Sunday, June 24, 2007

ಬಿನ್ನಪ

ಬದುಕು,
ಕಳೆದ ಶತ
ಮಾನ
ಹಾನಿಗಳ, ಕುಳಿ-ದೊಗರುಗಳ
ಹರಿದ ದಾಂಬರು ರಸ್ತೆ.

ಓ ತಂದೆ,
ಕ್ಷಮಿಸು ನೀನೆನ್ನ
ನು
ದ್ಧರಿಸಬೇಕೆಂದೆಲ್ಲ ಬೇಡಬಂದಿಲ್ಲ:
ಮೊಳಕಾಲನೂರಿ
ನಿನ್ನೆಡೆಗೆ ತಲೆಬಾಗಿ
ತಪ್ಪೊಪ್ಪಿ ಮರುಹುಟ್ಟು ಪಡೆವ ತುಡಿತಕ್ಕಷ್ಟು
ಕಿವಿಯಾಗಿಬಿಡು, ಸಾಕು;

ಮಸಗಿರುವ ಪೊರೆ ಹರಿದು
ಹೊಸ ಜಗಕೆ ಕಣ್ಭಿಡಲು
ತುಡಿಯುತಿಹ ಫಣಿಗೆ
ಒರೆಗಲ್ಲಾಗಿಬಿಡು, ಸಾಕು.

ನೆನ್ನೆಗಳ ಹೆಡೆಯಡಿಗೆ ಮಿಡುಕುತಿವೆ ನಾಳೆಗಳು,
ತೊಡೆದುಬಿಡು ಪಡಿನೆಳಲ, ನಗಲಿ ನಾಳೆ;
ಕುಳಿ-ದೊಗರುಗಳ ಮುಚ್ಚಿ,
ಮೇಲೆ ದಾಂಬರು ಹೊಚ್ಚಿ
ಸಲಿಸು ಯಾನ ಸಲೀಸು
ಉಳಿದರ್ಧಕೆ.

ಬೆಳಗುವಾತ್ಮಹ್ಯೋತಿ
ಮಸಿ ಮಸಗಿ ಕುಂದದಿರೆ
ನಿತ್ಯ ತೈಲವನೆರೆದು ಪೋಷಿಸು ದೊರೆ.

ಮತ್ತೆ ಹೊಸ ಪೊರೆ-ಮಸುಕು,
ಮುಖವಾಡಗಳ ಮುಸುಕು
ಬೆಳೆಯಗೊಡದಿರು
ಸಾಕು
ಮತ್ತೇನು ಬೇಕು.

- ೨೯/೦೯/೨೦೦೨

Saturday, June 16, 2007

ಬಂದಿ

ಬೇ
ಸತ್ತು ಕವುಚಿಹ ನೀಲ ವ್ಯೋಮ ಮಂಡಲ
ಕೆಳಗೆ ಎತ್ತ ನೋಡಿದರತ್ತ ಬಟ್ಟ ಬಯಲು;
ನಡುವೆ ನೆಟ್ಟಿಹ ಸೊಟ್ಟ ಗೂಟ
ಅದ ಸುತ್ತುತಿದೆ
ಮೋಟುಗಾಲಿನ ಕತ್ತೆ ಹಗಲು ಇರುಳು.
ಒಂದು, ಎರಡು... ಆರು... ಏಳು...
ಅನಂತ ಸುತ್ತು
ಸಂಕೋಚಶೀಲ ವರ್ತುಲ, ಶೂನ್ಯ.

ಸುತ್ತಿ ಹೊರಟವರೆಲ್ಲ ಮತ್ತಿಲ್ಲಿ ಬಂದವರೆ!
ಊರೂರು ತಿರುಗಿ
ದರು
ನಮ್ಮೂರು ವಾಸಿ-
ಯಾಗದ ರೋಗ-
ಹಿಡಿದ ಮನೆ.

ಆರು - ಹತ್ತು
ಆಯದ ವಸತಿ,
ಮಾಯದ ಗಾಯದಂತಷ್ಟೊಂದು ಕಿವಿ ಮೂಗು ನಾಲಗೆ
ಸಹಸ್ರಾಕ್ಷ ಭಿತ್ತಿ
ಒತ್ತೊತ್ತಿ
ಉಸಿರು ಹತ್ತಿ, ಗಬ್ಬು
ಅಪಸ್ಮಾರ,
ಬಯಲ ವಿಸ್ತಾರ, ಸ್ವಚ್ಛಂದ ಸ್ವೈರ ಕಾತರ
ಜಗ್ಗುತಿದೆ
ಹಗ್ಗ ಹರಿ
ದತ್ತ ಸ್ವಾತಂತ್ರ್ಯ
ವರ್ತುಳವ ಸೀಳಿ
ಧೂಳಿಸಿ ಗೋಡೆ - ಮಾಡುಗಳ,
ನೆಟ್ಟ ಗೂಟವ ಕಿತ್ತು
ಬಯಲಲ್ಲಿ ಮರುಳಂತೆ ಓಡಬೇಕು;

ಇನ್ನು ಅಲ್ಲಲ್ಲಿ ಹಲ್ಕಿರಿಯುತಿಹ
ನೂರೆಂಟು ಮೊಗ-
ವಾಡಗಳ ಮುಸುಡು
ಕಿತ್ತು ಹೋಗುವ ಹಾಗೆ
ಸರೀ ಕತ್ತೆ ಕೂಗನು ಒಮ್ಮೆ ಕೂಗಬೇಕು;

ಎದೆಯೊಳಗೆ ಧಿಮಿಗುಡುವ
ನೂರೆಂಟು ಹಾಡು, ನುಡಿ,
ರಾಗ ಲಯಗಳ, ತಾಳ
ಭೇತಾಳದೂಳುಗಳ
ಗೋಳುಗಳ ಮೇಳೈಸಿ ಹಾಡಬೇಕು;

ಹಾಡಿ, ಕೂಗಿ, ದನಿ ಮಾಗಿ
ಹಣ್ಣಾಗಿ, ಹನಿಗಟ್ಟಿ, ಕಿವಿಗೆ ಸವಿಜೇನಾಗಿ,
ಬಾನು ಬಯಲುಗಳೆಲ್ಲ...
ಒತ್ತಿ ಬರುತಿದೆ
ಭಿತ್ತಿ
ಸುಸ್ತು...

- ೧೨/೦೭/೧೯೯೮

ಹೀಗೊಂದು ಗುಲಾಬಿ

ನಿಮ್ಮ ಮನೆ ಬಿರುಮುಳ್ಳ
ಗುಲಾಬಿ ಪೊದೆ
ಯಾಳದಲಿ
ದಿನ ಬೆಳಗಾದರೆ ನೀ ಚಿಮ್ಮಿಸುವ
ಹೂ ಮುಗುಳು, ಮುಳುಗು-
ವನ ಹುಲ್ಲು ಕಡ್ಡಿ.
ಮುಳ್ಳು-ಕಡ್ಡಿ
ಗಳ ಸರಿಸಿ ತರಚಿ-
ಕೊಂಡು ಮೈ - ಕೈ
ಚಾಚಿ ಎಟಕಿಸಿಕೊಳ್ಳುವಾಟ
ಸುಲಭವೇನಲ್ಲ.

ಸುಳಿಗಣ್ಣು, ಮಾತು,
ಸುಳಿಗುರುಳಿನುರುಳುಗಳು
ಬಿಗಿಯುವವು, ಸೆಳೆಯುವವು ಸುಳಿಯಾಳಕೆ;
ಸುಳಿಯೆಂಬುದೆಲ್ಲಕೂ ಸೆಳೆತ ಸಹಜವೆ ತಾನೆ,
ದಕ್ಕದ್ದಕ್ಕೆ, ದಕ್ಕಿಯೂ
ತೆಕ್ಕೆಯಲಿ ಮಿದುವಾಗಿ ಸಿಕ್ಕದ್ದಕ್ಕೆ,
ಸೆಳೆದಷ್ಟೂ ಮರೆಯ ಮೊರೆ ಹೊಕ್ಕಿದ್ದಕ್ಕೆ.

ನಸುಬಿರಿದು ನಳನಳಿಪ ಚೆಂಗುಲಾಬಿ,
ದಳದಳವ ತೆರೆದರೂ ತೆರೆಯದ ರಹಸ್ಯ
ಏಳು ಸುತ್ತಿನ ಕೋಟೆ.
ಲಗ್ಗೆಯಿಟ್ಟಿದ್ದಾನೆ ಪೋರ,
ಎದೆತುಂಬ ನೂರೆಂಟು ಕನಸ ಪೂರ.

ನುಗ್ಗುತಾನೆ, ಪೊದೆಯೊಳಗೆ ಕೈ ಚಾಚಿ
ಬಗ್ಗುತಾನೆ;
ಮುಂದೆ, ಇನ್ನೂ ಮುಂದೆ,
ಇನ್ನು ಚೂರೇ ಚೂರು.
ಮುಗ್ಗರಿಸಿ ಬಿದ್ದು, ಕೈ ತರಚಿ ಮೈ ಪರಚಿ,
ಕೊನೆಗೂ ಸಿಕ್ಕಿತು, ರಾಜ್ಯ
ಗೆದ್ದ ಕಳೆ ಮೊಗದಲ್ಲಿ
ಹೊರಬಿದ್ದು ನೋಡುತಾನೆ;
ಬಟ್ಟಿ, ಮೈ, ಮುಖ, ಕಣ್ಣು, ಕಿವಿ, ಮೂಗು, ಎದೆ-
ಯಾಳ ಗಾಯ, ರಾಮಾ ರಕ್ತ!
ಹೆಚ್ಚಿತೋ ಗುಲಾಬಿ ಬಣ್ಣ?
ಮುಳ್ಳಿನೊಡನಾಟದಲಿ, ನಡೆದ ಸೆಣೆಸಾಟದಲಿ
ಚೆಂಗುಲಾಬಿಯ ಹೂವು ಚೂರು ಚೂರು!
ಎದೆಯ ಕನಸುಗಳೆಲ್ಲ ನುಚ್ಚು ನೂರು.

- ೧೮/೦೬/೧೯೯೮

Tuesday, June 12, 2007

ಮನೆಗೆ ಗೋಡೆಗಳಿಲ್ಲ

ಬಾಗಿಲಂತೂ ಮಜಬೂತು,
ಅಂದದ ಕೆತ್ತನೆ, ಚಂದದ ಕುಸುರಿ,
ತೇಗದ ಮರ ಬಿಡು, ಭಾರಿ ದುಬಾರಿ.

ಅರೆ!
ಬಾಗಿಲಂದವ ಮೆಚ್ಚಿ ಅಲ್ಲೆ ನಿಂತರೆ ಹೇಗೆ?
ಒಳಗೆ ಬಾ ಗೆಳೆಯಾ.
ನಗಬೇಡ,
ಈ ನನ್ನ ಮನೆಗೆ ಗೋಡೆಗಳಿಲ್ಲ!

ಇದು ನೋಡು ಹಾಲು, ಅಡುಗೆ ಮನೆ ಅಲ್ಲಿ, ಮತ್ತಲ್ಲಿಯೇ ಊಟ;
ಎಡಕಿಹುದು ಮಂಚ, ಅಲ್ಲಿಯೆ ಪ್ರಣಯದಾಟ.
ಏನಯ್ಯ ಬಾಯ್ಬಿಡುವೆ, ಹೇಳಲಿಲ್ಲವೆ?
ನಮ್ಮ ಮನೆಗೆ ಗೋಡೆಗಳಿಲ್ಲ.

ಊಟ-ತಿಂಡಿ, ಜಳಕ,
ಶೃಂಗಾರ, ರತಿಯ ಪುಳಕ,
ಉಂಡು ಮಲಗೋ ತನಕ

ಮಾರಾ-ಮಾರಿ, ಜಗಳ-ಕದನ,
"ಅದಿಲ್ಲ-ಇದಿಲ್ಲ"ಗಳ ಅನುದಿನದ ಕಾಷ್ಟ-ವ್ಯಸನ,
ಇಲ್ಲಿ ಎಲ್ಲವು ಮುಕ್ತ, ನೋಡುಗರಿಗೆ.

ಯಾಕಯ್ಯ ಸಂಕೋಚ?
ಕೂಡು, ಇದು ನಿಮ್ಮ ಮನೆಯೇ
ಅಂತ ತಿಳಿ.
ತುಸು ವಿಶ್ರಮಿಸಿಕೋ ಕೂತು.
ಕೇಳಿಲ್ಲವೇ ಮಾತು?
"ಎಲ್ಲರ ಮನೆ ದೋಸೆ ತೂತು"
ಇಲ್ಲಿ ಹೊಸದಿನ್ನೇನಿದ್ದೀತು?

ತೆರೆದ ಮನೆ ನೋಡು, ನಮ್ಮಂತೆಯೇ ಇಲ್ಲಿ
ವಾಸ್ತವ್ಯ ಹೂಡಿಹವು ಹಾವು-ಹಲ್ಲಿ.
ಗೋಡೆಯಿಲ್ಲದ ಮೇಲೆ ಬಾಗಿಲೇಕೆಂದೆಯಾ?
ತಾತನ ಕಾಲದ್ದೋ ಅದು,
'ಮನೆ'ತನದ ಮರ್ಯಾದಿ!

ಮನದಂತೆಯೇ ನನ್ನ ಮನೆಯ ಬಾಗಿಲು ಕೂಡ,
ಸದಾ ತೆರೆದದ್ದೇ, ಮಾನವರ ಸ್ವಾಗತಕ್ಕೆ.
ಆದರೂ ಒಮ್ಮೊಮ್ಮೆ ಜಂತುಗಳೂ ಕೂಡ
ನುಸುಳುವುದೂ ಉಂಟು ಬಾಗಿಲ ಮುಖಾಂತರವೇ!
ಹಾಗೆಂದು ಬಾಗಿಲನು ಮುಚ್ಚಿಬಿಡಲಾದೀತೇ?
ನೆಗಡಿ ಬಂತೆಂದು ಮೂಗನೇ ಕೊಯ್ಯುವಂತೆ!

ಮನೆಗೆ ಗೋಡೆಗಳಿಲ್ಲವೆಂದು ಚಿಂತಿಸಬೇಡ,
ನೆರೆಹೊರೆಯ ಗೋಡೆಗಳೆ ನಮ್ಮವೂ ಕೂಡ.
ಕಿಟಕಿಗಳೂ ಉಂಟು;
ಯಾವಾಗಲಾದರೂ ತೆರೆಯಬಹುದು,
ಅವರಿಗೆ ಬೇಕಾದಾಗ.

ಹೊರಟೇಬಿಟ್ಟೆಯಾ? ಆಯ್ತು, ಬಾರೋ ಆಗಾಗ.
ಏನೆಂದೆ?... ಸಿಕ್ಕೇ ಸಿಗುವೆನು, ನನಗೆ ಮತ್ತಾವ ಜಾಗ?
"ಕತ್ತೆ ಸತ್ತರೆ ಹಾಳು ಗೋಡೆ" ಅನ್ನುವೆಯಾ?
ಆ ಮಾತುಗಳಿಗಿಲ್ಲಿ ಅರ್ಥವಿಲ್ಲ;
ನಮ್ಮ ಮನೆಗೆಲ್ಲಿಯೂ ಗೋಡೆಗಳೆ ಇಲ್ಲ!

- ೦೩/೦೬/೧೯೯೮

ದ್ರೋಣ

ಅರವತ್ತರಂಚಿನ ಅಸಹಾಯ
ಕತೆ,
ಹತಾಶೆ, ನಿಶ್ಶಕ್ತಿ,
(ರಾಜಗಾಂಭೀರ್ಯ?)
ಏನೆಲ್ಲ ಮೆರೆದಿತ್ತು ಆ ಮಂದ
ಗಮನದಲ್ಲಿ!

ಮಣಗಟ್ಟಲೆ ಬಂಗಾರದಂಬಾರಿ
ಮುದಿಯೊಡಲ ಜಗ್ಗಿದರೂನೂ
ಜಗ್ಗದೆಯೆ ನಡೆದಿದ್ದೆ,
ಹೊಣೆಹೊತ್ತ ಮನೆಯ ಹಿರಿ ಜೀವದಂತೆ.
ಭೇರಿ, ತುತ್ತೂರಿ, ನಗಾರಿ,
ಪಟಾಸು, ಕಾಡತೂಸುಗಳ
ಜನಾರಣ್ಯ ನಿರ್ಘೋಷ
ಕೂ
ಎದೆಗೆಡದೆ ಸಾಗಿದ್ದೆ,
ಧೀರ, ಪ್ರಶಾಂತ, ಸ್ಥಿತಪ್ರಜ್ಞ.

ಶಸ್ತ್ರ ಸನ್ಯಾಸ ನೀನೇನೂ ತಳೆದಿರಲಿಲ್ಲ
(ಯುದ್ಧ ಮೊದಲೇ ಇಲ್ಲ!);
ಆದರೂ ತನ್ನ ವಿದ್ಯುತ್ಖಡ್ಗವನು ಹಿರಿದು ಕಾದಿದ್ದನಲ್ಲ
ಅವಿವೇಕಿ ದುಷ್ಟ
ದ್ಯುಮ್ನ;
ಹಾರಿಸಿಯೇ ಬಿಟ್ಟನಲ್ಲ, ನಿಮಿಷಾರ್ಧದಲಿ ಪ್ರಾಣ.

ದ್ರೋಣ,
ನಾವೋ, ಹಿಂದುಮುಂದರಿವಿರದ;
ಚಾರ-ಅಪಚಾರ, ಆಯ-ಅಪಾಯಗಳ ತಿಳಿವಿರದ-
ನಾಗರಿಕ ಜೀವಿಗಳು.
ಮೆರೆಸುವೆವು ಮುಂದೆಯೂ
ನಮ್ಮೆಲ್ಲ ಸಾಧನೆಯ, ನಿಮ್ಮೆಲ್ಲ ವೇದನೆಯ
ಜಂಬೂ ಸವಾರಿ.
ಚಿನ್ನದಂಬಾರಿ
ಹೊತ್ತು ಸಾಗಲಿದೆ ಮತ್ತೊಂದು ಗಜ ಗಮನ.
ಕ್ಷಮಿಸಿಬಿಡು ಅಜ್ಜ,
ನಿನಗಿದೋ ಕೊನೆಯ ನಮನ.

- ೨೫/೧೨/೧೯೯೭

[ಈ ಸುಮಾರಿನಲ್ಲಿ ವಿದ್ಯುದಾಘಾತಕ್ಕೆ ಸಿಕ್ಕೆ ಸತ್ತ ಮೈಸೂರು ದಸರಾ ಮೆರವಣಿಗೆಯ ಆನೆ 'ದ್ರೋಣ'ನಿಗೊಂದು ಚರಮ ಗೀತೆ]

Monday, June 11, 2007

ಗೆಳೆತನ

[ಶ್ರೀ ಚನ್ನವೀರ ಕಣವಿಯವರ ಇದೇ ಹೆಸರಿನ ಕವನಕ್ಕೆ ಸಹ ಸ್ಪಂದನ]

"ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ
ತಣ್ಣೆಳಲ ತಂಪಿನಲಿ ತಂಗಿರುವೆನು"
ಬಿಳಿಲು ಕಟ್ಟಿಹ ನೆಳಲ ತೊಟ್ಟಿಲಲಿ ತೂಗುತಿರೆ
ಸವಿನಿದ್ದೆ - ಏನೇನೊ ಕನಸುತಿಹೆನು.
ನನ್ನ ನೆಚ್ಚಿನ ಮರದ ತುಂಬೆಲ್ಲ ಹಕ್ಕಿಗಳು
ಜೋಗುಳವ ಹಾಡುತಿರಲೆಷ್ಟು ಸೊಗಸು!

ಹೌದೋ ಮಾರಾಯ
ಆದರೊಂದ ಮರೆತಿಹೆ ನೀನು
(ಕವಿಯ ಮಾತನು ನೆಚ್ಚಿ ಕಣ್ಮುಚ್ಚಿ ಕುಳಿತವನು);
ಮರವೆಂದ ಮೇಲೆ ಹಕ್ಕಿಗಳಂತೆಯೇ ಅಲ್ಲಿ
ಹಾವೂ ಉಂಟು, ಹಲ್ಲಿಯೂ ಉಂಟು.
ಇರುವೆ ಗೆದ್ದಲಿಗಂತು ಲೆಕ್ಕವಿಲ್ಲ.
ಕೂತವನ ಬುಡಕೇ ಗೆದ್ದಲು ಹಿಡಿಯಬಹುದಂತೆ,
ಪುಟಗೋಸಿ ಮರವಿನ್ನು ಯಾವ ಲೆಕ್ಕ?
(ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ)
ನೀನಂತು ನಿದ್ದೆಯಲಿ ಮೈಮರೆತು ಬಿದ್ದಿರಲು
ಬೇರಿಗೇ ಗೆದ್ದಲಂಟಿದ್ದು ಗೊತ್ತಾದೀತಾದರೂ ಹೇಗೆ?

ಬೇರಳಿದ ಮರ ನಿನ್ನ ಮೇಲೇ ಧೊಪ್ಪನೆ ಬಿದ್ದು
ಮರದೊಡನೆಯೀ ನೀನೂ ಅ'ಮರ'ನಾಗುವ ಮುನ್ನ
ಎದ್ದೇಳೋ ಮಹನೀಯ!
ಗೆದ್ದಲ ಬಡಿ,
ಔಷಧ ಹೊಡಿ.

"ಗೆಳೆತನವೆ ಇಹಲೋಕಕಿರುವ ಅಮೃತ
ಅದನುಳಿದರೇನಿಹುದು ಜೀವನ್ಮೃತ"
ಮೃತಿಯನೈದುವ ಮುನ್ನ ಎಚ್ಚೆತ್ತು ಮೈ ಕೊಡಹು,
"ತಸ್ಮಾತ್ ಜಾಗ್ರತ ಜಾಗ್ರತ"

- ೧೬/೦೫/೧೯೯೭