Monday, June 6, 2016

ಔಚಿತ್ಯಪ್ರಜ್ಞೆ

ಈ ದಿನ ಶ್ರೀ Raghavendra Hebbalalu ಅವರ ಗೋಡೆಯಲ್ಲಿ ಕಂಡ ಕ್ಷೇಮೇಂದ್ರನ ಒಂದು ಉಕ್ತಿ, ಔಚಿತ್ಯಪ್ರಜ್ಞೆಯನ್ನು ಕುರಿತದ್ದು:

कण्ठॆ मॆखलया नितम्बफलकॆ तारॆण हारॆण वा
पाणौ नूपुरबन्धनॆन चरणॆ कॆयूरपाशॆन वा
शौर्यॆण प्रणतॆ रिपौ करुणया नायान्ति कॆ हास्यताम्
औचित्यॆन विना रुचिं प्रतनुतॆ नालङ्कृतीर्नॊ गुणाः

ಕಂಠೇ ಮೇಖಲಯಾ ನಿತಂಬಫಲಕೇ ತಾರೇಣ ಹಾರೇಣ ವಾ
ಪಾಣೌ ನೂಪುರಬಂಧನೇನ ಚರಣೇ ಕೇಯೂರಪಾಶೇನ ವಾ
ಶೌರ್ಯೇಣ ಪ್ರಣತೇ ರಿಪೌ ಕರುಣಯಾ ನಾಯಾನ್ತಿ ಕೇ ಹಾಸ್ಯತಾಮ್
ಔಚಿತ್ಯೇನ ವಿನಾ ರುಚಿಂ ಪ್ರತನುತೇ ನಾಲಂಕೃತೀರ್ನೋ ಗುಣಾಃ

ಔಚಿತ್ಯಪ್ರಜ್ಞೆಯನ್ನು ಇದಕ್ಕಿಂತ ಸೊಗಸಾಗಿ ಪ್ರಸ್ತುತಪಡಿಸಲು ಸಾಧ್ಯವೇ? ನನ್ನ ಕನ್ನಡಾನುವಾದ ಇಲ್ಲಿದೆ:

ಕೊರಳೊಳ್ ಮೇಖಲೆಯಾ ನಿತಂಬಮದರೊಳ್ ರಾಜಿಪ್ಪ ಹಾರಂಗಳುಂ
ಕರಮಂ ಜಗ್ಗಿಪ ಕಾಲ ಗೆಜ್ಜೆ, ನಡೆಯಂ ಬಂಧಿಪ್ಪ ತೋಳ್ವಂದಿಗಳ್
ಶರಣೆಂದುಂ ಮಿಗೆ ಶೌರ್ಯ, ಶತ್ರುದಯೆಗಳ್ ಹಾಸ್ಯಕ್ಕೆ ಠಾವಲ್ತೆ ಸಿಂ-
ಗರದಿಂ ಮೇಣ್ ಗುಣದಿಂದಲೇಂ ಸೊಗಮೆ ತಾನೌಚಿತ್ಯಮಂ ಮೀರಿರಲ್

ಕೊರಳಿನಲ್ಲಿ ಒಡ್ಯಾಣವೂ; ನಿತಂಬದ ಮೇಲೆ ಓಲಾಡುವ ಹಾರವೂ, ಕೈಗಳನ್ನು ಜಗ್ಗುವ ಕಾಲ್ಗೆಜ್ಜೆಗಳೂ, ಕಾಲನ್ನು ಬಂಧಿಸುವ ತೋಳಬಂದಿಗಳೂ, ಶರಣಾಗತರ ಮೇಲೆ ಶೌರ್ಯವೂ, ಹೊಡೆಯಬಂದ ಶತ್ರುವಿನ ಮೇಲೆ ದಯೆಯೂ ನಗೆಯುಕ್ಕಿಸುವುದಿಲ್ಲವೇನು? ಯಾವ ಅಲಂಕಾರವೂ ಯಾವ ಸದ್ಗುಣವೂ ಔಚಿತ್ಯವನ್ನು ಮೀರಿದರೆ ರುಚಿಯಾಗವು.

ಅರಿಯುವವರಿಗೆ ನೂರು ಅರ್ಥ - ಅರಿಯದವರಿಗೆ ವಿವರಿಸುವುದೇ ವ್ಯರ್ಥ - ಆ ಅನೌಚಿತ್ಯ ನಮಗೇಕೆ?

2 comments:

sunaath said...

ಸಂಸ್ಕೃತ ಸುಭಾಷಿತಗಳ ಹರವು, ವೈವಿಧ್ಯತೆ ಹಾಗು ಚೆಲವು ನನ್ನನ್ನು ದಂಗು ಬಡಿಸುತ್ತವೆ. ಆದರೆ ನಾನು ಸಂಸ್ಕೃತ-ಅಜ್ಞಾನಿ. ಆದುದರಿಂದ, ಈ ಸುಭಾಷಿತಗಳ ಅನುವಾದಗಳನ್ನು ಓದಿ ನನ್ನ ಹಸಿವನ್ನು ಹಿಂಗಿಸಿಕೊಳ್ಳುತ್ತಿರುತ್ತೇನೆ. ನನಗೆ ಹಾಗು ನನ್ನಂಥವರಿಗೆ ರುಚಿಕಟ್ಟಾದ ಭೋಜನವನ್ನು ಉಣಬಡಿಸುತ್ತಿರುವ ನಿಮಗೆ ಧನ್ಯವಾದಗಳು.

Manjunatha Kollegala said...

ಹಿರಿಯರ ಸಹೃದಯಸ್ಪಂದನ ಯಾವತ್ತೂ ಸ್ಫೂರ್ತಿದಾಯಕ. ಧನ್ಯವಾದಗಳು ಸುನಾಥರೇ