Tuesday, September 15, 2020

ಹಿಂದೀ ದಿವಸವೂ ಕನ್ನಡಪ್ರಜ್ಞೆಯೂ


सभी हिन्दी बोलने वाले साथियों को "राष्ट्रीय हिन्दी दिवस" की बधाई | इस हिन्दी दिवस जो है, भारत के किसी और श्रीमन्त, पुराने और वैज्ञनिक भाषाओं को भी नही मिला हुवा एक पुरस्कार है!  इस के लिये आप सभी को फिर एक बार बधाई | हम लोग 'सौत' के हैं (जो भी भारत का एक हिस्सा है लेकिन जिस का मातृभाषा हिन्दी नहीं है), हमारे हिन्दी गलत हो सकती है; अगर गलत है तो माफ कीजियेगा (क्यों कि "कन्नड् गोत्तिल्ला" जैसे अनाडीपन हमारे लिये नामुमकिन है - of course with due respects to all those friends who are linguistically sensible and really courteous to others)

(ಹಿಂದೀ ಮಾತಾಡುವ ಮಿತ್ರರಿಗೆಲ್ಲ "ರಾಷ್ಟ್ರೀಯ ಹಿಂದೀ ದಿವಸ"ದ ಅಭಿನಂದನೆಗಳು.  ಈ ಹಿಂದೀ ದಿವಸ ಏನಿದೆ, ಇದು ಭಾರತದ ಬೇರಾವುದೇ ಶ್ರೀಮಂತ, ಹಳೆಯ, ವೈಜ್ಞಾನಿಕ ಭಾಷೆಗೂ ಸಂದಿರದ ಪುರಸ್ಕಾರ.  ಅದಕ್ಕಾಗಿ ನಿಮಗೆಲ್ಲ ಮತ್ತೊಮ್ಮೆ ಅಭಿನಂದನೆಗಳು.  ನಾವು 'ಸೌತ್' ಜನ (ಅದೂ ಭಾರತದ್ದೇ ಒಂದು ಭಾಗ, ಆದರೆ ನಮ್ಮ ಮಾತೃಭಾಷೆ ಮಾತ್ರ ಹಿಂದಿ ಅಲ್ಲ), ಆದ್ದರಿಂದ ನಮ್ಮ ಹಿಂದೀ ತಪ್ಪಾಗಿರಲು ಸಾಧ್ಯ; ಹಾಗೊಂದುವೇಳೆ ತಪ್ಪಿದ್ದರೆ ಕ್ಷಮೆಯಿರಲಿ (ಏಕೆಂದರೆ "ಕನ್ನಡ್ ಗೊತ್ತಿಲ್ಲ" ಎನ್ನುವಂತಹ ಒರಟು ನಡುವಳಿಕೆ ನಮಗೆ ಸಾಧ್ಯವಿಲ್ಲ - ಇನ್ನೊಬ್ಬರ ಭಾಷಾಭಾವನೆಗಳನ್ನು ಮನ್ನಿಸಿ ನಿಜಕ್ಕೂ ಸೌಜನ್ಯದಿಂದ ವ್ಯವಹರಿಸುವ ಅನೇಕ ಮಿತ್ರರಿದ್ದಾರೆ, ಅವರನ್ನು ಹೊರತುಪಡಿಸಿ).

ಇಷ್ಟು ಹೇಳಿದಮೇಲೆ, ಇಡೀ ದೇಶವೇ ಏಕೆ "ಹಿಂದೀ ದಿವಸ್" ಆಚರಿಸಬೇಕೋ ನನಗೆ ತಿಳಿಯುತ್ತಿಲ್ಲ, ಅದರಲ್ಲೂ ಕನ್ನಡ ದಿವಸ್, ತಮಿಳ್ ದಿವಸ್, ಒರಿಯಾ ದಿವಸ್, ಕಾಶ್ಮೀರಿ ದಿವಸ್ ಇವನ್ನೆಲ್ಲಾ ಯಾರೂ ಆಚರಿಸದಿರುವಾಗ.  "ಹಿಂದೀ ರಾಷ್ಟ್ರಭಾಷೆ" ಎನ್ನುವ ನೆಪವನ್ನು ನನಗೆ ಹೇಳಬೇಡಿ.  ಉತ್ತರದ ರಾಜಕಾರಣಿಗಳು ಮತ್ತು ದಕ್ಷಿಣದ ಅವರ ಹಿಂಬಾಲಕರು ದಶಕಗಳಿಂದ ಹೇಳಿಕೊಂಡು ಬಂದಿರುವ ಸುಳ್ಳು ಇದು.  ಒಂದು ಮಾತಿದೆ - ಒಂದು ಸುಳ್ಳನ್ನು ನೂರು ಸಲ ಹೇಳಿದರೆ ಅದೇ ಸತ್ಯವಾಗಿಬಿಡುತ್ತದೆ.  ಆದರೆ ಅದು ಸುಳ್ಳು ಎಂಬ ಮಾತಂತೂ ಯಾವತ್ತಿದ್ದರೂ ಸತ್ಯವೇ.  ಶುರುವಾತಿಗೆ, ನಮ್ಮ ರಾಷ್ಟ್ರೀಯ ವಸ್ತುಗಳನ್ನು ವಿವರಿಸುವ ಭಾರತಸರ್ಕಾರದ ಒಂದು ವೆಬ್ ಸೈಟಿದೆ, ಅದನ್ನೊಮ್ಮೆ ನೋಡೋಣ:

https://www.india.gov.in/india-glance/national-symbols

ಇಲ್ಲಿ ರಾಷ್ಟ್ರಧ್ವಜವಿದೆ, ರಾಷ್ಟ್ರಗೀತೆಯಿದೆ, ರಾಷ್ಟ್ರಗಾನವಿದೆ, ರಾಷ್ಟ್ರಲಾಂಛನವಿದೆ, ರಾಷ್ಟ್ರಪಕ್ಷಿಯಿದೆ, ರಾಷ್ಟ್ರಪ್ರಾಣಿಯಿದೆ, ರಾಷ್ಟ್ರಪುಷ್ಪವಿದೆ - ಕೊನೆಗೆ ರಾಷ್ಟ್ರವೃಕ್ಷ, ರಾಷ್ಟ್ರಪಂಚಾಂಗ ಮತ್ತೆ ರಾಷ್ಟ್ರನಾಣ್ಯವೂ ಇದೆ, ರಾಷ್ಟ್ರಭಾಷೆಯ ಮಾತೇ ಇಲ್ಲ!

ಹೋಗಲಿ, 'ರಾಷ್ಟ್ರಭಾಷೆ' ಬಗೆಗೆ ನಮ್ಮ ಸಂವಿಧಾನವಾದರೂ ಏನಾದರೂ ಹೇಳುತ್ತದೆಯೋ? - ಏನಿಲ್ಲ, ಏನೇನೂ ಇಲ್ಲ.  ಭಾರತಸಂವಿಧಾನದ ವಿಧಿ 343-347, ಅಧಿಕೃತಭಾಷೆಗಳ ಕಾಯ್ದೆ 1963 ಮತ್ತು ಅಧಿಕೃತಭಾಷಾನಿಯಮ 1976 ಇವೆಲ್ಲವನ್ನೂ ಒಟ್ಟಿಗೆ ಓದಿದಾಗ ತಿಳಿದುಬರುವುದೆಂದರೆ, ಹಿಂದಿಯು ಕೇಂದ್ರದ ಅಧಿಕೃತಭಾಷೆ (ರಾಷ್ಟ್ರಭಾಷೆಯಲ್ಲ, ಅಧಿಕೃತಭಾಷೆ), ಅದೂ ಕೇವಲ ಕೇಂದ್ರ ಮತ್ತು ಹಿಂದೀ ಮಾತಾಡುವ ರಾಜ್ಯಗಳ ನಡುವಣ ವ್ಯವಹಾರಕ್ಕೆ ಸೀಮಿತವಾದದ್ದು.  ಉಳಿದ ರಾಜ್ಯಗಳೊಡನಿನ ವ್ಯವಹಾರಕ್ಕೆ ಇಂಗ್ಲಿಷೇ (ಹಿಂದಿಯೊಡನೆ, ಇರಲಿ).  348ನೇ ವಿಧಿ ಇನ್ನೂ ಸ್ಪಷ್ಟವಾಗಿ ನ್ಯಾಯಾಲಯಗಳ ವ್ಯವಹಾರ, ಪಾರ್ಲಿಮೆಂಟ್ ಹೊರಡಿಸುವ ಕಾಯ್ದೆ ಕಾನೂನುಗಳು ಇಂಗ್ಲಿಷಿನಲ್ಲಿರಬೇಕೆಂದು ತಿಳಿಸುತ್ತದೆ.  ಅಷ್ಟೇ ಅಲ್ಲ, ಅಧಿಕೃತಭಾಷೆಗಾಗಿ ನಿಯಮಿಸಲಾಗಿರುವ ಸಂಸದೀಯಸಮಿತಿಯು "ಹಿಂದೀ ಮಾತಾಡದ ಪ್ರಾಂತ್ಯಗಳಲ್ಲಿರುವ ಜನರ ನ್ಯಾಯಸಮ್ಮತ ಬೇಡಿಕೆಗಳನ್ನೂ ಹಿತಾಸಕ್ತಿಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕು" ಎಂದು ವಿಧಿ 444(3) ವಿಧಿಸುತ್ತದೆ.

ತಮಾಷೆಯೆಂದರೆ, 2010ರಲ್ಲಿ ಗುಜರಾತ್ ಉಚ್ಚನ್ಯಾಯಾಲಯದ ಮುಂದೆ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಂತು (Sureshbhai vs Union) - ಹಿಂದೀ ರಾಷ್ಟ್ರಭಾಷೆಯಾದ್ದರಿಂದ, ಮಾರಾಟವಾಗುವ ಸರಕಿನ ವಿವರಗಳನ್ನು ಹಿಂದಿಯಲ್ಲೇ ಮುದ್ರಿಸಬೇಕೆಂಬ ಆದೇಶ ಕೋರಿದ ಅರ್ಜಿ ಅದು.  ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಹೀಗೆ ಸ್ಪಷ್ಟಪಡಿಸಿತು - "ಹಿಂದೀ ಈ ದೇಶದ ರಾಷ್ಟ್ರಭಾಷೆಯೆಂಬುದನ್ನು ದೃಢಪಡಿಸುವ ಯಾವುದೇ ದಾಖಲೆಗಳಾಗಲೀ, ಕಾನೂನಾಗಲೀ, ಆದೇಶಗಳಾಗಲೀ ಇಲ್ಲ"

'ರಾಷ್ಟ್ರೀಯಭಾಷೆ'ಯ ಮಾತು ಇಷ್ಟಾಯಿತಲ್ಲ, ಇನ್ನೊಂದೆಡೆ ಇದೇ ಸಂವಿಧಾನದ 8ನೇ ಪರಿಶಿಷ್ಟದಲ್ಲಿ ಕನ್ನಡ ಮತ್ತು ಹಿಂದಿಯೂ (ಮತ್ತು ಮೈಥಿಲಿಯೂ) ಸೇರಿದಂತೆ 22 ಅಧಿಕೃತಭಾಷೆಗಳ ಪಟ್ಟಿ ಮಾಡುತ್ತದೆ - ಎಲ್ಲವೂ ಸಮಾನ.  ಈ "ಹಿಂದೀ ರಾಷ್ಟ್ರಭಾಷೆ" ಎಂಬ ಕೂಗು ಎಲ್ಲಿಂದ ಬಂತು ಯಾರಾದರೂ ತಿಳಿಸಬಹುದೇ?

ಹೋಗಲಿ, ಈ 'ಅಧಿಕೃತ' ವಿಷಯ ಬಿಡೋಣ.  ಒಬ್ಬ ನಿಜವಾದ ಭಾರತೀಯನಾಗಿ ನಾನು ಶ್ರೀ ಭದ್ರಾಚಲರಾಮದಾಸರನ್ನ, ಅನ್ನಮಯ್ಯನನ್ನ, ತ್ಯಾಗರಾಜರನ್ನ, ತಿರುವಳ್ಳುವರನ್ನ, ಕಂಬರನ್ನ, ಸ್ವಾತಿ ತಿರುನಾಳರನ್ನ ಎಷ್ಟು ಓದುತ್ತೇನೋ, ಕೇಳುತ್ತೇನೋ, ಆನಂದಿಸುತ್ತೇನೋ, ಗೌರವಿಸುತ್ತೇನೋ ಅಷ್ಟೇ ಶ್ರೀ ತುಳಸೀದಾಸರನ್ನ, ಸೂರದಾಸರನ್ನ, ಮೀರಾಳನ್ನ, ನಾನಕರನ್ನ, ಚೈತನ್ಯರನ್ನ, ಜಯದೇವನನ್ನ, ರಾಮದಾಸರನ್ನ, ಜ್ಞಾನೇಶ್ವರರನ್ನ ಅಷ್ಟೇ ಓದುತ್ತೇನೆ (ಅನುವಾದ, ಕೆಲವೊಮ್ಮೆ), ಕೇಳುತ್ತೇನೆ, ಆನಂದಿಸುತ್ತೇನೆ, ಗೌರವಿಸುತ್ತೇನೆ ಕೂಡ.  ಅವರೆಲ್ಲಾ ನಮ್ಮ ದಾಸ-ಶರಣರಷ್ಟೇ ಗೌರವಾರ್ಹರು, ಪೂಜ್ಯರು ನಮಗೆ.  ಈ ಮಹನೀಯರಲ್ಲಿ ಕೆಲವರ ಸಾಲುಗಳನ್ನು ಹೃದಯದಾಳದಿಂದ ಹೆಕ್ಕಿ ತರಬಲ್ಲೆ ಕೂಡ.  ಈ ಮಹನೀಯರ ನೆನಪು ತರುವ ಸ್ಥಳಗಳಿಗೆ ಹೋದಾಗೆಲ್ಲ ಭಾವುಕನಾಗುತ್ತೇನೆ, ಇದು ನನ್ನದೆಂಬ ಭಾವನೆ ತುಂಬಿ ಬರುತ್ತದೆ.  ದಕ್ಷಿಣದ ರಾಮೇಶ್ವರನಷ್ಟೇ ಪೂರ್ವದ ಜಗನ್ನಾಥನಷ್ಟೇ, ಪಶ್ಚಿಮದ ದ್ವಾರಕಾನಾಥನಷ್ಟೇ ಉತ್ತರದ ಕೈಲಾಸನಾಥನೂ, ಕೇದಾರನಾಥನೂ, ಬದರೀನಾಥನೂ ವಿಶ್ವನಾಥನೂ ನನ್ನವರು.  "ಆಸೇತು ಹಿಮಾಚಲಪರ್ಯಂತ (ದಕ್ಷಿಣದ ಮಹಾಸೇತುವಿನಿಂದ ಹಿಡಿದು ಹಿಮಾಚಲದವರೆಗೂ)" ಎಂಬ ನಿಜವಾದ ಅರ್ಥದಲ್ಲಿ ಭಾರತೀಯತೆಯನ್ನು ಆಚರಿಸುತ್ತೇವೆ ನಾವು.  ರಾಜ್ ಕುಮಾರ್ ನಮ್ಮ ನಾಡಿಮಿಡಿತವಾದರೆ, ಬಿಗ್ ಬಿ ಮತ್ತು ರಜನೀಕಾಂತರನ್ನೇನು ನಾವು ಕಡಿಮೆ ಇಷ್ಟಪಡುವುದಿಲ್ಲ.  ಲತಾಮಂಗೇಶ್ಕರ್, ಆಶಾ ಬೋಸ್ಲೆ, ಮುಖೇಶ್, ಕಿಶೋರ್ ಕುಮಾರ್, ಮೊಹಮ್ಮದ್ ರಫಿ ಇವರೆಲ್ಲಾ ತಮ್ಮ ಇಂಪಿನಿಂದ ಈಗಲೂ ನಮ್ಮ ಹೃದಯಗಳನ್ನು ಕಾಡುವಂಥವರು.  ಆ ಕಡೆಯಿಂದ ಇಂಥದ್ದೇ ಭಾವನೆಗಳನ್ನು ನಿರೀಕ್ಷಿಸಬಹುದೇ?  ಇಲ್ಲ, ನಿಮ್ಮಿಂದ ಪ್ರತ್ಯುಪಕಾರವನ್ನು ನಿರೀಕ್ಷಿಸುತ್ತಿಲ್ಲ - ನಿಮಗೂ ಭಾರತದ ಉಳಿದ ಭಾಗದ ವಿಷಯದಲ್ಲಿ ಇಂಥವೇ ಭಾವನೆಗಳಿವೆಯೇ (ಕೊನೆಯ ಪಕ್ಷ ನಿಮ್ಮ 'ಹಿಂದೀ ಲ್ಯಾಂಡ್'ನಿಂದ ಆಚೆಗೂ ಭಾರತವಿದೆಯೆಂಬ ಕಲ್ಪನೆಯಾದರೂ ನಿಮಗಿದೆಯೇ)? ರಾಷ್ಟ್ರೀಯತೆಯೆನ್ನುವುದು ಪರಸ್ಪರ ಗೌರವ-ಸಮಾನತೆ, ನನ್ನದೆನ್ನುವ ಅಕ್ಕರೆಯಿಲ್ಲದೇ ಉಳಿಯುವಂಥದ್ದಲ್ಲ.  ಹಿಂದೀ ಮತ್ತು ಹಿಂದಿಯಲ್ಲದ ಎಂದು ಎರಡು ದರ್ಜೆ ಪ್ರಜೆಗಳಾದರೆ ರಾಷ್ಟ್ರೀಯತೆಯೆನ್ನುವುದು ಉಳಿಯಲಾರದು.


ಹಿಂದೀ ರಾಷ್ಟ್ರೀಯವೂ ಅಲ್ಲ, ಹೆಚ್ಚುವರಿ ವಿಶೇಷವೂ ಅಲ್ಲ, ಕನ್ನಡಕ್ಕಿಂತ ಖಂಡಿತಾ ಅಲ್ಲ.  ಕೇವಲ ನಿಮ್ಮ "ಭಯ್ಯಾ, ಏಕ್ ಮಸಾಲಾ ಡೋಸಾ ದೇನಾ, ಏಕ್ ಈಡ್ಲೀ ಔರ್ ವಡಾ ದೇನಾ"ಗಳನ್ನು ಪುರಸ್ಕರಿಸುವುದಕ್ಕೋಸ್ಕರ ನಾವು ಹಿಂದೀ ಕಲಿಯಬೇಕೆಂದು ನಿರೀಕ್ಷಿಸುವ ಬದಲು ನೀವೇ ಕನ್ನಡ ಕಲಿತು ನಮ್ಮೊಡನೆ ಸುಖವಾಗಿ ಬಾಳಬಹುದಲ್ಲ.  ನಾವೇನಾದರೂ ನಿಮ್ಮ ನೆಲಕ್ಕೆ ಬಂದು ಬದುಕಬೇಕಾದರೆ ನೀವು ಕನ್ನಡ ಕಲಿತು ನಮ್ಮೊಡನೆ ಮಾತಾಡಬೇಕು ಎಂದಂತೂ ನಿರೀಕ್ಷಿಸಲಾಗದು, ಅಲ್ಲವೇ?

ಇದರ ಇಂಗ್ಲಿಷ್ ಅವತರಣಿಕೆಗಾಗಿ ಇಲ್ಲಿ ಕ್ಲಿಕ್ಕಿಸಿ.