Friday, August 8, 2014

ಸಾಂತ್ವನ

ಮನೆ ಹಿತ್ತಿಲು ಪಾಳು ಬಿದ್ದಿರಲು
ಸಂತೆಯೊಳು ಧ್ಯಾನವ ಕನಸುವವ
ಸಂತನೂ ಅಲ್ಲ ಯೋಗಿಯೂ ಅಲ್ಲ

ಬಿಡು ರಾಜಾ,
ಅದೊಂದು ಥರ
ಕಾಸೂ ಕೇಡು ತಲೆಯೂ ಬೋಳಿನ ಕತೆ.

ಗುದ್ದಲಿ ಪಿಕಾಸಿ ತೊಗೋ
ಹಿತ್ತಿಲಲಿ ಬೆಳೆದ ಕಳೆ ಕೀಳು
ಮಣ್ಣ ಹದಮಾಡಿ
ಐನಾತಿ ಅಸಲೀ ಬೀಜಗಳ ನೆಟ್ಟು
ನಗುವ ಸೂರ್ಯನ ತೊಡಿಸಿ
ಆತ್ಮಜಲ ಎರೆದು, ಬೆಳೆ
ನಿನಗೆ ಬೇಕಾದ್ದು
ನಿನ್ನ ಧ್ಯಾನಸ್ಥ ಮೌನದಲ್ಲಿ, ಏಕಾಂತದಲ್ಲಿ
ಬೆಳೆದು
ಕೊಂಡದ್ದು
ಸಂತೆಯ ಕೊಂಡ ಸರಕಿಗಿಂತ ಸಾವಿರಪಾಲು ಪುಷ್ಟಿ
ಬೆಳೆದಿದ್ದು ಮಾರದಿರು
ಮಾರಿದ್ದು ಕೊಳ್ಳದಿರು
ನಿನಗಷ್ಟು ಇಟ್ಟು ಬಂದವರಿಗಷ್ಟು ಕೊಟ್ಟು...
ರುಚಿಯಿಲ್ಲದ ಹಣ್ಣ ಗಿಣಿ ಕಚ್ಚುವುದೇ ಇಲ್ಲ
ಹೋಗು, ಹುಷಾರಾಗಿ, ಮತ್ತೆ ಬಾ
ಆಗೀಗ.

5 comments:

Badarinath Palavalli said...

ಮನಸನ್ನು ಹದಮಾಡಿ, ಸರಿಯಾದ ಜ್ಞಾನ ಬೀಜವ ಬಿತ್ತಿ, ಚಿರಕಾಲ ಉಳಿಯುವ ಫಸಲನ್ನು ಬೆಳೆಸುವತ್ತ ನಮ್ಮನ್ನು ಪ್ರೇರೇಪಿಸುವ ಕವನ.

ಕೊಳ್ಳುಬಾಕ ಪ್ರವೃತ್ತಿ ಮತ್ತು ಆರಿಸಿಕೊಳ್ಳುವಲ್ಲಿ ಅತೀವ ಅವಸರ ಇಂದು ಬದುಕಿನ ದಾರಿಯಲ್ಲಿಯು ಮತ್ತು ಕ್ರಮದಲ್ಲೂ ಬೇರುಬಿಟ್ಟಿದೆ.

'ರುಚಿಯಿಲ್ಲದ ಹಣ್ಣ ಗಿಣಿ ಕಚ್ಚುವುದೇ ಇಲ್ಲ' ಹಲವು ಅರ್ಥಗಳನು ಹೊಮ್ಮಿಸಿದ ಸಾಲುಗಳು.

ಇನ್ನಾದರೂ ನಮಗಾಗಿ ಬ್ಲಾಗಿಸುತಿರಿ ಗುರುವರ್ಯ, ನಿರಂತರವಾಗಿ...

sunaath said...

ನೀವು ಕಾವ್ಯಕ್ಷೇತ್ರದಲ್ಲಿ ಬಿತ್ತಿ, ಬೆಳೆದಂತಹ ಮಧುರ ಫಲವನ್ನು ಇಷ್ಟಮಿತ್ರರಿಗೆ ಕೊಡುತ್ತಿರುವದಕ್ಕಾಗಿ ಧನ್ಯವಾದಗಳು!

Manjunatha Kollegala said...

ಧನ್ಯವಾದಗಳು ಬದರೀ, ಹಲವು ಅರ್ಥಗಳನ್ನು ಹೊಮ್ಮಿಸುವುದೇ ಕಾವ್ಯದ ಪ್ರಮುಖ ಲಕ್ಷಣವಲ್ಲವೇ. ನಿಮ್ಮ ಅಭಿಮಾನಕ್ಕೆ ಋಣಿ.

Manjunatha Kollegala said...

ಧನ್ಯವಾದಗಳು ಸುನಾಥರೇ. ರುಚಿಯಿಲ್ಲದ ಹಣ್ಣ ಗಿಣಿ ಕಚ್ಚುವುದೇ ಇಲ್ಲ. ಗಿಣಿ ಕಚ್ಚಿದಮೇಲೆ ರುಚಿ ಖಾತ್ರಿ. ಈ ಕವನ ಚೆನ್ನಾಗಿದೆಯೆಂದು ನನಗೆ ಖಾತ್ರಿಯಾಯಿತು.

kavinagaraj said...

ಚೆನ್ನಾಗಿದೆ.