Thursday, September 21, 2017

ಹೊಸಕಾಲದ ಕನ್ನಡ ಮಾಧ್ಯಮ - ಕೇಳುವರಾರು ಮಕ್ಕಳ ಗೋಳು

ಖ್ಯಾತ ವಿಜ್ಞಾನಿ ಭಾರತರತ್ನ ಪ್ರೊ. ಸಿ ಎನ್ ಆರ್ ರಾಯರು ತಮ್ಮ ಕನ್ನಡಮಾಧ್ಯಮಶಾಲೆಯ ಪ್ರಾಥಮಿಕ ವ್ಯಾಸಂಗವನ್ನು ಎಂದು ಬಹು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ.  "ಕಲಿಕೆ ಯಶಸ್ವಿಯಾಗಬೇಕಾದರೆ ಅದು ಮಾತೃಭಾಷೆಯಲ್ಲೇ ಆಗಬೇಕು" ಎಂಬುದು ಅವರ ದೃಢ ನಿಲುವು. ಸಾಧಕರ ಈ ನುಡಿ ಅನೇಕ ಕನ್ನಡಿಗರಿಗೆ ಸ್ಫೂರ್ತಿದಾಯಕ.  ಅವರದ್ದು ವಿದ್ಯೆಯ ದೃಷ್ಟಿಯಿಂದ ಸ್ವರ್ಣಯುಗವೆನ್ನಬೇಕು.  ಆಗ ಕೆಲವು ಪಟ್ಟಣಗಳಲ್ಲಿ ಬಿಟ್ಟರೆ ಉಳಿದಂತೆ ಸರ್ಕಾರೀ ಕನ್ನಡ ಶಾಲೆ ಬಿಟ್ಟು ಬೇರೆ ಯೋಚನೆಯೂ ಪೋಷಕರಿಗೆ ಬರುತ್ತಿರಲಿಲ್ಲ, ಮತ್ತು ಕನ್ನಡ ಶಾಲೆಗೆ ಹೋಗುವುದು ಈಗಿನಂತೆ ಹೀನಾಯವೆನಿಸಿರಲಿಲ್ಲ.  ಮನೆಯಿಂದ ಶಾಲೆಗೆ ಹೋಗುವ ಮಕ್ಕಳಿಗೆ ಭಾಷೆಯಲ್ಲಿ ಕಾಣುತ್ತಿದ್ದ ಬಹುದೊಡ್ಡ ಬದಲಾವಣೆಯಿಂದರೆ ಕನ್ನಡದ ಗ್ರಾಂಥಿಕ ಭಾಷೆಯಷ್ಟೇ.   ಆಡುಮಾತಿಗಿಂತ ಗ್ರಾಂಥಿಕ ಭಾಷೆ ಹೆಚ್ಚು ಔಪಚಾರಿಕವಾಗಿ, ಹೆಚ್ಚು ’ಶುದ್ಧ’ವಾಗಿ ಕಾಣುತ್ತಿತ್ತೇ ವಿನಾ, ತೀರ ಅಪರಿಚಿತವಾಗೇನು ಇರಲಿಲ್ಲ.  "ದ್ಯುತಿಸಂಶ್ಲೇಶಣ", "ಪೀನಮಸೂರ", "ಸರಳಾಧಿಕಕೋನ"ಗಳು ಆಗಲೂ ಆಗೀಗ ಕಾಡಿದರೂ ಮಳೆ ಮಳೆಯಾಗಿ, ನೀರಾವಿ ನೀರಾವಿಯಾಗಿ, ಮಣ್ಣು ಮಣ್ಣಾಗಿಯೇ ಪುಸ್ತಕದಲ್ಲಿ ಕಾಣುತ್ತಿದ್ದುದರಿಂದ ಪಠ್ಯಪುಸ್ತಕದ ಭಾಷೆ ನಮ್ಮ ಭಾಷೆಯಂತೆಯೇ ತೋರುತ್ತಿತ್ತು.  ಕನ್ನಡದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಹೋದಾಗ ಕಾಣುವ ಪರಕೀಯಭಾವನೆ ಮಕ್ಕಳಿಗೆ ಕನ್ನಡ ಪಠ್ಯಗಳಲ್ಲಿ ಯಾವತ್ತೂ ಕಂಡಿದ್ದಿಲ್ಲ.  ಆದರೆ ಇವತ್ತಿನ ಕನ್ನಡ ಮಾಧ್ಯಮದ ಪಠ್ಯಗಳ ಸ್ಥಿತಿ ಹಾಗಲ್ಲ.  ಮೊದಲನೆಯದಾಗಿ, ಆಂಗ್ಲಮಾಧ್ಯಮವು ಮೋಹವೆನ್ನುವುದಕ್ಕಿಂತ ಅನಿವಾರ್ಯವೆನ್ನುವ ಸ್ಥಿತಿಯುಂಟಾಗಿರುವಾಗ, ಕನ್ನಡಮಾಧ್ಯಮ ಕೇವಲ ಅಭಿಮಾನದ ವಿಷಯವಾಗಷ್ಟೇ ಉಳಿದಿರುವಾಗ, ಅಭಿಮಾನಕ್ಕಿಂತ ಅವಕಾಶದ್ದೇ ಮೇಲುಗೈಯೆಂಬಂತೆ ತೋರುತ್ತಿರುವಾಗ ಕನ್ನಡ ಮಾಧ್ಯಮಕ್ಕೆ ಉಳಿಯುವುದು ಒಂದೇ ಆಕರ್ಷಣೆ - "ಉತ್ತಮ ಕಲಿಕೆ ಮಾತೃಭಾಷೆಯೊಂದರಿಂದಲೇ ಸಾಧ್ಯ" ಎನ್ನುವುದು.  ಆದರೆ ಇವತ್ತಿನ ಪರಿಸ್ಥಿತಿ ನೋಡಿದರೆ ಆ ಆಶೆಯನ್ನೂ ಮಣ್ಣುಗೂಡಿಸುವಂತಿದೆ. 

ಕರ್ನಾಟಕ ಶಿಕ್ಷಣ ಇಲಾಖೆಯ ಟೆಕ್ಸ್ಟ್ ಬುಕ್ ಹಳವಂಡಗಳು ಈ ದಿನಗಳಲ್ಲಿ ಬಹುಚರ್ಚಿತವಾದ ವಿಷಯ - ಕಣ್ತಪ್ಪಿನ ದೋಷಗಳು, ಭಾಷಾದೋಷಗಳು, ನಿರೂಪಣೆಯ ಎಡವಟ್ಟುಗಳು, ತಪ್ಪು ಮಾಹಿತಿ, ವಿಷಯಸ್ಪಷ್ಟತೆಯ ಕೊರತೆ, ಪರಿಕಲ್ಪನೆಯ ಪ್ರಮಾದಗಳು, ಏಕಪಕ್ಷೀಯ ನಿಲುವುಗಳು ಹೀಗೆ ಪಟ್ಟಿ ಮಾಡುತ್ತ ಹೋದರೆ, ಪಠ್ಯಪುಸ್ತಕಕ್ಕಿಂತ ದೊಡ್ಡ ಪುಸ್ತಕವೇ ಆದೀತೇನೋ.  ಆದರೆ ಈಗಾಗಲೇ ಚರ್ಚೆಯಲ್ಲಿರುವ ಅದನ್ನು ಸಧ್ಯಕ್ಕೆ ಬಿಡೋಣ; ಈ ಹಳವಂಡಗಳು ಕನ್ನಡ ಮಾಧ್ಯಮಕ್ಕೇ ಹೇಗೆ ಸಂಚಕಾರ ತರುತ್ತಿವೆಯೆಂಬಷ್ಟನ್ನು ನೋಡೋಣ.  ಇಷ್ಟಕ್ಕೂ ನಮ್ಮ ಮಾತೃಭಾಷೆ ಯಾವುದು?  "ಕನ್ನಡ" ಎನ್ನುವುದು ಸುಲಭದ ಉತ್ತರ.  ಆದರೆ ಪ್ರಾಂತ್ಯಕ್ಕೊಂದು ಕಾಲಕ್ಕೊಂದು ಜಾತಿಗೊಂದು ವೃತ್ತಿಗೊಂದು ಮನೆಗೊಂದು ಇರುವ ಕನ್ನಡದಲ್ಲಿ ನಮ್ಮ ’ಮಾತೃಭಾಷೆ’ಯಾದ ಕನ್ನಡ ಯಾವುದೆಂಬುದು ಸ್ಪಷ್ಟವಾಗಬೇಕಲ್ಲ.  ಉದಾಹರಣೆಗೆ, ನಿಮ್ಮ ಎರಡು ವರ್ಷದ ಮಗುವಿಗೆ ಊಟ ಮಾಡಿಸಬೇಕಾದರೆ "ಮಮ್ಮಮ್ ತಿನ್ನು ಬಾಮ್ಮಾ" ಎನ್ನುತ್ತೀರಿ.  ಆ ಮಗುವಿಗೆ ಅದೇ ಮಾತೃಭಾಷೆ.  ಅದೇ ಆರೇಳು ವರ್ಷದ ಹುಡುಗನೋ ಹುಡುಗಿಯೋ ಆಗಿದ್ದರೆ "ಉಣ್ಣು ಬಾ" ಎಂದೋ "ಊಟ ಮಾಡ್ ಬಾ" ಎನ್ನುತ್ತೀರಿ.  ತೀರ ಅದನ್ನೇ ಬರಹದಲ್ಲಿ ತಿಳಿಸಬೇಕೆಂದರೂ "ಊಟ ಮಾಡುವೆಯಂತೆ ಬಾ" ಎನ್ನುತ್ತೀರೇನೋ, ಆದರೆ "ಭೋಜನಸ್ವೀಕರಿಸು ಬಾ" ಎಂದೋ ಅಥವಾ ಅಚ್ಚಗನ್ನಡದಲ್ಲಿ "ಬೋನವನಾರೋಗಿಸು ಬಾ" ಎಂದೋ ಕರೆಯುವುದಿಲ್ಲ, ಅಲ್ಲವೇ?  "ಟವೆಲ್ ತೊಗೊಂಡ್ ಸ್ನಾನಕ್ಹೋಗು" ಎನ್ನುವುದು ಹೆಚ್ಚೆಂದರೆ "ಟವೆಲು ತೆಗೆದುಕೊಂಡು ಸ್ನಾನಕ್ಕೆ ಹೋಗು" ಎಂದಾದೀತೇ ಹೊರತು "ಅಂಗವಸ್ತ್ರವನ್ನು ತೆಗೆದುಕೊಂಡು ಸ್ನಾನಕ್ಕೆ ದಯಮಾಡಿಸು" ಎಂದು ಖಂಡಿತಾ ಹೇಳುವುದಿಲ್ಲ.  ಹಾಗೆ ಹೇಳಿದರೆ ನಿಮ್ಮ ಮಗುವಿಗೆ ಅರ್ಥವೂ ಆಗಬಹುದು, ಆದರೆ ಹೇಳುವ ರೀತಿಯಂತೂ ಅದಲ್ಲ, ಅಲ್ಲವೇ?  ಎಂದ ಮೇಲೆ ಶಾಲೆಯಲ್ಲಿ ಬಳಸುವ ಕನ್ನಡ ಆ ಔಪಚಾರಿಕ ಮಟ್ಟವನ್ನೂ ಮೀರಿ ಪರಕೀಯವೇ ಆಗಿಬಿಟ್ಟರೆ?

ಗಣಿತವಿಜ್ಞಾನಗಳಂಥಾ ಶಾಸ್ತ್ರವಿಷಯಗಳಲ್ಲಿ ಭಾಷೆ ಸ್ವಲ್ಪ ನಿಖರವಾಗಿರಬೇಕೆಂಬುದೇನೋ ನಿಜವೇ, ಆದರೆ ಅದು ಪಾರಿಭಾಷಿಕ ಪದಗಳಿಗೆ ಮಾತ್ರ ಸೀಮಿತವಷ್ಟೇ?  ಆದರೆ ಉಳಿದಂತೆ ಆದರೂ ಪಠ್ಯ ಓದಿಸಿಕೊಂಡು ಹೋಗಬೇಕಲ್ಲವೇ?  ಉದಾಹರಣೆಗೆ ಹೊಸ ಪಠ್ಯದಲ್ಲಿರುವ ಈ ಸೂಚನೆ ನೋಡಿ: 

"ಶಾಬ್ದಿಕ ಸಮಸ್ಯೆಗಳು - ಕೆಳಗಿನ ಲೆಕ್ಕಗಳನ್ನು ಓದು, ಸಂಖ್ಯೆಯ ಲೆಕ್ಕಗಳನ್ನು ಬಿಡಿಸುವುದು ಹೇಗೆಂದು ಕಲಿ" (Verbal Problems - Read the problems given below, Understand how to solve verbal problems). 

ಗಮನಿಸಿ, ಇದು ಯಾವುದೋ ದೊಡ್ಡ ತರಗತಿಯ ಪಠ್ಯವಲ್ಲ - ಮೂರನೆಯ ತರಗತಿಯ (ಎಂಟೊಂಬತ್ತು ವರ್ಷದ) ಮಕ್ಕಳಿಗೆ ಗಣಿತ ಪಠ್ಯದಲ್ಲಿ ಕೊಟ್ಟಿರುವ ಸೂಚನೆ.  ಇದೇ ಲೆಕ್ಕವನ್ನು ನಾವೂ ಮಾಡುತ್ತಿದ್ದೆವು, ಇದೇ ವಯಸ್ಸಿನಲ್ಲಿ.  ಇದಕ್ಕೆ "ಬಾಯಿಲೆಕ್ಕ ಅಥವಾ ದಾರಿ ಲೆಕ್ಕ" ಎಂದು ಹೇಳುತ್ತಿದ್ದರು ಆಗ.  ಈಗಿನ ತಲೆಮಾರಿನ ಮಕ್ಕಳು ಎಷ್ಟೇ ’ಸ್ಮಾರ್ಟ್’ ಆಗಿರುತ್ತಾರೆಂದುಕೊಂಡರೂ ಕನ್ನಡವನ್ನು ಮರೆತು ಸಂಸ್ಕೃತ ಪಂಡಿತರಾಗಿಬಿಟ್ಟಿರುತ್ತಾರೆಂದು ಹೇಗೆ ತಿಳಿಯುವುದು?  ಈಗ ಮಗು ಲೆಕ್ಕ ಕಲಿಯಬೇಕೋ ಇವರ ಭಾಷೆಯನ್ನು ಅರ್ಥಮಾಡಿಕೊಳ್ಳಲು ಹೆಣಗಬೇಕೋ?  ಒಂದು ಪದವಾದರೆ ಸರಿ, ನಕ್ಕು ಸುಮ್ಮನಾಗಬಹುದು, ಆದರೆ ಪಠ್ಯದುದ್ದಕ್ಕೂ ಇಂಥದ್ದೇ ಆದರೆ?!  ಇನ್ನೊಂದು ಉದಾಹರಣೆ ನೋಡಿ, ಏಳನೆಯ ತರಗತಿಯ ಗಣಿತದಿಂದ:

"ಇಲ್ಲಿ ಛಾಯೀಕರಿಸಿರುವ ಒಟ್ಟು ಭಾಗಗಳೆಷ್ಟು (how many parts of each circle are shaded?). 

ಪಠ್ಯಪುಸ್ತಕಸಮಿತಿಯ ಸರ್ವಾಧ್ಯಕ್ಷ ಶ್ರೀ ಬರಗೂರು ರಾಮಚಂದ್ರಪ್ಪನವರು ಈ ಹಿಂದೆ "ತಾಯೀಕರಣ" ಎಂಬ ಪದ ಸೃಷ್ಟಿಸಿ ಖ್ಯಾತರಾಗಿದ್ದುದು ನೆನಪಿಗೆ ಬಂತೇ?  ಪಠ್ಯಪುಸ್ತಕಗಳಲ್ಲಿ ಅಂಥಾ ನಿಷ್ಕಾರಣ ’ಕರಣ’ಗಳು ಬೇಕಾದಷ್ಟಿವೆ.  ಹೀಗೇ ಪಠ್ಯದ ತುಂಬೆಲ್ಲ ಬಹುಶಃ ಬರೆದವರಿಗೇ ಅರ್ಥವಾಗದ ಸಂಸ್ಕೃತ, ಅರೆಸಂಸ್ಕೃತ, ಅಸಂಸ್ಕೃತ ಪದಗಳೇ ತುಂಬಿವೆ - ಅರ್ಥವಾಗದ್ದು ಎಂಬುದು ಮುಖ್ಯ.  ನಾನಿಲ್ಲಿ ವಿವಿಧ ಪಠ್ಯಗಳಲ್ಲಿ ಕಂಡುಬಂದ ಆಣಿಮುತ್ತುಗಳನ್ನೂ ಬ್ರಾಕೆಟ್ಟಿನಲ್ಲಿ ಅವುಗಳ ’ನಮ್ಮ ಕನ್ನಡ’ದ ಅನುವಾದವನ್ನೂ ಕೊಡುತ್ತೇನೆ, ಒಮ್ಮೆ ನೋಡಿ: 
  • ವ್ಯುತ್ಕ್ರಮ ಅಥವಾ ವಿಲೋಮರೂಪ (Reciprocal or Inverse form) - ಭಿನ್ನರಾಶಿಯ ಅಂಶ ಛೇದ-ಗಳನ್ನು ಅದಲುಬದಲು ಮಾಡಿ ಬರೆದಾಗ ಆ ಭಿನ್ನರಾಶಿಯ ವ್ಯುತ್ಕ್ರಮ ರೂಪ ದೊರೆಯುತ್ತದೆ [ವ್ಯುತ್ಕ್ರಮ ಅಥವಾ ವಿಲೋಮ ಯಾರಿಗೆ ಅರ್ಥವಾಗುತ್ತದೆ?  ಅದರ ಬದಲು ಸರಳವಾಗಿ ಅದಲುಬದಲು ಅಥವಾ ತಿರುವುಮುರುವು ರೂಪ ಎಂದೇ ಹೇಳಬಹುದಿತ್ತಲ್ಲವೇ?];
  • ಪ್ರಚ್ಛನ್ನಶಕ್ತಿ (potential energy).  [ಅಡಗಿರುವ ಶಕ್ತಿ ಎಂದಿದ್ದರೆ ಆಗಿತ್ತಲ್ಲವೇ.  ಇನ್ನಿದಲ್ಲದೇ "ಪ್ರಚ್ಛನ್ನ (potential) ಎಂಬ ಶಬ್ದ ಲ್ಯಾಟಿನ್ ಮೂಲದಿಂದ ಬಂದದ್ದು" ಎಂಬ ಒಗ್ಗರಣೆ ಬೇರೆ?  ಲ್ಯಾಟಿನ್ ಮೂಲದಿಂದ ಬಂದದ್ದು "ಪ್ರಚ್ಛನ್ನ" ಪದವೋ "Potential" ಪದವೋ?  ವಾಕ್ಯರಚನೆಯ ದೋಷ!];
  • ವಿದ್ಯುತ್ಪ್ರವಾಹದ ರಾಸಾಯನಿಕ ಪರಿಣಾಮದ ಅನ್ವಯಗಳು (Applications of chemical effect of electric current).  [ಇಲ್ಲಿ Applications ಎನ್ನುವ ಪದಕ್ಕೆ ಅನ್ವಯ ಎಂದು ಅನುವಾದ ಮಾಡಿರುವುದು ಸ್ಪಷ್ಟ.  Application ಎಂಬ ಪದಕ್ಕೆ ಅರ್ಜಿ, ಅನ್ವಯ, ಬಳಕೆ ಮುಂತಾದ ಅರ್ಥಗಳಿವೆ.  ಹಾಗೆಯೇ ಅನ್ವಯ ಎಂಬ ಪದಕ್ಕೆ ವಂಶ, ಅರ್ಥ, ಹೊಂದುವಿಕೆ, ಮೊದಲಾದ ಅರ್ಥಗಳಿವೆ, ಆದರೆ ಬಳಕೆ, ಉಪಯೋಗ ಮೊದಲಾದ ಅರ್ಥಗಳು ಅನ್ವಯ ಎಂಬ ಪದಕ್ಕಿಲ್ಲ.  ನಿಘಂಟು ನೋಡಿಕೊಂಡು ಕುರುಡುಕುರುಡಾಗಿ ಅನುವಾದಿಸುವ ಬದಲು ಸಹಜವಾಗಿ, ಸರಳವಾಗಿ "ವಿದ್ಯುತ್ಪ್ರವಾಹದ ರಾಸಾಯನಿಕ ಪರಿಣಾಮದ ಉಪಯೋಗಗಳು" ಎನ್ನಬಹುದಿತ್ತಲ್ಲ!];
  • ಲೋಹಾಭಗಳು ಬಿಧುರವಾಗಿವೆ (ಪದಸಹಾಯ: ಬಿಧುರ = ಬಲಪ್ರಯೋಗದಿಂದ ತುಂಡಾಗುವುದು) [ಬಿಧುರ ಎಂಬ ಪದ ಯಾವ ಮಗುವಿಗೆ ಅರ್ಥವಾದೀತು ಸ್ವಾಮಿ, ಕೊನೆಯ ಪಕ್ಷ ಟೀಚರುಗಳಿಗಾದರೂ! ಅರ್ಥವಾಗದ್ದೊಂದು ಪದ ಹಾಕಿ, ಪದಸಹಾಯ ಎಂದು ಬೇರೆ ಕೊಡುವ ಬದಲು, ಸರಳವಾಗಿ "ಪೆಡಸಾಗಿವೆ, ಒಡೆಯುವ ಗುಣ ಹೊಂದಿವೆ" ಎನ್ನಬಾರದೇ?];
  • ಅವು ತನ್ಯವಾಗಿದ್ದು ಸುರುಳಿಯಾಕಾರದಲ್ಲಿ ಬಗ್ಗಿಸಬಹುದು [ಬಾಗುವ ಗುಣ ಹೊಂದಿದೆ];
  • ನೀರನ್ನು ಕಾಯಿಸಿದಾಗ ಎನಾಗುತ್ತದೆ?  ಇಲ್ಲಿ ನೋಡಿ: "ನೀರನ್ನು ೦ ಡಿಗ್ರಿಯಿಂದ ೪ ಡಿಗ್ರಿಯವರೆಗೆ ಕಾಯಿಸಿದಾಗ ಸಂಕುಚಿಸುತ್ತದೆ.  ೪ ಡಿಗ್ರಿಯನಂತರ ವ್ಯಾಕೋಚಿಸುತ್ತದೆ.  ನೀರಿನ ಈ ಲಕ್ಷಣವನ್ನು ನೀರಿನ ಅಸಂಗತ ವ್ಯಾಕೋಚನ (anomalous expansion) ಎನ್ನುವರು"! [ಎನ್ನುವವರು ಯಾರು? ಈ ಅಸಂಗತವ್ಯಾಕೋಚನ ಎಂಬ ಪದ ಎಲ್ಲಾದರೂ ಕೇಳಿದ್ದಿದೆಯಾ?  ಮಕ್ಕಳು ಅರ್ಥ ಮಾಡಿಕೊಂಡು ನೆನಪಿನಲ್ಲಿಟ್ಟುಕೊಳ್ಳಬಲ್ಲರಾ?  ಇದೇ ವಾಕ್ಯವನ್ನೇ ""ನೀರನ್ನು ೦ ಡಿಗ್ರಿಯಿಂದ ೪ ಡಿಗ್ರಿಯವರೆಗೆ ಕಾಯಿಸಿದಾಗ ಕುಗ್ಗುತ್ತದೆ.  ೪ ಡಿಗ್ರಿಯನಂತರ ಹಿಗ್ಗುತ್ತದೆ.  ನೀರಿನ ಈ ಲಕ್ಷಣವನ್ನು ನೀರಿನ ವಿಚಿತ್ರ ಹಿಗ್ಗುವಿಕೆ (anomalous expansion) ಎನ್ನುವರು" ಎಂದಿದ್ದರೆ ಸಂಸ್ಕೃತಕ್ಕೆ ದ್ರೋಹ ಬಗೆದಂತಾಗುತ್ತಿತ್ತೇ?];
  • ಭೂಸವೆತಕ್ಕೆ ಕಾರಣಗಳ ಪಟ್ಟಿಯಲ್ಲಿ ಕಂಡದ್ದು - "ಮಿತಿಮೀರಿದ ಮೇಯುವಿಕೆ" [ಬೆಚ್ಚದಿರಿ, ಭೂಮಿಯನ್ನು ಯಾರೂ ಮೇಯಲಿಲ್ಲ, ಅದು ಮೇಯಿಸುವಿಕೆ - ಜಾನುವಾರುಗಳು ವಿಪರೀತ ಹುಲ್ಲು ಮೇಯುವುದರಿಂದ ಮಣ್ಣು ಸವೆಯುತ್ತದೆ ಎಂದು ಭಾವ - overgrazing ಎಂಬುದರ ಪದಶಃ ಅನುವಾದ!];
  • ಗೋಲೀಯಕಾಯವಾದ ಚಂದ್ರ ಭೂಮಿಯ ಏಕಮಾತ್ರ ಸ್ವಾಭಾವಿಕ ಉಪಗ್ರಹ [Moon is a spherical body which is the only natural satellite of our planet ಎಂಬುದರ ಪದಶಃ ಅನುವಾದ.  ಇಂಗ್ಲಿಷಿಗೆ ಸಹಜವಾದ ವಾಕ್ಯರಚನೆ ಕನ್ನಡಕ್ಕೂ ಸರಿಹೊಂದಬಹುದೇ?];
  • ಇನ್ನು ಈ ಚಂದ್ರನ ಪುರಾಣ ಅಷ್ಟಕ್ಕೇ ಮುಗಿಯುವುದಿಲ್ಲ.  ಅಮಾವಾಸ್ಯೆಯಿಂದ ಅಮಾವಾಸ್ಯೆಗೆ ಚಂದ್ರನ ೮ ಅವಸ್ಥೆಗಳನ್ನು ಗುರುತಿಸಿ ಅವುಗಳನ್ನು ಹೀಗೆ ಹೆಸರಿಸುತ್ತಾರೆ - ಅಮಾವಾಸ್ಯೆ, ವೃದ್ಧಿಬಾಲಚಂದ್ರ, ಅರ್ಧಚಂದ್ರ, ವೃದ್ಧಿಪೀನಚಂದ್ರ, ಹುಣ್ಣಿಮೆ, ಕ್ಷೀಣಪೀನಚಂದ್ರ, ಅರ್ಧಚಂದ್ರ, ಕ್ಷೀಣಬಾಲಚಂದ್ರ!  ಇಲ್ಲಿ ಹುಣ್ಣಿಮೆ, ಅಮಾವಾಸ್ಯೆ ಮತ್ತು ಚಂದ್ರ (ಹೆಚ್ಚೆಂದರೆ ಅರ್ಧಚಂದ್ರ) ಇಷ್ಟು ಬಿಟ್ಟರೆ ಇನ್ನು ಯಾವ ಪದವೂ ಮಕ್ಕಳಿಗೆ ಪರಿಚಯವಿಲ್ಲ - ವೃದ್ಧಿ, ಕ್ಷೀಣ, ಬಾಲ, ಪೀನ!  ಇವು ಇಂಗ್ಲಿಷಿನ waxing, waning, crescent, gibbousಗಳಿಗಿಂತ ಎಷ್ಟು ಮಟ್ಟಿಗೆ ಹೆಚ್ಚು ಪರಿಚಯ ಮಕ್ಕಳಿಗೆ? ಮೊದಲನೆಯದಾಗಿ, Waxing crescent, waxing gibbous, waning gibbous, waning crescent ಎಂದು ಮುಂತಾಗಿ ಚಂದ್ರನ ೮ ಅವಸ್ಥೆಗಳನ್ನು ಗುರುತಿಸುವ ಕ್ರಮವೇ ನಮ್ಮದಲ್ಲ.  ನಮ್ಮಲ್ಲಿ ಅದನ್ನು ಇನ್ನೂ ವಿವರವಾಗಿ ಪಾಡ್ಯ, ಬಿದಿಗೆ ಮೊದಲಾದ ೧೫ ತಿಥಿಗಳ ಮೂಲಕ, ೧೬ ಕಲೆಗಳ ಮೂಲಕ ಗುರುತಿಸುತ್ತೇವೆ.  ಮಕ್ಕಳಿಗೆ ಅದನ್ನೇ ಹೇಳಿದ್ದರಾಗಿತ್ತು.  ಅಥವಾ ಪಠ್ಯಪುಸ್ತಕಸಮಿತಿಯ ಸಾಮಾನ್ಯ ನಿಲುವು ಸಾರಿ ಹೇಳುವಂತೆ ಭಾರತೀಯವಾದ್ದು ನಿಕೃಷ್ಟ ಎಂಬ ಭಾವನೆಯೇ ಇದ್ದರೆ, ಈ ಪಾಶ್ಚಾತ್ಯ ಕ್ರಮದಲ್ಲಿ ಗುರುತಿಸಿದ ೮ ಅವಸ್ಥೆಗಳನ್ನೇ, ಅವುಗಳ ಮೂಲ ಹೆಸರಿನಲ್ಲೇ ವಿವರಿಸಬಹುದಿತ್ತು.  ಪದಕ್ಕೊಂದು ಪದ ಅನುವಾದಿಸಿ, ನಮ್ಮಲ್ಲಿ ಎಂದೂ ಉಪಯೋಗಿಸದ, ಮಕ್ಕಳೂ ಮುಂದೆಂದೂ ಉಪಯೋಗಿಸದ ಪಾರಿಭಾಷಿಕಗಳನ್ನು ಸೃಷ್ಟಿಸಿ ಮಕ್ಕಳನ್ನು ದಾರಿತಪ್ಪಿಸಲೇಬೇಕೆಂಬ ಹಠವೇಕೆ? 
  • ನೋಡಿ, ನಿಮ್ಮ ಬಳಿ ಹನ್ನೊಂದು ಮಾವಿನ ಹಣ್ಣು ಇದೆ.  ಅದನ್ನು ಕತ್ತರಿಸದೇ ಐದು ಜನಕ್ಕೆ ಹಂಚಬೇಕು - ಇದು ಭಾಗಾಕಾರದ ಲೆಕ್ಕ.  ಐದನ್ನು ಭಾಜಕ (ಭಾಗಿಸುವ ಸಂಖ್ಯೆ) ಎಂದೂ ಹತ್ತನ್ನು ಭಾಜ್ಯ (ಭಾಗಿಸಿಕೊಳ್ಳುವ ಸಂಖ್ಯೆ) ಎಂದೂ, ಎರಡನ್ನು ಭಾಗಲಬ್ಧ (ಒಬ್ಬೊಬ್ಬರಿಗೂ ಎಷ್ಟೆಷ್ಟು ಬಂತು) ಎಂದೂ, ಉಳಿದ ಒಂದನ್ನು ಶೇಷ (ಉಳಿದದ್ದು) ಎಂದೂ ಕರೆಯುತ್ತೇವೆ.  ಇದಕ್ಕೆ ಈ ಹೆಸರೇಕೆ ಬೇಕು?  ಏಕೆಂದರೆ ಮುಂದೆ ಭಾಜಕ, ಭಾಜ್ಯ ಮುಂತಾದುವುಗಳ ಪ್ರಸ್ತಾಪ ಉದ್ದಕ್ಕೂ ಬರುತ್ತಾ ಹೋಗುತ್ತದೆ, ಆದ್ದರಿಂದ ಇಲ್ಲಿ ಈ ರೀತಿಯ ಪಾರಿಭಾಷಿಕವ್ಯಾಖ್ಯೆ ಅಗತ್ಯ.  ಅದೇ, ನಿಮ್ಮ ಬಳಿ ಹತ್ತು ರುಪಾಯಿ ಇದ್ದು ಅದರಲ್ಲಿ ೩ ರುಪಾಯಿ ಕಳೆದು ಹೋಯಿತು, ಉಳಿದದ್ದೆಷ್ಟು ಎಂದರೆ? ಏಳು ಎಂದು ಉತ್ತರ ಹೇಳಿ ಮುಂದುವರೆಯಬಹುದು.  ದೊಡ್ಡ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ಕಳೆದು ಉಳಿದದ್ದನ್ನು ಉತ್ತರವೆಂದು ಹೇಳುತ್ತೇವೆ, ಇದು ಸಾಮಾನ್ಯಜ್ಞಾನ.  ಇಲ್ಲಿ ವಿವಿಧ ಅಂಶಗಳಿಗೆ ಹೆಸರು ಕೊಡುವ ಅಗತ್ಯವೇ ಇಲ್ಲ (ಇಂಗ್ಲಿಷಿನಲ್ಲಿ ಇವಕ್ಕೆ minuend (ಕಳೆದುಕೊಳ್ಳುವ ಸಂಖ್ಯೆ), subtrahend (ಕಳೆಯುವ ಸಂಖ್ಯೆ) ಮತ್ತು difference (ವ್ಯತ್ಯಾಸ) ಎನ್ನುತ್ತಾರೆ, ಆದರೆ ಕನ್ನಡದಲ್ಲಿ, ಮಕ್ಕಳ ಈ ಹಂತಕ್ಕೆ ಆ ಹೆಸರು ಕಟ್ಟಿಕೊಂಡು ಏನು ಮಾಡಬೇಕು?  ಕಳೆಯಲು ಬಂದರೆ ಸಾಕಲ್ಲವೇ?  ಆದರೆ ಪಠ್ಯವಿದ್ವಾಂಸರು ಅದನ್ನು ಅಲ್ಲಿಗೆ ಬಿಡುವುದಿಲ್ಲ.  ಈ ಪದಗಳನ್ನು ವ್ಯವಕಲ್ಯ, ವ್ಯವಕಲಕ, ಮತ್ತು ವ್ಯತ್ಯಾಸ ಎಂದು ಅನುವಾದಿಸಿಯೇ ಸಿದ್ಧ!  ಮಗು, ಕಲಿಯುವುದನ್ನು ಬಿಟ್ಟು ಈ ಪದಗಳ ಅರ್ಥ ತಿಳಿಯಲು ಯಾವ ನಿಘಂಟು ಹುಡುಕಿ ಹೋಗಬೇಕು?
ಹೀಗೆ ಒಂದೆಡೆ ಮಕ್ಕಳಿಗೆ ಅರ್ಥವೇ ಆಗದ ಪದಗಳನ್ನು ತುರುಕುವುದು ಒಂದೆಡೆಯಾದರೆ, ಮಕ್ಕಳಿಗೆ ಸಹಜವಾಗಿಯೇ ಅರ್ಥವಾಗುವ ಪದಗಳಿಗೂ ಪರ್ಯಾಯ ಇಂಗ್ಲಿಷ್ ಪದಗಳನ್ನು ಸೂಚಿಸುವುದು ಇನ್ನೊಂದು ಜಾಡ್ಯ.  ಉದಾಹರಣೆಗೆ ಈ ವಾಕ್ಯವನ್ನು ನೋಡಿ -

"ದೊಡ್ಡದಾದ ಭಾರವಾಗಿರುವ ಹನಿಗಳು ಮಳೆ (Rain)ಯಾಗಿ ಬರುತ್ತವೆ.  ಮೋಡಗಳ ಸುತ್ತಲೂ ಇರುವ ಗಾಳಿ ಇನ್ನೂ ತಣ್ಣಗಾದಾಗ ಈ ಹನಿಗಳು ಹಿಮ (snow) ರೂಪದಲ್ಲಿ ಬೀಳುತ್ತವೆ" [ಸಂಸ್ಕೃತವೇ ಬರದ ಮಕ್ಕಳಿಗೆ ಮಳೆ, ಹಿಮ ಮೊದಲಾದ ಕನ್ನಡ ಪದಗಳೆಲ್ಲಿ ಬಂದೀತು ಎಂಬ ಊಹೆಯಿರಬಹುದೇ!]. 

ಇನ್ನು "ಕೋಶದ ಎರಡೂ ತುದಿಗಳಿಗೆ ಒಂದು ಬಲ್ಬ್ (bulb)ನ ಮೂಲಕ ಜೋಡಿಸಿ" ಎಂಬ ವಾಕ್ಯದಲ್ಲಂತೂ ಬಳಸಿರುವುದು ಬಲ್ಬ್ ಎಂಬ ಇಂಗ್ಲಿಷ್ ಪದವನ್ನೇ!  ಅದನ್ನು ಮಕ್ಕಳಿಗೆ ಕನ್ನಡ ಲಿಪಿಯಲ್ಲಿ ಓದಲು ಬರುವುದಿಲ್ಲವೋ ಎಂಬಂತೆ ಬ್ರಾಕೆಟ್ಟಿನಲ್ಲಿ ಅದೇ ಪದ ಇಂಗ್ಲಿಷ್ ಲಿಪಿಯಲ್ಲಿ ಹಾಕಲಾಗಿದೆ! 

ಇದೆಲ್ಲದರಿಂದ ಒಂದು ವಿಷಯ ಸ್ಪಷ್ಟವಾಗುವುದೇನೆಂದರೆ, ಪಠ್ಯ ಸಿದ್ಧಪಡಿಸಿದವರಿಗೆ ಕನ್ನಡದ ಸಹಜ ಬಳಕೆ ಬರುವುದಿಲ್ಲ; ಮಕ್ಕಳ ಭಾಷೆ ಬರುವುದಿಲ್ಲ, ಕನ್ನಡದ ಆಡುನುಡಿಯಾಗಲೀ ಲಿಖಿತ ಭಾಷೆಯಾಗಲೀ ಸ್ಪಷ್ಟವಾಗಿ ಬರುವುದಿಲ್ಲ.  ಯಾವ ಮಾತು/ಪದ ಎಲ್ಲರಿಗೂ ಅರ್ಥವಾಗುತ್ತದೆ, ಯಾವುದು ಎಲ್ಲರಿಗೂ ಅರ್ಥವಾಗುವುದಿಲ್ಲ ಎಂಬ ಪರಿಜ್ಞಾನ ಕಿಂಚಿತ್ತೂ ಇಲ್ಲ!  ಹೋಗಲಿ ಸಂಸ್ಕೃತದ ಹುಚ್ಚಿಗೆ ಬಿದ್ದವರಂತೆ ಸಂಸ್ಕೃತ ಪದಗಳನ್ನು ತುರುಕುತ್ತಾರಲ್ಲ, ಆ ಜ್ಞಾನವಾದರೂ ಸ್ಪಷ್ಟವಿದೆಯೇ ಎಂದರೆ ಉಹುಂ.  ಸಂಧಿಪ್ರಕ್ರಿಯೆಯ ಪರಿಚಯವಿಲ್ಲ, ಪ್ರತ್ಯಯಗಳನ್ನು ಹಚ್ಚುವ ಬಗೆ ತಿಳಿದಿಲ್ಲ, ಕನ್ನಡ-ಸಂಸ್ಕೃತದ ಯಾವ ಪದಗಳನ್ನು ಬೆರೆಸಿದರೆ ಅಸಹ್ಯವಾಗಿ ಒಡ್ಡೊಡ್ಡಾಗಿರುತ್ತದೆ (ಇವಕ್ಕೆ ಪರಿಭಾಷೆಯಲ್ಲಿ ಅರಿಸಮಾಸ ಎನ್ನುತ್ತಾರೆ) - ಇದಾವುದರ ಪರಿವೆಯೂ ಇಲ್ಲ - ಆದರೆ ಹೊಸ ಪದಗಳನ್ನು ಕಟ್ಟೆ ಬಿಡುವ ಹುಕ್ಕಿಗೆ ಮಾತ್ರ ಮಿತಿಯಿಲ್ಲ.  ಇವರು ಕಟ್ಟಿದ ಕೆಲವು ಪದಗಳನ್ನು ನೋಡಿ: 
  • ಪರಮಾಣ್ವಕಗಳು (ಪರಮಾಣು + ಕ = ಪರಮಾಣ್ವಕ!!);
  • ರಕ್ತಹೀರುಕ (ರಕ್ತಾಹಾರಿ ಎನ್ನುವ ಪದ ಹೊಳೆಯಲಾರದು);
  • ಸಮಜಾತ್ಯಮಿಶ್ರಣ (ಸಮಜಾತಿ+ಅಮಿಶ್ರಣ? - homogenous mixture ಎನ್ನಲಿಕ್ಕೆ);
  • ಅಸವಿತ ನೀರು (distilled water ಅಂತೆ.  ಬ್ರಾಕೆಟ್ಟಿನಲ್ಲೇ ಭಟ್ಟಿಯಿಳಿಸಿದ ನೀರು ಎಂದೂ ಹೇಳಿದ್ದಾರೆ, ಆದರೂ ಇದೊಂದು ತಪ್ಪುತಪ್ಪಾದ ಹೊಸ ಪದ ಬೇಕೇ ಬೇಕು - ’ಅಸವಿತ’ ಪದದ ವ್ಯುತ್ಪತ್ತಿ ದೇವರೇ ಬಲ್ಲ!);
  • ವಿದ್ಯುದಾಗ್ರ (ವಿದ್ಯುತ್ + ಅಗ್ರ = ವಿದ್ಯುದಗ್ರ ಎನ್ನುತ್ತದೆ ವ್ಯಾಕರಣ.  ಆದರೆ ಪಠ್ಯಪುಸ್ತಕದ ವಿಜ್ಞಾನಲೇಖಕರು ವ್ಯಾಕರಣಾತೀತರು);
  • ಅವಪಾತ (precipitation!);
  • ಕಾರ್ಬನಿಕ ದ್ರಾವಕ (Organic solvent! - ಈ ಅನುವಾದ ಹೇಗೋ, ’ಕಾರ್ಬನಿಕ’ ಎಂಬ ಪದದ ವ್ಯುತ್ಪತ್ತಿಯೇನೋ, ದೇವರೇ ಬಲ್ಲ);
  • ಸಾಂದ್ರೀಕರಣ,
  • ಆವೀಕರಣ ("ಆವಿ" ಕನ್ನಡ, "ಕರಣ" ಸಂಸ್ಕೃತ.  ಅಲ್ಲದೇ ಕರಣ ಎಂದರೆ ಮಾಡುವಿಕೆ ಎಂದರ್ಥವೇ ಹೊರತು ಆಗುವಿಕೆ ಎಂದಲ್ಲ - ಆದರೆ ವಿಜ್ಞಾನಲೇಖಕರು ಅದಕ್ಕೆಲ್ಲ ಸೊಪ್ಪು ಹಾಕುವವರಲ್ಲ - ಕರಣಸರಣಿಗೆ ಹೊಸ ಸೇರ್ಪಡೆಯಾದರೆ ಆಯಿತು). 
ಇನ್ನಿಷ್ಟು ಹೇಳಿದ ಮೇಲೆ ಬಹು ಗಂಭೀರವಾದ ಪ್ರಮಾದವನ್ನು ಹೇಳದಿದ್ದರೆ ಲೇಖನ ಪೂರ್ಣಗೊಳ್ಳದು.  ಗಣಿತ ವಿಜ್ಞಾನ ಮೊದಲಾದ ಶಾಸ್ತ್ರವಿಷಯಗಳಲ್ಲಿ ಪಾರಿಭಾಷಿಕಗಳ ಮಹತ್ವ ಎಂಥದ್ದೆಂಬುದು ಎಲ್ಲರಿಗೂ ತಿಳಿದದ್ದೇ.  ಚಾಲ್ತಿಯಲ್ಲಿರುವ ಇಂಗ್ಲಿಷಿನ ಪಾರಿಭಾಷಿಕ ಪದಕ್ಕೆ ಕನ್ನಡದಲ್ಲಿ ಒಂದು ಪಾರಿಭಾಷಿಕ ಬೇಕೇ, ಇದ್ದರೆ ಅದು ಸಂಸ್ಕೃತಪದವಾಗಿರಬೇಕೆ, ಕನ್ನಡದ್ದಾಗಿರಬೇಕೇ, ಅಥವ ಇಂಗ್ಲಿಷಿನದನ್ನೇ ಉಳಿಸಿಕೊಳ್ಳಬೇಕೇ ಇದು ಬಹು ದೊಡ್ಡ ಚರ್ಚೆಯ ವಿಷಯ.  ಅದೇನೇ ಇರಲಿ, ಪಾರಿಭಾಷಿಕಗಳು ಶಿಕ್ಷಣಕ್ರಮದುದ್ದಕ್ಕೂ ಒಂದೇ ಆಗಿ, ಯಾವುದೇ ಗಲಿಬಿಲಿಗೆಡೆಗೊಡದಂತಿರಬೇಕಾದ್ದು ಅತ್ಯವಶ್ಯ.  ಏಕೆಂದರೆ ಈ ಒಂದು ಪಾರಿಭಾಷಿಕ ಪದದ ಮೇಲೆ ಇಡೀ ಪರಿಕಲ್ಪನೆಯನ್ನು ಕಟ್ಟಿ ವಿವರಿಸಿ ಬಳಸಲಾಗುತ್ತದೆ.  ಮೂಲಭೂತ ಮಟ್ಟದಲ್ಲಿ ವಿದ್ಯಾರ್ಥಿ ಇದನ್ನು ಗ್ರಹಿಸದೆ ಹೋದರೆ ಮುಂದಿನದೆಲ್ಲವೂ ಗಲಿಬಿಲಿಯ ಕೊಂಪೆಯೇ.  ಆದರೆ ಇಲ್ಲಿ ಪಾರಿಭಾಷಿಕಗಳ ಮಹತ್ವವನ್ನೇ ಅರಿಯದೇ ಒಂದೊಂದು ಕಡೆ ಒಂದೊಂದರಂತೆ ಯದ್ವಾತದ್ವಾ ಬಳಸಿರುವುದು ಗಮನಕ್ಕೆ ಬರುತ್ತದೆ.  ಕೆಲವು ಉದಾಹರಣೆಗಳನ್ನು ನೋಡಿ: 



ನಾಲ್ಕನೆಯ ತರಗತಿಯಲ್ಲಿ ಭಾಗಾಕಾರದ ಪಾರಿಭಾಷಿಕ ಪದಗಳನ್ನು ವಿವರಿಸುತ್ತಾ ತಿಳಿಸುತ್ತಾರೆ "ಯಾವ ಸಂಖ್ಯೆಯನ್ನು ಭಾಗಿಸಬೇಕಾಗಿದೆಯೋ ಅದು ಭಾಜ್ಯ; ಯಾವ ಸಂಖ್ಯೆಯಿಂದ ಭಾಜ್ಯವನ್ನು ಭಾಗಿಸಲಾಗುತ್ತಿದೆಯೋ ಅದು ಭಾಜಕ; ಭಾಗಾಕಾರದ ಫಲಿತಾಂಶವನ್ನು ಭಾಗಲಬ್ದ ಎನ್ನುತ್ತಾರೆ (ಇಂಗ್ಲಿಷಿನಲ್ಲಿ ಇದಕ್ಕೆ ಕ್ರಮವಾಗಿ Dividend, Divisor, ಮತ್ತು Quotient ಎಂದರು)".  ಇದು ನಾವೆಲ್ಲರೂ ಕಲಿತು ಬಂದಿರುವುದೇ.  ಆದರೆ ಏಳನೆಯ ತರಗತಿಗೆ ಬಂದರೆ, Rational Number ಎಂಬುದನ್ನು ಭಾಗಲಬ್ಧಸಂಖ್ಯೆ ಎಂದು ಅನುವಾದಿಸಿಬಿಟ್ಟರು ("ಭಾಗಲಬ್ಧ" ನಾಲ್ಕನೆಯ ತರಗತಿಯ ವಿವರಣೆ ನೋಡಿ)!  ಮತ್ತು ಆ ಅನುವಾದದಮೇಲೆಯೇ ಇಡೀ Rational Numbers ಅಧ್ಯಾಯವನ್ನು ನಡೆಸಿದ್ದಾರೆ.  ಅಧ್ಯಾಯದೊಳಗೇ ಇಂಗ್ಲಿಷಿನ ವಿವರಣೆಗೂ ಕನ್ನಡದ ವಿವರಣೆಗೂ ಸಂಬಂಧವಿಲ್ಲ, ಇಡೀ ಅಧ್ಯಾಯ ಗೊಂದಲದ ಗೂಡಾಗಿದೆ!

ಇನ್ನು ಅದೇ ಅಧ್ಯಾಯದಲ್ಲಿ Natural numbers, Whole Numbers ಮತ್ತು Integers ಎನ್ನುವುದನ್ನು ಕ್ರಮವಾಗಿ ಸ್ವಾಭಾವಿಕ ಸಂಖ್ಯೆಗಳು, ಪೂರ್ಣಸಂಖ್ಯೆಗಳು ಮತ್ತು ಪೂರ್ಣಾಂಕಗಳು ಎಂದು ಅನುವಾದಿಸಿದ್ದಾರೆ.  ಪೂರ್ಣಸಂಖ್ಯೆ ಎಂದರೇನು ಪೂರ್ಣಾಂಕ ಎಂದರೇನು?  ಅಂಕ (ಅಂಕಿ) ಎಂದರೆ ಸೊನ್ನೆಯಿಂದ ಒಂಬತ್ತರವರೆಗಿನ ಒಂದು ಸ್ಥಾನದ ಸಂಖ್ಯೆ, ಮತ್ತು ಸಂಖ್ಯೆ ಎಂದರೆ ಇಂಥಾ ಹಲವು ಸ್ಥಾನಗಳನ್ನೂ, ದಶಮಾಂಶಗಳನ್ನೂ ಒಳಗೊಂಡ ಸಂಖ್ಯೆ ಎಂಬುದು ಮಕ್ಕಳಿಗೆ ಮೊದಲಿನಿಂದಲೂ ಕಲಿಸಿದ ವಿಷಯ.  ಈಗ ಇದ್ದಕ್ಕಿದ್ದಹಾಗೆ ಪೂರ್ಣಾಂಕ ಎಂದರೆ Integer ಎಂದುಬಿಟ್ಟರೆ, ಮಕ್ಕಳ ಗ್ರಹಿಕೆಗೆ ಏನಾಗಬೇಕು?  ಅದರಲ್ಲೂ ಇಡೀ Rational Number ಎಂಬ ಅಧ್ಯಾಯವನ್ನು ಅರಿಯಲು ಈ ಮೂರು ರೀತಿಯ ಸಂಖ್ಯೆಗಳ ಅರಿವು ಬಹು ಮುಖ್ಯವಾದದ್ದು. 

ಮುಂದುವರೆದು Rational Numberನ ವ್ಯಾಖ್ಯೆಯಲ್ಲೂ ಭಾರೀ ಎಡವಟ್ಟು ಮಾಡಿದ್ದಾರೆ.  ಇಂಗ್ಲಿಷಿನ ಮೂಲ ಹೀಗಿದೆ "All numbers of the form p/q are rational numbers. In p/q, q is not equal to 0 and p,q are integer"  ಇದರ ವ್ಯಾಕರಣ ಏನೇ ಇರಲಿ, ಈ ಸಾಲು ಹೇಳುವುದಿಷ್ಟು - p/q ಎನ್ನುವ ಸಂಖ್ಯೆ Rational number (ಭಾಗಲಬ್ಧ ಸಂಖ್ಯೆ!) ಆಗಬೇಕಾದರೆ, ಅದರಲ್ಲಿ q ಎನ್ನುವುದು ಸೊನ್ನೆಯಾಗಿರಬಾರದು, ಮತ್ತು p ಮತ್ತು q ಎರಡೂ Integer (ಪೂರ್ಣಾಂಕ!)ಗಳಾಗಿರಬೇಕು.  ಇದು ತಾನೆ ವಿವರಣೆ?  ಕನ್ನಡ ಪಠ್ಯದಲ್ಲಿ ಕೊಟ್ಟಿರುವ ವಿವರಣೆ ದಿಕ್ಕೆಡಿಸುವಂತಿದೆ.  "a/b ರೂಪದಲ್ಲಿರುವ ಎಲ್ಲಾ ಸಂಖ್ಯೆಗಳು ಭಾಗಲಬ್ಧ ಸಂಖ್ಯೆಗಳಾಗಿರಲು, a/b ಇದರಲ್ಲಿ a ಪೂರ್ಣಾಂಕ ಹಾಗೂ b ಸೊನ್ನೆಯಲ್ಲದ ಸಂಖ್ಯೆಯಾಗಿರುತ್ತದೆ.  ಭಾಗಲಬ್ಧ ಸಂಖ್ಯೆಯ ಛೇದವು ಯಾವಾಗಲೂ ಸ್ವಾಭಾವಿಕ ಸಂಖ್ಯೆ ಆಗಿರುತ್ತದೆ"!!!  ಇಂಗ್ಲಿಷಿನಲ್ಲಿ ಅಂಶ ಛೇದಗಳೆರಡೂ Integer (ಪೂರ್ಣಾಂಕ) ಆಗಿರಬೇಕೆಂದಿದೆ.  ಕನ್ನಡದಲ್ಲಿ ಛೇದವು ಸ್ವಾಭಾವಿಕ ಸಂಖ್ಯೆ (Natural Number) ಆಗಿರಬೇಕೆಂದಿದೆ!

ಈ ಅಧ್ಯಾಯವನ್ನು ಪೂರ್ಣ ನೋಡಿದ ಯಾರಿಗಾದರೂ, ಇಲ್ಲಿಯ ವಿಷಯ ವಿವರಿಸುವವರಿಗೇ ಸ್ಪಷ್ಟವಿಲ್ಲವೆಂಬುದು ಬಹು ನಿಚ್ಚಳವಾಗಿ ಗೋಚರಿಸುತ್ತದೆ. ಹಾಗಿದ್ದರೆ ಮಕ್ಕಳ ಗತಿಯೇನು?  ಕನ್ನಡಾಭಿಮಾನ, ಕನ್ನಡಮ್ಮನ ಸೇವೆ ಎಂದೆಲ್ಲಾ ಚಿಂತಿಸುವವರ ತಪ್ಪಿಗೆ ಇದು ಶಿಕ್ಷೆಯೇ?  ದುಬಾರಿ ಹಣ ತೆತ್ತು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಲಾಗದೇ, ಬೇರೆ ಗತಿಯಿಲ್ಲದೇ ಕನ್ನಡ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ನೀಡುವ ಬಳುವಳಿಯೇ?  ಮಕ್ಕಳು ಹೊಸ ವಿದ್ಯೆ ಕಲಿತು ಬರುವ ಬದಲು ತಮಗೆ ಬರುವ ಕನ್ನಡವನ್ನೂ ಮರೆತು ಬರಬೇಕೇ?  ಅರ್ಥವೇ ಇಲ್ಲದ ಪದಗಳಿಗಾಗಿ ನಿಘಂಟು ತಡಕುವುದೇ ಗಣಿತ-ವಿಜ್ಞಾನಗಳ ಪಾಠವಾಯಿತೇ?  ಈ ಅಜ್ಞಾನದ ಕೊಂಪೆಗಳಿಗಿಂತ ಮಕ್ಕಳಿಗೆ ಮನೆಯೇ ಉತ್ತಮ ಪಾಠಶಾಲೆಯಾಗಬೇಕಾದ ಅಗತ್ಯವೊದಗಿದೆಯೇ? ಗಂಭೀರವಾಗಿ ಚಿಂತಿಸುವ ಕಾಲ ಬಂದಿದೆ.

ಸೂ: ಈ ಲೇಖನವು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ದಿನಾಂಕ ೨೩-೦೭-೨೦೧೭ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದೆ:


 

Monday, July 31, 2017

ಅಥಾತೋ ಭೂತ ಜಿಜ್ಞಾಸಾ...

ಧೂರ್ತಲಕ್ಷಣವನ್ನು ವಿವರಿಸುವ ಸಂಸ್ಕೃತ ಸುಭಾಷಿತವೊಂದಿದೆ:

ಮುಖಂಪದ್ಮದಲಾಕಾರಂ ವಚಶ್ಚನ್ದನ ಶೀತಲಮ್
ಹೃತ್ ಕರ್ತರಿಸಮಂ ಚಾತಿವಿನಯಂ ಧೂರ್ತಲಕ್ಷಣಮ್

(ಮೊಗವು ತಾವರೆಯೆಸಳು ನುಡಿ ಚಂದನದ ತಂಪು
ಚಗಮೊಗನೆ ಮಸೆವ ಕತ್ತರಿಯೆದೆಯೊಳು
ಮಿಗುವ ಅತಿವಿನಯವೆಂಬೀ ನಾಲ್ಕು ಲಕ್ಷಣಗ
ಳೊಗೆದಿರಲು ಧೂರ್ತಲಕ್ಷಣವದೆಂಬರ್ 
    - ಅನುವಾದ ನನ್ನದೇ)

ಈ ಲಕ್ಷಣಗಳು ಸಾರ್ವಕಾಲಿಕವಷ್ಟೇ ಅಲ್ಲ, ಸಾರ್ವದೇಶಿಕವೂ ಹೌದು.  ಚಾರ್ಲ್ಸ್ ಡಿಕನ್ಸ್ ತನ್ನ ಅಮರಕೃತಿ ಡೇವಿಡ್ ಕಾಪರ್ ಫೀಲ್ಡ್ ಕಾದಂಬರಿಯಲ್ಲಿ ಉರಯ್ಯ ಹೀಪ್ (Uriah Heep) ಎಂಬ ಧೂರ್ತಶಿಖಾಮಣಿಯ ಪಾತ್ರವನ್ನು ಕಟ್ಟಿ ಕೊಡುತ್ತಾನೆ.  ಆತನ ಕೃತಕಾತಿಕೃತಕ ನಯ-ವಿನಯ, ಹಾವು ಬಳುಕಿದಂತೆ ಮೈಕೈ ಡೊಂಕಿಸಿಕೊಂಡು ಬಳಕುವ, ಹಾವಭಾವ ತುಂಬಿದ ಆತನ ನಲಿತ ನುಲಿತ, ಅದರ ಕೆಳಪದರದಲ್ಲಿ ಥಣ್ಣನೆ ಹರಿಯುವ, ಮಿಣ್ಣನೆ ಕತ್ತು ಕೊಯ್ಯಬಲ್ಲ ಕಪಟಾನುಸಂಧಾನ, ಅದನ್ನು ಮುಚ್ಚುವ ಸುಳಿನಗೆ, ಜೇನು-ಸಕ್ಕರೆ ಸವರಿದ ಮಾತು - ಈ ಪಾತ್ರ, ಮೇಲಿನ ಸುಭಾಷಿತಕ್ಕೆ ಲಕ್ಷ್ಯದಂತಿದೆ.  ತನ್ನ ಲಕ್ಷ್ಯಸಾಧನೆಗೆ ಈತ ಯಾವ ಸುಳ್ಳನ್ನು ಯಾರಿಗಾದರೂ ಹೇಳಬಲ್ಲ, ಯಾರ ಹಿತವನ್ನಾದರೂ ಬಲಿಗೊಡಬಲ್ಲ, ಶಿಕ್ಷೆಗೊಳಗಾದಾಗಲೂ ಶಿಕ್ಷೆಯನ್ನು ಅದೊಂದು ಮಹಾಪ್ರಾಯಶ್ಚಿತ್ತವೆಂಬಂತೆ ಪ್ರದರ್ಶಿಸುತ್ತಾ, ಮಹಾಧಾರ್ಮಿಕನಂತೆ ಧರ್ಮಗ್ರಂಥಗಳನ್ನು ಪಠಿಸುತ್ತಾ, ಪರಮಧಾರ್ಮಿಕನೇ ಆಗಿಬಿಡಬಲ್ಲ.  ಅಡಿಗಡಿಗೆ ಧರ್ಮಗ್ರಂಥಗಳಿಂದ ಉದ್ಧರಿಸುತ್ತಾ, ಸ್ವತಃ ತಾನೇ ನಂಬದ, ನೆಚ್ಚದ, ಆಚರಿಸದ ನೀತಿಯ ಪಾಠ ಮಾಡುತ್ತಾ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಬಲ್ಲ.  ಆ ಮೆಚ್ಚುಗೆಯನ್ನೇ ತನ್ನ ಚಿಮ್ಮುಗಲ್ಲಾಗಿ ಬಳಸಿಕೊಳ್ಳಬಲ್ಲ.

ಇಂಥಾ ಕಪಟಧರ್ಮಶ್ರವಣವನ್ನು Devil quoting from the scripture ಎನ್ನುತ್ತಾರೆ.  ಬಹುಶಃ ಈ ನಾಣ್ನುಡಿಗೆ ಮೂಲವಾಗಿರಬಹುದಾದ ಶೇಕ್ಸ್ಪಿಯರ್ ಮಹಾಕವಿಯ ಈ ಮಾತುಗಳನ್ನು ನೋಡಿ:
The devil can cite Scripture for his purpose.
An evil soul producing holy witness
Is like a villain with a smiling cheek,
A goodly apple rotten at the heart.
Oh, what a goodly outside falsehood hath!
    - Antonio to Shylack in Shakespere's "The Merchant of Venice"

ತನಗನುಕೂಲವೆನ್ನುವುದಾದರೆ ದೆವ್ವವೂ ದೈವವಾಕ್ಯಗಳನುದ್ಧರಿಸಿ ಕೊಟ್ಟೀತು
ದೇವರಾಣೆಯಿಡುವ ದುರಾತ್ಮ
ನಗೆಮೊಗದ ಖಳ
ಒಳಗೇ ಕೊಳೆತಿರುವ ದೈವೀ ಫಲ.
ಓಹ್, ಸುಳ್ಳತನಕೆಂತಹ ಸಾತ್ತ್ವಿಕತೆಯ ಮೊಗವಾಡ!
    - ಅಂತೋನಿಯೋ, ಶೈಲಾಕನಿಗೆ, ಶೇಕ್ಸ್ಪಿಯರನ "ದ ಮರ್ಚೆಂಟ್ಸ್ ಆಫ್ ವೆನಿಸ್" ನಾಟಕದಲ್ಲಿ

ಬಹುಶಃ ಇದೇ ನಾಣ್ನುಡಿಯಿಂದ ಪ್ರೇರಿತವಾದ ಹೊಸಗಾಲದ ಕನ್ನಡ ನಾಣ್ನುಡಿಯೊಂದು ಬಹು ಪ್ರಸಿದ್ಧವಾಗಿದೆ - "ಭೂತದ ಬಾಯಲ್ಲಿ ಭಗವದ್ಗೀತೆ"  ಭಗವದ್ಗೀತೆಯೂ ಭೂತವೂ ಸ್ವಭಾವತಃ ಪರಸ್ಪರ ವಿರುದ್ಧ ವಿಷಯಗಳು.  ಭಗವದ್ಗೀತೆಯು ಧರ್ಮವನ್ನು ಬೋಧಿಸಿದರೆ, ಅಧರ್ಮವೇ ಭೂತದ ಧರ್ಮ.  ಹೀಗೆ ಅಧರ್ಮಗಾಮಿಯಾದ ಭೂತವು ತನ್ನ ಬಲಿಪಶುವನ್ನು ನಂಬಿಸಿ ಸೆಳೆದೊಯ್ಯಲು ಭಗವದ್ಗೀತೆಯ ಅಗತ್ಯವಿದ್ದರೆ, ಅದನ್ನು ಬಳಸಲೂ ಹಿಂಜರಿಯದು.  ಅದಕ್ಕೆ ತಕ್ಕಂಥದ್ದೊಂದು ವೇಷ, ಭಾಷೆ, ಪರಿಭಾಷೆ ಹೊಂದಿಸಿಕೊಂಡರಾಯಿತು - ಭೂತವು ಇದರಲ್ಲೆಲ್ಲ ಎತ್ತಿದ ಕೈ.  ಭೂತದ ಮಾರುವೇಷ-ಭಾಷೆಗಳಿಗೆ ಮಾರುವೋದರೆ ಅದು ಹೇಗೆ ನಿಮ್ಮ ನೈತಿಕತೆಯ ಕತ್ತು ಹಿಸುಗಿ ನಿಮ್ಮಮೇಲೇ ಸವಾರಿ ಮಾಡಬಹುದು ಎಂಬುದನ್ನು ಪ್ರೊ. ಎನ್ ಎಸ್ ಲಕ್ಷ್ಮೀನಾರಾಯಣಭಟ್ಟರ ಈ ಕವನ ಸೊಗಸಾಗಿ ಚಿತ್ರಿಸುತ್ತದೆ:

ನಡುರಾತ್ರಿ ದೆವ್ವಗಳು
ಬಾಗಿಲನ್ನು ಬಡಿದವು,
ಯಾರೋ ಎಂದು ತೆರೆದೆ.
ಕಾಲಮೇಲೆ ಬಿದ್ದು
ಮುಳುಮುಳನೆ ಅತ್ತವು,
ಪಾಪ ! ಒಳಕ್ಕೆ ಕರೆದೆ.
ದೀನಮುಖ ಮಾಡಿ
ಕೈ ಹಿಡಿದು ಬೇಡಿದವು,
ಜೊತೆ ಹೋಗಲೊಪ್ಪಿದೆ.

ಅವು
ಇಟ್ಟ ಬೀದಿಗಳಲ್ಲಿ
ಬೀಗಿ ನಡೆದೆ,
ತೆರೆದ ಹಳ್ಳಗಳನ್ನು ಕೂಡಿ ಜಿಗಿದೆ.
ಕೊಟ್ಟ ತೀರ್ಥ ಕುಡಿದೆ
ಬಿಟ್ಟ ಹೆಣ್ಣನ್ನು ಮಿಡಿದೆ,
ಆಕಾಶಕ್ಕೆ ಮುಖ ಮಾಡಿ
ಸೂರ‍್ಯನಿಗೇ ಉಗಿದೆ.
ನೆಗೆದೆ.

ದೆವ್ವಗಳು ಕಲಿಸಿದ್ದೆಲ್ಲ
ಬಲು ವಿಚಿತ್ರ
ನಾಲ್ಕರಲ್ಲಿ ಎಂಟು ಕಳೆಯಬಹುದು,
ದಶಕದ ನೆರವಿಲ್ಲದೆ.
ಹೆಜ್ಜೆ ಊರದೆ ನೆಲಕ್ಕೆ ನಡೆಯಬಹುದು,
ಭಾರದ ಅರಿವಿಲ್ಲದೆ.
ಬೆಟ್ಟವನ್ನೇ ಬಗೆದು
ಗಾಳಿಯನ್ನೇ ಸಿಗಿದು
ಹೊಳೆಯಲ್ಲೂ ಮುಳುಗಬಹುದು,
ಕೂದಲೇ ನೆನೆಯದೆ.

ಆದರೆ ಒಂದು ವಿಷಯ;
ನೊಂದ ಜೀವಕ್ಕೆ ಮರುಗಿ
ಕಂಬನಿಯೊಂದ ಹಾಕಲು,
ತನ್ನ ಬೆವರೇ ಹರಿಸಿ
ತಿನ್ನುವ ಅನ್ನ ಬೇಯಿಸಲು,
ತರ್ಕ ಬಿಟ್ಟು ದೇವಾಲಯಕ್ಕೆ
ಸುತ್ತೊಂದನ್ನು ಹಾಕಲು
ಆಗುವುದೇ ಇಲ್ಲ.
ಬಲು ವಿಚಿತ್ರ ಎಂದರೆ
ಒಳಗಡೆ ಮಗು ಚೀರಿತೆನ್ನಿ,
ಕತ್ತು ಹಿಸುಕಿ ಕೊಂದಲ್ಲದೆ
ನಿದ್ದೆ ಬರುವುದಿಲ್ಲ!

ಅಂದಹಾಗೆ, ದೆವ್ವ-ಭೂತ ಮೂಢನಂಬಿಕೆಗಳನ್ನು ಹರಡುವ ಪ್ರಯತ್ನವೆಂದು ಮೂಗು ಮುರಿಯದಿರಿ - ಆ ನಂಬಿಕೆಯೇ ನನ್ನದಲ್ಲ.  ದೆವ್ವವಿದೆಯೆಂದು ಹೇಳಲಾಗುತ್ತಿದ್ದ ನಮ್ಮೂರ ನಾರಾಯಣಸ್ವಾಮಿಯ ರಥದ ಒಳಹೊರಗನ್ನೆಲ್ಲಾ ಹೊಕ್ಕು ನೋಡಿದ್ದೇನೆ, ಬಾಲ್ಯಕಾಲದಲ್ಲಿ.  ಹೆಸರಿಗಾದರೂ ಒಂದು ಪಿಳ್ಳೆ ದೆವ್ವವನ್ನು ಕಾಣಲಿಲ್ಲ.  ಆದ್ದರಿಂದ ಇಲ್ಲಿ ದೆವ್ವವೊಂದು ಸಂಕೇತವಷ್ಟೇ.  "ಎಲ್ಲಾ ಗುಣಗಳು ನಿನ್ನಲೆ ಅಡಗಿ ಕಾಳಗ ಮಾಡುತಿವೆ" ಎಂದು ನಮ್ಮ ರಾಜ್ ಕುಮಾರರು ಹಾಡಿಲ್ಲವೇ, ಬಹದ್ದೂರ್ ಗಂಡು ಸಿನಿಮಾದಲ್ಲಿ?  ಹಾಗೆ ದೈವ ದೆವ್ವಗಳೆರಡೂ ನಮ್ಮಲ್ಲಿಯೇ, ನಮ್ಮ ನಡುವೆಯೇ ಇವೆ - ಯಾವುದು ಏನು ಎಂದು ಒರೆಹಚ್ಚಿ ನಂಬುವ ಎಚ್ಚರ ಮಾತ್ರ ಅಗತ್ಯ; ಅದರಲ್ಲೂ ಭೂತಗಳೇ ಭಗವದ್ಗೀತೆಯನ್ನು ಜೋರೊಜೋರಾಗಿ ಪಠಿಸುವ ಈ ಕಾಲದಲ್ಲಂತೂ ಈ ಎಚ್ಚರ ಅತ್ಯವಶ್ಯ.  ಈ ಸುಭಾಷಿತ ಎಚ್ಚರದ ಗುಳಿಗೆಯಂತೆ ಕೆಲಸ ಮಾಡಬಹುದೇನೋ, ದಿನಕ್ಕೆ ಮೂರು ಬಾರಿ ಪಠಿಸಿದರೆ:

ಅಹೋ ದುರ್ಜನಸಂಸರ್ಗಾತ್ ಮಾನಹಾನಿಃ ಪದೇ ಪದೇ ।
ಪಾವಕೋ ಲೋಹಸಂಗೇನ ಮುದ್ಗರೈರಭಿತಾಡ್ಯತೇ
(ಆಹಾ! ದುರ್ಜನಸಂಸರ್ಗದಿಂದ ಪದೇಪದೇ ಮಾನಹಾನಿಯೇ ಕಟ್ಟಿಟ್ಟ ಬುತ್ತಿ; ಲೋಹದ ಸಂಗದಿಂದ ಅಗ್ನಿಗೂ ಸುತ್ತಿಗೆ ಪೆಟ್ಟು ಬೀಳುವಂತೆ)


Wednesday, May 31, 2017

ಕಂದ ನೀನು ಸಾಯಲೇಕೆ...



ಕಳೆದೆರಡು ದಿನದಿಂದ ಈ ಮುಗ್ಧ ಕರುವಿನ ಚಿತ್ರ ಪದೇಪದೇ ನಿದ್ದೆಗೆಡಿಸುತ್ತಿದೆ.  ಮೊನ್ನೆ ಕೇರಳದಲ್ಲಿ ಕೆಲವು ರಕ್ಕಸರು ಪ್ರತಿಭಟನೆಯ ಹೆಸರಿನಲ್ಲಿ ಕಡಿದು ತಿಂದು ತೇಗಿದರಲ್ಲ, ಆ ಪಾಪದ ಕರುವೇ ಇದು.  ಕಡಿಯಲು ಟೆಂಪೋ ಹತ್ತಿಸುವ ಕೆಲವೇ ಕ್ಷಣಗಳ ಹಿಂದಿನ ಚಿತ್ರ.  ಬಲಿಗೆ ಹೋಗುವ ಪ್ರಾಣಿಗಳ ಕಣ್ಣುಗಳಲ್ಲಿ ಸಾಮಾನ್ಯವಾಗಿ ಕಾಣುವ ಭಯದ ಸೂಚನೆಯೂ ಇಲ್ಲ ಅದರ ಮೊಗದಲ್ಲಿ.  ಇನ್ನೈದೇ ನಿಮಿಷದಲ್ಲಿ ತನ್ನನ್ನು ಕೊಲ್ಲುತ್ತಾರೆಂಬ ಅರಿವೂ ಇರಲಾರದು ಪಾಪದ್ದಕ್ಕೆ.  ಕೇವಲ ಯಾರದೋ ಮೇಲಿನ ಹುರುಡಿಗಾಗಿ ಇದನ್ನು ಕತ್ತರಿಸಿ ಚೆಲ್ಲಿದ ಕಟುಕರು ಈ ಮೊಗವನ್ನು, ಈ ಭಾವವನ್ನು ಕ್ಷಣಕಾಲವಾದರೂ ನಿರುಕಿಸಿದ್ದರೇ?  ಖಂಡಿತಾ ಇರಲಿಕ್ಕಿಲ್ಲ.

ಬಾಲ್ಯದಲ್ಲಿ ನಾನು ಕೊಟ್ಟಿಗೆಯಲ್ಲಿ ಕೂತು ದಿನಗಟ್ಟಲೆ ಹರಟುತ್ತಿದ್ದ ತುಂಗೆ ಕರುವೂ ಬಹುತೇಕ ಹೀಗೇ ಇತ್ತು.  ಅದೇ ಬಟ್ಟಲುಗಣ್ಣು, ಅದೇ ಹೊಳಪು, ಅದೇ ಮಾಟವಾದ ಮೋರೆ, ತುಸುವೇ ನಗುವಂತಿದ್ದ ಮುಖಭಾವ, ಹಣೆಯ ಮೇಲೆ ಅದೇ ಬಿಳಿಯ ಲಾಂಛನ.  ಮೈಬಣ್ಣವೊಂದು ತುಸು ತಿಳಿದು, ವಯಸ್ಸೊಂದು ಇನ್ನೂ ಚಿಕ್ಕದು... ಅಂಥದ್ದೊಂದು ಮುದ್ದಾದ ಜೀವಿಗೆ ಇಂಥ ದಾರುಣವಾದ ಅಂತ್ಯವೂ ಸಾಧ್ಯವಿರಬಹುದೆಂದು ಯೋಚಿಸಲೂ ಆಗದ ವಯಸ್ಸು ಅದು.  ಹಾಲು ಕರೆಯುವುದನ್ನು ನಿಲ್ಲಿಸಿದ ಹಸುವಿಗೂ ಮನೆಯಲ್ಲಿ ಹೊರೆ ಹುಲ್ಲು, ಒಂದಷ್ಟು ’ತಿಂಡಿ’ ದಕ್ಕುತ್ತಿತ್ತು; ಮೇಯಲು ಗೋಮಾಳವಿತ್ತು.  ಸತ್ತವುಗಳನ್ನು ಸಾಮಾನ್ಯವಾಗಿ ಮಾದಿಗರು ಒಯ್ಯುತ್ತಿದ್ದರಾದರೂ ಕೆಲವು ಮನೆಗಳಲ್ಲಿ ಮನೆಯ ಸದಸ್ಯರಂತೆಯೇ ಇರುತ್ತಿದ್ದ ಅವುಗಳು ಆನಂತರ ಛಿದ್ರಛಿದ್ರವಾಗಿ ಹೋಗುವುದನ್ನು ಕಲ್ಪಿಸಿಕೊಳ್ಳಲಾಗದೇ ಕೆಲವು ಮನೆಯವರು ತಮ್ಮ ಜಾಗೆಯಲ್ಲೇ ಮಣ್ಣು ಮಾಡುತ್ತಿದ್ದುದೂ, ಅದಕ್ಕಾಗಿ ಕೆಲವೊಮ್ಮೆ ಮಾದಿಗರು ಬಂದು ಜಗಳವಾಡುತ್ತಿದ್ದುದೂ ಉಂಟು - ಆಗ ಅದರ ಹಿಂದಿನ ಆರ್ಥಿಕತೆ, ಸಾಮಾಜಿಕ ನಡಾವಳಿಗಳು ನನಗಿನ್ನೂ ಅರ್ಥವಾಗದ ವಯಸ್ಸು.  ಹೋರಿಗರುಗಳನ್ನೂ ಅವು ಹಾಲು ಕುಡಿಯುವುದನ್ನು ಬಿಡುವವರೆಗೆ ಇಟ್ಟುಕೊಂಡು ಆಮೇಲೆ ಅದನ್ನು ರೈತರಿಗೆ ಮಾರುತ್ತಿದ್ದುದನ್ನೂ, "ಕಟುಕರಿಗೆ ಮಾರಿಗೀರೀಯ" ಎಂಬ ಕೊನೆಯ ಎಚ್ಚರಿಕೆಯೊಂದಿಗೆ ಬೀಳ್ಕೊಡುತ್ತಿದ್ದುದನ್ನೂ ನೋಡಿದ್ದೇನೆ.  ಆಮೇಲೆ ಅವುಗಳ ಗತಿ ಏನಾಗುತ್ತಿತ್ತೋ ಅರಿಯೆ - ಕೆಲವೊಮ್ಮೆ ಅವು ’ಮನೆ’ಯನ್ನು ಹುಡುಕಿಕೊಂಡು ಕೊಟ್ಟಿಗೆಗೇ ಮರಳಿ ಬಂದದ್ದೂ, ಆಗೆಲ್ಲಾ ಅವಕ್ಕೊಂದಷ್ಟು ಹುಲ್ಲು ಹಾಕಿ, ಮೈದಡವಿ, ’ಬುದ್ಧಿ ಹೇಳಿ’ ಮತ್ತೆ ಹೊಸ ಯಜಮಾನರ ಬಳಿ ಕಳಿಸುತ್ತಿದ್ದುದೂ ಉಂಟು.

ಇವೆಲ್ಲ, ಹಸುವನ್ನು (ಹಸುಗಳನ್ನು) ಮನೆ ಮಟ್ಟಿಗೆ ಸಾಕುತ್ತಿದ್ದ ದೊಡ್ಡದೊಡ್ಡ ಅವಿಭಕ್ತ ಕುಟುಂಬಗಳ ಕಾಲ - ಹೊರಗಿನಿಂದ ಹಾಲನ್ನು ಕೊಂಡು ತಂದರಿಯದ ಕಾಲ - ಹೈನುಗಾರಿಕೆ ಆಗಷ್ಟೇ ನಿಧಾನಕ್ಕೆ ಉದ್ಯಮದ ರೂಪ ಪಡೆಯುತ್ತಿದ್ದ ಕಾಲ.  ಹಸುವನ್ನು ಪೂಜಿಸುವುದು, ಪ್ರೀತಿಸುವುದು, ಸತ್ತರೆ ಮನೆಯವರ ಸಾವಿನಂತೆಯೇ ದುಃಖಿಸಿ ಮಣ್ಣು ಮಾಡುವುದು ಇಷ್ಟು ಮಾತ್ರ ಗೊತ್ತಿದ್ದ ಬಾಲ್ಯ ನಮ್ಮದು.  ಕೆಲವರು ಮಾತ್ರ ಹೋರಿಗರುಗಳನ್ನೂ, ಉಳಲಾರದ ಮುದಿ ಎತ್ತುಗಳನ್ನೂ ಎಲ್ಲೋ ಅಪರೂಪಕ್ಕೆ ಗೊಡ್ಡು ಹಸುಗಳನ್ನೂ ಹೊರಗಿನವರಿಗೆ ಮಾರುತ್ತಿದ್ದುದುಂಟು (ಸಹಜವಾಗಿಯೇ ಅವು ಕಸಾಯಿಖಾನೆಯ ದಾರಿ ಹಿಡಿಯುತ್ತಿದ್ದಿರಬೇಕು), ಆದರೆ ಬಾಲ್ಯಕ್ಕೆ ಆ ಕಠೋರ ಸತ್ಯ ತಿಳಿದಿರಲಿಲ್ಲ. 

ಮುಂದೆ ದೊಡ್ಡವನಾದಮೇಲೆ, ಹಸುವು ಸಮಾಜದ ಹಲವು ಸಮುದಾಯಗಳ ಆಹಾರವೂ ಹೌದು ಎಂಬ ಗಲಿಬಿಲಿಗೊಳಿಸುವ ವಾಸ್ತವ, ಪ್ರಜ್ಞೆಯಲ್ಲಿ ದಾಖಲಾದರೂ ಅದೇಕೋ ಭಾವಪ್ರಪಂಚದಲ್ಲಿ ಅದು ದಾಖಲಾಗಲೇ ಇಲ್ಲ.  ಆದ್ದರಿಂದಲೇ ಹಸುವನ್ನು ಕಡಿಯುವ ವಿಷಯಕ್ಕೆ ಇಷ್ಟು ನೋವು.  ಕಾರ್ಯನಿಮಿತ್ತ ಮುಂದೊಮ್ಮೆ ದುಬಾಯಿಗೆ ಹೋದಾಗ, ಬ್ರೆಡ್ಡಿಗೆ ಬಳಿಯುವ ಚೀಸ್ ಸ್ಪ್ರೆಡ್ಡಿನಲ್ಲಿ ಕರುವಿನ ಕರುಳುಪಚ್ಚಿಯ ಲೇಹ್ಯವಿರುತ್ತದೆಂದು ತಿಳಿದಾಗ, ಅದನ್ನು ಅರಿಯದೇ ತಿಂದ ಪಾಪಪ್ರಜ್ಞೆಯಿಂದ ಇಡೀ ದಿನವೆರಡು ದಿನ ನರಳಿದ್ದಿದೆ

ಆದರೆ ನಿರ್ಭಾವುಕವಾಗಿ ಚಿಂತಿಸುವ ಮನಸ್ಸಿಗೆ (ಹಸುವಿನ ವಿಷಯದಲ್ಲಿ ಇದು ಬಹಳ ಕಷ್ಟ), ಒಂದು ವಿಷಯ ಮನದಟ್ಟಾಗುತ್ತದೆ.  ನಾವೇ ಕುಣಿಕುಣಿದು (ಕುಡಿಕುಡಿದು) ಬರಮಾಡಿಕೊಂಡ ಹೈನು ಕ್ರಾಂತಿಯ ಆಧಾರಸ್ತಂಭವೇ ಹಸು.  ಹಸು ಸಾಕಣೆ ಮೊದಲಿನಂತೆ ಮನೆಮಟ್ಟಿನ ಭಾವನಾತ್ಮಕ ವಿಷಯವಾಗಿ ಉಳಿದಿಲ್ಲ, ಅದೊಂದು ಉದ್ಯಮವಾಗಿ ಬೆಳೆದಿದೆ (ಇದಾಗಬಾರದೆಂದು ಮನಸ್ಸು ಚೀರುತ್ತದೆ, ಆದರೆ ’ಅಭಿವೃದ್ಧಿ’ಯ ಕೂಗಿನಲ್ಲಿ ಅದು ಯಾರಿಗೂ ಕೇಳದು).  ಉದ್ಯಮವೆಂದಮೇಲೆ ಮುಗಿಯಿತು, ಅಲ್ಲಿ ಭಾವನೆಗಿಂತ ಲಾಭ-ನಷ್ಟದ ವ್ಯವಹಾರವೇ ಮುಖ್ಯ.  ಹಾಕಿದ ದುಡ್ಡು ವಾಪಸ್ ಬಂದರೆ ಸಾಲದು, ಲಾಭ ಬರಬೇಕು.  ಲಾಭವಿಲ್ಲದ ಉದ್ಯಮ ಉದ್ಯಮವಲ್ಲ - ಇದು ಯಾವುದೇ ಉದ್ಯಮದ ಮೂಲಮಂತ್ರ.  ತೆಂಗಿನ ಮರ ಕೇವಲ ಎಳನೀರು, ತೆಂಗಿನ ಕಾಯಿ ಕೊಡಲು ಸೀಮಿತವಾಗಿ ಉಳಿಯಲಾರದು - ಅದರ ಮಟ್ಟೆ, ಕಡ್ಡಿ, ತೊಗಟೆ, ನಾರು, ಬೇರು ಎಲ್ಲವೂ ’ಉಪಯೋಗ’ಕ್ಕೆ ಬರದಿದ್ದರೆ ತೆಂಗಿನ ಉದ್ಯಮ ಫಲಕಾಣದು.  ಸಕ್ಕರೆ ಉದ್ಯಮ ತೆಗೆದುಕೊಳ್ಳಿ, ಕೇವಲ ಕಬ್ಬಿನ ರಸ ಹಿಂಡಿದರೆ ಮುಗಿಯುವುದಿಲ್ಲ - ಕಬ್ಬಿನ ರಸ ಸಕ್ಕರೆಯೋ ಬೆಲ್ಲವೋ ಆಗುತ್ತದೆ, ಅದರ ಚರಟ ಕಾಕಂಬಿಯಾಗುತ್ತದೆ, ಗಸಿ ಮತ್ತೆಲ್ಲೋ ಉಪಯೋಗಕ್ಕೆ ಬರುತ್ತದೆ; ಇತ್ತ ಕಬ್ಬಿನ ಸಿಪ್ಪೆಯೋ ಹಿಂಡಿ ಉಳಿದ ಬೆಂಡೋ ಕಾಗದವಾಗುತ್ತದೆ, ಮೇವಾಗುತ್ತದೆ, ಗೊಬ್ಬರವಾಗುತ್ತದೆ.  ಇವಿಷ್ಟೂ ಆಗದಿದ್ದರೆ ಕೇವಲ ಸಕ್ಕರೆ ತೆಗೆದು ಅಷ್ಟು ದೊಡ್ಡ ಉದ್ಯಮವನ್ನು ಸಾಕಲಾಗದು.  ಉದ್ಯಮವೊಂದರ ಮೂಲವಸ್ತುವಾದ ಹಸುವಿನ ಪಾಡೂ ಇದೇ.  ಹಾಲಿನ ಜೊತೆಗೇ - ಇಟ್ಟರೆ ಸಗಣಿಯಾಗಿ, ತಟ್ಟಿದರೆ ಕುರುಳಾಗಿ, ಮೇಲುಗೊಬ್ಬರವಾಗಿ ಬ್ರಾಹ್ಮಣರ ಮನೆಯ ಪವಿತ್ರ ಪಂಚಗವ್ಯವಾಗಿ ಮುಗಿಯುವುದಲ್ಲ; ಹಾಲು ಕೊಟ್ಟು ಮುಗಿದನಂತರ ಅದು ತಿನ್ನುವ ಖಾದ್ಯವೂ ಆಗುತ್ತದೆ, ಕಾಲಿನ ಚಪ್ಪಲಿಯಾಗುತ್ತದೆ, ಸೊಂಟದ ಬೆಲ್ಟಾಗುತ್ತದೆ!  ನಮ್ಮ ಮನೆಯ ಗೋಮಾತೆಯಾಗಿ ಅರಿಸಿನಕುಂಕುಮ ಪೂಜಿಸಿಕೊಂಡು ಅಕ್ಕಿ ಬೆಲ್ಲ ಬಾಳೆಯ ನೈವೇದ್ಯ ಸ್ವೀಕರಿಸಿಕೊಂಡು, ಪ್ರೀತಿಯಿಂದ ಗಂಗೆದೊಗಲು ನೇವರಿಸಿಕೊಳ್ಳುತ್ತಾ, ಕೊರಳು ಮೈಕೈ ತುರಿಸಿಕೊಳ್ಳುತ್ತಾ ಇರಬೇಕಿದ್ದ ಹಸು ಇವತ್ತು ಹಾಲಿನ, ಮಾಂಸದ, ಕರುಗಳ ಇಳುವರಿ ಹೆಚ್ಚಿಸಲು ಹಲವು ಹಾರ್ಮೋನುಗಳನ್ನು ಚುಚ್ಚಿಸಿಕೊಳ್ಳುತ್ತಾ, ಅನಾರೋಗ್ಯಕರ ಅಮಾನವೀಯ ಪರಿಸರದಲ್ಲಿ ಇತರ ನೂರಾರು ಹಸುಗಳೊಂದಿಗೆ ಜೀವ ಸವೆಸುತ್ತಾ, ಕ್ಯಾನುಗಟ್ಟಲೆ ಹಾಲಿನ ಹೊಳೆ ಹರಿಸಿ, ಮೊಲೆ ಬತ್ತಿದೊಡನೆ ಕಸಾಯಿಗಾಡಿಗಳನ್ನೇರಬೇಕು; ಜೀವಂತವಿದ್ದಾಗಲೇ ಕಾಲು ಕಡಿಸಿಕೊಂಡು, ಚರ್ಮ ಸುಲಿಸಿಕೊಂಡು, ಮೂಳೆ ಹಿರಿಸಿಕೊಂಡು, ಹದವಾದ ಮಾಂಸವಾಗಿ ಕ್ಯಾನು ತುಂಬಬೇಕು - ಇವೆಲ್ಲ ಕೇವಲ ಹಾಲು-ಹಯನುಗಳಿಗಿಂತ ಬಹುದೊಡ್ಡ ವ್ಯವಹಾರ - ಕೇವಲ ಒಂದು ಜಾತಿ, ಒಂದು ಧರ್ಮ, ಒಂದು ಆರ್ಥಿಕತೆಯನ್ನು ಮೀರಿದ್ದು - ನಾವೇ ಕುಣಿಕುಣಿದು ಬರಮಾಡಿಕೊಂಡ ಕ್ಷೀರೋದ್ಯಮಕ್ರಾಂತಿಯ ಫಲ.  ಕಾಡಿನಲ್ಲಿ ಸ್ವತಂತ್ರವಾಗಿ ರಾಜಾರೋಷವಾಗಿ ತಿರುಗುವ ಹುಲಿಯನ್ನೇ ಅದರ ಚರ್ಮ ಹಲ್ಲು ಉಗುರುಗಳಿಗಾಗಿ ಸಂಚುಮಾಡಿ ಕೊಲ್ಲುವ ಮನುಷ್ಯ, ಇನ್ನು ಮಾಡಿದ್ದು ಮಾಡಿಸಿಕೊಳ್ಳುವ ಪುಣ್ಯಕೋಟಿಯನ್ನು ಬಿಡುತ್ತಾನೆಯೇ?

ಗೋವನ್ನು ಈ ವಿಷವಲಯದಿಂದ ಬಿಡಿಸಿ ಮೊದಲಿನ ಮುದ್ದಿನ ಗೋಮಾತೆಯಾಗಿ ಸಂರಕ್ಷಿಸಿಕೊಳ್ಳಬೇಕೆನ್ನುವವರು ಮಾಡಬೇಕಾದ ಮೊದಲ ಕೆಲಸ ಏನು ಗೊತ್ತೇ? ಕಾಲಿಗೆ ಹಾಕುವ ಚರ್ಮದ ಚಪ್ಪಲಿ, ಬೂಟು, ಥಳಥಳಿಸುವ ಚರ್ಮದ ಬೆಲ್ಟನ್ನೂ ಒಳಗೊಂಡಂತೆ ಉದ್ಯಮವು ಕೊಡಮಾಡಬಹುದಾದ ಎಲ್ಲ ಗೋ-ಉತ್ಪನ್ನಗಳನ್ನೂ ಖಡಾಖಂಡಿತವಾಗಿ ತ್ಯಜಿಸುವುದು (ಉದ್ಯಮದಿಂದ ಬರುವ ಹಾಲು ಹಯನನ್ನೂ ಒಳಗೊಂಡಂತೆ) - ಆ ಚರ್ಮದ್ದು ಗೋವಿನದ್ದೇ ಎಂದು ಖಾತ್ರಿಯೇನು ಎಂಬುದು ಮೂರ್ಖ ಪ್ರಶ್ನೆಯಾಗುತ್ತದೆ; ಗೋವಿನ ಮಾಂಸವನ್ನೇ ಬಿಡದವರು ಚರ್ಮಕ್ಕೆ ಅಂತ್ಯಸಂಸ್ಕಾರ ಮಾಡುವುದಿಲ್ಲ!

ಅಷ್ಟೇಕೆ, ಮನೆಯ ಮುದ್ದುಮಗುವಿಗೆ ಎರೆಯುವ ಹಾಲು, ಹಬೆಯಾಡುವ ಕಾಫಿ, ಬಿಸಿಬಿಸಿ ಮಸಾಲೆ ದೋಸೆಯ ಮೇಲೆ ಕರಗುವ ಆ ಬೆಣ್ಣೆ ಮುದ್ದೆ, ಮನೆಯ ಶಾಲಗ್ರಾಮಕ್ಕೆ ಎರೆಯುವ ಕ್ಷೀರಾಭಿಷೇಕ ಇವಾವುದೂ ಮೊದಲಿನಂತೆ ಗೋವಿನ ಸಹಜಸ್ಥಿತಿಯಿಂದ ಬರುತ್ತಿರುವ ಉತ್ಪನ್ನಗಳಾಗಿ ಉಳಿದಿಲ್ಲ, ಬದಲಿಗೆ ಹೆಚ್ಚಿದ ಜನಸಂಖ್ಯೆಯ ರಕ್ಕಸದಾಹದ ಫಲವಾದ ಕ್ಷೀರಕ್ರಾಂತಿಯ ಪೈಶಾಚಿಕತೆಗೆ ಸಿಕ್ಕು ನರಳುತ್ತಿರುವ ಜಂತುವೊಂದರ ವಿಸರ್ಜನೆಯೆಂದು ಅರಿತು, ಅದನ್ನು ತ್ಯಜಿಸುವುದು; ಕುಟುಂಬಕ್ಕೆ ಬೇಕಾದ ಹಾಲನ್ನು ಹತ್ತಿರದ ಗೌಳಿಯ ಕುಟುಂಬದಿಂದಲೇ ಕೊಂಡುಕೊಳ್ಳುವುದು (ಸಿಕ್ಕರೆ) - ಇವು ಸಾಧ್ಯವಾದರೆ!  ಗೋವಿನ ಬಗೆಗೆ ಇಷ್ಟೊಂದು ಅಕ್ಕರೆ, ಭಕ್ತಿ-ಗೌರವಗಳಿರುವ ಸಮಾಜಕ್ಕೆ, ಗೋಮಾತೆಯ ರಕ್ಷಣೆಗಾಗಿ ಇಷ್ಟನ್ನು ಮಾಡುವುದು ಕಷ್ಟವಾಗಲಾರದೇನೋ.  ಇಷ್ಟಾಗಿಬಿಟ್ಟರೆ ಏನಾಗುತ್ತದೆ?  ಕ್ಷೀರೋತ್ಪನ್ನ ಮತ್ತಿತರ ಗೋ-ಉತ್ಪನ್ನಗಳ ಬೇಡಿಕೆ ಸಾಕಷ್ಟು ಕುಸಿಯುತ್ತದೆ, ಮತ್ತು ರಫ್ತಿಗಷ್ಟೇ ಸೀಮಿತಗೊಳ್ಳುತ್ತದೆ.  ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸಿದ ನಮಗೆ, ಆಗ ರಫ್ತನ್ನು ಪ್ರತಿಬಂಧಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ನೈತಿಕ ಬಲ ಸಿದ್ಧಿಸುತ್ತದೆ.  ಗೋ-ಉತ್ಪನ್ನಗಳ ಉಪಭೋಗ ಕುಸಿದಾಗ, ಸಹಜವಾಗಿಯೇ ಹೆಚ್ಚಿನ ಇಳುವರಿಗಾಗಿ ಹೆಚ್ಚುಹೆಚ್ಚು ಗೋವುಗಳನ್ನು ಉತ್ಪಾದಿಸುವುದು, ಮತ್ತು ಅವುಗಳನ್ನು ಪೀಡಿಸುವುದು ನಿಂತು, ಮೊದಲಿನಂತೆ ಗೋಮಾತೆ ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುವ ಮನೆಯ ಸದಸ್ಯಳಾಗುತ್ತಾಳೆ.  ಬರಡು ಹಸು, ಎತ್ತು, ಹೋರಿಗರುಗಳ ಕಸಾಯಿಖಾನೆ ಯಾತ್ರೆ ಇದರಿಂದ ಸಂಪೂರ್ಣ ಬಂದಾಗದಿದ್ದರೂ, ಗೋಮಾಂಸದ ಬಳಕೆ ಅಷ್ಟಕ್ಕೆ ಸೀಮಿತವಾಗಿ, ಗೋಮಾಂಸದ ಪೂರೈಕೆ ಕಡಿಮೆಯಾಗಿ, ಬದಲೀ ಮಾಂಸಕ್ಕೆ ಬೇಡಿಕೆ ಹೆಚ್ಚಿ, ಮಾಂಸದ ಮಾರುಕಟ್ಟೆಯಲ್ಲಿ ಅದೊಂದು ರೀತಿಯ ಸಮತೋಲನವೇರ್ಪಡುತ್ತದೆ.  ಗೋಮಾಂಸನಿಷೇಧದಿಂದ ಸಾಧಿಸಬಯಸುವುದೂ ಇದನ್ನೇ ತಾನೆ?  ಇನ್ನಿದರ ಜೊತೆಗೆ, ನೆಲಗಳ್ಳರು, ಪುಢಾರಿಗಳು, ಸ್ವಾರ್ಥಿ ರಾಜಕಾರಣಿಗಳು ನುಂಗಿ ನೀರು ಕುಡಿದಿರುವ ಗೋಮಾಳಗಳನ್ನು ಸರಿಯಾಗಿ ಒದ್ದು ಕಕ್ಕಿಸಿದರೆ, ಗೋವುಗಳು ನಿರಾತಂಕವಾಗಿ ಉಸಿರಾಡುತ್ತಾ, ಬಾಯಾಡಿಸುತ್ತಾ ನೆಮ್ಮದಿಯ ಬದುಕು ಕಂಡುಕೊಳ್ಳುವಂತಾಗುತ್ತದೆ, ಜೊತೆಗೆ ಮೊದಲೇ ಸಾಲದ ಶೂಲದಿಂದ ಆತ್ಮಹತ್ಯೆಯತ್ತ ಜಾರುತ್ತಿರುವ ರೈತ ಕೂಡ ಬರಡು ಹಸುಗಳನ್ನು ಕಾಸು ಖರ್ಚು ಮಾಡಿ ಸಾಕಬೇಕಾದ, ಅಥವಾ ಅದಕ್ಕೆ ಗತಿಯಿಲ್ಲದೇ ಅವನ್ನು ಕಸಾಯಿಖಾನೆಗೆ ಅಟ್ಟಬೇಕಾದ ಧರ್ಮಸಂಕಟದಿಂದ ಬಚಾವಾಗುತ್ತಾನೆ.  ಇವಿಷ್ಟರ ಜೊತೆಗೆ ಮತ್ತೂ ಒಂದಾಗುತ್ತದೆ.  ಗೋವಿನ ಸೆಂಟಿಮೆಂಟಿನಿಂದಲೇ ಓಟು ಸೀಟು ಕಾಸು ಮಾಡಿಕೊಳ್ಳುವ ಎಲ್ಲಾ ಬಣದ ರಾಜಕಾರಣಿಗಳಿಗೆ ನಿರುದ್ಯೋಗ ಬಂದೊದಗುತ್ತದೆ.  ಹಾಗಾಗಲು ಅವರೇಕೆ ಬಿಟ್ಟಾರು?

ಅದೇ ಕಾರಣಕ್ಕೋ ಏನೋ, ಸರ್ಕಾರಗಳಿಗಾಗಲೀ, ಸಂಬಂಧಿಸಿದ ಇತರಿಗಾಗಲೀ ಇದಾವ ಸೂಕ್ಷ್ಮವೂ ಕಾಣುವುದಿಲ್ಲ!  ತಾನು ಘೋಷಿಸಿದಂತೆ ಗೋರಕ್ಷಣೆಯ ಬಗೆಗೆ ನಿಜವಾದ ಕಳಕಳಿಯಿದ್ದರೆ ಅದಕ್ಕೆ ತಕ್ಕಂತೆ, ಯಾರಿಗೂ ಅನ್ಯಾಯವಾಗದಂತೆ, ಯಾರಿಗೂ ನಷ್ಟವಾಗದಂತೆ ಸಮಗ್ರ ವ್ಯವಸ್ಥೆಯೊಂದನ್ನು ರೂಪಿಸಬೇಕಾದ ಸರ್ಕಾರ, ಕಾರ್ಯಸಾಧುವಲ್ಲದ, ಮೇಲ್ನೋಟಕ್ಕೇ ಹಲವು ಸಮುದಾಯಗಳಿಗೆ ವಿರುದ್ಧವೆಂದು ಕಾಣುವ, ಸಮಸ್ಯೆಯ ಮೂಲವನ್ನು ಮುಟ್ಟಿಯೂ ನೋಡದ ಕಾನೂನೊಂದನ್ನು ಹೊಸೆದು ತನ್ನ ಜವಾಬ್ದಾರಿ ಮುಗಿಯಿತೆಂದುಕೊಂಡಂತಿದೆ (ಇದು ಇವತ್ತಿನ ಒಂದು ಕಾನೂನಿನ ಬಗೆಗಲ್ಲ, ಗೋರಕ್ಷಣೆ ಕುರಿತ ಕಾನೂನುಗಳೆಲ್ಲವೂ ಹಿಡಿದ ದಾರಿಯೇ ಇದು).  ಹೂಸಿದ್ದು ಕೆಮ್ಮಿದ್ದಕ್ಕೆಲ್ಲ ಕಾನೂನಿನ ಕತ್ತಿಯೇ ಪರಿಹಾರವೆಂದು ಸರ್ಕಾರಗಳು ಭಾವಿಸುತ್ತಿರುವಾಗಲೇ ಗೋರಕ್ಷಣೆಯ ಹೆಸರಿನಲ್ಲಿ ಗುಂಡಾಗಿರಿ ತಲೆಯೆತ್ತುತ್ತಿದೆ - ಅದಕ್ಕೆ ತಕ್ಕಂತೆ ದನಗಳ್ಳತನವೂ, ಹಸುವಿನ ಮೇಲೆ ವಿನಾಕಾರಣ ಕ್ರೌರ್ಯವೂ!    ಇಲ್ಲಿ ನಿರ್ದಿಷ್ಟ ಸಮುದಾಯವೊಂದರ ಹಕ್ಕಿನ ಹೋರಾಟಕ್ಕಿಂತ, ಹಿಂದೂ ಭಾವನೆಗಳನ್ನು ಹಣಿಯುವ ಹಪಹಪಿಯೇ ಎದ್ದೆದ್ದು ಕಾಣುತ್ತಿದೆ.

ಇನ್ನು ಭಾರತದ ಬಹು ದೊಡ್ಡ ಜಾತಿಗಳಲ್ಲೊಂದಾದ ಮುಸ್ಲಿಮ್ ಸಮುದಾಯ, ಇವತ್ತಿಗೂ ಅಲ್ಪಸಂಖ್ಯಾತರ ಸೋಗು ಹಾಕುತ್ತಾ, ಬ್ರಿಟಿಷರ ಕಾಲದಿಂದಲೂ ಬಂದ ಚಾಳಿಯನ್ನು ಮುಂದುವರೆಸುತ್ತಾ ಮುಖ್ಯವಾಹಿನಿಯ ಜೊತೆ ಬೆರೆಯುವ, ಭ್ರಾತೃತ್ವ ಮೆರೆಯುವ ಯಾವ ಪ್ರಯತ್ನವನ್ನೂ ಮಾಡದೇ, ವಿದೇಶೀ ಶಕ್ತಿಗಳ, ಹಲ್ಕಾ ರಾಜಕಾರಣಿಗಳ ಕೈಯ ದಾಳವಾಗುವ ಬೇಜವಾಬ್ದಾರಿತನದಲ್ಲೇ ಸಾರ್ಥಕತೆ ಕಂಡಿದೆ.  ಒಬ್ಬರನ್ನೊಬ್ಬರು ಎದುರು ಹಾಕಿಕೊಂಡು ಸಹಬಾಳ್ವೆ ನಡೆಸಲು ಸಾಧ್ಯವೇ ಇಲ್ಲವೆನ್ನುವ ಸಾಮಾನ್ಯ ಸತ್ಯವೂ ಇವರಿಗರಿವಾಗುವಂತಿಲ್ಲ.  ಬೇಕಿದ್ದೋ ಬೇಡದೆಯೋ ಧರ್ಮಾಧಾರದ ಮೇಲೆ ದೇಶವಿಭಜನೆಯಾದಮೇಲೆ, ಅಲ್ಲಿ ಹೋಗದೇ ಇಲ್ಲೇ ಇರಬೇಕೆನ್ನುವ ನಿರ್ಧಾರವನ್ನೂ ತೆಗೆದುಕೊಂಡಮೇಲೆ, ಜಾತ್ಯತೀತ ರಾಷ್ಟ್ರದಲ್ಲಿ ಪರಧರ್ಮವನ್ನು ಗೌರವಿಸುತ್ತಾ ತಮ್ಮ ಧರ್ಮವನ್ನು ತಮ್ಮ ಮನೆ/ಸಮುದಾಯದ ಮಟ್ಟಿಗೆ ಆಚರಿಸುತ್ತಾ ಹೊಂದಿಕೊಂಡು ಇರುವುದರ ಬದಲಿಗೆ, ಮಾತೆತ್ತಿದ್ದಕ್ಕೂ ವೈಯಕ್ತಿಕ ಕಾನೂನಿನ ಗುಮ್ಮ ತೆಗೆಯುತ್ತಾ ಗಂಡಾಗುಂಡಿ ಮಾಡುತ್ತಾ ಪ್ರತ್ಯೇಕವಾಗಿಯೇ ಉಳಿದುಬಿಡುವಲ್ಲೇ ಪರಮಾರ್ಥ ಕಂಡುಕೊಂಡಂತಿದೆ (ಈ ’ಪ್ರತ್ಯೇಕತೆ’ಯೇ ದೇಶದ ವಿಭಜನೆಗೆ ಕಾರಣವಾದ ’ದ್ವಿರಾಷ್ಟ್ರ ಸಿದ್ಧಾಂತ’ದ ತಳಹದಿಯಲ್ಲವೇ, ವಿಭಜನೆಯಾಗಿದ್ದಂತೂ ಆಯಿತಲ್ಲ, ಇಲ್ಲಿ ಉಳಿದುಕೊಂಡಮೇಲೆ ಪ್ರತ್ಯೇಕತೆಯಿನ್ನೇತರದು?  ಈ ಪ್ರಶ್ನೆ ಅವರನ್ನಾಗಲೀ ಅವರನ್ನು ಓಲೈಸುವ ರಾಜಕಾರಣಿಗಳನ್ನಾಗಲೀ ಕಾಡಿದಂತಿಲ್ಲ).   ಇನ್ನಿವರನ್ನು ತುಷ್ಟೀಕರಿಸುವ ರಾಜಕೀಯವನ್ನೇ ಪರಮಧರ್ಮ ಮಾಡಿಕೊಂಡ ’ರಾಷ್ಟ್ರೀಯ’ ಚಿಲ್ಲರೆ ಪಕ್ಷಗಳು, ಚಿಲ್ಲರೆ ಪಕ್ಷಗಳ ರಾಷ್ಟ್ರೀಯ ರಾಜಕಾರಣಿಗಳು, ಸ್ವತಃ ಈ ಸಮುದಾಯವೇ ಕನಸುಮನಸಿನಲ್ಲೂ ಎಣಿಸಿರದ ಬೇಡಿಕೆಗಳನ್ನು ಅವರ ಪರವಾಗಿ ಮುಂದಿಡುತ್ತಾ, ಸ್ವತಃ ಅವರಿಗೇ ಹೊಳೆದಿರದ ಕ್ಯಾತೆಗಳನ್ನು ಅವರ ಪರವಾಗಿ ತೆಗೆಯುತ್ತಾ, ಸ್ವತಃ ಅವರೇ ಎಣಿಸಿರದ ಕ್ರೌರ್ಯಗಳನ್ನಾಚರಿಸುತ್ತಾ ಇಡೀ ದೇಶದ ಬದುಕನ್ನು ನರಕ ಮಾಡುತ್ತಿದ್ದಾರೆ. 

ಮನಸ್ಸು ಮತ್ತೆ ಮೊನ್ನಿನ ಘಟನೆಗೇ ಮರಳುತ್ತಿದೆ.  ವೇದಗಳಲ್ಲಿ ಒಂದು ಮಾತಿದೆ "ಅನ್ನಂ ನ ನಿಂದ್ಯಾತ್, ತದ್ ವ್ರತಮ್".  ಈ ದೇಶದಲ್ಲಿ ಶುದ್ಧ ಸಸ್ಯಾಹಾರದಿಂದ ಹಿಡಿದು ಗೋಮಾಂಸದವರೆಗೆ ಹಲವು ಆಹಾರಪದ್ಧತಿಗಳು ಕಾಲದಿಂದ ನಡೆದುಬಂದಿವೆ.  ಇವರಲ್ಲಿ ವೇದವೋದಿದವರೆಷ್ಟೋ, ಅದರ ಗಂಧಗಾಳಿಯೂ ಇರದವರೆಷ್ಟೋ, ಆದರೆ ಅನ್ನವನ್ನು ನಿಂದಿಸುವ, ದೂಷಿಸುವ, ಅಪವಿತ್ರಗೊಳಿಸುವ ಸಂಸ್ಕೃತಿ ಎಲ್ಲೂ ಕಂಡಿದ್ದಿಲ್ಲ.  ತಿನ್ನುವುದೇನೇ ಇರಲಿ, ಅದರ ಪಾವಿತ್ರ್ಯವನ್ನು ವ್ರತದಂತೆ ಕಾಯ್ದುಕೊಂಡು ಬರುವುದನ್ನು ನೋಡಿದ್ದೇವೆ (ಮೋಜಿಗಾಗಿ ಹಾಕಿಸಿಕೊಂಡು ಬೀದಿಗೆ ಚೆಲ್ಲುವ ಆಧುನಿಕ ಸಿರಿವಂತ ಭಿಕ್ಷುಕರ ವಿಷಯ ಬೇರೆ ಬಿಡಿ).  ಧಾರ್ಮಿಕ ಕಾರಣಗಳಿಗಾಗಿ ನಡೆಯುವ ಬಲಿಯಲ್ಲೂ (ಸರ್ವಥಾ ಸಮರ್ಥನೀಯವಲ್ಲದಿದ್ದರೂ) "ಕೊಂದ ಪಾಪ ತಿಂದು ಪರಿಹಾರ" ಎಂಬ ಸಮಾಧಾನವಾದರೂ ಇದೆ.  ಮನುಷ್ಯರ ಮಾತು ಹಾಗಿರಲಿ, ತನ್ನ ಸುತ್ತ ಜಿಂಕೆ ಕಾಡೆಮ್ಮೆಗಳ ಹಿಂಡೇ ಇದ್ದರೂ ಹೊಟ್ಟೆ ತುಂಬಿದ ಸಿಂಹ ಅವುಗಳ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ - ತಮಾಷೆಗಾಗಿ, ಮೋಜಿಗಾಗಿ, ಕ್ರೌರ್ಯಕ್ಕಾಗಿ, ದ್ವೇಷಕ್ಕಾಗಿ ಕೊಲ್ಲುವುದಿಲ್ಲ.    ಅಂಥದ್ದರಲ್ಲಿ ಮೊನ್ನೆ ಕೇರಳದಲ್ಲಿ ನಡೆದ ಗೋವಧೆ, ಎಂಥ ಮೃಗಗಳೂ ತಲೆ ತಗ್ಗಿಸುವಂಥದು.  ಇಲ್ಲಿ ಕೊಂದದ್ದು, ತಿಂದದ್ದು ಹಸಿವಿಗಲ್ಲ, ರಾಜಕೀಯಕ್ಕೆ, ಹುರುಡಿಗೆ, ಯಾರಿಗೋ ’ಪಾಠ’ ಕಲಿಸುವುದಕ್ಕೆ!  ಮತ್ತೊಮ್ಮೆ ಮೊದಲು ಕೇಳಿದ ಪ್ರಶ್ನೆಯನ್ನೇ ಕೇಳಬೇಕೆನಿಸುತ್ತದೆ - "ಕೇವಲ ಯಾರದೋ ಮೇಲಿನ ಹುರುಡಿಗಾಗಿ ಒಂದು ಮುಗ್ಧ ಕರುವನ್ನು ಕತ್ತರಿಸಿ ಚೆಲ್ಲಿದ ಈ ಕಟುಕ ಪ್ರಾಣಿಗಳು ಆ ಕರುವಿನ ಮೊಗವನ್ನು, ಆ ಭಾವವನ್ನು ಕ್ಷಣಕಾಲವಾದರೂ ನಿರುಕಿಸಿದ್ದರೇ?"  ಖಂಡಿತಾ ಇರಲಿಕ್ಕಿಲ್ಲ.  ಕೊಂದಪಾಪ ತಿಂದು ಪರಿಹಾರ ಎನ್ನುವ ಸಮಾಧಾನವೂ ಇಲ್ಲಿಲ್ಲ, ಏಕೆಂದರೆ ಕೇವಲ ರಾಜಕೀಯವನ್ನೇ ತಿಂದು ರಾಜಕೀಯವನ್ನೇ ವಿಸರ್ಜಿಸಿ ರಾಜಕೀಯಕ್ಕಾಗಿಯೇ ಕೊಲ್ಲುವ ಈ ಪಿಶಾಚಿಗಳು ಅನ್ನ ತಿನ್ನುವ ಜಾತಿಗಂತೂ ಸೇರಿದವಲ್ಲ

Friday, March 24, 2017

ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ

 
ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ.  ಆದರೆ ಪಂಪನ ದುರ್ಯೋಧನ?  ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರಸಂಗ, ತನ್ನ ಹಲವು ಅಂತರ್ಧ್ವನಿಗಳಿಂದಾಗಿ ಪಂಪಭಾರತದ ಬಹು ಶಕ್ತವಾದ ಚಿತ್ರಣಗಳಲ್ಲೊಂದಾಗಿದೆ.  ಅದನ್ನೊಂದಿಷ್ಟು ನೋಡೋಣ.

ಕುರುಕ್ಷೇತ್ರದ ಯುದ್ಧ ಕೊನೆಯ ಹಂತಕ್ಕೆ ಬಂದಿದೆ.  ತನ್ನವರೆಲ್ಲರನ್ನೂ ಕಳೆದುಕೊಂಡು ಒಂಟಿಯಾಗಿರುವ ದುರ್ಯೋಧನನೀಗ ಪಾಂಡವರನ್ನು ಇದಿರಿಸಬೇಕಿದೆ.  ಅಳಿದುಳಿದ ಶತ್ರುಗಳನ್ನು ಹುಡುಕಿ ಹುಡುಕಿ ಬೇಟೆಯಾಡುತ್ತಿರುವ ಪಾಂಡವರು ದುರ್ಯೋಧನನ್ನು ಕಣ್ಣಲ್ಲಿ ಕಣ್ಣಿಟ್ಟು ಹುಡುಕುತ್ತಿದ್ದಾರೆ.  ಇತ್ತ ಅಶ್ವತ್ಥಾಮ ಕೃಪ ಕೃತವರ್ಮರೂ ಯುದ್ಧರಂಗದಿಂದ ಮರೆಯಾದ ಸ್ವಾಮಿಯನ್ನು ಸೇರಲು ಆತನಿಗಾಗಿ ಹುಡುಕುತ್ತಿದ್ದಾರೆ.  ಕೊನೆಯದಾಗೊಮ್ಮೆ ಭೀಷ್ಮರನ್ನು ಕಂಡು ಹೋಗಬೇಕೆಂಬ ಉದ್ದೇಶದಿಂದ, ಭೀಕರವಾದ ರಣಭೂಮಿಯಲ್ಲಿ ಎಡವುತ್ತಾ ತೊಡರುತ್ತಾ ಸಂಜಯನೊಡನೆ ಭೀಷ್ಮನನ್ನು ಹುಡುಕಿಕೊಂಡು ಬಂದಿದ್ದಾನೆ ದುರ್ಯೋಧನ.  ಒಬ್ಬೊಂಟಿಯಾದ ದುರ್ಯೋಧನಿಗೆ ಪಾಂಡವರಿಂದ ಉಳಿಗಾಲವಿಲ್ಲವೆಂದರಿತ ಭೀಷ್ಮರು ಅವನನ್ನು ಸಂಧಿಗೊಡಂಬಡುವಂತೆ ಅನುನಯಿಸುತ್ತಾರೆ.  ಸಹಜವಾಗಿಯೇ ದುರ್ಯೋಧನನು ಅದಕ್ಕೊಪ್ಪದಿದ್ದಾಗ - ಕೊನೆಯ ಪಕ್ಷ ಎಲ್ಲೋ ಇವನನ್ನರಸುತ್ತಿರುವ ಅಶ್ವತ್ಥಾಮ ಕೃಪ ಕೃತವರ್ಮರು ಇವನನ್ನು ಕಂಡು ಸೇರುವವರೆಗಾದರೂ - ರಕ್ಷಿಸಬೇಕೆಂದು ಹವಣಿಸುತ್ತಾರೆ.  ಆದರೆ ಅಡಗಿರಲು ಅಭಿಮಾನಧನನಾದ ದುರ್ಯೋಧನನು ಒಪ್ಪುವನೇ?  ಅದಕ್ಕಾಗಿಯೇ "ಕಾಲಾಗ್ನಿರುದ್ರಂ ರಸಾತಳದೊಳಡಂಗಿರ್ಪಂತೆ" ವೈಶಂಪಾಯನ ಸರೋವರಲ್ಲಡಗಿದ್ದು, ನಾಳೆ ಬಲದೇವ, ಅಶ್ವತ್ಥಾಮ ಕೃಪ ಕೃತವರ್ಮರು ಬಂದೊದಗಿದೊಡನೆ ಶತ್ರುಗಳ ಮೇಲೆ ಬಿದ್ದು ಗೆಲ್ಲುವೆಯಂತೆ ಎಂದು ಅವನ ಮನವೊಲಿಸಿ ಜಲಮಂತ್ರವನ್ನುಪದೇಶಿಸಿ ಅವನನ್ನು ವೈಶಂಪಾಯನಕ್ಕೆ ಕಳಿಸುತ್ತಾರೆ.

ಅವನಲ್ಲಿಗೆ ಹೋಗುವ ದಾರಿಯಲ್ಲಿ ಯುದ್ಧಭೂಮಿಯನ್ನು ಹಾದು ಹೋಗಬೇಕಲ್ಲ - ಹೀಗೆ ಹೋಗುವಾಗ ದುರ್ಯೋಧನನ ಯುದ್ಧದ ಘೋರವನ್ನು ಅವನಿಗೇ ಕಾಣಿಸುತ್ತಾನೆ ಕವಿ:

ಕ್ರಂದತ್ಸ್ಯಂದನಜಾತನಿರ್ಗತಶಿಖಿಜ್ವಾಳಾಸಹಸ್ರಂಗಳಾ
ಟಂದೆತ್ತಂ ಕವಿದೞ್ವೆ ಬೇವ ಶವಸಂಘಾತಂಗಳಂ ಚಕ್ಕಮೊ|
ಕ್ಕೆಂದಾಗಳ್ ಕಡಿದುಗ್ರಭೂತನಿಕರಂ ಕೆಯ್ ಬೇಯೆ ಬಾಯ್ ಬೇಯೆ ತಿಂ
ಬಂದಂ ತನ್ನ ಮನಕ್ಕಗುರ್ವಿಸುವಿನಂ ದುರ್ಯೋಧನಂ ನೋಡಿದಂ

ಯುದ್ಧಭೂಮಿಯಲ್ಲಿ ಸುಟ್ಟುರಿಯುತ್ತಿರುವ ರಥಗಳಿಂದ ಹೊರಟ ಬೆಂಕಿ ತನ್ನ ಸಾವಿರ ಕೆನ್ನಾಲಗೆಗಳನ್ನು ಸುತ್ತೆಲ್ಲ ಹರಡಿರಲು ಭೀಕರ ರಣಪಿಶಾಚಿಗಳು ಆ ಬೆಂಕಿಯಲ್ಲಿ ಸಿಕ್ಕಿ ಬೇಯುತ್ತಿರುವ ಹೆಣಗಳ ರಾಶಿಯಿಂದ ಬೇಯಬೇಯುತ್ತಿರುವಂತೆಯೇ ಕೈಕಾಲುಗಳನ್ನು ಚಕ್ಕಮೊಕ್ಕೆಂದು ಕಿತ್ತು ತಿನ್ನುತ್ತಿರುವ ಭಯಾನಕವಾದ ದೃಶ್ಯವನ್ನು ದುರ್ಯೋಧನನು ಕಾಣುತ್ತಾನೆ.  ಅಷ್ಟೇ ಅಲ್ಲದೇ "ನೋಡಿ ಕನಲ್ವ ಕೆಂಡದ ಮೇಲೆ ಪೞೆಯ ಬೇವಿನೆಣ್ಣೆಯೊಳ್ ತೊಯ್ದಿಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ ಬಳ್ಳುವಿನ ಬಾಯೊಳಳುರ್ವ ಕೆಂಡಂಗಳೊಳ್ ಸುೞದು ಬೇವ ಪೆಣಂಗಳ ಕಂಪು ನಾಱುವುದರ್ಕೆ ಸೈರಿಸಲಾಱದೆ (ಇನ್ನೂ ಸುಟ್ಟುರಿಯುತ್ತಿರುವ ಹೆಣಗಳನ್ನು ನರಿಗಳು ತಮ್ಮ ಬಾಯಲ್ಲಿ ಕಚ್ಚಿಕೊಂಡಿದ್ದರೆ, ಹಳೆಯ ಬೇವಿನೆಣ್ಣೆಯಲ್ಲಿ ನೆನೆಸಿದ ಬೆಳ್ಳುಳ್ಳಿ ಸುಟ್ಟಂತೆ ನಾರುವ ಅದರ ವಾಸನೆಯನ್ನು ಸಹಿಸಲಾಗದೇ) ದಾಪುಗಾಲಿಡುತ್ತಾ ಆ ಯುದ್ಧಭೂಮಿಯನ್ನು ಬೇಗಬೇಗ ದಾಟಿ ದುರ್ಯೋಧನ ವೈಶಂಪಾಯನ ಸರೋವರಕ್ಕೆ ಬರುತ್ತಾನೆ.

ಆ ವೈಶಂಪಾಯನಸರೋವರವಾದರೂ ಹೇಗೆ ಕಾಣುತ್ತಿದೆ - ಪ್ರಳಯಕಾಲದ ಹೊಡೆತಕ್ಕೆ ಅಷ್ಟದಿಕ್ಕುಗಳ ಕೀಲುಗಳೇ ಕಳಚಿ ಆಕಾಶವೇ ಭೂಮಿಯ ಮೇಲೆ ಜರಿದು ಬಿದ್ದಿದೆಯೋ; ಆದಿವರಾಹನು ಸಮುದ್ರಮುದ್ರಿತಧರಾಮಂಡಳವನ್ನು ರಸಾತಳದಿಂದ ಮೇಲೆತ್ತಿದಾಗ ಆಕಾಶವೇ ಜಲಾವೃತವಾಗಿಬಿಟ್ಟಿತೋ (ಅಷ್ಟು ವಿಸ್ತಾರವಾಗಿ, ಕಣ್ಣು ಹರಿಯುವಷ್ಟು ದೂರಕ್ಕೂ ಗಗನವನ್ನು ಪ್ರತಿಫಲಿಸುತ್ತಿದ್ದ ಸರೋವರ)!  ಅಂಥಾ ವೈಶಂಪಾಯನ ಸರೋವರವನ್ನು ಕವಿ ವರ್ಣಿಸುವ ರೀತಿಯಿದು:

ಇದು ಪಾತಾಳಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾ
ಡಿದ ಕೂಪಂ ಪೆಱತಲ್ತಿದುಗ್ರಲಯಕಾಳಾಂಭೋಧರಚ್ಛಾಯೆ ತಾ
ನೆ ದಲೆಂಬಂತಿರೆ ಕಾಚಮೇಚಕಚಯಚ್ಛಾಯಾಂಬುವಿಂ ಗುಣ್ಪಿನಿಂ
ಪುದಿದಿರ್ದತ್ತು ಸರೋವರಂ ಬಕ ಬಳಾಕಾನೀಕ ರಾವಾಕುಳಂ

ಇದು ಪಾತಾಳಬಿಲಕ್ಕೆ ಬಾಗಿಲೋ, ಘೋರಾಂಧಕಾರವು ವಾಸಿಸಲಿಕ್ಕಾಗಿಯೇ ಮಾಡಿದ ಭಾವಿಯೋ, ಪ್ರಳಯಕಾಲದ ಭೀಕರ ಕಪ್ಪುಮೋಡಗಳ ನೆರಳೋ ಎಂಬಂತೆ ಕಡುಗಪ್ಪು-ನೀಲಿಯ ಗಾಜಿನಂತಿದ್ದ ನೀರಿಂದ ತುಂಬಿ, ಆಳವಾಗಿ, ಬಕಬಲಾಕಗಳ ಅರಚುವಿಕೆಯಿಂದ ಗಿಜಿಗುಟ್ಟಿಹೋಗಿತ್ತು ವೈಶಂಪಾಯನ ಸರೋವರ!

ಸರೋವರವೊಂದನ್ನು ಇಷ್ಟು ಗಾಢವಾಗಿ, ಅನಿಷ್ಟಕರವಾಗಿ ವರ್ಣಿಸಲು ಸಾಧ್ಯವೇ?  ಸಾಮಾನ್ಯವಾಗಿ ಸರೋವರವರ್ಣನೆಯೆಂದರೆ ಕವಿಗಳು ಅದರ ಸೌಂದರ್ಯವನ್ನು ವರ್ಣಿಸುತ್ತಾರೆ - ಅದರ ಅಂದಚಂದ, ಅದರ ನೀರು, ಅದರ ಬಿಳ್ಪು, ತೆಳ್ಪು, ತಂಪು, ಅದರಲ್ಲರಳಿದ ಹೂವುಗಳು, ಪಕ್ಷಿಸಂಕುಲ, ಸುತ್ತಲ ವನರಾಜಿ, ಹೀಗೆ, ಆ ಸರೋವರಗಳೂ ಆಳವಾಗಿ, ವಿಶಾಲವಾಗಿ, ಕಡುಸಂಜೆ ಸಮಯವಾದರೆ ನೀರೂ ಕಪ್ಪಾಗಿಯೇ ಇದ್ದೀತು.  ಆದರೂ ಕವಿಯ ವರ್ಣನೆಯಲ್ಲಿ ಅದು ಸರ್ವಾಂಗಸುಂದರವಾಗಿಯೇ ಹೊರಹೊಮ್ಮುತ್ತದೆ.  ಹಾಗೆಯೇ ಈ ವೈಶಂಪಾಯನಸರೋವರದಲ್ಲಿಯೂ ವಿಶಾಲತೆಯಿದೆ, ಆಳವಿದೆ, ತಂಪಿದೆ, ಬಕಬಲಾಕಾದಿ ಪಕ್ಷಿಗಳೂ ಇದೆ - ಸೌಂದರ್ಯವರ್ಣನೆಗೆ ಬೇಕಾದ ಅಂಶಗಳೆಲ್ಲವೂ ಇದೆ.  ಆದರೆ ಸೌಂದರ್ಯವನ್ನು ಕಾಣಲು ಬೇಕಿರುವ ಕಣ್ಣು ಮಾತ್ರ ಇಲ್ಲ - ದುರ್ಯೋಧನನಲ್ಲಿ.  ಅವನೀಗ ಯುದ್ಧದಲ್ಲಿ ಬಹುತೇಕ ಸೋತಿದ್ದಾನೆ, ಎಲ್ಲರನ್ನೂ ಕಳೆದುಕೊಂಡಿದ್ದಾನೆ, ಇವನಿಗಾಗಿಯೇ ಹುಡುಕುತ್ತಿರುವ ಪಾಂಡವರು ಯಾವ ಗಳಿಗೆಯಲ್ಲಾದರೂ ಬಂದೆರಗಬಹುದು.  ಆ ಭಯವನ್ನೂ ಮೀರಿದ ಭಯಂಕರವಾದ ಅಪಮಾನದ ಕೆಲಸವನ್ನೀಗ ಕೈಗೊಳ್ಳಲಿದ್ದಾನೆ ಈಗ, ಭೀಷ್ಮನ ಬಲವಂತಕ್ಕೆ ಕಟ್ಟುಬಿದ್ದು,  ಇಂತಿರುವಲ್ಲಿ ಸರೋವರದ ಸೌಂದರ್ಯವರ್ಣನೆಯನ್ನು ಮಾಡುವ ರಸಾಭಾಸಕ್ಕೆ ಕವಿ ಎಳಸಬಾರದು.  ಆದ್ದರಿಂದಲೇ ಸರೋವರದ ಸೌಂದರ್ಯಕ್ಕಿಂತ ಅದು ಆ ಕ್ಷಣಕ್ಕೆ ತೋರುತ್ತಿರುವ ಬೀಭತ್ಸತೆಯನ್ನೇ ಕವಿ ಕಟ್ಟಿಕೊಡುತ್ತಾನೆ - ಅದಕ್ಕೇ ಗಗನವೇ ಜರಿದು ಬಿದ್ದಿದೆಯೋ, ಸಮುದ್ರವೇ ಆಕಾಶವನ್ನು ತುಂಬಿದೆಯೋ ಎಂಬಂತಿರುವ ವಿಸ್ತಾರವಾದ ಜಲರಾಶಿಯು ಪಾತಾಳದ ಬಾಗಿಲಿನಂತೆ, ಘೋರಾಂಧಕಾರಕ್ಕೆ ಮಾಡಿದ ಕೂಪದಂತೆ, ಪ್ರಳಯಕಾಲದ ಮೋಡಗಳ ಕರಿನೆರಳಂತೆ ಕಾಣುತ್ತದೆ.  ಬರೀ ಕಾಣುತ್ತದೆಯೇ?  ಕೇಳುತ್ತದೆ - ಕಿವಿಗಡಚಿಕ್ಕುತ್ತದೆ ಕೂಡ - ಆ ಸರೋವರವನ್ನು ತುಂಬಿದ್ದ ಜಲಪಕ್ಷಿಗಳ ಅರಚುವಿಕೆ - ಅದು ಕೇವಲ ಕಲರವಲ್ಲ, ರೌರವ!  ಅದಕ್ಕೆ ಕವಿ ಬಳಸಿಕೊಳ್ಳುವ ಪದವೂ ಅದೇ ಛಾಯೆಯನ್ನು ಕೊಡುವಂತಿದೆ - "ರಾವಾಕುಳಂ".  ರವ ಎಂದರೆ ಶಬ್ದ.  ಆಕುಲ/ಳ ಎಂದರೆ ತುಂಬಿಹೋದ, ಕೆದರಿಹೋದ, ಕದಡಿಹೋದ, ಕ್ಷೋಭೆಗೊಂಡ - ಆ ಸರೋವರ ಆ ಸಂಜೆ, ಪಕ್ಷಿಗಳ ಕೂಗಿನಿಂದ ಕ್ಷೋಭೆಗೊಂಡಿದೆ, ಕದಡಿಹೋಗಿದೆ.

ಆ ಪಕ್ಷಿಗಳಾದರೂ ಏಕೆ ಕೂಗುತ್ತಿವೆ, ಏನೆಂದು ಕೂಗುತ್ತಿವೆ?  ಈ ದುರ್ಯೋಧನನೀಗ ಪಾಂಡವರ, ಅದರಲ್ಲೂ ಭೀಮಾರ್ಜುನರ ಕೋಪಕ್ಕೆ ಪಕ್ಕಾಗಿದ್ದಾನೆ.  ಅವರ ಕ್ರೋಧಾಗ್ನಿ ಇವನನ್ನು ಎಲ್ಲಿದ್ದರೂ ಬಿಡದು; ಇವನಿಲ್ಲಿ ಬಂದರೆ, ಇವನೊಡನೆ ನಮ್ಮನ್ನೂ ಸುಟ್ಟು ಬೂದಿಮಾಡದೇ ಬಿಡದು.  ಆದ್ದರಿಂದ "ಇಲ್ಲಿ ಕದಡಬೇಡ, ಬರಬೇಡ ಬರಬೇಡ" ಎಂದು ದುರ್ಯೋಧನನಿಗೆ ಎಚ್ಚರಿಕೆಕೊಡುತ್ತಾ ಅಲ್ಲಿನ ಪಕ್ಷಿಗಳೆಲ್ಲಾ ಒಗ್ಗೊರಲಿನಿಂದ ಕೂಗುತ್ತಿದ್ದುವಂತೆ:

ಅದಟಿನ ವಿಕ್ರಮಾರ್ಜುನನ ಸಾಹಸ ಭೀಮನ ಕೋಪ ಪಾವಕಂ
ಪುದಿದಳುರ್ದೞ್ವಿ ಕೊಳ್ಳದಿರದಿಲ್ಲಿಯುಮೆಮ್ಮುಮನಿಲ್ಲಿ ಬಾೞ್ವರಂ|
ಕದಡದಿರಿತ್ತ ಬಾರದಿರು ಸಾರದಿರೆಂಬವೊಲಾದುದೆತ್ತಮು
ನ್ಮದಕಳಹಂಸಕೋಕನಿಕರದ್ವನಿ ರುಂದ್ರಫಣೀಂದ್ರಕೇತುವಂ

ಇಲ್ಲಿ ಕವಿ, ದುರ್ಯೋಧನನನ್ನು "ರುಂದ್ರಫಣೀಂದ್ರಕೇತು" ಎಂದು ನಿರ್ದೇಶಿಸುತ್ತಾನೆ.  ದುರ್ಯೋಧನನು ಫಣಿಕೇತನ (ಹಾವಿನ ಬಾವುಟವುಳ್ಳವನು) ಹೌದು.  ಆದರೆ ಕವಿ, ರುಂದ್ರಫಣೀಂದ್ರಕೇತು (ರುಂದ್ರ = ವಿಶಾಲವಾದ, ಅಗಲವಾದ, ಹರಡಿದ) ಎಂದು ನಿರ್ದೇಶಿಸಿರುವುದು ವಿಶಿಷ್ಟವಾಗಿದೆ.  ಈ "ರುಂದ್ರ" ವಿಶೇಷಣವು "ರುಂದ್ರಫಣೀಂದ್ರ"ನಾಗಿ ವಿಶಾಲವಾಗಿ ಹೆಡೆಬಿಚ್ಚಿದ ಹಾವನ್ನೂ ಸೂಚಿಸಬಹುದು, "ರುಂದ್ರಕೇತನ"ವಾಗಿ ಹರಡಿದ ಬಾವುಟವನ್ನೂ ಸೂಚಿಸಬಹುದು ಅಥವಾ "ರುಂದ್ರ ಫಣೀಂದ್ರಕೇತನ"ನಾಗಿ ಸ್ವತಃ ದುರ್ಯೋಧನನನ್ನೇ ಸೂಚಿಸಬಹುದು.  ಇದಾವುದರಿಂದಲೂ (ಅಥವಾ ಇದೆಲ್ಲದರಿಂದಲೂ), ಅದೀಗ ಕ್ರೋಧದಿಂದ ಹೆಡೆಯಗಲಿಸಿದ ಸರ್ಪದಂತೆ ಕೆರಳಿದ, ಕೆರಳಿ ಅರಳಿದ ದುರ್ಯೋಧನನ ಇರವನ್ನು "ರುಂದ್ರಫಣೀಂದ್ರಕೇತು" ಎಂಬ ಒಂದೇ ಮಾತಿನಲ್ಲಿ ಸೂಚಿಸಿಬಿಡುತ್ತಾನೆ ಕವಿ.  ಸರೋವರದ ಪಕ್ಷಿಗಳು ಕಂಡು ಬೆದರಿ, ಬೇಡಬೇಡವೆಂದು ಚೀರಲಿಕ್ಕೆ ಇದಕ್ಕಿಂತ ಕಾರಣ ಬೇಕೇ?  ಹೀಗೆ, ಸರೋವರವನ್ನು ಕಂಡಾಗ ದುರ್ಯೋಧನನ ಮನದಲ್ಲುಂಟಾದ ಭಾವದ ಪ್ರತಿಫಲನವನ್ನು, ಸ್ವತಃ ದುರ್ಯೋಧನನನ್ನು ಕಂಡು ಪಕ್ಷಿಗಳಲ್ಲುಂಟಾದ ಭಾವದಲ್ಲಿ ಕಟ್ಟಿಕೊಡುತ್ತಾನೆ.

ಇವೆಲ್ಲ ಕೇವಲ ಅಲಂಕಾರಗಳೆಂದೂ ಕವಿಚಮತ್ಕಾರಗಳೆಂದೂ ಓದಿ ಬಿಡುವಂಥದ್ದಲ್ಲ.  ಶಕ್ತಕವಿಯೊಬ್ಬ ಕೇವಲ ಚಪಲಕ್ಕಾಗಿ ಚಮತ್ಕಾರ ಪ್ರದರ್ಶಿಸಲಾರ.  ದುರ್ಯೋಧನನ ಆಗಿನ ಮನಸ್ಥಿತಿಯ ಪ್ರತಿಬಿಂಬವಾಗಿ ಚಿತ್ರಿತವಾಗುವ ವೈಶಂಪಾಯನ, ಇತರ ಸರೋವರ, ನದಿ, ಬೆಟ್ಟಗುಡ್ಡಗಳಂತಲ್ಲದೇ ಸ್ವತಃ ಒಂದು ಪಾತ್ರವಾಗಿಬಿಡುತ್ತದೆ.  ಭೀಷ್ಮರಿಂದ ಬೀಳ್ಕೊಂಡು ಉದ್ವಿಗ್ನಮನನಾಗಿ ಹೊರಡುವ ದುರ್ಯೋಧನನು ರಣಭೂಮಿಯಲ್ಲಿ ಕಂಡ ಬೀಭತ್ಸಗಳನ್ನು ಈಗಾಗಲೇ ನೋಡಿದೆವು.  ಅವೆಲ್ಲವೂ ಅವನ ಮನಸ್ಸಿನಲ್ಲಿ ಭಯಂಕರ ತುಮುಲವನ್ನೂ, ಭಯವನ್ನೂ, ಅಸಹ್ಯವನ್ನೂ, ಖಿನ್ನತೆಯನ್ನೂ ಹುಟ್ಟಿಸಿವೆ.  ಅಭಿಮಾನಧನನಾದ ದುರ್ಯೋಧನನು, ತನಗಿಷ್ಟವಿಲ್ಲದಿದ್ದರೂ ಭೀಷ್ಮನ ಬಲವಂತಕ್ಕೆ ಕಟ್ಟುಬಿದ್ದು ತನ್ನ ವ್ಯಕ್ತಿತ್ವಕ್ಕೆ ಒಂದಿನಿತೂ ಒಗ್ಗದ ಕಾರ್ಯ ಮಾಡಲು ಇಲ್ಲಿಗೆ ಬಂದಿದ್ದಾನೆ.  ಶತ್ರುಗಳಿಗೆ ಹೆದರಿ ಹೇಡಿಯಂತೆ ನೀರಿನಲ್ಲಿ ಅವಿತುಕೊಳ್ಳುವುದು ದುರ್ಯೋಧನನಂಥಾ ವೀರನಿಗೆ ಸಾವಿಗಿಂತಲೂ ಕೆಟ್ಟದ್ದು, ಅದು ಆತನ ವ್ಯಕ್ತಿತ್ವ ಕಾಣುತ್ತಿರುವ ಅಧಃಪಾತ - ಆದ್ದರಿಂದಲೇ ತಾನೀಗ ಹೊಗಲಿರುವ ಸರೋವರ, ತನ್ನ ವ್ಯಕ್ತಿತ್ವವನ್ನೂ ಕೀರ್ತಿಯಶಸ್ಸುಗಳನ್ನೂ ಪಾತಾಳಕ್ಕೆ ಕೊಂಡೊಯ್ಯುವ ಬಾಗಿಲಿನಂತೆ ತೋರುತ್ತದೆ; ಸೂರ್ಯನಂತೆ ಬೆಳಗಿದ್ದ ತನ್ನ ಕೀರ್ತಿ ಅಡಗಲಿರುವ ಘೋರಾಂಧಕಾರದ ಕೂಪದಂತೆ ಕಾಣುತ್ತದೆ; ಇದಾದಮೇಲೆ ಘೋರ ಅಪಮಾನ ಅಪಕೀರ್ತಿಗಳಲ್ಲದೇ ಇನ್ನೇನುಳಿಯಿತು ದುರ್ಯೋಧನನಿಗೆ?  ಅದು ಆತನ ಪಾಲಿಗೆ ಪ್ರಳಯವೇ - ಮಹಾದುರಂತ!  ಆದ್ದರಿಂದಲೇ ಈ ಸರೋವರ ಪ್ರಳಯಮೇಘದ ಕರಿನೆರಳಂತೆ ಕಂಡರೆ ಆಶ್ಚರ್ಯವೇನು?  ಇನ್ನು ದುರ್ಯೋಧನನ ಅಪಯಶಸ್ಸನ್ನೇ ಕಿವಿಗಡಚಿಕ್ಕುತ್ತಿರುವ ಜಲಪಕ್ಷಿಗಳ ಕೂಗನ್ನು ಮೇಲೇ ವರ್ಣಿಸಿದೆ. 
ಕೊನೆಗೆ, ಗಾಯಗಳಿಂದ ರಕ್ತವೊಸರುತ್ತಿದ್ದ ಮೈಯನ್ನು ಒರೆಸಿ ತೊಳೆದು, ಜಲಾಭಿಮಂತ್ರಣಪೂರ್ವಕವಾಗಿ ಸರೋವರದಲ್ಲಿಳಿಯುವ ದುರ್ಯೋಧನನನ್ನು ಪಂಪ ಬಣ್ಣಿಸುವ ಕವಿ, "ತನ್ನ ತೇಜದಿಂದ ಸಮಸ್ತಭೂವಲಯವನ್ನು ಬೆಳಗಿ, ದೈತ್ಯರೊಡನೆ ಹೋರಾಡಿ ಕಳೆಗುಂದಿ ಬಳಲಿ ಕೊನೆಗೆ ಪಡುಗಡಲಲ್ಲಿ ಮುಳುಗುವ ಸೂರ್ಯನಂತೆ ಫಣಿರಾಜಕೇತನನು ಕೊಳದಲ್ಲಿ ಮುಳುಗಿದನು - ವಿಧಿ ಕಟ್ಟಿಟ್ಟದ್ದನ್ನು ಕಳೆಯುವವರಾರು!" ಎಂದು ನಿಟ್ಟುಸಿರಿಡುತ್ತಾನೆ - "ಕುರುಕುಲಾರ್ಕನುಮ್ ಅರ್ಕನುಮ್ ಅಸ್ತಮನೆಯ್ದಿದರ್" ಎಂದು ರನ್ನನು ಕಟ್ಟಿಕೊಡುವ ದುರ್ಯೋಧನನ ಅವಸಾನದ ಚಿತ್ರಣವನ್ನು ಪಂಪ ಈಗಲೇ - ದುರ್ಯೋಧನನ ವೈಶಂಪಾಯನಪ್ರವೇಶದ ಸಂದರ್ಭದಲ್ಲೇ ಕೊಟ್ಟುಬಿಡುವುದು ವಿಶಿಷ್ಟವಾಗಿದೆ.  ದುರ್ಯೋಧನನ ತೇಜಸ್ಸಿನ ಅವಸಾನಕ್ಕೆ ಇದೇ ಶ್ರದ್ಧಾಂಜಲಿಯಂತೆ ಕೇಳುತ್ತದೆ.

ಕಲ್ಪನೆಯಲ್ಲೂ ಪ್ರಸ್ತುತಿಯಲ್ಲೂ ಕೊನೆಗೆ ಭಾಷೆಯಲ್ಲೂ ಅನೇಕ ಬಾರಿ ಪಂಪನನ್ನು ಪಡಿನೆಳಲಂತೆ ಅನುಸರಿಸುವ ರನ್ನನು ಇದೇ ವೈಶಂಪಾಯನಪ್ರಸಂಗವನ್ನು ವರ್ಣಿಸುವ ಬಗೆ ಬೇರೆ.  ಪಂಪನಲ್ಲಿ ದುರಂತವೆಂಬಂತೆ ಚಿತ್ರಿತವಾಗಿರುವ ಈ ಭಾಗವನ್ನು ರನ್ನನು ಅದೂ ಸುಯೋಧನನ ವೈಭವವೋ ಎಂಬಂತೆಯೇ ಚಿತ್ರಿಸುತ್ತಾನೆ - "ನರಲೋಕವನ್ನು ಅನುಭವಿಸಿ, ಸ್ವರ್ಗಸುಖವನ್ನೂ ವೈಭವದಿಂದ ಅನುಭವಿಸಿ ಅನಂತರ ನಾಗಲೋಕವನ್ನು ಹೊಗುವಂತೆ ಕುರುಪತಿಯು ವೈಶಂಪಾಯನವನ್ನು ಹೊಕ್ಕನು (ನರಲೋಕಮನುಪಭೋಗಿಸಿ ಸುರಲೋಕದ ಸುಖಮನಾತ್ಮವಿಭವದೆ ತಳೆದಾ ಕುರುಪತಿ ವೈಶಂಪಾಯನ ಸರಮಂ ಪುಗುವಂತೆ ನಾಗಲೋಕವ ಪೊಕ್ಕಂ) ಎನ್ನುತ್ತಾನೆ.  ಮುಂದೆ ದುರ್ಯೋಧನನು ಹತನಾದಾಗಲೂ "ಕುರುಕುಲಾರ್ಕನುಮ್ ಅರ್ಕನುಮ್ ಅಸ್ತಮನೆಯ್ದಿದರ್" ಎಂದು ಭಾವಪೂರ್ಣವಾಗಿ ಬೀಳ್ಕೊಡುತ್ತಾನೆ.

ಆದರೆ ಈ ವೈಭವದ ಪ್ರಭಾವಳಿಯನ್ನೇನೂ ಹಚ್ಚದ ಪಂಪನಿಗೆ ದುರ್ಯೋಧನನು ವೈಶಂಪಾಯನದಲ್ಲಿಳಿಯುವ ಈ ಪ್ರಸಂಗ, ದುರ್ಯೋಧನನ ದುರಂತದಂತೆ, ಸ್ವತಃ ಅದೇ ಆತನ ಅವಸಾನದಂತೆ ಕಾಣುತ್ತದೆ - ಮಾನಧನನಿಗೆ ಅಪಮಾನಕ್ಕಿಂತ, ಅಪಕೀರ್ತಿ ಅಪಯಶಗಳಿಗಿಂತ ಬೇರೆ ಸಾವುಂಟೇ?  ಆದ್ದರಿಂದ ಈ ಪ್ರಸಂಗವನ್ನೇ ಆತನ ಅವಸಾನವೆಂಬಂತೆ ಚಿತ್ರಿಸುವ ಪಂಪ, ಮುಂದೆ ಆತನು ನಿಜವಾಗಿ ಯುದ್ಧದಲ್ಲಿ ಸತ್ತುದನ್ನು ಚಿತ್ರಿಸುವ ಗೋಜಿಗೇ ಹೋಗುವುದಿಲ್ಲ - ಕರ್ಣನ ಅವಸಾನವನ್ನು ಚಿತ್ರಿಸುವ ಅಥವಾ ಮುಂದೆ ರನ್ನನು ದುರ್ಯೋಧನನ ಅವಸಾನವನ್ನೇ ಚಿತ್ರಿಸುವ ವೈಭವ ಇಲ್ಲಿ ಕಾಣುವುದೇ ಇಲ್ಲ! ಅದು ಏನೇನೂ ಮುಖ್ಯವಲ್ಲವಂತೆ "ಎಮಗಂತ್ಯಕಾಲಮೆಂದು ದುರ್ಯೋಧನಂ ಪ್ರಾಣತ್ಯಾಗಂಗೈದಂ" ಎಂದು ಅರ್ಧವಾಕ್ಯದಲ್ಲಿ ಮುಗಿಸಿಬಿಡುತ್ತಾನೆ!  ನಿಜವೇ.  ವೈಶಂಪಾಯನವನ್ನು ಹೊಕ್ಕು ಅಡಗಿ ಕುಳಿತಾಗಲೇ ದುರ್ಯೋಧನನು ಸತ್ತಿದ್ದಾಯಿತು.  ಆಮೇಲೆ ಉಳಿದದ್ದು, ಊರುಭಂಗ ಮಕುಟಭಂಗಗಳ ಹೀನಾಯವನ್ನು ಅನುಭವಿಸಿದ್ದು, ಆಮೇಲೆ ಸತ್ತು ಬಿದ್ದದ್ದು ಕೇವಲ ಉಸಿರಾಡುತ್ತಿದ್ದ ಆತನ ಶರೀರವಷ್ಟೇ.

ಹೀಗಾಗಿ, ದುರ್ಯೋಧನನ ಉಗ್ರತೇಜದ ಅಂತಿಮ ಕ್ಷಣಗಳನ್ನು - ನಿಜಾರ್ಥದಲ್ಲಿ ಆತನ ಅವಸಾನವನ್ನು - ಈ ವೈಶಂಪಾಯನ ಪ್ರಸಂಗ ಬಹು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

ಬೆಳಗಿ ಸಮಸ್ತಭೂವಳಯಮಂ ನಿಜ ತೇಜದಿನಾಂತ ದೈತ್ಯರಂ
ತಳವೆಳಗಾಗೆ ಕಾದಿ ಚಳಿತೆಯ್ದಿ ಬೞಲ್ದಪರಾಂಬುರಾಶಿಯೊಳ್|
ಮುೞುಗುವ ತೀವ್ರದೀಧಿತಿವೊಲಾ ಕೊಳದೊಳ್ ಫಣಿರಾಜಕೇತನಂ
ಮುೞುಗಿದನಾರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ

(ಚಿತ್ರಕೃಪೆ: ಅಂತರ್ಜಾಲ)

Thursday, March 16, 2017

ಕಲೆಗೆ ಕಟ್ಟೆಲ್ಲಯ್ಯಾ...

ರೇಡಿಯೋ ನಮ್ಮ ದಿನಚರಿಯನ್ನು ನಿಯಂತ್ರಿಸುತ್ತಿದ್ದ ಕಾಲ ಅದು.  ನನ್ನ ಬಾಲ್ಯದ ಬೆಳಗುಗಳು ಶುರುವಾಗುತ್ತಿದ್ದುದೇ ನಮ್ಮ ತಂದೆಯವರ ರೇಡಿಯೋದಲ್ಲಿ ಬೆಳಗ್ಗೆ ಐದಕ್ಕೋ ಐದೂವರೆಗೋ ಅದಾವುದೋ ಸ್ಟೇಷನ್ನಿನಿಂದ ಮೊಳಗುತ್ತಿದ್ದ ಹಮ್ದ್ ಒ ನಾತ್ - ಇಸ್ಲಾಮ್ ಭಕ್ತಿಗೀತೆಗಳ ಕಾರ್ಯಕ್ರಮದಿಂದ. ಬೆಳಗಿನ ಮೌನವನ್ನು ಮೆಲ್ಲಮೆಲ್ಲಗೆ ಸರಿಸುತ್ತಾ, ಮಂದ್ರವೂ ಅಲ್ಲದ, ಕೀರಲೂ ಅಲ್ಲದ, ಸಹಜ ಧ್ವನಿಯಲ್ಲಿ ಹೊಮ್ಮುತ್ತಿದ್ದ ಗೀತೆಗಳು ವಾತಾವರಣದಲ್ಲಿ ಅದೊಂದು ರೀತಿಯ ಪ್ರಸನ್ನತೆಯನ್ನು ಪಸರಿಸುತ್ತಾ ಬೆಳಗಿನ ಸಕ್ಕರೆನಿದ್ದೆಯ ಸಿಹಿಯನ್ನು ಹೆಚ್ಚಿಸುತ್ತಿತ್ತು.  ಅದಾದಮೇಲೆ ಆರು ಗಂಟೆಗೆ ಬೆಂಗಳೂರು ಕೇಂದ್ರದ ಪ್ರಸಾರ ಶುರುವಾಗುತ್ತಿತ್ತು - ಒಂದೆರಡು ನಿಮಿಷ ನಾದಸ್ವರವಾದನ, ವಂದೇಮಾತರಂ, ಆಮೇಲೆ ಇಂಗ್ಲಿಷಿನಲ್ಲಿ ವಾರ್ತೆಗಳು, ಅನಂತರ ಗೀತಾರಾಧನ - ಭಕ್ತಿಗೀತೆಗಳ ಕಾರ್ಯಕ್ರಮ - ಹೀಗೆ ಸಾಗುತ್ತಿತ್ತು.  ಸಾಹಿತ್ಯ ಕಿವಿಗೆ ಬಿದ್ದರೂ ಅರ್ಥವಾಗದ ಕಾಲ, ಈ ಹಮ್ದ್ ನಾತ್ ಗೀತೆಗಳಲ್ಲಿ ಕೆಲವು - ಅಪ್ನಾ ಕ್ಯಾ ಹೈ, ತಮಾಮ್ ಉನ್ಕಾ ಹೈ; ಯೆಹ್ ಸಬ್ ತುಮ್ಹಾರಾ ಕರಮ್ ಹೈ ಆಕಾ ಮುಂತಾಗಿ ಹಲವು ಗೀತೆಗಳು ಇವತ್ತಿಗೂ ಕಿವಿಗಳಲ್ಲಿ ಅಚ್ಚೊತ್ತಿವೆ (ಹಾಡುತ್ತಿದ್ದ ಕಲಾವಿದರಾರೋ ಪರಿಚಯವಾಗದ ವಯಸ್ಸದು - ಆ ಮಾಧುರ್ಯವೂ ಆರ್ತತೆಯೂ ಸರಳತೆಯೂ ಮತ್ತೆ ಸಿಕ್ಕೀತೇ ಎಂದು ಇಂಟರ್ನೆಟ್ಟಿನಲ್ಲಿ ಹುಡುಕಿ ವಿಫಲನಾಗಿದ್ದೇನೆ).  ನಾದಮಾಧುರ್ಯವನ್ನು ಮೀರಿ ಹಾಡಿನಲ್ಲಿನ ’ಮಾತು’ ಸುಮಾರಾಗಿ ಅರ್ಥವಾಗತೊಡಗಿದ ಮೇಲೂ, ಭಾವವದಲ್ಲಾಗಲೀ ಭಕ್ತಿಯಾಗಲೀ ಈ ಗೀತೆಗಳು ನಮ್ಮದೇ ವಚನ-ದಾಸರ ಪದಗಳಿಂದ ಹೊರಗಿನವೆನಿಸಲಿಲ್ಲವೆನ್ನುವುದು ನನ್ನ ಅನುಭವ.   "ಕಿಸೀ ಕಾ ಎಹೆಸಾನ್ ಕ್ಯೂನ್ ಉಠಾಯೇನ್, ಕಿಸೀ ಕೊ ಹಾಲಾತ್ ಕ್ಯೂನ್ ಬತಾಯೇನ್; ತುಮ್ ಹಿ ಸೆ ಮಾಂಗೇಂಗೆ ತುಮ್ ಹೀ ದೋಗೇ (ಯಾರ ನೆರವನೋ ಕೇಳುವುದೇಕೆ, ಮತ್ತಾರೊಳೊ ಅಳಲನು ಪೇಳುವುದೇಕೆ; ಬೇಡುವೆವು ನಿನ್ನೊಬ್ಬನನೆ ನೀನೀವೆ ಬೇಡಿದ್ದೆಲ್ಲವ)" ಈ ಸಾಲು, "ಹಾಡಿದರೆ ಎನ್ನ ಒಡೆಯನ ಹಾಡುವೆ, ಬೇಡಿದರೆ ಎನ್ನ ಒಡೆಯನ ಬೇಡುವೆ, ಒಡೆಯಗೆ ಒಡಲನು ತೋರುವೆ ಎನ್ನ ಬಡತನ ಬಿನ್ನಹ ಮಾಡುವೆ" ಎಂಬ ದಾಸವಾಣಿಗಿಂತ ಬೇರೆನಿಸುವುದೇ?    ಈ ಶರಣಾಗತಿ, ಪ್ರಪತ್ತಿ, ಏಕದೈವಾರಾಧನೆ, ಇವೆಲ್ಲ ಈ ನೆಲದ ಪರಿಕಲ್ಪನೆಗಳೇ ತಾನೆ! 

ಖವ್ವಾಲಿಗಳ ಕಡೆ ನಮ್ಮ ತಂದೆಯವರಿಗಿದ್ದ ಸೆಳೆತ ಕೇವಲ ಸಂಗೀತದ ಗಮ್ಮತ್ತಿನ ಕುರುಡು ಸೆಳೆತವಾಗಿರಲಿಲ್ಲ, ಅಲ್ಲೊಂದು ಅನುಸಂಧಾನವೂ ಇತ್ತೆಂಬುದು ಹಿನ್ನೋಟದಲ್ಲಿ ನನಗನಿಸಿದೆ.  ಎಷ್ಟೋ ಬಾರಿ ಅಲ್ಲೊಂದು ಇಲ್ಲೊಂದು ಸಾಲುಗಳ ಅರ್ಥ ಕೇಳಿದಾಗ, ಅವರು ಅರ್ಥವನ್ನು ಕನ್ನಡದಲ್ಲಿ ಹೇಳುವುದಲ್ಲದೇ ಅದೇ ಭಾವಮುದ್ರೆಯನ್ನು ದಾಸರ ಪದಗಳಿಂದಲೋ ವಚನಗಳಿಂದಲೋ ತಂದೊದಗಿಸುತ್ತಿದ್ದುದೂ ಉಂಟು.  ಹೀಗಾಗಿ, ಕಲೆಯ ಮಟ್ಟದಲ್ಲಿರಲಿ, ಧರ್ಮದ, ಅನುಭಾವದ ಮಟ್ಟದಲ್ಲೂ ನಮಗಿವು ಹೊರಗಿನವೆಂದು ಅನ್ನಿಸಿರಲೇ ಇಲ್ಲ.  ಇವತ್ತು ಬಲವಂತವಾಗಿಯಾದರೂ ತಂದುಕೊಳ್ಳಬೇಕಾಗಿರುವ ’ಸರ್ವಧರ್ಮಸಮನ್ವಯ’, ಆ ಪದದ ಪರಿಚಯವೂ ಇಲ್ಲದ ಬಾಲ್ಯದಲ್ಲಿ, ಬೆಳಗಿನ ಸವಿ-ಅರೆನಿದ್ದೆಯ ರೂಪದಲ್ಲಿ ನನ್ನದಾಗಿದ್ದು, ನನಗೊದಗಿದ ಬಹು ದೊಡ್ಡ ಸಂಸ್ಕಾರವೆಂದೇ ನನ್ನೆಣಿಕೆ.

ಮೊನ್ನೆ ದೂರದರ್ಶನ ವಾಹಿನಿಯೊಂದರಲ್ಲಿ ಸುಹಾನಾ ಎಂಬ ಹೆಣ್ಣುಮಗಳು ’ಹಿಂದೂ’ ಭಕ್ತಿಗೀತೆ ಹಾಡಿದ್ದನ್ನೇ ಒಂದು ಅದ್ಭುತವೆಂಬಂತೆ ಕಾರ್ಯಕ್ರಮ ನಿರ್ವಾಹಕರು ಹಿಗ್ಗಾಮುಗ್ಗಾ ಕೊಂಡಾಡಿದ್ದೂ, ಅದೇ ಕಾರಣಕ್ಕಾಗಿ ಆಕೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದದ್ದೂ, ನೋಡಿದಾಗ, ಕಳೆದುಹೋದ ಪ್ರಸನ್ನಬಾಲ್ಯ ನೆನಪಾಯಿತು.  ಘಟನೆಯೇ ಅಲ್ಲದ ಘಟನೆಗೆ ಇಷ್ಟು ಹುಯ್ಯಲೆಬ್ಬಿಸುವ ನಾವು, ಕಾಲದಿಂದ ನಮ್ಮನ್ನು ಬೆಸೆದಿರುವ ಧಾರ್ಮಿಕ ಸಾಮರಸ್ಯವನ್ನು ಕಾಣದೇ ಹೋಗುತ್ತಿದ್ದೇವೆಯೇ? ಎಷ್ಟು ಜನ ಮುಸ್ಲಿಮ್ ಭಕ್ತರು ಹಿಂದೂ ದೇವಾಲಯಗಳಿಗೆ ಹರಕೆ ಹೊರುತ್ತಾರೆ, ಹಿಂದೂಗಳು ದರ್ಗಾಗಳಿಗೆ ಹರಕೆ ಸಲ್ಲಿಸಿ ಸಕ್ಕರೆ ಪ್ರಸಾದ ಕೊಂಡು ಬರುತ್ತಾರೆ, ಎಷ್ಟು ಊರೊಟ್ಟಿನ ಹಿಂದೂ ದೇವಾಲಯಗಳ ಆಡಳಿತ ಮಂಡಲಿಯಲ್ಲಿ ಊರಿನ ಗಣ್ಯ ಮುಸ್ಲಿಮರಿರುತ್ತಾರೆ! ಇನ್ನು ಹಿಂದೂ ಮುಸ್ಲಿಂ ಭಾವೈಕ್ಯವನ್ನು ಸಾರಿದ, ನಮ್ಮೆಲ್ಲರ ಒಡೆಯನೊಬ್ಬನೇ ಎಂಬ ಸತ್ಯವನ್ನು ಪದೇಪದೇ ಎತ್ತಿಹಿಡಿದ ಅದೆಷ್ಟು ಸೂಫೀ ಸಂತರು ಈ ನೆಲದಲ್ಲಿ ಆಗಿಹೋಗಿಲ್ಲ!  ಇರಲಿ, ಧಾರ್ಮಿಕ-ಆಧ್ಯಾತ್ಮಿಕ ಸ್ತರದಲ್ಲೇ ಈ ಪರಿಯ ಸಾಮರಸ್ಯ ಸಾಧಿಸಿದ ಈ ಮಣ್ಣಿನ ಗುಣ, ಕಲೆಯಲ್ಲಿ ಧರ್ಮದ ಭೇದವನ್ನೆಣಿಸಿದ ಉದಾಹರಣೆಗಳಿವೆಯೇ? ಧರ್ಮವೊಂದು ಸಂಗೀತವನ್ನು ’ಹರಾಮ್’ ಎನ್ನುತ್ತದೆನ್ನುವುದು, ಸ್ವತಃ ಧಾರ್ಮಿಕರ ನಡುವೆಯೇ ವಿವಾದಕ್ಕೊಳಪಟ್ಟ ವಿಷಯ.  ಆದರೆ, ಕಲಾವಿದ, ಅದೊಂದಕ್ಕೂ ತಲೆ ಕೆಡಿಸಿಕೊಂಡದ್ದೇ ಇಲ್ಲ!  ಭಾರತೀಯ, ಅದರಲ್ಲೂ ಹಿಂದೂಸ್ತಾನೀ ಸಂಗೀತಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು ಮುಸ್ಲಿಮರೆಂಬುದನ್ನು ಮರೆಯುವಂತಿಲ್ಲ - ಸ್ವತಃ ತಾನ್ಸೇನನ ಮಕ್ಕಳಾದ ಬಿಲಾಸ್ ಖಾನ್, ತಾನತರಂಗ್ ಖಾನರಿಂದ ಹಿಡಿದು ತೀರ ಕಳೆದ ಶತಮಾನದ ಅಮೀರ್ ಖಾನರವರೆಗೆ ಎಷ್ಟು ಜನ!  ಅವರಲ್ಲಿ ಹಲವರು ಸ್ವತಃ ಘರಾನೆಗಳನ್ನು ಹುಟ್ಟುಹಾಕಿದವರು, ಹಲವರು ಕಳೆಗುಂದಿದ್ದ ಘರಾನೆಗಳನ್ನು ಉಜ್ಜಿ ಹೊಳಪು ನೀಡಿದವರು.  ಒಂದು ಕಾಲಕ್ಕೆ ಇದು ಎಷ್ಟು ಮುಸ್ಲಿಂ ಮಯವಾಗಿತ್ತೆಂದರೆ, ಉತ್ತರಾದಿ ಸಂಗೀತವೆಂದರೆ ಮುಸಲರ ಸಂಗೀತವೆನ್ನುವಷ್ಟು.  ಆದರೆ ಇವರೆಲ್ಲ ನೀಡಿದ್ದು ಅದೆಂಥಾ ದೈವೀ ಗಾನ!  ಇದನ್ನು ’ಹರಾಮ್’ ಎನ್ನಲಾದೀತೇ?  ಸಂಗೀತಕ್ಕೆ ಕಲೆಗೆ ಇನ್ನಿಲ್ಲದಂತೆ ಪ್ರೋತ್ಸಾಹ ನೀಡಿದ ಮುಘಲ್ ಅರಸರು ಸ್ವತಃ ಸಂಗೀತಕಲೆಯಲ್ಲಿ ನಿಷ್ಣಾತರಾಗಿದ್ದರೆಂಬುದನ್ನೂ ಮರೆಯುವಂತಿಲ್ಲ (ಕೆಲವು ಅಪವಾದಗಳನ್ನುಳಿದು).  ಧರ್ಮದ ಕಟ್ಟಿರಲಿ, ಸಂಗೀತಕ್ಕೆ ಲಿಂಗದ ಕಟ್ಟಾದರೂ ಇದೆಯೇ? ಉಹೂಂ!  ಸಾಂಪ್ರದಾಯಿಕವಾಗಿ ಸಂಗೀತನೃತ್ಯಗಳು ಸ್ತ್ರೀಯರದೇ ಭದ್ರಕೋಟೆ.  ಈಗ ಬಿಡಿ, ಈ ಹಿಂದೆಯೂ ಅದೆಷ್ಟು ಜನ ವಿದುಷಿಯರು ಆಗಿಹೋದವರು!   ಗೋಹರ್ ಜಾನ್, ಗೋಹರ್ ಬಾಯಿ ಕರ್ನಾಟಕಿ, ಅಮಿರ್ ಬಾಯಿ ಕರ್ನಾಟಕಿ, ಅಬ್ದುಲ್ ಕರೀಮ್ ಖಾನರ ಶಿಷ್ಯೆ ರೋಷನಾರಾ ಬೇಗಂ, ಮತ್ತೆ ನಮ್ಮವರೇ ಆದ ಬೆಂಗಳೂರು ನಾಗರತ್ನಮ್ಮ (ಈಕೆಯ ಪ್ರಸಿದ್ಧಿ ಸಂಗೀತವೊಂದಕ್ಕೇ ಅಲ್ಲ - ತಿರುವಯ್ಯಾರಿನಲ್ಲಿ ಪಾಳಾಗಿದ್ದ ಸಂತ ತ್ಯಾಗರಾಜರ ಸಮಾಧಿಸ್ಥಳವನ್ನು ಪತ್ತೆಹಚ್ಚಿ, ಅದಕ್ಕೊಂದು ಭವನವನ್ನು ನಿರ್ಮಾಣಮಾಡಿ ವರ್ಷವರ್ಷ ಆರಾಧನೆ ನಡೆಯುವಂತೆ ಅನುವುಗೊಳಿಸಿದ್ದು, ಅದಕ್ಕೋಸ್ಕರ ತನ್ನೆಲ್ಲ ಸಂಪತ್ತನ್ನೂ ಸುರಿದದ್ದು ಈ ಮಹಾನ್ ಚೇತನ.  ಇವತ್ತು ತಿರುವಯ್ಯಾರು ದಕ್ಷಿಣಾದಿ ಸಂಗೀತದ ಶ್ರದ್ಧಾಕೇಂದ್ರವಾಗಿದ್ದರೆ ಅದರ ಶ್ರೇಯಸ್ಸು ಶ್ರೀಮತಿ ನಾಗರತ್ನಮ್ಮನವರಿಗೆ ಸೇರತಕ್ಕದ್ದು).  ಒಂದು ಕಾಲಕ್ಕೆ ’ಕುಲೀನ’ಸ್ತ್ರೀಯರು ಸಂಗೀತ-ನೃತ್ಯಗಳಲ್ಲಿ ಈಡುಪಡುವುದಕ್ಕೆ ನಿಷೇಧವಿದ್ದದ್ದು ನಿಜ, ಆದರೆ ಅದು ಕೇವಲ ಒಂದು ಕಾಲಘಟ್ಟವಷ್ಟೇ.  ಈಗಂತೂ ಆ ’ನಿಷೇಧ’ ಹೇಳಹೆಸರಿಲ್ಲದಂತೆ ಮಾಯವಾಗಿದೆಯಲ್ಲವೇ?  ಉತ್ತರಾದಿ ಸಂಗೀತವಿರಲಿ, ಇಸ್ಲಾಮಿಕ್ ಭಕ್ತಿಸಂಗೀತದಲ್ಲೂ ಆ ಕಟ್ಟು ಎಲ್ಲಿದೆ ಇವೊತ್ತು?  ಸಂಗೀತ ಸಾಮ್ರಾಜ್ಞಿ ಪರ್ವಿನ್ ಸುಲ್ತಾನಾ, ಬೇಗಮ್ ಅಕ್ತರ್, ಅಬಿದಾ ಪರ್ವೀನ್ ಇವರಾರ ಹೆಸರನ್ನೂ ನಾವು ಕೇಳಿಲ್ಲವೇ? (ಹೆಸರುಗಳು ಪ್ರಾತಿನಿಧಿಕವಷ್ಟೇ, ಇಂದು ಖ್ಯಾತನಾಮರಾದ ವಿವಿಧ ಧರ್ಮಗಳ ಎಲ್ಲ ಸ್ತ್ರೀ ಪುರುಷ ಕಲಾಕಾರರ ಹೆಸರುಗಳನ್ನು ಬರೆದರೆ ಗ್ರಂಥವೇ ಬೇಕಾದೀತು).

ಸಂಗೀತವೇನೋ ಹೋಗಲಿ, ಆದರೆ ಅದರಲ್ಲಿ ’ಮಾತು’ ಇದೆಯಲ್ಲ, ಅದು ’ಅನ್ಯ’ ಧರ್ಮಕ್ಕೆ ಕಟ್ಟುಬಿದ್ದಿದೆಯಲ್ಲವೇ ಎನ್ನುವುದಾದರೆ, ಅದಕ್ಕೆ ಸಮಾಧಾನ ಈ ಲೇಖನದ ಮೊದಲಲ್ಲೇ ಇದೆ.  ಕಟ್ಟುಗಳಿರುವುದು ನೋಡುವವನ ಕಣ್ಣಿನಲ್ಲೇ ಹೊರತು ಗೀತೆಗಳಲ್ಲಲ್ಲ.  (ಅ)ಧಾರ್ಮಿಕ ಸಾಹಿತ್ಯವೆಂಬ ಕಾರಣಕ್ಕೆ ಮೇಲೆ ವಿವರಿಸಿದ ಮಹನೀಯ ಸಂಗೀತಗಾರರು ಯಾರೂ ತಾವು ಹಾಡುವ ಬಂದಿಶ್, ಠುಮ್ರಿಗಳಲ್ಲಿ ಸಾಹಿತ್ಯವನ್ನು ಬಿಟ್ಟು ಬರೀ ಸ್ವರವನ್ನೇ ಹಾಡಿದ್ದಿಲ್ಲ - ಅಂದ ಮಾತ್ರಕ್ಕೆ ಅವರು ಧರ್ಮಭ್ರಷ್ಟರಾಗಿದ್ದೂ ಇಲ್ಲ ಎಂಬುದನ್ನು ಗಮನಿಸಬೇಕು.  ಅಷ್ಟೇಕೆ, ಭಕ್ತಿಪ್ರಧಾನವೆಂದೇ ಹೆಸರಾದ ಕರ್ನಾಟಕಸಂಗೀತದಲ್ಲೇ ಸಾಧನೆಯ ಉತ್ತುಂಗಕ್ಕೇರಿದ ’ಹಿಂದು’ ಅಲ್ಲದ ಮಹನೀಯರಿದ್ದಾರೆ.  ಪಕ್ಕನೆ ಯಾರಿಗೂ ಹೊಳೆಯಬಹುದಾದ ಉದಾಹರಣೆ, ಡಾ. ಯೇಸುದಾಸರದು.  ಇನ್ನು ಹಿಗ್ಗಿನ್ಸ್ ಭಾಗವತರ್ ಎಂದೇ ಹೆಸರಾಗಿದ ಅಮೆರಿಕೆಯ ಶ್ರೀ ಜಾನ್ ಬಿ ಹಿಗಿನ್ಸ್ ಹೆಸರನ್ನು ಕರ್ನಾಟಕಸಂಗೀತ ರಸಿಕರು ಮರೆಯುವುದಕ್ಕಿಲ್ಲ.  ಅಂತೆಯೇ ಶೇಕ್ ಚಿನ್ನಾ ಮೌಲಾನ, ನಾಗೋರ್ ಎಸ್ ಎಮ್ ಎ ಖಾದಿರ್, ನಾಗೋರ್ ಯೂಸುಫ್, ದಾಸರ ಪದಗಳ ಕಂಪು ಹರಡುತ್ತಿರುವ ಹುಸೈನ್ ಸಾಬ್, ಫಯಾಜ್ ಖಾನ್, ಖಾನ್ ಸಹೋದರರೆಂದೇ ಹೆಸರಾದ ಉಸ್ತಾದ್ ರಾಯಿಸ್ ಬಲೇ ಖಾನ್ ಮತ್ತು ಹಫೀಜ಼್ ಬಲೇ ಖಾನ್... ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.  ಅಷ್ಟೇಕೆ, ಸ್ವತಃ ಉಸ್ತಾದ್ ಅಬ್ದುಲ್ ಕರೀಮ್ ಖಾನರು ಕರ್ನಾಟಕ ಸಂಗೀತಕೃತಿಗಳಾದ ರಾಮ ನೀ ಸಮಾನಮೆವರು (ಖರಹರಪ್ರಿಯ) ಮತ್ತು ಎಂತನೇರ್ಚಿನ (ಸಾವೇರಿ) ಎಂಬ ಎರಡು ಕೃತಿಗಳನ್ನು ಹಾಡಿರುವ ಅಪರೂಪದ ಧ್ವನಿಮುದ್ರಣ ಲಭ್ಯವಿದೆ (ಇವು ’ಹಿಂದೂ’ ಭಕ್ತಿರಚನೆಗಳೆಂದು ಪ್ರತ್ಯೇಕ ಹೇಳಬೇಕಿಲ್ಲವಲ್ಲ). 

ಸಂಗೀತ, ಸಾಹಿತ್ಯ, ಕಲೆಗಳು ಅಭಿವ್ಯಕ್ತಿಸಾಧನಗಳು.  ಅಭಿವ್ಯಕ್ತಿಯ ಹೆಸರಿನಲ್ಲಿ ಬರುವ ವಿಕೃತಿಗಳನ್ನು, ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ತಡೆಗಟ್ಟಲು ಕಾನೂನು ಮಾಡಬಹುದು, ಧರ್ಮಶಾಸ್ತ್ರದ ಕಟ್ಟುಗಳನ್ನು ಹಾಕಬಹುದು.  ಆದರೆ ಹಾಗೆ ಸಮಾಜಕ್ಕೆ ಕೆಡಕುಂಟುಮಾಡದ ಶುದ್ಧ ಅಭಿವ್ಯಕ್ತಿಯನ್ನು ಯಾವ ಕಟ್ಟುಕಟ್ಟಲೆಗಳೂ ತಡೆಯಲು ಸಾಧ್ಯವಿಲ್ಲ - ಅದು ದೇಶ ಲಿಂಗ ಧರ್ಮಗಳಿಗೆ ಅತೀತವಾದುವು. 

ದೇಶ ಕಂಡ ಅತ್ಯುತ್ತಮ ಕಲಾವಿದರಲ್ಲೊಬ್ಬರಾದ ಶಹನಾಯ್ ಸಾಮ್ರಾಟ್ ಉಸ್ತಾದ್ ಬಿಸ್ಮಿಲ್ಲಾ ಖಾನರು ಈ ಸಂಗೀತವೆಂಬ ’ಹರಾಮ್’ ಬಿಟ್ಟುಬಿಡಿರೆಂದು ಬೋಧಿಸಿದ ಧರ್ಮಗುರುವೊಬ್ಬರಿಗೆ ನೀಡಿದ ಉತ್ತರ ಮಾರ್ಮಿಕವಾಗಿದೆ:  "ನಾನೀಗ "ಅಲ್ಲಾಹು ಅಲ್ಲಾಹ್" ಎಂದು ಭೈರವ್ ರಾಗದಲ್ಲಿ ಹಾಡ್ತೇನೆ ಎಂದುಕೊಳ್ಳಿ.  ನೀವು ಅದನ್ನ ಅಲ್ಲಾಹ್ ಎನ್ನುತ್ತೀರಿ, ಆದರೆ ಅದರ ರಾಗವಂತೂ ಭೈರವವೇ.  ಕೇಳುವವರು ರಾಗವನ್ನ ಕೇಳುತ್ತಾರೆ, ಸ್ಮರಿಸುವವರು ಭಗವಂತನನ್ನು ಸ್ಮರಿಸುತ್ತಾರೆ, ಇದರಲ್ಲಿ ಹರಾಮ್ ಏನು ಬಂತು?"

ಅದೂಂದು ಅಲೌಕಿಕ ಶಕ್ತಿ - ಅದನ್ನು ಅಲ್ಲಾಹ್ ಎನ್ನಿ, ರಾಮನೆನ್ನಿ, ಶಿವನೆನ್ನಿ - ಎದೆಯೆದೆಯಲ್ಲೂ ಒಂದು ಜ್ಯೋತಿಯನ್ನು ಹೊತ್ತಿಸಿ ಇಟ್ಟಿದೆ - ಅದೇ ಪ್ರೀತಿ.  ಅದನ್ನು ಉದ್ದೀಪಿಸುವ ಸಾಧನಗಳೇ ಕಲೆ, ಸಾಹಿತ್ಯ, ಸಂಗೀತಗಳು.  ಅವನ್ನು ಉಪಯೋಗಿಸಿಕೊಂಡು ಎದೆಯ ಬೆಳಕನ್ನು ಕಾಪಿಟ್ಟುಕೊಳ್ಳುವುದು ನಮ್ಮ ಕೈಲೇ ಇದೆಯಲ್ಲವೇ?

ಅಂಧೇರೇ ಮೆ ದಿಲ್ ಕೇ ಚಿರಾಗ್ ಏ ಮೊಹಬ್ಬತ್
ಏ ಕಿಸ್ ನೇ ಜಲಾಯಾ ಸವೇರೇ ಸವೇರೇ

(ಚಿತ್ರಕೃಪೆ: ಅಂತರ್ಜಾಲ)

ಸೂ:  ಈ ಲೇಖನ ಇಂದಿನ ವಿಶ್ವವಾಣಿ ಪತ್ರಿಕೆಯ ’ಗುರು’ ವಿಭಾಗದಲ್ಲಿ "ಕಟ್ಟುವಿರೋ ಕಟ್ಟಿ ಕಲಾಧರ್ಮ" ಎಂಬ ಶೀರ್ಷಿಕೆಯಡಿ ಪ್ರಕಟವಾಗಿದೆ.  ಪ್ರಕಟಿತ ಲೇಖನದ ಕೊಂಡಿ ಇಲ್ಲಿದೆ:
http://epaper.vishwavani.news/bng/e/bng/16-03-2017/15

Monday, February 27, 2017

ಲಿಪಿ’ಸುಧಾರಣೆ’ - "ಆಕ್ ಯಾವೊತ್ತೂ? - ಆ್ಯ" - ಸಂವಾದ

ನನ್ನ ಬ್ಲಾಗ್ ಬರಹ "ಲಿಪಿ’ಸುಧಾರಣೆ’ - "ಆಕ್ ಯಾವೊತ್ತೂ? - ಆ್ಯ"" ಇದಕ್ಕೆ ಹಿರಿಯ ವಿದ್ವಾಂಸರಾದ ಶ್ರೀಯುತ ಸುಧೀಂದ್ರ ದೇಶಪಾಂಡೆಯವರ ಪ್ರತಿಕ್ರಿಯೆ ಅವರ ಸಲ್ಲಾಪ ಬ್ಲಾಗಿನಲ್ಲಿ ಪ್ರಕಟವಾಗಿದೆ "ಕನ್ನಡದಲ್ಲಿ apple".  ಅದಕ್ಕೆ ಪ್ರತಿಕ್ರಿಯೆಯನ್ನು ಬರೆಯುತ್ತಾ ಅದೇ ಒಂದು ಲೇಖನವಾದ್ದರಿಂದ ಅದನ್ನಿಲ್ಲಿ ಪ್ರಕಟಿಸುತ್ತಿದ್ದೇನೆ.  ಕನ್ನಡದ ಹಿತದೃಷ್ಟಿಯಿಂದ ಇಂಥಾ ವಿದ್ವಚ್ಚರ್ಚೆಗಳು ಹೆಚ್ಚಾಗಲೆಂದು ನನ್ನ ಹಾರೈಕೆ.  ಆಸಕ್ತರು ಎರಡೂ ಲೇಖನಗಳನ್ನು ಬೇರೆಬೇರೆ ಕಿಟಕಿಯಲ್ಲಿ ತೆರೆದಿಟ್ಟುಕೊಂಡು ಓದಿದರೆ ಚೆನ್ನು.

ಪ್ರಿಯ ಸುಧೀಂದ್ರ ದೇಶಪಾಂಡೆಯವರೇ,

ನನ್ನದೊಂದು ಬರಹ ತಮ್ಮ ಬ್ಲಾಗಿನಲ್ಲಿ ಕಾಣಿಸಿಕೊಂಡುದು ನನಗೆ ಹೆಮ್ಮೆ.  ಇದಕ್ಕಾಗಿ ತಮಗೆ ಧನ್ಯವಾದಗಳು.  ವಿಷಯದ ವಾಸ್ತವ ಚರ್ಚೆಗೆ ಹೋಗುವ ಮುನ್ನ ಕೆಲವು ವೈಯಕ್ತಿಕ ಗ್ರಹಿಕೆಗಳನ್ನು ಸ್ಪಷ್ಟಪಡಿಸಲಿಚ್ಛಿಸುವೆ.  ಮೊದಲಿಗೆ, ನನ್ನ ಲೇಖನವು ಪದಾರ್ಥಚಿಂತಾಮಣಿಯಲ್ಲಿ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯೆಯಲ್ಲ - ಪದಾರ್ಥಚಿಂತಾಮಣಿಯ ಚರ್ಚೆಯನ್ನು ಸ್ಥೂಲವಾಗಿ ಗಮನಿಸಿದ್ದೆನಾದರೂ, ಲೇಖನವನ್ನು ಬರೆದಾಗ ನನ್ನ ದೃಷ್ಟಿಯಲ್ಲಿದ್ದದ್ದು ರಾಜೇಶರು ಅವರ ಪುಟದಲ್ಲಿ ಪ್ರಕಟಿಸಿದ್ದ ಲೇಖನವಷ್ಟೇ.  ಇದೀಗ ನಿಮ್ಮ ಲೇಖನವನ್ನೋದಿದಮೇಲೆ, ಪದಾರ್ಥಚಿಂತಾಮಣಿಯ ಚರ್ಚೆಯನ್ನೂ, ವಿಶೇಷವಾಗಿ ತಮ್ಮ ಪ್ರತಿಕ್ರಿಯೆಗಳನ್ನೂ ಮತ್ತೊಮ್ಮೆ ಕೂಲಂಕಶವಾಗಿ ಓದಿಕೊಂಡೆ.  ನಿಜ ಹೇಳಬೇಕೆಂದರೆ, ಕೆಲವು ವಿಷಯಗಳನ್ನು ಬಿಟ್ಟರೆ ತಮ್ಮ ನಿಲುವುಗಳ ಬಗ್ಗೆ ನನಗೆ ಒಮ್ಮತವೇ ಇದೆ (ಅಪವಾದಗಳನ್ನು ಮುಂದೆ ಚರ್ಚಿಸುತ್ತೇನೆ).  ಅಲ್ಲದೇ ಒಬ್ಬ ಅಪರೂಪದ ವಿದ್ವಾಂಸರಾಗಿ, ಹಿರಿಯರಾಗಿ ತಮ್ಮನ್ನು ಹಲವು ವರ್ಷಗಳಿಂದ ಬಲ್ಲ ನಾನು ತಮ್ಮನ್ನು "ಮಂದ ಕಿವಿಯ ಸುಧಾರಣಾವಾದಿ"ಗಳ ಗುಂಪಿಗೆ ಸೇರಿಸುವುದು ಶಕ್ಯವೇ ಇಲ್ಲ.  ಇನ್ನೂ ಮುಂದುವರೆದು "Appleದಲ್ಲಿಯ ಉಚ್ಚಾರವು ‘ಆ’ಸ್ವರಕ್ಕೆ ‘ಯ’ಕಾರದ ಒತ್ತನ್ನು ಕೊಟ್ಟಾಗ... ಇದು ‘ಅತಿ ಸನಿಹದ’ ಉಚ್ಚಾರ ಎಂದಷ್ಟೇ ಹೇಳುತ್ತಿದ್ದೇವೆ. ನಿಜ ಹೇಳಬೇಕೆಂದರೆ, ಈ ಭೂಮಂಡಲದ ಮೇಲೆ ಎಷ್ಟು ಮಾನವರಿದ್ದಾರೊ, ಅಷ್ಟೇ ಉಚ್ಚಾರಪ್ರಭೇದಗಳಿವೆ.  ಆದುದರಿಂದ ಯಾವುದು ಗ್ರಾಹ್ಯ ಯಾವುದು ಅಗ್ರಾಹ್ಯ ಎನ್ನುವುದನ್ನು ನಾವು ಸಮಾಧಾನದಿಂದ ಲೆಕ್ಕಿಸುವುದು ಒಳಿತು" ಎಂಬ ಪ್ರಬುದ್ಧವಾದ ಮಾತು ತಮ್ಮಂತಹ ಹಿರಿಯ ವಿದ್ವಾಂಸರಿಂದ ಬರಬಲ್ಲುದಷ್ಟೇ ಹೊರತು "ಮಂದ ಕಿವಿಯ ಸುಧಾರಣಾವಾದಿ"ಗಳಿಂದ ಖಂಡಿತಾ ಅಲ್ಲ.  ""A = ಅ (ಅರ್ಧ) + ಯಾ" ಎನ್ನುವುದು ಋ = ರ್, ಐ = ಅಯ್ ಅಥವಾ ಔ = ಅವ್ ಎನ್ನುವಷ್ಟೇ ತಪ್ಪು ವಾದ" ಎಂಬ ನನ್ನ ಪೂರ್ಣವಾಕ್ಯವನ್ನಷ್ಟು ಪರಿಗಣಿಸಬೇಕೆಂದು ವಿನಂತಿ.  ಅಲ್ಲಿನ ಇತರ ಉದಾಹರಣೆಗಳು ಎಲ್ಲಿಂದ ಬರುತ್ತವೆಂಬುದು ತಮಗೆ ಗೊತ್ತು.  ಅಂಥಾ ’ಸುಧಾರಣಾವಾದಿ’ಗಳ ಉದಾಹರಣೆಯನ್ನು ತಾವೇ ತಮ್ಮ ಲೇಖನದಲ್ಲೇ ಹಿಂದಿನ ಪ್ಯಾರಾದಲ್ಲೇ ಸೂಚಿಸಿದ್ದೀರಿ.  ಇಷ್ಟು ಹೇಳಿದ ಮೇಲೆ, ತಾವು ಎತ್ತಿದ ಆಕ್ಷೇಪಗಳನ್ನಿಷ್ಟು ಪರಿಶೀಲಿಸಬಹುದು.

(೧) "Appleದಲ್ಲಿಯ ಉಚ್ಚಾರವು ‘ಆ’ಸ್ವರಕ್ಕೆ ‘ಯ’ಕಾರದ ಒತ್ತನ್ನು ಕೊಟ್ಟಾಗ (ಆ್ಯ) ಇರುವಂತೆಯೇ ಇರುತ್ತದೆ ಎಂದು ಮಂದಕಿವಿಯ ನಾವ್ಯಾರೂ ಹೇಳುತ್ತಿಲ್ಲ. ಆದರೆ ಇದು ‘ಅತಿ ಸನಿಹದ’ ಉಚ್ಚಾರ ಎಂದಷ್ಟೇ ಹೇಳುತ್ತಿದ್ದೇವೆ."
ಇದು ಅತಿ ಸನಿಹದ ಉಚ್ಚಾರ ಎಂಬುದು ನಾನೂ ಒಪ್ಪತಕ್ಕ ಮಾತೇ, ಇಷ್ಟರಲ್ಲಿ ತಕರಾರೇನು ಇಲ್ಲ.  ಹಾಗಿದ್ದರೆ "ಆ್ಯ" ಎಂದು ಹೇಳುವುದರಲ್ಲಿ ತಪ್ಪೇನು ಎನ್ನುವುದಕ್ಕೆ ಸಮಾಧಾನವನ್ನು ನನ್ನ ಲೇಖನದಲ್ಲೇ ಕೊಟ್ಟಿದ್ದೇನೆ, ತಮ್ಮ ಮುಂದಿನ ಅಂಶಗಳ ಮೇಲಿನ ನನ್ನ ಪ್ರತಿಕ್ರಿಯೆಯಲ್ಲಿ ಇದನ್ನು ಇನ್ನಷ್ಟು ವಿವರವಾಗಿ ಪರಿಶೀಲಿಸಬಹುದು.

(೨) "ನಾನಾದರೂ ಸಹ ಅದೇ ತರ್ಕವನ್ನು ಬಳಸಿ ‘ಆ’ ಸ್ವರಕ್ಕೆ ‘ಯ’ದ ಒತ್ತು ಕೊಡಬೇಕು (ಆ್ಯ)". ಏಕೆಂದರೆ ಅದೇ ಅತಿ ಹತ್ತಿರದ ಉಚ್ಚಾರ ಎಂದು ಹೇಳುತ್ತಿರುವುದು. ಅವರು ಹೇಳಿದಂತೆ, ‘ಯಾಪಲ್’ ಎಂದು ಬರೆದರೆ, ಈ ಪದದ ಉಚ್ಚಾರವು yaple ಎಂದು ಆಗುವುದು!"
ಪ್ರಸ್ತುತ ಆ ಅಥವಾ ಯಾ ಎಂಬ ಸಾಧ್ಯವಾದಷ್ಟು ಹತ್ತಿರದ ಸಂಕೇತವನ್ನು ಬಳಸುತ್ತಿರುವ ಉದ್ದೇಶವಾದರೂ ಏನು?  ನಮ್ಮ ಈಗಿರುವ ಚೌಕಟ್ಟಿನಲ್ಲಿ ಇದಕ್ಕೆ ಅತಿ ಹತ್ತಿರದ್ದಾಗಿ ಒದಗುವುದು ಎಂದು ತಾನೆ?  ಈಗ ಆ್ಯ ಎಂಬ ಹೊಸ ಅಕ್ಷರವೊಂದನ್ನು ತಂದೂ ಅದು ಮೂಲ ಉಚ್ಚಾರಣೆಯನ್ನು ಯಥಾವತ್ ಪ್ರಸ್ತುತಪಡಿಸಲಾಗದೇ ಕೇವಲ ’ಹತ್ತಿರ’ದ ಉಚ್ಚಾರಣೆಯಷ್ಟೇ ಆಗುವುದಾದರೆ, ಅದಕ್ಕಾಗಿ ಇರುವ ಚೌಕಟ್ಟನ್ನೇ ಸಡಿಲಿಸುವಂಥ ದೊಡ್ಡ ಬೆಲೆಯನ್ನು ತೆರುವ ಅಗತ್ಯವೇನು (ಅದು ’ದೊಡ್ಡ ಬೆಲೆ’ ಏಕೆನ್ನುವುದನ್ನು ಮುಂದೆ ವಿವರಿಸುತ್ತೇನೆ).

(೩a) "ಅವರ ಪ್ರಯತ್ನವನ್ನು ನಾವು ಸ್ವಲ್ಪವಾದರೂ ಮುಂದುವರಿಸಿ, ಲಿಪಿವರ್ಧನೆಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುವುದು ಸರಿಯೊ ಅಥವಾ ಇದ್ದ ಸಂಕೇತಗಳನ್ನು ಕತ್ತರಿಸಿ ಹಾಕಿ ನಮ್ಮ ದಡ್ಡ ಗೋಣನ್ನು ಮೇಲೆತ್ತುವುದು ಸರಿಯೊ?"
ಲಿಪಿವರ್ಧನೆ ಆಗಬಾರದೆಂಬುದು ನನ್ನ ಅಭಿಪ್ರಾಯವಲ್ಲ, ಆದರೆ ಅದಾಗುವ ಮೊದಲು ಈಗಿರುವ ಚೌಕಟ್ಟನ್ನು ಕೂಲಂಕಷವಾಗಿ ಪರಿಶೀಲಿಸಬೇಕೆನ್ನುವುದು, ಹೊಸ ಸೇರ್ಪಡೆಗಳನ್ನು ಇರುವ ಚೌಕಟ್ಟಿನಲ್ಲಿ ನಿರ್ದಿಷ್ಟವಾಗಿ ಎಲ್ಲಿ ಹೇಗೆ ಸೇರಿಸಬೇಕೆನ್ನುವುದೂ, ಹಾಗೆ ಬರುವ ಸೇರ್ಪಡೆಗಳು ಭಾಷೆಯ ಈಗಿನ ಚೌಕಟ್ಟಿಗನುಗುಣವಾಗಿ ಎಂಥ ಸೇರ್ಪಡೆಯಾಗಿರಬೇಕೆನ್ನುವುದನ್ನು ನಿರ್ಧರಿಸಬೇಕೆನ್ನುವುದೂ, ಹಾಗೆ ನಿರ್ಧರಿಸುವಾಗ ಕೇವಲ ಈಗಿನ ಅಗತ್ಯವಷ್ಟನ್ನಲ್ಲ, ಈ ಬದಲಾವನೆಯ ಭೂತ ಭವಿಷ್ಯದ್ವರ್ತಮಾನಗಳ ಪರಿಣಾಮವನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವೆಂಬುದು ನನ್ನ ಅಭಿಪ್ರಾಯ.  ಇಲ್ಲದಿದ್ದರೆ ಬದಲಾವಣೆ ಮಾಡಬೇಕೆನ್ನುವುದೇ ಒಂದು ಫ್ಯಾಶನ್ ಆಗಿ ಸೂಕ್ಷ್ಮವಾಗಿರುವ ಕನ್ನಡದ ಪರಿಸ್ಥಿತಿ ಮತ್ತಷ್ಟು ಕಠಿನವಾಗಬಾರದೆಂಬುದು ನನ್ನ ಆಶಯ.

ಇನ್ನು "ಸಂಕೇತಗಳನ್ನು ಕತ್ತರಿಸಿ ಹಾಕುವ" ಸಲಹೆಗಳು ನನ್ನಿಂದ ಬಂದಿಲ್ಲವಲ್ಲ!  ನಾನೂ ಅಂಥಾ ಪ್ರಯತ್ನಗಳ ವಿರೋಧಿಯೇ ಎಂಬುದನ್ನು ತಾವು ಬಲ್ಲಿರಿ.

(೩b) "ನಾವು ಸಂಸ್ಕೃತವನ್ನು ಗೌರವಿಸೋಣ. ಆದರೆ ನಾಗರಿ ಲಿಪಿಯ ಅಸಮರ್ಪಕತೆಯನ್ನು ಅಳವಡಿಸಿಕೊಳ್ಳುವುದು ಬೇಡ. ಏಕೆಂದರೆ ದೇವನಾಗರಿ ಲಿಪಿ ಇದೆಯಲ್ಲ, ಇದು inadequate ಲಿಪಿ. ಈ ಲಿಪಿಯನ್ನು ಆಧರಿಸಿದ ಸಂಸ್ಕೃತ ವ್ಯಾಕರಣದ ಕೆಲವು ಲೋಪಗಳನ್ನು ನಾವು ಕನ್ನಡ ವ್ಯಾಕರಣಕ್ಕೆ ಅನ್ವಯಿಸಬಾರದು.  ಏಕೆಂದರೆ ದೇವನಾಗರಿ ಲಿಪಿ ಇದೆಯಲ್ಲ, ಇದು inadequate ಲಿಪಿ"
ದೇವನಾಗರಿ ಸ್ವಯಂಸಂಪೂರ್ಣವಲ್ಲ ಎಂಬುದು ವೇದ್ಯವಾಗಿಯೇ ಇದೆ.  ಇದರಲ್ಲಿ ತಕರಾರಿಲ್ಲ.  ಮತ್ತು ಈ ಲಿಪಿಯನ್ನು ಆಧರಿಸಿದ ಸಂಸ್ಕೃತ ವ್ಯಾಕರಣದ ಕೆಲವು ಲೋಪಗಳನ್ನು ನಾವು ಕನ್ನಡ ವ್ಯಾಕರಣಕ್ಕೆ ಅನ್ವಯಿಸಬಾರದು ಎಂಬುದು ನನ್ನ ಅಭಿಪ್ರಾಯ ಕೂಡ.  ಆದರೆ ನಾವು ಹಾಗೆಲ್ಲಿ ಮಾಡುತ್ತಿದ್ದೇವೆ?  ಕನ್ನಡದ ವ್ಯಾಕರಣವು ಇದುವರೆಗೆ ಅನುಸರಿಸಿರುವ ದಾರಿಯೂ ಇದೇ ಅಲ್ಲವೇ?  ಸಂಸ್ಕೃತದ ತರ್ಕಬದ್ಧವಾದ ವೈಜ್ಞಾನಿಕವಾದ ಹಂದರವನ್ನು ಒಳಗೊಳ್ಳುವ ಮೂಲಕ ಅದರ ಲಾಭಗಳನ್ನು ಪಡೆದಿದೆ, ಆದರೆ ಅದೇ ಸಮಯದಲ್ಲಿ ಅದನ್ನು ಕನ್ನಡದ ಪ್ರಸ್ತುತತೆಗನುಗುಣವಾಗಿ ಮಾರ್ಪಡಿಸಿಕೊಂಡಿದೆ ಕೂಡ.  ಅದೇ ಕಾರಣಕ್ಕೇ ಸಂಸ್ಕೃತದಲ್ಲಿಲ್ಲದ ಎ ಮತ್ತು ಒ ಅಕ್ಷರಗಳನ್ನೂ, ಱೞಳ ಅಕ್ಷರಗಳನ್ನೂ ಕನ್ನಡದಲ್ಲಿ ನಾವು ಕಾಣುತ್ತೇವೆ.  ಅದರಲ್ಲೂ ತನ್ನ ಕಾಲಕ್ಕಾಗಲೇ ಬಳಕೆಯಿಂದ ಮರೆಯಾಗಿಯೇ ಹೋಗಿದ್ದರೂ ಱೞ ಅಕ್ಷರಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಳ್ಳುವ ಪ್ರಯತ್ನಗಳನ್ನು ಕೇಶಿರಾಜನು ಮಾಡಿರುವುದನ್ನು ಕಾಣಬಹುದು (ತಿಳಿ ದೇಶೀಯಮಮೈದಂ; ಕಳೆ ನೀಂ ಋ ಲೃ ವರ್ಣ ಶ ಷ ವಿಸರ್ಗ ೱಕ ೲಪಕ್ಷಳನಂ; ನಾಲ್ವತ್ತೇೞಾಯ್ತಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ - ಶಬ್ದಮಣಿದರ್ಪಣ).  ಆಮೇಲೆ ಅವು ವರ್ಣಮಾಲೆಯಿಂದ ಏಕೆ ಮರೆಯಾದುವೆನ್ನುವುದು ಬೇರೆಯೇ ಚರ್ಚೆಯ ವಿಷಯ.  ಅಷ್ಟೇ ಅಲ್ಲ, ಕನ್ನಡದಲ್ಲಿಲ್ಲವೆನ್ನುವ ಕಾರಣಕ್ಕೆ ಸಂಸ್ಕೃತದ ಋಲೃ ವರ್ಣಗಳನ್ನೂ ಶಷಗಳನ್ನೂ ವಿಸರ್ಗ, ೱಕ, ೲಪ ಗಳನ್ನೂ ನಿರ್ದಾಕ್ಷಿಣ್ಯವಾಗಿ ಕಿತ್ತೆಸೆಯುತ್ತಾನೆ ಕೇಶಿರಾಜ.  ಆದರೆ ಕನ್ನಡ ಮತ್ತು ಸಮಸಂಸ್ಕೃತಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಕಾರಣದಿಂದಲೂ, ವರ್ಣಮಾಲೆಯ ತಾರ್ಕಿಕ ಪೂರ್ಣತೆಯನ್ನು ಕಾಯುಕೊಳ್ಳುವ ದೃಷ್ಟಿಯಿಂದಲೂ ಋಶಷಗಳೂ ವಿಸರ್ಗವೂ ಮತ್ತೆ ಸೇರಿಕೊಳ್ಳುತ್ತವೆ (ವ್ಯಾಕರಣದಲ್ಲೂ ಇಂಥ ಹಲವು ’ಅಳವಡಿಕೆ’ಗಳನ್ನು ವಿವರಿಸಬಹುದು, ಆದರೆ ಸಧ್ಯದ ಚರ್ಚೆಗೆ ಅದು ಅಪ್ರಸ್ತುತ).  ಆದ್ದರಿಂದ ಸಂಸ್ಕೃತವನ್ನು ಕನ್ನಡ ಕುರುಡಾಗಿ ಅನುಸರಿಸುತ್ತಿದೆಯೆಂಬುದೂ ಅದರ ಸ್ವತಃ ತನಗೆ ಶಕ್ತಿಯಿದ್ದಾಗ್ಯೂ ಅದರ ದೋಷಗಳನ್ನು ತಾನೂ ಒಳಗೊಳ್ಳುತ್ತಿದೆಯೆನ್ನುವುದೂ ಒಪ್ಪತಕ್ಕ ಮಾತಲ್ಲ.

(೩c) "च (ಚ )ಕಾರದ ಮೇಲ್ಕಟ್ಟಿನಲ್ಲಿ ಒಂದು ಮೇಲ್-ಗೆರೆ ಎಳೆದಾಗ चे (ಚೆ) ಆಗುತ್ತದೆ. ಎರಡು ಗೆರೆ ಎಳೆದಾಗ चै (ಚೈ) ಆಗುತ್ತದೆ. ಇದೇ ತತ್ವವನ್ನು ಅನುಸರಿಸಿ, चा (ಚಾ) ಕಾರದ ಮೇಲೆ ಎರಡು ಗೆರೆ ಎಳೆದಾಗ ಅದು chaai ಆಗಲಾದರು. ಏಕೆಂದರೆ ಅದು चौ (ಚೌ) ಆಗುತ್ತದೆ. ‘ಆ’ ಎನ್ನುವ ಸ್ವರಕ್ಕೆ ‘ಇ’ಸ್ವರವನ್ನು ಕೂಡಿಸಲು ಈ ಕಾರಣದಿಂದ ನಾಗರಿ ಲಿಪಿಯಲ್ಲಿ ಸಾಧ್ಯವೇ ಇಲ್ಲ. ಇದರಂತೆ ನಾಗರಿ ಲಿಪಿಯಲ್ಲಿ आ (ಆ)ಕಾರಕ್ಕೆ ‘ಯ’ದ ಒತ್ತು ಕೊಡಲು ಸಾಧ್ಯವೇ ಇಲ್ಲ. ಏಕೆಂದರೆ ನಾಗರಿ ಲಿಪಿಯಲ್ಲಿ ಒತ್ತಿನ ಸಂಕೇತವು ಪೂರ್ವಾಕ್ಷರದ ಮುಂದೆ ಬರುತ್ತದೆ. ಕನ್ನಡದಲ್ಲಿ ಇದು ಪೂರ್ವಾಕ್ಷರದ ಕೆಳಗೆ ಬರುತ್ತದೆ"
ದೇವನಾಗರೀ ಲಿಪಿ ಅಸಂಪೂರ್ಣ ಎಂಬುದಕ್ಕೆ ತಾವು ಈ ಉದಾಹರಣೆ ನೀಡುತ್ತಿದ್ದರೆ, ಅದನ್ನು ನಾವು ಆಗಲೇ ಒಪ್ಪಿಯಾಗಿದೆ.  ಆದರೆ ಈ ಉದಾಹರಣೆ ಅದಕ್ಕೆ ಸಮರ್ಪಕವಾದ ಉದಾಹರಣೆಯಾಗಲಾರದು.  ದೇವನಾಗರಿಯಲ್ಲಿ ಚಾ+ಐತ್ವ ಬರೆಯಲಾಗದ್ದು ಅದರ ಲಿಪಿಯ ಅಸಂಪೂರ್ಣತೆಯಿಂದ ಎನ್ನುವುದಕ್ಕಿಂತ ಅಲ್ಲಿ ಅದರ ಅಗತ್ಯವಿಲ್ಲ ಎಂಬ ಕಾರಣದಿಂದ.  ಅಗತ್ಯವಿದ್ದಿದ್ದರೆ ಅದಕ್ಕನುಗುಣವಾಗಿ ಲಿಪಿ ರೂಪುಗೊಳ್ಳುತ್ತಿತ್ತು.  ಕನ್ನಡದಲ್ಲಿ ಅದರ ಲಿಪಿಸಾಧ್ಯತೆಯಿದೆ, ಆದರೆ ಅದನ್ನು ನಾವೆಲ್ಲಿ ಬಳಸುತ್ತಿದ್ದೇವೆ?  ಏಕೆಂದರೆ ಸಧ್ಯಕ್ಕೆ ನಮಗದರ ಅಗತ್ಯ ಕಂಡಿಲ್ಲ - ಏಕೆಂದರೆ ಚಾ ಅಕ್ಷರಕ್ಕೆ ಐತ್ವ ಕೊಡುವುದಾದರೆ ಅದು ಚಾಯ್ ಎಂಬ ಪದವೇ ಆಗುತ್ತದೆ, ಅದು ಈಗಾಗಲೇ ಸಾಧ್ಯ.  ಚೈ ಮತ್ತು ಚಯ್ ಗಳ ನಡುವಿರುವ ಸೂಕ್ಷ್ಮ ವ್ಯತ್ಯಾಸ ಚಾ(ಐ) ಮತ್ತು ಚಾಯ್ ಗಳ ನಡುವೆ ಇಲ್ಲ.  ಸಂಸ್ಕೃತದಲ್ಲಿ ಆ ಲಿಪಿಸಾಧ್ಯತೆ ಬರದಿದ್ದುದಕ್ಕೆ ಅದೇ ಕಾರಣವಿರಬಹುದು.

ಆದರೆ ನಾಗರೀ ಲಿಪಿಯಲ್ಲಿ आ (ಆ)ಕಾರಕ್ಕೆ ‘ಯ’ದ ಒತ್ತು ಕೊಡಲು ಸಾಧ್ಯವಿಲ್ಲ ಎಂಬುದು ಒಪ್ಪತಕ್ಕ ಮಾತಲ್ಲ.  ಕೊಡುವ ಅಗತ್ಯವಿದ್ದರೆ ಬೇರೆಲ್ಲ ಪೂರ್ವಾಕ್ಷರಗಳನ್ನೂ ಅರ್ಧ ಬರೆದು ಮುಂದಿನ ಒತ್ತನ್ನು ಪೂರ್ಣಾಕ್ಷರವಾಗಿ ಬರೆಯುವಂತೆ ಇದನ್ನೂ ಬರೆಯಬಹುದು, अ್या ಎಂಬಂತೆ (ಇಲ್ಲಿ ಯೂನಿಕೋಡ್ ಇದನ್ನು ಬರೆದು ತೋರಿಸಲು ಸಹಕರಿಸುತ್ತಿಲ್ಲ, अ ಅಕ್ಷರದ ಉದ್ದಗೀಟನ್ನೂ ತಲಕಟ್ಟನ್ನೂ ತೆಗೆದುಹಾಕಿ, ಬಳ್ಳಿಯ ನಡುಗೀಟಿಗೆ ಹೊಂದಿದಂತೆ या ಬರೆಯಿರಿ, ನಿಮಗೆ ಬೇಕಾದ ಅಕ್ಷರ ಸಿಗುತ್ತದೆ.  ಕನ್ನಡದಲ್ಲೂ ಬರೆಯುವುದು ಸಾಧ್ಯವಂತೂ ಇದೆ (ಯೂನಿಕೋಡ್ ಸಹಕರಿಸದಿದ್ದರೂ ಮತ್ತೊಂದರ ಸಹಕಾರದಿಂದ ಇಲ್ಲೂ ಬರೆಯುತ್ತೇನೆ ನೋಡಿ "ಆ್ಯ").  ಆದರೆ ಸಂಸ್ಕೃತದಲ್ಲಾಗಲೀ ಕನ್ನಡದಲ್ಲಾಗಲೀ ಹಾಗೆ ಬರೆಯದಿದ್ದುದು ಲಿಪಿಸೌಲಭ್ಯದ ಕಾರಣಕ್ಕಲ್ಲ, ಅದು ತಾಂತ್ರಿಕವಾಗಿ ಸರಿಯಲ್ಲ ಎಂಬ ಕಾರಣಕ್ಕೆ.  ಕಾರಣವನ್ನು ಮುಖ್ಯಲೇಖನದಲ್ಲಿ ವಿವರಿಸಿದ್ದೇನೆ.  ಮತ್ತೊಮ್ಮೆ ಕ್ವಚಿತ್ತಾಗಿ ವಿವರಿಸುತ್ತೇನೆ:

ಯಾವುದೇ ಅಕ್ಷರಕ್ಕೆ ಒತ್ತು ಕೊಡಬೇಕೆಂದರೆ ಮುಖ್ಯಾಕ್ಷರವು ಅರ್ಧವಾಗಿಯೂ ಒತ್ತಕ್ಷರವು ಪೂರ್ಣವಾಗಿಯೂ ಬರುವುದು ಅತ್ಯಗತ್ಯ (ಲಿಪಿಯಲ್ಲಲ್ಲ, ಉಚ್ಚಾರಣೆಯಲ್ಲಿ - ದೇವನಾಗರೀ ಲಿಪಿ ಈ ಕ್ರಮವನ್ನನುಸರಿಸುತ್ತದೆ, ಕನ್ನಡ ಲಿಪಿ ಇದರ ವಿರುದ್ಧ, ಅದು ಬೇರೆಯ ವಿಷಯ, ಆದರೆ ಉಚ್ಚಾರಣೆ ಮಾತ್ರ ಭಾಷಾತೀತ) - ಬೇಕಿದ್ದರೆ ಇಂಗ್ಲಿಷಿನಲ್ಲೂ ನೋಡಬಹುದು Tree (ಟ್ರೀ) ಎನ್ನುವಾಗ ಟ್ ಮತ್ತು ರೀ ಎಂಬ ಎರಡು ಅಕ್ಷರಗಳನ್ನು ನೋಡುತ್ತೇವೆ.  ಮುಖ್ಯಾಕ್ಷರವಾದ ಟಕಾರವು ಅರ್ಧವಾಗಿಯೂ ಒತ್ತಕ್ಷರವಾದ ರೀ ಪೂರ್ಣವಾಗಿಯೂ ಬರುತ್ತದೆ (ನಾನು ಹೇಳುತ್ತಿರುವುದು ಉಚ್ಚಾರದ ವಿಷಯ, ಲಿಪಿಯ ವಿಷಯವಲ್ಲ); ಹಿಂದಿಯಲ್ಲಿ ನೋಡಿ रब्डी (ರಬ್ಡೀ) ಎನ್ನುವಾಬ ಬ್ ಮತ್ತು ಡೀ ಎಂಬ ಎರಡು ಅಕ್ಷರಗಳನ್ನು ನೋಡುತ್ತೇವೆ.  ಮುಖ್ಯಾಕ್ಷರವಾದ ಬಕಾರವು ಅರ್ಧವಾಗಿಯೂ ಒತ್ತಕ್ಷರವಾದ ಡೀ ಪೂರ್ಣವಾಗಿಯೂ ಬರುತ್ತದೆ.  ತಮಿಳನ್ನು ನೋಡಿ பைத்யம் (ಪೈತ್ಯಂ) ಇಲ್ಲಿ ತ್ಯ ಅಕ್ಷರದಲ್ಲಿ ಮುಖ್ಯಾಕ್ಷರವಾದ ತಕಾರವು ಅರ್ಧಾಕ್ಷರವಾಗಿಯೂ (த்) ಒತ್ತಕ್ಷರವಾದ ಯಕಾರವು ಪೂರ್ಣಾಕ್ಷರವಾಗಿಯೂ ಬಂದಿದೆ.  ಜ಼ೆಕ್ ರಿಪಬ್ಲಿಕ್ ದೇಶಭಾಷೆಯಾದ ಜ಼ೆಕ್ ನೋಡಿ matka (ಮತ್ಕ = ಅಮ್ಮ) ಎಂಬಲ್ಲಿ ಮುಖ್ಯಾಕ್ಷರವಾದ ತಕಾರವು ಅರ್ಧಾಕ್ಷರವಾಗಿಯೂ ಒತ್ತಕ್ಷರವಾದ ಕಕಾರವು ಪೂರ್ಣಾಕ್ಷರವಾಗಿಯೂ ಬಂದಿದೆ.  ಎಂದರೇನಾಯಿತು? ಇದು ಭಾಷಾತೀತ - ಮತ್ತಿದು ನಿಯಮವಲ್ಲ, ಸಾಧ್ಯತೆ.

ಈಗ, ಸಂಯುಕ್ತಾಕ್ಷರವೊಂದರಲ್ಲಿ ಆಕಾರವನ್ನು ಮುಖ್ಯಾಕ್ಷರವಾಗಿ ಬಳಸಬೇಕೆಂದರೆ ಅದು ಅರ್ಧಾಕ್ಷರವಾಗಬೇಕಲ್ಲವೇ?  ಆಕಾರವನ್ನು ಅರ್ಧವಾಗಿ ನುಡಿಯಲು ಸಾಧ್ಯವೇ?  ಪ್ರಾಯೋಗಿಕವಾಗಿ ಸಾಧ್ಯವೇ ಇಲ್ಲ ಅದು.  ಆಕಾರವನ್ನು ಅರ್ಧ ನುಡಿಯಲು ಹೋದರೆ ಏನೂ ಬರುವುದೇ ಇಲ್ಲ - ಸ್ವರದ ಸ್ವಭಾವವೇ ಹಾಗೆ.  ನೀವು ಸ್ವರವೊಂದಕ್ಕೆ ವ್ಯಂಜನದ ಒತ್ತು ಕೊಟ್ಟಾಗ, ಅರ್ಧಾಕ್ಷರವಾದ ಸ್ವರ ನಿಜದಲ್ಲಿ ಇಲ್ಲವಾಗುತ್ತದೆ, ಒತ್ತಕ್ಷರವಾದ ವ್ಯಂಜನಾಕ್ಷರ ಪೂರ್ಣಾಕ್ಷರವಾಗಿ ಕೇಳುತ್ತದೆ.  ಎಂದರೆ ನೀವು ಆಕಾರಕ್ಕೆ ಯವೊತ್ತು ಕೊಟ್ಟು "ಆ್ಯ" ಎಂದು ಬರೆದಾಗ ಹಾಗೆ ಬರೆಯಬಹುದಷ್ಟೇ ಹೊರತು ಉಚ್ಚರಿಸಲು ಸಾಧ್ಯವೇ ಇಲ್ಲ.  ಹಾಗೆ ಉಚ್ಚರಿಸಿದಾಗ ಮುಖ್ಯಾಕ್ಷರವಾದ ಆ ಕಾರ ಮರೆಯಾಗಿ, ಕೇಳುವುದು ಯಾ ಮಾತ್ರ.  ಹೆಚ್ಚೆಂದರೆ ಅಕಾರದ ಉತ್ಪತ್ತಿಸ್ಥಾನವನ್ನು ನೀವು ಗಂಟಲಿನಲ್ಲಿ ಒತ್ತಿ, ಅನಂತರ ಯಕಾರವನ್ನು ಉಚ್ಚರಿಸುಸುವುದರಿಂದ ಹಾಗೆ ಒತ್ತಿದ್ದು ಯಕಾರದ ಹಿಂದೊಂದು ವಿಚಿತ್ರ ಶಬ್ದವನ್ನು ಮೂಡಿಸುತ್ತದೆಯೇ ಹೊರತು ಅದು ಅಕಾರವೆನ್ನುವಂತಿಲ್ಲ.  ಅದು ಮನದಟ್ಟಾಗಬೇಕಾದರೆ ಯಕಾರವನ್ನು ಕೈಬಿಟ್ಟು ಇನ್ನೂ ಸ್ಪಷ್ಟವಾದ ಇನ್ನೊಂದು ಉದಾಹರಣೆಯನ್ನು ನೋಡೋಣ.  ಮಟ್ಕಾ ಎಂಬ ಪದವನ್ನು ತೆಗೆದುಕೊಳ್ಳಿ.  ಇಲ್ಲಿನ ಟ್ಕಾ ಎಂಬ ಅಕ್ಷರವನ್ನು ಗಮನಿಸಿ.  ಇಲ್ಲಿ ಏನೇನಿದೆ? ಟ್ ಕ್ ಆ ಅಲ್ಲವೇ?  ಮುಖ್ಯಾಕ್ಷರವಾದ ಟಾ ಎಂಬುದು ಸೀಳಿ ಹೋಗಿ, ಮೊದಲ ಭಾಗವಾದ ಟ್ ವ್ಯಂಜನವು ಮೊದಲು ಬಂತು, ಎರಡನೆಯ ಭಾಗವಾದ ಆ ಸ್ವರವು ಕಕಾರಕ್ಕೆ ಹೋಗಿ ಸೇರಿಕೊಂಡಿತು, ಅಲ್ಲವೇ?  ಈಗ ಟ ಅಕ್ಷರದ ಬದಲು ಅ ಅಕ್ಷರಕ್ಕೆ ಕವೊತ್ತು ಕೊಟ್ಟರೆ ಏನಾಗುತ್ತದೆ? (ಅ್ಕ).  ಮೊದಲಾದರೆ ಟಾ ಎಂಬಲ್ಲಿನ ವ್ಯಂಜನ ಸ್ವರಗಳು ಸೀಳಿ ವ್ಯಂಜನವು ಈಕಡೆಯೂ ಸ್ವರವು ಆಕಡೆಯೂ ಹೋಯಿತು.  ಈಗ ಅಕಾರಕ್ಕೇ ಒತ್ತು ಕೊಡುತ್ತಿದ್ದೇವೆ.  ಇಲ್ಲಿ ಸೀಳುವುದು ಯಾವುದು?  ಅ ಅರ್ಧಾಕ್ಷರವು ಸೀಳಿ ಒಂದು ಸೀಳು ಎಡಕ್ಕೆ ಬಂತು (ಅ್ ಎನ್ನೋಣ).  ಇನ್ನು ಕಕಾರಕ್ಕೆ ಬಂದು ಸೇರುವುದೇನು?  ಅ ಅರ್ಧಾಕ್ಷರವೇ? ಅ್ಕ ಎಂಬುದನ್ನು ಉಚ್ಚರಿಸಿ ನೋಡಿ?  ಕಕಾರದನಂತರ ಅಕಾರದ ಪೂರ್ಣಾಕ್ಷರವೇ ಕೇಳುತ್ತದಲ್ಲವೇ? (ಕ್ + ಅ = ಕ).  ಹಾಗಿದ್ದರೆ ಕಕಾರದ ಹಿಂದೆ ಉಳಿದದ್ದೇನು? ಅ್ ಎಂಬ, ರೂಪವಿಲ್ಲದ ವಿಚಿತ್ರ ಶಬ್ದವಷ್ಟೇ.  ಮುಖ್ಯವಾಗಿ ಕೇಳುವುದು ಕ ಎಂಬ ಅಕ್ಷರವಷ್ಟೇ.  ಇನ್ನಿದೇ ಪ್ರಯೋಗವನ್ನು ಇ ಅಕ್ಷರದೊಂದಿಗೆ ಪುನರಾವರ್ತಿಸಿ? (ಇ್ಕ).  ಈಗ ಸ್ವರಾಕ್ಷರದಲ್ಲಿ ಸೀಳಿದ್ದೇನು? ಇ್ ಎಂಬ ರೂಪವಿಲ್ಲದ ವಿಚಿತ್ರ ಶಬ್ದವು ಕಕಾರದ ಎಡಕ್ಕೂ, ಇ ಎಂಬ ಪೂರ್ಣಸ್ವರವು ಕಕಾರದನಂತರವೂ ಬಂದಿತಲ್ಲವೇ? ಇದನ್ನು ಉಚ್ಚರಿಸಿದಾಗ ಕೇಳುವುದೇನು?  ಇ್ + ಕಿ!  ಎಂದರೆ ಇಕಾರವು ಸಂಪೂರ್ಣವಾಗಿ ಕಕಾರಕ್ಕೆ ಸೇರಿಬಿಟ್ಟಿದೆ.  ಇನ್ನು ಹಿಂದೆ ಉಳಿದದ್ದು ಇ್ ಎಂಬ ರೂಪವಿಲ್ಲದ ಶಬ್ದವಷ್ಟೇ.  ಈಗ ಮೊದಲ ಉದಾಹರಣೆಯ ಅ್ ಶಬ್ದಕ್ಕೂ ಈ ಉದಾಹರಣೆಯ ಇ್ ಶಬ್ದಕ್ಕೂ ವ್ಯತ್ಯಾಸವೇನಾದರೂ ಉಂಟೇ? (ಅ ಇ ಎನ್ನುವುದು ಬೇಡ, ಅವು ಕಕಾರದನಂತರ ನುಡಿಯುತ್ತಿರುವ ಪೂರ್ಣಸ್ವರಗಳು - ಟ್ಕ ಎನ್ನುವಾಗಲೂ ಕಕಾರದನಂತರ ಅಕಾರವು ಬಂದಿದೆ, ಆದರೆ ಅದರ ಹಿಂದೆ ಟಕಾರದ ಅರ್ಧಾಕ್ಷರ ಸ್ಪಷ್ಟವಾಗಿ ನುಡಿಯುತ್ತಿದೆ.  ಆದರೆ ಅ್ ಇ್ ಗಳ ವಿಷಯದಲ್ಲಿ ಹೀಗಾಯಿತೇ?).  ಇದೇ ಪ್ರಯೋಗವನ್ನು ಅ್ ಆ್ ಇ್ ಈ್ ಉ್ ಊ್ ಈ ಎಲ್ಲ ’ಅರ್ಧ’ಸ್ವರಗಳೊಂದಿಗೆ ಪುನರಾವರ್ತಿಸಿ ನೋಡಿ - ಅ್ಕ ಆ್ಕ ಇ್ಕ ಈ್ಕ ಉ್ಕ ಊ್ಕ ಹೀಗೆ.  ಇವಕ್ಕೂ ಕ ಕಾ ಕಿ ಕೀ ಕು ಕೂ ಈ ಅಕ್ಷರಗಳಿಗೂ ವ್ಯತ್ಯಾಸವೇನು?  ಮೊದಲ ಗುಂಪಿನಲ್ಲಿ ಸ್ವರಸ್ಥಾನವನ್ನೊತ್ತಿದ ಅ್ ಎಂಬ ಧ್ವನಿ ಕೇಳುತ್ತದಷ್ಟೇ.  ಆದರೆ ಅ್ ಆ್ ಇ್ ಈ್ ಉ್ ಊ್ ಎಂಬ ವ್ಯತ್ಯಾಸವನ್ನು ಅಲ್ಲಿ ಕಂಡುಹಿಡಿಯಬಹುದೇ? ಈಗಲೂ ಹೌದೆನ್ನುವುದಾದರೆ, ಇದು ಇನ್ನೊಂದು ಕಠಿನವಾದ ಪರೀಕ್ಷೆಯನ್ನೆದುರಿಸಬೇಕಾಗುತ್ತದೆ.  ಸ್ವರಾಕ್ಷರವು ಅರ್ಧಾಕ್ಷರವಾಗಬಹುದೆನ್ನುವುದಾದರೆ, ಅದು ಸ್ವತಂತ್ರವಾಗಿಯೇ ಅರ್ಧಾಕ್ಷರವಾಗಿ ನುಡಿಯಬೇಕು.  ಮಸ್ಕ್ ಎನ್ನುವಲ್ಲಿ ಸ್ಕ್ ಎನ್ನುವ ಅಕ್ಷರ ಗಮನಿಸಿ.  ಸ್ ಮತ್ತು ಕ್ ಎರಡೂ ಅರ್ಧಾಕ್ಷರಗಳೇ.  ಎರಡೂ ಸ್ಪಷ್ಟವಾಗಿ ನುಡಿಯುತ್ತವೆ.  ಇಲ್ಲಿನ ಸಕಾರದಂತೆ ಸ್ವರಾಕ್ಷರವೂ ಅರ್ಧಾಕ್ಷರವಾಗಿ ನುಡಿಯಬಲ್ಲುದೇ?  ಪ್ರಯತ್ನಿಸಿ ನೋಡಿ ಮೊದಲೇ ಹೇಳಿದ ಸ್ವರಾಕ್ಷರಗಳಿಗೆ ಕವೊತ್ತನ್ನು ಅರ್ಧಾಕ್ಷರವಾಗಿ ಕೊಟ್ಟು ನೋಡಿ ಅ್ಕ್ ಆ್ಕ್ ಇ್ಕ್ ಈ್ಕ್ ಉ್ಕ್ ಊ್ಕ್.  ಇದನ್ನು ಉಚ್ಚರಿಸಿದಾಗ ಸ್ವರವ್ಯಂಜನಗಳೆರಡೂ ನುಡಿಯುತ್ತವೆಯೇ? ಇವಕ್ಕೂ ಬರೀ ಕ್ ಉಚ್ಚಾರಣೆಗೂ ವ್ಯತ್ಯಾಸವೇನು?

ಆದ್ದರಿಂದ "ಆ್ಯ" ಎಂಬ ’ಸ್ವರ’ಸಂಕೇತ ಬೇಡವೆನ್ನುತ್ತಿರುವುದು ಸ್ವಪ್ರೇರಿತ ಮುಜುಗರದಿಂದಲ್ಲ, ಬದಲಿಗೆ ಈ ಎರಡು ಕಾರಣಗಳಿಂದ:

೧) "ಆ್ಯ" ಎಂಬ ಅಕ್ಷರವನ್ನು ಲಿಪಿಯಲ್ಲಿ ಸಾಧ್ಯವಾಗಿಸಬಹುದಾದರೂ ಅದಕ್ಕೆ ಉಚ್ಚಾರಣೆಯಲ್ಲಿ ಅಸ್ತಿತ್ವವಿಲ್ಲ.  ತಿಳಿದೂ ತಿಳಿದೂ ಉಚ್ಚಾರಣಾಸಾಧುತ್ವವಿಲ್ಲದ ಅಕ್ಷರಗಳನ್ನು ಹುಟ್ಟುಹಾಕುವುದು ವೈಜ್ಞಾನಿಕವಲ್ಲ

೨) ಇಂಗ್ಲಿಷಿನ A ಅಕ್ಷರದ ಉಚ್ಚಾರಣೆ ಸುಮಾರಾಗಿ "ಆ್ಯ" ಎಂಬುದಕ್ಕೆ ಹತ್ತಿರಿರಬಹುದು, ಆದರೆ ಅದೇ ಅಲ್ಲ.  ಆದ್ದರಿಂದ ಆ ಮತ್ತು ಯಾ ಗಳಂತೆಯೇ "ಆ್ಯ" ಎಂಬುದೂ ದಾರಿತಪ್ಪಿಸುವಂಥದ್ದೇ.  ಹೊಸದಾಗಿ ಧ್ವನಿಸಂಕೇತವನ್ನು ತರುವುದಾದರೆ (ಸಾಧ್ಯವಾದರೆ ಅದು ಯಾವಾಗಲೂ ಸ್ವಾಗತಾರ್ಹವೇ), ಸುಮಾರಾಗಿ ಹತ್ತಿರದ್ದೊಂದು ಸಂಕೇತವನ್ನು ತರುವುದರ ಬದಲು ಯಥಾವತ್ತಾಗಿ ಅದನ್ನೇ ಧ್ವನಿಸುವ ಸಂಕೇತಗಳನ್ನು ಜಾರಿಗೆ ತರುವುದು ಒಳ್ಳೆಯದು.  ಸಾಗರಸ್ಸಾಗರೋಪಮಮ್ ಎನ್ನುವಂತೆ A ಅಕ್ಷರಕ್ಕೆ ಅದೇ ಸಾಠಿ.  ಆದ್ದರಿಂದ ಆ ಧ್ವನಿಯನ್ನು ಸಂಕೇತಿಸಲು ಕನ್ನಡದಲ್ಲೂ A ಅಕ್ಷರವನ್ನೇ ಬಳಸಿದರೂ ಅಭ್ಯಂತರವಿರಲಿಕ್ಕಿಲ್ಲ (ಕೈಲಾಸಂ ಈಗಾಗಲೇ ಅಂಥ ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ - ಗಡFಖಾನ್ ನೆನಪಿಸಿಕೊಳ್ಳಿ).  ಇರಲಿ, Aಪಲ್, ಕಾFಈ, Zಈಬ್ರಾಗಳು ತೀರ ಅತಿರೇಕವೆನಿಸಿದರೂ, ಅದನ್ನೇ ಯಥಾವತ್ತಾಗಿ ಸೂಚಿಸುವ ಹೊಸ ಸಂಕೇತಗಳನ್ನು ಕನ್ನಡದಲ್ಲಿಯೂ ರೂಢಿಸಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ.  ಈಗಾಗಲೇ F Z ಗಳಿಗೆ ಕನ್ನಡದಲ್ಲಿ ಫ಼ ಜ಼ ಎಂದು ಅಡಿಚುಕ್ಕಿಯಿಟ್ಟು ಸೂಚಿಸುತ್ತೇವೆ.  ಹಿಂದಿಯಲ್ಲಿಯೂ ವರ್ಣಮಾಲೆಯಲ್ಲಿಲ್ಲದ ಅನುನಾಸಿಕ ಉಚ್ಚಾರಕ್ಕೆ ಅರ್ಧಚಂದ್ರಬಿಂದುವಿನ ಸಂಕೇತವನ್ನು ಬಳಸುತ್ತಾರೆ (कहाँ).  ಹಾಗೆಯೇ ಕನ್ನಡದಲ್ಲಿಯೂ A ಅಕ್ಷರದ ವಿಶಿಷ್ಟ ಉಚ್ಚಾರವನ್ನು ಸೂಚಿಸಲು ಅ ಅಕ್ಷರದ ಕೆಳಗೆ ಅಡಿಚುಕ್ಕೆಯನ್ನೋ, ಮೇಲೆ ಚಂದ್ರನನ್ನೋ ಇಟ್ಟು ಸೂಚಿಸುವುದು ಹೆಚ್ಚು ಸೂಕ್ತವೆನಿಸುತ್ತದೆ - ಏಕೆಂದರೆ A ಎನ್ನುವುದು ಅ ಎನ್ನುವುದರ ವಿಶಿಷ್ಟ ಉಚ್ಚಾರವೇ ಹೊರತು ಆ್ಯ ಅಲ್ಲ.

ಇವೆಲ್ಲ ವೈಯಾಕರಣನ ಕಸರತ್ತೇ ಇರಬಹುದು, ಆದರೆ ಕನ್ನಡದ ಲಿಪಿ ವರ್ಣಮಾಲೆಯು ಇಂಗ್ಲಿಷಿನಂತೆ ಯರ್ರಾಬಿರ್ರಿ ಬೆಳೆಯುವ ಹಂತಕ್ಕಿಂತ ಬಹು ಮುಂದೆ ಹೋಗಿದೆ.  ಆದ್ದರಿಂದ ಭಾಷೆಯಲ್ಲಲ್ಲದಿದ್ದರೆ ಕೊನೆಯಪಕ್ಷ ವರ್ಣಮಾಲೆಯಲ್ಲಾದರೂ ಈ ರೀತಿಯ ಪ್ರಜ್ಞಾಪೂರ್ವಕ ಕಸರತ್ತು ಅತ್ಯವಶ್ಯ.

Sunday, February 26, 2017

ಲಿಪಿ’ಸುಧಾರಣೆ’ - "ಆಕ್ ಯಾವೊತ್ತೂ? - ಆ್ಯ"


ಇಂಗ್ಲಿಷಿನ Apple, Add ಮೊದಲಾದ ಪದಗಳನ್ನು ಹಾಗೆಯೇ ಕನ್ನಡದಲ್ಲಿ ಬರೆಯುವಾಗ ಆಪಲ್, ಆಡ್ ಅಥವಾ ಯಾಪಲ್, ಯಾಡ್ ಎಂದು ಬರೆಯುವ ಪದ್ಧತಿಯಿದೆ.  ಹಲವು ಇಂಗ್ಲಿಷ್-ಕನ್ನಡ ನಿಘಂಟುಗಳಲ್ಲಿ ಅದರ ನೈಜ ಉಚ್ಚಾರಕ್ಕೆ ಹತ್ತಿರವಾಗುವಂತೆ ಆ ಎಂಬ ಅಕ್ಷರಕ್ಕೆ ಯವೊತ್ತು ಕೊಟ್ಟು "ಆ್ಯ" ಎಂದು ತೋರಿಸಿರುತ್ತಾರೆ.  ಕೈಬರಹದಲ್ಲೇನೋ ಇದು ಸಾಧ್ಯ, ಆದರೆ ಆದರೆ ಕಂಪ್ಯೂಟರಿನಲ್ಲಿ ಯೂನಿಕೋಡಿನಲ್ಲಿ ಬರೆಯುವಾಗ ಇದು ಸಾಧ್ಯವಿಲ್ಲ.  ಅಕಾರಕ್ಕೆ ಯವೊತ್ತನ್ನು ಕೊಡುವುದು ಭಾಷಿಕವಾಗಿ ಸಾಧುವಲ್ಲವಾದ್ದರಿಂದ, ಆ ಸೌಲಭ್ಯವನ್ನು ಯೂನಿಕೋಡಿನಲ್ಲೂ ಕೊಡಮಾಡಿಲ್ಲ.  ಆದರೆ ಇದನ್ನೊಂದು ’ದೋಷ’ ಅಥವಾ ಕೊರತೆಯೆಂದು ಭಾವಿಸುವ ಹಲವರು ಈ ಕೊರತೆಯನ್ನು ತುಂಬಲು ಯೂನಿಕೋಡಿನಲ್ಲಿ ತಕ್ಕ ಮಾರ್ಪಾಡುಗಳನ್ನು ಮಾಡಬೇಕೆಂದು ಚರ್ಚಿಸುತ್ತಿದ್ದಾರೆ.  ಭಾಷಾವೇದಿಕೆಯೊಂದರಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ನನ್ನ ಗಮನಕ್ಕೆ ತಂದ ಮಿತ್ರ ರಾಜೇಶರಿಗೆ (”ಪರಿವರ್ಧಿತ ಕನ್ನಡ ಲಿಪಿ") ಪ್ರತಿಕ್ರಿಯೆ ಬರೆಯುತ್ತಾ ಇದೊಂದು ಪೂರ್ಣಪ್ರಮಾಣದ ಲೇಖನವೇ ಆಯಿತು.  ಈ ವಿಷಯದಲ್ಲಿ ನನ್ನ ಅಭಿಪ್ರಾಯಗಳು ಇಂತಿವೆ.

ಇಲ್ಲಿ ನಾವು ಯೂನಿಕೋಡಿನ ವಿಷಯ ಚಿಂತಿಸುವ ಮೊದಲು ನೇರ ಲಿಪಿಯ ಬಗೆಗೇ ಚಿಂತಿಸಬೇಕಾಗುತ್ತದೆ, ಏಕೆಂದರೆ ಲಿಪಿಸಂಕೇತಗಳು ಯೂನಿಕೋಡಿನಲ್ಲಿ ಬಂದಮಾತ್ರಕ್ಕೆ ಬಳಕೆಯಲ್ಲಿ ನಿಲ್ಲದು.  ಕೈಬರಹವು ನಿಧಾನಕ್ಕೆ ಕಣ್ಮರೆಯಾಗುತ್ತಾ ಕಂಪ್ಯೂಟರು ಅದರ ಸ್ಥಾನವನ್ನಾಕ್ರಮಿಸುತ್ತಾ ಹೋದಂತೆ, ವಿವಿಧ ಭಾಷೆ ಪ್ರದೇಶ ಸನ್ನಿವೇಶಗಳ ಪ್ರಭಾವದಿಂದ ಸಾವಿರಾರು ವರ್ಷಗಳಿಂದ ವಿಕಾಸಗೊಳ್ಳುತ್ತಾ ಬಂದಿರುವ ಲಿಪಿ, ಲಿಪಿಸಂಸಾರ-ವ್ಯವಸ್ಥೆಗಳು ವಿಕಾಸಮಾರ್ಗದಲ್ಲಿ ಸ್ಥಗಿತಗೊಂಡು, ಯೂನಿಕೋಡಿನಲ್ಲಿ standard ರೂಪ ಪಡೆದು ಅಲ್ಲಿಗೆ ನಿಂತುಬಿಡುತ್ತವೆಂಬುದು ನಿಜವಾದರೂ, ಸಧ್ಯಕ್ಕಂತೂ ಕಂಪ್ಯೂಟರಿಗೆ ಹೊರತಾದ ದೈನಂದಿನ ಜಗತ್ತಿನ ಮಾನ್ಯತೆ ಮುಖ್ಯವಾಗಿಯೇ ಉಳಿದಿದೆ.  ಯೂನಿಕೋಡಿನಲ್ಲಿ ಕೊಡಮಾಡುವ ಲಿಪಿಸೌಲಭ್ಯವೇನಿದ್ದರೂ ವಾಸ್ತವ ಜಗತ್ತಿನ ಲಿಪಿಸೌಲಭ್ಯದ ಪ್ರತಿಫಲನವಷ್ಟೇ.

ಸರಿ, ಲಿಪಿಯಲ್ಲಾದರೂ (ಉದಾಹರಣೆಗೆ) ’ಅ’ ಸ್ವರಕ್ಕೆ ’ಯ’ವೊತ್ತು ಕೊಡುವ ಅಗತ್ಯವಿದೆಯೇ ನೋಡಬೇಕಲ್ಲ.  ಈ ಅಗತ್ಯ ಕಂಡುಬಂದದ್ದು ಇಂಗ್ಲಿಷಿನ Apple ಮೊದಲಾದ ಪದಗಳಲ್ಲಿನ A ಅಕ್ಷರವನ್ನು ಕನ್ನಡ ಲಿಪಿಯಲ್ಲಿ ಬಳಸಲೋಸುಗ.  ಈ ಉಚ್ಚಾರಣೆಯನ್ನು ಕನ್ನಡದಲ್ಲಿ ತೋರಿಸುವ ಅಗತ್ಯವಿದೆಯೇ ಎಂಬುದನ್ನು ಅನಂತರ ನೋಡೋಣ.  ಅದಕ್ಕೂ ಮೊದಲು ಗಮನಿಸಬೇಕಾದ ವಿಷಯವೆಂದರೆ, ಇಂಗ್ಲಿಷಿನ A ಅಕ್ಷರದ್ದು "ಆ್ಯ" ಎಂಬ ರೀತಿಯ ಉಚ್ಚಾರಣೆ ಎಂಬ ಗ್ರಹಿಕೆಯೇ ತಪ್ಪು - ಸ್ವರ-ವ್ಯಂಜನಗಳ ಮೂಲಭೂತ ಅರಿವಿನ ಕೊರತೆಯಿಂದ ಬಂದದ್ದು!  ಭಾಷೆಯೊಂದು ಗ್ರಹಿಸುವ ಸ್ವರ-ವ್ಯಂಜನಗಳ ಸಂಖ್ಯೆ ಬೇರೆಬೇರೆಯಿರಬಹುದು, ಅವುಗಳನ್ನು ವರ್ಣಮಾಲೆಯಲ್ಲಿ ಪ್ರಸ್ತುತಪಡಿಸುವ ಕ್ರಮ ಬೇರೆಬೇರೆಯಿರಬಹುದು, ಮತ್ತು ಒಂದು ಭಾಷೆಯಲ್ಲಿ ಬಳಕೆಯಲ್ಲಿರುವ ಸ್ವರ/ವ್ಯಂಜನ ಇನ್ನೊಂದರಲ್ಲಿ ಇಲ್ಲದಿರಬಹುದು (ಕೆಲವು ಭಾಷೆಗಳಿಗೆ ವರ್ಣಮಾಲೆಯೇ ಇಲ್ಲ!  ಆದರೂ ಭಾಷೆಯಂತೂ ಇದೆ). ಧ್ವನಿಯೊಂದು ಸ್ವರವೋ ವ್ಯಂಜನವೋ ಆಗಿ ಗುರ್ತಿಸಿಕೊಳ್ಳುತ್ತದಲ್ಲ, ಆ ಸ್ವಭಾವ ಮಾತ್ರ ಭಾಷಾತೀತವಾದದ್ದು.  ಸ್ವರವೊಂದು ಯಾವ ಭಾಷೆಯಲ್ಲಿದ್ದರೂ (ಅಥವ ಪ್ರಾಣಿಯ ಧ್ವನಿಯೇ ಆಗಿದ್ದರೂ) ಅದು ಸ್ವರವೇ, ವ್ಯಂಜನ ಎಲ್ಲಿದ್ದರೂ ವ್ಯಂಜನವೇ.  ಆದ್ದರಿಂದ ಈ ಉಚ್ಚಾರವಿಷಯವನ್ನು ನೋಡುವ ಮೊದಲು ಸ್ವರ-ವ್ಯಂಜನಗಳ ಮೂಲಭೂತ ವ್ಯತ್ಯಾಸವನ್ನು ಅರಿಯುವುದು ಮುಖ್ಯ.

ಸ್ವರಕ್ಕೆ ಸ್ವತಂತ್ರ ಅಸ್ತಿತ್ವವಿದೆ (ಎಂದರೆ ಉಚ್ಚಾರಣೆಯಲ್ಲಿ ಅದು ಸ್ವತಂತ್ರವಾಗಿ ತನ್ನಿಂತಾನೇ ಪ್ರಕಟಗೊಳ್ಳುತ್ತದೆ), ಆದರೆ ವ್ಯಂಜನಕ್ಕೆ ಇರುವುದು ಕೇವಲ ಸಾಂಕೇತಿಕ ಅಸ್ತಿತ್ವ ಮಾತ್ರ - ಅನುನಾಸಿಕ ವ್ಯಂಜನಗಳು, ಮತ್ತು ಕೆಲವು ಅವರ್ಗೀಯ ವ್ಯಂಜನಗಳನ್ನು ಬಿಟ್ಟರೆ ಉಳಿದುವಾವುವೂ ಸ್ವತಂತ್ರವಾಗಿ ತನ್ನಿಂತಾನೇ ಉಚ್ಚಾರಣೆಯಲ್ಲಿ ಪ್ರಕಟಗೊಳ್ಳವು (ಬೇಕಿದ್ದರೆ ಕ್ ಚ್ ಟ್ ತ್ ಪ್ ಮೊದಲಾದುವುಗಳನ್ನು ಒಂದೂ ಚೂರೂ ಎಳೆಯದೇ ಉಚ್ಚರಿಸಿ ನೋಡಿ - ಅವು ಕೇವಲ ರೂಪವಿಲ್ಲದ ಲೊಚಗುಟ್ಟುವಿಕೆಯಂತ ಕೇಳುತ್ತವೆ, ಏಕೆಂದರೆ ಅವಕ್ಕೆ ಸ್ವರಗಳ ಆಧಾರವಿಲ್ಲ (ಕೆಲವರು ಅರ್ಧಾಕ್ಷರವನ್ನು ಉಚ್ಚರಿಸಿ ತೋರಿಸಲು ಅದಕೆ ಅಕಾರವನ್ನೋ ಉಕಾರವನ್ನೋ ಸೇರಿಸಿ ಅದನ್ನೇ ’ಅರ್ಧ’ಮಾಡಿ ಎಳೆದಂತೆ ಉಚ್ಚರಿಸುತ್ತಾರೆ (ಕ್ಅ್ ಖ್ಅ್ ಗ್ಅ್ ಘ್ಅ್ ಹೀಗೆ) ಅದು ತಪ್ಪು.  ವ್ಯಂಜನದ ಸ್ವರೂಪ ಧ್ವನಿಯಲ್ಲಿ ಪ್ರಕಟವಾಗಲು ಅದಕ್ಕೆ ಸ್ವರಗಳ ಬೆಂಬಲ ಬೇಕಾಗುತ್ತದೆ.  ಇದು ಒಂದೆಡೆಯಾದರೆ, ಮತ್ತೊಂದೆಡೆ, ’ಅರ್ಥ’ಕ್ಕೆ ಅತ್ಯಗತ್ಯವಾದ ಧ್ವನಿವೈವಿಧ್ಯ ಸ್ವರಗಳಿಗಿಲ್ಲ.  ಆ ವೈವಿಧ್ಯಕ್ಕಾಗಿ, ಅರ್ಥ ತುಂಬುವುದಕ್ಕಾಗಿ ಅವು ವ್ಯಂಜನಗಳನ್ನೇ ಆಶ್ರಯಿಸಬೇಕು.  ಎಂದರೆ ಅ ಆ ಇ ಈ ಮೊದಲಾದ ಸ್ವರಗಳನ್ನು ಬೇರಾವುದರ ಹಂಗೂ ಇಲ್ಲದೇ ಸ್ವತಂತ್ರವಾಗಿ ನುಡಿಯಬಹುದೇನೋ ಹೌದು - ಅವಕ್ಕೆ ಸ್ವತಂತ್ರ ಅಸ್ತಿತ್ವವಿದೆ; ಆದರೆ ಅದಕ್ಕೆ ಅರ್ಥವಿರಬೇಕೆಂದಿಲ್ಲ (ಬಹುಪಾಲು ಅರ್ಥವಿರುವುದಿಲ್ಲ ಕೂಡ). ಉದಾಹರಣೆಗೆ "ಆಉ ಓಇಎ" ಎಂದು ಸ್ವತಂತ್ರವಾಗಿ ಉಚ್ಚರಿಸಬಹುದು, ಆದರೆ ಅರ್ಥ? ಇದಕ್ಕೆ ಅರ್ಥ ತುಂಬಬೇಕಾದರೆ, ಸಂದರ್ಭಾನುಸಾರವಾಗಿ ನ್ ನ್ ನ್ ಡ್ ದ್ ಈ ವ್ಯಂಜನಗಳು ಬರಬೇಕು - ಆಗ ನಾನು ನೋಡಿದೆ ಎಂದಾಗುತ್ತದೆ. ಬದಲಿಗೆ ಇವೇ ಸ್ವರಗಳಿಗೆ ಮ್ ಡ್ ಸ್ ರ್ ದ್ ವ್ಯಂಜನಗಳನ್ನು ಹಾಕಿದರೆ ಮಾಡು ಸೋರಿದೆ ಎಂದಾಯಿತು. ಎರಡರಲ್ಲೂ ಮೂಲವಸ್ತು, ಸ್ವತಂತ್ರ ಅಸ್ತಿತ್ವವಿರುವ ಸ್ವರಗಳು ಆ ಉ ಓ ಇ ಎ ಗಳೇ. ಆದರೆ ವಿವಿಧ ವ್ಯಂಜನಗಳ ಸಂಯೋಗದೊಡನೆ ವಿವಿಧ ಉಚ್ಚಾರಣೆಯುಳ್ಳ ಅಕ್ಷರಗಳಾದುವು, ವಿವಿಧ ಅರ್ಥವುಳ್ಳ ಪದ/ವಾಕ್ಯಗಳಾದುವು. ಆದರೆ ನ್ ನ್ ನ್ ಡ್ ದ್ ಅಥವಾ ಮ್ ಡ್ ಸ್ ರ್ ದ್ ಈ ಅಕ್ಷರಗಳಿಗೆ ಇಷ್ಟು ಶಕ್ತಿಯಿದ್ದರೂ ಸ್ವತಂತ್ರ ಅಸ್ತಿತ್ವವಿಲ್ಲ, ಅವೇನಿದ್ದರೂ ಮೂಲಸ್ವರಗಳಿಗೆ ವಿವಿಧ ರೂಪ-ವ್ಯಕ್ತಿತ್ವ ನೀಡುವ ವ್ಯಂಜನಗಳಷ್ಟೇ.

ಎಂದರೇನು? ಸ್ವರಾಕ್ಷರಗಳು *ಯಾವಾಗಲೂ* ಪೂರ್ಣಾಕ್ಷರಗಳು, ಅವು ಅರ್ಧವಾಗುವುದೇ ಇಲ್ಲ, ಮತ್ತೆ ವ್ಯಂಜನಗಳು ಯಾವಾಗಲೂ ಅರ್ಧಾಕ್ಷರಗಳೇ, ಅವು ತಮ್ಮ ಸ್ವಸ್ವರೂಪದಲ್ಲಿ ಪ್ರಕಟವಾಗಿ ಕೇಳುವುದೇ ಇಲ್ಲ (ಮ್ ಣ್ ನ್ ಲ್ ಳ್ ರ್ ಮೊದಲಾದ ಕೆಲವು ವ್ಯಂಜನಗಳ ಹೊರತಾಗಿ).  ಆದ್ದರಿಂದ ವ್ಯಂಜನಗಳು ತಮ್ಮ ಪೂರ್ಣತ್ವಕ್ಕಾಗಿ ಸ್ವರಗಳನ್ನು ಆಶ್ರಯಿಸಲೇ ಬೇಕಾಗುತ್ತದೆ.  ಈಗ ಒತ್ತಕ್ಷರಗಳನ್ನು ನೋಡಿ.  ಇವು ಹಲವು ಅರ್ಧಾಕ್ಷರಗಳು ಮತ್ತು ಒಂದು ಪೂರ್ಣಾಕ್ಷರದ ಸಂಯೋಗ ತಾನೆ?  ಈ ಅರ್ಧಾಕ್ಷರಗಳು ಯಾವುವು?  ವ್ಯಂಜನಗಳೇ.  ಉದಾಹರಣೆಗೆ ಕ್ರ ಎಂಬಲ್ಲಿ ಕ್ ರ್ ಮತ್ತು ಅ ಅಕ್ಷರಗಳಿವೆ.  ಮೊದಲೆರಡೂ ವ್ಯಂಜನಗಳು, ಮತ್ತು ಕೊನೆಯ ಪೂರ್ಣಾಕ್ಷರ ಸ್ವರ.  ಕ್ರ ಎನ್ನುವುದರ ಬದಲು ರ‍್ಕ ಎಂದರೂ ಇದೇ ಕತೆಯೇ - ರ್ ಕ್ ಮತ್ತು ಅ.  ಅದೇ ಉಣ್ ಎಂಬ ಪದ ನೋಡಿ.  ಇಲ್ಲೂ ಪೂರ್ಣಾಕ್ಷರವಾದ ಉಕಾರವು ಸ್ವತಂತ್ರವಾಗಿಯೇ ಪ್ರಕಟವಾಗಿದೆ.  ಇನ್ನು ಣ್ ವ್ಯಂಜನ ಸ್ವತಃ ಸ್ವತಂತ್ರ, ಅದು ಹಾಗೆಯೇ ಪ್ರಕಟಗೊಂಡಿದೆ.  ಆದರೆ ಉಕಾರಕ್ಕೆ ಣಕಾರವನ್ನು ’ಒತ್ತು’ ಎನ್ನಲಾಗುವುದಿಲ್ಲ.  ಏಕೆಂದರೆ ಒತ್ತಕ್ಷರವಾಗಲು ಮೊದಲಕ್ಷರ ಅರ್ಧಾಕ್ಷರವೇ ಆಗಿರಬೇಕು.  ಮೊದಲೇ ತಿಳಿಸಿದಂತೆ, ಸ್ವರಾಕ್ಷರಗಳು ಸ್ವಭಾವತಃ ಪೂರ್ಣಾಕ್ಷರಗಳು, ಮತ್ತು ಅವು ಅರ್ಧವಾಗುವುದೇ ಇಲ್ಲ.  ಕ್, ಗ್, ಜ್ ಎಂದು ವ್ಯಂಜನವನ್ನುಚ್ಚರಿಸುವಂತೆ ಯಾವುದಾದರೂ ಸ್ವರವನ್ನು ಅರ್ಧಾಕ್ಷರವಾಗಿ ಉಚ್ಚರಿಸಿ ನೋಡೋಣ.  ಆಗದು ಅಲ್ಲವೇ (ಔತ್ತರೇಯರು ಈ ಸ್ವರಗಳನ್ನೂ ಹಲ್ಲು ಹಿಡಿದು ಅರ್ಧಾಕ್ಷರವಾಗಿ ಕೇಳುವಂತೆ ವಿಚಿತ್ರವಾಗಿ ಉಲಿಯುತ್ತಾರೆ - ಅ್ ಆ್ ಇ್ ಈ್ ಉ್ ಊ್ ಹೀಗೆ - ಆದರೆ ಅದು ಸರಿಯಲ್ಲ).  ಆದ್ದರಿಂದ ಅರ್ಧವಾಗಲಾರದ ಅಕಾರಕ್ಕೆ ಯವೊತ್ತನ್ನು ಕೊಡುವುದು ಪ್ರಾಯೋಗಿಕವಾಗಿ ಅಸಾಧ್ಯ.  ನೆನಪಿರಲಿ, ಇದು ಕೇವಲ ಕನ್ನಡ/ಸಂಸ್ಕೃತಕ್ಕಷ್ಟೇ ಅನ್ವಯವಾಗುವ ಮಾತಲ್ಲ, ಯಾವುದೇ ಭಾಷೆಗೂ, ಯಾವುದೇ ಮನುಷ್ಯಧ್ವನಿಗೂ ಅನ್ವಯಿಸುವಂಥದ್ದು.

ಹಾಗಿದ್ದರೆ ಇಂಗ್ಲಿಷಿನಲ್ಲಿ ಆ ಪ್ರಯೋಗವಿದೆಯಲ್ಲ, ಎಂದರೆ ಅದು ಸುಳ್ಳು - ಇಂಗ್ಲಿಷಿನ A ಅಕ್ಷರವು ಸುಮಾರಾಗಿ ಅಕಾರಕ್ಕೆ ಯವೊತ್ತನ್ನು ಕೊಟ್ಟಂತೆ ಕೇಳುತ್ತದೆಯೇ ಹೊರತು ಅದು ಅದೇ ಅಲ್ಲ - ಅ/ಆಕಾರದ್ದೇ ಮತ್ತೊಂದು ಪ್ರಭೇದವಷ್ಟೇ - ಆ ಎನ್ನುವ ಸ್ವರವೇ ಸ್ವಸ್ಥಾನದಿಂದ ಸ್ವಲ್ಪ ಮೇಲಿನ ಜಾಗೆಯಿಂದ ಹೊರಡುತ್ತದೆ, ಮತ್ತು ಅದನ್ನುಚ್ಚರಿಸುವಾಗ ಎಂದುಚ್ಚರಿಸುವಾಗ ನಾಲಿಗೆಗೂ ಬಾಯಿಯ ಮೇಲ್ಗೋಡೆಗೂ ನಡುವಿರುವ ಅವಕಾಶ ಸ್ವಲ್ಪ ಕಿರಿದಾಗಿ ಚಪ್ಪಟೆಯಾಗುತ್ತದೆ.  "A = ಆ್ಯ" ಎನ್ನುವುದು ಋ = ರ್, ಐ = ಅಯ್ ಅಥವಾ ಔ = ಅವ್ ಎನ್ನುವಷ್ಟೇ ತಪ್ಪು ವಾದ.  ’ಸುಧಾರಣಾ’ವಾದಿಗಳು ಸಾವಿರ ಹೇಳುತ್ತಾರೆ, ಆದರೆ ಅವರ ಕಿವಿಗಳು ಮಂದವಾಗಿದೆಯೆನ್ನದೇ ಬೇರೆ ವಿಧಿಯಿಲ್ಲ.  ಹಾಗಿದ್ದರೆ ಈ ಸಮಸ್ಯೆಯನ್ನು ಪರಿಗಣಿಸುವುದು ಹೇಗೆ?

ಕನ್ನಡ ವರ್ಣಮಾಲೆ ಸಂಸ್ಕೃತವರ್ಣಮಾಲೆಯ ಪ್ರಸ್ತುತಿಯನ್ನೇ ಬಹುಪಾಲು ಅನುಸರಿಸಿದ್ದರೂ, ಕನ್ನಡದ ಅಗತ್ಯಗಳಿಗೆ ತಕ್ಕಂತೆ ಮಾರ್ಪಟ್ಟು ಅನುವಾಗಿದೆ.  ಅದರಲ್ಲಿರುವ ಐವತ್ತು (ನಲವತ್ತೊಂಬತ್ತು ಅನ್ನೋಣ) ಅಕ್ಷರಗಳು ಕನ್ನಡದ ಸಂಪರ್ಕದಲ್ಲಿರುವ ಬಹುತೇಕ ಭಾಷೆಗಳನ್ನೂ ನುಡಿಯಲು ಅನುವಾಗುವಂತಿದೆ.  ಇಷ್ಟಿದ್ದೂ ಯಾವುದೇ ವರ್ಣಮಾಲೆಯು ಎಲ್ಲ ಮಾನವಧ್ವನಿಗಳನ್ನೂ ಹಿಡಿದಿಡುತ್ತದೆಯೆನ್ನಲಾಗದು.  ನೂರಾರು ಧ್ವನಿಗಳನ್ನು ಹಿಡಿದಿಡುವ ಕೆಲಸವನ್ನು ಐವತ್ತು ಅಕ್ಷರದ ವರ್ಣಮಾಲೆ ನಿಭಾಯಿಸುತ್ತಿದೆ.  ಅದೇ ಕೆಲಸವನ್ನೇ ಇಂಗ್ಲಿಷಿನ ಇಪ್ಪತ್ತಾರು ಅಕ್ಷರದ ವರ್ಣಮಾಲೆಯೂ ಮಾಡುತ್ತಿದೆ. ಅದರರ್ಥವೇನು?  ವರ್ಣಮಾಲೆಯೊಂದು ಸಾಧ್ಯವಿರುವ *ಎಲ್ಲ* ಧ್ವನಿಗಳನ್ನೂ ಒಳಗೊಳ್ಳುವುದು ಅಸಾಧ್ಯ.  ಬದಲಿಗೆ ಆ ಭಾಷೆಯಲ್ಲಿ ಬಳಕೆಯಲ್ಲಿದ್ದ/ಇರುವ/ಇರಬಹುದಾದ ಮತ್ತು ಇತರ ಭಾಷೆಗಳೊಡನೆ ದೈನಂದಿನ ಕೊಡುಕೊಳ್ಳುವಿಕೆಗೆ ಅನುವಾಗುವಷ್ಟು ಅಕ್ಷರಗಳನ್ನು ಆ ಭಾಷೆಯ ವರ್ಣಮಾಲೆ ಒಳಗೊಳ್ಳುತ್ತದೆ.  ಇನ್ನಿದನ್ನು ಧ್ವನಿವೈಜ್ಞಾನಿಕವಾಗಿ ತರ್ಕಬದ್ಧವಾಗಿ ಜೋಡಿಸಿಟ್ಟುಕೊಳ್ಳುವ ಕೆಲಸವನ್ನು ಸಂಸ್ಕೃತದಂಥ ಕೆಲವು ಭಾಷೆಗಳು ಮಾಡುತ್ತವೆ, ಆದರೆ ಇಂಗ್ಲಿಷಿನಂಥ ಹಲವು ಭಾಷೆಗಳು ಮಾಡುವುದಿಲ್ಲವಷ್ಟೇ.  ಹೀಗೆ ಅನುವುಗೊಂಡ ವರ್ಣಮಾಲೆಯ ಒಂದು ಅಕ್ಷರಕ್ಕೆ ಹಲವು ಧ್ವನಿಗಳಿರುವುದು ಸಾಧ್ಯ, ಅಲ್ಲವೇ?  ಉದಾಹರಣೆಗೆ ನೋಡಿ, A ಅಕ್ಷರಕ್ಕೆ ಇಂಗ್ಲಿಷಿನಲ್ಲೇ ನಿರ್ದಿಷ್ಟ ಧ್ವನಿಯಿಲ್ಲ.  ಅ ಎನ್ನುವುದರಿಂದ ಎ ಎನ್ನುವವರೆಗೂ ಅದರ ಧ್ವನಿವ್ಯಾಪ್ತಿ - ನೇರ A ಅಕ್ಷರ ಬಂದರೊಂದು ಉಚ್ಚಾರಣೆ, ಪದದ ಕೊನೆಯಲ್ಲಿ ಬಂದರೆ ಒಂದು ಉಚ್ಚಾರಣೆ, ಪದದ ಮೊದಲಲ್ಲಿ ಬಂದರೆ ಒಂದು; ಇನ್ನು ಪದದ ಕೊನೆಯಲ್ಲಿ E ಅಕ್ಷರ ಬಂದರೇ ಪದದ ನಡುವಿನಲ್ಲಿ ಬರುವ A ಅಕ್ಷರಕ್ಕೊಂದು ಉಚ್ಚಾರಣೆ, A ಅಕ್ಷರದ ಮುಂದೆ ಬರುವ ಅಕ್ಷರದ ಮೇಲೆ ಅವಲಂಬಿತವಾಗಿ ಬೇರೊಂದು ಉಚ್ಚಾರ - ಹೋಗಲಿ ಇದರಲ್ಲಾದರೂ ಏಕರೂಪತೆಯಿದೆಯೇ ಎಂದರೆ ಅದೂ ಕಾಣದು.  ಒಂದೊಂದು ಭಾಷೆಯ ಮೂಲದಿಂದ ಬಂದ ಪದದಲ್ಲಿ ಒಂದೊಂದು ಉಚ್ಚಾರ.  ಇದಕ್ಕೆ ಕಾರಣವೂ ಇಲ್ಲದಿಲ್ಲ.  ಇಂಗ್ಲಿಷ್ ನಾಗರಿಕತೆ ಮತ್ತು ವ್ಯವಹಾರಸಂಬಂಧಗಳು ಬೆಳೆದಷ್ಟು ಪ್ರಚಂಡವೇಗದಲ್ಲಿ ಭಾಷೆ/ವ್ಯಾಕರಣ/ಲಿಪಿಸೌಲಭ್ಯಗಳು ಬೆಳೆಯಲಿಲ್ಲ.  ಲ್ಯಾಟಿನ್, ಗ್ರೀಕ್, ಸ್ವೀಡಿಶ್, ಸ್ಕ್ಯಾಂಡಿನೇವಿಯನ್, ಐಸ್ಲಾಂಡಿಕ್ ಹೀಗೆ ಹಲವು ಭಾಷಾಮೂಲದ ಪದಗಳ ಕುದಿಗುಲುಮೆ ಇಂಗ್ಲಿಷ್ ಭಾಷೆ.  ಆಯಾ ಭಾಷೆಯ ಮೂಲದಿಂದ ಬಂದ ಪದಗಳು ಬಹುತೇಕ ಅದೇ ಉಚ್ಚಾರವನ್ನುಳಿಸಿಕೊಂಡಿದ್ದರೂ, ಅದಕ್ಕೆ ತಕ್ಕ ಅಕ್ಷರಸಂಜ್ಞೆ ಮಾತ್ರ ಇಂಗ್ಲಿಷಿನಲ್ಲಿ ಮೂಡಲಿಲ್ಲ (ಆದ್ದರಿಂದಲೇ, ಸ್ಪೆಲ್ಲಿಂಗ್ ಕಲಿಕೆ ಕೇವಲ ಭಾರತೀಯ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಅವರಿಗೂ ಬಹು ದೊಡ್ಡ ಗೊಂದಲವೇ - ಇನ್ನು ಅಮೆರಿಕನ್ನರ ಬಗೆಗಂತೂ ಹೇಳುವುದೇ ಬೇಡ.  ಆಂಗ್ಲೇಯರಿಂದಲೇ ಬರುವ ಇ-ಮೈಲ್ ಪತ್ರವ್ಯವಹಾರವು ಎಣೆಯಿಲ್ಲದಷ್ಟು ಕಾಗುಣಿತದ ದೋಷದಿಂದ ತುಂಬಿರುವುದು ನನ್ನ ಸ್ವಂತ ಅನುಭವ).  ಒಂದೇ ಅಕ್ಷರಗಳ ವಿವಿಧ ಉಚ್ಚಾರಗಳನ್ನು ಸೂಚಿಸಲು a ā ä ẚ à á â ಮೊದಲಾದ ಸಂಜ್ಞೆಗಳನ್ನು ಬಳಸಲಾಗುತ್ತದೆಯಾದರೂ ಅದರಲ್ಲಿ ಏಕರೂಪತೆಯೂ ಇಲ್ಲ, ಎಲ್ಲೆಡೆಯೂ ಬಳಸುವ ಸಾರ್ವತ್ರಿಕತೆಯೂ ಇಲ್ಲ ಮತ್ತಿದು ಎಲ್ಲ ಉಚ್ಚಾರಣಾ ಸನ್ನಿವೇಶಗಳನ್ನು ಒಳಗೊಳ್ಳುವುದೂ ಇಲ್ಲ.  ಸಧ್ಯಕ್ಕೆ ಈ ಗೊಂದಲಗಳ ಭಾಷಾಮೂಲವನ್ನು ಕಡೆಗಣಿಸೋಣ.  ನಮಗೆ ಇವು ಪರಿಚಿತವಾಗುವುದು ಇಂಗ್ಲಿಷಿನ ಮೂಲಕ.  ಸ್ವತಃ ಇಂಗ್ಲಿಷ್ ಭಾಷೆಯೇ ಬಗೆಹರಿಸಿಕೊಳ್ಳಲಾಗದ ಸಮಸ್ಯೆಯನ್ನು, ನಾವು ಬಗೆಹರಿಸುವ ಅಗತ್ಯವೂ ಸಾಧ್ಯತೆಯೂ ಇದೆಯೇ ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ.

ಇಷ್ಟು ಹೇಳಿದ ಮೇಲೆ, ಇದೇ ಸಮಸ್ಯೆಯನ್ನು ಇಂಗ್ಲಿಷಿನೊಡನೆ ಇಂಥದೇ ಸಂಬಂಧ ಹೊಂದಿರುವ ಇತರ ಭಾರತೀಯ ಭಾಷೆಗಳು ಹೇಗೆ ನಿಭಾಯಿಸುತ್ತಿವೆ ನೋಡಬಹುದು.  ಸಂಸ್ಕೃತವಂತೂ ಕನ್ನಡ ಪದಗಳನ್ನೇ ಮುಟ್ಟಿಸಿಕೊಳ್ಳುವುದಿಲ್ಲವಾದ್ದರಿಂದ, ಇಂಗ್ಲಿಷಿನ ಉಚ್ಚಾರಣಾಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಸ್ಕೃತ ನಮಗೆ ಉದಾಹರಣೆಯಾಗಲಾರದು.  ಹಿಂದಿ?  ಹಿಂದಿಯೂ ಒಂದು ರೀತಿ ಇಂಗ್ಲಿಷಿನಂತೆಯೇ ಹಲವು ಭಾಷೆಗಳ ಮಿಶ್ರಣ.  ಅರೇಬಿಕ್, ಪರ್ಶಿಯನ್, ಉರ್ದೂ ಮತ್ತು ದೇಶೀಯ ಪ್ರಾಕೃತಭಾಷೆಗಳ ಮಿಶ್ರಣವನ್ನು ಮೂಲವಾಗುಳ್ಳದ್ದು.  ಕೆಲವು ಸಂದರ್ಭಗಳಲ್ಲಿ, ವರ್ಣಮಾಲೆಯಲ್ಲಿಲ್ಲದ ವಿಶೇಷ ಉಚ್ಚಾರಣೆಗಾಗಿ (ಉದಾಹರಣೆಗೆ ಅನುನಾಸಿಕ) ಇರುವ ಅಕ್ಷರಕ್ಕೇ ಚಂದ್ರಚಿಹ್ನೆಯನ್ನು ಬಳಸುವ ಉದಾಹರಣೆಗಳಿವೆ (ಉದಾ: ಕಹಾ = कहा; ಕಹಾಂ = कहॅ).  ಆದರೆ ಅದು ಇಂಗ್ಲಿಷಿನಂತೆ ಹೊರಗಿನ ಪದಗಳನ್ನು ಅವುಗಳ ಮೂಲರೂಪದಲ್ಲೇ ಸ್ವೀಕರಿಸಿದ್ದಾಗಲೀ, ಅದಕ್ಕಾಗಿ ತನ್ನ ವರ್ಣಮಾಲೆಯಲ್ಲಿ ಬದಲಾವಣೆ ಮಾಡಿಕೊಂಡದ್ದಾಗಲೀ ಇಲ್ಲ.   ಇಂಗ್ಲಿಷಿನ bank ಎನ್ನುವುದನ್ನು ನಾವು ಬ್ಯಾಂಕ್ ಎಂದಾದರೂ ಬರೆಯುತ್ತೇವೆ, ಆದರೆ ಹಿಂದಿಯಲ್ಲಿ ಅದು बैंक ಆಗಿಬಿಡುತ್ತದೆ.  ಕೊನೆಗೆ ಹಿಂದಿಯಲ್ಲಿ ಸುಲಭವಾಗಿ ಬರೆಯಬಹುದಾದ hospital (हास्पिटल) ಕೂಡ आस्पताल ಆಗಿಬಿಡುತ್ತದೆ.  ಇನ್ನು ತಮಿಳಿಗೆ ಬಂದರೆ, ಇಂಗ್ಲಿಷಿನ ಎರವಲಿರಲಿ, ಇಂಗ್ಲಿಷಿನ ಕಾಗುಣಿತದಲ್ಲಿ ಕಾಣುವ ಗಲಿಬಿಲಿಯ ಹತ್ತು ಪಟ್ಟನ್ನು ತಮಿಳಿನ ಒಳಗೇ ಕಾಣಬಹುದು.  ಅಲ್ಲಿ ಕ ಖ ಗ ಘ; ತ ಥ ದ ಧ; ಪ ಫ ಬ ಭ ಮುಂತಾದ ನಾಲ್ಕುನಾಲ್ಕು ಅಕ್ಷರಗಳ ಧ್ವನಿಯನ್ನು ಒಂದೊಂದೇ ಅಕ್ಷರವು ನಿಭಾಯಿಸುತ್ತಿದೆ.  ಕನ್ನಡದ ಗೋಪಿಯೂ ಸಂಸ್ಕೃತದ ಕೋಪಿಯೂ ಹಿಂದಿಯ ಗೋಬಿಯೂ ತಮಿಳಿನಲ್ಲಿ ಕೋಪಿಯೇ (கோபி); ಕನ್ನಡದ ಬೀದಿಯೂ ಸಂಸ್ಕೃತದ ಭೀತಿಯೂ ತಮಿಳಿನಲ್ಲಿ ಪೀತಿಯೇ (பீதி); ಇನ್ನು ತಮಿಳಿನಲ್ಲಿಯೇ ಸರಿಯಾಗಿ ಬರೆಯಬಹುದಾದ ಹೊಸೂರು (ஹொசூர்) ಪದವನ್ನು ಅವರು ಬರೆಯುವುದು ஓசுர் (ವೊಚೂರ್) ಎಂದೇ!ಬಹುಪಾಲು ಸಂಸ್ಕೃತ ವರ್ಣಮಾಲೆಯ ಹಂದರವನ್ನನುಸರಿಸುವ (ಆದರೆ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡದ ಸಂದರ್ಭಕ್ಕೆ ಅನುವಾಗಿಸಿಕೊಂಡಿರುವ) ಕನ್ನಡ ವರ್ಣಮಾಲೆಯಲ್ಲಿ ಈ ಬಗೆಯ ಗೊಂದಲಗಳು ಬಹುತೇಕ ಇಲ್ಲವೇ ಇಲ್ಲವೆನ್ನಬಹುದು.  ಹಾಗೆಂದು ಗೊಂದಲಗಳು ಇಲ್ಲವೇ ಇಲ್ಲವೆಂದಲ್ಲ - ಮೊದಲೇ ಹೇಳಿದಂತೆ ಯಾವುದೇ ವರ್ಣಮಾಲೆಯು ಎಲ್ಲ ಮಾನವಧ್ವನಿಗಳನ್ನೂ ಹಿಡಿದಿಡುತ್ತದೆಯೆನ್ನಲಾಗದು, ಆದರೆ ಕನ್ನಡದಲ್ಲಿ ಈ ಗೊಂದಲಗಳು ಕಡೆಗಣಿಸಬಹುದಾದಷ್ಟು ಕಡಿಮೆ.  ಉದಾಹರಣೆಗೆ, ಪ್ರತಿಯೊಂದು ಅಕ್ಷರವೂ ಹಲವು ಧ್ವನಿಗಳನ್ನು ನಿಭಾಯಿಸುವ ತಮಿಳಿನಲ್ಲಿ ನಕಾರಕ್ಕೆ ಎರಡು ಅಕ್ಷರಗಳಿವೆ ந ಮತ್ತು ன - நாராயணன் (ನಾರಾಯಣನ್) ಎಂಬಲ್ಲಿ ಮೊದಲ ಮತ್ತು ಕೊನೆಯ ನಕಾರಗಳನ್ನು ಗಮನಿಸಬಹುದು.  ಈ ಎರಡನ್ನೂ ಕನ್ನಡದಲ್ಲಿ ನ ಎಂಬ ಒಂದೇ ಅಕ್ಷರ ನಿಭಾಯಿಸುತ್ತದೆ, ಅದಕ್ಕಾಗಿ ಹೊಸದೊಂದು ಸಂಜ್ಞೆಯೋ ಹೊಸದೊಂದು ಸೂಚಿಯೋ ಅಗತ್ಯ ನಮಗೆ ಕಂಡಿಲ್ಲ.  ಇದೇ ಕಾರಣಕ್ಕೆ ನಮ್ಮಲ್ಲಿ ಈ ಎರಡು ನಕಾರಗಳ ಸೂಕ್ಷ್ಮ ಭೇದಗಳೂ ಕಾಣೆಯಾಗಿವೆ.  ಇದೇ ಕತೆ ள ழ ಅಕ್ಷರಗಳದ್ದೂ.  ಇದಕ್ಕೆ ಸಮಾನವಾಗಿ ಹಳಗನ್ನಡದಲ್ಲಿ ಳ ಮತ್ತು ೞ ಎಂಬ ಎರಡು ಅಕ್ಷರಗಳಿದ್ದುವು.  ಆದರೆ ಕ್ರಮೇಣ ಕನ್ನಡದಲ್ಲಿ ಈ ಎರಡನೆಯ ಅಕ್ಷರ ಬಿದ್ದುಹೋಗಿ ಕೇವಲ ಳಕಾರವಷ್ಟೇ ಉಳಿದಿದೆ.  ಅದಕ್ಕನುಗುಣವಾಗಿ ಉಚ್ಚಾರಣ ಸೂಕ್ಷ್ಮವೂ ಬಿದ್ದುಹೋಗಿದೆಯಾಗಿ ನಾವು ತಮಿೞನ್ನು ತಮಿಳ್ ಎಂದೇ ಉಚ್ಚರಿಸುತ್ತೇವೆ.

ಹೀಗಾಗಿ, ಯಾವ ಭಾಷೆಯೂ ಹೊರಗಿನ ಪದಗಳಿಗಾಗಿ ತಮ್ಮ ವರ್ಣಮಾಲೆಯನ್ನು ಬದಲಿಸಿಕೊಂಡದ್ದು ಕಂಡಿಲ್ಲ.  ಬದಲಿಗೆ, ಹೊರಗಿನಿಂದ ಬಂದ ಪದಗಳು, ಅತಿಥಿ ಭಾಷೆಯ ಜಾಯಮಾನಕ್ಕೆ ತಕ್ಕಂತೆ ರೂಪಾಂತರ ಹೊಂದುತ್ತವೆ.  ಕನ್ನಡದಲ್ಲೂ ಇದೇ ರೂಢಿಯನ್ನು ಕಾಣುತ್ತೇವೆ (ಸಂಸ್ಕೃತಪದಗಳು ಮಾತ್ರ ಏಕೆ ಹಾಗೇ ಉಪಯೋಗಿಸಲ್ಪಡುತ್ತವೆ ಎಂಬ ಪ್ರಶ್ನೆ ಇಲ್ಲಿ ಪ್ರಸ್ತುತವಲ್ಲ, ಅದು ಬೇರೆಯೇ ಚರ್ಚೆಯ ವಿಷಯ - ಆಡುನುಡಿಗೆ ಬಿದ್ದ ಸಂಸ್ಕೃತಪದಗಳೂ ಕನ್ನಡದಲ್ಲಿ ತದ್ಭವಗಳಾಗುವುದನ್ನೂ ಮರೆಯುವಂತಿಲ್ಲ).  ಹೀಗಾಗಿ ಕುರ್ಚಿ, ಮೇಜು, ತಾರೀಖುಗಳಂತೆಯೇ ಆಸ್ಪತ್ರೆ, ಬಸ್ಸು ಕಾರುಗಳೂ ಬ್ಯಾಟುಗಳೂ (hospital, bus, car, bat) ಕನ್ನಡದ ಜಾಯಮಾನಕ್ಕೆ ತಕ್ಕಂತೆ ಬಳಕೆಯಲ್ಲಿರುವುದನ್ನು ಗಮನಿಸಿರಬಹುದು.  car ಮತ್ತು batಗಳಲ್ಲಿರುವ A ಅಕ್ಷರದ ಉಚ್ಚಾರ ಬೇರೆಬೇರೆ.  ಅದಕ್ಕನುಗುಣವಾಗಿ ಕನ್ನಡದಲ್ಲಿ ಅದು ಕಾರ್ (ಕ್ ಆ ರ್) ಮತ್ತು ಬ್ಯಾಟ್ (ಬ್ ಯಾ ಟ್) ಆಗಿ ಬಳಕೆಯಲ್ಲಿರುವುದನ್ನು ಕಾಣಬಹುದು.  ಅದೇ ತರ್ಕದಲ್ಲಿ Apple ಪದವನ್ನು ಯಾಪಲ್ ಎಂದು ಬರೆಯಬಹುದು (ಸರಿಯಾದ ಉಚ್ಚಾರಣೆಯಲ್ಲ, ಆದರೆ ಮೂಲಕ್ಕೆ ಹತ್ತಿರದ್ದು), ಅಥವಾ ಅದು ತೀರ ದೂರವೆನಿಸಿದರೆ ಸುಮ್ಮನೇ ಆಪಲ್ ಎಂದರೂ ಆಯಿತು.

ಇಂಗ್ಲಿಷಿನಲ್ಲಿ ಸ್ಪಷ್ಟ ಉಚ್ಚಾರಣೆಯಿರುವ, ಆದರೆ ಕನ್ನಡದಲ್ಲಿ ಇಲ್ಲದ, F, Z ಮೊದಲಾದುವುಗಳನ್ನೂ ಕನ್ನಡದಲ್ಲಿ ಮೊದಲು ಫ್, ಜ್ ಎಂದು ತೋರಿಸುತ್ತಿದ್ದೆವು, ಆಮೇಲೆ ಈ ಅಕ್ಷರಗಳಿಗೇ ಅಡಿಯಲ್ಲಿ ಎರಡು ಚುಕ್ಕಿಯಿಟ್ಟು ತೋರಿಸಲಾರಂಭಿಸಿದ್ದೇವೆ.  ಇವು ವರ್ಣಮಾಲೆಯ ಹೊಸ ಅಕ್ಷರಗಳಲ್ಲ, ಬದಲಿಗೆ ಇರುವ ಅಕ್ಷರಗಳ ವಿಶಿಷ್ಟ ಉಚ್ಚಾರಸೂಚಕಗಳು.  ಇದು ಬರಹದಲ್ಲಿ ಬಳಕೆಯಲ್ಲಿ ಬಂದಿರುವುದರಿಂದ ಯೂನಿಕೋಡಿನಲ್ಲೂ ಬಳಕೆಯಲ್ಲಿದೆ (ಫ಼್ ಜ಼್ ಹೀಗೆ). ಆದರೆ F Z ಗಳಂತೆ ನಿರ್ದಿಷ್ಟ ಉಚ್ಚಾರವಿಲ್ಲದ A ಅಕ್ಷರವನ್ನು ಕೈಬರಹದಲ್ಲಿ ಆ ಅಥವಾ ಯಾ ಎಂದೇ ಬರೆಯುವ ರೂಢಿ.  ಆದರೂ ಇದಕ್ಕೂ ಒಂದು ನಿರ್ದಿಷ್ಟ ಸಂಕೇತವನ್ನು ನೀಡಬೇಕೆಂದರೆ ಹೊಸದೊಂದು (ತಪ್ಪಾದ) ಅಕ್ಷರದ ಬದಲು F Z ಗಳಿಗೆ ಬಳಸುವಂಥದ್ದೇ ಒಂದು ವಿಶಿಷ್ಟ ಚಿಹ್ನೆಯನ್ನು ಬಳಸಬಹುದೇನೋ (ಭಾರಧ್ವಾಜ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿ ಅ ಮತ್ತು ಓ ಗಳ ನಡುವಿನ ಉಚ್ಚಾರಣೆಯನ್ನು ಸೂಚಿಸಲು ಅಕ್ಷರದ ಮೇಲೆ ಅರ್ಧಚಂದ್ರ ಚಿಹ್ನೆಯನ್ನು ಬಳಸುವುದನ್ನು ನಾನು ಕಂಡಿದ್ದೇನೆ).