Thursday, November 29, 2012

ಅವಧಾನಕಲೆ

ಇದೇ ತಿಂಗಳ ೩೦ರಿಂದ ಮೂರುದಿನ ಬೆಂಗಳೂರಿನಲ್ಲಿ ತುಂಬುಗನ್ನಡದ ಶತಾವಧಾನ ಕಾರ್ಯಕ್ರಮ ಜರುಗಲಿದೆ.  ಜೊತೆಗೆ ಅವಧಾನವೆಂದರೆ ಏನೆಂಬ ಕುತೂಹಲದ ಪ್ರಶ್ನೆ ಅನೇಕ ಆಸಕ್ತ ಮಿತ್ರರಿಂದ ಬಂದಿದೆ.  ಒಂದು ಕಾಲದಲ್ಲಿ ತನ್ನ ಸಕಲ ವೈಭವದೊಡನೆ ವಿಜೃಂಭಿಸಿ ಈಗ ಹಿನ್ನೆಲೆಗೆ ಸರಿದಿರುವ ಈ ಅಭಿಜಾತ ಕಲೆಯ ಕಿರುಪರಿಚಯ ಮಾಡಿಕೊಡುವುದು, ತನ್ಮೂಲಕ ಕಾರ್ಯಕ್ರಮದ ಆಸ್ವಾದಕ್ಕೆ ಅನುವು ಮಾಡಿಕೊಡುವುದು ಈ ಲೇಖನದ ಉದ್ದೇಶ.

ಅವಧಾನವೆಂದರೆ ಸರಿಸುಮಾರು attention ಎಂಬ ಅರ್ಥ.  ಚಿತ್ತೈಕಾಗ್ರ್ಯಂ ಅವಧಾನಂ ಎಂಬ ಮಾತಿದೆ.  ಅನೇಕ ಗೊಂದಲ/ಗಲಿಬಿಲಿಗಳ ನಡುವೆಯೂ ಚಿತ್ತವನ್ನು ಏಕಾಗ್ರಗೊಳಿಸಿ ಕೆಲಸವೊಂದನ್ನು ನೆರವೇರಿಸುವುದೇ ಅವಧಾನದ ಮೂಲ ತತ್ತ್ವ.

ಸಾಮಾನ್ಯವಾಗಿ ಸವಾಲ್-ಜವಾಬಿನ ರೂಪದಲ್ಲಿರುವ ಅವಧಾನ ಕಾರ್ಯಕ್ರಮದ ಕೇಂದ್ರಬಿಂದು ಅವಧಾನಿಯೇ.  ಅವನನ್ನು ಸುತ್ತುವರಿದು ಪ್ರಶ್ನಿಸುವವರು ಅನೇಕ ಜನ.  ಇವರನ್ನು ಪೃಚ್ಛಕ (ಪ್ರಶ್ನಿಸುವವ)ರೆನ್ನುತ್ತಾರೆ.  ವೇದಾವಧಾನ, ಗಣಿತಾವಧಾನ, ಸಂಗೀತಾವಧಾನ, ಸಾಹಿತ್ಯಾವಧಾನ, ಹೀಗೆ ಒಂದು ಸಾಂಸ್ಕೃತಿಕ ಕಲೆಯಾಗಿ ಅವಧಾನಕಲೆ ಬಹು ಹಿಂದಿನಿಂದ ಚಾಲ್ತಿಯಲ್ಲಿದೆ.  ಅವಧಾನ ಕಾರ್ಯಕ್ರಮವೊಂದು ಇವೆಲ್ಲದರ ಮಿಶ್ರಣವೂ ಆಗಿರಬಹುದು.  ತೆಲುಗಿನಲ್ಲಿ ಇದು ಇಂದಿಗೂ ಬಹು ಜನಪ್ರಿಯ ಸಾಹಿತ್ಯ ಕ್ರೀಡೆಯಾಗಿ ಉಳಿದಿದೆ.  ಆದರೆ ಇದರ ಉಗಮ ಕನ್ನಡದ್ದು ಎಂದು ಹೇಳಲಾಗುತ್ತದೆ.

ಅವಧಾನದಲ್ಲಿ ಭಾಗವಹಿಸುವ ಪೃಚ್ಛಕರ ಸಂಖ್ಯೆಯ ಆಧಾರದ ಮೇಲೆ ಅವಧಾನವು ಗುರುತಿಸಲ್ಪಡುತ್ತದೆ.  ಅದು ಅಷ್ಟಾವಧಾನ ಅಥವ ಶತಾವಧಾನವೇ ಆಗಬೇಕೆಂದಿಲ್ಲ.  ಶೋಡಷಾವಧಾನ (ಹದಿನಾರು ಪೃಚ್ಛಕರು) ಅಷ್ಟಾದಶಾವಧಾನ (ಹದಿನೆಂಟು), ಶತಾವಧಾನ, ಸಹಸ್ರಾವಧಾನ ಅಷ್ಟೇಕೆ ಲಕ್ಷಾವಧಾನ (ಲಕ್ಷ ಜನ ಪೃಚ್ಛಕರು) ಸಹಾ ಚಾಲ್ತಿಯಲ್ಲಿತ್ತೆಂದು ಉಲ್ಲೇಖಗಳು ತಿಳಿಸುತ್ತವೆ.  ಅದರಲ್ಲಿ ಉತ್ಪ್ರೇಕ್ಷೆಯೇನೇ ಇರಲಿ ಶತಾವಧಾನವು ನಾವು ಕಂಡರಿತ ಅತಿ ದೊಡ್ಡ ಅವಧಾನ. 

ಚಿತ್ರಸಾಹಿತಿಯಾಗಿ ಖ್ಯಾತಿ ಪಡೆದ ಬೆಳ್ಳಾವೆ ನರಹರಿಶಾಸ್ತ್ರಿಗಳು ಓರ್ವ ಖ್ಯಾತ ಅವಧಾನಿಯೂ ಆಗಿದ್ದರು.  ಕನ್ನಡದಲ್ಲಿ ಮರೆಯಾಗಿದ್ದ ಅವಧಾನ ಕಲೆಯನ್ನು ಪುನರುತ್ಥಾನಗೊಳಿಸಿದ ಕೀರ್ತಿ ಶಾಸ್ತ್ರಿಗಳದು.  ಹಾಗೆಯೇ ನಮ್ಮ ದಿವಂಗತ ಪ್ರಧಾನಿ ಪಿ ವಿ ನರಸಿಂಹರಾವ್ ಸಹ ಅವಧಾನ ಕಾರ್ಯಕ್ರಮಗಳನ್ನು ನೀಡುತ್ತಿದ್ದರೆಂದು ಕೇಳಿದ್ದೇನೆ.  ಒಂದು ಸಾವಿರದ ಹತ್ತಿರ ಹತ್ತಿರ ಅವಧಾನಕಾರ್ಯಕ್ರಮಗಳನ್ನು ನೆಡೆಸಿದ ಬಹುಶ್ರುತ ವಿದ್ವಾಂಸ ರಾ. ಗಣೇಶರು ಇವತ್ತು ನಮ್ಮ ನಡುವಿರುವ ಏಕೈಕ ಶತಾವಧಾನಿ.

ಇವತ್ತು ಚಾಲ್ತಿಯಲ್ಲಿರುವ ಸಾಮಾನ್ಯ ಅಷ್ಟಾವಧಾನದಲ್ಲಿ ಪೃಚ್ಛಕರ ಕ್ರಮ ಹೀಗೆ.  ಎಂಟು ಜನ ಪೃಚ್ಛಕರಿರುತ್ತಾರೆ.  ಅವರಲ್ಲಿ ನಾಲ್ಕು ಜನ ಅವಧಾನಿಯ ನೆನಪಿನ ಶಕ್ತಿಯನ್ನು ಪರೀಕ್ಷಿಸುವವರಾದರೆ ಇಬ್ಬರು ಅವಧಾನಿಯ ಕಾವ್ಯ ಪ್ರೌಢಿಮೆ, ಓದಿನ ಉದ್ದಗಲಗಳನ್ನು ಪರೀಕ್ಷಿಸುವವರಾಗಿರುತ್ತಾರೆ.  ಇನ್ನಿಬ್ಬರು ಪದೇಪದೇ ಅವಧಾನಿಗೆ ತಡೆಯನ್ನೊಡ್ಡುವುದರ ಮೂಲಕ ಅವನ ಏಕಾಗ್ರತೆಯನ್ನು ಅಗ್ನಿಪರೀಕ್ಷೆಗೊಳಡಿಸುತ್ತಾರೆ.

ಅವಧಾನಿಯು ಪ್ರತಿಯೊಬ್ಬ ಪೃಚ್ಛಕನ ಪ್ರಶ್ನೆಯನ್ನೂ ಸರದಿಯ ಮೇಲೆ ತೆಗೆದುಕೊಂಡು ಉತ್ತರಿಸುತ್ತಾ ಮುಂದುವರೆಯುತ್ತಾನೆ.  ಮೊದಲ ಆರೂ ಜನರಿಗೆ ಉತ್ತರಿಸಿದ ನಂತರ ಎರಡನೆಯ ಸುತ್ತು.  ಹೀಗೆ ಸಾಮಾನ್ಯವಾಗಿ ನಾಲ್ಕು ಸುತ್ತು ನಡೆಯುತ್ತದೆ.  ಕೊನೆಯ ಇಬ್ಬರು ಪೃಚ್ಛಕರು ಯಾವಾಗಲೆಂದರೆ ಆಗ ಮಧ್ಯಪ್ರವೇಶಿಸಬಹುದು. 

ಮೊದಲ ನಾಲ್ಕು ಪೃಚ್ಛಕರೆಂದರೆ:

ನಿಷೇಧಾಕ್ಷರ: ಈತ ಅವಧಾನಿಗೆ ಒಂದು ವಸ್ತುವಿನ ಮೇಲೆ ಒಂದು ಛಂದಸ್ಸಿನಲ್ಲಿ ಪದ್ಯವೊಂದನ್ನು ರಚಿಸಲು ಹೇಳುತ್ತಾನೆ.  ಆದರೆ ಅವಧಾನಿಯು ಹೇಳಿದ ಪ್ರತಿಯೊಂದು ಅಕ್ಷರಕ್ಕೂ, ಮುಂದಿನ ಅಕ್ಷರವನ್ನು ಊಹಿಸುತ್ತಾ ಅದನ್ನು ನಿಷೇಧಿಸುತ್ತಾ ಹೋಗುತ್ತಾನೆ.  ಅವಧಾನಿಯು ಈ ನಿಷೇಧವನ್ನು ಪರಿಗಣಿಸಿ ಬೇರೊಂದು ಅಕ್ಷರವನ್ನು ಬಳಸುತ್ತಾ ಸಾಗಬೇಕು.  ಉದಾಹರಣೆಗೆ ಗಣಪನ ಮೇಲೆ ಪದ್ಯವೊಂದನ್ನು ರಚಿಸಬೇಕಾಗಿದೆಯೆನ್ನೋಣ.  ಅವಧಾನಿಯು ಗಣಪತಿ ಎಂದು ಹೇಳಬೇಕೆಂದುಕೊಂಡು ಗ ಎನ್ನುತ್ತಾನೆ.  ಆದರೆ ಇದನ್ನು ಊಹಿಸುವ ಪೃಚ್ಛಕ ಣಕಾರವನ್ನು ನಿಷೇಧಿಸಿಬಿಡುತ್ತಾನೆ.   ಈಗ ಗಣಪತಿ ಎನ್ನುವಹಾಗಿಲ್ಲ.  ಬದಲಿಗೆ ಗಜ ಎಂದು ಹೇಳುತ್ತಾನೆ ಅವಧಾನಿ.  ಇದು ಗಜಮುಖ ಎಂದಾಗಬಹುದೆಂದು ಊಹಿಸಿದ ಪೃಚ್ಛಕ ಮಕಾರವನ್ನು ನಿಷೇಧಿಸುತ್ತಾನೆ.  ಆಗ ಅವಧಾನಿ ಗಜವದನ ಎಂಬುದನ್ನು ಮನಸ್ಸಿನಲ್ಲಿಟ್ಟು ವ ಎಂದು ಹೇಳಿದರೆ ಇದನ್ನೂ ಊಹಿಸಿದ ಪೃಚ್ಛಕ ದಕಾರವನ್ನು ನಿಷೇಧಿಸುತ್ತಾನೆ.  ಆದರೆ ಅವಧಾನಿಯ ಶಬ್ದಸಂಪತ್ತು ದೊಡ್ಡದು.  ಆತ ಗಜವದನ ಎಂಬುದರ ಬದಲಿಗೆ ಗಜವಕ್ತ್ರ ಎಂದು ಹೇಳಿ ಪದವನ್ನು ಪೂರ್ಣಗೊಳಿಸುತ್ತಾನೆ.  ಹೀಗೆ ಪೃಚ್ಛಕನ ತಡೆಯನ್ನೂ ಮೀರಿ ಗಣಪತಿ ಗಜವಕ್ತ್ರನಾಗುತ್ತಾನೆ.  ಆದರೂ ಉದ್ದಕ್ಕೂ ಆತನು ಛಂದೋನಿಯಮಗಳನ್ನು ಮರೆಯುವಂತಿಲ್ಲ!  ಹೀಗೆ ಪದ್ಯದ ಒಂದು ಸಾಲನ್ನು ಪೂರೈಸಿದ ಅವಧಾನಿ ಮುಂದಿನ ಪೃಚ್ಛಕನೆಡೆ ತಿರುಗುತ್ತಾನೆ.

ಸಮಸ್ಯಾಪೂರಣ:  ಈತ ಅವಧಾನಿಗೆ ಸಮಸ್ಯೆಯಂಥಾ ಸಾಲೊಂದನ್ನು ನೀಡುತ್ತಾನೆ.  ಇದು ನಾಲ್ಕು/ಆರು ಸಾಲಿನ ಪದ್ಯವೊಂದರ ಕೊನೆಯ ಸಾಲಾಗಿರುತ್ತದೆ, ಮತ್ತು ಕೇಳಲು ಅರ್ಥಹೀನವೋ ಅಸಮಂಜಸವೋ ಅಶ್ಲೀಲವೋ ಆಗಿರಬಹುದು.  ಅವಧಾನಿಯ ಕೆಲಸವೆಂದರೆ ಪದ್ಯದ ಉಳಿದ ಸಾಲುಗಳನ್ನು ಅದೇ ಛಂದಸ್ಸಿನಲ್ಲಿ ರಚಿಸಿ, ಆ ಮೂಲಕ ಕೊನೆಯ ಸಾಲಿಗೊಂದು ಸಮಂಜಸವಾದ ಅರ್ಥ ಬರುವಂತೆ ಮಾಡುವುದು.  ಉದಾಹರಣೆಗೆ ಸಮಸ್ಯೆಯೊಂದರ ಸಾಲು ಹೀಗಿದೆಯೆನ್ನಿ "ತಂದೆಯನೇ ಕೊಂದುತಿಂಬ ಸುತನತಿ ರಮ್ಯಂ"  ಇದೊಂದು ಕಂದಪದ್ಯದ ಕೊನೆಯ ಸಾಲು.  ಅರೇ! ಇದೊಳ್ಳೇ ತಮಾಷೆಯಾಯಿತಲ್ಲ!  ಮಗ ಎಲ್ಲಾದರೂ ತಂದೆಯನ್ನು ಕೊಲ್ಲುವುದೆಂದರೇನು, ಕೊಂದು ತಿನ್ನುವುದೇನು, ಹಾಗೆ ಕೊಂದು ತಿನ್ನುವ ಮಗ ರಮ್ಯವಾಗಿ ಕಾಣುವುದಾದರೂ ಹೇಗೆ?  ಅವಧಾನಿಯ ಚಾತುರ್ಯವಿರುವುದು, ಈ ಸಾಲಿನಲ್ಲಿ ಕಾಣುವ ಅನರ್ಥವನ್ನು ತೊಡೆದು ಹಾಕಿ ಅದಕ್ಕೊಂದು ಒಪ್ಪವಾದ ಅರ್ಥವನ್ನು ಕೊಡುವುದು.  ಇದಕ್ಕೆ ನಾನು ನೀಡುವ ಪರಿಹಾರ ಹೀಗೆ:

ಕಂದಂ ಕೊಂಡಾಟದೊಳಾ
ತಂದೆಯ ಮುಂದಲೆಯ ಜಗ್ಗಿ ಗರ್ಜಿಸುತಿಪ್ಪಂ
ತಿಂದಪೆನಿದೊ ನಾಂ ಪುಲಿಯೆನೆ
ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ

ಮಗು ತಂದೆಯೊಡನೆ ಆಟವಾಡುತ್ತಿದೆ.  "ನಾನು ಹುಲಿ, ನಿನ್ನ ತಿಂದುಬಿಡ್ತೀನಿ" ಎಂದು ಗರ್ಜಿಸುತ್ತಾ ತಂದೆಯನ್ನು ಜಗ್ಗಾಡುತ್ತಿದೆ.  ಇದು ಎಷ್ಟು ರಮ್ಯವಾದ ದೃಶ್ಯವಲ್ಲವೇ?  ಸಮಸ್ಯೆಯ ಸಾಲಿನಲ್ಲಿನ ಅನರ್ಥ ಹೀಗೆ ನೇರ್ಪಟ್ಟಿತು.  ಇದು ಪೃಚ್ಛಕನು ಸಿದ್ಧಪಡಿಸಿಟ್ಟುಕೊಂಡಿರುವ ಪರಿಹಾರ.  ಹೀಗೇ ಸ್ಥಳದಲ್ಲೇ ಅವಧಾನಿಯೂ ತನ್ನ ಪರಿಹಾರವನ್ನು ಕೊಡುತ್ತಾನೆ.  ಅದು ಬೇರೆಯೇ ಇರಬಹುದು.

ಶತಾವಧಾನಿ ಆರ್ ಗಣೇಶರ ಮೈಸೂರಿನ ಅಷ್ಟಾವಧಾನವೊಂದರಲ್ಲಿ ನಾನು ಕೊಟ್ಟ ಸಮಸ್ಯೆಯ ಸಾಲು ಹೀಗಿತ್ತು.  "ನಾನೀನೋನೀನೆನಾನೋ ನೆನೆನೆನೆನೆನೆ ನಾನೇನುನೀನೇನದೇನೋ".  ಸ್ರಗ್ಧರಾವೃತ್ತದಲ್ಲಿರುವ ಈ ಸಾಲು ಕೇಳುವುದಕ್ಕೆ ಅರ್ಥಹೀನವಾಗಿದೆ.  ಇದಕ್ಕೆ ಗಣೇಶರು ಕೊಟ್ಟ ಸಮಾಧಾನ ಹೀಗೆ:

ದೀನಂ ಸಂಗ್ರಾಮರಂಗಸ್ಥಿತ ನನರದೊ ಕಾಣ್ ಜಾರೆ ಕೋದಂಡ ಕಾಂಡಂ|
ಮಾನಾಮಾನಾವಲೀಢಂ ಮಥಿಸೆ ಮನದೊಳೇ ಕೃಷ್ಣನೊಲ್ದೀಯೆ ಗೀತಾ|
ಯಾನಂ ಧೈರ್ಯ ಪ್ರವಾಸಕ್ಕೆನೆ ಭವರಣದೊಳ್ ಚಿಂತಿಸುತ್ತೆಂದನಿನ್ನೇನ್|
ನಾನೀನೋ ನೀನೆನಾನೋ ನೆನೆನೆನೆನೆನೆ ನಾನೇನೊ ನೀನೇನದೇನೋ|

(ಸಂಗ್ರಾಮರಂಗದಲ್ಲಿ ಮುಂದಿನ ದಾರಿ ಕಾಣದೇ ಬಿಲ್ಲುಬಾಣಗಳನ್ನು ಕೆಳಗೆಸೆದು ಕೂತ ಪಾರ್ಥನಿಗೆ ಕೃಷ್ಣನು ಒಲಿದಿತ್ತ ಗೀತೆಯ ಸಾರ ಇದು "ನಾನೀನೋ, ನೀನೆ ನಾನೋ, ಯೋಚಿಸು... ನಾನೇನು, ನೀನೇನು ಅದೇನೆಂಬ ವಿವರಗಳನ್ನು ಯೋಚಿಸು - ಇದೊಂದು ಅಧ್ಯಾತ್ಮ ಚಿಂತನೆ)

ಅವಧಾನದ ಕೊನೆಯಲ್ಲಿ ಪೃಚ್ಛಕನೂ ಇದಕ್ಕೆ ತನ್ನ ಪರಿಹಾರವನ್ನೂ ಹೇಳಬೇಕಾಗುತ್ತದೆ.  ಇದಕ್ಕೆ ನನ್ನ ಪರಿಹಾರ ಹೀಗಿತ್ತು:

ನಾನಾ ವ್ಯಾಖ್ಯಾನ ಪೂರಂ ಬಹುಮಥಿತ ಮತಾಲಂಬ ಗಂಭೀರ ಪಾರಂ
ನೀನೀಗಳ್ ಭಾವಿಸಲ್ಕಿಂತಿರುತಿಹುದು ಕಣಾ ವೇದವೇದಾರ್ಥ ಸಾರಂ
ನಾನುಂ ನೀನೆಂಬುದುಂ ಪೇಳಿತರಬಹುತರೋಪಾಧಿಗಂ ಮೂಲಮೇನೈ
ನಾನೀನೋ ನೀನೆನಾನೋ ನೆನೆನೆನೆನೆನೆ ನಾನೇನೊ ನೀನೇನದೇನೋ

(ವೇದವೇದಾರ್ಥಗಳು ಅನೇಕ ವ್ಯಾಖ್ಯಾನಗಳಿಂದಲೂ, ಮತಾವಲಂಬೀ ವಿವರಣೆಗಳಿಂದಲೂ ತುಂಬಿವೆ.  ಆದರೂ ಅದೆಲ್ಲವನ್ನೂ ಸಂಕ್ಷಿಪ್ತವಾಗಿ ನೋಡಿದರೆ, ಅದರ ಅಭಿಮತವಿಷ್ಟೇ:  ನಾನು ನೀನೆಂಬುದೇ ನಾವಿಂದು ಕಾಣುತ್ತಿರುವ ಅನೇಕ ರೂಪಗಳಿಗೂ ಮೂಲವೇ, ನಾನೇ ನೀನೋ, ನೀನೆ ನಾನೋ (ಅಂದರೆ ನಾವಿಬ್ಬರೂ ಒಂದೆಯೋ), ಯೋಚಿಸಿ ನೋಡು, ನಾನೇನು, ನೀನೇನು, ಅದೇನೆಂಬುದನ್ನು ಯೋಚಿಸು)

ಈ ಪೃಚ್ಚಕನಿಗೂ ಮೊದಲ ಸಾಲನ್ನು ರಚಿಸಿ ಹೇಳಿ ಅವಧಾನಿ ಮುಂದಿನ ಪೃಚ್ಛಕನೆಡೆ ಗಮನ ಹರಿಸುತ್ತಾನೆ.

ದತ್ತಪದಿ: ಈತನ ಕೆಲಸ, ಅವಧಾನಿಗೆ ಮೂರೋ ನಾಲ್ಕೋ ಸಂಬಂಧವಿಲ್ಲದ ಪದಗಳನ್ನು ಕೊಟ್ಟು ಯಾವುದಾದರೊಂದು ಛಂದಸ್ಸಿನಲ್ಲಿ ಆ ಪದಗಳಿಗೆ ಸಂಬಂಧವೇ ಇಲ್ಲದ ವಿಷಯದ ಮೇಲೆ ಪದ್ಯವೊಂದನ್ನು ರಚಿಸಲು ಹೇಳುವುದು.  ಉದಾಹರಣೆಗೆ ಕಳೆದೊಂದು ಅವಧಾನದಲ್ಲಿ ನಾನು ಕೊಟ್ಟ ದತ್ತಪದಿಯ ಸಮಸ್ಯೆ ಹೀಗಿತ್ತು.  ಮೂರ್ಖ, ಮಂಕ ಮತ್ತು ಮಡ್ಡಿ ಈ ಮೂರು ಹೆಸರುಗಳನ್ನು ಉಪಯೋಗಿಸಿಕೊಂಡು ತ್ರಿಮೂರ್ತಿಗಳನ್ನು ಸ್ತುತಿಸಬೇಕು, ಆದರೆ ಇದು ನಿಂದಾಸ್ತುತಿಯಾಗಿರಬಾರದು ಅಥವಾ ಸ್ವನಿಂದೆಯಾಗಿರಬಾರದು, ಮತ್ತು ಮತ್ತೇಭವಿಕ್ರೀಡಿತ ವೃತ್ತದಲ್ಲಿರಬೇಕು.

ಇದಕ್ಕೆ ಅವಧಾನಿಗಳು ಕೊಟ್ಟ ಪರಿಹಾರ ಇದು:

ಸಮನಾರ್ ಮೂರ್ ಖನಟದ್ರವೀಂದು ಚಪಲಾವ್ರಾತಕ್ಕೆ ತೇಜಸ್ಸಿನೊಳ್
ವಿಮಲಾತ್ಮದ್ಯುತಿಯಿಂದಮಾಂತರತಮಂ ಕಟ್ಟಿಟ್ಟವೊಲ್ ನೀಗುಗುಂ
ಪ್ರಮೆಯಿಂ ಮೂವರನೀಕ್ಷಿಸಲ್ ಸ್ಫುರಿಪುದೈತಾಮಡ್ಡಿಯಾಗರ್ ನತ
ಕ್ರಮಕಂ ಕಾಣ್ ತ್ರಿಗುಣಂಗಳೊಳ್ ಮಡೆಯರೇಂ ಭಕ್ತೇಂಗಿತಂ ಬೇರಿಸಲ್

ನನ್ನ ಪರಿಹಾರ ಹೀಗಿತ್ತು:

ಮೊನೆಗಳ್ ಮೂರ್ ಖಗರಾಜವಾಹನ ಚತುರ್ವಾಗೀಶರೂಪಂ ಜಗನ್
ಮನಗಳ್ಗೀತ ವಿಧಾತನೈ ಸಕಲಮಂ ಕಣ್ಸನ್ನೆಯೊಳ್ ಸಾಧಿಪಂ
ಎಣೆಯಿಲ್ಲಂ ಜಗತೀ ಸಹಸ್ರ ಮೆರೆವೀ ತುಂಗಾಂಗನಂ ಭಾವಿಸಲ್
ಕೊನೆಗಾ ತಾಮಸಮಡ್ಡಿಯಂ ಕಿಡಿಸುವೀ ಮುಮ್ಮೂರ್ತಿಯಂ ಧ್ಯಾನಿಪೆಂ

ಈತನಿಗೂ ಪದ್ಯದ ಒಂದು ಸಾಲನ್ನು ರಚಿಸಿಕೊಟ್ಟು ಅವಧಾನಿ ಮುಂದುವರೆಯುತ್ತಾನೆ.

ಚಿತ್ರಬಂಧ: ಇದರಲ್ಲಿ ಅಕ್ಷರಗಳು ಕೆಲವು ನಿರ್ದಿಷ್ಟ ಕ್ರಮದಲ್ಲಿ ಪದೇಪದೇ ಬರುವಂತೆ ಪದ್ಯ ರಚಿಸಲಾಗುತ್ತದೆ.  ಉದಾಹರಣೆಗೆ:
ತಾಕಾ ತಿ ಕ್ತೀಶಂ
ಮೋರೆ ತೋರೆ ತಿರೆ ಸ್ವಶಂ

ಇಲ್ಲಿ ಪ್ರತಿ ಎರಡನೆಯ ಅಕ್ಷರ ರಕಾರವಾಗಿರುವುದನ್ನು ಗಮನಿಸಿ.  ಈ ರೀತಿ ವಿವಿಧ ವಿನ್ಯಾಸಗಳನ್ನು ವಿವಿಧ ಹೆಸರಿನಿಂದ ಕರೆಯಲಾಗುತ್ತದೆ - ಪುಷ್ಪಗುಚ್ಛಬಂಧ, ಸರ್ಪಬಂಧ, ಗೋಮೂತ್ರಿಕಾ ಬಂಧ, ಮುರಜ ಬಂಧ, ನಾಗಬಂಧ ಇತ್ಯಾದಿ.  ಇದೂ ಸಾಮಾನ್ಯವಾಗಿ ನಾಲ್ಕು ಸಾಲಿನ ಯಾವುದಾದರೂ ಛಂದಸ್ಸಿನಲ್ಲಿರುತ್ತದೆ.

ಈ ಪೃಚ್ಛಕನಿಗೂ ಒಂದು ಸಾಲನ್ನು ರಚಿಸಿಕೊಟ್ಟು ಅವಧಾನಿ ಮುಂದಿನ ಪೃಚ್ಛಕನೆಡೆ ಗಮನ ಹರಿಸುತ್ತಾನೆ.

ವರ್ಣನೆ/ಆಶುಕವಿತೆ:  ಪೃಚ್ಛಕನು ವಸ್ತು/ವಿಷಯವೊಂದನ್ನು ಅವಧಾನಿಗೆ ಕೊಟ್ಟು ನಿರ್ದಿಷ್ಟ ಛಂದಸ್ಸಿನಲ್ಲಿ ಕಾವ್ಯ ರಚಿಸಲು ಹೇಳುತ್ತಾನೆ.  ಇದು ಸಾಮಾನ್ಯವಾಗಿ ಕಾವ್ಯಾತ್ಮಕವಾಗಿ, ವರ್ಣನಾತ್ಮಕವಾಗಿರುತ್ತದೆ.  ಉದಾಹರಣೆಗೆ ತನ್ನದಲ್ಲದ ಕಾರಣಕ್ಕಾಗಿ ಪ್ರಿಯತಮೆಯಿಂದ ದೂರವಾಗಿ ಜೈಲು ಸೇರಿರುವ ನಿರಪರಾಧಿಯೊಬ್ಬನ ಭಾವನೆ ಹುಣ್ಣಿಮೆ ರಾತ್ರೆಯಲ್ಲಿ ಹೇಗಿರಬಹುದು ಎಂದು ವರ್ಣಿಸಲು ಕೇಳಬಹುದು.  ಇದಕ್ಕೆ ಉತ್ತರವಾಗಿ ಅವಧಾನಿ ಸ್ಥಳದಲ್ಲೇ ಕವಿತೆಯೊಂದನ್ನು ರಚಿಸಿಕೊಟ್ಟು ಮುಂದುವರೆಯುತ್ತಾನೆ.

ಕಾವ್ಯವಾಚನ: ಇಲ್ಲಿ ಪೃಚ್ಛಕನು ಯಾವುದಾದರೊಂದು ಕಾವ್ಯದ ಯಾವುದೋ ಒಂದು ಭಾಗವನ್ನು ವಾಚಿಸುತ್ತಾನೆ.  ಇದು ಯಾವ ಕಾವ್ಯವಾದರೂ ಆಗಿರಬಹುದು, ಯಾವ ಮೂಲೆಯಿಂದಾದರೂ ಎತ್ತಿದ್ದಿರಬಹುದು.  ಅದನ್ನು ಕೇಳಿಸಿಕೊಂಡು ಅವಧಾನಿಯು ಆ ಕಾವ್ಯ, ಕವಿ, ಸಂದರ್ಭವನ್ನು ತಿಳಿಸುತ್ತಾನೆ.

ಹೀಗೆ ಆರೂ ಪೃಚ್ಛಕರಿಗೆ ಉತ್ತರಿಸಿದ ನಂತರ ಎರಡನೆಯ ಸುತ್ತು ಪ್ರಾರಂಭವಾಗುತ್ತದೆ, ನಿಷೇಧಾಕ್ಷರಿಯ ಎರಡನೆಯ ಸಾಲಿನ ರಚನೆ... ಹೀಗೆ ನಾಲ್ಕು ಸುತ್ತು ಮುಂದುವರೆಯುತ್ತದೆ ಅವಧಾನ.  ಮೇಲಿನ ನಾಲ್ಕೂ ಪೃಚ್ಛಕರಿಗೂ ಅವಧಾನಿಯು ಒಂದೊಂದು ಒಂದೊಂದು ಸುತ್ತಿನಲ್ಲಿ ಒಂದೊಂದು ಸಾಲುಗಳನ್ನು ಹೇಳುತ್ತಾ ಕೊನೆಯ ಸುತ್ತಿನ ನಂತರ ಪ್ರತಿಯೊಬ್ಬನಿಗೂ ಪೂರ್ಣ ಪದ್ಯವನ್ನು ಒಪ್ಪಿಸಬೇಕು. ಹಾಗೆಯೇ ಪೃಚ್ಛಕರೂ ತಂತಮ್ಮ ಪದ್ಯಗಳನ್ನು ಪಠಿಸುತ್ತಾರೆ.  ಆದರೆ ಕೊನೆಯ ಇಬ್ಬರು ಪೃಚ್ಛಕರ ಪ್ರಶ್ನೆ ಸುತ್ತುಗಳಲ್ಲಿ ಮುಂದುವರೆಯುವುದಿಲ್ಲ.  ಅವರ ಪ್ರಶ್ನೆಗಳಿಗೆ ಆಯಾ ಸುತ್ತಿನಲ್ಲೇ ಪೂರ್ಣಪದ್ಯ ರಚಿಸಿಕೊಟ್ಟು ಅವಧಾನಿ ಮುಂದುವರೆಯುತ್ತಾನೆ.  ಮೊದಲ ನಾಲ್ಕು ಪೃಚ್ಛಕರ ಕೆಲಸ ಅವಧಾನಿಯ ನೆನಪಿನ ಶಕ್ತಿ, ಛಂದೋ ಪಟುತ್ವವನ್ನು ಪರೀಕ್ಷಿಸುವುದಾದರೆ, ಕೊನೆಯ ಇಬ್ಬರು ಪೃಚ್ಛಕರ ಕೆಲಸ ಅವಧಾನಿಯ ಕಾವ್ಯ ಸಾಮರ್ಥ್ಯವನ್ನೂ ಓದಿನ ವಿಸ್ತಾರವನ್ನೂ ಒರೆ ಹಚ್ಚುವುದು.

ಈ ಮೇಲೆ ಹೇಳಿದ ಆರು ಪೃಚ್ಛಕರು ನಿಯತವಾಗಿ ತಮ್ಮತಮ್ಮ ಸರದಿಯಲ್ಲಿ ಪ್ರಶ್ನೆ ಕೇಳಿದರೆ, ಉಳಿದಿಬ್ಬರು ಪೃಚ್ಛಕರು ಯಾವಾಗಲಾದರೂ ಮಧ್ಯ ನುಗ್ಗಿ ಪ್ರಶ್ನೆಗಳನ್ನು ಕೇಳಬಹುದು.  ಮುಖ್ಯವಾಗಿ ಅವಧಾನಿಯ ಏಕಾಗ್ರತೆಯನ್ನು ಕದಲಿಸುವುದೇ ಇವರ ಗುರಿ.  ಸಾಮಾನ್ಯವಾಗಿ ಈ ಪೃಚ್ಛಕರು ಈ ಕೆಳಗಿನ ಯಾವುದಾದರೂ ಎರಡು ವಿಭಾಗಗಳನ್ನು ನಿರ್ವಹಿಸುತ್ತಾರೆ:

ಅಪ್ರಸ್ತುತ ಪ್ರಸಂಗಿ:  ಹೆಸರೇ ಸೂಚಿಸುವಂತೆ ಈತ ಅಪ್ರಸ್ತುತ ಪ್ರಸಂಗಿ.  ಸಂದರ್ಭಕ್ಕೆ ಸಂಬಂಧವೇ ಇಲ್ಲದಂತೆ ಈತ ಏನಾದರೂ ಮಾತಾಡಬಹುದು/ಏನಾದರೂ ಕೇಳಬಹುದು.  ಅವಧಾನಿ ಅವನನ್ನು ಕಡೆಗಣಿಸುವಂತಿಲ್ಲ, ರೇಗುವಂತಿಲ್ಲ, ಉತ್ತರ ಕೊಡುವುದಿಲ್ಲ ಎನ್ನುವಂತಿಲ್ಲ.  ಈತನ ಸವಾಲುಗಳನ್ನು ನಗುನಗುತ್ತಾ ಸ್ವೀಕರಿಸುತ್ತಾ, ಆತನೊಡನೆ ಸರಸವಾಗಿ ಸಂಭಾಷಿಸುತ್ತಲೇ ಈತನನ್ನು ನಿವಾರಿಸಿಕೊಂಡು ಅವಧಾನಿ ಮುಂದುವರಿಯಬೇಕಾಗುತ್ತದೆ.

ಸಂಖ್ಯಾಬಂಧ:  ೫ X ೫ ರ ಚೌಕವೊಂದರಲ್ಲಿ ಹೇಗೇ ಕೂಡಿದರೂ ಒಂದೇ ಮೊತ್ತ ಬರುವಂತೆ ಒಂದು ಬಂಧವನ್ನು ಪೃಚ್ಛಕ ಮೊದಲೇ ರಚಿಸಿಕೊಂಡು ಬಂದಿರುತ್ತಾನೆ.  ಕಾರ್ಯಕ್ರಮದ ಮೊದಲಲ್ಲಿ ಅವಧಾನಿಗೆ ಈ ಮೊತ್ತವನ್ನಷ್ಟೇ ಆತ ಕೊಡುತ್ತಾನೆ.  ಆಮೇಲೆ ಮಧ್ಯ ಮಧ್ಯ ಮನಬಂದಾಗ ಈ ಬಂಧದ ಒಂದು ನಿರ್ದಿಷ್ಟ ಮನೆಯಲ್ಲಿ ಬರುವ ಸಂಖ್ಯೆಯನ್ನು ಕೇಳುತ್ತಾನೆ.  ಉದಾಹರಣೆಗೆ, ಮೂರನೆಯ ಸಾಲಿನ ನಾಲ್ಕನೆಯ ಮನೆಯಲ್ಲಿ ಬರುವ ಸಂಖ್ಯೆ ಎಷ್ಟು?  ಅವಧಾನಿ ಮನಸ್ಸಿನಲ್ಲೇ ಬಂಧವನ್ನು ರಚಿಸಿಕೊಂಡು ಆಯಾ ಮನೆಯಲ್ಲಿ ಬರುವ ಸಂಖ್ಯೆಯನ್ನು ಪೃಚ್ಛಕನು ಕೇಳಿದಾಗಲೆಲ್ಲಾ ಹೇಳಬೇಕಾಗುತ್ತದೆ.  ಅದನ್ನು ಪೃಚ್ಛಕನು ಪ್ರೇಕ್ಷಕರಿಗೆ ಮಾತ್ರ ಕಾಣುವಂತೆ ಬಂಧದಲ್ಲಿ ಬರೆಯುತ್ತಾ ಹೋಗುತ್ತಾನೆ.  ಕೊನೆಯಲ್ಲಿ ಅವುಗಳನ್ನು ಕೂಡಿದಾಗ ಮೊದಲು ನೀಡಿದ ಮೊತ್ತ ಬಂದಿರಬೇಕು.

ಘಂಟಾಗಣನ: ಪೃಚ್ಛಕನೊಬ್ಬ ಒಂದು ಘಂಟೆಯನ್ನು ಹಿಡಿದು ಕುಳಿತಿರುತ್ತಾನೆ.  ಅವಧಾನದುದ್ದಕ್ಕೂ ಯಾವಾಗ ಬೇಕಾದರೂ ಎಷ್ಟು ಬಾರಿ ಬೇಕಾದರೂ ಅವನು ಗಂಟೆಯನ್ನು ಬಾರಿಸಬಹುದು.  ಅದನ್ನು ಅವಧಾನಿ ಮನಸ್ಸಿನಲ್ಲೇ ಲೆಕ್ಕವಿಟ್ಟುಕೊಳ್ಳಬೇಕು.  ಪ್ರೇಕ್ಷಕರೂ ಲೆಕ್ಕವಿಟ್ಟುಕೊಳ್ಳಬಹುದು.  ಕಾರ್ಯಕ್ರಮದ ಕೊನೆಯಲ್ಲಿ ಅವಧಾನಿ ಇದರ ಲೆಕ್ಕವನ್ನು ಒಪ್ಪಿಸುತ್ತಾನೆ.  ಪ್ರೇಕ್ಷಕರು ಇದರ ತಾಳೆ ನೋಡಿಕೊಳ್ಳಬಹುದು.  ಪುಷ್ಪಗಣನವು ಘಂಟಾಗಣನದ ಇನ್ನೊಂದು ರೂಪ.  ಪೃಚ್ಛಕನು ಅವಧಾನಿಯ ಮೇಲೆ ಹೂವನ್ನು ಎಸೆಯುತ್ತಾ ಹೋಗುತ್ತಾನೆ.  ಅದನ್ನು ಅವಧಾನಿ ಲೆಕ್ಕವಿಟ್ಟುಕೊಳ್ಳಬೇಕು.  ಇದೇ ರೀತಿ ಇಸ್ಪೀಟು, ಚದುರಂಗಗಳನ್ನೂ ಕೆಲವು ಅವಧಾನಿಗಳು ಅಳವಡಿಸಿಕೊಳ್ಳುವುದುಂಟು

ಮೇಲೆ ಹೇಳಿದ ವಿಭಾಗಗಳಲ್ಲದೇ ಹಾಗೆಯೇ ನ್ಯಸ್ತಾಕ್ಷರಿ (ಪದ್ಯವೊಂದರ ಕೆಲಕೆಲವು ಸ್ಥಾನಗಳಲ್ಲಿ ಕೆಲ ಕೆಲವು ಅಕ್ಷರಗಳು ಬರಬೇಕು ಎಂಬ ನಿಬಂಧನೆ); ವ್ಯಸ್ತಾಕ್ಷರಿ (ಸಾಲೊಂದರಲ್ಲಿ ಬರುವ ವಿವಿಧ ಅಕ್ಷರಗಳನ್ನೂ ಅವುಗಳ ಸ್ಥಾನ ಸಂಖ್ಯೆಗಳನ್ನೂ ಪ್ರತ್ಯೇಕವಾಗಿ ಬರೆದಿಟ್ಟುಕೊಂಡು ಕ್ರಮ ತಪ್ಪಿದ ರೀತಿಯಲ್ಲಿ ಈ ಅಕ್ಷರಗಳನ್ನು ಆಗಾಗ ಅವಧಾನಿಗೆ ತುಸುವೇ ಕಾಲ ತೋರಿಸುತ್ತಾ ಹೋಗುವುದು.  ಈ ಎಲ್ಲ ಅಕ್ಷರಗಳನ್ನೂ ನೆನಪಿಟ್ಟುಕೊಂಡು ಅವಧಾನದ ಕೊನೆಯಲ್ಲಿ ಅವುಗಳನ್ನು ಕ್ರಮವಾಗಿ ಜೋಡಿಸಿ ಇಡೀ ವಾಕ್ಯವನ್ನು ಅವಧಾನಿ ನಿರೂಪಿಸುವುದು) ಈ ಪ್ರಕಾರಗಳನ್ನೂ ಅಳವಡಿಸಿಕೊಳ್ಳುವುದುಂಟು.

ಇನ್ನು ಶತಾವಧಾನವು ಸಂಯೋಜನೆಯಲ್ಲಿ ಸರಿಸುಮಾರು ಅಷ್ಟಾವಧಾನವನ್ನೇ ಹೋಲುತ್ತದೆಯಾದರೂ ಇಲ್ಲಿ ಪೃಚ್ಛಕರ ಸಂಖ್ಯೆ, ಮತ್ತು ಆ ಕಾರಣದಿಂದ ಇಡೀ ಕಾರ್ಯಕ್ರಮದ ಅವಧಿ ಹೆಚ್ಚು.  ಒಂದು ನಿಷೇಧಾಕ್ಷರಿಯ ಜಾಗದಲ್ಲಿ ಹತ್ತು ಜನ, ಒಬ್ಬ ಸಮಸ್ಯಾಪೂರಕನ ಜಾಗದಲ್ಲಿ ಹತ್ತು ಜನ, ಹೀಗೆ ಸಂಖ್ಯೆ ಜಾಸ್ತಿಯಾಗುತ್ತದೆ, ಮತ್ತು ರಚಿಸಲ್ಪಡುವ ಪದ್ಯಗಳ ಸಂಖ್ಯೆಯೂ ಹೆಚ್ಚು.  ಜೊತೆಗೆ ಅವಧಾನಿಯ ಸಾಮರ್ಥ್ಯಕ್ಕನುಗುಣವಾಗಿ ಅವಧಾನದ ವಿಭಾಗಗಳೂ ಹೆಚ್ಚಬಹುದು.

ಅದೇನೇ ಇರಲಿ, ಅವಧಾನಕಾರ್ಯಕ್ರಮವೆಂದರೆ ಪ್ರಶ್ನೋತ್ತರಗಳ ಗುಡುಗು-ಮಿಂಚುಗಳಿಗೂ ಸರಸ ಸಂಭಾಷಣೆಗಳ ತುಷಾರಸೇಚನಕ್ಕೂ, ಕಾವ್ಯದ ವಿವಿಧ ರೂಹುಗಳ ಅನಾವರಣಕ್ಕೂ ತೆರೆದುಕೊಂಡ ಭವ್ಯರಂಗಸ್ಥಳವೇ ಸರಿ.  ಅವಧಾನ ಕಲೆಯೆಂಬುದೇ ನಶಿಸುತ್ತಿರುವ ಈ ಯುಗದಲ್ಲಿ ಶತಾವಧಾನ, ಅದರಲ್ಲೂ ಸಂಪೂರ್ಣ ಕನ್ನಡ ಶತಾವಧಾನವೆಂಬ ವಿಸ್ಮಯ ಇದೇ ೩೦ನೆಯ ದಿನಾಂಕದಂದು ಅನಾವರಣಗೊಳ್ಳಲಿದೆ.  ಅಪರೂಪದಲ್ಲಿ ಅಪರೂಪವೆನಿಸಿಕೊಳ್ಳುವ ಇಂಥಾ ಕಾರ್ಯಕ್ರಮವೊಂದು ಇಂದಿಗೂ ನೋಡಸಿಗುತ್ತಿದೆಯೆಂಬುದು ನಿಜಕ್ಕೂ ಕೌತುಕದ, ಹೆಮ್ಮೆಯ ವಿಷಯ.

Wednesday, February 1, 2012

ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 3: ಮಾತ್ರೆ-ಗಣ (ಮುಂದುವರೆದಿದೆ)

ಹಿಂದಿನ ಬರಹದಲ್ಲಿ ಲಘು-ಗುರುಗಳ ಬಳಕೆಯನ್ನು ಸ್ವಲ್ಪ ಮಟ್ಟಿಗೆ ನೋಡಿದೆವು; ಬರೀ ಲಘುವನ್ನೇ ಬಳಸಿ ಮತ್ತು ಬರೀ ಗುರುವನ್ನೇ ಬಳಸಿ ಕೆಲವು ಸಾಲುಗಳನ್ನು ಮಾಡಿದೆವು. (ನೋಡಿಲ್ಲದೆ ಇದ್ದರೆ ಆ ಬರಹ ಇಲ್ಲಿದೆ ನೋಡಿ)

ಸುಮ್ಮನೆ ಒಂದು ಸಲ ನೆನಪಿಸಿಕೊಳ್ಳೋಣ. ಲಘುವನ್ನೇ ಬಳಸಿ ಎರಡು, ಮೂರು, ನಾಲ್ಕು, ಐದು ಮತ್ತು ಏಳು ಮಾತ್ರೆಗಳ ಗುಂಪಿರುವಂತೆ ಸಾಲುಗಳನ್ನು ರಚಿಸಿದೆವು, ಹಾಗೇ ಗುರುವನ್ನೇ ಬಳಸಿ ಎರಡು, ನಾಲ್ಕು ಮತ್ತು ಆರು ಮಾತ್ರೆಗಳ ಗುಂಪಿರುವಂತೆಯೂ ಸಾಲುಗಳನ್ನು ರಚಿಸಿದೆವು.

ಆದರೆ ನಾವು ಯಾವಾಗಲೂ ಬರೀ ಲಘುವಿನಲ್ಲಿ ಅಥವಾ ಬರೀ ಗುರುವಿನಲ್ಲಿ ಮಾತಾಡುತ್ತೀವಾ? ಖಂಡಿತಾ ಇಲ್ಲ. ನಮ್ಮ ಮಾತಲ್ಲಿ ಲಘು-ಗುರು ಎರಡೂ ರೀತಿಯ ಅಕ್ಷರಗಳು ಇದ್ದೇ ಇರುತ್ತವೆ ಅಲ್ಲವೇ? ಹಾಗೇ ಪದ್ಯದಲ್ಲೂ ಕೂಡ. ಯಾವುದೇ ಪದ್ಯವಾದರೂ ಲಘು-ಗುರುಗಳ ಮಿಶ್ರಣ. ಕೆಲವು ಅಕ್ಷರ ತುಂಡು (ಲಘು), ಕೆಲವಕ್ಕೆ ಎಳೆತ (ಗುರು). ಮೊದಲು ಮಾಡಿದೆವಲ್ಲ, ಮೂರು, ನಾಲ್ಕು, ಐದು, ಏಳು ಇತ್ಯಾದಿ ಲಯಬದ್ಧ ಗುಂಪು? ಅಲ್ಲಿ ಬರೀ ಲಘು ಅಥವ ಬರೀ ಗುರು ಬಳಸುವ ಬದಲು, ಲಘು ಮತ್ತು ಗುರು ಎರಡನ್ನೂ ಬೇರೆಬೇರೆ ರೀತಿಗಳಲ್ಲಿ ಬಳಸಿ ಬೇರೆ ಬೇರೆ ಲಯಗಳನ್ನು ಸೃಷ್ಟಿಸಬಹುದು.

ಇಲ್ಲಿ ನೋಡಿ (ಇದನ್ನು ಜೋರಾಗಿ ಹೇಳಿ):

ಬಳಸಿ ಬಳಸಿ ನುಡಿಯ ಬೇಡ ನೇರ ನುಡಿಯ ನೂ (ತಕಿಟ ತಕಿಟ ತಕಿಟ ತಕಿಟ ತಾತ ತಕಿಟ ತಾ ಎಂಬಂತೆ) [ಬಳಸಿ (UUU) ಬಳಸಿ (UUU) ನುಡಿಯ (UUU) ಬೇಡ ( _U) ನೇರ ( _U) ನುಡಿಯ (UUU) ನೂ - ಇಲ್ಲಿ ಮೂರುಮೂರು ಮಾತ್ರೆಯ ಜೊತೆ ಬಂದಿದೆ, ಆದರೆ ಕೆಲವು ಗುಂಪುಗಳಲ್ಲಿ ಎಲ್ಲವೂ ಲಘು, ಕೆಲವರಲ್ಲಿ ಲಘು-ಗುರುಗಳ ಮಿಶ್ರಣ]

ಗಣಪತಿ ಬಪ್ಪಾ ಬಂದಾ ನೋಡೂ (ತಕತಕ ತಾತಾ ತಾತಾ ತಾತಾ ಎಂಬಂತೆ) [ಗಣಪತಿ (UUUU) ಬಪ್ಪಾ ( _ _ ) ಬಂದಾ ( _ _ ) ನೋಡೂ ( _ _ ) - ನಾಲ್ಕುನಾಲ್ಕು ಮಾತ್ರೆಯ ಜೊತೆ, ಲಘು-ಗುರುಗಳ ಮಿಶ್ರಣ]

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ (ತಾತಕಿಟ ತಾತಕಿಟ ತಾತಕಿಟ ತಾತಾ ಎಂಬಂತೆ) [ತೂಕಡಿಸಿ ( _UUU) ತೂಕಡಿಸಿ ( _UUU) ಬೀಳದಿರು ( _UUU) ತಮ್ಮಾ ( _ _ ) - ಐದೈದು ಮಾತ್ರೆಗಳ ಜೊತೆ, ಲಘು ಗುರುಗಳ ಸೊಗಸಾದ ಮಿಶ್ರಣ ಇಲ್ಲಿ]

ಶಾಲೆಯಲಿ ನೀ ಓತ್ಲ ಹೊಡೆದರೆ ನಾಕು ಬಾರಿಸಿ ಬಿಡುವೆನು (ತಾತಕಿಟತಾ ತಾತಕಿಟತಕ ತಾತತಾಕಿಟ ತಕಿಟತಾ ಎಂಬಂತೆ) [ಶಾಲೆಯಲಿ ನೀ ( _UUU _) ಓತ್ಲ ಹೊಡೆದರೆ ( _U UUUU) ನಾಕು ಬಾರಿಸಿ ( _U _UU) ಬಿಡುವೆನು (UUUU) - ಏಳೇಳು ಮಾತ್ರೆಯ ಜೊತೆ, ಲಘು-ಗುರುಗಳ ಹದವಾದ ಮಿಶ್ರಣ ಇಲ್ಲಿದೆ]

ಗೆಳೆಯರೇ, ಇಷ್ಟು ಓದಿದಮೇಲೆ, ಹಾಡಿದ ಮೇಲೆ, ನಿಮಗೆ ಮಾತ್ರೆ-ಲಯದ ಮರ್ಮ ಅರ್ಥವಾಗಿರಬೇಕು. ಇನ್ನು ವಿಜೃಂಭಿಸಿ. ೧-೨ (ಲಘು-ಗುರು) ಗಳನ್ನು ವಿವಿಧ ರೀತಿಯಲ್ಲಿ ಬಳಸಿ ಎರಡೋ ಮೂರೋ ನಾಲ್ಕೋ ಹೀಗೆ ನಿಮ್ಮ ಮನಸ್ಸಿನಲ್ಲಿ ಮೂಡಿದ ಲಯದಲ್ಲಿ ಸಾಲುಗಳನ್ನು ರಚಿಸಿ. ನೆನಪಿರಲಿ, ಇದು ಕಾವ್ಯವಾಗಬೇಕಿಲ್ಲ, (ಕಾವ್ಯವಾದರೂ ತಪ್ಪಲ್ಲ) ಒಟ್ಟಿನಲ್ಲಿ ಲಯಬದ್ಧವಾದ, ಅರ್ಥಬದ್ಧವಾದ ಸಾಲುಗಳು ಬಂದರೆ ಸರಿ.

ಮತ್ತೆ ನೆನಪಿಸುತ್ತೇನೆ, ಬರೀ ಯಾಂತ್ರಿಕವಾಗಿ ಲಘು ಗುರುಗಳನ್ನು ಲೆಕ್ಕಹಾಕಿ ಬರೆಯಬೇಡಿ. ನೀವು ಬರೆದದ್ದು ನಿಮಗೇ ತಾಳಹಾಕಿಕೊಂಡು ಓದಲು ಸಿಗಬೇಕು. ಲಯ ಮನಸ್ಸಿನಲ್ಲಿ ಮೂಡಬೇಕಷ್ಟೇ ಬರೀ ಲೆಕ್ಕದಲ್ಲಿ ಅಲ್ಲ.

ಇದು ನಿಮ್ಮ ಹಿಡಿತಕ್ಕೆ ಸಿಕ್ಕಿದ ಮೇಲೆ ಮುಂದೆ ನೋಡೋಣ.

Tuesday, January 17, 2012

ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 2: ಮಾತ್ರೆ-ಗಣ (ಮುಂದುವರೆದಿದೆ)

ಹಿಂದಿನ ಬರಹದಲ್ಲಿ ಲಘು-ಗುರು ಅಂದರೆ ಏನು ಅಂತ ತಿಳಿದುಕೊಂಡೆವು (ನೋಡಿಲ್ಲದೇ ಇದ್ದರೆ ಆ ಬರಹ ಇಲ್ಲಿದೆ ನೋಡಿ)

ಸುಮ್ಮನೇ ಒಂದು ಸಲ ನೆನಪಿಸಿಕೊಳ್ಳೋಣ. ಲಘು ಅಂದರೆ ಒಂದು ಚಿಟುಕೆ ಹೊಡೆಯುವಷ್ಟು ಕಾಲ. ಗುರು ಅಂದರೆ ಅದರ ಎರಡರಷ್ಟು ಕಾಲ. ಆದ್ದರಿಂದ ಸಾಮಾನ್ಯವಾಗಿ ಎಲ್ಲ ಹ್ರಸ್ವಾಕ್ಷರಗಳೂ ಲಘು; ಎಲ್ಲಾ ಧೀರ್ಘಾಕ್ಷರಗಳೂ ಗುರು. ಒತ್ತಕ್ಷರದ ಹಿಂದಿನ ಅಕ್ಷರ ಅದೇನೇ ಇದ್ದರೂ ಗುರುವೇ. ಸರಳವಾಗಿ ತಿಳಿಯಲು ಇದಿಷ್ಟು ಈಗ್ಗೆ ಸಾಕು. ಈಗ ಬಳಕೆಯಲ್ಲಿ ಈ ಲಘು-ಗುರುಗಳನ್ನು ಸ್ವಲ್ಪ ನೋಡೋಣ.

ಈ ಸಾಲುಗಳನ್ನು ಜೋರಾಗಿ ಓದಿ:

ಚಿಲಿಪಿಲಿ ಉಲಿಯುತ ನಲಿವುದೆ ಸೊಗಸು (ತಕ ತಕ ತಕ ತಕ ಎಂಬಂತೆ - ಚಿಲಿ| ಪಿಲಿ| ಉಲಿ| ಯುತ| ನಲಿ| ವುದೆ| ಸೊಗ| ಸು - ಇಲ್ಲೆಲ್ಲಾ ಎರಡೆರಡು ಮಾತ್ರೆಯ ಜೊತೆಯಾಗಿ ಬಂದಿದೆ)

ಇಲಿಯು ಗಣಪಗೊಲಿಯಿತು (ತಕಿಟ ತಕಿಟ ತಕಿಟ ಎಂಬಂತೆ - ಇಲಿಯು| ಗಣಪ| ಗೊಲಿಯಿ| ತು - ಇಲ್ಲಿ ಮೂರುಮೂರು ಮಾತ್ರೆಯ ಜೊತೆಗಳು ಬಂದುವು)

ತಲೆಯನು ಪರಪರ ಕೆರೆಯುತಲಿಹಳು (ತಕತಕ ತಕತಕ ತಕತಕ ಎಂಬಂತೆ - ತಲೆಯನು| ಪರಪರ| ಕೆರೆಯುತ| ಲಿಹಳು| - ಇಲ್ಲಿ ನಾಲ್ಕು ನಾಲ್ಕು ಮಾತ್ರೆಯ ಜೊತೆ)

ಮನೆಗೆಲಸ ಮುಗಿಸದೆಯೆ ತರಗತಿಗೆ ಹೊರಟ (ತಕತಕಿಟ ತಕತಕಿಟ ತಕತಕಿಟ ಎಂಬಂತೆ - ಮನೆಗೆಲಸ| ಮುಗಿಸದೆಯೆ| ತರಗತಿಗೆ| ಹೊರಟ| - ಇಲ್ಲಿ ಐದೈದು ಮಾತ್ರೆಯ ಜೊತೆ)

ಮನೆಯ ಕೆಲಸವ ಬರೆದು ಮುಗಿಸದೆ ತರಗತಿಗೆ ಇವ ಹೊರಟನು (ತಕಿಟತಕತಕ ತಕಿಟತಕತಕ ಎಂಬಂತೆ - ಮನೆಯ ಕೆಲಸವ| ಬರೆದು ಮುಗಿಸದೆ| ತರಗತಿಗೆ ಇವ| ಹೊರಟನು| - ಇಲ್ಲಿ ಏಳೇಳು ಮಾತ್ರೆಯ ಜೊತೆ)

ಇಲ್ಲಿ ನೀವು ಗಮನಿಸಬೇಕಾದ್ದು ಮೇಲೆ ಬಳಸಿರುವುದೆಲ್ಲಾ ಲಘು (U) ಅಕ್ಷರಗಳೇ! ಅಂದರೆ ಕೇವಲ ಒಂದು ಮಾತ್ರೆಯ (ಒಂದು ಚಿಟುಕೆ ಹೊಡೆಯುವಷ್ಟೇ) ಅಕ್ಷರಗಳು.

ಇದೇ ರೀತಿ ಕೆಲವು ಅಭ್ಯಾಸಗಳನ್ನು ಮಾಡೋಣವೇ? ಮೇಲೆ ಹೇಳಿದ ಯಾವುದಾದರೂ ಲಯದಲ್ಲಿ, ಬರೀ ಲಘು ಅಕ್ಷರಗಳನ್ನೇ ಬಳಸಿ ಏನಾದರೂ ಬರೆಯಿರಿ (ಅದು ಅದ್ಭುತ ಕಾವ್ಯವಾಗಿರಬೇಕಿಲ್ಲ, ಏನಾದರೂ ಆಗಬಹುದು)

ಈಗ ಈ ಸಾಲುಗಳನ್ನು ಜೋರಾಗಿ ಓದೋಣ.

ಕಾ ಕಾ ಕಾಗೇ ಬಂತೂ ನೋಡೀ (ತಾ ತಾ ತಾ ತಾ ಎಂಬಂತೆ - ಕಾ| ಕಾ| ಕಾ| ಗೇ| ಬಂ| ತೂ| ನೋ| ಡೀ| - ಇಲ್ಲಿ ಎರಡೆರಡು ಮಾತ್ರೆಗಳು ಬಂದಿದಿವೆ, ಆದರೆ ಒಂದೊಂದರ ಎರಡು ಲಘುವಿನ ಬದಲು ಒಂದೇ ಗುರು ಬಂದಿದೆ)

ಬಂದಾ ಬಂದಾ ಚಂದಾ ಮಾಮಾ (ತಾತಾ ತಾತಾ ತಾತಾ ತಾತಾ ಎಂಬಂತೆ - ಬಂದಾ| ಬಂದಾ| ಚಂದಾ| ಮಾಮಾ| - ಇಲ್ಲಿ ನಾಲ್ಕು ನಾಲ್ಕು ಮಾತ್ರೆಯ ಜೊತೆ, ಅಂದರೆ ಒಂದೊಂದು ಗುಂಪಿನಲ್ಲೂ ಎರಡೆರಡು ಗುರು)

ರಂಗಯ್ಯಾ ಬಂದವ್ನೇ ಬಾಗ್ಲಲ್ಲೀ ನಿಂದವ್ನೇ (ತಾತಾತಾ ತಾತಾತಾ ತಾತಾತಾ ತಾತಾತಾ ಎಂಬಂತೆ - ರಂಗಯ್ಯಾ| ಬಂದವ್ನೇ| ಬಾಗ್ಲಲ್ಲೀ| ನಿಂದವ್ನೇ| - ಇಲ್ಲಿ ಆರಾರು ಮಾತ್ರೆಯ ಜೊತೆ, ಅಂದರೆ ಒಂದೊಂದು ಗುಂಪಿನಲ್ಲೂ ಮೂರುಮೂರು ಗುರು)

ಇಲ್ಲಿ ನೀವು ಗಮನಿಸಬೇಕಾದ್ದು ಮೇಲೆ ಬಳಸಿರುವುದೆಲ್ಲಾ ಗುರು ( _ ) ಅಕ್ಷರಗಳೇ! ಅಂದರೆ ಎರಡು ಮಾತ್ರೆಯ (ಎರಡು ಚಿಟುಕೆ ಹೊಡೆಯುವಷ್ಟು) ಅಕ್ಷರಗಳು.

ಇದೇ ರೀತಿ ಕೆಲವು ಅಭ್ಯಾಸಗಳನ್ನು ಮಾಡೋಣವೇ? ಮೇಲೆ ಹೇಳಿದ ಯಾವುದಾದರೂ ಲಯದಲ್ಲಿ, ಬರೀ ಗುರು ಅಕ್ಷರಗಳನ್ನೇ ಬಳಸಿ ಏನಾದರೂ ಬರೆಯಿರಿ

ಗೆಳೆಯರೇ, ಇಲ್ಲಿಂದಾಚೆಗೆ ಇದು ನಿಮ್ಮೆಡೆಯಿಂದ ತುಸು ಅಭ್ಯಾಸವನ್ನು ನಿರೀಕ್ಷಿಸುತ್ತದೆ. ಅಭ್ಯಾಸರೂಪದ ಪ್ರತಿಕ್ರಿಯೆಗಳು ಬಂದಷ್ಟೂ ಮುಂದುವರೆಸಲು ಹುರುಪು.

ಇದು ಸ್ವಲ್ಪ ಕೈವಶವಾದ ನಂತರ ಮುಂದುವರೆಯೋಣ.

ಈ ಸರಣಿಯ ಮುಂದಿನ ಬರಹ ಇಲ್ಲಿದೆ.
 

Monday, January 9, 2012

ಚೊಚ್ಚಿಲ ಕಂದನನ್ನು ಕಾಯುತ್ತಾ

"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapaana.com) ವಿವಿಧ ಛಂದಸ್ಸುಗಳಲ್ಲಿ "ಚೊಚ್ಚಿಲ ಬಸಿರಿನ" ಬಗ್ಗೆ ಪದ್ಯಗಳನ್ನು ರಚಿಸುವ ಆಹ್ವಾನವಿತ್ತು. ಕವಯಿತ್ರಿಗಿರುವ ಅನುಭವ ಸಂಪತ್ತು ಈ ವಿಷಯದಲ್ಲಿ ಕವಿಗಿಲ್ಲವೆನ್ನುವುದೇನೋ ನಿಜ. ಆದರೂ ಕವಿಗಿರುವ ಕಲ್ಪನಾಸ್ವಾತಂತ್ರ್ಯವನ್ನು ತುಸು (ದುರ್)ಉಪಯೋಗ ಪಡಿಸಿಕೊಂಡಿದ್ದೇನೆ. ಇದರಲ್ಲಿ ’ಬುರುಡೆ-ಬುಡುಬುಡಿಕೆ’ಕಂಡುಬಂದರೆ ತಾಯಂದಿರು ಮನ್ನಿಸಿ.
ಪಂಚಮಾತ್ರಾ ಚೌಪದಿ
ಮುಗಿಲ ಮೊದಲನೆ ಮಳೆಗೆ ನೆನೆದ ಮಣ್ಣಿನ ಕಂಪು
ಮುಗಿದ ಹಚ್ಚನೆ ಮೊಗ್ಗು ಬಿರಿವ ಕೆಂಪು
ಬಗೆ-ಮೈಗಳುಬ್ಬೆ ಮೊದಲಬ್ಬೆತನದಾ ಪೆಂಪು
ನಗೆಸೂಸಿ ಹರಡುತಿದೆ ಮನೆಗೆ ತಂಪು.

ಉತ್ಫಲಮಾಲಾ
ಬೆಚ್ಚನೆ ರಾತ್ರೆಯೊಳ್ ಮನದಿ ಶಂಕೆಯು ಹಿಗ್ಗುತ ಚುಚ್ಚಿ ಕಾಡಿರಲ್
ಬೆಚ್ಚುತ ಚಿಂತಿಪಳ್ ಮಗುವಿದೇಂ ಮಲಗಿಪ್ಪುದೊ ಸತ್ತುದೊ ಕಾಣೆನೇ ಶಿವಾ
ಮುಚ್ಚಿದ ಕಂಗಳೊಳ್ ನಿದಿರೆ ಬಾರದೆ ಬೇಗುದಿ ಭಾರವಾಗಿರಲ್
ಕೆಚ್ಚನೆ ಕಾಲೊಳೊದ್ದು ಬಸಿರಂ ತನಯಂ ಹಿರಿ ಚಿಂತೆನೀಗುವಂ

ಕಂದ
ಕಂದಂ ಬಸಿರೊದೆವಂದಂ
ಬಂಧುರಮೀ ತಾಯ್ ಕುಲಾವಿಗನಸಿನ ಚಂದಂ
ಕಂದಂ ನಸುನಗುವೋಲ್ ಮೇಣ್
ಮುಂದೋಡುತ ಬಿಳ್ದು ಭೋರಿಡುವವೋಲ್ ನೆನೆವಳ್

ಮತ್ತೇಭವಿಕ್ರೀಡಿತ
ಮೆರೆವಳ್ ಮೋದದಿ ಮತ್ತೆ ಮೈಯ ಮರೆವಳ್ ಮತ್ತಾಲಸಂ ಬಾಧಿಸಲ್
ಒರಗುತ್ತುಂ ಕಿರು ಮಂಚದೊಳ್ ನಲುಮೆ ತೋಳ್ ಸಾಂಗತ್ಯಮಂ ಧೇನಿಪಳ್
ಕಿರಿದೊಂದೇ ಕ್ಷಣದೊಳ್ ಮನೋನಯನದೊಳ್ ಕಂದಂ ನಗುತ್ತೈತರಲ್
ಸಿರಿಯಂ ಕಂಡವೊಲಾಗಿ ಕಂಡ ಕನಸೊಳ್ ತೇಲುತ್ತಲಾನಂದಿಪಳ್

ರಗಳೆ
ಮೊದಲಿನ ಹಿಗ್ಗದು ಆಗಸಮುಟ್ಟಲ್
ಬೆದರಿಪ ಭಯವದು ಮೈ ಮನ ತಟ್ಟಲ್
ಬಗೆಬಗೆ ಬಯಕೆಯ ತೆನೆಯೊಡೆಯುತಿರಲ್
ಚಿಗುರುವ ಲತೆಯೊಲ್ ಬಸಿರದು ಬೆಳೆಯಲ್
ತೆಗೆವಾ ನೋವದು ಬೆಳೆದಿರೆ ಒಡಲೊಳ್
ಬಗೆಯೊಳ್ ಕಂದಂ ನೋವ ಮರೆಸಿರಲ್
ಬೆವರುತ ಸುಖದೊಳ್ ಬೆದರುತ ಭಯದೊಳ್
ನವೆವಳ್ ಬೆಳೆವಳ್ ಚೊಚ್ಚಲ ಬಸಿರೊಳ್
ಕೊ: ಗೆಳೆಯ ಚಂದ್ರಮೌಳಿಯವರು ಮೇಲಿನ ಉತ್ಫಲಮಾಲಾ ವೃತ್ತದ ಎರಡನೆಯ ಸಾಲಿನಲ್ಲಿ ಮೂರಕ್ಷರ ಹೆಚ್ಚಾಗಿ ಬಂದಿದೆಯೆಂಬುದನ್ನು ಗಮನಿಸಿದರು. ಇದನ್ನು ಸರಳವಾಗಿ ಸರಿಪಡಿಸಬಹುದಾದರೂ, ಅದೇಕೋ ಇದನ್ನು ಸರಿಪಡಿಸಲು ಮನಸ್ಸೊಪ್ಪುತ್ತಿಲ್ಲ. ಈ ಹೆಚ್ಚಿನ ಗಣವನ್ನು ಗರ್ಭಸ್ಥ ಶಿಶುವಿನ ಪ್ರತೀಕವೆಂದು ಹಾಗೆಯೇ ಉಳಿಸಿಕೊಳ್ಳುತ್ತೇನೆ:

ಆರರ ಮೇಲಿನೊಂದು ಗಣ ದೋಷಮದುತ್ಫಲ ಮಾಲೆಗೆಂದಪರ್
ಮೀರಿರೆ ಪದ್ಯದಂದಗಿಡುಗುಂ ಸರಿ ತೋರದು ಛಂದಕೆಂದಿರಲ್
ಆರನೆ ಕಾಲ್ವೆರಲ್ ದೊರೆಯ ಕಂದನ ಚಂದವ ಕೀಳುಗಟ್ಟಿತೇಂ
ಮೀರಿದ ಭಾರಮುತ್ಫಲಿತ ಗರ್ಭಕೆ ಶೋಭೆಯ ತರ್ಪುದೇ ದಿಟಂ

ಮರೆಯಲ್ ಭಾವದದೊಂದು ಜೋರ ಸೆಳೆಯೊಳ್ ಮೇಲಾಗಿ ಮೂರಕ್ಕರಂ
ನೆರೆಯಲ್ ತಾಳವು ತಪ್ಪಿ ಮುಗ್ಗರಿಸಲುಂ ಛಂದಸ್ಸದೇಂ ಬೇರೆಯೇಂ?
ಸರಿಯೈದೇವೆರಲಿದ್ದೊಡಂ ಮನುಜಗಾರಾಯ್ತೆಂದು ಬೇರಾದನೇಂ?
ಮರೆವೀ ಮಾನವ ಜನ್ಮಜಾತ ಗುಣವೈ ಬ್ರಹ್ಮಾದಿಗಳ್ ಮೀರರೇಂ?

ಪದ್ಯದಲ್ಲೊಂದು ಗಣ ಮೀರಿದರೆ ಛಂದಸ್ಸು ಕೆಡುವುದು, ನಿಜ. ಕಾಲಿಗೆ ಐದೇ ಬೆರಳಾದರೂ ಅಪರೂಪಕ್ಕೆ ಆರು ಬೆರಳಿರುವುದಿಲ್ಲವೇ? ಅದೇನು ಚಂದ್ರಹಾಸನ ಅಂದಗೆಡಿಸಿತೇ? ಮೀರಿದ ಭಾರವು ಬಸಿರಿನ ಶೋಭೆಯನ್ನು ಹೆಚ್ಚಿಸುವುದಲ್ಲದೇ ಕೆಡಿಸುವುದೇ? ಬ್ರಹ್ಮಾದಿಗಳೇ ಮರೆತು ಬೆರಳಿನ ಲೆಕ್ಕವನ್ನು ಹೆಚ್ಚು ಕಡಿಮೆ ಮಾಡುವಾಗ ಮರೆವು ಮನುಜನಿಗೆ ಸಹಜವಲ್ಲವೇ? :)

Saturday, January 7, 2012

ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 1: ಲಘು-ಗುರು

ಇತ್ತೀಚಿಗೆ ನಾನು ಛಂದೋಬದ್ಧ ರಚನೆಗಳಿಗೆ ಕೈಹಾಕಿದ ಮೇಲೆ ಇದರಲ್ಲಿ ಆಸಕ್ತಿ ತಳೆದ ಅನೇಕ ಮಿತ್ರರು, ಈ ಬಗ್ಗೆ ಸರಳವಾಗಿ, ಪ್ರಾಕ್ಟಿಕಲ್ ಆಗಿ ಏನಾದರೂ ಏಕೆ ಬರೆಯಬಾರದೆಂದು ಕೇಳಿದರು. ಛಂದಸ್ಸಿನ ಬಗ್ಗೆ, ಕಾವ್ಯದ ಬಗ್ಗೆ ತಿಳಿಸುವ ಸಾವಿರಾರು ಪುಸ್ತಕಗಳೂ ನೂರಾರು ವೆಬ್ ಸೈಟುಗಳೂ ಇರುವಾಗ ನನ್ನದೊಂದು ಮಾತಿನ ಅಗತ್ಯ ಇಲ್ಲಿ ಇದೆಯೇ ಎನ್ನಿಸಿತು. ಆದರೂ ಈ ಛಂದಸ್ಸಾಹಿತ್ಯರಾಶಿಯಲ್ಲಿ ನಮಗೆ ಬೇಕಾದ ನಿರ್ದಿಷ್ಟ ಪ್ರಶ್ನೆಗೆ ಉತ್ತರ ಹುಡುಕುವುದಕ್ಕಾದರೂ ಛಂದೋಜಗತ್ತಿನಲ್ಲಿ ತುಸು ಪ್ರವೃತ್ತಿ ಬೇಕಲ್ಲವೇ? ಅದನ್ನು ಹುಡುಕಿ ಓದುವವರಾರು, ಓದಿದರೂ ಯಾರೊಡನಾದರೂ personal ಆಗಿ ಚರ್ಚಿಸಿದಷ್ಟು ಪರಿಣಾಮ ಬೀರುತ್ತವೆಯೇ? ಈ ಹಿನ್ನೆಲೆಯೇನೂ ಇಲ್ಲದ, ಆದರೆ ಕಲಿಯುವ/ರಚಿಸುವ ಉತ್ಸಾಹವಂತೂ ಹೇರಳವಾಗಿರುವ ಕವಿಗಡಣಕ್ಕೇನು ದಾರಿ? ಈ ಅಗತ್ಯವನ್ನೂ ತುಂಬಿ ಕೊಡುವ ಪ್ರಯತ್ನಗಳೂ ಇಲ್ಲದಿಲ್ಲ. ಪ್ರೊ. ಅ.ರಾ.ಮಿತ್ರರ "ಛಂದೋಮಿತ್ರ" ಇಂಥದ್ದೊಂದು ಪ್ರಯತ್ನ. ಮಿತ್ರರಿಗೆ ವಿಶಿಷ್ಟವಾದ, ಸುಲಲಿತ ಹಾಸ್ಯಮಿಶ್ರಿತ ಶೈಲಿಯಲ್ಲಿ ಛಂದಶ್ಶಾಸ್ತ್ರದಂಥ ಗಂಭೀರ ವಿಷಯವನ್ನು ಸರಸವಾಗಿ ಹೇಳುವ ಶೈಲಿ ಅನ್ಯಾದೃಶ. ಆಯಾ ಛಂದಸ್ಸುಗಳನ್ನು ಆಯಾ ಛಂದಸ್ಸಿನ ಪದ್ಯಗಳಲ್ಲೇ ವಿವರಿಸುತ್ತಾ, ಅದೇ ಛಂದಸ್ಸಿನಲ್ಲಿ ಹಾಸ್ಯಮಿಶ್ರಿತವಾದ ಲಕ್ಷಣ ಪದ್ಯವನ್ನೂ ಕೊಡುವ ಈ ಪುಸ್ತಕ ಛಂದಶ್ಶಾಸ್ತ್ರಸಾಹಿತ್ಯದಲ್ಲಿ ಒಂದು ಅಪೂರ್ವ ಪ್ರಯತ್ನ. ಆದರೂ, ಇಷ್ಟು ಸುಲಲಿತ ಸರಳ ಶೈಲಿಯಿದ್ದಾಗ್ಯೂ ಈ ಪುಸ್ತಕವೂ ಪದ್ಯಭೂಯಿಷ್ಠವೇ ಆದ್ದರಿಂದ ಪದ್ಯವೆಂದರೆ ತುಸು ಕಣ್ಣೆಳೆಯುವ ಗುಂಪಿಗೆ ಇದನ್ನು ಇನ್ನೂ ಸರಳಗೊಳಿಸಿ ಲಲಿತ ಗದ್ಯದಲ್ಲಿ ಹೇಳುವ ಅಗತ್ಯವಿದೆಯೆನ್ನಿಸಿತು. ಹಾಗೆಯೇ ಛಂದಶ್ಶಾಸ್ತ್ರದ ಪಾಠಗಳನ್ನು ಸರಸ-ಗಂಭೀರವಾಗಿ ಪ್ರಾತ್ಯಕ್ಷಿಕೆಯೊಡನೆ ತಿಳಿಸಿಕೊಡುವ ಶ್ರೀ ಆರ್. ಗಣೇಶರ ವಿಡಿಯೋಗಳೂ ಇವೆ (http://www.padyapaana.com). ಪದ್ಯಪಾಠದ ಗಂಭೀರ ವಿದ್ಯಾರ್ಥಿಗಳಿಗೆ ಇದಕ್ಕಿಂತ ಹೇಳಿ ಮಾಡಿಸಿದ ತಾಣ ಇನ್ನೊಂದಿರಲಾರದು. ಈ ಪಾಠಗಳು ಬಹು ಸರಳವಾಗಿ, ಸ್ವಾರಸ್ಯಕರವಾಗಿದ್ದರೂ, ಇಲ್ಲಿಯೂ ಕಾವ್ಯರಚನೆಗೆ ಕೈಹಾಕಬೇಕಾದರೆ ತುಸುವಾದರೂ ಭಾಷಾಸಿದ್ಧತೆ ಬೇಕು.

ಆದರೆ ನನ್ನ ಈ ಲೇಖನ ಸರಣಿಯ audience ಈ ಗಂಭೀರ ವಿದ್ಯಾರ್ಥಿಗಳೂ ಅಲ್ಲ - ಈಗಷ್ಟೇ ಪದ್ಯರಚನೆಗೆ ಕೈಹಾಕಿ, ನವ್ಯ ಕವನಗಳ ಮಾದರಿಯ ಗದ್ಯರೂಪದ ಪದ್ಯಗಳನ್ನು ಬರೆಯುತ್ತಾ, ಛಂದಸ್ಸು, ಹಳಗನ್ನಡ ಇವುಗಳ ಗಂಧಗಾಳಿಯೂ ಇಲ್ಲದಿದ್ದರೂ ಛಂದೋಬದ್ಧವಾಗಿ ರಚಿಸಬೇಕೆಂಬ ಆಸಕ್ತಿ, ಆದರೆ ಲಘು-ಗುರುಗಳ ಮಾತ್ರೆ ನುಂಗಲು ಹೇವರಿಕೆ ಇವೆರಡೂ ಸಮಾನವಾಗಿ ಸಮ್ಮಿಳಿತವಾಗಿರುವ ಉತ್ಸಾಹೀ ಕವಿ ಕಿಶೋರರಿಗೆ, ಕಿಶೋರ ಕವಿಗಳಿಗೆ ಈ ಸರಣಿ ಅರ್ಪಿತ. ಅದಕ್ಕೆಂದೇ ತೀರ ತೀರ ಪ್ರಾಥಮಿಕ ಮಟ್ಟದಿಂದ ಆರಂಭಿಸಿ ಛಂದೋಪ್ರಪಂಚದ ಕೆಲವು ಹೊಳಹುಗಳನ್ನಷ್ಟೇ ಕಾಣಿಸುವುದು ಈ ಸರಣಿಯ ಉದ್ದೇಶ. ಇದರಿಂದ ಕಾವ್ಯಕ್ಕೆ ಲಯಪ್ರಾಸಗಳೂ ರುಚಿಕರ ವ್ಯಂಜನ ಹೌದೆಂಬ ವಿಷಯ ಉತ್ಸಾಹೀ ಓದುಗರ ಮನಕ್ಕೆ ಹತ್ತಿದರೆ, ಛಂದಸ್ಸನ್ನು ಗಂಭೀರವಾಗಿ ಅಧ್ಯಯನಮಾಡಬೇಕೆಂಬ ಹುಕ್ಕಿ ಬಂದರೆ, ನಾನು ಧನ್ಯ. ಒಮ್ಮೆ ಇದು ಬಂದಮೇಲೆ ಮೇಲ್ಕಾಣಿಸಿದ ಪುಸ್ತಕ-ಜಾಲತಾಣಗಳಿದ್ದೇ ಇವೆ; ಜೊತೆಗೆ ಅಪಾರ ಸಾಹಿತ್ಯವೂ ಇದೆ.

ಸರಣಿಯ ಹೆಸರೇ ಸೂಚಿಸುವಂತೆ ಕಾವ್ಯದ ಕುಣಿತದ ಭಾಗವನ್ನು ತೋರಿಸುವುದೇ ಈ ಸರಣಿಯ ಉದ್ದೇಶ. ಕುಣಿತ ಎಂಬುದರ ಬದಲು ನಡಿಗೆಯೆಂಬುದು ಹೆಚ್ಚು ಗಂಭೀರವಾಗಿರುತ್ತಿತ್ತಲ್ಲವೇ ಎಂಬ ಪ್ರಶ್ನೆಗೆ, "ಹೌದು, ಅದಕ್ಕೇ ನಡಿಗೆಯ ಬದಲು ಕುಣಿತ ಆದದ್ದು" ಎಂಬುದು ನನ್ನ ಉತ್ತರ. ಮೊದಲೇ ಹೇಳಿದಂತೆ ಕಾವ್ಯದ ಗಂಭೀರ ನಡಿಗೆಯನ್ನೂ ಗಜಗಮನವನ್ನೂ ತೋರಿಸುವ ಅನೇಕ ಪ್ರೌಢಾತಿಪ್ರೌಢ ಗ್ರಂಥಗಳು ಈಗಾಗಲೇ ಇವೆ. ಆದರೆ ಆಡುವ ಮಕ್ಕಳಿಗೆ ಬ್ರಹ್ಮಸೂತ್ರದಿಂದೇನು ಪ್ರಯೋಜನ?

ಮೊದಲೇ ಹೇಳಿದಂತೆ ಈ ಸರಣಿ ಕೇವಲ ಆರಂಭಿಕರಿಗೋಸ್ಕರ. ಪರಿಭಾಷೆಯನ್ನು ಆದಷ್ಟು ಕಡಿಮೆಗೊಳಿಸುವುದು ಇಲ್ಲಿ ಉದ್ದೇಶ. ಹಾಗೂ ಬಳಸಿದ ಪರಿಭಾಷೆಯಲ್ಲಿ ಸೂಕ್ಷ್ಮ ಅದಲುಬದಲು (interchange) ಆಗಲೂ ಬಹುದು. ಈ ಸರಣಿಯಲ್ಲಿ ಒಂದೊಂದು ಲೇಖನವೂ ಒಂದೊಂದು ಹೊಸ ವಸ್ತು-ವಿಷಯವನ್ನೊಳಗೊಂಡಿರುತ್ತದೆ. ಬರೆದಿದ್ದಕ್ಕೆ ತಕ್ಕಷ್ಟು ಉದಾಹರಣೆಗಳನ್ನೂ ಕೊಡುತ್ತೇನೆ. ಇದರ ಉದ್ದೇಶ ಸುಮ್ಮನೇ ಬರೆದು ಮರೆಯುವುದಲ್ಲ. ಆಸಕ್ತರು ತಾವೂ ಆಯಾ ಪ್ರಕಾರದಲ್ಲಿ ಪದ್ಯವನ್ನು ರಚಿಸಲು ಪ್ರಯತ್ನಿಸಬಹುದು. ನಿಜಕ್ಕೂ ಇದೊಂದು ಆಟದಂತೆ, ಹರಟೆ ಕಟ್ಟೆಯಂತೆ ಚೇತೋಹಾರಿಯಾಗಬೇಕೆಂದು ನನ್ನ ಆಸೆ. ಇಲ್ಲಿ ನೀವು ಮಾಮೂಲಾಗಿ ಹರಟಿದರೂ ಅಡ್ಡಿಯಿಲ್ಲ, ಒಬ್ಬರು ಇನ್ನೊಬ್ಬರ ಕಾಲೆಳೆದರೂ ಅಡ್ಡಿಯಿಲ್ಲ, ಆದರೆ ಒಂದೇ ಒಂದು ಶರತ್ತೆಂದರೆ ಹರಟಿದರೂ ಪದ್ಯದಲ್ಲೇ ಹರಟಬೇಕು, ಕಾಲೆಳೆದರೂ ಪದ್ಯದಲ್ಲೇ ಕಾಲೆಳೆಯಬೇಕು, ಒದ್ದರೂ ಪದ್ಯದಲ್ಲೇ ಒದೆಯಬೇಕು [:)]

ಇನ್ನು ಮುಂದುವರೆಯೋಣ. ಮೊದಲಿಗೆ, ಛಂದಸ್ಸು ಅಂದ್ರೆ ಏನು? ಛಂದಸ್ಸು ಅಂದ್ರೆ, ಕವನಕ್ಕೆ ಬೇಕಾದ ಲಯ, ಪ್ರಾಸಗಳ ಕಟ್ಟುಪಾಡು. ಅರೇ, ಒಂದು ನಿಮಿಷ! ಈ ಲಯ ಅಂದ್ರೆ ಏನಪ್ಪಾ?!!

ಈ ಕೆಳಗಿನ ಸಾಲುಗಳನ್ನು ನೋಡಿ (ಜೋರಾಗಿ ಹೇಳಿ, ಬೇಕಿದ್ರೆ ಕೈ ಚಪ್ಪಾಳೆ ಹಾಕಿಕೊಂಡು ಹೇಳಿ):

ಅನಂತದಿಂ ದಿಗಂತದಿಂ
ಅನಂತದಾ ದಿಗಂತದಿಂ|

ಏನಿದು ಧೂಳೀ ಓಹೋ ಗಾಳೀ
ಸುರ್ರನೆ ಬಂತೈ ಸುಂಟರಗಾಳೀ|

ಆಟಕ್ಕುಂಟೂ ಲೆಕ್ಕಕ್ಕಿಲ್ಲಾ|

ಬಂದಾ ಬಂದಾ ಸಣ್ ತಮ್ಮಣ್ಣಾ|

ಬೇಕೇ ಬೇಕೂ
ನ್ಯಾಯಾ ಬೇಕೂ|

ಲಗ್ಗ ಲಗಾ ಲಗಾ ಲಗಾ
ಲಗ್ಗ ಲಗಡಿ ಲಗಾ ಲಗಾ|

ಇಲ್ಲೊಂದು ಕುಣಿತದ ಸ್ಥಿತಿ ಕಾಣುತ್ತದೆ ಅಲ್ಲವೇ? ಅದೇ ಲಯ/rhythm. ಅದು ಹೇಗೆ ಬಂತು? ಹೇಗೆ ಅಂದ್ರೆ, ಕೆಲವು ಅಕ್ಷರಗಳು ಚಿಕ್ಕವು, ಕೆಲವು ಉದ್ದ; ಕೆಲವಕ್ಕೆ ಕಡಿಮೆ ಕಾಲ ತೆಗೆದುಕೊಂಡರೆ ಕೆಲವಕ್ಕೆ ಜಾಸ್ತಿ ಕಾಲ. ಅದಕ್ಕೇ ಅಲ್ಲೊಂದು ಕುಣಿತದ ಲಯ ಮೂಡಿಬರುತ್ತದೆ. ಅನೇಕ ವೇಳೆ ನಮಗೆ ಅರಿವಿಲ್ಲದೇ ನಾವು ಲಯಬದ್ಧವಾಗಿ ಮಾತಾಡಿಬಿಡುತ್ತೇವೆ. ಇನ್ನು ಮೇಲಿನ ಉದಾಹರಣೆ ತಗೊಂಡ್ರೆ, "ಅನಂತ" ಅನ್ನೋ ಪದಾನೇ ನೋಡಿ. ಅ ಎನ್ನುವ ಅಕ್ಷರದ ಎರಡರಷ್ಟು ಸಮಯ ನಂ ಅನ್ನುವ ಅಕ್ಷರಕ್ಕೆ ಬಂತು; ಹಾಗೇ ತ ಎಂಬ ಅಕ್ಷರವು ಅ ಎಂಬ ಅಕ್ಷರದಷ್ಟೇ ಸಮಯ ತೆಗೆದುಕೊಂಡಿತು. ಹೀಗೆ ಒಂದು ಎರಡರಷ್ಟು ಸಮಯ ತೆಗೆದುಕೊಳ್ಳುವ ಅಕ್ಷರಗಳನ್ನು ಯಾವುದೋ ಕ್ರಮದಲ್ಲಿ ಜೋಡಿಸಿದರೆ ಅಲ್ಲಿ ಲಯ ಮೂಡುತ್ತದೆ. ಉದಾಹರಣೆಗೆ ಲ(2)ಗ್ಗ(1) = 3; ಲ(1)ಗಾ(2) = 3; ಲ(1)ಗಾ(2) = 3; ಲ(1)ಗಾ(2) = 3 ಇಲ್ಲಿ ಮೂರುಮೂರಕ್ಷರದ 123,123,123,123 ಎನ್ನುವ ಲಯವನ್ನು ಕಾಣುತ್ತೇವಲ್ಲವೇ (ಮತ್ತೆ ಜೋರಾಗಿ ಓದಿ ನೋಡಿ)?

ಅಂದರೆ ಅಕ್ಷರಗಳನ್ನು ನುಡಿಯುವ ಕಾಲಾವಧಿಯೇ ಲಯಕ್ಕೆ ಮೂಲ ಎಂದಾಯಿತು. ಈ ಕಾಲಾವಧಿಯನ್ನೇ ಮಾತ್ರಾಕಾಲ ಅಂತೀವಿ. ಮಾತ್ರೆ ಎಂದರೆ ಒಂದು ಚಿಟಿಕೆ ಹಾಕುವಷ್ಟು ಕಾಲ (ಮಾತ್ರೆ ಅಂದ್ರೆ tablet ಅನ್ಕೊಂಡೀರಿ ಮತ್ತೆ [:)] ).

ಈ ಅಕ್ಷರಗಳನ್ನು ಎಲ್ಲೂ ನಿಲ್ಲಿಸದೇ ಜೋರಾಗಿ ಹೇಳಿ ನೋಡಿ:

ಅ, ಇ, ಉ, ಋ, ಎ, ಒ
ಕ, ಖ, ಗ, ಘ, ಙ, ಯ, ರ, ಲ, ವ...

ಇವನ್ನು ಹೇಳಲು ಒಂದು ಚಿಟಿಕೆಯಷ್ಟು ಕಾಲವಷ್ಟೇ ಬೇಕಾಗುವುದು. ಇದಕ್ಕೆ ಛಂದಸ್ಸಿನ ಭಾಷೆಯಲ್ಲಿ "ಲಘು" ಎನ್ನುತ್ತೇವೆ. ಬರಹದಲ್ಲಿ ಇದನ್ನು ( U ) ಎಂದು ಸೂಚಿಸುತ್ತೇವೆ.

ಇನ್ನು ಇವನ್ನು ಜೋರಾಗಿ ಹೇಳಿ:

ಆ, ಈ, ಊ, ೠ, ಏ, ಐ, ಓ, ಔ, ಅಂ, ಅಃ,
ಕಾ, ಖಾ, ಗಾ, ಘಾ, ಗೀ, ಮೀ, ಯೂ, ಲೇ, ರೌ...

ಇವನ್ನು ಹೇಳಲು ಮೇಲಿನ ಎರಡರಷ್ಟು ಕಾಲ ಬೇಕಾಗುವುದು (ಎರಡು ಚಿಟಿಕೆಯಷ್ಟು ಎನ್ನೋಣ). ಇದಕ್ಕೆ ಛಂದಸ್ಸಿನ ಭಾಷೆಯಲ್ಲಿ "ಗುರು" ಎನ್ನುತ್ತೇವೆ. ಬರಹದಲ್ಲಿ ಇದನ್ನು ( _ ) ಎಂದು ಸೂಚಿಸುತ್ತೇವೆ.

ಗಮನಿಸಿ: ಯಾವುದಾದರೂ ಒತ್ತಕ್ಷರದ ಹಿಂದಿರುವ ಅಕ್ಷರ ಸಹಜವಾಗಿಯೇ ಎಳೆಯುತ್ತದೆ. ಉದಾಹರಣೆಗೆ, ಅಣ್ಣ. ಇಲ್ಲಿ ಅ ಎನ್ನುವುದು ಒಂದೇ ಚಿಟುಕೆಯಲ್ಲಿ ಪೂರೈಸುವ ಅಕ್ಷರವಾದರೂ ಮುಂದೆ ಣ್ಣ ಇರುವುದರಿಂದ ಅ ಎಂಬ ಅಕ್ಷರ ಆ ಎಂಬಷ್ಟೇ ಕಾಲವನ್ನು ತೆಗೆದುಕೊಳ್ಳುತ್ತದೆ.

ಈ ಪದಗಳನ್ನು ಜೋರಾಗಿ ಹೇಳಿ ನೋಡಿ: ಅಣ - ಅಣ್ಣ, ಹಿಗು - ಹಿಗ್ಗು; ಬಕ - ಭಕ್ಷ್ಯ - ಇಲ್ಲೆಲ್ಲಾ ಮೊದಲನೆಯ ಪದದಲ್ಲಿ ಅ ಎನ್ನುವ ಅಕ್ಷರ ಮಾಮೂಲಾಗೇ ಬಂತು. ಎರಡನೆಯ ಪದಗಳಲ್ಲಿ ಅ ಎನ್ನುವುದು ಎರಡರಷ್ಟು ಸಮಯ ತೆಗೆದುಕೊಂಡಿತು.

ಆದ್ದರಿಂದ ಒತ್ತಕ್ಷರದ ಹಿಂದಿನ ಅಕ್ಷರವು ಲಘುವಾಗಿದ್ದರೂ ಅದನ್ನು ಗುರುವೆಂದೇ ಲೆಕ್ಕಹಾಕಬೇಕು
ಈ ಸರಣಿಯ ಮುಂದಿನ ಬರಹ ಇಲ್ಲಿದೆ.