Friday, March 24, 2017

ಆರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ

 
ಪಂಪನ ಕರ್ಣನನ್ನು ನಾವು ಬಲ್ಲೆವು - ಕರ್ಣಾವಸಾನವಂತೂ ಬಹು ಪ್ರಸಿದ್ಧ.  ಆದರೆ ಪಂಪನ ದುರ್ಯೋಧನ?  ಆತನ ಕೊನೆಯ ಹಲವು ಗಂಟೆಗಳನ್ನು ಚಿತ್ರಿಸುವ ವೈಶಂಪಾಯನ ಸರೋವರದ ಪ್ರಸಂಗ, ತನ್ನ ಹಲವು ಅಂತರ್ಧ್ವನಿಗಳಿಂದಾಗಿ ಪಂಪಭಾರತದ ಬಹು ಶಕ್ತವಾದ ಚಿತ್ರಣಗಳಲ್ಲೊಂದಾಗಿದೆ.  ಅದನ್ನೊಂದಿಷ್ಟು ನೋಡೋಣ.

ಕುರುಕ್ಷೇತ್ರದ ಯುದ್ಧ ಕೊನೆಯ ಹಂತಕ್ಕೆ ಬಂದಿದೆ.  ತನ್ನವರೆಲ್ಲರನ್ನೂ ಕಳೆದುಕೊಂಡು ಒಂಟಿಯಾಗಿರುವ ದುರ್ಯೋಧನನೀಗ ಪಾಂಡವರನ್ನು ಇದಿರಿಸಬೇಕಿದೆ.  ಅಳಿದುಳಿದ ಶತ್ರುಗಳನ್ನು ಹುಡುಕಿ ಹುಡುಕಿ ಬೇಟೆಯಾಡುತ್ತಿರುವ ಪಾಂಡವರು ದುರ್ಯೋಧನನ್ನು ಕಣ್ಣಲ್ಲಿ ಕಣ್ಣಿಟ್ಟು ಹುಡುಕುತ್ತಿದ್ದಾರೆ.  ಇತ್ತ ಅಶ್ವತ್ಥಾಮ ಕೃಪ ಕೃತವರ್ಮರೂ ಯುದ್ಧರಂಗದಿಂದ ಮರೆಯಾದ ಸ್ವಾಮಿಯನ್ನು ಸೇರಲು ಆತನಿಗಾಗಿ ಹುಡುಕುತ್ತಿದ್ದಾರೆ.  ಕೊನೆಯದಾಗೊಮ್ಮೆ ಭೀಷ್ಮರನ್ನು ಕಂಡು ಹೋಗಬೇಕೆಂಬ ಉದ್ದೇಶದಿಂದ, ಭೀಕರವಾದ ರಣಭೂಮಿಯಲ್ಲಿ ಎಡವುತ್ತಾ ತೊಡರುತ್ತಾ ಸಂಜಯನೊಡನೆ ಭೀಷ್ಮನನ್ನು ಹುಡುಕಿಕೊಂಡು ಬಂದಿದ್ದಾನೆ ದುರ್ಯೋಧನ.  ಒಬ್ಬೊಂಟಿಯಾದ ದುರ್ಯೋಧನಿಗೆ ಪಾಂಡವರಿಂದ ಉಳಿಗಾಲವಿಲ್ಲವೆಂದರಿತ ಭೀಷ್ಮರು ಅವನನ್ನು ಸಂಧಿಗೊಡಂಬಡುವಂತೆ ಅನುನಯಿಸುತ್ತಾರೆ.  ಸಹಜವಾಗಿಯೇ ದುರ್ಯೋಧನನು ಅದಕ್ಕೊಪ್ಪದಿದ್ದಾಗ - ಕೊನೆಯ ಪಕ್ಷ ಎಲ್ಲೋ ಇವನನ್ನರಸುತ್ತಿರುವ ಅಶ್ವತ್ಥಾಮ ಕೃಪ ಕೃತವರ್ಮರು ಇವನನ್ನು ಕಂಡು ಸೇರುವವರೆಗಾದರೂ - ರಕ್ಷಿಸಬೇಕೆಂದು ಹವಣಿಸುತ್ತಾರೆ.  ಆದರೆ ಅಡಗಿರಲು ಅಭಿಮಾನಧನನಾದ ದುರ್ಯೋಧನನು ಒಪ್ಪುವನೇ?  ಅದಕ್ಕಾಗಿಯೇ "ಕಾಲಾಗ್ನಿರುದ್ರಂ ರಸಾತಳದೊಳಡಂಗಿರ್ಪಂತೆ" ವೈಶಂಪಾಯನ ಸರೋವರಲ್ಲಡಗಿದ್ದು, ನಾಳೆ ಬಲದೇವ, ಅಶ್ವತ್ಥಾಮ ಕೃಪ ಕೃತವರ್ಮರು ಬಂದೊದಗಿದೊಡನೆ ಶತ್ರುಗಳ ಮೇಲೆ ಬಿದ್ದು ಗೆಲ್ಲುವೆಯಂತೆ ಎಂದು ಅವನ ಮನವೊಲಿಸಿ ಜಲಮಂತ್ರವನ್ನುಪದೇಶಿಸಿ ಅವನನ್ನು ವೈಶಂಪಾಯನಕ್ಕೆ ಕಳಿಸುತ್ತಾರೆ.

ಅವನಲ್ಲಿಗೆ ಹೋಗುವ ದಾರಿಯಲ್ಲಿ ಯುದ್ಧಭೂಮಿಯನ್ನು ಹಾದು ಹೋಗಬೇಕಲ್ಲ - ಹೀಗೆ ಹೋಗುವಾಗ ದುರ್ಯೋಧನನ ಯುದ್ಧದ ಘೋರವನ್ನು ಅವನಿಗೇ ಕಾಣಿಸುತ್ತಾನೆ ಕವಿ:

ಕ್ರಂದತ್ಸ್ಯಂದನಜಾತನಿರ್ಗತಶಿಖಿಜ್ವಾಳಾಸಹಸ್ರಂಗಳಾ
ಟಂದೆತ್ತಂ ಕವಿದೞ್ವೆ ಬೇವ ಶವಸಂಘಾತಂಗಳಂ ಚಕ್ಕಮೊ|
ಕ್ಕೆಂದಾಗಳ್ ಕಡಿದುಗ್ರಭೂತನಿಕರಂ ಕೆಯ್ ಬೇಯೆ ಬಾಯ್ ಬೇಯೆ ತಿಂ
ಬಂದಂ ತನ್ನ ಮನಕ್ಕಗುರ್ವಿಸುವಿನಂ ದುರ್ಯೋಧನಂ ನೋಡಿದಂ

ಯುದ್ಧಭೂಮಿಯಲ್ಲಿ ಸುಟ್ಟುರಿಯುತ್ತಿರುವ ರಥಗಳಿಂದ ಹೊರಟ ಬೆಂಕಿ ತನ್ನ ಸಾವಿರ ಕೆನ್ನಾಲಗೆಗಳನ್ನು ಸುತ್ತೆಲ್ಲ ಹರಡಿರಲು ಭೀಕರ ರಣಪಿಶಾಚಿಗಳು ಆ ಬೆಂಕಿಯಲ್ಲಿ ಸಿಕ್ಕಿ ಬೇಯುತ್ತಿರುವ ಹೆಣಗಳ ರಾಶಿಯಿಂದ ಬೇಯಬೇಯುತ್ತಿರುವಂತೆಯೇ ಕೈಕಾಲುಗಳನ್ನು ಚಕ್ಕಮೊಕ್ಕೆಂದು ಕಿತ್ತು ತಿನ್ನುತ್ತಿರುವ ಭಯಾನಕವಾದ ದೃಶ್ಯವನ್ನು ದುರ್ಯೋಧನನು ಕಾಣುತ್ತಾನೆ.  ಅಷ್ಟೇ ಅಲ್ಲದೇ "ನೋಡಿ ಕನಲ್ವ ಕೆಂಡದ ಮೇಲೆ ಪೞೆಯ ಬೇವಿನೆಣ್ಣೆಯೊಳ್ ತೊಯ್ದಿಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ ಬಳ್ಳುವಿನ ಬಾಯೊಳಳುರ್ವ ಕೆಂಡಂಗಳೊಳ್ ಸುೞದು ಬೇವ ಪೆಣಂಗಳ ಕಂಪು ನಾಱುವುದರ್ಕೆ ಸೈರಿಸಲಾಱದೆ (ಇನ್ನೂ ಸುಟ್ಟುರಿಯುತ್ತಿರುವ ಹೆಣಗಳನ್ನು ನರಿಗಳು ತಮ್ಮ ಬಾಯಲ್ಲಿ ಕಚ್ಚಿಕೊಂಡಿದ್ದರೆ, ಹಳೆಯ ಬೇವಿನೆಣ್ಣೆಯಲ್ಲಿ ನೆನೆಸಿದ ಬೆಳ್ಳುಳ್ಳಿ ಸುಟ್ಟಂತೆ ನಾರುವ ಅದರ ವಾಸನೆಯನ್ನು ಸಹಿಸಲಾಗದೇ) ದಾಪುಗಾಲಿಡುತ್ತಾ ಆ ಯುದ್ಧಭೂಮಿಯನ್ನು ಬೇಗಬೇಗ ದಾಟಿ ದುರ್ಯೋಧನ ವೈಶಂಪಾಯನ ಸರೋವರಕ್ಕೆ ಬರುತ್ತಾನೆ.

ಆ ವೈಶಂಪಾಯನಸರೋವರವಾದರೂ ಹೇಗೆ ಕಾಣುತ್ತಿದೆ - ಪ್ರಳಯಕಾಲದ ಹೊಡೆತಕ್ಕೆ ಅಷ್ಟದಿಕ್ಕುಗಳ ಕೀಲುಗಳೇ ಕಳಚಿ ಆಕಾಶವೇ ಭೂಮಿಯ ಮೇಲೆ ಜರಿದು ಬಿದ್ದಿದೆಯೋ; ಆದಿವರಾಹನು ಸಮುದ್ರಮುದ್ರಿತಧರಾಮಂಡಳವನ್ನು ರಸಾತಳದಿಂದ ಮೇಲೆತ್ತಿದಾಗ ಆಕಾಶವೇ ಜಲಾವೃತವಾಗಿಬಿಟ್ಟಿತೋ (ಅಷ್ಟು ವಿಸ್ತಾರವಾಗಿ, ಕಣ್ಣು ಹರಿಯುವಷ್ಟು ದೂರಕ್ಕೂ ಗಗನವನ್ನು ಪ್ರತಿಫಲಿಸುತ್ತಿದ್ದ ಸರೋವರ)!  ಅಂಥಾ ವೈಶಂಪಾಯನ ಸರೋವರವನ್ನು ಕವಿ ವರ್ಣಿಸುವ ರೀತಿಯಿದು:

ಇದು ಪಾತಾಳಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾ
ಡಿದ ಕೂಪಂ ಪೆಱತಲ್ತಿದುಗ್ರಲಯಕಾಳಾಂಭೋಧರಚ್ಛಾಯೆ ತಾ
ನೆ ದಲೆಂಬಂತಿರೆ ಕಾಚಮೇಚಕಚಯಚ್ಛಾಯಾಂಬುವಿಂ ಗುಣ್ಪಿನಿಂ
ಪುದಿದಿರ್ದತ್ತು ಸರೋವರಂ ಬಕ ಬಳಾಕಾನೀಕ ರಾವಾಕುಳಂ

ಇದು ಪಾತಾಳಬಿಲಕ್ಕೆ ಬಾಗಿಲೋ, ಘೋರಾಂಧಕಾರವು ವಾಸಿಸಲಿಕ್ಕಾಗಿಯೇ ಮಾಡಿದ ಭಾವಿಯೋ, ಪ್ರಳಯಕಾಲದ ಭೀಕರ ಕಪ್ಪುಮೋಡಗಳ ನೆರಳೋ ಎಂಬಂತೆ ಕಡುಗಪ್ಪು-ನೀಲಿಯ ಗಾಜಿನಂತಿದ್ದ ನೀರಿಂದ ತುಂಬಿ, ಆಳವಾಗಿ, ಬಕಬಲಾಕಗಳ ಅರಚುವಿಕೆಯಿಂದ ಗಿಜಿಗುಟ್ಟಿಹೋಗಿತ್ತು ವೈಶಂಪಾಯನ ಸರೋವರ!

ಸರೋವರವೊಂದನ್ನು ಇಷ್ಟು ಗಾಢವಾಗಿ, ಅನಿಷ್ಟಕರವಾಗಿ ವರ್ಣಿಸಲು ಸಾಧ್ಯವೇ?  ಸಾಮಾನ್ಯವಾಗಿ ಸರೋವರವರ್ಣನೆಯೆಂದರೆ ಕವಿಗಳು ಅದರ ಸೌಂದರ್ಯವನ್ನು ವರ್ಣಿಸುತ್ತಾರೆ - ಅದರ ಅಂದಚಂದ, ಅದರ ನೀರು, ಅದರ ಬಿಳ್ಪು, ತೆಳ್ಪು, ತಂಪು, ಅದರಲ್ಲರಳಿದ ಹೂವುಗಳು, ಪಕ್ಷಿಸಂಕುಲ, ಸುತ್ತಲ ವನರಾಜಿ, ಹೀಗೆ, ಆ ಸರೋವರಗಳೂ ಆಳವಾಗಿ, ವಿಶಾಲವಾಗಿ, ಕಡುಸಂಜೆ ಸಮಯವಾದರೆ ನೀರೂ ಕಪ್ಪಾಗಿಯೇ ಇದ್ದೀತು.  ಆದರೂ ಕವಿಯ ವರ್ಣನೆಯಲ್ಲಿ ಅದು ಸರ್ವಾಂಗಸುಂದರವಾಗಿಯೇ ಹೊರಹೊಮ್ಮುತ್ತದೆ.  ಹಾಗೆಯೇ ಈ ವೈಶಂಪಾಯನಸರೋವರದಲ್ಲಿಯೂ ವಿಶಾಲತೆಯಿದೆ, ಆಳವಿದೆ, ತಂಪಿದೆ, ಬಕಬಲಾಕಾದಿ ಪಕ್ಷಿಗಳೂ ಇದೆ - ಸೌಂದರ್ಯವರ್ಣನೆಗೆ ಬೇಕಾದ ಅಂಶಗಳೆಲ್ಲವೂ ಇದೆ.  ಆದರೆ ಸೌಂದರ್ಯವನ್ನು ಕಾಣಲು ಬೇಕಿರುವ ಕಣ್ಣು ಮಾತ್ರ ಇಲ್ಲ - ದುರ್ಯೋಧನನಲ್ಲಿ.  ಅವನೀಗ ಯುದ್ಧದಲ್ಲಿ ಬಹುತೇಕ ಸೋತಿದ್ದಾನೆ, ಎಲ್ಲರನ್ನೂ ಕಳೆದುಕೊಂಡಿದ್ದಾನೆ, ಇವನಿಗಾಗಿಯೇ ಹುಡುಕುತ್ತಿರುವ ಪಾಂಡವರು ಯಾವ ಗಳಿಗೆಯಲ್ಲಾದರೂ ಬಂದೆರಗಬಹುದು.  ಆ ಭಯವನ್ನೂ ಮೀರಿದ ಭಯಂಕರವಾದ ಅಪಮಾನದ ಕೆಲಸವನ್ನೀಗ ಕೈಗೊಳ್ಳಲಿದ್ದಾನೆ ಈಗ, ಭೀಷ್ಮನ ಬಲವಂತಕ್ಕೆ ಕಟ್ಟುಬಿದ್ದು,  ಇಂತಿರುವಲ್ಲಿ ಸರೋವರದ ಸೌಂದರ್ಯವರ್ಣನೆಯನ್ನು ಮಾಡುವ ರಸಾಭಾಸಕ್ಕೆ ಕವಿ ಎಳಸಬಾರದು.  ಆದ್ದರಿಂದಲೇ ಸರೋವರದ ಸೌಂದರ್ಯಕ್ಕಿಂತ ಅದು ಆ ಕ್ಷಣಕ್ಕೆ ತೋರುತ್ತಿರುವ ಬೀಭತ್ಸತೆಯನ್ನೇ ಕವಿ ಕಟ್ಟಿಕೊಡುತ್ತಾನೆ - ಅದಕ್ಕೇ ಗಗನವೇ ಜರಿದು ಬಿದ್ದಿದೆಯೋ, ಸಮುದ್ರವೇ ಆಕಾಶವನ್ನು ತುಂಬಿದೆಯೋ ಎಂಬಂತಿರುವ ವಿಸ್ತಾರವಾದ ಜಲರಾಶಿಯು ಪಾತಾಳದ ಬಾಗಿಲಿನಂತೆ, ಘೋರಾಂಧಕಾರಕ್ಕೆ ಮಾಡಿದ ಕೂಪದಂತೆ, ಪ್ರಳಯಕಾಲದ ಮೋಡಗಳ ಕರಿನೆರಳಂತೆ ಕಾಣುತ್ತದೆ.  ಬರೀ ಕಾಣುತ್ತದೆಯೇ?  ಕೇಳುತ್ತದೆ - ಕಿವಿಗಡಚಿಕ್ಕುತ್ತದೆ ಕೂಡ - ಆ ಸರೋವರವನ್ನು ತುಂಬಿದ್ದ ಜಲಪಕ್ಷಿಗಳ ಅರಚುವಿಕೆ - ಅದು ಕೇವಲ ಕಲರವಲ್ಲ, ರೌರವ!  ಅದಕ್ಕೆ ಕವಿ ಬಳಸಿಕೊಳ್ಳುವ ಪದವೂ ಅದೇ ಛಾಯೆಯನ್ನು ಕೊಡುವಂತಿದೆ - "ರಾವಾಕುಳಂ".  ರವ ಎಂದರೆ ಶಬ್ದ.  ಆಕುಲ/ಳ ಎಂದರೆ ತುಂಬಿಹೋದ, ಕೆದರಿಹೋದ, ಕದಡಿಹೋದ, ಕ್ಷೋಭೆಗೊಂಡ - ಆ ಸರೋವರ ಆ ಸಂಜೆ, ಪಕ್ಷಿಗಳ ಕೂಗಿನಿಂದ ಕ್ಷೋಭೆಗೊಂಡಿದೆ, ಕದಡಿಹೋಗಿದೆ.

ಆ ಪಕ್ಷಿಗಳಾದರೂ ಏಕೆ ಕೂಗುತ್ತಿವೆ, ಏನೆಂದು ಕೂಗುತ್ತಿವೆ?  ಈ ದುರ್ಯೋಧನನೀಗ ಪಾಂಡವರ, ಅದರಲ್ಲೂ ಭೀಮಾರ್ಜುನರ ಕೋಪಕ್ಕೆ ಪಕ್ಕಾಗಿದ್ದಾನೆ.  ಅವರ ಕ್ರೋಧಾಗ್ನಿ ಇವನನ್ನು ಎಲ್ಲಿದ್ದರೂ ಬಿಡದು; ಇವನಿಲ್ಲಿ ಬಂದರೆ, ಇವನೊಡನೆ ನಮ್ಮನ್ನೂ ಸುಟ್ಟು ಬೂದಿಮಾಡದೇ ಬಿಡದು.  ಆದ್ದರಿಂದ "ಇಲ್ಲಿ ಕದಡಬೇಡ, ಬರಬೇಡ ಬರಬೇಡ" ಎಂದು ದುರ್ಯೋಧನನಿಗೆ ಎಚ್ಚರಿಕೆಕೊಡುತ್ತಾ ಅಲ್ಲಿನ ಪಕ್ಷಿಗಳೆಲ್ಲಾ ಒಗ್ಗೊರಲಿನಿಂದ ಕೂಗುತ್ತಿದ್ದುವಂತೆ:

ಅದಟಿನ ವಿಕ್ರಮಾರ್ಜುನನ ಸಾಹಸ ಭೀಮನ ಕೋಪ ಪಾವಕಂ
ಪುದಿದಳುರ್ದೞ್ವಿ ಕೊಳ್ಳದಿರದಿಲ್ಲಿಯುಮೆಮ್ಮುಮನಿಲ್ಲಿ ಬಾೞ್ವರಂ|
ಕದಡದಿರಿತ್ತ ಬಾರದಿರು ಸಾರದಿರೆಂಬವೊಲಾದುದೆತ್ತಮು
ನ್ಮದಕಳಹಂಸಕೋಕನಿಕರದ್ವನಿ ರುಂದ್ರಫಣೀಂದ್ರಕೇತುವಂ

ಇಲ್ಲಿ ಕವಿ, ದುರ್ಯೋಧನನನ್ನು "ರುಂದ್ರಫಣೀಂದ್ರಕೇತು" ಎಂದು ನಿರ್ದೇಶಿಸುತ್ತಾನೆ.  ದುರ್ಯೋಧನನು ಫಣಿಕೇತನ (ಹಾವಿನ ಬಾವುಟವುಳ್ಳವನು) ಹೌದು.  ಆದರೆ ಕವಿ, ರುಂದ್ರಫಣೀಂದ್ರಕೇತು (ರುಂದ್ರ = ವಿಶಾಲವಾದ, ಅಗಲವಾದ, ಹರಡಿದ) ಎಂದು ನಿರ್ದೇಶಿಸಿರುವುದು ವಿಶಿಷ್ಟವಾಗಿದೆ.  ಈ "ರುಂದ್ರ" ವಿಶೇಷಣವು "ರುಂದ್ರಫಣೀಂದ್ರ"ನಾಗಿ ವಿಶಾಲವಾಗಿ ಹೆಡೆಬಿಚ್ಚಿದ ಹಾವನ್ನೂ ಸೂಚಿಸಬಹುದು, "ರುಂದ್ರಕೇತನ"ವಾಗಿ ಹರಡಿದ ಬಾವುಟವನ್ನೂ ಸೂಚಿಸಬಹುದು ಅಥವಾ "ರುಂದ್ರ ಫಣೀಂದ್ರಕೇತನ"ನಾಗಿ ಸ್ವತಃ ದುರ್ಯೋಧನನನ್ನೇ ಸೂಚಿಸಬಹುದು.  ಇದಾವುದರಿಂದಲೂ (ಅಥವಾ ಇದೆಲ್ಲದರಿಂದಲೂ), ಅದೀಗ ಕ್ರೋಧದಿಂದ ಹೆಡೆಯಗಲಿಸಿದ ಸರ್ಪದಂತೆ ಕೆರಳಿದ, ಕೆರಳಿ ಅರಳಿದ ದುರ್ಯೋಧನನ ಇರವನ್ನು "ರುಂದ್ರಫಣೀಂದ್ರಕೇತು" ಎಂಬ ಒಂದೇ ಮಾತಿನಲ್ಲಿ ಸೂಚಿಸಿಬಿಡುತ್ತಾನೆ ಕವಿ.  ಸರೋವರದ ಪಕ್ಷಿಗಳು ಕಂಡು ಬೆದರಿ, ಬೇಡಬೇಡವೆಂದು ಚೀರಲಿಕ್ಕೆ ಇದಕ್ಕಿಂತ ಕಾರಣ ಬೇಕೇ?  ಹೀಗೆ, ಸರೋವರವನ್ನು ಕಂಡಾಗ ದುರ್ಯೋಧನನ ಮನದಲ್ಲುಂಟಾದ ಭಾವದ ಪ್ರತಿಫಲನವನ್ನು, ಸ್ವತಃ ದುರ್ಯೋಧನನನ್ನು ಕಂಡು ಪಕ್ಷಿಗಳಲ್ಲುಂಟಾದ ಭಾವದಲ್ಲಿ ಕಟ್ಟಿಕೊಡುತ್ತಾನೆ.

ಇವೆಲ್ಲ ಕೇವಲ ಅಲಂಕಾರಗಳೆಂದೂ ಕವಿಚಮತ್ಕಾರಗಳೆಂದೂ ಓದಿ ಬಿಡುವಂಥದ್ದಲ್ಲ.  ಶಕ್ತಕವಿಯೊಬ್ಬ ಕೇವಲ ಚಪಲಕ್ಕಾಗಿ ಚಮತ್ಕಾರ ಪ್ರದರ್ಶಿಸಲಾರ.  ದುರ್ಯೋಧನನ ಆಗಿನ ಮನಸ್ಥಿತಿಯ ಪ್ರತಿಬಿಂಬವಾಗಿ ಚಿತ್ರಿತವಾಗುವ ವೈಶಂಪಾಯನ, ಇತರ ಸರೋವರ, ನದಿ, ಬೆಟ್ಟಗುಡ್ಡಗಳಂತಲ್ಲದೇ ಸ್ವತಃ ಒಂದು ಪಾತ್ರವಾಗಿಬಿಡುತ್ತದೆ.  ಭೀಷ್ಮರಿಂದ ಬೀಳ್ಕೊಂಡು ಉದ್ವಿಗ್ನಮನನಾಗಿ ಹೊರಡುವ ದುರ್ಯೋಧನನು ರಣಭೂಮಿಯಲ್ಲಿ ಕಂಡ ಬೀಭತ್ಸಗಳನ್ನು ಈಗಾಗಲೇ ನೋಡಿದೆವು.  ಅವೆಲ್ಲವೂ ಅವನ ಮನಸ್ಸಿನಲ್ಲಿ ಭಯಂಕರ ತುಮುಲವನ್ನೂ, ಭಯವನ್ನೂ, ಅಸಹ್ಯವನ್ನೂ, ಖಿನ್ನತೆಯನ್ನೂ ಹುಟ್ಟಿಸಿವೆ.  ಅಭಿಮಾನಧನನಾದ ದುರ್ಯೋಧನನು, ತನಗಿಷ್ಟವಿಲ್ಲದಿದ್ದರೂ ಭೀಷ್ಮನ ಬಲವಂತಕ್ಕೆ ಕಟ್ಟುಬಿದ್ದು ತನ್ನ ವ್ಯಕ್ತಿತ್ವಕ್ಕೆ ಒಂದಿನಿತೂ ಒಗ್ಗದ ಕಾರ್ಯ ಮಾಡಲು ಇಲ್ಲಿಗೆ ಬಂದಿದ್ದಾನೆ.  ಶತ್ರುಗಳಿಗೆ ಹೆದರಿ ಹೇಡಿಯಂತೆ ನೀರಿನಲ್ಲಿ ಅವಿತುಕೊಳ್ಳುವುದು ದುರ್ಯೋಧನನಂಥಾ ವೀರನಿಗೆ ಸಾವಿಗಿಂತಲೂ ಕೆಟ್ಟದ್ದು, ಅದು ಆತನ ವ್ಯಕ್ತಿತ್ವ ಕಾಣುತ್ತಿರುವ ಅಧಃಪಾತ - ಆದ್ದರಿಂದಲೇ ತಾನೀಗ ಹೊಗಲಿರುವ ಸರೋವರ, ತನ್ನ ವ್ಯಕ್ತಿತ್ವವನ್ನೂ ಕೀರ್ತಿಯಶಸ್ಸುಗಳನ್ನೂ ಪಾತಾಳಕ್ಕೆ ಕೊಂಡೊಯ್ಯುವ ಬಾಗಿಲಿನಂತೆ ತೋರುತ್ತದೆ; ಸೂರ್ಯನಂತೆ ಬೆಳಗಿದ್ದ ತನ್ನ ಕೀರ್ತಿ ಅಡಗಲಿರುವ ಘೋರಾಂಧಕಾರದ ಕೂಪದಂತೆ ಕಾಣುತ್ತದೆ; ಇದಾದಮೇಲೆ ಘೋರ ಅಪಮಾನ ಅಪಕೀರ್ತಿಗಳಲ್ಲದೇ ಇನ್ನೇನುಳಿಯಿತು ದುರ್ಯೋಧನನಿಗೆ?  ಅದು ಆತನ ಪಾಲಿಗೆ ಪ್ರಳಯವೇ - ಮಹಾದುರಂತ!  ಆದ್ದರಿಂದಲೇ ಈ ಸರೋವರ ಪ್ರಳಯಮೇಘದ ಕರಿನೆರಳಂತೆ ಕಂಡರೆ ಆಶ್ಚರ್ಯವೇನು?  ಇನ್ನು ದುರ್ಯೋಧನನ ಅಪಯಶಸ್ಸನ್ನೇ ಕಿವಿಗಡಚಿಕ್ಕುತ್ತಿರುವ ಜಲಪಕ್ಷಿಗಳ ಕೂಗನ್ನು ಮೇಲೇ ವರ್ಣಿಸಿದೆ. 
ಕೊನೆಗೆ, ಗಾಯಗಳಿಂದ ರಕ್ತವೊಸರುತ್ತಿದ್ದ ಮೈಯನ್ನು ಒರೆಸಿ ತೊಳೆದು, ಜಲಾಭಿಮಂತ್ರಣಪೂರ್ವಕವಾಗಿ ಸರೋವರದಲ್ಲಿಳಿಯುವ ದುರ್ಯೋಧನನನ್ನು ಪಂಪ ಬಣ್ಣಿಸುವ ಕವಿ, "ತನ್ನ ತೇಜದಿಂದ ಸಮಸ್ತಭೂವಲಯವನ್ನು ಬೆಳಗಿ, ದೈತ್ಯರೊಡನೆ ಹೋರಾಡಿ ಕಳೆಗುಂದಿ ಬಳಲಿ ಕೊನೆಗೆ ಪಡುಗಡಲಲ್ಲಿ ಮುಳುಗುವ ಸೂರ್ಯನಂತೆ ಫಣಿರಾಜಕೇತನನು ಕೊಳದಲ್ಲಿ ಮುಳುಗಿದನು - ವಿಧಿ ಕಟ್ಟಿಟ್ಟದ್ದನ್ನು ಕಳೆಯುವವರಾರು!" ಎಂದು ನಿಟ್ಟುಸಿರಿಡುತ್ತಾನೆ - "ಕುರುಕುಲಾರ್ಕನುಮ್ ಅರ್ಕನುಮ್ ಅಸ್ತಮನೆಯ್ದಿದರ್" ಎಂದು ರನ್ನನು ಕಟ್ಟಿಕೊಡುವ ದುರ್ಯೋಧನನ ಅವಸಾನದ ಚಿತ್ರಣವನ್ನು ಪಂಪ ಈಗಲೇ - ದುರ್ಯೋಧನನ ವೈಶಂಪಾಯನಪ್ರವೇಶದ ಸಂದರ್ಭದಲ್ಲೇ ಕೊಟ್ಟುಬಿಡುವುದು ವಿಶಿಷ್ಟವಾಗಿದೆ.  ದುರ್ಯೋಧನನ ತೇಜಸ್ಸಿನ ಅವಸಾನಕ್ಕೆ ಇದೇ ಶ್ರದ್ಧಾಂಜಲಿಯಂತೆ ಕೇಳುತ್ತದೆ.

ಕಲ್ಪನೆಯಲ್ಲೂ ಪ್ರಸ್ತುತಿಯಲ್ಲೂ ಕೊನೆಗೆ ಭಾಷೆಯಲ್ಲೂ ಅನೇಕ ಬಾರಿ ಪಂಪನನ್ನು ಪಡಿನೆಳಲಂತೆ ಅನುಸರಿಸುವ ರನ್ನನು ಇದೇ ವೈಶಂಪಾಯನಪ್ರಸಂಗವನ್ನು ವರ್ಣಿಸುವ ಬಗೆ ಬೇರೆ.  ಪಂಪನಲ್ಲಿ ದುರಂತವೆಂಬಂತೆ ಚಿತ್ರಿತವಾಗಿರುವ ಈ ಭಾಗವನ್ನು ರನ್ನನು ಅದೂ ಸುಯೋಧನನ ವೈಭವವೋ ಎಂಬಂತೆಯೇ ಚಿತ್ರಿಸುತ್ತಾನೆ - "ನರಲೋಕವನ್ನು ಅನುಭವಿಸಿ, ಸ್ವರ್ಗಸುಖವನ್ನೂ ವೈಭವದಿಂದ ಅನುಭವಿಸಿ ಅನಂತರ ನಾಗಲೋಕವನ್ನು ಹೊಗುವಂತೆ ಕುರುಪತಿಯು ವೈಶಂಪಾಯನವನ್ನು ಹೊಕ್ಕನು (ನರಲೋಕಮನುಪಭೋಗಿಸಿ ಸುರಲೋಕದ ಸುಖಮನಾತ್ಮವಿಭವದೆ ತಳೆದಾ ಕುರುಪತಿ ವೈಶಂಪಾಯನ ಸರಮಂ ಪುಗುವಂತೆ ನಾಗಲೋಕವ ಪೊಕ್ಕಂ) ಎನ್ನುತ್ತಾನೆ.  ಮುಂದೆ ದುರ್ಯೋಧನನು ಹತನಾದಾಗಲೂ "ಕುರುಕುಲಾರ್ಕನುಮ್ ಅರ್ಕನುಮ್ ಅಸ್ತಮನೆಯ್ದಿದರ್" ಎಂದು ಭಾವಪೂರ್ಣವಾಗಿ ಬೀಳ್ಕೊಡುತ್ತಾನೆ.

ಆದರೆ ಈ ವೈಭವದ ಪ್ರಭಾವಳಿಯನ್ನೇನೂ ಹಚ್ಚದ ಪಂಪನಿಗೆ ದುರ್ಯೋಧನನು ವೈಶಂಪಾಯನದಲ್ಲಿಳಿಯುವ ಈ ಪ್ರಸಂಗ, ದುರ್ಯೋಧನನ ದುರಂತದಂತೆ, ಸ್ವತಃ ಅದೇ ಆತನ ಅವಸಾನದಂತೆ ಕಾಣುತ್ತದೆ - ಮಾನಧನನಿಗೆ ಅಪಮಾನಕ್ಕಿಂತ, ಅಪಕೀರ್ತಿ ಅಪಯಶಗಳಿಗಿಂತ ಬೇರೆ ಸಾವುಂಟೇ?  ಆದ್ದರಿಂದ ಈ ಪ್ರಸಂಗವನ್ನೇ ಆತನ ಅವಸಾನವೆಂಬಂತೆ ಚಿತ್ರಿಸುವ ಪಂಪ, ಮುಂದೆ ಆತನು ನಿಜವಾಗಿ ಯುದ್ಧದಲ್ಲಿ ಸತ್ತುದನ್ನು ಚಿತ್ರಿಸುವ ಗೋಜಿಗೇ ಹೋಗುವುದಿಲ್ಲ - ಕರ್ಣನ ಅವಸಾನವನ್ನು ಚಿತ್ರಿಸುವ ಅಥವಾ ಮುಂದೆ ರನ್ನನು ದುರ್ಯೋಧನನ ಅವಸಾನವನ್ನೇ ಚಿತ್ರಿಸುವ ವೈಭವ ಇಲ್ಲಿ ಕಾಣುವುದೇ ಇಲ್ಲ! ಅದು ಏನೇನೂ ಮುಖ್ಯವಲ್ಲವಂತೆ "ಎಮಗಂತ್ಯಕಾಲಮೆಂದು ದುರ್ಯೋಧನಂ ಪ್ರಾಣತ್ಯಾಗಂಗೈದಂ" ಎಂದು ಅರ್ಧವಾಕ್ಯದಲ್ಲಿ ಮುಗಿಸಿಬಿಡುತ್ತಾನೆ!  ನಿಜವೇ.  ವೈಶಂಪಾಯನವನ್ನು ಹೊಕ್ಕು ಅಡಗಿ ಕುಳಿತಾಗಲೇ ದುರ್ಯೋಧನನು ಸತ್ತಿದ್ದಾಯಿತು.  ಆಮೇಲೆ ಉಳಿದದ್ದು, ಊರುಭಂಗ ಮಕುಟಭಂಗಗಳ ಹೀನಾಯವನ್ನು ಅನುಭವಿಸಿದ್ದು, ಆಮೇಲೆ ಸತ್ತು ಬಿದ್ದದ್ದು ಕೇವಲ ಉಸಿರಾಡುತ್ತಿದ್ದ ಆತನ ಶರೀರವಷ್ಟೇ.

ಹೀಗಾಗಿ, ದುರ್ಯೋಧನನ ಉಗ್ರತೇಜದ ಅಂತಿಮ ಕ್ಷಣಗಳನ್ನು - ನಿಜಾರ್ಥದಲ್ಲಿ ಆತನ ಅವಸಾನವನ್ನು - ಈ ವೈಶಂಪಾಯನ ಪ್ರಸಂಗ ಬಹು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

ಬೆಳಗಿ ಸಮಸ್ತಭೂವಳಯಮಂ ನಿಜ ತೇಜದಿನಾಂತ ದೈತ್ಯರಂ
ತಳವೆಳಗಾಗೆ ಕಾದಿ ಚಳಿತೆಯ್ದಿ ಬೞಲ್ದಪರಾಂಬುರಾಶಿಯೊಳ್|
ಮುೞುಗುವ ತೀವ್ರದೀಧಿತಿವೊಲಾ ಕೊಳದೊಳ್ ಫಣಿರಾಜಕೇತನಂ
ಮುೞುಗಿದನಾರ್ಗಮೇಂ ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ

(ಚಿತ್ರಕೃಪೆ: ಅಂತರ್ಜಾಲ)