Tuesday, April 12, 2016

ಕೇಶಿರಾಜನ ಕನ್ನಡವರ್ಣಮಾಲೆ

ಏಪ್ರಿಲ್ ೨೦೧೬ರ "ಸಂಪದ ಸಾಲು" ಸಂಚಿಕೆಯ "ಪದಾರ್ಥಚಿಂತಾಮಣಿ" ಅಂಕಣದಲ್ಲಿ ಪ್ರಕಟಗೊಂಡ ಬರಹ"
ಕೆಲದಿನಗಳ ಹಿಂದೆ ಪದಾರ್ಥಚಿಂತಾಮಣಿಯಲ್ಲಿ ಕೇಶಿರಾಜನ “ಅಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ” ಎಂಬ ಸಾಲು ಚರ್ಚೆಗೆ ಬಂತು.  ಕೇಶಿರಾಜನು ಶಬ್ದಮಣಿದರ್ಪಣದ ಸಂಜ್ಞಾಪ್ರಕರಣದಲ್ಲಿ ಅಚ್ಚಗನ್ನಡದ ವರ್ಣಮಾಲೆಯನ್ನು ಹೀಗೆ ವಿವರಿಸುತ್ತಾನೆ.

ತಿಳಿ ದೇಶೀಯಮಮೈದಂ
ಕಳೆ ನೀಂ ಋ ಲೃ ವರ್ಣ ಶ ಷ ವಿಸರ್ಗ ೱಕ ೲಪ
ಕ್ಷಳನಂ ನಾಲ್ವತ್ತೇೞಾ
ಯ್ತಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ

ಇದು ಪದ್ಯ. ಪ್ರಸಿದ್ಧವಾದ ಸಂಸ್ಕೃತವರ್ಣಮಾಲೆಯಿಂದ ಯಾವಯಾವ ಅಕ್ಷರಗಳನ್ನು ಕಳೆದು, ಅಚ್ಚಗನ್ನಡದ ಯಾವಯಾವ ಅಕ್ಷರಗಳನ್ನು ಅದಕ್ಕೆ ಕೂಡಿಸಿದರೆ ಅಚ್ಚಗನ್ನಡದ ವರ್ಣಮಾಲೆ ಸಿದ್ಧವಾಗುತ್ತದೆ ಎಂದು ಕೇಶಿರಾಜನು ಮೇಲಿನ ಪದ್ಯದಲ್ಲಿ ತಿಳಿಸುತ್ತಾನೆ, ಹೀಗೆ:

(ಐವತ್ತೆರಡು ಅಕ್ಷರಗಳಿರುವ ಸಂಸ್ಕೃತವರ್ಣಮಾಲೆಯನ್ನು ಹಿಡಿದು) ಅದಕ್ಕೆ -  
  1. ತಿಳಿ ದೇಶೀಯಮಮೈದಂ (ಸಂಸ್ಕೃತವರ್ಣಮಾಲೆಯಲ್ಲಿಲ್ಲದ, ಆದರೆ ಅಚ್ಚಗನ್ನಡದಲ್ಲಿರುವ ಎಒಱೞಳ ಎಂಬ ಐದಕ್ಷರಗಳನ್ನು ಸೇರಿಸು)
  2. ಕಳೆ ನೀಂ ಋ ಲೃ ವರ್ಣ ಶ ಷ ವಿಸರ್ಗ ೱಕ ೲಪ ಕ್ಷಳನಂ (ಸಂಸ್ಕೃತದಲ್ಲಿ ಮಾತ್ರ ಬಳಕೆಯಲ್ಲಿರುವ, ಆದರೆ ಕನ್ನಡದಲ್ಲಿಲ್ಲದ ಋೠಲೃಲೄಶಷಳ ಅಕ್ಷರಗಳನ್ನೂ, ವಿಸರ್ಗ (ಅಃ), ಜಿಹ್ವಾಮೂಲೀಯ (ೱಕ), ಉಪಧ್ಮಾನೀಯ (ೲಪ) - ಈ ಹತ್ತು ಅಕ್ಷರಗಳನ್ನು ಕಳೆ)
ನಾಲ್ವತ್ತೇೞಾಯ್ತಳೆ ಶುದ್ಧಗೆಯಚ್ಚಗನ್ನಡಕ್ಕೀ ಕ್ರಮದಿಂ - ಹೀಗೆ ಅಚ್ಚಗನ್ನಡದ ಶುದ್ಧವರ್ಣಮಾಲೆಯನ್ನು ನಲವತ್ತೇಳೆಂದು ಅಳೆ - ಇದು ಈ ಪದ್ಯದ ಅರ್ಥ.

ಮೇಲಿನ ಪದ್ಯದಲ್ಲಿ ಸೂಚಿಸಿರುವ ೱ ಮತ್ತು ೲ ಎಂಬ ಎರಡಕ್ಷರಗಳ ಬಗ್ಗೆ ಒಂದು ಕಿರುಟಿಪ್ಪಣಿ: ಇವು ಕ್ರಮವಾಗಿ ಜಿಹ್ವಾಮೂಲೀಯ ಮತ್ತು ಉಪಧ್ಮಾನೀಯಗಳೆಂದು ಕರೆಯಲ್ಪಡುತ್ತವೆ. ಇವು ಸಂಸ್ಕೃತದಲ್ಲಿ ಕ ಮತ್ತು ಪ ಅಕ್ಷರಗಳ ಹಿಂದೆ ಬರುವ ವಿಶೇಷ ವಿಸರ್ಗಗಳಷ್ಟೇ, ಆದರೆ ಉಚ್ಚಾರಣೆ ವಿಸರ್ಗಕ್ಕಿಂತ ತುಸು ಭಿನ್ನ - ಉಪಧ್ಮಾನೀಯ(ೲ)ದ ಉಚ್ಚಾರವು ಸರಿಸುಮಾರು ಇಂಗ್ಲಿಷಿನ f ಅಕ್ಷರದಂತೆ ಬರುತ್ತದೆ (ಉದಾ: ಮನಃಪರಿವರ್ತನೆ > ಮನfಪರಿವರ್ತನೆ); ಜಿಹ್ವಾಮೂಲೀಯ(ೱ)ದ ಉಚ್ಚಾರವು ಕ ಮತ್ತು ಗ ನಡುವಿನ ಉಚ್ಚಾರವಾಗಿ, ತೆಳುವಾದ ಹಕಾರದೊಂದಿಗೆ (ಮುರುಘಾ, ಮಹೇಶ್ವರಿ, ಮೊಳಗಾ ಈ ಪದಗಳಲ್ಲಿ ಬರುವ ಘ, ಹ, ಗ ಅಕ್ಷರಗಳನ್ನು ತಮಿಳರು ಉಚ್ಚರಿಸುವಂತೆ) ಬರುತ್ತದೆ (ಉದಾ: ಮನಃಕ್ಲೇಶ ಎಂಬುದು ಮನhkhಕ್ಲೇಶ ಎಂದು ಉಚ್ಚರಿಸಲ್ಪಡುತ್ತದೆ) – ಆದರೆ ಕನ್ನಡದಲ್ಲಿ ಇವುಗಳ ಬಳಕೆಯಿಲ್ಲ – ಇಲ್ಲಿ ಉಪಧ್ಮಾನೀಯ ಮತ್ತು ಜಿಹ್ವಾಮೂಲೀಯಗಳನ್ನೂ ವಿಸರ್ಗಾಕ್ಷರಗಳಾಗಿಯೇ ಉಚ್ಚರಿಸುವುದು ರೂಢಿ (ಮನಃಪರಿವರ್ತನೆ ಮನಃಕ್ಲೇಶಗಳನ್ನು ಮನಃಪರಿವರ್ತನೆ, ಮನಃಕ್ಲೇಶ ಎಂದೇ ಉಚ್ಚರಿಸಲಾಗುತ್ತದೆ).

ಹೀಗೆ, ಕೇಶಿರಾಜನ ಪ್ರಕಾರ ಅಚ್ಚಗನ್ನಡದ ವರ್ಣಮಾಲೆ:
ಅಆಇಈಉಊಎಏಐಒಓಔ (=೧೨)
ಂ (ಅನುಸ್ವಾರ - ಅಂ) (=೧)
ಕಖಗಘಙ ಚಛಜಝಞ ಟಠಡಢಣ ತಥದಧನ ಪಫಬಭಮ (=೨೫)
ಯಱರಲವಸಹೞಳ (=೯)

ಒಟ್ಟು ೪೭ ಅಕ್ಷರಗಳು.

ಕೇಶಿರಾಜನೇನೋ "’ಅಚ್ಚ’ಕನ್ನಡದಲ್ಲಿ ಬಳಕೆಯಲ್ಲಿಲ್ಲ"ವೆಂದು ಹಲವು ಅಕ್ಷರಗಳನ್ನು ತೆಗೆದುಹಾಕಿದ. ಸಂಸ್ಕೃತದಲ್ಲೇ ತೀರ ಕಡಿಮೆ ಉಪಯೋಗವಿದ್ದು, ಕನ್ನಡದಲ್ಲಿ ಬಳಕೆಯಲ್ಲೇ ಇಲ್ಲದ ೠ, ಲೃ, ಲೄ, ೱ, ೲ ಗಳನ್ನು ತೆಗೆದದ್ದೇನೋ ಸರಿ, ಆದರೆ ನಾವು ಇವತ್ತು ವ್ಯಾಪಕವಾಗಿ ಬಳಸುತ್ತಿರುವ ಋ, ಶ, ಷ ಮತ್ತು ವಿಸರ್ಗಗಳನ್ನೂ ತೆಗೆದುಬಿಟ್ಟ. ಅದಕ್ಕೆ ಆತನ ತರ್ಕ ಹೀಗೆ: ಅಚ್ಚಗನ್ನಡದಲ್ಲಿ ಈ ಅಕ್ಷರಗಳು ಬಳಕೆಯಲ್ಲಿಲ್ಲ; ಸಂಸ್ಕೃತ ಪದಗಳಲ್ಲಿದ್ದರೂ ಅವು ಕನ್ನಡದಲ್ಲಿ ತದ್ಭವವಾಗುವಾಗ ಆ ಅಕ್ಷರಗಳು ದೇಸೀ ಅಕ್ಷರಗಳಿಗೆ ಬದಲಾಗುತ್ತವೆ (ಉದಾಹರಣೆಗೆ, ಋಷಿ > ರಿಸಿ, ಪಶು > ಪಸು/ಹಸು, ದುಃಖ > ದುಕ್ಕ ಹೀಗೆ) - ಆದ್ದರಿಂದ ಅಚ್ಚಗನ್ನಡ ವರ್ಣಮಾಲೆಯಲ್ಲಿ ಈ ಅಕ್ಷರಗಳ ಅಗತ್ಯವಿಲ್ಲ.  ಆದರೆ ಈ ತರ್ಕಕ್ಕೆ ಕೊನೆಯೆಲ್ಲಿ?  ಇದೇ ದಾರಿಯಲ್ಲಿ ಮುನ್ನೆಡೆದರೆ ಮಹಾಪ್ರಾಣಗಳೂ ಹೀಗೇ ಅಲ್ಲವೇ? ಅಚ್ಚಗನ್ನಡದಲ್ಲಿ ಮಹಾಪ್ರಾಣವೆಲ್ಲಿದೆ? ಸಂಸ್ಕೃತದ ಮಹಾಪ್ರಾಣಶಬ್ದಗಳೂ ಕನ್ನಡಕ್ಕೆ ಬರುವಾಗ ತದ್ಭವವಾಗಿಯೇ ಬರುತ್ತವೆ (ಹಠ > ಹಟ; ಘಂಟಾ > ಗಂಟೆ; ದುಃಖ > ದುಕ್ಕ ಹೀಗೆ). ಇನ್ನು ಙ ಮತ್ತು ಞಗಳ ಕೆಲಸವನ್ನು ಅನುಸ್ವಾರ (೦) ಮಾಡುತ್ತದೆ;  ಐಔ ಎಂಬುದು ಅ+ಏ ಮತ್ತು ಅ+ಓ ಅಕ್ಷರಗಳ ಸಂಯುಕ್ತ - ಕನ್ನಡದಲ್ಲಿ ಇದನ್ನೇ ಅಯ್ ಮತ್ತು ಅವ್ ಎಂದು ಬಳಸಬಹುದಾದ್ದರಿಂದ ಆ ಎರಡು ಸ್ವರಗಳ ಅಗತ್ಯವೂ ಇಲ್ಲ. ಆದ್ದರಿಂದ ಹತ್ತು ಮಹಾಪ್ರಾಣಗಳನ್ನೂ ಙಞಗಳನ್ನೂ ಐಔ ಸಂಯುಕ್ತ ಸ್ವರಗಳನ್ನೂ ತೆಗೆದರೆ ’ಅಚ್ಚಗನ್ನಡ’ ವರ್ಣಮಾಲೆಯ ಅಕ್ಷರಗಳ ಸಂಖ್ಯೆ ಮೂವತ್ಮೂರಕ್ಕಿಳಿಯುತ್ತದೆ, ಹೀಗೆ:

ಅಆಇಈಉಊಎಏಒಓ (=೧೦)
ಂ (ಅನುಸ್ವಾರ - ಅಂ) (=೧)
ಕಗ ಚಜ ಟಡಣ ತದನ ಪಬಮ (=೧೩)
ಯರಱಲವಸಹಳೞ (=೯)

ಒಟ್ಟು ೩೩ ಅಕ್ಷರಗಳು.

ತರ್ಕವೇನೋ ಸರಿಯೇ, ಆದರೆ ಕೇಶಿರಾಜನು ಈ ದಿಕ್ಕಿನಲ್ಲಿ ಮುಂದುವರೆಯದಿದ್ದುದಕ್ಕೆ ಕಾರಣವಿದೆ.  ಮೊದಲಿಗೆ ಸಂಸ್ಕೃತಪದಗಳೆಲ್ಲವೂ ಕನ್ನಡಕ್ಕೆ ತದ್ಭವವಾಗಿಯೇ ಬರುತ್ತವೆ/ಬರಬೇಕು ಎನ್ನುವ ಮಾತೇ ಪ್ರಾಯೋಗಿಕವಲ್ಲ. ರಿಸಿ ಪಸು ದುಕ್ಕ ಮುಂತಾಗಿ ಜನಬಳಕೆಯಲ್ಲಿ ಬಿದ್ದು ಸಹಜವಾಗಿ ಬದಲಾಗುವ ಪದಗಳಷ್ಟೇ ತದ್ಭವಗಳಾಗುತ್ತವೆಯೇ ಹೊರತು ಕನ್ನಡದಲ್ಲಿ ಬಳಸಲ್ಪಡುವ ಎಲ್ಲ ಸಂಸ್ಕೃತ ಪದಗಳೂ ಅಲ್ಲ. ಉದಾಹರಣೆಗೆ, ಶಂಕರ, ಅಘೋರ, ದರ್ಶನ ಇತ್ಯಾದಿ ಪದಗಳು ಜನಬಳಕೆಯದ್ದಲ್ಲ, ಆದರೆ ಗ್ರಾಂಥಿಕ ಕನ್ನಡದಲ್ಲೂ, ಅದನ್ನನುಸರಿಸುವ ಶಿಷ್ಟ ಕನ್ನಡದಲ್ಲೂ ಬಳಕೆಯಲ್ಲಿವೆ.  ಆದ್ದರಿಂದ ಮಹಾಪ್ರಾಣಯುಕ್ತ ಸಂಸ್ಕೃತ ಪದಗಳೂ ಕನ್ನಡದ ಅವಿಭಾಜ್ಯ ಅಂಗವೇ.  ಇವಿಲ್ಲದ ಕಾವ್ಯವನ್ನೂ ಶಾಸ್ತ್ರೀಯ ಸಾಹಿತ್ಯವನ್ನೂ ಊಹಿಸಿಕೊಳ್ಳಲೂ ಸಾಧ್ಯವಿಲ್ಲ.  ಎಂದಮೇಲೆ ಈ ಪದಗಳನ್ನು ಬಳಸುವ ಅಗತ್ಯಕ್ಕೆ ತಕ್ಕಂತೆ ಹಾಗೆಯೇ ಬರೆಯುವ ಸೌಲಭ್ಯ ಕನ್ನಡದಲ್ಲಿ ಉಳಿದಿರಬೇಕಾದದ್ದು ಸಹಜವೇ ತಾನೇ? ಹೀಗಾಗಿ ಕೇಶಿರಾಜನು ಮಹಾಪ್ರಾಣಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಳ್ಳಬೇಕಾಯಿತು. ಹಾಗೆಯೇ ಐಔ ಗಳನ್ನು ಅಯ್ ಮತ್ತು ಅವ್ ಗಳು ನಿಭಾಯಿಸಬಲ್ಲುವಾದರೂ ಉಚ್ಚಾರಣೆಯಲ್ಲಿ ಸೂಕ್ಷ್ಮ ವ್ಯತ್ಯಾಸವಿದ್ದೇ ಇದೆ. ಬಳಕೆಯಲ್ಲಿರುವ ಸಂಸ್ಕೃತ ಪದಗಳನ್ನು ವಿಕಾರವಿಲ್ಲದೇ ಹಾಗೇ ಬಳಸಬಹುದಾದರೆ ಐಔಗಳನ್ನು ಮಾತ್ರ ಏಕೆ ವಿಕಾರಮಾಡಬೇಕು? ಅದಕ್ಕೆ ಬಲಗೊಡುವ ಯಾವ ಪ್ರಯೋಗವೂ ಇಲ್ಲವಲ್ಲ! ಅದಕ್ಕೇ ಐಔಗಳೂ ಉಳಿದುವು.  ಹೀಗೆ ವಿಪರೀತಕ್ರಾಂತಿಯ ಗೊಡವೆಗೆ ಹೋಗದೇ ಕೇವಲ ಪ್ರಯೋಗಸಾಧುವಾದ ’ಶುದ್ಧಗೆ’ಯ ಪ್ರಸ್ತುತ ಪಡಿಸುವಲ್ಲಿಗೆ ಕೇಶಿರಾಜ ನಿಂತ.

ಇದಿಷ್ಟು ಕೇಶರಾಜನ ವಿಷಯವಾಯಿತು, ಆದರೆ ನಮ್ಮ ಆಧುನಿಕ ಕನ್ನಡ ವರ್ಣಮಾಲೆಯು, ಕೇಶಿರಾಜನು ಸೂಚಿಸಿದ ’ಶುದ್ಧಗೆ’ಯಿಂದ ಸಾಕಷ್ಟು ಬದಲಾವಣೆ ಹೊಂದಿದೆ, ಪರಿಷ್ಕೃತಗೊಂಡಿದೆ.  ಹಾಗಾದರೆ ಈ ಪುನಃಪರಿಷ್ಕರಣಗಳ ಅಗತ್ಯವಾದರೂ ಏಕೆ ಬಿದ್ದಿತೆಂಬುದನ್ನು ನೋಡೋಣ.  ಈ ಹಿಂದೆ ನೋಡಿದಂತೆ ಜನಬಳಕೆಗೆ ಬಿದ್ದ ಹಲವು ಸಂಸ್ಕೃತ ಪದಗಳು ಕನ್ನಡಕ್ಕೆ ತದ್ಭವವಾಗಿ ಬರುವುದು ನಿಜವಾದರೂ, ಅಷ್ಟುಮಾತ್ರಕ್ಕೆ ಮೂಲ ತತ್ಸಮದ ಬಳಕೆಯೇ ಇಲ್ಲವೆನ್ನುವಂತಿಲ್ಲ, ಈ ತದ್ಭವಗಳ ಜೊತೆಜೊತೆಗೇ ಅವುಗಳ ತತ್ಸಮರೂಪಗಳೂ ಬಳಕೆಯಲ್ಲಿದ್ದೇಯಿವೆ.  ಉದಾಹರಣೆಗೆ ರಿಸಿ ಪಸು ದುಕ್ಕ ಮುಂತಾದುವು ತದ್ಭವಗಳಾದರೂ, ಅವುಗಳ ತತ್ಸಮರೂಪಗಳಾದ ಋಷಿ, ಪಶು, ದುಃಖಗಳೂ ಅಷ್ಟೇ ವ್ಯಾಪಕವಾಗಿ ಬಳಕೆಯಲ್ಲಿವೆ. ಪದವೊಂದನ್ನು ತದ್ಭವವಾಗಿ ಬಳಸಬೇಕೋ ತತ್ಸಮವಾಗಿಯೋ ಎಂದು ನಿರ್ಧರಿಸುವಲ್ಲಿ ಬಳಕೆಯ ಸಂದರ್ಭ, ಇತರ ಕನ್ನಡ ಹಾಗೂ ಸಂಸ್ಕೃತ ಪದಗಳೊಡನೆ ಅವಕ್ಕಿರುವ ಸಂಧಿ/ಸಮಾಸ ಸೌಲಭ್ಯ, ಇದರಿಂದ ಬರವಣಿಗೆಗೆ ದಕ್ಕುವ ಬಾಗು-ಬಳುಕುಗಳು, ನಿಖರತೆ, ತೇಜಸ್ಸು, ಶ್ರೀಮಂತಿಕೆ ಮುಂತಾದುವು ಪ್ರಮುಖ ಪಾತ್ರವಹಿಸುತ್ತವೆ. ಅದೇನೇ ಇರಲಿ, ಅಗತ್ಯ ಬಿದ್ದಾಗ ಎರಡೂ ರೂಪಗಳನ್ನು ಕೈತಡೆಯದೇ ಬಳಸುವ ಸ್ವಾತಂತ್ರ್ಯವು ಬಳಸುವವನಿಗೆ ಇರಬೇಕಾಗುತ್ತದೆ.  ಆದ್ದರಿಂದ ಮಹಾಪ್ರಾಣಗಳನ್ನು ಉಳಿಸಿಕೊಂಡಂತೆಯೇ ರಿಸಿ ಪಸು ದುಕ್ಕ ಮುಂತಾದುಗಳ ತತ್ಸಮರೂಪಗಳಾದ ಋಷಿ, ಪಶು, ದುಃಖಗಳಲ್ಲಿರುವ ಋಶಷ ಮತ್ತು ವಿಸರ್ಗಗಳನ್ನೂ ಉಳಿಸಿಕೊಳ್ಳುವ ಅಗತ್ ಬೀಳುತ್ತದೆ.  ಆದ್ದರಿಂದಲೇ ಕನ್ನಡದ್ದಲ್ಲವೆಂದು ಕೇಶಿರಾಜನು ಓಡಿಸಿದ್ದ ಋಶಷ ಮತ್ತು ವಿಸರ್ಗಗಳೂ ಹಿಂದಿರುಗಿದುವು.

ಅಕ್ಷರಗಳು ಮರಳಿ ಬಂದದ್ದೇನೋ ಸರಿ, ಆದರೆ ಕೇಶಿರಾಜನು ಕನ್ನಡದ್ದೇ ಎಂದು ನಿರ್ದಿಷ್ಟವಾಗಿ ಉಳಿಸಿಕೊಂಡಿದ್ದ ಱೞ ವರ್ಣಗಳು ಮರೆಯಾದದ್ದೇಕೆ?  ಮಹಾಪ್ರಾಣ, ಋಶಷ ಮತ್ತು ವಿಸರ್ಗಗಳಿಗೆ ಅನ್ವಯಿಸುವ ತರ್ಕವೇ ಇಲ್ಲೂ ಅನ್ವಯವಾಗಬೇಕಿತ್ತಲ್ಲವೇ?  ಬಳಸುವ ಅಗತ್ಯ ಬಿದ್ದಾಗ ಅಕ್ಷರವಿಲ್ಲದಿದ್ದರೆ ಹೇಗೆ?  ಅದಕ್ಕೇ ಅಲ್ಲವೇ ಕೇಶಿರಾಜನು ಅವುಗಳನ್ನು ವರ್ಣಮಾಲೆಯಲ್ಲಿ ಉಳಿಸಿಕೊಂಡದ್ದು?  ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಱೞ ವರ್ಣಗಳು ಕೇಶಿರಾಜನ ಕಾಲಕ್ಕೇ ನಿಧಾನಕ್ಕೆ ರಳ ಅಕ್ಷರಗಳ ಜೊತೆ ಬೆರೆತುಹೋಗುತ್ತಿದ್ದು, ನಡುಗನ್ನಡದ ಕಾಲಕ್ಕಾಗಲೇ ಆ ವ್ಯತ್ಯಾಸ ಅಳಿದುಹೋಗಿತ್ತು; ವಿದ್ವಾಂಸರಲ್ಲೇ ಈ ಬಗೆಗಿನ ಗೊಂದಲಗಳಿತ್ತು. ಹನ್ನೆರಡನೇ ಶತಮಾನದ ಶರಣಸಾಹಿತ್ಯದಲ್ಲೂ ಱೞಗಳ ಬಳಕೆ ಕ್ವಚಿತ್ತಾಗಿ ಮಾತ್ರ ಕಂಡುಬರುತ್ತದೆ.  ಕೇಶಿರಾಜನಿಗಿಂತ ಅರ್ಧಶತಮಾನದಷ್ಟಾದರೂ ಹಿಂದಿನವನಾದ ಹರಿಹರನೇ - "ಕವಿತತಿ ವಿಚಾರಿಸಬೇಡದರಿಂ ಱೞಕುಳಕ್ಷಳಂಗಳನಿದರೊಳ್" ಎಂದು ತನ್ನ ಗಿರಿಜಾಕಲ್ಯಾಣದಲ್ಲಿ ಹೇಳಿದ್ದಾನೆ (ಕಾವ್ಯಸೌಷ್ಟವಕ್ಕೆ ಗಮನ ಕೊಡಬೇಕಾದ ಕವಿಗಳು ಅರ್ಥವಿಲ್ಲದ ಱೞಕುಳಕ್ಷಳಗಳ ಚರ್ಚೆಯ ಗೊಡವೆಗೆ ಹೋಗದಿರುವುದೇ ಲೇಸು ಎಂದು ಅವನ ಅಭಿಪ್ರಾಯ).  ಹರಿಹರನೂ ರಾಘವಾಂಕನೂ ಱೞಗಳನ್ನು ಹಠ ಹಿಡಿದಂತೆ ಬಳಸಿದರೂ ಆಮೇಲಾಮೇಲೆ ಬಂದ ಕುಮಾರವ್ಯಾಸನಲ್ಲಿ ಹಾಗೂ ದಾಸರ ಪದಗಳಲ್ಲಿ ಅವು ಸಂಪೂರ್ಣ ಮರೆಯಾಗಿರುವುದನ್ನು ನೋಡುತ್ತೇವೆ.  ಹೀಗೆ ದಿನಬಳಕೆಯಿಂದ ತನ್ನ ಕಾಲಕ್ಕಾಗಲೇ ಹೊರನಡೆದಿದ್ದ ಱೞ ಅಕ್ಷರಗಳಿಗೆ ವರ್ಣಮಾಲೆಯಲ್ಲಾದರೂ, ಶಾಸ್ತ್ರಕ್ಕಾದರೂ ಒಂದು ಆಶ್ರಯ ಕಲ್ಪಿಸುವ ಕೇಶಿರಾಜನ ಪ್ರಯತ್ನವು ಫಲಿಸದೇ ಅವು ಕ್ರಮೇಣ ಕಣ್ಮರೆಯೇ ಆದುವು.  ಹೀಗಾಗಿ ಕೇಶಿರಾಜನ ’ಅಚ್ಚಗನ್ನಡ’ ವರ್ಣಮಾಲೆಯಿಂದ, ಬದಲಾದ ಆಧುನಿಕ ಕನ್ನಡವರ್ಣಮಾಲೆಗೆ ಮತ್ತೊಂದು ತಾಳೆ ಪಟ್ಟಿ ಬರೆಯುವುದಾದರೆ ಅದು ಹೀಗಿರುತ್ತದೆ:

ಕೇಶಿರಾಜನ ’ಅಚ್ಚಗನ್ನಡ’ ವರ್ಣಮಾಲೆಯ ಅಕ್ಷರಗಳು - ೪೭
ಅದರಿಂದ ಕೈಬಿಟ್ಟ, ಇಂದಿಗೆ ಬಳಕೆಯಲ್ಲಿಲ್ಲದ ಅಕ್ಷರಗಳು - ೨ (ಱೞ)
ಮತ್ತೆ ಸೇರಿಸಿಕೊಂಡ ಸಂಸ್ಕೃತಮೂಲದ ಅಕ್ಷರಗಳು - ೪ (ಋಶಷ ಮತ್ತು ವಿಸರ್ಗ )
ಹೊಸಗನ್ನಡ ವರ್ಣಮಾಲೆಯ ಒಟ್ಟು ಅಕ್ಷರಗಳು - ೪೯

ಹೀಗೆ, ಸಧ್ಯ ಬಳಕೆಯಲ್ಲಿರುವ ಆಧುನಿಕ ಕನ್ನಡದ ವರ್ಣಮಾಲೆ:
ಅಆಇಈಉಊಋಎಏಐಒಓಔ (=೧೩)
ಂ (ಅನುಸ್ವಾರ - ಅಂ) ಃ (ವಿಸರ್ಗ - ಅಃ) (=೨)
ಕಖಗಘಙ ಚಛಜಝಞ ಟಠಡಢಣ ತಥದಧನ ಪಫಬಭಮ (=೨೫)
ಯರಲವಶಷಸಹಳ (=೯)

ಒಟ್ಟು ೪೯ ಅಕ್ಷರಗಳು.  ನಾವು ಓದುತ್ತಿದ್ದ ಕಾಲದಲ್ಲಿ ೠ ಅಕ್ಷರವನ್ನೂ ಕನ್ನಡ ವರ್ಣಮಾಲೆಯ ಭಾಗವಾಗಿಸಿ ಒಟ್ಟು ಐವತ್ತು ಅಕ್ಷರಗಳಾಗಿ ಹೇಳಿಕೊಡುತ್ತಿದ್ದರು.  ಈಗ ಆಧುನಿಕ ಕನ್ನಡ ವರ್ಣಮಾಲೆಯು ೠಕಾರದಿಂದ ಮುಕ್ತಿಪಡೆದಿದೆ.

ಇನ್ನು ಈ ಲೇಖನದಲ್ಲಿ ಹೇಳಿದ ಱೞ ಕುೞ ಕ್ಷಳಗಳ ವಿಷಯ ಮತ್ತೊಂದು ದೊಡ್ಡ ಕತೆ.  ಮತ್ತೆಂದಾದರೂ ಬರೆಯುತ್ತೇನೆ.