Tuesday, November 10, 2009

ಏರಿ ನೀರುಂಬೊಡೆ, ಬೇಲಿ ಹೊಲವ ಮೇದಡೆ...

ಮೊನ್ನೆ ಬೆಂಗಳೂರಿನಲ್ಲಿ ನಡೆದ ವಕೀಲರ ದಾಂದಲೆ ಯಾವ ಮಾನವಂತ, ವೃತ್ತಿವಂತ ವಕೀಲನೂ ತಲೆತಗ್ಗಿಸುವಂಥದ್ದು. ದಾಂದಲೆಗೆ ಪ್ರೇರಕವಾದ ಕಾರಣಗಳೇನೇ ಇರಲಿ, ಅವು ಅದೆಷ್ಟೇ ಸಕಾರಣವಾಗಿರಲಿ ಅದಕ್ಕೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರವಿರಲಿಲ್ಲವೇ? ಕಾನೂನು ಅರಿಯದ ಸಾಮಾನ್ಯ ಜನ ಗೂಂಡಾಗಿರಿಗಿಳಿದರೆ ಅದು ಅವರ ಕಾನೂನು ಅಜ್ಞಾನ ಅಥವ ವ್ಯವಸ್ಥೆಯ ಬಗ್ಗೆ ಹತಾಶೆ ಎಂದಾದರೂ ಅರ್ಥಮಾಡಿಕೊಳ್ಳಬಹುದು; ಆದರೆ ಕಾನೂನು ಬಲ್ಲ ವಕೀಲರು ಈ ರೀತಿ ಕಾನೂನು ಹೊರಗಿನ ಪರಿಹಾರಕ್ಕೆಳಸಿದರೆ ಅದು ಅವರ ಕಾನೂನು ಅಜ್ಞಾನವೇ, ವ್ಯವಸ್ಥೆಯ ಬಗೆಗಿನ ಹತಾಶೆಯೇ? ಅಜ್ಞಾನವಾದರೆ, ಆ ಅಜ್ಞಾನಿ ನಮಗೆ ಯಾವ ಸಹಾಯ ಮಾಡಿಯಾನು? ಹತಾಶೆಯಾದರೆ, ಸ್ವತಃ ಕಾನೂನಿನಲ್ಲಿ ನಂಬಿಕೆ ಕಳೆದುಕೊಂಡ ವಕೀಲ ನಮಗೆ ಅದಾವ ನಂಬಿಕೆ ಕೊಟ್ಟಾನು? ಕೋರ್ಟಿನಲ್ಲಿ ನಿಂತು ವಾದಿಸುವ ಯೋಗ್ಯತೆಯಾದರು ಇದೆಯೇ ಇವರಿಗೆ? ಅದೂ ಒಬ್ಬ ಇಬ್ಬ ವಕೀಲನಾದರೆ ಹೋಗಲಿ, ಒಂದು ಇಡೀ ವಕೀಲ ಸಮುದಾಯ ಹೀಗೆ ಕಾನೂನಿನಲ್ಲಿ ಅಪನಂಬಿಕೆ ತಳೆದರೆ, ಕಾನೂನೇತರ ಮಾರ್ಗ ಹಿಡಿದರೆ ಸಮಾಜಕ್ಕೆ ಇವರ ಸಂದೇಶವೇನು? ಅಥವಾ ಇದು ಸೂಚಿಸುವಂತೆ, ನಮ್ಮ ಕಾನೂನು ವ್ಯವಸ್ಥೆಯಲ್ಲಿ ನಿಜಕ್ಕೂ ದಮ್ಮೇ ಇಲ್ಲವೇ? ಹಾಗಾದರೆ ಕೋರ್ಟ್ ಏಕೆ, ಪೋಲೀಸ್ ಏಕೆ, ಸರಕಾರವೇಕೆ? ದಿಗ್ಭ್ರಮೆಗೊಂಡ ಒಬ್ಬ ಸಾಮಾನ್ಯ law abiding ನಾಗರಿಕನ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿವು. ಉತ್ತರಿಸುವ ಹೊಣೆಗಾರರು ಯಾರಾದರೂ ಇದ್ದಾರೆಯೇ?

ಒಂದು ಜೋಕು ನೆನಪಿಗೆ ಬರುತ್ತದೆ (ಇದು ಜೋಕು ಮಾಡುವ ವಿಷಯವಲ್ಲ, ಆದರೂ). ಆಸ್ಪತ್ರೆಯೊಂದರಲ್ಲಿ ರೋಗಿಯೊಬ್ಬನಿಗೆ ಆಪರೇಷನ್ ನೆಡೆಯಬೇಕಿತ್ತು, ಎಲ್ಲಾ ಸಿದ್ಧವಾಗಿತ್ತು. ಅರಿವಳಿಕೆ ಕೊಡಲು ನರ್ಸ್ ಹತ್ತಿರ ಬಂದಳು. ಡಾಕ್ಟರು ನರ್ಸ್ ಜೊತೆ ಮಾತಾಡುತ್ತಾ ಆಪರೇಷನ್ ಸಿದ್ಧತೆ ನೆಡೆಸಿದ್ದರು. ಆಪರೇಷನ್ ಟೇಬಲಿನ ಮೇಲೆ ಮಲಗಿದ್ದ ರೋಗಿ ಭಯಗೊಂಡು ಧಡಕ್ಕನೆ ಎದ್ದು ಓಡತೊಡಗಿದ. ಓಡುತ್ತಿದ್ದವನನ್ನು ದಾರಿಯಲ್ಲಿ ಒಬ್ಬ ತಡೆದು ಕಾರಣ ಕೇಳಿದ. ಅವರ ಸಂಭಾಷಣೆ ಹೀಗಿತ್ತು:

ದಾರಿಹೋಕ: ಯಾಕೆ ಓಡುತ್ತಿದ್ದೀ, ಏನಾಯ್ತು?
ರೋಗಿ: ನಂಗೆ ಆಪರೇಷನ್ ಆಗಬೇಕಿತ್ತು, ನನಗೆ ಭಯವಾಗಿ ಓಡಿಬಂದೆ
ದಾರಿಹೋಕ: ಭಯ ಯಾಕೆ?
ರೋಗಿ: ನರ್ಸ್ ಹೇಳ್ತಿದ್ದಳು "ಏನೂ ಹೆದರಬೇಡಿ, ನಾನಿದೀನಿ, ಏನೂ ಆಗಲ್ಲ"
ದಾರಿಹೋಕ: ಅದಕ್ಕೆ ನಿನಗೆ ಮತ್ತೂ ಧೈರ್ಯ ಬರಬೇಕು, ಹೆದರಿಕೆ ಯಾಕೆ?
ರೋಗಿ: ಯಾಕಂದ್ರೆ, ನರ್ಸ್ ಹಾಗೆ ಹೇಳಿದ್ದು ನನಗಲ್ಲ, ಡಾಕ್ಟರಿಗೆ

ಏರಿ ನೀರುಂಬೊಡೆ, ಬೇಲಿ ಹೊಲವ ಮೇದಡೆ ಇನ್ನಾರಿಗೆ ದೂರುವೆನಯ್ಯಾ?

Thursday, October 29, 2009

ಕನ್ಯಾಕುಮಾರಿ

(೧)
ಸಂಜೆ ಎಂಟಕೆ ಬಿಡುವ
ಲೌಡ್ ಸ್ಪೀಕರಿನ
someಗೀತ
ಟ್ರಾವೆಲ್ ಬಸ್ಸು;
ಬೆಂಗಳೂರಿಂದ ಹದಿನೆಂಟು ತ್ರಾಸು
ರೆಪ್ಪೆಯಿಲ್ಲದ ಕಿವಿಯ ಮುಚ್ಚಲಾರದ ದಿಟಕೆ
ಕಣ್ಮುಚ್ಚಿ ಕೂತ
ಚಿತ್-
ಭಂಗಿ, ನಿದ್ರಾಯೋಗ
ನಟಿಸಿ, ವಟವಟಿಸಿ ಚಡಪಡಿಸಿ ಸಿಡಿವುದರೊಳಗೆ
ಕನ್ಯಾ
ಕು
ಮಾರಿ
ಬಿಸಿಲು-ಅಂಟು
ಮೈಯೆಲ್ಲ ಉಪ್ಪು
ಕಾರುವ ಕಡಲು
ಅಲೆ
ಯುವ ಮಂದೆ-
ಮಂದಿ

ದ ಒಳ ಹೊರಗೆ
ಕಡಲ ತಡಿಯಡಿಗಡಿಗೆ
ಕಾಗದ ಚೂರು
ಪ್ಲಾಸ್ಟೀಕು ಕವರು
ಕಚಪಚ ಕೆಸರು
ಚೆಲ್ಲುವ ವಿವೇಕ
ಸಾಗರದ
ನಡುವೆ ತಲೆಯೆತ್ತಿದ
ವಿವೇಕ
ಶಿಲೆಗೆ
ಲಾಂಚರು
ಕಾದುನಿಂತ ಮೈಲುದ್ದ ಕ್ಯೂ!

(೨)
ವಿವೇಕ ಮಂದಿರದಿ
ಧ್ಯಾನದಾನಂದದಾರಾಮ;
ತಂಪೆರೆವ ನಿಃಶಬ್ದ ನಿರ್ವಾತ ಧಾಮ;
ಗದ್ದಲದ ವಾಕ್ಯದಲಿದೊಂದು
ಅಲ್ಪ ವಿರಾಮ.

(೩)
ದಿನವೆಲ್ಲ ಉರಿದು ಸುಸ್ತಾಗಿ
ಪಡುಗಡಲಲ್ಲಿ ಮಲಗಲೆಳಸುವ ಸೂರ್ಯ;
ಕಡಲ ಹೊನ್ನೀರ್ ತುಳುಕಿ
ಸುತ್ತೆಲ್ಲ ಬಣ್ಣವೋ ಬಣ್ಣ;
ಸಂಜೆಬಾನಿನ ಕಾಂತಿ,
ಶಿಲೆಯ ನೆಲೆಯಿಂ ಹೊರಟು
ದಿಕ್ಕ ತುಂಬಿದ ಶಾಂತಿ -
ಶ್ರೀ ವಿವೇಕಾನಂದ ಚಿತ್ಛಾಂತಿ

(೪)
ಮುಂಜಾವಿನರುಣೋದಯದ
ಹೊನ್ನ ಕಿರಣದಲಿ
ತೀಡುತಿಹ ತಂಗಾಳಿ,
ದೇವಿಯ ಕೃಪೆಯ ಸುಯ್ಯುತಿಹ
ಉದಯರಾಗ;
ವರ್ಣಮಯವೀ ಬಾನು
ವರ್ಣಮಯವೀ ಕಡಲು
ವರ್ಣಮಯವದರ ಮಳಲು.
ಮುಂಜಾವ ಸಿಹಿಗನಸಲಿನ್ನೂ ಮಿಸುಗುವ ಸೂರ್ಯ
ಮೈತಿಳಿದು ಕಣ್ಹೊಸಕಿ ಉರಿಯ ಕೆದರುವ ಮುನ್ನ
ಕಟ್ಟುತ್ತೇನೆ ಜೋಳಿಗೆಯ,
ಮುಂದಿನೂರಿಗೆ ಪಯಣ.

Wednesday, October 21, 2009

ಮಾತು ಒಡೆದರೆ...

ಮೊನ್ನೆ ಸುಮ್ಮನೇ ಟಿ.ವಿ. ಚಾನೆಲ್ಲುಗಳನ್ನು ತಿರುಗಿಸುತ್ತಿರಬೇಕಾದರೆ ಚಾನೆಲ್ಲೊಂದರಲ್ಲಿ ಬಭ್ರುವಾಹನ ಚಿತ್ರದ ಹಾಡೊಂದು ಬರುತ್ತಿತ್ತು - ರಾಜಕುಮಾರ್ ಜಯಮಾಲಾ ಅಭಿನಯದ ಜನಪ್ರಿಯ ಗೀತೆ, "ಆರಾಧಿಸುವೇ ಮದನಾರಿ". ನಿಮ್ಮಲ್ಲಿ ಅನೇಕರಿಗೆ ಅರಿವಿರುವಂತೆ ಅದೊಂದು ಪ್ರಣಯಸನ್ನಿವೇಶ. ಅರ್ಜುನ ಸನ್ಯಾಸಿ ತನ್ನ ಪೂಜಾ-ಕೈಂಕರ್ಯಗಳಿಗೆಂದು ನಿಯಮಿಸಿದ್ದ ಸುಭದ್ರೆಯೊಡನೆ ಸರಸವಾಡುತ್ತಾ, ಪೂಜೆಯ ನೆವದಲ್ಲಿ ಅವಳೊಡನೆ flirt ಮಾಡುವ ಹಾಡು ಅದು. ಈ ಹಾಡನ್ನು ನಾನು ಮೊದಲು ನೋಡಿದ್ದು ಬಹುಶಃ ಸಿನಿಮಾದಲ್ಲೇ. "ಬಭ್ರುವಾಹನ" ನಮ್ಮೂರಿಗೆ ಬಂದದ್ದು ೭೭ರಲ್ಲೋ ೭೮ರಲ್ಲೋ. ನನಗಾಗ ೮-೧೦ ವಯಸ್ಸಿರಬೇಕು. ಖುಶಿ ಕೊಡುವ ಸಂಗೀತದ ಜೊತೆಗೆ ಸಿನಿಮಾದ ಶ್ರೀಮಂತ ಸೆಟ್, ರಾಜಕುಮಾರರ ಶೃಂಗಾರಭರಿತ ಅಭಿನಯ, 'ಮದನಾರಿ' ಸುಭದ್ರೆಯ ಮದವೇರಿಸುವ ಸೌಂದರ್ಯ, ಒನಪು-ವಯ್ಯಾರ ಇವು ನನ್ನ ಎಳೆಗಣ್ಣಿಗೆ ಕಟ್ಟಿದ್ದ ಅಂಶಗಳು. ಆಮೇಲೆ ಈ ಚಿತ್ರವನ್ನು ಎಷ್ಟೋ ಬಾರಿ ನೋಡಿದ್ದೇನೆ, ಹಾಡನ್ನು ಅದೆಷ್ಟೋ ಬಾರಿ ನೋಡಿದ್ದೇನೆ-ಕೇಳಿದ್ದೇನೆ. ತಲೆಚಿಟ್ಟು ಹಿಡಿಸುವ ಟಿ.ವಿ ಕಾರ್ಯಕ್ರಮಗಳ ನಡುವೆ ಆಗೊಮ್ಮೆ ಈಗೊಮ್ಮೆ ಇಂಥ ಮುದಕೊಡುವ ಹಾಡುಗಳು ಸುಳಿಯುವುದುಂಟು. ಮೊನ್ನೆ ಈ ಹಾಡು ಕೇಳುತ್ತಿದ್ದಾಗ ಮೂವತ್ತು ವರ್ಷಗಳ ಹಿಂದೆ ಇದಕ್ಕೆ ಸಂಬಂಧಿಸಿದ ಮೋಜಿನ ಪ್ರಸಂಗ ನೆನಪಿಗೆ ಬಂತು.

ಬೆಳಗ್ಗೆ ಎಲ್ಲೋ ಯಾರೋ ರೇಡಿಯೋ ಹಾಕಿದ್ದರು (ಯಾರಾದರೂ ಕೇಳುತ್ತಿದ್ದರೆಂದಲ್ಲ, ಯಾರಾದರು ಕೇಳಲಿ ಕೇಳದಿರಲಿ, ರೇಡಿಯೋ ಮಾತ್ರ ಅರಚುತ್ತಿರಬೇಕು; ಆಗೆಲ್ಲ ರೇಡಿಯೋ ನಮ್ಮ ದಿನಚರಿಯನ್ನು ನಿಯಂತ್ರಿಸುವ calender ಆಗಿತ್ತು). ವಿವಿಧಭಾರತಿ ಇರಬೇಕು, ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಈ ಹಾಡು ಪ್ರಸಾರವಾಗುತ್ತಿತ್ತು. ಅಲ್ಲೆಲ್ಲೋ ಜಗುಲಿಯ ಮೇಲೆ ಕುಳಿತಿದ್ದ ನಮ್ಮ ತಾತನವರು (ಆಗ ಅವರಿಗೆ ಸುಮಾರು ಎಂಬತ್ತು ವರ್ಷ) ಆ ಹಾಡನ್ನು ಆಸ್ವಾದಿಸುತ್ತಾ ತಲೆದೂಗುತ್ತಿದ್ದರು; ಬಾಯಿಂದ "ಭೇಷ್ ಭೇಷ್..." ಎಂಬ ಉದ್ಗಾರ ಬೇರೆ. ಇದನ್ನು ಕಂಡ ನಮ್ಮ ತಾಯಿ, ನಮ್ಮ ಸೋದರತ್ತೆಗೆ (ನಮ್ಮ ತಾತನವರ ಮಗಳಿಗೆ) ಅದನ್ನು ತೋರಿಸಿ ನಗುತ್ತಿದ್ದರು. ನಮ್ಮತ್ತೆಗೋ ಒಂದು ರೀತಿ ಇರುಸುಮುರುಸು, ಮುಜುಗರ. ಸಾತ್ವಿಕರಾದ, ಋಜುಸ್ವಭಾವದವರಾದ, ಸಿನಿಮಾ ಮುಖವನ್ನೇ ನೋಡಿಲ್ಲದ ನಮ್ಮ ತಾತ ಈ ವಯಸ್ಸಿನಲ್ಲಿ ಅದಾವುದೋ ಶೃಂಗಾರದ ಹಾಡನ್ನು ಅಷ್ಟು public ಆಗಿ ಮೆಚ್ಚುವುದೆಂದರೇನು, ತಲೆದೂಗುವುದೆಂದರೇನು!

ಆದರೆ ನನಗೆ ಆಶ್ಚರ್ಯ, ಅವರು ಆ ಹಾಡನ್ನು ಮೆಚ್ಚಿದರೆ ಇವರಿಗೇನು? ಆ ಹಾಡಿನ ಸಂಗೀತ ಎಷ್ಟು ಸೊಗಸಾಗಿತ್ತೆಂದರೆ, ಸ್ವತಃ ಹಾಡುಗಾರರಾಗಿದ್ದ ನಮ್ಮ ತಾತನವರು ಅದನ್ನು ಮೆಚ್ಚಿ ತಲೆದೂಗದಿರಲು ಸಾಧ್ಯವೇ ಇರಲಿಲ್ಲ. ನಮ್ಮ ಅತ್ತೆ ಮತ್ತು ನಮ್ಮ ತಾತನವರ ಸಂಭಾಷಣೆ ಹೆಚ್ಚು ಕಡಿಮೆ ಹೀಗಿತ್ತು:

ನಮ್ಮತ್ತೆ: (ಇರುಸುಮುರುಸಿನಿಂದ, ಅಪ್ಪನ ಬಳಿ ಸಾರಿ) ಏನಪ್ಪ ಇದು ಅಸಹ್ಯ, ಹೋಗಿ ಹೋಗಿ ಈ ಹಾಡಿಗೆ ತಲೆತೂಗುತ್ತ ಇದೀಯಲ್ಲ
ತಾತ: ಯಾಕೇ ಪುಟ್ಟಾ, ಅದರ ಸಾಹಿತ್ಯ ನೋಡು, ಎಷ್ಟು ಸೊಗಸಾಗಿದೆ (ನನ್ನ ಸ್ವಗತ, ಅರೇ, ಸಾಹಿತ್ಯವೇ? ಅಥವಾ ಸಂಗೀತವೋ? ಸಾಹಿತ್ಯದಲ್ಲೇನಿದೆ!)
ನಮ್ಮತ್ತೆ: (ತಲೆ ಚಚ್ಚಿಕೊಳ್ಳುತ್ತಾ), ಬಡುಕೋಬೇಕು, ಅದರಲ್ಲೇನಿದೆಯಪ್ಪಾ ಅಂಥಾದ್ದು... ನೀನಂತೂ...

ನಮ್ಮ ತಾತ ಅದಕ್ಕೇನೂ ಉತ್ತರ ಕೊಡುವ ಗೋಜಿಗೆ ಹೋಗಲಿಲ್ಲ. ನಕ್ಕುಕೊಂಡು ಸುಮ್ಮನಾದರೆಂದು ನೆನಪು.

ಆಮೇಲೂ ಸುಮಾರು ಸಲ ಆ ಹಾಡನ್ನು ನೋಡಿದಾಗೆಲ್ಲ/ಕೇಳಿದಾಗೆಲ್ಲ ನಮ್ಮ ತಾಯಿ-ತಂದೆ ಆ ಘಟನೆಯನ್ನು ನೆನಪಿಸಿಕೊಂಡು ನಕ್ಕದ್ದಿದೆ; ಹಾಗೇ ಆ ಸಾಹಿತ್ಯದಲ್ಲಿ ತಾತನವರು ಮೆಚ್ಚಿದ್ದು ಏನಿದೆಯೆಂದು ನಾನು ತಲೆಕೆಡಿಸಿಕೊಂಡಿದ್ದೂ. ಆಮೇಲೊಂದುದಿನ, (ತಲೆಯಲ್ಲಿ ಕುಳಿತಿದ್ದ ಮದ'ನಾರಿ' ಕ್ಷಣಕಾಲ ಮರೆಯಾದಾಗ) ಇದ್ದಕ್ಕಿದ್ದಂತೆ ಹೊಳೆಯಿತು; ಅರೇ, ಮದನಾರಿಯೆಂದರೆ ಶಿವನಲ್ಲವೇ (ಮದನ + ಅರಿ)! ಜೊತೆಗೇ ನೆನಪಿಗೆ ಬಂತು, ತೆರೆಯಮೇಲೆ ಆ ಮದ'ನಾರಿ'ಯ ಮುಂದೆಯೇ ಕುಳಿತಿದ್ದ ಶಿವನ ಮೂರ್ತಿ; ಅರ್ಜುನ ಪೂಜಿಸುವಂತೆ ಅಭಿನಯಿಸುತ್ತಿದ್ದುದು ಆ ಮದನಾರಿಯನ್ನೇ! ಆಗ ಆ ಹಾಡಿನ ಪೂರ್ಣ ಸ್ವಾರಸ್ಯ ಅರಿವಿಗೆ ಬಂತು. ಈಗ ಮೊನ್ನೆ ಆ ಹಾಡನ್ನು ಮತ್ತೆ ನೋಡಿದಾಗ ಈ ಬಗ್ಗೆ ಬರೆಯಬೇಕೆನ್ನಿಸಿತು. ಕೇವಲ ಅದೊಂದು ಅರ್ಥಪಲ್ಲಟದಿಂದ ಇಡೀ ಹಾಡಿನ ರಸವೇ ಅದುಹೇಗೆ ಶೃಂಗಾರದಿಂದ ಭಕ್ತಿಗೆ ಬದಲಾಗುತ್ತದೆ ನೋಡಿ:

ಆರಾಧಿಸುವೇ ಮದನಾರಿ ಆದರಿಸು ನೀ ದಯ ತೋರಿ

ಅಂತರಂಗದಲಿ ನೆಲೆಸಿರುವೆ ಆಂತರ್ಯ ತಿಳಿಯದೆ ಏಕಿರುವೆ
ಸಂತತ ನಿನ್ನ ಸಹವಾಸ ನೀಡಿ ಸಂತೋಷದಿಂದೆನ್ನ ನಲಿಸೆಂದು ಕೋರುವೆ

ಮೈದೋರಿ ಮುಂದೆ ಸಹಕರಿಸು ಆ ಮಾರನುರವಣೆ ಪರಿಹರಿಸು
ಪ್ರೇಮಾಮೃತವನು ನೀನುಣಿಸು ತನ್ಮಯಗೊಳಿಸು ಮೈಮರೆಸು
ಚಿನ್ಮಯ ಭಾವ ತುಂಬುತ ಜೀವ ಆನಂದ ಆನಂದ ಆನಂದವಾಗಲಿ

ಇಡೀ ಹಾಡಿನ ಸಾಹಿತ್ಯ, ಎರಡು ಅರ್ಥಗಳಿಗೂ ಸಂಪೂರ್ಣ ಹೊಂದುತ್ತದೆ. ಬಳಸುವುದು ಒಂದೇ ಪದ, ಕೊಡುವುದು ಎರಡು ಅರ್ಥ (ಅದು ನೀವು ಈಗ ನೋಡುವ double-meaning ಅಲ್ಲ!). ಹೀಗೆ ಒಂದೇ ಪದ ಅಥವಾ ಪದಪುಂಜಗಳನ್ನು ಬಳಸಿ ವಿವಿದಾರ್ಥಗಳನ್ನು ಸೂಚಿಸುವುದಕ್ಕೆ ಅಲಂಕಾರದ ಪರಿಭಾಷೆಯಲ್ಲಿ ಶ್ಲೇಷೆಯೆನ್ನುತ್ತಾರೆ.

ಶ್ಲೇಷಾಲಂಕಾರ ಪ್ರತಿಭಾವಂತ ಕವಿಯೊಬ್ಬನ ಕೈಯಲ್ಲಿ ಉತ್ತಮ ಸಾಧನ. ಪ್ರಾಚೀನ-ಆಧುನಿಕ ಕವಿಗಳು ನಾಟಕಕಾರರು ಶ್ಲೇಷೆಯನ್ನು ಒಂದಿಲ್ಲೊಂದು ರೀತಿಯಲ್ಲಿ ಬಳಸುತ್ತಲೇ ಬಂದಿದ್ದಾರೆ. ಉದಾಹರಣೆಗೆ ಭಾಸನ "ಪ್ರತಿಜ್ಞಾಯೌಗಂಧರಾಯಣ" ನಾಟಕದ ನಾಂದಿ ಪದ್ಯವನ್ನು ನೋಡಿ:

ಪಾಂತು ವಾಸವದತ್ತಾಯೋ ಮಹಾಸೇನೋತಿ ವೀರ್ಯವಾನ್
ವತ್ಸರಾಜಸ್ತು ನಾಮ್ನಾ ಸ ಶಕ್ತಿರ್ಯೌಗಂಧರಾಯಣಃ

(ವಾಸವದತ್ತಾಭ್ಯುದಯ ಮಹಾಸೇನ ಬಹುವೀರ್ಯಯುತ ವತ್ಸರಾಜ
ಶಕ್ತಿಯ ತಳೆದಿಹ ಯೌಗಂಧರಾಯಣ ಕರುಣದಿ ಕಾಪಾಡಲೆಮ್ಮ - ಅನು: ಸಿ.ಪಿ.ಕೆ)

ಸ್ಥೂಲವಾಗಿ ಅದರ ಅರ್ಥ ಹೀಗೆ. ವಾಸವ (ಇಂದ್ರ)ನಿಗೆ ಜೀವನವನ್ನು (ಆಯು = ಜೀವನ, ಅಭ್ಯುದಯ) ನೀಡಿದ, ಅತಿ ವೀರ್ಯವಂತನೂ ವತ್ಸರಾಜನೆಂಬ ಹೆಸರುಳ್ಳವನೂ, ಮಹಾಸೇನನೂ ಆದ ಶಕ್ತಿಯುತನಾದ (ಅಥವ ಶಕ್ತ್ಯಾಯುಧ - ವೇಲಾಯುಧವನ್ನು ತಳೆದ) ಯೌಗಂಧರಾಯಣನು (ಕುಮಾರಸ್ವಾಮಿಯು) ನಮ್ಮನ್ನು ಕಾಪಾಡಲಿ (ಕುಮಾರಸ್ವಾಮಿಗೆ ವತ್ಸರಾಜನೆಂದೂ ಹೆಸರಿದೆ - ಗಣಪತಿಯು ಜ್ಯೇಷ್ಠರಾಜನಾದರೆ, ಅವನ ತಮ್ಮ ಸುಬ್ರಹ್ಮಣ್ಯನು ವತ್ಸರಾಜ; ಹಾಗೆಯೇ ದೇವಸೇನಾನಿಯಾದ ಈತ ಮಹಾಸೇನ; ಅಂತೆಯೇ ಯುಗಂಧರ (ಶಿವ)ನ ಮಗನಾದ್ದರಿಂದ ಯೌಗಂಧರಾಯಣ)

ಇದು ಕುಮಾರಸ್ವಾಮಿಯನ್ನು ಕುರಿತ ಸ್ತುತಿಯಾದರೆ, ನಾಟಕದ ಮಟ್ಟದಲ್ಲಿ ಅದರ ಮುಖ್ಯಪಾತ್ರಗಳ ಸ್ತುತಿಯೂ ಹೌದು, ಹಾಗೆಯೇ ನಾಟಕದ ಸ್ಥೂಲ ಪೂರ್ವಸೂಚಿಕೆಯೂ ಹೌದು - ವಾಸವದತ್ತೆ (ಮತ್ತವಳ ಅಭ್ಯುದಯ - ವಿವಾಹವೇ ಈ ನಾಟಕದ ವಸ್ತು), ಆಕೆಯ ತಂದೆ ಮಹಾಸೇನ (ಪ್ರದ್ಯೋತ); ವೀರಶ್ರೇಷ್ಠನಾದ ವತ್ಸರಾಜ (ಉದಯನ); ಇವೆಲ್ಲದರ ಜೊತೆಗೆ ಈ ನಾಟಕದ ನಾಯಕ, ಚತುರನೂ ಶಕ್ತಿಯುತನೂ ಆದ ಮಂತ್ರಿ ಯೌಗಂಧರಾಯಣ; ವಾಸವದತ್ತೆಯ ನವಜೀವನಕ್ಕೆ ಕಾರಣವಾಗುವ ಅವನ ಯುಕ್ತಿ-ಚಾತುರ್ಯಗಳು - ಇವನ್ನು ಸೂತ್ರಧಾರ ಸ್ತುತಿಸುತ್ತಾ ನಾಟಕವನ್ನು ಪ್ರಾರಂಭಿಸುತ್ತಾನೆ.

ಹೀಗೆಯೇ ಈ ನಾಟಕದ ಮುಂದುವರಿಕೆಯಾದ "ಸ್ವಪ್ನವಾಸದತ್ತಾ" ನಾಟಕದಲ್ಲೂ ಇಂಥದ್ದೇ ಶ್ಲೇಷೆಯನ್ನು ಬಳಸುತ್ತಾನೆ ಕವಿ (ಅದು ಬಲರಾಮನ ಬಗ್ಗೆ ಹಾಗೂ ನಾಟಕದ ಪಾತ್ರಗಳ ಬಗ್ಗೆ - ಶ್ಲೋಕ ನೆನಪಿಲ್ಲ)

ಇನ್ನು ಕಾಳಿದಾಸನ ಬಹು ಪರಿಚಿತ ಸಾಲು <em><span style="font-size:85%;">"ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ"

ಜಗನ್ಮಾತಾಪಿತರಾದ (ಪಿತರೌ = ತಂದೆ-ತಾಯಿಯ ಜೋಡಿಯನ್ನು ಒಟ್ಟಾಗಿ ಸೂಚಿಸಿದಾಗ) ಪಾರ್ವತೀ ಪರಮೇಶ್ವರನ್ನು ವಂದಿಸುತ್ತೇನೆ, ಇದು ಒಂದು ಅರ್ಥವಾದರೆ, ಜಗಜ್ಜನಕರಾದ ಪಾರ್ವತೀಪ (ಪಾರ್ವತೀ ಪತಿ = ಶಿವ) ಹಾಗೂ ರಮೇಶ್ವರ (ರಮಾಪತಿ = ವಿಷ್ಣು) ಇವರನ್ನು ವಂದಿಸುತ್ತೇನೆ (ಇಲ್ಲಿ ಕವಿ "ಪಿತರೌ" ಎಂಬ ದ್ವಿ ವಚನವನ್ನು ಎಷ್ಟು ಚಾತುರ್ಯದಿಂದ ಬಳಸಿದ್ದಾನೆ ಎಂಬುದನ್ನು ಗಮನಿಸಬಹುದು)

ಅಡಿಟಿಪ್ಪಣಿ: "ಪಾರ್ವತೀಪ + ರಮೇಶ್ವರೌ" ಎಂದು ಬಿಡಿಸುವುದು "ಜಗತಃ ಪಿತರೌ" ಎಂಬ ದ್ವಿವಚನದ ಸಂದರ್ಭದಲ್ಲಿ ಅಸಾಧುವೆಂದೂ, "ವಾಕ್" ಎಂಬ ಸ್ತ್ರೀಲಿಂಗಪದಕ್ಕೂ "ಅರ್ಥ" ಎಂಬ ಪುಲ್ಲಿಂಗಪದಕ್ಕೂ ಸಂವಾದಿಯಾಗಿ "ಪಾರ್ವತೀ ಪರಮೇಶ್ವರೌ" ಎಂಬ ಹೋಲಿಕೆ ಬರುವುದರಿಂದ, ಪಾರ್ವತೀಪ ಹಾಗೂ ರಮೇಶ್ವರ ಎಂಬ ದ್ವಿ ಪುಲ್ಲಿಂಗ ಪದಗಳ ಬಳಕೆ ಆಲಂಕಾರಿಕವಾಗೂ ಅನುಚಿತವೆಂದೂ, ತನ್ನ ಕಾವ್ಯಗಳಲ್ಲೆಲ್ಲಾ ಅಸಾಧಾರಣ ಔಚಿತ್ಯಪ್ರಜ್ಞೆ, ವ್ಯಾಕರಣಪ್ರಜ್ಞೆ ಮೆರೆಯುವ ಕಾಳಿದಾಸ ಕೇವಲ ಸಣ್ಣ ಕಾವ್ಯಪ್ರಯೋಜನಕ್ಕೆ ಇಂಧಾ ವ್ಯಾಕರಣದೋಷಕ್ಕೆಡೆಗೊಡುವುದು ಅಸಂಭವವೆಂದೂ ಆದ್ದರಿಂದ ಇಲ್ಲಿ ಶ್ಲೇಷೆಯನ್ನು ಹುಡುಕಹೊರಡುವುದು ವ್ಯರ್ಥವೆಂದೂ ಕೆಲವಿದ್ವಾಂಸರ ಅಭಿಪ್ರಾಯ.  ಹೆಚ್ಚಿನ ವಿವರಗಳಿಗೆ ಶ್ರೀ ವಿವೇಕರ ಪ್ರತಿಕ್ರಿಯಾರೂಪದ ಲೇಖನವನ್ನು ನೋಡಿ, ಕಾಮೆಂಟಿನಲ್ಲಿ]

ಇನ್ನು ಕನ್ನಡಕ್ಕೆ ಬಂದರೆ, "ಕವಿರಾಜಮಾರ್ಗ"ದ ಈ ಮಂಗಲಾಚರಣೆಯ ಪದ್ಯವನ್ನು ನೋಡಿ:

ಶ್ರೀವಿಶದವರ್ಣೆ ಮಧುರಾ
ರಾವೋಚಿತೆ ಚತುರ ರುಚಿರ ಪದರಚನೆ ಚಿರಂ
ದೇವಿ ಸರಸ್ವತಿ ಹಂಸೀ
ಭಾವದಿ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್

  ಶ್ರೀ ವಿಶದವರ್ಣೆ (ಮಂಗಳಕರವಾದ, ಶುಭ್ರವಾದ ಬಿಳೀ ಬಣ್ಣವುಳ್ಳವಳು), ಮಧುರಾರಾವೋಚಿತೆ (ಮಧುರವಾದ ಸ್ತುತಿಗೆ ಅರ್ಹಳು), ಚತುರ ರುಚಿರ ಪದರಚನೆ (ಸುಂದರವಾದ ಸುಲಲಿತವಾದ ನಡೆಯುಳ್ಳವಳು) ಚಿರಂದೇವಿ (ಶಾಶ್ವತಿ - "ಚಿರಂಜೀವಿ"ಯಂತೆ, ಚಿರಂದೇವಿ) ಸರಸ್ವತಿ, ಹಂಸೀ ಭಾವದಿ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್ (ಹಂಸವು ಮಾನಸ ಸರೋವರದಲ್ಲಿ ನೆಲೆಗೊಳ್ಳುವಂತೆ, ನೀನು ನನ್ನ ಮನಸ್ಸಿನಲ್ಲಿ ನೆಲೆಸು);

ಮತ್ತೆ, ಶ್ರೀ ವಿಶದವರ್ಣೆ (ಮಂಗಳಕರವಾದ ಸ್ಫುಟವಾದ ಅಕ್ಷರಗಳನ್ನುಳ್ಳವಳು - ವರ್ಣ = ಅಕ್ಷರ), ಮಧುರಾರಾವೋಚಿತೆ (ಮಧುರವಾದ ನುಡಿಯನ್ನು ಹೊಂದಿದವಳು = ಭಾಷೆ ಮಧುರವಾಗಿದೆ ಎಂಬ ಅಭಿಪ್ರಾಯ), ಚತುರ ರುಚಿರ ಪದರಚನೆ (ಸುಂದರವಾದ ಸುಲಲಿತವಾದ ಪದರಚನೆಯ ಸಾಮರ್ಥ್ಯವುಳ್ಳವಳು) ಚಿರಂದೇವಿ (ಶಾಶ್ವತಿ - ಅಕ್ಷರ ಶಾಶ್ವತ "ಅ+ಕ್ಷರ = ನಾಶವಿಲ್ಲದ್ದು) ಸರಸ್ವತಿ (ಭಾಷೆಗೆ ಸರಸ್ವತಿ ಎಂದೂ ಪರ್ಯಾಯವುಂಟು) ಹಂಸೀ ಭಾವದಿ ನೆಲೆಗೊಳ್ಗೆ ಕೂರ್ತು ಮನ್ಮಾನಸದೊಳ್ (ಹಂಸವು ಮಾನಸ ಸರೋವರದಲ್ಲಿ ನೆಲೆಗೊಳ್ಳುವಂತೆ, ನೀನು ನನ್ನ ಮನಸ್ಸಿನಲ್ಲಿ ನೆಲೆಸು) - ಇದು ಮಾತಿನ ಅಧಿದೇವಿಯಾದ ವಾಗ್ದೇವಿಯನ್ನು (ವಾಗ್ದೇವಿ = ಸರಸ್ವತಿ, ಮತ್ತೆ) ಕುರಿತ ಅರ್ಥ. ಮೊದಲ ಅರ್ಥದಲ್ಲಿ ಸರಸ್ವತಿಯ ದೈವೀ ಸ್ವರೂಪದ ವರ್ಣನೆಯಿದ್ದರೆ, ಎರಡನೆಯ ಅರ್ಥದಲ್ಲಿ ಆಕೆಯ ವಾಕ್ ಸ್ವರೂಪದ ವರ್ಣನೆಯಿದೆ. ಈ ರೀತಿ ವಿವಿಧಾರ್ಥಗಳನ್ನು ಹೊಳೆಸುವುದೂ ಮಾತಿನ ಶಕ್ತಿಯೇ ತಾನೆ? ಇದು ವಾಗ್ದೇವಿಯನ್ನು ಸ್ತುತಿಸುವ ಈ ಶ್ಲೋಕದ ಚಮತ್ಕಾರ.

ಇದೇ ಬಗೆಯ ಶ್ಲೇಷೆಯನ್ನು ಕವಿ ಮುದ್ದಣ ಹೇಗೆ ತರುತ್ತಾನೆ ನೋಡಿ ("ಶ್ರೀರಾಮ ಪಟ್ಟಾಭಿಷೇಕ" ಕಾವ್ಯದ ಮಂಗಲಾಚರಣೆಯಿಂದ):

ಹರಿಗೆರಗಿ ಸೋಮನಂ ನುತಿಸುತೆ ಮನಂದಣಿಯೆ
ಹರಿವಾಹನನ ಬಲಂಗೊಂಡು ಹರಿಪುತ್ರರಂ
ಹರಿಸುತಾದ್ಯರ್ಗೆ ತಲೆವಾಗಿ ಗುರು ಕವಿ ಬುಧರ ಪದಕಮಲಮಂ ಧ್ಯಾನಿಸಿ
ಹರಿಗೆರಗಿ ಸೋಮನಂ ನುತಿಸುತೆ ಮನಂದಣಿಯೆ
ಹರಿವಾಹನನ ಬಲಂಗೊಂಡು ಹರಿಪುತ್ರರಂ
ಹರಿಸುತಾದ್ಯರ್ಗೆ ತಲೆವಾಗಿ ಗುರು ಕವಿ ಬುಧರ ಪದಕಮಲಮಂ ಧ್ಯಾನಿಪೆಂ

ಹರಿ (ವಿಷ್ಣು)ಗೆರಗಿ, ಸೋಮ (ಶಿವ)ನಂ ನುತಿಸುತೆ ಮನಂದಣಿಯೆ, ಹರಿವಾಹನನ (ಗರುಡ?) ಬಲಂಗೊಂಡು ಹರಿಪುತ್ರರಂ (ಬ್ರಹ್ಮ) ಹರಿಸುತಾದ್ಯರ್ಗೆ (ಹನುಮನೇ ಮೊದಲಾದ ಕಪಿಶ್ರೇಷ್ಠರಿಗೆ - ಹರಿ = ಕಪಿ) ತಲೆವಾಗಿ ಗುರು (ಗುರುಗಳು) ಕವಿ (ಕವಿಗಳು/ಸಹೃದಯರು) ಬುಧ (ಪಂಡಿತ/ಜ್ಞಾನಿ)ರ ಪದಕಮಲಮಂ ಧ್ಯಾನಿಸಿ; ಮತ್ತೆ ಹರಿ (ಸೂರ್ಯ)ಗೆರಗಿ, ಸೋಮ (ಚಂದ್ರ)ನಂ ನುತಿಸುತೆ, ಮನಂದಣಿಯೆ ಹರಿವಾಹನ (ಮೇಷವಾಹನ = ಮಂಗಳ) ನ ಬಲಂಗೊಂಡು, ಹರಿಪುತ್ರರಂ (ಹರಿ(ಸೂರ್ಯ)ಪುತ್ರ = ಶನಿ) ಹರಿಸುತಾದ್ಯರ್ಗೆ (ಹರಿ=ಹಾವು; ಹಾವಿನಿಂದ ಹುಟ್ಟಿದವರು (?) ರಾಹುಕೇತು) ತಲೆವಾಗಿ, ಗುರು (ಗುರು) ಕವಿ (ಶುಕ್ರ) ಬುಧ (ಕವಿ = ಬುಧ)ರ ಪದಕಮಲಮಂ ಧ್ಯಾನಿಸುವೆ.

ಷಟ್ಪದಿಯ ಎರಡೂ ಅರ್ಧಗಳಲ್ಲಿ ಒಂದೇ ಪದಗಳನ್ನು ಬಳಸಿದರೂ ಮೊದಲ ಅರ್ಧದಲ್ಲಿ ತ್ರಿಮೂರ್ತಿಗಳು, ಗುರು-ಹಿರಿಯರನ್ನು ವಂದಿಸುವ ಕವಿ, ಎರಡನೇ ಅರ್ಧದಲ್ಲಿ ಅದೇ ಪದಗಳನ್ನು ಬಳಸಿ ನವಗ್ರಹಗಳನ್ನು ವಂದಿಸುತ್ತಾನೆ. ಈ ಷಟ್ಪದಿಯಲ್ಲಿ ವಿಷಯದ ಹರಿವಿನಲ್ಲಿ, ಅನ್ವಯದಲ್ಲಿ ಅಷ್ಟು ಸ್ಪಷ್ಟತೆ ಕಾಣುವುದಿಲ್ಲ, ಆದರೂ ಶ್ಲೇಷೆಗೆ ಇದೊಂದು ಉದಾಹರಣೆಯೆಂದು ಇಲ್ಲಿ ಕೊಟ್ಟಿದ್ದೇನೆ.

ಇದೆಲ್ಲಾ ಬುದ್ಧಿಯ ಚಮತ್ಕಾರವಾಯಿತು; ಪ್ರಯತ್ನ ಪಟ್ಟು ಬರೆಯದೇ ಬಂದದ್ದಲ್ಲ, ಪ್ರಯತ್ನ ಪಟ್ಟು ಅರಿಯದೇ ಅರ್ಥವಾಗುವುದಲ್ಲ. ಆದರೆ ಸ್ವಯಂಪ್ರಭೆಯಿರುವ ಕಾವ್ಯದ ಮಿಂಚಿಲ್ಲದಿದ್ದರೆ ಅದಾವ ಅಲಂಕಾರ ತಾನೆ ಮಿನುಗೀತು? ಶ್ರೀ ಎನ್ಕೆಯವರು ಬೇಂದ್ರೆಯರ ಬಗ್ಗೆ ಆಗಾಗ ಹೇಳುತ್ತಿದ್ದ ಘಟನೆಯೊಂದು ನೆನಪಿಗೆ ಬರುತ್ತದೆ. ಬೇಂದ್ರೆಯವರು ಕೆಲ ಮಿತ್ರರೊಡನೆ ಇನ್ನೊಬ್ಬ ಮಿತ್ರರ ಮನೆಗೆ ಹೋಗಿದ್ದರಂತೆ. ಮಿತ್ರರು ಹೊರಗೆಲ್ಲೋ ಹೋಗಿದ್ದರಿಂದ, ಸ್ವಲ್ಪ ಕಾಯಬೇಕಾಯಿತು. ಅವರು ಬರುವವರೆಗೆ ಹೀಗೇ ಸ್ವಲ್ಪ ಸುತ್ತಾಡಿ ಬರೋಣ ಎಂದ ಮಿತ್ರರ ಸಲಹೆಗೆ ಒಪ್ಪದ ಬೇಂದ್ರೆ, ಇತರರನ್ನು ಸುತ್ತಲು ಕಳುಹಿಸಿ ಮನೆಯಲ್ಲೇ ಉಳಿದರಂತೆ. ಅವರನ್ನು ಉಪಚರಿಸಲು ಮನೆಯೊಡತಿ ಒಂದು ತಟ್ಟೆಯಲ್ಲಿ ದೊಡ್ಡ ತಂಬಿಟ್ಟು ತಂದಿತ್ತರಂತೆ. ಅದನ್ನು ತಿಂದು ಮುಗಿಸುವ ವೇಳೆಗೆ ಹಿಂದಿರುಗಿದ ಇತರ ಮಿತ್ರರು, ತಮ್ಮನ್ನೆಲ್ಲಾ ಬಿಟ್ಟು ಬೇಂದ್ರೆ ತಂಬಿಟ್ಟು ತಿಂದರು ಎಂದು ಆಕ್ಷೇಪಿಸಿದಾಗ ಬೇಂದ್ರೆ ಉತ್ತರ "ನೀವ್ ನಂಬಿಟ್ ಹ್ವಾದ್ರಿ, ನಾವ್ ತಂಬಿಟ್ ತಿಂದ್ವಿ" (ನೀವು ನಮ್ಮನ್ನ ಬಿಟ್ಟು ಹೋದಿರಿ, ನಾವು ತಮ್ಮನ್ನ ಬಿಟ್ಟು ತಿಂದೆವು)

ಅ.ರಾ.ಮಿತ್ರರು ಶ್ಲೇಷಾಲಂಕಾರಕ್ಕೆ ಬಹು ಸೊಗಸಾದ ಉದಾಹರಣೆಯೊಂದನ್ನು ರಚಿಸಿ ಕೊಟ್ಟಿದ್ದಾರೆ, ತಮ್ಮ "ಛಂದೋಮಿತ್ರ" ಪುಸ್ತಕದಲ್ಲಿ:

ೀತವರ್ಣಪ್ರೀತೆ ಗೃಹಪತ್ರಕರ್ತೆ
ದೋಷದ ಕರಡು ತಿದ್ದದ ಮನೆಯ ಸಂಪಾದಕ
ಇಬ್ಬರಿಂ ಹಾಳಾಯ್ತು ಮನೆಯಚ್ಚುಕೂಟ
ಬತ್ತಿ ಹೋಯಿತು ಕೇಳು ಅರ್ಥ ಜೀವನದಿ

ಪೀತ = ಹಳದಿ ಪತ್ರಿಕೋದ್ಯಮ (yellow press - useless gossip), ಚಿನ್ನ ಕೂಡ
ಗೃಹಪತ್ರಕರ್ತೆ = ಗೃಹಿಣಿಯೆಂಬ ಪತ್ರಕರ್ತೆ, ಗೃಹಪತ್ರ (ಮನೆಯ ಖರ್ಚುವೆಚ್ಚ) ನೋಡುವವಳು ಕೂಡ
ಸಂಪಾದಕ = ಪತ್ರಿಕಾ ಸಂಪಾದಕ, ಹಣ ಸಂಪಾದಿಸುವವನು (ಯಜಮಾನ) ಎಂದು ಕೂಡ
ಅರ್ಥ = ಸ್ವಾರಸ್ಯ, ಹಣ ಕೂಡ
ಜೀವನದಿ = ಜೀವನದಲ್ಲಿ, ಜೀವ-ನದಿ ಕೂಡ (ಅರ್ಥ (ಹಣ)ವೆಂಬ ಜೀವನದಿ ಈ ದುಂದುವೆಚ್ಚದಿಂದ ಬತ್ತಿಹೋಯಿತು ಎಂದೂ ಅರ್ಥ)

ಶ್ಲೇಷೆಯ ಶುದ್ಧ ರೂಪದಲ್ಲಿ, ಒಂದೇ ಪದಕ್ಕೆ ಸಹಜವಾಗೇ ವಿವಿಧ ಅರ್ಥಗಳಿರುತ್ತವೆ. ಈ ಅರ್ಥಗಳು ಸಹಜ ನಿಘಂಟು ಅರ್ಥಗಳೇ ಹೊರತು ಸಾಧಿತ (ವ್ಯಂಗ್ಯ) ಅರ್ಥಗಳಲ್ಲ. ಉದಾ: ಅತ್ತೆ, ನಿನ್ನಿಂದ ನಾನತ್ತೆ.  ಇಲ್ಲಿ ಅತ್ತೆ (ಗಂಡನ ಅಥವ ಹೆಂಡತಿಯ ತಾಯಿ) ಮತ್ತು (ಅತ್ತೆ, ಅಳುವುದರ ಭೂತಕಾಲ) ಎರಡೂ ನಿಘಂಟಿನ ಅರ್ಥಗಳೇ.  ಹೀಗೆ ಪದಗಳನ್ನು ಒಡೆಯದೆಯೇ ಅದರ ವಿವಿಧಾರ್ಥಗಳನ್ನು ಚಮತ್ಕಾರಿಕವಾಗಿ ಬಳಸಿಕೊಳ್ಳುವುದಕ್ಕೆ ಅಭಂಗಶ್ಲೇಷೆ ಎನ್ನುತ್ತಾರೆ.  ದುಂಡಿರಾಜರ ಈ ಹನಿ ನೋಡಿ:

ಕ್ಯಾಶ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದರೂ ಸಿಗದು
ಅದಕ್ಕೆ ಇರಬೇಕು
ಹಾಕಿದ್ದಾರೆ ಬೋರ್ಡು
"ನಗದು"

ಒಂದೇ ಪದವನ್ನು ಚಮತ್ಕಾರಿಕವಾಗಿ ಒಡೆಯುವುದರ ಮೂಲಕವೂ ಶ್ಲೇಷೆ ಉದಿಸುತ್ತದೆ. ಇದನ್ನು ಸಭಂಗ ಶ್ಲೇಷೆ ಎನ್ನುತ್ತಾರೆ ಉದಾ: ಭೀಮ"ನ ಗದೆ"ಯೆತ್ತುವ ನಿನ್ನ ಸಾಹಸಕೆ ಅವ "ನಗದೆ" ಇರಲು ಹೇಗೆ ಸಾಧ್ಯ?  ಈ ಕೆಳಗಿನ ಸುಂದರ ಸಾಲುಗಳನ್ನು ನೋಡಿ:

ಯಥಾ ನಯತಿ ಕೈಲಾಸಂ ನಗಂ ಗಾನ ಸರಸ್ವತೀ
ತಥಾ ನಯತಿ ಕೈಲಾಸಂ ನ ಗಂಗಾ ನ ಸರಸ್ವತೀ ||

ಇಲ್ಲಿನ "ನಗಂ ಗಾನ" ಹಾಗೂ "ನ ಗಂಗಾ ನ" ಎಂಬ ಒಡೆಯುವಿಕೆಯನ್ನು ಗಮನಿಸಿ.

ಮಾತಿನಲ್ಲಿ ಅಲ್ಲಲ್ಲಿ ಹೀಗೆ ಮಿಂಚಿ ಮರೆಯಾಗುವ ಶ್ಲೇಷೆ ಮನಸ್ಸಿಗೆ ಹಿತವೆನ್ನಿಸಿದರೂ, ಅದು ಅತಿಯಾದರೆ ತಲೆಚಿಟ್ಟು ಹಿಡಿಯಬಹುದಲ್ಲವೇ?  ಶ್ಲೇಷೆಯ ಅತಿ ಬಳಕೆ ಚಿತ್ರಕವಿತ್ವವೆಂಬ ಅಧಮ ಕಾವ್ಯಪ್ರಕಾರವಾಗಿಬಿಡುತ್ತದೆಂದು ಆಲಂಕಾರಿಕರ ಮತ.  ಆದ್ದರಿಂದ ಇದನ್ನು ಸೂಕ್ಷ್ಮವಾಗಿ, ರಸಪೂರ್ಣವಾಗಿ ಬಳಸುವ ಔಚಿತ್ಯಪ್ರಜ್ಞೆ ಅತಿ ಅವಶ್ಯಕ.

ಮೇಲಿನ ಚರ್ಚೆಯಲ್ಲಿ ನಾವು ಗಮನಿಸಿದ ಮುಖ್ಯ ಅಂಶವೆಂದರೆ, ಶ್ಲೇಷೆಯಲ್ಲಿ ಪದವೊಂದನ್ನು ವಿವಿಧಾರ್ಥಗಳಲ್ಲಿ ಬಳಸಿದರೂ, ಆ ವಿವಿಧಾರ್ಥಗಳು ಆ ಪದಕ್ಕೆ ಸಹಜವಾಗಿಯೇ ನಿಘಂಟಿನಲ್ಲಿ ದೊರಕೊಂಡಿರುವುದು; ಅವಾವುವೂ ಸಾಧಿತ ಅಥವ ವ್ಯಂಗ್ಯಾರ್ಥಗಳಲ್ಲ.  ಉದಾಹರಣೆಗೆ ಮಾಮೂಲು ಎಂಬ ಪದಕ್ಕೆ ಇರುವ ಅರ್ಥ, ಸಾಧಾರಣವಾಗಿ, ಸಾಮಾನ್ಯವಾಗಿ, routine, customary ಇತ್ಯಾದಿ.  ಆದರೆ ಅದೇ ಲಂಚವೆಂಬ ವಿಶೇಷಾರ್ಥದಲ್ಲೂ ಬಳಕೆಯಲ್ಲಿದೆ.  ಆದ್ದರಿಂದ ಬಳಕೆಯಲ್ಲಿ ಮಾಮೂಲು ಎನ್ನುವ ಪದವನ್ನು ಹೀಗೆ ಎರಡರ್ಥದಲ್ಲಿ ಬಳಸಿದರೆ, ಅದು ಶ್ಲೇಷೆಯಾಗುವುದಲ್ಲ, ಬದಲಿಗೆ ವ್ಯಂಜನಾವೃತ್ತಿಯೆಂಬ ಮತ್ತೊಂದು ಅಲಂಕಾರವಾಗುತ್ತದೆ.  ವ್ಯಂಜನಾವೃತ್ತಿಯ ಮಿತಿಯೆಂದರೆ, ಈ ವ್ಯಂಗ್ಯಾರ್ಥ ಎಷ್ಟೆಂದರೂ ಸಂದರ್ಭದ ಚಮತ್ಕಾರದಿಂದ ಮೂಡಿರುವ ಅರ್ಥವಾದ್ದರಿಂದ, ಮೊದಲ ಕೆಲವು ಪ್ರಯೋಗಗಳಲ್ಲಿ ಚಮತ್ಕಾರಿಕವಾಗಿ ಸೊಗಸೆನ್ನಿಸಿದರೂ, ಅದರ ಮಿತಿಮೀರಿದ ಬಳಕೆ ತನ್ನ ಹೊಳಪು ಕಳೆದುಕೊಳ್ಳುತ್ತದೆ.  "ಯಡಿಯೂರಪ್ಪನವರ ಸರ್ಕಾರ ’ಶೋಭಾ’ಯಮಾನವಾಗಿ ಮಿನುಗುತ್ತದೆ" ಎಂದಂತೆ!


"Pun" ಎನ್ನುವುದು ಶ್ಲೇಷೆ ಮತ್ತು ವ್ಯಂಜನಾವೃತ್ತಿಗಳ ನಡುವೆ ಸಂಚರಿಸುವ ಇಂಗ್ಲಿಷ್ ಸಮಾನಾಂತರ.  Ogden Nash ಪನ್ನಿನ ಅನಂತ ಸಾಧ್ಯತೆಗಳನ್ನು ಪರಿಚಯಿಸಿದ ಕವಿ. ಅವನ ಈ ಸಾಲುಗಳನ್ನು ನೋಡಿ:

There was an old man in the trunk
Who inquired of his wife, "Am I drunk?"
She replied with regret
"I'm afraid so, my pet"
And he answered, "It's just as I thunk."
 
ಕುುಡುಕ ಗಂಡ ಹೆಂಡತಿಯನ್ನು ಕೇಳುತ್ತಾನೆ, "ನಾನು ಕುಡಿದಿದ್ದೀನಾ?" ಅವಳು ಉತ್ತರಿಸುತ್ತಾಳೆ, "ಹೌದು ಮುದ್ದೂ". ಅದಕ್ಕವನು ಹೇಳುತ್ತಾನೆ, "ಅದೇ ನಾನೂ ಯೋಚಿಸಿದ್ದು". ಇದು ಭಾಷಾಂತರಕ್ಕೆ ಸಿಕ್ಕುವ pun ಅಲ್ಲ. ಇಲ್ಲಿ ಸ್ವಾರಸ್ಯವಿರುವುದು ಕೊನೇ ಸಾಲಿನ "thunk" ಎನ್ನುವ ಪದದಲ್ಲಿ. Drink ಎನ್ನುವುದು Drunk ಆದಂತೆ, ಕುಡುಕನ ಬಾಯಲ್ಲಿ Think ಅನ್ನುವುದು Thunk (Thought ಬದಲಿಗೆ). ಅದೇ ಇಲ್ಲಿನ Pun. ಪದವನ್ನು ತಿರುಚಿ Pun ಉತ್ಪಾದಿಸುವುದಕ್ಕೆ ಇದು ಉದಾಹರಣೆ. ಮತ್ತೆ ಅವ ಅದೆಷ್ಟು ಕುಡುಕನಾಗಿಬಿಟ್ಟಿದ್ದಾನೆಂದರೆ, ಅವನ ಹೆಂಡತಿಯ ಪಾಲಿಗೆ ಅವನೊಂದು ಪೆಟ್ಟಿಗೆಯಲ್ಲಿ ಹೊತ್ತೊಯ್ಯುವ ಸಾಕುಪ್ರಾಣಿಯಂತೆ (trunk ಮತ್ತು pet ಅನ್ನುವುದರ pun ಇದು). ಅದಕ್ಕೇ ಅವನು "honey" ಅಲ್ಲ, "sweetheart" ಅಲ್ಲ, "pet". ಮತ್ತೆ Trunk - Drunk; (Re)gret - Pet ಈ ಪ್ರಾಸಗಳ ಜೊತೆಗೆ ಕೊನೆಯ ಸಾಲಿನಲ್ಲಿ Thunk ಎನ್ನುವ ವಿಲಕ್ಷಣ ಪ್ರಾಸವೂ ಸೇರಿ ಅದಕ್ಕೆ ಮತ್ತಷ್ಟು ಹಾಸ್ಯದ ಲೇಪ ಕೊಡುತ್ತದೆ.

ಇದೇ ಉಸಿರಿನಲ್ಲಿ ವೈಯೆನ್ಕೆಯವರ ಒಂದು ಹನಿ ನೆನಪಿಗೆ ಬರುತ್ತದೆ:

ಕರುಣಾಳು ಬಾ ಬೆಳಕೆ
ಮಸುಕಿದೀ ಪಬ್ಬಿನಲಿ
ಕೈ ಹಿಡಿದು ಕುಡಿಸೆನ್ನನು

ಸುಪ್ರಸಿದ್ಧವಾದ ಸಾಲೊಂದನ್ನು ತೆಗೆದುಕೊಂಡು ಅದಕ್ಕೆ ವಿಲಕ್ಷಣ ತಿರುವನ್ನು ಕೊಡುವುದು ಇಲ್ಲಿನ pun; ಹಾಗೆಯೇ ನಡೆಯುವನಿಗೆಂತೋ ಅಂತೆಯೇ ಕುಡಿಯುವವನಿಗೂ ಬೇಕು ಬೆಳಕು (ಅವನಿಗೆ ಹೆಚ್ಚೇ ಬೇಕು, ಏಕೆಂದರೆ ಅವನ "ಮಬ್ಬು" ಹೆಚ್ಚು) ಅನ್ನುವುದು ಕೂಡ; ಪಬ್ಬೇ ಮಬ್ಬಾಗುವ pun ಕೂಡ ಇಲ್ಲಿದೆ

Pun ಸಾಹಿತ್ಯದ ಬೆಳೆ ಆಧುನಿಕ ಕನ್ನಡದಲ್ಲಿ ಸಾಕಷ್ಟು ಹುಲುಸಾಗಿಯೇ ಬೆಳೆದಿದೆ. ಕೈಲಾಸಂರಿಂದ ಹಿಡಿದು ದುಂಡಿರಾಜರವರೆಗೂ ಅನೇಕ punಡಿತರು ನಮ್ಮಲ್ಲಿದ್ದಾರೆ (ಕ್ಷಮಿಸಿ, ಈ punಡಿತ ಎನ್ನುವ ಶ್ಲೇಷೆಯೇ (ಹಾಗನ್ನಬಹುದೇ) ತನ್ನ ಅತಿ ಬಳಕೆಯಿಂದ ಕ್ಲೀಷೆ (cliche)ಯಾಗಿ ಹೋಗಿದೆ)

Punನ್ನಿನ ವಿಷಯಕ್ಕೆ ಬಂದರೆ ದುಂಡಿರಾಜರನ್ನು ಮರೆಯಲು ಸಾಧ್ಯವೇ ಇಲ್ಲ, ಆದರೆ ಸಮಸ್ಯೆಯೆಂದರೆ ಅವರ ಯಾವ ಹನಿಯನ್ನು ಉದಾಹರಿಸುವುದು ಯಾವುದನ್ನು ಬಿಡುವುದು? ಕಾವ್ಯ ಮಿಂಚಲು ಭಾಮಿನಿಯೇ ಆಗಬೇಕೇ, ಮಿನಿ ಆಗದೇ? ಅವರು ಹೇಳುತ್ತಾರೆ:

ಅಯ್ಯಾ ಕುಮಾರವ್ಯಾಸ
ನಾನು ನಿನ್ನ ದಾಸ
ನೀನು ಬರೆದದ್ದು ಭಾಮಿನಿ
ನನ್ನದೋ ಬರೀ 'ಮಿನಿ'
 
ಹಾಗೆಯೇ ಇನ್ನೊಂದು:

ಬ್ಯಾಂಕ್ ಜೀವನದ
ಏಕತಾನದಿಂದ
ರೋಸಿ ಹೋಗಿ
ಎಲ್ಲ ಮರೆತು ಹಾಯಾಗಿ
ಸುತ್ತಾಡಿ ಬರಲೆಂದು
ರೈಲು ಹತ್ತಿದರೆ ಅಲ್ಲೂ
ಅದೇ ಸೊಲ್ಲು
ಚೆಕ್ ಬುಕ್ ಚೆಕ್ ಬುಕ್ ಚೆಕ್ ಬುಕ್
ಶ್ಲೇಷೆ ಅಥವ ಪನ್ನು ಬರೀ ಕಾವ್ಯದ ಪುಸ್ತಕಗಳಲ್ಲಿ ಮಾತ್ರ ಇರುವುದೆಂದು ತಿಳಿಯಬೇಡಿ ಮತ್ತೆ. ಬಹುಶಃ ಯಾವುದೇ ಪದಕ್ಕೂ ಬಳಕೆಯ ಬಲದಿಂದ ಶ್ಲೇಷೆಯ ಅಥವ ಪನ್ನಿನ 'ದಮ್' ಕೊಡಬಹುದೆನ್ನಿಸುತ್ತದೆ. ನಾ. ಕಸ್ತೂರಿಯವರು ಈ ಶ್ಲೇಷಾರ್ಥ ವ್ಯಂಗ್ಯಾರ್ಥಗಳನ್ನು ಸಂಗ್ರಹಿಸಿ ಒಂದು ಅರ್ಥಕೋಶವನ್ನೇ ರಚಿಸಿದ್ದಾರೆ, ಹೆಸರು "ಅನರ್ಥಕೋಶ"! ಅದರ ಒಂದೆರಡು ಎಂಟ್ರಿಗಳನ್ನು ನೋಡಿ:

ತುಪ್ಪ = ಪಾತ್ರೆಗೆ ಚಮಚೆಯಿಂದ ಬಡಿದಾಗ ಉಂಟಾಗುವ ಶಬ್ದವಿಶೇಷ
ಕೃದಂತ = ಕೃತಕ ಹಲ್ಲಿನ ಸೆಟ್ಟು

ಯಾರನ್ನಾದರೂ ಮೇಧಾವಿಗಳೆಂದು ಹೇಳಬೇಕಾದರೆ "ಬೃಹಸ್ಪತಿ" ಎನ್ನುತ್ತೇವೆ; ಹೀಯಾಳಿಸಬೇಕಾದರೆ ಕೂಡ! ನಮ್ಮಲ್ಲೊಬ್ಬರು "ಮೇಧಾವಿ" ಎಂಬ ಪದವನ್ನು ಅಪಭ್ರಂಶಿಸಿ "ಮೇದಾವಿ" ಎಂದೇ ಬಳಸುತ್ತಿದ್ದರು. ಈ ಅಪಭ್ರಂಶ ಉದ್ದೇಶಪೂರ್ವಕವೆಂದೇ ನನ್ನ ಗುಮಾನಿ; ಏಕೆಂದರೆ ಈ ಮಾರ್ಪಾಡು ಅವರಿಗೆ ಬೇಕಾದಾಗ ಅದನ್ನು ಶ್ಲೇಷೆಯಾಗಿಯೂ ಬಳಸುವ ಅನುಕೂಲವನ್ನಿತ್ತಿತ್ತು. ಯಾರನ್ನಾದರೂ "ಮೇದಾವಿ" ಎಂದು ಹೊಗಳುವಾಗ ಅದೊಂದು ನಿಷ್ಪಾಪಿ ಕಾಗುಣಿತದ ತಪ್ಪಾಗಿ ಕಾಣುತ್ತಿದ್ದರೂ, ಯಾರನ್ನಾದರೂ ತೆಗಳಬೇಕಾದಾಗ ಅವರು ಅದಕ್ಕಿಡುತ್ತಿದ್ದ ಅರ್ಥ "ಮೇದಾವಿ = ಮೇದುಕೊಂಡು ತಿರುಗುವವನು"

ಮತ್ತೆ ಕುಡುಕ ಅಪ್ಪನಿಗೆ ಮಗ ಬರೆಯುತ್ತಿದ್ದ ಪತ್ರದ ಒಕ್ಕಣೆ "’ತೀರ್ಥರೂಪು’ ತಂದೆಯವರಿಗೆ..."

ನನಗೆ ತಿಳಿದ ವಯೋವೃದ್ಧ ಪುರೋಹಿತರೊಬ್ಬರು ಪೌರೋಹಿತ್ಯಕ್ಕಾಗಿ ತಮ್ಮ ಬಳಿ ಬರುತ್ತಿದ್ದ ಕಕ್ಷಿದಾರರನ್ನು ಕೇಳುತ್ತಿದ್ದರು "ಮರ್ಯಾದೆ ಎಷ್ಟು ಕೊಡುತ್ತೀರಿ?" ಇಲ್ಲಿ "ಮರ್ಯಾದೆ" ಎಂದರೆ ದಕ್ಷಿಣೆ ಎಂದರ್ಥ.

ಎಷ್ಟೊಂದು ಪದಗಳು, ಬಳಸುವವರ ಪ್ರತಿಭಾಚಾತುರ್ಯದಿಂದ, ಬಳಕೆಯ ಸಾಮಾನ್ಯತೆಯಿಂದ ಪನ್ ಆಗಿ ಮಾರ್ಪಟ್ಟಿವೆ ನೋಡಿ - ಮಾಮೂಲು, ದಕ್ಷಿಣೆ, ಸಮಾಜ ಸೇವೆ, ಸತ್ಯಾಗ್ರಹ, ಅಹಿಂಸಾತ್ಮಕ ಹೋರಾಟ... ಅಷ್ಟೇಕೆ, "ಮಣ್ಣಿನ ಮಗ" ಎಂಬುದಕ್ಕಿಂತ ಉತ್ತಮ ಪನ್ ಬೇಕೆ!

Sunday, October 4, 2009

ದ್ವೈತಮು ಸುಖಮಾ...

ಸ್ನೇಹಿತರ ವಲಯದಲ್ಲಿ ಈ ವಿಷಯ ಒಮ್ಮೆ ಚರ್ಚೆಗೆ ಬಂತು. ತ್ಯಾಗರಾಜರು ಜನ್ಮತಃ ಅದ್ವೈತಿಗಳಾಗಿದ್ದಾಗ್ಯೂ ತಮ್ಮ ಕೃತಿಗಳಲ್ಲಿ ದ್ವೈತವನ್ನೇ ಎತ್ತಿ ಹಿಡಿದಿದ್ದಾರೆಯೇ?

ಮೊದಲಿಗೆ, ದ್ವೈತ-ಅದ್ವೈತಗಳ ಚರ್ಚೆಯೇ ಆಧ್ಯಾತ್ಮದ ಅತ್ಯುನ್ನತ ಸ್ತರಕ್ಕೆ ಸಂಬಂಧಿಸಿದ್ದು. ಸಾಧಕನು ಆ ಸ್ತರವನ್ನು ಮುಟ್ಟುವವರೆಗೂ, ಅದರಲ್ಲೂ ವ್ಯಾವಹಾರಿಕ ಸ್ತರದಲ್ಲಂತೂ ಇವರಡರ ನಿಲುವಿನಲ್ಲೂ ಆತನಿಗೆ ಹೆಚ್ಚೇನು ವ್ಯತ್ಯಾಸ ಕಾಣದು. ಶಂಕರರು "ಭಜಗೋವಿಂದಂ" ಎಂದರೂ, ಮಧ್ವರು "ಪ್ರೀಣಯಾಮೋ ವಾಸುದೇವಂ" ಎಂದರೂ ಆ ನಮನವು ಮುಟ್ಟುವುದು ಕೇಶವನನ್ನೇ. ಅನುಸಂಧಾನವು ಬೇರೆಯಿರಬಹುದು, ಗಮ್ಯದೃಷ್ಟಿ ಬೇರೆಯಿರಬಹುದು, ಆದರೆ ಇವು ಸಾಧಕನಿಗೆ ಬಿಟ್ಟಿದ್ದಲ್ಲವೇ? ಹೀಗಾಗಿ, ಇನ್ನೂ ಆಧ್ಯಾತ್ಮಸಾಧನೆಯ ತಳದ ಮೆಟ್ಟಿಲಲ್ಲೆಲ್ಲೋ ಇರುವ, ಅಥವ ಶ್ರೀ ರಾಮಾನುಜರು ಹೇಳುವಂತೆ "ಅನಾದಿ ಪಾಪವಾಸನಾಮಹಾರ್ಣವಾಂತರ್ನಿಮಗ್ನ"ರಾದ, "ಕರ್ಮಪಾಶಪ್ರಗ್ರಥಿತ"ರಾದ ನಮಗೆ, ನಮ್ಮ ಈಗಿನ ಮಟ್ಟದಲ್ಲಿ ಈ ಚರ್ಚೆ ಎಷ್ಟು ಪ್ರಸ್ತುತ ಎಂಬ ಬಗ್ಗೆಯೇ ನನಗೆ ಸಂದೇಹವಿದೆ.

ಇದು ಒಂದುಕಡೆಗಾದರೆ, ತ್ಯಾಗರಾಜಸ್ವಾಮಿಗಳಂಥ ಅನುಭಾವಿಗಳ, ಜೀವನ್ಮುಕ್ತರ ವಿಷಯದಲ್ಲೂ ಈ ಚರ್ಚೆ ಅಪ್ರಸ್ತುತವೆಂದೇ ನನ್ನ ಅನಿಸಿಕೆ. ತ್ಯಾಗರಾಜರಂತೂ ತಮ್ಮ ಕೃತಿಗಳಲ್ಲೆಲ್ಲೂ 'ತತ್ತ್ವ' ವಿಚಾರವನ್ನು ಚರ್ಚಿಸಿದ್ದಾಗಲಿ, ದ್ವೈತವೋ ಅದ್ವೈತವೋ ಅಥವ ಮತ್ತಾವುದೋ ಒಂದು ನಿಲುವನ್ನು ತಳೆದಿದ್ದಾಗಲಿ ಕಾಣೆ. ತಮ್ಮ ಕೃತಿಗಳುದ್ದಕ್ಕೂ ಅವರು ಪ್ರತಿಪಾದಿಸುವ ಏಕೈಕ ನಿಲುವೆಂದರೆ ಭಕ್ತಿ - ಅದಕ್ಕೆ ಸಂವಾದಿಯಾಗಿ ಬರುವ ಆತ್ಮನಿವೇದನೆ. ಈ ಭಕ್ತಿಕೂಡ ಭಾವಪ್ರಪಂಚದಿಂದ ಹೆಕ್ಕಿ ತೆಗೆದ ರತ್ನವೇ ಹೊರತು ಶಾಸ್ತ್ರದ ಮೊಸರು ಕಡೆದು ಪಡೆದ ನವನೀತವಲ್ಲ. ಆ ಭಕ್ತಿಯೂ ಅದೆಷ್ಟು ಉತ್ಕೃಷ್ಟ ಮಟ್ಟದ್ದೆಂದರೆ, ಅವರ ಕೃತಿಗಳಲ್ಲಿ ಎದ್ದು ಕಾಣುವ ಭಕ್ತಿಭಾವವನ್ನು ಮರೆತು ಇತರರ ಸಂಗೀತರಚನೆಗಳಂತೆ ಕೇವಲ ಸಂಗೀತದ ಸೊಬಗನ್ನು ಆಸ್ವಾದಿಸುವುದು ಸಾಧ್ಯವೇ ಇಲ್ಲ ಎನ್ನಬಹುದು.

ಭಕ್ತಿಯ ಮೂಲ ಅಗತ್ಯವೇ ದ್ವೈತದ ಸ್ಥಿತಿ, ಒಪ್ಪೋಣ. ಆದರೆ ಅದು ಶ್ರೀ ಮಧ್ವರ ಸಂಪೂರ್ಣ, ಅವಿಚ್ಛಿನ್ನ ದ್ವೈತದ ಪ್ರತಿಪಾದನೆಯಲ್ಲ. ತ್ಯಾಗರಾಜರು ಭಕ್ತಿಯನ್ನು ಪ್ರತಿಪಾದಿಸಿದರೂ ಮಾಧ್ವ ಮಹಾಪ್ರಮೇಯಗಳಾದ ಹರಿಸರ್ವೋತ್ತಮತ್ವ, ಜಗತ್ಸತ್ಯತ್ವ, ಪಂಚಭೇದ, ತಾರತಮ್ಯ, ಮೋಕ್ಷದಲ್ಲೂ ನಿರ್ಬಾಧಿತವಾಗಿ ಉಳಿಯುವ ಜೀವೇಶಭೇದದ ಸ್ಥಿತಿ ಇತ್ಯಾದಿ ತಾಂತ್ರಿಕ ವಿವರ (jargon)ಗಳನ್ನು ಎಲ್ಲೂ ಒಪ್ಪಿ ಪ್ರತಿಪಾದಿಸಿದಂತೆ ಕಾಣೆ. ಬದಲಿಗೆ ಈ ಕೆಳಗಿನ ಸಾಲುಗಳನ್ನು ನೋಡಿ

ಅನ್ನಿ ನೀವನುಚು ಎಂಚಿನವಾಣಿಕಿ ಆಶ್ರಮಭೇದಮುಲೇಲ
ಕನ್ನುಕಟ್ಟು ಮಾಯಲನಿ ಎಂಚುವಾಣಿಕಿ ಕಾಂತಲ ಭ್ರಮಲೇಲ ದಶರಥ ಬಾಲ ೧

(ಎಲ್ಲಾ ನೀನೇ ಎಂದು ತಿಳಿದವನಿಗೆ ಆಶ್ರಮಭೇದವೇಕೆ, (ಸರ್ವವೂ) ಕಣ್ಣುಕಟ್ಟು, ಮಾಯೆ ಎಂದು ಅರಿತವನಿಗೆ ಹೆಣ್ಣಿನ ಭ್ರಮೆಯೇಕೆ)

ಇರಲಿ, ಚರ್ಚೆಯಂತೂ ಬಂತು. ಪ್ರಶ್ನೆಯನ್ನೆತ್ತಿದ ಮಿತ್ರರು ತಮ್ಮ ಅಭಿಪ್ರಾಯಕ್ಕೆ ಉದಾಹರಣೆಯಾಗಿ ಪ್ರಸ್ತುತ ಪಡಿಸಿದ್ದು "ದ್ವೈತಮು ಸುಖಮಾ..." ಎಂಬ ಕೃತಿಯನ್ನು. ರೀತಿಗೌಳ ರಾಗದಲ್ಲಿರುವ ಈ ಕೃತಿ ಹೀಗಿದೆ:

ದ್ವೈತಮು ಸುಖಮಾ ಅದ್ವೈತಮು ಸುಖಮಾ ಪ
ಚೈತನ್ಯಮಾ ವಿನು ಸರ್ವ ಸಾಕ್ಷಿ ವಿಸ್ತಾರಮುಗಾನು ದೆಲ್ಪುಮು ನಾತೋ ಅ.ಪ

ಗಗನ ಪವನ ತಪನ ಭುವನ ದ್ಯಾವಾನಿಲಲೋ ನಗಧರಾಜ ಶಿವೇಂದ್ರಾದಿ ಸುರುಲಲೋ
ಭಗವದ್ಭಕ್ತವರಾಗ್ರೇಸರುಲಲೋ ಬಾಗ ರಮಿಂಚೇ ತ್ಯಾಗರಾಜಾರ್ಚಿತ ೧

ಈ ಪ್ರಶ್ನೆಯನ್ನೆತ್ತುವವರೆಲ್ಲ ಸಾಮಾನ್ಯವಾಗಿ ಮುಂದೊಡ್ಡುವ ಕೃತಿಯೇ ಇದು. ಸ್ವಯಂಸ್ಪಷ್ಟವಾಗಿರುವ ಈ ಕೃತಿಯನ್ನು ಮತ್ತಷ್ಟು ತಿಳಿಗೊಳಿಸಿ ಹೇಳಬೇಕಾದರೆ, ಪಂಚಭೂತಗಳಲ್ಲೂ ತ್ರಿಮೂರ್ತಿಗಳಲ್ಲೂ ಭಕ್ತಶಿಖಾಮಣಿಗಳಲ್ಲೂ ಚೈತನ್ಯವಾಗಿ ನಲಿಯುವ ಸರ್ವಸಾಕ್ಷಿಯಾದ ಪರಮಾತ್ಮನನ್ನು ಕೇಳುತ್ತಾರೆ ತ್ಯಾಗರಾಜರು, "ದ್ವೈತವು ಸುಖವೋ ಅದ್ವೈತವೋ, ವಿಸ್ತಾರವಾಗಿ ತಿಳಿಸು"

"ಪಂಚಭೂತಗಳಲ್ಲೂ ತ್ರಿಮೂರ್ತಿಗಳಲ್ಲೂ ಭಕ್ತಶಿಖಾಮಣಿಗಳಲ್ಲೂ ಚೈತನ್ಯವಾಗಿ ನಲಿಯುವ ಸರ್ವಸಾಕ್ಷಿ"ಯೊಂದು ಜೀವಾತ್ಮಕ್ಕಿಂತ ಪ್ರತ್ಯೇಕ ಅಸ್ಥಿತ್ವಹೊಂದಿದೆಯಿಂದು ಹೇಳಿದಂತಾಯಿತಲ್ಲವೇ? ಅದರಲ್ಲೂ "ದ್ವೈತಮು ಸುಖಮಾ, ಅದ್ವೈತಮು ಸುಖಮಾ" ಎಂಬ ಪಲ್ಲವಿಯ ಹಿನ್ನೆಲೆಯಲ್ಲಿ ಈ ಚರಣ ವ್ಯಂಗ್ಯಾತ್ಮಕವಾಗಿ ದ್ವೈತವನ್ನೇ ಧ್ವನಿಸುವುದಿಲ್ಲವೇ - ಇದು ಸಾಹಿತ್ಯದಲ್ಲೂ ಪ್ರವೃತ್ತಿಯಿರುವ ಮಿತ್ರರ ಪ್ರಶ್ನೆ.

ಇರಬಹುದು, ತ್ಯಾಗರಾಜರು ದ್ವೈತವನ್ನೇ ಸರಿಯೆಂದಲ್ಲಿ ಅಚ್ಚರಿಯೇನಿದೆ? ಅವರು ಅಷ್ಟು ತೀವ್ರವಾಗಿ ಪ್ರತಿಪಾದಿಸುವ ಭಕ್ತಿ, ದ್ವೈತಚಿಂತನೆಯಲ್ಲದೇ ಮತ್ತೇನು? ದ್ವೈತಭಾವವಿಲ್ಲದೆ ಭಕ್ತಿ ಸಾಧ್ಯವೇ?

ಆದರೆ ಹೀಗೆ ಅವರು ದ್ವೈತವನ್ನೋ ಅದ್ವೈತವನ್ನೋ ಪ್ರತಿಪಾದಿಸಿದ್ದಾರೆಂದು ಸಾಧಿಸುವಮೊದಲು ಪಲ್ಲವಿಯಯನ್ನು ಮತ್ತೊಮ್ಮೆ ಗಮನಿಸುವುದು ಸೂಕ್ತ. ಅದರ ಸೂಕ್ಷ್ಮ ಅವಗಾಹನೆ ಮತ್ತೊಂದು ದೃಷ್ಟಿಕೋನವನ್ನು ತೆರೆದಿಡುತ್ತದೆ. "ದ್ವೈತಮು ಸುಖಮಾ, ಅದ್ವೈತಮು ಸುಖಮಾ" - ಗಮನಿಸಬೇಕಾದ ಅಂಶವೆಂದರೆ, "ಸುಖಮಾ" ಎನ್ನುವ ಪ್ರಯೋಗ. ದ್ವೈತವು ಸರಿಯೋ ಅದ್ವೈತವೋ ಎಂಬುದನ್ನು ಸಾಧಿಸುವ ಇರಾದೆ ತ್ಯಾಗರಾಜರಿಗಿದ್ದಲ್ಲಿ, "ದ್ವೈತಮು ತರಮಾ, ಅದ್ವೈತಮು ತರಮಾ" (ಅಥವಾ "ನಿಜಮಾ") ಎಂದು ಬಳಸುತ್ತಿದ್ದರೇನೋ! ಆಗ, ಮುಂದೆ ಬರುವ ಚರಣ ದ್ವೈತವೇ ಸತ್ಯವೆಂಬ ನಿಲುವನ್ನು ಮತ್ತಷ್ಟು ಪುಷ್ಟಿಗೊಳಿಸುತ್ತಿತ್ತು. ಆದರೆ "ಸುಖಮಾ" ಎಂಬ ಬಳಕೆಯಿಂದ, ಸರಿ-ತಪ್ಪಿನ ಪ್ರಶ್ನೆಗಿಂತ, ರಾಮಭಕ್ತಿಗೆ ಯಾವ ಭಾವ ಹೆಚ್ಚು ಸುಖ ಎಂಬ ಚಿಂತನೆಯಷ್ಟೇ ಸ್ಫುಟಗೊಳ್ಳುತ್ತದೆ. ಕೇವಲ ಇದೊಂದು ಪದವನ್ನು ಬಳಸುವ ಮುನ್ನ ತ್ಯಾಗರಾಜರು ಇಷ್ಟೆಲ್ಲ ಯೋಚಿಸಿದ್ದಿರಬೇಕೆಂದು ನಾನು ಹೇಳಹೊರಟಿಲ್ಲ. ಆದರೆ ಭಾವವು ಭಾಷೆಯಲ್ಲಿ ರೂಪುಗೊಳ್ಳುವ ಪರಿಯನ್ನಷ್ಟೇ ವಿವರಿಸಹೊರಟಿದ್ದು. ಕವಿಯೊಬ್ಬ ತನ್ನ ಭಾವಲಹರಿಗೆ ಮಾತಿನ ರೂಪ ಕೊಡುವಾಗ ಭಾವಕ್ಕೆ ತಕ್ಕುದಾದ ಹಲವು ಪದಗಳು ಮೂಡಿ ನಿಲ್ಲುತ್ತವೆ. ಮನದಲ್ಲಿ ಮೂಡಿದ ಭಾವಕ್ಕೆ ಅತ್ಯುಚಿತವಾದ ಪದದ ಆಯ್ಕೆ ಕವಿಯಲ್ಲಿ ತಾನೇ ತಾನಾಗಿ ನಡೆಯುತ್ತದೆ - ಇದೊಂದು ಭಾವದ ವ್ಯಾಪಾರ, ಬುದ್ಧಿಯದಲ್ಲ. ಈ ಸಂದರ್ಭಕ್ಕೆ "ಸುಖಮಾ" ಮತ್ತು "ತರಮಾ" ಎರಡೂ ಪದಗಳು ಒಂದೇ ಭಾವದ ಸೂಚಕ ಖಂಡಿತಾ ಅಲ್ಲ. ಆದ್ದರಿಂದ ಕವಿಗೆ ಇಷ್ಟು ಸಹಜವಾಗಿ "ಸುಖಮಾ" ಎಂಬ ಪದ ಮನದಲ್ಲಿ ಹೊಳೆದಿರಬೇಕಾದರೆ, ಅವರ ಮನದಲ್ಲಿ ದ್ವೈತಾದ್ವೈತಗಳ ಸರಿ-ತಪ್ಪುಗಳ ವಿಮರ್ಶೆಗಿಂತಾ ಆ ನಿಲುವುಗಳ ಭಕ್ತಿಸೌಖ್ಯವೇ ಚಿಂತನೆಯ ವಸ್ತುವಾಗಿದ್ದಿರಬೇಕೆನ್ನುವುದು ಸಹಜ. ಅಂತಿಮವಾಗಿ ದ್ವೈತವು ನಿಜವೋ ಅದ್ವೈತವೋ ಅದು ತ್ಯಾಗರಾಜರಿಗೆ ಮುಖ್ಯವಲ್ಲ. ಬದಲಿಗೆ, ಯಾವ ಮಾರ್ಗದಲ್ಲಿ ಭಕ್ತಿ ಹೆಚ್ಚು ತೀವ್ರ, ನಿಶ್ಕಲ್ಮಶ, ಸುಖ - ಇದು ಅವರ ಪ್ರಶ್ನೆಯೆನಿಸುತ್ತದೆ.

ಅದ್ವೈತ ಚಿಂತನೆಯ ಪರಿಸರದಲ್ಲಿ ಹುಟ್ಟಿ ಬೆಳೆದ ತ್ಯಾಗರಾಜರಿಗೆ, ಅದ್ವೈತವೇ ಅಂತಿಮ ಸತ್ಯವೆಂಬ ಅರಿವಿದೆ. ಆದರೆ ಭಾವುಕ ಮನಸ್ಸೇಕೋ ಇದನ್ನೊಲ್ಲದು. ನಾನೀನೆಂಬ ಭೇದವಳಿದ ಅದ್ವೈತದ ಅರಿವಿನಲ್ಲಿ ಏನಿದೆ? ಏನೂ ಇಲ್ಲ. ಭಕ್ತನೂ ಇಲ್ಲ, ಭಕ್ತಿಯೂ ಇಲ್ಲ. "ರಾಮಭಕ್ತಿಸಾಮ್ರಾಜ್ಯ"ದಲ್ಲಿ ಓಲಾಡುವ ಕವಿಯ ಮನಸ್ಸಿಗೆ, ಈ ನಿರ್ಗುಣ ನಿರುಪಾಧಿಕ ನಿರ್ವೇದಕವಾದ ಅದ್ವೈತ ಸಿದ್ಧಿ ಹೇಗೆ ತಾನೇ ರುಚಿಸೀತು? ಈ ಪರಮಾತ್ಮ-ಜೀವಾತ್ಮ ಭೇದ ತೋರುವ ಮಾಯಾ ಪ್ರಪಂಚದಲ್ಲಿ ಭಕ್ತಿಯೂ ಮಾಯೆಯೇ ಹೌದು, ಉತ್ಕಟ ಭಕ್ತಿ, ಯಥಾರ್ಥ ಜ್ಞಾನಕ್ಕೆ, ತನ್ಮೂಲಕ ಅದ್ವೈತದ ಸಿದ್ಧಿಗೆ ದಾರಿ - ಇರಬಹುದು. ಆದರೆ ಭಕ್ತಿಯ ರಸವನ್ನೀಂಟಿದ ಮನಸ್ಸಿಗೆ, ಗಮ್ಯಕ್ಕಿಂತಾ ಮಾರ್ಗವೇ ರಮ್ಯ, ಅದೇ ಸುಖ. ಆದ್ದರಿಂದ ಭಕ್ತಿಯು ಮಾಯೆಯೆನ್ನುವುದಾದರೆ ಅದ್ವೈತದ 'ವಾಸ್ತವ'ಕ್ಕಿಂತ ದ್ವೈತಸ್ಥಿತಿಯ 'ಮಾಯೆ'ಯೇ ಸುಖವಲ್ಲವೇ? ಇದು, ನನಗನ್ನಿಸುವ ಮಟ್ಟಿಗೆ ಈ ರಚನೆಯ ಕವಿಸಮಯ.

ತ್ಯಾಗರಾಜರು ಅದೆಂಥಾ ಮೃದುಮನದ, ಹದನುಡಿಯ ಕವಿಯೆಂದರೆ, ಅವರೆಲ್ಲೂ ಈ ತತ್ತ್ವ-ಸಿದ್ಧಾಂತಗಳ ಒಣಚರ್ಚೆಯ ಗೊಡವೆಗೆ ಹೋಗುವುದೇ ಇಲ್ಲ. ಈ ರೀತಿಯ ತತ್ತ್ವದ ಇಬ್ಬಂದಿಗಳು ಎದುರಾದಾಗೆಲ್ಲಾ ಅವರು ಕಂಡುಕೊಳ್ಳುವುದು ತಾರ್ಕಿಕನ ಪರಿಹಾರವಲ್ಲ, ಕವಿಯ ಪರಿಹಾರವನ್ನು. ಈ ಸಾಲುಗಳನ್ನು ನೋಡಿ:

ಎವರನಿ ನಿರ್ಣಯಿಂಚಿರಿರಾ ನಿನ್ನೆಟ್ಲಾರಾಧಿಂಚಿರಿರಾ, ನರವರು ಪ
ಶಿವುಡನೋ ಮಾಧವುಡನೋ ಕಮಲ ಭವುಡನೋ ಪರಬ್ರಹ್ಮಮನೋ ನಿ ಅ.ಪ

ಶಿವಮಂತ್ರಮುನಕು ಮಾಜೀವಮು ಮಾಧವ ಮಂತ್ರಮುನಕು ರಾಜೀವಮು ಈ
ವಿವರಮುದೆಲಿಸಿನ ಘನುಲಕು ಮ್ರೋಕ್ಕೆದ ವಿತರಣಗುಣ ತ್ಯಾಗರಾಜವಿನುತ ನಿ ೧

(ನಿನ್ನನ್ನು ಯಾರೆಂದು ನಿರ್ಣಯಿಸಿದರು (ಕೊನೆಗೆ)? ಶಿವನೆಂದೋ, ಮಾಧವನೆಂದೋ, ಕಮಲಭವನೆಂದೋ ಅಥವಾ ಪರಬ್ರಹ್ಮವೆಂದೋ?

"ನಮಶ್ಶಿವಾಯ" ಎಂಬ ಶಿವಮಂತ್ರದ ಜೀವಾಕ್ಷರ "ಮ". ಹಾಗೇ "ನಮೋ ನಾರಾಯಣಾಯ" ಎಂಬ ನಾರಾಯಣಮಂತ್ರದ ಜೀವಾಕ್ಷರ "ರಾ" (ಈ ಅಕ್ಷರಗಳನ್ನು ತೆಗೆದರೆ ಆ ಮಂತ್ರಗಳು ವಿರುದ್ಧಾರ್ಥವನ್ನೇ ಕೊಡುತ್ತವೆ, ಆದ್ದರಿಂದ). ಈ ಎರಡು ಜೀವಾಕ್ಷರಗಳು ಕೂಡಿ ಆದದ್ದೇ "ರಾಮ". ಈ ಮರ್ಮವನ್ನು ತಿಳಿದ ಮಹಾತ್ಮರನ್ನು ವಂದಿಸುತ್ತೇನೆ)

ತಮ್ಮ ಮನೋರಾಜ್ಯಕ್ಕೆ ಪ್ರಸ್ತುತವಲ್ಲದ ಸೈದ್ಧಾಂತಿಕ ಚರ್ಚೆಗಳಿಂದ ಅದೆಷ್ಟು ಸೊಗಸಾಗಿ ತಮ್ಮನ್ನು ಹೊರಪಡಿಸಿಕೊಳ್ಳುತ್ತಾರೆ, ನೋಡಿ. ಭಕ್ತಿಯೋ, ಭಕ್ತನ ಉದ್ಧಾರವೋ ಅಲ್ಲದ ಬೇರಾವ ವಿಚಾರವೂ ಅವರಿಗೆ ಹೊಲ್ಲ. ತಾನಾಯಿತು, ರಾಮನಾಯಿತು, ರಾಮಭಕ್ತಿಯಾಯಿತು. ಆಗೀಗ ತನಗೆ ಸರಿಕಂಡ ಸರಳ ತತ್ತ್ವವನ್ನು ಜನಕ್ಕೆ ಬೋಧಿಸುವುದುಂಟು, ಅದೂ ಸ್ವಗತದ ಧಾಟಿಯಲ್ಲಿ. ಪುರಂಧರ-ಕನಕರೇ ಮೊದಲಾದವರಲ್ಲಿ ಕಾಣಬರುವ ತತ್ತ್ವಬೋಧನೆಯ ಬಿರುಸೂ ಕಟುವೂ ಕಾಣಬರುವುದಿಲ್ಲ ತ್ಯಾಗರಾಜರಲ್ಲಿ. ಬೋಧಿಸಿದ್ದೆಲ್ಲಾ ಸರಳ, ನೇರ, ಚಿಕ್ಕ-ಚೊಕ್ಕ. ಈ ಸಾಲುಗಳನ್ನು ನೋಡಿ:

"ತುರಕವೀದಿಲೋ ವಿಪ್ರುನಿಕಿ ಪಾನಕ ಪೂಜ ಚೇಸಿ ಏಮಿ ಚೇಯಕುಂಡಿ ಏಮಿ"

(ತುರಕಬೀದಿಯಲ್ಲಿ ವಿಪ್ರರಿಗೆ ಪಾನಕಪೂಜೆ ಮಾಡಿ ಏನು ಮಾಡದಿದ್ದರೆ ಏನು?)

ಮತ್ತೆ ಇದು;

"ಬಹುಜನ್ಮಂಬುನಿ ವಾಸನಯುತುಲೈ ಅಹಿವಿಷಸಮವಿಷಯಾಕೃಷ್ಟುಲೈ
ಬಹಿರಾನನುಲೈ ತ್ಯಾಗರಾಜು ಭಜಿಯಿಂಚೇ ಶ್ರೀ ರಾಮುನಿ ತೆಲಿಯಕ (ಯಜ್ಞಾದುಲು ಸುಖಮನುವಾರಿಕಿ ಸಮಮಜ್ಞಾನುಲು ಗನ ಲೇ)"

(ಬಹುಜನ್ಮದ ವಾಸನೆಹೊಂದಿ, ಹಾವಿನ ವಿಷದಂಥ ವಿಷಯಗಳಿಂದ ಆಕರ್ಷಿತರಾಗಿ, ಅಂತ್ರರ್ದೃಷ್ಟಿಯನ್ನು ಕಳೆದುಕೊಂಡು ಶ್ರೀ ರಾಮನನ್ನು ತಿಳಿಯದೇ, ಯಜ್ಞಾದಿಗಳೇ ಸುಖವೆನ್ನುವರಂಥ ಅಜ್ಞಾನಿಗಳು ಇಲ್ಲ)

ಇನ್ನು ಮಂತ್ರ-ತಂತ್ರ, ಶಾಸ್ತ್ರ-ಸಂಪ್ರದಾಯಗಳ ಗೋಜಲಂತೂ ದೂರವೇ ಉಳಿಯಿತು. ಈ ಗೋಜಿನ ಪ್ರಶ್ನೆಗೆ ತ್ಯಾಗರಾಜರ ಉತ್ತರ "ಮನಸು ಸ್ವಾಧೀನಮೈನ ಘನುನಿಕಿ ಮರಿ ಮಂತ್ರ ತಂತ್ರಮುಲೇಲ" (ಮನಸು ಸ್ವಾಧೀನವಿರುವ ಮಹಾತ್ಮನಿಗೆ ಮತ್ತೆ ಮಂತ್ರತಂತ್ರಗಳೇಕೆ)

ಆದ್ದರಿಂದ ತ್ಯಾಗರಾಜರ ಕೃತಿಗಳಲ್ಲಿ ಶಾಸ್ತ್ರ-ಸಿದ್ಧಾಂತಗಳ ಪ್ರತಿಪಾದನೆಯನ್ನರಸುವುದಕ್ಕಿಂತ ಅಮೃತಪ್ರಾಯವಾದ "ಸ್ವರರಾಗಸುಧಾರಸಯುತ ಭಕ್ತಿ"ಯ ಸೊಬಗನ್ನು ಆಸ್ವಾದಿಸುವುದೇ ಹೆಚ್ಚು ಸುಖವಲ್ಲವೇ?

Saturday, August 29, 2009

ಕನ್ನಡ ಕಾವ್ಯ ನಡೆದು ಬಂದ ದಾರಿ - ಒಂದು ಹಿನ್ನೋಟ

ಇದನ್ನು ಈಗ ಬರೆಯುವ ವಿಶೇಷ ಸಂದರ್ಭವೇನು ಇರಲಿಲ್ಲ. ಹೀಗೇ ಸ್ನೇಹಿತರ ವಲಯದಲ್ಲಿ ಪದ್ಯ-ಗದ್ಯ, ನವ್ಯ-ನವೋದಯ ಕಾವ್ಯಮಾರ್ಗಗಳ ಬಗ್ಗೆ ಚರ್ಚೆ ಎದ್ದುದರಿಂದ ಅದರ ಬಗ್ಗೆ ಒಂದೆರಡು ವಿಷಯ ಬರೆಯಹೊರಟೆ. ಆದರೆ ಅದು ಒಂದು ಸಂಪೂರ್ಣ ಲೇಖವವೇ ಆಗಬಹುದೆನಿಸಿತು. ಅದೇ ಇದು.

ಸಾಹಿತ್ಯ, ಜೀವನದ ಪ್ರತಿಫಲನ ಎನ್ನುತ್ತಾರೆ. ಜೀವನ ಎಂದೂ ನಿಲ್ಲದೇ ನಿರಂತರವಾಗಿ ಹರಿಯುವ ನದಿ ಎನ್ನಬಹುದಾದರೆ, ಸಾಹಿತ್ಯ ಕೂಡ ಹಾಗೆಯೇ. ನದಿ, ನಮಗೆ ಯಾವುದೋ ಕಾಲಘಟ್ಟದಲ್ಲಿ ಕಾಣುವಂತೆ ಬರೀ ಹರಿಯುವ ನೀರಲ್ಲ; ಕಾಲಾಂತರದಲ್ಲಿ ನದಿಯೇ ಬದಲಾಗುತ್ತದೆ, ಅದರ ಪಾತ್ರ ಬದಲಾಗಬಹುದು, ಕೆಲವೆಡೆ ಆಳ ಹೆಚ್ಚಬಹುದು, ಮತ್ತೆ ಕೆಲವೆಡೆ ತಗ್ಗಬಹುದು, ನದಿಯೇ ಮಾಯವಾಗಬಹುದು. ಸಾಹಿತ್ಯ ಕೂಡ ಇದರಂತೆಯೇ ನಿರಂತರ ಚಲನಶೀಲ. ಕಾಲಾಂತರದಲ್ಲಿ ಅದರ ನಿಲುವು, ಒಲವು, ಭಾವ-ಭಂಗಿ ನಮೂನೆಗಳೇ ಬದಲಾಗಬಹುದು. ಜೀವನದಂತೆಯೇ ಇಲ್ಲೂ ನಿರಂತರ ಕೊಡುಕೊಳ್ಳುವಿಕೆ ನಡೆದೇ ಇರುತ್ತದೆ. ಸಮಾಜವು ಸಾಹಿತ್ಯವನ್ನೂ, ಸಾಹಿತ್ಯವು ಸಮಾಜವನ್ನೂ ಪ್ರಭಾವಿಸುತ್ತವೆ; ಹಾಗೆಯೇ ಭಾಷೆ ಇನ್ನೊಂದು ಭಾಷೆಯನ್ನು

ವೈಯಕ್ತಿಕವಾದ ಅಭಿವ್ಯಕ್ತಿ ಕಾಲಕ್ರಮದಲ್ಲಿ ಸ್ಪಷ್ಟ ರೂಪು-ರೇಷೆ-ಲಕ್ಷಣ-ಶೈಲಿಗಳನ್ನು ರೂಪಿಸಿಕೊಳ್ಳುತ್ತಿದ್ದಂತೆ ಅದಕ್ಕೊಂದು ಸಾರ್ವತ್ರಿಕ ನಮೂನೆ (standard format) ದೊರಕಿತೆನ್ನಿಸುತ್ತದೆ. ಹೀಗೆ ರೂಪಗೊಂಡಿದ್ದು ಛಂದಸ್ಸು, ಅಲಂಕಾರ ಇತ್ಯಾದಿ. ಕಾಲಕ್ರಮದಲ್ಲಿ ಇದು ಸರ್ವಸಮ್ಮತವಾಗಿ, ಕಾವ್ಯ "ಹೀಗೇ" ಇರಬೇಕೆಂದು ಶಾಸ್ತ್ರದ ರೂಪ ಪಡೆದಿರಬೇಕು. ಮುಂದೆ ಒಂದು ಭಾಷೆಯಲ್ಲಿ ಬಳಕೆಯಲ್ಲಿದ್ದ ಛಂದಸ್ಸು, ವೃತ್ತ ಇತ್ಯಾದಿ ಸಾಹಿತ್ಯ ಪರಿಕರಗಳು (literary components) ಮತ್ತೊಂದು ಭಾಷೆಯಲ್ಲೂ ಬಳಕೆಗೆ ಬಂದುವು. ಆದಿಕಾಲದ ಕನ್ನಡ ಸಾಹಿತ್ಯ ಕೂಡ ಹೀಗೆಯೇ ತನ್ನ ಶೈಲಿ-ನಮೂನೆ-ಭಾಷೆಗಳನ್ನು ಸಂಸ್ಕೃತದಿಂದ ಭಾರಿ ಪ್ರಮಾಣದಲ್ಲಿ ಎರವಲು ಪಡೆದದ್ದನ್ನು ಕಾಣುತ್ತೇವೆ.

ಅದೇನೇ ಇರಲಿ, ಸಾಹಿತ್ಯ ರಚನೆ ಜನಸಾಮಾನ್ಯರ ಮಟ್ಟದಿಂದ ಬಹು ಮೇಲೇರಿ, ಅದೊಂದು ಕಲೆ-ಶಾಸ್ತ್ರದ ಸ್ಥಾನ ಪಡೆದಿದ್ದಂತೂ ನಿಜ. ಕಲೆ ಎಂದಮೇಲೆ ಅದಕ್ಕೊಂದು ಪ್ರತಿಭೆಯೂ, ಶಾಸ್ತ್ರವೆಂದಮೇಲೆ ಅದಕ್ಕೊಂದು ನಿಶ್ಚಿತ ವಿಧಿ-ವಿಧಾನಗಳೂ "ಮಾಡು-ಬೇಡ"ಗಳೂ (do's and dont's) ಇರಬೇಕಲ್ಲವೇ? ಕಾವ್ಯದಲ್ಲಿ ಎಳ್ಳಷ್ಟು "ದೋಷ" ಸುಳಿದರೂ ಕಣ್ಣಿನಲ್ಲಿ ಬಿದ್ದ ಕಸ ಇಡೀ ಕಣ್ಣನ್ನೇ ಮುಚ್ಚುವಂತೆ ಅದು ಇಡಿಯ ಕಾವ್ಯವನ್ನೇ ಕೆಡಿಸುತ್ತದೆ ಎನ್ನುವ ಕಾಲವೊಂದಿತ್ತು.

ಅವಗುಣಮಿನಿತಾದೊಡಮಾ ಕವಿತಾಬಂಧಮನಶೇಷಮಂ ದೂಷಿಸುಗುಂ
ಸವಿಳಾಸ ಲೋಲಲೋಚನ ವಿವರಮನೆಡೆವೆತ್ತ ಕಸದ ವೋಲನವರತಂ (ಕವಿರಾಜಮಾರ್ಗ)

ಆದ್ದರಿಂದ ಕಾವ್ಯದೋಷಗಳನ್ನು ನಿವಾರಿಸಲೆಂದೇ ಕಾವ್ಯದ ಗುಣ-ಲಕ್ಷಣ-ದೋಷಗಳನ್ನು ತಿಳಿಸುವ ಗ್ರಂಥಗಳು ಬಂದುವು. ಕವಿರಾಜ ಮಾರ್ಗ (ಕ್ರಿ.ಶ.೯ನೆಯ ಶತಮಾನ) ಅಂತಹ ಒಂದು ಗ್ರಂಥ. ಕನ್ನಡದಲ್ಲಿ ನಮಗೆ ಸಿಗುವ ಮೊದಲ "ಕಾವ್ಯ-ಲಕ್ಷಣ" ಗ್ರಂಥ ಇದು. ಆದರೂ ಕಾವ್ಯದ ಗುಣ ಲಕ್ಷಣಗಳನ್ನು ತಿಳಿಸುವ ಗ್ರಂಥ ಇದಾದ್ದರಿಂದ ಕನ್ನಡದಲ್ಲಿ ಕಾವ್ಯ ಇನ್ನೂ ತುಂಬಾ ಹಿಂದಿನಿಂದಲೇ ಇದ್ದಿರಬೇಕೆಂಬುದು ಸುಲಭವಾದ ತರ್ಕ, ಇರಲಿ. ನಾನು ಹೇಳಹೊರಟಿದ್ದು, ಸುಮಾರು ೮-೯ನೆಯ ಶತಮಾನದಿಂದ ೧೨ನೆಯ ಶತಮಾನದ ವರೆಗಿನ ಹಳೆಗನ್ನಡ ಕಾವ್ಯಕ್ಕೆ ಅದರದೇ ಬಂಧ-ಛಂದಗಳು, ನಿಲುವು-ನಡೆಗಳು, ಭಾಷೆ-ಭಾವ-ರಸಗಳ ಕಟ್ಟುಪಾಡು - ಸಾಕಷ್ಟು ಕಠಿಣವಾಗೇ ಇತ್ತು. ಈ ಎಲ್ಲ ಕಡುಕಟ್ಟುಗಳ ನಡುವೆಯೇ ಕವಿಯ ಪ್ರತಿಭೆ ವಿಜೃಂಬಿಸಬೇಕಿತ್ತು, ವಿಜೃಂಭಿಸಿತು ಕೂಡ. ನಡೆ ತಪ್ಪಿದರೆ ಹೀನಾಯ-ಅವಮಾನ ಕಟ್ಟಿಟ್ಟ ಬುತ್ತಿ. ಕಾವ್ಯಕ್ಕಿಂತಾ ಪಾಂಡಿತ್ಯದ ದರ್ಪವೇ ಹೆಚ್ಚಿದ್ದ ಕಾಲ. ಹೀಗಾಗಿ, ಇದು ಕವಿಯೊಬ್ಬನ 'ಅಹಂ'ನ ಪ್ರಶ್ನೆಯಾಗಿದ್ದರಿಂದ "ದೋಷಾರೋಪಣೆ" ಮಾಡುವಮೊದಲು ವಿಮರ್ಶಕನೂ ಅದೆಷ್ಟು ಎಚ್ಚರ ವಹಿಸಿದ್ದರೂ ಸಾಲದು. "ಫಣಿಪತಿಯ ಫಣಾರತ್ನಮುಮಂ ರನ್ನನ ಕೃತಿರತ್ನಮುಮಂ ಪೇಳ್ ಪರೀಕ್ಷಿಪಂಗೆಂಟೆರ್ದೆಯೇ" (ಹಾವಿನ ಹೆಡೆಯ ರತ್ನವನ್ನೂ ರನ್ನನ ಕೃತಿರತ್ನವನ್ನೂ ಪರೀಕ್ಷಿಸಬೇಕೆನ್ನುವನಿಗೆ ಎಂಟೆದೆಯಿರಬೇಕು) ಎನ್ನುತ್ತಾನೆ ರನ್ನ. ಹೀಗಾಗಿ ಅದು ಕವಿ-ಕವಿಗಳ, ಕವಿ-ವಿಮರ್ಶಕರ, ವಿಮರ್ಶಕ-ವಿಮರ್ಶಕರ ದರ್ಪದ ಗದಾಯುದ್ಧವೇ ಆಗಿತ್ತು. ಕಾವ್ಯಕನ್ನಿಕೆ ಸಂಸ್ಕೃತ ಭೂಯಿಷ್ಟವಾದ ಕಂದ-ವೃತ್ತ-ಚಂಪೂ ಛಂದಸ್ಸಿನ ಗುರು-ಲಘು-ಮಾತ್ರೆ-ಗಣ-ಯತಿಗಳ ಆಭರಣ-ಅಲಂಕಾರಗಳಲ್ಲಿ ಬಂದಿ. ಈ ವಜ್ರದ ಮೇಲ್ಮುಸುಕನ್ನು ಮೆಲ್ಲನೆ ಸರಿಸಿ ನೋಡಿದಾಗಷ್ಟೇ ಅವಳ ಕಣ್ಣ ಮಿಂಚು ಹೊಳೆಯಬೇಕು (ಅದಿದ್ದರೆ). ಹೀಗೆ ಈ ಅಲಂಕಾರಗಳ ವೈಭವವನ್ನೂ ಮೀರಿ ವಿಜೃಂಭಿಸಬೇಕಾದರೆ ಕಾವ್ಯಕ್ಕೆ ನಿಜವಾದ ಸತ್ವವಿರಬೇಕಿತ್ತು. ಹಳೆಗನ್ನಡದ ಪಂಪ, ರನ್ನನೇ ಮುಂತಾದ ಕವಿಪರಂಪರೆ, ಈ ಜರಡಿಯಲ್ಲಿ ಉಳಿದ ಗಟ್ಟಿ ಕಾಳುಗಳು. ಉಳಿದಂತೆ ಕೇವಲ ಛಂದಸ್ಸು-ಪದ-ಅಲಂಕಾರಗಳ ಹಿಂದೆ ಬಿದ್ದು ಕಾವ್ಯಕ್ಕೆ ಎರವಾಗಿ ಕಳೆದುಹೋದ ಪುಡಿ ಕವಿಗಳೆಷ್ಟೋ!

ಬದಲಾವಣೆಗೊಳಗಾಗುವುದೇ ಜೀವಂತವಾದ, ಜೀವನಕ್ಕೆ ಸಂಬಂಧಿಸಿದ ಎಲ್ಲದರ ಲಕ್ಷಣ. ಕಾವ್ಯ ಇದಕ್ಕೆ ಹೊರತಲ್ಲ. ಕಾವ್ಯಕ್ಕೆ ಬಿಗಿದ ಸಂಕಲೆಗಳು ಉಸಿರುಗಟ್ಟಿಸತೊಡಗಿ ಕಾವ್ಯ ನಿಂತ ನೀರಾಗತೊಡಗಿದಂತೆ ಈ ಕಟ್ಟುಗಳನ್ನು ತುಸು ಸಡಿಲಿಸಿ, ಕಾವ್ಯಕನ್ನಿಕೆ ಸ್ವಲ್ಪ ಸರಾಗವಾಗಿ ಉಸಿರಾಡಿಸುವ ಅಗತ್ಯ ಕಂಡುಬಂತು. ಭಾಷೆ, ಛಂದಸ್ಸುಗಳೆಲ್ಲವನ್ನೂ ಸಂಸ್ಕೃತದಿಂದ ಸಾರಾಸಗಟಾಗಿ ಎರವಲು ತರುವ ಅಗತ್ಯವಾದರೂ ಏನು? ಉದಾಹರಣೆಗೆ ಯತಿನಿಯಮ. ಪ್ರತಿಯೊಂದು ಪದದಲ್ಲೂ ಯಾವುದೋ ಒಂದು ಅಕ್ಷರದ ಮೇಲೆ ಒತ್ತು ಬೀಳುವ ಮೂಲಕ ಅದರ ಅರ್ಥ ಸ್ಫುಟಗೊಳ್ಳುತ್ತದೆ. ಹೀಗೆ ನಾವು ಮಾತಾಡುವಾಗ ಪ್ರತಿಯೊಂದು ಪದದ ಅರ್ಥಕ್ಕನುಗುಣವಾಗಿ ಕೆಲವು ಅಕ್ಷರದಲ್ಲಿ ನಿಲ್ಲಿಸಿ/ಒತ್ತು ಹಾಕಿ ನುಡಿಯುತ್ತೇವೆ. ಇದು ಯತಿ ನಿಯಮ. ಆದರೆ ಪದ್ಯವೊಂದರ ಛಂದಸ್ಸಿಗೆ ಅದರದೇ ಅಕ್ಷರ ಗಣದ ನಿಯಮವೂ ಇರುತ್ತದೆ (ಅದು ಅರ್ಥವನ್ನನುಸರಿಸಬೇಕೆಂದೇನೂ ಇಲ್ಲ). ಹೀಗಾದಾಗ, ಛಂದೋನಿಯಮಕ್ಕೆ ಕಟ್ಟುಬಿದ್ದು ಪದಗಳನ್ನು ಅರ್ಥಹೀನವಾಗಿ ಒಡೆಯುವ ಸಾಧ್ಯತೆಗಳಿವೆ. ಹೀಗಾಗಬಾರದೆಂದೇ ಛಂದೋಬದ್ಧ ರಚನೆಯಲ್ಲೂ ಯತಿನಿಯಮವನ್ನು ಪಾಲಿಸಬೇಕೆಂಬುದು ಸಂಸ್ಕೃತ ಪದ್ಯ ರಚನೆಯ ನಿಯಮಗಳಲ್ಲೊಂದು. ಉದಾಹರಣೆಗೆ ಈ ಶ್ಲೋಕ ನೋಡಿ:

ಟಾಟವೀ ಗಜ್ವಲ ಪ್ರವಾಹಪಾಲಿಸ್ಥಲೇ ಗಳೇsವಲಂಬ್ಯ ಲಂಬಿತಾಂ ಭುಜಂಗ ತುಂಗ ಮಾಲಿಕಾಂ

ದಪ್ಪಕ್ಷರದಲ್ಲಿರುವ ಅಕ್ಷರಗಳು ಲಯಕ್ಕೂ ಅರ್ಥಕ್ಕೂ ಅನುಗುಣವಾಗೇ ಒತ್ತನ್ನು ಪಡೆಯುತ್ತವೆ. ಸಂಸ್ಕೃತದಲ್ಲಿ ಇದನ್ನು ಸುಲಭವಾಗಿ ಸಾಧಿಸಬಹುದು, ಏಕೆಂದರೆ ಸಂಸ್ಕೃತದ ಪದಗಳ ಜಾಯಮಾನವೇ ಅದು. ಆದರೆ ಕನ್ನಡದಲ್ಲಿ ಅದು ಕಷ್ಟ. ಉದಾಹರಣೆಗೆ ಪಂಪನ ಈ ಸಾಲುಗಳನ್ನು ನೋಡಿ.

ಚಾಗದಭೋಗದಕ್ಕರದಗೇಯದಗೊಟ್ಟಿಯಲಂಪಿನಿಂಪು

ಳ್ಗಾಗರಮಾದಮಾನಿಸರೆ ಮಾನಿಸರಂತವರಾಗಿ ಪುಟ್ಟದೇ

ನಾಗಿಯುಮೇನೊತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್

ಕೋಗಿಲೆಯಾಗಿಪುಟ್ಟುವುದು ನಂದನದೊಳ್ ಬನವಾಸಿ ದೇದೊಳ್

ಇಲ್ಲಿ ಮೂರಕ್ಷರದ ಅಕ್ಷರಗಣದಿಂದ ಲಯ ಬರುತ್ತದೆ ಆದರೆ ಲಯಬದ್ಧವಾಗಿ ಉಚ್ಛರಿಸಿದಾಗ ಅದರ ಅರ್ಥವುಳಿಯುವುದಿಲ್ಲ. ಮತ್ತೆ ಅರ್ಥಕ್ಕನುಗುಣವಾಗಿ ಪಠಿಸಿದರೆ ಲಯದ ಅನುಭವವಾಗುವುದಿಲ್ಲ. ಕನ್ನಡದಲ್ಲೂ ಯತಿನಿಯಮಗಳನ್ನು ಅನುಸರಿಸಿರುವ ರಚನೆಗಳಿಲ್ಲ ಎಂದಲ್ಲ, ಉದಾಹರಣೆಗೆ, ಸೋಮೇಶ್ವರ ಶತಕದ ಈ ಸಾಲುಗಳನ್ನು ನೋಡಿ:

ಪ್ರಜೆಯಂ ಪಾಲಿಸ ಬಲ್ಲೊಡಾತನರಸಂ ಕಯ್ಯಾಶೆಯಂ ಮಾಡದಂ
ನಿಜಮಂತ್ರೀಶ್ವರ ತಂದೆತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ

ಆದರೆ ಅದು ಅಪವಾದ ಅಷ್ಟೇ. ಕವಿರಾಜಮಾರ್ಗಕಾರನೇನೋ ಯತಿವಿಲಂಘನೆಯು ಕನ್ನಡದ ವಿಶೇಷ ಲಕ್ಷಣವೆಂದು ಕರೆದು ಈ ಅಪವಾದವನ್ನು ಸೂತ್ರಬದ್ಧಗೊಳಿಸಿಯೂ ಬಿಟ್ಟ. ಆದರೆ ಒಟ್ಟಂದದಲ್ಲಿ ಈ ನಿಯಮಗಳೆಲ್ಲಾ ಸಂಸ್ಕೃತದ ಜಾಯಮಾನಕ್ಕೆ ಒಗ್ಗೀತೇ ಹೊರತು ಕನ್ನಡದ ಜಾಯಮಾನಕ್ಕಲ್ಲ. ಹಾಗಿದ್ದಮೇಲೆ ಕನ್ನಡಕ್ಕೆ ಒಗ್ಗದ್ದನ್ನೂ ಸಂಸ್ಕೃತದಿಂದ ಎರವಲು ತಂದು ಅದರ ಕಟ್ಟುಪಾಡಿನಲ್ಲಿ ಕಾವ್ಯವನ್ನು ಸಿಲುಕಿಸಬೇಕೇಕೆ? ಕ್ಲಿಷ್ಟವಾದ ಅಕ್ಷರ ಗಣಗಳು, ವೃತ್ತದ ಸುತ್ತುಗಳು ಇಲ್ಲದೆ ಕಾವ್ಯಸೃಷ್ಟಿ ಸಾಧ್ಯವೇ ಇಲ್ಲವೇ? ಮುಂದಿನ ಸುಮಾರು ಮುನ್ನೂರು-ನಾನೂರು ವರ್ಷ (೧೨ರಿಂದ ೧೬ನೆಯ ಶತಮಾನ) ಕಾವ್ಯಮಾರ್ಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆದುವು. ಸರಳ ಸುಂದರವಾದ ಷಟ್ಪದಿ-ರಗಳೆಗಳು ಜನಪ್ರಿಯವಾದದ್ದು ಹೀಗೆ. ಸರಳ ನಡೆ, ತಿಳಿಯಾದ ಭಾಷೆ, ಆದರೆ ಪ್ರಖರವಾದ ಕಾವ್ಯಗುಣ ಹೊಸ ಕಾವ್ಯಮಾರ್ಗದ ವಿಶೇಷವಾಯಿತು. ನಡುಗನ್ನಡ ಕಾವ್ಯದ ಕುಮಾರವ್ಯಾಸ-ಹರಿಹರ-ರಾಘವಾಂಕ; ಜಾನಪದ ಸೊಗಡಿನ ಸಾಂಗತ್ಯಗಳ ರತ್ನಾಕರವರ್ಣಿ; ತ್ರಿಪದಿಗಳ ಸರ್ವಜ್ಞ ಯಾರಿಗೆ ಗೊತ್ತಿಲ್ಲ. ಗದುಗಿನ ಭಾರತ, ತ್ರಿಪದಿ, ಸಾಂಗತ್ಯಗಳು, ದಾಸರ ಪದಗಳು ಜನಸಾಮಾನ್ಯರ ಮನೆ ಮನಗಳಲ್ಲಿ ನಲಿದುವು. ಆದರೂ ಈ ಬದಲಾವಣೆ ಸುಲಭದ್ದೇನಾಗಿರಲಿಲ್ಲ. ಹಳೆಗನ್ನಡದಿಂದ ಬಂದ ಕಾವ್ಯದ ಸತ್ವವನ್ನು ಕಳೆದುಕೊಳ್ಳದೇ, ಅನಗತ್ಯವೆನಿಸಿದ ನಿಯಮಗಳನ್ನು ಮುರಿದು (ಅಥವ ಕೈಬಿಟ್ಟು), ಹೊಸ ನಿಯಮವನ್ನು ಅನುಸರಿಸಿ, ಹೊಸ ನಮೂನೆ-ವಸ್ತುಗಳನ್ನು ಬಳಸಿ ಕಾವ್ಯ ಬರೆಯುವುದು, ಅದರಲ್ಲೂ ಅದು "ಪಂಡಿತ" ಜನರಲ್ಲಿ ಒಪ್ಪಿತಗೊಳ್ಳುವುದು ಒಂದು ಸವಾಲಾಗೇ ಇತ್ತು. ಲಕ್ಷ್ಮೀಶನ ಈ ಸಾಲುಗಳನ್ನು ನೋಡಿ:

ಕೆನೆವಾಲ ಕಡೆದು ನವನೀತಮಂ ತೆಗೆದು ಬಾ
ಯ್ಗಿನಿದಾಗಿ ಸವೆಯದದರೊಳಗೆ ಪುಳಿವಿಡಿದು ರಸ
ವನೆಗೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ ಕಾವ್ಯಮಂ ಕೇಳ್ದು ಮಥಿಸಿ
ಜನಿಸಿದ ಪದಾರ್ಥಮಂ ತಿಳಿದು ನೋಡದೆ ವಿನೂ
ತನ ಕವಿತೆಯೆಂದು ಕುಂದಿಟ್ಟು ಜರಿದೊಡೆ ಪೇಳ್ದ
ವನೊಳಾವದೂಣೆಯಂ ಜಾಣರಿದನರಿದು ಮತ್ಸರವ ಮರೆದಾಲಿಸುವುದು

(ಕೆನೆ ಹಾಲನ್ನು ಕಡೆದು ಬೆಣ್ಣೆ ತೆಗೆದರೆ ಅದನ್ನು ಸವಿಯುವುದು ಬಿಟ್ಟು, ಇದು ಹುಳಿಹಿಡಿದ ಹಾಲು, ಆದ್ದರಿಂದ ಚೆನ್ನಲ್ಲ ಎಂದರೆ ಕರೆದ ಹಸುವಿಗೆ ಅದರಿಂದ ಕುಂದೇನು? ಹಾಗೆಯೇ ಕಾವ್ಯವನ್ನು ಕೇಳಿ, ಅದನ್ನು "ಕಡೆದು" ಅದರ ಬೆಣ್ಣೆಯನ್ನು ಸವಿಯದೆ, ಇದು ಹೊಸ ಕವಿತೆ, ಸಾಂಪ್ರದಾಯ ಬಾಹಿರ (ಆದ್ದರಿಂದ ಚೆನ್ನಾಗಿಲ್ಲ) ಎಂದು ಜರಿದರೆ, ಅದರಲ್ಲಿ ಕವಿಯ ತಪ್ಪೇನು? ಆದ್ದರಿಂದ ಜಾಣರಾದವರು ಇದನ್ನು ಅರಿತು, ಮತ್ಸರವನ್ನು ಮರೆತು ಆಲಿಸಿ - ಜೈಮಿನಿ ಭಾರತ)

ನಿಯಮಗಳಲ್ಲಿ ಸಡಿಲಿಕೆ ಬಂದರೂ, ಹೊಸ ನಿಯಮಗಳು ಬಂದರೂ ನಿಯಮಗಳೇ ಇಲ್ಲವಾಗಲಿಲ್ಲ. ಆದರೂ ಇದೇ ಕಾಲಘಟ್ಟದಲ್ಲಿ ಬಂದ ವಚನಸಾಹಿತ್ಯ ಮಾತ್ರ ಸಾಲುಗಳ ಉದ್ದ, ಗಾತ್ರಗಳ ಯಾವ ನಿಯಮವನ್ನೂ ಪಾಲಿಸದೇ, ಅದರ "ಆಳ"ದ ಬಗೆಗೆ ಮಾತ್ರ ಗಮನ ನೀಡಿತು. ಬಸವಣ್ಣನವರ ಮಾತಿನಲ್ಲಿ ಹೇಳುವುದಾದರೆ, "ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು". ಅದೇ ಅಲ್ಲವೇ ಕಾವ್ಯ? ನುಡಿ ಹಾಗಿದ್ದಮೇಲೆ, ಅದು ಎಷ್ಟು ಉದ್ದ, ಯಾವ ನಡೆಯಲ್ಲಿದ್ದರೆ ಏನು? ಹಾಗೆ ನೋಡಿದರೆ ಇತ್ತೀಚಿನ ದಶಕಗಳಲ್ಲಿ ನಾವು ನವ್ಯದಲ್ಲಿ ಏನು ಪ್ರಯೋಗ ಮಾಡಿದೆವೋ ಅದು ವಚನಗಳಲ್ಲಿ ಆಗಲೇ ನಡೆದಿತ್ತು (atleast, with respect to physical format). ೧೨ನೆಯ ಶತಮಾನದಲ್ಲಿ ನಡೆದ ಈ ಸಾಹಿತ್ಯಕ ಕ್ರಾಂತಿ, ಅವರು ನಡೆಸಿದ ಸಾಮಾಜಿಕ ಕ್ರಾಂತಿಯ ಸಂಕೇತವೂ ಆಗಿತ್ತು. ಆದರೂ ನಡುಗನ್ನಡದ ಸರಳ ನಿಯಮ, ಸರಸ ಕಾವ್ಯಗಳ ಯುಗದಲ್ಲಿ ವಚನಸಾಹಿತ್ಯದ ನಿಯಮರಾಹಿತ್ಯದ ಈ ಕ್ರಾಂತಿ ಒಂದು exception ಆಗಿ ಉಳಿತಷ್ಟೇ ಹೊರತು, ಸಾಹಿತ್ಯದ ಶೈಲಿಯಲ್ಲಿ ಅದು ಮುಂದೆ ಪರಂಪರೆಯಾಗಿ ಬೆಳೆಯಲಿಲ್ಲ. ತದನಂತರದ ನಿಜಗುಣಶಿವಯೋಗಿಗಳಂಥವರೂ ಸಹ (ಕ್ರಿ.ಶ.೧೬೦೦) ಸ್ವರ ವಚನಗಳೆಂಬ ನಿಬದ್ಧ ಪ್ರಕಾರನ್ನೇ ಬಳಸಿಕೊಂಡರು

ಮತ್ತೆ ಕೆಲವು ಕಾಲ ಸರಿದಂತೆ ಸಾಹಿತ್ಯ ಮತ್ತೆ ನಿಂತ ನೀರು. ಇದುವರೆಗೂ "ದೇಸೀ" ಆಗಿದ್ದ ಬದುಕು-ಭಾಷೆ-ಸಾಹಿತ್ಯ, ಬ್ರಿಟಿಷರ ಆಳ್ವಿಕೆಯಲ್ಲಿ ಫಕ್ಕನೆ ಪಾಶ್ಚಾತ್ಯ ಪ್ರಭಾವಕ್ಕೊಳಗಾಯಿತು. ೧೯ನೆಯ ಶತಮಾನದ ಕೊನೆಗೆ ಪಡುವಣ ದಿಕ್ಕಿನಿಂದ ಬೀಸಿದ ಈ ಹೊಸ ಗಾಳಿ ನಮ್ಮ ನಡೆ-ನುಡಿ-ನೋಟಗಳಲ್ಲಿ ಹೊಸ ಬದಲಾವಣೆಯನ್ನೇ ತಂದಿತು. ಕಾಲದಿಂದ ಜುಂಗು ಹಿಡಿದು ನಿಂತಿದ್ದ ಶತಮಾನದ ಸಾಹಿತ್ಯಕ್ಕೀಗ "ನವೋದಯ"ವಾಯಿತು. ಆಗ ಇಂಗ್ಲಿಷಿನಲ್ಲಿ ಜನಪ್ರಿಯವಾಗಿದ್ದ ರೊಮಾಂಟಿಕ್ ಸಾಹಿತ್ಯ ಕನ್ನಡ ಸಾಹಿತ್ಯದ ಮೇಲೆ ಪ್ರಭಾವ ಬೀರಿತು. ರೊಮಾಂಟಿಕ್ ಕವಿಗಳಾದ Wordsworth, Shelly, Tennyson ಮುಂತಾದವರಿಂದ ಸ್ಫೂರ್ತಿಗೊಂಡರು ನವೋದಯದ ಕನ್ನಡ ಕವಿಗಳು. ನಡು/ಹಳೆಗನ್ನಡದ ಪುರಾಣ, ಪ್ರಸಿದ್ಧವ್ಯಕ್ತಿಗಳನ್ನು ಬಿಟ್ಟು, ಪ್ರಕೃತಿ, ಪ್ರೀತಿ-ಪ್ರೇಮ, ಅದರ ದೈವಿಕತೆ, (ಸಭ್ಯತೆ ಮೀರದ) ಪ್ರಣಯ, ನವಿರಾದ ಭಾವನೆಗಳು ಇವು ಹೊಸಕಾವ್ಯದ ವಸ್ತುಗಳಾದುವು. ಇಂಗ್ಲಿಷಿನ ಸಾನೆಟ್ ಇತ್ಯಾದಿ ಛಂದಃಪ್ರಕಾರಗಳನ್ನು ಹೋಲುವ ಹೊಸ ಹೊಸ ಛಂದಸ್ಸುಗಳು ಕನ್ನಡದಲ್ಲಿ ಬಳಕೆಗೆ ಬಂದುವು. ಕಾವ್ಯ ಚಿಕ್ಕಚಿಕ್ಕ ಗೀತೆಗಳ ರೂಪ ಪಡೆಯಿತು. ಭಾಷೆ ಜನ ಬಳಕೆಗೆ ಹತ್ತಿರ ಬಂತು. ಮಾತು ಭಾವವನ್ನು ಅನುಸರಿಸಿ ಬರಬೇಕೇ ಹೊರತು ಭಾವ ಮಾತಿಗೆ ಬಂದಿಯಾಗಬಾರದು ಎನ್ನುವ ನಿಲುವು ಮನ್ನಣೆ ಪಡೆಯಿತು. ಇದುವರೆಗೂ ಇದ್ದ ಛಂದೋನಿಯಮಗಳನ್ನು ದಿಕ್ಕರಿಸಿ, ಭಾವಕ್ಕೆ ತಕ್ಕಂಥ ಸಹಜ ನಡೆ/ಲಯಗಳನ್ನು ಬಳಸಿ ಬರೆಯುವ ಕ್ರಮ ಬಂತು. ನಡುಗನ್ನಡದಲ್ಲಿ ಕಾವ್ಯ ಸರಸವಾಗಿದ್ದರೂ, ಜನದ ಮಟ್ಟದಿಂದ ಒಂದು ಹೆಜ್ಜೆ ಮೇಲಿತ್ತು; ಈಗ ಹೊಸಗನ್ನಡದ ನವೋದಯದಲ್ಲಿ ಇದು ಇನ್ನಷ್ಟು ಸರಸವಾಯಿತು, ಜನದ ಮಟ್ಟಕ್ಕೆ ಇಳಿದುಬಂತು, ನಾವು ಸುತ್ತಮುತ್ತಲ ನಿರ್ದಿಷ್ಟ ವಸ್ತು/ವಿಷಯ/ಅನುಭವಗಳಿಗೆ ಚಿನ್ನದ ಕಟ್ಟು ಹಾಕುವ ಕವಿತೆಗಳಾದುವು. ಗೇಯ ಗುಣ, ಭಾವದ ಲಾಲಿತ್ಯ ಈ ಕಾವ್ಯದ ಮುಖ್ಯ ಅಂಶ. ಕುವೆಂಪು, ಬೇಂದ್ರೆ. ಪುತಿನ, ನರಸಿಂಹಸ್ವಾಮಿ ಮುಂತಾದ ಅತ್ಯುತ್ತಮ ಕವಿಗಳನ್ನು ಕೊಟ್ಟಿತು, ಈ ಘಟ್ಟ.

ಇದರಂತೆಯೇ ನಮ್ಮ ಮೇಲೆ ಪ್ರಭಾವ ಬೀರಿದ ಮತ್ತೊಂದು ಸಾಹಿತ್ಯವೆಂದರೆ ಗ್ರೀಕ್ ಸಾಹಿತ್ಯ. ಗ್ರೀಕ್ ಪುರಾಣಗಳನ್ನಾಧರಿಸಿದ ರುದ್ರನಾಟಕಗಳು ಕನ್ನಡಕ್ಕೆ ಭಾಷಾಂತರಗೊಂಡುವು. ಆ ನಾಟಕಗಳ ವಸ್ತು-ರೌದ್ರತೆ-ಭಾಷೆಯ ತೂಕಕ್ಕೆ ಸರಿದೂಗಿಸಬಲ್ಲಂತೆ ಅವುಗಳನ್ನು ನಮ್ಮ ಹಳೆಗನ್ನಡ ಭಾಷೆಯಲ್ಲಿ ಭಾಷಾಂತರಿಸಲಾಯಿತು. ಕ.ವೆಂ.ರಾಘವಾಚಾರ್ಯರ ಈಡಿಪಸ್ ಇಂಥಾ ನಾಟಕಗಳಲ್ಲೊಂದು. ಇದು ಭಾಷಾಂತರವಾದರೆ, ಇಡೀ ನಾಟಕದ ವಸ್ತು-ಪಾತ್ರಗಳನ್ನು ನಮ್ಮ ಪೌರಾಣಿಕ ಸನ್ನಿವೇಶ-ಪಾತ್ರಗಳಿಗೆ ಅಳವಡಿಸಿ ಮೂಲ ನಾಟಕವನ್ನು ನಮ್ಮ ಸನ್ನಿವೇಶದಲ್ಲಿ ಪುನಃಸೃಷ್ಟಿಸುವ "ರೂಪಾಂತರ" ಕಾರ್ಯಗಳೂ ನಡೆದುವು. ಬಿಎಂಶ್ರೀಯವರ "ಅಶ್ವತ್ಥಾಮನ್" ಇಂಥದ್ದೊಂದು ಉತ್ತಮ ಕೃತಿ. ಮೂಲ ಗ್ರೀಕ್ ನಾಟಕ ಸಾಪೋಕ್ಲೀಸನ "ಅಯಾಜ್" ನ ರೂಪಾಂತರ ಇದು.

ಆದರೆ ಕಾವ್ಯ ಎಂದರೆ ಬರೀ ಪ್ರಕೃತಿ ಸೌಂದರ್ಯ, 'ದೈವೀ'ಪ್ರೇಮ, ನದಿ, ಕಣಿವೆ, ಬೆಟ್ಟ, ಬಾನಾಡಿಗಳನ್ನಷ್ಟೇ ಬಣ್ಣಿಸಿ ತೃಪ್ತಿ ಪಟ್ಟುಕೊಂಡರೆ ಸಾಕೇ? ಕೋಗಿಲೆಯ ಕೂಗನ್ನೇ ಅದೆಷ್ಟುದ್ದ ಎಳೆಯಲು ಸಾಧ್ಯ? ಮನುಷ್ಯನ ಮನದಾಳದಲ್ಲಿ ಕ್ರೂರಮೃಗ ಹೂಂಕರಿಸುತ್ತಿರುವಾಗ ಬರೀ ಅವನ ಔನ್ನತ್ಯವನ್ನಷ್ಟೇ ಕೊಂಡಾಡಿದರೆ ಅದು ಹಸೀ ಸುಳ್ಳಲ್ಲವೇ. ಮನದಾಳದ ವ್ಯಾಪಾರ, ಮನುಷ್ಯ-ಸಮಾಜ-ಪರಿಸರದ ಸಂಬಂಧ, ಕೊಡುಕೊಳ್ಳುವಿಕೆ, ಅವನ ನೂರೆಂಟು ಗೋಳುಗಳು, ಸಣ್ಣಪುಟ್ಟ ನೋವು-ನಲಿವುಗಳಿಗೆ ಕಣ್ಣುಮುಚ್ಚಿ ಬರೀ ಪ್ರಕೃತಿಯನ್ನಾರಾಧಿಸುವವ ಅದೆಂಥ ಕವಿಯಾದಾನು? ಕಾವ್ಯಕ್ಕೂ ಬದುಕಿಗೂ ನಡುವೆ ಕಂಡುಬರುವ ಒಂದು ಬಗೆಯ ವೈರುಧ್ಯ, ಭ್ರಮನಿರಸನಕ್ಕೆಡೆಗೊಟ್ಟಿತು. ಈ ಸರಣಿಯ ಆಲೋಚನೆಗಳು ಜಗತ್ತಿನ ಸಾಹಿತ್ಯವಲಯದಲ್ಲಿ ಹರಿಯತೊಡಗಿ, ಹೊಸಬಗೆಯ ಕಾವ್ಯ ಸೃಷ್ಟಿಗೆ ದಾರಿಗೊಟ್ಟಿತು. ಫ್ರಾಯ್ಡನ ಸುಪ್ತಮನೋವಿಶ್ಲೇಷಣೆಯಿಂದ ಹಿಡಿದು ಮಾರ್ಕ್ಸನ ಸಮತಾವಾದದವರೆಗು ಅನೇಕ ಆಲೋಚನಾಧಾರೆಗಳು ಈ ಕಾವ್ಯಮಾರ್ಗವನ್ನು ರೂಪಿಸಿದುವು; ಹಾಗೆಯೇ ಚಿತ್ರಕಲೆ-ಸಂಗೀತಗಳೇ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ನಡೆದ ಹೊಸ ಪ್ರಯೋಗಗಳು ತಮ್ಮದೇ ಕೊಡುಗೆಯನ್ನು ನೀಡಿದುವು. ಇದನ್ನೇ ಕನ್ನಡದಲ್ಲಿ ನವ್ಯ ಕಾವ್ಯದ ಯುಗ ಎನ್ನಲಾಯಿತು. ಸ್ವಾತಂತ್ರೋತ್ತರ ದಿನಗಳಲ್ಲಿ ಬಳಕೆಗೆ ಬಂದ ಈ ಪ್ರಕಾರದ ಮೊದಲ ಕವಿ ಬಹುಶಃ ಗೋಪಾಲ ಕೃಷ್ಣ ಅಡಿಗರು. ಸ್ವತಃ ನವೋದಯ ಕವಿಯಾಗಿ "ಯಾವ ಮೋಹನ ಮುರಳಿ ಕರೆಯಿತು", "ನಗು ನನ್ನ ನಲ್ಲೆ" ಇತ್ಯಾದಿ ಸುಂದರ ಕವಿತೆಗಳನ್ನು ನೀಡಿದ ಅಡಿಗರು, ಅನಂತರದ ದಿನಗಳಲ್ಲಿ ನವ್ಯದ ಕಡೆ ಹೊರಳಿದರು. "ಹಿಮಗಿರಿಯ ಕಂದರ", "ಭೂಮಿಗೀತ" ದಂತಹ ಶಕ್ತ ಕವನಗಳು ಹೊರಬಂದವು. ನಿಸಾರ್, ಲಂಕೇಶ್, ರಾಮಚಂದ್ರಶರ್ಮ, ರಾಮಾನುಜಂ ಮುಂತಾದ ಪ್ರಮುಖ ಕವಿಗಳು ನವ್ಯದಲ್ಲಿ ಬರೆದರು.

ನವೋದಯದಲ್ಲಿ ನವಿರು ಭಾವಗಳಿಗೂ, ಅವಕ್ಕನುಗುಣವಾದ ಸರಳ, ಸಹಜ, ಸುಂದರ ಲಯಕ್ಕೂ ಒತ್ತುಕೊಟ್ಟಿದ್ದರೆ, ನವ್ಯದ ಮಾರ್ಗದಲ್ಲಿ ಭಾವ, ಅಭಾವ, ಅದರ ತೀವ್ರತೆ-ಸಂಕೀರ್ಣತೆಗಳೇ ಪ್ರಧಾನವಾದುವು. ಅದರ ಸಹಜ ಹರಿವಿಗೆ "ಅಡ್ಡಿ"ಯುಂಟುಮಾಡುವ ಯಾವುದೂ ಕಾವ್ಯದಲ್ಲಿ ಇರತಕ್ಕದ್ದಲ್ಲ. ಆದ್ದರಿಂದ ಕಾವ್ಯ ಮನದಲ್ಲಿ ಧುಮ್ಮಿಕ್ಕುವ ಭಾವದ ಲಯವನ್ನು ಅನುಸರಿಸಬೇಕೇ ಹೊರತು, ಅದಾವುದೋ ಎರವಲು ತಂದ ಮೂರಕ್ಷರದ್ದೋ ಎರಡಕ್ಷರದ್ದೋ ಲಯವನ್ನಲ್ಲ. ಸರ್ವತೋಮುಖ ಸ್ವಾತಂತ್ರ್ಯ, ಸ್ವ'ಚ್ಛಂದ' ನವ್ಯಕಾವ್ಯದ ಹೆಗ್ಗುರುತು. ಅದಕ್ಕೆಂದೇ, ಅದುವರೆಗಿನ "ಶಿಷ್ಟ" ಸಾಹಿತ್ಯದಲ್ಲಿ ಮಡಿವಂತಿಕೆಯಿಂದ ಬಿಟ್ಟಿದ್ದ ಕಾಮ ಇಲ್ಲಿ ಪ್ರಮುಖ ವಸ್ತುವಾಯಿತು. ಇದ್ದದ್ದನ್ನು ಕೆಡವಿ ಹೊಸದನ್ನು ಕಟ್ಟುವ ಉತ್ಸಾಹವೇ ಇಲ್ಲಿನ ಮೂಲಮಂತ್ರ. ಆದ್ದರಿಂದಲೇ, ನವ್ಯಕಾವ್ಯದಲ್ಲಿ ಸ್ವಚ್ಛಂದದ ಇನ್ನೊಂದು ಮುಖವಾದ "ಲಯ"ವಿಹೀನತೆಯೇ ಮುಖ್ಯ ಗುರುತು ಎಂಬಂತಾಯಿತು. ಇದನ್ನೇ ನವ್ಯಕಾವ್ಯದ ವಿಮರ್ಶಕರು "ನಿಯತಿಕೃತ ನಿಯಮ ರಾಹಿತ್ಯ" ಎಂದರು.

ಹಾಗಿದ್ದರೆ ಕಾವ್ಯಕ್ಕೂ ಗದ್ಯಕ್ಕೂ ಏನು ವ್ಯತ್ಯಾಸ? "ಪದ್ಯ"ವೆಂದು ಬರೆದ ತುಂಡು ಸಾಲುಗಳನ್ನು ಒಂದರಪಕ್ಕ ಒಂದು ಜೋಡಿಸಿದರೆ ಗದ್ಯವಾಗುವುದಿಲ್ಲವೇ? ಇದು ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ. ಇದಕ್ಕೆ ಸಾಮಾನ್ಯವಾಗಿ "ಹೌದು" ಎಂದು ಉತ್ತರಿಸಲಾಗುತ್ತದೆ. ಆದರೆ, ಅದು ಹಾಗಲ್ಲ. ನವ್ಯಕಾವ್ಯ ನಿಯತಿಕೃತ ನಿಯಮಗಳನ್ನು ಮೀರಿದರೂ ಅದು ಮೊತ್ತವಾಗಿ ನಿಯಮವಿಹೀನವೇನೂ ಅಲ್ಲ. ಅದು ಕಣ್ಣಿಗೆ ಕಾಣುವ (ಅಥವ ಕಿವಿಗೆ ಕೇಳುವ) "ಅಸಹಜ" ಲಯವನ್ನು ನಿರಾಕರಿಸಿತೇ ಹೊರತು, ಸಾರಾಸಗಟಾಗಿ ಲಯವನ್ನೇ ಅಲ್ಲ. ಅದರ ನಿಲುವು, ಕಾವ್ಯ ಭಾವದ ಲಯವನ್ನು ಅನುಸರಿಸಬೇಕೆಂಬುದಷ್ಟೇ. ಕಾವ್ಯವನ್ನು ನಿರ್ದಿಷ್ಟ ಛಂದಸ್ಸಿನಲ್ಲಿ ಇರುಕುವ ಬದಲು, ಕವನವೊಂದು ತನ್ನದೇ ಛಂದಸ್ಸನ್ನು ಕಂಡುಕೊಳ್ಳಬೇಕೆನ್ನುವುದು ಇದರ ಆಶಯ. ಇದನ್ನು ಬಿಟ್ಟರೆ, ಕಾವ್ಯಕ್ಕೆ ಅನ್ವಯಿಸುವ ಮೂಲಭೂತ ನಿಯಮಗಳೆಲ್ಲಾ ಇಲ್ಲಿಯೂ ಅನ್ವಯಿಸುತ್ತವೆ. ಕಾವ್ಯಕ್ಕೆ ಅದರದೇ ಆದ ಭಾಷೆಯಿದೆ - ಅದು matter-of-factly ಎನಿಸುವ ಗದ್ಯದ ಭಾಷೆಗಿಂತ ತುಸು ಭಿನ್ನವಾದ ನಾಟಕೀಯ ಭಾಷೆ (ಉದಾ: ಬರುತ್ತೀಯಾ - ಬರುವೆಯಾ); ಗದ್ಯಕ್ಕೆ ಒಂದು ಭೌತಿಕ ಲಯವಿಲ್ಲ, ಆದರೆ ಕಾವ್ಯದಲ್ಲಿ ಲಯವಿದೆ, ಅದು ಭಾಷೆಯ ಲಯವಿರಬಹುದು, ಭಾವದ ಲಯವಿರಬಹುದು ಅಥವ ಅಕ್ಷರಗಳ ಲಯವಿರಬಹುದು, ಮುಖ್ಯವೆಂದರೆ, ಅದು ಆ ಕವನದ್ದೇ ಆದ ಲಯ, ಹೊರಗಿನಿಂದ ಹೇರಿದ್ದಲ್ಲ. ಈ ದೃಷ್ಟಿಯಿಂದ, ಕಾವ್ಯ ಲಯವಿಹೀನ ಅಲ್ಲವೇ ಅಲ್ಲ; ತಂತ್ರಗಾರಿಕೆಯಿಂದ ಗದ್ಯ-ಕಾವ್ಯಗಳು ಬೇರೆಯೇ.

"ನವ್ಯಕಾವ್ಯ ಬರೆಯುವುದಕ್ಕೆ ಛಂದಸ್ಸು, ಪ್ರಾಸ, ಲಯ ಇತ್ಯಾದಿ ನಿಯಮಗಳೇನೂ ಇಲ್ಲ, ಹೇಗೆ ಬೇಕೆಂದರೂ ಬರೆಯಬಹುದು" ಎಂಬ ಮಾತು ಪದೇಪದೇ ಕೇಳಿಬರುತ್ತದೆ. ಹೇಗೆ ಬೇಕಿದ್ದರೂ ಬರೆಯಬಹುದೇನೋ, ಆದರೆ ಅದನ್ನು "ಕಾವ್ಯ"ವೆನ್ನಬಹುದೇ ಎಂಬುದು ಬೇರೆಯೇ ಪ್ರಶ್ನೆ. ಈ ಸಂದರ್ಭದಲ್ಲಿ ಶತಾವಧಾನಿ ರಾ.ಗಣೇಶರ ಮಾತು ನೆನಪಿಗೆ ಬರುತ್ತದೆ:

"ಇಂದಿನ ಕವಿಲೋಕ ಛಂದಸ್ಸನ್ನರಿಯದೆಯೇ ಅದನ್ನು ಪರಿತ್ಯಜಿಸಿದ ಅಟ್ಟಹಾಸ ಮಾಡಿದೆ. ಪರಿಗ್ರಹಣವಿಲ್ಲದ ಪರಿತ್ಯಾಗಕ್ಕೆ ಬೆಲೆಯೇನು? ಕವಿಗಳಿಗೇ ಇದರ ಅರಿವಿಲ್ಲದಿದ್ದರೆ ಸಹೃದಯರಿಗೆ ತಿಳಿಯುವುದೆಂತು? ಇವರಿಬ್ಬರನ್ನೇ ಅಭ್ಯಸಿಸುವ ವಿದ್ಯಾರ್ಥಿಗಳಿಗಂತೂ ಛಂದದ ಗಂಧವೂ ಇಲ್ಲದಂತಾಗಿದೆ" - ಅ.ರಾ.ಮಿತ್ರರ "ಛಂದೋಮಿತ್ರ" ಗ್ರಂಥದ ಮುನ್ನುಡಿಯಿಂದ.

ಅಕ್ಷರದ ಲಯ ಅಥವ ಛಂದಸ್ಸುಗಳಿಗೆ ಅಂಟಿಕೊಳ್ಳದಿದ್ದರೂ, ಅಕ್ಷರ, ಭಾವ, ಭಾಷೆಯ ಲಯಗಳನ್ನು ಹದವಾಗಿ ನೆಯ್ದ ನವ್ಯ ಕವನಗಳನ್ನು ಓದಬೇಕಾದರೆ ಅಡಿಗರನ್ನು ಓದಬೇಕು. ಉದಾಹರಣೆಯಾಗಿ ಈ ಸಾಲುಗಳನ್ನು ನೋಡಿ:

"ನವಾವತಾರ ಪುರುಷರು:
ವೇದವನ್ನು ಕದ್ದು, ಮತ್ತೆ ಸೋಮಕನಿಗೆ ಕೊಟ್ಟವರು,
ಭೂಗೋಳವ ಬೆನ್ನ ಮೇಲೆ ಹೊತ್ತಾಡುವ ಕಮಠರು,
ಹಿರಣ್ಯವನ್ನು ತೊಡೆದು ತೆಗೆದು ನೋಟಿನ ಮಳೆಗರೆದವರು,
ನೆಲವ ಚಾಪೆ ಬಿಚ್ಚಿ ಮೈ ಚಾಚಿ ಮಲಗಿ ಕೊಂಡವರು;
ಎಡವು ಅಲ್ಲ, ಬಲವು ಅಲ್ಲ;
ಗಾಂಧಿ ಅಲ್ಲ, ಮಾರ್ಕ್ಸೂ ಅಲ್ಲ;
ಅಹಿಂಸೆಯಲ್ಲ, ಹಿಂಸೆಯಲ್ಲ;
ಇಹವಿಲ್ಲದ ಪರವೊಲ್ಲದ
ಅನುಕೂಲಸಿಂಧು ರಚಿಸುತಿರುವ ಅವರ್ಣ್ಯರೂಪ ಭೂಪರು;
ಬಲ್ಲಿದರನ್ನೊತ್ತಿ ತುಳಿದು ಬಡವಗೆ ಕೈ ಕೊಟ್ಟವರು;
ಚಿಂತಕರನ್ನೊರಸಲಿಕ್ಕೆ ಬೀದಿಕೂಗ ಮಸೆದವರು,
ಮೂರು ಬಾರಿ ನಾಡ ಸೋಸಿ ಮರಳಿ ಪಟ್ಟವೇರಿದವರು,
ಆಹಾ ಮಹಾಪುರುಷರು;
ಉಪವಾಸದಿ ಸಮ್ಮ ಹಿಡಿದು ತೃಪ್ತಿ ತೇಗ ಬರಿಸುವವರು,
ಸಾಲ ಮಾಡಿ ತುಪ್ಪ ತಿಂದು ನಮ್ಮ ಮೂತಿಗೊರಸಿದವರು,
ಯೋಜನೆಗಳ ಯಜ್ಞದಲ್ಲಿ ವಪೆಯ ರುಚಿಯನರಿತವರು,
ಕಾನೂನಿನ ಗಾಣದಿಂದ ಮರಳಿನೆಣ್ಣೆ ತೆಗೆಯುವವರು,
ಕತ್ತೆ ಕುದುರೆಯಾಗುವಂತೆ, ಹುಲಿ ಹೊಟ್ಟನ್ನುಣ್ಣುವಂತೆ
ನೆಲವೆ ನಾಕವಾಗುವಂತೆ, ನಾಯಿಬಾಲ ನಿಗುರುವಂತೆ
ಮಾಡಬಲ್ಲ ದೊಂಬರು"

- "ಬರುತ್ತಾರೆ" ಕವನದಿಂದ

ಇದನ್ನು ಒಂದರ ಪಕ್ಕ ಒಂದು ಜೋಡಿಸಿ ನೋಡಿ, ಗದ್ಯವಾಗುತ್ತದೆಯೋ?

ಇಷ್ಟಕ್ಕೂ ಆದಿ ಕಾಲದ ಸಂಸ್ಕೃತ ಕಾವ್ಯದಿಂದ ಹಿಡಿದು ಇವತ್ತಿನ ನವ್ಯ/ನವ್ಯೋತ್ತರ ಕಾವ್ಯದ ವರೆಗೂ, ಕಾವ್ಯಕ್ಕೆ ಬದ್ಧತೆ ಹೊಂದಿದ ಯಾವುದೇ ಬರಹ ಕೂಡ, ಒಂದು ಮೂಲಭೂತ ನಿಯಮವನ್ನು ಪಾಲಿಸುತ್ತಾ ಬಂದಿದೆ; ಅದೆಂದರೆ ಸಹಜತೆ. ಕಾವ್ಯ ರುಚಿಯಾಗುವುದಕ್ಕೆ ಅಗತ್ಯವಾಗಿ ಬೇಕಾದ್ದು ಅದರ ಸೆಳೆಯುವ, ಮಿಡಿಯುವ, ಮಿಂಚು ಹೊಳೆಸುವ ಗುಣ; "ಆಗಲೇ ಅಲ್ಲೇ ಹುಟ್ಟಿಬಂತೆನಿಸುವ" ತಾಜಾತನ. W.B.Yeatsನ ಮಾತಿನಲ್ಲಿ ಹೇಳಬೇಕಾದರೆ:

"A line will take us hours maybe;
Yet, if it doesn't seem a moment's thought
Our stitching and unstitching has been naught.
Better go down upon your marrow-bones
And scrub a kitchen pavement, or break stones
Like an old pauper, in all kinds of weather"

("ಕವಿತೆ ಸಾಲೊಂದ ಸಾಧಿಸಲು
ಗಂಟೆಗಟ್ಟಲೆ ನಾವು ಹೆಣಗಬೇಕು;
ಆದರೂ ಆ ಸಾಲು ಅಲ್ಲೆ, ಆ ಗಳಿಗೆಯೇ
ಚಿಮ್ಮಿ ಬಂದದ್ದೆಂದು ಅನ್ನಿಸದೆ ಇದ್ದಲ್ಲಿ
ಹೊಲೆದು ಬಿಚ್ಚಿದ್ದೆಲ್ಲ ಪೂರ ವ್ಯರ್ಥ.
ಬೆನ್ನು ಬಗ್ಗಿಸಿ ಮಂಡಿಯೂರಿ ಕೊಳೆಯಡಿಗೆಮನೆ ನೆಲವನ್ನುಜ್ಜುವುದೋ,
ಕಡುಭಿಕಾರಿಯ ಹಾಗೆ ಬಿಸಿಲು ಚಳಿ ಎನ್ನದೆ ಕಲ್ಲನ್ನೊಡೆಯುವುದೋ
ಇದಕಿಂತ ಉತ್ತಮ"

- ಅನು: ಡಾ. ಲಕ್ಷ್ಮೀನಾರಾಯಣಭಟ್ಟ)

ಅಡಿಟಿಪ್ಪಣಿ: ನವ್ಯೋತ್ತರ ಸಾಹಿತ್ಯದ ಪ್ರಕಾರಗಳೆಂದು ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ, ಸ್ತ್ರೀ ಸಾಹಿತ್ಯ ಇತ್ಯಾದಿಗಳು ಬಂದರೂ, ಅವೆಲ್ಲ ಕೆಲವು ನಿರ್ದಿಷ್ಟ ಸಾಮಾಜಿಕ ಸನ್ನಿವೇಶ, ಇಸಂ/ಸಿದ್ಧಾಂತ ಅಥವಾ ನಿರ್ದಿಷ್ಟಸಾಮಾಜಿಕ ಗುರಿಗೆ ಬದ್ಧವಾಗಿ "ಕಾವ್ಯ"ದ ಬದ್ಧತೆಯನ್ನು ಕಡೆಗಣಿಸಿದುವೆಂದೇ ನನ್ನ ಅನಿಸಿಕೆ. ಅಲ್ಲೂ ಗಟ್ಟಿ ಕಾವ್ಯ ಇರಲಿಲ್ಲವೆಂದಲ್ಲ, ಆದರೆ ನವ್ಯದಿಂದಲೇ ಬೇರೆಯಾದ "ಅಲೆ" ಎಬ್ಬಿಸಿದ್ದನ್ನು ಕಾಣೆ. ಅವುಗಳ ನಿರ್ದಿಷ್ಟ ಸಿದ್ಧಾಂತ-ಧೋರಣೆ-ಸಂವೇದನೆಗಳನ್ನು ಬಿಟ್ಟರೆ, ಶೈಲಿ, ರೂಪಗಳಲ್ಲಿ ನವ್ಯದ್ದೇ ಒಂದು ಪ್ರಭೇದವೆಂದು ಪರಿಗಣಿಸಬಹುದಾದ್ದರಿಂದ, ಅವುಗಳ ಬಗ್ಗೆ (ಕಾವ್ಯದ ಸಂದರ್ಭದಲ್ಲಿ) ಪ್ರತ್ಯೇಕವಾಗಿ ಬರೆಯಲು ಏನಾದರೂ ಇದೆ ಎನಿಸುವುದಿಲ್ಲ.

Sunday, August 2, 2009

ಕಂಡಿತು ಕಣ್ಣು ಸವಿದಿತು ನಾಲಗೆ ಪಡೆದೀತೀ ದೇಹಾ...

ನಡುಬೇಸಿಗೆಯ ಮಧ್ಯಾಹ್ನ, ಒಂದೆಲೆ ಅಲುಗುವಷ್ಟೂ ಗಾಳಿಯಿಲ್ಲ. ಮೋಡ ಕವಿದರೂ ಬಾರದ ಮಳೆ, ಮೂಗುಬ್ಬಸ. ಉರಿಯುವ ಬಿಸಿಲಿಗೆ ಮನೆಯ ತಾರಸಿ ಕಾದು ಒಳಗೂ ಹೊರಗೂ ಅಸಾಧ್ಯ ಧಗೆ. ಬೆಳಗಿನಿಂದ ಯಾವಯಾವುದೋ ವಿಚಾರಗಳಲ್ಲಿ ಸಿಕ್ಕಿ ಮನಸ್ಸು ಕೊಚ್ಚೆಯಾಗಿತ್ತು. ಹಣಕಾಸಿನ ಲೆಕ್ಕವಾಯಿತು, ಮನೆ ಖರ್ಚಿನ ಲೆಕ್ಕವಾಯಿತು, careerಬಗೆಗಿನ ಚಿಂತನೆಯಾಯಿತು, mail check ಮಾಡಿದ್ದಾಯಿತು, ಆರ್ಕುಟ್ ನೋಡಿದ್ದಾಯಿತು, ಟೀವಿ ಆಯಿತು... ಉಹೂಂ, ಮನಸ್ಸು ಅದೇಕೋ ವಿರಮಿಸಲೊಲ್ಲದು. ಎದ್ದು ಹೋಗಿ ನನ್ನ ಲೈಬ್ರರಿಯಿಂದ ಕವನ ಸಂಕಲನವೊಂದನ್ನು ಹೊರಗೆಳೆದೆ. ಬೇಂದ್ರೆಯವರ ಕವನ ಸಂಕಲನಗಳ ಸಂಕಲನ ಅದು. ಪುಸ್ತಕ ತೆರೆದಾಗ ಮೊದಲು ಸಿಕ್ಕ ಕವಿತೆ "ಬೆಳಗು", ನನ್ನ ಅಚ್ಚುಮೆಚ್ಚಿನ ಕವನಗಳಲ್ಲೊಂದು. "ವಾಹ್" ಅನ್ನಿಸಿತು. ಈ ಕವನ ತನ್ನ ವಿಶಿಷ್ಟ ಗೇಯತೆಯೊಂದಿಗೆ, ಕಾವ್ಯ ಗುಣದೊಂದಿಗೆ ಮತ್ತೆ ಮತ್ತೆ ಮನದಲ್ಲಿ ರಿಂಗಣಗೊಳ್ಳುತ್ತದೆ. ಬೆಳಗು ತರುವ ಚೈತನ್ಯದ ಸಾಂಕ್ರಾಮಿಕತೆ, ಅದು ತಾನೇ ತಾನಾಗಿ ಮುಟ್ಟಿದ್ದಕ್ಕೆಲ್ಲಾ ಊಡುವ ಜೀವ, ಅದನ್ನು ಚಿತ್ರಿಸುವ ಪರಿ, ಅನ್ಯಾದೃಶ.


"ರತ್ನದ ರಸದಾ ಕಾರಂಜೀಯೂ ಪುಟಪುಟನೇ ಪುಟಿದು ತಾನೆ ಪುಟಪುಟನೇ ಪುಟಿದು ಮಘಮಘಿಸುವಾ ಮುಗಿದ ಮೊಗ್ಗೀ ಪಟಪಟನೇ ಒಡೆದು ತಾನೇ ಪಟಪಟನೇ ಒಡೆದು" ಎನ್ನುವಲ್ಲಿ ರತ್ನದ ರಸದ ಕಾರಂಜಿ ಪುಟಪುಟನೆ ಪುಟಿದಾಗ, ಮುಗಿದ ಮೊಗ್ಗು ತಾನಾಗೇ ಒಡೆಯುವುದು. ಕಾವ್ಯದ ಸೌಂದರ್ಯದೊಡನೆ ಇಲ್ಲಿ ಮತ್ತೆ ಮತ್ತೆ ಅನುರಣನಗೊಳ್ಳುವ ಸಾಲುಗಳು, ಅದಕ್ಕೆ ತಕ್ಕಂತೆ ಮೇಳದಂತೆ ಬರುವ ಪ್ರಾಸಗಳು ಅದಕ್ಕೊಂದು ವಿಚಿತ್ರ ಗೇಯತೆ ತಂದುಕೊಡುತ್ತದೆ. ಹಾಗೆಯೇ ಮತ್ತೊಂದು ಸಾಲು - "ತಂಗಾಳೀಯಾ ಕೈಯೊಳಗಿರಿಸೀ ಎಸಳಿನಾ ಚವರಿ ಹೂವಿನ ಎಸಳೀನಾ ಚವರಿ, ಹಾರಿಸಿಬಿಟ್ಟರು ತುಂಬಿಯ ದಂಡು ಮೈಯೆಲ್ಲಾ ಸವರಿ ಗಂಧಾ ಮೈಯೆಲ್ಲಾ ಸವರಿ" - ಎಸಳಿನ ಚವರಿ ಮತ್ತೆ "ಹೂವಿನ ಎಸಳಿನ ಚವರಿ" ಎಂದು ಅನುರಣನಗೊಳ್ಳುವ ಮೂಲಕ ಎಸಳಿನ ಚವರಿಗೆ ಹೊಸ ಅರ್ಥ ಕೊಡುತ್ತದೆ. ಚವರಿಯ ಕೆಲಸವೇ ತಂಗಾಳಿ ಬೀಸುವುದು. ಮತ್ತೆ ತಂಗಾಳಿಯೇ ಚವರಿ ಹಿಡಿದು ನಿಂತರೆ? ಅದಕ್ಕೆ ಅನುವಾದವಾಗಿ ಬರುವ ಮುಂದಿನ ಸಾಲು ನೋಡಿ, "ಹಾರಿಸಿಬಿಟ್ಟರು ತುಂಬಿಯ ದಂಡು, ಮೈಯೆಲ್ಲಾ ಸವರಿ.. ಗಂಧಾ ಮೈಯೆಲ್ಲಾ ಸವರಿ". ಹೂವಿಗೂ ದುಂಬಿಗೂ ಇರುವ ಸಂಬಂಧ ಸರ್ವ ಸಾಮಾನ್ಯ. ಹೂವಿನೆಸಳಿನ ಚವರಿ ಬಂದಾಗ ದುಂಬಿಯ ಪ್ರಸ್ತಾಪ ಸಹಜವೇ, ಆದರೆ ಅದನ್ನು ಸುಮ್ಮನೇ ಹಾರಿಸಿ ಬಿಡಲಿಲ್ಲ "ಹಾರಿಸಿಬಿಟ್ಟರು... ಮೈಯೆಲ್ಲಾ ಸವರಿ" ಅನ್ನುವಾಗಿನ ಆಪ್ಯಾಯತೆ, "ಗಂಧಾ ಮೈಯೆಲ್ಲಾ ಸವರಿ" ಎಂದು ಅನುರಣನಗೊಂಡಾಗ, ಹೂವು, ದುಂಬಿ, ಗಂಧಗಳ ಮಧುರ ಸಂಬಂಧ ಸುಂದರವಾಗಿ ಮೈದಳೆಯುತ್ತದೆ.


ಕವನವನ್ನು ಮೆಚ್ಚುತ್ತಾ ಇರಬೇಕಾದರೆ, ಮೂರು ವರ್ಷದ ರಾಘವಾಂಕ "ಅಣ್ಣಾ" ಎಂದು ಕರೆದಿದ್ದು ಕೇಳಿಸಿತು. ತಲೆಯೆತ್ತಿ ನೋಡಿದೆ. ಕಂಪ್ಯೂಟರಿನಲ್ಲಿ ಅದಾವುದೋ ಭಾವಗೀತೆ ಸಣ್ಣಗೆ ಗುಯ್ ಗುಡುತ್ತಿತ್ತು. ಟೀವಿ ಬಡಬಡಿಸುತ್ತಿತ್ತು, ನೋಡುವರಾರೂ ಇಲ್ಲದೆ. ರಾಘವಾಂಕ ಮಾಡಲು ಚೇಷ್ಟೆಯೇನೂ ಹೊಳೆಯದೆ ಅದಾವುದೋ ಪುಸ್ತಕದ ಮೇಲೆ ಗೀಚುತ್ತಾ ಮಂಕಾಗಿ ಕುಳಿತಿದ್ದ. ಅವನು ಕೆಲವೊಮ್ಮೆ ಬೈಕಿನಂತೆ, ಕೆಲವೊಮ್ಮೆ ಕುದುರೆಯಂತೆ ಬಳಸುವ ದೊಡ್ಡ ನಾಯಿಯ ಬೊಂಬೆ ನಿರ್ಲಕ್ಷ್ಯಕ್ಕೊಳಗಾಗಿ ಅಲ್ಲೊಂದು ಕಡೆ ಬಿದ್ದಿತ್ತು. ಸಾಮಾನ್ಯವಾಗಿ ಸುಮ್ಮನೆ ಕುಳಿತಿರುವ ಜೀವವಲ್ಲ ರಾಘವಾಂಕ. ಏನಾದರೊಂದು ಮಾಡುತ್ತಿರಬೇಕು - ಗೋಡೆಯ ಮೇಲೆ ಗೀಚುವುದೋ, ರೇಡಿಯೋ-ಗೀಡಿಯೋ ಬಿಚ್ಚಿ "ರಿಪೇರಿ" ಮಾಡುವುದೋ, ಚತ್ತಿನ ಮೇಲೆ ಕುಳಿತ ದೊಡ್ಡ ಹಲ್ಲಿಗೆ ಕೂಗುಹಾಕಿ ಓಡಿಸಲು ಪ್ರಯತ್ನಿಸುವುದೋ, ಏನಾದರೊಂದು. ನೀರಾಟ ಅವನ ಅತಿ ಇಷ್ಟವಾದ ಕ್ರೀಡೆಗಳಲ್ಲೊಂದು. ಆದರೆ "ಮಗುವಿಗೆ ಶೀತ ಆಗಬಹುದೆಂಬ" ಕಾರಣದಿಂದ ಈ ಕ್ರೀಡೆಯಮೇಲೆ ಕಟ್ಟುನಿಟ್ಟಿನ ನಿಷೇಧವಿತ್ತು. ನಿಷೇಧಿತವಾಗಿದ್ದು ಇದೊಂದೇ ಅಲ್ಲ, ಟೆರೇಸಿನ ಮೇಲೆ ಹೋಗುವುದು, ಒಬ್ಬನೇ ಬಚ್ಚಲ ಮನೆಗೆ ಹೋಗುವುದು, ಗೇಟಿನ ಬಳಿ ಆಡುವುದು, ಮಣ್ಣು ಮುಟ್ಟುವುದು, ಬಿಸಿಲಲ್ಲಿ ಹೋಗುವುದು, ಪುಸ್ತಕ-ಪೆನ್ನು ಮುಟ್ಟುವುದು, ಹೀಗೆ ಅವನನ್ನು ಕಟ್ಟಿ ಹಾಕಿದ್ದ ಪಟ್ಟಿ ಸಾಕಷ್ಟು ದೊಡ್ಡದೇ ಇದೆ. ಆದರೆ ಅವನೋ, "ದೇವರಂತೆ ಬಂದು ಠಾವಿಲಿ ಕೂಡ"ಲು ಒಲ್ಲದ ಹುಲು ಮಾನವ ಶಿಶು. ನಾನು ಮನೆಯಲ್ಲಿದ್ದರೆ ಈ ಪಟ್ಟಿಯ ಕಟ್ಟು ಸ್ವಲ್ಪ ಸಡಿಲಗೊಳ್ಳುತ್ತದೆ. ಹಾಗೆ ದೊರಕುವ ಸ್ವಾತಂತ್ರ್ಯಕ್ಕಾಗಿ ಅವ ನನಗೋಸ್ಕರ ಪ್ರತಿ ವಾರ ಕಾದಿರುತ್ತಾನೆ.

"ಅಣ್ಣಾ" ಎಂದು ಕರೆದಾಗೊಮ್ಮೆ ತಲೆಯೆತ್ತಿ ಮಗನ ಮುಖ ನೊಡಿದೆ. ಅನ್ಯಮನಸ್ಕನಾಗಿ ನನ್ನದೊಂದು ಪುಸ್ತಕದ ಮೇಲೆ ಗೀಚುತ್ತಾ ಕುಳಿತಿದ್ದ. ನಾನು ಪುಸ್ತಕ ಹಿಡಿದು ಕುಳಿತಿದ್ದಕ್ಕೆ ಅಸಮಾಧಾನ ಮುಖದ ಮೇಲೆ ಆಳವಾಗಿ ಕೊರೆದಿಟ್ಟಂತಿತ್ತು. ಮತ್ತೆ ತನ್ನ ಬಾಲಭಾಷೆಯಲ್ಲಿ ಹೇಳಿದ "ಅಣ್ಣಾ, ಆ ಪುಸ್ತಕ ಚೆನ್ನಾಗಿಲ್ಲ, ಮುಚ್ಚಿಡು. ಕಂಪ್ಯೂಟರು ಆರಿಸು... ಬಾ ಇಲ್ಲಿ". ಪುಸ್ತಕ ಪಕ್ಕಕ್ಕಿಟ್ಟು ಎದ್ದು ಹತ್ತಿರ ಹೋದೆ. ಅವನು ಗೀಚುತ್ತಿದ್ದ ಪುಸ್ತಕ ನನ್ನ Financial Management ಪುಸ್ತಕ! ಓದಲು ಬರದ ಮಗು, ಬರೆಯುತ್ತಿತ್ತು. ಬೈಯಲು ಮನಸ್ಸು ಬರಲಿಲ್ಲ. ಪೆನ್ನನ್ನು ಕಿತ್ತುಕೊಂಡು ಮಗನನ್ನು ಹತ್ತಿರ ಸೆಳೆದು ಹಗುರವಾಗಿ ಮುದ್ದಿಸಿದೆ. ಪೆನ್ನು ಕಿತ್ತುಕೊಂಡದ್ದಕ್ಕೆ ಪ್ರತಿಭಟನೆಯೇನೂ ವ್ಯಕ್ತವಾಗಲಿಲ್ಲ. ತನ್ನ ಬಾಲಭಾಷೆಯಲ್ಲಿ ಮತ್ತೆ ಹೇಳಿತು ಮಗು "ಅಣ್ಣಾ, ಕಂಪ್ಯುಟರ್ ಮಾಡಿದ್ದು ಸಾಕು, ಆರಿಸಿಬಿಡು, ಇಲ್ಲಿ ಕೂತುಕೋ ಬಾ" ಹಾಗೇ ಮಗುವನ್ನು ಅಪ್ಪಿಕೊಂಡು ಚಿಂತಿಸಿದೆ. ಬೆಳಗಿನಿಂದ ನಾನು ಕಾಲ ಕಳೆದಿದ್ದು ಕಾಗದ ಹೂಗಳ ನಡುವೆ ಅಲ್ಲವೇ! ಕ್ಷಣ ಸುಮ್ಮನಾದೆ.


ಮೇಲೆ ನೀರಿನ ತೊಟ್ಟಿ ಕೊಳೆಯಾಗಿತ್ತು, ನಲ್ಲಿಯಲ್ಲಿ ಕೊಳೆನೀರು ಬರುತ್ತಿತ್ತು. ಕ್ಲೀನ್ ಮಾಡಬೇಕು. ಇಂಥ ಕೆಲಸವೆಲ್ಲಾ ಚಿಕ್ಕಂದಿನಿಂದ ನನ್ನದೇ. ಈಗ ನನ್ನ ಮಡಿಲಲ್ಲಿ ಕುಳಿತು ಮುದ್ದುಗರೆಯುತ್ತಿದ್ದ ರಾಘವಾಂಕನಿಗೆ ಹೇಳಿದೆ "ಮೇಲೆ ಟ್ಯಾಂಕ್ ಕ್ಲೀನ್ ಮಾಡೋಣ?" ಅಷ್ಟು ಹೇಳಿದ್ದೇ ತಡ, ಅದೆಲ್ಲಿತ್ತೋ ಉತ್ಸಾಹ, ದುಡುದುಡು ಓಡಿಹೋದ, ಒಂದು ಪುಟ್ಟ ಬಕೆಟ್ಟು, ಮಗ್ಗು ಮತ್ತೊಂದು ದೊಡ್ಡ ಬಕೆಟ್ ತಂದ. ತೊಟ್ಟಿ ಕ್ಲೀನ್ ಮಾಡುವ ಕ್ರಮ ಅವನಿಗೆ ಸಂಪೂರ್ಣ ಗೊತ್ತು. ಕೆಳಗೆ ನೆಲ್ಲಿಯಲ್ಲಿ ನೀರು ಬಿಟ್ಟು ಟ್ಯಾಂಕ್ ಖಾಲಿ ಮಾಡಬೇಕು. ಟ್ಯಾಂಕಿನ ನೀರು ತಳಮಟ್ಟ ಮುಟ್ಟಿದ ಮೇಲೆ ಟೆರೇಸಿನ ಮೇಲೆ ಹೋಗಿ ನಾನು ಟ್ಯಾಂಕಿನ ಕಟ್ಟೆಯ ಮೇಲೆ ಹತ್ತಬೇಕು; ದೊಡ್ಡ ಬಕೆಟ್ಟನ್ನು ಟ್ಯಾಂಕಿನ ಕಟ್ಟೆಯ ಕೆಳಗೆ ನೆಲದ ಮೇಲಿಡಬೇಕು; ಟ್ಯಾಂಕಿನ ತಳ ನನ್ನ ಕೈಗೆ ನಿಲುಕದ್ದರಿಂದ ಯಾರಾದರೊಬ್ಬರು ಅದರ ಒಳಗೆ ಇಳಿದು ಅಲ್ಲಿ ಉಳಿದ ನೀರು ಖಾಲಿ ಮಾಡಬೇಕು. ಅದಕ್ಕೆ ಎರಡಡಿ ಉದ್ದದ ರಾಘವಾಂಕನಲ್ಲದೆ ಇನ್ನಾರಿಗೆ ಸಾಧ್ಯ! ಅದು ಅವನ ಹಿಗ್ಗು. ಕ್ಲೀನ್ ಮಾಡುವ ಪರಿಕರಗಳನ್ನೆಲ್ಲಾ ಹೊತ್ತು ತಂದು, ಎಲ್ಲರಬಳಿಯೂ ಒಮ್ಮೆ ಹೋಗಿ ಹೇಳಿಕೊಂಡು ಬಂದ. ಅವನ ಅಮ್ಮನ ಬಳಿ ಹೋಗಿ "ಅಮ್ಮಾ, ಈಗ ಅಣ್ಣ ನನಗೆ ಟ್ಯಾಂಕ್ ಕ್ಲೀನ್ ಮಾಡಲು ಹೇಳಿದೆ. ನೀನು ನನ್ನ ಬಯ್ಯಕೂಡದು" ಎಂದು ತಾಕೀತಿನ ರೂಪದ ಅಪ್ಪಣೆ ಬೇಡಿದ್ದೂ ಆಯಿತು; ಅವಳು "ಸರಿ, ಅಪ್ಪ ಮಗನಿಗೆ ಇನ್ನೇನು ಕೆಲಸ, ಉರಿಬಿಸಿಲು, ಮಗು ನೀರಾಡಿ ಶೀತ ಬಂದರೆ ಡಾಕ್ಟರ ಬಳಿ ಹೋಗಲು ನಾನು ಗಟ್ಟಿಯಾಗಿದ್ದೀನಲ್ಲ" ಎಂದು ಆಕ್ಷೇಪಣಾರೂಪದ ಅನುಮತಿಯನ್ನು ನೀಡಿದ್ದೂ ಆಯಿತು. ನೀರಾಟದ, ಕ್ಷಮಿಸಿ, ಕ್ಲೀನ್ ಮಾಡುವ ಪರಿಕರಗಳನ್ನು ಹೊತ್ತು ನಾವಿಬ್ಬರೂ ಮೇಲೆ ನಡೆದೆವು.

ಕೆಳಗೆ ನೆಲ್ಲಿ ಬಿಟ್ಟಿದ್ದರಿಂದ ಟ್ಯಾಂಕಿನ ನೀರು ತಳ ಮುಟ್ಟಿತ್ತು. ಇನ್ನಷ್ಟು ನೀರನ್ನು ಮೊಗೆದು ಈಚೆ ಸುರಿಯಬೇಕಿತ್ತು. ಮೇಲೆ ಬಿಸಿಲಿಗೆ ಟೆರೇಸು ಕಾದಿತ್ತು. ನಾನು ನೀರು ಮೊಗೆದು ಕೆಳಗಿದ್ದ ಬಕೀಟಿಗೆ ಸುರಿದರೆ, ರಾಘವಾಂಕ ಮತ್ತೊಂದು ಮಗ್ಗಿನಿಂದ ಅದನ್ನು ಮೊಗೆದು ಟೆರೇಸಿನ ಮೇಲೆ ಸುರಿಯುವುದು ವ್ಯವಸ್ಥೆ. ಆ ಹಿಗ್ಗನ್ನು ಮೊಗೆಯಲು ಅವನಾಗಲೇ ಉತ್ಸುಕನಾಗಿದ್ದ. ಹಿಗ್ಗು ಮೊಗದಲ್ಲಿ ಕುಣಿಯುತ್ತಿತ್ತು. ನಾನು ಮೇಲಿನಿಂದ ನೀರನ್ನು ಸುರಿಯಲು ಶುರು ಮಾಡಿದೆ. ಬಕೆಟ್ಟು ತುಂಬುವತನಕ ಕಾಯುವ ಮಾತೇ ಇಲ್ಲ. ಮಗ್ಗಿಗೆ ಸಿಕ್ಕಷ್ಟು ನೀರು ಮೊಗೆದು ಸಿಕ್ಕ ಸಿಕ್ಕಂತೆ ಎರಚತೊಡಗಿದ. ಪುಟ್ಟ ಮಗು ಇಷ್ಟಿಷ್ಟೇ ನೀರು ಎರಚಾಡುತ್ತಾ ಇಡೀ ಟೆರೇಸಿನ ತುಂಬಾ ಕುಣಿಯುತ್ತಿದ್ದರೆ, ಮೇಲಿನ ಸುಡುಬಿಸಿಲಿಗೂ ಅದರ ಲಯ ದಕ್ಕಿತ್ತು. ಮೋಡ ನೆರಳು ಬೆಳಕಿನಾಟ ನಡೆಸಿತ್ತು. ಮಕ್ಕಳನ್ನು ಬಿಸಿಲು ಸುಡುವುದುಂಟೇ? ಶೀತ ಮುಟ್ಟುವುದುಂಟೇ? ಇವಳಿಗೆಲ್ಲೋ ಭ್ರಾಂತು. ಮೇಲಿನ ಗದ್ದಲ ಕೇಳಿ ನನ್ನನ್ನು ಬೈಯಲೆಂದು ಮೇಲೆ ಬಂದ ಮಡದಿ, ಕುಣಿಯುತ್ತಿದ್ದ ಮಗನ ಚೆಲುವಿಗೆ ಮನಸೋತು ಕ್ಷಣ ನಿಂತು ಹಿಂದಿರುಗಿದಳು. ಅಲ್ಲೆಲ್ಲೋ ಏನೋ ಓದುತ್ತಿದ್ದ ನನ್ನ ತಮ್ಮ ಮೇಲೆ ಬಂದ. ಚಿಕ್ಕಪ್ಪನನ್ನು ನೋಡಿದ ಮಗುವಿಗೆ ಮತ್ತೂ ಉತ್ಸಾಹ. ಈ ಉತ್ಸಾಹದ ಭರದಲ್ಲಿ ನಾನು ಮೇಲಿನಿಂದ ಸುರಿಯುತ್ತಿದ್ದ ನೀರಿಗೆ ತಲೆ ಕೊಟ್ಟ. ತಲೆಯೆಲ್ಲಾ ತೊಯ್ದುಹೋಯ್ತು. ಒಂದು ಕ್ಷಣವಷ್ಟೇ ಚಕಿತನಾಗಿ ನಿಂತಿದ್ದು. ಮರುಕ್ಷಣ ಹಿಗ್ಗು ಕಿತ್ತು ಹರಿಯಿತು. ಸುಡುಬಿಸಿಲಿನಲ್ಲಿ, ಹಾಕಿಕೊಂಡಿದ್ದ ಬಟ್ಟೆ ಸಮೇತ ಅನಾಮತ್ತು ನೆನೆದಿತ್ತು ಮಗು. ಮುಂದಿನ ಒಂದು ಮಗ್ಗು ನೀರನ್ನು ಅವ ನೆಲಕ್ಕೆ ಸುರಿಯಲೇ ಇಲ್ಲ. ಸೀದಾ ತಲೆಯಮೇಲೆ ಸುರಿದುಕೊಂಡದ್ದೇ! ಆ ಕ್ಷಣಕ್ಕೆ ಅವನ ಮುಖ ನೋಡಬೇಕಿತ್ತು. ನೂರು ಭಾವದ ಮೆರವಣಿಗೆ, ನೀರಿನ ಕಟ್ಟಳೆ ಮೀರಿದ್ದೋ, ಅನಿರೀಕ್ಷಿತ ಸ್ನಾನವೋ, ಉಟ್ಟಬಟ್ಟೆ ಪೂರಾ ನೆಂದಿದ್ದೋ, ನೂರು ಬೆಳಕಿನ ಸಂತೆ ಅಲ್ಲಿತ್ತು. ಇಷ್ಟು ನೆನೆದ ಮೇಲೆ ಇನ್ನೇನು ಎಂದು ಇಡೀ ಬಕೆಟ್ಟಿನಲ್ಲಿದ್ದ ನೀರನ್ನು ತೆಗೆದು ಅನಾಮತ್ತಾಗಿ ಮೇಲೆ ಸುರಿದುಕೊಂಡು ದಬದಬನೆ ಕುಣಿಯಲಾರಂಭಿಸಿದ. ವಿಚಿತ್ರ ಉನ್ಮಾದ ಮುಖದಲ್ಲಿ ಕುಣಿಯುತ್ತಿತ್ತು. ಅವನ ಕಾಲಿನ ಹುಚ್ಚು ಲಯಕ್ಕೆ ಸಿಕ್ಕಿ ಟೆರೇಸು ಪೂರಾ ನರ್ತಿಸುತ್ತಿತ್ತು. ಆ ಕ್ಷಣಕ್ಕೆ ಆ ಮೊಗದಲ್ಲಿ ಮೂಡಿದ ಹಿಗ್ಗು, ಚೊಂಬು ನೀರಿನ ಕಿಂಚಿತ್ತಿನಿಂದ ಪಡೆದ ಧನ್ಯತೆಯ ಮಹತ್ತು, ನೋಡಿಯೇ ಅನುಭವಿಸಬೇಕಾದ್ದು. ಕೆಳಗೆಲ್ಲೋ ಕಾವ್ಯದ ಪುಸ್ತಕದಲ್ಲಿ ಮಲಗಿದ್ದ ನಿರ್ಜೀವ ಸಾಲುಗಳು ಜೀವ ಪಡೆದು ಕಣ್ಣ ಮುಂದೆ ನಿಂತಿತ್ತು.

ಕಂಡಿತು ಕಣ್ಣು ಸವಿದಿತು ನಾಲಗೆ ಪಡೆದಿತೀ ದೇಹ
ಸ್ಪರ್ಶಾ ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು ತನ್ಮಯವೀ ಗೇಹ
ದೇವರದೀ ಮನಸಿನ ಗೇಹಾ

ಅಲ್ಲವೇ? ಮೈ-ಕೈ ಕಟ್ಟಿ ಕಿಟಕಿ-ಬಾಗಿಲು ಮುಚ್ಚಿ ಮಾಡುವ ಅದಾವ ಧ್ಯಾನ, ಅದಾವ ಯೋಗ ನೀರಾಟವಾಡಿದ ಈ ಪೋರನ ಆನಂದ ತರಬಲ್ಲುದು? ಚೈತನ್ಯದ ಪರಮ ಸುಖ ಮೈಯ ಮೂಲಕವೇ ಅಲ್ಲವೇ ಮನವನ್ನು ಮುಟ್ಟುವುದು. ಅದು ರಾಘವಾಂಕನ ನೀರಾಟವಿರಬಹುದು, "ಮಘಮಘಿಸುವ ಹೂವಿನ ಮೊಗ್ಗೀ" ಇರಬಹುದು, ಬೆಳಗಿನ ಚೈತನ್ಯಪೂರ್ಣ ಆನಂದವಿರಬಹುದು, ಅದು ಮೈಯ ಗೇಹದ ಮೂಲಕವೇ ಅಲ್ಲವೇ ಸುಳಿದು ಮನಸಿನ ದೇವರನ್ನು ಮುಟ್ಟುವುದು. ಇಂದ್ರಿಯವಾದದ ಕಾವ್ಯಮಯ ಪ್ರಸ್ತುತಿ ಇದೇ ಅಲ್ಲವೇ?

ಕವಿಗೆ ಅದೊಂದು ಒಳಗಣ್ಣಿದೆ, ನಿಜ, ಆದರೆ ಅವನು ಹೊರಗಣ್ಣನ್ನು ಮುಚ್ಚಿ ಕೂಡುವುದಿಲ್ಲ. ಹೊರಗಣ್ಣಿಲ್ಲದೇ ಒಳಗಣ್ಣಿಲ್ಲ. ಅವನಿಗೆ ಪ್ರಪಂಚ ಇಂದ್ರಿಯಗಳ ಮೂಲಕವೇ ಒಳಗಿಳಿಯಬೇಕು; ಅದು ಕೊಡುವ ಸಮಸ್ತ ಅನುಭವಗಳೂ ಅವನಿಗೆ ಬೇಕು, ಬೇರೆಯವರಿಗಿಂತ ಹೆಚ್ಚು ಬೇಕು, ಯಾಕೆಂದರೆ, ಬೇರೆಯವರು ಅದನ್ನು ಸುಮ್ಮನೇ ಅನುಭವಿಸಿ ಮರೆಯುತ್ತಾರೆ, ಆದರೆ ಕವಿ ಹಾಗಲ್ಲ, ಪಡೆದದ್ದನ್ನು ನೂರ್ಮಡಿ ಅನುಭಿಸುತ್ತಾನೆ, ಅನುಭವಿಸಿ ಹಾಡುತ್ತಾನೆ, ಹಾಡಿ ತನ್ನ ಅನುಭವನ್ನು ಕಣ್ಣಿಗೆ ಕಟ್ಟುವಂತೆ, ಮನ ಮುಟ್ಟುವಂತೆ ಹಂಚುತ್ತಾನೆ.

ಅದಕ್ಕೇ, ಹೆರರಿಗೆ ಇದು ಬರೀ ಬೆಳಗಾದರೆ, ಕವಿಗೆ ಅದು ಬರಿ ಬೆಳಗಲ್ಲ... ಅಮೂರ್ತವಾದ ಶಾಂತಿರಸದ ಮೂರ್ತರೂಪ.

ಅರಿಯದು ಅಳವು ತಿಳಿಯದು ಮನವುಕಾಣಾದೋ ಬಣ್ಣಾ
ಕಣ್ಣಿಗೆ ಕಾಣಾದೋ ಬಣ್ಣಾ
ಶಾಂತಿರಸವೇ ಪ್ರೀತಿಯಿಂದಾಮೈದೊರೀತಣ್ಣಾ
ಇದು ಬರಿ ಬೆಳಗಲ್ಲೋ ಅಣ್ಣಾ..

ಸ್ವಭಾವತಃ ಅಮೂರ್ತವಾದ ಶಾಂತಿರಸ ಹೀಗೆ ಪ್ರೀತಿಯಿಂದ ಮುಂಜಾವಿನ ರೂಪದಲ್ಲಿ ಮೈದೋರದಿದ್ದರೆ, "ಅರಿಯದು ಅಳವು ತಿಳಿಯದು ಮನವು ಕಾಣಾದೋ ಬಣ್ಣಾ, ಕಣ್ಣಿಗೆ ಕಾಣಾದೋ ಬಣ್ಣಾ" ಎಂದು ಮೂರ್ತಕ್ಕೇ ಒಗ್ಗಿಕೊಂಡ ಈ ಮನಸ್ಸಿಗೆ ತನ್ನ ಸುತ್ತಮುತ್ತಲ ಈ ಚಿಲಿಪಿಲಿಯಲ್ಲೂ ಅಂತರ್ಗತವಾದ ಶಾಂತಿ ಅರಿವಿಗೆ ಬರುವುದಾದರೂ ಹೇಗೆ.

ಮೂರ್ತದಿಂದ ಅಮೂರ್ತದೆಡೆಗೆ, ಹುಚ್ಚು ಉನ್ಮಾದದಿಂದ ಪರಮ ಶಾಂತಿಯೆಡೆಗೆ; ಲೋಕೋತ್ತರದ ಪಯಣಕ್ಕೆ ಹೆಬ್ಬಾಗಿಲು ಲೋಕವೇ ಅಲ್ಲವೇ?

Sunday, July 12, 2009

ನಮ್ಮೂರಲೊಂದು ಸುತ್ತು

ಬೆಂಗಳೂರಿಂದ ನಮ್ಮೂರು,ಬಹುದೂರ
ಏನಿಲ್ಲ; ಮೂರು
ಗಂಟೆಯ ಪಯಣ.
(ಆದರೂ ಬೆಂಗಳೂರಿನ ಗಜಿ-
ಬಿಜಿಯ ಮಂದಿಗೆ,
ಹತ್ತಿರದ ಶೌಚವೂ ನಿತ್ಯ ಮರಣ)

ಬಹುದೂರವೇನಿಲ್ಲ...
ರಾಮನಗರ-
ದಲ್ಲೊಂದು ಹಿಡಿ ಕಡಲೆ ಬೆಲ್ಲ;
ಮದ್ದೂರಿನೊಂದು ಕಡೆ ಒಂದೆರಡು ವಡೆ
ನಂಚಿಕೊಳ್ಳಲು ದೆವ್ವದ್ದೋ ಭೂತದ್ದೋ ಕತೆಯ ಕಂತೆ -
ಮೆದ್ದು ಮುಗಿವುದರೊಳಗೆ
ಅದೋ ಅಲ್ಲಿ,
ಕೊಳ್ಳೆ-
ಗಾಲ!
ಕೊಳ್ಳೆ ಹೊಡೆದವರಿಲ್ಲ, ಗಾಲ ಪಿಡಿದವರಿಲ್ಲ,
ಆದರೂ ನಮ್ಮೂರು,
ಕೊಳ್ಳೆಗಾಲ.

ಬೆಂಗಳೂರಿನ ಕಾಡಿಗೆನ್ನನಟ್ಟಿದಮೇಲೆ
ಬಹಳ ಬದಲಾಗಿಹುದು
ಊರು-ಕೇರಿ

ಬಸ್ಸಿಳಿದ ಒಡನೆ
ಮುರುಕು ಸೊಂಡಿಲ ಬೀಸಿ
ಸ್ವಾಗತಿಪ ಗಣಪ ಕಾಣಲಿಲ್ಲ
ಗೋಪುರದ ಮೇಲೆ
ಝಗಝಗಿಸಿತ್ತು ಪಾಶಾಂಕುಶ ಕರ
ರಕ್ತಾಂಬರಧರ
ಲಂಬೋದರ
ಮಂಡಿತ ಸೊಂಡಿಲು ಪೂರ!

ಮೊಗದಿರುಹಿ
ಎಡಕೆ ನಡೆದರೆ ಪೇಟೆ
ಬೀದಿ
ಮಾರ್ಕೆಟ್ ಚೌಕದ ಅರವಟ್ಟಿಗೆ ಜಾಗದಲ್ಲೀಗ
ಹೊಸ ಮಸೀದಿ ಮಿನಾರ!
ಮುಂದೀಗ ಮಾರುವರು ಕೋಕ-ಕೋಲ
ಹಿಂದೆಯೇ ಶಿವನ ಗೋಪುರ ಬಸವ,
ಮತ್ತದರ ಬಾಲ.

ತರಕಾರಿ ಮಾರುಕಟ್ಟೆಯಲಿ ಸೊಪ್ಪನು ಮೆದ್ದು
ಓಡುತಿದ್ದುವು ತೊಂಡು ದನದ ಹಿಂಡು
ಮೂವತ್ತು ವರ್ಷಗಳ ಹಿಂದೆಯೂ ಇದೆ ಕೆಲಸ
ಹಿಡಿದು ನಡೆಸಿತ್ತಿದರ ಪೂರ್ವಜರ ದಂಡು

ಗುಡಿಬೀದಿಯಲಿ ನಾವು ಬಾಡಿಗೆಗಿದ್ದ ಮನೆ
ಕೆಡವಿ
ಹೊಸಮನೆ ಕಟ್ಟಿದ್ದಾರೆ;
ಮನೆಮುಂದಿನೊಗೆಯುವ ಕಲ್ಲು,
ನೆರೆಮನೆಯ ಹುಡುಗಿ
ದಿನವು ಎದೆಯಲ್ಲಿ ಮಿಡಿಸುತ್ತಿದ್ದ ಝಲ್ಲು
ಮುಗಿಲೆತ್ತರದ ತೆಂಗಿನ ಮರ
ಕೆ
ಹೆದೆಯೇರಿಸಿದ ಕಾಮ
ನ ಬಿಲ್ಲು
ಇಂದಿಲ್ಲ.

ಮುಟ್ಟು ಚಟ್ಟಾದರೂ ಹೊತ್ತಿ ಉರಿಯುತ್ತಿದ್ದ
ಹನುಮನ ಕಿತ್ತೆತ್ತಿ ತಂದು
ಹೊಸ ಗುಡಿಯಲಿಟ್ಟಿದ್ದಾರೆ
ಹಾರಿ ಹೋಗದ ಹಾಗೆ ಸರೀ ಕಟಕಟೆಯ ಕಟ್ಟಿದ್ದಾರೆ.

ಪಾಂಡವರು ಪೂಜಿಸಿದ
ಊರ ನಾರಾಯಣನ
ದೇಗುಲಕೆ,
ಹೊಸ ಬೊಂಬೆಗಳ ಜಡಿದು,
ಮೇಲೆ ಬಣ್ಣವ ಬಡಿದು ಚೊಕ್ಕ ಮಾಡಿದ್ದಾರೆ.

ಮಜ
ಬೂತಾದ ತೇರಿಗೀಗೊಂದು ಭಾರಿಯ ಶೆಡ್ಡು.
ತೇರ ತುಂಬೆಲ್ಲ ಗಿಜಿಗುಡುತಿದ್ದ
ಪಡ್ಡೆದೆವ್ವಗಳೀಗ
ಕತೆಯ ಬುಕ್ಕುಗಳಲ್ಲಿ ತಲೆಮರೆಸಿವೆ.

ಗುಡಿಬಿಟ್ಟು ಎಡಕೆ ಹೊರಳಿದರೆ,
ಕಾವೇರಿ
ಬೀದಿ;
ಪೈಸಕೊಂದು ಬಿಸ್ಕತ್ತಿನಂಗಡಿ-
ರಾಮು ಅಂಗಡಿ;
ಅಲ್ಲೀಗ ನೆಟ್ ಬ್ರೌಸಿಂಗ್ ಸೆಂಟರ್ ತಲೆಯೆತ್ತಿದೆ
ರಾಮುವೂ ಇಲ್ಲ, ರಾವಣನೂ ಇಲ್ಲ.

ಶಾಲೆಯಲ್ಲೆನ್ನೊಮ್ಮೆ ಕಚ್ಚಿ ನೆತ್ತರಿಸಿದ್ದ
ಗುಂಡಣ್ಣನಿನ್ನೂ ಇದ್ದಾನೆ, ಅವಗಿಂದು
ಹಲ್ಲು ಬಿದ್ದಿವೆ, ತಲೆಗೆ ನರೆ ಬಂದಿದೆ

ನನ್ನೊಡನೆ ಬಚ್ಚಲು ಬಿದ್ದು,
ಗೋಲಿ ಗಜ್ಜುಗವಾಡಿ,
ಚಿಣ್ಣಿ-ದಾಂಡನು ಬಡಿದು,
ದೊಣ್ಣೆಯಾಡಿದ ಸಹ-
ಧರ್ಮಚಾರಿಗಳಿಂದು
ಅಪ್ಪಂದಿರಾಗಿದ್ದಾರೆ;
ಮಕ್ಕಳು
ಹೊಂ-ವರ್ಕು ಬುಕ್ಕಿನಲ್ಲಿ ತಲೆಹುಗಿದಿವೆ.

ಸಂಜೆ ಐದಕ್ಕಿಹುದು ಬೆಂಗಳೂರಿನ ಬಸ್ಸು,
ಹೊಚ್ಚ'ಹೊಸ' ಉದಯರಂಗ, ಎಕ್ಸ್ ಪ್ರೆಸ್ಸು.
ಕಿವಿಗೆ ಹತ್ತಿಯ ಜಡಿದು ಸಣ್ಣ ನಿದ್ದೆಯ ಬಡಿದು
ಕಣ್ಣು ಬಿಡುವಷ್ಟರಲಿ ಬೆಂಗಳೂರು,
ಬಿದ್ದಿಹುದು ಕೆಲಸಗಳು ನೂರು ನೂರು!

Sunday, April 26, 2009

ಪಂಢರಿ ಚಾ ವಾಸ; ಚಂದ್ರಭಾಗಾ ಸ್ನಾನ...

ಮೇಲೆ ಸುರಿಯುವ ಬಿರುಬಿಸಿಲು, ಅಸಾಧ್ಯ ಶೆಖೆ, ದಾರಿಯುದ್ದಕ್ಕೂ ನಿಂತು ನಿಂತು ಮುನ್ನೆಡೆಯುವ ಬಸ್ಸು, ರಸ್ತೆಯಲ್ಲದ ರಸ್ತೆ, ಮಧ್ಯ ಟೈರು ಪಂಕ್ಚರ್ ಆಯಿತೆಂದು ಮತ್ತೆರಡು ಗಂಟೆ ನಿಲ್ಲಿಸಿದಾಗಲಂತೂ ಬೆಳಗ್ಗೆ ಏಳಕ್ಕೆ ಹೊರಡುವಾಗಿದ್ದ ಉತ್ಸಾಹ ಸಂಪೂರ್ಣ ಬತ್ತಿಹೋಗಿತ್ತು. ಪುಣೆಯಿಂದ ಪಂಢರಪುರಕ್ಕೆ ೨೦೪ ಕಿಲೋಮೀಟರು, ಮೈಸೂರು-ಬೆಂಗಳೂರು ಪಯಣದ ಲೆಕ್ಕದಲ್ಲಿ ನಾಲ್ಕು ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾರದು; ಹನ್ನೊಂದಕ್ಕೆಲ್ಲ ಪಂಢರಪುರದಲ್ಲಿರುತ್ತೇನೆಂದು ಹೊರಟವನಿಗೆ ಕಂಡಕ್ಟರು ಐದು ಗಂಟೆಯ ಪಯಣವೆಂದಾಗಲೇ ಸ್ವಲ್ಪ ಉತ್ಸಾಹಭಂಗವಾಗಿತ್ತು. ಆದರೂ ಇನ್ನೊಂದು ಗಂಟೆ ತಾನೆ ಎಂದು ಹೊರಟವನಿಗೆ ಕಾದಿದ್ದು ಮತ್ತೊಂದೇ ವಾಸ್ತವ. ಹೊಟ್ಟೆಬೇರೆ ಚುರುಗುಡುತ್ತಿತ್ತು. ಇದುವರೆಗೂ ಸೌತ್ ಇಂಡಿಯನ್ ಊಟಕ್ಕೇ ಒಗ್ಗಿಹೋಗಿದ್ದವನಿಗೆ (ಪುಣೆಯಲ್ಲೂ ಕೊನೆಯ ಪಕ್ಷ ಇಡ್ಲಿ ದೋಸೆಗಳಿಗಂತೂ ಕಡಿಮೆಯಿರಲಿಲ್ಲ) ಮಹಾರಾಷ್ಟ್ರದ ಒಳನಾಡಿನ ಪಯಣದಲ್ಲಿ ಅಲ್ಲಲ್ಲಿ ರಸ್ತೆಬದಿಯ ಪಾವ್-ಭಾಜಿ ದುಕಾನದಲ್ಲಿ ದೊರೆಯುವ ಒಣಕಲು ಪಾವ್-ಭಾಜಿ, ರೊಟ್ಟಿ-ಮೆಣಸಿನಕಾಯಿ (ಅದೂ ಹಳ್ಳಿಕಡೆಯ ರೂಕ್ಷ ರುಚಿಯುಳ್ಳದ್ದು) ನಾಲಿಗೆಗೆ ಕಠೋರವಾಗಿತ್ತು. ರೊಟ್ಟಿಯ ಒಂದು ತುಂಡು ಒಳಗೆ ಸೇರಿದ್ದಷ್ಟೇ, ಇನ್ನೊಂದರ ಅಗತ್ಯವಿಲ್ಲವೆಂದು ಸಂದೇಶ ಬಂತು ಒಳಗಿಂದ. ಮೆಣಸಿನಕಾಯಿಯಂತೂ ಮೇಲೆ ಉರಿಯುತ್ತಿದ್ದ ಬಿಸಿಲಿನ ಏಜೆಂಟನಂತೆ ಕಂಡಿತು. ಇನ್ನದನ್ನು ಒಳಗೆ ಸೇರಿಸುವುದುಂಟೇ! ಸರಿ, ಅಷ್ಟೋ ಇಷ್ಟೋ ಹಣ್ಣು ಹಂಪಲು ತಿಂದುಕೊಂಡು, ಹಾಗೂ ಹೀಗೂ ಕುಂಟುತ್ತಿದ್ದ ಬಸ್ಸಿನ ಜೊತೆಗೂ ಕುಂಟಿಕೊಂಡು ಪಂಢರಪುರ ತಲುಪಿದಾಗ ಮಧ್ಯಾಹ್ನ ಎರಡು. ನಾನಿದ್ದ ಪರಿಸ್ಥಿತಿಗಾಗಿ ವಿಠ್ಠಲನಿಗೆ ಹಿಡಿಶಾಪ ಹಾಕುವುದೊಂದು ಬಾಕಿ.


ಪರಮಾತ್ಮನ ದರ್ಶನಕ್ಕೆ ಕಡುಕಷ್ಟ ಪಟ್ಟು ಹೋದಷ್ಟೂ "ಫಲ" ಹೆಚ್ಚೆಂದು ಒಪ್ಪುತ್ತೇನೆ. ಸಂತ ಜ್ಞಾನೇಶ್ವರರಿಗಾಗಲಿ, ಸಂತ ತುಕಾರಾಮರಿಗಾಲಿ ಅಥವ ವಿಠ್ಠಲನ ಇತರ ಭಕ್ತ ಕೋಟಿಗಾಗಲಿ ಬಸ್ಸು, ಕಾರು, ಹವಾನಿಯಂತ್ರಿತ ವಸತಿ ಇತ್ಯಾದಿ ಸೌಲಭ್ಯಗಳಿದ್ದಂತೇನೂ ಕಂಡುಬರುವುದಿಲ್ಲ. ಅಷ್ಟೇಕೆ, ಇಂದಿಗೂ ಪುಣ್ಯನಗರಿ(ಪುಣೆ)ಯಿಂದ ಪಂಢರಪುರಿಗೆ ಕಾಲ್ನಡಿಗೆಯಲ್ಲಿ ಸಾಗುವ "ವಾರಕರಿ" ಎಂಬ ಕಠಿಣ ಪರಿಕ್ರಮ ಜಾರಿಯಲ್ಲಿದೆ. ಉದ್ದಕ್ಕೂ ವಿಠ್ಠಲನ ಕುರಿತ ಅಭಂಗಗಳನ್ನು ಹಾಡುತ್ತಾ, ದಾರಿಯಲ್ಲಿ ಸಿಗುವ ಇತರ ಪುಣ್ಯಸ್ಥಳನ್ನು ಸಂದರ್ಶಿಸುತ್ತಾ ಅಲ್ಲಲ್ಲಿ ತಂಗುತ್ತಾ ಸಾಗುವ ಶ್ರಮದ ಪಯಣ ಅದು; ಹದಿನೈದೋ ಇಪ್ಪತ್ತೋ ದಿನದ್ದು. ತುಕಾರಾಮರ ಜನ್ಮಸ್ಥಳವಾದ ದೇಹು ಗ್ರಾಮ, ಜ್ಞಾನೇಶ್ವರರ ಪುಣ್ಯಸ್ಥಳವಾದ ಆಳಂದಿ ಈ ಪರಿಕ್ರಮದ ಅಂಗವೆಂದು ಕೇಳಿದ್ದೇನೆ; ಅದು ಸಂಪೂರ್ಣ ಯಾತ್ರೆ. ಜಗದ ಜಂಜಡಗಳನ್ನು ಅಷ್ಟುದಿನವಾದರೂ ಮರೆತು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾನೆ ಭಕ್ತ. ಯಾತ್ರಿಯ ಬಳಿ ಮೊಬೈಲ್ ಇರುವುದಿಲ್ಲ, ಫೋನಾಗಲೀ ಇತರ ಸಂಪರ್ಕ ಸಾಧನವಾಗಲೀ ಇರುವುದಿಲ್ಲ, ಮನೆಯದ್ದೋ ಕೆಲಸದ್ದೋ ಜವಾಬ್ದಾರಿಯಿರುವುದಿಲ್ಲ - ಅದೆಲ್ಲಕ್ಕೂ ಅವನು ವ್ಯವಸ್ಥೆಮಾಡಿಯೇ ಬಂದಿದ್ದಾನೆ. ಯಾತ್ರೆ ಅತಿ ನಿಷ್ಠವಾಗಿದ್ದ ಕಾಲಕ್ಕೆ ದಾರಿಯ ಖರ್ಚಿಗೆ ಹಣವೂ ಇರುತ್ತಿರಲಿಲ್ಲವೆಂದು ಕೇಳಿದ್ದೇನೆ - "ಸಾಲ ಮಾಡೆ; ಸಾಲದೆಂದೆನೆ; ನಾಳೆಗೆ ಇಡೆ" ಎಂಬುದೇ ದಾಸನ ದೀಕ್ಷೆತಾನೆ (ನಾನು ಹೇಳುತ್ತಿರುವುದು ಹಳೆಯ ಯಾತ್ರೆಯ ಮಾತು - ಈಗಿನ ಮಾತು ಬೇರೆ). ಈ ಹದಿನೈದಿಪ್ಪತ್ತು ದಿನ, ಅವನ ಸಂಪೂರ್ಣ ಗಮನ ವಿಠ್ಠಲನ ಕಡೆಗೆ.


"ತೀರ್ಥ ವಿಠ್ಠಲ; ಕ್ಷೇತ್ರ ವಿಠ್ಠಲ; ದೇವ ವಿಠ್ಠಲ; ದೇವಪೂಜಾ ವಿಠ್ಠಲ" (ಜ್ಞಾನದೇವ)


ಯಾತ್ರೆಯ ಕಡುಕಷ್ಟ-ನಿಷ್ಠುರಗಳೆಲ್ಲ ವಿಠ್ಠಲನೊಡನೆ ಅವನ ಸಂಪರ್ಕವನ್ನು ಬೆಸೆಯುವ, ಬಲಗೊಳಿಸುವ ಸಾಧನ. ಬೇಯಿಸುವ ಬಿರುಬಿಸಿಲೋ, ಕಿತ್ತು ತಿನ್ನುವ ಹಸಿವೋ, ಆಯಾಸವೂ, ರೋಗವೋ ರುಜಿನವೋ - ಅಧಿಕಸ್ಯ ಅಧಿಕಂ ಫಲಂ. ಇಷ್ಟೆಲ್ಲ ಶ್ರಮದ ಯಾತ್ರೆಯ ಕೊನೆಗೆ, ಅಗೋ ದೂರಕ್ಕೆ ಕಾಣುತ್ತದೆ ಭಕ್ತ ಪುಂಡಲೀಕನ ಗೋಪುರ, ಅದರ ಹಿಂದೆ ವಿಠ್ಠಲ-ರಕುಮಾಯೀ ಮಂದಿರದ ಗೋಪುರ; ಇನ್ನಷ್ಟು ಹತ್ತಿರ ಸಾಗಿದರೆ, ಪುಂಡಲೀಕನ ಗುಡಿಯ ಮುಂದೆ ಜುಳುಜುಳು ಹರಿಯುವ ಚಂದ್ರಭಾಗಾ ನದಿ; ಅದರ ದರ್ಶನವೇ ಮಾರ್ಗದ ಆಯಾಸವನ್ನು ಅಪಹರಿಸುತ್ತದೆ. ಇಲ್ಲಿಯೇ ಅಲ್ಲವೇ ತಾಯಿ-ತಂದೆಯ ಸೇವೆಯಲ್ಲಿ ಮಗ್ನನಾದ ಭಕ್ತ ಪುಂಡಲೀಕನಿಗೆ ಹರಿ ಮೈದೋರಿದ್ದು; ತನ್ನನ್ನು ನೋಡಲು ಬಂದ ದೇವನಿಗೆ ಪುಂಡಲೀಕ ಸ್ವಲ್ಪ ಕಾಯಲು ಹೇಳಿ ಕೂಡಲು ಇಟ್ಟಿಗೆಯ ತುಂಡನ್ನೆಸೆದದ್ದು; ಹಾಗೆಯೇ ಆಗಲೆಂದು ಅದೇ ಇಟ್ಟಿಗೆಯ ಮೇಲೆ ನಿಂತು ಕಾದೇ ಕಾದನಲ್ಲ ವಿಠ್ಠಲ! "ಕಟಿಯಲ್ಲಿ ಕರವಿಟ್ಟನು, ಪಂಢರಿರಾಯ". ಆ ಕ್ಷಣಕ್ಕೆ ಈ "ಇತಿಹಾಸ"ದಲ್ಲಿ ನಿಜವೆಷ್ಟು, ಕತೆಯೆಷ್ಟು ಎಂದು ಎಣಿಸುವ ಗೋಜಿಗೆ ಹೋಗದು ಭಕ್ತನ ಮನ. "ದೇವನಿಹುದು ದಿಟವೊ ಸಟೆಯೊ; ಭಕ್ತಿಯಂತು ದಿಟ" ಎನ್ನುವ ಪುತಿನ ರವರ ಮಾತು ನೆನಪಿಗೆ ಬರುತ್ತದೆ. ತಂಪು ಚೆಲ್ಲುತ್ತಾ ಹರಿಯುವ ಚಂದ್ರಭಾಗಾ; ಅದರ ತಡಿಯಲ್ಲಿ ಮರದ ತಣ್ಣೆಳಲಲ್ಲಿ ಮಲಗಿ ವಿಶ್ರಮಿಸುವ ವೃದ್ಧ ದಂಪತಿ, ಅವರ ಕಾಲೊತ್ತುತ್ತಿರುವ ಮಗ ಪುಂಡಲೀಕ, ದೇವರನ್ನೂ ಮರೆಯುವ ಶ್ರದ್ಧೆ ಸೇವೆಯಲ್ಲಿ; ಈ ವೈಚಿತ್ರವನ್ನು ನೋಡ ಬಂದ ದೇವರ ದೇವ; ಭಕ್ತನೆಸೆದ ಇಟ್ಟಿಗೆಯ ತುಂಡಮೇಲೆ ಅವ ನಿಂತ ರೀತಿ, ಟೊಂಕದ ಮೇಲೆ ಕೈಯನಿಟ್ಟು ನಗುವ ಆ ಚಿದ್ಬಂಗಿ - ಇಡೀ ಸನ್ನಿವೇಶದ ಕಾವ್ಯ ಮನವನ್ನಪರಿಹರಿಸುತ್ತದೆ. ಬಿರುಬಿಸಿಲು ಬೆಳದಿಂಗಳಾಗುತ್ತದೆ; ತಂಬೆಲರು ಹಾಯುತ್ತದೆ; ಮನ ತುಂದಿಲಗೊಳ್ಳುತ್ತದೆ, ಕಂಠ ಗದ್ಗದಗೊಳ್ಳುತ್ತದೆ, ಕಣ್ಣಲ್ಲಿ ನೀರು ತುಂಬುತ್ತದೆ. ಆ ಕ್ಷಣಕ್ಕೆ ಅದು ನಿಜ; ಆ ಅನುಭೂತಿಯಂತೂ ಸತ್ಯಸ್ಯ ಸತ್ಯ. ಪುರಂದರರಿಗಾಗಲೀ ತುಕಾರಾಮರಿಗಾಗಲೀ ಆಗಿದ್ದು ಇದೇ ಅಲ್ಲವೇ; ವರ್ಷಗಳ ಹಿಂದೆ ಅವರೂ ಪ್ರಾಯಶ: ಇದೇ ಜಾಗೆಯಲ್ಲಿ ಇದೇ ಸನ್ನಿವೇಶದಲ್ಲಿ ನಿಂತು ಹೀಗೇ ಕಣ್ಣೀರುಗರೆದಿದ್ದರಲ್ಲವೇ; ಈ identity, ಸಮಷ್ಟಿ ಭಾವನೆ ಮನವನ್ನು ಮತ್ತಷ್ಟು ಪರವಶಗೊಳಿಸುತ್ತದೆ. ಭಕ್ತಸಮುದಾಯದಿಂದ ದನಿಯೊಂದು ಮೊಳಗುತ್ತದೆ, "ಬೊಲೋ ಶ್ರೀ ಪುಂಡಲೀಕ ವರದೇ..." ಗದ್ಗದ ಕಂಠ ಪ್ರಯತ್ನವಿಲ್ಲದೆಯೇ ದನಿಗೂಡಿಸುತ್ತದೆ "ಪಾಂಡುರಂ...ಗ"


ವಿಠ್ಠಲ ಒಂದುರೀತಿ ಕೊಂಡಾಟದ ದೈವ. ತಿರುಪತಿಯ ತಿಮ್ಮಪ್ಪನಿಗಾಗಲೀ ಬಾಡದ ಆದಿಕೇಶವನಿಗಾಗಲೀ ಇಲ್ಲದ ಒಂದುಬಗೆಯ ಮುದ್ದು, ಕೊಂಡಾಟ, ಬಿಂಕ ಈತನಿಗೆ. ಭಕ್ತ-ದೇವನ ಏಕಾಂತ ಈತನಿಗೆ ಪ್ರಿಯವಾದರೂ ಅದಕ್ಕಿಂತ ಭಜನೆಯಲ್ಲಿಯೇ ಹೆಚ್ಚು ರುಚಿ ಈತನಿಗೆ. ಅದಕ್ಕೆಂದೇ ಈತ ಸಮಷ್ಟಿಯ ದೇವ. ತಾಳ ತಂಬೂರಿ ಮದ್ದಳೆ ಕುಣಿತ ಮೊರೆತಗಳ ಗೋಷ್ಟಿ ಭಜನೆಯೇ ಇವನಿಗೆ ಪ್ರಿಯ. ಭಕ್ತರ ಹಿಂಡು ಇವನನ್ನು ಕೊಂಡಾಡಬೇಕು, ಆಡಬೇಕು, ಇವನ ಮುಂದೆ ಹಾಡಬೇಕು, ಕುಣಿಯಬೇಕು. ಇಲ್ಲಿ ದೇವನಿಲ್ಲದೇ ಭಕ್ತನಿಲ್ಲವಷ್ಟೇ ಅಲ್ಲ; ಭಕ್ತನಿಲ್ಲದೇ ದೇವನಿಲ್ಲ - ಕೊನೆಯ ಪಕ್ಷ ಈ ದೇವನಿಲ್ಲ. ಅದಕ್ಕೆಂದೇ, "ವಿಠ್ಠಲ ವಿಠ್ಠಲ ಪಾಂಡುರಂಗ..." ಜೊತೆ ಜೊತೆಗೇ ಮೊಳಗುತ್ತದೆ "ಶ್ರೀ ತುಕಾರಾಮ ಮಹಾರಾಜ್ ಕೀ... ಜೈ..."; "ಸಂತ ನಾಮದೇವಜೀ ಮಹಾರಾಜ್ ಕೀ... ಜೈ..." ಇತ್ಯಾದಿ ಘೋಷಣೆ. "ಹಿಂಡುದೈವರ ಗಂಡ"ನಾದ ಈತ, ತಾನೇ ಸ್ವತಃ ಹಿಂಡುದೈವ. ಅದಕ್ಕೆಂದೇ ಇರಬೇಕು, ನಮ್ಮ ದಾಸ ಸಮುದಾಯದಲ್ಲಿ ಬಹು ಜನಪ್ರಿಯ ದೈವ ಈ ವಿಠ್ಠಲ. ವಚನ ಸಾಹಿತ್ಯ ಹೆಚ್ಚು ಬುದ್ಧಿಪ್ರಧಾನವಾದ ಅಮೂರ್ತದ ಕಡೆ ಒಲವುಳ್ಳದ್ದಾದರೆ, ದಾಸ ಸಾಹಿತ್ಯದ ಒಲವು ಭಾವಪ್ರಧಾನವಾದ ಮೂರ್ತದೆಡೆಗೇ ಹೆಚ್ಚೆಂದು ಹೇಳಬೇಕು. ಚೆನ್ನಮಲ್ಲಿಕಾರ್ಜುನನೋ ಗುಹೇಶ್ವರನೋ ನಮಗೆ ಕೇವಲ ಪರಿಕಲ್ಪನೆಯಾಗಿ ಕಂಡರೆ, ವಿಠ್ಠಲನೋ ಕೃಷ್ಣನೋ ಹಾಗಲ್ಲ. ಅವ ನಿಮ್ಮೊಡನೆ ಆಡುತ್ತಾನೆ, ಕಾಡುತ್ತಾನೆ, ಬೇಡುತ್ತಾನೆ, ಕಣ್ಣು ಮುಚ್ಚಿ ಓಡುತ್ತಾನೆ; ಕೊನೆಗೆ ನಿಲ್ಲೆಂದು ನೀವು ಇಟ್ಟಿಗೆಯನ್ನೆಸೆದರೆ ಅದರ ಮೇಲೇ ನಿಂತು ಕಲ್ಲಾಗಿಬಿಡುತ್ತಾನೆ. ಕಲ್ಲು - ನೀವು ಮುಟ್ಟಿ, ಮೂಸಿ ಅನುಭವಕ್ಕೆ ತಂದುಕೊಳ್ಳಬಹುದಾದ ಕಡುಗಲ್ಲು. ಈ ಕಲ್ಲ ಮೂರ್ತಿಯ ಮೂಲಕವೇ ಅಮೂರ್ತದೆಡೆಗೆ ನಿಮ್ಮ ಪಯಣ. ಆದರೆ ಅವ ಕಲ್ಲಾದ ಪರಿ, ಕತೆಯಾಗುತ್ತದೆ, ಪದವಾಗುತ್ತದೆ, ಅಭಂಗವಾಗುತ್ತದೆ, ಜನಮನದಲ್ಲಿ ಹರಿಯುತ್ತದೆ. ಅಂದಮೇಲೆ, ಮೂರ್ತಕ್ಕೆ ಹತ್ತಿರವಾದ ದಾಸರ ಪದಗಳಿಗೆ ವಿಠ್ಠಲನಿಗಿಂತ ಹತ್ತಿರದ ದೈವವೆಲ್ಲಿ? ಅದಕ್ಕೆಂದೇ ದಾಸರ ನೆಚ್ಚಿನ ದೈವ ವಿಠ್ಠಲ - ಅವ ಪುರಂಧರವಿಠಲನಿರಬಹುದು, ವಿಜಯವಿಠಲನಿರಬಹುದು, ಜಗನ್ನಾಥವಿಠಲನಿರಬಹುದು. ಕೀರ್ತನೆ ತಿರುಪತಿಯ ತಿಮ್ಮಪ್ಪನದಾದರೂ ಕೊನೆಯಲ್ಲಿ ವಿಠಲ ಬರಲೇ ಬೇಕು. ಕೊನೆಗೆ ಶ್ರೀರಂಗದಿಂದ ದಾಸವಾಣಿಯ ಸ್ಫೂರ್ತಿಪಡೆದ ಶ್ರೀಪಾದರಾಜರೂ ತಮ್ಮ ಅಂಕಿತದಲ್ಲಿ ರಂಗ"ವಿಠಲ"ನೆಂದರು, ರಂಗನೊಡನೆ ವಿಠಲನನ್ನೂ ತಂದರು.


ಎಲ್ಲಿಂದಲೋ ಹೊರಟು ಎಲ್ಲಿಗೋ ಬಂದೆ, ಇರಲಿ. ಪರಮಾತ್ಮನ ದರ್ಶನಕ್ಕೆ ಕಡುಕಷ್ಟ ಪಟ್ಟು ಹೋದಷ್ಟೂ ಅದು ಹೆಚ್ಚು ಸಫಲವೆಂದು ಒಪ್ಪುತ್ತೇನೆ. ಯಾತ್ರೆ ಸುಲಭವಾದಷ್ಟೂ ಅದರ ಮಹತ್ವ ಕಡಿಮೆಯಾಗುತ್ತದೆನ್ನುವರಲ್ಲಿ ನಾನೂ ಒಬ್ಬ. ಆದ್ದರಿಂದಲೇ, ಭಕ್ತಾದಿಗಳ "ಅನುಕೂಲಕ್ಕೆ" ಉಡುಪಿ ಕೃಷ್ಣನ ದೇವಳದಲ್ಲಿ ಹವಾನಿಯಂತ್ರಣದ ಅಳವಡಿಕೆ, ಅದೇ ಅನುಕೂಲಕ್ಕೆ ಗೊಮ್ಮಟೇಶನ ದರ್ಶನಕ್ಕೆ cable-carಗಳ ಬಳಕೆ ಇಂಥಾ ವ್ಯವಸ್ಥೆಗಳನ್ನು ಖಂಡಿಸಿದ್ದೇನೆ, ವಿಡಂಬಿಸಿದ್ದೇನೆ; ಗೊಮ್ಮಟನ ಮುಂದೆ ಚಡ್ಡಿ ಬೇಡುವ ಕಡು ಸಂಸಾರಿಗಳನ್ನೂ, ಪರಮ ವಿರಕ್ತನ "ದರ್ಶನ"ಕ್ಕೆ ಹಣ್ಣು ಮುದುಕರ ಬೆನ್ನ ಮೇಲೆ ಡೋಲಿಯಲ್ಲಿ ಕುಳಿತು ಇಂದ್ರಗಿರಿಯೇರುವ ತರುಣ "ಭಕ್ತ"ರನ್ನೂ ಕಂಡು ಮೈ ಉರಿದಿದ್ದೂ ಇದೆ. ಆದರೆ ಇಲ್ಲಿ ನನ್ನ ಕಷ್ಟ ವಿಚಿತ್ರರೀತಿಯದಿತ್ತು. ಮನೆ ಮಠ ಬಿಟ್ಟು ಕಷ್ಟಕರ ಯಾತ್ರೆಗಾಗೇ ಬಂದಿದ್ದ ವಾರಕರೀ ಯಾತ್ರಿಯಾಗಿರಲಿಲ್ಲ ನಾನು; ಅಥವ ಸರ್ವ ಸುಲಭ "ದರ್ಶನ ಪ್ಯಾಕೇಜ್" ಟೂರಿನಲ್ಲಿ ಬಂದ ಪ್ರವಾಸಿಗ ಕೂಡ ಆಗಿರಲಿಲ್ಲ (ನನಗದು ಹೊರತು); ಒಂದು ರೀತಿಯ ಎಡಬಿಡಂಗಿ ಅವತಾರವಾಗಿತ್ತು ನನ್ನದು. ಪ್ರಯಾಣಕ್ಕೆ ಆಯ್ದದ್ದು ಒಂದು ಕೆಂಪು ಡಬ್ಬದ ಬಸ್ಸು. (ತೀರ ಅಷ್ಟೂ ಆಗದೆಂದರೆ ಹೇಗೆ); ಒಂದು ಬರ್ಮುಡಾ ಮತ್ತು ಟಿ-ಷರಟು, ಕೈಯಲ್ಲೊಂದು ಬಿಸ್ಲೆರಿ ನೀರಿನ ಬಾಟಲಿ, ಮತ್ತೊಂದು ಕೈಲಿ ಒಂದಷ್ಟು ಹಣ್ಣುಗಳು; ನನ್ನ ಈ ಶಾಕವ್ರತ ವಾರಕರಿಯ ಕಷ್ಟ ನಿಷ್ಠೆಯ ಫಲವಾಗಿರಲಿಲ್ಲ, ತಿನ್ನಲು ಮತ್ತೇನೂ ದೊರಕದ್ದರ ಫಲವಾಗಿತ್ತು; ನನ್ನ ಮೆಟ್ರೋಪೋಲಿಟನ್ ಮನಸ್ಸು-ದೇಹ, ಹಳ್ಳಿಯ ಸಾಮಾನ್ಯ ಒರಟು ಊಟವನ್ನು ಒಲ್ಲದ್ದರ ಫಲವಾಗಿತ್ತು. ನನಗೆ ಆ ಕ್ಷಣಕ್ಕೆ ವಿಠಲ ಜೀವನದ ಸರ್ವಸ್ವವಾಗಿರಲಿಲ್ಲ (ಹಾಗಿದ್ದರೆ ಎಷ್ಟು ಚೆನ್ನಿತ್ತು!). Afterall, I was a week-end traveller. ಬೆಳಗ್ಗೆ ಪುಣೆ ಬಿಟ್ಟ ನನಗೆ ಶೀಘ್ರವಾಗಿ ವಿಠಲನನ್ನು ನೋಡಿಕೊಂಡು ಮರುಬಸ್ಸಿಗೇ ಪಯಣಿಸಿ ರಾತ್ರಿ ಹತ್ತರ ಮೊದಲು ಪುಣೆ ಸೇರುವುದಿತ್ತು (ಪಂಢರಿಯಲ್ಲಿ ಉಳಿದುಕೊಳ್ಳುವುದು ಅಸಾಧ್ಯವಾದರೆ). ತಡವಾದರೆ ನಾನಿಳಿದುಕೊಂಡಿದ್ದ ಮನೆಯ ಗೇಟು ಮುಚ್ಚುತ್ತಿತ್ತು; ಉದ್ದಕ್ಕೂ ನಾಯಿಯ ಕಾಟ; ಆಟೋ ಸಿಕ್ಕುವುದಿಲ್ಲ; ದರೋಡೆಕೋರರ ಭಯ... "ಅನುಗಾಲವು ಚಿಂತೆ ಜೀವಕ್ಕೆ... ". ಬಸ್ಸು ಚಂದ್ರಭಾಗಾ ಸೇತುವೆಯ ಬಳಿ ಬರುತ್ತಿದ್ದಂತೆ ಕಂಡಿತು ಪುಂಡಲೀಕನ ಗೋಪುರ - ಹಿಂದೆ ಎಷ್ಟೋ ಭಕ್ತಮಹನೀಯರಿಗೆ ಕಂಡಂತೆ. ಆದರೆ ಆ ದಿವ್ಯ ಅನುಭೂತಿಯ ನೆನಪು ಬರುವಷ್ಟು ಹದವಾಗಿರಲಿಲ್ಲ ಮನಸು; ಏಕೆಂದರೆ ಉದ್ದಕ್ಕೂ ನಾನು ಅಭಂಗ ನುಡಿಯುತ್ತಿರಲಿಲ್ಲ, ಬದಲಿಗೆ ನನ್ನನ್ನು ಈ ನಾನಾ ಭಂಗಕ್ಕೊಡ್ಡಿದ್ದ ಬಸ್ಸನ್ನೂ ಡ್ರೈವರನನ್ನೂ, ಈ ಬಸ್ಸನ್ನು ಆರಿಸಿಕೊಂಡ ನನ್ನನ್ನೂ ಶಪಿಸುವುದರಲ್ಲೇ ಮಗ್ನನಾಗಿದ್ದೆ. ಹಾಗೂ ಈ ಅನುಭೂತಿ ಮೂಡುವಷ್ಟರೊಳಗೆ ಬಸ್ಸು ಭರ್ರ್ ಎಂದು ಬಸ್ ನಿಲ್ದಾಣ ತಲುಪಿಯಾಗಿತ್ತು. ಧರ್ಮದರ್ಶನ ಸಿಗುವುದು ಕಷ್ಟವಾಗಬಹುದೆಂದೂ, ಬದಲಿಗೆ "ಸ್ಪೆಷಲ್ ಪೆಯ್ಡ್ ದರ್ಶನ್" ಕೂಪನು ಅಲ್ಲಿಯೇ ಹತ್ತಿರದ State Bank of Hyderabadನಲ್ಲಿ ದೊರೆಯುತ್ತದೆಂದೂ, ಕೇವಲ ನಲವತ್ತು ರುಪಾಯಿಯೆಂದೂ, bankನ ವ್ಯವಸ್ಥಾಪಕರು ತನಗೆ ಚೆನ್ನಾಗಿ ಪರಿಚಯವಿರುವುದರಿಂದ ಬೇಕಿದ್ದರೆ ಒಂದು ಮಾತು ಹೇಳುತ್ತೇನೆಂದೂ ನನ್ನ ಗೆಳೆಯರೊಬ್ಬರ ಸಲಹೆಯಿತ್ತು. ಸುಮ್ಮನೇ ದೇವಸ್ಥಾನಕ್ಕೆ ಹೋಗಿ ಅಲ್ಲಿ ದಳ್ಳಾಳಿಗಳ ಕೈಗೆ ಸಿಕ್ಕಿಬೀಳಬೇಡ, ನೂರು ಇನ್ನೂರು ಕಿತ್ತುಬಿಡುತ್ತಾರೆ, ಸುಮ್ಮನೆ "ದಂಡ" ಎಂದು ವಿವೇಕವನ್ನೂ ಹೇಳಿದ್ದರು. ಸಧ್ಯಕ್ಕೆ ಯಾವುದನ್ನೇ ಆಗಲೀ ಪ್ರಶ್ನಿಸುವ ವಿವೇಕವಂತೂ ನನ್ನಿಂದ ಹಾರಿ ಹೋಗಿತ್ತು. ಸುಮ್ಮನೇ ಬ್ಯಾಂಕಿಗೆ ಹೋದೆ. ಆದರೆ ಕೂಪನು ವ್ಯವಸ್ಥೆ ಕೇವಲ "ಸೀಸನ್" ನಲ್ಲಿ ಮಾತ್ರವೆಂದೂ ಈಗ ದೇವರ ದರ್ಶನ "ಫ್ರೀ"ಯಾಗಿ ಸಿಗುತ್ತದೆಂದೂ ಅವರು ಹೇಳಿದ್ದರಿಂದ ಆಲಯದ ಕಡೆ ತೆರಳಿದೆ.


ಆಲಯದ ಗೋಪುರ ಸುಲಭವಾಗಿ ಕಾಣಸಿಗುವಂತಿರಲಿಲ್ಲ. ದಾರಿಯುದ್ದಕ್ಕೂ ಕಿಕ್ಕಿರಿದ ಅಂಗಡಿಬೀದಿ, ಮಿಠಾಯಿ ಬತ್ತಾಸುಗಳ ನಿತ್ಯ ಜಾತ್ರೆ, ಜೊತೆಗೆ ಆಧುನಿಕ ಜಗತ್ತಿನ ಬಳುವಳಿ ಕಿವಿಗಡಚಿಕ್ಕುವ ಕ್ಯಾಸೆಟ್-ಸಿಡಿ ಅಂಗಡಿಗಳು, roaring business. ಹಾಗೆಯೇ ದೇವಳವನ್ನು ಸುತ್ತು ಹಾಕುತ್ತಾ ದೇವಳದ ಮುಂಭಾಗಕ್ಕೆ ಬಂದರೆ, ಮೂಲಗೋಪುರವನ್ನು ಮುಚ್ಚುವಂತೆ ಒಂದು ಕಮಾನು, "ಸಂತ ನಾಮದೇವ ಮಹಾದ್ವಾರ". ನಾಮದೇವರ ಪುಣ್ಯಸ್ಮೃತಿಗೆ ನಮಿಸುತ್ತಾ ಹಾಗೆಯೇ ದೇವಳವನ್ನು ಹಿಂದೆಬಿಟ್ಟು ಅಂಗಡಿ ಸಾಲಿನಲ್ಲಿ ಮುಂದುವರೆದೆ, ಕಂಡಿತು ಚಂದ್ರಭಾಗಾ. ಮನವು ಮತ್ತೆ ಮೆದುವಾಯಿತು (ಅದುವರೆಗೂ ಒರಟಾಗಿದ್ದು ಗಮನಕ್ಕೆ ಬಂದದ್ದು ಆಗಲೇ!). ನನ್ನ ಯೋಜನೆಯಿದ್ದದ್ದು ಅಂದು ಪಂಢರಪುರದಲ್ಲೇ ಉಳಿದುಕೊಳ್ಳುವುದು, ಚಂದ್ರಭಾಗಾ ಸ್ನಾನ ಮಾಡಿ ವಿಠಲನನ್ನು ನೋಡುವುದು, ಮರುದಿನ ಬೆಳಗ್ಗೆ ನದಿಯೊಂದಿಗೆ ಸ್ವಲ್ಪ ಸಮಯ ಕಳೆದು ಊರಿಗೆ ಮರಳುವುದು ಎಂದು. ಬಿಸಿಲಲ್ಲಿ ಬೆಂದು ಬಂದಿದ್ದ ನನಗಂತೂ ಈ ಯೋಚನೆಯೇ ಅಮೃತಪ್ರಾಯವಾಗಿತ್ತು. ಅದಕ್ಕೆಂದೇ ನನ್ನೊಡನೆ ವಿಶೇಷವಾಗಿ ಏನನ್ನೂ ತಂದಿರಲಿಲ್ಲ, ಜನ್ಮಕ್ಕೆ ಹತ್ತಿದ ಮೊಬೈಲ್ ಮತ್ತು ಒಂದಷ್ಟು ಹಣವನ್ನು ಬಿಟ್ಟು. ಈಗ ಸ್ನಾನಕ್ಕೆ ಹೇಗೆ ಇಳಿಯುವುದು? ಮೊಬೈಲನ್ನು ಯಾರು ನೋಡಿಕೊಳ್ಳುತ್ತಾರೆ? ಮೊದಲೇ ವಸತಿ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದಲ್ಲವೇ? ಎಂದೆಲ್ಲಾ ಯೋಚಿಸುತ್ತಾ ನದಿಯ ಸಮೀಪಕ್ಕೆ ಬಂದಾಗಲೇ ಅರಿವಾದದ್ದು, ಅದುವರೆಗೂ ನಾನೆಂಥಾ ಭ್ರಮಾಲೋಕದಲ್ಲಿ ಜೀವಿಸುತ್ತಿದ್ದೆನೆಂದು. ಬೇಸಿಗೆಯಾದ್ದರಿಂದಲೋ ಏನೋ, ನದಿ ಹರಿಯುತ್ತಲೇ ಇರಲಿಲ್ಲ! ನದಿಯ ಮಧ್ಯಕ್ಕೆ ಹೋದರೂ ಕೇವಲ ಮೊಳಕಾಲು ಮುಳುಗುವಷ್ಟೇ ನೀರು! ನೀರೆಂದೆನೇ, ಅಲ್ಲ ಅಲ್ಲ; ಕೊಚ್ಚೆ - ಕಡುಕೊಚ್ಚೆ, ಕೆಸರು; ಎಲ್ಲೆಂದರಲ್ಲಿ ತೇಲಿ ಮುಳುಗುತ್ತಿದ್ದ ಪ್ಲಾಸ್ಟಿಕ್ ಕವರುಗಳು, ಬಟ್ಟೆ ತುಂಡುಗಳು, ಬಾಟಲಿಗಳು, ನೀರ ತಳದಲ್ಲಿ ರಕ್ತದಂತೆ ಹರಡಿ ನಿಂತಿದ್ದ ಕುಂಕುಮ, ಪಾಚಿ. ಅಲ್ಲೇ ಹಲ ಭಕ್ತರು ಮೀಯುತ್ತಿದ್ದರು. ಆ ಕ್ಷಣ ನನಗೆ ಹೊಳೆದಿರಲೇ ಇಲ್ಲ - ಇದು ಯಾತ್ರಾಸ್ಥಳ, ಬೇರೇನನ್ನಾದರೂ ಇಲ್ಲಿ ನಿರೀಕ್ಷಿಸುವುದು ಮೂರ್ಖತನ.


ಮನಸ್ಸು ಭಾರವಾಗಿತ್ತು. ಹಾಗೇ ನದಿಯ ಮಧ್ಯ ನಡೆಯುತ್ತಾ ದೇಗುಲದ ಸ್ಥಳಬಿಟ್ಟು ಸುಮಾರು ಅರ್ಧ ಕಿಲೋಮೀಟರು ಮೇಲೆ ಸೇತುವೆಯ ಕಡೆಗೆ ನಡೆದು ಹೋದೆ. ಗುಡಿಗೆ ದೂರವಿದ್ದುದರಿಂದಲೋ ಏನೋ, ಇಲ್ಲಿ ಕೊಚ್ಚೆಯಿರಲಿಲ್ಲ. ಇದು ನದಿಯ ಪಾತ್ರದಲ್ಲಿ ಗುಡಿಗಿಂತಾ ಮೇಲಿತ್ತು. ನದಿಯ ಮಧ್ಯಭಾಗದಲ್ಲಿ ನೀರು ಜುಳುಜುಳು ಹರಿಯುತ್ತಿತ್ತು. ಅಲ್ಲಿಲ್ಲಿ ತೇಲಿಬರುತ್ತಿದ್ದ ಪಾಚಿ-ಹಾವಸೆಯನ್ನು ಬಿಟ್ಟರೆ ನೀರು ಬಹುತೇಕ ಸ್ವಚ್ಛವಾಗಿತ್ತು. ಸ್ನಾನ ಮಾಡುವುದೇ - ಕೊಳಚೆ ನೀರಲ್ಲಿ? ಬುದ್ಧಿ ಭಾವನೆಗಳ ಯಥಾಪ್ರಕಾರದ ಹೊಯ್ದಾಟ ಸಾಗಿತ್ತು. ನಾನು ಇಲ್ಲಿಗೆ ಸುಮಾರು ಮೂವತ್ತು ವರ್ಷಗಳ ಕೆಳಗೆ ಬಂದಿದ್ದಾಗ ಎಂಟರ ಹುಡುಗ. ದೇಗುಲದ ಎದುರಲ್ಲೇ ಸ್ನಾನ ಮಾಡಿದ್ದೆ. ಆಗಲೂ ನೀರು ಕೊಚ್ಚೆಯಾಗಿತ್ತೇ, ನೆನಪಿಲ್ಲ. ಕೊಚ್ಚೆಯೇ ಇದ್ದಿರಬೇಕು - ಕೇವಲ ಮೂವತ್ತು ವರ್ಷಗಳ ಕಾಲಾವಧಿ ಭಕ್ತವೃಂದದ ಸ್ವರೂಪ ಬದಲಾವಣೆ ಮಾಡಿದ್ದಿರಲಾರದು. ಹಾಗಿದ್ದರೆ ಆದೇ ಕೊಚ್ಚೆಯಲ್ಲಿ ಮೀಯುವಾಗ ಅಥವ ಮಿಂದ ಮೇಲೆ ನನಗೇನೂ ಆಗಲಿಲ್ಲ? ಆಗೆಲ್ಲಾ ಏನೂ ಅನಿಸುತ್ತಲೂ ಇರಲಿಲ್ಲ!


ಮೇಲೆ ಬಿಸಿಲು ಕುದಿಯುತ್ತಿತ್ತು. ಒಳಗೆ ಹೊಟ್ಟೆ ಬೇಯುತ್ತಿತ್ತು. ಸ್ನಾನವಂತೂ ಸಾಧ್ಯವಿರಲಿಲ್ಲ, ಜೇಬೊಳಗೆ ಮೊಬೈಲಿತ್ತು, ದುಡ್ಡಿತ್ತು. ಹಾಗೇ ಬಗ್ಗಿ ಆ ತೆಳು ತಿಳಿ ನೀರನ್ನು ಮುಖಕ್ಕೆರಚಿಕೊಂಡೆ. ಮತ್ತೂ ಬೇಕೆನಿಸಿತು. ಮೊಬೈಲು ಇತ್ಯಾದಿಯನ್ನು ಪ್ಯಾಂಟಿನ ಜೇಬಿನಲ್ಲಿಟ್ಟು, ಬೊಗಸೆಯಲ್ಲಿ ಮತ್ತಷ್ಟು ನೀರು ಮೊಗೆದು ತಲೆಗೆ ಸುರಿದುಕೊಂಡೆ. ಹಾಯೆನಿಸಿತು; ಇನ್ನಷ್ಟು ಸುರಿದುಕೊಂಡೆ. ಮೂವತ್ತೋ ಮುನ್ನೂರೋ ವರ್ಷಗಳಿಂದ ನದಿಯ ಶೀತಲತೆ ಬದಲಾಗಿರಲಿಲ್ಲ; ಅದರ ಮಾರ್ದವ ಕೂಡ. ದಾಸರು, ಮರಾಠಿಯ ಸಂತರು ನೆನಪಿಗೆ ಬಂದರು. ಆ ಸ್ಪರ್ಷದ ಪವಿತ್ರತೆ ಕೂಡ ಕಡಿಮೆಯಾಗಿಲ್ಲ ಎಂದುಕೊಂಡೆ. ತಂಬೆಲರು ಬೀಸಿತು. ಹಾಯೆನಿಸಿತು. ನದಿ ಬಿಟ್ಟು ವಿಶಾಲ ಮರಳ ಹಾಸಿನ ಮೇಲೆ ಬರಿಗಾಲಲ್ಲಿ ನಡೆಯುತ್ತಾ ಗುಡಿಯಕಡೆ ನಡೆದೆ. ಪುಂಡಲೀಕನ ಗುಡಿಯಲ್ಲಿ ಪುರೋಹಿತನೊಬ್ಬ ಭಕ್ತನಿಗೂ ದೇವರಿಗೂ ಮಧ್ಯಸ್ತಿಕೆ ನಡೆಸುತ್ತಿದ್ದ. ಹಾಗೆಯೇ ಮೇಲೆ ಬಂದೆ. ಮತ್ತೊಬ್ಬ ಧುತ್ತನೆ ಪ್ರತ್ಯಕ್ಷನಾಗಿ ನಾನು ಬೇಡ-ಬೇಕೆನ್ನುವಷ್ಟರಲ್ಲಿ ಹಣೆಗೆ ಚಂದನ ತಿಲಕವಿಟ್ಟು ಹಣ ಬೇಡಿದ. ಅವನ ಕೈಗೊಂದೈದು ರುಪಾಯಿ ತುರುಕಿ ವಿಠಲನ ಗುಡಿಯ ಕಡೆ ಬಂದೆ. ತಲೆಯ ಮೇಲೆ ಚಂದ್ರಭಾಗೆಯ ತಂಪಿತ್ತು. ಹಣೆಯ ಮೇಲೆ ಐದು ರೂಪಾಯಿನ ಚಂದನ ತಣ್ಣಗೆ ಕೊರೆಯುತ್ತಿತ್ತು. ಗುಡಿಯೊಳಗೆ ತಣ್ಣಗಿತ್ತು. ವಿಠಲನ ಕಾಡುಗಲ್ಲಿನ ಮೂರ್ತಿ ನಗುತ್ತಿತ್ತು. ಅದುವರೆಗಿಲ್ಲದ ತಾದಾತ್ಮ್ಯ ಸಿದ್ಧಿಸಿತ್ತು. ದಿಕ್ಕು ತಪ್ಪಿಸುವ ದೇಗುಲ ಸಿಬ್ಬಂದಿಯ "ಛಲಾ ಛಲಾ..." ಉದ್ಗಾರ ನಿಜಕ್ಕೂ ದಿಕ್ಕು ತಪ್ಪಿಸಲಿಲ್ಲ. ಪಾದಸ್ಪರ್ಷ ಆಪ್ಯಾಯಮಾನವಾಗಿತ್ತು. "ನಾಮ ತುಝೇ ಸಾಂಗ ಲೇ, ಐಕತಾ ಮನ ಮಾಝೇ ರಂಗಲೇ... " ಅಭಂಗವಾಣಿಯೊಂದು ಮನಸಿನಲ್ಲಿ ಮೂಡಿ ಅಲ್ಲೇ ತುಂಡಾಯಿತು; ಕಂಠ ಗದ್ಗದವಾಯಿತು. ಅಲ್ಲಿ ಉಳಿಯುವ ಯೋಜನೆಯನ್ನು ರದ್ದುಗೊಳಿಸಿ ಪುಣೆಯ ಬಸ್ಸಿಗಾಗಿ ನಡೆದೆ.


ಇನ್ನು ವಾಪಸು ಪ್ರಯಾಣದ ಪಡಿಪಾಟಲುಗಳು, ವಾರಕರಿ ಭಕ್ತರ ಮರು ಪ್ರಯಾಣದಂತೆಯೇ irrelevant and uninteresting. ಅಲ್ಲೆಲ್ಲೋ ಒಂದು ಪುರಂಧರ ಕಂಬವಿದೆಯಂತೆ; ಸಮರ್ಥ ರಾಮದಾಸರ ಸ್ಮಾರಕವೇನೋ ಇದೆಯಂತೆ... ಸಾಧ್ಯವಾದರೆ ಮತ್ತೊಮ್ಮೆ ಹೋಗಬೇಕು, ಬೇರೆ ನಿರೀಕ್ಷೆಗಳಿಲ್ಲದೆ.

Friday, April 3, 2009

ಅರ್ಥಾಂತರ ನ್ಯಾಸ

ಮೊನ್ನಿನ ಯುವಕರು (ಅಥವ ಹಳೇಏಏ ಸಿನೆಮಾ ಹಾಡುಗಳ ಶೋಕಿರುವ ನಿನ್ನಿನ/ಇಂದಿನ ಯುವಕರೂ ಕೂಡ) ಒಂದಲ್ಲ ಹತ್ತು ಬಾರಿ ಕೇಳಿರಲೇ ಬೇಕಾದ ಹಾಡು, ಭೂಕೈಲಾಸದ ಚಿತ್ರದ "ರಾಮನ ಅವತಾರ". ಶೀರ್ಗಾಳಿ ಗೋವಿಂದರಾಜನ್ನರ ಮಧುರ ಕಂಠದಲ್ಲಿ ಮೂಡಿಬಂದಿರುವ (ಕು.ರಾ.ಸೀತಾರಾಮ ಶಾಸ್ತ್ರಿಗಳ ಸಾಹಿತ್ಯದ) ಈ ಹಾಡು ನನಗೆ ತುಂಬಾ ಖುಷಿ ಕೊಡುವ ಹಾಡುಗಳಲ್ಲೊಂದು. ಆ ಹಾಡಿದ ಚಂದವೋ, ಸಂಗೀತದ ಲಯ-ಮಾಧುರ್ಯವೋ, ಸಾಹಿತ್ಯದ ಉತ್ಕೃಷ್ಟತೆಯೋ, ಕೇಳುವ ನಿಮ್ಮನ್ನು ತನ್ನೊಡನೆಯೇ ಕೊಂಡೊಯ್ಯುತ್ತದೆ. ಗೀತೆಯ ಸಾಹಿತ್ಯದಲ್ಲಿ ಅದೊಂದು ಗತ್ತಿದೆ, ಲಾಲಿತ್ಯವಿದೆ, ಕಥನ ಕೌಶಲವಿದೆ. ಅದು ನಿಮ್ಮನ್ನು ಮಿಥಿಲೆ, ಅಯೋಧ್ಯೆ, ಲಂಕೆಗಳಲ್ಲಿ ಸುತ್ತಿಸುತ್ತದೆ; ರಾಮ ಶಿವಧನುವನ್ನು ಮುರಿಯುವಲ್ಲಿ ನೀವೇ ಸಾಕ್ಷಿ; ಕಾನನದಲ್ಲಿ ರಾಮನ ಜೊತೆಗೂ ಅಲೆಯುವಿರಿ; ಕನ್ನಡ ಕುಲಪುಂಗವನಾದ ಹನುಮ ನಿಮ್ಮ ಮುಂದೆಯೇ ರಾಮನಾಮ ಹಾಡಿಕೊಂಡು ಕುಣಿಯುವನು; ಕೊನೆಗೆ ದಾನವ ಭಕ್ತಾಗ್ರೇಸರನ ಮರಣಕ್ಕೂ ಮರುಗುವಿರಿ.

ಮೊದಲೆಲ್ಲಾ ಹಾಡುಗಳು ಇಷ್ಟವಾಗುತ್ತಿದ್ದರೂ ಸಾಹಿತ್ಯದ ಉತ್ಕೃಷ್ಟತೆಯ ಬಗ್ಗೆ ಅಷ್ಟು ಗಮನ ಹೋಗುತ್ತಿರಲಿಲ್ಲ (ಉತ್ತಮ ಸಾಹಿತ್ಯ ಸರ್ವೇಸಾಮಾನ್ಯವಾಗಿದ್ದ, ಆ ಕಾರಣಕ್ಕಾಗಿಯೇ ನಮ್ಮ ಉಪೇಕ್ಷೆಗೊಳಗಾಗುತ್ತಿದ್ದ ಸ್ವರ್ಣಯುಗ ಅದು). ಆದರೆ ಇತ್ತೀಚೆಗೆ ಈ ಹಾಡುಗಳು ತಮ್ಮ ಸಾಹಿತ್ಯದ ಕಾರಣದಿಂದಲೇ ಮತ್ತಷ್ಟು ರುಚಿಸಹತ್ತಿವೆ. ಇದೇ ಹಾಡಿನಲ್ಲಿ ಈ ಚರಣ ನೋಡಿ:

ಧನುವೋ ಜನಕನ ಮಮತೆಯ ಕುಡಿಯೋ ಸೀತೆಯ ಕನ್ಯಾ ಸಂಕಲೆಯೋ
ದನುಜರ ಕನಸಿನ ಸುಖ ಗೋಪುರವೋ ಮುರಿವುದು ಮಿಥಿಲಾ ನಗರದಲಿ

ಇದೊಂದು ಕಥಾ ನಿರೂಪಣೆಯ ವಿಧಾನ. ರಾಮ ಮಿಥಿಲೆಗೆ ಹೋಗುತ್ತಿದ್ದಾನೆ, ಅಲ್ಲಿ ಮುಂದಾಗುವುದು ನಿರೂಪಕನಿಗೆ ಗೊತ್ತು, ಅದು ನಮಗೂ ಗೊತ್ತೆಂದೂ ಆತನಿಗೆ ಗೊತ್ತು. ಶಿವಧನುಸ್ಸನ್ನು ರಾಮನು ಮುರಿಯುವುದು ನಿಮಿತ್ತ ಮಾತ್ರ; ಅದರೊಡನೆ ಅಂದು ಮಿಥಿಲೆಯಲ್ಲಿ ಮುರಿದು ಬೀಳುವುದು ಇನ್ನೂ ಸಾಕಷ್ಟಿವೆ - ಜನಕನ ಕರುಳ ಕುಡಿ, ಸೀತೆಯ ಕನ್ಯಾ ಸಂಕಲೆ; ಇತರ ದೊರೆಗಳ ಕನಸಿನ ಗೋಪುರ (ಈ ಧನು ಮುರಿದರೆ ಅವರಾರಿಗೂ ಸೀತೆ ದಕ್ಕುವಂತಿಲ್ಲವಲ್ಲ). ಶಿವಧನುವನ್ನು ಮುರಿಯುವ ಮಹಾ ಘಟನೆ ಕೂಡ ಇಷ್ಟೆಲ್ಲಾ ಮುಖ್ಯ ಘಟನೆಗಳ ಮುಂದೆ ಗೌಣ! ಅದಕ್ಕೆಂದೇ ಏನೋ, ಇಡೀ ಚರಣದಲ್ಲಿ ಶಿವಧನು ಏನೂ ದೊಡ್ಡದಾಗಿ ಕಾಣುವುದೇ ಇಲ್ಲ; ಅದೊಂದು ಧನು, ಅಷ್ಟೆ.

ಹೀಗೆ ಒಂದು ಕ್ರಿಯೆಯನ್ನು ಸೂಚಿಸಿ, ಅದರಿಂದ ಹೊರಡುವ (ಅಥವಾ ಕವಿ ಆರೋಪಿಸುವ) ಮತ್ತೊಂದು ಕ್ರಿಯೆಯನ್ನು ಸೂಚಿಸುತ್ತಾ ಘಟನೆಗೆ ಹೊಸ ಅರ್ಥ-ಆಯಾಮ ಕಲ್ಪಿಸುವ ರೀತಿ ಇದೆಯಲ್ಲ, ಅದನ್ನು ಅಲಂಕಾರಗಳ ಪರಿಭಾಷೆಯಲ್ಲಿ ಅರ್ಥಾಂತರ ನ್ಯಾಸ ಎನ್ನುತ್ತಾರೆ. ಉಪಮೆ, ರೂಪಕ, ಉತ್ಪ್ರೇಕ್ಷೆಗಳಂತೆಯೇ ಇದೊಂದು ಅಲಂಕಾರ; ಕ್ರಿಯೆ ಒಂದು, ಅದರ ಅರ್ಥ ಬೇರೊಂದು! ಕಥನ ಕಲೆಯಲ್ಲಿ ಇದೊಂದು ಬಹಳ ಪರಿಣಾಮಕಾರಿ ಸಾಧನ. ಮತ್ತೊಂದು ಉದಾಹರಣೆ ನೋಡಿ:

ಜ್ಞಾನ ಚಂದ್ರಿಕೆ ಬೆಳಗೆ ಭಕ್ತಿವಾರಿಧಿಯುಕ್ಕೆ ಮನಚಕೋರವು ವಿಷ್ಣುಪಥದಿ ನಲಿಯೆ
ದೀನಜನ ಭಯವಡಗೆ ತಾಪತ್ರಯಗಳೋಡೆ ಮಧ್ವೇಂದು ಶ್ರೀ ಕೃಷ್ಣ ನೋಡಿ ತಾ ನಲಿಯೆ (ವ್ಯಾಸರಾಜರು)

ಇದು ಇನ್ನೂ ಸಂಕೀರ್ಣವಾದ ಅರ್ಥಾಂತರ ನ್ಯಾಸ. ಮೊದಲ ಉದಾಹರಣೆಯಲ್ಲಿ ಕೇವಲ ಒಂದು ಕ್ರಿಯೆ, ಅದರ ಸರಣಿ ಪರಿಣಾಮಗಳಿದ್ದುವು, ಆದರೆ ಇಲ್ಲಿ ನೋಡಿ. ಎರಡೆರಡು ಸರಣಿ ಪ್ರಕ್ರಿಯೆಗಳು ಒಂದನ್ನೊಂದು ಧ್ವನಿಸುತ್ತಾ ಸಾಗುತ್ತವೆ. ಚಂದ್ರಿಕೆ ಬೆಳಗಲು ಸಮುದ್ರ ಉಕ್ಕುತ್ತದೆ; ಚಕೋರ ಪಕ್ಷಿಯು ನಲಿಯುತ್ತದೆ; ಭಯ ಅಡಗುತ್ತದೆ; ತಾಪತ್ರಯಗಳು ಓಡುತ್ತವೆ. ಅದಕ್ಕೇ ಸಮಾನಂತರವಾಗಿ ಓಡುವ ಮತ್ತೊಂದು ಸರಣಿ ನೋಡಿ. (ಪರಮಾತ್ಮನ) ಜ್ಞಾನ ಬೆಳಗಿದರೆ ಭಕ್ತಿ ತಾನಾಗಿಯೇ ಉಕ್ಕುತ್ತದೆ; ಮನವು ವಿಷ್ಣುಪಥದಲ್ಲಿ ನಲಿಯುತ್ತದೆ; ಸಹಜವಾಗಿಯೇ ಭಯಗಳು ಅಡಗುತ್ತವೆ, ಕಷ್ಟಗಳು ಕೊನೆಗಾಣುತ್ತವೆ. ಚಂದ್ರೋದಯ ಮತ್ತು ಅದರ ಪರಿಣಾಮಗಳು ಜ್ಞಾನೋದಯ ಮತ್ತು ಅದರ ಪರಿಣಾಮಗಳು ಪರಸ್ಪರ ಸಮಾನಾಂತರವಾಗಿ ಓಡುತ್ತಾ, ಒಂದು ಇನ್ನೊಂದರ ಅರ್ಥವನ್ನು ಧ್ವನಿಸುತ್ತಾ ಹೋಗುವುದನ್ನು ಕಾಣುತ್ತೇವೆ. "ಜ್ಞಾನಚಂದ್ರಿಕೆ", "ಭಕ್ತಿವಾರಿಧಿ", "ಮನಚಕೋರ", "ವಿಷ್ಣುಪಥ" ಇವೆಲ್ಲಾ ಒಂದೊಂದು ಪ್ರತ್ಯೇಕ ರೂಪಕಗಳೇ! ಈ ರೂಪಕಗಳನ್ನೆಲ್ಲ ಒಳಗೊಂಡು ಇಲ್ಲಿ ಅರ್ಥಾಂತರ ನ್ಯಾಸ ಒಡಮೂಡುತ್ತದೆ. ಅಲಂಕಾರದೊಳಗೊಂದು ಅಲಂಕಾರ!

ಪ್ರತಿಯೊಬ್ಬ ಶಕ್ತ ಕವಿಯ ಬಹು ಮುಖ್ಯ ಸಾಧನ-ಸಲಕರಣೆ (Tool), ಅರ್ಥಾಂತರ ನ್ಯಾಸ. ರೂಪಕ ಸಾಮ್ರಾಜ್ಯ ಚಕ್ರವರ್ತಿಯೆಂದೇ ಹೆಸರಾದ ಕುಮಾರವ್ಯಾಸನೂ ಅರ್ಥಾಂತರ ನ್ಯಾಸವನ್ನು ಅದೆಷ್ಟು ಪರಿಣಾಮಕಾರಿಯಾಗಿ ಬಳಸುತ್ತಾನೆ ನೋಡಿ:

ಜವನ ಮೀಸೆಯ ಮುರಿದನೋ ಭೈ
ರವನ ದಾಡೆಯನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೋ
ಬವರವನು ತೊಡಗಿದನಲಾ ಕೌ
ರವನಕಟ ಮರುಳಾದನೆಂದಾ
ಯುವತಿಯರ ಮೊಗನೋಡುತುತ್ತರ ಬಿರುದ ಕೆದರಿದನು

(ನೆನಪಿನ ಮೇಲೆ ಬರೆದದ್ದು. ತಪ್ಪಿದ್ದರೆ ದಯವಿಟ್ಟು ತಿಳಿಸಿ)

ಕೌರವನು ಯುದ್ಧದಲ್ಲಿ ತೊಡಕಿಕೊಂಡಿದ್ದಾನೆ, ಉತ್ತರನ ಮೇಲೆ! ಆದರೆ ಅವನೆಂಥಾ ಅನಾಹುತ ಮಾಡಿಕೊಂಡಿದ್ದಾನೆಂದು ಅವನಿಗೇ ಗೊತ್ತಿಲ್ಲ - ಯಮನ ಮೀಸೆಯನ್ನೆಳೆದಿದ್ದಾನೆ; ಭೈರವನ ದಾಡೆಯನ್ನು ಅಲುಗಿಸಿದ್ದಾನೆ;, ಮಲಗಿದ್ದ ಮೃತ್ಯುವಿನ ಮುಸುಗೆಳೆದಿದ್ದಾನೆ; ಸಿಂಹವನ್ನು ಕೆಣಕಿದ್ದಾನೆ! ಯುವತಿಯರ ಮುಂದೆ ಹೀಗೆ ಉತ್ತರ ಬಿರುದ ಕೆದರಿದನು ಎನ್ನುವುದರ ಮೂಲಕ ವ್ಯಂಗ್ಯದ ಪರಿಣಾಮವನ್ನು ಕವಿ ಎಷ್ಟು ಚೆನ್ನಾಗಿ ತರುತ್ತಾನೆ ನೋಡಿ. ಕುಮಾರವ್ಯಾಸನು ತನ್ನ ರೂಪಕಗಳಿಗೆ ಹೆಸರುವಾಸಿ, ಆದರೆ ಅವನ ಕೃತಿಯುದ್ದಕ್ಕೂ ಇಂಥಾ ಶಕ್ತಿಯುತವಾದ ಅರ್ಥಾಂತರನ್ಯಾಸ ಸೂರೆಗೊಂಡಿದೆ.

ಜೂಜಿನಲ್ಲಿ ಸೋತ ಪಾಂಡವರನ್ನು ಅಪಮಾನಿಸಲು ದ್ರೌಪದಿಯ ಮಾನಭಂಗವೊಂದೇ ತಕ್ಕ ಮಾರ್ಗವೆಂದು ನಿರ್ಧರಿಸುವ ದುರ್ಯೋಧನ ಆಕೆಯನ್ನು ಎಳೆತರಹೇಳುತ್ತಾನೆ. ಈ ಮೂರ್ಖನಿಷ್ಠುರತೆಗೆ ಬೆಚ್ಚಿದ ವಿದುರ ದುರ್ಯೋಧನನಿಗೆ ಎಚ್ಚರಿಸುವ ಬಗೆ ನೋಡಿ:

"ಸಿಡಿಲ ಪೊಟ್ಟಣಗಟ್ಟಿ ಸೇಕವ ಕೊಡುವರೇ... ಹೆಡತಲೆಯ ತುರಿಸುವರೆ ಹಾವಿನ ಹೆಡೆಯನಕಟಾ..." ಎಷ್ಟು ಶಕ್ತಿಶಾಲಿಯಾದ ಮಾತು!

ಇವೆಲ್ಲಾ ಸಾಮಾನ್ಯದಿಂದ ಅಸಾಮಾನ್ಯವನ್ನು ಧ್ವನಿಸುವ ಮಾತಾದರೆ, ಅಸಾಮಾನ್ಯದಿಂದ ಸಾಮಾನ್ಯವನ್ನು ಧ್ವನಿಸುವ, ಮತ್ತು ಆ ಮೂಲಕ ಸಾಮಾನ್ಯವನ್ನೇ ಅಸಾಮಾನ್ಯದ ಮಟ್ಟಕ್ಕೇರಿಸುವ ಈ ಪರಿ ನೋಡಿ:

"ಮುಗಿಲ ಮಾರಿಗೆ ರಾಗರತಿಯಾ ನಂಜ ಏರಿತ್ತ, ಆಗ ಸಂಜಿಯಾಗಿತ್ತ"

ಸಂಜೆಯನ್ನು ವರ್ಣಿಸಿ ರಾಗರತಿಯ ಸ್ವರ್ಗೀಯತೆಯನ್ನು ಸೂಚಿಸುವ ಬದಲು, ರಾಗರತಿಯನ್ನೇ ಮೊದಲು ಸೂಚಿಸಿ ಅದರಿಂದ ಸಂಜೆಯಾಯಿತೆಂದು ಧ್ವನಿಸುತ್ತದೆ ಈ ಸಾಲು; ಆ ಮೂಲಕ ಸಾಮಾನ್ಯ ಸಂಜೆಯೊಂದು ಅಸಾಮಾನ್ಯದ ಮಟ್ಟಕ್ಕೇರುತ್ತದೆ, ಬೇಂದ್ರೆಯವರ ಕಾವ್ಯದ ಮೋಡಿಯಲ್ಲಿ.

ಅದಿರಲಿ, ಮಾತಿಗೊಂದು ಅರ್ಥ ಬೇಕೆ ಅರ್ಥವಿದ್ದರಷ್ಟೆ ಸಾಕೆ ಎಂದ ಕವಿ ಕುವೆಂಪು, ಅಮೂರ್ತದ ಅರ್ಥವನ್ನು ಧ್ವನಿಸುವಲ್ಲಿ ಅದೆಷ್ಟು ಸೊಗಸಾಗಿ ಅರ್ಥಾಂತರನ್ಯಾಸವನ್ನು ಬಳೆಸುತ್ತಾರೆ ನೋಡಿ:

ಗಿರಿವನ ಪಟದಾಕಾಶದಲಿ
ತೇಲುತ ಬರಲ್ಕೆ ಬಲಾಕಪಂಕ್ತಿ
ಲೇಖನ ರೇಖಾನ್ಯಾಸದಲಿ
ಅವಾಙ್ಮಯ ಛಂದಃಪ್ರಾಸದಲಿ

ಸೃಷ್ಟಿಯ ರಚನೆಯ ಕುಶಲಕೆ ಚಂದಕೆ
ಜಗದಚ್ಚರಿಯಂದದ ಒಪ್ಪಂದಕೆ
ಚಿರಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ

ದೇವರು ರುಜು ಮಾಡಿದನು
ರಸವಶನಾಗುತ ಕವಿ ಅದ ನೋಡಿದನು

ಬೆಳ್ಳಕ್ಕಿಯ ಗುಂಪೊಂದು ಅದಾವುದೋ ಬರವಣಿಗೆಯ ಆಕಾರದಲ್ಲಿ ಆಗಸದಲ್ಲಿ ಹಾರುತ್ತಿದೆ. ಜಗತ್ತಿನ ಎಲ್ಲ ಕೌತುಕಗಳಿಗೆ ತಾನು ಚಿರಂತನವಾಗಿ ಸಾಕ್ಷಿಯೆಂಬ ಒಪ್ಪಂದಕ್ಕೆ ದೇವರು ರುಜು ಹಾಕುತ್ತಿರುವಂತೆ ಕವಿಯ ಕಲ್ಪನೆ. ಸ್ವಲ್ಪ ನಿರುಕಿಸಿ ನೋಡಿದರೆ ಇದು ಉತ್ಪ್ರೇಕ್ಷಾಲಂಕಾರವೆಂದೇ ಹೇಳಿಬಿಡಬಹುದು; ಒಪ್ಪಂದವೊಂದಕ್ಕೆ ದೇವರು ರುಜು ಮಾಡಿದ್ದಾನೋ ಎಂಬಂತೆ ಹಕ್ಕಿ ಸಾಲು ಹಾರುತ್ತಿದೆ, ಆದ್ದರಿಂದ. ಆದರೆ ಹಕ್ಕಿಯ ಸಾಲು ದೇವರ ರುಜುವಿನ ರೂಪಿನಲ್ಲಿ ಬೇರೆಯದೇ ಅರ್ಥವನ್ನು ಪಡೆಯುವ ಸೂಕ್ಷ್ಮ ಅರ್ಥಾಂತರ ಇಲ್ಲಿ ಇದ್ದೇ ಇದೆ. ಕಾವ್ಯ, ಅಲಂಕಾರ-ಲಕ್ಷಣಗಳ ಕಟ್ಟಿಗೆ ಒಳಪಡುವುದಲ್ಲ ಎನ್ನುವುದಕ್ಕೆ ಇದು ಉದಾಹರಣೆ.

ಹಾಂ! ಅರ್ಥಾಂತರನ್ಯಾಸ ಕೇವಲ ಕಾವ್ಯ (ಕವನ-ಪದ್ಯ?)ಗಳಲ್ಲಿ ಮಾತ್ರ ಆಗುವಂಥದ್ದೆಂದು ಭಾವಿಸಬೇಕಿಲ್ಲ. ಮೊನ್ನೆ ಗೆಳೆಯರೊಂದಿಗೆ ಹೋಟೆಲಿಗೆ ಹೋಗಿದ್ದೆ. ಕೊನೆಯಲ್ಲಿ ಮಾಣಿ ತಂದಿತ್ತ ದುಬಾರಿ ಬಿಲ್ಲನ್ನು ನೋಡಿ, ಕಾವ್ಯದ ಗಂಧವೇ ಇಲ್ಲದ ನನ್ನ ಗೆಳೆಯ ತೆಗೆದ ಉದ್ಗಾರ "ಓ, ಇದು ಬಿಲ್ಲಲ್ಲ ಗುರುವೇ, ಬಾಣ, ಬಾಣ!"