Tuesday, January 14, 2014

ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದು

ಕುಮಾರವ್ಯಾಸಜಯಂತಿಯಂದು ನನ್ನ ಭಾವಪೋಷಕನಾದ ಕುಮಾರವ್ಯಾಸನಿಗೆ ನಮನ

ನಾರಣನೆ ಕರ್ಣಾಟ ಭಾರತ
ಕಾರಣನೆ ಕೃಷ್ಣಾಮೃತಾರ್ಣವ
ಪೂರಣನೆ ಕವಿತಿಲಕ ಕುವರವ್ಯಾಸ ಮುನಿರಾಯ
ಚಾರುಕವಿತೆಯಿದಲ್ಲವೆನುತಲೆ
ಮೇರೆವರಿಸಿದೆ ಬರಿಯ ತೊಳಸಿಯ
ತೀರುತಕೆ ಕಪ್ಪುರವ ಬೆರೆಸಿದೆ ಕಾವ್ಯಸೌರಭವ

ಕಾಳಗದ ಕಲಿಕರ್ಣ ಭಕುತಿಯ
ಸೂಳರಿತ ಗಾಂಗೇಯ ಘನ ಸುವಿ
ಶಾಲಮತಿ ವಿದುರಾಂಕ ಬೆಂಕಿಯ ಕುವರಿ ಪಾಂಚಾಲಿ
ಕಾಳಮತಿ ದುರ್ಯೋಧನಾಹವ
ಕಾಲ ಭೀಮ ಪರಂತಪರ ಕರು
ಣಾಳು ಕೃಷ್ಣನ ಕಂಡರಿಸಿದೈ ಭಾವಭಿತ್ತಿಯಲಿ

ಅರಗಿನರಮನೆಯೋ ವಿರಾಟನ
ಪುರದೊಳಜ್ಞಾತವೊ ಸುಯೋಧನ
ಹರಣವೋ ಕಲಿ ಕರ್ಣಭೀಷ್ಮರ ಮರಣವೋ ಕೊನೆಗೆ
ದುರುಪದಿಯ ಧನ ಹರಣವೋ ಸಲೆ
ಪರಮಪುರುಷನ ಕರುಣವೋ ಮಿರು
ಮಿರುಗಿತಲ ನಿಜರೂಪಕದ ಭಾಂಡದೊಳು ತೊಳತೊಳಗಿ

ನಾರಣನ ಮೊರೆಯಿಡುವ ಭಕುತನ
ನಾರಣಮು ಕೊಂಕಿಸರು ಗಜಪತಿ
ನಾರಣನ ಪಿತನಜಮಿಳನು ಪ್ರಹ್ಲಾದನೇ ಸಾಕ್ಷಿ
ನಾರಣನೆ ಬಾರಯ್ಯ ದುರುಳರ
ನಾರಣೆವರೆಂದವಳ ಮಾನವ
ನಾರಣಿಯೊಳಡಗಿಸುತ ಕಾಯ್ದರು ಕೃಷ್ಣ ದೊರೆಯಲ್ತೇ?

ನಾರಣನ ಕೈವಲ್ಯಕಾರಣ
ನಾ ರಣದ ಪಂಡಿತರ ಗಂಡನ
ನಾರಣಗಿಸುವರೈ ಮಹಾಭಾರತದ ನಾಯಕನ
ನಾರಣನ ಮಂಗಳದ ನಾಮವ
ನಾರಣಿಸುತಿಹ ನಿಗಮಸಾರವು
ನಾರಣಪ್ಪನ ಕತೆಯ ಕುಸುಮಕೆ ಮಧುವಿನಂತಿಹುದು