ಹಾಗಿದ್ದರೆ
ಕುಶೀಲವರಂತಹ ಇಬ್ಬರು ಮುದ್ದು ಮಕ್ಕಳನ್ನು ಹೆತ್ತುದಕ್ಕೋ? ಅದಕ್ಕೂ ಇರಲಾರದು. ಈ
ದೇಶದಲ್ಲಿ ಮಕ್ಕಳ ಸಂಖ್ಯೆಯಂತೂ ರಾಮಾಯಣದ ಕವಿಗಳ ಸಾವಿರಪಟ್ಟು ಹೆಚ್ಚು. ಮಕ್ಕಳ
ಹೆತ್ತುದಕ್ಕೆ ಪ್ರಶಸ್ತಿ ಕೊಡಲು ಇದೇನು ಆಸ್ಟ್ರೇಲಿಯಾ ಕೆಟ್ಟುಹೋಯಿತೇ?
ಹಾಗಿದ್ದರೆ ಮತ್ತೇತಕ್ಕೆ ಈ ಪ್ರಶಸ್ತಿ? ಊಹಾಪೋಹಗಳನ್ನು ಪಕ್ಕಕ್ಕಿಡಿ - ಕೆಳಗಿನ ನ್ಯೂಸ್ ಐಟಮ್ ನೋಡಿ - ಈ ಪ್ರಶಸ್ತಿಯನ್ನು ಕೊಡಮಾಡಿದ್ದು "ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿ"ದ್ದಕ್ಕಾಗಿ - ರಾಮಾಯಣಕ್ಕಾಗಿ ಅಲ್ಲ - ವಾಲ್ಮೀಕಿಯೆಂದರೆ ರಾಮಾಯಣವೊಂದನ್ನೇ ಕಾಣುವುದು ನಿಮ್ಮದೇ ದೃಷ್ಟಿದೋಷವೆನ್ನದೇ ವಿಧಿಯಿಲ್ಲ. ಅದಿರಲಿ, ಸ್ವತಃ ರಾಮನಿಂದ ಶೂದ್ರತಪಸ್ವಿಯ ಕೊಲೆ ಮಾಡಿಸಿದ, ಅಸಹಾಯಕ ಹೆಣ್ಣುಮಗಳಾದ ಸೀತೆಯನ್ನು ಗರ್ಭಿಣಿಯೆಂಬುದನ್ನೂ ನೋಡದೇ ಕಾಡಿಗಟ್ಟಿಸಿದ, ದಿಟ್ಟತೆಯಿಂದ 'ಬ್ರಾಹ್ಮಣ್ಯ'ವನ್ನು ತೊರೆದು ಪ್ರಗತಿಪರತೆಯ ದೀಕ್ಷೆತೊಟ್ಟ ರಾವಣೇಶ್ವರನನ್ನೂ ಕೊಲ್ಲಿಸಿದ, ಕಬಂಧ ಮಾರೀಚ ಸುಬಾಹುಗಳೇ ಮೊದಲಾದ ಈ ನೆಲದ ಜನಪ್ರಿಯ ದ್ರಾವಿಡರಾಜರನ್ನು ಬರ್ಬರವಾಗಿ ಕೊಲ್ಲಿಸಿದ, ಪ್ರೇಮಭಿಕ್ಷೆ ಬೇಡಿ ಬಂದ ಶೂರ್ಪಣಖಿಯ ಕಿವಿಮೂಗು ಕೊಯ್ಸಿದ ವಾಲ್ಮೀಕಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದು ಯಾವಾಗ ಎಂದು ನೀವು ಕೇಳಿದರೆ, ಅದು ನಿಮ್ಮ ಅಜ್ಞಾನದ ಪ್ರಶ್ನೆ, ಏಕೆಂದರೆ ಅದು ಕೇವಲ ಕಾವ್ಯ, ಕಟ್ಟುಕತೆ. ಗೊತ್ತಿಲ್ಲವೇ? "ಸೇತುಬಂಧ ಮಾಡಿಸಿದ ರಾಮ ಯಾವ ಯೂನಿವರ್ಸಿಟಿಯಿಂದ ಎಂಜಿನಿಯರಿಂಗ್ ಡಿಗ್ರೀ ಪಡೆದ" ಎನ್ನುವ ದಿವಂಗತ ರಾಜಕಾರಣಿಯೊಬ್ಬರ ಪ್ರಶ್ನೆಗೆ ಪುರಾವೆಯೊದಗಿಸಲು ಇನ್ನೂ ನಮ್ಮಿಂದ ಆಗಿಲ್ಲ. ರಾವಣನಿಗೆ ಹತ್ತು ತಲೆಯಿತ್ತೆಂಬುದೂ ನಂಬಲಾಗದ ವಿಷಯವೇ, ಒಂದು ತಲೆಯೇ ಅಚ್ಚರಿಯ ವಿಷಯವಾದ ಈ ಕಾಲದಲ್ಲಿ.
ಆದ್ದರಿಂದ ರಾಮಾಯಣವು ಸತ್ಯಕತೆಯೆನ್ನುವ ಮೌಢ್ಯಕ್ಕೆ ಬೀಳದಿರಿ (ಮೌಢ್ಯವಿರೋಧಿ ಕಾನೂನು ಜಾರಿಯಲ್ಲಿದೆಯೆಂಬುದನ್ನು ಮರೆಯದಿರಿ). ರಾಮನೆಂಬ ಆರ್ಯರಾಜನ ದುಷ್ಟಗುಣವನ್ನು ಚಿತ್ರಿಸಲು ವಾಲ್ಮೀಕಿ ರಚಿಸಿದ ಕಟ್ಟುಕತೆಯಿದು (ಅಲ್ಲದೇ ಸುಮಾರು ಭಾಗಗಳನ್ನು ಆಮೇಲೆ ಬ್ರಾಮಣರು ಸೇರಿಸಿದರೆಂಬ ವಾದವೂ ಇದೆ). ಆದ್ದರಿಂದ ಇವೆಲ್ಲಕ್ಕೂ ವಾಲ್ಮೀಕಿಯ ಬೆಂಬಲವಿತ್ತೆಂದು ಭಾವಿಸದಿರಿ. ನಿಜವಾದ ಕತೆಯಲ್ಲಿ ಆಮೇಲೆ ನೋಡಿ, ಅದೇ ವಾಲ್ಮೀಕಿ ಅಸಹಾಯಕ ಹೆಣ್ಣುಮಗಳಾದ ಸೀತೆಯನ್ನು ಆಶ್ರಮದಲ್ಲಿರಿಸಿಕೊಂಡು ತಂದೆಯಂತೆ ಪೊರೆಯುತ್ತಾನೆ; ಆಕೆಯ ಮಕ್ಕಳನ್ನು ತಾತನಂತೆ ಸಾಕುತ್ತಾನೆ; ಅವರಿಗೆ ತಾನು ರಚಿಸಿದ ರಾಮಕಥೆಯನ್ನು ಕಲಿಸಿ, ರಾಮನ ಬಳಿಗೇ ಕಳಿಸಿ ಅವನಿಗೆ ಬುದ್ಧಿ ಕಲಿಸುತ್ತಾನೆ. ಹೀಗೆ ವಾಲ್ಮೀಕಿ ಕೇವಲ ತನ್ನ ಜನಾಂಗಕ್ಕಲ್ಲ ಇಡೀ ತುಳಿತಕ್ಕೊಳಗಾದ ಎಲ್ಲರ ಸೆಕ್ಯುಲರ್ ಪ್ರತಿನಿಧಿಯಾಗಿ ನಿಲ್ಲುತ್ತಾನೆ.
ಅದೇನೋ ಸರಿ, ಆದರೆ ವಾಲ್ಮೀಕಿ ಪ್ರಶಸ್ತಿ ಪಡೆಯಲು ದೇವೇಗೌಡರು ವಾಲ್ಮೀಕಿ ಜನಾಂಗಕ್ಕಾದರೂ ಏನು ಮಾಡಿದರು ಎಂದು ಕೇಳಬೇಡಿ. ಅವರೂ ಬಹಳ ಸೆಕ್ಯುಲರ್ ಆಗಿ ಹಿಂದುಳಿದವರನ್ನು ಮುಂದೆ ತರಲು, ಕೆಳಗೆ ಬಿದ್ದವರನ್ನು ಮೇಲೆತ್ತಲು ಶ್ರಮಿಸಿದ್ದಾರೆ. ಏನೂ ಏನೇನೂ ಏನೇನೇನೂ ಇಲ್ಲದವರೆಷ್ಟೋ ಜನ ಅವರ ಕೃಪಾಕಟಾಕ್ಷದಿಂದ ಇಂದು ಲಕ್ಷ್ಮೀಪುತ್ರರಾಗಿ ಸುಖಜೀವನ ನಡೆಸುತ್ತಿದ್ದಾರೆ. ಎಂದ ಮೇಲೆ ಈ ಪ್ರಶಸ್ತಿಗೆ ಅವರಿಗಿಂತ ಹೆಚ್ಚಿನವರಾರು ಯೋಗ್ಯರಿದ್ದಾರು? ಆದ್ದರಿಂದ ಇದು ಖಂಡಿತಾ ಸರಿಯಾದ ಆಯ್ಕೆ ಎಂದು ನನ್ನ ಅನಿಸಿಕೆ.
ಅಂದ ಹಾಗೆ ವಾಲ್ಮೀಕಿಯ ಜನ್ಮದಿನವನ್ನು ಅದಾವ ಇತಿಹಾಸಕಾರರು ಅದು ಹೇಗೆ ಲೆಕ್ಕ ಹಾಕಿದರೋ ತಿಳಿಯದು - ಹೇಗಿದ್ದರೇನು? ಪುಣ್ಯಸ್ಮರಣೆಗೊಂದು ನೆಪ ಸಾಕಲ್ಲವೇ? ಈ ಜಗತ್ತಿಗೆ ರಾಮಾಯಣವೆಂಬ ಬಹುದೊಡ್ಡ ಉಡುಗೊರೆಯನ್ನಿತ್ತ ಮಹರ್ಷಿ ವಾಲ್ಮೀಕಿಯ ದಿವ್ಯಚೇತನ ನಮ್ಮೆಲ್ಲರನ್ನೂ ಪೊರೆಯಲಿ, "ಸೀತಾಯಾಶ್ಚರಿತಂ ಮಹತ್" ಆದ ರಾಮಾಯಣಕಾವ್ಯವು ನಮ್ಮೆಲ್ಲರ ಹೃದಯಗಳನ್ನು ಹದಗೊಳಿಸಲಿ, ಮೆದುಗೊಳಿಸಲಿ, ನಮ್ಮ ಭಾವದಾರಿದ್ರ್ಯವನ್ನು ಹಿಂಗಿಸಲಿ, "ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ" ಎಂದು ನವನಿಷಾದರನ್ನು ಶಪಿಸಬೇಕಾದ ದೌರ್ಭಾಗ್ಯವು ಶೀಘ್ರವಾಗಿ ತಪ್ಪಲಿ ಎಂದು ಈ ಸಂದರ್ಭದಲ್ಲಿ ಆಶಿಸೋಣ.
ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್
(ಈ ಲೇಖನವನ್ನು ಫೇಸ್ಬುಕ್ಕಿನಲ್ಲಿಯೂ ನೋಡಬಹುದು)
3 comments:
ಮೊದಲ ಮಾತು, ಈವರೆಗೆ ಯಾರ್ಯಾರಿಗೆ ಪ್ರಶಸ್ತಿ ಕೊಡಮಾಡಲಾಗಿದೆ ಎಂಬ ವಿಚಾರವು ವಾಲ್ಮಿಕಿ ಮಹಾಮುನಿಗಳ ಗಮನಕ್ಕೆ ಬಂದಿಲ್ಲವಂತೆ. ಅದೊಂದೇ ಪುಣ್ಯ ನೋಡಿ...😂😂
ರಾಮಾಯಣವನ್ನು ಬೆಂಬಲಿಸುವ ಮತ್ತು ವಿರೋಧಿಸುವ ಎರಡೂ ಪಂಗಡಗಳಿಗೂ ಪ್ರಶಸ್ತಿ ಸಲ್ಲಬೇಕು. ಹಾಲಿವುಡ್ನಲ್ಲಿ ಉತ್ತಮ ಚಿತ್ರಗಳಿಗೆ ಆಸ್ಕರ್ ಕೊಡಮಾಡುವಂತೆ, ಕೆಟ್ಟ ಚಿತ್ರಗಳಿಗೂ golden raspberry awards ಕೊಡುತ್ತಾರಲ್ಲ ಹಾಗೆ... 😂
https://en.m.wikipedia.org/wiki/Golden_Raspberry_Awards
ಒಟ್ಟಾರೆ ಹಲವು ಮಾಹಿತಿಗಳನು ಹೊತ್ತ ಈ ಬರಹವು ನನಗಂತೂ ಬಲು ಮುದ ಕೊಟ್ಟಿತು. ಅನಂತ ಧನ್ಯವಾದಗಳು.
||ವಂದೇ ವಾಲ್ಮೀಕಿಕೋಕಿಲಮ್||
ತ್ರೇತಾಯುಗಕ್ಕೆ ಒಮ್ಮೆ ಕಾಲಿಟ್ಟು ಬಂದಂತೆ ಆಯಿತು.. ಎಲ್ಲಾ ಕೋನಗಳನ್ನು.. ಎಲ್ಲಾ ಮೂಲೆಗಳನ್ನು ಮುಟ್ಟಿ ಬಂದಿದೆ ನಿಮ್ಮ ಬರಹ.. ಸೊಗಸಾಗಿದೆ ಗುರುಗಳೇ
ಅಹಾ! ಹೀಗೋ ವಿಷಯ!!
Post a Comment