Friday, April 3, 2009

ಅರ್ಥಾಂತರ ನ್ಯಾಸ

ಮೊನ್ನಿನ ಯುವಕರು (ಅಥವ ಹಳೇಏಏ ಸಿನೆಮಾ ಹಾಡುಗಳ ಶೋಕಿರುವ ನಿನ್ನಿನ/ಇಂದಿನ ಯುವಕರೂ ಕೂಡ) ಒಂದಲ್ಲ ಹತ್ತು ಬಾರಿ ಕೇಳಿರಲೇ ಬೇಕಾದ ಹಾಡು, ಭೂಕೈಲಾಸದ ಚಿತ್ರದ "ರಾಮನ ಅವತಾರ". ಶೀರ್ಗಾಳಿ ಗೋವಿಂದರಾಜನ್ನರ ಮಧುರ ಕಂಠದಲ್ಲಿ ಮೂಡಿಬಂದಿರುವ (ಕು.ರಾ.ಸೀತಾರಾಮ ಶಾಸ್ತ್ರಿಗಳ ಸಾಹಿತ್ಯದ) ಈ ಹಾಡು ನನಗೆ ತುಂಬಾ ಖುಷಿ ಕೊಡುವ ಹಾಡುಗಳಲ್ಲೊಂದು. ಆ ಹಾಡಿದ ಚಂದವೋ, ಸಂಗೀತದ ಲಯ-ಮಾಧುರ್ಯವೋ, ಸಾಹಿತ್ಯದ ಉತ್ಕೃಷ್ಟತೆಯೋ, ಕೇಳುವ ನಿಮ್ಮನ್ನು ತನ್ನೊಡನೆಯೇ ಕೊಂಡೊಯ್ಯುತ್ತದೆ. ಗೀತೆಯ ಸಾಹಿತ್ಯದಲ್ಲಿ ಅದೊಂದು ಗತ್ತಿದೆ, ಲಾಲಿತ್ಯವಿದೆ, ಕಥನ ಕೌಶಲವಿದೆ. ಅದು ನಿಮ್ಮನ್ನು ಮಿಥಿಲೆ, ಅಯೋಧ್ಯೆ, ಲಂಕೆಗಳಲ್ಲಿ ಸುತ್ತಿಸುತ್ತದೆ; ರಾಮ ಶಿವಧನುವನ್ನು ಮುರಿಯುವಲ್ಲಿ ನೀವೇ ಸಾಕ್ಷಿ; ಕಾನನದಲ್ಲಿ ರಾಮನ ಜೊತೆಗೂ ಅಲೆಯುವಿರಿ; ಕನ್ನಡ ಕುಲಪುಂಗವನಾದ ಹನುಮ ನಿಮ್ಮ ಮುಂದೆಯೇ ರಾಮನಾಮ ಹಾಡಿಕೊಂಡು ಕುಣಿಯುವನು; ಕೊನೆಗೆ ದಾನವ ಭಕ್ತಾಗ್ರೇಸರನ ಮರಣಕ್ಕೂ ಮರುಗುವಿರಿ.

ಮೊದಲೆಲ್ಲಾ ಹಾಡುಗಳು ಇಷ್ಟವಾಗುತ್ತಿದ್ದರೂ ಸಾಹಿತ್ಯದ ಉತ್ಕೃಷ್ಟತೆಯ ಬಗ್ಗೆ ಅಷ್ಟು ಗಮನ ಹೋಗುತ್ತಿರಲಿಲ್ಲ (ಉತ್ತಮ ಸಾಹಿತ್ಯ ಸರ್ವೇಸಾಮಾನ್ಯವಾಗಿದ್ದ, ಆ ಕಾರಣಕ್ಕಾಗಿಯೇ ನಮ್ಮ ಉಪೇಕ್ಷೆಗೊಳಗಾಗುತ್ತಿದ್ದ ಸ್ವರ್ಣಯುಗ ಅದು). ಆದರೆ ಇತ್ತೀಚೆಗೆ ಈ ಹಾಡುಗಳು ತಮ್ಮ ಸಾಹಿತ್ಯದ ಕಾರಣದಿಂದಲೇ ಮತ್ತಷ್ಟು ರುಚಿಸಹತ್ತಿವೆ. ಇದೇ ಹಾಡಿನಲ್ಲಿ ಈ ಚರಣ ನೋಡಿ:

ಧನುವೋ ಜನಕನ ಮಮತೆಯ ಕುಡಿಯೋ ಸೀತೆಯ ಕನ್ಯಾ ಸಂಕಲೆಯೋ
ದನುಜರ ಕನಸಿನ ಸುಖ ಗೋಪುರವೋ ಮುರಿವುದು ಮಿಥಿಲಾ ನಗರದಲಿ

ಇದೊಂದು ಕಥಾ ನಿರೂಪಣೆಯ ವಿಧಾನ. ರಾಮ ಮಿಥಿಲೆಗೆ ಹೋಗುತ್ತಿದ್ದಾನೆ, ಅಲ್ಲಿ ಮುಂದಾಗುವುದು ನಿರೂಪಕನಿಗೆ ಗೊತ್ತು, ಅದು ನಮಗೂ ಗೊತ್ತೆಂದೂ ಆತನಿಗೆ ಗೊತ್ತು. ಶಿವಧನುಸ್ಸನ್ನು ರಾಮನು ಮುರಿಯುವುದು ನಿಮಿತ್ತ ಮಾತ್ರ; ಅದರೊಡನೆ ಅಂದು ಮಿಥಿಲೆಯಲ್ಲಿ ಮುರಿದು ಬೀಳುವುದು ಇನ್ನೂ ಸಾಕಷ್ಟಿವೆ - ಜನಕನ ಕರುಳ ಕುಡಿ, ಸೀತೆಯ ಕನ್ಯಾ ಸಂಕಲೆ; ಇತರ ದೊರೆಗಳ ಕನಸಿನ ಗೋಪುರ (ಈ ಧನು ಮುರಿದರೆ ಅವರಾರಿಗೂ ಸೀತೆ ದಕ್ಕುವಂತಿಲ್ಲವಲ್ಲ). ಶಿವಧನುವನ್ನು ಮುರಿಯುವ ಮಹಾ ಘಟನೆ ಕೂಡ ಇಷ್ಟೆಲ್ಲಾ ಮುಖ್ಯ ಘಟನೆಗಳ ಮುಂದೆ ಗೌಣ! ಅದಕ್ಕೆಂದೇ ಏನೋ, ಇಡೀ ಚರಣದಲ್ಲಿ ಶಿವಧನು ಏನೂ ದೊಡ್ಡದಾಗಿ ಕಾಣುವುದೇ ಇಲ್ಲ; ಅದೊಂದು ಧನು, ಅಷ್ಟೆ.

ಹೀಗೆ ಒಂದು ಕ್ರಿಯೆಯನ್ನು ಸೂಚಿಸಿ, ಅದರಿಂದ ಹೊರಡುವ (ಅಥವಾ ಕವಿ ಆರೋಪಿಸುವ) ಮತ್ತೊಂದು ಕ್ರಿಯೆಯನ್ನು ಸೂಚಿಸುತ್ತಾ ಘಟನೆಗೆ ಹೊಸ ಅರ್ಥ-ಆಯಾಮ ಕಲ್ಪಿಸುವ ರೀತಿ ಇದೆಯಲ್ಲ, ಅದನ್ನು ಅಲಂಕಾರಗಳ ಪರಿಭಾಷೆಯಲ್ಲಿ ಅರ್ಥಾಂತರ ನ್ಯಾಸ ಎನ್ನುತ್ತಾರೆ. ಉಪಮೆ, ರೂಪಕ, ಉತ್ಪ್ರೇಕ್ಷೆಗಳಂತೆಯೇ ಇದೊಂದು ಅಲಂಕಾರ; ಕ್ರಿಯೆ ಒಂದು, ಅದರ ಅರ್ಥ ಬೇರೊಂದು! ಕಥನ ಕಲೆಯಲ್ಲಿ ಇದೊಂದು ಬಹಳ ಪರಿಣಾಮಕಾರಿ ಸಾಧನ. ಮತ್ತೊಂದು ಉದಾಹರಣೆ ನೋಡಿ:

ಜ್ಞಾನ ಚಂದ್ರಿಕೆ ಬೆಳಗೆ ಭಕ್ತಿವಾರಿಧಿಯುಕ್ಕೆ ಮನಚಕೋರವು ವಿಷ್ಣುಪಥದಿ ನಲಿಯೆ
ದೀನಜನ ಭಯವಡಗೆ ತಾಪತ್ರಯಗಳೋಡೆ ಮಧ್ವೇಂದು ಶ್ರೀ ಕೃಷ್ಣ ನೋಡಿ ತಾ ನಲಿಯೆ (ವ್ಯಾಸರಾಜರು)

ಇದು ಇನ್ನೂ ಸಂಕೀರ್ಣವಾದ ಅರ್ಥಾಂತರ ನ್ಯಾಸ. ಮೊದಲ ಉದಾಹರಣೆಯಲ್ಲಿ ಕೇವಲ ಒಂದು ಕ್ರಿಯೆ, ಅದರ ಸರಣಿ ಪರಿಣಾಮಗಳಿದ್ದುವು, ಆದರೆ ಇಲ್ಲಿ ನೋಡಿ. ಎರಡೆರಡು ಸರಣಿ ಪ್ರಕ್ರಿಯೆಗಳು ಒಂದನ್ನೊಂದು ಧ್ವನಿಸುತ್ತಾ ಸಾಗುತ್ತವೆ. ಚಂದ್ರಿಕೆ ಬೆಳಗಲು ಸಮುದ್ರ ಉಕ್ಕುತ್ತದೆ; ಚಕೋರ ಪಕ್ಷಿಯು ನಲಿಯುತ್ತದೆ; ಭಯ ಅಡಗುತ್ತದೆ; ತಾಪತ್ರಯಗಳು ಓಡುತ್ತವೆ. ಅದಕ್ಕೇ ಸಮಾನಂತರವಾಗಿ ಓಡುವ ಮತ್ತೊಂದು ಸರಣಿ ನೋಡಿ. (ಪರಮಾತ್ಮನ) ಜ್ಞಾನ ಬೆಳಗಿದರೆ ಭಕ್ತಿ ತಾನಾಗಿಯೇ ಉಕ್ಕುತ್ತದೆ; ಮನವು ವಿಷ್ಣುಪಥದಲ್ಲಿ ನಲಿಯುತ್ತದೆ; ಸಹಜವಾಗಿಯೇ ಭಯಗಳು ಅಡಗುತ್ತವೆ, ಕಷ್ಟಗಳು ಕೊನೆಗಾಣುತ್ತವೆ. ಚಂದ್ರೋದಯ ಮತ್ತು ಅದರ ಪರಿಣಾಮಗಳು ಜ್ಞಾನೋದಯ ಮತ್ತು ಅದರ ಪರಿಣಾಮಗಳು ಪರಸ್ಪರ ಸಮಾನಾಂತರವಾಗಿ ಓಡುತ್ತಾ, ಒಂದು ಇನ್ನೊಂದರ ಅರ್ಥವನ್ನು ಧ್ವನಿಸುತ್ತಾ ಹೋಗುವುದನ್ನು ಕಾಣುತ್ತೇವೆ. "ಜ್ಞಾನಚಂದ್ರಿಕೆ", "ಭಕ್ತಿವಾರಿಧಿ", "ಮನಚಕೋರ", "ವಿಷ್ಣುಪಥ" ಇವೆಲ್ಲಾ ಒಂದೊಂದು ಪ್ರತ್ಯೇಕ ರೂಪಕಗಳೇ! ಈ ರೂಪಕಗಳನ್ನೆಲ್ಲ ಒಳಗೊಂಡು ಇಲ್ಲಿ ಅರ್ಥಾಂತರ ನ್ಯಾಸ ಒಡಮೂಡುತ್ತದೆ. ಅಲಂಕಾರದೊಳಗೊಂದು ಅಲಂಕಾರ!

ಪ್ರತಿಯೊಬ್ಬ ಶಕ್ತ ಕವಿಯ ಬಹು ಮುಖ್ಯ ಸಾಧನ-ಸಲಕರಣೆ (Tool), ಅರ್ಥಾಂತರ ನ್ಯಾಸ. ರೂಪಕ ಸಾಮ್ರಾಜ್ಯ ಚಕ್ರವರ್ತಿಯೆಂದೇ ಹೆಸರಾದ ಕುಮಾರವ್ಯಾಸನೂ ಅರ್ಥಾಂತರ ನ್ಯಾಸವನ್ನು ಅದೆಷ್ಟು ಪರಿಣಾಮಕಾರಿಯಾಗಿ ಬಳಸುತ್ತಾನೆ ನೋಡಿ:

ಜವನ ಮೀಸೆಯ ಮುರಿದನೋ ಭೈ
ರವನ ದಾಡೆಯನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೋ
ಬವರವನು ತೊಡಗಿದನಲಾ ಕೌ
ರವನಕಟ ಮರುಳಾದನೆಂದಾ
ಯುವತಿಯರ ಮೊಗನೋಡುತುತ್ತರ ಬಿರುದ ಕೆದರಿದನು

(ನೆನಪಿನ ಮೇಲೆ ಬರೆದದ್ದು. ತಪ್ಪಿದ್ದರೆ ದಯವಿಟ್ಟು ತಿಳಿಸಿ)

ಕೌರವನು ಯುದ್ಧದಲ್ಲಿ ತೊಡಕಿಕೊಂಡಿದ್ದಾನೆ, ಉತ್ತರನ ಮೇಲೆ! ಆದರೆ ಅವನೆಂಥಾ ಅನಾಹುತ ಮಾಡಿಕೊಂಡಿದ್ದಾನೆಂದು ಅವನಿಗೇ ಗೊತ್ತಿಲ್ಲ - ಯಮನ ಮೀಸೆಯನ್ನೆಳೆದಿದ್ದಾನೆ; ಭೈರವನ ದಾಡೆಯನ್ನು ಅಲುಗಿಸಿದ್ದಾನೆ;, ಮಲಗಿದ್ದ ಮೃತ್ಯುವಿನ ಮುಸುಗೆಳೆದಿದ್ದಾನೆ; ಸಿಂಹವನ್ನು ಕೆಣಕಿದ್ದಾನೆ! ಯುವತಿಯರ ಮುಂದೆ ಹೀಗೆ ಉತ್ತರ ಬಿರುದ ಕೆದರಿದನು ಎನ್ನುವುದರ ಮೂಲಕ ವ್ಯಂಗ್ಯದ ಪರಿಣಾಮವನ್ನು ಕವಿ ಎಷ್ಟು ಚೆನ್ನಾಗಿ ತರುತ್ತಾನೆ ನೋಡಿ. ಕುಮಾರವ್ಯಾಸನು ತನ್ನ ರೂಪಕಗಳಿಗೆ ಹೆಸರುವಾಸಿ, ಆದರೆ ಅವನ ಕೃತಿಯುದ್ದಕ್ಕೂ ಇಂಥಾ ಶಕ್ತಿಯುತವಾದ ಅರ್ಥಾಂತರನ್ಯಾಸ ಸೂರೆಗೊಂಡಿದೆ.

ಜೂಜಿನಲ್ಲಿ ಸೋತ ಪಾಂಡವರನ್ನು ಅಪಮಾನಿಸಲು ದ್ರೌಪದಿಯ ಮಾನಭಂಗವೊಂದೇ ತಕ್ಕ ಮಾರ್ಗವೆಂದು ನಿರ್ಧರಿಸುವ ದುರ್ಯೋಧನ ಆಕೆಯನ್ನು ಎಳೆತರಹೇಳುತ್ತಾನೆ. ಈ ಮೂರ್ಖನಿಷ್ಠುರತೆಗೆ ಬೆಚ್ಚಿದ ವಿದುರ ದುರ್ಯೋಧನನಿಗೆ ಎಚ್ಚರಿಸುವ ಬಗೆ ನೋಡಿ:

"ಸಿಡಿಲ ಪೊಟ್ಟಣಗಟ್ಟಿ ಸೇಕವ ಕೊಡುವರೇ... ಹೆಡತಲೆಯ ತುರಿಸುವರೆ ಹಾವಿನ ಹೆಡೆಯನಕಟಾ..." ಎಷ್ಟು ಶಕ್ತಿಶಾಲಿಯಾದ ಮಾತು!

ಇವೆಲ್ಲಾ ಸಾಮಾನ್ಯದಿಂದ ಅಸಾಮಾನ್ಯವನ್ನು ಧ್ವನಿಸುವ ಮಾತಾದರೆ, ಅಸಾಮಾನ್ಯದಿಂದ ಸಾಮಾನ್ಯವನ್ನು ಧ್ವನಿಸುವ, ಮತ್ತು ಆ ಮೂಲಕ ಸಾಮಾನ್ಯವನ್ನೇ ಅಸಾಮಾನ್ಯದ ಮಟ್ಟಕ್ಕೇರಿಸುವ ಈ ಪರಿ ನೋಡಿ:

"ಮುಗಿಲ ಮಾರಿಗೆ ರಾಗರತಿಯಾ ನಂಜ ಏರಿತ್ತ, ಆಗ ಸಂಜಿಯಾಗಿತ್ತ"

ಸಂಜೆಯನ್ನು ವರ್ಣಿಸಿ ರಾಗರತಿಯ ಸ್ವರ್ಗೀಯತೆಯನ್ನು ಸೂಚಿಸುವ ಬದಲು, ರಾಗರತಿಯನ್ನೇ ಮೊದಲು ಸೂಚಿಸಿ ಅದರಿಂದ ಸಂಜೆಯಾಯಿತೆಂದು ಧ್ವನಿಸುತ್ತದೆ ಈ ಸಾಲು; ಆ ಮೂಲಕ ಸಾಮಾನ್ಯ ಸಂಜೆಯೊಂದು ಅಸಾಮಾನ್ಯದ ಮಟ್ಟಕ್ಕೇರುತ್ತದೆ, ಬೇಂದ್ರೆಯವರ ಕಾವ್ಯದ ಮೋಡಿಯಲ್ಲಿ.

ಅದಿರಲಿ, ಮಾತಿಗೊಂದು ಅರ್ಥ ಬೇಕೆ ಅರ್ಥವಿದ್ದರಷ್ಟೆ ಸಾಕೆ ಎಂದ ಕವಿ ಕುವೆಂಪು, ಅಮೂರ್ತದ ಅರ್ಥವನ್ನು ಧ್ವನಿಸುವಲ್ಲಿ ಅದೆಷ್ಟು ಸೊಗಸಾಗಿ ಅರ್ಥಾಂತರನ್ಯಾಸವನ್ನು ಬಳೆಸುತ್ತಾರೆ ನೋಡಿ:

ಗಿರಿವನ ಪಟದಾಕಾಶದಲಿ
ತೇಲುತ ಬರಲ್ಕೆ ಬಲಾಕಪಂಕ್ತಿ
ಲೇಖನ ರೇಖಾನ್ಯಾಸದಲಿ
ಅವಾಙ್ಮಯ ಛಂದಃಪ್ರಾಸದಲಿ

ಸೃಷ್ಟಿಯ ರಚನೆಯ ಕುಶಲಕೆ ಚಂದಕೆ
ಜಗದಚ್ಚರಿಯಂದದ ಒಪ್ಪಂದಕೆ
ಚಿರಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ

ದೇವರು ರುಜು ಮಾಡಿದನು
ರಸವಶನಾಗುತ ಕವಿ ಅದ ನೋಡಿದನು

ಬೆಳ್ಳಕ್ಕಿಯ ಗುಂಪೊಂದು ಅದಾವುದೋ ಬರವಣಿಗೆಯ ಆಕಾರದಲ್ಲಿ ಆಗಸದಲ್ಲಿ ಹಾರುತ್ತಿದೆ. ಜಗತ್ತಿನ ಎಲ್ಲ ಕೌತುಕಗಳಿಗೆ ತಾನು ಚಿರಂತನವಾಗಿ ಸಾಕ್ಷಿಯೆಂಬ ಒಪ್ಪಂದಕ್ಕೆ ದೇವರು ರುಜು ಹಾಕುತ್ತಿರುವಂತೆ ಕವಿಯ ಕಲ್ಪನೆ. ಸ್ವಲ್ಪ ನಿರುಕಿಸಿ ನೋಡಿದರೆ ಇದು ಉತ್ಪ್ರೇಕ್ಷಾಲಂಕಾರವೆಂದೇ ಹೇಳಿಬಿಡಬಹುದು; ಒಪ್ಪಂದವೊಂದಕ್ಕೆ ದೇವರು ರುಜು ಮಾಡಿದ್ದಾನೋ ಎಂಬಂತೆ ಹಕ್ಕಿ ಸಾಲು ಹಾರುತ್ತಿದೆ, ಆದ್ದರಿಂದ. ಆದರೆ ಹಕ್ಕಿಯ ಸಾಲು ದೇವರ ರುಜುವಿನ ರೂಪಿನಲ್ಲಿ ಬೇರೆಯದೇ ಅರ್ಥವನ್ನು ಪಡೆಯುವ ಸೂಕ್ಷ್ಮ ಅರ್ಥಾಂತರ ಇಲ್ಲಿ ಇದ್ದೇ ಇದೆ. ಕಾವ್ಯ, ಅಲಂಕಾರ-ಲಕ್ಷಣಗಳ ಕಟ್ಟಿಗೆ ಒಳಪಡುವುದಲ್ಲ ಎನ್ನುವುದಕ್ಕೆ ಇದು ಉದಾಹರಣೆ.

ಹಾಂ! ಅರ್ಥಾಂತರನ್ಯಾಸ ಕೇವಲ ಕಾವ್ಯ (ಕವನ-ಪದ್ಯ?)ಗಳಲ್ಲಿ ಮಾತ್ರ ಆಗುವಂಥದ್ದೆಂದು ಭಾವಿಸಬೇಕಿಲ್ಲ. ಮೊನ್ನೆ ಗೆಳೆಯರೊಂದಿಗೆ ಹೋಟೆಲಿಗೆ ಹೋಗಿದ್ದೆ. ಕೊನೆಯಲ್ಲಿ ಮಾಣಿ ತಂದಿತ್ತ ದುಬಾರಿ ಬಿಲ್ಲನ್ನು ನೋಡಿ, ಕಾವ್ಯದ ಗಂಧವೇ ಇಲ್ಲದ ನನ್ನ ಗೆಳೆಯ ತೆಗೆದ ಉದ್ಗಾರ "ಓ, ಇದು ಬಿಲ್ಲಲ್ಲ ಗುರುವೇ, ಬಾಣ, ಬಾಣ!"

9 comments:

Santhosh Mugoor (ಸಂk) said...

" ಜವನ ಮೀಸೆಯ ಮುರಿದನೋ ಭೈ
ರವನ ದಾಡೆಯನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೋ
ಬವರವನು ತೊಡಗಿದನಲಾ ಕೌ
ರವನಕಟ ಮರುಳಾದನೆಂದಾ
ಯುವತಿಯರ ಮೊಗನೋಡುತುತ್ತರ ಬಿರುದ ಕೆದರಿದನು

(ನೆನಪಿನ ಮೇಲೆ ಬರೆದದ್ದು. ತಪ್ಪಿದ್ದರೆ ದಯವಿಟ್ಟು ತಿಳಿಸಿ)"

ಸಾರ್ ನಿಮ್ಮ ನೆನಪಿನ ಶಕ್ತಿ ಅಪಾರ ... ಕಳೆದ ವಾರವಷ್ಟೆ ಓದಿದ್ದ ಈ ಸಾಲುಗಳನ್ನು ಮತ್ತೊಮ್ಮೆ ಓದಿಕೊಳ್ಳಬೇಕಾಯ್ತು ತಪ್ಪೋ ಸರಿಯೋ ಎಂದು ನಿರ್ಧರಿಸಲು. ಅಕ್ಷರಕ್ಷರಗಳು ಸರಿಯಾಗಿದೆ ( ಬೆಂಗಳೂರು ಯುನಿವರ್ಸಿಟಿಯ ಬಿ.ಕಾಂ. ಎರಡನೇ ಸೆಮಿಸ್ಟರ್ ಪಠ್ಯಪುಸ್ತಕದಲ್ಲಿದೆ..)


ಅರ್ಥಾಂತರ ನ್ಯಾಸದ ಬಗ್ಗೆ ಸರಳವಾಗಿ ಉದಾಹರಣೆ ಸಮೇತ ತಿಳಿಸಿದ ನಿಮ್ಮ ಪರಿ ಬಹಳ ಇಷ್ಟವಾಯಿತು.

Manjunatha Kollegala said...

ಧನ್ಯವಾದ ಸಂತೋಷ್. ಬರುತ್ತಿರಿ. ಪಂಕ್ತಿಗಳು ನೆನಪಿನಲ್ಲುಳಿಯಬೇಕಾದರೆ ಅದರ ಹೆಗ್ಗಳಿಕೆ ನನ್ನದಲ್ಲ, ಕವಿಯದು. ಕುಮಾರವ್ಯಾಸನನ್ನು ಇನ್ನೂ ಯೂನಿವರ್ಸಿಟಿಯಲ್ಲಿ ಕಲಿಸುತ್ತಾರೆ ಎಂದು ಅರಿತು ಸಂತಸವಾಯಿತು.

Srikanth said...

ಬಹಳ ಸಂತಸ ನೀಡಿದ ಬರಹ. ಹೀಗೆ ಇನ್ನು ಹೆಚ್ಚು ಹೆಚ್ಚು ಆಲಂಕಾರಿಕ ಸ್ವಾರಸ್ಯಗಳನ್ನು ಓದುಗರಿಗೆ ವಿವರಿಸುತ್ತಾ, ಧ್ವನಿಸುತ್ತಾ ನಮ್ಮ ಆನಂದವನ್ನು ವರ್ಧಿಸಿ :)

Susheel Sandeep said...
This comment has been removed by the author.
Susheel Sandeep said...

ಸಾಷ್ಟಾಂಗ ನಮನಗಳು.
ಕನ್ನಡ ನಿಜಕ್ಕೂ ಸುಲಿದ ಬಾಳೆಯೇ ಹೌದು. ಅದರಲ್ಲೂ ಹೀಗೆ ಬಿಡಿಸಿ ಜೇನುಸುರಿದು ರಸಾಯನ ಮಾಡಿಕೊಟ್ಟರಂತೂ...ಲೊಟ್ಟೆ ಹೊಡ್ಕೊಂಡು ಮೂರು ಮೇಲೊಂದು ದೊನ್ನೆ ಗುಳುಂ :) ಸೂಪರ್ ಮಂಜು ಸಾರ್.

ಅರ್ಥಾಂತರ ನ್ಯಾಸವನ್ನು ಇಷ್ಟು ಸಲೀಸಾಗಿ ಅರ್ಥ ಮಾಡ್ಕೋಬೋದು ಅನ್ನಿಸಿರಲಿಲ್ಲ. ಉದಾಹರಣೆಗಳು ಒಂದಕ್ಕಿಂತ ಒಂದು ಏವನ್!
ಮುಗಿಲ ಮಾರಿಗೆ ರಾಗರತಿ, ದೇವರ ರುಜುವನ್ನು ಈ ರೀತಿಯಾಗಿ ಹಿಂದೆ ಓದಿಕೊಂಡಿದ್ದೇ ಇಲ್ಲ. ಈಗ ಈ ದೃಷ್ಟಿಕೋನದಲ್ಲಿ ಮತ್ತೊಮ್ಮೆ ಓದಿಕೊಂಡರೆ ಆಗ್ತಿರೋ ಆನಂದಕ್ಕೆ ಎಣೆಯೇ ಇಲ್ಲ.
"ಅಲಂಕಾರದೊಳಗೊಂದು ಅಲಂಕಾರ!" - ನಮ್ಮ ಐಟಿ ಹುಡುಗರ ಬಾಯಲ್ಲಿ ಕುಣಿಯೋ ಫಂಕ್ಷನ್ ಇನ್ ಎ ಫಂಕ್ಷನ್ ಕಾಲ್ ಥರವೇ! :)

ಅದ್ಬುತ ಬರವಣಿಗೆ. ಹೀಗೆ ಸ್ವಾರಸ್ಯಕರವಾದ ಮತ್ತಷ್ಟು ಲೇಖನಗಳು ಬರಲಿ.

ಬಾಲು said...

ಕನ್ನಡ ಕಾವ್ಯ ಲೋಕದೊಳಗಿನ ನಿಮ್ಮ ಅಕ್ಷರ ಪಯಣ ಹೀಗೆ ನಿರಂತರ ವಾಗಿ ಇರಲಿ. ಕೊನೆಯ ಪಂಚ್ ಕೂಡ ಚೆನ್ನಾಗಿದೆ.

ಗೀತೆಯ ಬಗೆಗಿನ ನಿಮ್ಮ ಬ್ಲಾಗ್ ಯಾಕೋ ನಿಂತಂತಿದೆ.... ಅದನ್ನೂ ಮುಂದುವರಿಸಿದರೆ ನಮ್ಮ ಖುಶಿಯು ನೂರ್ಮಡಿ ಆಗುವುದು.

ಜಯಂತ ಬಾಬು said...

ಅರ್ಥಾಂತರ ನ್ಯಾಸದ ಬಗ್ಗೆ ಸರಳ-ಸುಂದರ ಲೇಖನ. ಮತ್ತೊಮ್ಮೆ ನಿಮ್ಮೊಡನೆ ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿದೆ. ಹೀಗೆ ಹೆಚ್ಚೆಚ್ಚು ಬರೀತಾ ಇರಿ ಸಾರ‍್.

Manjunatha Kollegala said...

ಬಾಲು ಅವರೇ,
ತಾವು ನನ್ನ ಬ್ಲಾಗುಗಳನ್ನು close ಆಗಿ ಓದುತ್ತಿರುವುದು ಸಂತಸವಾಯಿತು. ನೀವು ಹೇಳುವುದು ನಿಜ, ಭಗವದ್ಗೀತೆಯ ಬಗೆಗಿನ ಬರಹ ಕೊಂಚ ನಿಂತಂತಿದೆ; ನಿರ್ದಿಷ್ಟ ಕಾರಣವೇನೂ ಇಲ್ಲ. ಮನಸಿನಲ್ಲಿ ಮೂಡುವ ನೂರು ಯೋಚನೆಗಳಲ್ಲಿ ಬರಹವಾಗುವುದು ಎರಡೋ ಮೂರೊ. ಖಂಡಿತಾ ಬರೆಯುತ್ತೇನೆ. ನೆನಪಿಸಿದ್ದಕ್ಕೆ ಧನ್ಯವಾದಗಳು.

ಜಯಂತ್, ಧನ್ಯವಾದಗಳು, ನಿಮಗೂ ಕೂಡ

mahabala said...

ಚೆನ್ನಾಗಿದೆ