Tuesday, January 17, 2012

ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 2: ಮಾತ್ರೆ-ಗಣ (ಮುಂದುವರೆದಿದೆ)

ಹಿಂದಿನ ಬರಹದಲ್ಲಿ ಲಘು-ಗುರು ಅಂದರೆ ಏನು ಅಂತ ತಿಳಿದುಕೊಂಡೆವು (ನೋಡಿಲ್ಲದೇ ಇದ್ದರೆ ಆ ಬರಹ ಇಲ್ಲಿದೆ ನೋಡಿ)

ಸುಮ್ಮನೇ ಒಂದು ಸಲ ನೆನಪಿಸಿಕೊಳ್ಳೋಣ. ಲಘು ಅಂದರೆ ಒಂದು ಚಿಟುಕೆ ಹೊಡೆಯುವಷ್ಟು ಕಾಲ. ಗುರು ಅಂದರೆ ಅದರ ಎರಡರಷ್ಟು ಕಾಲ. ಆದ್ದರಿಂದ ಸಾಮಾನ್ಯವಾಗಿ ಎಲ್ಲ ಹ್ರಸ್ವಾಕ್ಷರಗಳೂ ಲಘು; ಎಲ್ಲಾ ಧೀರ್ಘಾಕ್ಷರಗಳೂ ಗುರು. ಒತ್ತಕ್ಷರದ ಹಿಂದಿನ ಅಕ್ಷರ ಅದೇನೇ ಇದ್ದರೂ ಗುರುವೇ. ಸರಳವಾಗಿ ತಿಳಿಯಲು ಇದಿಷ್ಟು ಈಗ್ಗೆ ಸಾಕು. ಈಗ ಬಳಕೆಯಲ್ಲಿ ಈ ಲಘು-ಗುರುಗಳನ್ನು ಸ್ವಲ್ಪ ನೋಡೋಣ.

ಈ ಸಾಲುಗಳನ್ನು ಜೋರಾಗಿ ಓದಿ:

ಚಿಲಿಪಿಲಿ ಉಲಿಯುತ ನಲಿವುದೆ ಸೊಗಸು (ತಕ ತಕ ತಕ ತಕ ಎಂಬಂತೆ - ಚಿಲಿ| ಪಿಲಿ| ಉಲಿ| ಯುತ| ನಲಿ| ವುದೆ| ಸೊಗ| ಸು - ಇಲ್ಲೆಲ್ಲಾ ಎರಡೆರಡು ಮಾತ್ರೆಯ ಜೊತೆಯಾಗಿ ಬಂದಿದೆ)

ಇಲಿಯು ಗಣಪಗೊಲಿಯಿತು (ತಕಿಟ ತಕಿಟ ತಕಿಟ ಎಂಬಂತೆ - ಇಲಿಯು| ಗಣಪ| ಗೊಲಿಯಿ| ತು - ಇಲ್ಲಿ ಮೂರುಮೂರು ಮಾತ್ರೆಯ ಜೊತೆಗಳು ಬಂದುವು)

ತಲೆಯನು ಪರಪರ ಕೆರೆಯುತಲಿಹಳು (ತಕತಕ ತಕತಕ ತಕತಕ ಎಂಬಂತೆ - ತಲೆಯನು| ಪರಪರ| ಕೆರೆಯುತ| ಲಿಹಳು| - ಇಲ್ಲಿ ನಾಲ್ಕು ನಾಲ್ಕು ಮಾತ್ರೆಯ ಜೊತೆ)

ಮನೆಗೆಲಸ ಮುಗಿಸದೆಯೆ ತರಗತಿಗೆ ಹೊರಟ (ತಕತಕಿಟ ತಕತಕಿಟ ತಕತಕಿಟ ಎಂಬಂತೆ - ಮನೆಗೆಲಸ| ಮುಗಿಸದೆಯೆ| ತರಗತಿಗೆ| ಹೊರಟ| - ಇಲ್ಲಿ ಐದೈದು ಮಾತ್ರೆಯ ಜೊತೆ)

ಮನೆಯ ಕೆಲಸವ ಬರೆದು ಮುಗಿಸದೆ ತರಗತಿಗೆ ಇವ ಹೊರಟನು (ತಕಿಟತಕತಕ ತಕಿಟತಕತಕ ಎಂಬಂತೆ - ಮನೆಯ ಕೆಲಸವ| ಬರೆದು ಮುಗಿಸದೆ| ತರಗತಿಗೆ ಇವ| ಹೊರಟನು| - ಇಲ್ಲಿ ಏಳೇಳು ಮಾತ್ರೆಯ ಜೊತೆ)

ಇಲ್ಲಿ ನೀವು ಗಮನಿಸಬೇಕಾದ್ದು ಮೇಲೆ ಬಳಸಿರುವುದೆಲ್ಲಾ ಲಘು (U) ಅಕ್ಷರಗಳೇ! ಅಂದರೆ ಕೇವಲ ಒಂದು ಮಾತ್ರೆಯ (ಒಂದು ಚಿಟುಕೆ ಹೊಡೆಯುವಷ್ಟೇ) ಅಕ್ಷರಗಳು.

ಇದೇ ರೀತಿ ಕೆಲವು ಅಭ್ಯಾಸಗಳನ್ನು ಮಾಡೋಣವೇ? ಮೇಲೆ ಹೇಳಿದ ಯಾವುದಾದರೂ ಲಯದಲ್ಲಿ, ಬರೀ ಲಘು ಅಕ್ಷರಗಳನ್ನೇ ಬಳಸಿ ಏನಾದರೂ ಬರೆಯಿರಿ (ಅದು ಅದ್ಭುತ ಕಾವ್ಯವಾಗಿರಬೇಕಿಲ್ಲ, ಏನಾದರೂ ಆಗಬಹುದು)

ಈಗ ಈ ಸಾಲುಗಳನ್ನು ಜೋರಾಗಿ ಓದೋಣ.

ಕಾ ಕಾ ಕಾಗೇ ಬಂತೂ ನೋಡೀ (ತಾ ತಾ ತಾ ತಾ ಎಂಬಂತೆ - ಕಾ| ಕಾ| ಕಾ| ಗೇ| ಬಂ| ತೂ| ನೋ| ಡೀ| - ಇಲ್ಲಿ ಎರಡೆರಡು ಮಾತ್ರೆಗಳು ಬಂದಿದಿವೆ, ಆದರೆ ಒಂದೊಂದರ ಎರಡು ಲಘುವಿನ ಬದಲು ಒಂದೇ ಗುರು ಬಂದಿದೆ)

ಬಂದಾ ಬಂದಾ ಚಂದಾ ಮಾಮಾ (ತಾತಾ ತಾತಾ ತಾತಾ ತಾತಾ ಎಂಬಂತೆ - ಬಂದಾ| ಬಂದಾ| ಚಂದಾ| ಮಾಮಾ| - ಇಲ್ಲಿ ನಾಲ್ಕು ನಾಲ್ಕು ಮಾತ್ರೆಯ ಜೊತೆ, ಅಂದರೆ ಒಂದೊಂದು ಗುಂಪಿನಲ್ಲೂ ಎರಡೆರಡು ಗುರು)

ರಂಗಯ್ಯಾ ಬಂದವ್ನೇ ಬಾಗ್ಲಲ್ಲೀ ನಿಂದವ್ನೇ (ತಾತಾತಾ ತಾತಾತಾ ತಾತಾತಾ ತಾತಾತಾ ಎಂಬಂತೆ - ರಂಗಯ್ಯಾ| ಬಂದವ್ನೇ| ಬಾಗ್ಲಲ್ಲೀ| ನಿಂದವ್ನೇ| - ಇಲ್ಲಿ ಆರಾರು ಮಾತ್ರೆಯ ಜೊತೆ, ಅಂದರೆ ಒಂದೊಂದು ಗುಂಪಿನಲ್ಲೂ ಮೂರುಮೂರು ಗುರು)

ಇಲ್ಲಿ ನೀವು ಗಮನಿಸಬೇಕಾದ್ದು ಮೇಲೆ ಬಳಸಿರುವುದೆಲ್ಲಾ ಗುರು ( _ ) ಅಕ್ಷರಗಳೇ! ಅಂದರೆ ಎರಡು ಮಾತ್ರೆಯ (ಎರಡು ಚಿಟುಕೆ ಹೊಡೆಯುವಷ್ಟು) ಅಕ್ಷರಗಳು.

ಇದೇ ರೀತಿ ಕೆಲವು ಅಭ್ಯಾಸಗಳನ್ನು ಮಾಡೋಣವೇ? ಮೇಲೆ ಹೇಳಿದ ಯಾವುದಾದರೂ ಲಯದಲ್ಲಿ, ಬರೀ ಗುರು ಅಕ್ಷರಗಳನ್ನೇ ಬಳಸಿ ಏನಾದರೂ ಬರೆಯಿರಿ

ಗೆಳೆಯರೇ, ಇಲ್ಲಿಂದಾಚೆಗೆ ಇದು ನಿಮ್ಮೆಡೆಯಿಂದ ತುಸು ಅಭ್ಯಾಸವನ್ನು ನಿರೀಕ್ಷಿಸುತ್ತದೆ. ಅಭ್ಯಾಸರೂಪದ ಪ್ರತಿಕ್ರಿಯೆಗಳು ಬಂದಷ್ಟೂ ಮುಂದುವರೆಸಲು ಹುರುಪು.

ಇದು ಸ್ವಲ್ಪ ಕೈವಶವಾದ ನಂತರ ಮುಂದುವರೆಯೋಣ.

ಈ ಸರಣಿಯ ಮುಂದಿನ ಬರಹ ಇಲ್ಲಿದೆ.
 

Monday, January 9, 2012

ಚೊಚ್ಚಿಲ ಕಂದನನ್ನು ಕಾಯುತ್ತಾ

"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapaana.com) ವಿವಿಧ ಛಂದಸ್ಸುಗಳಲ್ಲಿ "ಚೊಚ್ಚಿಲ ಬಸಿರಿನ" ಬಗ್ಗೆ ಪದ್ಯಗಳನ್ನು ರಚಿಸುವ ಆಹ್ವಾನವಿತ್ತು. ಕವಯಿತ್ರಿಗಿರುವ ಅನುಭವ ಸಂಪತ್ತು ಈ ವಿಷಯದಲ್ಲಿ ಕವಿಗಿಲ್ಲವೆನ್ನುವುದೇನೋ ನಿಜ. ಆದರೂ ಕವಿಗಿರುವ ಕಲ್ಪನಾಸ್ವಾತಂತ್ರ್ಯವನ್ನು ತುಸು (ದುರ್)ಉಪಯೋಗ ಪಡಿಸಿಕೊಂಡಿದ್ದೇನೆ. ಇದರಲ್ಲಿ ’ಬುರುಡೆ-ಬುಡುಬುಡಿಕೆ’ಕಂಡುಬಂದರೆ ತಾಯಂದಿರು ಮನ್ನಿಸಿ.
ಪಂಚಮಾತ್ರಾ ಚೌಪದಿ
ಮುಗಿಲ ಮೊದಲನೆ ಮಳೆಗೆ ನೆನೆದ ಮಣ್ಣಿನ ಕಂಪು
ಮುಗಿದ ಹಚ್ಚನೆ ಮೊಗ್ಗು ಬಿರಿವ ಕೆಂಪು
ಬಗೆ-ಮೈಗಳುಬ್ಬೆ ಮೊದಲಬ್ಬೆತನದಾ ಪೆಂಪು
ನಗೆಸೂಸಿ ಹರಡುತಿದೆ ಮನೆಗೆ ತಂಪು.

ಉತ್ಫಲಮಾಲಾ
ಬೆಚ್ಚನೆ ರಾತ್ರೆಯೊಳ್ ಮನದಿ ಶಂಕೆಯು ಹಿಗ್ಗುತ ಚುಚ್ಚಿ ಕಾಡಿರಲ್
ಬೆಚ್ಚುತ ಚಿಂತಿಪಳ್ ಮಗುವಿದೇಂ ಮಲಗಿಪ್ಪುದೊ ಸತ್ತುದೊ ಕಾಣೆನೇ ಶಿವಾ
ಮುಚ್ಚಿದ ಕಂಗಳೊಳ್ ನಿದಿರೆ ಬಾರದೆ ಬೇಗುದಿ ಭಾರವಾಗಿರಲ್
ಕೆಚ್ಚನೆ ಕಾಲೊಳೊದ್ದು ಬಸಿರಂ ತನಯಂ ಹಿರಿ ಚಿಂತೆನೀಗುವಂ

ಕಂದ
ಕಂದಂ ಬಸಿರೊದೆವಂದಂ
ಬಂಧುರಮೀ ತಾಯ್ ಕುಲಾವಿಗನಸಿನ ಚಂದಂ
ಕಂದಂ ನಸುನಗುವೋಲ್ ಮೇಣ್
ಮುಂದೋಡುತ ಬಿಳ್ದು ಭೋರಿಡುವವೋಲ್ ನೆನೆವಳ್

ಮತ್ತೇಭವಿಕ್ರೀಡಿತ
ಮೆರೆವಳ್ ಮೋದದಿ ಮತ್ತೆ ಮೈಯ ಮರೆವಳ್ ಮತ್ತಾಲಸಂ ಬಾಧಿಸಲ್
ಒರಗುತ್ತುಂ ಕಿರು ಮಂಚದೊಳ್ ನಲುಮೆ ತೋಳ್ ಸಾಂಗತ್ಯಮಂ ಧೇನಿಪಳ್
ಕಿರಿದೊಂದೇ ಕ್ಷಣದೊಳ್ ಮನೋನಯನದೊಳ್ ಕಂದಂ ನಗುತ್ತೈತರಲ್
ಸಿರಿಯಂ ಕಂಡವೊಲಾಗಿ ಕಂಡ ಕನಸೊಳ್ ತೇಲುತ್ತಲಾನಂದಿಪಳ್

ರಗಳೆ
ಮೊದಲಿನ ಹಿಗ್ಗದು ಆಗಸಮುಟ್ಟಲ್
ಬೆದರಿಪ ಭಯವದು ಮೈ ಮನ ತಟ್ಟಲ್
ಬಗೆಬಗೆ ಬಯಕೆಯ ತೆನೆಯೊಡೆಯುತಿರಲ್
ಚಿಗುರುವ ಲತೆಯೊಲ್ ಬಸಿರದು ಬೆಳೆಯಲ್
ತೆಗೆವಾ ನೋವದು ಬೆಳೆದಿರೆ ಒಡಲೊಳ್
ಬಗೆಯೊಳ್ ಕಂದಂ ನೋವ ಮರೆಸಿರಲ್
ಬೆವರುತ ಸುಖದೊಳ್ ಬೆದರುತ ಭಯದೊಳ್
ನವೆವಳ್ ಬೆಳೆವಳ್ ಚೊಚ್ಚಲ ಬಸಿರೊಳ್
ಕೊ: ಗೆಳೆಯ ಚಂದ್ರಮೌಳಿಯವರು ಮೇಲಿನ ಉತ್ಫಲಮಾಲಾ ವೃತ್ತದ ಎರಡನೆಯ ಸಾಲಿನಲ್ಲಿ ಮೂರಕ್ಷರ ಹೆಚ್ಚಾಗಿ ಬಂದಿದೆಯೆಂಬುದನ್ನು ಗಮನಿಸಿದರು. ಇದನ್ನು ಸರಳವಾಗಿ ಸರಿಪಡಿಸಬಹುದಾದರೂ, ಅದೇಕೋ ಇದನ್ನು ಸರಿಪಡಿಸಲು ಮನಸ್ಸೊಪ್ಪುತ್ತಿಲ್ಲ. ಈ ಹೆಚ್ಚಿನ ಗಣವನ್ನು ಗರ್ಭಸ್ಥ ಶಿಶುವಿನ ಪ್ರತೀಕವೆಂದು ಹಾಗೆಯೇ ಉಳಿಸಿಕೊಳ್ಳುತ್ತೇನೆ:

ಆರರ ಮೇಲಿನೊಂದು ಗಣ ದೋಷಮದುತ್ಫಲ ಮಾಲೆಗೆಂದಪರ್
ಮೀರಿರೆ ಪದ್ಯದಂದಗಿಡುಗುಂ ಸರಿ ತೋರದು ಛಂದಕೆಂದಿರಲ್
ಆರನೆ ಕಾಲ್ವೆರಲ್ ದೊರೆಯ ಕಂದನ ಚಂದವ ಕೀಳುಗಟ್ಟಿತೇಂ
ಮೀರಿದ ಭಾರಮುತ್ಫಲಿತ ಗರ್ಭಕೆ ಶೋಭೆಯ ತರ್ಪುದೇ ದಿಟಂ

ಮರೆಯಲ್ ಭಾವದದೊಂದು ಜೋರ ಸೆಳೆಯೊಳ್ ಮೇಲಾಗಿ ಮೂರಕ್ಕರಂ
ನೆರೆಯಲ್ ತಾಳವು ತಪ್ಪಿ ಮುಗ್ಗರಿಸಲುಂ ಛಂದಸ್ಸದೇಂ ಬೇರೆಯೇಂ?
ಸರಿಯೈದೇವೆರಲಿದ್ದೊಡಂ ಮನುಜಗಾರಾಯ್ತೆಂದು ಬೇರಾದನೇಂ?
ಮರೆವೀ ಮಾನವ ಜನ್ಮಜಾತ ಗುಣವೈ ಬ್ರಹ್ಮಾದಿಗಳ್ ಮೀರರೇಂ?

ಪದ್ಯದಲ್ಲೊಂದು ಗಣ ಮೀರಿದರೆ ಛಂದಸ್ಸು ಕೆಡುವುದು, ನಿಜ. ಕಾಲಿಗೆ ಐದೇ ಬೆರಳಾದರೂ ಅಪರೂಪಕ್ಕೆ ಆರು ಬೆರಳಿರುವುದಿಲ್ಲವೇ? ಅದೇನು ಚಂದ್ರಹಾಸನ ಅಂದಗೆಡಿಸಿತೇ? ಮೀರಿದ ಭಾರವು ಬಸಿರಿನ ಶೋಭೆಯನ್ನು ಹೆಚ್ಚಿಸುವುದಲ್ಲದೇ ಕೆಡಿಸುವುದೇ? ಬ್ರಹ್ಮಾದಿಗಳೇ ಮರೆತು ಬೆರಳಿನ ಲೆಕ್ಕವನ್ನು ಹೆಚ್ಚು ಕಡಿಮೆ ಮಾಡುವಾಗ ಮರೆವು ಮನುಜನಿಗೆ ಸಹಜವಲ್ಲವೇ? :)

Saturday, January 7, 2012

ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು 1: ಲಘು-ಗುರು

ಇತ್ತೀಚಿಗೆ ನಾನು ಛಂದೋಬದ್ಧ ರಚನೆಗಳಿಗೆ ಕೈಹಾಕಿದ ಮೇಲೆ ಇದರಲ್ಲಿ ಆಸಕ್ತಿ ತಳೆದ ಅನೇಕ ಮಿತ್ರರು, ಈ ಬಗ್ಗೆ ಸರಳವಾಗಿ, ಪ್ರಾಕ್ಟಿಕಲ್ ಆಗಿ ಏನಾದರೂ ಏಕೆ ಬರೆಯಬಾರದೆಂದು ಕೇಳಿದರು. ಛಂದಸ್ಸಿನ ಬಗ್ಗೆ, ಕಾವ್ಯದ ಬಗ್ಗೆ ತಿಳಿಸುವ ಸಾವಿರಾರು ಪುಸ್ತಕಗಳೂ ನೂರಾರು ವೆಬ್ ಸೈಟುಗಳೂ ಇರುವಾಗ ನನ್ನದೊಂದು ಮಾತಿನ ಅಗತ್ಯ ಇಲ್ಲಿ ಇದೆಯೇ ಎನ್ನಿಸಿತು. ಆದರೂ ಈ ಛಂದಸ್ಸಾಹಿತ್ಯರಾಶಿಯಲ್ಲಿ ನಮಗೆ ಬೇಕಾದ ನಿರ್ದಿಷ್ಟ ಪ್ರಶ್ನೆಗೆ ಉತ್ತರ ಹುಡುಕುವುದಕ್ಕಾದರೂ ಛಂದೋಜಗತ್ತಿನಲ್ಲಿ ತುಸು ಪ್ರವೃತ್ತಿ ಬೇಕಲ್ಲವೇ? ಅದನ್ನು ಹುಡುಕಿ ಓದುವವರಾರು, ಓದಿದರೂ ಯಾರೊಡನಾದರೂ personal ಆಗಿ ಚರ್ಚಿಸಿದಷ್ಟು ಪರಿಣಾಮ ಬೀರುತ್ತವೆಯೇ? ಈ ಹಿನ್ನೆಲೆಯೇನೂ ಇಲ್ಲದ, ಆದರೆ ಕಲಿಯುವ/ರಚಿಸುವ ಉತ್ಸಾಹವಂತೂ ಹೇರಳವಾಗಿರುವ ಕವಿಗಡಣಕ್ಕೇನು ದಾರಿ? ಈ ಅಗತ್ಯವನ್ನೂ ತುಂಬಿ ಕೊಡುವ ಪ್ರಯತ್ನಗಳೂ ಇಲ್ಲದಿಲ್ಲ. ಪ್ರೊ. ಅ.ರಾ.ಮಿತ್ರರ "ಛಂದೋಮಿತ್ರ" ಇಂಥದ್ದೊಂದು ಪ್ರಯತ್ನ. ಮಿತ್ರರಿಗೆ ವಿಶಿಷ್ಟವಾದ, ಸುಲಲಿತ ಹಾಸ್ಯಮಿಶ್ರಿತ ಶೈಲಿಯಲ್ಲಿ ಛಂದಶ್ಶಾಸ್ತ್ರದಂಥ ಗಂಭೀರ ವಿಷಯವನ್ನು ಸರಸವಾಗಿ ಹೇಳುವ ಶೈಲಿ ಅನ್ಯಾದೃಶ. ಆಯಾ ಛಂದಸ್ಸುಗಳನ್ನು ಆಯಾ ಛಂದಸ್ಸಿನ ಪದ್ಯಗಳಲ್ಲೇ ವಿವರಿಸುತ್ತಾ, ಅದೇ ಛಂದಸ್ಸಿನಲ್ಲಿ ಹಾಸ್ಯಮಿಶ್ರಿತವಾದ ಲಕ್ಷಣ ಪದ್ಯವನ್ನೂ ಕೊಡುವ ಈ ಪುಸ್ತಕ ಛಂದಶ್ಶಾಸ್ತ್ರಸಾಹಿತ್ಯದಲ್ಲಿ ಒಂದು ಅಪೂರ್ವ ಪ್ರಯತ್ನ. ಆದರೂ, ಇಷ್ಟು ಸುಲಲಿತ ಸರಳ ಶೈಲಿಯಿದ್ದಾಗ್ಯೂ ಈ ಪುಸ್ತಕವೂ ಪದ್ಯಭೂಯಿಷ್ಠವೇ ಆದ್ದರಿಂದ ಪದ್ಯವೆಂದರೆ ತುಸು ಕಣ್ಣೆಳೆಯುವ ಗುಂಪಿಗೆ ಇದನ್ನು ಇನ್ನೂ ಸರಳಗೊಳಿಸಿ ಲಲಿತ ಗದ್ಯದಲ್ಲಿ ಹೇಳುವ ಅಗತ್ಯವಿದೆಯೆನ್ನಿಸಿತು. ಹಾಗೆಯೇ ಛಂದಶ್ಶಾಸ್ತ್ರದ ಪಾಠಗಳನ್ನು ಸರಸ-ಗಂಭೀರವಾಗಿ ಪ್ರಾತ್ಯಕ್ಷಿಕೆಯೊಡನೆ ತಿಳಿಸಿಕೊಡುವ ಶ್ರೀ ಆರ್. ಗಣೇಶರ ವಿಡಿಯೋಗಳೂ ಇವೆ (http://www.padyapaana.com). ಪದ್ಯಪಾಠದ ಗಂಭೀರ ವಿದ್ಯಾರ್ಥಿಗಳಿಗೆ ಇದಕ್ಕಿಂತ ಹೇಳಿ ಮಾಡಿಸಿದ ತಾಣ ಇನ್ನೊಂದಿರಲಾರದು. ಈ ಪಾಠಗಳು ಬಹು ಸರಳವಾಗಿ, ಸ್ವಾರಸ್ಯಕರವಾಗಿದ್ದರೂ, ಇಲ್ಲಿಯೂ ಕಾವ್ಯರಚನೆಗೆ ಕೈಹಾಕಬೇಕಾದರೆ ತುಸುವಾದರೂ ಭಾಷಾಸಿದ್ಧತೆ ಬೇಕು.

ಆದರೆ ನನ್ನ ಈ ಲೇಖನ ಸರಣಿಯ audience ಈ ಗಂಭೀರ ವಿದ್ಯಾರ್ಥಿಗಳೂ ಅಲ್ಲ - ಈಗಷ್ಟೇ ಪದ್ಯರಚನೆಗೆ ಕೈಹಾಕಿ, ನವ್ಯ ಕವನಗಳ ಮಾದರಿಯ ಗದ್ಯರೂಪದ ಪದ್ಯಗಳನ್ನು ಬರೆಯುತ್ತಾ, ಛಂದಸ್ಸು, ಹಳಗನ್ನಡ ಇವುಗಳ ಗಂಧಗಾಳಿಯೂ ಇಲ್ಲದಿದ್ದರೂ ಛಂದೋಬದ್ಧವಾಗಿ ರಚಿಸಬೇಕೆಂಬ ಆಸಕ್ತಿ, ಆದರೆ ಲಘು-ಗುರುಗಳ ಮಾತ್ರೆ ನುಂಗಲು ಹೇವರಿಕೆ ಇವೆರಡೂ ಸಮಾನವಾಗಿ ಸಮ್ಮಿಳಿತವಾಗಿರುವ ಉತ್ಸಾಹೀ ಕವಿ ಕಿಶೋರರಿಗೆ, ಕಿಶೋರ ಕವಿಗಳಿಗೆ ಈ ಸರಣಿ ಅರ್ಪಿತ. ಅದಕ್ಕೆಂದೇ ತೀರ ತೀರ ಪ್ರಾಥಮಿಕ ಮಟ್ಟದಿಂದ ಆರಂಭಿಸಿ ಛಂದೋಪ್ರಪಂಚದ ಕೆಲವು ಹೊಳಹುಗಳನ್ನಷ್ಟೇ ಕಾಣಿಸುವುದು ಈ ಸರಣಿಯ ಉದ್ದೇಶ. ಇದರಿಂದ ಕಾವ್ಯಕ್ಕೆ ಲಯಪ್ರಾಸಗಳೂ ರುಚಿಕರ ವ್ಯಂಜನ ಹೌದೆಂಬ ವಿಷಯ ಉತ್ಸಾಹೀ ಓದುಗರ ಮನಕ್ಕೆ ಹತ್ತಿದರೆ, ಛಂದಸ್ಸನ್ನು ಗಂಭೀರವಾಗಿ ಅಧ್ಯಯನಮಾಡಬೇಕೆಂಬ ಹುಕ್ಕಿ ಬಂದರೆ, ನಾನು ಧನ್ಯ. ಒಮ್ಮೆ ಇದು ಬಂದಮೇಲೆ ಮೇಲ್ಕಾಣಿಸಿದ ಪುಸ್ತಕ-ಜಾಲತಾಣಗಳಿದ್ದೇ ಇವೆ; ಜೊತೆಗೆ ಅಪಾರ ಸಾಹಿತ್ಯವೂ ಇದೆ.

ಸರಣಿಯ ಹೆಸರೇ ಸೂಚಿಸುವಂತೆ ಕಾವ್ಯದ ಕುಣಿತದ ಭಾಗವನ್ನು ತೋರಿಸುವುದೇ ಈ ಸರಣಿಯ ಉದ್ದೇಶ. ಕುಣಿತ ಎಂಬುದರ ಬದಲು ನಡಿಗೆಯೆಂಬುದು ಹೆಚ್ಚು ಗಂಭೀರವಾಗಿರುತ್ತಿತ್ತಲ್ಲವೇ ಎಂಬ ಪ್ರಶ್ನೆಗೆ, "ಹೌದು, ಅದಕ್ಕೇ ನಡಿಗೆಯ ಬದಲು ಕುಣಿತ ಆದದ್ದು" ಎಂಬುದು ನನ್ನ ಉತ್ತರ. ಮೊದಲೇ ಹೇಳಿದಂತೆ ಕಾವ್ಯದ ಗಂಭೀರ ನಡಿಗೆಯನ್ನೂ ಗಜಗಮನವನ್ನೂ ತೋರಿಸುವ ಅನೇಕ ಪ್ರೌಢಾತಿಪ್ರೌಢ ಗ್ರಂಥಗಳು ಈಗಾಗಲೇ ಇವೆ. ಆದರೆ ಆಡುವ ಮಕ್ಕಳಿಗೆ ಬ್ರಹ್ಮಸೂತ್ರದಿಂದೇನು ಪ್ರಯೋಜನ?

ಮೊದಲೇ ಹೇಳಿದಂತೆ ಈ ಸರಣಿ ಕೇವಲ ಆರಂಭಿಕರಿಗೋಸ್ಕರ. ಪರಿಭಾಷೆಯನ್ನು ಆದಷ್ಟು ಕಡಿಮೆಗೊಳಿಸುವುದು ಇಲ್ಲಿ ಉದ್ದೇಶ. ಹಾಗೂ ಬಳಸಿದ ಪರಿಭಾಷೆಯಲ್ಲಿ ಸೂಕ್ಷ್ಮ ಅದಲುಬದಲು (interchange) ಆಗಲೂ ಬಹುದು. ಈ ಸರಣಿಯಲ್ಲಿ ಒಂದೊಂದು ಲೇಖನವೂ ಒಂದೊಂದು ಹೊಸ ವಸ್ತು-ವಿಷಯವನ್ನೊಳಗೊಂಡಿರುತ್ತದೆ. ಬರೆದಿದ್ದಕ್ಕೆ ತಕ್ಕಷ್ಟು ಉದಾಹರಣೆಗಳನ್ನೂ ಕೊಡುತ್ತೇನೆ. ಇದರ ಉದ್ದೇಶ ಸುಮ್ಮನೇ ಬರೆದು ಮರೆಯುವುದಲ್ಲ. ಆಸಕ್ತರು ತಾವೂ ಆಯಾ ಪ್ರಕಾರದಲ್ಲಿ ಪದ್ಯವನ್ನು ರಚಿಸಲು ಪ್ರಯತ್ನಿಸಬಹುದು. ನಿಜಕ್ಕೂ ಇದೊಂದು ಆಟದಂತೆ, ಹರಟೆ ಕಟ್ಟೆಯಂತೆ ಚೇತೋಹಾರಿಯಾಗಬೇಕೆಂದು ನನ್ನ ಆಸೆ. ಇಲ್ಲಿ ನೀವು ಮಾಮೂಲಾಗಿ ಹರಟಿದರೂ ಅಡ್ಡಿಯಿಲ್ಲ, ಒಬ್ಬರು ಇನ್ನೊಬ್ಬರ ಕಾಲೆಳೆದರೂ ಅಡ್ಡಿಯಿಲ್ಲ, ಆದರೆ ಒಂದೇ ಒಂದು ಶರತ್ತೆಂದರೆ ಹರಟಿದರೂ ಪದ್ಯದಲ್ಲೇ ಹರಟಬೇಕು, ಕಾಲೆಳೆದರೂ ಪದ್ಯದಲ್ಲೇ ಕಾಲೆಳೆಯಬೇಕು, ಒದ್ದರೂ ಪದ್ಯದಲ್ಲೇ ಒದೆಯಬೇಕು [:)]

ಇನ್ನು ಮುಂದುವರೆಯೋಣ. ಮೊದಲಿಗೆ, ಛಂದಸ್ಸು ಅಂದ್ರೆ ಏನು? ಛಂದಸ್ಸು ಅಂದ್ರೆ, ಕವನಕ್ಕೆ ಬೇಕಾದ ಲಯ, ಪ್ರಾಸಗಳ ಕಟ್ಟುಪಾಡು. ಅರೇ, ಒಂದು ನಿಮಿಷ! ಈ ಲಯ ಅಂದ್ರೆ ಏನಪ್ಪಾ?!!

ಈ ಕೆಳಗಿನ ಸಾಲುಗಳನ್ನು ನೋಡಿ (ಜೋರಾಗಿ ಹೇಳಿ, ಬೇಕಿದ್ರೆ ಕೈ ಚಪ್ಪಾಳೆ ಹಾಕಿಕೊಂಡು ಹೇಳಿ):

ಅನಂತದಿಂ ದಿಗಂತದಿಂ
ಅನಂತದಾ ದಿಗಂತದಿಂ|

ಏನಿದು ಧೂಳೀ ಓಹೋ ಗಾಳೀ
ಸುರ್ರನೆ ಬಂತೈ ಸುಂಟರಗಾಳೀ|

ಆಟಕ್ಕುಂಟೂ ಲೆಕ್ಕಕ್ಕಿಲ್ಲಾ|

ಬಂದಾ ಬಂದಾ ಸಣ್ ತಮ್ಮಣ್ಣಾ|

ಬೇಕೇ ಬೇಕೂ
ನ್ಯಾಯಾ ಬೇಕೂ|

ಲಗ್ಗ ಲಗಾ ಲಗಾ ಲಗಾ
ಲಗ್ಗ ಲಗಡಿ ಲಗಾ ಲಗಾ|

ಇಲ್ಲೊಂದು ಕುಣಿತದ ಸ್ಥಿತಿ ಕಾಣುತ್ತದೆ ಅಲ್ಲವೇ? ಅದೇ ಲಯ/rhythm. ಅದು ಹೇಗೆ ಬಂತು? ಹೇಗೆ ಅಂದ್ರೆ, ಕೆಲವು ಅಕ್ಷರಗಳು ಚಿಕ್ಕವು, ಕೆಲವು ಉದ್ದ; ಕೆಲವಕ್ಕೆ ಕಡಿಮೆ ಕಾಲ ತೆಗೆದುಕೊಂಡರೆ ಕೆಲವಕ್ಕೆ ಜಾಸ್ತಿ ಕಾಲ. ಅದಕ್ಕೇ ಅಲ್ಲೊಂದು ಕುಣಿತದ ಲಯ ಮೂಡಿಬರುತ್ತದೆ. ಅನೇಕ ವೇಳೆ ನಮಗೆ ಅರಿವಿಲ್ಲದೇ ನಾವು ಲಯಬದ್ಧವಾಗಿ ಮಾತಾಡಿಬಿಡುತ್ತೇವೆ. ಇನ್ನು ಮೇಲಿನ ಉದಾಹರಣೆ ತಗೊಂಡ್ರೆ, "ಅನಂತ" ಅನ್ನೋ ಪದಾನೇ ನೋಡಿ. ಅ ಎನ್ನುವ ಅಕ್ಷರದ ಎರಡರಷ್ಟು ಸಮಯ ನಂ ಅನ್ನುವ ಅಕ್ಷರಕ್ಕೆ ಬಂತು; ಹಾಗೇ ತ ಎಂಬ ಅಕ್ಷರವು ಅ ಎಂಬ ಅಕ್ಷರದಷ್ಟೇ ಸಮಯ ತೆಗೆದುಕೊಂಡಿತು. ಹೀಗೆ ಒಂದು ಎರಡರಷ್ಟು ಸಮಯ ತೆಗೆದುಕೊಳ್ಳುವ ಅಕ್ಷರಗಳನ್ನು ಯಾವುದೋ ಕ್ರಮದಲ್ಲಿ ಜೋಡಿಸಿದರೆ ಅಲ್ಲಿ ಲಯ ಮೂಡುತ್ತದೆ. ಉದಾಹರಣೆಗೆ ಲ(2)ಗ್ಗ(1) = 3; ಲ(1)ಗಾ(2) = 3; ಲ(1)ಗಾ(2) = 3; ಲ(1)ಗಾ(2) = 3 ಇಲ್ಲಿ ಮೂರುಮೂರಕ್ಷರದ 123,123,123,123 ಎನ್ನುವ ಲಯವನ್ನು ಕಾಣುತ್ತೇವಲ್ಲವೇ (ಮತ್ತೆ ಜೋರಾಗಿ ಓದಿ ನೋಡಿ)?

ಅಂದರೆ ಅಕ್ಷರಗಳನ್ನು ನುಡಿಯುವ ಕಾಲಾವಧಿಯೇ ಲಯಕ್ಕೆ ಮೂಲ ಎಂದಾಯಿತು. ಈ ಕಾಲಾವಧಿಯನ್ನೇ ಮಾತ್ರಾಕಾಲ ಅಂತೀವಿ. ಮಾತ್ರೆ ಎಂದರೆ ಒಂದು ಚಿಟಿಕೆ ಹಾಕುವಷ್ಟು ಕಾಲ (ಮಾತ್ರೆ ಅಂದ್ರೆ tablet ಅನ್ಕೊಂಡೀರಿ ಮತ್ತೆ [:)] ).

ಈ ಅಕ್ಷರಗಳನ್ನು ಎಲ್ಲೂ ನಿಲ್ಲಿಸದೇ ಜೋರಾಗಿ ಹೇಳಿ ನೋಡಿ:

ಅ, ಇ, ಉ, ಋ, ಎ, ಒ
ಕ, ಖ, ಗ, ಘ, ಙ, ಯ, ರ, ಲ, ವ...

ಇವನ್ನು ಹೇಳಲು ಒಂದು ಚಿಟಿಕೆಯಷ್ಟು ಕಾಲವಷ್ಟೇ ಬೇಕಾಗುವುದು. ಇದಕ್ಕೆ ಛಂದಸ್ಸಿನ ಭಾಷೆಯಲ್ಲಿ "ಲಘು" ಎನ್ನುತ್ತೇವೆ. ಬರಹದಲ್ಲಿ ಇದನ್ನು ( U ) ಎಂದು ಸೂಚಿಸುತ್ತೇವೆ.

ಇನ್ನು ಇವನ್ನು ಜೋರಾಗಿ ಹೇಳಿ:

ಆ, ಈ, ಊ, ೠ, ಏ, ಐ, ಓ, ಔ, ಅಂ, ಅಃ,
ಕಾ, ಖಾ, ಗಾ, ಘಾ, ಗೀ, ಮೀ, ಯೂ, ಲೇ, ರೌ...

ಇವನ್ನು ಹೇಳಲು ಮೇಲಿನ ಎರಡರಷ್ಟು ಕಾಲ ಬೇಕಾಗುವುದು (ಎರಡು ಚಿಟಿಕೆಯಷ್ಟು ಎನ್ನೋಣ). ಇದಕ್ಕೆ ಛಂದಸ್ಸಿನ ಭಾಷೆಯಲ್ಲಿ "ಗುರು" ಎನ್ನುತ್ತೇವೆ. ಬರಹದಲ್ಲಿ ಇದನ್ನು ( _ ) ಎಂದು ಸೂಚಿಸುತ್ತೇವೆ.

ಗಮನಿಸಿ: ಯಾವುದಾದರೂ ಒತ್ತಕ್ಷರದ ಹಿಂದಿರುವ ಅಕ್ಷರ ಸಹಜವಾಗಿಯೇ ಎಳೆಯುತ್ತದೆ. ಉದಾಹರಣೆಗೆ, ಅಣ್ಣ. ಇಲ್ಲಿ ಅ ಎನ್ನುವುದು ಒಂದೇ ಚಿಟುಕೆಯಲ್ಲಿ ಪೂರೈಸುವ ಅಕ್ಷರವಾದರೂ ಮುಂದೆ ಣ್ಣ ಇರುವುದರಿಂದ ಅ ಎಂಬ ಅಕ್ಷರ ಆ ಎಂಬಷ್ಟೇ ಕಾಲವನ್ನು ತೆಗೆದುಕೊಳ್ಳುತ್ತದೆ.

ಈ ಪದಗಳನ್ನು ಜೋರಾಗಿ ಹೇಳಿ ನೋಡಿ: ಅಣ - ಅಣ್ಣ, ಹಿಗು - ಹಿಗ್ಗು; ಬಕ - ಭಕ್ಷ್ಯ - ಇಲ್ಲೆಲ್ಲಾ ಮೊದಲನೆಯ ಪದದಲ್ಲಿ ಅ ಎನ್ನುವ ಅಕ್ಷರ ಮಾಮೂಲಾಗೇ ಬಂತು. ಎರಡನೆಯ ಪದಗಳಲ್ಲಿ ಅ ಎನ್ನುವುದು ಎರಡರಷ್ಟು ಸಮಯ ತೆಗೆದುಕೊಂಡಿತು.

ಆದ್ದರಿಂದ ಒತ್ತಕ್ಷರದ ಹಿಂದಿನ ಅಕ್ಷರವು ಲಘುವಾಗಿದ್ದರೂ ಅದನ್ನು ಗುರುವೆಂದೇ ಲೆಕ್ಕಹಾಕಬೇಕು
ಈ ಸರಣಿಯ ಮುಂದಿನ ಬರಹ ಇಲ್ಲಿದೆ.