Wednesday, November 17, 2010

ಎರಡು ಸಂಸ್ಕೃತ ಶ್ಲೋಕಗಳು

ಕನ್ನಡ ಸಂಸ್ಕೃತ ಛಂದಸ್ಸುಗಳು ನನ್ನನ್ನು ಯಾವಾಗಲೂ ಆಕರ್ಷಿಸಿವೆ. ಹೀಗೇ ಆಗೀಗ ಅವುಗಳಲ್ಲಿ ಸುಮ್ಮನೇ ಕೈಯಾಡಿಸುವುದುಂಟು. ಮೊನ್ನೆ ಮೊನ್ನೆ ಗೆಳೆಯ ಶ್ರೀಕಾಂತರು "ಪ್ರಗತಿ" ಎಂಬ ಪದವಿರುವಂತೆ ಸರಸ್ವತಿ ಮತ್ತು ಗಣಪತಿಯಮೇಲೆ ಒಂದು ಸಂಸ್ಕೃತ ಶ್ಲೋಕವನ್ನು ರಚಿಸುವುದು ಸಾಧ್ಯವೇ ಎಂದು ಕೇಳಿದ್ದರು. ಸಂಸ್ಕೃತ ಯಾವತ್ತೂ ನನ್ನ ಭಾಷೆಯಾಗಿರಲಿಲ್ಲವಾದರೂ ಅದೊಂದು ಸಾಕಷ್ಟೇ ಪರಿಚಿತಭಾಷೆಯೇ ಸರಿ. ನೆರೆಮನೆಯ ಭಾಷೆಯೆಂಬ ಸಲುಗೆಯಿಂದ ಹೊಸೆದದ್ದು ಈ ಶ್ಲೋಕಗಳು

ಸರಸ್ವತೀ:ವಂದೇ ವಾಗೀಶ ವಾಣೀವಿಲಸಿತ ವರ ಚತ್ವಾರಿ ವಾಣೀಂ ಪುರಾಣೀಂ
ವಂದೇಹಂ ಹಂಸಿನೀಂ ತಾಂ ಸದಮಲ ಧವಳಾಂ ಸರ್ವವರ್ಣಾಂ ಸುವಾಣೀಂ
ಯುಕ್ತಿಸ್ಸಂಧಾನವಾದಾದ್ಯಖಿಲ ಪಟುಕಲಾ ಕಾರಿಣೀಂ ಚಾರುವಾಣೀಂ
ಬ್ರಹ್ಮಾಣೀಂ ಬ್ರಾಹ್ಮಣೀಂ ಸತ್ಪ್ರಗತಿವಿಗತಿ ಸಂದಾಯಿನೀಂ ಭಾವಯೇಹಂ - ಸ್ರಗ್ಧರಾವೃತ್ತ

ಗಣಪತಿ:ಗಜವಕ್ತ್ರಂ ಸುಜನಾಳಿವಂದಿತಲಸತ್ಪದ್ಮಾರುಣಶ್ರೀಪದಂ
ದುರಿತಾರಿಷ್ಟಸಮಸ್ತಮಸ್ತಕದಳೀಮತ್ತೇಭವಿಕ್ರೀಡಿತಂ
ಸಕಲಾರಂಭ ಸುಪೂಜಿತಂ ಶುಭಕಲಾ ಸೌಭಾಗ್ಯರತ್ನಾಕರಂ
ಅಖಿಳಾರ್ಥಪ್ರಗತಿಪ್ರದಂ ಶುಭಕರಂ ವಂದೇ ಸದಾ ಶ್ರೀಕರಂ - ಮತ್ತೇಭವಿಕ್ರೀಡಿತವೃತ್ತ

ಇದು ಮತ್ತೇಭವಿಕ್ರೀಡಿತವೃತ್ತದಲ್ಲಿದೆ (ಮತ್ತ + ಇಭ = ಮತ್ತೇಭ, ಮದಿಸಿದ ಆನೆ; ಅರಿಷ್ಟವೆಂಬ ಹೆಬ್ಬಾಳೆಯ ವನಕ್ಕೆ ಹೊಕ್ಕ ಮದಿಸಿದ ಆನೆ ಎಂಬ ಎರಡನೆಯ ಸಾಲು ಇದನ್ನೇ ಸೂಚಿಸುತ್ತದೆ, ಜೊತೆಗೆ ಇದರ ಛಂದಸ್ಸನ್ನೂ)

ವಿ ಆರ್ ಭಟ್ಟರ ಕೋರಿಕೆಯ ಮೇರೆಗೆ ಮತ್ತೊಂದು ತರಲೆ ಪ್ರಯತ್ನ, ಮೇಲಿನ ಗಣಪತಿ ಸ್ತುತಿಯನ್ನು ಶಾರ್ದೂಲವಿಕ್ರೀಡಿತವೃತ್ತದಲ್ಲಿ ಅಂದರೆ ಹೇಗಿರುತ್ತದೆ? ಹೀಗೆ:

ವಿಘ್ನೇಶಂ ಸುರಮೌಳಿಮಂಡಿತಲಸತ್ಪದ್ಮಾರುಣಶ್ರೀಪದಂ
ವಿಘ್ನಾರಿಷ್ಟಸಮಸ್ತಮಸ್ತಕದಳೀವಿಧ್ವಂಸವಿಕ್ರೀಡನಂ
ಸರ್ವಾರಂಭ ಸುಪೂಜಿತಂ ಶುಭಕಲಾ ಸೌಭಾಗ್ಯರತ್ನಾಕರಂ
ಸರ್ವಾರ್ಥಪ್ರಗತಿಪ್ರದಂ ಶುಭಕರಂ ವಂದೇ ಸದಾಶಂಕರಂ

ಮೊದಲಿನ ಶ್ಲೋಕವನ್ನೇ ತುಸು ಮಾರ್ಪಡಿಸಿದ್ದೇನಷ್ಟೇ. ನಿಜಹೇಳಬೇಕೆಂದರೆ, ಇದೇ ನಾನು ಮೊದಲು ರಚಿಸಿದ್ದು. ಆಮೇಲೆ ಕದಳಿಯ ಸಾಲಿನಲ್ಲಿ "ಮತ್ತೇಭವಿಕ್ರೀಡಿತ" ಅನ್ನುವ ಪದ ಉತ್ತಮ ಪ್ರತಿಮೆಯಾಗಬಹುದಲ್ಲವೇ ಅನ್ನಿಸಿತು. ಅದು ಛಂದಸ್ಸನ್ನು ಸೂಚಿಸುವುದು ಕೂಡ. ಅದನ್ನು ಬಳಸುವ ಮನಸ್ಸು ಮಾಡಿದ್ದರಿಂದ ಇಡೀ ಶ್ಲೋಕವನ್ನು ತುಸು ಮಾರ್ಪಡಿಸಿ ಶಾರ್ದೂಲವಿಕ್ರೀಡಿತದಿಂದ ಮತ್ತೇಭವಿಕ್ರೀಡಿತವೃತ್ತವನ್ನಾಗಿ ಮಾರ್ಪಡಿಸಿದೆ

Tuesday, November 2, 2010

ಸ್ತಬ್ಧ ಚಿತ್ರ

ನಿನ್ನ ಕಣ್ಣಿನ ಮಿಂಚಿನಂಚಿನೊಳಗಿಂದೇನೊ
ಹೊಸ ಹೊಳಪು ಹೊಳೆಯುತಿಹುದು;
ಬೀಸುಗತ್ತಿಯು ಕೂಡ ಕೂರಲಗ ಮೊನೆಯಿಂದ
ಹೂಮಿಂಚನೆಸೆಯುತಿಹುದು.

ಇರುಳಿಡೀ ಸೋನೆಯಲಿ ಮಿಂದು ಚಳಿಹಿಡಿದ ಮುಂ-
ಜಾವೀಗ ನಗುತಲಿಹುದು;
ಎಳೆಬಿಸಿಲ ಕಾಯಿಸುತ ಮಿಡಿಯ ನಾಗರವೊಂದು
ಹೆಡೆಬಿಚ್ಚಿ ತೂಗುತಿಹುದು.

ಹೊಡೆಯುವುದೆ, ಬೇಡ ಬಿಡು; ಎಷ್ಟು ಚೆನ್ನಿದೆ ನೋಡು,
ಕಾಣಿಸದು ರೋಷ ಲೇಶ;
ಏಕೆ ಬಂದಿತೊ ಏನೊ ಸರಿದುಹೋಗಲಿ ತಾನೆ
ನಮಗೇಕೆ ನಾಗದೋಷ.

ಹರಿದ ಹಾದಿಯನಳೆದ ಸೌರಮಾನಗಳೆಷ್ಟೊ
ಸಪ್ತಪದಬಂಧದೊಳಗೆ;
ವೈಶಾಖದಿರುಳುಗಳ ಚಂದಿರನು ಕೂಡೆ ಬೆಳ
ದಿಂಗಳೊಂಭತ್ತರೊಳಗೆ.

ಇಬ್ಬರೊಳಗೊಂದಾಗಿ ಕೂಡಿದೆವು ಕಾಡಿದೆವು
ಬೇಡಿದೆವು ದೇವನಲ್ಲಿ;
ಚೆಂಗುಲಾಬಿಯ ಮೇಲೆ ಇಬ್ಬನಿಯು ನಗುತಿತ್ತು
ಕಂಪೊಡನೆ ತಂಪ ಚೆಲ್ಲಿ.

ಇಲ್ಲಿಬಾ, ತುಸುಹೊತ್ತು ಕೂರೋಣ ನಾವಿಲ್ಲಿ
ಹಚ್ಚಿ ಗಲ್ಲಕ್ಕೆ ಗಲ್ಲ;
ಅಮೃತಗಳಿಗೆಯನಿಂತು ಕಳೆಯುವುದು ತರವಲ್ಲ
ನಲ್ಲೆ ನಾ ನಿನ್ನ ನಲ್ಲ

Sunday, October 17, 2010

ಸಾಂಸ್ಕೃತಿಕ ಅನ್ವೇಷಣೆಯ ಸಾಹಿತಿ---ಎಸ್. ಎಲ್. ಭೈರಪ್ಪ?

ಇದು ಸುನಾಥರ "ಸಾಂಸ್ಕೃತಿಕ ಅನ್ವೇಷಣೆಯ ಸಾಹಿತಿ---ಎಸ್. ಎಲ್. ಭೈರಪ್ಪ" ಎಂಬ ಲೇಖನಕ್ಕೆ ನನ್ನ ಪ್ರತಿಕ್ರಿಯೆ. ಪ್ರತಿಕ್ರಿಯೆ ತುಸು ಉದ್ದವಾದ್ದರಿಂದ ಅವರ ಲೇಖನಕ್ಕೆ ಕಾಮೆಂಟಾಗಿ ಹಾಕುವ ಬದಲು ಇಲ್ಲಿ ಪ್ರಕಟಿಸುತ್ತಿದ್ದೇನೆ. ಈ ಲೇಖನದಲ್ಲಿ ಬರುವ ಅನೇಕ ಪ್ರಸ್ತಾಪಗಳು ಮೂಲ ಲೇಖನದ ಭಾಗಗಳನ್ನು ಸೂಚಿಸುವುದರಿಂದ, ಇದನ್ನು ಓದುವ ಮೊದಲು ಮೂಲ ಲೇಖನವನ್ನು ಓದಬೇಕೆಂದು ಕೋರಿಕೆ.

ಭೈರಪ್ಪನವರ ಕಾದಂಬರಿಗಳ ಪ್ರಾತಿನಿಧಿಕ ಸೊಗಸಾದ ಕಿರುಪರಿಚಯ ಮಾಡಿಕೊಡುತ್ತಾ ಕೊನೆಗೆ "ಅವರನ್ನು ನಮ್ಮ ಸಾಂಸ್ಕೃತಿಕ ಅನ್ವೇಷಕ" ಎಂದು ಕರೆಯುತ್ತಾರೆ ಲೇಖಕರು. ನಾನು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅವರನ್ನು ನಮ್ಮ ಸಾಂಸ್ಕೃತಿಕ ಪ್ರತಿಪಾದಕನೆಂದು ಕರೆಯುತ್ತೇನೆ. ಏಕೆಂದರೆ ಅನ್ವೇಷಣೆಯಲ್ಲಿ ನಮಗೆ ತಿಳಿಯದ/ಹೊಸದಾಗಿ ತಿಳಿಯುವ, ಹಾಗೆ ತಿಳಿದಿದ್ದನ್ನು ಮುಕ್ತವಾಗಿ ಒಪ್ಪುವ ಅಂಶವಿರುತ್ತದೆ, ಚಿಂತನೆಯ ಅಂಶವಿರುತ್ತದೆ. ಆದರೆ ಭೈರಪ್ಪನವರಿಗೆ ನಮ್ಮ (ಹಾಗೇ ಪರ)ಸಂಸ್ಕೃತಿಯಬಗ್ಗೆ ಈಗಾಗಲೇ ಪ್ರಬಲವಾದ ಅಭಿಪ್ರಾಯಗಳಿರುವುದರಿಂದ, ಅದರ ಬಗ್ಗೆ ಅನ್ವೇಷಣೆ/"ಚಿಂತನೆ" ಈಗಾಗಲೇ ಆಗಿಹೋಗಿದೆ. ಅದರ ಪ್ರತಿಪಾದನೆಯೇ ಅವರ (ಕೊನೆಯ ಪಕ್ಷ ಇತ್ತೀಚಿನ) ಕಾದಂಬರಿಗಳ ಗುರಿಯಾದಂತೆನಿಸುತ್ತದೆ. ಸುನಾಥರೇ ಮುಂದೊಂದುಕಡೆ ಬಳಸುವಂತೆ, "ವಕಾಲತ್ತು" ಎನ್ನುವ ಪದ ಹೆಚ್ಚು ಸೂಕ್ತವೆನಿಸುತ್ತದೆ. ವಕೀಲನಿಗೆ ಚಿಂತನೆಗಿಂತಾ ಪ್ರತಿಪಾದನೆಯೇ ಮುಖ್ಯವಾಗುತ್ತದೆ.

ಅದೇನೇ ಇರಲಿ ಕಾದಂಬರಿಯ ತಂತ್ರಗಾರಿಕೆ, ಕತೆ ಹೇಳುವ ಅನನ್ಯಶೈಲಿ, ಕತೆಯ ಓಟಕ್ಕೆ ಭಂಗತಾರದೆ ಪಾತ್ರಗಳ ತಾತ್ವಿಕ/ನೈತಿಕ ಒಳತೋಟಿಗಳಲ್ಲಿ ಓದುಗರನ್ನು ಒಳಗೊಳಿಸುವ ಪರಿ ಇತ್ಯಾದಿ ಕಾರಣಗಳಿಗಾಗಿ ಭೈರಪ್ಪ ನನ್ನ ನೆಚ್ಚಿನ ಲೇಖಕರಲ್ಲಿ ಒಬ್ಬರು, ಇಂದಿಗೂ ಕೂಡ. ಅವರ ಈ ಹಿಂದಿನ ಕಾದಂಬರಿಗಳ ಬಗ್ಗೆ ನನ್ನ (ಮತ್ತು ನನ್ನಂತಹ ಇತರರ) ತಕರಾರೆಂದರೆ ಇದು: ಪ್ರಸ್ತುತ ವ್ಯವಸ್ಥೆಯೊಡನೆ ಬದಲಾದ ಪರಿಸ್ಥಿತಿಯ ಮುಖಾಮುಖಿ, ಅದು ಪಾತ್ರಗಳಲ್ಲಿ ತಂದೊಡ್ಡುವ ಸಂಘರ್ಷ, ಉಸಿರುಗಟ್ಟಿಸುವ ಪರಿಸ್ಥಿತಿ ಇವುಗಳನ್ನು ಭೈರಪ್ಪನವರು ವಸ್ತುವನ್ನಾಗಿಸಿಕೊಂಡರೂ, ಇಷ್ಟೆಲ್ಲಾ ತುಮುಲ/ಒಳತೋಟಿಗಳನ್ನನುಭವಿಸಿಯೂ ಅವರ ಪಾತ್ರಗಳು ಈ ಉಸಿರುಗಟ್ಟಿಸುವ ವ್ಯವಸ್ಥೆಯಿಂದ ಹರಿದುಕೊಂಡು ಹೊರಬರದೇ ಕೊನೆಗೆ ಅದಕ್ಕೇ ಜೋತುಬಿದ್ದುಬಿಡುತ್ತವೆಂಬುದು. ಆ ಕಾರಣಕ್ಕೇ ಭೈರಪ್ಪನವರು ಸನಾತನ ಜೀವನಶೈಲಿ ಎತ್ತಿಹಿಡಿಯುವ ಭರದಲ್ಲಿ ಹಳೆಯ ಕಂದಾಚಾರಕ್ಕೇ ಶರಣು ಹೊಡೆದುಬಿಡುತ್ತಾರೆಂಬುದು ಒಂದು ಅನಿಸಿಕೆಯಾಗಿತ್ತು. ಇಂಥದ್ದೊಂದು "ಕ್ರಾಂತಿ" ಆ ಪಾತ್ರ ಅನುಭವಿಸುವ ತುಮುಲಕ್ಕೆ ಅತಿ ಸಹಜವಾದ ಹೊರಹರಿವಾಗಿದ್ದರೂ ಕೊನೆಯ ಗಳಿಗೆಯಲ್ಲಿ ಅದು ಹಿಂದಿರುಗಿ ಬಂದುಬಿಡುತ್ತದೆ, ಮತ್ತು ಅದೊಂದು ರೀತಿಯ ರಸಾತ್ಮಕ ಅಸಮಾಧಾನ/ಅಸಂತುಷ್ಟಿಯನ್ನು ಓದುಗನಲ್ಲಿ ಉಳಿಸಿಬಿಡುತ್ತವೆ. ಹಾಗಿದ್ದಮೇಲೆ ಅಂಥದ್ದೊಂದು ಸಂಘರ್ಷವನ್ನು ಕಾದಂಬರಿಯ ಸಮಸ್ಯೆಯನ್ನಾಗಿ ತೆಗೆದುಕೊಳ್ಳುವ ಅಗತ್ಯವಾದರೂ ಏನು? ಆದರೆ ನಮ್ಮ ಈ ಭಿನ್ನಾಭಿಪ್ರಾಯವೇನಿದ್ದರೂ ತಾತ್ವಿಕ ಮಟ್ಟದಲ್ಲಿ ಮಾತ್ರವೇ ಹೊರತು, ಕಾದಂಬರಿಗಳ ಕಲಾದೃಷ್ಟಿಯ ಬಗ್ಗೆ ಮಾತ್ರ ಎರಡು ಮಾತಿರಲಿಲ್ಲ.

ಆದರೆ ಆವರಣದಿಂದೀಚಿನ ಕಾದಂಬರಿಗಳ ಬಗೆಗೆ ಇಷ್ಟೇ ಹೇಳಿ ಸುಮ್ಮನಾಗಲು ಬರುವುದಿಲ್ಲ. ಅವರ ಹಳೆಯ ಕಾದಂಬರಿಗಳ ಕಲಾದೃಷ್ಟಿ, ಸೂಕ್ಷ್ಮ ಪ್ರಬುದ್ಧ ಮಂಡನೆ ಇಲ್ಲಿ ಮರೆಯಾಗಿದೆ. ಪಾತ್ರಗಳ ಒಳತೋಟಿ, ಅದರ ವೈಯಕ್ತಿಕ ಸೂಕ್ಷ್ಮ ಕಳೆದುಕೊಂಡು ಎರಡು ಪಂಗಡಗಳ/ಜನಾಂಗಗಳ/ಸಮಾಜಗಳ/ಲಿಂಗಗಳ ಜೋರುಬಾಯಿಯಾಗಿ ಪರಿವರ್ತನೆಗೊಂಡಿದೆ. ಈ ಇಡೀ ಸಮಾಜಗಳ ಭಾರವನ್ನು ಕೇವಲ ಒಂದೆರಡು ದುರ್ಬಲ ಪಾತ್ರಗಳು ತಡೆದುಕೊಳ್ಳುವುದು ಸಾಧ್ಯವಾಗದೇ, ಪಾತ್ರಗಳಾಗಿ ಅವು ಕುಸಿದಿವೆ. ಪಾತ್ರವೊಂದು ಗುಣವೊಂದರ ಪ್ರತಿನಿಧಿಯಾಗಿ ಕೆಲಸಮಾಡುವುದು ಅಷ್ಟು ಸುಲಭವೂ ಅಲ್ಲ, ಮತ್ತು ಇದೇ ಮೊದಲೂ ಅಲ್ಲ. ವ್ಯಾಸರು ಇದನ್ನು ಬಹು ಯಶಸ್ವಿಯಾಗಿ ಮಾಡಿದ್ದಾರೆ; ರನ್ನ-ಪಂಪರು ಮಾಡಿದ್ದಾರೆ; ಅಷ್ಟೇಕೆ, ಸ್ವತಃ ಭೈರಪ್ಪನವರೇ ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ, ಪರ್ವದಲ್ಲಿ. ಆದರೆ ಆವರಣದೀಚೆಯ ಅವರ ಕಾದಂಬರಿಗಳಲ್ಲಿ ಈ ಕೌಶಲ ಸಂಪೂರ್ಣ ಮರೆಯಾಗಿದೆಯೆಂದೇ ಹೇಳಬೇಕು. ಅಲ್ಲಿ ಪಾತ್ರಗಳು ಪಾತ್ರಗಳಾಗಿ ಉಳಿದಿಲ್ಲ. ಅಷ್ಟೇಕೆ, ರಾತ್ರಿ ಗಂಡಹೆಂಡಿರು ಪಕ್ಕಪಕ್ಕ ಮಲಗಿದಾಗಲೂ, ಮಿಲನದ ವೇಳೆಯಲ್ಲೂ ಮಾತಾಡುವುದು ಆ ಎರಡು ದೇಹಗಳಲ್ಲ, ಎರಡು ಮನಸ್ಸುಗಳಲ್ಲ, ಬದಲಿಗೆ ಎರಡು ಸಮಾಜಗಳು, ಎರಡು ಧರ್ಮಗಳು (ಆವರಣ)! ಕಾದಂಬರಿಯಲ್ಲಿ ಭೈರಪ್ಪನವರದ್ದೇ ಛಾಪು ಹೊತ್ತು ಮೂಡಿರುವ ತಲೆದೂಗಿಸುವ ಕಥನತಂತ್ರವೂ ಈ ಅಧ್ವಾನವನ್ನು ಮುಚ್ಚುವಲ್ಲಿ ಯಶಸ್ವಿಯಾಗುವುದಿಲ್ಲ.

"ನನ್ನ ದೃಷ್ಟಿ ಬಹುಜನದ ದೃಷ್ಟಿ, ಆದ್ದರಿಂದ ನನ್ನದು ಸರಿ, ಆದ್ದರಿಂದಲೇ ನಿನ್ನದು ತಪ್ಪು, ಆದ್ದರಿಂದಲೇ ನಿನ್ನದೆಂಬುದೆಲ್ಲವೂ ತಪ್ಪೇ, ನಿನ್ನ ಅಪ್ಪ, ತಾತ ಮುತ್ತಾತಂದಿರೆಲ್ಲಾ ತಪ್ಪು" ಮತ್ತು ಇನ್ನೊಂದು ರೀತಿಯಿಂದ "ನಿನ್ನ ಅಪ್ಪ, ತಾತ ಮುತ್ತಾತಂದಿರು ನಮಗೆ ಹೀಗೆ ಹೀಗೆ ಮಾಡಿದರು ( ಐತಿಹಾಸಿಕ ಪುರಾವೆ); ಆದ್ದರಿಂದ ನೀವೆಲ್ಲರೂ ನಮ್ಮೆಲ್ಲರನ್ನೂ ನಾಶ ಮಾಡಿದಿರಿ, ಮಾಡುತ್ತಿದ್ದೀರಿ, ಮಾಡುವಿರಿ; ಆದ್ದರಿಂದ ನಿಮ್ಮದೆಲ್ಲವೂ ತಪ್ಪೇ; ನಾನು ಸನಾತನ ಧರ್ಮದ ಪ್ರತಿನಿಧಿ, ನೀನು ನಮ್ಮನ್ನು ನಾಶಮಾಡಿದ ಪಾಶವೀ ಧರ್ಮದ ಪ್ರತಿನಿಧಿ" ಈ ರೀತಿಯ ವಾದಸರಣಿಗಳು ಚರ್ಚಾಸ್ಪರ್ಧೆಗೆ ಸರಿಹೊಂದಬಹುದೇ ಹೊರತು ಕಾದಂಬರಿಯಂಥ ಸೂಕ್ಷ್ಮ ವೈಯಕ್ತಿಕ ಬರವಣಿಗೆಗಲ್ಲ; ಮತ್ತು ಈ ವಾದಸರಣಿಯನ್ನು ಸಮರ್ಥಿಸಲೆಂದೇ ಸೃಷ್ಟಿಗೊಂಡ ಪಾತ್ರನಿರೂಪಣೆ ಘಟನಾವಳಿಗಳು. ಇತಿಹಾಸವೇ ಪ್ರಧಾನವಾದರೆ ಒಂದು ಸಂಶೋಧನ ಗ್ರಂಥವನ್ನು ಬರೆದರೆ ಅದಕ್ಕೊಂದು ಗಾಂಭೀರ್ಯ; ಇಲ್ಲ ವೈಯಕ್ತಿಕ ದೃಷ್ಟಿಕೋನವೇ ಪ್ರಧಾನವಾದರೆ ಅದನ್ನು ಪ್ರತಿಪಾದಿಸಿ ಒಂದು ಲೇಖನ ಪ್ರಕಟಿಸಿದರೆ ಅದರ ಬಗ್ಗೆ ಚರ್ಚಿಸಬಹುದು; ಆದರೆ ಕಾದಂಬರಿ ಬರೆದಾಗ ಅದರ ಪ್ರಥಮ ಬದ್ಧತೆ ಕಲಾದೃಷ್ಟಿಗೇ ಹೊರತು ಮತ್ತಾವುದಕ್ಕೋ ಅಲ್ಲ, ಅಲ್ಲವೇ? ಅದು ಬಿಟ್ಟು ಕೇವಲ ವೈಯಕ್ತಿಕ ದೃಷ್ಟಿಕೋನವನ್ನು "ಎಲ್ಲರೂ ಒಪ್ಪುವಂತೆ" ಪ್ರತಿಪಾದಿಸಲು ಕಾದಂಬರಿಯ ಹೊದಿಕೆಯಲ್ಲಿ ಇತಿಹಾಸವನ್ನು ತುರುಕಿದರೆ, ಅಷ್ಟಾಗಿಯೂ ಅದು ಒಂದು ದೃಷ್ಟಿಕೋನದ ಲೇಖನವಾಗಿ ಉಳಿದೀತೇ ಹೊರತು ಕಾದಂಬರಿಯಾಗುವುದಿಲ್ಲ, ಅಲ್ಲವೇ? ಹಾಗೆ ಲೇಖನವಾಗಿಯೇ ಬರೆಯುವುದಾದರೆ ಅದನ್ನು ಸಾಫ ಸೀದಾ ಹೇಳುವುದರ ಬದಲು ಕಾದಂಬರಿಯೊಂದರ ಕಲಾತ್ಮಕ ಅಸ್ಪಷ್ಟತೆ, ಮಾಯದ ಮುಸುಕು (fictionality) ಏಕೆ? ಅಂದರೆ ನಮ್ಮ ತಾತ್ವಿಕ ವಿರೋಧ, ಧರ್ಮ ಮತ್ತು ಅದರ ಸಾಮಾಜಿಕ ಆಯಾಮಗಳ ಬಗೆಗಿನ ಭೈರಪ್ಪನವರ ನಿಲುವಿನ ಬಗೆಗಲ್ಲ, ಬದಲಿಗೆ ಅದನ್ನು ಅವರು "ಕಾದಂಬರಿ"ಯನ್ನಾಗಿಸಲೆತ್ನಿಸುವ ಪರಿಯ ಬಗೆಗೆ. ಇಂಥದ್ದೊಂದು ಇತಿಹಾಸ, ವಿಚಾರ ಮತ್ತು ಕತೆಯ ಅಂಶಗಳ ಕಲಸುಮೇಲೋಗರ, ಆ ಅಂಶಗಳ ಪರಸ್ಪರ ಮೈಲಿಗೆಯಿಂದಾಗಿಯೇ ಆ ಬರಹಕ್ಕೆ ಇತಿಹಾಸಗ್ರಂಥವೊಂದರ authenticityಯನ್ನಾಗಲೀ ವೈಚಾರಿಕ ಬರಹವೊಂದರ ಗಾಂಭೀರ್ಯವನ್ನಾಗಲಿ ಕತೆಯ ಸೌಂದರ್ಯ/ಕಲಾತ್ಮಕತೆಯನ್ನಾಗಲಿ ದೊರಕಿಸಲು ವಿಫಲವಾಗುತ್ತದೆ. ಇದಕ್ಕೆ ಸರಿದೊರೆಯಾದ ಉದಾಹರಣೆಯಾಗಿ ತರಾಸು ಅವರ ಐತಿಹಾಸಿಕ ಕಾದಂಬರಿಗಳನ್ನು ನೆನೆಯೋಣ. ಅಲ್ಲೆಲ್ಲೂ ಕಾದಂಬರಿಯ ಪಾತ್ರವೊಂದು ಇಷ್ಟೆಲ್ಲಾ "ಐತಿಹಾಸಿಕ ಸಂಶೋಧನೆ"ಗಳನ್ನು ಮಾಡಿ, ತನ್ನದೇ ಕತೆಯ ಕೊನೆಯಲ್ಲಿ ತನ್ನ ಐತಿಹಾಸಿಕ ಸಂಶೋಧನೆಗಳ bibliography ಕೊಟ್ಟದ್ದು ಕಾಣಬರುವುದಿಲ್ಲ. ಇಷ್ಟಕ್ಕೂ ಇದೆಲ್ಲಾ ಚರ್ಚೆ, ಈ ಕಾದಂಬರಿಗಳ "ಕಾದಂಬರಿತನ"ವನ್ನು ಕುರಿತದ್ದೇ ಹೊರತು ಭೈರಪ್ಪನವರ ನಿಲುವು/"ಪ್ರತಿಪಾದನೆ"ಗಳ ಕುರಿತದ್ದಲ್ಲ (ಅವು ಬೇರೆಯೇ ಚರ್ಚೆಯ ವಿಷಯ).

ಇನ್ನು ಅನಂತಮೂರ್ತಿಯವರ ಬಗ್ಗೆ ಬಂದರೆ, ಭೈರಪ್ಪನವರ ಬಗೆಗಿನ ಚರ್ಚೆಯಲ್ಲಿ ಅನಂತಮೂರ್ತಿಯ ಪ್ರಸ್ತಾಪ ಬರಬೇಕಾದ ಯಾವುದೇ ಸಾಹಿತ್ಯಕ ಕಾರಣಗಳೂ ನನಗಂತೂ ಕಾಣುವುದಿಲ್ಲ. ಇಬ್ಬರ ಬರಹಗಳ ದಿಕ್ಕು ದೆಸೆಗಳು ನೀತಿ-ನಿಲುವುಗಳು, ಸೊಗಸುಗಳು ಬೇರೆಯೇ. ಜಿಲೇಬಿಯೇ ರುಚಿ, ಖೀರು ಅಲ್ಲ ಎನ್ನಲಾದೀತೇ? ಭೈರಪ್ಪನವರ ನಿಲುವಿನಲ್ಲಿ ಅದೆಷ್ಟೇ ಕುಂದುಗಳಿದ್ದಾಗ್ಯೂ ನಮ್ಮ ಕನ್ನಡ ಕಾದಂಬರಿಯ ಸಂದರ್ಭದಲ್ಲಿ ಭೈರಪ್ಪನವರೊಂದು ಮೈಲಿಗಲ್ಲು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅಂತೆಯೇ ಸಣ್ಣ ಕತೆಗಳ ಸಂದರ್ಭದಲ್ಲಿ ಅನಂತಮೂರ್ತಿಯವರು. ಆದರೆ ಇಬ್ಬರಿಗೂ ಎಲ್ಲಿಂದೆಲ್ಲಿಯ ಹೋಲಿಕೆ? ಆನಂದಭೈರವಿಗೂ ಕಲ್ಯಾಣಿಗೂ ಹೋಲಿಕೆಯೇ? ಆದರೆ ಇವತ್ತು ಭೈರಪ್ಪನವರ ಚರ್ಚೆ ಅನಂತಮೂರ್ತಿಯವರ ಪ್ರಸ್ತಾಪವಿಲ್ಲದೇ ಪೂರ್ಣಗೊಳ್ಳುವುದೇ ಇಲ್ಲ. ಇದಕ್ಕೆ ನಾವು ಕಾಣುವ ಒಂದೇ ಅಸಾಹಿತ್ಯಕ ಕಾರಣವೆಂದರೆ, ಅನಂತಮೂರ್ತಿಯವರು ಭೈರಪ್ಪನವರ ಕಾದಂಬರಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು, ಅದು ವಿವಾದವಾಯಿತು, in retaliation, ಅನಂತಮೂರ್ತಿಯವರ ಸಾಹಿತ್ಯದ "ಪುನರ್ವಿಮರ್ಶೆ" ನಡೆಯಿತು, ಹೊಸ ದೃಷ್ಟಿಕೋನದಿಂದ! ಮತ್ತೆ ಎರಡೂ ಬಣಗಳೂ ವೈಯಕ್ತಿಕ ನಿಂದನೆಗಳಲ್ಲಿ ತೊಡಗಿದುವು. ಇದು ಎಷ್ಟರಮಟ್ಟಿಗೆ ಸರಿ?

ಇನ್ನು specific ಆಗಿ "ಸಂಸ್ಕಾರ"ದ ಬಗ್ಗೆ ಮಾತಾಡುವುದಾದರೆ, ಸಂಸ್ಕಾರದ ಕತೆ ಅಥವ ಅದರ "ಒಳಕತೆ"ಯಲ್ಲಿ, ಹಾಗೆ ಅದನ್ನು ಬಳಸುವ ತಂತ್ರಗಾರಿಕೆಯಲ್ಲಿ ಲೇಖಕರು ಹೇಳುವ ದೂರ್ತತನವಾಗಲೀ ಅಥವ ಆ ದೂರ್ತತನ ಮಾಡುವ ಅಗತ್ಯವಾಗಲೀ ಕಾಣಬರುವುದಿಲ್ಲ. ಕತೆಯ ರೀತಿಯೇ ಅದಲ್ಲವೇ? ಹೇಳುವುದನ್ನು ಸಾಫ ಸೀದಾ ಹೇಳಿಬಿಟ್ಟರೆ ಅದು ಕತೆಯಾಗುವುದಿಲ್ಲ, ಬದಲಿಗೆ ಲೇಖನವೋ ಭಾಷಣವೋ ಇನ್ನೇನೋ ಆಗುವುದು, ಅಲ್ಲವೇ? ಆದರೆ ಇಲ್ಲಿ ಕತೆಗಾರನ ಉದ್ದೇಶ ಇದನ್ನು ಲೇಖನವೋ ಭಾಷಣವೋ ಆಗಿಸುವುದಲ್ಲ, ಬದಲಿಗೆ ಕತೆಯಾಗಿಯೇ ಉಳಿಸಿಕೊಳ್ಳುವುದು. ಮತ್ತು ಇದರಲ್ಲಿ ದೂರ್ತತನವನ್ನು ಆರೋಪಿಸುವ ಮೊದಲು ಸಂಸ್ಕಾರದ ಕತೆ ಬಂದ ಕಾಲಘಟ್ಟವನ್ನು ಗಮನಿಸಬೇಕು. ಅವತ್ತಿನ ಸಮಾಜ ಇವತ್ತಿನಷ್ಟು liberal ಆಗಿರಲಿಲ್ಲ. ಸಂಸ್ಕಾರದ "ಪ್ರತಿಭಟನೆ" ಅವತ್ತಿನ ಕಾಲಘಟ್ಟಕ್ಕಂತೂ ಖಂಡಿತಾ ಪ್ರಸ್ತುತವಾಗಿತ್ತು. ವ್ಯವಸ್ಥೆಯೇ ಬಲವಾಗಿದ್ದಾಗ ಅದರ ಬಗೆಗಿನ ಪ್ರತಿಭಟನೆ "ಲೇವಡಿ"ಯೆನ್ನಿಸಿಕೊಳ್ಳುವುದೇ? ಆದರೆ ಇವತ್ತು ಕಾಲ ಬದಲಾಗಿದೆ. ಸಮಾಜ ಹೆಚ್ಚು liberal ಆಗಿದೆ, ವ್ಯವಸ್ಥೆ ಮೊದಲಿನಷ್ಟು ಬಲವಾಗಿಲ್ಲ. ಆದ್ದರಿಂದ ಅದೇ ಕತೆ ಇವತ್ತಿನ ಕಾಲಘಟ್ಟದಲ್ಲಿ ಬಂದರೆ, ಬದಲಾದ ಬ್ರಾಹ್ಮಣ ಸಮಾಜದ ಹಿನ್ನೆಯಲ್ಲಿ ಅನಂತಮೂರ್ತಿಯವರ ಅಂಥ ಪ್ರಯತ್ನ ದೂರ್ತತನವೂ ಬ್ರಾಹ್ಮಣ ಸಮಾಜದ ಲೇವಡಿಯೂ ಖಂಡಿತ ಆಗುತ್ತಿತ್ತು, ಆದರೆ ಸಂಸ್ಕಾರದ ಅವತ್ತಿನ ಕಾಲಘಟ್ಟದಲ್ಲಿ ಅಲ್ಲ.

ಇದರ ಅರ್ಥ ಅನಂತಮೂರ್ತಿಯವರ ಇಂದಿನ ಅನೇಕ ಸಾಹಿತ್ಯೇತರ ಸಾಮಾಜಿಕ ನಿಲುವುಗಳಲ್ಲಿ ದೂರ್ತತನವಿಲ್ಲವೆಂದಲ್ಲ, ಅದನ್ನು ನಾನು ಸಮರ್ಥಿಸುತ್ತೇನೆಂದೂ ಅಲ್ಲ. ಅವರ "ಅಲ್ಪಸಂಖ್ಯಾತ" ಧ್ವನಿಯನ್ನು ತಾತ್ವಿಕವಾಗಿ ನಾನು ಸಮರ್ಥಿಸಿದರೂ ಅದು ಅತಿರೇಕಕ್ಕೆ ಹೋದಾಗೆಲ್ಲಾ ಕಟುವಾಗಿ ವಿರೋಧಿಸಿದವರಲ್ಲಿ ನಾನೂ ಒಬ್ಬ. ಆದರೂ ವ್ಯಕ್ತಿಯೊಬ್ಬನಿಗೆ ಸಾರಾಸಗಟಾಗಿ ದೂರ್ತ/ಸರಳ ಎಂಬ ಹಣೆಪಟ್ಟಿ ಹಚ್ಚುವುದಾಗಲೀ ಆ "ದೂರ್ತತನ/ಸರಳತೆ"ಗಳನ್ನು ಅವನ ಎಲ್ಲಾ (ಕಾಲಘಟ್ಟಗಳ) ಬರವಣಿಗೆಗೂ ಸಾರಾಸಗಟಾಗಿ ಅನ್ವಯಿಸುವುದು ಸಾಹಿತ್ಯಕ್ಕೆ, ಸೃಜನಶೀಲತೆಗೆ ಅಪಚಾರವಲ್ಲವೇ? ಅಂಥ ಸಾಹಿತ್ಯ/ಸೃಜನಶೀಲತೆ ಅನಂತಮೂರ್ತಿಯವರದ್ದಿರಬಹುದು, ಅಥವ ಭೈರಪ್ಪನವರದ್ದಿರಬಹುದು ಅಥವ ಇನ್ನಾರದೇ ಇರಬಹುದು.

Sunday, September 12, 2010

ಪರಪ್ಪನ ಅಗ್ರಹಾರ

ಇಲ್ಲ, ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಬಗೆಗಿನ ಲೇಖನವಲ್ಲ ಇದು.

ಗೂಗಲ್ ಬಝ್ ನಲ್ಲಿ ಗೆಳೆಯ ಬರತ್ ಕುಮಾರ್ "ಪರಪ್ಪನ ಅಗ್ರಹಾರ"ದ ಮೂಲದ ವಿಶ್ಲೇಷಣೆ ಮಾಡಿದ್ದರು. ಅವರ ಪ್ರಕಾರ:

ಪಾರ್ = ನೋಡಿಕೊಳ್ಳು = look after.... ಪಾರ್ + ಅಪ್ಪ => ಎಲ್ಲರನ್ನು ನೋಡಿಕೊಳ್ಳುವ ಅಪ್ಪ ==> ದೇವರು
ಪಾರಪ್ಪ = ದೇವರು = ಕಡವ

ಅದಕ್ಕೆ ಹಂಸಾನಂದಿಗಳ ಪ್ರತಿಕ್ರಿಯೆ ಹೀಗಿತ್ತು:

ಪಾರು (ಮಾಡುವ, ಗಾಣಿಸುವ) ಅಪ್ಪ -> ದಾಟಿಸುವ ಅಪ್ಪ = ದೇವರು
ಹೀಗಿರಬಾರದೇಕೆ ? ಪಾರು ಅನ್ನೋದಕ್ಕೆ ತಮಿಳಿನಲ್ಲಿ ನೋಡು ಅನ್ನುವ ಅರ್ಥವಿದ್ದರೂ, ಕನ್ನಡದ ಆಡು ಮಾತಿನ ಬಳಕೆಯಲ್ಲಿ ಅದು ಇರುವುದು ನನಗೆ ನೆನಪಿಗೆ ಬರುತ್ತಿಲ್ಲ.

ಇದೇ ರೀತಿ ಪಾರ್ವ, ಹಾರುವ -ಇಲ್ಲೂ ದಾಟು ಅನ್ನುವ ಅರ್ಥವೇ ಇರುವುದನ್ನೂ ಗಮನಿಸಬಹುದು.

ಇದಕ್ಕೆ ನನ್ನ ಪ್ರತಿಕ್ರಿಯೆ ಇದಾಗಿತ್ತು:

ಪಾರು ಅನ್ನುವುದಕ್ಕೆ ಕನ್ನಡದಲ್ಲೂ ನೋಡು (rather (ಕೊನೆಮುಟ್ಟಿಸುವಂತೆ) ನೋಡಿಕೋ, take care) ಅನ್ನುವುದೇ ಅರ್ಥ (ಪಾರು+ಪತ್ತೆ=ಪಾರುಪತ್ತೆ/ಪಾರುಪತ್ಯೆ). ತಮಿಳಿನಲ್ಲೂ ಇದು ಇದೇ ಅರ್ಥದಲ್ಲಿ ಬಳಕೆಯಲ್ಲಿದ್ದು ಅಮೇಲಾಮೇಲೆ ನೋಡು ಎನ್ನುವ ಸಾಮಾನ್ಯಾರ್ಥವೂ ದಕ್ಕಿದಂತೆ ತೋರುತ್ತದೆ.

ಇನ್ನು ಅಪ್ಪ ಅನ್ನುವುದು ಅದರ ಹಿಗ್ಗಿಸಿದ ಅರ್ಥದಲ್ಲಿ ದೇವರು ಎಂದಾದರೂ ಅದನ್ನು ಅಷ್ಟು ಹಿಗ್ಗಿಸುವ ಅಗತ್ಯವೇ ಇಲ್ಲ ಎನ್ನಿಸುತ್ತದೆ. ಪಾರು + ಅಪ್ಪ = ಪಾರುಪತ್ತೇದಾರ, ಯಜಮಾನನ ಅಗ್ರಹಾರ, sounds more practical interpretation

ಈ ಚರ್ಚೆ ನನ್ನಲ್ಲೆಬ್ಬಿಸಿದ ಆಲೋಚನಾತರಂಗಗಳ ಲೇಖನರೂಪವೇ ಇದು.

ಪಾರು (=ನಾಮಪದ: ಗಡಿ/ಸೀಮೆ; ಕ್ರಿಯಾಪದ: ಗಡಿದಾಟು) ಎನ್ನುವುದು ಪಾರ ಎನ್ನುವ ಸಂಸ್ಕೃತ ಶಬ್ದದಿಂದ ಬಂದಂತೆನಿಸುತ್ತದೆ. ಇದು ಸಂಸ್ಕೃತದ "ಪರ್" ಧಾತುವಿನಿಂದ ಬಂದಿರಬೇಕು. ಪರ ಅಂದರೆ, ಹೊರಗಿನದ್ದು. ಪಾರ = "ಸ್ವ" ವನ್ನು "ಪರ"ದಿಂದ ಬೇರ್ಪಡಿಸುವ ಸೀಮಾರೇಖೆ/ಗಡಿ (ವರ-ವಾರ; ಭರ-ಭಾರ; ಧರ-ಧಾರ ಇತಿವತ್); ಅಪಾರ = ಪಾರವಿಲ್ಲದ್ದು, ಬಹುಪಾರ = ಅನೇಕ ಗಡಿಯುಳ್ಳದ್ದು/ವಿಸ್ತಾರವಾದ ಗಡಿಯುಳ್ಳದ್ದು; ವ್ಯಾಪಾರ (ವಿ+ಆಪಾರ) = ಗಡಿಯಾಚಿನ ವ್ಯವಹಾರ (ಆಮದು), ಇತ್ಯಾದಿ ಸಂಸ್ಕೃತ ಪದಗಳನ್ನು ಗಮನಿಸಿ.

ಮನುಷ್ಯನ ಮೂಲಭೂತ ಅಡಚಣೆ/ಪರಿಮಿತಿಯೇ ವೇಗ. ಈ ಅಡಚಣೆಯೇ ಅವನ ಮಿತಿ/ಪಾರ. ಅದನ್ನು ದಾಟಬೇಕಾದರೆ ಮೇಲೆ ನೆಗೆಯಬೇಕು. ಆದ್ದರಿಂದ ಈ ಲಂಘನೆಯೇ "ಪಾರು"/"ಹಾರು" ಆಗಿರಬೇಕು. (ಪಾರ್ವ/ಹಾರುವ ಗಮನಿಸಿ. ಅದರ ಅರ್ಥ "ಹಾರಾಡು"ವವನಲ್ಲ, ಬದಲಿಗೆ ದಾಟುವವನು) ಆದ್ದರಿಂದ ಪಾರು ಎಂಬುದಕ್ಕೆ ಗಡಿದಾಟುವಂತೆ ನೆಗೆ/ದಾಟು ಎಂಬ ಅರ್ಥವಿದ್ದು, ಅದರಲ್ಲಿ ಬಲವೂ ವೇಗವೂ ಸೇರಿರುವುದರಿಂದ ಮುಂದೆ ಪಾರು ಎಂಬ ಪದಕ್ಕೆ ವೇಗವಾಗಿ ಚಲಿಸು ಎಂಬ ಅರ್ಥ ದೊರಕೊಂಡಂತೆ ತೋರುತ್ತದೆ. ಆದ್ದರಿಂದಲೇ ಕೇವಲ ನೆಗೆತವಲ್ಲದ ಹಕ್ಕಿಯ ಸ್ವಚ್ಛಂದ ಹಾರಾಟವೂ "ಪಾರು"/"ಹಾರು" ಎಂದೇ ಸೂಚಿತವಾಯಿತು. ಇನ್ನು ತೆಲುಗಿನ ಪಾರು = ಬಹುವೇಗವಾಗಿ ಓಡು ಎಂಬ ಪ್ರಯೋಗವನ್ನೂ ಗಮನಿಸಬಹುದು. ಇಲ್ಲೆಲ್ಲಾ ಒತ್ತು ಗಮ್ಯವನ್ನು ತಲುಪುವುದೇ.

ಅದೇನೇ ಇರಲಿ, ಹೀಗೆ ಗಮ್ಯವನ್ನು ತಲುಪಿಸುವ (ಕಾಣಿಸುವ) ಜವಾಬ್ದಾರಿಗೆ ಕನ್ನಡದಲ್ಲಿ "ಪಾರಗಾಣಿಸು", "ಪಾರುಪತ್ತೆ ನೋಡು" ಇತ್ಯಾದಿ ಬಳಕೆಯಿದೆ. ಜವಾಬ್ದಾರಿ ನಿರ್ವಹಿಸುವುದಕ್ಕೆ "ನೋಡಿಕೋ, ನೋಡು" ಎಂಬ ಬಳಕೆ ತಮಿಳಿನಲ್ಲೂ ಇರುವುದರಿಂದ ಕನ್ನಡದ ಪಾರಗಾಣು ಎನ್ನುವದಕ್ಕೆ ಸಮಾನಾರ್ಥಕವಾದ "ಪಾರಂಗಾಮಿಚ್ಚು/ಪಾರಂಗಾಣ್" ಎಂಬ ಬಳಕೆ ಮುಂದೆ ಚುಟುಕಾಗಿ "ಪಾತ್ತುಕೋ/ಪಾರ್" ಎಂದಾದಂತೆಯೂ, ಅದರ "ನೋಡಿಕೋ (look after)" ಎನ್ನುವ ಅರ್ಥದಿಂದ ಮುಂದೆ ಪಾತ್ತುಕೋ ಎನ್ನುವುದರ ಧಾತುವಾದ "ಪಾರ್" ಎನ್ನುವುದಕ್ಕೆ ನೋಡು ಎಂಬ ಸಾಮಾನ್ಯಾರ್ಥ ಬಂದಂತೆಯೂ ಕಾಣುತ್ತದೆ.

ಈ ಭಾಷಾಸಾಮ್ಯಗಳನ್ನು ಗಮನಿಸಿದಾಗ ತಮಿಳಿನ ಪಾರ್ ಎನ್ನುವುದರ ಇವತ್ತಿನ ಅರ್ಥ "ನೋಡು" ಮೂಲತಃ ಕನ್ನಡದಿಂದ ತಮಿಳಿಗೆ ಹೋದಂತೆಯೂ, ಹಾರು ಎನ್ನುವ ಅರ್ಥ ಕನ್ನಡ/ತೆಲಗು ದ್ರಾವಿಡಮೂಲದ್ದಾದರೂ ಭೌತಿಕ ಪದ ಸಂಸ್ಕೃತ ಮೂಲದಿಂದ ದ್ರಾವಿಡಕ್ಕೆ ಬಂದಂತೆಯೂ ಕಾಣುತ್ತದೆ.

ಅಷ್ಟಾದರೂ ಇಲ್ಲೇ ಹುಟ್ಟಿ ಬೆಳೆದು ನೆಲೆನಿಂದ "ಪಾರಪ್ಪ/ಪರಪ್ಪ" ನಮ್ಮವನೇ ಎನ್ನಲಡ್ಡಿಯಿಲ್ಲ. ಆದರೆ ಪರಪ್ಪನ ಅಗ್ರಹಾರ ನಮ್ಮದೆಂದರೆ ಮಾತ್ರ ತುಸು ಇರುಸುಮುರುಸಾಗಬಹುದೇನೋ.

Tuesday, September 7, 2010

ನಾನೇಕೆ ಬರೆಯುವುದಿಲ್ಲ

ನಾನು ಕೈಯಲ್ಲಿ ಪೆನ್ನೋ ಪುಸ್ತಕವೋ ಹಿಡಿದು ಎಷ್ಟುದಿನವಾಯಿತು? ತಿಂಗಳು? ವರ್ಷ?

ದಿನಬೆಳಗಾದರೆ ಬೇಕಾದಷ್ಟು ಪೇಪರುಗಳನ್ನು "ಹ್ಯಾಂಡಲ್" ಮಾಡುತ್ತೇನೆ, ಪೆನ್ನು ಹಿಡಿದು ಅನೇಕ ಸಹಿ ಹಾಕುತ್ತೇನೆ, ನೋಟ್ ಪ್ಯಾಡ್ ಹಿಡಿದು ಅನೇಕ "ನೋಟು"ಗಳನ್ನು ಬರೆದುಕೊಳ್ಳುತ್ತೇನೆ, ಅಲ್ಲ, ನಾನು ಅದರ ಬಗ್ಗೆ ಮಾತಾಡುತ್ತಿಲ್ಲ. ನಾನು ಹೇಳುತ್ತಿರುವುದು serious ಆದ ಓದು-ಬರಹದ ಬಗ್ಗೆ. ಸುಮಾರು ಒಂದು ಸಾವಿರದಷ್ಟಿರುವ ನನ್ನ ಪುಸ್ತಕ ಸಂಗ್ರಹ ಎರಡು ಮೂರುಕಡೆ ಹಂಚಿಹೋಗಿದೆ, ಈ ಎರಡು-ಮೂರು ವರ್ಷದಲ್ಲಿ ನಾನು ಅದರಲ್ಲಿ ಒಂದು ಪುಸ್ತಕವನ್ನೂ ಮುಟ್ಟಿದಂತಿಲ್ಲ, ಹಾಗೆಂದು ನನ್ನ ಓದುವ ಹವ್ಯಾಸವೇನು ಬಿಟ್ಟಿಲ್ಲ. ಅಂತರ್ಜಾಲದಲ್ಲಿ ಯಾವಾಗಲೂ ಅದು ಇದು ಓದುತ್ತಲೇ ಇರುತ್ತೇನೆ. ಇನ್ನು ಬರೆಯುವ ವಿಷಯಕ್ಕೆ ಬಂದರೆ, ನಾನು ಪೆನ್ನು ಪೇಪರು ಉಪಯೋಗಿಸಿ ಬರೆದ ಕೊನೆಯ ಬರಹವೆಂದರೆ ಅದೊಂದು ಕವನ, "ಶ್ರಾವಣ ಮುಗಿದಮೇಲೊಂದು ಸಂಜೆ", ೨೦೦೭ ಸೆಪ್ಟೆಂಬರಿನಲ್ಲಿ - ಸುಮಾರು ಹತ್ತಿರ ಹತ್ತಿರ ಮೂರು ವರ್ಷ. ಅದಾದಮೇಲೆ ಮತ್ತೆ ಎರಡು ಕವನ, ಮತ್ತು ಸುಮಾರು ಇಪ್ಪತ್ತೋ ಇಪ್ಪತ್ತೆರಡೋ ಬರಹಗಳನ್ನು 'ಬರೆ'ದೆ, ಆದರೆ ಅವೆಲ್ಲಾ ನಿಜಕ್ಕೂ ಬರೆದಿದ್ದಲ್ಲ, ನೇರವಾಗಿ ಬ್ಲಾಗಿನಲ್ಲಿ ಟೈಪು ಮಾಡಿದ್ದು! ನನ್ನ ಬರಹಗಳನ್ನೆಲ್ಲಾ ಸಂಗ್ರಹಿಸಿಡಲು ಒಂದು ಪುಸ್ತಕವನ್ನಿಟ್ಟಿದ್ದೆ. ಅದರಲ್ಲಿ ಕೊನೆಯದಾಗಿ ದಾಖಲಾಗಿರುವುದು ಈ ಕವನವಷ್ಟೇ. ಹಾಗಾದರೆ ನಿಜಕ್ಕೂ ಬರೆಯುವ ಹವ್ಯಾಸ ತಪ್ಪಿಹೋಗಿದೆಯೇ? ಬ್ಲಾಗಿಂಗ್ ಎಂಬ ಅಂತರ್ಜಾಲ ಬರಹದ ತಂತ್ರ ಜನಪ್ರಿಯಗೊಳ್ಳುತ್ತಿದ್ದಂತೆ ನಮ್ಮ ಬರಹಗಾರರನೇಕರು ಬ್ಲಾಗುಗಾರರಾಗಿಬಿಟ್ಟಿದ್ದಾರೆ. ಹೊಸ ಹೊಸ ಬ್ಲಾಗುಗಳು ಹುಟ್ಟಿಕೊಳ್ಳುತ್ತಿವೆ, ಬ್ಲಾಗಿಗರ ದೊಡ್ಡ ಪಡೆಯೇ ಸಿದ್ಧವಾಗಿದೆ. ಬರಹದ ಬಳಕೆ ತಪ್ಪಿದ್ದು ನನ್ನೊಬ್ಬನ ಅನುಭವವಲ್ಲ. ನೀವು ಇತರ ಬ್ಲಾಗಿಗರನ್ನು ಕೇಳಿನೋಡಿ, ಅವರಲ್ಲಿ ಬಹುತೇಕರ ಅನುಭವ ಇದೇ ಆಗಿರುತ್ತದೆ. ಬರೆಯುವಷ್ಟಿಲ್ಲ, ಬರೆದದ್ದನ್ನು ಹೊಡೆದುಹಾಕುವಷ್ಟಿಲ್ಲ, ಮತ್ತೊಮ್ಮೆ "ನೀಟ್" ಪ್ರತಿ ಮಾಡುವಷ್ಟಿಲ್ಲ; ಸುಮ್ಮನೇ ಮನಸ್ಸಿಗೆ ತೋಚಿದ್ದನ್ನು draft modeನಲ್ಲಿ 'ಗೀಚಿ'ಇಟ್ಟಿದ್ದರಾಯಿತು. ಮತ್ತೆ ಮನಬಂದಾಗ ಮನಬಂದಷ್ಟು ಬಾರಿ ಅದನ್ನು edit ಮಾಡಿ, ತೃಪ್ತಿಯೆನಿಸಿದಾಗ ಪ್ರಕಟಿಸಿದರಾಯಿತು. ಪತ್ರಿಕೆಗಳಿಗೆ ಕಳಿಸಬೇಕಾದರೂ ಬರೆಯಬೇಕಿಲ್ಲ. ಸುಮ್ಮನೇ copy & paste ಮಾಡಿ e-ಅಂಚೆಯಲ್ಲಿ ಕಳಿಸಿಬಿಟ್ಟರಾಯಿತು. ಮರುಕ್ಷಣ ಅದು ಸಂಪಾದಕನ ಬುಟ್ಟಿಯಲ್ಲಿ (ಅಥವಾ ಕಸದ ಬುಟ್ಟಿಯಲ್ಲಿ - ಅದೂ e-ಬುಟ್ಟಿಯೇ!) ಬಿದ್ದಿರುತ್ತದೆ. ಎಂದರೆ "ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ, ಪದವಿಟ್ಟಳುಪದೊಂದಗ್ಗಳಿಕೆ... ಬಳಸಿ ಬರೆಯಲು ಕಂಠಪತ್ರದ ಉಲುಹು ಕೆಡದಗ್ಗಳಿಕೆ" ಎಂದೆಲ್ಲಾ ಕುಮಾರವ್ಯಾಸನು ಅಷ್ಟು ಹೊಗಳಿಕೊಂಡದ್ದನ್ನು ನಾವು ಪ್ರಯತ್ನವೇ ಇಲ್ಲದೇ ಸಾಧಿಸಿಬಿಟ್ಟೆವೇ?

ಖ್ಯಾತ ಲೇಖಕ-ಕತೆಗಾರ ರಸ್ಕಿನ್ ಬಾಂಡ್ ರನ್ನು ಪತ್ರಕರ್ತರೊಬ್ಬರು ಕೇಳಿದರಂತೆ "ಕಂಪ್ಯೂಟರ್, ಇಂಟರ್ ನೆಟ್ ಇತ್ಯಾದಿ ತಾಂತ್ರಿಕ ಪ್ರಗತಿಯ ಈ ಯುಗದಲ್ಲೂ ನೀವಿನ್ನೂ ಒಂದು ನೋಟ್ ಪ್ಯಾಡು ಪೆನ್ಸಿಲು ಹಿಡಿದಿರುವಿರಲ್ಲ, ಅದಕ್ಕೇನು ಕಾರಣ?" ತುಸು ಯೋಚಿಸಿ ಬಾಂಡ್ ಹೇಳಿದರಂತೆ, "ನೋಡೀ, ಬರೆಯುವಾಗ ಏನೂ ಹೊಳೆಯದಿದ್ದರೆ, ನಾನು ಪೆನ್ಸಿಲಿನ ತುದಿಯನ್ನು ಬಾಯಲ್ಲಿ ಹಾಕಿ ಕಚ್ಚುತ್ತಿರುತ್ತೇನೆ, ಕಂಪ್ಯೂಟರನ್ನು ಹಾಗೆ ಕಚ್ಚಲು ಬರುವುದಿಲ್ಲ"

ತುಸು ಸೂಕ್ಷ್ಮವಾಗಿ ನಿರುಕಿಸಿ ನೋಡಿದರೆ, ಬರೆಯುವ ಕ್ರಿಯೆಗೆ ಭೌತಿಕ ಸಾಧನಗಳಾದ ಪೆನ್ಸಿಲು ಪೇಪರು ಇತ್ಯಾದಿಗಳು ದೊರಕಿಸಿಕೊಡುವ ಅದೊಂದು ಬಗೆಯ ಆಪ್ಯಾಯತೆಯನ್ನು ಸೂಚಿಸುತ್ತವೆ ಈ ಮಾತುಗಳು. ಬರೆಯುವವನಿಗೆ ಪೆನ್ನು ಪೇಪರು ಕೇವಲ ಸಲಕರಣೆಯಲ್ಲ, ಆತ್ಮೀಯ ಸಂಗಾತಿ. ಅದರೊಡನೆ ನೀವು ಯಾವ ಸಲುಗೆಯನ್ನು ಬೇಕಾದರೂ ತೆಗೆದುಕೊಳ್ಳಬಹುದು. ಅದರಮೇಲೆ ನಿಮ್ಮ ಸಂಪೂರ್ಣ ನಿಯಂತ್ರಣವಿದೆ. ಅದನ್ನು ಹಿಡಿದೇ ನೀವು ಬರೆಯುವುದನ್ನು ಕಲಿತಿದ್ದೀರಿ. ಕಂಪ್ಯೂಟರಿನ ಕೀಬೋರ್ಡ್ ಮೇಲೆ ನೀವು ಹೇಗೇ ಬಡಿದರೂ ಆಯಾ ಅಕ್ಷರ ಆಯಾರೀತಿಯೇ ಅಚ್ಚಾಗುತ್ತದೆ. ಆದರೆ ನಿಮ್ಮ ಲೇಖನಿ ಹಾಗಲ್ಲ. ನಿಮ್ಮ ಕೈಬರಹ ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ, ನಿಮ್ಮ ವ್ಯಕ್ತಿತ್ವ ನಿಮ್ಮ ಬರಹವನ್ನು ರೂಪಿಸುತ್ತದೆ. ಅದಕ್ಕೆಂದೇ 'ಬರಹ'ಕ್ಕೆ ನಮ್ಮ ವಿದ್ಯಾಭ್ಯಾಸಕ್ರಮದಲ್ಲಿ ಇವತ್ತಿಗೂ ಅತಿ ಪ್ರಮುಖ ಸ್ಥಾನ. ಬರಹ "ದುಂಡಗೆ"ಇಲ್ಲವೆಂದು ಕೈ ಗಿಣ್ಣಿನ ಮೇಲೆ ಹೊಡೆಯುತ್ತಿದ್ದ ನಮ್ಮ ಮೇಷ್ಟ್ರು ಇವತ್ತೂ ನಮಗೆ ಪೂಜನೀಯರು. ಬರಹದ ಬಳಕೆ ತಪ್ಪಿಹೋಗಿ ಇವತ್ತಿನ ನನ್ನ hand writing ನೋಡಿದರೆ ಮನಸ್ಸಿಗೆ ಪಿಚ್ಚೆನಿಸುತ್ತದೆ. ಬರಹವು ಭಾಷೆಯೊಡನೆಯೇ ಬೆಳೆಯಿತಲ್ಲವೇ? ವಿವಿಧ ಜನಾಂಗಗಳ ಮಾತು-ಬರಹಗಳ ಬಳಕೆಯ ಸೌಲಭ್ಯಪ್ರಜ್ಞೆಯನ್ನನುಸರಿಸಿಯೇ ತಾನೇ ಇವತ್ತು ಇಷ್ಟೊಂದು ಭಾಷೆ, ಇಷ್ಟೊಂದು ಲಿಪಿ. ಅದಕ್ಕಲ್ಲವೇ ಇಂಗ್ಲಿಷಿನ R ಮತ್ತು ದೇವನಾಗರಿಯ र ಅಷ್ಟೊಂದು ಬೇರೆಯಾಗಿ ಬೆಳೆದದ್ದು? ಅದಕ್ಕಲ್ಲವೇ ವಿವಿಧ ಭಾಷೆಗಳ ನಡುವಿನ ಇಷ್ಟೊಂದು ಸಾಮ್ಯ-ವ್ಯತ್ಯಾಸಗಳು. ಮಾತಿನಂತೆಯೇ ಬರಹ ನಿರಂತರ ಚಲನಶೀಲ. ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ ಪರಿವರ್ತನೆಹೊಂದುತ್ತಾ, ಎರಡು ವಿಭಿನ್ನ ಕಾಲಘಟ್ಟಗಳಲ್ಲಿ, ದೇಶಮಾನಗಳಲ್ಲಿ ಬೇರೆಯೇ ಆಗಿಬಿಡುತ್ತದೆ. ಆದ್ದರಿಂದ ಲಿಪಿಯೊಂದರ ಅವತಾರ ಜನಾಂಗವೊಂದರ ಬರೆಯುವಿಕೆಯ ವೈಶಿಷ್ಟ್ಯದ ಮೇಲೆ ಅವಲಂಬಿಸಿರುತ್ತದೆ. ಬರೆಯುವುದನ್ನು ನಿಲ್ಲಿಸಿ ಇರುವ ಲಿಪಿಯನ್ನು ಮುದ್ರಣಕ್ಕೆ ಅಳವಡಿಸಿ ಅದನ್ನು "standardise" ಮಾಡಿದ ಮೇಲೆ ಹೊಸ ಲಿಪಿಗಳು ಇನ್ನೆಲ್ಲಿ? ಅದರಿಂದಲೇ ಬಹುಶಃ ಮುದ್ರಣ ಮಾಧ್ಯಮ ಅಸ್ತಿತ್ವಕ್ಕೆ ಬಂದಮೇಲೆ ಮತ್ತಾವುದೂ ಹೊಸ ಲಿಪಿ ಬೆಳೆಯಲೇ ಇಲ್ಲವೇನೋ, ಬೆಳೆಯುವುದೂ ಇಲ್ಲವೇನೋ!

ಒಂದು ಕಂಪ್ಯೂಟರು ಸಾವಿರ ಪುಸ್ತಕಗಳನ್ನು ಅಡಗಿಸಿಕೊಂಡಿರಬಹುದು, ಆದರೆ ಅದನ್ನು ಪುಸ್ತಕವೆನ್ನಲಾದೀತೇ? ಸಾವಿರ ಪುಸ್ತಕಗಳನ್ನು ಹೊದಿಕೆ ಹೊಚ್ಚಿ ಒಪ್ಪಗೊಳಿಸಿ ಶೋಕೇಸಿನಲ್ಲಿಡುವಂತೆ ಕಂಪ್ಯೂಟರನ್ನು ಇಡಲಾದೀತೇ? ಕಂಪ್ಯೂಟರು ಯಾರಬಳಿಯಾದರೂ ಇರಬಹುದು. ಆದರೆ ಅದರ ಹೂರಣ ಹೊರಗೆ ಕಾಣುತ್ತದೆಯೇ? ಅದರಲ್ಲಿ ಪುಸ್ತಕಗಳೇ ಇರಬಹುದು, ಕೆಲಸಕ್ಕೆ ಬಾರದ ಮತ್ತೇನೇ ಇರಬಹುದು, ಅದೇನಿದ್ದರೂ ಅದು ಕಂಪ್ಯೂಟರ್ ಆಗಿಯೇ ಉಳಿಯುತ್ತದೆಯೇ ಹೊರತು ಅದರ ಹೂರಣವೇ ಅದಾಗಲಾರದು. ಇವತ್ತಿಗೂ ನಾವು ಸರಸ್ವತಿಯೆಂದು ಪುಸ್ತಕವನ್ನು ಪೂಜಿಸುತ್ತೇವೆಯೇ ಹೊರತು ಕಂಪ್ಯೂಟರನ್ನಲ್ಲ. ಕಂಪ್ಯೂಟರಿನ ಬಳಕೆಯಿಲ್ಲದ ನನ್ನ ಲೇಖಕಮಿತ್ರರೊಬ್ಬರು ಅವರ ಎರಡುಸಾವಿರ ಪುಸ್ತಕಗಳ ಲೈಬ್ರರಿಯಲ್ಲಿ (ಸದಾ ಸ್ವಚ್ಛ) ಟೇಬಲಿನ ಮೇಲೆ ಲಕ್ಷಣವಾಗಿ ಒಂದು ಹದಿನೈದಿಪ್ಪತ್ತು ಬಿಳೀ ಹಾಳೆಗಳನ್ನೊಳಗೊಂಡ ಒಂದು ಬರಹದ ಪ್ಯಾಡ್ ಮತ್ತು ಒಂದು ಪೆನ್ನು ಸಿದ್ಧವಾಗಿ ಇಟ್ಟಿರುತ್ತಾರೆ. ಅಲ್ಲಿ ಕುಳಿತು ಬರೆಯುವುದೇ ಒಂದು ಆನಂದ (ತಲೆಗೆ ಏನಾದರು ಹೊಳೆದರೆ). ಹೀಗೆ ಹೇಳುವಾಗ ನ್ಯೂಸ್ ಪೇಪರಿನ ಅನಿವಾರ್ಯತೆ ಕುರಿತ ಜಾಹೀರಾತೊಂದು ನೆನಪಿಗೆ ಬರುತ್ತದೆ. ನ್ಯೂಸ್ ಪೇಪರನ್ನು ಶೌಚಾಲಯದಲ್ಲಿ ಕೂಡ ಕೂತು ತೆರೆದು ಓದಬಹುದು, ಆದರೆ e-ಪತ್ರಿಕೆಯನ್ನು ಹಾಗೆ ಓದಬರುವುದಿಲ್ಲ ಎನ್ನುತ್ತದೆ ಆ ಜಾಹೀರಾತು (ಅಪವಾದವೆಂದರೆ, ನನ್ನ ಸಹೋದ್ಯೋಗಿಯೊಬ್ಬ ಲ್ಯಾಪ್ ಟಾಪ್ ತೆಗೆದುಕೊಂಡು ಶೌಚಕ್ಕೆ ಹೋಗಿ ಅಲ್ಲೇ ಕೂತು ದಿನ'ಪತ್ರಿಕೆ' ಓದಿ ಮುಗಿಸಿ ಬರುತ್ತಿದ್ದನೆನ್ನಿ).

ಅದೆಷ್ಟೇ ಅನುಕೂಲವಾದರೂ ಈ ಕಂಪ್ಯೂಟರ್, ಲ್ಯಾಪ್ ಟಾಪ್, ಇತ್ಯಾದಿ ಸಾಧನಗಳು ನಿಮ್ಮಿಂದ ಅದೊಂದುಬಗೆಯ 'ಮರ್ಯಾದೆ'ಯನ್ನು ನಿರೀಕ್ಷಿಸುತ್ತದೆ. ಲ್ಯಾಪ್ ಟಾಪ್ ಅನ್ನು ಎಲ್ಲೆಂದರಲ್ಲಿ ಹೊತ್ತೊಯ್ಯುವಂತಿಲ್ಲ; ಅದಕ್ಕೆ ವಿದ್ಯುತ್ ಸರಬರಾಜು ಬೇಕು, ಅದಿಲ್ಲದಿದ್ದರೂ ಅದರ ಬ್ಯಾಟರಿ ಜೀವನ ಒಂದೋ ಎರಡೋ ಗಂಟೆಗಳು. ಅಷ್ಟರೊಳಗೆ ನಿಮ್ಮ 'ಓದು/ಬರಹ'ದ ಕರ್ಮವನ್ನು ಮುಗಿಸಿ ಬರಬೇಕು; ಇಲ್ಲವೆಂದರೆ ಲ್ಯಾಪ್ ಟಾಪ್ ನೊಂದಿಗೆ ಅದರ ಸಕಲ ಪರಿಕರಗಳನ್ನೂ ಹೊತ್ತೊಯ್ಯಬೇಕು, ಹೋದರೂ ಅಲ್ಲೆಲ್ಲಾದರೂ ವಿದ್ಯುತ್ ಪೂರೈಕೆ ಇರುವ ಜಾಗೆಯಲ್ಲೇ ಕುಳಿತು ಬರೆಯಬೇಕು; ನಮ್ಮಿಷ್ಟಬಂದಂತೆ ಬೆಟ್ಟವೋ, ಕಾಡೋ ನದಿಯೋ ಎಲ್ಲೆಂದರೆ ಅಲ್ಲಿ ಕೂಡುವಂತಿಲ್ಲ. ಅದರಲ್ಲೂ, ಅದನ್ನು ಎಲ್ಲೆಂದರೆ ಅಲ್ಲಿ ಇಡುವಂತಿಲ್ಲ. ಟೇಬಲ್ಲೇ ಆಗಬೇಕು, ಇಲ್ಲವೆಂದರೆ ನಿಮ್ಮ ತೊಡೆ; ಅದನ್ನು ಇಡುವ ರೀತಿಯೋ ಅಷ್ಟೇ - ಅದರ ಫ್ಯಾನಿನ ಗಾಳಿಗೆ ಅಡಚಣೆ ಬರಬಾರದು, ಇಲ್ಲವೆಂದರೆ ಲ್ಯಾಪ್ ಟಾಪ್ ಬಿಸಿಯೇರಿ ನಿಂತೇಹೋಗಿಬಿಡುತ್ತದೆ. ಬರಹದ ಸಿದ್ಧತೆಯೇ ಇಷ್ಟು ಔಪಚಾರಿಕವಾಗಿಬಿಟ್ಟರೆ, ಬರಹ ಹೊಮ್ಮುವುದೆಂತು? ಈ ಬರಹದ ಸ್ಪೂರ್ತಿಯೋ, ಬೇರೆಲ್ಲ ಸ್ಪೂರ್ತಿಗಳಂತೆಯೇ ಅದೂ ಕೂಡ, ಹೊತ್ತಿಲ್ಲ ಗೊತ್ತಿಲ್ಲ. ಮನಸ್ಸಿಗೆ ಬಂದಾಗ ಮೇಲೇರಿ ಸವಾರಿ ಮಾಡುತ್ತದೆ. ಆಗ ಬಂದ ಹದ ಮತ್ತೊಮ್ಮೆ ಬರದು. "ಸದಮಲ ಜ್ಞಾನದ ಕುದಿ ಉಕ್ಕಿ ಬರುವಾಗ ನದರಿಟ್ಟು ನಿನ್ನೊಳು ಸದಮಲ ತತ್ವದಿ ಬರಕೋ ಪದಾ ಬರಕೋ" ಅನ್ನುತ್ತಾನೆ ಶಿಶುನಾಳ ಶರೀಫ. ಅದನ್ನು ಗುರುತು ಹಾಕಿಕೊಳ್ಳಬೇಕೆಂದು ಲ್ಯಾಪ್ ಟಾಪ್ ಶುರುಮಾಡುತ್ತಾ ಕುಳಿತುಕೊಳ್ಳುವುದುಂಟೇ? ಆದರೆ ಪೇಪರು ಪೆನ್ಸಿಲಿನ ವಿಷಯ ಹಾಗಲ್ಲ. ಅದನ್ನು ಪಕ್ಕದಲ್ಲೇ ಇಟ್ಟುಕೊಳ್ಳಬಹುದು, ಇಲ್ಲದಿದ್ದರೂ ಎದ್ದುಹೋಗಿ ಒಂದು ಪೇಪರು ಪೆನ್ಸಿಲು ತಂದು ಬರೆದುಕೊಳ್ಳಬಹುದು. ಪೇಪರಿನ ಕಂತೆಯನ್ನು ಕಿಸೆಯಲ್ಲಿ ತುರುಕಿಕೊಂಡು, ಪೆನ್ಸಿಲನ್ನು ಕೊನೆಗೆ ಕಿವಿಯಲ್ಲಿ ಕೂಡ ಸಿಕ್ಕಿಸಿಕೊಂಡು ಎಲ್ಲಿ ಬೇಕಾದರೂ ಹೋಗಬಹುದು. ನೀವು ಬರೆಯಲೆಂದೇ ಎಲ್ಲೂ ಹೋಗಬೇಕಿಲ್ಲ, ಹೋದಮೇಲೆ ಬರೆಯಲೂ ಬೇಕಿಲ್ಲ. ಸುಮ್ಮನೆ ಹೊರಗೆ ಹೋಗುವಾಗ ಇವನ್ನು ಒಯ್ದರೆ ಆಯಿತು. ಬರುವಾಗ ತಂದರೆ ಆಯಿತು. ಡಿವಿಜಿಯವರ ಜ್ಞಾಪಕ ಚಿತ್ರಶಾಲೆಯಲ್ಲೋ ಹಕ್ಕಿಯ ಪಯಣ ಸರಣಿಯಲ್ಲೋ ಎಲ್ಲೋ ಓದಿದ ಪ್ರಸಂಗ. ಖ್ಯಾತ ಸಂಗೀತವಿದ್ವಾಂಸರೊಬ್ಬರು ಯಾವಾಗಲೂ ತಮ್ಮೊಡನೆ ಒಂದು ಕಟ್ಟು ಪೇಪರು ಪೆನ್ಸಿಲು ಒಯ್ಯುತ್ತಿದ್ದರಂತೆ. ಯಾವುದೋ ಸೊಗಸಾದ ಪಲುಕೋ ಸಂಗ್ತಿಯೋ ನೆರವಲೋ ಎತ್ತುಗಡೆಯೋ ಹೊಳೆದರೆ ಅದನ್ನು ಅಲ್ಲಿಯೇ ಗುರುತು ಹಾಕಿಕೊಳ್ಳುವುದು, ಅದನ್ನೇ ಪದೇಪದೇ ಪಲುಕುತ್ತಾ ಗಟ್ಟಿಮಾಡಿಕೊಳ್ಳುವುದು, ಅದನ್ನು ಮುಂದಿನ ಸಂಗೀತ ಕಚೇರಿಯಲ್ಲಿ ಬಳಸುವುದು ಅವರ ವಾಡಿಕೆ. ಹೀಗೊಮ್ಮೆ ಹೊರಗೆ ಹೋದಾಗ ಅವತ್ತು ಎಂದೂ ಇಲ್ಲದ ಅದ್ಭುತವಾದ ರಾಗಸಂಚಾರವೊಂದು ಹೊಳೆದುಬಿಟ್ಟಿದೆ; ವಾಡಿಕೆಯಂತೆ ಬರೆದುಕೊಳ್ಳಲು ಪೇಪರು ಪೆನ್ಸಿಲು ಹುಡುಕುತ್ತಾರೆ, ಆದರೆ ಅವತ್ತೇ ಅದನ್ನು ಮರೆತಿರಬೇಕೇ? ಸಂಚಾರದ ನಡೆಯೋ ಕ್ಲಿಷ್ಟಾತಿ ಕ್ಲಿಷ್ಟ, ನೆನಪಿನಲ್ಲೂ ಉಳಿಯುವುದಲ್ಲ, ಬರೆದುಕೊಳ್ಳೋಣವೆಂದರೆ ಪೇಪರು ಪೆನ್ನು ಇಲ್ಲ. ಚಡಪಡಿಸಿ ಹೋದರಂತೆ. ಕೊನೆಗೆ ಇವರ ಪಾಡು ಗಮನಿಸಿದ ಯಾರೋ ಸಹೃದಯರು ಅದೆಲ್ಲಿಂದಲೋ ಒಂದು ಪೇಪರು ಪೆನ್ಸಿಲು ಸಂಪಾದಿಸಿ ತಂದಿತ್ತ ಮೇಲೇ ಸಮಾಧಾನ ಆ ವಿದ್ವಾಂಸರಿಗೆ. ಈ ಸ್ಪೂರ್ತಿದೇವತೆಯರ ಉಪಟಳವೇ ಹಾಗೆ. ಅವರು ಬಂದಾಗ ನೀವು ತಯಾರಾಗಿರಬೇಕೇ ಹೊರತು ನಿಮಗೆ ಬೇಕಾದಾಗ ಅವರು ಬರುವುದಿಲ್ಲ. ಗೆಳೆಯ ಜಯಂತರು ಅಲ್ಲೂ hifi technology ಬಿಟ್ಟುಕೊಡರು. ಹೀಗೆ "ಸದಮಲ ಜ್ಞಾನದ ಕುದಿ ಉಕ್ಕಿ ಬರುವಾಗ" ಅದನ್ನು ಅವರು ಮೊಬೈಲಿನಲ್ಲಿ ನಮೂದಿಸಿಕೊಳ್ಳುತ್ತಾರಂತೆ, ಮತ್ತೆ ಯಾವಾಗಲಾದರೂ lap top ಗೆ ವರ್ಗಾಯಿಸಿದರಾಯಿತು! ನಾನಂತೂ ಇನ್ನೂ ತಾಂತ್ರಿಕವಾಗಿ ಅಷ್ಟು ಮುನ್ನಡೆ ಸಾಧಿಸಿಲ್ಲ; ಲ್ಯಾಪ್ ಟಾಪಿನಲ್ಲಿ ಟೈಪು ಮಾಡಿ ಒಗ್ಗಿದ ನನ್ನ ಬೆರಳಿಗೆ ಇನ್ನೂ ಮೊಬೈಲಿನ ಅಕ್ಷರಗಳು ಒಗ್ಗಿಲ್ಲ, ಇರಲಿ.

ಕಾವ್ಯದಷ್ಟು ಸೃಜನಶೀಲವಲ್ಲದ (ಲೇಖನ, ಪ್ರಬಂಧ, ವಿಚಾರ ಎಂದಿಟ್ಟುಕೊಳ್ಳೋಣ) ಬರಹಕ್ಕೆ ಬೇಕಾದ ಸಾಧನ ಸಲಕರಣೆಗಳೇ ಬೇರೆ. ಅದಕ್ಕೆ ಸ್ಫೂರ್ತಿಯ ಅಂಶ ಕಡಿಮೆ. ಅಲ್ಲಿ ವಿಚಾರದ ಪ್ರಖರತೆ, ಹರಿವು, ಸುಸಂಬದ್ಧತೆ ಮುಖ್ಯವೇ ಹೊರತು ಭಾವದ ತೀವ್ರತೆಯಲ್ಲ. ಅದಕ್ಕೆ ಈಗಾಗಲೇ ಓದುಗರ ಗುಂಪೊಂದಿದೆ. ಬರಹಗಾರ ಆ ಗುಂಪನ್ನು ಮನಸ್ಸಿನಲ್ಲಿಟ್ಟೇ ತನ್ನ ವಾದಸರಣಿಯನ್ನು ಮಂಡಿಸುತ್ತಾನೆ. ಅದು ಹುಟ್ಟುವುದು ಅವನ ಮನಸ್ಸಿನಲ್ಲಾದರೂ ಬೆಳೆಯುವುದು ಗುಂಪಿನ ಮಧ್ಯೆಯೇ. ಆ ದೃಷ್ಟಿಯಿಂದ ಅದು ಬಹಿರ್ಮುಖಿ. ಆದ್ದರಿಂದಲೇ ಲೇಖನವೊಂದಕ್ಕೆ ಸ್ಫೂರ್ತಿಗಿಂತಾ ಪ್ರಯತ್ನ ಮುಖ್ಯವಾಗುತ್ತದೆ, ಆದರೆ ಕಾವ್ಯಕ್ಕೆ ಸ್ಫೂರ್ತಿಯೇ ಮುಖ್ಯ (ಅದನ್ನು ಅಲಂಕರಿಸುವಲ್ಲಿ ಪ್ರಯತ್ನವಿದ್ದರೂ, ಕಾವ್ಯದ ಜೀವವಿರುವುದು ಸ್ಫೂರ್ತಿಯಲ್ಲೇ). ಆದ್ದರಿಂದ ನೀವು ಕಂಪ್ಯೂಟರಿನಮುಂದೆಯೋ ಪೆನ್ನು ಪೇಪರು ಹಿಡಿದೋ ದಿನಗಟ್ಟಲೆ ಕುಳಿತು ಪುಟಗಟ್ಟಲೆ ಲೇಖನ ಬರೆಯಬಹುದು, ಆದರೆ ಕಾವ್ಯವನ್ನಲ್ಲ. ಇನ್ನು ಕತೆಯ ವಿಷಯ ನನಗೆ ಗೊತ್ತಿಲ್ಲ. ಕತೆಯೊಂದು ಮನಸ್ಸಿನ ಗಜಗರ್ಭದಲ್ಲಿ ೧೨ ವರ್ಷ ಕಳೆದು ಅದೆಲ್ಲೋ ಕರಗಿಯೇ ಹೋಯಿತು. ಮತ್ತೊಂದು ಕತೆ ತುಸುಕಾಲ ಸೊಗಸಾಗಿ ಬರೆಯಿಸಿಕೊಂಡಿತಾದರೂ ಅದೇಕೋ ಮುಂದುವರೆಯಲೊಲ್ಲದು. ಅದೂ ಕಾವ್ಯದಂತೆಯೇ ಸ್ಫೂರ್ತಿಜನ್ಯವಾದರೂ ಕಾವ್ಯದಂತೆ ಒಮ್ಮೆ ಮಿಂಚಿ ಮರೆಯಾಗಿಬಿಡುವುದಲ್ಲ. ಸ್ಫೂರ್ತಿ ಕತೆಗೆ ಕಾಲಿದ್ದಂತೆ. ಅದು ಉದ್ದಕ್ಕೂ ಹೊಳೆಯುತ್ತಲೇ ಹೋಗಬೇಕು. ಜೊತೆಗೆ ಅದಕ್ಕೆ ಗದ್ಯದ ಸುಸಂಬದ್ಧತೆಯೂ (ಅದಕ್ಕೆ ಬೇಕಾದ ನಿರಂತರ ಪ್ರಯತ್ನವೂ) ಜೊತೆಗೆ ತನ್ನದೇ ಆದ ತಂತ್ರಗಾರಿಕೆಯೂ ಬೇಕು. ಆದರೆ ಕಾವ್ಯ ಹಾಗಲ್ಲ. ಯಾವುದೋ ಘಳಿಗೆ ಮಿಂಚಿ ಮರೆಯಾಗುತ್ತದೆ. ಅದನ್ನು ಹಿಡಿದಿಟ್ಟುಕೊಂಡಿರೋ ಸರಿ, ಇಲ್ಲದಿದ್ದರೆ ಇಲ್ಲ. ಅದು ಒಂದು ಸಲಕರಣೆಯಾಗಿ ನಿಮ್ಮಿಂದ ಬಯಸುವುದು, ಹೊಳೆದಾಗ ಗುರುತು ಹಾಕಿಕೊಳ್ಳಲು ಕೇವಲ ಒಂದು ಸೀಸದ ಕಡ್ಡಿ ಮತ್ತು ಕಾಗದದ ತುಂಡು ಮಾತ್ರ. ಯಾರೋ ಲೇಖಕಿಯೊಬ್ಬರ ಪುಟ್ಟ ಕವನವೊಂದರಲ್ಲಿ (ಕವನವೋ ಕತೆಯೋ ನೆನಪಿಲ್ಲ, ಲೇಖಕಿಯ ಹೆಸರೂ ನೆನಪಿಲ್ಲ) ಅದರ ನಾಯಕಿ ತನ್ನ ಬ್ರಾ ದ ಸ್ಟ್ರಾಪಿನ ಮೇಲೆ ಕವನದ ಸಾಲೆರಡನ್ನು ಬರೆದಿಟ್ಟು ಅದನ್ನು ಒಗೆದಂತೆಲ್ಲಾ ಕರಗುವ ಆ ಸಾಲುಗಳನ್ನು ನೋಡುತ್ತಾ ವಿಷಾದವನ್ನನುಭವಿಸುತ್ತಾಳೆ. ಸಂವೇದನೆಯ ಅನೇಕ ಸ್ತರಗಳನ್ನೊಳಗೊಂಡ ಆ ಪ್ರತಿಮೆ ನನಗೆ ತುಂಬಾ ಹಿಡಿಸಿತು. ಕಾವ್ಯವೊಂದು ಹುಟ್ಟುವುದು ಕವಿಯ ಅತ್ಯಂತ ಖಾಸಗಿ ಕ್ಷಣದಲ್ಲಿ, ಬೆಳೆಯುವುದು ಅವನ/ಳ ಏಕಾಂತದಲ್ಲಿ, ಸೂಕ್ಷ್ಮ ಸಂವೇದನೆಗಳಲ್ಲಿ. ಅಲ್ಲಿ ಅವನಿಗೆ ಓದುಗರಿಲ್ಲ, ಚಪ್ಪಾಳೆಗಳಿಲ್ಲ, ಸ್ಪರ್ಧೆಯಿಲ್ಲ, ಅದನ್ನವನು ಯಾವ ಪತ್ರಿಕೆಗೂ ಕಳಿಸಬೇಕಿಲ್ಲ, ಬ್ಲಾಗಿನಲ್ಲೂ ಪ್ರಕಟಿಸಬೇಕಿಲ್ಲ. ಅಲ್ಲಿ ಬೇರೆ ಯಾರೂ ಇಲ್ಲದಿರುವುದರಿಂದ ಅವನು ಸರ್ವತಂತ್ರಸ್ವತಂತ್ರ. ಮನಕ್ಕೆ ಬಂದದ್ದನ್ನು ಬರೆಯಬಹುದು. ಚಂದ ಕಂಡದ್ದನ್ನು ಉಳಿಸಿಕೊಳ್ಳಬಹುದು. ಲಕ್ಷಣಕ್ಕೆ ಪ್ರಾಸ, ಲಯ, ಛಂದಸ್ಸುಗಳೇನಿದ್ದರೂ ಹೊರಗೆ ತೋರಿಸುವ ಅಲಂಕಾರ ಅಷ್ಟೇ. ಕಾವ್ಯ ಆಗತಾನೇ ಹುಟ್ಟಿದ ಮಗುವಿನಂತೆ, ಬೆತ್ತಲೆ. ಅಲಂಕಾರ ಆಮೇಲೆ. ಅದನ್ನು ಅಲ್ಲಿ ಇಲ್ಲಿ ಪ್ರಕಟಿಸುವುದೋ, ಪ್ರದರ್ಶಿಸುವುದೋ ಆಮೇಲೆ. ಈ ಸೃಜನದ ಏಕಾಂತಕ್ಕೆ, ಧ್ಯಾನಕ್ಕೆ, ತಾದಾತ್ಮ್ಯಕ್ಕೆ ಪೆನ್ನು ಪೇಪರಿನಂತಹ ಸುಲಭ ಸರಳ ಸಲಕರಣೆಗಳೇ least disturbing ಎಂದು ನನ್ನ ಅನಿಸಿಕೆ.

ಈ ದಿಕ್ಕಿನಲ್ಲಿ ಯೋಚಿಸುತ್ತಾ ನನ್ನದೇ ಬರಹಗಳನ್ನು ಗಮನಿಸುತ್ತಿದ್ದಾಗ ಮತ್ತೊಂದು ಅಂಶ ನನ್ನ ಗಮನಕ್ಕೆ ಬಂತು. ಮೇಲೆ ತಿಳಿಸಿದ ಸೆಪ್ಟೆಂಬರು ೨೦೦೭ ರ ವರಿಗಿನ ಕವನಗಳೆಲ್ಲಾ ಹಳೆಯವು, ಕಂಪ್ಯೂಟರಿನ ಬಳಕೆ ಅಷ್ಟಾಗಿ ಇಲ್ಲದ ಕಾಲದಲ್ಲಿ ಬರೆದು ಆಮೇಲೆ ಬ್ಲಾಗಿನಲ್ಲಿ ಹಾಕಿದ್ದು. ಸೆಪ್ಟೆಂಬರ್ ೨೦೦೭ರ ಮೇಲೆ ಮೇಲೆ ನಾನು ಬರೆದದ್ದು ಕೇವಲ ಎರಡೇ ಎರಡು ಕವನ, ಅದೂ ನನಗೆ ಚೆನ್ನಾಗಿ ನೆನಪಿರುವಂತೆ ಎಲ್ಲೋ ಪೇಪರಿನಮೇಲೆ ಗೀಚಿ ಇಟ್ಟುಕೊಂಡಿದ್ದು, ಬಿಡುವಾದಾಗ ಪರಿಷ್ಕರಿಸಿ ಬ್ಲಾಗಿಗೆ ಹಾಕಿದ್ದು. ಅದು ಬಿಟ್ಟರೆ ಆ ನಂತರ ನಾನು ಬರೆದದ್ದೆಲ್ಲಾ (ಅಷ್ಟೊಂದು ಸೃಜನಶೀಲವೆನ್ನಲಾಗದ) ಲೇಖನಗಳೇ! ಅವಕ್ಕೆ ಬರೆದು, ಹೊಡೆದು, ಹರಿದುಹಾಕುವ ಪೆನ್ನು ಪೇಪರಿಗಿಂತ, ಕಟ್ ಕಾಪಿ ಪೇಸ್ಟ್ ಸಾಮರ್ಥ್ಯವನ್ನೊಳಗೊಂಡ ಕಂಪ್ಯೂಟರೇ ಸುಲಭವೆನ್ನಿಸಿದ್ದೂ ನಿಜ, ಅದನ್ನು ಕೂಡಲೇ ಬ್ಲಾಗಿನಲ್ಲಿ ಪ್ರಕಟಿಸುವ ಅನುಕೂಲವಿದ್ದದ್ದೂ ನಿಜ.

ಸ್ಫೂರ್ತಿಗಾಗಿ ಧ್ಯಾನಿಸುವುದಕ್ಕಿಂತಾ ಸುಮ್ಮನೇ ಕುಳಿತು ಯೋಚಿಸಿ ಬರೆಯುವುದು ನನಗೀಗ ಸುಲಭವಾದ್ದರಿಂದ ಸ್ಪೂರ್ತಿಯನ್ನಪೇಕ್ಷಿಸುವ ಕಾವ್ಯ ಹಿಂದೆ ಸರಿದು ಬರಹಗಳ ಹರಿವು ಮುಂಚೂಣಿಗೆ ಬಂತೇ? ಅಥವಾ ಕಾವ್ಯದ ಬುಗ್ಗೆ ಸೊರಗಿದ್ದರ ಕೊರತೆಯನ್ನು ನೀಗಲೆಂದೇ ಇಷ್ಟೆಲ್ಲಾ ಬರೆಯುತ್ತಿದ್ದೇನೆಯೇ? ತುಸು ದಿನ ಬರೆಯುವುದು ಬಿಟ್ಟರೆ ಮತ್ತೆ ನಾನು ಕಾವ್ಯದ ದಾರಿಗೆ ಹೊರಳಿಕೊಳ್ಳಬಹುದೇ? ಪ್ರಶ್ನೆಗಳು ಹಲವು. ಉತ್ತರ ಕಂಡುಕೊಳ್ಳಬೇಕು.

Sunday, August 8, 2010

ಕಿ ರಂ ನಾಗರಾಜ್ ಇನ್ನಿಲ್ಲ !


ದಿಗ್ಭ್ರಮೆಯಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ನೆನ್ನೆ ಸಂಜೆಯಷ್ಟೇ ಗೆಳೆಯ ಶ್ರೀಕಾಂತರೊಡನೆ ಮಾತಾಡುತ್ತಾ ಮಾತು ಕಿ ರಂ ಬಗ್ಗೆ ತಿರುಗಿತ್ತು. ಶ್ರೀಕಾಂತ್ ಆಗಷ್ಟೇ ಸುಚಿತ್ರಾ ಚಲನಚಿತ್ರ ಸೊಸೈಟಿಯ ಆವರಣದಲ್ಲಿ ನಡೆದ "ಮತ್ತೆ ಬಂತು ಶ್ರಾವಣ" ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದಾರೆ. ಕಾರ್ಯಕ್ರಮ ಸುಮಾರು ೭.೩೦ ಕ್ಕೆ ಮುಗಿದಿದೆ. ಕಾರ್ಯಕ್ರಮ ಮುಗಿದ ನಂತರ ಇನ್ನೊಬ್ಬ ಗೆಳೆಯ ಸತ್ಯ ಅವರಿಗೆ ಕಿ ರಂ ಅವರನ್ನು ಪರಿಚಯಿಸಿದ್ದಾರೆ, ಅವರೊಂದಿಗೆ ಮಾತಾಡಿದ ಶ್ರೀಕಾಂತ್ ಮನೆಗೆ ಬಂದೊಡನೆ gtalkನಲ್ಲಿ ನನ್ನೊಡನೆ ಮಾತಾಡುತ್ತಾ ಕಾರ್ಯಕ್ರಮದ ಬಗ್ಗೆ ಹೇಳಿದ್ದಾರೆ. ಆಗಿನ್ನೂ ರಾತ್ರಿ ೮.೩೦. ಮಾತು ಕಿ ರಂ ಅವರ ಕಾವ್ಯಾಸಕ್ತಿಯ ಬಗ್ಗೆ, ಕನ್ನಡದೆಡೆಗೆ ಅವರ ನಿಲುವಿನ ಬಗ್ಗೆ ಸಾಗಿದೆ, ಹೀಗೇ ಸುಮಾರು ಎರಡು ಗಂಟೆ ಹರಟಿದ್ದೇವೆ. ಅದಾದನಂತರ ಗೆಳೆಯ ಜಯಂತರ ಬ್ಲಾಗನ್ನೋದುತ್ತಾ ಅಲ್ಲಿ ಸಿಕ್ಕಿದ "ಅವಧಿ"ಯ ಲಿಂಕ್ ಹಿಡಿದು ಅಲ್ಲಿಗೆ ಹೋದರೆ ಕಿ ರಂ - ಲಂಕೇಶರಬಗ್ಗೆ ಒಂದು ಫೋಟೋ ಲೇಖನ. ಮತ್ತೆ ತುಸುಹೊತ್ತಿನ ಬಳಿಕ ಬೇರಾವುದೋ ಕವನದ ಲಿಂಕ್ ಅನುಸರಿಸಿ "ಕೆಂಡಸಂಪಿಗೆ" ಈ-ಪತ್ರಿಕೆಗೆ ಹೋದರೆ ಅಲ್ಲಿ ಕಿ ರಂ ಬಗೆಗೆ ಮತ್ತೊಂದು ಲೇಖನ, ಅಬ್ದುಲ್ ರಶೀದರಿಂದ. ಅದೇಕೋ ಮನಸ್ಸಿನಲ್ಲಿ ಕಿ ರಂ ಏನಾದರೂ ಸತ್ತುಹೋದರೋ ಎಂಬ ಭಾವನೆ ಬಂದು ಹೋಯಿತು. ಎಷ್ಟೆಂದರೆ ಈ ಲೇಖಕ್ಕೆ "ಕಿ ರಂ ಕ್ಷೇಮವಷ್ಟೇ" ಎಂದು ಕಾಮೆಂಟ್ ಹಾಕಹೊರಡುವಷ್ಟು. ಲೇಖನವೂ ಶ್ರದ್ಧಾಂಜಲಿಯಂತೆಯೇ ಇತ್ತು. ಆದರೆ ಅದು ಶ್ರದ್ಧಾಂಜಲಿಯಾಗಿರಲಿಲ್ಲ, ಅದು ಪ್ರಕಟವಾದ ಸಮಯ ಶುಕ್ರವಾರ ಮಧ್ಯರಾತ್ರೆ; ನಾನು ನೋಡುತ್ತಿದ್ದದ್ದು almost ಭಾನುವಾರ ಬೆಳಗಿನ ಜಾವ.

ಆದರೂ ಕಿರಂ ಬಗ್ಗೆ ಇದೇನು ಇಷ್ಟೊಂದು ಇವತ್ತು ಎನಿಸಿ ಕಿ ರಂ ನಾಗರಾಜ್ ಎಂದು ಗೂಗಲಿಸಿದವನಿಗೆ ಭಾರಿ ಶಾಕ್ ಕಾದಿತ್ತು, ಕಿ ರಂ ನಾಗರಾಜ್ ಇನ್ನಿಲ್ಲ! ಅವತ್ತು update ಆದ ವೆಬ್ ಪುಟಗಳ ಸಂಖ್ಯೆ ೪, ಅದರಲ್ಲಿ ಸಾವಿನ ಸುದ್ದಿ ಹೊತ್ತದ್ದು ಒಂದೇ ಪುಟ, ಆಗಷ್ಟೇ ಎರಡು-ಮೂರು ಗಂಟೆಗಳ ಹಿಂದೆ ಪ್ರಕಟವಾದದ್ದು

ಕನ್ನಡದ ಹಿರಿಯ ವಿಮರ್ಶಕ, ಚಿಂತಕ ಕಿ ರಂ ನಾಗರಾಜ್ ಬಗ್ಗೆ, ಅವರ ಕಾವ್ಯಪ್ರೀತಿಯಬಗ್ಗೆ, ಮಾತಿನಲ್ಲೇ ರನ್ನ ಪಂಪ ಬೇಂದ್ರೆಯರನ್ನು ಪುನಃಸೃಷ್ಟಿಸುತ್ತಿದ್ದ ಅವರ ವೈಖರಿಯ ಬಗ್ಗೆ ತನ್ಮಯರಾಗಿ ನೆನೆಸುವ, ಹೇಳುವ ಬರೆಯುವ ಅವರ ಸಾವಿರಾರು ಶಿಷ್ಯರಿದ್ದಾರೆ. ಕಿ ರಂ ಕಾವ್ಯದ ಬಗ್ಗೆ ಮಾತಾಡಿದರೆ ಅದೊಂದು ಬೇರೆಯೇ ಲೋಕವಿದ್ದಂತೆ ಎನ್ನುವ ಗೆಳೆಯ ಸತ್ಯರಿಗಂತೂ ಕಿ ರಂ ಅಂದರೆ ದೇವರೇ ಸರಿ. ಅವರನ್ನು ಪರಿಚಯಿಸಿಕೊಡುವಂತೆ ಸತ್ಯರಿಗೆ ಅನೇಕಬಾರಿ ದುಂಬಾಲು ಬಿದ್ದಿದ್ದೇನೆ. ಆದರೂ ನನ್ನದೇ ಸೋಮಾರಿತನವೋ ಅದೇನೋ, ಅದೇಕೋ ಆಗಿಬರಲಿಲ್ಲ. ಕಿ ರಂ ಬಾಯಲ್ಲಿ ಕಾವ್ಯ ಕೇಳುವ ಪುಣ್ಯ ಕೊನೆಗೂ ಒದಗಲಿಲ್ಲ, ಇನ್ನು ಒದಗುವುದೂ ಇಲ್ಲ. ಜೀವನದಲ್ಲಿ ಹೀಗೇ ಅನೇಕ ಬಸ್ಸುಗಳನ್ನು ಮಿಸ್ ಮಾಡಿಕೊಂಡಿದ್ದೇನೆ.

ಎರಡೋ ಮೂರೋ ವರ್ಷಗಳ ಹಿಂದೆ ಬಿ ಪಿ ವಾಡಿಯ ರಸ್ತೆಯಲ್ಲಿ ಬ್ಲಾಗ್ ಬರಹಗಾರರ ಪುಟ್ಟದೊಂದು ಸಮಾವೇಶ ಜರುಗಿತು. ಆಗ ಅಲ್ಲಿಗೆ ಬಂದ ಕಿ ರಂ ತಮ್ಮ ಚಿಕ್ಕ ಭಾಷಣದಲ್ಲಿ ಕನ್ನಡ ಲಿಪಿ ಸುಧಾರಣೆಯ ಬಗ್ಗೆ ಮಾತಾಡಿದರು. ಆ ಬಗ್ಗೆ ಅವರ ನಿಲುವುಗಳು ನನಗೆ ಸರಿಬೀಳಲಿಲ್ಲ, ಜೊತೆಗೆ ತುಸು ಆಶ್ಚರ್ಯವನ್ನೂ ತಂದಿತು. ಪ್ರಶ್ನೆಗಳನ್ನು ರೂಪಿಸಿಕೊಂಡು ಎದ್ದು ನಿಂತು ಪ್ರಸ್ತುತಪಡಿಸುವಷ್ಟರಲ್ಲಿ ಮಾತು ಮುಗಿಸಿದ ಕಿ ರಂ ಕೂಡಲೇ ಹೊರಟುಬಿಟ್ಟಿದ್ದರು.

ಈ ಬಗ್ಗೆ ಈಗ ೫-೬ ಗಂಟೆಗಳ ಹಿಂದಷ್ಟೇ ಶ್ರೀಕಾಂತರೊಡನೆ ಮಾತಾಡುತ್ತಾ ನಗೆಯಾಡಿದ್ದೆ. ಕಿ ರಂ ಎದುರು ಎಂದಾದರೂ ಈ ಪ್ರಶ್ನೆಗಳನ್ನು ಎತ್ತಬೇಕೆಂದಿದ್ದೆ. ಇವತ್ತು ಕಿ ರಂ ಈ ಲೋಕವನ್ನೇ ಬಿಟ್ಟು ಹೊರಟುಬಿಟ್ಟಿದ್ದಾರೆ, ನನ್ನ ಪ್ರಶ್ನೆಗಳು ಹಾಗೆಯೇ ಉಳಿದಿವೆ.

Monday, July 26, 2010

ಕಿಟಕಿ ಪಕ್ಕದ ಸೀಟು

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ನನ್ನ ಮಡದಿ ತಾನಾಗಿಯೇ ನನಗೆ ಕಿಟಕಿ ಸೀಟನ್ನು ಬಿಟ್ಟುಕೊಟ್ಟದ್ದು ಅದೇಕೋ ಮನಸ್ಸಿಗೆ ನಾಟಿತು. ಅವಳು ಹಾಗೆ ನನಗೆ ಕಿಟಕಿ ಸೀಟು ಬಿಟ್ಟುಕೊಟ್ಟದ್ದೇನು ಮೊದಲನೆಯ ಸಲವೂ ಅಲ್ಲ, ಹೊಸದೂ ಅಲ್ಲ. ಆದರೆ ಈ ಔದಾರ್ಯ ಯಾವಾಗ ಶುರುವಾಯಿತೋ ನೆನಪಿಲ್ಲ. ಕಿಟಕಿ ಸೀಟಿಗಾಗಿ ನಾವು ಕೊನೆಯ ಸಲ ಕಿತ್ತಾಡಿದ್ದು ಯಾವಾಗ? ನೆನಪಿಗೆ ಬರುತ್ತಿಲ್ಲ, ಕಿತ್ತಾಡುತ್ತಿದ್ದಂತೂ ನಿಜ. ಬಹಳಷ್ಟೇ ದಿನ ನಡೆದುಕೊಂಡುಬಂದ ಈ ಕಿತ್ತಾಟ ಅದು ಯಾವುದೋ ಮಾಯದಲ್ಲಿ ನನ್ನ ಗಮನಕ್ಕೇ ಬರದೇ ಕೊನೆಗೊಂಡಿತ್ತು.

ಹತ್ತು ವರ್ಷದ ಹಿಂದೆ ನಾವು ಮಧುಚಂದ್ರಕ್ಕಾಗಿ ದಿಲ್ಲಿಯಿಂದ ಮನಾಲಿಗೆ ಪಯಣಿಸುತ್ತಿದ್ದಾಗಿನ ಘಟನೆ ನೆನಪಿಗೆ ಬರುತ್ತದೆ. ಇದು ನಾವಿಬ್ಬರೂ ಬಹಳ ಆಸ್ತೆಯಿಂದ ಯೋಜಿಸಿದ್ದ ಪ್ರವಾಸವಾಗಿತ್ತು. ಅಲ್ಲದೇ ಹಿಮಾಲಯದ ದರ್ಶನ ನನ್ನ ಬಹುದಿನಗಳ ಹೆಬ್ಬಯಕೆಯಾಗಿತ್ತು ಕೂಡ. ಬೆಟ್ಟಗಳು ಬೆಳ್ಳಗೂ ಇರುತ್ತವೆ ಎಂಬುದು ನನ್ನ ಜ್ಞಾನ ಪ್ರಪಂಚದಲ್ಲಿ ನಮೂದಾದ್ದ ವಿಷಯವೇ ಹೊರತು, ನನ್ನ ಭಾವಪ್ರಪಂಚದಿಂದ ಅದು ಸಂಪೂರ್ಣ ಹೊರಗು. ಹೀಗಾಗಿ ಬೆಳ್ಳಿ ಬೆಟ್ಟದ ಬೆರಗನ್ನು ನೋಡಲು ಮನಸ್ಸು ಬಹಳ ಉತ್ಸುಕವಾಗಿತ್ತು. ದಿಲ್ಲಿಯಿಂದ ರಾತ್ರಿ ಹೊರಟ ಬಸ್ಸು ಕುಲು ಕಣಿವೆಯನ್ನು ಪ್ರವೇಶಿಸುವ ಹೊತ್ತಿಗೆ ಅರುಣೋದಯದ ಸಮಯ. ಇವಳಿಗೆ ತಡೆಯದಷ್ಟು ನಿದ್ದೆ. ಕಣಿವೆಯ ಕೊನೆಯಲ್ಲಿ ನಿಧಾನಕ್ಕೆ ಕೆಂಪಾಗುತ್ತಿತ್ತು. ಬೆಳ್ಳನೆಯ ಗೋಡೆಗಳಂತೆ ನಿಂತಿದ್ದ ಹಿಮಶೀತಲ ಶೈಲಗಳನ್ನು ಮುಟ್ಟುವುದೋ ಬೇಡವೋ ಎಂಬಂತೆ ಸೂರ್ಯನ ಪ್ರಥಮ ಕಿರಣಗಳು ಅದರ ತುದಿಯನ್ನು ತುಸುವೇ ಸೋಂಕಿ ಸೋಂಕಿ ಹಿಂಜರಿಯುತ್ತಿದ್ದವು. ಬೆಟ್ಟವೂ ಸ್ವಲ್ಪಹೊತ್ತು ತನ್ನ ಸ್ವಭಾವಸಿದ್ಧವಾದ ದಿವ್ಯ ಶೀತಲತೆಯನ್ನು ನಟಿಸಿತು. ಆದರೇನು? ರವಿಗೆ ಕರಗದ ಮಂಜೇ? ಸ್ಪರ್ಶಕ್ಕೆ ನಾಚಿ ನಿಧಾನಕ್ಕೆ, ಬಹು ನಿಧಾನಕ್ಕೆ ಹಿಮಗಿರಿಯ ತುದಿಗಳು ಕೆಂಪೇರತೊಡಗಿದ್ದುವು. ಜುಮ್ಮೆನ್ನುವ ಮಲಯ ಮಾರುತಕ್ಕೆ ಕುಲು ಕಣಿವೆಯ ಹೂ ಗಿಡ ಮರಗಳು ಪುಳಕಿತಗೊಂಡು ತಲೆದೂಗುತ್ತಿದ್ದವು. ನೋಡನೋಡುತ್ತಿದ್ದಂತೆ ಇದುವರೆಗೂ ತಮೋನೀರಸವಾಗಿದ್ದ ಇಡೀ ಕಣಿವೆ ತನ್ನ ಸೌಂದರ್ಯ ಸಮಸ್ತವನ್ನು ಮರೆಮಾಚಿದ್ದ ನಿಷೆಯ ಜವನಿಕೆಯನ್ನು ಕಿತ್ತೊಗೆದು ತನ್ನೆಲ್ಲ ವರ್ಣ ವೈವಿಧ್ಯದೊಂದಿಗೆ ಮುಂಜಾವಿನ ಸೊಬಗನ್ನು ಸ್ವಾಗತಿಸಲು ಎದ್ದು ನಿಂತಿತು. ಶುಭ್ರ ಶ್ವೇತ ಗಿರಿ ಪಂಕ್ತಿ, ನಡುವಿನ ಬಿಡುವಿನಲ್ಲಿ ತುಸುವೇ ಕೆಂಪೇರಿದ ನಸುಗಪ್ಪು ನೀಲಿ ಆಕಾಶ, ಅಲ್ಲೊಂದು ಇಲ್ಲೊಂದು ತುಂಡು ಮೋಡಗಳು, ಕ್ಷಣಕ್ಕೊಮ್ಮೆ ರಂಗು ಬದಲಿಸುತ್ತಿದ್ದ ಸೂರ್ಯ, ಇವೆಲ್ಲಾ, ಮೊದಲೇ ವರ್ಣಮಯವಾದ ಕಣಿವೆಯ ಮೇಲೆ ತಮ್ಮ ಕುಂಚವಾಡಿಸಿ ಅದೊಂದು ಹೊಸ ಲೋಕವನ್ನು ನಿರ್ಮಿಸಿದ್ದುವು.

ಗಳಿಗೆಗೊಂದು ಹೊಸ ರಂಗು, ರೂಪ ತಳೆಯುತ್ತಿದ್ದ ಈ ಚೇತೋಹಾರಿ ದೃಶ್ಯಾವಳಿಯನ್ನು ಸೆರೆಹಿಡಿಯುತ್ತಾ, ಹಿಮಾಲಯದ ಮಹೋನ್ನತ ಶಿಖರಗಳ ಭವ್ಯತೆಗೆ ಬೆರಗಾಗುತ್ತಾ ಮೈಮರೆತಿದ್ದಾಗ ಒಂದು ವಿಷಯ ನನ್ನ ಗಮನಕ್ಕೆ ಬಂತು. ಇಡೀ ಬಸ್ಸಿನಲ್ಲಿ ಕುಳಿತಿದ್ದ ಸುಮಾರು ಮೂವತ್ತು ಜೋಡಿಗಳಲ್ಲಿ, ಕಿಟಕಿಯ ಪಕ್ಕ ಕುಳಿತಿದ್ದ ಗಂಡು ನಾನೊಬ್ಬನೇ. ಉಳಿದವರೆಲ್ಲಾ ಆ ಜಾಗವನ್ನು ತಂತಮ್ಮ ಮಡದಿಯರಿಗೆ ಒಪ್ಪಿಸಿ ಕೊಟ್ಟು ತಾವು ನಿದ್ದೆ ಹೊಡೆಯುತಿದ್ದರು. ನನ್ನ ಪುರುಷಪ್ರಜ್ಞೆ ಸ್ವಲ್ಪ ನಾಚಿತು; ಇವಳ ಮುಖ ನೋಡಿದೆ. ಅವಳೂ ಈ ವಿಷಯವನ್ನು ನನಗಿಂತ ಮುಂಚೆಯೇ ತುಸು ಅಸಮಾಧಾನದಿಂದ ಗಮನಿಸಿದ್ದಂತೆ ಕಂಡಿತು. ಹೊಸ ಪರಿಚಯ, ಕೇಳುವುದು ಹೇಗೆ ಎಂದು ಸುಮ್ಮನಿದ್ದಿರಬಹುದು. ಗಂಡಾಗಿ ನಾನೇ ಈ etiquette ಯನ್ನು ಅರ್ಥಮಾಡಿಕೊಳ್ಳಲಿ ಎಂಬ ನಿರೀಕ್ಷೆಯೂ ಇರಬಹುದು. ಎಷ್ಟುಹೊತ್ತು ಕಳೆದರೂ ನಾನು ಆ ಸಭ್ಯತೆಯನ್ನು ತೋರಿಸದಿದ್ದುದು ಕಂಡು, ಇದೆಂಥಾ ವಡ್ಡನ ಜೊತೆ ಗಂಟುಬಿತ್ತೆಂದು ಅನಿಸಿರಲೂ ಸಾಕು. ನನಗೋ, ಪುರುಷರು ಮಹಿಳೆಯರಿಗೆ ಕಿಟಕಿ ಸೀಟು ಬಿಟ್ಟುಕೊಡಬೇಕೆನ್ನುವ ಈ ಅಲಿಖಿತ ಅರ್ಥಹೀನ ಕಂದಾಚಾರ, ಈ ಸ್ವರ್ಗಸದೃಶ ಪಯಣದಲ್ಲಿ, ಮೊಸರನ್ನದಲ್ಲಿ ಸಿಕ್ಕ ಕಲ್ಲಿನಂತೆ ದೊಡ್ಡ ಕಿರಿಕಿರಿಯನ್ನೇ ಉಂಟುಮಾಡಿತು. Once in a life time ಎನಿಸುವ ಪಯಣವೊಂದುಕಡೆ, etiquette ಪಾಲಿಸಲಿಲ್ಲವೆಂದು ಮುಖವೂದಿಸಿಕೊಂಡು ಕುಳಿತ ಮುದ್ದಿನ ಮಡದಿಯೊಂದುಕಡೆ (ಅತ್ತ ದರಿಯೇನೋ ಸರಿ, ಇತ್ತ ಪುಲಿ ಎನ್ನಲಾದೀತೇ). ಆದರೂ, ಜೀವನದ ಪ್ರತಿಯೊಂದನ್ನೂ ಹಂಚಿಕೊಂಡು ಬದುಕಬೇಕಾದ ನಾವು ಈ ಆನಂದವನ್ನೂ ಹಂಚಿಕೊಳ್ಳಬೇಕಲ್ಲವೇ? ಅಷ್ಟೇ ಏನು, ಕಿಟಕಿಯಪಕ್ಕ ಕೂಡುವುದು ಅವಳ ಹಕ್ಕೂ ಅಲ್ಲವೇ? ಒಬ್ಬಳೇ ಬಂದಿದ್ದರೆ ಅವಳು ಆ ಹಕ್ಕನ್ನು ನಿರ್ಭಿಡೆಯಿಂದ ಚಲಾಯಿಸುತ್ತಿದ್ದಳಲ್ಲವೇ? ಇಬ್ಬರೂ ಒಟ್ಟಿಗೇ ಪಯಣಿಸುತ್ತಿದ್ದರಿಂದ ಈ ಕಿಟಕಿ ಸೀಟಿನ ಆನಂದ ಇಬ್ಬರಿಗೂ ಸಮಾನವಾಗಿ ದಕ್ಕಬೇಕಾದ್ದೇ ನ್ಯಾಯ. ಹೇಗೂ ನಾನು ಕಿಟಕಿಯ ಪಕ್ಕದಲ್ಲಿ ಒಂದು ಕಾಲು ಭಾಗದಷ್ಟು ದಾರಿ ಪಯಣಿಸಿದ್ದಾಗಿದೆ. ಅವಳೊಂದುಸ್ವಲ್ಪ ಹೊತ್ತು ಕೂಡಲಿ, ಮತ್ತೆ ಅವಳೇ ನನಗೆ ಬಿಟ್ಟುಕೊಡುತ್ತಾಳೆ; ಇಷ್ಟಕ್ಕೂ ಅವಳಿಗೆ ಅಸಮಾಧಾನವಾಗಿದೆ ಎನ್ನುವುದು ಕೇವಲ ನನ್ನ ಭ್ರಮೆಯಿರಬಹುದು; ನಾನು ಅದುವರೆಗೂ ಆ ದೃಶ್ಯವೈಭವವನ್ನು ನೋಡುತ್ತಾ ಚಿಕ್ಕ ಹುಡುಗರಂತೆ ಹಿಗ್ಗುತ್ತಿದ್ದುದನ್ನು ಅದೊಂದು ರೀತಿಯ ಆತ್ಮೀಯತೆಯಿಂದ ಗಮನಿಸುತ್ತಿದ್ದಳಲ್ಲವೇ. ನಾನೇನು ಬೇರೆಯವನೇ, ಅವಳಿಗೆ ಬೇಕಿದ್ದರೆ ಕೇಳಿಯೇ ಕೇಳುತ್ತಿದ್ದಳು - ಉಳಿದಂತೆ ಎಷ್ಟು ಕೇಳಿಲ್ಲ; ಆದರೂ ಇರಲಿ ಯಾವುದಕ್ಕೂ ವಿಚಾರಿಸಿ ನೋಡುವಾ; ಅವಳಿಗೆ ಬೇಕಾದರೆ ಬಿಟ್ಟುಕೊಡುತ್ತೇನೆ, ಇಲ್ಲದಿದ್ದರೆ ನಾನೇ ಇಲ್ಲಿ ಮುಂದುವರೆಯುತ್ತೇನೆ ಎಂದೆಲ್ಲಾ ಯೋಚಿಸಿ, "ಕಿಟಕಿ ಪಕ್ಕ ಕೂತ್ಕೋಬೇಕಾ?" ಎಂದು ಕೇಳಿದೆ. ಅವಳು ಹೂಂಗುಟ್ಟಿದಳು. "ಎಲ್ಲರೂ ಅವರವರ ಹೆಂಡತಿಯರಿಗೆ window seat ಬಿಟ್ಟುಕೊಟ್ಟಿದ್ದಾರೆ, ನಾನು ಮಾತ್ರ ನಿನ್ನ ಕೇಳಲೂ ಇಲ್ಲ ಅಂತ ಕೋಪಾನಾ?" ಎಂದು ಕೇಳಿದೆ. ಮುಗುಳ್ನಕ್ಕು ಅದಕ್ಕೂ ಹೂಂ ಎಂದಳು. ಸರಿ, ಇನ್ನು ಬೇರೆ ದಾರಿಯೇ ಇಲ್ಲ. ಕಿಟಕಿ ಸೀಟನ್ನು ಅದೊಂದು ಮಾಣಿಕ್ಯವೋ ಎಂಬಂತೆ ಅವಳಿಗೆ ಹಸ್ತಾಂತರಿಸಿ ನಾನು ಈಚೆ ಬದಿಗೆ ಬಂದು ಕುಂತೆ.

ತರ್ಕದಿಂದ ಈ "ತ್ಯಾಗ"ಕ್ಕೆ ನನ್ನ ಬುದ್ಧಿಯನ್ನು ಒಲಿಸಿದೆನಾದರೂ ಅದೇಕೋ ಭಾವ ಮಾತ್ರ ಬುದ್ಧಿಗೇಡಿ ಮಗುವಿನಂತೆ ಮುಸುಗುಡುತ್ತಲೇ ಇತ್ತು, "ಕಿಟಕಿ ಸೀಟು... ಕಿಟಕಿ ಸೀಟೂಊ" ಎಂದು. ಇವಳಾದರೋ, ಜಾಗ ಬದಲಿಸಿದವಳೇ ಒಂದೈದು ನಿಮಿಷ ಹೊರಗೆ ನೋಡುತ್ತಿದ್ದವಳು ಮತ್ತೆ ನನ್ನೆಡೆ ತಿರುಗಿ ಹೆಗಲ ಮೇಲೆ ತಲೆಯಿಟ್ಟು ಹಾಗೇ ನಿದ್ದೆಹೋದಳು; ದೈವವೇ ಎದುರು ನಿಂತಿರಲು, ಚರುಪು ಪಡೆಯಲು ಪೂಜಾರಿಯ ಹಿಂದೆ ಓಡುವಂತೆ. ಈಗಂತೂ ದೂರದ ಬೆಳ್ಳಿಯ ಶಿಖರ ಹೊತ್ತಿಕೊಂಡು ಉರಿಯುತ್ತಿದೆಯೋ ಎಂಬಂತೆ ಕಿತ್ತಳೆ ಬಣ್ಣದೊಂದಿಗೆ ಜಗಜಗಿಸುತ್ತಿತ್ತು. ಅನ್ಯಾಯ ಇಷ್ಟು ಅಮೂಲ್ಯವಾದ ದೃಶ್ಯವನ್ನು ಕಳೆದುಕೊಳ್ಳುತ್ತಿದ್ದಾಳಲ್ಲಾ ಈ ಪೆದ್ದು ಹುಡುಗಿ - ನನಗೂ ಇಲ್ಲ, ತನಗೂ ಇಲ್ಲ - ಎನ್ನಿಸಿದರೂ ಮಗುವಿನಂತೆ ನಿದ್ರಿಸುತ್ತಿದ್ದ ಅವಳ ಮುಖವನ್ನೇ ಕೆಲಹೊತ್ತು ನಿಟ್ಟಿಸಿದೆ. ಈಗ ಅವಳ ಮುಖದಮೇಲೆ ನಲಿಯುತ್ತಿದ್ದ ಸೂರ್ಯ ಕಿರಣ, ಮುಖದ ಚೆಲುವನ್ನು ಇಮ್ಮಡಿಸಿತ್ತು. ಆದರೆ ಈ ಸೌಖ್ಯ ಬಹುಕಾಲ ಉಳಿಯಲಿಲ್ಲ. ಅವಳು ಎಚ್ಚೆತ್ತು "ಮುಖಕ್ಕೆ ಗಾಳಿ ಹೊಡೆಯುತ್ತಿದೆ, ಕಿಟಕಿ ಮುಚ್ಚಿ, ನಾನು ಸ್ವಲ್ಪ ನಿದ್ದೆ ಮಾಡುತ್ತೇನೆ" ಎಂದಾಗ ಮಾತ್ರ ನನಗೆ ಎಲ್ಲಿಲ್ಲದ ಕೋಪ ಬಂತು. ಆದರೇನು, courtship etiquette ಮೀರಲಾದೀತೇ - ಸಮಯ, ಸಂದರ್ಭ. ಕೊನೆಗೂ ತನ್ನ ಹಕ್ಕಿನ ವಿಂಡೋ ಸೀಟನ್ನು ಪಡೆದ ನೆಮ್ಮದಿಯಲ್ಲಿ ಕಿಟಕಿ ಮುಚ್ಚಿ ನಿದ್ದೆ ಹೋದಳು ಹುಡುಗಿ.

ಕಿಟಕಿ ಸೀಟಿಗಾಗಿ ಹೀಗೆ ಶುರುವಾದ ನಮ್ಮ ಕಾದಾಟ ಬಹಳಷ್ಟು ದಿನ ಮುಂದುವರಿಯಿತೆನ್ನಿಸುತ್ತದೆ. ಪ್ರತಿ ಬಾರಿಯೂ ನಾನೇ ತ್ಯಾಗ ಮಾಡಿ ದೊಡ್ಡವನಾಗುತ್ತಿದ್ದೆ. ಆಗೊಮ್ಮೆ ಈಗೊಮ್ಮೆ ನಾನು ಹಾಗೆ ತ್ಯಾಗ ಮಾಡದಿದ್ದರೆ "ನೀವು 'ಯಾವಾಗಲೂ' ಹೀಗೆಯೇ" ಎನ್ನುವ ಬಾಣ ಸಿದ್ಧವಾಗಿರುತ್ತಿತ್ತು. ಹಾಗೆಂದು ಅವಳಿಗೇನು ಕಿಟಕಿಯ ಬಳಿ ಕೂಡುವ ಹುಚ್ಚೇನೂ ಇದ್ದಂತಿರಲಿಲ್ಲ. ಇನ್ನು ಕಿಟಕಿಯ ಹೊರಗೆ ನೋಡುವ ವಿಚಾರವಂತೂ ದೂರವೇ ಉಳಿಯಿತು. ಬೇರೆ ಯಾರ ಜೊತೆ ಹೋದರೂ ಕಿಟಕಿಯ ಬಗ್ಗೆ ಚಕಾರವನ್ನೂ ಎತ್ತುತ್ತಿರಲಿಲ್ಲ. ಬಹಳಷ್ಟು ಸಾರಿ ತನಗೆ ಗಾಳಿ ಆಗುವುದಿಲ್ಲ ಎಂದು ಹೇಳಿ ಅವರಿಗೇ ಬಿಟ್ಟುಕೊಡುತ್ತಿದ್ದಳು. ಅವಳ ತಕರಾರೆಲ್ಲಾ ನನ್ನೊಡನೆ ಪಯಣಿಸುವಾಗ ಮಾತ್ರ. ಆಗ ಮಾತ್ರ ಕಿಟಕಿ ಅವಳಿಗೆ ಹಕ್ಕಿನ ವಿಷಯವಾಗುತ್ತಿತ್ತು.

ಹಾಗೆಂದು ಕಿಟಕಿಗೋಸ್ಕರ ನನ್ನದೇನು ಹಕ್ಕಿನ ಕಾದಾಟವಲ್ಲ; ಅಥವ ಅದೊಂದು ಅನಿವಾರ್ಯವೂ ಅಲ್ಲ. ಪ್ರಯಾಣ ಅನಿವಾರ್ಯವಾದಾಗ ಎಲ್ಲೋ ಹೇಗೋ ನಿಂತುಕೊಂಡೂ ಪಯಣಿಸಿದ್ದಿದೆ. ಆದರೆ ಕಿಟಕಿಯ ಪಕ್ಕ ಕುಳಿತೂ ಅದರ ಸದುಪಯೋಗ ಪಡೆಯದಿದ್ದರೆ ಮಾತ್ರ ಹೊಟ್ಟೆ ಉರಿಯುತ್ತದೆ. ಹಾಗೆ ನೋಡಿದರೆ ಕಿಟಕಿಯೊಂದೇ ಅಲ್ಲ, ಪಯಣದ ಬಗ್ಗೆ ನನಗೆ ನನ್ನದೇ ಆದ ಅನೇಕ ಗೊತ್ತುಪಾಡುಗಳಿವೆ. ಪಯಣ ತೀರ ಅನಿವಾರ್ಯವಲ್ಲದಿದ್ದರೆ ನಾನು ಈ ಗೊತ್ತುಪಾಡುಗಳನ್ನು ಸಾಕಷ್ಟೇ ಕಟ್ಟುನಿಟ್ಟಾಗಿ ಅನುಸರಿಸುತ್ತೇನೆ, ಮತ್ತು ಅಂಥಾ ಪ್ರಯಾಣಕ್ಕಾಗಿ ಕಾಯುತ್ತೇನೆ, ಒಂದು ಬಸ್ಸು ಮಿಸ್ಸಾದರೂ ಪರವಾಗಿಲ್ಲ (ಅದರಿಂದಲೇ ನಾನು ತೀರಾ 'ನಚ್ಚು' ಎಂಬ ಹಣೆಪಟ್ಟಿಯನ್ನೂ ಸಂಪಾದಿಸಿದ್ದೇನೆ).

ಪ್ರಯಾಣಕ್ಕೆ ಬಸ್ಸಿಗಿಂತ ರೈಲಾದರೆ ಸೂಕ್ತ; ಅದು ಸ್ವಚ್ಚವಾಗಿ ಥಳಥಳಿಸುತ್ತಿರಬೇಕಿಲ್ಲವಾದರೂ ಗಲೀಜಾಗಿರಬಾರದು; ಬಸ್ಸೇ ಆದರೆ ಅದು ವಿಡಿಯೋ ಕೋಚ್ ಆಗಿರಬಾರದು; 'ಸಂಗೀತ'ದ ಗಲಾಟೆಯಿರಬಾರದು; ಬಸ್ಸಿನಲ್ಲಿ ತೀರ ಹಿಂದಲ್ಲದ ತೀರಾ ಮುಂದಲ್ಲದ ಮಧ್ಯ ಭಾಗದ ಸೀಟಾದರೆ ಉತ್ತಮ; ಒಬ್ಬನೇ ಪಯಣಿಸುವಾಗ ಇಬ್ಬರ ಸೀಟಾದರೆ ಒಳ್ಳೆಯದು; ಅಷ್ಟಾದರೂ ಆ ಎರಡನೆಯ ಸೀಟಿಗೆ ಬರುವವರು ಯಾರೋ ಎಂಬ ಟೆನ್ಷನ್ ತಪ್ಪಿದ್ದಲ್ಲ. ಯಾರೂ ಬರದಿದ್ದರೆ ಒಳ್ಳೆಯದು. ಹಾಗೊಂದುವೇಳೆ ಬಂದರೂ ಅದು ಕಿರಿಕಿರಿಯ ಪ್ರಯಾಣಿಕನಲ್ಲದಿದ್ದರೆ ನಾನು ಧನ್ಯ. ಅದೇನೇ ಇರಲಿ, ಆ ಪ್ರಾಣಿ ಬಂದು ಕೂಡುವವರೆಗೂ ಜೀವಕ್ಕೆ ನೆಮ್ಮದಿಯಿಲ್ಲ.

ಇದು ನಿಮಗೆ ತಮಾಷೆಯೆನ್ನಿಸಬಹುದು. ಆದರೆ ನಗಬೇಡಿ, ಅನುಭವದಿಂದ ಹೇಳುತ್ತೇನೆ; ನಿಮ್ಮ ಆ "ಸಹ" ಪ್ರಯಾಣಿಕರಿಗೆ ನಿಮ್ಮ ಪಯಣವನ್ನೇ ಗಬ್ಬೆಬ್ಬಿಸಿಬಿಡುವ ತಾಕತ್ತಿರುತ್ತದೆ. ಈ ಪಕ್ಕಪಯಣಿಗರ ತರಹೇವಾರಿ ರಖಂಗಳನ್ನು ನೋಡಿಬಿಟ್ಟಿದ್ದೇನೆ. ಕೆಲವರಿರುತ್ತಾರೆ. ಅವರು ನಿಮ್ಮ ಪಕ್ಕ ಕುಳಿತಿರುವುದೇ ಗೊತ್ತಾಗುವುದಿಲ್ಲ ನಿಮಗೆ. ತಾವಾಯಿತು, ತಮ್ಮ ಪುಸ್ತಕವೋ/ಮ್ಯಾಗಜೀನೋ ಆಯಿತು. ಇನ್ನು ಕೆಲವರು ನಿಮ್ಮತ್ತ ಒಂದು ಸೌಜನ್ಯದ ಮುಗುಳ್ನಗು ಎಸೆಯುತ್ತಾರೆ; ಹಿತಮಿತವಾಗಿ ಮಾತಾಡುತ್ತಾರೆ. ಆಸಕ್ತಿ ಕುದುರಿದರೆ ಪಯಣದುದ್ದಕ್ಕೂ ಒಳ್ಳೆಯ ಕಂಪನಿಯಾಗಬಲ್ಲರು ಇವರು. ಆದರೆ ಈ ಎರಡೂ ತರಹೆಯ ಜನ ಅಲ್ಪಸಂಖ್ಯಾತರು. ಇವರಿಗಿಂತಲೂ ಮುಂದುವರೆದ ಇನ್ನೊಂದು ಪಂಗಡವಿದೆ. ಇವರಿಗೆ ಮೌನವೆಂದರೆ ಆಗದು. ಯಾರಾದರೂ ಸುಮ್ಮನೆ ಇರುವುದನ್ನು ಕಂಡರೆ ಆಗದು. ವಿನಾಕಾರಣ ನಿಮ್ಮನ್ನು ಮಾತಿಗೆಳೆಯುತ್ತಾರೆ. ನಿಮ್ಮ ವೈಯಕ್ತಿಕ ವಿವರಗಳೆಲ್ಲ ಇವರಿಗೆ ಬೇಕು. ನೀವು ಕೆಲಸ ಮಾಡುವುದೆಲ್ಲಿ (ಕೆಲಸ ಮಾಡುತ್ತೀರಾ?), ಸಂಬಳ ಎಷ್ಟು, ಎಷ್ಟು ಇನ್ಕಂ ಟ್ಯಾಕ್ಸ್ ಕಟ್ಟುತ್ತೀರಿ, ಮಕ್ಕಳೆಷ್ಟು, ಕೊನೆಗೆ ಹೆಂಡತಿಯರೆಷ್ಟು ಎನ್ನುವವರೆಗೂ ಎಲ್ಲ ವಿವರಗಳೂ ಬೇಕು. ಅಷ್ಟೆಲ್ಲ ಕೇಳಿದಮೇಲೂ ಕೊನೆಗೆ "ನೀವು ಬಿಡೀಪ್ಪಾ, ಐಟಿ ಜನ. ನಿಮ್ಮಿಂದಲೇ ಬೆಲೆಯೆಲ್ಲ ಜಾಸ್ತಿಯಾಗಿ ನಮ್ಮಂಥ ಬಡವರ ಹೊಟ್ಟೆ ಮೇಲೆ ಒದ್ದೆಬಟ್ಟೆ" ಎಂದು ಮೂತಿ ದಬ್ಬುತ್ತಾರೆ.

ಇದು ಒಂದು ತರಹೆಯಾದರೆ ಇನ್ನು ಕೆಲವರಿರುತ್ತಾರೆ. ಅವರಿಗೆ ನಿಮ್ಮ ಅಸ್ತಿತ್ವವೇ ಲೆಕ್ಕಕ್ಕಿರುವುದಿಲ್ಲ. ಬಂದವರೇ ನಿಮ್ಮನ್ನೂ ಒತ್ತರಿಸಿಕೊಂಡು ಧೊಪ್ಪನೆ ಕೂತಿದ್ದೇ ಸೈ. ಇದು ಇಬ್ಬರ ಸೀಟು, ನನ್ನ ಭಾಗ ಇದರ ಅರ್ಧ ಮಾತ್ರ ಎಂದು ಅವರಿಗೆ ಅನಿಸುವುದೇ ಇಲ್ಲ. ತಮ್ಮದೇ ಸೀಟಿನ ಮೂಲೆಯಲ್ಲಿ ನೀವೊಂದು ಕಸದಂತೆ ಬಂದು ಕುಳಿತಿದ್ದೀರೆಂದೇ ಅವರ ಅನಿಸಿಕೆ. ಆದ್ದರಿಂದಲೇ ನಿಮ್ಮನ್ನು ಆದಷ್ಟು ಒತ್ತರಿಸಿ ಉಳಿದ ಜಾಗದ ಸದುಪಯೋಗ ಮಾಡಿಕೊಳ್ಳುತ್ತಾರೆ. ಸಣ್ಣಗಿರುವುದು ಎಷ್ಟು ಹೀನಾಯ ಎಂದು ನಿಮಗನ್ನಿಸುವುದೇ ಆಗ. ಕೂತವರು ಸುಮ್ಮನೆ ಕೂಡುತ್ತಾರೆಯೇ, ಇಲ್ಲ. ಮೊಬೈಲ್ ತೆಗೆದು ಯಾರೊಡನೆಯೋ ಜೋರಾಗಿ ಸಂಭಾಷಿಸತೊಡಗುತ್ತಾರೆ, ಎಲ್ಲ ಹಾವಭಾವಗಳೊಡನೆ. ಆ ಕಡೆ ಇರುವ ಪ್ರಾಣಿಗೆ ತಮ್ಮ ಕೈಕರಣಗಳೊಂದೂ ಕಾಣದು ಎಂದು ಇವರಿಗೆ ಅನಿಸದು. ನಿಸ್ಸಂಕೋಚವಾಗಿ ನಿಮ್ಮ ಕರ್ಣಪಟಲದ ಮೇಲೆ ದಾಳಿಗೈಯುತ್ತಾ ಅವರ ವೈಯಕ್ತಿಕ ವಿವರಗಳನ್ನೆಲ್ಲಾ ನಿಮ್ಮ ಮುಂದರಚುತ್ತಾರೆ - ಅದು ಪ್ರೇಯಸಿಯೊಡನಿನ ಲಲ್ಲೆಯಿರಬಹುದು, ಅತ್ತೆಸೊಸೆಯರ ಜಗಳವಿರಬಹುದು, ಸಾಲ ವಸೂಲಿಯಿರಬಹುದು, ಆಸ್ತಿ ತಗಾದೆಯಿರಬಹುದು. ಇಲ್ಲದಿದ್ದರೆ ಮೊಬೈಲಿನಿಂದ ಜೋರಾಗಿ ಸಂಗೀತಸುಧೆಯನ್ನು ಹರಿಸತೊಡಗುತ್ತಾರೆ. ನಿಮ್ಮ ಮುಂದೆ ಅವರ ಮೊಬೈಲ್ ಕಿಂದರಿ ಏನೂ ಉಪಯೋಗವಿಲ್ಲವೆಂದು ಅವರಿಗೆ ತಿಳಿಯುವುದೇ ಇಲ್ಲ. ಇದೇನೂ ಇಲ್ಲದಿದ್ದರೂ ಕುಳಿತಹಾಗೇ ನಿಮಗೊರಗಿ ನಿಶ್ಚಿಂತೆಯಿಂದ ನಿದ್ದೆಹೋಗುತ್ತಾರೆ. ಕಿಟಕಿಯ ಪಕ್ಕ ಕುಳಿತವರು ನೀವಾದರೂ, ಅದರ ಬಾಗಿಲಿನ ಸ್ವಾಮ್ಯ ಮಾತ್ರ ಅವರದೇ. ಅದನ್ನು ಅವರಿಗೆ ಬೇಕಾದಾಗ ಮುಚ್ಚುವುದು, ತೆರೆಯುವುದು ಮಾತ್ರ ನಿಮ್ಮ ಕರ್ತವ್ಯ. ನಿಮ್ಮ ದುರದೃಷ್ಟಕ್ಕೆ ನಿಮಗೆ ಸೆಖೆಯಾದಾಗ ಅವರಿಗೆ ಚಳಿಯೂ, ನಿಮಗೆ ಚಳಿಯಾದಾಗ ಅವರಿಗೆ ಸೆಖೆಯೂ ಆಗುತ್ತದೆ.

ಇದನ್ನೆಲ್ಲಾ ಹೇಗೋ ಸಹಿಸಿಕೊಳ್ಳೋಣವೆಂದರೆ ಇನ್ನೊಂದು ಬಾಧೆಯಿದೆಯಲ್ಲ, ಅದು ಮಾತ್ರ ಸಹಿಸಲಸದಳ. ಅದು ಜರದಾ-ಬೀಡಾ ಜಗಿಯುವವರದ್ದು. ಸದಾ ಸರ್ವದಾ ಜಗಿಯುತ್ತಲೇ ಇರಬೇಕು, ಉಗಿಯುತ್ತಲೇ ಇರಬೇಕು. ಇವರ ಪಾಲಿಗೆ ಕಿಟಕಿ ಕೇವಲ ಪೀಕುದಾನಿಯಷ್ಟೇ. ಮೊದಲುಮೊದಲು ನಿಮ್ಮ ಅನುಮತಿ ಕೇಳುತ್ತಾರೆಂದುಕೊಂಡರೂ ಎಷ್ಟು ಸಲ ಅಂತ ಅನುಮತಿ ಕೇಳುತ್ತಲೇ ಇರುವುದು? ನೀವಾದರೂ ಏನಂದುಕೊಳ್ಳುತ್ತೀರಿ. ಆದ್ದರಿಂದ ನಿಮ್ಮ ಅನುಮತಿಗೂ ಕಾಯದೇ ಎದ್ದು ನಿಮ್ಮ ಮೇಲೆ ಬಗ್ಗಿ ತಲೆ ಹೊರಚಾಚಿ ಸರಿಯಾಗಿ ತುಪ್ಪಿ ಕುಳಿತುಕೊಳ್ಳುತ್ತಾರೆ, ಮತ್ತೊಂದು ಗುಕ್ಕಿಗೆ (ಕೆಳಗೆ ಯಾರಾದರೂ ಬಿಳೀಬಟ್ಟೆ ಧರಿಸಿ ಹೋಗುತ್ತಿದ್ದರೆ, ಗೋವಿಂದ). ಒಂದುರೀತಿಯಲ್ಲಿ ಅವರು ನಿಮ್ಮ ಅನುಮತಿ ಕೇಳದಿರುವುದೇ ಸರಿ. ಅನುಮತಿ ಕೇಳಲು ನಿಮ್ಮ ಮುಂದೆ ಬಾಯಿಬಿಟ್ಟರೆ ನಿಮಗೇ ಕಷ್ಟ.

ಇನ್ನು ನೀವೇನಾದರೂ ಘಾಟ್ ಸೆಕ್ಷನ್ನಿನಲ್ಲಿ ಪಯಣಿಸುತ್ತಿದ್ದರೋ, ನಿಮ್ಮನ್ನು ದೇವರೇ ಕಾಪಾಡಬೇಕು. ಘಟ್ಟದ ರುದ್ರಸೌಂದರ್ಯವನ್ನು ಸವಿಯಬೇಕೆಂದು ನೀವು ಬಸ್ಸಿನಲ್ಲಿ ಪಯಣಿಸುವಿರಾದರೆ ನೀವು ಅಷ್ಟು ಆಸೆಯಿಟ್ಟುಕೊಳ್ಳದಿರುವುದೇ ಒಳ್ಳೆಯದು. ಬಸ್ಸು ಒಂದೆರಡು ತಿರುವು ತಿರುಗಿದ್ದೇ ತಡ, ಪಕ್ಕದಿಂದ ಬೇಡಿಕೆ ಬರುತ್ತದೆ "ವಾಂತಿ ಮಾಡಬೇಕು" ಪ್ರಕೃತಿಯ ಕರೆ, ಇಲ್ಲ ಅನ್ನುವಂತೆಯೇ ಇಲ್ಲ. ಅದೇನು ಬಸ್ಸಿನಲ್ಲಿ ವಾಂತಿಮಾಡುವುದು ಸಾಂಕ್ರಾಮಿಕ ರೋಗವೋ ಏನೋ, ಮತ್ತೊಂದೆರಡು ತಿರುವು ಹೋಗುವಷ್ಟರೊಳಗೆ ಇಡೀ ಬಸ್ಸಿಗೆ ಬಸ್ಸೇ ಕಿಟಕಿಯಿಂದ ತಲೆ ಹೊರಚಾಚಿ ವಾಂತಿಮಾಡಿಕೊಳ್ಳುತ್ತಿರುತ್ತದೆ. ಆಗಂತೂ ನೀವು ವಾಂತಿ ಮಾಡದಿದ್ದರೂ ಕಿಟಕಿಯನ್ನು ಮುಚ್ಚಿ ತೆಪ್ಪಗೆ ಕೂತುಕೊಳ್ಳುವುದೇ ವಾಸಿ. ಇನ್ನು, ಹಿಂದಿನವರಿಗೆ ಯಾವುದೇ ಪೂರ್ವಸೂಚನೆ ಕೊಡದೆ ತಲೆ ಹೊರಹಾಕಿ ವಾಂತಿಮಾಡುವ ಭೂಪ-ಭೂಪತ್ನಿಯರೂ (ವೈಯಾಕರಣರು ಮನ್ನಿಸಬೇಕು) ಇರುತ್ತಾರೆ. ಆಗಂತೂ ಮನೆ ತಲುಪಿದ ಮೇಲೆ ನಿಮಗೆ ಸಚೇಲಸ್ನಾನವೇ ಗಟ್ಟಿ. ಅದುವರೆಗೂ ಮತ್ತೊಮ್ಮೆ ಮುಖಪ್ರಕ್ಷಾಳನವಾಗದಂತೆ ಕಿಟಕಿ ಭದ್ರಮಾಡಿಕೊಂಡು ಮನೆಯ ಬರವನ್ನೇ ಹಾರೈಸುತ್ತಾ ಮುದುರಿ ಕೂಡುವುದಷ್ಟೇ ನಿಮ್ಮ ಕೆಲಸ. ಕಿಟಕಿಗೆ ಆಸೆಪಟ್ಟಿರಲ್ಲವೇ, ಅದರ ಫಲ ಇದು. ಆಸೆಯೇ ದುಃಖಕ್ಕೆ ಮೂಲಕಾರಣ ಎಂದು ಬುದ್ಧ ಹೇಳಿದ್ದ, ಆದರೆ ನಿಮಗಂತು ಬುದ್ಧಿ ಬರಲಿಲ್ಲ. "ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ..."

ಇಷ್ಟಾದರೂ ಕಿಟಕಿಯ ಸೆಳೆತವಂತೂ ಹೋಗದು. ಕಿಟಕಿ ಪಕ್ಕದ ಸೀಟಿನಲ್ಲಿ ಏನೋ ಆಕರ್ಷಣೆ ಇದೆ. ಈ ಮಾತನ್ನು ನಿಮ್ಮಲ್ಲಿ ಬಹಳಷ್ಟು ಮಂದಿ ಒಪ್ಪುತ್ತೀರಿ ಎಂದು ನನಗೂ ಗೊತ್ತು. ಪಯಣಕ್ಕೆ ಯಾವ ಸೀಟಾದರೇನು, ಅದು ಎತ್ತಿ ಹಾಕದಿದ್ದರೆ ಸರಿ ಎನ್ನುವ ಸೌಕರ್ಯವಾದಿಗಳೂ ಸಹ, ಅವಕಾಶ ಸಿಕ್ಕರೆ ಕಿಟಕಿಯ ಸೀಟನ್ನೇ ಬಯಸುತ್ತಾರೆನ್ನುವುದು ನನ್ನ ಅನುಭವಕ್ಕೆ ಬಂದ ಸತ್ಯ. ಇಷ್ಟಕ್ಕೂ ಅಂಥಾದ್ದೇನಿದೆ ಕಿಟಕಿ ಪಕ್ಕದಲ್ಲಿ? ಇನ್ನೇನಿಲ್ಲದಿದ್ದರೂ ಆರಾಮವಾಗಿ ಪಕ್ಕಕ್ಕೊರಗಿ ಕೂಡಲು ಆಧಾರ ಸಿಗುತ್ತದೆ. ಮತ್ತೆ ತುಂಬಿದ ಬಸ್ಸಿನಲ್ಲಿ ನೀವು ಕಿಟಕಿಯ ಅಕ್ಕದ (ಕಿಟಕಿ ಪಕ್ಕದ ಪಕ್ಕ!) ಸೀಟಿನಲ್ಲೇನಾದರೂ ಕುಳಿತರೆ ನಿಮ್ಮ ತಲೆಯಮೇಲೇ ಬುಟ್ಟಿಯನ್ನಿಟ್ಟು ನಿಮ್ಮ ಹೆಗಲಮೇಲೆ ಪೃಷ್ಠವನ್ನೂರಿ ನಿಂತೇ ಪಯಣಿಸುವವರ ಕೋಟಲೆಯಿದೆ. ಅದರಿಂದ ತಪ್ಪಿಸಿಕೊಳ್ಳಬೇಕಾದರೆ ಕಿಟಕಿ ಪಕ್ಕದ ಸೀಟೇ ಉತ್ತಮ. ಅಲ್ಲದೇ ಕಿಟಕಿ ಪಕ್ಕ ಒಳ್ಳೆ ಗಾಳಿಯಾಡುತ್ತದೆ. ಅಷ್ಟು ಬಿಟ್ಟರೆ ಕಿಟಿಕಿ ಸೀಟಿನ "ಐಹಿಕ"ಉಪಯೋಗಗಳೇನೂ ಕಾಣೆ. ಆದರೆ ಕಿಟಕಿ ಪಕ್ಕದ ಪ್ರಯಾಣದ ನಿಜವಾದ ಸುಖವೇ ಬೇರೆ.

ಮೇಲೆ ಹೇಳಿದ ಕೋಟಲೆ-ಕಿರಿಕಿರಿಗಳೊಂದೂ ಇಲ್ಲದ ಕಿಟಕಿ ಸೀಟು ನಿಮಗೆ ದಕ್ಕಿತೆಂದುಕೊಳ್ಳಿ. ನಿಮ್ಮ ಮುಂದಿನ ಮೂರೋ ಐದೋ ಹತ್ತೋ ಗಂಟೆಗಳ ಪಯಣದದಾರಿ, ನಿಮ್ಮದೇ ಭಾವಪ್ರಪಂಚದ ಪಯಣಕ್ಕೆ ರಹದಾರಿ. ಬಸ್ಸು ಹೊರಟ ಮೊದಲ ಹತ್ತು-ಹದಿನೈದು ನಿಮಿಷದ ಗದ್ದಲ ಗಲಿಬಿಲಿ ಶಾಂತವಾಗುತ್ತಿದ್ದಂತೆ ನಿಧಾನವಾಗಿ ಬಸ್ಸಿನ ಒಳ ಆವರಣ ಮರೆಯುತ್ತಾ ಹೋಗುತ್ತದೆ. ಹೊರಗಡೆ ಕಿಟಕಿಯ ಚೌಕಟ್ಟಿನ ಮಧ್ಯೆ ಓಡುವ ದೃಶ್ಯಾವಳಿ, ತೀಡುವ ಗಾಳಿ, ಬಸ್ಸಿನ ಎಂಜಿನ್ನಿನ ಏಕತಾನದ ನಾದ ಎಲ್ಲವೂ ಸೇರಿ ನಿಧಾನಕ್ಕೆ ಹೊಸದೊಂದು ಪ್ರಪಂಚವನ್ನು ತೆರೆದಿಡುತ್ತದೆ. ಹೊರಗೆ ಓಡುತ್ತಿರುವ ಬಸ್ಸಿಗೆ ಸಮಾನಾಂತರವಾಗಿ ನಿಮ್ಮ ಮನಸ್ಸಿನಲ್ಲೂ ಆಲೋಚನೆಗಳ ಬಸ್ಸು ಓಡತೊಡಗುತ್ತದೆ. ಆಲೋಚನೆಗಳು ನಿಧಾನವಾಗಿ ಕಲ್ಪನೆಗಳಾಗುತ್ತವೆ, ಕನಸಾಗುತ್ತವೆ. ಹಾಗೆಂದು ನೀವೇನು ನಿದ್ದೆ ಮಾಡಿಲ್ಲ. ಹೊರಗೆ ನಡೆಯುವ ಪ್ರತಿಯೊಂದು ವಿದ್ಯಮಾನಗಳನ್ನೂ ಗಮನಿಸುತ್ತಿದ್ದೀರಿ, ಅವೆಲ್ಲವೂ ನಿಮ್ಮ ಭಾವಪ್ರಪಂಚದಲ್ಲಿ ದಾಖಲಾಗುತ್ತಿವೆ - ಓಡುವ ಮರ-ಗಿಡಗಳು, ರಸ್ತೆ ಕಲ್ಲುಗಳು, ವಿದ್ಯುತ್ ಕಂಬಗಳು, ಕಂಬದಿಂದ ಕಂಬಕ್ಕೆ ಏರುತ್ತಾ ಇಳಿಯುತ್ತಾ ನರ್ತಿಸುವ ತಂತಿಗಳು, ಮಧ್ಯೆ ಮಧ್ಯೆ ಬಂದುಹೋಗುವ ಊರುಗಳು, ಅಲ್ಲೆಲ್ಲಾ ಕಳ್ಳೇಕಾಯಿ, ಸೌತೇಕಾಯಿ, ಮಿಠಾಯಿ ವಡೆ ಮಾರುವ ಹುಡುಗರು, ಊರು ಬದಲಾಗುತ್ತಿದ್ದಂತೆಯೇ ಬದಲಾಗುವ ಅವರ ವೇಷಭೂಷಣಗಳು, ನಡೆ-ನುಡಿಗಳು, ದಾರಿಯಲ್ಲಿ ಅಡ್ಡಹಾಯುವ ಬೆಟ್ಟಗುಡ್ಡ, ನದಿಗಳು, ದಾರಿಯುದ್ದಕ್ಕೂ ಹಾದುಹೋಗುವ ಸುಂದರವಾದ ಹಳ್ಳಿಗಳು, ಮನೆಗಳ ಚಿಮಣಿಯಿಂದ ಏಳುತ್ತಿರುವ ತೆಳ್ಳನೆ ಹೊಗೆ, ಹೊಲದಲ್ಲಿ ಕಣ್ಣಿ ಕಿತ್ತುಕೊಂಡು ಕಿವಿಯಲ್ಲಿ ಗಾಳಿಹೊಕ್ಕಂತೆ ಓಡುತ್ತಿರುವ ಬಿಳೀ ಕರು, ಕನಸಿನೂರಿನ ದಾರಿಗಳಂತೆ ಅಂಕುಡೊಂಕಾಗಿ ಏರಿಳಿದು ಮರೆಯಾಗುವ ಒಳದಾರಿಗಳು; ಕೆಲವೊಮ್ಮೆಯಂತೂ ಅಲ್ಲೇ ಇಳಿಯಬೇಕೆನ್ನಿಸುತ್ತದೆ, ಆದರೆ ನೀವು ಟಿಕೇಟು ತೆಗೆದುಕೊಂಡಿರುವುದು ಕೊನೆಯ ಸ್ಟಾಪಿಗೆ. ಇಲ್ಲಿ ಇಳಿದರೆ ಮತ್ತೆ ನಿಮ್ಮೂರು ಸೇರುವುದು ಕಷ್ಟ.

ಚಲಿಸುತ್ತಿರುವ ಬಸ್ಸಿನ ಎಂಜಿನ್ನಿನ ಏಕತಾನದ ನಾದವೂ ಮನಸ್ಸಿನಲ್ಲಿ ಅದೊಂದು ಆಧಾರಶ್ರುತಿಯನ್ನು ನಿರ್ಮಿಸುತ್ತದೆ. ಸಾಮಾನ್ಯವಾಗಿ ನನ್ನಷ್ಟಕ್ಕೆ ನಾನು ಪಯಣಿಸುತ್ತಿರುವಾಗ ಮನಸ್ಸಿನಲ್ಲಿ ಯಾವುದೋ ರಾಗವೋ ರಚನೆಯೋ ಗುನುಗುತ್ತಿರುತ್ತಿದೆ. ಅನೇಕ ಸಲ ಎಚ್ಚೆತ್ತು ಗಮನಿಸಿದಾಗ ಅದು ಎಂಜಿನ್ನಿನ ಶ್ರುತಿಗೆ ಅನುಸಾರವಾಗಿ ಹೋಗುತ್ತಿರುವುದನ್ನು ಗಮನಿಸಿ ಆಶ್ಚರ್ಯಪಟ್ಟಿದ್ದೇನೆ. ಅಷ್ಟೇಅಲ್ಲ, ನೀವು ನಿಯಮಿತ ದಾರಿಯಲ್ಲಿ ಪಯಣಿಸುತ್ತಿದ್ದೀರಾದರೆ ನಿಮ್ಮ ಆಲೋಚನೆಯ ಅಲೆಯೂ ಅದೊಂದು ರೀತಿಯ ನಿಶ್ಚಿತತೆಯನ್ನು ಪಡೆಯುತ್ತದೆ. ಉದಾಹರಣೆಗೆ ನಾನು ಸಾಮಾನ್ಯವಾಗಿ ಮೈಸೂರು ಬೆಂಗಳೂರು ಮಾರ್ಗವಾಗಿ ಪಯಣಿಸುವಾಗೆಲ್ಲಾ ಒಂದೊಂದು ಊರು ಬರುವಹೊತ್ತಿಗೆ ಆಲೋಚನೆ ಕೆಲವೊಂದು ನಿರ್ಧರಿತ ದಿಕ್ಕಿಗೆ ಹೊರಳಿಕೊಳ್ಳುತ್ತದೆ. ಚನ್ನಪಟ್ಟಣ ಬಂದಂತೆಲ್ಲ ನಮ್ಮ ತಾತನವರ ಮನೆ, ನನ್ನ ಬಾಲ್ಯದ ನೆನಪುಗಳು ದಟ್ಟವಾಗುತ್ತಾ ಹೋಗುತ್ತದೆ. ಅವರ ಮನೆಯ ಕೊಟ್ಟಿಗೆ, ಅಲ್ಲಿ ತುಂಗೆ ಕರುವಿನೊಡನೆ ಗಂಟೆಗಟ್ಟಲೆ ಹರಟುತ್ತಾ ಕಳೆಯುತ್ತಿದ್ದುದು, ತಾತನವರ ಮನೆಯ ದೇವರಪೂಜೆಯ ವೈಭವ, ಪೂಜೆಯ ಸಮಯದಲ್ಲಿ ನಡೆಯುತ್ತಿದ್ದ ವೇದಘೋಷ, ಮತ್ತೆ ನಾನೂ ನನ್ನ ಓರಗೆಯ ಕಿಟ್ಟಿಯೂ ಅನೇಕಬಾರಿ ಅಭಿನಯಿಸುತ್ತಿದ್ದ ಕರ್ಣಾರ್ಜುನರ ಯುದ್ಧ, ಭೀಮ-ದುರ್ಯೋಧನರ ಕಾಳಗ - ಮನೆಯ ಅಂಗಳವೇ ನಮ್ಮ ರಣರಂಗ, ಮಟ್ಟಾಳೆ ಕಸಬರಿಕೆಯ ಕಡ್ಡಿಯೇ ಬಿಲ್ಲು ಬಾಣ, ಹಾಕಿದ್ದ ಶರಟಿನ ಹಿಂಬದಿಯೇ ನಮ್ಮ ಅಕ್ಷಯ ತೂಣೀರ; ಆಗೀಗ ಮನೆಯ ಮುಂದೆ ಕಟ್ಟಿರುತ್ತಿದ್ದ ಬಾಳೆಯ ಕಂದೇ ಗದೆ. ಹೀಗೊಮ್ಮೆ ದುರ್ಯೋಧನನಾದ ನಾನು (ನನಗೆ ದಕ್ಕುತ್ತಿದ್ದದ್ದು ಯಾವಾಗಲೂ ಕೆಟ್ಟ ಪಾತ್ರಗಳೇ), ಭೀಮನಾದ ಕಿಟ್ಟಿಯ ಮುಖಕ್ಕೆ ಬಾಳೆ ಕಂದಿನ ಗದೆಯಿಂದ ಅಪ್ಪಳಿಸಿದ್ದರ ಪರಿಣಾಮವಾಗಿ ಅವನ ಕಣ್ಣು ಹೋಗಿಬಿಡುವುದರಲ್ಲಿತ್ತು. ತತ್ಪರಿಣಾಮವಾಗಿ ಇಬ್ಬರಿಗೂ ಭೀಷ್ಮಪಿತಾಮಹರಿಂದ ಸರಿಯಾಗಿ ಲಾತಾಗಳೂ ಬಿದ್ದಿದ್ದವು.

ಸರಿ, ಇನ್ನೇನು ಮದ್ದೂರು ಬಂತು. ಇಳಿದು ಊಟಮುಗಿಸಿ ಮತ್ತೆ ಗಾಡಿ ಹತ್ತಿದರೆ ಮಂಡ್ಯದವರೆಗು ಒಂದಿಪ್ಪತ್ತು ನಿಮಿಷ ಸಣ್ಣ ಜೋಂಪು. ಪಯಣದುದ್ದಕ್ಕೂ ಮನಸ್ಸು ಯಾವುದಾದರೂ ರಾಗವನ್ನೋ ರಚನೆಯನ್ನೋ ಗುನುಗುತ್ತಿರುತ್ತದೆ ಎಂದೆನಷ್ಟೇ. ಈ ಮಾರ್ಗದಲ್ಲಿ ಅದರಲ್ಲೂ ಒಂದು ನಿರ್ದಿಷ್ಟ pattern ಇದೆ ಎಂಬುದನ್ನು ಇತ್ತೀಚೆಗಷ್ಟೇ ಗಮನಿಸಿದೆ. ಮಂಡ್ಯ ಬಿಟ್ಟು ಒಂದು ಹತ್ತು ಹದಿನೈದು ನಿಮಿಷ ಬಾಬುರಾಯನ ಕೊಪ್ಪಲು ಬರುವ ಹೊತ್ತಿಗೆ, ಅದೇನೇ ಯೋಚಿಸುತ್ತಿದ್ದರೂ ಮನಸ್ಸು ಅಪ್ರಯತ್ನತಃ ತೋಡಿ ರಾಗದ ಮಟ್ಟುಗಳನ್ನು ಗುನುಗುನಿಸತೊಡಗುತ್ತದೆ. ಇದನ್ನು ಬಹುಕಾಲ ಗಮನಿಸಿರಲಿಲ್ಲ, ಆದರೆ ಎರಡುಮೂರು ಬಾರಿ ಗಮನಿಸಿದಾಗ ಆಶ್ಚರ್ಯವಾಗಿತ್ತು, ಅದೇಕೆ ಆ ಸ್ಥಳದಲ್ಲೇ ಇದೇ ರಾಗ ನೆನಪಿಗೆ ಬರುತ್ತದೆ? ಉತ್ತರಮಾತ್ರ ಹೊಳೆದಿರಲಿಲ್ಲ. ಮನಸ್ಸಿನಲ್ಲೇ ಒಂದು ಕಿರು ಆಲಾಪನೆ ಮುಗಿದು, ಪಲುಕು ತಾನಾಗೇ "ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ..." ಎಂದು ಶುರು ಮಾಡುವ ಹೊತ್ತಿಗೆ ಬಸ್ಸು ಕಾವೇರಿಯ ಮೊದಲ ಕವಲನ್ನು ದಾಟಿ ಶ್ರೀರಂಗಪಟ್ಟಣದಲ್ಲಿರುತ್ತದೆ. ಕಾವೇರಿಗೂ, ಶ್ರೀರಂಗನಿಗೂ ಈ ಹಾಡಿಗೂ ಸಂಬಂಧವಿದ್ದರೂ, ತೋಡಿ ರಾಗದ ಈ ಹಾಡಿಗೆ ಪೀಠಿಕೆಯಾಗಿಯೇ ಆ ರಾಗ ಅಷ್ಟುಹೊತ್ತಿನಿಂದ ಮನಸ್ಸಿನಲ್ಲಿ ತೊಡಗಿದ್ದು ಎಂದು ಹೊಳೆದಾಗಮಾತ್ರ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಈ ಅಚ್ಚರಿ ಅಷ್ಟಕ್ಕೇ ಮುಗಿಯುವುದಿಲ್ಲ. ಬಸ್ಸು ಕಾವೇರಿಯ ಮತ್ತೊಂದು ಕವಲನ್ನು ದಾಟಿ ಶ್ರೀರಂಗಪಟ್ಟಣವನ್ನು ಬಿಡುವಹೊತ್ತಿಗೆ ಆ ಹಾಡು (ಅಥವ ಒಂದು ಚರಣ) ಮುಗಿದು, ಹಾಡು "ರಂಗ ನಾಯಕಂ... ಭಾವಯೇ..." (ನಾಯಕೀ ರಾಗ) ಎಂದು ತಿರುಗಿರುತ್ತದೆ. ಅದರನಂತರ ಅದೇ ರಾಗವನ್ನು ತುಸುಹೋಲುವ "ದರ್ಬಾರು" (ಇದಕ್ಕೂ ಮೈಸೂರು ದರ್ಬಾರಿಗೂ ಸಂಬಂಧವಿದೆಯೇ, ದೇವರೇ ಬಲ್ಲ), ಅದರನಂತರ "ದರ್ಬಾರೀ ಕಾನಡ" ಶೇಷಣ್ಣನವರ ತಿಲ್ಲಾನದ್ದೊಂದು ಪಲುಕು... ಕೊನೆಗೆ ಬಿಲಹರಿಯದೊಂದು ತುಣುಕು, "ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ" ಎಂದು ಮುಗಿಸುವಹೊತ್ತಿಗೆ ಮೈಸೂರು ಬಸ್ ನಿಲ್ದಾಣ ಬಂದಿರುತ್ತದೆ. ಈಗಂತೂ ಅದನ್ನು ನಾನು ಗಮನಿಸಿಬಿಟ್ಟಿರುವುದರಿಂದ ಮೊದಲಿನಷ್ಟು ನಿಶ್ಚಿತತೆ, spontaneity ಇಲ್ಲ.

ಅದೇನೇ ಇರಲಿ, ಮನಸ್ಸಿನ ಮಾರ್ಗಗಳನ್ನು ಕಂಡು ಬೆರಗಾಗಿದ್ದೇನೆ. ಅದು ತನ್ನನ್ನು ತಾನೇ ರಂಜಿಸಿಕೊಳ್ಳುವ, ಕಲ್ಪನೆ ಕಟ್ಟುವ, ಕಂಪನಿ ಕೊಟ್ಟುಕೊಳ್ಳುವ ಪರಿ ನಿಜಕ್ಕೂ ಅದ್ಭುತ. ಒಳಗಿನ ’ನಿಶ್ಶಬ್ದ’ಕ್ಕೆ ಹೆದರಿ ಹೊರಗೆ ಗದ್ದಲದ "ಸಂಗೀತ"ಕ್ಕೆ ಮರೆಹೊಗುವವರನ್ನು ಕಂಡಾಗ ಮರುಕವುಂಟಾಗುತ್ತದೆ. ಈ ಗದ್ದಲವನ್ನು ಒಂದೇ ಕ್ಷಣ ಬಂದು ಮಾಡಿ, ನಿಮ್ಮೊಳಗಿನ ದನಿಯನ್ನು ಆಲಿಸಿ ನೋಡಿ, ಅದೇ ಒಂದು ಲೋಕ. ಅಲ್ಲಿ ನಿಮಗೆ "ಬೋರ್"ಎಂಬುದು ಆಗಲು ಸಾಧ್ಯವೇ ಇಲ್ಲ. ಈ ಲೋಕ ತೆರೆದುಕೊಳ್ಳುವ ಅಂಥ ಒಂದು ಸಂದರ್ಭ, ಕಿಟಕಿ ಪಕ್ಕದ ಸೀಟು. ಮುಂದಿನ ಸಲ ಪಯಣಿಸುವಾಗ ಪುಸ್ತಕಕ್ಕೋ ಐಪೋಡಿಗೋ ಮರೆಹೊಗಬೇಡಿ. ಸುಮ್ಮನೇ ಕಿಟಿಕಿಯಾಚೆ ಕಣ್ಣುಕೀಲಿಸಿ ಓಡುವ ಬಸ್ಸಿನೊಡನೆ ನಿಮ್ಮ ಮನಸ್ಸನ್ನು ಹರಿಯಬಿಡಿ. ಆಮೇಲೆ ನೋಡಿ.

Wednesday, May 5, 2010

ಹೀಗೊಂದು ಬಿಕರೀ ನೋಟೀಸು

ಮೊನ್ನೆ ಸತ್ಯ ಇದ್ದಕ್ಕಿದ್ದಹಾಗೆ ಫೋನಾಯಿಸಿ "ನನ್ನ ಲೈಬ್ರರಿ sale ಮಾಡಬೇಕು ಅಂತಿದೀನಿ ಮಂಜು" ಅಂದಾಗ ಒಂದು ಕ್ಷಣ ಅವರು ಜೋಕ್ ಮಾಡುತ್ತಿದ್ದಾರೆನ್ನಿಸಿತು. ಕೂಲಾಗಿ "ಸರಿ ಮಾಡಿ, ಎಷ್ಟು ಬೇಕು ಹೇಳಿ ಕೊಡೋಣ" ಎಂದೆ. ನಾವು ಆಗಾಗ ಭೆಟ್ಟಿಯಾದಾಗೆಲ್ಲಾ ಅದೂ ಇದು ಕಾಡುಹರಟೆಯ ನಡುವೆ ಏನಾದರೂ ಹಣಕಾಸಿನ ಕಷ್ಟ-ಸುಖದ ವಿಷಯ ಬಂದರೆ "ನನ್ನ ಲೈಬ್ರರಿ ತಗೊಂಡು ಎರಡು ಸಾವಿರ ಕೊಡಿ ಮಂಜು" ಎನ್ನುವುದು, ನಾನು "ಅದು ತುಂಬಾ ಜಾಸ್ತಿಯಾಯಿತು" ಎಂದು ನಗೆಯಾಡುವುದು ವಾಡಿಕೆ. ಒಂದು ಕ್ಷಣ ಮೌನದ ನಂತರ ಹೇಳಿದರು "ಇಲ್ಲ ಮಂಜು, ನಾನು serious ಆಗಿ ಹೇಳ್ತಾ ಇದೀನಿ". ಅರೇ, ಹೌದಲ್ಲ. ಮೊನ್ನೆ ತಾನೆ ಹಠಾತ್ತಾಗಿ ತಮ್ಮನನ್ನು ಕಳೆದುಕೊಂಡ ದುಃಖದಲ್ಲಿದ್ದ ಸತ್ಯ ಜೋಕ್ ಮಾಡುವ ಮನಸ್ಥಿತಿಯಲ್ಲೇನೂ ಇಲ್ಲ ಎಂದು ಹೊಳೆಯಿತು. ಮತ್ತೆ? ನಿಜಕ್ಕೂ ಲೈಬ್ರರಿ ಮಾರಿಬಿಡುತ್ತಿದ್ದಾರೆಯೇ? ಕ್ಷಣ ನಂಬಲಾಗಲಿಲ್ಲ. ಹಾಗೊಂದುವೇಳೆ ಇದು ಜೋಕ್ ಅಲ್ಲವೆಂದಾದರೆ, ಈ ಮಾತು ಸತ್ಯನ ಬಾಯಲ್ಲಿ ಬರಲು ಸಾಧ್ಯವೇ ಇರಲಿಲ್ಲ. ಏಕೆಂದರೆ ನಾನು ಬಾಲ್ಯದಿಂದಲೂ ಬಲ್ಲ ಈತ ತಮ್ಮ ಪುಟ್ಟ ಲೈಬ್ರರಿ ಕಟ್ಟಿ ಬೆಳೆಸಿಕೊಂಡಿದ್ದ ಪರಿಯನ್ನು ಕಣ್ಣಾರೆ ಕಂಡಿದ್ದೆ.

ಚಿಕ್ಕಂದಿನಲ್ಲೇ ಸಿನೆಮಾ-ನಾಟಕ-ಸಾಹಿತ್ಯಗಳ ಗೀಳು ಹತ್ತಿಸಿಕೊಂಡು, ಮುಂದೊಮ್ಮೆ ಅದೇನೋ ಸಾಧಿಸುವ ಕನಸು ಕಣ್ಣಲ್ಲಿಟ್ಟುಕೊಂಡು ಓದು ಬಿಟ್ಟು ಊರು ಬಿಟ್ಟು ಬೆಂಗಳೂರು ಸೇರಿದ ಹುಡುಗ, ಕಲಾವಿದನಾಗಿ ಸಾಕಷ್ಟು ಬೆಳೆಯುತ್ತಾ, ಸಿಜಿಕೆ, ಬಿ.ವಿ.ಕಾರಂತ ಇತ್ಯಾದಿ ಘಟಾನುಘಟಿಗಳೊಂದಿಗೆ ದುಡಿಯುತ್ತಾ ಕಲೆಯ ಬದುಕನ್ನು ರೂಪಿಸಿಕೊಂಡರು. ಹವ್ಯಾಸಿ ರಂಗಭೂಮಿ ವಲಯದಲ್ಲಿ "ಕತ್ಲು ಸತ್ಯ" ಎಂದೇ ಹೆಸರಾಗಿದ್ದ ಸತ್ಯನಾರಾಯಣ, "ಬಾವಿ", "ಡಾಂಬರು ಬಂದದ್ದು" ಇತ್ಯಾದಿ ಸ್ವತಃ ಕೆಲವು ನಾಟಕಗಳನ್ನೂ ರಚಿಸಿದ್ದಲ್ಲದೇ, ರಂಗಕರ್ಮಿ/ನಿರ್ದೇಶಕರಾಗಿ ಕೂಡ ಸಾಕಷ್ಟು ಹೆಸರು ಮಾಡಿದರು.

ಅರಸನ ಅಂಕೆಯಿಲ್ಲದೆ ದೆವ್ವದ ಕಾಟವಿಲ್ಲದೆ ಮನಸ್ಸಿಗೆ ಸರಿಕಂಡದ್ದನ್ನು ಮಾಡುತ್ತಾ, ತನಗಿಷ್ಟವಾದ ಬದುಕು ಬದುಕುವ, ಸರಳಾತಿಸರಳ ಜೀವನ ಶೈಲಿಯ ಸತ್ಯ ನಮಗೆಲ್ಲಾ ಒಂದುರೀತಿ ಅಸೂಯೆ ಹುಟ್ಟಿಸಿದ್ದ ವ್ಯಕ್ತಿ. ಈ ಸಿನಿಮಾ-ನಾಟಕಗಳ ಗೀಳಿಗೆ ಹತ್ತಿಕೊಂಡಂತೆ ಬಂದಿದ್ದ ಮತ್ತೊಂದು ಗೀಳು ಪುಸ್ತಕಗಳದು. ನಾವೆಲ್ಲಾ ಬೇಜಾರಾದಾಗ TV, ಸಿನೆಮಾ ನೋಡಿದರೆ ಈ ಮನುಷ್ಯ ಸುಳಿಯುತ್ತಿದ್ದುದು ಪುಸ್ತಕದ ಅಂಗಡಿಗಳ ಮುಂದೆ. ಊರಲ್ಲಿ ಎಲ್ಲಿ ಪುಸ್ತಕ ಮೇಳವಾದರೆ ಅಲ್ಲಿ ಸತ್ಯ ಹಾಜರು, ಕೈಗೊಂದು ಐದೋ ಆರೋ ಪುಸ್ತಕ ಖರೀದಿಸಿದ್ದೇ ಸೈ. ಕೊಳ್ಳಲು ಸೆಕೆಂಡ್ ಹ್ಯಾಂಡ್, ಫಸ್ಟ್ ಹ್ಯಾಂಡ್, ಅಗ್ಗ, ದುಬಾರಿಯ ಪ್ರಶ್ನೆ ಬರುತ್ತಲೇ ಇರಲಿಲ್ಲ. ಪುಸ್ತಕ ಅಪರೂಪದ್ದಾದರೆ, ಮೌಲಿಕವಾದದ್ದಾದರೆ ಅದು ಮನೆ ಸೇರಲೇಬೇಕು; ಪುಸ್ತಕದ ಆಯ್ಕೆಯಲ್ಲಿ, ಆಟದ ಸಾಮಾನು ಆಯ್ದುಕೊಳ್ಳುವ ಹುಡುಗನ ತನ್ಮಯತೆ ಇರುತ್ತಿತ್ತು. ತಂದದ್ದು ಅಲಂಕಾರಕ್ಕಲ್ಲ, ಮುಂದೆರಡು ಮೂರು ದಿನ ಪಟ್ಟು ಹಿಡಿದು ಅದನ್ನು ಓದಿ ಮುಗಿಸಬೇಕು. ಬಹಳಷ್ಟು ಪುಸ್ತಕಗಳನ್ನು ಪುಸ್ತಕಮೇಳಗಳಲ್ಲೇ ಖರೀದಿಸುತ್ತಿದ್ದುದರಿಂದ, ಅದರಲ್ಲಿ ಬಹಳಷ್ಟು "ಭಾರಿ" ಪುಸ್ತಕಗಳೇ ಆದ್ದರಿಂದ ಇದೊಂದು ದುಬಾರಿ ಹವ್ಯಾಸವಾಗಿ ಪರಿಣಮಿಸಿತ್ತು. ಇವತ್ತು ಒಂದು ನೂರು ರುಪಾಯಿ ಉಳಿದರೆ ಒಂದು ಪುಸ್ತಕ್ಕಾದರೂ ಆಗುತ್ತದೆ ಎಂದು ಯೋಚಿಸುತಿದ್ದ ಸತ್ಯ, ಗಳಿಸಿದ, ಉಳಿಸಿದ ಹಣವನ್ನೆಲ್ಲಾ ಪುಸ್ತಕ ಕೊಳ್ಳಲು ಸುರಿಯುತ್ತಿದ್ದರು. ಹೀಗಾಗಿ ಈ ಪುಟ್ಟ ಲೈಬ್ರರಿ ಕೇವಲ ಲೈಬ್ರರಿ ಆಗಿರದೆ ಅವರ ವ್ಯಕ್ತಿತ್ವದ ಒಂದು ಭಾಗವಾಗಿತ್ತು. ಸುಮಾರು ೨೫೦೦ ಪುಸ್ತಕಗಳಿರುವ ಆ ಲೈಬ್ರರಿಯಲ್ಲಿ ಒಂದೊಂದು ಪುಸ್ತಕವೂ ಎಲ್ಲೆಲ್ಲಿ ಇದೆ, ಯಾವಾಗ ಕೊಂಡದ್ದು, ಅದರ ಹೂರಣವೇನು, ಯಾವ ಪುಸ್ತಕದ ಅಟ್ಟೆ ಎಲ್ಲಿ, ಯಾವಾಗ, ಏಕೆ ಹರಿದಿದೆ ಇತ್ಯಾದಿ ವಿವರಗಳನ್ನೆಲ್ಲಾ ಕರಾರುವಾಕ್ಕಾಗಿ ತಿಳಿಸಬಲ್ಲಷ್ಟು ತಾದಾತ್ಮ್ಯ ಸಿದ್ಧಿಸಿತ್ತು ಆ ಪುಸ್ತಕಗಳ ಜೊತೆ. ಬಂದವರೆದುರು ಈ ಸಂಗ್ರಹವನ್ನು ಪ್ರದರ್ಶಿಸುವುದೇ ಹೆಮ್ಮೆ. ಅದು ನಿಜ ಕೂಡ. Afterall, the collection was an owner's pride.

ಇಂಥಾ ಮನುಷ್ಯ ತಾನು ಕಟ್ಟಿ ಬೆಳೆಸಿದ ಈ ಪುಟ್ಟ ಭಂಡಾರವನ್ನು ಮಾರಿಬಿಡಬೇಕೆಂದರೆ, ಬಂದಿರುವ ತುರ್ತು ಸಾಕಷ್ಟು serious ಆಗಿರಲೇ ಬೇಕೆನ್ನಿಸಿತು. ಈ ವೈಯಕ್ತಿಕ ಪ್ರಶ್ನೆಯನ್ನು ನಾನು ಕೇಳದಿದ್ದರೂ, ಅವರು ತಮ್ಮದೇ ಆಗಿ ಉಳಿದಿದ್ದ ಈ ಏಕಮಾತ್ರ "ಆಸ್ತಿ"ಯನ್ನು ಮಾರಿಬಿಡುವ ನಿರ್ಧಾರಕ್ಕೆ ಬರುವ ಮುನ್ನ ಸುಮಾರು ಎರಡು ತಿಂಗಳ ಕಾಲ ತೊಳಲಾಟವನ್ನನುಭವಿಸಿದ್ದರೆನ್ನುವುದು ತಿಳಿಯುತ್ತಿತ್ತು. ಬಂದ ಕುತ್ತು ಕ್ಷಣಿಕವೇ ಇರಬಹುದು, ಸ್ವಲ್ಪ ಉಸಿರು ಕಟ್ಟಿ ತಡೆದರೆ ಆ ಕುತ್ತು ಹೊರಟುಹೋಗಬಹುದು, ಆದರೆ ಇದು ಮಾತ್ರ ಖಂಡಿತ ಆಗಬಾರದು, ಏಕೆಂದರೆ ಇದು ವ್ಯಕ್ತಿತ್ವದ ಒಂದು ಭಾಗ, ಐಹಿಕ ಸಮಸ್ಯೆಗಳಿಗೋಸ್ಕರ ಮಾರಿಕೊಳ್ಳುವುದಲ್ಲ. ತಾತ್ಕಾಲಿಕವಾಗಿಯಾದರೂ ಏನಾದರೂ ಮಾಡಿ, ಈ ಪುಸ್ತಕಭಂಡಾರವನ್ನು ಉಳಿಸಿಕೊಡಲು ಸಾಧ್ಯವೇ ಇತ್ಯಾದಿ ಯೋಚಿಸಿದೆ. ಆದರೆ ನಾವು ಯಾರೂ ಏನೂ ಮಾಡಲು ಸಾಧ್ಯವಾಗದಷ್ಟು ದೊಡ್ಡದಿತ್ತು ಅವರ ಆರ್ಥಿಕ ಅಗತ್ಯಗಳು; ಮತ್ತೂ ಈ ಲೈಬ್ರರಿಯ ಮಾರಾಟ ಕೂಡ ಅವರ ಇಡೀ ಅಗತ್ಯದಲ್ಲಿ ಕೇವಲ ತುರ್ತಿನ ಅಗತ್ಯಗಳಿಗೆ ಮಾತ್ರ ಸರಿಹೊಂದುವಂತಿತ್ತು. ಲೈಬ್ರರಿ ಮಾರದೆ ಬೇರೆ ದಾರಿಯೇ ಇರಲಿಲ್ಲ. ನಾನು ಇಷ್ಟೆಲ್ಲಾ ಚಿಂತಿಸುತ್ತಿರುವಾಗ ಸತ್ಯ ಹೇಳಿದ ಮಾತು ಇದು. "ನೀವಿರುವ ಈ ಪರಿಸ್ಥಿತಿಯಲ್ಲಿ ಈ ಲೈಬ್ರರಿ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ಗೊತ್ತು, ಆದರೆ ನಾನು ನಿಮ್ಮನ್ನು ಕೇಳುತ್ತಿರುವುದು ಈ ಬಗ್ಗೆ ಬರೆಯಿರಿ ಅಂತ ಮಾತ್ರ. ನನಗೆ ಗೊತ್ತು, ನನ್ನಷ್ಟೇ ಹುಚ್ಚರು ಯಾವಯಾವುದೋ ಮೂಲೆಯಲ್ಲಿ ಬಹಳಷ್ಟು ಜನ ಇರುತ್ತಾರೆ, ಅವರೊಂದಿಗೆ ಸಂಪರ್ಕ ಸಾಧಿಸುವುದು ಮಾತ್ರ ನಮ್ಮ ಸಧ್ಯದ ಕೆಲಸ; ನಿಮಗೂ ನನ್ನಂಥದೇ ಆಸಕ್ತಿಯಿರುವುದರಿಂದ ನಿಮ್ಮ ಮಿತ್ರರ ಗುಂಪಿನಲ್ಲಿ ಖಂಡಿತಾ ಸಮಾನ ವ್ಯಸನಿಗಳು ಇದ್ದಾರು ಎನ್ನುವುದು ನನ್ನ ನಂಬಿಕೆ"
ನನಗೆ ಹೌದೆನ್ನಿಸಿತು.

ಇನ್ನು ನೇರ ವ್ಯವಹಾರಕ್ಕೆ. ಪ್ರಾಚೀನ ಸಾಹಿತ್ಯದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೆ, ಪಾಶ್ಚಾತ್ಯದಿಂದ ಪೌರ್ವಾತ್ಯದವರೆಗೆ, ಕಾವ್ಯ, ನಾಟಕ, ಇತಿಹಾಸ, ಆಧ್ಯಾತ್ಮ, ವಿಜ್ಞಾನ, ಕಲೆ, ರಂಗಭೂಮಿ ಹೀಗೆ ಹತ್ತು ಹಲವು ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಈ ಲೈಬ್ರರಿಗೆ ಅವರು ನಿರೀಕ್ಷಿಸುವ ಒಟ್ಟಂದದ ಬೆಲೆ ಎರಡು ಲಕ್ಷ ರುಪಾಯಿಗಳು (ಸರಾಸರಿ ಪುಸ್ತಕವೊಂದಕ್ಕೆ ೮೦ ರುಪಾಯಿಗಳು). ಪುಸ್ತಕವೊಂದರ ಮೌಲ್ಯ ಯಾವಾಗಲೂ ಅದರ ಮುಖಬೆಲೆಗಿಂತ ಬಹು ಹೆಚ್ಚಿನದು, ಮತ್ತು ಒಂದೊಂದು ಪುಸ್ತಕಗಳ ಬೆಲೆಯ ಮೊತ್ತಕ್ಕಿಂತಾ ಇಡೀ ಪುಸ್ತಕ ಭಂಡಾರದ "ಸಂಗ್ರಹ" ಹೆಚ್ಚು ಬೆಲೆ ಬಾಳುವಂಥದ್ದು ಎಂಬುದು ಯಾವುದೇ ಪುಸ್ತಕಪ್ರೇಮಿಗೆ ತಿಳಿದ ವಿಷಯ. ಮಾರಾಟಕ್ಕಿರುವುದು ಇಡೀ ಲೈಬ್ರರಿಯೇ ಹೊರತು individual ಪುಸ್ತಕಗಳಲ್ಲ. ಒಬ್ಬ ವ್ಯಕ್ತಿ, ಅಲ್ಲದಿದ್ದರೆ ಒಂದು ಗುಂಪು ಕೂಡ ಇದನ್ನು ಖರೀದಿಸಬಹುದು, ಆದರೆ ಇಡೀ ಲೈಬ್ರರಿಯನ್ನು ಒಟ್ಟಿಗೆ ಖರೀದಿಸಬೇಕೆನ್ನುವುದಷ್ಟೇ ಷರತ್ತು, ಇಲ್ಲವೆಂದರೆ ಅದು ತಮ್ಮ ಹಣಕಾಸಿನ ಅಗತ್ಯವನ್ನು ಪೂರೈಸದು, ಹಾಗೂ ಪುಸ್ತಕಗಳನ್ನು ಹರಿದು ಹಂಚುವುದು ಭಾವನಾತ್ಮಕವಾಗಿ ನೋವಿನ ವಿಷಯ ಎಂದು ಅವರ ಅಭಿಪ್ರಾಯ. ಹಾಗೂ ಕೊಂಡವರು ಕೂಡ ಆ ಸಂಗ್ರಹವನ್ನು ಹಾಗೆಯೇ ನೋಡಿಕೊಂಡಾರೆನ್ನುವುದು ಆಶಯ ಕೂಡ.

ಪುಸ್ತಕ ಸಂಗ್ರಹದ ಕೆಲವು ಚಿತ್ರಗಳು http://picasaweb.google.co.in/ksmanjunatha/SatyaLibrary# ಇಲ್ಲಿವೆ.

ಆಸಕ್ತರು ಸತ್ಯನಾರಾಯಣರನ್ನು ನೇರವಾಗಿ ಸಂಪರ್ಕಿಸಬಹುದು ಮತ್ತು ಬೆಂಗಳೂರಿನಲ್ಲಿರುವ ಅವರ ಮನೆಗೆ ಭೇಟಿನೀಡಿ ಪುಸ್ತಕ ಸಂಗ್ರಹವನ್ನು ನೋಡಬಹುದು. ಅವರ ಮೊಬೈಲ್ ಸಂಖ್ಯೆ + ೯೧ ೯೪೪೮೭ ೦೩೮೬೪ (+ 91 94487 03864)

ಪುಸ್ತಕ ಸಂಗ್ರಹವನ್ನು ಮಾರುವ ನಿರ್ಧಾರವೇ ನೋವಿನ ನಿರ್ಧಾರ; ಕೊನೆಯ ಪಕ್ಷ ಅದನ್ನು ಮಾರುವ ಪ್ರಕ್ರಿಯೆ ಹೆಚ್ಚು ನೋವಿಲ್ಲದೆಯೇ ನಡೆಯಲೆಂಬುದು ವೈಯಕ್ತಿಕವಾಗಿ ನನ್ನ ಹಾರೈಕೆ. ಏಕೆಂದರೆ ಇದು ಕೇವಲ ಲೈಬ್ರರಿಯೊಂದನ್ನು ಮಾರುವ/ಕೊಳ್ಳುವ ಪ್ರಶ್ನೆಯಲ್ಲ, ಬದಲಿಗೆ ಜೀವನ ಶೈಲಿ/ಮೌಲ್ಯವೊಂದರ ಬಗೆಗಿನ ನಂಬಿಕೆಯ ಪ್ರಶ್ನೆ. ವ್ಯಕ್ತಿಯೊಬ್ಬ materialistic ಆಯಾಮಗಳಿಲ್ಲದೆಯೂ ಆತ್ಮಸಂತೋಷಕ್ಕೋಸ್ಕರವೇ ಬದುಕಬಹುದು ಎಂಬ ನಂಬಿಕೆಗೆ ಪೆಟ್ಟಾಗುವುದಾದರೆ ಅಂಥಾ ಜೀವನಶೈಲಿಯ ಬಗ್ಗೆ ನಾವು ಪುಟಗಟ್ಟಲೆ ಬರೆಯುವುದು, ವರ್ಷಗಟ್ಟಲೆ ಕನಸುವುದು ಎಲ್ಲ ವ್ಯರ್ಥವೆಂದೇ ನನ್ನ ನಂಬಿಕೆ.

Thursday, January 7, 2010

ಕಾವುದಾನತಜನವ ಗದುಗಿನ ವೀರನಾರಯಣ...

ಕಳೆದ ವಾರ ರಜಾ ಸೀಸನ್ ಆದ್ದರಿಂದ ಪುಣೆಯಿಂದ ಮೈಸೂರಿಗೆ ಯಾವ ಬಸ್ಸೂ ಸಿಕ್ಕಿರಲಿಲ್ಲ. ಇನ್ನು ಟ್ರೈನಿನ ಮಾತಂತೂ ದೂರವೇ ಉಳಿಯಿತು, ಮಾಮೂಲಿನ ದಿನಗಳಲ್ಲೂ ಅದರ "ವೈಟಿಂಗ್ ಲಿಸ್ಟ್" ಮೊಟಕಾಗಿದ್ದೇ ಇಲ್ಲ. ವಿಮಾನಯಾನದ ದರವಂತೂ ವಿಮಾನದೊಂದಿಗೇ ಗಗನಗಾಮಿಯಾಗಿತ್ತು. ಇನ್ನು ಉಳಿದದ್ದೊಂದೇ, ಕಟ್ ರೂಟಿನ ಹೆಜ್ಜೆಸಾಲಿನ ಪಯಣ. ಹೇಗೂ ದೀರ್ಘ ರಜೆಯಿದ್ದುದರಿಂದ ಪಯಣ ಸ್ವಲ್ಪ ಎಳೆದರೂ ಪರವಾಗಿಲ್ಲವೆಂದುಕೊಂಡು, ಪುಣೆ - ಹುಬ್ಬಳ್ಳಿ - ಬೆಂಗಳೂರು - ಮೈಸೂರು ಹೀಗೆ ಪಯಣವನ್ನು ತುಂಡರಿಸಿಕೊಂಡೆ. ರಾತ್ರೆ ಪುಣೆಯಿಂದ ಹೊರಡುವ ಬಸ್ಸು ಬೆಳಗ್ಗೆ ೭ಕ್ಕೆ ಹುಬ್ಬಳ್ಳಿ ಸೇರುವುದಿತ್ತು. ಅಲ್ಲಿಂದ ಬೆಂಗಳೂರಿಗೆ ಸಂಜೆ ೫ರವರೆಗೂ ಯಾವ ಟ್ರೈನೂ ಖಾಲಿಯಿಲ್ಲ. ಈ ಹತ್ತು ಗಂಟೆಗಳನ್ನು ಕಳೆಯುವುದು ಹೇಗೆ? ಆಗ ಇದ್ದಕ್ಕಿದ್ದಂತೆ ನನ್ನ ಬಹುದಿನದ ಕನಸು ನೆನಪಿಗೆ ಬಂತು. ಬಾಲ್ಯದಿಂದಲೂ ಭಾವನಾತ್ಮಕವಾಗಿ ನನ್ನ ಒಡನಾಡಿಯಾದ ಗದುಗಿನ ಭಾರತ, ಅದರ ಕರ್ತೃ ಕುಮಾರವ್ಯಾಸ, ಅವನ ಸ್ಪೂರ್ತಿಯ ಸೆಲೆಯಾದ ವೀರನಾರಾಯಣನನ್ನು ದರ್ಶಿಸುವುದು, ಕವಿಯ ನೆನಪಿಗೆ ಕಾವ್ಯವಾಚನದ ಅಂಜಲಿಯನ್ನು ಸಲ್ಲಿಸುವುದು ಇದು ನನ್ನ ಬಹುದಿನದ ಕನಸಾಗಿತ್ತು. ಅನೇಕಬಾರಿ ಗದುಗಿಗೆ ಹೋಗಬೇಕೆಂದಿದ್ದರೂ ಸಾಧ್ಯವಾಗಿರಲಿಲ್ಲ; ಹೀಗೆ ನಾನು ಹೋಗಬೇಕೆಂದು ಎಣಿಸಿರುವ ಸ್ಥಳಗಳ ಪಟ್ಟಿಯೇ ಬಹಳ ದೊಡ್ಡದಿದ್ದುದರಿಂದ, ಆ ಪಟ್ಟಿಯಲ್ಲಿ ಇದೂ ಒಂದು ಹೆಸರಾಗಿ ಉಳಿದಿತ್ತಷ್ಟೇ. ಮೊನ್ನೆ ಪವನನ ಮದುವೆಗೆ ಧಾರವಾಡಕ್ಕೆ ಹೋದಾಗಲೂ ಗದುಗಿಗೆ ಹೋಗೋಣವೆಂದುಕೊಂಡೆ, ಆದರೆ ಜೊತೆಯಿದ್ದ ಗುಂಪಿನ ಆಸಕ್ತಿಗಳಿಗೆ ಈ ಆಲೋಚನೆ ಕೊಂಚವೂ ಪ್ರಸ್ತುತವಿರಲಿಲ್ಲವಾದ್ದರಿಂದ ಆ ಯೋಜನೆ ಮನಸ್ಸಿನಲ್ಲೇ ಉಳಿಯಿತು. ಆದರೆ ಅದಕ್ಕೆ ಈಗ ಇದ್ದಕ್ಕಿದ್ದಂತೆ ಸಮಯ ಕೂಡಿಬಂದಿತ್ತು. ಹುಬ್ಬಳ್ಳಿಯಿಂದ ಗದುಗಿಗೆ ೭೦ ಕಿಲೋಮೀಟರು, ಒಂದೂವರೆ ಗಂಟೆ ಪಯಣ. ಬೆಳಗ್ಗೆ ೮ಕ್ಕೆ ಹುಬ್ಬಳ್ಳಿ ಬಿಟ್ಟರೂ ೯.೩೦ಕ್ಕೆಲ್ಲಾ ಗದುಗಿನಲ್ಲಿರುತ್ತೇನೆ, ೧೦ಕ್ಕೆ ದೇವಾಲಯ. ಸ್ವಲ್ಪ ಬೇಗ ಹೋದರೆ ಜನವಿಲ್ಲದೆ ಪ್ರಶಾಂತವಾಗಿದ್ದರೆ ಅಂದುಕೊಂಡಂತೆ ಕಾವ್ಯವಾಚನಮಾಡುವ ಅವಕಾಶವೂ ಇರುತ್ತದೆ, ಇದು ನನ್ನ ಆಲೋಚನೆ. ಈ ಭಾವನಾತ್ಮಕ ಪ್ರೈವೆಸಿಯ ವಿಷಯದಲ್ಲಿ ದುರ್ಯೋಧನನ ಅಭಿಮಾನದ ಅಂಶ ನನ್ನಲ್ಲಿ ತುಸು ಹೆಚ್ಚಾಗೇ ಇದೆ. ಸ್ನಾನದ ಮನೆಯ ಹಾಡುಗಾರಿಕೆಗೂ ಸೌಂಡ್ ಪ್ರೂಫಿಂಗ್ ಇದ್ದರೆ ಒಳ್ಳೆಯದೆನ್ನುವ ಗುಂಪಿಗೆ ಸೇರಿದವನು ನಾನು. ಅವಕಾಶವೊದಗಿದರೆ ಇರಲಿ ಎಂದು ಕುಮಾರವ್ಯಾಸಭಾರತದ ಒಂದು ಪ್ರತಿಯನ್ನು ಬ್ಯಾಗಿನಲ್ಲಿರಿಸಿದೆ. ಸಾಮಾನ್ಯವಾಗಿ ನಾನು ಪ್ರಯಾಣದಲ್ಲಿ ಏನನ್ನೂ ಹೊತ್ತೊಯ್ಯುವುದಿಲ್ಲವಾದ್ದರಿಂದ ಇದೊಂದು ಪುಸ್ತಕದಿಂದ ಹೆಚ್ಚಿನ ಭಾರವೇನು ಆಗುವಂತಿಲ್ಲ. ಅಲ್ಲದೇ ಕುಮಾರವ್ಯಾಸನೇ ಹೇಳಿದ್ದಾನಲ್ಲ "ಭಾರತದ ಕಥನಪ್ರಸಂಗವ ಕ್ರೂರಕರ್ಮಿಗಳೆತ್ತಬಲ್ಲರು" ನನಗಂತೂ ಅದು ಎತ್ತಲು ಸುಲಭವಾಗಿತ್ತು!

ಪುಣೆಯಿಂದ ಹುಬ್ಬಳ್ಳಿವರೆಗಿನ ರಾತ್ರಿ ಪ್ರಯಾಣದಲ್ಲಿ ನಿದ್ದೆ ಬರಲಿಲ್ಲ. ಮನಸ್ಸು ತುಸು ಉದ್ವೇಗಗೊಂಡಿತ್ತು. ನನ್ನ ನೆಚ್ಚಿನ ಕವಿ, ಕಾವ್ಯವನ್ನು ರಚಿಸಿದ ಜಾಗದಲ್ಲೇ ಕುಳಿತು ಅದನ್ನು ವಾಚಿಸುವ, ಅರ್ಪಿಸುವ ಕಲ್ಪನೆಯೇ ಮನವನ್ನು ಮುದಗೊಳಿಸಿತ್ತು. ಮರುದಿನ ಅಂದುಕೊಂಡದ್ದಕ್ಕಿಂತ ಮುಂಚೆಯೇ ಹುಬ್ಬಳ್ಳಿ ತಲುಪಿದವನು, ಬೆಳಗ್ಗೆ ೯ಕ್ಕೆಲ್ಲಾ ಗದುಗಿನಲ್ಲಿದ್ದೆ. ಬಸ್ ಸ್ಟಾಂಡಿನಲ್ಲಿಳಿದು ಅಲ್ಲಿ ಇಲ್ಲಿ ವಿಚಾರಿಸುತ್ತಾ ಕೊನೆಗೊಮ್ಮೆ ದೇವಾಲಯವನ್ನು ತಲುಪಿದಾಗ ಅದರ "ಜನ ಜಂಗುಳಿ"ಯ ಬಗ್ಗೆ ಇದ್ದ ವಿಪರೀತ ಕಲ್ಪನೆಯೆಲ್ಲಾ ಹಾರಿಹೋಯಿತು. ಗದುಗಿನ ಸಂದಿಗೊಂದಿ ಗಲ್ಲಿ ಗಲ್ಲಿ ಸುತ್ತಿ ಅದೊಂದು ಕಡೆ ಎಡಕ್ಕೆ ಹೊರಳಿದರೆ ಧುತ್ತನೆ ಪ್ರತ್ಯಕ್ಷವಾಗುತ್ತದೆ, ವೀರನಾರಾಯಣನ ಗೋಪುರ. ಎರಡು ಗಲ್ಲಿ ಕೂಡುವೆಡೆಯಲ್ಲಿ ಮೂಲೆಯಲ್ಲಿರುವ ದೇವಾಲಯದ ಗೋಪುರವನ್ನು ಅದರ ಮುಂದೆ ಬೆಳೆದಿರುವ ದೊಡ್ಡ ಅರಳೀ ಮರ ಮುಚ್ಚಿದ್ದರೆ, ದೇವಾಲಯದ ಉಳಿದ ಭಾಗವನ್ನು ಅದರ ಮುಂದೆ ಅಡ್ಡಾದಿಡ್ಡಿ "ಪಾರ್ಕ್"ಮಾಡಿರುವ ಟ್ರಕ್ಕುಗಳು ಮುಚ್ಚಿರುತ್ತವೆ. ಆದರೂ ಅಲ್ಲೊಂದು ಇಲ್ಲೊಂದು ರಸ್ತೆಸೂಚಿಗಳಿರುವುದರಿಂದ ದೇವಾಲಯವನ್ನು ಕಂಡುಹಿಡಿಯುವುದು ಅಷ್ಟೇನು ಕಷ್ಟವಲ್ಲ, ಅಲ್ಲದೆ ಊರೂ ಚಿಕ್ಕದು. ದೇವಾಲಯ ನಿರ್ಜನವಾಗಿತ್ತು. ಬಹುಶಃ ಭಕ್ತ ನಾರಣಪ್ಪನಂತೆಯೇ ದೈವ ವೀರನಾರಾಯಣನೂ ಊರಿಗೆ ಅಜ್ಞಾತನಿರಬಹುದು. ಅದೇನೇ ಇರಲಿ, ಈ ಅಜ್ಞಾತತೆಯಿಂದ ಒಂದು ಅನುಕೂಲವಂತೂ ಇತ್ತು. ಬೇರೆ ಟೂರಿಸ್ಟ್ ಸ್ಪಾಟ್ ಅಥವಾ ಯಾತ್ರಾಸ್ಥಳಗಳಂತೆ ಇಲ್ಲಿ ಗಜಿಬಿಜಿ ಗಲೀಜುಗಳಾಗಲಿ, ಅದರೊಂದಿಗೆ ಬರುವ ಸ್ಥಳಮಹಾತ್ಮೆ, ಭಕ್ತಿಗೀತೆಗಳ ಕ್ಯಾಸೆಟ್ಟು ಸಿ.ಡಿ., ಬುಕ್ಕುಗಳನ್ನು ಮಾರುವ ಅಂಗಡಿ-ಮುಂಗಟ್ಟುಗಳ ಗಲಾಟೆಗಳಾಗಲಿ ಇಲ್ಲಿರಲಿಲ್ಲ. ಕೇವಲ ಹರಕೆ ಮಾತ್ರದಿಂದ ಭಕ್ತರ ಭವರೋಗಗಳನ್ನೆಲ್ಲಾ ಜಾಲಾಡಿ ಬಿಸಾಕುವ "ಪವರ್ ಫುಲ್" ದೈವಗಳು ಸಾಕಷ್ಟಿರುವಾಗ, ಈ ಬಡ ಗದಾಧರನನ್ನು ಹುಡುಕಿಕೊಂಡು ಯಾವ ಭಕ್ತಗಡಣವೂ ಗದುಗಿನ ಈ ಮೂಲೆಗೆ ಬರುವಂತಿಲ್ಲ. ಹೀಗಾಗಿ ಬಹುತೇಕ ಸ್ಥಳೀಯ ದೈವವಾದ ವೀರನಾರಾಯಣ, ಆ ಅರ್ಥದಲ್ಲಿ ಊರನಾರಾಯಣನೇ ಸರಿ, ನಮ್ಮೂರ ನಾರಾಯಣಸ್ವಾಮಿಯಂತೆ. ಅವನಂತೆ ಇವನಿಗೂ ಸ್ಥಳಪುರಾಣವಿದೆ, "ಹೊರಗಿನವ"ರಿಗೆ ಅದನ್ನು ಅರ್ಚಕರು ಹೇಳುತ್ತಾರೆ, ಈ ಪುರಾಣದ ಮಧ್ಯೆ ಕ್ವಚಿತ್ತಾಗಿ ಕುಮಾರವ್ಯಾಸನು ಇಲ್ಲಿ ಕಾವ್ಯ ಬರೆದನೆನ್ನುವ "ಪ್ರತೀತಿ"ಯೂ ಸುಳಿದು ಹೋಗುತ್ತದೆ. ಅದು ಬಿಟ್ಟರೆ "ಕುಮಾರವ್ಯಾಸನ ಕಂಬ" ಎಂಬ ಬೋರ್ಡು ಹೊತ್ತ ಒಂದು ಕಂಬ, ಹೊರಗೆ ಅಂಗಳದಲ್ಲಿ "ಕುಮಾರವ್ಯಾಸಮಂಟಪ" ಎಂಬ ಹೆಸರು ಹೊತ್ತ ಒಂದು ಮಂಟಪ, ಆಲಯದ ಒಳಬಾಗಿಲ ಮೇಲೆ "ಶ್ರೀ ವನಿತೆಯರಸನೆ..." ಪದ್ಯ ಮತ್ತು ಅದಕ್ಕಿಂತಲೂ ಮುಖ್ಯವಾಗಿ "ಸೇವೆ: ಕೆನರಾ ಬ್ಯಾಂಕ್" ಎಂಬ ಎಚ್ಚರಿಕೆಯನ್ನು ಹೊತ್ತ ಫಲಕ, ಇವಿಷ್ಟೇ ಕುಮಾರವ್ಯಾಸನ ಬಗ್ಗೆ "ಸ್ಥಳೀಯ" ನೆನಪು. ಊರಿನ ಧಾರ್ಮಿಕ ಕುಟುಂಬಗಳು ದಿನಕ್ಕೊಂದೋ ಎರಡೋ ಬಾರಿ ಗುಡಿಗೆ ಬಂದು ನಮಸ್ಕಾರ ಹಾಕಿದರೆ ಮುಗಿಯಿತು; ವರ್ಷಕ್ಕೊಂದೋ ಎರಡೋ ಜಾತ್ರೆ-ಉತ್ಸವ; ಇಷ್ಟು ಬಿಟ್ಟರೆ ಉಳಿದಂತೆ ಭಕ್ತರ ಗಲಾಟೆಯಿಲ್ಲದ ಪ್ರಶಾಂತಮೂರ್ತಿ ಇವ. ಅಜ್ಞಾತವೆನ್ನುವುದಕ್ಕಿಂತ ಅತಿ ಪರಿಚಯದ ಉಪೇಕ್ಷೆಯೆಂದರೆ ಹೆಚ್ಚು ಸೂಕ್ತ; ಬಹುಶಃ ಇದೇ ವಿವರಣೆ ನಾರಣಪ್ಪನಿಗೂ ಅನ್ವಯಿಸುತ್ತದೆ. ಇನ್ನು ಆಗೀಗ ಬರುವ "ಹೊರಗಿನವ"ರೆಂದರೆ ಕುಮಾರವ್ಯಾಸನ ಕಾವ್ಯವನ್ನು ಆನಂದಿಸಿ, ಅವನ ನೆನಪಿಗೆ ಒಂದು ಭಕ್ತಿಯ ಕಾಣಿಕೆ ಸಲ್ಲಿಸಬಯಸುವ ಒಂದಷ್ಟು ಸಾಹಿತ್ಯಾಸಕ್ತರು, ನನ್ನಂತೆ.

ನಾನು ದೇವಾಲಯಕ್ಕೆ ಬೇಗ ಬಂದಿದ್ದರಿಂದ ಬೆಳಗಿನ ಪೂಜಾಕೈಂಕರ್ಯಗಳನ್ನು ವೀಕ್ಷಿಸುವ ಅವಕಾಶವೊದಗಿತ್ತು. ನಿರಾಲಂಕೃತವಾದ ಶಂಖಚಕ್ರಗದಾಭಯ ಮೂರ್ತಿಯ ವಿಶ್ವರೂಪ ದೃಶ್ಯ ಮನೋಹರವಾಗಿತ್ತು. ಇದು ನಾನು ನೋಡಿದ ಬಹು "expressive"ಆದ ನಾರಾಯಣಮೂರ್ತಿಗಳಲ್ಲೊಂದು. ಕುಮಾರವ್ಯಾಸನ ಭಾರತದಲ್ಲಿಡೀ ನಮ್ಮ-ನಿಮ್ಮಂತೆ ನಡೆದಾಡುವ, ಮಾತಾಡುವ, ಕಪಟನಾಟಕದ ಸೂತ್ರ ಹಿಡಿದಾಡಿಸುವ, ಏನೂ ಅರಿಯದಂತೆ ನಸುನಗುವ "ಸಿರಿಮೊಗದ, ಕಿರುಬೆಮರ, ತೇಜಿಯ ಖುರಪುಟದ ಕೆಂದೂಳಿ ಸೋಂಕಿದ ಸಿರಿಮುಡಿಯ, ಕುಡಿಮೀಸೆಯಲಿ ಕೆಂಪಡರ್ದ ರೇಣುಗಳ", ದೇವದೇವನಾದರೂ ಶ್ರೇಷ್ಠ ಮಾನವಭಾವಗಳನ್ನು ಪ್ರದರ್ಶಿಸುವ ಕೃಷ್ಣಮೂರ್ತಿಯ ಕಲ್ಪನೆಯ ಸೆಲೆ ನಸುನಗುವ ಈ ವೀರನಾರಾಯಣನೇ ಸರಿ.

ಭಾವದ ಸಂದರ್ಭದ ಉತ್ಕಟತೆಯನ್ನು ಕಟ್ಟಿಕೊಡುವುದರಲ್ಲಿ ಕುಮಾರವ್ಯಾಸನದು ಎತ್ತಿದ ಕೈ. ಅದರಲ್ಲೂ ಕೃಷ್ಣನ ಬರವನ್ನು ವರ್ಣಿಸುವ ಒಂದು ಅವಕಾಶವನ್ನೂ ಕವಿ ಕಳೆದುಕೊಳ್ಳುವುದೇ ಇಲ್ಲ. ಮಾತು ನಿರರ್ಗಳವಾಗುತ್ತದೆ. "ನಂದಗೋಪಕುಮಾರ ಗೋಪೀವೃಂದ ವಲ್ಲಭ ದೈತ್ಯ ಮಥನ ಮುಕುಂದ ಮುರಹರ ಭಕ್ತವತ್ಸಲ ಘನ ಕೃಪಾಜಲಧಿ" ಎಂದು ದ್ರೌಪದಿ ಮೊರೆಯಿಡುತ್ತಾಳೆ; "ಒಲಿದವರನುಜ್ಜೀವಿಸುವ ಬಗೆ ಬಲುಹು ಮುರಮಥನಂಗೆ"; ಮುಂದೆ ಸಂಧಾನಕ್ಕಾಗಿ ದೇವರ ದೇವ ದುರ್ಯೋಧನನ ಅರಮನೆಗೆ ಬರುವ ಪರಿ ನೋಡಿ "ದೇವಬಂದನು ತನ್ನ ನೆನೆವರ ಕಾವ ಬಂದನು ದೈತ್ಯಕುಲವನದಾವ ಬಂದನು ಭಾಗವತಜನ ಲೋಲುಪನು ಬಂದ, ಭಾವಿಸುವೊಡಘಹಾರಿ ಬಂದನು ಓವಿ ಬಂದರೆ ತನ್ನ ನೀಡುವ ದೇವ ಬಂದನು ವೀರ ನರಯಣ ಬಂದನರಮನೆಗೆ" ಎನ್ನುತ್ತಾನೆ.

ನಿರಾಲಂಕೃತವಾದ ಮೂರ್ತಿಗೆ ಶಂಖ ಚಕ್ರಗಳನ್ನೇರಿಸಿ, ಶುಭ್ರವಾದ ಬಿಳೀ ಪಂಚೆಯುಡಿಸಿ, ಸರಳವಾಗಿ ಸೇವಂತಿಗೆಯನ್ನೇರಿಸಿ ಅಲಂಕಾರವನ್ನು ಮುಗಿಸುವ ವೇಳೆಗೆ ಅಂದು ನಾನು ವಾಚನಮಾಡಬೇಕಾದ ಭಾಗ ಮನದಲ್ಲಿ ಮೂಡಿತ್ತು. ಬೆಳಗಿನ ಮಂಗಳಾರತಿಗಾಗಿ ಬಂದಿದ್ದ ನಾಲ್ಕೈದು ಜನ ಸ್ಥಳೀಯರು ಖಾಲಿಯಾದರು. ಹೊರಗಿನಿಂದ ಬಂದಿದ್ದ ಒಂದಿಬ್ಬರು ದರ್ಶನ ಮುಗಿಸಿಕೊಂಡು ದೇವಸ್ಥಾನದ ಹೊರ ಅಂಗಳಕ್ಕೆ ನಡೆದರು. ನನ್ನಷ್ಟಕ್ಕೆ ನಾನು ಹಾಡಿಕೊಳ್ಳುವುದಿರಲಿ, ಜೋರಾಗಿ ಅರಚಿದರೂ ಯಾರೂ ಕೇಳುವವನಿರಲಿಲ್ಲ. ಗರ್ಭಗುಡಿಯ ಹೊರಪ್ರಾಂಗಣದಲ್ಲಿ ಕುಮಾರವ್ಯಾಸನು ಕುಳಿತು ಕಾವ್ಯ ರಚಿಸುತ್ತಿದ್ದನೆನ್ನಲಾದ ಕಂಬದೆಡೆ ನಡೆದೆ. ಅದೊಂದು ವಿಧದ ಹೆಸರಿಲ್ಲದ ಭಾವದಿಂದ ಮನಸ್ಸು ಉತ್ಕಂಠಿತವಾಗಿತ್ತು. ಕಂಬಕ್ಕೊರಗಿ ಕುಳಿತು, ಪುಸ್ತಕವನ್ನು ತೆರೆದಿಟ್ಟು ನನ್ನಷ್ಟಕ್ಕೆಂಬ ಕೆಳದನಿಯಲ್ಲಿ ಮಂಗಳಾಚರಣೆಯ ಭಾಗಗಳನ್ನು ಶುರುಮಾಡಿದೆ. "ಶ್ರೀ ವನಿತೆಯರಸನೆ..."; "ತಿಳಿಯಹೇಳುವೆ ಕೃಷ್ಣಕಥೆಯನು... "; "ಅರಸುಗಳಿಗಿದು ವೀರ..." ಗುಡಿಗೆ ಆಗೊಬ್ಬರು ಈಗೊಬ್ಬರು ಜನ ಬರುತ್ತಿದ್ದರು. ಕುತೂಹಲದಿಂದ ಈ ಕಡೆ ನೋಡಿದಾಗೆಲ್ಲಾ ಅದೊಂದು ರೀತಿಯ ಸ್ವಪ್ರಜ್ಞೆ ಜಾಗೃತವಾಗಿ ದನಿ ಕುಗ್ಗುವುದು. ಆಗೆಲ್ಲಾ ಐದಾರು ಶತಕಗಳ ಹಿಂದೆ, ಪ್ರಾಯಶಃ ಇದೇ ಜಾಗದಲ್ಲಿ ಕಾವ್ಯಾವೇಶಭರಿತನಾಗಿ ಮೈಮರೆತು ಹಾಡುತ್ತಿದ್ದ ಭಕ್ತ ಕವಿಯ ಚಿತ್ರ ಕಣ್ಮುಂದೆ ಬರುವುದು, ಮನಸ್ಸು ಮತ್ತೆ ಕಾವ್ಯದಲ್ಲಿ ಹೊಗುವುದು. ಅವತ್ತು ನಾನು ವಾಚಿಸಲು ಆಯ್ದುಕೊಂಡ ಭಾಗ ಉದ್ಯೋಗಪರ್ವದ ಎಂಟನೆಯ ಸಂಧಿ, ಸಂಧಾನಕ್ಕಾಗಿ ಹಸ್ತಿನಾವತಿಗೆ ಆಗಮಿಸುವ ಕೃಷ್ಣ ವಿದುರನ ಮನೆಗೆ ಬಂದ ಪ್ರಸಂಗ. ಪಯಣದ ಆಯಾಸದಿಂದ ನಸುವೇ ಬಾಡಿದ ಸಿರಿಮೊಗದ ಮೂರ್ತಿ; ಭಕ್ತ್ಯುದ್ರೇಕದಿಂದ ಮನೆಯನ್ನೇ ಮುರಿದೀಡಾಡುವ ವಿದುರ; ಅದರ ಹುಚ್ಚಾಟವನ್ನು ನೋಡಿ ನಸುನಗುತ್ತಾ "ಹಸಿದು ನಾವೈತಂದರೀ ಪರಿ ಮಸಗಿ ಕುಣಿದಾಡಿದೊಡೆ ಮೇಣೀ ವಸತಿಯನು ಸುಗಿದೆತ್ತಿ ಬಿಸುಟರೆ ತನಗೆ ತಣಿವಹುದೇ? ವಸುಮತಿಯ ವಲ್ಲಭರು ಮಿಗೆ ಪ್ರಾರ್ಥಿಸಿದೊಡೊಲ್ಲದೆ ಬಂದೆವೈ, ನಾಚಿಸದಿರೈ ಬಾ ವಿದುರ" ಎಂದು ಅವನನ್ನು ಸಂತೈಸಿ ಒಳಗೆ ಕರೆದೊಯ್ಯುವ ಕೃಷ್ಣ. ವಾಚನದ ಕೊನೆಗೆ "ವೇದಪಾರಾಯಣದ ಫಲ..." ಹಾಡಿ ಕೈ ಮುಗಿಯುವಹೊತ್ತಿಗೆ ಸಂಪೂರ್ಣ ತಾದಾತ್ಮ್ಯ ಲಭಿಸಿತ್ತು. ಬಹುದಿನದ ಕನಸು ನನಸಾಗಿತ್ತು. ಗುಡಿಗೆ ಬಂದವರು ಹಾಗೇ ಆಲಿಸುತ್ತಾ ಕುಳಿತ ಒಂದಿಬ್ಬರು "ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು" ಒಳನಿಂತಿದ್ದ ಕವಿ ವೀರನಾರಾಯಣನಿಗೆ ನಮಿಸಿ ತೆರಳಿದರು. ನಾನು "ಲಿಪಿಕಾರ ಕುವರವ್ಯಾಸ"ನ ಪುಣ್ಯಸ್ಮೃತಿಯೊಂದಿಗೆ ಊರ ದಾರಿ ಹಿಡಿದೆ.

ಅಡಿಟಿಪ್ಪಣಿ:
ಊರಿಗೆ ಪಯಣಿಸುತ್ತಾ ಮನಸ್ಸಿನಲ್ಲಿ ಮೂಡಿದ ಯೋಚನೆ ಇದು. ಇಡೀ ಕುಮಾರವ್ಯಾಸಭಾರತವನ್ನು ಧ್ವನಿರೂಪದಲ್ಲಿ ಸಂಗ್ರಹಿಸಿಡಲು ಸಾಧ್ಯವೇ? ಊರಿಗೆ ಬಂದಮೇಲೆ ಗೆಳೆಯ ಶ್ರೀಕಾಂತರೊಡನೆ ಚರ್ಚಿಸುತ್ತಿದ್ದಾಗ ಅವರಿಂದ ಅದಕ್ಕೆ ಪೂರಕವಾಗಿ ಅದಕ್ಕೂ ಪ್ರಾಥಮಿಕವಾಗಬಹುದಾದ ಮತ್ತೊಂದು ಯೋಚನೆಯೂ ಬಂತು, ಕುಮಾರವ್ಯಾಸಭಾರತವನ್ನು ಎಲೆಕ್ಟ್ರಾನಿಕ್ ಪುಸ್ತಕವಾಗಿ ಸಂಗ್ರಹಿಸಬಾರದೇಕೆ? ಅಂತರ್ಜಾಲದಲ್ಲೆಲ್ಲೂ ಗದುಗಿನ ಭಾರತ e-book ಇರುವಂತೆ ಕಾಣಲಿಲ್ಲ. ಎರಡೂ ಯೋಜನೆಗಳು ಕಷ್ಟಸಾಧ್ಯವಾದರೂ ಇದ್ದುದರಲ್ಲಿ ಮೊದಲನೆಯ ಯೋಜನೆಗಿಂತಲೂ ಎರಡನೆಯ ಯೋಜನೆ ಸುಲಭವೆಂದು ಕಂಡಿತು. ಆದ್ದರಿಂದ ಪ್ರಾರಂಭಿಕವಾಗಿ ಎಲೆಕ್ಟ್ರಾನಿಕ್ ಪುಸ್ತಕದ ಯೋಜನೆಯನ್ನು ಕೈಗೊಳ್ಳುವುದೆಂದೂ, ಅದರ ಯಶಸ್ಸನ್ನು ಅವಲಂಬಿಸಿ ಧ್ವನಿರೂಪದ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದೆಂದೂ ತೀರ್ಮಾನಿಸಿದೆವು. ಮುಂದುವರೆದು, ಇಡೀ ಕಾರ್ಯ ನಮ್ಮಿಬ್ಬರಿಂದಲೇ ಆಗುವುದಲ್ಲವೆಂದೂ, ನಮ್ಮಿಬ್ಬರದೇ ಆಗಿ ಉಳಿಯಬಾರದೆಂದೂ ಅರಿತೆವು. ಜನಪ್ರಿಯವಾದ ಗದುಗಿನ ಭಾರತದ ಇ-ಆವೃತ್ತಿ ಬಹು ಜನರ ಪ್ರಯತ್ನದಿಂದಲೇ ಸಾಕಾರಗೊಳ್ಳುವುದು ಸಾಧುವೆಂದು ನಮ್ಮ ಅನಿಸಿಕೆ. ಸ್ಥೂಲವಾಗಿ ಎರಡು ಹಂತಗಳ ಯೋಜನೆ ಹೀಗೆ:

೧. ಇ-ಪುಸ್ತಕ: ಸುಮಾರು ೬೦೦ ಪುಟಗಳ ಗದುಗಿನ ಭಾರತದಲ್ಲಿ ೧೦ ಪರ್ವಗಳಿವೆ. ಒಬ್ಬರು ಒಂದೊಂದು ಪರ್ವವನ್ನು ವಹಿಸಿಕೊಂಡರೂ, ದಿನಕ್ಕೊಂದು ಪುಟದಂತೆ ಟೈಪು ಮಾಡಿದರೂ ಹತ್ತು ಜನ ಇದನ್ನು ಎರಡು ತಿಂಗಳಲ್ಲಿ ಮುಗಿಸಬಲ್ಲರೆಂದು ಅಂದಾಜು. ಇವೆಲ್ಲವನ್ನೂ ಒಂದು ಕಡೆ ಕಲೆಹಾಕಿ, ಕರಡು ತಿದ್ದಿ ಕ್ರಮಪಡಿಸಿದರೆ ಇ-ಪುಸ್ತಕವನ್ನು ಅಂತರ್ಜಾಲದಲ್ಲಿ ಉಚಿತವಾಗಿ ದೊರೆಯುವಂತೆ ಪ್ರಕಟಿಸಬಹುದು. ಸಲಕರಣೆಗಾಗಿ ನಮಗೆ ಬೇಕಾದ್ದೆಲ್ಲಾ ಒಂದು unicode ತಂತ್ರಾಂಶ (ಬರಹ ಇತ್ಯಾದಿ), ಗದುಗಿನ ಭಾರತದ ಪ್ರತಿ, ಬರೆಯಲು ಸಮಯ ಮತ್ತು ಉತ್ಸಾಹ. ಈ ಉದ್ದೇಶಕ್ಕಾಗಿ ಬ್ಲಾಗೊಂದನ್ನು ಸಿದ್ಧಪಡಿಸಿದ್ದೇವೆ http://gaduginabharata.blogspot.com/. ಸಧ್ಯಕ್ಕೆ ಶ್ರೀಕಾಂತ್ ಆದಿಪರ್ವವನ್ನೂ ನಾನು ಸಭಾಪರ್ವವನ್ನೂ ಕೈಗೆತ್ತಿಕೊಂಡಿದ್ದೇವೆ. ಉತ್ಸಾಹಿಗಳು ಉಳಿದ ಪರ್ವಗಳನ್ನು ಕೈಗೆತ್ತಿಕೊಳ್ಳಲು ಮುಂದೆ ಬಂದಲ್ಲಿ ಬ್ಲಾಗಿನ authorship ಪಡೆಯಲು ಸ್ವಾಗತ.

೨. ದ್ವನಿರೂಪದ ಸಂಗ್ರಹ: ಇದು ಮೂಲತಃ ಕಾವ್ಯವಾಚನದ ಯೋಜನೆ, ಆದರೆ ಸಿ.ಡಿ. ಹೊರತರುವುದೋ, ಭಾಗಶಃ ವಾಚನ-ವ್ಯಾಖ್ಯಾನವೋ ಅಲ್ಲ. ಮೇಲೆ ಹೇಳಿದ ಇ-ಪುಸ್ತಕದಂತೆಯೇ ಇದು ಧ್ವನಿ ಪುಸ್ತಕ. ಮೇಲಿನಂತೆಯೇ ಒಂದಷ್ಟು ಜನ ಉತ್ಸಾಹಿ ಗಮಕಿಗಳ ಗುಂಪು ಭಾರತದ ಒಂದೊಂದು ಭಾಗವನ್ನು ಹಾಡಿ ಧ್ವನಿಮುದ್ರಿಸಿ ಒಂದು ಕಡೆ ಕಲೆಹಾಕುತ್ತಾ ಹೋಗುವುದು. ಮುಂದೆ ಅವೆಲ್ಲವನ್ನೂ ಪರಿಷ್ಕರಿಸಿ ಕರ್ಣಾಟಭಾರತ ಕಥಾಮಂಜರಿ ಧ್ವನಿ ಅವತರಣಿಕೆ ಹೊರತರಲು ಸಾಧ್ಯ. ಇದೂ ಇ-ಪುಸ್ತಕದಂತೆಯೇ ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿರಬೇಕೆಂದು ಆಶಯ. ಆದರೆ ಇದಕ್ಕೆ ಮೇಲಿನದಕ್ಕಿಂತ ಹೆಚ್ಚು ಜನ ಬೇಕಾಗುತ್ತದೆ ಎನ್ನುವುದಂತೂ ನಿಜ. ಆದರೆ ಭಾಗವಹಿಸುವವರು ಉತ್ತಮ ಸಂಗೀತಗಾರರೋ, ವೃತ್ತಿಪರ ಗಮಕಿಗಳೋ ಆಗಿರಬೇಕೆಂದೇನೂ ಇಲ್ಲ. ಕಾವ್ಯವನ್ನು ಆಸ್ವಾದಿಸುವ, ಅದನ್ನು ಸುಶ್ರಾವ್ಯವಾಗಿ ಭಾವಪೂರ್ಣವಾಗಿ ಹಾಡಿ ಪ್ರಸ್ತುತಪಡಿಸುವ, ಆ ಕ್ರಿಯೆಯನ್ನು ಆನಂದಿಸುವ ಮನಸ್ಸುಳ್ಳವರಾದರೆ ಸಾಕು. ಮತ್ತು ಸಲಕರಣೆಯಾಗಿ ನಮಗೆ ಬೇಕಾದ್ದೆಲ್ಲಾ ಗದುಗಿನ ಭಾರತದ ಪ್ರತಿ, ಒಂದು audacity ತಂತ್ರಾಂಶ (ಅಂತರ್ಜಾಲದಲ್ಲಿ ಉಚಿತವಾಗಿ ದೊರೆಯುತ್ತದೆ), ಒಂದು ಶ್ರುತಿಪೆಟ್ಟಿಗೆ/ತಂಬೂರಿ, ಗೊತ್ತುಪಡಿಸಿದ ಒಂದು ಸಾಮಾನ್ಯ ಶ್ರುತಿ, ಧ್ವನಿಮುದ್ರಿಸಲು ಪ್ರಶಾಂತವಾದ ಸ್ಥಳ, ಎಲ್ಲವನ್ನು ಕಲೆಹಾಕಲು ಒಂದು rapid share ಅಥವ ಅಂಥದ್ದೊಂದು ಖಾತೆ. ಈ ಯೋಜನೆ ಇನ್ನೂ ಆಲೋಚನೆಯ ಹಂತದಲ್ಲಿದೆ. ಸಲಹೆ ಸೂಚನೆಯನ್ನೂ ಒಳಗೊಂಡು ಎಲ್ಲಾ ವಿಧದ ಭಾಗವಹಿಸುವಿಕೆಗೆ ಸ್ವಾಗತ.