Monday, February 27, 2017

ಲಿಪಿ’ಸುಧಾರಣೆ’ - "ಆಕ್ ಯಾವೊತ್ತೂ? - ಆ್ಯ" - ಸಂವಾದ

ನನ್ನ ಬ್ಲಾಗ್ ಬರಹ "ಲಿಪಿ’ಸುಧಾರಣೆ’ - "ಆಕ್ ಯಾವೊತ್ತೂ? - ಆ್ಯ"" ಇದಕ್ಕೆ ಹಿರಿಯ ವಿದ್ವಾಂಸರಾದ ಶ್ರೀಯುತ ಸುಧೀಂದ್ರ ದೇಶಪಾಂಡೆಯವರ ಪ್ರತಿಕ್ರಿಯೆ ಅವರ ಸಲ್ಲಾಪ ಬ್ಲಾಗಿನಲ್ಲಿ ಪ್ರಕಟವಾಗಿದೆ "ಕನ್ನಡದಲ್ಲಿ apple".  ಅದಕ್ಕೆ ಪ್ರತಿಕ್ರಿಯೆಯನ್ನು ಬರೆಯುತ್ತಾ ಅದೇ ಒಂದು ಲೇಖನವಾದ್ದರಿಂದ ಅದನ್ನಿಲ್ಲಿ ಪ್ರಕಟಿಸುತ್ತಿದ್ದೇನೆ.  ಕನ್ನಡದ ಹಿತದೃಷ್ಟಿಯಿಂದ ಇಂಥಾ ವಿದ್ವಚ್ಚರ್ಚೆಗಳು ಹೆಚ್ಚಾಗಲೆಂದು ನನ್ನ ಹಾರೈಕೆ.  ಆಸಕ್ತರು ಎರಡೂ ಲೇಖನಗಳನ್ನು ಬೇರೆಬೇರೆ ಕಿಟಕಿಯಲ್ಲಿ ತೆರೆದಿಟ್ಟುಕೊಂಡು ಓದಿದರೆ ಚೆನ್ನು.

ಪ್ರಿಯ ಸುಧೀಂದ್ರ ದೇಶಪಾಂಡೆಯವರೇ,

ನನ್ನದೊಂದು ಬರಹ ತಮ್ಮ ಬ್ಲಾಗಿನಲ್ಲಿ ಕಾಣಿಸಿಕೊಂಡುದು ನನಗೆ ಹೆಮ್ಮೆ.  ಇದಕ್ಕಾಗಿ ತಮಗೆ ಧನ್ಯವಾದಗಳು.  ವಿಷಯದ ವಾಸ್ತವ ಚರ್ಚೆಗೆ ಹೋಗುವ ಮುನ್ನ ಕೆಲವು ವೈಯಕ್ತಿಕ ಗ್ರಹಿಕೆಗಳನ್ನು ಸ್ಪಷ್ಟಪಡಿಸಲಿಚ್ಛಿಸುವೆ.  ಮೊದಲಿಗೆ, ನನ್ನ ಲೇಖನವು ಪದಾರ್ಥಚಿಂತಾಮಣಿಯಲ್ಲಿ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯೆಯಲ್ಲ - ಪದಾರ್ಥಚಿಂತಾಮಣಿಯ ಚರ್ಚೆಯನ್ನು ಸ್ಥೂಲವಾಗಿ ಗಮನಿಸಿದ್ದೆನಾದರೂ, ಲೇಖನವನ್ನು ಬರೆದಾಗ ನನ್ನ ದೃಷ್ಟಿಯಲ್ಲಿದ್ದದ್ದು ರಾಜೇಶರು ಅವರ ಪುಟದಲ್ಲಿ ಪ್ರಕಟಿಸಿದ್ದ ಲೇಖನವಷ್ಟೇ.  ಇದೀಗ ನಿಮ್ಮ ಲೇಖನವನ್ನೋದಿದಮೇಲೆ, ಪದಾರ್ಥಚಿಂತಾಮಣಿಯ ಚರ್ಚೆಯನ್ನೂ, ವಿಶೇಷವಾಗಿ ತಮ್ಮ ಪ್ರತಿಕ್ರಿಯೆಗಳನ್ನೂ ಮತ್ತೊಮ್ಮೆ ಕೂಲಂಕಶವಾಗಿ ಓದಿಕೊಂಡೆ.  ನಿಜ ಹೇಳಬೇಕೆಂದರೆ, ಕೆಲವು ವಿಷಯಗಳನ್ನು ಬಿಟ್ಟರೆ ತಮ್ಮ ನಿಲುವುಗಳ ಬಗ್ಗೆ ನನಗೆ ಒಮ್ಮತವೇ ಇದೆ (ಅಪವಾದಗಳನ್ನು ಮುಂದೆ ಚರ್ಚಿಸುತ್ತೇನೆ).  ಅಲ್ಲದೇ ಒಬ್ಬ ಅಪರೂಪದ ವಿದ್ವಾಂಸರಾಗಿ, ಹಿರಿಯರಾಗಿ ತಮ್ಮನ್ನು ಹಲವು ವರ್ಷಗಳಿಂದ ಬಲ್ಲ ನಾನು ತಮ್ಮನ್ನು "ಮಂದ ಕಿವಿಯ ಸುಧಾರಣಾವಾದಿ"ಗಳ ಗುಂಪಿಗೆ ಸೇರಿಸುವುದು ಶಕ್ಯವೇ ಇಲ್ಲ.  ಇನ್ನೂ ಮುಂದುವರೆದು "Appleದಲ್ಲಿಯ ಉಚ್ಚಾರವು ‘ಆ’ಸ್ವರಕ್ಕೆ ‘ಯ’ಕಾರದ ಒತ್ತನ್ನು ಕೊಟ್ಟಾಗ... ಇದು ‘ಅತಿ ಸನಿಹದ’ ಉಚ್ಚಾರ ಎಂದಷ್ಟೇ ಹೇಳುತ್ತಿದ್ದೇವೆ. ನಿಜ ಹೇಳಬೇಕೆಂದರೆ, ಈ ಭೂಮಂಡಲದ ಮೇಲೆ ಎಷ್ಟು ಮಾನವರಿದ್ದಾರೊ, ಅಷ್ಟೇ ಉಚ್ಚಾರಪ್ರಭೇದಗಳಿವೆ.  ಆದುದರಿಂದ ಯಾವುದು ಗ್ರಾಹ್ಯ ಯಾವುದು ಅಗ್ರಾಹ್ಯ ಎನ್ನುವುದನ್ನು ನಾವು ಸಮಾಧಾನದಿಂದ ಲೆಕ್ಕಿಸುವುದು ಒಳಿತು" ಎಂಬ ಪ್ರಬುದ್ಧವಾದ ಮಾತು ತಮ್ಮಂತಹ ಹಿರಿಯ ವಿದ್ವಾಂಸರಿಂದ ಬರಬಲ್ಲುದಷ್ಟೇ ಹೊರತು "ಮಂದ ಕಿವಿಯ ಸುಧಾರಣಾವಾದಿ"ಗಳಿಂದ ಖಂಡಿತಾ ಅಲ್ಲ.  ""A = ಅ (ಅರ್ಧ) + ಯಾ" ಎನ್ನುವುದು ಋ = ರ್, ಐ = ಅಯ್ ಅಥವಾ ಔ = ಅವ್ ಎನ್ನುವಷ್ಟೇ ತಪ್ಪು ವಾದ" ಎಂಬ ನನ್ನ ಪೂರ್ಣವಾಕ್ಯವನ್ನಷ್ಟು ಪರಿಗಣಿಸಬೇಕೆಂದು ವಿನಂತಿ.  ಅಲ್ಲಿನ ಇತರ ಉದಾಹರಣೆಗಳು ಎಲ್ಲಿಂದ ಬರುತ್ತವೆಂಬುದು ತಮಗೆ ಗೊತ್ತು.  ಅಂಥಾ ’ಸುಧಾರಣಾವಾದಿ’ಗಳ ಉದಾಹರಣೆಯನ್ನು ತಾವೇ ತಮ್ಮ ಲೇಖನದಲ್ಲೇ ಹಿಂದಿನ ಪ್ಯಾರಾದಲ್ಲೇ ಸೂಚಿಸಿದ್ದೀರಿ.  ಇಷ್ಟು ಹೇಳಿದ ಮೇಲೆ, ತಾವು ಎತ್ತಿದ ಆಕ್ಷೇಪಗಳನ್ನಿಷ್ಟು ಪರಿಶೀಲಿಸಬಹುದು.

(೧) "Appleದಲ್ಲಿಯ ಉಚ್ಚಾರವು ‘ಆ’ಸ್ವರಕ್ಕೆ ‘ಯ’ಕಾರದ ಒತ್ತನ್ನು ಕೊಟ್ಟಾಗ (ಆ್ಯ) ಇರುವಂತೆಯೇ ಇರುತ್ತದೆ ಎಂದು ಮಂದಕಿವಿಯ ನಾವ್ಯಾರೂ ಹೇಳುತ್ತಿಲ್ಲ. ಆದರೆ ಇದು ‘ಅತಿ ಸನಿಹದ’ ಉಚ್ಚಾರ ಎಂದಷ್ಟೇ ಹೇಳುತ್ತಿದ್ದೇವೆ."
ಇದು ಅತಿ ಸನಿಹದ ಉಚ್ಚಾರ ಎಂಬುದು ನಾನೂ ಒಪ್ಪತಕ್ಕ ಮಾತೇ, ಇಷ್ಟರಲ್ಲಿ ತಕರಾರೇನು ಇಲ್ಲ.  ಹಾಗಿದ್ದರೆ "ಆ್ಯ" ಎಂದು ಹೇಳುವುದರಲ್ಲಿ ತಪ್ಪೇನು ಎನ್ನುವುದಕ್ಕೆ ಸಮಾಧಾನವನ್ನು ನನ್ನ ಲೇಖನದಲ್ಲೇ ಕೊಟ್ಟಿದ್ದೇನೆ, ತಮ್ಮ ಮುಂದಿನ ಅಂಶಗಳ ಮೇಲಿನ ನನ್ನ ಪ್ರತಿಕ್ರಿಯೆಯಲ್ಲಿ ಇದನ್ನು ಇನ್ನಷ್ಟು ವಿವರವಾಗಿ ಪರಿಶೀಲಿಸಬಹುದು.

(೨) "ನಾನಾದರೂ ಸಹ ಅದೇ ತರ್ಕವನ್ನು ಬಳಸಿ ‘ಆ’ ಸ್ವರಕ್ಕೆ ‘ಯ’ದ ಒತ್ತು ಕೊಡಬೇಕು (ಆ್ಯ)". ಏಕೆಂದರೆ ಅದೇ ಅತಿ ಹತ್ತಿರದ ಉಚ್ಚಾರ ಎಂದು ಹೇಳುತ್ತಿರುವುದು. ಅವರು ಹೇಳಿದಂತೆ, ‘ಯಾಪಲ್’ ಎಂದು ಬರೆದರೆ, ಈ ಪದದ ಉಚ್ಚಾರವು yaple ಎಂದು ಆಗುವುದು!"
ಪ್ರಸ್ತುತ ಆ ಅಥವಾ ಯಾ ಎಂಬ ಸಾಧ್ಯವಾದಷ್ಟು ಹತ್ತಿರದ ಸಂಕೇತವನ್ನು ಬಳಸುತ್ತಿರುವ ಉದ್ದೇಶವಾದರೂ ಏನು?  ನಮ್ಮ ಈಗಿರುವ ಚೌಕಟ್ಟಿನಲ್ಲಿ ಇದಕ್ಕೆ ಅತಿ ಹತ್ತಿರದ್ದಾಗಿ ಒದಗುವುದು ಎಂದು ತಾನೆ?  ಈಗ ಆ್ಯ ಎಂಬ ಹೊಸ ಅಕ್ಷರವೊಂದನ್ನು ತಂದೂ ಅದು ಮೂಲ ಉಚ್ಚಾರಣೆಯನ್ನು ಯಥಾವತ್ ಪ್ರಸ್ತುತಪಡಿಸಲಾಗದೇ ಕೇವಲ ’ಹತ್ತಿರ’ದ ಉಚ್ಚಾರಣೆಯಷ್ಟೇ ಆಗುವುದಾದರೆ, ಅದಕ್ಕಾಗಿ ಇರುವ ಚೌಕಟ್ಟನ್ನೇ ಸಡಿಲಿಸುವಂಥ ದೊಡ್ಡ ಬೆಲೆಯನ್ನು ತೆರುವ ಅಗತ್ಯವೇನು (ಅದು ’ದೊಡ್ಡ ಬೆಲೆ’ ಏಕೆನ್ನುವುದನ್ನು ಮುಂದೆ ವಿವರಿಸುತ್ತೇನೆ).

(೩a) "ಅವರ ಪ್ರಯತ್ನವನ್ನು ನಾವು ಸ್ವಲ್ಪವಾದರೂ ಮುಂದುವರಿಸಿ, ಲಿಪಿವರ್ಧನೆಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುವುದು ಸರಿಯೊ ಅಥವಾ ಇದ್ದ ಸಂಕೇತಗಳನ್ನು ಕತ್ತರಿಸಿ ಹಾಕಿ ನಮ್ಮ ದಡ್ಡ ಗೋಣನ್ನು ಮೇಲೆತ್ತುವುದು ಸರಿಯೊ?"
ಲಿಪಿವರ್ಧನೆ ಆಗಬಾರದೆಂಬುದು ನನ್ನ ಅಭಿಪ್ರಾಯವಲ್ಲ, ಆದರೆ ಅದಾಗುವ ಮೊದಲು ಈಗಿರುವ ಚೌಕಟ್ಟನ್ನು ಕೂಲಂಕಷವಾಗಿ ಪರಿಶೀಲಿಸಬೇಕೆನ್ನುವುದು, ಹೊಸ ಸೇರ್ಪಡೆಗಳನ್ನು ಇರುವ ಚೌಕಟ್ಟಿನಲ್ಲಿ ನಿರ್ದಿಷ್ಟವಾಗಿ ಎಲ್ಲಿ ಹೇಗೆ ಸೇರಿಸಬೇಕೆನ್ನುವುದೂ, ಹಾಗೆ ಬರುವ ಸೇರ್ಪಡೆಗಳು ಭಾಷೆಯ ಈಗಿನ ಚೌಕಟ್ಟಿಗನುಗುಣವಾಗಿ ಎಂಥ ಸೇರ್ಪಡೆಯಾಗಿರಬೇಕೆನ್ನುವುದನ್ನು ನಿರ್ಧರಿಸಬೇಕೆನ್ನುವುದೂ, ಹಾಗೆ ನಿರ್ಧರಿಸುವಾಗ ಕೇವಲ ಈಗಿನ ಅಗತ್ಯವಷ್ಟನ್ನಲ್ಲ, ಈ ಬದಲಾವನೆಯ ಭೂತ ಭವಿಷ್ಯದ್ವರ್ತಮಾನಗಳ ಪರಿಣಾಮವನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವೆಂಬುದು ನನ್ನ ಅಭಿಪ್ರಾಯ.  ಇಲ್ಲದಿದ್ದರೆ ಬದಲಾವಣೆ ಮಾಡಬೇಕೆನ್ನುವುದೇ ಒಂದು ಫ್ಯಾಶನ್ ಆಗಿ ಸೂಕ್ಷ್ಮವಾಗಿರುವ ಕನ್ನಡದ ಪರಿಸ್ಥಿತಿ ಮತ್ತಷ್ಟು ಕಠಿನವಾಗಬಾರದೆಂಬುದು ನನ್ನ ಆಶಯ.

ಇನ್ನು "ಸಂಕೇತಗಳನ್ನು ಕತ್ತರಿಸಿ ಹಾಕುವ" ಸಲಹೆಗಳು ನನ್ನಿಂದ ಬಂದಿಲ್ಲವಲ್ಲ!  ನಾನೂ ಅಂಥಾ ಪ್ರಯತ್ನಗಳ ವಿರೋಧಿಯೇ ಎಂಬುದನ್ನು ತಾವು ಬಲ್ಲಿರಿ.

(೩b) "ನಾವು ಸಂಸ್ಕೃತವನ್ನು ಗೌರವಿಸೋಣ. ಆದರೆ ನಾಗರಿ ಲಿಪಿಯ ಅಸಮರ್ಪಕತೆಯನ್ನು ಅಳವಡಿಸಿಕೊಳ್ಳುವುದು ಬೇಡ. ಏಕೆಂದರೆ ದೇವನಾಗರಿ ಲಿಪಿ ಇದೆಯಲ್ಲ, ಇದು inadequate ಲಿಪಿ. ಈ ಲಿಪಿಯನ್ನು ಆಧರಿಸಿದ ಸಂಸ್ಕೃತ ವ್ಯಾಕರಣದ ಕೆಲವು ಲೋಪಗಳನ್ನು ನಾವು ಕನ್ನಡ ವ್ಯಾಕರಣಕ್ಕೆ ಅನ್ವಯಿಸಬಾರದು.  ಏಕೆಂದರೆ ದೇವನಾಗರಿ ಲಿಪಿ ಇದೆಯಲ್ಲ, ಇದು inadequate ಲಿಪಿ"
ದೇವನಾಗರಿ ಸ್ವಯಂಸಂಪೂರ್ಣವಲ್ಲ ಎಂಬುದು ವೇದ್ಯವಾಗಿಯೇ ಇದೆ.  ಇದರಲ್ಲಿ ತಕರಾರಿಲ್ಲ.  ಮತ್ತು ಈ ಲಿಪಿಯನ್ನು ಆಧರಿಸಿದ ಸಂಸ್ಕೃತ ವ್ಯಾಕರಣದ ಕೆಲವು ಲೋಪಗಳನ್ನು ನಾವು ಕನ್ನಡ ವ್ಯಾಕರಣಕ್ಕೆ ಅನ್ವಯಿಸಬಾರದು ಎಂಬುದು ನನ್ನ ಅಭಿಪ್ರಾಯ ಕೂಡ.  ಆದರೆ ನಾವು ಹಾಗೆಲ್ಲಿ ಮಾಡುತ್ತಿದ್ದೇವೆ?  ಕನ್ನಡದ ವ್ಯಾಕರಣವು ಇದುವರೆಗೆ ಅನುಸರಿಸಿರುವ ದಾರಿಯೂ ಇದೇ ಅಲ್ಲವೇ?  ಸಂಸ್ಕೃತದ ತರ್ಕಬದ್ಧವಾದ ವೈಜ್ಞಾನಿಕವಾದ ಹಂದರವನ್ನು ಒಳಗೊಳ್ಳುವ ಮೂಲಕ ಅದರ ಲಾಭಗಳನ್ನು ಪಡೆದಿದೆ, ಆದರೆ ಅದೇ ಸಮಯದಲ್ಲಿ ಅದನ್ನು ಕನ್ನಡದ ಪ್ರಸ್ತುತತೆಗನುಗುಣವಾಗಿ ಮಾರ್ಪಡಿಸಿಕೊಂಡಿದೆ ಕೂಡ.  ಅದೇ ಕಾರಣಕ್ಕೇ ಸಂಸ್ಕೃತದಲ್ಲಿಲ್ಲದ ಎ ಮತ್ತು ಒ ಅಕ್ಷರಗಳನ್ನೂ, ಱೞಳ ಅಕ್ಷರಗಳನ್ನೂ ಕನ್ನಡದಲ್ಲಿ ನಾವು ಕಾಣುತ್ತೇವೆ.  ಅದರಲ್ಲೂ ತನ್ನ ಕಾಲಕ್ಕಾಗಲೇ ಬಳಕೆಯಿಂದ ಮರೆಯಾಗಿಯೇ ಹೋಗಿದ್ದರೂ ಱೞ ಅಕ್ಷರಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನಗಳನ್ನು ಕೇಶಿರಾಜನು ಮಾಡಿರುವುದನ್ನು ಕಾಣಬಹುದು (ತಿಳಿ ದೇಶೀಯಮಮೈದಂ; ಕಳೆ ನೀಂ ಋ ಲೃ ವರ್ಣ ಶ ಷ ವಿಸರ್ಗ ೱಕ ೲಪಕ್ಷಳನಂ; ನಾಲ್ವತ್ತೇೞಾಯ್ತಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ - ಶಬ್ದಮಣಿದರ್ಪಣ).  ಆಮೇಲೆ ಅವು ವರ್ಣಮಾಲೆಯಿಂದ ಏಕೆ ಮರೆಯಾದುವೆನ್ನುವುದು ಬೇರೆಯೇ ಚರ್ಚೆಯ ವಿಷಯ.  ಅಷ್ಟೇ ಅಲ್ಲ, ಕನ್ನಡದಲ್ಲಿಲ್ಲವೆನ್ನುವ ಕಾರಣಕ್ಕೆ ಸಂಸ್ಕೃತದ ಋಲೃ ವರ್ಣಗಳನ್ನೂ ಶಷಗಳನ್ನೂ ವಿಸರ್ಗ, ೱಕ, ೲಪ ಗಳನ್ನೂ ನಿರ್ದಾಕ್ಷಿಣ್ಯವಾಗಿ ಕಿತ್ತೆಸೆಯುತ್ತಾನೆ ಕೇಶಿರಾಜ.  ಆದರೆ ಕನ್ನಡ ಮತ್ತು ಸಮಸಂಸ್ಕೃತಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಕಾರಣದಿಂದಲೂ, ವರ್ಣಮಾಲೆಯ ತಾರ್ಕಿಕ ಪೂರ್ಣತೆಯನ್ನು ಕಾಯುಕೊಳ್ಳುವ ದೃಷ್ಟಿಯಿಂದಲೂ ಋಶಷಗಳೂ ವಿಸರ್ಗವೂ ಮತ್ತೆ ಸೇರಿಕೊಳ್ಳುತ್ತವೆ (ವ್ಯಾಕರಣದಲ್ಲೂ ಇಂಥ ಹಲವು ’ಅಳವಡಿಕೆ’ಗಳನ್ನು ವಿವರಿಸಬಹುದು, ಆದರೆ ಸಧ್ಯದ ಚರ್ಚೆಗೆ ಅದು ಅಪ್ರಸ್ತುತ).  ಆದ್ದರಿಂದ ಸಂಸ್ಕೃತವನ್ನು ಕನ್ನಡ ಕುರುಡಾಗಿ ಅನುಸರಿಸುತ್ತಿದೆಯೆಂಬುದೂ ಅದರ ಸ್ವತಃ ತನಗೆ ಶಕ್ತಿಯಿದ್ದಾಗ್ಯೂ ಅದರ ದೋಷಗಳನ್ನು ತಾನೂ ಒಳಗೊಳ್ಳುತ್ತಿದೆಯೆನ್ನುವುದೂ ಒಪ್ಪತಕ್ಕ ಮಾತಲ್ಲ.

(೩c) "च (ಚ )ಕಾರದ ಮೇಲ್ಕಟ್ಟಿನಲ್ಲಿ ಒಂದು ಮೇಲ್-ಗೆರೆ ಎಳೆದಾಗ चे (ಚೆ) ಆಗುತ್ತದೆ. ಎರಡು ಗೆರೆ ಎಳೆದಾಗ चै (ಚೈ) ಆಗುತ್ತದೆ. ಇದೇ ತತ್ವವನ್ನು ಅನುಸರಿಸಿ, चा (ಚಾ) ಕಾರದ ಮೇಲೆ ಎರಡು ಗೆರೆ ಎಳೆದಾಗ ಅದು chaai ಆಗಲಾದರು. ಏಕೆಂದರೆ ಅದು चौ (ಚೌ) ಆಗುತ್ತದೆ. ‘ಆ’ ಎನ್ನುವ ಸ್ವರಕ್ಕೆ ‘ಇ’ಸ್ವರವನ್ನು ಕೂಡಿಸಲು ಈ ಕಾರಣದಿಂದ ನಾಗರಿ ಲಿಪಿಯಲ್ಲಿ ಸಾಧ್ಯವೇ ಇಲ್ಲ. ಇದರಂತೆ ನಾಗರಿ ಲಿಪಿಯಲ್ಲಿ आ (ಆ)ಕಾರಕ್ಕೆ ‘ಯ’ದ ಒತ್ತು ಕೊಡಲು ಸಾಧ್ಯವೇ ಇಲ್ಲ. ಏಕೆಂದರೆ ನಾಗರಿ ಲಿಪಿಯಲ್ಲಿ ಒತ್ತಿನ ಸಂಕೇತವು ಪೂರ್ವಾಕ್ಷರದ ಮುಂದೆ ಬರುತ್ತದೆ. ಕನ್ನಡದಲ್ಲಿ ಇದು ಪೂರ್ವಾಕ್ಷರದ ಕೆಳಗೆ ಬರುತ್ತದೆ"
ದೇವನಾಗರೀ ಲಿಪಿ ಅಸಂಪೂರ್ಣ ಎಂಬುದಕ್ಕೆ ತಾವು ಈ ಉದಾಹರಣೆ ನೀಡುತ್ತಿದ್ದರೆ, ಅದನ್ನು ನಾವು ಆಗಲೇ ಒಪ್ಪಿಯಾಗಿದೆ.  ಆದರೆ ಈ ಉದಾಹರಣೆ ಅದಕ್ಕೆ ಸಮರ್ಪಕವಾದ ಉದಾಹರಣೆಯಾಗಲಾರದು.  ದೇವನಾಗರಿಯಲ್ಲಿ ಚಾ+ಐತ್ವ ಬರೆಯಲಾಗದ್ದು ಅದರ ಲಿಪಿಯ ಅಸಂಪೂರ್ಣತೆಯಿಂದ ಎನ್ನುವುದಕ್ಕಿಂತ ಅಲ್ಲಿ ಅದರ ಅಗತ್ಯವಿಲ್ಲ ಎಂಬ ಕಾರಣದಿಂದ.  ಅಗತ್ಯವಿದ್ದಿದ್ದರೆ ಅದಕ್ಕನುಗುಣವಾಗಿ ಲಿಪಿ ರೂಪುಗೊಳ್ಳುತ್ತಿತ್ತು.  ಕನ್ನಡದಲ್ಲಿ ಅದರ ಲಿಪಿಸಾಧ್ಯತೆಯಿದೆ, ಆದರೆ ಅದನ್ನು ನಾವೆಲ್ಲಿ ಬಳಸುತ್ತಿದ್ದೇವೆ?  ಏಕೆಂದರೆ ಸಧ್ಯಕ್ಕೆ ನಮಗದರ ಅಗತ್ಯ ಕಂಡಿಲ್ಲ - ಏಕೆಂದರೆ ಚಾ ಅಕ್ಷರಕ್ಕೆ ಐತ್ವ ಕೊಡುವುದಾದರೆ ಅದು ಚಾಯ್ ಎಂಬ ಪದವೇ ಆಗುತ್ತದೆ, ಅದು ಈಗಾಗಲೇ ಸಾಧ್ಯ.  ಚೈ ಮತ್ತು ಚಯ್ ಗಳ ನಡುವಿರುವ ಸೂಕ್ಷ್ಮ ವ್ಯತ್ಯಾಸ ಚಾ(ಐ) ಮತ್ತು ಚಾಯ್ ಗಳ ನಡುವೆ ಇಲ್ಲ.  ಸಂಸ್ಕೃತದಲ್ಲಿ ಆ ಲಿಪಿಸಾಧ್ಯತೆ ಬರದಿದ್ದುದಕ್ಕೆ ಅದೇ ಕಾರಣವಿರಬಹುದು.

ಆದರೆ ನಾಗರೀ ಲಿಪಿಯಲ್ಲಿ आ (ಆ)ಕಾರಕ್ಕೆ ‘ಯ’ದ ಒತ್ತು ಕೊಡಲು ಸಾಧ್ಯವಿಲ್ಲ ಎಂಬುದು ಒಪ್ಪತಕ್ಕ ಮಾತಲ್ಲ.  ಕೊಡುವ ಅಗತ್ಯವಿದ್ದರೆ ಬೇರೆಲ್ಲ ಪೂರ್ವಾಕ್ಷರಗಳನ್ನೂ ಅರ್ಧ ಬರೆದು ಮುಂದಿನ ಒತ್ತನ್ನು ಪೂರ್ಣಾಕ್ಷರವಾಗಿ ಬರೆಯುವಂತೆ ಇದನ್ನೂ ಬರೆಯಬಹುದು, अ್या ಎಂಬಂತೆ (ಇಲ್ಲಿ ಯೂನಿಕೋಡ್ ಇದನ್ನು ಬರೆದು ತೋರಿಸಲು ಸಹಕರಿಸುತ್ತಿಲ್ಲ, अ ಅಕ್ಷರದ ಉದ್ದಗೀಟನ್ನೂ ತಲಕಟ್ಟನ್ನೂ ತೆಗೆದುಹಾಕಿ, ಬಳ್ಳಿಯ ನಡುಗೀಟಿಗೆ ಹೊಂದಿದಂತೆ या ಬರೆಯಿರಿ, ನಿಮಗೆ ಬೇಕಾದ ಅಕ್ಷರ ಸಿಗುತ್ತದೆ.  ಕನ್ನಡದಲ್ಲೂ ಬರೆಯುವುದು ಸಾಧ್ಯವಂತೂ ಇದೆ (ಯೂನಿಕೋಡ್ ಸಹಕರಿಸದಿದ್ದರೂ ಮತ್ತೊಂದರ ಸಹಕಾರದಿಂದ ಇಲ್ಲೂ ಬರೆಯುತ್ತೇನೆ ನೋಡಿ "ಆ್ಯ").  ಆದರೆ ಸಂಸ್ಕೃತದಲ್ಲಾಗಲೀ ಕನ್ನಡದಲ್ಲಾಗಲೀ ಹಾಗೆ ಬರೆಯದಿದ್ದುದು ಲಿಪಿಸೌಲಭ್ಯದ ಕಾರಣಕ್ಕಲ್ಲ, ಅದು ತಾಂತ್ರಿಕವಾಗಿ ಸರಿಯಲ್ಲ ಎಂಬ ಕಾರಣಕ್ಕೆ.  ಕಾರಣವನ್ನು ಮುಖ್ಯಲೇಖನದಲ್ಲಿ ವಿವರಿಸಿದ್ದೇನೆ.  ಮತ್ತೊಮ್ಮೆ ಕ್ವಚಿತ್ತಾಗಿ ವಿವರಿಸುತ್ತೇನೆ:

ಯಾವುದೇ ಅಕ್ಷರಕ್ಕೆ ಒತ್ತು ಕೊಡಬೇಕೆಂದರೆ ಮುಖ್ಯಾಕ್ಷರವು ಅರ್ಧವಾಗಿಯೂ ಒತ್ತಕ್ಷರವು ಪೂರ್ಣವಾಗಿಯೂ ಬರುವುದು ಅತ್ಯಗತ್ಯ (ಲಿಪಿಯಲ್ಲಲ್ಲ, ಉಚ್ಚಾರಣೆಯಲ್ಲಿ - ದೇವನಾಗರೀ ಲಿಪಿ ಈ ಕ್ರಮವನ್ನನುಸರಿಸುತ್ತದೆ, ಕನ್ನಡ ಲಿಪಿ ಇದರ ವಿರುದ್ಧ, ಅದು ಬೇರೆಯ ವಿಷಯ, ಆದರೆ ಉಚ್ಚಾರಣೆ ಮಾತ್ರ ಭಾಷಾತೀತ) - ಬೇಕಿದ್ದರೆ ಇಂಗ್ಲಿಷಿನಲ್ಲೂ ನೋಡಬಹುದು Tree (ಟ್ರೀ) ಎನ್ನುವಾಗ ಟ್ ಮತ್ತು ರೀ ಎಂಬ ಎರಡು ಅಕ್ಷರಗಳನ್ನು ನೋಡುತ್ತೇವೆ.  ಮುಖ್ಯಾಕ್ಷರವಾದ ಟಕಾರವು ಅರ್ಧವಾಗಿಯೂ ಒತ್ತಕ್ಷರವಾದ ರೀ ಪೂರ್ಣವಾಗಿಯೂ ಬರುತ್ತದೆ (ನಾನು ಹೇಳುತ್ತಿರುವುದು ಉಚ್ಚಾರದ ವಿಷಯ, ಲಿಪಿಯ ವಿಷಯವಲ್ಲ); ಹಿಂದಿಯಲ್ಲಿ ನೋಡಿ रब्डी (ರಬ್ಡೀ) ಎನ್ನುವಾಬ ಬ್ ಮತ್ತು ಡೀ ಎಂಬ ಎರಡು ಅಕ್ಷರಗಳನ್ನು ನೋಡುತ್ತೇವೆ.  ಮುಖ್ಯಾಕ್ಷರವಾದ ಬಕಾರವು ಅರ್ಧವಾಗಿಯೂ ಒತ್ತಕ್ಷರವಾದ ಡೀ ಪೂರ್ಣವಾಗಿಯೂ ಬರುತ್ತದೆ.  ತಮಿಳನ್ನು ನೋಡಿ பைத்யம் (ಪೈತ್ಯಂ) ಇಲ್ಲಿ ತ್ಯ ಅಕ್ಷರದಲ್ಲಿ ಮುಖ್ಯಾಕ್ಷರವಾದ ತಕಾರವು ಅರ್ಧಾಕ್ಷರವಾಗಿಯೂ (த்) ಒತ್ತಕ್ಷರವಾದ ಯಕಾರವು ಪೂರ್ಣಾಕ್ಷರವಾಗಿಯೂ ಬಂದಿದೆ.  ಜ಼ೆಕ್ ರಿಪಬ್ಲಿಕ್ ದೇಶಭಾಷೆಯಾದ ಜ಼ೆಕ್ ನೋಡಿ matka (ಮತ್ಕ = ಅಮ್ಮ) ಎಂಬಲ್ಲಿ ಮುಖ್ಯಾಕ್ಷರವಾದ ತಕಾರವು ಅರ್ಧಾಕ್ಷರವಾಗಿಯೂ ಒತ್ತಕ್ಷರವಾದ ಕಕಾರವು ಪೂರ್ಣಾಕ್ಷರವಾಗಿಯೂ ಬಂದಿದೆ.  ಎಂದರೇನಾಯಿತು? ಇದು ಭಾಷಾತೀತ - ಮತ್ತಿದು ನಿಯಮವಲ್ಲ, ಸಾಧ್ಯತೆ.

ಈಗ, ಸಂಯುಕ್ತಾಕ್ಷರವೊಂದರಲ್ಲಿ ಆಕಾರವನ್ನು ಮುಖ್ಯಾಕ್ಷರವಾಗಿ ಬಳಸಬೇಕೆಂದರೆ ಅದು ಅರ್ಧಾಕ್ಷರವಾಗಬೇಕಲ್ಲವೇ?  ಆಕಾರವನ್ನು ಅರ್ಧವಾಗಿ ನುಡಿಯಲು ಸಾಧ್ಯವೇ?  ಪ್ರಾಯೋಗಿಕವಾಗಿ ಸಾಧ್ಯವೇ ಇಲ್ಲ ಅದು.  ಆಕಾರವನ್ನು ಅರ್ಧ ನುಡಿಯಲು ಹೋದರೆ ಏನೂ ಬರುವುದೇ ಇಲ್ಲ - ಸ್ವರದ ಸ್ವಭಾವವೇ ಹಾಗೆ.  ನೀವು ಸ್ವರವೊಂದಕ್ಕೆ ವ್ಯಂಜನದ ಒತ್ತು ಕೊಟ್ಟಾಗ, ಅರ್ಧಾಕ್ಷರವಾದ ಸ್ವರ ನಿಜದಲ್ಲಿ ಇಲ್ಲವಾಗುತ್ತದೆ, ಒತ್ತಕ್ಷರವಾದ ವ್ಯಂಜನಾಕ್ಷರ ಪೂರ್ಣಾಕ್ಷರವಾಗಿ ಕೇಳುತ್ತದೆ.  ಎಂದರೆ ನೀವು ಆಕಾರಕ್ಕೆ ಯವೊತ್ತು ಕೊಟ್ಟು "ಆ್ಯ" ಎಂದು ಬರೆದಾಗ ಹಾಗೆ ಬರೆಯಬಹುದಷ್ಟೇ ಹೊರತು ಉಚ್ಚರಿಸಲು ಸಾಧ್ಯವೇ ಇಲ್ಲ.  ಹಾಗೆ ಉಚ್ಚರಿಸಿದಾಗ ಮುಖ್ಯಾಕ್ಷರವಾದ ಆ ಕಾರ ಮರೆಯಾಗಿ, ಕೇಳುವುದು ಯಾ ಮಾತ್ರ.  ಹೆಚ್ಚೆಂದರೆ ಅಕಾರದ ಉತ್ಪತ್ತಿಸ್ಥಾನವನ್ನು ನೀವು ಗಂಟಲಿನಲ್ಲಿ ಒತ್ತಿ, ಅನಂತರ ಯಕಾರವನ್ನು ಉಚ್ಚರಿಸುಸುವುದರಿಂದ ಹಾಗೆ ಒತ್ತಿದ್ದು ಯಕಾರದ ಹಿಂದೊಂದು ವಿಚಿತ್ರ ಶಬ್ದವನ್ನು ಮೂಡಿಸುತ್ತದೆಯೇ ಹೊರತು ಅದು ಅಕಾರವೆನ್ನುವಂತಿಲ್ಲ.  ಅದು ಮನದಟ್ಟಾಗಬೇಕಾದರೆ ಯಕಾರವನ್ನು ಕೈಬಿಟ್ಟು ಇನ್ನೂ ಸ್ಪಷ್ಟವಾದ ಇನ್ನೊಂದು ಉದಾಹರಣೆಯನ್ನು ನೋಡೋಣ.  ಮಟ್ಕಾ ಎಂಬ ಪದವನ್ನು ತೆಗೆದುಕೊಳ್ಳಿ.  ಇಲ್ಲಿನ ಟ್ಕಾ ಎಂಬ ಅಕ್ಷರವನ್ನು ಗಮನಿಸಿ.  ಇಲ್ಲಿ ಏನೇನಿದೆ? ಟ್ ಕ್ ಆ ಅಲ್ಲವೇ?  ಮುಖ್ಯಾಕ್ಷರವಾದ ಟಾ ಎಂಬುದು ಸೀಳಿ ಹೋಗಿ, ಮೊದಲ ಭಾಗವಾದ ಟ್ ವ್ಯಂಜನವು ಮೊದಲು ಬಂತು, ಎರಡನೆಯ ಭಾಗವಾದ ಆ ಸ್ವರವು ಕಕಾರಕ್ಕೆ ಹೋಗಿ ಸೇರಿಕೊಂಡಿತು, ಅಲ್ಲವೇ?  ಈಗ ಟ ಅಕ್ಷರದ ಬದಲು ಅ ಅಕ್ಷರಕ್ಕೆ ಕವೊತ್ತು ಕೊಟ್ಟರೆ ಏನಾಗುತ್ತದೆ? (ಅ್ಕ).  ಮೊದಲಾದರೆ ಟಾ ಎಂಬಲ್ಲಿನ ವ್ಯಂಜನ ಸ್ವರಗಳು ಸೀಳಿ ವ್ಯಂಜನವು ಈಕಡೆಯೂ ಸ್ವರವು ಆಕಡೆಯೂ ಹೋಯಿತು.  ಈಗ ಅಕಾರಕ್ಕೇ ಒತ್ತು ಕೊಡುತ್ತಿದ್ದೇವೆ.  ಇಲ್ಲಿ ಸೀಳುವುದು ಯಾವುದು?  ಅ ಅರ್ಧಾಕ್ಷರವು ಸೀಳಿ ಒಂದು ಸೀಳು ಎಡಕ್ಕೆ ಬಂತು (ಅ್ ಎನ್ನೋಣ).  ಇನ್ನು ಕಕಾರಕ್ಕೆ ಬಂದು ಸೇರುವುದೇನು?  ಅ ಅರ್ಧಾಕ್ಷರವೇ? ಅ್ಕ ಎಂಬುದನ್ನು ಉಚ್ಚರಿಸಿ ನೋಡಿ?  ಕಕಾರದನಂತರ ಅಕಾರದ ಪೂರ್ಣಾಕ್ಷರವೇ ಕೇಳುತ್ತದಲ್ಲವೇ? (ಕ್ + ಅ = ಕ).  ಹಾಗಿದ್ದರೆ ಕಕಾರದ ಹಿಂದೆ ಉಳಿದದ್ದೇನು? ಅ್ ಎಂಬ, ರೂಪವಿಲ್ಲದ ವಿಚಿತ್ರ ಶಬ್ದವಷ್ಟೇ.  ಮುಖ್ಯವಾಗಿ ಕೇಳುವುದು ಕ ಎಂಬ ಅಕ್ಷರವಷ್ಟೇ.  ಇನ್ನಿದೇ ಪ್ರಯೋಗವನ್ನು ಇ ಅಕ್ಷರದೊಂದಿಗೆ ಪುನರಾವರ್ತಿಸಿ? (ಇ್ಕ).  ಈಗ ಸ್ವರಾಕ್ಷರದಲ್ಲಿ ಸೀಳಿದ್ದೇನು? ಇ್ ಎಂಬ ರೂಪವಿಲ್ಲದ ವಿಚಿತ್ರ ಶಬ್ದವು ಕಕಾರದ ಎಡಕ್ಕೂ, ಇ ಎಂಬ ಪೂರ್ಣಸ್ವರವು ಕಕಾರದನಂತರವೂ ಬಂದಿತಲ್ಲವೇ? ಇದನ್ನು ಉಚ್ಚರಿಸಿದಾಗ ಕೇಳುವುದೇನು?  ಇ್ + ಕಿ!  ಎಂದರೆ ಇಕಾರವು ಸಂಪೂರ್ಣವಾಗಿ ಕಕಾರಕ್ಕೆ ಸೇರಿಬಿಟ್ಟಿದೆ.  ಇನ್ನು ಹಿಂದೆ ಉಳಿದದ್ದು ಇ್ ಎಂಬ ರೂಪವಿಲ್ಲದ ಶಬ್ದವಷ್ಟೇ.  ಈಗ ಮೊದಲ ಉದಾಹರಣೆಯ ಅ್ ಶಬ್ದಕ್ಕೂ ಈ ಉದಾಹರಣೆಯ ಇ್ ಶಬ್ದಕ್ಕೂ ವ್ಯತ್ಯಾಸವೇನಾದರೂ ಉಂಟೇ? (ಅ ಇ ಎನ್ನುವುದು ಬೇಡ, ಅವು ಕಕಾರದನಂತರ ನುಡಿಯುತ್ತಿರುವ ಪೂರ್ಣಸ್ವರಗಳು - ಟ್ಕ ಎನ್ನುವಾಗಲೂ ಕಕಾರದನಂತರ ಅಕಾರವು ಬಂದಿದೆ, ಆದರೆ ಅದರ ಹಿಂದೆ ಟಕಾರದ ಅರ್ಧಾಕ್ಷರ ಸ್ಪಷ್ಟವಾಗಿ ನುಡಿಯುತ್ತಿದೆ.  ಆದರೆ ಅ್ ಇ್ ಗಳ ವಿಷಯದಲ್ಲಿ ಹೀಗಾಯಿತೇ?).  ಇದೇ ಪ್ರಯೋಗವನ್ನು ಅ್ ಆ್ ಇ್ ಈ್ ಉ್ ಊ್ ಈ ಎಲ್ಲ ’ಅರ್ಧ’ಸ್ವರಗಳೊಂದಿಗೆ ಪುನರಾವರ್ತಿಸಿ ನೋಡಿ - ಅ್ಕ ಆ್ಕ ಇ್ಕ ಈ್ಕ ಉ್ಕ ಊ್ಕ ಹೀಗೆ.  ಇವಕ್ಕೂ ಕ ಕಾ ಕಿ ಕೀ ಕು ಕೂ ಈ ಅಕ್ಷರಗಳಿಗೂ ವ್ಯತ್ಯಾಸವೇನು?  ಮೊದಲ ಗುಂಪಿನಲ್ಲಿ ಸ್ವರಸ್ಥಾನವನ್ನೊತ್ತಿದ ಅ್ ಎಂಬ ಧ್ವನಿ ಕೇಳುತ್ತದಷ್ಟೇ.  ಆದರೆ ಅ್ ಆ್ ಇ್ ಈ್ ಉ್ ಊ್ ಎಂಬ ವ್ಯತ್ಯಾಸವನ್ನು ಅಲ್ಲಿ ಕಂಡುಹಿಡಿಯಬಹುದೇ? ಈಗಲೂ ಹೌದೆನ್ನುವುದಾದರೆ, ಇದು ಇನ್ನೊಂದು ಕಠಿನವಾದ ಪರೀಕ್ಷೆಯನ್ನೆದುರಿಸಬೇಕಾಗುತ್ತದೆ.  ಸ್ವರಾಕ್ಷರವು ಅರ್ಧಾಕ್ಷರವಾಗಬಹುದೆನ್ನುವುದಾದರೆ, ಅದು ಸ್ವತಂತ್ರವಾಗಿಯೇ ಅರ್ಧಾಕ್ಷರವಾಗಿ ನುಡಿಯಬೇಕು.  ಮಸ್ಕ್ ಎನ್ನುವಲ್ಲಿ ಸ್ಕ್ ಎನ್ನುವ ಅಕ್ಷರ ಗಮನಿಸಿ.  ಸ್ ಮತ್ತು ಕ್ ಎರಡೂ ಅರ್ಧಾಕ್ಷರಗಳೇ.  ಎರಡೂ ಸ್ಪಷ್ಟವಾಗಿ ನುಡಿಯುತ್ತವೆ.  ಇಲ್ಲಿನ ಸಕಾರದಂತೆ ಸ್ವರಾಕ್ಷರವೂ ಅರ್ಧಾಕ್ಷರವಾಗಿ ನುಡಿಯಬಲ್ಲುದೇ?  ಪ್ರಯತ್ನಿಸಿ ನೋಡಿ ಮೊದಲೇ ಹೇಳಿದ ಸ್ವರಾಕ್ಷರಗಳಿಗೆ ಕವೊತ್ತನ್ನು ಅರ್ಧಾಕ್ಷರವಾಗಿ ಕೊಟ್ಟು ನೋಡಿ ಅ್ಕ್ ಆ್ಕ್ ಇ್ಕ್ ಈ್ಕ್ ಉ್ಕ್ ಊ್ಕ್.  ಇದನ್ನು ಉಚ್ಚರಿಸಿದಾಗ ಸ್ವರವ್ಯಂಜನಗಳೆರಡೂ ನುಡಿಯುತ್ತವೆಯೇ? ಇವಕ್ಕೂ ಬರೀ ಕ್ ಉಚ್ಚಾರಣೆಗೂ ವ್ಯತ್ಯಾಸವೇನು?

ಆದ್ದರಿಂದ "ಆ್ಯ" ಎಂಬ ’ಸ್ವರ’ಸಂಕೇತ ಬೇಡವೆನ್ನುತ್ತಿರುವುದು ಸ್ವಪ್ರೇರಿತ ಮುಜುಗರದಿಂದಲ್ಲ, ಬದಲಿಗೆ ಈ ಎರಡು ಕಾರಣಗಳಿಂದ:

೧) "ಆ್ಯ" ಎಂಬ ಅಕ್ಷರವನ್ನು ಲಿಪಿಯಲ್ಲಿ ಸಾಧ್ಯವಾಗಿಸಬಹುದಾದರೂ ಅದಕ್ಕೆ ಉಚ್ಚಾರಣೆಯಲ್ಲಿ ಅಸ್ತಿತ್ವವಿಲ್ಲ.  ತಿಳಿದೂ ತಿಳಿದೂ ಉಚ್ಚಾರಣಾಸಾಧುತ್ವವಿಲ್ಲದ ಅಕ್ಷರಗಳನ್ನು ಹುಟ್ಟುಹಾಕುವುದು ವೈಜ್ಞಾನಿಕವಲ್ಲ

೨) ಇಂಗ್ಲಿಷಿನ A ಅಕ್ಷರದ ಉಚ್ಚಾರಣೆ ಸುಮಾರಾಗಿ "ಆ್ಯ" ಎಂಬುದಕ್ಕೆ ಹತ್ತಿರಿರಬಹುದು, ಆದರೆ ಅದೇ ಅಲ್ಲ.  ಆದ್ದರಿಂದ ಆ ಮತ್ತು ಯಾ ಗಳಂತೆಯೇ "ಆ್ಯ" ಎಂಬುದೂ ದಾರಿತಪ್ಪಿಸುವಂಥದ್ದೇ.  ಹೊಸದಾಗಿ ಧ್ವನಿಸಂಕೇತವನ್ನು ತರುವುದಾದರೆ (ಸಾಧ್ಯವಾದರೆ ಅದು ಯಾವಾಗಲೂ ಸ್ವಾಗತಾರ್ಹವೇ), ಸುಮಾರಾಗಿ ಹತ್ತಿರದ್ದೊಂದು ಸಂಕೇತವನ್ನು ತರುವುದರ ಬದಲು ಯಥಾವತ್ತಾಗಿ ಅದನ್ನೇ ಧ್ವನಿಸುವ ಸಂಕೇತಗಳನ್ನು ಜಾರಿಗೆ ತರುವುದು ಒಳ್ಳೆಯದು.  ಸಾಗರಸ್ಸಾಗರೋಪಮಮ್ ಎನ್ನುವಂತೆ A ಅಕ್ಷರಕ್ಕೆ ಅದೇ ಸಾಠಿ.  ಆದ್ದರಿಂದ ಆ ಧ್ವನಿಯನ್ನು ಸಂಕೇತಿಸಲು ಕನ್ನಡದಲ್ಲೂ A ಅಕ್ಷರವನ್ನೇ ಬಳಸಿದರೂ ಅಭ್ಯಂತರವಿರಲಿಕ್ಕಿಲ್ಲ (ಕೈಲಾಸಂ ಈಗಾಗಲೇ ಅಂಥ ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ - ಗಡFಖಾನ್ ನೆನಪಿಸಿಕೊಳ್ಳಿ).  ಇರಲಿ, Aಪಲ್, ಕಾFಈ, Zಈಬ್ರಾಗಳು ತೀರ ಅತಿರೇಕವೆನಿಸಿದರೂ, ಅದನ್ನೇ ಯಥಾವತ್ತಾಗಿ ಸೂಚಿಸುವ ಹೊಸ ಸಂಕೇತಗಳನ್ನು ಕನ್ನಡದಲ್ಲಿಯೂ ರೂಢಿಸಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ.  ಈಗಾಗಲೇ F Z ಗಳಿಗೆ ಕನ್ನಡದಲ್ಲಿ ಫ಼ ಜ಼ ಎಂದು ಅಡಿಚುಕ್ಕಿಯಿಟ್ಟು ಸೂಚಿಸುತ್ತೇವೆ.  ಹಿಂದಿಯಲ್ಲಿಯೂ ವರ್ಣಮಾಲೆಯಲ್ಲಿಲ್ಲದ ಅನುನಾಸಿಕ ಉಚ್ಚಾರಕ್ಕೆ ಅರ್ಧಚಂದ್ರಬಿಂದುವಿನ ಸಂಕೇತವನ್ನು ಬಳಸುತ್ತಾರೆ (कहाँ).  ಹಾಗೆಯೇ ಕನ್ನಡದಲ್ಲಿಯೂ A ಅಕ್ಷರದ ವಿಶಿಷ್ಟ ಉಚ್ಚಾರವನ್ನು ಸೂಚಿಸಲು ಅ ಅಕ್ಷರದ ಕೆಳಗೆ ಅಡಿಚುಕ್ಕೆಯನ್ನೋ, ಮೇಲೆ ಚಂದ್ರನನ್ನೋ ಇಟ್ಟು ಸೂಚಿಸುವುದು ಹೆಚ್ಚು ಸೂಕ್ತವೆನಿಸುತ್ತದೆ - ಏಕೆಂದರೆ A ಎನ್ನುವುದು ಅ ಎನ್ನುವುದರ ವಿಶಿಷ್ಟ ಉಚ್ಚಾರವೇ ಹೊರತು ಆ್ಯ ಅಲ್ಲ.

ಇವೆಲ್ಲ ವೈಯಾಕರಣನ ಕಸರತ್ತೇ ಇರಬಹುದು, ಆದರೆ ಕನ್ನಡದ ಲಿಪಿ ವರ್ಣಮಾಲೆಯು ಇಂಗ್ಲಿಷಿನಂತೆ ಯರ್ರಾಬಿರ್ರಿ ಬೆಳೆಯುವ ಹಂತಕ್ಕಿಂತ ಬಹು ಮುಂದೆ ಹೋಗಿದೆ.  ಆದ್ದರಿಂದ ಭಾಷೆಯಲ್ಲಲ್ಲದಿದ್ದರೆ ಕೊನೆಯಪಕ್ಷ ವರ್ಣಮಾಲೆಯಲ್ಲಾದರೂ ಈ ರೀತಿಯ ಪ್ರಜ್ಞಾಪೂರ್ವಕ ಕಸರತ್ತು ಅತ್ಯವಶ್ಯ.

Sunday, February 26, 2017

ಲಿಪಿ’ಸುಧಾರಣೆ’ - "ಆಕ್ ಯಾವೊತ್ತೂ? - ಆ್ಯ"


ಇಂಗ್ಲಿಷಿನ Apple, Add ಮೊದಲಾದ ಪದಗಳನ್ನು ಹಾಗೆಯೇ ಕನ್ನಡದಲ್ಲಿ ಬರೆಯುವಾಗ ಆಪಲ್, ಆಡ್ ಅಥವಾ ಯಾಪಲ್, ಯಾಡ್ ಎಂದು ಬರೆಯುವ ಪದ್ಧತಿಯಿದೆ.  ಹಲವು ಇಂಗ್ಲಿಷ್-ಕನ್ನಡ ನಿಘಂಟುಗಳಲ್ಲಿ ಅದರ ನೈಜ ಉಚ್ಚಾರಕ್ಕೆ ಹತ್ತಿರವಾಗುವಂತೆ ಆ ಎಂಬ ಅಕ್ಷರಕ್ಕೆ ಯವೊತ್ತು ಕೊಟ್ಟು "ಆ್ಯ" ಎಂದು ತೋರಿಸಿರುತ್ತಾರೆ.  ಕೈಬರಹದಲ್ಲೇನೋ ಇದು ಸಾಧ್ಯ, ಆದರೆ ಆದರೆ ಕಂಪ್ಯೂಟರಿನಲ್ಲಿ ಯೂನಿಕೋಡಿನಲ್ಲಿ ಬರೆಯುವಾಗ ಇದು ಸಾಧ್ಯವಿಲ್ಲ.  ಅಕಾರಕ್ಕೆ ಯವೊತ್ತನ್ನು ಕೊಡುವುದು ಭಾಷಿಕವಾಗಿ ಸಾಧುವಲ್ಲವಾದ್ದರಿಂದ, ಆ ಸೌಲಭ್ಯವನ್ನು ಯೂನಿಕೋಡಿನಲ್ಲೂ ಕೊಡಮಾಡಿಲ್ಲ.  ಆದರೆ ಇದನ್ನೊಂದು ’ದೋಷ’ ಅಥವಾ ಕೊರತೆಯೆಂದು ಭಾವಿಸುವ ಹಲವರು ಈ ಕೊರತೆಯನ್ನು ತುಂಬಲು ಯೂನಿಕೋಡಿನಲ್ಲಿ ತಕ್ಕ ಮಾರ್ಪಾಡುಗಳನ್ನು ಮಾಡಬೇಕೆಂದು ಚರ್ಚಿಸುತ್ತಿದ್ದಾರೆ.  ಭಾಷಾವೇದಿಕೆಯೊಂದರಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ನನ್ನ ಗಮನಕ್ಕೆ ತಂದ ಮಿತ್ರ ರಾಜೇಶರಿಗೆ (”ಪರಿವರ್ಧಿತ ಕನ್ನಡ ಲಿಪಿ") ಪ್ರತಿಕ್ರಿಯೆ ಬರೆಯುತ್ತಾ ಇದೊಂದು ಪೂರ್ಣಪ್ರಮಾಣದ ಲೇಖನವೇ ಆಯಿತು.  ಈ ವಿಷಯದಲ್ಲಿ ನನ್ನ ಅಭಿಪ್ರಾಯಗಳು ಇಂತಿವೆ.

ಇಲ್ಲಿ ನಾವು ಯೂನಿಕೋಡಿನ ವಿಷಯ ಚಿಂತಿಸುವ ಮೊದಲು ನೇರ ಲಿಪಿಯ ಬಗೆಗೇ ಚಿಂತಿಸಬೇಕಾಗುತ್ತದೆ, ಏಕೆಂದರೆ ಲಿಪಿಸಂಕೇತಗಳು ಯೂನಿಕೋಡಿನಲ್ಲಿ ಬಂದಮಾತ್ರಕ್ಕೆ ಬಳಕೆಯಲ್ಲಿ ನಿಲ್ಲದು.  ಕೈಬರಹವು ನಿಧಾನಕ್ಕೆ ಕಣ್ಮರೆಯಾಗುತ್ತಾ ಕಂಪ್ಯೂಟರು ಅದರ ಸ್ಥಾನವನ್ನಾಕ್ರಮಿಸುತ್ತಾ ಹೋದಂತೆ, ವಿವಿಧ ಭಾಷೆ ಪ್ರದೇಶ ಸನ್ನಿವೇಶಗಳ ಪ್ರಭಾವದಿಂದ ಸಾವಿರಾರು ವರ್ಷಗಳಿಂದ ವಿಕಾಸಗೊಳ್ಳುತ್ತಾ ಬಂದಿರುವ ಲಿಪಿ, ಲಿಪಿಸಂಸಾರ-ವ್ಯವಸ್ಥೆಗಳು ವಿಕಾಸಮಾರ್ಗದಲ್ಲಿ ಸ್ಥಗಿತಗೊಂಡು, ಯೂನಿಕೋಡಿನಲ್ಲಿ standard ರೂಪ ಪಡೆದು ಅಲ್ಲಿಗೆ ನಿಂತುಬಿಡುತ್ತವೆಂಬುದು ನಿಜವಾದರೂ, ಸಧ್ಯಕ್ಕಂತೂ ಕಂಪ್ಯೂಟರಿಗೆ ಹೊರತಾದ ದೈನಂದಿನ ಜಗತ್ತಿನ ಮಾನ್ಯತೆ ಮುಖ್ಯವಾಗಿಯೇ ಉಳಿದಿದೆ.  ಯೂನಿಕೋಡಿನಲ್ಲಿ ಕೊಡಮಾಡುವ ಲಿಪಿಸೌಲಭ್ಯವೇನಿದ್ದರೂ ವಾಸ್ತವ ಜಗತ್ತಿನ ಲಿಪಿಸೌಲಭ್ಯದ ಪ್ರತಿಫಲನವಷ್ಟೇ.

ಸರಿ, ಲಿಪಿಯಲ್ಲಾದರೂ (ಉದಾಹರಣೆಗೆ) ’ಅ’ ಸ್ವರಕ್ಕೆ ’ಯ’ವೊತ್ತು ಕೊಡುವ ಅಗತ್ಯವಿದೆಯೇ ನೋಡಬೇಕಲ್ಲ.  ಈ ಅಗತ್ಯ ಕಂಡುಬಂದದ್ದು ಇಂಗ್ಲಿಷಿನ Apple ಮೊದಲಾದ ಪದಗಳಲ್ಲಿನ A ಅಕ್ಷರವನ್ನು ಕನ್ನಡ ಲಿಪಿಯಲ್ಲಿ ಬಳಸಲೋಸುಗ.  ಈ ಉಚ್ಚಾರಣೆಯನ್ನು ಕನ್ನಡದಲ್ಲಿ ತೋರಿಸುವ ಅಗತ್ಯವಿದೆಯೇ ಎಂಬುದನ್ನು ಅನಂತರ ನೋಡೋಣ.  ಅದಕ್ಕೂ ಮೊದಲು ಗಮನಿಸಬೇಕಾದ ವಿಷಯವೆಂದರೆ, ಇಂಗ್ಲಿಷಿನ A ಅಕ್ಷರದ್ದು "ಆ್ಯ" ಎಂಬ ರೀತಿಯ ಉಚ್ಚಾರಣೆ ಎಂಬ ಗ್ರಹಿಕೆಯೇ ತಪ್ಪು - ಸ್ವರ-ವ್ಯಂಜನಗಳ ಮೂಲಭೂತ ಅರಿವಿನ ಕೊರತೆಯಿಂದ ಬಂದದ್ದು!  ಭಾಷೆಯೊಂದು ಗ್ರಹಿಸುವ ಸ್ವರ-ವ್ಯಂಜನಗಳ ಸಂಖ್ಯೆ ಬೇರೆಬೇರೆಯಿರಬಹುದು, ಅವುಗಳನ್ನು ವರ್ಣಮಾಲೆಯಲ್ಲಿ ಪ್ರಸ್ತುತಪಡಿಸುವ ಕ್ರಮ ಬೇರೆಬೇರೆಯಿರಬಹುದು, ಮತ್ತು ಒಂದು ಭಾಷೆಯಲ್ಲಿ ಬಳಕೆಯಲ್ಲಿರುವ ಸ್ವರ/ವ್ಯಂಜನ ಇನ್ನೊಂದರಲ್ಲಿ ಇಲ್ಲದಿರಬಹುದು (ಕೆಲವು ಭಾಷೆಗಳಿಗೆ ವರ್ಣಮಾಲೆಯೇ ಇಲ್ಲ!  ಆದರೂ ಭಾಷೆಯಂತೂ ಇದೆ). ಧ್ವನಿಯೊಂದು ಸ್ವರವೋ ವ್ಯಂಜನವೋ ಆಗಿ ಗುರ್ತಿಸಿಕೊಳ್ಳುತ್ತದಲ್ಲ, ಆ ಸ್ವಭಾವ ಮಾತ್ರ ಭಾಷಾತೀತವಾದದ್ದು.  ಸ್ವರವೊಂದು ಯಾವ ಭಾಷೆಯಲ್ಲಿದ್ದರೂ (ಅಥವ ಪ್ರಾಣಿಯ ಧ್ವನಿಯೇ ಆಗಿದ್ದರೂ) ಅದು ಸ್ವರವೇ, ವ್ಯಂಜನ ಎಲ್ಲಿದ್ದರೂ ವ್ಯಂಜನವೇ.  ಆದ್ದರಿಂದ ಈ ಉಚ್ಚಾರವಿಷಯವನ್ನು ನೋಡುವ ಮೊದಲು ಸ್ವರ-ವ್ಯಂಜನಗಳ ಮೂಲಭೂತ ವ್ಯತ್ಯಾಸವನ್ನು ಅರಿಯುವುದು ಮುಖ್ಯ.

ಸ್ವರಕ್ಕೆ ಸ್ವತಂತ್ರ ಅಸ್ತಿತ್ವವಿದೆ (ಎಂದರೆ ಉಚ್ಚಾರಣೆಯಲ್ಲಿ ಅದು ಸ್ವತಂತ್ರವಾಗಿ ತನ್ನಿಂತಾನೇ ಪ್ರಕಟಗೊಳ್ಳುತ್ತದೆ), ಆದರೆ ವ್ಯಂಜನಕ್ಕೆ ಇರುವುದು ಕೇವಲ ಸಾಂಕೇತಿಕ ಅಸ್ತಿತ್ವ ಮಾತ್ರ - ಅನುನಾಸಿಕ ವ್ಯಂಜನಗಳು, ಮತ್ತು ಕೆಲವು ಅವರ್ಗೀಯ ವ್ಯಂಜನಗಳನ್ನು ಬಿಟ್ಟರೆ ಉಳಿದುವಾವುವೂ ಸ್ವತಂತ್ರವಾಗಿ ತನ್ನಿಂತಾನೇ ಉಚ್ಚಾರಣೆಯಲ್ಲಿ ಪ್ರಕಟಗೊಳ್ಳವು (ಬೇಕಿದ್ದರೆ ಕ್ ಚ್ ಟ್ ತ್ ಪ್ ಮೊದಲಾದುವುಗಳನ್ನು ಒಂದೂ ಚೂರೂ ಎಳೆಯದೇ ಉಚ್ಚರಿಸಿ ನೋಡಿ - ಅವು ಕೇವಲ ರೂಪವಿಲ್ಲದ ಲೊಚಗುಟ್ಟುವಿಕೆಯಂತ ಕೇಳುತ್ತವೆ, ಏಕೆಂದರೆ ಅವಕ್ಕೆ ಸ್ವರಗಳ ಆಧಾರವಿಲ್ಲ (ಕೆಲವರು ಅರ್ಧಾಕ್ಷರವನ್ನು ಉಚ್ಚರಿಸಿ ತೋರಿಸಲು ಅದಕೆ ಅಕಾರವನ್ನೋ ಉಕಾರವನ್ನೋ ಸೇರಿಸಿ ಅದನ್ನೇ ’ಅರ್ಧ’ಮಾಡಿ ಎಳೆದಂತೆ ಉಚ್ಚರಿಸುತ್ತಾರೆ (ಕ್ಅ್ ಖ್ಅ್ ಗ್ಅ್ ಘ್ಅ್ ಹೀಗೆ) ಅದು ತಪ್ಪು.  ವ್ಯಂಜನದ ಸ್ವರೂಪ ಧ್ವನಿಯಲ್ಲಿ ಪ್ರಕಟವಾಗಲು ಅದಕ್ಕೆ ಸ್ವರಗಳ ಬೆಂಬಲ ಬೇಕಾಗುತ್ತದೆ.  ಇದು ಒಂದೆಡೆಯಾದರೆ, ಮತ್ತೊಂದೆಡೆ, ’ಅರ್ಥ’ಕ್ಕೆ ಅತ್ಯಗತ್ಯವಾದ ಧ್ವನಿವೈವಿಧ್ಯ ಸ್ವರಗಳಿಗಿಲ್ಲ.  ಆ ವೈವಿಧ್ಯಕ್ಕಾಗಿ, ಅರ್ಥ ತುಂಬುವುದಕ್ಕಾಗಿ ಅವು ವ್ಯಂಜನಗಳನ್ನೇ ಆಶ್ರಯಿಸಬೇಕು.  ಎಂದರೆ ಅ ಆ ಇ ಈ ಮೊದಲಾದ ಸ್ವರಗಳನ್ನು ಬೇರಾವುದರ ಹಂಗೂ ಇಲ್ಲದೇ ಸ್ವತಂತ್ರವಾಗಿ ನುಡಿಯಬಹುದೇನೋ ಹೌದು - ಅವಕ್ಕೆ ಸ್ವತಂತ್ರ ಅಸ್ತಿತ್ವವಿದೆ; ಆದರೆ ಅದಕ್ಕೆ ಅರ್ಥವಿರಬೇಕೆಂದಿಲ್ಲ (ಬಹುಪಾಲು ಅರ್ಥವಿರುವುದಿಲ್ಲ ಕೂಡ). ಉದಾಹರಣೆಗೆ "ಆಉ ಓಇಎ" ಎಂದು ಸ್ವತಂತ್ರವಾಗಿ ಉಚ್ಚರಿಸಬಹುದು, ಆದರೆ ಅರ್ಥ? ಇದಕ್ಕೆ ಅರ್ಥ ತುಂಬಬೇಕಾದರೆ, ಸಂದರ್ಭಾನುಸಾರವಾಗಿ ನ್ ನ್ ನ್ ಡ್ ದ್ ಈ ವ್ಯಂಜನಗಳು ಬರಬೇಕು - ಆಗ ನಾನು ನೋಡಿದೆ ಎಂದಾಗುತ್ತದೆ. ಬದಲಿಗೆ ಇವೇ ಸ್ವರಗಳಿಗೆ ಮ್ ಡ್ ಸ್ ರ್ ದ್ ವ್ಯಂಜನಗಳನ್ನು ಹಾಕಿದರೆ ಮಾಡು ಸೋರಿದೆ ಎಂದಾಯಿತು. ಎರಡರಲ್ಲೂ ಮೂಲವಸ್ತು, ಸ್ವತಂತ್ರ ಅಸ್ತಿತ್ವವಿರುವ ಸ್ವರಗಳು ಆ ಉ ಓ ಇ ಎ ಗಳೇ. ಆದರೆ ವಿವಿಧ ವ್ಯಂಜನಗಳ ಸಂಯೋಗದೊಡನೆ ವಿವಿಧ ಉಚ್ಚಾರಣೆಯುಳ್ಳ ಅಕ್ಷರಗಳಾದುವು, ವಿವಿಧ ಅರ್ಥವುಳ್ಳ ಪದ/ವಾಕ್ಯಗಳಾದುವು. ಆದರೆ ನ್ ನ್ ನ್ ಡ್ ದ್ ಅಥವಾ ಮ್ ಡ್ ಸ್ ರ್ ದ್ ಈ ಅಕ್ಷರಗಳಿಗೆ ಇಷ್ಟು ಶಕ್ತಿಯಿದ್ದರೂ ಸ್ವತಂತ್ರ ಅಸ್ತಿತ್ವವಿಲ್ಲ, ಅವೇನಿದ್ದರೂ ಮೂಲಸ್ವರಗಳಿಗೆ ವಿವಿಧ ರೂಪ-ವ್ಯಕ್ತಿತ್ವ ನೀಡುವ ವ್ಯಂಜನಗಳಷ್ಟೇ.

ಎಂದರೇನು? ಸ್ವರಾಕ್ಷರಗಳು *ಯಾವಾಗಲೂ* ಪೂರ್ಣಾಕ್ಷರಗಳು, ಅವು ಅರ್ಧವಾಗುವುದೇ ಇಲ್ಲ, ಮತ್ತೆ ವ್ಯಂಜನಗಳು ಯಾವಾಗಲೂ ಅರ್ಧಾಕ್ಷರಗಳೇ, ಅವು ತಮ್ಮ ಸ್ವಸ್ವರೂಪದಲ್ಲಿ ಪ್ರಕಟವಾಗಿ ಕೇಳುವುದೇ ಇಲ್ಲ (ಮ್ ಣ್ ನ್ ಲ್ ಳ್ ರ್ ಮೊದಲಾದ ಕೆಲವು ವ್ಯಂಜನಗಳ ಹೊರತಾಗಿ).  ಆದ್ದರಿಂದ ವ್ಯಂಜನಗಳು ತಮ್ಮ ಪೂರ್ಣತ್ವಕ್ಕಾಗಿ ಸ್ವರಗಳನ್ನು ಆಶ್ರಯಿಸಲೇ ಬೇಕಾಗುತ್ತದೆ.  ಈಗ ಒತ್ತಕ್ಷರಗಳನ್ನು ನೋಡಿ.  ಇವು ಹಲವು ಅರ್ಧಾಕ್ಷರಗಳು ಮತ್ತು ಒಂದು ಪೂರ್ಣಾಕ್ಷರದ ಸಂಯೋಗ ತಾನೆ?  ಈ ಅರ್ಧಾಕ್ಷರಗಳು ಯಾವುವು?  ವ್ಯಂಜನಗಳೇ.  ಉದಾಹರಣೆಗೆ ಕ್ರ ಎಂಬಲ್ಲಿ ಕ್ ರ್ ಮತ್ತು ಅ ಅಕ್ಷರಗಳಿವೆ.  ಮೊದಲೆರಡೂ ವ್ಯಂಜನಗಳು, ಮತ್ತು ಕೊನೆಯ ಪೂರ್ಣಾಕ್ಷರ ಸ್ವರ.  ಕ್ರ ಎನ್ನುವುದರ ಬದಲು ರ‍್ಕ ಎಂದರೂ ಇದೇ ಕತೆಯೇ - ರ್ ಕ್ ಮತ್ತು ಅ.  ಅದೇ ಉಣ್ ಎಂಬ ಪದ ನೋಡಿ.  ಇಲ್ಲೂ ಪೂರ್ಣಾಕ್ಷರವಾದ ಉಕಾರವು ಸ್ವತಂತ್ರವಾಗಿಯೇ ಪ್ರಕಟವಾಗಿದೆ.  ಇನ್ನು ಣ್ ವ್ಯಂಜನ ಸ್ವತಃ ಸ್ವತಂತ್ರ, ಅದು ಹಾಗೆಯೇ ಪ್ರಕಟಗೊಂಡಿದೆ.  ಆದರೆ ಉಕಾರಕ್ಕೆ ಣಕಾರವನ್ನು ’ಒತ್ತು’ ಎನ್ನಲಾಗುವುದಿಲ್ಲ.  ಏಕೆಂದರೆ ಒತ್ತಕ್ಷರವಾಗಲು ಮೊದಲಕ್ಷರ ಅರ್ಧಾಕ್ಷರವೇ ಆಗಿರಬೇಕು.  ಮೊದಲೇ ತಿಳಿಸಿದಂತೆ, ಸ್ವರಾಕ್ಷರಗಳು ಸ್ವಭಾವತಃ ಪೂರ್ಣಾಕ್ಷರಗಳು, ಮತ್ತು ಅವು ಅರ್ಧವಾಗುವುದೇ ಇಲ್ಲ.  ಕ್, ಗ್, ಜ್ ಎಂದು ವ್ಯಂಜನವನ್ನುಚ್ಚರಿಸುವಂತೆ ಯಾವುದಾದರೂ ಸ್ವರವನ್ನು ಅರ್ಧಾಕ್ಷರವಾಗಿ ಉಚ್ಚರಿಸಿ ನೋಡೋಣ.  ಆಗದು ಅಲ್ಲವೇ (ಔತ್ತರೇಯರು ಈ ಸ್ವರಗಳನ್ನೂ ಹಲ್ಲು ಹಿಡಿದು ಅರ್ಧಾಕ್ಷರವಾಗಿ ಕೇಳುವಂತೆ ವಿಚಿತ್ರವಾಗಿ ಉಲಿಯುತ್ತಾರೆ - ಅ್ ಆ್ ಇ್ ಈ್ ಉ್ ಊ್ ಹೀಗೆ - ಆದರೆ ಅದು ಸರಿಯಲ್ಲ).  ಆದ್ದರಿಂದ ಅರ್ಧವಾಗಲಾರದ ಅಕಾರಕ್ಕೆ ಯವೊತ್ತನ್ನು ಕೊಡುವುದು ಪ್ರಾಯೋಗಿಕವಾಗಿ ಅಸಾಧ್ಯ.  ನೆನಪಿರಲಿ, ಇದು ಕೇವಲ ಕನ್ನಡ/ಸಂಸ್ಕೃತಕ್ಕಷ್ಟೇ ಅನ್ವಯವಾಗುವ ಮಾತಲ್ಲ, ಯಾವುದೇ ಭಾಷೆಗೂ, ಯಾವುದೇ ಮನುಷ್ಯಧ್ವನಿಗೂ ಅನ್ವಯಿಸುವಂಥದ್ದು.

ಹಾಗಿದ್ದರೆ ಇಂಗ್ಲಿಷಿನಲ್ಲಿ ಆ ಪ್ರಯೋಗವಿದೆಯಲ್ಲ, ಎಂದರೆ ಅದು ಸುಳ್ಳು - ಇಂಗ್ಲಿಷಿನ A ಅಕ್ಷರವು ಸುಮಾರಾಗಿ ಅಕಾರಕ್ಕೆ ಯವೊತ್ತನ್ನು ಕೊಟ್ಟಂತೆ ಕೇಳುತ್ತದೆಯೇ ಹೊರತು ಅದು ಅದೇ ಅಲ್ಲ - ಅ/ಆಕಾರದ್ದೇ ಮತ್ತೊಂದು ಪ್ರಭೇದವಷ್ಟೇ - ಆ ಎನ್ನುವ ಸ್ವರವೇ ಸ್ವಸ್ಥಾನದಿಂದ ಸ್ವಲ್ಪ ಮೇಲಿನ ಜಾಗೆಯಿಂದ ಹೊರಡುತ್ತದೆ, ಮತ್ತು ಅದನ್ನುಚ್ಚರಿಸುವಾಗ ಎಂದುಚ್ಚರಿಸುವಾಗ ನಾಲಿಗೆಗೂ ಬಾಯಿಯ ಮೇಲ್ಗೋಡೆಗೂ ನಡುವಿರುವ ಅವಕಾಶ ಸ್ವಲ್ಪ ಕಿರಿದಾಗಿ ಚಪ್ಪಟೆಯಾಗುತ್ತದೆ.  "A = ಆ್ಯ" ಎನ್ನುವುದು ಋ = ರ್, ಐ = ಅಯ್ ಅಥವಾ ಔ = ಅವ್ ಎನ್ನುವಷ್ಟೇ ತಪ್ಪು ವಾದ.  ’ಸುಧಾರಣಾ’ವಾದಿಗಳು ಸಾವಿರ ಹೇಳುತ್ತಾರೆ, ಆದರೆ ಅವರ ಕಿವಿಗಳು ಮಂದವಾಗಿದೆಯೆನ್ನದೇ ಬೇರೆ ವಿಧಿಯಿಲ್ಲ.  ಹಾಗಿದ್ದರೆ ಈ ಸಮಸ್ಯೆಯನ್ನು ಪರಿಗಣಿಸುವುದು ಹೇಗೆ?

ಕನ್ನಡ ವರ್ಣಮಾಲೆ ಸಂಸ್ಕೃತವರ್ಣಮಾಲೆಯ ಪ್ರಸ್ತುತಿಯನ್ನೇ ಬಹುಪಾಲು ಅನುಸರಿಸಿದ್ದರೂ, ಕನ್ನಡದ ಅಗತ್ಯಗಳಿಗೆ ತಕ್ಕಂತೆ ಮಾರ್ಪಟ್ಟು ಅನುವಾಗಿದೆ.  ಅದರಲ್ಲಿರುವ ಐವತ್ತು (ನಲವತ್ತೊಂಬತ್ತು ಅನ್ನೋಣ) ಅಕ್ಷರಗಳು ಕನ್ನಡದ ಸಂಪರ್ಕದಲ್ಲಿರುವ ಬಹುತೇಕ ಭಾಷೆಗಳನ್ನೂ ನುಡಿಯಲು ಅನುವಾಗುವಂತಿದೆ.  ಇಷ್ಟಿದ್ದೂ ಯಾವುದೇ ವರ್ಣಮಾಲೆಯು ಎಲ್ಲ ಮಾನವಧ್ವನಿಗಳನ್ನೂ ಹಿಡಿದಿಡುತ್ತದೆಯೆನ್ನಲಾಗದು.  ನೂರಾರು ಧ್ವನಿಗಳನ್ನು ಹಿಡಿದಿಡುವ ಕೆಲಸವನ್ನು ಐವತ್ತು ಅಕ್ಷರದ ವರ್ಣಮಾಲೆ ನಿಭಾಯಿಸುತ್ತಿದೆ.  ಅದೇ ಕೆಲಸವನ್ನೇ ಇಂಗ್ಲಿಷಿನ ಇಪ್ಪತ್ತಾರು ಅಕ್ಷರದ ವರ್ಣಮಾಲೆಯೂ ಮಾಡುತ್ತಿದೆ. ಅದರರ್ಥವೇನು?  ವರ್ಣಮಾಲೆಯೊಂದು ಸಾಧ್ಯವಿರುವ *ಎಲ್ಲ* ಧ್ವನಿಗಳನ್ನೂ ಒಳಗೊಳ್ಳುವುದು ಅಸಾಧ್ಯ.  ಬದಲಿಗೆ ಆ ಭಾಷೆಯಲ್ಲಿ ಬಳಕೆಯಲ್ಲಿದ್ದ/ಇರುವ/ಇರಬಹುದಾದ ಮತ್ತು ಇತರ ಭಾಷೆಗಳೊಡನೆ ದೈನಂದಿನ ಕೊಡುಕೊಳ್ಳುವಿಕೆಗೆ ಅನುವಾಗುವಷ್ಟು ಅಕ್ಷರಗಳನ್ನು ಆ ಭಾಷೆಯ ವರ್ಣಮಾಲೆ ಒಳಗೊಳ್ಳುತ್ತದೆ.  ಇನ್ನಿದನ್ನು ಧ್ವನಿವೈಜ್ಞಾನಿಕವಾಗಿ ತರ್ಕಬದ್ಧವಾಗಿ ಜೋಡಿಸಿಟ್ಟುಕೊಳ್ಳುವ ಕೆಲಸವನ್ನು ಸಂಸ್ಕೃತದಂಥ ಕೆಲವು ಭಾಷೆಗಳು ಮಾಡುತ್ತವೆ, ಆದರೆ ಇಂಗ್ಲಿಷಿನಂಥ ಹಲವು ಭಾಷೆಗಳು ಮಾಡುವುದಿಲ್ಲವಷ್ಟೇ.  ಹೀಗೆ ಅನುವುಗೊಂಡ ವರ್ಣಮಾಲೆಯ ಒಂದು ಅಕ್ಷರಕ್ಕೆ ಹಲವು ಧ್ವನಿಗಳಿರುವುದು ಸಾಧ್ಯ, ಅಲ್ಲವೇ?  ಉದಾಹರಣೆಗೆ ನೋಡಿ, A ಅಕ್ಷರಕ್ಕೆ ಇಂಗ್ಲಿಷಿನಲ್ಲೇ ನಿರ್ದಿಷ್ಟ ಧ್ವನಿಯಿಲ್ಲ.  ಅ ಎನ್ನುವುದರಿಂದ ಎ ಎನ್ನುವವರೆಗೂ ಅದರ ಧ್ವನಿವ್ಯಾಪ್ತಿ - ನೇರ A ಅಕ್ಷರ ಬಂದರೊಂದು ಉಚ್ಚಾರಣೆ, ಪದದ ಕೊನೆಯಲ್ಲಿ ಬಂದರೆ ಒಂದು ಉಚ್ಚಾರಣೆ, ಪದದ ಮೊದಲಲ್ಲಿ ಬಂದರೆ ಒಂದು; ಇನ್ನು ಪದದ ಕೊನೆಯಲ್ಲಿ E ಅಕ್ಷರ ಬಂದರೇ ಪದದ ನಡುವಿನಲ್ಲಿ ಬರುವ A ಅಕ್ಷರಕ್ಕೊಂದು ಉಚ್ಚಾರಣೆ, A ಅಕ್ಷರದ ಮುಂದೆ ಬರುವ ಅಕ್ಷರದ ಮೇಲೆ ಅವಲಂಬಿತವಾಗಿ ಬೇರೊಂದು ಉಚ್ಚಾರ - ಹೋಗಲಿ ಇದರಲ್ಲಾದರೂ ಏಕರೂಪತೆಯಿದೆಯೇ ಎಂದರೆ ಅದೂ ಕಾಣದು.  ಒಂದೊಂದು ಭಾಷೆಯ ಮೂಲದಿಂದ ಬಂದ ಪದದಲ್ಲಿ ಒಂದೊಂದು ಉಚ್ಚಾರ.  ಇದಕ್ಕೆ ಕಾರಣವೂ ಇಲ್ಲದಿಲ್ಲ.  ಇಂಗ್ಲಿಷ್ ನಾಗರಿಕತೆ ಮತ್ತು ವ್ಯವಹಾರಸಂಬಂಧಗಳು ಬೆಳೆದಷ್ಟು ಪ್ರಚಂಡವೇಗದಲ್ಲಿ ಭಾಷೆ/ವ್ಯಾಕರಣ/ಲಿಪಿಸೌಲಭ್ಯಗಳು ಬೆಳೆಯಲಿಲ್ಲ.  ಲ್ಯಾಟಿನ್, ಗ್ರೀಕ್, ಸ್ವೀಡಿಶ್, ಸ್ಕ್ಯಾಂಡಿನೇವಿಯನ್, ಐಸ್ಲಾಂಡಿಕ್ ಹೀಗೆ ಹಲವು ಭಾಷಾಮೂಲದ ಪದಗಳ ಕುದಿಗುಲುಮೆ ಇಂಗ್ಲಿಷ್ ಭಾಷೆ.  ಆಯಾ ಭಾಷೆಯ ಮೂಲದಿಂದ ಬಂದ ಪದಗಳು ಬಹುತೇಕ ಅದೇ ಉಚ್ಚಾರವನ್ನುಳಿಸಿಕೊಂಡಿದ್ದರೂ, ಅದಕ್ಕೆ ತಕ್ಕ ಅಕ್ಷರಸಂಜ್ಞೆ ಮಾತ್ರ ಇಂಗ್ಲಿಷಿನಲ್ಲಿ ಮೂಡಲಿಲ್ಲ (ಆದ್ದರಿಂದಲೇ, ಸ್ಪೆಲ್ಲಿಂಗ್ ಕಲಿಕೆ ಕೇವಲ ಭಾರತೀಯ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಅವರಿಗೂ ಬಹು ದೊಡ್ಡ ಗೊಂದಲವೇ - ಇನ್ನು ಅಮೆರಿಕನ್ನರ ಬಗೆಗಂತೂ ಹೇಳುವುದೇ ಬೇಡ.  ಆಂಗ್ಲೇಯರಿಂದಲೇ ಬರುವ ಇ-ಮೈಲ್ ಪತ್ರವ್ಯವಹಾರವು ಎಣೆಯಿಲ್ಲದಷ್ಟು ಕಾಗುಣಿತದ ದೋಷದಿಂದ ತುಂಬಿರುವುದು ನನ್ನ ಸ್ವಂತ ಅನುಭವ).  ಒಂದೇ ಅಕ್ಷರಗಳ ವಿವಿಧ ಉಚ್ಚಾರಗಳನ್ನು ಸೂಚಿಸಲು a ā ä ẚ à á â ಮೊದಲಾದ ಸಂಜ್ಞೆಗಳನ್ನು ಬಳಸಲಾಗುತ್ತದೆಯಾದರೂ ಅದರಲ್ಲಿ ಏಕರೂಪತೆಯೂ ಇಲ್ಲ, ಎಲ್ಲೆಡೆಯೂ ಬಳಸುವ ಸಾರ್ವತ್ರಿಕತೆಯೂ ಇಲ್ಲ ಮತ್ತಿದು ಎಲ್ಲ ಉಚ್ಚಾರಣಾ ಸನ್ನಿವೇಶಗಳನ್ನು ಒಳಗೊಳ್ಳುವುದೂ ಇಲ್ಲ.  ಸಧ್ಯಕ್ಕೆ ಈ ಗೊಂದಲಗಳ ಭಾಷಾಮೂಲವನ್ನು ಕಡೆಗಣಿಸೋಣ.  ನಮಗೆ ಇವು ಪರಿಚಿತವಾಗುವುದು ಇಂಗ್ಲಿಷಿನ ಮೂಲಕ.  ಸ್ವತಃ ಇಂಗ್ಲಿಷ್ ಭಾಷೆಯೇ ಬಗೆಹರಿಸಿಕೊಳ್ಳಲಾಗದ ಸಮಸ್ಯೆಯನ್ನು, ನಾವು ಬಗೆಹರಿಸುವ ಅಗತ್ಯವೂ ಸಾಧ್ಯತೆಯೂ ಇದೆಯೇ ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ.

ಇಷ್ಟು ಹೇಳಿದ ಮೇಲೆ, ಇದೇ ಸಮಸ್ಯೆಯನ್ನು ಇಂಗ್ಲಿಷಿನೊಡನೆ ಇಂಥದೇ ಸಂಬಂಧ ಹೊಂದಿರುವ ಇತರ ಭಾರತೀಯ ಭಾಷೆಗಳು ಹೇಗೆ ನಿಭಾಯಿಸುತ್ತಿವೆ ನೋಡಬಹುದು.  ಸಂಸ್ಕೃತವಂತೂ ಕನ್ನಡ ಪದಗಳನ್ನೇ ಮುಟ್ಟಿಸಿಕೊಳ್ಳುವುದಿಲ್ಲವಾದ್ದರಿಂದ, ಇಂಗ್ಲಿಷಿನ ಉಚ್ಚಾರಣಾಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಸ್ಕೃತ ನಮಗೆ ಉದಾಹರಣೆಯಾಗಲಾರದು.  ಹಿಂದಿ?  ಹಿಂದಿಯೂ ಒಂದು ರೀತಿ ಇಂಗ್ಲಿಷಿನಂತೆಯೇ ಹಲವು ಭಾಷೆಗಳ ಮಿಶ್ರಣ.  ಅರೇಬಿಕ್, ಪರ್ಶಿಯನ್, ಉರ್ದೂ ಮತ್ತು ದೇಶೀಯ ಪ್ರಾಕೃತಭಾಷೆಗಳ ಮಿಶ್ರಣವನ್ನು ಮೂಲವಾಗುಳ್ಳದ್ದು.  ಕೆಲವು ಸಂದರ್ಭಗಳಲ್ಲಿ, ವರ್ಣಮಾಲೆಯಲ್ಲಿಲ್ಲದ ವಿಶೇಷ ಉಚ್ಚಾರಣೆಗಾಗಿ (ಉದಾಹರಣೆಗೆ ಅನುನಾಸಿಕ) ಇರುವ ಅಕ್ಷರಕ್ಕೇ ಚಂದ್ರಚಿಹ್ನೆಯನ್ನು ಬಳಸುವ ಉದಾಹರಣೆಗಳಿವೆ (ಉದಾ: ಕಹಾ = कहा; ಕಹಾಂ = कहॅ).  ಆದರೆ ಅದು ಇಂಗ್ಲಿಷಿನಂತೆ ಹೊರಗಿನ ಪದಗಳನ್ನು ಅವುಗಳ ಮೂಲರೂಪದಲ್ಲೇ ಸ್ವೀಕರಿಸಿದ್ದಾಗಲೀ, ಅದಕ್ಕಾಗಿ ತನ್ನ ವರ್ಣಮಾಲೆಯಲ್ಲಿ ಬದಲಾವಣೆ ಮಾಡಿಕೊಂಡದ್ದಾಗಲೀ ಇಲ್ಲ.   ಇಂಗ್ಲಿಷಿನ bank ಎನ್ನುವುದನ್ನು ನಾವು ಬ್ಯಾಂಕ್ ಎಂದಾದರೂ ಬರೆಯುತ್ತೇವೆ, ಆದರೆ ಹಿಂದಿಯಲ್ಲಿ ಅದು बैंक ಆಗಿಬಿಡುತ್ತದೆ.  ಕೊನೆಗೆ ಹಿಂದಿಯಲ್ಲಿ ಸುಲಭವಾಗಿ ಬರೆಯಬಹುದಾದ hospital (हास्पिटल) ಕೂಡ आस्पताल ಆಗಿಬಿಡುತ್ತದೆ.  ಇನ್ನು ತಮಿಳಿಗೆ ಬಂದರೆ, ಇಂಗ್ಲಿಷಿನ ಎರವಲಿರಲಿ, ಇಂಗ್ಲಿಷಿನ ಕಾಗುಣಿತದಲ್ಲಿ ಕಾಣುವ ಗಲಿಬಿಲಿಯ ಹತ್ತು ಪಟ್ಟನ್ನು ತಮಿಳಿನ ಒಳಗೇ ಕಾಣಬಹುದು.  ಅಲ್ಲಿ ಕ ಖ ಗ ಘ; ತ ಥ ದ ಧ; ಪ ಫ ಬ ಭ ಮುಂತಾದ ನಾಲ್ಕುನಾಲ್ಕು ಅಕ್ಷರಗಳ ಧ್ವನಿಯನ್ನು ಒಂದೊಂದೇ ಅಕ್ಷರವು ನಿಭಾಯಿಸುತ್ತಿದೆ.  ಕನ್ನಡದ ಗೋಪಿಯೂ ಸಂಸ್ಕೃತದ ಕೋಪಿಯೂ ಹಿಂದಿಯ ಗೋಬಿಯೂ ತಮಿಳಿನಲ್ಲಿ ಕೋಪಿಯೇ (கோபி); ಕನ್ನಡದ ಬೀದಿಯೂ ಸಂಸ್ಕೃತದ ಭೀತಿಯೂ ತಮಿಳಿನಲ್ಲಿ ಪೀತಿಯೇ (பீதி); ಇನ್ನು ತಮಿಳಿನಲ್ಲಿಯೇ ಸರಿಯಾಗಿ ಬರೆಯಬಹುದಾದ ಹೊಸೂರು (ஹொசூர்) ಪದವನ್ನು ಅವರು ಬರೆಯುವುದು ஓசுர் (ವೊಚೂರ್) ಎಂದೇ!ಬಹುಪಾಲು ಸಂಸ್ಕೃತ ವರ್ಣಮಾಲೆಯ ಹಂದರವನ್ನನುಸರಿಸುವ (ಆದರೆ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡದ ಸಂದರ್ಭಕ್ಕೆ ಅನುವಾಗಿಸಿಕೊಂಡಿರುವ) ಕನ್ನಡ ವರ್ಣಮಾಲೆಯಲ್ಲಿ ಈ ಬಗೆಯ ಗೊಂದಲಗಳು ಬಹುತೇಕ ಇಲ್ಲವೇ ಇಲ್ಲವೆನ್ನಬಹುದು.  ಹಾಗೆಂದು ಗೊಂದಲಗಳು ಇಲ್ಲವೇ ಇಲ್ಲವೆಂದಲ್ಲ - ಮೊದಲೇ ಹೇಳಿದಂತೆ ಯಾವುದೇ ವರ್ಣಮಾಲೆಯು ಎಲ್ಲ ಮಾನವಧ್ವನಿಗಳನ್ನೂ ಹಿಡಿದಿಡುತ್ತದೆಯೆನ್ನಲಾಗದು, ಆದರೆ ಕನ್ನಡದಲ್ಲಿ ಈ ಗೊಂದಲಗಳು ಕಡೆಗಣಿಸಬಹುದಾದಷ್ಟು ಕಡಿಮೆ.  ಉದಾಹರಣೆಗೆ, ಪ್ರತಿಯೊಂದು ಅಕ್ಷರವೂ ಹಲವು ಧ್ವನಿಗಳನ್ನು ನಿಭಾಯಿಸುವ ತಮಿಳಿನಲ್ಲಿ ನಕಾರಕ್ಕೆ ಎರಡು ಅಕ್ಷರಗಳಿವೆ ந ಮತ್ತು ன - நாராயணன் (ನಾರಾಯಣನ್) ಎಂಬಲ್ಲಿ ಮೊದಲ ಮತ್ತು ಕೊನೆಯ ನಕಾರಗಳನ್ನು ಗಮನಿಸಬಹುದು.  ಈ ಎರಡನ್ನೂ ಕನ್ನಡದಲ್ಲಿ ನ ಎಂಬ ಒಂದೇ ಅಕ್ಷರ ನಿಭಾಯಿಸುತ್ತದೆ, ಅದಕ್ಕಾಗಿ ಹೊಸದೊಂದು ಸಂಜ್ಞೆಯೋ ಹೊಸದೊಂದು ಸೂಚಿಯೋ ಅಗತ್ಯ ನಮಗೆ ಕಂಡಿಲ್ಲ.  ಇದೇ ಕಾರಣಕ್ಕೆ ನಮ್ಮಲ್ಲಿ ಈ ಎರಡು ನಕಾರಗಳ ಸೂಕ್ಷ್ಮ ಭೇದಗಳೂ ಕಾಣೆಯಾಗಿವೆ.  ಇದೇ ಕತೆ ள ழ ಅಕ್ಷರಗಳದ್ದೂ.  ಇದಕ್ಕೆ ಸಮಾನವಾಗಿ ಹಳಗನ್ನಡದಲ್ಲಿ ಳ ಮತ್ತು ೞ ಎಂಬ ಎರಡು ಅಕ್ಷರಗಳಿದ್ದುವು.  ಆದರೆ ಕ್ರಮೇಣ ಕನ್ನಡದಲ್ಲಿ ಈ ಎರಡನೆಯ ಅಕ್ಷರ ಬಿದ್ದುಹೋಗಿ ಕೇವಲ ಳಕಾರವಷ್ಟೇ ಉಳಿದಿದೆ.  ಅದಕ್ಕನುಗುಣವಾಗಿ ಉಚ್ಚಾರಣ ಸೂಕ್ಷ್ಮವೂ ಬಿದ್ದುಹೋಗಿದೆಯಾಗಿ ನಾವು ತಮಿೞನ್ನು ತಮಿಳ್ ಎಂದೇ ಉಚ್ಚರಿಸುತ್ತೇವೆ.

ಹೀಗಾಗಿ, ಯಾವ ಭಾಷೆಯೂ ಹೊರಗಿನ ಪದಗಳಿಗಾಗಿ ತಮ್ಮ ವರ್ಣಮಾಲೆಯನ್ನು ಬದಲಿಸಿಕೊಂಡದ್ದು ಕಂಡಿಲ್ಲ.  ಬದಲಿಗೆ, ಹೊರಗಿನಿಂದ ಬಂದ ಪದಗಳು, ಅತಿಥಿ ಭಾಷೆಯ ಜಾಯಮಾನಕ್ಕೆ ತಕ್ಕಂತೆ ರೂಪಾಂತರ ಹೊಂದುತ್ತವೆ.  ಕನ್ನಡದಲ್ಲೂ ಇದೇ ರೂಢಿಯನ್ನು ಕಾಣುತ್ತೇವೆ (ಸಂಸ್ಕೃತಪದಗಳು ಮಾತ್ರ ಏಕೆ ಹಾಗೇ ಉಪಯೋಗಿಸಲ್ಪಡುತ್ತವೆ ಎಂಬ ಪ್ರಶ್ನೆ ಇಲ್ಲಿ ಪ್ರಸ್ತುತವಲ್ಲ, ಅದು ಬೇರೆಯೇ ಚರ್ಚೆಯ ವಿಷಯ - ಆಡುನುಡಿಗೆ ಬಿದ್ದ ಸಂಸ್ಕೃತಪದಗಳೂ ಕನ್ನಡದಲ್ಲಿ ತದ್ಭವಗಳಾಗುವುದನ್ನೂ ಮರೆಯುವಂತಿಲ್ಲ).  ಹೀಗಾಗಿ ಕುರ್ಚಿ, ಮೇಜು, ತಾರೀಖುಗಳಂತೆಯೇ ಆಸ್ಪತ್ರೆ, ಬಸ್ಸು ಕಾರುಗಳೂ ಬ್ಯಾಟುಗಳೂ (hospital, bus, car, bat) ಕನ್ನಡದ ಜಾಯಮಾನಕ್ಕೆ ತಕ್ಕಂತೆ ಬಳಕೆಯಲ್ಲಿರುವುದನ್ನು ಗಮನಿಸಿರಬಹುದು.  car ಮತ್ತು batಗಳಲ್ಲಿರುವ A ಅಕ್ಷರದ ಉಚ್ಚಾರ ಬೇರೆಬೇರೆ.  ಅದಕ್ಕನುಗುಣವಾಗಿ ಕನ್ನಡದಲ್ಲಿ ಅದು ಕಾರ್ (ಕ್ ಆ ರ್) ಮತ್ತು ಬ್ಯಾಟ್ (ಬ್ ಯಾ ಟ್) ಆಗಿ ಬಳಕೆಯಲ್ಲಿರುವುದನ್ನು ಕಾಣಬಹುದು.  ಅದೇ ತರ್ಕದಲ್ಲಿ Apple ಪದವನ್ನು ಯಾಪಲ್ ಎಂದು ಬರೆಯಬಹುದು (ಸರಿಯಾದ ಉಚ್ಚಾರಣೆಯಲ್ಲ, ಆದರೆ ಮೂಲಕ್ಕೆ ಹತ್ತಿರದ್ದು), ಅಥವಾ ಅದು ತೀರ ದೂರವೆನಿಸಿದರೆ ಸುಮ್ಮನೇ ಆಪಲ್ ಎಂದರೂ ಆಯಿತು.

ಇಂಗ್ಲಿಷಿನಲ್ಲಿ ಸ್ಪಷ್ಟ ಉಚ್ಚಾರಣೆಯಿರುವ, ಆದರೆ ಕನ್ನಡದಲ್ಲಿ ಇಲ್ಲದ, F, Z ಮೊದಲಾದುವುಗಳನ್ನೂ ಕನ್ನಡದಲ್ಲಿ ಮೊದಲು ಫ್, ಜ್ ಎಂದು ತೋರಿಸುತ್ತಿದ್ದೆವು, ಆಮೇಲೆ ಈ ಅಕ್ಷರಗಳಿಗೇ ಅಡಿಯಲ್ಲಿ ಎರಡು ಚುಕ್ಕಿಯಿಟ್ಟು ತೋರಿಸಲಾರಂಭಿಸಿದ್ದೇವೆ.  ಇವು ವರ್ಣಮಾಲೆಯ ಹೊಸ ಅಕ್ಷರಗಳಲ್ಲ, ಬದಲಿಗೆ ಇರುವ ಅಕ್ಷರಗಳ ವಿಶಿಷ್ಟ ಉಚ್ಚಾರಸೂಚಕಗಳು.  ಇದು ಬರಹದಲ್ಲಿ ಬಳಕೆಯಲ್ಲಿ ಬಂದಿರುವುದರಿಂದ ಯೂನಿಕೋಡಿನಲ್ಲೂ ಬಳಕೆಯಲ್ಲಿದೆ (ಫ಼್ ಜ಼್ ಹೀಗೆ). ಆದರೆ F Z ಗಳಂತೆ ನಿರ್ದಿಷ್ಟ ಉಚ್ಚಾರವಿಲ್ಲದ A ಅಕ್ಷರವನ್ನು ಕೈಬರಹದಲ್ಲಿ ಆ ಅಥವಾ ಯಾ ಎಂದೇ ಬರೆಯುವ ರೂಢಿ.  ಆದರೂ ಇದಕ್ಕೂ ಒಂದು ನಿರ್ದಿಷ್ಟ ಸಂಕೇತವನ್ನು ನೀಡಬೇಕೆಂದರೆ ಹೊಸದೊಂದು (ತಪ್ಪಾದ) ಅಕ್ಷರದ ಬದಲು F Z ಗಳಿಗೆ ಬಳಸುವಂಥದ್ದೇ ಒಂದು ವಿಶಿಷ್ಟ ಚಿಹ್ನೆಯನ್ನು ಬಳಸಬಹುದೇನೋ (ಭಾರಧ್ವಾಜ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿ ಅ ಮತ್ತು ಓ ಗಳ ನಡುವಿನ ಉಚ್ಚಾರಣೆಯನ್ನು ಸೂಚಿಸಲು ಅಕ್ಷರದ ಮೇಲೆ ಅರ್ಧಚಂದ್ರ ಚಿಹ್ನೆಯನ್ನು ಬಳಸುವುದನ್ನು ನಾನು ಕಂಡಿದ್ದೇನೆ).

Friday, August 5, 2016

ಸವಿಯಬಾರದ ಹಣ್ಣು...

ಇತ್ತೀಚಿಗೆ ಕನ್ನಡದ್ದೇ ಪದಗಳನ್ನು ಬಳಸಬೇಕೆಂಬ ಪ್ರಚಾರದಡಿಯಲ್ಲಿ ಟೊಮ್ಯಾಟೋ ಮತ್ತು ಕ್ಯಾರೆಟ್ ಗಳಿಗೆ ಗೂದೆಹಣ್ಣು ಮತ್ತು ಕೆಂಗೆಣಸು ಎಂಬ ಹೆಸರು ಬಳಸಿ ಎಂದು ಹೇಳಲಾಗುತ್ತಿದೆ.  ಹೀಗೆ ಕರೆಕೊಡುವ ವಿಡಿಯೋ ತುಣುಕೊಂದು ಇಲ್ಲಿದೆ. 

https://www.facebook.com/TheKachaguli/videos/1063052510445410/

ವಿಡಿಯೋ ಮಾಡಿದವರ ಆಶಯವೇನೋ ಮೆಚ್ಚತಕ್ಕದ್ದೇ.  ಅನಗತ್ಯವಾಗಿ ಇಂಗ್ಲಿಷ್, ಹಿಂದಿ, ಸಂಸ್ಕೃತಗಳನ್ನು ಕನ್ನಡದಲ್ಲಿ ತುರುಕಿದರೆ ಯಾರಿಗಿಷ್ಟವಾಗುತ್ತದೆ ಹೇಳಿ.  ಹಾಗೆಯೇ, ವಿಡಿಯೂ ಕೂಡ ಅಚ್ಚುಕಟ್ಟಾಗಿದೆ, ಅಭಿನಯವೂ ಚೆನ್ನಾಗಿದೆ.  ಆದರೆ ಹಾಗೆ ಚೆನ್ನಾಗಿರುವುದೇ ತಪ್ಪು ಅರಿವನ್ನು ಹರಡಲು ರಹದಾರಿಯಾಗಬಾರದಲ್ಲ, ಅದಕ್ಕಾಗಿ ಈ ಲೇಖನ.  ಗೂದೆ ಹಣ್ಣು ಮತ್ತು ಕೆಂಗೆಣಸು ಏಕೆ ಸರಿಯಲ್ಲ ಎಂಬುದನ್ನಷ್ಟು ನೋಡೋಣ.

ಮೊದಲಿಗೆ ನಾವು ಅಷ್ಟು ಬಾಯಿ ಚಪ್ಪರಿಸಿಕೊಂಡು ತಿನ್ನುವ ಅಚ್ಚುಮೆಚ್ಚಿನ ಟೊಮ್ಯಾಟೋ ಹಣ್ಣಿನ ಕತೆ ನೋಡೋಣ.  ಇದಕ್ಕೆ ಗೂದೆಹಣ್ಣು ಎಂದು ಹೆಸರಂತೆ.  ಹೌದು, ಕೆಲವು ಪ್ರದೇಶಗಳಲ್ಲಿ ಅದನ್ನು ಹಾಗೆ ಕರೆಯುತ್ತಾರೆ, ಆದರೆ ಪದಮೂಲವನ್ನೂ ಅರಿಯಬೇಕಷ್ಟೇ.

ಗೂದೆ ಎನ್ನುವ ಪದಕ್ಕೆ ಕನ್ನಡದಲ್ಲಿ ಅಷ್ಟು ಬಾಯಿಚಪ್ಪರಿಸುವ ಅರ್ಥವೇನಿಲ್ಲ.  ಕೆಲವೊಮ್ಮೆ ಮಲದ್ವಾರದಲ್ಲಿ ದುರ್ಮಾಂಸ ಬೆಳೆದು, ಮಲವಿಸರ್ಜನೆಯ ಸಮಯದಲ್ಲಿ ಹೊರಬಂದುಬಿಡುತ್ತದೆ; ಇದನ್ನು ಕೈಯಿಂದ ಒಳತಳ್ಳಬಹುದು - ಅಸಾಧ್ಯ ನೋವಾಗುತ್ತದೆಂಬುದು ಅನುಭವಿಸಿದವರ ನುಡಿ.  ಇದನ್ನು ಮೂಲವ್ಯಾಧಿ (anal prolapse/piles/fistula) ಎನ್ನುತ್ತಾರೆ.  ಹೀಗೆ ಹೊರಬರುವ ಕೆಂಪನೆಯ ಭಾಗವೇ ಗೂದೆ.  ಅದಕ್ಕೇ ಈ ರೋಗಕ್ಕೆ ಗೂದೆರೋಗ ಎಂದೂ ಹೆಸರು.  ಕೆಲವು ಜಾತಿಯ ಮಂಗಗಳಲ್ಲಿ ಪೃಷ್ಠಭಾಗವು ಕೆಂಪಗೆ ಊದಿ ಹೊರಚಾಚಿಕೊಂಡಂತಿರುತ್ತದೆ.  ಸಂಗಾತಿಯನ್ನು ಆಕರ್ಷಿಸಲು ಇದು ಸಹಕಾರಿ ಎಂದು ಪ್ರಾಣಿಶಾಸ್ತ್ರಜ್ಞರ ಅಂಬೋಣ.  ಇದನ್ನು ಮಂಗನಗೂದೆ ಎನ್ನುತ್ತಾರೆ. 

ಸೊಗಸಾಗಿ ರಸತುಂಬಿ ನಳನಳಿಸುವ ಟೊಮ್ಯಾಟೋ ವಿಷಯ ಬರೆಯಹೋಗಿ ಇದನ್ನು ವಿವರಿಸಬೇಕಾಯಿತು ನೋಡಿ, ಇರಲಿ, ಈಗ ಟೊಮ್ಯಾಟೋ ವಿಷಯಕ್ಕೆ ಬರೋಣ.  

ಟೊಮ್ಯಾಟೋ ಭಾರತದ ಸ್ಥಳೀಯ ಹಣ್ಣಲ್ಲ.  ಆದ್ದರಿಂದಲೇ ಇದಕ್ಕೊಂದು ಸ್ಥಳೀಯ ಹೆಸರಿಲ್ಲ.  ಇದನ್ನು ಭಾರತಕ್ಕೆ ತಂದಿದ್ದು ಪೋರ್ತುಗೀಸರು, ಹದಿನಾರು-ಹದಿನೇಳನೆಯ ಶತಮಾನದ ಸುಮಾರಿಗೆ.  ಎಲ್ಲ ವಿದೇಶೀ ವಸ್ತುಗಳ ವಿಷಯದಲ್ಲಾಗುವಂತೆ ಇದನ್ನೂ ಸ್ಥಳೀಯರು ಅನುಮಾನ ಅಸಹ್ಯಗಳಿಂದಲೇ ನೋಡಿದರು.  ಹೀಗಾಗಿ ತಿಪ್ಪೆಯ ಮೇಲೆ ಬೆಳೆಯುವ ಈ ಹಣ್ಣು ಅವರಿಗೆ ಪೃಷ್ಠದಿಂದ ಹೊರಚಾಚಿದ ದುರ್ಮಾಂಸದಂತೆ ಅಸಹ್ಯಕರವಾಗಿ ಕಂಡಿದ್ದರೆ ಆಶ್ಚರ್ಯವಿಲ್ಲ.  ಗೂದೆಹಣ್ಣು ಹೆಸರು ಪ್ರಚಾರ ಮಾಡುವವರಿಗೆ ಬಹುಶಃ ಇದರ ಅರಿವಿಲ್ಲವೇನೋ.  ಜನಪದಕ್ಕೆ ಹೊಸತಾದ ಯಾವುದೇ ವಸ್ತುವು ಹೊರಗಿನಿಂದ ಬಂದರೂ ಅದರ ಹೆಸರೂ ಅದರೊಂದಿಗೇ ಬರುತ್ತದೆ ಎಂಬುದು ಯಾವುದೇ ಭಾಷೆಗೂ ಸಹಜ.  ಉದಾಹರಣೆಗೆ ಇಡ್ಲಿಯನ್ನು rice cake, backed rice ball ಎಂಬ ಏನೇ ಹೆಸರಿನಿಂದ ಕರೆದರೂ ಅದು ಇಡ್ಲಿಯಾಗುವುದಿಲ್ಲ, ಇಡ್ಲಿ ಇಡ್ಲಿಯೇ.  ಹಾಗೆಯೇ ದ್ವಿಚಕ್ರವಾಹನವು ಸ್ಕೂಟರ್ ಆಗುವುದಿಲ್ಲ, ಅದು ಸೈಕಲ್ ಕೂಡ ಆಗಬಹುದು, ಆದರೆ ಸ್ಕೂಟರ್ ಸ್ಕೂಟರೇ, ಸೈಕಲ್ ಸೈಕಲೇ.  ತಮಿಳನ್ನು ಬಿಟ್ಟು ಭಾರತದ ಬೇರೆಲ್ಲ ಭಾಷೆಗಳಲ್ಲೂ ಈ ಹಣ್ಣಿಗೆ ಟೊಮ್ಯಾಟೋ ಅಥವ ಅದರ ವಿವಿಧ ರೂಪಗಳೇ ಹೆಸರು - ತಮೋಟ, ತಮಾಟ, ತಮಾಟರ್, ತಮೇಟೋ ಕಾಯಿ ಹೀಗೆ.  ತಮಿಳಿನಲ್ಲಿ ಇದನ್ನು ತಕ್ಕಾಳಿ ಎನ್ನುತ್ತಾರೆ ಆದರೆ ಅದೂ ಪ್ರಾಚೀನವಾದ ಹೆಸರೇನಲ್ಲ - ತಕ್+ಆಳ್+ಇ = ಆಳಿಗೆ ತಕ್ಕ ಪುಷ್ಠಿ ಕೊಡುವುದು ಎಂಬಂಥದ್ದೇನೋ ಅರ್ಥದಲ್ಲಿ ಅದನ್ನು ಹಾಗೆ ಕರೆಯುತ್ತಾರೆ.

ಟೊಮ್ಯಾಟೋ ನಮಗೆ ಟೊಮ್ಯಾಟೋ ಎಂದೇ ಪರಿಚಿತವಾದ ವಿದೇಶೀ ತರಕಾರಿ, ಅದು ಹಾಗಿರುವುದೇ ಚೆನ್ನ.  ನಮ್ಮವರೂ ಮೊದಮೊದಲು ಗೂದೆಹಣ್ಣು ಎಂಬ ಅಸಹ್ಯ ಹೆಸರನ್ನಿಟ್ಟು ಅಪಹಾಸ್ಯ ಮಾಡಿದರೂ ಆಮೇಲಾಮೇಲೆ ಅದನ್ನು ಅಪ್ಪಿ-ಕೊಂಡಿಲ್ಲವೇ?  ಈಗಂತೂ ಟೊಮ್ಯಾಟೋ ಯಾವುದೇ ಅಡುಗೆ ಮನೆಯ ಬಹುಮುಖ್ಯ ತರಕಾರಿಗಳಲ್ಲೊಂದು.  ಸೊಗಸಾದ ಟೊಮ್ಯಾಟೋ ಗೊಜ್ಜನ್ನು ಗೂದೆಹಣ್ಣಿನ ಗೊಜ್ಜು ಎಂದು ಕಲ್ಪಿಸಲಾದರೂ ಆಗುತ್ತದೆಯೇ, ಹಾಗೆ ಕಲ್ಪಿಸಿದರೆ ಆ ಗೊಜ್ಜು ಗಂಟಲಲ್ಲಿ ಇಳಿಯಬಹುದೇ?

ಇನ್ನು ಕೆಂಗೆಣಸು (carrot) ಎನ್ನುವುದೂ ಇತ್ತೀಚಿಗೆ ಕನ್ನಡ ಉತ್ಸಾಹಿಗಳು ಕಟ್ಟಿದ ಪದವಷ್ಟೇ.  ಪ್ರಾಚೀನಸಾಹಿತ್ಯದಲ್ಲಾಗಲೀ ಅಥವ ಜನಬಳಕೆಯಲ್ಲಾಗಲೀ carrot ಎಂಬುದಕ್ಕೆ ಕೆಂಗೆಣಸು ಎಂಬ ಬಳಕೆಯಿಲ್ಲ.  ಹೊಸ ಪದ ಕಟ್ಟುವುದರಲ್ಲಿ ತಪ್ಪಿಲ್ಲ, ಆದರೆ ಅದಕ್ಕೆ ಅರ್ಥವನ್ನೂ ನೋಡಬೇಕಲ್ಲ?  ಕೆಂಪು + ಗೆಣಸು = ಕೆಂಗೆಣಸು; ಆದರೆ, ಕ್ಯಾರಟನ್ನು ಯಾವುದಕ್ಕಾದರೂ ಹೋಲಿಸುವುದೇ ಆದರೆ, ಅದು ಗೆಣಸಿಗಿಂತಾ ಮೂಲಂಗಿಗೇ ಹತ್ತಿರ.  carrot ನೋಡಲು ಕೆಂಪಾಗಿದ್ದ ಮಾತ್ರಕ್ಕೆ ಅದನ್ನು ಕೆಂಗೆಣಸು ಎನ್ನಲು ಆಗುವುದಿಲ್ಲ, ಗೆಣಸಿಗೂ ಕ್ಯಾರಟಿಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ - ರೂಪ, ಗುಣ, ಸ್ವಭಾವ ಎಲ್ಲದರಲ್ಲೂ. ಅದೇನೇ ಇರಲಿ ಕ್ಯಾರಟ್ ಭಾರತದ ಸ್ಥಳೀಯ ತರಕಾರಿಯೇ, ಹೊರಗಿನದೇನಲ್ಲ.  ಭಾರತದ ವಿವಿಧಭಾಗಗಳಲ್ಲಿ ಇದರ ಬೇರೆಬೇರೆ ಜಾತಿಗಳು ಬೆಳೆಯುತ್ತವೆ.  ಸಂಸ್ಕೃತದಲ್ಲಿ ಇದಕ್ಕೆ ಗರ್ಜರ ಎನ್ನುತ್ತಾರೆ.  ಅದೇ ಪ್ರಾಕೃತದಲ್ಲಿ ಗಜ್ಜರ ಆಗಿ, ಹಿಂದೀ ಮುಂತಾದ ಉತ್ತರ ಭಾಷೆಗಳಲ್ಲಿ ಗಾಜರ್ ಆಗಿಯೂ ಮತ್ತೆ ಕನ್ನಡದಲ್ಲಿ ಗಜ್ಜರಿ ಆಗೂ ಬಳಕೆಯಲ್ಲಿದೆ.  ಹಾಗೇ ನೆಲದೊಳಗೆ ಬೇರಿನ ರೂಪದಲ್ಲಿ ಬೆಳೆಯುವ ತರಕಾರಿಗಳನ್ನೆಲ್ಲಾ ಸಂಸ್ಕೃತದಲ್ಲಿ ಮೂಲ/ಮೂಲಕ ಎಂಬ ಹೆಸರಿನಿಂದ ಗುರುತಿಸುವುದು ವಾಡಿಕೆ - ಮೂಲಕ, ಚಾಣಕ್ಯಮೂಲಕ, ದೀರ್ಘಮೂಲಕ, ನೇಪಾಳಮೂಲಕ - ಹೀಗೆ, ಕ್ಯಾರಟು, ಮೂಲಂಗಿ, ಗೆಣಸು, ಎಲ್ಲವೂ ಒಂದಿಲ್ಲೊಂದು ’ಮೂಲ’ಕವೇ.  ಇದೇ ಹಿಂದಿಯಲ್ಲಿ ಮೂಲೀ ಆಗಿ ಬರಬರುತ್ತಾ ಕೇವಲ ಮೂಲಂಗಿ ಎಂಬ ಒಂದು ತರಕಾರಿಗೆ ಮಾತ್ರ ಹೆಸರಾಗಿ ನಿಂತಿತು.  ಹಾಗೇ ಮೂಲಕ ಎನ್ನುವುದು ದ್ರಾವಿಡದಲ್ಲಿ ಮೂಲಗೈ ಆಗಿ ಮೂಳಂಗಿ ಆಗಿ (ಇಟ್ಟಿಗೆ > ಇಟ್ಟಂಗಿ; ಹಚ್ಚಿಗೆ > ಹಚ್ಚಂಗಿ ಆದಹಾಗೆ) - ಕೊನೆಗೆ ಮೈಯುದ್ದಕ್ಕೂ ಮುಳ್ಳಿನಂತೆ ಸಣ್ಣಸಣ್ಣ ಬೇರುಗಳಿರುವುದರಿಂದ ಮುಳ್ಳಂಗಿ ಆಯಿತು.  ಆಮೇಲೆ ಅದೇ ಹಿಂದಿಯ ಮೂಲೀ ಪ್ರಭಾವದಿಂದ ಮೂಲಂಗಿಯಾಗಿ ಬಳಕೆಗೆ ಬಂತು.  ಮುಳ್ಳಂಗಿ ದ್ರಾವಿಡಭಾಷೆಗಳಲ್ಲಿ ಬಹುಕಾಲದಿಂದ ಬಳಕೆಯಲ್ಲಿರುವ ಪದ.  ವಿಶಾಲಾರ್ಥದಿಂದ ಅರ್ಥವು ಕುಗ್ಗಿ ಒಂದು ವಸ್ತುವಿಗೇ ಸೀಮಿತವಾಗುವ ಉದಾಹರಣೆಯಿದು.

ಇನ್ನು ಮೈಯೆಲ್ಲಾ ಗಂಟುಗಂಟಾಗಿರುವ (ಗೆಣ್ಣುಗಳಿಂದ ತುಂಬಿರುವ)ದಕ್ಕೆ ಗೆಣಸು (ಗಿಣ್ > ಗೆಣ್ > ಗೆಣಸು).  ಉರುಟುರುಟಾಗಿ ಗೆಣ್ಣುಗಳಿಂದ ತುಂಬಿರುವ ಗೆಣಸಿನ ರೂಪವೇ ಬೇರೆ, ಸಪೂರವಾಗಿ ನೇರವಾಗಿರುವ ಕ್ಯಾರಟ್ಟಿನ ರೂಪವೇ ಬೇರೆ.  ಅದು ರೂಪದಲ್ಲಿ ಗೆಣಸಿಗಿಂತ ಮೂಲಂಗಿಗೇ ಹತ್ತಿರ.  ನೆಲದಲ್ಲಿ ಬೆಳೆಯುವ ಹಲವು ’ಮೂಲಂಗಿ’ಗಳಲ್ಲಿ (ಮೂಲ ಅಥವಾ ಬೇರಿನ ರೂಪದಲ್ಲಿ ಬೆಳೆಯುವ ತರಕಾರಿಗಳಲ್ಲಿ) ಗರ್ಜರ (ಗಜ್ಜರಿ) ಸಹ ಒಂದು.  ಆದ್ದರಿಂದ ’ಮೂಲ’ಸಂಬಂಧದ ಹೆಸರು ಇದಕ್ಕೂ ಹತ್ತುತ್ತದೆ.  ಆದ್ದರಿಂದಲೇ ತಮಿಳಿನಲ್ಲಿ ಕ್ಯಾರೆಟ್ಟಿಗೆ ಮಂಜಳ್ ಮೂಲಂಗಿ (ಹಳದಿ/ಕೇಸರಿ ಮೂಲಂಗಿ) ಎಂಬ ನಿರ್ದೇಶನವೂ ಇದೆ.  ಕ್ಯಾರೆಟ್ಟಿಗೂ ಮೂಲಂಗಿಗೂ ಎಷ್ಟೋ ವ್ಯತ್ಯಾಸವಿದ್ದರೂ ಆ ವ್ಯತ್ಯಾಸವು ತೀರ ಕ್ಯಾರೆಟ್ಟು ಗೆಣಸುಗಳ ನಡುವಿನಷ್ಟಲ್ಲ.  ಆದ್ದರಿಂದ ಕರೆಯುವುದೇ ಆದರೆ, ಕೆಂಗೆಣಸು ಎಂದು ತಪ್ಪಾಗಿ ಕರೆಯುವುದಕ್ಕಿಂತ ಕೆಂಪುಮೂಲಂಗಿ ಎನ್ನುವುದು ಎಷ್ಟೋ ವಾಸಿ, ಆದರೆ ಮೂಲಂಗಿಯಲ್ಲೇ ಕೆಂಪುಮೂಲಂಗಿ ಕೂಡ ಈಗಾಗಲೇ ಇದೆ!  ಇಷ್ಟೆಲ್ಲಾ ತಾಪತ್ರಯಗಳ ಬದಲು ಈಗಾಗಲೇ ಇರುವ ಗಜ್ಜರಿ ಎನ್ನುವ ಹೆಸರೇ ಸೊಗಸಾಗಿದೆಯಲ್ಲವೇ, ಮೊದಲೇ ಹೇಳಿದಂತೆ ಜನಪದಕ್ಕೆ ಹೊಸತಾದ ಯಾವುದೇ ವಸ್ತುವು ಹೊರಗಿನಿಂದ ಬಂದರೂ ಅದರ ಹೆಸರೂ ಅದರೊಂದಿಗೇ ಬರುತ್ತದೆ ಎಂಬುದು ಯಾವುದೇ ಭಾಷೆಗೂ ಸಹಜ.  ಅದು ಇಲ್ಲಿ ಬಂದು, ಈ ಭಾಷೆಯ ಜಾಯಮಾನಕ್ಕೆ ಹೊಂದಿಕೊಂಡು ನೆಲೆಯೂರುತ್ತದೆ.  ಕ್ಯಾರಟ್ ಕೂಡ ಬಳಸುತ್ತಾ ಬಳಸುತ್ತಾ ಕನ್ನಡದ ಪದವೇ ಆಗಿದೆ.

Monday, June 6, 2016

ಔಚಿತ್ಯಪ್ರಜ್ಞೆ

ಈ ದಿನ ಶ್ರೀ Raghavendra Hebbalalu ಅವರ ಗೋಡೆಯಲ್ಲಿ ಕಂಡ ಕ್ಷೇಮೇಂದ್ರನ ಒಂದು ಉಕ್ತಿ, ಔಚಿತ್ಯಪ್ರಜ್ಞೆಯನ್ನು ಕುರಿತದ್ದು:

कण्ठॆ मॆखलया नितम्बफलकॆ तारॆण हारॆण वा
पाणौ नूपुरबन्धनॆन चरणॆ कॆयूरपाशॆन वा
शौर्यॆण प्रणतॆ रिपौ करुणया नायान्ति कॆ हास्यताम्
औचित्यॆन विना रुचिं प्रतनुतॆ नालङ्कृतीर्नॊ गुणाः

ಕಂಠೇ ಮೇಖಲಯಾ ನಿತಂಬಫಲಕೇ ತಾರೇಣ ಹಾರೇಣ ವಾ
ಪಾಣೌ ನೂಪುರಬಂಧನೇನ ಚರಣೇ ಕೇಯೂರಪಾಶೇನ ವಾ
ಶೌರ್ಯೇಣ ಪ್ರಣತೇ ರಿಪೌ ಕರುಣಯಾ ನಾಯಾನ್ತಿ ಕೇ ಹಾಸ್ಯತಾಮ್
ಔಚಿತ್ಯೇನ ವಿನಾ ರುಚಿಂ ಪ್ರತನುತೇ ನಾಲಂಕೃತೀರ್ನೋ ಗುಣಾಃ

ಔಚಿತ್ಯಪ್ರಜ್ಞೆಯನ್ನು ಇದಕ್ಕಿಂತ ಸೊಗಸಾಗಿ ಪ್ರಸ್ತುತಪಡಿಸಲು ಸಾಧ್ಯವೇ? ನನ್ನ ಕನ್ನಡಾನುವಾದ ಇಲ್ಲಿದೆ:

ಕೊರಳೊಳ್ ಮೇಖಲೆಯಾ ನಿತಂಬಮದರೊಳ್ ರಾಜಿಪ್ಪ ಹಾರಂಗಳುಂ
ಕರಮಂ ಜಗ್ಗಿಪ ಕಾಲ ಗೆಜ್ಜೆ, ನಡೆಯಂ ಬಂಧಿಪ್ಪ ತೋಳ್ವಂದಿಗಳ್
ಶರಣೆಂದುಂ ಮಿಗೆ ಶೌರ್ಯ, ಶತ್ರುದಯೆಗಳ್ ಹಾಸ್ಯಕ್ಕೆ ಠಾವಲ್ತೆ ಸಿಂ-
ಗರದಿಂ ಮೇಣ್ ಗುಣದಿಂದಲೇಂ ಸೊಗಮೆ ತಾನೌಚಿತ್ಯಮಂ ಮೀರಿರಲ್

ಕೊರಳಿನಲ್ಲಿ ಒಡ್ಯಾಣವೂ; ನಿತಂಬದ ಮೇಲೆ ಓಲಾಡುವ ಹಾರವೂ, ಕೈಗಳನ್ನು ಜಗ್ಗುವ ಕಾಲ್ಗೆಜ್ಜೆಗಳೂ, ಕಾಲನ್ನು ಬಂಧಿಸುವ ತೋಳಬಂದಿಗಳೂ, ಶರಣಾಗತರ ಮೇಲೆ ಶೌರ್ಯವೂ, ಹೊಡೆಯಬಂದ ಶತ್ರುವಿನ ಮೇಲೆ ದಯೆಯೂ ನಗೆಯುಕ್ಕಿಸುವುದಿಲ್ಲವೇನು? ಯಾವ ಅಲಂಕಾರವೂ ಯಾವ ಸದ್ಗುಣವೂ ಔಚಿತ್ಯವನ್ನು ಮೀರಿದರೆ ರುಚಿಯಾಗವು.

ಅರಿಯುವವರಿಗೆ ನೂರು ಅರ್ಥ - ಅರಿಯದವರಿಗೆ ವಿವರಿಸುವುದೇ ವ್ಯರ್ಥ - ಆ ಅನೌಚಿತ್ಯ ನಮಗೇಕೆ?

Tuesday, April 12, 2016

ಕೇಶಿರಾಜನ ಕನ್ನಡವರ್ಣಮಾಲೆ

ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ"
ಕೆಲದಿನಗಳ ಹಿಂದೆ ಪದಾರ್ಥಚಿಂತಾಮಣಿಯಲ್ಲಿ ಕೇಶಿರಾಜನ “ಅಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ” ಎಂಬ ಸಾಲು ಚರ್ಚೆಗೆ ಬಂತು.  ಕೇಶಿರಾಜನು ಶಬ್ದಮಣಿದರ್ಪಣದ ಸಂಜ್ಞಾಪ್ರಕರಣದಲ್ಲಿ ಅಚ್ಚಗನ್ನಡದ ವರ್ಣಮಾಲೆಯನ್ನು ಹೀಗೆ ವಿವರಿಸುತ್ತಾನೆ.

ತಿಳಿ ದೇಶೀಯಮಮೈದಂ
ಕಳೆ ನೀಂ ಋ ಲೃ ವರ್ಣ ಶ ಷ ವಿಸರ್ಗ ೱಕ ೲಪ
ಕ್ಷಳನಂ ನಾಲ್ವತ್ತೇೞಾ
ಯ್ತಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ

ಇದು ಪದ್ಯ. ಪ್ರಸಿದ್ಧವಾದ ಸಂಸ್ಕೃತವರ್ಣಮಾಲೆಯಿಂದ ಯಾವಯಾವ ಅಕ್ಷರಗಳನ್ನು ಕಳೆದು, ಅಚ್ಚಗನ್ನಡದ ಯಾವಯಾವ ಅಕ್ಷರಗಳನ್ನು ಅದಕ್ಕೆ ಕೂಡಿಸಿದರೆ ಅಚ್ಚಗನ್ನಡದ ವರ್ಣಮಾಲೆ ಸಿದ್ಧವಾಗುತ್ತದೆ ಎಂದು ಕೇಶಿರಾಜನು ಮೇಲಿನ ಪದ್ಯದಲ್ಲಿ ತಿಳಿಸುತ್ತಾನೆ, ಹೀಗೆ:

(ಐವತ್ತೆರಡು ಅಕ್ಷರಗಳಿರುವ ಸಂಸ್ಕೃತವರ್ಣಮಾಲೆಯನ್ನು ಹಿಡಿದು) ಅದಕ್ಕೆ -  
  1. ತಿಳಿ ದೇಶೀಯಮಮೈದಂ (ಸಂಸ್ಕೃತವರ್ಣಮಾಲೆಯಲ್ಲಿಲ್ಲದ, ಆದರೆ ಅಚ್ಚಗನ್ನಡದಲ್ಲಿರುವ ಎಒಱೞಳ ಎಂಬ ಐದಕ್ಷರಗಳನ್ನು ಸೇರಿಸು)
  2. ಕಳೆ ನೀಂ ಋ ಲೃ ವರ್ಣ ಶ ಷ ವಿಸರ್ಗ ೱಕ ೲಪ ಕ್ಷಳನಂ (ಸಂಸ್ಕೃತದಲ್ಲಿ ಮಾತ್ರ ಬಳಕೆಯಲ್ಲಿರುವ, ಆದರೆ ಕನ್ನಡದಲ್ಲಿಲ್ಲದ ಋೠಲೃಲೄಶಷಳ ಅಕ್ಷರಗಳನ್ನೂ, ವಿಸರ್ಗ (ಅಃ), ಜಿಹ್ವಾಮೂಲೀಯ (ೱಕ), ಉಪಧ್ಮಾನೀಯ (ೲಪ) - ಈ ಹತ್ತು ಅಕ್ಷರಗಳನ್ನು ಕಳೆ)
ನಾಲ್ವತ್ತೇೞಾಯ್ತಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ - ಹೀಗೆ ಅಚ್ಚಗನ್ನಡದ ಶುದ್ಧವರ್ಣಮಾಲೆಯನ್ನು ನಲವತ್ತೇಳೆಂದು ಅಳೆ - ಇದು ಈ ಪದ್ಯದ ಅರ್ಥ.

ಮೇಲಿನ ಪದ್ಯದಲ್ಲಿ ಸೂಚಿಸಿರುವ ೱ ಮತ್ತು ೲ ಎಂಬ ಎರಡಕ್ಷರಗಳ ಬಗ್ಗೆ ಒಂದು ಕಿರುಟಿಪ್ಪಣಿ: ಇವು ಕ್ರಮವಾಗಿ ಜಿಹ್ವಾಮೂಲೀಯ ಮತ್ತು ಉಪಧ್ಮಾನೀಯಗಳೆಂದು ಕರೆಯಲ್ಪಡುತ್ತವೆ. ಇವು ಸಂಸ್ಕೃತದಲ್ಲಿ ಕ ಮತ್ತು ಪ ಅಕ್ಷರಗಳ ಹಿಂದೆ ಬರುವ ವಿಶೇಷ ವಿಸರ್ಗಗಳಷ್ಟೇ, ಆದರೆ ಉಚ್ಚಾರಣೆ ವಿಸರ್ಗಕ್ಕಿಂತ ತುಸು ಭಿನ್ನ - ಉಪಧ್ಮಾನೀಯ(ೲ)ದ ಉಚ್ಚಾರವು ಸರಿಸುಮಾರು ಇಂಗ್ಲಿಷಿನ f ಅಕ್ಷರದಂತೆ ಬರುತ್ತದೆ (ಉದಾ: ಮನಃಪರಿವರ್ತನೆ > ಮನfಪರಿವರ್ತನೆ); ಜಿಹ್ವಾಮೂಲೀಯ(ೱ)ದ ಉಚ್ಚಾರವು ಕ ಮತ್ತು ಗ ನಡುವಿನ ಉಚ್ಚಾರವಾಗಿ, ತೆಳುವಾದ ಹಕಾರದೊಂದಿಗೆ (ಮುರುಘಾ, ಮಹೇಶ್ವರಿ, ಮೊಳಗಾ ಈ ಪದಗಳಲ್ಲಿ ಬರುವ ಘ, ಹ, ಗ ಅಕ್ಷರಗಳನ್ನು ತಮಿಳರು ಉಚ್ಚರಿಸುವಂತೆ) ಬರುತ್ತದೆ (ಉದಾ: ಮನಃಕ್ಲೇಶ ಎಂಬುದು ಮನhkhಕ್ಲೇಶ ಎಂದು ಉಚ್ಚರಿಸಲ್ಪಡುತ್ತದೆ) – ಆದರೆ ಕನ್ನಡದಲ್ಲಿ ಇವುಗಳ ಬಳಕೆಯಿಲ್ಲ – ಇಲ್ಲಿ ಉಪಧ್ಮಾನೀಯ ಮತ್ತು ಜಿಹ್ವಾಮೂಲೀಯಗಳನ್ನೂ ವಿಸರ್ಗಾಕ್ಷರಗಳಾಗಿಯೇ ಉಚ್ಚರಿಸುವುದು ರೂಢಿ (ಮನಃಪರಿವರ್ತನೆ ಮನಃಕ್ಲೇಶಗಳನ್ನು ಮನಃಪರಿವರ್ತನೆ, ಮನಃಕ್ಲೇಶ ಎಂದೇ ಉಚ್ಚರಿಸಲಾಗುತ್ತದೆ).

ಹೀಗೆ, ಕೇಶಿರಾಜನ ಪ್ರಕಾರ ಅಚ್ಚಗನ್ನಡದ ವರ್ಣಮಾಲೆ:
ಅಆಇಈಉಊಎಏಐಒಓಔ (=೧೨)
ಂ (ಅನುಸ್ವಾರ - ಅಂ) (=೧)
ಕಖಗಘಙ ಚಛಜಝಞ ಟಠಡಢಣ ತಥದಧನ ಪಫಬಭಮ (=೨೫)
ಯಱರಲವಸಹೞಳ (=೯)

ಒಟ್ಟು ೪೭ ಅಕ್ಷರಗಳು.

ಕೇಶಿರಾಜನೇನೋ "’ಅಚ್ಚ’ಕನ್ನಡದಲ್ಲಿ ಬಳಕೆಯಲ್ಲಿಲ್ಲ"ವೆಂದು ಹಲವು ಅಕ್ಷರಗಳನ್ನು ತೆಗೆದುಹಾಕಿದ. ಸಂಸ್ಕೃತದಲ್ಲೇ ತೀರ ಕಡಿಮೆ ಉಪಯೋಗವಿದ್ದು, ಕನ್ನಡದಲ್ಲಿ ಬಳಕೆಯಲ್ಲೇ ಇಲ್ಲದ ೠ, ಲೃ, ಲೄ, ೱ, ೲ ಗಳನ್ನು ತೆಗೆದದ್ದೇನೋ ಸರಿ, ಆದರೆ ನಾವು ಇವತ್ತು ವ್ಯಾಪಕವಾಗಿ ಬಳಸುತ್ತಿರುವ ಋ, ಶ, ಷ ಮತ್ತು ವಿಸರ್ಗಗಳನ್ನೂ ತೆಗೆದುಬಿಟ್ಟ. ಅದಕ್ಕೆ ಆತನ ತರ್ಕ ಹೀಗೆ: ಅಚ್ಚಗನ್ನಡದಲ್ಲಿ ಈ ಅಕ್ಷರಗಳು ಬಳಕೆಯಲ್ಲಿಲ್ಲ; ಸಂಸ್ಕೃತ ಪದಗಳಲ್ಲಿದ್ದರೂ ಅವು ಕನ್ನಡದಲ್ಲಿ ತದ್ಭವವಾಗುವಾಗ ಆ ಅಕ್ಷರಗಳು ದೇಸೀ ಅಕ್ಷರಗಳಿಗೆ ಬದಲಾಗುತ್ತವೆ (ಉದಾಹರಣೆಗೆ, ಋಷಿ > ರಿಸಿ, ಪಶು > ಪಸು/ಹಸು, ದುಃಖ > ದುಕ್ಕ ಹೀಗೆ) - ಆದ್ದರಿಂದ ಅಚ್ಚಗನ್ನಡ ವರ್ಣಮಾಲೆಯಲ್ಲಿ ಈ ಅಕ್ಷರಗಳ ಅಗತ್ಯವಿಲ್ಲ.  ಆದರೆ ಈ ತರ್ಕಕ್ಕೆ ಕೊನೆಯೆಲ್ಲಿ?  ಇದೇ ದಾರಿಯಲ್ಲಿ ಮುನ್ನೆಡೆದರೆ ಮಹಾಪ್ರಾಣಗಳೂ ಹೀಗೇ ಅಲ್ಲವೇ? ಅಚ್ಚಗನ್ನಡದಲ್ಲಿ ಮಹಾಪ್ರಾಣವೆಲ್ಲಿದೆ? ಸಂಸ್ಕೃತದ ಮಹಾಪ್ರಾಣಶಬ್ದಗಳೂ ಕನ್ನಡಕ್ಕೆ ಬರುವಾಗ ತದ್ಭವವಾಗಿಯೇ ಬರುತ್ತವೆ (ಹಠ > ಹಟ; ಘಂಟಾ > ಗಂಟೆ; ದುಃಖ > ದುಕ್ಕ ಹೀಗೆ). ಇನ್ನು ಙ ಮತ್ತು ಞಗಳ ಕೆಲಸವನ್ನು ಅನುಸ್ವಾರ (೦) ಮಾಡುತ್ತದೆ;  ಐಔ ಎಂಬುದು ಅ+ಏ ಮತ್ತು ಅ+ಓ ಅಕ್ಷರಗಳ ಸಂಯುಕ್ತ - ಕನ್ನಡದಲ್ಲಿ ಇದನ್ನೇ ಅಯ್ ಮತ್ತು ಅವ್ ಎಂದು ಬಳಸಬಹುದಾದ್ದರಿಂದ ಆ ಎರಡು ಸ್ವರಗಳ ಅಗತ್ಯವೂ ಇಲ್ಲ. ಆದ್ದರಿಂದ ಹತ್ತು ಮಹಾಪ್ರಾಣಗಳನ್ನೂ ಙಞಗಳನ್ನೂ ಐಔ ಸಂಯುಕ್ತ ಸ್ವರಗಳನ್ನೂ ತೆಗೆದರೆ ’ಅಚ್ಚಗನ್ನಡ’ ವರ್ಣಮಾಲೆಯ ಅಕ್ಷರಗಳ ಸಂಖ್ಯೆ ಮೂವತ್ಮೂರಕ್ಕಿಳಿಯುತ್ತದೆ, ಹೀಗೆ:

ಅಆಇಈಉಊಎಏಒಓ (=೧೦)
ಂ (ಅನುಸ್ವಾರ - ಅಂ) (=೧)
ಕಗ ಚಜ ಟಡಣ ತದನ ಪಬಮ (=೧೩)
ಯರಱಲವಸಹಳೞ (=೯)

ಒಟ್ಟು ೩೩ ಅಕ್ಷರಗಳು.

ತರ್ಕವೇನೋ ಸರಿಯೇ, ಆದರೆ ಕೇಶಿರಾಜನು ಈ ದಿಕ್ಕಿನಲ್ಲಿ ಮುಂದುವರೆಯದಿದ್ದುದಕ್ಕೆ ಕಾರಣವಿದೆ.  ಮೊದಲಿಗೆ ಸಂಸ್ಕೃತಪದಗಳೆಲ್ಲವೂ ಕನ್ನಡಕ್ಕೆ ತದ್ಭವವಾಗಿಯೇ ಬರುತ್ತವೆ/ಬರಬೇಕು ಎನ್ನುವ ಮಾತೇ ಪ್ರಾಯೋಗಿಕವಲ್ಲ. ರಿಸಿ ಪಸು ದುಕ್ಕ ಮುಂತಾಗಿ ಜನಬಳಕೆಯಲ್ಲಿ ಬಿದ್ದು ಸಹಜವಾಗಿ ಬದಲಾಗುವ ಪದಗಳಷ್ಟೇ ತದ್ಭವಗಳಾಗುತ್ತವೆಯೇ ಹೊರತು ಕನ್ನಡದಲ್ಲಿ ಬಳಸಲ್ಪಡುವ ಎಲ್ಲ ಸಂಸ್ಕೃತ ಪದಗಳೂ ಅಲ್ಲ. ಉದಾಹರಣೆಗೆ, ಶಂಕರ, ಅಘೋರ, ದರ್ಶನ ಇತ್ಯಾದಿ ಪದಗಳು ಜನಬಳಕೆಯದ್ದಲ್ಲ, ಆದರೆ ಗ್ರಾಂಥಿಕ ಕನ್ನಡದಲ್ಲೂ, ಅದನ್ನನುಸರಿಸುವ ಶಿಷ್ಟ ಕನ್ನಡದಲ್ಲೂ ಬಳಕೆಯಲ್ಲಿವೆ.  ಆದ್ದರಿಂದ ಮಹಾಪ್ರಾಣಯುಕ್ತ ಸಂಸ್ಕೃತ ಪದಗಳೂ ಕನ್ನಡದ ಅವಿಭಾಜ್ಯ ಅಂಗವೇ.  ಇವಿಲ್ಲದ ಕಾವ್ಯವನ್ನೂ ಶಾಸ್ತ್ರೀಯ ಸಾಹಿತ್ಯವನ್ನೂ ಊಹಿಸಿಕೊಳ್ಳಲೂ ಸಾಧ್ಯವಿಲ್ಲ.  ಎಂದಮೇಲೆ ಈ ಪದಗಳನ್ನು ಬಳಸುವ ಅಗತ್ಯಕ್ಕೆ ತಕ್ಕಂತೆ ಹಾಗೆಯೇ ಬರೆಯುವ ಸೌಲಭ್ಯ ಕನ್ನಡದಲ್ಲಿ ಉಳಿದಿರಬೇಕಾದದ್ದು ಸಹಜವೇ ತಾನೇ? ಹೀಗಾಗಿ ಕೇಶಿರಾಜನು ಮಹಾಪ್ರಾಣಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಳ್ಳಬೇಕಾಯಿತು. ಹಾಗೆಯೇ ಐಔ ಗಳನ್ನು ಅಯ್ ಮತ್ತು ಅವ್ ಗಳು ನಿಭಾಯಿಸಬಲ್ಲುವಾದರೂ ಉಚ್ಚಾರಣೆಯಲ್ಲಿ ಸೂಕ್ಷ್ಮ ವ್ಯತ್ಯಾಸವಿದ್ದೇ ಇದೆ. ಬಳಕೆಯಲ್ಲಿರುವ ಸಂಸ್ಕೃತ ಪದಗಳನ್ನು ವಿಕಾರವಿಲ್ಲದೇ ಹಾಗೇ ಬಳಸಬಹುದಾದರೆ ಐಔಗಳನ್ನು ಮಾತ್ರ ಏಕೆ ವಿಕಾರಮಾಡಬೇಕು? ಅದಕ್ಕೆ ಬಲಗೊಡುವ ಯಾವ ಪ್ರಯೋಗವೂ ಇಲ್ಲವಲ್ಲ! ಅದಕ್ಕೇ ಐಔಗಳೂ ಉಳಿದುವು.  ಹೀಗೆ ವಿಪರೀತಕ್ರಾಂತಿಯ ಗೊಡವೆಗೆ ಹೋಗದೇ ಕೇವಲ ಪ್ರಯೋಗಸಾಧುವಾದ ’ಶುದ್ಧಗೆ’ಯ ಪ್ರಸ್ತುತ ಪಡಿಸುವಲ್ಲಿಗೆ ಕೇಶಿರಾಜ ನಿಂತ.

ಇದಿಷ್ಟು ಕೇಶರಾಜನ ವಿಷಯವಾಯಿತು, ಆದರೆ ನಮ್ಮ ಆಧುನಿಕ ಕನ್ನಡ ವರ್ಣಮಾಲೆಯು, ಕೇಶಿರಾಜನು ಸೂಚಿಸಿದ ’ಶುದ್ಧಗೆ’ಯಿಂದ ಸಾಕಷ್ಟು ಬದಲಾವಣೆ ಹೊಂದಿದೆ, ಪರಿಷ್ಕೃತಗೊಂಡಿದೆ.  ಹಾಗಾದರೆ ಈ ಪುನಃಪರಿಷ್ಕರಣಗಳ ಅಗತ್ಯವಾದರೂ ಏಕೆ ಬಿದ್ದಿತೆಂಬುದನ್ನು ನೋಡೋಣ.  ಈ ಹಿಂದೆ ನೋಡಿದಂತೆ ಜನಬಳಕೆಗೆ ಬಿದ್ದ ಹಲವು ಸಂಸ್ಕೃತ ಪದಗಳು ಕನ್ನಡಕ್ಕೆ ತದ್ಭವವಾಗಿ ಬರುವುದು ನಿಜವಾದರೂ, ಅಷ್ಟುಮಾತ್ರಕ್ಕೆ ಮೂಲ ತತ್ಸಮದ ಬಳಕೆಯೇ ಇಲ್ಲವೆನ್ನುವಂತಿಲ್ಲ, ಈ ತದ್ಭವಗಳ ಜೊತೆಜೊತೆಗೇ ಅವುಗಳ ತತ್ಸಮರೂಪಗಳೂ ಬಳಕೆಯಲ್ಲಿದ್ದೇಯಿವೆ.  ಉದಾಹರಣೆಗೆ ರಿಸಿ ಪಸು ದುಕ್ಕ ಮುಂತಾದುವು ತದ್ಭವಗಳಾದರೂ, ಅವುಗಳ ತತ್ಸಮರೂಪಗಳಾದ ಋಷಿ, ಪಶು, ದುಃಖಗಳೂ ಅಷ್ಟೇ ವ್ಯಾಪಕವಾಗಿ ಬಳಕೆಯಲ್ಲಿವೆ. ಪದವೊಂದನ್ನು ತದ್ಭವವಾಗಿ ಬಳಸಬೇಕೋ ತತ್ಸಮವಾಗಿಯೋ ಎಂದು ನಿರ್ಧರಿಸುವಲ್ಲಿ ಬಳಕೆಯ ಸಂದರ್ಭ, ಇತರ ಕನ್ನಡ ಹಾಗೂ ಸಂಸ್ಕೃತ ಪದಗಳೊಡನೆ ಅವಕ್ಕಿರುವ ಸಂಧಿ/ಸಮಾಸ ಸೌಲಭ್ಯ, ಇದರಿಂದ ಬರವಣಿಗೆಗೆ ದಕ್ಕುವ ಬಾಗು-ಬಳುಕುಗಳು, ನಿಖರತೆ, ತೇಜಸ್ಸು, ಶ್ರೀಮಂತಿಕೆ ಮುಂತಾದುವು ಪ್ರಮುಖ ಪಾತ್ರವಹಿಸುತ್ತವೆ. ಅದೇನೇ ಇರಲಿ, ಅಗತ್ಯ ಬಿದ್ದಾಗ ಎರಡೂ ರೂಪಗಳನ್ನು ಕೈತಡೆಯದೇ ಬಳಸುವ ಸ್ವಾತಂತ್ರ್ಯವು ಬಳಸುವವನಿಗೆ ಇರಬೇಕಾಗುತ್ತದೆ.  ಆದ್ದರಿಂದ ಮಹಾಪ್ರಾಣಗಳನ್ನು ಉಳಿಸಿಕೊಂಡಂತೆಯೇ ರಿಸಿ ಪಸು ದುಕ್ಕ ಮುಂತಾದುಗಳ ತತ್ಸಮರೂಪಗಳಾದ ಋಷಿ, ಪಶು, ದುಃಖಗಳಲ್ಲಿರುವ ಋಶಷ ಮತ್ತು ವಿಸರ್ಗಗಳನ್ನೂ ಉಳಿಸಿಕೊಳ್ಳುವ ಅಗತ್ ಬೀಳುತ್ತದೆ.  ಆದ್ದರಿಂದಲೇ ಕನ್ನಡದ್ದಲ್ಲವೆಂದು ಕೇಶಿರಾಜನು ಓಡಿಸಿದ್ದ ಋಶಷ ಮತ್ತು ವಿಸರ್ಗಗಳೂ ಹಿಂದಿರುಗಿದುವು.

ಅಕ್ಷರಗಳು ಮರಳಿ ಬಂದದ್ದೇನೋ ಸರಿ, ಆದರೆ ಕೇಶಿರಾಜನು ಕನ್ನಡದ್ದೇ ಎಂದು ನಿರ್ದಿಷ್ಟವಾಗಿ ಉಳಿಸಿಕೊಂಡಿದ್ದ ಱೞ ವರ್ಣಗಳು ಮರೆಯಾದದ್ದೇಕೆ?  ಮಹಾಪ್ರಾಣ, ಋಶಷ ಮತ್ತು ವಿಸರ್ಗಗಳಿಗೆ ಅನ್ವಯಿಸುವ ತರ್ಕವೇ ಇಲ್ಲೂ ಅನ್ವಯವಾಗಬೇಕಿತ್ತಲ್ಲವೇ?  ಬಳಸುವ ಅಗತ್ಯ ಬಿದ್ದಾಗ ಅಕ್ಷರವಿಲ್ಲದಿದ್ದರೆ ಹೇಗೆ?  ಅದಕ್ಕೇ ಅಲ್ಲವೇ ಕೇಶಿರಾಜನು ಅವುಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಂಡದ್ದು?  ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಱೞ ವರ್ಣಗಳು ಕೇಶಿರಾಜನ ಕಾಲಕ್ಕೇ ನಿಧಾನಕ್ಕೆ ರಳ ಅಕ್ಷರಗಳ ಜೊತೆ ಬೆರೆತುಹೋಗುತ್ತಿದ್ದು, ನಡುಗನ್ನಡದ ಕಾಲಕ್ಕಾಗಲೇ ಆ ವ್ಯತ್ಯಾಸ ಅಳಿದುಹೋಗಿತ್ತು; ವಿದ್ವಾಂಸರಲ್ಲೇ ಈ ಬಗೆಗಿನ ಗೊಂದಲಗಳಿತ್ತು. ಹನ್ನೆರಡನೇ ಶತಮಾನದ ಶರಣಸಾಹಿತ್ಯದಲ್ಲೂ ಱೞಗಳ ಬಳಕೆ ಕ್ವಚಿತ್ತಾಗಿ ಮಾತ್ರ ಕಂಡುಬರುತ್ತದೆ.  ಕೇಶಿರಾಜನಿಗಿಂತ ಅರ್ಧಶತಮಾನದಷ್ಟಾದರೂ ಹಿಂದಿನವನಾದ ಹರಿಹರನೇ - "ಕವಿತತಿ ವಿಚಾರಿಸಬೇಡದರಿಂ ಱೞಕುಳಕ್ಷಳಂಗಳನಿದರೊಳ್" ಎಂದು ತನ್ನ ಗಿರಿಜಾಕಲ್ಯಾಣದಲ್ಲಿ ಹೇಳಿದ್ದಾನೆ (ಕಾವ್ಯಸೌಷ್ಟವಕ್ಕೆ ಗಮನ ಕೊಡಬೇಕಾದ ಕವಿಗಳು ಅರ್ಥವಿಲ್ಲದ ಱೞಕುಳಕ್ಷಳಗಳ ಚರ್ಚೆಯ ಗೊಡವೆಗೆ ಹೋಗದಿರುವುದೇ ಲೇಸು ಎಂದು ಅವನ ಅಭಿಪ್ರಾಯ).  ಹರಿಹರನೂ ರಾಘವಾಂಕನೂ ಱೞಗಳನ್ನು ಹಠ ಹಿಡಿದಂತೆ ಬಳಸಿದರೂ ಆಮೇಲಾಮೇಲೆ ಬಂದ ಕುಮಾರವ್ಯಾಸನಲ್ಲಿ ಹಾಗೂ ದಾಸರ ಪದಗಳಲ್ಲಿ ಅವು ಸಂಪೂರ್ಣ ಮರೆಯಾಗಿರುವುದನ್ನು ನೋಡುತ್ತೇವೆ.  ಹೀಗೆ ದಿನಬಳಕೆಯಿಂದ ತನ್ನ ಕಾಲಕ್ಕಾಗಲೇ ಹೊರನಡೆದಿದ್ದ ಱೞ ಅಕ್ಷರಗಳಿಗೆ ವರ್ಣಮಾಲೆಯಲ್ಲಾದರೂ, ಶಾಸ್ತ್ರಕ್ಕಾದರೂ ಒಂದು ಆಶ್ರಯ ಕಲ್ಪಿಸುವ ಕೇಶಿರಾಜನ ಪ್ರಯತ್ನವು ಫಲಿಸದೇ ಅವು ಕ್ರಮೇಣ ಕಣ್ಮರೆಯೇ ಆದುವು.  ಹೀಗಾಗಿ ಕೇಶಿರಾಜನ ’ಅಚ್ಚಗನ್ನಡ’ ವರ್ಣಮಾಲೆಯಿಂದ, ಬದಲಾದ ಆಧುನಿಕ ಕನ್ನಡವರ್ಣಮಾಲೆಗೆ ಮತ್ತೊಂದು ತಾಳೆ ಪಟ್ಟಿ ಬರೆಯುವುದಾದರೆ ಅದು ಹೀಗಿರುತ್ತದೆ:

ಕೇಶಿರಾಜನ ’ಅಚ್ಚಗನ್ನಡ’ ವರ್ಣಮಾಲೆಯ ಅಕ್ಷರಗಳು - ೪೭
ಅದರಿಂದ ಕೈಬಿಟ್ಟ, ಇಂದಿಗೆ ಬಳಕೆಯಲ್ಲಿಲ್ಲದ ಅಕ್ಷರಗಳು - ೨ (ಱೞ)
ಮತ್ತೆ ಸೇರಿಸಿಕೊಂಡ ಸಂಸ್ಕೃತಮೂಲದ ಅಕ್ಷರಗಳು - ೪ (ಋಶಷ ಮತ್ತು ವಿಸರ್ಗ )
ಹೊಸಗನ್ನಡ ವರ್ಣಮಾಲೆಯ ಒಟ್ಟು ಅಕ್ಷರಗಳು - ೪೯

ಹೀಗೆ, ಸಧ್ಯ ಬಳಕೆಯಲ್ಲಿರುವ ಆಧುನಿಕ ಕನ್ನಡದ ವರ್ಣಮಾಲೆ:
ಅಆಇಈಉಊಋಎಏಐಒಓಔ (=೧೩)
ಂ (ಅನುಸ್ವಾರ - ಅಂ) ಃ (ವಿಸರ್ಗ - ಅಃ) (=೨)
ಕಖಗಘಙ ಚಛಜಝಞ ಟಠಡಢಣ ತಥದಧನ ಪಫಬಭಮ (=೨೫)
ಯರಲವಶಷಸಹಳ (=೯)

ಒಟ್ಟು ೪೯ ಅಕ್ಷರಗಳು.  ನಾವು ಓದುತ್ತಿದ್ದ ಕಾಲದಲ್ಲಿ ೠ ಅಕ್ಷರವನ್ನೂ ಕನ್ನಡ ವರ್ಣಮಾಲೆಯ ಭಾಗವಾಗಿಸಿ ಒಟ್ಟು ಐವತ್ತು ಅಕ್ಷರಗಳಾಗಿ ಹೇಳಿಕೊಡುತ್ತಿದ್ದರು.  ಈಗ ಆಧುನಿಕ ಕನ್ನಡ ವರ್ಣಮಾಲೆಯು ೠಕಾರದಿಂದ ಮುಕ್ತಿಪಡೆದಿದೆ.

ಇನ್ನು ಈ ಲೇಖನದಲ್ಲಿ ಹೇಳಿದ ಱೞ ಕುೞ ಕ್ಷಳಗಳ ವಿಷಯ ಮತ್ತೊಂದು ದೊಡ್ಡ ಕತೆ.  ಮತ್ತೆಂದಾದರೂ ಬರೆಯುತ್ತೇನೆ.

Wednesday, January 27, 2016

ಬೆರಳೊಳು ಕುಟಿಲದಿ ಕದವನು ಬಡಿವವ

ಅಂಗುಲ್ಯಾ ಕಃ ಕವಾಟಂ ಪ್ರಹರತಿ ಕುಟಿಲೇ ಮಾಧವಃ ಕಿಂ ವಸಂತೋ|
ನೋ ಚಕ್ರೀ ಕಿಂ ಕುಲಾಲೋ ನಹಿ ಧರಣಿಧರಃ ಕಿಂ ದ್ವಿಜಿಹ್ನೂಃ ಫಣೀಂದ್ರಃ|
ನಾಹಂ ಘೋರಾಹಿಮರ್ದೀ ಖಗಪತಿರಸಿ ಕಿಂ ನೋ ಹರಿಃ, ಕಿಂ ಕಪೀಂದ್ರ
ಸ್ತ್ವಿತ್ಯೇವಂ ಗೋಪಕನ್ಯಾಪ್ರತಿವಚನಜಡಃ ಪಾತುಮಾಂ ಪದ್ಮನಾಭಃ

ಇದು ಶ್ರೀ ವಾದಿರಾಜರ ಉಕ್ತಿಪ್ರತ್ಯುಕ್ತಿಸ್ತೋತ್ರದ ಒಂದು ಶ್ಲೋಕ.  ತುಂಟ ಕೃಷ್ಣನು ಗೊಲ್ಲತಿಯೊಬ್ಬಳ ಮನೆಯ ಬಾಗಿಲು ತಟ್ಟುತ್ತಿದ್ದಾನೆ.  ಬೆರಳ ತುದಿಯಿಂದ ಇಷ್ಟು ಹಗುರವಾಗಿ ಕಳ್ಳನಂತೆ ಬಾಗಿಲು ತಟ್ಟುತ್ತಿರುವುದು ಈ ಕೃಷ್ಣನೇ ಎಂಬುದು ಗೋಪಿಕೆಗೆ ಗೊತ್ತು.  ಅವನನ್ನು ಕೆಲಕಾಲ ಹೊರಗೇ ನಿಲ್ಲಿಸಿ ಸತಾಯಿಸುವ ಇರಾದೆ ಆಕೆಯದು.  ಬಾಗಿಲು ತಟ್ಟುತ್ತಿರುವುದು ಯಾರೆಂದು ಕೇಳಿದಾಗ ಮಾಧವ, ಚಕ್ರೀ, ಧರಣಿಧರ ಹೀಗೆ ಆತ ಏನು ಉತ್ತರ ಹೇಳಿದರೂ ಅದಕ್ಕೆ ಕೃಷ್ಣನೆಂದೇ ಅಲ್ಲದೇ ಮತ್ತೊಂದು ಅರ್ಥವಿದ್ದೇ ಇದೆ - ಈಕೆ ಆ ಇನ್ನೊಂದು ಶ್ಲೇಷಾರ್ಥವನ್ನು ಬಳಸಿ, ನೀನು ಅವನೇ ಇವನೇ ಎಂದು ಕೇಳುತ್ತಾ, ಬಂದಿರುವುದು ಕೃಷ್ಣನೆಂಬ ವಿಷಯವು ತನಗೆ ತಿಳಿಯದಂತೆ ನಟಿಸುತ್ತಾಳೆ.  ಏನು ಹೇಳಿದರೂ ಅದಕ್ಕೆ ಬೇರೆಯದೇ ಅರ್ಥ ಕಲ್ಪಿಸುತ್ತಿರುವ ಗೋಪಿಕೆಯ ಮುಂದೆ ಸರ್ವಶಬ್ದವಾಚ್ಯನಾದ ಹರಿ ತನ್ನದೇ ಒಂದು ಹೆಸರಿಲ್ಲದಂತಾಗಿ ನಿರುತ್ತರನಾಗಿ ನಿಲ್ಲುವ ಸುಂದರ ಚಿತ್ರಣ ಇಲ್ಲಿದೆ.

ಈ ಕೆಳಗಿನದು ಅದರ ಕನ್ನಡಾನುವಾದ.  ಮೂಲದ ಶ್ಲೇಷಾರ್ಥಸೌಂದರ್ಯವನ್ನುಳಿಸಿಕೊಳ್ಳಲೋಸುಗ ಆದಿಪ್ರಾಸವನ್ನು ಕೈಬಿಟ್ಟಿದ್ದೇನೆ:

"ಬೆರಳೊಳಿನಿತು ಕುಟಿಲದಿ ಕದ ಬಡಿವರಾರು?" "ಮಾಧವಂ"
"ಮಾಧವಂ? ವಸಂತನೇಂ?" "ಅಲ್ತು, ಚಕ್ರಿಯೆಂಬುವನ್"
"ಚಕ್ರಿಯೆನೆ? ಕುಲಾಲನೇಂ?" "ಅಲ್ತು, ಧರಣಿಧರನಿವಂ"
"ಬಲ್ಲೆ, ಸೀಳುನಾಲಗೆಯವನಾದಿಶೇಷನಲ್ತೆ ನೀಂ?"

"ಅಲ್ತು, ಹಾವನಳುಪಿದಂ" "ಓಹೊ, ಗರುಡನೆಂಬೆಯಾ?"
"ಗರುಡನಲ್ತು, ಹರಿಯೆ ನಾಂ" "ಹರಿಯೆನಲ್? ಕಪೀಂದ್ರನೇಂ?"
ಇಂತು ಮಾತಿಗೊಂದು ಮಾತನೆಸೆಯುತಿರ್ಪ ಗೊಲ್ಲಹುಡುಗಿ-
ಗೆದುರುಸೋಲ್ತ ಪದುಮನಾಭ ಸಲಹಲೆಮ್ಮ ಸಂತತಂ

ವಾದಿರಾಜರು ಸ್ವತಃ ಹರಿದಾಸರು.  ಮೇಲಿನ ಸಂಸ್ಕೃತಶ್ಲೋಕವನ್ನೇ ಅವರು ಕೀರ್ತನೆಯ ರೂಪದಲ್ಲಿ ರಚಿಸಿದ್ದರೆ ಹೇಗಿದ್ದಿರಬಹುದು?  ಅಂಥದೊಂದು ಪ್ರಯತ್ನ ಇಲ್ಲಿದೆ.  ಇದು ವಾದಿರಾಜರ ಕೀರ್ತನೆಯಲ್ಲ, ಮೂಲಶ್ಲೋಕದ, ಕೀರ್ತನಾರೂಪದ ಭಾವಾನುವಾದವಷ್ಟೇ.  ಚಮತ್ಕಾರಯುಕ್ತವಾದ ಆ ಸಂಸ್ಕೃತಶ್ಲೋಕದಲ್ಲಿ ಕನ್ನಡದ ಹರಿದಾಸರಾದ ವಾದಿರಾಜರನ್ನು ಕಾಣುವ ಪ್ರಯತ್ನ:

ರಾಗ - ಶಂಕರಾಭರಣ; ತಾಳ - ಮಿಶ್ರಚಾಪು
ಬೆರಳೊಳು ಕುಟಿಲದಿ ಕದವನು ಬಡಿವವ-
ನಾರೋ ಪೇಳೆಲೊ ಬೇಗ ||ಪ||

ಮಾಧವನೆನಲು ವಸಂತನು ನೀನೇನೊ
ಚಕ್ರಿಯೆನಲು ಮಡಕೆ ಮಾಳ್ಪನೆ ನೀ ಪೇಳೋ ||ಅ.ಪ||

ಮೇದಿನಿಧರನೆನೆ ಸೀಳುನಾಲಗೆಯುಳ್ಳ
ಆದಿಶೇಷನೆ ನೀನೋ|
ಮೋದದಿ ಹಾವ ಭಂಜಿಸಿದವನೆನ್ನುವೆ-
ಯಾದೊಡೆ ಪೇಳೋ ನೀ ಗರುಡನೇನೋ ||೧||

ಹರಿಯೆನ್ನುತಿಹ ನೀನು ಕಪಿಯೋ ಏನೋ ಎನ-
ಗೊರೆಯೆನುತಲಿ ಕಾಡುವಾ|
ತರಳೆ ಗೊಲ್ಲತಿಗೆ ಬಾಯ್ಸೋತು ನಿಂತಿಹ ಸಿರಿ
ವರಪದ್ಮನಾಭನೇ ಸಲಹೆಲೊ ರಂಗಯ್ಯ ||೨||

(ಕೊನೆಯ ಸಾಲಿನ ಬದಲಿಗೆ "ವರಪದ್ಮನಾಭ ಹಯವದನ ಪಾಲಿಸೋ ಬೇಗ" - ಎಂದು ಮುದ್ರಿಕೆಯೂ ಬರುತ್ತಿದ್ದಿತೇನೋ)

Saturday, October 24, 2015

ಪುಸ್ತಕಗಳು, ರಂಗುಗಳು ಮತ್ತು ಒಂದು ಕಪ್ಪು ಚಾ

ಇದು ರೂಪಾ ಸತೀಶರ  ಇಂಗ್ಲಿಷ್ ಕವಿತೆ ಯೊಂದರ ಭಾವಾನುವಾದ:
:
ಅವನು, ಸಾಟಿಯಿಲ್ಲದ
ಮಹಾ ಪುಸ್ತಕವಂತೆ!
ನಾನೊಪ್ಪಲಾರೆ,
ಒಳಗೇ ಗೊಣಗಿಕೊಳ್ಳುತ್ತೇನೆ, ಖಂಡಿತಾ,
"ಹೆಚ್ಚಂದ್ರೆ, ಅವನೊಂದು ಚಂದದ ಮುನ್ನುಡಿಯಷ್ಟೇ"

ಹೆಸರೇ ಕೇಳದ
ಮಾಯದ ರಂಗೊಂದು
ಸಿಗದೇ
ಅಳಿಸಿಹಾಕಿದ ಚಿತ್ರ!
ಮುರಿದ ಬಣ್ಣದ ಕಡ್ಡಿಗಳು -
ತುಂಬಬಲ್ಲವೆ ರಂಗು?

ಇರುಳ ಗಾಳಿಗೆ ಸುಯ್ಯುವ
ಮಣ್ಣ ಘಂಟೆಗಳು
ಆಗೀಗ
ಗಾಳಿಮುತ್ತಿನ ಸುಖಕೆ
ಕಿಣಿಗುಡುತಿವೆ

ಮತ್ತೆ, ಮುರಿದ ಕಪ್ಪು -
ಸುಮ್ಮನಿದೆ - ಮಾತಿಲ್ಲ ಕತೆಯಿಲ್ಲ.
ನಾನೇ ರೆಪ್ಪೆಬಡಿದು, ಪಿಸುಗುತ್ತೇನೆ
"ಇನ್ನೊಂದು ಕಪ್ಪು ಟೀ ಸಿಕ್ಕೀತಾ!"
:
:
ಮೂಲ:
Books, Shades & A Cuppa Tea
:
He, the Book
an Opus of sort!
I differ,
I beg,
mumble alone to conclude,
"He's just an interesting Prologue"

A sketch undone
in quest of a shade
"Razzmatazz",
a tinge I never heard!!
Can they,
the broken crayons
still color?

Chimes, the earthy ones
shrilled through
the night air!
Once a while
they kiss,
"Lucky Winds"

And then,
that broken cup
said nothing much.
I wink, I whisper
"Another cuppa tea please"!

https://www.facebook.com/roopa.satish.56/posts/10208193570221404

Tuesday, April 7, 2015

ದಕ್ಷಿಣಾಯಣ

(೨೦೧೪ರ  ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ)
 *********

ಛೇ ಛೇ, ಇದೇನು? ಲಲಿತಪ್ರಬಂಧ ಅಂತ ಬರೆಯಲು ಹೋಗಿ ದಕ್ಷಿಣಾಯಣದಂಥ "ಅನಿಷ್ಟ"ದ ವಿಷಯ ಹೇಳ್ತಿದಾನಲ್ಲ ಅಂತ ಮೂಗು ಮುರಿಯಬೇಡಿ.  ಅದೂ ನಿಜವೇ ಅನ್ನಿ.  ಉತ್ತರಾಯಣವಾದರೆ ಅದೊಂದುರೀತಿ - ಪುಣ್ಯಕಾಲ - ಸತ್ತರೆ ಸ್ವರ್ಗಪ್ರಾಪ್ತಿ.  ರಾಜ್ಯ-ಸಂಸಾರಗಳ ವ್ಯಾಮೋಹಗಳನ್ನೇ ಗೆದ್ದ ಭೀಷ್ಮನಂಥಾ ಭೀಷ್ಮನೇ "ಅದೇನೇ ಆಗಲಿ, ಸತ್ತರೆ ಮಾತ್ರ ಉತ್ತರಾಯಣ ಪುಣ್ಯಕಾಲದಲ್ಲೇ" ಅಂತ, ಮೈಯೆಲ್ಲಾ ಚುಚ್ಚಿಕೊಂಡ ಬಾಣಗಳು ಜೀವ ತೆಗೆಯುತ್ತಿದ್ದರೂ ಹಲ್ಲು ಕಚ್ಚಿ (ಅದರೊಡನೆ ಜೀವವನ್ನೂ ಕಚ್ಚಿ ಹಿಡಿದು) ಉತ್ತರಾಯಣ ಪುಣ್ಯಕಾಲಕ್ಕಾಗಿ ಕಾಯಲಿಲ್ಲವೇ ಪಾಪ, ಸಾಯೋದಿಕ್ಕೆ - ಹದಿನೆಂಟು ದಿನ!  ಉತ್ತರಾಯಣ ಪುಣ್ಯಕಾಲದಲ್ಲಿ ಸಾಯೋ ಗಮ್ಮತ್ತೇ ಅದು ಅಂತಾರಪ್ಪ, ಬದುಕಿರುವವರು.  ಸ್ವರ್ಗದ ಬಾಗಿಲು ತೆಗೆದಿರುತ್ತೆ.  ಇಲ್ಲಿಂದ ರೊಯ್ಯನೆ ಹಾರಿದರೆ ನೇರ ಸ್ವರ್ಗದ ತೆರೆದಬಾಗಿಲ ಮೂಲಕ ತೂರಿ ಒಳಹೋಗಿಬಿಡಬಹುದು.  ಅಪ್ಪಿತಪ್ಪಿ ಇಂದ್ರನೇನಾದರೂ ಸಿಂಹಾಸನ ಬಿಟ್ಟು ಯಾತಕ್ಕಾದರೂ ಎದ್ದು ಹೋಗಿದ್ದರೆ ನೇರ ಸಿಂಹಾಸನದ ಮೇಲೇ ಕುಕ್ಕರಿಸಿದರೂ ಸೈಯೇ.  ಒಮ್ಮೆ ಸಿಂಹಾಸನ ಸಿಕ್ಕಮೇಲೆ ಮುಗೀತಲ್ಲ.  ಆಮೇಲೆ ಇಂದ್ರ ವಾಪಸು ಬಂದಾಗ ನೋಡಿಕೊಳ್ಳೋಣ.  ಖುರ್ಚಿ ಬಿಡಿಸುವುದೇನು ಹುಡುಗಾಟವೇ?  ನಮ್ಮ ಆಂಧ್ರದಲ್ಲೇ ಹಿಂದೊಂದು ಕಾಲದಲ್ಲಿ ಎಂ ಟಿ ರಾಮರಾವುಗಾರು ಪಾಪ ಅದೇಕೋ ಅಮೇರಿಕಾಕ್ಕೆ ಹೀಗೆ ಹೋಗಿ ಹಾಗೆ ಬರೋವಷ್ಟರಲ್ಲಿ ಅವರ ಮುಖ್ಯಮಂತ್ರಿ ಸೀಟೇ ಗುಳುಂ ಆಗಿರಲಿಲ್ಲವೇ?  ಆಮೇಲೆ ಎಷ್ಟೆಷ್ಟು ತಿಪ್ಪರಲಾಗ ಹಾಕಿದರೂ ಅಂಥಾ ಕೃಷ್ಣವೇಷಧಾರೀ ರಾಮನಿಗೇ ಏನೂ ಮಾಡಲು ಆಗಲಿಲ್ಲವೆಂದಮೇಲೆ ಒಬ್ಬ ಯಃಕಶ್ಚಿತ್ ಇಂದ್ರ, ಏನು ಮಾಡಾನು!  ಅಲ್ಲದೇ, ಅದೇನೋ ಮಾನವರ ಕಾಲಪ್ರಮಾಣಕ್ಕಿಂತ ದೇವತೆಗಳ ಕಾಲಪ್ರಮಾಣ ನೂರಾರು ಪಟ್ಟು ಹೆಚ್ಚಂತೆ.  "ಬ್ರಹ್ಮಶೌಚ" ಅನ್ನೋ ಮಾತೇ ಇದೆಯಲ್ಲ - ನಿಮಗೆ ಅದರ ಕತೆ ಗೊತ್ತಿಲ್ಲವೆಂದರೆ ಅದನ್ನೂ ಕೇಳಿಬಿಡಿ.  ಬ್ರಹ್ಮದೇವನು ಒಮ್ಮೆ ಶೌಚಕ್ಕೆ ಹೋಗಬೇಕಾಯಿತಂತೆ, ಇನ್ನೇನು ಬಾಗಿಲು ತೆರೆದು ಒಳಹೋಗಬೇಕು, ಆಗ ವರದಿಗಾರನೊಬ್ಬ ಬಂದು ಒಪ್ಪಿಸಿದನಂತೆ "ಸ್ವಾಮಿ, ರಾವಣ ಜನನವಾಯಿತು"  ಸರಿ ಎಂದ ಬ್ರಹ್ಮದೇವನು ಒಳಗೆ ಹೋದನಂತೆ, ಮತ್ತೆ ಎಲ್ಲಾ ಮುಗಿಸಿ ಹೊರಬರುವ ಹೊತ್ತಿಗೆ ಮತ್ತೆ ವರದಿಗಾರ ಪ್ರತ್ಯಕ್ಷ - "ಸ್ವಾಮೀ, ರಾವಣ ಸಂಹಾರವಾಯಿತು".  ಇದು ನೋಡಿ ಬ್ರಹ್ಮಶೌಚದ ಕಾಲಪ್ರಮಾಣ.  ಹೀಗೇ ’ಒಂದೈದು ನಿಮಿಷ’ ಎಲ್ಲೋ ಹೊರಹೋಗಿರುವ ಇಂದ್ರ ವಾಪಸು ಬರಬೇಕಾದರೆ ನಮ್ಮ ಅಳತೆಯಲ್ಲಿ ಅದೆಷ್ಟು ವರ್ಷ ಲೆಕ್ಕ ಹಾಕಿಕೊಳ್ಳಿ ಆ ಐದು ನಿಮಿಷಕ್ಕೆ.  ಅಷ್ಟು ವರ್ಷವಂತೂ ಇಂದ್ರನ ಖುರ್ಚಿ ನಿಮ್ಮದಾಯಿತಲ್ಲ.  ಆ ಇಂದ್ರಪದವಿ, ಅಪ್ಸರೆಯರ ನೃತ್ಯ, ಸೋಮಪಾನ, ದೇವಗುರು ಬೃಹಸ್ಪತಿಯಿಂದ ಸ್ವಸ್ತಿವಾಚನ, ಅಷ್ಟದಿಕ್ಪಾಲಕರೆಲ್ಲ ನಿಮ್ಮ ಮುಷ್ಠಿಯಲ್ಲಿ!  ಇಂದ್ರ ತಿರುಗಿ ಬಂದಮೇಲೆ ನೋಡಿಕೊಳ್ಳೋಣ ಬಿಡಿ.  ಬಂದಮೇಲೂ ಅವನೇನು ಮಾಡಲು ಸಾಧ್ಯ?  ನೀವೇನು ಬ್ರಹ್ಮನೋ ಶಿವನೋ ಕೊಟ್ಟ ಮೋಸದ ವರದ ಬಲದಿಂದ ಅಲ್ಲಿ ಹೋಗಿ ಕುಳಿತಿಲ್ಲವಲ್ಲ - ಅದರ ಲೂಪ್ ಹೋಲುಗಳನ್ನು ಹಿಡಿದು ನಿಮ್ಮನ್ನ ಮಟ್ಟಹಾಕಲಿಕ್ಕೆ;  ಅಥವಾ ನೀವೇನು ಆ ಅವಿವೇಕಿ ರಾಕ್ಷರಂತೆ ದೇವರಾಜನ ಮೇಲೆ ದಂಡೆತ್ತಿ ಹೋಗಿಲ್ಲ, ಬಲಪ್ರಯೋಗ ಮಾಡಲಿಲ್ಲ.  ನೀವು ಭೂಲೋಕದಿಂದ ತೂರಿ ಬಂದಾಗ ಅಲ್ಲಿ ಸೀಟು ಖಾಲಿಯಿತ್ತು, ಹೋಗಿ ಕುಳಿತಿರಿ - ಅದೇನು ಸರ್ವೀಸು ಬಸ್ಸು ಕೆಟ್ಟುಹೋಯಿತೇ, ಟವಲು ಹಾಸಿ ಸೀಟು ಹಿಡಿದಿಡಲಿಕ್ಕೆ; ಯಾರಿಗೆ ಸಿಗುತ್ತೋ ಅವರು ಕೂರುತ್ತಾರಪ್ಪ.  ಅಲ್ಲದೇ ನೀವಲ್ಲಿ ಹೋಗಿ ಕುಳಿತಿದ್ದು ಸ್ವತಃ ನಿಮ್ಮದೇ ಪುಣ್ಯಫಲದಿಂದ - ಮತ್ತೆ? ಮೊದಲಾಗಿ ಸಾಯುವುದೇ ಅತ್ಯಂತ ಪುಣ್ಯದ ಕೆಲಸ ಈ ಕಾಲಕ್ಕೆ, ಇನ್ನು ಉತ್ತರಾಯಣ ಪುಣ್ಯಕಾಲದಲ್ಲಿ ಸಾಯುವುದೇನು ಕಡಿಮೆ ಪುಣ್ಯವೇ?  ಶ್ರೀ ಕೃಷ್ಣಪರಮಾತ್ಮನೇ ಹೇಳಿಲ್ಲವೇ?  "ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ" - ನೀವು ನಿಮ್ಮ ಪುಣ್ಯದ ಫಲವನ್ನು ಅನುಭವಿಸಿಯೇ ತೀರಬೇಕು; ಅದನ್ನು ಇಂದ್ರನೂ ತಡೆಯುವಂತಿಲ್ಲ, ಹರಿಹರಬ್ರಹ್ಮರೂ ತಡೆಯುವಂತಿಲ್ಲ. ಹಾಗೆಯೇ ಇಂದ್ರನೂ ತನ್ನ ಕರ್ಮಫಲವನ್ನು ಅನುಭವಿಸಬೇಕಲ್ಲ!  ಅಲ್ಲ, ಹೇಳಿ ಕೇಳಿ ಇದು ಉತ್ತರಾಯಣ ಪುಣ್ಯಕಾಲ, ಸ್ವರ್ಗದ ಬಾಗಿಲು ಹಾಗೆ ಹಾರಹೊಡೆದಿದೆ; ಭೂಮಿಯಿಂದ ಯಾವ ಪುಣ್ಯಜೀವಿಯಾದರೂ ಯಾವಾಗಲಾದರೂ ಉಲ್ಕೆಯಂತೆ ರೊಯ್ಯನೆ ಬಂದು ತನ್ನ ಸಿಂಹಾಸನದಲ್ಲಿ ಕುಕ್ಕರಿಸಿಬಿಡಬಹುದು, ಈಗ ಮೈಯೆಲ್ಲಾ (ಸಾವಿರ) ಕಣ್ಣಾಗಿ ಸಿಂಹಾಸನ ಕಾಪಾಡಿಕೊಳ್ಳುವುದು ಬಹು ಮುಖ್ಯ ಎಂಬ ಪರಿಜ್ಞಾನವೇ ಇಲ್ಲದೇ ತನ್ನ ಸೀಟು ಬಿಟ್ಟು ಎದ್ದು ಹೋಗಿದ್ದು ಅವನ ಕರ್ಮವಲ್ಲದೇ ಮತ್ತೇನು?  ಆಕ್ಸಿಡೆಂಟುಗಳು ಆಗಲು ಒಂದು ಕ್ಷಣ ಸಾಕು ಸ್ವಾಮಿ - ಒಂದು ಮಾನವಕ್ಷಣ, ದೇವಕ್ಷಣವಲ್ಲ.  ಅಂಥಾದ್ದರಲ್ಲಿ ದೇವಲೆಕ್ಕದಲ್ಲಿ ನಿಮಿಷಗಟ್ಟಲೆ ಸೀಟು ಬಿಟ್ಟುಹೋಗುವುದೆಂದರೆ, ಬೇಜವಾಬ್ದಾರಿಯ ಪರಮಾವಧಿಯಲ್ಲವೇ.  ನಮ್ಮಲ್ಲಿ ಯಾವ ಮಂತ್ರಿಯಾದರೂ ಆ ಮೂರ್ಖತನ ಮಾಡುತ್ತಾನೆಯೇ? ಅದಕ್ಕೇ ಇಂದ್ರನಿಗೂ "ಅವಶ್ಯಮನುಭೋಕ್ತವ್ಯಂ... ".  ಅಥವಾ ಅವನಿಗೆ ಕನ್ನಡ ಅರ್ಥವಾಗುವುದಾದರೆ "ಮಾಡಿದ್ದುಣ್ಣೋ ಮಹರಾಯ" ಅನ್ನಲೂ ಬಹುದು.

ತಡೀರಿ, ದಕ್ಷಿಣಾಯಣದ ಬಗ್ಗೆ ಹೇಳಹೊರಟು ಉತ್ತರಾಯಣದ ಬಗೆಗೇ ಹೇಳುತ್ತಿದ್ದಾನಲ್ಲ ಎಂದು ನೀವು ಮೂಗು (ನಿಮ್ಮದೇ) ಮುರಿಯುತ್ತಿದ್ದೀರೆಂದು ನನಗೆ ಗೊತ್ತು.  ಅದ್ಯಾರೋ ಒಬ್ಬ ಹುಡುಗ ಪರೀಕ್ಷೆಗೆ ಹೋದನಂತೆ.  ತೆಂಗಿನ ಮರದ ಬಗ್ಗೆ ಪ್ರಬಂಧ ಉರುಹಚ್ಚಿಕೊಂಡು ಹೋಗಿದ್ದ.  ಆದರೆ ಅವನ ದುರದೃಷ್ಟಕ್ಕೆ ಅಲ್ಲಿ ಕೇಳಿದ್ದು ಹಸುವಿನ ಬಗ್ಗೆ ಪ್ರಬಂಧ.  ಏನು ಮಾಡುವುದು.  ಪ್ರಬಂಧವನ್ನಂತೂ ಬರೆಯಬೇಕಲ್ಲ.  ಸುಮ್ಮನೇ ಹಸುವಿಗೆ ಎರಡು ಕಣ್ಣು, ಎರಡು ಕಿವಿ, ಕೊಂಬು, ನಾಲ್ಕು ಕಾಲು, ಕೆಚ್ಚಲು, ಹಾಲು ಕರೆಯುತ್ತೆ ಎಂದರೆ ಮುಗಿಯಿತೇ, ಪೇಜು ತುಂಬಬೇಕಲ್ಲ.  ಲಕ್ಷಣವಾಗಿ ಎರಡು ಪೇಜು ತಾನು ಉರುಹಚ್ಚಿಕೊಂಡು ಹೋದ ತೆಂಗಿನ ಮರದ ಪ್ರಬಂಧವನ್ನೇ ಬರೆದ.  ಕೊನೆಯಲ್ಲಿ "ಇಂಥ ಅದ್ಭುತವಾದ ಕಲ್ಪವೃಕ್ಷದಂಥ ತೆಂಗಿನ ಮರಕ್ಕೆ ಹಸುವನ್ನು ಕಟ್ಟಿ ಹಾಲು ಕರೆಯುತ್ತಾರೆ.  ಇದು ಹಸುವಿನ ಪ್ರಬಂಧ" ಎಂದು ಬರೆದ.  ನನ್ನ ಪ್ರಬಂಧದ ಕತೆಯೂ ಇಷ್ಟೇ ಎಂದು ನೀವು ಯೋಚಿಸುತ್ತಿರಲಿಕ್ಕೆ ಸಾಕು.  ಅಲ್ಲವೇ ಮತ್ತೆ, ಉತ್ತರಾಯಣದಲ್ಲಾದರೆ ಮೇಲೆ ಹೇಳಿದ ಮಹಿಮೆಯೆಲ್ಲಾ ಇದೆ.  ಪುರಾಣಗಳೇ ಇದನ್ನು ಸಾರುತ್ತಿವೆ.  ದಕ್ಷಿಣಾಯಣದಲ್ಲೇನಿದೆ.  ದಕ್ಷಿಣಾಯಣದಲ್ಲಿ ಸತ್ತರೆ ನೇರ ನರಕವೇ ಗಟ್ಟಿ.  ಅದರಲ್ಲೂ ಈ ಕಲಿಗಾಲದಲ್ಲಂತೂ, ಸಾಯುವವರು ಮತ್ತು ಪಾಪಿಗಳ ಸಂಖ್ಯೆಗಳೆರಡೂ ಮುಗಿಲುಮುಟ್ಟಿರುವುದರಿಂದ ನರಕಕ್ಕೆ ಹೋಗುವ ದಾರಿ ಮೊದಲಿನಷ್ಟು ಸಲೀಸಲ್ಲವಂತೆ.  ಆ ಟ್ರಾಫಿಕ್ ಜಾಮಿನಲ್ಲಿ ತೆವಳಿಕೊಂಡು (ಮೊದಲೇ ದಕ್ಷಿಣಾಯಣ, ಮಳೆ ಛಳಿ ಬೇರೆ), ಆ ಮಳೆಯಲ್ಲಿ ನೆನೆದುಕೊಂಡು - ಬೇಡಾ ಫಜೀತಿ.  ಕೊನೆಯಲ್ಲಿ ಸಿಕ್ಕುವ ಆ ನರಕವನ್ನು ರಸ್ತೆಯಲ್ಲೇ ತೋರಿಸಿಬಿಡುತ್ತಾರೆ.  ಬೆಂಗಳೂರಿನ ರಸ್ತೆಗಳಲ್ಲಿ ಪೀಕ್ ಅವರಿನಲ್ಲಿ ತೆವಳಿ ಅಭ್ಯಾಸವಿರುವ ಸುಮಾರು ಆತ್ಮಗಳು ಹಾಗೂ ಹೀಗೂ ಈ ದಾರಿಯನ್ನು ಸವೆಸಿ ಯಶಸ್ವಿಯಾಗಿ ನರಕವನ್ನು ಸೇರಿಬಿಡುತ್ತವಾದರೂ ಈ ಅಭ್ಯಾಸವಿಲ್ಲದ ಅದೆಷ್ಟೋ ಆತ್ಮಗಳು ಪಾಪ, ಈ ಕೊನೆಗಾಣದ ಹಾದಿ ಸವೆಸಲಾಗದೇ ಅತ್ತ ನರಕವೂ ಇಲ್ಲದೇ ಇತ್ತ ಭೂಮಿಯೂ ಇಲ್ಲದೇ ಬೆಂತರಗಳಾಗಿ ಅಲೆದಾಡುತ್ತವಂತೆ.  ಅಂದಮೇಲೆ ಯಾರಿಗೆ ಬೇಕು ಹೇಳಿ ದಕ್ಷಿಣಾಯಣದ ಸಹವಾಸ.  ಇಲ್ಲ, ನೀವು ಅಪ್ಪೀತಪ್ಪಿ ಪುಣ್ಯವನ್ನೇ ಗಂಟುಕಟ್ಟಿಕೊಂಡಿದ್ದೀರೆನ್ನಿ; ಅದಕ್ಕೇ ನಿಮಗೆ ಸ್ವರ್ಗಕ್ಕೇ ಟಿಕೇಟೂ ಸಿಕ್ಕಿದೆಯೆನ್ನಿ.  ಆ ದಾರಿಯಲ್ಲೇನೋ ಈ ಪರಿಯ ಟ್ರಾಫಿಕ್ ಜಾಮ್ ಇಲ್ಲ.  ಹೇಳಿದೆನಲ್ಲ, ಇಲ್ಲಿಂದ ಜೀವ ಎಗರಿದರೆ ರೊಯ್ಯನೇ ನೇರ ಸ್ವರ್ಗಕ್ಕೇ!  ಆದರೇನು?  ಹಾಳು ದಕ್ಷಿಣಾಯಣ, ಸ್ವರ್ಗದ ಬಾಗಿಲು ಮುಚ್ಚಿದೆ.  ಹಾಗಾಗಿ, ಇಲ್ಲಿಂದ ಬಿಟ್ಟ ಬಾಣದಂತೆ ಹೊರಟ ನೀವು ಹೋಗಿ ಸ್ವರ್ಗದ ಮುಚ್ಚಿದ ಬಾಗಿಲಿಗೆ ಅಪ್ಪಳಿಸುವುದೂ, ಮತ್ತೆ ತ್ರಿಶಂಕುವಿನಂತೆ ಭೋಂಕನೆ ತಲೆ ಕೆಳಗಾಗಿ ಭುವಿಗೆ ಬೀಳುವುದೂ ತಪ್ಪದೇ ತಪ್ಪದು.  ಅಂತರಾಳದಲ್ಲೇ ನಿಮಗಾಗಿ ಒಂದು ಬದಲೀ ಸ್ವರ್ಗ ನಿರ್ಮಿಸಿಕೊಡಲು ಈ ಕಾಲದಲ್ಲಿ ವಿಶ್ವಾಮಿತ್ರನೂ ಇಲ್ಲ, ನೀವು ತ್ರಿಶಂಕುವೂ ಅಲ್ಲ!

ಸರಿಹೋಯ್ತು.  ಹರಟೆಯ ಭರದಲ್ಲಿ ನಾವೀಗಾಲೇ ಪರಲೋಕಯಾತ್ರೆ ಕೈಗೊಂಡೇ ಬಿಟ್ಟಿದ್ದೇವೆಂಬ ಹುರುಪಿನಲ್ಲಿ ಮಾತಾಡುತ್ತಿದ್ದೇನೆ ನೋಡಿ.  ಪರಲೋಕಯಾತ್ರೆಯ ಗಡಿಬಿಡಿಯಲ್ಲಿರುವವರು ಯಾರಾದರೂ ಹೀಗೆ ಲೋಕಾಭಿರಾಮ ಹರಟುತ್ತಿರಲು ಸಾಧ್ಯವೇ?  ಅಥವ ಲೋಕಾಭಿರಾಮವಾದ ಹರಟೆ ಹೊಡೆಯುವ ಮನಸ್ಥಿತಿಯುಳ್ಳವರು ಪರಲೋಕಯಾತ್ರೆಯ ಬಗೆಗೆ ಯೋಚಿಸುವುದಾದರೂ ಸಾಧ್ಯವೇ?  ಅಂಥವರು ಎಲ್ಲೋ ಎಂದೋ ಒಬ್ಬಿಬ್ಬರಿರಬಹುದು, ವೇದಕಾಲದ ನಚಿಕೇತನಂಥವರು.  ಇತರರು, ಸತ್ತಮೇಲೂ ಸ್ವರ್ಗಭೋಗಕ್ಕಾಗಿ ಉತ್ತರದಿಕ್ಕಿನ ಕನಸು ಕಾಣುತ್ತಿದ್ದರೆ, ಈ ಹುಚ್ಚು ಹುಡುಗ ಜ್ಞಾನ ಸಂಪಾದನೆ ಮಾಡಬೇಕೆಂದು, ಬದುಕಿದ್ದಾಗಲೇ ದಕ್ಷಿಣ ದಿಕ್ಕಿನೆಡೆ ನಡೆದ.  ಅತ್ತಕಡೆ ಯಮಧರ್ಮರಾಯ ಅವಧಿಮೀರಿದ ಆತ್ಮಗಳನ್ನು ದಸ್ತಗಿರಿ ಮಾಡಿಕೊಂಡು ಬರಲು ಹುಡುಕಿಕೊಂಡು ಭೂಲೋಕದಲ್ಲಿ ಅಲೆದಾಡುತ್ತಿದ್ದರೆ, ಈ ಪುಣ್ಯಾತ್ಮ ಯಮನನ್ನೇ ಹುಡುಕಿಕೊಂಡು ಯಮಸದನಕ್ಕೇ ಬಂದ; ಮೂರು ದಿನ ಮನೆಯ ಬಾಗಿಲಲ್ಲೇ ಝಂಡಾ ಹಾಕಿದ.  ಎದೆಗಾರಿಕೆ ಎಂದರೆ ಇದಪ್ಪ - ಯಮಧರ್ಮನೇ ಅಲುಗಿಹೋದನಲ್ಲ!  ನಿನಗೆ ಬೇಕಾದಷ್ಟು ಸಂಪತ್ತು ಕೊಡುತ್ತೇನೆ, ತೆಗೆದುಕೊಂಡು ಜಾಗ ಖಾಲಿ ಮಾಡು ಅಂದರೂ, ಉಹ್ಹೂಂ... ಹುಡುಗನದು ಒಂದೇ ಹಟ.  "ನಿನ್ನ ಸಂಪತ್ತೂ ಬೇಡ ಏನೂ ಬೇಡ, ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು, ಸಾಕು" - ಪಟ್ಟು ಎಂದರೆ ಪಟ್ಟು, ನಕ್ಷತ್ರಿಕಂದೇ ಪಟ್ಟು ಅಂತಾರಲ್ಲ ಹಾಗೆ.  ಅಂಥಾ ಯಮನಿಗೂ ಒಂದು ಕ್ಷಣ ಸಾಕಾಗಿಹೋಗಿರಬೇಕು.  ಕೊನೆಗೂ ಯಮನಿಂದ ಸಾವಿನ ರಹಸ್ಯ ತಿಳಿದು, ಬದುಕಿಗೆ ಹಿಂದಿರುಗಿದ ಹುಡುಗ, ಬರಿಗೈಯಲ್ಲಿ!  ಈ ಹುಚ್ಚಿಗೇನು ಹೇಳೋಣ ಸ್ವಾಮಿ?  ಅಲ್ಲಾ, ಬದುಕು ಬದುಕಲು ಸಾವಿನ ರಹಸ್ಯ ಬೇಕೇ?  ನಾವಾಗಿದ್ದರೆ ಯಮನ ಮೊದಲನೇ ಆಫರನ್ನೇ ಒಪ್ಪಿಕೊಂಡು ಕೈತುಂಬಾ ಸಂಪತ್ತಿನ ದಕ್ಷಿಣೆ ಹೊತ್ತು ಮರಳುತ್ತಿರಲಿಲ್ಲವೇ? 

ಈ ಕತೆ ಹೇಳುತ್ತಿರುವಾಗಲೇ ನನಗನ್ನಿಸಿದ್ದು, ನಾವು ದಿನನಿತ್ಯ ಬಳಸುವ ’ದಕ್ಷಿಣೆ’ ಅನ್ನೋ ಪದದ ಮೂಲ ಈ ಕತೆಯೇ ಇರಬಹುದೇ?  ಮನೆಗೆ ಬಂದ ಬ್ರಾಹ್ಮಣ ವಟುವನ್ನು ಮೂರುದಿನ ಕಾಯಿಸಿದ್ದಕ್ಕಾಗಿ ಯಮನಿಗೆ ತುಂಬ ಪಶ್ಚಾತ್ತಾಪವಾಯಿತಂತೆ.  ಅದಕ್ಕೆ ಪ್ರತಿಯಾಗಿ ಮೂರು ವರಗಳನ್ನು ಕೋರಿಕೋ ಎಂದನಂತೆ.  ಮೊದಲ ಎರಡು ವರ ಹೇಗೋ ಸಂದಿತು, ಆದರೆ ಕೊನೆಯ ವರವಾಗಿ ಇವನು ಹುಟ್ಟು ಸಾವಿನ ರಹಸ್ಯ ತಿಳಿಸು ಎಂದು ಕೇಳಿದಾಗ ಮಾತ್ರ ಯಮನಿಗೆ ತೀರ ಪೇಚಾಟಕ್ಕಿಟ್ಟುಕೊಂಡಿತಂತೆ.  ಮಾನವಮಾತ್ರನಿಗೆ ಈ ರಹಸ್ಯವನ್ನು ಹೇಳಿಬಿಟ್ಟರೆ ಅದು ರಹಸ್ಯವಾಗಿ ಉಳಿಯುವುದೆಂತು?  ವರವನ್ನಂತೂ ಕೊಟ್ಟಾಗಿದೆ, ಕೊಟ್ಟ ಮಾತಿನಿಂದ ಹಿಂದೆಗೆಯುವಂತಿಲ್ಲ, ಅದರಲ್ಲೂ ಸಾಕ್ಷಾತ್ ಧರ್ಮದೇವತೆ!  ಅದಕ್ಕೇ ಅದನ್ನು ಮರೆಯಿಸಲು ಹುಡುಗನನ್ನು ಹೇಗೋ ಪುಸಲಾಯಿಸಿ ಕಳಿಸಲು ಅಪಾರ ಸಂಪತ್ತಿನ ದಕ್ಷಿಣೆಯನ್ನಿಟ್ಟನಂತೆ.  ಆದರೆ ಈ ಹುಡುಗ ಮೊಂಡು ಆಸಾಮಿ - ನಮ್ಮಲ್ಲಿರುವ ಹಲವು ಖಡಕ್ ಆಫೀಸರುಗಳಂತೆ.  ದಕ್ಷಿಣೆಯನ್ನು ಕೈಯಿಂದಲೂ ಮುಟ್ಟ; ಕಿಸೆಯಲ್ಲೂ ಹಾಕಗೊಡ!  ಕೊನೆಗೂ ವಿಧಿಯಿಲ್ಲದೇ ಯಮ ಬಾಯಿಬಿಡಬೇಕಾಯಿತು (ಬಾಯ್ಬಾಯಿ ಬಿಡಬೇಕಾಯಿತೆನ್ನುವುದು ಪಾಠಾಂತರ).  ಅದೇನೇ ಇರಲಿ, ಕಾಂಚಾಣದಿಂದ ಕಾರ್ಯಸಿದ್ಧಿ - ಕೆಲಸವನ್ನು ಆಗಮಾಡಿಕೊಳ್ಳಲು ಆಗಲೂ ದಕ್ಷಿಣೆಯಿಡುತ್ತಿದ್ದರು ಅನ್ನೋದಂತೂ ಸಾಬೀತಾಯಿತಲ್ಲ!  ಬಹುಶಃ ದಕ್ಷಿಣದಿಂದ ಹುಟ್ಟಿದ್ದಾದ್ದರಿಂದ ಈ ಸುವಿಧಾ ದ್ರವ್ಯಕ್ಕೆ ದಕ್ಷಿಣೆಯೆಂಬ ಹೆಸರು ಬಂದಿರಬೇಕು.  ಇದು ಕೆಲಸಮಾಡುವ ರೀತಿಯೂ ಹಾಗೇ.  ಮೊದಲು ದಕ್ಷಿಣೆ, ಆಮೇಲೆ ಸಂಬಂಧಪಟ್ಟವರಿಂದ ಅದಕ್ಕೆ ’ಉತ್ತರ’; ಮತ್ತದರಿಂದಲೇ ತಾನೇ, ದಕ್ಷಿಣೆ ನೀಡಿದವನ ಉತ್ತರೋತ್ತರ ಅಭಿವೃದ್ಧಿ?  ಮತ್ತೆ ಈ ದಕ್ಷಿಣೆಯ ಪ್ರಭಾವವೂ ಅಷ್ಟೇ, ಅಲೌಕಿಕ.  ದಕ್ಷಿಣೆ ಪಡೆದವರ ಮೈಭಾಷೆಯನ್ನೊಮ್ಮೆ ನೀವು ಅವಲೋಕಿಸಬೇಕು.  ಸಾಮಾನ್ಯವಾಗಿ ಜಡ ಸಂಪನ್ನವಾಗಿರುವ ಮೈಮನಗಳ ಕಣಕಣವೂ ನೀವು ಹನಿಸಿದ ದಕ್ಷಿಣೆಯ ಕಾಯಕಲ್ಪದಿಂದ ಹುರಿಗೊಳ್ಳುತ್ತದೆ, ಕಾರ್ಯೋತ್ಸಾಹ ಪುಟಿದೇಳುತ್ತಿರುತ್ತದೆ.  ದಕ್ಷಿಣಾದರ್ಶನದ ಮುಂಚೆ ಆ ಅರೆಮುಚ್ಚಿದ ಕಣ್ಣುಗಳಲ್ಲಿ ತುಂಬಿ ತೊನೆಯುತ್ತಿದ್ದ ನಿಮ್ಮ ಬಗೆಗಿನ ದಿವ್ಯನಿರ್ಲಕ್ಷ್ಯ ಈಗ ಮಂಗಮಾಯವಾಗಿ ಅದರ ಜಾಗದಲ್ಲಿ ದಾಕ್ಷಿಣ್ಯಪರತೆ (ದಕ್ಷಿಣೆಯು ತುಂಬಿದ ಧನ್ಯತಾ ಭಾವ) ತುಂಬಿ ತುಳುಕುತ್ತಿರುತ್ತದೆ.  ಕಿರಿದ ಹಲ್ಲುಗಳ ಕಾಂತಿ ಎಲ್ಲೆಲ್ಲೂ ಹರಡುತ್ತದೆ (ಅದನ್ನು ನೋಡಿ "ವದಸಿ ಯದಿ ಕಿಂಚಿದಪಿ ದಂತ ರುಚಿ ಕೌಮುದೀ ಹರತಿ ಧರ ತಿಮಿರಮತಿ ಘೋರಂ" ಎಂದು ನೀವು ಹಾಡಿದರೂ ತಪ್ಪಿಲ್ಲ).  ಅದುವರೆಗೂ ಮೌನಕಠೋರವಾಗಿದ್ದ ಆತನ ದನಿ, ಈಗ ಕೋಕಿಲಧ್ವನಿಯಾಗಿದೆ.  ಮಹಿಷಗಮನಕ್ಕೀಗ ನವಿಲಿನ ನಾಟ್ಯದ ಕಸುವು ದಕ್ಕಿದೆ.  ಆ ಅರಳಿದ ಮೊಗದಾವರೆಯನ್ನು ನೋಡಿ ಅದನ್ನು ಅರಳಿಸಿದ ಬಾಲ ಸೂರ್ಯ ನೀವೇನೋ ಎಂದು ಒಂದು ಕ್ಷಣ ನೀವು ವಿವಂಚನೆಗೊಳಗಾಗುತ್ತೀರಿ, ಆದರೆ ನಿಮಗೆ ತಿಳಿದಿರಲಿ, ಅದು ನೀವಲ್ಲ, ನಿಮ್ಮ ಪರ್ಸು.  ಅದರ ತಾಖತ್ತು ನಿಮಗೇ ಇಷ್ಟುದಿನ ತಿಳಿದಿರಲಿಕ್ಕಿಲ್ಲ.  ಕೇವಲ ಅದರ ಸಾನ್ನಿಧ್ಯದಿಂದಲೇ ನಿಮ್ಮ ಫೈಲುಗಳಿಗೆ ಎಂದಿಲ್ಲದ ಸಂಚಲನೆ ದೊರಕುತ್ತದೆ.  ಭಾಗ್ಯವಂತನ ಮನೆಯಲ್ಲಿ ಒಂದರೆಕ್ಷಣವೂ ಇರಲೊಲ್ಲದ ದರಿದ್ರ ಲಕ್ಷ್ಮಿಯಂತೆ ಹರಿದು ಜೀರ್ಣಗೊಂಡ ಆ ನಿಮ್ಮ ಫೈಲು ಆತನ ಟೇಬಲನ್ನು ಬಿಟ್ಟು ತೊಲಗುತ್ತದೆ.  ಆದರೆ ಮರೆಯದಿರಿ.  ಈ ಹಳೇ ಫೈಲುಗಳ ಮೈಲೇಜು ಹಳೇ ಗಾಡಿಗಳ ಮೈಲೇಜಿಗಿಂತಲೂ ತೀರ ಕಡಿಮೆ.  ಟೇಬಲ್ಲು ಟೇಬಲ್ಲಿನಲ್ಲೂ ನಿಂತು ನಿಮ್ಮತ್ತ ತಿರುಗಿ ಕೈಯಲ್ಲಾಡಿಸಿಬಿಡುತ್ತದೆ.  ನಿಮ್ಮ ಪರ್ಸಿನಲ್ಲಡಗಿದ ಆ ಬಾಲಸೂರ್ಯ, ಇಂಥಾ ಹಲವಾರು ತಾವರೆಗಳನ್ನರಳಿಸಬೇಕು - ನಿಮ್ಮ ಪರ್ಸು ಹತ್ತಾರು ನಿಲುಗಡೆಗಳಲ್ಲಿ ನಿಮ್ಮ ಆಯಾಸಗೊಂಡ ಫೈಲಿಗೆ ಊರುಗೋಲಾಗಬೇಕು.  ಹೀಗೆ ನಿಂತೂ ನಿಂತೂ ಅಂತೂ ಇಂತೂ ಕೊನೆಯ ಘಟ್ಟ ಮುಟ್ಟಿದಮೇಲಷ್ಟೇ ನಿಮ್ಮ ಫೈಲಿಗೆ ಮುಕ್ತಿ, ನಿಮ್ಮ ಕಾರ್ಯಸಿದ್ಧಿ.  ಇದಕ್ಕಾಗಿ ನೀವು ಈ ದಕ್ಷಿಣೆಯೆಂಬ ದೇವಕಾರ್ಯಕ್ಕೆ ಅದೆಷ್ಟು ಕೃತಜ್ಞರಾಗಿದ್ದರೂ ಸಾಲದು.

ಹೀಗೆ ನಿಮ್ಮ ಸಕಲ ಕಾರ್ಯಗಳಿಗೂ ಉತ್ತರಮುಕ್ತಿದಾಯಕವಾದ ದಕ್ಷಿಣೆಗೆ ದಕ್ಕಬೇಕಾದ ನೈತಿಕ ಮಾನ ಸನ್ಮಾನಗಳು ಮಾತ್ರ ದಕ್ಕಲಿಲ್ಲವೆಂಬುದೇ ದುಃಖದ ವಿಷಯ.  ದಕ್ಷಿಣದಿಂದ ಉತ್ತರಕ್ಕೆ ಒಂದು ಹೈ-ಸ್ಪೀಡ್ ರಸ್ತೆಯಂತೆ ಕೆಲಸಮಾಡುವ ದಕ್ಷಿಣೆಗೆ "ಲಂಚ" ಎಂಬ ಕೆಟ್ಟ ಹೆಸರು ಬಂದು ಬಡಿದಿದೆ.  ಇದರ ಹೆಸರೆತ್ತಲೂ ಜನ ಹಿಂದುಮುಂದು ನೋಡುತ್ತಾರೆ - ಎಷ್ಟೆಂದರೆ ಕನ್ನಡದ ಹೋಟೆಲುಗಳಿಗೆ ಹೋಗಿ ರಾಜಾರೋಷವಾಗಿ ಲಂಚ್ ತಿಂದು ಬರುವವರೂ ಲಂಚದ ಹೆಸರನ್ನು ಮಾತ್ರ ಬಾಯಿಬಿಟ್ಟು ಹೇಳುವುದಿಲ್ಲ (ಕೈ ಚಾಚಿ ತೆಗೆದುಕೊಳ್ಳುವುದಿಲ್ಲ ಅಂತ ಹೇಳಲಾಗುವುದಿಲ್ಲ, ಅದು ಬೇರೆ ವಿಷಯ).  ಅದಕ್ಕೇ ಈ ’ಅನಿಷ್ಟ’ ಹೆಸರನ್ನು ವ್ಯವಹಾರದಿಂದ ಆದಷ್ಟೂ ದೂರವಿಡಲು ಮಾಮೂಲು, ಕೈಬೆಚ್ಚಗೆ, ’ನೋಡಿಕೊಳ್ಳುವುದು’, ಸುವಿಧಾ, ’ಮೇಲೆ’, ಟೇಬಲ್ ಕೆಳಗೆ, ಎಕ್ಸ್ಟ್ರಾ, ಚಿಲ್ಲರೆ ದಕ್ಷಿಣೆಯಾದರೆ ’ಕಾಫಿಗೆ’, ಭಾರೀ (ಪ್ರ)ದಕ್ಷಿಣೆಯಾದರೆ ’ಸ್ಕ್ಯಾಮ್’... ಹೀಗೆ ಏನೇನೋ ಹೆಸರುಗಳಿಂದ ಕರೆಯುತ್ತಾರೆ - ತಮ್ಮ ಭಾಗ್ಯದೇವತೆಯನ್ನೇ ಜರಿಯುತ್ತಾರೆ!  ಇನ್ನು ಗುರುದಕ್ಷಿಣೆಯ ವಿಷಯವಂತೂ ಕೇಳಲೇ ಬೇಡಿ.  ಫೀಸು, ಕ್ಯಾಪಿಟೇಶನ್ನು, ಬಿಲ್ಡಿಂಗ್ ಫಂಡು, ಡೆವಲಪ್ ಮೆಂಟ್, ಡೊನೇಶನ್ನು, ದೇಣಿಗೆ ಹೀಗೆ ನಾನಾ ವೇಷ ತಾಳಿ ಕಾಡುತ್ತದೆ.  ವರದಕ್ಷಿಣೆಯೋ, ಅದರ ಹೆಸರೆತ್ತಿದರೆ ನಿಮಗೆ ಜೈಲೇ ಗಟ್ಟಿ.  ಅದೆಲ್ಲ ಹೋಗಲಿ, ಪೌರೋಹಿತ್ಯಕ್ಕೆ ಸಹಜವಾಗಿಯೇ ಬರುವ ಸಂಭಾವನೆಯನ್ನೂ ದಕ್ಷಿಣೆಯೆಂದು ಕರೆಯಲು ಮುಜುಗರ ಪಡುತ್ತಿದ್ದ ಹಿರಿ ತಲೆಗಳನ್ನು ನೋಡಿದ್ದೇನೆ.  ನನಗೆ ತಿಳಿದ ವಯೋವೃದ್ಧ ಪುರೋಹಿತರೊಬ್ಬರು ಪೌರೋಹಿತ್ಯಕ್ಕಾಗಿ ತಮ್ಮ ಬಳಿ ಬರುತ್ತಿದ್ದ ಕಕ್ಷಿದಾರರನ್ನು ಕೇಳುತ್ತಿದ್ದರು "ಮರ್ಯಾದೆ ಎಷ್ಟು ಕೊಡುತ್ತೀರಿ?" ಅಥವ ಹಾಗಾದರೂ ಇವತ್ತು ದಕ್ಷಿಣೆಯೆಂಬ ಪದಕ್ಕೆ ಕಳೆದುಹೋದ ಮರ್ಯಾದೆಯನ್ನು ಸಂಪಾದಿಸಿಕೊಡುವ ಇರಾದೆಯಿದ್ದಿರಬಹುದು ಆ ಹಿರಿಯರಿಗೆ. 

ಆದರೇನು? ನೀವು ಎಷ್ಟೇ ಮುಜುಗರ ಪಟ್ಟರೂ, ಹೇವರಿಸಿಕೊಂಡರೂ, ಹೆಸರು ಮರೆಸಿದರೂ ಈ ಲಂಚತತ್ತ್ವ ಮಾತ್ರ ನಿಮ್ಮ ಕೈಬಿಡುವುದಿಲ್ಲ.  ನೀವದನ್ನು ದಕ್ಷಿಣೆಯೆನ್ನಿ, ಲಂಚವೆನ್ನಿ, ಮರ್ಯಾದೆಯೆನ್ನಿ ಅಥವಾ ಅದೊಂದು ಅಸಹ್ಯ ವಿಷಯವೆಂಬಂತೆ ಕೈಬಾಯಿ ಸನ್ನೆಯಲ್ಲೇ ಸೂಚಿಸಿ, ಅದು ಮಾತ್ರ ಕರ್ಮಯೋಗಿಯಂತೆ ನಿರ್ಲಿಪ್ತವಾಗಿ ತನ್ನ ಕೆಲಸವನ್ನು ತಾನು ಮಾಡುತ್ತಲೇ ಇರುತ್ತದೆ.  ಸ್ವತಃ ತಾನು ಯಾವುದಕ್ಕೂ ಅಂಟದಿದ್ದರೂ ಕೊಡುಕೊಳ್ಳುವರನ್ನು ಅಂಟಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತದೆ - ಲಂಚಗಾರ ಮತ್ತು ಲಂಚಿಗರ (ವೈಯಾಕರಣಿಗಳು ಮನ್ನಿಸಬೇಕು) ಮಧ್ಯೆ ಅದೊಂದು ಅವಿನಾಭಾವ ಸಂಬಂಧವನ್ನೇರ್ಪಡಿಸುತ್ತದೆ.  ಕೊಟ್ಟ ಮೇಲೆ ಕೆಲಸ ಮುಗಿಯುವವರೆಗೂ ಅವನನ್ನು ಇವನು ಬಿಡ, ಇವನನ್ನು ಅವನು ಬಿಡ.  ಹೀಗೆ ವ್ಯಕ್ತಿ ವ್ಯಕ್ತಿಗಳ ನಡುವೆ ಬಾಂಧವ್ಯ ಬೆಸೆಯುವ ದಿವ್ಯ ಬಂಧನವಾಗಿ ಕೆಲಸಮಾಡುತ್ತದೆ ಈ ದಕ್ಷಿಣೆ (ಮುಂದೆ ಅದು ಬೇರೆಯೇ ಬಂಧನವಾಗಬಹುದು, ಆದರೇನು).  ಕಾರ್ಯಸಾಧನೆಗೆ ಈ ಬಂಧ-ಬಾಂಧವ್ಯಗಳೇ ಅಲ್ಲವೇ ಮುಖ್ಯ? ಬಂಧನವಿಲ್ಲದೇ ಜಗತ್ತು ನಡೆಯುವುದುಂಟೇ.  ಆದ್ದರಿಂದ ಲಂಚವೆನ್ನುವುದು ಈ ಜಗತ್ತನ್ನು ಒಗ್ಗೂಡಿಸಿ ಮುನ್ನಡೆಸುವ ಅದ್ಭುತ ಶಕ್ತಿಯೆಂದರೆ ತಪ್ಪೇನು?  ಈ ಜಗದ್ಭವ್ಯ ಶಕ್ತಿಯನ್ನು ಕುರಿತು ಚಿಂತಿಸುವುದು ಬಿಟ್ಟು ಒಣವೇದಾಂತ, ಲೋಕಾಂತರಗಳ ಚಿಂತೆ ನಮಗೇಕೆ ಹೇಳಿ. ನಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳಿ.  ಸುಮ್ಮನೇ ಸ್ವರ್ಗ, ನರಕ, ಉತ್ತರ ದಕ್ಷಿಣ ಎಂದೆಲ್ಲಾ ಲೋಕದಿಂದ ಲೋಕಕ್ಕೆ ಅಲೆಯುತ್ತಿದ್ದ ನಮ್ಮ ಮಾತು, ದಕ್ಷಿಣೆ-ಲಂಚದ ವಿಷಯ ಬಂದ ಕೂಡಲೇ ಹೇಗೆ ಈ ನೆಲಕ್ಕೆ ಅಂಟಿ ನಿಂತಿತು ನೋಡಿ.  ಇಂಥಾ ಜೀವನ್ಮುಖೀ ಶಕ್ತಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೆ ತಾನೇ ತೀರೀತು?  ಅದಕ್ಕೇ ನಾನಂತೂ ನಿರ್ಧರಿಸಿಬಿಟ್ಟಿದ್ದೇನೆ - ಪರ(ಲೋಕ) ಚಿಂತೆ ನಮಗೆ ಏಕಯ್ಯಾ ನಮ್ಮ(ಲೋಕದ) ಚಿಂತೆ ನಮಗೆ ಸಾಲದೇ ಎಂದು ಇಹಲೋಕದ ಬಗ್ಗೆ ಚಿಂತಿಸುವುದೇ ಆದರೆ, ಮೊದಲು ಕೈಮುಗಿಯಬೇಕಾದ್ದು ಈ ಲೋಕದ ಸ್ಥಿತಿಕಾರಕ ಶಕ್ತಿಯಾದ ದಕ್ಷಿಣಾಮೂರ್ತಿಗೆ - ದಕ್ಷಿಣಾಮೂರ್ತಿಯೇ ಆದಿಗುರುವೇ!

Monday, August 25, 2014

ಹೋಗಿ ಬನ್ನಿ ಅನಂತಮೂರ್ತಿ... ವಿದಾಯ.

ಅನಂತಮೂರ್ತಿ ನಮ್ಮನ್ನಗಲಿದ್ದಾರೆ,  ನಂಬಲಾಗುತ್ತಿಲ್ಲ.  ಹಾಗೆಂದು ಇದು ಅಕಾಲಮೃತ್ಯುವಲ್ಲ, ಎಂಬತ್ತಕ್ಕೂ ಹೆಚ್ಚುಕಾಲ ಪುಷ್ಕಳವಾಗಿ ಬದುಕಿ ಬಹುಶಃ ಸಂತೃಪ್ತಿಯಿಂದ ಸಹಜ ಸಾವಿಗೇ ಸಂದಿದ್ದಾರೆ.  ಆದರೆ ಕೊನೆಯವರೆಗೂ ಸಾಮಾಜಿಕ ಜೀವನದಿಂದ ನಿವೃತ್ತಿಹೊಂದದೆಯೇ ನೆನ್ನೆಮೊನ್ನೆಯವರೆಗೂ ನಮ್ಮ ನಡುವೆಯೇ ಇದ್ದವರು ಇವತ್ತಿನಿಂದ ಇಲ್ಲವೆಂದರೆ ಗಕ್ಕಿಟ್ಟಂತಾಗುವುದು ಸಹಜವೇ, ಸತ್ಯ ಒಳಗಿಳಿಯಲು ತುಸು ಸಮಯ ಬೇಕಾಗುತ್ತದೆ.  ಕೊನೆ ದಿನಗಳಲ್ಲಿ ತೀವ್ರ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾಗಲೂ ಸುತ್ತಮುತ್ತಲ ಆಗುಹೋಗುಗಳಿಗೆ ಸ್ಪಂದನಶೀಲರಾಗಿದ್ದರೆಂಬುದನ್ನು ನೆನೆದಾಗ ಆಶ್ಚರ್ಯವಾಗುತ್ತದೆ; ಅನಗತ್ಯವಾಗಿ ವಿವಾದಗಳು ಮೈಮೇಲೆ ಬೀಳುತ್ತವೆಂಬುದನ್ನು ತಿಳಿದೂ (ಅವರು ನುಡಿದದ್ದೆಲ್ಲಾ ವಿವಾದವಾಗುವುದಕ್ಕೇ ಕಾಯುತ್ತಿರುತ್ತವೆಂಬುದನ್ನು ತಿಳಿದೂ) ತಾವು ನಂಬಿದ್ದನ್ನು ಹೇಳಲು ಹಿಂಜರಿಯುತ್ತಿರಲಿಲ್ಲವೆಂಬುದನ್ನು ನೆನೆದಾಗ ಆ ಮೌಲ್ಯಪ್ರಜ್ಞೆಯ ಬಗ್ಗೆ ಹೆಮ್ಮೆಯೆನಿಸುತ್ತದೆ. 

ಅವರನ್ನಂಟಿಕೊಂಡ ವಿವಾದಗಳೇನೇ ಇರಲಿ, ನಾವು ಕಂಡ ಅತ್ಯಂತ ಸಂವೇದನಶೀಲ ವ್ಯಕ್ತಿ/ಸಾಹಿತಿಗಳಲ್ಲೊಬ್ಬರು ಅನಂತಮೂರ್ತಿ ಎಂಬುದರಲ್ಲಿ ಎರಡು ಮಾತುಗಳಿಲ್ಲ.  ಮಾಸ್ತಿಯವರನಂತರ ಅನಂತಮೂರ್ತಿ ಕನ್ನಡ ಕತೆಗಳ ಪ್ರಪಂಚದಲ್ಲಿ ಕಡೆಗಣಿಸಲಾಗದ ಹೆಸರು.  ಅವರ ಕತೆಗಳು ಹೊಸ ಕತೆಗಾರರಿಗೆ ಹಿರಿಯಣ್ಣನ ಮೇಲ್ಪಂಕ್ತಿಯಂತೆ ಕಂಡರೆ, ಸೂಕ್ಷ್ಮ ಓದುಗನನ್ನು ಹಲವು ಬಗೆಗಳಲ್ಲಿ ಆವರಿಸುತ್ತವೆ.  ಅವುಗಳಲ್ಲಿ ನನಗೆ ಬಹು ಇಷ್ಟವಾಗುವ ಅಂಶಗಳೆಂದರೆ, ಪಾತ್ರಗಳ ಒಳತೋಟಿ - ಸನ್ನಿವೇಶಕ್ಕೆ ಸಹಜವಾಗಿ ಅವು ಮೂಡುವ ಪರಿ, ತತ್ತ್ವ, ತರ್ಕ, ಕಲಾತ್ಮಕತೆಗಳ ಆಡಂಬರವಿಲ್ಲದೆಯೂ ಕಲಾತ್ಮಕವಾಗಿ ಅವು ಚಿತ್ರಿತವಾಗುವ, ಕ್ರಿಯೆ ಪಡೆದುಕೊಳ್ಳುವ ರೀತಿ.  ತಾವು ಹುಟ್ಟಿ ಬೆಳೆದ ಬ್ರಾಹ್ಮಣ ಸಮುದಾಯ, ಅದರ ನಿಂತ ನೀರಿನಂಥ ವ್ಯವಸ್ಥೆ, ಆಚರಣೆಗಳು, ಬಿಡಿಸಲಾಗದಂತೆ ಬೆಸೆದ ಒಳಿತು-ಕೆಡಕುಗಳು ಮತ್ತು ಅದೇ ಪರಿಸರದಲ್ಲಿ ಮತ್ತದರ ಹೊರಗೆ ಎದುರಾಗುವ ಸಂಕೀರ್ಣ ಸಂದರ್ಭಗಳು ಬಹುಶಃ ಅವರಲ್ಲಿ ಹಲವು ದ್ವಂದ್ವಗಳನ್ನು ಸೃಷ್ಟಿಸಿದಂತೆನಿಸುತ್ತದೆ.  ಅದಕ್ಕೆಂದೇ ಅನಂತಮೂರ್ತಿಯವರಲ್ಲಿ ಹೊತ್ತಿ ಉರಿಯುವ ಬಂಡಾಯಗಾರನನ್ನು ಕಾಣೆವು, ಅಥವ ಕೊನೆಯಲ್ಲಿ ಅಪ್ಪ ಹಾಕಿದ ಆಲದ ಮರಕ್ಕೇ ಜೋತುಬೀಳುವ ಸಂಪ್ರದಾಯಶರಣನನ್ನೂ.  ಈ ಬಂಡಾಯಗಾರ ತಣ್ಣಗೆ ಉರಿಯುವಂಥವನು; ಭಾಷಣ ಮಾಡುವವನಲ್ಲ, ಪ್ರತಿಭಟನೆಯನ್ನು ತಣ್ಣನೆಯ ಕ್ರಿಯೆಯಿಂದಲೇ ದಾಖಲಿಸುವವನು, ಸುಡುತ್ತಲೇ ಶಾಖದೊಳಗಣ ತಂಪಿಗಾಗಿ ಹಂಬಲಿಸುವಂಥವನು, ತಂಪಿನೊಳಗಣ ಬಿಸುಪನ್ನು ಕಂಡು ಬೆಚ್ಚುವವನು.  ತಮ್ಮಲ್ಲೇ ಬೆಳೆದ ಈ ದ್ವಂದ್ವಗಳನ್ನು ಕತೆಯ ಹಲವು ಪಾತ್ರಗಳಾಗಿ ಹಂಚಿ ರೂಪಿಸುವ ಅನಂತಮೂರ್ತಿಯವರ ರೀತಿ ಬಲು ಸೊಗಸು.  ಆ ಪಾತ್ರಗಳು ತಮ್ಮ ನಡುವೆ ನಡೆಸುವ ಸಂವಾದ ವಿವಾದ ಕ್ರಿಯೆ ಪ್ರತಿಕ್ರಿಯೆಗಳು ಒಟ್ಟಂದದಲ್ಲಿ ಒಂದೇ ವ್ಯಕ್ತಿಯ ಒಳತೋಟಿಯಂತೆ ಕಾಣುವುದು,  ಇದೇ ಕಾರಣಕ್ಕಿರಬೇಕು.  ಇದೇ ದ್ವಂದ್ವಗಳು ಅನಂತಮೂರ್ತಿಯವರನ್ನು ಅವರ ನಿಜಜೀವನದಲ್ಲೂ ನೆರಳಂತೆ ಹಿಂಬಾಲಿಸಿರುವುದನ್ನು ಕಾಣುತ್ತೇವೆ.  ಸಂವೇದನೆಗಳು ಹೆಚ್ಚು ಸೂಕ್ಷ್ಮಗೊಂಡಂತೆ ದ್ವಂದ್ವಗಳೂ ಹೆಚ್ಚುವುದು ಸಹಜವೇನೋ. 

ನನ್ನ ಚಿಂತನೆಯ, ಯೌವನದ ದಿನಗಳನ್ನು ರೂಪಿಸಿದ ಹಿರಿಮೆ ಅನಂತಮೂರ್ತಿ, ತೇಜಸ್ವಿ, ಲಂಕೇಶರದು.  ಆದ್ದರಿಂದಲೇ ನನಗವರು ಹೊಸ ಬದುಕಿನ, ಹೊಸ ಚಿಂತನೆಗಳ, ಸ್ವತಂತ್ರಶೀಲತೆಯ ಪ್ರತೀಕ.  ಅವರನ್ನು ಅವರ ಬದುಕಿನ ಉಚ್ಛ್ರಾಯದ ದಿನಗಳಲ್ಲಿ ಕಂಡು ಓದಿ ಬೆಳೆದ ನನಗೆ "ಹಿರಿಯರು" "ಅಗಲಿದ ವೃದ್ಧರು" ಎಂದೆಲ್ಲಾ ಹೇಳಲು ಮನಸ್ಸು ತಡೆಯುತ್ತದೆ.  ಬದುಕನ್ನು ತಮ್ಮಾಣತಿಯಂತೆಯೇ ಕುಣಿಕುಣಿದು ಬದುಕಿ, ಬದುಕಿನ ಕೊನೆ ಹನಿಯನ್ನೂ ಸವಿದು ತೀರಿದವರಿಗೆ "ಅಂತಿಮ ನಮನ"ಕ್ಕಿಂತ "ಪ್ರೀತಿಯ ವಿದಾಯ" ಎನ್ನುವುದು ಹೆಚ್ಚು ಆಪ್ಯಾಯಮಾನ.  ಈ ಮೂವರಲ್ಲಿ ಕೊನೆಯವರಾಗಿ ಅನಂತಮೂರ್ತಿ ಈಗ ನಮ್ಮನ್ನು ಅಗಲಿದ್ದಾರೆ - ಮಿಶ್ರ ಸಂವೇದನೆಗಳೊಂದಿಗೆ ನಮ್ಮನ್ನು ಬಿಟ್ಟು.  ಅನಂತಮೂರ್ತಿಯವರನ್ನು ಹತ್ತಿರದಿಂದ ಕಂಡು ಒಡನಾಡಿದವರು, ಅವರಲ್ಲಿ ಪಾಠ ಕೇಳಿದವರು, ಕೇಳದಿದ್ದರೂ ಪ್ರೀತಿಯ ಅನಂತು ಮೇಷ್ಟ್ರಾಗಿ ಸ್ವೀಕರಿಸಿದ ಅನೇಕ ಏಕಲವ್ಯ ಶಿಷ್ಯರು ಅವರಬಗ್ಗೆ ಭಾವುಕತೆಯಿಂದ, ಗದ್ಗದಿತರಾಗಿ ಮಾತಾಡುತ್ತಾರೆ.  ಇವೆಲ್ಲ ’ಪ್ರಗತಿಪರ’ ’ಬುದ್ಧಿಜೀವಿ’ ಮನಸ್ಸುಗಳು ಎಂದು ಸಾರಾಸಗಟಾಗಿ ತಳ್ಳಿಹಾಕಿಬಿಡುವ ಒರಟು ಅಭ್ಯಾಸವೂ ಇತ್ತೀಚಿಗೆ ಬಂದುಬಿಟ್ಟಿದೆ.  ಆದರೆ ಈ ಪ್ರೀತಿ, ಅಸ್ಮಿತೆಗಳು ವ್ಯಕ್ತಿಯೊಬ್ಬನ ಕೇವಲ ಚಾಣಾಕ್ಷತೆಯಿಂದ, ರಾಜಕೀಯ/ಸಾಮಾಜಿಕ ’ಪ್ರಗತಿಪರತೆ’ಯಿಂದ, ಯಾವುದೋ ಸಿದ್ಧಾಂತದ ಮೇಲ್ಮೆಯಿಂದ, ಮೇಸ್ಟ್ರುಗಿರಿಯಿಂದ, ಲಾಬಿಯಿಂದ ಅಥವಾ ಸಾಹಿತ್ಯದ ಜನಪ್ರಿಯತೆಯಿಂದ ಬರುವುದಲ್ಲವೆಂಬುದನ್ನು ನೆನಪಿನಲ್ಲಿಡಬೇಕು.  ಭಾಷಣಗಳಲ್ಲಿ ಚಪ್ಪಾಳೆಯಿಕ್ಕುವುದು ಬೇರೆ, ಪ್ರೀತಿಯಿಂದ ನೆನೆಯುವುದು ಬೇರೆ.  ಗತಿಸಿದ ಮೇಷ್ಟ್ರ ಬಗೆಗಿನ ಸಾವಿರ ಬೆಚ್ಚನೆ ನೆನಪುಗಳಿವೆ ಅವರ ಮೆಚ್ಚುಗರಲ್ಲಿ.  ಹಾಗೇ ಅವರ ನಿಷ್ಠುರ ನಿಲುವಿನಿಂದಾಗಿ ಅವರನ್ನ ಕಾಯಾ ವಾಚಾ ಮನಸಾ ದ್ವೇಷಿಸುತ್ತಿದ್ದ, ಅವರ ಸಾವನ್ನೂ ಸಂಭ್ರಮಿಸುವ ಸಮೂಹವೂ ಇದೆ.  ಇದಂತೂ ಒಂದು ರೋಗಗ್ರಸ್ತ ಮನಸ್ಥಿತಿಯೆಂಬುದರಲ್ಲಿ ಎರಡು ಮಾತಿಲ್ಲ.  ಎಷ್ಟೊ ಸಮಯ ಅಗತ್ಯವೇ ಇಲ್ಲದೆಡೆಯಲ್ಲೂ ಅವರ ಹೆಸರು ಎಳೆಯಲ್ಪಡುತ್ತಿತ್ತು, ಯಾರನ್ನಾದರೂ ಹೊಗಳಬೇಕಿದ್ದರೂ ತೆಗಳಿಕೆಗೆ ಅನಂತಮೂರ್ತಿಯೇ ಬೇಕು ಎಂಬಂಥ ಪರಿಸ್ಥಿತಿಯೂ ಏರ್ಪಟ್ಟಿತ್ತು.  ಅಷ್ಟಾದರೂ ಎಲ್ಲೋ ಒಂದುಕಡೆ ಈ ಅಸಹನೆಗೆ ರವೆಯಷ್ಟಾದರೂ ತಥ್ಯ ಕಾರಣವಿಲ್ಲದಿಲ್ಲ.  ಹಲವು ವಿಷಯಗಳಲ್ಲಿ ನಿಷ್ಠುರ ನಿಲುವು ತಾಳುತ್ತಿದ್ದ ಅನಂತಮೂರ್ತಿ, ಮತ್ತೆ ಕೆಲವು ವಿಷಯಗಳು ಕಂಡೂ ಕಾಣದಂತೆ ಇರುತ್ತಿದ್ದರೆಂಬುದು ಅಸಹನೀಯವಾಗುತ್ತಿತ್ತು.  ಅವರ ’ಸಮಾಜಪರ’ ’ಸಾಮಾಜಿಕನ್ಯಾಯುತ’ ನಿಲುವುಗಳು ಹಲವು ಬಾರಿ ಅಷ್ಟೇನು ಸಾಮಾಜಿಕ ನ್ಯಾಯದ್ದಾಗಿ ಕಾಣುತ್ತಲೇ ಇರಲಿಲ್ಲ.  ಅನೇಕವೇಳೆ ಅವರ ನಿಲುವುಗಳಲ್ಲಿ ಕಣ್ಣಿಗೇ ಹೊಡೆಯುವ ವಿರೋಧಾಭಾಸಗಳು ಇರುತ್ತಿದ್ದುವು.  ಈ ಸಮಯದಲ್ಲೆಲ್ಲಾ ಅವರ ಚಿನ್ಮೌನ ಕೂಡ ಹೊತ್ತಿ ಉರಿಯುತ್ತಿದ್ದ ಅಸಹನೆಗೆ ತುಪ್ಪ ಹೊಯ್ಯುತ್ತಿತ್ತು.  ಅನಂತಮೂರ್ತಿ-ಗಾಂಧಿ-ಕಸಬರನ್ನು ಒಟ್ಟಿಗೇ ದ್ವೇಷಿಸುವ ಜನವಿರುವಂತೆಯೇ ಈ ಮೂವರನ್ನೂ ಒಟ್ಟಿಗೇ ಪ್ರೀತಿಸುವ ಜನರೂ ಇರುವುದು, ಆ ಕಳವಳಕಾರೀ ಸಾಮಾಜಿಕ ಬೆಳವಣಿಗೆ, ಅನಂತಮೂರ್ತಿಯವರ ಗಮನಕ್ಕೆ ಬರಲೇ ಇಲ್ಲ.  ಕಸಬನಂಥವರ ಮೇಲಿನ ದ್ವೇಷ ಅನಂತಮೂರ್ತಿಯಂಥವರ ಮೇಲಿನ ಅಸಹನೆಯಾಗಿ ಪರಿಣಮಿಸುತ್ತಿದ್ದುದನ್ನೂ, ಅನಂತಮೂರ್ತಿಯವರ ಮೇಲಿನ ಪ್ರೀತಿ ಕಸಬನಂಥವರ ಮೇಲಿನ ಪ್ರೀತಿಯಾಗಿ ಚಲಾವಣೆಗೊಳ್ಳುತ್ತಿದ್ದುದನ್ನೂ ಅವರು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ.  ಹೀಗಾಗಿ ಯಾವುದೋ ಮಟ್ಟದಲ್ಲಿ ಅನಂತಮೂರ್ತಿ ಅವರದಲ್ಲದ ದ್ವೇಷಕ್ಕೆ ಅವರದಲ್ಲದ ಪ್ರೀತಿಗೆ ಪಕ್ಕಾಗುತ್ತಾ ಹೋದರು.  ಅಥವ ಇದು ಅನಂತಮೂರ್ತಿಯವರ ವೈಯಕ್ತಿಕ ನಿಲುವೆನ್ನುವುದಕ್ಕಿಂತ ಅವರು ಗುರುತಿಸಿಕೊಂಡ, ಈಗಾಗಲೇ ಒಂದು ಕಟ್ಟರ್ ’ಪಂಥ’ವೇ ಆಗಿ ಬೆಳೆದ ರಾಜಕೀಯ ಸಿದ್ಧಾಂತದ ಅನಿವಾರ್ಯ dynamics ಕೂಡ ಇರಬಹುದೆಂದು ನಾನು ಚಿಂತಿಸುತ್ತೇನೆ.  ಆ ದೃಷ್ಟಿಯಿಂದ ಉಳಿದ ಹಲವು ಪ್ರಗತಿಪರರಂತೆಯೇ ಅನಂತಮೂರ್ತಿಯವರೂ ತಾವೇ ನೀರೆರೆದು ಬೆಳೆಸಿದ ಪಂಥವನ್ನು ಪ್ರಶ್ನಿಸಿಕೊಳ್ಳುವ critical insider ಕೆಲಸವನ್ನು ನಿಲ್ಲಿಸಿಬಿಟ್ಟಿದ್ದರೋ ಎನ್ನುವ ಅನುಮಾನ ಕಾಡುತ್ತದೆ.  ಬದಲಾದ ಸಾಮಾಜಿಕ ರಾಜಕೀಯ ಸಂದರ್ಭದಲ್ಲಿ ಸಮತೋಲನದ ಗುರುತ್ವಬಿಂದು (center gravity) ಬದಲಾಗಿದ್ದು ಅವರಿಗೆ ತಿಳಿಯಲೇಯಿಲ್ಲವೆನಿಸುತ್ತದೆ.  ಏಕೆಂದರೆ ತಮ್ಮ ಜೀವನವೆಲ್ಲಾ ವ್ಯವಸ್ಥೆಯನ್ನು ಪ್ರಶ್ನಿಸುತ್ತಾ, ಅದನ್ನು ಮೀರುತ್ತಾ ಗಟ್ಟಿಗೊಳ್ಳುತ್ತಾ ಬಂದ ಈ ಸಮಾಜವಾದಿ, ತಾವೇ ಮತ್ತೊಂದು ಬದಲೀ ವ್ಯವಸ್ಥೆಯ ಭಾಗವಾಗತೊಡಗಿದ್ದನ್ನೂ ಮತ್ತು ಆ ವ್ಯವಸ್ಥೆಯೇ ಮತ್ತೊಂದೆಡೆಯಿಂದ ಅದೇ ಹಲವು ಬಗೆಯ ವೈಪರೀತ್ಯಗಳಿಗೆಡೆಗೊಡತೊಡಗಿದ್ದನ್ನು ಗಮನಿಸದೇ ಹೋದರೇ?  ಇಲ್ಲದಿದ್ದರೆ ಅವರು ಎಲ್ಲೋ ಒಂದೆಡೆ ಅದನ್ನೂ ಮೀರಲೆತ್ನಿಸುತ್ತಿರಲಿಲ್ಲವೇ?  ಅಥವ ಅಷ್ಟುಹೊತ್ತಿಗಾಗಲೇ ಅವರ ಸುತ್ತ ರೂಪುಗೊಂಡಿದ್ದ ಆ ಪ್ರಭಾವಳಿ, ಗೌರವ, ಪ್ರೀತಿಗಳು ಅನಂತಮೂರ್ತಿಯವರೊಳಗಿದ್ದ ಬಂಡಾಯಗಾರನನ್ನು ಮೆತ್ತಗಾಗಿಸಿತ್ತೇ?  ಈ ಹಲವು ಪ್ರಶ್ನೆಗಳನ್ನಿಟ್ಟು ಅವರೊಡನೆ ಚರ್ಚಿಸಬೇಕೆಂದು ಎಷ್ಟೋಬಾರಿ ಅಂದುಕೊಂಡಿದ್ದಿದೆ.  ಅದು ಸಾಧ್ಯವಾಗುತ್ತಿದ್ದಿತೋ, ಇಲ್ಲವೋ - ಒಟ್ಟಿನಲ್ಲಿ ಈಗಂತೂ ಅವರಿಲ್ಲ.  ಬಹುಶಃ ಅವರಲ್ಲಿ ಉತ್ತರವಿದ್ದಿರಬಹುದು, ಕೇವಲ ಭರ್ತ್ಸನೆ, ಬೆದರಿಕೆ, ವೈಯಕ್ತಿಕ ನಿಂದನೆಗಳನ್ನು ಬಿಟ್ಟು ನಿಜದ ಪ್ರಶ್ನೆಗಳೇ ಅವರ ವಿರೋಧಿಗಳಿಂದ ಇತ್ತೀಚಿನ ದಿನಗಳಲ್ಲಿ ಅವರಿಗೆದುರಾಗಲಿಲ್ಲವೇನೋ.  ಪ್ರಶ್ನೆಗಳಂತೂ ಇವೆ.  ಉತ್ತರಗಳೂ ಖಂಡಿತ ಇವೆ.  ಆದರೆ ಸಮಾಧಾನದಿಂದ ಕೂತು, ಪರಸ್ಪರ ಅನುಮಾನಗಳಿಲ್ಲದೇ ಚರ್ಚಿಸಿ ’ಅರ್ಥಮಾಡಿಕೊಳ್ಳುವುದು’ ಸಾಧ್ಯವಾದರೆ!  ಅನಂತ ಸರಳತೆ ಸಜ್ಜನಿಕೆ ಸನ್ನಡತೆಗಳ ಮೂರ್ತಿಗೆ ಅದು ನಿಜವಾದ ಶ್ರದ್ಧಾಂಜಲಿಯಾಗಬಹುದು.

ಅನಂತಮೂರ್ತಿಯವರ ಬಗೆಗೆ ನೆನೆಸಿಕೊಳ್ಳಲು ನನಗೆ ವೈಯಕ್ತಿಕ ಆಪ್ತ ಅನುಭವಗಳಿಲ್ಲ.  ಅಥವ ದ್ವೇಷಿಸುವ ಧಾರ್ಮಿಕ/ಸಾಮಾಜಿಕ ಕಾರಣಗಳೂ ಇಲ್ಲ.  ನನ್ನ ನೆಚ್ಚಿನ ಕತೆಗಾರ ಅನಂತಮೂರ್ತಿ ಮಾತ್ರ ಹಿಂದಿನಂತೆಯೇ ಇನ್ನು ಮುಂದೆಯೂ ನನ್ನ ಜೊತೆಯಿರುವರೆಂಬುದಂತೂ ನಿಜ, ನನ್ನ ಪುಸ್ತಕದ ಕಪಾಟಿನಲ್ಲಿ, ನನ್ನ ಓದಿನ ನೆನಪುಗಳಲ್ಲಿ, ಸ್ಫೂರ್ತಿಯಲ್ಲಿ.  ಅದೇಕೋ ಮೊನ್ನೆ ಅನಂತಮೂರ್ತಿಯವರು ಕೊನೆಯ ಕ್ಷಣಗಳನ್ನೆಣಿಸುತ್ತಿದ್ದ ಸುದ್ದಿ ತಿಳಿದಾಗ ನನಗೆ ನೆನಪಾದದ್ದು, ವಿಪರೀತ ಕಾಡತೊಡಗಿದ್ದು ಅವರು ಕುಮಾರಗಂಧರ್ವರ ಬಗ್ಗೆ ಬರೆದ ಒಂದು ಕವನ.  ಮೊದಲೇ ಹೇಳಿದಂತೆ ನಾನು ವೈಯಕ್ತಿಕವಾಗಿ ಅನಂತಮೂರ್ತಿಯವರನ್ನು ಬಲ್ಲವನಲ್ಲ, ಆದರೆ ಅವರು ನನ್ನೊಡನೆ ಅಷ್ಟು ಆಪ್ತವಾಗಿ ಮಾತನಾಡಿದ್ದು ಈ ಕವನದ ಮೂಲಕವೇ, "ಸಂತೆಯಿಂದ ಸುಸ್ತಾಗಿ ಬಂದ ಶೆಟ್ಟಿ"ಯಂಥ ಆ ಗಂಧರ್ವ ಈ ಮೂರ್ತಿಯನ್ನು ಮಾತಾಡಿಸಿದಷ್ಟೇ ಆಪ್ತತೆಯಿಂದ.  ಅವರ ಸಾವಿನ ಸುದ್ದಿ ಬಂದಾಗ, ಅವರ ಈ ಕವನ ಓದಬೇಕೆಂದು ತುಂಬಾ ಅನ್ನಿಸಿತು.  ನನ್ನ ಲೈಬ್ರರಿಗೆ ದೂರವಿದ್ದೆ.  ಗೆಳೆಯ ರಾಜೇಂದ್ರನ ಬಳಿ ಹೇಳಿ ತರಿಸಿಕೊಂಡು ಒಮ್ಮೆ ಏಕಾಂತದಲ್ಲಿ ಕುಳಿತು ಓದಿಕೊಂಡೆ.  ಗಂಧರ್ವನ ಜಾಡು ಹಿಡಿದು ಹೊರಟ ಅನಂತಮೂರ್ತಿ ಮುಗುಳ್ನಕ್ಕು ಕೈಬೀಸಿದರು.

ಈ ಕವನದ ಧ್ವನಿಮುದ್ರಿಕೆಯನ್ನು ಇಲ್ಲಿ ಕೇಳಬಹುದು:
http://youtu.be/hPrOY1EC7oI

Monday, August 11, 2014

ಅಪೀಲು

ಕೊಲೆಯಿರದ ಮನೆಯ
ಸಾಸಿವೆಯನೆಲ್ಲಿಂದ ತರಲಿ ದೊರೇ!

ಸಾಯಲಸುವೊಂದಿರಲು
ಕೊಲುವ ಕೈಗಳು ಹಲವು;
ಬಡಿಯದಿರು ಅವಕೆ ಕಸ್ತೂರಿ ಚಂದನ ನಾಮ.
ರುದ್ರಾಕ್ಷದಗ್ನಿಯಲಿ ಸನಾತನ
ಕಾಯುತಿದೆ ಚಿನ್ಮುದ್ರೆ;
ಕೊಲೆಯ ಕೈಗಳಿಗಿವನು ಒತ್ತಬಹುದೇ?

ಗ್ರೀಷ್ಮಹತಿಗೆಲೆಯುದುರಿ
ಬೋಧಿಯ ಕೆಳಗೂ ಬಲೆಬಲೆಯ ಬಿಸಿಲು,
ಹೊಸ ಟೊಂಗೆ ಟಿಸಿಲುಗಳು ಬೆಳೆಯಬೇಕು.

ವಿಲಾಯತಿ ಸಿರಿಂಜು ಕತ್ತಿ-ಕತ್ತರಿ ಬರುವ ಮೊದಲು
ಮಾಟಗಾರನೆ ಮನೆವೈದ್ಯ;
ತಾಯತವೆ ಸಕಲ ರುಜಾಪಹಾರಿ.
ಇಂದು ಹಳತೆಂದವನು ದೂಡಬೇಕೆ?
ದತ್ತೂರಿಯಿರಲಿ ಬಿಡು,
ಔಷಧಕೂ ಬಂದೀತು
(ಅತಿಯಾದ ಕ್ಷೀರವೂ ಅತಿಸಾರ ತಂದೀತು).

ಕೊಲೆಯ ಕೈಗಳಿಗಿಂದು ಕಾವ ಕಸುಬನು ಕಲಿಸು,
ಬಿಳಿಲು ಇಳಿಯಲಿ ನೇಣ ಹೆಣದ ಬದಲು;
ಭೂತಗಳಿಗೊಂದೊಮ್ಮೆ ಮುಕ್ತಿ ಕರುಣಿಸಿ ಸಲಿಸು,
ಸತ್ತವರ ನೆನಪಿನಲಿ ಸಂಪಗೆಯು ನಗಲಿ.

Friday, August 8, 2014

ಸಾಂತ್ವನ

ಮನೆ ಹಿತ್ತಿಲು ಪಾಳು ಬಿದ್ದಿರಲು
ಸಂತೆಯೊಳು ಧ್ಯಾನವ ಕನಸುವವ
ಸಂತನೂ ಅಲ್ಲ ಯೋಗಿಯೂ ಅಲ್ಲ

ಬಿಡು ರಾಜಾ,
ಅದೊಂದು ಥರ
ಕಾಸೂ ಕೇಡು ತಲೆಯೂ ಬೋಳಿನ ಕತೆ.

ಗುದ್ದಲಿ ಪಿಕಾಸಿ ತೊಗೋ
ಹಿತ್ತಿಲಲಿ ಬೆಳೆದ ಕಳೆ ಕೀಳು
ಮಣ್ಣ ಹದಮಾಡಿ
ಐನಾತಿ ಅಸಲೀ ಬೀಜಗಳ ನೆಟ್ಟು
ನಗುವ ಸೂರ್ಯನ ತೊಡಿಸಿ
ಆತ್ಮಜಲ ಎರೆದು, ಬೆಳೆ
ನಿನಗೆ ಬೇಕಾದ್ದು
ನಿನ್ನ ಧ್ಯಾನಸ್ಥ ಮೌನದಲ್ಲಿ, ಏಕಾಂತದಲ್ಲಿ
ಬೆಳೆದು
ಕೊಂಡದ್ದು
ಸಂತೆಯ ಕೊಂಡ ಸರಕಿಗಿಂತ ಸಾವಿರಪಾಲು ಪುಷ್ಟಿ
ಬೆಳೆದಿದ್ದು ಮಾರದಿರು
ಮಾರಿದ್ದು ಕೊಳ್ಳದಿರು
ನಿನಗಷ್ಟು ಇಟ್ಟು ಬಂದವರಿಗಷ್ಟು ಕೊಟ್ಟು...
ರುಚಿಯಿಲ್ಲದ ಹಣ್ಣ ಗಿಣಿ ಕಚ್ಚುವುದೇ ಇಲ್ಲ
ಹೋಗು, ಹುಷಾರಾಗಿ, ಮತ್ತೆ ಬಾ
ಆಗೀಗ.

Tuesday, January 14, 2014

ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದು

ಕುಮಾರವ್ಯಾಸಜಯಂತಿಯಂದು ನನ್ನ ಭಾವಪೋಷಕನಾದ ಕುಮಾರವ್ಯಾಸನಿಗೆ ನಮನ

ನಾರಣನೆ ಕರ್ಣಾಟ ಭಾರತ
ಕಾರಣನೆ ಕೃಷ್ಣಾಮೃತಾರ್ಣವ
ಪೂರಣನೆ ಕವಿತಿಲಕ ಕುವರವ್ಯಾಸ ಮುನಿರಾಯ
ಚಾರುಕವಿತೆಯಿದಲ್ಲವೆನುತಲೆ
ಮೇರೆವರಿಸಿದೆ ಬರಿಯ ತೊಳಸಿಯ
ತೀರುತಕೆ ಕಪ್ಪುರವ ಬೆರೆಸಿದೆ ಕಾವ್ಯಸೌರಭವ

ಕಾಳಗದ ಕಲಿಕರ್ಣ ಭಕುತಿಯ
ಸೂಳರಿತ ಗಾಂಗೇಯ ಘನ ಸುವಿ
ಶಾಲಮತಿ ವಿದುರಾಂಕ ಬೆಂಕಿಯ ಕುವರಿ ಪಾಂಚಾಲಿ
ಕಾಳಮತಿ ದುರ್ಯೋಧನಾಹವ
ಕಾಲ ಭೀಮ ಪರಂತಪರ ಕರು
ಣಾಳು ಕೃಷ್ಣನ ಕಂಡರಿಸಿದೈ ಭಾವಭಿತ್ತಿಯಲಿ

ಅರಗಿನರಮನೆಯೋ ವಿರಾಟನ
ಪುರದೊಳಜ್ಞಾತವೊ ಸುಯೋಧನ
ಹರಣವೋ ಕಲಿ ಕರ್ಣಭೀಷ್ಮರ ಮರಣವೋ ಕೊನೆಗೆ
ದುರುಪದಿಯ ಧನ ಹರಣವೋ ಸಲೆ
ಪರಮಪುರುಷನ ಕರುಣವೋ ಮಿರು
ಮಿರುಗಿತಲ ನಿಜರೂಪಕದ ಭಾಂಡದೊಳು ತೊಳತೊಳಗಿ

ನಾರಣನ ಮೊರೆಯಿಡುವ ಭಕುತನ
ನಾರಣಮು ಕೊಂಕಿಸರು ಗಜಪತಿ
ನಾರಣನ ಪಿತನಜಮಿಳನು ಪ್ರಹ್ಲಾದನೇ ಸಾಕ್ಷಿ
ನಾರಣನೆ ಬಾರಯ್ಯ ದುರುಳರ
ನಾರಣೆವರೆಂದವಳ ಮಾನವ
ನಾರಣಿಯೊಳಡಗಿಸುತ ಕಾಯ್ದರು ಕೃಷ್ಣ ದೊರೆಯಲ್ತೇ?

ನಾರಣನ ಕೈವಲ್ಯಕಾರಣ
ನಾ ರಣದ ಪಂಡಿತರ ಗಂಡನ
ನಾರಣಗಿಸುವರೈ ಮಹಾಭಾರತದ ನಾಯಕನ
ನಾರಣನ ಮಂಗಳದ ನಾಮವ
ನಾರಣಿಸುತಿಹ ನಿಗಮಸಾರವು
ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದು