Thursday, September 21, 2017

ಹೊಸಕಾಲದ ಕನ್ನಡ ಮಾಧ್ಯಮ - ಕೇಳುವರಾರು ಮಕ್ಕಳ ಗೋಳು

ಖ್ಯಾತ ವಿಜ್ಞಾನಿ ಭಾರತರತ್ನ ಪ್ರೊ. ಸಿ ಎನ್ ಆರ್ ರಾಯರು ತಮ್ಮ ಕನ್ನಡಮಾಧ್ಯಮಶಾಲೆಯ ಪ್ರಾಥಮಿಕ ವ್ಯಾಸಂಗವನ್ನು ಎಂದು ಬಹು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ.  "ಕಲಿಕೆ ಯಶಸ್ವಿಯಾಗಬೇಕಾದರೆ ಅದು ಮಾತೃಭಾಷೆಯಲ್ಲೇ ಆಗಬೇಕು" ಎಂಬುದು ಅವರ ದೃಢ ನಿಲುವು. ಸಾಧಕರ ಈ ನುಡಿ ಅನೇಕ ಕನ್ನಡಿಗರಿಗೆ ಸ್ಫೂರ್ತಿದಾಯಕ.  ಅವರದ್ದು ವಿದ್ಯೆಯ ದೃಷ್ಟಿಯಿಂದ ಸ್ವರ್ಣಯುಗವೆನ್ನಬೇಕು.  ಆಗ ಕೆಲವು ಪಟ್ಟಣಗಳಲ್ಲಿ ಬಿಟ್ಟರೆ ಉಳಿದಂತೆ ಸರ್ಕಾರೀ ಕನ್ನಡ ಶಾಲೆ ಬಿಟ್ಟು ಬೇರೆ ಯೋಚನೆಯೂ ಪೋಷಕರಿಗೆ ಬರುತ್ತಿರಲಿಲ್ಲ, ಮತ್ತು ಕನ್ನಡ ಶಾಲೆಗೆ ಹೋಗುವುದು ಈಗಿನಂತೆ ಹೀನಾಯವೆನಿಸಿರಲಿಲ್ಲ.  ಮನೆಯಿಂದ ಶಾಲೆಗೆ ಹೋಗುವ ಮಕ್ಕಳಿಗೆ ಭಾಷೆಯಲ್ಲಿ ಕಾಣುತ್ತಿದ್ದ ಬಹುದೊಡ್ಡ ಬದಲಾವಣೆಯಿಂದರೆ ಕನ್ನಡದ ಗ್ರಾಂಥಿಕ ಭಾಷೆಯಷ್ಟೇ.   ಆಡುಮಾತಿಗಿಂತ ಗ್ರಾಂಥಿಕ ಭಾಷೆ ಹೆಚ್ಚು ಔಪಚಾರಿಕವಾಗಿ, ಹೆಚ್ಚು ’ಶುದ್ಧ’ವಾಗಿ ಕಾಣುತ್ತಿತ್ತೇ ವಿನಾ, ತೀರ ಅಪರಿಚಿತವಾಗೇನು ಇರಲಿಲ್ಲ.  "ದ್ಯುತಿಸಂಶ್ಲೇಶಣ", "ಪೀನಮಸೂರ", "ಸರಳಾಧಿಕಕೋನ"ಗಳು ಆಗಲೂ ಆಗೀಗ ಕಾಡಿದರೂ ಮಳೆ ಮಳೆಯಾಗಿ, ನೀರಾವಿ ನೀರಾವಿಯಾಗಿ, ಮಣ್ಣು ಮಣ್ಣಾಗಿಯೇ ಪುಸ್ತಕದಲ್ಲಿ ಕಾಣುತ್ತಿದ್ದುದರಿಂದ ಪಠ್ಯಪುಸ್ತಕದ ಭಾಷೆ ನಮ್ಮ ಭಾಷೆಯಂತೆಯೇ ತೋರುತ್ತಿತ್ತು.  ಕನ್ನಡದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಹೋದಾಗ ಕಾಣುವ ಪರಕೀಯಭಾವನೆ ಮಕ್ಕಳಿಗೆ ಕನ್ನಡ ಪಠ್ಯಗಳಲ್ಲಿ ಯಾವತ್ತೂ ಕಂಡಿದ್ದಿಲ್ಲ.  ಆದರೆ ಇವತ್ತಿನ ಕನ್ನಡ ಮಾಧ್ಯಮದ ಪಠ್ಯಗಳ ಸ್ಥಿತಿ ಹಾಗಲ್ಲ.  ಮೊದಲನೆಯದಾಗಿ, ಆಂಗ್ಲಮಾಧ್ಯಮವು ಮೋಹವೆನ್ನುವುದಕ್ಕಿಂತ ಅನಿವಾರ್ಯವೆನ್ನುವ ಸ್ಥಿತಿಯುಂಟಾಗಿರುವಾಗ, ಕನ್ನಡಮಾಧ್ಯಮ ಕೇವಲ ಅಭಿಮಾನದ ವಿಷಯವಾಗಷ್ಟೇ ಉಳಿದಿರುವಾಗ, ಅಭಿಮಾನಕ್ಕಿಂತ ಅವಕಾಶದ್ದೇ ಮೇಲುಗೈಯೆಂಬಂತೆ ತೋರುತ್ತಿರುವಾಗ ಕನ್ನಡ ಮಾಧ್ಯಮಕ್ಕೆ ಉಳಿಯುವುದು ಒಂದೇ ಆಕರ್ಷಣೆ - "ಉತ್ತಮ ಕಲಿಕೆ ಮಾತೃಭಾಷೆಯೊಂದರಿಂದಲೇ ಸಾಧ್ಯ" ಎನ್ನುವುದು.  ಆದರೆ ಇವತ್ತಿನ ಪರಿಸ್ಥಿತಿ ನೋಡಿದರೆ ಆ ಆಶೆಯನ್ನೂ ಮಣ್ಣುಗೂಡಿಸುವಂತಿದೆ. 

ಕರ್ನಾಟಕ ಶಿಕ್ಷಣ ಇಲಾಖೆಯ ಟೆಕ್ಸ್ಟ್ ಬುಕ್ ಹಳವಂಡಗಳು ಈ ದಿನಗಳಲ್ಲಿ ಬಹುಚರ್ಚಿತವಾದ ವಿಷಯ - ಕಣ್ತಪ್ಪಿನ ದೋಷಗಳು, ಭಾಷಾದೋಷಗಳು, ನಿರೂಪಣೆಯ ಎಡವಟ್ಟುಗಳು, ತಪ್ಪು ಮಾಹಿತಿ, ವಿಷಯಸ್ಪಷ್ಟತೆಯ ಕೊರತೆ, ಪರಿಕಲ್ಪನೆಯ ಪ್ರಮಾದಗಳು, ಏಕಪಕ್ಷೀಯ ನಿಲುವುಗಳು ಹೀಗೆ ಪಟ್ಟಿ ಮಾಡುತ್ತ ಹೋದರೆ, ಪಠ್ಯಪುಸ್ತಕಕ್ಕಿಂತ ದೊಡ್ಡ ಪುಸ್ತಕವೇ ಆದೀತೇನೋ.  ಆದರೆ ಈಗಾಗಲೇ ಚರ್ಚೆಯಲ್ಲಿರುವ ಅದನ್ನು ಸಧ್ಯಕ್ಕೆ ಬಿಡೋಣ; ಈ ಹಳವಂಡಗಳು ಕನ್ನಡ ಮಾಧ್ಯಮಕ್ಕೇ ಹೇಗೆ ಸಂಚಕಾರ ತರುತ್ತಿವೆಯೆಂಬಷ್ಟನ್ನು ನೋಡೋಣ.  ಇಷ್ಟಕ್ಕೂ ನಮ್ಮ ಮಾತೃಭಾಷೆ ಯಾವುದು?  "ಕನ್ನಡ" ಎನ್ನುವುದು ಸುಲಭದ ಉತ್ತರ.  ಆದರೆ ಪ್ರಾಂತ್ಯಕ್ಕೊಂದು ಕಾಲಕ್ಕೊಂದು ಜಾತಿಗೊಂದು ವೃತ್ತಿಗೊಂದು ಮನೆಗೊಂದು ಇರುವ ಕನ್ನಡದಲ್ಲಿ ನಮ್ಮ ’ಮಾತೃಭಾಷೆ’ಯಾದ ಕನ್ನಡ ಯಾವುದೆಂಬುದು ಸ್ಪಷ್ಟವಾಗಬೇಕಲ್ಲ.  ಉದಾಹರಣೆಗೆ, ನಿಮ್ಮ ಎರಡು ವರ್ಷದ ಮಗುವಿಗೆ ಊಟ ಮಾಡಿಸಬೇಕಾದರೆ "ಮಮ್ಮಮ್ ತಿನ್ನು ಬಾಮ್ಮಾ" ಎನ್ನುತ್ತೀರಿ.  ಆ ಮಗುವಿಗೆ ಅದೇ ಮಾತೃಭಾಷೆ.  ಅದೇ ಆರೇಳು ವರ್ಷದ ಹುಡುಗನೋ ಹುಡುಗಿಯೋ ಆಗಿದ್ದರೆ "ಉಣ್ಣು ಬಾ" ಎಂದೋ "ಊಟ ಮಾಡ್ ಬಾ" ಎನ್ನುತ್ತೀರಿ.  ತೀರ ಅದನ್ನೇ ಬರಹದಲ್ಲಿ ತಿಳಿಸಬೇಕೆಂದರೂ "ಊಟ ಮಾಡುವೆಯಂತೆ ಬಾ" ಎನ್ನುತ್ತೀರೇನೋ, ಆದರೆ "ಭೋಜನಸ್ವೀಕರಿಸು ಬಾ" ಎಂದೋ ಅಥವಾ ಅಚ್ಚಗನ್ನಡದಲ್ಲಿ "ಬೋನವನಾರೋಗಿಸು ಬಾ" ಎಂದೋ ಕರೆಯುವುದಿಲ್ಲ, ಅಲ್ಲವೇ?  "ಟವೆಲ್ ತೊಗೊಂಡ್ ಸ್ನಾನಕ್ಹೋಗು" ಎನ್ನುವುದು ಹೆಚ್ಚೆಂದರೆ "ಟವೆಲು ತೆಗೆದುಕೊಂಡು ಸ್ನಾನಕ್ಕೆ ಹೋಗು" ಎಂದಾದೀತೇ ಹೊರತು "ಅಂಗವಸ್ತ್ರವನ್ನು ತೆಗೆದುಕೊಂಡು ಸ್ನಾನಕ್ಕೆ ದಯಮಾಡಿಸು" ಎಂದು ಖಂಡಿತಾ ಹೇಳುವುದಿಲ್ಲ.  ಹಾಗೆ ಹೇಳಿದರೆ ನಿಮ್ಮ ಮಗುವಿಗೆ ಅರ್ಥವೂ ಆಗಬಹುದು, ಆದರೆ ಹೇಳುವ ರೀತಿಯಂತೂ ಅದಲ್ಲ, ಅಲ್ಲವೇ?  ಎಂದ ಮೇಲೆ ಶಾಲೆಯಲ್ಲಿ ಬಳಸುವ ಕನ್ನಡ ಆ ಔಪಚಾರಿಕ ಮಟ್ಟವನ್ನೂ ಮೀರಿ ಪರಕೀಯವೇ ಆಗಿಬಿಟ್ಟರೆ?

ಗಣಿತವಿಜ್ಞಾನಗಳಂಥಾ ಶಾಸ್ತ್ರವಿಷಯಗಳಲ್ಲಿ ಭಾಷೆ ಸ್ವಲ್ಪ ನಿಖರವಾಗಿರಬೇಕೆಂಬುದೇನೋ ನಿಜವೇ, ಆದರೆ ಅದು ಪಾರಿಭಾಷಿಕ ಪದಗಳಿಗೆ ಮಾತ್ರ ಸೀಮಿತವಷ್ಟೇ?  ಆದರೆ ಉಳಿದಂತೆ ಆದರೂ ಪಠ್ಯ ಓದಿಸಿಕೊಂಡು ಹೋಗಬೇಕಲ್ಲವೇ?  ಉದಾಹರಣೆಗೆ ಹೊಸ ಪಠ್ಯದಲ್ಲಿರುವ ಈ ಸೂಚನೆ ನೋಡಿ: 

"ಶಾಬ್ದಿಕ ಸಮಸ್ಯೆಗಳು - ಕೆಳಗಿನ ಲೆಕ್ಕಗಳನ್ನು ಓದು, ಸಂಖ್ಯೆಯ ಲೆಕ್ಕಗಳನ್ನು ಬಿಡಿಸುವುದು ಹೇಗೆಂದು ಕಲಿ" (Verbal Problems - Read the problems given below, Understand how to solve verbal problems). 

ಗಮನಿಸಿ, ಇದು ಯಾವುದೋ ದೊಡ್ಡ ತರಗತಿಯ ಪಠ್ಯವಲ್ಲ - ಮೂರನೆಯ ತರಗತಿಯ (ಎಂಟೊಂಬತ್ತು ವರ್ಷದ) ಮಕ್ಕಳಿಗೆ ಗಣಿತ ಪಠ್ಯದಲ್ಲಿ ಕೊಟ್ಟಿರುವ ಸೂಚನೆ.  ಇದೇ ಲೆಕ್ಕವನ್ನು ನಾವೂ ಮಾಡುತ್ತಿದ್ದೆವು, ಇದೇ ವಯಸ್ಸಿನಲ್ಲಿ.  ಇದಕ್ಕೆ "ಬಾಯಿಲೆಕ್ಕ ಅಥವಾ ದಾರಿ ಲೆಕ್ಕ" ಎಂದು ಹೇಳುತ್ತಿದ್ದರು ಆಗ.  ಈಗಿನ ತಲೆಮಾರಿನ ಮಕ್ಕಳು ಎಷ್ಟೇ ’ಸ್ಮಾರ್ಟ್’ ಆಗಿರುತ್ತಾರೆಂದುಕೊಂಡರೂ ಕನ್ನಡವನ್ನು ಮರೆತು ಸಂಸ್ಕೃತ ಪಂಡಿತರಾಗಿಬಿಟ್ಟಿರುತ್ತಾರೆಂದು ಹೇಗೆ ತಿಳಿಯುವುದು?  ಈಗ ಮಗು ಲೆಕ್ಕ ಕಲಿಯಬೇಕೋ ಇವರ ಭಾಷೆಯನ್ನು ಅರ್ಥಮಾಡಿಕೊಳ್ಳಲು ಹೆಣಗಬೇಕೋ?  ಒಂದು ಪದವಾದರೆ ಸರಿ, ನಕ್ಕು ಸುಮ್ಮನಾಗಬಹುದು, ಆದರೆ ಪಠ್ಯದುದ್ದಕ್ಕೂ ಇಂಥದ್ದೇ ಆದರೆ?!  ಇನ್ನೊಂದು ಉದಾಹರಣೆ ನೋಡಿ, ಏಳನೆಯ ತರಗತಿಯ ಗಣಿತದಿಂದ:

"ಇಲ್ಲಿ ಛಾಯೀಕರಿಸಿರುವ ಒಟ್ಟು ಭಾಗಗಳೆಷ್ಟು (how many parts of each circle are shaded?). 

ಪಠ್ಯಪುಸ್ತಕಸಮಿತಿಯ ಸರ್ವಾಧ್ಯಕ್ಷ ಶ್ರೀ ಬರಗೂರು ರಾಮಚಂದ್ರಪ್ಪನವರು ಈ ಹಿಂದೆ "ತಾಯೀಕರಣ" ಎಂಬ ಪದ ಸೃಷ್ಟಿಸಿ ಖ್ಯಾತರಾಗಿದ್ದುದು ನೆನಪಿಗೆ ಬಂತೇ?  ಪಠ್ಯಪುಸ್ತಕಗಳಲ್ಲಿ ಅಂಥಾ ನಿಷ್ಕಾರಣ ’ಕರಣ’ಗಳು ಬೇಕಾದಷ್ಟಿವೆ.  ಹೀಗೇ ಪಠ್ಯದ ತುಂಬೆಲ್ಲ ಬಹುಶಃ ಬರೆದವರಿಗೇ ಅರ್ಥವಾಗದ ಸಂಸ್ಕೃತ, ಅರೆಸಂಸ್ಕೃತ, ಅಸಂಸ್ಕೃತ ಪದಗಳೇ ತುಂಬಿವೆ - ಅರ್ಥವಾಗದ್ದು ಎಂಬುದು ಮುಖ್ಯ.  ನಾನಿಲ್ಲಿ ವಿವಿಧ ಪಠ್ಯಗಳಲ್ಲಿ ಕಂಡುಬಂದ ಆಣಿಮುತ್ತುಗಳನ್ನೂ ಬ್ರಾಕೆಟ್ಟಿನಲ್ಲಿ ಅವುಗಳ ’ನಮ್ಮ ಕನ್ನಡ’ದ ಅನುವಾದವನ್ನೂ ಕೊಡುತ್ತೇನೆ, ಒಮ್ಮೆ ನೋಡಿ: 
  • ವ್ಯುತ್ಕ್ರಮ ಅಥವಾ ವಿಲೋಮರೂಪ (Reciprocal or Inverse form) - ಭಿನ್ನರಾಶಿಯ ಅಂಶ ಛೇದ-ಗಳನ್ನು ಅದಲುಬದಲು ಮಾಡಿ ಬರೆದಾಗ ಆ ಭಿನ್ನರಾಶಿಯ ವ್ಯುತ್ಕ್ರಮ ರೂಪ ದೊರೆಯುತ್ತದೆ [ವ್ಯುತ್ಕ್ರಮ ಅಥವಾ ವಿಲೋಮ ಯಾರಿಗೆ ಅರ್ಥವಾಗುತ್ತದೆ?  ಅದರ ಬದಲು ಸರಳವಾಗಿ ಅದಲುಬದಲು ಅಥವಾ ತಿರುವುಮುರುವು ರೂಪ ಎಂದೇ ಹೇಳಬಹುದಿತ್ತಲ್ಲವೇ?];
  • ಪ್ರಚ್ಛನ್ನಶಕ್ತಿ (potential energy).  [ಅಡಗಿರುವ ಶಕ್ತಿ ಎಂದಿದ್ದರೆ ಆಗಿತ್ತಲ್ಲವೇ.  ಇನ್ನಿದಲ್ಲದೇ "ಪ್ರಚ್ಛನ್ನ (potential) ಎಂಬ ಶಬ್ದ ಲ್ಯಾಟಿನ್ ಮೂಲದಿಂದ ಬಂದದ್ದು" ಎಂಬ ಒಗ್ಗರಣೆ ಬೇರೆ?  ಲ್ಯಾಟಿನ್ ಮೂಲದಿಂದ ಬಂದದ್ದು "ಪ್ರಚ್ಛನ್ನ" ಪದವೋ "Potential" ಪದವೋ?  ವಾಕ್ಯರಚನೆಯ ದೋಷ!];
  • ವಿದ್ಯುತ್ಪ್ರವಾಹದ ರಾಸಾಯನಿಕ ಪರಿಣಾಮದ ಅನ್ವಯಗಳು (Applications of chemical effect of electric current).  [ಇಲ್ಲಿ Applications ಎನ್ನುವ ಪದಕ್ಕೆ ಅನ್ವಯ ಎಂದು ಅನುವಾದ ಮಾಡಿರುವುದು ಸ್ಪಷ್ಟ.  Application ಎಂಬ ಪದಕ್ಕೆ ಅರ್ಜಿ, ಅನ್ವಯ, ಬಳಕೆ ಮುಂತಾದ ಅರ್ಥಗಳಿವೆ.  ಹಾಗೆಯೇ ಅನ್ವಯ ಎಂಬ ಪದಕ್ಕೆ ವಂಶ, ಅರ್ಥ, ಹೊಂದುವಿಕೆ, ಮೊದಲಾದ ಅರ್ಥಗಳಿವೆ, ಆದರೆ ಬಳಕೆ, ಉಪಯೋಗ ಮೊದಲಾದ ಅರ್ಥಗಳು ಅನ್ವಯ ಎಂಬ ಪದಕ್ಕಿಲ್ಲ.  ನಿಘಂಟು ನೋಡಿಕೊಂಡು ಕುರುಡುಕುರುಡಾಗಿ ಅನುವಾದಿಸುವ ಬದಲು ಸಹಜವಾಗಿ, ಸರಳವಾಗಿ "ವಿದ್ಯುತ್ಪ್ರವಾಹದ ರಾಸಾಯನಿಕ ಪರಿಣಾಮದ ಉಪಯೋಗಗಳು" ಎನ್ನಬಹುದಿತ್ತಲ್ಲ!];
  • ಲೋಹಾಭಗಳು ಬಿಧುರವಾಗಿವೆ (ಪದಸಹಾಯ: ಬಿಧುರ = ಬಲಪ್ರಯೋಗದಿಂದ ತುಂಡಾಗುವುದು) [ಬಿಧುರ ಎಂಬ ಪದ ಯಾವ ಮಗುವಿಗೆ ಅರ್ಥವಾದೀತು ಸ್ವಾಮಿ, ಕೊನೆಯ ಪಕ್ಷ ಟೀಚರುಗಳಿಗಾದರೂ! ಅರ್ಥವಾಗದ್ದೊಂದು ಪದ ಹಾಕಿ, ಪದಸಹಾಯ ಎಂದು ಬೇರೆ ಕೊಡುವ ಬದಲು, ಸರಳವಾಗಿ "ಪೆಡಸಾಗಿವೆ, ಒಡೆಯುವ ಗುಣ ಹೊಂದಿವೆ" ಎನ್ನಬಾರದೇ?];
  • ಅವು ತನ್ಯವಾಗಿದ್ದು ಸುರುಳಿಯಾಕಾರದಲ್ಲಿ ಬಗ್ಗಿಸಬಹುದು [ಬಾಗುವ ಗುಣ ಹೊಂದಿದೆ];
  • ನೀರನ್ನು ಕಾಯಿಸಿದಾಗ ಎನಾಗುತ್ತದೆ?  ಇಲ್ಲಿ ನೋಡಿ: "ನೀರನ್ನು ೦ ಡಿಗ್ರಿಯಿಂದ ೪ ಡಿಗ್ರಿಯವರೆಗೆ ಕಾಯಿಸಿದಾಗ ಸಂಕುಚಿಸುತ್ತದೆ.  ೪ ಡಿಗ್ರಿಯನಂತರ ವ್ಯಾಕೋಚಿಸುತ್ತದೆ.  ನೀರಿನ ಈ ಲಕ್ಷಣವನ್ನು ನೀರಿನ ಅಸಂಗತ ವ್ಯಾಕೋಚನ (anomalous expansion) ಎನ್ನುವರು"! [ಎನ್ನುವವರು ಯಾರು? ಈ ಅಸಂಗತವ್ಯಾಕೋಚನ ಎಂಬ ಪದ ಎಲ್ಲಾದರೂ ಕೇಳಿದ್ದಿದೆಯಾ?  ಮಕ್ಕಳು ಅರ್ಥ ಮಾಡಿಕೊಂಡು ನೆನಪಿನಲ್ಲಿಟ್ಟುಕೊಳ್ಳಬಲ್ಲರಾ?  ಇದೇ ವಾಕ್ಯವನ್ನೇ ""ನೀರನ್ನು ೦ ಡಿಗ್ರಿಯಿಂದ ೪ ಡಿಗ್ರಿಯವರೆಗೆ ಕಾಯಿಸಿದಾಗ ಕುಗ್ಗುತ್ತದೆ.  ೪ ಡಿಗ್ರಿಯನಂತರ ಹಿಗ್ಗುತ್ತದೆ.  ನೀರಿನ ಈ ಲಕ್ಷಣವನ್ನು ನೀರಿನ ವಿಚಿತ್ರ ಹಿಗ್ಗುವಿಕೆ (anomalous expansion) ಎನ್ನುವರು" ಎಂದಿದ್ದರೆ ಸಂಸ್ಕೃತಕ್ಕೆ ದ್ರೋಹ ಬಗೆದಂತಾಗುತ್ತಿತ್ತೇ?];
  • ಭೂಸವೆತಕ್ಕೆ ಕಾರಣಗಳ ಪಟ್ಟಿಯಲ್ಲಿ ಕಂಡದ್ದು - "ಮಿತಿಮೀರಿದ ಮೇಯುವಿಕೆ" [ಬೆಚ್ಚದಿರಿ, ಭೂಮಿಯನ್ನು ಯಾರೂ ಮೇಯಲಿಲ್ಲ, ಅದು ಮೇಯಿಸುವಿಕೆ - ಜಾನುವಾರುಗಳು ವಿಪರೀತ ಹುಲ್ಲು ಮೇಯುವುದರಿಂದ ಮಣ್ಣು ಸವೆಯುತ್ತದೆ ಎಂದು ಭಾವ - overgrazing ಎಂಬುದರ ಪದಶಃ ಅನುವಾದ!];
  • ಗೋಲೀಯಕಾಯವಾದ ಚಂದ್ರ ಭೂಮಿಯ ಏಕಮಾತ್ರ ಸ್ವಾಭಾವಿಕ ಉಪಗ್ರಹ [Moon is a spherical body which is the only natural satellite of our planet ಎಂಬುದರ ಪದಶಃ ಅನುವಾದ.  ಇಂಗ್ಲಿಷಿಗೆ ಸಹಜವಾದ ವಾಕ್ಯರಚನೆ ಕನ್ನಡಕ್ಕೂ ಸರಿಹೊಂದಬಹುದೇ?];
  • ಇನ್ನು ಈ ಚಂದ್ರನ ಪುರಾಣ ಅಷ್ಟಕ್ಕೇ ಮುಗಿಯುವುದಿಲ್ಲ.  ಅಮಾವಾಸ್ಯೆಯಿಂದ ಅಮಾವಾಸ್ಯೆಗೆ ಚಂದ್ರನ ೮ ಅವಸ್ಥೆಗಳನ್ನು ಗುರುತಿಸಿ ಅವುಗಳನ್ನು ಹೀಗೆ ಹೆಸರಿಸುತ್ತಾರೆ - ಅಮಾವಾಸ್ಯೆ, ವೃದ್ಧಿಬಾಲಚಂದ್ರ, ಅರ್ಧಚಂದ್ರ, ವೃದ್ಧಿಪೀನಚಂದ್ರ, ಹುಣ್ಣಿಮೆ, ಕ್ಷೀಣಪೀನಚಂದ್ರ, ಅರ್ಧಚಂದ್ರ, ಕ್ಷೀಣಬಾಲಚಂದ್ರ!  ಇಲ್ಲಿ ಹುಣ್ಣಿಮೆ, ಅಮಾವಾಸ್ಯೆ ಮತ್ತು ಚಂದ್ರ (ಹೆಚ್ಚೆಂದರೆ ಅರ್ಧಚಂದ್ರ) ಇಷ್ಟು ಬಿಟ್ಟರೆ ಇನ್ನು ಯಾವ ಪದವೂ ಮಕ್ಕಳಿಗೆ ಪರಿಚಯವಿಲ್ಲ - ವೃದ್ಧಿ, ಕ್ಷೀಣ, ಬಾಲ, ಪೀನ!  ಇವು ಇಂಗ್ಲಿಷಿನ waxing, waning, crescent, gibbousಗಳಿಗಿಂತ ಎಷ್ಟು ಮಟ್ಟಿಗೆ ಹೆಚ್ಚು ಪರಿಚಯ ಮಕ್ಕಳಿಗೆ? ಮೊದಲನೆಯದಾಗಿ, Waxing crescent, waxing gibbous, waning gibbous, waning crescent ಎಂದು ಮುಂತಾಗಿ ಚಂದ್ರನ ೮ ಅವಸ್ಥೆಗಳನ್ನು ಗುರುತಿಸುವ ಕ್ರಮವೇ ನಮ್ಮದಲ್ಲ.  ನಮ್ಮಲ್ಲಿ ಅದನ್ನು ಇನ್ನೂ ವಿವರವಾಗಿ ಪಾಡ್ಯ, ಬಿದಿಗೆ ಮೊದಲಾದ ೧೫ ತಿಥಿಗಳ ಮೂಲಕ, ೧೬ ಕಲೆಗಳ ಮೂಲಕ ಗುರುತಿಸುತ್ತೇವೆ.  ಮಕ್ಕಳಿಗೆ ಅದನ್ನೇ ಹೇಳಿದ್ದರಾಗಿತ್ತು.  ಅಥವಾ ಪಠ್ಯಪುಸ್ತಕಸಮಿತಿಯ ಸಾಮಾನ್ಯ ನಿಲುವು ಸಾರಿ ಹೇಳುವಂತೆ ಭಾರತೀಯವಾದ್ದು ನಿಕೃಷ್ಟ ಎಂಬ ಭಾವನೆಯೇ ಇದ್ದರೆ, ಈ ಪಾಶ್ಚಾತ್ಯ ಕ್ರಮದಲ್ಲಿ ಗುರುತಿಸಿದ ೮ ಅವಸ್ಥೆಗಳನ್ನೇ, ಅವುಗಳ ಮೂಲ ಹೆಸರಿನಲ್ಲೇ ವಿವರಿಸಬಹುದಿತ್ತು.  ಪದಕ್ಕೊಂದು ಪದ ಅನುವಾದಿಸಿ, ನಮ್ಮಲ್ಲಿ ಎಂದೂ ಉಪಯೋಗಿಸದ, ಮಕ್ಕಳೂ ಮುಂದೆಂದೂ ಉಪಯೋಗಿಸದ ಪಾರಿಭಾಷಿಕಗಳನ್ನು ಸೃಷ್ಟಿಸಿ ಮಕ್ಕಳನ್ನು ದಾರಿತಪ್ಪಿಸಲೇಬೇಕೆಂಬ ಹಠವೇಕೆ? 
  • ನೋಡಿ, ನಿಮ್ಮ ಬಳಿ ಹನ್ನೊಂದು ಮಾವಿನ ಹಣ್ಣು ಇದೆ.  ಅದನ್ನು ಕತ್ತರಿಸದೇ ಐದು ಜನಕ್ಕೆ ಹಂಚಬೇಕು - ಇದು ಭಾಗಾಕಾರದ ಲೆಕ್ಕ.  ಐದನ್ನು ಭಾಜಕ (ಭಾಗಿಸುವ ಸಂಖ್ಯೆ) ಎಂದೂ ಹತ್ತನ್ನು ಭಾಜ್ಯ (ಭಾಗಿಸಿಕೊಳ್ಳುವ ಸಂಖ್ಯೆ) ಎಂದೂ, ಎರಡನ್ನು ಭಾಗಲಬ್ಧ (ಒಬ್ಬೊಬ್ಬರಿಗೂ ಎಷ್ಟೆಷ್ಟು ಬಂತು) ಎಂದೂ, ಉಳಿದ ಒಂದನ್ನು ಶೇಷ (ಉಳಿದದ್ದು) ಎಂದೂ ಕರೆಯುತ್ತೇವೆ.  ಇದಕ್ಕೆ ಈ ಹೆಸರೇಕೆ ಬೇಕು?  ಏಕೆಂದರೆ ಮುಂದೆ ಭಾಜಕ, ಭಾಜ್ಯ ಮುಂತಾದುವುಗಳ ಪ್ರಸ್ತಾಪ ಉದ್ದಕ್ಕೂ ಬರುತ್ತಾ ಹೋಗುತ್ತದೆ, ಆದ್ದರಿಂದ ಇಲ್ಲಿ ಈ ರೀತಿಯ ಪಾರಿಭಾಷಿಕವ್ಯಾಖ್ಯೆ ಅಗತ್ಯ.  ಅದೇ, ನಿಮ್ಮ ಬಳಿ ಹತ್ತು ರುಪಾಯಿ ಇದ್ದು ಅದರಲ್ಲಿ ೩ ರುಪಾಯಿ ಕಳೆದು ಹೋಯಿತು, ಉಳಿದದ್ದೆಷ್ಟು ಎಂದರೆ? ಏಳು ಎಂದು ಉತ್ತರ ಹೇಳಿ ಮುಂದುವರೆಯಬಹುದು.  ದೊಡ್ಡ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ಕಳೆದು ಉಳಿದದ್ದನ್ನು ಉತ್ತರವೆಂದು ಹೇಳುತ್ತೇವೆ, ಇದು ಸಾಮಾನ್ಯಜ್ಞಾನ.  ಇಲ್ಲಿ ವಿವಿಧ ಅಂಶಗಳಿಗೆ ಹೆಸರು ಕೊಡುವ ಅಗತ್ಯವೇ ಇಲ್ಲ (ಇಂಗ್ಲಿಷಿನಲ್ಲಿ ಇವಕ್ಕೆ minuend (ಕಳೆದುಕೊಳ್ಳುವ ಸಂಖ್ಯೆ), subtrahend (ಕಳೆಯುವ ಸಂಖ್ಯೆ) ಮತ್ತು difference (ವ್ಯತ್ಯಾಸ) ಎನ್ನುತ್ತಾರೆ, ಆದರೆ ಕನ್ನಡದಲ್ಲಿ, ಮಕ್ಕಳ ಈ ಹಂತಕ್ಕೆ ಆ ಹೆಸರು ಕಟ್ಟಿಕೊಂಡು ಏನು ಮಾಡಬೇಕು?  ಕಳೆಯಲು ಬಂದರೆ ಸಾಕಲ್ಲವೇ?  ಆದರೆ ಪಠ್ಯವಿದ್ವಾಂಸರು ಅದನ್ನು ಅಲ್ಲಿಗೆ ಬಿಡುವುದಿಲ್ಲ.  ಈ ಪದಗಳನ್ನು ವ್ಯವಕಲ್ಯ, ವ್ಯವಕಲಕ, ಮತ್ತು ವ್ಯತ್ಯಾಸ ಎಂದು ಅನುವಾದಿಸಿಯೇ ಸಿದ್ಧ!  ಮಗು, ಕಲಿಯುವುದನ್ನು ಬಿಟ್ಟು ಈ ಪದಗಳ ಅರ್ಥ ತಿಳಿಯಲು ಯಾವ ನಿಘಂಟು ಹುಡುಕಿ ಹೋಗಬೇಕು?
ಹೀಗೆ ಒಂದೆಡೆ ಮಕ್ಕಳಿಗೆ ಅರ್ಥವೇ ಆಗದ ಪದಗಳನ್ನು ತುರುಕುವುದು ಒಂದೆಡೆಯಾದರೆ, ಮಕ್ಕಳಿಗೆ ಸಹಜವಾಗಿಯೇ ಅರ್ಥವಾಗುವ ಪದಗಳಿಗೂ ಪರ್ಯಾಯ ಇಂಗ್ಲಿಷ್ ಪದಗಳನ್ನು ಸೂಚಿಸುವುದು ಇನ್ನೊಂದು ಜಾಡ್ಯ.  ಉದಾಹರಣೆಗೆ ಈ ವಾಕ್ಯವನ್ನು ನೋಡಿ -

"ದೊಡ್ಡದಾದ ಭಾರವಾಗಿರುವ ಹನಿಗಳು ಮಳೆ (Rain)ಯಾಗಿ ಬರುತ್ತವೆ.  ಮೋಡಗಳ ಸುತ್ತಲೂ ಇರುವ ಗಾಳಿ ಇನ್ನೂ ತಣ್ಣಗಾದಾಗ ಈ ಹನಿಗಳು ಹಿಮ (snow) ರೂಪದಲ್ಲಿ ಬೀಳುತ್ತವೆ" [ಸಂಸ್ಕೃತವೇ ಬರದ ಮಕ್ಕಳಿಗೆ ಮಳೆ, ಹಿಮ ಮೊದಲಾದ ಕನ್ನಡ ಪದಗಳೆಲ್ಲಿ ಬಂದೀತು ಎಂಬ ಊಹೆಯಿರಬಹುದೇ!]. 

ಇನ್ನು "ಕೋಶದ ಎರಡೂ ತುದಿಗಳಿಗೆ ಒಂದು ಬಲ್ಬ್ (bulb)ನ ಮೂಲಕ ಜೋಡಿಸಿ" ಎಂಬ ವಾಕ್ಯದಲ್ಲಂತೂ ಬಳಸಿರುವುದು ಬಲ್ಬ್ ಎಂಬ ಇಂಗ್ಲಿಷ್ ಪದವನ್ನೇ!  ಅದನ್ನು ಮಕ್ಕಳಿಗೆ ಕನ್ನಡ ಲಿಪಿಯಲ್ಲಿ ಓದಲು ಬರುವುದಿಲ್ಲವೋ ಎಂಬಂತೆ ಬ್ರಾಕೆಟ್ಟಿನಲ್ಲಿ ಅದೇ ಪದ ಇಂಗ್ಲಿಷ್ ಲಿಪಿಯಲ್ಲಿ ಹಾಕಲಾಗಿದೆ! 

ಇದೆಲ್ಲದರಿಂದ ಒಂದು ವಿಷಯ ಸ್ಪಷ್ಟವಾಗುವುದೇನೆಂದರೆ, ಪಠ್ಯ ಸಿದ್ಧಪಡಿಸಿದವರಿಗೆ ಕನ್ನಡದ ಸಹಜ ಬಳಕೆ ಬರುವುದಿಲ್ಲ; ಮಕ್ಕಳ ಭಾಷೆ ಬರುವುದಿಲ್ಲ, ಕನ್ನಡದ ಆಡುನುಡಿಯಾಗಲೀ ಲಿಖಿತ ಭಾಷೆಯಾಗಲೀ ಸ್ಪಷ್ಟವಾಗಿ ಬರುವುದಿಲ್ಲ.  ಯಾವ ಮಾತು/ಪದ ಎಲ್ಲರಿಗೂ ಅರ್ಥವಾಗುತ್ತದೆ, ಯಾವುದು ಎಲ್ಲರಿಗೂ ಅರ್ಥವಾಗುವುದಿಲ್ಲ ಎಂಬ ಪರಿಜ್ಞಾನ ಕಿಂಚಿತ್ತೂ ಇಲ್ಲ!  ಹೋಗಲಿ ಸಂಸ್ಕೃತದ ಹುಚ್ಚಿಗೆ ಬಿದ್ದವರಂತೆ ಸಂಸ್ಕೃತ ಪದಗಳನ್ನು ತುರುಕುತ್ತಾರಲ್ಲ, ಆ ಜ್ಞಾನವಾದರೂ ಸ್ಪಷ್ಟವಿದೆಯೇ ಎಂದರೆ ಉಹುಂ.  ಸಂಧಿಪ್ರಕ್ರಿಯೆಯ ಪರಿಚಯವಿಲ್ಲ, ಪ್ರತ್ಯಯಗಳನ್ನು ಹಚ್ಚುವ ಬಗೆ ತಿಳಿದಿಲ್ಲ, ಕನ್ನಡ-ಸಂಸ್ಕೃತದ ಯಾವ ಪದಗಳನ್ನು ಬೆರೆಸಿದರೆ ಅಸಹ್ಯವಾಗಿ ಒಡ್ಡೊಡ್ಡಾಗಿರುತ್ತದೆ (ಇವಕ್ಕೆ ಪರಿಭಾಷೆಯಲ್ಲಿ ಅರಿಸಮಾಸ ಎನ್ನುತ್ತಾರೆ) - ಇದಾವುದರ ಪರಿವೆಯೂ ಇಲ್ಲ - ಆದರೆ ಹೊಸ ಪದಗಳನ್ನು ಕಟ್ಟೆ ಬಿಡುವ ಹುಕ್ಕಿಗೆ ಮಾತ್ರ ಮಿತಿಯಿಲ್ಲ.  ಇವರು ಕಟ್ಟಿದ ಕೆಲವು ಪದಗಳನ್ನು ನೋಡಿ: 
  • ಪರಮಾಣ್ವಕಗಳು (ಪರಮಾಣು + ಕ = ಪರಮಾಣ್ವಕ!!);
  • ರಕ್ತಹೀರುಕ (ರಕ್ತಾಹಾರಿ ಎನ್ನುವ ಪದ ಹೊಳೆಯಲಾರದು);
  • ಸಮಜಾತ್ಯಮಿಶ್ರಣ (ಸಮಜಾತಿ+ಅಮಿಶ್ರಣ? - homogenous mixture ಎನ್ನಲಿಕ್ಕೆ);
  • ಅಸವಿತ ನೀರು (distilled water ಅಂತೆ.  ಬ್ರಾಕೆಟ್ಟಿನಲ್ಲೇ ಭಟ್ಟಿಯಿಳಿಸಿದ ನೀರು ಎಂದೂ ಹೇಳಿದ್ದಾರೆ, ಆದರೂ ಇದೊಂದು ತಪ್ಪುತಪ್ಪಾದ ಹೊಸ ಪದ ಬೇಕೇ ಬೇಕು - ’ಅಸವಿತ’ ಪದದ ವ್ಯುತ್ಪತ್ತಿ ದೇವರೇ ಬಲ್ಲ!);
  • ವಿದ್ಯುದಾಗ್ರ (ವಿದ್ಯುತ್ + ಅಗ್ರ = ವಿದ್ಯುದಗ್ರ ಎನ್ನುತ್ತದೆ ವ್ಯಾಕರಣ.  ಆದರೆ ಪಠ್ಯಪುಸ್ತಕದ ವಿಜ್ಞಾನಲೇಖಕರು ವ್ಯಾಕರಣಾತೀತರು);
  • ಅವಪಾತ (precipitation!);
  • ಕಾರ್ಬನಿಕ ದ್ರಾವಕ (Organic solvent! - ಈ ಅನುವಾದ ಹೇಗೋ, ’ಕಾರ್ಬನಿಕ’ ಎಂಬ ಪದದ ವ್ಯುತ್ಪತ್ತಿಯೇನೋ, ದೇವರೇ ಬಲ್ಲ);
  • ಸಾಂದ್ರೀಕರಣ,
  • ಆವೀಕರಣ ("ಆವಿ" ಕನ್ನಡ, "ಕರಣ" ಸಂಸ್ಕೃತ.  ಅಲ್ಲದೇ ಕರಣ ಎಂದರೆ ಮಾಡುವಿಕೆ ಎಂದರ್ಥವೇ ಹೊರತು ಆಗುವಿಕೆ ಎಂದಲ್ಲ - ಆದರೆ ವಿಜ್ಞಾನಲೇಖಕರು ಅದಕ್ಕೆಲ್ಲ ಸೊಪ್ಪು ಹಾಕುವವರಲ್ಲ - ಕರಣಸರಣಿಗೆ ಹೊಸ ಸೇರ್ಪಡೆಯಾದರೆ ಆಯಿತು). 
ಇನ್ನಿಷ್ಟು ಹೇಳಿದ ಮೇಲೆ ಬಹು ಗಂಭೀರವಾದ ಪ್ರಮಾದವನ್ನು ಹೇಳದಿದ್ದರೆ ಲೇಖನ ಪೂರ್ಣಗೊಳ್ಳದು.  ಗಣಿತ ವಿಜ್ಞಾನ ಮೊದಲಾದ ಶಾಸ್ತ್ರವಿಷಯಗಳಲ್ಲಿ ಪಾರಿಭಾಷಿಕಗಳ ಮಹತ್ವ ಎಂಥದ್ದೆಂಬುದು ಎಲ್ಲರಿಗೂ ತಿಳಿದದ್ದೇ.  ಚಾಲ್ತಿಯಲ್ಲಿರುವ ಇಂಗ್ಲಿಷಿನ ಪಾರಿಭಾಷಿಕ ಪದಕ್ಕೆ ಕನ್ನಡದಲ್ಲಿ ಒಂದು ಪಾರಿಭಾಷಿಕ ಬೇಕೇ, ಇದ್ದರೆ ಅದು ಸಂಸ್ಕೃತಪದವಾಗಿರಬೇಕೆ, ಕನ್ನಡದ್ದಾಗಿರಬೇಕೇ, ಅಥವ ಇಂಗ್ಲಿಷಿನದನ್ನೇ ಉಳಿಸಿಕೊಳ್ಳಬೇಕೇ ಇದು ಬಹು ದೊಡ್ಡ ಚರ್ಚೆಯ ವಿಷಯ.  ಅದೇನೇ ಇರಲಿ, ಪಾರಿಭಾಷಿಕಗಳು ಶಿಕ್ಷಣಕ್ರಮದುದ್ದಕ್ಕೂ ಒಂದೇ ಆಗಿ, ಯಾವುದೇ ಗಲಿಬಿಲಿಗೆಡೆಗೊಡದಂತಿರಬೇಕಾದ್ದು ಅತ್ಯವಶ್ಯ.  ಏಕೆಂದರೆ ಈ ಒಂದು ಪಾರಿಭಾಷಿಕ ಪದದ ಮೇಲೆ ಇಡೀ ಪರಿಕಲ್ಪನೆಯನ್ನು ಕಟ್ಟಿ ವಿವರಿಸಿ ಬಳಸಲಾಗುತ್ತದೆ.  ಮೂಲಭೂತ ಮಟ್ಟದಲ್ಲಿ ವಿದ್ಯಾರ್ಥಿ ಇದನ್ನು ಗ್ರಹಿಸದೆ ಹೋದರೆ ಮುಂದಿನದೆಲ್ಲವೂ ಗಲಿಬಿಲಿಯ ಕೊಂಪೆಯೇ.  ಆದರೆ ಇಲ್ಲಿ ಪಾರಿಭಾಷಿಕಗಳ ಮಹತ್ವವನ್ನೇ ಅರಿಯದೇ ಒಂದೊಂದು ಕಡೆ ಒಂದೊಂದರಂತೆ ಯದ್ವಾತದ್ವಾ ಬಳಸಿರುವುದು ಗಮನಕ್ಕೆ ಬರುತ್ತದೆ.  ಕೆಲವು ಉದಾಹರಣೆಗಳನ್ನು ನೋಡಿ: 



ನಾಲ್ಕನೆಯ ತರಗತಿಯಲ್ಲಿ ಭಾಗಾಕಾರದ ಪಾರಿಭಾಷಿಕ ಪದಗಳನ್ನು ವಿವರಿಸುತ್ತಾ ತಿಳಿಸುತ್ತಾರೆ "ಯಾವ ಸಂಖ್ಯೆಯನ್ನು ಭಾಗಿಸಬೇಕಾಗಿದೆಯೋ ಅದು ಭಾಜ್ಯ; ಯಾವ ಸಂಖ್ಯೆಯಿಂದ ಭಾಜ್ಯವನ್ನು ಭಾಗಿಸಲಾಗುತ್ತಿದೆಯೋ ಅದು ಭಾಜಕ; ಭಾಗಾಕಾರದ ಫಲಿತಾಂಶವನ್ನು ಭಾಗಲಬ್ದ ಎನ್ನುತ್ತಾರೆ (ಇಂಗ್ಲಿಷಿನಲ್ಲಿ ಇದಕ್ಕೆ ಕ್ರಮವಾಗಿ Dividend, Divisor, ಮತ್ತು Quotient ಎಂದರು)".  ಇದು ನಾವೆಲ್ಲರೂ ಕಲಿತು ಬಂದಿರುವುದೇ.  ಆದರೆ ಏಳನೆಯ ತರಗತಿಗೆ ಬಂದರೆ, Rational Number ಎಂಬುದನ್ನು ಭಾಗಲಬ್ಧಸಂಖ್ಯೆ ಎಂದು ಅನುವಾದಿಸಿಬಿಟ್ಟರು ("ಭಾಗಲಬ್ಧ" ನಾಲ್ಕನೆಯ ತರಗತಿಯ ವಿವರಣೆ ನೋಡಿ)!  ಮತ್ತು ಆ ಅನುವಾದದಮೇಲೆಯೇ ಇಡೀ Rational Numbers ಅಧ್ಯಾಯವನ್ನು ನಡೆಸಿದ್ದಾರೆ.  ಅಧ್ಯಾಯದೊಳಗೇ ಇಂಗ್ಲಿಷಿನ ವಿವರಣೆಗೂ ಕನ್ನಡದ ವಿವರಣೆಗೂ ಸಂಬಂಧವಿಲ್ಲ, ಇಡೀ ಅಧ್ಯಾಯ ಗೊಂದಲದ ಗೂಡಾಗಿದೆ!

ಇನ್ನು ಅದೇ ಅಧ್ಯಾಯದಲ್ಲಿ Natural numbers, Whole Numbers ಮತ್ತು Integers ಎನ್ನುವುದನ್ನು ಕ್ರಮವಾಗಿ ಸ್ವಾಭಾವಿಕ ಸಂಖ್ಯೆಗಳು, ಪೂರ್ಣಸಂಖ್ಯೆಗಳು ಮತ್ತು ಪೂರ್ಣಾಂಕಗಳು ಎಂದು ಅನುವಾದಿಸಿದ್ದಾರೆ.  ಪೂರ್ಣಸಂಖ್ಯೆ ಎಂದರೇನು ಪೂರ್ಣಾಂಕ ಎಂದರೇನು?  ಅಂಕ (ಅಂಕಿ) ಎಂದರೆ ಸೊನ್ನೆಯಿಂದ ಒಂಬತ್ತರವರೆಗಿನ ಒಂದು ಸ್ಥಾನದ ಸಂಖ್ಯೆ, ಮತ್ತು ಸಂಖ್ಯೆ ಎಂದರೆ ಇಂಥಾ ಹಲವು ಸ್ಥಾನಗಳನ್ನೂ, ದಶಮಾಂಶಗಳನ್ನೂ ಒಳಗೊಂಡ ಸಂಖ್ಯೆ ಎಂಬುದು ಮಕ್ಕಳಿಗೆ ಮೊದಲಿನಿಂದಲೂ ಕಲಿಸಿದ ವಿಷಯ.  ಈಗ ಇದ್ದಕ್ಕಿದ್ದಹಾಗೆ ಪೂರ್ಣಾಂಕ ಎಂದರೆ Integer ಎಂದುಬಿಟ್ಟರೆ, ಮಕ್ಕಳ ಗ್ರಹಿಕೆಗೆ ಏನಾಗಬೇಕು?  ಅದರಲ್ಲೂ ಇಡೀ Rational Number ಎಂಬ ಅಧ್ಯಾಯವನ್ನು ಅರಿಯಲು ಈ ಮೂರು ರೀತಿಯ ಸಂಖ್ಯೆಗಳ ಅರಿವು ಬಹು ಮುಖ್ಯವಾದದ್ದು. 

ಮುಂದುವರೆದು Rational Numberನ ವ್ಯಾಖ್ಯೆಯಲ್ಲೂ ಭಾರೀ ಎಡವಟ್ಟು ಮಾಡಿದ್ದಾರೆ.  ಇಂಗ್ಲಿಷಿನ ಮೂಲ ಹೀಗಿದೆ "All numbers of the form p/q are rational numbers. In p/q, q is not equal to 0 and p,q are integer"  ಇದರ ವ್ಯಾಕರಣ ಏನೇ ಇರಲಿ, ಈ ಸಾಲು ಹೇಳುವುದಿಷ್ಟು - p/q ಎನ್ನುವ ಸಂಖ್ಯೆ Rational number (ಭಾಗಲಬ್ಧ ಸಂಖ್ಯೆ!) ಆಗಬೇಕಾದರೆ, ಅದರಲ್ಲಿ q ಎನ್ನುವುದು ಸೊನ್ನೆಯಾಗಿರಬಾರದು, ಮತ್ತು p ಮತ್ತು q ಎರಡೂ Integer (ಪೂರ್ಣಾಂಕ!)ಗಳಾಗಿರಬೇಕು.  ಇದು ತಾನೆ ವಿವರಣೆ?  ಕನ್ನಡ ಪಠ್ಯದಲ್ಲಿ ಕೊಟ್ಟಿರುವ ವಿವರಣೆ ದಿಕ್ಕೆಡಿಸುವಂತಿದೆ.  "a/b ರೂಪದಲ್ಲಿರುವ ಎಲ್ಲಾ ಸಂಖ್ಯೆಗಳು ಭಾಗಲಬ್ಧ ಸಂಖ್ಯೆಗಳಾಗಿರಲು, a/b ಇದರಲ್ಲಿ a ಪೂರ್ಣಾಂಕ ಹಾಗೂ b ಸೊನ್ನೆಯಲ್ಲದ ಸಂಖ್ಯೆಯಾಗಿರುತ್ತದೆ.  ಭಾಗಲಬ್ಧ ಸಂಖ್ಯೆಯ ಛೇದವು ಯಾವಾಗಲೂ ಸ್ವಾಭಾವಿಕ ಸಂಖ್ಯೆ ಆಗಿರುತ್ತದೆ"!!!  ಇಂಗ್ಲಿಷಿನಲ್ಲಿ ಅಂಶ ಛೇದಗಳೆರಡೂ Integer (ಪೂರ್ಣಾಂಕ) ಆಗಿರಬೇಕೆಂದಿದೆ.  ಕನ್ನಡದಲ್ಲಿ ಛೇದವು ಸ್ವಾಭಾವಿಕ ಸಂಖ್ಯೆ (Natural Number) ಆಗಿರಬೇಕೆಂದಿದೆ!

ಈ ಅಧ್ಯಾಯವನ್ನು ಪೂರ್ಣ ನೋಡಿದ ಯಾರಿಗಾದರೂ, ಇಲ್ಲಿಯ ವಿಷಯ ವಿವರಿಸುವವರಿಗೇ ಸ್ಪಷ್ಟವಿಲ್ಲವೆಂಬುದು ಬಹು ನಿಚ್ಚಳವಾಗಿ ಗೋಚರಿಸುತ್ತದೆ. ಹಾಗಿದ್ದರೆ ಮಕ್ಕಳ ಗತಿಯೇನು?  ಕನ್ನಡಾಭಿಮಾನ, ಕನ್ನಡಮ್ಮನ ಸೇವೆ ಎಂದೆಲ್ಲಾ ಚಿಂತಿಸುವವರ ತಪ್ಪಿಗೆ ಇದು ಶಿಕ್ಷೆಯೇ?  ದುಬಾರಿ ಹಣ ತೆತ್ತು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಲಾಗದೇ, ಬೇರೆ ಗತಿಯಿಲ್ಲದೇ ಕನ್ನಡ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ನೀಡುವ ಬಳುವಳಿಯೇ?  ಮಕ್ಕಳು ಹೊಸ ವಿದ್ಯೆ ಕಲಿತು ಬರುವ ಬದಲು ತಮಗೆ ಬರುವ ಕನ್ನಡವನ್ನೂ ಮರೆತು ಬರಬೇಕೇ?  ಅರ್ಥವೇ ಇಲ್ಲದ ಪದಗಳಿಗಾಗಿ ನಿಘಂಟು ತಡಕುವುದೇ ಗಣಿತ-ವಿಜ್ಞಾನಗಳ ಪಾಠವಾಯಿತೇ?  ಈ ಅಜ್ಞಾನದ ಕೊಂಪೆಗಳಿಗಿಂತ ಮಕ್ಕಳಿಗೆ ಮನೆಯೇ ಉತ್ತಮ ಪಾಠಶಾಲೆಯಾಗಬೇಕಾದ ಅಗತ್ಯವೊದಗಿದೆಯೇ? ಗಂಭೀರವಾಗಿ ಚಿಂತಿಸುವ ಕಾಲ ಬಂದಿದೆ.

ಸೂ: ಈ ಲೇಖನವು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ದಿನಾಂಕ ೨೩-೦೭-೨೦೧೭ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದೆ: