Tuesday, November 29, 2011

ಭಾವಸಿಂಚನ - ಪುಸ್ತಕ ಬಿಡುಗಡೆ ಸಮಾರಂಭ

ಈ ಮೊದಲೇ ತಿಳಿಸಿದಂತೆ 26ರಂದು "ಭಾವಸಿಂಚನ" ಕವನ ಸಂಕಲನದ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗಹಿಸಿದ್ದೆ. ಇದೊಂದು ವಿನೂತನ ಪ್ರಯೋಗ. ೩ಕೆ ಎಂಬ ಆರ್ಕುಟ್ ಸಮುದಾಯದ ಉತ್ಸಾಹಿ ಯುವ ಕವಿ-ಕವಯಿತ್ರಿಯರು ಸೇರಿ ಆ ಸಮುದಾಯದಲ್ಲಿ ಆಗಾಗ್ಗೆ ಪ್ರಕಟವಾದ ಕವನಗಳನ್ನು ಹೊರತಂದಿದ್ದಾರೆ.

ಆ ಸಮಾರಂಭದ ಕೆಲವು ಚಿತ್ರಗಳು ಇಲ್ಲಿವೆ (ಚಿತ್ರ ಕೃಪೆ, ತಂಡದ ಸದಸ್ಯರು)

ಆಸಕ್ತರು ಈ ಪುಸ್ತಕಗಳನ್ನು ಬೆಂಗಳೂರಿನ ಸಪ್ನಾ ಪುಸ್ತಕ ಮಳಿಗೆ ಮತ್ತಿತರ ಕಡೆಗಳಲ್ಲಿ ಪಡೆಯಬಹುದು. ಯಾವುದೇ ಕನ್ನಡ ಪುಸ್ತಕದ ಖರೀದಿಯೊಂದಿಗೆ ಈ ಪುಸ್ತಕ ಉಚಿತವಾಗಿ ದೊರೆಯುತ್ತದೆ ಎಂದು ಸಮುದಾಯದ ಪ್ರಕಟಣೆ ಹೇಳುತ್ತದೆ.

Monday, November 21, 2011

ಕೆಲವು ವಚನಗಳು

(೧)
ಕಾಗೆ ಕರುಬಿ ಮಾವಿನ ಚಿಗುರುಂಬೊಡೆ
ಬಾಯಿ ಕಹಿಗೊಂಡಿತ್ತಲ್ಲದೆ
ಕೋಗಿಲೆಯ ಸೊಲ್ಲು ದೊರಕೊಂಡಿತೇ
ಕಾಡ ಮಂಗ ಸಿರಿಗಂಧದ ಮರಕೆ ಜೋತೊಡದರ ನಡೆ ಸಿರಿಗೊಂಡಿತೇ?
ಭಾವದ ಮಿಂಚೊಡೆದ ಬೆಡಗಿಂಗೆ ಮೈಯಿಕ್ಕದೆ ಮನವೀಯದೆ
ಬರಿದೇ ನುಡಿನುಡಿಯೆಂದುರೆ ಬೊಬ್ಬೆ ಹೊಯ್ದೊಡೆ
ಆ ಬೊಬ್ಬೆ ನುಡಿಯೇ? ಹೊಯ್ದವ ನುಡಿಗನೇ? ನುಡಿ ಕನ್ನುಡಿಯೇ?
ನುಡಿಯೊಳನುಡಿತವ ಕೇಳದೆ ಮಿಡಿತವನರಿಯದೆ
ನಾನೀನೆಂದು ಗಳಹುವ ಬಾಯಿಬಡುಕರನೇನೆಂಬೆನಯ್ಯಾ
ದಮ್ಮಪುರದ ಮಂಜಯ್ಯಾ ನಿಮ್ಮ ನುಡಿಯೆಮಗೆ ಶರಣು.

(೨)
ಈ ನುಡಿ ಕನ್ನುಡಿಯೆಂಬರು
ಮತ್ತಾನುಡಿ ಪರನುಡಿಯೆಂಬರು,
ತೊದಲುವ ಕಂದನ ನುಡಿಯಾವುದಯ್ಯಾ
ಬಿರಿವೂವಿನ, ಚೆಲುನಗುವಿನ, ಎದೆಯೊಲವಿನ ನುಡಿಯಾವುದಯ್ಯಾ
ನುಡಿವುಟ್ಟುವ, ಹೊಮ್ಮುವ, ನೆಗೆಯುವ, ಚಿಮ್ಮುವ ಜೀವದ ನಡೆಯರಿಯದೆ,
ಪೆಣಕೆ ದಾರವನಿಕ್ಕಿ ಜಾತಿಯ ಹೊಲಸುಂಬರಯ್ಯಾ
ಅಯ್ಯಾ ನಿಮ್ಮ ಕರುಣೆಯದಾವ ನುಡಿ
ಕಡುಮೌನವದಾವ ನುಡಿ ಪೇಳಾ ದಮ್ಮಪುರದ ಮಂಜಯ್ಯಾ

Sunday, November 20, 2011

ಭಾವಸಿಂಚನ - ಕವಿಗಳಲ್ಲದವರ ಕವನಗಳು

ಆರ್ಕುಟ್ ನ "3K ಬಳಗ"ದ ಉತ್ಸಾಹೀ ನವಕವಿಗಳು ಈ ಬಳಗದ ವೇದಿಕೆಯಲ್ಲಿ ಆಗಾಗ ಪ್ರಕಟಿಸಿದ ಆಯ್ದ ಕವನಗಳ ಸಂಕಲನವೊಂದನ್ನು ಹೊರತರುತ್ತಿದ್ದಾರೆ. ಇದು ಸಂತೋಷದ ವಿಷಯ. ನಾನೂ ಹೋಗುತ್ತಿದ್ದೇನೆ. ನೀವೂ ಬನ್ನಿ.

ದಿನಾಂಕ: ೨೬/೧೧/೨೦೧೧, ಶನಿವಾರ
ಸಮಯ: ಸಂಜೆ ೬ ಗಂಟೆ
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.