Wednesday, November 17, 2010

ಎರಡು ಸಂಸ್ಕೃತ ಶ್ಲೋಕಗಳು

ಕನ್ನಡ ಸಂಸ್ಕೃತ ಛಂದಸ್ಸುಗಳು ನನ್ನನ್ನು ಯಾವಾಗಲೂ ಆಕರ್ಷಿಸಿವೆ. ಹೀಗೇ ಆಗೀಗ ಅವುಗಳಲ್ಲಿ ಸುಮ್ಮನೇ ಕೈಯಾಡಿಸುವುದುಂಟು. ಮೊನ್ನೆ ಮೊನ್ನೆ ಗೆಳೆಯ ಶ್ರೀಕಾಂತರು "ಪ್ರಗತಿ" ಎಂಬ ಪದವಿರುವಂತೆ ಸರಸ್ವತಿ ಮತ್ತು ಗಣಪತಿಯಮೇಲೆ ಒಂದು ಸಂಸ್ಕೃತ ಶ್ಲೋಕವನ್ನು ರಚಿಸುವುದು ಸಾಧ್ಯವೇ ಎಂದು ಕೇಳಿದ್ದರು. ಸಂಸ್ಕೃತ ಯಾವತ್ತೂ ನನ್ನ ಭಾಷೆಯಾಗಿರಲಿಲ್ಲವಾದರೂ ಅದೊಂದು ಸಾಕಷ್ಟೇ ಪರಿಚಿತಭಾಷೆಯೇ ಸರಿ. ನೆರೆಮನೆಯ ಭಾಷೆಯೆಂಬ ಸಲುಗೆಯಿಂದ ಹೊಸೆದದ್ದು ಈ ಶ್ಲೋಕಗಳು

ಸರಸ್ವತೀ:ವಂದೇ ವಾಗೀಶ ವಾಣೀವಿಲಸಿತ ವರ ಚತ್ವಾರಿ ವಾಣೀಂ ಪುರಾಣೀಂ
ವಂದೇಹಂ ಹಂಸಿನೀಂ ತಾಂ ಸದಮಲ ಧವಳಾಂ ಸರ್ವವರ್ಣಾಂ ಸುವಾಣೀಂ
ಯುಕ್ತಿಸ್ಸಂಧಾನವಾದಾದ್ಯಖಿಲ ಪಟುಕಲಾ ಕಾರಿಣೀಂ ಚಾರುವಾಣೀಂ
ಬ್ರಹ್ಮಾಣೀಂ ಬ್ರಾಹ್ಮಣೀಂ ಸತ್ಪ್ರಗತಿವಿಗತಿ ಸಂದಾಯಿನೀಂ ಭಾವಯೇಹಂ - ಸ್ರಗ್ಧರಾವೃತ್ತ

ಗಣಪತಿ:ಗಜವಕ್ತ್ರಂ ಸುಜನಾಳಿವಂದಿತಲಸತ್ಪದ್ಮಾರುಣಶ್ರೀಪದಂ
ದುರಿತಾರಿಷ್ಟಸಮಸ್ತಮಸ್ತಕದಳೀಮತ್ತೇಭವಿಕ್ರೀಡಿತಂ
ಸಕಲಾರಂಭ ಸುಪೂಜಿತಂ ಶುಭಕಲಾ ಸೌಭಾಗ್ಯರತ್ನಾಕರಂ
ಅಖಿಳಾರ್ಥಪ್ರಗತಿಪ್ರದಂ ಶುಭಕರಂ ವಂದೇ ಸದಾ ಶ್ರೀಕರಂ - ಮತ್ತೇಭವಿಕ್ರೀಡಿತವೃತ್ತ

ಇದು ಮತ್ತೇಭವಿಕ್ರೀಡಿತವೃತ್ತದಲ್ಲಿದೆ (ಮತ್ತ + ಇಭ = ಮತ್ತೇಭ, ಮದಿಸಿದ ಆನೆ; ಅರಿಷ್ಟವೆಂಬ ಹೆಬ್ಬಾಳೆಯ ವನಕ್ಕೆ ಹೊಕ್ಕ ಮದಿಸಿದ ಆನೆ ಎಂಬ ಎರಡನೆಯ ಸಾಲು ಇದನ್ನೇ ಸೂಚಿಸುತ್ತದೆ, ಜೊತೆಗೆ ಇದರ ಛಂದಸ್ಸನ್ನೂ)

ವಿ ಆರ್ ಭಟ್ಟರ ಕೋರಿಕೆಯ ಮೇರೆಗೆ ಮತ್ತೊಂದು ತರಲೆ ಪ್ರಯತ್ನ, ಮೇಲಿನ ಗಣಪತಿ ಸ್ತುತಿಯನ್ನು ಶಾರ್ದೂಲವಿಕ್ರೀಡಿತವೃತ್ತದಲ್ಲಿ ಅಂದರೆ ಹೇಗಿರುತ್ತದೆ? ಹೀಗೆ:

ವಿಘ್ನೇಶಂ ಸುರಮೌಳಿಮಂಡಿತಲಸತ್ಪದ್ಮಾರುಣಶ್ರೀಪದಂ
ವಿಘ್ನಾರಿಷ್ಟಸಮಸ್ತಮಸ್ತಕದಳೀವಿಧ್ವಂಸವಿಕ್ರೀಡನಂ
ಸರ್ವಾರಂಭ ಸುಪೂಜಿತಂ ಶುಭಕಲಾ ಸೌಭಾಗ್ಯರತ್ನಾಕರಂ
ಸರ್ವಾರ್ಥಪ್ರಗತಿಪ್ರದಂ ಶುಭಕರಂ ವಂದೇ ಸದಾಶಂಕರಂ

ಮೊದಲಿನ ಶ್ಲೋಕವನ್ನೇ ತುಸು ಮಾರ್ಪಡಿಸಿದ್ದೇನಷ್ಟೇ. ನಿಜಹೇಳಬೇಕೆಂದರೆ, ಇದೇ ನಾನು ಮೊದಲು ರಚಿಸಿದ್ದು. ಆಮೇಲೆ ಕದಳಿಯ ಸಾಲಿನಲ್ಲಿ "ಮತ್ತೇಭವಿಕ್ರೀಡಿತ" ಅನ್ನುವ ಪದ ಉತ್ತಮ ಪ್ರತಿಮೆಯಾಗಬಹುದಲ್ಲವೇ ಅನ್ನಿಸಿತು. ಅದು ಛಂದಸ್ಸನ್ನು ಸೂಚಿಸುವುದು ಕೂಡ. ಅದನ್ನು ಬಳಸುವ ಮನಸ್ಸು ಮಾಡಿದ್ದರಿಂದ ಇಡೀ ಶ್ಲೋಕವನ್ನು ತುಸು ಮಾರ್ಪಡಿಸಿ ಶಾರ್ದೂಲವಿಕ್ರೀಡಿತದಿಂದ ಮತ್ತೇಭವಿಕ್ರೀಡಿತವೃತ್ತವನ್ನಾಗಿ ಮಾರ್ಪಡಿಸಿದೆ

Tuesday, November 2, 2010

ಸ್ತಬ್ಧ ಚಿತ್ರ

ನಿನ್ನ ಕಣ್ಣಿನ ಮಿಂಚಿನಂಚಿನೊಳಗಿಂದೇನೊ
ಹೊಸ ಹೊಳಪು ಹೊಳೆಯುತಿಹುದು;
ಬೀಸುಗತ್ತಿಯು ಕೂಡ ಕೂರಲಗ ಮೊನೆಯಿಂದ
ಹೂಮಿಂಚನೆಸೆಯುತಿಹುದು.

ಇರುಳಿಡೀ ಸೋನೆಯಲಿ ಮಿಂದು ಚಳಿಹಿಡಿದ ಮುಂ-
ಜಾವೀಗ ನಗುತಲಿಹುದು;
ಎಳೆಬಿಸಿಲ ಕಾಯಿಸುತ ಮಿಡಿಯ ನಾಗರವೊಂದು
ಹೆಡೆಬಿಚ್ಚಿ ತೂಗುತಿಹುದು.

ಹೊಡೆಯುವುದೆ, ಬೇಡ ಬಿಡು; ಎಷ್ಟು ಚೆನ್ನಿದೆ ನೋಡು,
ಕಾಣಿಸದು ರೋಷ ಲೇಶ;
ಏಕೆ ಬಂದಿತೊ ಏನೊ ಸರಿದುಹೋಗಲಿ ತಾನೆ
ನಮಗೇಕೆ ನಾಗದೋಷ.

ಹರಿದ ಹಾದಿಯನಳೆದ ಸೌರಮಾನಗಳೆಷ್ಟೊ
ಸಪ್ತಪದಬಂಧದೊಳಗೆ;
ವೈಶಾಖದಿರುಳುಗಳ ಚಂದಿರನು ಕೂಡೆ ಬೆಳ
ದಿಂಗಳೊಂಭತ್ತರೊಳಗೆ.

ಇಬ್ಬರೊಳಗೊಂದಾಗಿ ಕೂಡಿದೆವು ಕಾಡಿದೆವು
ಬೇಡಿದೆವು ದೇವನಲ್ಲಿ;
ಚೆಂಗುಲಾಬಿಯ ಮೇಲೆ ಇಬ್ಬನಿಯು ನಗುತಿತ್ತು
ಕಂಪೊಡನೆ ತಂಪ ಚೆಲ್ಲಿ.

ಇಲ್ಲಿಬಾ, ತುಸುಹೊತ್ತು ಕೂರೋಣ ನಾವಿಲ್ಲಿ
ಹಚ್ಚಿ ಗಲ್ಲಕ್ಕೆ ಗಲ್ಲ;
ಅಮೃತಗಳಿಗೆಯನಿಂತು ಕಳೆಯುವುದು ತರವಲ್ಲ
ನಲ್ಲೆ ನಾ ನಿನ್ನ ನಲ್ಲ