Sunday, March 25, 2007

ಹಗೆ

ಮತ್ತೊಂದು ಅನುವಾದ; ಮೂಲ James Stephens:

ಆವೊತ್ತು ಸಿಕ್ಕಿದ್ದ ಅವನು,
ನಾನು
ದಿಟ್ಟಿಸಿದೆ, ಬಿಗಿದ ತುಟಿ, ಸಿಟ್ಟು, ಕಿರುಗಣ್ಣ
ನೆಟ್ಟ ನೋಟವ ತೂರಿ ಅವನ ಮುಖದೊಳಗೆ;
ಪಕ್ಕಕ್ಕೆ ಸರಿದು ಕಾಲ್ದೆಗೆಯಲಿರುವಷ್ಟರಲಿ, ಆ ನನ್ನ ಹಗೆಗಾರ -
ಕಲ್ಲೆದೆಯ ಕಾಡಾಡಿ - ನುಡಿದ:
"ಮುಂದೊಂದು ದಿನ, ಇಂದು ಹಿಂದಾದಂದು,
ನಮ್ಮೆಲ್ಲ ಅಸ್ತ್ರ ಪ್ರತ್ಯಸ್ತ್ರಗಳ ಬತ್ತಳಿಕೆ ಬರಿದಾದಂದು
ನಮಗನ್ನಿಸೀತು, ನಾವಿಷ್ಟೊಂದು ದ್ವೇಷಿಸುತ್ತೀವೇಕೆ,
ಸಿಕ್ಕೀತೆ ಹೇಳು ನೆಪವೊಂದಾದರೂ ಅದಕೆ?
ನಮ್ಮ ಹಗೆಯೇ ದೊಡ್ಡ ಒಗಟಂತೆ ಕಂಡೀತು"

ಇಷ್ಟು ಹೇಳಿದ ಅವನು
ಹಿಂದಿರುಗಲಿಲ್ಲ;
ಕಾದ,
ತಿಳೀಯಲು ನನ್ನ ಮನದ ಸೊಲ್ಲ.
ನಾ
ಒಂದು ಕ್ಷಣ ತಡೆದರೂ
ಪ್ರಿಯೆಯ ಮುದ್ದಿಸುವಂತೆ
ನಾನವನ ಮುದ್ದಿಸಿಯೇ ಬಿಡಬಹುದೆನಿಸಿ ಭಯವಾಗಿ...
ಥಟ್ಟನೇ ಓಡಿದೆನು ಅತ್ತ ಜರುಗಿ.

- ೦೬/೦೪/೧೯೯೭

ಮೂಲ:
Hate

My enemy came nigh,
And I
Stared fiercely in his face.
My lips went withing back in grimace,
And stern I watched him with a narrow eye.
Then, as I turned away, my enemy,
That bitter heart and savage, said to me:
"Someday, when this is past,
When all the arrows that we have are cast,
We may ask one another why we hate,
And fail to find a story to relate.
It may seem to us then a mystery
That we should hate each other."

Thus said he,
And did not turn away,
Waiting to hear what I might have to say;
But I fled quickly, fearing if I stayed
I might have kissed him as I would a maid.

Sunday, March 18, 2007

ಹುಟ್ಟು

ಮನದಲೆಲ್ಲೋ ಬಿತ್ತಿ ಬೆಳೆದ ಭಾವದ ಬೀಜ
ಮೊಳೆತು ಜೀವವ ಪಡೆದು ಮಿಸುಕತೊಡಗಿದರೊಮ್ಮೆ
ಹಿತವಾದ ನೋವು, ನರಳಿಕೆ, ಪುಳಕ.
:
ಯಾವುದೋ ಅನುಭವದ ಮಿಲನಕ್ಕೆ ಫಲಗೊಂಡು
ಭಾವದಂಕುರವಾಗಿ ಬೆಳೆದು ಮೈ ಕೈ ತುಂಬಿ
ಬಗೆಯ ಬಸಿರನ್ನೊದೆದು ಹೊರಬರಲು ತುಡಿಯುತಿಹ
ಹೊಸ ಜೀವಕೊಂದು ರೂಪವ ಕೊಡಲು ನುಡಿಗಾಗಿ ತಡಕಾಟ, ತಿಣುಕಾಟ.
:
ಮೈಮನವ ಬಿಗಿಯುವಾಯಾಸ ನೋವಿನ ಕೊನೆಗೆ
ಹೊರಬೀಳ್ವ ಶಿಶು ಏನಾದರಾಗಿದ್ದೀತು!
ಗಂಡೊ, ಹೆಣ್ಣೋ, ಕುಂಟೊ, ಕುರುಡೋ, ಅಥವ ಸತ್ತು ಹುಟ್ಟಿದ್ದೋ!
:
ಹುಟ್ಟಿದ್ದು ತುಂಬುಚಂದಿರನಂಥ ಮುದ್ದು ಮಗುವಾದರೆ
ದಕ್ಕೀತು ನೊಂದ ನೋವಿಗು, ಬೆಂದ ಬೇಗುದಿಗು, ನರಳಿಕೆಗು
ಅರ್ಥ - ಸುಖದ ಅಂತ
:
- ೧೧/೦೪/೧೯೯೬

Friday, March 9, 2007

ಬೀಜ - ಶಕ್ತಿ

ಬಹಳ ವರುಷಗಳಿಂದ ಕೊಳೆಯುತಿದೆ ಈ ಬೀಜ!
ಕೊಳೆಯುತಿದೆ ಎಂದೆನೆ? ಕರಗುತಿರಬಹುದೇನೊ
(ವ್ಯತ್ಯಾಸ ಬಹಳಿಲ್ಲ!).
:
ಇಹುದು ಇದಕೂ ಕೂಡ,
..........ಎಲ್ಲರೊಲು ಮೊಳೆದೆದ್ದು ಚಿಗುರೊಡೆದು ಬೆಳೆಯುವಾಸೆ!
..........ಮೈ ತುಂಬ ಹಸುರುಟ್ಟು, ತಲೆತುಂಬ ಹೂ ಮುಡಿದು,
..........ಹೀಚು ಮಿಡಿ ಹಣ್ಣುಗಳ ತಳೆಯುವಾಸೆ;
..........ಪಾತಳಕೆ ಬೇರಿಳಿಸಿ, ಜಗ್ಗದೆಯೆ ತಳವೂರಿ ನಿಲ್ಲುವಾಸೆ;
..........ಆಗಸಕೆ ತಲೆಯೆತ್ತಿ, ರೆಂಬೆಕೈಗಳ ಚಾಚಿ
..........ಜಗದ ವಿಸ್ತಾರವನು ಗೆಲ್ಲುವಾಸೆ.
:
ಆದರೇನಾಯ್ತಿದಕೆ?
..........ಬೇರಿಳಿಯಲೆಡೆಯಿಲ್ಲ, ತಳವೆಲ್ಲ ಕಲ್ಲು;
..........ಕೈ ಚಾಚೆ ತೆರಪಿಲ್ಲ, ಕಾಂಕ್ರೀಟೆ ಎಲ್ಲೆಲ್ಲು;
..........ಗಾಳಿ ಬಿಸಿಲಿಗು ರೇಷನ್ (ಮೋಸವದರಲ್ಲು!)
:
ಯಾವ ಚೇತನವೊ ಇದು? ಹೂಬಳ್ಳಿ? ನೆರಳ ಮರ?
ಅಥವ ಈ ಬೋನ್ಸಾಯಿಯಲಿ ವ್ಯಕ್ತಿತ್ವವನೆ ಮರೆತು
ಆಗುವುದೊ ಕುಬ್ಜತರ!

ಆದರೊಂದಿನಿಮನವಿ ಕೇಳೊ ಅಣ್ಣ,
..........ಬರಿ ಬೀಜವಲ್ಲಿದು, ಅದಮ್ಯ ಚೈತನ್ಯ!
..........ಕಲ್ಲುಗಳ ಹೇರಿ, ಜಲ್ಲಿಗಳ ಕೂರಿ, ಅದುಮಿ ಇಡುತಿಹೆನೆಂಬ
..........ಭ್ರಮೆ ಬೇಡವಿನ್ನ.
..........ಈ ಕಲ್ಲು ಕಟ್ಟುಗಳ ತೂರಿ ಆಸ್ಫೋಟಿಸುವ ದಮ್ಮಿದೆ,
..........ಈ ಬೀಜದಗ್ನಿ ಗರ್ಭಕ್ಕೆ!
..........(ಅಂಥಾ ಅನಾಹುತಕೆ ಅವಕಾಶವೇಕೆ?)
..........ತೆಗೆದುಬಿಡು ನಿನ್ನೆಲ್ಲ ಅಡ್ಡಿ ಆತಂಕಗಳ, ಚೈತನ್ಯವುಕ್ಕೆ,
..........ಮೊಳೆಯಲದು, ಬೆಳೆಯಲದು, ಹಸಿರುಟ್ಟು ನಲಿಯಲದು,
..........ನೀಡಲಿ ಕೃತಜ್ಞತೆಯ ಸ್ನೇಹಮಯ ತಂಗಾಳಿ, ನೆರಳು, ಹೂ-ಹಣ್ಣುಗಳ...
..........ಇನ್ನೂ ಬೇಕೆ?!
:
- ೧೦/೦೩/೧೯೯೪
:
ಮನೆಯ ಮುಂದೆ ಕಲ್ಲು ಚಪ್ಪಡಿಯಡಿ ಅರ್ಧ ಮೊಳೆತು ಕರಗುತ್ತಿದ್ದ ಮೊಳಕೆಯೊಂದನ್ನು ನೋಡಿ ಅನಿಸಿದ್ದು.

Wednesday, March 7, 2007

ಮರಳು ಜೇನಳೂ ಮತ್ತು ಪಾದ್ರಿಯೂ

ಇದು W.B.Yeats ಕವಿಯ ಕವನವೊಂದರ ಭಾವಾನುವಾದ:
:
ದಾರಿಯಲ್ಲಿ ಆ ಪಾದ್ರಿ ಸಿಕ್ಕಿದ್ದ
ಅದೂ ಇದೂ ಮಾತಾಡಿದೆವು.
"ಎಂಥ ಮೊಲೆಯೀಗ ಸೊರಗಿ ಬಿದ್ದಿಹುದು,
ನರಗಳಿನ್ನೇನು ಬತ್ತುವುವು;
ಸ್ವರ್ಗ ಸೌಧದಲಿ ಬದುಕಿನ್ನಾದರು
ಏತಕೀ ಕೊಳಕು ಕೂಪವು"
:
"ಕೊಳಕಿಗು ಥಳಕಿಗು ಬಿಡದಿಹ ನಂಟು
ಅಗಲಿ ಇರವು ಅವು" - ಚೀರಿದೆ ನಾನು,
"ಸಖರು ಹೋದರೂ ಗೋರಿಯೂ ತಿಳಿದಿದೆ
ಸುಖದ ಶಯ್ಯೆಯೂ ನಿಜವಿದನು.
ಈ ಪತಿತ ದೇಹದಲೆ, ವಿನಯದಿ ಹೆಮ್ಮೆಯ
ಮನದಿ ಅರಿತೆನೀ ಸತ್ಯವನು"
:
"ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!
ಹರಿದೇ ಇಲ್ಲದ ಒಂದೇ ವಸ್ತುವ
ಹೊಲೆವುದು ತಾನೇ ಎಲ್ಲಿ?"
:
- ೧೯೯೧/೯೨ ರ ಒಂದು ದಿನ
:
ಮೂಲ:
Crazy Jane Talks with the Bishop
:
I met the Bishop on the road
And much said he and I.
"Those breasts are flat and fallen now,
Those veins must soon be dry;
Live in a heavenly mansion
Not in some foul sty'.
:
"Fair and foul are near of kin,
And fair needs foul" I cried.
"My friends are gone, but that's a truth
Nor grave nor bed denied,
Learn'd in bodily lowliness
And in the heart's pride.
:
"A woman can be proud and stiff
When on love intent;
But love has pitched his mansion in
The place of excrament;
For nothing can be sole or whole
That has not been rent?"
:
ಕೆಲವು ಪದಗಳ ಅರ್ಥ:
Sty = ಹಂದಿಗೂಡು, ದೊಡ್ಡಿ, ರೊಪ್ಪ, ಕೊಂಪೆ, ಕೂಪ
Kin = ನಂಟು, ಸಂಬಂಧ.
Lowliness = ತಗ್ಗಿನ ಸ್ಥಿತಿ, ನಿಮ್ನತೆ, ಹೀನತನ, (philosophically) ನಮ್ರತೆ
be stiff = ಸೆಡೆತುಕೊ, ಬಿಗಿಯಾಗು, ಬಿಗಿ ಹಿಡಿ
Excrament = ವಿಸರ್ಜಿತ ವಸ್ತು, ಮಲ-ಮೂತ್ರ, ಹೊಲಸು.
Rent = (p.p. of "rend") ಹರಿದ, ಸೀಳಿದ, ಛಿದ್ರವಾದ.

Monday, March 5, 2007

ಕೋಗಿಲೆಗೆ

ಇದು Wordsworthಕವಿಯ ಕವನವೊಂದರ ಭಾವಾನುವಾದ:
:
ಓ ಸಂತಸದ ಹೊಸ ಬರವೆ! ನಿನ್ನ ನಾನಾಲಿಸಿಹೆ,
ಆಲಿಸುತ್ತಲೆ ಮನದಿ ಮುದಗೊಳುತಿಹೆ.
ಓ ಕುಕಿಲೇ! ಕರೆಯಲೇ ನಿನ್ನೊಂದು ಹಕ್ಕಿಯೆಂದು,
ಅಥವ ಅಲೆದಾಡುತಿಹ ಬರಿಯ ದನಿಯೆಂದು?
:
ಹುಲ್ಲ ಹಾಸಿನ ಮೇಲೆ ಬರಿದೆ ನಾ ಮಲಗಿರಲು
ಕೇಳಿಬರುವುದು ನಿನ್ನ ಇಪ್ಪರಿಯ ಕುಕಿಲು,
ಬೆಟ್ಟದಿಂ ಬೆಟ್ಟಕ್ಕೆ ಚಲಿಪಂತೆ ತೋರುತಲಿ,
ಒಮ್ಮೆ ದೂರದಲೆಲ್ಲೋ, ಮತ್ತಿಲ್ಲೆ ಪಕ್ಕದಲಿ.
:
ರವಿಯ ಕಿರಣದ ಕಾಂತಿ ಸುಮಗಳಿಂ ನಳನಳಿಪ
ಬರಿ ಕಣಿವೆಗಾಗಿಯೇ ಹಾಡುತಿದ್ದರು ನೀನು
ನನಗಾಗಿ ಹೊತ್ತೊಯ್ದು ತರುತಿರುವೆ ಸುಸ್ವಪ್ನ
ಲೋಕದ ಹೊಂಗತೆಯ ಮಧುರ ಕ್ಷಣಗಳನು.
:
ಮೂರ್ಮೆ ಸ್ವಾಗತ ನಿನಗೆ ಓ ವರ್ಷ ಮಿತ್ರನೆ!
ಆಗಿರುವೆ ನೀನೆನಗೆ ಇಂದಿಗೂ ಕೂಡ
ಹಕ್ಕಿಯಲ್ಲ, ಒಂದಗೋಚರದ ವಸ್ತು,
ಒಂದು ದನಿ, ಎಂದಿಗೂ ಬಿಡಿಸಲಾಗದ ಗೂಢ;
:
ಶಾಲೆಯೋದುತ್ತಿದ್ದ ನನ್ನೆಳವೆ ದಿನಗಳಲಿ
ನಾ ಕೇಳುತಿದ್ದದ್ದು; ಅದೆ ಸೊಲ್ಲು
ಹುಡುಕಲೆನ್ನೆಳೆದದ್ದು ನೂರಾರು ದಿಕ್ಕಿನಲಿ
ಪೊದೆಗಳಲಿ, ಮರಗಳಲಿ, ಆಗಸದಲೆಲ್ಲೆಲ್ಲು.
:
ನಿನ್ನ ಕಾಣುವ ಬಯಕೆ ಹೊತ್ತು ನಾ ಅಂಡಲೆದೆ,
ಕಾಡಿನಲಿ, ಸಿರಿಹಸುರ ಬನಗಳಲ್ಲಿ;
ನೀ ಎಂದೂ ಕಾಣ್ಪಡದೆ, ಬಯಕೆಯಾಗೇ ಉಳಿದೆ
ಕೆಡೆದೆನ್ನ ಕಾತರ ನಿರೀಕ್ಷೆಗಳಲಿ.
:
ಆದರೂ ಈ ಬಯಲ ವಿಸ್ತಾರದಲಿ ಮಲಗಿ
ಇಂದಿಗೂ ನಾ ನಿನ್ನ ಕೇಳಬಲ್ಲೆ;
ಆ ಸೊಗದ ದಿನಗಳನು ಪಡೆವವರೆಗೂ ತಿರುಗಿ
ನಿನ್ನ ಇನಿದನಿಯ ನಾನಾಲೈಸಬಲ್ಲೆ.
:
ಓ ದಯವಡೆದ ಹಕ್ಕಿಯೇ! ನಾವು ದಿನ ದಿನ ಬದುಕ
ಸವೆಯಿಸುವ ಈ ಭೂಮಿಯಾಗುವುದು ಮತ್ತೊಮ್ಮೆ
ತಾನಲೌಕಿಕವಾದ ಯಕ್ಷ ಕಿನ್ನರ ಲೋಕ;
ಅದೆ ನಿನಗೆ ತಕ್ಕ ಮನೆ, ಅದುವೆ ಹೆಮ್ಮೆ!
:
- ೧೯೯೧ ರ ಒಂದು ದಿನ
:
ಮೂಲ:
To the Cuckoo
:
O blithe New-comer! I have heard,
I hear thee and rejoice.
O cuckoo! Shall I call thee Bird,
Or but a wandering Voice?
::
While I am lying on the grass
Thy twofold shout I hear,
From hill to hill it seems to pass
At once far off, and near.
:
Though babling only to the vale,
Of sunshine and of flowers,
Thou bringst unto me a tale
Of visionary hours
:
Thrice welcome darling of the spring!
Even yet thou art to me
No bird, but an invisible thing
A voice, a mystery;
:
The same whom in my school-boy days
I listened to; that cry
Which made me look a thousand ways
In bush, and tree, and sky.
:
To seek thee did I often rove
Through woods and on green;
And thou wert still a hope, a love;
Still longed for, never seen.
:
And I can listen to thee yet;
Can lay upon the plain
And listen, till I do beget
That golden time again
:
O blessed bird! the earth we pace
Again appears to be
An unsubstantial faery place;
That is fit home for thee!

Friday, March 2, 2007

ಕಿಚ್ಚು

ಇದು ೧೭-೧೮ ವರ್ಷದ ಹಿಂದೆ ಬರೆದ ಕವನ, ಅಥವ ಕವನ ಎಂದು ಹೇಳಿಕೊಳ್ಳಬಹುದಾದ ಮೊದಲ ಬರಹ (ಅಥವ ನನ್ನ ಸಂಗ್ರಹದಲ್ಲಿರುವ ಮೊದಲ ಕವನ ಅನ್ನಬಹುದು), ನಗಬೇಡಿ.

ಕಿಚ್ಚು

ಊಟದ ನಂತರ ಸಣ್ಣ ನಿದ್ದೆ
ಮುಗಿದು, ನೋಡುತ್ತೇನೆ,
ಸೂರ್ಯ ಆಗಲೇ ಆ ಕಾಡು ಗುಡ್ಡದ ಹಿಂದೆ!
ಏನು ಕೆಂಪು ಇವೊತ್ತು! ಹೊಗೆ!!

ಅರೆ! ಅದು ಸೂರ್ಯ ಅಲ್ಲ!
(ಕಾಡು ಸಿಗರೇಟು ಸೇದುತ್ತಿದೆಯೆ?)
ಅಷ್ಟರಲ್ಲಿ ಕೇಳಿಸಿತು ಎದೆ ಸೀಳುವ ಚೀರು,
ಸಾವಿನ ತಣ್ಣನೆ ಕೂಗು!
ಓಹೋ! ಆಗಿದ್ದಿಷ್ಟೆ.

ಕಾಡು ಸತ್ತಿದೆ, ಅದಕ್ಕೆ ಬೆಂಕಿಯಿಟ್ಟಿದ್ದಾರೆ.
ಪಾಪ. ಕಾಡು ಆಗಲೇ ಬಡವಾಗಿತ್ತು;
ಮಕ್ಕಳ ಸಾಕಲು ಸವೆದೂ ಸವೆದೂಊ.
ಈಗ, ಆ ಕಾಡು ಸತ್ತಿದೆ.

ಅಯ್ಯೋ! ಕಾಡು ಸತ್ತಿದೆ,
ಅದಕ್ಕೆ ಬೆಂಕಿಯಿಟ್ಟಿದ್ದಾರೆ... ಮಕ್ಕಳು!


- ೦೫/೦೭/೧೯೯೦

Thursday, March 1, 2007

ಒಳಹೋಗುವ ಮುನ್ನ ಒಂದು ನಿಮಿಷ...

ಅಂತೂ ಕೊನೆಗೊಮ್ಮೆ ಈ ಪುಟಕ್ಕೆ ಬಂದು ಮುಟ್ಟಿದ್ದೇನೆ. ಬ್ಲಾಗ್ ಒಂದನ್ನು ರೂಪಿಸುವ, ಮನಕ್ಕೆ ತೋಚಿದ್ದನ್ನು ಅಲ್ಲಿ ದಾಖಲಿಸುತ್ತಾ ಹೋಗುವ ಆಲೋಚನೆಯೇನೋ ಬಹಳ ದಿನದಿಂದ ಇತ್ತು. ಆದರೆ ಜನ್ಮಜಾತವಾದ ಸೋಮಾರಿತನ ಇದನ್ನು ಮುಂದೂಡುತ್ತಲೇ ಇತ್ತು. ಬ್ಲಾಗು ಭಾವಕ್ಕೆ ಕಾಯಬಹುದು, ಭಾವ ಬ್ಲಾಗಿಗೆ ಕಾಯುತ್ತದೆಯೇ? ಪಂಪ ರನ್ನ ಕುಮಾರವ್ಯಾಸರಿಗೆ ಬ್ಲಾಗುಗಳೇ ಇತ್ತೆ? ಕುಮಾರವ್ಯಾಸನದಂತೂ ಬ್ಲಾಗಿರಲಿ, "ಪಲಗೆ ಬಳಪವನ್ನೂ ಪಿಡಿಯದೊಂದಗ್ಗಳಿಕೆ" (ಈ ಅಗ್ಗಳಿಕೆ ನಮಗೂ ಸಾಕಷ್ಟೇ ಇದೆ ಎನ್ನಿ. "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್" ನಾವು). ಇರಲಿ, as usual ವಿಷಯ ಮತ್ತೆಲ್ಲಿಗೋ ಹೋಯಿತು. ಒಟ್ಟಾರೆ ಬ್ಲಾಗಿಗೆ ಕಾಯದೇ ಬರಹ ಬೆಳೆಯುತ್ತಿತ್ತು, ಅದಕ್ಕೆ ಮುಂಚಿನಿಂದ ಗೀಚಿದ್ದೂ ಒಂದಷ್ಟಿತ್ತು. ಆದ್ದರಿಂದ ಸಧ್ಯಕ್ಕೆ ಹೊಸದೊಂದನ್ನು ದಾಖಲಿಸುವ ಮುನ್ನ, ಹಳೆಯದನ್ನೆಲ್ಲ ಇಲ್ಲಿ ತಂದು ಜೋಡಿಸಿಡುವ ಕೆಲಸ ಬಾಕಿ.
:
ನನ್ನ ಕವನಗಳ ಕಡತ ತೆರೆಯುವ ಮುನ್ನ ಒಂದು ಮಾತು. ಇದುವರೆಗೂ ನಾನು ಬರೆದಿದ್ದು ಬೆರಳೆಣಿಕೆಯಷ್ಟೇ ಕವನಗಳಾದರೂ, ಅವುಗಳನ್ನು ಬರೆದ ಕಾಲಾವಧಿ ಮಾತ್ರ ಸಾಕಷ್ಟು ದೀರ್ಘವೆಂದೇ ಹೇಳಬೇಕು. ಸುಮಾರು ೧೫-೧೮ ವರ್ಷಗಳಿಂದ ಬರೆದ ಕೆಲವೇ ಕವನಗಳನ್ನು ಇಲ್ಲಿ ದಾಖಲಿಸಲು ಯತ್ನಿಸುತ್ತೇನೆ (ತೀರ ಹಸಿ ಹಸಿ, ವೈಯಕ್ತಿಕವೆನ್ನಿಸಿದ ಕೆಲವನ್ನು ಹೊರತು ಪಡಿಸಿ).
:
ಲೇಖಕನೊಬ್ಬ ಹಲ ವರ್ಷಗಳ ಅವಧಿಯಲ್ಲಿ ಬರೆದ ಎಲ್ಲ ಬರಹಗಳನ್ನು ಅವುಗಳನ್ನು ಬರೆದ ಅನುಕ್ರಮದಲ್ಲೇ ಜೋಡಿಸಿಟ್ಟರೆ, ಆ ಸಂಕಲನ ಅವನು ಈ ವರ್ಷಗಳಲ್ಲಿ ವೈಯಕ್ತಿಕವಾಗಿ, ಸಾಹಿತ್ಯಕವಾಗಿ ಬೆಳೆದುಬಂದ ದಾರಿಯನ್ನು ಗುರ್ತಿಸುತ್ತವಾ ಎಂಬ ಕುತೂಹಲ ನನಗಿದೆ. ಬರಹಗಳು ಪರೋಕ್ಷವಾಗಿ ಯಾವುದೋ ರೀತಿಯಿಂದ ಬರಹಗಾರನೊಬ್ಬನ ಜೀವನ/ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ ಎಂದು ಎಲ್ಲೊ ಓದಿದ ನೆನಪು. ಆದರೆ ಅವು ಕವಿಯ ವ್ಯಕ್ತಿತ್ವವನ್ನಾಗಲಿ, ಅವನ ಜೀವನದ ಘಟನೆಗಳನ್ನಾಗಲಿ ಯಥಾವತ್ತಾಗಿ ಚಿತ್ರಿಸುತ್ತವೆಂದು ಖಂಡಿತ ಒಪ್ಪಲಾರೆ. ಇಲ್ಲಿ ಕಾಣುವ ಬರಹಗಳಿಗೆ ಪೂರ್ವಭಾವಿಯಾಗಿ ಇದನ್ನು ಸೂಚಿಸಬೇಕೆನ್ನಿಸಿತು.
:
ಕವಿ ತಾನೇ ಅನುಭವಿಸಿದ್ದರ ಜೊತೆಗೆ, ಎಲ್ಲೋ ನೋಡಿದ್ದು, ಕೇಳಿದ್ದು, ಚಿಂತಿಸಿದ್ದು, ಭಾವಿಸಿದ್ದು, ಪರಿಭಾವಿಸಿದ್ದು, ಪರಿತಪಿಸಿದ್ದು ಈ ಎಲ್ಲ ಯಾವ ಯಾವುದೋ ಹದದಲ್ಲಿ ಪಾಕಗೊಳ್ಳುತ್ತವೆ, ಆತನ ಬರಹದಲ್ಲಿ - ಎಷ್ಟೋ ಬಾರಿ ನೈಜವೆನಿಸುವ ಮಟ್ಟಿಗೆ. ಇದರಲ್ಲಿ ಕವಿಯ ಯೋಚನಾಲಹರಿಯ ಕೆಲವು ಹೊಳಹುಗಳನ್ನು ಮಾತ್ರ ಕಾಣಬಹುದಷ್ಟಲ್ಲದೇ ಸಾಕ್ಷಾತ್ ಕವಿಯನ್ನೇ ಕಾಣಬಯಸುವುದು ವ್ಯರ್ಥ. ಇನ್ನು ಕವಿಯ ಬುದ್ಧಿ ಭಾವಗಳಲ್ಲಿ ರೂಪುತಳೆದ ಈ ಶಿಶು, ಓದುಗನ ದೃಷ್ಟಿಕೋನದಲ್ಲಿ ಬೇರೆಯ ನಿಲುವನ್ನೇ ತಳೆಯುತ್ತದೆ. ಪು.ತಿ.ನ.ರವರ ಸಾಲೊಂದು ನೆನಪಾಗುತ್ತದೆ; "ಬರೆಯುವವನದಲ್ಲ ಕವಿತೆ, ಹಾಡುವವನದು" (ಪದಗಳು ಸರಿಯಾಗಿ ನೆನಪಿಲ್ಲ). ಹೀಗಾಗಿ, ಕಾವ್ಯದ ನಿರೂಪಣೆಗೆ ಸಹೃದಯನ ಕೊಡುಗೆಯೂ ಇದೆ ಎನ್ನುವುದನ್ನು ಮರೆಯಬಾರದು. ಎಷ್ಟೊ ಬಾರಿ ಇದರಲ್ಲಿ ಓದುಗ ತನ್ನನ್ನೇ ಕಂಡುಕೊಳ್ಳುತ್ತಾನೆ. ಹೀಗೆ, ಕಾವ್ಯ ಕವಿ-ಓದುಗನ ನಡುವೆ ಒಂದು ಮೌನ ಸಂವಾದವನ್ನೇರ್ಪಡಿಸುತ್ತದೆ. ಕವಿಯ ಮನದಲ್ಲಿ ಮಿಡಿದ ಒಂದು ನಾದದ ಒಂದು ಎಳೆ, ಓದುಗನ ಮನದಲ್ಲೂ ಸಮಶ್ರುತಿ ಮಿಡಿದರೆ ಕಾವ್ಯದ ಹುಟ್ಟು ಸಾರ್ಥಕ ಎಂದು ನನ್ನ ಅನಿಸಿಕೆ. ಎಲ್ಲೋ ಎಂದೋ ಇದ್ದು ಸಂದು ಹೋದ ಘಾಲಿಬನಾಗಲೀ, ಕನಕ-ಕಬೀರರಾಗಲೀ, ವ್ಯಾಸ-ವಾಲ್ಮೀಕಿಗಳಾಗಲೀ ದೇಶ ಕಾಲಗಳಾಚಿನಿಂದ ನಮ್ಮೆದೆಯನ್ನು ಮುಟ್ಟುವುದು, ಮಾತಾಡಿಸುವುದು, ಹೀಗೆ.
:
ಬ್ಲಾಗನ್ನು ತುಂಬುವ ಮುನ್ನ ನನ್ನ ಮನದಲ್ಲಿ ಮೂಡಿದ ಕೆಲವು ವಿಚಾರಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು, ಬರಹ ತುಸು ಉದ್ದವೆನಿಸಿದ್ದರೆ ಕ್ಷಮಿಸಿ. ಇನ್ನು ಶೀರ್ಷಿಕೆಗಳಿಗೆ.