Thursday, October 29, 2009

ಕನ್ಯಾಕುಮಾರಿ

(೧)
ಸಂಜೆ ಎಂಟಕೆ ಬಿಡುವ
ಲೌಡ್ ಸ್ಪೀಕರಿನ
someಗೀತ
ಟ್ರಾವೆಲ್ ಬಸ್ಸು;
ಬೆಂಗಳೂರಿಂದ ಹದಿನೆಂಟು ತ್ರಾಸು
ರೆಪ್ಪೆಯಿಲ್ಲದ ಕಿವಿಯ ಮುಚ್ಚಲಾರದ ದಿಟಕೆ
ಕಣ್ಮುಚ್ಚಿ ಕೂತ
ಚಿತ್-
ಭಂಗಿ, ನಿದ್ರಾಯೋಗ
ನಟಿಸಿ, ವಟವಟಿಸಿ ಚಡಪಡಿಸಿ ಸಿಡಿವುದರೊಳಗೆ
ಕನ್ಯಾ
ಕು
ಮಾರಿ
ಬಿಸಿಲು-ಅಂಟು
ಮೈಯೆಲ್ಲ ಉಪ್ಪು
ಕಾರುವ ಕಡಲು
ಅಲೆ
ಯುವ ಮಂದೆ-
ಮಂದಿ

ದ ಒಳ ಹೊರಗೆ
ಕಡಲ ತಡಿಯಡಿಗಡಿಗೆ
ಕಾಗದ ಚೂರು
ಪ್ಲಾಸ್ಟೀಕು ಕವರು
ಕಚಪಚ ಕೆಸರು
ಚೆಲ್ಲುವ ವಿವೇಕ
ಸಾಗರದ
ನಡುವೆ ತಲೆಯೆತ್ತಿದ
ವಿವೇಕ
ಶಿಲೆಗೆ
ಲಾಂಚರು
ಕಾದುನಿಂತ ಮೈಲುದ್ದ ಕ್ಯೂ!

(೨)
ವಿವೇಕ ಮಂದಿರದಿ
ಧ್ಯಾನದಾನಂದದಾರಾಮ;
ತಂಪೆರೆವ ನಿಃಶಬ್ದ ನಿರ್ವಾತ ಧಾಮ;
ಗದ್ದಲದ ವಾಕ್ಯದಲಿದೊಂದು
ಅಲ್ಪ ವಿರಾಮ.

(೩)
ದಿನವೆಲ್ಲ ಉರಿದು ಸುಸ್ತಾಗಿ
ಪಡುಗಡಲಲ್ಲಿ ಮಲಗಲೆಳಸುವ ಸೂರ್ಯ;
ಕಡಲ ಹೊನ್ನೀರ್ ತುಳುಕಿ
ಸುತ್ತೆಲ್ಲ ಬಣ್ಣವೋ ಬಣ್ಣ;
ಸಂಜೆಬಾನಿನ ಕಾಂತಿ,
ಶಿಲೆಯ ನೆಲೆಯಿಂ ಹೊರಟು
ದಿಕ್ಕ ತುಂಬಿದ ಶಾಂತಿ -
ಶ್ರೀ ವಿವೇಕಾನಂದ ಚಿತ್ಛಾಂತಿ

(೪)
ಮುಂಜಾವಿನರುಣೋದಯದ
ಹೊನ್ನ ಕಿರಣದಲಿ
ತೀಡುತಿಹ ತಂಗಾಳಿ,
ದೇವಿಯ ಕೃಪೆಯ ಸುಯ್ಯುತಿಹ
ಉದಯರಾಗ;
ವರ್ಣಮಯವೀ ಬಾನು
ವರ್ಣಮಯವೀ ಕಡಲು
ವರ್ಣಮಯವದರ ಮಳಲು.
ಮುಂಜಾವ ಸಿಹಿಗನಸಲಿನ್ನೂ ಮಿಸುಗುವ ಸೂರ್ಯ
ಮೈತಿಳಿದು ಕಣ್ಹೊಸಕಿ ಉರಿಯ ಕೆದರುವ ಮುನ್ನ
ಕಟ್ಟುತ್ತೇನೆ ಜೋಳಿಗೆಯ,
ಮುಂದಿನೂರಿಗೆ ಪಯಣ.

4 comments:

sunaath said...

ಕನ್ಯಾಕುಮಾರಿಯ ಯಥಾವತ್ ಚಿತ್ರಣ!

R. K. DIVAKARA said...

ಕನ್ಯಾಕುಮಾರಿಯನ್ನು ಪಕ್ಕದ ಬೃಹತ್ ಚರ್ಚಿಗರು ದೊಡ್ಡದಾಗಿ "ಕನ್ನಿಕಾ ಮೇರಿ" ಎಂದಬ್ಬರಿಸಿ ಪರಿಚಯಿಸುತ್ತಾರೆ ಮತ್ತು "ಪ್ರಚಾರ" ಮಾಡುತ್ತಾರೆ!

ಚಾರ್ವಾಕ ವೆಂಕಟರಮಣ ಭಾಗವತ said...

"ಮಾರಿ
ಬಿಸಿಲು-ಅಂಟು
ಮೈಯೆಲ್ಲ ಉಪ್ಪು
ಕಾರುವ ಕಡಲು
ಅಲೆ
ಯುವ ಮಂದೆ-
ಮಂದಿ"

"ಗದ್ದಲದ ವಾಕ್ಯದಲಿದೊಂದು
ಅಲ್ಪ ವಿರಾಮ."

"ತೀಡುತಿಹ ತಂಗಾಳಿ,
ದೇವಿಯ ಕೃಪೆಯ ಸುಯ್ಯುತಿಹ
ಉದಯರಾಗ;"

ನನಗಿಷ್ಟವಾದ ಸಾಲುಗಳು, ನಿಮ್ಮದೇ ಛಾಪನ್ನು ಹೊತ್ತಿವೆ. ಆದರೂ ನಿಮ್ಮ ಇತರ ಕವನಗಳು, ಅವುಗಳ depth and directionನ benchmarkಗೆ ಹೋಲಿಸಿದಾಗ, ಈ ಕವನ ಅದೇಕೋ ಪೇಲವವೆನ್ನಿಸಿತು.

Susheel Sandeep said...

'ಕಾರುವ ಕಡಲು
ಅಲೆ
ಯುವ ಮಂದೆ-
ಮಂದಿ

ದ ಒಳ ಹೊರಗೆ'

ಪದಗಳ ಬಳಕೆ,ಛೇದನ - ಪಾಠ ಕಲಿಸುವಂತಿವೆ. ಖುಶಿಯಾಯ್ತು.

'ಹದಿನೆಂಟು ತ್ರಾಸು' - ಸೂಪರ್
'ಧ್ಯಾನದಾನಂದದಾರಾಮ' - ಅದ್ಭುತವಾದ ಪ್ರಯೋಗ. ಧ್ಯಾನದ ಆನಂದದ ಆರಾಮ - ವಾವ್!

someಗೀತ - ಇದು ಸ್ವಲ್ಪ ಕ್ಲೀಷೆ ಅನ್ನಿಸ್ತು...ತುಂಬಾ ಜನ ತುಂಬಾ ಕಡೆ ಅನವಶ್ಯಕವಾಗಿ ಬಳಸಿರುವುದರಿಂದಲೋ ಏನೋ ಈ ಪ್ರಯೋಗ ಅಷ್ಟು ಪ್ರಭಾವಶಾಲಿ ಅನ್ನಿಸಲಿಲ್ಲ.
(ಬಿಜೆಪಿ ಸರ್ಕಾರ 'ಶೋಭಾ'ಯಮಾನವಾಗಿ ಮಿನುಗದ ರೀತಿ!) :)