Saturday, September 13, 2008

ತನ್ನಂತೆ ಪರರ ಬಗೆವೊಡೆ...

ಆವೊತ್ತು ಮುಸ್ಸಂಜೆ ನಸುಗತ್ತಲಲ್ಲಿ ಹಾಗೆ ಹಿಂದಿನಿಂದ ಬಂದು ಪ್ರಾಣಾಂತಿಕವಾಗಿ ಕೊರಳನ್ನು ಅಮುಕಿ ಹಿಡಿದು ಚೂರಿಯಿಂದ ತೊಡೆಯಿರಿದು ಓಡಿದ ಅವನಿಗೆ ನಾನಾರೆಂದು ಗೊತ್ತಿತ್ತೇ? ಇರಲಿಕ್ಕಿಲ್ಲ. ಇವತ್ತು ಪೋಲೀಸರೆದುರಿಗೆ ನನಗೆ ಅವನನ್ನು ಹೇಗೆ ಗುರುತಿಸಲು ಆಗುತ್ತಿಲ್ಲವೋ ಹಾಗೆ ಅವನಿಗೂ ನನ್ನನ್ನು ಗುರುತಿಸಲು ಆಗಿರಲಿಕ್ಕಿಲ್ಲ. ವ್ಯಾವಹಾರಿಕವಾಗಿ ನಾವು "ಶತ್ರು"ಗಳು, ಒಬ್ಬರನ್ನೊಬ್ಬರು ಕಾಣದ ಅಜ್ಞಾತ ಶತ್ರುಗಳು. ಆ ದೃಷ್ಟಿಯಿಂದ ಗುರುತಿಸಲಾಗದಿರುವುದು ಪರಸ್ಪರರಿಗೆ ಒಳ್ಳೆಯದೇ ಸೈ.
ಅವತ್ತು ಅವನಿಗೆ ನನ್ನಿಂದ ಬೇಕಾಗಿದ್ದೆಲ್ಲ ಹಣವೊಂದೇ; ನಾನು ಕಳೆದುಕೊಂಡೂ ಅವನಿಗೆ ಉಪಯೋಗವಾಗಬಹುದಾದದ್ದು ಅದೊಂದೇ ನನ್ನ ಬಳಿಯಿದ್ದದ್ದು, ಜುಜುಬಿ ಹಣ. ಬಹುಶಃ ಸುಮ್ಮನೆ ಕೇಳಿದ್ದರೆ ಕೊಟ್ಟುಬಿಡುತ್ತಿದ್ದೆನೇನೋ (?!). ಅಷ್ಟಕ್ಕೋಸ್ಕರ ಆತ ಅಮುಕಿ ಬಿಸಾಕಿದ್ದು ನನ್ನ ದನಿ, ಅದರಲ್ಲಿದ್ದ ಬನಿ! ಮತ್ತೆಂದೂ ಮೊದಲಿನಂತೆ ಹಾಡಲು ಸಾಧ್ಯವಿಲ್ಲವೇನೋ ಅನ್ನುವ ಭಯ ಬಿತ್ತಿ ಓಡಿಹೋದವನಿಗೆ ಅದರ ಬೆಲೆ ಗೊತ್ತಿತ್ತೇ?


ಬೆಂಗಳೂರಿನಲ್ಲಿ ನೂರು ಇನ್ನೂರು ರುಪಾಯಿಗೆಲ್ಲಾ ಕೊಲೆ ನೆಡೆಯುವ ಬಗ್ಗೆ ಕೇಳಿದ್ದೇವೆ; ಜೀವದ ಬೆಲೆ ಹೋಗಲಿ, ಕೊಲೆಗಾರ ತೆಗೆದುಕೊಳ್ಳುವ riskನ ಬೆಲೆ ಇಷ್ಟೇನೇ? ಬೇರೆಲ್ಲೆಡೆ ಕಾಣುವಂತೆ ಇಲ್ಲೂ ಮೌಲ್ಯಗಳು ತಳಕಂಡಿದೆ ಅನ್ನಲೇಬೇಕು. ತೀರ ನೆನ್ನೆ ಮೊನ್ನಿನ ಕಳ್ಳ/ಕೊಲೆಗಾರ ಕೂಡ ಕೊನೆಯ ಪಕ್ಷ ಆ ಸ್ಥೂಲ cost & benefit ಲೆಕ್ಕಾಚಾರವಾದರೂ ಹಾಕುತ್ತಿದ್ದನೆಂದು ಕಾಣುತ್ತದೆ. ಇವತ್ತು ಅದಿಲ್ಲ. ಜುಜುಬಿ ಇನ್ನೂರು ರುಪಾಯಿಗೆ ಒಬ್ಬನ ತಲೆ ಒಡೆಯವಷ್ಟು ದೊಡ್ಡ ಸಾಹಸ ಮಾಡಬೇಕೆಂದರೆ, ತಲೆಯೊಡೆಯುವ ಜೀವನವೂ ಅದೆಷ್ಟು ದುರ್ಭರವಲ್ಲವೇ?


ಯಾವುದೇ ಒಂದು ಕಾಯಕ ದಂಧೆಯಾಗಿ ಬೆಳೆಯಬೇಕೆಂದರೆ ಅದಕ್ಕೆ ವಿಶೇಷ ಪರಿಣತಿ, ತರಬೇತಿ ಬೇಕು! ಇವತ್ತು ಕ್ರೈಂ ಡೈರಿ, ಕ್ರೈಂ ಸ್ಟೋರಿ ಗಳಂಥ ತಲೆ ಮಾಸಿದ ಬೇಜವಾಬ್ದಾರಿ ಸೀರಿಯಲ್ಲುಗಳಾಗಲಿ ಓಂ ನಿಂದ ಹಿಡಿದು ಮಾದೇಶನ ವರೆಗೆ ಸಾಲು ಸಾಲಾಗಿ ಬರುತ್ತಿರುವ ರೌಡಿ ಪೂಜಕ ಸಿನಿಮಾಗಳಾಗಲಿ, ಅದನ್ನು ಕ್ಯೂ ಕಾದು ಬಾಯಿ ಚಪ್ಪರಿಸಿಕೊಂಡು ಸಾವಿರಗಟ್ಟಲೆ ಜನ ನೋಡುವುದು ನೋಡಿದರೆ ನಾವೆಲ್ಲಿ ಸಾಗುತ್ತಿದ್ದೇವೆ ಎಂದು ಭಯವಾಗುತ್ತದೆ. ಕೊಲೆ ಮಾಡಲು ಬೇಕಾದ್ದು ಬಹುಶಃ ಎರಡೇ: ಒಂದು, ರಕ್ತ ಮಾಂಸ ಚೆಲ್ಲಾಡಿದರೂ ಏನೂ ಅನ್ನಿಸದ insensitivity; ಎರಡು, ಕೊಲೆ ಮಾಡುವ urge (ಅದು ಅಗತ್ಯಕ್ಕಿರಬಹುದು, ಶೋಕಿಗಿರಬಹುದು!). ಇದೆರಡನ್ನೂ ದಂಡಿಯಾಗಿ ದಯಪಾಲಿಸುತ್ತವೆ, ಮೇಲೆ ಹೇಳಿದ "ಮನರಂಜನೆ"ಗಳು. ಒಬ್ಬಿಬ್ಬರು ರೌಡಿತನ ಮಾಡಿದರೆ ನಿಭಾಯಿಸಬಹುದು, ಆದರೆ ಅದೇ ಸರ್ವ ಮಾನ್ಯ ಮೌಲ್ಯವಾಗಿಬಿಟ್ಟರೆ?


ಒಂದುಕಡೆ ಇದನ್ನೇ ದಿನದಿನವೂ ಸಿನಿಮಾ ಟಿವಿಗಳಲ್ಲಿ ನೋಡಿ ಸ್ಪಂದಿಸುವುದನ್ನೇ ನಿಲ್ಲಿಸಿದ ನಾವು, ಇನ್ನೊಂದುಕಡೆ ಅದನ್ನು ದಿನದಿನವೂ ನೋಡಿ ಸ್ಪೂರ್ತಿಗೊಳ್ಳುವ ಪುಂಡ ಹುಡುಗರ ಪಡೆ! ಎಲ್ಲೋ ನಡೆದ ಭೀಕರ ಕೊಲೆ ಕೂಡ ಪತ್ರಿಕೆಯ "ಅಪರಾಧ ಸುದ್ದಿಯ" ಒಂದು ಮೂಲೆ ಬರಹವಾಗುತ್ತದೆ, ಅದೇ ತೆರೆಯಮೇಲಿನ ದೃಶ್ಯವೈಭವವಾಗುತ್ತದೆ ಕೂಡ. ತೆರೆಯ ಮೇಲೆ ನಾಯಕ ನಾಯಕಿಯ ತುಟಿ ಹಿಡಿದು ಮುತ್ತಿಟ್ಟೊಡನೆ ತಲೆಯೇ ಬಿದ್ದುಹೋದಂತೆ ಬೊಬ್ಬಿಡುವ so called ಸಮಾಜ ಸುಧಾರಕರು, ದೃಶ್ಯದ ಹಿಂದು-ಮುಂದಿನ ಹತ್ತು frameಗಳ ಮೇಲೆ ಕತ್ತರಿಯಾಡಿಸಿ ಕೈ ತೊಳೆದುಕೊಳ್ಳುವ censor ಮಂಡಲಿ, ಸಮಾಜದ ಸ್ವಾಸ್ಥ್ಯ ಕಾಯಬೇಕಾದ ಇಂಥ ಹತ್ತು ಹಲವು agencyಗಳು ಈ ತೆರೆಯ ಮೇಲಿನ ಹಿಂಸೆ-ಅತಿರಂಜಕತೆಯ ವಿಷಯದಲ್ಲಿ ಮಾತ್ರ ಅದಾವ ಕತ್ತೆಯನ್ನು ಕಾಯುತ್ತಿವೆಯೋ ಕಾಣೆ!

******

ಮತ್ತೊಂದು ಚಿತ್ರ. ಕುತ್ತಿಗೆಯಲ್ಲಿ ಉಸಿರು ಸಿಕ್ಕಿಸುವ ಊತ, ತೊಡೆ ಇಷ್ಟುದ್ದ ಹಿಸಿದು ಧಾರಾಳ ರಕ್ತ ಸುರಿಸುತ್ತ ಪೋಲೀಸು ಠಾಣೆಗೆ ಬಂದವನಿಗೆ ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸುವ ಕ್ರಮ ಕಾನೂನು ಕಟ್ಟಳೆಗಳಲ್ಲಿಲ್ಲವೇನೋ! ಬದಲಿಗೆ ಕಂಪ್ಲೇಂಟು, ಸ್ಪಾಟ್ ಇನ್ಸ್ಪೆಕ್ಷನ್ (ಎರಡೆರಡು ಬಾರಿ) ಇತ್ಯಾದಿ ಉಪದ್ವ್ಯಾಪಗಳಲ್ಲಿ ಈಡುಪಟ್ಟು ಕರ್ತವ್ಯ ತತ್ಪರತೆ ಮೆರೆವ ಪೋಲೀಸರು, procedure ಪ್ರಕಾರ ಅಳೆದೂ ಸುರಿದೂ, (ಸುರಿವ ಗಾಯವನ್ನು ಅಳೆದು ಆರಿಂಚು ಉದ್ದ ಅರ್ಧ ಇಂಚು ಆಳ ಎಂದು FIR ಬರೆದು), ಪ್ರಥಮ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ರಾತ್ರೆ ಹನ್ನೊಂದು. ಇಡೀ ಆರಿಂಚಿನ ಗಾಯ ಹೆಪ್ಪುಗಟ್ಟಿ ಪ್ರಕೃತಿಸಹಜವಾದ healing process ಆಗಲೇ ಶುರುವಾಗಿತ್ತು!

******

ಇನ್ನೊಂದು. ವಿಕ್ಟೋರಿಯಾ ಆಸ್ಪತ್ರೆ "ತುರ್ತು" ಚಿಕಿತ್ಸಾ ವಿಭಾಗ. ನಾವು ಹೋಗುವ ಹೊತ್ತಿಗೆ ಇನ್ನೂ ಹತ್ತು ನಿಜಕ್ಕೂ ತುರ್ತು ಕೇಸುಗಳು ಕ್ಯೂ ನಲ್ಲಿ ಕಾಯುತ್ತಿದ್ದವು, ಸಾಲಾಗಿ ನಿಂತ ಸ್ಟ್ರೆಚರುಗಳಲ್ಲಿ ಮಲಗಿ ನರಳುತ್ತಾ. ಒಬ್ಬನಿಗೆ ಲಾಂಗಿನಲ್ಲಿ ಸೊಂಟವನ್ನು ಕೊಚ್ಚಲಾಗಿತ್ತು; ಮತ್ತೊಬ್ಬನ ತಲೆ ಒಡೆದು ಒಳಗಿನ ಹೂರಣ ಹೊರಗಿಣುಕುತ್ತಿತ್ತು; ಮತ್ತೊಬ್ಬನ ಕಿವಿಯಿಂದ ಧಾರಾಕಾರ ರಕ್ತ ಹರಿಯುತ್ತಿತ್ತು. "ಬನ್ನಿ ಸಾರ್, ಇವತ್ತು week-end ಅಲ್ವಾ, assault ಕೇಸುಗಳು ಸ್ವಲ್ಪ ಜಾಸ್ತಿ ರಿಪೋರ್ಟ್ ಆಗವೆ, ನೀವು ಸ್ವಲ್ಪ ಕಾಯಬೇಕಾತದೆ" ಎಂದು ಸ್ವಾಗತಿಸಿದ ಪೋಲೀಸಪ್ಪನಿಗೆ ಪ್ರತಿ ನಮಿಸಿ ಹೋಗಿ ಅಲ್ಲೇ ಬೆಂಚಿನ ಮೇಲೆ ಕುಂತೆ. ಅಲ್ಲಿದ್ದ emergency ಕೇಸುಗಳಲ್ಲೆಲ್ಲಾ ಆರಾಮವಾಗಿ ನಡೆದುಕೊಂಡು ಬಂದಿದ್ದ ಕೇಸು ಇದೊಂದೇ, ಆತ್ಮ.

ಕಾಯುತ್ತಾ ಕೂತಿದ್ದಂತೆಯೇ ಅಲ್ಲಿ ಸ್ಟ್ರೆಚರುಗಳ ಮೇಲೆ ಮಲಗಿದ್ದ ಎರಡು ಕೇಸುಗಳ ಹೆಂಡಿರ ನಡುವೆ ಮಾತು ಹತ್ತಿತು. ನಂತರ ಕೈ ಕೈ ಹತ್ತಿತು. ಹೀಗೆ ಹತ್ತಿದ ಒಂದು ಕೈ ಮೇಲಾಗಿ ಇನ್ನೊಂದರ ತಲೆ ಜುಟ್ಟು ಹಿಡಿದದ್ದೇ ಆ ಕಲ್ಲಾಸ್ಪತ್ರೆಯ ಗೋಡೆಗೆ, ಕ್ಷಮಿಸಿ, ಆಸ್ಪತ್ರೆಯ ಕಲ್ಲು ಗೋಡೆಗೆ ಜಪ್ಪಿಸಿತು. ಹನ್ನೊಂದನೇ ಕೇಸು ತನಗಾಗಿ ರೆಡಿಯಾಗಿದ್ದ ಸ್ಟ್ರೆಚ್ಚರ್ ಮೇಲೆ ಮಲಗಿ ನರಳುತ್ತಾ ಕಾಯತೊಡಗಿತು.
ನಾವು ಕಾಯುತ್ತಲೇ ಹೋದೆವು. ಹತ್ತಾರು ಪೋಲೀಸರು ಅವರವರ "ಕೇಸು"ಗಳನ್ನು ಹಿಡಿದುಕೊಂಡು ಬಂದಿದ್ದರು; ಕೆಲವು ಕೇಸುಗಳಿಗೆ ಚೈನು, ಕೆಲವಕ್ಕೆ ಬೇಡಿ, ಖೈದಿಯಲ್ಲದೆ ಕೇವಲ ಫಿರ್ಯಾದಿಯಾಗಿದ್ದ ಕೇಸುಗಳಿಗೆ ಮಾತ್ರ ಈ ಮರ್ಯಾದೆಯಿಲ್ಲ. ಸುಮಾರು ಒಂದು ಗಂಟೆ ಕಾದು ಸುಸ್ತಾದ ಮೇಲೆ "ಸಾರ್, ಇಲ್ಲಿ ವ್ಯವಸ್ಥೆಯೇ ಹೀಗೆ, ಹೀಗೆ ಕೂತರೆ ಮುಗಿಯೊಲ್ಲ. ನಾವು O.T. ಒಳಗೇ ಹೋಗಿ ಕಾಯುವುದು ವಾಸಿ" ಎಂದ ನನ್ನ ಪೋಲಿಸು ಪೇದೆಯ ಸಲಹೆಯ ಮೇರೆಗೆ ಒಳಗೆ ಹೋದದ್ದಾಯಿತು.

ಸಾಕ್ಷಾತ್ ಧರ್ಮರಾಯನಿಗೆ ಅವನು ತಪ್ಪಿ ಒಂದು ಸುಳ್ಳು ಹೇಳಿದ್ದಕ್ಕಾಗಿ ಕ್ಷಣಮಾತ್ರದ ನರಕದರ್ಶನವಾಯಿತಂತೆ. ದಿನದಿನವೂ ಸುಳ್ಳನ್ನೇ ತಿಂದು ಸುಳ್ಳನ್ನೇ ಕುಡಿದು ಸುಳ್ಳನ್ನೇ ಉಸಿರಾಡಿ ಬದುಕುವ ನಮಗೆ ಕೆಲವು ಗಂಟೆಗಳಾದರೂ ನರಕದರ್ಶನವಾದರೆ ಅಚ್ಚರಿಯೇನಿಲ್ಲ. ಆದರೆ ಆ ದರ್ಶನಭಾಗ್ಯಕ್ಕೆ ಸಾಯುವವರೆಗೂ ಕಾಯಬೇಕಿಲ್ಲ ಎನ್ನುವುದೊಂದೇ ವ್ಯತ್ಯಾಸ. ಒಳಗೆ ಹೋದರೆ ಅಲ್ಲಿ ಸಾಲಾಗಿರಿಸಿದ್ದ ನಾಲ್ಕೈದು ಆಪರೇಶನ್ ಟೇಬಲ್ಲುಗಳ ಮೇಲೆ ಕೇಸುಗಳನ್ನು "ಹ್ಯಾಂಡಲ್" ಮಾಡುತ್ತಿತ್ತು ಡಾಕ್ಟರು/ಹೌಸ್ ಸರ್ಜನುಗಳ ಮಂದೆ. ಅರ್ಧ ಕತ್ತರಿಸಿದ್ದ ಸೊಂಟವನ್ನು ಹೊಲೆಯುತ್ತಿದ್ದ ದಬ್ಬಳವನ್ನು ತಡೆಯಲಾರದೇ ಬಡುಕೊಳ್ಳುವನೊಬ್ಬ; ಕಿವಿಯೊಳಗೆ ಮುಲಾಜಿಲ್ಲದೆ ಓಡಾಡುವ ಶಸ್ತ್ರದ ದಾಳಿಯನ್ನು ಭರಿಸಲಾಗದೆ ಚೀರಿಡುವನೊಬ್ಬ; ದನ ತಿವಿದು ಹೊಟ್ಟೆಯಿಂದ ಬೆನ್ನಿನವರೆಗೂ ತೂತಾದ ಮುದುಕಿಯೊಬ್ಬಳ ಕರುಳುಪಚ್ಚಿಯನ್ನು ಏನಾದರೂ damage ಇದೆಯೇ ಎಂದು ಬೆಳಕಿಗೆ ಹಿಡಿದು ಪರೀಕ್ಷಿಸಿ ನೋಡಿ ಮತ್ತೆ ಹೊಟ್ಟೆಗೆ ತುರುಕುತ್ತಿದ್ದರೆ ಆ ಕರುಳ ಬಳ್ಳಿಯ ನೋವನ್ನು ತಾಳಲಾರದೇ ಭೋರಿಡುತ್ತಿದ್ದ ಮುದುಕಿ; ಈ ಚಿಕಿತ್ಸೆಯ ಪರಿಯನ್ನು ನೋಡಿಯೇ ಮೂರ್ಛೆ ಹೋದವನೊಬ್ಬ (local anesthesia ಇಲ್ಲದಿದ್ದರೂ ನೋವಿಲ್ಲದೆಯೇ ಚಿಕಿತ್ಸೆ ಪಡೆದ ಪುಣ್ಯವಂತ!).

ನೋವೂ ಕೂಡ ತೀರ ಖಾಸಗಿ ವಿಷಯ, ಪರಸ್ಪರ ಅನುಮತಿಯಿಲ್ಲದೆ, ಅಥವ ಉಪಯೋಗವಿಲ್ಲದೆ ಅದರಲ್ಲಿ ತಲೆ ಹಾಕುವುದು ಸಲ್ಲ ಎಂದು ನಂಬಿಕೊಂಡು ಬದುಕುವವನು ನಾನು. ಆ ದೃಷ್ಟಿಯಿಂದ ರೋಗಿ-ವೈದ್ಯರ ಸಂಬಂಧ ಒಂದು ರೀತಿ confidential ಆದುದು ಎಂದು ನನ್ನ ನಿಲುವು. ಆದರೆ ಇಲ್ಲಿ ಆ "ಖಾಸಗಿ"ತನಕ್ಕೆ ಅರ್ಥವೇ ಇರಲಿಲ್ಲ.

ಕೇಸುಗಳು ಒಂದಾದ ಮೇಲೊಂದು ಬರುತ್ತಿದ್ದುವು, ಸ್ವಲ್ಪ ಹೊತ್ತು ಕಿರುಚಿ-ಅರಚಿ ನಂತರ ಬಟ್ಟೆ ಕಟ್ಟಿಸಿಕೊಂಡು ಎದ್ದು ಹೋಗುತ್ತಿದ್ದುವು. ಆಪರೇಶನ್ ಟೇಬಲ್ ಮೇಲಿನ ರಕ್ತವನ್ನು ಬಟ್ಟೆಯೊಂದು ಒರೆಸುತ್ತಿತ್ತು (ರಸ್ತೆ ಬದಿಯ ಕಾಕಾ ಹೋಟೆಲಿನ ಊಟದ ಟೇಬಲ್ ಒರೆಸುವಂತೆ), ಟೇಬಲು ಮತ್ತೊಂದು ಕೇಸಿಗೆ ರೆಡಿ.

ಆಪರೇಶನ್ನು, ಇಲಾಜು, ಟೇಬಲ್ ಒರೆಸುವುದು, ಮತ್ತೊಂದು ಕೇಸನ್ನು ಮುಟ್ಟುವುದು, prescription ಬರೆಯುವುದು ಎಲ್ಲಕ್ಕೂ ಒಂದೇ ಕೈ, ಶುದ್ಧ ಅನಾಚಾರ! Sterilization, clinical-cleansing ಇತ್ಯಾದಿ ಕ್ರಮಗಳೇನಾದರೂ ನಡೆಯುತ್ತಿದ್ದರೆ ನನ್ನ ಮಂದ ದೃಷ್ಟಿಗಂತೂ ಬೀಳಲಿಲ್ಲ. ಹೀಗೆಯೇ ಆತಂಕ ಪಡುತ್ತಿರುವಾಗ ನನ್ನ ಸರದಿ ಬಂತು. ನನ್ನ ಗಾಯವನ್ನು ಮುಟ್ಟಿ, ಎಳೆದು, ಹಿಸಿದು (of course, ನನ್ನ ಬೇಡಿಕೆಯಂತೆ ಕೈ ತೊಳೆದುಕೊಂಡು, ಗ್ಲೌಸ್ ಧರಿಸಿ) ಪರೀಕ್ಷಿಸಿ ನೋಡಿದ house surgeon ಎಂಬ ಹೆಸರಿನ ಪ್ರಾಣಿ "deep-cut ಆಗಿದೆ, ಹೊಲಿಗೆ ಹಾಕಬೇಕು" ಎಂದಾಗ ಎದೆ ಹಾರಿತು. ಆತ್ಮಹತ್ಯೆಯನ್ನು ಒಪ್ಪುತ್ತೇನೆ, ನನ್ನ ಪ್ರಯತ್ನವನ್ನು ಮೀರಿ ಯಾರಾದರೂ ನನ್ನ ಕೊಲೆ ಮಾಡುವರೆಂದರೆ ಅದನ್ನು ಸೈದ್ಧಾಂತಿಕವಾಗಿಯಾದರೂ ಒಪ್ಪಬಹುದು. ಆದರೆ ಸುಮ್ಮಸುಮ್ಮನೆ ಸೋಂಕಿನ ದಬ್ಬಳದಲ್ಲಿ ಹೊಲಿಸಿಕೊಂಡು ಯಾವುದೋ ಮರಣಾಂತಿಕ ಸೋಂಕು ಹತ್ತಿಸಿಕೊಂಡು ನಿಧಾನವಾಗಿ ಸಾಯುವುದರಲ್ಲಿ ನನಗಂತೂ ನಂಬಿಕೆಯಿಲ್ಲ. ಇಷ್ಟೆಲ್ಲಾ ಹೇಳಿ ದಬಾಯಿಸಿದ ಮೇಲೆ, ನನ್ನ ಸಹಿ ತೆಗೆದುಕೊಂಡು ನನ್ನೇನೂ ಮಾಡದೇ ಸುಮ್ಮನೇ ಬಿಡಲು ಒಪ್ಪಿತು ಪ್ರಾಣಿ. ಆಗಲೇ ಸುರಿದು ಮರಗಟ್ಟಿದ್ದ ಗಾಯವನ್ನು ಅಯೋಡಿನ್-ಟಿಂಕ್ಚರ್ ಹಾಕಿ ತೊಳೆದು ಒಂದು ಬಿಗಿ ಕಟ್ಟು ಹಾಕಿಸಿಕೊಂಡು ಹೊರಬೀಳುವ ಹೊತ್ತಿಗೆ ರಾತ್ರೆ ಒಂದು.

ಪೋಲೀಸು ಠಾಣೆಗೆ ವಾಪಸು ಬಂದಾಗ, ಠಾಣೆಯ ಸೂಚನಾ ಫಲಕದಲ್ಲಿ ರಾರಾಜಿಸುತ್ತಿದ್ದ ಅಪರಾಧಗಳ ಅಂಕಿ-ಅಂಶಗಳಲ್ಲಿ "ಹಲ್ಲೆ-ಡಕಾಯಿತಿ" ಕಲಮಿನಲ್ಲಿ ಒಂದು ಅಂಕಿ ಹೆಚ್ಚಾಗಿತ್ತು; ಮರುದಿನ ದಿನಪತ್ರಿಕೆಯ "ಅಪರಾಧ ಸುದ್ದಿ" ಭಾಗದ ಅಡಿ ಮೂಲೆಯಲ್ಲಿ ಸುದ್ದಿಯೊಂದು ವರದಿಯಾಗಿತ್ತು "ನಗರದ ಸಂಕಟಪುರ ಠಾಣೆ ವ್ಯಾಪ್ತಿಯಲ್ಲಿ ಐಟಿ ಉದ್ಯೋಗಿಯನ್ನು ಅಡ್ಡಗಟ್ಟಿ ಪರ್ಸ್ ಅಪಹರಣ"

ಟಿಪ್ಪಣಿ - 17/05/2020ರಂದು ಸೇರಿಸಿದ್ದು:
ಈ ಲೇಖನ ಬರೆದದ್ದು ಸುಮಾರು ಹನ್ನೆರಡು ವರ್ಷಗಳ ಹಿಂದೆ, ಬಹುಶಃ ಆ ಘಟನೆಯಾಗಿ ಒಂದೆರಡು ತಿಂಗಳಲ್ಲಿ - ಘಟನೆಯ ಆಘಾತ, ದಿಗ್ಭ್ರಮೆಗಳಿನ್ನೂ ಮನಸ್ಸಿನಲ್ಲಿ ಹಸಿಯಾಗಿದ್ದಾಗ. ಗಂಟಲನ್ನು ಬಲವಾಗಿ ಅದುಮಿ ಹಿಡಿದುದರಿಂದ ಗಂಟಲು ಯಾವ ಪರಿ ಇರುಕಿ ಹೋಗಿತ್ತೆಂದರೆ ಒಂದುವಾರ-ಹತ್ತು ದಿನ ಮಾತು ಹೊರಡುವುದಿರಲಿ, ಉಸಿರಾಡುವುದೂ ಪ್ರಯಾಸಕರವಾಗಿತ್ತು. ಕಷ್ಟಪಟ್ಟು ಗುಟ್ಟಾಗಿ ಮಾತಾಡಿದಂತೆ ಆಡುವುದಾಗುತ್ತಿತ್ತು. ಹಾಡುವುದಂತೂ ದೂರವೇ ಉಳಿಯಿತು. ಬದುಕಿನಲ್ಲಿ ಇನ್ನೊಮ್ಮೆ ಹಾಡುತ್ತೇನೋ ಇಲ್ಲವೋ ಎನ್ನುವ ಚಿಂತೆಗೆ ವಾರಗಟ್ಟಲೆ ನಿದ್ದೆಯೇ ಬರುತ್ತಿರಲಿಲ್ಲ. ಈ ಲೇಖನ ಬರೆಯುವ ಹೊತ್ತಿಗೆ ಇನ್ನೂ ಉಡುಗಿದ ದನಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿತ್ತು, ಮಾತಾಡುವುದು ಸರಾಗವಾಗಿತ್ತು ಆದರೆ ಕರ್ಕಶವಾಗಿತ್ತು. ಆ ಮನಸ್ಥಿತಿಯಲ್ಲಿ ಬರೆದದ್ದು ಈ ಲೇಖನ.

ಇಡೀ ಘಟನೆಯನ್ನು ಇವತ್ತು ಅವಲೋಕಿಸಿದರೆ, ಈ ದೂರಕ್ಕೆ, ಮೇಲೆ ನಾನು ವ್ಯಕ್ತಪಡಿಸಿದ ಅನಿಸಿಕೆಗಳು ಅಲ್ಲಲ್ಲಲ್ಲಿ ಸ್ವಲ್ಪ ಕಟುವಾಯಿತೇನೋ ಎನಿಸುತ್ತದೆ - ಅಥವಾ ಅದೇ ಸರಿಯಿರಬಹುದು, ಪೋಲೀಸು ಕೋರ್ಟು ಆಸ್ಪತ್ರೆಗಳ ನನ್ನ ಒಟ್ಟಾರೆ ಅನುಭವ ನನಗಂತೂ ಹಿತಕರವಾಗೇನು ಇರಲಿಲ್ಲ (ಕೆಲವಂಶಗಳನ್ನು ಬಿಟ್ಟರೆ). ಇನ್ನೂ ಹಲವರ ಅನುಭವವೂ ಇದೇ ಆಗಿದ್ದೀತು. ಆದರೂ ಅಲ್ಲಿ ಗಮನಿಸದೇ ಬಿಟ್ಟ ಕೆಲವು ಅಂಶಗಳನ್ನು ಹೇಳದಿದ್ದರೆ ಪ್ರಸ್ತುತ ಸಂದರ್ಭಕ್ಕೆ ಅನ್ಯಾಯವಾದೀತು. ಬರವಣಿಗೆಯ ಹಳಮೆಗೆ ಊನವಾಗದಿರಲೆಂದು ಈಗಿನ ಅನಿಸಿಕೆಯನ್ನು ಈ ಅಡಿಟಿಪ್ಪಣಿಯ ಮೂಲಕ ಪ್ರತ್ಯೇಕವಾಗಿಯೇ ದಾಖಲಿಸಿದ್ದೇನೆ.

ರಕ್ತ ಸುರಿಸುತ್ತಿದ್ದವನನ್ನು ಕರೆದುಕೊಂಡು ಹೋಗಿ ಪ್ರಥಮಚಿಕಿತ್ಸೆ ಕೊಡಿಸದೇ ಪೋಲೀಸರು ಪ್ರೊಸೀಜರುಗಳ ಬಗೆಗೇ ಹೆಚ್ಚಿನ ಗಮನ ಕೊಟ್ಟು ಎರಡೆರಡು ಬಾರಿ ಸ್ಪಾಟ್ ಇನ್ಸ್ಪೆಕ್ಷನ್ನಿಗೆ ಕರೆದುಕೊಂಡು ಹೋದರೆಂದು ಹೇಳಿದೆ. ಈಗ ಹಿಂದಿರುಗಿ ನೋಡಿದರೆ ಅದು ಅಷ್ಟು ದೊಡ್ಡ ವಿಷಯವಲ್ಲವೆನಿಸುತ್ತದೆ. ನಮ್ಮ ನೋವು, ಆಘಾತ, ಗಾಬರಿ ನಮಗೆ ಹೆಚ್ಚು, ಆದರೆ ದಿನರಾತ್ರಿಯಾದರೆ ಎಷ್ಟೆಷ್ಟೋ ಘೋರವಾದ ಅಪರಾಧಗಳನ್ನು ನೋಡುವ ಪೋಲೀಸರಿಗೆ ಇದು ನಿಜಕ್ಕೂ ಏನೇನೂ ಅಲ್ಲ. ಕಣ್ಣಿನಲ್ಲಿ ಹೊಕ್ಕ ದೂಳಿನ ಕಣ ಕಣ್ಣಿಗೆ ದೊಡ್ಡ ಬಂಡೆಯಂತೆಯೇ ಅನ್ನಿಸಬಹುದು, ಆದರೆ ವಾಸ್ತವದಲ್ಲಿ ಅದು ಕೇವಲ ದೂಳಿನ ಕಣವಷ್ಟೇ. ವಾಸ್ತವದಲ್ಲಿ ಅದು ತುರ್ತುಚಿಕಿತ್ಸೆ ಒದಗಿಸಬೇಕಾದ ಮಾರಣಾಂತಿಕವಾದ ಗಾಯವೇನಾಗಿರಲಿಲ್ಲ, ಮೇಲೇ ವಿವರಿಸಿದಂತೆ ಕೇವಲ ಅರ್ಧ ಇಂಚು ಆಳದ ಕಾಟಾಗಿತ್ತಷ್ಟೇ. ಹೀಗಿರುವಾಗ, ಪಿರ್ಯಾದಿ ಮಾತಾಡುವ, ಓಡಾಡುವ, ತೋರಿಸಿ ವಿವರಿಸುವ ಸ್ಥಿತಿಯಲ್ಲಿದ್ದರೆ ಕೂಡಲೇ ಆತನನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ಯುವುದು ದುಷ್ಕರ್ಮಿಗಳನ್ನು ಹಿಡಿಯಲು ಸಹಾಯಕವಾಗಬಹುದು. ಅಕಸ್ಮಾತ್ (ಅಂತಹ ಸಂದರ್ಭಗಳೂ ಇರುತ್ತವೆ) ದುಷ್ಕರ್ಮಿಗಳು ಅಲ್ಲೇ ಎಲ್ಲಾದರೂ ಅಡ್ಡಾಡುತ್ತಿದ್ದರೆ ಹಿಡಿಯುವ ಸಾಧ್ಯತೆಯೂ ಇರುತ್ತದೆ. ನನ್ನನ್ನು ಸ್ಥಳಕ್ಕೆ ಕರೆದೊಯ್ದ ಪೋಲೀಸರು ಸುಮಾರು ಒಂದು ಗಂಟೆಯ ಕಾಲ ಅಲ್ಲಿಲ್ಲಿ ಪತ್ತೆ ತರದೂದು ಮಾಡಿದರು ಕೂಡ. ಅದನ್ನು ಇಲ್ಲಿ ಕಾಣಿಸದಿದ್ದರೆ ಅನ್ಯಾಯವಾದೀತು.

ಇನ್ನು ಆಸ್ಪತ್ರೆಯ ವಿಷಯಕ್ಕೆ ಬಂದರೆ, ಕೆಲವು ಕೇಸುಗಳನ್ನು (ಉದಾಹರಣೆಗೆ ಕರುಳುಪಚ್ಚಿಯಲ್ಲಿ ಏನಾದರೂ ಡ್ಯಾಮೇಜ್ ಇದೆಯೇ ಎಂದು ನೋಡುತ್ತಿದ್ದ ವಿಷಯ) ನಿರ್ವಹಿಸಬೇಕಾದ್ದೇ ಹಾಗೆ ಎಂದು ಅದಾಗಿ ಕೆಲದಿನಗಳನಂತರ ವೈದ್ಯಮಿತ್ರರೊಬ್ಬರು ಹೇಳಿದರು. ಆಮೇಲೆ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಿರಬಹುದು, ನಾನರಿಯೆ. ಆಕೆಯನ್ನೂ ಸೇರಿದಂತೆ ಹಲವರಿಗೆ ಅರಿವಳಿಕೆ ಕೊಟ್ಟಿದ್ದಿರಬಹುದು, (ವಿಪರೀತ ಕಾಯುವಿಕೆಯಿಂದ) ಅದರ ಪ್ರಭಾವ ತಗ್ಗಿದ್ದಿರಬಹುದು (ಅರಿವಳಿಕೆಯ ಪ್ರಭಾವ ತಗ್ಗುವ ಯಾತನೆಯ ಅನುಭವ ಬೇರೆ ಒಂದೆರಡು ಸಂದರ್ಭದಲ್ಲಿ ನನಗೇ ಆಗಿದೆ). ಆದ್ದರಿಂದ ಅರಿವಳಿಕೆಯನ್ನೇ ಕೊಟ್ಟಿರಲಿಲ್ಲವೆಂದು ಹೇಳಲಾರೆ. ಹಾಗೆಯೇ ಸ್ವಚ್ಛತೆಯ ವಿಷಯ. ಅದರ ಕೊರತೆಯೇನೋ ಢಾಳಾಗಿಯೇ ಇತ್ತೆಂಬುದು ಸತ್ಯ, ಆದರೆ ಅದನ್ನು ವೈದ್ಯರು ನಿರ್ಲಕ್ಷ್ಯದಿಂದ ರೋಗಿಗಳ ದೇಹಕ್ಕೆ ರವಾನಿಸುತ್ತಿದ್ದರೆಂದು ಹೇಳುವುದು ಕಷ್ಟ. ಯಾವುದೋ ಮಟ್ಟದ sterilization ಇದ್ದಿರಬೇಕು, ನನ್ನ ಗಮನಕ್ಕೆ ಬಂದಿರಲಾರದು. ಆದರೆ ಆ ವೈದ್ಯವಿದ್ಯಾರ್ಥಿ ನನಗೆ ಹೊಲಿಗೆ ಹಾಕಲು ಬಂದಾಗ ನಾನದನ್ನು ನಿರಾಕರಿಸಿದ್ದು ನೋವಿನ ಭಯಕ್ಕಲ್ಲ, ಸ್ವಚ್ಛತೆಯ ಕಾರಣಕ್ಕೇ ಎಂಬುದನ್ನು ನಾನು ಅವರಿಗೇ ನೇರ ಹೇಳಿದ್ದು ನನಗೆ ಸ್ಪಷ್ಟವಾಗಿ ನೆನಪಿದೆ, ಮತ್ತು ನನ್ನ ಮಾತನ್ನು ಆತ ಅಲ್ಲಗಳೆಯಲೂ ಇಲ್ಲ. ಸುಮ್ಮನೇ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟರು (ಮತ್ತು ಮುಚ್ಚಳಿಕೆಯಲ್ಲಿ ನಾನು ಅದೇ ಕಾರಣವನ್ನೇ ಬರೆದನೆಂದೂ ನೆನಪು).

ಒಟ್ಟಿನಲ್ಲಿ ಹೇಳುವುದಾದರೆ, ಮೇಲಿನ ವಿವರಗಳನ್ನು 'ಕಂಡದ್ದು' ಆಗಷ್ಟೇ ಆಘಾತವನ್ನನುಭವಿಸಿ ಚೇತರಿಸಿಕೊಳ್ಳುತ್ತಿದ್ದ ಕಣ್ಣುಗಳೆಂಬುದನ್ನು ನೆನಪಿನಲ್ಲಿಡಬೇಕು, ಆದ್ದರಿಂದ ಅದರಲ್ಲಿ ಒಂದಿಷ್ಟೇ ಇಷ್ಟು ಉತ್ಪ್ರೇಕ್ಷೆಯೂ ಇದ್ದೀತು. ಆದರೆ ನನಗೆ ಈಗಲೂ ನೆನಪಿನಲ್ಲಿರುವಂತೆ ಮೇಲಿನ ವಿವರಗಳು ಕೂಡಿದ ಮಟ್ಟಿಗೂ ವಾಸ್ತವಕ್ಕೆ ಹತ್ತಿರವಾಗಿವೆಯೆಂದಷ್ಟು ಹೇಳಬಲ್ಲೆ. ಈ ಸಂಸ್ಥೆಗಳೊಡನೆ ನನ್ನ ಆಮೇಲಿನ ಹಲವು ಅನುಭವಗಳೂ ಈ ಭಾವನೆಯನ್ನೇ ದೃಢಪಡಿಸುತ್ತವೆ.