Friday, August 8, 2014

ಸಾಂತ್ವನ

ಮನೆ ಹಿತ್ತಿಲು ಪಾಳು ಬಿದ್ದಿರಲು
ಸಂತೆಯೊಳು ಧ್ಯಾನವ ಕನಸುವವ
ಸಂತನೂ ಅಲ್ಲ ಯೋಗಿಯೂ ಅಲ್ಲ

ಬಿಡು ರಾಜಾ,
ಅದೊಂದು ಥರ
ಕಾಸೂ ಕೇಡು ತಲೆಯೂ ಬೋಳಿನ ಕತೆ.

ಗುದ್ದಲಿ ಪಿಕಾಸಿ ತೊಗೋ
ಹಿತ್ತಿಲಲಿ ಬೆಳೆದ ಕಳೆ ಕೀಳು
ಮಣ್ಣ ಹದಮಾಡಿ
ಐನಾತಿ ಅಸಲೀ ಬೀಜಗಳ ನೆಟ್ಟು
ನಗುವ ಸೂರ್ಯನ ತೊಡಿಸಿ
ಆತ್ಮಜಲ ಎರೆದು, ಬೆಳೆ
ನಿನಗೆ ಬೇಕಾದ್ದು
ನಿನ್ನ ಧ್ಯಾನಸ್ಥ ಮೌನದಲ್ಲಿ, ಏಕಾಂತದಲ್ಲಿ
ಬೆಳೆದು
ಕೊಂಡದ್ದು
ಸಂತೆಯ ಕೊಂಡ ಸರಕಿಗಿಂತ ಸಾವಿರಪಾಲು ಪುಷ್ಟಿ
ಬೆಳೆದಿದ್ದು ಮಾರದಿರು
ಮಾರಿದ್ದು ಕೊಳ್ಳದಿರು
ನಿನಗಷ್ಟು ಇಟ್ಟು ಬಂದವರಿಗಷ್ಟು ಕೊಟ್ಟು...
ರುಚಿಯಿಲ್ಲದ ಹಣ್ಣ ಗಿಣಿ ಕಚ್ಚುವುದೇ ಇಲ್ಲ
ಹೋಗು, ಹುಷಾರಾಗಿ, ಮತ್ತೆ ಬಾ
ಆಗೀಗ.