Sunday, May 31, 2020

ಸಂಸ್ಕೃತದಿಂದ ಪ್ರಾಕೃತವೋ ಪ್ರಾಕೃತದಿಂದ ಸಂಸ್ಕೃತವೋ?

ಈ ಚರ್ಚೆ ವಿದ್ವದ್ವಲಯದಲ್ಲಿ ಚರ್ವಿತಚರ್ವಣವೆನಿಸಬಹುದು.  ನಾನು ಹೇಳುತ್ತಿರುವುದರಲ್ಲಿ ಹೊಸದೇನೂ ಇಲ್ಲ.  ಆದರೂ ಈ ಪ್ರಶ್ನೆ ಪದೇಪದೇ ಬರುತ್ತಲೇ ಇರುವುದರಿಂದ, ಉತ್ತರವೂ ಪುನರಾವರ್ತನೆಯಾಗುವುದು ಸಹಜವಷ್ಟೇ  ಆದ್ದರಿಂದ ಈ ಲೇಖನ ಈಗಾಗಲೇ ಇದನ್ನು ತಿಳಿದವರಿಗಾಗಿ ಅಲ್ಲ, ಇನ್ನೂ ಈ ಪ್ರಶ್ನೆಯಿರುವವರಿಗಾಗಿ ಅಷ್ಟೇ.

ಈ ಲೇಖನದ ವಸ್ತು, ಹಿರಿಯಮಿತ್ರರಾದ ಶ್ರೀ ಸುಧೀಂದ್ರ ದೇಶಪಾಂಡೆಯವರು ಫೇಸ್ಬುಕ್ ಚರ್ಚೆಯೊಂದರಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ - "ಸಂಸ್ಕೃತವು ಪ್ರಾಕೃತದಿಂದ (ಪ್ರಾಕೃತ ಇದರರ್ಥ; ಪ್ರಕೃತಿಸಹಜವಾದದ್ದು, ಆಡುಮಾತು. natureದಿಂದ ಹುಟ್ಟಿದ natural) ಹುಟ್ಟಿದೆಯೇ ಹೊರತು, ಪ್ರಾಕೃತವು ಸಂಸ್ಕೃತದಿಂದ ಹುಟ್ಟಿಲ್ಲ. ಗ್ರಂಥಭಾಷೆಯಿಂದ ಆಡುನುಡಿಯು ಹುಟ್ಟುವುದೋ, ಆಡುನುಡಿಯಿಂದ ಗ್ರಾಂಥಿಕ ಭಾಷೆ ಹುಟ್ಟುವುದೋ ಎನ್ನುವುದನ್ನು ಪ್ರಾಜ್ಞರು ತಿಳಿದೇ ಇದ್ದಾರೆ"

ಪ್ರಾಕೃತ-ಸಂಸ್ಕೃತಗಳ ಗೂಡಿಗೆ ಕೈಯಿಕ್ಕುವ ಮೊದಲು, ಮೇಲಿನ ಅಭಿಪ್ರಾಯದ ಕೊನೆಯ ವಾಕ್ಯಕ್ಕೆ ಉತ್ತರಿಸಿಬಿಡುತ್ತೇನೆ - ಅದು ಸರಳ.  ಗ್ರಂಥಭಾಷೆಯಿಂದ ಆಡುನುಡಿ ಹುಟ್ಟುವುದೋ ಆಡುನುಡಿಯಿಂದ ಗ್ರಾಂಥಿಕಭಾಷೆ ಹುಟ್ಟುವುದೋ?  ಗ್ರಂಥಭಾಷೆಯಿಂದ ಆಡುನುಡಿ ಹುಟ್ಟುವುದೆಂಬುದನ್ನು ಯಾರೂ ಒಪ್ಪತಕ್ಕದ್ದಲ್ಲ, ಕಾರಣ ಸ್ಪಷ್ಟವಾಗಿಯೇ ಇದೆ - ಏಕೆಂದರೆ ಅಕ್ಷರ ಬರದವರೂ ಭಾಷೆಯನ್ನು ಮಾತಾಡುತ್ತಾರೆ, ಇದರಲ್ಲಿ ಶಂಕೆಯಿಲ್ಲ.  ಆದರೆ ಆಡುನುಡಿಯಿಂದ ಗ್ರಾಂಥಿಕಭಾಷೆ ಹುಟ್ಟುವುದೆಂಬುದೂ ಅತಿವಾದವೇ.  ಏಕೆಂದರೆ ಆಡುನುಡಿಗಳ ಹಲವು ಪ್ರಭೇದಗಳಿರುತ್ತವೆ, ಅವುಗಳಿಂದ ನೇರವಾಗಿ ಗ್ರಂಥಭಾಷೆ ಹುಟ್ಟುವುದಿಲ್ಲ, ಹಾಗೆ ಹುಟ್ಟಿದರೆ ಒಂದೊಂದು ಆಡುನುಡಿಯ ಪ್ರಭೇದಕ್ಕೂ ಒಂದೊಂದು ಗ್ರಂಥಭಾಷೆಯಿರಬೇಕಾಗುತ್ತದೆ.  ಆದರೆ ವಸ್ತುಸ್ಥಿತಿ ಹಾಗಿಲ್ಲವಲ್ಲ.  ಆದ್ದರಿಂದ ಆಡುನುಡಿಗೂ ಗ್ರಂಥಭಾಷೆಗೂ ಮೂಲವಾದ ಭಾಷಾರೂಪವೊಂದು ಇರಲೇಬೇಕು.  ಒಂದುಕಡೆ, ಆ ಮೂಲರೂಪವೇ ಹಲವು ಪ್ರದೇಶಗಳಲ್ಲಿ ಬೇರೆಬೇರೆ ರೀತಿ ಸವೆಸವೆದು ಬೇರೆಬೇರೆಯ ಭಾಷಾಪ್ರಭೇದಗಳಾಗುತ್ತದೆ (ಇವು ಆಡುನುಡಿಗಳು), ಮತ್ತೆ ಅದೇ ಮೂಲರೂಪವನ್ನೇ ಪರಿಶೋಧಿಸಿ ಅದು ಅನುಸರಿಸುವ ವ್ಯಾಕರಣನಿಯಮಗಳನ್ನು ಸೂತ್ರೀಕರಿಸಿದಾಗ ಗ್ರಂಥಭಾಷೆಯ ಉದ್ಭವವಾಗುತ್ತದೆ.  ಇದರ ಅಗತ್ಯವಾದರೂ ಏನೆಂದರೆ, ಅಕ್ಷರರೂಪದಲ್ಲಿರುವ ಭಾಷೆಯು ಮುಖಭಾವ, ದೇಹದ ಚಲನೆ, ಧ್ವನಿಯ ಏರಿಳಿತಗಳ ಸಹಾಯವಿಲ್ಲದೇ ಕೇವಲ ತನ್ನಿಂತಾನೇ ಸಂವಹನಗೊಳ್ಳಬೇಕಿರುವುದರಿಂದ ಅದು ಹೆಚ್ಚು ನಿಖರವಾಗಿ, ಸಂದೇಹಕ್ಕೆಡೆಯಿಲ್ಲದಂತಿರಬೇಕಾಗುತ್ತದೆ.  ಇದು ಸಾಧ್ಯವಾಗಬೇಕೆಂದರೆ ಭಾಷೆಯು ಯಾವ ನಿಯಮಗಳನ್ನು ಅನುಸರಿಸುತ್ತದೆಂಬುದರ ಸ್ಪಷ್ಟತೆಯೂ, ಬಳಕೆಯಲ್ಲಿ ಕೂಡಿದ ಮಟ್ಟಿಗೂ ಏಕರೂಪತೆಯೂ ಅತ್ಯಗತ್ಯವಾಗುತ್ತದೆ.  ಆದ್ದರಿಂದಲೇ ಗ್ರಂಥಭಾಷೆಗೆ ಆಡುಮಾತಿನಲ್ಲಿಲ್ಲದ ಒಂದು ಔಪಚಾರಿಕತೆ, ವ್ಯಾಕರಣಬದ್ಧತೆ ಇರುತ್ತದೆ.  ಆದರೆ ಗ್ರಂಥಭಾಷೆ ಮತ್ತು ವಿವಿಧ ಆಡುನುಡಿಗಳು ಒಂದೇ ಮೂಲರೂಪದಿಂದ ಹೊಮ್ಮಿದ್ದೆಂಬುದನ್ನು ಗಮನದಲ್ಲಿಡಬೇಕು. 

ಇದೇ ಜಾಡನ್ನನುಸರಿಸಿ ಈಗ ಚರ್ಚೆಯನ್ನು ಮುಂದುವರೆಸೋಣ. ಪ್ರಾಕೃತ ಮೊದಲು, ಸಂಸ್ಕೃತ ಆಮೇಲೆ ಎಂಬ ಮಾತು ಬೇರೆಯದೇ ಚರ್ಚೆ - ಯಾವಯಾವ ಪ್ರಾಕೃತಗಳು ಯಾವಯಾವಾಗ ಹುಟ್ಟಿದುವು, ಸಂಸ್ಕೃತ ಹುಟ್ಟಿದ್ದು ಯಾವಾಗ ಇತ್ಯಾದಿ - ಆದರೆ ಅದು ಇಲ್ಲಿನ ಚರ್ಚೆಯ ವಿಷಯವಲ್ಲ; ಇಲ್ಲಿ ನಾವು ಚರ್ಚಿಸುವುದು ಪ್ರಾಕೃತದಿಂದ ಸಂಸ್ಕೃತ ಹುಟ್ಟಿತೋ ಸಂಸ್ಕೃತದಿಂದ ಪ್ರಾಕೃತವೋ ಎಂಬ ಬಗ್ಗೆ ಮಾತ್ರ.

ಮೊದಲಿಗೆ, ಪ್ರಾಕೃತ-ಸಂಸ್ಕೃತ ಎಂಬ ಹೆಸರಿನ ಒಂದು ಅರ್ಥವನ್ನಷ್ಟೇ ಹಿಡಿದು ಭಾಷಾಮೂಲದ ವ್ಯಾಖ್ಯಾನ ಮಾಡುವುದು ಸರಿಯಲ್ಲ.  ಪ್ರಾಕೃತ = ಪ್ರಕೃತಿಯಿಂದ ಹುಟ್ಟಿದ್ದು ಎಂಬ ಅರ್ಥವನ್ನು ಹಿಡಿದರೆ, ಅದನ್ನು ಎಷ್ಟು ಮೂಲಕ್ಕಾದರೂ ಕೊಂಡೊಯ್ಯಬಹುದು - ಉದಾಹರಣೆಗೆ ಗಾಳಿ ಸುಯ್ಯನೆ ಬೀಸುತ್ತದೆ, ಗಿಡಮರಗಳು ಸರ್ರಬರ್ರನೆ ಆಡುತ್ತವೆ, ನದಿ ಜುಳುಜುಳು ಹರಿಯುತ್ತದೆ, ಪಕ್ಷಿಗಳು ಚಿಲಿಪಿಲಿಗುಟ್ಟುತ್ತವೆ, ನಾಯಿ ಭೌಗುಟ್ಟುತ್ತದೆ, ಹುಲಿ 'ಗರ್'ಜಿಸುತ್ತದೆ - ಇವೆಲ್ಲ ಪ್ರಾಕೃತಿಕಶಬ್ದಗಳೇ.  ಪ್ರಕೃತಿಯದೇ ಒಂದು ಭಾಗವಾದ ಮಾನವ ಕೂಡ ತನ್ನ ವಿಶಿಷ್ಟವಾದ ಧ್ವನಿಪೆಟ್ಟಿಗೆಯ ಸಹಾಯದಿಂದ ಸಾವಿರಾರು ಧ್ವನಿಗಳನ್ನು ಹೊರಡಿಸಬಲ್ಲ, ಇವೆಲ್ಲದರ 'ಭಾಷಾರೂಪ' ಪ್ರಾಕೃತ.  ಹೀಗೆಂದುಬಿಟ್ಟರೆ ಪ್ರಪಂಚದ ಎಲ್ಲ ಮೂಲಭಾಷೆಗಳೂ ಪ್ರಾಕೃತಗಳೇ; ಅವುಗಳನ್ನು ಹಿಡಿದು ಸಂಸ್ಕರಿಸಿ ವ್ಯಾಕರಣದ ಚೌಕಟ್ಟಿಗಳವಡಿಸಿಬಿಟ್ಟರೆ ಅಂತಹ ಎಲ್ಲ ಭಾಷೆಗಳೂ ಸಂಸ್ಕೃತವೇ; ಆ ದೃಷ್ಟಿಯಿಂದ ನಮ್ಮ ಕೊಳ್ಳೇಗಾಲದ ಕನ್ನಡ, ಕುಂದಾಪ್ರಕನ್ನಡ, ಹವಿಗನ್ನಡ ಇವೆಲ್ಲವೂ ಪ್ರಾಕೃತಗಳೆಂದೂ, ಅವುಗಳ ಆಧಾರದ ಮೇಲೇ ರೂಪಿತವಾದ ಮೈಸೂರು, ಮಂಗಳೂರು, ಧಾರವಾಡ ಕನ್ನಡಗಳು ಅರೆಸಂಸ್ಕೃತವೆಂದೂ, ಅವುಗಳನ್ನು ಹಿಡಿದು ವ್ಯಾಕರಣಬಂಧಕ್ಕೊಳಪಡಿಸಿದ ಗ್ರಾಂಥಿಕ ಕನ್ನಡವೇ ಸಂಸ್ಕೃತವೆಂದೂ ಕರೆಯಬೇಕಾಗುತ್ತದೆ.  ಆದರೆ ವಸ್ತುತಃ, ಕನ್ನಡವು ಸಂಸ್ಕೃತವಲ್ಲ, ಅಲ್ಲವೇ? ಎರಡೂ ಬೇರೆಬೇರೆ ಭಾಷೆಗಳು!

ಜೊತೆಗೆ ಪ್ರಾಕೃತ=ಪ್ರಕೃತಿಯಿಂದ ಮಾಡಲ್ಪಟ್ಟದ್ದು ಎಂಬ ವ್ಯಾಖ್ಯಾನವನ್ನಿಟ್ಟುಕೊಂಡರೆ ಇನ್ನೆಷ್ಟು ಗಲಿಬಿಲಿಗಳುಂಟಾಗುತ್ತವೆ ನೋಡೋಣ.

ನಮ್ಮಲ್ಲಿ ಅನೇಕರು ತಿಳಿದಿರಬಹುದಾದಂತೆ ಪ್ರಾಕೃತವೆಂಬುದು "ಒಂದು" ಭಾಷೆಯಲ್ಲ - "ಪಲವುಂ ಕನ್ನಡಂಗಳ್" ಎಂಬಂತೆ ಪಲವುಂ ಪ್ರಾಕೃತಂಗಳ್ ಇವೆ - ಶೌರಸೇನೀ, ಪೈಶಾಚೀ, ಅಪಭ್ರಂಶ, ಮಾಗಧೀ, ಅರ್ಧಮಾಗಧೀ, ವೈದರ್ಭೀ (ಮಹಾರಾಷ್ಟ್ರೀ), ಜೈನ, ಪಾಲಿ ಹೀಗೆ.  ಇವೆಲ್ಲವೂ ತಮ್ಮದೇ ವಿಶಿಷ್ಟತೆಯನ್ನು ಹೊಂದಿರುವವಾದರೂ ಇವುಗಳ ನಡುವಿನ ಸಾಮ್ಯವೂ ಕಡೆಗಣಿಸಲಾಗದಂಥದ್ದು - ಉಚ್ಚಾರಣೆ, ವ್ಯಾಕರಣ, ಪದಸಂಪತ್ತು ಮೊದಲಾದುವುಗಳಲ್ಲಿ - ಈ ಸಾಮ್ಯ ತಮಿಳು-ಕನ್ನಡಗಳ ಸಾಮ್ಯಕ್ಕಿಂತ ಹತ್ತಿರದ್ದು, ಧಾರವಾಡ-ಮೈಸೂರು ಕನ್ನಡಗಳ ಸಾಮ್ಯಕ್ಕಿಂತ ದೂರದ್ದು.  ಆದ್ದರಿಂದ ಇವು ಸೋದರಭಾಷೆಗಳೋ, ಒಂದೇ ಭಾಷೆಯ ಪ್ರಭೇದಗಳೋ ಯಾರ ಊಹೆಗಾದರೂ ಬಿಟ್ಟದ್ದು.  ಜೊತೆಗೆ ಈ ಪ್ರಾಕೃತಗಳನ್ನಾಡುವ ಪ್ರದೇಶಗಳು ಒಂದರಿಂದೊಂದು ಬಹುದೂರದವೆಂಬುದನ್ನು ಗಮನದಲ್ಲಿಡಿ - ಶೌರಸೇನೀ ಉತ್ತರಪ್ರದೇಶದ್ದಾದರೆ, ವೈದರ್ಭೀ ಮಹಾರಾಷ್ಟ್ರದ್ದು.  ಎಲ್ಲವೂ ಒಂದಿನ್ನೊಂದರ ಪ್ರಭಾವವಿಲ್ಲದೇ 'ಪ್ರಾಕೃತಿಕ'ವಾಗಿಯೇ ಹುಟ್ಟಿದವೆನ್ನುವುದಾದರೆ, ಅವುಗಳ ನಡುವಣ ಅಚ್ಚರಿಗೊಳಿಸುವ ಸಾಮ್ಯವನ್ನು ಹೇಗೆ ವಿವರಿಸುತ್ತೀರಿ?  ಭಾಷೆಗಳ ನಡುವೆ ಕೊಡುಕೊಳ್ಳುವಿಕೆ, ಒಂದು ಪ್ರದೇಶದಿಂದ ಮತ್ತೊಂದಕ್ಕೆ ಜನರ ವಲಸೆ ಇದರಿಂದ ಭಾಷೆಗಳು ಪರಸ್ಪರ ಪ್ರಭಾವಿತವಾಗುವುದು ಸಾಮಾನ್ಯ, ಒಪ್ಪೋಣ.  ಆದರೆ ಅವು ಭಾಷೆಯೊಂದನ್ನು ಎಷ್ಟೇ ಅತಿಯಾಗಿ ಪ್ರಭಾವಿಸಿದರೂ ಭಾಷೆಯ ಹಂದರವನ್ನೇ ಬದಲಿಸಿಬಿಡುವುದಿಲ್ಲ, ಅಲ್ಲವೇ?  ಈಗ, ಕನ್ನಡಿಗನಿಗೆ ತಮಿಳು ಅರ್ಥವಾಗುವುದಿಲ್ಲ, ತಮಿಳನಿಗೆ ಕನ್ನಡ ಅರ್ಥವಾಗುವುದಿಲ್ಲ, ಎರಡೂ ಬೇರೆಬೇರೆಯ ಭಾಷೆಗಳು.  ಆದರೆ ನೀವು ಕಾಲದಲ್ಲಿ ಹಿಂದುಹಿಂದಕ್ಕೆ ಪಯಣಿಸಿದಂತೆ ತಮಿಳು ಕನ್ನಡಗಳ ಭೇದಗಳು ಕಡಿಮೆಯಾಗುವುದನ್ನು ಗಮನಿಸಬಹುದು.  ಆದ್ದರಿಂದಲೇ ತಮಿಳು ಕನ್ನಡಗಳೆರಡೂ ಒಂದೇ ಭಾಷಾಕುಟುಂಬಕ್ಕೆ ಸೇರಿದುವೆಂದೂ, ಮೂಲಮಾತೃಕೆಯಾದ ಒಂದು ದ್ರಾವಿಡಭಾಷೆಯಿಂದ ಕವಲೊಡೆದುವೆಂದೂ ಭಾಷಾಶಾಸ್ತ್ರಜ್ಞರು ಒಪ್ಪಿದ್ದಾರಲ್ಲವೇ?  ಇದೇ ಮಾತು ಈ ಪ್ರಾಕೃತಗಳಿಗೂ ಅನ್ವಯಿಸುತ್ತವೆ.  ಹಾಗಾದರೆ, ಈ ಎಲ್ಲ ಪ್ರಾಕೃತಗಳಿಗೂ ಮೂಲಮಾತೃಕೆಯೊಂದಿದೆಯೆಂದಮೇಲೆ, ಈ ಒಂದೊಂದು ಪ್ರಾಕೃತವೂ ಪ್ರಕೃತಿಯಿಂದ ಸ್ಥಳೀಯವಾಗಿಯೇ ಮಾಡಲ್ಪಟ್ಟದ್ದು ಎನ್ನುವ ವಾದ ಬಿದ್ದುಹೋಗುತ್ತದೆ ತಾನೆ?  ಹಾಗಿದ್ದರೆ ಅದಕ್ಕೆ 'ಪ್ರಾಕೃತ' (ಪ್ರಕೃತಿಯಿಂದ ಮಾಡಲ್ಪಟ್ಟದ್ದು) ಎಂದೇಕೆ ಕರೆಯುತ್ತಾರೆ?  ಈ ಪ್ರಶ್ನೆ ಏಕೆ ಬರುತ್ತಿದೆಯೆಂದರೆ, ಪ್ರಾಕೃತ = ಪ್ರಕೃತಿಯಿಂದ ಮಾಡಲ್ಪಟ್ಟದ್ದು ಎನ್ನುವ ವ್ಯಾಖ್ಯೆಯನ್ನು ನಾವು ಹಿಡಿದಿರುವುದರಿಂದ.  ಅದು ಈ ಸಂದರ್ಭಕ್ಕೆ ಹೊಂದುವಂಥದ್ದೇ ಅಲ್ಲ.  ಪ್ರಕೃತ = ಮಾಡಲ್ಪಟ್ಟ, ಇರುವ ಇತ್ಯಾದಿ; ಪ್ರಾಕೃತ = ಪ್ರಕೃತದಲ್ಲಿ ಬಳಕೆಯಲ್ಲಿರುವುದು - ಇದು ಸರಿಯಾದ ವ್ಯಾಖ್ಯಾನ.  ಸಂಸ್ಕೃತ-ಪ್ರಾಕೃತ ಈ ಜೋಡಿಯ ಸಂದರ್ಭದಲ್ಲಿ ಹೇಳುವುದಾದರೆ ('ಸಂಸ್ಕೃತ'ದ ವಿಷಯ ಆಮೇಲೆ ನೋಡೋಣ), ಪ್ರಕೃತದಲ್ಲಿ ಬಳಕೆಯಲ್ಲಿರುವ ಭಾಷಾಪ್ರಭೇದಗಳೇ ಪ್ರಾಕೃತಗಳು (ಎಂದರೆ ಇವುಗಳ ಮೂಲರೂಪ ಹೇಗೋ ಇತ್ತು, ಆದರೆ ಇವತ್ತು ಬಳಕೆಯಲ್ಲಿರುವುದು ಹೀಗೆ)

ಈ ವಿವಿಧ ಪ್ರಾಕೃತಗಳ ಪರಸ್ಪರ ಸಾಮ್ಯವಿರಲಿ, ಪ್ರಾಕೃತ-ಸಂಸ್ಕೃತದ ನಡುವಣ ಸಾಮ್ಯವನ್ನೊಮ್ಮೆ ಗಮನಿಸಿ.  ಉದಾಹರಣೆಗೆ ಈ ಕೆಳಗಿನ ಪದ್ಯವನ್ನೊಮ್ಮೆ ನೋಡೋಣ:

ಭವಭೂಇಜಲಹಿಣಿಗ್ಗಯಕವ್ವಾಮಯರಸಕಣಾ ಇವಾ ಫುರಂತಿ
ಜಸ್ಸ ವಿಸೇಸಾ ಅಜ್ಜವಿ ವಿಯಡೇಸು ಕಹಾಣಿವೇಸೇಸು||

ಇದು ವಾಕ್ಪತಿರಾಜನ "ಗಉಡವಹೋ" (ಸಂ. ಗೌಡವಧಾ) ಎಂಬ ಪ್ರಾಕೃತಕಾವ್ಯದಲ್ಲಿ ಬರುವ ಭವಭೂತಿಕವಿಯ ಪ್ರಶಂಸೆ.  "ಭವಭೂತಿಯೆಂಬ ಜಲಧಿಯನ್ನು ಕಡೆದಾಗ ಸ್ಫುರಿಸಿದ ಕಾವ್ಯಾಮೃತರಸದ ಕೆಲವು ಕಣಗಳು ನನ್ನ ಈ ಕಥಾನಿವೇಶದಲ್ಲಿ ಇಂದಿಗೂ ಪ್ರಕಟಗೊಳ್ಳುತ್ತವೆ" ಇದು ಇದರ ಸ್ಥೂಲಾರ್ಥ, ವಾಕ್ಪತಿರಾಜನು ಭವಭೂತಿಯನ್ನು ಸ್ಮರಿಸಿಕೊಳ್ಳುವ ರೀತಿ.  ನಮಗೆ ಈ ಭಾಷೆಯ ಪರಿಚಯವಿಲ್ಲದಿದ್ದರೂ, ಸಂಸ್ಕೃತದ ಅಲ್ಪಪರಿಚಯವಾದರೂ ಇದ್ದವರಿಗೆ ಈ ಪದ್ಯವನ್ನು ಓದಿದಾಗ ತೀರ ಅಪರಿಚಿತವೆಂದೇನು ಅನ್ನಿಸುವುದಿಲ್ಲ - ಪದಗಳು ವಿಚಿತ್ರವೆನಿಸಬಹುದು, ಆದರೆ ಅದರ ಲಯ, ಶೈಲಿ, ವ್ಯಾಕರಣ ಇವಾವುವೂ ಅಪರಿಚಿತವೆನಿಸುವುದಿಲ್ಲ.  ಈಗ ಮೇಲಿನ ಪದ್ಯದ ಸಂಸ್ಕೃತ ಅನುವಾದವನ್ನೇ ನೋಡಿಬಿಡೋಣ:

ಭವಭೂತಿಜಲಧಿನಿರ್ಗತಕಾವ್ಯಾಮೃತರಸಕಣಾ ಇವ ಸ್ಫುರಂತಿ
ಯಸ್ಯ ವಿಶೇಷಾ ಅದ್ಯಪಿ ವಿಕಟೇಷು ಕಥಾನಿವೇಶೇಷು||

ಎಷ್ಟು ವ್ಯತ್ಯಾಸವಿದೆ?  ಸಂಸ್ಕೃತದ ಭವಭೂತಿ ಇಲ್ಲಿ ಭವಭೂಇ ಆದ (ಕೆಲವು ಪ್ರಾಕೃತಗಳಲ್ಲಿ ಬವಬೂಯಿ), ಜಲಧಿಯು ಜಲಹಿ ಆಯಿತು (ಕೆಲವು ಪ್ರಾಕೃತಗಳಲ್ಲಿ ಜಳಹಿ), ನಿರ್ಗತವು ಣಿಗ್ಗಯವಾಯಿತು, ಅದ್ಯಪಿ > ಅಜ್ಜವಿ; ಕಥಾನಿವೇಶ > ಕಹಾಣಿವೇಸ - ಹೀಗೆ ರೂಪಗಳು ವ್ಯತ್ಯಾಸವಾದುವೇ ವಿನಾ ಉಳಿದದ್ದೆಲ್ಲವೂ ಹಾಗೇ ಇವೆಯಲ್ಲ.

ಹಾಗಿದ್ದರೆ ಸಂಸ್ಕೃತಪ್ರಾಕೃತಗಳೆರಡಕ್ಕೂ ಹೊಕ್ಕುಳಬಳ್ಳಿಯ ಸಂಬಂಧವಿದೆಯೆಂದಂತಾಯಿತಲ್ಲವೇ?  ಯಾವುದರಿಂದ ಯಾವುದು ಹುಟ್ಟಿತು?  ಪ್ರಾಕೃತ = ಪ್ರಕೃತಿಯಿಂದ ಮಾಡಲ್ಪಟ್ಟಿದ್ದು, ಸಂಸ್ಕೃತ = ಅದನ್ನು ಸಂಸ್ಕರಿಸಿದ್ದು ಎನ್ನುವ ವ್ಯಾಖ್ಯೆಯ ಆಧಾರದ ಮೇಲೆ, "ಪ್ರಾಕೃತವೇ ಮೊದಲು, ಅದರಿಂದ ಬಂದದ್ದು ಸಂಸ್ಕೃತ" ಎಂದು ಇದುವರೆಗೆ ವಾದಿಸುತ್ತಿದ್ದೆವು.  ಆದರೆ ಪ್ರಾಕೃತವೆಂಬುದರ ವ್ಯಾಖ್ಯೆ ಹಾಗಲ್ಲವೆಂಬುದನ್ನು ಮೇಲೇ ನೋಡಿದೆವಲ್ಲ - ಪ್ರಾಕೃತವೆಂದರೆ ಪ್ರಕೃತದಲ್ಲಿ ಬಳಕೆಯಲ್ಲಿರುವುದೆಂದಷ್ಟೇ ಅರ್ಥ, ಆದಿಯಿಂದಲೂ (Natural ಆಗಿ) ಹೀಗೇ ಇತ್ತಂದಲ್ಲ.  ಸರಿ, ಪ್ರಾಕೃತವೆಂಬುದರ ವ್ಯಾಖ್ಯೆ ಹೇಗಾದರೂ ಇರಲಿ, ಸಂಸ್ಕೃತವು ಪ್ರಾಕೃತದಿಂದಲೇ ಹುಟ್ಟಿಲ್ಲವೆಂದು ಹೇಗೆ ಹೇಳುತ್ತೀರಿ?  ಪ್ರಾಕೃತವೆಂದರೆ ಸದ್ಯ ಬಳಕೆಯಲ್ಲಿರುವುದು ಎಂದಿರಬಹುದು, ಆದರೆ ಸಂಸ್ಕೃತವೆಂದರೆ "ಸಂಸ್ಕರಿಸಲ್ಪಟ್ಟ ಭಾಷೆ" ಎಂಬ ಅರ್ಥವಂತೂ ಇದೆಯಲ್ಲ - ಪ್ರಾಕೃತವನ್ನು 'ಸಂಸ್ಕರಿಸಿ' ಪಡೆದ ಭಾಷೆಯೇ ಸಂಸ್ಕೃತ ಎಂದು ಇನ್ನೂ ವಾದಿಸಬಹುದು.  ಹೀಗೆ ವಾದ ಹೂಡುವಾಗ ಭಾಷೆಯ ಬೆಳವಣಿಗೆಯ ಸಹಜ ಹರಿವನ್ನು ಗಮನಸಲ್ಲಿಡಬೇಕಾಗುತ್ತದೆ.  ಈಗ ನೋಡಿ, ನಿರ್ಗತ-ಣಿಗ್ಗಯ ಇವುಗಳಲ್ಲಿ ಯಾವುದು ಕ್ಲಿಷ್ಟ, ಯಾವುದು ಸರಳ?  ಸ್ಫುರಂತಿ-ಪುರಂತಿ ಇವುಗಳ ನಡುವೆ?  ಹಾಗೆಯೇ ವಿಶೇಷಾ-ವಿಸೇಸಾ, ವಿಕಟ-ವಿಯಡ.  ಈ ಜೋಡಿಗಳಲ್ಲಿ ಎರಡನೆಯ ಪದವೇ ಉಚ್ಚಾರಣೆಗೆ ಸುಲಭವಲ್ಲವೇ?  ಸರಳವಾದ ಕನ್ನಡದ ಉದಾಹರಣೆಯನ್ನೇ ಕೊಡುವುದಾದರೆ, "ನಾನು ಹೋಗುತ್ತೇನೆ" ಎನ್ನುವುದು ಸರಳವೋ, "ನಾ ವೊಯ್ತಿನಿ" ಎನ್ನುವುದೋ?  "ನಾ ವೊಯ್ತಿನಿ" ಎನ್ನುವುದು ಸರಳ.  "ನಾನು ಹೋಗುತ್ತೇನೆ" ಎನ್ನುವುದನ್ನು ಉಚ್ಚಾರಣೆಯ ಸೌಲಭ್ಯಕ್ಕೆ ತಕ್ಕಂತೆ "ನಾ ವೊಯ್ತಿನಿ" ಎಂದು ಮಾಡಿಕೊಂಡಿತು ನಾಲಿಗೆ.  ಎಂದ ಮೇಲೆ ಮೊದಲಿದ್ದದ್ದು ಯಾವುದು?  ನಾನು ಹೋಗುತ್ತೇನೆ ಎಂಬುದೋ ನಾ ವೊಯ್ತಿನಿ ಎಂಬುದೋ?  ನಾ ವೊಯ್ತಿನಿ ಎಂಬುದೇ ಮೊದಲಿದ್ದದ್ದು, ಅದನ್ನು 'ಸಂಸ್ಕರಿಸಿ' ನಾನು ಹೋಗುತ್ತೇನೆ ಎಂಬ ಮಾತು ಕಟ್ಟಲ್ಪಟ್ಟಿತು ಎಂಬ ವಾದವು ಎಷ್ಟು ಸಹಜವೆನಿಸಬಹುದು?  ಸದ್ಯಕ್ಕೆ, ವಾದಕ್ಕಾಗಿ ಈ ವಾದವನ್ನೇ ಒಪ್ಪೋಣ, ನಾ ವೊಯ್ತಿನಿ ಎಂಬುದೇ ಮೊದಲಿದ್ದುದು, ನಾನು ಹೋಗುತ್ತೇನೆ ಎಂಬುದು ಅದರ 'ಸಂಸ್ಕರಿಸಿದ' ರೂಪ.  ಈ ವಾದದಿಂದ ಹೊರಡುವ ತೊಡಕುಗಳನ್ನು ನೋಡಿ.  "ನಾ ವೊಯ್ತಿನಿ" ಎನ್ನುವುದು ನಮ್ಮ ಮೈಸೂರು ಕಡೆ ನಿರ್ದಿಷ್ಟ ಸಮುದಾಯಗಳ ನಡುವಷ್ಟೇ ಇರುವ ಬಳಕೆ - ಇತರರು "ನಾ ಹೋಗ್ತೀನಿ", "ನಾ ಹೋಗ್ತೇನೆ" ಎಂದೂ ಹೇಳುತ್ತಾರೆ.  ಮಂಗಳೂರು/ಕುಂದಾಪುರದ ಕಡೆ "ನಾ ಹೋಗ್ತೆ/ಹೋಗ್ತ್ನೆ/ಹೋತ್ನೆ" ಎನ್ನುತ್ತಾರೆ (ಹಾಗೆಂದುಕೊಂಡಿದ್ದೇನೆ, ಆ ಕಡೆಯವರು ತಿದ್ದಬಹುದು), ಕೊಯಮತ್ತೂರಿನ ಕಡೆಯವರು "ನಾ ಹೋಪೆ" ಎನ್ನುತ್ತಾರೆ, ಧಾರವಾಡದ ಕಡೆ "ನಾ ಹೊಕ್ಕೀನಿ" ಎನ್ನುತ್ತಾರೆ (ಮತ್ತೆ, ತಪ್ಪಿದ್ದರೆ ತಿದ್ದಬಹುದು); ಕೆಲವು ಬ್ರಾಹ್ಮಣಪಂಗಡಗಳಲ್ಲಿ "ನಾ ಹೋಗ್ತೇನು" ಎಂದೂ ಹೇಳುತ್ತಿದ್ದರು (ಕೈಲಾಸಂ ಈ ರೂಪವನ್ನು ತಮ್ಮ ನಾಟಕಗಳಲ್ಲಿ ಬಳಸಿದ್ದಾರೆ ಕೂಡ) ಈಗ ವೊಯ್ತಿನಿ, ಹೋಗ್ತೀನಿ, ಹೋಗ್ತೇನೆ, ಹೋಗ್ತೇನು, ಹೋಗ್ತೆ, ಹೋಗ್ತ್ನೆ, ಹೋತ್ನೆ, ಹೋಪೆ, ಹೊಕ್ಕೀನಿ ಇವುಗಳಲ್ಲಿ ಯಾವುದು ಮೂಲರೂಪ, ಯಾವುದರಿಂದ ಯಾವುದು ಹುಟ್ಟಿತು, ಈ ಒಂದೊಂದು ರೂಪವೂ ಬಂದದ್ದಾದರೂ ಹೇಗೆ?  ಈ ಒಂದೊಂದು ರೂಪವೂ "ಹೋಗುತ್ತೇನೆ" ಎಂದೇ ಪರಿವರ್ತನೆಗೊಂಡದ್ದಾದರೂ ಹೇಗೆ?  ಹಾಗೆ ಪರಿವರ್ತಿಸಿದ ನಿರ್ದಿಷ್ಟ ವ್ಯಾಕರಣಸೂತ್ರವಾವುದು? (ಹೋಗುತ್ತೇನೆ ಎಂಬುದರಿಂದ ಇವು ಹುಟ್ಟಿದುವು ಎನ್ನುವುದಕ್ಕಾದರೆ ಒಂದೇ ವಿವರಣೆ - ನಾಲಿಗೆಯ ಸೌಲಭ್ಯ), ಆದರೆ ಅವುಗಳಿಂದಲೇ ಇದು ಹುಟ್ಟಿತು ಎನ್ನುವುದಕ್ಕಾದರೆ ನಾಲಿಗೆಯ ಸೌಲಭ್ಯ ಎಂಬ ವಿವರಣೆ ಸಲ್ಲುವುದಿಲ್ಲ, ಹೋಗುತ್ತೇನೆ ಎಂಬುದು ಇವೆಲ್ಲಕ್ಕಿಂತ ಕ್ಲಿಷ್ಟರೂಪ, ಮತ್ತು ನಾಲಿಗೆ ಯಾವಾಗಲೂ ಕ್ಲಿಷ್ಟತೆಯಿಂದ ಸರಳತೆಗೆ ಜಾರುವುದೇ ಹೊರತು, ವಿರುದ್ಧದಿಕ್ಕಿನಲ್ಲಲ್ಲ.  ಅಲ್ಲದೇ ವೊಯ್ತಿನಿ, ಹೋಗ್ತೆ, ಹೋಗ್ತ್ನೆ ಮುಂತಾದುವುಗಳಿಂದ ಹೋಗುತ್ತೇನೆ ಎನ್ನುವ ರೂಪ ಬರಬೇಕಾದರೆ, ಅಲ್ಲಿ ಮುಖ್ಯವಾಗುವುದು ನಾಲಿಗೆಯ ಸೌಲಭ್ಯವಲ್ಲ, ವ್ಯಾಕರಣಬದ್ಧತೆ (ಗ್ರಾಂಥಿಕಭಾಷೆಯಲ್ಲಿ ವ್ಯಾಕರಣವೇ ಮುಖ್ಯವಷ್ಟೇ?).  ಹಾಗಿದ್ದರೆ ಈ ಒಂದೊಂದು ರೂಪದಿಂದಲೂ "ಹೋಗುತ್ತೇನೆ" ಎನ್ನುವ ರೂಪವೇ ಸಿದ್ಧಿಸಬೇಕಾದರೆ ಅಲ್ಲಿ ಬಳಸಿದ ವ್ಯಾಕರಣ ಯಾವುದು?  "ಹೋಗುತ್ತೇನೆ" ಎನ್ನುವುದಕ್ಕಾದರೆ ವ್ಯಾಕರಣದ ವಿವರಣೆಯಿದೆ - ಹೋಗು ಎನ್ನುವ ಧಾತುವಿಗೆ "ತ್ತೇನೆ" ಎನ್ನುವ ಕಾಲಸೂಚಕಪ್ರತ್ಯಯ ಸೇರಿ ಹೋಗುತ್ತೇನೆ ಎಂದಾಯಿತು.  ಹೀಗೇ ಈ ಬಳಕೆಯ ರೂಪಗಳನ್ನು ವಿವರಿಸಲಿಕ್ಕಾಗುತ್ತದೆಯೇ?  ಇದರಿಂದ ಏನು ಸಾಬೀತಾಯಿತು?  ಹೋಗುತ್ತೇನೆ ಎಂಬುದೇ ಮೂಲರೂಪ, ಅದರಿಂದ ಹುಟ್ಟಿದ್ದು ವೊಯ್ತಿನಿ, ಹೋಗ್ತೆ, ಹೋಗ್ತ್ನೆ ಇತ್ಯಾದಿ ರೂಪಗಳು, ಅಲ್ಲವೇ? ಒಂದು ಮೂಲದಿಂದ ಹಲವು ರೂಪಗಳು ಹೊಮ್ಮುವುದು ಸಹಜ, ಆದರೆ ಒಂದೇ ರೂಪಕ್ಕೆ ಹಲವು ಮೂಲಗಳಿರಲಾರವಷ್ಟೇ?  ಜೊತೆಗೆ ನೋಡಿ, ಒಯ್ತಿನಿ ಎನ್ನುವುದು ಹೋಗುತ್ತೇನೆ ಎಂಬುದರ ಬಳಕೆಯ ರೂಪವೂ ಆಗಬಹುದು, ಒಯ್ಯುತ್ತೇನೆ ಎನ್ನುವುದರ ಬಳಕೆಯ ರೂಪವೂ ಆಗಬಹುದು. ಹೀಗಾಗಿ ಒಯ್ತೀನಿ ಎನ್ನುವುದರ ವ್ಯುತ್ಪತ್ತಿಯನ್ನು ಅದೇ ರೂಪದಲ್ಲಿ ವಿವರಿಸುವುದು ಸಾಧ್ಯವೇ ಇಲ್ಲ; ಹೋಗುತ್ತೇನೆ ಮತ್ತು ಒಯ್ಯುತ್ತೇನೆ ಎಂಬ ರೂಪಗಳಲ್ಲೇ ವ್ಯುತ್ಪತ್ತಿಯನ್ನು ವಿವರಿಸಬೇಕು. ಎಂದ ಮೇಲೆ ಯಾವುದು ಮೂಲ?

ಇದೇ ತರ್ಕವನ್ನು ಜಲಧಿ-ಜಲಹಿ/ಜಳಹಿ, ನಿರ್ಗತ-ಣಿಗ್ಗಯ, ಸ್ಫುರಂತಿ-ಪುರಂತಿ, ವಿಶೇಷ-ವಿಸೇಸ, ವಿಕಟ-ವಿಯಡ ಇವುಗಳಿಗೆ ಅನ್ವಯಿಸಿ ನೋಡಿ?  ಎರಡನೆಯ ಪದಗಳಿಂದಲೇ ಮೊದಲಿನವು ಹುಟ್ಟಿದುವೆಂದರೆ, ಅವುಗಳ ವ್ಯುತ್ಪತ್ತಿವಿವರಣೆ, ಬೇರೆಬೇರೆ ಹಲವು ರೂಪಗಳಿಂದ ಒಂದೇ ಸಂಸ್ಕೃತಪದ ಹುಟ್ಟಿದ್ದಾದರೂ ಹೇಗೆ ಮೊದಲಾದ ವಿವರಣೆಗಳು ಬೇಕಲ್ಲವೇ? ಜೋಡಿಯ ಮೊದಲ ಪದಗಳಿಗೆ ವ್ಯುತ್ಪತ್ತಿವಿವರಣೆಯಿದೆ.  ಎರಡನೆಯ ಪದಗಳಿಗೆ ಅಂತಹ ವಿವರಣೆಯಿಲ್ಲ.  ಅವು ಮೊದಲ ಪದಗಳಿಂದ ನಾಲಿಗೆಯ ಸೌಲಭ್ಯಕ್ಕನುಗುಣವಾಗಿ ಹುಟ್ಟಿದವು ಎಂಬುದು ಸ್ಪಷ್ಟವಾಯಿತಲ್ಲವೇ?  ತತ್ಸಮದಿಂದ ಹುಟ್ಟಿದ್ದು ತದ್ಭವವೇ ಹೊರತು ತದ್ಭವದಿಂದಲೇ ತತ್ಸಮವು ಹುಟ್ಟುವುದಿಲ್ಲವಷ್ಟೇ?

ಹಾಗಿದ್ದರೆ ಈಗ ಬಹುಮುಖ್ಯವಾದ ಪ್ರಶ್ನೆಯೇಳುತ್ತದೆ - 'ಸಂಸ್ಕೃತ' ಎಂಬುದು ಸಂಸ್ಕರಿಸಿದ ಭಾಷೆ ತಾನೆ?  "ಪ್ರಾಕೃತದಿಂದ ಸಂಸ್ಕರಿಸಿದ ಭಾಷೆ ಸಂಸ್ಕೃತ" ಎನ್ನುವುದು ಸ್ಪಷ್ಟವಾಗಿಯೇ ಇದೆಯಲ್ಲ.  ಇದಕ್ಕೇನು ಸಮಾಧಾನ?  ಸಮಾಧಾನವಿದೆ.  ಪ್ರಾಕೃತ ಎಂದರೆ ಪ್ರಕೃತಿಜನ್ಯವಾದ ಭಾಷೆಯಲ್ಲ, ಪ್ರಕೃತ ಬಳಕೆಯಲ್ಲಿರುವ ಭಾಷೆ ಎಂಬುದನ್ನು ಮೇಲೆ ನೋಡಿದೆವು.  ಪ್ರಾಕೃತದಿಂದ 'ಸಂಸ್ಕೃತ'ವು ಹುಟ್ಟಲು ಸಾಧ್ಯವಿಲ್ಲ ಎಂಬುದನ್ನೂ ಮೇಲೆಯೇ ನೋಡಿದೆವು.  ಹಾಗಿದ್ದರೆ ಸಂಸ್ಕೃತವು ಹುಟ್ಟಿದ್ದೆಲ್ಲಿಂದ?  ಅದು 'ಸಂಸ್ಕರಿಸಿದ ಭಾಷೆ' ಅಲ್ಲವೇ?  ಖಂಡಿತಾ ಹೌದು, ಆದರೆ ಪ್ರಾಕೃತದಿಂದ 'ಸಂಸ್ಕರಿಸಿ' ಪಡೆದದ್ದಲ್ಲ.  ಸಂಸ್ಕೃತದ ಮೂಲಮಾತೃಕೆ ವೇದಭಾಷೆ (ಗುರುತಿಸುವ ಸೌಲಭ್ಯಕ್ಕಾಗಿ ವೇದಭಾಷೆಯನ್ನು ವೈದಿಕಸಂಸ್ಕೃತವೆಂದೂ, ಅದಲ್ಲದ, ಪಾಣಿನಿಪ್ರಣೀತವಾದ ವ್ಯಾವಹಾರಿಕಸಂಸ್ಕೃತವನ್ನು ಲೌಕಿಕ/ಪಾಣಿನೀಯಸಂಸ್ಕೃತವೆಂದೂ ಕರೆಯುತ್ತೇವೆ, ಆದರೆ ವೇದಭಾಷೆಗೆ ಮೂಲತಃ 'ಸಂಸ್ಕೃತ'ವೆಂಬ ಹೆಸರಿದ್ದಿಲ್ಲ, 'ಸಂಸ್ಕೃತ'ವೆಂಬುದೇನಿದ್ದರೂ ವೇದಭಾಷೆಯನ್ನು ಪರಿಷ್ಕರಿಸಿ, 'ಸಂಸ್ಕರಿಸಿ' ಪಡೆದ ಪಾಣಿನೀಯ ಸಂಸ್ಕೃತ).  ಈ ವೇದಭಾಷೆ ಜನಬಳಕೆಗೆ ಹತ್ತಿರವಾದದ್ದು.  ಮೇಲೆ ಹಲವು ಪ್ರಾಕೃತಗಳನ್ನು ವಿವರಿಸುತ್ತಾ, ಅವಕ್ಕೆ ಮೂಲಮಾತೃಕೆಯೊಂದಿರಬೇಕೆಂದಿದ್ದೆನಲ್ಲವೇ?  ಆ ಮೂಲಮಾತೃಕೆಯೇ ವೇದಭಾಷೆ.  ವೇದಭಾಷೆಯೇ ಬಳಕೆಯಲ್ಲಿ ಸವೆಸವೆದು ವಿವಿಧ ಸ್ಥಳೀಯ ಪ್ರಾಕೃತಗಳಾಗಿ ರೂಪುಗೊಂಡದ್ದು.  ಇದು ಯಾವಾಗ ಸವೆಯಲು ಶುರುವಾಯಿತು, ಯಾವಯಾವಾಗ ಎಲ್ಲೆಲ್ಲಿ ಎಷ್ಟೆಷ್ಟು ಸವೆಯಿತು ಎಂಬುದನ್ನು ಹೇಳಬರುವುದಿಲ್ಲವಷ್ಟೇ?  ಜೊತೆಗೆ ಈ ಪ್ರಾಕೃತಗಳ ಮೂಲಮಾತೃಕೆಯಾದ ವೇದಭಾಷೆಯೇ ಜನಬಳಕೆಗೆ ಹತ್ತಿರವಿದ್ದುದರಿಂದ ಅದರಲ್ಲೂ ಕ್ರಮೇಣ ಸಹಜವಾಗಿಯೇ ಬಳಕೆಯಿಂದುಂಟಾಗುವ ಶೈಥಿಲ್ಯಗಳೂ, 'ಅಪ'ರೂಪಗಳೂ, ನಿರ್ದಿಷ್ಟ ನಿಯಮಗಳಿಗೆ ಕಟ್ಟುಬೀಳದ ಹೊಸಹೊಸ ಪ್ರಯೋಗಗಳೂ ಕಾಲಕ್ರಮದಲ್ಲಿ ಹೇರಳವಾಗಿ ಸೇರಿ, ವೇದಭಾಷೆಯಿಂದಾಚೆಗೂ ಹೊರವಾಗಿ ಬೆಳೆದ ಅಗಾಧವಾದ ವ್ಯಾವಹಾರಿಕಭಾಷೆಯೊಂದು ಪಾಣಿನಿಯ ಕಾಲಕ್ಕಾಗಲೇ ಅಸ್ತಿತ್ವದಲ್ಲಿತ್ತು; ಜೊತೆಗೆ ಇದನ್ನು ವಿವರಿಸುವ ವಿವಿಧ ವ್ಯಾಕರಣಗಳೂ - ಈ ಇವೆಲ್ಲವನ್ನೂ ಸೂತ್ರೀಕರಿಸಿ ನಿಯಮಗಳ ಮೂಲಕ ವಿವರಿಸಿದ್ದು, ನಿಯಮಕ್ಕೆ ಅಳವಡಿಸುವಲ್ಲಿನ ತೊಡಕುಗಳನ್ನು ನಿವಾರಿಸಿ 'ಸಂಸ್ಕರಿಸಿ'ದ್ದು, ತನ್ನ ಕಾಲದಲ್ಲಿ ಬಳಕೆಯಲ್ಲಿದ್ದ ಭಾಷೆಯ ಹಲವು ನಿಯಮಬದ್ಧವಲ್ಲದ ರೂಪಗಳಿಗೆ 'ಸರಿ'ಯಾದ ರೂಪಗಳನ್ನು ಹೇಳಿದ್ದು ಪಾಣಿನಿ.  ಪಾಣಿನಿಪ್ರಣೀತವಾದ, ಪರಿಶೋಧಿಸಲ್ಪಟ್ಟ ಈ ಭಾಷೆಯೇ 'ಸಂಸ್ಕೃತ'ವೆಂದು ಬಳಕೆಗೆ ಬಂತು (ಪಾಣಿನಿಗೂ ಮೊದಲೇ ಹಲವರು ವೈಯಾಕರಣರು ವ್ಯಾಕರಣವನ್ನು ರಚಿಸಿದ್ದಾರಾದರೂ ಪಾಣಿನೀಯವ್ಯಾಕರಣವು ಗಟ್ಟಿಯಾಗಿ ನೆಲೆನಿಂತಿತು)

ಈ ಚರ್ಚೆಯಿಂದ ಸ್ಪಷ್ಟವಾಗಿ ತಿಳಿದುಬರುವ ಅಂಶವೆಂದರೆ, ಹಲವು ಪ್ರಭೇದಗಳನ್ನು ಹೊಂದಿದ ಪ್ರಾಕೃತವೂ, ನಾವಿವತ್ತು ಸಂಸ್ಕೃತವೆಂದು ಕರೆಯುವ ಪಾಣಿನೀಯಸಂಸ್ಕೃತವೂ ವೇದಭಾಷೆಯೆಂಬ ಒಂದೇ ಮೂಲಮಾತೃಕೆಯಿಂದ ಹುಟ್ಟಿದ್ದು.  ಪ್ರಾಕೃತಗಳು ವೇದಭಾಷೆಯ ಆಡುನುಡಿಗಳಾದರೆ, 'ಸಂಸ್ಕೃತ'ವು ವೇದಭಾಷೆಯ ಪರಿಷ್ಕೃತರೂಪ.

ಮುಂದೆ ಈ ಪ್ರಾಕೃತಗಳೇ ಹಲವು ಬೇರೆಬೇರೆ ಭಾಷೆಗಳ ಪ್ರಭಾವಕ್ಕೊಳಗಾಗಿ ಹಲವಾರು ಭಾಷೆಗಳು ಹುಟ್ಟಿಕೊಂಡುವೆಂಬುದು ಬೇರೆಯೇ ವಿಷಯ; ಸದ್ಯಕ್ಕೆ ಇಷ್ಟು ಸಾಕೆನಿಸುತ್ತದೆ.

6 comments:

sunaath said...

ಪ್ರಿಯ ಮಂಜುನಾಥರೆ, ತುಂಬ ವಿಚಾರಪ್ರಚೋದಕ ಲೇಖನವನ್ನು ಬರೆದಿದ್ದೀರಿ. ತಮ್ಮ ಸೂಚನೆಯಂತೆ ತಮ್ಮ ಲೇಖನವನ್ನು ಒಮ್ಮೆಯಲ್ಲದೆ, ಮತ್ತೆರಡು ಸಲ ಓದಿದೆ. ನಾನು ನನ್ನ ಲೇಖನದಲ್ಲಿ ಎತ್ತಿದ ಸಂದೇಹಗಳು ಮತ್ತಿಷ್ಟು ಗಾಢವಾದವೇ ಹೊರತು ತಿಳಿಯಾಗಲಿಲ್ಲ.

ತಾವು ಬರೆದಿರುವ ಒಂದು ಅಂಶವು ನನಗೆ ಸ್ಪಷ್ಟವಾಗುತ್ತಿಲ್ಲ. ತಾವು ಹೀಗೆ ಬರೆದಿರುವಿರಿ:
“ ಹೀಗೆಂದುಬಿಟ್ಟರೆ ಪ್ರಪಂಚದ ಎಲ್ಲ ಮೂಲಭಾಷೆಗಳೂ ಪ್ರಾಕೃತಗಳೇ; ಅವುಗಳನ್ನು ಹಿಡಿದು ಸಂಸ್ಕರಿಸಿ ವ್ಯಾಕರಣದ ಚೌಕಟ್ಟಿಗಳವಡಿಸಿಬಿಟ್ಟರೆ ಅಂತಹ ಎಲ್ಲ ಭಾಷೆಗಳೂ ಸಂಸ್ಕೃತವೇ; ಆ ದೃಷ್ಟಿಯಿಂದ ನಮ್ಮ ಕೊಳ್ಳೇಗಾಲದ ಕನ್ನಡ, ಕುಂದಾಪ್ರಕನ್ನಡ, ಹವಿಗನ್ನಡ ಇವೆಲ್ಲವೂ ಪ್ರಾಕೃತಗಳೆಂದೂ, ಅವುಗಳ ಆಧಾರದ ಮೇಲೇ ರೂಪಿತವಾದ ಮೈಸೂರು, ಮಂಗಳೂರು, ಧಾರವಾಡ ಕನ್ನಡಗಳು ಅರೆಸಂಸ್ಕೃತವೆಂದೂ, ಅವುಗಳನ್ನು ಹಿಡಿದು ವ್ಯಾಕರಣಬಂಧಕ್ಕೊಳಪಡಿಸಿದ ಗ್ರಾಂಥಿಕ ಕನ್ನಡವೇ ಸಂಸ್ಕೃತವೆಂದೂ ಕರೆಯಬೇಕಾಗುತ್ತದೆ. ಆದರೆ ವಸ್ತುತಃ, ಕನ್ನಡವು ಸಂಸ್ಕೃತವಲ್ಲ, ಅಲ್ಲವೇ? ಎರಡೂ ಬೇರೆಬೇರೆ ಭಾಷೆಗಳು! ”

ಮೇಲಿನ ಪರಿಚ್ಛೇದದಲ್ಲಿ ನಿಮ್ಮ ಮೊದಲ ವಾಕ್ಯಕ್ಕೆ ನಾನು ಹೃತ್ಪೂರ್ವಕವಾಗಿ ಒಪ್ಪುತ್ತೇನೆ. ಅಂದರೆ ಪ್ರಪಂಚದ ಎಲ್ಲ ಮೂಲಭಾಷೆಗಳೂ ಪ್ರಾಕೃತಗಳೇ. ನಾನು ಮೊದಲಿನಿಂದಲೇ ಅದನ್ನೇ ಹೇಳುತ್ತಿದ್ದೇನೆ. ಎರಡನೆಯದಾಗಿ ಗ್ರಾಂಥಿಕ ಕನ್ನಡಕ್ಕೆ ಸಂಸ್ಕೃತ ಎಂದು ನೀವು ಸರಿಯಾಗಿಯೇ ಕರೆದಿದ್ದೀರಿ. ಅದನ್ನು ಸಂಸ್ಕರಿಸಲ್ಪಟ್ಟ (refined, processed) ಎನ್ನುವ ಅರ್ಥದಲ್ಲಿ ನೀವು ಹೇಳುತ್ತಿದ್ದೀರೆಂದು ನಾನು ಗ್ರಹಿಸುತ್ತ ಓದುತ್ತಲಿದ್ದೇನೆ. ನೀವೀಗ ಮುಂದಿನ ವಾಕ್ಯದಲ್ಲಿ ಕನ್ನಡ ಹಾಗು ಸಂಸ್ಕೃತ ಎರಡೂ ಬೇರೆ ಬೇರೆ ಭಾಷೆಗಳು ಎಂದು ಹೇಳುವಾಗ, ಯಾವ ಅರ್ಥದಲ್ಲಿ ಹೇಳುತ್ತಿದ್ದೀರಿ? ‘ಸಂಸ್ಕೃತ’ವು ಒಂದು ಭಾಷೆ ಎನ್ನುವ ಅರ್ಥದಲ್ಲಿ ನೀವು ಹೇಳುವುದಾದರೆ, ಕನ್ನಡವು ಖಂಡಿತವಾಗಿಯೂ ‘ಸಂಸ್ಕೃತ’ ಎಂದು ಕರೆಯಲ್ಪಡುತ್ತಿರುವ ಆರ್ಯಭಾಷೆ ಅಲ್ಲ. ಆದರೆ ವ್ಯಾಕರಣ-ಪರಿಷ್ಕೃತ ಎನ್ನುವ ಅರ್ಥದಲ್ಲಿ ಹೇಳುವುದಾದರೆ, ಕನ್ನಡವು ಖಂಡಿತವಾಗಿಯೂ ಸಂಸ್ಕೃತಭಾಷೆ ಹೌದು! ಕನ್ನಡದ ವಿವಿಧ ಪ್ರಾದೇಶಿಕ ಭೇದಗಳು ಆಯಾ ಪ್ರದೇಶದ ಪ್ರಾಕೃತಗಳು!

ನಿಮ್ಮ ಮತ್ತೊಂದು ತರ್ಕ ಹೀಗಿದೆ:
“………ಪ್ರಾಕೃತ ಪ್ರಕೃತಿಯಿಂದ ಮಾಡಲ್ಪಟ್ಟದ್ದು ಎಂಬ ವ್ಯಾಖ್ಯಾನವನ್ನಿಟ್ಟುಕೊಂಡರೆ ಇನ್ನೆಷ್ಟು ಗಲಿಬಿಲಿಗಳುಂಟಾಗುತ್ತವೆ, ನೋಡೋಣ.”

ಇಲ್ಲಿ ಗಲಿಬಿಲಿಗಳು ಯಾರಿಗುಂಟಾಗುತ್ತವೆ? ಯಾಕೆ ಆಗಬೇಕು? ಆಗಬಾರದು; ಯಾಕೆಂದರೆ ಪ್ರಾಕೃತವು ಪ್ರಕೃತಿಸಹಜವಾದದ್ದು ಎನ್ನುವ ಅರ್ಥವಿದ್ದಾಗ ಮಾತ್ರ, ‘ಸಂಸ್ಕೃತ’ಕ್ಕೆ ಒಂದು ಅರ್ಥ ಸಿದ್ಧವಾಗುತ್ತದೆ. ನೀವು ಇಲ್ಲಿ ಬೇರೊಂದು ಅರ್ಥವನ್ನು ಬಳಸಲು ಹೇಳುತ್ತಿದ್ದೀರಿ:
“ಪ್ರಕೃತ = ಮಾಡಲ್ಪಟ್ಟ =ಇರುವ ಇತ್ಯಾದಿ. ಪ್ರಾಕೃತ ಇದರ ಸರಿಯಾದ ವ್ಯಾಖ್ಯಾನ = ಪ್ರಕೃತದಲ್ಲಿ ಬಳಕೆಯಲ್ಲಿರುವುದು”.

ಪ್ರಾಕೃತಕ್ಕೆ ಪ್ರಕೃತದಲ್ಲಿರುವ ಅರ್ಥಾತ್ ಸದ್ಯ ಪ್ರಚಲಿತವಿರುವ ಎನ್ನುವ ಅರ್ಥವನ್ನು ಜೋಡಿಸಬೇಕೆನ್ನುವುದು ನಿಮ್ಮ ಮಂಡನೆ. ಪ್ರಾಕೃತಕ್ಕೆ ನಾವು “ಪ್ರಕೃತದಲ್ಲಿ ಬಳಕೆಯಲ್ಲಿರುವ ಭಾಷೆ” ಎಂದುಕೊಂಡು ಹೋದರೆ, (--ಆಡುನುಡಿಯು ಯಾವಾಗಲೂ ಪ್ರಚಲಿತದಲ್ಲಿರುವ ನುಡಿಯೇ.--) ‘ಸಂಸ್ಕೃತ’ವು ಸದ್ಯದಲ್ಲಿ ಇಲ್ಲದ ಭಾಷೆ (ಮೃತಭಾಷೆ) ಎನ್ನುವ ಬೋಧೆ ಆಗುವುದಿಲ್ಲವೆ?

ನಾನು ಹೇಳಬಯಸುವುದು: ಆಡುನುಡಿಯೇ (ಅಂದರೆ ಪ್ರಾಕೃತವೇ) ಮಾನವ-ಉಲಿಯ ಮೂಲರೂಪ. ಈ ಮೂಲರೂಪವೇ ವೈಯಾಕರಣಿಗಳಿಂದ ಪರಿಷ್ಕರಿಸಲ್ಪಟ್ಟು ‘ಸಂಸ್ಕೃತ’ವಾಯಿತು.

sunaath said...

ಮುಂದುವರೆದು, ನೀವು ‘ಹೋಗುತ್ತೇನೆ’ ಎನ್ನುವ ಮೂಲರೂಪದಿಂದಲೇ ‘ಹೋಪೆ, ಹೊಯ್ತೀನಿ…’ ಮುಂತಾದ ರೂಪಗಳು ಉದ್ಭವಿಸಿದವು ಎಂದು ಹೇಳುತ್ತಿದ್ದೀರಿ. ಈ ತರ್ಕವನ್ನುಅನುಸರಿಸಿ, ಸಂಸ್ಕೃತಭಾಷೆಯೇ ಮೂಲರೂಪ ಹಾಗು ಪ್ರಾಕೃತಗಳು ಪ್ರತಿರೂಪಗಳು ಎನ್ನುವ ತರ್ಕವನ್ನು ಮುಂದಿಡುತ್ತಿದ್ದೀರಿ.

ಭಾರತದಲ್ಲಿ ಪ್ರಚಲಿತವಿರುವ ಅನೇಕ ನುಡಿಗಳು ಅನೇಕ ಸಾವಿರ ವರ್ಷಗಳಿಂದ ಪ್ರಚಲಿತವಿವೆ. ಭಾರತವು ಕಾಡುಕೊಳ್ಳಗಳಿಂದ ತುಂಬಿದ ಆ ಕಾಲದಲ್ಲಿ ಅನೇಕ ಸಮುದಾಯಗಳು ಎಲ್ಲೆಡೆಗೂ ಹರಡಿಕೊಂಡಿದ್ದವು. ಅವುಗಳ ಉಲಿಗಳು ಯಾವುದೇ ಸಂಸ್ಕರಣಕ್ಕೆ ಒಳಪಟ್ಟಿದ್ದಿಲ್ಲ. ಆದುದರಿಂದ ಅವೆಲ್ಲವುಗಳನ್ನು ‘ಪ್ರಾಕೃತ’ ಎಂದು ಕರೆಯಬೇಕೇ ಹೊರತು ‘ಸಂಸ್ಕೃತ’ ಎಂದಲ್ಲ!

ಆ ಸಮಯದಲ್ಲಿ ಕನ್ನಡದ ಪೂರ್ವರೂಪವನ್ನು ಉಲಿಯುತ್ತಿರುವ ಒಂದು ಕಾಡುಸಮುದಾಯವನ್ನು ಕಲ್ಪಿಸಿಕೊಳ್ಳೋಣ. (ನನಗೆ ಸಂಸ್ಕೃತ ಭಾಷೆ ಬರುವುದಿಲ್ಲ. ಆದುದರಿಂದ ಕನ್ನಡದ ಮೂಲರೂಪದಲ್ಲಿ ಉಲಿಯುತ್ತಿರುವ ಕಾಡುಸಮುದಾಯವನ್ನು ಕಲ್ಪಿಸಿಕೊಳ್ಳುತ್ತಿದ್ದೇನೆ.) ಉಲಿಯು ಹುಟ್ಟುವ ಸಮಯದಲ್ಲಿ ಪ್ರಚಲಿತವಿದ್ದ ಪದಗಳು ಏನಾಗಿರಬಹುದು? ಕಾಡು ಮನುಷ್ಯರು ದೂರದಲ್ಲಿರುವ ಒಂದು ಹುಲಿಯನ್ನು ನೋಡಿದರು ಎಂದಿಟ್ಟುಕೊಳ್ಳಿರಿ. ಅವರು ಪರಸ್ಪರ ಚೀರಿಕೊಳ್ಳುವುದು ಹೀಗೆ: ಕೊಲ್, ಹೊಯ್, ಓಡ್ ಇತ್ಯಾದಿ. ಈ ಎಲ್ಲ ಕ್ರಿಯಾಧಾತುಗಳು ‘ಆದೇಶಾತ್ಮಕ’ವೆನ್ನುವುದನ್ನು ಗಮನಿಸಿರಿ. ಹಾಗೆ ನೋಡಿದರೆ, ಪ್ರತಿಯೊಂದು ಭಾಷೆಯಲ್ಲಿರುವ ಕ್ರಿಯಾಧಾತುಗಳೆಲ್ಲ ಮೂಲದಲ್ಲಿ ಆದೇಶಾತ್ಮಕವಾಗಿಯೇ ಇವೆ. ಉದಾಹರಣೆಗೆ ಕನ್ನಡದಲ್ಲಿ, ಪೋ, ವಾ, ಕೂರ್, ನಿಲ್, ಮಾಳ್, ಉಣ್, ತಿನ್, ಉಡು, ಊಡು, ಹೊಡೆ, ಬಡಿ, ಒತ್, ಕೆತ್ ಇತ್ಯಾದಿ. (ಎಲ್ಲ ಭಾಷೆಯ ಕ್ರಿಯಾಧಾತುಗಳು ಸಹಸಾ ಆದೇಶಾತ್ಮಕವಾಗಿರುವುದನ್ನು ಗಮನಿಸಬಹುದು.) ಇವನ್ನೀಗ ಪಕ್ಕದಲ್ಲಿಟ್ಟು ನಮ್ಮ ಕಲ್ಪನೆಯನ್ನು ಮುಂದುವರಿಸೋಣ:

ಈ ಕಾಡುಸಮುದಾಯದ ಒಬ್ಬನು ಓಡೋಡುತ್ತ ಬಂದು, ಸಮುದಾಯದ ಹಿರಿಯನೆದುರಿಗೆ ನಿಂತು ಹೀಗೆ ಹೇಳುತ್ತಾನೆ: ‘ಕೆಂಚ ಹುಲಿ ಕೊಲ್’. ಇದರರ್ಥ ಏನು, bro? ಕೆಂಚನು ಹುಲಿಯನ್ನು ಕೊಂದನು ಎಂದೊ? ಅಥವಾ ಹುಲಿಯು ಕೆಂಚನನ್ನು ಕೊಂದಿತು ಎಂದೊ? Bro,ಇದು ವ್ಯಾಕರಣವಿಲ್ಲದ ಸಮಯದ ಆಡುನುಡಿ ಅರ್ಥಾತ್ ಇದು ಪ್ರಕೃತಿಸಹಜವಾದ ಪ್ರಾಕೃತ ಭಾಷೆ; ಭಾಷೆ ಬೆಳೆದಂತೆ, ಸಂಸ್ಕರಣಕ್ಕೆ ಒಳಪಟ್ಟಂತೆ ‘ಕೆಂಚನು ಹುಲಿಯನ್ನು ಕೊಂದನು’ ಅಥವಾ ‘ಹುಲಿಯು ಕೆಂಚನನ್ನು ಕೊಂದಿತು’ ಎಂದು ತಿಳಿಯುವಂತೆ ಹೇಳಬಹುದು. ಆಗ ಇದು ಸಂಸ್ಕರಿಸಲ್ಪಟ್ಟ ‘ಸಂಸ್ಕೃತ’ ಭಾಷೆಯಾಗುತ್ತದೆ. (ಇದನ್ನು ‘ಸಂಸ್ಕೃತ’ ಎನ್ನುವ ಆರ್ಯಭಾಷೆಯೊಡನೆ confuse ಮಾಡಿಕೊಳ್ಳದಿರಿ.)

ಹೀಗಿರುವಾಗ ‘ಕೊಂದನು’ ಎನ್ನುವ ವ್ಯಾಕರಣಶುದ್ಧ ಪದದಿಂದಲೇ ‘ಕೊಲ್’ ಎನ್ನುವ ಪದ ಬಂದಿದೆ ಎಂದು ನೀವು ಹೇಳುವುದು ಹೇಗೆ ಸರಿಯಾಗುತ್ತದೆ? ಅದರಂತೆಯೇ ‘ಹೋಗುತ್ತೇನೆ’ ಎನ್ನುವ ಪದದಿಂದಲೇ ‘ಹೋಪೆ, ಹೋಯ್ತೆ…’ ಎನ್ನುವ ಪದಗಳು ಹುಟ್ಟಿವೆ ಎಂದು ನೀವು ಹೇಳುವುದು ಹೇಗೆ ಸರಿಯಾದೀತು? ಮತ್ತೊಂದು ಮಾತೆಂದರೆ ಈ ಭಾಷಿಕ ಸಮುದಾಯಗಳು ಭಾರತದಲ್ಲಿ ವಿಶಾಲವಾಗಿ ಹರಡಿಕೊಂಡಿದ್ದವು. ಕನ್ನಡ ಭಾಷಿಕ ಸಮುದಾಯವು ಹಿಮಾಲಯದಿಂದ ಕಾವೇರಿಯವರೆಗೂ ಹರಡಿತ್ತು. (ಇದರ ಚರ್ಚೆ ಇಲ್ಲಿ ಸಾಧ್ಯವಾಗುವುದಿಲ್ಲ.)

sunaath said...

ಆದುದರಿಂದಲೇ ಕನ್ನಡದಲ್ಲಿ ಅನೇಕ ಭೇದಗಳನ್ನು ನಾವು ಕಾಣುವುದು. ಇವೆಲ್ಲವುಗಳಿಗೆ ಮೂಲರೂಪವಾಗಿದ್ದು ವ್ಯಾಕರಣವಿಲ್ಲದ ಮಾತೃಕಾ ಭಾಷೆ. ಈಗ ತಾನೇ ನೋಡಿದೆವಲ್ಲ: ‘ಕೆಂಚ ಹುಲಿ ಕೊಲ್’; ಮಾತೃಕಾ ಭಾಷೆ ಎಂದರೆ ಈ ತರಹದ್ದು. ಇದನ್ನು ಸಂಸ್ಕರಿತ ಭಾಷೆ (‘ಸಂಸ್ಕೃತ’) ಎಂದು ಕರೆಯುವುದು ಸರಿಯೆ? ‘ಹೋಗುತ್ತೇನೆ’ ಎನ್ನುವುದು ಮೂಲರೂಪ ಅಥವಾ ಮಾತೃಕಾ ಭಾಷೆ ಆಗಲು ಹೇಗೆ ಸಾಧ್ಯ?

‘ಪೋ’ ಎನ್ನುವ ಧಾತುವೇ ಮೇಲಿನ ಎಲ್ಲ ಕ್ರಿಯೆಗಳ ಮೂಲರೂಪ. ಇದರಿಂದಲೇ ‘ಆನ್ ಪೋಯೆ, ನೀನ್ ಪೋ, ಅವನ್ ಪೋಯಿ’ ಮೊದಲಾದ ರೂಪಗಳು ಕಾಲಾಂತರದಲ್ಲಿ ಸಿದ್ಧವಾಗುತ್ತವೆ. ಇದು ಭಾಷೆ ಬೆಳೆಯುವ ರೀತಿ. ಪೋ ಎನ್ನುವ ಮೂಲರೂಪವು ಪ್ರಾಕೃತ ; ಪೋಗುತ್ತೇನೆ (=ಹೋಗುತ್ತೇನೆ) ಎನ್ನುವ ರೂಪವು, ಕಾಲಕ್ರಮದಲ್ಲಿ ತನ್ನ ಅನೇಕ ರೂಪಗಳಲ್ಲಿ ಬದಲಾಗುತ್ತ, ನೂರಾರು ವರ್ಷಗಳ ಬಳಿಕ ವ್ಯಾಕರಣದ ಮೂಸೆಯಲ್ಲಿ ಹೊಕ್ಕು, ಸಂಸ್ಕರಿತ ಭಾಷೆ (‘ಸಂಸ್ಕೃತ’)ಯಾಗಿ ಹೊರಹೊಮ್ಮಿತು.

“‘ಹೋಗುತ್ತೇನೆ’ ಎನ್ನುವುದೇ ಮೂಲರೂಪ, ಇದರಿಂದಲೇ ‘ಹೋಪೆ, ಹೋಕ್ಕೇನಿ’ ಎನ್ನುವ ರೂಪಗಳು ಸಿದ್ಧವಾಗುತ್ತವೆ” ಎಂದು ನೀವು ಹೇಳುವುದು, ರಥದ ಮುಂದೆ ಕುದುರೆಯನ್ನು ಕಟ್ಟುವ ಬದಲು, ಕುದುರೆಯ ಮುಂದೆ ರಥವನ್ನು ಕಟ್ಟಿದಂತಾಗುತ್ತದೆ!

ಇಂಗ್ಲೀಶಿನ ಒಂದು ಉದಾಹರಣೆಯನ್ನು ಇಲ್ಲಿ ಕೊಟ್ಟರೆ ತಪ್ಪಾಗಲಿಕ್ಕಿಲ್ಲ: ‘ನೀನು ಹೋಗುತ್ತಿ’ ಎನ್ನಲು ಹಳೆಯ ಇಂಗ್ಲೀಶಿನಲ್ಲಿ ‘Thou goeth’ ಎನ್ನುತ್ತಾರೆ. ಹೊಸ ಇಂಗ್ಲೀಶಿನಲ್ಲಿ ‘You go’ ಮಾತ್ರ ಇದೆ. ತಾತ್ಪರ್ಯವೇನೆಂದರೆ, ಕಾಲಾಂತರದಲ್ಲಿ goeth ಪದವು ಇಂಗ್ಲೀಶಿನಿಂದ ಹೊರಟು ಹೋಗಿ, ಕೇವಲ go ಪದವು ಮಾತ್ರ ಉಳಿಯಿತು. ಇದರಂತೆಯೇ ‘ಪೋ’ ಪದದಿಂದ ಸಿದ್ಧವಾದಂತಹ ಅನೇಕ ರೂಪಗಳು ಹೊರಟು ಹೋಗಿ, ‘ಪೋ (ಹೋ)ಗುತ್ತೇನೆ’ ಎನ್ನುವ ರೂಪ ಮಾತ್ರ ಸಂಸ್ಕರಿತ ಕನ್ನಡದಲ್ಲಿ ಉಳಿಯಿತು. ಕಾಲಾಂತರದಲ್ಲಿ ರೂಪಾಂತರಗೊಂಡ ‘ಹೋಗುತ್ತೇನೆ’ ಎನ್ನುವ ಈ ಕ್ರಿಯಾಪದಕ್ಕೆ ನೀವು ಮೂಲಮಾತೃಕೆ ಎಂದು ಹೇಗೆ ಕರೆಯುತ್ತೀರಿ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ!

ನೀವು ‘ವೇದಭಾಷೆ’ಯೇ ಮೂಲಮಾತೃಕೆ ಎಂದು ಹೇಳುತ್ತೀರಿ. ಇದೇ ಸವೆಸವೆದು ಸ್ಥಳೀಯ ಪ್ರಾಕೃತಗಳಾದವು ಎಂದು ಹೇಳುತ್ತೀರಿ. ಹಾಗಿದ್ದರೆ ‘ವೇದಭಾಷೆ’ಯ ವ್ಯಾಖ್ಯಾನ ಏನು? ನಾಲ್ಕು ವೇದಗಳಲ್ಲಿ ಬಳಸಲಾದ ಭಾಷೆ ಎಂದಲ್ಲವೆ? ಇದು ಋಷಿಗಳು ಬಳಸಿದ ‘ಸಂಸ್ಕರಿತ’ ಭಾಷೆಯೇ ಹೊರತು ಜನಬಳಕೆಗೆ ಹತ್ತಿರವಿದ್ದ ಭಾಷೆ ಹೇಗೆ ಆದೀತು? ಯಾವ ಆಧಾರದ ಮೇಲೆ ನೀವು ಹೀಗೆ ಹೇಳಿದಿರಿ? ಇರಲಿ ನಿಮ್ಮ ತರ್ಕವನ್ನು ಅನುಸರಿಸಿಯೇ ನಾವು ಇಲ್ಲಿ ಒಂದು ನಿರ್ಣಯವನ್ನು ರೂಪಿಸಬಹುದು:

sunaath said...

(೧) “ವೇದಭಾಷೆಯು ಜನಬಳಕೆಗೆ ಹತ್ತಿರವಿದ್ದ ಭಾಷೆ.” ಎಂದು ನೀವು ಹೇಳಿದಿರಿ.
ಇದರರ್ಥ ಇದು ಜನಬಳಕೆಯ ಭಾಷೆ ಅಲ್ಲ ಎಂದಾಯಿತಲ್ಲವೆ? ; ಅರ್ಥಾತ್ ಇದು ಪಂಡಿತರ ಭಾಷೆ. ಅಂದರೆ ಸಂಸ್ಕರಿಸಲ್ಪಟ್ಟ ಭಾಷೆ. Of course, ಈ ಪ್ರಕ್ರಿಯೆಯು ಸಂಸ್ಕರಣೆಯ ಮೊದಲ ಹಂತವಾಗಿರಬಹುದು. ಹೀಗಾಗಿ ಪಂಡಿತರು ವೇದಭಾಷೆಗೆ ‘ವೇದಸಂಸ್ಕೃತ’ ಎನ್ನುವ ಹೆಸರನ್ನು ಕೊಟ್ಟಿದ್ದಾರೆ. ಇದರ ಮೂಲಕ ಇದು ಪಾಮರರಿಗೆ ತಿಳಿಯುವ ಭಾಷೆ ಅಲ್ಲ ಎಂದು ಎಚ್ಚರಿಸುತ್ತ ಇದ್ದಾರೆ!

(೨) ವೇದಭಾಷೆಯೇ ಮೂಲಮಾತೃಕಾ ಎಂದು ನೀವು ಹೇಳಿದಿರಿ. ವೇದಭಾಷೆಯು ಸಾಕಷ್ಟು ಗಂಭೀರವಾದ, ಆಧ್ಯಾತ್ಮಿಕ ಭಾಷೆಯಾಗಿರುವದರಿಂದ, ಇದು ‘ಸಂಸ್ಕರಿತ’ ಭಾಷೆ. ಅಂದರೆ ಜನಬಳಕೆಯ ಭಾಷೆ ಅಲ್ಲ. ಹಾಗಿದ್ದರೆ ಇದಕ್ಕೂ ಮೊದಲು ಒಂದು ಆರ್ಯರ ಉಲಿ ಇದ್ದಿತು ಎಂದು ಊಹಿಸುವದು ವಾಸ್ತವಕ್ಕೆ ಹತ್ತಿರವಾಗುತ್ತದೆಯಲ್ಲವೆ? ಉದಾಹರಣೆಗೆ ‘ಸಂಸ್ಕೃತ’ದಲ್ಲಿ ‘ವಾಂತಿ’ ಮಾಡುವುದಕ್ಕೆ ‘ವಮ’ ಎನ್ನುವ ಧಾತುವನ್ನು ಬಳಸುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ‘ವೊಮಿರೆ’ ಎನ್ನುವ ಪದವನ್ನು ಬಳಸಲಾಗುತ್ತದೆ. ಆದುದರಿಂದ ವೇದಭಾಷೆಗೂ ಮೊದಲೇ ಒಂದು ಅ-ಸಂಸ್ಕರಿತ ಆಡುನುಡಿ ಬಳಕೆಯಲ್ಲಿತ್ತು (ಇಂಡೋ-ಯುರೋಪಿಯನ್ ಮೂಲಭಾಷೆಯಾಗಿರಬಹುದು). ಈ ಆಡುಭಾಷೆಯ ಸಂಸ್ಕರಿತ ರೂಪವೇ ವೇದಭಾಷೆ. ‘ಅ-ಸಂಸ್ಕರಿತ’ ಆಡುನುಡಿಯೇ ಜನಬಳಕೆಯ ‘ಆರ್ಯಭಾಷೆ.’ ಈ ಆರ್ಯಭಾಷೆಯೇ ಪ್ರಾದೇಶಿಕ ಭಿನ್ನತೆಗಳಿಂದ ಉತ್ತರಭಾರತದಲ್ಲಿ (ಮಾತ್ರ) ಹಲವು ಬಗೆಯ ಪ್ರಾಕೃತರೂಪಗಳನ್ನು ಪಡೆಯಿತು. ಉದಾಹರಣೆಗೆ, ಹಿಂದೀಯಲ್ಲಿ ‘ಕ್ಯಾ’ ಅಂದರೆ, ಮರಾಠಿಯಲ್ಲಿ ‘ಕಾಯ್’ ಎನ್ನುತ್ತಾರೆ. ದ್ರಾವಿಡ ಭಾಷೆಗಳು ಆರ್ಯಭಾಷೆಗೆ ಸಂಬಂಧಿಸಿದ ಪ್ರಾಕೃತ ಭಾಷೆಗಳಲ್ಲ. ತಮ್ಮ ದೊಡ್ಡಸ್ತಿಕೆಗಾಗಿ ಸಂಸ್ಕೃತಪಂಡಿತರು ಭಾರತದಲ್ಲಿ ಇರುವ ಆಡುನುಡಿಗಳೆಲ್ಲವೂ ಸಂಸ್ಕೃತದಿಂದ ಹುಟ್ಟಿದಂತಹವು ಎನ್ನುವ claim ಮಾಡುತ್ತಾರೆ ಹಾಗು ದ್ರಾವಿಡಭಾಷೆಗಳಿಗೂ ಸಹ ಪ್ರಾಕೃತ ಭಾಷೆಗಳು ಎನ್ನುವ ಹಣೆಬರಹವನ್ನು ಹಚ್ಚಿದ್ದಾರೆ. ದ್ರಾವಿಡ ಭಾಷೆಗಳಲ್ಲಿಯೂ ಸಹ ಕಾಲಾಂತರದಲ್ಲಿ ಅನೇಕ ರೂಪಾಂತರಗಳಾಗಿವೆ. ಉದಾಹರಣೆಗೆ ತಮಿಳಿನಲ್ಲಿ ‘ವಾ’ ಎನ್ನುವುದು ಕನ್ನಡದಲ್ಲಿ ‘ಬಾ’ ಎಂದಾಗಿದೆ. ಇವು ಭಿನ್ನ ರೂಪ ಪಡೆದ ಆಡುನುಡಿ (ದ್ರಾವಿಡಪ್ರಾಕೃತ)ಗಳಷ್ಟೇ. ಇವನ್ನು ನಾನು ದ್ರಾವಿಡಪ್ರಾಕೃತಗಳೆಂದು ಕರೆಯುವ ಸಾಹಸ ಮಾಡುತ್ತೇನೆ. ಈ ಸಾಹಸದಲ್ಲಿ ಲೋಪದೋಷಗಳಿದ್ದರೆ, ಪ್ರಾಜ್ಞರು ದಯವಿಟ್ಟು ಸರಿಪಡಿಸಲು ಸೂಚಿಸಲಿ.

sunaath said...

ಇದರಂತೆಯೇ ಉತ್ತರ ಭಾರತದ ಭಾಷೆಗಳು. ಇವು ಪ್ರಾದೇಶಿಕ ಭಿನ್ನತೆಯಿಂದಾಗಿ ಪಂಜಾಬಿ, ಬಂಗಾಲಿ ಇತ್ಯಾದಿ ರೂಪಗಳನ್ನು ಪಡೆದವು. ಇವೆಲ್ಲವುಗಳ ಮೂಲರೂಪವು ಜನಪದದಲ್ಲಿ ಬಳಕೆಯಲ್ಲಿದ್ದ ಆರ್ಯಭಾಷೆ. ಇದು ಖಂಡಿತವಾಗಿಯೂ ಸಂಸ್ಕರಣೆಗೊಂಡ ‘ಸಂಸ್ಕೃತ’ವಲ್ಲ. ಏಕೆಂದರೆ ‘ಸಂಸ್ಕರಿತ’ ವ್ಯಾಕರಣಶುದ್ಧವಾದ, ‘ಸಂಸ್ಕೃತ’ ಭಾಷೆಯು ಕೆಲವೇ ಪಂಡಿತರ ನಡುವಿನ ಚರ್ಚೆಗಾಗಿ ಬಳಕೆಯಲ್ಲಿತ್ತು. ಈ ಪಂಡಿತರು ಮನೆಗೆ ಹೋದ ಮೇಲೆ ವ್ಯಾಕರಣವನ್ನು ಮೂಲೆಗೆ ಬಿಸಾಕಿ ತಮ್ಮ ಹೆಂಡತಿಯ ಜೊತೆಗೆ ‘ಪ್ರಾಕೃತ’ದಲ್ಲಿಯೇ ಮಾತನಾಡುತ್ತಿದ್ದರು. ಉದಾಹರಣೆಗೆ, ನಮ್ಮಿಬ್ಬರನ್ನೇ (ಕೊಳ್ಳೇಗಾಲರು ಹಾಗು ನಾನು) ತೆಗೆದುಕೊಳ್ಳೋಣ: ಇಷ್ಟೆಲ್ಲ ಚರ್ಚೆಯನ್ನು ಗ್ರಾಂಥಿಕ ಕನ್ನಡದಲ್ಲಿ ಮಾಡಿದ ನಾವು, ಇದೀಗ ನಮ್ಮ ಹೆಂಡಂದರಿಗೆ, ‘ಒಂದ್ ಕಪ್ ಚಾ ಮಾಡ್ತೀಯಾ?’ ಎಂದು instinctual ಭಾಷೆಯಲ್ಲಿ ಕೇಳುತ್ತೇವೆಯೆ ಹೊರತು, ‘ಸಂಸ್ಕರಿತ’ ಕನ್ನಡದಲ್ಲಿ ‘ಒಂದು ಕಪ್ಪು ಚಹವನ್ನು ಮಾಡುತ್ತೀಯಾ?’ ಎಂದು ಕೇಳುವುದಿಲ್ಲ.

‘ಸಂಸ್ಕರಿತ’ ಇದು ಸಾಧ್ಯವಾಗುವುದೇ, ಶುದ್ಧ ರೂಪ ಪಡೆಯುವ ಉದ್ದೇಶದಿಂದ. ನೋಡಿ, ಬಂಗಾರದ ಅದಿರನ್ನು ಬೆಂಕಿಯಲ್ಲಿ ಸುಟ್ಟು, ಅನೇಕ ಪ್ರಕ್ರಿಯೆಗಳಿಗೆ ಒಳಪಡಿಸಿದ ಮೇಲಷ್ಟೇ ಅದು ಶುದ್ಧ ಬಂಗಾರವಾಗುವುದು. ‘ಪ್ರಾಕೃತ’ವೆಂದರೆ ಬಂಗಾರದ ಅದಿರು ಇದ್ದಂತೆ. ಅದನ್ನು ಶುದ್ಧೀಕರಿಸಿದ ಬಳಿಕ (ಅಂದರೆ ವ್ಯಾಕರಣಪ್ರಯೋಗಗಳಿಗೆ ಒಳಪಡಿಸಿದ ನಂತರ) ಅದು ಶುದ್ಧ ಬಂಗಾರವಾಗುವುದು (ಅಂದರೆ ‘ಸಂಸ್ಕೃತ’ವಾಗುವುದು.) ಇದರ ಉಲ್ಟಾ ಪ್ರಕ್ರಿಯೆಯನ್ನು ಊಹಿಸುವುದೂ ಸಾಧ್ಯವಿಲ್ಲ ಅಂದರೆ ಶುದ್ಧಬಂಗಾರದಿಂದ (‘ಸಂಸ್ಕೃತ’ದಿಂದ) ಬಂಗಾರದ ಅದಿರನ್ನು (‘ಪ್ರಾಕೃತ’ವನ್ನು) ಪಡೆಯುವುದು ಸಾಧ್ಯವಿಲ್ಲ.

ಇನ್ನು ನಿಮ್ಮ ಮತ್ತೊಂದು ಪ್ರಶ್ನೆಯನ್ನು ಎತ್ತಿಕೊಳ್ಳೋಣ:
“ಹಾಗೆಯೇ, ಹೀಗೆ ಪ್ರಾಕೃತ ಮಾತಾಡುವವರು ಕೇವಲ ತಮ್ಮ ದಣಿಗಳ ಮುಂದಷ್ಟೇ ಅಲ್ಲ, ತಮ್ಮ ತಮ್ಮ ನಡುವೆಯೂ
ಪ್ರಾಕೃತದಲ್ಲಿಯೇ ಮಾತನಾಡುತ್ತಾರೆಂಬುದನ್ನು ಗಮನಿಸಿ. ಇದರಿಂದ ಏನು ಹೇಳಿದ ಹಾಗಾಯಿತು? ಪ್ರಾಕೃತವೆಂಬುವುದು
ದಣಿಗಳೊಡನೆ ಸಂಸ್ಕೃತ ಮಾತನಾಡಲು ಯತ್ನಿಸಿದಾಗ ಹೊಮ್ಮಿದ ಭಾಷೆಯಲ್ಲ……..ಜನಬಳಕೆಯಲ್ಲಿ ಸವೆದು ಉಂಟಾ
ದದ್ದು ಪ್ರಾಕೃತಗಳು ಎಂದೇ ಹೇಳಿದಂತಾಯಿತಲ್ಲವೆ?”

sunaath said...

ಕೊಳ್ಳೇಗಾಲರೆ, ತಾವು ಒಂದು ವಿಷಯವನ್ನು ತಪ್ಪಾಗಿ ಗ್ರಹಿಸಿದ್ದೀರಿ: ಸಂಸ್ಕೃತ ನಾಟಕಗಳಲ್ಲಿ ಪ್ರಭುಗಳು ಸಂಸ್ಕೃತದಲ್ಲಿ ಮಾತನಾಡುತ್ತಾರೆ ಎನ್ನುವುದು ಹಾಗು ಊಳಿಗದವರು ತಮ್ಮತಮ್ಮಲ್ಲಿಯೂ ಸಹ ‘ಪ್ರಾಕೃತ’ದಲ್ಲಿ ಮಾತನಾಡುತ್ತಾರೆ ಎನ್ನುವುದು ಸರಿಯೇ. ಆದರೆ ಈ ಊಳಿಗದವರು ನಾಟಕ ಮುಗಿದ ಮೇಲೆ, ತಮ್ಮ ಮನೆಗಳಿಗೆ ಹೋದಾಗ ತಮ್ಮ ಮನೆಯೊಡತಿಯೊಡನೆ ‘ಪ್ರಾಕೃತ’ದಲ್ಲಿ ಮಾತನಾಡುವುದಿಲ್ಲವಲ್ಲ! ಅಲ್ಲಿ ಅವರು ತಮಗೆ ಸಹಜವಾದ ಮಲೆಯಾಳವೋ, ತಮಿಳೋ ಮೊದಲಾದ ಭಾಷೆಯಲ್ಲಿ ಮಾತನಾಡಿಯಾರು! ಆದರೆ ಯಾವಾಗಲೂ ಪರಭಾಷಾಮೋಹಿತರಾದ ಕನ್ನಡಿಗರು ಮಾತ್ರ, ‘ಪ್ರಾಕೃತ’ದಲ್ಲಿ ಮಾತನಾಡುವುದನ್ನು ಮುಂದುವರಿಸಿಯಾರು. ಇರಲಿ, ಇನ್ನು ನಾಟಕದ ರಾಜನು ನಾಟಕದಲ್ಲಿ ಮಾತ್ರ ವ್ಯಾಕರಣಶುದ್ಧ ‘ಸಂಸ್ಕೃತ’ದಲ್ಲಿ ಮಾತನಾಡುತ್ತಾನೆಯೇ ಹೊರತು, ಮನೆಯಲ್ಲಿ ಅಲ್ಲ. ಏಕೆಂದರೆ ಅವನ ಹೆಂಡತಿಗೆ ಈ ವ್ಯಾಕರಣಶುದ್ಧ ಸಂಸ್ಕೃತ ತಿಳಿಯದು!

‘ಮೋದಕೇನ ತಾಡಯ’ ಎನ್ನುವ ವಿನೋದ ಪ್ರಸಂಗ ತಮಗೆ ಗೊತ್ತಿರಲೇ ಬೇಕು. ಗೊತ್ತಿಲ್ಲದವರಿಗಾಗಿ ಇಲ್ಲಿ ಉದ್ಧರಿಸುತ್ತೇನೆ. ಹಳೆಯ ಕಾಲದಲ್ಲಿ ಒಬ್ಬ ರಾಜನಿದ್ದ. ಆತನು ಸಂಸ್ಕೃತಭಾಷೆಯನ್ನು, ವ್ಯಾಕರಣವನ್ನು ಸರಿಯಾಗಿ ಕಲಿಯಲಿಲ್ಲ. ಒಂದು ದಿನ ತನ್ನ ರಾಣಿಯರೊಡನೆ ಆತ ಜಲಕ್ರೀಡೆಯನ್ನು ಆಡುತ್ತ, ಒಬ್ಬಳು ರಾಣಿಯ ಮುಖದ ಮೇಲೆ ನೀರನ್ನು ಎರಚಿದ. ಸಂಸ್ಕೃತಪಂಡಿತೆಯಾದ ಅವನ ರಾಣಿಯು ಅವನಿಗೆ ‘ಮೋದಕೇನ ತಾಡಯ’ ಎಂದು ಹೇಳಿದಳಂತೆ. ಅವಳು ಹೇಳಿದ್ದು : ‘ಮಾ ಉದಕೇನ ತಾಡಯ!’ (ಅಂದರೆ ‘ನೀರಿನಿಂದ ಹೊಡೆಯಬೇಡ’). ಸಂಸ್ಕೃತ ವ್ಯಾಕರಣ ತಿಳಿಯದ ಆ ರಾಜನು ತನ್ನ ರಾಣಿಗೆ ಮೊದಕಗಳಿಂದ ಹೊಡೆಯಿಸಿಕೊಳ್ಳುವ ಬಯಕೆಯಾಗಿದೆ ಎಂದು ತಿಳಿದು, ಮೋದಕಗಳನ್ನು ತರಿಸಿ, ಹೊಡೆದನಂತೆ! ಇವೆಲ್ಲದರ ತಾತ್ಪರ್ಯವೇನು? ಒಂದು ಕಾಲದಲ್ಲಿ (ಬಹುಶಃ ವೇದಪೂರ್ವ ಕಾಲದಲ್ಲಿ), ಆರ್ಯಭಾಷೆಯೂ ಸಹ ಕಾಡುಭಾಷೆಯೇ ಆಗಿತ್ತು. ವಿವಿಧ ಪ್ರದೇಶಗಳಲ್ಲಿ ಹರಡಿದ ಆರ್ಯರ ಸಮುದಾಯಗಳು ತಮತಮಗೆ ತಿಳಿದಂತೆ ಆಡುನುಡಿಗಳಲ್ಲಿ ಮಾತನಾಡುತ್ತಿದ್ದರು. ವೈಯಾಕರಣಿಗಳು ಈ ಆಡುನುಡಿಗಳನ್ನು ಪ್ರಾಕೃತ (ಪ್ರಕೃತಿಸಹಜವಾದ ಆಡುನುಡಿ ಅಥವಾ ಪ್ರಕೃತದಲ್ಲಿರುವ ಆಡುನುಡಿ) ಎಂದು ಕರೆದರು. ಈ ಎಲ್ಲ ಪ್ರಾಕೃತಗಳಿಗೆ ವ್ಯಾಕರಣದ ಚೌಕಟ್ಟನ್ನು ಹಾಕಿ ‘ಸಂಸ್ಕೃತ’ ಎಂದು ಕರೆದರು. ಅಂದ ಮೇಲೆ ಪ್ರಾಕೃತಗಳಿಂದಲೇ ಸಂಸ್ಕೃತಭಾಷೆ ಹುಟ್ಟಿತು ಎನ್ನುವುದು ಸರಿಯಾದ ತರ್ಕವಲ್ಲವೆ?

ಅಲಮ್ ವಿಸ್ತರೇಣ! Your Lordship, I rest my argument!