Wednesday, January 27, 2016

ಬೆರಳೊಳು ಕುಟಿಲದಿ ಕದವನು ಬಡಿವವ

ಅಂಗುಲ್ಯಾ ಕಃ ಕವಾಟಂ ಪ್ರಹರತಿ ಕುಟಿಲೇ ಮಾಧವಃ ಕಿಂ ವಸಂತೋ|
ನೋ ಚಕ್ರೀ ಕಿಂ ಕುಲಾಲೋ ನಹಿ ಧರಣಿಧರಃ ಕಿಂ ದ್ವಿಜಿಹ್ನೂಃ ಫಣೀಂದ್ರಃ|
ನಾಹಂ ಘೋರಾಹಿಮರ್ದೀ ಖಗಪತಿರಸಿ ಕಿಂ ನೋ ಹರಿಃ, ಕಿಂ ಕಪೀಂದ್ರ
ಸ್ತ್ವಿತ್ಯೇವಂ ಗೋಪಕನ್ಯಾಪ್ರತಿವಚನಜಡಃ ಪಾತುಮಾಂ ಪದ್ಮನಾಭಃ

ಇದು ಶ್ರೀ ವಾದಿರಾಜರ ಉಕ್ತಿಪ್ರತ್ಯುಕ್ತಿಸ್ತೋತ್ರದ ಒಂದು ಶ್ಲೋಕ.  ತುಂಟ ಕೃಷ್ಣನು ಗೊಲ್ಲತಿಯೊಬ್ಬಳ ಮನೆಯ ಬಾಗಿಲು ತಟ್ಟುತ್ತಿದ್ದಾನೆ.  ಬೆರಳ ತುದಿಯಿಂದ ಇಷ್ಟು ಹಗುರವಾಗಿ ಕಳ್ಳನಂತೆ ಬಾಗಿಲು ತಟ್ಟುತ್ತಿರುವುದು ಈ ಕೃಷ್ಣನೇ ಎಂಬುದು ಗೋಪಿಕೆಗೆ ಗೊತ್ತು.  ಅವನನ್ನು ಕೆಲಕಾಲ ಹೊರಗೇ ನಿಲ್ಲಿಸಿ ಸತಾಯಿಸುವ ಇರಾದೆ ಆಕೆಯದು.  ಬಾಗಿಲು ತಟ್ಟುತ್ತಿರುವುದು ಯಾರೆಂದು ಕೇಳಿದಾಗ ಮಾಧವ, ಚಕ್ರೀ, ಧರಣಿಧರ ಹೀಗೆ ಆತ ಏನು ಉತ್ತರ ಹೇಳಿದರೂ ಅದಕ್ಕೆ ಕೃಷ್ಣನೆಂದೇ ಅಲ್ಲದೇ ಮತ್ತೊಂದು ಅರ್ಥವಿದ್ದೇ ಇದೆ - ಈಕೆ ಆ ಇನ್ನೊಂದು ಶ್ಲೇಷಾರ್ಥವನ್ನು ಬಳಸಿ, ನೀನು ಅವನೇ ಇವನೇ ಎಂದು ಕೇಳುತ್ತಾ, ಬಂದಿರುವುದು ಕೃಷ್ಣನೆಂಬ ವಿಷಯವು ತನಗೆ ತಿಳಿಯದಂತೆ ನಟಿಸುತ್ತಾಳೆ.  ಏನು ಹೇಳಿದರೂ ಅದಕ್ಕೆ ಬೇರೆಯದೇ ಅರ್ಥ ಕಲ್ಪಿಸುತ್ತಿರುವ ಗೋಪಿಕೆಯ ಮುಂದೆ ಸರ್ವಶಬ್ದವಾಚ್ಯನಾದ ಹರಿ ತನ್ನದೇ ಒಂದು ಹೆಸರಿಲ್ಲದಂತಾಗಿ ನಿರುತ್ತರನಾಗಿ ನಿಲ್ಲುವ ಸುಂದರ ಚಿತ್ರಣ ಇಲ್ಲಿದೆ.

ಈ ಕೆಳಗಿನದು ಅದರ ಕನ್ನಡಾನುವಾದ.  ಮೂಲದ ಶ್ಲೇಷಾರ್ಥಸೌಂದರ್ಯವನ್ನುಳಿಸಿಕೊಳ್ಳಲೋಸುಗ ಆದಿಪ್ರಾಸವನ್ನು ಕೈಬಿಟ್ಟಿದ್ದೇನೆ:

"ಬೆರಳೊಳಿನಿತು ಕುಟಿಲದಿ ಕದ ಬಡಿವರಾರು?" "ಮಾಧವಂ"
"ಮಾಧವಂ? ವಸಂತನೇಂ?" "ಅಲ್ತು, ಚಕ್ರಿಯೆಂಬುವನ್"
"ಚಕ್ರಿಯೆನೆ? ಕುಲಾಲನೇಂ?" "ಅಲ್ತು, ಧರಣಿಧರನಿವಂ"
"ಬಲ್ಲೆ, ಸೀಳುನಾಲಗೆಯವನಾದಿಶೇಷನಲ್ತೆ ನೀಂ?"

"ಅಲ್ತು, ಹಾವನಳುಪಿದಂ" "ಓಹೊ, ಗರುಡನೆಂಬೆಯಾ?"
"ಗರುಡನಲ್ತು, ಹರಿಯೆ ನಾಂ" "ಹರಿಯೆನಲ್? ಕಪೀಂದ್ರನೇಂ?"
ಇಂತು ಮಾತಿಗೊಂದು ಮಾತನೆಸೆಯುತಿರ್ಪ ಗೊಲ್ಲಹುಡುಗಿ-
ಗೆದುರುಸೋಲ್ತ ಪದುಮನಾಭ ಸಲಹಲೆಮ್ಮ ಸಂತತಂ

ವಾದಿರಾಜರು ಸ್ವತಃ ಹರಿದಾಸರು.  ಮೇಲಿನ ಸಂಸ್ಕೃತಶ್ಲೋಕವನ್ನೇ ಅವರು ಕೀರ್ತನೆಯ ರೂಪದಲ್ಲಿ ರಚಿಸಿದ್ದರೆ ಹೇಗಿದ್ದಿರಬಹುದು?  ಅಂಥದೊಂದು ಪ್ರಯತ್ನ ಇಲ್ಲಿದೆ.  ಇದು ವಾದಿರಾಜರ ಕೀರ್ತನೆಯಲ್ಲ, ಮೂಲಶ್ಲೋಕದ, ಕೀರ್ತನಾರೂಪದ ಭಾವಾನುವಾದವಷ್ಟೇ.  ಚಮತ್ಕಾರಯುಕ್ತವಾದ ಆ ಸಂಸ್ಕೃತಶ್ಲೋಕದಲ್ಲಿ ಕನ್ನಡದ ಹರಿದಾಸರಾದ ವಾದಿರಾಜರನ್ನು ಕಾಣುವ ಪ್ರಯತ್ನ:

ರಾಗ - ಶಂಕರಾಭರಣ; ತಾಳ - ಮಿಶ್ರಚಾಪು
ಬೆರಳೊಳು ಕುಟಿಲದಿ ಕದವನು ಬಡಿವವ-
ನಾರೋ ಪೇಳೆಲೊ ಬೇಗ ||ಪ||

ಮಾಧವನೆನಲು ವಸಂತನು ನೀನೇನೊ
ಚಕ್ರಿಯೆನಲು ಮಡಕೆ ಮಾಳ್ಪನೆ ನೀ ಪೇಳೋ ||ಅ.ಪ||

ಮೇದಿನಿಧರನೆನೆ ಸೀಳುನಾಲಗೆಯುಳ್ಳ
ಆದಿಶೇಷನೆ ನೀನೋ|
ಮೋದದಿ ಹಾವ ಭಂಜಿಸಿದವನೆನ್ನುವೆ-
ಯಾದೊಡೆ ಪೇಳೋ ನೀ ಗರುಡನೇನೋ ||೧||

ಹರಿಯೆನ್ನುತಿಹ ನೀನು ಕಪಿಯೋ ಏನೋ ಎನ-
ಗೊರೆಯೆನುತಲಿ ಕಾಡುವಾ|
ತರಳೆ ಗೊಲ್ಲತಿಗೆ ಬಾಯ್ಸೋತು ನಿಂತಿಹ ಸಿರಿ
ವರಪದ್ಮನಾಭನೇ ಸಲಹೆಲೊ ರಂಗಯ್ಯ ||೨||

(ಕೊನೆಯ ಸಾಲಿನ ಬದಲಿಗೆ "ವರಪದ್ಮನಾಭ ಹಯವದನ ಪಾಲಿಸೋ ಬೇಗ" - ಎಂದು ಮುದ್ರಿಕೆಯೂ ಬರುತ್ತಿದ್ದಿತೇನೋ)