Showing posts with label ೧೩. ವ್ಯಕ್ತಿಗಳು. Show all posts
Showing posts with label ೧೩. ವ್ಯಕ್ತಿಗಳು. Show all posts

Thursday, July 22, 2021

'ಬೋಳುಬಸವ' ಶ್ರೀ ಕುಮಾರ ನಿಜಗುಣ ಸ್ವಾಮಿಗಳು - ಕೆಲವು ನೆನಪುಗಳು

ಹಿರಿಯರಾದ ಶ್ರೀ ಕುಮಾರನಿಜಗುಣಸ್ವಾಮಿಗಳು ಮೊನ್ನೆ ಇಹಲೋಕವನ್ನು ತ್ಯಜಿಸಿದ್ದಾರೆ.  ಇದು ಅವರು ಬಯಸಿದ ಕೈವಲ್ಯವೋ ಮೋಕ್ಷವೋ ಅಲ್ಲವೋ ತಿಳಿಯುವ ಯೋಗ್ಯತೆ ನಮಗಿಲ್ಲ.  ಸನ್ಯಾಸಿಗಳು ಮೃತಿಯನ್ನೈದಿದಾಗ ಶೋಕಿಸಬಾರದೆಂಬ ಮಾತೂ ಇದೆ.  ಆದರೆ ನಿತ್ಯಸಂಸಾರಿಗಳಾದ ನಮಗೆ ಅದರ ಗೊಡವೆಯೇಕೆ?  ನಮ್ಮ ದುಃಖ ನಮ್ಮದು.

ಕುಮಾರನಿಜಗುಣರ ಬಗೆಗೆ ಹೆಚ್ಚು ಜನಕ್ಕೆ ತಿಳಿದಿರಲಾರದು - ಅವರು ಸಾಹಿತ್ಯಲೋಕದ, ವಿದ್ವಲ್ಲೋಕದ ಧ್ರುವತಾರೆಯಾಗಿ ತೊಳಗಲಿಲ್ಲ, ಸೂರ್ಯನಾಗಿ ಬೆಳಗಲಿಲ್ಲ - ಹಾಗೆ ತೊಳಗಿ ಬೆಳಗಲು ಬೇಕಾದ ವಿದ್ವತ್ತೆಯೂ, ಅದನ್ನು ಮಿಂಚಿದ ಪ್ರತಿಭೆಯೂ ಅವರ ಬಳಿ ಬೇಕಾದಷ್ಟಿತ್ತೆಂಬುದನ್ನು ಅವರನ್ನು ವಿದ್ವದೃಷ್ಟಿಯಿಂದ ಕಂಡವರು ಬಲ್ಲರು - ಬಲ್ಲವರು ಹಲವಷ್ಟು ಬರೆದಿದ್ದಾರೆ ಕೂಡ.  ಅದರಲ್ಲಿ ನಾನು ಕಂಡುದು ಅತ್ಯಲ್ಪವೆಂದರೆ ಅದಕ್ಕೆ ಕಾರಣ ಆ ವಿದ್ವತ್ಪ್ರತಿಭೆಯನ್ನು ಸ್ವಾಮಿಗಳು ಧರಿಸಿದ್ದ ರೀತಿ - ಆ ವಿದ್ವತ್ತೆ ಮತ್ತು ಪ್ರತಿಭೆಗಳ ಭಾರವು ತಮ್ಮದಲ್ಲವೆಂಬಂತೆ ಅವಲೀಲೆಯಾಗಿ ಹೊತ್ತು ಬದುಕಿದವರು ಕುಮಾರನಿಜಗುಣಸ್ವಾಮಿಗಳು.  ಯಾವುದೇ ವೈಭವ, ಭಾಜಾಭಜಂತ್ರಿ, ತುತ್ತೂರಿಗಳಿಲ್ಲದೇ, ಜಾತಿ-ರಾಜಕೀಯಗಳ ಹೋರಟೆಯಿಲ್ಲದೇ ಚಿಲಕವಾಡಿಯ ಬೆಟ್ಟದ ಗುಹೆಯ ಪ್ರಸನ್ನತೆಯಲ್ಲಿ, ಗುರು ನಿಜಗುಣರ ಸಾನ್ನಿಧ್ಯದಲ್ಲಿ, ಕೇವಲ ಕಾಡುಹೂವಿನಂತೆ ಬದುಕಿ ಮರೆಯಾದರು.  ರಾಜರಸ್ತೆ ಬಿಟ್ಟು ಪಕ್ಕಕ್ಕೆ ಹೊರಳಿದಲ್ಲದೇ, ಕಾಡುಹೊಕ್ಕಲ್ಲದೇ ವನಸುಮದ ಗಂಧ ಅರಿವಿಗೆ ಬಾರದಷ್ಟೇ?  ಹೀಗಾಗಿ ಅನೇಕರಿಗೆ ಅಜ್ಞಾತರಾಗಿಯೇ ಉಳಿದರು ಸ್ವಾಮಿಗಳು, ಅದು ಅವರು ಬಯಸಿ ಆರಿಸಿಕೊಂಡ ಬದುಕು.  ಅದನ್ನು ಆಗೀಗಾದರೂ ಹತ್ತಿರದಿಂದ ಕಂಡು ಆಘ್ರಾಣಿಸಿದವರು ಭಾಗ್ಯಶಾಲಿಗಳು - ಆ ಭಾಗ್ಯದ ಕಿಂಚಿತ್ಪ್ರಮಾಣವು ನನ್ನದೂ ಕೂಡ.

ಅವರ ಪರಿಚಯವಿರುವ ಬಹುಮಂದಿಗೆ ಕುಮಾರ ನಿಜಗುಣಸ್ವಾಮಿಗಳೆಂದರೆ ಮೊಟ್ಟಮೊದಲು ಮನಸ್ಸಿಗೆ ಬರುವುದು ಅವರ ಅಗಾಧ ವಿದ್ವತ್ಕೃಷಿಯಲ್ಲ, ಅವರ "ಬೋಳು ಬಸವನ ಬೊಂತೆ".  ಪೂಜ್ಯ ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳುಮುನಿಯನ ಕಗ್ಗಗಳಂತೆಯೇ ಇದೂ ಒಂದು ಬಿಡಿಚೌಪದಿಗಳ ಗುಚ್ಚ.  ಶೈಲಿವಿನ್ಯಾಸಗಳಲ್ಲಿ ಅದರ ಅನುಕರಣೆಯಂತೆ ತೋರಿ ಬಂದರೂ ಹೂರಣದಲ್ಲಿ ಇದು ಅವರದೇ ಜೀವನಾನುಭವದ, ಅನುಭಾವದ ರಸಗಟ್ಟಿ, ಬದುಕಿನ ಪ್ರಾಮಾಣಿಕ ಕಾಣ್ಕೆ.  ಅದರಂತೆ ಇದೂ ಬದುಕಿನ ದುರ್ಭರಸನ್ನಿವೇಶಗಳಲ್ಲಿ ನನ್ನ ಕೈಹಿಡಿದು ನಡೆಸಿದೆ.  ಈ ಕೃಪೆಗಾಗಿ ಸ್ವಾಮಿಗಳು ನನಗೆ ವಿಶೇಷವಾಗಿ ಪ್ರಾತಃಸ್ಮರಣೀಯರು.  ಬೋಳು ಬಸವನ ಬೊಂತೆಯಲ್ಲಿ ಒಂದು ಪದ್ಯವಿದೆ:

ಮಕ್ಕಳಿಲ್ಲದವರಿಗೆ ಮುಕ್ತಿ ದುರ್ಲಭವೆಂದು
ಉಕ್ಕಿಪರು ದುಃಖಮಂ ಹೆಗ್ಗ ಜನರು
ಮಕ್ಕಳಾಗದೆಯಲ್ತು ಮಕ್ಕಳಂತಾಗದಿರೆ
ದಕ್ಕದೈ ಮೋಕ್ಷಸುಖ ಬೋಳುಬಸವ.

ಇದಕ್ಕೆ ಲಕ್ಷ್ಯವಾಗಿ ಬದುಕಿದವರು ಸ್ವಾಮಿಗಳು.  ಮಗುವಿನ ಮಂದಹಾಸ, ಮಗುವಿನ ಮುಗ್ಧತೆ, ಮಗುವಿನದೇ ಸ್ನೇಹಪರತೆ, ಮಗುವಿನದೇ ಸರಳತೆ, ಮಗುವಿನದೇ ಶೀಘ್ರಕೋಪವೂ (ಈ ಕೊನೆಯ ಗುಣದ ಪರಿಚಯ ನನಗಾಗಿಲ್ಲ ಆದರೆ ಅದನ್ನು ಅನುಭವಿಸಿದವರು ಹಲವರು ಅದಕ್ಕೆ ಸಾಕ್ಷಿ ನುಡಿಯಬಲ್ಲರು).  ಆದರೆ ಇವೆಲ್ಲವೂ ಅವರಲ್ಲಿ ಶ್ರೀಮಂತವಾಗಿ ನೆಲೆಗೊಂಡಿದ್ದ ಭಾವಪ್ರಾಮಾಣಿಕತೆಯಿಂದ ಹೊಮ್ಮಿದ್ದೆನ್ನುವುದರಲ್ಲಿ ಸಂಶಯವಿಲ್ಲ - ಸಂತಸವಾಗಲಿ, ಸ್ನೇಹವಾಗಲಿ, ಮಂದಹಾಸವಾಗಲಿ, ಕೊನೆಗೆ ಆ ಕ್ಷಣಕ್ಕೆ ಉರವಣಿಸಿ ಮರೆಯಾಗುವ ಕೋಪವಾಗಲಿ ಪ್ರಾಮಾಣಿಕವಾದದ್ದು, ಕಪಟವರಿಯದ್ದು, ಪರಿಶುದ್ಧವಾದದ್ದು.  ಹೀಗಿರುವುದೂ ಸುಲಭವೇನಲ್ಲ.

ಕುಮಾರನಿಜಗುಣರ ಪರೋಕ್ಷ ಪರಿಚಯ ನನಗಾದದ್ದು ಅದೇ ಬೋಳುಬಸವನ ಬೊಂತೆಯಿಂದಲೇ.  ನಮ್ಮ ತಂದೆಯವರ ಸಂಗ್ರಹದಲ್ಲಿತ್ತು.  ಆಗ ನನಗೆ ಹತ್ತೋ ಹನ್ನೊಂದೋ.  ಆಗಿನ್ನೂ ಅವರು ಸ್ವಾಮಿಗಳಾಗಿರಲಿಲ್ಲ, ಲಾಯರ್ ಪಿ ಬಸವಣ್ಣನವರಾಗಿದ್ದರು.  ತಿಂಗಳಿಗೊಮ್ಮೆಯೋ ಎರಡು ತಿಂಗಳಿಗೊಮ್ಮೆಯೋ ನಡೆಯುತ್ತಿದ್ದ 'ಟೀಚರ್ಸ್ ಮೀಟಿಂಗ್'ನಲ್ಲಿ ಕೆಲವೊಮ್ಮೆ ಭಾಷಣಕಾರರಾಗಿ ಶ್ರೀ ಬಸವಣ್ಣನವರನ್ನು ವಿದ್ಯಾ ಇಲಾಖೆ ಕರೆಸುತ್ತಿತ್ತೆಂದು, ಶಿಕ್ಷಕರಾಗಿದ್ದ ನಮ್ಮ ತಂದೆ ಹೇಳಿದ್ದ ನೆನಪು.  ಇಂತಹ ಮೀಟಿಂಗೊಂದರಲ್ಲಿ ಬಸವಣ್ಣನವರು ಆಗಷ್ಟೇ ಪ್ರಕಟವಾಗಿದ್ದ ತಮ್ಮ ಬೋಳುಬಸವನ ಬೊಂತೆಯನ್ನು ಶಿಕ್ಷಕರಿಗೆ ಹಂಚಿದ್ದರೆಂದು ನೆನಪು.  ನಮ್ಮ ಮನೆಗೆ ಬೊಂತೆ ಬಂದದ್ದು ಹೀಗೆ.  ಸಾಮಾನ್ಯವಾಗಿ ನಮ್ಮ ತಂದೆಯವರ ಸಂಗ್ರಹದಲ್ಲಿದ್ದ ಪುಸ್ತಕವನ್ನೆಲ್ಲಾ ನಾನು ಅದೊಂದು ರೀತಿ ನಿಸ್ಪೃಹತೆಯಿಂದ ಓದುತ್ತಿದ್ದೆ - ಓದಬೇಕೆಂಬ ಕುತೂಹಲವಿಲ್ಲ, ಜ್ಞಾನವೃದ್ಧಿಯೋ ಮತ್ತೊಂದೋ ಉದ್ದೇಶವೂ ಇಲ್ಲ - ಸುಮ್ಮನೇ ಓದುವ ಹವ್ಯಾಸವಷ್ಟೇ.  ಅದೇ ನಿಸ್ಪೃಹತೆಯಿಂದಲೇ ಮಂಕುತಿಮ್ಮನ ಕಗ್ಗವನ್ನೂ ಓದಿದ್ದು, ಅದೇ ರೀತಿ ಬೋಳುಬಸವನ ಬೊಂತೆಯನ್ನೂ.  ಹೀಗೆ ಲಾಯರ್ ಬಸವಣ್ಣ ಮತ್ತು ಬೋಳುಬಸವನ ಬೊಂತೆ ಇವೆರಡೂ ಪರ್ಯಾಯನಾಮಗಳಾಗಿ ನನ್ನ ಸ್ಮೃತಿಕೋಶದಲ್ಲಿತ್ತು.  ಅದು ಬಿಟ್ಟರೆ ನಮ್ಮ ಪಾಲಿಗೆ, ಕೊಳ್ಳೇಗಾಲದಲ್ಲಿ ಆ ಕಾಲಕ್ಕೆ ಖ್ಯಾತನಾಮರಾಗಿದ್ದ ನಾಲ್ಕೋ ಐದೋ ಜನ ಲಾಯರುಗಳಲ್ಲಿ ಪಿ ಬಸವಣ್ಣನವರದ್ದೂ ಒಂದು ಹೆಸರು - ನೇರ ಪರಿಚಯವಿಲ್ಲ - ಕಾನೂನೆಂಬ ಒಂದು ಪ್ರಾಣಿ ಇದೆಯೆಂಬುದನ್ನೂ ಅರಿಯದ ಸರಳಜೀವನಕ್ಕೆ ಲಾಯರುಗಳ ಪ್ರವೇಶ ತಾನೇ ಹೇಗೆ ಸಾಧ್ಯ.

ಬಸವಣ್ಣನವರನ್ನು ಅಲ್ಲಿಲ್ಲಿ ಪೇಟೆಬೀದಿ ಮೊದಲಾದ ಕಡೆ ಸುಮ್ಮನೇ ಕಂಡಿದ್ದೆನಾದರೂ ಮೊದಲ ಬಾರಿಗೆ ಹತ್ತಿರದಿಂದ ಕಂಡಿದ್ದು ಒಂದು ತಮಾಷೆಯ ಸಂದರ್ಭದಲ್ಲಿ.  ನಮ್ಮೂರಿನಲ್ಲಿ ಇನ್ನೊಬ್ಬರು ಹೆಸರಾಂತ ಲಾಯರಿದ್ದರು.  ಶೇಷಾದ್ರಿ ಅಯ್ಯಂಗಾರರೆಂದೋ ಏನೋ ಅವರ ಹೆಸರು.  ಅವರಿಗೂ ನನಗೂ ಸಂಬಂಧವುಂಟಾದದ್ದೂ ವೃತ್ತಿಯ ಕಾರಣದಿಂದಲ್ಲ, ನಮ್ಮೂರ ಆಂಜನೇಯನ ಕಾರಣದಿಂದ.  10-11 ವರ್ಷದವನಾದ ನನಗೂ ಪ್ರತಿಷ್ಠಿತ ವಕೀಲರಾಗಿದ್ದ, ಆಗ್ಗೆ ಸುಮಾರು ಐವತ್ತು ಮೀರಿರಬಹುದಿದ್ದ ಅಯ್ಯಂಗಾರರಿಗೂ ಇದ್ದ ಸಮಾನಧರ್ಮ ಈ ಹನುಮದ್ಭಕ್ತಿಯೇ.  ಆ ಪರಿಚಯದಿಂದಲೇ ಅವರ ಮಡದಿಮಕ್ಕಳೊಂದಿಗೂ ಪರಿಚಯ.  ದೊಡ್ಡ ಮನೆ, ಹೊರಗೆ ಅದಕ್ಕಿಂತ ದೊಡ್ಡದಾದ ಸುಮಾರು ನಲವತ್ತೋ ಐವತ್ತೋ ಅಡಿ ವಿಸ್ತೀರ್ಣವುಳ್ಳ ಅಂಗಳ.  ಜಗುಲಿಯ ಮೇಲೇ ಲಾಯರರ ಆಫೀಸು - ಕಕ್ಷಿದಾರರನ್ನು, ವೃತ್ತಿಬಾಂಧವರನ್ನು ಅವರು ಭೇಟಿಯಾಗುತ್ತಿದ್ದುದು ಅಲ್ಲೇ.  ಅವರ ಮನೆಯಲ್ಲಿ ಒಂದು ಅಲ್ಸೇಷನ್ ನಾಯಿಯಿತ್ತು.  ಒಳ್ಳೆ ಸಿಂಹದಂತಿತ್ತು.  ರಿಂಕಿ ಎಂದು ಅದರ ಹೆಸರು.  ಕೆಲಕಾಲದ ಬಳಕೆಯಿಂದ ಅದರ ಭಯವನ್ನು ಮೆಟ್ಟಿದ್ದೆನಾದರೂ ಅದರೊಡನೆ ಎಂದೂ ಸಲುಗೆ ಬೆಳೆಯಲಿಲ್ಲ.  ಅದೂ ನನ್ನನ್ನು ಹೆಚ್ಚೇನು ಕಾಡದೇ ಇವನೇನೋ ಪಾಪದ ಪ್ರಾಣಿಯೆಂದು ನನ್ನನ್ನು ಕ್ಷಮಿಸಿ ಸುಮ್ಮನಾದಂತಿತ್ತು.  ನಾನು ಅಪರೂಪಕ್ಕೆ ಅವರ ಮನೆಗೆ ಹೋದರೆ ಬೊಗಳದೇ ಬಾಲವನ್ನೂ ಆಡಿಸದೇ ನಾನು ಕಾಣಲೇ ಇಲ್ಲವೆಂಬಂತೆ ಸುಮ್ಮನಿರುತ್ತಿತ್ತು.  ನಾನೂ ಅಷ್ಟೇ, ದುಷ್ಟರನ್ನು ಕಂಡರೆ ದೂರವಿರು ಎಂಬ ಗಾದೆಯಂತೆ ನನ್ನಷ್ಟಕ್ಕೆ ನಾನಿರುತ್ತಿದ್ದೆ.  ಮನೆಗೆ ಹೋದಾಗ ಮಾಮಿ (ಅಯ್ಯಂಗಾರ್ ಲಾಯರರ ಮಡದಿ) ಏನಾದರೂ ತಿಂಡಿ ಕೊಡುತ್ತಿದ್ದರು - ತಿನ್ನುತ್ತಾ ಅವರ ಮಕ್ಕಳೊಡನೆ ಹರಟುತ್ತಾ ಜಗುಲಿಯ ಮೇಲೆ ಕೂರುವುದು ವಾಡಿಕೆ.   

ಇಂಥದ್ದೊಂದು ಸಂಜೆ, ಅಂಗಳದಲ್ಲಿ ಗೇಟಿನ ಬಳಿ ಎಂಥದೋ ಭಾರೀ ಕೋಲಾಹಲ.  ರಿಂಕಿ ಯಾರನ್ನೋ ಅಟ್ಟಾಡಿಸಿಕೊಂಡು ಹೋಗಿ ಕೊನೆಗೆ ಹಿಡಿದೇ ಬಿಟ್ಟು ವರವರಗುಟ್ಟುತ್ತಿದೆ.  ನೋಡಿದರೆ ದಾಳಿಗೊಳಗಾಗಿದ್ದವರು ಮತ್ತಾರೂ ಅಲ್ಲ, ಲಾಯರ್ ಬಸವಣ್ಣನವರು.  ಎತ್ತರದ ನಿಲುವು, ಕಪ್ಪೆಂದರೆ ಕಡುಗಪ್ಪು ಗಡ್ಡ, ಒಪ್ಪವಾಗಿ ಹಿಂದಕ್ಕೆ ಬಾಚಿ ಗಂಟು ಕಟ್ಟಿದ್ದ ಕಪ್ಪು ಕೂದಲು, ಕೃಷ್ಣವರ್ಣದ ಮುಖದ ಮೇಲೆ ಅಚ್ಚಾಗಿ ಬಳಿದ ಅಚ್ಚ ಬಿಳಿಯ ವಿಭೂತಿ, ಅದರ ಕೆಳಗೆ ಹೊಳೆಹೊಳೆವ ಕಣ್ಣುಗಳು, ಹುಡುಕಿದರೂ ಕಪ್ಪು ಚುಕ್ಕೆಯೊಂದು ಕಾಣದ ಬಿಳಿಯ ದಟ್ಟಿ ಪಂಚೆ, ಅದರಮೇಲೊಂದು ಅಚ್ಚಬಿಳಿಯ ಒರಟು ಖಾದಿಯ ಕಸೆಯಂಗಿ, ಬಗಲಲ್ಲಿ ಚರ್ಮದ್ದೋ ಬಟ್ಟೆಯದೋ ಕಪ್ಪು ಚೀಲ.  ಕಪ್ಪು ನಾಯಿ ಪಕ್ಕನೆ ಬಾಯಿ ಹಾಕಿ ಹಿಡಿದದ್ದು ಈ ಕಪ್ಪು ಚೀಲವನ್ನೇ.  ಹೇಗಾದರೂ ಅನುನಯದಿಂದ ಅದನ್ನು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿದ್ದರು ಬಸವಣ್ಣನವರು.  ನಾಯಿಯ ಗಲಭೆ, ನಮ್ಮ ಗಲಭೆ ಇವನ್ನೆಲ್ಲಾ ಕೇಳಿ ಮನೆಯೊಳಗಿಂದ ಓಡಿ ಬಂದ ಲಾಯರು "Hey Rinky, don't you do that... say sorry" ಎಂದು ಕೂಗಿದ ಮೇಲೆಯೇ ರಿಂಕಿ ಬಸವಣ್ಣನವರನ್ನು ಬಿಟ್ಟಿದ್ದು, ಮತ್ತು "ಸಾರಿ"ಯಾಗಿ ಬಾಲವಾಡಿಸತೊಡಗಿದ್ದು.  ಹೇಗೋ ಸಾವರಿಸಿಕೊಳ್ಳುತ್ತಾ, "ಹಹ್ಹಾ... ಪಾಪ ಫ್ರೆಂಡ್ ಮಾಡಿಕೊಳ್ಳೋಕ್ಕೆ ಪ್ರಯತ್ನ ಪಡ್ತಾ ಇದ್ಲು" ಎಂದು ನಗುನಗುತ್ತಾ ಬಸವಣ್ಣನವರು ಒಳಬಂದರು.  ಇದೊಂದು ನೆನಪು.

ಮತ್ತೊಮ್ಮೆ ಅವರು ನನ್ನ ಗಮನಕ್ಕೆ ಬಂದದ್ದು ನಮ್ಮೂರಿನಲ್ಲಿ 1986ರಲ್ಲೋ 87ರಲ್ಲೋ ನಡೆದ ಅವಧಾನಕಾರ್ಯಕ್ರಮದಲ್ಲಿ - ಶತಾವಧಾನಿ ಆರ್ ಗಣೇಶರ (ಅವರಿನ್ನೂ ಆಗ ಶತಾವಧಾನಿಗಳಾಗಿರಲಿಲ್ಲವೆಂದು ನೆನಪು) ಅವಧಾನ.  ನನಗಾಗ ಹದಿನಾರೋ ಹದಿನೇಳೋ.  ಅದು ನಾನು ನೋಡಿದ ಮೊತ್ತಮೊದಲ ಅವಧಾನಕಾರ್ಯಕ್ರಮ.  ಆಗಿನ್ನೂ ಅವಧಾನವೆಂಬುದು ನಮಗಿರಲಿ, ಕನ್ನಡಕ್ಕೇ ಹೊಸದು.  ಕನ್ನಡದಲ್ಲಿ ಸಂಪೂರ್ಣ ಮರೆಯಾಗಿಬಿಟ್ಟಿದ್ದ ಅವಧಾನಕಲೆಯನ್ನು ಕನ್ನಡಕ್ಕೆ ಮರುಪರಿಚಯಿಸಿದ್ದೂ ಗಣೇಶರೇ, ಮೊದಲ ಅವಧಾನದಲ್ಲಿ ಅವರಿಗೆ ಹತ್ತೊಂಬತ್ತು ವರ್ಷವಂತೆ.  ನಮ್ಮೂರಲ್ಲಿ ಅವಧಾನಕಾರ್ಯಕ್ರಮ ಮಾಡಿದಾಗ ಅವರು ಇಪ್ಪತ್ನಾಲ್ಕು ಇಪ್ಪತ್ತೈದರ ತರುಣ.  ಅವಧಾನಕಲೆಯನ್ನವರು ಆರಂಭಿಸಿ ಐದಾರು ವರ್ಷಗಳು ಸಂದಿದ್ದೀತಷ್ಟೇ.  ನಮಗೋ ಅವಧಾನದ ಬಗ್ಗೆ ವಿಚಿತ್ರ ಅದ್ಭುತಕಲ್ಪನೆಗಳು.  ಯಾವ ಪದ್ಯ ಕೇಳಿದರೂ ಅಲ್ಲೇ ಹೇಳಿಬಿಡುತ್ತಾರಂತೆ, ಬೇಡವೆಂದ ಅಕ್ಷರ ಬಳಸದೇ ಅಲ್ಲೇ ಪದ್ಯ ಹೇಳುತ್ತಾರಂತೆ, ಗಂಟೆ ಹೊಡೆದದ್ದನ್ನೆಲ್ಲಾ ಲೆಕ್ಕವಿಟ್ಟುಕೊಂಡು ಕೊನೆಯಲ್ಲಿ ಹೇಳುತ್ತಾರಂತೆ (ಆಗ ಗಣೇಶರು ಘಂಟಾಗಣನವನ್ನೂ ಅವಧಾನದ ಭಾಗವಾಗಿ ಇಟ್ಟುಕೊಂಡಿದ್ದರು).  ಕಿಕ್ಕಿರಿದ ಕಲಾಮಂಟಪ ಸಭಾಂಗಣದಲ್ಲಿ ಕೊನೆಯ ಮೂಲೆಯಲ್ಲಿ ನಿಂತು ಇಡೀ ಕಾರ್ಯಕ್ರಮವನ್ನು ವೀಕ್ಷಿಸಿದ ನೆನಪಿದೆ.  ಅಲ್ಲಿ ಗಣೇಶರು ಕೇಸರೀಭಾತ್ ಎಂಬುದನ್ನು ಬಳಸಿ ಸಂಸ್ಕೃತ ಪದ್ಯವೊಂದನ್ನು ಮಾಡಿದ್ದರು.  "ಕೇಸರೀಭಾತ್ ವಿಶಿಷ್ಯತೇ" (ಕೇಸರಿ = ಸಿಂಹ, ಇಭ=ಆನೆ) ಎಂದೇನೋ ಪೂರಣ ಮಾಡಿದ್ದು ನೆನಪಿದೆ.  ಈ ಅವಧಾನದಲ್ಲಿ ಬಸವಣ್ಣನವರದು ನಿಷೇಧಾಕ್ಷರಪೃಚ್ಛಕಪಾತ್ರ.  ಅವರು ಯಾವ ಪದ್ಯ ಕೇಳಿದರೋ ಹೇಳಿದರೋ ನೆನಪಿಲ್ಲ, ಆದರೆ ಒಂದು ಮಾತ್ರ ಅಚ್ಚಳಿಯದೇ ನೆನಪಿನಲ್ಲಿದೆ - ಅವಧಾನದಲ್ಲಿ ಅಪ್ರಸ್ತುತಪ್ರಸಂಗಿಗಳು ಕೇಳಿದ ಯಾವುದೋ ಪ್ರಶ್ನೆ, ಅದಕ್ಕೆ ಅವಧಾನಿಗಳು ಕೊಟ್ಟ ಉತ್ತರ ಇಡೀ ಸಭೆಯನ್ನು ನಗೆಗಡಲಲ್ಲಿ ಮುಳುಗಿಸಿತ್ತು.  ಆಗ ಇದ್ದಕ್ಕಿದ್ದಂತೆ ಇಡೀ ಸಭೆಯ ನಗೆಯನ್ನು ಸೀಳಿಕೊಂಡು ಹಹ್ಹಹ್ಹಹ್ಹಹ್ಹಾ ಎಂಬ ಜೋರು ಅಟ್ಟಹಾಸ ವೇದಿಕೆಯ ಮೇಲಿಂದ ಕೇಳಿಬಂತು, ಧ್ವನಿವರ್ಧಕದ ಮೂಲಕ - ಎಸ್ ವಿ ರಂಗರಾವ್ ಘಟೋತ್ಕಚನ ಪಾತ್ರದಲ್ಲಿ ನಗುವ ರೀತಿ.  ಯಾರು ನಗುತ್ತಿದ್ದಾರೆಂಬುದು ಕ್ಷಣಕಾಲ ತಿಳಿಯಲಿಲ್ಲ.  ಆದರೆ ನಗು ನಿಲ್ಲುತ್ತಲೇ ಇಲ್ಲ.  ನೋಡಿದರೆ, ಬಸವಣ್ಣನವರು.  ನಗುತ್ತಿದ್ದಾರೆ, ಮೈಕ್ ಆಫ್ ಮಾಡುವುದನ್ನೂ, ಮೈಕನ್ನು ದೂರವೊಯ್ಯುವುದನ್ನೂ ಮರೆತು ಗಹಗಹಿಸಿ ನಗುತ್ತಿದ್ದಾರೆ.  ಮತ್ತೊಮ್ಮೆ ಸಭೆ ನಗೆಯಲ್ಲಿ ಮುಳುಗಿತು.  ನೀವು ಹೀಗೆ ಅಟ್ಟಹಾಸ ಮಾಡಿದರೆ ನಮ್ಮ ಗುಂಡಿಗೆಯ ಗತಿಯೇನು ಎಂದೋ ಏನೋ ಗಣೇಶರು ಚಟಾಕಿ ಹಾರಿಸಿದ್ದೂ ನೆನಪಿದೆ.

ಇದಾದ ಮೇಲೆ ಸುಮಾರು ಇಪ್ಪತ್ತೈದು ವರ್ಷ ಬಸವಣ್ಣನವರು ನನ್ನ ನೆನಪಿನಿಂದ ಆಚೆಗೆ ಸರಿದುಬಿಟ್ಟಿದ್ದರು - ನಮ್ಮೂರಿನ ಇತರ ಹಲವು ನೆನಪುಗಳಂತೆ.  ಈ ನಡುವೆ ಒಂದೆರಡು ಬಾರಿ, ಬೋಳುಬಸವನ ಬೊಂತೆಯ ಲಾಯರ್ ಬಸವಣ್ಣನವರು ಸನ್ಯಾಸಿಗಳಾದರಂತೆ ಎಂಬ ಸುದ್ದಿ ಕೇಳಿದ್ದುಂಟು, ಅದೇನು ಅಷ್ಟೊಂದು ಕುತೂಹಲ ಕೆರಳಿಸುವ ಸಂಗತಿಯಾಗಿರಲಿಲ್ಲ.  ಆಮೇಲೆ ಮತ್ತೆ ಅವರ ದರ್ಶನವಾಗಿದ್ದು 2012ರಲ್ಲಿ, ಮೈಸೂರಿನಲ್ಲಿ, ಇನ್ನೊಂದು ಅವಧಾನದಲ್ಲೇ!  ವಿಶೇಷವೆಂದರೆ ಈ ಬಾರಿ ನಾನು ಪ್ರೇಕ್ಷಕನಾಗಿ ಅಲ್ಲ, ಅವರ ಪಕ್ಕದಲ್ಲೇ ಪೃಚ್ಛಕನಾಗಿ ಕುಳಿತು ಅವಧಾನದಲ್ಲಿ ಭಾಗವಹಿಸುವುದಿತ್ತು.  ಈ ಇಪ್ಪತ್ತೈದು ವರ್ಷಗಳಲ್ಲಿ ಸಾಕಷ್ಟೇ ಆಗಿತ್ತು - ಭಾಷೆ-ಸಾಹಿತ್ಯಗಳಲ್ಲಿನ ನನ್ನ ಆಸಕ್ತಿಯ ಸ್ವರೂಪವೇ ಬದಲಾಗಿತ್ತು; ಹಳಗನ್ನಡದ ರುಚಿ ಬಹುವಾಗಿ ಬೆಳೆದಿತ್ತು, ನಿಬದ್ಧಪದ್ಯರಚನೆಯಲ್ಲೂ ಕೈ ಸುಮಾರಾಗಿ ಪಳಗಿತ್ತು - ಈ ಹೊಸ ರುಚಿಗಳೇ ಶತಾವಧಾನಿ ಶ್ರೀ ಗಣೇಶರ ಪರಿಚಯಭಾಗ್ಯವನ್ನೂ ತಂದುಕೊಟ್ಟಿತ್ತು.  ವೈಯಕ್ತಿಕಜೀವನದಲ್ಲಿ, ನನ್ನ ಓದು ಮುಗಿದು, ಕೆಲಸಕ್ಕೆ ಸೇರಿ, ಸಂಸಾರವನ್ನೂ ಕಟ್ಟಿಕೊಂಡಿದ್ದೆ.  ಇತ್ತ, ಲಾಯರ್ ಪಿ ಬಸವಣ್ಣನವರು ಆ ಉಪಾಧಿಯನ್ನು ತ್ಯಜಿಸಿ ಶ್ರೀ ಕುಮಾರ ನಿಜಗುಣಸ್ವಾಮಿಗಳಾಗಿದ್ದರು.

2012ರ ಒಂದು ಸಂಜೆ, ಹೇಗೂ ಬೆಂಗಳೂರಿಗೆ ಬಂದಿದ್ದುದರಿಂದ ಶ್ರೀ ಗಣೇಶರನ್ನೊಮ್ಮೆ ನೋಡಿ ಹೋಗೋಣವೆಂದು ಅವರ ಮನೆಗೆ ಹೋಗಿದ್ದೆ.  ಅವರು ಯಾವುದೋ ಕಾರ್ಯಕ್ರಮವೊಂದಕ್ಕೆ ಹಾಜರಿ ಹಾಕಿ ಬರುವುದಿದ್ದುದರಿಂದ ನನ್ನನ್ನೂ ಜೊತೆಯಲ್ಲೇ ಕರೆದುಕೊಂಡು ಹೊರಟರು.  ಮಾತಿನ ಮಧ್ಯೆ, ಮುಂದಿನ ತಿಂಗಳು ಮೈಸೂರಿನಲ್ಲಿ ನಡೆಯಲಿದ್ದ ತಮ್ಮ ಅವಧಾನವೊಂದರಲ್ಲಿ ಪೃಚ್ಛಕಪಾತ್ರವಹಿಸಲು ನನ್ನನ್ನು ಕೇಳಿದಾಗ ನನಗೆ ಆನಂದವೇನೋ ಆಯಿತು, ಅದಕ್ಕಿಂತ ಹೆಚ್ಚಾಗಿ ಆಶ್ಚರ್ಯವೂ ಅದನ್ನು ಮೀರಿದ ಗಾಬರಿಯೂ ಆಯಿತು.  ಅವಧಾನದ ಬಗೆಗೆ ಇಪ್ಪತ್ತೈದು ವರ್ಷಗಳ ಹಿಂದಿದ್ದ ಬಾಲಿಶಕಲ್ಪನೆಗಳೇನೂ ಇಲ್ಲದಿದ್ದರೂ ಅದು ವಿದ್ವಾಂಸರ, ಸಾಹಿತ್ಯಪಟುಗಳ ಆಡುಂಬೊಲವೆಂಬ ಅರಿವಂತೂ ಇತ್ತು.  ಅಷ್ಟೊಂದು ಜನ ವಿದ್ವಾಂಸರ ನಡುವೆ ನಾನು ಕುಳಿತು ವಿದ್ಯೆಯ ಪರ್ವತಕ್ಕೇ ಬಾಣ ಬಿಡುವ ಕಲ್ಪನೆ ನಿಜಕ್ಕೂ ನನಗೇ ನಗೆ ತರಿಸುವಂತಿತ್ತು.  ಆದರೆ ಕಿರಿಯರನ್ನೂ ಎಳೆಯರನ್ನೂ ಮೇಲೆತ್ತಿ ಕೂರಿಸಿಕೊಳ್ಳುವ ಗಣೇಶರ ಸ್ನೇಹಬುದ್ಧಿ ನನಗೆ ಹೊಸದು.  ಇರಲಿ, ಅದು ಬೇರೆಯದೇ ವಿಷಯವಾಯಿತು.  ಅಂತೂ ಮೈಸೂರಿನ ಅವಧಾನದಲ್ಲಿ ನಾನು ಪೃಚ್ಛಕನಾಗಿ ಸಮಸ್ಯಾಪೂರಣದ ವಿಭಾಗವನ್ನು ನಿರ್ವಹಿಸುವುದೆಂದಾಯಿತು.

ಈ ಮೈಸೂರು ಅವಧಾನ ಕೆಲವು ಸಣ್ಣಪುಟ್ಟ ವಿಶೇಷಗಳನ್ನೊಳಗೊಂಡಿತ್ತು.  ನಾನು ಭಾಗವಹಿಸಲಿದ್ದ ಮೊದಲ ಅವಧಾನಕಾರ್ಯಕ್ರಮ; ಮೈಸೂರು ಆಕಾಶವಾಣಿಯ ಬೆಳ್ಳಿಹಬ್ಬದ ನೆನಪಿಗಾಗಿ ನಿಲಯವು ಆಯೋಜಿಸಿದ ಕಾರ್ಯಕ್ರಮವಿದಾಗಿತ್ತು.  ಹಿರಿಯವಿದ್ವಾಂಸರಾದ ಪ್ರೊ. ವೆಂಕಟಾಚಲಶಾಸ್ತ್ರಿಗಳು ಆಶಯಭಾಷಣ ಮಾಡುವವರಿದ್ದರು (ಆಗ್ಗೆ ಅವರ ಪರಿಚಯವೂ ನನಗಿರಲಿಲ್ಲ).  ಮತ್ತಷ್ಟು ಹಿರಿಯ ವಿದ್ವಾಂಸರ ಪರಿಚಯವಾಗುವುದಿತ್ತು - ಎಲ್ಲಕ್ಕಿಂತ ಹೆಚ್ಚಾಗಿ ಕುಮಾರನಿಜಗುಣರ ಮರುಪರಿಚಯವಾಗುವುದೂ ಇತ್ತು.  ನನಗೆ ಕುಮಾರನಿಜಗುಣರೂ ಒಳಗೊಂಡಂತೆ ಕಾರ್ಯಕ್ರಮದ ಪರಿಚಯಪತ್ರಿಕೆಯಲ್ಲಿದ್ದ ಯಾವ ವಿದ್ವಾಂಸರ ಮುಖಪರಿಚಯವೂ ಇಲ್ಲ.  ನಿಜಗುಣ ಎಂಬ ಹೆಸರನ್ನು ನೋಡಿ ನಮ್ಮ ನಿಜಗುಣಶಿವಯೋಗಿಗಳ, ಕುಂತೂರು-ಚಿಲಕವಾಡಿಗಳ ನೆನಪಂತೂ ತುಂಬಿ ಬಂದಿತಷ್ಟೇ.  ಇತ್ತ ಸ್ವಾಮಿಗಳಿಗೆ "ಕೊಳ್ಳೇಗಾಲ ಮಂಜುನಾಥ" ಎಂಬ ಹೆಸರನ್ನು ನೋಡಿ ಇದಾವುದು ಹೊಸಮುಖ ಎಂಬ ಕುತೂಹಲ.  ಬಹುಶಃ ಅವರಿಗೆ ನನ್ನನ್ನು ಬಿಟ್ಟು ಅಂದು ಪೃಚ್ಛಕತ್ವವಹಿಸುವ ಎಲ್ಲ ವಿದ್ವಾಂಸರ ನಿಕಟಪರಿಚಯವಿತ್ತು.  ಇವರನ್ನೊಮ್ಮೆ ಭೇಟಿಮಾಡಬೇಕಲ್ಲಾ, ನಮ್ಮೂರಿನವರು ಬೇರೆ, ನನಗೆ ಪರಿಚಯವೇ ಇಲ್ಲವಲ್ಲಾ - ಎಂದು ಗಣೇಶರಲ್ಲಿ ಹಳಹಳಿಸಿದರಂತೆ.  ನಾನು ಕಾರ್ಯಕ್ರಮಕ್ಕೆ ಹೋದೊಡನೆ ಎದುರುಗೊಂಡ ಗಣೇಶರು, "ಕುಮಾರನಿಜಗುಣಸ್ವಾಮಿಗಳು ನಿಮ್ಮನ್ನು ನೋಡಬೇಕೆಂದು ಬಹುವಾಗಿ ಕಾದಿದ್ದಾರೆ, ಅವರೂ ನಿಮ್ಮೂರಿನವರೇ, ಪರಿಚಯ ಮಾಡಿಕೊಳ್ಳಿ" ಎಂದು ಹೇಳಿ ನನ್ನನ್ನು ಮುಂದಿನ ಸಾಲಿನಲ್ಲಿ ಕೂರಿಸಿ ಹೋದರು.  ಸ್ವಲ್ಪಕಾಲದ ಮೇಲೆ ಯಾರೋ ಸ್ವಾಮಿಗಳು ಬಂದರು, ಅವರನ್ನೂ ಗಣೇಶರು ಕರೆತಂದು ನನ್ನ ಪಕ್ಕದಲ್ಲಿ ಕುಳ್ಳಿರಿಸಿ ಇವರೇ ಕುಮಾರನಿಜಗುಣಸ್ವಾಮಿಗಳು, ನಿಮ್ಮೂರಿನವರೇ ಎಂದು ಪರಿಚಯ ಮಾಡಿಸಿದರು.  ನೋಡಿದರೆ, ಇದು ನನಗೆ ಬಹುಪರಿಚಿತವಾದ ಮುಖವೇ, ಲಾಯರ್ ಬಸವಣ್ಣನವರು!   ಅದೆಂತಹ ಬದಲಾವಣೆಯೋ - ಆ ಇಪ್ಪತ್ತೈದು ವರ್ಷದಲ್ಲಿ!  ಕಣ್ಣು ಕೋರೈಸುವ ಶುಭ್ರಶ್ವೇತವಸನ ಮಾಸಲು ಕಾವಿ ಬಣ್ಣವಾಗಿದೆ, ಕಡುಗಪ್ಪು ಬಣ್ಣದ ಗಡ್ಡ ಬಹುವಾಗಿ ನೆರೆತು ಮಾಸಲು ಬಿಳಿಯ ಬಣ್ಣಕ್ಕೆ ತಿರುಗಿದೆ, ಆಜಾನುಬಾಹು ಶರೀರ ಕುಗ್ಗಿ ಕೃಶವಾಗಿದೆ, ಕಣ್ಣಿನ ಕಾಂತಿ, ಮುಗ್ಧಮಂದಹಾಸ ಮಾತ್ರ ಅದೇ - ಅವರೇ ಇವರು ಎಂಬುದಕ್ಕೆ ಸಾಕ್ಷಿ (ಭವಭೂತಿ ಹೇಳುತ್ತಾನಲ್ಲ, "ನಿವೇಶಃ ಶೈಲಾನಾಂ ತದಿದಮಿತಿ ಬುದ್ಧಿಂ ದ್ರಢಯತಿ")!  ಸ್ವಾಮಿಗಳು ನನ್ನ ಪಕ್ಕ ಕುಳಿತುಕೊಳ್ಳುತ್ತಾ "ಶರಣು" ಎಂದರು.  ಪರಿಚಯದ ಪ್ರತಿನಮಸ್ಕಾರ ಮಾಡಲೆಂದು ಮುಗಿಯಲಿದ್ದ ಕೈ ಅರ್ಧ ದಾರಿಯಲ್ಲೇ ತಡೆಯಿತು.  ಪಕ್ಕ ಕುಳಿತವರು ಓರ್ವ ಸನ್ಯಾಸಿಯೆಂಬುದು ಪ್ರಜ್ಞೆಗೆ ಹೊಳೆದು ಕೂಡಲೇ ಎದ್ದು ನಿಂತೆ, ಸಂಪ್ರದಾಯದಂತೆ ನಮಸ್ಕರಿಸಿದೆ.  ಅದಕ್ಕೆ ಮತ್ತೆರಡು ಬಾರಿ ಶರಣುಶರಣು ಎಂದ ಸ್ವಾಮಿಗಳು ಕುಳಿತುಕೊಳ್ಳಲು ಸೂಚಿಸಿದರು.  ಕೂರಲು ಅವರಿಗಿಂತ ತಗ್ಗಾದ ಯಾವ ಸ್ಥಾನವೂ ಇಲ್ಲದುದರಿಂದ ಸಂಕೋಚದ ಮುದ್ದೆಯಾಗಿ ಪಕ್ಕದಲ್ಲೇ ಕೂತೆ.  "ನಿಮ್ಮನ್ನು ನೋಡಿದ್ದು ತುಂಬಾ ಸಂತೋಷವಾಯಿತು, ನಮ್ಮೂರಿನವರು - ನಿಮ್ಮ ಪರಿಚಯವೇ ಇರಲಿಲ್ಲ, ಆಶ್ಚರ್ಯ" ಎಂದರು ಸ್ವಾಮಿಗಳು.  "ಏನು ಕಾಯಕ ಮಾಡಿಕೊಂಡಿದ್ದೀರಿ?" ಎಂದು ಕೇಳಿದರು.  ನನ್ನ ಪರಿಚಯ ಹೇಳಿಕೊಂಡೆ.

ಕಾರ್ಯಕ್ರಮ ಆರಂಭವಾಯಿತು, ನಾವು ವೇದಿಕೆಯ ಮೇಲೆ ಹೋದೆವು.  ಆ ದಿನದ ಸಮಸ್ಯಾಪೂರಣಕ್ಕೆ ನಾನು ಸ್ರಗ್ಧರಾವೃತ್ತದಲ್ಲಿ "ನಾನೀನೋನೀನೆನಾನೋ ನೆನೆನೆನೆನೆನೆನಾ ನೇನೊನೀನೇನದೇನೋ (ನಾನೀನೋ ನೀನೆನಾನೋ ನೆನೆ ನೆನೆ ನೆನೆ ನಾನೇನೊ ನೀನೇನದೇನೋ)" ಎಂಬ ಸಾಲನ್ನು ರಚಿಸಿ ಸಮಸ್ಯೆಯಾಗಿ ನೀಡಿದೆ.  ಪಕ್ಕದಲ್ಲೇ ಸಹಪೃಚ್ಛಕರಾಗಿ ಕುಳಿತಿದ್ದ ಸ್ವಾಮಿಗಳು ತಲೆದೂಗಿ ಭಲಾ ಭಲಾ ಎಂದರು (ಯಥಾಪ್ರಕಾರ, ಮೈಕನ್ನು ಬಾಯೊಳಗೇ ಇಟ್ಟುಕೊಂಡು - ಆ ಅಭ್ಯಾಸವಂತೂ ಮಾಸಿರಲಿಲ್ಲ).  ಮುಂದಿನ ನಾಲ್ಕು ಸುತ್ತುಗಳಲ್ಲಿ ಅವಧಾನಿಗಳು ಅದಕ್ಕೊಂದು ಸುಂದರವಾದ ಸಮಸ್ಯಾಪೂರಣಪದ್ಯವನ್ನೂ ರಚಿಸಿದರು.  ಕಾರ್ಯಕ್ರಮದ ಕೊನೆಯಲ್ಲಿ ನಮ್ಮ ಪೂರಣವನ್ನೂ ಹೇಳಬೇಕಲ್ಲ - ನಾನು ಇದೇ ಸಮಸ್ಯೆಗೆ ನನ್ನ ಪರಿಹಾರವನ್ನೂ ರಚಿಸಿ ಹಾಡಿ ತೋರಿಸಿದೆ.  ಕಾರ್ಯಕ್ರಮವಾದ ಮೇಲೆ ಇದರ ಬಗ್ಗೆ ಬಹುವಾಗಿ ಮೆಚ್ಚುಗೆ ಸೂಚಿಸಿದ ಸ್ವಾಮಿಗಳು "ನಿಮ್ಮ ಪರಿಚಯ ಇದುವರೆಗೆ ಆಗೇ ಇರಲಿಲ್ಲ ಅನ್ನೋದೇ ದುಃಖದ ವಿಚಾರ, ನೀವು ಚಿಲಕವಾಡಿಗೆ ತಪ್ಪದೇ ಬನ್ನಿ" ಎಂದು ಹೇಳಿ ಬೀಳ್ಕೊಂಡರು.  ಅದು ಕೇವಲ ಬಾಯುಪಚಾರದ ಮಾತಾಗಿರಲಿಲ್ಲವೆಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಕೈತುಂಬ ಸಂಪಾದನೆಯಾಗುವ ವಕೀಲಿಕೆಯನ್ನೂ ತೊರೆದು ನಿಜಗುಣಶಿವಯೋಗಿಗಳ ಗುಹೆಯಲ್ಲಿ ಇರತೊಡಗಿದ ಈ ವಿರಕ್ತಯೋಗಿಯ ಬಗ್ಗೆ ವಿಪರೀತ ಕುತೂಹಲ ಮೂಡಿತ್ತು.  ಪರಿಚಯದ ಆಮಂತ್ರಣವೂ ಇದ್ದುದರಿಂದ ಸಂಕೋಚವಿಲ್ಲದೇ ತಿಂಗಳೆರಡು ತಿಂಗಳಲ್ಲಿ ಚಿಲಕವಾಡಿಗೆ ಹೊರಟೆ.  ನಮ್ಮೂರಿನ ಕಡೆ ಹೋಗೇ ಎಷ್ಟೋ ಕಾಲವಾಗಿಬಿಟ್ಟಿತ್ತು.  ಬರುತ್ತೇನೆಂದು ಕರೆಮಾಡಿ ತಿಳಿಸಿದಾಗ ಸ್ವಾಮಿಗಳು ಬಹು ಸಂಭ್ರಮದಿಂದ "ಪ್ರಸಾದಕ್ಕೆ ಇಲ್ಲೇ ಬಂದುಬಿಡಿ" ಎಂದೂ ಹೇಳಿದರು.  ದಾರಿಯುದ್ದಕ್ಕೂ ಎರಡುಮೂರು ಬಾರಿ ಕರೆ ಬಂತು.  ಹೋಗಿ ಸೇರುವುದು ತಡವಾಯಿತು.  ಅವರು ಪ್ರಸಾದ ಸ್ವೀಕರಿಸದೇ ಕಾದು ಕುಳಿತದ್ದು ನೋಡಿ ಬಹಳ ಬೇಸರವಾಯಿತು.  ಗುಡ್ಡದ ಕೆಳಗಣ ಮಠದಲ್ಲಿ ಕೂರಿಸಿ ತಾವೇ ಬಡಿಸಿದರು.  ಹೊಟ್ಟೆ ತುಂಬಿ ಸಾಕುಬೇಕೆನಿಸುವಂತಾಗಿದ್ದರೂ "ಇಷ್ಟು ಕಡಿಮೆ ಉಂಡರೆ ಹೇಗೆ?  ಚಿಕ್ಕವಯಸ್ಸು.  ಚೆನ್ನಾಗಿ ಉಣಬೇಕು" ಎಂದು ಬಲವಂತ ಮಾಡಿ ಬಡಿಸಿದರು.  ಆನಂತರ ತಾವೂ ಕುಳಿತು ಪ್ರಸಾದ ಸ್ವೀಕರಿಸಿದರು.

ಊಟವಾದನಂತರ ಬೆಟ್ಟದ ತಪ್ಪಲಿನಲ್ಲೇ ತುಸು ಎತ್ತರದಲ್ಲಿದ್ದ ಚಾವಡಿಗೆ ಕರೆದೊಯ್ದರು - ಗುಹೆಯೊಂದಕ್ಕೇ ಸೇರಿದಂತೆ ಕಟ್ಟಿದ್ದ ಕಲ್ಲುಮಂಟಪ, ಸುತ್ತಲೂ ಬಿದಿರಿನ ತಡಿಕೆ.  ಇದು ಸ್ವಾಮಿಗಳ ಗ್ರಂಥಾಲಯ, ವ್ಯಾಸಂಗಸ್ಥಳ, ವಿರಾಮಸ್ಥಳ, ಊರ ಹತ್ತುಮಂದಿಯೊಂದಿಗೆ ಬೆರೆತು ಹರಟುವ ಸ್ಥಳ.  ನಾನು ಬರುತ್ತೇನೆಂದು ಮೊದಲೇ ತಿಳಿಸಿದ್ದುದರಿಂದ ನನ್ನನ್ನು ಭೇಟಿಮಾಡಲು ಊರಿನ ಐದಾರು ಜನರನ್ನು ಸಹ ಕರೆಸಿದ್ದರು ಸ್ವಾಮಿಗಳು.  ಈ ಆದರ, ಉತ್ಸಾಹ, ಸಂಭ್ರಮ - ನನಗೆ ತೀರ ಹೊಸದು.  ಅವರಲ್ಲೊಬ್ಬರನ್ನು ನನಗೆ ಪರಿಚಯಿಸಿ "ನಿಮಗೆ ಇವರ ಗುರುತು ಹತ್ತುತ್ತದೆಯೋ ನೋಡಿ" ಎಂದರು.  ಎದುರಿದ್ದ ವ್ಯಕ್ತಿ ನನಗೆ ಕೈ ಮುಗಿದು ನಮಸ್ಕಾರ ಹೇಳಿದರು - ನನಗೆ ಗುರುತು ಸಿಕ್ಕಲಿಲ್ಲ.  ಸ್ವಾಮಿಗಳೇ ನಗುತ್ತಾ "ಇವರು ನಿಮಗೆ ಚಿಕ್ಕಂದಿನಲ್ಲಿ ಮೇಷ್ಟರಾಗಿದ್ದರು, ಕುಮಾರಾರಾಧ್ಯರು ಅಂತ" ಎಂದು ಪರಿಚಯಿಸಿದರು.  ನನಗೆ ಬೆರಗಾಗಿ ಹೋಯಿತು.  ಅವರನ್ನು ಮತ್ತೆ ನಿಟ್ಟಿಸಿ ನೋಡಿದರೆ, ಹೌದು, ಅದೇ ಕುಮಾರಾರಾಧ್ಯರು, ನನಗೆ ಮೂರನೆಯ ತರಗತಿಯಲ್ಲಿ ಮೇಷ್ಟರಾಗಿದ್ದವರು.  ಮೂವತ್ತೈದು ವರ್ಷಗಳ ಹಿಂದೆ ಆಗಷ್ಟೇ ಕೆಲಸಕ್ಕೆ ಸೇರಿದ್ದ ಚಿಗುರುಮೀಸೆಯ ತೆಳ್ಳಗೆ ಮಡಿಕೋಲಿನಂತಿದ್ದ ಯುವಕನೀಗ, ಆಗಷ್ಟೇ ನಿವೃತ್ತಿಹೊಂದಿದ್ದ ಬೆಳ್ಮೀಸೆಯ ತುಸು ಸ್ಥೂಲಕಾಯವಡೆದ ವೃದ್ಧರಾಗಿದ್ದರು.  ಅವರು ನನಗೆ ಮೇಷ್ಟರಾಗಿದ್ದುದು ಒಂದೇ ವರ್ಷ, ಆರಾಧ್ಯ ಮೇಷ್ಟ್ರೆಂದರೆ ನನಗೆ ಥಟ್ಟನೆ ನೆನಪಾಗುವುದು, ಅದೇ ಮೂರನೆಯ ತರಗತಿಯಲ್ಲಿದ್ದಾಗೊಮ್ಮೆ ಅವರು ಮರದ ಪಟ್ಟಿಯಿಂದ ಅಂಗೈಗೆ ಬಾರಿಸಿದ್ದ ಏಟು, ಅದರ ಚುರುಕು, ಬಿಸುಪು ಇನ್ನೂ ಅಂಗೈಯಲ್ಲಿದ್ದಂತೆನಿಸುತ್ತದೆ.  ಅದನ್ನೇ ಅವರಿಗೆ ನೆನಪಿಸಿ ನಮಸ್ಕರಿಸಿದೆ.  ಅದನ್ನು ನೆನಪಿಸಿದೊಡನೆ ಯಾವಾಗಲೋ ನನಗೆ ಹೊಡೆದದ್ದಕ್ಕೆ ಪಾಪ ಅವರು ಮುಜುಗರಗೊಂಡರೆನಿಸುತ್ತದೆ, ಸಂಕೋಚ ಬೆರೆತ ಮುಗುಳ್ನಗೆಯೊಡನೆ ನಮಸ್ಕಾರವನ್ನು ಸ್ವೀಕರಿಸಿ ಮೇಲೆಬ್ಬಿಸಿದರು.  ನಿಜಗುಣಸ್ವಾಮಿಗಳು ನಗುತ್ತಾ "ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸುವಡೆ ಆಗಲಿ ಮಹಾಪ್ರಸಾದವೆಂದೆನಯ್ಯ ಎಂದಿಲ್ಲವೇ, ನೋಡಿ ನಿಮ್ಮ ಶಿಷ್ಯ ಈಗ" ಎಂದರು.  ಅದುವರೆಗೆ ಹೊಟ್ಟೆ ತುಂಬಿತ್ತು, ಈಗ ಮನಸ್ಸೂ ತುಂಬಿ ಬಂತು.  ಎಲ್ಲಿಯ ಲಾಯರ್ ಬಸವಣ್ಣನವರು, ಎಲ್ಲಿಯ ಚಿಲಕವಾಡಿ ಸ್ವಾಮಿಗಳು, ಎಲ್ಲಿಯ ನನ್ನ ಬಾಲ್ಯ, ಎಲ್ಲಿಯ ನಮ್ಮ ಮೇಷ್ಟರು ಎಲ್ಲಿಯ ನಾನು - ಹೋಗಲಿ ಇವಿಷ್ಟನ್ನು ಇವರು ಪತ್ತೆಹಚ್ಚಿದ್ದಾದರೂ ಹೇಗೆ - ಬುದ್ದಿಯವರ ಪ್ರೀತಿ-ವಾತ್ಸಲ್ಯ-ಆದರ ನಿಜಕ್ಕೂ ಕಣ್ಣಲ್ಲಿ ನೀರು ತರಿಸಿತು.  "ಮೊನ್ನೆ ಮೈಸೂರಿನ ಅವಧಾನದಲ್ಲಿ, ಸ್ರಗ್ಧರಾವೃತ್ತದಲ್ಲಿ ಪದ್ಯ ರಚಿಸಿದರು, ಸೊಗಸಾಗಿ ಹಾಡ್ತಾರೆ ಕೂಡ, ನಮ್ಮೂರಿನಾತ ಈತ" ಎಂದು ನೆರೆದಿದ್ದವರಿಗೆ ಹೇಳಿ ಹೇಳಿ, ನನ್ನ ಅದೇ ಪದ್ಯವನ್ನ ಎರಡು ಮೂರು ಬಾರಿ ಹಾಡಿಸಿದರು - ಅದೇ ರಾಗದಲ್ಲಿ, ಬೇರೆಬೇರೆ ರಾಗದಲ್ಲಿ; ಪ್ರತಿಬಾರಿಯೂ ಸಣ್ಣ ಮಕ್ಕಳಂತೆ ಖುಷಿಪಟ್ಟರು.  

ಆನಂತರ ಬುದ್ದಿಯವರು ಬೆಟ್ಟದಲ್ಲಿ ಇನ್ನೊಂದು ಸ್ವಲ್ಪ ಮೇಲಿದ್ದ ಮುಪ್ಪಿನ ಷಡಕ್ಷರಿಗಳ ಗುಹೆಗೆ ಕೊಂಡೊಯ್ದರು.  ಅದು ಶಿವಯೋಗಿ ಮುಪ್ಪಿನ ಷಡಕ್ಷರಿಗಳು ಇದ್ದ ಸ್ಥಳ, ಬುದ್ಧಿಯವರು ಧ್ಯಾನಾಸಕ್ತರಾಗುವ ಸ್ಥಳ ಕೂಡ.  "ಮೊದಲು ಇನ್ನೊಂದು ಸ್ವಲ್ಪ ಮೇಲಿರುವ ನಿಜಗುಣಶಿವಯೋಗಿಗಳ ಗುಹೆಯಲ್ಲಿ ಕೂರುತ್ತಿದ್ದೆ.  ಈಗ ಹತ್ತಲು ಕೈಲಾಗೊಲ್ಲ, ಇಲ್ಲಿ ಕೂರುತ್ತೇನೆ" ಎಂದು ಹೇಳಿದ ಬುದ್ಧಿಯವರು, "ನೀವಿಲ್ಲಿ ಸ್ವಲ್ಪ ಹೊತ್ತು ಕಳೆದು, ಮೇಲೆ ನಿಜಗುಣಶಿವಯೋಗಿಗಳ ಗುಹೆಯಲ್ಲೂ ಸ್ವಲ್ಪಹೊತ್ತು ಕೂತಿದ್ದು ಹರಕೆ ಪಡೆದು ಕೆಳಗೆ ಬನ್ನಿ" ಎಂದು ಹೇಳಿ ನನ್ನನ್ನು ಅಲ್ಲೇ ಬಿಟ್ಟು ಕೆಳಗೆ ಹೋದರು.  ತುಸು ಹೊತ್ತು ಕುಳಿತೆ.  ಈ ಸ್ಥಳದಲ್ಲಿ ಕುಳಿತು ಷಡಕ್ಷರಿ ಯೋಗಿ ಏನೇನು ಚಿಂತಿಸಿರಬಹುದು, ಧೇನಿಸಿರಬಹುದು - ಯಾವಯಾವ ಕಾಣ್ಕೆ ಕಣ್ಣ ಮುಂದೆ ಸುಳಿದಿರಬಹುದು.  "ಹೋರಾಟ ಹುಟ್ಟಿಸಲು ಬೇರಾದೆಯಲ್ಲದೆ ಬೇರುಂಟೆ ಜಗದೊಳಗೆ ಎಲೆ ದೇವನೇ" ಎನ್ನುವಾಗ ದೈವಪಾರಮ್ಯಕ್ಕಾಗಿ ಶತಶತಮಾನಗಳು ನಡೆದ, ನಡೆಯುತ್ತಿರುವ, ನಡೆಯಲಿರುವ ಎಷ್ಟೊಂದು ಹೋರಾಟಗಳು ಅವರ ಕಣ್ಣಮುಂದೆ ಮೆರವಣಿಗೆ ಹೊರಟಿರಬಹುದು!  ಕ್ಷಣಕಾಲ ಕುಳಿತು, ಮೇಲಿದ್ದ ನಿಜಗುಣರ ಗುಹೆಗೆ ಹತ್ತಿಕೊಂಡು ಹೋದೆ.  ಕೆಲಕಾಲ ಬಳಕೆತಪ್ಪಿದ್ದರಿಂದ ಅಲ್ಲಿ ಹರಡಿದ್ದ ಹಿಕ್ಕೆ, ಗುಹೆಗೆ ಸಹಜವಾದ ಜುಂಗುವಾಸನೆ - ಸಾನ್ನಿಧ್ಯದ ಪಾವಿತ್ರ್ಯಕ್ಕೇನೂ ಭಂಗ ತರಲಿಲ್ಲ.  ಅಲ್ಲೊಂದಷ್ಟು ಹೊತ್ತು ತಂಗಿದ್ದೆ; ನಿಜಗುಣಶಿವಯೋಗಿಗಳ ಕೆಲವು ಸ್ವರವಚನಗಳನ್ನು ಕೆಳದನಿಯಲ್ಲಿ ಹಾಡಿಕೊಂಡೆ; ಮನಸ್ಸು ಪ್ರಸನ್ನವಾಯಿತು; ಹರಕೆ ಸಂದಿತೆಂದು ಭಾವಿಸಿ ಕೆಳಗಿಳಿದೆ.  ಬಂದವರೆಲ್ಲ ಹೊರಟಿದ್ದರು.  ಬುದ್ದಿಯವರು ವಿರಾಮವಾಗಿ ಕುಳಿತು ಬಹುಕಾಲ ಮಾತಾಡಿದರು - ಅವರ ಛಂದಃಪ್ರೀತಿ, ಅದರ ಬಗ್ಗೆ ಅವರು ನಡೆಸಿದ ಅಧ್ಯಯನ, ಸಂಶೋಧನೆಗಳು, ತಮ್ಮ ಪ್ರತಿಭಾವಿಶೇಷದಿಂದ ಅವರೇ ಸೃಷ್ಟಿಸಿದ ಲೆಕ್ಕವಿಲ್ಲದಷ್ಟು ಹೊಸಹೊಸ ಛಂದಸ್ಸುಗಳ ಪರಿಚಯ ಮಾಡಿಸಿದರು.  ಛಂದಶ್ಶಾಸ್ತ್ರದ ಬಗೆಗಿರಲಿ, ಛಂದಸ್ಸುಗಳ ಬಗೆಗೇ ಅವರ ಹೊಕ್ಕುಬಳಕೆ ಯಾರಾದರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥದ್ದು.  ಇಂತಿಂತಹ ಛಂದೋವರ್ಗಗಳಲ್ಲಿ ಇಷ್ಟಿಷ್ಟು ಬಗೆಯ ಗಣಸಂಯೋಜನೆ ಸಾಧ್ಯ, ಅದರಲ್ಲಿ ಇಷ್ಟಿಷ್ಟು ಸಂಯೋಜನೆಗಳನ್ನು ಯಾರೂ ಬಳಸೇ ಇಲ್ಲ, ಅದರಲ್ಲಿ ಈ ಸಂಯೋಜನೆಯನ್ನು ನಾನು ಮಾಡಿದ್ದೇನೆ ನೋಡಿ - ಹೀಗೇ ಸಾಗುತ್ತಿತ್ತು ಬುದ್ದಿಯವರ ವಿವರಣೆ.  ಲಕ್ಷಾಂತರ ವೃತ್ತಗಳ ಸಂರಚನೆ ಸಾಧ್ಯವೆನ್ನುತ್ತಾರೆ ಲಾಕ್ಷಣಿಕರು - ನಿಜಗುಣಸ್ವಾಮಿಗಳು ವಿವಿಧ ಮಾತ್ರಾಗಣಗಳನ್ನು ಅಕ್ಷರಗಣಗಳನ್ನು ಚಿತ್ರವಿಚಿತ್ರವಾಗಿ ಸಂಯೋಜಿಸಿ ಅನೇಕ ಹೊಸಹೊಸ ಷಟ್ಪದಿ, ವೃತ್ತಗಳನ್ನು ರೂಪಿಸಿದ್ದಾರೆ.  ಉದಾಹರಣೆಗೆ ಶರಷಟ್ಪದಿಗೆ ಸಂವಾದಿಯಾಗಿ ಮಹಾಶರಷಟ್ಪದಿ, ಅನೇಕ ವಿನೂತನವೃತ್ತಗಳು - ನವಯೌವ್ವನ, ಭೂಮೀಶ, ಪಾಂಚಾಲಿ; ಛಂದಸ್ಸಿನ ಸೃಷ್ಟಿಯಷ್ಟೇ ವಿನೂತನವಲ್ಲ, ಅವಕ್ಕಿಟ್ಟ ಹೆಸರುಗಳೂ ವಿನೂತನವೇ - ಉದಾಹರಣೆಗೆ ಏಳುಮಲೆ ಮಾದೇವ ಎಂಬುದೊಂದು ವೃತ್ತ, ನನ್ನಿ, ಕುವೆಂಪು, ಕನ್ನಡಾಂಬೆ, ರಾಮರಾಜ್ಯ - ಮತ್ತೆ ಅವು ಒಂದೊಂದಕ್ಕೂ ಲಕ್ಷಣಪದ್ಯಗಳು ಬೇರೆ.  ಕೆಲವು ಛಂದಸ್ಸುಗಳು ಲಯದುಷ್ಕರವೆನಿಸಿದುವು, ಕಟುವೆನಿಸಿದುವು.  ಅದನ್ನೇ ಹೇಳಿದೆ - "ಕೆಲವು ವೃತ್ತಗಳಲ್ಲಿ ಲಯಸೌಕರ್ಯವೇ ಇಲ್ಲವಲ್ಲ ಬುದ್ದೀ, ಕೆಲವು ಕಡೆ ಜಗಣವಿರಬಾರದೆಡೆ ಜಗಣವಿದೆ..." ಹೀಗೇ ಏನೋ ಹೇಳಿದ ನೆನಪು.  ಕೂಡಲೇ ಸಿಟ್ಟಿಗೆದ್ದ ಬುದ್ಧಿಯವರು - "ಅದೆಲ್ಲಾ ಕಂದಾಚಾರ.  ಯಾವುದು ಲಯಸೌಕರ್ಯ?  ಹಾಡ್ತಾ ಹಾಡ್ತಾ ರಾಗ.  ಹಾಡೋಕ್ಕೆ ಬರಬೇಕಷ್ಟೇ; ಈಗ ವೆಂಕಟಮಖಿ 72 ಮೇಳಕರ್ತ ಮಾಡಿದಾನಲ್ಲ, ಅದನ್ನೆಲ್ಲಾ ಹಾಡೋಕ್ಕೆ ಆಗುವುದೋ?  ಅದು ಪ್ರತಿಭಾಸೃಷ್ಟಿಯಷ್ಟೇ, ದಕ್ಕಿಸಿಕೊಳ್ಳುವವರು ದಕ್ಕಿಸಿಕೊಳ್ಳುತ್ತಾರೆ" ಎಂದರು "ನಿನಗೆ ಯೋಗ್ಯತೆಯಿದ್ದರೆ ದಕ್ಕಿಸಿಕೋ ಇಲ್ಲದಿದ್ದರೆ ತೆಪ್ಪಗಿರು" ಎಂಬ ಧ್ವನಿಯನ್ನು ಅದರಲ್ಲಿ ಗುರುತಿಸಿ, ಅರಿತು ಕೈಮುಗಿದು ಸುಮ್ಮನಾದೆ.  ಮಾತು ವಚನಸಾಹಿತ್ಯಕ್ಕೆ, ಅನುಭಾವಕ್ಕೆ, ಶರಣಸತಿ-ಲಿಂಗಪತಿ ಪರಿಕಲ್ಪನೆಗೆ ಹೊರಳಿತು.  ಈ ಪರಿಕಲ್ಪನೆಯ ಕೆಲವು ವಚನಗಳನ್ನು ಬುದ್ದಿಯವರು ಭಾವಪೂರ್ಣವಾಗಿ, ಅಭಿನಯಪೂರ್ವಕವಾಗಿ ಅಂದು ತೋರಿಸಿದರು.  ಅವರು ಹೀಗೆ 'ಅನ್ನು'ವ ಶೈಲಿಯೇ ಅನನ್ಯ.  ಕೇಳುತ್ತ ಕೇಳುತ್ತಾ ಹೊತ್ತು ಸರಿಯಿತು, ಸಂಜೆಯಾಗತೊಡಗಿತು.  ಬನ್ನಿ ಕೆಳಗೆ ನಿಜಗುಣಾನುಭವಮಂಟಪವನ್ನು ನೋಡಿಕೊಂಡು ಹೊರಡುವಿರಂತೆ ಎಂದು ಕೆಳಗೆ ಕರೆದುಕೊಂಡುಬಂದರು.  ವಿಶಾಲವಾದ ಪ್ರಾಂಗಣ, ನಿಜಗುಣಶಿವಯೋಗಿಗಳ ದೊಡ್ಡ ಚಿತ್ರಪಟ, ಕಟ್ಟಡದ ಸುತ್ತ ಆಪ್ತವೆನಿಸುವ ಕೈತೋಟ.  ಸುತ್ತುಹಾಕಿಕೊಂಡು ಒಳಬಂದು ಕುಳಿತೆವು.  ಇಲ್ಲಿ ಆಗೀಗ ಭಜನೆ, ಕೆಲವು ಕಾರ್ಯಕ್ರಮಗಳು ನಡೆಯುತ್ತವೆ, ನಿರೀಕ್ಷಿಸಿದಷ್ಟು ಉತ್ಸಾಹ ಕಾಣುತ್ತಿಲ್ಲ ಎಂದು ಹೇಳುವಾಗ ಬುದ್ದಿಯವರ ಮುಖ ಸಪ್ಪಗಾಯಿತು.  ಯಾವುದೋ ಲೋಕದಲ್ಲಿದ್ದವರಂತೆ ತೇಲುಗಣ್ಣಾಗಿ ಹೇಳಿದರು - "ನಾನು, ಕೈವಲ್ಯಸಾಧನೆಯಲ್ಲಿ ಬಹಳಷ್ಟು ದೂರ ಕ್ರಮಿಸಿಬಿಟ್ಟಿದ್ದೆ, ಬಹಳ ಮೇಲೆ ತಲುಪಿದ್ದೆ, ಗುರಿಗೆ ಬಹಳ ಹತ್ತಿರವಿದ್ದೆ..." ಕೆಲಕಾಲ ನಿಲ್ಲಿಸಿ ಮತ್ತೆ ನಿಧಾನಕ್ಕೆ ನುಡಿದರು "ಈ ಅನುಭವಮಂಟಪ ಕಟ್ಟುವ ಹವ್ಯಾಸದಲ್ಲಿ ಮತ್ತೆ ಭವಕ್ಕೆ ಬಿದ್ದೆ..."  ಬುದ್ದಿಯವರ ಕಣ್ಣು ತೇವವಾಗಿದ್ದು ಸ್ಪಷ್ಟವಾಗಿತ್ತು.  ಅದನ್ನವರು ತೊಡೆಯುವ ಪ್ರಯತ್ನವನ್ನೇನೂ ಮಾಡಲಿಲ್ಲ.  ಕೆಲಕಾಲದ ಮೌನದನಂತರ ಇಹಕ್ಕೆ ಮರಳಿದವರೇ, ತಟಕ್ಕನೆ ಏಳುತ್ತಾ, "ನಿಮಗೆ ಹೊತ್ತಾಯಿತು, ಹೊರಟುಬಿಡಿ, ಆಗಾಗ ಬರುತ್ತಿರಿ" ಎಂದರು.

ನಾನೂ ಕತ್ತಲಲ್ಲಿ ಐವತ್ತು ಕಿಲೋಮೀಟರು ಟೂವ್ಹೀಲರ್ ಓಡಿಸಿಕೊಂಡು ನನ್ನ 'ಭವ'ಕ್ಕೆ ಸುರಕ್ಷಿತವಾಗಿ ಮರಳಬೇಕಿತ್ತು.  ಅವರವರ ಭವ ಅವರವರಿಗೆ ದೊಡ್ಡದು ಎನ್ನುವ ಭಾವ ಹೊತ್ತು ಮರಳಿದೆ.

ಆಮೇಲೆ ಬುದ್ದಿಯವರನ್ನು ಒಂದೆರಡು ಬಾರಿ ದೂರವಾಣಿಯಲ್ಲಿ ಮಾತಾಡಿಸಿದ್ದಷ್ಟೇ.  ಕೆಲವರ್ಷಗಳ ಮೇಲೆ ಒಂದುಬಾರಿ ಇದ್ದಕ್ಕಿದ್ದಂತೆ ಬೆಳಗಿನ ಏಳುಗಂಟೆಗೆ ಕರೆಮಾಡಿ, ನಿಮ್ಮ ಮನೆಯ ಹತ್ತಿರದ ಸರ್ಕಲಿನಲ್ಲಿದ್ದೇನೆ, ನಿಮ್ಮ ಮನೆಗೆ ಹೇಗೆ ಬರಬೇಕೆಂದು ತಿಳಿಸಿ ಎಂದಿದ್ದರು.  ನಮ್ಮಲ್ಲೋ, ಸ್ವಾಮಿಗಳು ಮನೆಗೆ ಬರುವುದೆಂದರೆ ಸಾಮಾನ್ಯವಲ್ಲ, ಅದರ ಪರಿಠವಣೆಯೇ ಬೇರೆ.  ನೋಡಿದರೆ ಈತ ಮನೆಯ ಹತ್ತಿರವೇ ನಿಂತುಕೊಂಡು ದಾರಿ ಕೇಳುತ್ತಿದ್ದಾರೆ.  ಅರ್ಧ ಮನೆ ಇನ್ನೂ ಹಾಸಿಗೆ ಬಿಟ್ಟು ಎದ್ದೂ ಇಲ್ಲ.  ಮನೆಯಲ್ಲಿ ದೊಡ್ಡ ಗಡಿಬಿಡಿಯೆದ್ದಿತು.  ಅದೇ ಗಡಿಬಿಡಿಯಲ್ಲಿ ಮುಖ ಗಲಬರಿಸಿಕೊಂಡು, ಅಂಗಿಯೇರಿಸಿಕೊಂಡು ಓಡಿದೆ.  ಹೋಗಿ ಮನೆಗೆ ಕರೆದುಕೊಂಡು ಬಂದೆ.  "ಸ್ವಾಮಿಗಳು" ಮನೆಗೆ ಬಂದಹಾಗಾಗಲೇ ಇಲ್ಲ.  ಬುದ್ದಿಯವರು ಬಂದು ಸ್ವಲ್ಪಹೊತ್ತು ಕುಳಿತಿದ್ದು, ಎಲ್ಲರನ್ನೂ ಮಂದಹಾಸದೊಡನೆ ಮಾತಾಡಿಸಿ, ಮಗನ ತಲೆ ಸವರಿ, ತಮ್ಮನ ಬೆನ್ನು ತಟ್ಟಿ, ಒಂದು ಲೋಟ ಹಾಲು ಕುಡಿದು ಹೊರಟರು.  "ನನ್ನನ್ನು ಇಲ್ಲೇ ಸರ್ಪಭೂಷಣಮಠಕ್ಕೆ ಬಿಟ್ಟುಬಿಡಿ ಸಾಕು" ಎಂದು ನನ್ನ ಟೂವ್ಹೀಲರಿನಲ್ಲೇ ಕುಳಿತು ಡ್ರಾಪ್ ಪಡೆದರು.

ಆಮೇಲೆ ಅವರನ್ನು ಹಲವು ಬಾರಿ ನೆನೆದಿದ್ದೇನೆ; ಈ ಐದಾರು ತಿಂಗಳಲ್ಲಂತೂ ಅದೇಕೋ, ಮಿತ್ರರೊಡನೆ ಮಾತುಕತೆಗಳಲ್ಲಿ ಅವರ ವಿಷಯ ಸಾಕಷ್ಟು ಬಾರಿ ಬಂದು ಹೋಗಿದೆ.  ಮನಸ್ಸು ವಿಹ್ವಲಗೊಂಡಾಗಲೆಲ್ಲಾ ತಣ್ಣಗೆ ಶಂಭುಲಿಂಗನ ಬೆಟ್ಟಕ್ಕೆ ಹೋಗಿ ಇದ್ದುಬಿಡುವುದೆಂಬ ಕಲ್ಪನಾಸಮಾಧಾನವನ್ನು ಅನೇಕ ಬಾರಿ ಮನಸ್ಸಿಗೆ ತಂದುಕೊಂಡಿದ್ದೇನೆ.  ಹಾಗೆಂದುಕೊಂಡಾಗಲೆಲ್ಲಾ, ದೂರದಲ್ಲಿರುವ ಮಿನುಗುದೀವೊಂದು ನಾವು ಯಾತಕ್ಕೂ ಉಪಯೋಗಿಸದಿದ್ದರೂ ತನ್ನ ಮಿನುಗುವಿಕೆಯಿಂದಲೇ ಒಂದು ಬಗೆಯ ಭರವಸೆ ತುಂಬುವಂತೆ ಭರವಸೆ ತುಂಬಿ ಬಂದಿದೆ.  ಅನೇಕ ಬಾರಿ ಅಲ್ಲಿ ಹೋಗಿ ಒಂದೆರಡು ಗಂಟೆಯಾದರೂ ಅವರೊಡನೆ ಕಾಲಕಳೆದು ಬರಬೇಕೆಂದುಕೊಂಡಿದ್ದೇನೆ.  ಆದರೆ ಯಾವತ್ತೂ ಅದು ಸಾಧ್ಯವಾಗಲೇ ಇಲ್ಲ.  ಈಗ್ಗೆ ಕೆಲತಿಂಗಳ ಹಿಂದೆ ಕುಮಾರನಿಜಗುಣರಿಗೆ ಬಹಳ ಹುಷಾರಿಲ್ಲ, ಬೆಂಗಳೂರಿನಲ್ಲಿದ್ದಾರೆ ಎಂಬ ಸುದ್ದಿ ಬಂತು.  ಅಂದುಕೊಂಡಂತೆ ಮೊದಲೇ ಒಮ್ಮೆ ಚಿಲಕವಾಡಿಗೆ ಹೋಗಿ ನೋಡಿ ಬರಲಾಗದ್ದಕ್ಕೆ ವಿಷಾದವಾಯಿತು.  ಈಗ ಅವರು ನಮ್ಮನ್ನಗಲಿದನಂತರ, ಆ ವಿಷಾದ ಶಾಶ್ವತವಾಗಿ ಉಳಿದುಕೊಂಡಿತು.

ಅಗಲಿದ ಹಿರಿಯರಿಗೆ, ಅವರೊಪ್ಪುವಂತೆ ಒಂದು ಶ್ರದ್ಧಾಂಜಲಿಯನ್ನಾದರೂ ಸಲ್ಲಿಸುವುದು ನಮಗುಳಿದ ಕಾರ್ಯ.  ಅವರೇ ಸೃಷ್ಟಿಸಿದ "ಏಳುಮಲೆ ಮಾದೇವ" ವೃತ್ತದಲ್ಲಿ ಅವರಿಗಾಗಿ ಈ ಶ್ರದ್ಧಾಂಜಲಿ (ಏಳುಮಲೆ ಮಾದೇವ ವೃತ್ತ - ಭಯಜಸ ರನತ ಗಣಗಳು ಮತ್ತೊಂದು ಗುರು - ಒಟ್ಟು 22 ಅಕ್ಷರಗಳು - "ಏಳುಮಲೆ ಮಾದೇವ ಏಳುಮಲೆ ಮಾದೇವ ಏಳುಮಲೆ ಮಾದೇವನೇ" - ಹೀಗೆ):

ವೃತ್ತಗಳ ಸುತ್ತುತ್ತೆ ಕಂದಗಳ ತಾನೆತ್ತುತುಂ ಸಲಹಿ ಸಂತೈಸುತುಂ
ಚಿತ್ತದೊಳಗೆತ್ತಿರ್ದ ಶಂಭುವಿನ ರೂಹೆತ್ತಲುಂ ಕದಲದಂತಾವಗಂ
ಸುತ್ತರಿದು ಕಾಯುತ್ತಲಿತ್ತ ಶಿವಯೋಗಂಗಳೊಳ್ಮುಳುಗುತುಂ ಸೌಖ್ಯಮಂ
ಪೊತ್ತ ಮೃದುಮಂದಸ್ಮಿತಂ ನಿಜಗುಣಾಖ್ಯ ಶಿವಯೋಗಿಕುವರಂಗೊಂದಿಪೆಂ



Sunday, December 29, 2019

ಕೊನೆಗೊಂಡ ಸದಾಚಾರ-ಸೌಶೀಲ್ಯಗಳ ಯುಗ


ಶ್ರೀಗಳ ಸಮ್ಮುಖ ನಮ್ಮ ಪಾಲಿಗೆ ಬಹುಸಾಮಾನ್ಯವೆಂಬಂತಿದ್ದದ್ದು ನನ್ನ ಎಳವೆಯಲ್ಲಿ. ಚನ್ನಪಟ್ಟಣಕ್ಕೆ ಬಂದ ಎಲ್ಲ ಸ್ವಾಮಿಗಳಿಗೂ ನಮ್ಮ ತಾತನವರದ್ದೇ ಆತಿಥ್ಯ, ಊರಿನ ರಾಮದೇವರ ಗುಡಿಯಲ್ಲಿ ವಾಸ್ತವ್ಯ ಎಂದು ನನ್ನ ನೆನಪು. ಅವರು ಊರಿಗೆ ಬಂದ ದಿನ ಸಂಜೆ ಸಾಮಾನ್ಯವಾಗಿ ನಮ್ಮ ತಾತನವರ ಮನೆಗೆ ಭೇಟಿ - ದೊಡ್ಡ ಮನೆ, ಅಲ್ಲೊಂದು ಪುಟ್ಟ ಸಭೆ ನಡೆಯುತ್ತಿತ್ತು. ಶ್ರೀಗಳ ಆಶೀರ್ವಚನ - ಅದೇ ವಿದ್ಯುತ್ಕಾಂತಿಯ ಮಾಸದ ನಗೆ, ಸ್ವಗತದ ಶೈಲಿಯ ಮೃದುಗಂಭೀರವಾಣಿ, ಫಲಮಂತ್ರಾಕ್ಷತೆ, ನಗೆಮೊಗದ ಕುಶಲಪ್ರಶ್ನೆ - ಈ ಕ್ರಮ ಬಹುತೇಕ ನಮ್ಮ ತಾತನವರು ಬದುಕಿರುವ ತನಕ ತಪ್ಪಿದ್ದಿಲ್ಲ. ಆಮೇಲೆ ಊರಿನ ಸಂಪರ್ಕ ತಪ್ಪಿ ದಶಕಗಳೇ ಕಳೆದುವು. ಮಾಧ್ಯಮಗಳ ಮೂಲಕವಷ್ಟೇ ಶ್ರೀಗಳ ಪರೋಕ್ಷಸಂಪರ್ಕ. ಎಷ್ಟೋ ದಶಕಗಳನಂತರ ಮೊನ್ನೆಮೊನ್ನೆ ಶ್ರೀಗಳ ನೇರ ದರ್ಶನ ಬೆಂಗಳೂರಿನಲ್ಲಿ, ಸರಿಯಾಗಿ 18 ದಿನದ ಕೆಳಗೆ, 11/12/2019ರಂದು, ಶ್ರೀ ವಿದ್ಯಾಪ್ರಸನ್ನತೀರ್ಥರ ಐವತ್ತನೇ ಪುಣ್ಯದಿನದ ಸ್ಮರಣೆಯಲ್ಲಿ. ಪ್ರಸನ್ನತೀರ್ಥರೊಡನಿನ ಅರವತ್ತೈದು ವರ್ಷಕ್ಕೂ ಹಿಂದಿನ ತಮ್ಮ ನೆನಪುಗಳನ್ನು ಹೆಕ್ಕಿ ತೆಗೆದು ಹಂಚಿಕೊಂಡರು, ತಮಿಳುನಾಡಿನ ಯಾವುದೋ ಹಳ್ಳಿಯ ಹೆಸರು ಕೂಡ ಶ್ರೀಗಳ ನೆನಪಿನಲ್ಲಿತ್ತು. ಆ ದಿನ ಶ್ರೀಗಳನ್ನು ನೋಡಿದವರಿಗೆ ಅದೇ ಕೊನೆಯ ದರ್ಶನವಾಗಬಹುದೆಂಬ ಊಹೆ ಖಂಡಿತಾ ಇರಲಿಕ್ಕಿಲ್ಲ. ಶ್ರೀಗಳ ಅದಮ್ಯಚೇತನಕ್ಕೆ 88 ಇನ್ನೂ ಕಿರಿಯವಯಸ್ಸು. ಬಿಡುವಿಲ್ಲದ ಕಾರ್ಯಕ್ರಮದ ಕಾರಣದಿಂದ, ಈ ಕಾರ್ಯಕ್ರಮದ ಅರ್ಧದಲ್ಲೇ ಉಡುಪಿಗೆ ಹೊರಡಬೇಕಾಗಿ ಬಂದ ಕಾರಣವನ್ನು ಸಭೆಗೆ ವಿವರಿಸಿ "ಸಭೆಯ ಅನುಮತಿ ಪಡೆದು ಪ್ರಯಾಣ ಬೆಳಸುತ್ತೇವೆ" ಎಂದ ಶ್ರೀಗಳ ಸೌಜನ್ಯ ಬೆರಗಾಗಿಸಿತು.

ಕಳೆದ ವರ್ಷವೋ ಏನೋ, ಪ್ರಯಾಣದಲ್ಲಿ ಬೆನ್ನಿಗೆ ಪೆಟ್ಟಾಗಿ, ಎದ್ದು ನಿಲ್ಲುವುದೇ ದುಸ್ತರವಾಗಿ, ವೈದ್ಯರು ಬೆಡ್ ರೆಸ್ಟ್ ಹೇಳಿದ್ದಾಗ್ಯೂ ಎರಡೇ ದಿನದಲ್ಲಿ ಕೂಡಿದ ಮಟ್ಟಿಗೆ ನಿತ್ಯಕರ್ಮಾನುಷ್ಠಾನವನ್ನು ರೂಢಿಸಿಕೊಂಡರೆಂದು ಕೇಳಿದ್ದೇನೆ. ಸಾಂಪ್ರದಾಯಿಕ ಸನ್ಯಾಸಿಯೊಬ್ಬನಿಗೆ ನಿತ್ಯಕರ್ಮಾನುಷ್ಠಾನ ಅದೆಷ್ಟು ಮುಖ್ಯವೆಂದು ಸಂಪ್ರದಾಯವನ್ನು ಬಲ್ಲವರೆಲ್ಲರೂ ಅರಿತ ವಿಷಯ. ಇದು ಸನ್ಯಾಸಿಗಳಿಗೆಲ್ಲ ಮಾದರಿಯಾಗಬಹುದಾದ ವಿಶ್ವೇಶತೀರ್ಥರ ಇಚ್ಛಾಶಕ್ತಿ.

ಸಾಂಪ್ರದಾಯಿಕ ಸನ್ಯಾಸದ ಚೌಕಟ್ಟಿನೊಳಗೇ ಸಾಮಾಜಿಕಸುಧಾರಣೆಗಾಗಿ ತುಡಿದ ಈ ಚೇತನ, ಕೇಳಿದ ಕಟಕಿಗಳೆಷ್ಟು, ಎದುರಿಸಿದ ವಿರೋಧವೆಷ್ಟು, ಅನುಭವಿಸಿದ ನಿರ್ಲಜ್ಜ ವೈಯಕ್ತಿಕ ಭರ್ತ್ಸನೆಗಳೆಷ್ಟು? ರಾಜಕೀಯಸ್ಥನೆಂದರು, ಪೊಲಿಟಿಕಲ್ ಗಿಮಿಕ್ ಎಂದರು, ಕೇಳಬಾರದ ಪ್ರಶ್ನೆಗಳನ್ನು ಕೇಳಿದರು, ಆಡಬಾರದ್ದನ್ನಾಡಿದರು - ಈ ಎಲ್ಲ ಸಂದರ್ಭಗಳಲ್ಲೂ ತಮ್ಮದೇ ಸಮುದಾಯದ ಯತಿಗಡಣವಿರಲಿ, ಬ್ರಾಹ್ಮಣಸಮಾಜದ, ಇಡೀ ಹಿಂದೂ ಸಮಾಜದ ಯತಿಸಮುದಾಯವೂ ನಿರ್ಲಿಪ್ತಮೌನ ವಹಿಸಿದಾಗ್ಯೂ, ತಾವೂ ಸ್ವತಃ ನಿರ್ಲಿಪ್ತರಾಗಿ ತಾವು ಸರಿಯೆಂದು ಅರಿತದ್ದನ್ನು ನಡೆಸಿಕೊಂಡು ಹೋದ ದೃಢತೆ ಸ್ವಾಮಿಗಳದ್ದು.

ಸ್ವಚ್ಛತೆ, ಸದಾಚಾರ, ಸಂಯಮ, ಸೌಶೀಲ್ಯಗಳ ಒಂದು ಯುಗ ಇಂದಿಗೆ ಮುಗಿದಿದೆ. ಆ ಯುಗದ ಒಂದು ಭಾಗದಲ್ಲಿ ನಾವೂ ಜೀವಿಸಿದ್ದೆವೆಂಬ ಸಾರ್ಥಕತೆ ನಮಗುಳಿದಿದೆ, ಆ ಸಾರ್ಥಕತೆಗೆ ಮುಕ್ಕಾಗದಂತೆ ಬದುಕುವ ಹೊಣೆಗಾರಿಕೆಯೂ!  ನೆಚ್ಚಿದ ತತ್ತ್ವಕ್ಕೆ ಕಟ್ಟಿ ನಿಲ್ಲುವ ಆ ದೃಢತೆ, ಗುಬ್ಬಚ್ಚಿಯಂತಹ ಪುಟ್ಟ ದೇಹದಲ್ಲಿ ಸದಾ ಪುಟಿಯುವ ಆ ಚೈತನ್ಯ, ಆ ಮಗುವಿನಂತಹ ನಗೆ - ಇವೆಲ್ಲ ಕಣ್ಣಿಗೆ ಕಟ್ಟಿದಂತಿದೆ.

ಈ ಚೇತನ ನಮ್ಮ ಹಿಂದೆ ಸದಾ ಬೆಂಗಾವಲಾಗಿರಲಿ ಎಂಬ ಹಾರೈಕೆಯೊಂದಿಗೆ 🙏🙏🙏

Thursday, May 2, 2019

ಬೈದು ಬೈದೇ ಹೃದಯದಲ್ಲಿ ಮನೆಮಾಡಿದ ಕಲ್ಚರ್ಡ್ ಕಮೆಡಿಯನ್

























"ಈ ಊರಲ್ಲಿ, ಸಾವ್ಕಾರ್ರ್ ಮನೆ ಎಷ್ಟದಾವೆ...?"

"ಅಗೋ... ಅಲ್ ಕಾಣ್ತಾದಲ್ಲ, ಆ ಬೀದಿ..."

"ಹೂ, ಅದೇ ಬೀದಿ? ನಾವ್ ಬಂದಿದ್ದು..."

"ಅದೇ ಬೀದೀಲ್ ಬಂದ್ರೇನು?... ಆ ಬೀದೀಲಿರೋರೆಲ್ಲಾ ಸಾವ್ಕಾರ್ರೇ ವೋಗತ್ಲಾಗೆ..."

"ಮತ್ತೆ, ಆ ಬೀದೀಗೆ ಪುರುಂದರದಾಸರ ಬೀದಿ ಅಂತ ಹೆಸ್ರಿಟ್ಟಿದಾರೆ..."

"ನಿನ್ ಹೆಣಾ, ಅಯೋಗ್ಯ್ **ಮಗ್ನೇ... ಆ ಬೀದೀಲಿ ಈವಾಗಿರೋ ಶ್ರೀಮಂತ್ರೆಲ್ಲಾ ಬೀದೀಗ್ ಬಂದಾಗ, ದಾಸ್ರು ಬಂದ್ಹಾಂಗ್ ಬಂದ್ರು... ಆಮೇಲೆ ಅದೇನ್ ಮಾಡಿದ್ರೋ ಯೆಂಗ್ ಮಾಡಿದ್ರೋ, ಅಂತ್ಕೂ ಎಲ್ಲಾ ಶ್ರೀಮಂತ್ರಾಗಿ ಮಾಡೀಮೇಲೆ ಮಾಡಿ ಕಟ್ಟಿಸ್ಕೊಂಡು, ಮಾಡಿ ವಳಕ್ಕೆ... ಅವ್ರ್ ಹೋದ್ರು, ದಾಸರಿಗೆ ಬೀದಿ ತಿರ್ಗಾಡಾಕ್ ಬಿಟ್ರು"

"ಬೀದಿ ಮಾತ್ರಾ ದಾಸ್ರುದ್ದು, ಮನೆಯೆಲ್ಲಾ ಶ್ರೀಮಂತ್ರುದ್ದು"

****************************************************************************************************
"ಅಲ್ರೀ, ಬಿಕ್ಸಾ ಬೇಡುದ್ರೆ, ಕೆಲ್ಸಾ ಮಾಡ್ಕಂಡ್ ತಿನ್ನೂ ಅಂತೀರ, ಕೆಲ್ಸಾ ಕೇಳುದ್ರೆ ಬಿಕ್ಸಾ ಬೇಡ್ಕಂಡ್ ತಿನ್ನೂ ಅಂತೀರ; ಕೆಲ್ಸಾ ಕೊಡಲ್ಲಾ, ಬಿಕ್ಸಾ ಆಕಲ್ಲ... ಬಡಬಗ್ರು ಹೊಟ್ಗೇನ್ ಮಣ್ ತಿನ್ಬೇಕೇನ್ರೀ?"

*****************************************************************************************************

ಪಶ್ಚಾತ್ತಾಪ ನಾಟಕದ ಈ ಡಯಲಾಗುಗಳಿಂದ ನನಗೆ ಪರಿಚಿತರಾದವರು ಮಾಸ್ಟರ್ ಹಿರಣ್ಣಯ್ಯ. ಕೇಳಿದ ಸುಮಾರು ಮೂವತ್ತು ಮೂವತ್ತೆರಡು ವರ್ಷಗಳ ಮೇಲೂ ಈ ಸಂಭಾಷಣೆಗಳು ಮನಸ್ಸಿನಲ್ಲಿ ಅಚ್ಚೊತ್ತಿವೆ. ಕ್ಯಾಸೆಟ್ ರೆಕಾರ್ಡರಿನ ಕಾಲ ಅದು. ಒಂಬತ್ತನೆಯದೋ ಹತ್ತನೆಯದೋ ತರಗತಿ ಓದುತ್ತಿದ್ದೆ. ಈ ಕ್ಯಾಸೆಟ್ ನಾಟಕವನ್ನು ನಾವು ಎಷ್ಟು ಬಾರಿ ಕೇಳಿದ್ದೆವೆಂದರೆ, ಆಗೆಲ್ಲಾ ಇಡೀ ಪಶ್ಚಾತ್ತಾಪ ನಾಟಕ ಬಾಯಿಗೇ ಬರುತ್ತಿತ್ತು.

ಎರಡೇ ದಶಕಗಳ ಹಿಂದೆ, ಸಂಸಾರದ ಜೊತೆ ಮಕ್ಕಳ ಜೊತೆ ಕೂತು ಕೇಳಲು/ನೋಡಲು ತುಸು ಮುಜುಗರವೆನಿಸುವಷ್ಟು ಎಗ್ಗುಸಿಗ್ಗಿಲ್ಲದ ಬೈಗಳ ಮಾಸ್ಟರ್ ಹಿರಣ್ಣಯ್ಯ ಸಹ, ಆಮೇಲಾಮೇಲೆ ರಂಗಭೂಮಿ/ಸಿನಿಮಾರಂಗಗಳು ತಳೆದ ಅಸಹ್ಯ ಅವತಾರಗಳ ಹಿನ್ನೆಲೆಯಲ್ಲಿ ಎಷ್ಟೋ ಮೇಲೆನಿಸತೊಡಗಿ, ನಿಜಕ್ಕೂ ನಿಜಕ್ಕೂ ಕಲ್ಚರ್ಡ್ ಕಮೆಡಿಯನ್ ಎನಿಸತೊಡಗಿದ್ದು ಕನ್ನಡ ಕಲಾರಂಗದ ವಿಪರ್ಯಾಸವೇ ಸರಿ. ಆದರೆ ಇವೆಲ್ಲ ತಕರಾರುಗಳಾಚೆಗೂ - ಅನೇಕವೇಳೆ ಏಕತಾನವೆನಿಸುವಷ್ಟು ಬಡಬಡ ಮಾತಿನ ಶೈಲಿಯಲ್ಲೇ - ತಮಗನ್ನಿಸಿದ ಸತ್ಯವನ್ನು ನಿರ್ಭೀತಿಯಿಂದ ಹೇಳುತ್ತಾ, ತಮ್ಮದೇ ರೀತಿಯಲ್ಲಿ ಸಮಾಜದ, ಸರ್ಕಾರಗಳ ಓರೆಕೋರೆಗಳನ್ನು ಕಲಾಮಾಧ್ಯಮದ ಮೂಲಕ ತಿದ್ದುವ ಪ್ರಯತ್ನ ನಡೆಸಿದ ಹಿರಣ್ಣಯ್ಯ ತಮ್ಮ ಆ ದಾರಿಯಲ್ಲಿ ಜನರ ಹೃದಯದಲ್ಲಿ ಒಂದು ವಿಚಿತ್ರ ಪ್ರೀತಿಯನ್ನು ಗಳಿಸಿಕೊಂಡುಬಿಟ್ಟರು. ಇದರಿಂದ ಸರ್ಕಾರ ಸಮಾಜಗಳು ಎಷ್ಟು ಎಚ್ಚೆತ್ತುಕೊಂಡುವೋ, ಆದರೆ ಸರ್ಕಾರವನ್ನೇ ಎದುರುಹಾಕಿಕೊಂಡು ದಕ್ಕಿಸಿಕೊಳ್ಳುವ ಕೆಚ್ಚೆದೆ, ಫ್ರೀಪಾಸುಗಳನ್ನು ನೀಡಿ ಗಣ್ಯ-ಪ್ರಭಾವಿಗಳನ್ನು ಮುಂದಿನ ಸಾಲುಗಳಲ್ಲೇ ಕೂರಿಸಿಕೊಂಡು ಉಗಿದು ಉಪ್ಪುಹಾಕುವ ಭಂಡಧೈರ್ಯದ ಹಿರಣ್ಣಯ್ಯ ಒಂದು ರೀತಿಯಲ್ಲಿ ಜನರ ಹತಾಶೆಯ, ಸಿಟ್ಟಿನ, ಬೇಸರಿಕೆಯ, ಬೈಗಳಿಗೆ ದನಿಯಾದರು, ಬಹುಶಃ ಆ ಕಾರಣಕ್ಕೇ ಜನಕ್ಕೆ ಅಚ್ಚುಮೆಚ್ಚಾದರು. "ಹದಿನಾರ್ ಜೊತೆ ಸೊಲ್ಲಾಪುರದ್ ಚಪ್ಲಿ ಅರಿಯೋವರ್ಗೂ ಹೊಡೆ"ಯುವ ಅವರದೇ ನಾಲಿಗೆಯಲ್ಲಿ "ಎಲೆ ಅಡಿಕೆ ಸುಣ್ಣ ಹೊಗೆಸೊಪ್ಪು ಎಲ್ಲಾ ಹಾಕ್ಕೊಂಡು ಕ್ಯಾಕರಿಸಿ ಅಗಿದು ಉಗಿ"ಯುವ ಮಾತಿನ ಶೈಲಿ ಅದು. "ಮಾಸ್ಟರ್ ಹಿರಣ್ಣಯ್ಯ ಕಣಯ್ಯ, ಹ್ಯಾಗ್ ಬೈತಾನೆ ಗೊತ್ತಾ, ಅಯ್ಯಪ್ಪಾ... ಮಾನವಿದ್ದೋರು ಯಾರಾದ್ರೂ ನೇಣ್ಹಾಕ್ಕೋಬೇಕು ಬಡ್ಡಿಮಗಂದು..." ಎಂಬ ತಮಾಷೆ ತುಂಬಿದ ಮೆಚ್ಚುಗೆಗೆ ಪಾತ್ರರಾದವರು ಹಿರಣ್ಣಯ್ಯ. ಸುಶಿಕ್ಷಿತ ರಂಗಾಸಕ್ತರಿಂದ ಹವ್ಯಾಸೀ ರಂಗಭೂಮಿ ಚಾಲನೆಗೊಂಡು, ಹವ್ಯಾಸೀ ರಂಗಪ್ರಯೋಗಗಳು ಸುಶಿಕ್ಷಿತರ ನಡುವೆ ಜನಪ್ರಿಯಗೊಳ್ಳುತ್ತಾ ವೃತ್ತಿರಂಗಭೂಮಿ ಅಸಾಧ್ಯ ಟೀಕೆಗೆ, ಹೀಗಳಿಕೆಗೆ, ಅಪಹಾಸ್ಯಕ್ಕೆ ಒಳಗಾಗಿ, ಇನ್ನೊಂದೆಡೆ ಸಿನಿಮಾ ಮಾಧ್ಯಮದ ಅಬ್ಬರದಿಂದ ಇಡೀ ವೃತ್ತಿರಂಗಭೂಮಿಯೇ ನಿತ್ರಾಣಗೊಂಡು ನೆಲಕಚ್ಚಿದ್ದ ಕಾಲದಲ್ಲಿ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ವಿನೂತನ ಸಾಮಾಜಿಕ ರಾಜಕೀಯ ಪ್ರಯೋಗಗಳಿಂದ ವೃತ್ತಿರಂಗಭೂಮಿಗೆ ಒಂದಷ್ಟು ಜೀವ, ಒಂದಷ್ಟು ಪ್ರಸ್ತುತತೆ ತುಂಬಿದರು. ರಂಗಪ್ರಯೋಗಗಳಿಗಷ್ಟೇ ಸೀಮಿತಗೊಂಡಿದ್ದ ಅನೇಕ ಹಳೆಯ ಹೊಸ ನಾಟಕಗಳನ್ನು ಧ್ವನಿಸುರುಳಿಯ ಮೂಲಕ ಮತ್ತೆ ಜನಪ್ರಿಯಗೊಳಿಸಿದರು.

ಹಿರಣ್ಣಯ್ಯನವರನ್ನು ನೀವು ಇನ್ನಿಷ್ಟೇ ಟೀಕಿಸಬಹುದು, ವಿಮರ್ಶಿಸಬಹುದು, ಆದರೆ ಅವರ ನಾಟಕಗಳನ್ನು ಕೇಳಿ ನೋಡಿ ನಕ್ಕು ಮೆಚ್ಚಿ ಹಗುರಾಗದಿರಲು ಸಾಧ್ಯವೇ ಇಲ್ಲ.

ಇಷ್ಟಾಗಿಯೂ ನರಸಿಂಹಮೂರ್ತಿಗಳು (ಅವರ ಮೂಲನಾಮ), ತಮ್ಮ ಹೆಸರಿನಿಂದಲ್ಲ, ತಮ್ಮ ತಂದೆ ದಿ. ಕೆ ಹಿರಣ್ಣಯ್ಯನವರ ಹೆಸರಿನಿಂದ ತಮ್ಮ ಜನಪ್ರಿಯತೆಯನ್ನು ಕಟ್ಟಿಕೊಂಡದ್ದು, ತಂದೆಯವರ ಕೀರ್ತಿಯನ್ನೂ ಮೀರುವಷ್ಟು ಜನಪ್ರಿಯತೆಯನ್ನು ಸ್ವತಃ ಸಂಪಾದಿಸಿಕೊಂಡ ಮೇಲೂ "ಮಾಸ್ಟರ್ ಹಿರಣ್ಣಯ್ಯ"ನವರಾಗಿಯೇ ಉಳಿದದ್ದು ಕುತೂಹಲಕರ.

ಇಂಥದ್ದೊಂದು ಪ್ರತಿಭೆ ಇಂದು ನಮ್ಮೊಡನಿಲ್ಲವೆಂಬುದು ನೋವಿನ ವಿಷಯ, ವೃತ್ತಿರಂಗಭೂಮಿಯಲ್ಲಿ ಅವರು ಖಾಲಿ ಮಾಡಿ ಹೋದ ಜಾಗ ತುಂಬ ದೊಡ್ಡದು, ತುಂಬಲಾರದ್ದು.

ನಮ್ಮೆಲ್ಲರ ಅಚ್ಚುಮೆಚ್ಚಿನ ಕಲ್ಚರ್ಡ್ ಕಮೆಡಿಯನ್ ಗೆ ವಿದಾಯ

🙏🙏🙏

Monday, August 25, 2014

ಹೋಗಿ ಬನ್ನಿ ಅನಂತಮೂರ್ತಿ... ವಿದಾಯ.

ಅನಂತಮೂರ್ತಿ ನಮ್ಮನ್ನಗಲಿದ್ದಾರೆ,  ನಂಬಲಾಗುತ್ತಿಲ್ಲ.  ಹಾಗೆಂದು ಇದು ಅಕಾಲಮೃತ್ಯುವಲ್ಲ, ಎಂಬತ್ತಕ್ಕೂ ಹೆಚ್ಚುಕಾಲ ಪುಷ್ಕಳವಾಗಿ ಬದುಕಿ ಬಹುಶಃ ಸಂತೃಪ್ತಿಯಿಂದ ಸಹಜ ಸಾವಿಗೇ ಸಂದಿದ್ದಾರೆ.  ಆದರೆ ಕೊನೆಯವರೆಗೂ ಸಾಮಾಜಿಕ ಜೀವನದಿಂದ ನಿವೃತ್ತಿಹೊಂದದೆಯೇ ನೆನ್ನೆಮೊನ್ನೆಯವರೆಗೂ ನಮ್ಮ ನಡುವೆಯೇ ಇದ್ದವರು ಇವತ್ತಿನಿಂದ ಇಲ್ಲವೆಂದರೆ ಗಕ್ಕಿಟ್ಟಂತಾಗುವುದು ಸಹಜವೇ, ಸತ್ಯ ಒಳಗಿಳಿಯಲು ತುಸು ಸಮಯ ಬೇಕಾಗುತ್ತದೆ.  ಕೊನೆ ದಿನಗಳಲ್ಲಿ ತೀವ್ರ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾಗಲೂ ಸುತ್ತಮುತ್ತಲ ಆಗುಹೋಗುಗಳಿಗೆ ಸ್ಪಂದನಶೀಲರಾಗಿದ್ದರೆಂಬುದನ್ನು ನೆನೆದಾಗ ಆಶ್ಚರ್ಯವಾಗುತ್ತದೆ; ಅನಗತ್ಯವಾಗಿ ವಿವಾದಗಳು ಮೈಮೇಲೆ ಬೀಳುತ್ತವೆಂಬುದನ್ನು ತಿಳಿದೂ (ಅವರು ನುಡಿದದ್ದೆಲ್ಲಾ ವಿವಾದವಾಗುವುದಕ್ಕೇ ಕಾಯುತ್ತಿರುತ್ತವೆಂಬುದನ್ನು ತಿಳಿದೂ) ತಾವು ನಂಬಿದ್ದನ್ನು ಹೇಳಲು ಹಿಂಜರಿಯುತ್ತಿರಲಿಲ್ಲವೆಂಬುದನ್ನು ನೆನೆದಾಗ ಆ ಮೌಲ್ಯಪ್ರಜ್ಞೆಯ ಬಗ್ಗೆ ಹೆಮ್ಮೆಯೆನಿಸುತ್ತದೆ. 

ಅವರನ್ನಂಟಿಕೊಂಡ ವಿವಾದಗಳೇನೇ ಇರಲಿ, ನಾವು ಕಂಡ ಅತ್ಯಂತ ಸಂವೇದನಶೀಲ ವ್ಯಕ್ತಿ/ಸಾಹಿತಿಗಳಲ್ಲೊಬ್ಬರು ಅನಂತಮೂರ್ತಿ ಎಂಬುದರಲ್ಲಿ ಎರಡು ಮಾತುಗಳಿಲ್ಲ.  ಮಾಸ್ತಿಯವರನಂತರ ಅನಂತಮೂರ್ತಿ ಕನ್ನಡ ಕತೆಗಳ ಪ್ರಪಂಚದಲ್ಲಿ ಕಡೆಗಣಿಸಲಾಗದ ಹೆಸರು.  ಅವರ ಕತೆಗಳು ಹೊಸ ಕತೆಗಾರರಿಗೆ ಹಿರಿಯಣ್ಣನ ಮೇಲ್ಪಂಕ್ತಿಯಂತೆ ಕಂಡರೆ, ಸೂಕ್ಷ್ಮ ಓದುಗನನ್ನು ಹಲವು ಬಗೆಗಳಲ್ಲಿ ಆವರಿಸುತ್ತವೆ.  ಅವುಗಳಲ್ಲಿ ನನಗೆ ಬಹು ಇಷ್ಟವಾಗುವ ಅಂಶಗಳೆಂದರೆ, ಪಾತ್ರಗಳ ಒಳತೋಟಿ - ಸನ್ನಿವೇಶಕ್ಕೆ ಸಹಜವಾಗಿ ಅವು ಮೂಡುವ ಪರಿ, ತತ್ತ್ವ, ತರ್ಕ, ಕಲಾತ್ಮಕತೆಗಳ ಆಡಂಬರವಿಲ್ಲದೆಯೂ ಕಲಾತ್ಮಕವಾಗಿ ಅವು ಚಿತ್ರಿತವಾಗುವ, ಕ್ರಿಯೆ ಪಡೆದುಕೊಳ್ಳುವ ರೀತಿ.  ತಾವು ಹುಟ್ಟಿ ಬೆಳೆದ ಬ್ರಾಹ್ಮಣ ಸಮುದಾಯ, ಅದರ ನಿಂತ ನೀರಿನಂಥ ವ್ಯವಸ್ಥೆ, ಆಚರಣೆಗಳು, ಬಿಡಿಸಲಾಗದಂತೆ ಬೆಸೆದ ಒಳಿತು-ಕೆಡಕುಗಳು ಮತ್ತು ಅದೇ ಪರಿಸರದಲ್ಲಿ ಮತ್ತದರ ಹೊರಗೆ ಎದುರಾಗುವ ಸಂಕೀರ್ಣ ಸಂದರ್ಭಗಳು ಬಹುಶಃ ಅವರಲ್ಲಿ ಹಲವು ದ್ವಂದ್ವಗಳನ್ನು ಸೃಷ್ಟಿಸಿದಂತೆನಿಸುತ್ತದೆ.  ಅದಕ್ಕೆಂದೇ ಅನಂತಮೂರ್ತಿಯವರಲ್ಲಿ ಹೊತ್ತಿ ಉರಿಯುವ ಬಂಡಾಯಗಾರನನ್ನು ಕಾಣೆವು, ಅಥವ ಕೊನೆಯಲ್ಲಿ ಅಪ್ಪ ಹಾಕಿದ ಆಲದ ಮರಕ್ಕೇ ಜೋತುಬೀಳುವ ಸಂಪ್ರದಾಯಶರಣನನ್ನೂ.  ಈ ಬಂಡಾಯಗಾರ ತಣ್ಣಗೆ ಉರಿಯುವಂಥವನು; ಭಾಷಣ ಮಾಡುವವನಲ್ಲ, ಪ್ರತಿಭಟನೆಯನ್ನು ತಣ್ಣನೆಯ ಕ್ರಿಯೆಯಿಂದಲೇ ದಾಖಲಿಸುವವನು, ಸುಡುತ್ತಲೇ ಶಾಖದೊಳಗಣ ತಂಪಿಗಾಗಿ ಹಂಬಲಿಸುವಂಥವನು, ತಂಪಿನೊಳಗಣ ಬಿಸುಪನ್ನು ಕಂಡು ಬೆಚ್ಚುವವನು.  ತಮ್ಮಲ್ಲೇ ಬೆಳೆದ ಈ ದ್ವಂದ್ವಗಳನ್ನು ಕತೆಯ ಹಲವು ಪಾತ್ರಗಳಾಗಿ ಹಂಚಿ ರೂಪಿಸುವ ಅನಂತಮೂರ್ತಿಯವರ ರೀತಿ ಬಲು ಸೊಗಸು.  ಆ ಪಾತ್ರಗಳು ತಮ್ಮ ನಡುವೆ ನಡೆಸುವ ಸಂವಾದ ವಿವಾದ ಕ್ರಿಯೆ ಪ್ರತಿಕ್ರಿಯೆಗಳು ಒಟ್ಟಂದದಲ್ಲಿ ಒಂದೇ ವ್ಯಕ್ತಿಯ ಒಳತೋಟಿಯಂತೆ ಕಾಣುವುದು,  ಇದೇ ಕಾರಣಕ್ಕಿರಬೇಕು.  ಇದೇ ದ್ವಂದ್ವಗಳು ಅನಂತಮೂರ್ತಿಯವರನ್ನು ಅವರ ನಿಜಜೀವನದಲ್ಲೂ ನೆರಳಂತೆ ಹಿಂಬಾಲಿಸಿರುವುದನ್ನು ಕಾಣುತ್ತೇವೆ.  ಸಂವೇದನೆಗಳು ಹೆಚ್ಚು ಸೂಕ್ಷ್ಮಗೊಂಡಂತೆ ದ್ವಂದ್ವಗಳೂ ಹೆಚ್ಚುವುದು ಸಹಜವೇನೋ. 

ನನ್ನ ಚಿಂತನೆಯ, ಯೌವನದ ದಿನಗಳನ್ನು ರೂಪಿಸಿದ ಹಿರಿಮೆ ಅನಂತಮೂರ್ತಿ, ತೇಜಸ್ವಿ, ಲಂಕೇಶರದು.  ಆದ್ದರಿಂದಲೇ ನನಗವರು ಹೊಸ ಬದುಕಿನ, ಹೊಸ ಚಿಂತನೆಗಳ, ಸ್ವತಂತ್ರಶೀಲತೆಯ ಪ್ರತೀಕ.  ಅವರನ್ನು ಅವರ ಬದುಕಿನ ಉಚ್ಛ್ರಾಯದ ದಿನಗಳಲ್ಲಿ ಕಂಡು ಓದಿ ಬೆಳೆದ ನನಗೆ "ಹಿರಿಯರು" "ಅಗಲಿದ ವೃದ್ಧರು" ಎಂದೆಲ್ಲಾ ಹೇಳಲು ಮನಸ್ಸು ತಡೆಯುತ್ತದೆ.  ಬದುಕನ್ನು ತಮ್ಮಾಣತಿಯಂತೆಯೇ ಕುಣಿಕುಣಿದು ಬದುಕಿ, ಬದುಕಿನ ಕೊನೆ ಹನಿಯನ್ನೂ ಸವಿದು ತೀರಿದವರಿಗೆ "ಅಂತಿಮ ನಮನ"ಕ್ಕಿಂತ "ಪ್ರೀತಿಯ ವಿದಾಯ" ಎನ್ನುವುದು ಹೆಚ್ಚು ಆಪ್ಯಾಯಮಾನ.  ಈ ಮೂವರಲ್ಲಿ ಕೊನೆಯವರಾಗಿ ಅನಂತಮೂರ್ತಿ ಈಗ ನಮ್ಮನ್ನು ಅಗಲಿದ್ದಾರೆ - ಮಿಶ್ರ ಸಂವೇದನೆಗಳೊಂದಿಗೆ ನಮ್ಮನ್ನು ಬಿಟ್ಟು.  ಅನಂತಮೂರ್ತಿಯವರನ್ನು ಹತ್ತಿರದಿಂದ ಕಂಡು ಒಡನಾಡಿದವರು, ಅವರಲ್ಲಿ ಪಾಠ ಕೇಳಿದವರು, ಕೇಳದಿದ್ದರೂ ಪ್ರೀತಿಯ ಅನಂತು ಮೇಷ್ಟ್ರಾಗಿ ಸ್ವೀಕರಿಸಿದ ಅನೇಕ ಏಕಲವ್ಯ ಶಿಷ್ಯರು ಅವರಬಗ್ಗೆ ಭಾವುಕತೆಯಿಂದ, ಗದ್ಗದಿತರಾಗಿ ಮಾತಾಡುತ್ತಾರೆ.  ಇವೆಲ್ಲ ’ಪ್ರಗತಿಪರ’ ’ಬುದ್ಧಿಜೀವಿ’ ಮನಸ್ಸುಗಳು ಎಂದು ಸಾರಾಸಗಟಾಗಿ ತಳ್ಳಿಹಾಕಿಬಿಡುವ ಒರಟು ಅಭ್ಯಾಸವೂ ಇತ್ತೀಚಿಗೆ ಬಂದುಬಿಟ್ಟಿದೆ.  ಆದರೆ ಈ ಪ್ರೀತಿ, ಅಸ್ಮಿತೆಗಳು ವ್ಯಕ್ತಿಯೊಬ್ಬನ ಕೇವಲ ಚಾಣಾಕ್ಷತೆಯಿಂದ, ರಾಜಕೀಯ/ಸಾಮಾಜಿಕ ’ಪ್ರಗತಿಪರತೆ’ಯಿಂದ, ಯಾವುದೋ ಸಿದ್ಧಾಂತದ ಮೇಲ್ಮೆಯಿಂದ, ಮೇಸ್ಟ್ರುಗಿರಿಯಿಂದ, ಲಾಬಿಯಿಂದ ಅಥವಾ ಸಾಹಿತ್ಯದ ಜನಪ್ರಿಯತೆಯಿಂದ ಬರುವುದಲ್ಲವೆಂಬುದನ್ನು ನೆನಪಿನಲ್ಲಿಡಬೇಕು.  ಭಾಷಣಗಳಲ್ಲಿ ಚಪ್ಪಾಳೆಯಿಕ್ಕುವುದು ಬೇರೆ, ಪ್ರೀತಿಯಿಂದ ನೆನೆಯುವುದು ಬೇರೆ.  ಗತಿಸಿದ ಮೇಷ್ಟ್ರ ಬಗೆಗಿನ ಸಾವಿರ ಬೆಚ್ಚನೆ ನೆನಪುಗಳಿವೆ ಅವರ ಮೆಚ್ಚುಗರಲ್ಲಿ.  ಹಾಗೇ ಅವರ ನಿಷ್ಠುರ ನಿಲುವಿನಿಂದಾಗಿ ಅವರನ್ನ ಕಾಯಾ ವಾಚಾ ಮನಸಾ ದ್ವೇಷಿಸುತ್ತಿದ್ದ, ಅವರ ಸಾವನ್ನೂ ಸಂಭ್ರಮಿಸುವ ಸಮೂಹವೂ ಇದೆ.  ಇದಂತೂ ಒಂದು ರೋಗಗ್ರಸ್ತ ಮನಸ್ಥಿತಿಯೆಂಬುದರಲ್ಲಿ ಎರಡು ಮಾತಿಲ್ಲ.  ಎಷ್ಟೊ ಸಮಯ ಅಗತ್ಯವೇ ಇಲ್ಲದೆಡೆಯಲ್ಲೂ ಅವರ ಹೆಸರು ಎಳೆಯಲ್ಪಡುತ್ತಿತ್ತು, ಯಾರನ್ನಾದರೂ ಹೊಗಳಬೇಕಿದ್ದರೂ ತೆಗಳಿಕೆಗೆ ಅನಂತಮೂರ್ತಿಯೇ ಬೇಕು ಎಂಬಂಥ ಪರಿಸ್ಥಿತಿಯೂ ಏರ್ಪಟ್ಟಿತ್ತು.  ಅಷ್ಟಾದರೂ ಎಲ್ಲೋ ಒಂದುಕಡೆ ಈ ಅಸಹನೆಗೆ ರವೆಯಷ್ಟಾದರೂ ತಥ್ಯ ಕಾರಣವಿಲ್ಲದಿಲ್ಲ.  ಹಲವು ವಿಷಯಗಳಲ್ಲಿ ನಿಷ್ಠುರ ನಿಲುವು ತಾಳುತ್ತಿದ್ದ ಅನಂತಮೂರ್ತಿ, ಮತ್ತೆ ಕೆಲವು ವಿಷಯಗಳು ಕಂಡೂ ಕಾಣದಂತೆ ಇರುತ್ತಿದ್ದರೆಂಬುದು ಅಸಹನೀಯವಾಗುತ್ತಿತ್ತು.  ಅವರ ’ಸಮಾಜಪರ’ ’ಸಾಮಾಜಿಕನ್ಯಾಯುತ’ ನಿಲುವುಗಳು ಹಲವು ಬಾರಿ ಅಷ್ಟೇನು ಸಾಮಾಜಿಕ ನ್ಯಾಯದ್ದಾಗಿ ಕಾಣುತ್ತಲೇ ಇರಲಿಲ್ಲ.  ಅನೇಕವೇಳೆ ಅವರ ನಿಲುವುಗಳಲ್ಲಿ ಕಣ್ಣಿಗೇ ಹೊಡೆಯುವ ವಿರೋಧಾಭಾಸಗಳು ಇರುತ್ತಿದ್ದುವು.  ಈ ಸಮಯದಲ್ಲೆಲ್ಲಾ ಅವರ ಚಿನ್ಮೌನ ಕೂಡ ಹೊತ್ತಿ ಉರಿಯುತ್ತಿದ್ದ ಅಸಹನೆಗೆ ತುಪ್ಪ ಹೊಯ್ಯುತ್ತಿತ್ತು.  ಅನಂತಮೂರ್ತಿ-ಗಾಂಧಿ-ಕಸಬರನ್ನು ಒಟ್ಟಿಗೇ ದ್ವೇಷಿಸುವ ಜನವಿರುವಂತೆಯೇ ಈ ಮೂವರನ್ನೂ ಒಟ್ಟಿಗೇ ಪ್ರೀತಿಸುವ ಜನರೂ ಇರುವುದು, ಆ ಕಳವಳಕಾರೀ ಸಾಮಾಜಿಕ ಬೆಳವಣಿಗೆ, ಅನಂತಮೂರ್ತಿಯವರ ಗಮನಕ್ಕೆ ಬರಲೇ ಇಲ್ಲ.  ಕಸಬನಂಥವರ ಮೇಲಿನ ದ್ವೇಷ ಅನಂತಮೂರ್ತಿಯಂಥವರ ಮೇಲಿನ ಅಸಹನೆಯಾಗಿ ಪರಿಣಮಿಸುತ್ತಿದ್ದುದನ್ನೂ, ಅನಂತಮೂರ್ತಿಯವರ ಮೇಲಿನ ಪ್ರೀತಿ ಕಸಬನಂಥವರ ಮೇಲಿನ ಪ್ರೀತಿಯಾಗಿ ಚಲಾವಣೆಗೊಳ್ಳುತ್ತಿದ್ದುದನ್ನೂ ಅವರು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ.  ಹೀಗಾಗಿ ಯಾವುದೋ ಮಟ್ಟದಲ್ಲಿ ಅನಂತಮೂರ್ತಿ ಅವರದಲ್ಲದ ದ್ವೇಷಕ್ಕೆ ಅವರದಲ್ಲದ ಪ್ರೀತಿಗೆ ಪಕ್ಕಾಗುತ್ತಾ ಹೋದರು.  ಅಥವ ಇದು ಅನಂತಮೂರ್ತಿಯವರ ವೈಯಕ್ತಿಕ ನಿಲುವೆನ್ನುವುದಕ್ಕಿಂತ ಅವರು ಗುರುತಿಸಿಕೊಂಡ, ಈಗಾಗಲೇ ಒಂದು ಕಟ್ಟರ್ ’ಪಂಥ’ವೇ ಆಗಿ ಬೆಳೆದ ರಾಜಕೀಯ ಸಿದ್ಧಾಂತದ ಅನಿವಾರ್ಯ dynamics ಕೂಡ ಇರಬಹುದೆಂದು ನಾನು ಚಿಂತಿಸುತ್ತೇನೆ.  ಆ ದೃಷ್ಟಿಯಿಂದ ಉಳಿದ ಹಲವು ಪ್ರಗತಿಪರರಂತೆಯೇ ಅನಂತಮೂರ್ತಿಯವರೂ ತಾವೇ ನೀರೆರೆದು ಬೆಳೆಸಿದ ಪಂಥವನ್ನು ಪ್ರಶ್ನಿಸಿಕೊಳ್ಳುವ critical insider ಕೆಲಸವನ್ನು ನಿಲ್ಲಿಸಿಬಿಟ್ಟಿದ್ದರೋ ಎನ್ನುವ ಅನುಮಾನ ಕಾಡುತ್ತದೆ.  ಬದಲಾದ ಸಾಮಾಜಿಕ ರಾಜಕೀಯ ಸಂದರ್ಭದಲ್ಲಿ ಸಮತೋಲನದ ಗುರುತ್ವಬಿಂದು (center gravity) ಬದಲಾಗಿದ್ದು ಅವರಿಗೆ ತಿಳಿಯಲೇಯಿಲ್ಲವೆನಿಸುತ್ತದೆ.  ಏಕೆಂದರೆ ತಮ್ಮ ಜೀವನವೆಲ್ಲಾ ವ್ಯವಸ್ಥೆಯನ್ನು ಪ್ರಶ್ನಿಸುತ್ತಾ, ಅದನ್ನು ಮೀರುತ್ತಾ ಗಟ್ಟಿಗೊಳ್ಳುತ್ತಾ ಬಂದ ಈ ಸಮಾಜವಾದಿ, ತಾವೇ ಮತ್ತೊಂದು ಬದಲೀ ವ್ಯವಸ್ಥೆಯ ಭಾಗವಾಗತೊಡಗಿದ್ದನ್ನೂ ಮತ್ತು ಆ ವ್ಯವಸ್ಥೆಯೇ ಮತ್ತೊಂದೆಡೆಯಿಂದ ಅದೇ ಹಲವು ಬಗೆಯ ವೈಪರೀತ್ಯಗಳಿಗೆಡೆಗೊಡತೊಡಗಿದ್ದನ್ನು ಗಮನಿಸದೇ ಹೋದರೇ?  ಇಲ್ಲದಿದ್ದರೆ ಅವರು ಎಲ್ಲೋ ಒಂದೆಡೆ ಅದನ್ನೂ ಮೀರಲೆತ್ನಿಸುತ್ತಿರಲಿಲ್ಲವೇ?  ಅಥವ ಅಷ್ಟುಹೊತ್ತಿಗಾಗಲೇ ಅವರ ಸುತ್ತ ರೂಪುಗೊಂಡಿದ್ದ ಆ ಪ್ರಭಾವಳಿ, ಗೌರವ, ಪ್ರೀತಿಗಳು ಅನಂತಮೂರ್ತಿಯವರೊಳಗಿದ್ದ ಬಂಡಾಯಗಾರನನ್ನು ಮೆತ್ತಗಾಗಿಸಿತ್ತೇ?  ಈ ಹಲವು ಪ್ರಶ್ನೆಗಳನ್ನಿಟ್ಟು ಅವರೊಡನೆ ಚರ್ಚಿಸಬೇಕೆಂದು ಎಷ್ಟೋಬಾರಿ ಅಂದುಕೊಂಡಿದ್ದಿದೆ.  ಅದು ಸಾಧ್ಯವಾಗುತ್ತಿದ್ದಿತೋ, ಇಲ್ಲವೋ - ಒಟ್ಟಿನಲ್ಲಿ ಈಗಂತೂ ಅವರಿಲ್ಲ.  ಬಹುಶಃ ಅವರಲ್ಲಿ ಉತ್ತರವಿದ್ದಿರಬಹುದು, ಕೇವಲ ಭರ್ತ್ಸನೆ, ಬೆದರಿಕೆ, ವೈಯಕ್ತಿಕ ನಿಂದನೆಗಳನ್ನು ಬಿಟ್ಟು ನಿಜದ ಪ್ರಶ್ನೆಗಳೇ ಅವರ ವಿರೋಧಿಗಳಿಂದ ಇತ್ತೀಚಿನ ದಿನಗಳಲ್ಲಿ ಅವರಿಗೆದುರಾಗಲಿಲ್ಲವೇನೋ.  ಪ್ರಶ್ನೆಗಳಂತೂ ಇವೆ.  ಉತ್ತರಗಳೂ ಖಂಡಿತ ಇವೆ.  ಆದರೆ ಸಮಾಧಾನದಿಂದ ಕೂತು, ಪರಸ್ಪರ ಅನುಮಾನಗಳಿಲ್ಲದೇ ಚರ್ಚಿಸಿ ’ಅರ್ಥಮಾಡಿಕೊಳ್ಳುವುದು’ ಸಾಧ್ಯವಾದರೆ!  ಅನಂತ ಸರಳತೆ ಸಜ್ಜನಿಕೆ ಸನ್ನಡತೆಗಳ ಮೂರ್ತಿಗೆ ಅದು ನಿಜವಾದ ಶ್ರದ್ಧಾಂಜಲಿಯಾಗಬಹುದು.

ಅನಂತಮೂರ್ತಿಯವರ ಬಗೆಗೆ ನೆನೆಸಿಕೊಳ್ಳಲು ನನಗೆ ವೈಯಕ್ತಿಕ ಆಪ್ತ ಅನುಭವಗಳಿಲ್ಲ.  ಅಥವ ದ್ವೇಷಿಸುವ ಧಾರ್ಮಿಕ/ಸಾಮಾಜಿಕ ಕಾರಣಗಳೂ ಇಲ್ಲ.  ನನ್ನ ನೆಚ್ಚಿನ ಕತೆಗಾರ ಅನಂತಮೂರ್ತಿ ಮಾತ್ರ ಹಿಂದಿನಂತೆಯೇ ಇನ್ನು ಮುಂದೆಯೂ ನನ್ನ ಜೊತೆಯಿರುವರೆಂಬುದಂತೂ ನಿಜ, ನನ್ನ ಪುಸ್ತಕದ ಕಪಾಟಿನಲ್ಲಿ, ನನ್ನ ಓದಿನ ನೆನಪುಗಳಲ್ಲಿ, ಸ್ಫೂರ್ತಿಯಲ್ಲಿ.  ಅದೇಕೋ ಮೊನ್ನೆ ಅನಂತಮೂರ್ತಿಯವರು ಕೊನೆಯ ಕ್ಷಣಗಳನ್ನೆಣಿಸುತ್ತಿದ್ದ ಸುದ್ದಿ ತಿಳಿದಾಗ ನನಗೆ ನೆನಪಾದದ್ದು, ವಿಪರೀತ ಕಾಡತೊಡಗಿದ್ದು ಅವರು ಕುಮಾರಗಂಧರ್ವರ ಬಗ್ಗೆ ಬರೆದ ಒಂದು ಕವನ.  ಮೊದಲೇ ಹೇಳಿದಂತೆ ನಾನು ವೈಯಕ್ತಿಕವಾಗಿ ಅನಂತಮೂರ್ತಿಯವರನ್ನು ಬಲ್ಲವನಲ್ಲ, ಆದರೆ ಅವರು ನನ್ನೊಡನೆ ಅಷ್ಟು ಆಪ್ತವಾಗಿ ಮಾತನಾಡಿದ್ದು ಈ ಕವನದ ಮೂಲಕವೇ, "ಸಂತೆಯಿಂದ ಸುಸ್ತಾಗಿ ಬಂದ ಶೆಟ್ಟಿ"ಯಂಥ ಆ ಗಂಧರ್ವ ಈ ಮೂರ್ತಿಯನ್ನು ಮಾತಾಡಿಸಿದಷ್ಟೇ ಆಪ್ತತೆಯಿಂದ.  ಅವರ ಸಾವಿನ ಸುದ್ದಿ ಬಂದಾಗ, ಅವರ ಈ ಕವನ ಓದಬೇಕೆಂದು ತುಂಬಾ ಅನ್ನಿಸಿತು.  ನನ್ನ ಲೈಬ್ರರಿಗೆ ದೂರವಿದ್ದೆ.  ಗೆಳೆಯ ರಾಜೇಂದ್ರನ ಬಳಿ ಹೇಳಿ ತರಿಸಿಕೊಂಡು ಒಮ್ಮೆ ಏಕಾಂತದಲ್ಲಿ ಕುಳಿತು ಓದಿಕೊಂಡೆ.  ಗಂಧರ್ವನ ಜಾಡು ಹಿಡಿದು ಹೊರಟ ಅನಂತಮೂರ್ತಿ ಮುಗುಳ್ನಕ್ಕು ಕೈಬೀಸಿದರು.

ಈ ಕವನದ ಧ್ವನಿಮುದ್ರಿಕೆಯನ್ನು ಇಲ್ಲಿ ಕೇಳಬಹುದು:
http://youtu.be/hPrOY1EC7oI

Sunday, August 8, 2010

ಕಿ ರಂ ನಾಗರಾಜ್ ಇನ್ನಿಲ್ಲ !


ದಿಗ್ಭ್ರಮೆಯಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ನೆನ್ನೆ ಸಂಜೆಯಷ್ಟೇ ಗೆಳೆಯ ಶ್ರೀಕಾಂತರೊಡನೆ ಮಾತಾಡುತ್ತಾ ಮಾತು ಕಿ ರಂ ಬಗ್ಗೆ ತಿರುಗಿತ್ತು. ಶ್ರೀಕಾಂತ್ ಆಗಷ್ಟೇ ಸುಚಿತ್ರಾ ಚಲನಚಿತ್ರ ಸೊಸೈಟಿಯ ಆವರಣದಲ್ಲಿ ನಡೆದ "ಮತ್ತೆ ಬಂತು ಶ್ರಾವಣ" ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದಾರೆ. ಕಾರ್ಯಕ್ರಮ ಸುಮಾರು ೭.೩೦ ಕ್ಕೆ ಮುಗಿದಿದೆ. ಕಾರ್ಯಕ್ರಮ ಮುಗಿದ ನಂತರ ಇನ್ನೊಬ್ಬ ಗೆಳೆಯ ಸತ್ಯ ಅವರಿಗೆ ಕಿ ರಂ ಅವರನ್ನು ಪರಿಚಯಿಸಿದ್ದಾರೆ, ಅವರೊಂದಿಗೆ ಮಾತಾಡಿದ ಶ್ರೀಕಾಂತ್ ಮನೆಗೆ ಬಂದೊಡನೆ gtalkನಲ್ಲಿ ನನ್ನೊಡನೆ ಮಾತಾಡುತ್ತಾ ಕಾರ್ಯಕ್ರಮದ ಬಗ್ಗೆ ಹೇಳಿದ್ದಾರೆ. ಆಗಿನ್ನೂ ರಾತ್ರಿ ೮.೩೦. ಮಾತು ಕಿ ರಂ ಅವರ ಕಾವ್ಯಾಸಕ್ತಿಯ ಬಗ್ಗೆ, ಕನ್ನಡದೆಡೆಗೆ ಅವರ ನಿಲುವಿನ ಬಗ್ಗೆ ಸಾಗಿದೆ, ಹೀಗೇ ಸುಮಾರು ಎರಡು ಗಂಟೆ ಹರಟಿದ್ದೇವೆ. ಅದಾದನಂತರ ಗೆಳೆಯ ಜಯಂತರ ಬ್ಲಾಗನ್ನೋದುತ್ತಾ ಅಲ್ಲಿ ಸಿಕ್ಕಿದ "ಅವಧಿ"ಯ ಲಿಂಕ್ ಹಿಡಿದು ಅಲ್ಲಿಗೆ ಹೋದರೆ ಕಿ ರಂ - ಲಂಕೇಶರಬಗ್ಗೆ ಒಂದು ಫೋಟೋ ಲೇಖನ. ಮತ್ತೆ ತುಸುಹೊತ್ತಿನ ಬಳಿಕ ಬೇರಾವುದೋ ಕವನದ ಲಿಂಕ್ ಅನುಸರಿಸಿ "ಕೆಂಡಸಂಪಿಗೆ" ಈ-ಪತ್ರಿಕೆಗೆ ಹೋದರೆ ಅಲ್ಲಿ ಕಿ ರಂ ಬಗೆಗೆ ಮತ್ತೊಂದು ಲೇಖನ, ಅಬ್ದುಲ್ ರಶೀದರಿಂದ. ಅದೇಕೋ ಮನಸ್ಸಿನಲ್ಲಿ ಕಿ ರಂ ಏನಾದರೂ ಸತ್ತುಹೋದರೋ ಎಂಬ ಭಾವನೆ ಬಂದು ಹೋಯಿತು. ಎಷ್ಟೆಂದರೆ ಈ ಲೇಖಕ್ಕೆ "ಕಿ ರಂ ಕ್ಷೇಮವಷ್ಟೇ" ಎಂದು ಕಾಮೆಂಟ್ ಹಾಕಹೊರಡುವಷ್ಟು. ಲೇಖನವೂ ಶ್ರದ್ಧಾಂಜಲಿಯಂತೆಯೇ ಇತ್ತು. ಆದರೆ ಅದು ಶ್ರದ್ಧಾಂಜಲಿಯಾಗಿರಲಿಲ್ಲ, ಅದು ಪ್ರಕಟವಾದ ಸಮಯ ಶುಕ್ರವಾರ ಮಧ್ಯರಾತ್ರೆ; ನಾನು ನೋಡುತ್ತಿದ್ದದ್ದು almost ಭಾನುವಾರ ಬೆಳಗಿನ ಜಾವ.

ಆದರೂ ಕಿರಂ ಬಗ್ಗೆ ಇದೇನು ಇಷ್ಟೊಂದು ಇವತ್ತು ಎನಿಸಿ ಕಿ ರಂ ನಾಗರಾಜ್ ಎಂದು ಗೂಗಲಿಸಿದವನಿಗೆ ಭಾರಿ ಶಾಕ್ ಕಾದಿತ್ತು, ಕಿ ರಂ ನಾಗರಾಜ್ ಇನ್ನಿಲ್ಲ! ಅವತ್ತು update ಆದ ವೆಬ್ ಪುಟಗಳ ಸಂಖ್ಯೆ ೪, ಅದರಲ್ಲಿ ಸಾವಿನ ಸುದ್ದಿ ಹೊತ್ತದ್ದು ಒಂದೇ ಪುಟ, ಆಗಷ್ಟೇ ಎರಡು-ಮೂರು ಗಂಟೆಗಳ ಹಿಂದೆ ಪ್ರಕಟವಾದದ್ದು

ಕನ್ನಡದ ಹಿರಿಯ ವಿಮರ್ಶಕ, ಚಿಂತಕ ಕಿ ರಂ ನಾಗರಾಜ್ ಬಗ್ಗೆ, ಅವರ ಕಾವ್ಯಪ್ರೀತಿಯಬಗ್ಗೆ, ಮಾತಿನಲ್ಲೇ ರನ್ನ ಪಂಪ ಬೇಂದ್ರೆಯರನ್ನು ಪುನಃಸೃಷ್ಟಿಸುತ್ತಿದ್ದ ಅವರ ವೈಖರಿಯ ಬಗ್ಗೆ ತನ್ಮಯರಾಗಿ ನೆನೆಸುವ, ಹೇಳುವ ಬರೆಯುವ ಅವರ ಸಾವಿರಾರು ಶಿಷ್ಯರಿದ್ದಾರೆ. ಕಿ ರಂ ಕಾವ್ಯದ ಬಗ್ಗೆ ಮಾತಾಡಿದರೆ ಅದೊಂದು ಬೇರೆಯೇ ಲೋಕವಿದ್ದಂತೆ ಎನ್ನುವ ಗೆಳೆಯ ಸತ್ಯರಿಗಂತೂ ಕಿ ರಂ ಅಂದರೆ ದೇವರೇ ಸರಿ. ಅವರನ್ನು ಪರಿಚಯಿಸಿಕೊಡುವಂತೆ ಸತ್ಯರಿಗೆ ಅನೇಕಬಾರಿ ದುಂಬಾಲು ಬಿದ್ದಿದ್ದೇನೆ. ಆದರೂ ನನ್ನದೇ ಸೋಮಾರಿತನವೋ ಅದೇನೋ, ಅದೇಕೋ ಆಗಿಬರಲಿಲ್ಲ. ಕಿ ರಂ ಬಾಯಲ್ಲಿ ಕಾವ್ಯ ಕೇಳುವ ಪುಣ್ಯ ಕೊನೆಗೂ ಒದಗಲಿಲ್ಲ, ಇನ್ನು ಒದಗುವುದೂ ಇಲ್ಲ. ಜೀವನದಲ್ಲಿ ಹೀಗೇ ಅನೇಕ ಬಸ್ಸುಗಳನ್ನು ಮಿಸ್ ಮಾಡಿಕೊಂಡಿದ್ದೇನೆ.

ಎರಡೋ ಮೂರೋ ವರ್ಷಗಳ ಹಿಂದೆ ಬಿ ಪಿ ವಾಡಿಯ ರಸ್ತೆಯಲ್ಲಿ ಬ್ಲಾಗ್ ಬರಹಗಾರರ ಪುಟ್ಟದೊಂದು ಸಮಾವೇಶ ಜರುಗಿತು. ಆಗ ಅಲ್ಲಿಗೆ ಬಂದ ಕಿ ರಂ ತಮ್ಮ ಚಿಕ್ಕ ಭಾಷಣದಲ್ಲಿ ಕನ್ನಡ ಲಿಪಿ ಸುಧಾರಣೆಯ ಬಗ್ಗೆ ಮಾತಾಡಿದರು. ಆ ಬಗ್ಗೆ ಅವರ ನಿಲುವುಗಳು ನನಗೆ ಸರಿಬೀಳಲಿಲ್ಲ, ಜೊತೆಗೆ ತುಸು ಆಶ್ಚರ್ಯವನ್ನೂ ತಂದಿತು. ಪ್ರಶ್ನೆಗಳನ್ನು ರೂಪಿಸಿಕೊಂಡು ಎದ್ದು ನಿಂತು ಪ್ರಸ್ತುತಪಡಿಸುವಷ್ಟರಲ್ಲಿ ಮಾತು ಮುಗಿಸಿದ ಕಿ ರಂ ಕೂಡಲೇ ಹೊರಟುಬಿಟ್ಟಿದ್ದರು.

ಈ ಬಗ್ಗೆ ಈಗ ೫-೬ ಗಂಟೆಗಳ ಹಿಂದಷ್ಟೇ ಶ್ರೀಕಾಂತರೊಡನೆ ಮಾತಾಡುತ್ತಾ ನಗೆಯಾಡಿದ್ದೆ. ಕಿ ರಂ ಎದುರು ಎಂದಾದರೂ ಈ ಪ್ರಶ್ನೆಗಳನ್ನು ಎತ್ತಬೇಕೆಂದಿದ್ದೆ. ಇವತ್ತು ಕಿ ರಂ ಈ ಲೋಕವನ್ನೇ ಬಿಟ್ಟು ಹೊರಟುಬಿಟ್ಟಿದ್ದಾರೆ, ನನ್ನ ಪ್ರಶ್ನೆಗಳು ಹಾಗೆಯೇ ಉಳಿದಿವೆ.

Saturday, December 13, 2008

ವಿದ್ಯಾ ಪ್ರಸನ್ನ ತೀರ್ಥರು

ಲೌಕಿಕ-ವೈದಿಕ ವಿದ್ಯೆಗಳೆರಡರಲ್ಲೂ ಅಪಾರ ಜ್ಞಾನ, ಕವಿ ಹೃದಯ, ವ್ಯವಹಾರ ಚತುರತೆ, ಆಡಳಿತದಲ್ಲಿ ದಕ್ಷತೆ, ಇದೆಲ್ಲವನ್ನೂ ಮೀರಿದ ವಿರಕ್ತಿ-ಸನ್ಯಾಸ ಇವಿಷ್ಟೂ ಒಬ್ಬನೇ ವ್ಯಕ್ತಿಯಲ್ಲಿ ಮೇಳೈಸಿರುವುದು ಬಹು ವಿರಳ. ಅಂಥಾ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರು ಶ್ರೀ ವಿದ್ಯಾ ಪ್ರಸನ್ನ ತೀರ್ಥರು.

.
ಜನನ ೧೮೯೯, ತೆಕ್ಕಲೂರಿನಲ್ಲಿ. ತಂದೆ, ಆ ಕಾಲಕ್ಕೆ ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ತೆಕ್ಕಲೂರು ಅಹೋಬಲಾಚಾರ್ಯರು (ಇವರೇ ಮುಂದೆ ಶ್ರೀ ವ್ಯಾಸರಾಜ ವಿದ್ಯಾ ಸಿಂಹಾಸನದಲ್ಲಿ ೩೫ನೇ ಯತಿಗಳಾಗಿ ವಿರಾಜಿಸಿದ ಶ್ರೀ ವಿದ್ಯಾ ರತ್ನಾಕರ ತೀರ್ಥರು); ತಾಯಿ, ಇದೇ ಸಂಸ್ಥಾನದಲ್ಲಿ ೩೧ನೇ ಯತಿಗಳಾಗಿದ್ದ ಶ್ರೀ ವಿದ್ಯಾ ಶ್ರೀಸಿಂಧು ತೀರ್ಥರ ಪೂರ್ವಾಶ್ರಮದ ಪುತ್ರಿ ಸತ್ಯಭಾಮಮ್ಮನವರು. ಹೀಗೆ ಶ್ರೀಮಠದ ನಿಕಟ ಸಂಪರ್ಕ, ಪಾಂಡಿತ್ಯದ ದಟ್ಟ ವಾತಾವರಣ ಇವುಗಳು ಬಾಲಕ ವೆಂಕಟ ನರಸಿಂಹನಿಗೆ ಬಾಲ್ಯದಲ್ಲೇ ಪಾಂಡಿತ್ಯದ ಉತ್ತಮ ಬುನಾದಿಯನ್ನು ಹಾಕಿ ಕೊಟ್ಟಿದ್ದುವೆನ್ನುವುದರಲ್ಲಿ ಸಂಶಯವಿಲ್ಲ. ಸ್ವತಃ ಪ್ರಕಾಂಡ ಪಂಡಿತರಾದ ಅಹೋಬಲಾಚಾರ್ಯರು ಮಗನ ವಿದ್ಯಾಭ್ಯಾಸದ ಹೊಣೆಯನ್ನು ಸ್ವತಃ ವಹಿಸಿದರು. ಮುಂದೆ ಅವರು ಸನ್ಯಾಸ ಸ್ವೀಕರಿಸಿದ ಮೇಲೂ ಹುಡುಗನ ವಿದ್ಯಾಭ್ಯಾಸಕ್ಕಾಗಿ ಉತ್ತಮ ಪಂಡಿತರನ್ನು ನಿಯಮಿಸಿ ಅದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು.

.
ಆದರೆ ಆ ಕಾಲಕ್ಕಾಗಲೇ ಬ್ರಾಹ್ಮಣ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತ್ತು. ಸಾಂಪ್ರದಾಯಿಕ ವಿದ್ಯಾಭ್ಯಾಸ ಕ್ರಮಕ್ಕೆ ಶರಣು ಹೊಡೆದು, ಲಾಭ ತರುವ ಪಾಶ್ಚಾತ್ಯ ವಿದ್ಯಾಭ್ಯಾಸದೆಡೆಗೆ ಅನೇಕ ಪ್ರತಿಭಾವಂತ ತರುಣರು ಆಕರ್ಷಿತರಾಗುತ್ತಿದ್ದರು. ಈ ಆಕರ್ಷಣೆಗೆ ಬಾಲಕ ವೆಂಕಟ ನರಸಿಂಹನೇನೂ ಹೊರತಾಗಿರಲಿಲ್ಲ. ತಾಯಿಯ ಅಪೇಕ್ಷೆ/ಒತ್ತಾಸೆಯ ಮೇರೆಗೆ ಪರಿಚಿತರು/ಸಂಬಂಧಿಕರ ನೆರವಿನಿಂದ ಲೋವರ್ ಸೆಕೆಂಡರಿ ಪರೀಕ್ಷೆಗೆ ಕುಳಿತ ಹುಡುಗ ಸುಲಭವಾಗಿ ತೇರ್ಗಡೆ ಹೊಂದಿದ. ಹಾಗೆಯೇ ವಿದ್ಯಾಭ್ಯಾಸವನ್ನು ಮುಂದುವರೆಸಿ ಬಿ.ಎ., ಬಿ.ಎಲ್ ಪದವಿಗಳನ್ನು ಗಳಿಸಿದ ವೆಂಕಟ ನರಸಿಂಹಾಚಾರ್ಯರು ೧೯೨೫ರಲ್ಲಿ ಮೈಸೂರಿನಲ್ಲಿ ಸ್ವತಂತ್ರವಾಗಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಮುಂದೆ ಮೂವತ್ತಾರನೆಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸುವವರೆಗೂ ಇದೇ ವೃತ್ತಿಯಲ್ಲಿದ್ದು, ಅಂದಿನ ತರುಣ ವಕೀಲರ ಪಂಕ್ತಿಯಲ್ಲಿ ಅಗ್ರಗಣ್ಯರೆನಿಸಿದ್ದರು.
.
ಈ ಅವಧಿಯಲ್ಲಿ ಕಾವೇರಿ-ಕಪಿಲೆಯಲ್ಲಿ ಸಾಕಷ್ಟು ನೀರು ಹರಿದಿತ್ತು. ಆಚಾರ್ಯರು ನಾಲ್ಕರ ಕೂಸಾಗಿದ್ದಾಗಲೇ ಸನ್ಯಾಸ ಸ್ವೀಕರಿಸಿದ್ದ ಅಹೋಬಲಾಚಾರ್ಯರು ಶ್ರೀ ವಿದ್ಯಾ ರತ್ನಾಕರ ತೀರ್ಥರಾಗಿ ಹನ್ನೆರಡು ವರ್ಷ ವಿದ್ಯಾ ಸಾಮ್ರಾಜ್ಯವನ್ನಾಳಿ ಕೀರ್ತಿಶೇಷರಾಗಿದ್ದರು. ಅವರ ಉತ್ತರಾಧಿಕಾರಿಯಾಗಿ ಶ್ರೀ ವಿದ್ಯಾ ವಾರಿಧಿ ತೀರ್ಥರು ಅಧಿಕಾರ ವಹಿಸಿಕೊಂಡಿದ್ದರು. ಮುಂದೆ ೧೯೩೫ ರಲ್ಲಿ ಶ್ರೀ ವಿದ್ಯಾ ವಾರಿಧಿ ತೀರ್ಥರು ಅನಾರೋಗ್ಯಪೀಡಿತರಾಗಿ ಶ್ರೀಮಠದ ಉತ್ತರಾಧಿಕಾರವನ್ನು ವಹಿಸಲು ಆಚಾರ್ಯರಿಗೆ ಕರೆ ಹೋದಾಗ, ಅವರ ವಕೀಲಿ ವೃತ್ತಿ ಬಿಡುವಿಲ್ಲದಷ್ಟು-ಬಿಡಬಾರದಷ್ಟು ಉನ್ನತ ಸ್ಥಿತಿಯಲ್ಲಿತ್ತು. ಮುಂದೊಂದು ದಿನ ಈ ಕರೆ ಬರುತ್ತದೆಯೆಂದು ಆಚಾರ್ಯರಿಗೆ ತಿಳಿದೇ ಇದ್ದರೂ, ಅದು ಅಷ್ಟು ಬೇಗ ಬರುತ್ತದೆಯೆಂದು ತಿಳಿದಿರಲಿಲ್ಲ. ಮಠದ ವಕೀಲಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದದ್ದು ಬಿಟ್ಟರೆ, ಆಚಾರ್ಯರ ಮಠ ಸಂಪರ್ಕ/ಅವಲಂಬನೆ ಕೇವಲ ಧಾರ್ಮಿಕ ಅಗತ್ಯಗಳಿಗಷ್ಟೇ ಸೀಮಿತವಾಗಿತ್ತು. ಲಾಭದಾಯಕವಾದ ವಕೀಲಿಕೆ, ಕೈತುಂಬಾ ಸಂಪಾದನೆ, ಚಿಕ್ಕ ಚೊಕ್ಕ ಸಂಸಾರ, ನೆಮ್ಮದಿಯ ಜೀವನ - ಸನ್ಯಾಸಕ್ಕೆ ಬೇಕಾದ ವಿರಕ್ತಿಯ ಯಾವ ಹೊಳಹೂ ಆಚಾರ್ಯರ ಜೀವನದ ಕ್ಷಿತಿಜದಲ್ಲಿ ಕಾಣುತ್ತಿರಲಿಲ್ಲ. ಹೀಗಾಗಿ ಸನ್ಯಾಸ ಸುಲಭದ ನಿರ್ಧಾರವಾಗಿರಲಿಲ್ಲ.

.
ವಿರಕ್ತಿಯಿಂದ ಸನ್ಯಾಸವೋ ಸನ್ಯಾಸದಿಂದ ವಿರಕ್ತಿಯೋ ಎಂಬ ಒಳತೋಟಿ ಆಚಾರ್ಯರನ್ನು ಬಹಳ ಕಾಡಿತೆನಿಸುತ್ತದೆ. ಕೊನೆಗೂ ಮುಂದೆಂದಾದರೂ ಬರುವುದೇ ಆಗಿದ್ದ ಸನ್ಯಾಸವೆಂಬ "ಜವಾಬ್ದಾರಿ"ಯನ್ನು ಅಂದೇ ಹೊರುವ ನಿರ್ಧಾರಕ್ಕೆ ಬಂದರು ಆಚಾರ್ಯರು.
.
ಹೀಗೆ ಶ್ರೀ ವಿದ್ಯಾ ಪ್ರಸನ್ನ ತೀರ್ಥರೆಂಬ ಹೆಸರಿನಿಂದ ಆಶ್ರಮ ಸ್ವೀಕರಿಸಿದ ಆಚಾರ್ಯರು, ಮುಂದಿನ ಐದು ವರ್ಷ (ಶ್ರೀ ವಿದ್ಯಾ ವಾರಿಧಿ ತೀರ್ಥರು ಬೃಂದಾವನಸ್ಥರಾಗುವವರೆಗೂ) ತಮ್ಮ ಮುಂದಿದ್ದ ಸನ್ಯಾಸ ಜೀವನದ ಹೊಣೆಗಾರಿಕೆಗಳಿಗೆ ತಮ್ಮನ್ನು ಸಿದ್ಧಗೊಳಿಸಿಕೊಳ್ಳಲು ತೊಡಗಿದರು. ಆಸ್ಥಾನದ ಮಹಾ ಮಹಾ ವಿದ್ವಾಂಸರ ನೆರವಿನಿಂದ ಮಧ್ವ ಸಿದ್ಧಾಂತದ ಆಳವಾದ ಅಧ್ಯಯನ ಕೈಗೊಂಡರು. ಅತಿ ಲೌಕಿಕದ ನಡುವಿನಿಂದ ಅಧ್ಯಾತ್ಮದೆಡೆಗೆ ಪಯಣ ಒಂದು ದೊಡ್ಡ ಸವಾಲೇ ಆಗಿತ್ತು. ವಕೀಲಿಯ ಬೆಚ್ಚನೆ ಕರೀ ಕೋಟನ್ನು ಕಿತ್ತೊಗೆದು ತೆಳುವಾದ ಕಾಷಾಯ ಧರಿಸುವುದೇನೂ ಸುಲಭದ ಮಾತಾಗಿರಲಿಲ್ಲ. ಬಿಟ್ಟುಬಂದ ಸಂಸಾರವಿರಲಿ, ಕಟ್ಟಿಕೊಂಡ ಮಠವೂ ಮತ್ತೊಂದು ಮಹಾಸಂಸಾರದಂತೆ ಕಂಡಿರಲು ಸಾಕು. ಅದರ ನೂರೆಂಟು ರೀತಿ-ರಿವಾಜುಗಳು, ಆಡಳಿತದ-ವ್ಯವಹಾರದ ತಲೆನೋವುಗಳು; ಸನ್ಯಾಸವೆಂದರೆ ವೈರಾಗ್ಯಸಾಧನೆಯೆಂದು ನೆಚ್ಚಿ ಬಂದ ಆಚಾರ್ಯರಿಗೆ ಧುತ್ತನೆ ನೂರು ಪ್ರಶ್ನೆಗಳು ಎದುರಾದಂತಿವೆ. ಇಡೀ ವ್ಯವಸ್ಥೆಯಲ್ಲಿ ತನ್ನ ಪಾತ್ರವೇನು? ಜ್ಞಾನಾರ್ಜನೆಯೇ, ಧಾರ್ಮಿಕ ನಾಯಕತ್ವವೇ, ಗುರುತನವೇ, ಮಠದ ಆಡಳಿತವೇ, ಆಸ್ತಿಪಾಲನೆಯೇ, ವಿರಕ್ತಿಯೇ, ಸನ್ಯಾಸವೇ... ಈ ಅವಧಿಯಲ್ಲಿ ತರುಣ ಸನ್ಯಾಸಿ ಅನುಭವಿಸಿದ ಒಳತೋಟಿ ಈ ಕೆಳಕಂಡ ಹಾಡಿನಲ್ಲಿ ಎಷ್ಟು ಶಕ್ತವಾಗಿ ಚಿತ್ರಿತವಾಗಿದೆ ನೋಡಿ:
.
ಬಿಡಿಸೋ ಬಂಧನ ಕೇಶವ ಬಿಗಿಯುತಲಿದೆ
ನಾನು ಬಿಟ್ಟರೂ ಎನ್ನ ಕಂಬಳಿ ಬಿಡದಿದೆ
.
ಎಲ್ಲವ ಬಿಟ್ಟು ನಾ ಬಂದೆನೆಂದರಿತೆನೋ
ಎಲ್ಲವು ಎನ್ನನು ಬಿಡಲಿಲ್ಲವೋ
ಕಲ್ಲು ಎದೆಯ ಪೊತ್ತ ಮಲ್ಲನೆಂದರಿತೆನೋ
ಹುಲ್ಲೆಯ ಮರಿಯಂತೆ ನಡುಗುವಂತಾಯಿತೋ
.
ಮಿಕ್ಕ ವಿಷಯಗಳ ಬೇಡಬೇಡೆನ್ನುತ
ಹೊಕ್ಕರೂ ಮೂಲೆ ಮೂಲೆಗಳನ್ನು
ದಿಕ್ಕುದಿಕ್ಕುಗಳಿಂದ ಸೆಳೆಯುತಲಿರುವುವು
ಅಕ್ಕರೆ ತೊಲಗಿತು ಶುಷ್ಕವಾಯಿತು ಮನವು
.
ಲೋಕರಕ್ಷಕನು ನೀನೆಂಬುದನರಿತರೂ
ವ್ಯಾಕುಲವೇತಕೆ ಪ್ರತಿಕ್ಷಣವೂ
ತಾ ಕಾಣದ ನರ ವರವ ಕೊಡಲುಬಹುದೇ
ಏಕಾಂತಭಕುತ ಪ್ರಸನ್ನನೆ ಕರುಣದಿ
.
ಶ್ರೀ ಪ್ರಸನ್ನ ತೀರ್ಥರು ಕೇವಲ ಕವಿಗಳಷ್ಟೇ ಅಲ್ಲ, ಒಬ್ಬ ಸಮರ್ಥ ಧಾರ್ಮಿಕ ಮುಖಂಡರೂ ಆಗಿದ್ದರು. ಅಖಿಲಭಾರತ ಮಾಧ್ವ ಮಹಾಮಂಡಲಿ ಸ್ಥಾಪಕ ಶಕ್ತಿಗಳಲ್ಲಿ ಪ್ರಮುಖರು. ಮಂಡಲಿಯ ಅಧ್ಯಕ್ಷರಾಗಿ ಅದಕ್ಕೆ ಮಾರ್ಗದರ್ಶನ ನೀಡಿದ್ದಲ್ಲದೇ ಅದರ ಆಶ್ರಯದಲ್ಲಿ ನಡೆದ ಅನೇಕ ಸಮ್ಮೇಳನಗಳಲ್ಲಿ ತಮ್ಮ ವಿಚಾರಪ್ರಚೋದಕವೂ ಸ್ಪೂರ್ತಿದಾಯಕವೂ ಆದ ಭಾಷಣಗಳಿಂದ ಮಾಧ್ವ ಸಮಾಜಕ್ಕೆ ಹೊಸ ಚೈತನ್ಯ ತುಂಬಿದರು.
.
ದಾಸ ಸಾಹಿತ್ಯಕ್ಕೆ ಶ್ರೀಗಳ ಕೊಡುಗೆ ಬಹು ವಿಶಿಷ್ಟವಾದದ್ದು. ಶ್ರೀಪಾದರಾಜ-ವ್ಯಾಸರಾಜ-ವಾದಿರಾಜ-ಪುರಂದರ-ಕನಕರ ದಾಸಪರಂಪರೆಯಲ್ಲೇ ಬಂದರೂ, ಪಾಶ್ಚಾತ್ಯ ಸಾಹಿತ್ಯದ ರಮ್ಯತೆ ಗೇಯತೆಗಳನ್ನೂ ಮೈಗೂಡಿಸಿಕೊಂಡ ಹೊಸತನವೇ ಪ್ರಸನ್ನ ತೀರ್ಥರ ಕೃತಿಗಳ ವೈಶಿಷ್ಟ್ಯ. ಕಲ್ಪನೆಯ ಉತ್ಕೃಷ್ಟತೆ, ಅನುಭಾವ, ವಸ್ತು-ವಿಷಯಗಳ ಹರಹು, ಗೇಯತೆ, ರಮ್ಯತೆಗಳ ಸೊಂಪು ಇವುಗಳನ್ನು ಓದಿ, ಹಾಡಿ, ಕೇಳಿ ಅನುಭವಿಸುವುದೇ ಸೊಗಸು. ಹಾಡುಗಳನ್ನು ರಚಿಸಿ, ತಾವೇ ರಾಗ ಸಂಯೋಜಿಸಿ, ಕಲಿಸಿ ಹಾಡಿಸುತ್ತಿದ್ದರಂತೆ ಶ್ರೀಗಳು. ಕೆಲವೊಂದು ಹಾಡುಗಳನ್ನು ಕೆಲವೊಂದು ಸಂದರ್ಭಗಳಲ್ಲಿ ಶ್ರೀಮಠದ್ದೇ ಆದ ವಿಶಿಷ್ಟ ಮಟ್ಟಿನಲ್ಲಿ ಶಿಷ್ಯ ಸಮುದಾಯ ಹಾಡುತ್ತಿದ್ದ ಸಂಪ್ರದಾಯವಿತ್ತು. ಶ್ರೀ ವಿದ್ಯಾ ಪಯೋನಿಧಿ ತೀರ್ಥರ ಕಾಲದಲ್ಲೂ ಈ ಕ್ರಮ ಚಾಲ್ತಿಯಲ್ಲಿದ್ದುದನ್ನು ನಾನು ಕಂಡಿದ್ದೇನೆ. ಅದು ಈಗಲೂ ಇದೆಯೋ ಇಲ್ಲವೋ ನಾ ಕಾಣೆ. ಇಲ್ಲದಿದ್ದರೆ ಅದು ನಮ್ಮೆಲ್ಲರ ನಷ್ಟ.
ಇತ್ತೀಚಿಗೇನೋ ಅನೇಕ ಪ್ರತಿಭಾವಂತ ಸಂಗೀತಗಾರರು ತಮ್ಮದೇ ರಾಗ-ಶೈಲಿಗಳಲ್ಲಿ ಹಾಡಿ ಜನಪ್ರಿಯಗೊಳಿಸುತ್ತಿದ್ದಾರೆ, ಆದರೆ ಅದೇಕೋ ಅದರಲ್ಲಿ ಆ ಸಾಂಪ್ರದಾಯಿಕ ಶೈಲಿಯ originality ಕಾಣಬರುತ್ತಿಲ್ಲ. ಈ ಹಾಡುಗಳನ್ನು ಮಠದ ಶೈಲಿಯಲ್ಲಿ ಹಾಡಿ-ಕೇಳಿ ಬಲ್ಲವರು ಅದನ್ನು ಧ್ವನಿಮುದ್ರಿಸಿ ಕಳುಹಿಸಿದರೆ, ಅದೆಲ್ಲವನ್ನು ಒಂದೆಡೆ ಸಂಗ್ರಹಿಸಬಹುದು. ಅದೊಂದು ಆಸ್ತಿಯಾಗುತ್ತದೆ ಎಂದು ನನ್ನ ಅನಿಸಿಕೆ.
.
ವಿ.ಸೂ: ಶ್ರೀ ಪ್ರಸನ್ನ ತೀರ್ಥರ ಆರಾಧನೆಯ ಸಂದರ್ಭದಲ್ಲಿ ಸಿದ್ಧಪಡಿಸಿದ ಈ ಲೇಖನಕ್ಕಾಗಿ ಕೆಲ ಮಾಹಿತಿಗಳನ್ನು "ಪ್ರಸನ್ನ ಸಾಹಿತ್ಯ ಸೌರಭ" (ಪ್ರಕಾಶಕರು: ಶ್ರೀ ವಿದ್ಯಾಪ್ರಸನ್ನತೀರ್ಥ ಸ್ಮಾರಕ ಸಮಿತಿ, ಬೆಂಗಳೂರು) ಗ್ರಂಥದಿಂದ ಪಡೆಯಲಾಗಿದೆ, ಧನ್ಯವಾದಗಳೊಂದಿಗೆ.