Monday, December 28, 2020

ಜನಗಣಮನ: ವಿವಾದ-ನಿರ್ವಿವಾದ


ನಮ್ಮ ರಾಷ್ಟ್ರಗೀತೆ "ಜನಗಣಮನ" ಮತ್ತದನ್ನು ಸುತ್ತುವರಿದ ವಿವಾದದ ಮೇಲೆ ಬೆಳಕು ಚೆಲ್ಲುವ ಲೇಖನವೊಂದನ್ನು ಮಿತ್ರರಾದ ದಿಲೀಪ್ ಕುಮಾರ್ ಕೆಲದಿನದ ಹಿಂದೆ ಹಂಚಿಕೊಂಡಿದ್ದರು.  ಐದು ಚರಣಗಳಲ್ಲಿರುವ ಈ ಗೀತೆಯ ಮೊದಲ ಚರಣವನ್ನಷ್ಟೇ ನಮ್ಮ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿದ್ದೇವೆ.  ಈ ಗೀತೆಯನ್ನು ಮೂಲತಃ ಬ್ರಿಟನ್ನಿನ ಚಕ್ರವರ್ತಿ ಐದನೆಯ ಜಾರ್ಜ್ ದೊರೆಯನ್ನು ಸ್ವಾಗತಿಸಲೋಸುಗ ರಚಿಸಿದ್ದೆಂದೂ, ಇದನ್ನು ರಚಿಸಿದ್ದಕ್ಕೇ ಆನಂತರದ ದಿನಗಳಲ್ಲಿ ಟಾಗೂರರಿಗೆ ನೊಬೆಲ್ ಪಾರಿತೋಷಕವೂ ಮತ್ತೆ ಕೆಲದಿನಗಳಾದ ಮೇಲೆ ನೈಟ್ ಹುಡ್ (knighthood) ಪದವಿಯೂ ದೊರಕಿತೆಂದೂ ಒಂದು ಆರೋಪ ಬಹುಕಾಲ ಈ ಗೀತೆಯನ್ನು ಸುತ್ತಿಕೊಂಡಿತ್ತು.  ಈಗಲೂ ಆಗೀಗ ತಲೆಯೆತ್ತುತ್ತಿರುತ್ತದೆ.  ಈ ವಿವಾದದ ಮೇಲೆ ಅಚ್ಚುಕಟ್ಟಾಗಿ ಬೆಳಕು ಚೆಲ್ಲುವ ಆ ಲೇಖನದಲ್ಲಿ ಒಂದು ಭಾಗ ನನ್ನ ಗಮನ ಸೆಳೆಯಿತು.  ಅದು ಹೀಗಿದೆ:

=========================================================================
"ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸಂಟಿಸಲು (ಸಂಘಟಿಸಲು?) ಬ್ರಿಟಿಷ್ ಸರಕಾರ ಅಡ್ಡಿಮಾಡಿದಾಗ ಮುಂಬೈ ಪ್ರಾಂತ್ಯದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣಾಧಿನಾಯಕನ ಪೂಜೆಯನ್ನು ಪ್ರಾರಂಭಿಸಿದ್ದರು. ೧೮೯೮ರಲ್ಲಿ ಬ್ರಿಟಿಷ್ ಸರಕಾರ ತಿಲಕರ ವಿರುದ್ಧ ರಾಜದ್ರೋಹದ ಆಪಾದನೆ ಹೊರಿಸಿ ಬಂಧಿಸಿತು. ರವೀಂದ್ರರು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ತಿಲಕರ ಕಾನೂನು ಹೋರಾಟಕ್ಕೆ ಬೆಂಬಲ ನೀಡಿದ್ದರು. ಆಗ ರವೀಂದ್ರರು ರಚಿಸಿದ ದೇಶಭಕ್ತಿಗೀತೆಗಳ ಸಂಕಲನ ನೈವೇದ್ಯ(೧೯೦೧). ಇದನ್ನು ಶ್ರೀ ಎಂ.ಆರ್.ಸಿ. ನಾಗರಾಜನ್ ಅವರು ಮೂಲ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ (ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಬೆಂಗಳೂರು ೨೦೦೭). ಇದರಲ್ಲಿರುವ ನೂರು ದೇಶಭಕ್ತಿಗೀತೆಗಳು ರವೀಂದ್ರರ ಉಜ್ವಲ ಸ್ವಾಭಿಮಾನ, ದೇಶಾಭಿಮಾನಗಳಿಗೆ ನಿದರ್ಶನಗಳಾಗಿವೆ.  ರವೀಂದ್ರರು ತಿಲಕರ ಗಣಾಧಿನಾಯಕನನ್ನು ಜನಗಣದ ಮನದ ಅಧಿನಾಯಕನಾಗಿಸಿದರು.

...

"‘ಜನಗಣಮನ’ದ ಬಗ್ಗೆ ಅಪಪ್ರಚಾರಗಳೂ ಇದ್ದುವು. ಅದನ್ನು ರವೀಂದ್ರರು ಐದನೆಯ ಜಾರ್ಜ್ ದೊರೆಯ ಸ್ವಾಗತಕ್ಕಾಗಿ ಬರೆದರೆಂದೂ ಅದರಿಂದ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಿತೆಂದೂ ಅಪಪ್ರಚಾರ ಮಾಡುತ್ತಿದ್ದರು. ಅದಕ್ಕೆ ರವೀಂದ್ರರು ಬೆಲೆಕೊಡಲಿಲ್ಲ. ಅವರ ಆತ್ಮೀಯರೊಬ್ಬರಿಗೆ ಬರೆದ ಪತ್ರದಲ್ಲಿ “ಯುಗ ಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾನು ನಾಲ್ಕನೆಯವನೊ ಐದನೆಯವನೊ ಜಾರ್ಜ್ ನ ಗುಣಗಾನ ಮಾಡಿದ್ದೇನೆಂದು, ತಮ್ಮ ಅಪರಿಮಿತ ಮೌಢ್ಯದಿಂದ ನನ್ನ ಬಗ್ಗೆ ಸಂಶಯಪಡಬಲ್ಲವರ ಪ್ರಶ್ನೆಗೆ ಉತ್ತರ ನೀಡುವುದೂ ನನ್ನ ಆತ್ಮಗೌರವಕ್ಕೆ ಅವಮಾನ” ಎಂದು ಹೇಳಿದ್ದಾರೆ."
=========================================================================

ತಿಲಕರ ಗಣನಾಯಕನೇ ರವೀಂದ್ರರ ಜನಗಣಮನದ ಅಧಿನಾಯಕನೆನ್ನುವ ಅಭಿಪ್ರಾಯಕ್ಕೆ ಲೇಖಕರ ಆಕರವೇನೋ ನನಗೆ ತಿಳಿಯದು.  ತಿಲಕರು ರಾಜದ್ರೋಹದ ಆಪಾದನೆಯ ಮೇಲೆ ಬಂಧನಕ್ಕೊಳಗಾಗಿದ್ದು ನಿಜ, ರವೀಂದ್ರರು ಹಲವು ರೀತಿಯಲ್ಲಿ ತಿಲಕರ ಬೆಂಬಲಕ್ಕೆ ನಿಂತದ್ದೂ ನಿಜ.  ತಿಲಕರ ಗಣೇಶೋತ್ಸವದ ಬಗ್ಗೆ ರವೀಂದ್ರರ ಅಭಿಪ್ರಾಯ ಎಂತಿತ್ತೋ ತಿಳಿಯದು, ಆದರೆ ದೇಶವನ್ನು ಒಗ್ಗೂಡಿಸುವ ಮಹದಾಶಯವುಳ್ಳ ಅದನ್ನವರು ಬೆಂಬಲಿಸಿದ್ದಿರಲು ಸಾಕು.  ಆದರೆ ತಿಲಕರ ಗಣಾಧಿನಾಯಕನನ್ನೇ ರವೀಂದ್ರರು ಜನಗಣಮನದ ಅಧಿನಾಯಕನಾಗಿಸಿದರು ಎನ್ನುವುದು ಊಹೆಯೆನ್ನದೇ ವಿಧಿಯಿಲ್ಲ - ಏಕೆಂದರೆ ಹಾಗೆ ಹೇಳಲು ಬೇಕಾದ ಉಲ್ಲೇಖಗಳಾಗಲೀ, ಜನಗಣಮನ ಗೀತೆಯಲ್ಲಾಗಲೀ ಯಾವ ಸೂಚನೆಯೂ ಕಂಡುಬರುವುದಿಲ್ಲ.  ಜನ'ಗಣ'ಮನ 'ಅಧಿನಾಯಕ' ಎಂಬ ಎರಡೇ ಪದಪ್ರಯೋಗದ ಸಾಮ್ಯದಿಂದ ರವೀಂದ್ರರ ಜನಗಣಮನ ಅಧಿನಾಯಕನನ್ನು ತಿಲಕರ ಗಣೇಶನೆಂದು ಅರ್ಥೈಸುವುದು ಸರಿಯಲ್ಲವೆಂದು ನನ್ನ ಅನಿಸಿಕೆ.  ಇದರ ವಿಶ್ಲೇಷಣೆಗೆ ತೊಡಗುವ ಮೊದಲು, ರವೀಂದ್ರರ ಮೂಲ ಬೆಂಗಾಲೀ ಗೀತೆಯ ಪೂರ್ಣಪಾಠವನ್ನು ನೋಡೋಣ (ಸುಲಭವಾಗಿ ಅರ್ಥವಾಗಲೆಂದು ಮೂಲಬೆಂಗಾಲೀ ಉಚ್ಚಾರಣೆಯನ್ನು ಕೂಡಿದ ಮಟ್ಟಿಗೂ ಹಿಂದೀ/ಸಂಸ್ಕೃತ ಉಚ್ಚಾರಣೆಗೆ ಪರಿವರ್ತಿಸಿದ್ದೇನೆ, ಅರ್ಥ ಬದಲಾಗಬಹುದೆನಿಸಿದ ಕಡೆ ಮೂಲ ಬೆಂಗಾಲೀ ಪದಗಳನ್ನು ಹಾಗೇ ಉಳಿಸಿಕೊಂಡಿದ್ದೇನೆ):


ಜನಗಣಮನ ಅಧಿನಾಯಕ ಜಯ ಹೇ, ಭಾರತ ಭಾಗ್ಯವಿಧಾತಾ
ಪಂಜಾಬ ಸಿಂಧು ಗುಜರಾತ ಮರಾಠಾ, ದ್ರಾವಿಡ ಉತ್ಕಲ ಬಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ, ಉಚ್ಚಲ ಜಲಧಿ ತರಂಗ
ತವ ಶುಭನಾಮೇ ಜಾಗೇ, ತವ ಶುಭ ಆಶಿಶ ಮಾಗೇ
ಗಾಹೇ ತವ ಜಯಗಾಥಾ

ಜನಗಣ ಮಂಗಳದಾಯಕ, ಜಯ ಹೇ ಭಾರತ ಭಾಗ್ಯ ವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ


ಅಹರಹ ತವ ಆಹ್ವಾನ ಪ್ರಚಾರಿತ, ಸುನಿ ತವ ಉದಾರವಾಣಿ
ಹಿಂದು ಬೌದ್ಧ ಸಿಖ ಜೈನ, ಪಾರಸಿಕ ಮುಸಲ್ಮಾನ ಕ್ರಿಸ್ತಾನಿ
ಪೂರವ ಪಶ್ಚಿಮ ಆಸೇ, ತವ ಸಿಂಹಾಸನ ಪಾಶೇ
ಪ್ರೇಮಹಾರ ಜಯಗಾಥಾ

ಜನಗಣ ಐಕ್ಯ ವಿಧಾಯಕ ಜಯ ಹೇ, ಭಾರತ ಭಾಗ್ಯ ವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ


ಪತನ ಅಭ್ಯುದಯ ಬಂಧುರ ಪಂಥಾ, ಯುಗಯುಗ ಧಾವಿತ ಜಾತ್ರೀ
ಹೇ ಚಿರಸಾರಥಿ, ತವ ರಥಚಕ್ರೇ ಮುಖರಿತ ಪಥ ದಿನರಾತ್ರೀ
ದಾರುಣ ವಿಪ್ಲವ ಮಾಝೇ, ತವ ಶಂಖಧ್ವನಿ ಬಾಜೇ
ಸಂಕಟದುಃಖ ತ್ರಾತಾ

ಜನಗಣ ಪಥ ಪರಿಚಾಯಕ, ಜಯ ಹೇ ಭಾರತ ಭಾಗ್ಯ ವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ


ಘೋರತಿಮಿರಘನನಿಬಿಡನಿಶೀಥೇ ಪೀಡಿತ ಮೂರ್ಛಿತ ದೇಶೇ
ಜಾಗ್ರತ ಛಿಲ ತವ ಅವಿಚಲ ಮಂಗಲ ನತನಯನೇ ಅನಿಮೇಶೇ
ದುಃಸ್ವಪ್ನೇ ಆತಂಕೇ, ರಕ್ಷಾ ಕರಿಲೇ ಅಂಕೇ
ಸ್ನೆಹಮಯೀ ತುಮಿ ಮಾತಾ

ಜನಗಣದುಃಖತ್ರಾಯಕ, ಜಯ ಹೇ ಭಾರತ ಭಾಗ್ಯ ವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ


ರಾತ್ರಿ ಪ್ರಭಾತಿಲ ಉದಿಲ ರವಿಚ್ಛವಿ, ಪೂರ್ವ ಉದಯಗಿರಿ ಭಾಲೇ
ಗಾಹೆ ವಿಹಂಗಮ ಪುಣ್ಯ ಸಮೀರಣ, ನವಜೀವನರಸ ಢಾಲೇ
ತವ ಕರುಣಾರುಣ ರಾಗೇ, ನಿದ್ರಿತಭಾರತ ಜಾಗೇ
ತವಚರಣೇ ನತ ಮಾಥಾ

ಜಯ ಜಯ ಜಯ ಹೇ, ಜಯ ರಾಜೇಶ್ವರ, ಭಾರತ ಭಾಗ್ಯವಿಧಾತಾ
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ, ಜಯ ಹೇ

ಮೊದಲಿಗೆ, ತಿಲಕರ ಗಣನಾಥ ಯಾವ ಅಮೂರ್ತಕಲ್ಪನೆಯೂ ಇಲ್ಲ.  ದೇಶದ ಬಹುತೇಕರ ಮನೆಮನೆಗಳಲ್ಲೂ ಪೂಜಿಸಲ್ಪಡುವ ಆನೆಮೊಗದ, ಡೊಳ್ಳುಹೊಟ್ಟೆಯ 'ಗಣಪತಿಬಪ್ಪ'ನೇ ಈತ.  ಜನ ಸೇರಲು ಸರ್ಕಾರ ಹಾಕಿದ ನಿರ್ಬಂಧವನ್ನು ಮುರಿಯುವ ಸಲುವಾಗಿ, ಗಣೇಶನ ನೆಪದಿಂದ ಜನರು ಹೊರಬಂದು ಒಂದಾಗಬೇಕೆಂಬ ಉದ್ದೇಶದಿಂದ ತಿಲಕರು ಆರಂಭಿಸಿದ್ದು ಸಾರ್ವಜನಿಕ ಗಣೇಶೋತ್ಸವ.  ಇದಕ್ಕಿದ್ದ ರಾಜಕೀಯಕಾರಣಗಳನ್ನು ಬಿಟ್ಟರೆ ಇದಕ್ಕೆ ಇನ್ನಾವ ಆಧ್ಯಾತ್ಮಿಕ ಕಾರಣಗಳೂ ಇರಲಿಲ್ಲ.  ಆದರೆ ರವೀಂದ್ರರ ಅಮೂರ್ತಕಲ್ಪನೆಯ "ಜನಗಣಮನದ ಅಧಿನಾಯಕ" ಮೂರ್ತರೂಪದಲ್ಲಾಗಲಿ, ಸಂಕೇತಗಳಲ್ಲಾಗಲಿ, ಕಲ್ಪನೆಗಳಲ್ಲಾಗಲಿ ತಿಲಕರ ಗಣೇಶನನ್ನು ಹೋಲುವುದೇ ಇಲ್ಲ.

ಇಷ್ಟಕ್ಕೆ ಪ್ರತಿಕ್ರಿಯೆ ಬರೆಯುತ್ತಾ, ರಾಷ್ಟ್ರಗೀತೆಯ ಸುತ್ತಣ ವಿವಾದವನ್ನೂ ಇನ್ನಷ್ಟು ವಿವರವಾಗಿ ವಸ್ತುನಿಷ್ಠವಾಗಿ ಪರಿಶೀಲಿಸುವ ಅಗತ್ಯವಿದೆಯೆನಿಸಿತು.  ಅದರ ಫಲವೇ ಪ್ರಸ್ತುತ ಲೇಖನ.  ಮೊದಲನೆಯದಾಗಿ, ಇದರ 'ರಾಷ್ಟ್ರಗೀತೆ'ಯ ಆಯಾಮವನ್ನು ಬದಿಗಿಟ್ಟರೆ, ಇಡೀ ಗೀತೆ ಒಂದು ಉಜ್ವಲವಾದ, ಉನ್ನತಭಾವಪ್ರೇರಕವಾದ ಗೀತೆಯೆನ್ನುವುದರಲ್ಲಿ ಎರಡು ಮಾತಿಲ್ಲ.  ಅದನ್ನು ಆಮೇಲೆ ಪರಿಶೀಲಿಸೋಣ.  ಇದನ್ನು ಸುತ್ತುವರಿದ ವಿವಾದ ಮೂಲಲೇಖನದ ಮುಖ್ಯವಸ್ತುವಾದ್ದರಿಂದ ಅದನ್ನು ಮೊದಲು ಪರಿಶೀಲಿಸೋಣ.

ಇದು ಜಾರ್ಜ್ ದೊರೆಯನ್ನು ಕುರಿತ ಸ್ತುತಿ ಎಂಬ ಮಾತಿಗೆ ಪ್ರತಿಕ್ರಿಯಿಸುತ್ತ ಕವಿ, ಹಾಗೆ ಪ್ರಶ್ನೆ ಕೇಳಿದವರದ್ದು "ಅಪರಿಮಿತಮೌಢ್ಯ" ಎಂದಿದ್ದಾರೆಂದು ಮೂಲಲೇಖನ ತಿಳಿಸುತ್ತದೆ (“ಯುಗ ಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾನು ನಾಲ್ಕನೆಯವನೊ ಐದನೆಯವನೊ ಜಾರ್ಜ್ ನ ಗುಣಗಾನ ಮಾಡಿದ್ದೇನೆಂದು, ತಮ್ಮ ಅಪರಿಮಿತ ಮೌಢ್ಯದಿಂದ ನನ್ನ ಬಗ್ಗೆ ಸಂಶಯಪಡಬಲ್ಲವರ ಪ್ರಶ್ನೆಗೆ ಉತ್ತರ ನೀಡುವುದೂ ನನ್ನ ಆತ್ಮಗೌರವಕ್ಕೆ ಅವಮಾನ”).  ಈ ಅನುವಾದದ ಆಕರ ತಿಳಿದಿಲ್ಲ, ಆದರೆ 'ವಿರೋಧಿ'ಗಳದು 'ಅಪರಿಮಿತಮೌಢ್ಯ' ಎಂದು ಕರೆದು ವೈಯಕ್ತಿಕ ದಾಳಿ ಮಾಡುವುದು ಕವಿಯ ಉದ್ದೇಶವಾಗಿರಲಿಲ್ಲವೆಂಬುದು, ಕವಿಯ ಇದೇ ಮಾತಿನ ಇಂಗ್ಲಿಷ್ ಅನುವಾದವನ್ನು ನೋಡಿದರೆ ತಿಳಿದುಬಿಡುತ್ತದೆ - 1939ರ ಮಾರ್ಚ್ 19ರ ತಮ್ಮ ಪತ್ರವೊಂದರಲ್ಲಿ ಟ್ಯಾಗೋರ್ ಹೀಗೆ ಹೇಳುತ್ತಾರೆ “I should only insult myself if I cared to answer those who consider me capable of such unbounded stupidity as to sing in praise of George the Fourth or George the Fifth as the Eternal Charioteer leading the pilgrims on their journey through countless ages of the timeless history of mankind (ಯುಗಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾಲ್ಕನೆಯವನೊ ಐದನೆಯವನೊ ಜಾರ್ಜ್ ನ ಗುಣಗಾನ ಮಾಡುವ ಎಣೆಯಿಲ್ಲದ ಮೂರ್ಖತನ ನನ್ನದೆನ್ನುವವರಿಗೆ ಉತ್ತರಿಸಹೋಗುವುದೂ ನನಗೆ ನಾನೇ ಮಾಡಿಕೊಳ್ಳುವ ಅಪಮಾನ" - ಎರಡೂ ಅನುವಾದಗಳ ಸೂಕ್ಷ್ಮವ್ಯತ್ಯಾಸ ಗಮನಿಸಿ) - Purvasa, Phalgun, 1354, p738.  ರವೀಂದ್ರರಿಗೆ ಹೀಗೆನ್ನಿಸಲೂ ಕಾರಣವಿದೆ, ಅದನ್ನು ಆಮೇಲೆ ನೋಡೋಣ.  ಸದ್ಯಕ್ಕಂತೂ ಅಪರಿತಮೌಢ್ಯದ ಶಂಕೆಗೊಳಗಾಗದೇ, ಈ ಗೀತೆ ಯಾವ ರೀತಿಯಲ್ಲಾದರೂ ಜಾರ್ಜ್ ದೊರೆಗೆ ಅನ್ವಯಿಸುವುದೇ ಎಂಬುದನ್ನೊಮ್ಮೆ ಪರಿಶೀಲಿಸೋಣ.

ಮೊದಲಿಗೆ, ದೇಶ-ಭಾಷೆಗಳು ಬಹಳ ಭಾವನಾತ್ಮಕವಾದ ವಿಷಯಗಳು, ಮತ್ತು ಈ ಭಾವನೆಯಲ್ಲಿ ಅತ್ಯುತ್ಕಟವಾದ ಭಾವನೆ ತಾಯಿಯನ್ನು ಕುರಿತದ್ದು.  ದೇಶವನ್ನಾಗಲೀ ಭಾಷೆಯನ್ನಾಗಲೀ ಹೆಣ್ಣಿಗೆ, ಮಾತೆಗೆ ಹೋಲಿಸುವುದೇ ಸಾಮಾನ್ಯವಾಗಿ ಎಲ್ಲೆಡೆಯೂ ಪ್ರಚಲಿತವಿರುವ ರೂಢಿ.  ಭಾರತದಲ್ಲಿರಲಿ, ಪಾಶ್ಚಾತ್ಯರಲ್ಲೂ ದೇಶವೊಂದನ್ನು ಕುರಿತು ಮಾತಾಡುವಾಗ 'her' ಎನ್ನುವ ಸರ್ವನಾಮವನ್ನು ಬಳಸುವರೇ ನಿನಾ 'him' ಎಂಬುದನ್ನಲ್ಲ; ಹಾಗೆಯೇ ಮನೆಮಾತು ತಾಯ್ನುಡಿ, ಮಾತೃಭಾಷೆ, Mother-tongue ಎನ್ನಿಸಿಕೊಳ್ಳುತ್ತದೆಯೇ ಹೊರತು ತಂದೆನುಡಿ, ಪಿತೃಭಾಷೆ, Father-tongue ಎನ್ನುವುದಿಲ್ಲ.  ಸ್ವದೇಶವು ತಾಯ್ನೆಲ, ಮಾತೃಭೂಮಿ Mother-land ಆಗುತ್ತದೆಯೇ ಹೊರತು ಹೊರತು ತಂದೆನೆಲ, ಪಿತೃಭೂಮಿ Father-land ಆಗುವುದಿಲ್ಲ.  ಭಾಷಿಕವಾಗಿಯೂ, ಭಾವನಾತ್ಮಕವಾಗಿಯೂ ನೆಲ-ನುಡಿಗಳು ಹೆಣ್ಣು.  ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿಗರೀಯಸಿ ಎನ್ನುವುದೇ ಈ ನೆಲದ ಭಾವ.  ಹೀಗಿರುವಾಗ "ಭಾರತ ಭಾಗ್ಯವಿಧಾತ"ನ (ಆತ ತಂದೆಯೂ ಅಲ್ಲ, ವಿಧಾತ, ಸ್ವಾಮಿ, ಪ್ರಭು), ಈ ನೆಲದ ಭಾವಕ್ಕೆ ಹೊರಗು.  ಆದ್ದರಿಂದ ಅದೆಷ್ಟೇ ಉಜ್ವಲವಾದ ದೇಶಭಕ್ತಿಯಿಂದ ಕೂಡಿದ್ದರೂ ಅದು ಈ ನೆಲದ ಬಗ್ಗೆ "ವಂದೇ ಮಾತರಂ" ಉದ್ದೀಪಿಸಬಲ್ಲ ಉತ್ಕಟಭಾವನೆಗಳನ್ನು ಉದ್ದೀಪಿಸಲಾರದು.

ಇನ್ನು ಜನಗಣದೊಡನೆ ಆ "ಜನಗಣಮನ ಅಧಿನಾಯಕ"ನ ಸಂಬಂಧವನ್ನು ನೋಡಿ - ಆತ "ಭಾರತ ಭಾಗ್ಯವಿಧಾತ" - ಭಾರತದ ಭಾಗ್ಯವನ್ನು ದಯಪಾಲಿಸುವವನು, ಭಾರತದ ಹಣೆಬರಹ ಬರೆಯುವ ವಿಧಾತ, ಬ್ರಹ್ಮ.  ನಮ್ಮ ಭಾಗ್ಯವನ್ನು ಆತ ದಯಪಾಲಿಸುತ್ತಾನೆಯೇ ಹೊರತು, ನಮ್ಮ ಭಾಗ್ಯದಲ್ಲಿ ಆತ ಪಾಲ್ಗೊಳ್ಳಲಾರ.  ಅವನು ದೊರೆ - ಇಡೀ ದೇಶ, ಜನಸಮುದಾಯಗಳು, ನದಿಸಾಗರಗಳು ಅವನ ಶುಭನಾಮವನ್ನು ನೆನೆಸಿಕೊಂಡು ಏಳುತ್ತದೆ, ಆತನ ಉದಾರವಾಣಿಯನ್ನು ಕೇಳಿ ಸಕಲಜನರೂ ಆತನ "ಸಿಂಹಾಸನ"ದ ಸುತ್ತ ನೆರೆಯುತ್ತಾರೆ, ಆತನಿಗೆ ಪ್ರೇಮದಿಂದ ಜಯಕಾರ ಹಾಕುತ್ತಾರೆ, ಯುಗಯುಗಗಳಿಂದ ಏರಿಳಿತದ ಹಾದಿಯಲ್ಲಿ ಸಾಗಿರುವ ಜನಜಾತ್ರೆಗೆ ಹಗಲಿರುಳು ದಾರಿತೋರುವುದು ಆ ಚಿರಸಾರಥಿಯ ರಥದ ಚಕ್ರಗಳು, ಅವನ ಶಂಖಧ್ವನಿ ನಮ್ಮ ಸಕಲ ಸಂಕಟವಿಪ್ಲವಗಳಿಂದಲೂ ಮೇಲೆತ್ತುವ ಮಹಾಶಕ್ತಿ; "ಘೋರಾಂಧಕಾರದಲ್ಲಿ ಮೂರ್ಛಿತವಾಗಿ ಮಲಗಿರುವ ಈ ದೇಶ"ವನ್ನು ಮೇಲೆಬ್ಬಿಸಲು ಆತನ ಮಂಗಲದೃಷ್ಟಿಯೇ ಬೇಕು.  ಇಂತಿರುವ ಹೀಗೆ ಜನಗಣದ ದುಃಖತ್ರಾಯಕನಾದ ಭಾರತಭಾಗ್ಯವಿಧಾತನು ಅವರನ್ನು ತೊಡೆಯಮೇಲಿರಿಸಿಕೊಂಡು ಸಲಹುವ ತಾಯಿಯೂ ಆಗಿದ್ದಾನೆ (ತಾಯಿಲ್ಲದ ತಬ್ಬಲಿಗಳಿಗೆ ತಂದೆಯೇ ತಾಯಿಯಷ್ಟೇ? ಆದರೇನು, ತಂದೆಯೆಂಬ, ವಿಧಾತನೆಂಬ, ದೊರೆಯೆಂಬ ಭಾವದಲ್ಲಿ ಇದೊಂದು ಸಣ್ಣ ಆಯಾಮವಷ್ಟೆ).  ರಾತ್ರೆ ಕಳೆದು ಉದಯಾದ್ರಿಯ ಹಣೆಯ ಮೇಲೆ ಮೂಡುವ ಭಾಸ್ಕರ, ಚಿಲಿಪಿಲಿಗುಟ್ಟುವ ಹಕ್ಕಿಗಳು, ಬೀಸುವ ತಂಗಾಳಿ ಎಲ್ಲವೂ ಆತನ ಕರಣುರಾರುಣರಾಗವನ್ನೇ ಹಾಡುತ್ತಾ, ಈ "ನಿದ್ರಿಸುತ್ತಿರುವ ಭಾರತ"ವನ್ನು ಎಚ್ಚರಿಸುತ್ತಿವೆ.  ಇಂತಹ ಭಾರತಭಾಗ್ಯವಿಧಾತನಾದ "ರಾಜೇಶ್ವರ"ನ ಚರಣಗಳಿಗೆ ನಾವು ತಲೆವಾಗುತ್ತಾ ಜಯಗೀತೆ ಹಾಡುತ್ತೇವೆ.

ಗೀತೆಯುದ್ದಕ್ಕೂ ಈ ಭಾರತಭಾಗ್ಯವಿಧಾತ ಮತ್ತು ಭಾರತದ (ಭಾರತನಿವಾಸಿಗಳಾದ ನಮ್ಮ) ಸಂಬಂಧ ತಾಯಿ ಮಕ್ಕಳ ಹೊಕ್ಕುಳಬಳ್ಳಿ ಸಂಬಂಧವಲ್ಲ, ಅಲ್ಲಿ ಸಲುಗೆಯಿಲ್ಲ, ಆತ್ಮೀಯತೆಯಿಲ್ಲ, ಅಪ್ಪುಗೆಯಿಲ್ಲ, ಅದರಿಂದಲೇ ನಮ್ಮ ಹಕ್ಕಾಗಿ ಬರುವ 'ನನ್ನದು' ಎನ್ನಿಸುವ ಯಾವ ಭಾವವೂ ಇಲ್ಲ, ಬದಲಿಗೆ ಆ ಸಂಬಂಧ - ದೇವ ಮತ್ತು ಹುಲುಮನುಜರದ್ದು, ರಾಜ-ಪ್ರಜೆಗಳದ್ದು, ಯಜಮಾನ-ಸೇವಕರದ್ದು; ಆತನ 'ವಿಧಾಯಕ'ತೆ, ಆತನ ಸಿಂಹಾಸನ, ಆತನ ರಥಚಕ್ರ, ಆತನ ಶಂಖಧ್ವನಿ, ಆತನ ರಾಜೇಶ್ವರ ಪದವಿ - ಇದನ್ನಲ್ಲದೇ ಬೇರೇನನ್ನೂ ಸೂಚಿಸುವುದಿಲ್ಲ.  ನಮ್ಮ ಭಾಗ್ಯಸರ್ವಸ್ವವೂ ಅವನ ಕೈಯಲ್ಲಿದೆ, ಅವನ ದಯೆಯಿಂದ ಬದುಕು ಸಾಗುತ್ತಿದೆ.  ನಾವು ಆತನ ಪಾದಗಳಿಗೆ ಹಣೆಯೊತ್ತಿ, ಜಯಗೀತೆ ಹಾಡುತ್ತ ಬದುಕುತ್ತೇವೆ.  ಇಂತಹ ಶರಣಾಗತಿಗೆ ನಿಷ್ಠೆಗೆ ಅರ್ಹನಾದ ಆ "ಭಾಗ್ಯವಿಧಾತ" ಒಂದೋ ಆ ಪರಮಾತ್ಮನಿರಬೇಕು, ಅಥವಾ ಈ ದೇಶವನ್ನಾಳುವ ದೊರೆಯಿರಬೇಕು.  ಈ ಗೀತೆಯಲ್ಲಿ ದೇಶದ ಪ್ರಸಕ್ತಿಯಿರದಿದ್ದರೆ ಅದೊಂದು ದೇವಪ್ರಾರ್ಥನೆಯ ಗೀತೆಯೆಂದು ಸುಲಭವಾಗಿ ಅರ್ಥೈಸಬಹುದಿತ್ತು - ವಾಸ್ತವದಲ್ಲಿ ಇದು ಪ್ರಾರ್ಥನಾಗೀತೆಯೇ - ಈ ಗೀತೆಯನ್ನು ಬ್ರಹ್ಮಸಮಾಜವು ಬ್ರಹ್ಮಗೀತೆಯೆಂದು ಅಂಗೀಕರಿಸಿ ಪ್ರಕಟಿಸಿದೆ, ಅಲ್ಲದೇ ಮೇಲಿನ ಲೇಖನದಲ್ಲೂ ವಿವರಿಸಿದಂತೆ, ರವೀಂದ್ರರ ಹಲವು ಪ್ರಾರ್ಥನಾಗೀತೆಗಳು ಇದೇ ತಂದೆ-ಈಶ ಭಾವವನ್ನು ಹೊರಸೂಸುತ್ತವೆ.  ಅವರ ಅಂತಹ ಒಂದೆರಡು ಮನೋಜ್ಞವಾದ ಪ್ರಾರ್ಥನಾಗೀತೆಗಳನ್ನು ಇಲ್ಲಿ ಕೇಳಬಹುದು:

https://youtu.be/YgFMeVceP34 (ಪಾದಪ್ರಾಂತೇ ರಖೋ ಸಬಕೆ - ಸ್ವಾಗತಲಕ್ಷ್ಮಿ ದಾಸ್ ಗುಪ್ತಾ)
https://youtu.be/KfzkYf-2vaU (ಬಹೆ ನಿರಂತರ ಅನಂತ - ಡಾ. ಬಾಲಮುರಳೀಕೃಷ್ಣ)
https://youtu.be/I7Nj2G4g4hQ (ತುಮಿ ಆಮದೆರ್ ಪಿತಾ - ಸ್ವಾಗತಲಕ್ಷ್ಮಿ ದಾಸ್ ಗುಪ್ತಾ)

ಒಂದು ದೈವಪ್ರಾರ್ಥನೆಯಾಗಿ "ಜನಗಣಮನ" ಒಂದು ಉನ್ನತಭಾವಪ್ರೇರಕವಾದ ಗೀತೆಯೆನ್ನುವುದರಲ್ಲಿ ಎರಡು ಮಾತಿಲ್ಲ.  ಆದರೆ ಇಲ್ಲಿ ದೇಶದ ಪ್ರಸಕ್ತಿಯೂ ಇದ್ದು, ಇದೊಂದು ದೇಶಭಕ್ತಿಗೀತೆಯೆಂದೇ ಖ್ಯಾತವಾಗಿದೆ.  ರವೀಂದ್ರರೂ ಈ ಗೀತೆಯನ್ನು ಬರೆದ ಹಿನ್ನೆಲೆಯನ್ನು ವಿವರಿಸುತ್ತಾ ಇದೊಂದು ದೇಶಭಕ್ತಿಗೀತೆಯೆಂದೇ ಹೇಳಿಕೊಂಡಿದ್ದಾರೆ (ಅದನ್ನು ಆಮೇಲೆ ನೋಡೋಣ).  ಆದರೆ ವಿಧಾಯಕ (ವಿಧಿಸುವವನು, ಶಾಸಿಸುವವನು, ಅಧಿಪತಿ), ಸಿಂಹಾಸನ, ರಾಜೇಶ್ವರ ಮೊದಲಾದ ಪದಪ್ರಯೋಗಗಳು ಇದನ್ನು ದೇಶಭಕ್ತಿಗೀತೆಯೆನ್ನುವುದಕ್ಕಿಂತ ಒಬ್ಬ ಚಕ್ರವರ್ತಿಗೆ ದೇಶದ ಭಕ್ತಿಯನ್ನು ನಿಷ್ಠೆಯನ್ನು ಸೂಚಿಸುವ ಗೀತೆಯನ್ನಾಗಿಸಿದೆಯೆಂದರೆ ಸುಳ್ಳಾಗಲಾರದು.  ಸಹಜವಾಗಿಯೇ ಆ ಚಕ್ರವರ್ತಿ, ರಾಜೇಶ್ವರ ಯಾರು ಎಂಬ ಪ್ರಶ್ನೆ ಬರುತ್ತದೆ.  ಈಗ, ಈ ಪ್ರಶ್ನೆಯನ್ನು ಇನ್ನಷ್ಟು ದಟ್ಟವಾಗಿಸಿ, ಅದನ್ನು ಐದನೆಯ ಜಾರ್ಜ್ ದೊರೆಗೆ ಕಟ್ಟಲು ಕಾರಣವಾದ ಸನ್ನಿವೇಶಗಳನ್ನು ನೋಡೋಣ:

1911 - ಆಗಿನ್ನೂ ಪೂರ್ಣಸ್ವರಾಜ್ಯದ ಬೇಡಿಕೆ ಶುರುವಾಗಿರಲಿಲ್ಲ.  ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯದ ಅಧೀನರಾಷ್ಟ್ರವಾಗಿ ಮಾಡಿ 'ಡೊಮಿನಿಯನ್' ಸ್ಥಾನಮಾನ ನೀಡಿ ಒಂದು ಮಟ್ಟದ ಸ್ವಾಯತ್ತತೆ ನೀಡಬೇಕೆಂಬ ಬೇಡಿಕೆಯನ್ನು ಭಾರತದ ಸ್ವಾತಂತ್ರ್ಯಚಳುವಳಿಯ ನಾಯಕರು ಮುಂದಿಟ್ಟಿದ್ದರು.  ಇದರಿಂದ ಭಾರತ ಬಹುಮಟ್ಟಿಗೆ ಸ್ವತಂತ್ರವಾಗುವುದಾದರೂ ಅದು ಬ್ರಿಟನ್ನಿನ ಧ್ವಜದಡಿಯಲ್ಲಿ, ಹೆಸರಿನಲ್ಲಾದರೂ ಬ್ರಿಟನ್ ಅರಸೊತ್ತಿಗೆಗೆ ಅಧೀನವಾಗಿ ಬದುಕಬೇಕಿತ್ತು.  ಬ್ರಿಟಿಷರ ಆಡಳಿತವು ತೊಲಗಿ ಅಷ್ಟರಮಟ್ಟಿಗಾದರೂ ಸ್ವಾತಂತ್ರ್ಯ ದೊರಕಲಿ ಸದ್ಯಕ್ಕೆ ಎಂಬುದು ರಾಷ್ಟ್ರನಾಯಕರ ಇರಾದೆಯಾಗಿತ್ತು.  ಆದ್ದರಿಂದ ಯಾವುದು ಹೇಗೇ ಇರಲಿ, ಸದ್ಯಕ್ಕಂತೂ ಬ್ರಿಟಿಷ್ ಅರಸೊತ್ತಿಗೆಗೆ ನಿಷ್ಠವಾಗಿರುವುದು ಕಾಂಗ್ರೆಸ್ಸಿಗೆ ಅನಿವಾರ್ಯವಾಗಿತ್ತು.  1911ರ ಕಾಂಗ್ರೆಸ್ ಅಧಿವೇಶನದ ಸಮಯದಲ್ಲಿದ್ದ ಪರಿಸ್ಥಿತಿ ಇದು.  ಇದಲ್ಲದೇ ಇದೇ ಸುಮಾರಿನಲ್ಲಿ ಮತ್ತೆರಡು ಮಹತ್ವದ ಬೆಳವಣಿಗೆಗಳಾದುವು.  ಜೂನ್ 22ರಂದು ಐದನೆಯ ಜಾರ್ಜ್ ಬ್ರಿಟಿಷ್ ಸಾಮ್ರಾಜ್ಯದ ದೊರೆಯಾಗಿ, ಭಾರತದ ಚಕ್ರವರ್ತಿಯಾಗಿ ಅಧಿಕಾರ ಸ್ವೀಕರಿಸಿದ.  ಡಿಸೆಂಬರ್ 12ರಂದು ಕಲ್ಕತ್ತಾದ ಕೊರೊನೇಶನ್ ಮೈದಾನದಲ್ಲಿ ಅದ್ದೂರಿಯಾದ ದರ್ಬಾರ್ ಸಮಾರಂಭ ನಡೆಯಿತು.  ದೇಶದ ಎಲ್ಲ ರಾಜರು, ಗಣ್ಯರು ಸೇರಿದಂತೆ ಸಾವಿರಾರು ಜನ ನೂತನ ಚಕ್ರವರ್ತಿ-ಚಕ್ರವರ್ತಿನಿಯರೆದುರು ನಡುಬಾಗಿಸಿ ಮುಜುರೆ ಮಾಡಿ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ತಮ್ಮ ನಿಷ್ಠೆ ಪ್ರದರ್ಶಿಸಿದರು.  ಇದೇ ಸಂದರ್ಭಕ್ಕೆ ಪೂರ್ವಭಾವಿಯಾಗಿ, ರವೀಂದ್ರರ ಮಿತ್ರನಾದ ಬ್ರಿಟಿಷ್ ಉನ್ನತ ಅಧಿಕಾರಿಯೊಬ್ಬ, ಭಾರತಕ್ಕೆ ಆಗಮಿಸಲಿರುವ ಜಾರ್ಜ್ ಚಕ್ರವರ್ತಿಗಾಗಿ ಒಂದು ಸ್ವಾಗತಗೀತೆಯನ್ನು ಬರೆಯಲು ಸಾಧ್ಯವೇ ಎಂದು ರವೀಂದ್ರರನ್ನು ಕೇಳಿದ್ದ (ಇದು, ಅದಾದ ಅನೇಕ ವರ್ಷಗಳನಂತರ, 1937ರಲ್ಲಿ, ರವೀಂದ್ರರೇ ತಮ್ಮ ಪತ್ರವೊಂದರಲ್ಲಿ ನೀಡಿರುವ ವಿವರಣೆ - ಅವರ ಪೂರ್ಣವಿವರಣೆಯನ್ನು ಆಮೇಲೆ ನೋಡೋಣ).   ರವೀಂದ್ರರು ಈ ಬೇಡಿಕೆಯನ್ನು ಒಪ್ಪಿದರೋ ಬಿಟ್ಟರೋ, ಗೀತೆಯನ್ನಂತೂ ಬರೆದರು - ಅದೇ, "ಜನಗಣಮನದ ಅಧಿನಾಯಕನಾದ ಭಾರತಭಾಗ್ಯವಿಧಾತ"ನಿಗೆ ಜಯವನ್ನು ಹಾಡುವ ಪ್ರಸ್ತುತ ಗೀತೆ.  ಮೇಲಿನ ದರ್ಬಾರ್ ನಡೆದ ಎರಡೇ ವಾರಗಳನಂತರ ಡಿಸೆಂಬರ್ 27ರಂದು ಕಲ್ಕತ್ತಾದಲ್ಲೇ ನಡೆದ 26ನೆಯ ಕಾಂಗ್ರೆಸ್ ಅಧಿವೇಶನದ ಎರಡನೆಯ ದಿನ, ಕಲಾಪದ ಆರಂಭದಲ್ಲಿ ಈ ಗೀತೆಯನ್ನು ಪ್ರಾರ್ಥನಾಗೀತೆಯಾಗಿ ಹಾಡಿದರು ಕೂಡ (ಆ ದಿನ ಅವರೊಟ್ಟಿಗೆ ದನಿಗೂಡಿಸಿದ್ದು ಅವರ ಅಕ್ಕನ ಮಗಳಾದ, ಖ್ಯಾತ ಮಹಿಳಾವಾದಿ ಸರಳಾದೇವಿ ಚೌಧುರಾಣಿ).  ಆನಂತರ ಬಂದಿದ್ದ ಶುಭಸಂದೇಶಗಳನ್ನು ಓದಲಾಯಿತು ಮತ್ತು ನೂತನ ಚಕ್ರವರ್ತಿ-ಚಕ್ರವರ್ತಿನಿಯರಿಗೆ ನಿಷ್ಠಾಪೂರ್ಣಸ್ವಾಗತವನ್ನು ಕೋರುವ ನಿರ್ಣಯವನ್ನು ಅಂಗೀಕರಿಸಲಾಯ್ತು.  ತದನಂತರ ಚಕ್ರವರ್ತಿ-ಚಕ್ರವರ್ತಿನಿಯರನ್ನು ಸ್ವಾಗತಿಸುವ (ಇದೇ ಸರಳಾದೇವಿಯವರ ಪತಿ, ಪಂಜಾಬಿನ ಪತ್ರಕರ್ತ, ಕಾಂಗ್ರೆಸ್ ನಾಯಕ ರಾಂ ಭುಜ್ ಚೌಧುರಿಯವರು ರಚಿಸಿದ) "ಬಾದಶಾಹ್ ಹಮಾರಾ" ಎಂಬ ಗೀತೆಯನ್ನು ಹಾಡಲಾಯಿತು.

ಮೇಲಿನದು ಭಾರತೀಯಪತ್ರಿಕೆಗಳ ಮತ್ತು ಕಾಂಗ್ರೆಸ್ ಅಧಿವೇಶನದ ವಾರ್ಷಿಕವರದಿ.  ಪಾಶ್ಚಾತ್ಯಪತ್ರಿಕೆಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, "ಚಕ್ರವರ್ತಿಯನ್ನು ಸ್ವಾಗತಿಸಲೆಂದೇ ವಿಶೇಷವಾಗಿ ರಚಿಸಿದ ಬೆಂಗಾಲೀ ಗೀತೆಯನ್ನು ಕವಿ ರವೀಂದ್ರನಾಥ ಟಾಗೋರರು ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದರು" ಎಂದೇ ವರದಿ ಮಾಡಿದುವು:

"The Bengali poet Rabindranath Tagore sang a song composed by him specially to welcome the Emperor." (Statesman, 28 December 1911)

"The proceedings began with the singing by Rabindranath Tagore of a song specially composed by him in honour of the Emperor." (Englishman, 28 December 1911) 

ಈ ಗೀತೆಯನ್ನು ರವೀಂದ್ರರು ಐದನೆಯ ಜಾರ್ಜ್ ದೊರೆಯ ಸ್ವಾಗತಕ್ಕಾಗಿ ಬರೆದರೋ ಇಲ್ಲವೋ, ಕಾಂಗ್ರೆಸ್ಸಿಗಾಗಿಯೇ ಬರೆದರೋ ಇಲ್ಲವೋ, ಕೊನೆಗೆ ಅವರೇ ಹಾಡಿದರೋ ಇಲ್ಲವೋ, ಆದರೆ ರಚನೆಯಾದ ಕೆಲವೇ ದಿನಗಳಲ್ಲಿ ಅದು ಉಪಯೋಗಿಸಲ್ಪಟ್ಟ ಸಂದರ್ಭ, ಮತ್ತು ಈಗಾಗಲೇ ವಿವರಿಸಿದಂತೆ ಗೀತೆಯ ಹೂರಣ, ಭಾಷೆ, ಭಾವ, ಅದು ಐದನೆಯ ಜಾರ್ಜ್ ದೊರೆಯನ್ನು ಕುರಿತದ್ದೇ ಎಂಬ ಸ್ಪಷ್ಟ ಅಭಿಪ್ರಾಯವನ್ನು ರೂಪಿಸಿಬಿಟ್ಟಿತು.  ಕವಿಗೆ ಅದನ್ನು ಮೀರಿದ ಉನ್ನತ ಉದ್ದೇಶವೊಂದಿದ್ದರೆ, ಅದು ಕೇವಲ ಕಾವ್ಯಸತ್ಯವಾಗಿ, ರವೀಂದ್ರರ ಸಾಹಿತ್ಯವನ್ನರಿತ ದೇಶಭಕ್ತ ಸಹೃದಯರಿಗಷ್ಟೆ ಅರಿವಿಗೆ ಬರುವಂಥದ್ದಾಗಿತ್ತೇ ಹೊರತು, ಕಾವ್ಯಸೂಕ್ಷ್ಮವನ್ನರಿಯದ ಜನಸಾಮಾನ್ಯರ, ರಾಜಕೀಯಸ್ಥರ ಅರಿವಿಗೆ ಸುತರಾಂ ಬರುವಂಥದ್ದಾಗಿರಲಿಲ್ಲ, ಏಕೆಂದರೆ ಗೀತೆಯು ಮೇಲ್ನೋಟಕ್ಕೇ ತೋರುತ್ತಿದ್ದ ಅಭಿಪ್ರಾಯ ಸ್ಪಷ್ಟವಿತ್ತು.  ಕುತೂಹಲದ ಅಂಶವೆಂದರೆ, ತಮ್ಮ ದೇಶಭಕ್ತಿಯ ಪರಿಕಲ್ಪನೆಗಳಿಗೇ ಧಕ್ಕೆತರುವಂತಿದ್ದ ಈ ಪತ್ರಿಕಾವರದಿಗಳನ್ನು ಕುರಿತ ಟಾಗೋರರ ಮೌನ.

ಇದಾಗಿ ಎರಡು ವರ್ಷಗಳಲ್ಲಿ ಅವರ ಗೀತಾಂಜಲಿ ಇಂಗ್ಲಿಷ್ ಅನುವಾದಕ್ಕಾಗಿ ನೊಬೆಲ್ ಪ್ರಶಸ್ತಿಯೂ, ಮತ್ತೆರಡು ವರ್ಷಗಳಲ್ಲಿ 1915ರಲ್ಲಿ ಬ್ರಿಟಿಷ್ ಸರ್ಕಾರದ ಅತ್ಯುನ್ನತ ನಾಗರಿಕಗೌರವವಾದ 'ನೈಟ್ ಹುಡ್' ಟಾಗೋರರಿಗೆ ದೊರೆಯಿತು.  ರವೀಂದ್ರರು ಚಕ್ರವರ್ತಿಯನ್ನು ಹೊಗಳಿದ್ದಕ್ಕಾಗಿಯೇ ಅವರಿಗೆ ಈ ಗೌರವ ಸಂದಿತು ಎನ್ನುವುದು ನನ್ನ ವಾದವಂತೂ ಅಲ್ಲ, ಖಂಡಿತಾ ಅಲ್ಲ.  ಅದೇ ನಿಜವಾಗಿದ್ದರೆ ಇನ್ನೂ ಸ್ಪಷ್ಟವಾಗಿಯೇ ಚಕ್ರವರ್ತಿಯನ್ನು ಹಾಡಿ ಹೊಗಳಿದ ಅನೇಕರಿಗೆ, ಮೇಲಿನ ಉದಾಹರಣೆಯಲ್ಲೇ ರಾಂ ಭುಜ್ ಚೌಧುರಿಯವರಿಗೂ ಇದು ಸಲ್ಲಬಹುದಿತ್ತು.  ಆದ್ದರಿಂದ ಇದು ಸ್ಪಷ್ಟವಾಗಿಯೇ ಕಾಕತಾಳೀಯವಷ್ಟೇ, ಆದರೆ ಮಹತ್ವಪೂರ್ಣವಾಗಿ ಎದ್ದು ಕಾಣುವ ಕಾಕತಾಳೀಯ - ದೇಶಕಂಡ ಮಹೋನ್ನತ ವ್ಯಕ್ತಿತ್ವ, ಅಪ್ರತಿಮ ದೇಶಭಕ್ತ, ಕವಿ ಟಾಗೋರ ಬೆಂಬಲ ಬ್ರಿಟಿಷ್ ಚಕ್ರಾಧಿಪತ್ಯಕ್ಕಿದೆಯೆನ್ನುವ ಅಭಿಪ್ರಾಯ ಮೂಡಿದರೆ ಅದು ಹಗುರವಾದ ಮಾತಲ್ಲ - ಅದು ಚಕ್ರಾಧಿಪತ್ಯಕ್ಕೆ ಅಮೂಲ್ಯವಾದದ್ದು.  ಆದ್ದರಿಂದ ಈ ಹಿನ್ನೆಲೆಯಲ್ಲಿ ನೈಟ್ ಹುಡ್ ಪದವಿಯನ್ನು ನೋಡುವವರಿಗೆ ಸಹಜವಾಗಿಯೇ ಅಲ್ಲಿ ಕೇವಲ ಕಾಕತಾಳೀಯಕ್ಕಿಂತ ಹೆಚ್ಚಿನದು ಕಂಡರೆ ಅಚ್ಚರಿಯೇನಿಲ್ಲ.

ಇವಿಷ್ಟು ವಿಷಯದ ಒಂದು ಮುಖವಾಯಿತು.  ಈಗ ಇದರ ಇನ್ನೊಂದು, ಮೊದಲಿನದ್ದಕ್ಕಿಂತ ಮುಖ್ಯವಾದ, ಮುಖವನ್ನು ಈಗ ನೋಡೋಣ.  ಮೇಲೆ ವಿವರಿಸಿದ್ದೆಲ್ಲ ಈ ಗೀತೆಯು (ಬಹುಶಃ ಟಾಗೋರರ ಉದ್ದೇಶವನ್ನೂ ಮೀರಿ), ಐದನೆಯ ಜಾರ್ಜ್ ಚಕ್ರವರ್ತಿಯ ಸ್ತುತಿಯೆಂದು ಬಿಂಬಿತವಾಗಲು ಕಾರಣವಾದ ಸಂದರ್ಭಗಳನ್ನು ಕುರಿತದ್ದು.  ಆದರೆ ನಿಜಕ್ಕೂ ಈ ಗೀತೆ ಜಾರ್ಜ್ ಚಕ್ರವರ್ತಿಯನ್ನೇ ಕುರಿತದ್ದೇ ಎಂಬುದರ ಸತ್ಯವನ್ನೀಗ ಪರಿಶೀಲಿಸಬೇಕಿದೆ.  ಮೊದಲಿಗೆ ಈ ಗೀತೆ ದೇಶಭಕ್ತಿಗೀತೆಯಾದರೂ ಮೇಲೆ ವಿವರಿಸಿದಂತೆ ಒಂದು ವಿಭಿನ್ನವಾದ ದೇಶಭಕ್ತಿಗೀತೆಯೆಂಬುದನ್ನು ನೆನಪಿನಲ್ಲಿಡಬೇಕು.  ಇಲ್ಲಿ ದೇಶದ ಬಗೆಗಿರುವುದು ಭಕ್ತಿಯಲ್ಲ, ಕಳಕಳಿ, ಕಾಳಜಿ, ವಿಹ್ವಲತೆ - ಭಕ್ತಿ, ದೇಶವನ್ನು ಅನವರತ ಕೈಹಿಡಿದು ಪೊರೆಯುವ, ಮುನ್ನಡೆಸುವ ಪರಮಪಿತನ ಬಗೆಗೆ.  ಭಗವಂತನನ್ನು ದೇವದೇವನನ್ನು ಪುರುಷರೂಪದಲ್ಲಿ, ಪ್ರಭುವಿನ ರೂಪದಲ್ಲಿ ಆರಾಧಿಸುವ ಕಲ್ಪನೆ ನಮಗೆ ಹೊಸದಲ್ಲವಾದರೂ, ದೇಶಭಕ್ತಿಯ ಸಂದರ್ಭದಲ್ಲಿ ಇದು ಹೊಸ ಕಲ್ಪನೆ.  ಆದರೆ ರವೀಂದ್ರರಿಗೆ ಇದು ಹೊಸ ಕಲ್ಪನೆಯೇನಲ್ಲ.  ಬ್ರಹ್ಮಸಮಾಜಿಗಳಾದ ರವೀಂದ್ರರ ಅನೇಕ ಪದ್ಯಗಳಲ್ಲಿ ಉನ್ನತಾಸನದಲ್ಲಿ ಮಂಡಿಸಿದ, ದೊರೆಗಳ ದೊರೆಯಾದ, ಜಗತ್ತಿನ ತಂದೆಯಾದ ಪರಮಪುರುಷನ ಕಲ್ಪನೆ, ಆತನ ಸಿಂಹಾಸನ, ಸ್ವರ್ಣರಥ, ಶಂಖನಾದ, ಭಯಹುಟ್ಟಿಸುವ ಖಡ್ಗ, ಪೊರೆಯುವ ಮಂದಹಾಸ, 'ಮಗ'ನನ್ನು ಹುಡುಕಿಕೊಂಡು ಹಟ್ಟಿಯ ಬಾಗಿಲಿಗೇ ಬಂದುಬಿಡುವ ಪರಮ ಔದಾರ್ಯ ಇವೆಲ್ಲವೂ ಧಾರಾಳವಾಗಿ ಬರುತ್ತವೆ.  ಉದಾಹರಣೆಗೆ, ಅವರ ಖ್ಯಾತ ಗೀತಾಂಜಲಿ ಸಂಕಲನದಿಂದ ಅವರೇ ಅನುವಾದಿಸಿದ ಕೆಲವು ಸಾಲುಗಳನ್ನು ನೋಡಬಹುದು (ಓದುಗರ ಅನುಕೂಲಕ್ಕಾಗಿ ಸ್ಥೂಲವಾಗಿ ಕನ್ನಡಕ್ಕೆ ಅನುವಾದಿಸಿದ್ದೇನೆ):

I was singing all alone in a corner, and the melody caught your ear.
You came down and stood at my cottage door.
(ನಾನು ನನ್ನಷ್ಟಕ್ಕೆ ಅಲ್ಲೊಂದು ಮೂಲೆಯಲಿ ಹಾಡುತಿದ್ದೆ; ಹಾಡು ನಿನ್ನ ಕಿವಿಮುಟ್ಟಿತು.  
ನೀನೋ ನನ್ನ ಗುಡಿಸಿಲ ಬಾಗಿಲಿಗೇ ಬಂದು ನಿಂತೆ)

...

I had gone a-begging from door to door in the village path, when thy golden chariot
appeared in the distance like a gorgeous dream and I wondered who was this King of all
kings!
(ಬೀದಿ ತಿರಿಯಹೊರಟವನಿಗೆ ಅಲ್ಲಿ, ದೂರದಲ್ಲಿ ನಿನ್ನ ಹೊಂದೇರ ಗಾಲಿ ಕಂಡಿತು, ದಿವ್ಯಾದ್ಭುತಸ್ವಪ್ನದಂತೆ.  ನನಗೆ ಬೆರಗು - ಯಾರೀ ರಾಜರ ರಾಜ!)

...

The chariot stopped where I stood... Then of a sudden thou didst hold out
thy right hand and say ‘What hast thou to give to me?’

Ah, what a kingly jest was it to open thy palm to a beggar to beg!

(ರಥ ಪಕ್ಕದಲ್ಲೇ ನಿಂತಿತು... ಇದ್ದಕ್ಕಿದ್ದಂತೆ ನೀನೇ ಕೈಚಾಚಿದೆ, ಕೇಳಿದೆ "ಏನು ಕೊಡುತ್ತೀ ನನಗೆ?"

ಆಹ, ತಿರುಕನಲ್ಲೆ ತಿರಿಯಬರುವ ದೊರೆಯ ಆಟವೆಂಥದೋ!)

... 

The night darkened... some said the king was to come. We laughed and said ‘No, it cannot be!’
(ಇರುಳುಗತ್ತಲೇರಿತು...  ಕೆಲರೆಂದರು, ದೊರೆ ಬರುವುದು ಬಾಕಿಯಿದೆ.  ನಮಗೆ ನಗು "ಇಲ್ಲ, ಸಾಧ್ಯವಿಲ್ಲ!)

...

The night was still dark when the drum sounded... We pressed our hands on our hearts and
shuddered with fear. Some said, ‘Lo, there is the king’s flag!’
(ಮತ್ತೂ ಕತ್ತಲಾಯಿತು, ನಗಾರಿ ಶಬ್ದ... ಬೆಚ್ಚಿ ಎದೆಯೊತ್ತಿಕೊಂಡೆವು.  ಕೆಲರೆಂದರು, 'ಅಗೋ ರಾಜಧ್ವಜ!)

...

The king has come—but where are lights, where are wreaths? Where is the throne to seat
him? Oh, shame! Oh utter shame! Where is the hall, the decorations? Someone has said,
‘Vain is this cry! Greet him with empty hands, lead him into thy rooms all bare!’
Open the doors, let the conch-shells be sounded! in the depth of the night has come the
king of our dark, dreary house. 

(ದೊರೆ ಬಂದಿಹನು - ಆದರೆ ದೀವಟಿಗೆಯೆಲ್ಲಿ, ಹಾರವೆಲ್ಲಿ?  ಕುಳ್ಳಿರಿಸಲು ಸಿಂಹಾಸನವೆಲ್ಲಿ?  ಓಹ್ ಮುಜುಗರವೇ! ಎಂಥ ನಾಣ್ಗೇಡು!  ಸಭಾಂಗಣವೆಲ್ಲಿ, ಎಲ್ಲಿ ಅಲಂಕಾರ?
ಒಬ್ಬರೆಂದರು "ವೃಥಾ ಅಳುವುದೇಕೆ? ಬರಿಗೈಯಲ್ಲೇ ಬರಮಾಡಿಕೊಳ್ಳಿ, ನಿಮ್ಮ ಬರಿಗೋಣೆಗವನ ಕರೆದೊಯ್ಯಿರಿ!"
ಬಾಗಿಲ ತೆರೆಯಿರಿ, ಶಂಖಧ್ವನಿ ಮೊಳಗಲಿ!  ನಟ್ಟಿರುಳೊಳು ದೊರೆ ಬಂದಿದ್ದಾನೆ, ನಮ್ಮ ಮಬ್ಬುಗತ್ತಲ ಕೋಣೆಗೆ)

...

I thought I should ask of thee—but I dared not—the rose wreath thou hadst on thy neck.
Thus I waited for the morning, when thou didst depart, to find a few fragments on the bed.
(ಬೇಡೋಣವೆಂದಿದ್ದೆ, ನಿನ್ನ ಕೊರಳನಲಂಕರಿಸಿದ್ದ ಆ ಗುಲಾಬಿ ಮಾಲೆಯನ್ನು - ಅಂಜಿ ಸುಮ್ಮನಾದೆ.
ಕಾದೆ - ಬೆಳಗ್ಗೆ ನೀ ಹೋದ ಮೇಲೆ ಹಾಸಿಗೆಯ ಮೇಲುದುರಿರುವ ಕೆಲವು ಪಕಳೆಗಳನ್ನಾಯಲು)

...

Ah me, what is it I find? What token left of thy love? It is no flower, no spices, no vase of
perfumed water. It is thy mighty sword, flashing as a flame, heavy as a bolt of thunder.
(ಆಹ್, ನನಗೆ ಕಂಡದ್ದಾದರೂ ಏನು?  ನೀ ನನಗಾಗಿ ಬಿಟ್ಟುಹೋದ ಪ್ರೀತಿಯ ಕಾಣಿಕೆ!  ಹೂವಲ್ಲ, ಗಂಧವಲ್ಲ, ತೀರ್ಥವೂ ಅಲ್ಲ.  
ಬೆಂಕಿಯುಗುಳುವ, ಸಿಡಿಲ ತೂಕದ ನಿನ್ನ ಬಲು ಖಡ್ಗ!)

...

I sit and muse in wonder, what gift is this of thine.
(ಬೆರಗುವಡೆದು ಚಿಂತಿಸುತ್ತಿದ್ದೇನೆ, ಇದೆಂಥ ಉಡುಗೊರೆಯಪ್ಪ ನಿನ್ನದು)

"ಜನಗಣಮನ" ಗೀತೆಯಲ್ಲಿ ಸ್ತುತಿಸಲ್ಪಟ್ಟ "ಭಾರತಭಾಗ್ಯವಿಧಾತ" ಈ ದೊರೆ - ಯಾವುದೋ ಮರ್ತ್ಯಲೋಕದ ಚಕ್ರವರ್ತಿಯಲ್ಲ.  ಮೇಲಿನದು ಒಂದು ಉದಾಹರಣೆಯಷ್ಟೇ.  ಈ ಕಲ್ಪನೆ ರವೀಂದ್ರರ ಸಾಹಿತ್ಯದಲ್ಲಿ ವಿಪುಲವಾಗಿ ದೊರೆಯುತ್ತದೆ.  ಅದರ ಪರಿಚಯವಿದ್ದವರಿಗೆ ಇದು ಹೊಸದಲ್ಲ.  

ರವೀಂದ್ರರು ಬೆಂಗಾಲದ ವಿಭಜನೆಯನ್ನು ಪ್ರತಿಭಟಿಸುವ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು, ಸ್ವಾತಂತ್ರ್ಯಚಳುವಳಿಗಾರರನೇಕರ 'ರಾಷ್ಟ್ರೀಯತೆ'ಯ ಕಲ್ಪನೆಯನ್ನು ಅನೇಕ ವೇಳೆ ಕಟುವಾಗಿ ಟೀಕಿಸಿದರೂ ದೇಶದ ದಾಸ್ಯವನ್ನು ಕಂಡು ಬಹುವಾಗಿ ಮರುಗಿದವರು.  ಈ 'ದೈನ್ಯ', ಅದರಿಂದ ದೇಶವನ್ನು ಮೇಲೆತ್ತಲು ದೇವದೇವನಿಗೆ ಕಳಕಳಿಯ ಮೊರೆ ಇವು ರವೀಂದ್ರರ ಬರಹಗಳಲ್ಲಿ ಪದೇಪದೇ ಕಾಣುತ್ತವೆ (ಇದೇ ಭಾವ ಮೇಲೆ ನೋಡಿದ "ಜನಗಣಮನ" ಗೀತೆಯಲ್ಲೂ ಮಡುಗಟ್ಟಿದೆ).  ಮುಂದೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಪ್ರತಿಭಟಿಸಿ ನಾವು ಮೇಲೆ ಚರ್ಚಿಸಿದ ಅದೇ 'ನೈಟ್ ಹುಡ್' ಪದವಿಯನ್ನು ಅದೇ ಬ್ರಿಟಿಷ್ ಸರ್ಕಾರದ ಮುಖಕ್ಕೆ ಬಿಸಾಕಿದ ಧೀಮಂತವ್ಯಕ್ತಿತ್ವದ ಅಸೀಮ ದೇಶಭಕ್ತ, ದಾರ್ಶನಿಕ, ಮರ್ತ್ಯದ ದೊರೆಯೊಬ್ಬನಿಗೆ ಜೈಕಾರ ಹಾಕುತ್ತಾನೆಂಬುದು ನಿಜಕ್ಕೂ ಯೋಚನೆಗೆ ದಕ್ಕುವ ವಿಷಯವಲ್ಲ.  ಸುಮಾರು ಇದೇ ಭಾವನೆಯನ್ನು ಪ್ರತಿಧ್ವನಿಸುತ್ತಾ, 1937ರಲ್ಲಿ, ಪುಲಿನ್ ಬಿಹಾರಿ ಸೇನ್ ಎಂಬುವರಿಗೆ ಬರೆದ ಪತ್ರದಲ್ಲಿ ರವೀಂದ್ರರು ಹೀಗೆ ಹೇಳುತ್ತಾರೆ - "A certain high official in His Majesty's service, who was also my friend, had requested that I write a song of felicitation towards the Emperor. The request simply amazed me. It caused a great stir in my heart. In response to that great mental turmoil, I pronounced the victory in Jana Gana Mana of that Bhagya Bidhata [ed. God of Destiny] of India who has from age after age held steadfast the reins of India's chariot through rise and fall, through the straight path and the curved. That Lord of Destiny, that Reader of the Collective Mind of India, that Perennial Guide, could never be George V, George VI, or any other George. Even my official friend understood this about the song. After all, even if his admiration for the crown was excessive, he was not lacking in simple common sense (ಪ್ರಭುಗಳ ಸೇವೆಯಲ್ಲಿರುವ ಉನ್ನತ ಅಧಿಕಾರಿಯೊಬ್ಬರು, ನನ್ನ ಮಿತ್ರರೂ ಕೂಡ, ಚಕ್ರವರ್ತಿಯನ್ನು ಸ್ವಾಗತಿಸುವ ಗೀತೆಯೊಂದನ್ನು ಬರೆಯಲು ನನ್ನನ್ನು ಕೋರಿದರು.  ಈ ಕೋರಿಕೆ ನನ್ನನ್ನು ಅಚ್ಚರಿಗೊಳಿಸಿತು.  ನನ್ನ ಹೃದಯವನ್ನು ಕಲಕಿಬಿಟ್ಟಿತು.  ಈ ಒಳತೋಟಿಗುತ್ತರವಾಗಿ ನಾನು, ಎಷ್ಟೆಷ್ಟೋ ಏಳುಬೀಳಿನ ಅಂಕುಡೊಂಕಿನ ದಾರಿಯಲ್ಲೂ ಯುಗಯುಗಗಳಿಂದ ಭಾರತದ ರಥವನ್ನು ನಡೆಸುತ್ತಾ ಕರೆದೊಯ್ಯುತ್ತಿರುವ, ಭಾರತಭಾಗ್ಯವಿಧಾತನ ಜಯಗೀತೆಯನ್ನು ಹಾಡಿದೆ.  ಆ ಭಾಗ್ಯವಿಧಾತ, ಜನಗಣಮನದ ಅಧಿನಾಯಕ, ಚಿರಸಾರಥಿ ಖಂಡಿತಾ ಐದನೆಯ ಜಾರ್ಜೋ ಆರನೆಯ ಜಾರ್ಜೋ ಇನ್ನಾವ ಜಾರ್ಜೋ ಆಗಿರಲು ಸಾಧ್ಯವಿಲ್ಲ.  ನನ್ನ ಆ ಅಧಿಕಾರಿಮಿತ್ರರೂ ಆ ಗೀತೆಯ ವಿಷಯದಲ್ಲಿ ಇದನ್ನು ಅರಿತರು.  ಚಕ್ರವರ್ತಿಗಳ ವಿಷಯದಲ್ಲಿ ಅವರ ಭಕ್ತಿ ಏನೇ ಇರಲಿ, ಆತನಿಗೆ ಸಾಮಾನ್ಯಜ್ಞಾನವಂತೂ ಇದ್ದೇ ಇತ್ತು)" 

ಮತ್ತೆ 1939ರ ಮಾರ್ಚ್ 19ರ ತಮ್ಮ ಇನ್ನೊಂದು ಪತ್ರ ಟ್ಯಾಗೋರ್ ಹೀಗೆ ಹೇಳುತ್ತಾರೆ “I should only insult myself if I cared to answer those who consider me capable of such unbounded stupidity as to sing in praise of George the Fourth or George the Fifth as the Eternal Charioteer leading the pilgrims on their journey through countless ages of the timeless history of mankind (ಯುಗಯುಗಗಳಿಂದಲೂ ಮಾನವ ಕುಲದ ಪತನ-ಅಭ್ಯುದಯಗಳ ನಿರಂತರ ರಥಯಾತ್ರೆಯಲ್ಲಿ ಚಿರಸಾರಥಿಯೆಂದು ನಾಲ್ಕನೆಯವನೊ ಐದನೆಯವನೊ ಜಾರ್ಜ್ ನ ಗುಣಗಾನ ಮಾಡುವ ಎಣೆಯಿಲ್ಲದ ಮೂರ್ಖತನ ನನ್ನದೆನ್ನುವವರಿಗೆ ಉತ್ತರಿಸಹೋಗುವುದೂ ನನಗೆ ನಾನೇ ಮಾಡಿಕೊಳ್ಳುವ ಅಪಮಾನ") - Purvasa, Phalgun, 1354, p738.

ಅದೇನೇ ಇರಲಿ, ಮೇಲಿನ ಎರಡೂ ಸ್ಪಷ್ಟನೆಗಳು ಬಂದದ್ದು ಮೇಲಿನ ವಿವಾದ ಸೃಷ್ಟಿಯಾದ ಎಷ್ಟೋ ವರ್ಷಗಳನಂತರ, ಸ್ವತಃ ಐದನೆಯ ಜಾರ್ಜ್ ದೊರೆ ಗತಿಸಿದಮೇಲೆ.  ಬಹುಶಃ ಈ ವಿವರಣೆಯನ್ನು ಟಾಗೋರರು ಇಪ್ಪತ್ತು ವರ್ಷಗಳ ಹಿಂದೆಯೇ ನೀಡಿದ್ದರೆ ಆ ಮಾತು ಬೇರೆಯೇ ಇರುತ್ತಿತ್ತೇನೋ.  ಆದರೆ ಇಷ್ಟು ವರ್ಷಕಾಲದ ಅವರ ಮೌನಕ್ಕೆ ನಿಜಕ್ಕೂ ವಿವರಣೆಯಿಲ್ಲ.  ಅಥವಾ, ಟಾಗೋರರ ಆಗಿನ ಮೌನಕ್ಕೆ ಆ ಕಾಲದ ರಾಜಕೀಯಸನ್ನಿವೇಶವೇ ಕಾರಣವಿರಬಹುದೆಂದು ಊಹಿಸುವುದರಲ್ಲಿ ತಪ್ಪೇನಿಲ್ಲ.  ಹೇಳಿಕೇಳಿ, ಭಾರತವು ಬ್ರಿಟಿಷರಿಂದ ಡೊಮಿನಿಯನ್ ಸ್ಥಾನಮಾನ ಕೇಳುತ್ತಿದ್ದ ಕಾಲ, ಸಹಜವಾಗಿಯೇ ಚಕ್ರಾಧಿಪತ್ಯಕ್ಕೆ ತಗ್ಗಿಬಗ್ಗಿ ನಡೆಯಬೇಕಾದ ರಾಜಕೀಯ ಅನಿವಾರ್ಯತೆಯಿದ್ದ ಕಾಲ; ಇನ್ನೂ ಅನೇಕ ಮುಂಚೂಣಿ ನಾಯಕರು ಇದೇ ರಾಜಕೀಯಕಾರಣಕ್ಕಾಗಿಯೇ ಬ್ರಿಟಿಷರನ್ನು ಅದೆಷ್ಟೋ ವಿಷಯಗಳಲ್ಲಿ ಬೆಂಬಲಿಸಿದ ಉದಾಹರಣೆಯೂ ಇದೆ.  ಹೀಗಿದ್ದಾಗ, ದೇಶದ ಹಿತದೃಷ್ಟಿಯಿಂದಲೇ ಮೌನವಹಿಸುವುದು ಲೇಸೆಂದು ಆಗ ಗುರುದೇವರು ಭಾವಿಸಿದ್ದರೆ ಅಚ್ಚರಿಯೇನಿಲ್ಲ.  ಜನಗಣಮನದಂತಹ ಅರ್ಥಸಂದಿಗ್ಧವುಳ್ಳ ಗೀತೆಯನ್ನು ರಚಿಸಿದ್ದೂ ಈ ಸನ್ನಿವೇಶಕ್ಕೆ ಕಟ್ಟುಬಿದ್ದೇ ಇರಬಹುದು.  ಆದರೆ ಮೇಲ್ಕಂಡ ಸ್ಪಷ್ಟನೆ ನೀಡುವ ಹೊತ್ತಿಗೆ ಕಾಲ ಬದಲಾಗಿತ್ತು - ಭಾರತದ ಸ್ವಾತಂತ್ರ್ಯಚಳುವಳಿ ಬ್ರಿಟಿಷ್ ಚಕ್ರಾಧಿಪತ್ಯದ ಮುಲಾಜನ್ನು ಕಿತ್ತೊಗೆದು, ಡೊಮಿನಿಯನ್ ಸ್ಥಾನಮಾನದ ಬೇಡಿಕೆಯನ್ನು ಕೈಬಿಟ್ಟು, ಪೂರ್ಣಸ್ವರಾಜ್ಯದ ಹಕ್ಕೊತ್ತಾಯವನ್ನು ಸ್ಥಾಪಿಸಿ ಸಂಪೂರ್ಣಸ್ವಾತಂತ್ರ್ಯದೆಡೆ ದಾಪುಗಾಲಿಕ್ಕುತ್ತಿದ್ದ ಕಾಲವದು.  ಆದ್ದರಿಂದ ಈಗ ಸ್ಪಷ್ಟನೆ ನೀಡಲು ಸಕಾಲವೆಂದು ಟಾಗೂರರು ಭಾವಿಸಿದ್ದಿರಬಹುದು. 

ಇವಿಷ್ಟನ್ನೂ ಪರ್ಯಾಲೋಚಿಸಿದ ಮೇಲೆ ನಮಗೆ ತೋರುವುದಿಷ್ಟು.  ರವೀಂದ್ರರ ಸಾಹಿತ್ಯದ ಸಂದರ್ಭ, ಧಾರ್ಮಿಕ-ಆಧ್ಯಾತ್ಮಿಕ ಹಿನ್ನೆಲೆ, ಮತ್ತು ಅವರದ್ದೇ ಇತರ ಹಲವು ಪ್ರಾರ್ಥನಾಪದ್ಯಗಳನ್ನು ಗಮನದಲ್ಲಿಟ್ಟುಕೊಂಡು ಜನಗಣಮನ ಪೂರ್ಣಗೀತೆಯನ್ನು ಪರಿಶೀಲಿಸಿದಾಗ ಗೀತೆಯ ಉದಾತ್ತಕಲ್ಪನೆ, ಈ ನೆಲದ ಜನಗಣಮನವನ್ನು ಅನುಗಾಲವೂ ಕೈಹಿಡಿದು ನಡೆಸುವ ಪರಮಪಿತನ ಸ್ತುತಿಯೆಂಬ ವಿಷಯ ಮನದಟ್ಟಾಗುತ್ತದೆ.  ಇದನ್ನು ಬ್ರಹ್ಮಸಮಾಜವು 'ಬ್ರಹ್ಮ'ಪ್ರಾರ್ಥನೆಯೆಂದು ಅಂಗೀಕರಿಸಿ ತನ್ನ ಸಂಕಲನದಲ್ಲಿ ಪ್ರಕಟಿಸಿರುವುದೂ ಈ ಅಂಶವನ್ನು ದೃಢಪಡಿಸುತ್ತದೆ.  ಇಂತಿರುವಾಗ ಇದು ಯಾವನೋ ಈ ನೆಲದ ದೊರೆಯ ಸ್ತುತಿಯೆನ್ನುವ ಗ್ರಹಿಕೆ ನಿರಾಧಾರವೆಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಇದು ಈ ನೆಲದ ದೊರೆಯ ಸ್ತುತಿಯೆನ್ನುವ ಗ್ರಹಿಕೆ ನಿರಾಧಾರವಾದುದೇನೋ ಹೌದು - ಯಾರಿಗೆ? ಮೇಲೆ ವಿವರಿಸಿದ ಎಲ್ಲ ಹಿನ್ನೆಲೆಗಳನ್ನೂ ಅರಿತವರಿಗೆ.  ಆದರೆ ಹಾಗೆ ಕೂಲಂಕಷವಾಗಿ ವಿಷಯವನ್ನು ಅರಿತವರು, ಪರಿಶೀಲಿಸಬಲ್ಲವರು ಎಷ್ಟು ಮಂದಿ? ಪರಮಾತ್ಮನನ್ನು ಪೂಜಿಸುವ ಧಾರ್ಮಿಕ ವಿಷಯ ಬೇರೆ, ಆದರೆ ದೇಶವೆಂದರೆ ಮಾತೆ ಎಂಬ ಕಲ್ಪನೆಯನ್ನೇ ಹೊಂದಿರುವ ಎಷ್ಟು ಜನಕ್ಕೆ "ಜನಗಣಮನ ಅಧಿನಾಯಕ"ನ ಅಮೂರ್ತಕಲ್ಪನೆ ಮನಸ್ಸಿಗೆ ಹೊಗಬಲ್ಲುದು?  ರಥ, ಚಕ್ರ, ಚಕ್ರೇಶ್ವರ, ಶಂಖಧ್ವನಿ, ಸಿಂಹಾಸನ ಮುಂತಾದ ಸಂಕೇತಗಳು ಯಾವುದೋ ರಾಜನದ್ದಲ್ಲ, ಪರಮಪಿತನನ್ನು ಕುರಿತದ್ದೆಂಬುದನ್ನು ಎಷ್ಟು ಜನ ಅರಿಯಬಲ್ಲರು?  ಜನಾಭಿಪ್ರಾಯಗಳು ರೂಪುಗೊಳ್ಳುವುದು ಸೂಕ್ಷ್ಮಪರಿಶೀಲನೆಗಳಿಂದಲ್ಲ, ಕಣ್ಣಿಗೆ ಕಾಣುವ ಸ್ಥೂಲಸನ್ನಿವೇಶಗಳ ಆಧಾರದ ಮೇಲೆ.  ಆ ಸ್ಥೂಲಸನ್ನಿವೇಶಗಳು ಸ್ಪಷ್ಟವಾಗಿವೆ - ದೊರೆಯ ಪಟ್ಟಾಭಿಷೇಕ ಕೆಲವೇ ತಿಂಗಳ ಹಿಂದೆ ಆಗಿದೆ, ಎರಡೇ ವಾರದ ಹಿಂದೆ ಕಲ್ಕತ್ತಾದಲ್ಲಿ ಚಕ್ರವರ್ತಿಯ ದರ್ಬಾರು ನಡೆದಿದೆ - ಅದರಲ್ಲಿ ಇಡೀ ದೇಶದ ಗಣ್ಯಾತಿಗಣ್ಯರು ನಡುಬಗ್ಗಿಸಿ ಚಕ್ರವರ್ತಿಗೆ ಮುಜುರೆ ಮಾಡಿ ನಿಷ್ಠೆತೋರಿದ್ದಾರೆ.  ದೊರೆಗೆ ನಿಷ್ಠವಾದ ಕಾಂಗ್ರೆಸ್ ಅಧಿವೇಶನದಲ್ಲಿ ಹೊಸದಾಗಿ ರಚಿತವಾದ ಪ್ರಾರ್ಥನಗೀತೆಯೊಂದನ್ನು ಸ್ವತಃ ರವೀಂದ್ರರೇ ಹಾಡಿದ್ದಾರೆ (ಅಂಥದ್ದೊಂದು ಸ್ವಾಗತಗೀತೆಯನ್ನು ರಚಿಸಬೇಕೆಂಬ ಕೋರಿಕೆ ಅವರಿಗೆ ಬ್ರಿಟಿಷರ ಕಡೆಯಿಂದಲೇ ಬಂದಿದೆ - ಅವರದನ್ನು ಪುರಸ್ಕರಿಸಿಲ್ಲವಾದರೂ ಸ್ಪಷ್ಟವಾಗಿ ತಿರಸ್ಕರಿಸಿಲ್ಲ, ಗೀತೆಯನ್ನೇನೋ ರಚಿಸಿದ್ದಾರೆ).  ಆ ಗೀತೆಯ ಉನ್ನತಾರ್ಥವೇನೇ ಇರಲಿ, ಮೇಲ್ನೋಟಕ್ಕೆ ಅದರ ಹೂರಣವಂತೂ (ಹಿನ್ನೆಲೆಯನ್ನರಿಯದ ಬಹುಪಾಲು ಜನಕ್ಕೆ) ದೊರೆಯನ್ನು ಸ್ತುತಿಸುವಂತೆಯೇ ಕಾಣುತ್ತದೆ.  ಈ ಗೀತೆಯಾದೊಡನೆಯೇ ದೊರೆಗೆ ನಿಷ್ಠವಾಗಿರುವ ನಿರ್ಣಯವನ್ನು ಅಂಗೀಕರಿಸಲಾಗುತ್ತದೆ, ಮತ್ತು ಅದರ ಬೆನ್ನಲ್ಲೇ ದೊರೆಯನ್ನು ಸ್ವಾಗತಿಸಿಕೊಂಡಾಡುವ ಸ್ವಾಗತಗೀತೆಯನ್ನು ಹಾಡಲಾಗುತ್ತದೆ.  ಆಂಗ್ಲಪತ್ರಿಕೆಗಳು "ಚಕ್ರವರ್ತಿಯನ್ನು ಸ್ವಾಗತಿಸಲೆಂದೇ ವಿಶೇಷವಾಗಿ ರಚಿಸಿದ ಬೆಂಗಾಲೀ ಗೀತೆಯನ್ನು ಕವಿ ರವೀಂದ್ರನಾಥ ಟಾಗೋರರು ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದರು" ಎಂದು ವರದಿ ಮಾಡುತ್ತವೆ.  ಹೀಗೆ ಸ್ಪಷ್ಟವಾಗಿಯೇ 'ದಾರಿ ತಪ್ಪಿಸುವ' ವರದಿ ಬಂದಾಗಲೂ, ಅದನ್ನು ನಿರಾಕರಿಸಿ ಗಟ್ಟಿಯಾಗಿ ಸ್ಪಷ್ಟನೆ ನೀಡಬಹುದಾದ ಒಬ್ಬರೇ ವ್ಯಕ್ತಿ, ಟಾಗೋರರು ಮೌನವಹಿಸುತ್ತಾರೆ.  ಇದಾಗಿ ಎರಡೇ ವರ್ಷಕ್ಕೆ ನೊಬೆಲ್ ಪ್ರಶಸ್ತಿಯೂ ನಾಲ್ಕೇ ವರ್ಷಕ್ಕೆ ನೈಟ್ ಪದವಿಯೂ ಕೂಡ ದೊರೆಯುತ್ತದೆ, ಇದು ಸಹಜವಾಗಿಯೇ ಈ ಮೌನಕ್ಕೆ ವಿಶೇಷಾರ್ಥವನ್ನು ಹಚ್ಚುತ್ತದೆಯಷ್ಟೇ?  (ಆಮೇಲಿನ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಅವರು ಆ ಪದವಿಯನ್ನು ಮರಳಿಸುತ್ತಾರೆಂಬುದೇನೋ ನಿಜವೇ, ಆದರೆ ಅದು ಸರ್ಕಾರದ ಅವತ್ತಿನ ದುರಾಚಾರಕ್ಕೆ ಪ್ರತಿಭಟನೆಯಾಗುತ್ತದೆಯೇ ಹೊರತು, ಮೂಲವಿವಾದವನ್ನೇನೂ ಸರಿಪಡಿಸುವುದಿಲ್ಲ).  ಇಷ್ಟೆಲ್ಲ ಇರುವಾಗ, ಇದು ಐದನೇ ಜಾರ್ಜ್ ಚಕ್ರವರ್ತಿಯನ್ನೇ ಕುರಿತದ್ದಿರಬೇಕೆನ್ನುವ ಜನಾಭಿಪ್ರಾಯ ರೂಪುಗೊಂಡಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ.

ಇಷ್ಟಕ್ಕೂ ಈ ಅಭಿಪ್ರಾಯದಲ್ಲೂ ಎಳ್ಳಷ್ಟಾದರೂ ಸತ್ಯವಿಲ್ಲದಿಲ್ಲ.  ಗೀತೆಯಲ್ಲಿ ಕವಿಯ ಉದಾತ್ತಕಲ್ಪನೆಯೇನೇ ಇರಲಿ, ಗೀತೆಗೆ ನಿಮಿತ್ತವಾದದ್ದು ಮಾತ್ರ ಭಾರತಕ್ಕೆ ಬರಲಿದ್ದ ಚಕ್ರವರ್ತಿಯೇ ಎಂಬುದರಲ್ಲಿ ಸುಳ್ಳೇನಿಲ್ಲವಲ್ಲ.  ಆತನ ಸ್ವಾಗತಕ್ಕಾಗಿ ಗೀತೆಯೊಂದನ್ನು ರಚಿಸಿರೆಂಬ ಕೋರಿಕೆ ಬರದಿದ್ದರೆ ಬಹುಶಃ ರವೀಂದ್ರರು ಈ ಗೀತೆಯನ್ನು ರಚಿಸುತ್ತಲೇ ಇರಲಿಲ್ಲವಷ್ಟೇ?  ಅದನ್ನು ಕಾಂಗ್ರೆಸ್ ಅಧಿವೇಶನದಲ್ಲಿ (ದೊರೆಗೆ ನಿಷ್ಠೆಯನ್ನು ಸೂಚಿಸುವ ಸಂದರ್ಭದಲ್ಲಿ) ಹಾಡಿದ್ದೂ ಸಹ, ಆ ಗೀತೆಯನ್ನು ಇದೇ ಸಂದರ್ಭಕ್ಕಾಗಿ ಬರೆದದ್ದೆಂಬುದನ್ನು ಸ್ಪಷ್ಟಪಡಿಸುತ್ತದೆ.  ಕವಿಗೆ ದೊರೆಯನ್ನು ಸ್ತುತಿಸುವ ಉದ್ದೇಶವಿಲ್ಲದಿರಬಹುದು, ಅಂಥದ್ದೊಂದು ಕೋರಿಕೆಯಿಂದ ತಮಗಾದ ನೋವನ್ನು ಪ್ರತಿಭಟನೆಯ ರೂಪದಲ್ಲಿ ತುಂಬಿ, ದೊರೆಯ ನೆವದಲ್ಲಿ "ಜನಗಣಮನ ಅಧಿನಾಯಕ"ನನ್ನೇ ಸ್ತುತಿಸಿರಬಹುದು - ಅತ್ತ ದೊರೆಗೆ ಇದು ತನ್ನನ್ನೇ ಕುರಿತದ್ದೆನ್ನುವ ಸಂತಸವಾದರೆ ಇತ್ತ ನಮಗೆ ನಮ್ಮೆಲ್ಲರನ್ನೂ ಕೈಹಿಡಿದು ಮುನ್ನೆಡೆಸುತ್ತಿರುವ ಮಹಾಶಕ್ತಿಯ ಸ್ತುತಿಯೆಂಬ ಸಮಾಧಾನ.  ಆದರೆ ಅದಕ್ಕಾಗಿ ಕವಿ ಬಳಸಿದ ಸಂದಿಗ್ಧ ಕಲ್ಪನೆಗಳು (ಎರಡೂ ಅರ್ಥ ಕೊಡಬಹುದಾದ ಕಲ್ಪನೆಗಳು), ಕವಿಯ ಉದಾತ್ತ ಉದ್ದೇಶವನ್ನಾಗಲಿ, ಕವಿಯನ್ನು ತುಂಬಿದ್ದ ನೋವನ್ನಾಗಲೀ ಬಹುಜನರಿಗೆ ಮುಟ್ಟಿಸಲಿಲ್ಲ.  ಬದಲಿಗೆ ಜನ, ದೊರೆಯೇ ಆ "ಜನಗಣಮನ ಅಧಿನಾಯಕ"ನೆಂದು ತಿಳಿಯುವ ಅಪಾಯವನ್ನೇನೂ ಅದು ತಪ್ಪಿಸಲಿಲ್ಲ.  ಹೀಗಾಗಿ, ಗೀತೆಯು ತಾತ್ತ್ವಿಕವಾಗಿ ಭಾರತದ ಭಾಗ್ಯವಿಧಾತನನ್ನೇ ಸ್ತುತಿಸಿದ್ದರೂ, ವಾಸ್ತವದಲ್ಲಿ ಆ ಪದ್ಯ ಹುಟ್ಟಿದ್ದು ದೊರೆಯ ನಿಮಿತ್ತದಿಂದಲೇ ಎಂಬುದನ್ನು ಅಲ್ಲಗಳೆಯಲಾಗದು.  ಆದರೆ ಪ್ರಸಕ್ತ ರಾಜಕೀಯಸನ್ನಿವೇಶ ಟಾಗೂರರ ಬಾಯಿ ಕಟ್ಟಿತ್ತೆಂದುಕೊಳ್ಳಬಹುದು.

ಇಷ್ಟು ಹೇಳಿದ ಮೇಲೆ ಕೊನೆಯದಾಗಿ, ರಾಷ್ಟ್ರಗೀತೆಯಾಗಿ ಈ ಗೀತೆಯನ್ನೊಮ್ಮೆ ಪರಿಶೀಲಿಸುವುದು ಅಪ್ರಸ್ತುತವಾಗಲಿಕ್ಕಿಲ್ಲ.  ರಾಷ್ಟ್ರಗೀತೆಯೊಂದು ಹೇಗಿರಬೇಕು?  

  1. ಎದೆ ಸೆಟೆಸಿ ತಲೆಯೆತ್ತಿ ಗತ್ತಿನಿಂದ ಹಾಡುವಂತಿರಬೇಕು; 
  2. ತೀರ ನಿಧಾನವೂ ಅಲ್ಲದ, ವೇಗವೂ ಅಲ್ಲದ ಕವಾಯತಿನ ಲಯಕ್ಕೆ ತಕ್ಕಂತಹ ವೇಗ, ಸಂಗೀತ ಹೊಂದಿರಬೇಕು; 
  3. ಆ ಸಂದರ್ಭಕ್ಕೆ ತಕ್ಕಂತಹ ಹೆಮ್ಮೆಯ ಭಾವವನ್ನು ಹೊಮ್ಮಿಸುವ ಸಂಗೀತ, ಮತ್ತು ಅದಕ್ಕೆ ಒಪ್ಪುವ ಸಾಹಿತ್ಯವಿರಬೇಕು; 
  4. ಆ ನೆಲಜಲಗಳ, ಜನದ, ಸಿರಿಸಂಪತ್ತಿನ, ವೀರ್ಯಶೌರ್ಯಗಳ, ತ್ಯಾಗಬಲಿದಾನಗಳ ವೈಶಿಷ್ಟ್ಯವನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುವಂತಿರಬೇಕು, 
  5. ಜೊತೆಗೆ ತನ್ನ ದೇಶದ ಬಗ್ಗೆ ಆತ್ಮೀಯಭಾವ ಉಕ್ಕುವಂತಿರಬೇಕು.

ಈ ಐದು ಅಂಶಗಳಲ್ಲಿ ಮೊದಲ ಮೂರಂಶಗಳು ಸಂಗೀತಕ್ಕೆ ಸಂಬಂಧಿಸಿದುವು.  ಸಾಹಿತ್ಯವೊಂದು ಸಂಗೀತಕ್ಕೊಪ್ಪುವಂತಿದ್ದರಾಯಿತು.  ಉಳಿದುದನ್ನು ಸಂಗೀತ ನೋಡಿಕೊಳ್ಳುತ್ತದೆ.  ನಮ್ಮ ರಾಷ್ಟ್ರಗೀತೆಯ ಸಂಗೀತ ಅಂತಹ ಗುಣವನ್ನು ಹೊಂದಿದೆಯೆನ್ನುವುದು ನಿರ್ವಿವಾದ.  ಆದರೆ ನೆನಪಿರಲಿ, ಅಂತಹ ಸಂಗೀತವನ್ನು ಯಾವ ಗೀತೆಗೂ ಮಾಡಬಹುದು, ಮತ್ತು ಅಂತಹ ಸಂಗೀತಕ್ಕೆ ತಕ್ಕ ಭಾವವನ್ನು ಇನ್ನೂ ಸಮರ್ಥವಾಗಿ ಒದಗಿಸಬಲ್ಲ ಗೀತೆಗಳು ಹೇರಳವಾಗಿವೆ.  ಇನ್ನು ನಾಲ್ಕನೆಯ ಅಂಶಕ್ಕೆ ಬಂದರೆ ನನಗೆ ಥಟ್ಟನೆ ನೆನಪಾಗುವುದು ಪಂಜೆಮಂಗೇಶರಾಯರ "ನಮ್ಮ ನಾಡಿದು ನಮ್ಮದು, ನಮ್ಮ ಕನ್ನಡನಾಡಿದು" ಎಂಬ ಗೀತೆ, ಯಾವುದೇ ನಾಡಿನ ಹೆಮ್ಮೆಯ ಗೀತೆಯಾಗಬಲ್ಲ ಗೀತೆಯಿದು.  ಆದರೆ ಜನಗಣಮನ ಗೀತೆಯಲ್ಲಿ ಕಾಣುವುದು ಶೌರ್ಯವೀರ್ಯ, ತ್ಯಾಗಬಲಿದಾನಗಳ ಹೆಮ್ಮೆಯ ಭಾವವಲ್ಲ, ಬದಲಿಗೆ ಈಗಾಗಲೇ ವಿವರಿಸಿದಂತೆ ಇಲ್ಲಿ ಕಾಣಬರುವುದೆಲ್ಲ "ನಮ್ಮದೇನಿದೆ, ಎಲ್ಲ ನಿನ್ನದೇ, ಬಿದ್ದಿರುವ ನಮ್ಮನ್ನು ಮೇಲೆತ್ತಿ ಮುನ್ನಡೆಸಿ ಕಾಪಾಡು, ನಿನಗೆ ಜಯವಾಗಲಿ" ಎಂಬ ರೀತಿಯ ದೈನ್ಯಭಾವವಷ್ಟೇ.  ರಾಷ್ಟ್ರಗೀತೆಯಾಗಿ ಕೇವಲ ಮೊದಲ ಚರಣವನ್ನಷ್ಟೇ ಅಂಗೀಕರಿಸಿದೆ ಎಂಬ ಅಂಶವನ್ನು ಗಮನದಲ್ಲಿರಿಸಿದರೂ "ದೇಶದ ಸಕಲಪ್ರಾಂತ್ಯಗಳೂ, ಸಕಲ ನದಿಸಾಗರಗಳೂ ನಿನ್ನ ಶುಭನಾಮವನ್ನೇ ನೆನೆಯುತ್ತಿವೆ, ನಿನ್ನ ಕೃಪೆಗಾಗಿ ಕಾಯುತ್ತಿವೆ, ನಮ್ಮ ಭಾಗ್ಯವಿಧಾತನಾದ ನಿನಗೆ ಜಯವಾಗಲಿ" ಎನ್ನುವ ಭಾವವಷ್ಟೇ ಇಲ್ಲಿಯೂ ಕಾಣುವುದು.  ದೇಶವಾಸಿಗಳ ನರನಾಡಿಗಳಲ್ಲಿ ರಾಷ್ಟ್ರೀಯತೆಯ ಕೆಚ್ಚು ಕಿಚ್ಚುಗಳನ್ನು ಹೊತ್ತಿಸಿದ ನೂರಾರು ಗೀತೆಗಳ ಮುಂದೆ ಈ ಭಾವ ಪೇಲವವೆನಿಸಿದರೆ ಅಚ್ಚರಿಯೇನಿಲ್ಲ.  ಇನ್ನು ಕೊನೆಯದಾದ ಆತ್ಮೀಯಭಾವವೂ ಅಷ್ಟೇ.  ತಾಯೊಲುಮೆಗಿಂತ ಆತ್ಮೀಯಭಾವವೇ?  ಆದರೆ ದೊರೆ-ಸೇವಕ, ಪ್ರಭು-ಪ್ರಜೆ, ನಮ್ಮೆಲ್ಲರ ಮನಗಳ ಅಧಿನಾಯಕ ಮುಂತಾದ ಭಾವಗಳಲ್ಲಿ ತಾಯೊಲುಮೆಯ ಆತ್ಮೀಯತೆ ಹೇಗೆ ತಾನೆ ಸ್ಫುರಿಸೀತು?  ಹೋಗಲಿ, ಭಕ್ತಿಭಾವದಿಂದಲಾದರೂ ಈ ಆತ್ಮೀಯತೆ ಸ್ಫುರಿಸಬಹುದೇ ಎಂದರೆ, ಶಿವ, ವಿಷ್ಣು, ಕಾಳಿ, ಮಾರಿ-ಮಸಣಿ, ಜಕ್ಕಿಣಿ-ಭೂತಪ್ಪಗಳನ್ನು ಕಂಡರಿಸಿದ ಮೂರ್ತಕಲ್ಪನೆಯ ಮನಸ್ಸಿಗೆ ಬ್ರಹ್ಮಸಮಾಜದ ಸುಶಿಕ್ಷಿತ ಉಚ್ಚಬೌದ್ಧಿಕಸಮುದಾಯಕ್ಕಷ್ಟೇ ಪರಿಚಿತವಾದ ಈ ನಿರಾಕಾರ, ಕಲ್ಪನಾತೀತ "ಅಧಿನಾಯಕ" ಆತನ ರಥ, ಚಕ್ರ, ಶಂಖಧ್ವನಿ, ಸಿಂಹಾಸನ ಇವುಗಳ ಸಾಂಕೇತಿಕತೆ, ಅಮೂರ್ತಕಲ್ಪನೆಗಳು ಆತ್ಮೀಯತೆಯನ್ನು ಉಕ್ಕಿಸಿಯಾವು ಹೇಗೆ?  ಅಥವಾ ಇವೆಲ್ಲವನ್ನೂ ದೇಶಕ್ಕೆ ಲಗತ್ತಿಸಿ ಕಲ್ಪಿಸಿಕೊಳ್ಳುವುದಾದರೂ ಹೇಗೆ?

ಇಲ್ಲಿ ವಂದೇಮಾತರಂ ಸಣ್ಣದೊಂದು ಹೋಲಿಕೆ ಬೇಡುತ್ತದೆ.  ವಂದೇಮಾತರಂ ವಿಷಯ ಹಾಗಲ್ಲ.  ಅದು ತಾಯ್ದೇವಿಯ ವಿವಿಧ ಆಯಾಮಗಳ ಮೂರ್ತಕಲ್ಪನೆ.  ಅಲ್ಲಲ್ಲಿ ಬರುವ ಅಮೂರ್ತ ಕಲ್ಪನೆಗಳೂ ದೇಶದ ಸಾಮಾನ್ಯರ ಕಲ್ಪನಾಪರಿಧಿಗೆ ಹೊರತೇನಲ್ಲ.  ಕೋಟಿಕೋಟಿಕಂಠಕಲಕಲನಿನಾದಕರಾಲೆಯಾದ ಬಹುಬಲಧಾರಿಣಿ, ತಾರಿಣಿಯ ಪರಿಚಯ ಹೇಗೋ, ವಿದ್ಯಾ, ಧರ್ಮ, ಮರ್ಮಸ್ವರೂಪೆಯ ಪರಿಚಯ ಹೇಗೋ ಸುಜಲೆ, ಸುಫಲೆ, ಮಲಯಜಶೀತಲೆ, ಸಸ್ಯಶ್ಯಾಮಲೆ, ಶುಭ್ರಜ್ಯೋತ್ಸ್ನಾಪುಲಕಿತಯಾಮಿನಿ, ಫುಲ್ಲಕುಸುಮಿತಧ್ರುಮದಳಶೋಭಿನಿ, ಸುಹಾಸಿನಿ, ಸುಮಧುರಭಾಷಿಣಿಯಾದ ರಾಷ್ಟ್ರಮಾತೆಯ ಕಲ್ಪನೆಯೂ ಭಾರತೀಯರಿಗೆ ಹೊಸದಲ್ಲ.  ಆದರೆ ಇದನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸುವಲ್ಲಿ ಎದುರಾದ ಮುಖ್ಯ ತೊಡಕೆಂದರೆ, ಇಲ್ಲಿ ಹಿಂದೂ ದೇವತೆಯೊಬ್ಬಳ ಮೂರ್ತಕಲ್ಪನೆಯಿರುವುದರಿಂದ ರಾಷ್ಟ್ರಗೀತೆಯ ಹೆಸರಿನಲ್ಲಿ ಆಕೆಗೆ ತಲೆವಾಗುವುದು ತಮ್ಮ ಧರ್ಮವಿರುದ್ಧ ಎಂದು ಮುಸ್ಲಿಮರು ತಕರಾರು ತೆಗೆದದ್ದು.  ಆದರೆ ಬಂಗಾಳದ ವಿಭಜನೆಯವರೆಗೂ ಈ ಗೀತೆಯನ್ನು ಹಿಂದೂ ಮುಸ್ಲಿಮರಿಬ್ಬರೂ ಕೂಡಿಯೇ ಹಾಡುತ್ತಿದ್ದರೆಂಬುದೂ, ಇಡೀ ದೇಶವನ್ನು ಒಗ್ಗೂಡಿಸುವಲ್ಲಿ ಈ ಗೀತೆ ಸಹಾಯಮಾಡಿತ್ತೆಂಬುದೂ ಇತಿಹಾಸ.  ಇರಲಿ, ಆದರೂ ಈ ತಕರಾರಿನಲ್ಲಿ ತಥ್ಯವಿಲ್ಲದಿಲ್ಲ.  ಗೀತೆಯ ಮೊದಲ ಚರಣವನ್ನು ಬಿಟ್ಟರೆ ಉಳಿದದ್ದು ಕಾಳಿಕಾಮಾತೆಯ ಮೂರ್ತಿಪೂಜೆಯೇ.  ಆದ್ದರಿಂದ ಅದಕ್ಕೆ ವಿರೋಧವೊದಗಿದ್ದರೆ ಸಹಜವೇ.  ಆದರೆ ರಾಷ್ಟ್ರೀಯಗೀತೆಯಾಗಿ ಚಾಲ್ತಿಯಲ್ಲಿರುವುದು ಕೇವಲ ಮೊದಲ ಚರಣವಷ್ಟೇ?  ಅಲ್ಲಿ ಯಾವ ಮೂರ್ತಿಪೂಜೆಯೂ, ಹಿಂದೂ ದೇವತೆಯ ಸ್ತುತಿಯೂ ಇಲ್ಲವಲ್ಲ?  ಅಲ್ಲಿರುವುದೆಲ್ಲಾ ಒಳ್ಳೆಯ ನೀರು, ಹಣ್ಣು, ಗಾಳಿ, ಸಸ್ಯಸಂಪತ್ತಿನಿಂದ ತುಂಬಿದ ತಾಯ್ನೆಲದ ಸ್ತುತಿಯಷ್ಟೇ.  ತಾಯ್ನೆಲ ಎಲ್ಲರಿಗೂ ಸಮಾನವಾಗಿ ಪೂಜ್ಯವಷ್ಟೆ?  ಅದಕ್ಕಾದರೂ ಯಾವ ಧಾರ್ಮಿಕ ತೊಡಕೂ ಇರಬಾರದಷ್ಟೇ?  ಆದರೂ ಇದಕ್ಕೆ ವಿರೋಧವಂತೂ ತಪ್ಪಲಿಲ್ಲ.  ಸ್ವಲ್ಪ ನಿರುಕಿಸಿ ನೋಡಿದರೆ ಈ ವಿರೋಧಕ್ಕೆ ಅಸಲಿ ಕಾರಣ ಮೇಲೆ ಹೇಳಿದ ವಿಗ್ರಹಪೂಜೆಯಲ್ಲ, ಬೇರೆಯೇ!  ಈ ಗೀತೆ ಬಂಕಿಮಚಂದ್ರರ ಆನಂದಮಠದಲ್ಲಿ, ಮುಸ್ಲಿಮ್ ದುರಾಕ್ರಮಣಕಾರರ ವಿರುದ್ಧ ಹಿಂದೂ ಸಾಧುಗಳು ಒಗ್ಗೂಡುತ್ತಿದ್ದ ಸಂದರ್ಭದಲ್ಲಿ ಬರುವುದು, ಆದ್ದರಿಂದ ಇದು "ಮುಸ್ಲಿಮರ ವಿರುದ್ಧವಾದುದು" ಎನ್ನುವ ಗ್ರಹಿಕೆ ಈ ವಿರೋಧಕ್ಕೆ ಕಾರಣ.  ಆದರೆ ನಿಜಕ್ಕೂ ಈ ಗ್ರಹಿಕೆಯಲ್ಲಿ ತಥ್ಯವುಂಟೇ ಎಂಬುದು ನಾವೆಲ್ಲರೂ ಪರಿಶೀಲಿಸಿಕೊಳ್ಳಬೇಕಾದ ಅಂಶ.  ದುರಾಕ್ರಮಣಕಾರರ ವಿರುದ್ಧದ ಭಾವನೆಗಳನ್ನು ಒಂದು ಸಮುದಾಯದ ವಿರುದ್ಧದ ಭಾವನೆಗಳಾಗಿ ಗ್ರಹಿಸಬೇಕೇ?  ಪ್ರಾರ್ಥನಾಪದ್ಯವಾಗಿ ಬಂದ ಗೀತೆಯ ಒಂದು ಭಾಗವನ್ನು (ಅದರ ಪ್ರಾರ್ಥನೆಯ ಅಂಶಗಳನ್ನು ಕಡೆಗಣಿಸಿ) ರಾಷ್ಟ್ರಗೀತೆಯಾಗಿ ಪರಿಗ್ರಹಿಸಬಹುದಾದರೆ, ಕಾದಂಬರಿಯೊಂದರಲ್ಲಿ ಬಂದ ಗೀತೆಯ ಒಂದು ಭಾಗವನ್ನು (ತನ್ನಷ್ಟಕ್ಕೇ ಯಾವ ಧಾರ್ಮಿಕವಿರೋಧಕ್ಕೂ ಎಡೆಗೊಡದ ಭಾಗವನ್ನು) ಅದರ ಕಾದಂಬರಿ ಸಂದರ್ಭದ ಹಿನ್ನೆಲೆಯನ್ನು ಕಡೆಗಣಿಸಿ ರಾಷ್ಟ್ರಗೀತೆಯಾಗಿ ಪರಿಗ್ರಹಿಸಬಾರದೇಕೆ?  ಇರಲಿ, ಇದು ಬಗೆಹರಿಯಲಾರದ ಪ್ರಶ್ನೆ.  ವಂದೇಮಾತರಂನಂತಹ ಹೃದ್ಯಮನೋಹರವಾದ ಗೀತೆಯನ್ನು ರಾಷ್ಟ್ರಗೀತೆಯಾಗಿ ಹಾಡುವ ಭಾಗ್ಯ ನಮಗೆ ಬರಲಿಲ್ಲವೆಂದು ನಿಡುಸುಯ್ಯಬಹುದಷ್ಟೇ.

ಅದೇನೇ ಇರಲಿ ರಾಷ್ಟ್ರಗೀತೆ ಯಾವುದಿರಬೇಕು, ಯಾವುದಿರಬಾರದೆಂದು ಚರ್ಚಿಸುವ ಉದ್ದೇಶ ಈ ಲೇಖನದ್ದಲ್ಲ, ಮತ್ತು ಅಂತಹ ಸಂದರ್ಭವೂ ಈಗಿಲ್ಲ; ರಾಷ್ಟ್ರಗೀತೆಯೆಂಬುದು ಹಾಗೆಲ್ಲ ಮನಬಂದಂತೆ ಬದಲಿಸಬರುವಂಥದ್ದೂ ಅಲ್ಲ.  ಜನಗಣಮನ ಗೀತೆಯ ಸಾಹಿತ್ಯಕ, ಐತಿಹಾಸಿಕವಿಶ್ಲೇಷಣಗಳೇನೇ ಇರಲಿ, ಅದಕ್ಕೆ ಅತ್ಯುನ್ನತಗೌರವ ಸಲ್ಲಲು ಅದು ನಮ್ಮ ರಾಷ್ಟ್ರಗೀತೆಯೆನ್ನುವ ಒಂದೇ ಕಾರಣ ಸಾಕು - ನಮ್ಮ ಎರಡಿಲ್ಲದ ಗೌರವ ಅದಕ್ಕೆ ಮೀಸಲು.  ಇದರೊಡನೆ ಗೀತೆಯಲ್ಲಿ ಅಂತರ್ಗತವಾಗಿರುವ ಉನ್ನತಭಾವವೂ ಮನಸ್ಸಿಗೆ ಬಂದರೆ ಈ ಗೌರವ ಇಮ್ಮಡಿಯಾದೀತು

ಜನಗಣಮಂಗಲದಾಯಕ ಜಯಹೇ ಭಾರತಭಾಗ್ಯವಿಧಾತಾ
ಜಯಹೇ ಜಯಹೇ ಜಯಹೇ ಜಯಜಯಜಯಜಯಹೇ

ವಂದೇಮಾತರಂ