Sunday, July 29, 2007

ಪದ್ದಕ್ಕ ಸತ್ತ ಸುದ್ದಿ

ಮಕರ
ಸಂಕ್ರಮಣದ ಮರುದಿನ
ಕರಿ ಹರಿದಿತ್ತು
ಮುಂಜಾನೆ
ಬ್ರಾಹ್ಮಿ ಕಳೆದೆರಡು ತಾಸು;
ಆರು
ಹೊಡೆಯಲಿನ್ನೈದು ನಿಮಿಷಗಳನಳೆದಿತ್ತು ಗಡಿ
ಯಾರ;
ಗುಣುಗುಣಿಸಿ ಕರೆದಿತ್ತುಫೋನು.

ಅಷ್ಟು ಹೊತ್ತಲಿ ನಮಗೆ ಫೋನು ಬರುವುದೆ ಇಲ್ಲ,
ಕೆಲಸದ ಕರೆಯನು ಬಿಟ್ಟು.
ಕೆಲಸದ್ದಂತೂ ಇರಲಿಕ್ಕಿಲ್ಲ,
ಅದಕೆ ಮೊಬೈಲಿದೆಯಲ್ಲ.
ಹಬ್ಬದ ಸಡಗರ ಖಂಡಿತ ಅಲ್ಲ,
ನೆನ್ನೆಯೆ ಮುಗಿದಿತ್ತೆಲ್ಲ!
ಮತ್ತೇನೀ ಕರೆ
ಬೆಳಗಿನ-
ಮಂಗಳ ವೇಳೆಯಲಿ?

ಕೊನೆಪಟ್ಟಿಯಲ್ಲಿಹರನೊಮ್ಮೆ ಮನ ನೆನೆದಿತ್ತು,
ಛೆ ಛೆ! ಮಂಗಳಮಸ್ತು!
ನಡುಗುಗೈಯನು ಪಿಡಿದು ನುಡಿದಿತ್ತು ಗ್ರಾಹಿ,
ದೂರದಿಂ ತಂದ ಸುದ್ದಿ;
ಪದ್ದಕ್ಕ ಸತ್ತರಂತೆ.
ಸುದ್ದಿ ಬರ
ಸಿಡಿಲೇನು ಆಗಿರಲಿಲ್ಲ;
ನೂರರ ವೃದ್ಧೆ ಪದ್ದಕ್ಕ
ಇದ್ದದ್ದೆ ಗೊತ್ತಿರಲಿಲ್ಲ.
ತುಂಬು ಜೀವ,ಇದ್ದಾಗೊಮ್ಮೆ ನೋಡಿ ಬರಬೇಕಿತ್ತು;
ಸಂಬಂಧ,
ಬದುಕಿಗೆ ದೂರ,
ಸಾವಿಗೆ ಹತ್ತಿರ;
ದಶರಾತ್ರ
ಜ್ಞಾತಿ
ಹತ್ತು ದಿನ
ಸೂತಕವಿರಬೇಕು.

ಅಣ್ಣ ನಡುಗುತ್ತಿದ್ದರು.
ಕೊರೆವ ಚಳಿ,
ಕಾಯಿಸಲು
ಗ್ಯಾಸಿಲ್ಲ, ಲೈಟಿಲ್ಲ, ನೀರಿನ್ನೂ ಬಂದಿಲ್ಲ;
ಸುದ್ದಿ ಕೇಳಿದ ಸ್ನಾನವಾಗಬೇಕು.
ಸ್ನಾನವಾಗಲೆ ಬೇಕು
ಹೊರಗೆ ಹೊರಡುವ ಮುನ್ನ,
ಎಂಟಕ್ಕೆ ಆಫೀಸು.
ಆರು ಹೊಡೆದಿತ್ತು ಗಡಿಯಾರ
ಮಂಗಳವಾರ
ರೇಡಿಯೋ ಮೊಳಗಿತ್ತು ನಾದಸ್ವರ.
ಹೊರಗೆ ಬೀದಿಯ ಮೇಲೆ ಹೂವು ಮಾರುತ್ತಿತ್ತು;
ಹಾಲೂ ಬಂತು, ಪೇಪರೂ ಬಂತು.
ಏಳಕ್ಕೆ ಎದ್ದ ಮಗು ಆಟವಾಡುತ್ತಿತ್ತು,
ಸಂದ ನೂರರ ಹರಕೆ ತುಂಬಿದಂತೆ.

- ೧೭/೦೧/೨೦೦೭