Tuesday, June 12, 2007

ದ್ರೋಣ

ಅರವತ್ತರಂಚಿನ ಅಸಹಾಯ
ಕತೆ,
ಹತಾಶೆ, ನಿಶ್ಶಕ್ತಿ,
(ರಾಜಗಾಂಭೀರ್ಯ?)
ಏನೆಲ್ಲ ಮೆರೆದಿತ್ತು ಆ ಮಂದ
ಗಮನದಲ್ಲಿ!

ಮಣಗಟ್ಟಲೆ ಬಂಗಾರದಂಬಾರಿ
ಮುದಿಯೊಡಲ ಜಗ್ಗಿದರೂನೂ
ಜಗ್ಗದೆಯೆ ನಡೆದಿದ್ದೆ,
ಹೊಣೆಹೊತ್ತ ಮನೆಯ ಹಿರಿ ಜೀವದಂತೆ.
ಭೇರಿ, ತುತ್ತೂರಿ, ನಗಾರಿ,
ಪಟಾಸು, ಕಾಡತೂಸುಗಳ
ಜನಾರಣ್ಯ ನಿರ್ಘೋಷ
ಕೂ
ಎದೆಗೆಡದೆ ಸಾಗಿದ್ದೆ,
ಧೀರ, ಪ್ರಶಾಂತ, ಸ್ಥಿತಪ್ರಜ್ಞ.

ಶಸ್ತ್ರ ಸನ್ಯಾಸ ನೀನೇನೂ ತಳೆದಿರಲಿಲ್ಲ
(ಯುದ್ಧ ಮೊದಲೇ ಇಲ್ಲ!);
ಆದರೂ ತನ್ನ ವಿದ್ಯುತ್ಖಡ್ಗವನು ಹಿರಿದು ಕಾದಿದ್ದನಲ್ಲ
ಅವಿವೇಕಿ ದುಷ್ಟ
ದ್ಯುಮ್ನ;
ಹಾರಿಸಿಯೇ ಬಿಟ್ಟನಲ್ಲ, ನಿಮಿಷಾರ್ಧದಲಿ ಪ್ರಾಣ.

ದ್ರೋಣ,
ನಾವೋ, ಹಿಂದುಮುಂದರಿವಿರದ;
ಚಾರ-ಅಪಚಾರ, ಆಯ-ಅಪಾಯಗಳ ತಿಳಿವಿರದ-
ನಾಗರಿಕ ಜೀವಿಗಳು.
ಮೆರೆಸುವೆವು ಮುಂದೆಯೂ
ನಮ್ಮೆಲ್ಲ ಸಾಧನೆಯ, ನಿಮ್ಮೆಲ್ಲ ವೇದನೆಯ
ಜಂಬೂ ಸವಾರಿ.
ಚಿನ್ನದಂಬಾರಿ
ಹೊತ್ತು ಸಾಗಲಿದೆ ಮತ್ತೊಂದು ಗಜ ಗಮನ.
ಕ್ಷಮಿಸಿಬಿಡು ಅಜ್ಜ,
ನಿನಗಿದೋ ಕೊನೆಯ ನಮನ.

- ೨೫/೧೨/೧೯೯೭

[ಈ ಸುಮಾರಿನಲ್ಲಿ ವಿದ್ಯುದಾಘಾತಕ್ಕೆ ಸಿಕ್ಕೆ ಸತ್ತ ಮೈಸೂರು ದಸರಾ ಮೆರವಣಿಗೆಯ ಆನೆ 'ದ್ರೋಣ'ನಿಗೊಂದು ಚರಮ ಗೀತೆ]

2 comments:

ಜಯಂತ ಬಾಬು said...

ಮೆರೆಸುವೆವು ಮುಂದೆಯೂ
ನಮ್ಮೆಲ್ಲ ಸಾಧನೆಯ, ನಿಮ್ಮೆಲ್ಲ ವೇದನೆಯ
ಜಂಬೂ ಸವಾರಿ.

ಈ ಸಾಲುಗಳು ಅಧ್ಬುತ..ದ್ರೋಣನ ಇಂದು ನೆನೆವರೆಷ್ಟೋ ಕಾಣೆ...ಈ ಚರಮ ಗೀತೆ( ಗೊತ್ತಿಲ್ಲ ಸರಿಯಾದ ಬಳಕೆಯೊ..)ದ್ರೋಣನಂತಹ ಹಲವು ಮುಗ್ದ ಜೀವಿಗಳ ನಮ್ಮ "ಸಾಧನೆ"ಯ ಹೊರೆಯಿಂದ ತಪ್ಪಿಸುವಲ್ಲಿ ನೆರವಾಗಲೆಂಬ ಆಶಯ..

Manjunatha Kollegala said...

Thanks Jayant, on behalf of dRONa