬಾಚಿ ಅಣ್ಣಾವ್ರ ಕಾಲು ಹಿಡಿಯಬೇಕು, ಅಷ್ಟರಲ್ಲಿ ಆ ಜಾಗದಲ್ಲಿ ಪ್ರಭಾಕರ್ ಕಾಲು. ಥೂ.. ಇವ&$@ ಎಂದು ಬೈಯುತ್ತಾ ಇನ್ನೊಮ್ಮೆ ಪಾದ ಹಿಡಿಯಲು ಹೋಗುತ್ತಾನೆ, ಮತ್ತೆ ಪ್ರಭಾಕರ್ ಕಾಲು. ಸುಮಾರು ಸಲ ಇದೇ ಆಗಿ, ಕೊನೆಗೆ ಬೇಸತ್ತು ಅಲ್ಲೇ ಅಂಗತ್ತ ಮಲಗೇ ಬಿಟ್ಟ ಭೂಪ. ಆಕಡೆಯಿಂದ ಅಣ್ಣಾವ್ರು, ಈಕಡೆಯಿಂದ ಪ್ರಭಾಕರ್ರು ಸೇರಿಸಿ ಸೇರಿಸಿ ಒದೆಯುತ್ತಿದ್ದರೂ ಅದರ ಪರಿವೆಯೇ ಇಲ್ಲದೇ ಗೊರಕೆ ಹೊಡೆದದ್ದೇ ಬಂತು.

ಕೊಳ್ಳೇಗಾಲದಲ್ಲಿ ಅತಿ ಹಳೆಯ ಟಾಕೀಸು ಕೃಷ್ಣ. ಹಳೆಯ ಕಾಲದ ರೀತಿಯ ಭಾರಿಭಾರಿ ಕಂಬಗಳು ಬಾಲ್ಕನಿಯಲ್ಲಿ, ತೆರೆಗೆ ಅಡ್ಡಡ್ಡವಾಗಿ - ಟಾಕೀಸೂ ಚಿಕ್ಕದು - ಡಬ್ಬಾ ಟಾಕೀಸು ಎಂದೇ ಅದಕ್ಕೆ ಅಡ್ಡಹೆಸರು - ಈಗಿನ 'ಡಬ್ಬಾ' ಎನ್ನುವ ಅರ್ಥಕ್ಕಿಂತಾ ಅದು ನಿಜಕ್ಕೂ ಡಬ್ಬದಂತೆಯೇ ಇದ್ದುದರಿಂದ. ಆ ಡಬ್ಬದಲ್ಲಿ ಕುಳಿತು ಸಿನಿಮಾ ನೋಡಿ ಮನೆಗೆ ಬಂದರೆ, ಬಟ್ಟೆ ಮೂಸಿ ನೋಡಿಯೇ, ಸಿನಿಮಾಗೆ ಹೋಗಿದ್ದಾರೆಂದು ಹೇಳಬಹುದಿತ್ತು - ಅಷ್ಟು ದಟ್ಟವಾಗಿ ಬಟ್ಟೆಗೆ ಹತ್ತಿರುತ್ತಿತ್ತು ಇಡೀ ಟಾಕೀಸಿನಲ್ಲಿ ಕವಿದಿರುತ್ತಿದ್ದ ಬೀಡಿಯ ವಾಸನೆ - ಆರಂಭದಲ್ಲಿ ಬರುವ ನಮೋ ವೆಂಕಟೇಶಾ ಹಾಡಿನೊಡನೆಯೇ ಧೂಮಪಾನ ನಿಷೇಧಿಸಿದೆ ಎಂಬ ಸ್ಲೈಡನ್ನೇನೋ ತೋರಿಸುತ್ತಿದ್ದರು. ಅದನ್ನು ನೋಡುತ್ತಿದ್ದವರಾರು? ನನಗೆ ನೆನಪಿರುವ ಮೊಟ್ಟ ಮೊದಲ ಸಿನಿಮಾ "ಭಲೇ ಹುಚ್ಚ" ನೋಡಿದ್ದು ಇಲ್ಲೇ, ಹಾಗೆಯೇ ನಾನು ನೋಡಿದ ಮೊದಲ ಕಲರ್ ಸಿನಿಮಾ (ಹೆಸರು ನೆನಪಿಲ್ಲ) ನೋಡಿದ್ದೂ ಇಲ್ಲಿಯೇ - ತಂದೆಯವರ ಜೊತೆ ಎಂದು ಬೇರೆ ಹೇಳಬೇಕಿಲ್ಲವಲ್ಲ.

ಆಮೇಲೆ ಯಾವಾಗಲೋ, 9-10ನೇ ತರಗತಿಯಲ್ಲಿರಬೇಕು, ಯಾವುದೋ ಪ್ರಖ್ಯಾತವಾದ ಸಿನಿಮಾ, ಇದೇ ಕೃಷ್ಣ ಟಾಕೀಸಿನಲ್ಲಿ. ಹೋಗುವ ಹೊತ್ತಿಗೆ ತಡವಾಗಿತ್ತು, ಟಿಕೇಟ್ ಇಲ್ಲ. ಬ್ಲಾಕ್ ಟಿಕೇಟು ಕೊಂಡುಕೊಳ್ಳುವ ಮನಸ್ಸಾಗದೇ ವಾಪಸು ಹೋಗುತ್ತಿದ್ದಾಗ ಯಾರೋ ಒಬ್ಬ, ತನ್ನ ಬಳಿ ಎರಡು ಟಿಕೇಟ್ ಇದೆಯೆಂದೂ ತನ್ನ ಮಿತ್ರ ಬರಲಿಲ್ಲವೆಂದೂ ಟಿಕೆಟಿನ ಬೆಲೆಯನ್ನೇ ಕೊಟ್ಟರೆ ಸಾಕೆಂದೂ ಹೇಳಿದ. ನಮಗೂ ಇಂತಹ ಹಲವು ಸಂದರ್ಭಗಳಲ್ಲಿ ನಾವೂ ಹೀಗೇ ಯಾರಿಗೋ ಮಾರಿ ಬಂದಿದ್ದುದರಿಂದ ಸಂತೋಷವಾಗಿ ಅವನು ಕೊಟ್ಟ ಟಿಕೆಟ್ ಕೊಂಡು ಒಳಹೋದೆವು. ಹೋದರೆ ಗೇಟಿನಲ್ಲಿ ನಮ್ಮನ್ನು ಆಪಾದಮಸ್ತಕ ನೋಡಿದ ಗೇಟ್ ಕೀಪರ್ "ಇದು ಹಳೇ ಟಿಕೇಟು ಹೋಗ್ರಯ್ಯಾ" ಎಂದು ಬೈದು ಕಳಿಸಿದ. ಇದು ಬಹುಶಃ ಬದುಕಿನಲ್ಲಿ ನಾನು ಅನುಭವಿಸಿದ ಮೊಟ್ಟ ಮೊದಲ ಮೋಸ, ಒಂದು ರುಪಾಯಿ 90 ಪೈಸೆಯದ್ದು. ಆಮೇಲೆ ಈ ಘಟನೆಯನ್ನು ಸುಧಾ ಪತ್ರಿಕೆಯ "ನಿಮ್ಮ ಪುಟ"ಕ್ಕೆ ಬರೆದಿದ್ದೆ, ಮತ್ತು ಅದಕ್ಕೆ 50 ರುಪಾಯಿ ಸಂಭಾವನೆಯೂ ಸುಧಾ ಪತ್ರಿಕೆಯ ಪ್ರತಿಯೂ ಬಂದಿತ್ತು. ಹೀಗೆ, ಆದ ನಷ್ಟತುಂಬಿತು. ನನ್ನ ಬದುಕಿನಲ್ಲಿ ಪ್ರಕಟವಾದ ಮೊದಲ ಲೇಖನವೂ ಇದೇ. ಹೀಗೆ ಕೃಷ್ಣ ಟಾಕೀಸು ಬದುಕಿನ ಹಲವು ಮೊದಲುಗಳಿಗೆ ಸಾಕ್ಷಿಯಾಯಿತು :)

ಕೃಷ್ಣಾ ಆದ ಮೇಲೆ ಬಂದಾಕೆ ಶಾಂತಿ.  ಮಯೂರ, ಬಭ್ರುವಾಹನ, ಹುಲಿಯ ಹಾಲಿನ ಮೇವು, ಗಂಧದ ಗುಡಿ (ಬಹುಶಃ ನಾಗರಹಾವೂ) ಮೊದಲಾದ ಮಹೋನ್ನತ ಚಿತ್ರಗಳನ್ನು ನೋಡಿದ್ದು ಶಾಂತಿ ಟಾಕೀಸಿನಲ್ಲಿಯೇ. ಹಾಗೆಯೇ ಕಾಶೀನಾಥರ 'ಅನುಭವ' ಎಂಬ (ಆ ಕಾಲಕ್ಕೆ 'ಮರ್ಯಾದಸ್ಥರು ನೋಡಬಾರದ') ಚಿತ್ರ ನೋಡಿದ್ದೂ ಅಲ್ಲೇ. ಹೆಣ್ಣುಮಕ್ಕಳಿಗೆ ಆ ಚಿತ್ರಕ್ಕೆ ಪ್ರವೇಶವಿರಲಿಲ್ಲವೆಂದು ನೆನಪು, ಚಿತ್ರ ನೋಡಲು ಬಂದ ಯಾವುದೋ ಮಹಿಳೆಯನ್ನು ಬೈದು ಕಳಿಸಿದ್ದರೆಂಬುದೂ ಅಸ್ಪಷ್ಟ ನೆನಪು)

ಆಮೇಲೆ ಬಂದದ್ದು ಶೋಭಾ. ಪ್ರೇಮದ ಕಾಣಿಕೆ ಚಿತ್ರ ಇಲ್ಲಿ ನೋಡಿದ್ದೆಂದು ನೆನಪಿದೆ, ಹಾಗೆಯೇ ಸಿಂಹದ ಮರಿ ಸೈನ್ಯ, ಪುಟಾಣಿ ಏಜೆಂಟ್ 123 ಇವುಗಳನ್ನೂ. ಹಾಗೆಯೇ ತಾಯಿಯವರ ಜೊತೆ "ಉಪಾಸನೆ" ಎಂಬ 'ಗೋಳುಕರೆಯ' (ಆಗಿನ ದೃಷ್ಟಿಯಲ್ಲಿ) ಚಿತ್ರವನ್ನು ನೋಡಿದ್ದೂ ಇಲ್ಲೆಯೇ, ಹೆಂಗಸರಿಗೇ ಪ್ರತ್ಯೇಕವಾಗಿದ್ದ 95 ಪೈಸೆಯ ವರ್ಗದಲ್ಲಿ ಕೂತು. ತಮಾಷೆಯೆಂದರೆ ನಾಯಕಿ ಮತ್ತಾಕೆಯ ಗುರುಗಳನ್ನು ಮೆಚ್ಚುವ, ಸಹಾನುಭೂತಿ ಸೂಚಿಸುವ ಬದಲು ಬೈಯುವ ಹೆಂಗಸರೂ ಅಲ್ಲಿದ್ದುದು ಆಗೆಲ್ಲ ಅಚ್ಚರಿಯೆನಿಸುತ್ತಿರಲಿಲ್ಲ; ಜೊತೆಗೆ ಅಬ್ಬಾ! ಅಲ್ಲಿನ ಕಿಸಿಕಿಸಿ, ಮುಸಿಮುಸಿ, ಅಳು, ಅಯ್ಯೋ ಪಾಪವೇ ಪ್ಚ ಪ್ಚ ಪ್ಚ ಭಗವಂತಾ, ಎಂಥಾ ಕಷ್ಟವಪ್ಪಾ ಎಂಬ ಉದ್ಗಾರಗಳೂ - ಅದೇ ಒಂದು ಪ್ರಪಂಚ.

ಶ್ರೀನಿವಾಸ ಆಮೇಲೆ ಬಂದುದು, ಸುಮಾರು ನಾನು 8-9ನೆಯ ತರಗತಿಯಲ್ಲಿದ್ದಾಗ. ಆಗೆಲ್ಲಾ ಅದೆಷ್ಟೆಷ್ಟೊಂದು ಮುಗ್ಧತೆ, ಎಷ್ಟೊಂದು ಮೂಢನಂಬಿಕೆಗಳು. ಹೊಸ ಸಿನಿಮಾ ಥಿಯೇಟರ್ ಭದ್ರವಾಗಿ ನಿಲ್ಲಬೇಕಾದರೆ ಮಕ್ಕಳನ್ನು ಬಲಿಕೊಡುತ್ತಾರಂತೆ ಎನ್ನುವುದು ನಮ್ಮ ಬಾಲಬಳಗದಲ್ಲಿ ಜನಜನಿತವಾಗಿದ್ದ ನಂಬಿಕೆ. ನನ್ನ ಸಹಪಾಠಿಯಾಗಿದ್ದ ಆನಂದನಂತೂ (ನನಗಿಂತ ಒಂದು ವರ್ಷ ದೊಡ್ಡವನು) ಮಕ್ಕಳನ್ನು ಹೇಗೆ ಎಳೆದುಕೊಂಡು ಹೋಗಿ ಬಲಿ ಕೊಡುತ್ತಾರೆಂಬುದನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಪೂರ್ವಕವಾಗಿ ವರ್ಣಿಸುತ್ತಿದ್ದ - ತಾನೇ ಬಲಿಯಾಗುತ್ತಿರುವ ಮಗುವೋ ಎನ್ನುವಂತೆ. ಹಾಗೆ ಬಲಿ ಕೊಡದಿದ್ದರೆ ಕಟ್ಟಡ ಬಿದ್ದೇ ಹೋಗುತ್ತಂತೆ, ಮೊದಲ ಪ್ರದರ್ಶನದಲ್ಲೇ ತನ್ನ ಬಲಿ ತೆಗೆದುಕೊಂಡುಬಿಡುವುದಂತೆ, ಅದಕ್ಕೇ ಮೊದಲ ಪ್ರದರ್ಶನಕ್ಕೆ ಹೋಗಲು ಜನ ಹೆದರುತ್ತಾರಂತೆ, ಅದಕ್ಕೇ ಯಾವಾಗಲೂ ಫ್ರೀ ಅಂತೆ - ಹೀಗೆ ಏನೇನೋ. ಇವನು ಬಿಡುತ್ತಿರುವುದೆಲ್ಲ ರೈಲು ಎಂದು ಆಗಲೂ ಗೊತ್ತಾಗುತ್ತಿತ್ತು, ಆದರೂ ಅದರಲ್ಲಿ ಎಷ್ಟು ಸುಳ್ಳೋ ಎಷ್ಟು ನಿಜವೋ, ಅಕಸ್ಮಾತ್ ಬಲಿ ಕೊಡುವ ವಿಷಯ ಸುಳ್ಳಾಗಿದ್ದು, ಕಟ್ಟಡ ಮುನಿಸಿಕೊಳ್ಳುವ ವಿಷಯ ನಿಜವಾಗಿದ್ದರೆ? ಸಿನಿಮಾಗೆ ಹೋದವರನ್ನೇ ಬಲಿ ಪಡೆದರೆ? ಆ ಬಲಿ ನಾವೇಕಾಗಬೇಕು? ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಒಳ್ಳೆಯದು ಎಂದು, ಮೊದಲ ಪ್ರದರ್ಶನವಿರಲಿ, ಮೊದಲ ಒಂದು ತಿಂಗಳಿಡೀ ಈ ಚಿತ್ರಮಂದಿರದೆಡೆ ತಲೆ ಹಾಕಿರಲಿಲ್ಲ - ಅಣ್ಣಾವ್ರ ಕವಿರತ್ನ ಕಾಳಿದಾಸ ಮತ್ತು ಭಕ್ತಪ್ರಹ್ಲಾದ ಚಿತ್ರಗಳನ್ನು ನಾಲ್ಕು ನಾಲ್ಕು ಬಾರಿ ನೋಡಿದ್ದು ಇಲ್ಲೇ (ಭಕ್ತಪ್ರಹ್ಲಾದ ಅಂತೂ ಒಂದೇ ದಿನ ಎರಡು ಬಾರಿ - ಒಮ್ಮೆ ನಾನಾಗೇ, ಇನ್ನೊಮ್ಮೆ ಅಫಿಯಲ್ ಆಗಿ ತಂದೆಯವರ ಜೊತೆ :) ) ನನ್ನ ಭಾವಕೋಶದಲ್ಲಿ ಅಚ್ಚಾಗಿರುವ ಕೊನೆಯ ಟಾಕೀಸು ಇದು.

ವಿನಾಯಕ ಚಿತ್ರಮಂದಿರ ನನ್ನ ಪಾಲಿಗೆ ಸಾಕಷ್ಟು 'ಹೊಸದು' ಕಾಲೇಜಿನಲ್ಲಿದ್ದಾಗೇನೋ ಬಂದದ್ದು - ಅಲ್ಲಿ ಒಂದೆರಡು ಚಿತ್ರ ನೋಡಿದ್ದು (Ocotopussy ಎಂಬ 'ಕೆಟ್ಟ' ಚಿತ್ರ, ನನಗೆ ನೆನಪಿರುವಂತೆ) ಬಿಟ್ಟರೆ, ಎಲ್ಲೋ "ಊರಾಚೆ, ಮುಡಿಗುಂಡದ ಹತ್ತಹತ್ತಿರ" ಇದ್ದ ಅದರ ಬಗೆಗೆ ಅಷ್ಟೊಂದು ಭಾವನಾತ್ಮಕ ಸಂಬಂಧವೂ ನೆನಪುಗಳೂ ಇಲ್ಲ.

ಕೊಳ್ಳೇಗಾಲದಲ್ಲೇ ಅತ್ಯುತ್ತಮವಾದ ಟಾಕೀಸ್ ಶೋಭಾ, ಆ ಕಾಲಕ್ಕೆ - ಅದಕ್ಕೆ ಅಲ್ಲಿ ತೋರಿಸುತ್ತಿದ್ದ "Photophone and sound projection only in this theater" ಎಂಬ ಸ್ಲೈಡ್ ಅಷ್ಟೇ ಸಾಕ್ಷಿಯಲ್ಲ, ಟಾಕೀಸು ವಿಶಾಲವಾಗಿತ್ತು, ಸ್ವಚ್ಛವಾಗಿತ್ತು, ಹೊಸದಾಗಿತ್ತು, ಸೀಟುಗಳು ಚೆನ್ನಾಗಿದ್ದುವು, ಸೌಂಡ್ ನಿಜಕ್ಕೂ ಚೆನ್ನಾಗಿತ್ತು - ಆಮೇಲೆ ಶ್ರೀನಿವಾಸ ಮತ್ತು ನಾನು ಊರು ಬಿಡುವ ಒಂದೈದು ವರ್ಷದ ಮೊದಲು ವಿನಾಯಕ ಬಂದರೂ 'ಊರಾಚೆ' ಎಲ್ಲೋ ಇದ್ದ ಅವು ಶೋಭೆಯ ಆಕರ್ಷಣೆಯನ್ನು ಕಿತ್ತುಕೊಳ್ಳಲು ಆಗಲಿಲ್ಲ.

ಈ ಪತ್ರಿಕಾ ವರದಿಯನ್ನು ನೋಡುವವರೆಗೂ ಭೂತಯ್ಯನ ಮಗ ಅಯ್ಯು ಮತ್ತು ಶ್ರೀನಿವಾಸಕಲ್ಯಾಣ ಈ ಟಾಕೀಸಿನ ಮೊದಲ ಮತ್ತು ಎರಡನೆಯ ಚಿತ್ರ ಎಂದು ತಿಳಿದಿರಲಿಲ್ಲ. ಆದರೆ ಅವೆರಡನ್ನೂ ನಾನು ನೋಡಿದ್ದು ನಮ್ಮೂರಿನಲ್ಲೇ, ಮೊದಲ ರಿಲೀಸಿನಲ್ಲೇ ಆದ್ದರಿಂದ ಶೋಭೆಯ ಮೊದಲ ಮತ್ತು ಎರಡನೆಯ ಚಿತ್ರಗಳ ಸಂಭ್ರಮದಲ್ಲಿ ನಾನೂ ಭಾಗಿಯಾಗಿದ್ದೆ ಎಂದು ಈಗ ತಿಳಿದು ಖುಶಿಯಾಗುತ್ತಿದೆ :) ಆಗ ನನಗೆ ಐದೋ ಆರೋ ವರ್ಷ. ತನ್ನ ಮಡಿಲಲ್ಲಿ ಕೂರಿಸಿಕೊಂಡು ಅದೆಷ್ಟೆಷ್ಟೋ ಸಿನಿಮಾ ತೋರಿಸಿ - ಒಳ್ಳೆಯದನ್ನೂ ಕೆಟ್ಟದ್ದನ್ನೂ ತೋರಿಸಿಕೊಟ್ಟು - ಕತೆ ಹೇಳಿ ರಂಜಿಸಿದ ಈಕೆಗೆ "ಹೋಗಿ ಬಾರೇ ಅಕ್ಕಾ" ಎಂದು ವಿದಾಯ ಹೇಳಬೇಕಷ್ಟೇ.

Monday, June 29, 2020

ಧರ್ಮಸಂಸ್ಥಾಪನಾರ್ಥಾಯ




ಶಿಕ್ಷಕಮಿತ್ರರಾದ ಶ್ರೀ ಅಣ್ಣಪ್ಪನವರು ಒಂದು ಜಿಜ್ಞಾಸೆಯನ್ನೆತ್ತಿದರು - "ಮಹಾಭಾರತದಲ್ಲಿ ಭೀಷ್ಮನು ದುರ್ಯೋಧನಾದಿ ಕೌರವರ ಕಡೆಯಲ್ಲೇ ಉಳಿದದ್ದೇಕೆ? ಮತ್ತವನು ಅವರ ಆಜ್ಞಾನುವರ್ತಿಯಾಗಲು ಕಾರಣವೇನು? ಹಸ್ತಿನಾಪುರ ಸಿಂಹಾಸನದಲ್ಲಿ ಧರ್ಮವನ್ನೇ ಪ್ರತಿಷ್ಠಾಪಿಸುವ ಪ್ರತಿಜ್ಞೆ ಹೊತ್ತವನು ಹೀಗೆ ನಡೆದುಕೊಂಡದ್ದು ಯಾವ ಕಾರಣಕ್ಕಾಗಿ?"  ಕುರುವಂಶದ ರಾಜ್ಯಾಧಿಕಾರವೇ ಇವನ ಹಕ್ಕಾಗಿದ್ದು, ಕೌರವರ ಅಧಿಕಾರವೇ ಇವನ ತ್ಯಾಗದ ಫಲವಾದ್ದರಿಂದ , 'ಅನ್ನದ ಋಣ'ವೆಂಬುದು ಸಮರ್ಥಿಸಲಾಗದ ಅಂಶ ಎಂಬುದು ಅವರ ಅನಿಸಿಕೆ.

ಮೊದಲನೆಯದಾಗಿ, ಭೀಷ್ಮನು ಕುರುಸಿಂಹಾಸನದಲ್ಲಿ ಧರ್ಮವನ್ನಾಗಲೀ ಇನ್ನೇನನ್ನಾಗಲೀ ಪ್ರತಿಷ್ಠಾಪಿಸುವ ಪ್ರತಿಜ್ಞೆ ಹೊತ್ತಿರಲಿಲ್ಲ.  ರಾಜ್ಯವಾಳುವುದಿಲ್ಲ, ಬ್ರಹ್ಮಚರ್ಯವನ್ನಾಚರಿಸುತ್ತೇನೆ ಎಂಬುದಷ್ಟೇ ಅವನ ಪ್ರತಿಜ್ಞೆ.  ಕುರುಸಿಂಹಾಸನಕ್ಕೆ ಅವನ ನಿಷ್ಠೆ - ಅದನ್ನು ಕಾಯ್ದುಕೊಳ್ಳಲು ಅವನು ಬದ್ಧನಷ್ಟೇ.

ಅನ್ನದ ಋಣದ ಮಾತು ಸರಿಯೇ, ಆದರೆ ಅನ್ನದ ಋಣ ಎಂದರೆ ಕೌರವರು ಭೀಷ್ಮನಿಗೆ ಅನ್ನ ಹಾಕಿ ಸಾಕಿದರೆಂದಲ್ಲ, ಇದನ್ನು ವಿಶಾಲಾರ್ಥದಲ್ಲಿ ನೋಡಬೇಕಾಗುತ್ತದೆ. ಹಾಗೆ ನೋಡದಿದ್ದಾಗಲೇ, "ದುರ್ಯೋಧನನ ಋಣ ಭೀಷ್ಮನಿಗೆಂಥದ್ದು? ರಾಜ್ಯವೇ ಭೀಷ್ಮನ ಭಿಕ್ಷೆಯಾಗಿರುವಾಗ" ಮೊದಲಾದ ವಾದಗಳು ಬರುವುದು. ಆದರೆ ಇಲ್ಲಿನ ಅನ್ನದ ಋಣ ನಿರ್ದಿಷ್ಟ ವ್ಯಕ್ತಿಗಳ ನಡುವಿನದ್ದಲ್ಲ. ರಾಜ್ಯ/ಸಿಂಹಾಸನವು ಒಬ್ಬ ಪ್ರಜೆಯಾಗಿ ಭೀಷ್ಮನನ್ನು ಪೋಷಿಸಿದೆ, ಅದಕ್ಕಾತ ನಿಷ್ಠನಾಗಿದ್ದಾನೆಂಬುದಷ್ಟೇ ಅಲ್ಲಿ ಮುಖ್ಯ. ಆ ಅರ್ಥದಲ್ಲಿ ಕೌರವರೂ, ಧೃತರಾಷ್ಟ್ರನೂ ಆ ಅನ್ನಕ್ಕೆ ಋಣಿಗಳೇ, ಭೀಷ್ಮನೇ ಚಕ್ರವರ್ತಿಯಾಗಿದ್ದಿದ್ದರೂ ಆತ ಋಣಿಯೇ. ಆ ಲೆಕ್ಕದಲ್ಲಿ ಪಾಂಡವರೂ ಋಣಿಗಳೇ, ಆದರೆ ಅವರು ಪ್ರಭುತ್ವದಿಂದ ಸಿಡಿದು ಹೋದವರು, ಮತ್ತು ಅದೇ ಕಾರಣಕ್ಕೆ ರಾಜ್ಯದ ಶತ್ರುಗಳು. ಅದರಿಂದಾಗಿ ಸಿಂಹಾಸನಕ್ಕೆ ನಿಷ್ಠನಾಗಿರುವ ಭೀಷ್ಮವಿದುರಾದಿ ಧರ್ಮಾತ್ಮರು ಪಾಂಡವರ ವಿರುದ್ಧ, ಪ್ರಭುತ್ವದ ಪರ ನಿಲ್ಲಬೇಕಾಯಿತು.

ಪಾಂಡವರೂ ಧರ್ಮಾತ್ಮರು, ಭೀಷ್ಮವಿದುರಾದಿಗಳೂ ಧರ್ಮಾತ್ಮರೆಂದರೆ ಹೇಗಾದೀತು? ಇದೇ ಧರ್ಮಸೂಕ್ಷ್ಮ - ಇಡೀ ಮಹಾಭಾರತದ ಕಥಾಸಂವಿಧಾನವೇ ಇದನ್ನು ವಿಶ್ಲೇಷಿಸುವ ಉದ್ದೇಶ ಹೊಂದಿದ್ದು.

ಕೆಲವರು, ಪಾಂಡವರು ನಿಯೋಗಸಂತಾನವಾದ್ದರಿಂದ ಅವರು ರಾಜ್ಯಕ್ಕೆ ಅರ್ಹರಲ್ಲ ಎಂದು ವಾದಿಸುತ್ತಾರೆ. ಅದು ಸರಿಯಲ್ಲ - ಸ್ವತಃ ಧೃತರಾಷ್ಟ್ರಪಾಂಡುಗಳೇ ನಿಯೋಗಸಂತಾನ - ನಿಯೋಗಸಂತಾನಕ್ಕೆ ಔರಸಸಂತಾನದಷ್ಟೇ ಮಾನ್ಯತೆಯಿರುವುದರಿಂದ ಪ್ರಶ್ನೆ ಅದಲ್ಲ.

ಧೃತರಾಷ್ಟ್ರ ಹಿರಿಯನಾದ್ದರಿಂದ ಸಹಜವಾಗಿಯೇ ರಾಜ್ಯಾಧಿಕಾರವುಳ್ಳವನು. ಆದರೆ ಆತ ಕುರುಡನಾದ್ದರಿಂದ ಪಾಂಡು ರಾಜನಾದ.  ಆದ್ದರಿಂದ ಪಾಂಡುವಿನ ರಾಜ್ಯಾಧಿಕಾರ ಅವನಿಗೆ ಸಹಜವಾಗಿ ಬಂದದ್ದಲ್ಲ.  ಇನ್ನು ಕೆಲಕಾಲಾನಂತರ ಶಾಪಗ್ರಸ್ಥನಾದ ಆತ ಹಸ್ತಿನಾವತಿಯನ್ನು ಬಿಟ್ಟು ಋಷ್ಯಾಶ್ರಮಗಳಲ್ಲಿ ಕಾಲ ಕಳೆಯಬೇಕಾದಾಗ ರಾಜ್ಯಾಧಿಕಾರವು ಧೃತರಾಷ್ಟ್ರನ ಕೈಸೇರಿತು. ಪಾಂಡವರ ಜನನಾನಂತರ ಪಾಂಡು ಸತ್ತೂ ಹೋದ. ಈಗಂತೂ ಧೃತರಾಷ್ಟ್ರನೇ ರಾಜನಾದನಲ್ಲ.

ಈಗ ಅವರಿಬ್ಬರ ಮಕ್ಕಳಲ್ಲಿ ಮುಂದೆ ಯಾರು ಅರಸರಾಗಬೇಕೆಂಬುದು ಪ್ರಶ್ನೆ. ಪಾಂಡು ದೊರೆಯಾಗಿದ್ದುದ್ದರಿಂದ ಸಹಜವಾಗಿಯೇ ಅವನ ಮಗನಾದ ಧರ್ಮಜ ದೊರೆಯಾಗಬೇಕು (ಅಲ್ಲದೇ ಕೌರವಪಾಂಡವರಲ್ಲಿ ಅವನೇ ಹಿರಿಯ ಕೂಡ). ಆದರೆ ಅದೇನಿದ್ದರೂ ಪಾಂಡುವು ಬದುಕಿದ್ದರೆ ಅವನಿಂದ ಧರ್ಮಜನಿಗೆ ರಾಜ್ಯ ದೊರೆಯಬೇಕಿದ್ದ ಮಾತು. ಈಗ ಪಾಂಡು ಸತ್ತೇ ಹೋಗಿದ್ದಾನೆ, ಮತ್ತು ಮೂಲತಃ ಧೃತರಾಷ್ಟ್ರನಿಗೆ ಸೇರಬೇಕಿದ್ದ ಅಧಿಕಾರ ಅವನಿಗೇ ಮರಳಿದ್ದೂ ಆಗಿದೆ. ಅವನ ಅನರ್ಹತೆಯೇನಿದ್ದರೂ ಆತ ಕುರುಡನೆಂಬುದಷ್ಟೇ?  ಅದು ಅವನ ಸಹಜ ಉತ್ತರಾಧಿಕಾರಿಗಳಾದ ಮಕ್ಕಳ ಅನರ್ಹತೆಯಲ್ಲವಲ್ಲ, ಆದ್ದರಿಂದ ಸಹಜವಾಗಿಯೇ ಈಗ ರಾಜನಾಗಿರುವ ಧೃತರಾಷ್ಟ್ರನ ಮಗ ದುರ್ಯೋಧನನು ರಾಜನಾಗಬೇಕಾದ್ದೇ ಸರಿಯಾದ ಮಾರ್ಗ. ಹೀಗಾಗಿ ತನ್ನ ಹಿರಿಮಗನಾದ ದುರ್ಯೋಧನ ದೊರೆಯಾಗಬಾರದೇಕೆ ಎಂಬ ಪ್ರಶ್ನೆಯನ್ನು ದುರ್ಯೋಧನನು ಹುಟ್ಟಿದೊಡನೆಯೇ ಧೃತರಾಷ್ಟ್ರನು ಎತ್ತುತ್ತಾನೆ ಕೂಡ. ಆದರೆ ದುಷ್ಟನಾದ ದುರ್ಯೋಧನನು ಹುಟ್ಟಿದಾಗಲೇ ಎದ್ದ ಅಶುಭಶಕುನಗಳನ್ನು ಕಂಡು ಗುರುಹಿರಿಯರು ಆ ಮಗುವನ್ನು ತ್ಯಜಿಸಿಯೇ ಬಿಡುವಂತೆ ಸಲಹೆ ನೀಡುವುದರಿಂದ ರಾಜ್ಯಾಧಿಕಾರದ ಬಗೆಗೆ ಮಾತಾಡಿ ಪ್ರಯೋಜನವಿಲ್ಲವೆಂದರಿತು ಧೃತರಾಷ್ಟ್ರ ಸುಮ್ಮನಾಗುತ್ತಾನೆ.

ಹೀಗಾಗಿ ಸಹಜಕ್ರಮದಲ್ಲಿ ನೋಡಿದರೆ ದುರ್ಯೋಧನನಿಗೆ ರಾಜ್ಯ ಸಿಗಬೇಕು. ಆದರೆ ಧರ್ಮರಾಜ ಭೂತಪೂರ್ವ ರಾಜನ ಹಿರಿಯ ಮಗ, ಕೌರವಪಾಂಡವರಿಬ್ಬರಲ್ಲೂ ಹಿರಿಯ ಮತ್ತು ಧರ್ಮಾತ್ಮನಾದ್ದರಿಂದ ಅವನು ಸಿಂಹಾಸನಕ್ಕೆ ಯೋಗ್ಯ. ಎಂದ ಮೇಲೆ ಯಾರಿಗೆ ರಾಜ್ಯ ಸಿಕ್ಕಬೇಕು? ಇದು ಇಲ್ಲಿನ ಧರ್ಮಸೂಕ್ಷ್ಮ.

ಇಷ್ಟಕ್ಕೂ ಧರ್ಮರಾಜನು ಧರ್ಮಾತ್ಮನೆಂದು ಹೇಳಿದವರಾರು? ಕತೆಯನ್ನು ರಚಿಸಿದವರು, ಅದರಲ್ಲಿನ ಎಲ್ಲ ಧರ್ಮಾತ್ಮರು, ಅದನ್ನು ಓದಿದ ನಾವು ನೀವು. ಅಷ್ಟೇಕೆ? ಭೀಷ್ಮದ್ರೋಣವಿದುರಾದಿ ಧರ್ಮಾತ್ಮರೆಲ್ಲರೂ ಅಂತಃಕರಣದಲ್ಲಿ ಪಾಂಡವಪಕ್ಷಪಾತಿಗಳೇ. ಆದರೇನು? ಅದಷ್ಟರಿಂದಲೇ ಧರ್ಮ ಸ್ಥಾಪನೆಯಾಗುವುದೇ? ಜನಪ್ರಿಯತೆಯು ಧರ್ಮವನ್ನು ನಿರ್ಧರಿಸುವುದೇ? ಅಥವಾ ಹಾಗೆ ನಿರ್ಧರಿಸಲ್ಪಟ್ಟ ಧರ್ಮಕ್ಕಾಗಿ ವಂಶಾನುಗತವಾಗಿ ಬಂದ ರಾಜತ್ವವನ್ನು ಅದರ ವಾರಸುದಾರನಿಂದ ಕಿತ್ತುಕೊಂಡು ಅವರಿಗೆ ಕೊಡಲಾಗುತ್ತದೆಯೇ?  ಇದು ಜಿಜ್ಞಾಸೆ.  ನಿಜಕ್ಕೂ ಧರ್ಮದಲ್ಲಿ ಸತ್ತ್ವವಿರುವುದಾದರೆ ಅದು ಪರೀಕ್ಷೆಯನ್ನೆದುರಿಸಿ ಗೆಲ್ಲಬೇಕು, ನಿಲ್ಲಬೇಕು. ಕೌರವರ ಅಧರ್ಮವು ಯುದ್ಧದಲ್ಲಿ ಸೋಲಬೇಕು. ಅದುವರೆಗೂ ದುರ್ಯೋಧನನಿಗಿದ್ದ ಜನ್ಮಜಾತ ಹಕ್ಕಿನಂತೆ ಮುಂದುವರೆಯುವುದೇ ಧರ್ಮ.

ಆದರೆ ಪಾಂಡವರನ್ನು ಹಸ್ತಿನಪುರಕ್ಕೆ ಕರೆತಂದಾಗ, ದಾಯಾದಿಗಳ ನಡುವಣ ಕಲಹ ನಿಜಕ್ಕೂ ಕೈಮೀರಿ ಮನೆಯೇ ಒಡೆಯುವುದನ್ನು ಕಂಡ ಭೀಷ್ಮಾದಿಗಳು ಇದಕ್ಕೊಂದು ರಾಜೀಸೂತ್ರವನ್ನು ಅನುಸರಿಸಿ ರಾಜ್ಯವನ್ನು ಭಾಗಮಾಡುತ್ತಾರೆ. ಆದರೆ ಮೋಸದ ಜೂಜಿಗೆ ಸಿಕ್ಕಿ ಪಾಂಡವರು ಅದನ್ನು ಕಳೆದುಕೊಳ್ಳುತ್ತಾರೆ. ಸರಿ, ಮೋಸದ ಜೂಜು ಅಧರ್ಮವಾಯಿತಲ್ಲ, ಅಷ್ಟಾದರೂ ಪುನಃ ದಕ್ಕಬೇಕಾದ್ದು ಪಾಂಡವರಿಗೇ ತಾನೆ ಎಂದರೆ, ಅದು ಮೋಸವೆಂದು ಕಂಡವರಾರು? ಕತೆಗಾರರು ಹೇಳಿದ್ದು, ನಾವು ಕಂಡದ್ದು, ಭೀಷ್ಮಾದಿಗಳು ಅನುಮಾನಿಸಿದ್ದು. ಅಷ್ಟಕ್ಕೇ ಧರ್ಮದ್ಯೂತವನ್ನು ಮೋಸದ್ದೆಂದು ಘೋಷಿಸಿಬಿಡಲಾಗುವುದಿಲ್ಲವಲ್ಲ. ಆ ಕಾಲಕ್ಕೆ ಜೂಜೂ ಯುದ್ಧದಷ್ಟೇ ಧರ್ಮವತ್ತಾದದ್ದು. ಅದರಲ್ಲಿ ಗೆದ್ದ ರಾಜ್ಯ ಕೌರವರದ್ದೇ. ಅದೇ ಕಾರಣಕ್ಕೆ ಪಾಂಡವರು ಕಾಡಿಗೆ ಹೋದಾಗಲೂ ಭೀಷ್ಮಾದಿಗಳ ಹೃದಯ ಅವರೊಂದಿಗೇ ಇದ್ದರೂ ಅವರನ್ನು ಬೆಂಬಲಿಸಲಾಗದೇ ಸುಮ್ಮನಾಗುತ್ತಾರೆ. ದ್ರೌಪದಿಯ ಮಾನಭಂಗದ ಪ್ರಶ್ನೆ ಬಂದಾಗಲೂ ಇಂಥದ್ದೇ ಧರ್ಮಸೂಕ್ಷ್ಮಗಳಲ್ಲಿ ಸಿಕ್ಕು ಹೈರಾಣಾಗಿಬಿಡುತ್ತಾರೆ ಭೀಷ್ಮಾದಿಗಳು - ಸ್ವತಃ ದ್ರೌಪದಿಯೇ ಕೇಳುತ್ತಾಳೆ, ಧರ್ಮಜನು ತಾನು ಸೋತಮೇಲೆ ನನ್ನನ್ನು ಪಣಕ್ಕಿಟ್ಟನೋ, ಅದಕ್ಕೆ ಮೊದಲೇ ಪಣಕ್ಕಿಟ್ಟನೋ?  ಇಲ್ಲೆಲ್ಲೂ ದ್ರೌಪದಿಯ ಸೀರೆ ಸೆಳೆದದ್ದು ಧರ್ಮವೋ ಅಧರ್ಮವೋ ಎಂಬ ಪ್ರಶ್ನೆ ಬರುವುದಿಲ್ಲ, ಆಕೆ ತಾಂತ್ರಿಕವಾಗಿ ದಾಸಿಯೋ ಅಲ್ಲವೋ ಎಂಬುದೇ ಪ್ರಶ್ನೆ.

ಸರಿ, ಕೊನೆಗೆ ಒಪ್ಪಂದದಂತೆ ಅಜ್ಞಾತವನ್ನು ಮುಗಿಸಿದಮೇಲಾದರೂ ರಾಜ್ಯವನ್ನು ಕೊಡಬೇಕಾಗಿತ್ತಲ್ಲ ಎಂದರೆ ಅಲ್ಲೂ ಸಮಸ್ಯೆ ಅಷ್ಟು ಸರಳವಲ್ಲ. ಕೌರವರು ಪಾಂಡವರನ್ನು ಗುರುತು ಹಿಡಿಯುವ ಹೊತ್ತಿಗೆ ಅಜ್ಞಾತವು ನಿಜಕ್ಕೂ ಮುಗಿದಿತ್ತೋ ಇಲ್ಲವೋ ಎಂಬ ಪ್ರಶ್ನೆ ಕೂಡ ಬರುತ್ತದೆ. ಮುಗಿದಿತ್ತೆಂಬ ವಿಷಯ ಖಚಿತವಾದಮೇಲೆ ಭೀಷ್ಮಾದಿಗಳು ಪಾಂಡವರ ರಾಜ್ಯವನ್ನು ಅವರಿಗೆ ಕೊಟ್ಟುಬಿಡುವಂತೆ ದುರ್ಯೋಧನನಿಗೆ ಹೇಳುತ್ತಾರೆ. ಆದರೆ ಅದಾಗಲೇ ರಾಜ್ಯಭೋಗದಿಂದ ಕೊಬ್ಬಿದ್ದ ಕೌರವರು ಅವರ ಮಾತನ್ನು ಕೇಳುವುದಿಲ್ಲ. ಸ್ವತಃ ರಾಜ್ಯದ ಒಡೆಯನಾಗಬಹುದಿದ್ದ ಭೀಷ್ಮ ತನ್ನ ಅಧಿಕಾರವನ್ನುಪಯೋಗಿಸಿ ಇವರನ್ನು ತೊಲಗಿಸಬಹುದಿತ್ತಲ್ಲವೇ ಎಂದರೆ, ಹಾಗೆ ಮಾಡುವುದು ರಾಜ್ಯವನ್ನು ತ್ಯಜಿಸಿದ ಅವನ ಪ್ರತಿಜ್ಞೆಗೇ ವಿರುದ್ಧ. ಪ್ರತಿಜ್ಞೆಯನ್ನು ಮುರಿಯುವವನು ಭೀಷ್ಮ ಹೇಗಾದಾನು?

ಇನ್ನು ಯುದ್ಧ ಬೇಕಾಗಿರುವುದು ಕೇವಲ ಕೌರವರಿಗಷ್ಟೇ ಅಲ್ಲ, ಪಾಂಡವರಿಗೂ. ಅವರ ಕಡೆ, ಕೃಷ್ಣನನ್ನೂ ಒಳಗೊಂಡು, ಧರ್ಮಜನೊಬ್ಬನನ್ನು ಬಿಟ್ಟು ಉಳಿದೆಲ್ಲರಿಗೂ ಯುದ್ಧವೇ ಬೇಕಿರುತ್ತದೆ. ಇತ್ತ ಕೌರವರಿಗೆ ಯುದ್ಧ ಬೇಕೆಂದಿಲ್ಲ, ಆದರೆ ಅಡ್ಡಿಯಿಲ್ಲ. ಹೀಗಾಗಿ ಕೃಷ್ಣನು ಸಂಧಿಯ ಹೆಸರಿನಲ್ಲಿ ಯುದ್ಧವನ್ನೇ ಬಲಿಸಿದಾಗ, ಅನಿವಾರ್ಯವಾಗಿ ಪ್ರತಿಯೊಬ್ಬರೂ ಒಂದಿಲ್ಲೊಂದು ಪಕ್ಷ ಹಿಡಿಯಬೇಕಾಗುತ್ತದೆ. ಎಲ್ಲ ರಾಜರಿಗೂ ಹೀಗೊಂದು ಪಕ್ಷವನ್ನು ಹಿಡಿಯುವುದು ರಾಜಕೀಯದ ಆಯ್ಕೆಯಾದರೆ, ಕುರುಕುಲಕ್ಕೇ ಸೇರಿದ ಭೀಷ್ಮರಿಗೂ, ಅದಕ್ಕೆ ನಿಷ್ಠರಾದ ದ್ರೋಣವಿದುರಾದಿಗಳಿಗೂ ಅದು ಧರ್ಮಾಧರ್ಮಗಳ ನಡುವಣ ಆಯ್ಕೆಯಾಗುತ್ತದೆ. ಪ್ರಭುತ್ವದಿಂದ ಸಿಡಿದುಹೋದ ಪಾಂಡವರು ಅದೆಷ್ಟೇ ಧರ್ಮಾತ್ಮರಾದರೂ ಅವರೀಗ ರಾಜ್ಯದ ಶತ್ರುಗಳು. ಮೊದಲೇ ಹೇಳಿದಂತೆ ಧರ್ಮವೆಂಬುದು ಭೀಷ್ಮದ್ರೋಣಾದಿಗಳ ಮೂಗಿನ ನೇರಕ್ಕೆ ನಿರ್ಧಾರವಾಗುವಂಥದ್ದಲ್ಲ. ಅವರ ನಿಷ್ಠೆಯೇನಿದ್ದರೂ ಸಿಂಹಾಸನಕ್ಕೆ. ಅವರೇನಾದರೂ ಪಕ್ಷ ಬದಲಿಸಿ ಪಾಂಡವರ ಕಡೆ ನಿಂತಿದ್ದರೆ ಯುದ್ಧವೇ ಆಗುತ್ತಿರಲಿಲ್ಲವಲ್ಲ, 'ಧರ್ಮಸ್ಥಾಪನೆ'ಯೂ ಆಗುತ್ತಿರಲಿಲ್ಲ (ಸ್ಥಾಪನೆ = establish, to be proved) - ವ್ಯಾಸರ ಉದ್ದೇಶ ಅದಲ್ಲ. ಹೀಗಾಗಿ ಕೇವಲ ಧರ್ಮದ (ಅದರಿಂದಾಗಿ ದೈವದ) ಬಲವುಳ್ಳ ಪಾಂಡವರು, ಭೀಷ್ಮದ್ರೋಣಾದಿ ಧರ್ಮಾತ್ಮರನ್ನೂ ಒಳಗೊಂಡ ಬಲುದೊಡ್ಡ ಅಧರ್ಮದ ಶಕ್ತಿಯೊಂದಿಗೆ ಸೆಣೆಸಬೇಕಾಗುತ್ತದೆ, ಸೆಣೆಸಿ ಗೆದ್ದು ತಮ್ಮ ಧರ್ಮಬಲವನ್ನು ಸ್ಥಾಪಿಸಬೇಕಾಗುತ್ತದೆ. ಆದರೆ ಇಂತಹ ಯಾವ ಲೌಕಿಕ ತುಮುಲಗಳೂ ಇಲ್ಲದ ಕೃಷ್ಣ, ಧರ್ಮವೊಂದಕ್ಕೇ ಬೆಂಬಲವಾಗಿ ನಿಂತು ಗೆಲ್ಲಿಸುತ್ತಲೇ ಹೋಗುತ್ತಾನೆ.

ಶಾಸ್ತ್ರವು ಬೆಂಬಲಿಸುವ ಧರ್ಮವೊಂದು, ಪ್ರಜ್ಜೆಗೆ ದಕ್ಕುವ ಧರ್ಮವೊಂದು - ಲೋಕವು ಬೆಂಬಲಿಸುವ ಧರ್ಮವೊಂದು - ದೈವವು ಬೆಂಬಲಿಸುವ ಧರ್ಮವೊಂದು; ಸ್ಥೂಲದೃಷ್ಟಿಗೆ ಕಾಣುವ ಧರ್ಮವೊಂದು - ಸೂಕ್ಷ್ಮಕ್ಕಷ್ಟೇ ಕಾಣುವ ಧರ್ಮವೊಂದು. ಈ ತುಮುಲ ಅನೇಕ ಸ್ತರಗಳಲ್ಲಿ ನಡೆಯುವಂಥದ್ದು, ಒಂದು ಸರಳವಿಶ್ಲೇಷಣೆಗೆ ದಕ್ಕುವಂಥದ್ದಲ್ಲ.

ಕೃಷ್ಣಪರಮಾತ್ಮನೇ ಹೇಳುತ್ತಾನಲ್ಲ:
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ

ಇದು ಕೇವಲ ಧರ್ಮವು ಕುಸಿದಾಗ ಬಂದು ಧರ್ಮವನ್ನು ಎತ್ತಿ ಹಿಡಿಯುವ ಭರವಸೆಯಲ್ಲ - ಅದನ್ನು ಮಾಡಲು ಧರ್ಮಾತ್ಮರು, ವೀರರು ಇದ್ದೇ ಇದ್ದಾರೆ.  ಆದರೆ ಯಾವಾಗ ಧರ್ಮದ ವ್ಯಾಖ್ಯೆಯೇ ಕುಸಿದು, ಧರ್ಮದ ಹೆಸರಿನಲ್ಲಿ ಅಧರ್ಮವೇ ವಿಜೃಂಭಿಸತೊಡಗುತ್ತದೆಯೋ ಆಗ ಭೀಷ್ಮವಿದುರಾದಿಗಳಂತಹ ಧರ್ಮಜ್ಞರೂ ಧರ್ಮದ ರೂಲ್ ಬುಕ್ಕುಗಳ ಮುಂದೆ ನಿಸ್ಸಹಾಯಕರಾಗಿಹೋಗುತ್ತಾರೆ; ಆಗ ಅವತರಿಸಿ ಬಂದು ಧರ್ಮವನ್ನು ಪುನರ್ವ್ಯಾಖ್ಯಾನಿಸುವ ಭರವಸೆ ಪರಮಾತ್ಮನದು.  ಇದು, ಮಹಾಭಾರತದಲ್ಲಿ ನಡೆಯುವ ಧರ್ಮ'ಸಂಸ್ಥಾಪನೆ'.

Sunday, May 31, 2020

ಸಂಸ್ಕೃತದಿಂದ ಪ್ರಾಕೃತವೋ ಪ್ರಾಕೃತದಿಂದ ಸಂಸ್ಕೃತವೋ?

ಈ ಚರ್ಚೆ ವಿದ್ವದ್ವಲಯದಲ್ಲಿ ಚರ್ವಿತಚರ್ವಣವೆನಿಸಬಹುದು.  ನಾನು ಹೇಳುತ್ತಿರುವುದರಲ್ಲಿ ಹೊಸದೇನೂ ಇಲ್ಲ.  ಆದರೂ ಈ ಪ್ರಶ್ನೆ ಪದೇಪದೇ ಬರುತ್ತಲೇ ಇರುವುದರಿಂದ, ಉತ್ತರವೂ ಪುನರಾವರ್ತನೆಯಾಗುವುದು ಸಹಜವಷ್ಟೇ  ಆದ್ದರಿಂದ ಈ ಲೇಖನ ಈಗಾಗಲೇ ಇದನ್ನು ತಿಳಿದವರಿಗಾಗಿ ಅಲ್ಲ, ಇನ್ನೂ ಈ ಪ್ರಶ್ನೆಯಿರುವವರಿಗಾಗಿ ಅಷ್ಟೇ.

ಈ ಲೇಖನದ ವಸ್ತು, ಹಿರಿಯಮಿತ್ರರಾದ ಶ್ರೀ ಸುಧೀಂದ್ರ ದೇಶಪಾಂಡೆಯವರು ಫೇಸ್ಬುಕ್ ಚರ್ಚೆಯೊಂದರಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ - "ಸಂಸ್ಕೃತವು ಪ್ರಾಕೃತದಿಂದ (ಪ್ರಾಕೃತ ಇದರರ್ಥ; ಪ್ರಕೃತಿಸಹಜವಾದದ್ದು, ಆಡುಮಾತು. natureದಿಂದ ಹುಟ್ಟಿದ natural) ಹುಟ್ಟಿದೆಯೇ ಹೊರತು, ಪ್ರಾಕೃತವು ಸಂಸ್ಕೃತದಿಂದ ಹುಟ್ಟಿಲ್ಲ. ಗ್ರಂಥಭಾಷೆಯಿಂದ ಆಡುನುಡಿಯು ಹುಟ್ಟುವುದೋ, ಆಡುನುಡಿಯಿಂದ ಗ್ರಾಂಥಿಕ ಭಾಷೆ ಹುಟ್ಟುವುದೋ ಎನ್ನುವುದನ್ನು ಪ್ರಾಜ್ಞರು ತಿಳಿದೇ ಇದ್ದಾರೆ"

ಪ್ರಾಕೃತ-ಸಂಸ್ಕೃತಗಳ ಗೂಡಿಗೆ ಕೈಯಿಕ್ಕುವ ಮೊದಲು, ಮೇಲಿನ ಅಭಿಪ್ರಾಯದ ಕೊನೆಯ ವಾಕ್ಯಕ್ಕೆ ಉತ್ತರಿಸಿಬಿಡುತ್ತೇನೆ - ಅದು ಸರಳ.  ಗ್ರಂಥಭಾಷೆಯಿಂದ ಆಡುನುಡಿ ಹುಟ್ಟುವುದೋ ಆಡುನುಡಿಯಿಂದ ಗ್ರಾಂಥಿಕಭಾಷೆ ಹುಟ್ಟುವುದೋ?  ಗ್ರಂಥಭಾಷೆಯಿಂದ ಆಡುನುಡಿ ಹುಟ್ಟುವುದೆಂಬುದನ್ನು ಯಾರೂ ಒಪ್ಪತಕ್ಕದ್ದಲ್ಲ, ಕಾರಣ ಸ್ಪಷ್ಟವಾಗಿಯೇ ಇದೆ - ಏಕೆಂದರೆ ಅಕ್ಷರ ಬರದವರೂ ಭಾಷೆಯನ್ನು ಮಾತಾಡುತ್ತಾರೆ, ಇದರಲ್ಲಿ ಶಂಕೆಯಿಲ್ಲ.  ಆದರೆ ಆಡುನುಡಿಯಿಂದ ಗ್ರಾಂಥಿಕಭಾಷೆ ಹುಟ್ಟುವುದೆಂಬುದೂ ಅತಿವಾದವೇ.  ಏಕೆಂದರೆ ಆಡುನುಡಿಗಳ ಹಲವು ಪ್ರಭೇದಗಳಿರುತ್ತವೆ, ಅವುಗಳಿಂದ ನೇರವಾಗಿ ಗ್ರಂಥಭಾಷೆ ಹುಟ್ಟುವುದಿಲ್ಲ, ಹಾಗೆ ಹುಟ್ಟಿದರೆ ಒಂದೊಂದು ಆಡುನುಡಿಯ ಪ್ರಭೇದಕ್ಕೂ ಒಂದೊಂದು ಗ್ರಂಥಭಾಷೆಯಿರಬೇಕಾಗುತ್ತದೆ.  ಆದರೆ ವಸ್ತುಸ್ಥಿತಿ ಹಾಗಿಲ್ಲವಲ್ಲ.  ಆದ್ದರಿಂದ ಆಡುನುಡಿಗೂ ಗ್ರಂಥಭಾಷೆಗೂ ಮೂಲವಾದ ಭಾಷಾರೂಪವೊಂದು ಇರಲೇಬೇಕು.  ಒಂದುಕಡೆ, ಆ ಮೂಲರೂಪವೇ ಹಲವು ಪ್ರದೇಶಗಳಲ್ಲಿ ಬೇರೆಬೇರೆ ರೀತಿ ಸವೆಸವೆದು ಬೇರೆಬೇರೆಯ ಭಾಷಾಪ್ರಭೇದಗಳಾಗುತ್ತದೆ (ಇವು ಆಡುನುಡಿಗಳು), ಮತ್ತೆ ಅದೇ ಮೂಲರೂಪವನ್ನೇ ಪರಿಶೋಧಿಸಿ ಅದು ಅನುಸರಿಸುವ ವ್ಯಾಕರಣನಿಯಮಗಳನ್ನು ಸೂತ್ರೀಕರಿಸಿದಾಗ ಗ್ರಂಥಭಾಷೆಯ ಉದ್ಭವವಾಗುತ್ತದೆ.  ಇದರ ಅಗತ್ಯವಾದರೂ ಏನೆಂದರೆ, ಅಕ್ಷರರೂಪದಲ್ಲಿರುವ ಭಾಷೆಯು ಮುಖಭಾವ, ದೇಹದ ಚಲನೆ, ಧ್ವನಿಯ ಏರಿಳಿತಗಳ ಸಹಾಯವಿಲ್ಲದೇ ಕೇವಲ ತನ್ನಿಂತಾನೇ ಸಂವಹನಗೊಳ್ಳಬೇಕಿರುವುದರಿಂದ ಅದು ಹೆಚ್ಚು ನಿಖರವಾಗಿ, ಸಂದೇಹಕ್ಕೆಡೆಯಿಲ್ಲದಂತಿರಬೇಕಾಗುತ್ತದೆ.  ಇದು ಸಾಧ್ಯವಾಗಬೇಕೆಂದರೆ ಭಾಷೆಯು ಯಾವ ನಿಯಮಗಳನ್ನು ಅನುಸರಿಸುತ್ತದೆಂಬುದರ ಸ್ಪಷ್ಟತೆಯೂ, ಬಳಕೆಯಲ್ಲಿ ಕೂಡಿದ ಮಟ್ಟಿಗೂ ಏಕರೂಪತೆಯೂ ಅತ್ಯಗತ್ಯವಾಗುತ್ತದೆ.  ಆದ್ದರಿಂದಲೇ ಗ್ರಂಥಭಾಷೆಗೆ ಆಡುಮಾತಿನಲ್ಲಿಲ್ಲದ ಒಂದು ಔಪಚಾರಿಕತೆ, ವ್ಯಾಕರಣಬದ್ಧತೆ ಇರುತ್ತದೆ.  ಆದರೆ ಗ್ರಂಥಭಾಷೆ ಮತ್ತು ವಿವಿಧ ಆಡುನುಡಿಗಳು ಒಂದೇ ಮೂಲರೂಪದಿಂದ ಹೊಮ್ಮಿದ್ದೆಂಬುದನ್ನು ಗಮನದಲ್ಲಿಡಬೇಕು. 

ಇದೇ ಜಾಡನ್ನನುಸರಿಸಿ ಈಗ ಚರ್ಚೆಯನ್ನು ಮುಂದುವರೆಸೋಣ. ಪ್ರಾಕೃತ ಮೊದಲು, ಸಂಸ್ಕೃತ ಆಮೇಲೆ ಎಂಬ ಮಾತು ಬೇರೆಯದೇ ಚರ್ಚೆ - ಯಾವಯಾವ ಪ್ರಾಕೃತಗಳು ಯಾವಯಾವಾಗ ಹುಟ್ಟಿದುವು, ಸಂಸ್ಕೃತ ಹುಟ್ಟಿದ್ದು ಯಾವಾಗ ಇತ್ಯಾದಿ - ಆದರೆ ಅದು ಇಲ್ಲಿನ ಚರ್ಚೆಯ ವಿಷಯವಲ್ಲ; ಇಲ್ಲಿ ನಾವು ಚರ್ಚಿಸುವುದು ಪ್ರಾಕೃತದಿಂದ ಸಂಸ್ಕೃತ ಹುಟ್ಟಿತೋ ಸಂಸ್ಕೃತದಿಂದ ಪ್ರಾಕೃತವೋ ಎಂಬ ಬಗ್ಗೆ ಮಾತ್ರ.

ಮೊದಲಿಗೆ, ಪ್ರಾಕೃತ-ಸಂಸ್ಕೃತ ಎಂಬ ಹೆಸರಿನ ಒಂದು ಅರ್ಥವನ್ನಷ್ಟೇ ಹಿಡಿದು ಭಾಷಾಮೂಲದ ವ್ಯಾಖ್ಯಾನ ಮಾಡುವುದು ಸರಿಯಲ್ಲ.  ಪ್ರಾಕೃತ = ಪ್ರಕೃತಿಯಿಂದ ಹುಟ್ಟಿದ್ದು ಎಂಬ ಅರ್ಥವನ್ನು ಹಿಡಿದರೆ, ಅದನ್ನು ಎಷ್ಟು ಮೂಲಕ್ಕಾದರೂ ಕೊಂಡೊಯ್ಯಬಹುದು - ಉದಾಹರಣೆಗೆ ಗಾಳಿ ಸುಯ್ಯನೆ ಬೀಸುತ್ತದೆ, ಗಿಡಮರಗಳು ಸರ್ರಬರ್ರನೆ ಆಡುತ್ತವೆ, ನದಿ ಜುಳುಜುಳು ಹರಿಯುತ್ತದೆ, ಪಕ್ಷಿಗಳು ಚಿಲಿಪಿಲಿಗುಟ್ಟುತ್ತವೆ, ನಾಯಿ ಭೌಗುಟ್ಟುತ್ತದೆ, ಹುಲಿ 'ಗರ್'ಜಿಸುತ್ತದೆ - ಇವೆಲ್ಲ ಪ್ರಾಕೃತಿಕಶಬ್ದಗಳೇ.  ಪ್ರಕೃತಿಯದೇ ಒಂದು ಭಾಗವಾದ ಮಾನವ ಕೂಡ ತನ್ನ ವಿಶಿಷ್ಟವಾದ ಧ್ವನಿಪೆಟ್ಟಿಗೆಯ ಸಹಾಯದಿಂದ ಸಾವಿರಾರು ಧ್ವನಿಗಳನ್ನು ಹೊರಡಿಸಬಲ್ಲ, ಇವೆಲ್ಲದರ 'ಭಾಷಾರೂಪ' ಪ್ರಾಕೃತ.  ಹೀಗೆಂದುಬಿಟ್ಟರೆ ಪ್ರಪಂಚದ ಎಲ್ಲ ಮೂಲಭಾಷೆಗಳೂ ಪ್ರಾಕೃತಗಳೇ; ಅವುಗಳನ್ನು ಹಿಡಿದು ಸಂಸ್ಕರಿಸಿ ವ್ಯಾಕರಣದ ಚೌಕಟ್ಟಿಗಳವಡಿಸಿಬಿಟ್ಟರೆ ಅಂತಹ ಎಲ್ಲ ಭಾಷೆಗಳೂ ಸಂಸ್ಕೃತವೇ; ಆ ದೃಷ್ಟಿಯಿಂದ ನಮ್ಮ ಕೊಳ್ಳೇಗಾಲದ ಕನ್ನಡ, ಕುಂದಾಪ್ರಕನ್ನಡ, ಹವಿಗನ್ನಡ ಇವೆಲ್ಲವೂ ಪ್ರಾಕೃತಗಳೆಂದೂ, ಅವುಗಳ ಆಧಾರದ ಮೇಲೇ ರೂಪಿತವಾದ ಮೈಸೂರು, ಮಂಗಳೂರು, ಧಾರವಾಡ ಕನ್ನಡಗಳು ಅರೆಸಂಸ್ಕೃತವೆಂದೂ, ಅವುಗಳನ್ನು ಹಿಡಿದು ವ್ಯಾಕರಣಬಂಧಕ್ಕೊಳಪಡಿಸಿದ ಗ್ರಾಂಥಿಕ ಕನ್ನಡವೇ ಸಂಸ್ಕೃತವೆಂದೂ ಕರೆಯಬೇಕಾಗುತ್ತದೆ.  ಆದರೆ ವಸ್ತುತಃ, ಕನ್ನಡವು ಸಂಸ್ಕೃತವಲ್ಲ, ಅಲ್ಲವೇ? ಎರಡೂ ಬೇರೆಬೇರೆ ಭಾಷೆಗಳು!

ಜೊತೆಗೆ ಪ್ರಾಕೃತ=ಪ್ರಕೃತಿಯಿಂದ ಮಾಡಲ್ಪಟ್ಟದ್ದು ಎಂಬ ವ್ಯಾಖ್ಯಾನವನ್ನಿಟ್ಟುಕೊಂಡರೆ ಇನ್ನೆಷ್ಟು ಗಲಿಬಿಲಿಗಳುಂಟಾಗುತ್ತವೆ ನೋಡೋಣ.

ನಮ್ಮಲ್ಲಿ ಅನೇಕರು ತಿಳಿದಿರಬಹುದಾದಂತೆ ಪ್ರಾಕೃತವೆಂಬುದು "ಒಂದು" ಭಾಷೆಯಲ್ಲ - "ಪಲವುಂ ಕನ್ನಡಂಗಳ್" ಎಂಬಂತೆ ಪಲವುಂ ಪ್ರಾಕೃತಂಗಳ್ ಇವೆ - ಶೌರಸೇನೀ, ಪೈಶಾಚೀ, ಅಪಭ್ರಂಶ, ಮಾಗಧೀ, ಅರ್ಧಮಾಗಧೀ, ವೈದರ್ಭೀ (ಮಹಾರಾಷ್ಟ್ರೀ), ಜೈನ, ಪಾಲಿ ಹೀಗೆ.  ಇವೆಲ್ಲವೂ ತಮ್ಮದೇ ವಿಶಿಷ್ಟತೆಯನ್ನು ಹೊಂದಿರುವವಾದರೂ ಇವುಗಳ ನಡುವಿನ ಸಾಮ್ಯವೂ ಕಡೆಗಣಿಸಲಾಗದಂಥದ್ದು - ಉಚ್ಚಾರಣೆ, ವ್ಯಾಕರಣ, ಪದಸಂಪತ್ತು ಮೊದಲಾದುವುಗಳಲ್ಲಿ - ಈ ಸಾಮ್ಯ ತಮಿಳು-ಕನ್ನಡಗಳ ಸಾಮ್ಯಕ್ಕಿಂತ ಹತ್ತಿರದ್ದು, ಧಾರವಾಡ-ಮೈಸೂರು ಕನ್ನಡಗಳ ಸಾಮ್ಯಕ್ಕಿಂತ ದೂರದ್ದು.  ಆದ್ದರಿಂದ ಇವು ಸೋದರಭಾಷೆಗಳೋ, ಒಂದೇ ಭಾಷೆಯ ಪ್ರಭೇದಗಳೋ ಯಾರ ಊಹೆಗಾದರೂ ಬಿಟ್ಟದ್ದು.  ಜೊತೆಗೆ ಈ ಪ್ರಾಕೃತಗಳನ್ನಾಡುವ ಪ್ರದೇಶಗಳು ಒಂದರಿಂದೊಂದು ಬಹುದೂರದವೆಂಬುದನ್ನು ಗಮನದಲ್ಲಿಡಿ - ಶೌರಸೇನೀ ಉತ್ತರಪ್ರದೇಶದ್ದಾದರೆ, ವೈದರ್ಭೀ ಮಹಾರಾಷ್ಟ್ರದ್ದು.  ಎಲ್ಲವೂ ಒಂದಿನ್ನೊಂದರ ಪ್ರಭಾವವಿಲ್ಲದೇ 'ಪ್ರಾಕೃತಿಕ'ವಾಗಿಯೇ ಹುಟ್ಟಿದವೆನ್ನುವುದಾದರೆ, ಅವುಗಳ ನಡುವಣ ಅಚ್ಚರಿಗೊಳಿಸುವ ಸಾಮ್ಯವನ್ನು ಹೇಗೆ ವಿವರಿಸುತ್ತೀರಿ?  ಭಾಷೆಗಳ ನಡುವೆ ಕೊಡುಕೊಳ್ಳುವಿಕೆ, ಒಂದು ಪ್ರದೇಶದಿಂದ ಮತ್ತೊಂದಕ್ಕೆ ಜನರ ವಲಸೆ ಇದರಿಂದ ಭಾಷೆಗಳು ಪರಸ್ಪರ ಪ್ರಭಾವಿತವಾಗುವುದು ಸಾಮಾನ್ಯ, ಒಪ್ಪೋಣ.  ಆದರೆ ಅವು ಭಾಷೆಯೊಂದನ್ನು ಎಷ್ಟೇ ಅತಿಯಾಗಿ ಪ್ರಭಾವಿಸಿದರೂ ಭಾಷೆಯ ಹಂದರವನ್ನೇ ಬದಲಿಸಿಬಿಡುವುದಿಲ್ಲ, ಅಲ್ಲವೇ?  ಈಗ, ಕನ್ನಡಿಗನಿಗೆ ತಮಿಳು ಅರ್ಥವಾಗುವುದಿಲ್ಲ, ತಮಿಳನಿಗೆ ಕನ್ನಡ ಅರ್ಥವಾಗುವುದಿಲ್ಲ, ಎರಡೂ ಬೇರೆಬೇರೆಯ ಭಾಷೆಗಳು.  ಆದರೆ ನೀವು ಕಾಲದಲ್ಲಿ ಹಿಂದುಹಿಂದಕ್ಕೆ ಪಯಣಿಸಿದಂತೆ ತಮಿಳು ಕನ್ನಡಗಳ ಭೇದಗಳು ಕಡಿಮೆಯಾಗುವುದನ್ನು ಗಮನಿಸಬಹುದು.  ಆದ್ದರಿಂದಲೇ ತಮಿಳು ಕನ್ನಡಗಳೆರಡೂ ಒಂದೇ ಭಾಷಾಕುಟುಂಬಕ್ಕೆ ಸೇರಿದುವೆಂದೂ, ಮೂಲಮಾತೃಕೆಯಾದ ಒಂದು ದ್ರಾವಿಡಭಾಷೆಯಿಂದ ಕವಲೊಡೆದುವೆಂದೂ ಭಾಷಾಶಾಸ್ತ್ರಜ್ಞರು ಒಪ್ಪಿದ್ದಾರಲ್ಲವೇ?  ಇದೇ ಮಾತು ಈ ಪ್ರಾಕೃತಗಳಿಗೂ ಅನ್ವಯಿಸುತ್ತವೆ.  ಹಾಗಾದರೆ, ಈ ಎಲ್ಲ ಪ್ರಾಕೃತಗಳಿಗೂ ಮೂಲಮಾತೃಕೆಯೊಂದಿದೆಯೆಂದಮೇಲೆ, ಈ ಒಂದೊಂದು ಪ್ರಾಕೃತವೂ ಪ್ರಕೃತಿಯಿಂದ ಸ್ಥಳೀಯವಾಗಿಯೇ ಮಾಡಲ್ಪಟ್ಟದ್ದು ಎನ್ನುವ ವಾದ ಬಿದ್ದುಹೋಗುತ್ತದೆ ತಾನೆ?  ಹಾಗಿದ್ದರೆ ಅದಕ್ಕೆ 'ಪ್ರಾಕೃತ' (ಪ್ರಕೃತಿಯಿಂದ ಮಾಡಲ್ಪಟ್ಟದ್ದು) ಎಂದೇಕೆ ಕರೆಯುತ್ತಾರೆ?  ಈ ಪ್ರಶ್ನೆ ಏಕೆ ಬರುತ್ತಿದೆಯೆಂದರೆ, ಪ್ರಾಕೃತ = ಪ್ರಕೃತಿಯಿಂದ ಮಾಡಲ್ಪಟ್ಟದ್ದು ಎನ್ನುವ ವ್ಯಾಖ್ಯೆಯನ್ನು ನಾವು ಹಿಡಿದಿರುವುದರಿಂದ.  ಅದು ಈ ಸಂದರ್ಭಕ್ಕೆ ಹೊಂದುವಂಥದ್ದೇ ಅಲ್ಲ.  ಪ್ರಕೃತ = ಮಾಡಲ್ಪಟ್ಟ, ಇರುವ ಇತ್ಯಾದಿ; ಪ್ರಾಕೃತ = ಪ್ರಕೃತದಲ್ಲಿ ಬಳಕೆಯಲ್ಲಿರುವುದು - ಇದು ಸರಿಯಾದ ವ್ಯಾಖ್ಯಾನ.  ಸಂಸ್ಕೃತ-ಪ್ರಾಕೃತ ಈ ಜೋಡಿಯ ಸಂದರ್ಭದಲ್ಲಿ ಹೇಳುವುದಾದರೆ ('ಸಂಸ್ಕೃತ'ದ ವಿಷಯ ಆಮೇಲೆ ನೋಡೋಣ), ಪ್ರಕೃತದಲ್ಲಿ ಬಳಕೆಯಲ್ಲಿರುವ ಭಾಷಾಪ್ರಭೇದಗಳೇ ಪ್ರಾಕೃತಗಳು (ಎಂದರೆ ಇವುಗಳ ಮೂಲರೂಪ ಹೇಗೋ ಇತ್ತು, ಆದರೆ ಇವತ್ತು ಬಳಕೆಯಲ್ಲಿರುವುದು ಹೀಗೆ)

ಈ ವಿವಿಧ ಪ್ರಾಕೃತಗಳ ಪರಸ್ಪರ ಸಾಮ್ಯವಿರಲಿ, ಪ್ರಾಕೃತ-ಸಂಸ್ಕೃತದ ನಡುವಣ ಸಾಮ್ಯವನ್ನೊಮ್ಮೆ ಗಮನಿಸಿ.  ಉದಾಹರಣೆಗೆ ಈ ಕೆಳಗಿನ ಪದ್ಯವನ್ನೊಮ್ಮೆ ನೋಡೋಣ:

ಭವಭೂಇಜಲಹಿಣಿಗ್ಗಯಕವ್ವಾಮಯರಸಕಣಾ ಇವಾ ಫುರಂತಿ
ಜಸ್ಸ ವಿಸೇಸಾ ಅಜ್ಜವಿ ವಿಯಡೇಸು ಕಹಾಣಿವೇಸೇಸು||

ಇದು ವಾಕ್ಪತಿರಾಜನ "ಗಉಡವಹೋ" (ಸಂ. ಗೌಡವಧಾ) ಎಂಬ ಪ್ರಾಕೃತಕಾವ್ಯದಲ್ಲಿ ಬರುವ ಭವಭೂತಿಕವಿಯ ಪ್ರಶಂಸೆ.  "ಭವಭೂತಿಯೆಂಬ ಜಲಧಿಯನ್ನು ಕಡೆದಾಗ ಸ್ಫುರಿಸಿದ ಕಾವ್ಯಾಮೃತರಸದ ಕೆಲವು ಕಣಗಳು ನನ್ನ ಈ ಕಥಾನಿವೇಶದಲ್ಲಿ ಇಂದಿಗೂ ಪ್ರಕಟಗೊಳ್ಳುತ್ತವೆ" ಇದು ಇದರ ಸ್ಥೂಲಾರ್ಥ, ವಾಕ್ಪತಿರಾಜನು ಭವಭೂತಿಯನ್ನು ಸ್ಮರಿಸಿಕೊಳ್ಳುವ ರೀತಿ.  ನಮಗೆ ಈ ಭಾಷೆಯ ಪರಿಚಯವಿಲ್ಲದಿದ್ದರೂ, ಸಂಸ್ಕೃತದ ಅಲ್ಪಪರಿಚಯವಾದರೂ ಇದ್ದವರಿಗೆ ಈ ಪದ್ಯವನ್ನು ಓದಿದಾಗ ತೀರ ಅಪರಿಚಿತವೆಂದೇನು ಅನ್ನಿಸುವುದಿಲ್ಲ - ಪದಗಳು ವಿಚಿತ್ರವೆನಿಸಬಹುದು, ಆದರೆ ಅದರ ಲಯ, ಶೈಲಿ, ವ್ಯಾಕರಣ ಇವಾವುವೂ ಅಪರಿಚಿತವೆನಿಸುವುದಿಲ್ಲ.  ಈಗ ಮೇಲಿನ ಪದ್ಯದ ಸಂಸ್ಕೃತ ಅನುವಾದವನ್ನೇ ನೋಡಿಬಿಡೋಣ:

ಭವಭೂತಿಜಲಧಿನಿರ್ಗತಕಾವ್ಯಾಮೃತರಸಕಣಾ ಇವ ಸ್ಫುರಂತಿ
ಯಸ್ಯ ವಿಶೇಷಾ ಅದ್ಯಪಿ ವಿಕಟೇಷು ಕಥಾನಿವೇಶೇಷು||

ಎಷ್ಟು ವ್ಯತ್ಯಾಸವಿದೆ?  ಸಂಸ್ಕೃತದ ಭವಭೂತಿ ಇಲ್ಲಿ ಭವಭೂಇ ಆದ (ಕೆಲವು ಪ್ರಾಕೃತಗಳಲ್ಲಿ ಬವಬೂಯಿ), ಜಲಧಿಯು ಜಲಹಿ ಆಯಿತು (ಕೆಲವು ಪ್ರಾಕೃತಗಳಲ್ಲಿ ಜಳಹಿ), ನಿರ್ಗತವು ಣಿಗ್ಗಯವಾಯಿತು, ಅದ್ಯಪಿ > ಅಜ್ಜವಿ; ಕಥಾನಿವೇಶ > ಕಹಾಣಿವೇಸ - ಹೀಗೆ ರೂಪಗಳು ವ್ಯತ್ಯಾಸವಾದುವೇ ವಿನಾ ಉಳಿದದ್ದೆಲ್ಲವೂ ಹಾಗೇ ಇವೆಯಲ್ಲ.

ಹಾಗಿದ್ದರೆ ಸಂಸ್ಕೃತಪ್ರಾಕೃತಗಳೆರಡಕ್ಕೂ ಹೊಕ್ಕುಳಬಳ್ಳಿಯ ಸಂಬಂಧವಿದೆಯೆಂದಂತಾಯಿತಲ್ಲವೇ?  ಯಾವುದರಿಂದ ಯಾವುದು ಹುಟ್ಟಿತು?  ಪ್ರಾಕೃತ = ಪ್ರಕೃತಿಯಿಂದ ಮಾಡಲ್ಪಟ್ಟಿದ್ದು, ಸಂಸ್ಕೃತ = ಅದನ್ನು ಸಂಸ್ಕರಿಸಿದ್ದು ಎನ್ನುವ ವ್ಯಾಖ್ಯೆಯ ಆಧಾರದ ಮೇಲೆ, "ಪ್ರಾಕೃತವೇ ಮೊದಲು, ಅದರಿಂದ ಬಂದದ್ದು ಸಂಸ್ಕೃತ" ಎಂದು ಇದುವರೆಗೆ ವಾದಿಸುತ್ತಿದ್ದೆವು.  ಆದರೆ ಪ್ರಾಕೃತವೆಂಬುದರ ವ್ಯಾಖ್ಯೆ ಹಾಗಲ್ಲವೆಂಬುದನ್ನು ಮೇಲೇ ನೋಡಿದೆವಲ್ಲ - ಪ್ರಾಕೃತವೆಂದರೆ ಪ್ರಕೃತದಲ್ಲಿ ಬಳಕೆಯಲ್ಲಿರುವುದೆಂದಷ್ಟೇ ಅರ್ಥ, ಆದಿಯಿಂದಲೂ (Natural ಆಗಿ) ಹೀಗೇ ಇತ್ತಂದಲ್ಲ.  ಸರಿ, ಪ್ರಾಕೃತವೆಂಬುದರ ವ್ಯಾಖ್ಯೆ ಹೇಗಾದರೂ ಇರಲಿ, ಸಂಸ್ಕೃತವು ಪ್ರಾಕೃತದಿಂದಲೇ ಹುಟ್ಟಿಲ್ಲವೆಂದು ಹೇಗೆ ಹೇಳುತ್ತೀರಿ?  ಪ್ರಾಕೃತವೆಂದರೆ ಸದ್ಯ ಬಳಕೆಯಲ್ಲಿರುವುದು ಎಂದಿರಬಹುದು, ಆದರೆ ಸಂಸ್ಕೃತವೆಂದರೆ "ಸಂಸ್ಕರಿಸಲ್ಪಟ್ಟ ಭಾಷೆ" ಎಂಬ ಅರ್ಥವಂತೂ ಇದೆಯಲ್ಲ - ಪ್ರಾಕೃತವನ್ನು 'ಸಂಸ್ಕರಿಸಿ' ಪಡೆದ ಭಾಷೆಯೇ ಸಂಸ್ಕೃತ ಎಂದು ಇನ್ನೂ ವಾದಿಸಬಹುದು.  ಹೀಗೆ ವಾದ ಹೂಡುವಾಗ ಭಾಷೆಯ ಬೆಳವಣಿಗೆಯ ಸಹಜ ಹರಿವನ್ನು ಗಮನಸಲ್ಲಿಡಬೇಕಾಗುತ್ತದೆ.  ಈಗ ನೋಡಿ, ನಿರ್ಗತ-ಣಿಗ್ಗಯ ಇವುಗಳಲ್ಲಿ ಯಾವುದು ಕ್ಲಿಷ್ಟ, ಯಾವುದು ಸರಳ?  ಸ್ಫುರಂತಿ-ಪುರಂತಿ ಇವುಗಳ ನಡುವೆ?  ಹಾಗೆಯೇ ವಿಶೇಷಾ-ವಿಸೇಸಾ, ವಿಕಟ-ವಿಯಡ.  ಈ ಜೋಡಿಗಳಲ್ಲಿ ಎರಡನೆಯ ಪದವೇ ಉಚ್ಚಾರಣೆಗೆ ಸುಲಭವಲ್ಲವೇ?  ಸರಳವಾದ ಕನ್ನಡದ ಉದಾಹರಣೆಯನ್ನೇ ಕೊಡುವುದಾದರೆ, "ನಾನು ಹೋಗುತ್ತೇನೆ" ಎನ್ನುವುದು ಸರಳವೋ, "ನಾ ವೊಯ್ತಿನಿ" ಎನ್ನುವುದೋ?  "ನಾ ವೊಯ್ತಿನಿ" ಎನ್ನುವುದು ಸರಳ.  "ನಾನು ಹೋಗುತ್ತೇನೆ" ಎನ್ನುವುದನ್ನು ಉಚ್ಚಾರಣೆಯ ಸೌಲಭ್ಯಕ್ಕೆ ತಕ್ಕಂತೆ "ನಾ ವೊಯ್ತಿನಿ" ಎಂದು ಮಾಡಿಕೊಂಡಿತು ನಾಲಿಗೆ.  ಎಂದ ಮೇಲೆ ಮೊದಲಿದ್ದದ್ದು ಯಾವುದು?  ನಾನು ಹೋಗುತ್ತೇನೆ ಎಂಬುದೋ ನಾ ವೊಯ್ತಿನಿ ಎಂಬುದೋ?  ನಾ ವೊಯ್ತಿನಿ ಎಂಬುದೇ ಮೊದಲಿದ್ದದ್ದು, ಅದನ್ನು 'ಸಂಸ್ಕರಿಸಿ' ನಾನು ಹೋಗುತ್ತೇನೆ ಎಂಬ ಮಾತು ಕಟ್ಟಲ್ಪಟ್ಟಿತು ಎಂಬ ವಾದವು ಎಷ್ಟು ಸಹಜವೆನಿಸಬಹುದು?  ಸದ್ಯಕ್ಕೆ, ವಾದಕ್ಕಾಗಿ ಈ ವಾದವನ್ನೇ ಒಪ್ಪೋಣ, ನಾ ವೊಯ್ತಿನಿ ಎಂಬುದೇ ಮೊದಲಿದ್ದುದು, ನಾನು ಹೋಗುತ್ತೇನೆ ಎಂಬುದು ಅದರ 'ಸಂಸ್ಕರಿಸಿದ' ರೂಪ.  ಈ ವಾದದಿಂದ ಹೊರಡುವ ತೊಡಕುಗಳನ್ನು ನೋಡಿ.  "ನಾ ವೊಯ್ತಿನಿ" ಎನ್ನುವುದು ನಮ್ಮ ಮೈಸೂರು ಕಡೆ ನಿರ್ದಿಷ್ಟ ಸಮುದಾಯಗಳ ನಡುವಷ್ಟೇ ಇರುವ ಬಳಕೆ - ಇತರರು "ನಾ ಹೋಗ್ತೀನಿ", "ನಾ ಹೋಗ್ತೇನೆ" ಎಂದೂ ಹೇಳುತ್ತಾರೆ.  ಮಂಗಳೂರು/ಕುಂದಾಪುರದ ಕಡೆ "ನಾ ಹೋಗ್ತೆ/ಹೋಗ್ತ್ನೆ/ಹೋತ್ನೆ" ಎನ್ನುತ್ತಾರೆ (ಹಾಗೆಂದುಕೊಂಡಿದ್ದೇನೆ, ಆ ಕಡೆಯವರು ತಿದ್ದಬಹುದು), ಕೊಯಮತ್ತೂರಿನ ಕಡೆಯವರು "ನಾ ಹೋಪೆ" ಎನ್ನುತ್ತಾರೆ, ಧಾರವಾಡದ ಕಡೆ "ನಾ ಹೊಕ್ಕೀನಿ" ಎನ್ನುತ್ತಾರೆ (ಮತ್ತೆ, ತಪ್ಪಿದ್ದರೆ ತಿದ್ದಬಹುದು); ಕೆಲವು ಬ್ರಾಹ್ಮಣಪಂಗಡಗಳಲ್ಲಿ "ನಾ ಹೋಗ್ತೇನು" ಎಂದೂ ಹೇಳುತ್ತಿದ್ದರು (ಕೈಲಾಸಂ ಈ ರೂಪವನ್ನು ತಮ್ಮ ನಾಟಕಗಳಲ್ಲಿ ಬಳಸಿದ್ದಾರೆ ಕೂಡ) ಈಗ ವೊಯ್ತಿನಿ, ಹೋಗ್ತೀನಿ, ಹೋಗ್ತೇನೆ, ಹೋಗ್ತೇನು, ಹೋಗ್ತೆ, ಹೋಗ್ತ್ನೆ, ಹೋತ್ನೆ, ಹೋಪೆ, ಹೊಕ್ಕೀನಿ ಇವುಗಳಲ್ಲಿ ಯಾವುದು ಮೂಲರೂಪ, ಯಾವುದರಿಂದ ಯಾವುದು ಹುಟ್ಟಿತು, ಈ ಒಂದೊಂದು ರೂಪವೂ ಬಂದದ್ದಾದರೂ ಹೇಗೆ?  ಈ ಒಂದೊಂದು ರೂಪವೂ "ಹೋಗುತ್ತೇನೆ" ಎಂದೇ ಪರಿವರ್ತನೆಗೊಂಡದ್ದಾದರೂ ಹೇಗೆ?  ಹಾಗೆ ಪರಿವರ್ತಿಸಿದ ನಿರ್ದಿಷ್ಟ ವ್ಯಾಕರಣಸೂತ್ರವಾವುದು? (ಹೋಗುತ್ತೇನೆ ಎಂಬುದರಿಂದ ಇವು ಹುಟ್ಟಿದುವು ಎನ್ನುವುದಕ್ಕಾದರೆ ಒಂದೇ ವಿವರಣೆ - ನಾಲಿಗೆಯ ಸೌಲಭ್ಯ), ಆದರೆ ಅವುಗಳಿಂದಲೇ ಇದು ಹುಟ್ಟಿತು ಎನ್ನುವುದಕ್ಕಾದರೆ ನಾಲಿಗೆಯ ಸೌಲಭ್ಯ ಎಂಬ ವಿವರಣೆ ಸಲ್ಲುವುದಿಲ್ಲ, ಹೋಗುತ್ತೇನೆ ಎಂಬುದು ಇವೆಲ್ಲಕ್ಕಿಂತ ಕ್ಲಿಷ್ಟರೂಪ, ಮತ್ತು ನಾಲಿಗೆ ಯಾವಾಗಲೂ ಕ್ಲಿಷ್ಟತೆಯಿಂದ ಸರಳತೆಗೆ ಜಾರುವುದೇ ಹೊರತು, ವಿರುದ್ಧದಿಕ್ಕಿನಲ್ಲಲ್ಲ.  ಅಲ್ಲದೇ ವೊಯ್ತಿನಿ, ಹೋಗ್ತೆ, ಹೋಗ್ತ್ನೆ ಮುಂತಾದುವುಗಳಿಂದ ಹೋಗುತ್ತೇನೆ ಎನ್ನುವ ರೂಪ ಬರಬೇಕಾದರೆ, ಅಲ್ಲಿ ಮುಖ್ಯವಾಗುವುದು ನಾಲಿಗೆಯ ಸೌಲಭ್ಯವಲ್ಲ, ವ್ಯಾಕರಣಬದ್ಧತೆ (ಗ್ರಾಂಥಿಕಭಾಷೆಯಲ್ಲಿ ವ್ಯಾಕರಣವೇ ಮುಖ್ಯವಷ್ಟೇ?).  ಹಾಗಿದ್ದರೆ ಈ ಒಂದೊಂದು ರೂಪದಿಂದಲೂ "ಹೋಗುತ್ತೇನೆ" ಎನ್ನುವ ರೂಪವೇ ಸಿದ್ಧಿಸಬೇಕಾದರೆ ಅಲ್ಲಿ ಬಳಸಿದ ವ್ಯಾಕರಣ ಯಾವುದು?  "ಹೋಗುತ್ತೇನೆ" ಎನ್ನುವುದಕ್ಕಾದರೆ ವ್ಯಾಕರಣದ ವಿವರಣೆಯಿದೆ - ಹೋಗು ಎನ್ನುವ ಧಾತುವಿಗೆ "ತ್ತೇನೆ" ಎನ್ನುವ ಕಾಲಸೂಚಕಪ್ರತ್ಯಯ ಸೇರಿ ಹೋಗುತ್ತೇನೆ ಎಂದಾಯಿತು.  ಹೀಗೇ ಈ ಬಳಕೆಯ ರೂಪಗಳನ್ನು ವಿವರಿಸಲಿಕ್ಕಾಗುತ್ತದೆಯೇ?  ಇದರಿಂದ ಏನು ಸಾಬೀತಾಯಿತು?  ಹೋಗುತ್ತೇನೆ ಎಂಬುದೇ ಮೂಲರೂಪ, ಅದರಿಂದ ಹುಟ್ಟಿದ್ದು ವೊಯ್ತಿನಿ, ಹೋಗ್ತೆ, ಹೋಗ್ತ್ನೆ ಇತ್ಯಾದಿ ರೂಪಗಳು, ಅಲ್ಲವೇ? ಒಂದು ಮೂಲದಿಂದ ಹಲವು ರೂಪಗಳು ಹೊಮ್ಮುವುದು ಸಹಜ, ಆದರೆ ಒಂದೇ ರೂಪಕ್ಕೆ ಹಲವು ಮೂಲಗಳಿರಲಾರವಷ್ಟೇ?  ಜೊತೆಗೆ ನೋಡಿ, ಒಯ್ತಿನಿ ಎನ್ನುವುದು ಹೋಗುತ್ತೇನೆ ಎಂಬುದರ ಬಳಕೆಯ ರೂಪವೂ ಆಗಬಹುದು, ಒಯ್ಯುತ್ತೇನೆ ಎನ್ನುವುದರ ಬಳಕೆಯ ರೂಪವೂ ಆಗಬಹುದು. ಹೀಗಾಗಿ ಒಯ್ತೀನಿ ಎನ್ನುವುದರ ವ್ಯುತ್ಪತ್ತಿಯನ್ನು ಅದೇ ರೂಪದಲ್ಲಿ ವಿವರಿಸುವುದು ಸಾಧ್ಯವೇ ಇಲ್ಲ; ಹೋಗುತ್ತೇನೆ ಮತ್ತು ಒಯ್ಯುತ್ತೇನೆ ಎಂಬ ರೂಪಗಳಲ್ಲೇ ವ್ಯುತ್ಪತ್ತಿಯನ್ನು ವಿವರಿಸಬೇಕು. ಎಂದ ಮೇಲೆ ಯಾವುದು ಮೂಲ?

ಇದೇ ತರ್ಕವನ್ನು ಜಲಧಿ-ಜಲಹಿ/ಜಳಹಿ, ನಿರ್ಗತ-ಣಿಗ್ಗಯ, ಸ್ಫುರಂತಿ-ಪುರಂತಿ, ವಿಶೇಷ-ವಿಸೇಸ, ವಿಕಟ-ವಿಯಡ ಇವುಗಳಿಗೆ ಅನ್ವಯಿಸಿ ನೋಡಿ?  ಎರಡನೆಯ ಪದಗಳಿಂದಲೇ ಮೊದಲಿನವು ಹುಟ್ಟಿದುವೆಂದರೆ, ಅವುಗಳ ವ್ಯುತ್ಪತ್ತಿವಿವರಣೆ, ಬೇರೆಬೇರೆ ಹಲವು ರೂಪಗಳಿಂದ ಒಂದೇ ಸಂಸ್ಕೃತಪದ ಹುಟ್ಟಿದ್ದಾದರೂ ಹೇಗೆ ಮೊದಲಾದ ವಿವರಣೆಗಳು ಬೇಕಲ್ಲವೇ? ಜೋಡಿಯ ಮೊದಲ ಪದಗಳಿಗೆ ವ್ಯುತ್ಪತ್ತಿವಿವರಣೆಯಿದೆ.  ಎರಡನೆಯ ಪದಗಳಿಗೆ ಅಂತಹ ವಿವರಣೆಯಿಲ್ಲ.  ಅವು ಮೊದಲ ಪದಗಳಿಂದ ನಾಲಿಗೆಯ ಸೌಲಭ್ಯಕ್ಕನುಗುಣವಾಗಿ ಹುಟ್ಟಿದವು ಎಂಬುದು ಸ್ಪಷ್ಟವಾಯಿತಲ್ಲವೇ?  ತತ್ಸಮದಿಂದ ಹುಟ್ಟಿದ್ದು ತದ್ಭವವೇ ಹೊರತು ತದ್ಭವದಿಂದಲೇ ತತ್ಸಮವು ಹುಟ್ಟುವುದಿಲ್ಲವಷ್ಟೇ?

ಹಾಗಿದ್ದರೆ ಈಗ ಬಹುಮುಖ್ಯವಾದ ಪ್ರಶ್ನೆಯೇಳುತ್ತದೆ - 'ಸಂಸ್ಕೃತ' ಎಂಬುದು ಸಂಸ್ಕರಿಸಿದ ಭಾಷೆ ತಾನೆ?  "ಪ್ರಾಕೃತದಿಂದ ಸಂಸ್ಕರಿಸಿದ ಭಾಷೆ ಸಂಸ್ಕೃತ" ಎನ್ನುವುದು ಸ್ಪಷ್ಟವಾಗಿಯೇ ಇದೆಯಲ್ಲ.  ಇದಕ್ಕೇನು ಸಮಾಧಾನ?  ಸಮಾಧಾನವಿದೆ.  ಪ್ರಾಕೃತ ಎಂದರೆ ಪ್ರಕೃತಿಜನ್ಯವಾದ ಭಾಷೆಯಲ್ಲ, ಪ್ರಕೃತ ಬಳಕೆಯಲ್ಲಿರುವ ಭಾಷೆ ಎಂಬುದನ್ನು ಮೇಲೆ ನೋಡಿದೆವು.  ಪ್ರಾಕೃತದಿಂದ 'ಸಂಸ್ಕೃತ'ವು ಹುಟ್ಟಲು ಸಾಧ್ಯವಿಲ್ಲ ಎಂಬುದನ್ನೂ ಮೇಲೆಯೇ ನೋಡಿದೆವು.  ಹಾಗಿದ್ದರೆ ಸಂಸ್ಕೃತವು ಹುಟ್ಟಿದ್ದೆಲ್ಲಿಂದ?  ಅದು 'ಸಂಸ್ಕರಿಸಿದ ಭಾಷೆ' ಅಲ್ಲವೇ?  ಖಂಡಿತಾ ಹೌದು, ಆದರೆ ಪ್ರಾಕೃತದಿಂದ 'ಸಂಸ್ಕರಿಸಿ' ಪಡೆದದ್ದಲ್ಲ.  ಸಂಸ್ಕೃತದ ಮೂಲಮಾತೃಕೆ ವೇದಭಾಷೆ (ಗುರುತಿಸುವ ಸೌಲಭ್ಯಕ್ಕಾಗಿ ವೇದಭಾಷೆಯನ್ನು ವೈದಿಕಸಂಸ್ಕೃತವೆಂದೂ, ಅದಲ್ಲದ, ಪಾಣಿನಿಪ್ರಣೀತವಾದ ವ್ಯಾವಹಾರಿಕಸಂಸ್ಕೃತವನ್ನು ಲೌಕಿಕ/ಪಾಣಿನೀಯಸಂಸ್ಕೃತವೆಂದೂ ಕರೆಯುತ್ತೇವೆ, ಆದರೆ ವೇದಭಾಷೆಗೆ ಮೂಲತಃ 'ಸಂಸ್ಕೃತ'ವೆಂಬ ಹೆಸರಿದ್ದಿಲ್ಲ, 'ಸಂಸ್ಕೃತ'ವೆಂಬುದೇನಿದ್ದರೂ ವೇದಭಾಷೆಯನ್ನು ಪರಿಷ್ಕರಿಸಿ, 'ಸಂಸ್ಕರಿಸಿ' ಪಡೆದ ಪಾಣಿನೀಯ ಸಂಸ್ಕೃತ).  ಈ ವೇದಭಾಷೆ ಜನಬಳಕೆಗೆ ಹತ್ತಿರವಾದದ್ದು.  ಮೇಲೆ ಹಲವು ಪ್ರಾಕೃತಗಳನ್ನು ವಿವರಿಸುತ್ತಾ, ಅವಕ್ಕೆ ಮೂಲಮಾತೃಕೆಯೊಂದಿರಬೇಕೆಂದಿದ್ದೆನಲ್ಲವೇ?  ಆ ಮೂಲಮಾತೃಕೆಯೇ ವೇದಭಾಷೆ.  ವೇದಭಾಷೆಯೇ ಬಳಕೆಯಲ್ಲಿ ಸವೆಸವೆದು ವಿವಿಧ ಸ್ಥಳೀಯ ಪ್ರಾಕೃತಗಳಾಗಿ ರೂಪುಗೊಂಡದ್ದು.  ಇದು ಯಾವಾಗ ಸವೆಯಲು ಶುರುವಾಯಿತು, ಯಾವಯಾವಾಗ ಎಲ್ಲೆಲ್ಲಿ ಎಷ್ಟೆಷ್ಟು ಸವೆಯಿತು ಎಂಬುದನ್ನು ಹೇಳಬರುವುದಿಲ್ಲವಷ್ಟೇ?  ಜೊತೆಗೆ ಈ ಪ್ರಾಕೃತಗಳ ಮೂಲಮಾತೃಕೆಯಾದ ವೇದಭಾಷೆಯೇ ಜನಬಳಕೆಗೆ ಹತ್ತಿರವಿದ್ದುದರಿಂದ ಅದರಲ್ಲೂ ಕ್ರಮೇಣ ಸಹಜವಾಗಿಯೇ ಬಳಕೆಯಿಂದುಂಟಾಗುವ ಶೈಥಿಲ್ಯಗಳೂ, 'ಅಪ'ರೂಪಗಳೂ, ನಿರ್ದಿಷ್ಟ ನಿಯಮಗಳಿಗೆ ಕಟ್ಟುಬೀಳದ ಹೊಸಹೊಸ ಪ್ರಯೋಗಗಳೂ ಕಾಲಕ್ರಮದಲ್ಲಿ ಹೇರಳವಾಗಿ ಸೇರಿ, ವೇದಭಾಷೆಯಿಂದಾಚೆಗೂ ಹೊರವಾಗಿ ಬೆಳೆದ ಅಗಾಧವಾದ ವ್ಯಾವಹಾರಿಕಭಾಷೆಯೊಂದು ಪಾಣಿನಿಯ ಕಾಲಕ್ಕಾಗಲೇ ಅಸ್ತಿತ್ವದಲ್ಲಿತ್ತು; ಜೊತೆಗೆ ಇದನ್ನು ವಿವರಿಸುವ ವಿವಿಧ ವ್ಯಾಕರಣಗಳೂ - ಈ ಇವೆಲ್ಲವನ್ನೂ ಸೂತ್ರೀಕರಿಸಿ ನಿಯಮಗಳ ಮೂಲಕ ವಿವರಿಸಿದ್ದು, ನಿಯಮಕ್ಕೆ ಅಳವಡಿಸುವಲ್ಲಿನ ತೊಡಕುಗಳನ್ನು ನಿವಾರಿಸಿ 'ಸಂಸ್ಕರಿಸಿ'ದ್ದು, ತನ್ನ ಕಾಲದಲ್ಲಿ ಬಳಕೆಯಲ್ಲಿದ್ದ ಭಾಷೆಯ ಹಲವು ನಿಯಮಬದ್ಧವಲ್ಲದ ರೂಪಗಳಿಗೆ 'ಸರಿ'ಯಾದ ರೂಪಗಳನ್ನು ಹೇಳಿದ್ದು ಪಾಣಿನಿ.  ಪಾಣಿನಿಪ್ರಣೀತವಾದ, ಪರಿಶೋಧಿಸಲ್ಪಟ್ಟ ಈ ಭಾಷೆಯೇ 'ಸಂಸ್ಕೃತ'ವೆಂದು ಬಳಕೆಗೆ ಬಂತು (ಪಾಣಿನಿಗೂ ಮೊದಲೇ ಹಲವರು ವೈಯಾಕರಣರು ವ್ಯಾಕರಣವನ್ನು ರಚಿಸಿದ್ದಾರಾದರೂ ಪಾಣಿನೀಯವ್ಯಾಕರಣವು ಗಟ್ಟಿಯಾಗಿ ನೆಲೆನಿಂತಿತು)

ಈ ಚರ್ಚೆಯಿಂದ ಸ್ಪಷ್ಟವಾಗಿ ತಿಳಿದುಬರುವ ಅಂಶವೆಂದರೆ, ಹಲವು ಪ್ರಭೇದಗಳನ್ನು ಹೊಂದಿದ ಪ್ರಾಕೃತವೂ, ನಾವಿವತ್ತು ಸಂಸ್ಕೃತವೆಂದು ಕರೆಯುವ ಪಾಣಿನೀಯಸಂಸ್ಕೃತವೂ ವೇದಭಾಷೆಯೆಂಬ ಒಂದೇ ಮೂಲಮಾತೃಕೆಯಿಂದ ಹುಟ್ಟಿದ್ದು.  ಪ್ರಾಕೃತಗಳು ವೇದಭಾಷೆಯ ಆಡುನುಡಿಗಳಾದರೆ, 'ಸಂಸ್ಕೃತ'ವು ವೇದಭಾಷೆಯ ಪರಿಷ್ಕೃತರೂಪ.

ಮುಂದೆ ಈ ಪ್ರಾಕೃತಗಳೇ ಹಲವು ಬೇರೆಬೇರೆ ಭಾಷೆಗಳ ಪ್ರಭಾವಕ್ಕೊಳಗಾಗಿ ಹಲವಾರು ಭಾಷೆಗಳು ಹುಟ್ಟಿಕೊಂಡುವೆಂಬುದು ಬೇರೆಯೇ ವಿಷಯ; ಸದ್ಯಕ್ಕೆ ಇಷ್ಟು ಸಾಕೆನಿಸುತ್ತದೆ.