Wednesday, May 5, 2010

ಹೀಗೊಂದು ಬಿಕರೀ ನೋಟೀಸು

ಮೊನ್ನೆ ಸತ್ಯ ಇದ್ದಕ್ಕಿದ್ದಹಾಗೆ ಫೋನಾಯಿಸಿ "ನನ್ನ ಲೈಬ್ರರಿ sale ಮಾಡಬೇಕು ಅಂತಿದೀನಿ ಮಂಜು" ಅಂದಾಗ ಒಂದು ಕ್ಷಣ ಅವರು ಜೋಕ್ ಮಾಡುತ್ತಿದ್ದಾರೆನ್ನಿಸಿತು. ಕೂಲಾಗಿ "ಸರಿ ಮಾಡಿ, ಎಷ್ಟು ಬೇಕು ಹೇಳಿ ಕೊಡೋಣ" ಎಂದೆ. ನಾವು ಆಗಾಗ ಭೆಟ್ಟಿಯಾದಾಗೆಲ್ಲಾ ಅದೂ ಇದು ಕಾಡುಹರಟೆಯ ನಡುವೆ ಏನಾದರೂ ಹಣಕಾಸಿನ ಕಷ್ಟ-ಸುಖದ ವಿಷಯ ಬಂದರೆ "ನನ್ನ ಲೈಬ್ರರಿ ತಗೊಂಡು ಎರಡು ಸಾವಿರ ಕೊಡಿ ಮಂಜು" ಎನ್ನುವುದು, ನಾನು "ಅದು ತುಂಬಾ ಜಾಸ್ತಿಯಾಯಿತು" ಎಂದು ನಗೆಯಾಡುವುದು ವಾಡಿಕೆ. ಒಂದು ಕ್ಷಣ ಮೌನದ ನಂತರ ಹೇಳಿದರು "ಇಲ್ಲ ಮಂಜು, ನಾನು serious ಆಗಿ ಹೇಳ್ತಾ ಇದೀನಿ". ಅರೇ, ಹೌದಲ್ಲ. ಮೊನ್ನೆ ತಾನೆ ಹಠಾತ್ತಾಗಿ ತಮ್ಮನನ್ನು ಕಳೆದುಕೊಂಡ ದುಃಖದಲ್ಲಿದ್ದ ಸತ್ಯ ಜೋಕ್ ಮಾಡುವ ಮನಸ್ಥಿತಿಯಲ್ಲೇನೂ ಇಲ್ಲ ಎಂದು ಹೊಳೆಯಿತು. ಮತ್ತೆ? ನಿಜಕ್ಕೂ ಲೈಬ್ರರಿ ಮಾರಿಬಿಡುತ್ತಿದ್ದಾರೆಯೇ? ಕ್ಷಣ ನಂಬಲಾಗಲಿಲ್ಲ. ಹಾಗೊಂದುವೇಳೆ ಇದು ಜೋಕ್ ಅಲ್ಲವೆಂದಾದರೆ, ಈ ಮಾತು ಸತ್ಯನ ಬಾಯಲ್ಲಿ ಬರಲು ಸಾಧ್ಯವೇ ಇರಲಿಲ್ಲ. ಏಕೆಂದರೆ ನಾನು ಬಾಲ್ಯದಿಂದಲೂ ಬಲ್ಲ ಈತ ತಮ್ಮ ಪುಟ್ಟ ಲೈಬ್ರರಿ ಕಟ್ಟಿ ಬೆಳೆಸಿಕೊಂಡಿದ್ದ ಪರಿಯನ್ನು ಕಣ್ಣಾರೆ ಕಂಡಿದ್ದೆ.

ಚಿಕ್ಕಂದಿನಲ್ಲೇ ಸಿನೆಮಾ-ನಾಟಕ-ಸಾಹಿತ್ಯಗಳ ಗೀಳು ಹತ್ತಿಸಿಕೊಂಡು, ಮುಂದೊಮ್ಮೆ ಅದೇನೋ ಸಾಧಿಸುವ ಕನಸು ಕಣ್ಣಲ್ಲಿಟ್ಟುಕೊಂಡು ಓದು ಬಿಟ್ಟು ಊರು ಬಿಟ್ಟು ಬೆಂಗಳೂರು ಸೇರಿದ ಹುಡುಗ, ಕಲಾವಿದನಾಗಿ ಸಾಕಷ್ಟು ಬೆಳೆಯುತ್ತಾ, ಸಿಜಿಕೆ, ಬಿ.ವಿ.ಕಾರಂತ ಇತ್ಯಾದಿ ಘಟಾನುಘಟಿಗಳೊಂದಿಗೆ ದುಡಿಯುತ್ತಾ ಕಲೆಯ ಬದುಕನ್ನು ರೂಪಿಸಿಕೊಂಡರು. ಹವ್ಯಾಸಿ ರಂಗಭೂಮಿ ವಲಯದಲ್ಲಿ "ಕತ್ಲು ಸತ್ಯ" ಎಂದೇ ಹೆಸರಾಗಿದ್ದ ಸತ್ಯನಾರಾಯಣ, "ಬಾವಿ", "ಡಾಂಬರು ಬಂದದ್ದು" ಇತ್ಯಾದಿ ಸ್ವತಃ ಕೆಲವು ನಾಟಕಗಳನ್ನೂ ರಚಿಸಿದ್ದಲ್ಲದೇ, ರಂಗಕರ್ಮಿ/ನಿರ್ದೇಶಕರಾಗಿ ಕೂಡ ಸಾಕಷ್ಟು ಹೆಸರು ಮಾಡಿದರು.

ಅರಸನ ಅಂಕೆಯಿಲ್ಲದೆ ದೆವ್ವದ ಕಾಟವಿಲ್ಲದೆ ಮನಸ್ಸಿಗೆ ಸರಿಕಂಡದ್ದನ್ನು ಮಾಡುತ್ತಾ, ತನಗಿಷ್ಟವಾದ ಬದುಕು ಬದುಕುವ, ಸರಳಾತಿಸರಳ ಜೀವನ ಶೈಲಿಯ ಸತ್ಯ ನಮಗೆಲ್ಲಾ ಒಂದುರೀತಿ ಅಸೂಯೆ ಹುಟ್ಟಿಸಿದ್ದ ವ್ಯಕ್ತಿ. ಈ ಸಿನಿಮಾ-ನಾಟಕಗಳ ಗೀಳಿಗೆ ಹತ್ತಿಕೊಂಡಂತೆ ಬಂದಿದ್ದ ಮತ್ತೊಂದು ಗೀಳು ಪುಸ್ತಕಗಳದು. ನಾವೆಲ್ಲಾ ಬೇಜಾರಾದಾಗ TV, ಸಿನೆಮಾ ನೋಡಿದರೆ ಈ ಮನುಷ್ಯ ಸುಳಿಯುತ್ತಿದ್ದುದು ಪುಸ್ತಕದ ಅಂಗಡಿಗಳ ಮುಂದೆ. ಊರಲ್ಲಿ ಎಲ್ಲಿ ಪುಸ್ತಕ ಮೇಳವಾದರೆ ಅಲ್ಲಿ ಸತ್ಯ ಹಾಜರು, ಕೈಗೊಂದು ಐದೋ ಆರೋ ಪುಸ್ತಕ ಖರೀದಿಸಿದ್ದೇ ಸೈ. ಕೊಳ್ಳಲು ಸೆಕೆಂಡ್ ಹ್ಯಾಂಡ್, ಫಸ್ಟ್ ಹ್ಯಾಂಡ್, ಅಗ್ಗ, ದುಬಾರಿಯ ಪ್ರಶ್ನೆ ಬರುತ್ತಲೇ ಇರಲಿಲ್ಲ. ಪುಸ್ತಕ ಅಪರೂಪದ್ದಾದರೆ, ಮೌಲಿಕವಾದದ್ದಾದರೆ ಅದು ಮನೆ ಸೇರಲೇಬೇಕು; ಪುಸ್ತಕದ ಆಯ್ಕೆಯಲ್ಲಿ, ಆಟದ ಸಾಮಾನು ಆಯ್ದುಕೊಳ್ಳುವ ಹುಡುಗನ ತನ್ಮಯತೆ ಇರುತ್ತಿತ್ತು. ತಂದದ್ದು ಅಲಂಕಾರಕ್ಕಲ್ಲ, ಮುಂದೆರಡು ಮೂರು ದಿನ ಪಟ್ಟು ಹಿಡಿದು ಅದನ್ನು ಓದಿ ಮುಗಿಸಬೇಕು. ಬಹಳಷ್ಟು ಪುಸ್ತಕಗಳನ್ನು ಪುಸ್ತಕಮೇಳಗಳಲ್ಲೇ ಖರೀದಿಸುತ್ತಿದ್ದುದರಿಂದ, ಅದರಲ್ಲಿ ಬಹಳಷ್ಟು "ಭಾರಿ" ಪುಸ್ತಕಗಳೇ ಆದ್ದರಿಂದ ಇದೊಂದು ದುಬಾರಿ ಹವ್ಯಾಸವಾಗಿ ಪರಿಣಮಿಸಿತ್ತು. ಇವತ್ತು ಒಂದು ನೂರು ರುಪಾಯಿ ಉಳಿದರೆ ಒಂದು ಪುಸ್ತಕ್ಕಾದರೂ ಆಗುತ್ತದೆ ಎಂದು ಯೋಚಿಸುತಿದ್ದ ಸತ್ಯ, ಗಳಿಸಿದ, ಉಳಿಸಿದ ಹಣವನ್ನೆಲ್ಲಾ ಪುಸ್ತಕ ಕೊಳ್ಳಲು ಸುರಿಯುತ್ತಿದ್ದರು. ಹೀಗಾಗಿ ಈ ಪುಟ್ಟ ಲೈಬ್ರರಿ ಕೇವಲ ಲೈಬ್ರರಿ ಆಗಿರದೆ ಅವರ ವ್ಯಕ್ತಿತ್ವದ ಒಂದು ಭಾಗವಾಗಿತ್ತು. ಸುಮಾರು ೨೫೦೦ ಪುಸ್ತಕಗಳಿರುವ ಆ ಲೈಬ್ರರಿಯಲ್ಲಿ ಒಂದೊಂದು ಪುಸ್ತಕವೂ ಎಲ್ಲೆಲ್ಲಿ ಇದೆ, ಯಾವಾಗ ಕೊಂಡದ್ದು, ಅದರ ಹೂರಣವೇನು, ಯಾವ ಪುಸ್ತಕದ ಅಟ್ಟೆ ಎಲ್ಲಿ, ಯಾವಾಗ, ಏಕೆ ಹರಿದಿದೆ ಇತ್ಯಾದಿ ವಿವರಗಳನ್ನೆಲ್ಲಾ ಕರಾರುವಾಕ್ಕಾಗಿ ತಿಳಿಸಬಲ್ಲಷ್ಟು ತಾದಾತ್ಮ್ಯ ಸಿದ್ಧಿಸಿತ್ತು ಆ ಪುಸ್ತಕಗಳ ಜೊತೆ. ಬಂದವರೆದುರು ಈ ಸಂಗ್ರಹವನ್ನು ಪ್ರದರ್ಶಿಸುವುದೇ ಹೆಮ್ಮೆ. ಅದು ನಿಜ ಕೂಡ. Afterall, the collection was an owner's pride.

ಇಂಥಾ ಮನುಷ್ಯ ತಾನು ಕಟ್ಟಿ ಬೆಳೆಸಿದ ಈ ಪುಟ್ಟ ಭಂಡಾರವನ್ನು ಮಾರಿಬಿಡಬೇಕೆಂದರೆ, ಬಂದಿರುವ ತುರ್ತು ಸಾಕಷ್ಟು serious ಆಗಿರಲೇ ಬೇಕೆನ್ನಿಸಿತು. ಈ ವೈಯಕ್ತಿಕ ಪ್ರಶ್ನೆಯನ್ನು ನಾನು ಕೇಳದಿದ್ದರೂ, ಅವರು ತಮ್ಮದೇ ಆಗಿ ಉಳಿದಿದ್ದ ಈ ಏಕಮಾತ್ರ "ಆಸ್ತಿ"ಯನ್ನು ಮಾರಿಬಿಡುವ ನಿರ್ಧಾರಕ್ಕೆ ಬರುವ ಮುನ್ನ ಸುಮಾರು ಎರಡು ತಿಂಗಳ ಕಾಲ ತೊಳಲಾಟವನ್ನನುಭವಿಸಿದ್ದರೆನ್ನುವುದು ತಿಳಿಯುತ್ತಿತ್ತು. ಬಂದ ಕುತ್ತು ಕ್ಷಣಿಕವೇ ಇರಬಹುದು, ಸ್ವಲ್ಪ ಉಸಿರು ಕಟ್ಟಿ ತಡೆದರೆ ಆ ಕುತ್ತು ಹೊರಟುಹೋಗಬಹುದು, ಆದರೆ ಇದು ಮಾತ್ರ ಖಂಡಿತ ಆಗಬಾರದು, ಏಕೆಂದರೆ ಇದು ವ್ಯಕ್ತಿತ್ವದ ಒಂದು ಭಾಗ, ಐಹಿಕ ಸಮಸ್ಯೆಗಳಿಗೋಸ್ಕರ ಮಾರಿಕೊಳ್ಳುವುದಲ್ಲ. ತಾತ್ಕಾಲಿಕವಾಗಿಯಾದರೂ ಏನಾದರೂ ಮಾಡಿ, ಈ ಪುಸ್ತಕಭಂಡಾರವನ್ನು ಉಳಿಸಿಕೊಡಲು ಸಾಧ್ಯವೇ ಇತ್ಯಾದಿ ಯೋಚಿಸಿದೆ. ಆದರೆ ನಾವು ಯಾರೂ ಏನೂ ಮಾಡಲು ಸಾಧ್ಯವಾಗದಷ್ಟು ದೊಡ್ಡದಿತ್ತು ಅವರ ಆರ್ಥಿಕ ಅಗತ್ಯಗಳು; ಮತ್ತೂ ಈ ಲೈಬ್ರರಿಯ ಮಾರಾಟ ಕೂಡ ಅವರ ಇಡೀ ಅಗತ್ಯದಲ್ಲಿ ಕೇವಲ ತುರ್ತಿನ ಅಗತ್ಯಗಳಿಗೆ ಮಾತ್ರ ಸರಿಹೊಂದುವಂತಿತ್ತು. ಲೈಬ್ರರಿ ಮಾರದೆ ಬೇರೆ ದಾರಿಯೇ ಇರಲಿಲ್ಲ. ನಾನು ಇಷ್ಟೆಲ್ಲಾ ಚಿಂತಿಸುತ್ತಿರುವಾಗ ಸತ್ಯ ಹೇಳಿದ ಮಾತು ಇದು. "ನೀವಿರುವ ಈ ಪರಿಸ್ಥಿತಿಯಲ್ಲಿ ಈ ಲೈಬ್ರರಿ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ಗೊತ್ತು, ಆದರೆ ನಾನು ನಿಮ್ಮನ್ನು ಕೇಳುತ್ತಿರುವುದು ಈ ಬಗ್ಗೆ ಬರೆಯಿರಿ ಅಂತ ಮಾತ್ರ. ನನಗೆ ಗೊತ್ತು, ನನ್ನಷ್ಟೇ ಹುಚ್ಚರು ಯಾವಯಾವುದೋ ಮೂಲೆಯಲ್ಲಿ ಬಹಳಷ್ಟು ಜನ ಇರುತ್ತಾರೆ, ಅವರೊಂದಿಗೆ ಸಂಪರ್ಕ ಸಾಧಿಸುವುದು ಮಾತ್ರ ನಮ್ಮ ಸಧ್ಯದ ಕೆಲಸ; ನಿಮಗೂ ನನ್ನಂಥದೇ ಆಸಕ್ತಿಯಿರುವುದರಿಂದ ನಿಮ್ಮ ಮಿತ್ರರ ಗುಂಪಿನಲ್ಲಿ ಖಂಡಿತಾ ಸಮಾನ ವ್ಯಸನಿಗಳು ಇದ್ದಾರು ಎನ್ನುವುದು ನನ್ನ ನಂಬಿಕೆ"
ನನಗೆ ಹೌದೆನ್ನಿಸಿತು.

ಇನ್ನು ನೇರ ವ್ಯವಹಾರಕ್ಕೆ. ಪ್ರಾಚೀನ ಸಾಹಿತ್ಯದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೆ, ಪಾಶ್ಚಾತ್ಯದಿಂದ ಪೌರ್ವಾತ್ಯದವರೆಗೆ, ಕಾವ್ಯ, ನಾಟಕ, ಇತಿಹಾಸ, ಆಧ್ಯಾತ್ಮ, ವಿಜ್ಞಾನ, ಕಲೆ, ರಂಗಭೂಮಿ ಹೀಗೆ ಹತ್ತು ಹಲವು ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಈ ಲೈಬ್ರರಿಗೆ ಅವರು ನಿರೀಕ್ಷಿಸುವ ಒಟ್ಟಂದದ ಬೆಲೆ ಎರಡು ಲಕ್ಷ ರುಪಾಯಿಗಳು (ಸರಾಸರಿ ಪುಸ್ತಕವೊಂದಕ್ಕೆ ೮೦ ರುಪಾಯಿಗಳು). ಪುಸ್ತಕವೊಂದರ ಮೌಲ್ಯ ಯಾವಾಗಲೂ ಅದರ ಮುಖಬೆಲೆಗಿಂತ ಬಹು ಹೆಚ್ಚಿನದು, ಮತ್ತು ಒಂದೊಂದು ಪುಸ್ತಕಗಳ ಬೆಲೆಯ ಮೊತ್ತಕ್ಕಿಂತಾ ಇಡೀ ಪುಸ್ತಕ ಭಂಡಾರದ "ಸಂಗ್ರಹ" ಹೆಚ್ಚು ಬೆಲೆ ಬಾಳುವಂಥದ್ದು ಎಂಬುದು ಯಾವುದೇ ಪುಸ್ತಕಪ್ರೇಮಿಗೆ ತಿಳಿದ ವಿಷಯ. ಮಾರಾಟಕ್ಕಿರುವುದು ಇಡೀ ಲೈಬ್ರರಿಯೇ ಹೊರತು individual ಪುಸ್ತಕಗಳಲ್ಲ. ಒಬ್ಬ ವ್ಯಕ್ತಿ, ಅಲ್ಲದಿದ್ದರೆ ಒಂದು ಗುಂಪು ಕೂಡ ಇದನ್ನು ಖರೀದಿಸಬಹುದು, ಆದರೆ ಇಡೀ ಲೈಬ್ರರಿಯನ್ನು ಒಟ್ಟಿಗೆ ಖರೀದಿಸಬೇಕೆನ್ನುವುದಷ್ಟೇ ಷರತ್ತು, ಇಲ್ಲವೆಂದರೆ ಅದು ತಮ್ಮ ಹಣಕಾಸಿನ ಅಗತ್ಯವನ್ನು ಪೂರೈಸದು, ಹಾಗೂ ಪುಸ್ತಕಗಳನ್ನು ಹರಿದು ಹಂಚುವುದು ಭಾವನಾತ್ಮಕವಾಗಿ ನೋವಿನ ವಿಷಯ ಎಂದು ಅವರ ಅಭಿಪ್ರಾಯ. ಹಾಗೂ ಕೊಂಡವರು ಕೂಡ ಆ ಸಂಗ್ರಹವನ್ನು ಹಾಗೆಯೇ ನೋಡಿಕೊಂಡಾರೆನ್ನುವುದು ಆಶಯ ಕೂಡ.

ಪುಸ್ತಕ ಸಂಗ್ರಹದ ಕೆಲವು ಚಿತ್ರಗಳು http://picasaweb.google.co.in/ksmanjunatha/SatyaLibrary# ಇಲ್ಲಿವೆ.

ಆಸಕ್ತರು ಸತ್ಯನಾರಾಯಣರನ್ನು ನೇರವಾಗಿ ಸಂಪರ್ಕಿಸಬಹುದು ಮತ್ತು ಬೆಂಗಳೂರಿನಲ್ಲಿರುವ ಅವರ ಮನೆಗೆ ಭೇಟಿನೀಡಿ ಪುಸ್ತಕ ಸಂಗ್ರಹವನ್ನು ನೋಡಬಹುದು. ಅವರ ಮೊಬೈಲ್ ಸಂಖ್ಯೆ + ೯೧ ೯೪೪೮೭ ೦೩೮೬೪ (+ 91 94487 03864)

ಪುಸ್ತಕ ಸಂಗ್ರಹವನ್ನು ಮಾರುವ ನಿರ್ಧಾರವೇ ನೋವಿನ ನಿರ್ಧಾರ; ಕೊನೆಯ ಪಕ್ಷ ಅದನ್ನು ಮಾರುವ ಪ್ರಕ್ರಿಯೆ ಹೆಚ್ಚು ನೋವಿಲ್ಲದೆಯೇ ನಡೆಯಲೆಂಬುದು ವೈಯಕ್ತಿಕವಾಗಿ ನನ್ನ ಹಾರೈಕೆ. ಏಕೆಂದರೆ ಇದು ಕೇವಲ ಲೈಬ್ರರಿಯೊಂದನ್ನು ಮಾರುವ/ಕೊಳ್ಳುವ ಪ್ರಶ್ನೆಯಲ್ಲ, ಬದಲಿಗೆ ಜೀವನ ಶೈಲಿ/ಮೌಲ್ಯವೊಂದರ ಬಗೆಗಿನ ನಂಬಿಕೆಯ ಪ್ರಶ್ನೆ. ವ್ಯಕ್ತಿಯೊಬ್ಬ materialistic ಆಯಾಮಗಳಿಲ್ಲದೆಯೂ ಆತ್ಮಸಂತೋಷಕ್ಕೋಸ್ಕರವೇ ಬದುಕಬಹುದು ಎಂಬ ನಂಬಿಕೆಗೆ ಪೆಟ್ಟಾಗುವುದಾದರೆ ಅಂಥಾ ಜೀವನಶೈಲಿಯ ಬಗ್ಗೆ ನಾವು ಪುಟಗಟ್ಟಲೆ ಬರೆಯುವುದು, ವರ್ಷಗಟ್ಟಲೆ ಕನಸುವುದು ಎಲ್ಲ ವ್ಯರ್ಥವೆಂದೇ ನನ್ನ ನಂಬಿಕೆ.

4 comments:

Subrahmanya said...

ತುಂಬ ಬೇಸರವಾಗ್ತಿದೆ. ಅವರ ಸಂಗ್ರಹಣೆಯಲ್ಲಿರುವ ಪುಸ್ತಕಗಳನ್ನು ನೋಡಿದರೆ , ಪರಿಸ್ತಿತಿಗಳೇಕೆ ಇಷ್ಟು ಕಠೋರವಾಗುತ್ತದೆ ಎನಿಸುತ್ತದೆ.

"ವ್ಯಕ್ತಿಯೊಬ್ಬ materialistic ಆಯಾಮಗಳಿಲ್ಲದೆಯೂ ಆತ್ಮಸಂತೋಷಕ್ಕೋಸ್ಕರವೇ ಬದುಕಬಹುದು ಎಂಬ ನಂಬಿಕೆಗೆ ಪೆಟ್ಟಾಗುವುದಾದರೆ ಅಂಥಾ ಜೀವನಶೈಲಿಯ ಬಗ್ಗೆ ನಾವು ಪುಟಗಟ್ಟಲೆ ಬರೆಯುವುದು, ವರ್ಷಗಟ್ಟಲೆ ಕನಸುವುದು ಎಲ್ಲ ವ್ಯರ್ಥವೆಂದೇ ನನ್ನ ನಂಬಿಕೆ."

ಸತ್ಯವಾದ ಮಾತು.

Any way..Welcome back...

Unknown said...

Your blog is really moving. I just spoke to Sathya. I have forwarded your blog link to many of my affluent and book leaving contacts.. Hopefully, some one will contact.. I am sure, he will be able to come through this phase quickly.

ಎಚ್. ಆನಂದರಾಮ ಶಾಸ್ತ್ರೀ said...

ನನ್ನ ಪರಿಚಿತರನೇಕರಿಗೆ ವಿಷಯ ತಿಳಿಸಿದ್ದೇನೆ. ಯಾವುದಾದರೂ ಸಂಸ್ಥೆ ಕೊಂಡೀತೇನೋ.

ಜಾಕಾಸ್ ಹುಡ್ಗ... said...

ವ್ಯಕ್ತಿಯೊಬ್ಬ materialistic ಆಯಾಮಗಳಿಲ್ಲದೆಯೂ ಆತ್ಮಸಂತೋಷಕ್ಕೋಸ್ಕರವೇ ಬದುಕಬಹುದು ಎಂಬ ನಂಬಿಕೆಗೆ ಪೆಟ್ಟಾಗುವುದಾದರೆ ಅಂಥಾ ಜೀವನಶೈಲಿಯ ಬಗ್ಗೆ ನಾವು ಪುಟಗಟ್ಟಲೆ ಬರೆಯುವುದು, ವರ್ಷಗಟ್ಟಲೆ ಕನಸುವುದು ಎಲ್ಲ ವ್ಯರ್ಥವೆಂದೇ ನನ್ನ ನಂಬಿಕೆ -

ಓಹ್ !! ಅದ್ಭುತವಾದ ಮಾತು...ಸತ್ಯರ ಗ್ರಂಥಾಲಯ ಅವರ ಬಳಿಯಲ್ಲೇ ಉಳಿದು..ಅವರ ಕಷ್ಟಗಳೆಲ್ಲಾ ಪರಿಹಾರವಾಗಲಿ ಎಂದು ಆಶಿಸುತ್ತೇನೆ..