Sunday, July 12, 2009

ನಮ್ಮೂರಲೊಂದು ಸುತ್ತು

ಬೆಂಗಳೂರಿಂದ ನಮ್ಮೂರು,ಬಹುದೂರ
ಏನಿಲ್ಲ; ಮೂರು
ಗಂಟೆಯ ಪಯಣ.
(ಆದರೂ ಬೆಂಗಳೂರಿನ ಗಜಿ-
ಬಿಜಿಯ ಮಂದಿಗೆ,
ಹತ್ತಿರದ ಶೌಚವೂ ನಿತ್ಯ ಮರಣ)

ಬಹುದೂರವೇನಿಲ್ಲ...
ರಾಮನಗರ-
ದಲ್ಲೊಂದು ಹಿಡಿ ಕಡಲೆ ಬೆಲ್ಲ;
ಮದ್ದೂರಿನೊಂದು ಕಡೆ ಒಂದೆರಡು ವಡೆ
ನಂಚಿಕೊಳ್ಳಲು ದೆವ್ವದ್ದೋ ಭೂತದ್ದೋ ಕತೆಯ ಕಂತೆ -
ಮೆದ್ದು ಮುಗಿವುದರೊಳಗೆ
ಅದೋ ಅಲ್ಲಿ,
ಕೊಳ್ಳೆ-
ಗಾಲ!
ಕೊಳ್ಳೆ ಹೊಡೆದವರಿಲ್ಲ, ಗಾಲ ಪಿಡಿದವರಿಲ್ಲ,
ಆದರೂ ನಮ್ಮೂರು,
ಕೊಳ್ಳೆಗಾಲ.

ಬೆಂಗಳೂರಿನ ಕಾಡಿಗೆನ್ನನಟ್ಟಿದಮೇಲೆ
ಬಹಳ ಬದಲಾಗಿಹುದು
ಊರು-ಕೇರಿ

ಬಸ್ಸಿಳಿದ ಒಡನೆ
ಮುರುಕು ಸೊಂಡಿಲ ಬೀಸಿ
ಸ್ವಾಗತಿಪ ಗಣಪ ಕಾಣಲಿಲ್ಲ
ಗೋಪುರದ ಮೇಲೆ
ಝಗಝಗಿಸಿತ್ತು ಪಾಶಾಂಕುಶ ಕರ
ರಕ್ತಾಂಬರಧರ
ಲಂಬೋದರ
ಮಂಡಿತ ಸೊಂಡಿಲು ಪೂರ!

ಮೊಗದಿರುಹಿ
ಎಡಕೆ ನಡೆದರೆ ಪೇಟೆ
ಬೀದಿ
ಮಾರ್ಕೆಟ್ ಚೌಕದ ಅರವಟ್ಟಿಗೆ ಜಾಗದಲ್ಲೀಗ
ಹೊಸ ಮಸೀದಿ ಮಿನಾರ!
ಮುಂದೀಗ ಮಾರುವರು ಕೋಕ-ಕೋಲ
ಹಿಂದೆಯೇ ಶಿವನ ಗೋಪುರ ಬಸವ,
ಮತ್ತದರ ಬಾಲ.

ತರಕಾರಿ ಮಾರುಕಟ್ಟೆಯಲಿ ಸೊಪ್ಪನು ಮೆದ್ದು
ಓಡುತಿದ್ದುವು ತೊಂಡು ದನದ ಹಿಂಡು
ಮೂವತ್ತು ವರ್ಷಗಳ ಹಿಂದೆಯೂ ಇದೆ ಕೆಲಸ
ಹಿಡಿದು ನಡೆಸಿತ್ತಿದರ ಪೂರ್ವಜರ ದಂಡು

ಗುಡಿಬೀದಿಯಲಿ ನಾವು ಬಾಡಿಗೆಗಿದ್ದ ಮನೆ
ಕೆಡವಿ
ಹೊಸಮನೆ ಕಟ್ಟಿದ್ದಾರೆ;
ಮನೆಮುಂದಿನೊಗೆಯುವ ಕಲ್ಲು,
ನೆರೆಮನೆಯ ಹುಡುಗಿ
ದಿನವು ಎದೆಯಲ್ಲಿ ಮಿಡಿಸುತ್ತಿದ್ದ ಝಲ್ಲು
ಮುಗಿಲೆತ್ತರದ ತೆಂಗಿನ ಮರ
ಕೆ
ಹೆದೆಯೇರಿಸಿದ ಕಾಮ
ನ ಬಿಲ್ಲು
ಇಂದಿಲ್ಲ.

ಮುಟ್ಟು ಚಟ್ಟಾದರೂ ಹೊತ್ತಿ ಉರಿಯುತ್ತಿದ್ದ
ಹನುಮನ ಕಿತ್ತೆತ್ತಿ ತಂದು
ಹೊಸ ಗುಡಿಯಲಿಟ್ಟಿದ್ದಾರೆ
ಹಾರಿ ಹೋಗದ ಹಾಗೆ ಸರೀ ಕಟಕಟೆಯ ಕಟ್ಟಿದ್ದಾರೆ.

ಪಾಂಡವರು ಪೂಜಿಸಿದ
ಊರ ನಾರಾಯಣನ
ದೇಗುಲಕೆ,
ಹೊಸ ಬೊಂಬೆಗಳ ಜಡಿದು,
ಮೇಲೆ ಬಣ್ಣವ ಬಡಿದು ಚೊಕ್ಕ ಮಾಡಿದ್ದಾರೆ.

ಮಜ
ಬೂತಾದ ತೇರಿಗೀಗೊಂದು ಭಾರಿಯ ಶೆಡ್ಡು.
ತೇರ ತುಂಬೆಲ್ಲ ಗಿಜಿಗುಡುತಿದ್ದ
ಪಡ್ಡೆದೆವ್ವಗಳೀಗ
ಕತೆಯ ಬುಕ್ಕುಗಳಲ್ಲಿ ತಲೆಮರೆಸಿವೆ.

ಗುಡಿಬಿಟ್ಟು ಎಡಕೆ ಹೊರಳಿದರೆ,
ಕಾವೇರಿ
ಬೀದಿ;
ಪೈಸಕೊಂದು ಬಿಸ್ಕತ್ತಿನಂಗಡಿ-
ರಾಮು ಅಂಗಡಿ;
ಅಲ್ಲೀಗ ನೆಟ್ ಬ್ರೌಸಿಂಗ್ ಸೆಂಟರ್ ತಲೆಯೆತ್ತಿದೆ
ರಾಮುವೂ ಇಲ್ಲ, ರಾವಣನೂ ಇಲ್ಲ.

ಶಾಲೆಯಲ್ಲೆನ್ನೊಮ್ಮೆ ಕಚ್ಚಿ ನೆತ್ತರಿಸಿದ್ದ
ಗುಂಡಣ್ಣನಿನ್ನೂ ಇದ್ದಾನೆ, ಅವಗಿಂದು
ಹಲ್ಲು ಬಿದ್ದಿವೆ, ತಲೆಗೆ ನರೆ ಬಂದಿದೆ

ನನ್ನೊಡನೆ ಬಚ್ಚಲು ಬಿದ್ದು,
ಗೋಲಿ ಗಜ್ಜುಗವಾಡಿ,
ಚಿಣ್ಣಿ-ದಾಂಡನು ಬಡಿದು,
ದೊಣ್ಣೆಯಾಡಿದ ಸಹ-
ಧರ್ಮಚಾರಿಗಳಿಂದು
ಅಪ್ಪಂದಿರಾಗಿದ್ದಾರೆ;
ಮಕ್ಕಳು
ಹೊಂ-ವರ್ಕು ಬುಕ್ಕಿನಲ್ಲಿ ತಲೆಹುಗಿದಿವೆ.

ಸಂಜೆ ಐದಕ್ಕಿಹುದು ಬೆಂಗಳೂರಿನ ಬಸ್ಸು,
ಹೊಚ್ಚ'ಹೊಸ' ಉದಯರಂಗ, ಎಕ್ಸ್ ಪ್ರೆಸ್ಸು.
ಕಿವಿಗೆ ಹತ್ತಿಯ ಜಡಿದು ಸಣ್ಣ ನಿದ್ದೆಯ ಬಡಿದು
ಕಣ್ಣು ಬಿಡುವಷ್ಟರಲಿ ಬೆಂಗಳೂರು,
ಬಿದ್ದಿಹುದು ಕೆಲಸಗಳು ನೂರು ನೂರು!

12 comments:

Roopa Satish said...

Manjunath,
Tumbaa chennagide!!! Sannadondu journey idda haaagide nimma kavana...I was able to imagine KoLLegaala through ur lines.... :-)

Manjunatha Kollegala said...

Thanks for your comments Roopa, keep coming.

ಬಾಲು said...

nimmura varnane haagu, allada badalavane galanna chennagi barediruviri.

kaala kaledanthe nammura devvagalu, kathegalaguttave.. munde naavu kooda ade reethi annisuttade.

Santhosh Mugoor (ಸಂk) said...

2 varusha aagittu koLLegaala nODi. nimma daye nODida haagaaytu.

ascharya aMdre koLLegaalada baTTe aMgaDigaLu kaavyadallellu baarade iddaddu !!

Manjunatha Kollegala said...

ಧನ್ಯವಾದಗಳು, ಬಾಲು ಮತ್ತು ಸಂತೋಷ್

ಬಟ್ಟೆ ಅಂಗಡಿಗಳು ಕಾವ್ಯದಲ್ಲೆಲ್ಲೂ ಬರದಿದ್ದಕ್ಕೆ ಕಾರಣ ಸಿಂಪಲ್. ಬಟ್ಟೆ ಅಂಗಡಿಗಳಲ್ಲಿ ಕಾವ್ಯ'ವಸ್ತು' ಇಲ್ಲದೆ ಇದ್ದದ್ದು, ಅಂದರೆ ಬಟ್ಟೆ ಅಂಗಡಿಗಳು ನನಗೆ ಎಂದೂ facinate ಮಾಡಿರಲಿಲ್ಲ ಅನ್ನಿಸುತ್ತೆ :).

ಅಲ್ಲದೆ ಇದು ಕೇವಲ ನನ್ನ ಭಾವನಾತ್ಮಕ ಪ್ರಪಂಚ ಮತ್ತು ನಿಜ ಪ್ರಪಂಚಗಳ ನಡುವಿನ ಅಂತರ ಹಾಗು ಅದು ತರುವ ಒಂದು ರೀತಿ ನೋವು, ಇವುಗಳ ವರ್ಣನೆಯೇ ಹೊರತು ಪ್ರವಾಸಕಥನವಲ್ಲ.

Unknown said...

hmmmmm kollegala round hakkondu bandhagittu....swalpa maggada saddu, bhaktiyinda gudige baro mugdha sundariyaru...maradigudda idella martu hodra?

Manjunatha Kollegala said...

ಮಗ್ಗದ ಸದ್ದಿನ ಬಗ್ಗೆ ನೀವು ಬರೆದರೆ ಚೆನ್ನಾಗಿರುತ್ತೆ. ಇನ್ನು ಗುಡಿಗೆ ಹೋಗಿಬರುತ್ತಿದ್ದ ಮುಗ್ಧ ಸುಂದರಿಯರ ಬಗ್ಗೆ ಬರೆಯಲು ನಾನು ಸರಿಯಾದ ವ್ಯಕ್ತಿ ಅಲ್ಲವೇನೋ, ಯಾಕೆಂದರೆ ಮುಗ್ಧ ಸುಂದರಿಯರನ್ನು ನೋಡುವ ವಯಸ್ಸಿಗಾಗಲೇ ಗುಡಿಗಳ ಜೊತೆ ನನ್ನ ಸಂಬಂಧ ಬಹಳ ವಿರಳವಾಗಿತ್ತು :) ಇನ್ನು ಬೇರೆಡೆ ಆಗೀಗ ಕಣ್ಸೆಳೆಯುತ್ತಿದ್ದ ಸುಂದರಿಯರಲ್ಲೊಬ್ಬಳು representitive ಆಗಿ ಕವನದಲ್ಲಿ ಬಂದಿದ್ದಾಳೆ :)

ಮರಡಿಗುಡ್ಡ ಮರೆತಿದ್ದೇನೋ ನಿಜ, ಬಹುಶಃ ಕಾರಣವೇನೆಂದರೆ, ಮರಡಿ ಗುಡ್ಡ ಮೂವತ್ತು ವರ್ಷಗಳು ಪೂರಾ ಗುಡ್ಡವಾಗೇ ನಿಂತಿದೆ, ಕಾವ್ಯದ ವಸ್ತುವಾಗುವ "ಬದಲಾವಣೆ" ಕಂಡುಬರಲಿಲ್ಲ. ಮೊದಲೇ ಹೇಳಿದಂತೆ, ಈ ಕವನ ಬದಲಾವಣೆಯ ಬಗೆಗೆ, ಸ್ಥಳದ ಬಗೆಗಲ್ಲ. ಕೊಳ್ಳೇಗಾಲವನ್ನೇ ವಸ್ತುವಾಗಿಟ್ಟುಕೊಂಡು ಒಂದು ಕವನ ಬರೆಯೋಣ ಬಿಡಿ... ಇಲ್ಲ ಇಲ್ಲ, ನೀವು ಬರೆಯಿರಿ ಅಂತ ಹೇಳುತ್ತೇನೆ

Unknown said...

hmmmm smhow ths things always connect me with my childhood..especially maradigudda, kaveri nadi, gudi, smhow i just remain a spectator i can't jump into tht kinda excitement n rejoice once again but i cherish d memories. innu kaavya kavana.......naavu brahma nidde maaduvaga huttidavru aparoopada creatures....kavithe padya nimmantha buddhivantarige bittu bari adanna odhi chappale thatto putta jana....;) neevu bareeri naavu odtivi

ಅರುಣ ಸಿರಿಗೆರೆ said...

sookshmavaagi gamanisidare, nimma kavana badalaguttiruva halligala bagge chitraNa needta ide anta nanage annistu. ide nimma kavanada aashayavagitte athava bere enadru helta ideya?

Parisarapremi said...

abbaahh... sogasaagide kaNree... kollegaala nOdi 3 varsha aagittu..

huTTooru badalaagirOdanna nODidaaga aago bhaavane tumba chennaagide kavanadalli... :-)

Arun said...

Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net

ಚಾರ್ವಾಕ ವೆಂಕಟರಮಣ ಭಾಗವತ said...

Very nice poem