Sunday, July 29, 2007

ಪದ್ದಕ್ಕ ಸತ್ತ ಸುದ್ದಿ

ಮಕರ
ಸಂಕ್ರಮಣದ ಮರುದಿನ
ಕರಿ ಹರಿದಿತ್ತು
ಮುಂಜಾನೆ
ಬ್ರಾಹ್ಮಿ ಕಳೆದೆರಡು ತಾಸು;
ಆರು
ಹೊಡೆಯಲಿನ್ನೈದು ನಿಮಿಷಗಳನಳೆದಿತ್ತು ಗಡಿ
ಯಾರ;
ಗುಣುಗುಣಿಸಿ ಕರೆದಿತ್ತುಫೋನು.

ಅಷ್ಟು ಹೊತ್ತಲಿ ನಮಗೆ ಫೋನು ಬರುವುದೆ ಇಲ್ಲ,
ಕೆಲಸದ ಕರೆಯನು ಬಿಟ್ಟು.
ಕೆಲಸದ್ದಂತೂ ಇರಲಿಕ್ಕಿಲ್ಲ,
ಅದಕೆ ಮೊಬೈಲಿದೆಯಲ್ಲ.
ಹಬ್ಬದ ಸಡಗರ ಖಂಡಿತ ಅಲ್ಲ,
ನೆನ್ನೆಯೆ ಮುಗಿದಿತ್ತೆಲ್ಲ!
ಮತ್ತೇನೀ ಕರೆ
ಬೆಳಗಿನ-
ಮಂಗಳ ವೇಳೆಯಲಿ?

ಕೊನೆಪಟ್ಟಿಯಲ್ಲಿಹರನೊಮ್ಮೆ ಮನ ನೆನೆದಿತ್ತು,
ಛೆ ಛೆ! ಮಂಗಳಮಸ್ತು!
ನಡುಗುಗೈಯನು ಪಿಡಿದು ನುಡಿದಿತ್ತು ಗ್ರಾಹಿ,
ದೂರದಿಂ ತಂದ ಸುದ್ದಿ;
ಪದ್ದಕ್ಕ ಸತ್ತರಂತೆ.
ಸುದ್ದಿ ಬರ
ಸಿಡಿಲೇನು ಆಗಿರಲಿಲ್ಲ;
ನೂರರ ವೃದ್ಧೆ ಪದ್ದಕ್ಕ
ಇದ್ದದ್ದೆ ಗೊತ್ತಿರಲಿಲ್ಲ.
ತುಂಬು ಜೀವ,ಇದ್ದಾಗೊಮ್ಮೆ ನೋಡಿ ಬರಬೇಕಿತ್ತು;
ಸಂಬಂಧ,
ಬದುಕಿಗೆ ದೂರ,
ಸಾವಿಗೆ ಹತ್ತಿರ;
ದಶರಾತ್ರ
ಜ್ಞಾತಿ
ಹತ್ತು ದಿನ
ಸೂತಕವಿರಬೇಕು.

ಅಣ್ಣ ನಡುಗುತ್ತಿದ್ದರು.
ಕೊರೆವ ಚಳಿ,
ಕಾಯಿಸಲು
ಗ್ಯಾಸಿಲ್ಲ, ಲೈಟಿಲ್ಲ, ನೀರಿನ್ನೂ ಬಂದಿಲ್ಲ;
ಸುದ್ದಿ ಕೇಳಿದ ಸ್ನಾನವಾಗಬೇಕು.
ಸ್ನಾನವಾಗಲೆ ಬೇಕು
ಹೊರಗೆ ಹೊರಡುವ ಮುನ್ನ,
ಎಂಟಕ್ಕೆ ಆಫೀಸು.
ಆರು ಹೊಡೆದಿತ್ತು ಗಡಿಯಾರ
ಮಂಗಳವಾರ
ರೇಡಿಯೋ ಮೊಳಗಿತ್ತು ನಾದಸ್ವರ.
ಹೊರಗೆ ಬೀದಿಯ ಮೇಲೆ ಹೂವು ಮಾರುತ್ತಿತ್ತು;
ಹಾಲೂ ಬಂತು, ಪೇಪರೂ ಬಂತು.
ಏಳಕ್ಕೆ ಎದ್ದ ಮಗು ಆಟವಾಡುತ್ತಿತ್ತು,
ಸಂದ ನೂರರ ಹರಕೆ ತುಂಬಿದಂತೆ.

- ೧೭/೦೧/೨೦೦೭

Sunday, July 22, 2007

ಕಾವ್ಯ ಎಂದರೆ...

ಶತಮಾನಗಳಿಂದ ಕನ್ನಡ ಕಾವ್ಯ ನಡೆದುಬಂದ ದಾರಿಯನ್ನು ಸುಮ್ಮನೆ ಸ್ಥೂಲವಾಗಿ ಗುರುತಿಸುವ ಪ್ರಯತ್ನ ಈ ಕವನ. ಹಾಗೆಂದು ಎಲ್ಲ ಕಾಲಘಟ್ಟದಲ್ಲಿ ಬರುವ ಎಲ್ಲ ಪ್ರಾತಿನಿಧಿಕ ಮಾದರಿಗಳನ್ನು/ಕವಿಗಳನ್ನು ಈ ಕವನ ಒಳಗೊಳ್ಳುವುದಿಲ್ಲ, ಅದು ಈ ಕವನದ ಉದ್ದೇಶವೂ ಅಲ್ಲ. ಕೇವಲ, ಕಾವ್ಯ ನಡೆದು ಬಂದ ದಾರಿಯನ್ನು ನನಗೆ ತೋರಿದಂತೆ ಚಿತ್ರಿಸುವುದಷ್ಟೇ ಈ ಕವನದ ಉದ್ದೇಶ.

ಆಯಾ ಕಾಲಘಟ್ಟದಲ್ಲಿ ಬಳಕೆಯಲ್ಲಿದ್ದ ಭಾಷೆ, ಶೈಲಿ, ಪ್ರತಿಮೆಗಳ ಮಾದರಿಯನ್ನೇ ಬಳಸಿಕೊಳ್ಳುವ, ಹಾಗೂ ಆಯಾ ಕಾಲಘಟ್ಟದಲ್ಲಿ ಅತಿಯೆನ್ನಿಸುವಷ್ಟು ಎದ್ದು ಕಾಣುವ ಅಂಶಗಳನ್ನು ಬಳಸುವ ಮೂಲಕ ಆಯಾ ಕಾಲದ ಕಾವ್ಯವನ್ನು ಗುರುತಿಸುವ ಪ್ರಯತ್ನ ಇಲ್ಲಿದೆ. ಇದು ಕೆಲವೊಮ್ಮೆ ವಿಡಂಬನೆಯ ರೂಪವನ್ನು ತಳೆದಿರುವುದೂ ಇದೆ. ಆದರೆ ಇದರ ಅರ್ಥ ಆ ಕಾಲಘಟ್ಟದಲ್ಲಿ ಬಂದ ಕಾವ್ಯ ಜೊಳ್ಳು ಅಥವ ಹಾಸ್ಯಾಸ್ಪದ ಎಂದಲ್ಲ; ನಮಗೆ ತೀರ ಪ್ರಿಯರಾದವರ ಅಂಕು ಡೊಂಕುಗಳನ್ನು ಎತ್ತಿ ತೋರಿಸಿ ತಮಾಷೆ ಮಾಡುವ ರೀತಿ ಎಂದಿಟ್ಟುಕೊಳ್ಳಬಹುದು.

=========
ಕಾವ್ಯ ಎಂದರೆ...
=========
(೧)
ಕವಿರಾಜಮಾರ್ಗಮೆಸೆದಿರೆ,
ಕವಿಕುಳಾಶ್ರಯ ಕಲ್ಪತರುವೆನಿಪ
ಭೂಪಾಲ ಕುಳಮಿರಲ್,
ಕವಿ ಮೇಘ ಸಂಘರ್ಷಣೋಜ್ಜನಿತ
ಕಾವ್ಯ ವಿದ್ಯುಲ್ಲತಾ ಪ್ರಭಾವಳಯಂ;
ಕಾವ್ಯ ವರ್ಷಂ;
ಕವಿಮತ್ತವಾರಣ ಪರಸ್ಪರಾಭಿಸಂಘಟ್ಟನೋತ್ಪಾದಿತಾರುಣ ಸಲಿಲ ಸಮ್ಮಿಶ್ರಿತ
ಕಾವ್ಯ ಸರಸ್ವತೀ ಸರಿತ್ಪ್ರವಾಹಂ.

(೨)
ಕಾವ್ಯಪ್ರಯೋಜನಂ
ವಾರ್ಧಕಮನೈದಿ ಬರಲೊಂದು ಸೊಗಂ;
ಕಂದನ ರಗಳೆಯದೊಂದು ಮುದಂ;
ಭಾಮಿನಿಯ ನಲ್ವಾತಿನ ಸೊಗಕೇಂ ಸಮನೈ?
ಕೇಳದೋ,
ವೀರನಾರಯಣಕುವರಂ ಪೇಳುತಿಹ
ಭಾರತದ ಚಾರು ಕತೆಯಂ.

(೩)
ಅನುಭವದ ಮಂಟಪದಿ
ನುಡಿಯ ಸ್ಫಟಿಕ ಶಲಾಕೆಯಲುಗೆ
ತೊಳಗಿದ ಮಾಣಿಕದ ದೀಪ್ತಿ
ತೋರಿದ್ದು
ಶೂನ್ಯ
ಸಿಂಹಾಸನ.
ಕೊನೆಗುಳಿದದ್ದು
ಸಿಂಹಾಸನವೂ ಅಲ್ಲ!
ಮಾಡು ಸಿಕ್ಕಲಿಲ್ಲ,
ಮಾಡಿನ ಗೂಡೂ ದಕ್ಕಲಿಲ್ಲ;
ನಾಮ
ಸಂಕೀರ್ತನೆಗೆ ಆದಿಕೇಶವ - ವಿಠಲ.

(೪)
ಹೊಂಬಿಸಿಲು,
ಹೂ - ಹಣ್ಣು,
ಹೆಣ್ಣ ಕುರುಳಿನ ಲಾಸ್ಯ;
ಹಿತವಾಗಿ ಅಲ್ಲಲ್ಲಿ ಹೊಕ್ಕು ಹೊರಡುವ ಹಾಸ್ಯ;
ಕವಿಶೈಲದಲಿ ಕುಳಿತು ಧ್ಯಾನಿಸಿ ನೋಡೆ
ಬಾನಿನಲಿ ನರ್ತಿಸುವ ಹೊನ್ನ ನವಿಲು;
ಒಮ್ಮೊಮ್ಮೆ ಕಾರಿರುಳು,
ಜೀರಿಡುವ ಮಲೆ - ಕಾನು
ರುದ್ರ ಭೀಷಣ ಭೀಷ್ಮ ಸಹ್ಯಾದ್ರಿ;
ಮಹಾ ಮೇಘ ರಂಜಿತ ರುಂದ್ರ ಗಗನ, ಘನ ನೀಲ;
ಮರುಕ್ಷಣವೆ ಮಳೆ,
ಗುರುಕೃಪೆಯೆ ಇಳೆಗೆ ಸುರಿದಂತೆ;
ಮಲೆ ದೇವ ನಗುವಂತೆ
ತೀಡುತಿಹ ತಂಗಾಳಿ
ಯಲಿ
ಮಿಂದು ಪಾವನ
ಯದುಶೈಲ.

(೫)
ಯೋನಿತಳದಿಂದೆಳೆದು
ಎದೆಹೊಕ್ಕು ಹೊರಡುವ ನಾಳ,
ವೈತರಣಿ;
ಎದೆಯಾಳದುದ್ವೇಗ,
ಮತಿ ವಿಚಾರ - ವಿಕಾರ
ಕಲಮಲಿಸಿ
ತೊಳಸಿ
ಹೊರನುಗ್ಗಿರಲು
ಪೈಪಿನ ತುದಿಗೆ
ನವರಂಧ್ರ ಝಾಲರಿಯಿಟ್ಟು
ಕಾರಂಜಿ
ತೋರಿಸುವ ಕಸರತ್ತು;
ಕೆಲವೊಮ್ಮೆ
ಧಾತು ಸಾಲದೆ
ಹೊರಟ ಮಾತೂ ಹರಡಿ
ಜರಡಿ
ಬಿದ್ದ
ಪೈಪಿನ ತುದಿಗೆ
ಸೊರಗಿದ ಬುಗ್ಗೆ.

(೬)
ಧಿಕ್ಕಾರ...
ತಳೆದ ಮುಖವಾಡಕ್ಕೆ,
ಒಣಹುಲ್ಲ ಮಾಡಕ್ಕೆ,
ನನಗೆ, ನಿನಗೆ, ಅದಕೆ, ಇದಕೆ;
ನೂರು ಕಣ್ಣು ಮಣ್ಣಲ್ಲಿ ಹುದುಗಿರುವಾಗ,
ಕಾವ್ಯ?!
ಪುಟಗೋಸಿ, ಮಣ್ಣಂಗಟ್ಟಿ.
ಎಲ್ಲಿ ಹುಡುಕುವೆ ನೀನು?
ಕಾವ್ಯವಿರುವುದು ನಿನ್ನ ಪೆನ್ನಲಲ್ಲೋ ಅಣ್ಣ,
ಮಣ್ಣಿನಲ್ಲಿ.
ಎಸೆ ಪೆನ್ನು,
ಹಿಡಿ ಮಣ್ಣು;
ತೊಡೆ,
ಹಣೆಗೆ...
ಕಣ್ಣು ಬಸೆದಿರುವ ಬಿಸಿ
ನೆತ್ತರನೆ ಮಸಿ ಮಾಡಿ
ಬರೆ,
ಮುಟ್ಟಿ ನೋಡಿಕೊಳ್ಳೋಹಾಗೆ.
ಬಂಡೇಳು! ಬಂಡೇಳು!!
ಓ ಏಳು ಬಂಡೆಯೆ ಏಳು.
ಒಂದೆರಡಾದರೂ ಬೀಳದಿರೆ ತಲೆ,
ವ್ಯರ್ಥ ಕಾಣೋ ನಿನ್ನ ಲೇಖನ ಕಲೆ!

(೭)
ವರುಷ ವರುಷಗಳಿಂದ
ಹರಿದಿಹಳು ಕಾವ್ಯಧುನಿ,
ರಕ್ತೆ, ಶ್ಯಾಮಲೆ, ಅಮಲೆ,
ಮಲಿನೆ, ಶುದ್ಧಸ್ಫಟಿಕೆ,
ವಿವಿಧ ವರ್ಣೆ;
ಈ-ಮೈಲು ಎಸ್ಸೆಮ್ಮೆಸ್ಸುಗಳ
ವೇಗದಬ್ಬರದಲ್ಲೂ
ಕೆಲವೊಮ್ಮೆ ಸುವ್ಯಕ್ತೆ,
ಕೆಲವೊಮ್ಮೆ ಲುಪ್ತೆ.

- ೦೮/೦೫/೨೦೦೬

Sunday, July 15, 2007

ನಗಬಹುದು ಹೀಗೂ

ಸಂಜೆಗಪ್ಪು ಬಸಿದಿತ್ತು ಧರೆಗೆ ಮುಗಿ-
ದಿರಲು ಹಗಲ ಸಂತೆ;
ಎದೆಯಾಳದಿಂದ ಕಿರುಚಿಂತೆಯೆದ್ದು ಎದೆ-
ಯೆಲ್ಲ ತುಂಬಿದಂತೆ.

ರವಿಯ ಹಗಲು ಮುಗಿದಿತ್ತು ರಾತ್ರಿಗಾ
ರಜನಿಧರನ ಪಾಳಿ;
ಅವ ಬರುವವರೆಗು ಕಾರಿರುಳ ರಾಜ್ಯದೊಳ-
ಗಾರು ದಿಕ್ಕು ಹೇಳಿ!

ಇರುಳುಗಪ್ಪ ತಿಳಿಗೊಳಿಸೆ ಮಿನುಗುತಿವೆ
ಕೋಟಿ ಚುಕ್ಕೆ ನಭದಿ;
ಮಿಣುಕು ಹಣತೆ ಮನೆ ಬೆಳಗುತಿಹುದು
ನಸುಬೆಳಕ ಸುತ್ತ ಹರಡಿ.

ಬೆಳಕ ನಡುವೆ ಕತ್ತಲೆಯ ರಾಜ್ಯ ನಲಿ-
ವುಗಳ ನಡುವೆ ನೋವು;
ಮಿನುಗಿರುವ ಚುಕ್ಕೆ, ಬೆಳಗಿರುವ ದೀಪ;
ನಗಬಹುದು ಹೀಗೂ ನಾವು!

- ೨೮/೦೫/೨೦೦೪

Sunday, July 8, 2007

ಹೀಗೇ...

ಕೆಲವೊಮ್ಮೆ
ಹೀಗೇ...
ಎಲ್ಲ ಖಾಲಿ ಖಾಲಿ;
ಬರೆಯ ಹೊರಟ ಕವನ,
ಕನಸು-ಕನವರಿಕೆ;
ಮಧುರ ಮದ-

ಕದನ ಕುತೂಹಲಕೆ
ತೆರೆದ
ಹರನ ಫಣಾನಲಕೆ
ಕಾಮ-
ದಹನ.
ಅಖಂಡ ಸುಖಕೆ
ಕುದಿದ
ಪುರುಪಿತಗೆ ದಕ್ಕಿದ್ದು
ಅಕಾಲ ವೃದ್ಧಾಪ್ಯ;

ಮಸಕು-ಮಂಕು
ಬೂದಿ
ಎರಚಿದಂತೆಲ್ಲೆಲ್ಲು,
ಬಯಲು,
ಬಾನು
(ಎಲ್ಲಪ್ಪಾ ಮಳೆ!)
ಉಸ್... ತೆವಳುವ
ಬೇವಾರ್ಸಿ
ತುಂಡು ಮೋಡ;
ಸ್ಥಬ್ಧ-
ಚಿತ್ರಕೆ ಚೌಕಟ್ಟು
ಹಿಡಿದ
ಎತ್ತರದ ಗವಾಕ್ಷ;

ಹಲ್ಲಳಿದ,
ಬಾಯ್-
ಮೊಸರೆಂದೂ ಆಗದ,
ಕೈ
ಕೆಸರ ಸಾರಿಸುತ್ತಾನೆ
ಮುದುಕ,
ನಾಲ್ಕು ಗೋಡೆಗಳ ನಡುವೆ.
ಧಗೆ ಒಳಗೆ,
ಇಣುಕಿದರೆ
ಬಿಸಿಲ ಬಿಸಿ ಹೊರಗೆ,
ಮೋಟಾರು, ಕಾರಖಾನೆ
ಹೊಗೆ,
ಬೆಂಕಿ - ಬಂದೂಕು
ಗದ್ದಲದ ಗೊಂದಲದ
ಬಯಲ ಬಂದೀಖಾನೆ

ರಕ್ಕಸ ಗಡಿ-
ಯಾರ;
ಗಂಟೆ, ನಿಮಿಷ, ಸೆಕೆಂಡು ಮುಳ್ಳಿಗೆ,
ಕಾಲಚಕ್ರದ ಹಲ್ಲಿಗೆ
ಸಿಕ್ಕಿ ಸಂದವರು - ನಿಂದವರು;
ಚಿರಸುಖದ
ಕಲ್ಪನೆಯ ಕುರುಡಾನೆ
ಬಯಸಿ
ಬಸವಳಿದವರು,
ನಾವು - ನೀವು.

- ೨೨/೦೫/೨೦೦೪

Monday, July 2, 2007

ಶೂನ್ಯಲಿಂಗ

ಹಿಮಗಿರಿಯ
ಮೃತ್ಯು
ಕಂದರ ಶಿಖರಗಳ ದಾರಿ
ಸವೆಯಿಸಲು ನೀ ಕಾಣ್ಬೆ
ಅಮರ
ಲಿಂಗ.

ಶಿರ
ಶಿಖರದಿಂದುದಿಸಿ
ಜಗವೆಲ್ಲವನು ಪೊರೆಯೆ ಹರಿದಿಹಳು
ನೋಡಲ್ಲಿ, ಪ್ರಾಣ ಗಂಗಾ...

ನಟ್ಟಿರುಳ ಕೊನೆಗೆ
ಕಡುಗತ್ತಲೆಯ ಕತ್ತರಿಸಿ
ಬೆಳಗಾಯಿತದೋ ಅಲ್ಲಿ
ಪೂರ್ವರಂಗ;
ಆ ಮಹಾ ರವಿರೂಪ,
ಧರೆಯ ಕಾಯ್ವ ಪ್ರತಾಪ
ಅದುವೆ
ಜ್ಯೋತಿರ್ಲಿಂಗ ವಿಸ್ಫುಲಿಂಗ.

ಜಲಲಿಂಗ
ಜ್ವಲಲಿಂಗ
ಹರಹಿನಂಬರ
ಲಿಂಗ
ಧರಿಸಿಹುದು ರೂಪ-
ರಸ
ವಿವಿಧ ಭಾವ;

ರೂಪ ರಸ ನಾದಗಳ
ನಾಮ ಗುಣ ಭೇದಗಳ
ನಡುವಿನಂತರ್ಭಾವ...
ಶೂನ್ಯ
ಭಾವ.

ಗುಣ, ರೂಪ, ಸ್ಪರ್ಷ
ಜಗ-
ದೆಲ್ಲ ಭಾವದ-
ಭಾವ;
ಅಸ್ತಿತ್ವದಂಚಿಡಿದ
ನಾಸ್ತಿತ್ವ
ಕಾಣ-
ದೋ...
ಶೂನ್ಯ
ಲಿಂಗದ
ಮಹಾವಿರ್ಭಾವ
ಭಾವ!

- ೦೩/೦೮/೨೦೦೩

ಹಿನ್ನೆಲೆ: ಈ ಕವನದ ಹಿನ್ನೆಲೆ ಒಂದು ಕನಸು - ಅಮರನಾಥ ಅಥವ ಕೈಲಾಸನಾಥ ಯಾತ್ರೆಯಂಥದೇ ಒಂದು ಯಾತ್ರೆ (ನಾನೇನೂ ಅಂಥ ಧಾರ್ಮಿಕ ವ್ಯಕ್ತಿಯಲ್ಲ - ಆಶ್ಚರ್ಯ!). ಕೈಲಾಸಪರ್ವತವೇ ಶಿವಲಿಂಗವಾಗಿ ಪೂಜೆಗೊಳ್ಳುವಂತೆ (ಹೌದಾ? I am not sure), ಇದೂ... ಶೂನ್ಯಲಿಂಗ! ಹಿಮಾಲಯದ ಚೇತೋಹಾರಿ ಗಿರಿ ಕಣಿವೆಗಳನ್ನು ದಾಟಿ ಶೂನ್ಯಲಿಂಗದ "ದರ್ಶನ"ಕ್ಕೆ ಬರುತ್ತೇವೆ, ಅಲ್ಲೇನಿದೆ! ವಿಚಿತ್ರವಾಗಿ ಒಂದರ ಮುಂದೊಂದು ಚಾಚಿಕೊಂಡಿರುವ ಎರಡು ಮೂರು ಹಿಮಬೆಟ್ಟಗಳು, ಕೆಳಗೆ "ಆ..." ಎಂದು ಬಾಯ್ದೆರೆದಿರುವ ಕಣಿವೆ - ಚೇತೋಹಾರಿ ದೃಶ್ಯ! ಅಲ್ಲೆಲ್ಲಾ "ಜೈ ಭೋಲೇ ನಾಥ್" ಘೋಷಿಸುತ್ತಾ ನರ್ತಿಸುವ ಸಾಧು, ಗೋಸಾಯಿಗಳು, ಹೂ ಹಣ್ಣು ಪೂಜಿಸುವ ಭಕ್ತರು; ಅರೆ! ಆದರೆ ಲಿಂಗ ಎಲ್ಲಿ? ಹಾಗೆ ವಿಚಿತ್ರವಾಗಿ ಚಾಚಿಕೊಂಡಿರುವ ಬಂಡೆಗಳಲ್ಲಿ ಒಂದಕ್ಕೂ ಲಿಂಗದ ಹೋಲಿಕೆಯೂ ಇಲ್ಲ! ಸ್ವಲ್ಪ ಹಿಂದೆ ಬಂದು ಮೇಲೇರಿ, ಇಡೀ landscape ಗಮನಕ್ಕೆ ತಂದುಕೊಂಡು ನೋಡಿದರೆ, ಅದೋ, ಅಲ್ಲಿ, ಆ ವಿಚಿತ್ರವಾಗಿ ಚಾಚಿಕೊಂಡಿರುವ ಕೋಡುಬಂಡೆಗಳ ನಡುವಣ ಅಗಾಧ ಶೂನ್ಯವೇ ಲಿಂಗಾಕಾರವಾಗಿ ನಿಂತಿದೆ! ಇದು "ದರ್ಶನ"

ಈ ಕನಸು ಕೇವಲ ಕನಸು ಮಾತ್ರವಾಗದೆ, ಆಳವಾದ ಆಧ್ಯಾತ್ಮಿಕ ಅರ್ಥಗಳನ್ನೊಳಗೊಂಡಿರುವಂತೆ ಅನಿಸಿತು. It felt like a wonderful symbolization of the Indian mysticism. ಆ ಅನುಭವದ ಫಲವೇ ಈ ಕವನ. ಅನುಭವ ಎಷ್ಟರಮಟ್ಟಿಗೆ ಚಿತ್ರಿತವಾಗಿದೆಯೋ ಗೊತ್ತಿಲ್ಲ!