Wednesday, December 21, 2011

ಹಾಯ್ಕುಗಳು

ಹಾಯ್ಕು ಎನ್ನುವುದು ಒಂದು ಜಪಾನಿ ಕಾವ್ಯ ಪ್ರಕಾರ; ನಮ್ಮಲ್ಲಿನ ಹನಿಗವನ ಮಿನಿಗವನ ಇತ್ಯಾದಿ ಚಿಕ್ಕ ಕವನ ಇದೆಯಲ್ಲ ಹಾಗೆ. ಯಾವುದಾದರೊಂದು ವಿಷಯ, ಅದರಲ್ಲೊಂದು ಪಂಚ್ ಲೈನ್ - ಅರ್ಥದ, ಭಾವದ ಮಿಂಚು, ಮಿಂಚಿ ಮರೆಯಾಗುವ ಒಂದು ಕ್ಷಣದ ಸ್ತಬ್ಧಚಿತ್ರ. ತೀರ ಚಿಕ್ಕ ಪದ್ಯವಾದ್ದರಿಂದ ಈ ಅರ್ಥದ ಮಿಂಚು ಬಹಳ ಮುಖ್ಯ. ಅರ್ಥದ ಸೊಗಸು ಪದೇಪದೇ ಮನಸ್ಸಿನಲ್ಲಿ ಮೂಡುವಂತಿರಬೇಕು. ಈ ಅರ್ಥದ ಮಿಂಚು ಎಂದೆನಲ್ಲ, ಅದು ಯಾವುದೋ ಒಂದು ಕಳೆದೇಹೋಗುವಂತಿರುವ ಕ್ಷಣವನ್ನು ಕಟ್ಟಿಕೊಡಬೇಕು - ಅದೊಂದು ಸಾರ್ಥಕಕ್ಷಣ, ಮಿಂಚಿ ಮರೆಯಾಗಿಬಿಡುವ ಆ ಕ್ಷಣ ಚಿತ್ರಪಟದಂತೆ ಹಾಯ್ಕಿನ ಆ ಸಾಲಿನಲ್ಲಿ ನಿಂತುಬಿಟ್ಟಿದೆ.  ಆ ಕ್ಷಣದ ಆಳ, ಆಧ್ಯಾತ್ಮಿಕತೆ ಹೆಚ್ಚಿದ್ದಷ್ಟೂ ಹಾಯ್ಕು ಹೆಚ್ಚು ಪರಿಣಾಮಕಾರಿ.  ಇರಲಿ, ಇದು ವಿವರಿಸಿ ತಿಳಿಸುವಂಥದ್ದಲ್ಲ, ಅವರವರ ಕಾವ್ಯದೃಷ್ಟಿಗೆ ಬಿಟ್ಟ ವಿಷಯ, ಅವರವರು ಕಂಡುಕೊಳ್ಳಬೇಕಾದ್ದು.  ಆದ್ದರಿಂದ ನಾವಿಲ್ಲಿ ಅದನ್ನು ಒಂದು ಪಂಚ್ ಲೈನ್ ಎನ್ನೋಣ, ಮತ್ತು ಹಾಯ್ಕಿನ ಭೌತಿಕ ಅಂಶಗಳಿಗಷ್ಟೇ ಗಮನ ಕೊಡೋಣ.


ನಮ್ಮ ಹನಿಗವನಗಳಂತೆ ಅಂದೆ, ಆದರೆ ನಮ್ಮ ಹನಿಗವನಗಳಂತೆ ಅಳತೆಯಿಲ್ಲದ ಕವನಗಳಲ್ಲ ಇವು. ನಮ್ಮ ಹಳೆಗನ್ನಡದ ಕಂದಪದ್ಯಗಳಂತೆ ಚುಟುಕು, ಆದರೆ ಲೆಕ್ಕಾಚಾರದಿಂದ ಕೂಡಿದ ಪದ್ಯಗಳು. ಆದರೆ ನಮ್ಮ ಕಂದಪದ್ಯಗಳಲ್ಲಿ ಮಾತ್ರಾಕಾಲವನ್ನು ಪರಿಗಣಿಸುತ್ತೇವೆ, ಹಾಯ್ಕುಗಳಲ್ಲಿ ಅಕ್ಷರಗಳನ್ನು.

ಹಾಯ್ಕುಗಳು ಮೂರುಸಾಲಿನವು. ಮೊದಲನೆಯ ಸಾಲಿನಲ್ಲಿ ೫, ಎರಡನೆಯ ಸಾಲಿನಲ್ಲಿ ೭ ಮತ್ತು ಮೂರನೆಯ ಸಾಲಿನಲ್ಲಿ ೫ ಅಕ್ಷರಗಳು. ಜಪಾನೀಯರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ಹಾಯ್ಕುಗಳ ಅಕ್ಷರವಿನ್ಯಾಸದ ಬಗ್ಗೆ ಹೇಳಿದ್ದೆ (ಮೊದಲ, ಎರಡನೆಯ ಮತ್ತು ಮೂರನೆಯ ಸಾಲುಗಳಲ್ಲಿ ಕ್ರಮವಾಗಿ ೫,೭ ಮತ್ತು ೫ ಅಕ್ಷರಗಳು). ಆದರೆ ಇಲ್ಲಿ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜಪಾನೀ ಭಾಷೆ ಕನ್ನಡದಂತಲ್ಲ. It is a highly phonetic language (ಅಂದರೆ ಸ್ವರಬದ್ಧವಾದ ಭಾಷೆ). ಆದ್ದರಿಂದ ಅಲ್ಲಿನ ಅಕ್ಷರಗಳ ಎಣಿಕೆ ನಮ್ಮ ಕನ್ನಡದ ಅಕ್ಷರದ ಎಣಿಕೆಯಂತಲ್ಲ. ನಾವು ಕಣ್ಣಿಗೆ ಕಾಣುವ ಅಕ್ಷರಗಳನ್ನು ಎಣಿಸಿದರೆ ಅವರು ಉಚ್ಛಾರಣೆಯಲ್ಲಿ ಬರುವ ಘಟಕಗಳನ್ನು (syllableಗಳನ್ನು) ಎಣಿಸುತ್ತಾರೆ. Syllable ಎಂದರೆ ಒಂದೇ ಉಚ್ಚಾರಣೆಯ ಪ್ರಯತ್ನದಲ್ಲಿ ಉಚ್ಚರಿಸಲ್ಪಡುವ ಶಬ್ದ. ಅದು ಒಂದೇ ಅಕ್ಷರವಿರಬಹುದು, ಅಥವ ಒಂದಕ್ಕಿಂತ ಹೆಚ್ಚು ಅಕ್ಷರಗಳ ಗುಂಪೂ ಇರಬಹುದು. ಇದನ್ನು ಕೆಲವು ಉದಾಹರಣೆಗಳೊಂದಿಗೆ ಹೀಗೆ ವಿವರಿಸೋಣ:

"ಲವ್ (love)" ಇಲ್ಲಿ ಕಣ್ಣಿಗೆ ಕಾಣುವುದು ಕನ್ನಡದಲ್ಲಿ ಎರಡು ಅಕ್ಷರಗಳು, ಇಂಗ್ಲಿಷಿನಲ್ಲಿ ನಾಲ್ಕು ಅಕ್ಷರಗಳು. ಆದರೆ ಉಚ್ಚಾರಣೆಯ unit (syllable) ಕೇವಲ ಒಂದೇ (ಲೌ). ಆದ್ದರಿಂದ ಹಾಯ್ಕುಗಳ ವಿಷಯದಲ್ಲಿ ಇದನ್ನು ಒಂದು ಎಂದು ಎಣಿಸಬೇಕು.

"ಕಣ್" ಇದೂ ಹಾಗೆಯೇ, ಎರಡು ಅಕ್ಷರಗಳು ಕಂಡರೂ ಉಚ್ಚಾರಣೆಯ syllable ಒಂದೇ. ಆದ್ದರಿಂದ ಹಾಯ್ಕಿನಲ್ಲಿ ಇದು ಒಂದೇ ಅಕ್ಷರವೆಂದಾಗುತ್ತದೆ.

"ಜಂಪ್" ಎನ್ನುವುದೂ ಹಾಗೇ. ಆದರೆ "ಜಂಪು" ಎಂದಾಗ ಮಾತ್ರ ಅಲ್ಲಿ ಎರಡು syllables ಬರುತ್ತವೆ, ಜಂ ಮತ್ತು ಪು.

ಹಾಗೆಯೇ "ಬಂಪರ್ (bumper)" ಎನ್ನುವುದರಲ್ಲಿ 3 (ಇಂಗ್ಲಿಷಿನ 6) ಅಕ್ಷರಗಳು ಆದರೆ ಎರಡೇ syllableಗಳು (ಬಂ + ಪರ್), ಆದರೆ "ಬಂಪರು" ಎನ್ನುವುದರಲ್ಲಿ ಮೂರು syllables ಮತ್ತು ಮೂರು ಅಕ್ಷರಗಳು.

"ಕಾವೇರಿ" ಇಲ್ಲಿ ಕಣ್ಣಿಗೆ ಕಾಣುವುದೂ ಮೂರು ಅಕ್ಷರ, ಉಚ್ಚಾರಣೆಯಲ್ಲೂ ಮೂರು ಅಕ್ಷರ (3 letters and 3 syllables).

ಆದ್ದರಿಂದ ಹಾಯ್ಕುಗಳನ್ನು ಬರೆಯುವಾಗ ೧,೨ ಮತ್ತು ೩ನೆಯ ಸಾಲುಗಳಲ್ಲಿ ೫,೭ ಮತ್ತು ೫ ಅಕ್ಷರಗಳನ್ನು ಎಣಿಸುವ ಬದಲಿಗೆ ೫,೭ ಮತ್ತು ೫ ಸಿಲೆಬಲ್ಲುಗಳನ್ನು ಎಣಿಸುವುದು ಸೂಕ್ತ.

ಹೀಗೆ ಹಾಯ್ಕುಗಳ ಸಾಮಾನ್ಯ format ಹೀಗಿರಬಹುದು:

ನನ ನನನ
ನನ ನನ ನನನ
ನನ ನನನ

(ಮೇಲೆ ಹೇಳಿದಂತೆ ಅದು ಹ್ರಸ್ವಾಕ್ಷರವೇ ಆಗಬೇಕಿಲ್ಲ, "ನ" ಅನ್ನುವುದರ ಬದಲು "ನಾ" ಎಂದು ಕೂಡ ಆಗಬಹುದು, ಅಥವ "ನನ್" ಕೂಡ ಆಗಬಹುದು)

ಮತ್ತೆ, ಮೊದಲೇ ಹೇಳಿದಂತೆ ಜಪಾನೀ ನುಡಿ ಕನ್ನಡಕ್ಕಿಂತ ಹೆಚ್ಚು phonetic ನುಡಿಯಾದ್ದರಿಂದ ಅವರು ಈ ಎಣಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಕನ್ನಡದ ಜಾಯಮಾನ ಹಾಗಲ್ಲವಾದ್ದರಿಂದ ನಾವು ಅದನ್ನು ಅಷ್ಟು ಕಟ್ಟುನಿಟ್ಟಾಗಿ ಅನುಸರಿಸಬೇಕಿಲ್ಲವೆಂಬುದು ನನ್ನ ಅನಿಸಿಕೆ. ಆದರೂ ಆದಷ್ಟು ಈ ಲಕ್ಷಣಗಳನ್ನು ಅನುಸರಿಸುವುದು ಒಳ್ಳೆಯದು. ಒಂದೋ ಎರಡೋ ಸಿಲೆಬಲ್ಲುಗಳು ಹೆಚ್ಚು ಕಡಿಮೆಯಾದರೆ ಪರವಾಗಿಲ್ಲ, ಆದರೆ ತೀರ ಎಣಿಕೆಗೇ ಸಿಗದಂತಿರಬಾರದೆಂಬುದು ನನ್ನ ನಿಲುವು.

ಮತ್ತೆ, ಪ್ರಾಸದ ಬಗ್ಗೆ ಯಾವ ನಿಯಮವೂ ಇದ್ದಂತಿಲ್ಲ, ಆದರೆ ಪ್ರಾಸವಿರಬಾರದೆಂದೇನೂ ಇಲ್ಲ. ಅರ್ಥದ ಮಿಂಚಿಗೆ ಮತ್ತಷ್ಟು ಹೊಳಪು ಸೇರಿಸುವುದಾದರೆ ಏಕಿರಬಾರದು? ಹೀಗೇ ಗೀಚಿದ ಕೆಲವು ಹಾಯ್ಕುಗಳು ಇಲ್ಲಿವೆ (ಮತ್ತೆ ಮೊದಲೇ ಹೇಳಿದಂತೆ, ಇವನ್ನು ನಿಜಾರ್ಥದಲ್ಲಿ ಹಾಯ್ಕು ಎನ್ನಲಾಗುವುದಿಲ್ಲ, ಏಕೆಂದರೆ ಹಾಯ್ಕೊಂದರಲ್ಲಿ ಮುಖ್ಯವಾಗಿ ಇರಲೇ ಬೇಕಾದ ಆ ಒಂದು ಕ್ಷಣವನ್ನು, ಸಾರ್ಥಕಕ್ಷಣವನ್ನು ಚಿತ್ರಪಟದಂತೆ ಹಿಡಿದಿಡುವ ಪಂಚ್ ಲೈನ್ ಇಲ್ಲಿಲ್ಲ - ಕೇವಲ ಹಾಯ್ಕಿನ ಭೌತಿಕ ರೂಪವನ್ನಷ್ಟೇ ಗಮನಿಸುವುದು):

ಐದು ಏಳರ
ಮೇಲೈದುಲಿಯಂ ಹಾಕು
ಬಂದಿತು ಹಾಯ್ಕು

ಬಂಪರ್ ಟು ಬಂಪರ್
ಜೋರಾಗಿ ಗುದ್ದಿದರೆ
ಬಂಪರ್ ಹೊಡೆತ

ನಿನ್ನ ನಗೆ ಹೂ
ಮೊಲ್ಲೆಯ ಚೆಲ್ಲಿಬಿಡು
ಹೂಮಂಚವೇಕೆ?

ಆ ಕಣ್ಣು ತುಟಿ
ಹೀರಿ ತೂರಾಡುವನು
ಇವ, ಕುಡುಕ!

ನಗೆಯ ಮಿಂಚ
ಮುಂದೆ ಮಳೆಯ ಮಿಂಚು
ಮಂಕಾಯಿತಲ್ಲ!

ಮಳೆ ಗುಡುಗು
ಮಿಂಚಿ ತೋರಿಸಿದ್ದೇನು?
ಊಳಿಡೋ ದೆವ್ವ!

ಕಣ್ಣ ಮುಚ್ಚಿದೆ
ನಿದ್ದೆಯಲೂ ನೀ ಬಂದೆ
ನಿದ್ದೆ ಬಿಟ್ಟೆದ್ದೆ

ಕಾಡದಿರು ನೀ
ಗೆಳತಿ, ನೋಡುವಳು
ನಿನ್ನ ಸವತಿ!

ಕಾಡೆ ನೀ ಹೀಗೆ,
ಬೇಜಾರುಗೊಳ್ಳುವನು
ಶನಿರಾಯನು

ಎಕ್ಸಾಮಂದ್ರಿಷ್ಟೇ,
ಜಸ್ಟ್ ಕಾಪಿ ಪೇಸ್ಟ್, ಕಾಪಿ ಪೇಸ್ಟ್
ಓದೋದೆಲ್ಲಾ ವೇಸ್ಟ್

ದೆವ್ವದ್ ಕತೇಲೇ
ಹೆದ್ರುಸ್ತಿದ್ದಾ ನಂ ತಾತ
ಈಗವ್ನೇ ಭೂತಾ!

ಎತ್ತಣ ಮಾವೋ
ಎತ್ತಣ ಕೋಗಿಲೆಯೋ
ಬಂದೂಕು ಶಬ್ದ!

ಹೊಟ್ಗಿಲ್ಲ ಅನ್ನಾ
ತಿರ್ಕೊಂಡ್ ತಿನ್ನೋದ್ ಏನ್ ಚೆನ್ನ?
ಹಾಕ್ತೀನಿ ಕನ್ನ

ಹಾಯ್ಕುವಿನ ಗಮ್ಮತ್ತೇ ಅದು. ಸುಮ್ನೇ ಚಾಟ್ ಮಾಡಿದಹಾಗೆ ಬರೀತಾನೇ ಹೋಗಬಹುದು.

ಈ ಮಾತೇ ಮುತ್ತು
ಮಾತೇ ಮತ್ತು, ಮಾತಲ್ಲೇ
ಕಾಣೋ ಗಮ್ಮತ್ತು

ಚಾಟ್ ಮಾಡ್ದಾಗೆ, ಚಾಟ್
ತಿಂದ್ ಹಾಗೆ, ಚಾಟೀ ಹಾಯ್ಕೊಂಡ್
ಬಂದ್ ಹಾಗ್ ಮಾತು

ನೀನಾಡೋ ಮಾತ್ನೇ
ಕಟ್ ಕಟ್ ಮಾಡು, ಹಾಯ್ಕೊಂದಲ್
ಬಂದಯ್ತೆ ನೋಡು

ಒಂದಷ್ಟು ಸೀರಿಯಸ್ ಹಾಯ್ಕುಗಳು:
ಎಲೆ ಹುಳಕೆ
ಕಪ್ಪೆ ಹಾರಲು ತಡೆ
ಆಡುವ ಹೆಡೆ

ತುಟಿ ಚಾಚಿದೆ
ಮುತ್ತೆಲ್ಲೋ ಉದುರಿದೆ
ಮೆದೆಯ ಸೂಜಿ

ಒಂದು ಎರಡು
ಬಾಳೆಲೆಯ ಹರಡು
ಚುರುಗುಟ್ಟಿದೆ

ಹುಲಿ ಹಸಿದು
ನೆಗೆದಿದೆ; ಗೋವಿಗೋ
ಕರು ಯೋಚನೆ

ರವಿ ಮುಳುಗಿ
ಗಡಂಗು ಕರೆದಿದೆ
ಖಾಲಿ ಜೇಬು

ನೇಣೆತ್ತುವ ಕೈ
ಕಾಣುತ್ತಿಲ್ಲ ಕೈಮರ
ಕಣ್ಣೊರಸಿದೆ

ನೇಣೆತ್ತುವ ಕೈ
ಕಾಣುತ್ತಿಲ್ಲ ಕೈಮರ
ಕಣ್ಣರಸಿದೆ

ಎಂಜಲು ರೊಟ್ಟಿ
ತುಪ್ಪದೊಳಗೆ ಬಿತ್ತು
ಕೇಜಿ ಐನೂರು




Tuesday, November 29, 2011

ಭಾವಸಿಂಚನ - ಪುಸ್ತಕ ಬಿಡುಗಡೆ ಸಮಾರಂಭ

ಈ ಮೊದಲೇ ತಿಳಿಸಿದಂತೆ 26ರಂದು "ಭಾವಸಿಂಚನ" ಕವನ ಸಂಕಲನದ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗಹಿಸಿದ್ದೆ. ಇದೊಂದು ವಿನೂತನ ಪ್ರಯೋಗ. ೩ಕೆ ಎಂಬ ಆರ್ಕುಟ್ ಸಮುದಾಯದ ಉತ್ಸಾಹಿ ಯುವ ಕವಿ-ಕವಯಿತ್ರಿಯರು ಸೇರಿ ಆ ಸಮುದಾಯದಲ್ಲಿ ಆಗಾಗ್ಗೆ ಪ್ರಕಟವಾದ ಕವನಗಳನ್ನು ಹೊರತಂದಿದ್ದಾರೆ.

ಆ ಸಮಾರಂಭದ ಕೆಲವು ಚಿತ್ರಗಳು ಇಲ್ಲಿವೆ (ಚಿತ್ರ ಕೃಪೆ, ತಂಡದ ಸದಸ್ಯರು)

ಆಸಕ್ತರು ಈ ಪುಸ್ತಕಗಳನ್ನು ಬೆಂಗಳೂರಿನ ಸಪ್ನಾ ಪುಸ್ತಕ ಮಳಿಗೆ ಮತ್ತಿತರ ಕಡೆಗಳಲ್ಲಿ ಪಡೆಯಬಹುದು. ಯಾವುದೇ ಕನ್ನಡ ಪುಸ್ತಕದ ಖರೀದಿಯೊಂದಿಗೆ ಈ ಪುಸ್ತಕ ಉಚಿತವಾಗಿ ದೊರೆಯುತ್ತದೆ ಎಂದು ಸಮುದಾಯದ ಪ್ರಕಟಣೆ ಹೇಳುತ್ತದೆ.

Monday, November 21, 2011

ಕೆಲವು ವಚನಗಳು

(೧)
ಕಾಗೆ ಕರುಬಿ ಮಾವಿನ ಚಿಗುರುಂಬೊಡೆ
ಬಾಯಿ ಕಹಿಗೊಂಡಿತ್ತಲ್ಲದೆ
ಕೋಗಿಲೆಯ ಸೊಲ್ಲು ದೊರಕೊಂಡಿತೇ
ಕಾಡ ಮಂಗ ಸಿರಿಗಂಧದ ಮರಕೆ ಜೋತೊಡದರ ನಡೆ ಸಿರಿಗೊಂಡಿತೇ?
ಭಾವದ ಮಿಂಚೊಡೆದ ಬೆಡಗಿಂಗೆ ಮೈಯಿಕ್ಕದೆ ಮನವೀಯದೆ
ಬರಿದೇ ನುಡಿನುಡಿಯೆಂದುರೆ ಬೊಬ್ಬೆ ಹೊಯ್ದೊಡೆ
ಆ ಬೊಬ್ಬೆ ನುಡಿಯೇ? ಹೊಯ್ದವ ನುಡಿಗನೇ? ನುಡಿ ಕನ್ನುಡಿಯೇ?
ನುಡಿಯೊಳನುಡಿತವ ಕೇಳದೆ ಮಿಡಿತವನರಿಯದೆ
ನಾನೀನೆಂದು ಗಳಹುವ ಬಾಯಿಬಡುಕರನೇನೆಂಬೆನಯ್ಯಾ
ದಮ್ಮಪುರದ ಮಂಜಯ್ಯಾ ನಿಮ್ಮ ನುಡಿಯೆಮಗೆ ಶರಣು.

(೨)
ಈ ನುಡಿ ಕನ್ನುಡಿಯೆಂಬರು
ಮತ್ತಾನುಡಿ ಪರನುಡಿಯೆಂಬರು,
ತೊದಲುವ ಕಂದನ ನುಡಿಯಾವುದಯ್ಯಾ
ಬಿರಿವೂವಿನ, ಚೆಲುನಗುವಿನ, ಎದೆಯೊಲವಿನ ನುಡಿಯಾವುದಯ್ಯಾ
ನುಡಿವುಟ್ಟುವ, ಹೊಮ್ಮುವ, ನೆಗೆಯುವ, ಚಿಮ್ಮುವ ಜೀವದ ನಡೆಯರಿಯದೆ,
ಪೆಣಕೆ ದಾರವನಿಕ್ಕಿ ಜಾತಿಯ ಹೊಲಸುಂಬರಯ್ಯಾ
ಅಯ್ಯಾ ನಿಮ್ಮ ಕರುಣೆಯದಾವ ನುಡಿ
ಕಡುಮೌನವದಾವ ನುಡಿ ಪೇಳಾ ದಮ್ಮಪುರದ ಮಂಜಯ್ಯಾ

Sunday, November 20, 2011

ಭಾವಸಿಂಚನ - ಕವಿಗಳಲ್ಲದವರ ಕವನಗಳು

ಆರ್ಕುಟ್ ನ "3K ಬಳಗ"ದ ಉತ್ಸಾಹೀ ನವಕವಿಗಳು ಈ ಬಳಗದ ವೇದಿಕೆಯಲ್ಲಿ ಆಗಾಗ ಪ್ರಕಟಿಸಿದ ಆಯ್ದ ಕವನಗಳ ಸಂಕಲನವೊಂದನ್ನು ಹೊರತರುತ್ತಿದ್ದಾರೆ. ಇದು ಸಂತೋಷದ ವಿಷಯ. ನಾನೂ ಹೋಗುತ್ತಿದ್ದೇನೆ. ನೀವೂ ಬನ್ನಿ.

ದಿನಾಂಕ: ೨೬/೧೧/೨೦೧೧, ಶನಿವಾರ
ಸಮಯ: ಸಂಜೆ ೬ ಗಂಟೆ
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.

Thursday, October 27, 2011

ಬೆಳಕಿನ ಹಾಡು

ದೀವಳಿಗೆಯ ಲಯಕ್ಕೆ ಹೊಂದುವಂತೆ ಕೆಲವು ಲಯಗಳು ಮನಕ್ಕೆ ಹೊಳೆದುದರ ಫಲವೇ ಈ ಕವನ. ಇದು ನಡುಗನ್ನಡದ "ರಗಳೆ" ಛಂದಸ್ಸನ್ನು ಬಹುತೇಕ ಹೋಲುತ್ತದೆಯಾದರೂ ಅಲ್ಲಲ್ಲಿ ಕವನದ ಓಟಕ್ಕೆ ತಕ್ಕಂತೆ ಛಂದಸ್ಸನ್ನು ಬದಲಿಸಿಕೊಳ್ಳುವ ಸ್ವಾತಂತ್ರ್ಯ ವಹಿಸಿದ್ದೇನೆ. ಉತ್ಸಾಹ ರಗಳೆ, ಮಂದಾನಿಲ ರಗಳೆ ಮತ್ತು ಲಲಿತ ರಗಳೆಗಳು ಇಲ್ಲಿ ಕಾಣಬರುವ ಛಂದೋರೂಪಗಳು. ಈ ಪದ್ಯದ ಉದ್ದೇಶವೇ ಹಬ್ಬದ, ಸಂಭ್ರಮದ, ಸ್ವಚ್ಛಂದದ ಅಂದವನ್ನು ಹಿಡಿಯುವುದಾದ್ದರಿಂದ ಪದ್ಯದ ಗಾತ್ರವನ್ನು ನಿಯಂತ್ರಿಸಲು ನಾನು ಯತ್ನಿಸಿಲ್ಲ. ಆದ್ದರಿಂದ ಪದ್ಯ ತುಸು ಉದ್ದವೇ ಬೆಳೆದಿದೆಯೆನ್ನಬೇಕು. ಪಟಾಕಿ ಹೊಡೆಯುವ ಮಕ್ಕಳ ಸಂಭ್ರಮವನ್ನು ಮೊಟಕುಗೊಳಿಸಿ ಊಟಕ್ಕೆಳೆದುಕೊಂಡು ಬಂದರೆ ಇಷ್ಟಪಡುವರೇ?

ಚುಕ್ಕಿ ಬೆಳಕ ಚೆಲ್ಲುವಲ್ಲಿ
ಹಕ್ಕಿ ಹಾಡು ಮೂಡುವಲ್ಲಿ
ಕತ್ತಲೊಡನೆ ತೆಕ್ಕೆಬಿದ್ದು
ಎತ್ತಲಾಗೊ ಹೊರಳುತಿದ್ದ
ಬೆಳಕ ಹಬ್ಬವೆದ್ದಿತೈ
ಹೊಳೆವ ಮೈಯ ಮುರಿದಿತೈ

ಒಳಗೆ ಬಚ್ಚಲಲ್ಲಿ ನೀರು
ಮರಳಿ ಮರಳಿ ಕುದಿವ ಜೋರು
ಕಾದ ಎಣ್ಣೆ ಸೌಟ ಹಿಡಿದು
ಸೀದ ಜಗುಲಿಯೆಡೆಗೆ ನಡೆದು
ಬಂದಳಿವಳು ಸರಸರ
ಚಂದವವಳ ಸಡಗರ

ಕೈಯನೆತ್ತಿ ತಲೆಯ ಸುತ್ತಿ
ಮೈಯ ಸವರಿ ಮೊಗವನೊತ್ತಿ
ಕಾದ ಎಣ್ಣೆ ಸುಡಲು ನೆತ್ತಿ
ಆಹ ಬಡಿಯೆ ಕೈಯನೆತ್ತಿ
ಉಜ್ಜುತಿರಲು ಗಸಗಸ
ತೋರುತಿತ್ತು ಗರಗಸ

ಕುದಿವ ನೀರ ಮೈಯಿಗೆರಚಿ
ಅಯ್ಯೊ ಬೇಡವೆಂದು ಅರಚಿ
ಕಣ್ಣ ತುಂಬ ತುಂಬಿ ಸೀಗೆ
ಆಗಬಹುದೆ ಇಂದು ಹೀಗೆ
ಕೊನೆಗು ಬಂತೆ ಬಿಡುಗಡೆ
ಆಹ ಎಂಥ ನಿಲುಗಡೆ!

ಹೊಸತು ಬಟ್ಟೆ ಹೊಸತು ಹೂ
ಹೊಸತು ಗಂಧ ಎಂಥ ಚಂದ
ಹೊಸತು ಬೆಳಕು ಬಣ್ಣ ಬಿಳುಪು
ಕಣ್ಣುಗಳಲಿ ಹೊಳೆವ ಹೊಳಪು
ನಮಿಸಿ ದೇವ ದೇವಗೆ
ಗಮನವಾ ಪಟಾಕಿಗೆ

ಮಗನಿಗಾ ಪಟಾಕಿ ಕೇಪು
ಒಳಗೆ ನಡುಗಿ ಕಿರುಚೆ ಪಾಪು
ಇವಳಿಗೆ ಸುರುಬತ್ತಿ ಕುಂಡ
ಬಾಣ ಬಿರುಸು ಬರಿಯ ದಂಡ
ಸಮಯವೀಗ ಊಟಕೆ
ಸಗ್ಗದ ರಸದೂಟಕೆ

ಪಾಯಸ ಪುಳಿಯೋಗರೆ ಗೊಜ್ಜುಗಳೇನ್
ರಾಯತ ಕೋಸಂಬರಿ ಪಲ್ಯಗಳೇನ್
ಬಾಯೊಳು ನೀರೊಡೆಸುವ ಚಕ್ಕುಲಿಯೇನ್
ಕಾಯೊಬ್ಬಟ್ಟಿನ ಗಮಗಮ ಕಂಪೇನ್
ರಾಯನಡುಗೆಯೇಂ ಸಮನೆ ಇದಕೆ ಪೇಳ್
ಬಾಯ ತುಂಬ ನೀಂ ತಿಂದುಣ್ಣುತ ಬಾಳ್

ಹಗಲಿನ ಕೊನೆಗಿರಣಗಳಾಡುತಿರಲ್
ಹೆಗಲಿನ ಭಾರವ ರವಿ ಕೊಡವುತಿರಲ್
ಬೆವರಿದನೆನೆ ಹನಿಯೆರಡುದುರುತಿರಲ್
ಅವನಿಯ ಮೇಲ್ಕತ್ತಲೆ ಸೆರಗಿಕ್ಕಲ್

ಓಹೊ ಬೆಳಕು ಹರಿಯಿತೇಂ
ಬಾನು ಬಣ್ಣ ತಳೆಯಿತೇಂ
ಏಳುಬಣ್ಣದಿಂದ್ರಚಾಪ
ಬೆಳಕ ಸೆಳೆದು ಬಿಟ್ಟಿತೇಂ
ಹಳದಿ ಕೆಂಪು ಹಸಿರು ನೀಲಿ
ಬಿಳುಪ ಬಸಿರ ಸೀಳಿ ಸೀಳಿ
ತಮದ ಮಹಾಭಿತ್ತಿಯಲ್ಲಿ
ಗಮನಸೆಳೆವ ರಂಗವಲ್ಲಿ
ಸುರರ ಕಲ್ಪತರುವೆ ಹಿಗ್ಗು
ತರಳಿ ಹೂವ ಬಿಟ್ಟಿತೇಂ
ಮನದಿ ಮನೆಯ ಕಟ್ಟಿತೇಂ
ಮನದ ಕದವ ತಟ್ಟಿತೇಂ

ಮಂದಾನಿಲ ತಣ್ಣಗೆ ಬೀಸುತಿರಲ್
ಸುಂದರ ಕನಸೆನೆ ಹಬ್ಬವು ಕರಗಲ್
ಹಿತಮಿತದಿರುಳೂಟದ ಸವಿಯೆರೆಯಲ್
ಅತಿ ಹಿತದೊಳ್ ಮೆದು ಹಾಸಿಗೆ ಕರೆಯಲ್
ಹಬ್ಬದ ಬೆಳಕದು ಕಣ್ಣೊಳ್ ಕುಣಿಯಲ್
ತಬ್ಬಿದ ನಿದಿರೆಯ ತೋಳೊಳ್ ಜಾರಲ್

ಮುಗಿದಿತ್ತಾ ಸವಿ ದೀವಳಿಗೆ
ಸೊಗವನು ಹಂಚುತಲೀಯಿಳೆಗೆ

Wednesday, October 12, 2011

ಹೂರಣದಿ ಹುಲ್ಲು ಕಲ್ಲುಗಳಿಗೂ ಹಿರಿಮೆಯುಂಟು

"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapaana.com) ಪಂಚಮಾತ್ರೆಯ ಚೌಪದಿಯಲ್ಲಿ "ಹೂರಣದಿ ಹುಲ್ಲು ಕಲ್ಲುಗಳಿಗೂ ಹಿರಿಮೆಯುಂಟು" ಎಂಬ ಸಾಲನ್ನು ಬಳಸಿ ಸಮಸ್ಯೆಯನ್ನು ಪೂರ್ತಿಗೊಳಿಸುವ ಸವಾಲಿತ್ತು. ಅದಕ್ಕಾಗಿ ರಚಿಸಿದ್ದು ಈ ಚೌಪದಿಗಳು:


ಬೆಲ್ಲಬೇಳೆಯ ಸೊಗಸಿನೊಬ್ಬಟ್ಟು ಹೂರಣದಿ
ಕಲ್ಲು ದೊರಕಿರಲು ನೀಂ ಕಡಿಯದಿರು ಹಲ್ಲ
ಬಲ್ಲವರದಾರು ಈ ಬದುಕೆಂಬ ಹೂರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

ಹುಲ್ಲಿರದೆ ಪಶುವಿಹುದೆ ಕಲ್ಲಿರದೆ ಮನೆಯಹುದೆ
ಹುಲ್ಲೆಂದು ಕಲ್ಲೆಂದು ಜರಿಯದಿರು ಮೂಢಾ
ಬಲ್ಲವರು ಪೇಳುವರು ಜಗವೆಂಬ ಹೂರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

ಹುಲ್ಲ ಮಂತ್ರಿಸೆ ಕೊಲ್ವ ಕಣೆಯಾಯ್ತು ಕದನದೊಳು
ಕಲ್ಲಿನಿಂದರಿಸೇನೆ ಮಡಿದೊರಗಿತು
ನಲ್ಲೆಮುಡಿಗಷ್ಟೆ ತಗುವುದು ದಂಡೆ ಹೂ ರಣದಿ
ಹುಲ್ಲುಕಲ್ಲುಗಳಿಗೂ ಹಿರಿಮೆಯುಂಟು

Sunday, October 2, 2011

ಸ್ತನ ದೊಡ್ಡತನದಲ್ಲಿ ಶೋಭಿಸಿಹುದು


"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ "ಸ್ತನ ದೊಡ್ಡತನದಲ್ಲಿ ಶೋಭಿಸಿಹುದು" ಎಂಬ ಸಾಲನ್ನು ಬಳಸಿ ಸಮಸ್ಯೆಯನ್ನು ಪೂರ್ತಿಗೊಳಿಸುವ  ಸವಾಲಿತ್ತು.  ಅದಕ್ಕಾಗಿ ರಚಿಸಿದ್ದು ಈ ಚೌಪದಿಗಳು:

ಮನೆಗಲ್ಲದೆಯೆ ನೆಂಟ ಮಠಕೆ ಬರುವನೆ ಪೇಳು
ಒಣಮರಕೆ ಬಹುದೆ ಕೋಗಿಲೆಯು ಗಿಳಿವಿಂಡು
ಮನದಣಿಯೆ ಉಣಬಡಿಪ ಸಿರಿವನೆಯು ಮನೆತನ-
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

ಇನಸುತಗೆ ತಿಳಿದೊಡೇಂ ತನ್ನ ಹುಟ್ಟಿನ ಹಿರಿಮೆ
ಅನುಮಾನವಿನಿತಿಲ್ಲ ಜೀಯನೊಲವಿನೊಳು
ಧನವದುವೆ ಕೌರವನ ಮಾನಧನ ನಂಬಿಕ-
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

ವನಕೆ ಹೆಮ್ಮರ ಸೊಗಸು ಗಿರಿಗಾ ಶಿಖರ ಸೊಗಸು
ಮನೆಗೆ ಹಿರಿಗಂಬದಾಲಂಬ ಸೊಗಸು
ಇನಿವೆಣ್ಣಿನೊಡಲಿಗಾಲಂಬವೆನೆ ಚೆಲುವಿನಾ
ಸ್ತನ ದೊಡ್ಡತನದಲ್ಲಿ ಶೋಭಿಸಿಹುದು.

ಜನಕಗಲ್ಲದೆ ಶುನಕಕಹುದೆ ರಾಮನ ನಂಟು
ಘನಶೈಲಿ ಶೂಲಿ ಹುಲು ಮೊರಡಿ ಬಯಸುವನೇ
ವನಮಾಲಿಯಲ್ತೆ ಸಾಗರನಳಿಯ?ಹಿರಿನಂಟ-
ತನ ದೊಡ್ಡತನದಲ್ಲಿ ಶೋಭಿಸಿಹುದು

ಕೊನೆಯ ಚೌಪದಿ “ಸ್ತನ ದೊಡ್ಡತನದಲ್ಲಿ ಶೋಭಿಸಿಹುದು” ಎಂದು ಬಳಸಿದರೆ ಮೂರನೆಯ ಸಾಲಿನ ಛಂದಸ್ಸು ಕೆಡುತ್ತದೆಯಾದ್ದರಿಂದ ಅದು ಸಮಸ್ಯೆಯನ್ನು ಯಥಾವತ್ತಾಗಿ ಪೂರೈಸುವುದಿಲ್ಲ, ಆದರೂ ಉಳಿದ ಸಾಲುಗಳು ಬಂದುವಲ್ಲ ಎಂದು ಪೋಸ್ಟಿಸಿದೆ ಅಷ್ಟೇ.

Friday, September 23, 2011

ಪ್ರಭಾತ ಚತುರ್ಮುಖ

"ಪದ್ಯಪಾನ" ಕಾವ್ಯಕುತೂಹಲಿಗಳ ಜಾಲತಾಣದಲ್ಲಿ (padyapana.com) ಪಂಚಮಾತ್ರೆಯ ಚೌಪದಿಯಲ್ಲಿ ಮುಂಜಾವಿನ ವರ್ಣನೆಯ ಬಗೆಗೊಂದು ಸವಾಲಿತ್ತು.  ಅದಕ್ಕಾಗಿ ರಚಿಸಿದ್ದು ಈ ಚೌಪದಿಗಳು:


(೧)
ಸೋರೆ ಕತ್ತಲ ಸಾರ ನೇಸರನ ಮೆಲ್ಬರವ
ಸಾರೆ ಗಗನಾಂಗನೆಯ ಕೆಂಪು ಕದಪು|
ವಾರಿಜದ ಮೊಗವರಳಿ ಮಲಗಿದಿಬ್ಬನಿ ಹೊರಳಿ
ಕೋರಿದುವು ಮಂಗಳದ ಮುಂಬೆಳಗನು||

(೨)
ತಂಗದಿರನಗಲಿಕೆಯ ವಿರಹಕಾಡಲು ರಾತ್ರಿ
ಯಂಗನೆಯ ಕೆನ್ನೆ ತುಸು ಬಿಳುಪಡರಿದೆ|
ಸಂಗಡಲೆ ರವಿಯು ಝುಮ್ಮನೆ ಸೋಂಕೆ ಬಿಸುಪಿನಾ
ಲಿಂಗನದಿ ನಾಚಿ ಮೊಗ ಕೆಂಪೇರಿದೆ||

(೩)
ಮುಂಗೋಳಿ ಕೂಗಿರಲು, ಹಕ್ಕಿಗಳು ಹಾಡಿರಲು
ರಂಗೋಲಿ ನಗುತಲಿವೆ ಅಂಗಳದೊಳು|
ಅಂಗಡಿಯು ತೆರೆಯುತಿದೆ, ತರಕಾರಿ ಕೂಗು ಮನೆ
ಮುಂಗಡೆಯೆ ಸಾಗುತಿದೆ ಏನು ಬೇಕು?

(೪)
ಮಾಗಿಯಿರುಳಿನ ಕೊನೆಗೆ ಮೂಡಣದಿ ನಸುವೆ ಬೆಳ
ಗಾಗೆ ಜಗವೆದ್ದು ಚಡಪಡಿಸುತಿಹುದು|
ಸಾಗೆ ಭರಗುಟ್ಟಿ ಮೋಟಾರುಗಳು ಒಣಮರದ
ಕೋಗಿಲೆಯೆ ಶ್ರುತಿಗೆಟ್ಟು ಕಾಗುತಿಹುದು||

Friday, September 9, 2011

ದ್ವೈತ - ಅದ್ವೈತ: ಒಂದು ಚಿಂತನೆ

ಇದೊಂದು ಸ್ವತಂತ್ರ ಲೇಖನವಲ್ಲ. ಗೆಳೆಯ ಶ್ರೀ ಸುಬ್ರಹ್ಮಣ್ಯರು ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿಯ ಬಗ್ಗೆ ಸೊಗಸಾಗಿ ಬರೆಯುತ್ತಿದ್ದಾರೆ. ಈ ಸರಣಿಯಲ್ಲಿ ಸಾಧನಚತುಷ್ಟಯದ ಬಗ್ಗೆ ಒಂದು ಲೇಖನವಿದೆ. ಅಲ್ಲಿ ಬಂದಿರುವ ದ್ವೈತ-ಅದ್ವೈತ-ವಿಶಿಷ್ಟಾದ್ವೈತಗಳ ತುಲನೆಯ ವಿಷಯದಲ್ಲಿ ನನ್ನ ಕೆಲವು ಅನಿಸಿಕೆಗಳನ್ನು ಬರೆಯುತ್ತಿದ್ದಾಗ ಅದು ತೀರ ಬೆಳೆದು ತಾನೇ ಒಂದು ಸ್ವತಂತ್ರ ಬರಹವಾಗಬಹುದೆನ್ನಿಸಿತು. ಅದರ ಪರಿಣಾಮವೇ ಈ ಲೇಖನ.

ಇದು ಮೂಲತಃ ದ್ವೈತವು ಸರಿಯೋ ಅದ್ವೈತವೋ ಎಂಬ ಚರ್ಚೆಯಲ್ಲ (ಏಕೆಂದರೆ ಶಂಕರರ ಸಿದ್ಧಾಂತದ ಬಗೆಗೆ ಹೇಗೋ ಹಾಗೆ ಮಧ್ವರ ಸಿದ್ಧಾಂತಗಳ ಬಗೆಗೂ ನನ್ನದೇ ಅನೇಕ ಪ್ರಶ್ನೆಗಳಿದ್ದು ಅದರ ನಿವಾರಣೆಗೆ ಬೇಕಾದ ಬುದ್ಧಿ/ಜ್ಞಾನ ಸಾಮಗ್ರಿ ನನ್ನಲ್ಲಿಲ್ಲ). ಆದ್ದರಿಂದ ಇವು ಮೇಲಿನ ಲೇಖನದಲ್ಲಿ ಕಂಡ ವಿವಿಧ ಸಿದ್ಧಾಂತಗಳ ತುಲನೆಯ ಬಗೆಗಿನ ನನ್ನ ಅನಿಸಿಕೆಗಳು ಮಾತ್ರ. ಇದು ಮೇಲಿನ ಲೇಖನಕ್ಕೆ ಪ್ರತಿಕ್ರಿಯೆಯಾದ್ದರಿಂದ ಆ ಲೇಖನವನ್ನು ಓದದೇ ಇದು ಪೂರ್ಣವಾಗುವುದಿಲ್ಲ. ಆದ್ದರಿಂದ ಮೂಲ ಲೇಖನವನ್ನು ಮೊದಲು ಓದಬೇಕಾಗಿ ಕೋರಿಕೆ (ದಯವಿಟ್ಟು ರೈಟ್ ಕ್ಲಿಕ್ ಮಾಡಿ ಬೇರೊಂದು ಕಿಟಕಿಯಲ್ಲಿ ತೆರೆದಿಟ್ಟುಕೊಳ್ಳಿ).

ಮೊದಲಿಗೆ ದ್ವೈತ-ಅದ್ವೈತ ಎನ್ನುವ ಪದಗಳು ಆಯಾ ಆಚಾರ್ಯರು ಚಾಲ್ತಿಗೆ ತಂದದ್ದಲ್ಲ. ಉದಾಹರಣೆಗೆ ನಾವು ಅದ್ವೈತವೆಂದು ಕರೆಯುವ ತತ್ವವನ್ನು ಸ್ವತಃ ಶಂಕರರು "ಔಪನಿಷದ ದರ್ಶನ"ವೆಂದು ಕರೆಯುತ್ತಾರೆ ("ತಸ್ಮಾತ್ ಸಮಂಜಸಮಿದಂ ಔಪನಿಷದಂ ದರ್ಶನಂ" - ಸೂತ್ರ ಭಾಷ್ಯ.೨.೧.೯) - ವೇದಾಂತದ (ಉಪನಿಷತ್ತುಗಳ) ಪಾರಮಾರ್ಥಿಕ ದೃಷ್ಟಿ ಮತ್ತು ಬ್ರಹ್ಮೈಕತ್ವವನ್ನು ಎತ್ತಿಹಿಡಿಯುವುದರಿಂದ ಇದು ಔಪನಿಷದ ದರ್ಶನ. ಗೌಡಪಾದಕಾರಿಕೆಯಲ್ಲಿ "ಮಾಯಾಮಾತ್ರಮಿದಂ ದ್ವೈತಂ ಅದ್ವೈತಂ ಪರಮಾರ್ಥತಃ" ಎಂಬ ಮಾತು ಬರುತ್ತದೆ. ಆದರೆ ಇಲ್ಲಿ ಬರುವ ದ್ವೈತ ಅದ್ವೈತ ಪದಗಳು ಒಂದು ಸಿದ್ಧಾಂತವನ್ನು ಸೂಚಿಸದೇ ಕೇವಲ ಎರಡು ಸ್ಥಿತಿಗಳನ್ನಷ್ಟೇ ಸೂಚಿಸುತ್ತದೆ (ಏಕೆಂದರೆ ಶಂಕರಾಚಾರ್ಯರ ಕಾಲಕ್ಕೆ ನಾವೀಗ ನೋಡುವ "ದ್ವೈತಸಿದ್ಧಾಂತ"ದ ಪ್ರತಿಪಾದನೆಯೇ ಆಗಿರಲಿಲ್ಲ!). ಇದಕ್ಕೆ ಅದ್ವೈತಸಿದ್ಧಾಂತವೆಂಬ ಹೆಸರು ಬಿದ್ದದ್ದೇ ಬಹುಶಃ ೧೩ನೆಯ ಶತಮಾನದ ಆಸುಪಾಸಿನಲ್ಲಿ (ಮಧ್ವಾಚಾರ್ಯರ ಕಾಲದ ಸರಿಸುಮಾರಿನಲ್ಲಿ).  ಸುಮಾರು ಹದಿನೈದನೆಯ ಶತಮಾನದ "ಅದ್ವೈತದೀಪಿಕೆ", "ಅದ್ವೈತಬೋಧ", "ಭೇದ ಧಿಕ್ಕಾರ" ಇತ್ಯಾದಿ ಗ್ರಂಥಗಳು, ಮತ್ತು ಮುಂದೆ ಮಧುಸೂದನ ಸರಸ್ವತಿಗಳ "ಅದ್ವೈತಸಿದ್ಧಿ" ಇತ್ಯಾದಿ ಗ್ರಂಥಗಳಲ್ಲಿ ಸ್ಪಷ್ಟವಾಗಿ ಕಂಡುಬರುವ ದ್ವೈತ-ಅದ್ವೈತ ಸೈದ್ಧಾಂತಿಕ ಚರ್ಚೆಗಳನ್ನು ಉದಹರಿಸುವ ಸಾಕೃ ರಾಮಚಂದ್ರರಾಯರು, ಶಂಕರರ ಔಪನಿಶದ ದರ್ಶನಕ್ಕೆ ಅದ್ವೈತ ಸಿದ್ಧಾಂತವೆಂಬ ವ್ಯವಹಾರ ಬಂದದ್ದು ಬಹುಶಃ ಹದಿನೈದನೆಯ ಶತಮಾನದಿಂದೀಚಿಗಿರಬಹುದು ಎಂದು ಅಭಿಪ್ರಾಯ ಪಡುತ್ತಾರೆ (ದರ್ಶನ ಪ್ರಬಂಧ - ಅದ್ವೈತ ಸಿದ್ಧಾಂತ: ಸಾ.ಕೃ.ರಾ).  ಆದ್ದರಿಂದ ಶಾಂಕರದರ್ಶನಕ್ಕೆ ಅದ್ವೈತ ಸಿದ್ಧಾಂತವೆಂಬ ವ್ಯವಹಾರವು ಮಧ್ವಾಚಾರ್ಯರ ಕಾಲಕ್ಕೆ ಆರಂಭವಾಗಿ ಬಹುಶಃ ಹದಿನೈದನೆಯ ಶತಮಾನದ ಹೊತ್ತಿಗೆ ಭದ್ರವಾಗಿ ನೆಲೆಯೂರಿತ್ತೆನ್ನಬಹುದು.

ವಿಶಿಷ್ಟಾದ್ವೈತವೆಂಬ ನಿರ್ದೇಶನವೂ ರಾಮಾನುಜರು ಬಳಕೆಗೆ ತಂದದ್ದಲ್ಲ, ಏಕೆಂದರೆ ರಾಮಾನುಜರ ಮತಕ್ಕೆ ಶ್ರೀವೈಷ್ಣವ ಮತವೆಂದೇ ಬಳಕೆ. ಈ ವೈಷ್ಣವ ಮತದಲ್ಲಿ ಹರಿಗಷ್ಟೇ ಅಲ್ಲ, ಲಕ್ಷ್ಮಿಗೂ ಬಹಳಷ್ಟು ಪ್ರಾಮುಖ್ಯವಿರುವುದರಿಂದ ಇದು ಶ್ರೀ-ವೈಷ್ಣವ. ಆಳ್ವಾರರ ಭಕ್ತಿಪಂಥ ಮತ್ತು ನಾಥ-ಯಾಮುನರ ವೈದಿಕ ವಿಚಾರಧಾರೆಗಳನ್ನು ಕ್ರೋಢೀಕರಿಸಿ ಅದಕ್ಕೊಂದು ವೈದಿಕ ದರ್ಶನದ ಅಂತಸ್ತು ನೀಡಿದ ಹೆಗ್ಗಳಿಕೆ ರಾಮಾನುಜರದು. ಬ್ರಹ್ಮ-ಚಿತ್-ಅಚಿತ್ ಸಂಬಂಧವನ್ನು ದೇಹಿ-ದೇಹ (ಶೇಷಿ-ಶೇಷ)ದ ಪರಿಭಾಷೆಯಲ್ಲಿ ನಿರೂಪಿಸುವುದರ ಮೂಲಕ (ಬ್ರಹ್ಮವು ದೇಹಿ, ಜಗತ್ತು ದೇಹ; ಜಗತ್ತಿನ ಪ್ರತಿಯೊಂದು ಚಿದಚಿದ್ವಸ್ತುವೂ ಈ ಬ್ರಹ್ಮನ ಒಂದು ಭಾಗ/ಅಂಶ) ಬ್ರಹ್ಮವೂ ಜಗತ್ತೂ ಹೇಗೆ ಬೇರೆಬೇರೆ ಮತ್ತು ಅದೇ ಸಮಯದಲ್ಲಿ ಹೇಗೆ ಒಂದೇ ಎಂಬುದನ್ನು ಪ್ರತಿಪಾದಿಸುವುದರಿಂದ ಇದಕ್ಕೆ ಮುಂದೆ ವಿಶಿಷ್ಟಾದ್ವೈತವೆಂಬ ಹೆಸರು ದೊರಕೊಂಡಿರುವಂತೆ ತೋರುತ್ತದೆ. ಈ ಹೆಸರಿನ ಬಳಕೆ ವೇದಾಂತದೇಶಿಕರಲ್ಲಿ ಮತ್ತು ಸುದರ್ಶನ ಸೂರಿಗಳಲ್ಲಿ ಮೊದಲಿಗೆ ಬಳಕೆಗೆ ಬಂದಂತೆ ಕಂಡುಬರುತ್ತದೆ (ಕ್ರಿ.ಶ.೧೩-೧೪ - ಮಧ್ವಾಚಾರ್ಯರ ಕಾಲದ ಸರಿಸುಮಾರಿನಲ್ಲೇ). ಮೇಲೆ ತಿಳಿಸಿದಂತೆ ಈ ಹೊತ್ತಿಗಾಲೇ ಶಂಕರರ ಔಪನಿಶದ ದರ್ಶನವು "ಅದ್ವೈತ"ವೆಂಬ ಹೆಸರಿನಲ್ಲಿ ಬಳಕೆಗೆ ಬಂದಿತ್ತು (ಶಂಕರರ ಅದ್ವೈತದಿಂದ ತಮ್ಮದನ್ನು ಪ್ರತ್ಯೇಕವಾಗಿ ಗುರುತಿಸಲಿಕ್ಕಾಗಿ ವಿಶಿಷ್ಟಾದ್ವೈತಿಗಳು ಶಂಕರರ ಅದ್ವೈತವನ್ನು "ಕೇವಲಾದ್ವೈತ" ಎಂದು ನಿರ್ದೇಶಿಸುತ್ತಾರೆ).

ಇನ್ನು ದ್ವೈತದ ವಿಷಯಕ್ಕೆ ಬಂದರೆ, ಇದೂ ಮೂಲತಃ ದ್ವೈತಸಿದ್ಧಾಂತವೆಂದು ಕರೆಯಲ್ಪಟ್ಟದ್ದಲ್ಲ. ಇದರ ಮೂಲ ಹೆಸರು "ತತ್ವವಾದ". ದ್ವೈತಿಗಳು ಅದ್ವೈತ ಸಿದ್ಧಾಂತವನ್ನು ಮಾಯಾವಾದವೆಂದು ನಿರ್ದೇಶಿಸುತ್ತಾರೆ (ಜಗತ್ತು ಮಾಯೆಯೆಂಬುದರಿಂದ). ಅದಕ್ಕೆ ಪ್ರತಿಯಾಗಿ ಈ ವಾದದ ಮುಖ್ಯನಿಲುವು ಸತ್ಯತ್ವ. ಬ್ರಹ್ಮನಷ್ಟೇ ಅಲ್ಲ, ಬ್ರಹ್ಮನಿಂದ ನಿರ್ಮಿತವಾದ ಜಗತ್ತೂ, ಅವುಗಳ ನಡುವಿನ ಸಾಮ್ಯ, ವೈಷಮ್ಯ, ತಾರತಮ್ಯಗಳೂ, ಸ್ವರೂಪ-ಸ್ವಭಾವಗಳೂ ಸತ್ಯ ಹಾಗೂ ನಿತ್ಯವೆಂದೇ ಸಾರುವುದರಿಂದ ಇದು ತತ್ವವಾದ. ಈ ತತ್ತ್ವವಾದವೇ ಆರ್ಷೇಯದರ್ಶನವೆಂದೂ, ಕಾಲಕ್ರಮದಲ್ಲಿ ಬೇರೆಬೇರೆ ಸಿದ್ಧಾಂತಗಳ ವಿಜೃಂಭಣೆಯಿಂದ ತತ್ವವಾದದ ಬೆಳಕು ಮರೆಯಾಯಿತೆಂದೂ, ಮುಂದೆ ಹದಿಮೂರನೆಯ ಶತಮಾನದಲ್ಲಿ ಬಂದ ಮಧ್ವಾಚಾರ್ಯರು (ಇವರ ಆಶ್ರಮನಾಮ ಪೂರ್ಣಪ್ರಜ್ಞತೀರ್ಥರು; ಬಳಿತ್ಥಾಸೂಕ್ತದ ಮಧ್ವ ಆಧವೇ ಎಂಬ ವಾಕ್ಯದಿಂದ ಮಧ್ವಾಚಾರ್ಯರೆಂದು ಪ್ರಸಿದ್ಧಿ - "ಯದೀಮನು ಪ್ರದಿವೋ ಮಧ್ವ ಆಧವೇ ಗುಹಾ ಸಂತಂ ಮಾತರಿಶ್ವಾ ಮಥಾಯತಿ") ಈ ಮರೆಯಾಗಿದ್ದ ತತ್ವವಾದವನ್ನು ಪುನರುಜ್ಜೀವಿಸಿ ಪ್ರಚುರಗೊಳಿಸಿದರೆಂದೂ ದ್ವೈತ ಸಂಪ್ರದಾಯ ನಂಬುತ್ತದೆ. ಆದ್ದರಿಂದ ಇದಕ್ಕೆ ಪೂರ್ಣಪ್ರಜ್ಞದರ್ಶನವೆಂದೂ ಹೆಸರು. ೧೩-೧೪ನೆಯ ಶತಮಾನದ ಮಾಧವಾಚಾರ್ಯರ "ಸರ್ವದರ್ಶನ ಸಂಗ್ರಹ"ದಲ್ಲೂ ಈ ದರ್ಶನ ಪೂರ್ಣಪ್ರಜ್ಞದರ್ಶನವೆಂದೇ ಕರೆಯಲ್ಪಟ್ಟಿದೆ. ದ್ವೈತಸಿದ್ಧಾಂತವೆಂಬ ಹೆಸರು ಮೇಲಿನ ಆತ್ಮೈಕತ್ವದ (ಅದ್ವೈತದ) ಪ್ರತಿಯಾಗಿ ಬಳಕೆಗೆ ಬಂದ ವ್ಯವಹಾರವಿರಬೇಕು. ಶಂಕರರ ಸೂತ್ರಭಾಷ್ಯಗಳಲ್ಲೂ ದ್ವೈತಿಗಳ ಉಲ್ಲೇಖ ಬಂದಿದ್ದರೂ ಸ್ಪಷ್ಟವಾಗಿಯೇ ಅದು ಮಧ್ವಸಿದ್ಧಾಂತದ ಉಲ್ಲೇಖವಲ್ಲ, ಬದಲಿಗೆ ಅದು ಸಾಂಖ್ಯ ಮತ್ತು ಯೋಗದರ್ಶನಗಳನ್ನು ಕುರಿತದ್ದು (ದ್ವೈತಿನೋ ಹಿ ತೇ ಸಾಂಖ್ಯಾ ಯೋಗಾಶ್ಚ - ಸೂತ್ರ ಭಾಷ್ಯ.೨.೧.೩). ದ್ವೈತವೆಂಬಲ್ಲಿ ಒತ್ತು ಎರಡು ಎಂಬ ಸಂಖ್ಯೆಯ ಮೇಲಲ್ಲ, ಬದಲಿಗೆ ನಾನಾತ್ವದ ಮೇಲೆ.

ಅದೇನೇ ಇದ್ದರೂ ಈ ಮೂರೂ ದರ್ಶನಗಳು ಸಮನ್ವಯಿಸಲೇ ಸಾಧ್ಯವಿಲ್ಲದಷ್ಟು ವಿಭಿನ್ನ ಧೋರಣೆಯನ್ನು ತಳೆದದ್ದು.  ಆದರೆ ಪ್ರಸ್ತುತ ಲೇಖನವನ್ನು ಓದುವಾಗ ಅದು ಎಲ್ಲೋ ಒಂದೆಡೆ ಈ ಮೂರೂ ಮತಗಳನ್ನು ಸಮನ್ವಯಿಸಲೆಳಸುತ್ತದೆಯೆನ್ನಿಸಿತು.ಉದಾಹರಣೆಗೆ ಇದನ್ನು ನೋಡಿ:

"ರಾಮಾನುಜಾಚಾರ್ಯರ ವಿಶಿಷ್ಟಾದ್ವೈತಕ್ಕೂ ಅದ್ವೈತಕ್ಕೂ ಹೆಚ್ಚೇನೂ ಭಿನ್ನತೆಯಿಲ್ಲದಿದ್ದರೂ "ವಿಶ್ವಮಾನವರೆಲ್ಲರೂ ಪರಮಾತ್ಮನ ಸ್ವರೂಪರೇ" ಎನ್ನುವ ಅದ್ವೈತವನ್ನು ಬಿಟ್ಟು ಎಲ್ಲವೂ ಶ್ರೀ ಹರಿಯೇ , ಅವನೊಬ್ಬನೇ ಶೇಷಿ ಮಿಕ್ಕದ್ದೆಲ್ಲಾ ಶೇಷ ಎಂದು ಹೇಳುತ್ತಾರೆ"

- ಆದರೆ "ವಿಶ್ವಮಾನವರೆಲ್ಲರೂ ಪರಮಾತ್ಮನ ಸ್ವರೂಪರೇ" ಎನ್ನುವುದಕ್ಕೂ "ಶ್ರೀಹರಿಯು ಶೇಷಿ, ಮಿಕ್ಕದ್ದೆಲ್ಲಾ ಶೇಷ" ಎನ್ನುವುದಕ್ಕೂ ಅಗಾಧವಾದ ಅಂತರವುಂಟು. ಆದ್ದರಿಂದ "ವಿಶಿಷ್ಟಾದ್ವೈತಕ್ಕೂ ಅದ್ವೈತಕ್ಕೂ ಹೆಚ್ಚೇನೂ ಭಿನ್ನತೆಯಿಲ್ಲ"ವೆಂಬ ಸಮನ್ವಯ ತುಸು ಕಷ್ಟದ್ದೆನಿಸುತ್ತದೆ. ಜಗತ್ತು ಮಿಥ್ಯೆ, ಮಾಯೆ; ಈ ಮಾಯಾಪ್ರಪಂಚದಲ್ಲಿ ಸಿಲುಕಿರುವ ಜೀವನ ನಿಜಸ್ವರೂಪವೆಂದರೆ ಪರಮಾತ್ಮನೇ; ಜೀವನಿಗೂ ಪರಮಾತ್ಮನಿಗೂ ಕಾಣಬರುವ ಭೇದ ಕೇವಲ ಪರಮಾತ್ಮನ ಮಾಯಾವಿಕಾರ; ಹೀಗೆಂಬ ತಿಳಿವೇ ಮುಕ್ತಿ (ಸ್ವಸರೂಪದರ್ಶನ, ಯಥಾರ್ಥ ಜ್ಞಾನ) - ಇದು ಸ್ಥೂಲವಾಗಿ ಶಂಕರರ ನಿಲುವು.

ಆದರೆ ರಾಮಾನುಜರ ಶೇಷಿ-ಶೇಷ ಪರಿಕಲ್ಪನೆ ಹಾಗಲ್ಲ. ಇಲ್ಲಿ ಮೂರು ಮುಖ್ಯ ಅಂಶಗಳಿವೆ: ಆತ್ಮ, ಚೇತನ (ಚಿದ್ವಸ್ತು) ಮತ್ತು ಅಚೇತನ (ಅಚಿದ್ವಸ್ತು). ವೇದಪ್ರತಿಪಾದ್ಯವಾದ ಆತ್ಮವೆನ್ನುವುದು ಒಂದೇ - ಅದೇ ಬ್ರಹ್ಮ, ಅದೇ ಸತ್ಯ. ವಿವಿಧಜೀವಿಗಳಲ್ಲಿ ಬೇರೆಬೇರೆ ತೋರುವುದು ವಿವಿಧ ಆತ್ಮಗಳಲ್ಲ, ಬದಲಿಗೆ ಈ ಪರಮಾತ್ಮನದೇ ಒಂದು ಅಂಶವಷ್ಟೇ. ಅದು ಚೇತನ (ಚಿದ್ವಸ್ತು - ಆತ್ಮನ ಒಂದು ತುಣುಕು). ಇನ್ನು ಈ ಇಡೀ ಜಗತ್ತು (ಅಚೇತನ-ಅಚಿದ್ವಸ್ತುಗಳ ಮೊತ್ತ) ಪರಮಾತ್ಮನ ದೇಹ. ಅದಕ್ಕೆಂದೇ ಪರಮಪುರುಷನು ಸಹಸ್ರಪಾದ, ಸಹಸ್ರಾಕ್ಷ, ಸಹಸ್ರಶಿರ, ಸಹಸ್ರೋರು ಮತ್ತು ಸಹಸ್ರಬಾಹುವೆನ್ನಿಸಿಕೊಳ್ಳುತ್ತಾನೆ. ಹೀಗೆ ಆತ್ಮ-ಪರಮಾತ್ಮರ ಭೇದವನ್ನೂ, ಆತ್ಮದ ಬಹುತ್ವವನ್ನೂ ನಿರಾಕರಿಸಿ, ಪ್ರತಿಯೊಂದು ಜೀವಿಯಲ್ಲಿರುವುದು ಒಂದೇ ಪರಮಾತ್ಮನ ಅಂಶ(ಶೇಷ)ವೆಂದೂ, ಆತ್ಮ(ಶೇಷಿ)ವೊಂದೇ ಎಂದೂ ಆತ್ಮೈಕತ್ವವನ್ನು ಪ್ರತಿಪಾದಿಸುವುದರಿಂದ ಅದು "ಅದ್ವೈತ"; ಆದರೆ ಕಾಣಬರುವ ವಿವಿಧ ಆತ್ಮಗಳ ಭೇದವನ್ನು ಮಾಯೆಯೆನ್ನದೇ ಅದು ಸತ್ಯವೆಂದೂ ವಿರಾಟ್ ಆತ್ಮದ ಅಂಶಮಾತ್ರವೆಂದೂ ಪ್ರತಿಪಾದಿಸುವುದರಿಂದ ಅದು "ವಿಶಿಷ್ಟಾದ್ವೈತ". ಇದಕ್ಕೂ, ಬ್ರಹ್ಮನನ್ನುಳಿದು ಮಿಕ್ಕದ್ದೆಲ್ಲವೂ ಮಾಯೆಯೆನ್ನುವ ಅದ್ವೈತದ ನಿಲುವಿಗೂ ಅಜಗಜಾಂತರ ವ್ಯತ್ಯಾಸವಿದೆ.

ಇನ್ನು ಶಂಕರರ ಸಿದ್ಧಾಂತಕ್ಕೂ ಮಧ್ವಸಿದ್ಧಾಂತಕ್ಕೂ ಮೇಲಿನಷ್ಟು ಸಾಮ್ಯವೂ ಇಲ್ಲ - ಭೂಮ್ಯಾಕಾಶಗಳ ಅಂತರ. ಎರಡೂ ಪಕ್ಷಗಳು ಒಪ್ಪುವ ಒಂದೇ ವಾಕ್ಯವೆಂದರೆ "ಬ್ರಹ್ಮ ಸತ್ಯ" ಅದು ಬಿಟ್ಟರೆ ಮಿಕ್ಕಿದ್ದೆಲ್ಲವೂ ತದ್ವಿರುದ್ಧವೇ! ಆದರೆ ಈ ಎರಡು ಸಿದ್ಧಾಂತಗಳನ್ನು ಹೋಲಿಸುತ್ತಾ, ಲೇಖನ ಹೀಗೆ ಹೇಳುತ್ತದೆ:

"ದ್ವೈತದಲ್ಲಿಯೂ ಸಹ 'ಹರಿ ಸರ್ವೋತ್ತಮ' ಎನ್ನುವುದು ಅಂತಿಮ ನಿಶ್ಚಯ. ಬ್ರಹ್ಮವೆಂದರೆ ಬೇರೇನೂ ಅಲ್ಲ, ಜಗತ್ತಿನ ನಿಯಾಮಕನೂ ಸರ್ವಶಕ್ತನೂ ಆದ ಶ್ರೀಹರಿಯೇ ಮತ್ತು ಅವನೊಬ್ಬನೇ ಎಂದು ನಿರೂಪಿಸುತ್ತಾರೆ. ಹರಿಯೊಬ್ಬನೆ ಸ್ವತಂತ್ರ ಸತ್ಯ ಇನ್ನುಳಿದದ್ದೆಲ್ಲಾ ಅಧೀನ ಸತ್ಯ ಎನ್ನುವ ಪ್ರತಿಪಾದನೆಯನ್ನು ಕಾಣಬಹುದಾಗಿರುತ್ತದೆ. ಇಲ್ಲಾದರೂ ಸಹ ನಾವು ಶಂಕರರ ತತ್ವವನ್ನೇ ಕಾಣಬಹುದಾಗಿರುತ್ತದೆ. ಬ್ರಹ್ಮವೊಂದೇ ಸತ್ಯ ಜಗತ್ತು ಮಿಥ್ಯೆ ಎನ್ನುವ ಶಂಕರರ ಅದ್ವೈತಕ್ಕೂ ಹರಿಯೊಬ್ಬನೇ (ಸಗುಣ ಬ್ರಹ್ಮ) ಸತ್ಯ ಉಳಿದುದೆಲ್ಲವೂ ಅನಿತ್ಯ ಅಥವಾ ಅಧೀನ ಸತ್ಯ (ಅಸ್ವತಂತ್ರ ಸತ್ಯ) ಮತ್ತು ಹರಿಯಿಂದಲೇ ಜಗತ್ತು ನೆಡೆಯುವುದು ಎನ್ನುವಾಗ 'ಜಗತ್ತು' ಕೂಡಾ ಹರಿಯ ಮಾಯೆಯೇ ಎನ್ನುವುದು ನಿರೂಪಿತವಾಗುತ್ತದೆ ಮತ್ತು ಹೆಚ್ಚು ವ್ಯತ್ಯಾಸವೂ ಕಾಣದಾಗುತ್ತದೆ. ಇದು ನಿತ್ಯ ಅದು ಅನಿತ್ಯ ಎನ್ನುವ ಪೃಥಃಕರಣ ಎನ್ನಬಹುದು. (ಅರ್ಜುನನ ಗುರಿಯು ಪಕ್ಷಿಯ ಅಕ್ಷಿಯೊಂದೇ ಆಗಿದ್ದಾಗ ಉಳಿದ ಅಂಗಗಳೆಲ್ಲಾ ಆತನಿಗೆ ನಿಮಿತ್ತವಾಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬಹುದು)"

- ಇಲ್ಲಿ ಉಭಯಮತಸಮನ್ವಯದ ಪ್ರಯತ್ನ ಕಾಣುತ್ತದೆ, ಆದರೆ ತಾತ್ವಿಕವಾಗಿಯಾದರೂ ಈ ಸಮನ್ವಯ ಸಾಧ್ಯವೇ ನೋಡೋಣ.

"ದ್ವೈತದಲ್ಲಿಯೂ ಸಹ 'ಹರಿ ಸರ್ವೋತ್ತಮ' ಎನ್ನುವುದು ಅಂತಿಮ ನಿಶ್ಚಯ. ಬ್ರಹ್ಮವೆಂದರೆ ಬೇರೇನೂ ಅಲ್ಲ, ಜಗತ್ತಿನ ನಿಯಾಮಕನೂ ಸರ್ವಶಕ್ತನೂ ಆದ ಶ್ರೀಹರಿಯೇ ಮತ್ತು ಅವನೊಬ್ಬನೇ ಎಂದು ನಿರೂಪಿಸುತ್ತಾರೆ" - ಇದರಲ್ಲಿ ಎರಡು ಮಾತಿಲ್ಲ.

ಮುಂದೆ "ಹರಿಯೊಬ್ಬನೆ ಸ್ವತಂತ್ರ ಸತ್ಯ ಇನ್ನುಳಿದದ್ದೆಲ್ಲಾ ಅಧೀನ ಸತ್ಯ ಎನ್ನುವ ಪ್ರತಿಪಾದನೆಯನ್ನು ಕಾಣಬಹುದಾಗಿರುತ್ತದೆ" ಇಲ್ಲಿ ಸ್ವತಂತ್ರ ಸತ್ಯ ಮತ್ತು ಅಧೀನ ಸತ್ಯ ಎಂಬುವು ತತ್ವವಾದದ ಪರಿಭಾಷೆಯಲ್ಲವಾದರೂ ಅದರ ಆಶಯಕ್ಕೆ ಮುಕ್ಕಾಗಿಲ್ಲವಾದ್ದರಿಂದ ಒಪ್ಪಿ ಮುಂದುವರೆಯಬಹುದು. ಅದನ್ನೇ ತತ್ವವಾದದ ಪರಿಭಾಷೆಯಲ್ಲಿ ಹೇಳುವುದಾದರೆ "ಹರಿಯೊಬ್ಬನೇ ಸ್ವತಂತ್ರ, ಮಿಕ್ಕೆಲ್ಲಾ ಹರಿಯ ಅಧೀನ; ಬ್ರಹ್ಮನೂ, ಅವನಿಂದ ಸೃಷ್ಟಿಸಲ್ಪಟ್ಟ ಜಗತ್ತೂ, ಅದರ ಭೇದವೂ ತಾರತಮ್ಯವೂ ಸತ್ಯ." ಇದನ್ನು ಹೀಗೇಕೆ ಮಾರ್ಪಡಿಸಬೇಕಾಯಿತೆಂದರೆ, ಮೇಲಿನ ವಾಕ್ಯದ ಆಶಯ ಅದೇ ಆದರೂ ಸ್ವತಂತ್ರ ಸತ್ಯ ಮತ್ತು ಅಧೀನ ಸತ್ಯವೆಂಬ ಪರಿಭಾಷೆ ತತ್ವವಾದವನ್ನು ಅದ್ವೈತವಾದದತ್ತ ತುಯ್ಯುತ್ತದೆ. ಏಕೆಂದರೆ "ಹರಿ ಸ್ವತಂತ್ರ, ಮಿಕ್ಕಿದ್ದು ಅಧೀನ, ಮತ್ತು ಎರಡೂ ಸತ್ಯ" ಎನ್ನುವುದಕ್ಕೂ "ಹರಿಯು ಸ್ವತಂತ್ರ ಸತ್ಯ, ಮಿಕ್ಕಿದ್ದು ಅಧೀನ ಸತ್ಯ" ಎನ್ನುವುದಕ್ಕೂ ಬಹಳ ವ್ಯತ್ಯಾಸವಿದೆ. ಮೊದಲ ಸಾಲಿನಲ್ಲಿ ನಾವು ವಸ್ತುವಿನ ಸ್ವಾತಂತ್ರ್ಯದ ಬಗೆಗೆ ಮಾತಾಡುತ್ತೇವೆ, ಎರಡನೆಯದರಲ್ಲಿ ಸತ್ಯದ ಸ್ವಾತಂತ್ರ್ಯದ ಬಗ್ಗೆ. ಮಿಕ್ಕಿದ್ದು ಅಧೀನಸತ್ಯ (dependent/conditional truth) ಎಂದುಬಿಟ್ಟರೆ ಸ್ವತಂತ್ರ ಸತ್ಯದ ಮರ್ಜಿಯಲ್ಲಿ ಅಧೀನ ಸತ್ಯವೂ ಮಿಥ್ಯೆಯಾಗಿಬಿಡಬಹುದೆನ್ನುವ ಅಭಿಪ್ರಾಯ ಬಂದುಬಿಡುತ್ತದೆ (ಜಗತ್ತು ಬ್ರಹ್ಮದ ಮಾಯೆ, ಅದರೊಳಗಿರುವವರಿಗೆ ಮಾತ್ರ ಅದು ಸತ್ಯ (ವ್ಯಾವಹಾರಿಕ-ಅಧೀನ ಸತ್ಯ), ಬ್ರಹ್ಮನಿಗಲ್ಲ). ಇದು ಖಂಡಿತಾ ತತ್ವವಾದದ ನಿಲುವಲ್ಲ. ಇಷ್ಟು ಹೇಳಿ ಮುಂದೆ ನೋಡೋಣ:

"ಬ್ರಹ್ಮವೊಂದೇ ಸತ್ಯ ಜಗತ್ತು ಮಿಥ್ಯೆ ಎನ್ನುವ ಶಂಕರರ ಅದ್ವೈತಕ್ಕೂ ಹರಿಯೊಬ್ಬನೇ (ಸಗುಣ ಬ್ರಹ್ಮ) ಸತ್ಯ ಉಳಿದುದೆಲ್ಲವೂ ಅನಿತ್ಯ ಅಥವಾ ಅಧೀನ ಸತ್ಯ (ಅಸ್ವತಂತ್ರ ಸತ್ಯ) ಮತ್ತು ಹರಿಯಿಂದಲೇ ಜಗತ್ತು ನೆಡೆಯುವುದು ಎನ್ನುವಾಗ 'ಜಗತ್ತು' ಕೂಡಾ ಹರಿಯ ಮಾಯೆಯೇ ಎನ್ನುವುದು ನಿರೂಪಿತವಾಗುತ್ತದೆ ಮತ್ತು ಹೆಚ್ಚು ವ್ಯತ್ಯಾಸವೂ ಕಾಣದಾಗುತ್ತದೆ" - ಇದು ಹೇಗೆ?

"ಹರಿಯೊಬ್ಬನೇ (ಸಗುಣಬ್ರಹ್ಮದ ವಿಷಯವನ್ನು ಮುಂದೆ ಮಾತಾಡೋಣ) ಸತ್ಯ, ಉಳಿದುದೆಲ್ಲವೂ ಅನಿತ್ಯ (ಹಿಂದಿನ ಅಧೀನಸತ್ಯವು ಇಲ್ಲಿ ಅನಿತ್ಯವೆಂದು ಕರೆಯಲ್ಪಟ್ಟಿತು)" ಎಂದಾಗ ಅದು ಹರಿಯ ಮಾಯೆಯೆಂದು ಎಲ್ಲಿ ನಿರೂಪಿತವಾಯಿತು? ಅನಿತ್ಯವೆಂದರೆ ಕ್ಷಣಿಕ (not-eternal, but mortal); ಕ್ಷಣಿಕ ಹೌದು, ಆದರೆ ಮಾಯೆಯೇ? ನಡೆಯುವಾಗ ಎಡವಿ ಬಿದ್ದರೆ ನೋವು ಕ್ಷಣಿಕ, ಅನಿತ್ಯ, ಆದರೆ ಅದು ಮಾಯೆಯಲ್ಲವಲ್ಲ!

ಮತ್ತೆ ಹರಿಯಿಂದಲೇ ಜಗತ್ತು ನಡೆಯುವುದು ಎನ್ನುವಾಗ ಜಗತ್ತು ಹರಿಯ ಮಾಯೆಯೆಂದು ನಿರೂಪಿತವಾಗದು? ಹೆಚ್ಚೆಂದರೆ ಅದನ್ನು ಹರಿಯ ಲೀಲೆಯೆನ್ನಬಹುದಲ್ಲವೇ? ಬ್ರಹ್ಮನ ಲೀಲಾಮಾತ್ರದಿಂದ ಜಗತ್ತು ಸೃಷ್ಟಿಯಾಯಿತು ಎನ್ನುವುದು ಉಭಯ ದರ್ಶನಗಳೂ ಒಪ್ಪುವ ವಿಚಾರ. ಆದರೆ ಈ ಲೀಲಾಮಾತ್ರ ಸೃಷ್ಟಿ ಮಾಯಾಸೃಷ್ಟಿಯೋ ನೈಜವೋ ಎಂಬಲ್ಲಿಯೇ ತಕರಾರು. ಇಲ್ಲಿ ಜಗನ್ನಾಥದಾಸರ ಹರಿಕಥಾಮೃತಸಾರದಿಂದ ಒಂದು ಸಾಲು ನೆನಪಿಗೆ ಬರುತ್ತದೆ "ಏನು ಕರುಣಾನಿಧಿಯೊ ಹರಿ ಮತ್ತೇನು ಭಕ್ತಾಧೀನನೋ ಇನ್ನೇನು ಈತನ ಲೀಲೆ ಇಚ್ಛಾಮಾತ್ರದಲೆ ಜಗವ ತಾನೆ ಸೃಜಿಸುವ ಪಾಲಿಸುವ ನಿರ್ಮಾಣ ಮೊದಲಾದಖಿಲ ಲೋಕಸ್ಥಾನದಲಿ ತನ್ನವರನಿಟ್ಟಾನಂದ ಪಡಿಸುವನು"

ಜಗತ್ಸತ್ಯತ್ವವನ್ನು ವ್ಯಾವಹಾರಿಕ ಸ್ತರದಲ್ಲಿ ಶಂಕರರರೂ ಒಪ್ಪುವರಾದರೂ ಪರಮಾರ್ಥದಲ್ಲಿ ಅದು ಮಾಯೆಯೇ ಸರಿ. ಆದರೆ ಮಧ್ವರ ನಿಲುವೋ, ಜಗತ್ತು ಸತ್ಯವಷ್ಟೇ ಅಲ್ಲ, ನಿತ್ಯವೂ - ಅದರ ರೂಪ ಬದಲಾಗಬಹುದು, ಎಲ್ಲವೂ ನಾಶಹೊಂದಿ ಪರಮಾತ್ಮನಲ್ಲಿ ಅಡಗಬಹುದು, ಆದರೆ ಮಾಯವಾಗದು. ಬೀಜರೂಪದಲ್ಲಾದರೂ ಅದರ ಅಸ್ತಿತ್ವವಿದ್ದೇ ಇರುತ್ತದೆ. ಎಂದಮೇಲೆ ಜಗನ್ಮಿಥ್ಯಾತ್ವ ಮತ್ತು ಸತ್ಯತ್ವಗಳ ನಡುವಿನ ಸಮನ್ವಯವಿರಲಿ, ಹೋಲಿಕೆಯಾದರೂ ಹೇಗೆ?

ಇನ್ನು ಆಚಾರ್ಯರಿಬ್ಬರೂ "ಒಪ್ಪುವ" ಬ್ರಹ್ಮಸತ್ಯತ್ವದ ವಿಷಯವನ್ನೊಂದಿಷ್ಟು ನೋಡೋಣ. ಅದಾದರೂ ನಿರ್ವಿವಾದವೇ ಎಂದರೆ, ಅಲ್ಲವೆಂದೇ ಹೇಳಬೇಕಾಗುವುದು. "ಒಪ್ಪಿಗೆ" ವಾಕ್ಯದ ಮಟ್ಟದಲ್ಲಷ್ಟೇ! ವಾಕ್ಯಾರ್ಥದ ಮಟ್ಟಕ್ಕಿಳಿದರೆ ಅಲ್ಲೂ ತಕರಾರೇ! ಶಂಕರರ ಪ್ರಕಾರ ಬ್ರಹ್ಮನು ನಿರ್ಗುಣ, ನಿರಾಕಾರ, ನಿರುಪಾಧಿಕ. ಗುಣ, ಆಕಾರ, ಉಪಾಧಿ ಎಲ್ಲವೂ ಜೀವಕ್ಕೆ ಮಾತ್ರ. ಆದರೆ ಈಗಾಗಲೇ ಜೀವನು ಪರಬ್ರಹ್ಮಸ್ವರೂಪಿಯೆಂದೂ ಪರಬ್ರಹ್ಮನು ನಿರ್ಗುಣ, ನಿರಾಕಾರ, ನಿರುಪಾಧಿಕನೆಂದೂ ಒಪ್ಪಿಬಿಟ್ಟಿರುವುದರಿಂದ, ಜೀವನಲ್ಲಿ ಕಾಣುವ ಈ ಗುಣ, ಆಕಾರ, ಉಪಾಧಿಗಳೆಲ್ಲಾ ಬರೀ ತೋರಿಕೆಯೆಂದೂ ಮಾಯೆಯೆಂದೂ ಹೇಳಬೇಕಾಗುವುದು - ಇದು ತರ್ಕ. ಹಾಗೆಂದಮಾತ್ರಕ್ಕೆ ಅದ್ವೈತಸಾಧನೆಯಲ್ಲಿ ಬ್ರಹ್ಮನ ಸಗುಣೌಪಾಸನೆಯಿಲ್ಲವೆಂದಲ್ಲ. ಗುಣ, ಆಕಾರ, ಉಪಾಧಿಭರಿತವಾದ ಜೀವಕ್ಕೆ ಅವೆಲ್ಲಾ ಮಾಯೆಯೆಂಬ ಜ್ಞಾನವಾಗದೆ ನಿರ್ಗುಣದ ಅರಿವು ಸಾಧ್ಯವಿಲ್ಲ. ಅದುವರೆಗೂ ಜೀವಕ್ಕೆ ತನ್ನ ಉಪಾಧಿಗನುಗುಣವಾಗಿ ಸಗುಣೌಪಾಸನೆಯೇ ಮಾರ್ಗ. ಭಕ್ತಿ ಇದಕ್ಕೆ ಸಾಧನ. ಇದರಿಂದ ಚಿತ್ತಶುದ್ಧಿ, ತನ್ಮೂಲಕ ಜ್ಞಾನಾರ್ಹತೆ, ಜ್ಞಾನ, ಮುಂದೆ ನಿರ್ಗುಣೋಪಾಸನೆ - ಇದು ಶಂಕರರ ಮಾರ್ಗ. ಇದಕ್ಕೆ ಮಧ್ವರ ಆಕ್ಷೇಪಣೆಯೋ ಎಂದರೆ, ಗುಣ, ಆಕಾರ, ಉಪಾಧಿಗಳೇನೂ ಇಲ್ಲದ ಬ್ರಹ್ಮನನ್ನು ಏನೆಂದು ನಿರ್ದೇಶಿಸುವುದು? "ಇಲ್ಲ"ವೆಂದೇ? ಇದು ಆತ್ಯಂತಿಕವಾಗಿ ಬ್ರಹ್ಮನೂ ಇಲ್ಲವೆಂದೇ ಹೇಳಿದಂತಲ್ಲವೇ? ಇದಕ್ಕೆ ಪ್ರತಿಯಾಗಿ ಮಧ್ವರ ಪರಿಕಲ್ಪನೆಯೆಂದರೆ, ಬ್ರಹ್ಮ ಗುಣರಹಿತನಲ್ಲ, ನಿರಾಕಾರನಲ್ಲ, ಉಪಾಧಿರಹಿತನಲ್ಲ; ಹಾಗೆಯೇ ಆತ್ಮನೂ ಗುಣ/ಆಕಾರ/ಉಪಾಧಿರಹಿತನಲ್ಲ. ಹಾಗಿದ್ದರೆ ಬ್ರಹ್ಮನಿಗೂ ಜೀವನಿಗೂ ವ್ಯತ್ಯಾಸವೇನು? ಜೀವನ ಗುಣ/ಆಕಾರ/ಉಪಾಧಿಗಳು ಸಂಪೂರ್ಣವೂ ಕಳಂಕರಹಿತವೂ ಅಲ್ಲ. ಅದಕ್ಕೆ ಅಪೂರ್ಣತ್ವವಿದೆ, ದೋಷಬಾಧೆಯಿದೆ. ಆದರೆ ಬ್ರಹ್ಮನೋ, ಸರ್ವದೋಷವಿವರ್ಜಿತ. "ಅನಂತಕಲ್ಯಾಣಗುಣ ಪರಿಪೂರ್ಣ, ಕ್ಷೀರಾಬ್ಧಿಶಾಯಿ, ನಿರ್ದೋಷ ಜ್ಞಾನಾನಂದಾತ್ಮಕ ವಿಷ್ಣುರ್ಮೇ ಸ್ವಾಮಿನ್" ಎಂದೇ ನಿರ್ದೇಶನ. ಗುಣಪೂರ್ಣನಾದ್ದರಿಂದ ಈತನಿಗೊಂದು ಹೆಸರಿದೆ, ಅದೇ ಹರಿ; ಅವನಿಗೊಂದು ರೂಪ ಕೂಡ ಇದೆ. ಹರಿಯ ರೂಪಾತಿಶಯಗಳ, ದೇಹದ ಅಂಗಾಂಗಗಳ ವರ್ಣನೆಗೆಂದೇ ಮಧ್ವಾಚಾರ್ಯರು ತಮ್ಮ ದ್ವಾದಶಸ್ತೋತ್ರದ ಇಡೀ ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ.

ಆದ್ದರಿಂದ ಕೇವಲ ಕೆಲವೇ ಕೆಲವು ಗೌಣ ವಿಷಯಗಳ ಬಗೆಗೆ ಬಿಟ್ಟರೆ ಆಚಾರ್ಯದ್ವಯರಲ್ಲಿ (ಅಥವ ಆಚಾರ್ಯತ್ರಯರಲ್ಲಿಯೂ) ಕಂಡುಬರುವುದು ಅಡಿಯಿಂದ ಮುಡಿಯವರೆಗೂ ಭಿನ್ನತೆಯೇ! ಇದರರ್ಥ ಯಾರು ಸರಿ ಯಾರು ತಪ್ಪೆಂದು ಚರ್ಚಿಸಬೇಕೆಂದೋ ನಿರ್ಧರಿಸಬೇಕೆಂದೋ ಅಲ್ಲ, ಕೇವಲ ಹೋಲಿಕೆಗಳ ಸ್ಪಷ್ಟತೆಗಾಗಿಯಷ್ಟೇ ಈ ಚರ್ಚೆ.

ಇದು ಲೇಖನದಲ್ಲಿನ ಹೋಲಿಕೆಗಳ ವಿಷಯದ ಮಾತಾಯಿತು. ಇನ್ನು ಲೇಖನದಲ್ಲೇ ಒಡಮೂಡಿರುವ ಮತ್ತೊಂದು ವಿಚಾರದ ಬಗ್ಗೆ ನನ್ನ ಅನಿಸಿಕೆಗಳನ್ನು ಮಂಡಿಸುವೆ. ಅದೆಂದರೆ ಅನಿತ್ಯ-ಮಿಥ್ಯ ವಿಚಾರ. ಮೊದಲೇ ಚರ್ಚಿಸಿದಂತೆ ಅನಿತ್ಯವು ಮಿಥ್ಯೆಯಾಗಬೇಕಿಲ್ಲ ಅಲ್ಲವೇ? ಲೇಖನವೂ "'ಅನಿತ್ಯ' ಎನ್ನುವುದೇನೋ ಸರಿ ಆದರೆ, ಮಿಥ್ಯೆ ಎನ್ನುವುದು ಎಷ್ಟು ಸರಿ?" ಎಂದು ಪ್ರಶ್ನೆಯನ್ನೇನೋ ಕೈಗೆತ್ತಿಕೊಳ್ಳುತ್ತದೆ, ಆದರೆ ಉತ್ತರ ಮನದಟ್ಟಾಗಲಿಲ್ಲ.

"ಆತ್ಮಾಭ್ಯಾಸಿಯು ಅನಿತ್ಯವಾದ ಜಗತ್ತನ್ನು ನೆಚ್ಚಿ ಕುಳಿತರೆ ತನ್ನ ಪರಮಾರ್ಥದ ಉದ್ದೇಶವನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗದು. ಆತನ ಲಕ್ಷ್ಯವೇನಿದ್ದರೂ ಬ್ರಹ್ಮದೆಡೆಗೆ ಮಾತ್ರ ಇರಬೇಕಾಗುತ್ತದೆ. ಹೀಗೆ ಗಟ್ಟಿಯಾಗುತ್ತಾ ಸಾಗಿದಂತೆ ಮೊಟ್ಟಮೊದಲ ವೈರಾಗ್ಯವು(=ಅನಾಸಕ್ತಿ, ತಟಸ್ಥ ಭಾವ) ಹುಟ್ಟುತ್ತದೆ... ಮಿಥ್ಯಾಪ್ರಂಪಚದ ಗೊಡವೆಯಿಂದ ಪರಮಾರ್ಥ ಚಿಂತನೆಯು ಸಾಧ್ಯವಾಗುವುದಿಲ್ಲ ಎಂಬ ಭಾವವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ ಎಂದುಕೊಳ್ಳಬಹುದು. "ವೈರಾಗ್ಯವು ತಪ್ಪದೆ ಹುಟ್ಟುವುದಕ್ಕಾಗಿ ಬ್ರಹ್ಮವು ನಿತ್ಯ ಜಗತ್ತು ಅನಿತ್ಯ ಎಂದು ಹೇಳದೆ ಬ್ರಹ್ಮವು ಸತ್ಯ ಜಗತ್ತು ಮಿಥ್ಯೆ ಎಂದು ಹೇಳಿದ್ದಾರೆ " ಎಂಬುದು ಸದ್ಗುರು ಚಂದ್ರಶೇಖರ ಭಾರತಿಗಳ ವಿವರಣೆ." ಇದು ಅಷ್ಟು ಸಮರ್ಪಕವೆನಿಸುವುದಿಲ್ಲ. ಕೇವಲ ವೈರಾಗ್ಯವು ತಪ್ಪದೇ ಹುಟ್ಟಬೇಕೆಂಬ ಕಾರಣಕ್ಕಾಗಿ ಅನಿತ್ಯವನ್ನು ಮಿಥ್ಯೆಯೆಂದು ಹೇಳುತ್ತಾರೆಯೇ? ಹಾಗಿದ್ದರೆ ಸತ್ಯವನ್ನೂ ಮಿಥ್ಯೆಯೆಂದೇ ಹೇಳಿಬಿಡಬಹುದಲ್ಲವೇ? ಯಥಾರ್ಥಜ್ಞಾನವೇ ಪರಮಾರ್ಥವೆಂದು ಸಾಧಿಸುವ ಬೋಧಿಸುವ ಮಹಾಮನೀಷಿಗಳು ಕೇವಲ ಮುಮುಕ್ಷುಗಳ ವೈರಾಗ್ಯಲಾಭಕ್ಕಾದರೂ ಅನಿತ್ಯವನ್ನು ಮಿಥ್ಯೆಯೆನ್ನುವ ಆಮಿಷವೊಡ್ಡುವರೇ? ಶ್ರೀ ಶಂಕರರ ವಿಷಯದಲ್ಲಿ ನನಗೇನೋ ಇದು ಮನಸ್ಸಿಗೊಪ್ಪುವ ಮಾತಲ್ಲ. ಬದಲಿಗೆ ಇದರ ಸಮನ್ವಯ ಹೀಗಿರಬಹುದು:

ಸಾಧನಚತುಷ್ಟಯದ ಮೊದಲ ಸಾಧನ, ನಿತ್ಯಾನಿತ್ಯವಸ್ತುವಿವೇಕ. ಯಾವುದು ನಿತ್ಯ (eternal) ಮತ್ತು ಯಾವುದು ಅನಿತ್ಯ (mortal). ಬ್ರಹ್ಮನೇನೋ ಸತ್ಯವೂ, ನಿತ್ಯವೂ ಹೌದು (ಸತ್ಯ, ಮತ್ತು ಅನಾದ್ಯನಂತ). ಇದಕ್ಕೆ ವಿರುದ್ಧವಾಗಿ ಜಗತ್ತು ಮಿಥ್ಯೆ, ಮತ್ತು ಅನಿತ್ಯ. ಆದರೆ ಇಲ್ಲಿ ಮಿಥ್ಯೆಯೆಂದುಬಿಟ್ಟಮೇಲೆ ನಿತ್ಯಾನಿತ್ಯದ ಪ್ರಶ್ನೆಯೇ ಏಳುವುದಿಲ್ಲವಲ್ಲ! ಏಕೆಂದರೆ "ಇಲ್ಲ"ದಿದ್ದುದು ನಿತ್ಯವೋ ಅನಿತ್ಯವೋ ಆಗುವುದಾದರೂ ಹೇಗೆ? ಅದೇನಿದ್ದರೂ ಸತ್ಯವಸ್ತುವಿನ ಗೊಡವೆಯಲ್ಲವೇ? ಹೌದು. ಮತ್ತಿದರ ಪರಿಹಾರ? ಜಗತ್ತು ಪರಮಾರ್ಥದಲ್ಲಿ ಮಿಥ್ಯವೇನೋ ಸರಿ, ಆದರೆ ವ್ಯಾವಹಾರಿಕ ಸ್ತರದಲ್ಲಿ (ಜೀವನಿಗೆ ಯಥಾರ್ಥಜ್ಞಾನವಾಗುವವರೆಗಾದರೂ) ಸತ್ಯವೇ ತಾನೆ? ಅಂದಮೇಲೆ ಆ "ಸತ್ಯ"ದ ಪರಿಧಿಯಲ್ಲಿ ವಸ್ತುವು ನಿತ್ಯವೋ ಅನಿತ್ಯವೋ ಎಂಬ ಪ್ರಶ್ನೆಬಂದೇಬರುತ್ತದೆ. ಜೀವನ ಆತ್ಯಂತಿಕ ಗುರಿ ಪರಮಾರ್ಥವಾದ್ದರಿಂದ, ಯಥಾರ್ಥಜ್ಞಾನವಾದೊಡನೆ ಜಗತ್ತಿನ ವ್ಯಾವಹಾರಿಕ ಸತ್ಯದ ಪೊರೆ ಹರಿಯುವುದರಿಂದ ಈ ವ್ಯಾವಹಾರಿಕ ಜಗತ್ತು ನಿತ್ಯವಲ್ಲ, ಬದಲಿಗೆ ಅನಿತ್ಯ. ಬಹುಶಃ ಇದು ಆಚಾರ್ಯ ಶಂಕರರ ನಿಲುವು. ಆದ್ದರಿಂದ ಇದನ್ನು ಹೀಗೆ ಸಂಗ್ರಹಿಸಬಹುದು: ಬ್ರಹ್ಮವು ಸತ್ಯ, ಮತ್ತು ನಿತ್ಯ; ಜಗತ್ತು, ಪರಮಾರ್ಥದಲ್ಲಿ ಮಿಥ್ಯೆಯಾದರೂ ವ್ಯವಹಾರದಲ್ಲಿ ಸತ್ಯ ಆದರೆ ಈ ವ್ಯಾವಹಾರಿಕತೆಯೇ ಮಿಥ್ಯೆಯಾದ್ದರಿಂದ, ಎಂದಿದ್ದರೂ ಹರಿದುಹೋಗುವುದರಿಂದ ಈ ಜಗತ್ತು ಅನಿತ್ಯ. ಆದ್ದರಿಂದ ಈ ಸಂದರ್ಭದಲ್ಲಿ ನಿಜಕ್ಕೂ ಶ್ರೀ ಶಂಕರರ ಉದ್ದೇಶ ನಿತ್ಯಾನಿತ್ಯವಸ್ತುವಿನ ಬಗ್ಗೆ ತಿಳಿಯಪಡಿಸುವುದೇ ಹೊರತು ಮಿಥ್ಯೆಯ ಬಗೆಗಲ್ಲ (ಅದರ ಸಂದರ್ಭವೇ ಬೇರೆ). "ಜಗತ್ತು ಅನಿತ್ಯವೆಂಬುದನ್ನು ಮೊದಲು ಅರಿತುಕೋ, ಮುಂದಿನ ಅರಿವು ಆಮೇಲಾಗಲಿ" ಇದು ಶಂಕರರ ಆಶಯವಿರಬೇಕು; ಆದ್ದರಿಂದಲೇ ಇದನ್ನು "ನಿತ್ಯಾನಿತ್ಯವಸ್ತುವಿವೇಕ"ವೆಂದಿದ್ದಾರೆ, ತಪ್ಪಿದ್ದರೆ ದಯವಿಟ್ಟು ತಿಳಿಯಪಡಿಸಬೇಕೆಂದು ಕೋರುತ್ತೇನೆ.

ಅನುಬಂಧ:
ಇನ್ನು ಕೊನೆಯದಾಗಿ, ಲೇಖನದಲ್ಲಿ ಪ್ರಾಸ್ತಾವಿಕವಾಗಿ ಮಾಧ್ವಪ್ರಮೇಯಗಳ ಬಗ್ಗೆ ವಿವರಿಸುವಲ್ಲಿ ಈ ಕೆಳಕಂಡ ಶ್ಲೋಕವನ್ನು ಉದಹರಿಸಲಾಗಿದೆ.

ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ತತ್ತ್ವತೋ
ಭೇದೋ ಜೀವಗಣಾಃ ಹರೇರನುಚರಾಃ ನೀಚೋಚ್ಛಭಾವಂ ಗತಾಃ|
ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಂ
ಹ್ಯಕ್ಷಾದಿ ತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ||

ಇದಕ್ಕೆ ತುಸು ವಿವರಣೆ ನೀಡಬೇಕೆನ್ನಿಸಿತು. ವಿವರಣೆ ಇಲ್ಲಿದೆ:

ಮಾಧ್ವತತ್ವದ ಒಂಬತ್ತೂ ಪ್ರಮೇಯಗಳನ್ನು ಸಾರಭೂತವಾಗಿ ಮಂಡಿಸುವ ಈ ಶ್ಲೋಕದ ಕರ್ತೃ ಹರಿದಾಸಸಾಹಿತ್ಯದ ಹರಿಕಾರರೂ, ಕವಿಗಳೂ ಸ್ವತಃ ಪ್ರಕಾಂಡ ಪಂಡಿತರೂ ಆದ ಶ್ರೀ ವ್ಯಾಸರಾಜರು. ಈ ಶ್ಲೋಕದ ಅರ್ಥ/ಅನ್ವಯ ಹೀಗಿದೆ:

ಶ್ರೀಮನ್ ಮಧ್ವಮತೇ;

  • ಹರಿಃ ಪರತರಃ
  • ಸತ್ಯಂ ಜಗತ್
  • ತತ್ತ್ವತೋ ಭೇದಃ
  • ಜೀವಗಣಾಃ ಹರೇರನುಚರಾಃ
  • ನೀಚೋಚ್ಛ ಭಾವಂ ಗತಾಃ
  • ಮುಕ್ತಿಃ ನೈಜ ಸುಖಾನುಭೂತಿಃ, ಅಮಲಾ
  • ಭಕ್ತಿಶ್ಚ ತತ್ಸಾಧನಂ
  • ಅಕ್ಷಾದಿ ತ್ರಿತಯಂ ಹಿ ಪ್ರಮಾಣಂ
  • ಅಖಿಲಾಮ್ನಾಯೈಕ ವೇದ್ಯೋ ಹರಿಃ

ಇದರ ಆಧಾರದಮೇಲೆ ಮಧ್ವಮತವನ್ನು ಸಂಗ್ರಹಿಸಿ ಹೇಳಬಹುದಾದರೆ,

  • ಹರಿಯೇ ಪರದೈವ;
  • ಜಗತ್ತು ಸತ್ಯ;
  • ಭೇದವು ಬ್ರಹ್ಮ-ಜಗತ್ತುಗಳ ಸ್ವಭಾವ (ತತ್ವ)ದಲ್ಲೇ ಇದೆ. ಆಚಾರ್ಯರು ಪಂಚಭೇದಗಳನ್ನು ನಿರೂಪಿಸುತ್ತಾರೆ ಬ್ರಹ್ಮ-ಜೀವ, ಬ್ರಹ್ಮ-ಜಡ, ಜೀವ-ಜೀವ, ಜೀವ-ಜಡ ಮತ್ತು ಜಡ-ಜಡ;
  • ಸಕಲಜೀವರೂ ಹರಿಯ ಅನುಚರರು (ಇಲ್ಲಿ ಅನುಚರ ಅನ್ನುವುದನ್ನು ಅದರ ನಿಜ ಅರ್ಥದಲ್ಲಿ ಬಳಸಲಾಗಿದೆ, ಹರಿಯ ಅನುವರ್ತಿ, ವಶವರ್ತಿ, ಅಧೀನ ಎಂಬ ಅರ್ಥದಲ್ಲಿ, ಜೊತೆಗಾರರು ಎಂಬರ್ಥದಲ್ಲಲ್ಲ);
  • ಮೇಲೆ ಹೇಳಿದ ಬ್ರಹ್ಮ-ಜೀವ, ಬ್ರಹ್ಮ-ಜಡ, ಜೀವ-ಜೀವ, ಜೀವ-ಜಡ ಮತ್ತು ಜಡ-ಜಡಗಳಲ್ಲಿ ಕೇವಲ ಭೇದವಷ್ಟೇ ಅಲ್ಲ ತಾರತಮ್ಯ ಕೂಡ ಇದೆ; ಒಂದು ಮತ್ತೊಂದಕ್ಕೆ ಸಮನಲ್ಲ (ಅಸಮಭವ ಕಾಗಿನೆಲೆಯಾದಿಕೇಶವರಾಯ - ಕನಕದಾಸರು);
  • ಕುಂದಿಲ್ಲದ (flawless) ನೈಜ ಸುಖಾನುಭೂತಿಯೇ ಮುಕ್ತಿ (ಇಲ್ಲಿ ನೈಜ ಎನ್ನುವುದನ್ನು ಜೀವದ ಸ್ವಭಾವಕ್ಕೆ ನಿಜವಾದ (ತಕ್ಕುದಾದ) ಎಂದು ಅರ್ಥೈಸಲಾಗುತ್ತದೆ. ಅಂದರೆ ಮುಕ್ತಿ ಸಹ ಎಲ್ಲ ಜೀವರಿಗೂ ಒಂದೇ ಅಲ್ಲ, ಬೇರ‍ೆಬೇರೆ - ಅದರ ನೆಲೆ ಬೇರೆ, ಆಳ-ಅಗಲಗಳು ಬೇರೆ, ತೀವ್ರತೆ ಬೇರೆ ಇತ್ಯಾದಿ) ಆದ್ದರಿಂದ ಮೇಲೆ ಹೇಳಿದ ಭೇದವೂ ತಾರತಮ್ಯವೂ ಮುಕ್ತಿಯಲ್ಲೂ ಇರುತ್ತದೆ. ಜೀವರು ಮಾತ್ರ ಮುಕ್ತಿಯೋಗ್ಯರು, ಜಡವಲ್ಲ. ಮತ್ತೆ ಜೀವರಲ್ಲಿ ಅವರವರ ಸ್ವಾಭಾವಿಕ ಭೇದಕ್ಕನುಗುಣವಾಗಿ (ತತ್ತ್ವತೋ ಭೇದಃ) ಅವರವರ ಮುಕ್ತಿಯೋಗ್ಯತೆಯೂ ನಿರ್ಧರಿತವಾಗುತ್ತದೆ. ಮತ್ತೆ ಇದರಲ್ಲಿ ಸತ್ವ, ರಜಸ್ ತಮೋಗುಣಗಳ ವರ್ಗೀಕರಣ ಬರುತ್ತದೆ, ಮತ್ತು ಅದಕ್ಕನುಗುಣವಾಗಿ ಜೀವವೊಂದು ತಮೋಯೋಗ್ಯವೋ, ನಿತ್ಯಸಂಸಾರಿಯೋ ಅಥವಾ ಮುಕ್ತಿಯೋಗ್ಯವೋ ಇರಬಹುದು ("ಸಾತ್ವರಿಗೆ ಸುಖ; ಸಂಸಾರ ಮಿಶ್ರರಿಗೆ; ಅಧಮ ಜನರಿಗಪಾರ ದುಃಖಗಳೀವ" - ಹರಿಕಥಾಮೃತಸಾರ, ಜಗನ್ನಾಥದಾಸರು);
  • ಹೀಗೆ ಮುಕ್ತಿಯೋಗ್ಯವಾದ ಜೀವಿಗೆ ಮುಕ್ತಿ ತಾನೇತಾನಾಗಿ ದೊರೆಯುವುದಿಲ್ಲ. ಅದಕ್ಕೆ ಹರಿಕೃಪೆ ಬೇಕು. ಅದಕ್ಕಿರುವ ಮಾರ್ಗವೆಂದರೆ, ಭಕ್ತಿ (ಹರಿಯ ಗುಣಗಳ ಜ್ಞಾನದಿಂದ ಭಕ್ತಿಯ ಹುಟ್ಟು - ಜ್ಞಾನಚಂದ್ರಿಕೆ ಬೆಳಗೆ ಭಕ್ತಿವಾರಿಧಿಯುಕ್ಕೆ ಮನಚಕೋರವು ವಿಷ್ಣುಪಥದಿ ನಲಿಯೆ; ದೀನಜನಭಯವಡಗೆ ತಾಪತ್ರಯಗಳೋಡೆ ಮಧ್ವೇಂದು ಶ್ರೀಕೃಷ್ಣ ನೋಡಿ ತಾ ನಲಿಯೆ - ವ್ಯಾಸರಾಜರು)
  • ಇದಕ್ಕೆ ಪ್ರಮಾಣವೇನು? ಅಕ್ಷಾದಿ ತ್ರಿತಯಂ ಹಿ. ಅಂದರೆ ಪ್ರತ್ಯಕ್ಷ, ಅನುಮಾನ ಮತ್ತು ಆಗಮಗಳೆಂಬ ಈ ಮೂರೇ ಪ್ರಮಾಣ. ಇಲ್ಲೂ ಆಗಮೈಕಪ್ರಮಾಣವೆನ್ನುವ ಬದಲು ಪ್ರತ್ಯಕ್ಷ ಮತ್ತು ಆಗಮಗಳಿಗೆ ಸಮಾನ ಪ್ರಾಮುಖ್ಯ ಕಲ್ಪಿಸಿದ್ದಾರೆ ಆಚಾರ್ಯರು. ಪ್ರತ್ಯಕ್ಷ ಮತ್ತು ಆಗಮಪ್ರಮಾಣಗಳಲ್ಲಿ ವಿರೋಧವಿರದು ಎಂದು ಅಭಿಪ್ರಾಯ. ಮತ್ತೂ ವಿರೋಧ ಕಂಡುಬಂದರೆ ಲೌಕಿಕ ವಿಷಯಗಳಲ್ಲಿ ಪ್ರತ್ಯಕ್ಷವೂ ಅಲೌಕಿಕ ವಿಷಯಗಳಲ್ಲಿ ಆಗಮವೂ ಪ್ರಾಮುಖ್ಯವನ್ನು ಪಡೆಯುವುದು (ಇದು ನನ್ನ ಊಹೆ, ತಿಳಿದವರು ತಿದ್ದಬೇಕು). ಹಾಗೆ ಯಾವುದೇ ಪ್ರತ್ಯಕ್ಷವಿಷಯವನ್ನೋ ಆಗಮವಾಕ್ಯವನ್ನೋ ಪ್ರಮಾಣವೆಂದು ಒಪ್ಪಿಕೊಳ್ಳುವ ಮೊದಲು ಆ "ಪ್ರಮಾಣ" ಶುದ್ಧವಿರಬೇಕು (ಬೇರೆಬೇರ‍ೆ ಪ್ರತ್ಯಕ್ಷ ಪ್ರಮಾಣಗಳಲ್ಲಿ ವಿರೋಧಾಭಾಸವಿರಬಾರದು; ಹಾಗೇ ಆಗಮವಾಕ್ಯಗಳ "ಪ್ರಮಾಣ"ಗಳಲ್ಲಿ ವಿರೋಧಾಭಾಸವಿರಬಾರದು. ಅಪೌರುಷೇಯವಾದ ವೇದವಾಕ್ಯಗಳಲ್ಲಿ ವಿರೋಧವಿರಲು ಸಾಧ್ಯವಿಲ್ಲ, ಆದರೆ ಮೇಲ್ನೋಟಕ್ಕೆ ಕಾಣಬರುವ ವಿರೋಧಾಭಾಸಗಳನ್ನು ಅನುಮಾನ ಮತ್ತು ಬೇರೆ ಪ್ರಮಾಣಗಳ ಮೂಲಕ ಸಮನ್ವಯಿಸಿಕೊಳ್ಳಬೇಕು, ಸಮನ್ವಯವೊದಗುವಂತೆ ಅರ್ಥೈಸಬೇಕು).
  • ಹರಿಯೇ ಸಕಲ ವೇದಪ್ರತಿಪಾದ್ಯನಾದ, ಸತ್ಯಸ್ವರೂಪನಾದ ಬ್ರಹ್ಮ.

Tuesday, September 6, 2011

ಗಣೇಶ ೨೦೧೧

ಪ್ರತಿ ವರ್ಷದಂತೆಯೇ ಈ ವರ್ಷವೂ ಗಣೇಶನ ಹಬ್ಬಕ್ಕಾಗಿ ಗಣೇಶನ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿದ್ದೆ. ಅದರ ಕೆಲವು ಚಿತ್ರಗಳು ಇಲ್ಲಿವೆ. ಈ ವರ್ಷ ಇಡೀ ಚಟುವಟಿಕೆಯ ವಿಡಿಯೋ ಕೂಡ ಮಾಡಿರುವೆ, ಅದನ್ನು ಸಧ್ಯದಲ್ಲೇ ಪೋಸ್ಟ್ ಮಾಡುತ್ತೇನೆ.

ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಂದಿನಂತೆ ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

Sunday, August 14, 2011

ವಂದೇ ಮಾತರಂ (ತಾಯೇ ಬಾಗುವೆ)

"ವಂದೇ ಮಾತರಂ" ಕೇಳಿ ಭಾವುಕನಾಗದ ಭಾರತೀಯನಾರು? ಬಂಕಿಮಚಂದ್ರರ ಕ್ರಾಂತಿಕಾರಿ ಬಂಗಾಳೀ ಕಾದಂಬರಿ ಆನಂದಮಠದಲ್ಲಿ ಬರುವ ಈ ಸುಂದರ ಬಂಗಾಳೀ-ಸಮಸಂಸ್ಕೃತ ಗೀತೆ ತನ್ನ ನವಿರಾದ ಕಾವ್ಯಗುಣದಿಂದ ಮನಮುಟ್ಟುತ್ತದೆ. ರಾಷ್ಟ್ರಗೀತೆಯ ಸ್ಥಾನ ಸಿಗದಿದ್ದರೇನಂತೆ, ಉಜ್ವಲ ರಾಷ್ಟ್ರಪ್ರೇಮವನ್ನು ಬಿಂಬಿಸುವ ಈ ಗೀತೆ ಅದರ ನಿಜ ಅರ್ಥದಲ್ಲಿ ರಾಷ್ಟ್ರಗೀತೆಯೇ ಆಗಿದೆ. ಚಾಲ್ತಿಯಲ್ಲಿರುವ ಭಾಗವನ್ನಷ್ಟೇ ಈ ಕೆಳಗೆ ಕೊಟ್ಟಿದ್ದೇನೆ:

ವಂದೇ ಮಾತರಂ

ಸುಜಲಾಂ ಸುಫಲಾಂ
ಮಲಯಜ ಶೀತಲಾಂ
ಸಸ್ಯಶಾಮಲಾಂ ಮಾತರಂ
ವಂದೇ ಮಾತರಂ...

ಶುಭ್ರಜ್ಯೋತ್ಸ್ನಾಪುಲಕಿತ ಯಾಮಿನೀಂ
ಫುಲ್ಲಕುಸುಮಿತಧ್ರುಮದಳ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ

ವಂದೇ ಮಾತರಂ...
====================


ಇದರ ಕನ್ನಡ ಅವತರಣಿಕೆ ಇಲ್ಲಿದೆ. ಮೂಲದ ಸೊಬಗನ್ನು, ಅಷ್ಟೇ ತುಸುಮಾತುಗಳಲ್ಲಿ ಕನ್ನಡದಲ್ಲಿ ಹಿಡಿದಿಡುವುದು ಕಷ್ಟವೇ ಸರಿ. ಆದರೂ ಮೂಲದ ಭಾವವನ್ನಾದರೂ ಹಿಡಿದಿಟ್ಟಿದ್ದೇನೆನಿಸುತ್ತದೆ. ಭಾವಾನುವಾದದ ಅನುಕೂಲಕ್ಕಾಗಿ, ಮೂಲದ ದ್ವಿತೀಯಾ ವಿಭಕ್ತಿಯನ್ನು ("ಅನ್ನು") ಕನ್ನಡದಲ್ಲಿ ಸಂಬೋಧನೆಯಾಗಿ ಬದಲಿಸಿಕೊಂಡಿದ್ದೇನೆ. ಗೆಳೆಯ ಭರತಕುಮಾರರು ಗೂಗಲ್ ಬಜ಼್ ನಲ್ಲಿ "ನಲ್ನೀರು ನಲ್ವಣ್ಣು ತಾಯಿಯೇ ಬಾಗುವೇ ತಾಯಿಯೇ" ಎಂದು ಹೇಳಿ ಸುಮ್ಮನಾಗಿದ್ದರು. ಇಲ್ಲಿನ ಅನುವಾದಕ್ಕೆ ಈ ಒಂಟಿ ಸಾಲೇ ಸ್ಫೂರ್ತಿ. ಇದಕ್ಕಾಗಿ ಭರತಕುಮಾರರಿಗೆ ಧನ್ಯವಾದ.

ತಾಯೇ ಬಾಗುವೆ

ಸವಿನೀರ್, ತನಿವಣ್,
ತಂಬೆಲರೀವಳೇ
ಸಿರಿಹಸಿರವಳೇ, ಬಾಗುವೆ
ತಾಯೇ ಬಾಗುವೆ...

ಮುಂಜಾವದ ಬಿಳಿ ಸೋನೆಯ ಚುಮಚುಮವೇ
ಅರಳಿ ನಗುವ ಹೂ ಮರಗಳ ಗಮಗಮವೇ
ಮೆಲುನಗೆಯೇ, ನಲ್ನುಡಿಗಾತಿಯೇ
ಸೊಗವೀವಳೆ ವರವೀವಳೇ

ತಾಯೇ ಬಾಗುವೆ...

ಇದರ ಧ್ವನಿಮುದ್ರಿಕೆಯನ್ನು ಸ್ವಾತಂತ್ರ್ಯದಿನಾಚರಣೆಯ ಈ ದಿನವೇ ಪ್ರಕಟಿಸಬೇಕೆಂದಿದ್ದೆ, ಸಾಧ್ಯವಾಗಲಿಲ್ಲ. ಇಷ್ಟರಲ್ಲೇ ಪ್ರಕಟಿಸುತ್ತೇನೆ.

ನಿಮಗೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಟಿಪ್ಪಣಿ - ೧೯/೦೯/೨೦೧೮
=================
ಮೇಲಿನ ಅನುವಾದದಲ್ಲಿ ಮೂಲಕ್ಕೆ ಹತ್ತಿರವಲ್ಲದ ಒಂದು ಸಾಲನ್ನು ಗಮನಿಸಬೇಕು - "ಮುಂಜಾವದ ಬಿಳಿ ಸೋನೆಯ ಚುಮಚುಮವೇ"  ಮೂಲದಲ್ಲಿರುವುದು "ಶುಭ್ರಜ್ಯೋತ್ಸ್ನಾಪುಲಕಿತ ಯಾಮಿನೀಂ" (ತುಂಬು ಬೆಳುದಿಂಗಳಿಂದ ಪುಳಕಿತವಾದ ಇರುಳುಗಳನ್ನು ಹೊಂದಿರುವವಳೇ).  "ಬೆಳುದಿಂಗಳ ರಾತ್ರಿ"ಯು ಅನುವಾದದಲ್ಲಿ "ಮುಂಜಾವದ ಬಿಳಿ ಸೋನೆಯ ಚುಮಚುಮ" ಆಗಿದ್ದು ವಿಚಿತ್ರ, ಆದರೆ ಸ್ವಾರಸ್ಯದ ವಿಷಯ - ಯಾವುದೋ ಒಂದು ಲಹರಿಯಲ್ಲಿ ಬಂದ ಅನುವಾದವದು; ಮೂಲದ ಅರ್ಥ-ಭಾವಗಳಿಗಿಂತ ನನ್ನದೇ ಆ ಕ್ಷಣದ ಲಹರಿಯನ್ನಾಧರಿಸಿ ಹೊಮ್ಮಿದ್ದು.  ಅದಕ್ಕೆ ತಕ್ಕಂತೆ ಮೂಲದಿಂದ ಚಿಕ್ಕದೊಂದು ಬದಲಾವಣೆಯನ್ನು ಮಾಡಿಕೊಂಡೆನೆಂದು ನೆನಪು.  ದಿನಾ ಬೆಳಗಿನ ಜಾವ ರೇಡಿಯೋದಿಂದ ಬಿತ್ತರಗೊಳ್ಳುತ್ತಿದ್ದ ವಂದೇಮಾತರಂ ನನ್ನ ಬಾಲ್ಯಕಾಲದ ಬೆಳಗಿನ ಜಾವದ ಮಧುರ ನೆನಪುಗಳಲ್ಲೊಂದು.  ಇದನ್ನು ಅನುವಾದಿಸುವಾಗ ಆ ನೆನಪಿನ ಲಹರಿಯೇ ನನ್ನ ಮನದಲ್ಲಿದ್ದುದು.  ಯಾಮಿನಿಯು ಇರುಳ್ವೆಣ್ಣಾಗುವುದಕ್ಕಿಂತ ಸುಂದರ ಮುಂಬೆಳಗಿನ ಯಾಮವಾಗುವುದು, ಜ್ಯೋತ್ಸ್ನೆಯ ಜಾಗವನ್ನು ಬೆಳಗಿನ ಜಾವದ ಬೆಳ್ಳನೆಯ ಹಿಮದ ಜವನಿಕೆಯು ತುಂಬುವುದೂ ಹೆಚ್ಚು ಸೊಗಸಾಗಿ ಕಂಡಿತ್ತು.  "ಪುಲಕಿತ" ಶಬ್ದವು ಅದಕ್ಕಿಂತ ಇಲ್ಲೇ ಹೆಚ್ಚು ಸಾರ್ಥಕವಾಗುವುದೆಂದೂ, ಈ ಪ್ರತಿಮೆಯು ಮೂಲಪ್ರತಿಮೆಗಿಂತ ಕವಿಯ ಭಾವವನ್ನು ಹೆಚ್ಚು ಪರಿಣಾಮಕಾರಿಯಾಗಿ ಧ್ವನಿಸಬಹುದೆಂದೂ ಎನಿಸಿ ಮೇಲ್ಕಂಡ ಮಾರ್ಪಾಟು ಮಾಡಿಕೊಂಡೆ.  ಆಮೇಲೆ ಅದರ ಬಗ್ಗೆ ಹೆಚ್ಚು ಚಿಂತಿಸಹೋಗಿರಲಿಲ್ಲ.  ಆದರೆ ಮೊನ್ನೆ ಅದರ ಇಂಗ್ಲಿಷ್ ಅನುವಾದವನ್ನು ಮಾಡಿದಾಗ (ಅನುವಾದವು ಈ ಬರಹದ ಕೊನೆಯಲ್ಲಿದೆ), ಅದೂ ಈ ಕನ್ನಡಾನುವಾದದ ಜಾಡನ್ನೇ ಹಿಡಿದುದನ್ನು ಗಮನಿಸಿ ನನ್ನ ಗಮನ ಸೆಳೆದವರು ವಿದ್ವನ್ಮಿತ್ರರಾದ ಶ್ರೀ ಶ್ರೀಕಾಂತಮೂರ್ತಿ.   ಅಂತೆಯೇ ಇಂಗ್ಲಿಷ್ ಅನುವಾದವನ್ನು ತಿದ್ದಿದೆ, ಆದರೆ ಕನ್ನಡದ ಅನುವಾದ ಆಗ ಅದು ಬಂದ ಹಾಗೆಯೇ ನನಗೆ ಹೆಚ್ಚು ಪ್ರಿಯವೆನಿಸಿದ್ದರಿಂದ ಅದನ್ನು ಹಾಗೆಯೇ ಉಳಿಸಿಕೊಂಡಿದ್ದೇನೆ.  ಆದರೆ ಮೂಲಕ್ಕನುಗುಣವಾಗಿ ತಿದ್ದಿದ ಅನುವಾದ ಇಲ್ಲಿದೆ (ಎರಡನೆಯ ಚರಣದ ಮೊದಲ ಸಾಲನ್ನು ಗಮನಿಸಿ):

ತಾಯೇ ಬಾಗುವೆ

ಸವಿನೀರ್, ತನಿವಣ್,
ತಂಬೆಲರೀವಳೇ
ಸಿರಿಹಸಿರವಳೇ, ಬಾಗುವೆ
ತಾಯೇ ಬಾಗುವೆ...

ಬೆಳುದಿಂಗಳ ಹಾಲ್ಜೊನ್ನದ ಚುಮಚುಮವೇ
ಅರಳಿ ನಗುವ ಹೂ ಮರಗಳ ಗಮಗಮವೇ
ಮೆಲುನಗೆಯೇ, ನಲ್ನುಡಿಗಾತಿಯೇ
ಸೊಗವೀವಳೆ ವರವೀವಳೇ

ತಾಯೇ ಬಾಗುವೆ...

Monday, June 27, 2011

ಮರಳು ಜೇನಳೂ ಮತ್ತು ಪಾದ್ರಿಯೂ (ಮತ್ತೊಂದು ಅನುವಾದ)

ಬಹಳ ಹಿಂದೆ ನಾನು ಮಾಡಿದ W.B.Yeats ಕವನವೊಂದರ ಅನುವಾದವನ್ನು ತುಸು ಬದಲಿಸಿ ಮರುಬರೆದಿದ್ದೇನೆ. ಮೊದಲ ಅನುವಾದವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ (right click ಮಾಡಿ ಬೇರೊಂದು ಕಿಟಕಿಯಲ್ಲಿ ತೆರೆದಿಟ್ಟುಕೊಂಡರೆ ಅನುಕೂಲ)

ದಾರಿಯಲ್ಲಿ ಆ ಪಾದ್ರಿ ಸಿಕ್ಕಿದ್ದ
ಅದೂ ಇದೂ ಮಾತಾಡಿದೆವು.
"ಎಂಥ ಮೊಲೆ, ಹೇಗೆ ಬತ್ತಿಹೋಗಿವೆ ನೋಡು,
ನರಗಳಿನ್ನೇನು ಸೊರಗುವುವು;
ನಡೆಯಿನ್ನಾದರು ಸ್ವರ್ಗದಲಿ ಬದುಕು
ಸಾಕೀ ನರಕದ ಕೊಳೆ ಬದುಕು"

"ಕೊಳಕಿಗು ಥಳುಕಿಗು ಬಿಡದಿಹ ನಂಟು
ಅಗಲಿ ಇರವು ಅವು" - ಚೀರಿದೆ ನಾನು,
"ಸಖರು ಹೋದರೂ ಗೋರಿಯೂ ತಿಳಿದಿದೆ
ಸುಖದ ಶಯ್ಯೆಯೂ ನಿಜವಿದನು.
ಈ ಪತಿತ ದೇಹದಲೆ, ವಿನಯದಿ ಹೆಮ್ಮೆಯ
ಮನದಿ ಅರಿತೆನೀ ಸತ್ಯವನು"

"ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!
ಹರಿಯದ ಬಿರಿಯದ ಒಂದಿದ್ದರೆ ಅದ
ಹೊಲೆವುದು ತಾನೇ ಎಲ್ಲಿ?"

ಟಿಪ್ಪಣಿ:
ಕೊನೆಯ ಎರಡು ಸಾಲುಗಳಿಗೆ ಮೂಲದಲ್ಲಿರುವ ನುಡಿ:
For nothing can be sole or whole
That has not been rent?

ಸೋಲ್ (sole) ಮತ್ತು ಹೋಲ್ (whole) ಎನ್ನುವ ಪದಗಳನ್ನು ಉಚ್ಚರಿಸಿದಾಗ ಅವು soul ಮತ್ತು hole ಎನ್ನುವ ಧ್ವನಿಗಳನ್ನೂ ಹೊರಡಿಸುವ ಮೂಲಕ ಮುಂದಿನ ಸಾಲಿನಲ್ಲಿ ಬರುವ rent ಅನ್ನುವ ಪದಕ್ಕೆ ವಿವಿಧಾರ್ಥಗಳನ್ನು ಕೊಡುತ್ತದೆ; ಅದೇ ಇಲ್ಲಿನ ಸ್ವಾರಸ್ಯ - rent ಅನ್ನುವ ಪದಕ್ಕೇ ಬಾಡಿಗೆಗೆ ಕೊಡು/ಹರಿದುಹಾಕು (rend p.p. rent) ಅನ್ನುವ ಅರ್ಥಗಳಿರುವುದನ್ನೂ ಮತ್ತು ಈ ಕವನದಲ್ಲಿ ಬರುವ ಜೇನ್ ಓರ್ವ ವೇಶ್ಯೆಯೆನ್ನುವುದನ್ನೂ ಗಮನಿಸಿದರೆ rent ಅನ್ನುವುದರ ಸ್ವಾರಸ್ಯ ಹೊಳೆಯುತ್ತದೆ. ಹರಿಯದೇ ಹೊಲೆಯುವುದಕ್ಕಾಗುವುದೇ ಎಂಬ ಅರ್ಥದ ಜೊತೆ, ಇಲ್ಲಿ "ಹರಿಯದೇ ತೂತಾಗುವುದೇ" ಅನ್ನುವ ವ್ಯಂಗ್ಯಾರ್ಥವೂ ಮತ್ತು "ಹರಿದಿದ್ದಕ್ಕೇ ತಾನೆ ಒಂದಾಗುವ ಅಗತ್ಯ?" ಎಂಬ ಅರ್ಥವೂ ಕೂಡಿ ಬರುತ್ತದೆ. ಜೊತೆಗೆ, ತನ್ನ ಈ ಹರಿದ (ಮಾರಿಕೊಂಡ) ಜೀವನದ ಪಾಪಕೂಪವೇ ನನ್ನ ಆತ್ಮೋನ್ನತಿಯ ದಾರಿ ಎಂಬ ಧ್ವನಿಯೂ ಇದೆ (soul ಅನ್ನುವ ಉಚ್ಚಾರಣೆಯ ಭ್ರಮೆ ಇದನ್ನೇ ಧ್ವನಿಸುತ್ತದೆ). ಇದಕ್ಕೆ ಇಂಬುಕೊಡುವಂತೆ ಈ ಮೊದಲ ನಾಲ್ಕು ಸಾಲುಗಳನ್ನು ಗಮನಿಸಬಹುದು:

ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!

("A woman can be proud and stiff
When on love intent;
But love has pitched his mansion in
The place of excrament;)

ಪ್ರೇಮದ ಉತ್ಕಟಸ್ಥಿತಿಯೇ ಆತ್ಮದ ಉನ್ನತಿಯೆನ್ನುತ್ತಾರೆ, ಆದರೆ ಆ "ಪ್ರೇಮ" ಅರಳುವುದೇ ಹೊಲಸಿನ ಕೂಪದಲ್ಲಿ ಅನ್ನುತ್ತಾಳೆ ಜೇನ್. ಶಿಷ್ಟ/ಪವಿತ್ರ ಜೀವನವನ್ನು ಪ್ರತಿನಿಧಿಸುವ ಪಾದ್ರಿಯ ಉಪದೇಶದ ಭಾಷೆಗೆ ಸವಾಲೆಸೆವಂತೆ ಮೈಮಾರಿ ಬದುಕುವ ಹೆಂಗಸಿನ ಒರಟು (rude and crude) ಭಾಷೆಯನ್ನೂ, ಆ ಭಾಷೆಯ ಒರಟುತನದಲ್ಲೇ ಅರಳುವ ತಲೆದೂಗಿಸುವ ತರ್ಕದ ಸೂಕ್ಷ್ಮತೆಯನ್ನೂ ಇಲ್ಲಿ ಗಮನಿಸಬಹುದು. ಕೆಸರಿನ ಕಮಲದಂತೆ ಒರಟು ಮಾತಿನಲ್ಲಿ ಅರಳುವ ಈ ಸೂಕ್ಷ್ಮ, ಜೇನಳೇ ಹೇಳುವಂತೆ ಹೊಲಸಿನಲ್ಲರಳುವ ಸೊಗಸು, ಕಾಮದ ಕೆಸರಿನಲ್ಲಿ ಹುಟ್ಟಿ ಮೇಲೇರುವ ಪ್ರೇಮದ ಔನ್ನತ್ಯವನ್ನೂ ಧ್ವನಿಸುತ್ತದೆ.

ಆದರೆ sole ಮತ್ತು whole ಗಳನ್ನು soul ಮತ್ತು hole ಎಂದೂ ಅರ್ಥ ಸ್ಫುರಿಸುವಂತೆ ಉಚ್ಚರಿಸುವ ಸೌಲಭ್ಯ ಕನ್ನಡದಲ್ಲಿ ಇಲ್ಲವಾದ್ದರಿಂದ ಈ ಸ್ವಾರಸ್ಯವನ್ನು ಕನ್ನಡದ ಅನುವಾದದಲ್ಲಿ ತರುವುದು ಕಷ್ಟ; ಆದ್ದರಿಂದ ಬರೀ ಅರ್ಥವನ್ನು ಮಾತ್ರ ಉಳಿಸಿಕೊಂಡಿದ್ದೇನೆ. ಈ ದೃಷ್ಟಿಯಿಂದ ಈ ಅನುವಾದದ ಬಗೆಗೆ ನನಗೆ ಅತೃಪ್ತಿಯಿದೆ.

Tuesday, June 14, 2011

ಅದು ನೀನಲ್ಲ

ಎಂದೋ ಬಿಡಿಸಿದ ಚಿತ್ರ -
ಹಿಂದೊಂದು ಕಾಲದಲಿ, ದೇಶದಲಿ,
ವರ್ತಮಾನದಿ ಸುಳಿವ ಭೂತದಲ್ಲಿ.
ಕುಡಿಹುಬ್ಬು, ಸುಳಿಗಣ್ಣು
ಮೂಗು ಸಂಪಿಗೆಯೆಸಳು
ನಗೆಯ ಮಲ್ಲಿಗೆಯರಳು
ಮುದ್ದು ಸುರಿಯುವ ಗಲ್ಲ,
ಆಗೆಲ್ಲ;

ಹಾಲ್ಬಿಳುಪು, ಕಡುಗಪ್ಪು,
ಚೆಂಗುಲಾಬಿಯ ಕೆಂಪು,
ನರುಗಂಪು;
ಮಳೆಸುರಿವ ಮುಗಿಲು
ನವಿಲು
ಗರಿ
ಕಾಮನಬಿಲ್ಲು
ಎಲ್ಲೆಲ್ಲು;
ಎಲೆ ಹಸಿರು ಚೆಲ್ಲಾಡಿ,
ಹಳದಿ ಕಿತ್ತಳೆ ಮೋಡಿ;
ಬಣ್ಣಗಳ ರಾಡಿ,
ನೆತ್ತರಿನ ಕಡುಗೆಂಪು-
ಸುರಿಯುವ ಕಣ್ಣ
ನೀರಿಗದ್ದಿದ ಕುಂಚ
ತೊಳೆದಿಟ್ಟು,
ಬಿಸಿಲಿಗಿಕ್ಕಿದ ಚಿತ್ರ;
ಒಣಗಿ ರಟ್ಟು-
ಗಟ್ಟಿದ ನೂರು ಪತ್ರ-
ಗಳ
ಕೆಳಗೆಲ್ಲೋ ಹೂತು ಪೆಟ್ಟಿಗೆಯ
ಬೀಗವ ಜಡಿದು
ಕಳೆದಿದ್ದೆನಲ್ಲ
ಕೈ!

ಆ ಮೇಲೆ
ಸವೆದದ್ದೆಷ್ಟು ವೈಶಾಖ
ಸುರಿದು ಸರಿದದ್ದೆಷ್ಟು ಆಷಾಢ
ಶಿಶಿರ!
ಕಿತ್ತೊಗೆದ ಸುಳಿಬಳ್ಳಿ ಮತ್ತೆಲ್ಲೋ ಬೇರಿಳಿಸಿ
ಮರವನೊಂದನು ಹಬ್ಬಿ,
ಹೂತು, ಮಿಡಿ ಕಾಯಾಗಿ
ತೂಗು ತೊಟ್ಟಿಲು ತೂಗಿ,
ನನಗೊಬ್ಬ ಪುಟ್ಟ, ನಿನಗೆ ಪುಟ್ಟಿ.

ಮೊನ್ನೆ,
ಅದೇನೋ, ತುಕ್ಕಿಡಿದ ತಗಡಿನ ಪೆಟ್ಟಿಯೊಳಗಿಂದ
ದಡದಡನೆ ತಟ್ಟಿದಂತಾಗಿ,
ಕ್ಷಣ ಎದೆ ನಡುಗಿ
ತೆರೆದು ನೋಡಿದರೆ
ನೀನು,
ನಗುತ್ತಲಿದ್ದಿ!
"ನೀ ಒಂಚೂರೂ ಬದಲಾಗಿಲ್ಲ"ವೆಂದಿ
"ಬದಲಾಗು" ಎಂದಿ
ಅದ ಅರಗಿಸಿಕೊಳಲು ನಾನಿಲ್ಲಿ ಹೆಣ-
ಗುತ್ತಿರಲು
ನೀ ಆರಾಮ
ಮಾತಾಡುತ್ತಲೇ ಹೋದಿ -
ಪುಟ್ಟನಿಗೆ ವಯಸೆಷ್ಟು? ಪುಟ್ಟಿಯೇನೋದುವಳು;
ಮನೆ, ಗಂಡ, ಕಾರು, ಹೆಂಡತಿ-
ಪಟ್ಟ
ಆನೆ ಬಂತೊಂದಾನೆ...
ಹೌದೇ? ಅದು ನೀನೇನೆ?
ಆ ಕೆನ್ನೆ, ಆ ಕದಪು
ಆ ಚೆದುರು, ನುಡಿ-ನವಿರು,
ಬರಿಯ ಕಿರುನೋಟದೊಳೆ ಸುತ್ತೆಲ್ಲ ಎಳೆಚಿಗುರು -
ಒಳಗೇ ಹೋಲಿಸಿಕೊಂಡೆ;
ಇಲ್ಲ,
ಅದು ನೀನಲ್ಲವೆಂದು ಹೊಳೆದು,
ಎಂದೂ ಅದು ನೀನಾಗಿರಲೇ ಇಲ್ಲೆಂದು ತಲೆಗಿಳಿದು,
ನೆಮ್ಮದಿಯ ನಿಟ್ಟುಸಿರ ಹೊರದಬ್ಬಿದೆ;
ಮತ್ತಷ್ಟು ಖುಶಿಯಿಂದ ನಿನ್ನೊಡನೆ ಹರಟಿ
ಲೋಕಾಭಿರಾಮದಾರಾಮ
ಅನುಭವಿಸಿದೆ;
ಕೊನೆಗೊಮ್ಮೆ ಸ್ಟೈಲಾಗಿ ಬೈ ಹೇಳಿ
ಪೆಟ್ಟಿಗೆಯ ಮೇಲೆ ಮತ್ತೊಂದು
ಹೂವಿಟ್ಟು ಹಗುರಾಗಿ
ನಿದ್ದೆಹೋದೆ.

Thursday, June 2, 2011

ಸಕ್ಕದಮೋ ಕನ್ನಡಮೋ ನುಡಿಯೋ...

ಮೊನ್ನೆ ನಯಸೇನನ ಈ ಸಾಲುಗಳು ಕಣ್ಣಿಗೆ ಬಿತ್ತು:

ಸಕ್ಕದಮಂ ಪೇೞ್ವೊಡೆ ನೆಱೆ
ಸಕ್ಕದಮಂ ಪೇೞ್ಗೆ ಶುದ್ಧ ಕನ್ನಡದೊಳ್ ತಂ
ದಿಕ್ಕುವುದೆ ಸಕ್ಕದಂಗಳ
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ

ಇದನ್ನು google buzz ನಲ್ಲಿ ಹಂಚಿಕೊಂಡಾಗ ಗೆಳೆಯ ಹಂಸಾನಂದಿ ಇಂತೆಂದರು. "True - for today we should also say the same thing about English!"

ಅಲ್ಲವೇ ಮತ್ತೆ? ಅಟ್ಟುವುದಾದರೆ ಸಂಸ್ಕೃತವೊಂದನ್ನೇ ಏಕೆ? ನಯಸೇನನ ಕಾಲದಲ್ಲಿ ಆಂಗ್ಲದ ಹಾವಳಿಯಿರಲಿಲ್ಲ. ಇದ್ದಿದ್ದರೆ ಅವ ಹೀಗೆ ಹೇಳಿರಬಹುದಿತ್ತೇ?

ಆಂಗಿಲಮಂ ಪೇೞ್ವೊಡೆ ನೆಱೆ
ಯಾಂಗಿಲಮನೆ ಪೇೞ್ಗೆ ಬೆರೆಸಿ ಕಿಡಿಸುವುದೇಂ ತಾ
ಮಂಗಳಮೆ ಚೊಕ್ಕ ಕನ್ನಡ
ಕಾಂಗಿಲಮಂ ತುಪ್ಪಕೆಣ್ಣೆ ಬೆರೆಸುವ ತೆರದೊಳ್

ಮೊದಲು ಹೇಳಿದ ನಯಸೇನನ ಸಾಲುಗಳೂ ಮತ್ತು ಅದರ ಅಭಿಪ್ರಾಯಭೂತವಾಗಿ ನಾನು ಬರೆದ ಮೇಲಿನ ಸಾಲುಗಳೂ, ಸವಿಗನ್ನಡದಲ್ಲಿ ಕಟಕಟೆಯೆನಿಸುವಷ್ಟು ಅಸಹಜವಾಗಿ ಸಕ್ಕದ/ಆಂಗ್ಲಗಳನ್ನು ಬಳಸುವ ಬಗೆಗೆನ್ನುವುದು ಸ್ಪಷ್ಟ. ಆದರೆ ಸಕ್ಕದದ ಮೈಲಿಗೆಯಿಂದ ಕನ್ನಡವನ್ನೇ ಬುಡಮಟ್ಟ clean ಮಾಡಿಬಿಡಬೇಕೆನ್ನುವ ಇಂದಿನ ಅರ್ಥಹೀನ ಕೂಗಿಗೂ ಇವೇ ಸಾಲುಗಳು ಆಧಾರವಾದೀತಲ್ಲವೇ? ಈ ದಿಕ್ಕಿನಲ್ಲಿ ಯೋಚಿಸುತ್ತಿದ್ದಾಗ ಮೂಡಿದುವು ಈ ಕೆಳಗಿನ ಕಂದಗಳೈದು.

ಸಜ್ಜಿಗೆಗೆರೆಯದೆ ತುಪ್ಪಮ
ನೊಜ್ಜೆಯೊಳಿಕ್ಕುವರೆ ಮಜ್ಜಿಗೆಗೆ ರುಚಿಯರಿಗರ್
ಮಜ್ಜನಕೆಣ್ಣೆಯನೆರೆಯದೆ
ಯುಜ್ಜುವವೋಲ್ ತಲೆಗೆ ತುಪ್ಪಮನ್ ಸಕ್ಕರೆಯನ್ ೧

ಎಣ್ಣೆಯೆ ರುಚಿಯೋಗರಕೆನೆ
ಬೆಣ್ಣೆಯದರ ಸವಿಯನೆತ್ತದೇಂ ಕಿಡಿಸುಗುಮೇ
ಎಣ್ಣೆಯಬೆಣ್ಣೆಯ ಸವಿಯರಿ
ದುಣ್ಣುವ ರಸಿಗನವಗಲ್ತೆ ಸೊಗಯಿಪುದಿನಿಗಳ್ ೨

ನುಡಿಯೇಂ ಬರಿ ಪದಮೇ ಕ
ನ್ನಡಪದವೊಟ್ಟುತಲೆ ಸಕ್ಕದಮನಕ್ಕಜದಿಂ
ಬಡಿದಟ್ಟಲ್ಕಾನುಡಿ ಕ
ನ್ನುಡಿಯಪ್ಪುದೆ ಮರುಳೆ ಕನ್ನಡಮದನೆ ಮರೆವಾ ೩

ಪದನರಿದುಲಿಯದೆ ಸವಿಯದೆ
ಪದವಿಡಿದೆಳೆಯುತಿದು ಕನ್ನಡಂ ಸಕ್ಕದಮೆಂ
ದದರುೞಿವಿಡಿಯಲ್ ಕಬ್ಬದ
ಪದಮದು ಕಿಡದುಳಿವುದೆಂತುಪುೞಿವಾಲಿನವೋಲ್ ೪

ನುಡಿಯೊಳನುಡಿತಕೆ ಗಮನಂ
ಗುಡುತೆಸೆವನುನಯದಿ ನಾದದೊಳ್ ಮನವಿಡುವನ್
ನುಡಿಯರಿಗನ್ ಗಮನಂಗಿಡೆ
ನುಡಿದರಿಗನೆನಲ್ ಸಮಂತು ನುಡಿಗದೆ ಲಕ್ಷ್ಯಂ ೫

Wednesday, May 11, 2011

ಅರಿವಿನ ದಾರಿ

ಚಿತ್ರಕೃಪೆ: ಅಂತರ್ಜಾಲ
ತೈತ್ತಿರೀಯೋಪನಿಷತ್ತಿನ ಭೃಗುವಲ್ಲಿಯೆಂಬ ಭಾಗದಲ್ಲಿ ಒಂದು ಸುಂದರ ಸಂವಾದವಿದೆ. ವರುಣನ ಮಗನಾದ ಭೃಗು, ಬ್ರಹ್ಮಜ್ಞಾನವನ್ನು ಹೊಂದುವ ಕುತೂಹಲದಿಂದ, ತಂದೆಯ ಬಳಿ ಸಾರಿ ಹೀಗೆ ಕೇಳುತ್ತಾನೆ:

"ಭಗವನ್, ನನಗೆ ಬ್ರಹ್ಮನ ಬಗ್ಗೆ ತಿಳಿಸಿಕೊಡಿ" ಸಂಬಂಧದಿಂದ ತಂದೆಯೇ ಹೌದಾದರೂ ಕಾರ್ಯನಿಮಿತ್ತ ಗುರು, ವರುಣ. ಅದರಿಂದ ಗುರುವನ್ನು ಸಂಬೋಧಿಸುವ ರೀತಿ "ಭಗವನ್... "

ವಿಷಯವೋ ಅತಿ ಗಹನ. ಭೃಗುವಿನದ್ದು ಒಂದು ಸಾಲಿನ ಪ್ರಶ್ನೆ. ಆದರೆ ಉತ್ತರವೋ? ವರುಣನಾದರೋ ಅದು ಯಾವ ಸಿದ್ಧ ಉತ್ತರ ಹೇಳಿಯಾನು?

"ಮಗೂ, ಅನ್ನ, ಪ್ರಾಣ, ಕಣ್ಣು, ಕಿವಿ, ಮನಸ್ಸು ಮಾತು, ಇವು ಬ್ರಹ್ಮನನ್ನು ತಿಳಿಯುವ ಸಾಧನಗಳು" ಒಗಟಿನ ರೀತಿಯಲ್ಲಿ ನುಡಿಯುತ್ತಾನೆ ವರುಣ "ಯಾವುದರಿಂದ ಸಕಲಭೂತಗಳೂ ಜನಿಸುತ್ತವೆಯೋ, ಹೀಗೆ ಹುಟ್ಟಿದವು ಯಾವುದರಿಂದ ಜೀವಿಸುತ್ತವೆಯೋ, ಕೊನೆಗೆ ಯಾವುದನ್ನು ಸೇರಿ ಅದರಲ್ಲೇ ಲೀನವಾಗುತ್ತವೆಯೋ, ಅದನ್ನು ಕುರಿತು ಚಿಂತಿಸು; ಅದೇ ಬ್ರಹ್ಮ"

ಹೀಗೆ ಬ್ರಹ್ಮನನ್ನು ತಿಳಿಯುವ ಸಾಧನಗಳನ್ನೂ ಬ್ರಹ್ಮನ ಸುಳುಹನ್ನೂ ತಂದೆಯಿಂದ ಅರಿತ ಭೃಗು ಈ ಕುರಿತು ಚಿಂತಿಸಲು (ತಪಸ್ಸನ್ನಾಚರಿಸಲು) ನಿಶ್ಚಯಿಸಿ ಹಿಂದಿರುಗುತ್ತಾನೆ. ಕೆಲಕಾಲದ ತಪಸ್ಸಿನಿಂದ ಉತ್ತರವೊಂದು ಮನಸ್ಸಿನಲ್ಲಿ ಮೂಡುತ್ತದೆ: ಅನ್ನವೇ ಬ್ರಹ್ಮ. ಏಕೆಂದರೆ ಸಕಲಭೂತಗಳೂ ಕೇವಲ ಅನ್ನದಿಂದಲೇ ಜನಿಸುತ್ತವೆ, ಹೀಗೆ ಹುಟ್ಟಿದವು ಅನ್ನದಿಂದಲೇ ಜೀವಿಸುತ್ತವೆ. ಕೊನೆಗೆ ಅನ್ನವನ್ನೇ ಸೇರಿ ಅದರಲ್ಲಿ ಲೀನವಾಗುತ್ತವೆ (ಮತ್ತೊಂದಕ್ಕೆ ಅನ್ನವಾಗುತ್ತವೆ - ಆಹಾರ ಸರಪಳಿ ಅದೇ ಅಲ್ಲವೇ? ಅನ್ನವಿಲ್ಲದೇ ಜಗತ್ತಿಲ್ಲ; ಜಗತ್ತೇ ಅನ್ನಮಯ!). ಆದ್ದರಿಂದ ಅನ್ನವೇ ಬ್ರಹ್ಮ ಇರಬೇಕು. ಹೀಗೆ ತರ್ಕಿಸಿ ಭೃಗು ಮತ್ತೆ ತಂದೆಯ ಬಳಿ ಬರುತ್ತಾನೆ, ಅದೇ ಪ್ರಶ್ನೆ ಕೇಳುತ್ತಾನೆ:

"ಭಗವನ್, ನನಗೆ ಬ್ರಹ್ಮನ ಬಗ್ಗೆ ತಿಳಿಸಿಕೊಡಿ"

ಅದಕ್ಕೆ ವರುಣನ ಉತ್ತರ "ಮಗೂ, ತಪಸ್ಸಿನಿಂದ ಬ್ರಹ್ಮನನ್ನು ತಿಳಿ, ತಪಸ್ಸೇ ಬ್ರಹ್ಮ"

ಭೃಗುವಿಗೆ ತನ್ನ ತರ್ಕದಲ್ಲೇನೋ ಕೊರತೆಯಿರಬಹುದೆಂದು ಅರಿವಾಗುತ್ತದೆ. ತಂದೆ ಹೇಳಿದ ಬ್ರಹ್ಮನ ಲಕ್ಷಣಗಳೆಲ್ಲಾ ಅನ್ನಕ್ಕಿದ್ದರೂ, ಅದಕ್ಕೆ ಹುಟ್ಟೂ ಇದೆಯಲ್ಲವೇ? ಆದರೆ ಬ್ರಹ್ಮನಾದರೋ ಅನಾದಿ! ಸರಿ, ಮತ್ತೆ ತಪಸ್ಸನ್ನು ಮುಂದುವರೆಸಲು ನಿಶ್ಚಯಿಸಿ ಹಿಂದಿರುಗುತ್ತಾನೆ ಭೃಗು.

ಕೆಲಕಾಲದ ತಪಸ್ಸಿನಿಂದ ಹೊಸದೊಂದು ಉತ್ತರ ಮೂಡುತ್ತದೆ: ಪ್ರಾಣವೇ ಬ್ರಹ್ಮ. ಏಕೆಂದರೆ ಸಕಲಭೂತಗಳೂ ಕೇವಲ ಪ್ರಾಣದಿಂದಲೇ ಜನಿಸುತ್ತವೆ, ಹೀಗೆ ಹುಟ್ಟಿದವು ಪ್ರಾಣದಿಂದಲೇ ಜೀವಿಸುತ್ತವೆ. ಕೊನೆಗೆ ಪ್ರಾಣವನ್ನೇ ಸೇರಿ ಅದರಲ್ಲಿ ಲೀನವಾಗುತ್ತವೆ. ಆದ್ದರಿಂದ ಪ್ರಾಣವೇ ಬ್ರಹ್ಮ ಇರಬೇಕು. (ಉಸಿರಿಲ್ಲದೇ ಜೀವವೊಂದು ಹುಟ್ಟುವುದು, ಬದುಕುವುದಾದರೂ ಹೇಗೆ? ಮತ್ತು ಕೊನೆಗೆ ಅದು ವಿರಾಟ್ ಸ್ವರೂಪಿಯಾದ ಪ್ರಾಣದಲ್ಲಲ್ಲವೇ ಲೀನವಾಗಬೇಕು?). ಈ ಹೊಸ ಉತ್ತರದೊಡನೆ ಭೃಗು ಮತ್ತೆ ತಂದೆಯ ಬಳಿ ಬರುತ್ತಾನೆ,

"ಭಗವನ್, ನನಗೆ ಬ್ರಹ್ಮನ ಬಗ್ಗೆ ತಿಳಿಸಿಕೊಡಿ"

ಮತ್ತೆ ವರುಣನಿಂದ ಅದೇ ಉತ್ತರ "ಮಗೂ, ತಪಸ್ಸಿನಿಂದ ಬ್ರಹ್ಮನನ್ನು ತಿಳಿ, ತಪಸ್ಸೇ ಬ್ರಹ್ಮ" ಮತ್ತೆ ವರುಣನು ಹೀಗಂದದ್ದು ಕೇಳಿ, ಮತ್ತೂ ತಪಸ್ಸನ್ನು ಮುಂದುವರೆಸಲು ನಿಶ್ಚಯಿಸಿ ಹಿಂದಿರುಗುತ್ತಾನೆ ಭೃಗು.

ಮತ್ತೆ ಕೆಲಕಾಲದ ತಪಸ್ಸಿನಿಂದ ಅವನಿಗನ್ನಿಸುತ್ತದೆ; ಅರೆ, ಎಲ್ಲದರ ಹುಟ್ಟು ಬದುಕು ನಾಶಕ್ಕೆ ಮನಸ್ಸೇ ಕಾರಣವಲ್ಲವೇ? ಏಕೆಂದರೆ ಕೇವಲ ಮನಸ್ಸಿನ ಕಾರಣದಿಂದಲೇ ಸಕಲಭೂತಗಳೂ ಜನಿಸುತ್ತವೆ, ಹೀಗೆ ಹುಟ್ಟಿದವು ಮನೋಮಾತ್ರದಿಂದಲೇ ಜೀವಿಸುತ್ತವೆ. ಕೊನೆಗೆ ಮನಸ್ಸನ್ನೇ ಸೇರಿ ಅದರಲ್ಲಿ ಲೀನವಾಗುತ್ತವೆ. ಆದ್ದರಿಂದ ಮನಸ್ಸೇ ಬ್ರಹ್ಮ! (ಕೇವಲ ಅನ್ನ, ಪ್ರಾಣಗಳಿದ್ದು ಮನಸ್ಸಿನ ಸಂಕಲ್ಪವಿಲ್ಲದಿದ್ದರೆ ಯಾವುದು ಸಾಧ್ಯ!) ಮತ್ತೆ ತಂದೆಯ ಬಳಿ ಸಾರುತ್ತಾನೆ ಭೃಗು; ಮತ್ತೆ ಅದೇ ಪ್ರಶ್ನೆ:

"ಭಗವನ್, ನನಗೆ ಬ್ರಹ್ಮನ ಬಗ್ಗೆ ತಿಳಿಸಿಕೊಡಿ"

ಆದರೆ ಉಹುಂ... ವರುಣನಿಂದ ಮತ್ತೆ ಅದೇ ಉತ್ತರ! "ಮಗೂ, ತಪಸ್ಸಿನಿಂದ ಬ್ರಹ್ಮನನ್ನು ತಿಳಿ, ತಪಸ್ಸೇ ಬ್ರಹ್ಮ"

ಮತ್ತೆ ತಪಸ್ಸು! ಸರಿ, ಮತ್ತೂ ತಪಸ್ಸನ್ನು ಮುಂದುವರೆಸಲು ನಿಶ್ಚಯಿಸಿ ಹಿಂದಿರುಗುತ್ತಾನೆ ಭೃಗು.

ಕೆಲಕಾಲದ ತಪಸ್ಸಿನನಂತರ ಮತ್ತೊಂದು ಹೊಳಹು: ಅನ್ನ, ಪ್ರಾಣ, ಮನಸ್ಸುಗಳಿದ್ದರೂ ತನ್ನ ಸುತ್ತೆಲ್ಲ ನಡೆಯುವ ವ್ಯಾಪಾರದ ಹಿಂದೆ ವಿಶೇಷವಾದ ಜ್ಞಾನವೊಂದಿರಲೇಬೇಕಲ್ಲವೇ? ಕೇವಲ ಈ ವಿಜ್ಞಾನದ ಕಾರಣದಿಂದಲೇ ಸಕಲಭೂತಗಳೂ ಜನಿಸುತ್ತವೆ, ಹೀಗೆ ಹುಟ್ಟಿದವು ವಿಜ್ಞಾನದ ಬಲದಿಂದಲೇ ಜೀವಿಸುತ್ತವೆ. ಕೊನೆಗೆ ವಿಜ್ಞಾನವನ್ನೇ ಸೇರಿ ಅದರಲ್ಲಿ ಲೀನವಾಗುತ್ತವೆ. (ಕೇವಲ ಸಂಕಲ್ಪಮಾತ್ರದಿಂದ ಎಲ್ಲವೂ ನಡೆಯುತ್ತವೆಯೇ? ಸೃಷ್ಟಿ, ಸ್ಥಿತಿ ಲಯಗಳಿಗೂ ಅದೊಂದು ಕ್ರಿಯೆಯಿದೆ, ಕ್ರಮವಿದೆ, ಅದರ ಹಿಂದೊಂದು ವಿಜ್ಞಾನವಿದೆಯಲ್ಲವೇ?) ಆದ್ದರಿಂದ ಬ್ರಹ್ಮನೆಂದರೆ ಸರ್ವವ್ಯಾಪಿಯಾದ ಈ ವಿಜ್ಞಾನವೇ ಹೌದು! ಹೀಗೆ ತಿಳಿದು ಭೃಗು ಮತ್ತೆ ತಂದೆಯ ಬಳಿ ಬರುತ್ತಾನೆ, ಮತ್ತೆ ಅದೇ ಪ್ರಶ್ನೆ!

ಇಲ್ಲ, ಈ ಬಾರಿಯೂ ವರುಣನ ಉತ್ತರ ಅದೇ!! ಬಂದದಾರಿಗೆ ಸುಂಕವಿಲ್ಲವೆಂಬಂತೆ ಮರಳುವ ಭೃಗು ಮತ್ತೆ ತಪಸ್ಸನ್ನು ಮುಂದುವರೆಸುತ್ತಾನೆ. ಸಾಕಷ್ಟು ತಪಸ್ಸಿನ ನಂತರ ಕೊನೆಗೊಮ್ಮೆ ಅವನಿಗೆ ಹೊಳೆಯುತ್ತದೆ, ಜಗತ್ತಿನ ಎಲ್ಲದರ ಮೂಲ, ಆಧಾರ, ಗಮ್ಯ ಏನು? ಆನಂದವಲ್ಲವೇ? ಕೇವಲ ಆನಂದದ ಕಾರಣದಿಂದಲೇ ಸಕಲಭೂತಗಳೂ ಜನಿಸುತ್ತವೆ. ಹೀಗೆ ಹುಟ್ಟಿದವು ಆನಂದಕ್ಕಾಗಿಯೇ ಜೀವಿಸುತ್ತವೆ, ಕೊನೆಗೆ ಪರಮಾನಂದದಲ್ಲಿ ಲೀನವಾಗುತ್ತವೆ ಅಲ್ಲವೇ? ಆನಂದದ ಅಪೇಕ್ಷೆಯಿಲ್ಲದೇ ಸೃಷ್ಟಿಕ್ರಿಯೆಯಿಲ್ಲ. ಅದರ ಅವಲಂಬನೆಯಿಲ್ಲದೆಯೇ ಬದುಕಿಲ್ಲ. ಇದೆಲ್ಲವನ್ನೂ ಒಳಗೊಂಡ ಪರಮಾನಂದ (eternal bliss ಅನ್ನೋಣ)ವೊಂದಿದೆ; ಅದು ಸರ್ವವ್ಯಾಪಿ, ಕೊನೆಗೆ ಎಲ್ಲವೂ ಅದರಲ್ಲೇ ಲೀನವಾಗಬೇಕು. ಆದ್ದರಿಂದ ಜಗತ್ತೆಲ್ಲವೂ ಆನಂದಮಯವಲ್ಲವೇ? ಆದ್ದರಿಂದ ಬ್ರಹ್ಮನೆಂದರೆ ಈ ಪರಮಾನಂದವಲ್ಲದೇ ಮತ್ತೇನು?

ಇದು, ವರುಣನಿಂದ ಪ್ರೇರಿತವಾದ, ಭೃಗುವು ಅರಿತ ವಿದ್ಯೆ ("ಸೈಷಾ ಭಾರ್ಗವೀ ವಾರುಣೀ ವಿದ್ಯಾ") ಎನ್ನುತ್ತದೆ ಉಪನಿಷತ್ತು. ಹೃದಯದ ಆಳದಲ್ಲಿ ಪ್ರತಿಷ್ಠಿತವಾದ ಈ "ಬ್ರಹ್ಮ"ನನ್ನು ಯಾವನು ಅರಿಯುತ್ತಾನೋ ಅವನು ಅದೇ ಬ್ರಹ್ಮನಲ್ಲಿ (ಪರಮಾನಂದದಲ್ಲಿ) ನೆಲೆನಿಲ್ಲುತ್ತಾನೆ; ಸ್ವಕೀಯವಾದ ಈ ಆನಂದದ ಹೊರಗುರುತಾಗಿ, ಇಹದಲ್ಲಿ ಅವನು ಅನ್ನವಂತನೂ ಅದನ್ನು ಭೋಗಿಸುವವನೂ ಆಗುತ್ತಾನೆ; ಜನಸಂಪತ್ತಿನಿಂದಲೂ, ಪಶುಸಂಪತ್ತಿನಿಂದಲೂ, ಬ್ರಹ್ಮವರ್ಚಸ್ಸಿನಿಂದಲೂ ಕೂಡಿ ಮಹಾ ಕೀರ್ತಿವಂತನಾಗುತ್ತಾನೆ ಎನ್ನುವುದು ಉಪನಿಷತ್ತಿನ ಮಾತು. ಮುಂದುವರೆಯುವ ಉಪನಿಷತ್ತು ಅನ್ನದ ವಿವಿಧ ಆಯಾಮಗಳನ್ನೂ, ಬ್ರಹ್ಮೌಪಾಸನೆಯ ವಿವಿಧ ರೂಪಗಳನ್ನೂ, ಆತ್ಮಸಾಕ್ಷಾತ್ಕಾರದ ವಿವಿಧ ಮಜಲುಗಳನ್ನೂ ವಿವರಿಸುತ್ತದೆ.

ಮೇಲಿನ ಸಂವಾದದಲ್ಲಿ ಗಮನಸೆಳೆಯುವ ಅಂಶವೆಂದರೆ ಜ್ಞಾನಸಾಧನೆಯಲ್ಲಿ ಚಿಂತನೆಗೆ/ತಪಕ್ಕೆ ಇರುವ ಮಹತ್ವ; ಆರ್ಷೇಯವಾಗಿ ಬಂದದ್ದು ಇದು. ಭೃಗುವು ವರುಣನಬಳಿ ಹೋದಾಗಲೆಲ್ಲಾ ಅವನಿಗೆ ಸಿಗುವ ಉತ್ತರ ಒಂದೇ? "ತಪಸಾ ಬ್ರಹ್ಮ ವಿಜಿಜ್ಞಾಸಸ್ವ..."; ಎಷ್ಟು? "ತಪಸ್ಸೇ ಬ್ರಹ್ಮ" ಎನ್ನುವಷ್ಟು. ಕೊನೆಯಲ್ಲಿ ಭೃಗು ಅರಿಯುವ ಸತ್ಯ ವರುಣನಿಗೆ ಮೊದಲೇ ತಿಳಿದಿದ್ದರೆ ಅದನ್ನು ಆಗಲೇ ಹೇಳಿಬಿಡಬಹುದಿತ್ತಲ್ಲವೇ? ಈ ಪ್ರಶ್ನೆ ಸಹಜ. "Why re-invent the wheel" ಅನ್ನುವ ಯುಗ ನಮ್ಮದು. ಆದರೆ ಸನಾತನ ವಿದ್ಯಾಭ್ಯಾಸದ ರೀತಿ ಅದಲ್ಲ. ಈ ಅಂತಿಮ ಸತ್ಯ ವರುಣನಿಗೇ ಗೊತ್ತಿತ್ತೋ ಅನ್ನುವುದೂ ಬೇರೆಯ ವಿಷಯ. ಹಾಗೊಂದುವೇಳೆ ಅವನಿಗೆ ಗೊತ್ತಿದ್ದೂ ಅದನ್ನು ಅವನೇ ಹೇಳಿದ್ದರೆ, ಅದು ಅವನದೇ ಸತ್ಯವಾಗಿ ಉಳಿಯುತ್ತಿತ್ತೇ ಹೊರತು ಭೃಗುವಿನದಾಗುತ್ತಿರಲಿಲ್ಲ. ಸತ್ಯದ ದಾರಿಯನ್ನಷ್ಟೇ ಗುರು ಸೂಚಿಸಬಲ್ಲ; ಸುಳುಹುಗಳನ್ನು ನೀಡಬಲ್ಲ, ದಾರಿ ತಪ್ಪುವಲ್ಲಿ ತಿದ್ದಬಲ್ಲ, ಆದರೆ ಆ ದಾರಿಯಲ್ಲಿ ಸ್ವತಃ ನಡೆದು ಸತ್ಯವನ್ನು ಕಂಡುಕೊಳ್ಳುವ ಜವಾಬ್ದಾರಿ ಶಿಷ್ಯನದೇ. ಸತ್ಯ ಅವನದಾಗುವುದು ಹಾಗೆ. ಈ ದಾರಿಯಲ್ಲಿ ಕಷ್ಟಗಳೇ ಅವನ ಆಹಾರ. ಬೆಂಬಿಡದ ಛಲ, ಸತ್ಯವಾದಿತ್ವ, ಕಷ್ಟಸಹಿಷ್ಣುತೆಗಳೇ ಅವನ ಕಾಪು. ಬದುಕು-ಸಾವುಗಳ ರಹಸ್ಯವನ್ನರಿಯಲು ಯಮನಿಗೇ ಬೆನ್ನು ಬಿದ್ದ ನಚಿಕೇತನಾಗಲಿ, ತನ್ನ ವಂಶವೇ ಗೊತ್ತಿಲ್ಲದೆಯೂ ಗೊತ್ತಿಲ್ಲವೆಂಬುದನ್ನೇ ನಿರ್ಭೀತಿಯಿಂದ ಹೇಳುವ ಸತ್ಯಕಾಮ ಜಾಬಾಲಿಯಾಗಲೀ, ಗುರುವಿನ ಮಾತಿಗಾಗಿ ತಮ್ಮನ್ನೇ ಕೊಟ್ಟುಕೊಳ್ಳುವ ಉಪಮನ್ಯು ಆರುಣಿಗಳಾಗಲೀ ನಮಗೆ ತಿಳಿಸುವುದು ಇದನ್ನೇ. ಇದು ವಿದ್ಯೆ ಗಳಿಕೆಗೆ ಅರ್ಹತೆ; ಇದು ಅರಿವಿನ ದಾರಿ, ಅನ್ವೇಷಿಗಳ ದಾರಿ, ಋಷಿಗಳ ದಾರಿ, ವೇದಗಳ ದಾರಿ. ಹಾಗೆ ಕಡುಕಷ್ಟದ ಹಾದಿಯಲ್ಲಿ ನಡೆದಾಗಲಷ್ಟೇ ಅವನಿಗೆ ಬ್ರಹ್ಮಸ್ವರೂಪದ ಆನಂದದ ಅನುಭೂತಿ ದೊರಕಬಹುದೇ ಹೊರತು, ಅದನ್ನು ಯಾರೋ ಹೇಳಿಕೊಟ್ಟಾಗಲ್ಲ. ಮರುಭೂಮಿಯಲ್ಲಿ ದೊರಕುವ ಓಯಸಿಸ್ಸಿನ ಬೆಲೆ ಕೂತಲ್ಲೇ ಕೈಚಾಚಿದಾಗ ಸಿಕ್ಕುವ ನೀರಿನ ಬಾಟಲಿಗಿಲ್ಲವಷ್ಟೆ? ಈ ವಿದ್ಯೆ/ಅರಿವು ಬ್ರಹ್ಮಜ್ಞಾನವಿರಬಹುದು, ವೈದ್ಯಕೀಯವಿರಬಹುದು, ವಿಜ್ಞಾನ, ಗಣಿತ, ಅರ್ಥ, ಮತ್ತಾವುದೇ ಶಾಸ್ತ್ರವಿರಬಹುದು, ಇಲ್ಲಿ short cuts, ಗೈಡು, ಟ್ಯುಟೋರಿಲ್ಲುಗಳಿಲ್ಲ, "100% results guaranteed" ಅನ್ನುವ ಬೋರ್ಡುಗಳಿಲ್ಲ, ಸೀಟು, ಡೊನೇಶನ್ನು ವ್ಯವಹಾರಗಳಿಲ್ಲ; ಇಲ್ಲಿ ಗುರು ರಾಜಕೀಯಮಾಡುವುದಿಲ್ಲ (ಕೈಚಾಚಿದರೆ ಅದು ಆಶೀರ್ವದಿಸುವುದಕ್ಕಷ್ಟೇ), ಶಿಷ್ಯ strike ಮಾಡುವುದಿಲ್ಲ, ಅಪ್ಪ-ಅಮ್ಮಂದಿರು ಗುರುಗಳನ್ನು ಜಬರಿಸುವುದೂ ಇಲ್ಲ! ಇರುವುದೆಲ್ಲಾ ಕೇವಲ ವಿದ್ಯೆ, ದಾನ, ಆದಾನ! "ಆಚಾರ್ಯಃ ಪೂರ್ವರೂಪಮ್, ಅಂತೇವಾಸ್ಯುತ್ತರ ರೂಪಮ್, ವಿದ್ಯಾ ಸಂಧಿಃ, ಪ್ರವಚನಗ್ಂ ಸಂಧಾನಮ್"