Monday, July 31, 2017

ಅಥಾತೋ ಭೂತ ಜಿಜ್ಞಾಸಾ...

ಧೂರ್ತಲಕ್ಷಣವನ್ನು ವಿವರಿಸುವ ಸಂಸ್ಕೃತ ಸುಭಾಷಿತವೊಂದಿದೆ:

ಮುಖಂಪದ್ಮದಲಾಕಾರಂ ವಚಶ್ಚನ್ದನ ಶೀತಲಮ್
ಹೃತ್ ಕರ್ತರಿಸಮಂ ಚಾತಿವಿನಯಂ ಧೂರ್ತಲಕ್ಷಣಮ್

(ಮೊಗವು ತಾವರೆಯೆಸಳು ನುಡಿ ಚಂದನದ ತಂಪು
ಚಗಮೊಗನೆ ಮಸೆವ ಕತ್ತರಿಯೆದೆಯೊಳು
ಮಿಗುವ ಅತಿವಿನಯವೆಂಬೀ ನಾಲ್ಕು ಲಕ್ಷಣಗ
ಳೊಗೆದಿರಲು ಧೂರ್ತಲಕ್ಷಣವದೆಂಬರ್ 
    - ಅನುವಾದ ನನ್ನದೇ)

ಈ ಲಕ್ಷಣಗಳು ಸಾರ್ವಕಾಲಿಕವಷ್ಟೇ ಅಲ್ಲ, ಸಾರ್ವದೇಶಿಕವೂ ಹೌದು.  ಚಾರ್ಲ್ಸ್ ಡಿಕನ್ಸ್ ತನ್ನ ಅಮರಕೃತಿ ಡೇವಿಡ್ ಕಾಪರ್ ಫೀಲ್ಡ್ ಕಾದಂಬರಿಯಲ್ಲಿ ಉರಯ್ಯ ಹೀಪ್ (Uriah Heep) ಎಂಬ ಧೂರ್ತಶಿಖಾಮಣಿಯ ಪಾತ್ರವನ್ನು ಕಟ್ಟಿ ಕೊಡುತ್ತಾನೆ.  ಆತನ ಕೃತಕಾತಿಕೃತಕ ನಯ-ವಿನಯ, ಹಾವು ಬಳುಕಿದಂತೆ ಮೈಕೈ ಡೊಂಕಿಸಿಕೊಂಡು ಬಳಕುವ, ಹಾವಭಾವ ತುಂಬಿದ ಆತನ ನಲಿತ ನುಲಿತ, ಅದರ ಕೆಳಪದರದಲ್ಲಿ ಥಣ್ಣನೆ ಹರಿಯುವ, ಮಿಣ್ಣನೆ ಕತ್ತು ಕೊಯ್ಯಬಲ್ಲ ಕಪಟಾನುಸಂಧಾನ, ಅದನ್ನು ಮುಚ್ಚುವ ಸುಳಿನಗೆ, ಜೇನು-ಸಕ್ಕರೆ ಸವರಿದ ಮಾತು - ಈ ಪಾತ್ರ, ಮೇಲಿನ ಸುಭಾಷಿತಕ್ಕೆ ಲಕ್ಷ್ಯದಂತಿದೆ.  ತನ್ನ ಲಕ್ಷ್ಯಸಾಧನೆಗೆ ಈತ ಯಾವ ಸುಳ್ಳನ್ನು ಯಾರಿಗಾದರೂ ಹೇಳಬಲ್ಲ, ಯಾರ ಹಿತವನ್ನಾದರೂ ಬಲಿಗೊಡಬಲ್ಲ, ಶಿಕ್ಷೆಗೊಳಗಾದಾಗಲೂ ಶಿಕ್ಷೆಯನ್ನು ಅದೊಂದು ಮಹಾಪ್ರಾಯಶ್ಚಿತ್ತವೆಂಬಂತೆ ಪ್ರದರ್ಶಿಸುತ್ತಾ, ಮಹಾಧಾರ್ಮಿಕನಂತೆ ಧರ್ಮಗ್ರಂಥಗಳನ್ನು ಪಠಿಸುತ್ತಾ, ಪರಮಧಾರ್ಮಿಕನೇ ಆಗಿಬಿಡಬಲ್ಲ.  ಅಡಿಗಡಿಗೆ ಧರ್ಮಗ್ರಂಥಗಳಿಂದ ಉದ್ಧರಿಸುತ್ತಾ, ಸ್ವತಃ ತಾನೇ ನಂಬದ, ನೆಚ್ಚದ, ಆಚರಿಸದ ನೀತಿಯ ಪಾಠ ಮಾಡುತ್ತಾ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಬಲ್ಲ.  ಆ ಮೆಚ್ಚುಗೆಯನ್ನೇ ತನ್ನ ಚಿಮ್ಮುಗಲ್ಲಾಗಿ ಬಳಸಿಕೊಳ್ಳಬಲ್ಲ.

ಇಂಥಾ ಕಪಟಧರ್ಮಶ್ರವಣವನ್ನು Devil quoting from the scripture ಎನ್ನುತ್ತಾರೆ.  ಬಹುಶಃ ಈ ನಾಣ್ನುಡಿಗೆ ಮೂಲವಾಗಿರಬಹುದಾದ ಶೇಕ್ಸ್ಪಿಯರ್ ಮಹಾಕವಿಯ ಈ ಮಾತುಗಳನ್ನು ನೋಡಿ:
The devil can cite Scripture for his purpose.
An evil soul producing holy witness
Is like a villain with a smiling cheek,
A goodly apple rotten at the heart.
Oh, what a goodly outside falsehood hath!
    - Antonio to Shylack in Shakespere's "The Merchant of Venice"

ತನಗನುಕೂಲವೆನ್ನುವುದಾದರೆ ದೆವ್ವವೂ ದೈವವಾಕ್ಯಗಳನುದ್ಧರಿಸಿ ಕೊಟ್ಟೀತು
ದೇವರಾಣೆಯಿಡುವ ದುರಾತ್ಮ
ನಗೆಮೊಗದ ಖಳ
ಒಳಗೇ ಕೊಳೆತಿರುವ ದೈವೀ ಫಲ.
ಓಹ್, ಸುಳ್ಳತನಕೆಂತಹ ಸಾತ್ತ್ವಿಕತೆಯ ಮೊಗವಾಡ!
    - ಅಂತೋನಿಯೋ, ಶೈಲಾಕನಿಗೆ, ಶೇಕ್ಸ್ಪಿಯರನ "ದ ಮರ್ಚೆಂಟ್ಸ್ ಆಫ್ ವೆನಿಸ್" ನಾಟಕದಲ್ಲಿ

ಬಹುಶಃ ಇದೇ ನಾಣ್ನುಡಿಯಿಂದ ಪ್ರೇರಿತವಾದ ಹೊಸಗಾಲದ ಕನ್ನಡ ನಾಣ್ನುಡಿಯೊಂದು ಬಹು ಪ್ರಸಿದ್ಧವಾಗಿದೆ - "ಭೂತದ ಬಾಯಲ್ಲಿ ಭಗವದ್ಗೀತೆ"  ಭಗವದ್ಗೀತೆಯೂ ಭೂತವೂ ಸ್ವಭಾವತಃ ಪರಸ್ಪರ ವಿರುದ್ಧ ವಿಷಯಗಳು.  ಭಗವದ್ಗೀತೆಯು ಧರ್ಮವನ್ನು ಬೋಧಿಸಿದರೆ, ಅಧರ್ಮವೇ ಭೂತದ ಧರ್ಮ.  ಹೀಗೆ ಅಧರ್ಮಗಾಮಿಯಾದ ಭೂತವು ತನ್ನ ಬಲಿಪಶುವನ್ನು ನಂಬಿಸಿ ಸೆಳೆದೊಯ್ಯಲು ಭಗವದ್ಗೀತೆಯ ಅಗತ್ಯವಿದ್ದರೆ, ಅದನ್ನು ಬಳಸಲೂ ಹಿಂಜರಿಯದು.  ಅದಕ್ಕೆ ತಕ್ಕಂಥದ್ದೊಂದು ವೇಷ, ಭಾಷೆ, ಪರಿಭಾಷೆ ಹೊಂದಿಸಿಕೊಂಡರಾಯಿತು - ಭೂತವು ಇದರಲ್ಲೆಲ್ಲ ಎತ್ತಿದ ಕೈ.  ಭೂತದ ಮಾರುವೇಷ-ಭಾಷೆಗಳಿಗೆ ಮಾರುವೋದರೆ ಅದು ಹೇಗೆ ನಿಮ್ಮ ನೈತಿಕತೆಯ ಕತ್ತು ಹಿಸುಗಿ ನಿಮ್ಮಮೇಲೇ ಸವಾರಿ ಮಾಡಬಹುದು ಎಂಬುದನ್ನು ಪ್ರೊ. ಎನ್ ಎಸ್ ಲಕ್ಷ್ಮೀನಾರಾಯಣಭಟ್ಟರ ಈ ಕವನ ಸೊಗಸಾಗಿ ಚಿತ್ರಿಸುತ್ತದೆ:

ನಡುರಾತ್ರಿ ದೆವ್ವಗಳು
ಬಾಗಿಲನ್ನು ಬಡಿದವು,
ಯಾರೋ ಎಂದು ತೆರೆದೆ.
ಕಾಲಮೇಲೆ ಬಿದ್ದು
ಮುಳುಮುಳನೆ ಅತ್ತವು,
ಪಾಪ ! ಒಳಕ್ಕೆ ಕರೆದೆ.
ದೀನಮುಖ ಮಾಡಿ
ಕೈ ಹಿಡಿದು ಬೇಡಿದವು,
ಜೊತೆ ಹೋಗಲೊಪ್ಪಿದೆ.

ಅವು
ಇಟ್ಟ ಬೀದಿಗಳಲ್ಲಿ
ಬೀಗಿ ನಡೆದೆ,
ತೆರೆದ ಹಳ್ಳಗಳನ್ನು ಕೂಡಿ ಜಿಗಿದೆ.
ಕೊಟ್ಟ ತೀರ್ಥ ಕುಡಿದೆ
ಬಿಟ್ಟ ಹೆಣ್ಣನ್ನು ಮಿಡಿದೆ,
ಆಕಾಶಕ್ಕೆ ಮುಖ ಮಾಡಿ
ಸೂರ‍್ಯನಿಗೇ ಉಗಿದೆ.
ನೆಗೆದೆ.

ದೆವ್ವಗಳು ಕಲಿಸಿದ್ದೆಲ್ಲ
ಬಲು ವಿಚಿತ್ರ
ನಾಲ್ಕರಲ್ಲಿ ಎಂಟು ಕಳೆಯಬಹುದು,
ದಶಕದ ನೆರವಿಲ್ಲದೆ.
ಹೆಜ್ಜೆ ಊರದೆ ನೆಲಕ್ಕೆ ನಡೆಯಬಹುದು,
ಭಾರದ ಅರಿವಿಲ್ಲದೆ.
ಬೆಟ್ಟವನ್ನೇ ಬಗೆದು
ಗಾಳಿಯನ್ನೇ ಸಿಗಿದು
ಹೊಳೆಯಲ್ಲೂ ಮುಳುಗಬಹುದು,
ಕೂದಲೇ ನೆನೆಯದೆ.

ಆದರೆ ಒಂದು ವಿಷಯ;
ನೊಂದ ಜೀವಕ್ಕೆ ಮರುಗಿ
ಕಂಬನಿಯೊಂದ ಹಾಕಲು,
ತನ್ನ ಬೆವರೇ ಹರಿಸಿ
ತಿನ್ನುವ ಅನ್ನ ಬೇಯಿಸಲು,
ತರ್ಕ ಬಿಟ್ಟು ದೇವಾಲಯಕ್ಕೆ
ಸುತ್ತೊಂದನ್ನು ಹಾಕಲು
ಆಗುವುದೇ ಇಲ್ಲ.
ಬಲು ವಿಚಿತ್ರ ಎಂದರೆ
ಒಳಗಡೆ ಮಗು ಚೀರಿತೆನ್ನಿ,
ಕತ್ತು ಹಿಸುಕಿ ಕೊಂದಲ್ಲದೆ
ನಿದ್ದೆ ಬರುವುದಿಲ್ಲ!

ಅಂದಹಾಗೆ, ದೆವ್ವ-ಭೂತ ಮೂಢನಂಬಿಕೆಗಳನ್ನು ಹರಡುವ ಪ್ರಯತ್ನವೆಂದು ಮೂಗು ಮುರಿಯದಿರಿ - ಆ ನಂಬಿಕೆಯೇ ನನ್ನದಲ್ಲ.  ದೆವ್ವವಿದೆಯೆಂದು ಹೇಳಲಾಗುತ್ತಿದ್ದ ನಮ್ಮೂರ ನಾರಾಯಣಸ್ವಾಮಿಯ ರಥದ ಒಳಹೊರಗನ್ನೆಲ್ಲಾ ಹೊಕ್ಕು ನೋಡಿದ್ದೇನೆ, ಬಾಲ್ಯಕಾಲದಲ್ಲಿ.  ಹೆಸರಿಗಾದರೂ ಒಂದು ಪಿಳ್ಳೆ ದೆವ್ವವನ್ನು ಕಾಣಲಿಲ್ಲ.  ಆದ್ದರಿಂದ ಇಲ್ಲಿ ದೆವ್ವವೊಂದು ಸಂಕೇತವಷ್ಟೇ.  "ಎಲ್ಲಾ ಗುಣಗಳು ನಿನ್ನಲೆ ಅಡಗಿ ಕಾಳಗ ಮಾಡುತಿವೆ" ಎಂದು ನಮ್ಮ ರಾಜ್ ಕುಮಾರರು ಹಾಡಿಲ್ಲವೇ, ಬಹದ್ದೂರ್ ಗಂಡು ಸಿನಿಮಾದಲ್ಲಿ?  ಹಾಗೆ ದೈವ ದೆವ್ವಗಳೆರಡೂ ನಮ್ಮಲ್ಲಿಯೇ, ನಮ್ಮ ನಡುವೆಯೇ ಇವೆ - ಯಾವುದು ಏನು ಎಂದು ಒರೆಹಚ್ಚಿ ನಂಬುವ ಎಚ್ಚರ ಮಾತ್ರ ಅಗತ್ಯ; ಅದರಲ್ಲೂ ಭೂತಗಳೇ ಭಗವದ್ಗೀತೆಯನ್ನು ಜೋರೊಜೋರಾಗಿ ಪಠಿಸುವ ಈ ಕಾಲದಲ್ಲಂತೂ ಈ ಎಚ್ಚರ ಅತ್ಯವಶ್ಯ.  ಈ ಸುಭಾಷಿತ ಎಚ್ಚರದ ಗುಳಿಗೆಯಂತೆ ಕೆಲಸ ಮಾಡಬಹುದೇನೋ, ದಿನಕ್ಕೆ ಮೂರು ಬಾರಿ ಪಠಿಸಿದರೆ:

ಅಹೋ ದುರ್ಜನಸಂಸರ್ಗಾತ್ ಮಾನಹಾನಿಃ ಪದೇ ಪದೇ ।
ಪಾವಕೋ ಲೋಹಸಂಗೇನ ಮುದ್ಗರೈರಭಿತಾಡ್ಯತೇ
(ಆಹಾ! ದುರ್ಜನಸಂಸರ್ಗದಿಂದ ಪದೇಪದೇ ಮಾನಹಾನಿಯೇ ಕಟ್ಟಿಟ್ಟ ಬುತ್ತಿ; ಲೋಹದ ಸಂಗದಿಂದ ಅಗ್ನಿಗೂ ಸುತ್ತಿಗೆ ಪೆಟ್ಟು ಬೀಳುವಂತೆ)