Monday, November 21, 2011

ಕೆಲವು ವಚನಗಳು

(೧)
ಕಾಗೆ ಕರುಬಿ ಮಾವಿನ ಚಿಗುರುಂಬೊಡೆ
ಬಾಯಿ ಕಹಿಗೊಂಡಿತ್ತಲ್ಲದೆ
ಕೋಗಿಲೆಯ ಸೊಲ್ಲು ದೊರಕೊಂಡಿತೇ
ಕಾಡ ಮಂಗ ಸಿರಿಗಂಧದ ಮರಕೆ ಜೋತೊಡದರ ನಡೆ ಸಿರಿಗೊಂಡಿತೇ?
ಭಾವದ ಮಿಂಚೊಡೆದ ಬೆಡಗಿಂಗೆ ಮೈಯಿಕ್ಕದೆ ಮನವೀಯದೆ
ಬರಿದೇ ನುಡಿನುಡಿಯೆಂದುರೆ ಬೊಬ್ಬೆ ಹೊಯ್ದೊಡೆ
ಆ ಬೊಬ್ಬೆ ನುಡಿಯೇ? ಹೊಯ್ದವ ನುಡಿಗನೇ? ನುಡಿ ಕನ್ನುಡಿಯೇ?
ನುಡಿಯೊಳನುಡಿತವ ಕೇಳದೆ ಮಿಡಿತವನರಿಯದೆ
ನಾನೀನೆಂದು ಗಳಹುವ ಬಾಯಿಬಡುಕರನೇನೆಂಬೆನಯ್ಯಾ
ದಮ್ಮಪುರದ ಮಂಜಯ್ಯಾ ನಿಮ್ಮ ನುಡಿಯೆಮಗೆ ಶರಣು.

(೨)
ಈ ನುಡಿ ಕನ್ನುಡಿಯೆಂಬರು
ಮತ್ತಾನುಡಿ ಪರನುಡಿಯೆಂಬರು,
ತೊದಲುವ ಕಂದನ ನುಡಿಯಾವುದಯ್ಯಾ
ಬಿರಿವೂವಿನ, ಚೆಲುನಗುವಿನ, ಎದೆಯೊಲವಿನ ನುಡಿಯಾವುದಯ್ಯಾ
ನುಡಿವುಟ್ಟುವ, ಹೊಮ್ಮುವ, ನೆಗೆಯುವ, ಚಿಮ್ಮುವ ಜೀವದ ನಡೆಯರಿಯದೆ,
ಪೆಣಕೆ ದಾರವನಿಕ್ಕಿ ಜಾತಿಯ ಹೊಲಸುಂಬರಯ್ಯಾ
ಅಯ್ಯಾ ನಿಮ್ಮ ಕರುಣೆಯದಾವ ನುಡಿ
ಕಡುಮೌನವದಾವ ನುಡಿ ಪೇಳಾ ದಮ್ಮಪುರದ ಮಂಜಯ್ಯಾ

21 comments:

sunaath said...

ಸೊಬಗಿಂದಾಡುತಿರುವನು ನಮ್ಮ ಮಂಜಯ್ಯಾ!
ಸೊಬಗು ನುಡಿಯುತಿರುವನು ನಮ್ಮ ಮಂಜಯ್ಯಾ!
ನೋಟಕ್ಕಿದು ಚೆನ್ನ, ಶ್ರವಣಕ್ಕಿದು ಚೆನ್ನ,
ಕೇಳಯ್ಯಾ ದಮ್ಮಪುರದ ಮಂಜಯ್ಯಾ!

ರಾಘವೇಂದ್ರ ಜೋಶಿ said...

"ಬಿರಿವೂವಿನ, ಚೆಲುನಗುವಿನ, ಎದೆಯೊಲವಿನ ನುಡಿಯಾವುದಯ್ಯಾ.."
ಒಂದು ಕಾಲದಲ್ಲಿ ಕಿಡಿಯೆಬ್ಬಿಸಿದ,ಸದ್ಯಕ್ಕೆ ತಣ್ಣಗಾದಂತಿರುವ ಪದ್ಯ ಪ್ರಕಾರಕ್ಕೆ ನೀವು ಮತ್ತೇ ಮತ್ತೇ ತಿಕ್ಕಿ ಹೊಳೆಸುವ ಪಣ ತೊಟ್ಟಂತಿದೆ..ನಡೆಯಲಿ.ನಡೆಯಲಿ.ಖುಷಿ ನೀಡಲಿ.. :-)

ಬಾಲು said...

Liked the both the post and the comments :) :)

Subrahmanya said...

:-))

Susheel Sandeep said...

"ಭಾವದ ಮಿಂಚೊಡೆದ ಬೆಡಗಿಂಗೆ ಮೈಯಿಕ್ಕದೆ ಮನವೀಯದೆ
ಬರಿದೇ ನುಡಿನುಡಿಯೆಂದುರೆ ಬೊಬ್ಬೆ ಹೊಯ್ದೊಡೆ
ಆ ಬೊಬ್ಬೆ ನುಡಿಯೇ? ಹೊಯ್ದವ ನುಡಿಗನೇ? ನುಡಿ ಕನ್ನುಡಿಯೇ?"

I can so relate these lines...

"ತೊದಲುವ ಕಂದನ ನುಡಿಯಾವುದಯ್ಯಾ
ಬಿರಿವೂವಿನ, ಚೆಲುನಗುವಿನ, ಎದೆಯೊಲವಿನ ನುಡಿಯಾವುದಯ್ಯಾ
ನುಡಿವುಟ್ಟುವ, ಹೊಮ್ಮುವ, ನೆಗೆಯುವ, ಚಿಮ್ಮುವ ಜೀವದ ನಡೆಯರಿಯದೆ"

Super likes...nimma experimentationsu very inspiringu... :)

Srikanth said...

ದಮ್ಮಪುರದ ಮಂಜಯ್ಯ, ನಿಮ್ಮ ವಚನಗಳಲ್ಲಿ 'ದಮ್' ಇಹುದಯ್ಯ :)

Manjunatha Kollegala said...

ಪಾಮರ ನುಡಿದೊಡೆ ಅಹುದೆಂಬೆನಯ್ಯಾ
ಪಂಡಿತ ಬಡಿದೊಡೆ ಹಸಾದಮೆಂಬೆನಯ್ಯಾ
ಪಂಡಿತನಾಥ ನಮ್ಮ ಸುನಾಥ ಮೆಚ್ಚಿ ಅಹುದೆಂದರೆ
ಟೊಂಕಕಟ್ಟಿ ಉದ್ದಂಡವೆರಗುವೆನಯ್ಯಾ
ದಮ್ಮಪುರದ ಮಂಜಯ್ಯಾ ನಿಮ್ಮಾಣೆ ನಿಮ್ಮಾಣೆ.

Manjunatha Kollegala said...

RJ, ಕಾವ್ಯವಿರುವುದು substanceನಲ್ಲಿ, formನಲ್ಲಲ್ಲ ಎಂದು ಮತ್ತೆ ಮತ್ತೆ ಧೃಡಪಡಿಸಿಕೊಳ್ಳುವುದಕ್ಕಾಗಿ ಈ ಕಸರತ್ತು :)

ಮೆಚ್ಚಿದ್ದಕ್ಕೆ ಧನ್ಯವಾದಗಳು.

Manjunatha Kollegala said...

ಬಾಲು ಮತ್ತು ಸುಬ್ರಹ್ಮಣ್ಯ, ಧನ್ಯವಾದಗಳು, ನಿಮ್ಮ ಮೆಚ್ಚುಗೆಗೆ, ಓದಿ ನಿಮ್ಮ ಮೊಗದಲ್ಲರಳಿದ ನಗುವಿಗೆ.

Manjunatha Kollegala said...

ಧನ್ಯವಾದ ಸುಶೀಲ್. ಬರುತ್ತಿರಿ.

Manjunatha Kollegala said...

ದಮ್ಮಿಲ್ಲದ ವಚನ ಆವುದಯ್ಯಾ
ದಮ್ಮೇ ವಚನದ ಮೂಲವಯ್ಯ
ಶ್ರೀಕಾಂತ ಪೇಳ್ವನು ಕೇಳಾ ದಮ್ಮಪುರದ ಮಂಜಯ್ಯಾ

ಗಿರೀಶ್.ಎಸ್ said...

Both are good sir...liked it..

ಚಾರ್ವಾಕ ವೆಂಕಟರಮಣ ಭಾಗವತ said...
This comment has been removed by a blog administrator.
ಪ್ರಶಾಂತ ಸೊರಟೂರ said...

ಇಲ್ಲಿಗೆ ಮೊದಲ ಬಾರಿಗೆ ಬಂದಿದ್ದು...ಸೊಗಸಾಗಿದೆ :-)

Manjunatha Kollegala said...

ಗಿರೀಶ್, ಚಾರ್ವಾಕ ಮತ್ತು ಪ್ರಶಾಂತರೆ ಧನ್ಯವಾದ

haarasana said...

mana miDisuva, tanu jummenisuva, buddhige guddi,eccharisuva vachanagaLannu koTTiruva manjayyanavarege uge!! uge!!
eraDU vachanagallalli, 'nuDi kannuDi'ya badalu 'nuDigannuDi' sariyenisuttade. athavaa 'nuDi tannuDi'endiddare innU chenna.
by
haarasana

Manjunatha Kollegala said...

haarasana ಅವರೇ (ಅದು ತಮ್ಮ ಕಾವ್ಯನಾಮವೇ?), ನಿಮ್ಮ ಮೆಚ್ಚುಗೆಗೆ ಧನ್ಯವಾದ. ನುಡಿ ಕನ್ನುಡಿ ಎರಡೂ ಇಲ್ಲಿ ಬೇರೆಬೇರೆ ಪದಗಳು (ನುಡಿಯು ಕನ್ನುಡಿ), ಆದ್ದರಿಂದ ಸಂಧಿಮಾಡಲಿಲ್ಲ. ನುಡಿಯೆಂಬ ಕನ್ನುಡಿ ಆಗಿದ್ದರೆ ನುಡಿಗನ್ನುಡಿಯಾಗುತ್ತಿತ್ತು.

Ashok.V.Shetty, Kodlady said...
This comment has been removed by the author.
Swarna said...

ಅಯ್ಯಾ ನಿಮ್ಮ ಕರುಣೆಯದಾವ ನುಡಿ
ಕಡುಮೌನವದಾವ ನುಡಿ ಪೇಳಾ
ಹಾಗೆ ನಿಮ್ಮ ಬ್ಲಾಗಿನ ಹಳೇ ಪೋಸ್ಟ್ಗಳ ಓದುತ್ತಿದ್ದಾಗ
ಇದು ಕಣ್ಣಿಗೆ ಬಿತ್ತು. ಎಷ್ಟೆಲ್ಲಾ ಪ್ರಕಾರಗಳಲ್ಲಿ ಎಷ್ಟು ಚಂದ
ಬರೆಯುತ್ತಿರಿ. ನಿಮ್ಮ ಆ ಪ್ರತಿಭೆಗೆ ಮತ್ತು ಇಲ್ಲಿ ಅದ ಹಾಕಿ ಓದಲು
ಕೊಡುತ್ತಿರುವುದಕ್ಕೆ ವಂದನೆಗಳು ಸರ್.
ಸ್ವರ್ಣಾ

Manjunatha Kollegala said...

ಧನ್ಯವಾದಗಳು ಸ್ವರ್ಣಾ... ನೀವೂ ಚಂದ ಬರೆಯುತ್ತೀರಿ, ನಿಮ್ಮ ಬ್ಲಾಗಿಗೆ ಭೇಟಿ ನೀಡಿದೆ... ಯಾವುದಕ್ಕೆ ಕಾಮೆಂಟಿಸಬೇಕೆಂದು ತಿಳಿಯಲಿಲ್ಲ :)

bilimugilu said...

ಮೇಷ್ಟ್ರೆ ನಮಸ್ತೆ.......
ಸೊಗಸಾದ ಎರಡು ವಚನಗಳಿಗೆ ಶರಣು ಶರಣು......
ಮೊದಲನೆಯದ೦ತು ಮನ ಮುಟ್ಟಿದೆ - ಮತ್ತೆ ಮತ್ತೆ ಓದಬೇಕೆನಿಸಿ - ವಾಹ್ ವಾಹ್ ಕ್ಯಾ ಬಾತ್ ಹೈ..... ಅನಿಸಿದ್ದು ಸುಳ್ಳಲ್ಲ.....
ದಯವಿಟ್ಟು ಇನ್ನು ಹೆಚ್ಚಾಗಿ ಬರೆಯಿರಿ, ನಿಮ್ಮ ಅಭಿಮಾನಿಗಳ ದ೦ಡಿನಲ್ಲಿ ನಾನು ಸಹ ಇದ್ದೇನೆ.....