Wednesday, October 24, 2018

ದೇವೇಗೌಡರಿಗೆ ವಾಲ್ಮೀಕಿಪ್ರಶಸ್ತಿ


ಅಲ್ಲಾ, ಗೌಡರು ಕಾಲಕಾಲಕ್ಕೆ ಹಲವು 'ರಾಮಾಯಣ'ಗಳನ್ನು ಮಾಡಿದ್ದಾರೆ ಇಲ್ಲವೆಂದಲ್ಲ, ತಮ್ಮ ಅರವತ್ತೈದು ವರ್ಷಗಳ ಸುದೀರ್ಘ ರಾಜಕೀಯವೃತ್ತದಲ್ಲಿ ಅವರು ರಚಿಸಿದ ರಾಮಾಯಣದ ಒಟ್ಟು ಮೊತ್ತವೇನು ಕಡಿಮೆಯೇ? - ಎಪಿಕ್ ಪ್ರಮಾಣದ್ದು! ಹಾಗೆಂದ ಮಾತ್ರಕ್ಕೆ, ಈ ಪ್ರಶಸ್ತಿಯನ್ನು ಈ 'ರಾಮಾಯಣ'ಪ್ರತಿಭೆಗಾಗಿ ನೀಡಿದ್ದೆಂದು ನೀವು ಭಾವಿಸಿದ್ದರೆ, ಅಲ್ಲ, ಅಲ್ಲ, ಖಂಡಿತಾ ಅಲ್ಲ. ರಾಜಕೀಯದಲ್ಲೇನು ರಾಮಾಯಣಕ್ಕೆ ಕಡಿಮೆಯೇ - ಇತ್ತೀಚಿನ ಸಮೀಕ್ಷೆಯ ಪ್ರಕಾರ ದಿನಕ್ಕೊಂದು ರಾಮಾಯಣ ಹುಟ್ಟಿಕೊಳ್ಳುತ್ತಿದೆ (ಕ್ಷಣಕ್ಕೊಂದು ಎಂದರೂ ನಡೆದೀತು). ನಮ್ಮ ದೇಶದಲ್ಲಿ ರಾಮಾಯಣದ ಪರಂಪರೆ ಬಹಳ ದೊಡ್ಡದು - ಕಾವ್ಯದಲ್ಲೂ ರಾಜಕೀಯದಲ್ಲೂ. ಹಾಗೆಂದು ಎಲ್ಲಕ್ಕೂ ಪ್ರಶಸ್ತಿ ಕೊಡುತ್ತಾ ಹೋದರೆ ಮುಜರಾಯಿ, ಅಬಕಾರಿ ಎರಡೂ ಇಲಾಖೆಗಳ ಆದಾಯ ಬರಿದಾದೀತು, ಎಷ್ಟೋ ನೌಕರರಿಗೆ ಪಾಕೆಟ್ ಮನಿ ನೀಡಲು ಕಾಸಿಲ್ಲದೇ ಸರ್ಕಾರಕ್ಕೆ ಸರ್ಕಾರವೇ ನಿಮ್ಮ ಮನೆಯ ಮುಂದೆ ಭಿಕ್ಷೆಗೆ ಬಂದು ಕುಳಿತೀತು. ಇನ್ನೆಷ್ಟೆಷ್ಟೋ ದೇವಸ್ಥಾನಗಳು ಮುಜರಾಯಿ ತೆಕ್ಕೆಗೆ ಬಂದಾವು, ಹೆಂಡ ಸಾರಾಯಿ ಚಿನ್ನಕ್ಕಿಂತ ತುಟ್ಟಿಯಾದೀತು, ಮಹಾವಿಪ್ಲವವೇ ಆದೀತು. ಹಾಗೆಲ್ಲಾ ರಾಮಾಯಣಕ್ಕೆ ಪ್ರಶಸ್ತಿ ಕೊಡುವ ಕಾಲ ಯಾವತ್ತೋ ಹೋಯಿತು. ಐನೂರು ವರ್ಷದ ಹಿಂದೆಯೇ ಕುಮಾರವ್ಯಾಸನೇ ಹೇಳಲಿಲ್ಲವೇ "ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ".  ನೆನಪಿಡಿ, ಆತ ಹೇಳಿದ್ದು ಕೇವಲ ರಾಮಾಯಣದ ಕವಿಗಳ ವಿಷಯ. ಇನ್ನು ಮೇಲೆ ಹೇಳಿದ 'ರಾಮಾಯಣ'ಗಳು ಇನ್ನೆನಿತೋ, ಅದರ ಕರ್ತೃಗಳೆನಿತೋ - ಐನೂರು ವರ್ಷವಾದ ಮೇಲೆ ಈಗ ಇನ್ನೂ ಇನ್ನೆನಿತೋ! ಭೂಮಿ ಬಿರಿಯದಿರುವುದು ಹೆಚ್ಚು - ಆಕೆಯ ತಾಳಿಕೆ ಅಮೋಘವಾದದ್ದು. ಹೀಗೆ ಭೂಮಿಗೆ ಭಾರವಾದ ರಾಮಾಯಣದ ಕರ್ತೃಗಳಿಗೆ ಎಲ್ಲಾದರೂ ಪ್ರಶಸ್ತಿ ಕೊಡುವುದುಂಟೇ - ಅದೂ "ರಾಮಾಯಣವನ್ನು ಸುಡಿ" "ರಾಮನಿಗೆ ಚಾವಟಿಯಲ್ಲಿ ಹೊಡೆಯಿರಿ" ಮೊದಲಾದ 'ಭೂಭಾರವನ್ನಿಳಿಸುವ' ಅಭಿಯಾನಗಳು ಜೋರಾಗಿ ನಡೆಯುತ್ತಿರುವ ಈ ಕಾಲದಲ್ಲಿ! ಎಲ್ಲೋ ಭ್ರಾಂತು. ಅದಕ್ಕೇ ಹೇಳಿದ್ದು, ದೇವೇಗೌಡರಿಗೆ ಈ ಪ್ರಶಸ್ತಿ ಸಂದದ್ದು ಅವರ 'ರಾಮಾಯಣ'ಕೃತಿಸರಣಿಗೆ ಅಲ್ಲ, ಅಲ್ಲ, ಖಂಡಿತಾ ಅಲ್ಲ ಎಂದು.
ಹಾಗಿದ್ದರೆ ಕುಶೀಲವರಂತಹ ಇಬ್ಬರು ಮುದ್ದು ಮಕ್ಕಳನ್ನು ಹೆತ್ತುದಕ್ಕೋ? ಅದಕ್ಕೂ ಇರಲಾರದು. ಈ ದೇಶದಲ್ಲಿ ಮಕ್ಕಳ ಸಂಖ್ಯೆಯಂತೂ ರಾಮಾಯಣದ ಕವಿಗಳ ಸಾವಿರಪಟ್ಟು ಹೆಚ್ಚು. ಮಕ್ಕಳ ಹೆತ್ತುದಕ್ಕೆ ಪ್ರಶಸ್ತಿ ಕೊಡಲು ಇದೇನು ಆಸ್ಟ್ರೇಲಿಯಾ ಕೆಟ್ಟುಹೋಯಿತೇ?

ಹಾಗಿದ್ದರೆ ಮತ್ತೇತಕ್ಕೆ ಈ ಪ್ರಶಸ್ತಿ? ಊಹಾಪೋಹಗಳನ್ನು ಪಕ್ಕಕ್ಕಿಡಿ - ಕೆಳಗಿನ ನ್ಯೂಸ್ ಐಟಮ್ ನೋಡಿ - ಈ ಪ್ರಶಸ್ತಿಯನ್ನು ಕೊಡಮಾಡಿದ್ದು "ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿ"ದ್ದಕ್ಕಾಗಿ - ರಾಮಾಯಣಕ್ಕಾಗಿ ಅಲ್ಲ - ವಾಲ್ಮೀಕಿಯೆಂದರೆ ರಾಮಾಯಣವೊಂದನ್ನೇ ಕಾಣುವುದು ನಿಮ್ಮದೇ ದೃಷ್ಟಿದೋಷವೆನ್ನದೇ ವಿಧಿಯಿಲ್ಲ. ಅದಿರಲಿ, ಸ್ವತಃ ರಾಮನಿಂದ ಶೂದ್ರತಪಸ್ವಿಯ ಕೊಲೆ ಮಾಡಿಸಿದ, ಅಸಹಾಯಕ ಹೆಣ್ಣುಮಗಳಾದ ಸೀತೆಯನ್ನು ಗರ್ಭಿಣಿಯೆಂಬುದನ್ನೂ ನೋಡದೇ ಕಾಡಿಗಟ್ಟಿಸಿದ, ದಿಟ್ಟತೆಯಿಂದ 'ಬ್ರಾಹ್ಮಣ್ಯ'ವನ್ನು ತೊರೆದು ಪ್ರಗತಿಪರತೆಯ ದೀಕ್ಷೆತೊಟ್ಟ ರಾವಣೇಶ್ವರನನ್ನೂ ಕೊಲ್ಲಿಸಿದ, ಕಬಂಧ ಮಾರೀಚ ಸುಬಾಹುಗಳೇ ಮೊದಲಾದ ಈ ನೆಲದ ಜನಪ್ರಿಯ ದ್ರಾವಿಡರಾಜರನ್ನು ಬರ್ಬರವಾಗಿ ಕೊಲ್ಲಿಸಿದ, ಪ್ರೇಮಭಿಕ್ಷೆ ಬೇಡಿ ಬಂದ ಶೂರ್ಪಣಖಿಯ ಕಿವಿಮೂಗು ಕೊಯ್ಸಿದ ವಾಲ್ಮೀಕಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದು ಯಾವಾಗ ಎಂದು ನೀವು ಕೇಳಿದರೆ, ಅದು ನಿಮ್ಮ ಅಜ್ಞಾನದ ಪ್ರಶ್ನೆ, ಏಕೆಂದರೆ ಅದು ಕೇವಲ ಕಾವ್ಯ, ಕಟ್ಟುಕತೆ. ಗೊತ್ತಿಲ್ಲವೇ? "ಸೇತುಬಂಧ ಮಾಡಿಸಿದ ರಾಮ ಯಾವ ಯೂನಿವರ್ಸಿಟಿಯಿಂದ ಎಂಜಿನಿಯರಿಂಗ್ ಡಿಗ್ರೀ ಪಡೆದ" ಎನ್ನುವ ದಿವಂಗತ ರಾಜಕಾರಣಿಯೊಬ್ಬರ ಪ್ರಶ್ನೆಗೆ ಪುರಾವೆಯೊದಗಿಸಲು ಇನ್ನೂ ನಮ್ಮಿಂದ ಆಗಿಲ್ಲ. ರಾವಣನಿಗೆ ಹತ್ತು ತಲೆಯಿತ್ತೆಂಬುದೂ ನಂಬಲಾಗದ ವಿಷಯವೇ, ಒಂದು ತಲೆಯೇ ಅಚ್ಚರಿಯ ವಿಷಯವಾದ ಈ ಕಾಲದಲ್ಲಿ.

ಆದ್ದರಿಂದ ರಾಮಾಯಣವು ಸತ್ಯಕತೆಯೆನ್ನುವ ಮೌಢ್ಯಕ್ಕೆ ಬೀಳದಿರಿ (ಮೌಢ್ಯವಿರೋಧಿ ಕಾನೂನು ಜಾರಿಯಲ್ಲಿದೆಯೆಂಬುದನ್ನು ಮರೆಯದಿರಿ). ರಾಮನೆಂಬ ಆರ್ಯರಾಜನ ದುಷ್ಟಗುಣವನ್ನು ಚಿತ್ರಿಸಲು ವಾಲ್ಮೀಕಿ ರಚಿಸಿದ ಕಟ್ಟುಕತೆಯಿದು (ಅಲ್ಲದೇ ಸುಮಾರು ಭಾಗಗಳನ್ನು ಆಮೇಲೆ ಬ್ರಾಮಣರು ಸೇರಿಸಿದರೆಂಬ ವಾದವೂ ಇದೆ). ಆದ್ದರಿಂದ ಇವೆಲ್ಲಕ್ಕೂ ವಾಲ್ಮೀಕಿಯ ಬೆಂಬಲವಿತ್ತೆಂದು ಭಾವಿಸದಿರಿ. ನಿಜವಾದ ಕತೆಯಲ್ಲಿ ಆಮೇಲೆ ನೋಡಿ, ಅದೇ ವಾಲ್ಮೀಕಿ ಅಸಹಾಯಕ ಹೆಣ್ಣುಮಗಳಾದ ಸೀತೆಯನ್ನು ಆಶ್ರಮದಲ್ಲಿರಿಸಿಕೊಂಡು ತಂದೆಯಂತೆ ಪೊರೆಯುತ್ತಾನೆ; ಆಕೆಯ ಮಕ್ಕಳನ್ನು ತಾತನಂತೆ ಸಾಕುತ್ತಾನೆ; ಅವರಿಗೆ ತಾನು ರಚಿಸಿದ ರಾಮಕಥೆಯನ್ನು ಕಲಿಸಿ, ರಾಮನ ಬಳಿಗೇ ಕಳಿಸಿ ಅವನಿಗೆ ಬುದ್ಧಿ ಕಲಿಸುತ್ತಾನೆ. ಹೀಗೆ ವಾಲ್ಮೀಕಿ ಕೇವಲ ತನ್ನ ಜನಾಂಗಕ್ಕಲ್ಲ ಇಡೀ ತುಳಿತಕ್ಕೊಳಗಾದ ಎಲ್ಲರ ಸೆಕ್ಯುಲರ್ ಪ್ರತಿನಿಧಿಯಾಗಿ ನಿಲ್ಲುತ್ತಾನೆ.

ಅದೇನೋ ಸರಿ, ಆದರೆ ವಾಲ್ಮೀಕಿ ಪ್ರಶಸ್ತಿ ಪಡೆಯಲು ದೇವೇಗೌಡರು ವಾಲ್ಮೀಕಿ ಜನಾಂಗಕ್ಕಾದರೂ ಏನು ಮಾಡಿದರು ಎಂದು ಕೇಳಬೇಡಿ. ಅವರೂ ಬಹಳ ಸೆಕ್ಯುಲರ್ ಆಗಿ ಹಿಂದುಳಿದವರನ್ನು ಮುಂದೆ ತರಲು, ಕೆಳಗೆ ಬಿದ್ದವರನ್ನು ಮೇಲೆತ್ತಲು ಶ್ರಮಿಸಿದ್ದಾರೆ. ಏನೂ ಏನೇನೂ ಏನೇನೇನೂ ಇಲ್ಲದವರೆಷ್ಟೋ ಜನ ಅವರ ಕೃಪಾಕಟಾಕ್ಷದಿಂದ ಇಂದು ಲಕ್ಷ್ಮೀಪುತ್ರರಾಗಿ ಸುಖಜೀವನ ನಡೆಸುತ್ತಿದ್ದಾರೆ. ಎಂದ ಮೇಲೆ ಈ ಪ್ರಶಸ್ತಿಗೆ ಅವರಿಗಿಂತ ಹೆಚ್ಚಿನವರಾರು ಯೋಗ್ಯರಿದ್ದಾರು? ಆದ್ದರಿಂದ ಇದು ಖಂಡಿತಾ ಸರಿಯಾದ ಆಯ್ಕೆ ಎಂದು ನನ್ನ ಅನಿಸಿಕೆ.

ಅಂದ ಹಾಗೆ ವಾಲ್ಮೀಕಿಯ ಜನ್ಮದಿನವನ್ನು ಅದಾವ ಇತಿಹಾಸಕಾರರು ಅದು ಹೇಗೆ ಲೆಕ್ಕ ಹಾಕಿದರೋ ತಿಳಿಯದು - ಹೇಗಿದ್ದರೇನು? ಪುಣ್ಯಸ್ಮರಣೆಗೊಂದು ನೆಪ ಸಾಕಲ್ಲವೇ? ಈ ಜಗತ್ತಿಗೆ ರಾಮಾಯಣವೆಂಬ ಬಹುದೊಡ್ಡ ಉಡುಗೊರೆಯನ್ನಿತ್ತ ಮಹರ್ಷಿ ವಾಲ್ಮೀಕಿಯ ದಿವ್ಯಚೇತನ ನಮ್ಮೆಲ್ಲರನ್ನೂ ಪೊರೆಯಲಿ, "ಸೀತಾಯಾಶ್ಚರಿತಂ ಮಹತ್" ಆದ ರಾಮಾಯಣಕಾವ್ಯವು ನಮ್ಮೆಲ್ಲರ ಹೃದಯಗಳನ್ನು ಹದಗೊಳಿಸಲಿ, ಮೆದುಗೊಳಿಸಲಿ, ನಮ್ಮ ಭಾವದಾರಿದ್ರ್ಯವನ್ನು ಹಿಂಗಿಸಲಿ, "ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ" ಎಂದು ನವನಿಷಾದರನ್ನು ಶಪಿಸಬೇಕಾದ ದೌರ್ಭಾಗ್ಯವು ಶೀಘ್ರವಾಗಿ ತಪ್ಪಲಿ ಎಂದು ಈ ಸಂದರ್ಭದಲ್ಲಿ ಆಶಿಸೋಣ.

ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್

(ಈ ಲೇಖನವನ್ನು ಫೇಸ್ಬುಕ್ಕಿನಲ್ಲಿಯೂ ನೋಡಬಹುದು)

Saturday, October 6, 2018

ದಂಪತಿ ಶಬ್ದದ - ಲಿಂಗವಚನವಿಚಾರ

ಈ ಬರಹವು ಮೂಲತಃ, ಅಂಕಣಕಾರರಾದ ಶ್ರೀ ಶ್ರೀವತ್ಸಜೋಷಿಯವರು ಫೇಸ್ಬುಕ್ಕಿನಲ್ಲಿ ನಡೆಸುತ್ತಿರುವ "ಸ್ವಚ್ಛ ಭಾಷೆ ಅಭಿಯಾನ"ವೆಂಬ ಸರಣಿಯಲ್ಲಿ ಕಂಡು ಬಂದ ಅವರ ಒಂದು ಅಭಿಪ್ರಾಯಕ್ಕೆ ಪ್ರತಿಕ್ರಿಯೆಯಾಗಿ ಬಂದದ್ದು, ಆದ್ದರಿಂದ ಈ ಬರಹಕ್ಕೆ ಕಾರಣವಾದದ್ದಕ್ಕಾಗಿ ಶ್ರೀ ಜೋಷಿಯವರಿಗೆ ಅಭಿನಂದನೆ ಸಲ್ಲಬೇಕು.  

ತಮ್ಮ ಲೇಖನದಲ್ಲಿ ಅವರು, "ದಂಪತಿ" ಶಬ್ದವು ಕನ್ನಡದಲ್ಲಿ ಏಕವಚನ-ನಪುಂಸಕಲಿಂಗದ ಶಬ್ದವೆಂದು ಪ್ರತಿಪಾದಿಸುತ್ತಾರೆ.  ಈ ಅಭಿಪ್ರಾಯ ಸರಿಯಲ್ಲವೆಂದು ವಿವರಿಸಿ ಅವರ ಲೇಖನದಡಿಯಲ್ಲಿಯೇ ತಿದ್ದುಪಡಿಯನ್ನು ಸೂಚಿಸಿದೆ.  ಆದರೆ "ನಿಮ್ಮ ಪ್ರತಿಕ್ರಿಯೆಯನ್ನು ನೋಡಿದ್ದೇನೆ" ಎಂಬರ್ಧದ ಒಂದೆರಡು ಸಾಲು ಬಿಟ್ಟರೆ ಬೇರಾವ ಪ್ರತಿಕ್ರಿಯೆಯೂ ಅವರಿಂದ ಬರಲಿಲ್ಲ - ಸೂಚಿಸಿದ ತಿದ್ದುಪಡಿಯನ್ನು ಒಪ್ಪುವುದಾಗಲೀ, ಚರ್ಚಿಸಿ ನಿರಾಕರಿಸುವುದಾಗಲೀ, ತಮ್ಮ ಲೇಖನದ ಪ್ರಶ್ನಾರ್ಹ ಅಂಶಕ್ಕೆ ತಿದ್ದುಪಡಿ ತರುವುದಾಗಲೀ, ಅಥವಾ ಅದನ್ನು ಸಮರ್ಥಿಸಿಕೊಳ್ಳುವುದಾಗಲೀ ಇದಾವುದೂ ಅವರ ಕಡೆಯಿಂದ ಆಗಲಿಲ್ಲ.  ಶ್ರೀ ಜೋಷಿಯವರು ಅಂಕಣಕಾರರು, ಫೇಸ್ಬುಕ್ ಮತ್ತಿತರ ಜಾಲತಾಣದಲ್ಲಿ ಸಾಕಷ್ಟು ದೊಡ್ಡ ಓದುಗ ಬಳಗವನ್ನು ಹೊಂದಿದವರು.  ಈ ವೇಗದ ಯುಗದಲ್ಲಿ ಭಾಷೆ/ವ್ಯಾಕರಣದಂತಹ ಸಂಗತಿಗಳು ಒಂದು ’ಅಕ್ಯಾಡೆಮಿಕ್’ ನೆಲೆಯಲ್ಲಿ ಚರ್ಚೆಗೊಳಪಡುವುದೇ ಕಡಿಮೆ; ಅದರಲ್ಲೂ ಜೋಷಿಯವರಂತಹ ಜನಪ್ರಿಯ ಲೇಖಕರು ಇಂಥದ್ದು ಸರಿ ಇಂಥದ್ದು ತಪ್ಪು ಎಂದು ಅಷ್ಟು ನಿಖರವಾಗಿ ಹೇಳುವಾಗ ಅನೇಕರು ಹೆಚ್ಚು ಚರ್ಚೆಯಿಲ್ಲದೇ ಒಪ್ಪಿಬಿಡುವ ಸಾಧ್ಯತೆಯೇ ಹೆಚ್ಚು,  ಇಂಥಲ್ಲಿ ತಪ್ಪು ಮಾಹಿತಿ ಹರಡದಂತಿರಬೇಕಾದರೆ, ಲೇಖಕರು ವ್ಯಕ್ತಪಡಿಸುವ ಅಭಿಪ್ರಾಯಗಳು ನಿರ್ದುಷ್ಟವಾಗಿರಬೇಕಾದ್ದು ಬಹಳ ಮುಖ್ಯ.  ಅಂತಾಗದಿದ್ದರೆ, ಯಾವುದನ್ನೋ ಸರಿಪಡಿಸುತ್ತೇನೆಂದು ಹೋಗಿ ಸರಿದಾರಿಯಲ್ಲಿರುವವರನ್ನೂ ತಪ್ಪಿಗೆಳೆದ ಪಾಪ ಕಟ್ಟಿಟ್ಟ ಬುತ್ತಿ.  ಈ ಸರಣಿಯಲ್ಲಿ ಇಂಥವು ಹಲವು ಕಂಡುಬರುತ್ತವೆ, ಹಲವರು ಇದನ್ನು ತೋರಿಸಿ ತಿದ್ದುಪಡಿ ಸೂಚಿಸಿದ್ದಾರೆ ಕೂಡ - ನನ್ನ ಈ ಲೇಖನ ಕೇವಲ ಪ್ರಾತಿನಿಧಿಕವಷ್ಟೇ.  ನುಡಿಯ ವಿಷಯದಲ್ಲಿ ತಪ್ಪರಿಮೆ ಹರಡಬಾರದೆಂಬ ಉದ್ದೇಶದಿಂದ ಇದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.  ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಚರ್ಚಿಸಲು ಸರ್ವಥಾ ಸಿದ್ಧನಿದ್ದೇನೆ.

ಇದೊಂದು ಪ್ರತಿಕ್ರಿಯಾಲೇಖನವಾದುದರಿಂದ, ಈ ಲೇಖನಕ್ಕೆ ಕಾರಣವಾದ ಶ್ರೀ ಜೋಷಿಯವರ ಅಭಿಪ್ರಾಯವನ್ನು ಒಮ್ಮೆ ಪರಿಶೀಲಿಸೋಣ.  ಮೇಲ್ಕಂಡ ಲೇಖನಸರಣಿಯ ಹತ್ತೊಂಬತ್ತನೆಯ ಲೇಖನದಲ್ಲಿ ಅವರು ಹೀಗೆ ಹೇಳುತ್ತಾರೆ:

‘ದಂಪತಿ’ ಒಂದು ಜೋಡಿ; ಬಹುವಚನ ಬಳಸಬೇಡಿ!
"ಸಚಿವ ಹೆಚ್.ಡಿ ರೇವಣ್ಣ ದಂಪತಿಗಳಿಂದ ಸಕಲೇಶಪುರದಲ್ಲಿ ಹೊಳೆಮಲ್ಲೇಶ್ವರ ಸ್ವಾಮಿಗೆ ಪೂಜೆ", "ಒಬಾಮ ದಂಪತಿಗಳನ್ನು ಅಚ್ಚರಿಗೊಳಿಸಿದ BSF ಯೋಧರ ಬೈಕ್‌ ಸ್ಟಂಟ್‌", "ಬೆಂಗಳೂರು ಮೆಟ್ರೋದಲ್ಲಿ ಸಂಚರಿಸಿದ ಇನ್ಫೊಸಿಸ್ ಮೂರ್ತಿ ದಂಪತಿಗಳು"... ಇವೆಲ್ಲವೂ ಕನ್ನಡದ ದೊಡ್ಡ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಶೀರ್ಷಿಕೆಗಳು. ಇವೆಲ್ಲವುಗಳಲ್ಲೂ ‘ದಂಪತಿ’ ಎಂದು ಏಕವಚನ ಬಳಸಬೇಕಿತ್ತು, ಏಕೆಂದರೆ ಪ್ರತಿಯೊಂದರಲ್ಲೂ ನಿರ್ದಿಷ್ಟ ಒಂದು ಜೋಡಿ (ಇಂಗ್ಲಿಷ್‌ನಲ್ಲಾದರೆ Couple) ಬಗ್ಗೆ ಸುದ್ದಿ ಇರುವುದು. ಆ ದೃಷ್ಟಿಯಿಂದ, "ಎದ್ದೇಳು ಮಂಜುನಾಥ ಏಳು ಬೆಳಗಾಯಿತು..." ಪ್ರಖ್ಯಾತ ಭಕ್ತಿಗೀತೆಯಲ್ಲಿನ "ಹೆಗ್ಗಡೆಯ ದಂಪತಿಗಳು ನಿನ್ನಯ ಸೇವೆಗೆ ಕಾತರಿಸುತಿಹರು" ಸಹ ಸರಿಯಲ್ಲ, "ಹೆಗ್ಗಡೆ ದಂಪತಿ ನಿನ್ನಯ ಸೇವೆಗೆ ಕಾತರಿಸುತಿಹುದು" ಎಂದಿರಬೇಕಿತ್ತು (ಕವಿಗಳಿಗೆ ವ್ಯಾಕರಣ ನಿರ್ಬಂಧಗಳಿಂದ ಅಲ್ಪಸ್ವಲ್ಪ ವಿನಾಯಿತಿ ಇರುತ್ತದೆ ನಿಜ). ತಾತ್ಪರ್ಯ ಇಷ್ಟೇ: ‘ದಂಪತಿ’ ಅಂದರೆ ವಿವಾಹಸಂಬಂಧದಿಂದ ಬೆಸೆದ ಎರಡು ದೇಹಗಳು (ಗಂಡು ಮತ್ತು ಹೆಣ್ಣು ಎಂದು ಬರೆಯಬಹುದಿತ್ತು. ಈಗ ಭಾರತದಲ್ಲಿ ಐಪಿಸಿ ಸೆಕ್ಷನ್ 377 ಅಮಾನ್ಯವಾದ್ದರಿಂದ ’ಎರಡು ದೇಹಗಳು’ :-) ). ಅಲ್ಲಿ ಇಬ್ಬರಿದ್ದಾರೆಂದ ಮಾತ್ರಕ್ಕೇ ಬಹುವಚನ ಬೇಕಿಲ್ಲ. ಇಬ್ಬರದು ‘ಒಂದು’ ಜೋಡಿ. ಆದ್ದರಿಂದ ಏಕವಚನ ಸಾಕು, ಅದೇ ಸರಿ."

ಮೊದಲಿಗೆ, "‘ದಂಪತಿ’ ಅಂದರೆ ವಿವಾಹಸಂಬಂಧದಿಂದ ಬೆಸೆದ ಎರಡು ದೇಹಗಳು" ಎಂಬ ವ್ಯಾಖ್ಯೆ ಸರಿಯಲ್ಲ, ಅದು ಎರಡು ವ್ಯಕ್ತಿಗಳ ನಡುವಣ ಬೆಸುಗೆ (ಕೇವಲ ದೇಹಕ್ಕೂ ವ್ಯಕ್ತಿಗೂ ವ್ಯತ್ಯಾಸವಿದೆಯಲ್ಲವೇ?).  ಇರಲಿ, ಅದು ಬೇರೆಯ ವಿಷಯ.  ಇನ್ನು, "ಇಬ್ಬರಿದ್ದಾರೆಂದ ಮಾತ್ರಕ್ಕೇ ಬಹುವಚನ ಬೇಕಿಲ್ಲ. ಇಬ್ಬರದು ‘ಒಂದು’ ಜೋಡಿ. ಆದ್ದರಿಂದ ಏಕವಚನ ಸಾಕು" ಎಂಬುದು ಶ್ರೀ ಜೋಶಿಯವರ ವಾದ.  ಇದನ್ನು ವ್ಯಾಕರಣದೃಷ್ಟಿಯಿಂದ ನೋಡುವ ಮೊದಲು ಜನಸಾಮಾನ್ಯನ ದೃಷ್ಟಿಯಿಂದ, ರೂಢಿಯ ದೃಷ್ಟಿಯಿಂದ ನೋಡಬೇಕಾಗುತ್ತದೆ.  ಏಕೆಂದರೆ ಕನ್ನಡದಂತಹ ಜೀವಂತಭಾಷೆಯಲ್ಲಿ, ಪದವೊಂದರ ಸಾಧುತ್ವ ಅಸಾಧುತ್ವವನ್ನು ನಿಷ್ಕರ್ಷಿಸುವಲ್ಲಿ ವ್ಯಾಕರಣದಷ್ಟೇ ರೂಢಿಯೂ ಪ್ರಧಾನಪಾತ್ರವಹಿಸುತ್ತದೆ.  ಏಕೆಂದರೆ ವ್ಯಾಕರಣಪ್ರಜ್ಞೆ ಸಮಷ್ಟಿಯಲ್ಲಿ ಕೆಲಸ ಮಾಡುವುದೇ ರೂಢಿಯ ಮೂಲಕ.  ಆದ್ದರಿಂದ ಲೇಖಕರು ಹೇಳುತ್ತಿರುವ ’ತಿದ್ದುಪಡಿ’ ರೂಢಿಯಲ್ಲಿದೆಯೇ, ಅರ್ಥದಲ್ಲಿ/ರೂಪದಲ್ಲಿ ಕಟುವೆನಿಸುತ್ತದೆಯೇ, ಅಪಾರ್ಥಕ್ಕೆಡೆಮಾಡಿಕೊಡುತ್ತದೆಯೇ ಎಂಬುದು ಮೊದಲ ಪ್ರಶ್ನೆ.  ಈ ಕೆಳಗಿನ ಚಿತ್ರ ನೋಡಿ:

ಪ್ರತಿಯೊಂದು ಚಿತ್ರದ ಮುಂದೆಯೂ ಕೊಟ್ಟಿರುವ ನಾಲ್ಕು ವಾಕ್ಯಗಳಲ್ಲಿ, ಮೊದಲ ಎರಡು ಅಪಾರ್ಥದಾಯಕವಾಗಿಯೂ, ಕೆಲವೊಮ್ಮೆ ಅಗೌರವಕರವಾಗಿಯೂ ಕಾಣುತ್ತವೆಯಲ್ಲವೇ?  ಕೋತಿ ಬಂದಿತು, ನಾಯಿಗಳು ಮಲಗಿವೆ, ಕಲ್ಲು ಬಿದ್ದಿತು, ಮಗು ಎದ್ದಿತು, ಮುಂತಾಗಿ ನಿರ್ದಿಷ್ಟವ್ಯಕ್ತಿತ್ವವಿಲ್ಲದ, ವ್ಯಕ್ತಿತ್ವವನ್ನಾರೋಪಿಸಲಾಗದ ವಸ್ತು-ವಿಷಯಗಳಿಗೆ ನಾವು ನಪುಂಸಕಲಿಂಗವನ್ನು ಬಳಸುತ್ತೇವೆ.  ಎಷ್ಟೋ ವೇಳೆ ಮುದ್ದಿನ ಸಾಕುಪ್ರಾಣಿಗಳಿಗೂ ವ್ಯಕ್ತಿತ್ವವನ್ನಾರೋಪಿಸಿ ರಾಮು ಬಂದ, ರೋಜಿ ಹೋದಳು ಮುಂತಾಗಿ ನಿರ್ದೇಶಿಸುತ್ತೇವೆ.  ಆದರೆ ಈ ಸಾಮಾನ್ಯರೂಢಿಗೆ ವಿರುದ್ಧವಾಗಿ "ದಂಪತಿ" ಶಬ್ದವನ್ನು ನಪುಂಸಕಲಿಂಗ-ಏಕವಚನ ಮಾಡಬೇಕೆಂಬುದು ಲೇಖಕರ ಅಂಬೋಣ.  "ಜೋಡಿ", "ಜೊತೆ", "couple" ಮೊದಲಾದ ಶಬ್ದಗಳಂತೆ "ದಂಪತಿ" ಎಂಬುದೂ ಒಂದು ನಪುಂಸಕಲಿಂಗ ಏಕವಚನದ ಪದವೆಂದು ಲೇಖಕರು ಭಾವಿಸಿದಂತಿದೆ.  ಆದರೆ ಅದು ಸಾಮಾನ್ಯಲಿಂಗ-ಬಹುವಚನವೆಂಬುದನ್ನು ಪೂರ್ವಕವಿಪ್ರಯೋಗಗಳ ಆಧಾರಪೂರ್ವಕವಾಗಿ ಹಲವು ವಿದ್ವಾಂಸರು ವಿವರಿಸಿದ್ದಾರೆ.  ಹಾಗೆಯೇ ಸಂಸ್ಕೃತದಲ್ಲಿ ದಂಪತಿ ಪದದ ನಿಷ್ಪತ್ತಿಯನ್ನೂ ಸಹ ಕೆಲವರು ವಿವರಿಸಿದ್ದಾರೆ (ವಿವರಗಳಿಗೆ ವಿದ್ವನ್ಮಿತ್ರರಾದ ಶ್ರೀ ಗಣೇಶಭಟ್ಟ ಕೊಪ್ಪಲತೋಟ ಹಾಗೂ ಶ್ರೀ ಮಹೇಶಭಟ್ಟರ ಲೇಖನಗಳನ್ನು ಇಲ್ಲಿ ನೋಡಬಹುದು):
ಅವಧಾನಿ ಶ್ರೀ ಗಣೇಶಭಟ್ಟ ಕೊಪ್ಪಲತೋಟರ ಲೇಖನ
ಅವಧಾನಿ ಶ್ರೀ ಮಹೇಶಭಟ್ಟರ ಲೇಖನ

ಇದಕ್ಕೆ ಪ್ರತಿಯಾಗಿ ಲೇಖಕರ ಪ್ರತಿವಾದಸರಣಿ ಸರಿಸುಮಾರು ಈ ರೀತಿ:
  • ಸಂಸ್ಕೃತದ ನಿಯಮಗಳು ಕನ್ನಡಕ್ಕೆ ಅನ್ವಯಿಸಲೇಬೇಕಿಲ್ಲ.
  • ತಿದ್ದುಪಡಿ ಸೂಚಿಸಿದವರು ಸಂಸ್ಕೃತ ವಿದ್ವಾಂಸರು, ಕನ್ನಡದ ಅನೇಕ ರೂಢಿಗಳನ್ನು ಅವರು ಒಪ್ಪುವುದಿಲ್ಲ.
ಇದಕ್ಕೆ ಸಮಾಧಾನವೇನು?  ಮೇಲೆ ಸೂಚಿಸಿದ ಮಹನೀಯರಲ್ಲಿ ಶ್ರೀ ಮಹೇಶಭಟ್ಟರು ಸಂಸ್ಕೃತವಿದ್ವಾಂಸರೂ ಅಹುದಾದರೂ, ಇಬ್ಬರೂ ಕನ್ನಡದಲ್ಲಿ ಕಡಿಮೆ ವಿದ್ವಾಂಸರೇನಲ್ಲ - ಇಬ್ಬರೂ ಕನ್ನಡವ್ಯಾಕರಣ ಮತ್ತು ವಾಗ್ರೂಢಿಗಳನ್ನು ಆಳವಾಗಿ ಅರಿತವರು, ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದವರು ಮತ್ತು ಸಾಧು/ಅಸಾಧು ರೂಪಗಳ ಬಗ್ಗೆ ಅಧಿಕಾರಯುತವಾಗಿ ಮಾತಾಡಬಲ್ಲವರು.  ಇಷ್ಟಕ್ಕೂ ತಿದ್ದುಪಡಿ ಸೂಚಿಸುವವರು ಕನ್ನಡ ವಿದ್ವಾಂಸರೋ ಸಂಸ್ಕೃತವಿದ್ವಾಂಸರೋ ಅಥವಾ ವಿದ್ವಾಂಸರೇ ಅಲ್ಲವೋ ಎಂಬುದು ಪ್ರಸ್ತುತವಾಗಬಾರದು, ಬದಲಿಗೆ ಅವರು ನೀಡಿರುವ ವಿವರಣೆ, ಉದಾಹರಣೆಗಳು ಮತ್ತವುಗಳ ಸಾಧುತ್ವ ಮುಖ್ಯವಾಗಬೇಕು - ತಮ್ಮ ತಿದ್ದುಪಡಿಯಲ್ಲಿ ಅವರು ನೀಡಿರುವ ಉದಾಹರಣೆಗಳೊಂದೂ ಸಂಸ್ಕೃತದ ಉದಾಹರಣೆಗಳಲ್ಲ, ಕನ್ನಡದವೇ.  ಇನ್ನು ಸಂಸ್ಕೃತದ ನಿಯಮಗಳು ಕನ್ನಡಕ್ಕೆ ಅನ್ವಯಿಸಬೇಕಿಲ್ಲವೆಂಬ ಲೇಖಕರ ವಾದವು ಕನ್ನಡದ್ದೇ ಪದದ ವಿಷಯದಲ್ಲಿ ಸತ್ಯವಾದರೂ, ಅದು ಎಲ್ಲ ಸಂದರ್ಭಕ್ಕೂ ನಿಲ್ಲಲಾರದು.  ಕನ್ನಡಪದಗಳ ಜೊತೆ ಸೇರಿ ವಿಕೃತಿಹೊಂದಿಲ್ಲದ ಸಂಸ್ಕೃತಪದಗಳು ಸ್ವಭಾವತಃ ಕನ್ನಡದಲ್ಲಿ ಬಳಕೆಗೊಳ್ಳುವಾಗಲೂ ಸಂಸ್ಕೃತದ ನಿಯಮವನ್ನೇ ಅನುಸರಿಸುವುದು ರೂಢಿ (ಕನ್ನಡದ ರೂಢಿಯಲ್ಲಿ ಆ ಪದದ ಸ್ವಭಾವವೇ ಬದಲಾಗಿಲ್ಲದಿದ್ದರೆ) - ಉದಾಹರಣೆಗೆ ರಾಜ+ಆಜ್ಞೆ ಕನ್ನಡದಲ್ಲಿಯೂ ಸಂಸ್ಕೃತದ ಸವರ್ಣದೀರ್ಘಸಂಧಿಯ ನಿಯಮವನ್ನೇ ಅನುಸರಿಸಿ ರಾಜಾಜ್ಞೆಯಾಗುವುದೇ ಹೊರತು ಕನ್ನಡದ ಲೋಪಸಂಧಿಯನ್ನನುಸರಿಸಿ ರಾಜಜ್ಞೆ ಆಗುವುದಿಲ್ಲ (ಅದೇ ಅಣ್ಣ+ಅಪ್ಪ ಕನ್ನಡದ್ದೇ ಪದಗಳಾದ್ದರಿಂದ ಅಣ್ಣಪ್ಪ ಎಂದಾಗುತ್ತದೆ.  ಇಲ್ಲಿ ಯಾರೂ ಸಂಸ್ಕೃತಸಂಧಿ ಮಾಡುವುದಿಲ್ಲ, ಅದು ನಮ್ಮ ಆಗ್ರಹವೂ ಅಲ್ಲ).  ಹೀಗಾಗಿ ದಂಪತಿಯೆಂಬ ಸಂಸ್ಕೃತಮೂಲದ ಪದವು ಸಂಸ್ಕೃತದ ನಿಯಮವನ್ನೇ ಅನುಸರಿಸುವುದು ಸಹಜ - ಅದು ಕನ್ನಡದ ರೂಢಿಯಲ್ಲಿ ತನ್ನ ಅರ್ಥ-ರೂಪಗಳನ್ನು ಬದಲಿಸಿಕೊಂಡಿದ್ದರೆ ಅದು ಬೇರೆಯ ವಿಷಯ, ಆದರೆ ಈ ಪದದ ವಿಷಯದಲ್ಲಿ ಅಂಥದ್ದೇನೂ ಕಂಡುಬರುವುದಿಲ್ಲ.  ಇದನ್ನು ಪರಿಶೀಲಿಸುವ ಮೊದಲು ಕನ್ನಡದ ಪ್ರಾಚೀನ ವೈಯಾಕರಣರಲ್ಲೊಬ್ಬನಾದ ನಾಗವರ್ಮನ ಈ ಪದ್ಯವನ್ನು ನೋಡೋಣ:

ಯುಗಳಂ ಯುಗ್ಮಂ ದ್ವಂದ್ವಂ ಯುಗಮುಭಯಂ ಯಾಮಳಂ ದ್ವಯಂ ದ್ವಿತಯಂ ಸಂ-
ಜ್ಞೆಗಳಿವೆ ಪೊಣರೊಳ್ ಪುಂಸ್ತ್ರೀಯುಗವಾಚಕಮಱಿಗೆ ಮಿಥುನಮುಂ ದಂಪತಿಯುಂ
(ಅಭಿಧಾನವಸ್ತುಕೋಶ - ಸಾಮಾನ್ಯಕಾಂಡ - ವಿಶೇಷಣವರ್ಗ ಪ.೩೫)

ಯುಗಳ, ಯುಗ್ಮ, ದ್ವಂದ್ವ, ಯುಗ, ಉಭಯ, ಯಮಳ, ದ್ವಯ, ದ್ವಿತಯ ಇವು ಜೋಡಿಯನ್ನು ಕುರಿತಾದ ಶಬ್ದಗಳಾದರೆ, ಮಿಥುನ, ದಂಪತಿ ಇವು ವಿಶೇಷವಾಗಿ ಗಂಡುಹೆಣ್ಣಿನ ಜೋಡಿಯನ್ನು ಕುರಿತದ್ದು ಎಂಬುದು ತಾತ್ಪರ್ಯ.  ಇಲ್ಲಿ ಕೊನೆಯ ಪದವನ್ನು ಬಿಟ್ಟು ಉಳಿದ ಯಾವ ಪದವೂ ಜೋಡುಪದವಾಗಲೀ ಸಮಸ್ತಪದವಾಗಲೀ ಅಲ್ಲ - ಏಕಧಾತುಕವಾದ ಸರಳಪದಗಳವು.  ಅರ್ಥದಲ್ಲಿ ಜೋಡಿಯನ್ನು ಸೂಚಿಸಿದರೂ ಸ್ವರೂಪದಲ್ಲಿ ಏಕವಚನ, ನಪುಂಸಕಲಿಂಗದ ಪದಗಳು.  ಆದ್ದರಿಂದ ಕನ್ನಡದಲ್ಲಿ ಸಹಜವಾಗಿಯೇ ಅವಕ್ಕೆ ಏಕವಚನ ನಪುಂಸಕಲಿಂಗದ ಪ್ರಯೋಗವೇ ಬರುತ್ತದೆ - ಪಾದಯುಗಳಕ್ಕೆರಗು/ಯುಗ್ಮಕ್ಕೆರಗು/ದ್ವಂದ್ವಕ್ಕೆರಗು/ಯುಗಕ್ಕೆರಗು ಇತ್ಯಾದಿ.  ತಮ್ಮ ವಾದಕ್ಕೆ ಆಧಾರವಾಗಿ ಲೇಖಕರು ಉದಾಹರಿಸುವ ಕನ್ನಡದ "ಜೋಡಿ", ಇಂಗ್ಲಿಷಿನ couple ಮುಂತಾದುವು ಈ ಗುಂಪಿಗೆ ಸೇರುವ ಪದಗಳು - ಆ ಜೋಡಿಯಲ್ಲಿರುವುದು ಗಂಡು ಹೆಣ್ಣೆಂಬ ಇಬ್ಬರು ವ್ಯಕ್ತಿಗಳೇ ಆದರೂ, ಅವರಿಬ್ಬರ ಗುಂಪನ್ನು ಸೂಚಿಸುವ ಪದ ಮಾತ್ರ ನಪುಂಸಕಲಿಂಗ ಏಕವಚನದ ಪದವಾದ್ದರಿಂದ ಜೋಡಿ ಬಂದಿತು, couple ಚೆನ್ನಾಗಿದೆ ಮೊದಲಾದುವು ಸಾಧುಪ್ರಯೋಗಗಳು.  ಆದರೆ ಮೇಲಿನ ಪಟ್ಟಿಯಲ್ಲಿರುವ ದಂಪತಿ ಪದವನ್ನು ಮಾತ್ರ ಇದಕ್ಕೆ ಸಮೀಕರಿಸಿ ದಂಪತಿ ಬಂದಿತು/ಹೋಯಿತು ಎನ್ನುವುದು ಸರಿಯಲ್ಲ, ಏಕೆಂದರೆ ಮೇಲಿನ ಇತರ ಪದಗಳಂತೆ "ದಂಪತಿ" ಪದವು ಅರ್ಥದಲ್ಲಿ ಮಾತ್ರ ಜೋಡಿಯನ್ನು ಸೂಚಿಸುವ ಏಕಪದವಲ್ಲ, ರೂಪದಲ್ಲಿಯೂ ಎರಡು ಪದಗಳನ್ನು ಕೂಡಿಸಿಕೊಂಡ ಜೋಡುಪದ - ಜಾಯಾ+ಪತಿ ಎಂಬ ಎರಡು ಪದಗಳು ಬೆಸೆದು ಉಂಟಾದ ಸಮಸ್ತಪದವದು - ಜಾಯಾಪತೀ, ಜಂಪತೀ, ದಂಪತೀ ಇವು ಸಂಸ್ಕೃತದ ರೂಪಗಳು.  ಆದ್ದರಿಂದ ಈ ಪದದಲ್ಲಿ ಇಬ್ಬರು ವ್ಯಕ್ತಿಗಳು ಹೇಗೋ ಹಾಗೆ ಎರಡು ಸ್ವತಂತ್ರ ಪದಗಳೂ ಬೆಸೆದಿವೆ - ಬೆಸೆದಿವೆಯಷ್ಟೇ, ಅವು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿಲ್ಲ.  ಆದ್ದರಿಂದ ಆದ್ದರಿಂದ ಅದು ಇಬ್ಬರು ವ್ಯಕ್ತಿಗಳನ್ನು ನಿರ್ದೇಶಿಸುವ ಪದ, ಸಂಸ್ಕೃತದಲ್ಲಿ ದ್ವಿವಚನದೊಂದಿಗೆ ನಿರ್ದೇಶಿಸಲ್ಪಡುವುದು.  ಆದ್ದರಿಂದ ದಂಪತಿ ಪದವು ಜೋಡಿ, couple ಮೊದಲಾದುವುಗಳಿಗಿಂತಲೂ ತಾಯ್ತಂದೆ, ಗಂಡಹೆಂಡಿರು, ಪತಿಪತ್ನಿ, ಅಕ್ಕತಂಗಿ, ಅಣ್ಣತಮ್ಮ ಈ ಪ್ರಕಾರಕ್ಕೆ ಸೇರುವ ಪದ.  ತಾಯ್ತಂದೆ ಬಂದಿತು, ಗಂಡಹೆಂಡತಿ ಕುಳಿತಿತು, ಪತಿಪತ್ನಿ ಹೋಗುತ್ತಿದೆ ಎನ್ನುತ್ತೇವೆಯೇ?  ಹಾಗೆಯೇ ದಂಪತಿ ಬಂತು ಹೋಯ್ತು ಎನ್ನಲೂ ಆಗುವುದಿಲ್ಲ - ದಂಪತಿಗಳು ಎನ್ನುವುದು ಸರಿಯಾದ ಪ್ರಯೋಗ (ದಂಪತಿ ಬಂದರು ಎಂಬುದೂ ಸಾಧುವೇ, ಆದರೆ ಕ್ರಿಯಾಪದದಲ್ಲಾದರೂ ಬಹುವಚನ ಮುಖ್ಯ - ಅದನ್ನು ಮುಂದೆ ನೋಡೋಣ). 

ಒಟ್ಟಾರೆ ಇದರಿಂದ ಮನದಟ್ಟಾಗುವ ಅಂಶವೆಂದರೆ, ದಂಪತಿ ಎನ್ನುವುದು ಜೋಡಿ, ಯುಗಳ, couple ಎಂಬ ರೀತಿಯ ನಪುಂಸಕಲಿಂಗ ಏಕವಚನ ಪದವಲ್ಲ, ಅದೊಂದು ಸಮಸ್ತಪದ, ಎರಡು ಸ್ವತಂತ್ರ ಪದಗಳನ್ನು ಬೆಸೆದ ನಿತ್ಯದ್ವಿವಚನ ಎಂಬುದು.  ಈಗ ಈ ದ್ವಿವಚನವನ್ನು ಕನ್ನಡದಲ್ಲಿ ಹೇಗೆ ಪರಿಗಣಿಸುತ್ತಾರೆಂಬುದಕ್ಕೆ ಶಾಸ್ತ್ರಾಧಾರವನ್ನು ಈ ಮುಂದೆ ನೋಡಬಹುದು.

ದ್ವಿವಚನವೆಂದರೆ ಒಂದಕ್ಕಿಂತ ಹೆಚ್ಚು ಅಲ್ಲವೇ?  ಕನ್ನಡದಲ್ಲಿ ಒಂದಕ್ಕಿಂತ ಹೆಚ್ಚಾದುದೆಲ್ಲವೂ ಬಹುವಚನವೇ - ಅದು ಎರಡಿರಲಿ, ಮೂರಿರಲಿ ಹತ್ತಿರಲಿ (ಕೆಲವು ಅಪವಾದಗಳಿವೆ, ಮುಂದೆ ವಿವರಿಸುತ್ತೇನೆ).  ಈ ತರ್ಕವನ್ನು ನಾಗವರ್ಮ ಕೇಶಿರಾಜರೇ ಆದಿಯಾಗಿ ಕನ್ನಡದ ಎಲ್ಲ ವೈಯಾಕರಣರೂ ಎತ್ತಿ ಹಿಡಿದಿದ್ದಾರೆ (ಗಮನಿಸಿ, ನಾನಿಲ್ಲಿ ನೀಡುತ್ತಿರುವುದು ಸಂಸ್ಕೃತಪಂಡಿತರ ನಿಲುವುಗಳನ್ನಲ್ಲ, ಕನ್ನಡಕ್ಕೆ ಆಚಾರ್ಯಪುರುಷರೆನಿಸಿಕೊಂಡ ಕನ್ನಡ ವೈಯಾಕರಣರ ನಿಲುವುಗಳನ್ನು)

ಮೊದಲಿಗೆ ನಾಗವರ್ಮನ ಅಭಿಪ್ರಾಯಗಳನ್ನು ನೋಡಿ:
ಅವಱೊಳ್ ದ್ವಿತ್ವಬಹುತ್ವಂ ಬವರಿಸೆ ತಳ್ತಿರ್ಕುಮಲ್ಲಿ ಗಳ್ ಶಬ್ದಂ ಮ-
ತ್ತವು ಸರ್ವನಾಮ ಗುಣವಚನವೃತ್ತಿಯಂ ತಾಳ್ದೆನೆಗೞ್ಗುಮವು ಬಹುಳತೆಯಿಂ
(ಕಾವ್ಯಾವಲೋಕನ - ಶಬ್ದಸ್ಮೃತಿ - ನಾಮಪ್ರಕರಣ - ಸೂ. ೧೭)

ದ್ವಿತ್ವಬಹುತ್ವಯೋಃ ಗಳಾದೌ
(ಕರ್ಣಾಟಕಭಾಷಾಭೂಷಣ, ವಿಭಕ್ತಿವಿಧಾನಂ - ಸೂ. ೪೧)
ದ್ವಿತ್ವ ಬಹುತ್ವಗಳಿಗೆ ಗಳ್ ಪ್ರತ್ಯಯವು ಸೇರುತ್ತದೆ ಎಂಬುದು ಈ ಎರಡೂ ಉಲ್ಲೇಖಗಳ ತಾತ್ಪರ್ಯ

ಇನ್ನು ಕೇಶಿರಾಜನಾದರೋ, ಕನ್ನಡದಲ್ಲಿ ಏಕ-ಬಹುವಚನಗಳಷ್ಟೇ ಸ್ವೀಕಾರ್ಯ; ಇಲ್ಲಿ ದ್ವಿವಚನವಿಲ್ಲದಿರುವುದರಿಂದ ಅದು ಸಂದರ್ಭೋಚಿತವಾಗಿ (ಏಕ/ಬಹುವಚನವಾಗಿ) ಬರುತ್ತದೆ ಎನ್ನುತ್ತಾನೆ:
ಏಕದ್ವಿತ್ವಬಹುತ್ವಮನೇಕದ್ವಿಬಹುತ್ವವಸ್ತುಗಳೊಳಾಚರಿಪರ್
ಸ್ವೀಕಾರಂ ಕನ್ನಡದೊಳಗೇಕಬಹುತ್ವಂ ದ್ವಿವಚನಮುಚಿತದೆ ಬರ್ಕುಂ
(ಶಬ್ದಮಣಿದರ್ಪಣ - ನಾಮಪ್ರಕರಣ ಸೂ. ೯೪)

ಇದೇ ಮಾತನ್ನು ಎತ್ತಿ ಹಿಡಿಯುವ ಭಟ್ಟಾಕಳಂಕನೂ "ಭಾಷಾಯಾಂ... ಏಕವಚನಬಹುವಚನಯೋರೇವವ್ಯವಹಾರೋ ನ ದ್ವಿವಚನಸ್ಯ; ತಸ್ಯ ತು ಔಚಿತ್ಯಾದೇವ ವಿಜ್ಞೇಯತ್ವಾತ್" ("ಭಾಷೆ"ಯಲ್ಲಿ (ಕನ್ನಡದಲ್ಲಿ) ಏಕ-ಬಹುವಚನವಷ್ಟೇ ವ್ಯವಹಾರದಲ್ಲಿದೆ, ದ್ವಿವಚನವಿಲ್ಲ.  ದ್ವಿವಚನದ್ದೇನಿದ್ದರೂ ಔಚಿತ್ಯಾನುಸಾರವಾಗಿ ತಿಳಿಯಬೇಕಾದದ್ದು) ಎಂದು ಹೇಳುವುದಲ್ಲದೇ "ಉಕ್ತಂ ಚ ದರ್ಪಣಕೃತಾ" ಎಂದು ಹೇಳಿ ಕೇಶಿರಾಜನ ಮೇಲಿನ ಪದ್ಯವನ್ನೇ ಉದಾಹರಿಸುತ್ತಾನೆ (ಕರ್ಣಾಟಕ ಶಬ್ದಾನುಶಾಸನಂ ದ್ವಿತೀಯಪಾದ, ಸೂ. ೨೩೨ - "ಗಳನೇಕತ್ವೇ ಸುಪಿ")

ಮೇಲಿನವು ನಪುಂಸಕಲಿಂಗ ದ್ವಿ/ಬಹುವಚನದ್ದಾದರೆ, ಪು/ಸ್ತ್ರೀಲಿಂಗ ದ್ವಿವಚನಕ್ಕೆ ಬಹುವಚನದಂತೆಯೇ ಅರ್ ದಿರ್ ವಿರ್ ಮೊದಲಾದ ಪ್ರತ್ಯಯಗಳು ಸೇರುತ್ತವೆಂಬುದನ್ನೂ ಮುಂದಿನ ಸೂತ್ರಗಳು ವಿವರಿಸುತ್ತವೆ.  ಉದಾಹರಣೆಗೆ ಕೇಶಿರಾಜನಿಂದ - "ಮಿಕ್ಕಾ ಸ್ತ್ರೀಪುಲ್ಲಿಂಗದೊಳಕ್ಕುಮಿರರ್ದಿರ್ವಿರೆಂದು ಲೋಕೋಕ್ತಿಗಳೊಳ್" (ಶ.ಮ.ದ - ನಾಮಪ್ರಕರಣ ಸೂ. ೯೭)

ಮೇಲಿನ ಎಲ್ಲಾ ಉಲ್ಲೇಖಗಳಿಂದ ಸ್ಪಷ್ಟವಾಗುವುದೆಂದರೆ ಸಂದರ್ಭದ ಕಟ್ಟಲೆಯಿಲ್ಲದಿದ್ದರೆ ಸಂಸ್ಕೃತದ ದ್ವಿವಚನವು ಕನ್ನಡದಲ್ಲಿ ಬಹುವಚನವಾಗಿಯೇ ವ್ಯವಹರಿಸಲ್ಪಡುವುದೆಂಬುದು - ಕಣ್ಗಳ್, ನಯನಂಗಳ್, ತೊಡೆಗಳ್, ತೋಳ್ಗಳ್, ಇರ್ವರ್, ಭೀಮಾರ್ಜುನರ್, ರಾಮಕೃಷ್ಣರ್ ಇತ್ಯಾದಿ ಉದಾಹರಣೆಗಳನ್ನು ಗ್ರಂಥಗಳು ಕೊಡುತ್ತವೆ.  ಇವೆಲ್ಲವೂ ಸಂಸ್ಕೃತದಲ್ಲಿ ದ್ವಿವಚನಗಳೆಂಬುದನ್ನು ಗಮನಿಸಿ - ಸಂದರ್ಭೋಚಿತವಾಗಿ ಕನ್ನಡದಲ್ಲಿ ಬಹುವಚನಗಳಾಗಿವೆ.  ಅದೇ, ಸಂದರ್ಭೋಚಿತವಾಗಿ ಏಕವಚನಗಳಾಗುವ ಉದಾಹರಣೆಗಳನ್ನು ಸೂತ್ರಕಾರರು ಕೊಟ್ಟಿಲ್ಲ, ಆದರೆ ಪ್ರೊ. ಟಿ ವಿ ವೆಂಕಟಾಚಲಶಾಸ್ತ್ರಿಗಳು ತಮ್ಮ ದರ್ಪಣವಿವರಣದಲ್ಲಿ ಇಂತಹ ಹಲವು ಉದಾಹರಣೆಗಳನ್ನು ಕೊಡುತ್ತಾರೆ: 
ನೇರಿದುವು ಬೆರಲ್-ನೇರಿದುವು ಬೆರಲ್ಗಳ್; 
ತೋರಿದುವು ಜಘನಂ-ತೋರಿದುವು ಜಘನಂಗಳ್ 

ಹೀಗೆ ಏಕವಚನ ಮತ್ತು ಬಹುವಚನ ಎರಡೂ ರೂಪಗಳು ಸಾಧ್ಯ, ಆದರೆ ಅದರ ಕ್ರಿಯಾಪದವು ಮಾತ್ರ ಬಹುವಚನವೇ ಎಂಬುದನ್ನು ಗಮನಿಸಿ.  ಎಂದರೆ ಬೆರಲ್, ಜಘನಂ ಎಂದು ಏಕವಚನವನ್ನೇ ಹೇಳಿದರೂ, ಕ್ರಿಯೆಯಲ್ಲಿ ಅದು ಬಹುವಚನವೇ (ಅಂತೆಯೇ ದಂಪತಿಗಳು ಬಂದರು - ದಂಪತಿ ಬಂದರು ಎರಡೂ ಸಾಧುವೇ).  ಆದರೆ ನಿಜಕ್ಕೂ ಏಕವಚನವಾಗಿಯೇ ಬಳಸುವ ಉದಾಹರಣೆಗಳನ್ನು ಕೊಡಬಹುದು: 
ಕಣ್ ಸೋಲ್ತುದು-ಕಣ್ ಸೋಲ್ತುವು/ಕಂಗಳ್ ಸೋಲ್ತುವು; 
ಮೊಲೆ ಮೂಡಿತು-ಮೊಲೆ ಮೂಡಿದುವು/ಮೊಲೆಗಳು ಮೂಡಿದುವು; 
ಕಾಲುಡುಗಿತು-ಕಾಲುಡುಗಿದುವು/ಕಾಲ್ಗಳುಡುಗಿದುವು.  

ಇಲ್ಲಿ ಕಣ್, ಮೊಲೆ, ಕಾಲು ಇವು ದ್ವಿವಚನಗಳೇ ಮತ್ತು ಅದರ ಕ್ರಿಯೆಯೂ ದ್ವಿವಚನವೇ ಎಂಬುದನ್ನು ಗಮನಿಸಿ.  ಏಕೆಂದರೆ ಒಂದು ಕಣ್ಣು ಸೋಲುವುದಿಲ್ಲ, ಒಂದು ಮೊಲೆ ಮೂಡುವುದಿಲ್ಲ, ಒಂದು ಕಾಲು ಉಡುಗುವುದಿಲ್ಲ, ಸೋತಿತು, ಮೂಡಿತು, ಉಡುಗಿತು ಎಂಬ ಏಕವಚನವನ್ನೇ ಹೇಳಿದರೂ ಅರ್ಥ ಮಾತ್ರ ದ್ವಿವಚನದ್ದೇ (ಕನ್ನಡದ ಬಹುವಚನದ್ದೇ).  ಆದ್ದರಿಂದ ಸಂಸ್ಕೃತದ ನಿತ್ಯದ್ವಿವಚನಗಳು ಕನ್ನಡದಲ್ಲಿ ಯಾವ ರೂಪದಲ್ಲೇ ಇರಲಿ ಪರಿಣಾಮದಲ್ಲಿ ಬಹುವಚನವೇ ಎಂಬುದು ಸ್ಪಷ್ಟ

ಅಲ್ಲಿಗೆ ಏನು ಹೇಳಿದ ಹಾಗಾಯಿತು?  ದ್ವಿವಚನವೆಂದರೆ ಒಂದಕ್ಕಿಂತ ಹೆಚ್ಚು, ಅಂದರೆ ಕನ್ನಡದ ಮಟ್ಟಿಗೆ ಬಹುವಚನವೇ.  ಆದ್ದರಿಂದ ಸಂಸ್ಕೃತದ ದ್ವಿವಚನವು ಕನ್ನಡದಲ್ಲಿ ಆಗೀಗ ರೂಪ ಬದಲಿಸಿದರೂ ಅರ್ಥತಃ ಬಹುವಚನವೇ ಆಗಬೇಕು.

ಮೇಲಿನ ಪೂರ್ಣ ಚರ್ಚೆಯ ಹಿನ್ನೆಲೆಯಲ್ಲಿ ದಂಪತಿ ಶಬ್ದವನ್ನು ಗಮನಿಸಬಹುದು.  ಅದು ನಿತ್ಯದ್ವಿವಚನವೂ ಹೌದು (ಆದ್ದರಿಂದ ಕನ್ನಡದಲ್ಲಿ ಬಹುವಚನವಾಗಬೇಕಾದ್ದು), ಸಮಸ್ತಪದವಾದ್ದರಿಂದ ಅದನ್ನು ಜೋಡಿ, ಯುಗ್ಮ ಮೊದಲಾದುವುಗಳಂತೆ ಏಕಪದವಾಗಿ ಪರಿಗಣಿಸಬಾರದು, ಮತ್ತು ದಂಪತಿ ಎಂಬುದು ಇಬ್ಬರು ವ್ಯಕ್ತಿಗಳನ್ನೊಳಗೊಳ್ಳುವುದರಿಂದ ಅದು ನಪುಂಸಕಲಿಂಗವಾಗಲಾರದು.  ಆದ್ದರಿಂದ ದಂಪತಿ ಎನ್ನುವ ನಾಮಪದಕ್ಕೆ ಹತ್ತಬೇಕಾದ್ದು ದಂಪತಿಗಳು ಎಂಬ ಸಾಮಾನ್ಯಲಿಂಗದ ಬಹುವಚನವೇ ಎಂಬುದು ಸಿದ್ಧವಾಗುತ್ತದೆ.  ನಾಮಪದಕ್ಕೆ ಲಿಂಗವಚನವಿಭಕ್ತಿಯನ್ನು ಹೇಳದೇ ಕೇವಲ ದಂಪತಿ ಎಂದರೂ  ಆದೀತು, ಆದರೆ ಕ್ರಿಯೆ ಮಾತ್ರ ಬಹುವಚನದ್ದೇ.  ಆದ್ದರಿಂದ ದಂಪತಿಗಳು ಬಂದರು-ದಂಪತಿ ಬಂದರು ಎರಡೂ ಸಾಧುಪ್ರಯೋಗಗಳೇ. ಆದರೆ ದಂಪತಿ ಬಂದಿತು ಅಥವಾ ದಂಪತಿ ಬಂದುವು ಎನ್ನುವುದು ಅಸಾಧು (ಹೀಗಾಗಿ, "ಹೆಗ್ಗಡೆ ದಂಪತಿ ನಿನ್ನಯ ಸೇವೆಗೆ ಕಾತರಿಸುತಿಹುದು" ಎನ್ನುವುದು ಸರ್ವಥಾ ಅಗೌರವಕರ)

Friday, September 14, 2018

ವಂದೇಮಾತರಂ - ಶ್ರೀ ಅರೋಬಿಂದೋ ಮತ್ತು ನಾನು

ಈ ಹಿಂದೆ, ಶ್ರೀ ಬಂಕಿಮಚಂದ್ರರ ಸುಪ್ರಸಿದ್ಧ ಗೀತೆ "ವಂದೇಮಾತರಂ" ಗೀತೆಯನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೆ, ಅದು ಇಲ್ಲಿದೆ.  ಈಗ ರಾಷ್ಟ್ರಗೀತೆಯ ವ್ಯಾಜದಿಂದ ವಂದೇಮಾತರಂ ಗೀತೆಯು ಮತ್ತೆ ಚರ್ಚೆಗೊಳಪಡುತ್ತಿದೆ.  ಮಿತ್ರರಾದ ಶ್ರೀ ಶರತ್ ಭಟ್ ಸೆರಾಜೆಯವರು ಈಗಾಗಲೇ ಪ್ರಕಟಗೊಂಡಿರುವ ವಂದೇಮಾತರಂ ಗೀತೆಯ ಐದು ಅನುವಾದಗಳನ್ನು ಒಗ್ಗೂಡಿಸಿ ವಿಶ್ಲೇಷಿಸಿದ್ದಾರೆ.  ಇಲ್ಲಿ, ಶ್ರೀ ಶಿಕಾರಿಪುರ ಹರಿಹರೇಶ್ವರ, ಶ್ರೀ ಅರೋಬಿಂದೋ ಮೊದಲಾದವರ ಅನುವಾದಗಳೊಡನೆ ನನ್ನ ಅನುವಾದವೂ ಸ್ಥಾನಗಳಿಸಿರುವುದು ಅಚ್ಚರಿಗೂಡಿದ ಆನಂದ.  ಈ ಅನುವಾದಗಳಲ್ಲಿ ಶ್ರೀ ಅರೋಬಿಂದೋ ಅವರ ಇಂಗ್ಲಿಷ್ ’ಭಾವಾನುವಾದ’ ಹಲವು ಕಾರಣಗಳಿಗೆ ನನ್ನ ಗಮನ ಸೆಳೆಯಿತು.  ಆ ಅನುವಾದ ಹೀಗಿದೆ:

Mother, I bow to thee!
Rich with thy hurrying streams,
bright with orchard gleams,
Cool with thy winds of delight,
Dark fields waving Mother of might,
Mother free.

Glory of moonlight dreams,
Over thy branches and lordly streams,
Clad in thy blossoming trees,
Mother, giver of ease
Laughing low and sweet!
Mother I kiss thy feet,
Speaker sweet and low!
Mother, to thee I bow.

(ಮೂಲ:
ವಂದೇ ಮಾತರಂ

ಸುಜಲಾಂ ಸುಫಲಾಂ
ಮಲಯಜ ಶೀತಲಾಂ
ಸಸ್ಯಶ್ಯಾಮಲಾಂ ಮಾತರಂ
ವಂದೇ ಮಾತರಂ

ಶುಭ್ರಜ್ಯೋತ್ಸ್ನಾಪುಲಕಿತ ಯಾಮಿನೀಂ
ಫುಲ್ಲಕುಸುಮಿತಧ್ರುಮದಳ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ

ವಂದೇ ಮಾತರಂ)

ಇದನ್ನು ಪ್ರಸ್ತುತಪಡಿಸುತ್ತಾ ಸೆರಾಜೆಯವರು "ಕೀಟ್ಸ್,ಷೆಲ್ಲಿ ಮುಂತಾದವರನ್ನು ನೆನಪಿಸುವ, ಮೂಲದ ಪ್ರೇರಣೆ ಇರುವ ಪ್ರತಿಸೃಷ್ಟಿ ಅನ್ನಬಹುದಾದ ಅನುವಾದ" ಎಂಬ ವಿವರಣೆ ನೀಡುತ್ತಾರೆ.  ಇದು ಅತ್ಯಂತ ಸಮರ್ಪಕವಾದ ವಿವರಣೆ, ಹೀಗಲ್ಲದೇ ಬೇರೆ ರೀತಿಯಲ್ಲಿ ವಿವರಿಸಲಾಗುವುದಿಲ್ಲ.  ಒಂದು ಸ್ವತಂತ್ರಕೃತಿಯಾಗಿ ಇದು ಸೊಗಸಾದ ಪದ್ಯವೆನಿಸಿದರೂ, ಒಂದು ಅನುವಾದವಾಗಿ ಹಲವು ಸ್ತರಗಳಲ್ಲಿ ಸೋತಿದೆಯೆಂದು ನನ್ನ ಅನಿಸಿಕೆ.  ಅರವಿಂದರಂಥವರೂ ಸಸ್ಯಶ್ಯಾಮಲೆಯನ್ನು dark fields ಎಂದು ಅನುವಾದಿಸಿದ್ದು ಅಚ್ಚರಿಯನ್ನುಂಟುಮಾಡುತ್ತದೆ. ಶ್ಯಾಮ ಎಂಬುದಕ್ಕೆ dark ಎನ್ನುವ ಭಾವವಿದೆಯೆಂಬುದೇನೋ ನಿಜ, ಆದರೆ ಅದು ಒಂದೊಂದು ವರ್ಣ-ವಸ್ತುವಿನೊಡನೆ ಬೇರೆಬೇರೆ ಅರ್ಥಚ್ಛಾಯೆಗಳನ್ನು ತಳೆಯುತ್ತದೆಯಲ್ಲವೇ?  ಅಲ್ಲದೇ ಸಸ್ಯಶ್ಯಾಮಲಾಂ ಎನ್ನುವ ಪದದಲ್ಲಿ fields ಎನ್ನುವ ಸೂಚನೆಯೇ ಇಲ್ಲ - ಅದು fields ಇರಬಹುದು, gardens ಇರಬಹುದು, forests ಕೂಡ ಇರಬಹುದು.  ದಟ್ಟ ಹಸಿರು ಎನ್ನುವುದು ಭಾವ.  ಆದರೆ ಇಂಗ್ಲಿಷಿನಲ್ಲಿ dark green ಎಂಬ ಅನುವಾದವೂ ಆ ಭಾವಕ್ಕೆ ಹೊಂದುವುದಿಲ್ಲ.  ಹಸಿರು ಎಂಬ ಪದ ಮೂಲದಲ್ಲಿ ಇಲ್ಲವೆಂಬುದು ನಿಜ, ಆದರೆ ಅದು ಸಸ್ಯ ಎಂಬ ವಸ್ತುವಿನ ಸ್ವಭಾವದಲ್ಲಿಯೇ ಅಂತರ್ಗತವಾಗಿದೆಯಲ್ಲ, ಅದನ್ನು ಅನುವಾದದಲ್ಲಿ ತರದೇ ಬೇರೆ ದಾರಿಯಿಲ್ಲ.

ಜೊತೆಗೆ, ಜಲ, ಫಲ, ಮಲಯಜಶೀತಲ, ಸಸ್ಯಶ್ಯಾಮಲ ಇವೆಲ್ಲಾ ಆ ತಾಯಿಯ ವ್ಯಕ್ತಿತ್ವದ ಭಾಗಗಳೇ ಎಂಬ ಜೀವಂತ ಚಿತ್ರಣವು ಮೂಲದಲ್ಲಿದ್ದರೆ, ಅರವಿಂದರ ಅನುವಾದದಲ್ಲಿ ಅವೆಲ್ಲಾ hurrying streams, orchard gleams, winds of delight, dark fields ಮೊದಲಾಗಿ ಕೇವಲ ಭೌತಿಕ ವಸ್ತುಗಳಾಗಿ ಬಂದಿವೆ - ಅದು ಮೂಲದ ಆಶಯವಲ್ಲ. ಅಲ್ಲದೇ, ಸು ಎಂಬ ಉಪಸರ್ಗಕ್ಕೆ ಸಂಸ್ಕೃತದಲ್ಲಿ ಬಹು ವಿಶಾಲವಾದ ಅರ್ಥಗಳಿವೆ.  ಅವೆಲ್ಲವನ್ನೂ ಒಳಗೊಳ್ಳುವ ಅರ್ಥವ್ಯಾಪ್ತಿಯಿರುವ ಸಮಾನ ಪದವು ಇಂಗ್ಲಿಷಿನಲ್ಲಿ ಸಿಗುವುದು ಕಷ್ಟ.  Good ಎನ್ನುವ ಪದವನ್ನು ಬಳಸಬಹುದಾದರೂ, ಅದು ಅತಿಬಳಕೆಯ ಕಾರಣದಿಂದ ಬಹಳ ಸಪ್ಪೆಯಾದ ಅನುವಾದವಾಗುತ್ತದೆ, ವಿಶೇಷವಾದ ಏನನ್ನೂ ಹೇಳಿದಂತಾಗದು.  ಆದ್ದರಿಂದ ಆಯಾ ವಸ್ತುವಿನಲ್ಲಿ ಸು ಎಂಬ ಉಪಸರ್ಗವು ಪ್ರತಿನಿಧಿಸುವ ಮುಖ್ಯ ಗುಣವನ್ನು ಆರಿಸಿಕೊಂಡು ಅನುವಾದಕನು ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.  ಆದರೆ ಹಾಗೆ ಆರಿಸಿಕೊಳ್ಳುವ ವಿಶೇಷಣವು ಆ ವಸ್ತುವಿನಲ್ಲಿ ಪರಿಗಣಿಸಬಹುದಾದ ಅತಿ ಮುಖ್ಯ ಅಂಶವಾಗಿರಬೇಕಾಗುತ್ತದೆ.  ಇಲ್ಲಿ ಶ್ರೀ ಅರವಿಂದರು ಸು ಎಂಬುದನ್ನು hurrying ಎಂದೂ gleam ಎಂದೂ ಅನುವಾದಿಸಿದ್ದಾರೆ. ಆದರೆ ಹರಿವಾಗಲೀ ಹೊಳಪಾಗಲಿ ನೀರು ಹಣ್ಣುಗಳ ಮುಖ್ಯಾಂಶಗಳಲ್ಲ. ನೀರಿನಲ್ಲಿ ಸವಿ, ಹಣ್ಣಿನಲ್ಲಿ ತಾಜಾತನ/ರುಚಿ ಇವು ಆ ವಸ್ತುವು ’ಸು’ ಎನ್ನಿಸಿಕೊಳ್ಳಲು ಇರುವ ಮಾನದಂಡಗಳು.  ಹಾಗೆಯೇ ಮಾರುತಗಳಲ್ಲಿ ಮಲಯಮಾರುತಕ್ಕೆ ಬಹಳ ವಿಶಿಷ್ಟಸ್ಥಾನವಿದೆ. ಸಮುದ್ರದ ಮೇಲಿನಿಂದಲೂ ತಂಗಾಳಿ ಬೀಸಬಹುದು, ಅದು delightಅನ್ನು ಸಹಾ ತರುತ್ತದೆ, ಆದರೆ ಮಲಯಮಾರುತ ಸ್ಪಷ್ಟವಾಗಿಯೇ ನಮೂದಿಸಬೇಕಾದ್ದು. Cool with winds of delights ಎನ್ನುವಲ್ಲಿ ಮಲಯಮಾರುತದ ಸುಗಂಧ ಶೀತಲತೆ ಕಾಣುವುದಿಲ್ಲ.

ಅದೇ ರೀತಿ ಅನುವಾದದ ಉಳಿದ ಭಾಗಗಳನ್ನೂ ನೋಡಬಹುದು.  ಶುಭ್ರಜ್ಯೋತ್ಸ್ನಾಪುಲಕಿತಯಾಮಿನೀಂ (ಹಾಲುಬೆಳದಿಂಗಳಿನಿಂದ ಪುಳಕಿತವಾದ ರಾತ್ರಿಗಳನ್ನುಹೊಂದಿದವಳು) ಎಂಬುದನ್ನು Glory of moonlight dreams, over thy branches and lordly streams ಎಂದು ಶ್ರೀ ಅರವಿಂದರು ಅನುವಾದಿಸುತ್ತಾರೆ.  ಇದು ಮೂಲವನ್ನು ಎಲ್ಲಿಯೂ ಮುಟ್ಟುವುದೇ ಇಲ್ಲ.  ಫುಲ್ಲಕುಸುಮಿತಧ್ರುಮದಳಶೋಭಿನಿಯು ಸಪ್ಪೆಯಾಗಿ Clad in blossoming trees ಆಗುತ್ತಾಳೆ.  ಸುಹಾಸಿನಿ ಎಂಬುದಕ್ಕೆ One with a sweet smile ಎಂಬ ಸರಳ ಅನುವಾದದ ಬದಲು "Laughing low and sweet" ಎಂದು ಅನುವಾದಿಸುತ್ತಾರೆ.  ಮುಗುಳ್ನಗೆಗೂ ನಗುವುದಕ್ಕೂ (smile and laughter) ಅಜಗಜಾಂತರ ವ್ಯತ್ಯಾಸವಿದೆ.  Laughing low ಎನ್ನುವುದು ಅಪಹಾಸ್ಯದ ಮುಸಿನಗೆಯಾಗಬಲ್ಲುದೇ ವಿನಾ ಮುಗುಳ್ನಗೆಯಾಗಲಾರದು.  ಮತ್ತು  Laughing low and sweet ಎನ್ನುವುದು ಕಪಟದ ನಗೆಯಲ್ಲದೇ ಬೇರೊಂದಾಗಲಾರದು.  ಸುಮಧುರಭಾಷಿಣಿಯದ್ದೂ ಇದೇ ಕತೆ - sweet words ಆಗಬಹುದಾದದ್ದು speaker sweet and low ಆಗಿದೆ.  ಉದ್ದಕ್ಕೂ ಅನುವಾದಕರು streams-gleams, delight-might, dreams-streams, trees-ease, sweet-feet, low-bow ಎಂದು ಪ್ರಾಸಪದಗಳನ್ನು ಸಾಧಿಸಲು ಅಸಾಧ್ಯ ಹೆಣಗಿದ್ದಾರೆಂಬುದು ಸ್ಪಷ್ಟವಾಗಿದೆ.  ಆದರೆ ಈ ಪ್ರಾಸಪದಗಳಿಗಾಗಿ ತೆರಬೇಕಾದ ಬೆಲೆ ಮಾತ್ರ ಬಹು ದೊಡ್ಡದು - ಅದು ಮೂಲದ ಭಾವ!

ಸೆರಾಜೆಯವರು ಹೇಳುವಂತೆ, ಇದು ಮೂಲದ ಸ್ಫೂರ್ತಿಯಿಂದ ಬಂದ ಪ್ರತಿಸೃಷ್ಟಿಯಿರಬಹುದು, ಅನುವಾದ/ಭಾವಾನುವಾದವೆನ್ನುವುದು ಕಷ್ಟ.

ಒಂದು ನುಡಿಯಿಂದ ಇನ್ನೊಂದು ನುಡಿಗೆ ಅನುವಾದಿಸುವುದು ಸರಳವಲ್ಲ.  ಪದಪದ ಅನುವಾದವು ಎಷ್ಟೋ ಬಾರಿ ಅನುವಾದವೇ ಆಗುವುದಿಲ್ಲ, ಬದಲಿಗೆ ಅಪವಾದವಾಗುತ್ತದೆ.  ಹಾಗೆಯೇ ಭಾವಾನುವಾದವು ಅನೇಕ ಬಾರಿ ಪಲಾಯನವಾದವೂ ಆಗಬಹುದು.  ಸಮರ್ಥ ಅನುವಾದಕನು ಇವೆರಡು ಅತಿಗಳ ನಡುವಿನ ದಾರಿ ತುಳಿಯುತ್ತಾನೆ, ಮೂಲದ ಅರ್ಥ, ಭಾವ, ಪದಗಳ ನಾದ, ಲಯ ಇವೆಲ್ಲವನ್ನೂ ಹಿಡಿದಿಡಲು ಸಾಧ್ಯವಾದಷ್ಟು ಶ್ರಮಿಸುತ್ತಾನೆ.  ಈ ಮಾರ್ಗದಲ್ಲಿ ಕೆಲವೊಮ್ಮೆ ಆತ ಪದಪದ ಅನುವಾದ, ಅಥವಾ ಭಾವಾನುವಾದ ಇವುಗಳ ನಡುವೆ ತುಯ್ಯಬಹುದು, ಆದರೆ ಒಂದು ಅತಿಯನ್ನು ಹಿಡಿದು ಹೊರಟರೆ ಅನುವಾದ ಕೆಡುತ್ತದೆಯೆಂಬ ಪ್ರಜ್ಞೆ ಆತನಲ್ಲಿ ಜಾಗೃತವಾಗಿರುತ್ತದೆ.  ಅದು ತೂಕಡಿಸಿದಾಗ ಅನುವಾದ ಕೆಡುತ್ತದೆ.  ಈ ದಿಕ್ಕಿನಲ್ಲಿ ಚಿಂತಿಸುತ್ತಾ ನಾನೂ ಇದೊಂದು ಅನುವಾದವನ್ನು ಪ್ರಯತ್ನಿಸಿದೆ.  ನಾನೇ ವಿವರಿಸಿದ ಅಂಶಗಳು ಈ ಅನುವಾದದಲ್ಲಿ ಎಷ್ಟು ಮಟ್ಟಿಗೆ ಪಾಲಿತವಾಗಿವೆಯೋ ಹೇಳಲಾರೆ, ಒಂದು ಅನುವಾದದಲ್ಲಿ ಅನಿವಾರ್ಯವಾಗಿ ಇದ್ದೇ ಇರುವ ದೋಷಗಳೆಲ್ಲಾ ಇದರಲ್ಲಿಯೂ ಇದೆಯೆಂದು ಬಲ್ಲೆ, ಮೂಲದ ಸಂಕ್ಷಿಪ್ತತೆ ಇಲ್ಲಿ ಬಂದಿಲ್ಲ, ಇಂಗ್ಲಿಷಿನಲ್ಲಿ ಬಳಸಿರುವ ಪ್ರಾಸಪದಗಳು ಕೇವಲ ಸಮೀಪಪ್ರಾಸಗಳಷ್ಟೇ, ಮತ್ತು ಅದನ್ನೂ ಹಟ ಹಿಡಿದು ಪಾಲಿಸಿಲ್ಲ.  ಸಾಧ್ಯವಾದಷ್ಟೂ ಪ್ರಾಸವನ್ನು ಪಾಲಿಸಿದ್ದರೂ, ಎಲ್ಲೆಲ್ಲಿ ಅದರಿಂದ ಮೂಲದ ಭಾವಕ್ಕೆ ಭಂಗಬರಬಹುದೆನ್ನಿಸುತ್ತದೆಯೋ ಅಲ್ಲೆಲ್ಲಾ ಪ್ರಾಸಕ್ಕೆ ಕೈಕೊಟ್ಟಿದ್ದೇನೆ.  ಆದರೆ ಮೂಲಕ್ಕೆ ಸಾಧ್ಯವಾದಷ್ಟು ಹತ್ತಿರ ತರಲು ಯತ್ನಿಸಿದ್ದೇನೆಂಬ ನಂಬಿಕೆ ನನ್ನದು.  ಇದು ಯಾವ ರೀತಿಯಲ್ಲೂ ಮೇಲಿನ ಶ್ರೀ ಅರವಿಂದರ ಅನುವಾದಕ್ಕೆ ಹೆಗಲೆಣೆಯೆನ್ನುವುದಿರಲಿ, ಅದರೊಡನೆ ಹೋಲಿಸುವ ಪ್ರಯತ್ನವೂ ಸರ್ವಥಾ ಅಲ್ಲ.  ಮೇಲಿನ ವಿಷಯಗಳನ್ನು ಚಿಂತಿಸುತ್ತಿದ್ದಾಗ ಹೊಮ್ಮಿದ ಮತ್ತೊಂದು ಅನುವಾದವಷ್ಟೇ:

To thee I bow, O mother

Rich with sweet streams, fruits so fresh,
And cool with fragrant mountain breeze,
And green, O mother, so rich and lush
To thee I bow, O mother

O thou, with nights tingled by moonlight bright
Adorned with woods blooming,
With those soft smiles and words so sweet,
Comforting with bounties

To thee I bow, O mother

ಈ ಬರಹದ ಇಂಗ್ಲಿಷ್ ಅವತರಣಿಕೆಗಾಗಿ ಇಲ್ಲಿ ಚಿಟುಕಿಸಿ.