Saturday, November 1, 2008

ಕನ್ನಡ ರಾಜ್ಯೋತ್ಸವ - ಒಂದು ಹರಟೆ

[ನಾಲ್ಕು ವರ್ಷದ ಹಿಂದೆ ಶಾಲೆಯೊಂದರ ರಾಜ್ಯೋತ್ಸವಕ್ಕೋಸ್ಕರ ಬರೆದ ಕಿರು ಏಕಾಂಕ, ಇವತ್ತಿನ ರಾಜ್ಯೋತ್ಸವ ಸಂದರ್ಭದಲ್ಲಿ ಇಲ್ಲಿ ಕೊಡುತ್ತಿದ್ದೇನೆ]

=====================
ಕನ್ನಡ ರಾಜ್ಯೋತ್ಸವ - ಒಂದು ಹರಟೆ
=====================
[ರಾಜ್ಯೋತ್ಸವದ ಗಲಾಟೆ ಎಲ್ಲೆಲ್ಲೂ. ನೇಪಥ್ಯದಲ್ಲಿ ಅಬ್ಬರದ ಸಂಗೀತ, ಆರ್ಕೆಸ್ಟ್ರಾ, ಮೈಕುಗಳ ಗದ್ದಲ. ರಂಗದ ಮೇಲೆ ೪-೫ ಮಂದಿ ಪ್ರವೇಶ]

ವ್ಯಕ್ತಿ ೧:
[ಜುಗುಪ್ಸೆಯಿಂದ] ಅಬ್ಬಬ್ಬಬ್ಬಾ... ಏನಯ್ಯಾ ಇದು ಗಲಾಟೆ! ಬೆಳಗ್ಗಿನಿಂದ ರಾತ್ರೀವರಗೂ ಒಂದೇ ಸಮನೆ ಕುಟ್ಟಿದ್ದೇ ಸೈ. ತಲೆ ಮೇಲೆ ಸುತ್ತಿಗೆ ಬಡಿದ್ಹಾಗೆ!

ವ್ಯಕ್ತಿ ೨:
ರಾಜ್ಯೋತ್ಸವ ಬಂತೂಂತಂದ್ರೆ ಜನಕ್ಕೆ ಶನಿಕಾಟ ಬಂದ ಹಾಗೇ ನೋಡು. ಇಡೀ ತಿಂಗಳು ಇವರ ಗದ್ದಲ ಸಹಿಸೋದೇ ಒಂದು ಯಮ ಸಾಹಸ ಆಗಿಬಿಡ್ತದೆ.

ವ್ಯಕ್ತಿ ೧:
ಇವ್ರು ಇಷ್ಟ್ ಕಡಿದ್ಹಾಕೋ ಸಂಪತ್ತಿಗೆ ನಾವು ಚಂದಾ ಬೇರೆ ಕೊಡಬೇಕು. [ನಾಟಕೀಯವಾಗಿ] ಅದೂ ಚಂದಾ ಕೇಳೊ ಸ್ಟೈಲ್ ನೋಡ್ಬೇಕು ಕಣಯ್ಯ. ಅದು ಅವಂದೇ ದುಡ್ಡು ಅನ್ನೋ ಹಾಗೂ, ಏನೊ... ನಮ್ಮ ಉಪ್ಕಾರಕ್ಕೆ ನಮ್ಹತ್ರ ಬಿಟ್ಟಿದಾನೆ ಅನ್ನೋಹಾಗೂ ಮಾತು...

ವ್ಯಕ್ತಿ ೩:
ಏ, ಅದೇನ್ರಯ್ಯ? ನಿಮಗೆ ಚಂದಾ ಕೊಡೋದಕ್ಕೆ ಇಷ್ಟಇಲ್ದೇ ಇದ್ರೆ, ಬಿಡಿ. ಅವ್ರಷ್ಟಕ್ಕೆ ಅವ್ರು ರಾಜ್ಯೋತ್ಸವ ಆಚರಣೆ ಮಾಡಿದ್ರೆ, ನಿಮ್ದೇನ್ ಹೋಗುತ್ರಯ್ಯಾ?

ವ್ಯಕ್ತಿ ೪:
ಅಲ್ಲಪ್ಪ, ಕನ್ನಡ ನಾಡ್ನಲ್ಲಿ ಹುಟ್ಟಿ, ಕನ್ನಡದ ಅನ್ನಾನೇ ತಿಂದು, ಕನ್ನಡದ ನೀರ್ನೇ ಕುಡಿಯೋ ನಿಮಗೆ, ಒಂಚೂರಾದ್ರೂ ಕನ್ನಡ ಅಭಿಮಾನ ಬೇಡ್ವೇನ್ರಯ್ಯ? ದಿನಾ ಮಾಡ್ತಾರ ರಾಜ್ಯೋತ್ಸವಾನ? ವರ್ಷಕ್ಕೊಂದ್ಸಾರಿನಪ್ಪ... ನೀವೂ ಇದ್ರಲ್ಲಿ ಸಂತೋಷದಿಂದ ಭಾಗವಹಿಸೋದ್ ಬಿಟ್ಟು, ಕನ್ನಡ ರಾಜ್ಯೋತ್ಸವಾನೇ ಶನಿಕಾಟ ಅಂತೀರಲ್ಲ, ನೀವು ನಿಜವಾಗ್ಲೂ ಕನ್ನಡಿಗರೇನಯ್ಯ?

ವ್ಯಕ್ತಿ ೩:
[ಅನುಮೋದಿಸುತ್ತಾ - ವ್ಯಕ್ತಿ ೧ ಮತ್ತು ೨ ಕಡೆ] ಅದೇಯ ಮತ್ತೆ. ರಾಜ್ಯೋತ್ಸವಾನಂತೆ, ಶನಿಕಾಟ ಅಂತೆ... [ಬೆದರಿಸುವಂತೆ] ಯ್ಯೋಯ್... ಹೀಗೆಲ್ಲಾ ನಂಹತ್ರ ಮಾತಾಡಿದ್ರಿ, ಸರಿ ಹೋಯ್ತು. ಹೊರಗೆಲ್ಲಾರೂ ಮಾತಾಡೀರ, ಜೋಕೆ! ಕಳ್ದ್ಹೋಗ್ತೀರ, ಹುಷಾರ್!
[ಅವರವರಲ್ಲೇ ಜೋರಾದ ವಾಗ್ವಾದ ನಡೆಯ ತೊಡಗುತ್ತದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತದೆ. ಕನ್ನಡ ಪ್ರೊಫೆಸರ್ ವೆಂಕಟಗಿರಿ ಪ್ರವೇಶಿಸುತ್ತಾರೆ]

ವೆಂಕಟಗಿರಿ:
[ಜಗಳ ಬಿಡಿಸಲು ಯತ್ನಿಸುತ್ತಾ] ಏಯ್ ಏಯ್ ಏಯ್... ನಿಲ್ಸಿ, ನಿಲ್ಸಿ. ಏನಿದು [ನೋಡಿ ಚಕಿತನಾಗಿ] ಅರೇ! ಏನಿದು, ಪಿ.ಜಿ. ಪೈಲ್ವಾನ್ರು ನಾಕೂ ಜನಾನೂ ಸೇರಿಬಿಟ್ಟಿದಾರೆ! [ಬಿಡಿಸಿ ದೂರ ಮಾಡಿ] ಏನ್ರಯ್ಯಾ ಇದು... ಕಾಯ್ತಾ ಇರ್ತಾರಪ್ಪ ಕೈ ಕೈ ಮಿಲಾಯ್ಸೋದಕ್ಕೆ. ಏನಾಯ್ತ್ರಪ್ಪಾ?

[ನಾಲ್ಕೂ ಜನ ಹಾವಭಾವಗಳೊಂದಿಗೆ, ನಡೆದಿದ್ದನ್ನು ವಿವರಿಸುತ್ತಾರೆ]

[ಕೇಳುತ್ತಿದ್ದು, ಕುಚೇಷ್ಟೆಯಿಂದ ನಗುತ್ತಾ] ಓಹೋಹೋ... ನೀವೆಲ್ಲಾ "ಕನ್ನಡ ಹೋರಾಟ" ಮಾಡ್ತಾ ಇದೀರ ಅಂತಾಯ್ತು!

ವ್ಯಕ್ತಿ ೩:
[ನಸುಕೋಪದಿಂದ] ಅಯ್... ಏನ್ಸಾರ್, ನೀವೂ ಇವ್ರ ಥರಾನೇ...

ವೆಂಕಟಗಿರಿ:
[ನಸುನಗುತ್ತಾ, ಸಮಾಧಾನಿಸುವವನಂತೆ, ೩ನೇ ವ್ಯಕ್ತಿಗೆ] ಅಲ್ಕಾಣಯ್ಯಾ ಚಂದ್ರಣ್ಣ, ಈ ಗದ್ದಲ ತಡೀಲಾರ್ದೇ ರಾಜಪ್ಪ ಏನೋ ಅಂದ್ನಪ್ಪ; ಅವ್ನು ಏನಂದ ಅಂತ ಅರ್ಥಾನೂ ಮಾಡ್ಕೊಳ್ದೇ ಅವನ್ಗೆ ಹೊಡ್ಯಕ್ಕೆ ಹೋಗಿದ್ಯಲ್ಲ... [ಕ್ಷಣ ತಡೆದು] ಮಸಲಾ, ಈಗ ಅವನಿಗೆ ಕನ್ನಡಾಭಿಮಾನ ಇಲ್ವೇ ಇಲ್ಲ ಅಂತ್ಲೇ ಇಟ್ಕೋಳ್ಳೋಣ. ನೀನು ಅವನಿಗೆ ಹೊಡೆದ್ರೆ ಕನ್ನಡಾಭಿಮಾನ ಬರುತ್ತೇನಯ್ಯ?
[ಚಂದ್ರಣ್ಣ ಇರುಸುಮುರುಸಿನಿಂದ ಬೆಪ್ಪ ನಗೆ ನಗುತ್ತಾ ತಲೆ ತಗ್ಗಿಸುವನು].

[ವೆಂಕಟಗಿರಿ ಮುಂದುವರಿಸುತ್ತಾ] ನೋಡ್ರಯ್ಯಾ, ಅಭಿಮಾನ ಅನ್ನೋದು ಬಲಪ್ರಯೋಗದಿಂದ, ಗದ್ಲಾ ಹಚ್ಚೋದ್ರಿಂದ ಬರೋದಲ್ಲ. ಅದು, ನಮ್ಮ ನಾಡು, ನಮ್ಮ ಸಂಸ್ಕೃತಿಗಳನ್ನ ತಿಳಿದುಕೊಳ್ಳೋದ್ರಿಂದ ಬರೋದು. [ತಡೆದು, ನಿಧಾನವಾಗಿ ಭಾವುಕನಾಗುತ್ತಾ] ಎಂಥಾ ನಾಡು ಇದು. ಸಿರಿಗಂಧದ ಬೀಡು, ಮರಿದುಂಬಿ-ಕೋಗಿಲೆಗಳ ಗೂಡು. "ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಅಂತಾನೆ, ಆದಿ ಕವಿ ಪಂಪ. ಸಸ್ಯ ಶ್ಯಾಮಲೆ, ಸಿರಿದೇವಿ ಕನ್ನಡ ತಾಯಿಗೆ ನಿತ್ಯೋತ್ಸವ - ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ-ಗಂಧಗಳಲ್ಲಿ. "ಕಾವೇರಿಯಿಂದಮಾ ಗೋದಾವರಿವರೆಗಿರ್ದ" ಕನ್ನಡ ನಾಡಿನ ನೆಲ-ಜಲ, ಜನ, ಸಿರಿಸಂಪತ್ತನ್ನು ಪ್ರಾಚೀನ ಕವಿ ಶ್ರೀವಿಜಯನಿಂದ ಹಿಡಿದು ಎಷ್ಟು ಜನ ಕವಿಗಳು ಹಾಡಿ ಹೊಗಳಿದ್ದಾರೆ!

ವ್ಯಕ್ತಿ ೧:
ಅದನ್ನೇ ಸಾರ್, ನಾನು ಹೇಳಿದ್ದು. ಆ ಭವ್ಯ ಸಂಸ್ಕೃತಿ ಎಲ್ಲಿ, ಈ ಗಲಾಟೆ, ಗೂಂಡಾಗಿರಿ ಎಲ್ಲಿ...

ವೆಂಕಟಗಿರಿ:
[ಅನುಮೋದಿಸುತ್ತಾ] ಅದೇ ನಾನೂ ಹೇಳಿದ್ದು. ಹೀಗೆ ಯಾಕಾಗ್ತಾ ಇದೆ? ಯಾಕೇಂದ್ರೆ, ನಮಗೆ ನಮ್ಮ ಬಗ್ಗೆ ಹೆಮ್ಮೆ ಏನೋ ಇದೆ, ಆದರೆ ಯಾವುದರ ಬಗ್ಗೆ ಹೆಮ್ಮೆ ಪಡಬೇಕು ಅಂತಾನೇ ನಮಗೆ ಗೊತ್ತಿಲ್ಲ. ಯಾವುದರ ಬಗ್ಗೆ ನಾಚಿಕೆ ಪಟ್ಟುಕೋ ಬೇಕೋ ಅದರ ಬಗ್ಗೆ ಹೆಮ್ಮೆ ಪಡ್ತೀವಿ. ಅದು ದುರಭಿಮಾನ, ಒಣಹೆಮ್ಮೆ. ಅದು ಹೋಗಬೇಕು, ಅಭಿಮಾನ ಬರಬೇಕು, ರಾಜ್ಯೋತ್ಸವ ನಿಜವಾಗ್ಲೂ ನಮ್ಮ ಹೆಮ್ಮೆಯ ಉತ್ಸವ ಆಗ್ಬೇಕು ಅಂದ್ರೆ, ನಮ್ಮ ಇತಿಹಾಸ, ಪರಂಪರೆ, ಸಾಮರ್ಥ್ಯಗಳ ಬಗ್ಗೆ ತಿಳೀಬೇಕು. ಹಾಗೇ ನಮ್ಮ ಕುಂದುಗಳನ್ನೂ ತೆರೆದ ಮನಸ್ಸಿನಿಂದ ಒಪ್ಕೋಬೇಕು.

ವ್ಯಕ್ತಿ ೧:
ಸಿರಿಸಮೃದ್ಧವಾದ ಈ ನೆಲದಲ್ಲಿ ಅದೆಷ್ಟು ರಾಜವಂಶಗಳು; ಗಂಗ, ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯ ನಗರದ ಅರಸರು, ಮೈಸೂರು ಅರಸರು...

ವ್ಯಕ್ತಿ ೨:
ಪುಲಿಕೇಶಿ, ನೃಪತುಂಗ, ವಿಷ್ಣುವರ್ಧನ, ಕೃಷ್ಣದೇವರಾಯ, ರಣಧೀರ ಕಂಠೀರವ, ಕಿತ್ತೂರ ಚನ್ನಮ್ಮ, ಒನಕೆ ಓಬವ್ವ, ಟಿಪ್ಪೂ ಸುಲ್ತಾನ್... ಎಷ್ಟೊಂದು ಜನ ವೀರರು ಈ ಮಣ್ಣಿನಲ್ಲಿ ಮೆರೆದವರು!

ವೆಂಕಟಗಿರಿ:
ಹೌದು. ಆದ್ರೆ ನಮ್ಮ ನಾಡು ಕೇವಲ ನೆಲ-ಜಲಗಳ ಸಿರಿಯಷ್ಟೇ ಅಲ್ಲ; ಧೀರರ ನಾಡಷ್ಟೇ ಅಲ್ಲ; ಕಲೆ-ಸಂಸ್ಕೃತಿ-ತಂತ್ರಜ್ಞಾನಗಳ ನೆಲೆವೀಡೂ ಹೌದು. ಕನ್ನಡಿಗರ ಕಲಾ ಸಿದ್ಧಿ ಐಹೊಳೆ, ಬಾದಾಮಿ, ಬೇಲೂರು-ಹಳೇಬೀಡುಗಳಲ್ಲಿ ತನ್ನ ಉತ್ತುಂಗವನ್ನು ಕಂಡರೆ, ಕನ್ನಂಬಾಡಿಯ ಕಟ್ಟೆ, ಕನ್ನಡಿಗರ ಕ್ರಿಯಾಸಿದ್ಧಿಗೆ ಸಾಕ್ಷಿಯಾಗಿದೆ.

ವ್ಯಕ್ತಿ ೧:
ಅಲ್ಲಮ, ಬಸವ, ರಾಮಾನುಜ, ಮಧ್ವ, ವಿದ್ಯಾರಣ್ಯರ ಧರ್ಮಭೂಮಿ ಇದು; ಹಕ್ಕ-ಬುಕ್ಕರ ಕರ್ಮ ಭೂಮಿ; ಪಂಪ, ರನ್ನ, ಲಕ್ಶ್ಮೀಶ, ಕುಮಾರವ್ಯಾಸ, ಹರಿಹರ, ರಾಘವಾಂಕ ಮುಂತಾದ ಕವಿಕೋಗಿಲೆಗಳ ಪುಣ್ಯಾರಾಮ ಇದು; ದಾಸರ-ಶರಣರ ಅನುಭಾವ-ಸಾಹಿತ್ಯಗಳಿಂದ ಶ್ರೀಮಂತಗೊಂಡ ನೆಲ ಇದು;

ವ್ಯಕ್ತಿ ೨:
ಆಧುನಿಕರಲ್ಲಿ? ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ, ಕಾರ್ನಾಡ್... ಪಟ್ಟಿ ಬೆಳೀತಾನೇ ಹೋಗುತ್ತೆ. ಬೇರೆ ಯಾವ ಭಾಷೆಗೂ ದಕ್ಕದ ಏಳು ಜ್ಞಾನಪೀಠ ಪ್ರಶಸ್ತಿಗಳ ಗರಿ, ಕನ್ನಡದ ಕಿರೀಟಕ್ಕೆ!

ವ್ಯಕ್ತಿ ೪:
ಅದು ಸರಿ ಸಾರ್, ರಾಜ್ಯೋತ್ಸವ ಅಂದ್ರೆ ನಮ್ಮಲ್ಲಿ, ಕನ್ನಡ ಬಾವುಟ ಹಾರ್ಸೋದು, ಆರ್ಕೆಸ್ಟ್ರಾ, ಭಾಷಣ ಇದೆಲ್ಲ ಮಾಡ್ತೀವಿ. ಆದ್ರೆ, ಬೇರೆ ರಾಜ್ಯಗಳಲ್ಲೂ ಆಯಾ ರಾಜ್ಯೋತ್ಸವ ಯಾಕೆ ಮಾಡಲ್ಲ?

ವೆಂಕಟಗಿರಿ:
ಒಳ್ಳೇ ಪ್ರಶ್ನೆ. ಮೊದಲಿಂದಲೂ ಅಸ್ತಿತ್ವದಲ್ಲಿ ಇರುವ ರಾಜ್ಯಗಳಲ್ಲಿ ಬಹುಶಃ ಮಾಡೊಲ್ವೋ ಏನೊ. ಆದ್ರೆ, ನಮ್ಮ ರಾಜ್ಯ, ನಾವು ಹೋರಾಡಿ ಗಳಿಸಿದ್ದು. ಸುಮಾರು ೧೦೦ ವರ್ಷಗಳ ಸುದೀರ್ಘ ಇತಿಹಾಸ ಇದೆ, ಈ ಹೋರಾಟಕ್ಕೆ!

ಎಲ್ಲರೂ:
[ಆಶ್ಚರ್ಯ]

ವೆಂಕಟಗಿರಿ:
೧೯೦೫ರ ಸುಮಾರು. ಆಗ ತಾನೆ ವಿದ್ಯಾಭ್ಯಾಸ ಮುಗಿಸಿ ಪುಣೆಯಿಂದ ಬಳ್ಳಾರಿ ಜಿಲ್ಲೆಯ ಆನೆಗೊಂದಿಗೆ ಮರಳಿದ ಆ ಯುವಕ, ತುಸುದೂರದಲ್ಲಿ ಮುಗಿಲಿಗೆ ಮುತ್ತಿಡುವಂತೆ ನಿಂತಿದ್ದ ಭವ್ಯ ಗೋಪುರವನ್ನು ನೋಡಿ ಕೇಳ್ತಾನೆ, "ಅದು ಏನು?" ಅದು ಹಂಪೆಯ ವಿರೂಪಾಕ್ಷ ದೇವಾಲಯ ಎಂಬ ಸ್ಥಳೀಯನ ಉತ್ತರ ಅವನನ್ನು ಚಕಿತಗೊಳಿಸುತ್ತದೆ. ಕರ್ನಾಟಕದ ಮೂಲೆ ಕೊಂಪೆಯಲ್ಲಿದ್ದ, ಹಾಳು ಹಂಪೆಯೇ ಪ್ರಖ್ಯಾತ ವಿಜಯನಗರ ಮಹಾಸಾಮ್ರಾಜ್ಯದ ರಾಜಧಾನಿಯಾಗಿತ್ತು ಅನ್ನೋ ಸತ್ಯ ಅವನಿಗೆ ಹೊಳೀತಲ್ಲ, ಆ ಕ್ಷಣ, ಕರ್ನಾಟಕದ ಇತಿಹಾಸಕ್ಕೆ ಹೊಸ ತಿರುವನ್ನೇ ಕೊಟ್ಟಿತು. ಈ ಯುವಕ ಬೇರಾರೂ ಅಲ್ಲ, ಮುಂದೆ ನಾಡಿನಾದ್ಯಂತ ಸಂಚರಿಸಿ, ಕನ್ನಡಿಗರ ಎದೆ ಎದೆಯಲ್ಲೂ ಕನ್ನಡಾಭಿಮಾನದ ಕೆಚ್ಚನ್ನು ಹೊತ್ತಿಸಿದ ಆಲೂರು ವೆಂಕಟರಾಯರು. ಬಂಗಾಳ ಪಂಜಾಬಗಳಂತೆಯೇ ಕನ್ನಡ ನಾಡು ಸಹ ಭವ್ಯ ಇತಿಹಾಸವನ್ನು ಹೊಂದಿದೆ ಅನ್ನೋ ಸತ್ಯ ಮನದಟ್ಟಾಗುತ್ತಿದ್ದಂತೆ, ಯುವಕ ವೆಂಕಟರಾಯರು ಈ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತರಾದರು. ಸಂಶೋಧನೆಗಳನ್ನು ಕೈಗೊಂಡರು. ಇದರ ಫಲವೇ ಕನ್ನಡ ಇತಿಹಾಸದ ಹೆಮ್ಮೆಯ ಯಶೋಗಾಥೆ, "ಕರ್ನಾಟಕ ಗತ ವೈಭವ". ಜೊತೆಜೊತೆಗೆ, ಹರಿದು ಹಂಚಿಹೋಗಿದ್ದ ನಾಡಿನಾದ್ಯಂತ ಸಂಚಾರ ಕೈಗೊಂಡ ರಾಯರು ತಮ್ಮ ಪ್ರಖರವಾದ ಭಾಷಣಗಳಿಂದ ಜನಮನದಲ್ಲಿ ಕನ್ನಡತನದ ಮಿಂಚು ಹರಿಸಿದರು; ಕಣ್ಣುಗಳಲ್ಲಿ ಅಖಂಡ ಕರ್ನಾಟಕದ ಕನಸನ್ನು ಬಿತ್ತಿದರು.

ಎಲ್ಲರೂ:
[ಆಲಿಸುತ್ತಾರೆ]

ವೆಂಕಟಗಿರಿ:
ಮುಂದೆ ೧೯೧೫ರಲ್ಲಿ ಕರ್ಪೂರ ಶ್ರೀನಿವಾಸರಾಯರು ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವುದರೊಂದಿಗೆ ಕರ್ನಾಟಕ ಏಕೀಕರಣದ ಆಶಯ ಸ್ಪಷ್ಟ ರೂಪು ಪಡೀತು. ೧೯೨೦ರಲ್ಲಿ ಕರ್ನಾಟಕ ರಾಜಕೀಯ ಕಾಂಗ್ರೆಸ್ ಹಾಗೂ ೧೯೨೪ರಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾಂ ಕಾಂಗ್ರೆಸ್ ಅಧಿವೇಶನಗಳು ಕರ್ನಾಟಕ ಏಕೀಕರಣದ ಬೇಡಿಕೆ ಮುಂದಿಟ್ಟವು. ಆಗ ದಕ್ಷಿಣ ಭಾರತದಲ್ಲಿ ಕನ್ನಡ ಭಾಷಿಕರ ೨೨ ಪ್ರದೇಶಗಳಿದ್ದವು. ಅವುಗಳಲ್ಲಿ ಅತಿ ದೊಡ್ಡದು ಮೈಸೂರು ಪ್ರಾಂತ್ಯ. ಸ್ವಾತಂತ್ರ್ಯಾನಂತರ ಈ ಎಲ್ಲ ಪ್ರದೇಶಗಳನ್ನು ಪುನರ್ವಿಂಗಡಿಸಿ ಮುಂಬೈ, ಮದರಾಸು, ಹೈದರಾಬಾದ್, ಕೊಡಗು ಹಾಗೂ ಮೈಸೂರು ಪ್ರಾಂತ್ಯಗಳಿಗೆ ಹಂಚಲಾಯಿತು. ಏಕೀಕೃತ ಕರ್ನಾಟಕದ ಕನಸು ಕನಸಾಗೇ ಉಳೀತು.

ವ್ಯಕ್ತಿ ೪:
ಎಂಥ ವಿಪರ್ಯಾಸ! ಕನ್ನಡಿಗರು ತಮ್ಮ ನಾಡಿನಲ್ಲಿ ತಾವೇ ಪರಕೀಯರು!

ವೆಂಕಟಗಿರಿ:
ಹೌದು. ೧೯೪೭ರಲ್ಲೇ ಭಾರತ ಸ್ವತಂತ್ರಗೊಂಡರೂ, ಕನ್ನಡಿಗರ "ಸ್ವಾತಂತ್ರ್ಯ" ಹೋರಾಟ ನಿಲ್ಲಲಿಲ್ಲ! ಅದಾಗಿ ಒಂಬತ್ತು ವರ್ಷಗಳ ನಂತರ, ೧೯೫೬ರಲ್ಲಿ ರಾಜ್ಯಗಳ ಪುನರ್ವಿಂಗಡಣೆ ಆಯೋಗ ತನ್ನ ವರದಿ ಮಂಡಿಸಿತು. ಅದರ ಶಿಪಾರಸಿನ ಮೇರೆಗೆ, ಐದೂ ರಾಜ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡದ ಪ್ರದೇಶಗಳನ್ನೆಲ್ಲ ಒಗ್ಗೂಡಿಸಿ ಒಂದು ಪ್ರತ್ಯೇಕ ರಾಜ್ಯವನ್ನು ರಚಿಸಲಾಯಿತು. ಹೀಗೆ ನವೆಂಬರ್ ೧, ೧೯೫೬ರಂದು ಉದಯವಾಯಿತು ನಮ್ಮ ಚಲುವ ಕನ್ನಡ ನಾಡು. ಆದರೆ, ಇದಕ್ಕೆ "ಕರ್ನಾಟಕ" ಎಂಬ ಹೆಸರು ಬಂದದ್ದು ಮಾತ್ರ ೧೯೭೩ರಲ್ಲಿ.

ವ್ಯಕ್ತಿ ೪:
ಹಾಂ! ಇಷ್ಟು ಹೋರಾಡಿ ಪಡೆದ ನಾಡು. ನಮಗೆ ಅದರ ಬಗ್ಗೆ ಅಷ್ಟೊಂದು ಅಭಿಮಾನ ಇರೋದು ಆಶ್ಚರ್ಯವೇನಲ್ಲ!

ವೆಂಕಟಗಿರಿ:
ಅದೇನೋ ಸರಿ. ಕನ್ನಡದಲ್ಲಿ ಏನಿಲ್ಲ ಹೇಳಿ? ಸುಂದರ ಭಾಷೆ, ತುಂಬಿ ತುಳುಕುವ ಸಂಪತ್ತು, ಶ್ರೀಮಂತ ಸಾಹಿತ್ಯ-ಕಲೆ-ಸಂಗೀತ, ಭವ್ಯ ಇತಿಹಾಸ... ಇವಕ್ಕೆಲ್ಲಾ ವಾರಸುದಾರರು, ನಾವು. ನಮ್ಮ ಬೆನ್ನನ್ನು ನಾವು ತಟ್ಟಿಕೊಳ್ತಾನೇ ಹೋಗಬಹುದು. ಆದರೆ ಇದರಲ್ಲಿ ನಮಗೆ ದಕ್ಕಿದ್ದೆಷ್ಟು; ಎಷ್ಟು ಉಳಿಸಿಕೊಳ್ತಿದೀವಿ... ನೋಡಿದರೆ ಮನಸ್ಸು ಭಾರವಾಗುತ್ತೆ. ಕನ್ನಡದ ನೆಲ-ಜಲ-ಅರಣ್ಯಗಳು ಲೂಟಿಯಾಗ್ತಿವೆ, ಮಲಿನವಾಗ್ತಿವೆ; ಕನ್ನಡದ ಹೆಸರಲ್ಲಿ ಬರೇ ಮಾತಾಡ್ತೀವಿ; ವರ್ಷಕ್ಕೊಮ್ಮೆ ರಾಜ್ಯೋತ್ಸವ ಮಾಡ್ತೀವಿ, ಮೆರೀತೀವಿ, ಮರೀತೀವಿ. ಇನ್ನೊಂದು ಭಾಷೇನ ದ್ವೇಷಿಸೋದನ್ನೇ ಕನ್ನಡಪ್ರೇಮ ಅಂತ ಭ್ರಮಿಸುತ್ತೀವಿ! ನಮ್ಮಲ್ಲಿ ಎಷ್ಟು ಜನ ನಮ್ಮ ಭವ್ಯ ಸಂಸ್ಕೃತಿ-ಪರಂಪರೆಗಳ ಬಗ್ಗೆ ತಿಳಿದಿದ್ದೇವೆ, ಅಭಿಮಾನ ತಳೆದಿದ್ದೇವೆ ಹೇಳಿ, ನೋಡೋಣ? ಎಷ್ಟು ಜನ ಕನ್ನಡ ಪುಸ್ತಕಗಳನ್ನು ಕೊಳ್ಳುತ್ತೇವೆ, ಎಷ್ಟು ಜನ ಅವನ್ನು ಓದುತ್ತೇವೆ? ಬೇಡಪ್ಪ, ಎಷ್ಟು ಜನ ಕೊನೆಯ ಪಕ್ಷ ಸ್ವಚ್ಛ-ಸ್ಪಷ್ಟ ಕನ್ನಡ ಮಾತಾಡ್ತೇವೆ-ಬರೀತೇವೆ? - ಕನ್ನಡ ಅಭಿಮಾನವೆಂದರೆ, ಇದು.

ಎಲ್ಲರೂ:
[ಅನುಮೋದಿಸುವಂತೆ ತಲೆದೂಗುವರು]

ವೆಂಕಟಗಿರಿ:
ಆದರೆ ಈವತ್ತು ನೋಡಿ, ಕನ್ನಡ ರಾಜ್ಯೋತ್ಸವವೆಂದರೆ ಬರೀ ಮೈಕಾಸುರನ ಹಾವಳಿ ಎಂದಾಗಿದೆ. ಕರ್ನಾಟಕ ಸಂಗೀತದ ಸ್ಥಾನವನ್ನು ಈ ನೆಲದ್ದಲ್ಲದ ಅಬ್ಬರದ ಸಿನಿಮಾ ಸಂಗೀತ ಆಕ್ರಮಿಸಿದೆ. "ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ" ಎಂದು ಹಿರಿಯರು ಆಶಿಸಿದ್ದರು. ಆದರೆ ಅದನ್ನೇ ಇಂದು ನಾವು ದೇವರಲ್ಲಿ ಬೇಡಿಕೊಳ್ಳಬೇಕಾಗಿದೆ. ಕನ್ನಡಕ್ಕೆ ನಮ್ಮಿಂದಲೇ ಸಂಚಕಾರ ಬಂದೊದಗಿದೆ. ರಾಜ್ಯೋತ್ಸವದಂದು ದೊಡ್ಡ ದೊಡ್ಡ ಭಾಷಣ ಮಾಡ್ತೇವೆ; ಕನ್ನಡ ಹೋರಾಟದ ಹೆಸರಲ್ಲಿ ರಾಜಕೀಯ ಮಾಡ್ತೇವೆ.

ವ್ಯಕ್ತಿ ೧:
ಕನ್ನಡದ ಸಾಂಸ್ಕೃತಿಕ-ಸಾಹಿತ್ಯ ಕ್ಷೇತ್ರಗಳಲ್ಲೂ ರಾಜಕೀಯ ಕಾಲಿಟ್ಟಿದೆ.

ವೆಂಕಟಗಿರಿ:
ಯಾವ ನಾಡಿನ ಸಾಕಾರಕ್ಕಾಗಿ ಅನೇಕ ಚೇತನಗಳು ಜೀವವನ್ನೇ ತೇದುವೋ ಅದೇ ಕನ್ನಡ ನಾಡಿನಲ್ಲಿ ಇವತ್ತು ಪ್ರತ್ಯೇಕತೆಯ ಅಪಸ್ವರ ಕೇಳಬರುತ್ತಿದೆ. ಈಗ ಹೇಳಿ, ಎಲ್ಲಿದೆ ಕನ್ನಡ? ಎಲ್ಲಿದೆ ಕನ್ನಡತನ?

ಎಲ್ಲರೂ:
[ನಿರುತ್ತರ-ಮೌನ]

ವೆಂಕಟಗಿರಿ:
[ಮುಂದುವರಿಸುತ್ತಾ] ಈ ಸಂದರ್ಭದಲ್ಲಿ ಕುವೆಂಪುರವರ ಸಾಲುಗಳು ನೆನಪಿಗೆ ಬರುತ್ತವೆ [ಘಂಟಾಘೋಷವಾಗಿ ಹೇಳುವನು]

"ಅಖಂಡ ಕರ್ನಾಟಕ:
ಅಲ್ತೋ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!
ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್ಮ ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ ಸರ್ವಜ್ಞ ಷಡಕ್ಷರ:
ಸರಸ್ವತಿಯೆ ರಚಿಸಿದೊಂದು ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ!

"ಕರ್ಣಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಕಾವ ಕೊಲುವ ಒಲವ ಬಲವಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ!"

ವ್ಯಕ್ತಿ ೩:
ಸಾರ್, ನಾವು ಈ ವರಗೂ ಕನ್ನಡ ರಾಜ್ಯೋತ್ಸವದ ಬಗ್ಗೆ ಎಷ್ಟು ಹಗುರವಾದ ಭಾವನೆ ಇಟ್ಕೊಂಡಿದ್ವಿ ಅಂತ ನೋಡಿದ್ರೆ, ನಮಗೇ ನಾಚಿಕೆ ಆಗುತ್ತೆ ಸಾರ್.

ವ್ಯಕ್ತಿ ೨:
ನೀವು ಹೇಳೋದು ಸರಿ ಸಾರ್. ಕನ್ನಡ ರಾಜ್ಯೋತ್ಸವದ ಆಚರಣೆ ಹೀಗಲ್ಲ. ಅದು ನಿಜವಾದ ಕನ್ನಡತನಾನ ಬಿಂಬಿಸಬೇಕು.

ವ್ಯಕ್ತಿ ೧:
ಹಾಗಾಗಬೇಕಾದ್ರೆ, ನಮ್ಮ ವ್ಯಕ್ತಿತ್ವದಲ್ಲಿ ಕನ್ನಡತನ ಮೈಗೂಡಬೇಕು.

ವ್ಯಕ್ತಿ ೪:
ಹೌದು. ನಾವು ಕನ್ನಡ ಕಲೀಬೇಕು, ಕಲಿಸಬೇಕು. ಬೇರೆ ಭಾಷೆ ಸಂಸ್ಕೃತಿಗಳ್ನೂ ನೋಡಬೇಕು, ಕನ್ನಡ ಬೆಳೆಸಬೇಕು.

ವೆಂಕಟಗಿರಿ:
[ಸಂತಸದಿಂದ] ಸಂತೋಷ, ಸ್ನೇಹಿತರೆ. ಹಾಗಂತ ನಾವೆಲ್ಲಾ ಪ್ರತಿಜ್ಞೆ ಮಾಡೋಣ.

[ಘೋಷಿಸುವನು] ಕನ್ನಡವೇ...

ಎಲ್ಲರೂ:
ನಮ್ಮುಸಿರು...

ವೆಂಕಟಗಿರಿ:
ಸಿರಿಗನ್ನಡಂ ...

ಎಲ್ಲರೂ:
ಗೆಲ್ಗೆ

ವೆಂಕಟಗಿರಿ:
ಸಿರಿಗನ್ನಡಂ ...

ಎಲ್ಲರೂ:
ಆಳ್ಗೆ

ವೆಂಕಟಗಿರಿ:
ಸಿರಿಗನ್ನಡಂ...

ಎಲ್ಲರೂ:
ಬಾಳ್ಗೆ

[ಮೈಕುಗಳ ಗದ್ದಲ ಈ ಹೊತ್ತಿಗೆ ಸಂಪೂರ್ಣ ನಿಂತಿದೆ. ನೇಪಥ್ಯದಲ್ಲಿ "ಎಲ್ಲಾದರು ಇರು ಎಂತಾದರು ಇರು..." ಗೀತೆ ತೇಲಿ ಬರುತ್ತದೆ. ತೆರೆ]