Friday, September 23, 2022

ಬೆಳದಿಂಗಳ ಕಸುಬು

ಚಂದ್ರನನ್ನು ಹಾಡಿ ಹೊಗಳದವರಾರು.  ತಂಬೆಳಕು ನೀಡುವವನು, ಮನಸ್ಸಿಗೆ ಆಹ್ಲಾದ ನೀಡುವವನು, ನಿಶಾಪತಿ, ತಾರಾಪತಿ, ನೈದಿಲೆಗಳಿಗೆ ಚಕೋರಪಕ್ಷಿಗೆ ಪರಮಾಪ್ತಮಿತ್ರ, ಎಷ್ಟೆಲ್ಲ ಉಪಾಧಿಗಳು ಚಂದ್ರನಿಗೆ! "ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ" ಎನ್ನುತ್ತಾರೆ ಬಸವಣ್ಣನವರು.  ಇನ್ನು ಪ್ರೇಮಿಗಳಿಗಂತೂ ಮನ್ಮಥನನ್ನು ಬಿಟ್ಟರೆ ಈತನೇ ಆರಾಧ್ಯದೈವ.  ಬೆಳದಿಂಗಳಿನಲ್ಲಿ ಕಡಲತಡಿಯಲ್ಲಿ ಕೈಕೈ ಹಿಡಿದುಕೊಂಡು ನಡೆಯುವ ಪ್ರೇಮಿಗಳಿಗೆ ಬೇರೆ ಪ್ರಪಂಚವೇ ಬೇಡವಂತೆ - ಅಂತೆ, ನಮಗೆ ತಿಳಿಯದು.  "ತೆಂಗುಗರಿಗಳ ನಡುವೆ ತುಂಬು ಚಂದಿರ ಬಂದು ಬೆಳ್ಳಿ ಹಸುಗಳ ಹಾಲ ಕರೆಯುವಂದು ಅಂಗಳದ ನಡುವೆ ಬೃಂದಾವನದ ಬಳಿ ನಿಂದು ಹಾಡುವೆವು ಸಿರಿಯ ಕಂಡು" ಎಂದು ಕವಿ ಕನಸುತ್ತಾನೆ.  

ಇಂಥಾ ಚಂದಿರನನ್ನು ದ್ವೇಷಿಸುವವರೂ ಇರುತ್ತಾರೆಯೇ?  ಯಾಕಿಲ್ಲ?  ಆರಾಧ್ಯದೈವವೆಂದು ಕೊಂಡಾಡುವ ಅದೇ ಪ್ರೇಮಿಗಳನ್ನು ಒಮ್ಮೆ ಅಗಲಿಸಿ, ಅವರ ಮೇಲೆ ಬೆಳದಿಂಗಳನ್ನು ಹರಿಸಿ ನೋಡಿ, ಆಗ ತಿಳಿಯುತ್ತದೆ ಅವರ ಚಂದ್ರಭಕ್ತಿಯ ಅಸಲಿಯತ್ತು - ಪ್ರೇಮಿಯನ್ನಗಲಿದ ಜೀವಕ್ಕೆ ಬೆಳದಿಂಗಳೇ ಬಿಸಿಲಾಗಿ ಕಾಡುತ್ತದಂತೆ, ಮಲಯಾನಿಲ ಬಿಸಿಗಾಳಿಯಾಗಿಬಿಡುತ್ತದಂತೆ, ಚಂದನ ಮೈಸುಡುತ್ತದಂತೆ.  ಶೃಂಗಾರಕಾವ್ಯಗಳ ಅರ್ಧಕ್ಕರ್ಧ ಈ ವಿರಹಿಗಳ ವಿರಹಾಲಾಪದಿಂದಲೇ ತುಂಬಿ ಹೋಗಿದೆ - ಮನ್ಮಥ, ವಸಂತ, ಚಂದ್ರ, ಚಂದನ ಮತ್ತು ಮಲಯಾನಿಲ ಇವಿಷ್ಟನ್ನು ಎಷ್ಟು ಗೋಳುಗರೆದರೂ ಸಾಲದು.  ಪಾಪ ಇಲ್ಲೊಬ್ಬ ಪ್ರೇಮಿ ಚಂದ್ರನಲ್ಲಿ ಹೇಗೆ ಮೊರೆಯಿಡುತ್ತಾನೆ ನೋಡಿ, ರಾಜಶೇಖರನ ವಿದ್ಧಶಾಲಭಂಜಿಕಾ ನಾಟಕದಲ್ಲಿ:

ಸೂತಿರ್ದುಗ್ಧಸಮುದ್ರತೋ ಭಗವತಃ ಶ್ರೀಕೌಸ್ತುಭೌ ಸೋದರೌ

ಸೌಹಾರ್ದಂ ಕುಮುದಾಕರೇಷು ಕಿರಣಾಃ ಪೀಯೂಷಧಾರಾಕಿರಃ

ಸ್ಪರ್ಧಾ ತೇ ವದನಾಂಬುಜೈರ್ಮೃಗದೃಶಾಂ ತತ್ ಸ್ಥಾಣುಚೂಡಾಮಣೇ

ಹಂಹೋ ಚಂದ್ರ ಕಥಂ ನು ಮುಂಚಸಿ ಮಯಿ ಜ್ವಾಲಾಮುಚೋ ವೇದನಾಃ

(ಹೇ ಚಂದ್ರಭಗವನ್, ನೀನು ಹುಟ್ಟಿದ್ದು ನೋಡಿದರೆ ಹಾಲಿನ ಸಮುದ್ರದಲ್ಲಿ, ಲಕ್ಷ್ಮಿಯೂ ಕೌಸ್ತುಭರತ್ನವೂ ನಿನ್ನ ಸೋದರರು, ನಿನ್ನ ಸ್ನೇಹವೋ ಕುಮುದಪುಷ್ಪಗಳಿಂದ ತುಂಬಿದ ಕೊಳಗಳೊಡನೆ, ಕಿರಣವೋ ಅಮೃತಧಾರೆ, ಇನ್ನು ನಿನ್ನ ಸ್ಪರ್ಧೆಯೋ, ಆ ಮೃಗನಯನಿಯರ ಮುಖಕಮಲಗಳೊಂದಿಗೇ, ವಾಸವನ್ನು ನೋಡಿದರೆ, ಸಾಕ್ಷಾತ್ ಶಿವನ ತಲೆಯಮೇಲೆ ಚೂಡಾಮಣಿಯಾಗಿ ನೆಲೆಸಿದ್ದೀಯೆ - ಹೀಗಿದ್ದೂ ನನ್ನ ಮೇಲೆ ಮಾತ್ರ ಏಕಪ್ಪಾ ಈ ವೇದನಾಮಯವಾದ ಜ್ವಾಲೆಯನ್ನು ಹರಿಸುತ್ತಿದ್ದೀಯೆ?)

ಚಂದ್ರನನ್ನು ದ್ವೇಷಿಸುವ ಇನ್ನೊಂದು ಜೀವವಿದೆ - ಆತ ವಿರಹಿಯೂ ಅಲ್ಲ, ಪ್ರೇಮಿಯೂ ಅಲ್ಲ, ಭಾವುಕನೂ ಅಲ್ಲ, ಕೇವಲ ಡೌನ್ ಟು ಅರ್ಥ್ ಕಸಬುದಾರ - 

ಕಳ್ಳ.  

ಈಗಿನ ಕಳ್ಳರು ಹೇಗೋ ಗೊತ್ತಿಲ್ಲ, ಹಿಂದಿನ ಕಳ್ಳರಂತೂ ಪಾರಂಪರಿಕವಾಗಿ ಚಂದ್ರನನ್ನು ದ್ವೇಷಿಸಿಕೊಂಡೇ ಬಂದಿದ್ದಾರೆ.  "ಚೋರ ನಿಂದಿಸಿ ಶಶಿಯ ಬೈದೊಡೆ... ಏನಹುದು" ಎಂದು ಹೀಯಾಳಿಸುತ್ತಾನೆ ಕವಿ ಕುಮಾರವ್ಯಾಸ.  ಆಚಾರ್ಯ ಚಾಣಕ್ಯನಂತೂ "ಚೋರಾಣಾಂ ಚಂದ್ರಮಾ ರಿಪುಃ" ಎಂದೇ ಘೋಷಿಸಿಬಿಟ್ಟಿದ್ದಾನೆ.  ಕಳ್ಳನೊಬ್ಬನದೇ ಏಕೆ, ಆ ಪೂರ್ತಿ ಪದ್ಯವೇ ಅವಗಾಹ್ಯವಾಗಿದೆ, ಒಮ್ಮೆ ನೋಡಿಬಿಡೋಣ:

ಲುಬ್ಧಾನಾಂ ಯಾಚಕಃ ಶತ್ರುಃ ಮೂರ್ಖಾಣಾಂ ಬೋಧಕೋ ರಿಪುಃ |

ಜಾರಸ್ತ್ರೀಣಾಂ ಪತಿಃ ಶತ್ರುಃ ಚೋರಾಣಾಂ ಚಂದ್ರಮಾ ರಿಪುಃ

(ಚಾಣಕ್ಯನೀತಿ 10-6)

(ಲೋಭಿಗೆ ಬೇಡುವವನೇ ಶತ್ರುವಾದರೆ ಮೂರ್ಖನಿಗೆ ಬೋಧಿಸುವವನು; ಹಾದರಗಿತ್ತಿಗೆ ಪತಿಯೇ ಶತ್ರುವಾದರೆ, ಕಳ್ಳರಿಗೆ ಚಂದ್ರನೇ ಶತ್ರು)

ಎಂಜಲ ಕೈಯಲ್ಲಿ ಕಾಗೆ ಹೊಡೆಯದ ಲೋಭಿಯ ಬಳಿ ಹೋಗಿ ಸ್ವಲ್ಪ "ಕೀತ ಬೆಟ್ಟಿಗೆ ಉಚ್ಚೆ ಹೊಯ್ಯಿ" ಎಂದು ಬೇಡಿದರೆ ಆತ "ಜಲ ಮಲ ಕಟ್ಟಿ ಮೂರು ದಿನ ಆಯ್ತು" ಎಂದು ಹೇಳಿ ಎದ್ದು ಹೋದನಂತೆ.  ಹೀಗಿರುವಾಗ ಯಾಚಿಸಿದರೆ?  ನೀವೇ ಯೋಚಿಸಿ!  ಇನ್ನು ಮೂರ್ಖರಿಗೆ ಬೋಧಕರು ಅದೆಂತಹ ಪರಮಶತ್ರುಗಳು ಎಂಬುದನ್ನಂತೂ ಹೇಳುವುದೇ ಬೇಡ.  ಅಂತಹ ಸರ್ವಜ್ಞನೇ "ಮೂರ್ಖರಿಗೆ ನೂರ್ಕಾಲ ಬುದ್ಧಿ ಪೇಳಿದರೇನು ಗೋರ್ಕಲ್ಲ ಮೇಲೆ ಮಳೆ ಸುರಿಯಲಾ ಕಲ್ಲು ನೀರ್ಗುಡಿಯಲಪ್ಪುದೇ" ಎಂದು ಕೈ ಚೆಲ್ಲಿ, ಅಲ್ಲಲ್ಲ, ನೀರು ಚೆಲ್ಲಿ ಕೈಬಿಟ್ಟಿದ್ದಾನೆ.  ಸರ್ವಜ್ಞನಾದರೋ ನೂರ್ಕಾಲ ಮಳೆಸುರಿದು ನೋಡಿದ.  ಆದರೆ ಇದನ್ನು ಶತಮಾನಗಳ ಮೊದಲೇ ಕಂಡಿದ್ದ ಚಾಣಕ್ಯ, ಈ ಪ್ರಯತ್ನವೇ ವಿಫಲ ಎನ್ನುತ್ತಾನೆ.  "ಎಷ್ಟು ನೂರು ಬಾರಿ ತೊಳೆದರೂ ಗುದವು ಗುದವೇ ಹೊರತು ವದನವಾದೀತೇ" ಎಂಬುದು ಆತನ ನೇರ ಅಭಿಪ್ರಾಯ (ದುರ್ಜನಂ ಸಜ್ಜನಂ ಕರ್ತುಂ ಉಪಾಯಂ ನ ಹಿ ಭೂತಲೇ; ಅಪಾನಂ ಶತಧಾ ಧೌತಂ ನ ಶ್ರೇಷ್ಠಮಿಂದ್ರಿಯಂ ಭವೇತ್ (ಚಾಣಕ್ಯನೀತಿ - 10-10) - ದುರ್ಜನರನ್ನು ಸಜ್ಜನರನ್ನಾಗಿ ಮಾಡುವ ಉಪಾಯ ಈ ಭೂಮಿಯಲ್ಲಿ ಇಲ್ಲವೇ ಇಲ್ಲ; ಗುದವನ್ನು ನೂರು ಬಾರಿ ತೊಳೆದರೂ ಅದು ವದನವಾಗುವುದಿಲ್ಲ)

ಅದಿರಲಿ, ಮೂಲಶ್ಲೋಕಕ್ಕೆ ಮರಳೋಣ. ಲೋಭಿಗಳು ಮತ್ತು ಮೂರ್ಖರ ಬಗೆಗೆ ಹೇಳಿದ್ದೇನೋ ಸರಿ, ಆದರೆ "ಜಾರಸ್ತ್ರೀಣಾಂ ಪತಿಃ ಶತ್ರುಃ" ಎಂಬಲ್ಲಿ ಮಾತ್ರ ಚಾಣಕ್ಯನು ಪಕ್ಕಾ ಮೇಲ್ ಶೌವೆನಿಸ್ಟಿಕ್ ಆಗಿಬಿಟ್ಟಿದ್ದಾನೆ - ಜಾರತನವನ್ನು ಕೇವಲ ಸ್ತ್ರೀಯರು ಮಾಡುತ್ತಾರೆಯೇ?  ಅಥವಾ ಜಾರತನ ಮಾಡುವ ಪುರುಷರಿಗೇನು ಅವರ ಸತಿ ಶತ್ರುವೇ ಅಲ್ಲವೇ?  ಇದನ್ನೂ ಚಾಣಕ್ಯ ಹೇಳಬೇಕಾಗಿತ್ತು.  ಈ ಕಾರಣಕ್ಕಾಗಿ ಯಾರಾದರೂ ಚಾಣಕ್ಯನ ಮೇಲೆ ಹಕ್ಕುಚ್ಯುತಿ ಮಂಡಿಸುವುದಿದ್ದರೆ ಅದನ್ನು ನಾನಂತೂ ಬೆಂಬಲಿಸುತ್ತೇನೆ.  

ನೋಡಿ, ನಾವು ಶುರುಮಾಡಿದ್ದು ಕಳ್ಳನ ವಿಷಯ.  ಕಳ್ಳತನದ ಸುಳಿವು ಕಂಡದ್ದೇ ತಡ, ಮಾತು ಯಾವಯಾವುದೋ ಕಳ್ಳವ್ಯವಹಾರಗಳ ಹಾದಿಯನ್ನೇ ಹಿಡಿಯಿತು.  ಮತ್ತೆ ಸರಿದಾರಿಗೆ - ಅಂದರೆ ಕಳ್ಳನ ದಾರಿಗೆ ಬರೋಣ - "ಚೋರಾಣಾಂ ಚಂದ್ರಮಾ ರಿಪುಃ" - ಸದ್ಯಕ್ಕೆ ನಮ್ಮ ಅವಗಾಹನೆಗೆ ಬೇಕಾದ್ದು ಈ ಚಂದ್ರವೈರಿಯಾದ ಕಳ್ಳೋತ್ತಮನೇ.  

ಇಷ್ಟಕ್ಕೂ ಕಳ್ಳನಿಗೆ ಚಂದ್ರನ ಮೇಲೆ ಅಷ್ಟು ದ್ವೇಷವೇಕೆ, ಅದಕ್ಕೇನಾದರೂ ಪುರಾಣದ ಕತೆಯಿದೆಯೇ ಎಂದು ಕೇಳಬೇಡಿ - ಅದರ ಹಿಂದೆ ಇರುವುದು ಪುರಾಣವಲ್ಲ, ಕಾಮನ್ ಸೆನ್ಸು.  ಅಲ್ಲ, ಎಲ್ಲೆಲ್ಲೂ ಹಾಲು ಚೆಲ್ಲಿದಂತೆ ಬೆಳದಿಂಗಳು ಚೆಲ್ಲಿದ್ದರೆ ಆ ಬೆಳದಿಂಗಳ ರಾತ್ರಿಯಲ್ಲಿ ಕಳ್ಳನೇನು ಮೋಹಿನಿಯ ಜೊತೆ ಕೂತು ರೊಮ್ಯಾನ್ಸ್ ಮಾಡುತ್ತಾ ಕಾಲ ಹಾಕಬೇಕೇ?  ಅವ ಬಂದಿರುವುದು ಕಳ್ಳತನ ಮಾಡಲು - ಕಳ್ಳತನ ಯಾರ ಕಣ್ಣಿಗೂ ಬೀಳದಂತೆ ಮಾಡಬೇಕಾದ ಕೆಲಸ, ನಮ್ಮ ವಡಿವೇಲುವಿನಂತೆ ಢಾಣಾಢಂಗುರ ಹೊಯಿಸಿ, ಪೋಸ್ಟರ್ ಹಚ್ಚಿ ಮಾಡಬೇಕಾದ ಸಮಾರಂಭವಲ್ಲ.  ಅದು ಹೇಳಿಕೇಳಿ ಕಪ್ಪು ಕೆಲಸ - ಅದಕ್ಕೆ ಬೆಳದಿಂಗಳ ರಾತ್ರಿ ಆಗಿಬರದು. ಮಾಟಮಂತ್ರವೇ ಮೊದಲಾದ ಅಭಿಚಾರವಿದ್ಯೆಗಳಂತೆ ಇದೂ ಕಪ್ಪು ರಾತ್ರಿಯಲ್ಲೇ ಮಾಡಬೇಕಾದ ಕೆಲಸ - ಸೂರ್ಯಗ್ರಹಣವೂ ಕಪ್ಪುಕಾಲವೇ ಆದರೂ ಅದು ಮಾಟಮಂತ್ರಗಳಿಗೆ ಆದೀತೇ ಹೊರತು ಕಳ್ಳತನಕ್ಕೆ ಆಗಿಬರುವುದಿಲ್ಲ, ಏಕೆಂದರೆ ಸೂರ್ಯಗ್ರಹಣಗಳು ಆಗುವುದು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲೇ ನೋಡಿ!  ಗ್ರಹಣಕ್ಕೆ ಹೆದರಿ ಜನ ಮನೆಯಲ್ಲೇ ಗುಬ್ಬೆಂದು ಕೂತಿರುವಾಗ ಅಲ್ಲಿಗೆ ಕಳ್ಳ ಹೊಕ್ಕು ಜಯಿಸಲಾಗುವುದೇ?

ಈಗೆಲ್ಲ ಬಿಡಿ, ಕಳ್ಳನ ಕೆಲಸಕ್ಕೆ ಕಲ್ಲು ಹಾಕಲು ಹುಣ್ಣಿಮೆಯ ಚಂದ್ರನೇ ಬೇಕಿಲ್ಲ - ಬೀದಿ ದೀಪಗಳಿವೆ (ಅವು ನೂರಕ್ಕೆಪ್ಪತ್ತರಷ್ಟು ಕೆಟ್ಟು ಕೂತಿರುತ್ತವೆ ಎಂಬ ವಿಷಯವನ್ನು ಸದ್ಯಕ್ಕೆ ಪಕ್ಕಕ್ಕಿಡೋಣ), ಅವಿಲ್ಲದಿದ್ದರೇನಾಯಿತು, ದಂಡಿಯಾಗಿ ಬೀದಿ ನಾಯಿಗಳಿವೆ - ನಮ್ಮ ರಕ್ಷಣೆಗಾಗಿಯೇ ಕಾರ್ಪೊರೇಷನ್ನು ಅವುಗಳನ್ನು ಬೀದಿಬೀದಿಗಳಲ್ಲಿ ಬೆಳೆಸಿದೆ, ಸ್ವಲ್ಪ ಶ್ರೀಮಂತರ ಮನೆಗಳಲ್ಲಾದರೆ ಮನೆಯಲ್ಲಿ ಸಾಕಿದ ನಾಯಿಗಳೂ ಇರುತ್ತವೆ, ಮನೆಯ ದೀಪಗಳಂತೂ ಇದ್ದೇ ಇವೆ, ಸ್ವಲ್ಪ ಮುಂದುವರೆದ ಮನೆಗಳಲ್ಲಿ ಬರ್ಗಲರ್ ಅಲಾರ್ಮು, ಸಿಸಿಟಿವಿ ಹೀಗೆ ಇನ್ನೂ ಏನೇನೋ ಇರುತ್ತವೆ.  ಆದ್ದರಿಂದ ಈಚಿನ ಕಳ್ಳರಿಗೆ ಚಂದ್ರನೇನು ಬಲುದೊಡ್ಡ ತೊಡಕಲ್ಲ.  ಅಲ್ಲದೇ ಈಗಂತೂ ಹಾಡುಹಗಲಲ್ಲೇ ದರೋಡೆ ಮಾಡಿ ಹೋಗುವಷ್ಟು ಟೆಕ್ನಾಲಜಿ ಮುಂದುವರೆದಿರುವುದರಿಂದ ಈಗೇನಿದ್ದರೂ ಚಂದ್ರ ಒಂದು ಸಂಕೇತವಷ್ಟೇ - ಕಸುಬಿಗೆ ತೊಡಕಾಗಿರುವ ಎಲ್ಲದರ ಸಂಕೇತ - ಎಲ್ಲಿ ಯಾವುದೇ ಕೆಟ್ಟದಿದ್ದರೂ ಅದನ್ನು ಬ್ರಾಹ್ಮಣ್ಯವೆಂದು ಕರೆಯುವುದಿಲ್ಲವೇ, ಹಾಗೆ ಎಂದಿಟ್ಟುಕೊಳ್ಳಬಹುದು.

ಅದೇನೇ ಇರಲಿ, ವಾಸ್ತವದಲ್ಲಿ ಕಳ್ಳರು ಚಂದ್ರಪ್ರೇಮಿಗಳಲ್ಲದಿದ್ದರೂ ಚಂದ್ರದ್ವೇಷಿಗಳಲ್ಲ ಎಂಬುದನ್ನು ಸ್ಥಾಪಿಸಲಿಕ್ಕೆ ಇಷ್ಟು ಹೇಳಬೇಕಾಯಿತು.  ಅಷ್ಟೇಕೆ, ಈಗೀಗ ಒಂದು ಹೊಸಬಗೆಯ ಕಳ್ಳರ ಸಮುದಾಯ ರೂಪುಗೊಂಡಿದೆ.  ಅವರು ಸುತರಾಂ ಚಂದ್ರದ್ವೇಷಿಗಳಲ್ಲ.  ಇವರೂ ಸಾಮಾನ್ಯವಾಗಿ ನಡುರಾತ್ರಿಯಲ್ಲೇ ಕೆಲಸಮಾಡುವುದರಿಂದ ಇವರನ್ನು ನಿಶಾಚರರು ಎಂದೇ ಕರೆಯಬಹುದಾದರೂ ಇವರ ಕಸುಬಿಗೆ moonlighting ಎಂಬ ಸುಂದರವಾದ, ಕಾವ್ಯಮಯವಾದ ಹೆಸರಿದೆ.  ತಡೆಯಿರಿ, ಹೆಸರನ್ನು ನೋಡಿಕೊಂಡು ಕಸುಬಿಗಿಳಿಯುವುದು ಒಳ್ಳೆಯದಲ್ಲ.  ಹೆಸರು moonlighting ಆದರೂ ವಾಸ್ತವದಲ್ಲಿ ಅದು ಕಳ್ಳಕೆಲಸ.  ಒಂದು ಕಂಪನಿಯಲ್ಲಿ ಕೆಲಸಕ್ಕಿದ್ದುಕೊಂಡೇ ಗುಟ್ಟಾಗಿ ಇನ್ನೊಂದು ಕಂಪನಿಗೆ ಕೆಲಸ ಮಾಡುವುದಕ್ಕೆ ಕಾರ್ಪೊರೇಟ್ ವಲಯದಲ್ಲಿ moonlighting ಎಂಬ ನಾಮಧೇಯವಿದೆ.  ಈ moonlighting ಯಾವ ಕ್ಷೇತ್ರದಲ್ಲೂ ಆಗಬಹುದಾದರೂ ಸಾಮಾನ್ಯವಾಗಿ ಇದು ಐಟಿ ವಲಯದಲ್ಲೇ ಹೆಚ್ಚು.  ಈಗಂತೂ work from home ಬಹಳ ಹೆಚ್ಚಾದುದರಿಂದ ಈ 'ತಂಬೆಳಕು ಕೋರ'ರ ಸಂಖ್ಯೆಯೂ ವಿಪರೀತ ಹೆಚ್ಚಾಗಿದೆಯಂತೆ.  ಸಾಮಾನ್ಯವಾಗಿ ಐಟಿ ವಲಯದಲ್ಲಿ ಕೆಲಸದಲ್ಲಿರುವ ಯಾರಿಗಾದರೂ ಅವರವರ ಮಾನವಸಂಪನ್ಮೂಲವಿಭಾಗದಿಂದ ಹೀಗೆ ಮಾಡದಂತೆ ಎಚ್ಚರಿಕೆ ಸಂದೇಶ ಬಂದೇ ಇರುತ್ತದೆ.  ಸರಿ, ಮಾಡುವುದು ಕಳ್ಳಕೆಲಸ.  ಇದಕ್ಕೆ moonlighting ಎಂಬ ಹೆಸರೇಕೆ ಎಂದಿರಾ?  ಅದು ಹೀಗೆ.  ನೀವು ಮಾಡುವ ಮುಖ್ಯ ಕೆಲಸ ಸಾಮಾನ್ಯವಾಗಿ ಹಗಲು ಹೊತ್ತಿನದು - 9ರಿಂದ 6 ಎಂದಿಟ್ಟುಕೊಳ್ಳೋಣ - ಇದು sunlight ಇರುವ ಸಮಯ.  ಅದಾದ ಮೇಲೆ ನಿಮ್ಮ ಬಿಡುವಿನ ಸಮಯದಲ್ಲಿ ಇನ್ನೊಂದು ಕಂಪನಿಯಲ್ಲಿ ಇನ್ನೊಂದು ಆರೇಳು ಗಂಟೆ ಕೆಲಸ ಮಾಡುತ್ತೇನೆಂದರೆ ಅದು ರಾತ್ರಿಯ ಕೆಲಸವಾಯಿತಲ್ಲ - ಅದು moonlight ಸಮಯವಷ್ಟೇ?  ಆ ಸಮಯದಲ್ಲಿ ಮಾಡುವ ಕೆಲಸವಾದ್ದರಿಂದ ಅದು moonlighting.  

ಸರಿಯಪ್ಪಾ, ಆದರೂ ಕಳ್ಳಕೆಲಸಕ್ಕೆ ಇಷ್ಟು ಸುಂದರ ಹೆಸರೇ ಎಂದರೆ, ನೋಡಿ, ನಾವು ಐಟಿ ಜನ, ಭಾಷಾನಯವನ್ನು ಅರಿತವರು, ಯಾವುದನ್ನೂ ಎದುರಾಳಿಯ (ಅವನು ಕಳ್ಳನೇ ಆದರೂ) ಮನಸ್ಸಿಗೆ ನೋವಾಗದಂತೆ ಹೇಳುವ ಕಲೆ ನಮ್ಮ ಕಸುಬಿನ ಒಂದು ಭಾಗ.  ಅದ್ದರಿಂದಲೇ ಮೀಟಿಂಗುಗಳಲ್ಲಿ problem (ಗೋಳು)ಗಳು concernಗಳಾಗುತ್ತವೆ, hurdle (ತೊಡಕು)ಗಳು challengeಗಳಾಗುತ್ತವೆ; ನಾವು ಒಬ್ಬರಿನ್ನೊಬ್ಬರೊಂದಿಗೆ discuss ಮಾಡುವುದಿಲ್ಲ, brainstorm ಮಾಡುತ್ತೇವೆ, ಹಾಗೆ brainstorm ಮಾಡಲು ಒಂದೆಡೆ ಸೇರಬೇಕಲ್ಲ, ಸೇರಬೇಕೆಂದರೆ ಸಂಬಂಧಪಟ್ಟವರನ್ನು ಸಂಪರ್ಕಿಸಬೇಕಲ್ಲ; ಹಾಗೆಲ್ಲಾ ಒಡ್ಡೊಡ್ಡಾಗಿ ಹೋಗಿ ಸಂಪರ್ಕಿಸಿಬಿಡುವುದಿಲ್ಲ, ನಯವಾಗಿ touch base ಮಾಡುತ್ತೇವೆ - ಇಲ್ಲ ಇಲ್ಲ, ತಪ್ಪು ತಿಳಿಯಬೇಡಿ, ಮುಟ್ಟುವ ಕೆಲಸವೇನು ಇಲ್ಲ, ಮೀಟಿಂಗ್ ಮಾಡೋಣವಾ ಎಂದು ಕೇಳುವ ವಿಧಾನವಷ್ಟೇ ಅದು.  ಅಷ್ಟೇಕೆ, ಐಡಿ ಕಾರ್ಡ್ ಇಲ್ಲದೇ ಹೊಂಚು ಕಾದು ಇನ್ನೊಬ್ಬರ ಹಿಂದೆ ಒಳನುಗ್ಗುವುದನ್ನೂ tresspassing ಎಂದು ಕರೆದು ಅವರ ಮನನೋಯಿಸುವುದಿಲ್ಲ, ಅವರಿಗೆ ಖುಶಿಯಾಗುವ ಹಾಗೆ tailgating ಎನ್ನುತ್ತೇವೆ.  ಆದ್ದರಿಂದಲೇ ಒಂದು ಕೆಲಸದಲ್ಲಿದ್ದುಕೊಂಡೇ ಇನ್ನೊಂದು ಕಡೆ ಕೆಲಸ ಮಾಡುವುದನ್ನು doublecrossing ಎನ್ನುವ ಬದಲು ಡೀಸೆಂಟಾಗಿ moonlighting ಎನ್ನುತ್ತೇವಷ್ಟೇ.  ಬೇಕಾದರೆ ಇದನ್ನು "ಚಂದ್ರೋಪಜೀವನ" ಎಂದು ಅನುವಾದಿಸಿಕೊಳ್ಳಬಹುದು, ಅಥವಾ ಅಚ್ಚಗನ್ನಡದಲ್ಲಿ "ಬೆಳದಿಂಗಳ ಬದುಕು" ಎನ್ನಬಹುದು (ಬದುಕು = ಉದ್ಯೋಗ, ಉಪಜೀವಿಕೆ, ವೃತ್ತಿ).  ಅಥವಾ ಹೆಚ್ಚು ಕಸುಬುದಾರಿಕೆ ಕಾಣಬೇಕೆಂದರೆ "ಬೆಳದಿಂಗಳ ಕಸುಬು" ಎನ್ನಲೂ ಬಹುದು.  ಏನೇ ಇರಲಿ, ಇತ್ತೀಚಿಗೆ ಈ moonlighting ಒಂದು ಭಾರೀ ಪಿಡುಗಾಗಿದೆಯಂತೆ.  ಆದರೆ ಅದಕ್ಕಾಗಿ ಚಂದ್ರನನ್ನು ಶಪಿಸಬೇಕಿಲ್ಲ - ಈ ವಿಷಯದಲ್ಲಿ ನಿಜಕ್ಕೂ ನಿಷ್ಪಾಪಿ ಆತ.  

ಇರಲಿ, ಇಷ್ಟೆಲ್ಲಾ ಹೇಳಿದ ಮೇಲೆ ಒಂದು ಜೋಕು ನೆನಪಿಗೆ ಬರುತ್ತಿದೆ.  ಅದೂ ಒಂದನ್ನು ಕೇಳಿಬಿಡುವುದರಲ್ಲಿ ನಿಮಗೆ ಹೆಚ್ಚಿನ ತೊಂದರೆಯೇನೂ ಆಗದು.  ಪರೀಕ್ಷೆಗೆ ಹೋದವನೊಬ್ಬನಿಗೆ ಅಲ್ಲಿ ಹಸುವಿನ ಮೇಲೆ ಪ್ರಬಂಧ ಬರೆಯಲು ಹೇಳಿದ್ದು ಕೇಳಿ ಗಾಬರಿಯಾಯಿತಂತೆ.  ಇವನು ಓದಿಕೊಂಡು ಹೋಗಿದ್ದು ತೆಂಗಿನ ಮರದ ಬಗ್ಗೆ.  ಚಿಂತಿಸಿ ಏನು ಪ್ರಯೋಜನ?  ಓದಿಕೊಂಡು ಹೋಗಿದ್ದಂತೆ ತೆಂಗಿನ ಮರದ ಮೇಲೇ ಪ್ರಬಂಧ ಬರೆದನಂತೆ, ಕೊನೆಯಲ್ಲಿ "ಇಂಥಾ ಕಲ್ಪವೃಕ್ಷದಂತಹ ತೆಂಗಿನ ಮರಕ್ಕೆ, ಕಾಮಧೇನುವಿನಂತಹ ಹಸುವನ್ನು ಕಟ್ಟುತ್ತಾರೆ - ಇಲ್ಲಿಗೆ ಹಸುವಿನ ಮೇಲಿನ ಪ್ರಬಂಧ ಮುಗಿಯಿತು" ಎಂದು ಮುಗಿಸಿ ಎದ್ದು ಬಂದನಂತೆ.  ಮಿತ್ರ ಶ್ರೀ Hunasuru Sudeendra ಅವರು moonlighting ಬಗ್ಗೆ ಬರೆಯಿರಿ ಎಂದರು.  ಅದಕ್ಕಾಗಿ ಇಷ್ಟು ಬರೆಯಬೇಕಾಯಿತು.